Tuesday, December 24, 2013

ಹಚ್ಚಿದರು ಹಣತೆ

              






            ಕನ್ನಡದ ಹಿರಿಯ ಸಾಹಿತಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ನಿನ್ನೆ ಅಸ್ತಂಗತರಾದರು. ಇದು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ  ನಷ್ಟ. ಜಿಎಸ್ಎಸ್ ಕನ್ನಡ ನಾಡಿನ ಸಮನ್ವಯ ಕವಿ. ತಮ್ಮ ಭಾವ ಗೀತೆಗಳ ಮೂಲಕ ಇಡೀ ನಾಡಿನ ಜನರ ಮನಸ್ಸುಗಳನ್ನು ಭಾವಲೋಕಕ್ಕೆ ಕೊಂಡೊಯ್ದ ಗಾರುಡಿಗ. ಯಾವ ನವ್ಯ, ನವೋದಯ, ಬಂಡಾಯಗಳ ಬೇಲಿಯನ್ನು ತಮ್ಮ ಸುತ್ತ ಕಟ್ಟಿಕೊಳ್ಳದೆ ತಮ್ಮೊಳಗಿನ ಸೃಜನಶೀಲತೆಯು  ಮುಕ್ಕಾಗದಂತೆ ಕಾಪಾಡಿಕೊಂಡು ಬಂದ ಕನ್ನಡದ ಅನನ್ಯ ಬರಹಗಾರ. ಅಪ್ರಮಾಣಿಕತೆ, ಭ್ರಷ್ಟಾಚಾರವೇ ನಮ್ಮ ಸುತ್ತ ಕುಣಿದು ಕೇಕೆ ಹಾಕುತ್ತಿರುವ ಹೊತ್ತು ಇದೇ ಜಿಎಸ್ಎಸ್ ಅವರ ಭಾವಗಿತೆಗಳು ನಮ್ಮ ಬದುಕನ್ನು ಸಹನೀಯವಾಗಿಸಿದವು.  ಬದುಕಿನ  ನಿಜಾರ್ಥ ನಮ್ಮೆದುರು ಅನಾವರಣಗೊಂಡಿದ್ದು ಅವರದೇ ಭಾವಗೀತೆಗಳ ಮೂಲಕ. ಒಂದರ್ಥದಲ್ಲಿ ಜಿಎಸ್ಎಸ್ ಅವರ ಭಾವಗೀತೆಗಳಿಗೆ ಬದುಕನ್ನೇ  ಬದಲಿಸುವ ಶಕ್ತಿಯಿದೆ. ಅದಕ್ಕೆಂದೇ ಅವು ಎಲ್ಲ ಕಾಲಕ್ಕೂ ಸಲ್ಲುವ ಗೀತೆಗಳು.

       ಜಿಎಸ್ಎಸ್ ಅವರದು ಜಾಗೃತಿ ಮತ್ತು ಚಿಂತನೆಗಳನ್ನು ಓದುಗರಲ್ಲಿ ಒಡಮೂಡಿಸುವ ಕಾವ್ಯ. ಅವರ ಕವಿತೆಗಳಲ್ಲಿ ಸಾಮಾಜಿಕ ಆಯಾಮ ಅನಾವರಣಗೊಂಡಿದೆ. ಕಾವ್ಯರಚನೆ ಅವರಿಗೆ ಅದೊಂದು ಸಾಮಾಜಿಕ ಬದುಕನ್ನು ಕಟ್ಟಿಕೊಡುವ ಪ್ರಕ್ರಿಯೆ. ಇಂಥ ಮನೋಭಾವವಿರುವ ಅವರ ಕವಿ ಮನಸ್ಸು 'ಕಾವ್ಯ ಬರೀ ಶಬ್ದ ಸೇರಿಸುವ ಕ್ರಿಯೆಯಲ್ಲ. ಬರೀ ಪದಕ್ಕೆ ಪದ ಜತೆಗಿದ್ದ ಮಾತ್ರಕ್ಕೆ ಪದ್ಯವಾದೀತು ಹೇಗೆ?' ಎಂದು ಪ್ರಶ್ನಿಸುತ್ತದೆ. ಅದಕ್ಕೆಂದೇ ಅವರು ತಮ್ಮ ಕಾವ್ಯ ರಚನೆಯನ್ನು ಹೀಗೆ ಹೇಳುತ್ತಾರೆ

          ನಾನು ಬರೆಯುತ್ತೇನೆ
          ಖುಷಿಗೆ, ನೋವಿಗೆ
          ರೊಚ್ಚಿಗೆ ಮತ್ತು ಹುಚ್ಚಿಗೆ
          ಅಥವಾ ನಂದಿಸಲಾರದ ಕಿಚ್ಚಿಗೆ

    ಸಮಾಜದ ಸಮಸ್ಯೆಗಳಿಗೆ ದನಿಯಾಗುವಲ್ಲಿ ಕವಿಯ ಸಾಫಲ್ಯವಡಗಿದೆ. ಕವಿಯಾದವನು ವೈಯಕ್ತಿಕವಾದದ್ದನ್ನು ಸಾರ್ವತ್ರಿಕರಿಸುತ್ತ ಹೋಗುತ್ತಾನೆ. ಜಿಎಸ್ಎಸ್ ಅವರ ಹೆಚ್ಚಿನ ಕವಿತೆಗಳಲ್ಲಿ ಶೋಷಿತರ ದನಿ ಅನುರಣಿಸಿದೆ.

          ಸುತ್ತ ಮುತ್ತ ಮನೆ ಮಠಗಳು
          ಹೊತ್ತಿಕೊಂಡು ಉರಿಯುವಲ್ಲಿ
          ಸೋತು ಮೂಕವಾದ ಬದುಕು
          ನಿಟ್ಟುಸಿರೊಳು ತೇಲುವಲ್ಲಿ
          ಯಾವ ಹಾಡ ಹಾಡಲಿ?

           ಉರಿವ ಕಣ್ಣ ಚಿತೆಗಳಲ್ಲಿ
           ಇರುವ ಕನಸು ಸೀಯುವಲ್ಲಿ
           ಎದೆ ಎದೆಗಳ ಜ್ವಾಲಾಮುಖಿ
           ಹೊಗೆ  ಬೆಂಕಿ ಕಾರುವಲ್ಲಿ
           ಯಾವ ಹಾಡ ಹಾಡಲಿ?

     ಹೀಗೆ ಸೋತ ಸಮಾಜಕ್ಕೆ ದನಿಯಾಗುವ ಕವಿಯಲ್ಲಿ ನಂಬಿಕೆಯೂ ಇದೆ. ಶೋಷಿತರ ಸಮಸ್ಯೆಗಳನ್ನು ತನ್ನ ಹೃದಯಕ್ಕೆ ತೆಗೆದುಕೊಂಡು ಅವುಗಳನ್ನು ಪರಿಹರಿಸುವ ಆತ್ಮವಿಶ್ವಾಸವೂ  ಅವರದಾಗಿತ್ತು. ನಂಬಿಕೆ ಮತ್ತು ಆತ್ಮವಿಶ್ವಾಸಗಳೇ ಬರಹಗಾರನ ಬಹುಮುಖ್ಯವಾದ ಆಸ್ತಿಗಳು. ಜೊತೆಗೆ ಇದರೊಂದಿಗೆ ತಾಯ್ತನದ ಅಂತ:ಕರಣವೂ  ಸೇರಿದರೆ ಬರಹಗಾರ ಎಲ್ಲ ಸಾಮಾಜಿಕ ವೈರುಧ್ಯಗಳಿಗೂ ಮುಖಾಮುಖಿಯಾಗಿ ನಿಲ್ಲಬಲ್ಲ.

        ದೀಪವಿರದ ದಾರಿಯಲ್ಲಿ
        ತಡವರಿಸುವ ನುಡಿಗಳೇ
         ಕಂಬನಿಗಳ ತಲಾತಲದಿ
         ನಂದುತಿರುವ ಕಿಡಿಗಳೇ
         ಉಸಿರನಿಡುವೆ
         ಹೆಸರ ಕೊಡುವೆ
         ಬನ್ನಿ ನನ್ನ ಹೃದಯಕೆ

       ಜಿಎಸ್ಎಸ್ ಅವರಲ್ಲಿ ತಾಯ್ತನದ ಅಂತ:ಕಾರಣದ ಜೊತೆಗೆ ಆ ತಾಯ್ತನಕ್ಕೆ ಸಂಕೇತಳಾದ ಹೆಣ್ಣನ್ನು ಗೌರವಿಸುವ ವಿಶಾಲ ಮನೋಭಾವವೂ ಇತ್ತು. ಅವರ 'ಸ್ತ್ರೀ' ಕವಿತೆ ಹೆಣ್ಣನ್ನು ಪೂಜ್ಯನೀಯ ದೃಷ್ಟಿಯಿಂದ ಕಾಣುವ ಅವರ ಮನೋಭಾವಕ್ಕೊಂದು ದೃಷ್ಟಾಂತ. ಅವರೊಳಗಿನ ಸ್ತ್ರೀ ಸಂವೇದನೆಯ ಗುಣ ಈ ರೀತಿಯಾಗಿ ಅನಾವರಣಗೊಂಡಿದೆ

          ಆಕಾಶದ ನೀಲಿಯಲ್ಲಿ
          ಚಂದ್ರ ತಾರೆ ತೊಟ್ಟಿಲಲ್ಲಿ
          ಬೆಳಕನಿಟ್ಟು ತೂಗಿದಾಕೆ
          ನಿನಗೆ ಬೇರೆ ಹೆಸರು ಬೇಕೆ
          ಸ್ತ್ರೀ ಅಂದರೆ ಅಷ್ಟೆ ಸಾಕೇ ?

           ಮನೆಮನೆಯಲಿ ದೀಪ ಮುಡಿಸಿ
           ಹೊತ್ತು ಹೊತ್ತಿಗನ್ನ ಉಣಿಸಿ
           ತಂದೆ ಮಗುವ ತಬ್ಬಿದಾಕೆ
           ನಿನಗೆ ಬೇರೆ ಹೆಸರು ಬೇಕೆ
           ಸ್ತ್ರೀ ಅಂದರೆ ಅಷ್ಟೆ ಸಾಕೇ ?

    ಜಿಎಸ್ಎಸ್ ಅವರಲ್ಲಿ ಬಹುಮುಖ್ಯವಾಗಿ ನಾವು ಕಾಣುವ ಇನ್ನೊಂದು ಗುಣ ಅದು ಅವರೊಳಗಿನ ನಿರ್ಲಿಪ್ತತೆ. ಯಾವ ಬಿರುದು, ಪ್ರಶಸ್ತಿಗಳ ಬೆನ್ನು ಹತ್ತಿ ಹೋದವರಲ್ಲ. ಅವುಗಳು ಅವರನ್ನು ಅರಸಿ ಬಂದಾಗಲೂ ಈ ಕವಿಯದು ಅದೇ ದಿವ್ಯ ನಿರ್ಲಿಪ್ತತೆ. ಕಲಾವಿದನಲ್ಲಿ ಇರಲೇ ಬೇಕಾದ ಗುಣವಿದು. ನಿರೀಕ್ಷೆ ಮತ್ತು ಅಹಂಕಾರಗಳನ್ನು ಮೀರಿ ನಿಂತಾಗಲೇ ಬರಹಗಾರನಲ್ಲಿ ಸೃಜನಶೀಲತೆ ಸೃಷ್ಟಿಯಾಗಬಲ್ಲದು. ಅಂಥದ್ದೊಂದು ಆಶಯವನ್ನು ಜಿಎಸ್ಎಸ್ ತಮ್ಮ 'ಎದೆ ತುಂಬಿ ಹಾಡಿದೆನು' ಕವಿತೆಯಲ್ಲಿ ವ್ಯಕ್ತಪಡಿಸಿರುವರು.

           ಎಲ್ಲ ಕೇಳಲಿ ಎಂದು
           ನಾನು ಹಾಡುವುದಿಲ್ಲ
           ಹಾಡುವುದು ಅನಿವಾರ್ಯ
           ಕರ್ಮ ನನಗೆ

           ಕೇಳುವವರಿಹರೆಂದು
           ನಾ ಬಲ್ಲೆ ಅದರಿಂದ
           ಹಾಡುವೇನು ಮೈದುಂಬಿ
           ಎಂದಿನಂತೆ ಯಾರು
           ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ


         ವೈಚಾರಿಕತೆ ಜಿಎಸ್ಎಸ್ ಕಾವ್ಯದ ಇನ್ನೊಂದು ಬಹುಮುಖ್ಯವಾದ ಗುಣ. ಜಿಎಸ್ಎಸ್ ವ್ಯಕ್ತಿತ್ವ ಜಾತಿ, ಧರ್ಮಗಳ ಸಂಕೋಲೆಯಿಂದ ಮುಕ್ತವಾದದ್ದು. ಅವರ ಕವಿ ಮನಸ್ಸು ಅದನ್ನೇ ಸಮಾಜದಿಂದಲೂ ನಿರೀಕ್ಷಿಸುತ್ತದೆ (ಇಲ್ಲಿ ನಿರೀಕ್ಷೆ ವೈಯಕ್ತಿಕ ನೆಲೆಯಲ್ಲಲ್ಲ. ಅದು ಸಮಾಜಮುಖಿ ನಿರೀಕ್ಷೆ). ವೈಚಾರಿಕ ಪ್ರಜ್ಞೆಯೊಂದು ನಮ್ಮಲ್ಲಿ ಒಡಮೂಡಲು ಅದಕ್ಕೆ ಧರ್ಮನಿರಪೇಕ್ಷಿತ ದೃಷ್ಟಿಕೊನವೇ ದಾರಿ. ಹಲವು ದೇವರನ್ನು ದೂರ ನೂಕಿ ಪ್ರೀತಿ, ಸ್ನೇಹವೇ ನಮ್ಮ ದೇವರಾಗಬೇಕೆನ್ನುವ ವೈಚಾರಿಕ ಪ್ರಜ್ಞೆ ಅವರದಾಗಿತ್ತು.

          ಎಲ್ಲೋ ಹುಡುಕಿದೆ ಇಲ್ಲದ ದೇವರ
          ಕಲ್ಲು ಮಣ್ಣುಗಳ ಗುಡಿಯೊಳಗೆ
          ಇಲ್ಲೇ ಇರುವ ಪ್ರೀತಿ ಸ್ನೇಹಗಳ
          ಗುರುತಿಸದಾದೆನು ನಮ್ಮೊಳಗೆ

          ಎಲ್ಲಿದೆ ನಂದನ ಎಲ್ಲಿದೆ ಬಂಧನ
          ಎಲ್ಲಾ ಇದೆ ಈ ನಮ್ಮೊಳಗೆ
          ಒಳಗಿನ ತಿಳಿಯನು ಕಲಕದೆ ಇದ್ದರೆ
          ಅಮೃತದ ಸವಿಯಿದೆ ನಾಲಿಗೆಗೆ

     
          ಹೀಗೆ ವೈಚಾರಿಕ ಪ್ರಜ್ಞೆಗೊಳಗಾದ ಕವಿ ಸಮಾಜದಲ್ಲಿ ಜನರ ದುಷ್ಟತನವನ್ನು ಕಂಡು ಸಂಕಟಪಡುತ್ತಾರೆ. ಮನುಷ್ಯರೊಳಗಿನ ಕೆಟ್ಟತನ ಅವರನ್ನು ಯಾತನೆಗೊಳಿಸುತ್ತದೆ. ದುಷ್ಟರ ದುಷ್ಟತನವನ್ನು ಪ್ರಶ್ನಿಸುತ್ತಲೇ ಸಮಾಜದೊಂದಿಗಿನ ತಮ್ಮ ಸಂಬಂಧವೇನು ಎನ್ನುವ ವಿವೇಚನೆಗೆ ಮುಂದಾಗುತ್ತಾರೆ.

          ದು:ಖ ಅವಮಾನ ಸಂಕಟಗಳಲ್ಲಿ ನಾನು
          ಒಬ್ಬಂಟಿಯಾಗುತ್ತೇನೆ. ಅದುವರೆಗು ಜತೆಗೆ
          ನಿಂತವರೊಬ್ಬರೂ ಇರದ ದ್ವೀಪವಾಗುತ್ತೇನೆ
          ಹಬ್ಬಿರುವ ಮಬ್ಬಿನ ಮಧ್ಯೆ ಒಬ್ಬನೇ ಕೂತು
          ಯೋಚಿಸುತ್ತೇನೆ ಯಾಕಿಷ್ಟು ದುಷ್ಟರಾಗುತ್ತಾರೆ
          ಜನ ಕೊಂಬೆಗಳ ಕಡಿದು ಹೂವುಗಳ
          ಹೊಸಕಿ ಹಕ್ಕಿಗಳ ಕೊರಳು ಹಿಸುಕುತ್ತಾರೆ
          ನಿಷ್ಕಾರಣ? ಈ ಹೊತ್ತಿನಲ್ಲಿ ಮತ್ತೆ ಕಾಡುವುದು
          ಪ್ರಶ್ನೆ ಈ ಇವರಿಗೂ ನನಗೂ ಏನು ಸಂಬಂಧ?


          ಒಟ್ಟಿನಲ್ಲಿ ಜಿಎಸ್ಎಸ್ ಅವರ ಕವಿತೆಗಳು ಕಾಲ ಮತ್ತು ದೇಶಾತೀತವಾದವುಗಳು. ಅವರು ತಮ್ಮ ಭಾವಗೀತೆಗಳ ಮೂಲಕ ನಮ್ಮನ್ನು ಭಾವಲೋಕಕ್ಕೆ ಕರೆದೊಯ್ದು ನಮ್ಮಗಳ ಬದುಕನ್ನು ಒಂದಿಷ್ಟು ಸಹನೀಯವಾಗಿಸಿದ್ದು ಎಷ್ಟು ಸತ್ಯವೋ  ನಮ್ಮಲ್ಲಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸಿದ್ದು ಕೂಡ ಅಷ್ಟೆ ಸತ್ಯ. ಕುವೆಂಪು ನಂತರ ನಮಗೆ ಜಿಎಸ್ಎಸ್ ಇದ್ದರು ಈಗ ಜಿಎಸ್ಎಸ್ ನಂತರ _________ ಎನ್ನುವ ಪ್ರಶ್ನೆಯೊಂದು ನಮ್ಮ ಮನದಲ್ಲಿ ಮೂಡುವುದು ಸಹಜ. ಜಿಎಸ್ಎಸ್ ಕೂಡ ತಮ್ಮ ಗುರು ಕುವೆಂಪು ಅವರಂತೆ ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ಉತ್ಕೃಷ್ಟ ಗುರು-ಶಿಷ್ಯ ಪರಂಪರೆಯನ್ನೇ ಬೆಳೆಸಿದರು. ಅದಕ್ಕೆಂದೇ ಯು. ಆರ್. ಅನಂತಮೂರ್ತಿ ಅವರು ಜಿಎಸ್ ಎಸ್ ಅವರನ್ನು 'ನಮ್ಮ ಕಾಲದ ದ್ರೋಣ' ಎಂದು ಕರೆಯುತ್ತಾರೆ. ಜಿಎಸ್ಎಸ್ ಕನ್ನಡ ಸಾಹಿತ್ಯದಲ್ಲಿ ತಮ್ಮೊಂದಿಗೆ ಒಂದು ದೊಡ್ಡ ಶಿಷ್ಯ ಸಮೂಹವನ್ನೇ ಕಟ್ಟಿ ಬೆಳೆಸಿದರು. ಜಿಎಸ್ಎಸ್ ಅವರ ಈ ಗುಣವನ್ನು ದುಂಡಿರಾಜ್ ತಮ್ಮ 'ತೆಂಗಿನ ಮರ' ಕವಿತೆಯಲ್ಲಿ ಬಹು ವಿಶಿಷ್ಟವಾಗಿ ಕಟ್ಟಿಕೊಟ್ಟಿರುವರು.


          ಮರಗಳಲ್ಲಿ
          ತೆಂಗಿನ ಮರ
          ಕವಿಗಳಲ್ಲಿ ಇವರು
          ಅದೇ ಥರ
          ಎತ್ತರ
          ಸರಳ, ನೇರ

          ನೆಲದ ಸಾರವನ್ನೆಲ್ಲ ಒಬ್ಬರೇ
          ಹೊಟ್ಟೆ ಬಾಕನಂತೆ ಹೀರಿ
          ಅಡ್ಡಾದಿಡ್ಡಿ ಬೆಳೆದು
          ಎಲ್ಲ ಕಡೆಗೂ ಗೆಲ್ಲು
          ಚಾಚಿದವರಲ್ಲ

          ಗಾಳಿ ಬೆಳಕು
          ತಾವಷ್ಟೇ ಕುಡಿದು
          ಬೇರೆ ಕುಡಿ ಚಿಗುರದಂತೆ
          ನೆರಳು ರಾಚಿದವರಲ್ಲ
       
          ಬೆಳೆಯುವಂತೆ ತೆಂಗಿನ
          ತೋಟದಲ್ಲಿ ಬಾಳೆ,
          ಕೋಕೋ, ಅಡಿಕೆ, ವೀಳ್ಯದೆಲೆ
          ಬೆಳೆಸಿದರು ನೂರಾರು
          ಸಾಹಿತಿಗಳನ್ನು ತಮ್ಮ
          ಜೊತೆ ಜೊತೆಯಲ್ಲೆ 

      ಜಿಎಸ್ಎಸ್ ಭೌತಿಕವಾಗಿ  ನಮ್ಮಿಂದ  ದೂರಾದರೂ ತಮ್ಮ ಕವಿತೆಗಳ ಮೂಲಕ ಅವರು ಎಂದಿಗೂ ನಮ್ಮೊಂದಿಗಿರುತ್ತಾರೆ. ಈ ಸಮನ್ವಯದ ಕವಿಗೆ ಒಂದು ಪುಟ್ಟ ಕವನದ ಮೂಲಕ ಭಾವಪೂರ್ಣ ನಮನಗಳು. 

                             ಹಚ್ಚಿದರು ಹಣತೆ 


                                     ಸಿಡಿದು ಬಂತೊಂದು 
                                     ಬೆಂಕಿಯ ಕಿಡಿ 
                                     ರಸಋಷಿ  (ಕುವೆಂಪು) ಯ 
                                     ಯಜ್ಞ ಕುಂಡದಿಂದ 


                                    ಗುರು ಹಚ್ಚಿದ  ಹಣತೆಯಲಿ 
                                    ಬೆಳಗಿದವರು ನೀವು 
                                    ಗುರುವಿನಂತೆ ಶಿಷ್ಯ 
                                    ಕಂಡಿತು ಈ ಜಗವು 


                                    ಸುತ್ತಲೂ ಕತ್ತಲೆಯೊಳಗೆ 
                                    ಪ್ರೀತಿಯ ಹಣತೆ ಹಚ್ಚಿ 
                                    ಉಣಬಡಿಸಿದಿರಿ ಸಾಹಿತ್ಯದೂಟ 
                                    ಅನುಭವದ ಜೋಳಿಗೆ ಬಿಚ್ಚಿ 


                                    ಭೋರ್ಗರೆಯುತ್ತಿತ್ತು  ನಿಮ್ಮಲ್ಲಿ 
                                    ಕನ್ನಡದ ಅಭಿಮಾನ 
                                    ಮುಗ್ಧ ನಗುವಿನ ಹಿಂದೆ 
                                    ಜಗವ ಮಣಿಸುವ ಸ್ವಾಭಿಮಾನ 


                                    ನವ್ಯ ನವೋದಯ 
                                    ಬಂಡಾಯದ ಹಣೆಪಟ್ಟಿ 
                                    ಹಚ್ಚಿಕೊಂಡವರಲ್ಲ 
                                    ಅದಕ್ಕೆಂದೇ ರಾಷ್ಟ್ರಕವಿಯ ಪಟ್ಟ 


                                    ಕಳಚಿಕೊಂಡವರು ನೀವು 
                                    ಹಮ್ಮು ಬಿಮ್ಮಿನ ಸಂಕೋಲೆ 
                                    ಕೊನೆ ಉಸಿರಿನಲ್ಲೂ  
                                    ಕನ್ನಡದ  ಪ್ರೇಮ ಬತ್ತದ ಸೆಲೆ 


                                     ರಾಷ್ಟ್ರಕವಿಯಾದರೂ 
                                     ಅದೇ ನಿರ್ಲಿಪ್ತ ಮನ 
                                     ಹಾಡು ಹಕ್ಕಿಗೆ ಬೇಕೇ 
                                     ಬಿರುದು ಸನ್ಮಾನ 


                                     ಗುರುವಿನಂತೆ ನೀವು 
                                     ಹಚ್ಚಿದಿರಿ ಹಣತೆ ನೂರಾರು 
                                     ಸದ್ದುಗದ್ದಲದಾಚೆ ನಿಂತು 
                                     ನಿಮ್ಮ ನೆನೆಯುವ ನಾವು ಧನ್ಯರು 

                                                       -ರಾಜಕುಮಾರ.ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

Monday, December 16, 2013

ಭಿತ್ತಿ: ಭಾವಪ್ರಧಾನ ವ್ಯಕ್ತಿತ್ವದ ಕಥನ




          'ಚಿಕ್ಕ ಹುಡುಗನಾದ್ದರಿಂದ ಚಟ್ಟದ ಅಗತ್ಯವಿರಲಿಲ್ಲ. ನಾನೇ ಎತ್ತಿ ಎಡ ಹೆಗಲ ಮೇಲೆ ಹೊತ್ತುಕೊಂಡು ಬಲಗೈಲಿ ಬೆಂಕಿಯ ಮಡಕೆ ಹಿಡಿದು ಹೋಗುವುದೆಂದು ತೀರ್ಮಾನವಾಯಿತು. ಹೆಣ ಎತ್ತುವ ಮೊದಲು ಒಂದೊಂದು ಹಿಡಿಯಂತೆ ಒಟ್ಟು ಮೂರು ಹಿಡಿ ಅಕ್ಕಿ ಕಾಳು ನಾನು, ಅಜ್ಜಿ, ಲಲಿತ ಹೆಣದ ಬಾಯಮೇಲೆ ಸುರಿದ ನಂತರ ನಾನು ಮುಕ್ಕಿರಿದು ಎತ್ತಿ ಹೆಣವನ್ನು ಎಡ ಹೆಗಲ ಮೇಲೆ ಹಾಕಿಕೊಂಡು ಕೆಂಪು ಸೀರೆಯ ತುಂಡನ್ನು ಹೊದಿಸಿ ಮಡಕೆಯ ಬೆಂಕಿಯನ್ನು ಬಲಗೈಲಿ ಹಿಡಿದು ಬೀದಿಯಲ್ಲಿ ಹೊರಟೆ. ಏಳು ವರ್ಷದ ಹುಡುಗನ ಹೆಣದ ಭಾರಕ್ಕೆ ಎಡ ಹೆಗಲು ಸೇದಿ ನುಲಿಯತೊಡಗಿತು. ಅತ್ತಿತ್ತ ಹೊರಳಿಸಿ ಭಾರದ ಸ್ಥಾನವನ್ನು ಬದಲಿಸಿಕೊಳ್ಳಲು ಬಲಗೈ ಮುಕ್ತವಾಗಿರಲಿಲ್ಲ. ಅದಕ್ಕೆ ಕೂಡ ಬೆಂಕಿಯ ರಾವು ಹೊಡೆಯುತ್ತಿತ್ತು. ಸುಸ್ತಾಯಿತೆಂದು ಪದೇ ಪದೇ ಕೆಳಗಿಳಿಸಿ ಸುಧಾರಿಸಿಕೊಂಡು ಪಯಣವನ್ನು ಮುಂದುವರೆಸುವಂತೆಯೂ ಇಲ್ಲ. ಸ್ಮಶಾನಕ್ಕೆ ಹೋಗುವಷ್ಟರಲ್ಲಿ ನನ್ನ ಭುಜ ಮತ್ತು ಎದೆಗೂಡುಗಳು ಸತ್ತು ಹೋಗಿದ್ದವು. ನನ್ನ ಕಣ್ಣೆದುರಿಗೇ ಕೃಷ್ಣಮೂರ್ತಿಯ ಹೆಣ ಕಪ್ಪು ತಿರುಗಿ ಚರ್ಮ ಸುಲಿದು ಬಿಳಿಯ ನೆಣ ಬಾಯ್ದೆರೆದು ತೊಟ್ಟಿಕ್ಕಿ ಅದೇ ಇಂಧನವಾಗಿ ಹೆಣವೇ ಹೊತ್ತಿಕೊಂಡಿತು'. ಓದಿದ ಆ ಕ್ಷಣ ಬುದ್ದಿಯನ್ನೇ  ಮಂಕಾಗಿಸಿ ಮನಸ್ಸನ್ನು ಆರ್ದ್ರಗೊಳಿಸುವ ಈ ಸಾಲುಗಳು ನಾನು ಇತ್ತೀಚಿಗೆ ಓದಿದ 'ಭಿತ್ತಿ' ಪುಸ್ತಕದಿಂದ ಹೆಕ್ಕಿ ತೆಗೆದವುಗಳು. 

          'ಭಿತ್ತಿ' ಇದು ಕನ್ನಡ ಸಾಹಿತ್ಯಕ್ಕೆ ಕ್ಲಾಸಿಕ್ ಕಾದಂಬರಿಗಳನ್ನು ನೀಡಿರುವ ಶ್ರೇಷ್ಠ ಬರಹಗಾರ ಸಂತೇಶಿವರ ಲಿಂಗಣ್ಣ ಭೈರಪ್ಪನವರ ಆತ್ಮಕಥೆ. ಇಪ್ಪತ್ನಾಲ್ಕು ಕಾದಂಬರಿಗಳು, ಆತ್ಮವೃತ್ತಾಂತ, ನಾಲ್ಕು ಸಾಹಿತ್ಯ ಚಿಂತನ ಗ್ರಂಥಗಳು ಮತ್ತು ಎರಡು ಸಂಪಾದಿತ ಕೃತಿಗಳ ಲೇಖಕರಾದ ಎಸ್.ಎಲ್. ಭೈರಪ್ಪನವರು ಕನ್ನಡ ಮಾತ್ರವಲ್ಲದೆ ಇತರ ಭಾಷೆಗಳಲ್ಲೂ ಓದುಗರ ದೊಡ್ಡ ಸಮೂಹವನ್ನು ಹೊಂದಿರುವ ವಿಶಿಷ್ಠ ಬರಹಗಾರ. ಭೈರಪ್ಪನವರ ಕಾದಂಬರಿಗಳು ತೆಲುಗು, ಮರಾಠಿ, ಹಿಂದಿ ಭಾಷೆಗಳೂ ಸೇರಿ ಭಾರತದ ಎಲ್ಲ ೧೪ ಭಾಷೆಗಳಿಗೂ ಅನುವಾದಗೊಂಡಿವೆ. ಭೈರಪ್ಪನವರ ಬದುಕು ಮತ್ತು ಸಾಹಿತ್ಯ ಕುರಿತೇ  ಇಪ್ಪತ್ತಕ್ಕೂ ಹೆಚ್ಚು ಕೃತಿಗಳು ಬೇರೆ ಬೇರೆ ಲೇಖಕರಿಂದ ರಚನೆಗೊಂಡಿರುವುದು ಇನ್ನೊಂದು ವಿಶೇಷ. ಕಾಲಕಾಲಕ್ಕೆ ತಮ್ಮ ಬರವಣಿಗೆಯಿಂದ ಭೈರಪ್ಪನವರು ಕನ್ನಡದ ಓದುಗರನ್ನು ಚಿಂತನೆಗೆ ಹಚ್ಚುತ್ತಲೇ ಬಂದಿರುವರು. ಅವರ ಕೃತಿಗಳು ಮನೋರಂಜನೆಗಾಗಿಯೋ ಇಲ್ಲವೇ ಸಮಯ ಕಳೆಯುವುದಕ್ಕಾಗಿಯೋ ಓದುವಂಥ ಪುಸ್ತಕಗಳ ಸಾಲಿನಲ್ಲಿ ನಿಲ್ಲುವ ಕೃತಿಗಳಲ್ಲ. ಭೈರಪ್ಪನವರ ಕಾದಂಬರಿಯೊಂದನ್ನು ಓದಿದ ನಂತರ ಅದು ಓದುಗನ ಮನಸ್ಸನ್ನು ಅನೇಕ ದಿನಗಳವರೆಗೆ ಕಾಡುತ್ತ ಹೊಸ ಚಿಂತನೆಯನ್ನು ಸೃಷ್ಟಿಸಿ ಬದುಕಿನ ಪರಿವರ್ತನೆಗೆ ಕಾರಣವಾಗುತ್ತದೆ. ಧರ್ಮಶ್ರೀ, ಮತದಾನ, ದಾಟು, ಪರ್ವ, ಮಂದ್ರ ಕಾದಂಬರಿಗಳನ್ನು ಓದಿದ ನನಗೆ ಭೈರಪ್ಪನವರ ಆತ್ಮಕಥೆ ಓದಬೇಕೆನ್ನುವ ಆಸೆ ಮನಸ್ಸಿನಲ್ಲಿ ಮೊಳಕೆಯೊಡೆದು ಕಾಲಾನಂತರದಲ್ಲಿ ಅದು ಹೆಮ್ಮರವಾಗಿ ಬೆಳೆದು ಕೂತಲ್ಲಿ ನಿಂತಲ್ಲಿ ಕಾಡತೊಡಗಿದಾಗ ಪರಿಚಿತರನ್ನು ಸಂಪರ್ಕಿಸಿ 'ಭಿತ್ತಿ' ಯನ್ನು ತರಿಸಿಕೊಳ್ಳದೆ ಬೇರೆ ದಾರಿಯೇ ಇರಲಿಲ್ಲ. ಒಂದು ಹಗಲು ಒಂದು ರಾತ್ರಿ ಕುಳಿತು ಓದಿದ್ದಾಯಿತು. ಓದಿದ ನಂತರದ ಕೆಲವು ದಿನಗಳವರೆಗೆ ಮನೆಯಲ್ಲಿ ಹಾಗೂ ಪರಿಚಿತರಲ್ಲಿ 'ಭಿತ್ತಿ'ಯದೇ ಮಾತು. ಅಷ್ಟರಮಟ್ಟಿಗೆ ಭೈರಪ್ಪನವರ ಬದುಕು ನನ್ನನ್ನು ಕಲಕಿತ್ತು. ಜೊತೆಗೆ ಓದಿದ ಉತ್ತಮ ಪುಸ್ತಕವೊಂದನ್ನು ಅನೇಕ ಮನಸ್ಸುಗಳಿಗೆ ವಿಸ್ತರಿಸುವ ಕೆಲಸ ಓದುಗನಿಂದಾಗಬೇಕು ಎನ್ನುವುದನ್ನು ಬಲವಾಗಿ ನಂಬಿಕೊಂಡಿರುವ ಓದುಗ ನಾನು. ಅದಕ್ಕೆಂದೇ ಕನ್ನಡ ಪುಸ್ತಕಗಳ ಓದುಗರಿಗಾಗಿ 'ಭಿತ್ತಿ' ಕುರಿತು ನನ್ನ ಈ ಬರಹ.

ಭಿತ್ತಿಯಲ್ಲಿ ಮೂಡಿದ ಬದುಕು 


            ಬೆನ್ನು ಹತ್ತಿದ ಬಡತನ, ಜವಾಬ್ದಾರಿಯರಿಯದ ಅಪ್ಪ, ನೆರವು ನೀಡದ ಬಂಧುಗಳು ಹಾಗೂ ಇತರರ ಕೊಂಕು ನುಡಿಗಳ ನಡುವೆ ಭೈರಪ್ಪನವರ ಬಾಲ್ಯದ ಬದುಕು ತೆರೆದುಕೊಳ್ಳುತ್ತದೆ. ಏಳು ಮಕ್ಕಳ ದೊಡ್ಡ ಕುಟುಂಬಕ್ಕೆ ಆಸರೆಯಾಗಿದ್ದು ತಾಯಿಯ ದುಡಿಮೆಯೊಂದೆ. ಗಂಡಸಿಗೆ ಸರಿಸಮವಾಗಿ ದುಡಿದು ಕುಟುಂಬವನ್ನು ಸಾಕುತ್ತಿರುವ ತಾಯಿಯನ್ನು ಕಂಡರೆ ಭೈರಪ್ಪನವರಿಗೆ ಎಲ್ಲಿಲ್ಲದ  ಗೌರವ ಮತ್ತು ಅಭಿಮಾನ. ಆ ಅಭಿಮಾನ ಮತ್ತು ಗೌರವ ಅಮ್ಮನ ಸಾವಿನ ನಂತರವೂ ಅವರಲ್ಲುಳಿದು ಅಮ್ಮನ ವ್ಯಕ್ತಿತ್ವ ಅವರನ್ನು ಸದಾ ಎಚ್ಚರಿಸುವ ಜಾಗೃತ ಪ್ರಜ್ಞೆಯಾಗುತ್ತದೆ. ಜೊತೆಗೆ ಬಾಲ್ಯದಲ್ಲೇ ಕಂಡ ಸಾಲು ಸಾಲು ಸಾವುಗಳು ಭೈರಪ್ಪನವರ ಮನಸ್ಸಿನ ಮೇಲೆ ಗಾಢ ಪರಿಣಾಮವನ್ನುಂಟು ಮಾಡುತ್ತವೆ. ಅಮ್ಮ, ಅಕ್ಕಯ್ಯ, ರಾಮಣ್ಣ, ಸುಶೀಲ, ಕೃಷ್ಣಮೂರ್ತಿ ಈ ಎಲ್ಲ ಸಾವುಗಳನ್ನು ಕಂಡ ಆ ಘಳಿಗೆ ಭೈರಪ್ಪನವರಿಗಿನ್ನೂ ಹದಿನೈದು ವರ್ಷ ವಯಸ್ಸು. ಈ ಸೂತಕದ ಛಾಯೆ ಸಹಜವಾಗಿಯೇ ಅವರಲ್ಲಿ ಧರ್ಮ ಕರ್ಮ, ನ್ಯಾಯ ನೀತಿ, ಸರಿತಪ್ಪು ಇತ್ಯಾದಿ ಅಧ್ಯಾತ್ಮ ಗುಣದ ಪ್ರಶ್ನೆಗಳು ಸ್ಫುಟವಾಗಲು ಕಾರಣವಾಯಿತು. ಸಂತೇಶಿವರದಿಂದ ಬಾಗೂರಿಗೆ ಮುಂದೆ ನುಗ್ಗೆಹಳ್ಳಿಗೆ, ಗೊರೂರು, ಮೈಸೂರು, ಮುಂಬೈ, ಹಾವೇರಿ ಹೀಗೆ ಬದುಕು ಭೈರಪ್ಪನವರನ್ನು ಕೈಹಿಡಿದು ಎಲ್ಲೆಲ್ಲಿಗೋ ಕರೆದೊಯ್ಯುತ್ತದೆ. ಸ್ವಾಮಿ ಮೇಷ್ಟ್ರು, ಅತ್ತಿಗೆ, ಶ್ರೀನಿವಾಸ ಅಯ್ಯಂಗಾರರು, ರಾಮಕೃಷ್ಣಯ್ಯನವರು, ರಾಂಪುರದ ಕಲ್ಲೇಗೌಡರಿಂದ ದೊರೆತ ಸಹಾಯ ಭೈರಪ್ಪನವರ ಬಾಲ್ಯ ಜೀವನವನ್ನು ಒಂದಿಷ್ಟು ಸಹನೀಯವಾಗಿಸುತ್ತದೆ.  ಸೋದರ ಮಾವನ ಮನೆಯಲ್ಲಿ ಅನುಭವಿಸಿದ  ಹಿಂಸೆ, ಅಪಮಾನವನ್ನು ಕುರಿತು ಬರೆಯುವಾಗ ಸಹಜವಾಗಿಯೇ ಭೈರಪ್ಪನವರು ಭಾವುಕರಾಗುತ್ತಾರೆ. ಆ ಅಪಮಾನ ಹಿಂಸೆಯೇ ಅವರ ವ್ಯಕ್ತಿತ್ವವನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ. ಅಮ್ಮನ ಸಾವಿನ ನಂತರ ಸೋದರ ಮಾವನನ್ನು ವಿರೋಧಿಸಿ ಮನೆಯಿಂದ ಹೊರ ಬರುವ ಆ ಸಂದರ್ಭ ಅಸಹಾಯಕಳಾಗಿ ಅಳುತ್ತ ನಿಲ್ಲುವ ಅಕ್ಕಮ್ಮ (ಅಜ್ಜಿ) ನ ಚಿತ್ರ ಕಣ್ಮುಂದೆ ಸುಳಿದು ಓದುಗನ ಮನಸ್ಸು ಆರ್ದ್ರವಾಗುತ್ತದೆ.

         ಅಮ್ಮನ ಅಗಲಿಕೆ, ಸಹೋದರ ಸಹೋದರಿಯರ ಸಾವುಗಳು, ಬೆನ್ನುಹತ್ತಿದ ಬಡತನ, ಅಪ್ಪನ ಬೇಜವಾಬ್ದಾರಿತನ, ಅಮ್ಮನ ತವರಿನಲ್ಲಿ ಅನುಭವಿಸಿದ ಕಷ್ಟ ಈ ಎಲ್ಲ ನೋವುಗಳ ನಡುವೆಯೂ ಭೈರಪ್ಪನವರು ಬದುಕನ್ನು ಒಂದು ಸೃಜನಶೀಲ ನೆಲೆಯಲ್ಲಿ ಕಟ್ಟಿಕೊಳ್ಳಲು ನೆರವಾಗಿದ್ದೆ ನಾಟಕಗಳು. ದಿನನಿತ್ಯ ಹತ್ತಾರು ಮೈಲಿ ನಡೆದು ಊರೂರು ಸುತ್ತಿ ರಾತ್ರಿಯೆಲ್ಲ ನಿದ್ದೆಗಟ್ಟಿ ನೋಡಿದ ನಾಟಕಗಳು ಭೈರಪ್ಪನವರ ಬದುಕಿನ ಮೇಲೆ ಗಾಢ ಪ್ರಭಾವ ಬೀರುತ್ತವೆ. ಮುಂದೆ ಸಿನಿಮಾ ಮಂದಿರದಲ್ಲಿ ಗೇಟ್ ಕೀಪರ್ ಆಗಿ ಕೆಲಸ ಮಾಡುವ ವೇಳೆ ನೋಡುವ ಸಿನಿಮಾಗಳು, ಸಂಗೀತದ ಅಭಿಮಾನಿಯಾಗಿ ಅಸಂಖ್ಯಾತ ಕಾರ್ಯಕ್ರಮಗಳಿಗೆ ಕಿವಿಯಾದದ್ದು, ಊರೂರು ಅಲೆದಾಟ ಈ ಹವ್ಯಾಸಗಳೇ ಅಂದಿಗೂ ಇಂದಿಗೂ ಭೈರಪ್ಪನವರ ಸೃಜನಶೀಲತೆ ಮಂಕಾಗದಂತೆ ಕಾಪಿಟ್ಟುಕೊಂಡು ಬಂದಿವೆ.

        ಭೈರಪ್ಪನವರಿಗೆ ಬರಹದಲ್ಲಿ ರಸವನ್ನು ಸೃಷ್ಟಿಸುವ ಸೃಜನಶೀಲತೆಯಿದೆ. ಅಂಥದ್ದೊಂದು ಸೃಜನಶೀಲ ಶಕ್ತಿ ಅವರಲ್ಲಿರುವುದರಿಂದಲೇ ಅವರ ಈ ಆತ್ಮಕಥೆಯನ್ನು ಓದುವಾಗ ಅದೊಂದು ರೋಚಕ ಕಾದಂಬರಿಯಂತೆ ಭಾಸವಾಗುತ್ತದೆ. ಕಥೆಯ ಓಘ ತನ್ನ ವೇಗವನ್ನು ಕಳೆದುಕೊಳ್ಳದಿರುವುದರಿಂದ ಇಲ್ಲಿ ಪ್ರತಿಯೊಂದು ಅಧ್ಯಾಯ ತನ್ನ ತಾಜಾತನವನ್ನು ಉಳಿಸಿಕೊಂಡಿದೆ. ಜೊತೆಗೆ ಸಾಹಿತ್ಯದ ಒಂದು ಪ್ರಕಾರಕ್ಕೆ ಮಾತ್ರ ನಿಷ್ಠರಾಗಿರಬೇಕೆನ್ನುವ ಅವರೊಳಗಿನ ಹಠ ರಸಸೃಷ್ಟಿಯ ಸೆಲೆಯನ್ನು ನಿರಂತರವಾಗಿ ಪ್ರವಹಿಸುವಂತೆ ಮಾಡಿದೆ. ಭೈರಪ್ಪನವರು ತತ್ವಶಾಸ್ತ್ರವನ್ನು ತಮ್ಮ ಅಧ್ಯಯನಕ್ಕೆ ಆಯ್ಕೆಮಾಡಿಕೊಳ್ಳಲು ಅವರು ಬದುಕಿನಲ್ಲಿ ಎದುರಿಸಿದ ಅನೇಕ ಸವಾಲುಗಳು ಮತ್ತು ಸಮಸ್ಯೆಗಳೇ ಮುಖ್ಯಕಾರಣವಾಗುತ್ತವೆ. ತತ್ವಶಾಸ್ತ್ರದ ಅಧ್ಯಯನದಿಂದ ನೌಕರಿ ಗಿಟ್ಟಿಸುವುದು ಅಸಾಧ್ಯ ಎನ್ನುವ ಸಮಸ್ಯೆಯ ನಡುವೆಯೂ ಅವರು ತತ್ವಶಾಸ್ತ್ರವನ್ನೇ ಆಯ್ಕೆಮಾಡಿಕೊಳ್ಳುತ್ತಾರೆ. 'ಇಫ್ ಫಿಲಾಸಫಿ ಡಸ್ ನಾಟ್ ಬೇಕ್ ಎನಿ ಬ್ರೆಡ್ ಐ ವಿಲ್ ಓಪನ್ ಎ ಬೇಕರಿ ಅಂಡ್ ಅರ್ನ್ ಮೈ ಬ್ರೆಡ್' ಎನ್ನುವಷ್ಟು ತತ್ವಶಾಸ್ತ್ರದ ಮೇಲೆ  ಶ್ರದ್ಧೆ ಮತ್ತು ಪ್ರೀತಿ ಅವರಿಗೆ. ವಿದ್ಯಾರ್ಥಿ ದೆಸೆಯಲ್ಲೇ ತತ್ವಶಾಸ್ತ್ರದ ಆಳ ಅಗಲಗಳ ಶೋಧನೆಗೆ ಮುಂದಾಗುತ್ತಾರೆ. ಯಮುನಾಚಾರ್ಯ ಮತ್ತು ಶಾಂತಮ್ಮನವರಂಥ ಶ್ರೇಷ್ಠ ಗುರುಗಳ ಮಾರ್ಗದರ್ಶನದಲ್ಲಿ ಭೈರಪ್ಪನವರು ತತ್ವಶಾಸ್ತ್ರವನ್ನು ತಮ್ಮೊಳಗೆ ಅಂತರ್ಗತಗೊಳಿಸಿಕೊಳ್ಳುತ್ತಾರೆ. ತತ್ವಶಾಸ್ತ್ರದ ವಿದ್ಯಾರ್ಥಿಯಾಗಿ ಅದನ್ನು ಆಳವಾಗಿ ಅಭ್ಯಸಿಸಿ ಅದೇ ವಿಷಯದ ಉಪನ್ಯಾಸಕರಾಗಿ ಮತ್ತು ಸಂಶೋಧಕರಾಗಿ ಕಾರ್ಯನಿರ್ವಹಿಸುವ ಭೈರಪ್ಪನವರು ಮುಂದೊಂದು ದಿನ ಶ್ರೇಷ್ಠ ತತ್ವಜ್ಞಾನಿಯಾಗುವ ಎಲ್ಲ ಅವಕಾಶಗಳು ಮತ್ತು ಪ್ರತಿಭೆ ಇದ್ದೂ ಅವರು ಸಾಹಿತ್ಯದತ್ತ ಹೊರಳುವುದು ಸಾಹಿತ್ಯದ ಮೇಲಿನ ಅನನ್ಯ ಪ್ರೀತಿಗೆ ಸಾಕ್ಷಿಯಾಗಿದೆ. ಬದುಕಿನ ಒಂದು ಹಂತದಲ್ಲಿ ಎದುರಾಗುವ ಎರಡು ಅವಕಾಶಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ ಎನ್ನುವ ದ್ವಂದ್ವ ಭೈರಪ್ಪನವರನ್ನು ಕಾಡುತ್ತದೆ. ತತ್ವಜ್ಞಾನಿಯಾಗಿ ಖ್ಯಾತಿಯನ್ನು ಹೊಂದಬೇಕೋ ಅಥವಾ ಸಾಹಿತ್ಯದ ಸೃಷ್ಟಿಯಲ್ಲಿ ತನ್ನ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಬೇಕೋ ಎನ್ನುವ ಜಿಜ್ಞಾಸೆಗೆ ಉತ್ತರವನ್ನು ಕಂಡುಕೊಳ್ಳಲು ಅವರು ಹೆಣಗುತ್ತಾರೆ.

ಸಾಹಿತ್ಯದತ್ತ ಹೊರಳುವಿಕೆ


           ಎಸ್. ಎಲ್. ಭೈರಪ್ಪನವರು ೧೯೫೮ ರಲ್ಲಿ ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ತತ್ವಶಾಸ್ತ್ರದ ಉಪನ್ಯಾಸಕರಾಗಿ ತಮ್ಮ ವೃತ್ತಿಬದುಕಿಗೆ ಕಾಲಿಡುವರು. ೧೯೬೦ ರ ವರೆಗೆ ಸುಮಾರು ಎರಡು ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿ ಮುಂದೆ ಗುಜರಾತಿನ ಸರ್ದಾರ ಪಟೇಲ ವಿಶ್ವವಿದ್ಯಾಲಯದಲ್ಲಿ  ಹೊಸ ನೇಮಕಾತಿಯೊಂದಿಗೆ ಹೊಸ ಪರಿಸರದಲ್ಲಿ ಅವರ ವೃತ್ತಿ ಬದುಕಿನ ಪುಟಗಳು ತೆರೆದುಕೊಳ್ಳಲಾರಂಭಿಸುತ್ತವೆ. ಆ ಖಾಸಗಿ  ಕಾಲೇಜನ್ನು ಬಿಟ್ಟು  ಬರುವಾಗ ಅವರಿಗೆ ಅಡೆತಡೆಗಳು ಮತ್ತು ಕೆಲವು ಮಹನೀಯರ ಸಹಕಾರ ಒಟ್ಟೊಟ್ಟಿಗೆ ಎದುರಾಗುತ್ತವೆ. ಆ ಸಂದರ್ಭ ಹಿರಿಯರಾದ ನಾಡಗೌಡ, ತೋಪಖಾನೆ, ಕಲ್ಮಠ ಅವರಿಂದ ದೊರೆಯುವ ಸಹಕಾರ ಮತ್ತು ನೈತಿಕ ಪ್ರೋತ್ಸಾಹ ಯಾವುದೇ ಸಮಸ್ಯೆಗಳಿಲ್ಲದೆ ಭೈರಪ್ಪನವರು ವಿಶ್ವವಿದ್ಯಾಲಯದಂಥ ಉನ್ನತ ಶಿಕ್ಷಣ ಕೇಂದ್ರಕ್ಕೆ ಉಪನ್ಯಾಸಕರಾಗಿ ಸೇರಲು ನೆರವಾಗುತ್ತದೆ.

            ಗುಜರಾತು ಸೇರಿದ ಮುಂದಿನ ಎರಡು ವರ್ಷಗಳಲ್ಲೇ ಭೈರಪ್ಪನವರು ಡಾ.ಜಾವಡೇಕರ್ ಅವರ ಮಾರ್ಗದರ್ಶನದಲ್ಲಿ      ಪಿ. ಹೆಚ್. ಡಿ ಶಿಕ್ಷಣವನ್ನು ಪೂರ್ಣಗೊಳಿಸುವರು. ಪಿ. ಹೆಚ್. ಡಿ ಪದವಿ ನಂತರ ಜಾವಡೇಕರ್ ಡಿ. ಲಿಟ್ ಪದವಿಗಾಗಿ ತತ್ವಶಾಸ್ತ್ರದಲ್ಲಿ ಪುಸ್ತಕವೊಂದನ್ನು ಬರೆಯುವಂತೆ ಭೈರಪ್ಪನವರಿಗೆ ಸೂಚಿಸುವರು. ಅನೇಕ ಪುಸ್ತಕಗಳನ್ನು ಓದಿ ತತ್ವಶಾಸ್ತ್ರ ವಿಷಯದಲ್ಲಿ ಪ್ರಭುತ್ವವಿರುವ ಭೈರಪ್ಪನವರಿಗೆ ಇದು ಸುಲಭದ ಕೆಲಸ ಎನ್ನುವುದು ಜಾವಡೇಕರ್ ರ ಅಭಿಪ್ರಾಯವಾಗಿತ್ತು. ತಮ್ಮ ಗುರುಗಳ ಸಲಹೆಗೆ ಪ್ರಾರಂಭದಲ್ಲಿ ಸೂಕ್ತವಾಗಿಯೇ ಪ್ರತಿಕ್ರಿಯಿಸುವ ಭೈರಪ್ಪನವರು ಈ ವಿಷಯವಾಗಿ ಕಾರ್ಯೋನ್ಮುಖರಾಗುವರು. ಹೀಗೆ ಡಿ.ಲಿಟ್ ಪದವಿಗಾಗಿ ತಯ್ಯಾರಿ ಮಾಡಿಕೊಳ್ಳುತ್ತಿರುವ ಸಮಯದಲ್ಲೇ ಅವರಲ್ಲಿ 'ವಂಶ ವೃಕ್ಷ' ದ ಕಥೆ, ಪಾತ್ರಗಳು, ಸನ್ನಿವೇಶ, ಸಂದರ್ಭಗಳು ಮನಸ್ಸಿನಲ್ಲಿ ಮೊಳಕೆಯೊಡೆದು ಕಾಡಲಾರಂಭಿಸುತ್ತವೆ. ಈ ನಡುವೆ ಹುಬ್ಬಳ್ಳಿಯ ಸಾಹಿತ್ಯ ಭಂಡಾರದ ಗೋವಿಂದರಾಯರಿಂದ ಕಾದಂಬರಿಯೊಂದನ್ನು ಬರೆದು ಕಳುಹಿಸಿ ಎನ್ನುವ ಪ್ರೀತಿಯ ಒತ್ತಾಯ. ಒಂದೆಡೆ ವೃತ್ತಿ ಬದುಕಿನಲ್ಲಿ ಉನ್ನತ ಸ್ಥಾನ ತಂದು ಕೊಡಲಿರುವ ಡಿ.ಲಿಟ್ ಪದವಿ ಇನ್ನೊಂದೆಡೆ ಸೃಜನಾತ್ಮಕವಾದದ್ದನ್ನು ಸೃಷ್ಟಿಸಲು ನೆರವಾಗುವ ಸಾಹಿತ್ಯ. ಒಂದು ವಾಸ್ತವವಾದರೆ ಇನ್ನೊಂದು ಭಾವಪ್ರಧಾನ. ತತ್ವಶಾಸ್ತ್ರದ ಸಂಶೋಧನೆಯಲ್ಲೇ ಮುಂದುವರೆಯಲೇ? ಅಥವಾ ಸೃಜನಶೀಲ ಮಾಧ್ಯಮವಾದ ಕಾದಂಬರಿ ರಚನೆಯಲ್ಲಿ ತೊಡಗಿಸಿಕೊಳ್ಳಲೆ ಭೈರಪ್ಪನವರ ಮನಸ್ಸು ಈ ಸಂದಿಗ್ಧದಲ್ಲಿ ಅನೇಕ ತಿಂಗಳುಗಳ ಕಾಲ ಹೊಯ್ದಾಡುತ್ತದೆ. ಒಂದು ಹಂತದಲ್ಲಿ ಕನ್ನಡದಲ್ಲಿ ಬರೆಯುವ ಕಾದಂಬರಿಗೆ ಗುಜರಾತಿನಲ್ಲಿರುವ ತತ್ವಶಾಸ್ತ್ರ ವಿಭಾಗದಲ್ಲೇನು ಬೆಲೆ ಇರುತ್ತದೆ? ಎಂಬ ಲೌಕಿಕ ವಿವೇಕ ಎಚ್ಚರಿಸುತ್ತದೆ. ಇಂಥದ್ದೊಂದು ಹೊಯ್ದಾಟದ ನಡುವೆ ಕೆಲವು ದಿನಗಳ ಕಾಲ ಡಿ.ಲಿಟ್ ಪುಸ್ತಕಕ್ಕೆ ಕೈ ಹಚ್ಚುವುದು ನಂತರ ಇದು ನನ್ನ ಅಭಿವ್ಯಕ್ತಿ ಮಾಧ್ಯಮವಲ್ಲ ಎನ್ನುವ ಒಳಗಿನ ಒತ್ತಡದಿಂದಾಗಿ ಕಾದಂಬರಿ ಕಡೆ ಹೊರಳುವುದು ಈ ತೊಳಲಾಟ ಮುಂದುವರಿಯುತ್ತದೆ. ಕೊನೆಗೆ ಲೌಕಿಕ ವಿವೇಕದ ದ್ವನಿಯು ಬುದ್ದಿಯೊಳಕ್ಕೆ ಪ್ರವೇಶವನ್ನೇ ಮಾಡದ ಸ್ಥಿತಿಯು ಒಳಗಿನಿಂದ ಬೆಳೆದು ಹೆಮ್ಮರವಾದಾಗ ಭೈರಪ್ಪನವರು ಸೃಜನಾತ್ಮಕವಾಗಿ ಸೃಷ್ಟಿಸುವ ಸಾಹಿತ್ಯವನ್ನೇ ತಮ್ಮ ಬರವಣಿಗೆಯ ಮಾಧ್ಯಮವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಭೈರಪ್ಪನವರ ದೃಷ್ಟಿಯಲ್ಲಿ ಬರವಣಿಗೆ ಎನ್ನುವುದು ಅದು ಬರೀ ಬರೆದು ಹೊರಹಾಕುವುದಲ್ಲ. ಕುಸುರಿ ಕೆಲಸವಿರುವ ಪಾತ್ರಗಳ ಒಳಗನ್ನು ಪದರ ಪದರವಾಗಿ ತೋರಿಸುವ ಬರವಣಿಗೆ ಅದೊಂದು ಕಲೆ. ಇಂಥದ್ದೊಂದು ಕಲೆ ಅದು ಕಾದಂಬರಿ ರಚನೆಯಲ್ಲಿ ಮಾತ್ರ ಸಾಧ್ಯ ಎಂದವರ ನಂಬಿಕೆ. ಆದ್ದರಿಂದ ಸಂಶೋಧನಾ ಬರವಣಿಗೆಯನ್ನು ಹಿಂದೆ ಸರಿಸಿ ಕಾದಂಬರಿಯ ಬರವಣಿಗೆಗೆ ಮುಂದಾಗುತ್ತಾರೆ. ಹೀಗೆ ಸಂಶೋಧನಾ ಬರವಣಿಗೆಯಿಂದ ಸಂಪೂರ್ಣವಾಗಿ ಬಿಡಿಸಿಕೊಂಡು ಹೊರಬರುವ ಭೈರಪ್ಪನವರು ಆ ಘಳಿಗೆ ಹೀಗೆ ನುಡಿಯುತ್ತಾರೆ 'ತತ್ವಶಾಸ್ತ್ರದಲ್ಲಿ ಸೃಜನಾತ್ಮಕವಾಗಿ ಸೃಷ್ಟಿಸುವುದು ನನ್ನ ಮನೋಧರ್ಮದಲ್ಲಿಲ್ಲ. ನನ್ನದು ಭಾವಪ್ರಧಾನ ವ್ಯಕ್ತಿತ್ವ. ನಾನು ಸೃಜನಾತ್ಮಕವಾಗಬಹುದಾದದ್ದು ಸಾಹಿತ್ಯದಲ್ಲಿ ಮಾತ್ರ ಎಂಬುದನ್ನು ಒಂದು ಘಟ್ಟದಲ್ಲಿ ಅರ್ಥಮಾಡಿಕೊಂಡೆ. ಸಾಹಿತ್ಯವು ನನ್ನ ಸೃಜನಶೀಲ ಅಭಿವ್ಯಕ್ತಿಯ ಮಾಧ್ಯಮವಾಯಿತು. ಅದು ಅಪೇಕ್ಷಿಸಿದಂತೆ ನನ್ನ ಕಾಲ, ಚಿಂತನೆ, ವ್ಯವಸಾಯಗಳನ್ನೆಲ್ಲ ಬದಲಿಸಿಕೊಂಡೆ'. ಹೀಗೆ ಕಾಲ, ಚಿಂತನೆ, ವ್ಯವಸಾಯಗಳನ್ನು ಸಾಹಿತ್ಯಕ್ಕೆ ಪೂರಕವಾಗಿ ಬದಲಿಸಿಕೊಂಡ ಭೈರಪ್ಪನವರಿಂದ ಮುಂದಿನ ದಿನಗಳಲ್ಲಿ ಕನ್ನಡಕ್ಕೆ ಮಾತ್ರವಲ್ಲದೆ ಭಾರತದ ಇಡೀ ಸಾಹಿತ್ಯ ಕ್ಷೇತ್ರಕ್ಕೆ ಶ್ರೇಷ್ಠ ಕಾದಂಬರಿಗಳು ಕೊಡುಗೆಯಾಗಿ ದೊರೆತವು.

ನಾನ್ ಅಕಾಡೆಮಿಕ್ ಬರಹಗಾರ


         ಭೈರಪ್ಪನವರು ಓದಿದ್ದು ತತ್ವಶಾಸ್ತ್ರ ಆದರೆ ಕೃಷಿ ಮಾಡುತ್ತಿರುವುದು ಸಾಹಿತ್ಯದಲ್ಲಿ. ಅವರ ಓದಿನ ಹಿನ್ನೆಲೆಯನ್ನೇ ಆಧಾರವಾಗಿಟ್ಟುಕೊಂಡು ಕನ್ನಡದ ಸಾಹಿತ್ಯ ವಲಯ ಕಾಲಾನುಕಾಲಕ್ಕೆ ಭೈರಪ್ಪನವರ ಬರವಣಿಗೆಯನ್ನು ಟೀಕಿಸುತ್ತಲೇ ಬಂದಿದೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಭೈರಪ್ಪನವರು ಯಾವ ಟೀಕೆ ಟಿಪ್ಪಣಿಗಳಿಗೂ ಕಿವಿಗೊಡದೆ ಅತ್ಯುತ್ತಮ ಕಾದಂಬರಿಗಳನ್ನು ಬರೆದು ತಮ್ಮ ಬರವಣಿಗೆಯ ಓದಿಗೆ ದೊಡ್ಡ ಓದುಗರ ಸಮೂಹವನ್ನೇ ಸೃಷ್ಟಿಸಿಕೊಂಡ ಲೇಖಕ. ಭೈರಪ್ಪನವರಿಗಿರುವ ಈ ಜನಪ್ರಿಯತೆ ಮತ್ತು ಅವರೊಳಗಿನ ಸೃಜನಶೀಲತೆಯನ್ನು ಸಹಿಸಿಕೊಳ್ಳದ ನಮ್ಮ ಸಾಹಿತಿಗಳು ಅನೇಕ ಸಂದರ್ಭಗಳಲ್ಲಿ ತಮ್ಮ ಸಣ್ಣತನವನ್ನು ಪ್ರದರ್ಶಿಸಿದ್ದುಂಟು. ಅಂಥ ಒಂದೆರಡು ಸಣ್ಣತನಗಳನ್ನು ಹೇಳದೆ ಇದ್ದಲ್ಲಿ ಲೋಪವಾಗಬಹುದೆನ್ನುವ ವಿನಯದಿಂದಲೇ ಭೈರಪ್ಪನವರು ತಮ್ಮ ಆತ್ಮಕಥನದಲ್ಲಿ ಒಂದೆರಡು ಉದಾಹರಣೆಗಳಿಗೆ ಜಾಗಮಾಡಿ ಕೊಟ್ಟಿರುವರು.

         ಕನ್ನಡದ ಶ್ರೇಷ್ಠ ವಿಮರ್ಶಕರೆಂದೇ ಹೆಸರಾದ ಕೀರ್ತಿನಾಥ ಕುರ್ತುಕೋಟಿ ಅವರು ಅನೇಕ ಸಂದರ್ಭಗಳಲ್ಲಿ ಭೈರಪನವರ ಬರವಣಿಗೆಯನ್ನು ಟೀಕಿಸಿದ ಪ್ರಸಂಗಗಳು ಪುಸ್ತಕದ ಅಲ್ಲಲ್ಲಿ ಬರುತ್ತವೆ. ಒಂದು ಹಂತದಲ್ಲಿ ಕುರ್ತುಕೋಟಿ ಅವರು ಭೈರಪ್ಪನವರ ವ್ಯಕ್ತಿತ್ವದ ಮೇಲೆ ಪ್ರಹಾರ ಮಾಡುತ್ತ ಹೀಗೆ ಟೀಕಿಸುತ್ತಾರೆ 'ಸದಾ ಪುಸ್ತಕ ಜೀವಿಯಾಗಿರುವ ಭೈರಪ್ಪನವರಿಗೆ ಜೀವನಾನುಭವವೇ ಇಲ್ಲ. ಇವರು ಬರೆಯುವ ಕಾದಂಬರಿಯಲ್ಲಿ ಸತ್ವ ಹೇಗಿದ್ದೀತು? ಭೈರಪ್ಪನವರು ಚಹಾ ಕುಡಿಯುವುದಿಲ್ಲ ಆದ್ದರಿಂದ ಅವರ ಪಾತ್ರಗಳಿಗೂ ಚಹಾ ಕುಡಿಯಲು ಬರುವುದಿಲ್ಲ'.

         ೧೯೬೭ ರಲ್ಲಿ ಉಡುಪಿಯಲ್ಲಿ ಏರ್ಪಟ್ಟ ವಿಚಾರಗೊಷ್ಠಿಯಲ್ಲಿ ಕುರ್ತುಕೋಟಿಯವರು 'ವಂಶ ವೃಕ್ಷ' ಕಾದಂಬರಿಯನ್ನು ನೂರು ದೋಷಗಳಿರುವ ಕಾದಂಬರಿ ಎಂದು ಟೀಕಿಸಿದರೆ 'ಪರ್ವ' ದ ಮೇಲೆ ಬೆಂಗಳೂರಿನಲ್ಲಿ ನಡೆದ ವಿಮರ್ಶಾಗೊಷ್ಠಿಯಲ್ಲಿ 'ಇದು ಪಾಶ್ಚಿಮಾತ್ಯರಿಂದ ಪಡೆದ ಕಾದಂಬರಿ ಫಾರಂನಿಂದ ನಮ್ಮ ಪುರಾಣದ ಮೇಲೆ ನಿಯೋಗ ಮಾಡಿಸಿ ಸೃಷ್ಟಿಸಿದ ಕೃತಿ' ಎಂದು ರೋಷ ವ್ಯಕ್ತಪಡಿಸುತ್ತಾರೆ. ೧೯೮೮ ರಲ್ಲಿ ಬರೋಡದಲ್ಲಿ ಏರ್ಪಡಿಸಿದ ಭೈರಪ್ಪನವರ ಸನ್ಮಾನ ಸಮಾರಂಭದಲ್ಲಿ ಕುರ್ತುಕೋಟಿ ಅವರು 'ಭೈರಪ್ಪನವರು ತುಂಬಾ ಉದಾರವಾದಿ. ಮನೆಗೆ ಬಂದ ಮಿತ್ರರಿಗೆ ಹೋಳಿಗೆ ಮಾಡಿಸಿ ಉಣ್ಣಿಸುತ್ತಾರೆ' ಎಂದು ಹೇಳಿ ಅವರ ಕಾದಂಬರಿಗಳ ವಿಷಯವಾಗಿ ಒಂದು ಮಾತನ್ನೂ ಆಡುವುದಿಲ್ಲ.

           ಭೈರಪ್ಪನವರು ತಮ್ಮ ವೃತ್ತಿ ಬದುಕಿನ ಕೊನೆಯ ಹಂತವಾಗಿ ಮೈಸೂರಿಗೆ ಬಂದು ನೆಲೆಸಿದಾಗ ಅದಾಗಲೇ ನವ್ಯರು ಕನ್ನಡ ಸಾಹಿತ್ಯ ವಲಯದಲ್ಲಿ ತಮ್ಮ ನೆಲೆಯನ್ನು ಗಟ್ಟಿಗೊಳಿಸಿಕೊಂಡಿದ್ದರು. ಒಂದು ದಶಕಕ್ಕೂ ಹೆಚ್ಚು ಕಾಲ ಕರ್ನಾಟಕದ ಹೊರಗಿದ್ದೇ ಭೈರಪ್ಪನವರು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರೂ ಇಲ್ಲಿನ ನವ್ಯರೊಂದಿಗೆ ಅವರಿಗೆ ಸಂಪರ್ಕ ಏರ್ಪಡಲಿಲ್ಲ. ಪರಿಣಾಮವಾಗಿ ನವ್ಯರು ಕಾಲ ಕಾಲಕ್ಕೆ ಭೈರಪನವರ ಕೃತಿಗಳನ್ನು ಅನಂತಮೂರ್ತಿ ಅವರ ಕೃತಿಗಳೊಂದಿಗೆ ತುಲನೆ ಮಾಡುತ್ತ ಟೀಕಿಸುತ್ತಲೇ ಹೋದರು. ಅನಂತಮೂರ್ತಿ ಅವರ 'ಸಂಸ್ಕಾರ' ಪ್ರಗತಿಗಾಮಿಯಾದರೆ ಭೈರಪ್ಪನವರ 'ವಂಶ ವೃಕ್ಷ' ಪ್ರತಿಗಾಮಿ ಎನ್ನುವ ಉಪೇಕ್ಷೆಗೆ ಒಳಗಾಯಿತು. 'ಭಾರತೀಪುರ' ಕ್ರಾಂತಿಕಾರಕ ಕೃತಿಯಾದರೆ 'ದಾಟು' ಬ್ರಾಹ್ಮಣಿಕೆಯ ಹಿರಿಮೆಯನ್ನು ಎತ್ತಿ ಹಿಡಿಯುವ ಪ್ರತಿಗಾಮಿ ಕೃತಿ ಎಂದು ಪ್ರಚಾರ ಮಾಡಲಾಯಿತು. ಕೆಲವು ವಿಮರ್ಶಕರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ 'ಭೈರಪ್ಪನವರದು ರಂಜಿಸಿ ವಂಚಿಸುವ ಕಲೆ. ಇವರದು ಪೂರ್ವನಿಶ್ಚಿತ ವಿಚಾರಗಳನ್ನು ಪ್ರತಿಪಾದಿಸಲೆಂದು ಬರೆಯುವ ವಿಧಾನ. ಇವರೊಬ್ಬ ರಂಜಕ ಕಥೆಗಾರರು. ಕಥೆಗಿಂತ ಹೆಚ್ಚಿನದು ಇವರ ಕಾದಂಬರಿಗಳಲ್ಲಿಲ್ಲ. ಇವರೊಬ್ಬ ಜನಪ್ರಿಯ ಆದರೆ ಕಲಾಗುಣವಿಲ್ಲದ ಲೇಖಕ' ಎಂದು ಆರೋಪಿಸಿದರು.

           ೧೯೮೧ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಭಾರತದ ಎಲ್ಲ ಭಾಷೆಗಳಲ್ಲೂ ಒಂದೊಂದು ಆಧುನಿಕ ಕ್ಲಾಸಿಕ್ ಎಂದು ಪರಿಗಣಿಸಲ್ಪಡಬಹುದಾದ ಸಾಹಿತ್ಯ ಕೃತಿಯನ್ನು ಇಂಗ್ಲಿಷ್ ಗೆ ಅನುವಾದಿಸಲು ಯೋಜನೆ ಹಾಕಿಕೊಳ್ಳುತ್ತದೆ. ಆಗ ಕನ್ನಡ ಭಾಷೆಯಿಂದ ಆಯ್ಕೆಯಾಗುವ ಕೃತಿ ಕನ್ನಡ ಸಾಹಿತ್ಯದಲ್ಲೇ ಶ್ರೇಷ್ಠ ಎಂದೇ ಪರಿಗಣಿತವಾಗಿದ್ದ 'ಪರ್ವ' ಕಾದಂಬರಿ. ಅಕಾಡೆಮಿಯ ಸದಸ್ಯರೆಲ್ಲರೂ 'ಪರ್ವ' ಕೃತಿ ಅನುವಾದಗೊಳ್ಳಲೇ ಬೇಕಾದ ಕೃತಿ ಎಂದು ಅನುಮೋದಿಸಿದರೂ ಅನಂತಮೂರ್ತಿ ಮತ್ತು ಕುರ್ತುಕೋಟಿ ಅಪಸ್ವರ ಎತ್ತುತ್ತಾರೆ. ಕೊನೆಗೆ ಹೊಸ ಸಲಹಾ ಸಮಿತಿಯೊಂದು ಅಸ್ತಿತ್ವಕ್ಕೆ ಬಂದು 'ಪರ್ವ' ಕಾದಂಬರಿಯ ಇಂಗ್ಲಿಷ್ ಅನುವಾದಕ್ಕೆ ಒಪ್ಪಿಗೆ ದೊರೆಯುತ್ತದೆ. ಹೀಗೆ ಭೈರಪ್ಪನವರ ವ್ಯಕ್ತಿತ್ವ ಮತ್ತು ಬರವಣಿಗೆಯನ್ನು ಅವಕಾಶ ಸಿಕ್ಕಾಗಲೆಲ್ಲ ನವ್ಯರ ಗುಂಪು ತೇಜೋವಧೆಗೆ ಪ್ರಯತ್ನಿಸುತ್ತಲೇ ಬಂದಿದೆ. ಇತ್ತೀಚಿನ ಉದಾಹರಣೆಯಾಗಿ ಅವರ 'ಆವರಣ' ಕೃತಿಯನ್ನು ವಿರೋಧಿಸಿ 'ಅನಾವರಣ' ಪುಸ್ತಕವನ್ನೇ ಬರೆದರು. ಆದರೆ ಭೈರಪ್ಪನವರು ಮಾತ್ರ ಈ ಎಲ್ಲ ಬೆಳವಣಿಗೆಗಳಿಂದ ದೂರ ನಿಂತು ಕನ್ನಡಕ್ಕೆ ಕ್ಲಾಸಿಕ್ ಕೃತಿಗಳನ್ನು ಕೊಡುತ್ತಲೇ ಇರುವರು.

ಸಾಹಿತ್ಯ ಭಂಡಾರದೊಂದಿಗಿನ ನಂಟು 


            ಭೈರಪ್ಪನವರ ಎಲ್ಲ ಕೃತಿಗಳನ್ನು ಪ್ರಕಟಿಸಿದ್ದು ಸಾಹಿತ್ಯ ಭಂಡಾರ ಪ್ರಕಾಶಕರು. ಭೈರಪ್ಪನವರ ಕಾದಂಬರಿಗಳಿಗೆ ಅತಿ ಬೇಡಿಕೆಯಿದ್ದು ಅನೇಕ ಪ್ರಕಾಶಕರು ಅವರ ಕೃತಿಗಳನ್ನು ಪ್ರಕಟಿಸಲು ಮುಂದೆ ಬಂದರೂ ಭೈರಪ್ಪನವರು ಮಾತ್ರ ಸಾಹಿತ್ಯ ಭಂಡಾರದೊಂದಿಗಿನ ತಮ್ಮ ನಿಷ್ಠೆಯನ್ನು ಮುರಿಯಲಿಲ್ಲ. ಅದಕ್ಕೆಂದೇ ಭೈರಪ್ಪನವರಿಗೂ ಮತ್ತು ಸಾಹಿತ್ಯ ಭಂಡಾರದ ಗೋವಿಂದ ರಾಯರಿಗೂ ನಡುವೆ ಲೇಖಕ ಮತ್ತು ಪ್ರಕಾಶಕನ ಸಂಬಂಧವನ್ನು ಮೀರಿದ ಅನ್ಯೋನ್ಯತೆ ಮನೆ ಮಾಡಿತ್ತು. ಭೈರಪ್ಪನವರು ತಮ್ಮ ಆತ್ಮಕಥೆ 'ಭಿತ್ತಿ'ಯಲ್ಲಿ ಸಾಹಿತ್ಯ ಭಂಡಾರ ಮತ್ತು ಗೋವಿಂದ ರಾಯರಿಗೆ ವಿಶೇಷ ಸ್ಥಾನ ನೀಡಿರುವರು. ನಿಜಕ್ಕೂ ಅವರಿಬ್ಬರ ನಡುವಣ ಅನ್ಯೋನ್ಯತೆ ಮತ್ತು ವ್ಯವಹಾರ ನಿಷ್ಠೆ ಇವತ್ತಿನ ಲೇಖಕರು ಮತ್ತು ಪ್ರಕಾಶಕರಿಗೆ ಅದೊಂದು ಮಾದರಿ.

         ಭೈರಪ್ಪನವರಿಗೆ ಗೋವಿಂದರಾಯರ ಪರಿಚಯವಾಗಿದ್ದು ಅವರ 'ಧರ್ಮಶ್ರೀ' ಕಾದಂಬರಿಯ ಪ್ರಕಟಣೆಯ ಸಂದರ್ಭ. ಯಾವ ಹೆಸರೂ ಇಲ್ಲದ ಲೇಖಕನನ್ನು ಮನೆ ಹುಡುಕಿಕೊಂಡು ಹೋಗಿ ಅವರ ಕಾದಂಬರಿಯನ್ನು ಪ್ರಕಟಿಸಿದ ಔದಾರ್ಯತೆ ಸಾಹಿತ್ಯ ಭಂಡಾರದ ಗೋವಿಂದರಾಯರದು. ಅವರ ಆ ಔದಾರ್ಯತೆಯೇ ಭೈರಪ್ಪನವರು ತಮ್ಮ ಎಲ್ಲ ಕೃತಿಗಳನ್ನು ಸಾಹಿತ್ಯ ಭಂಡಾರದ ಮೂಲಕವೇ ಪ್ರಕಟವಾಗುವಂತೆ ನೋಡಿಕೊಳ್ಳಲು ಕಾರಣವಾಯಿತು. ನಂತರದ ದಿನಗಳಲ್ಲಿ ಭೈರಪ್ಪನವರ ಜನಪ್ರಿಯತೆ ಹೆಚ್ಚಿ ಅವರ ಕಾದಂಬರಿಗಳ ಬೇಡಿಕೆ ಏರಿ ಅನೇಕ ಪ್ರಕಾಶಕರು ಹೆಚ್ಚಿನ ಸಂಭಾವನೆ ಕೊಡುವ ಪ್ರಲೋಭನೆ ಒಡ್ಡಿದಾಗಲೂ ಅವರು ಗೋವಿಂದ ರಾಯರೆಡೆಗಿನ ತಮ್ಮ ನಿಷ್ಠೆಯನ್ನು ಬದಲಿಸಲಿಲ್ಲ. ಗೋವಿಂದ ರಾಯರು ತಮ್ಮ ಮೊದಲ ಕಾದಂಬರಿಯನ್ನು ಪ್ರಕಟಿಸಿದರು ಎನ್ನುವುದರ ಜೊತೆಗೆ ಪುಸ್ತಕ ಪ್ರಕಾಶಕನದ ಬಗೆಗಿನ ಅವರಲ್ಲಿದ್ದ ಕಾಳಜಿ, ಪ್ರಾಮಾಣಿಕತೆ, ಖರೀದಿಸಿ ಓದುವ ಓದುಗರಿಗೆ ಮೋಸ ಮಾಡಬಾರದೆನ್ನುವ ಮನೋಭಾವ ಈ ಗುಣಗಳೇ ಭೈರಪ್ಪನವರಿಗೆ ಗೋವಿಂದ ರಾಯರ ಬಗೆಗಿನ ನಿಷ್ಠೆಗೆ ಕಾರಣಗಳಾದವು.

           ಈ ನಡುವೆ ಭೈರಪ್ಪನವರು ಸಂಬಳವಿಲ್ಲದೆ ರಜೆ ಹಾಕಿ 'ಪರ್ವ' ಬರೆಯಲು ನಿರ್ಧರಿಸುತ್ತಾರೆ. ಸಂಬಳವಿಲ್ಲದೆ ಸಂಸಾರದ ಖರ್ಚು ವೆಚ್ಚಗಳನ್ನು ತೂಗಿಸುವುದಾದರೂ ಹೇಗೆ ಎನ್ನುವ ಸಮಸ್ಯೆ ಎದುರಾದಾಗ ಗೋವಿಂದ ರಾಯರು ಅವರ ನೆರವಿಗೆ ಬರುತ್ತಾರೆ. ಭೈರಪ್ಪನವರು ರಜೆಯಿಂದ ಕೆಲಸಕ್ಕೆ ಹಿಂದಿರುಗುವವರೆಗೂ ಅವರ ಸಂಸಾರ ನಿರ್ವಹಣೆಗೆ ಅಗತ್ಯದ ಹಣವನ್ನು ಪ್ರತಿತಿಂಗಳೂ ತಪ್ಪದೆ ತಲುಪಿಸುತ್ತಾರೆ. ಲೇಖಕನ ಸೃಜನಶೀಲತೆ ಮುಕ್ಕಾಗದಂತೆ ಕಾಯ್ದುಕೊಳ್ಳುವ ಈ ಪ್ರವೃತ್ತಿ ಇವತ್ತಿನ ಪ್ರಕಾಶಕರಲ್ಲಿ ಇಲ್ಲದಿರುವುದು ಅತ್ಯುತ್ತಮ ಪುಸ್ತಕಗಳ ಕೊರತೆಗೆ ಬಹುಮುಖ್ಯ ಕಾರಣವಾಗಿದೆ. 'ದಾಟು' ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ಗೋವಿಂದ ರಾಯರು ಸಂಭ್ರಮದಿಂದ ಮನೆಯಲ್ಲಿ ಹಬ್ಬ ಆಚರಿಸುವರು. ಆ ನೆನಪಿಗಾಗಿ ಸಾಹಿತ್ಯ ಪರಿಷತ್ತಿಗೆ ಹಣವನ್ನು ದೇಣಿಗೆಯಾಗಿ ನೀಡುವರು. ಭೈರಪ್ಪನವರೂ ಸಹ ಗೋವಿಂದ ರಾಯರೊಂದಿಗಿನ ವ್ಯವಹಾರಕ್ಕೆ ಯಾವುದೇ ಧಕ್ಕೆಯಾಗದಂತೆ ನಡೆದು ಕೊಳ್ಳುವರು. ಭೈರಪ್ಪನವರು ತಮ್ಮ ಆತ್ಮಕಥೆಯನ್ನು ಬರೆಯಲು ಮುಂದಾಗುವುದು ಕೂಡ ಗೋವಿಂದ ರಾಯರ ಪ್ರೀತಿಯ ಒತ್ತಾಯದಿಂದಲೇ. ಗೋವಿಂದ ರಾಯರ ಸಾವಿನ ನಂತರ   ಹಿರಿಯ ಜೀವವೊಂದನ್ನು ಕಳೆದುಕೊಂಡ ಅನಾಥ ಪ್ರಜ್ಞೆ ಕಾಡಲಾರಂಭಿಸುತ್ತದೆ. ಆ ಅನಾಥ ಪ್ರಜ್ಞೆಯನ್ನು ಭೈರಪ್ಪನವರು ಹೀಗೆ ವಿವರಿಸುತ್ತಾರೆ 'ಸಾವಿನ ಆ ಕ್ಷಣ ಗೋವಿಂದರಾಯರಿಗೆ ಎಂಬತ್ತೇಳು. ವಯಸ್ಸಿನಿಂದ ಮಾತ್ರವಲ್ಲ ಭಾವನಾತ್ಮಕವಾಗಿ ಅವರು ನನಗೆ ಹಿರಿಯರಾಗಿದ್ದರು. ಕೆಲವು ಗಟ್ಟಿ ಮೌಲ್ಯಗಳ ಜೀವಂತ ಪ್ರತ್ಯಕ್ಷವಾಗಿದ್ದರು. ನನಗೂ ಸಾವಿಗೂ ನಡುವಣ ಮರೆಯಾಗಿದ್ದರು. ಅವರು ಹೋದ ನಂತರ ಆತ್ಮೀಯ ವರ್ತುಲದಲ್ಲಿ ನನಗೆ ಹಿರಿಯರೆಂದು ನಾನು ಭಾವಿಸಬಹುದಾದ ಬೇರಾವ ವ್ಯಕ್ತಿಯೂ ಇಲ್ಲ. ಆ ನಡುವಣ ಮರೆಯು ಹೊರಟು ಹೋಗಿ ಇನ್ನು ನಾನೇ ಹಿರಿಯ ಎಂಬ ಸರದಿಯ ಭಾವನೆಯು ತುಂಬಿಕೊಂಡಿತು'.

          ಪುಸ್ತಕದ ಅಲ್ಲಲ್ಲಿ ಇನ್ನೂ ಅನೇಕ ಸಂಗತಿಗಳು ಓದಲು ಸಿಗುತ್ತವೆ. ತಂಗಿ ಲಲಿತಳ ಬದುಕನ್ನು ಒಂದು ದಡಕ್ಕೆ ಮುಟ್ಟಿಸಿದ್ದು, ಅಪ್ಪನ ಸಾವು, ಚಿಕ್ಕಪ್ಪನಿಗೆ ನೀಡಿದ ನೆರವು, ವಿದೇಶ ಪ್ರವಾಸ, ಗುಜರಾತಿನಿಂದ ದೆಹಲಿ ಮತ್ತು ದೆಹಲಿಯಿಂದ ಮೈಸೂರಿಗೆ ಬಂದು ನೆಲೆಸಿದ್ದು, ನಿವೃತ್ತಿಯ ದಿನ ಭಾವನೆಗಳನ್ನು ಹಿಡಿದಿಡಲು ಆಗದೆ ಅತ್ತಿದ್ದು ಹೀಗೆ ಅನೇಕ ಸಂಗತಿಗಳ ಸ್ವಾರಸ್ಯಪೂರ್ಣ ಓದು ಪುಸ್ತಕದುದ್ದಕ್ಕೂ ಹೇರಳವಾಗಿ ಲಭಿಸುತ್ತದೆ.

ಕೊನೆಯ ಮಾತು 


            ವ್ಯಕ್ತಿಯೊಬ್ಬನ ಕುರಿತು ಬರೆಯಲು ಹೊರಟರೆ ಅದು ಸಮಾಜದ ಚರಿತ್ರೆಯಾಗುತ್ತದೆ ಎನ್ನುವ ಮಾತಿದೆ.  ಈ ಮಾತಿಗೆ ಪುಷ್ಟಿಕೊಡುವಂತೆ ಅನೇಕ ಆತ್ಮಕಥನಗಳು ಪ್ರಕಟವಾಗಿವೆ. ಅಲ್ಲೆಲ್ಲ ಕಥಾನಾಯಕ ನೇಪಥ್ಯಕ್ಕೆ ಸರಿದು ಸಾಮಾಜಿಕ ಸಮಸ್ಯೆಗಳು ಮುಖ್ಯ ಭೂಮಿಕೆಗೆ ಬರುತ್ತವೆ. ಹಾಗೆಂದ ಮಾತ್ರಕ್ಕೆ ಅಲ್ಲಿನ ಕಥಾನಾಯಕ ಪರ್ಯಾಯ ವ್ಯವಸ್ಥೆಯನ್ನೇನೂ ತೋರಿಸಲಾರ. ಇಂಥ ಆತ್ಮಕಥೆಯನ್ನು ಬರೆಯುವ ವ್ಯಕ್ತಿಗೆ ಸಾಮಾಜಿಕ ಸಮಸ್ಯೆಗಳು ಶಾಶ್ವತವಾಗಿದ್ದರೆ ಮಾತ್ರ ಆತನ ಬರವಣಿಗೆಗೆ ಹೇರಳ ಫಸಲು ಲಭ್ಯ. ಇಂಥದ್ದೊಂದು ತಕರಾರು ಅನೇಕ ಓದುಗರದು. ಆದರೆ ಭೈರಪ್ಪನವರ 'ಭಿತ್ತಿ' ಯಾವ ಸಾಮಾಜಿಕ ಅವಲಕ್ಷಣಗಳ ಸುತ್ತ ಸುತ್ತದೆ ಅವರ ವೈಯಕ್ತಿಕ ಬದುಕನ್ನೇ ಕೇಂದ್ರವಾಗಿಟ್ಟುಕೊಂಡು ರಚನೆಯಾದ ಆತ್ಮಕಥನ. ಇಲ್ಲೂ ಕೆಲವೊಂದು ಸಣ್ಣತನಗಳ ಮೇಲೆ ಬೆಳಕು ಚೆಲ್ಲಲಾಗಿದೆಯಾದರೂ ಆ ಎಲ್ಲ ಸಮಸ್ಯೆಗಳು ಭೈರಪ್ಪನವರ ಸಂಪರ್ಕಕ್ಕೆ ಬಂದು ಅನಾವರಣಗೊಳ್ಳುತ್ತವೆ. ಈ ಆತ್ಮಕಥನವನ್ನು ಓದಿದ ನಂತರ ಭೈರಪ್ಪನವರ ಬದುಕು ಮತ್ತು ಬರಹ ಆದರ್ಶಪ್ರಾಯವಾಗಿ ನಿಲ್ಲುತ್ತವೆ. ಓದುಗರು ತಮ್ಮ ಹಿರಿಯರಿಂದ ನಿರೀಕ್ಷಿಸುವುದು ಕೂಡ ಇದನ್ನೇ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ  



     

Monday, December 2, 2013

ಮೈನಾ: ಒಂದು ಸುಂದರ ದೃಶ್ಯ ಕಾವ್ಯ



     







       



                ಮೊನ್ನೆ 'ಮೈನಾ' ಎನ್ನುವ ಕನ್ನಡ ಸಿನಿಮಾ ನೋಡಿದೆ. ಹಲವು ದಿನಗಳ ನಂತರ ನೋಡಿದ ಉತ್ತಮ ಕನ್ನಡ ಸಿನಿಮಾವಿದು.  ಇಲ್ಲಿ ನಾನು ಉತ್ತಮ ಸಿನಿಮಾ ಎಂದು  ಹೇಳಲು ಕಾರಣ ಈ ದಿನಗಳಲ್ಲಿ ಕುಟುಂಬದ ಸದಸ್ಯರೆಲ್ಲ ಒಟ್ಟಾಗಿ ಕುಳಿತು ನೋಡುವಂಥ ಸದಭಿರುಚಿಯ ಸಿನಿಮಾಗಳ ಸಂಖ್ಯೆ ಕ್ಷೀಣಿಸುತ್ತಿದೆ. ಇಂಥದ್ದೊಂದು ನಿರಾಸೆಯ ನಡುವೆಯೂ 'ಮೈನಾ' ದಂಥ ಸಿನಿಮಾಗಳ ನಿರ್ಮಾಣ ಅದೊಂದು ಆಶಾದಾಯಕ ಬೆಳವಣಿಗೆ ಎನ್ನಬಹುದು. ಜೊತೆಗೆ ಇಂಥ ಸಿನಿಮಾಗಳಿಗೆ ಪ್ರೇಕ್ಷಕರಿಂದ ದೊರೆಯಬೇಕಾದ ಉತ್ತೇಜನ ಮತ್ತು ಪ್ರೋತ್ಸಾಹ ದೊರೆಯದಿರುವುದು ವಿಪರ್ಯಾಸದ ಸಂಗತಿ. ಈ ವಿಷಯದಲ್ಲಿ ನಮ್ಮ ಕನ್ನಡದ ಸಿನಿಮಾ ಪ್ರೇಕ್ಷಕ ವರ್ಗ ನೆರೆಯ ತಮಿಳು ಮತ್ತು ಮಲೆಯಾಳಿ ಸಿನಿಮಾಗಳ ಪ್ರೇಕ್ಷಕರಿಂದ ಕಲಿಯ ಬೇಕಾದದ್ದು ಬಹಳಷ್ಟಿದೆ. ಇರಲಿ ಈಗ ನಾನು ಮತ್ತೆ 'ಮೈನಾ' ಚಿತ್ರದ ವಿಷಯಕ್ಕೆ ಬರುತ್ತೇನೆ. ಹಾಸ್ಯನಟನಾಗಿ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ನಾಗಶೇಖರ ಅವರ ನಿರ್ದೇಶನದ ಮೂರನೇ ಸಿನಿಮಾವಿದು. ಈ ಮೊದಲು 'ಅರಮನೆ' ಮತ್ತು 'ಸಂಜು ವೆಡ್ಸ್ ಗೀತಾ' ಸಿನಿಮಾಗಳನ್ನು ನಿರ್ದೇಶಿಸಿ ಗಾಂಧಿ ನಗರದ ನಿರ್ಮಾಪಕರಿಂದ ಮತ್ತು ಕನ್ನಡದ ಪ್ರೇಕ್ಷಕರಿಂದ ಸೈ  ಎನಿಸಿಕೊಂಡ ನಿರ್ದೇಶಕನೀತ. 'ಅರಮನೆ' ಮತ್ತು 'ಸಂಜು ವೆಡ್ಸ್ ಗೀತಾ' ಎರಡೂ ವಿಭಿನ್ನ ಕಥೆಯ ಸಿನಿಮಾಗಳು. ಅವರ ನಿರ್ದೇಶನದ 'ಮೈನಾ' ಕೂಡ ಮೊದಲೆರಡು ಸಿನಿಮಾಗಳಿಂದ ವಿಭಿನ್ನವಾಗಿದ್ದರೂ ಕಥೆಯ ಜೀವಾಳ ಮಾತ್ರ ಮನುಷ್ಯ ಸಂಬಂಧಗಳೇ.

         ಪೋಲೀಸ್ ಇಲಾಖೆಯ ದಾಖಲೆಗಳಲ್ಲಿ ಸರಣಿ ಹಂತಕನೆಂದೇ ಖ್ಯಾತನಾದ ಸತ್ಯನನ್ನು ಚೆನ್ನೈನ ಸಮುದ್ರ ತೀರದಲ್ಲಿ ಕರ್ನಾಟಕದ ಪೋಲಿಸರು ಬಂಧಿಸುವುದರೊಂದಿಗೆ 'ಮೈನಾ' ಸಿನಿಮಾದ ಕಥೆ ಪ್ರಾರಂಭವಾಗುತ್ತದೆ. ಈ ಅಪಾದಿತನೆ ಸಿನಿಮಾದ ನಾಯಕ ಕೂಡ ಹೌದು. ಅವನನ್ನು ಬಂಧಿಸಿರುವ ಪೋಲೀಸ್ ಅಧಿಕಾರಿಗೆ ಸತ್ಯನನ್ನು ಕಂಡರೆ ಒಂದಿಷ್ಟು ಪ್ರೀತಿ ಜೊತೆಗೆ ವಿಶ್ವಾಸ ಕೂಡ ಇದೆ. ಆ ವಿಶ್ವಾಸವೇ ಸತ್ಯನ  ಬದುಕಿನ  ಕಥೆ ಬಿಚ್ಚಿಕೊಳ್ಳಲು ಕಾರಣವಾಗುತ್ತದೆ. ಸತ್ಯ ರೀಯಾಲಿಟಿ ಷೋ ಒಂದರಲ್ಲಿ ಭಾಗವಹಿಸಲು ಬೆಳಗಾವ ಮತ್ತು ಗೋವಾ ಮಧ್ಯದಲ್ಲಿರುವ ದೂದ ಸಾಗರ ರೈಲು ನಿಲ್ದಾಣಕ್ಕೆ ಬಂದಿಳಿದಿರುವ ಹುಡುಗ. ಯಾರಿಗೂ ಕೇಡು ಬಗೆಯದ ತಾನಾಯಿತು ತನ್ನ ಬದುಕಾಯಿತು ಎನ್ನುವಂತ ಅಮಾಯಕ ಹುಡುಗನಾತ.  ರೀಯಾಲಿಟಿ ಷೋ ನಲ್ಲಿ ಗೆದ್ದು ಬರುವ ಹಣದಿಂದ ಬೆಂಗಳೂರಿನಲ್ಲಿ ಒಂದು ಸ್ವಂತದ  ಜಿಮ್ ಪ್ರಾರಂಭಿಸಬೇಕೆನ್ನುವ ಆಸೆ ಸತ್ಯನದು. ಜೊತೆಗೆ  ಅಪ್ಪ ಅಮ್ಮನ ಕನಸುಗಳು ಅವನ ಈ ಆಸೆಗೆ ನೀರೆರೆಯುತ್ತವೆ.

            ಷೋ ನ ಎರಡನೇ ದಿನವೇ ಅವನಿಗೆ ರೈಲಿನಲ್ಲಿ ನಾಯಕಿಯ ಭೇಟಿಯಾಗುತ್ತದೆ.  ಕಾಲಿಲ್ಲದ ಅಂಗವಿಕಲ ಬಿಕ್ಷುಕನಂತೆ ವೇಷಧರಿಸಿ  ಬಿಕ್ಷೆ ಬೇಡುತ್ತ ಹೋಗುತ್ತಿದ್ದವನನ್ನು ನಾಯಕಿಯ  ಸ್ನಿಗ್ಧ ಸೌಂದರ್ಯ ಒಂದು ಕ್ಷಣ ಹಿಡಿದು ನಿಲ್ಲಿಸುತ್ತದೆ. ಕಿಟಕಿಯ ಪಕ್ಕ ಕುಳಿತು ನಿಸರ್ಗದ ಚೆಲುವನ್ನು ಸವಿಯುತ್ತಿದ್ದ  ಅವಳೋ ಸೌಂದರ್ಯದೊಂದಿಗೆ ಸ್ಪರ್ಧೆಗಿಳಿದಂತೆ ಕಾಣುವ  ಚೆಲುವೆ.  ಅವಳ ಆ ನಗು ಹಾಲು ಚೆಲ್ಲಿದ ಬೆಳ್ಳನೆಯ  ಬೆಳದಿಂಗಳು. ಬಿಕ್ಷೆಗಾಗಿ ಕೈ ಮುಂದೆ ಚಾಚಿದವನ ಕೈಗೆ ನೂರರ ನೋಟನ್ನಿತ್ತು ತನ್ನ ಮಂದ ಸ್ವರದಲ್ಲಿ ನುಡಿಯುತ್ತಾಳೆ 'ಇದು ನಾನು ಕಷ್ಟ ಪಟ್ಟು ದುಡಿದ ಹಣ. ದಯವಿಟ್ಟು misuse ಮಾಡ್ಬೇಡಿ'. ರೈಲಿನಿಂದ ಕೆಳಗಿಳಿದವನಿಗೆ ಪ್ರಪಂಚವನ್ನೇ ಗೆದ್ದ  ಪುಟ್ಟ ಮಗುವಿನ  ಸಂಭ್ರಮ.

            ಆ ರೀಯಾಲಿಟಿ ಷೋ ನಲ್ಲಿ ಎರಡು ತಂಡಗಳಿವೆ. ಸಿನಿಮಾದ ನಾಯಕ ಸತ್ಯನ ತಂಡ ಆ ದಿನ ಗಳಿಸಿದ ಹಣ ಎದುರಾಳಿ ತಂಡಕ್ಕಿಂತ ಒಂದಿಷ್ಟು ಕಡಿಮೆ. ಸತ್ಯನ ಹತ್ತಿರ ನೂರು ರುಪಾಯಿಗಳಿವೆ ಎಂದು ಆ ಕಾರ್ಯಕ್ರಮದ ನಿರೂಪಕನಿಗೆ  ಗೊತ್ತು. ಆ ಹಣವನ್ನು ಸೇರಿಸಿದಲ್ಲಿ ಸತ್ಯನ ತಂಡ ಅವತ್ತಿನ ಸ್ಪರ್ಧೆಯಲ್ಲಿ ಗೆಲ್ಲುವುದು ಗ್ಯಾರಂಟಿ. ಆ ಗುಂಪಿಗೂ ಗೆಲುವು ಬೇಕಿದೆ. ಯಾರು ಎಷ್ಟೇ ಒತ್ತಾಯ ಮಾಡಿದರೂ ಸತ್ಯ ತನ್ನಲ್ಲಿರುವ ಆ ಸ್ನಿಗ್ಧ ಸೌಂದರ್ಯದ ಚೆಲುವೆ ಕೊಟ್ಟಿರುವ  ಹಣ ಬಳಸಿಕೊಳ್ಳಲು ಸಿದ್ಧನಿಲ್ಲ. ಅದು ಅವನಿಗೆ ಹಣಮಾತ್ರವಲ್ಲ. ಅದವಳ ನೆನಪು ತನ್ನ ಪ್ರಿಯತಮೆಯ ಒಲವಿನ ಉಡುಗೊರೆ. ಆ  ಮಧುರ ನೆನಪನ್ನು ಕಳೆದುಕೊಳ್ಳಲು ಅವನ ಮನಸ್ಸು ಒಪ್ಪುತ್ತಿಲ್ಲ. ತನ್ನ ಪ್ರೀತಿಗಾಗಿ ಕೊನೆಗೂ ಸತ್ಯ ರೀಯಾಲಿಟಿ ಷೋನಿಂದ ಹೊರಬರುತ್ತಾನೆ. ಹೀಗೆ ಹೊರಬಂದವನಿಗೆ ತನ್ನ ಪ್ರಿಯತಮೆಯನ್ನು ಕಾಣುವ ಅವಳಲ್ಲಿ ತನ್ನ ಪ್ರೀತಿಯನ್ನು ನಿವೇದನೆ ಮಾಡಿಕೊಳ್ಳುವ ತವಕ. ಅವನಿಗೆ ಗೊತ್ತಿದೆ ಅವಳು ಪ್ರತಿದಿನ ತಾನು ಬಿಕ್ಷೆ ಬೇಡಿದ ರೈಲಿನಲ್ಲೇ ದಿನಕ್ಕೆ ಎರಡು ಬಾರಿ ಸಂಚರಿಸುತ್ತಾಳೆಂದು.

           ಮರುದಿನ ಸತ್ಯ ಮತ್ತದೇ ರೈಲಿನ ಅವಳಿದ್ದ ಭೋಗಿಯಲ್ಲಿ ಆಕೆಯನ್ನು ಕಾಣಲು ಬರುತ್ತಾನೆ.  ದಿನಪತ್ರಿಕೆ ಮಾರುವವನಾಗಿ ತೆವಳುತ್ತ  ಅವಳಿದ್ದಲ್ಲಿಗೆ ಬಂದವನನ್ನು   ಕರೆದು ಪತ್ರಿಕೆ ಕೊಳ್ಳುತ್ತಾಳೆ. ಅವಳ ಕಣ್ಣ ಮೆಚ್ಚುಗೆಗಾಗಿ ಕಾದವನಿಗೆ ಅವಳು ನಿರಾಸೆ ಮಾಡಲಾರಳು. ಇಬ್ಬರದೂ  ಪ್ರೀತಿಗಾಗಿ  ಹಂಬಲಿಸುವ ಹೃದಯ. ಸತ್ಯನ ಒಡನಾಟದಿಂದ  ಅವಳಿಗೆ ಬದುಕು  ಅದು  ಬಣ್ಣಗಳ ಚಿತ್ತಾರ ಎಂದೆನಿಸುತ್ತದೆ. ಹಸಿರುಹೊದ್ದು ಮಲಗಿರುವ ಬೆಟ್ಟಗಳ ನಡುವೆ ಭೋರ್ಗರೆದು ಹರಿಯುತ್ತ ನದಿ ವಸುಂಧರೆಯ ಒಡಲು ಸೇರುತ್ತಿರುವ ಆ ನಿರ್ಜನ ತಾಣದಲ್ಲಿ ತನ್ನ ಪ್ರಿಯತಮೆಯ ವರ್ಣನೆಯನ್ನು ಆಲಿಸಲು ಸತ್ಯನಿಗೂ ಒಬ್ಬ ಜೊತೆಗಾರ ಬೇಕು. ಮನುಷ್ಯ ತನ್ನ ದುಃಖಕ್ಕೆ ಕಿವಿಯಾಗುವವರಿಗಿಂತ ತನ್ನ ಸಂತಸಕ್ಕೆ ಕಿವಿಯಾಗುವವರಿಗಾಗಿ ಹಂಬಲಿಸುತ್ತಾನೆ. ಇದು ಮನುಷ್ಯ ಸಹಜ ಸ್ವಭಾವ. ಸತ್ಯನ ಸಂತಸವನ್ನು ಹಂಚಿಕೊಳ್ಳಲು ಅಲ್ಲೊಂದು ಪಾತ್ರವನ್ನು ಸೃಷ್ಟಿಸಲಾಗಿದೆ. ಆತ ಸತ್ಯನ ಪ್ರೀತಿಗೆ ಸಾಕ್ಷಿಯಾಗುತ್ತಾನೆ. ಅವನ ಸಂತೋಷದಲ್ಲಿ ಭಾಗಿಯಾಗುತ್ತಾನೆ ಸಂಕಟದಲ್ಲಿ ನೆರವಾಗುತ್ತಾನೆ. ಹಿರಿಯಣ್ಣನಂತೆ ಬುದ್ದಿ ಹೇಳುತ್ತಾನೆ. ಪ್ರೀತಿಯ ಏಕತಾನತೆ ಪ್ರೇಕ್ಷಕನಿಗೆ ಕಾಡದಿರಲೆಂದು ನಕ್ಕು ನಗಿಸಲು ಅಲ್ಲೊಂದು ಕುರುಡು ಬಿಕ್ಷುಕನ  ಪಾತ್ರವಿದೆ. ನಿಜವಾದ ಸಂಗತಿಯೆಂದರೆ ಆತನದೂ  ಚಿತ್ರದ ನಾಯಕ ಸತ್ಯನಂತೆ ನಟನೆಯ ಕುರುಡುತನ. ಒಬ್ಬನ ನಟನೆ ಪ್ರೀತಿಗಾಗಿ ಇನ್ನೊಬ್ಬನದು ಎರಡ್ಹೊತ್ತಿನ ಹಿಡಿ ಅನ್ನಕ್ಕಾಗಿ. ಆ ಎರಡೂ ನಟನೆಗಳನ್ನು ಪ್ರೇಕ್ಷಕರು ಸಮೀಕರಿಸಿ ನೋಡಲೆಂದೇ ನಿರ್ದೇಶಕರು ಅತಿ ಜಾಣ್ಮೆಯಿಂದ ಸೃಷ್ಟಿಸಿರುವ ಪಾತ್ರವಿದು.

          ಈ ನಡುವೆ ನಾಯಕ ನಾಯಕಿಯರ ನಡುವೆ ಪ್ರೀತಿಯ ವಿನಿಮಯವಾಗುತ್ತದೆ. ಎಲ್ಲ ಪ್ರೇಮಿಗಳಂತೆ ಅವರು ಪ್ರೀತಿಯನ್ನು ಐ ಲವ್ ಯು ಎನ್ನುವ ಅರ್ಥ ಕಳೆದುಕೊಂಡ ಶಬ್ದಗಳಲ್ಲಿ ಹೇಳಲಾರರು. ಅದಕ್ಕವರಿಟ್ಟ ಹೆಸರು ಕಲರ್ ಫುಲ್ ಎಂದು. ಇಬ್ಬರೂ ಒಬ್ಬರನ್ನೊಬ್ಬರು ನೋಡಿ ಕಲರ್ ಫುಲ್ ಎಂದು ಹೇಳಿದ ಸಂದರ್ಭಗಳೆಷ್ಟೋ. ನಾಯಕನ ಕನಸುಗಳಲ್ಲಿ ನಾಯಕಿ ಮತ್ತು ನಾಯಕಿಯ ಮಧುರ ನೆನಪುಗಳಲ್ಲಿ ನಾಯಕ ಇಬ್ಬರೂ ಕೈ ಕೈ ಹಿಡಿದು ಹಾಡುತ್ತಾರೆ ಕುಣಿಯುತ್ತಾರೆ. ಈ ಪ್ರೇಮದ ಪರವಶತೆಯಲ್ಲೇ ಅವಳ ಕೋಗಿಲೆಯ ಕಂಠ  ತನ್ಹೇಸರು 'ಮೈನಾ' ಎಂದು ಉಲಿಯುತ್ತದೆ. ಮುಂದೇನಾಗುತ್ತದೆ ಎಂದು ಉಸಿರು ಬಿಗಿ ಹಿಡಿದು ನೋಡುವ ಸರದಿ ಪ್ರೇಕ್ಷಕನದು. ಏಕೆಂದರೆ ಆ ಪ್ರೀತಿಯ ಹುಡುಗಿ ಮೈನಾಗೆ ಗೊತ್ತಿಲ್ಲ ತಾನು ಪ್ರೀತಿಸುತ್ತಿರುವ ಹುಡುಗ ಕಾಲಿಲ್ಲದ ನಾಟಕ ಆಡುತ್ತಿರುವ ಸುಳ್ಳುಗಾರನೆಂದು. ಸುಳ್ಳನ್ನು ಸತ್ಯವೆಂದು ಆ ಕ್ಷಣಕ್ಕೆ ನಂಬಿಸಬಹುದಾದರೂ ಅದನ್ನು ಕೊನೆಯವರೆಗೂ ನಂಬಿಸುವುದು ಸತ್ಯನಂಥ ಪ್ರೀತಿಯ ಹುಡುಗನಿಗೂ ಸಾಧ್ಯವಿಲ್ಲ. ಕೊನೆಗೂ ಆ ಸುಳ್ಳಿಗೊಂದು ತೆರೆ ಬೀಳುವ ಸಂದರ್ಭ ಎದುರಾಗುತ್ತದೆ.

          ಪ್ರತಿದಿನದಂತೆ ಆ ದಿನವೂ ಸತ್ಯ ಅವಳೆದುರು ಕುಳಿತು ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದಾನೆ. ಆಕೆ ತನ್ನ ಪ್ರಿಯತಮನ ಮಾತುಗಳಿಗಾಗಿ ಕಾತರಿಸುತ್ತ  ಅವನ ಕಣ್ಣುಗಳಲ್ಲಿನ  ತನ್ನ ಪ್ರತಿಬಿಂಬವನ್ನು ಹುಡುಕುತ್ತಿದ್ದಾಳೆ. ಇಬ್ಬರೂ  ಒಬ್ಬರನ್ನೊಬ್ಬರು ನೋಡುತ್ತ ಪ್ರಪಂಚವನ್ನೇ ಮರೆತ ಕ್ಷಣವದು. ಇದೇ ಸಮಯವೆಂದು ಹೊಂಚು ಹಾಕಿದ ಕಳ್ಳ ಅವಳ ಬ್ಯಾಗಿನೊಂದಿಗೆ ಓಟ ಕೀಳುತ್ತಾನೆ. ಇಬ್ಬರೂ ವಾಸ್ತವಕ್ಕೆ ಮರಳಿದಾಗ ನಡೆದ ಅನಾಹುತದ ಅರಿವಾಗುತ್ತದೆ. ಸತ್ಯ ರೈಲಿನಿಂದ ಹೊರ ಜಿಗಿದು ಕಳ್ಳನನ್ನು ಬೆನ್ನಟ್ಟಿ ಬ್ಯಾಗನ್ನು ಮರಳಿ ತರುತ್ತಾನೆ. ಅದುವರೆಗೂ ತಾನು ನಂಬಿದ್ದು ಸುಳ್ಳೆಂದು ನಾಯಕಿಗೆ ಅರಿವಾಗುತ್ತದೆ. ನಾಯಕನ ಪ್ರೀತಿಯನ್ನು ತಿರಸ್ಕರಿಸಿ  ಆಕೆ ತೆವಳುತ್ತ ಸಾಗುವ ದೃಶ್ಯ ಆ ಕ್ಷಣಕ್ಕೆ ಇಡೀ ಪ್ರೇಕ್ಷಕ ಸಮೂಹವನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಚಿತ್ರದ ನಾಯಕಿ ಮೈನಾ ಅಂಗವಿಕಲೆ. ಪೋಲಿಯೋ ದಿಂದ ತನ್ನೆರಡೂ ಕಾಲುಗಳನ್ನು ಕಳೆದುಕೊಂಡಿರುವ ಅವಳಿಗೆ ನಡೆಯಲು ಬಾರದು ಎನ್ನುವ ಸತ್ಯವನ್ನು ಒಪ್ಪಿಕೊಳ್ಳಲು ಕೆಲವು ಕ್ಷಣಗಳೇ ಬೇಕಾಗುತ್ತವೆ. ಸುಳ್ಳು ಹೇಳಿ ತನ್ನ ಪ್ರೀತಿ ಗಿಟ್ಟಿಸಿದ ನಾಯಕನ ಪ್ರೀತಿಯನ್ನು ಮೈನಾ ತಿರಸ್ಕರಿಸುತ್ತಾಳೆ. ನಿನ್ನನ್ನು ಪ್ರೀತಿಸುತ್ತೇನೆ ಎಂದ ಸತ್ಯನ ಮಾತಿಗೆ ಮೈನಾ ಅನುಕಂಪದ ಪ್ರೀತಿ ನನಗೆ ಬೇಕಿಲ್ಲ ಎಂದುತ್ತರಿಸುತ್ತಾಳೆ. ನಿನಗೆ ಕಾಲಿಲ್ಲದ ವಿಷಯ ನನಗೆ ಮೊದಲೇ ಗೊತ್ತಿತ್ತು ಎಂದು ಆತ ನುಡಿದಾಗ ಮತ್ತೊಮ್ಮೆ ಅಚ್ಚರಿ ಪಡುವ ಸರದಿ ಪ್ರೇಕ್ಷಕರದು. ತನ್ನ ಪ್ರೀತಿಯ ಪ್ರಾರಂಭದಲ್ಲಿ ಅದೊಂದು ದಿನ ಅವಳನ್ನು ಹಿಂಬಾಲಿಸಿ ಹೋದ ಸತ್ಯನಿಗೆ ಆಕೆ ಅಂಗವಿಕಲೆ ಎಂದು ಗೊತ್ತಾಗುತ್ತದೆ. ಆದರೆ ಆತ ಪ್ರೀತಿಸುವುದು ಅವಳ ದೈಹಿಕ ಸೌಂದರ್ಯವನ್ನಲ್ಲ. ಬದುಕಿನುದ್ದಕ್ಕೂ ನಾನು ನಿನ್ನ ಜೊತೆಗಿರುವೆ ಎಂದು ಅಭಯ ನೀಡಿದ ಆ ಘಳಿಗೆ ಮೈನಾ ಸತ್ಯನ ಪ್ರೀತಿ ಎದುರು ಸೋಲುತ್ತಾಳೆ. ನಿಜಸ್ಥಿತಿಯನ್ನು ನಂತರ ತಿಳಿದು ನಾಯಕ ನಾಯಕಿಯನ್ನು ಪ್ರೀತಿಸಲು ಮುಂದಾಗಿದ್ದರೆ ಅದು ಅನುಕಂಪದ ಪ್ರೀತಿಯಾಗುತ್ತಿತ್ತು. ಆದ್ದರಿಂದ ಇಂಥದ್ದೊಂದು ಸಮಸ್ಯೆಯಿಂದ ಪಾರಾಗುವಲ್ಲಿ ನಿರ್ದೇಶಕರು ಜಾಣ್ಮೆ ಮೆರೆದಿದ್ದಾರೆ. ಸತ್ಯನಿಗೆ ಮೈನಾಳ ಪರಿಸ್ಥಿತಿಯನ್ನು ಮೊದಲೇ ಪರಿಚಯಿಸಿ ಇಲ್ಲಿ ಪ್ರೀತಿಯನ್ನು ಗೆಲ್ಲಿಸಿದ್ದಾರೆ. ಸತ್ಯ ಮತ್ತು ಮೈನಾ ಒಂದಾಗುವುದನ್ನು ಕುರುಡನಂತೆ ನಟಿಸುವ ಬಿಕ್ಷುಕ ದೂರದಲ್ಲಿ ನಿಂತು ನೋಡುವ ದೃಶ್ಯ ಆ ಸನ್ನಿವೇಶಕ್ಕೆ ಸಂದರ್ಭೋಚಿತವಾಗಿದೆ.

      ಸಿನಿಮಾದಲ್ಲಿ  ಸತ್ಯ ಮತ್ತು ಮೈನಾಳ ಪ್ರೀತಿಗೆ ಅಡ್ಡಿಯುಂಟು ಮಾಡುವ ವಿಲನ್ ಗಳಿಲ್ಲ. ಮದುವೆಯಾಗಿ ಆ ಯುವಜೋಡಿ ದೂರದ ಬೆಂಗಳೂರಿನಲ್ಲಿ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಸತ್ಯನಿಗಿರುವುದು ಒಂದೇ ಆಸೆ ತನ್ನ ಪ್ರೀತಿಯ ಹುಡುಗಿ ಎಲ್ಲರಂತೆ ನಡೆಯುವಂತಾಗಬೇಕು. ಆದರೆ ಅವಳಿಗೋ ನಾನೆಲ್ಲಿ ತನ್ನ ಪ್ರೀತಿಯ ಹುಡುಗನ ತೋಳ ತೆಕ್ಕೆಯಿಂದ ದೂರಾಗುವೇನೋ  ಎನ್ನುವ ಆತಂಕ. ಈ ಕೈ ಹಿಡಿದು ನಡೆಸುವ, ಮಗುವಿನಂತೆ ತೋಳುಗಳಲ್ಲಿ ಎತ್ತಿಕೊಳ್ಳುವ ಮಧುರ ಅನುಭವ ಇವೆಲ್ಲ ನಾಳೆಯಿಂದ ಬರೀ ನೆನಪುಗಳಾಗಿ ಉಳಿಯುವ ಬೇಸರ ಅವಳದು. ಆದರೆ ಸತ್ಯನ ಪ್ರೀತಿಯೇದುರು ಅವಳ ಹಠ ಮತ್ತೊಮ್ಮೆ ಸೋಲುತ್ತದೆ. ಅವಳನ್ನು ಪರೀಕ್ಷಿಸಿದ ಡಾ. ಅನಿರುದ್ಧ ದೇಸಾಯಿ ಮೈನಾ ಚಿಕಿತ್ಸೆಯ ನಂತರ ಸಹಜವಾಗಿ ನಡೆಯುವಳು ಎನ್ನುವ  ಭರವಸೆ ನೀಡುವನು. ಆದರೆ ಚಿತ್ರದ ಕಥೆ ತಿರುವು ಪಡೆಯುವುದೇ ಇಲ್ಲಿಂದ. ಮೈನಾಳ ಸೌಂದರ್ಯಕ್ಕೆ ಮನಸೋತ ಅನಿರುದ್ಧ ದೇಸಾಯಿಗೆ ಅವಳ ಮೇಲೆ ದೈಹಿಕ ವಾಂಛೆ ಬೆಳೆಯುತ್ತದೆ. ಮೈನಾಳನ್ನು ಸೇರಬೇಕೆನ್ನುವ ಅವನ ಆಸೆ ಅವಳ ನಗ್ನ ದೇಹವನ್ನು ತನ್ನ ಮೊಬೈಲ್ ನಲ್ಲಿ ಸೆರೆಹಿಡಿಯುವಂತೆ ಪ್ರಚೋದಿಸುತ್ತದೆ. ಅದನ್ನೇ ಮುಂದಿಟ್ಟುಕೊಂಡು ಆತ ಮೈನಾಳನ್ನು ಬ್ಲಾಕ್ ಮೇಲ್ ಮಾಡಲಾರಂಭಿಸುವನು. ಒಂದೆಡೆ ಜೀವಕ್ಕೆ ಜೀವವಾಗಿ ಪ್ರೀತಿಸುವ ಪತಿ. ಇನ್ನೊಂದೆಡೆ ದೈಹಿಕ ತೃಷೆಯಿಂದ ಉನ್ಮತ್ತಗೊಂಡ  ಮೃಗ. ಹೇಳಲೂ ಆಗದ ಅನುಭವಿಸಲೂ ಆಗದ ಸ್ಥಿತಿಯಲ್ಲಿ ಮೈನಾಳ ಮಾನಸಿಕ ತೊಳಲಾಟ ಆ ಕ್ಷಣ ಪ್ರೇಕ್ಷಕರ  ಮನಸ್ಸನ್ನು ಆರ್ದ್ರವಾಗಿಸುತ್ತದೆ.  ವಿಷಯ ತಿಳಿದ ಸತ್ಯ ಡಾ.ಅನಿರುದ್ಧ ದೇಸಾಯಿಯ ಕೊಲೆ ಮಾಡುತ್ತಾನೆ. ಆದರೆ ಇಡೀ ಸತ್ಯವನ್ನು  ಮೈನಾಳಿಂದ ಮುಚ್ಚಿಡುತ್ತಾನೆ. ಆ ಪರಿಸರದಲ್ಲಿ ಬದುಕುವುದು ಅಸಹನೀಯ ಎಂದೆನಿಸಿದಾಗ  ಹೊಸ ಪರಿಸರದಲ್ಲಿ ಹೊಸ ಬದುಕನ್ನು ಕಟ್ಟಿಕೊಳ್ಳಲು ಇಬ್ಬರೂ ಚೆನ್ನೈಗೆ ಪಯಣಿಸುತ್ತಾರೆ.

             ಇತ್ತ ಬೆಂಗಳೂರಿನಲ್ಲಿ ರಾಜಕಾರಣಿ ಸಂಜಯ ದೇಸಾಯಿ ತನ್ನ ತಮ್ಮನ ಕೊಲೆಗಾರನನ್ನು ಬಂಧಿಸುವಂತೆ ಪೋಲೀಸ್ ಇಲಾಖೆಯ ಮೇಲೆ ಒತ್ತಡ ತರುತ್ತಾನೆ. ಪೋಲೀಸ್ ಇಲಾಖೆ ಈ ಕೆಲಸವನ್ನು ದಕ್ಷ ಪೋಲೀಸ್ ಅಧಿಕಾರಿ ಶರತ್ ಕುಮಾರಗೆ ವಹಿಸುತ್ತದೆ. ಕೊನೆಗೂ ಪೋಲೀಸರು ಕೊಲೆಯ ರಹಸ್ಯವನ್ನು ಭೇದಿಸುವಲ್ಲಿ ಯಶಸ್ವಿಯಾಗುವರು. ಮೈನಾಳ ಸ್ನೇಹಿತೆಯ ನೆರವಿನಿಂದ ಕೊಲೆಗಾರ ಸತ್ಯ ಚೆನ್ನೈನಲ್ಲಿರುವ ಸಂಗತಿ ಬಹಿರಂಗವಾಗಿ ಅವನನ್ನು ಬಂಧಿಸುತ್ತಾರೆ. ಇತ್ತ ರಾಜಕಾರಣಿ ಸಂಜಯ ದೇಸಾಯಿ ಸತ್ಯನನ್ನು ಕೊಲ್ಲಲು ಬಾಡಿಗೆ ಹಂತಕರನ್ನು ನೇಮಿಸುತ್ತಾನೆ. ಸತ್ಯನನ್ನು ಬೆಂಗಳೂರಿಗೆ ಕರೆತರುವ ಶರತ್ ಕುಮಾರ ಅವನನ್ನು ತನ್ನ ಸ್ನೇಹಿತನ ಸುಪರ್ದಿಗೆ ಒಪ್ಪಿಸಿ ಕಾನೂನಿನ ಮೂಲಕ ಸತ್ಯನನ್ನು ರಕ್ಷಿಸಲು ಪ್ರಯತ್ನಿಸುತ್ತಾನೆ. ಬಂಧಿತನಾದ ಸತ್ಯನಿಗೆ ಮೈನಾಳದೆ ಚಿಂತೆ. ಅವಳನ್ನು ಕಾಣಲು ಅಲ್ಲಿಂದ ತಪ್ಪಿಸಿಕೊಳ್ಳಲು ಸಂಚು ರೂಪಿಸುತ್ತಾನೆ. ಕೊನೆಗೂ ತಪ್ಪಿಸಿಕೊಳ್ಳುವ ಸತ್ಯ ಮೈನಾಳನ್ನು ರೈಲು ನಿಲ್ದಾಣಕ್ಕೆ ಕರೆತರಲು ತನ್ನ ಸ್ನೇಹಿತನಿಗೆ ಸೂಚಿಸುವನು. ಸತ್ಯ ತಪ್ಪಿಸಿಕೊಂಡ ಸುದ್ದಿ ತಿಳಿದ ಹಂತಕರು ಅವನನ್ನು ಬೇಟೆಯಾಡಲು ಬೆನ್ನಟ್ಟುತ್ತಾರೆ. ಇನ್ನೊಂದೆಡೆ ಪೋಲೀಸ್ ಇಲಾಖೆಯೂ ಸತ್ಯನನ್ನು ಬಂಧಿಸಲು ಕಾರ್ಯತಂತ್ರ ರೂಪಿಸುತ್ತದೆ. ಸತ್ಯನ ಕೊಲೆಯ ಸಂಚಿನ ರಹಸ್ಯ ಅರಿತ ಪೋಲಿಸ್ ಅಧಿಕಾರಿ ಶರತ್ ಕುಮಾರ   ಅವನನ್ನು ಹಂತಕರಿಂದ ಉಳಿಸುತ್ತಾನೆ. ಸತ್ಯ ಮತ್ತು ಮೈನಾ ಒಂದಾಗುತ್ತಾರೆ. ಆದರೆ  ಅಷ್ಟರಲ್ಲೇ ಅನಾಹುತ ಸಂಭವಿಸುತ್ತದೆ. ರೈಲು ನಿಲ್ದಾಣವನ್ನು ಸುತ್ತುವರಿದ ಪೋಲೀಸರ ಗುಂಡಿಗೆ ಸತ್ಯ ಮತ್ತು ಮೈನಾರ  ದೇಹಗಳು ನೆಳಕ್ಕುರುಳುವುದರೊಂದಿಗೆ  ಚಿತ್ರ ಮುಗಿಯುತ್ತದೆ.

           ಸಿನಿಮಾದ ಮೊದಲರ್ಧ ಲವಲವಿಕೆಯಿಂದ ಕೂಡಿದ್ದರೆ ಉಳಿದರ್ಧದಲ್ಲಿ ಕಥೆಯ ಓಟ ಪಡೆದುಕೊಳ್ಳುವ ವೇಗ ಪ್ರೇಕ್ಷಕರನ್ನು ಒಂದಿಷ್ಟು ಗೊಂದಲಕ್ಕಿಡು ಮಾಡುತ್ತದೆ. ಎರಡುವರೆ ಗಂಟೆಗಳಿಗೆ ಮಾತ್ರ  ಸಿನಿಮಾ ಹೆಣೆಯ ಬೇಕೆಂಬ ಗಾಂಧಿನಗರದ ಸಿದ್ದ ಸೂತ್ರಕ್ಕೆ ಬದ್ದರಾದ ನಿರ್ದೇಶಕ ನಾಗಶೇಖರ ದ್ವಿತಿಯಾರ್ಧದಲ್ಲಿ ಕಥೆಯ ವೇಗಕ್ಕೆ ಒತ್ತು ನೀಡಿರುವರು. ಅದಕ್ಕೆಂದೇ ಅನಂತ ನಾಗ, ಸುಹಾಸಿನಿ, ಜೈ ಜಗದೀಶ, ರವಿವರ್ಮ  ಅವರಂಥ ಪ್ರತಿಭಾನ್ವಿತ ಕಲಾವಿದರ ಪಾತ್ರಗಳು ನೆಪಕ್ಕೆ ಮಾತ್ರ ಎನ್ನುವಂತೆ ಬಂದು ಹೋಗುತ್ತವೆ. ಇವರುಗಳ ಪ್ರತಿಭೆಯನ್ನು ನಿರ್ದೇಶಕರು ಸರಿಯಾದ ರೀತಿಯಲ್ಲಿ ದುಡಿಸಿಕೊಳ್ಳುವಲ್ಲಿ ಸೋತಿರುವರು. ಚಿತ್ರದ ನಾಯಕ ಸತ್ಯನ ಪಾತ್ರದಲ್ಲಿ  ನಟ ಚೇತನ್ ಅಭಿನಯ ಸಿನಿಮಾದ  ಮುಖ್ಯ ಜೀವಾಳ. ವಿದೇಶದಲ್ಲಿ ಓದಿರುವ ಈ ನಟ ಕಲೆಯ ಮೇಲಿನ ಆಸಕ್ತಿಯಿಂದ ಕರ್ನಾಟಕಕ್ಕೆ ಬಂದು ಅಭಿನಯ ತರಬೇತಿ ಪಡೆದವರು. ತಮ್ಮ ಮೊದಲ ಚಿತ್ರ 'ಆ ದಿನಗಳು' ಮೂಲಕ ಚಿತ್ರರಂಗದಲ್ಲಿ ಭದ್ರವಾಗಿ ತಳವೂರುವ ಭರವಸೆ ಮೂಡಿಸಿದ ನಟ. ನಾಯಕಿ ನಿತ್ಯಾ ಮೆನನ್ ಬೆಂಗಳೂರಿನ ಹುಡುಗಿ. ಆದರೆ ಹೆಸರು ಮಾಡಿದ್ದು ಮಲೆಯಾಳಂ ಮತ್ತು ತೆಲುಗು ಸಿನಿಮಾಗಳಲ್ಲಿ. ಅವರ ಸೌಂದರ್ಯ ಮತ್ತು ಅಭಿನಯ ಸಿನಿಮಾದ ಪ್ಲಸ್ ಪಾಯಿಂಟ್ ಗಳು. ತಮಿಳಿನ ಶರತ್ ಕುಮಾರ  ಖಡಕ್ ಪೋಲೀಸ್ ಅಧಿಕಾರಿಯ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿರುವರು. ಸಾಧು ಕೋಕಿಲ ಕೆಲವೇ  ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಪ್ರೇಕ್ಷಕರಿಗೆ ಹಾಸ್ಯದ ರಸದೌತಣ ನೀಡಿರುವರು. ಸತ್ಯ ಹೆಗಡೆ ಅವರ ಛಾಯಾಗ್ರಹಣ ಚಿತ್ರದ ಹೈಲೆಟ್. ಅವರ ಫೋಟೋಗ್ರಾಫಿ ಕಣ್ಣು ದೂದ ಸಾಗರನ ರಮಣೀಯ ದೃಶ್ಯವನ್ನು ಅತ್ಯಂತ ಸುಂದರವಾಗಿ ಸೆರೆ ಹಿಡಿದಿದೆ. ಸಿ. ಅಶ್ವತ್ಥ ಅವರ ಕಂಠದಲ್ಲಿ ಮೂಡಿ ಬಂದ ' ಕಾಣದ ಕಡಲಿಗೆ ಹಂಬಲಿಸಿದೆ ಮನ' ಹಾಡು ಕೇಳಲು ಇಂಪಾಗಿದೆ. ಸೋನು ನಿಗಮ್ ಮತ್ತು ಶ್ರೇಯಾ ಘೋಷಾಲ್ ಹಾಡಿರುವ 'ಮೊದಲ ಮಳೆಯಂತೆ' ಯುಗಳ ಗೀತೆ ಅನೇಕ ದಿನಗಳವರೆಗೆ ಕಾಡುತ್ತದೆ. ೧೯೬೫ ರಲ್ಲಿ ತೆರೆಕಂಡ 'ನಾಗ ಪೂಜಾ' ಚಿತ್ರದ ಎಲ್. ಆರ್. ಈಶ್ವರಿ ಹಾಡಿರುವ 'ಓ ಪ್ರೇಮದ ಪುಜಾರಿ' ಹಾಡನ್ನು ಈ ಚಿತ್ರದಲ್ಲಿ ಬಳಸಿಕೊಂಡಿರುವುದು ಸಿನಿಮಾದ ಇನ್ನೊಂದು ವಿಶೇಷ. ಶ್ರೇಯಾ ಘೋಷಾಲ ಅವರ ಕಂಠಸಿರಿಯಲ್ಲಿ ಹಾಡು ಸೊಗಸಾಗಿ ಮೂಡಿ ಬಂದಿದೆ.

            'ಮೈನಾ' ಚಿತ್ರದಲ್ಲಿ ಒಂದೆರಡು ನ್ಯೂನ್ಯತೆಗಳು ಕಂಡು ಬಂದರು ಒಟ್ಟಾರೆ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ. ದ್ವಂದ್ವಾರ್ಥ ಸಂಭಾಷಣೆಯಾಗಲಿ ಅಶ್ಲೀಲ ದೃಶ್ಯಗಳಾಗಲಿ ಇಲ್ಲದ ಸಿನಿಮಾವಿದು. ಕಥೆ ಮತ್ತು ತಾಂತ್ರಿಕವಾಗಿಯೂ ಸಿನಿಮಾ ಗೆದ್ದಿದೆ. ಒಂದು ಕಾಲದಲ್ಲಿ ನಿರ್ದೇಶಕನ ಮಾಧ್ಯಮವಾಗಿದ್ದ ಸಿನಿಮಾ ಕಾಲಾನಂತರದಲ್ಲಿ ಅನೇಕ ರೂಪಾಂತರಗಳನ್ನು ಹೊಂದಿ  ಅದು ನಾಯಕ ಪ್ರಧಾನ ಸಿನಿಮಾ ಎನ್ನುವ ಹಣೆಪಟ್ಟಿ ಅಂಟಿಸಿಕೊಂಡಿತು. ನಾಯಕನನ್ನು ಹೊರತು ಪಡಿಸಿ ಪೋಷಕ  ಪಾತ್ರಗಳೆಲ್ಲ ನೇಪಥ್ಯಕ್ಕೆ ಸರಿದದ್ದು ಈಗ ಇತಿಹಾಸ. ಹೀಗೆ ನಾಯಕ ನಟನನ್ನೇ ಕೇಂದ್ರವಾಗಿಟ್ಟುಕೊಂಡು ಸಿನಿಮಾ ರೀಲು ಸುತ್ತುತ್ತಿರುವ ಕನ್ನಡ ಚಿತ್ರೋದ್ಯಮದಲ್ಲಿ  ನಾಗಶೇಖರ, ಪ್ರಕಾಶ, ಚಂದ್ರು  ಅವರಂಥ ನಿರ್ದೇಶಕರು ಪುಟ್ಟಣ್ಣ ಕಣಗಾಲ ಅವರ ವಾರಸುದಾರರಂತೆ ಕಾಣಿಸುತ್ತಾರೆ.  ಇಂಥವರ ಸಂಖ್ಯೆ ಇನ್ನಷ್ಟು ಹೆಚ್ಚಲಿ ಎನ್ನುವುದೇ ಪ್ರಜ್ಞಾವಂತ ಪ್ರೇಕ್ಷಕರ ಹಾರೈಕೆ.

-ರಾಜಕುಮಾರ.ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ



Wednesday, November 13, 2013

ಸಚಿನ್ ತೆಂಡೂಲ್ಕರ್: ಕ್ರಿಕೆಟ್ ಲೋಕದ ಅನರ್ಘ್ಯ ರತ್ನ

                                 (ಎರಡು ದಶಕಗಳ ಕಾಲ ನಮ್ಮನ್ನು ರಂಜಿಸಿದ ಸಚಿನ್ ನಿನಗೊಂದು ಸಲಾಂ)



         ನಾಳೆ  ೨೦೦ ನೇ ಟೆಸ್ಟ್ ಆಡುತ್ತಿರುವ ಸಚಿನ್ ಗೆ ಇದು ಕೊನೆಯ ಆಟ. ಇನ್ನು ಮುಂದೆ ಕ್ರಿಕೆಟ್ ಮೈದಾನದಲ್ಲಿ ಸಚಿನ್ ಆಟವನ್ನು ನಾವು ನೋಡಲಾರೆವು. ಸತತ ೨೪ ವರ್ಷಗಳಿಂದ ಕ್ರಿಕೆಟ್ ಆಟದ ಸೊಗಸನ್ನು ನಾವುಗಳೆಲ್ಲ ಸವಿಯುವಂತೆ ಮಾಡಿದ ವ್ಯಕ್ತಿ ಈ ಸಚಿನ್ ತೆಂಡೂಲ್ಕರ್. ಸಚಿನ್ ಬಗ್ಗೆ ಬರೆಯಲು ಕುಳಿತರೆ ಹೇಳಿದ್ದನ್ನೇ ಹೇಳಿದಂತಾಗುತ್ತದೆ ಎನ್ನುವ ಭಯ ಕಾಡಲಾರಂಭಿಸುತ್ತದೆ. ಏಕೆಂದರೆ ಆತನ ಬಗ್ಗೆ ಬರೆಯದ ಮತ್ತು ಹೇಳದ ಯಾವ ಮಾಧ್ಯಮವೂ ಇಲ್ಲ. ಬರಹ ಮಾಧ್ಯಮದಿಂದ ಎಲೆಕ್ಟ್ರಾನಿಕ್ ಮಾಧ್ಯಮಗಳವರೆಗೆ ಸಚಿನ್ ವ್ಯಾಪಿಸಿ ಬೆಳೆದು ನಿಂತ ರೀತಿ ನಿಜಕ್ಕೂ ವಿಸ್ಮಯ. ಎರಡು ದಶಕಗಳಿಂದ ಕಳಂಕ ರಹಿತ ಕ್ರಿಕೆಟ್ ಆಟ ಆಡುತ್ತ ಆ ಆಟಕ್ಕೊಂದು ವಿಶಿಷ್ಠ ಮೆರುಗು ತಂದ ಈ ಅದ್ಭುತ ಪ್ರತಿಭೆಯ ಆಟಗಾರನನ್ನು ಆತನ ಈ ವಿದಾಯದ ಸಂದರ್ಭ ಒಂದಿಷ್ಟು ಸ್ಮರಿಸೋಣ ಎನ್ನುವ ಕಾರಣಕ್ಕಾಗಿ ಈ ಲೇಖನ.

           ೧೯೮೯ ರಲ್ಲಿ ಸಚಿನ್ ತನ್ನ ೧೬ ನೇ ವಯಸ್ಸಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದಾಗ ನಾನಾಗ    ಬಿ. ಎ ಮೊದಲ ವರ್ಷದ ವಿದ್ಯಾರ್ಥಿ. ಆ ಮೊದಲು ಗವಾಸ್ಕರ್ ಮತ್ತು ಕಪಿಲ್ ದೇವ್ ಹೆಸರು ಕೇಳಿದ್ದೆನಾದರೂ ಕ್ರಿಕೆಟ್ ಆಟ ನೋಡಿರಲಿಲ್ಲ. ಸಚಿನ್ ಕ್ರಿಕೆಟ್ ಪ್ರಪಂಚದಲ್ಲಿ ಒಂದಾದ ಮೇಲೊಂದರಂತೆ ದಾಖಲೆ ಬರೆಯುತ್ತಿದ್ದಂತೆ ನನ್ನ ಸಮಕಾಲಿನ ಪೀಳಿಗೆಯಲ್ಲಿ ಆ ಆಟದ ಕುರಿತು ಒಂದಿಷ್ಟು ಕುತೂಹಲ ಮೂಡತೊಡಗಿತು. ಅದಾಗಲೇ ಕ್ರಿಕೆಟ್ ಆಟವನ್ನು ಆರಾಧಿಸುತ್ತಿದ್ದವರಲ್ಲಿ ಆ ಆಟದ ಬಗೆಗಿನ ಕುತೂಹಲ ಮತ್ತಷ್ಟು ಇಮ್ಮಡಿಸಿತು. ಕ್ರಿಕೆಟ್ ಆಟವನ್ನೇ ದ್ವೇಷಿಸುತ್ತಿದ್ದ ಹಿರಿಯ ಜೀವಗಳಲ್ಲಿ ಆ ಆಟವನ್ನು ನೋಡಬೇಕೆಂಬ ಆಸೆ ಮೊಳಕೆಯೊಡೆಯಿತು. ಒಂದರ್ಥದಲ್ಲಿ ಸಚಿನ್ ಈ ಎರಡು ದಶಕಗಳಲ್ಲಿ ಕ್ರಿಕೆಟ್ ಆಟವನ್ನು ಪ್ರಪಂಚದ ಮನೆ ಮತ್ತು ಮನಸ್ಸುಗಳಿಗೆ ಮುಟ್ಟಿಸಿ ಜನಪ್ರಿಯಗೊಳಿಸಿದ. ಆತನ ಕಳಂಕ ರಹಿತ ಆಟ, ಮಾನಸಿಕ ದೃಢತೆ, ವೃತ್ತಿ ಪಾವಿತ್ರ್ಯತೆ, ಆಟದ ಮೇಲಿನ ನೈಜ ಪ್ರೀತಿ ಈ ಎಲ್ಲ ಗುಣಗಳು ಆತನ ವ್ಯಕ್ತಿತ್ವವನ್ನು ಹಿಮಾಲಯದೆತ್ತರಕ್ಕೆ ತಂದು ನಿಲ್ಲಿಸಿವೆ. ಕ್ರಿಕೆಟ್ ಜಗತ್ತಿನಲ್ಲಿ ಸಚಿನ್ ಗೆ ಸಚಿನ್ ಮಾತ್ರ ಸಾಟಿ ಎನ್ನುವ ಮಾತು ಅಕ್ಷರಶ: ನಿಜ.

ಅದು ಅದ್ಭುತ ಆಟ


            ೧೯೯೮ ಎಪ್ರಿಲ್ ೨೨ ಅದು ಶಾರ್ಜಾದ ಕ್ರಿಕೆಟ್ ಮೈದಾನ. ಅಲ್ಲಿ ಆ ದಿನ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಕೋಕ ಕೋಲಾ ಕಪ್ ನ ಕೊನೆಯ ಲೀಗ್ ಪಂದ್ಯದಲ್ಲಿ ಮುಖಾಮುಖಾಯಾಗಿದ್ದವು. ಆ ಹೊತ್ತಿಗಾಗಲೇ ಆಸ್ಟ್ರೇಲಿಯಾ ತಂಡ ಫೈನಲ್ ಗೆ ಅರ್ಹತೆ ಗಿಟ್ಟಿಸಿದ್ದರಿಂದ ಆ ದಿನದ ಪಂದ್ಯ ಅವರಿಗೆ ಔಪಚಾರಿಕವಾಗಿತ್ತು. ಆದರೆ ಭಾರತೀಯ ತಂಡದ ಪರಿಸ್ಥಿತಿ ತೀರ ಭಿನ್ನವಾಗಿತ್ತು. ತ್ರಿಕೋನ ಸರಣಿಯಲ್ಲಿನ ಇನ್ನೊಂದು ತಂಡವಾದ ನ್ಯೂಜಿಲೆಂಡ್ ಭಾರತಕ್ಕಿಂತ ಹೆಚ್ಚಿನ ರನ್ ರೇಟ್ ಹೊಂದಿದ್ದರಿಂದ ಭಾರತ  ಪಂದ್ಯವನ್ನು ಔಪಚಾರಿಕವಾಗಿ ತೆಗೆದುಕೊಳ್ಳುವಂತಿರಲಿಲ್ಲ. ಭಾರತ ಆ  ಪಂದ್ಯವನ್ನು ಸೋತರೂ ಅದು ೨೫೦ ಕ್ಕಿಂತ ಹೆಚ್ಚು ರನ್ ಗಳನ್ನು ಗಳಿಸಲೇ ಬೇಕಿತ್ತು. ಈ ಒಂದು ಒತ್ತಡದಲ್ಲಿ ಭಾರತ ಆಟದ ಅಂಗಳಕ್ಕಿಳಿದಾಗ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ೨೮೪ ರನ್ ಗಳ ಬೃಹತ್ ಮೊತ್ತ ಪೇರಿಸಿತು. ಭಾರತ ಇನ್ನಿಂಗ್ಸ್ ಆರಂಭಿಸಿದಾಗ ಅದರೆದುರು ಎರಡು ಆಯ್ಕೆಗಳಿದ್ದವು.  ಒಂದು ಪಂದ್ಯವನ್ನು ಗೆಲ್ಲಬೇಕು ಅಥವಾ ೨೫೪ ರನ್ ಗಳನ್ನಾದರೂ ಗಳಿಸಬೇಕು. ಪ್ರತಿ ಓವರ್ ಗೆ ಸರಾಸರಿ ೫.೪ ರನ್ ಗಳ ಗುರಿಯೊಂದಿಗೆ ಆಟ ಪ್ರಾರಂಭಿಸಿದ ಭಾರತಕ್ಕೆ ಸಚಿನ್ ತನ್ನ ಅಮೋಘ ಆಟದಿಂದ ಉತ್ತಮ ಅಡಿಪಾಯ ಒದಗಿಸಿದ. ಕ್ಯಾಸ್ಟ್ರೋವಿಚ್ ನ ಆರನೇ ಓವರ್ ನಲ್ಲಿ ಸತತವಾಗಿ ಭಾರಿಸಿದ ಎರಡು ಸಿಕ್ಸರ್ ಗಳು ಮನಮೋಹಕವಾಗಿದ್ದವು. ಸಚಿನ್ ಆಟ ಸೊಗಸಾಗಿದ್ದು ಮತ್ತು  ಆಕ್ರಮಣಕಾರಿಯಾಗಿದ್ದರೂ  ಬೇರೆ ಆಟಗಾರರಿಂದ ಬೆಂಬಲ ದೊರೆಯಲಿಲ್ಲ. ೨೯ ಓವರ್ ಗಳಾಗುವಷ್ಟರಲ್ಲಿ ಭಾರತ ೧೩೪ ರನ್ ಗಳಿಗೆ ೪ ವಿಕೆಟ್ ಗಳನ್ನು ಕಳೆದುಕೊಂಡು ಅಪಾಯದಲ್ಲಿತ್ತು. ಆ ಹೊತ್ತಿಗಾಗಲೇ ಮೈದಾನವನ್ನು ಪ್ರವೇಶಿಸಿದ ಗಾಳಿ ಕೆಲವು ನಿಮಿಷಗಳ ಕಾಲ ಆಟಕ್ಕೆ ತಡೆಯೊಡ್ಡಿತು. ಪರಿಣಾಮವಾಗಿ ೪೬ ಓವರ್ ಗಳಿಗೆ ಆಟವನ್ನು ಸೀಮಿತಗೊಳಿಸಿ ಭಾರತಕ್ಕೆ ಗೆಲ್ಲಲು ೨೭೬ ರನ್ ಗಳ ಗುರಿ ನೀಡಲಾಯಿತು ಇಲ್ಲವೇ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯಲು ೨೩೭ ರನ್ ಗಳನ್ನು ಗಳಿಸಬೇಕಿತ್ತು. ಗಾಳಿ ಶಾಂತವಾದ ನಂತರ ಮೈದಾನಕ್ಕೆ ಬಂದ ಸಚಿನ್ ಆಟ ಆಕ್ರಮಣಕಾರಿಯಾಗಿತ್ತು.  ಕೇವಲ ೧೦೯ ಎಸೆತಗಳಲ್ಲಿ ೧೪೩ ರನ್ ಗಳಿಸಿ ಆತ ಔಟಾದಾಗ ಸ್ಕೋರ್ ಬೋರ್ಡಿನಲ್ಲಿ ಭಾರತದ ಮೊತ್ತ ೨೩೭ ನ್ನು ದಾಟಿಯಾಗಿತ್ತು. ಭಾರತ ಆ ಪಂದ್ಯವನ್ನು ಸೋತರೂ ಹೆಚ್ಚಿನ ರನ್ ರೇಟ್ ಕಾರಣದಿಂದ ಫೈನಲ್ ಪಂದ್ಯಕ್ಕೆ ಅರ್ಹತೆ ಗಿಟ್ಟಿಸಿತು. ಸಚಿನ್ ಏಕಾಂಗಿಯಾಗಿ ಹೋರಾಡಿ ಭಾರತವನ್ನು ಫೈನಲ್ ನ ಹೊಸ್ತಿಲಿಗೆ  ತಂದು ನಿಲ್ಲಿಸಿದ್ದ. ಫೈನಲ್ ಪಂದ್ಯ ಎಪ್ರಿಲ್ ೨೪ ರಂದು ನಿಗದಿಯಾಗಿತ್ತು. ಆ ದಿನ ಸಚಿನ್ ತೆಂಡೂಲ್ಕರನದು ೨೫ ನೆ ಹುಟ್ಟು ಹಬ್ಬ.

            ಎಲ್ಲರೂ ಕಾತುರದಿಂದ ನಿರೀಕ್ಷಿಸುತ್ತಿದ ಎಪ್ರಿಲ್ ೨೪ ಬಂದೆ ಬಿಟ್ಟಿತು. ಅದೇ ಶಾರ್ಜಾದ  ಕ್ರಿಕೆಟ್ ಮೈದಾನ. ಮತ್ತೆ ಅದೇ ಎರಡು ತಂಡಗಳು ಫೈನಲ್ ನಲ್ಲಿ ಮುಖಾಮುಖಿಯಾಗಿದ್ದವು. ಹೊನಲು ಬೆಳಕಿನ ಪಂದ್ಯ ಆರಂಭವಾದಾಗ  ಮಧ್ಯಾಹ್ನದ ಸಮಯ. ಇಲ್ಲಿ ಭಾರತದಲ್ಲಿ ಟಿವಿ ಪರದೆಯ ಮುಂದೆ ಕುಳಿತಿದ್ದ ಕೋಟ್ಯಾಂತರ ಭಾರತೀಯರು ಭಾರತ ಗೆಲ್ಲಲೆಂದು ಪ್ರಾರ್ಥಿಸುತ್ತಿದ್ದರು. ಟಾಸ್ ಗೆದ್ದ ಭಾರತ ಆಸ್ಟ್ರೇಲಿಯಾಕ್ಕೆ ಬ್ಯಾಟಿಂಗ್ ನೀಡಿತು. ತನಗೆ ನೀಡಿದ ಆಹ್ವಾನವನ್ನು ಸರಿಯಾಗಿಯೇ ಬಳಸಿಕೊಂಡ ಆಸ್ಟ್ರೇಲಿಯಾ ೫೦ ಓವರ್ ಗಳಲ್ಲಿ ಸವಾಲಿನ ೨೭೨ ರನ್ ಗಳನ್ನು ಕಲೆಹಾಕಿ ಭಾರತಕ್ಕೆ ಗೆಲ್ಲಲು ೨೭೩ ರನ್ ಗಳ ಗುರಿ ನೀಡಿತು. ನೆನಪಿರಲಿ ೧೯೯೦ ರ ದಶಕದಲ್ಲಿ ಏಕದಿನ ಪಂದ್ಯದಲ್ಲಿ ೨೫೦ ರನ್ ಗಳಿಸುವುದೇ ಬೃಹತ್ ಮೊತ್ತವಾಗಿತ್ತು. ಅಂಥದ್ದರಲ್ಲಿ ೨೭೩ ಭಾರತಕ್ಕೆ ಸವಾಲಿನ ಮೊತ್ತವಾಗಿತ್ತು. ಓವರ್ ಗೆ ಸರಾಸರಿ ೫.೫ ರನ್ ಗಳ ಗುರಿಯೊಂದಿಗೆ ಬ್ಯಾಟಿಂಗ್ ಗಿಳಿದ ಭಾರತಕ್ಕೆ ಮತ್ತೆ ಅದೇ ಸಚಿನ್ ಆಸರೆಯಾದ. ಮೊಂಗಿಯಾ ಮತ್ತು ಅಜರ್ ರೊಂದಿಗಿನ ಎರಡು ಉತ್ತಮ ಜೊತೆಯಾಟದಲ್ಲಿ ಉತ್ತಮ ರನ್ ಕಲೆಹಾಕಿ ಭದ್ರ ಅಡಿಪಾಯ ಒದಗಿಸಿದ. ಆತನ ಮೊದಲ ಐವತ್ತು ರನ್ ಗಳು ಕೇವಲ ೪೪ ಎಸೆತಗಳಲ್ಲಿ ಬಂದವು. ಅದು ಆ ಸರಣಿಯ ಅತಿ ವೇಗದ ಅರ್ಧ ಶತಕ ಎಂದು ದಾಖಲಾಯಿತು. ಅಂದಿನ ಸಚಿನ್ ಆಟದ ವೈಖರಿ ಫೈನಲ್ ಪಂದ್ಯವನ್ನು ಗೆಲ್ಲಲೇ ಬೇಕೆಂದು ನಿರ್ಧರಿಸಿದಂತಿತ್ತು. ಮತ್ತೆ ಸಚಿನ್ ಸರಣಿಯಲ್ಲಿ ಸತತ ಎರಡನೇ ಶತಕ ದಾಖಲಿಸಿದ. ೧೩೪ ರನ್ ಗಳಿಸಿ ಸಚಿನ್ ಔಟಾದಾಗ ಭಾರತದ ಮೊತ್ತ ೨೪೮. ಆಗ ಭಾರತಕ್ಕೆ ಪಂದ್ಯ ಗೆಲ್ಲಲು  ಬೇಕಾಗಿದ್ದದ್ದು ಕೇವಲ ೨೫ ರನ್ ಗಳು ಮಾತ್ರ. ಜಡೇಜಾ ಮತ್ತು ಕಾನಿಟ್ಕರ್ ಇನ್ನೂ ೯ ಎಸೆತಗಳು ಉಳಿದಿರುವಂತೆಯೇ ಜಯದ ಔಪಚಾರಿಕತೆಯನ್ನು ಪೂರೈಸಿದರು. ಶಾರ್ಜಾದ ಕ್ರೀಡಾಂಗಣದ ತುಂಬ ಭಾರತದ ತ್ರಿವರ್ಣ ಧ್ವಜ ಹಾರಾಡಿತು. ಅರ್ಹವಾಗಿಯೇ ಸಚಿನ್ ಪಂದ್ಯ ಶ್ರೇಷ್ಠ ಮತ್ತು ಸರಣಿ  ಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾದ. ದಶಕದ ನಂತರವೂ ಅಂದಿನ ಆ ಎರಡು ಪಂದ್ಯಗಳು ಭಾರತೀಯರ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿವೆ. ಅದಕ್ಕೆ ಕಾರಣ ಅಂದು ಸಚಿನ್ ನೀಡಿದ ಆ ಅದ್ಭುತ ಪ್ರದರ್ಶನ.

ಆ ದಾಖಲೆ ಸಚಿನ್ ಗಾಗಿ ಕಾಯುತ್ತಿತ್ತು


            ಏಕದಿನ ಪಂದ್ಯದಲ್ಲಿ ಮೊದಲ ದ್ವಿಶತಕ ಇದು ಸಚಿನ್ ಬರೆದ ಹೊಸ ದಾಖಲೆ. ನಮಗೆಲ್ಲ ನೆನಪಿರುವಂತೆ ೧೯೭೧ ರಿಂದ ಪ್ರಾರಂಭವಾದ ಏಕದಿನ ಕ್ರಿಕೆಟ್ ನಲ್ಲಿ ಸಚಿನ್ ಗಿಂತ ಮೊದಲು ಯಾವೊಬ್ಬ ಕ್ರಿಕೆಟಿಗ ದ್ವಿಶತಕ ದಾಖಲಿಸಿರಲಿಲ್ಲ. ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ಎಂದಾಕ್ಷಣ ಎಲ್ಲರಿಗೂ ನೆನಪಾಗುತ್ತಿದ್ದದ್ದು ಆಕ್ರಮಣಕಾರಿ ಆಟಕ್ಕೆ ಹೆಸರಾದ ಜಯಸೂರ್ಯ, ಆಫ್ರಿದಿ, ಗಿಲ್ ಕ್ರಿಸ್ಟ್, ಸೆಹ್ವಾಗ್ ಮಾತ್ರ. ಆದರೆ ಅಂಥದ್ದೊಂದು ದಾಖಲೆಯ ಆಟ ಆಡಲು ತಾಳ್ಮೆ, ಇಡೀ ಇನ್ನಿಂಗ್ಸ್ ಆಡುವ ದೈಹಿಕ ಸಾಮರ್ಥ್ಯ, ಸಂಯಮ ಈ ಎಲ್ಲ ಗುಣಗಳು ಬೇಕು. ಈ ಎಲ್ಲ ಗುಣಗಳು ಇಡಿಯಾಗಿ ಒಂದೇ ವ್ಯಕ್ತಿತ್ವದಲ್ಲಿರುವುದು ಅದು ಸಚಿನ್ ನಲ್ಲಿ ಮಾತ್ರ. ಫೆಬ್ರುವರಿ ೨೩, ೨೦೧೦ ರಂದು ಗ್ವಾಲಿಯರ್ ನ ರೂಪಸಿಂಗ್ ಮೈದಾನ ಅವಿಸ್ಮರಣೀಯ ಘಟನೆಗೆ ಸಾಕ್ಷಿಯಾಯಿತು. ಆ ದಿನ ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವಿನ ಏಕದಿನ ಪಂದ್ಯ ಯಾರೂ ನಿರೀಕ್ಷಿಸದ ಮೈಲಿಗಲ್ಲನ್ನು ಕ್ರಿಕೆಟ್ ನ ಇತಿಹಾಸದಲ್ಲಿ ದಾಖಲಿಸಿತು. ಇನ್ನಿಂಗ್ಸ್ ನ ಕೊನೆಯ ಓವರ್ ನ ಎರಡನೇ ಚೆಂಡನ್ನು ಎದುರಿಸಿದ ಸಚಿನ್ ಒಂದು ರನ್ ಗಾಗಿ ಓಡಿದಾಗ ಇಡೀ ಕ್ರೀಡಾಂಗಣದ ತುಂಬ ರೋಮಾಂಚನದ ಕ್ಷಣವದು. ಇದು ಕನಸಿರಬಹುದೇ ಎನ್ನುವ ಅಚ್ಚರಿ ಅನೇಕರದು. ಏಕದಿನ ಕ್ರಿಕೆಟ್ ನಲ್ಲಿ ಶತಕಕ್ಕೊಂದು ಸಂಗಾತಿಯನ್ನು ಒದಗಿಸಿದ ಈ ವಾಮನ ಆ ಕ್ಷಣ ತ್ರಿವಿಕ್ರಮನಾಗಿ ಗೋಚರಿಸಿದ. ನಾಲ್ಕು ದಶಕಗಳಿಂದ ಯಾವ ಕ್ರಿಕೆಟಿಗ ಮಾಡದೆ ಇದ್ದ ಸಾಧನೆ ಅಂದು ಸಚಿನ್ ನಿಂದ ದಾಖಲಾಯಿತು. ಇಪ್ಪತ್ತು ವರ್ಷಗಳಿಂದ ಸತತ ಕ್ರಿಕೆಟ್ ಆಡುತ್ತಿರುವ ಸಚಿನ್ ಅಂದು ಇಡೀ ಇನ್ನಿಂಗ್ಸ್ ಆಡಿ ದ್ವಿಶತಕ ದಾಖಲಿಸಿದ. ಇಡೀ ಇನ್ನಿಂಗ್ಸ್ ಆಡಿದ್ದರೂ ಆತನ ಆಟ ಆಕ್ರಮಣಕಾರಿಯಾಗಿತ್ತು. ದ್ವಿಶತಕಕ್ಕಾಗಿ ಎದುರಿಸಿದ್ದು ಕೇವಲ ೧೪೭ ಎಸೆತಗಳನ್ನು ಮಾತ್ರ. ಇಂಥದ್ದೊಂದು ದಾಖಲೆ ಯಾವಾಗ ಬರೆಯುತ್ತದೆಂದು ಕ್ರಿಕೆಟ್ ಪ್ರಿಯರು ಕಾಯುತ್ತಿದ್ದರು. ಕೊನೆಗೂ ಅದು ಸಚಿನ್ ನಿಂದ ಸಾಧ್ಯವಾಯಿತು. ಏಕೆಂದರೆ ಆ ದಾಖಲೆ ಸಚಿನ್ ಗಾಗಿ ಕಾಯುತ್ತಿತ್ತು.

ಮಾನಸಿಕ ದೃಢತೆ


            ಸಚಿನ್ ಆಟದಲ್ಲಿನ ಸ್ಥಿರತೆ ನಿಜಕ್ಕೂ ಅಚ್ಚರಿಯ ಸಂಗತಿ. ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಡುತ್ತಿರುವ ಒಬ್ಬ ಕ್ರಿಕೆಟಿಗ ನಿರಂತರವಾಗಿ ಸ್ಥಿರತೆಯನ್ನು ಕಾಪಾಡಿಕೊಂಡು ಬರುವುದು ಸಣ್ಣ ಸಂಗತಿಯಲ್ಲ. ಕ್ರಿಕೆಟ್ ಆಟದಿಂದ ದೊರೆಯುತ್ತಿರುವ ಜನಪ್ರಿಯತೆ ಮತ್ತು ಶ್ರೀಮಂತಿಕೆಯಿಂದ ಆಟಗಾರರು ಉನ್ಮತ್ತರಾಗುತ್ತಿರುವರು. ಪರಿಣಾಮವಾಗಿ ಆಟದಲ್ಲಿನ ಕನ್ಸಿಸ್ಟೆನ್ಸಿ ಯನ್ನು ಅವರು ಬೇಗನೆ ಕಳೆದುಕೊಳ್ಳುತ್ತಿರುವರು. ಆದರೆ ಸಚಿನ್ ವ್ಯಕ್ತಿತ್ವ ಹಾಗಿಲ್ಲ. ಈ ಜನಪ್ರಿಯತೆ ಮತ್ತು ಹಣ   ಆತನನ್ನು ಉನ್ಮತ್ತನನ್ನಾಗಿಸಿಲ್ಲ. ದಾಖಲೆ ಮೇಲೆ ದಾಖಲೆ ಬರೆದರೂ ಆತನ ತಲೆ ಭುಜದ ಮೇಲೇ ಇದೆ. ರೂಪಸಿಂಗ್ ಮೈದಾನದಲ್ಲಿ ದ್ವಿಶತಕದ ಆಟವಾಡಿದಾಗ ಆತ ಕುಣಿಯಲಿಲ್ಲ, ಕುಪ್ಪಳಿಸಲಿಲ್ಲ, ಪಿಚ್ ಗೆ ಬಾಗಿ ನಮಿಸಲಿಲ್ಲ, ಕ್ರೀಡಾಂಗಣದ ತುಂಬ ಓಡಾಡಲಿಲ್ಲ, ಬ್ಯಾಟಿಗೆ ಮುತ್ತಿಕ್ಕಲಿಲ್ಲ. ಪ್ರತಿ ಬಾರಿ ಅರ್ಧ ಶತಕ, ಶತಕ ದಾಖಲಿಸಿದಾಗ ಆತನ ಪ್ರತಿಕ್ರಿಯೆ ಹೇಗಿರುತ್ತಿತ್ತೋ ಆ ದಿನ ಕೂಡ ಹಾಗೆ ಇತ್ತು.

           ಹೊಗಳಿಕೆ ಮತ್ತು ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವ ಆತನದು. ಸಚಿನ್ ವೃತ್ತಿ ಬದುಕಿನ ಈ ಎರಡು ದಶಕಗಳಲ್ಲಿ ಅನೇಕರು ಅನೇಕ  ರೀತಿಯ ಟೀಕೆಗಳನ್ನು ಮಾಡಿರುವರು. ಸಚಿನ್ ಗೆ ವಯಸ್ಸಾಗಿದೆ, ಆತನ ದೇಹ ಆಟಕ್ಕೆ ಸ್ಪಂದಿಸುತ್ತಿಲ್ಲ, ಆತ ಒಳ್ಳೆಯ ಫಿನಿಶರ್ ಅಲ್ಲ, ಸಚಿನ್ ಒತ್ತಡದಲ್ಲಿ ಆಡಲಾರ, ಆತ ಕೇವಲ ದಾಖಲೆಗಾಗಿ   ಆಡುವನು ಹೀಗೆ ಸಚಿನ್ ಹಲವು ಬಗೆಯ ಟೀಕೆಗಳನ್ನು ಎದುರಿಸಿರುವನು. ಆದರೆ ಸಚಿನ್  ಯಾವ ಟೀಕೆಗಳಿಗೂ ಉತ್ತರಿಸಲಾರ. ಯಾವ ಟೀಕೆಯೂ ಆಟದ ಬಗೆಗಿನ ಆತನ ಬದ್ಧತೆಯನ್ನು ಹಾಳುಗೆಡುವಲಿಲ್ಲ. ಪ್ರತಿಯೊಂದು ಟೀಕೆ ಬಂದಾಗಲೂ ಅವನೊಬ್ಬ ಪ್ರಬುದ್ಧ ಆಟಗಾರನಾಗಿ ಬೆಳೆಯುತ್ತಲೇ ಹೋದ.

ಆ ಒಂದು ಕೊರಗು ಆತನಿಗೂ ಇತ್ತು


             ಎಷ್ಟೆಲ್ಲಾ ದಾಖಲೆಗಳನ್ನು ಬರೆದು ಏನೆಲ್ಲಾ ವಿಕ್ರಮಗಳನ್ನು ಸಾಧಿಸಿಯೂ ಸಚಿನ್ ನಲ್ಲಿ ಒಂದು ಕೊರಗಿತ್ತು. ೨೦೧೧ ರ ವಿಶ್ವಕಪ್ ಗಿಂತ ಮೊದಲು ಐದು ವಿಶ್ವಕಪ್ ಗಳಲ್ಲಿ ಆಡಿರುವ ಸಚಿನ್ ಗೆ ವಿಶ್ವಕಪ್ ಗೆದ್ದ ತಂಡದ ಸದಸ್ಯನಾಗದೆ ಇರುವುದು ಒಂದು ಕೊರಗಾಗಿ ಪರಿಣಮಿಸಿತ್ತು. ಸಚಿನ್ ಆಡಿದ ಮೊದಲಿನ ಆ ಐದು ವಿಶ್ವಕಪ್ ಗಳಲ್ಲಿ ಭಾರತ ವಿಶ್ವಕಪ್ ಗೆಲ್ಲದಿದ್ದರೂ ಸಚಿನ್ ಮಾತ್ರ ವಿಶ್ವಕಪ್ ನಲ್ಲಿ ತನ್ನ ಛಾಪು ಮೂಡಿಸಿದ್ದ. ವಿಶ್ವಕಪ್ ನಲ್ಲಿ ಅತ್ಯಧಿಕ ರನ್ ಗಳಿಸಿದ ದಾಖಲೆ ಸಚಿನ್ ಹೆಸರಿನಲ್ಲಿದೆ. ೨೦೦೩ ರ ವಿಶ್ವಕಪ್ ನಲ್ಲಿ ೬೭೩ ರನ್ ಕಲೆಹಾಕಿದ ಸಚಿನ್ ಒಂದೇ ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕೀರ್ತಿಗೆ ಭಾಜನನಾದ. ಅದೇ ವರ್ಷ ವಿಶ್ವಕಪ್ ಸರಣಿ ಪುರುಷ ಪ್ರಶಸ್ತಿ ಸಚಿನ್ ಮುಡಿಗೇರಿತು. ೨೦೦೩ ರ ವಿಶ್ವಕಪ್ ನಲ್ಲಿ ಸಚಿನ್ ತನ್ನ ಅಮೋಘ ಆಟದಿಂದ ಭಾರತವನ್ನು ಫೈನಲ್  ವರೆಗೂ ಕೊಂಡೊಯ್ದ. ಆದರೆ   ಸಚಿನ್ ಕನಸು ನನಸಾದದ್ದು ೨೦೧೧ ರಲ್ಲಿ. ಅದು ಸಚಿನ್ ಪಾಲಿಗೆ ಆರನೇ ಮತ್ತು ಕೊನೆಯ ವಿಶ್ವಕಪ್ ಆಗಿತ್ತು. ಅದ್ಭುತ ಫಾರ್ಮ್ ನಲ್ಲಿದ್ದ ಭಾರತೀಯ ಕ್ರಿಕೆಟಿಗರು ಸಚಿನ್ ಗಾಗಿ ವಿಶ್ವಕಪ್ ಗೆಲ್ಲುವ ಪಣ ತೊಟ್ಟಿದ್ದರು. ವಿಶ್ವಕಪ್ ಗೆದ್ದ ಆ ದಿನ ಸಚಿನ್  ನನ್ನು ತಮ್ಮ ಹೆಗಲೆ ಮೇಲೆ ಹೊತ್ತು ಗೌರವಿಸಿದರು. ಕ್ರಿಕೆಟ್ ಲೋಕದ ಅನರ್ಘ್ಯ ರತ್ನ ಸಚಿನ್ ಗೆ ತನ್ನ ನಿವೃತ್ತಿಯ ದಿನಗಳಲ್ಲಿ ವಿಶ್ವಕಪ್ ಗೆಲ್ಲಲಿಲ್ಲ ಎನ್ನುವ ಕೊರಗು ಕಾಡದಿರಲಿ ಎನ್ನುವುದು ಅವರೆಲ್ಲರ ಬಯಕೆಯಾಗಿತ್ತು. 'ಕಳೆದ ಎರಡು ದಶಕಗಳಿಂದ ರಾಷ್ಟ್ರದ ಕ್ರಿಕೆಟ್ ಆಟದ ಕೀರ್ತಿಯನ್ನು  ಹೆಗಲೆ ಮೇಲೆ ಹೊತ್ತು ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ಸಚಿನ್ ನನ್ನು ನಾವು ಈ ದಿನ ಹೆಗಲ ಮೇಲೆ ಕುಳ್ಳಿರಿಸಿಕೊಂಡು ಗೌರವಿಸುತ್ತಿದ್ದೇವೆ' ಸಚಿನ್ ನನ್ನು ಗೌರವಿಸಿದ ಆ ಘಳಿಗೆ ಯುವ  ಕ್ರಿಕೆಟಿಗ  ವಿರಾಟ್ ಕೊಹ್ಲಿ ಹೇಳಿದ ಈ ಮಾತು ನಿಜಕ್ಕೂ ಅರ್ಥಪೂರ್ಣ.

ಸಚಿನ್ ಗೂ ಅಂಟಿದ ಕಳಂಕ


            ಕ್ರಿಕೆಟ್ ಜಗತ್ತಿನಲ್ಲಿ ಸಚಿನ್ ಒಬ್ಬ ವಿವಾದೀತ ಆಟಗಾರ. ಭಾರತದ ಪ್ರತಿಯೊಬ್ಬ ಕ್ರಿಕೆಟಿಗನಿಗೆ ಸಚಿನ್ ಜೊತೆ ಆಡುವುದು ಜೀವನದ ಬಹುಮುಖ್ಯ ಕನಸು. ಎದುರಾಳಿ ತಂಡ ಯಾವುದೇ ದೇಶವಾಗಿರಲಿ ಆ ಆಟಗಾರರೆಲ್ಲರೂ ಸಚಿನ್ ನನ್ನು ಗೌರವಿಸುತ್ತಾರೆ. ಮೈದಾನದಲ್ಲಿನ ಆತನ ಸಭ್ಯ ವರ್ತನೆ ವಿದೇಶಿ ಪ್ರೇಕ್ಷಕರನ್ನೂ ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಆತ ಶತಕ ಸಿಡಿಸಿದಾಗ ದೇಶ, ಭಾಷೆಯ ಗಡಿಯನ್ನು ಮೀರಿ ಎಲ್ಲ ಪ್ರೇಕ್ಷಕರು ಎದ್ದು ನಿಂತು ಕರತಾಡನದ ಮೂಲಕ ಸಂಭ್ರಮಿಸುತ್ತಾರೆ. ಇಂಥ ಸಭ್ಯ ಸಚಿನ್ ಗೂ ಒಂದು ಸಾರಿ ಕಳಂಕ ಅಂಟಿಕೊಂಡಿತ್ತು. ೨೦೦೧ ರಲ್ಲಿ ದಕ್ಷಿಣ ಆಫ್ರಿಕ ಜೊತೆಗಿನ ಎರಡನೇ ಟೆಸ್ಟ್ ನಲ್ಲಿ ಸಚಿನ್ ಚೆಂಡನ್ನು ಸ್ವಚ್ಚಗೊಳಿಸಿದ್ದು ವಿವಾದಕ್ಕೆ ಕಾರಣವಾಯಿತು. ಮ್ಯಾಚ್ ರೆಫರಿ ಮೈಕ್ ಡೆನ್ನಿಸ್ ಚೆಂಡು ವಿರೂಪಗೊಳಿಸಿದ ಆರೋಪದ ಮೇಲೆ ಸಚಿನ್ ಗೆ ಒಂದು ಪಂದ್ಯದ ನಿಷೇಧ ವಿಧಿಸಿದ. ನಂತರದ ದಿನಗಳಲ್ಲಿ ಮೈಕ್ ಡೆನಿಸ್ ವಿರುದ್ಧ ಆಕ್ರೋಶದ ಮಾತುಗಳು ಕೇಳಿ ಬಂದವು. ಎಲ್ಲ ದೇಶಗಳ ಕ್ರಿಕೆಟಿಗರು ಸಚಿನ್ ಬೆಂಬಲಕ್ಕೆ ನಿಂತರು. ಕೊನೆಗೆ ಎಚ್ಚೆತ್ತುಕೊಂಡ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮೈಕ್ ಡೆನಿಸ್ ನನ್ನು ಮೂರನೆ ಪಂದ್ಯದ ಮ್ಯಾಚ್ ರೆಫರಿ ಸ್ಥಾನದಿಂದ ಕೆಳಗಿಳಿಸಿತು. ಸಚಿನ್ ತನ್ನ ನಿಷ್ಕಳಂಕ ವ್ಯಕ್ತಿತ್ವದಿಂದ ಕ್ರಿಕೆಟ್ ಆಟವನ್ನು ಗೆಲ್ಲಿಸಿದ. ಇದು ಆತನ  ಸ್ಟ್ರೆಂಗ್ತ್    ಕೂಡ ಹೌದು.

ಕ್ರಿಕೆಟ್  ಹನ್ನೊಂದು ಜನರ ಆಟ


         ಸಚಿನ್ ಶತಕವನ್ನೂ ದಾಖಲಿಸಿಯೂ ಭಾರತ ಪಂದ್ಯವನ್ನು ಸೋತಾಗ ಆತನ ಆಟದ ಕುರಿತು ಟೀಕೆಗಳು ಕೇಳಿ ಬರುತ್ತವೆ. ಕ್ರಿಕೆಟ್ ಪಂಡಿತರು ಸಚಿನ್ ಕ್ರಿಕೆಟ್ ಬದುಕು ಮುಗಿಯಿತು ಎಂದು ಷರಾ ಬರೆಯುತ್ತಾರೆ. ಸಚಿನ್ ಆಡುವುದು ದಾಖಲೆಗಾಗಿ ಎಂದು ಮಾಧ್ಯಮಗಳು ವ್ಯಂಗ್ಯವಾಡುತ್ತವೆ. ಹೀಗೆ ಟೀಕಿಸುವವರು ಕ್ರಿಕೆಟ್   ಕೇವಲ ಒಬ್ಬನ ಆಟವಲ್ಲ ಅದು ಹನ್ನೊಂದು ಜನರ ಆಟ ಎಂದು ಅರ್ಥೈಸಿಕೊಳ್ಳದಿರುವುದು ದೊಡ್ಡ ದುರಂತ. ಚೆಸ್, ಟೆನಿಸ್, ಬಾಕ್ಸಿಂಗ್ ನಂಥ ಆಟಗಳು ಒಬ್ಬನೇ ಆಟಗಾರನ ಸಾಮರ್ಥ್ಯವನ್ನು ಅವಲಂಬಿಸಿವೆ. ಆದರೆ ಕ್ರಿಕೆಟ್ ಹಾಗಲ್ಲ. ಇಲ್ಲಿ ಬ್ಯಾಟ್ಸ್ ಮನ್ ರನ್ ಗಳಿಸಬೇಕು, ಬೌಲರ್ ವಿಕೆಟ್ ಉರುಳಿಸ ಬೇಕು, ಕಿಪರ್ ವಿಕೆಟ್ ಹಿಂದೆ ಅದ್ಭುತವಾಗಿ ಕಾರ್ಯನಿರ್ವಹಿಸಬೇಕು, ಕ್ಷೇತ್ರ  ರಕ್ಷಕ  ರನ್ ಉಳಿಸಬೇಕು ಇದೆಲ್ಲಕ್ಕೂ ಮಿಗಿಲಾಗಿ ನಾಯಕ ಇಡೀ ತಂಡವನ್ನು ಜಯದತ್ತ  ಮುನ್ನಡೆಸಬೇಕು.  ಅಂದಾಗ ಮಾತ್ರ ಕ್ರಿಕೆಟ್  ನಲ್ಲಿ ಗೆಲುವು ಸಾಧ್ಯ.  ಈ ಎಲ್ಲ ಪಾತ್ರಗಳನ್ನು ನಿರ್ವಹಿಸಲೆಂದೇ ಕ್ರಿಕೆಟ್ ಆಟದಲ್ಲಿ ಹನ್ನೊಂದು ಜನ ಆಟಗಾರರಿರುವರು. ಈ ಎಲ್ಲ ಪಾತ್ರಗಳನ್ನು ಸಚಿನ್ ಒಬ್ಬನೇ ನಿರ್ವಹಿಸಲು ಸಾಧ್ಯವಿಲ್ಲ. ಹೀಗಿದ್ದೂ ಸಚಿನ್ ಅನೇಕ ಪಂದ್ಯಗಳಲ್ಲಿ ಏಕಾಂಗಿಯಾಗಿ ಹೋರಾಡಿ ಭಾರತಕ್ಕೆ ಜಯ ತಂದಿರುವನು. ಆಟದ ಬಗೆಗಿನ ಆತನ ವೃತ್ತಿ ಬದ್ಧತೆಯನ್ನು ಪ್ರಶ್ನಿಸುವಂತಿಲ್ಲ. ಕ್ರಿಕೆಟ್ ಮೇಲಿನ ಅನನ್ಯ ಪ್ರೀತಿಯೆ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಡಲು ಸಾಧ್ಯವಾಗಿಸಿರುವುದು. ಸಚಿನ್ ಆಡುತ್ತ ಹೋದಂತೆ ದಾಖಲೆಗಳು ನಿರ್ಮಾಣವಾಗುತ್ತ ಹೋದವು. ಒಂದು ವೇಳೆ ಸಚಿನ್  ಪಂದ್ಯದಲ್ಲಿ  ಐದು ಹತ್ತು ರನ್ ಗಳಿಸಿ ಔಟಾಗುತ್ತಿದ್ದರೆ ಆತನ ಕ್ರಿಕೆಟ್ ಬದುಕು ಇವತ್ತಿನವರೆಗೂ ಮುಂದುವರಿಯುತ್ತಿತ್ತೆ?

ಕೊನೆಯ ಮಾತು 


           ಸಚಿನ್ ಮತ್ತು ಆತನ ಬಾಲ್ಯದ ಗೆಳೆಯ ಕಾಂಬ್ಳಿ ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಇಬ್ಬರೂ ಪ್ರತಿಭಾನ್ವಿತ ಆಟಗಾರರು. ಆದರೆ ಕಾಂಬ್ಳಿ ಬಹುಬೇಗ ತನ್ನ ಫಾರ್ಮ್ ಕಳೆದುಕೊಂಡು ಕ್ರಿಕೆಟ್ ನಿಂದ ದೂರವಾದ. ಸಚಿನ್ ಎರಡೂವರೆ ದಶಕಗಳ ಕಾಲ  ತನ್ನ ಸ್ಥಿರತೆಯನ್ನು ಕಾಯ್ದುಕೊಂಡು ಕ್ರಿಕೆಟ್ ಆಡಿದ. ಜನಪ್ರಿಯತೆ ಮತ್ತು ಹಣ ಒಬ್ಬನ ಕ್ರಿಕೆಟ್ ಬದುಕನ್ನು ಮೊಟಕುಗೊಳಿಸಿದರೆ ಇನ್ನೊಬ್ಬ ತನ್ನ ನಿಷ್ಕಳಂಕ ಆಟದಿಂದ ಕ್ರಿಕೆಟ್ ಆಟಕ್ಕೆ ಹೊಸ ಮೆರುಗು ತಂದಿತ್ತ. ಇಪ್ಪತ್ನಾಲ್ಕು  ವರ್ಷಗಳಿಂದ ನಾವು ನೋಡುತ್ತಿರುವ ಸಚಿನ್ ವ್ಯಕ್ತಿತ್ವದಲ್ಲಿ ಸ್ವಲ್ಪವೂ ಬದಲಾವಣೆಯಾಗಿಲ್ಲ. ಬದಲಾಗಿರುವುದು ಕಾಲ ಮತ್ತು ಕ್ರಿಕೆಟ್ ಮಾತ್ರ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 



 
       

Saturday, November 2, 2013

ದೀಪಾವಳಿ ಮತ್ತು ಸಾಂಸ್ಕೃತಿಕ ಸಂಕ್ರಮಣ

     



     









         




           
          ಇದು ಸಾಂಸ್ಕೃತಿಕ ಸಂಕ್ರಮಣದ ಕಾಲಘಟ್ಟ. ಏಕೆಂದರೆ ಆಧುನಿಕತೆ ಮತ್ತು ಜಾಗತೀಕರಣದ ಈ ಸಂದರ್ಭ ನಾವು ಜಗತ್ತಿನ ಆಗು ಹೋಗುಗಳಿಗೆ ಮುಖ ಮಾಡಿ ನಿಂತಿರುವ ಈ ಹೊತ್ತಿನಲ್ಲೇ ನಮ್ಮದೇ ನೆಲದ ಸಾಂಸ್ಕೃತಿಕ ಆಚರಣೆಗಳಾದ ಹಬ್ಬಗಳು ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತಿವೆ. ಅದಕ್ಕೆಂದೇ ನಾನು ಈ ಅವಧಿಯನ್ನು ಸಾಂಸ್ಕೃತಿಕ ಸಂಕ್ರಮಣದ ಕಾಲಘಟ್ಟವೆಂದು ಕರೆದಿದ್ದು. ನಿಮಗೊಂದು ಉದಾಹರಣೆ ಹೇಳುತ್ತೇನೆ ನನ್ನ ಪರಿಚಿತರ ಮಗ ಪ್ರದೀಪ ಹತ್ತನೇ ತರಗತಿಯಲ್ಲಿ ಓದುತ್ತಿರುವ ಹುಡುಗ. ಆತನನ್ನು ಮಾತನಾಡಿಸಿದಾಗ ಸೆಂಚುರಿಯನ್ ಇಂಗ್ಲಿಷ್ ಸಿನಿಮಾದ ಬಗ್ಗೆ, ರಫೆಲ್ ನಡಾಲ್ ಕುರಿತು, ಐಪಾಡ್ ಟ್ಯಾಬ್ಲೆಟ್ ವಿಷಯವಾಗಿ ಹೀಗೆ ಅನೇಕ ವಿಷಯಗಳನ್ನು ಹೇಳಿದ. ನಿಜಕ್ಕೂ ಆ ವಯಸ್ಸಿಗೆ ಬಹಳಷ್ಟು ವಿಷಯಗಳನ್ನು ತಿಳಿದುಕೊಂಡಿದ್ದ. ಆದರೆ ನಮ್ಮ ಸಂಭಾಷಣೆಯ ಕೊನೆಯಲ್ಲಿ ಆತ ಕೇಳಿದ ಪ್ರಶ್ನೆ ನನ್ನನ್ನು ಆ ಕ್ಷಣಕ್ಕೆ ಒಂದಿಷ್ಟು ವಿವೇಚಿಸುವಂತೆ ಮಾಡಿತು. ಆತ ಕೇಳಿದ್ದಿಷ್ಟೆ ಗಾಂಧಿ ಜಯಂತಿ ಪ್ರತಿವರ್ಷ ಅಕ್ಟೋಬರ್ ಎರಡನೇ ತಾರಿಖಿಗೆ ಆಚರಿಸುವಂತೆ ಈ ದೀಪಾವಳಿ ಹಬ್ಬವನ್ನು ಪ್ರತಿವರ್ಷ ಅದೇ ತಿಂಗಳು ಮತ್ತು ತಾರಿಖಿಗೆ ಏಕೆ ಆಚರಿಸುವುದಿಲ್ಲ? ಜಗತ್ತಿನ ಅನೇಕ ವಿಷಯಗಳನ್ನು ತಿಳಿದುಕೊಂಡಿರುವ  ಮಗು ತನ್ನ ನೆಲದ ಸಾಂಸ್ಕೃತಿಕ ಹಿನ್ನೆಲೆಯನ್ನು ತಿಳಿದುಕೊಂಡಿಲ್ಲವಲ್ಲ ಎಂದು ಅಚ್ಚರಿಯ ಜೊತೆ ನನ್ನಲ್ಲಿ ಬೇಸರವೂ ಮೂಡಿತು. ಇಲ್ಲಿ ಆ ತಪ್ಪು ಹುಡುಗನದಲ್ಲ. ನೆಲದ ಸಾಂಸ್ಕೃತಿಕ ಮಹತ್ವ ಮತ್ತು ಹಿನ್ನೆಲೆಯನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ದಾಟಿಸುವ ಕೆಲಸವನ್ನು ಮನೆಯ ಹಿರಿಯರು, ಶಾಲೆಗಳಲ್ಲಿ ಶಿಕ್ಷಕರು ಮತ್ತು ಸಮಾಜದಲ್ಲಿನ ಮಾಧ್ಯಮಗಳು ಮಾಡಬೇಕು. ಆದರೆ ಈ ದಿನಗಳಲ್ಲಿ ರೋಚಕ ಸುದ್ದಿಗಳತ್ತ ಗಿರಕಿ ಹೊಡೆಯುತ್ತಿರುವ ಮಾಧ್ಯಮಗಳು ಈ ಸಾಂಸ್ಕೃತಿಕ ಮಹತ್ವವನ್ನು ದಾಟಿಸುವ ಕೆಲಸ ಮಾಡುತ್ತಿಲ್ಲ.

           ಈಗ ನಾನು ಮತ್ತೆ ಪ್ರದೀಪ ಕೇಳಿದ ಪ್ರಶ್ನೆಗೆ  ಬರುತ್ತೇನೆ ದೀಪಾವಳಿ ನಾವು ಆಚರಿಸುವ ಹಬ್ಬಗಳಲ್ಲೇ ಅತ್ಯಂತ ಮಹತ್ವದ ಹಬ್ಬ. ಈ ಹಬ್ಬವನ್ನು ಪ್ರತಿವರ್ಷ ಆಶ್ವಿಜಮಾಸ ಕೃಷ್ಣ ಪಕ್ಷದ ಚತುರ್ದಶಿ, ಅಮವಾಸೆ ಹಾಗೂ ಕಾರ್ತಿಕ ಮಾಸ ಶುಕ್ಲ ಪಕ್ಷದ ಪಾಡ್ಯ ಈ ಮೂರು ದಿನಗಳಂದು ಆಚರಿಸಲಾಗುತ್ತದೆ. ದೀಪಾವಳಿಯ ಆಚರಣೆ ಮುಖ್ಯವಾಗಿ ಎರಡು ಪೌರಾಣಿಕ ಘಟನೆಗಳಿಗೆ ಸಂಬಂಧಿಸಿದೆ. ದೀಪಾವಳಿಯ ಮೊದಲ ದಿನ ನರಕ ಚತುರ್ದಶಿಯನ್ನು ಶ್ರೀಕೃಷ್ಣ ನರಕಾಸುರನನ್ನು ಕೊಂದ ದಿನವೆಂದು ಹೇಳುವರು. ಕೊನೆಯ ದಿನ ಬಲಿಪಾಡ್ಯಮಿಯನ್ನು ಬಲಿಚಕ್ರವರ್ತಿ ಭಗವಾನ ವಿಷ್ಣುವಿಗೆ ಸರ್ವಸ್ವವನ್ನೂ ಸಮರ್ಪಿಸಿದ ದಿನ ಎಂದು ಹೇಳಲಾಗುತ್ತದೆ. ಹೀಗೆ ದೀಪಾವಳಿ ಹಬ್ಬದ ಆಚರಣೆಗೆ ಪೌರಾಣಿಕ ಹಿನ್ನೆಲೆಯಿದೆ.

ನರಕ ಚತುರ್ದಶಿ 


          ನರಕ ಚತುರ್ದಶಿಯನ್ನು ಆಶ್ವಿಜ ಮಾಸ ಕೃಷ್ಣ ಪಕ್ಷದ ಚತುರ್ದಶಿ ದಿನದಂದು ಆಚರಿಸಲಾಗುತ್ತದೆ. ಈ ಹಬ್ಬದ ಆಚರಣೆಯ ಹಿಂದೆ ಒಂದು ಪೌರಾಣಿಕ ಕಥೆಯೇ ಇದೆ. ನರಕಾಸುರನೆನ್ನುವ ರಾಕ್ಷಸನ ಕಥೆಯದು. ವಿಷ್ಣು ಮತ್ತು ಭೂದೇವಿಯ ಸಮಾಗಮದಿಂದ ಹುಟ್ಟಿದ ಮಗುವೇ ಈ ನರಕಾಸುರನೆನ್ನುವ ರಾಕ್ಷಸ. ಈ ನರಕಾಸುರ ತಪಸ್ಸು ಮಾಡಿ ತನಗೆ ತನ್ನ ತಾಯಿಯಿಂದ ಮಾತ್ರವಲ್ಲದೆ ಬೇರೆಯಾರಿಂದಲೂ ಸಾವು ಬರಬಾರದು ಎಂದು ಬೃಹ್ಮನಿಂದ ವರ ಪಡೆಯುತ್ತಾನೆ. ಹೀಗೆ ಬೃಹ್ಮನ   ಕೃಪೆಗೆ  ಒಳಗಾದ ನರಕಾಸುರ ಭೂಮಂಡಲವನ್ನು ಮಾತ್ರವಲ್ಲದೆ ದೇವಾನುದೇವತೆಗಳನ್ನೂ ತನ್ನ ಅಂಕಿತದಲ್ಲಿಟ್ಟು ಕೊಳ್ಳುತ್ತಾನೆ. ಅವನ ಉಪಟಳ ಹೆಚ್ಚಿದಾಗ ದೇವತೆಗಳೆಲ್ಲರೂ ವಿಷ್ಣುವಿನ ಮೊರೆ ಹೋಗುತ್ತಾರೆ. ಅದೇ ಅವಧಿಯಲ್ಲಿ ವಿಷ್ಣು ಭೂಮಿಯ ಮೇಲಿನ ದುಷ್ಟ ಶಕ್ತಿಗಳನ್ನು ನಾಶ ಮಾಡಲು ಶ್ರೀಕೃಷ್ಣನ ರೂಪದಲ್ಲಿ ಅವತರಿಸಿರುತ್ತಾನೆ. ಒಮ್ಮೆ ಕೃಷ್ಣ ತನ್ನ ಪ್ರೀತಿಯ ಮಡದಿ ಸತ್ಯಭಾಮೆಯೊಂದಿಗೆ ವಿಹರಿಸುತ್ತಿರುವಾಗ ನರಕಾಸುರ ದಾಳಿ ಮಾಡುತ್ತಾನೆ. ಇಲ್ಲಿ ಗಮನಿಸ  ಬೇಕಾದ ಸಂಗತಿ ಎಂದರೆ ಸತ್ಯಭಾಮೆ ಭೂದೇವಿಯ ಆಶೀರ್ವಾದದಿಂದ ಹುಟ್ಟಿರುವುದರಿಂದ ಅವಳು ಒಂದರ್ಥದಲ್ಲಿ ನರಕಾಸುರನಿಗೆ  ತಾಯಿ ಇದ್ದಂತೆ. ಈ ವಿಷಯ ತಿಳಿದಿದ್ದ ಕೃಷ್ಣ ಸತ್ಯಭಾಮೆಗೆ ತನ್ನ ಸುದರ್ಶನ ಚಕ್ರವನ್ನು ಕೊಟ್ಟು ನರಕಾಸುರನನ್ನು ಸಂಹರಿಸುವಂತೆ ಹೇಳುತ್ತಾನೆ. ಕೊನೆಗೆ ನರಕಾಸುರ ಸಂಹಾರದಿಂದ ಭೂಲೋಕ ಮತ್ತು ದೇವಲೋಕಗಳೆರಡೂ ಅಸುರನ ದೌರ್ಜನ್ಯದಿಂದ ಮುಕ್ತಿ ಹೊಂದುತ್ತವೆ. ನರಕಾಸುರನನ್ನು ಸಂಹರಿಸಿದ ನೆನಪಿಗಾಗಿ ನರಕ ಚತುರ್ದಶಿಯನ್ನು ಆಚರಿಸಲಾಗುವುದು. ಆ ದಿನ ಮನೆಯನ್ನು ದೀಪಗಳಿಂದ ಶೃಂಗರಿಸುವುದರ ಅರ್ಥ ಕತ್ತಲೆ ಕಳೆದು ಬೆಳಕಿನಡೆ ನಡೆಯುವುದು ಎಂದು.

ಬಲಿಪಾಡ್ಯಮಿ 


        ಬಲಿಪಾಡ್ಯಮಿ ಹಬ್ಬ ಕೂಡ ದುಷ್ಟತನವನ್ನು ಕಳೆದುಕೊಂಡು ಸನ್ಮಾರ್ಗದೆಡೆ ನಡೆಯುವುದರ ಸಂಕೇತ. ಹಿರಣ್ಯಕಶ್ಯಪುವಿನ ಪುತ್ರ ಪ್ರಹ್ಲಾದ ಮಹಾ ವಿಷ್ಣು ಭಕ್ತ. ಆತನ ಮಗನೇ ವಿರೋಚನ. ವಿರೋಚನನ ಮಗನೇ ಬಲಿಚಕ್ರವರ್ತಿ. ಬಲಿಚಕ್ರವರ್ತಿ ಸಹ ತನ್ನ ತಾತ ಪ್ರಹ್ಲಾದನಂತೆ ವಿಷ್ಣು ಭಕ್ತನಾಗಿದ್ದ. ಆದರೆ ಅಸುರರ ವಂಶದಲ್ಲಿ ಹುಟ್ಟಿದ್ದರಿಂದ ತನ್ನ ಹಿಂಸಾ ಪ್ರವೃತ್ತಿಯನ್ನು ಬಿಟ್ಟಿರಲಿಲ್ಲ. ಬಲಿಚಕ್ರವರ್ತಿಯ ರಾಜ್ಯ ಸುಭಿಕ್ಷವಾಗಿತ್ತು. ಆದರೆ ಈತ ಋಷಿ ಮುನಿಗಳ ತಪೋಭಂಗ ಮಾಡುವುದು, ಯಜ್ಞ ಯಾಗಾದಿಗಳಿಗೆ ಅಡ್ಡಿಪಡಿಸುವುದು ಮಾಡುತ್ತಿದ್ದ. ಈತನ ಉಪಟಳ ಹೆಚ್ಚಾದಾಗ ಋಷಿ ಮುನಿಗಳೆಲ್ಲ ವಿಷ್ಣುವಿನ ಮೊರೆ ಹೋಗುತ್ತಾರೆ. ಇದೇ ಸಮಯದಲ್ಲಿ ಬಲಿಚಕ್ರವರ್ತಿಯು ಅಶ್ವಮೇಧ ಯಾಗವನ್ನು ಮಾಡಲು ಪ್ರಾರಂಭಿಸುವನು. ಈ ಯಾಗ ಮಾಡುವ ವೇಳೆ ಯಾರೇ ಬಂದು ಏನನ್ನೇ ಕೇಳಿದರೂ ಯಾರನ್ನೂ ಬರಿಗೈಯಿಂದ ಕಳುಹಿಸಬಾರದೆಂದು ನಿರ್ಧರಿಸುತ್ತಾನೆ. ವಿಷ್ಣು ಬಲಿಯನ್ನು ಸಂಹರಿಸಲು ಇದೇ ತಕ್ಕ ಸಮಯವೆಂದು ಅರಿತು ಯಾಗದ ಸ್ಥಳಕ್ಕೆ ಬ್ರಾಹ್ಮಣ ಬಾಲಕನ ವೇಷದಲ್ಲಿ ಹೋಗಿ ತನಗೆ ಮೂರು ಹೆಜ್ಜೆಗಳಷ್ಟು ಭೂಮಿಯನ್ನು ದಾನವಾಗಿ ಕೊಡುವಂತೆ ಕೇಳುತ್ತಾನೆ. ಆಗ ಬಲಿಚಕ್ರವರ್ತಿ ಒಪ್ಪಿಕೊಳ್ಳಲು ವಿಷ್ಣು ತ್ರಿವಿಕ್ರಮನಾಗಿ ಒಂದು ಹೆಜ್ಜೆಯನ್ನು ಭೂಮಿಯ  ಮೇಲೂ ಇನ್ನೊಂದು ಹೆಜ್ಜೆಯನ್ನು ಆಕಾಶದ ಮೇಲೂ ಇಡುತ್ತಾನೆ. ಮೂರನೇ ಹೆಜ್ಜೆ ಎಲ್ಲಿಡಬೇಕೆಂದು ಬಲಿಯನ್ನು ಕೇಳಿದಾಗ ಆಗ ಆತ ತನ್ನ ಮೇಲೆ ಎಂದು ಹೇಳಲು ವಿಷ್ಣು ತನ್ನ ಮೂರನೇ ಹೆಜ್ಜೆಯನ್ನು ಬಲಿಯ ತಲೆಯ ಮೇಲಿಟ್ಟು ಅವನನ್ನು ಪಾತಾಳಕ್ಕೆ ತಳ್ಳುವನು. ಆದರೆ ಬಲಿಚಕ್ರವರ್ತಿಯ ವಿಷ್ಣು ಭಕ್ತಿಯನ್ನು ಮೆಚ್ಚಿ ಅವನಿಗೆ ವಿಷ್ಣು ಪ್ರತಿವರ್ಷ ಆಶ್ವಿಜ ಮಾಸದಲ್ಲಿ ಮೂರು ದಿನಗಳ ಕಾಲ ಪೂಜೆಗೊಳ್ಳಲು ಭೂಲೋಕಕ್ಕೆ ಬರಬಹುದೆನ್ನುವ ಒಂದು ವರವನ್ನು ಕೊಡುವನು. ಆ ವರದ ಫಲವಾಗಿಯೇ ದೀಪಾವಳಿ ಸಮಯದಲ್ಲಿ ಎಲ್ಲರೂ ದೀಪ ಹಚ್ಚಿ ಬಲೀಂದ್ರನ ಪೂಜೆ ಮಾಡುವರು.

ದೀಪಾವಳಿ ಮತ್ತು ಧಾರ್ಮಿಕ ಬೆಸುಗೆ


              ದೀಪಾವಳಿ ಇದು ಕೇವಲ ಹಿಂದೂ ಧರ್ಮದವರು ಮಾತ್ರ ಆಚರಿಸುವ ಹಬ್ಬವಲ್ಲ. ಇದನ್ನು ಸಿಖ್, ಜೈನ ಮತ್ತು ಬೌದ್ಧ ಧರ್ಮಗಳಲ್ಲೂ ಆಚರಿಸುವರು. ಸಿಖ್ ಧರ್ಮಿಯರಲ್ಲಿ ದೀಪಾವಳಿ ಹಬ್ಬವನ್ನು ಸಿಖ್ ರ ಆರನೇ ಗುರು ಹರಗೋಬಿಂದ ಸಿಂಗ್ ಗ್ವಾಲಿಯರ್ ನ ಕೋಟೆಯಲ್ಲಿ ಬಂಧಿತರಾಗಿದ್ದ ೫೨ ರಾಜರನ್ನು ಬಿಡಿಸಿ ತಂದ ದಿನವೆಂದು ಆಚರಿಸುವರು. ದೀಪಾವಳಿ ಜೈನ ಧರ್ಮದಲ್ಲೂ ತನ್ನ ಮಹತ್ವವನ್ನು ಪಡೆದು ಕೊಂಡಿದೆ. ಜೈನಧರ್ಮದ ಕಡೆಯ ತೀರ್ಥಂಕರ ಮಾಹಾವೀರನು ಕಾರ್ತಿಕ ಚತುರ್ದಶಿಯಂದು ಪಾವಾಪುರಿಯಲ್ಲಿ ಮೋಕ್ಷ ಹೊಂದಿದ ದಿನವಾಗಿ ದೀಪಾವಳಿಯನ್ನು ಆಚರಿಸುವರು.

ಸಾಂಸ್ಕೃತಿಕ ಸಂಕ್ರಮಣಕ್ಕೆ ಕಾರಣ 


       ಇವತ್ತು ದಟ್ಟವಾಗಿ ಆವರಿಸಿರುವ ಸಾಂಸ್ಕೃತಿಕ ಸಂಕ್ರಮಣಕ್ಕೆ ಮೂಲ ಕಾರಣವೇನೆಂದು  ಹುಡುಕಿಕೊಂಡು  ಹೊರಟಾಗ ನಾವು ಗುರುತಿಸುವುದು ಎರಡು ಕಾರಣಗಳನ್ನು. ಒಂದು ಮನೋರಂಜನಾ ಮಾಧ್ಯಮಗಳು ಮತ್ತು ಎರಡನೆಯದು ಬೆಳೆಯುತ್ತಿರುವ ನಗರೀಕರಣ. ದಿನದ ೨೪ ಗಂಟೆಗಳ ಕಾಲ ಅವ್ಯಾಹತವಾಗಿ ಮನೋರಂಜನೆಯನ್ನು ಒದಗಿಸುತ್ತಿರುವ ಈ ಎಲೆಕ್ಟ್ರಾನಿಕ್ ಮಾಧ್ಯಮಗಳು ಸಾಂಸ್ಕೃತಿಕ ಹಿನ್ನೆಡೆಯನ್ನು ಸೃಷ್ಟಿಸಿವೆ. ಈ ಮಾಧ್ಯಮಗಳ ಪ್ರಭಾವ ಮತ್ತು ಆಕರ್ಷಣೆ  ಈ ದಿನಗಳಲ್ಲಿ ಎಷ್ಟೊಂದು ವ್ಯಾಪಕವಾಗಿದೆ ಎಂದರೆ ಜನರು ಹಬ್ಬಗಳ ಆಚರಣೆಯ ಬದಲು ಆ ದಿನದಂದು ಟಿವಿ ಚಾನೆಲ್ ಗಳಲ್ಲಿ ಪ್ರಸಾರವಾಗುವ ಹೊಸ ಹೊಸ ಸಿನಿಮಾಗಳು ಮತ್ತು ಹಾಸ್ಯ ಸನ್ನಿವೇಶಗಳನ್ನು ನೋಡಿ ಸಂಭ್ರಮಿಸುತ್ತಿರುವರು. ಹೀಗೆ ಹಬ್ಬಗಳಂಥ ಸಾಂಸ್ಕೃತಿಕ ಆಚರಣೆಗಳನ್ನು ಮೂಲೆಗುಂಪಾಗಿಸುತ್ತಿರುವ ಎಲೆಕ್ಟ್ರಾನಿಕ್ ಮಾಧ್ಯಮಗಳು ಒಂದು ಸಂಸ್ಕೃತಿಯನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಪರಿಚಯಿಸುವ ಮತ್ತು ದಾಟಿಸುವ ಕೆಲಸ ಮಾಡುತ್ತಿಲ್ಲ.

        ಇನ್ನು ಎರಡನೇ ಕಾರಣವೆಂದು ಗುರುತಿಸುತ್ತಿರುವ ನಗರೀಕರಣ ಸಮಾಜದಲ್ಲಿ ಅನೇಕ ಬದಲಾವಣೆಗಳಿಗೆ ಕಾರಣವಾಗುತ್ತಿದೆ. ನಗರ ಬದುಕಿನ ಯಾಂತ್ರಿಕತೆ ಮತ್ತು ಒತ್ತಡದ ಬದುಕಿನಿಂದಾಗಿ ಜನರಿಗೆ ತಮ್ಮ ಸಾಂಸ್ಕೃತಿಕ ಆಚರಣೆಗಳನ್ನು ಕಾಯ್ದುಕೊಳ್ಳುವಷ್ಟು ವ್ಯವಧಾನ ಇಲ್ಲವಾಗಿದೆ. ಜೊತೆಗೆ ಅವರೆಲ್ಲ ತಮ್ಮ ನಂತರದ ಪೀಳಿಗೆಯನ್ನು ಈ ಜಾಗತೀಕರಣಕ್ಕೆ ಮುಖಮಾಡಿ ನಿಲ್ಲಿಸುವ ಧಾವಂತದಲ್ಲಿರುವರು. ಇಂಥದ್ದೊಂದು ಧಾವಂತ ಮತ್ತು ಸಮಯದ ಅಭಾವದಿಂದಾಗಿ ಹಬ್ಬಗಳು ಅದರಲ್ಲೂ ವಿಶೇಷವಾಗಿ ನಗರ ಪ್ರದೇಶಗಳಲ್ಲಿ ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿವೆ. ಆದ್ದರಿಂದ ಇಂಥದ್ದೊಂದು ಸಾಂಸ್ಕೃತಿಕ ಸಂಕ್ರಮಣದಿಂದ ಹೊರಬರುವ ಕೆಲಸ ಇವತ್ತಿನ ತುರ್ತು ಅಗತ್ಯವಾಗಿದೆ. ಒಂದು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದೆ  ಅಲ್ಲವೇ ಮತ್ತೊಂದು ಹೊಸ ಸಂಸ್ಕೃತಿಯ ಉಗಮಕ್ಕೆ ಕಾರಣವಾಗುವುದು?

-ರಾಜಕುಮಾರ.ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

Tuesday, October 1, 2013

ಒಮ್ಮೆ ಓದಿ ನೋಡಿ


        ಒಮ್ಮೊಮ್ಮೆ ಬರಹವೊಂದು ತಟ್ಟನೆ ಕೈಹಿಡಿದು ನಮ್ಮನ್ನು ತಡೆದು ನಿಲ್ಲಿಸುತ್ತದೆ. ಬರಹದ ವಿಷಯವಸ್ತು, ಅದರಲ್ಲಿನ ಸಾಮಾಜಿಕ ಕಾಳಜಿ, ಬರಹಗಾರನ ಸಂವೇದನೆ ಮತ್ತು ತುಡಿತ ಓದುವಾಗ ಹೆಚ್ಚು ಅಪಾಯ್ಯಮಾನ ಎಂದೇನಿಸಿ ಬರವಣಿಗೆ ಆಪ್ತವಾಗುತ್ತದೆ. ಸೃಜನಶೀಲತೆಯೊಂದು ಉಂಟುಮಾಡಬಹುದಾದ ಬಹುದೊಡ್ಡ ಬೆರಗು ಮತ್ತು ತಲ್ಲಣವಿದು. ಬರಹವೊಂದು ನಮ್ಮನ್ನು ನಮ್ಮ ಸುತ್ತಮುತ್ತಲಿನ ಸಮಸ್ಯೆಗಳತ್ತ ಮುಖ ಮಾಡಿ ನಿಲ್ಲಿಸಬೇಕು. ಅದರಲ್ಲೇ ಬರಹಗಾರನ ಸಾರ್ಥಕತೆ ಇರುವುದು. ಹಿರಿಯ ಕವಿ ಜಿ.ಎಸ್.ಶಿವರುದ್ರಪ್ಪನವರು ಹೇಳುವಂತೆ ಸಾಹಿತ್ಯವಲ್ಲದೆ ಸಮಾಜವನ್ನು ಬೇರೆ ಯಾವುದು ಒಂದುಗೂಡಿಸಬೇಕು. ಹೀಗಾಗಿ ಸಾಹಿತ್ಯದ ಮೇಲೆ ಅತೀ ಹೆಚ್ಚಿನ ಜವಾಬ್ದಾರಿ ಇದೆ. ಸಾಹಿತ್ಯ ಸಮಾಜವನ್ನು ಒಂದುಗೂಡಿಸುವಂಥ ಕೆಲಸ ಮಾಡಬೇಕೆ ವಿನ: ಅದು ಸಮಾಜವನ್ನು ಒಡೆಯಬಾರದು. ಈಗ ಮತ್ತೆ ಸ್ಪೂರ್ತಿ ನೀಡುವ ಬರಹಗಳ ವಿಷಯಕ್ಕೆ ಬರುತ್ತೇನೆ. ಕೆಲವು ಬರಹಗಳೇ ಹಾಗೆ ಓದಿದ ನಂತರವೂ ಅನೇಕ ದಿನಗಳವರೆಗೆ ಕಾಡುತ್ತವೆ. ಹೀಗೆ ಕಾಡುವ ಬರಹಗಳನ್ನು ಇತರರೊಂದಿಗೆ ಹಂಚಿಕೊಂಡಾಗಲೇ ಓದುಗನಲ್ಲೂ ಒಂದು ಸಾರ್ಥಕ ಭಾವ. ಲೇಖಕ ತನ್ನ ವಿಚಾರಗಳನ್ನು ಒಂದು ಚೌಕಟ್ಟಿನಲ್ಲಿ ಕಟ್ಟಿ ಅವುಗಳಿಗೆ ಒಂದು ಮೂರ್ತ ರೂಪ ನೀಡಿದರೆ ಅಲ್ಲಿಗೆ ಆತನ ಕೆಲಸ ಮುಗಿದಂತೆ. ನಂತರದೇನಿದ್ದರು ಓದುಗರಿಗೆ ಸಂಬಂಧಿಸಿದ್ದು. ಓದಿದ ಉತ್ತಮ ಪುಸ್ತಕದಲ್ಲಿನ ವಿಚಾರಗಳನ್ನು ಹಲವು ಮನಸ್ಸುಗಳಿಗೆ ವಿಸ್ತರಿಸುವ ಕೆಲಸ ಓದುಗರಿಂದಾಗಬೇಕು. 

       ಎಂದೋ ಓದಿದ, ಮನಸ್ಸನ್ನು ತಟ್ಟಿದ, ಅನೇಕ ದಿನಗಳವರೆಗೆ ಕಾಡಿದ, ಬೆರಗುಗೊಳಿಸಿದ ಬರಹಗಳನ್ನು ಇಲ್ಲಿ ಯಥಾವತ್ತಾಗಿ ಕೊಟ್ಟಿದ್ದೇನೆ. ಒಮ್ಮೆ ಓದಿ ನೋಡಿ.........


ನನಗೆ ಧರ್ಮಕ್ಕಿಂತ ದೇಶ ಮುಖ್ಯ 


        ಸಿಖ್ ರು ಪ್ರತ್ಯೇಕ ಖಲಿಸ್ಥಾನ ರಾಜ್ಯದ ಸ್ಥಾಪನೆಗಾಗಿ ಹೋರಾಟ ಮಾಡುತ್ತಿದ್ದ ಕಾಲವದು. ಸಿಖ್ ರ ಉಪಟಳ ಮಿತಿ ಮೀರಿದಾಗ ಸರ್ಕಾರ ಪಂಜಾಬಿನ ಸ್ವರ್ಣ ಮಂದಿರದೊಳಗೆ ಸೇನೆ ನುಗ್ಗಿಸಲು ನಿರ್ಧರಿಸಿತು. ಜೂನ್ ೩, ೧೯೮೪ ರಂದು ಇಡೀ ಪಂಜಾಬಿನಲ್ಲಿ ಕರ್ಫ್ಯೂ ಹೇರಲಾಯಿತು. ಗಡಿಯುದ್ದಕ್ಕೂ ಸೇನೆ ನಿಯೋಜಿಸಲಾಯಿತು. ಜೂನ್ ೫ ರ ಮುಂಜಾನೆ ನಾಲ್ಕು ಗಂಟೆಯಿಂದಲೇ ಜನರಲ್ ಬ್ರಾರ್ ತಮ್ಮ ಬೆಟಾಲಿಯನ್ ಗಳನ್ನು ಹುರಿದುಂಬಿಸಲಾರಂಭಿಸಿದರು. ಕಾರ್ಯಾಚರಣೆ ತಂಡದಲ್ಲಿ ಸಿಖ್ ಯೋಧರೆ ಹೆಚ್ಚಿದ್ದರಿಂದ ಭಾವನಾತ್ಮಕವಾಗಿ ಅವರನ್ನು ಸಜ್ಜುಗೊಳಿಸುವುದು ಬ್ರಾರ್ ಗೆ ಸವಾಲಾಗಿತ್ತು. 'ಕಾರ್ಯಾಚರಣೆಯಲ್ಲಿ ಭಾಗವಹಿಸಲು ಮನಸ್ಸಿಲ್ಲದ ಸಿಖ್ ಯೋಧರು ಕೈ ಎತ್ತಬಹುದು. ಅಂಥವರನ್ನು ತಂಡದಿಂದ ಕೈಬಿಡಲಾಗುವುದು ಮತ್ತು ಅವರಿಗೆ ಯಾವ ಶಿಕ್ಷೆಯನ್ನೂ ನೀಡುವುದಿಲ್ಲ' ಎಂದು ಬ್ರಾರ್ ಹೇಳುತ್ತಿದ್ದರು. ೧, ೨ ಮತ್ತು ೩ ನೇ ಬೆಟಾಲಿಯನ್ ನ ಯಾರೊಬ್ಬರೂ ಕೈ ಎತ್ತಲಿಲ್ಲ. ಆದರೆ ೪ ನೇ ಬೆಟಾಲಿಯನ್ ನ ಯುವ ಸಿಖ್ ಯೋಧ ಕೈ ಎತ್ತಿದ. 'ಸರಿ ನಿನಗೆ ಇಷ್ಟವಿಲ್ಲದಿದ್ದರೆ ಬೇಡ ಬಿಡು' ಎಂದರು ಬ್ರಾರ್. ಆದರೆ ಆ ಯೋಧ ಎದೆಯುಬ್ಬಿಸಿ ಹೇಳಿದ 'ನಾನು ಕೈ ಎತ್ತಿದ್ದು ಓಡಿ ಹೋಗುವುದಕ್ಕಲ್ಲ. ನಾನೊಬ್ಬ ಸಿಖ್ ನಿಜ ಆದರೆ ನನಗೆ ಧರ್ಮಕ್ಕಿಂತ ದೇಶ ಮುಖ್ಯ. ಸ್ವರ್ಣ ಮಂದಿರದೊಳಗೆ ಎಲ್ಲರಿಗಿಂತ ಮೊದಲು ನಾನು ಕಾಲಿರಿಸಬೇಕು. ದಯವಿಟ್ಟು ನನಗೆ ಅವಕಾಶ ಕೊಡಿ'. ಹೀಗೆ ಕೇಳಿದ ಆ ಧೀರ ಯೋಧನ ಹೆಸರು ಲೆಫ್ಟಿನೆಂಟ್ ಜಸ್ಬೀರ್ ಸಿಂಗ ರೈನಾ. ವಿರಾವೇಶದಿಂದ ಹೋರಾಡುತ್ತ ಮಂದಿರದೊಳಗೆ ಪ್ರವೇಶಿಸಿದ ರೈನಾರ ಎರಡೂ ಕಾಲುಗಳನ್ನು ಉಗ್ರರ ಗುಂಡುಗಳು ಜಜ್ಜಿ ಹಾಕಿದವು. ವಿಶ್ರಮಿಸಲು ನಿರಾಕರಿಸಿ ತೆವಳುತ್ತಲೇ ಮುನ್ನುಗ್ಗುತ್ತಿದ್ದ ಆ ಯೋಧನನ್ನು ಬಲವಂತವಾಗಿ ಆಸ್ಪತ್ರೆಗೆ ಸಾಗಿಸಬೇಕಾಯಿತು.
(ವಿಜಯ ಕರ್ನಾಟಕ, ೦೯.೦೬. ೨೦೦೯ )

ವಿರೋಧಿಗೆ ಮತ ಹಾಕಿ 


     ಪ್ರಜಾಪ್ರಭುತ್ವಕ್ಕೆ ಉತ್ತಮ ಹೆಸರು ಬ್ರಿಟನ್. ನಾನು ಅಲ್ಲಿದ್ದ ೨೫ ವರ್ಷ ಅವಧಿಯಲ್ಲಿ ೫ ಚುನಾವಣೆ ಕಂಡಿದ್ದೆ. ಮಾರ್ಟಿನ್ ಸ್ಟಿವನ್ಸ್ ಎನ್ನುವ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸಿದ್ದರು. ಒಳ್ಳೆಯ ವ್ಯಕ್ತಿ ನನಗೂ ಸ್ನೇಹಿತ. ಚುನಾವಣಾ ಸಂದರ್ಭ ಒಂದು ಸಾರಿ ' 'ನೀವು ಪ್ರಚಾರಕ್ಕೆ ಹೋಗುವಾಗ ನಾನು ನಿಮ್ಮ ಜೊತೆಗೆ ಒಂದು ಬಾರಿ ಬರುತ್ತೇನೆ' ಎಂದೆ. ಅದಕ್ಕೆ ಅವರು ಒಪ್ಪಿಗೆ ನೀಡಿದರು. ಪ್ರಚಾರಕ್ಕಾಗಿ ಮನೆಯೊಂದಕ್ಕೆ ಹೋದೆವು. ಆ ಮನೆಯ ಒಡತಿ ಅಂಗಳದಲ್ಲಿ ಗಿಡಗಳಿಗೆ ನೀರುಣಿಸುತ್ತಿದ್ದರು. ಮಾರ್ಟಿನ್ 'ಮೇಡಂ ಚುನಾವಣೆಗೆ ನಿಂತಿದ್ದೇನೆ ನನಗೆ ನಿಮ್ಮ ಮತ ಕೊಡಿ' ಎಂದರು. ಸಿಡುಕಿನ ಮುಖ ಸಡಿಲಿಸದ ಆಕೆ 'ನಾನು ನಿಮಗೆ ಮತ ಹಾಕುವುದಿಲ್ಲ' ಎಂದಳು. ಕೊಂಚವೂ ವಿಚಲಿತರಾಗದ ಮಾರ್ಟಿನ್ 'ಸರಿ ಮೇಡಂ ನನ್ನ ವಿರೋಧಿಗೆ ನಿಮ್ಮ ಮತ ನೀಡಿ ಆದರೆ ಮತ ಚಲಾಯಿಸದೇ ಇರಬೇಡಿ' ಎಂದು ಮುಂದಿನ ಮನೆಗೆ ಹೋದರು. ಅಚ್ಚರಿಯಿಂದ ನಾನು ಅವರನ್ನು ಹಿಂಬಾಲಿಸಿದೆ.

(ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಶ್ರೀ ಮತ್ತೂರು ಕೃಷ್ಣಮೂರ್ತಿಯವರ ಅನುಭವ)

ಇವರನ್ನು ನೋಡುತ್ತಿದ್ದರೆ ಅಚ್ಚರಿ ಮತ್ತು ಪ್ರೀತಿ 


    ಅವರನ್ನು ಕನ್ನಡದ ಮಿಲ್ಟನ್ ಎಂದು ಕರೆದದ್ದು ಯಾರು ಎನ್ನುವುದೂ ಗೊತ್ತಿಲ್ಲ.  ಅನಗತ್ಯ ಹೋಲಿಕೆ. ಅಂಧತ್ವ ಮತ್ತು ಕವಿತ್ವ ಎರಡನ್ನೂ ಹೊಂದಿದ್ದ ಮಿಲ್ಟನ್ ಗಿಂತ ಎಷ್ಟೋ ಪಟ್ಟು ಎತ್ತರದಲ್ಲಿದ್ದವರು ಪುಟ್ಟರಾಜರು. ಅವರು ಇಲ್ಲವಾದ ಕ್ಷಣ ಎಪ್ಪತ್ತು ದಾಟಿದ ಮಹಿಳೆಯೊಬ್ಬರು ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯ ಟೀವಿಯಲ್ಲಿ ಕಾಣಿಸುತ್ತಿತ್ತು. ಕೆಮರಾ ಚಲಿಸುತ್ತಿದ್ದರೆ ಹದಿ ಹರೆಯದ ಹುಡುಗನೊಬ್ಬ ಬದುಕೇ ಮುಗಿದು ಹೋಗಿದೆಯೇನೋ ಎಂಬಂತೆ ರೋಧಿಸುತ್ತಿದ್ದ. ನೂರಾರು ಮಂದಿ ಉರುಳು ಸೇವೆ ಮಾಡುತ್ತಿದ್ದರು. ಬಹುಶ: ಆ ಕ್ಷೇತ್ರದಲ್ಲಷ್ಟೇ ಅಂಥದ್ದೊಂದು ಪವಾಡ ಸಾಧ್ಯವೋ ಏನೋ? ಅಥವಾ ಅದನ್ನು ಅವರು ಸಾಧ್ಯವಾಗಿಸಿದರು ಎನ್ನಬೇಕಾ? ಲಕ್ಷಾಂತರ ಶಿಷ್ಯರು, ಅಸಂಖ್ಯ ಬಂಧುಗಳು, ಅವರ ಮೇಲೆ ಪ್ರಾಣವಿಟ್ಟು ಕೊಂಡಿದ್ದವರು, ಅವರ ದರ್ಶನಕ್ಕೆ ಸಾಲುಗಟ್ಟಿ ನಿಲ್ಲುತ್ತಿದ್ದವರು, ಅವರಿಂದ ಹಾಡಲು ಕಲಿತು ಹೊಟ್ಟೆ ಹೊರೆದು ಕೊಂಡವರು, ಅವರ ಆಶ್ರಮದಲ್ಲಿ ಬದುಕು ಸವೆಸಿದವರು ಎಲ್ಲರ ಪಾಲಿಗೂ ಅವರು ಗುರು, ನಡೆದಾಡುವ ದೇವರು ಮತ್ತು ಯುಗ ಪುರುಷ.

(ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಶ್ರೀ ಗಿರೀಶ ರಾವ ಅವರ ಲೇಖನದಿಂದ)

ಕುಡಿತದ ಖರ್ಚು 


      ಇಂಗ್ಲೆಂಡಿನಿಂದ ನಾಲ್ಕೈದು ಮಂದಿ ಶಿಕ್ಷಣ ತಜ್ಞರ ತಂಡ ನಮ್ಮ ವಿಶ್ವವಿದ್ಯಾಲಯಕ್ಕೆ ಭೇಟಿ ಕೊಟ್ಟಿತು. ದಿನವಿಡಿ ಶೈಕ್ಷಣಿಕ ಸಮಾವೇಶಗಳಾದ ಮೇಲೆ ಅಂದು ರಾತ್ರಿ ವೆಸ್ಟ್ ಎಂಡ್ ಹೋಟೆಲಿನಲ್ಲಿ ಅವರಿಗೆ ಭೋಜನ ಕೂಟ ಏರ್ಪಡಿಸಲಾಗಿತ್ತು. ಆ ಮಾದರಿಯ ಊಟಕ್ಕೂ ನನಗೂ ಬಹು ದೂರ. ಅತಿಥಿಗಳಿಗೆ ಮುಜುಗುರವಾಗಬಹುದೆಂದು ಯೋಚಿಸಿ ನಾನು ಊಟಕ್ಕೆ ಹೋಗದಿರಲು ನಿರ್ಧರಿಸಿದೆ. ಆ ರಾತ್ರಿಯ ಊಟಕ್ಕೆ ಹೊಂದುವ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರನ್ನು ಹೇಳಿಕಳುಹಿಸಿದೆ. ಅವರು ಬಂದರು. 'ನೋಡಿಯಪ್ಪ ದಯವಿಟ್ಟು ಅವರ ಜೊತೆಯಲ್ಲಿದ್ದು ಊಟ ಮಾಡಿಕೊಂಡು ಬನ್ನಿ. ಆದರೆ ನನ್ನದು ಒಂದೇ ವಿನಂತಿ. ಕುಡಿಯ  ಬೇಡಿ. ವಿಶ್ವವಿದ್ಯಾಲಯದ ಖರ್ಚಿನಲ್ಲಿ ಕುಡಿಯುವುದು ಚೆನ್ನಾಗಿ ಕಾಣುವುದಿಲ್ಲ' ಅಂತ ಹೇಳಿದೆ. 'ಪ್ರಯತ್ನಿಸುತ್ತೇವೆ' ಎಂದರು. ಮಾರನೆ ದಿನ ಹೋಟೆಲ್ ಬಿಲ್ ಬಂತು. '೫೦೦ ರೂಪಾಯಿಗಳಷ್ಟು ಕುಡಿದು ಬಿಟ್ಟಿದ್ದಾರೆ. ಏನಪ್ಪಾ ಹೀಗಾಯಿತಲ್ಲ' ಎಂದು ರಿಜಿಸ್ಟ್ರಾರ್ ಸೂರ್ಯ ಪ್ರಸಾದರಿಗೆ ಕೇಳಿದೆ. 'ಪಾಶ್ಚಾತ್ಯ ದೇಶದಿಂದ ಬಂದವರು ಕುಡಿಯದೇ ಊಟ ಮಾಡುವುದಿಲ್ಲ' ಎಂದರು. 'ಹಾಗಾದರೆ ಹೋಗಲಿ ಬಿಡಿ. ಕುಡಿದ ಬಿಲ್ಲನ್ನು ಪ್ರತ್ಯೇಕವಾಗಿ ತರಿಸಿ' ಎಂದೆ. ಮಾರನೆ ದಿನ ೫೦೦ ರೂಪಾಯಿಗೆ ಕುಡಿದ ಬಿಲ್ ತಂದು ಕೊಟ್ಟರು. ಅವರ ಮುಂದೆಯೇ ಬಿಲ್ ಹರಿದು ಹಾಕಿ ೫೦೦ ರೂಪಾಯಿ ಕೊಟ್ಟೆ. 'ಅಯ್ಯೋ ಅದೇಕೆ ನೀವು ಕೊಡ್ತಿರಿ ಸಾರ್. ವಿಶ್ವವಿದ್ಯಾಲಯ ಆ ಖರ್ಚನ್ನು ಕೊಟ್ಟರೆ ತಪ್ಪೇನೂ ಆಗುವುದಿಲ್ಲ' ಅಂದರು. 'ವಿಶ್ವವಿದ್ಯಾಲಯ ಕುಡಿಯುವ ಖರ್ಚು ವಹಿಸುವುದು ತಪ್ಪು ಅಂತ ನನಗೆ ಅನ್ನಿಸುತ್ತದೆ. ಪರವಾಗಿಲ್ಲ ಬಿಡಿ. ನನ್ನಿಂದ ೫೦೦ ರೂಪಾಯಿ ಹೋದರೆ ಅಡ್ಡಿಯಿಲ್ಲ. ಆದರೆ ವಿಶ್ವವಿದ್ಯಾಲಯ ಶುದ್ಧವಾಗಿರಲಿ' ಅಂತ ಹೇಳಿ ಸಮಾಧಾನಪಡಿಸಿದೆ.

(ಎಚ್.ನರಸಿಂಹಯ್ಯನವರ 'ಹೋರಾಟದ ಹಾದಿ' ಪುಸ್ತಕದಿಂದ)


ಬಂಧುಗಳ ಖರ್ಚು 


        ಮೇ ೨೦೦೬ 'ಮಿಸ್ಟರ್ ನಾಯರ್ ನನ್ನ ಬಂಧುಗಳು, ಪರಿಚಿತರು ವಾರ ಅಥವಾ ಹತ್ತು ದಿನಗಳ ಮಟ್ಟಿಗೆ ಬರುತ್ತಾರೆ. ಅವರು ಬರುವುದು ಪಕ್ಕಾ ಖಾಸಗಿ ಉದ್ದೇಶಕ್ಕಾಗಿ. ಇದರಲ್ಲಿ ಅಧಿಕೃತ ಎಂಬುದೇನೂ ಇರುವುದಿಲ್ಲ' ಎಂದರು ಕಲಾಂ. ಅವರ ಐವತ್ತೆರಡು ಮಂದಿ ಬಂಧು ಬಳಗದವರು ರಾಷ್ಟ್ರಪತಿ ಭವನಕ್ಕೆ ಬರುವವರಿದ್ದರು. ಅದರಲ್ಲಿ ತೊಬತ್ತು ವರ್ಷದ ಕಲಾಮ್ ಹಿರಿಯಣ್ಣನಿಂದ ಹಿಡಿದು ಒಂದೂವರೆ ವರ್ಷದ ಪುಟ್ಟ ಮಗು ಸಹ ಸೇರಿತ್ತು. ಕಲಾಮ್ ಅವರು ಹೇಳಿದ ಪ್ರತಿ ಪದವೂ ನನಗೆ ಚೆನ್ನಾಗಿ ಅರ್ಥವಾಗಿತ್ತು. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆಂಬುದು ಗೊತ್ತಿತ್ತು.

    ಅವರೆಲ್ಲ ಆಗಮಿಸಿದರು. ಎಂಟು ದಿನಗಳ ಕಾಲ ದೆಹಲಿಯಲ್ಲಿ ಉಳಿದರು. ಅವರೆಲ್ಲ ಅಜ್ಮೀರ್ ಶರಿಫ್ ಗೆ ಭೇಟಿ ನೀಡಿದರು. ಅವರಲ್ಲಿ ಕೆಲವರು ದಿಲ್ಲಿಯಲ್ಲಿ ಶಾಪಿಂಗ್ ಮಾಡಿದರು. ಅನಂತರ ಅವರೆಲ್ಲ ಊರಿಗೆ ವಾಪಸ್ ಹೋದರು.

         ಅಚ್ಚರಿಯ ಸಂಗತಿ ಏನೆಂದರೆ ಅವರಿಗಾಗಿ ಒಂದೇ ಸಲವೂ ಆಫೀಸಿನ ವಾಹನ ಬಳಸಲಿಲ್ಲ. ರಾಷ್ಟ್ರಪತಿ ಭವನದಲ್ಲಿ ಅವರೆಲ್ಲ ಉಳಿದುದ್ದಕ್ಕಾಗಿ ಕಲಾಮ್ ತಮ್ಮ ಕೈಯಿಂದ ಬಾಡಿಗೆ ಕಟ್ಟಿದರು. ಅವರೆಲ್ಲ ಕುಡಿದ ಸಿಂಗಲ್ ಚಹಾದ ಹಣವನ್ನೂ ಅವರು ಭರಿಸಿದರು. ಅವರೆಲ್ಲ ಅಷ್ಟು ದಿನ ಉಳಿದುದಕ್ಕೆ ೩.೫೨ ಲಕ್ಷ ರೂಪಾಯಿಗಳ ಬಿಲ್ ಬಂತು. ಕಲಾಮ್ ತಮ್ಮ ಕಿಸೆಯಿಂದ ಹಣ ಎಣಿಸಿದರು. ಅದನ್ನು ಕಲಾಮ್ ಯಾರ ಮುಂದೆಯೂ ಹೇಳಿಕೊಳ್ಳಲಿಲ್ಲ. ಪತ್ರಿಕೆಗಳಿಗೆ ಹೇಳಿ ಪ್ರಚಾರ ಗಿಟ್ಟಿಸಿಕೊಳ್ಳಲಿಲ್ಲ.

(ವಿಶ್ವೇಶ್ವರ ಭಟ್ ಅವರು ಕನ್ನಡಕ್ಕೆ ಅನುವಾದಿಸಿರುವ 'ಕಲಾಮ್ ಕಮಾಲ್' ಪುಸ್ತಕದಿಂದ)


Let him make some profit 


        ತರಕಾರಿ ಅಂಗಡಿಯಲ್ಲಿ ತರಕಾರಿ ಕೊಳ್ಳುವಾಗ ಚೌಕಾಸಿ ಮಾಡಿದರೆ ಇವರಿಗೆ ಆಗುತ್ತಿರಲಿಲ್ಲ. ಕೆಲವು ಮಹಿಳೆಯರು ಕೊತ್ತಂಬರಿ ಸೊಪ್ಪು ಕೊಳ್ಳುವಾಗ ಕೊಸರಾಡಿ ಗುಂಜಾಡುತ್ತಿದ್ದದ್ದನ್ನು ನೋಡಿದರೆ Let him make some profit I say ಅನ್ನೋವ್ರು.

       ಒಂದ್ಸಲ ಇವರು ಕಾರು ರಿವರ್ಸ್ ಮಾಡುವಾಗ ಹಳ್ಳಿಯವನ ಟೊಮೆಟೊ ಬುಟ್ಟಿಗೆ ತಾಗಿತು. ಮೂಡಿಗೆರೆಯ ಇಕ್ಕಟ್ಟಿನ ಬೀದಿ. ಅವನು ಸಾರ್ ಎಂದು ಕೂಗಿಕೊಂಡ. ಕಾರಿನಿಂದಿಳಿದು ಸಾರಿ ಮಾರಾಯ ಹೇಳಿ ಆ ಬುಟ್ಟಿ ಟೊಮೆಟೊದ ಬೆಲೆ ಕೊಟ್ಟು ಬಂದಿದ್ದರು.

        ಇನ್ನೊಂದು  ವಿಚಿತ್ರ ಇತ್ತು ಇವರಲ್ಲಿ. ತರಕಾರಿ ಕೊಂಡ ನಂತರ ಜೇಬಿಗೆ ಕೈಹಾಕಿ ಕೈಗೆ ಬಂದಷ್ಟು ದುಡ್ಡು ಕೊಟ್ಟು ಹೊರಟೆ  ಬಿಡುತ್ತಿದ್ದರು. ಸಾರ್ ಹೆಚ್ಚು ಕೊಟ್ರಿ ಎಂದರೆ ಇಟ್ಕೋ ಮುಂದಿನ ಸರ್ತಿಗೆ ಅಡ್ಜೆಸ್ಟ್ ಮಾಡ್ಕೊ ಎನ್ನುವರಂತೆ. ಎಷ್ಟು ಕೊಟ್ರಿ ಅಂತ ಕೇಳಿದ್ರೆ ಇವರು ಕಿವಿ ಮೇಲೆ ಹಾಕಿ ಕೊಳ್ಳುತ್ತಿರಲಿಲ್ಲ.

(ರಾಜೇಶ್ವರಿ ತೇಜಸ್ವಿ ಅವರು ಬರೆದ 'ನನ್ನ ತೇಜಸ್ವಿ' ಪುಸ್ತಕದಿಂದ)


-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


   

   

Monday, September 16, 2013

ಹೀಗಿದ್ದರು ತೇಜಸ್ವಿ

   



          ತೇಜಸ್ವಿ ಕಾಲವಾಗಿ ಆಗಲೇ ಕೆಲವು ವರ್ಷಗಳು ಕಳೆದು ಹೋದವು. ತನ್ನ ನಂತರದ ಪೀಳಿಗೆಯನ್ನು ಬರವಣಿಗೆಯ ಮೂಲಕ ನಿರಂತರವಾಗಿ ಕಾಡಿದ ಕೆಲವೇ ಕೆಲವು ಬರಹಗಾರರಲ್ಲಿ ತೇಜಸ್ವಿ ಒಬ್ಬರು. ತೇಜಸ್ವಿ ಬದುಕಿದ್ದಾಗಲೇ ಅವರ ವ್ಯಕ್ತಿತ್ವ ಮತ್ತು ಬದುಕಿನ ಕುರಿತು ಅನೇಕ ಕಥೆಗಳು ಚಾಲ್ತಿಯಲ್ಲಿದ್ದವು. ತೇಜಸ್ವಿ ಮಹಾ ಮುಂಗೋಪಿಯಂತೆ, ಅವರ ಸ್ಕೂಟರ್ ಗೆ ಒಂದೇ ಸೀಟಂತೆ, ಕಾಡಿನಲ್ಲೇ ಮನೆಮಾಡಿಕೊಂಡು ಇರುವರಂತೆ, ಸಾಹಿತ್ಯ ಸಮ್ಮೇಳನ ಹಾಗೂ ಪ್ರಶಸ್ತಿಗಳೆಂದರೆ ಅವರಿಗೆ ಅಲರ್ಜಿಯಂತೆ ಹೀಗೆ ಅನೇಕಾನೇಕ ಕಥೆಗಳು ಯುವ ಓದುಗರ ಸಮೂಹದಲ್ಲಿ ಆಗಾಗ ಚರ್ಚೆಗೆ ಆಹಾರವಾಗುತ್ತಿದ್ದದ್ದುಂಟು. ಹೀಗೆ ತೇಜಸ್ವಿ ಬದುಕಿದ್ದಾಗಲೇ ಒಂದು ಒಗಟಾಗಿದ್ದರು. ತೇಜಸ್ವಿ ಬದುಕಿ ಬಾಳಿದ ಮೂಡಿಗೆರೆ ಬಗ್ಗೆ ಆಗ ನಮಗೆಲ್ಲ ನಮ್ಮದೇ ಆದ ಒಂದು ಸ್ಪಷ್ಟ ಕಲ್ಪನೆಯಿತ್ತು. ಅದು ಈಗಲೂ ಇದೆ ಬಿಡಿ. ಚಾರ್ಮಾಡಿ  ಬೆಟ್ಟದ ಮಡಿಲಲ್ಲಿರುವ ಆ ಪುಟ್ಟ ಊರು ತೇಜಸ್ವಿ ಅವರಿಂದ ಇಡೀ ನಾಡಿಗೆ ಪರಿಚಿತವಾಗಿತ್ತು. ಮೂಡಿಗೆರೆ ಎಂದ ತಕ್ಷಣ ನಮಗೆ ಥಟ್ಟನೆ ಈಗಲೂ ಕಣ್ಣೆದುರು ಬರುವುದು  ಕರ್ವಾಲೋನಂತೆ ಕಾಡಿನಲ್ಲಿ ಅಲೆಯುತ್ತಿರುವ ತೇಜಸ್ವಿ ಅವರ ಚಿತ್ರವೇ. 

           ತೇಜಸ್ವಿ ಅವರ ಬರವಣಿಗೆಯಷ್ಟೇ ಅವರ ವೈಯಕ್ತಿಕ ಬದುಕು ಕೂಡ ಅತ್ಯಂತ ಕುತೂಹಲದ ವಿಷಯವಾಗಿತ್ತು. ಬೇರೆ ಬರಹಗಾರರಂತೆಯೇ ತೇಜಸ್ವಿ ಕೂಡ ಬದುಕಿದ್ದರೆ ನಮಗಳೆಲ್ಲರ ಅಭಿಮಾನ ಮತ್ತು ಕುತೂಹಲ ಅವರ ಬರವಣಿಗೆಗೆ ಮಾತ್ರ ಸೀಮಿತವಾಗುತ್ತಿತ್ತೇನೋ. ಆದರೆ ತೇಜಸ್ವಿ ಅವರು ಆಯ್ದುಕೊಂಡ ಬದುಕು ಮತ್ತು ಅವರು ಬಾಳಿದ ರೀತಿ ಅದು ಅವರ ಬರವಣಿಗೆಯಾಚೆಯೂ ಅನೇಕ ಕುತೂಹಲಗಳಿಗೆ ದಾರಿಮಾಡಿಕೊಟ್ಟಿತು. ಎರಡನೇ ಪಿಯುಸಿಯಲ್ಲಿ ಅವರ 'ಕರ್ವಾಲೋ' ಕಾದಂಬರಿಯನ್ನು ಪಠ್ಯವಾಗಿ ಓದುವಾಗಲೇ ನಮಗೆಲ್ಲ ತೇಜಸ್ವಿ ಅವರ ಕುರಿತು ಸಣ್ಣದೊಂದು ಕುತೂಹಲ ಮೊಳಕೆಯೊಡೆಯಿತು. ನಂತರ ಲಂಕೇಶ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ  ಅವರ ವಿಜ್ಞಾನ ಮತ್ತು ಪ್ರಕೃತಿ ವಿಸ್ಮಯದ ಲೇಖನಗಳು ಸಹಜವಾಗಿಯೇ ನನ್ನ ವಯೋಮಾನದ ಓದುಗರನ್ನು ಅವರ ಬರವಣಿಗೆಯತ್ತ ಹೊರಳುವಂತೆ ಮಾಡಿದವು. ನಂತರದ ದಿನಗಳಲ್ಲಿ ಅವರ ಚಿದಂಬರ ರಹಸ್ಯ ಮತ್ತು ಜುಗಾರಿ ಕ್ರಾಸ್ ಕಾದಂಬರಿಗಳನ್ನು ಓದಿದ್ದಾಯಿತು. ಹೀಗೆ ಒಂದು ವಯೋಮಾನದ ಓದುಗರು ತೇಜಸ್ವಿ ಅವರ ಸಾಹಿತ್ಯವನ್ನು ಹಠಕ್ಕೆ ಬಿದ್ದಂತೆ ಓದುತ್ತಿರುವಾಗಲೇ ಸಾವಿನ ರೂಪದಲ್ಲಿ ಬಂದ ವಿಧಿ ತೇಜಸ್ವಿ ಅವರನ್ನು ಓದುಗರಿಂದ ದೂರವಾಗಿಸಿತು. ನಿಜಕ್ಕೂ ತೇಜಸ್ವಿ ಕಾಲವಾದ ನಂತರ ಅವರ ಪರಂಪರೆಯನ್ನು ಮುಂದುವರೆಸುವ ವಾರಸುದಾರರಿಲ್ಲದೆ ಓದುಗರ ಸಮೂಹ ಅನಾಥ ಪ್ರಜ್ಞೆಯಿಂದ ಒಂದಿಷ್ಟು ಕಾಲ ಬಳಲಿದ್ದುಂಟು. ಇದು ತೇಜಸ್ವಿ ಅವರ ಬರವಣಿಗೆಯ ಹಾಗೂ ಅವರ ವ್ಯಕ್ತಿತ್ವದ ತಾಕತ್ತಿಗೊಂದು ನಿದರ್ಶನ.

            ತೇಜಸ್ವಿ ಕಾಲವಾದ ನಂತರ ಅವರ ವ್ಯಕ್ತಿತ್ವವನ್ನು ಹಿಡಿದಿಡುವ ಪ್ರಯತ್ನವಾಗಿ ಎರಡು ಪುಸ್ತಕಗಳು ಪ್ರಕಟವಾದವು. ಅವುಗಳಲ್ಲಿ ಒಂದು ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿ ಅವರು ಬರೆದ 'ನನ್ನ ತೇಜಸ್ವಿ'. ತೇಜಸ್ವಿ ಅವರೊಂದಿಗೆ ದಾಂಪತ್ಯ ಜೀವನದ ಮೂರು ದಶಕಕ್ಕೂ ಹೆಚ್ಚು ಅವಧಿಯನ್ನು ಸವೆಸಿದ ರಾಜೇಶ್ವರಿ ಅವರು ಬರೆದ ಪುಸ್ತಕ ಸಹಜವಾಗಿಯೇ ಕನ್ನಡ ಸಾಹಿತ್ಯಾಸಕ್ತರಲ್ಲಿ ಅದರಲ್ಲೂ ವಿಶೇಷವಾಗಿ ತೇಜಸ್ವಿ ಅವರ ಅಭಿಮಾನಿಗಳ ಸಮೂಹದಲ್ಲಿ ಒಂದು ಸಂಚಲನವನ್ನೇ ಮೂಡಿಸಿತು. ತೇಜಸ್ವಿ ಅವರ ಬದುಕನ್ನು ಒಂದು ಕಾಲಕ್ರಮದಲ್ಲಿ ಕಟ್ಟಿಕೊಟ್ಟ ಲೇಖಕಿ ಅವರ ಬದುಕಿನ ಅನೇಕ ಮಗ್ಗಲುಗಳ ಪರಿಚಯ ಮಾಡಿಕೊಡುವಲ್ಲಿ ಪ್ರಯತ್ನಿಸಿದ್ದು ನಿಜಕ್ಕೂ ಅಭಿನಂದನಾರ್ಹ. ತೇಜಸ್ವಿ ಅವರ ವಿದ್ಯಾಭ್ಯಾಸ, ವಿದ್ಯಾರ್ಥಿ ಜೀವನ, ತಂದೆ ಕುವೆಂಪು ಅವರೊಂದಿಗಿನ ಒಡನಾಟ, ತೋಟ ಮಾಡಿದ್ದು, ಆ ಕಾಲದ ವಿವಿಧ ಚಳುವಳಿಗಳೊಂದಿಗೆ ಗುರುತಿಸಿಕೊಂಡಿದ್ದು, ಬರವಣಿಗೆ, ಬದುಕಿನ ಕೊನೆಯ ದಿನಗಳು ಹೀಗೆ ತೇಜಸ್ವಿ ಬದುಕಿಗೆ ಸಂಬಂಧಿಸಿದ ಅನೇಕ ಸಂಗತಿಗಳು 'ನನ್ನ ತೇಜಸ್ವಿ' ಪುಸ್ತಕದಲ್ಲಿ ಓದಲು ಸಿಗುತ್ತವೆ. ಆ ಪುಸ್ತಕವನ್ನು ಓದಿದ ನಂತರವೂ ತೇಜಸ್ವಿ ಅವರನ್ನು ಅಭಿಮಾನಿಸುವ ಓದುಗರಿಗೆ ಲೇಖಕಿ ಹೇಳಬೇಕಾದದ್ದನ್ನು ಪೂರ್ಣವಾಗಿ ಹೇಳಿಲ್ಲವೇನೋ ಎನ್ನುವ ಕೊರಗು  ಕಾಡಲಾರಂಭಿಸುವುದು ಸಹಜ.

          ಕೊನೆಗೂ ತೇಜಸ್ವಿ ಅವರ ಅಭಿಮಾನಿ ಓದುಗರು ತಮ್ಮ ಎಲ್ಲ ಕುತೂಹಲಗಳಿಗೆ ಮತ್ತು 'ನನ್ನ ತೇಜಸ್ವಿ' ಪುಸ್ತಕದಲ್ಲಿ ಕಾಣಿಸಿದ ಕೊರತೆಗೆ ಉತ್ತರ ಕಂಡುಕೊಂಡಿದ್ದು ಧನಂಜಯ ಜೀವಾಳ ಬರೆದ 'ಕಾಡಿನ  ಸಂತ ತೇಜಸ್ವಿ' ಪುಸ್ತಕದ ಓದಿನಿಂದ. ಮೂಡಿಗೆರೆಯವರಾದ ಧನಂಜಯ ತೇಜಸ್ವಿ ಅವರೊಂದಿಗಿನ ಒಡನಾಟದ ಅನುಭವವನ್ನು ಅತ್ಯಂತ ವಿಶಿಷ್ಟವಾಗಿ ಕಟ್ಟಿಕೊಟ್ಟಿರುವರು. ತೇಜಸ್ವಿ ಅವರಿಗಿದ್ದ ಪ್ರಶಸ್ತಿಯ ಅಲರ್ಜಿ, ಅವರ ನೇರ ನಡೆ ನುಡಿ, ಅವರೊಳಗಿನ ಭಾವುಕತೆ, ಯುವ ಸಮೂಹದೊಂದಿಗಿನ ಒಡನಾಟ ಹೀಗೆ ನಮಗೆ ಗೊತ್ತಿಲ್ಲದ ತೇಜಸ್ವಿ ಅವರ ಅನೇಕ ಮುಖಗಳ ಪರಿಚಯ ಓದುಗನಿಗಾಗುತ್ತದೆ. ಒಂದರ್ಥದಲ್ಲಿ 'ನನ್ನ ತೇಜಸ್ವಿ' ಪುಸ್ತಕದಲ್ಲಿ  ನಾವು ಕಾಣಲೆತ್ನಿಸುವ ಮತ್ತು ಹುಡುಕುವ ತೇಜಸ್ವಿ ಧನಂಜಯರ ಪುಸ್ತಕದಲ್ಲಿ ನಮಗೆ ಗೋಚರಿಸುತ್ತಾರೆ. ಪುಸ್ತಕ ಕೈಯಲ್ಲಿ ಹಿಡಿದ ಆ ಕ್ಷಣ ತೇಜಸ್ವಿಯೇ ನಮ್ಮೆದುರು ನಿಂತು ಮಾತನಾಡಿದಂತ ಅನುಭವ ಓದುಗನಿಗಾಗುತ್ತದೆ. ಇದಕ್ಕೆ ಕಾರಣ ಪುಸ್ತಕದ ಬಹಳಷ್ಟು ಪುಟಗಳಲ್ಲಿ ತೇಜಸ್ವಿ ಅವರ ಮಾತುಗಳೇ ಇವೆ. ಓದಿದ ನಂತರ ತೇಜಸ್ವಿ ನಮಗೆ ಇನ್ನೊಂದು ರೀತಿಯಲ್ಲಿ ಅರ್ಥವಾಗಿ ಕಾಡಲಾರಂಭಿಸುತ್ತಾರೆ.

           ತೇಜಸ್ವಿ ಹೇಗಿದ್ದರು ಎನ್ನುವ ಕುತೂಹಲಕ್ಕಾಗಿ ಪುಸ್ತಕವನ್ನೊಮ್ಮೆ ಓದಿನೋಡಿ. ಮುನ್ನುಡಿಯಲ್ಲಿ ರಹಮತ್ ತರೀಕೆರೆ ಅವರು ಹೇಳಿದಂತೆ ಪುಸ್ತಕವನ್ನು ಯಾವ ಅಧ್ಯಾಯದಿಂದಲಾದರೂ ಓದಬಹುದು. ಒಟ್ಟಿನಲ್ಲಿ ಓದಿದ ನಂತರ  ಮನಸ್ಸನ್ನು ಒಂದಿಷ್ಟು ಆಹ್ಲಾದಿಸುವಂತೆ ಮಾಡುವ ಪುಸ್ತಕವಿದು. ಒಂದಿಷ್ಟು ಕುತೂಹಲಕ್ಕಾಗಿ ಪುಸ್ತಕದಲ್ಲಿನ ಕೆಲವೊಂದು ಪ್ರಸಂಗಗಳು ನನ್ನ ಬ್ಲಾಗಿನ ಓದುಗರಿಗಾಗಿ................

           'ಆ ಸ್ಪೇರ್ ಪಾರ್ಟ್ಸ್ ಅಂಗಡಿಯವನಿಗೆ ಸ್ಕೂಟರ್ ನಿಲ್ಲಿಸಿ ಕರೆದು ಬೈದಿರಂತೆ ಹೌದಾ?' ಎಂದೆ. ತೇಜಸ್ವಿ ಸುಮ್ಮನಾದರು. ಮುಖ ಗಂಭೀರವಾಯಿತು. 'ಅವನಿಗೇನಾದ್ರೂ ಬುದ್ಧಿ ಉಂಟೇನಯ್ಯಾ? ಈಚೆಯಿಂದ ಮೂಡಿಗೆರೆಗೆ ಹೋಗಬೇಕಾದರೂ ನಮಸ್ಕಾರ, ಆಚೆ ಕಡೆಯಿಂದ ಬರುವಾಗಲೂ ನಮಸ್ಕಾರ! ಅವನಿಗೇನು ಬೇರೆ ಕೆಲಸ ಇಲ್ವ? ಆಕಸ್ಮಿಕವಾಗಿ ಅರ್ಜೆಂಟ್ ಕೆಲಸ ಇದ್ದು ಇನ್ನೊಮ್ಮೆ ಮೂಡಿಗೆರೆಗೆ ಹೋಗೋಣ ಎಂದರೆ ನನಗೇ ಕಾಯುತ್ತಿದ್ದನೇನೋ ಎಂಬಂತೆ ಮತ್ತೆ ಬಗ್ಗಿ ನಮಸ್ಕಾರ. ಅವನು ನಮಸ್ಕಾರ ಮಾಡೋಕ್ಕೆ ನಿಂತಿರೋ ಜಾಗ ಮೋಸ್ಟ ಡೇಂಜರಸ್ ಕಣಯ್ಯ. ಎರಡೂ ಕಡೆ ನೇರ ರಸ್ತೆ. ಅದೇ ಜಾಗದಲ್ಲಿ ತಿರುವು. ಅಂಥದ್ದರಲ್ಲಿ ಈ ಮನುಷ್ಯ ಕಾಯ್ಕೊಂಡು ಕೂತ್ಕೊಂಡು ನಮಸ್ಕಾರ ಮಾಡಿದ್ರೆ ನಾನು ಈತನ ಕಡೆ ತಿರುಗಿ ಎಲ್ಲಾದರೂ ಯಾರಿಂದಲಾದ್ರೂ ಗುದ್ದಿಸಿಕೊಂಡ್ರೆ ಏನಯ್ಯಾ ಗತಿ? ಇಷ್ಟೇ ಇನ್ನೇನಿಲ್ಲ'.

---೦೦೦---

          'ನಿಮ್ಮಂತ ಹುಡುಗರು ತ್ಯಾಪೇದಾರಿಯನ್ನೆಲ್ಲಾ ಬಿಟ್ಟು ಗುದ್ದಾಡಬೇಕಯ್ಯಾ. ಹಲ್ಕಾಗಳ ಹಲಾಲುಕೋರತನಗಳಿಗಿಂತ ಸಾಮಾನ್ಯರ ಕೈಲಾಗದತನ ಹೆಚ್ಚು ಅಪಾಯಕಾರಿ ಕಣಯ್ಯ. ಯೋಗ್ಯರು, ಅರ್ಹರು, ಹುಮ್ಮಸ್ಸಿರುವವರು ನಮಗ್ಯಾಕೆ ಈ ಉಸಾಬರಿ ಎಂದು ಹೊಟ್ಟೆಪಾಡನ್ನೇ ನೋಡಿಕೊಳ್ಳುತ್ತಾ ಕೂತ್ರೆ ಅಯೋಗ್ಯರು, ಸಮಯ ಸಾಧಕರು, ಗೂಂಡಾಗಳು, ಅಧಿಕಾರಕ್ಕೆ ಬಾಯಿ ಬಿಡುವ ನಾಯಿಗಳಂತವರು ವಕ್ಕರಿಸಿಕೊಂಡು ಬಿಡ್ತಾರೆ. ಮೂಡಿಗೆರೆ ಪರಿಸ್ಥಿತಿ ಏನಾಗ್ತಿದೆ ನೋಡಿದಿಯ. ರಸ್ತೆ ಬದಿಯಲ್ಲೇ ಗ್ಯಾರೇಜಿನ ಗಲೀಜು, ಊರಿನ ಕಸ, ಹೇಲುಹೆಮ್ಮಣ್ಣನ್ನೆಲ್ಲಾ ಸ್ವಾಗತ ಮಾಡಲು ಹಾಕಿರ್ತಾರೆ. ಹೊಟ್ಟೆಗೆ ಅನ್ನ ತಿನ್ನೋರು ಮಾಡೋ ಕೆಲ್ಸಾನ ಅದು?'.

---೦೦೦---

         'ನೋಡೊದನ್ನೆಲ್ಲಾ ಈಗಲೇ ನೋಡಿಕೊಂಡು ಬಿಡಯ್ಯ, ಎಲ್ಲವನ್ನೂ ತಿಂದು ಹಾಕ್ತಿದ್ದಾರೆ. ನಾವು ಈಗ ಬಂದ ದಾರಿ ನೋಡಿದೆಯಾ? ಇಂಥ ದುರ್ಗಮ ಪ್ರದೇಶಕ್ಕೆ ಟಾರು ರಸ್ತೆ ಬೇಕಾ? ನಿಜವಾಗಿಯೂ ಸಾಹಸ ಮಾಡಬೇಕು ಎಂದು ಬರುವವನಿಗೆ ಗಮ್ಯ ಸ್ಥಾನದವರೆಗೂ ರಸ್ತೆ ಯಾಕಯ್ಯ ಮಾಡಿಕೊಡಬೇಕು? ಇಲ್ಲಿ ಸುರಿಯುವ ಅಡಿಗಟ್ಟಲೆ ಮಳೆಗೆ ಇವರು ಕಡಿದಿರುವ ರಸ್ತೆ ಚರಂಡಿಗಳೆಲ್ಲಾ ಈ ಮಳೆಗಾಲ ಮುಗಿಯುವ ಹೊತ್ತಿಗೆ ದೊಡ್ಡ ಕೊರಕಲುಗಳಾಗಿರುತ್ತವೆ. ನೆಲ ಇರೋದೆ ಅಗೆಯೋಕೆ ಎಂದುಕೊಂಡಿದ್ದಾರಲ್ಲ! ಯಾರೋ ಕಂಟ್ರಾಕ್ಟರ್ ಗೆ ಕೆಲಸ ಕೊಡೋದಕ್ಕಾಗಿ ಇಂತಹ ಸೂಕ್ಷ್ಮ ಪ್ರದೇಶದಲ್ಲಿ ರಸ್ತೆ ಕಾಮಗಾರಿ ಮಾಡ್ತಿದ್ದಾರೆ. ದೇವಾಲಯಕ್ಕೆ ಹೋಗುವವರಿಗೆ ದೇವರ ಬಗ್ಗೆ ಶ್ರದ್ಧೆ ಇದ್ದಲ್ಲಿ ನಾಲ್ಕು ಹೆಜ್ಜೆ ನಡೆದು ಹೋಗಲಿ. ದೇವಾಲಯದ ಹೆಬ್ಬಾಗಿಲವರೆಗೂ ಕಾರನಲ್ಲೇ ಬರಬೇಕೆಂದು ಎಲ್ಲೋ ಅಲ್ಪಸ್ವಲ್ಪ ಉಳಿದಿರೋ ಈ ಕಾಡನ್ನೆಲ್ಲಾ ನುಂಗಿ ಹಾಕ್ತಿದ್ದಾರಲ್ಲಾ'.

---೦೦೦---

           ಒಮ್ಮೆ ನಮ್ಮ ಸಚೇತನ ಯುವಕ ಸಂಘದ ಸದಸ್ಯರೆಲ್ಲ ಜೆ. ಪಿ. ರಸ್ತೆಯಲ್ಲಿ ಚರಂಡಿ ಶುದ್ಧ ಮಾಡುವ ಶ್ರಮದಾನ ನಡೆಸುತ್ತಿದ್ದೆವು. ಅದೆಲ್ಲಿಗೆ ಹೋಗುತ್ತಿದ್ದರೋ ತೇಜಸ್ವಿ ತಮ್ಮ ಸ್ಕೂಟರ್ ನ್ನು ಸರಕ್ಕನೆ ನಿಲ್ಲಿಸಿ 'ಇದೆಂತದ್ದೋ ಮಾರಾಯ ಗೊಚ್ಚೆ ಬಳಿಯುವ ಕೆಲಸ ಮಾಡ್ತಿದ್ದಿರಲ್ಲ. ಬಡ್ಡಿ ಮಕ್ಳು ನೀವು ಚರಂಡಿ ತೊಳೀತೀರಿ ಅಂತ ಗೊತ್ತಾದ್ರೆ ಊರಲ್ಲಿರೋ ಚರಂಡಿನೆಲ್ಲಾ  ನಿಮ್ಮ  ಕೈಲೇ ತೊಳಸ್ತಾರೆ. ಮಾನಮರ್ಯಾದೆ ಇಲ್ಲದ ಹೆತ್ಲಾಂಡಿಗಳು ಅವರು. ನಿಮ್ಮ ಪ್ರತಿಭಟನೆ ಸಾಂಕೇತಿಕ ಆಗಿರಬೇಕು ಅಷ್ಟೇ. ಅವರಿಗೆ ಸಂಬಳ ಕೊಡೋದು ದನ ಕಾಯಕ್ಕಲ್ಲ'.

---೦೦೦---

          ಇದ್ದಕ್ಕಿದ್ದಂತೆ ಜನ್ನಾಪುರ ಸೇತುವೆ ಬಳಿ ಸ್ಕೂಟರ್ ನಿಲ್ಲಿಸಿದರು 'ಅಲ್ಲಾ ಕಣಯ್ಯಾ ಸಾಲ ಮನ್ನಾ ಮಾಡಿ, ಬಡ್ಡಿ ರಿಯಾಯ್ತಿ ಕೊಡಿ, ಪ್ರಾಣ ಹೋಗ್ತಿದೆ, ಸತ್ತೇ ಹೋಗ್ತಿವಿ ಅಂತೆಲ್ಲಾ ಬಂಬ್ಡಾ ಬಾರಿಸ್ತಿದ್ದಾರಲ್ಲಾ ಈ ಪ್ಲಾಂಟರ್ ಗಳು ಇಷ್ಟು ದುಬಾರಿ ಕಾರುಗಳನ್ನು ಹೇಗಯ್ಯಾ ಕೊಂಡುಕೊಳ್ತಾರೆ? ಸಾವಿರಾರು ಕಟ್ಟಿ ದಿನಗಟ್ಟಲೆ ಕುಳಿತುಕೊಂಡು ಜುಗಾರಿ ಆಡ್ತಾರಲ್ಲಾ ಆಗ ಅವರಿಗೆ ಸಾಲ ಇರಲ್ವಾ? ಸಾಲ ಮನ್ನಾ ಮಾಡಿ ಅಂತ ಕೇಳ್ತಾರಲ್ಲಾ ಅವರು ಥೂ. ಇವರುಗಳ ಮದುವೆ ನೋಡಿದಿಯೇನಯ್ಯಾ? ಹೋದೋರಿಗೇ ಮುಜುಗರವಾಗ್ಬೇಕು. ಯಾರನ್ನ ಮೆಚ್ಚಿಸೋಕೆ ಆ ರೀತಿ ದುಂದು ಮಾಡ್ತಾರೋ ಏನೋ. ಅದ್ಕೇನೆ ನಾನು ಯಾರ ಮದ್ವೆಗಳಿಗೂ ತಲೆ ಹಾಕೋಲ್ಲ. ಈ ಸರಳ ವಿವಾಹ, ಅಂತರ್ಜಾತಿಯ ವಿವಾಹ ಇವೆಲ್ಲ ಯಾಕೆ ಎಲ್ಲ ವರ್ಗದ ಜನರಿಗೆ ತಲುಪ್ತಾ ಇಲ್ಲ ಅನ್ನೋದೇ ನನಗೆ ಅರ್ಥ ಆಗ್ತಿಲ್ಲ'.

---೦೦೦---  

       ರಾಘವೇಂದ್ರರನ್ನು ಜೊತೆಯಲ್ಲಿ ಕರೆದೊಯ್ಯಲು ಅವರ ಮನೆಯ ಬಳಿ ತೇಜಸ್ವಿ ಹಾಗೂ ನಾನು ನಿಂತಿದ್ದೇವು. ಯಾವುದೋ ಒಂದು ಐಶಾರಾಮಿ ಕಾರೊಂದು ನಮ್ಮ ಬಳಿ ಬಂದು ಸರಕ್ಕೆಂದು ನಿಂತಿತು. ಕಾರಿನ ಕಪ್ಪು ಗಾಜು ನಿಧಾನವಾಗಿ ಕೆಳಗಿಳಿಯಿತು. 'ನಮಸ್ಕಾರ ಸಾರ್' ಎಂದಿತು ಒಳಗಿನ ಕಪ್ಪು ಕನ್ನಡಕದ ವ್ಯಕ್ತಿ. ತೇಜಸ್ವಿ ತಿರುಗಿ 'ನಮಸ್ಕಾರ' ಎಂದರು.

'ಇಲ್ಲೇ ಸಕಲೇಶಪುರದಲ್ಲಿ ಮದುವೆಯಿದೆ.  ಅದಕ್ಕೆ ಫ್ಯಾಮಿಲಿಯೆಲ್ಲ ಹೋಗ್ತಿದ್ದೀವಿ' ಎಂದರು.

ತೇಜಸ್ವಿ ಸುಮ್ಮನೆ ನಗೆಮುಖ ತೋರಿದರು.

ಕಾರು ಮುಂದೆ ಹೋಯಿತು.

'ನಾನೇನಾದ್ರೂ ಅವರನ್ನು ಎಲ್ಲಿಗಿ ಹೋಗ್ತಿದ್ದಿರಿ ಎಂದು ಕೇಳಿದೆನಾ?' ಎಂದು ನಸುನಕ್ಕರು ತೇಜಸ್ವಿ. ಅನಪೇಕ್ಷಿತ ಔಪಚಾರಿಕತೆಗೆ ತೇಜಸ್ವಿ ಪ್ರತಿಕ್ರಿಯಿಸುವ ರೀತಿಯಿದು.

---೦೦೦---

        ಪಂಪ ಪ್ರಶಸ್ತಿಯನ್ನು ಸ್ವೀಕರಿಸಲು ಹೋಗದೆ ಕಡೆಗೆ ಸರ್ಕಾರವೇ ಮನೆಗೆ ಬಂದು ಒಪ್ಪಿಸಿಹೋಗಬೇಕಾಗಿ ಬಂದದ್ದು ಎಲ್ಲರಿಗೂ ತಿಳಿದ ವಿಷಯವೇ. ಆ ಸಂದರ್ಭದಲ್ಲಿ ಯಾಕೆ ನೀವೇ ಹೋಗಲಿಲ್ಲ ಎಂದಾಗ 'ಪ್ರಶಸ್ತಿ ಪಡೆಯೋದು ಮುಖ್ಯವಲ್ಲ. ಓದುಗರನ್ನು ಗೆಲ್ಲೋದು ಮುಖ್ಯ. ಪ್ರಶಸ್ತಿಗೆ ಹಾತೊರೆಯಬಾರದು. ಹಾಗೆಲ್ಲಾದರೂ ಆದರೆ ಬಂಡಾಯ, ನವ್ಯ, ನವೋದಯ ಸಾಹಿತ್ಯದಂತೆ ಪ್ರಶಸ್ತಿ ಸಾಹಿತ್ಯವೆಂಬ ಪ್ರಕಾರವೊಂದು ಹುಟ್ಟಿಕೊಳ್ಳುತ್ತದೆ. ಆ ವೇದಿಕೆ, ಪರಾಕು, ಕಿರೀಟ, ಗಲಾಟೆ, ಸನ್ಮಾನ, ಶಾಲು ಹೊದೆಸುವುದು, ಹಾರ ಹಾಕುವುದು ನಾಚಿಕೆಯಾಗುತ್ತೆ ಮಾರಾಯ. ಥೂ ಅದನ್ನೆಲ್ಲ ಸಹಿಸಿಕೊಳ್ಳೋಕ್ಕಾಗಲ್ಲ. ಅದಕ್ಕಿಂತ ಮುಖ್ಯವಾದ ಕೆಲಸ ಸಾಕಷ್ಟು ಬಾಕಿ ಉಳಿದಿದೆ ಇಲ್ಲಿ ಗೊತ್ತಾ? ಕೆಲವರಿಗೆ ಈ ಪ್ರಶಸ್ತಿ ಪೂಜೆನೆ ಇಷ್ಟ ಆಗುತ್ತೆ. ಗೊತ್ತೇ ಇಲ್ಲದ ಸಂಸ್ಥೆಗಳು ಕೊಡೋ ಹೆಸರೇ ಕೇಳದ ಪ್ರಶಸ್ತಿಗಳಿಗೆ ಅರ್ಜಿ ಹಾಕಿ ಶಿಫಾರಸ್ಸು ಮಾಡಿಸಿ ಕುರ್ಚಿ ಮೇಲೆ ಕೂರಿಸಿಸಿಕೊಂಡು ಹಾರ ತುರಾಯಿ ಹಾಕಿಸಿಕೊಳ್ತಾರೆ. ಮಾರಾಯ ನನಗಂತಹ ಹುಚ್ಚೂ ಇಲ್ಲ ಪುರಸೊತ್ತು ಮೊದಲೇ ಇಲ್ಲ'.

---೦೦೦---

        ತೀರಾ ಅಪರೂಪವಾಗಿ ಸಾರ್ವಜನಿಕ ಸಭೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ತೇಜಸ್ವಿಯವರನ್ನು 'ಈಗ ಏನು ಬರೆಯುತ್ತಿದ್ದೀರಾ?' ಎಂದು ಯಾರಾದರೂ ಪ್ರಶ್ನಿಸಿದರೆ ತಿರುಗಿ 'ಯಾಕೆ ಬರೆಯಬೇಕು? ಒಂದಾದ ನಂತರ ಒಂದನ್ನು ಬರೆದುಕೊಡ್ತೀನಿ ಎಂದು ನಾನೆಲ್ಲಾದರೂ ಛಾಪಾ ಕಾಗದದ ಮೇಲೆ ಬರೆದುಕೊಟ್ಟಿದ್ದೀನಾ?' ಎಂದು ತಮಾಷೆಯಾಗಿ ಉತ್ತರ ಕೊಡುತ್ತಿದ್ದರು. ಬರಹ ಸ್ವಾಭಾವಿಕವಾಗಿ ಹೊರಬರಬೇಕು. ಹಠಕ್ಕಾಗಿ ಬರೆಯುವುದು ಮೂರ್ಖತನ ಎಂದಿದ್ದ ತೇಜಸ್ವಿ ಕಾಡು ಸುತ್ತುವುದು, ಪಕ್ಷಿ ವೀಕ್ಷಣೆ, ಛಾಯಾಗ್ರಹಣ, ಮೀನು ಶಿಕಾರಿ, ಮುಲಾಜಿಲ್ಲದ ಬದುಕು, ಖಂಡತುಂಡ ವೈಚಾರಿಕತೆಯನ್ನು ಮುಂಚಿನಿಂದಲೂ ಮೈಗೂಡಿಸಿಕೊಂಡಿದ್ದರು. ಯಾವುದೇ ಕಟ್ಟುಪಾಡುಗಳ ಹೊರತಾಗಿ ಬದುಕುತ್ತಿರುವುದರಿಂದ ನನ್ನ ಅಗತ್ಯ, ನನ್ನ ಕಲ್ಪನೆ, ನನ್ನ ಸಾಧ್ಯತೆಗಳಿಗೆ ಅನುಗುಣವಾಗಿ ನಾನು ತಿಳಿದಂತೆ, ಬಯಸಿದಂತೆ ಬದುಕಲು, ಬರೆಯಲು ಮತ್ತು ಅಭಿವ್ಯಕ್ತಿಗೊಳಿಸಲು ಸಾಧ್ಯವಾಗಿದೆ ಎನ್ನುತ್ತಿದ್ದರು. 

---೦೦೦---

        ವಾಡಿಕೆಯಂತೆ ಪ್ರತಿ ಗುರುವಾರ ಸುಮಾರು ಹನ್ನೊಂದು ಗಂಟೆಗೆ ತೇಜಸ್ವಿ ಬ್ಯಾಂಕಿಗೆ ಬರುತ್ತಿದ್ದರು. ಒಂದು ದಿನ ಬಂದವರೇ 'ನಿಮ್ಮಲ್ಲಿ ನನಗೆ ಕ್ರಾಪ್ ಲೋನ್ ಕೊಡುತ್ತೀರೇನಯ್ಯಾ?' ಎಂದರು. ಕೃಷಿ ವಿಭಾಗವನ್ನು ಕುಮಾರಸ್ವಾಮಿ ಎಂಬ ಅಧಿಕಾರಿ ನೋಡಿಕೊಳ್ಳುತ್ತಿದ್ದರು. 'ಅದಕ್ಕೇನಂತೆ ನಾವು ಕೊಡೋದು ಹೆಚ್ಚೋ ನೀವು ಬರೋದು ಹೆಚ್ಚೋ' ಎಂದು ತೇಜಸ್ವಿ ಅವರ ಅಭಿಮಾನಿಯಾಗಿದ್ದ ಕುಮಾರಸ್ವಾಮಿಯವರು ತ್ವರಿತವಾಗಿ ಕೆಲಸವನ್ನು ಮಾಡಿಕೊಟ್ಟರು. ತಮಗೆ ಮಂಜೂರಾದ ಹಣವನ್ನು ತೇಜಸ್ವಿಯವರು ಉಪಯೋಗಿಸಿಕೊಳ್ಳಲೇ ಇಲ್ಲ. ನನ್ನ ಹಣ ಖಾಲಿಯಾದಾಗ ಕೇಳ್ತೀನಿ ಕಣಯ್ಯ ಈಗ ಅಗತ್ಯವಿಲ್ಲವೆಂದು ಬಳಸಲೇ ಇಲ್ಲ.

---೦೦೦---

       ಕುವೆಂಪು ಅವರ ಶವಸಂಸ್ಕಾರದ ಸಂದರ್ಭ. ಸಾವಿರಾರು ಜನ ಸಾಗರೋಪಾದಿಯಲ್ಲಿ ಸೇರಿದ್ದರು. ಅಷ್ಟು ಜನರ ನಡುವಿನಲ್ಲೇ ತೇಜಸ್ವಿ 'ರೀ ಬನ್ರೀ ಇಲ್ಲಿ' ಎಂದು ಕೂಗಿದರು. ಹಾಗೆ ಅವರು ಕೂಗಿ ಕರೆದದ್ದು ಅಂದಿನ ಚಿಕ್ಕಮಗಳೂರಿನ ಅಂದಿನ ಜಿಲ್ಲಾಧಿಕಾರಿಗಳನ್ನು. ಆ ಸಂದರ್ಭ ಆ ಜನಜಂಗುಳಿಯ ನಡುವೆ ಸರಿಯಾಗಿ ಕೇಳಿಸಿತೋ ಬಿಟ್ಟಿತೋ ಗೊತ್ತಿಲ್ಲ ಸುತ್ತ ಒಮ್ಮೆ ತಿರುಗಿ ನೋಡಿ ಅವರು ತಮ್ಮ ಕೆಲಸದಲ್ಲಿ ಮಗ್ನರಾದರು. ತೇಜಸ್ವಿ ದೊಡ್ಡ ದನಿಯಲ್ಲಿ ಇನ್ನೊಮ್ಮೆ 'ನಿಮ್ಮನ್ನೇ ಕಣ್ರೀ ಕರೆದದ್ದು. ಬನ್ರೀ ಇಲ್ಲಿ ಸುಡಕ್ಕೆ ಹಾಕಿರೋ ಗಂಧದ ಚಕ್ಕೆಯಲ್ಲಾ ಕೊಂಡು ತಂದಿದ್ದೋ ಅಥವಾ ಗಂಧದ ಕಳ್ಳರಿಂದ ಸೀಝ್ ಮಾಡಿದ್ದೋ?' ಎಂದು ಪ್ರಶ್ನಿಸಿದರು. 

ಕೊನೆಯ ಮಾತು 


              ತೇಜಸ್ವಿ ಅವರ ಬರಹ ಮತ್ತು ಬದುಕು ಎರಡೂ ಅನುಕರಣೀಯ. ಪ್ರಶಸ್ತಿಯಾಗಲಿ ಇಲ್ಲವೇ ಆಯಕಟ್ಟಿನ ಸ್ಥಾನವಾಗಲಿ ಯಾವುದನ್ನೂ ಅಪೇಕ್ಷಿಸದೆ ಜೊತೆಗೆ ಯಾವ ಮುಲಾಜು ಮತ್ತು ಹಂಗಿಗೆ ಒಳಗಾಗದೆ ಅವರು ಬದುಕಿದ್ದರಿಂದಲೇ ಯುವ ಪೀಳಿಗೆಯ ಓದುಗರಿಗೆ ತೇಜಸ್ವಿ ಎಂದಿಗೂ ಆದರ್ಶಪ್ರಾಯರಾಗಿರುವರು. ತೇಜಸ್ವಿ ಪ್ರಕೃತಿಯನ್ನು ಕೇವಲ ಸೌಂದರ್ಯದ ದೃಷ್ಟಿಯಿಂದ  ನೋಡದೆ ಅದರೊಳಗಿನ ವಿಸ್ಮಯಕ್ಕೆ ಮುಖಾಮುಖಿಯಾಗಿದ್ದೇ ಹೆಚ್ಚು. ಅವರ ಈ ಮನೋಭಾವದಿಂದಾಗಿಯೇ ಚಿದಂಬರ ರಹಸ್ಯ, ಕರ್ವಾಲೋವಿನಂತಹ ಮಹತ್ವದ ಕೃತಿಗಳ ರಚನೆ ಸಾಧ್ಯವಾಯಿತು. ಬರೆಯುವುದರ ಜೊತೆಗೆ ಅವರು ಈ ನಾಗರಿಕರೆಂದು ಗುರುತಿಸಿಕೊಳ್ಳಲಿಚ್ಛಿಸುವ ಜನರು ಪ್ರಕೃತಿಯ ಮೇಲೆ ಮಾಡುತ್ತಿರುವ ಅನಾಗರಿಕ ದಾಳಿಯನ್ನು ಖಂಡಿಸುತ್ತಲೇ ಹೋದರು. ಈ ಕಾರಣದಿಂದಲೇ ತೇಜಸ್ವಿ ಅವರ ಬದುಕು ಮತ್ತು ಬರಹ ನಮಗೆ ಇನ್ನಷ್ಟು ಹತ್ತಿರವಾಯಿತು. ಆದರೆ ತೇಜಸ್ವಿ ಅವರನ್ನು ನಾವುಗಳೆಲ್ಲ ಅಭಿಮಾನಿಸುತ್ತಿರುವ ಈ ಘಳಿಗೆ ಕನ್ನಡ ಸಾಹಿತ್ಯದಲ್ಲಿ ಅವರ ಪರಂಪರೆಯನ್ನು ಮುಂದುವರೆಸುವ ವಾರಸುದಾರರಿಲ್ಲದಿರುವುದು ಅದು ಸಾಂಸ್ಕೃತಿಕ ಲೋಕವೊಂದರ ಅತಿ ದೊಡ್ಡ ತಳಮಳ.

-ರಾಜಕುಮಾರ.ವ್ಹಿ. ಕುಲಕರ್ಣಿ(ಕುಮಸಿ), ಬಾಗಲಕೋಟೆ 

       

Monday, September 2, 2013

ಮಕ್ಕಳಲ್ಲಿ ಒತ್ತಡ ಮತ್ತು ಉದ್ವಿಗ್ನತೆ

       
       ಇದು ನನ್ನ ಪರಿಚಿತರ ಮನೆಯಲ್ಲಿ ನಡೆದ ಘಟನೆ. ಕೆಲವು ದಿನಗಳ ಹಿಂದೆ ಆ ಮನೆಯಲ್ಲಿ ತಾಯಿ ಒಂದು ದಿನ ಇದ್ದಕ್ಕಿದ್ದಂತೆ ತನ್ನ ಮಗಳೊಂದಿಗೆ ಮಾತನಾಡುವುದನ್ನು ನಿಲ್ಲಿಸಿದಳು. ತಾಯಿಯ ಈ ವರ್ತನೆಗೆ ಮಗಳು ಒಂದಿಷ್ಟು ಒರಟಾಗಿ ವರ್ತಿಸಿದ್ದೆ ಕಾರಣವಾಗಿತ್ತು. ತಾಯಿ ಹೀಗೆ ಮುನಿಸಿಕೊಳ್ಳುವುದರ ಬದಲು ಮಗಳಿಗೆ ತಿಳಿ ಹೇಳಿ ಅವಳ ಒರಟುತನವನ್ನು ತಿದ್ದಿ ವಾತಾವರಣವನ್ನು ತಿಳಿಗೊಳಿಸುವ ಅವಕಾಶವಿತ್ತು. ಅಷ್ಟಕ್ಕೂ ಅದು ಐದನೇ ತರಗತಿಯಲ್ಲಿ ಓದುತ್ತಿರುವ ಹನ್ನೊಂದು ವರ್ಷ ವಯಸ್ಸಿನ ಮಗು. ಹಾಗೆ ಒರಟುತನದಿಂದ ವರ್ತಿಸಿದ್ದು ಅಕ್ಷಮ್ಯ ಅಪರಾಧವೇನೂ ಆಗಿರಲಿಲ್ಲ. ಆದರೆ ತಾಯಿಯ ಮೌನ ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಅವಳ ದಿನನಿತ್ಯದ ವರ್ತನೆಯಲ್ಲಿ ಒಂದಿಷ್ಟು ಬದಲಾವಣೆ ಕಾಣಿಸಿಕೊಂಡಿತು. ಟಿವಿ ನೋಡುತ್ತ, ಓದುತ್ತ, ಆಟವಾಡುತ್ತ ಖುಷಿಯಿಂದ ಇರುತ್ತಿದ್ದ ಮಗುವಿನಲ್ಲಿ ಖಿನ್ನತೆ ಆವರಿಸಿತು. ಮಗುವಿನಲ್ಲಿ ಆಗುತ್ತಿರುವ ಬದಲಾವಣೆ ಪಾಲಕರಿಗೆ ಆತಂಕವನ್ನುಂಟು ಮಾಡಿತು. ಪರಿಸ್ಥಿತಿಯನ್ನು ತಿಳಿಗೊಳಿಸಲು ಅವರಿಗೆ ಕೆಲವು ದಿನಗಳೇ ಬೇಕಾದವು. 

          ಈಗ ನಾನು ಮೂವತ್ತು ವರ್ಷಗಳ ಹಿಂದೆ ಹೋಗುತ್ತೇನೆ. ಆಗೆಲ್ಲ ಮನೆಯಲ್ಲಿ ನಾವು ಮಕ್ಕಳು ಗಲಾಟೆ ಮಾಡುವುದು ಹಿರಿಯರಿಂದ ಬೈಯಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿತ್ತು. ಒಮ್ಮೊಮ್ಮೆ ಮನೆಯ ಹಿರಿಯರು ನಮ್ಮಗಳ ಗಲಾಟೆಯಿಂದ ರೋಸಿಹೋಗಿ ಕೈಗೆ ಸಿಕ್ಕ ಕಟ್ಟಿಗೆಯಿಂದಲೋ ಇಲ್ಲವೇ ಹಗ್ಗದಿಂದಲೋ ಥಳಿಸುತ್ತಿದ್ದರು. ಕೆಲವೊಮ್ಮೆ ತಲೆಗೆ ಪೆಟ್ಟಾಗಿ ರಕ್ತ ಸಹ ಸುರಿಯುತ್ತಿತ್ತು. ಹೀಗಿದ್ದರೂ ಆ ಕೋಪ ಸಿಟ್ಟೆಲ್ಲ ಆ ಕ್ಷಣಕ್ಕೆ ಸೀಮಿತವಾಗಿರುತ್ತಿತ್ತು. ಮಕ್ಕಳಾದ ನಾವುಗಳು ಏನೂ ಆಗಿಲ್ಲವೇನೋ ಎನ್ನುವಂತೆ ವರ್ತಿಸುತ್ತಿದ್ದೆವು. ಹೀಗೆ ನಾವು ಗಲಾಟೆ ಮಾಡುವುದು ಹಿರಿಯರು ಬೈಯ್ಯುವುದು ಹಿಡಿದು ಥಳಿಸುವುದು ಪುನರಾವರ್ತನೆಯಾಗುತ್ತಲೇ ಇರುತ್ತಿತ್ತು. ಆದರೆ ಇದನ್ನು ಪಾಲಕರಾಗಲಿ ಮತ್ತು ಮಕ್ಕಳಾಗಲಿ ಮನಸ್ಸಿಗೆ ಹಚ್ಚಿಕೊಂಡು ಕೊರಗುತ್ತಿರಲಿಲ್ಲ. ಮನೋವಿಜ್ಞಾನಿಗಳ ಹತ್ತಿರ ಮಕ್ಕಳನ್ನು ಕೌನ್ಸಲಿಂಗ್ ಗಾಗಿ ಕರೆದೊಯ್ಯುವ ವಿಧಾನವೇ ಆಗ ಬಳಕೆಯಲ್ಲಿರಲಿಲ್ಲ. 

         ಈ ಮೂರು ದಶಕಗಳ ಹಿಂದಿನ ಮಕ್ಕಳ ಮನಸ್ಥಿತಿಗೂ ಮತ್ತು ಇಂದಿನ ಮಕ್ಕಳ ಮನಸ್ಥಿತಿಗೂ ಹೋಲಿಸಿ ನೋಡಿದಾಗ ಸಾಕಷ್ಟು ಬದಲಾವಣೆ ಕಾಣಿಸುತ್ತದೆ. ಈಗಿನ ಮಕ್ಕಳ ಮನಸ್ಸು ಅತ್ಯಂತ ಸೂಕ್ಷ್ಮವಾಗುತ್ತಿದೆ. ಒಂದು ಸಮೀಕ್ಷೆಯ ಪ್ರಕಾರ ಬೆಂಗಳೂರು ನಗರಕ್ಕೆ ಪ್ರತಿದಿನ ಎಂಟರಿಂದ ಹದಿನಾರು ಮಕ್ಕಳು ಮನೆಬಿಟ್ಟು ಬರುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಹೀಗೆ ಮನೆಬಿಟ್ಟು ಬರುವ ಬಹುತೇಕ ಮಕ್ಕಳಲ್ಲಿ ಹೆಚ್ಚಿನ ಮಕ್ಕಳು ಮನೆಯಲ್ಲಿ ಪಾಲಕರೊಂದಿಗೆ ಮಾಡಿಕೊಳ್ಳುವ ಮನಸ್ಥಾಪವೇ ಮುಖ್ಯ ಕಾರಣ. ಕಳೆದ ವರ್ಷ ಬೆಂಗಳೂರಿನಲ್ಲಿ ಎಂಟು ವರ್ಷದ ಬಾಲಕಿಯೊಬ್ಬಳು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಕ್ಕಳ ಬದಲಾಗುತ್ತಿರುವ ಮನಸ್ಥಿತಿಗೊಂದು ಜ್ವಲಂತ ನಿದರ್ಶನ. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಆತ್ಮಹತ್ಯೆಯಂಥ ಪ್ರಯತ್ನಕ್ಕೆ ಕೈಹಾಕುತ್ತಿರುವುದು ಪಾಲಕರಾದವರು ಯೋಚಿಸಬೇಕಾದ ಸಂಗತಿ. 

         ಹೀಗೆ ಮಕ್ಕಳ ಮನಸ್ಥಿತಿ ಬದಲಾಗುತ್ತಿರುವುದಕ್ಕೆ ಅನೇಕ ಕಾರಣಗಳಿವೆ. ಜೊತೆಗೆ ಈ ವಿಷಯವಾಗಿ ಪಾಲಕರದೂ ಬಹಳಷ್ಟು ತಪ್ಪುಗಳಿವೆ. ಬದಲಾಗುತ್ತಿರುವ  ಪರಿಸರ ಮತ್ತು ಪಾಲಕರ ದುಡುಕಿನ ನಿರ್ಧಾರಗಳಿಂದಾಗಿ ಮಕ್ಕಳಲ್ಲಿ ಸಾಕಷ್ಟು ಮಾನಸಿಕ ಮಾರ್ಪಾಡುಗಳಾಗುತ್ತಿವೆ.

ಸ್ಪರ್ಧೆ ಎನ್ನುವ ಪ್ರತಿಕೂಲ ವಾತಾವರಣ 


        ನಾವು ನಮ್ಮ ಮಕ್ಕಳ ಸಹಜ ಶಿಕ್ಷಣಕ್ಕೆ ಒತ್ತು ನೀಡುವುದಕ್ಕಿಂತ ಅವರನ್ನು ಸ್ಪರ್ಧೆಗೆ ಸಿದ್ಧಗೊಳಿಸಲು ನೆರವಾಗುವ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದೇವೆ. ಈ ದಿನಗಳಲ್ಲಿ ಮಕ್ಕಳು ತಮ್ಮ ಎರಡನೇ ವರ್ಷಕ್ಕೇ ಶಾಲೆಗೆ ಹೋಗುವ ಅನಿವಾರ್ಯತೆ ಎದುರಾಗಿದೆ. ತಮ್ಮ ಮಕ್ಕಳನ್ನು ವೈದ್ಯ, ಇಂಜಿನಿಯರ್, ಐಪಿಎಸ್, ಐಎಎಸ್ ಮಾಡಬೇಕೆನ್ನುವ ಧಾವಂತಕ್ಕೆ ಕಟ್ಟು ಬಿದ್ದ ಪಾಲಕರು ಮಗುವಿನ ಶಿಶುವಿಹಾರದ ಅನೌಪಚಾರಿಕ ಶಿಕ್ಷಣದಿಂದಲೇ ತಮ್ಮ ಪ್ರಯತ್ನವನ್ನು ಮುಂದುವರೆಸುತ್ತಿರುವರು. ತಮ್ಮ ಮಗು ಹೀಗೆ ಬೆಳೆಯಬೇಕು ಇಂಥದ್ದೇ ಹುದ್ದೆ ಪಡೆಯಬೇಕೆಂದು ಇಚ್ಛಿಸುವ ಪಾಲಕರ ಮನೋಭಾವದ ಪರಿಣಾಮ ಮಗು ಸ್ಪರ್ಧಾತ್ಮಕ ಜಗತ್ತಿಗೆ ಇಷ್ಟವಿರಲಿ ಇಲ್ಲದಿರಲಿ ತನ್ನನ್ನು ಒಡ್ಡಿಕೊಳ್ಳಲೇ ಬೇಕಾಗುವುದು. ಅದಕ್ಕೆ ಪೂರಕವಾಗಿ ಶಾಲೆ, ಮನೆಪಾಠದ ಬಿಡುವಿರದ ಚಟುವಟಿಕೆಗಳ ನಡುವೆ ಮಕ್ಕಳು ತಮ್ಮ ಸಹಜ ಬಾಲ್ಯ ಜೀವನದಿಂದಲೇ ವಂಚಿತರಾಗುತ್ತಿರುವರು. ಜೊತೆಗೆ ಅವರಿಗೆ ದೊರೆಯುವ ಅಲ್ಪ ವಿರಾಮದ ವೇಳೆ ಕೂಡ ನೃತ್ಯ, ಸಂಗೀತ, ಕಂಪ್ಯೂಟರ್ ದಂಥ ತರಬೇತಿಗಳಿಗೆ ವಿನಿಯೋಗವಾಗುತ್ತಿದೆ. ಒಟ್ಟಿನಲ್ಲಿ ತಮ್ಮ ಮಕ್ಕಳಲ್ಲಿ ಪರಿಪೂರ್ಣ ವ್ಯಕ್ತಿತ್ವವನ್ನು ಅರಳಿಸಬೇಕೆನ್ನುವ ಪಾಲಕರ ಹುನ್ನಾರಕ್ಕೆ ಮಕ್ಕಳ ಬಾಲ್ಯ ಬಲಿಯಾಗುತ್ತಿದೆ. ಈಗೀಗ ಬೆಸಿಗೆಯಂಥ ರಜಾದಿನಗಳಲ್ಲಿ ಕೂಡ ಮಕ್ಕಳು ಶಿಬಿರಗಳಿಗೆ ತೆರಳಿ ಪಾಠ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಪಾಲಕರ ಈ ಮನೋಭಾವವನ್ನು ಸರಿಯಾಗಿಯೇ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಶಾಲೆಗಳು ಬೆಸಿಗೆ ಶಿಬಿರಗಳ ಮೂಲಕ ಮಕ್ಕಳಿಗೆ ತರಬೇತಿ ನೀಡಲು ಮುಂದಾಗುತ್ತಿವೆ. ಹೀಗೆ ಮಗುವೊಂದು ವರ್ಷ ಪೂರ್ತಿ ಶೈಕ್ಷಣಿಕ ವಾತಾವರಣದಲ್ಲೇ ತನ್ನ ಸಮಯ ಕಳೆಯುವ ಸನ್ನಿವೇಶ ಸೃಷ್ಟಿಯಾಗಿದೆ. ಇದಕ್ಕೆಲ್ಲ ಬಹುಪಾಲು ಪಾಲಕರು ಕೊಡುವ ಉತ್ತರ ಇದು ಸ್ಪರ್ಧಾತ್ಮಕ ಯುಗ ಇಲ್ಲಿ ನಿಧಾನಿಸಿದಷ್ಟು ಮಕ್ಕಳು ಹಿಂದುಳಿಯುವ ಅಪಾಯವೇ ಹೆಚ್ಚು ಎಂದು. ಇಂಥದ್ದೊಂದು ಒತ್ತಡ ಮಕ್ಕಳ ಮಾನಸಿಕ ಸ್ಥೈರ್ಯ ಕುಸಿಯುವುದಕ್ಕೆ ಕಾರಣವಾಗುತ್ತಿದೆ.

ನ್ಯೂಕ್ಲಿಯರ್ ಕುಟುಂಬಗಳು 


          ವಿಭಕ್ತ ಕುಟುಂಬ ಇದು ಅತಿ ಮುಖ್ಯವಾದ ಸಾಮಾಜಿಕ ಪಲ್ಲಟಗಳಲ್ಲೊಂದು. ಉದ್ಯೋಗ, ಆರ್ಥಿಕ ಹಿನ್ನೆಡೆಯ ಪರಿಣಾಮ ಜನಸಮೂಹ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಲಸೆ ಹೋಗುತ್ತಿರುವುದರಿಂದ ಅವಿಭಕ್ತ ಕುಟುಂಬಗಳು ಒಡೆದು ಸಣ್ಣ ಸಣ್ಣ ಕುಟುಂಬಗಳಾಗಿ ರೂಪಾಂತರಗೊಳ್ಳುತ್ತಿವೆ. ಕುಟುಂಬವೊಂದು ಒಡೆದು ಸಣ್ಣದಾದಂತೆಲ್ಲ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗೆ ಎದುರಾಗುವ ಸಮಸ್ಯೆಗಳಲ್ಲಿ  ಮಕ್ಕಳ ಪಾಲನೆಯೂ ಒಂದು. ವಿಭಕ್ತ ಕುಟುಂಬಗಳಲ್ಲಿ ಸಾಮಾನ್ಯವಾಗಿ ಗಂಡ ಹೆಂಡತಿ ಇಬ್ಬರೂ ಉದ್ಯೋಗಿಗಳಾಗಿರುವುದರಿಂದ ಇಲ್ಲಿ ಮಕ್ಕಳ ಹೊಣೆ ಮನೆಯಲ್ಲಿ ಕೆಲಸ ಮಾಡುವ ಆಯಾಗಳಿಗೋ ಇಲ್ಲವೇ ಈ ಕೆಲಸಕ್ಕೆಂದೇ ಅಸ್ತಿತ್ವಕ್ಕೆ ಬಂದಿರುವ ಮಕ್ಕಳ ಪಾಲನಾ ಕೇಂದ್ರಗಳಿಗೋ ವರ್ಗಾವಣೆಗೊಳ್ಳುತ್ತದೆ. ಹೀಗೆ ತಮ್ಮ ಬಾಲ್ಯ ಜೀವನದ ಅತಿ ಮಹತ್ವದ ದಿನಗಳನ್ನು ಬೇರೆಯವರ ಆಶ್ರಯದಲ್ಲಿ ಕಳೆಯುವ ಮಕ್ಕಳಲ್ಲಿ ಅನಾಥ ಪ್ರಜ್ಞೆಯೊಂದು ಅವರಿಗೆ ಅರಿವಿಲ್ಲದೆ ಪ್ರಬಲವಾಗುತ್ತ ಹೋಗುತ್ತದೆ.

         ಇನ್ನು ಕೆಲವು ವಿಭಕ್ತ ಕುಟುಂಬಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಮಕ್ಕಳನ್ನು ವಸತಿ ಶಾಲೆಗಳಿಗೆ ಸೇರಿಸುವ ಪರಿಪಾಠ ಉಂಟು. ಆಗೆಲ್ಲ ವರ್ಷದ ಅತೀ ಹೆಚ್ಚಿನ ದಿನಗಳಲ್ಲಿ ಮಕ್ಕಳು ಪಾಲಕರಿಂದ ದೂರವಿರಬೇಕಾಗುವುದು. ಹೀಗೆ ಕುಟುಂಬದ ವಾತಾವರಣದಿಂದಲೇ ದೂರವಿರುವ ಮಕ್ಕಳಲ್ಲಿ ಸಾಕಷ್ಟು ಮಾನಸಿಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಇಂಥ ಮಕ್ಕಳು ಕೌಟಂಬಿಕ ವಾತಾವರಣದಲ್ಲಿ ಬೆಳೆಯುತ್ತಿರುವ ಮಕ್ಕಳೊಂದಿಗೆ ಹೋಲಿಸಿದಾಗ ಒಂದಿಷ್ಟು ಒರಟಾಗಿ ವರ್ತಿಸುವ ಸಾಧ್ಯತೆಯೇ ಹೆಚ್ಚು.

ಹೊರೆಯಾಗುತ್ತಿರುವ ಶಿಕ್ಷಣ 


         ಈ ದಿನಗಳಲ್ಲಿ ಮಕ್ಕಳಿಗೆ ಶಿಕ್ಷಣ ಹೊರೆಯಾಗುತ್ತಿದೆ. ಮಕ್ಕಳು ಅತ್ಯಂತ ಜಟಿಲ ವಿಷಯಗಳನ್ನು ಶಾಲೆಯಲ್ಲಿ ಕಲಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಈಗೀಗ ಕೇಂದ್ರ ಪಠ್ಯಕ್ರಮದ ಶಿಕ್ಷಣ ಅನಿವಾರ್ಯವಾಗುತ್ತಿರುವುದರಿಂದ ಮಕ್ಕಳು ಆ ಶಿಕ್ಷಣಕ್ಕೆ ಹೊಂದಿಕೊಳ್ಳುವುದೇ ಕಷ್ಟವಾಗುತ್ತಿದೆ. ಕೇಂದ್ರ ಪಠ್ಯಕ್ರಮದಲ್ಲಿ ಮಗು ತನ್ನ ಪರಿಸರಕ್ಕೆ ಸಂಬಂಧವೇ ಇಲ್ಲದ ಅಪರಿಚಿತ ಸಂಗತಿಗಳನ್ನು ಅಭ್ಯಾಸ ಮಾಡಬೇಕಾಗಿದೆ. ಇದರೊಂದಿಗೆ ತನ್ನ ಪರಿಸರದ ಭಾಷೆಯಿಂದ ದೂರವಾಗಿ ಇಂಗ್ಲಿಷ್ ಮಾಧ್ಯಮದ ಮೂಲಕ ಕಲಿಯುವ ಸಂದರ್ಭ ಮಕ್ಕಳು ತೀರ ಒತ್ತಡಕ್ಕೆ ಒಳಗಾಗುತ್ತಿರುವರು. ಭಾಷೆ ಮತ್ತು ವಿಷಯಗಳೆರಡೂ ಅಪರಿಚಿತವಾದಾಗ ಅಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ ಸಹಜವಾಗಿಯೇ ಕುಂಠಿತಗೊಳ್ಳುತ್ತದೆ. ಈ ಒಂದು ಸಮಸ್ಯೆಯ ನಿವಾರಣೆಗಾಗಿ ಕೇಂದ್ರೀಯ ಪಠ್ಯಕ್ರಮದ ಶಾಲೆಗಳು ಮಕ್ಕಳನ್ನು ಹತ್ತರಿಂದ ಹನ್ನೆರಡು ಗಂಟೆಗಳವರೆಗೆ ಶಾಲೆಯ ಪರಿಸರದಲ್ಲೇ ಉಳಿಸಿಕೊಳ್ಳುತ್ತಿವೆ. ಇನ್ನು ವಸತಿ ಶಾಲೆಗಳಲ್ಲಿ ಮಕ್ಕಳು ತಮ್ಮ ಶಿಕ್ಷಣದ ವಿಷಯವನ್ನು ಹೊರತು ಪಡಿಸಿ ಬೇರೆ ಯಾವ ವಿಷಯಗಳನ್ನು ಚರ್ಚಿಸುವಂತಿಲ್ಲ.ಈ ಪ್ರಕಾರದ ಬಿಡುವಿಲ್ಲದ ಅಭ್ಯಾಸದಿಂದ ಮಕ್ಕಳು ಅನುಭವಿಸುತ್ತಿರುವ ಒತ್ತಡ ಮತ್ತು ಉದ್ವಿಗ್ನತೆ ಅವರ ಮಾನಸಿಕ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಆಯಾ ರಾಜ್ಯಗಳಲ್ಲಿ ಮಾತೃ ಭಾಷೆಯ ಮೂಲಕ ರಾಜ್ಯ ಪಠ್ಯಕ್ರಮದ ಕಲಿಯುವಿಕೆಗೆ  ಅವಕಾಶವಿದ್ದರೂ ಹೆಚ್ಚಿನ ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಇಂಗ್ಲಿಷ್ ಮಾಧ್ಯಮ ಮತ್ತು ಕೇಂದ್ರ ಪಠ್ಯಕ್ರಮವನ್ನೆ ಆಯ್ಕೆ ಮಾಡಿಕೊಳ್ಳುತ್ತಿರುವರು. ಇಂಗ್ಲಿಷ್ ಜಾಗತಿಕ ಭಾಷೆಯಾಗಿರುವುದರಿಂದ ಅದು ಬದುಕಿನ ಭಾಷೆ ಎನ್ನುವ ಭಾವನೆ ನಮ್ಮಲ್ಲಿ ಬಲವಾಗುತ್ತಿದೆ. ಆದ್ದರಿಂದ ಮಕ್ಕಳ ಆಸಕ್ತಿ ಮತ್ತು ಸಾಮರ್ಥ್ಯಕ್ಕಿಂತ ಇಲ್ಲಿ ಮಕ್ಕಳ  ಭವಿಷ್ಯ ಮಹತ್ವ ಪಡೆದುಕೊಳ್ಳುತ್ತಿದೆ. ಇಷ್ಟವಿರಲಿ ಇಲ್ಲದಿರಲಿ ಮಕ್ಕಳು ಇಂಗ್ಲಿಷ್ ಮಾಧ್ಯಮದ ಕೇಂದ್ರೀಯ ಪಠ್ಯಕ್ರಮದ ಶಿಕ್ಷಣಕ್ಕೆ ಅನಿವಾರ್ಯವಾಗಿ ಒಗ್ಗಿಕೊಳ್ಳಬೇಕಿದೆ. ಅದೆಷ್ಟೋ ಸಂದರ್ಭಗಳಲ್ಲಿ ಈ ಹೊರೆಯಾಗುತ್ತಿರುವ ಶಿಕ್ಷಣದಿಂದಾಗಿ ಮಕ್ಕಳು ಮನೆಬಿಟ್ಟು ಹೋಗುತ್ತಿರುವರು. ಕೆಲವು ಮಕ್ಕಳು ಆತ್ಮಹತ್ಯೆಯಂಥ ಪ್ರಯತ್ನಕ್ಕೂ ಕೈಹಾಕಿದ್ದುಂಟು.

ದೃಶ್ಯ ಮಾಧ್ಯಮ 


      ಮಕ್ಕಳ ಮನೋವಿಕಾಸದ ಮೇಲೆ ದೃಶ್ಯ ಮಾಧ್ಯಮಗಳಾದ ಸಿನಿಮಾ ಮತ್ತು ಟಿವಿ ಚಾನೆಲ್ ಗಳು ಕೆಟ್ಟ ಪರಿಣಾಮವನ್ನುಂಟು  ಮಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ತಯ್ಯಾರಾಗುತ್ತಿರುವ ಬಹುತೇಕ ಸಿನಿಮಾಗಳಲ್ಲಿ ಮಕ್ಕಳ ಸದಭಿರುಚಿಗೆ ಅನುಗುಣವಾದ ಮತ್ತು ಅವರ ಮೇಲೆ ಒಳ್ಳೆಯ ಪರಿಣಾಮವನ್ನುಂಟು ಮಾಡುವ ಕಥೆಯ ಕೊರತೆ ಎದ್ದು ಕಾಣುತ್ತಿದೆ. ಈ ಸಮಸ್ಯೆಯಿಂದ ಯಾವ ಭಾಷೆಯ ಸಿನಿಮಾಗಳೂ ಹೊರತಾಗಿಲ್ಲ. ಇಂದಿನ ದಿನಗಳಲ್ಲಿ ಬಹಳಷ್ಟು ಸಿನಿಮಾಗಳಲ್ಲಿನ ಕಥೆ ಭೂಗತ ಲೋಕಕ್ಕೆ ಸೀಮಿತವಾಗುತ್ತಿರುವುದರಿಂದ ಅಂಥ ಕಥಾವಸ್ತುವಿನ ಸಿನಿಮಾಗಳೇ ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸುತ್ತಿರುವುದು ದುರಂತದ ಸಂಗತಿ. ಸಿನಿಮಾ ಕಲಾವಿದರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಗುವೊಂದು ಇಂದಿನ ಸಿನಿಮಾಗಳನ್ನು ವೀಕ್ಷಿಸಿದ ನಂತರ ಕೈಯಲ್ಲಿ ಮಚ್ಚು ಹಿಡಿಯಬೇಕೆನಿಸುತ್ತದೆ ಎಂದ ಮಾತು ಇವತ್ತು ದೃಶ್ಯ ಮಾಧ್ಯಮ ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎನ್ನುವುದಕ್ಕೊಂದು ಉತ್ತಮ  ಉದಾಹರಣೆ.

          ಜೊತೆಗೆ ನಮ್ಮ ಸಿನಿಮಾ ನಿರ್ದೇಶಕರುಗಳಿಗೆ ತಮ್ಮ ಚಿತ್ರಗಳಲ್ಲಿ ಮಕ್ಕಳನ್ನು ಕೊಲೆಗಾರರನ್ನಾಗಿಯೋ ಇಲ್ಲವೇ ಕಳ್ಳರನ್ನಾಗಿಯೋ ಚಿತ್ರಿಸುವುದರಲ್ಲೇ ಹೆಚ್ಚಿನ ಆಸಕ್ತಿ. ಕೆಲವು ಸಿನಿಮಾಗಳಲ್ಲಿ ಶಾಲೆಗೆ ಹೋಗುವ ವಯಸ್ಸಿನ ಮಕ್ಕಳು ಪ್ರೀತಿ ಪ್ರಣಯದಂಥ ಸನ್ನಿವೇಶಗಳಲ್ಲಿ ಅಭಿನಯಿಸಿರುವ ಉದಾಹರಣೆಯೂ ಉಂಟು. ಕನ್ನಡ ಸಿನಿಮಾ ಲೋಕದಲ್ಲಿನ ಇನ್ನೊಂದು ಗಂಭೀರ ಸಮಸ್ಯೆ ಎಂದರೆ ಈಗೀಗ ಮಕ್ಕಳ ಚಿತ್ರಗಳ ನಿರ್ಮಾಣದಲ್ಲಿ ಸಾಕಷ್ಟು ಇಳಿಮುಖವಾಗಿದೆ. ವರ್ಷಕ್ಕೆ ಒಂದು ಅಥವಾ ಎರಡು ಮಕ್ಕಳ ಸಿನಿಮಾ ತಯ್ಯಾರಾಗುವುದೇ ಅತ್ಯಂತ ದೊಡ್ಡ ಸಂಗತಿಯಾಗಿದೆ. ಸಧ್ಯದ ಮಟ್ಟಿಗೆ ಮಕ್ಕಳ  ಚಿತ್ರಗಳ ಕೊರತೆ ಕನ್ನಡ ಸಿನಿಮಾ ಮಾಧ್ಯಮದಲ್ಲಿ ಬಹು ದೊಡ್ಡ ಸಮಸ್ಯೆಯನ್ನು ಹುಟ್ಟುಹಾಕಿದೆ.

        ಇನ್ನು ಈ ದಿನಗಳಲ್ಲಿ ದಿನದ ೨೪ ಗಂಟೆಗಳು ನಾವು ಕುಳಿತಲ್ಲೇ ಮನೋರಂಜನೆಯನ್ನು ಕೊಡುತ್ತಿರುವ ಟಿವಿ ಚಾನೆಲ್ ಗಳಿಂದಾಗಿ ಮಕ್ಕಳ ಅಭಿರುಚಿಯಲ್ಲಿ ಸಾಕಷ್ಟು ಮಾರ್ಪಾಡುಗಳಾಗಿವೆ. ಅಲ್ಲಿಯೂ ಮಕ್ಕಳ ಸಂಬಂದಿ ಕಾರ್ಯಕ್ರಮಗಳ ಕೊರತೆಯಿಂದಾಗಿ ಮಕ್ಕಳು ಅನಿವಾರ್ಯವಾಗಿ ಹಿರಿಯರಿಗಾಗಿ ಪ್ರಸಾರವಾಗುವ ಕಾರ್ಯಕ್ರಮಗಳನ್ನೇ ವೀಕ್ಷಿಸ ಬೇಕಾಗಿದೆ. ಕೊಲೆ, ಕಳ್ಳತನ, ಅನೈತಿಕ ಸಂಬಂಧಗಳ ಕಥೆಗಳನ್ನು ಮೊಗೆ ಮೊಗೆದು ಕೊಡುತ್ತಿರುವ ಈ ಟಿವಿ ಚಾನೆಲ್ ಗಳಿಂದಾಗಿ ಮಕ್ಕಳ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ.

ಮಾಡಬೇಕಾದದ್ದೇನು


೧. ಮಕ್ಕಳ ಮೇಲಿನ ಮಾನಸಿಕ ಒತ್ತಡ ಕಡಿಮೆಯಾಗಲಿ. ಇದು ಪಾಲಕರ ಪ್ರಥಮ ಆದ್ಯತೆಗಳಲ್ಲೊಂದು. ಮಕ್ಕಳನ್ನು ವೈದ್ಯ, ಇಂಜಿನಿಯರ್ ರನ್ನಾಗಿ ಮಾಡಬೇಕೆನ್ನುವುದಕ್ಕಿಂತ ಅವರನ್ನು ಮನುಷ್ಯರನ್ನಾಗಿ ರೂಪಿಸುವುದು ನಮ್ಮ ಮೊದಲ ಆದ್ಯತೆಯಾಗಲಿ.

೨. ಮಕ್ಕಳು ತಮ್ಮ ಹೆಚ್ಚಿನ ಸಮಯವನ್ನು ಶೈಕ್ಷಣಿಕ ಚಟುವಟಿಕೆಗಳಲ್ಲೇ ಕಳೆಯುವಂಥ ವಾತಾವರಣ ದೂರವಾಗಲಿ. ಆಟ ಮತ್ತಿತರ ದೈಹಿಕ ಚಟುವಟಿಕೆಗಳಿಗೂ ಅವಕಾಶವಿರಲಿ.

೩. ವಿಭಕ್ತ ಕುಟುಂಬಗಳು ಈ ದಿನಗಳಲ್ಲಿ ಅನಿವಾರ್ಯವಾದರೂ ಮಕ್ಕಳನ್ನು ಮನೆಯ ಪರಿಸರದಿಂದ ದೂರವಿಡುವುದು ಅವರ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಅದೊಂದು ತಪ್ಪು ನಿರ್ಧಾರ. ಮಕ್ಕಳು ಒಂದು ನಿರ್ಧಿಷ್ಟ  ವಯಸ್ಸಿನವರೆಗೆ ಬೆಳೆಯುವವರೆಗಾದರೂ ಮನೆಯ ಗೃಹಿಣಿ ತಾಯಿಯಾಗಿ ಮಕ್ಕಳಿಗೆ ಮಮತೆ ನೀಡಲಿ. ಅತೀ ಚಿಕ್ಕ ವಯಸ್ಸಿನಲ್ಲೇ ಮಕ್ಕಳನ್ನು ವಸತಿ ಶಾಲೆಗೆ ಸೇರಿಸುವುದು ಅದು ನಮ್ಮ ದುಡುಕಿನ ನಿರ್ಧಾರಗಳಲ್ಲೊಂದು.

೪. ಪಾಲಕರ ಕೆಲಸದ ಒತ್ತಡ ಮತ್ತು ಅದರಿಂದಾಗುವ ಮಾನಸಿಕ ಉದ್ವಿಗ್ನತೆ ಮಕ್ಕಳ ಮೇಲೆ ನೇರವಾಗಿ ಪರಿಣಾಮ ಬೀರದಿರಲಿ. ಮಕ್ಕಳ ಮೇಲೆ ಕೋಪಗೊಳ್ಳುವುದು ಮತ್ತು ದೈಹಿಕವಾಗಿ ದಂಡಿಸುವುದರಿಂದ ಅದು ಅವರನ್ನು ಘಾಸಿಗೊಳಿಸಿ ತಪ್ಪು ನಡೆಗೆ ಎಡೆ ಮಾಡಿಕೊಡುತ್ತದೆ.

೫. ಮಕ್ಕಳ ಶಿಕ್ಷಣದ ವಿಷಯವಾಗಿ ಪಾಲಕರು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಳ್ಳುವುದು ಅನೇಕ ಸಂದರ್ಭಗಳಲ್ಲಿ ಅದು ನಿರಾಸೆಗೆ ದಾರಿಮಾಡಿ ಕೊಡಬಹುದು. ಹೀಗೆ ಎದುರಾಗುವ ನಿರಾಸೆಯಿಂದ ಮಕ್ಕಳನ್ನು ಹಿಯ್ಯಾಳಿಸುವುದು ಇಲ್ಲವೇ ಇತರರೆದುರು ಅವಮಾನಿಸುವುದು ಮಾಡಿದಲ್ಲಿ ನಮ್ಮ ಈ ವರ್ತನೆ ಅವರ ಶೈಕ್ಷಣಿಕ ಪ್ರಗತಿಯನ್ನೇ ಕುಂಠಿತಗೊಳಿಸಬಹುದು. ಆದ್ದರಿಂದ ಮಕ್ಕಳ ಆಸಕ್ತಿಗೂ ಆದ್ಯತೆ ಇರಲಿ.

೬. ಪಾಲಕರು ದೃಶ್ಯ ಮಾಧ್ಯಮದ ಕಾರ್ಯಕ್ರಮಗಳನ್ನು ವೀಕ್ಷಿಸುವಾಗ ಒಂದಿಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಮಕ್ಕಳ ಮಾನಸಿಕ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯದು.

೭. ಉತ್ತಮ ಸಾಹಿತ್ಯದ ಓದು ಸಹ ಮನೋರಂಜನೆಯ ಒಂದು ಭಾಗ. ಆದ್ದರಿಂದ ಮಕ್ಕಳು ಓದಿನಂಥ ಸೃಜನಾತ್ಮಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂಥ ವಾತಾವರಣ ಮನೆಯಲ್ಲಿ ನಿರ್ಮಾಣವಾಗಲಿ.

೮. ಸಿನಿಮಾ ಮಾಧ್ಯಮದಲ್ಲಿ ಮಕ್ಕಳ ಮಾನಸಿಕ ಬೆಳವಣಿಗೆಗೆ ಸಹಾಯಕವಾಗುವ ಸದಭಿರುಚಿಯ ಮಕ್ಕಳ ಸಿನಿಮಾಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣಗೊಳ್ಳಲಿ.

ಕೊನೆಯ ಮಾತು 


        ಇದು ಕೆಲವು ವರ್ಷಗಳ ಹಿಂದಿನ ಮಾತು  'ಚೆಲುವಿನ ಚಿತ್ತಾರ' ಎನ್ನುವ ಸಿನಿಮಾವನ್ನು ವೀಕ್ಷಿಸಿದ ಶಾಲಾ ಬಾಲಕಿಯೋರ್ವಳು ಆ ಸಿನಿಮಾದ ನಾಯಕ ನಟನನ್ನು ನೋಡಲೇ ಬೇಕೆಂದು ಹಠ ಹಿಡಿದಳು. ಅನ್ನ, ನೀರು ಬಿಟ್ಟು ಆತನ ಬರುವಿಕೆಗಾಗಿ ಕಾದು  ಕುಳಿತಳು. ಮೊದಮೊದಲು ಇದನ್ನು ಗಂಭೀರವಾಗಿ ಪರಿಗಣಿಸದ ಪಾಲಕರಿಗೆ ನಂತರ ಇದೊಂದು ಸಮಸ್ಯೆಯಾಗಿ ಕಾಡಲಾರಂಭಿಸಿತು. ಪರಿಸ್ಥಿತಿ ಇನ್ನಷ್ಟು ಗಂಭೀರವಾಗಬಾರದೆಂದು ಆ ನಟನನ್ನು ಆಸ್ಪತ್ರೆಗೆ ಕರೆಸಿ ಭೇಟಿಗೆ ಅವಕಾಶ ಮಾಡಿಕೊಡಲಾಯಿತು.  ಆನಂತರವೇ ಆ ಮಗುವಿನ ಮುಖದಲ್ಲಿ ನಗುವರಳಿದ್ದು. ಇದು ಇವತ್ತಿನ ದೃಶ್ಯ ಮಾಧ್ಯಮ ಮಕ್ಕಳ ಮೇಲೆ ಬೀರುತ್ತಿರುವ ಪರಿಣಾಮಕ್ಕೊಂದು ಉದಾಹರಣೆ. ಒಟ್ಟಿನಲ್ಲಿ ಮನಸ್ಸನ್ನು ಪ್ರಚೋದಿಸುವ ಹಾಗೂ ಉದ್ವಿಗ್ನತೆಗೆ ಎಡೆಮಾಡುವ ವಾತಾವರಣದಲ್ಲಿ ನಮ್ಮ ಮಕ್ಕಳು ತಮ್ಮ ಬಾಲ್ಯವನ್ನು ಕಳೆಯುತ್ತಿರುವರು. ಇಂಥ ಅಸಹಜ ವಾತಾವರಣದ ಪರಿಣಾಮ ಅವರು ತಮ್ಮ ಸಹಜ ಬಾಲ್ಯ ಜೀವನದಿಂದ ವಂಚಿತರಾಗುತ್ತಿರುವರು. ಮಕ್ಕಳ ಬಾಲ್ಯದ ಬದುಕಿಗೆ  ಪೂರಕವಾಗುವ ಪರಿಸರವನ್ನು ನಾವು ಕಟ್ಟಿಕೊಡದೆ ಹೋದಲ್ಲಿ ಅವರು ಕಳೆದು ಹೋಗುವುದಂತೂ ನಿಶ್ಚಿತ.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ