Thursday, December 22, 2022

ಪ್ರಜಾವಾಣಿ ವಾರ್ತೆಯಲ್ಲಿ ನನ್ನ ಲೇಖನ 'ವೃತ್ತಿಗೌರವ ಮತ್ತು ಅನುಚಿತ ವರ್ತನೆ' ಕೇಳಿ

ಪ್ರಜಾವಾಣಿ ಪತ್ರಿಕೆಯಲ್ಲಿ ದಿನಾಂಕ ೨೨.೧೨.೨೦೨೨ ರಂದು ಪ್ರಕಟವಾದ ನನ್ನ ಲೇಖನ 'ವೃತ್ತಿಗೌರವ ಮತ್ತು ಅನುಚಿತ ವರ್ತನೆ' ಅದೇ ದಿನ ಪ್ರಜಾವಾಣಿಯ ಕನ್ನಡ ಧ್ವನಿಯಲ್ಲಿ (ಪ್ರಜಾವಾಣಿ ವಾರ್ತೆ) ಬಿತ್ತರವಾಯಿತು. -ರಾಜಕುಮಾರ ಕುಲಕರ್ಣಿ

Tuesday, December 13, 2022

ಪ್ರಜಾವಾಣಿ ವಾರ್ತೆಯಲ್ಲಿ ನನ್ನ ಲೇಖನ 'ಪಯಣ ಪಥದ ಪಥಿಕರಾಗಿ' ಕೇಳಿ

 ಪ್ರಜಾವಾಣಿ ವಾರ್ತೆಯಲ್ಲಿ ನನ್ನ ಲೇಖನ 'ಪಯಣ ಪಥದ ಪಥಿಕರಾಗಿ' 

-ರಾಜಕುಮಾರ ಕುಲಕರ್ಣಿ 



ಪ್ರಜಾವಾಣಿ ವಾರ್ತೆಯಲ್ಲಿ ನನ್ನ ಲೇಖನ 'ಗಾಳಕ್ಕೆ ಸಿಲುಕುವುದು ಬೇಡ' ಕೇಳಿ

 

ಪ್ರಜಾವಾಣಿ ವಾರ್ತೆಯಲ್ಲಿ ನನ್ನ ಲೇಖನ 'ಗಾಳಕ್ಕೆ ಸಿಲುಕುವುದು ಬೇಡ' 



Wednesday, December 7, 2022

ಪ್ರಜಾವಾಣಿ ಕನ್ನಡ ಧ್ವನಿಯಲ್ಲಿ ‘ಹೊತ್ತಿಗೆ ಪ್ರಕಟಣೆಯ ಈ ಹೊತ್ತು’ ಲೇಖನ ಕೇಳಿ

ದಿನಾಂಕ 07.12.2022 ರ ಪ್ರಜಾವಾಣಿಯ ‘ಸಂಗತ’ ಅಂಕಣದಲ್ಲಿ ಪ್ರಕಟವಾದ ನನ್ನ ಲೇಖನ ‘ಹೊತ್ತಿಗೆ ಪ್ರಕಟಣೆಯ ಈ ಹೊತ್ತು’ ಅದೇ ದಿನ ಪ್ರಜಾವಾಣಿಯ ಕನ್ನಡ ಧ್ವನಿಯಲ್ಲಿ ಬಿತ್ತರವಾಯಿತು.

Monday, December 5, 2022

ಮಕ್ಕಳ ಪಾಲನೆ: ಸಾಂಸ್ಕೃತಿಕ ಲೋಕದ ಹೊಣೆ

    



(೦೪.೧೦.೨೦೨೨ ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ)


     ಮಕ್ಕಳ ಮೊಬೈಲ್ ಗೀಳು ಕೊರೊನಾ ನಂತರ ಕಾಲದ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೊರೊನಾ ಸಂದರ್ಭದ ಅನಿವಾರ್ಯತೆ ಈಗ ಸಂಕಷ್ಟವಾಗಿ ರೂಪಾಂತರಗೊಂಡಿದೆ. ಸಧ್ಯದ ಪರಿಸ್ಥಿತಿಯಲ್ಲಿ ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತರಬೇಕಾದ ಮಹತ್ವದ ಜವಾಬ್ದಾರಿ ಪಾಲಕರ ಮತ್ತು ಶಿಕ್ಷಕರದು ಮಾತ್ರವಲ್ಲದೆ ಸಾಂಸ್ಕೃತಿಕಲೋಕ ಕೂಡ ಈ ಹೊಣೆಗಾರಿಕೆಯನ್ನು ನಿಭಾಯಿಸಬೇಕಾಗಿದೆ. ಅತ್ಯುತ್ತಮ ಪುಸ್ತಕಗಳ ಓದು ಮತ್ತು ಸದಭಿರುಚಿಯ ಸಿನಿಮಾಗಳ ವೀಕ್ಷಣೆಗೆ ಮಕ್ಕಳನ್ನು ಒಳಗಾಗಿಸುವುದು ಈ ಸಮಸ್ಯೆಯ ಪರಿಹಾರಕ್ಕಿರುವ ಸೂಕ್ತ ಮಾರ್ಗವಾಗಿದೆ. ‘ಯೌವನದ ದಿನಗಳಲ್ಲಿ ಮಾಡಿದ ತಪ್ಪನ್ನು ಒಪ್ಪಿಕೊಂಡು ಪ್ರಾಯಶ್ಚಿತಹೊಂದಲು ಬಾಲ್ಯದಲ್ಲಿ ಓದಿದ ಉತ್ತಮ ಪುಸ್ತಕಗಳು ಮತ್ತು ನೋಡಿದ ನಾಟಕಗಳ ಪ್ರಭಾವ ನನಗೆ ನೆರವಾಯಿತು ಎಂದು ಗಾಂಧೀಜಿ ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿಕೊಂಡಿರುವರು. ಆತಂಕದ ಸಂಗತಿ ಎಂದರೆ ಮಕ್ಕಳ ಮಾನಸಿಕ ವಿಕಾಸಕ್ಕೆ ನೆರವಾಗಬಲ್ಲ ಸಾಹಿತ್ಯಿಕ ಪುಸ್ತಕಗಳ ಮತ್ತು ಸಿನಿಮಾಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ.

ಮಕ್ಕಳ ಮನೋವಿಕಾಸದ ನಿರ್ಮಾಣದಲ್ಲಿ ಸಾಹಿತ್ಯ ಮತ್ತು ಸಿನಿಮಾದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಾಲೆಯು ನಾಲ್ಕು ಗೋಡೆಗಳ ನಡುವೆ ಮಗುವಿನ ವ್ಯಕ್ತಿತ್ವವನ್ನು ರೂಪಿಸುವ ಒಂದು ವ್ಯವಸ್ಥೆಯಾದರೆ, ಸಿನಿಮಾ ಮತ್ತು ಸಾಹಿತ್ಯ ಆ ನಾಲ್ಕು ಗೋಡೆಗಳ ಹೊರಗೆ ಮಗುವಿನ ವ್ಯಕ್ತಿತ್ವವನ್ನು ರೂಪಿಸುತ್ತವೆ. ಶಾಲೆ ಮತ್ತು ಅಲ್ಲಿನ ಪರಿಸರದಷ್ಟೇ ಸಿನಿಮಾ ಮತ್ತು ಸಾಹಿತ್ಯದ ಜವಾಬ್ದಾರಿ ಕೂಡ ಮಗುವಿನ ಬೆಳವಣಿಗೆಯಲ್ಲಿ ಪರಿಗಣನೆಗೆ ಬರುತ್ತದೆ. ಅತ್ಯುತ್ತಮ ಶಿಕ್ಷಕರಂತೆ ಅತ್ಯುತ್ತಮ ಪುಸ್ತಕಗಳು ಮತ್ತು ಸಿನಿಮಾಗಳು ಸಹ ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸುತ್ತವೆ.

ಮಕ್ಕಳನ್ನು ಸಾಹಿತ್ಯದ ಓದುಗರನ್ನಾಗಿಸುವುದು ಅತ್ಯಂತ ಅವಶ್ಯಕವಾಗಿದೆ. ಸಾಹಿತ್ಯದ ಮೂಲಕವೇ ಮಗು ಪ್ರೀತಿ ಮತ್ತು ಅಂತ:ಕರಣ ತುಂಬಿರುವ ಭಾಷೆಯನ್ನು ಕಲಿಯಬೇಕಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತ ಕವಿ ಜೋಸೆಫ್ ಬ್ರಾಡ್‍ಸ್ಕೀ ‘ಸಾಹಿತ್ಯದಲ್ಲಿ ಭಾಷೆ ಬಳಕೆಯಾಗುವುದಿಲ್ಲ, ಸೃಷ್ಟಿಯಾಗುತ್ತದೆ’ ಎನ್ನುತ್ತಾರೆ. ಬ್ರಾಡ್‍ಸ್ಕೀಯೇ ಹೇಳಿದಂತೆ ‘ಮೌನದ ಸಂತ ಸಮಾಧಾನದಲ್ಲಿ ಸತ್ಯ ಪ್ರಕಟಗೊಳ್ಳುವ ಹಾಗೆ, ಬದುಕಿನ ಅರ್ಥ ಹೊಳೆಯುವ ಹಾಗೆ ಸಾಹಿತ್ಯದಲ್ಲಿ ಭಾಷೆ ಕಾವ್ಯವಾಗುತ್ತದೆ. ಭಾಷೆ ಕಾವ್ಯವಾಗುವುದು ಮನುಷ್ಯ ಸಾಂಸ್ಕೃತಿಕವಾಗಿ ವಿಕಾಸಗೊಳ್ಳುವ ದಿಕ್ಕನ್ನು ಸೂಚಿಸುವ ಸಂಗತಿ’. 

ಭಾಷೆಯ ಈ ಮಹತ್ವವನ್ನರಿತು ಮಕ್ಕಳನ್ನು ಪುಸ್ತಕಗಳ ಓದುಗರನ್ನಾಗಿಸಬೇಕಾದದ್ದು ಶಿಕ್ಷಕರ ಮತ್ತು ಪಾಲಕರ ಜವಾಬ್ದಾರಿಯಾಗಿದೆ. ಒಂದು ಕಾಲದಲ್ಲಿ ಕನ್ನಡ ಭಾಷೆಯಲ್ಲಿ ಸಮೃದ್ಧವಾಗಿ ಮಕ್ಕಳ ಪುಸ್ತಕಗಳು ಪ್ರಕಟಗೊಂಡಿವೆ. ಎಮ್.ಎಸ್.ಪುಟ್ಟಣ್ಣನವರ ‘ನೀತಿ ಚಿಂತಾಮಣಿ’ ಕುವೆಂಪು ಅವರ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ಮತ್ತು ‘ಮೋಡಣ್ಣನ ತಮ್ಮ’ ಮಕ್ಕಳ ಮೆಚ್ಚಿನ ಕೃತಿಗಳಾಗಿವೆ. ಪಂಜೆ ಮಂಗೇಶರಾಯರು, ಶಿವರಾಮ ಕಾರಂತ, ಜೆ.ಪಿ.ರಾಜರತ್ನಂ, ನಾ.ಕಸ್ತೂರಿ, ಚಿ.ಸದಾಶಿವಯ್ಯ, ಸಿಸು ಸಂಗಮೇಶ, ಜಯವಂತ ಕಾಡದೇವರ, ಕಂಚ್ಯಾಣಿ ಶಾಣಪ್ಪ ಕನ್ನಡ ಭಾಷೆಯಲ್ಲಿ ಮಕ್ಕಳ ಸಾಹಿತ್ಯವನ್ನು ಸಮೃದ್ಧಗೊಳಿಸಿದವರಲ್ಲಿ ಪ್ರಮುಖರು. ಎಮ್.ಆರ್.ಕೃಷ್ಣಶಾಸ್ತ್ರಿಗಳ ‘ನಿರ್ಮಲ ಭಾರತಿ’ ಮಕ್ಕಳ ಸಾಹಿತ್ಯಕ್ಕೆ ಶ್ರೇಷ್ಠ ಕೊಡುಗೆ ಎಂದು ಪರಿಗಣಿತವಾಗಿದೆ. ಅನುಪಮಾ ನಿರಂಜನ ಅವರ ‘ದಿನಕ್ಕೊಂದು ಕಥೆ’ ಮಕ್ಕಳಿಗಾಗಿ ಬರೆದ 365 ಕಥೆಗಳ ಸಂಪುಟ. ಶಿವರಾಮ ಕಾರಂತರು ‘ಬಾಲ ಪ್ರಪಂಚ’ದ ಮೂಲಕ ಮಕ್ಕಳಿಗಾಗಿ ವಿಜ್ಞಾನಲೋಕದ ವಿಸ್ಮಯಗಳನ್ನು ಮನೆ ಮನೆಗೂ ಮುಟ್ಟಿಸಿದರು. 

ಪರಂಪರೆಯ ಸಮೃದ್ಧ ಹಿನ್ನೆಲೆ ಇರುವ ಮಕ್ಕಳ ಸಾಹಿತ್ಯ ಈಗ ಬೆಳವಣಿಗೆ ಕಾಣದೆ ನಿಂತ ನೀರಾಗಿದೆ. ಜನಪ್ರಿಯ ಮಾದರಿಯನ್ನು ಮೈಗೂಡಿಸಿಕೊಂಡಿರುವ ಕನ್ನಡ ಸಾಹಿತ್ಯವಲಯ ಮಕ್ಕಳ ಆಸಕ್ತಿ ಮತ್ತು ಅಭಿರುಚಿಯ ಕಡೆಗೆ ಗಮನ ನೀಡುತ್ತಿಲ್ಲ. ಪತ್ರಿಕೆಗಳಲ್ಲಿ ಅರ್ಧ ಪುಟಕ್ಕಷ್ಟೇ ಮಕ್ಕಳ ಸಾಹಿತ್ಯ ಸೀಮಿತವಾಗುತ್ತಿದೆ. ಸಾಹಿತ್ಯ ಸಮ್ಮೇಳನಗಳ ಕಾರ್ಯಕ್ರಮಗಳಲ್ಲಿ ಮಕ್ಕಳ ಸಾಹಿತ್ಯಕ್ಕೆ ವೇದಿಕೆ ದೊರೆಯುತ್ತಿಲ್ಲ. ಈ ಮೊದಲು ಪ್ರಕಟವಾದ ಮಕ್ಕಳ ಪುಸ್ತಕಗಳನ್ನು ಪುನರ್ ಮುದ್ರಿಸುವ ಕೆಲಸಕ್ಕೆ ಸಾಹಿತ್ಯ ಪರಿಷತ್ತು ಚಾಲನೆ ನೀಡಬೇಕಿದೆ.

ಇನ್ನು ಮಕ್ಕಳ ಸಿನಿಮಾಗಳ ವಿಷಯದಲ್ಲಿ ಆಶಾದಾಯಕ ಬೆಳವಣಿಗೆ ಕಾಣಿಸುತ್ತಿಲ್ಲ. ಪುಟಾಣಿ ಎಜೆಂಟ್ 123, ಸಿಂಹದ ಮರಿಸೈನ್ಯ, ಮಕ್ಕಳ ಸೈನ್ಯ, ಬೆಟ್ಟದ ಹೂ, ನಾಗರ ಹೊಳೆ, ಚಿನ್ನಾರಿಮುತ್ತದಂತಹ ಅತ್ಯುತ್ತಮ ಮಕ್ಕಳ ಸಿನಿಮಾಗಳು ನಿರ್ಮಾಣಗೊಂಡ ಕನ್ನಡ ಬಾಷೆಯಲ್ಲಿ ಈಗ ಮಕ್ಕಳ ಸಿನಿಮಾಗಳ ಕ್ಷಾಮ ದಟ್ಟವಾಗಿ ಆವರಿಸಿದೆ. ಮಕ್ಕಳ ಸಿನಿಮಾದಲ್ಲಿನ ‘ಸ್ವಾಮಿದೇವನೆ ಲೋಕಪಾಲನೆ’ ಎನ್ನುವ ಹಾಡು ಒಂದು ಕಾಲದಲ್ಲಿ ಶಾಲೆಗಳಲ್ಲಿ ಪ್ರಾರ್ಥನಾ ಗೀತೆಯಾಗಿತ್ತು. ರಾಜಕುಮಾರ್ ಅವರಂತಹ ಜನಪ್ರಿಯ ಕಲಾವಿದ ಮಕ್ಕಳ ಸಿನಿಮಾದ ಪ್ರಾಮುಖ್ಯತೆಯನ್ನು ಅರಿತು ‘ಭಕ್ತ ಪ್ರಹ್ಲಾದ’ ಮತ್ತು ‘ಎರಡು ನಕ್ಷತ್ರಗಳು’ ಎನ್ನುವ ಮಕ್ಕಳ ಸಿನಿಮಾಗಳಲ್ಲಿ ನಟಿಸಿದರು. 

ಇತ್ತೀಚಿನ ಮಕ್ಕಳ ಸಿನಿಮಾಗಳು ಮಕ್ಕಳ ಅಭಿರುಚಿ ಮತ್ತು ಆಸಕ್ತಿಗೆ ಪೂರಕವಾಗಿ ನಿರ್ಮಾಣವಾಗುತ್ತಿಲ್ಲ. ಸಿನಿಮಾಗಳಲ್ಲಿ ಬಾಲಕಲಾವಿದರು ಅಭಿನಯಿಸುತ್ತಿರುವ ಪಾತ್ರಗಳು ವಾಸ್ತವಿಕತೆಗೆ ತುಂಬಾ ದೂರವಾಗಿವೆ. ಅಪ್ರಾಪ್ತ ವಯಸ್ಸಿನ ಬಾಲಕ, ಬಾಲಕಿ ಪರಸ್ಪರ ಪ್ರೀತಿಸುವುದು, ಚಿಕ್ಕವಯಸ್ಸಿನಲ್ಲಿ ಅಪರಾಧ ಪ್ರಪಂಚ ಪ್ರವೇಶಿಸುವುದು, ಅಪಾಯಕಾರಿ ಆಯುಧಗಳನ್ನು ಬಳಸುವುದು ಇಂತಹ ದೃಶ್ಯಗಳಲ್ಲಿ ಅಭಿನಯಿಸಲು ಬಾಲಕಲಾವಿದರನ್ನು ಬಳಸಿಕೊಳ್ಳಲಾಗುತ್ತಿದೆ. ಸಹಜ ಬದುಕಿಗೆ ಹತ್ತಿರವಾದ, ಮಕ್ಕಳ ಮನೋವಿಕಾಸಕ್ಕೆ ಪೂರಕವಾದ ಸಿನಿಮಾಗಳ ಸಂಖ್ಯೆ ಕ್ಷೀಣಿಸುತ್ತಿದೆ. ಸಂವಾದ ಕಾರ್ಯಕ್ರಮದಲ್ಲಿ ‘ಸಿನಿಮಾ ನೋಡಿ ಬಂದ ತಕ್ಷಣ ಕೈಯಲ್ಲಿ ಮಚ್ಚು ಹಿಡಿಯಬೇಕೆನಿಸುತ್ತದೆ’ ಎಂದು ಮಗುವೊಂದು ವ್ಯಕ್ತಪಡಿಸಿದ ಅಭಿಪ್ರಾಯ ಸಧ್ಯದ ಕನ್ನಡ ಸಿನಿಮಾರಂಗದ ದುಸ್ಥಿತಿಗೆ ಕನ್ನಡಿ ಹಿಡಿದಂತಿದೆ. 

ಸಾಹಿತ್ಯ ಮತ್ತು ಸಿನಿಮಾ ಮಾಧ್ಯಮದ ನಿಷ್ಕ್ರಿಯತೆಯ ಪರಿಣಾಮ ಈಗ ಮಕ್ಕಳು ಸೋಷಿಯಲ್ ಮೀಡಿಯಾವನ್ನು ವ್ಯಾಪಕವಾಗಿ ಉಪಯೋಗಿಸುತ್ತಿರುವರು. ಮನೋರಂಜನೆಯ ಹೆಸರಿನಲ್ಲಿ ಆಧುನಿಕ ತಂತ್ರಜ್ಞಾನದ ಅವಿಷ್ಕಾರಗಳು ಮಕ್ಕಳನ್ನು ದಾರಿ ತಪ್ಪಿಸುತ್ತಿವೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಮಕ್ಕಳ ಮನೋವಿಕಾಸಕ್ಕೆ ಸಹಾಯಕವಾಗುವಂತಹ ಮಕ್ಕಳ ಸಾಹಿತ್ಯ ಮತ್ತು ಸಿನಿಮಾಗಳು ಕನ್ನಡ ಭಾಷೆಯಲ್ಲಿ ಸಮೃದ್ಧವಾಗಿ ರಚನೆಯಾಗಬೇಕು. ಅಂತಹ ಸಿನಿಮಾ ಮತ್ತು ಸಾಹಿತ್ಯವನ್ನು ಪ್ರೋತ್ಸಾಹಿಸಿ  ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಬೆಳೆಸುವ ಹೊಣೆಗಾರಿಕೆ ಮತ್ತು ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

-ರಾಜಕುಮಾರ ಕುಲಕರ್ಣಿ

Wednesday, November 9, 2022

ಪ್ರಜಾವಾಣಿಯ ಕನ್ನಡ ಧ್ವನಿಯಲ್ಲಿ ‘ಗ್ರಂಥಾಲಯ: ಸಾರ್ವಜನಿಕರ ಕೊರತೆಯೇಕೆ?’ ಲೇಖನವನ್ನು ಕೇಳಿ

ದಿನಾಂಕ 07.11.2022 ರಂದು ಪ್ರಜಾವಾಣಿ ಪತ್ರಿಕೆಯ ‘ಸಂಗತ’ ಅಂಕಣದಲ್ಲಿ ನನ್ನ ‘ಗ್ರಂಥಾಲಯ: ಸಾರ್ವಜನಿಕರ ಕೊರತೆಯೇಕೆ?’ ಲೇಖನ ಪ್ರಕಟವಾಯಿತು. ಅದೇ ದಿನ ಪ್ರಜಾವಾಣಿಯ ಕನ್ನಡ ಧ್ವನಿಯಲ್ಲಿ ಲೇಖನ ಬಿತ್ತರವಾಯಿತು.ಕೇಳಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

Saturday, November 5, 2022

ಸಾವು: ಮಾರಾಟಕ್ಕಿಟ್ಟ ಸರಕು?


                                


 (ಪ್ರಜಾವಾಣಿ 08.09.2022)

 


     ಪ್ರತಿಯೊಬ್ಬರ ಬದುಕಿನಲ್ಲಿ ಲೋಕಾಂತ ಮತ್ತು ಏಕಾಂತಗಳೆಂಬ ಎರಡು ಪ್ರದೇಶಗಳಿರುತ್ತವೆ ಎಂದಿದ್ದಾರೆ ತಿಳಿದವರು. ಸದಾಕಾಲ ಲೋಕಾಂತದಲ್ಲೇ ಬದುಕುತ್ತಿರುವ ಮನುಷ್ಯನಿಗೆ ಏಕಾಂತವನ್ನು ಪ್ರವೇಶಿಸುವಷ್ಟು ತಾಳ್ಮೆಯಾಗಲಿ ಮತ್ತು ಪುರುಸೊತ್ತಾಗಲಿ ಇಲ್ಲ. ಇಂದಿನ ವೈಭವದ ಆಧುನಿಕ ಜೀವನಶೈಲಿಯಿಂದಾಗಿ ನಿಶ್ಯಬ್ದ ಮತ್ತು ನೀರವ ವಾತಾವರಣದಲ್ಲಿ ಒಬ್ಬಂಟಿಯಾಗಿ ಕುಳಿತು ಮನಸ್ಸನ್ನು ನಿಗ್ರಹಿಸಿಕೊಳ್ಳುತ್ತ ಏಕಾಂತವನ್ನು ಹೊಕ್ಕು ತನ್ನ ವರ್ತನೆಯನ್ನು ವಿಮರ್ಶಿಸಿಕೊಳ್ಳುವ ಆತ್ಮಾವಲೋಕನದ ಗುಣವನ್ನು ಮನುಷ್ಯ ಕಳೆದುಕೊಂಡಿರುವನು. ಆತ್ಮಪರೀಕ್ಷೆ, ಆತ್ಮವಿಮರ್ಶೆಗೆ ಇವತ್ತು ಮನುಷ್ಯ ಒಳಗಾಗುತ್ತಿಲ್ಲ. ಸಮಾಜದಲ್ಲಿ ಕ್ರೌರ್ಯ ಮತ್ತು ಹಿಂಸೆ ವಿಜೃಂಭಿಸುತ್ತಿವೆ. ಅದಕ್ಕೆಂದೆ ಇಲ್ಲಿ ಸಾವು ಕೂಡ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟ ಸರಕಿನಂತೆ ಗೋಚರಿಸುತ್ತಿದೆ.

ಇತ್ತೀಚೆಗೆ ಒಂದು ವಾರದ ಅವಧಿಯಲ್ಲಿ ನನ್ನ ಅನುಭವಕ್ಕೆ ಬಂದ ಎರಡು ಪ್ರಸಂಗಗಳು ಇದನ್ನು ಸಾಕ್ಷೀಕರಿಸುವಂತಿವೆ. ಬೆಳಗ್ಗಿನ ವಾಕಿಂಗ್‍ನಲ್ಲಿ ಆಗಾಗ ಭೇಟಿಯಾಗುವ ಪರಿಚಯದ ಹಿರಿಯರೊಬ್ಬರು ಇತ್ತೀಚೆಗೆ ಹದಿನೈದು ದಿನಗಳಿಂದ ಕಾಣಿಸದೆಯಿದ್ದವರು ಮೊನ್ನೆ ಧಿಡೀರೆಂದು ಪ್ರತ್ಯಕ್ಷರಾದರು. ಹದಿನೈದು ದಿನಗಳ ಅವರ ಅನುಪಸ್ಥಿತಿಗೆ ಕಾರಣ ಕೇಳಿದಾಗ ಅವರು ಹೇಳಿದ್ದಿಷ್ಟು-‘ಎರಡು ವಾರಗಳ ಹಿಂದೆ ಇದ್ದಕ್ಕಿದ್ದಂತೆ ಕಾಯಿಲೆಯಿಂದ ಆರೋಗ್ಯದಲ್ಲಿ ಏರುಪೇರಾಗಿ ಸಾವಿನ ಭಯ ಮನಸ್ಸನ್ನು ಆವರಿಸಿತು. ಬದುಕಿನಲ್ಲಿ ಇನ್ನು ಅನುಭವಿಸಬೇಕಾದದ್ದು ಸಾಕಷ್ಟಿದೆ. ಸಾವಿನ ಭೀತಿಯಿಂದ ಪಾರಾಗಲು ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿ ಕಾಣಿಕೆ ಸಮರ್ಪಿಸಿದೆ. ತಿಮ್ಮಪ್ಪನಿಗೆ ಕಿರೀಟ, ಹನುಮಪ್ಪನಿಗೆ ಗದೆ, ಫಕೀರಪ್ಪನಿಗೆ ಹೂವಿನ ಬುಟ್ಟಿ, ಮಾರಮ್ಮನಿಗೆ ಸೀರೆ ಸಲ್ಲಿಸಿ ಮನೆಯಲ್ಲಿ ಹೋಮ ಹವನಗಳನ್ನು ಮಾಡಿದ್ದಾಯಿತು. ಜೊತೆಗೆ ಆಸ್ಪತ್ರೆಯ ಖರ್ಚು ಬೇರೆ. ಲಕ್ಷಾಂತರ ರೂಪಾಯಿಗಳು ಕೈಬಿಟ್ಟು ಹೋದರೂ ಚಿಂತೆಯಿಲ್ಲ ಸಾವಿನ ಭಯ ಈಗ ದೂರಾಗಿದೆ’.

ಈ ಮೇಲಿನ ಘಟನೆಗೆ ಭಿನ್ನವಾದ ಘಟನೆಯೊಂದು ಸರಿಸುಮಾರು ಇದೇ ಸಂದರ್ಭದಲ್ಲಿ ಜರುಗಿತು. ನನ್ನ ಪಕ್ಕದ ಮನೆಯ ವಯಸ್ಸಾದ ಹಿರಿಯರು ಎದೆನೋವಿನಿಂದ ಹಾಸಿಗೆಹಿಡಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿರುವರು. ಅವರ ಆರೋಗ್ಯ ವಿಚಾರಿಸಲೆಂದು ಹೋದಾಗ ಅವರು ನುಡಿದಿದ್ದು ಹೀಗೆ-‘ಈಗೀಗ ಸಾವು ಯಾವ ಸಮಯದಲ್ಲಾದರೂ ಬರಬಹುದೆಂದು ಅನಿಸಲಾರಂಭಿಸಿದೆ. ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವಾಗ ಬದುಕಿನ ಸತ್ಯ ದರ್ಶನವಾಯಿತು. ನಾನು ಇದುವರೆಗೂ ಬದುಕಿನಲ್ಲಿ ಸಾಧಿಸಿರುವುದೇನು ಎಂದು ಅನಿಸಲಾರಂಭಿಸಿದೆ. ಇದುವರೆಗಿನ ಆಯುಷ್ಯನ್ನು ಸ್ವಂತದ ಬದುಕನ್ನು ಕಟ್ಟಿಕೊಳ್ಳುವುದರಲ್ಲೇ ಕಳೆದದ್ದಾಯಿತು. ಈಗ ಉಳಿದಿರುವ ಆಯುಷ್ಯದಲ್ಲಿ ಬೇರೆಯವರಿಗಾಗಿ ಬದುಕಬೇಕೆನ್ನುವ ಪ್ರಜ್ಞೆ ಮೂಡಿದೆ. ದುಡಿದು ಗಳಿಸಿದ್ದರಲ್ಲಿ ಒಂದಿಷ್ಟನ್ನು ಸಮಾಜಕ್ಕೆ ನೀಡಬೇಕೆನ್ನುವ ಬಯಕೆ ಪ್ರಬಲವಾಗುತ್ತಿದೆ’.

‘ಜಾತಸ್ಯ ಮರಣಂ ಧ್ರುವಂ’ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಹುಟ್ಟು ಆಕಸ್ಮಿಕ ಆದರೆ ಸಾವು ಅನಿವಾರ್ಯ ಎಂದಿರುವರು ಚಿಂತಕರು. ‘ಮೋಹದ ಹೆಂಡತಿ ತೀರಿದ ಬಳಿಕ ಮಾವನ ಮನೆಯ ಹಂಗಿನ್ಯಾತಕೋ’ ಎಂದು ಅನುಭಾವಿಗಳು ಸಾವಿನ ಅನಿವಾರ್ಯತೆಯನ್ನು ತಿಳಿಸಿಕೊಟ್ಟಿರುವರು. ‘ನೆಚ್ಚದಿರು ಸಂಸಾರ ನೆಲೆಯಲ್ಲವೀ ಕಾಯ’ ಎಂದು ಹಾಡಿರುವರು ಕನಕದಾಸರು. ಇಷ್ಟೆಲ್ಲ ಹಿನ್ನೆಲೆಯಿದ್ದೂ ಮನುಷ್ಯ ಚಿರಂಜೀವಿತ್ವದ ಭಾವನೆಯಿಂದ ಸೇಡು, ದ್ವೇಷ, ಕ್ರೌರ್ಯ, ಶೋಷಣೆಯ ಗುಣಗಳನ್ನು ಮೈಗೂಡಿಸಿಕೊಂಡು ಮೃಗೀಯವರ್ತನೆಯನ್ನು ತೋರಿಸುತ್ತಿರುವನು. ಅಮರತ್ವದ ಭಾವನೆ ಮುನ್ನೆಲೆಗೆ ಬಂದು ಬದುಕಿನ ಕ್ಷಣಿಕತೆಯ ಅರಿವು ಹಿನ್ನೆಲೆಗೆ ಸರಿದಿದೆ. ವಿಮರ್ಶಕ ಜಿ.ಎಸ್.ಆಮೂರ ಅವರು ಹೇಳಿದಂತೆ ಮನುಷ್ಯ ನಾಗರಿಕನಾಗಿ ಎಷ್ಟೇ ಮುಂದುವರೆದರೂ ಅವನ ಮೂಲ ಪ್ರವೃತ್ತಿಗಳಾದ ಕಾಮ, ಕ್ರೋಧ ಮತ್ತು ದ್ವೇಷ ಇವುಗಳಿಂದ ಬಿಡುಗಡೆ ಹೊಂದಲು ಇವತ್ತಿಗೂ ಸಾಧ್ಯವಾಗುತ್ತಿಲ್ಲ. ಒಟ್ಟಾರೆ ನ್ಯಾಯ-ಅನ್ಯಾಯ, ಸತ್ಯ-ಸುಳ್ಳು, ಅಹಿಂಸೆ-ಹಿಂಸೆ, ನೈತಿಕ-ಅನೈತಿಕ ಇವುಗಳ ನಡುವಣ ಗೆರೆ ಬಹಳ ತೆಳುವಾಗುತ್ತಿದ್ದು ಮನುಷ್ಯ ಸಾವಿನ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಿರುವನು. 

ಸಾವೆನ್ನುವುದು ಸತ್ತ ನಂತರವೂ ಬೇರೆಯವರ ಮೂಲಕ ಬದುಕಲು ದಂಡನೆಗೆ ಒಳಗಾದಂತೆ ಎಂದಿರುವ ಫ್ರೆಂಚ್ ಲೇಖಕ ಸಾರ್ತ್ರೆ ಸಾವನ್ನು ಅರ್ಥೈಸಿದ್ದು ಹೀಗೆ- ‘ಸಾವು ವ್ಯಕ್ತಿಯ ಬಾಳಿನ ಭೂತವನ್ನು ಬದಲಾಯಿಸಲು ಒಂದು ನಿರ್ಧಿಷ್ಟತೆ ತಂದುಬಿಡುತ್ತದೆ. ಆದ್ದರಿಂದ ಸತ್ತ ನಂತರದ ಬಾಳು ಬದುಕಿರುವವರ ಸ್ವತ್ತಾಗುತ್ತದೆ. ಅದನ್ನು ಅವರು ಬೇಕಾದರೆ ಉಳಿಸಿಕೊಳ್ಳಬಹುದು ಅಥವಾ ಅದನ್ನು ಕತ್ತಲೆಗೆ ತಳ್ಳುವುದರ ಮೂಲಕ ಅದಕ್ಕೆ ಎರಡನೆಯ ಸಾವನ್ನು ತರಬಹುದು’.

ಸಾವು ಬರಹಗಾರರನ್ನು ಮತ್ತು ಚಿಂತಕರನ್ನು ನಿರಂತರವಾಗಿ ಕಾಡಿದ ವಸ್ತುವಾಗಿದೆ. ಕತೆ, ಕಾದಂಬರಿ, ಆತ್ಮಕಥೆಗಳಲ್ಲಿ ಸಾವು ಮತ್ತೆ ಮತ್ತೆ ಗಾಢವಾಗಿ ಚರ್ಚೆಗೊಳಗಾಗಿದೆ. ಪಿ.ಲಂಕೇಶ್ ತಮ್ಮ ಆತ್ಮಚರಿತ್ರೆ ‘ಹುಳಿಮಾವಿನ ಮರ’ದಲ್ಲಿ ಸಾವಿನ ಕುರಿತು ಹೀಗೆ ಹೇಳಿಕೊಂಡಿರುವರು, ‘ನನ್ನ ಗಾಢ, ದುಗುಡದ ವೇಳೆಯಲ್ಲಿ ಸಾವಿನ ಹತ್ತಿರ ಇದ್ದಂತಿದ್ದಾಗ ಮುತ್ಸದ್ದಿತನ, ಹೊಂದಾಣಿಕೆ, ಖ್ಯಾತಿ, ಪ್ರಶಸ್ತಿ ಮುಂತಾದವೆಲ್ಲ ಬದುಕಿನೆದುರು, ಸಾವಿನೆದುರು ಗೌಣ ಅನ್ನಿಸುತ್ತಿದ್ದಾಗ ನನ್ನ ಬರವಣಿಗೆಯ ರೀತಿಯೂ ಬದಲಾಯಿತು. ಸಾವು ಇನ್ನು ಮೇಲೆ ನನಗೆ ಕೇವಲ ಕತೆಯಾಗದೆ, ಬದುಕುವ ಅಂತ್ಯ ಎಂಬ ಸತ್ಯ ಮಾತ್ರವಾಗದೆ ನನ್ನ ಉಳಿದ ದಿನಗಳಲ್ಲಿ, ಬರೆದ ಸಾಲುಗಳಲ್ಲಿ ನೆಲೆಸಿ ಎಚ್ಚರಿಸುವ ಛಾಯೆ ಅನ್ನಿಸತೊಡಗಿತು’. 

ಸಾವಿನ ನೆನಪು ಬದುಕನ್ನು ಅರ್ಥಪೂರ್ಣವಾಗಿಸಿದೆ ಎಂದು ಧನಾತ್ಮಕವಾಗಿ ಯೋಚಿಸುವವರೂ ನಮ್ಮ ನಡುವಿದ್ದಾರೆ. ಮನುಷ್ಯ ಸಾಯದೆ ಇದ್ದರೆ ಈ ಜಗತ್ತು ಎಷ್ಟೊಂದು ಅಸಹ್ಯವಾಗಿರುತ್ತಿತ್ತು ಎಂದು ಚಿಂತಿಸಿದ ಅನಂತಮೂರ್ತಿ ಅವರ ಮಾತಿನಲ್ಲಿ ಸಾವಿನಪ್ರಜ್ಞೆ ಇದೆ. ಸಾವಿಲ್ಲದ ಮನೆಯ ಸಾಸಿವೆಕಾಳು ತರಲು ಹೇಳಿ ಕಿಸಾಗೌತಮಿಗೆ ಸಾವಿನ ಅಸ್ತಿತ್ವದ ಅರಿವು ಮೂಡಿಸಿದ ಬುದ್ಧನ ನಾಡಿನಲ್ಲಿ ಸಾವು ನಮ್ಮನ್ನು ಎಚ್ಚರಿಸುವ ಪ್ರಜ್ಞೆಯಾಗಬೇಕು. ಮೌಲ್ಯಗಳು ಅಪಮೌಲ್ಯಗೊಳ್ಳುತ್ತ ಅನೈತಿಕತೆ, ಅಪ್ರಾಮಾಣಿಕತೆಗಳು ವಿಜೃಂಭಿಸುತ್ತಿರುವಾಗ ಸಾವಿನ ಪ್ರಜ್ಞೆಯಲ್ಲಿ ಬದುಕು ಅರಳಬೇಕಿರುವುದು ಇಂದಿನ ತುರ್ತು ಅಗತ್ಯವಾಗಿದೆ.

-ರಾಜಕುಮಾರ ಕುಲಕರ್ಣಿ

Thursday, October 6, 2022

ಪ್ರಜಾವಾಣಿ ಕನ್ನಡ ಧ್ವನಿಯಲ್ಲಿ 'ಮಕ್ಕಳ ಪಾಲನೆ: ಸಾಂಸ್ಕೃತಿಕ ಲೋಕದ ಹೊಣೆ' ಲೇಖನವನ್ನು ಕೇಳಿ

 

ದಿನಾಂಕ ೦೪.೧೦.೨೦೨೨ ರಂದು ಪ್ರಜಾವಾಣಿ ಪತ್ರಿಕೆಯ 'ಸಂಗತ' ಅಂಕಣದಲ್ಲಿ ನನ್ನ  'ಮಕ್ಕಳ ಪಾಲನೆ: ಸಾಂಸ್ಕೃತಿಕ ಲೋಕದ ಹೊಣೆ' ಲೇಖನ ಪ್ರಕಟವಾಯಿತು. ಈ ಲೇಖನ ದಿನಾಂಕ ೦೫.೧೦.೨೦೨೨ ರಂದು ಪ್ರಜಾವಾಣಿಯ ಕನ್ನಡ ಧ್ವನಿಯಲ್ಲಿ ಬಿತ್ತರವಾಯಿತು. ಕೇಳಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಥವಾ ವೆಬ್ ವಿಳಾಸವಾಗಿ ಉಪಯೋಗಿಸಿ. 

https://open.spotify.com/episode/71ARhGKWQGREEYBOv51feV





-ರಾಜಕುಮಾರ ಕುಲಕರ್ಣಿ 

Monday, October 3, 2022

ಗಾಳಕ್ಕೆ ಸಿಲುಕುವುದು ಬೇಡ

 



(ಪ್ರಜಾವಾಣಿ 04.08.2022 ರಲ್ಲಿ ಪ್ರಕಟ)

      ಲೇಖಕ ಎಂಥೋನಿ ಸ್ಟೊರ್ ಮನುಷ್ಯನ ಕ್ರೂರತ್ವವನ್ನು ಕುರಿತು ಹೇಳಿದ್ದು ಹೀಗೆ-‘ರೋಡೆಂಟ್ ಜಾತಿಯ ಕೆಲವು ಪ್ರಾಣಿಗಳನ್ನು ಬಿಟ್ಟರೆ ಕಶೇರುಕ ವರ್ಗದ ಯಾವ ಪ್ರಾಣಿಯೂ ತನ್ನದೇ ವರ್ಗದ ಇನ್ನೊಂದು ಪ್ರಾಣಿಯನ್ನು ಅಭ್ಯಾಸ ಬಲದಿಂದ ಕೊಲ್ಲುವ ಉದಾಹರಣೆಯಿಲ್ಲ. ಕೊಲ್ಲುವ ಸುಖಕ್ಕಾಗಿಯೇ ಕೊಲ್ಲುವ ಪ್ರಾಣಿ ಮನುಷ್ಯನನ್ನು ಬಿಟ್ಟು ಇನ್ನೊಂದಿಲ್ಲ. ನಮ್ಮ ವಿಷಾದಕ್ಕೆ ಕಾರಣವಾಗುವ ಸಂಗತಿಯೆಂದರೆ ಪೃಥ್ವಿಯ ಮೇಲಿನ ಪ್ರಾಣಿವರ್ಗಗಳಲ್ಲೇ ಅತ್ಯಂತ ಕ್ರೂರ ಹಾಗೂ ನಿಷ್ಠುರವಾದದ್ದೆಂದರೆ ಮನುಷ್ಯ ಜಾತಿಯೇ’.

ಮನುಷ್ಯ ಮನುಷ್ಯನನ್ನೇ ಬೇಟೆಯಾಡುವ, ಕೊಲ್ಲುವ, ಹಿಂಸಿಸುವ, ಶೋಷಿಸುವ ಪ್ರವೃತ್ತಿ ಇಂದು ನಿನ್ನೆಯದಲ್ಲ. ಅನಾದಿಕಾಲದಿಂದಲೂ ಮನುಷ್ಯನಲ್ಲಿ ಈ ಗುಣಗಳು ಅವ್ಯಾಹತವಾಗಿ ಮುಂದುವರೆದುಕೊಂಡು ಬಂದಿವೆ. ಪ್ರೀತಿ, ಕರುಣೆ, ಅಂತ:ಕರಣಗಳಿರಬೇಕಾದ ಜಾಗದಲ್ಲಿ ದ್ವೇಷ, ಸೇಡು, ಹಿಂಸೆಗಳು ವಿಜೃಂಭಿಸುತ್ತಿವೆ. ಮನುಷ್ಯ ನಾಗರಿಕನಾದಂತೆಲ್ಲ ಅವನ ಬುದ್ಧಿ, ಭಾವಗಳು ಸಂಕುಚಿತಗೊಳ್ಳುತ್ತಿವೆ. ಮನುಷ್ಯ ಮನುಷ್ಯರ ನಡುವಣ ಸಂಬಂಧಗಳನ್ನು ಲಾಭ, ನಷ್ಟಗಳ ಲೆಕ್ಕಾಚಾರದಿಂದ ನೋಡಲಾಗುತ್ತಿದೆ. ಬದುಕಿನಲ್ಲಿ ವ್ಯಾಪಾರ ಮನೋಧರ್ಮ ಮುನ್ನೆಲೆಗೆ ಬಂದು ತ್ಯಾಗ, ಪ್ರೀತಿ, ಸಹಿಷ್ಣುತೆಯ ಗುಣಗಳು ಹಿನ್ನೆಲೆಗೆ ಸರಿದಿವೆ.

ಮನಸ್ಸಿಗೆ ನೋವು ನೀಡುವ ಪ್ರವೃತ್ತಿ ನಾಗರಿಕ ಸಮಾಜದಲ್ಲೇ ಹೆಚ್ಚುತ್ತಿದೆ. ದೈಹಿಕ ನೋವಿಗಿಂತ ಮಾನಸಿಕ ನೋವು ಅತ್ಯಂತ ಅಪಾಯಕಾರಿ. ಮನುಷ್ಯ ತನ್ನ ದೇಹದ ಮೇಲಿನ ಗಾಯಗಳನ್ನು ಮರೆಯಬಹುದು ಆದರೆ ಮನಸ್ಸಿಗಾಗುವ ಗಾಯ ಬೇಗನೆ ಮಾಯುವಂತಹದ್ದಲ್ಲ. ಅಸಂವೇದಿಯಾಗುತ್ತಿರುವ ಮನುಷ್ಯ ನಗುವಿನ ಮುಖವಾಡದ ಹಿಂದೆ ಹಲ್ಲುಮಸೆತದ ಕ್ರೌರ್ಯವನ್ನು ಪ್ರದರ್ಶಿಸುತ್ತಿರುವನು. 

ಮನಶಾಸ್ತ್ರಜ್ಞ ಎರಿಕ್ ಬರ್ನ್ ಪರಿಚಯಿಸಿದ ‘ಟ್ರಾನ್ಸಾಕ್ಷನಲ್ ಆ್ಯನಾಲಿಸಿಸ್’ ಎನ್ನುವ ಪರಿಕಲ್ಪನೆ ಮನುಷ್ಯನೇ ಸೃಷ್ಟಿಸಿಕೊಂಡಿರುವ ಈ ಕ್ರೂರ ವ್ಯವಸ್ಥೆಯಲ್ಲಿ ಮನುಷ್ಯ ಮನುಷ್ಯನಂತೆ ಬದುಕುವುದನ್ನು ಹೇಳಿಕೊಡುತ್ತದೆ. ಈ ಪರಿಕಲ್ಪನೆಯನ್ವಯ ಮನುಷ್ಯ ಬೇರೆಯವರೊಂದಿಗೆ ಮಾತನಾಡುವ ಪೂರ್ವದಲ್ಲಿ ವರ್ತನೆ, ಆಲೋಚನೆ, ತನ್ನೊಳಗಿನ ಸಂಘರ್ಷ ಇವುಗಳ ಬಗ್ಗೆ ವಿಶೇಷ ಎಚ್ಚರ ವಹಿಸಬೇಕು ಎನ್ನುತ್ತಾರೆ ಮನೋವಿಜ್ಞಾನಿಗಳು. ಸಂಭಾಷಣೆಯ ಸಂದರ್ಭ ತನ್ನ ಮಾತು ಮತ್ತು ವರ್ತನೆ ಎದುರಿಗಿರುವ ವ್ಯಕ್ತಿಗೆ ನೋವನ್ನುಂಟು ಮಾಡದಂತೆ ಪೂರ್ವಸಿದ್ಧತೆಯೊಂದಿಗೆ ಮಾತಿಗಿಳಿಯುವುದೆ ‘ಟ್ರಾನ್ಸಾಕ್ಷನಲ್ ಆ್ಯನಾಲಿಸಿಸ್’ನ ಪ್ರಮುಖ ಲಕ್ಷಣ. ನಾಗರಿಕತೆಯ ವೇಷ ತೊಟ್ಟು ಅನಾಗರಿಕರಂತೆ ಮನುಷ್ಯರು ವರ್ತಿಸುತ್ತಿರುವ ಇವತ್ತಿನ ದಿನಗಳಲ್ಲಿ ಎರಿಕ್ ಬರ್ನ್ ಪರಿಚಯಿಸಿದ ಈ ಪರಿಕಲ್ಪನೆಯನ್ನು ಅರಿಯುವುದು ತುಂಬ ಅಗತ್ಯವಾಗಿದೆ.

ನನ್ನ ಪರಿಚಯದ ಹಿರಿಯರೊಬ್ಬರು ಆಗಾಗ ಹೇಳುವ ಮಾತಿದು-‘ನನ್ನ ಮನಸ್ಸಿಗೆ ನೋವಾದಾಗ ಅಥವಾ ಮಾಡಬೇಕೆಂದಿರುವ ಕೆಲಸದಲ್ಲಿ ಸೋಲು ಎದುರಾದಾಗ ನಾನು ಕಾರಂತರ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಪುಸ್ತಕವನ್ನು ಓದುತ್ತೇನೆ. ಆಗ ನೋವು ಮತ್ತು ಸೋಲನ್ನು ಮೆಟ್ಟಿ ನಿಲ್ಲುವ ಶಕ್ತಿಯನ್ನು ಈ ಪುಸ್ತಕದ ಓದು ನನಗೆ ತಂದು ಕೊಡುತ್ತದೆ. ನನಗೇ ಗೊತ್ತಿಲ್ಲ ಈ ಪುಸ್ತಕವನ್ನು ನಾನು ಅದೆಷ್ಟು ಬಾರಿ ಓದಿರುವೆನೆಂದು’. ಈ ಮಾತು ಸಾಹಿತ್ಯಕ್ಕಿರುವ ಶಕ್ತಿಗೊಂದು ದೃಷ್ಟಾಂತ. ಅನುದಿನದ ಅಂತರಗಂಗೆಯಂತೆ ಸಾಹಿತ್ಯ ಜನಮಾನಸದಲ್ಲಿ ಹಾಸುಹೊಕ್ಕಾಗಿ ಪ್ರವಹಿಸುತ್ತಲೇ ಇದೆ. ಅದಕ್ಕಾಗಿಯೇ ಓದು ಬಹುಮುಖ್ಯ. ಅದನ್ನು ಎಲ್ಲರೂ ರೂಢಿಸಿಕೊಳ್ಳಬೇಕು.

ಸಾರ್ವಜನಿಕ ಜೀವನದಲ್ಲಿ ಟೀಕೆ-ಟಿಪ್ಪಣೆಗಳ ಗುಣಮಟ್ಟ ಕುಸಿದಿರುವುದಕ್ಕೆ ಓದಿನ ಕೊರತೆಯೂ ಒಂದು ಪ್ರಮುಖ ಕಾರಣ. ಶಾಸನಸಭೆ ಕಲಾಪದ ಗುಣಮಟ್ಟ ಕೆಟ್ಟಿರುವುದಕ್ಕೆ ಕೂಡ ಇದೇ ಕಾರಣ. ಭಾಷೆಗೆ ಇರುವ ಸೊಬಗು ಮತ್ತು ಘನತೆಯನ್ನು ಅರಿಯದವರು ಅದನ್ನು ಹೇಗೆ ಬೇಕಾದರೂ ಬಳಸಬಲ್ಲರು. ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎನ್ನುವ ಬಸವಣ್ಣನವರ ವಚನವು ನಮ್ಮ ನುಡಿ ಹೇಗಿರಬೇಕು ಮತ್ತು ಮನುಷ್ಯ ಹೇಗೆ ಬಾಳಬೇಕು ಎನ್ನುವುದನ್ನು ಸೂಚಿಸುತ್ತದೆ. ದಿನಕರ ದೇಸಾಯಿ ಅವರ  ‘ಹಚ್ಚುವುದಾದರೆ ದೀಪ ಹಚ್ಚು, ಬೆಂಕಿ ಹಚ್ಚಬೇಡ. ಆರಿಸುವುದಾದರೆ ಬೆಂಕಿ ಆರಿಸು, ದೀಪ ಆರಿಸಬೇಡ’ ಎಂಬ ಈ ಸಾಲು ಬದುಕಿನ ಸಾರ್ಥಕ್ಯದ ಬಗೆಗೆ, ಬದುಕನ್ನು ಗ್ರಹಿಸುವ ದೃಷ್ಟಿಕೋನ ಹೇಗಿರಬೇಕು ಎಂಬುದರ ಕುರಿತ ಹೇಳುತ್ತದೆ.

ಕಾಮನ್‍ವೆಲ್ತ್ ಕ್ರೀಡಾಕೂಟ ನಡೆಯುತ್ತಿದೆ. ಅಲ್ಲಿನ ಆಟೋಟಗಳಿಂದ ಸ್ಫೂರ್ತಿ ಪಡೆಯೋಣ. ಮಕ್ಕಳನ್ನು ಆ ದಾರಿಯಲ್ಲಿ ನಡೆಯುವಂತೆ ಹುರಿದುಂಬಿಸೋಣ. ಕನ್ನಡದ ಸಿನಿಮಾಗಳು ರಾಷ್ಟ್ರಮಟ್ಟದಲ್ಲಿ ಸುದ್ಧಿಯಾಗುತ್ತಿವೆ. ಒಳ್ಳೆಯ ಸಿನಿಮಾ ನೋಡಿ ಖುಷಿಪಡೋಣ. ರಾಜಕಾರಣವನ್ನು ಸಹನೀಯಗೊಳಿಸಿದ ಮಹನೀಯರನ್ನು ನೆನೆದು ಅಂತಹವರಿಗಾಗಿ ಹುಡುಕೋಣ. ಇದು ಈ ಕ್ಷಣದ ಅಗತ್ಯ.

‘ಮೊಳಕೆಯೊಡೆಯಬೇಕು, ಸಸಿಯಾಗಿ-ಗಿಡವಾಗಿ-ಹೂವಾಗಿ ಕಣ್ತೆರೆಯಬೇಕು. ಮೇಲಿನ ಸೂರ್ಯನ ಬೆಳಕು ಕಾಣುತ್ತ ತಾನೇ ಬೆಳಕಾಗಬೇಕು ಎನ್ನುವ ಬೀಜದ ಬಯಕೆಯ ಸುಳಿವು ಬೀಜ ಬಿದ್ದ ಮಣ್ಣಿಗಿರುವುದು ಸಾಧ್ಯವೆ?’ ಸಾಹಿತ್ಯದ ಇಂಥ ಸಾಲುಗಳೇ ಬದುಕಬೇಕು, ಸಾಧಿಸಬೇಕೆಂಬ ನಮ್ಮೊಳಗಿನ ಜೀವಸೆಲೆ ಬತ್ತದಂತೆ ನಿರಂತರ ನೀರಹನಿ ಹೊಯ್ದು ಪೋಷಿಸುತ್ತಿವೆ.

‘ನಾವು ಎಷ್ಟೇ ಸಮರ್ಥಿಸಿಕೊಂಡರೂ ನಮ್ಮ ಬೈಗುಳಕ್ಕೆ-ದ್ವೇಷಕ್ಕೆ ಪಾತ್ರವಾದ ವ್ಯಕ್ತಿಯಾಗಲಿ, ವಸ್ತುವಾಗಲಿ ಜಗತ್ತಿನಲ್ಲಿ ಇಲ್ಲ. ದ್ವೇಷಕ್ಕೆ ಅಧಿಕಾರಿ ಇದ್ದಾನೆ, ವಸ್ತು ಇಲ್ಲ. ಇಲ್ಲಿ ಎಲ್ಲವೂ ಪ್ರೀತಿಗೆ ಯೋಗ್ಯವಾದದ್ದೇ ಪ್ರೀತಿಸುವ ತಾಕತ್ತು ನಮಗೆ ಇದ್ದಲಿ’ ಎಂದಿರುವರು ಯಶವಂತ ಚಿತ್ತಾಲರು.

ರಾಜಕೀಯ ಲಾಭಕ್ಕಾಗಿ ಕೆಲವರು ಒಡಕಿನ ಬೀಜಗಳನ್ನು ಬಿತ್ತುತ್ತಾರೆ. ಚುನಾವಣೆ ಸಮೀಪಿಸುತ್ತಿರುವುದರಿಂದ ಇಂತಹ ರಾಜಕೀಯದಾಟಗಳು ಮತ್ತೂ ಹೆಚ್ಚಬಹುದು. ಮತಗಳಿಕೆಯ ಗಾಳಕ್ಕೆ ನಾವು ಸಿಲುಕುವುದು ಬೇಡ. ಮನದ ನೋವಿಗೆ ಮುಲಾಮು ಹಚ್ಚುವ ಕೆಲಸ ಮಾಡೋಣ.

-ರಾಜಕುಮಾರ ಕುಲಕರ್ಣಿ




Friday, September 2, 2022

ಮೆದುಳಿಗೆ ಇಳಿಯುತ್ತಿದೆಯೇ ಮಾಹಿತಿ?

 



(೦೫.೦೭.೨೦೨೨ ರ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ)


ಇದು ಎರಡು ದಶಕಗಳ ಹಿಂದಿನ ಮಾತು-ಪದವಿ ತರಗತಿಯ ವಿದ್ಯಾರ್ಥಿಗಳಿಗೆ ನಾನು ಆಕ್ಸ್‍ಫರ್ಡ್ ಇಂಗ್ಲಿಷ್ ನಿಘಂಟುವಿನ ಸಂಪಾದಕ ಜೇಮ್ಸ್ ಮರ್ರೆ ಕುರಿತು ಪಾಠ ಮಾಡಬೇಕಿತ್ತು. ಬೃಹತ್ ಗಾತ್ರದ ಆಕ್ಸ್‍ಫರ್ಡ್ ಇಂಗ್ಲಿಷ್ ನಿಘಂಟುವಿನ ಯಾವ ಪುಟದಲ್ಲೂ ಅದರ ಸಂಪಾದಕ ಜೇಮ್ಸ್ ಮರ್ರೆ ಕುರಿತು ಹೆಚ್ಚಿನ ಮಾಹಿತಿ ಇರಲಿಲ್ಲ. ಕೊನೆಗೆ ಎರಡು ದಿನಗಳ ಕಾಲ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಭೇಟಿ ನೀಡಿ ಹಲವಾರು ಪರಾಮರ್ಶನ ಪುಸ್ತಕಗಳನ್ನು ಪರಿಶೀಲಿಸಿ ಮಾಹಿತಿಯನ್ನು ಹೆಕ್ಕಿ ತೆಗೆದಾಗ ಸಿಕ್ಕ ಮಾಹಿತಿ ಅರ್ಧಪುಟದಷ್ಟಿತ್ತು. 

ಇಂಟರ್‍ನೆಟ್ ಹೆಚ್ಚು ಬಳಕೆಯಿಲ್ಲದ ಕಾಲದಲ್ಲಿ ಮಾಹಿತಿಯ ಶೋಧನೆ ಹೆಚ್ಚು ಸಮಯ ಮತ್ತು ಶ್ರಮವನ್ನು ತೆಗೆದುಕೊಳ್ಳುತ್ತಿತ್ತು. ಆದರೆ ಆ ಎರಡು ದಿನಗಳ ಅನೇಕ ಪುಸ್ತಕಗಳ ಓದು ಹಲವು ವಿಷಯಗಳನ್ನು ತಿಳಿದುಕೊಳ್ಳಲು ಸಹಾಯವಾಯಿತು. ಇಂದು ಪರಿಸ್ಥಿತಿ ಹಿಂದಿನಂತಿಲ್ಲ- ಇಂಟರ್‍ನೆಟ್ ಬಳಕೆ ವ್ಯಾಪಕವಾಗಿದ್ದು ಜಾಲತಾಣದಲ್ಲಿ ಜೇಮ್ಸ್ ಮರ್ರೆ ಹೆಸರು ಟೈಪಿಸಿದ ಕ್ಷಣಾರ್ಧದಲ್ಲಿ ಹತ್ತಾರು ಪುಟಗಳ ಮಾಹಿತಿ ಕಂಪ್ಯೂಟರ್ ಪರದೆಯ ಮೇಲೆ ತೆರೆದುಕೊಳ್ಳುತ್ತದೆ. ಒಂದರ್ಥದಲ್ಲಿ ಮಾಹಿತಿಯು ಓದುಗನ ಬೆರಳ ತುದಿಯಲ್ಲಿದೆ ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ.

ಸಾಮಾನ್ಯ ಮಾಹಿತಿ ಮಾತ್ರವಲ್ಲದೆ ಇಂದು ಸಂಶೋಧನಾ ಲೇಖನಗಳು ಕೂಡ ಓದುಗರಿಗೆ ಉಚಿತವಾಗಿ ಲಭ್ಯವಾಗುತ್ತಿವೆ. ಸ್ಕಿ-ಹಬ್ ಹೆಸರಿನ ಜಾಲತಾಣ ಸಂಶೋಧನಾ ಲೇಖನವೊಂದು ಪ್ರಕಟವಾದ ಕೆಲವೇ ದಿನಗಳಲ್ಲಿ ಓದುಗರ ಕೈಸೇರುವಂತೆ ಮಾಹಿತಿ ಪಡೆಯುವಿಕೆಯನ್ನು ಸರಳಗೊಳಿಸಿದೆ. ಸಾಮಾನ್ಯವಾಗಿ ಸಂಶೋಧನಾ ನಿಯತಕಾಲಿಕೆಗಳ ಜಾಲತಾಣದಿಂದ ಲೇಖನವನ್ನು ಪಡೆಯಲು ಓದುಗ ನಿರ್ಧಿಷ್ಟ ಮೊತ್ತದ ಹಣವನ್ನು ಭರಿಸಬೇಕು. ಆದರೆ ಸ್ಕಿ-ಹಬ್ ಜಾಲತಾಣದ ಮೂಲಕ ಹೊಸ ಸಂಶೋಧನಾ ಲೇಖನಗಳನ್ನು ಕೂಡ ಉಚಿತವಾಗಿ ಪಡೆಯುವ ಸೌಲಭ್ಯವುಂಟು. ಈ ಮಾಹಿತಿ ಸೋರುವಿಕೆಯನ್ನು ತಡೆಗಟ್ಟಲು ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳು ಅಂತರರಾಷ್ಟ್ರೀಯ ನ್ಯಾಯÁಲಯದಲ್ಲಿ ಸ್ಕಿ-ಹಬ್ ಮೇಲೆ ದಾವೆ ಹೂಡಿವೆ. 

  ಮಾಹಿತಿಯು ಸುಲಭವಾಗಿ ಮತ್ತು ಹೆಚ್ಚಿನ ಪರಿಶ್ರಮವಿಲ್ಲದೆ ದೊರೆಯುತ್ತಿರುವುದರಿಂದ ಇಂದು ಬರವಣಿಗೆಯಲ್ಲಿ ‘ಕತ್ತರಿಸು ಮತ್ತು ಅಂಟಿಸು’ (ಕಟ್ ಆ್ಯಂಡ್ ಪೇಸ್ಟ್) ಸಂಸ್ಕೃತಿಯು ಮುನ್ನೆಲೆಗೆ ಬಂದಿದೆ. ಅತಿಹೆಚ್ಚಿನ ಬರಹಗಾರರು ತಮ್ಮ ಅಧ್ಯಯನದ ವಿಷಯದಲ್ಲಿ ಪ್ರಕಟವಾದ ವಿವಿಧ ಲೇಖನಗಳನ್ನು ಸಂಗ್ರಹಿಸಿ ಪ್ರತಿ ಲೇಖನದಿಂದ ಒಂದಿಷ್ಟು ಮಾಹಿತಿಯನ್ನು ಪಡೆದುಕೊಂಡು ಹೀಗೆ ಕಲೆಹಾಕಿದ ಮಾಹಿತಿಗೆ ಹೊಸ ಲೇಖನದ ಸ್ವರೂಪ ನೀಡುತ್ತಿರುವರು. ಬರಹಗಾರರ ಈ ನಕಲು ಸಂಸ್ಕೃತಿಗೆ ತಡೆ ಹಾಕಲು ಪ್ರಕಾಶಕರು ನಕಲು ಅಥವಾ ಕೃತಿಚೌರ್ಯವನ್ನು ಪತ್ತೆ ಹಚ್ಚಲು ತಂತ್ರಾಂಶಗಳನ್ನು ಉಪಯೋಗಿಸುತ್ತಿರುವರು. ಇಲ್ಲಿ ಜಾಣ ಬರಹಗಾರ ಮೂಲ ಲೇಖನದ ವಾಕ್ಯದಲ್ಲಿನ ಒಂದೆರಡು ಶಬ್ದಗಳನ್ನು ಕೈಬಿಡುವುದರಿಂದಲೊ ಅಥವಾ ಹೊಸ ಶಬ್ದಗಳ ಸೇರ್ಪಡೆಯಿಂದ ತಂತ್ರಾಂಶದ ನಕಲು ಶೋಧನೆಯ ಕಾರ್ಯವನ್ನೇ ಕಷ್ಟಸಾಧ್ಯಗೊಳಿಸುತ್ತಿರುವನು.

ತಂತ್ರಜ್ಞಾನ ಕೊಡಮಾಡುತ್ತಿರುವ ಸೌಲಭ್ಯಗಳಿಂದ ವಿದ್ಯಾರ್ಥಿಗಳು ಶಿಕ್ಷಕರ ಸಹಾಯವಿಲ್ಲದೆ ಅಭ್ಯಾಸಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಸುಲಭವಾಗಿ ಕಲೆಹಾಕುತ್ತಿರುವರು. ಪ್ರಾಯೋಗಿಕ ತರಗತಿಗಳಿಗೆ ಹಾಜರಾದರೆ ಸಾಕು ಥಿಯರಿಗೆ ಸಂಬಂಧಿಸಿದ ಸಾಮಗ್ರಿಯನ್ನು ತರಗತಿಗೆ ಹಾಜರಾಗದೇ ಕಲೆಹಾಕಬಹುದೆನ್ನುವ ಆತ್ಮವಿಶ್ವಾಸ ವಿದ್ಯಾರ್ಥಿಗಳಲ್ಲಿ ಇಂದು ನಾವು ಕಾಣುತ್ತಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನದ ಮೊರೆ ಹೋಗುತ್ತಿರುವುದರಿಂದ ಕಲಿಕೆ ಎನ್ನುವುದು ಶಿಕ್ಷಕ ಮತ್ತು ವಿದ್ಯಾರ್ಥಿ ಜೊತೆಯಾಗಿ ಪಾಲ್ಗೊಳ್ಳುವ ಚಟುವಟಿಕೆ ಎನ್ನುವ ಮಾತು ಸವಕಲಾಗಿ ಈಗ ಕಲಿಕೆಯು ಏಕಮುಖವಾದ ಕ್ರಿಯೆಯಾಗಿ ಬದಲಾಗುತ್ತಿದೆ.

ತಂತ್ರಜ್ಞಾನ ಅಗಾಧ ಪ್ರಮಾಣದಲ್ಲಿ ಮಾಹಿತಿಯನ್ನು ಉತ್ಪಾದಿಸಲು ಮತ್ತು ಓದುಗರಿಗೆ ಸುಲಭವಾಗಿ ದೊರೆಯಲು ನೆರವಾಗುತ್ತಿರುವ ಸಂದರ್ಭದಲ್ಲೇ ಗುಣಾತ್ಮಕ ಸಂಶೋಧನೆಗಳಾಗುತ್ತಿಲ್ಲ ಎಂದು ಚರ್ಚಿಸುವ ವಿಲಕ್ಷಣ ಸನ್ನಿವೇಶದಲ್ಲಿ ನಾವಿದ್ದೇವೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗ, ರಾಷ್ಟ್ರೀಯ ವೈದ್ಯಕೀಯ ಸಮಿತಿ, ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ ಈ ಉನ್ನತ ಶಿಕ್ಷಣ ಸಮಿತಿಗಳು ಶಿಕ್ಷಕರು ಉದ್ಯೋಗಬಡ್ತಿ ಮತ್ತು ವೇತನಬಡ್ತಿಗಾಗಿ ಸಂಶೋಧನಾ ಲೇಖನಗಳನ್ನು ಪ್ರಕಟಿಸುವುದನ್ನು ಕಡ್ಡಾಯಗೊಳಿಸಿವೆ. ಶಿಕ್ಷಕರ ಈ ಅಗತ್ಯವನ್ನು ಮನಗಂಡು ಅನೇಕ ಸಂಶೋಧನಾ ನಿಯತಕಾಲಿಕೆಗಳು ಲೇಖನಗಳನ್ನು ಪ್ರಕಟಿಸಲು ನಿರ್ಧಿಷ್ಟ ಮೊತ್ತದ ಶುಲ್ಕವನ್ನು ನಿಗದಿಪಡಿಸಿವೆ. ಕೆಲವೊಮ್ಮೆ  ತುರ್ತುಪರಿಸ್ಥಿತಿಗನುಗುಣವಾಗಿ ಶಿಕ್ಷಕರು ಹೆಚ್ಚುವರಿ ಶುಲ್ಕವನ್ನು ಪಾವತಿಸಿ ತರಾತುರಿಯಲ್ಲಿ ತಮ್ಮ ಸಂಶೋಧನಾ ಲೇಖನಗಳನ್ನು ಶೀಘ್ರವಾಗಿ ಪ್ರಕಟಿಸುತ್ತಿರುವರು. ಶಿಕ್ಷಕರ ವೇತನ ಮತ್ತು ಉದ್ಯೋಗದ ಬಡ್ತಿಯನ್ನೇ ಬಂಡವಾಳವಾಗಿಸಿಕೊಂಡು ಅನೇಕ ನಿಯತಕಾಲಿಕೆಗಳು ಹೆಚ್ಚಿನ ಹಣ ಪಡೆದು ಲೇಖನಗಳನ್ನು ಪ್ರಕಟಿಸುತ್ತಿವೆ. ಈ ಬೆಳವಣಿಗೆಯನ್ನು ನಿಯಂತ್ರಿಸಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ ನಿರ್ಧಿಷ್ಟ ನಿಯತಕಾಲಿಕೆಗಳಲ್ಲೇ ಲೇಖನಗಳನ್ನು ಪ್ರಕಟಿಸಬೇಕೆನ್ನುವ ನಿಯಮವನ್ನು ಜಾರಿಗೆ ತಂದಿದೆ.

ವಿವಿಧ ಉನ್ನತ ಶಿಕ್ಷಣ ಸಮಿತಿಗಳ ಕಠಿಣ ನಿಯಮಗಳಿಂದಾಗಿ ಸಂಶೋಧನೆಯ ಪ್ರಮಾಣದಲ್ಲಿ ಏರುಗತಿ ಕಂಡುಬರುತ್ತಿದೆಯಾದರೂ ಗುಣಾತ್ಮಕ ಸಂಶೋಧನೆ ಎನ್ನುವುದು ಇನ್ನೂ ಮರಿಚಿಕೆಯಾಗಿಯೆ ಉಳಿದಿದೆ. ವೇತನಬಡ್ತಿ, ಉದ್ಯೋಗಬಡ್ತಿ, ಹುದ್ದೆಯ ನೇಮಕಾತಿಯ ನಿಯಮಗಳ ಚೌಕಟ್ಟಿಗೊಳಪಡಲು ಇಲ್ಲಿ ಬಹುಪಾಲು ಸಂಶೋಧನೆಗಳು ನಡೆಯುತ್ತಿವೆಯೇ ವಿನಾ ರಾಷ್ಟ್ರದ ಪ್ರಗತಿಗೆ ನೆರವಾಗಬಲ್ಲ ನಿಜವಾದ ಅರ್ಥದ ಸಂಶೋಧನೆಗಳು ನಿರೀಕ್ಷಿತ ಪ್ರಮಾಣದಲ್ಲಾಗುತ್ತಿಲ್ಲ. ಸಂಶೋಧನಾ ಪ್ರಬಂಧಗಳು ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿನ ಗ್ರಂಥಾಲಯಗಳ ಅಲ್ಮೆರಾಗಳಿಗೆ ಶೋಭೆ ತರುತ್ತಿವೆಯೇ ಹೊರತು ಸಂಶೋಧಕರ ವಲಯದಲ್ಲಿ ವ್ಯಾಪಕ ಚರ್ಚೆಗೆ ಒಳಗಾಗುತ್ತಿಲ್ಲ.

ಇನ್ನು ಸಾಹಿತ್ಯ ಕೃತಿಗಳನ್ನೂ ಡಿಜಿಟಲೀಕರಣಗೊಳಿಸಿ ಓದುಗರಿಗೆ ಒದಗಿಸುವ ಕಾರ್ಯಕ್ಕೆ ಸಾರ್ವಜನಿಕ ಗ್ರಂಥಾಲಯ ಸೇರಿದಂತೆ ಅನೇಕ ಸಂಸ್ಥೆಗಳಲ್ಲಿ ಚಾಲನೆ ದೊರೆತಿದೆ. ಏಕಕಾಲಕ್ಕೆ ಸಾಹಿತ್ಯ ಕೃತಿಯೊಂದು ಡಿಜಿಟಲೀಕರಣದ ರೂಪದಲ್ಲಿ ಹಲವು ಓದುಗರಿಗೆ ಲಭ್ಯವಾಗುವ ಈ ಸೌಲಭ್ಯವನ್ನು ಓದುಗರ ವಲಯ ಒಕ್ಕೊರಲಿನಿಂದ ಸ್ವಾಗತಿಸುತ್ತಿಲ್ಲ. ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಓದುವ ಸಾಹಿತ್ಯ ಕೃತಿಯೊಂದು ಪುಸ್ತಕ ಓದಿದಂತೆ ಸರಾಗವಾಗಿ ಮನಸ್ಸಿಗಿಳಿಯಲಾರದು ಎನ್ನುವ ಸಮಸ್ಯೆ ಅನೇಕ ಓದುಗರದು. ಎಲೆಕ್ಟ್ರಾನಿಕ್ ಮಾಧ್ಯಮದ  ವ್ಯಾಪಕ ಬಳಕೆಯಿಂದ ಪುಸ್ತಕ ಸಂಸ್ಕೃತಿ ನಶಿಸಿಹೋಗಬಹುದೆನ್ನುವ ಆತಂಕ ಒಂದುವರ್ಗದ ಓದುಗರನ್ನು ಕಾಡುತ್ತಿದೆ. ಈ ನಡುವೆ ಮಾಹಿತಿಯ ಸುಲಭ ಪ್ರಾಪ್ತಿ ಕೃತಿಚೌರ್ಯವನ್ನು ಸುಗಮವಾಗಿಸಿರುವುದರಿಂದ ಶಿಕ್ಷಕರ, ಸಂಶೋಧಕರ ಮತ್ತು ವಿದ್ಯಾರ್ಥಿಗಳ ಅರಿವಿನ ವ್ಯಾಪ್ತಿ ವಿಸ್ತರಿಸುತ್ತಿಲ್ಲ ಎನ್ನುವ ಆರೋಪ ಶೈಕ್ಷಣಿಕ ವಲಯದಲ್ಲಿ ಕೇಳಿಬರುತ್ತಿದೆ.

-ರಾಜಕುಮಾರ ಕುಲಕರ್ಣಿ


Wednesday, August 3, 2022

ಇರಲಿ ವೃತ್ತಿಘನತೆಯ ಪ್ರಜ್ಞೆ



(೧೩.೦೬.೨೦೨೨ ರ ಪ್ರಜಾವಾಣಿಯಲ್ಲಿ ಪ್ರಕಟ)

    ಕಳೆದ ವರ್ಷದ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ  ರ್ಯಾಂಕ್‍ನೊಂದಿಗೆ ತೇರ್ಗಡೆಯಾದ ನನ್ನ ಪರಿಚಿತರ ಮಗ ವೈದ್ಯಕೀಯ ಕೋರ್ಸಿಗೆ ಪ್ರವೇಶ ಪಡೆಯಲು ನಿರಾಕರಿಸಿದ ಸಂಗತಿ ನನಗೆ ಅಚ್ಚರಿಯನ್ನುಂಟು ಮಾಡಿತು. ಮಾತಿನ ನಡುವೆ ಈ ಕುರಿತು ಪ್ರಶ್ನಿಸಿದಾಗ ‘ವೈದ್ಯಕೀಯ ವೃತ್ತಿ ಸದಾಕಾಲ ಸೇವೆಯನ್ನು ಬಯಸುವಂತಹದ್ದು. ಅಲ್ಲಿ ವೈಯಕ್ತಿಕ ಬದುಕಿಗೆ ಹೆಚ್ಚಿನ ಅವಕಾಶವಿಲ್ಲ. ಹಗಲು ಹೊತ್ತು ಬಿಡಿ, ರಾತ್ರಿ ವೇಳೆಯಲ್ಲೂ ರೋಗಿಗಳ ಚಿಕಿತ್ಸೆಗೆ ಮುಂದಾಗಬೇಕು. ವೈಯಕ್ತಿಕ ಬದುಕಿನ ಆಶೋತ್ತರಗಳನ್ನು ಬದಿಗೊತ್ತಿ ಆ ವೃತ್ತಿಯಲ್ಲಿ ಸಾಧಿಸುವಂತಹದ್ದಾದರೂ ಏನಿದೆ?’ ಎಂದು ಹೇಳಿದ. ಒಂದುಕ್ಷಣ ಅವನ ಪ್ರತಿಕ್ರಿಯೆ ಕೇಳಿ ನಾನು ದಂಗಾಗಿ ಹೋದೆ. ಪ್ರತಿಭಾವಂತನಾದ ಅವನು ವೈದ್ಯಕೀಯ ವೃತ್ತಿಯನ್ನು ಆರಿಸಿಕೊಂಡರೆ ಸಮಾಜಕ್ಕೊಬ್ಬ ಸೇವಾಮನೋಭಾವದ ವೈದ್ಯ ದೊರೆಯುವನೆಂದು ಮೊದಲಿನಿಂದ ಭರವಸೆ ಇಟ್ಟುಕೊಂಡಿದ್ದ ನನಗೆ ಆ ಸಂದರ್ಭ ಅವನ ಪ್ರತಿಕ್ರಿಯೆಯಿಂದ ಒಂದಿಷ್ಟು ನಿರಾಸೆಯ ಜೊತೆಗೆ ಅವನಲ್ಲಿನ ವೃತ್ತಿ ಘನತೆಯ ಅರಿವಿನ ಕೊರತೆಯಿಂದ  ಮನಸ್ಸಿಗೆ ನೋವಾಗಿದ್ದಂತೂ ಸತ್ಯ.

ಕೆಲವು ವೃತ್ತಿಗಳೆ ಹಾಗೆ ಸದಾಕಾಲ ಒಂದಿಷ್ಟು ಅಗತ್ಯಗಳನ್ನು ಬಯಸುತ್ತವೆ. ವೃತ್ತಿ ಘನತೆಯನ್ನು ಎತ್ತಿ ಹಿಡಿಯುವುದಕ್ಕಾಗಿ ವೃತ್ತಿಯೊಂದು ಬಯಸುವ ಅಗತ್ಯಗಳಿಗೆ ಮನ್ನಣೆ ನೀಡಲೆಬೇಕು. ವೈದ್ಯಕೀಯ ವೃತ್ತಿಯನ್ನು ಆರಿಸಿಕೊಳ್ಳುವ ವ್ಯಕ್ತಿ ಹಗಲು ರಾತ್ರಿಗಳೆಂಬ ಭೇದವಿಲ್ಲದೆ ಸದಾಕಾಲ ರೋಗಿಗಳ ಸೇವೆಗೆ ತೆರೆದುಕೊಳ್ಳುವ ಮುಕ್ತ ಮನಸ್ಸು ಹೊಂದಿರಬೇಕು. ಶಿಕ್ಷಕ ವೃತ್ತಿ ತುಂಬ ಶಿಸ್ತನ್ನು ಬಯಸುತ್ತದೆ. ಶಿಕ್ಷಕ ವಿದ್ಯಾರ್ಥಿಗಳಿಗೆ ಮಾದರಿಯಾಗುವ ವ್ಯಕ್ತಿತ್ವವನ್ನು ರೂಪಿಸಿಕೊಂಡಿರಬೇಕು. ಪೊಲೀಸ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುವವರು ಕಾನೂನಿನ ಪರಿಪಾಲಕರಾಗಿರಬೇಕು. ಗ್ರಂಥಪಾಲಕ ಪುಸ್ತಕಗಳ ಓದಿನ ಆರಾಧಕನಾಗಿರಬೇಕು. ಪತ್ರಕರ್ತ ಸತ್ಯ, ನ್ಯಾಯ, ನಿಷ್ಟುರತೆಗಳಿಗೆ ಬದ್ಧನಾಗಿರಬೇಕು. 

ವ್ಯಕ್ತಿಯು ಸಮಾಜಕ್ಕಲ್ಲವಾದರೂ ತನ್ನ ವೃತ್ತಿಗಾದರೂ ಉತ್ತರದಾಯಿಯಾಗಿರಬೇಕಾಗುತ್ತದೆ. ವೃತ್ತಿಯೊಂದನ್ನು ಆಯ್ಕೆಮಾಡಿಕೊಳ್ಳುವ ಪೂರ್ವದಲ್ಲಿ ಆ ವೃತ್ತಿ ನಮ್ಮಿಂದ ಏನನ್ನು ಬಯಸುತ್ತಿದೆ ಎನ್ನುವುದನ್ನು ಮನಗಾಣಬೇಕು. ವೃತ್ತಿಯ ಅಗತ್ಯಗಳಿಗನುಗುಣವಾಗಿ ಹುದ್ದೆಯನ್ನು ನಿರ್ವಹಿಸಲು ಮಾನಸಿಕವಾಗಿ ಸಿದ್ಧನಾಗಬೇಕು. ಇಲ್ಲಿ ತ್ಯಾಗ ಅಥವಾ ವೈಯಕ್ತಿಕ ಬದುಕನ್ನು ಕಳೆದುಕೊಳ್ಳುತ್ತಿದ್ದೇನೆ ಎನ್ನುವುದಕ್ಕಿಂತ ವೃತ್ತಿಯ ಘನತೆಯನ್ನು ಎತ್ತಿ ಹಿಡಿಯುವುದು ಮೊದಲ ಆದ್ಯತೆಯಾಗಬೇಕು. ವೃತ್ತಿಯು ತರುವ ಸಂಬಳ ಮತ್ತು ಸವಲತ್ತುಗಳು ಬೇಕು ಎನ್ನುವುದಾದರೆ ಅದರೊಂದಿಗೆ ವೃತ್ತಿಯು ಬೇಡುವ ಕೆಲವು ಅವಶ್ಯಕತೆಗಳನ್ನು ಮೈಗೂಡಿಸಿಕೊಳ್ಳಲು ಹಿಂಜರಿಯುವುದು ಇಲ್ಲವೇ ಲೆಕ್ಕಾಚಾರ ಹಾಕುವುದು ಯಾವ ನ್ಯಾಯ?.

ನಾನೇಕೆ ಸಾರ್ವಜನಿಕರ ಆರೋಗ್ಯದ ಕುರಿತು ಚಿಂತಿಸಲಿ ಎಂದು ವೈದ್ಯನೊಬ್ಬ ಕೇಳಿದರೆ ಎಷ್ಟು ಅಸಂಗತವೆನಿಸುತ್ತದೆಯೋ ಅಷ್ಟೇ ಅಸಂಗತತೆ ಪೊಲೀಸ್ ಅಧಿಕಾರಿ ನಾನೇಕೆ ಕಾನೂನಿಗೆ ನಿಷ್ಠೆಯಿಂದಿರಲಿ ಎಂದು ಯೋಚಿಸುವುದರಿಂದ ಅನಿಸುತ್ತದೆ. ಪುಸ್ತಕಗಳ ದ್ವೇಷಿ ಗ್ರಂಥಪಾಲಕ ಹುದ್ದೆಗೆ ನ್ಯಾಯಸಲ್ಲಿಸುವುದಿಲ್ಲ. ‘ವಿದ್ಯಾರ್ಥಿಗಳಿಗೆ ಪರೋಕ್ಷವಾಗಿಯಾದರೂ ತಿಳಿದು ಅವರ ಚಾರಿತ್ರ್ಯಕ್ಕೆ ಕೆಟ್ಟ ಮಾದರಿಯಾಗುವ ಯಾವ ಕೆಲಸವನ್ನೂ ಖಾಸಗಿಯಲ್ಲಿ ಕೂಡ ಮಾಡುವುದು ಅಧ್ಯಾಪಕನಿಗೆ ಸಲ್ಲುವುದಿಲ್ಲ. ಅಂಥವನು ಆ ವೃತ್ತಿಯನ್ನು ಬಿಟ್ಟುಬಿಡಬೇಕು ಎಂದು ನಾನು ದೃಢವಾಗಿ ನಂಬಿದವನು. ಉಪಾಧ್ಯಾಯನ ಘನತೆ ಇರುವುದು ಅವನ ಸಂಬಳದಿಂದಲ್ಲ-ವಿದ್ವತ್ತು, ಚಾರಿತ್ರ್ಯದಿಂದ ಕೂಡಿದ ವ್ಯಕ್ತಿತ್ವ ಮತ್ತು ಬೋಧನಾಶಕ್ತಿಗಳಿಂದ’ ಎಂದಿರುವರು ಎಸ್.ಎಲ್.ಭೈರಪ್ಪ ತಮ್ಮ ಆತ್ಮಕತೆ ಭಿತ್ತಿಯಲ್ಲಿ.

ತಮ್ಮ ವ್ಯಕ್ತಿತ್ವದ ಹಿರಿಮೆಯಿಂದ ತಾವು ಮಾಡುವ ವೃತ್ತಿಗೆ ಒಂದು ಘನತೆ ತಂದುಕೊಟ್ಟವರ ಅನೇಕ ಉದಾಹರಣೆಗಳಿವೆ. ಬಿಪಿನ್‍ಚಂದ್ರ ರಾಯ್ ತಮ್ಮ ಸೇವಾ ಮನೋಭಾವದಿಂದ ವೈದ್ಯಕೀಯ ಲೋಕದಲ್ಲಿ ಚಿರಸ್ಮರಣಿಯರಾಗಿ ಉಳಿದಿರುವರು. ಪ್ರತಿವರ್ಷ ಜುಲೈ 1 ರಂದು ಅವರ ಜನ್ಮದಿನವನ್ನು ವೈದ್ಯರ ದಿನವೆಂದು ಆಚರಿಸಲಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆಸಲ್ಲಿಸಿದ ವೈದ್ಯರಿಗೆ ‘ಬಿ.ಸಿ.ರಾಯ್’ ಪ್ರಶಸ್ತಿಯನ್ನು ಕೊಡುವುದರ ಮೂಲಕ ಬಿಪಿನ್‍ಚಂದ್ರ ರಾಯ್ ಅವರ ಹೆಸರನ್ನು ಅಜರಾಮರಗೊಳಿಸಲಾಗಿದೆ. ಎಂಜಿನಿಯರ್ ಹುದ್ದೆಗೆ ಎಮ್.ವಿಶ್ವೇಶ್ವರಯ್ಯನವರು ತಮ್ಮ ಪ್ರತಿಭೆ ಮತ್ತು ಪ್ರಾಮಾಣಿಕತೆಯಿಂದ ವಿಶಿಷ್ಟ ಘನತೆ ತಂದುಕೊಟ್ಟರು. ಪತ್ರಿಕಾಲೋಕದಲ್ಲಿ ಕೆ.ಶಾಮರಾವ್, ವೈ.ಎನ್.ಕೆ ಹೆಸರು ಚಿರಸ್ಥಾಯಿಯಾಗಿವೆ. ವಿಜ್ಞಾನಿ ಎಂದಾಕ್ಷಣ ಥಟ್ಟನೆ ನೆನಪಾಗುವುದು ಅಬ್ದುಲ್ ಕಲಾಮ್ ಅವರ ಹೆಸರು. ಕುವೆಂಪು ತಮ್ಮ ಮಹಾಕೃತಿ ರಾಮಾಯಣ ದರ್ಶನಂ ಸಮರ್ಪಿಸಿದ್ದು ತಮ್ಮನ್ನು ತುಂಬ ಪ್ರಭಾವಿಸಿದ ಗುರುಗಳಾದ ವೆಂಕಣ್ಣಯ್ಯನವರಿಗೆ. ರಾಜಕುಮಾರ ಅವರಿಗೆ ನಟನೆ ಪ್ರವೃತ್ತಿಯಾಗಿರಲಿಲ್ಲ ಅದೊಂದು ಪವಿತ್ರ ವೃತ್ತಿಯಾಗಿತ್ತು. ಕಲೆಯ ಘನತೆಗೆ ಕುಂದುಬರದಂತೆ ಅವರು ಬದುಕಿದರು. ರಾಜಕಾರಣಿಯಾಗಿ ರಾಮಮನೋಹರ ಲೋಹಿಯಾ ಇವತ್ತಿಗೂ ಮಾದರಿ ವ್ಯಕ್ತಿ.

ಬದಲಾದ ಕಾಲಘಟ್ಟದಲ್ಲಿ ವೃತ್ತಿಘನತೆ ಹಿನ್ನೆಲೆಗೆ ಸರಿದು ಹಣ ಗಳಿಕೆಯೇ ಮುನ್ನೆಲೆಗೆ ಬಂದಿದೆ. ವೃತ್ತಿಯ ಮೂಲ ಉದ್ದೇಶವೇ ಅದು ಅಕ್ರಮವಾದರೂ ಸರಿ ಸಂಪತ್ತಿನ ಗಳಿಕೆ ಎನ್ನುವ ಮನೋಭಾವ ಬಲವಾಗುತ್ತಿದೆ. ಯುದ್ಧ ಮತ್ತು ಪ್ರೀತಿಯಲ್ಲಿ ಎಲ್ಲವೂ ನ್ಯಾಯಸಮ್ಮತ ಎನ್ನುವುದು ಇಂದು ಬದುಕಿನ ಪ್ರತಿಹಂತದಲ್ಲೂ ಅನ್ವಯವಾಗುತ್ತಿದೆ. ಅದಕ್ಕೆಂದೆ ಇಲ್ಲಿ ನೀತಿ ಪಾಠ ಬೋಧಿಸುವ ಶಿಕ್ಷಕರೂ ಕೂಡ ಅಕ್ರಮ ಗಳಿಕೆಗೆ ಮುಂದಾಗುತ್ತಾರೆ. ಕಾನೂನನ್ನು ಎತ್ತಿಹಿಡಿಯಬೇಕಾದ ವೃತ್ತಿಯಲ್ಲಿರುವವರೆ ಅನ್ಯಾಯ ಎಸಗುತ್ತಾರೆ. ದೇಶದ ನೀತಿ, ನಿಯಮಗಳನ್ನು ರೂಪಿಸುವವರೆ ಅನೀತಿಯ ಮಾರ್ಗ ಹಿಡಿಯುತ್ತಾರೆ. ಒಟ್ಟಾರೆ ಬೇಲಿಯೇ ಎದ್ದು ಹೊಲ ಮೇಯ್ದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. 

ಕೆಲವೊಮ್ಮೆ ಪಾಲಕರ ಒತ್ತಾಯ ಮತ್ತು ಮಹತ್ವಾಕಾಂಕ್ಷೆಗೆ ಮಣಿದು ಮಕ್ಕಳು ತಮಗೆ ಇಷ್ಟವಿಲ್ಲದ ಕೋರ್ಸು-ವೃತ್ತಿಗೆ ಸೇರಿಕೊಳ್ಳುವುದುಂಟು. ವೃತ್ತಿಯಲ್ಲಿ ಆಸಕ್ತಿಯೇ ಇಲ್ಲದ ವ್ಯಕ್ತಿಯಿಂದ ವೃತ್ತಿ ಘನತೆಯನ್ನು ನಿರೀಕ್ಷಿಸುವುದಾದರೂ ಹೇಗೆ?. ಆಗ ನಷ್ಟವಾಗುವುದು ಸಮಾಜಕ್ಕೆ ವಿನಾ ವ್ಯಕ್ತಿ ಅಥವಾ ಕುಟುಂಬಕ್ಕಲ್ಲ.

ಶಿಕ್ಷಕ, ವೈದ್ಯ, ಎಂಜಿನಿಯರ್, ನ್ಯಾಯವಾದಿ, ರಾಜಕಾರಣಿ ಈ ಎಲ್ಲ ವೃತ್ತಿಗಳು ಸಮಾಜವನ್ನು ಪ್ರಭಾವಿಸುವಷ್ಟು ಮಹತ್ವದ್ದಾಗಿವೆ. ವಿದ್ಯಾರ್ಥಿ ಸಮೂಹ ತಮಗೆ ಆಸಕ್ತಿಯಿರುವ ವೃತ್ತಿಯಲ್ಲಿ ಹೆಸರು ಮಾಡಿದವರನ್ನು ಆದರ್ಶವಾಗಿಟ್ಟುಕೊಳ್ಳುವುದು ಸಹಜ. ಪರಿಣಾಮವಾಗಿ ಕೆಲವೊಂದು ವೃತ್ತಿಯಲ್ಲಿರುವವರು  ತಾವು ಸಮಾಜಕ್ಕೆ ಮಾದರಿಯಾಗಿದ್ದೇವೆ ಮತ್ತು ಯುವಶಕ್ತಿಯನ್ನು ಪ್ರಭಾವಿಸುತ್ತಿದ್ದೇವೆ ಎನ್ನುವ ಪ್ರಜ್ಞೆಯನ್ನು ಸದಾಕಾಲ ಜಾಗೃತವಾಗಿರಿಸಿಕೊಂಡಿರಬೇಕು. ಈ ಘನತೆಯ ಪ್ರಜ್ಞೆಯನ್ನು ಕಳೆದುಕೊಂಡರೆ ಸಾಲು ಸಾಲು ಕೊಲೆಗಳನ್ನು ಮಾಡಿಯೂ ಜನಮನ್ನಣೆಗೆ ಪಾತ್ರವಾಗುವ ಸಿನಿಮಾ ಮಾಧ್ಯಮದ ಕಥಾನಾಯಕರ ಪಾತ್ರಗಳೇ ನಮ್ಮ ಯುವಜನಾಂಗಕ್ಕೆ ಮಾದರಿಯೂ ಮತ್ತು ಆದರ್ಶವೂ ಆಗುವ ದುರಂತಕ್ಕೆ ನಾವೇ ಹೊಣೆಯಾಗಬೇಕಾಗುತ್ತದೆ. 

ಯಶವಂತ ಚಿತ್ತಾಲರ ‘ಪುರುಷೋತ್ತಮ’ದಲ್ಲಿ ಹೀಗೊಂದು ಮಾತಿದೆ ‘ನಿರ್ಜೀವ ಕಲ್ಲಿನಂತೆ ತೆಪ್ಪಗೆ ಬಿದ್ದ ಮಾವಿನ ಗೊರಟೆಗೂ ತಿಳುವಳಿಕೆ ಉಂಟಂತಲ್ಲಪ್ಪಾ, ತನ್ನ ಜನ್ಮದ ಸಾರ್ಥಕ್ಯ ಇರುವುದು ಸೂರ್ಯನತ್ತ ಮುಖ ಮಾಡಿದ ಮರವಾಗುವುದರಲ್ಲೆಂದು’. ಇಂಥದ್ದೊಂದು ಘನತೆಯನ್ನು ಮನುಷ್ಯ ರೂಢಿಸಿಕೊಳ್ಳಬೇಕಿದೆ.

-ರಾಜಕುಮಾರ ಕುಲಕರ್ಣಿ

Tuesday, July 5, 2022

ಪಯಣ ಪಥದ ಪಥಿಕರಾಗಿ

 


(೧೯.೫.೨೦೨೨ ರ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ)

ಇತ್ತೀಚೆಗೆ ಅಂತಿಮ ಪದವಿ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಹಾಸ್ಟೆಲಿನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮನಸ್ಸಿಗೆ ತುಂಬ ದು:ಖವನ್ನುಂಟುಮಾಡಿತು. ಖಿನ್ನತೆಯೇ ಅವನು ಆತ್ಮಹತ್ಯೆಯಂಥ ಹೇಯ ಮಾರ್ಗವನ್ನು ಆಯ್ದುಕೊಳ್ಳಲು ಕಾರಣವಾಗಿತ್ತು ಎನ್ನುವ ಮಾತುಗಳು ಕೇಳಿಬಂದವು. ಬದುಕಿ ಸಾಧಿಸಬೇಕಾದ ವಿಪುಲ ಅವಕಾಶ ಅವನೆದುರಿಗಿದ್ದರೂ ಅವನು ಸಾವನ್ನೇ ಆಯ್ಕೆ ಮಾಡಿಕೊಂಡ. ಆ ನಿರ್ಧಾರಕ್ಕೆ ಬಂದ ಗಳಿಗೆ ತಂದೆ-ತಾಯಿಯನ್ನು ಆತ ಜ್ಞಾಪಿಸಿಕೊಳ್ಳಬೇಕಿತ್ತು. ಜೀವನದ ಸವಾಲುಗಳಲ್ಲಿ ಗೆದ್ದು ನಿಂತ ಸಾಧಕರನ್ನು ಸ್ಮರಿಸಿಕೊಳ್ಳಬೇಕಿತ್ತು. ದೇಹದ ಅಂಗವೈಕಲ್ಯವನ್ನು ಮೆಟ್ಟಿನಿಂತು ಪ್ರಪಂಚಕ್ಕೇ ಮಾದರಿಯಾದ ಪ್ರಾತ:ಸ್ಮರಣೀಯರನ್ನು ನೆನಪಿಸಿಕೊಳ್ಳಬೇಕಿತ್ತು. ಕ್ಷಣಮಾತ್ರದ ನಿರ್ಧಾರ ಬದುಕನ್ನೇ ಬಲಿ ತೆಗೆದುಕೊಂಡಿತು. ಅಪ್ಪ ಅಮ್ಮನಿಗೆ ಮಗನ ಸಾವು ಅವರು ಬದುಕಿರುವವರೆಗೆ ಕಾಡುವ, ಕಂಗೆಡಿಸುವ ನೋವಾಗಿ ಉಳಿದು ಹೋಯಿತು. 

ಪ್ರಾಣಿವರ್ಗಗಳಲ್ಲೇ ಮನುಷ್ಯ ಅತ್ಯಂತ ಶ್ರೇಷ್ಠ ಪ್ರಾಣಿ ಎಂದು ಪರಿಗಣಿಸಲ್ಪಟ್ಟಿರುವನು. ಭೂಮಿಯ ಮೇಲಿನ ಉಳಿದ ಯಾವ ಪ್ರಾಣಿಗಳಿಗೂ ಇಲ್ಲದ ಯೋಚನಾಶಕ್ತಿ ಎಂಬ ವೈಶಿಷ್ಟ್ಯತೆ ಮನುಷ್ಯನಿಗಿದೆ. ತನ್ನ ಬುದ್ಧಿಶಕ್ತಿಯ ಬಲದಿಂದಲೇ ಮನುಷ್ಯ ಭೂಮಿ, ಆಕಾಶ, ಅಗ್ನಿ, ನೀರು, ವಾಯು ಈ ಪಂಚಭೂತಗಳ ಮೇಲೆ ತನ್ನ ನಿಯಂತ್ರಣ ಸಾಧಿಸಿರುವನು. ವಿಜ್ಞಾನವನ್ನು ಮಾನವ ಜಗತ್ತಿನ ಏಳ್ಗೆಗೆ ಏಣಿಯಾಗಿಸಿಕೊಂಡು ಹೊಸ ಹೊಸ ಅವಿಷ್ಕಾರಗಳಿಂದ ಅಭಿವೃದ್ಧಿಯ ಪಥದತ್ತ ನಾಗಾಲೋಟದಿಂದ ಮುನ್ನಡೆಯುತ್ತಿರುವನು. ಈ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿ ವಿದ್ಯಾವಂತ ಯುವಜನಾಂಗ ಪ್ರೇಮ ವೈಫಲ್ಯ, ಅಭ್ಯಾಸದ ಹೊರೆ, ಪರೀಕ್ಷೆಯಲ್ಲಿ ಅನುತ್ತೀರ್ಣ, ಇಚ್ಛಿಸಿದ ಕೋರ್ಸಿಗೆ ದೊರೆಯದ ಪ್ರವೇಶ ಇಂತಹ ಕಾರಣಗಳನ್ನು ನೀಡಿ ಆತ್ಮಹತ್ಯೆಗೆ ಶರಣಾಗುತ್ತಿರುವುದು ಇಡೀ ಮಾನವ ಕುಲವೇ ನಾಚಿಕೆಯಿಂದ ತಲೆತಗ್ಗಿಸಬೇಕಾದ ಸಂಗತಿ.

ಈ ಸಂದರ್ಭ ಪಾಲಕರು ಎಚ್ಚೆತ್ತುಕೊಳ್ಳುವುದೊಳಿತು. ಏಕೆಂದರೆ ಪಾಲಕರ ಅತಿಯಾದ ಮಹತ್ವಾಕಾಂಕ್ಷೆ ಮಕ್ಕಳನ್ನು ಸಾವಿನಂಚಿಗೆ ದೂಡುತ್ತಿದೆ. ಅಪ್ಪ, ಅಮ್ಮನ ಒತ್ತಾಯಕ್ಕೆ ತಮಗೆ ಇಷ್ಟವಿಲ್ಲದ ಕಾಲೇಜು, ಕೋರ್ಸಿಗೆ ಪ್ರವೇಶ ಪಡೆಯುವ ಯುವಜನಾಂಗ ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳದೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಪ್ರಯತ್ನಿಸುವುದುಂಟು. ಮಕ್ಕಳನ್ನು ಡಾಕ್ಟರ್, ಎಂಜಿನಿಯರ್, ಸರ್ಕಾರಿ ಅಧಿಕಾರಿಗಳನ್ನಾಗಿ ಮಾಡಬೇಕೆನ್ನುವ ಮಹತ್ವಾಕಾಂಕ್ಷೆಯಲ್ಲಿ ಬಹಳಷ್ಟು ಪಾಲಕರು ಮಕ್ಕಳ ಆಸಕ್ತಿ ಮತ್ತು ಬುದ್ಧಿಮತ್ತೆಯನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಮಕ್ಕಳು ಬಹುಪಾಲು ಸಮಯವನ್ನು ಶೈಕ್ಷಣಿಕ ಪರಿಸರದಲ್ಲಿ ಕಳೆಯುವಂಥ ವಾತಾವರಣವನ್ನು ಪಾಲಕರೇ ನಿರ್ಮಿಸಿಕೊಡುತ್ತಿರುವರು. ವಸತಿಶಾಲೆ, ಬೇಸಿಗೆ ಶಿಬಿರ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳೆಂದು ಮಕ್ಕಳು ಮನೆಯ ಪರಿಸರದಿಂದ ಹೊರಗೇ ಉಳಿಯುತ್ತಿರುವರು. ಮನೆ ಮತ್ತು ಕುಟುಂಬದ ಸದಸ್ಯರೊಂದಿಗಿನ ಈ ಭಾವನಾತ್ಮಕ ಮತ್ತು ಮಾನಸಿಕ ಅಂತರ ಅದೆಷ್ಟೋ ವಿದ್ಯಾರ್ಥಿಗಳನ್ನು ಖಿನ್ನತೆಗೆ ಒಳಗಾಗಿಸುತ್ತಿದೆ.  

ಇಂದಿನ ಶಿಕ್ಷಣ ಪದ್ಧತಿಯಲ್ಲೂ ಲೋಪದೋಷಗಳಿವೆ. ವ್ಯಾಪಾರೀಕರಣ ಶಿಕ್ಷಣವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಮೇಲೆ ಶಿಕ್ಷಣದ ಉದ್ದೇಶಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇಂದು ಶಿಕ್ಷಣದಿಂದ ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಯಾಗುತ್ತಿಲ್ಲ. ಶಿಕ್ಷಕರು ಪಠ್ಯಕ್ರಮದಾಚೆ ಏನನ್ನೂ ಬೋಧಿಸುತ್ತಿಲ್ಲ. ನೀತಿಶಿಕ್ಷಣ ಎನ್ನುವುದು ಶಾಲಾ ಕಾಲೇಜುಗಳ ವೇಳಾಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡಿದೆ. ವಾರ್ಷಿಕ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರುಗೊಳಿಸುವುದರಲ್ಲೇ ತಮ್ಮ ಪೂರ್ಣ ಸಮಯವನ್ನು ವಿನಿಯೋಗಿಸುತ್ತಿರುವ ಶಿಕ್ಷಕರು ವಿದ್ಯಾರ್ಥಿಗಳ ಮಾನಸಿಕ ಒತ್ತಡವನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳುತ್ತಿಲ್ಲ. ಹಿಂದಿನ ದಿನಗಳಲ್ಲಿ ಶಾಲಾ ಅವಧಿಯ ನಂತರವೂ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಸಮಯ ಕಳೆಯುತ್ತಿದ್ದರು. ಪಠ್ಯಕ್ರಮದಾಚೆ ಬದುಕಿನ ತತ್ವಗಳನ್ನು ಬೋಧಿಸುತ್ತಿದ್ದರು. ಪ್ರತಿವಿದ್ಯಾರ್ಥಿಯ ಯೋಗಕ್ಷೇಮ ವಿಚಾರಿಸುತ್ತಿದ್ದರು. ದಾರಿ ತಪ್ಪಿದಾಗ ಕಿವಿ ಹಿಂಡಿ ಬುದ್ಧಿ ಹೇಳುತ್ತಿದ್ದರು. ಇಂದು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮಧ್ಯದ ಸಂಬಂಧ ನಾಲ್ಕು ಗೋಡೆಗಳ ನಡುವಣ ಪಠ್ಯಕ್ರಮದ ಬೋಧನೆಗೆ ಮಾತ್ರ ಸೀಮಿತವಾಗಿದೆ.

ಬದುಕು ಒಡ್ಡಿದ ಸವಾಲುಗಳನ್ನು ಎದುರಿಸಿ ಅಪ್ರತಿಮ ಸಾಧನೆಗೈದವರು ನಮ್ಮ ನಡುವಿರುವರು. ಸ್ಟೀಫನ್ ಹಾಕಿಂಗ್, ಪುಟ್ಟರಾಜ ಗವಾಯಿಗಳು, ಸುಧಾಚಂದ್ರನ್, ಜಾನ್ ಮಿಲ್ಟನ್ ಈ ಸಾಧಕರು ತಮ್ಮ ದೈಹಿಕ ವೈಕಲ್ಯವನ್ನು ಮೀರಿನಿಂತು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅದ್ಭುತವಾದದ್ದನ್ನು ಸಾಧಿಸಿದರು. ಈ ಸಾಧಕರು ಕ್ರಮಿಸಿದ ದಾರಿ ಅದು ಹೂವಿನ ಹಾದಿಯಾಗಿರಲಿಲ್ಲ. ಪಯಣದ ಪಥದಲ್ಲಿ ಎದುರಾದ ಕಲ್ಲು ಮುಳ್ಳುಗಳನ್ನು ಬದಿಗೆ ಸರಿಸಿ ತಾವು ನಡೆಯಬೇಕಾದ ದಾರಿಯನ್ನು ಸ್ವತ: ತಾವೇ ನಿರ್ಮಿಸಿಕೊಂಡ ಪಥಿಕರಿವರು. ಒಂದೊಮ್ಮೆ ಅವರು ಸಮಸ್ಯೆಗಳಿಗೆ ಹೆದರಿ ಸಾಧನೆಯ ಪಥದಿಂದ ವಿಮುಖರಾಗಿದ್ದರೆ ಇಂದು ಜಗತ್ತು ಅವರನ್ನು ನೆನಪಿಟ್ಟುಕೊಳ್ಳುತ್ತಿರಲಿಲ್ಲ. ಪ್ರಪಂಚ ಸದಾ ಸ್ಮರಿಸುವುದು ಸಾಧಕರನ್ನೇ ವಿನಾ ಆತ್ಮಹತ್ಯೆಗೆ ಶರಣಾಗುವ ಹೇಡಿಗಳನ್ನಲ್ಲ. ಅಮೆರಿಕಾದ ಅಧ್ಯಕ್ಷ ಹುದ್ದೆಗೆ ಆಯ್ಕೆಯಾಗುವ ಪೂರ್ವದಲ್ಲಿ ಅಬ್ರಾಹಂ ಲಿಂಕನ್‍ಗೆ ವಿವಿಧ ಚುನಾವಣೆಗಳಲ್ಲಿ ಸತತ ಒಂಬತ್ತು ಸೋಲುಗಳು ಎದುರಾಗಿದ್ದವು. ಇಂಥ ಸಾಧಕರ ಬದುಕು ಮಕ್ಕಳಿಗಷ್ಟೇ ಅಲ್ಲ ಪಾಲಕರಿಗೂ ಸ್ಪೂರ್ತಿಯಾಗಬೇಕು. ಕೇವಲ ಬೇಸಿಗೆ ಶಿಬಿರ, ವಸತಿ ಶಾಲೆಗಳು ಮತ್ತು ತರಬೇತಿ ಕೇಂದ್ರಗಳಲ್ಲಷ್ಟೇ ಮಕ್ಕಳ ಭವ್ಯ ಭವಿಷ್ಯ ನಿರ್ಮಾಣಗೊಳ್ಳುತ್ತಿದೆ ಎನ್ನುವ ಭ್ರಮೆಯಿಂದ ಪಾಲಕರು ಹೊರಬರಬೇಕಿದೆ. 

ಯಶವಂತ ಚಿತ್ತಾಲರು ಮನುಷ್ಯನ ಬದುಕಬೇಕೆನ್ನುವ ಉತ್ಸಾಹವನ್ನು ವಿವರಿಸುತ್ತ ‘ಜೀವಕೋಟಿಯ ವಿಕಾಸದಲ್ಲಿ ‘ಬದುಕಬೇಕು’ ಎಂಬ ಅಭೀಪ್ಸೆಯ ಹಿಂದೆ ಕೋಟಿ ವರ್ಷಗಳ ಇತಿಹಾಸವಿದ್ದರೆ ‘ಯಾಕೆ ಬದುಕಬೇಕು?’ ಎಂದು ಕೇಳಿಕೊಳ್ಳುವ ಪ್ರಜ್ಞೆ ತೀರ ಸಧ್ಯದ್ದು. ಬದುಕುವುದರಲ್ಲಿ ಅದಮ್ಯ ಉತ್ಸಾಹವಿರುವ ಜೀವಕ್ಕೆ ಯಾಕೆ ಬದುಕಬೇಕು? ಎಂಬ ಪ್ರಶ್ನೆಗಿಂತ ಹೇಗೆ ಬದುಕಬೇಕು? ಎಂಬ ಪ್ರಶ್ನೆಯೇ ಹೆಚ್ಚು ಸಹಜವಾದದ್ದು. ನಿವೇಕೆ ಬದುಕಿದ್ದೀರಾ? ಎಂಬ ಪ್ರಶ್ನೆಗೆ ಬದುಕಿನಲ್ಲಿ ವಿಶ್ವಾಸವಿದ್ದ ಜೀವಿಯಿಂದ ಉತ್ತರವಿಲ್ಲ. ಆದರೆ ನೀವು ನಂಬಿಕೆ ಇಟ್ಟುಕೊಂಡ ಜೀವನ ಮೌಲ್ಯಗಳಾವುವು? ಯಾವ ಸಂಗತಿಗಳಿಂದಾಗಿ ನಿಮಗೆ ಬದುಕು ಅರ್ಥಪೂರ್ಣವೆನ್ನಿಸಿದೆ? ಎಂಬ ಪ್ರಶ್ನೆಗೆ ಉತ್ತರ ಸಿಗಬಹುದು’ ಎಂದಿರುವರು.

‘ಕಹಾ ಮೈನೆ ಕಿತನಾ ಹೈ ಗುಲ್ ಕಾ ಸಬಾತ್/ಕಾಲಿನೆ ಯೆ ಸುನ್ಕರ್ ತಬಸ್ಸೂಂ ಕಿಯಾ’ (‘ಎಷ್ಟು ಕಾಲ?’ ನಾನು ಕೇಳಿದೆ ಗುಲಾಬಿಯ ಆಯಸ್ಸು. ಮೊಗ್ಗು ಮೊಗವೆತ್ತಿ ಮುಗುಳ್ನಕ್ಕಿತ್ತಷ್ಟೆ)- ಬದುಕಿನ ಮಹತ್ವವನ್ನು ಅತ್ಯಂತ ಅರ್ಥಪೂರ್ಣವಾಗಿ ವಿವರಿಸುವ ಮಿರ್ಜಾ ಗಾಲಿಬ್‍ನ ಗಝಲ್ ಸಾಲುಗಳಿವು. ಅರಳಿ ನಿಂತ ಹೂವು ತನ್ನ ಬದುಕು ಕ್ಷಣಿಕವೆಂದು ಎಂದಿಗೂ ಶೋಕಿಸುವುದಿಲ್ಲ. ಅದು ಬದುಕಿರುವವರೆಗೂ ತನ್ನ ಪರಿಮಳವನ್ನು ಸುತ್ತಲೂ ಬೀರುತ್ತದೆ. ಕಲ್ಲುಬಂಡೆ ಕೆಳಗಿನ ಗರಿಕೆ ಹುಲ್ಲು ಸಿಕ್ಕ ಅವಕಾಶದಲ್ಲೇ ಹೊರಚಾಚಿ ಚಿಗುರೊಡೆಯುತ್ತದೆ. ಬಚ್ಚಲಿನ ಕೊಳೆಯ ನೀರಲ್ಲಿ ಬೆಳೆದು ನಿಲ್ಲುವ ಮಲ್ಲಿಗೆ ಬಳ್ಳಿ ಗಿಡದ ಕೊನೆಗೆ ಘಮಘಮಿಸುವ ಹೂಗಳನ್ನು ಬಿಡುತ್ತದೆ. ಆದರೆ ದೇಹದಲ್ಲಿ ದೊಡ್ಡ ಮೆದುಳಿರುವ ಮನುಷ್ಯ ಮಾತ್ರ ಸೋಲುಗಳಿಗೆ ಅಧೀರನಾಗಿ ಸಾವಿನಲ್ಲಿ ಪರಿಹಾರ ಹುಡುಕುತ್ತಿರುವುದು ಎಷ್ಟು ನ್ಯಾಯ?. 

-ರಾಜಕುಮಾರ ಕುಲಕರ್ಣಿ

Wednesday, June 8, 2022

ಸಾಧನೆ: ಬೌದ್ಧಿಕವೋ? ಭೌತಿಕವೋ?



(೨೮.೦೪.೨೦೨೨ ರ ಪ್ರಜಾವಾಣಿಯಲ್ಲಿ ಪ್ರಕಟ)

 ಇತ್ತೀಚೆಗೆ ಮದುವೆ ಸಮಾರಂಭವೊಂದರಲ್ಲಿ ಭೇಟಿಯಾದ ಪರಿಚಿತರೋರ್ವರು ತಮ್ಮ ಬದುಕಿನ ಸಾಧನೆಗಳನ್ನು ಕುರಿತು ಹೇಳಿಕೊಂಡರು. ನಿವೃತ್ತಿಯ ಅಂಚಿನಲ್ಲಿರುವ ಅವರು ಮಾತಿನ ನಡುವೆ ನನಗೆ ಹೇಳಿದ್ದಿಷ್ಟು-‘ಎಂಬತ್ತು x ನಲವತ್ತು ಅಳತೆಯ ದೊಡ್ಡ ಸೈಟಿನಲ್ಲಿ ಮೂರಂತಸ್ತಿನ ಮನೆ ಕಟ್ಟಿಸಿದ್ದೀನಿ, ಲಂಚಕೊಟ್ಟು ಮಗನಿಗೆ ಸರ್ಕಾರಿ ನೌಕರಿ ಕೊಡಿಸಿದ್ದೀನಿ, ಬೀಗರ ನಿರೀಕ್ಷೆಗಿಂತ ಹೆಚ್ಚು ವರದಕ್ಷಿಣೆ ಕೊಟ್ಟು ಮಗಳ ಮದುವೆ ಮಾಡಿದ್ದೀನಿ, ಹೆಂಡತಿ ಹೆಸರಲ್ಲಿ ಮೂರು ಸೈಟುಗಳಿವೆ, ಊರಿನಲ್ಲಿ ಹತ್ತೆಕರೆ ಜಮೀನು ಖರೀದಿಸಿ ತೋಟ ಮಾಡಿದ್ದೀನಿ. ಮನೆ ಎದುರು ಎರಡು ದುಬಾರಿ ಬೆಲೆಯ ಕಾರುಗಳಿವೆ ಅಂತೂ ಬದುಕು ಪರಿಪೂರ್ಣವಾಯಿತು ನೋಡಿ’ ಎಂದು ಮುಖದಲ್ಲಿ ಧನ್ಯತೆಯ ಭಾವವನ್ನು ತುಂಬಿಕೊಂಡು ನುಡಿದರು. ಅವರ ಸಾಧನೆ ಕೇಳಿ ದಂಗಾಗಿ ಹೋದೆ. ಮಾತಿನುದ್ದಕ್ಕೂ ಭೌತಿಕ ಸಂಗತಿಗಳೇ ಮುನ್ನೆಲೆಗೆ ಬಂದು ನಾನು ನಿರೀಕ್ಷಿಸುತ್ತಿದ್ದ ಅವರ ವೃತ್ತಿ ಸಂಬಂಧಿತ ಬೌದ್ಧಿಕ ಸಾಧನೆಗಳ ಕುರಿತು ಯಾವ ವಿಚಾರವಾಗಲಿ, ಹೇಳಿಕೆಯಾಗಲಿ ಮಾತಿನಲ್ಲಿ ಗೋಚರಿಸಲಿಲ್ಲ. ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಶ್ರೀಯುತರು ತಮ್ಮ ಅಕಾಡೆಮಿಕ್ ಸಾಧನೆಗಳ ಬಗ್ಗೆ ಹೇಳಿಕೊಳ್ಳಬಹುದೆಂದು ಒಂದಿಷ್ಟು ಹೊತ್ತು ಕಾದುಕುಳಿತ ನನಗೆ ಅವರಿಂದ ಅಂಥ ಯಾವ ಪ್ರತಿಕ್ರಿಯೆ ಬರದೆಯಿದ್ದಾಗ ನಿರಾಸೆಯಾಯಿತು. ಬೀಳ್ಕೊಡುವಾಗ ಸಧ್ಯದಲ್ಲೆ ಅಭಿಮಾನಿಗಳು ಮತ್ತು ವಿದ್ಯಾರ್ಥಿಗಳು ತಮ್ಮನ್ನು ಅಭಿನಂದಿಸಿ ಅಭಿನಂದನಾ ಗ್ರಂಥವನ್ನು ಸಮರ್ಪಿಸುತ್ತಿದ್ದು ಆ ಕಾರ್ಯಕ್ರಮಕ್ಕೆ ಬರುವಂತೆ ನನ್ನನ್ನು ಆಹ್ವಾನಿಸಿದರು. 

ಭೌತಿಕವೇ ಪ್ರಧಾನವಾಗುತ್ತಿರುವ ಬದುಕಿನಲ್ಲಿ ಸಾಧನೆ ಎನ್ನುವುದು ಕೂಡ ಮನೆ, ಸೈಟು, ಬ್ಯಾಂಕ್ ಬ್ಯಾಲೆನ್ಸ್, ಚಿನ್ನಾಭರಣಗಳ ರೂಪದಲ್ಲಿ ಢಾಳಾಗಿ ಕಣ್ಣಿಗೆ ಕಾಣಿಸುವಂತಿರಬೇಕು ಎಂದು ಮನುಷ್ಯರು ಅಪೇಕ್ಷಿಸುತ್ತಿದ್ದಾರೆ. ಅದಕ್ಕೆಂದೆ ಇಲ್ಲಿ ಆಕಾಶದೆತ್ತರಕ್ಕೆ ಮನೆಗಳು ನಿರ್ಮಾಣಗೊಳ್ಳುತ್ತವೆ, ಸೈಟುಗಳ ಬೆಲೆ ಗಗನಕ್ಕೆರುತ್ತದೆ, ಚಿನ್ನಾಭರಣಗಳ ಖರೀದಿ ಬಡವರಿಗೆ ಕನಸಿನ ಮಾತಾಗುತ್ತದೆ. ‘ಎಲ್ಲಿಯೂ ನಿಲ್ಲದಿರು, ಮನೆಯನೆಂದೂ ಕಟ್ಟದಿರು, ಕೊನೆಯನೆಂದೂ ಮುಟ್ಟದಿರು’ ಸಾಲುಗಳ ಮೂಲಕ ಕುವೆಂಪು ಲೌಕಿಕ ಬದುಕಿನ ಆದ್ಯತೆಗಳಾಚೆ ಬದುಕು ಮತ್ತು ಸಾಧನೆ ವಿಸ್ತರಿಸಲಿ ಎಂದು ಹೇಳಿದರು. ವಿಪರ್ಯಾಸವೆಂದರೆ ಹೀಗೆ ಉಪದೇಶಿಸಿದ ಕುವೆಂಪು ಅವರನ್ನು ಶಾಲೆ, ಕಾಲೇಜುಗಳಲ್ಲಿ ಬೋಧಿಸುವ ಅದೇ ಶಿಕ್ಷಕಗಣ ಬೌದ್ಧಿಕ ಸಾಧನೆಗಿಂತ ಭೌತಿಕ ಸಾಧನೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವರು.

ದಿನದಿಂದ ದಿನಕ್ಕೆ ಮನುಷ್ಯ ಮಟೆರಿಯಲಿಸ್ಟಿಕ್ ಆಗುತ್ತಿರುವನು. ‘ನಾನು ವಸ್ತುಗಳನ್ನು ಪ್ರೀತಿಸುತ್ತೇನೆ, ಮನುಷ್ಯರನ್ನು ಉಪಯೋಗಿಸುತ್ತೇನೆ’ ಎನ್ನುವುದು ಬದುಕಿನ ಧ್ಯೇಯ ವಾಕ್ಯವಾಗಿದೆ. ಸಮಾಜ ಕೂಡ ಸಾಧಕರನ್ನು ಗುರುತಿಸಿ ಗೌರವಿಸುವಲ್ಲಿ ಎಡವುತ್ತಿದೆ. ನಿಜವಾದ ಸಾಧಕರಿಗಿಂತ ಇಲ್ಲಿ ಭೌತಿಕ ಸಾಧಕರೇ ಗೌರವಕ್ಕೆ, ಅಭಿಮಾನಕ್ಕೆ ಪಾತ್ರರಾಗುತ್ತಿರುವರು. ಜಾತಿ, ಧರ್ಮ, ಹಣ ಮತ್ತು ತೋಳ್ಬಲದೆದುರು ನಿಜವಾದ ಬೌದ್ಧಿಕ ಸಾಧಕರು ಸಮಾಜದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವರು. ಒಂದರ್ಥದಲ್ಲಿ ಮನುಷ್ಯ ಮನುಷ್ಯನನ್ನು ಉಪಯೋಗಿಸುತ್ತಿರುವನು ಮತ್ತು ಶೋಷಣೆಗೆ ಒಳಪಡಿಸುತ್ತಿರುವನು.

ಬೌದ್ಧಿಕವೆಂದು ಪರಿಗಣಿತವಾಗಿರುವ ಕ್ಷೇತ್ರಗಳಲ್ಲೂ ಭೌತಿಕ ಸಾಧನೆಯ ವ್ಯಾಮೋಹ ಕಾಡುತ್ತಿದೆ. ತೊಂಬತ್ತೈದು ಪುಸ್ತಕಗಳನ್ನು ಪ್ರಕಟಿಸಿರುವ ಸಾಹಿತಿ ಮಿತ್ರರೋರ್ವರಿಗೆ ತನ್ನ ಈ ಸಾಹಿತ್ಯದ ಸಾಧನೆ ನೂರನ್ನು  ಮುಟ್ಟಲಿ ಎನ್ನುವ ಆಸೆ. ಈ ಸಂಖ್ಯಾತ್ಮಕ ಸಾಧನೆ ಎದುರು ಗುಣಾತ್ಮಕತೆಯು ಮೂಲೆಗುಂಪಾಗಿದೆ. ಅಭಿನಂದನ ಗ್ರಂಥಗಳ ಸಂಪಾದಕತ್ವವನ್ನು ಗುತ್ತಿಗೆ ಹಿಡಿದಿರುವವರು ಸಮಾಜದಲ್ಲಿ ಶ್ರೇಷ್ಠ ಸಾಹಿತಿ ಎನ್ನುವ ಗೌರವಕ್ಕೆ ಪಾತ್ರರಾಗುತ್ತಾರೆ. ಅರವತ್ತು, ಎಂಬತ್ತು ವರ್ಷಗಳ ದೈಹಿಕ ವಯೋಮಾನವನ್ನೆ ಮಾನದಂಡವಾಗಿಟ್ಟುಕೊಂಡು ಅಭಿನಂದನೆಗೆ ಒಳಗಾಗಲು ಹಪಹಪಿಸುವ ಸಾಧಕರ ಸಂಖ್ಯೆಯೇನೂ ಕಡಿಮೆ ಇಲ್ಲ. ಅನೇಕ ಪ್ರಕಾಶನ ಸಂಸ್ಥೆಗಳು ಪ್ರತಿವರ್ಷ ಸಾಮೂಹಿಕ ವಿವಾಹದ ರೀತಿ ನೂರು, ಎರಡು ನೂರು ಪುಸ್ತಕಗಳನ್ನು ಪ್ರಕಟಿಸುತ್ತಿವೆ. ಹೀಗೆ ಪ್ರಕಟವಾಗುತ್ತಿರುವ ಪುಸ್ತಕಗಳು ಸಾರ್ವಜನಿಕ ಗ್ರಂಥಾಲಯಗಳ ಅಲ್ಮೆರಾಗಳಿಗೆ ಶೋಭೆ ತರುತ್ತಿವೆಯೇ ವಿನ: ಓದುಗನ ಏಕಾಂತಕ್ಕೆ ಲಗ್ಗೆ ಇಡುತ್ತಿಲ್ಲ. ಹಾಡುಗಾರ ಕಣ್ಮುಚ್ಚಿ ತನ್ನನ್ನು ತಾನು ಮೈಮರೆತು ಹಾಡಿದರೆ ಅದು ತಾದ್ಯಾತ್ಮ ಅನಿಸಿಕೊಳ್ಳುತ್ತದೆ. ಪ್ರೇಕ್ಷಕರನ್ನು ಆಕರ್ಷಿಸಲೆಂದು ಕಣ್ಬಿಟ್ಟು ಆಂಗೀಕ ಅಭಿನಯಕ್ಕಿಳಿದರೆ ಆಗ ಸಂಗೀತ ಎನ್ನುವುದು ಭೌತಿಕ ಪ್ರದರ್ಶನವಾಗಿ ಪರಿಣಮಿಸುತ್ತದೆ.

ವಿವಿಧ ಕ್ಷೇತ್ರಗಳಂತೆ ಶಿಕ್ಷಣ ಕ್ಷೇತ್ರ ಕೂಡ ಇಂದು ಈ ಭೌತಿಕ ಸಾಧನೆಯ ವ್ಯಾಮೋಹದಿಂದ ಕಲುಷಿತಗೊಂಡಿದೆ. ವಿದ್ಯಾರ್ಥಿಗಳಿಗೆ ಪಾಠ ಮಾಡುವ ಅದೆಷ್ಟೋ ಶಿಕ್ಷಕರ ಮನೆಗಳಲ್ಲಿ ಕಣ್ಣಿಗೆ ದುರ್ಬೀನು ಹಾಕಿಕೊಂಡು ಹುಡುಕಿದರೂ ಒಂದು ಪುಸ್ತಕ ಗೋಚರಿಸುವುದಿಲ್ಲ. ಶಿಕ್ಷಕರು ಬೌದ್ಧಿಕ ಸಾಧನೆಯನ್ನು ನಿರ್ಲಕ್ಷಿಸುತ್ತಿರುವ ಕಾರಣದಿಂದ ‘ಕ್ಲಾಸ್ ಲೆಕ್ಚರ್ ಈಜ್ ಎ ಪ್ರೊಸೆಸ್  ಆಫ್ ಟೀಚರ್ಸ್ ನೋಟ್ಸ್ ಬಿಕಮಿಂಗ್ ಸ್ಟುಡೆಂಟ್ಸ್ ನೋಟ್ಸ್ ವಿದೌಟ್ ಪಾಸಿಂಗ್ ಥ್ರು ದಿ ಮೈಂಡ್ ಆಫ್ ಐದರ್’ ಎನ್ನುವ ಹಾಸ್ಯೋಕ್ತಿ ಶಿಕ್ಷಣವಲಯದಲ್ಲಿ ಚಲಾವಣೆಯಲ್ಲಿದೆ. ಓದು, ಬೋಧನೆ, ಸಂಶೋಧನೆಯಂತಹ ಬೌದ್ಧಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕಾದ ಶಿಕ್ಷಕರು ಹಣಕಾಸಿನ ಲೇವಾದೇವಿಯಂತಹ ವಹಿವಾಟುಗಳಲ್ಲಿ ನಿರತರಾಗಿರುವರು. ಪ್ರಾಧ್ಯಾಪಕರ ಸಂಶೋಧನಾ ಬರವಣಿಗೆ ಕೂಡ ಹುದ್ದೆ ಮತ್ತು ವೇತನ ಬಡ್ತಿಯಂತಹ ಭೌತಿಕ ಪ್ರಗತಿಗೆ ಸಿಮೀತವಾಗುತ್ತಿರುವುದು ದುರದೃಷ್ಟಕರ.  

ಎಲ್ಲವನ್ನೂ ಬಹಿರಂಗದಲ್ಲೇ ಹುಡುಕುತ್ತಿರುವ ಮನುಷ್ಯನಿಗೆ ಇಂದು ಭೌತಿಕ ಪ್ರಗತಿಯೇ ಪ್ರಧಾನವಾಗಿ ಕಾಣಿಸುತ್ತಿದೆ. ಬದುಕಿನ ಕ್ಷಣಿಕತೆಯ ಅರಿವು ಇವತ್ತಿನ ಮನುಷ್ಯನಿಗಿಲ್ಲ. ಸಾವಿನ ಪ್ರಜ್ಞೆ ಇಲ್ಲದೆ ಚಿರಂಜೀವಿತ್ವದ ಭಾವನೆಯನ್ನು ಅಂತರ್ಗತಗೊಳಿಸಿಕೊಂಡು ಬದುಕು ಶಾಶ್ವತ ಎನ್ನುವಂತೆ ವರ್ತಿಸುತ್ತಿರುವನು. ಆತ್ಮಾವಲೋಕನಕ್ಕಾಗಲಿ, ಆತ್ಮವಿಮರ್ಶೆಗಾಗಲಿ ಇಳಿಯುವಷ್ಟು ವ್ಯವಧಾನ ಇಂದಿನವರಿಗಿಲ್ಲ. ಪರಿಣಾಮವಾಗಿ ಬದುಕಿನ ಪ್ರಗತಿ-ಸಾಧನೆ ಎನ್ನುವುದು ನಗ, ನಾಣ್ಯ, ಮನೆ, ತೋಟಗಳಂತಹ ಭೌತಿಕ ವಸ್ತುಗಳ ರೂಪದಲ್ಲೇ ಗೋಚರಿಸುತ್ತಿದೆ. 

ಯಶವಂತ ಚಿತ್ತಾಲರು ಅಸ್ತಿತ್ವವಾದೀ ದಾರ್ಶನಿಕ ಮಾರ್ಟಿನ್ ಹೈಡೆಗರ್ ಸಿದ್ಧಾಂತವನ್ನು ವಿವರಿಸುತ್ತ ‘ಮನುಷ್ಯ ತನ್ನ ಅಸ್ತಿತ್ವದ ಅಸಂಖ್ಯ ಸಾಧ್ಯತೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವಾಗ ತನ್ನ ಸಾವು ಕೂಡ ಈ ಎಲ್ಲ ಸಾಧ್ಯತೆಗಳಲ್ಲಿ ಒಂದು ಮಾತ್ರವಲ್ಲ, ಎಲ್ಲ ಸಾಧ್ಯತೆಗಳಲ್ಲಿ ಇದೊಂದೆ ನಿಶ್ಚಿತವಾದದ್ದು ಎಂಬುದನ್ನು ಮನಗಾಣುತ್ತಾನೆ. ತನ್ನ ಸಾವನ್ನು ತಾನೇ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯ ಯಾವಾಗ ಬರುತ್ತದೊ ಆಗ ಮಾತ್ರ ಎಲ್ಲವನ್ನೂ ನಿಚ್ಚಳವಾಗಿ, ಸ್ವಚ್ಛವಾಗಿ ನೋಡುವ ದೃಷ್ಟಿಯುಳ್ಳವನಾಗುತ್ತಾನೆ. ಇಂಥ ದೃಷ್ಟಿಯ ಮೂಲಕವೇ ಲಕ್ಷ್ಯಕ್ಕೆ ಬರುವ ತನ್ನ ಬದುಕಿನ ಅಪರಿಪೂರ್ಣತೆಯನ್ನು, ಕುಂದುಕೊರತೆಗಳನ್ನು ಕುರಿತು ತೀವ್ರ ಅಸಮಾಧಾನಕ್ಕೆ, ಪಾಪಪ್ರಜ್ಞೆಗೆ ಒಳಗಾಗುತ್ತಾನೆ. ಮನುಷ್ಯನ ಪ್ರಜ್ಞೆಯ ಬೆಳವಣಿಗೆಯಲ್ಲಿ ಸಾವಿಗೆ ಅತ್ಯಂತ ಮಹತ್ವದ ಸ್ಥಾನವಿದ್ದುದನ್ನು ಹೈಡೆಗರ್‍ನ ದರ್ಶನ ಗುರುತಿಸುತ್ತದೆ’ ಎಂದಿರುವರು. ಹೈಡೆಗರ್ ಪ್ರಕಾರ ಬದುಕಿನ ಅಪರಿಪೂರ್ಣತೆ ಎನ್ನುವುದು ಭೌತಿಕವಲ್ಲ. ಆತ ಹೇಳುವುದು ಸಾವಿನ ಪ್ರಜ್ಞೆಯಿರುವ ಮನುಷ್ಯ ತನ್ನ ಬದುಕಿನ ಬೌದ್ಧಿಕ ಅಪರಿಪೂರ್ಣತೆ ಕುರಿತು ಚಿಂತಿಸುತ್ತಾನೆ. ದುರಾದೃಷ್ಟವೆಂದರೆ ಬಹಿರಂಗದ ಬದುಕಿಗೆ ಆದ್ಯತೆ ನೀಡುತ್ತಿರುವ ಮನುಷ್ಯ ತನ್ನ ಅಂತರಂಗದ ಪಿಸುಧ್ವನಿಯನ್ನು ಕೇಳಿಸಿಕೊಳ್ಳದಷ್ಟು ಅಸಂವೇದಿಯಾಗುತ್ತಿರುವನು.

-ರಾಜಕುಮಾರ ಕುಲಕರ್ಣಿ


Tuesday, May 17, 2022

ಮುಖವಾಡ (ಕಥೆ)




      ಪ್ರೇಮಚಂದನಿಗೆ ಅವನು ಕೆಲಸ ಮಾಡುತ್ತಿದ್ದ ಕಂಪನಿಯ ಪ್ರಧಾನ ಕಚೇರಿಯಿಂದ ಬಂದ ಪತ್ರದ ಒಕ್ಕಣೆ ಹೀಗಿತ್ತು- ‘ಕಂಪನಿಯ ಆಡಳಿತ ಮಂಡಳಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹೊಸ ಆಡಳಿತ ಮಂಡಳಿಯು ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ವಿಶ್ವಾಸಾರ್ಹತೆಯನ್ನು ಪರಿಶೀಲಿಸಲು ಬಯಸಿದೆ. ಕಂಪನಿಯ ನಿಯಮಗಳು ಮತ್ತು ಸಿಬ್ಬಂದಿಯ ವ್ಯಕ್ತಿತ್ವ ಹಾಗೂ ಮುಖಚಹರೆ ನಡುವಣ ಹೊಂದಾಣಿಕೆಯನ್ನು ಗುರುತಿಸುವುದೇ ಈ ಪರಿಶೀಲನೆಯ ಉದ್ದೇಶವಾಗಿದೆ. ಉಲ್ಲೇಖಿಸಿದ ದಿನಾಂಕದಂದು ತಾವು ಮುಖ್ಯಕಚೇರಿಯಲ್ಲಿ ಚಹರೆ ಪರಿಶೀಲನಾ ಸಂದರ್ಶನಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಆಡಳಿತ ಮಂಡಳಿಯ ನೀತಿನಿಯಮಗಳಿಗೆ  ಅನುಗುಣವಾದ ಮುಖಚಹರೆ ತಮ್ಮದಾಗಿದ್ದಲ್ಲಿ ತಮ್ಮನ್ನು ಕೆಲಸದಲ್ಲಿ ಮುಂದುವರೆಸಲಾಗುವುದು. ಒಂದುವೇಳೆ ತಮ್ಮ ಮುಖಚಹರೆ ಆಡಳಿತ ಮಂಡಳಿ ಇಚ್ಛೆಗೆ ವಿರುದ್ಧವಾಗಿದ್ದಲ್ಲಿ ತಮ್ಮನ್ನು ಮುಂದುವರೆಸುವ ಇಲ್ಲವೇ ಕೆಲಸದಿಂದ ವಜಾಗೊಳಿಸುವ ನಿರ್ಧಾರ ಕಂಪನಿಗೆ ಸೇರಿದ್ದು. ಪತ್ರದಲ್ಲಿ ಉಲ್ಲೇಖಿಸಿದ ದಿನದಂದು ತಾವು ಸಂದರ್ಶನಕ್ಕೆ ಹಾಜರಾಗದಿದ್ದ ಪಕ್ಷದಲ್ಲಿ ತಮ್ಮ ಗೈರುಹಾಜರಿಯನ್ನು ಅಸಮ್ಮತಿಯೆಂದು ಪರಿಗಣಿಸಿ ತಮ್ಮನ್ನು ಕೆಲಸದಿಂದ ವಜಾಗೊಳಿಸುವ ಹಕ್ಕು ಆಡಳಿತ ಮಂಡಳಿಗಿದೆ’. ಪತ್ರವನ್ನೊದಿ ಪ್ರೇಮಚಂದನಿಗೆ ಒಂದುಕ್ಷಣ ಕಣ್ಣಿಗೆ ಕತ್ತಲಾವರಿಸಿದಂತಾಗಿ ತಾನು ಯಾವುದೋ ಒಂದು ಷಡ್ಯಂತ್ರದಲ್ಲಿ ಸಿಕ್ಕಿಬಿದ್ದ ವಿಚಿತ್ರ ಅನುಭವವಾಗಿ ಹೊಟ್ಟೆ ತೊಳಿಸಿದಂತೆನಿಸಿ ಎದ್ದು ವಾಶ್‌ರೂಮಿನತ್ತ ಹೆಜ್ಜೆ ಹಾಕಿದ.    ತೂಗುಹಾಕಿದ್ದ ಕನ್ನಡಿಯಲ್ಲಿ ತನ್ನ ಮುಖವನ್ನು ದಿಟ್ಟಿಸಿ ನೋಡುತ್ತ ನಿಂತವನಿಗೆ ಕೆಲವು ದಿನಗಳ ಹಿಂದಷ್ಟೆ ಹೆಂಡತಿ ಆಡಿದ ಮಾತುಗಳು ತಲೆಯಲ್ಲಿ ಗಿರಗಿಟ್ಲೆ ಆಡಲಾರಂಭಿಸಿದವು. ಅಂದು ಊಟ ಬಡಿಸುವಾಗ ಸರಳಾಬಾಯಿ ತನ್ನ ಮನದ ಬೇಗುದಿಯನ್ನು ಸಿಟ್ಟಿನಿಂದಲೇ ಹೊರಹಾಕಿದ್ದಳು, ‘ನಿಮ್ಮ ಮಾರಿ ಮ್ಯಾಲಿನ ಕಳ್ಯಾಕ ಈಗಿದ್ದ ನೌಕರಿ ಸಿಕ್ಕಿದ್ದೆ ದೊಡ್ಡ ಪುಣ್ಯ. ಪಕ್ಕದ ಮನಿ ಮಾಧುರಿ ಹೇಳ್ಲಿಕತ್ತಿದ್ದಳು ಹೊಸ ಆಡಳಿತ ಮಂಡಳಿ ಬರೊದದಾ. ಹಾಗೇನಾದ್ರೂ ಬಂದ್ರ ಈಗಿದ್ದ ಎಷ್ಟೋ ಮಂದಿ ನೌಕರಿ ಕಳ್ಕೊತಾರಂತ. ಯಾಕಂದ್ರ ಹೊಸ ಆಡಳಿತ ಮಂಡಳಿಗೂ ನೌಕರಿ ಮಾಡೊವರ ಮಾರಿ ಚಹರಾಕ್ಕೂ ಹೊಂದಿಕಿ ಆಗ್ಬೇಕಂತ. ಹಾಂಗ ಹೊಂದಿಕಿ ಆಗ್ಲಿಲ್ಲಂದ್ರ ನೌಕರಿನಿಂದ ತೆಗೆದು ಹಾಕ್ತಾರಂತ. ಎಷ್ಟ ಸಲ ಬಡ್ಕೊಂಡಿನಿ ಸಮಯ ಸಂದರ್ಭಕ್ಕ ತಕ್ಕಂಗ ಬದುಕೊದು ರೂಢಿಸಿಕೊಳ್ರಿ ಅಂತ. ಎಲ್ಲಿ ನನ್ನ ಮಾತು ಕಿವ್ಯಾಗ ಹಾಕೊತಿರಿ. ಮದವಿ ಆದಾಗ್ಲಿಂದ ನೋಡ್ಲಿಕತ್ತಿನಿ ಈ ಮುಖದಾಗ ಒಂದಷ್ಟರೆ ಬದಲಾವಣಿ ಆಗ್ಯಾದೇನು. ಅದೇ ಗುಡ್ಡದ ಮ್ಯಾಲ ನಿಂತ ಗೊಮ್ಮಟನಂಗÀ’. ಹೆಂಡತಿ ಆಡಿದ ಮಾತುಗಳು ನೆನಪಾಗಿ ಪ್ರೇಮಚಂದನ ಆತಂಕ ಮತ್ತಷ್ಟು ಹೆಚ್ಚಿತು. 

* * *

ಕಳೆದ ಇಪ್ಪತ್ತೈದು  ವರ್ಷಗಳಿಂದ ಬಹುರಾಷ್ಟ್ರೀಯ ಕಂಪನಿಯೊಂದರ ಶಾಖಾ ಕಚೇರಿಯಲ್ಲಿ ಲೆಕ್ಕ ಪರಿಶೋಧಕನಾಗಿ ಕೆಲಸ ಮಾಡುತ್ತಿರುವ ಪ್ರೇಮಚಂದ ಗಲಗಲಿಯದು ಯಾವ ಏರಿಳಿತಗಳಿಲ್ಲದ ಸರಳ ಬದುಕು. ಪತ್ನಿ ಸರಳಾಬಾಯಿ, ಇಂಜಿನಿಯರಿಂಗ್ ಫೈನಲ್ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಮಗ ವಿಜೇತ, ಎರಡನೆ ಪಿಯುಸಿ ಓದುತ್ತಿರುವ ಮಗಳು ವೀಣಾ ಒಟ್ಟಾರೆ ಚಿಕ್ಕ ಮತ್ತು ಚೊಕ್ಕ ಸಂಸಾರ. ತಲೆಯ ಮೇಲೊಂದು ಸೂರಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಮಧ್ಯಮ ವರ್ಗದವರೇ ಹೆಚ್ಚಾಗಿ ವಾಸಿಸುತ್ತಿರುವ ನಗರದ ಬಡಾವಣೆಯೊಂದರಲ್ಲಿ ಅಪ್ಪ ಕಟ್ಟಿಸಿದ ಮನೆಯಿದೆ. ಅಪ್ಪ ಅಮ್ಮ ಇಹಲೋಕ ತ್ಯಜಿಸಿ ಹತ್ತಿರ ಹತ್ತಿರ ಹತ್ತು ವರ್ಷಗಳಾಗುತ್ತ ಬಂತು. ಹೆತ್ತವರ ಸಾವಿನ ನಂತರ ಪ್ರೇಮಚಂದನೇ ಸಂಬಂಧಿಕರಿಂದ ದೂರಾದನೋ ಇಲ್ಲ ಅವರೇ ಇವನಿಂದ ದೂರಾದರೋ ಅಂತೂ ಯಾವ ನೆಂಟರಿಷ್ಟರ ರಗಳೆ ತಾಪತ್ರಯಗಳಿಲ್ಲದೆ ತಾನಾಯ್ತು ತನ್ನ ಕೆಲಸವಾಯ್ತು ಎಂದು ಬದುಕುತ್ತಿರುವ ನಿರುಪದ್ರವಿ ಜೀವಿ ಈತ. ಬೆಳಗ್ಗೆ ಐದಕ್ಕೆ ಎದ್ದು ಒಂದಿಷ್ಟು ವಾಕಿಂಗ್ ಮುಗಿಸಿ ಸ್ನಾನ ಸಂದ್ಯಾವಂದನೆ ಮಾಡಿ ಹೆಂಡತಿ ಮಾಡಿಟ್ಟ ಉಪ್ಪಿಟ್ಟೊ ಅವಲಕ್ಕಿನೊ ತಿಂದು ಎರಡು ಚಪಾತಿಗಳನ್ನು ಡಬ್ಬಿಯಲ್ಲಿ ಸುತ್ತಿಕೊಂಡು ಮನೆಯಿಂದ ಹೊರಬಿದ್ದು ಸಮೀಪದ ಪಿಕಪ್ ಪಾಯಿಂಟ್‌ನಲ್ಲಿ ಕಂಪನಿಯ ಕ್ಯಾಬ್ ಹತ್ತಿ ಆಫೀಸ್ ಸಮೀಪಿಸುವವರೆಗೂ ಕ್ಯಾಬ್‌ನಲ್ಲೇ ಒಂದು ಸಣ್ಣ ನಿದ್ದೆ ತೆಗೆದು ಕ್ಯಾಬ್ ನಿಂತಿದ್ದೆ  ಅವಸವಸರವಾಗಿ ಆಫೀಸ್ ಬಿಲ್ಡಿಂಗ್ ಪ್ರವೇಶಿಸಿ ತನ್ನ ದಿನನಿತ್ಯದ ಜಾಗದಲ್ಲಿ ಕುಳಿತುಕೊಂಡರೆ ಹೊರಗೆ ಕಾಲಿಡುವುದು ಮತ್ತೆ ಮನೆಗೆ ಮರಳುವಾಗಲೇ. ಸಂಸಾರ ಮತ್ತು ನೌಕರಿಯ ತಾಪತ್ರಯಗಳ ನಡುವೆಯೂ ಓದು ಬರವಣಿಗೆ ಎಂದು ಹವ್ಯಾಸಗಳನ್ನು ಮೈಗೂಡಿಸಿಕೊಂಡಿರುವ ಪ್ರೇಮಚಂದನ ನಾಲ್ಕಾರು ಪುಸ್ತಕಗಳನ್ನು ಪ್ರಕಾಶಕರೊಬ್ಬರು ಪ್ರಕಟಿಸಿದ್ದರಿಂದ ಮನೆಯ ಕಪಾಟಿನಲ್ಲಿ ಹೆಸರಾಂತ ಸಾಹಿತಿಗಳ ಪುಸ್ತಕಗಳ ಸಾಲಿನಲ್ಲಿ ತನ್ನ ಪುಸ್ತಕಗಳನ್ನು ಜೋಡಿಸಿಟ್ಟು ಆಗಾಗ ಅವುಗಳ ಮೈಸವರಿ ಪುಳಕಗೊಳ್ಳುತ್ತಾನೆ.

ಈ ಹತ್ತುದಿನಗಳನ್ನು ಪ್ರೇಮಚಂದ ತುಂಬ ಆತಂಕದಿಂದಲೇ ಕಳೆದ. ಕಂಪನಿಯ ಬ್ರಾ÷್ಯಂಚ್ ಆಫೀಸಿನಲ್ಲಿ ತನ್ನೊಂದಿಗೆ ಕೆಲಸ ಮಾಡುತ್ತಿರುವ ಸಹೋದ್ಯೋಗಿಗಳು ಈ ಮೊದಲಿನಂತೆ ಸ್ನೇಹದಿಂದ ವರ್ತಿಸುತ್ತಿಲ್ಲ ಎನ್ನುವ ಗುಮಾನಿ ಮನಸ್ಸಿನಲ್ಲಿಮೂಡಿದ್ದೆ ಪ್ರೇಮಚಂದ ಮತ್ತಷ್ಟು ದಿಗಿಲುಗೊಂಡ. ಅಲ್ಲಲ್ಲಿ ಇಬ್ಬಿಬ್ಬರೆ ಜೊತೆಯಾಗಿ ನಿಂತು ಮೇಲುಧ್ವನಿಯಲ್ಲಿ ಮಾತನಾಡುವುದು, ಯಾರಾದರೂ ಬರುತ್ತಿರುವ ಸೂಚನೆ ಸಿಕ್ಕಿದ್ದೆ ಮಾತು ನಿಲ್ಲಿಸಿ ಅವರತ್ತ ಅನುಮಾನದಿಂದ ನೋಡುವುದು, ಕೆಲಸದಲ್ಲಿ ಆಸಕ್ತಿಯನ್ನೆ ಕಳೆದುಕೊಂಡ ಕಳಾಹೀನ ಮುಖಗಳು, ನಾಳೆ ಏನಾಗುವುದೋ ಎನ್ನುವ ಆತಂಕ ಒಟ್ಟಾರೆ ಆಫೀಸಿನ ವಾತಾವರಣದಲ್ಲಿ ಈ ಮೊದಲಿನ ಲವಲವಿಕೆ ಇಲ್ಲದೆ ಎಲ್ಲವೂ ಅಯೋಮಯ ಅಗೋಚರ ಅನಿಸತೊಡಗಿತು. ಸಂದರ್ಶನದ ದಿನ ಹತ್ತಿರವಾಗುತ್ತಿದ್ದಂತೆ ಪ್ರೇಮಚಂದನ ಆತಂಕ ಮತ್ತು ದಿಗಿಲು ಉಲ್ಬಣಗೊಂಡು ಬೆಡ್ ರೂಮಿನಲ್ಲಿದ್ದ ಅಲ್ಮೆರಾಕ್ಕೆ ಅಂಟಿಸಿದ ಆಳೆತ್ತರದ ಕನ್ನಡಿ ಎದುರು ನಿಂತು ತನ್ನ ಪ್ರತಿಬಿಂಬದ ಜೊತೆ ಗಂಟೆಗಟ್ಟಲೆ ಸ್ವಗತದಲ್ಲಿ ಮಾತನಾಡತೊಡಗಿದ. ಗಂಡನ ವರ್ತನೆ  ಹೆಂಡತಿ ಸರಳಾಬಾಯಿಗೆ ಏಕಕಾಲಕ್ಕೆ ಒಗಟಾಗಿಯೂ ಮತ್ತು ಸಮಸ್ಯೆಯಾಗಿ ಕಾಡತೊಡಗಿತು.

ಸಂದರ್ಶನದ ದಿನ ಸರಿಯಾಗಿ ಬೆಳಗ್ಗಿನ ಹತ್ತುಗಂಟೆಗೆ ಪ್ರೇಮಚಂದ ಕಂಪನಿಯ ಹೆಡ್ ಆಫೀಸಿನಲ್ಲಿದ್ದ. ಸಂದರ್ಶನದ ಕೊಠಡಿ ಎದುರಿನ ಉದ್ದನೆಯ ಸಾಲಿನತ್ತ ದೃಷ್ಟಿ ಹರಿಸಿದವನಿಗೆ ನಿಂತಿದ್ದವರಲ್ಲಿ ಒಂದೆರಡು ಪರಿಚಿತ ಮುಖಗಳು ಕಣ್ಣಿಗೆ ಕಾಣಿಸಿ ಮನಸ್ಸಿಗೆ ಸಮಾಧಾನವಾಯಿತು. ರಿಸೆಪ್ಷನ್ ಕೌಂಟರ್‌ನಲ್ಲಿ ಹೆಸರು ನೋಂದಾಯಿಸಿ ತನ್ನ ದಾಖಲೆಗಳನ್ನು ಪರಿಶೀಲನೆಗೆ ಕೊಟ್ಟು ಅವರಿಂದ ಚೆಕ್‌ಲಿಸ್ಟ್ ಪಡೆದು ಉದ್ದನೆಯ ಸರತಿ ಸಾಲಿನಲ್ಲಿ ತಾನೂ ಒಬ್ಬನಾಗಿ ನಿಂತ. ಪ್ರೇಮಚಂದ ಸಂದರ್ಶನದ ಕೊಠಡಿಯೊಳಗೆ ಕಾಲಿಡುವ ವೇಳೆಗಾಗಲೇ ಹೊತ್ತು ಮಧ್ಯಾಹ್ನದ ಹನ್ನೆರಡು ದಾಟಿತ್ತು. ವಾತಾನುಕೂಲ ಸೌಲಭ್ಯದ ಕೊಠಡಿಯಲ್ಲಿ ಅಂಥ ರಣಗುಟ್ಟುವ ಭಯಂಕರ ಬೇಸಿಗೆಯಲ್ಲೂ ತಂಪಾದ ಗಾಳಿ ತುಂಬಿಕೊಂಡಿತ್ತು. ಕೂಡಲು ಮೆತ್ತನೆಯ ಸುಖಾಸೀನಗಳು, ಕಿಟಕಿಗಳಿಂದ ಒಳಗೆ ತೂರದಂತೆ ಪ್ರಖರ ಬಿಸಿಲನ್ನು ಮರೆಮಾಚಿದ ಆಕರ್ಷಕ ಪರದೆಗಳು, ಹೂದಾನಿಯಲ್ಲಿ ಅರಳಿನಿಂತಿರುವ ಬಣ್ಣಬಣ್ಣದ ಹೂಗಳು, ಮೈಸೋಕುತ್ತಿರುವ ತಂಪಾದ ಹವೆ ಅರೆಕ್ಷಣ ಪ್ರೇಮಚಂದನಿಗೆ ತಾನು ನಿಂತಿರುವ ಆ ಜಾಗ ಇಂದ್ರನ ಅಮರಾವತಿಯಂತೆ ಭಾಸವಾಯಿತು. ತಾನು ನಿಂತಿರುವ ಜಾಗಕ್ಕೆ ಎದುರಾಗಿ ಮೆತ್ತನೆಯ ಕುರ್ಚಿಗಳ ಮೇಲೆ ಆಸೀನಗೊಂಡಿದ್ದ ಮೂರು ಅಪರಿಚಿತ ಮುಖಗಳು ಗೋಚರಿಸಿದವು. ಅವರಿಗೆದುರಾಗಿ ಇಟ್ಟಿದ್ದ ಖಾಲಿ ಕುರ್ಚಿಯಲ್ಲಿ ಕುಳಿತವನು ಕೇಶವರಾವ್ ಸಾಳುಂಕೆ ಕಾಣಿಸಬಹುದೇನೋ ಎಂದು ಸುತ್ತಲೂ ಕಣ್ಣಾಡಿಸಿದ. ಕಂಪನಿಯ ಹೆಡ್ ಆಫೀಸಿನ ಈ ಜಾಗಕ್ಕೆ ಐದು ವರ್ಷಗಳ ಹಿಂದೆ ಬಂದಿದ್ದ ನೆನಪು ಪ್ರೇಮಚಂದನ ಮನಸ್ಸಿನಲ್ಲಿ ಇನ್ನೂ ಮಾಸಿರಲಿಲ್ಲ. ಕಂಪನಿಯ ಇಪ್ಪತ್ತೆöÊದನೆ ವರ್ಷಾಚರಣೆಯ ನಿಮಿತ್ಯ ಅಂದಿನ ಕಂಪನಿಯ ಮುಖ್ಯಸ್ಥರಾಗಿದ್ದ ಕೇಶವರಾವ್ ಸಾಳುಂಕೆ ಅವರನ್ನು ಸಂದರ್ಶನ ಮಾಡಲು ಮ್ಯಾನೇಜರ್ ರಾಮನಾಥ ಚಿದ್ರಿ ತನ್ನನ್ನು ಹೆಡ್ ಆಫೀಸಿಗೆ ಕಳುಹಿಸಿದ್ದು ನೆನಪಾಯಿತು. ಅಂದು ಇಡೀ ಅರ್ಧದಿನ ಕೇಶವರಾವ್ ಸಾಳುಂಕೆ ಪ್ರೇಮಚಂದನೊಂದಿಗೆ ಕಳೆದಿದ್ದರು. ಚೇಂಬರಿಗೆ ಊಟ ತರಿಸಿ ಪ್ರೇಮಚಂದನೊಂದಿಗೆ ನಗುನಗುತ್ತ ಊಟ ಮಾಡಿದ್ದರು. ಮರುದಿನ ಸಾಳುಂಕೆ ಅವರ ಸಂದರ್ಶನದೊಂದಿಗೆ ಪ್ರೇಮಚಂದ ಬರೆದ ವಿವರವಾದ ಲೇಖನ ಎಲ್ಲ ಪತ್ರಿಕೆಗಳಲ್ಲಿ ಪ್ರಕಟವಾಗಿ ಅವನಲ್ಲಿ ಧನ್ಯತೆಯ ಭಾವವನ್ನು ಮೂಡಿಸಿತ್ತು. ಇನ್ನುಮುಂದೆ ಕಂಪನಿಯ ಮುಖ್ಯಸ್ಥರ ನೆನಪಿನಲ್ಲಿ ತನ್ನ ಚಿತ್ರ ಸ್ಥಿರವಾಗಿ ನೆಲೆಸುತ್ತದೆ ಎಂದು ಭಾವಿಸಿದ್ದ ಪ್ರೇಮಚಂದನಿಗೆ ಮುಂದೊಮ್ಮೆ ಕೇಶವರಾವ್ ಸಾಳುಂಕೆ ಬ್ರಾ÷್ಯಂಚ್ ಆಫೀಸಿಗೆ ಬೇಟಿ ನೀಡಿದ ಸಂದರ್ಭ ಯಾರು ನೀನು ಎಂದು ಪ್ರಶ್ನಿಸಿ ಅವನ ಅಸ್ತಿತ್ವವನ್ನೇ ಅಲುಗಾಡಿಸಿದ್ದರು. ಈ ಘಟನೆಯ ನಂತರ ಪ್ರೇಮಚಂದ ಇನ್ನುಮುಂದೆ ದೊಡ್ಡವರ ಸಹವಾಸವೇ ಸಾಕು ಎನ್ನುವಂತೆ ತಾನಾಯ್ತು ತನ್ನ ಕೆಲಸವಾಯ್ತು ಎನ್ನುತ್ತ ಯಾವ ಉಸಾಬರಿಗೂ ಹೋಗದೆ ಬದುಕುವುದನ್ನು ರೂಢಿಸಿಕೊಂಡಿದ್ದ.

ಹಿಂದಿನದೆಲ್ಲ ನೆನಪಾಗಿ ಈಗ ಸಾಳುಂಕೆ ಅಮೆರಿಕದಲ್ಲಿ ವಾಸಿಸುತ್ತಿರುವ ಸಂಗತಿ ಮನಸ್ಸಿಗೆ ಹೊಳೆದು ಪ್ರೇಮಚಂದ ತಾನು ಸಂದರ್ಶನದ ಕೊಠಡಿಯಲ್ಲಿ ಕುಳಿತಿರುವುದನ್ನು ಸ್ಮರಣೆಗೆ ತಂದುಕೊಂಡ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಆಳುವ ಪಕ್ಷದ ಕಿರುಕುಳದಿಂದ ಬೇಸತ್ತು  ಕೇಶವರಾವ್ ಸಾಳುಂಕೆ ಕಂಪನಿಯನ್ನು ವಿಲೇವಾರಿಮಾಡಿ ಪತ್ನಿಸಮೇತ ಅಮೆರಿಕಕ್ಕೆ ಹೋಗಿ ನೆಲೆಸಿದ್ದರು. ಹೊಸ ಆಡಳಿತ ಮಂಡಳಿ ಕಂಪನಿಯ ಆಮೂಲಾಗ್ರ ಬದಲಾವಣೆಗಾಗಿ ಹೊಸ ನಿಯಮಗಳನ್ನು ಜಾರಿಗೆ ತಂದಿತ್ತು. ಆಡಳಿತ ಮಂಡಳಿಯ ಹೊಸ ನಿಯಮಗಳಿಗೆ ಹೊಂದಿಕೊಳ್ಳುವವರನ್ನು ಮಾತ್ರ ಕೆಲಸದಲ್ಲಿ ಮುಂದುವರೆಸುವುದು, ಹೊಂದಿಕೊಳ್ಳದವರನ್ನು ನೌಕರಿಯಿಂದ ವಜಾಗೊಳಿಸುವ ಯೋಜನೆಯ ಮೊದಲಹಂತವಾಗಿ ಈ ಸಂದರ್ಶನವನ್ನು ಏರ್ಪಡಿಸಲಾಗಿತ್ತು. ನೀವು ಯಾವ ಮತಸ್ಥರು, ನಿಮ್ಮ ಮಠ ಯಾವುದು, ನೀವು ನಮೂದಿಸಿರುವ ಸಮುದಾಯಕ್ಕೂ ಮತ್ತು ನಿಮ್ಮ ಹೆಸರು ಹಾಗೂ ಚಹರೆಗೂ ತಾಳೆ ಆಗುತ್ತಿಲ್ಲ, ನೀವು ಒದಗಿಸಿದ ಮಾಹಿತಿ ಸುಳ್ಳು ಎಂದು ಸಾಬೀತಾದಲ್ಲಿ ನಿಮ್ಮ ಮೇಲೆ ಕ್ರಿಮಿನಲ್ ದಾವೆ ಹೂಡುವ ಎಲ್ಲ ಹಕ್ಕುಗಳು ಕಂಪನಿಗಿವೆ ಸಂದರ್ಶನ ಸಮಿತಿಯ ಸದಸ್ಯರ ಒಂದಾದ ಮೇಲೊಂದು ಪ್ರಶ್ನೆಗಳಿಂದ ಪ್ರೇಮಚಂದ ವಿಚಲಿತನಾದ. ಉತ್ತರಿಸುವಾಗ ತಡವರಿಸಿದ. ತಂಪು ವಾತಾವರಣದಲ್ಲೂ ಹಣೆ ಮತ್ತು ಕುತ್ತಿಗೆಯ ಸುತ್ತ ಸಣ್ಣಗೆ ಬೆವರು ಜಿನುಗತೊಡಗಿತು.  

ಪ್ರೇಮಚಂದನ ಮೌನಕ್ಕೆ ಪ್ರತಿಕ್ರಿಯೆಯಾಗಿ ಮಧ್ಯದ ಕುರ್ಚಿಯಲ್ಲಿ ಕುಳಿತ ವ್ಯಕ್ತಿ ಬಹುಶ: ಸಂದರ್ಶನ ಸಮಿತಿಯ ಚೇರ್ಮನ್ ಇರಬಹುದು ಆತ ಸಂದರ್ಶನವು ಅಂತಿಮ ಘಟಕ್ಕೆ ಬಂದಿರುವ ಸೂಚನೆಯೆಂಬಂತೆ ವಿವರಣೆ ನೀಡಿದ ‘ನೀವು ಸಮಿತಿಯ ಯಾವ ಪ್ರಶ್ನೆಗೂ ಉತ್ತರಿಸುತ್ತಿಲ್ಲ. ನಿಮ್ಮ ವರ್ತನೆ ಮತ್ತು ನೀವು ಒದಗಿಸಿದ ಮಾಹಿತಿ ಅನುಮಾನಾಸ್ಪದವಾಗಿ ಕಂಡುಬರುತ್ತಿದೆ. ಸಮಿತಿಯು ಮತ್ತೊಮ್ಮೆ ಸಭೆಸೇರಿ ನಿಮ್ಮನ್ನು ಕೆಲಸದಲ್ಲಿ ಮುಂದುವರೆಸಬೇಕೋ ಅಥವಾ ಇಲ್ಲವೋ ಎನ್ನುವುದನ್ನು ನಿರ್ಧರಿಸಲಿದೆ. ಸಮಿತಿಯ ಅಂತಿಮ ನಿರ್ಧಾರದವರೆಗೂ ನೀವು ಕೆಲಸಕ್ಕೆ ಹಾಜರಾಗುವಂತಿಲ್ಲ. ಈ ಅವಧಿಯ ನಿಮ್ಮ ಗೈರುಹಾಜರನ್ನು ತಾತ್ಕಾಲಿಕ ರಜೆ ಎಂದು ಪರಿಗಣಿಸಲಾಗುವುದು. ನಿಮ್ಮ ನೌಕರಿಯ ವಿಷಯದಲ್ಲಿ ಆಡಳಿತ ಮಂಡಳಿಯದೇ ಅಂತಿಮ ನಿರ್ಧಾರ. ಯಾವುದಕ್ಕೂ ಇನ್ನೆರಡು ದಿನಗಳಲ್ಲಿ ಕಂಪನಿಯ ನಿರ್ಧಾರ ರಿಜಿಸ್ಟರ್ಡ್ ಪೋಸ್ಟ್ ಮೂಲಕ ನಿಮ್ಮ ಕೈಸೇರಲಿದೆ. ಗುಡ್‌ಲಕ್’ ಎಂದು ಹೇಳಿ ಮಾತು ಮುಗಿಸಿದ. 

* * *

‘ನಿಮ್ಮ ಅಪ್ಪ ಮಾಡಿದ ಕಿತಾಪತಿಯಿಂದ ಈಗ ನಾವು ಅನುಭವಿಸಬೇಕಾಗಿ ಬಂದದ ನೋಡ್ರಿ. ಯಾಕ ಆ ವೆಂಕೋಬರಾಯಗ ಬೇರೆ ಯಾವ ಹೆಸರೂ ಸಿಗ್ಲಿಲ್ಲೇನು. ಇದೇ ಹೆಸರು ಬೇಕಾಗಿತ್ತೇನು. ತನಗೇನೋ ಕಥಿ ಮನಸ್ಸಿಗಿ ಹಿಡಿಸಿತು ಅಂತ ಆ ಕಥಿ ಬರೆದವನ ಹೆಸರು ನಿಮಗಿಟ್ಟು ಎಲ್ಲ ಹಾಳ್ಮಾಡಿ ಬಿಟ್ಟ. ನೀವೋ ಗುಡ್ಯಾಗ ಲಿಂಗದ ಎದುರು ಕೂತ ಬಸವಣ್ಣನಂಗ. ಅಪ್ಪ ಇಟ್ಟ ಹೆಸರಿಗಿ ಯಾವ ಕಳಂಕಾನೂ ಬರದಂಗ ವೆಂಕೋಬರಾಯನ ಮಾನ ಕಾಪಾಡ್ಲಿಕತ್ತಿರಿ. ಧೋಬಿ ಕಾ ಕುತ್ತಾ ನ ಘರ್ ಕಾ ನ ಘಾಟ್ ಕಾ ಅನ್ನೊಹಂಗ ಪರಿಸ್ಥಿತಿ ತಂದಿಟ್ಟೀರಿ. ನನ್ನ ಜೀವ ಅಂತೂ ಸೋತು ಸುಣ್ಣ ಆಗ್ಯಾದ. ಹಾಳಾದ ಹೆಸರು ಸುಟ್ಟು ಹೋಗಲಿ’ ಕಂಪನಿಯ ಹೆಡ್ ಆಫೀಸಿನಿಂದ ಬಂದ ಪತ್ರ ಓದಿದ್ದೆ ಸರಳಾಬಾಯಿ ಗಂಡ ಪ್ರೇಮಚಂದನನ್ನು ತರಾಟೆಗೆ ತೆಗೆದುಕೊಂಡಿದ್ದಳು. ಸಂದರ್ಶನದ ನಾಲ್ಕು ದಿನಗಳ ನಂತರ ಕಂಪನಿಯ ಪತ್ರ ರಿಜಿಸ್ಟರ್ಡ್ ಪೋಸ್ಟ್ ಮೂಲಕ ಕೈಸೇರಿದಾಗ ಪ್ರೇಮಚಂದ ಮಧ್ಯಾಹ್ನದ ಊಟ ಮುಗಿಸಿ ಒಂದು ಸಣ್ಣ ನಿದ್ದೆ ತೆಗೆಯಲೆಂದು ಹಾಸಿಗೆಯ ಮೇಲೆ ಅಡ್ಡಾಗುವ ತಯ್ಯಾರಿಯಲ್ಲಿದ್ದ. ಅದೇಕೋ ಸಂದರ್ಶನದ ನಂತರ ನೌಕರಿಯಿಂದ ವಜಾಗೊಂಡೆ ಎಂದೇ ಭಾವಿಸಿದ್ದ ಪ್ರೇಮಚಂದನಲ್ಲಿ ಒಂದುರೀತಿಯ ನಿರಾಳತೆ ಮನೆಮಾಡಿತ್ತು. ಈ ನಾಲ್ಕು ದಿನಗಳನ್ನು ಅವನು ಯಾವ ಆತಂಕವಿಲ್ಲದೆ ಕಳೆದಿದ್ದರೂ ಸರಳಾಬಾಯಿ ಮಾತ್ರ ಕಂಪನಿಯಿಂದ ಬರಬೇಕಿದ್ದ ಪತ್ರಕ್ಕಾಗಿ ಕ್ಷಣವನ್ನು ಯುಗವಾಗಿಸಿ ಕಾಯ್ದಿದ್ದಳು. ಪತ್ರ ಓದಿದ್ದೆ ಸರಳಾಬಾಯಿ ತಲೆ ಮೇಲೆ ಕೈಹೊತ್ತು ಚಿಂತಾಕ್ರಾಂತಳಾಗಿ ಕುಳಿತಳು. ಪತ್ರ ಓದಿದ ಪ್ರೇಮಚಂದನಿಂದ ಯಾವ ಪ್ರತಿಕ್ರಿಯೆಯೂ ಬಾರದಿದ್ದಾಗ ಸಹಜವಾಗಿಯೇ ಕೋಪಗೊಂಡವಳು ಗಂಡನನ್ನು ತರಾಟೆಗೆ ತೆಗೆದುಕೊಂಡಿದ್ದಳು. 

ಸಾರಂಶ ರೂಪದಲ್ಲಿ ಹೇಳುವುದಾದರೆ ಕಂಪನಿಯ ನಿರ್ಧಾರ ಹೀಗಿತ್ತು- ‘ಕಂಪನಿಯ ಹೊಸ ಆಡಳಿತ ಮಂಡಳಿಯ ನಿಯಮಗಳಿಗೆ ಹೊಂದಿಕೊಳ್ಳಬಹುದಾದ ಮುಖಚಹರೆ ನಿಮಗಿಲ್ಲ. ನಿಮ್ಮ ಹೆಸರು, ನಿಮ್ಮ ಮುಖದ ಚಹರೆ ಮತ್ತು ನಿಮ್ಮ ಸಮುದಾಯ ಇವುಗಳ ನಡುವೆ ಯಾವ ಹೊಂದಾಣಿಕೆಯೂ ನಮಗೆ ಕಾಣಿಸುತ್ತಿಲ್ಲ. ಸಮುದಾಯದ ಹಲವು ಶ್ರೀಮಠಗಳನ್ನು ಸಂಪರ್ಕಿಸಿ ನಿಮ್ಮ  ಹೆಸರಿನ ಕುರಿತು ಇರಬಹುದಾದ ಗೋಜಲನ್ನು ಸ್ಪಷ್ಟಪಡಿಸಿಕೊಳ್ಳಲು ಸಂದರ್ಶನ ಸಮಿತಿಯು ಪ್ರಯತ್ನಿಸಿತು. ಸಮುದಾಯದ ರೀತಿರಿವಾಜುಗಳನ್ನು ಅಭಿವ್ಯಕ್ತಿಸುವ ಹೆಸರು ನಿಮ್ಮದಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿರುವ ಮಠಗಳ ಯತಿಗಳು ತಮ್ಮ ಜಾತಿಯನ್ನು ದುರುಪಯೋಗ ಪಡಿಸಿಕೊಂಡಿದ್ದಕ್ಕೆ ಪ್ರತಿಯಾಗಿ ನಿಮ್ಮ ಮೇಲೇಕೆ ದಾವೆ ಹೂಡಬಾರದೆಂದು ನಮ್ಮನ್ನು ಪ್ರಶ್ನಿಸಿದ್ದಾರೆ. ಕಳೆದ ಇಪ್ಪತ್ತೈದು ವರ್ಷಗಳಿಂದ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿರುವ ನಿಮ್ಮನ್ನು ಇದ್ದಕ್ಕಿದ್ದಂತೆ ನೌಕರಿಯಿಂದ ವಜಾಗೊಳಿಸಲು ಆಡಳಿತ ಮಂಡಳಿಗೂ ಇಚ್ಛೆಯಿಲ್ಲ. ಹಾಗೆಂದು ಮಂಡಳಿಯ ನಿಯಮಗಳಿಗೆ ವಿರುದ್ಧವಾಗಿ ನಿಮ್ಮನ್ನು ಕೆಲಸದಲ್ಲಿ ಮುಂದುವರೆಸುವಂತೆಯೂ ಇಲ್ಲ. ಹದಿನೈದು ದಿನಗಳ ಕಾಲಾವಕಾಶವನ್ನು ನಿಮಗೆ ನೀಡಲಾಗಿದೆ. ಈ ಹದಿನೈದು ದಿನಗಳಲ್ಲಿ ನೀವು ಅರ್ಜಿಯಲ್ಲಿ ನಮೂದಿಸಿರುವ ಸಮುದಾಯಕ್ಕೆ ಸೇರಿದವರೆಂದು ರುಜುವಾತು ಪಡಿಸಬೇಕು ಮತ್ತು ಕಂಪನಿಯ ನೀತಿ ನಿಯಮಗಳು ನಿಮ್ಮ ಮುಖದ ಚಹರೆಯಲ್ಲಿ ಪ್ರತಿಬಿಂಬಿಸಬೇಕು. ಹಾಗೊಂದು ವೇಳೆ ಮೇಲೆ ಉಲ್ಲೇಖಿಸಿದ ಸಂಗತಿಗಳನ್ನು ನೀವು ಸಾಬೀತು ಪಡಿಸದೆ ಹೋದಲ್ಲಿ ಈ ಪತ್ರವನ್ನೇ ನಿಮ್ಮನ್ನು ನೌಕರಿಯಿಂದ ವಜಾಗೊಳಿಸಿದ ಆದೇಶ ಪತ್ರವೆಂದು ಪರಿಗಣಿಸತಕ್ಕದ್ದು’. 

ಆ ರಾತ್ರಿ ಸರಳಾಬಾಯಿಗೆ ಭವಿಷ್ಯ ಅಂಧಕಾರದಲ್ಲಿ ಮುಳುಗಿದಂತಾಗಿ ನಿದ್ದೆ ಹತ್ತಿರ ಸುಳಿಯದೆ ಅವಳ ಮನಸ್ಸು ಒಂದುರೀತಿಯ ಕ್ಷೋಭೆಯಿಂದ ನರಳಿತು. ರಾತ್ರಿಯೆಲ್ಲ ನಿದ್ದೆಗೆಟ್ಟು ಯೋಚಿಸಿದವಳಿಗೆ ಶೇಷಗಿರಿ ಪುರೋಹಿತನನ್ನು ಪ್ರೇಮಚಂದ ಭೇಟಿ ಮಾಡಿದರೆ ಸಮಸ್ಯೆಗೆ ಪರಿಹಾರ ಸಿಗಬಹುದೆಂಬ ಭರವಸೆ ಮನಸ್ಸಿನಲ್ಲಿ ಮೂಡಿದ್ದೆ ಅದನ್ನು ಮರುದಿನ ಬೆಳಗ್ಗೆ ಗಂಡನ ಮನವೊಲಿಸಿ ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾದಳು.

* * *

ಇಪ್ಪತ್ತೈದು  ವರ್ಷಗಳಿಂದ ಶೇಷಗಿರಿ ಪುರೋಹಿತ ಮತ್ತು ಪ್ರೇಮಚಂದ ಕಂಪನಿಯ ಬ್ರ್ಯಾಂಚ್  ಆಫೀಸಿನಲ್ಲಿ ಕೂಡಿಯೇ ಕೆಲಸ ಮಾಡುತ್ತಿದ್ದರೂ ಅವರಿಬ್ಬರ ನಡುವೆ ಹೇಳಿಕೊಳ್ಳುವಂತಹ ಗೆಳೆತನವೇನಿರಲಿಲ್ಲ. ನಗರಸಭೆ ಎಲೆಕ್ಶನ್‌ನಲ್ಲಿ ಕೇಶವರಾವ್ ಸಾಳುಂಕೆ ಅವರ ಅಳಿಯನ ಗೆಲುವಿಗಾಗಿ ತನ್ನ ಸಮುದಾಯದ ಮತಗಳನ್ನು ಕ್ರೋಢಿಕರಿಸುವಲ್ಲಿ ನೆರವಾಗಿದ್ದ ಶೇಷಗಿರಿ ಪುರೋಹಿತ ಆ ಒಂದು ಕಾರಣದಿಂದ ಕಂಪನಿಯ ಮುಖ್ಯಸ್ಥರಿಗೆ ಹತ್ತಿರವಾಗಿದ್ದ. ಅಂತರಂಗದಲ್ಲಿ ಮಾತ್ರವಲ್ಲದೆ ಬಾಹ್ಯನೋಟದಲ್ಲೂ ತನ್ನ ಸಮುದಾಯದ ಎಲ್ಲ ಲಕ್ಷಣಗಳನ್ನು ರೂಢಿಸಿಕೊಂಡಿದ್ದ ಶೇಷಗಿರಿ ಸಮಾಜದಲ್ಲೂ ತಕ್ಕಮಟ್ಟಿಗೆ ಹೆಸರು ಸಂಪಾದಿಸಿದ್ದ. ಬಾಗಿಲು ತೆರೆದು ಹೊರಬಂದ ಶೇಷಗಿರಿ ಪುರೋಹಿತನನ್ನು ಗುರುತಿಸಲು ಪ್ರೇಮಚಂದನಿಗೆ ಕೆಲವು ಕ್ಷಣಗಳೇ ಹಿಡಿದವು. ಸದಾಕಾಲ ಭ್ರೂಮಧ್ಯದಲ್ಲಿ ಪ್ರತಿಷ್ಠಾಪಿತಗೊಂಡಿರುತ್ತಿದ್ದ ಮಂತ್ರಾಕ್ಷತೆ ಸಹಿತ ಉದ್ದನೆಯ ತಿಲಕ, ಹಣೆಯ ಎಡಬಲದಲ್ಲಿ ಗಂಧದಿಂದ ನಿರ್ಮಾತೃಗೊಂಡಿರುತ್ತಿದ್ದ ಶಂಖ ಮತ್ತು ಚಕ್ರ, ತಲೆಯ ಹಿಂಭಾಗದಲ್ಲಿ ದೃಷ್ಟಿಗೆ ಗೋಚರವಾಗುತ್ತಿದ್ದ ಶಿಖೆ ಕಳೆದ ಇಪ್ಪತ್ತೈದು ವರ್ಷಗಳಿಂದ ಶೇಷಗಿರಿ ಪುರೋಹಿತನ ಮುಖಚಹರೆ ಮನಸ್ಸಲ್ಲಿ ಅಚ್ಚೊತ್ತು ನಿಂತಿತ್ತು. ಆದರೆ ಈ ದಿನ ಆ ಪರಿಚಿತ ಚಹರೆ ಬದಲು ಅಪರಿಚಿತ ಚಹರೆ ಎದುರು ನಿಂತಂತೆ ಭಾಸವಾಯಿತು. ಮುಖದಲ್ಲಿ ತಿಲಕ, ಶಂಖ, ಚಕ್ರ ಮಾಯವಾಗಿದ್ದವು. ತಲೆಯ ಹಿಂದಿನ ಶಿಖೆ ತುಂಡಾಗಿತ್ತು.

‘ಬಾರಯ್ಯ ಪ್ರೇಮಚಂದ ಕಾಲಕ್ಕೆ ತಕ್ಕಂತೆ ವೇಷ ಧರಿಸದಿದ್ದರೆ ಬದುಕೋದು ಕಷ್ಟ ಕಣಯ್ಯಾ ಈ ಜಗತ್ತಿನಲ್ಲಿ. ಐದು ವರ್ಷಗಳ ಹಿಂದೆ ಮಧ್ಯಾರಾಧನೆ ದಿನ ಮಠದಿಂದ ಸನ್ಮಾನಿತರಾಗುವವರ ಪಟ್ಟಿಯಲ್ಲಿ ನಿನ್ನ ಹೆಸರು ಸೇರಿಸೊದಕ್ಕ ಹರಸಾಹಸ ಮಾಡಬೇಕಾಯ್ತು. ಕೊನೆಗೂ ಮಠದವರು ನೀನು ನಮ್ಮ ಸಮುದಾಯದವನೇ ಅಲ್ಲ ಅಂತ ಹಟ ಹಿಡಿದು ಪಟ್ಟಿಯಿಂದ ನಿನ್ನ ಹೆಸರು ತೆಗೆದುಬಿಟ್ಟರು. ನಿನ್ನ ಹೆಸರು, ಮುಖದ ಚಹರೆ ಸಮುದಾಯದೊಂದಿಗೆ ಸ್ವಲ್ಪನೂ ಮ್ಯಾಚ್ ಆಗ್ತಿಲ್ಲ. ಈಗ ನೌಕರಿಗೇ ಕಂಟಕ ಬಂದು ಬಿಟ್ಟಿದೆ ಅಲ್ಲೋ ಮಾರಾಯಾ. ನಿನ್ನ ಮರ‍್ಯಾಗ ಯಾವ ಬದಲಾವಣಿನೂ ಕಾಣಿಸ್ತಿಲ್ಲ. ಊರಾಗ ಮುಖಾರವಿಂದ ಅಂತ ಹೊಸ ಅಂಗಡಿ ಬಂದದಂತ. ಅವರು ಎಂಥದ್ದು ಬೇಕು ಅಂಥದ್ದು ಚಹರಾ ರೂಪಿಸಿ ಕೊಡ್ತಾರಂತ. ಚಹರಾ ಬದಲಾವಣೆ ವಿದ್ಯಾ ನನಗ ಸಿದ್ಧಿಸಿರೊದರಿಂದ ನಾನೇನೂ ಆ ಅಂಗಡಿಗಿ ಭೇಟಿ ಕೊಟ್ಟಿಲ್ಲ. ನೀನು ಹೋಗಿ ಒಂದಿಷ್ಟು ಚಹರಾ ಬದಲಾಯಿಸಿಕೊಂಡು ಬಾ’ ಎಂದ ಶೇಷಗಿರಿ ಪುರೋಹಿತ ಅಂಗಡಿಯ ವಿಳಾಸ ಹೇಳಿ ಪ್ರೇಮಚಂದನನ್ನು ಸಾಗುಹಾಕಿದ್ದ.

* * *

ಆಟೋದಿಂದ ಕೆಳಗಿಳಿದ ಪ್ರೇಮಚಂದನ ಕಣ್ಣಿಗೆ ಕಾಮತ್ ಹೋಟೆಲಿನ ಮೇಲಿನ ಅಂತಸ್ತಿನಲ್ಲಿ ತೂಗುಹಾಕಿದ್ದ ಆಳೆತ್ತರದ ‘ಮುಖಾರವಿಂದ’ ಎನ್ನುವ ಬೋರ್ಡ್ ಗೋಚರಿಸಿತು. ಮುಖಾರವಿಂದ ಶೀರ್ಷಿಕೆಯ ಕೆಳಗೆ ಸಣ್ಣ ಅಕ್ಷರಗಳಲ್ಲಿದ್ದ ಬದುಕು ಬದಲಿಸುತ್ತೇವೆ ಎನ್ನುವ ಅಡಿ ಟಿಪ್ಪಣಿ ಪ್ರೇಮಚಂದನನ್ನು ವಿಶೇಷವಾಗಿ ಆಕರ್ಷಿಸಿತು. ಜನನಿಬಿಡ ಪ್ರದೇಶದ ಆಯಕಟ್ಟಿನ ಜಾಗದಲ್ಲಿ ಆರಂಭಗೊಂಡ ಮಳಿಗೆ ಕಳೆದ ಹದಿನೈದು ದಿನಗಳಿಂದ ನಗರದ ಪ್ರಮುಖ ಆಕರ್ಷಣೆಯಾಗಿತ್ತು. ಮೊದಲೇ ಅಪಾಯಿಂಟ್‌ಮೆಂಟ್ ತೆಗೆದುಕೊಂಡಿದ್ದರಿಂದ ರಿಸೆಪ್ಷನ್ ಕೌಂಟರ್‌ನಲ್ಲಿ ಕುಳಿತಿದ್ದ ಮಹಿಳೆ ಪ್ರೇಮಚಂದನನ್ನು ನೋಡುತ್ತಲೇ ಎದ್ದು ನಿಂತು ಸ್ವಾಗತಿಸಿ ಕರೆದೊಯ್ದು ಗೆಸ್ಟ್ ರೂಮಿನಲ್ಲಿ ಕೂಡಿಸಿದಳು. ಈಗಾಗಲೇ ಗೆಸ್ಟ್ ರೂಮಿನಲ್ಲಿ ನಾಲ್ಕೈದು  ಜನ ಮೊದಲೆ ಅಪಾಯಿಂಟ್‌ಮೆಂಟ್ ಪಡೆದು ಮುಖಚಹರೆಯ ಬದಲಾವಣೆಯ ಚಿಕಿತ್ಸೆಗೆಂದು ಬಂದು ಕುಳಿತಿದ್ದರು. ಅಲ್ಲಿ ಪ್ರೊಫೆಸರ್ ಕಾಳಪ್ಪ ಅವರನ್ನು ನೋಡಿ ಪ್ರೇಮಚಂದನಿಗೆ ಅಚ್ಚರಿಯಾಯಿತು. ಕಲಬುರಗಿಯ ಎಸ್.ಬಿ ಕಾಲೇಜಿನಲ್ಲಿ ಪ್ರೇಮಚಂದ ಡಿಗ್ರಿ ಓದುತ್ತಿದ್ದಾಗ ಅಲ್ಲಿ ಕಾಳಪ್ಪ ಇಂಗ್ಲಿಷ್ ಬೋಧಿಸುತ್ತಿದ್ದರು. ಯೇಟ್ಸ್, ಶೇಕ್‌ಸ್ಪಿಯರ್, ಕಮೂ, ಕಾಫ್ಕಾರನ್ನು ಬೋಧಿಸುವಾಗಲೆಲ್ಲ ಕಾಳಪ್ಪ ಅಕ್ಷರಶ: ಅವರನ್ನೆಲ್ಲ ತಮ್ಮೊಳಗೆ ಆವಾಹಿಸಿಕೊಂಡಿರುವರೇನೋ ಎಂದು ಭಾಸವಾಗುತ್ತಿತ್ತು. ಬೋದಿಲೇರನ ದಿ ಫ್ಲಾವರ್ಸ್ ಆಫ್ ಈವಿಲ್ ಕವನ ಸಂಕಲನದಿಂದ ಕವಿತೆ ಓದುವಾಗ ಇದೇ ಕಾಳಪ್ಪ ಕ್ಲಾಸ್ ರೂಮಿನಲ್ಲಿ ವಿದ್ಯಾರ್ಥಿಗಳೆದುರು ಬಿಕ್ಕಿ ಬಿಕ್ಕಿ ಅತ್ತಿದ್ದು ಇವತ್ತಿಗೂ ಪ್ರೇಮಚಂದನ ಕಣ್ಣಿಗೆ ಕಟ್ಟಿದಂತಿದೆ. ನಿವೃತ್ತರಾಗಿ ಮೂವತ್ತು ವರ್ಷಗಳಾದರೂ ತೊಂಬತ್ತರ ಇಳಿ ವಯಸ್ಸಿನಲ್ಲೂ ಲಾಭಿ ಶಿಫಾರಸುಗಳ ಸಹಾಯದಿಂದ ವಿಶ್ವವಿದ್ಯಾಲಯದ ಆಯಕಟ್ಟಿನ ಜಾಗವನ್ನು ಭದ್ರವಾಗಿ ವಕ್ಕರಿಸಿಕೊಂಡಿರುವರೆಂದು ಆಗಾಗ ಅವರ ಹಳೆಯ ವಿದ್ಯಾರ್ಥಿಗಳ ಮಾತಿನ ನಡುವೆ ಈ ವಿಷಯ ಚರ್ಚೆಗೆ ಬರುತ್ತಿತ್ತು. 

ಪ್ರೇಮಚಂದ ಹತ್ತಿರ ಹೋಗಿ ನಮಸ್ಕರಿಸಿ ತನ್ನ ಪರಿಚಯ ಹೇಳಿಕೊಂಡ. ಪ್ರೊಫೆಸರ್ ಕಾಳಪ್ಪ ತಮ್ಮ ಗತದ ನೆನಪುಗಳನ್ನು ಉತ್ಖನನಗೊಳಿಸಿ ಅಲ್ಲಿ ಪ್ರೇಮಚಂದನ ಚಿತ್ರಕ್ಕಾಗಿ ಹುಡುಕಾಡಿ ಸೋತರು. ಪ್ರೇಮಚಂದ ತನ್ನ ಬ್ಯಾಚಿನ ನಾಲ್ಕಾರು ವಿದ್ಯಾರ್ಥಿಗಳ ಹೆಸರು ಹೇಳಿದ. ಆಗಲೂ ಪ್ರೊಫೆಸರ್ ನೆನಪು ಕೈಕೊಟ್ಟಿತು. ಈ ನಡುವೆ ವಿಶ್ವವಿದ್ಯಾಲಯಕ್ಕೆ ನಾಮಧಾರಿ ವ್ಯಕ್ತಿ ವೈಸ್‌ಚಾನ್ಸಲರ್‌ರಾಗಿ ಬರುತ್ತಿರುವುದರಿಂದ ತಮ್ಮ ಸ್ಥಾನಕ್ಕೆ ಧಕ್ಕೆ ಉಂಟಾಗಲಿದ್ದು ಅದಕ್ಕೆಂದೆ ಹೊಸ ವೈಸ್‌ಚಾನ್ಸಲರ್ ಸಮುದಾಯದ ಚಹರೆಯನ್ನು ತಮ್ಮ ಮುಖದಲ್ಲಿ ಆವಿರ್ಭವಿಸಿಕೊಳ್ಳಲು ಬಂದಿರುವುದಾಗಿ ಹೇಳಿದರು. ಅಷ್ಟರಲ್ಲಿ ರಿಸೆಪ್ಶನ್ ಕೌಂಟರ್‌ನಲ್ಲಿದ್ದ ಮಹಿಳೆ ಪರಿಣಿತರು ಕರೆಯುತ್ತಿರುವರೆಂದು ಇಬ್ಬರನ್ನೂ ಒಳಗೆ ಕರೆದೊಯ್ದಳು. ಪ್ರೇಮಚಂದ ತನ್ನ ಕಂಪನಿಯ ನಿಯಮಗಳಿದ್ದ ಕೈಪಿಡಿಯನ್ನು ಪರಿಣಿತ ವ್ಯಕ್ತಿಗೆ ಕೊಟ್ಟು ಅವರು ತೋರಿಸಿದ ಕುರ್ಚಿಯಲ್ಲಿ ಕುಳಿತ. ಎದುರಿನ ವಿಶಾಲವಾದ ಕನ್ನಡಿಯಲ್ಲಿ ತನ್ನ ಪಕ್ಕದ ಕುರ್ಚಿಯಲ್ಲಿ ಪ್ರೊಫೆಸರ್ ಕಾಳಪ್ಪ ಕುಳಿತಿರುವುದು ಗೋಚರಿಸಿ ಪ್ರೇಮಚಂದ ಮುಗುಳುನಕ್ಕ. ಕಾಳಪ್ಪನವರ ಮುಖದ ತುಂಬೆಲ್ಲ ಚಿತ್ರವಿಚಿತ್ರವಾದ ಕಾಗದಗಳನ್ನು ಅಂಟಿಸಿದ್ದರಿಂದ ಪ್ರೇಮಚಂದ ತಮ್ಮನ್ನು ನೋಡಿ ಮುಗುಳುನಕ್ಕಿದ್ದು ಅವರ ಗಮನಕ್ಕೆ ಬರಲಿಲ್ಲ.

ಮೂರು ಗಂಟೆಗಳ ಸತತ ಪ್ರಯತ್ನದ ನಂತರವೂ ಪ್ರೇಮಚಂದನ ಮುಖದಲ್ಲಿ ಹೊಸ ಚಹರೆಯನ್ನು ರೂಪಿಸಲು ಪರಿಣಿತರು ವಿಫಲರಾದರು. ಅಚ್ಚರಿಯ ಸಂಗತಿ ಎಂದರೆ ಪ್ರೊಫೆಸರ್ ಕಾಳಪ್ಪನವರ ಮುಖದಲ್ಲಿ ಹೊಸಚಹರೆಯೊಂದು ಆವಿರ್ಭವಿಸಿ ಅವರು ಹೊಸ ವ್ಯಕ್ತಿಯಾಗಿ ಕಾಣಿಸತೊಡಗಿದರು. ಪ್ರೇಮಚಂದನಿಗೆ ಎಲ್ಲವೂ ಅಯೋಮಯವೆನಿಸಿತು. ಅಂಗಡಿಯ ಮುಖ್ಯಸ್ಥ ಪ್ರೇಮಚಂದನನ್ನು ತನ್ನ ಚೇಂಬರಿಗೆ ಕರೆದೊಯ್ದು ಹೇಳಿದ ‘ನಿಮ್ಮಲ್ಲಿ ಯಾವ ಪ್ರಲೋಭನೆಗಳೂ ಇದ್ದಂತೆ ತೋರುತ್ತಿಲ್ಲ. ವೈರಾಗ್ಯವೇ ನಿಮ್ಮ ಮೈ ಮತ್ತು ಮನಸ್ಸನ್ನು ಆವರಿಸಿಕೊಂಡಿರಬಹುದು. ಈ ಕಾರಣದಿಂದ ನಿಮ್ಮ ಮುಖದಲ್ಲಿ ಹೊಸ ಚಹರೆಯನ್ನು ರೂಪಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಅದೇ ಪ್ರೊಫೆಸರ್ ಕಾಳಪ್ಪ ಅವರನ್ನು ನೋಡಿ. ಮುಖದ ಸ್ನಾಯುಗಳು ಸಡಿಲುಗೊಂಡು ಚರ್ಮ ಸುಕ್ಕುಗಟ್ಟಿ ಜೊತು ಬಿದ್ದಿದ್ದರೂ ಅವರ ಮುಖದಲ್ಲಿ ಹೊಸ ಚಹರೆ ರೂಪಿಸಲು ಸಾಧ್ಯವಾಯಿತು. ಇದರರ್ಥ ಈ ಇಳಿ ವಯಸ್ಸಿನಲ್ಲೂ ಅವರಲ್ಲಿ ಬತ್ತದ ಮಹತ್ವಾಕಾಂಕ್ಷೆ ಇದೆ, ಪ್ರಶಸ್ತಿ ಗೌರವಗಳ ವಾಂಛೆ ಇದೆ, ಬೇರೆಯವರನ್ನು ತುಳಿದಾದರೂ ಸರಿ ತಾನು ಬೆಳೆಯಬೇಕೆಂಬ ಹಂಬಲವಿದೆ ಎಂದು. ಈ ಗುಣಗಳಿಂದಾಗಿ ಅವರ ಮುಖದಲ್ಲಿ ಹೊಸ ಚಹರೆ ಹುಟ್ಟಲು ಕೇವಲ ಅರ್ಧಗಂಟೆ ಸಾಕಾಯಿತು’.

* * *

ಉಪಸಂಹಾರ: ಸಂದರ್ಶನ ಸಮಿತಿಯು ಪತ್ರದಲ್ಲಿ ಉಲ್ಲೇಖಿಸಿದ ಸಂಗತಿಗಳನ್ನು ಸಾಬೀತು ಪಡಿಸಲು ವಿಫಲನಾದ ಹಿನ್ನೆಲೆಯಲ್ಲಿ ಕಂಪನಿಯು ಪ್ರೇಮಚಂದನನ್ನು ನೌಕರಿಯಿಂದ ವಜಾಗೊಳಿಸಿದೆ. ಮಠವೊಂದರ ಆಡಳಿತ ಮಂಡಳಿಯು ಜಾತಿಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಕೋರ್ಟಿನಲ್ಲಿ ದಾವೆ ಹೂಡಿದೆ. ಸರಳಾಬಾಯಿಯ ಆತಂಕ ದಿನೆದಿನೆ ಹೆಚ್ಚುತ್ತಿದ್ದು ಗಂಡನ ಮುಖದಲ್ಲಿ ಹೊಸ ಚಹರೆ ಆವಿರ್ಭವಿಸುವ ಕ್ಷಣಕ್ಕಾಗಿ ಕಾತುರದಿಂದ ಕಾದುಕುಳಿತಿದ್ದಾಳೆ. ಈ ನಡುವೆ ಶೇಷಗಿರಿ ಪುರೋಹಿತನ ಸಲಹೆಯಂತೆ ಸರಳಾಬಾಯಿ ಗಂಡನ ಹೆಸರನ್ನು ಬದಲಿಸುವ ಸಾಧ್ಯವಾದರೆ ಮುಖದಲ್ಲಿ ಕೃತಕ ಚಹರೆ ಸೃಷ್ಟಿಸಲು ಶಸ್ತ್ರಚಿಕಿತ್ಸೆ ಮಾಡಿಸುವ ಹವಣಿಕೆಯಲ್ಲಿರುವಳು. ಈ ಎಲ್ಲ ಆತಂಕ, ಗೊಂದಲಗಳ ನಡುವೆಯೂ ಪ್ರೇಮಚಂದ ಹೊಸ ನೌಕರಿ ಹುಡುಕುತ್ತ ಓದು ಬರಹದಲ್ಲಿ ತೊಡಗಿಸಿಕೊಂಡು ನೆಮ್ಮದಿಯಿಂದಿರುವನು.

* * *

-ರಾಜಕುಮಾರ ಕುಲಕರ್ಣಿ

Monday, April 4, 2022

ಅಂತರವಿರಲಿ... ಅದು ಅಂತರಂಗದ ಸಂಗತಿ

      


       ಬೆಳಗ್ಗಿನ ವಾಕಿಂಗ್ ಮುಗಿಸಿ ಮನೆಗೆ ಮರಳಿ ಬರುತ್ತಿರುವಾಗ ನನ್ನೆದುರು ನಡೆದುಕೊಂಡು ಹೋಗುತ್ತಿದ್ದ ಮಹನಿಯರಿಬ್ಬರು ತಾವಿರುವುದು ರಸ್ತೆಯಲ್ಲಿ ಎಂಬುದನ್ನೂ ಮರೆತು ಗಹನವಾದ ಮಾತುಗಳಲ್ಲಿ ತೊಡಗಿಕೊಂಡಿದ್ದರು. ಅವರ ಇಡೀ ಮಾತಿನುದ್ದಕ್ಕೂ ಬೇರೆ ವ್ಯಕ್ತಿಯ ಕುರಿತು ಅಸಹನೆ, ದ್ವೇಷ, ಸಿಟ್ಟು, ಭರ್ತ್ಸನೆ ವ್ಯಕ್ತವಾಗುತ್ತಿದವು. ತಮ್ಮ ಕೋಪಕ್ಕೆ ಕಾರಣನಾದ ವ್ಯಕ್ತಿಯನ್ನು ಅಪಮಾನಗೊಳಿಸಲು ಸೂಕ್ತ ಸಂದರ್ಭಕ್ಕಾಗಿ ಅವರು ಕಾಯುತ್ತಿದ್ದದ್ದು ಅವರಿಬ್ಬರ ಸಂಭಾಷಣೆಯಿಂದ ಅರ್ಥವಾಗುತ್ತಿತ್ತು. ಮಾತಿನ ನಡುವೆ ಅವರಿಬ್ಬರು ಅದೇ ಆಗ ಆಧ್ಯಾತ್ಮದ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮರಳಿ ಬರುತ್ತಿರುವರೆಂದು ಗೊತ್ತಾಯಿತು. ಕೆಲವು ಕ್ಷಣಗಳ ಹಿಂದಷ್ಟೆ ಆಧ್ಯಾತ್ಮದ ವಿಚಾರಗಳನ್ನು ಆಲಿಸಿದವರು ಎಷ್ಟು ಬೇಗ ಲೌಕಿಕ ಬದುಕಿನ ತಾಮಸ ಗುಣಗಳಿಗೆ ಮರಳಿದರೆಂದು ನನಗೆ ಖೇದವಾಯಿತು.

ಇತ್ತೀಚೆಗೆ ನನ್ನ ಸ್ನೇಹಿತನ ಊರಿನಲ್ಲಿ ಆಧ್ಯಾತ್ಮ ಪ್ರಸಾರ ಮಂಡಳಿಯೊಂದು ಹತ್ತು ದಿನಗಳ ಆಧ್ಯಾತ್ಮ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಊರ ಮಧ್ಯದ ವಿಶಾಲವಾದ ಶಾಲಾ ಮೈದಾನದಲ್ಲಿ ಸಾವಿರಾರು ಜನ ಕೂಡಬಹುದಾದ ಬೃಹತ್ ಸಭಾಂಗಣವನ್ನು ನಿರ್ಮಿಸಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸಾರ್ವಜನಿಕರಿಗೆ ಉಚಿತ ಆಧ್ಯಾತ್ಮ ತರಬೇತಿ ನೀಡಲಾಯಿತು. ದಿನದ ತರಬೇತಿಯ ಕೊನೆಯಲ್ಲಿ ಸಭಾಂಗಣದ ಪ್ರವೇಶ ಬಾಗಿಲ ಹತ್ತಿರದ ಮಳಿಗೆಯಲ್ಲಿ ಜನರು ಆಧ್ಯಾತ್ಮ ಸಂಬಂಧಿತ ಪುಸ್ತಕಗಳನ್ನು ಮತ್ತು ಸಿ.ಡಿಗಳನ್ನು ಮುಗಿಬಿದ್ದು ಖರೀದಿಸಿದರು. ಜೊತೆಗೆ ಮಾರಾಟಕ್ಕಿಟ್ಟಿದ್ದ ತರೆವಾರಿ ತಿಂಡಿಗಳನ್ನು ತಿಂದು ಧನ್ಯರಾದರು. ಸಾರ್ವಜನಿಕರು ಈ ತರಬೇತಿ ಕಾರ್ಯಕ್ರಮದಿಂದ ಆಧ್ಯಾತ್ಮವನ್ನು ಅದೆಷ್ಟು ಪ್ರಮಾಣದಲ್ಲಿ ಮೈಗೂಡಿಸಿಕೊಂಡರೆಂಬುದಕ್ಕಿಂತ ಆಯೋಜಕರು ಮಾತ್ರ ನಿವ್ವಳ ಲಾಭದೊಂದಿಗೆ ಮುಂದಿನ ಊರಿಗೆ ಪ್ರಯಾಣ ಬೆಳೆಸಿದರು ಎನ್ನುವುದು ಚರ್ಚೆಯ ಸಂಗತಿಯಾಗಿತ್ತು.

ಇವತ್ತು ಆಧ್ಯಾತ್ಮ ಮತ್ತು ಯೋಗಕ್ಕೆ ಮಾರುಕಟ್ಟೆಯ ಮೌಲ್ಯ ಪ್ರಾಪ್ತವಾಗಿದೆ. ಒಂದರ್ಥದಲ್ಲಿ ಈ ಎರಡು ಸಂಗತಿಗಳು ಬಿಕರಿಗಿಟ್ಟ ಮಾರಾಟದ ಸರಕುಗಳಾಗಿವೆ. ಅದಕ್ಕೆಂದೆ ಇಲ್ಲಿ ಢೊಂಗಿ ಬಾಬಾಗಳು ಮತ್ತು ಝಟಕಾ ಸ್ವಾಮಿಗಳು ಹುಟ್ಟಿಕೊಳ್ಳುತ್ತಾರೆ. ಪಂಚತಾರಾ ಹೊಟೇಲುಗಳನ್ನು ಮೀರಿಸುವ ಐಷಾರಾಮಿ ಸವಲತ್ತುಗಳ ಯೋಗ ಮತ್ತು ಆಧ್ಯಾತ್ಮದ ಕೇಂದ್ರಗಳು ಅಸ್ತಿತ್ವಕ್ಕೆ ಬರುತ್ತವೆ. ಸಾವಿರಾರು ರೂಪಾಯಿಗಳನ್ನು ಪಾವತಿಸಿ ಸಾರ್ವಜನಿಕರು ಆಧ್ಯಾತ್ಮವನ್ನು ಮೈಗೂಡಿಸಿಕೊಳ್ಳಲು ಹಪಹಪಿಸುತ್ತಾರೆ. 

ಅರಿವೆಗುರು ಎಂದಿರುವರು ಅನುಭಾವಿಗಳು. ಈ ನಾಡಿನಲ್ಲಿ ಶರಣರು, ಸಂತರು, ಸೂಫಿಗಳು ಲೌಕಿಕ ಬದುಕಿನ ನಡುವೆಯೂ ಅಲೌಕಿಕವನ್ನು ಸಾಧಿಸಿದರು. ತಮ್ಮ ದಿನ ನಿತ್ಯದ ಕಾಯಕದಲ್ಲೇ ಶರಣತ್ವವನ್ನು ಪಾಲಿಸಿದರು. ಕಳಬೇಡ/ಕೊಲಬೇಡ/ಹುಸಿಯ ನುಡಿಯಲುಬೇಡ/ಮುನಿಯಬೇಡ/ಅನ್ಯರಿಗೆ ಅಸಹ್ಯಪಡಬೇಡ/ತನ್ನ ಬಣ್ಣಿಸಬೇಡ/ಇದಿರ ಹಳಿಯಲುಬೇಡ/ಇದೇ ಅಂತರಂಗಶುದ್ಧಿ/ಇದೇ ಬಹಿರಂಗಶುದ್ಧಿ ಎಂದು ಇಡೀ ಬದುಕನ್ನೇ ಆಧ್ಯಾತ್ಮದ ನೆಲೆಯಲ್ಲಿ ನೋಡಿದರು. ಅಂತರಂಗ ಮತ್ತು ಬಹಿರಂಗ ಎಂದು ಎರಡು ಪ್ರತ್ಯೇಕ ಬದುಕುಗಳನ್ನು ಬದುಕದೆ ಎರಡನ್ನೂ ಏಕತ್ರವಾಗಿಸಿ ಇಹ ಮತ್ತು ಪರ ಎರಡನ್ನೂ ಒಂದಾಗಿಸಿದರು. 

ಬದುಕಿನ ಪಯಣ ಎನ್ನುವುದು ಅದೇನು ಹೂವು ಹಾಸಿದ ಹಾದಿಯ ಮೇಲಿನ ನಡಿಗೆಯಲ್ಲ. ಕಲ್ಲು ಮುಳ್ಳುಗಳನ್ನು ಬದಿಗೆ ಸರಿಸಿ ತಾನು ನಡೆಯಬೇಕಾದ ದಾರಿಯನ್ನು ಪಥಿಕ ತಾನೇ ಸೃಷ್ಟಿಸಿಕೊಳ್ಳಬೇಕು. ಬದುಕೆಂದ ಮೇಲೆ ಸವಾಲುಗಳು, ಸಮಸ್ಯೆಗಳು ಸಹಜ. ಕಥೆಗಾರ್ತಿ ಕಸ್ತೂರಿ ಬಾಯರಿ ತಮ್ಮ ಸಂದರ್ಶನದಲ್ಲಿ ಬದುಕಿನ ಕುರಿತು ತುಂಬ ಅರ್ಥಪೂರ್ಣವಾದ ಒಂದು ಮಾತು ಹೇಳಿರುವರು-‘ಅಸಹಾಯಕತೆ, ಹಸಿವು ನಮಗೆ ಕಾಡಲಿಲ್ಲ ಅಂದರೆ, ಹೌ ಮಚ್ ವಿ ಆರ್ ಸ್ಟ್ರಾಂಗ್ ಇನ್‍ಫ್ರಂಟ್ ಆಫ್ ಹಂಗರ್? ಅಂತ ಹ್ಯಾಂಗ ಗೊತ್ತಾಗೋದು. ಯಾರು ನಮ್ಮನ್ನು ನೋಡಿದರೂ ಒಂದು ಕೆಟ್ಟ ಭಾವ ಬರದಂಗ ಘನತೆಯ ಬದುಕು ಬದುಕೀವಿ ಅಂದರ ಅದು ಸಣ್ಣ ಮಾತಲ್ಲ’. ಯಾವ ಆಧ್ಯಾತ್ಮಿಕ ತರಬೇತಿ ಕೇಂದ್ರದಲ್ಲೂ ಕೇಳಲು ಸಿಗದ ಬದುಕಿನ ಅರ್ಥ ಮತ್ತು ಅನ್ವೇಷಣೆ ಇದು.

ಇವತ್ತು ಆಧ್ಯಾತ್ಮಕ್ಕೆ ಮಾರುಕಟ್ಟೆ ಮೌಲ್ಯ ಪ್ರಾಪ್ತವಾಗಿರುವುದಕ್ಕೆ ಸಾರ್ವಜನಿಕರ ಕೊಡುಗೆ ಸಾಕಷ್ಟಿದೆ. ಬದಲಾಗುತ್ತಿರುವ ಕುಟುಂಬ ಘಟಕ ಮತ್ತು ಬದುಕಿನ ಮೌಲ್ಯಗಳು ಜೀವನದ ರೀತಿ ನೀತಿಗಳನ್ನು ನಿಯಂತ್ರಿಸುತ್ತಿವೆ. ಅವಿಭಕ್ತ ಕುಟುಂಬಗಳು ಒಡೆದು ಸಣ್ಣ ಸಣ್ಣ ಕುಟುಂಬಗಳು ತಲೆ ಎತ್ತುತ್ತಿವೆ. ಕೂಡುಕುಟುಂಬಗಳಿಂದ ದೂರಾಗುತ್ತಿರುವ ಮನುಷ್ಯ ಒಂಟಿಯಾಗುತ್ತಿದ್ದಾನೆ. ತಬ್ಬಲಿತನದ ಭಾವ ಕಾಡುತ್ತಿದೆ. ಜೊತೆಗೆ ಉದ್ಯೋಗ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅನಿಶ್ಚಿತತೆ ಮತ್ತು ಸ್ಪರ್ಧೆ ಬಹುದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಏಕಮುಖವಾದ ಬದುಕಿನ ಪಯಣದಲ್ಲಿ ಕಿಂಚಿತ್ ಏರುಪೇರಾದರೂ ಮನುಷ್ಯ ಹತಾಶೆ, ಖಿನ್ನತೆ, ಉದ್ವಿಗ್ನತೆಗಳಿಗೆ ದೂಡಲ್ಪಡುತ್ತಿದ್ದಾನೆ. ಇಂಥ ಸಂದರ್ಭದಲ್ಲಿ ಮುಳುಗುವವನಿಗೆ ಹುಲ್ಲುಕಡ್ಡಿ ಆಸರೆ ಎನ್ನುವಂತೆ ಢೊಂಗಿ ಬಾಬಾಗಳು ಮತ್ತು ಝಟಕಾ ಸ್ವಾಮಿಗಳು ಅವತಾರ ಪುರುಷರಾಗಿ ಹುಟ್ಟಿಕೊಳ್ಳುತ್ತಿದ್ದಾರೆ. ಯೋಗ ಮತ್ತು ಆಧ್ಯಾತ್ಮದ ಕೇಂದ್ರಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಜನರ ಮಾನಸಿಕ ದೌರ್ಬಲ್ಯವನ್ನೆ ಬಂಡವಾಳವಾಗಿಸಿಕೊಂಡು ಆಧ್ಯಾತ್ಮದ ಕೇಂದ್ರಗಳು ಹಣ ಮಾಡುತ್ತಿವೆ,

ಆಧ್ಯಾತ್ಮವೆನ್ನುವುದು ಸಾವಿರಾರು ಜನರ ನಡುವೆ ವಿಶಾಲವಾದ ಮೈದಾನದಲ್ಲಿ ಕುಳಿತು ಸಾಧಿಸುವ ಸಾಧನೆಯಲ್ಲ. ನಿಶ್ಯಬ್ದ ಮತ್ತು ನೀರವ ವಾತಾವರಣದಲ್ಲಿ ಒಬ್ಬಂಟಿಯಾಗಿ ಕುಳಿತು ಮನಸ್ಸನ್ನು ನಿಗ್ರಹಿಸಿಕೊಳ್ಳುವ ಸಾಧನೆಯದು. ಆತ್ಮಪರೀಕ್ಷೆ, ಆತ್ಮವಿಮರ್ಶೆಗೆ ಇವತ್ತು ಮನುಷ್ಯ ಒಳಗಾಗುತ್ತಿಲ್ಲ. ಭೌತಿಕವೆ ಪ್ರಧಾನವಾದ ಬದುಕಿನಲ್ಲಿ ಅಂತರಂಗಕ್ಕಿಳಿಯುವ ಸಮಯವಾಗಲಿ ಸಂಯಮವಾಗಲಿ ಇವತ್ತಿನ ಮನುಷ್ಯನಿಗಿಲ್ಲ. ಎಲ್ಲವನ್ನೂ ಬಹಿರಂಗದಲ್ಲೆ ಹುಡುಕುತ್ತಿರುವನು. ಪ್ರತಿಯೊಂದು ಅವನಿಗೆ ಹೊರಗಿನಿಂದಲೇ ಪ್ರಾಪ್ತವಾಗಬೇಕು. ಅದಕ್ಕೆಂದೆ ಆಧ್ಯಾತ್ಮದಂಥ ಅಂತರಂಗದ ಸಂಗತಿ ಕೂಡ ಇಂದು  ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟ ಸರಕಿನಂತೆ ಗೋಚರಿಸುತ್ತಿದೆ.

 ಬದುಕಿನ ಅರ್ಥವನ್ನು ವಿಶ್ಲೇಷಿಸಲು, ಬದುಕಿಗೆ ಆಧ್ಯಾತ್ಮದ ರೂಪ ನೀಡಲು ಕುವೆಂಪು, ಕಾರಂತ, ಚಿತ್ತಾಲ, ಬೇಂದ್ರೆ ಅವರ ಸಾಹಿತ್ಯ ಕೃತಿಗಳಿಗಿರುವ ಶಕ್ತಿ ಈ ಮಾರಾಟಕ್ಕಿಟ್ಟ ಆಧ್ಯಾತ್ಮಿಕ ಸರಕಿಗಿಲ್ಲ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ.

-ರಾಜಕುಮಾರ ಕುಲಕರ್ಣಿ


Thursday, March 3, 2022

ಎಲ್ಲೆ ಮೀರುವ ನಾಗರಿಕರು

     


(ದಿನಾಂಕ ೧೫.೦೨.೨೦೨೨ ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ)

       ಇತ್ತೀಚೆಗೆ ನಮ್ಮ ಪಕ್ಕದ ಮನೆಯಲ್ಲಿ ಮಗುವಿನ ಮೊದಲ ವರ್ಷದ ಹುಟ್ಟುಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಿದರು. ಮನೆಯ ಮಾಳಿಗೆ ಮೇಲಿನ ಖಾಲಿ ಜಾಗವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಿ ಜನ್ಮದಿನದ ಆಚರಣೆಗೆ ಸುಂದರ ವೇದಿಕೆಯನ್ನು ಸಜ್ಜುಗೊಳಿಸಿದ್ದರು. ರಾತ್ರಿ ಏಳು ಗಂಟೆಗೆ ಆರಂಭಗೊಂಡ ಜನ್ಮದಿನದ ಆಚರಣೆ ಬೆಳಗಿನ ಎರಡು ಗಂಟೆಯವರೆಗೆ ಹಾಡು, ಕುಣಿತ ಇತ್ಯಾದಿ ಮನೋರಂಜನೆಗಳಿಂದ ಅವ್ಯಾಹತವಾಗಿ ಸಾಗಿತು. ಧ್ವನಿವರ್ಧಕ ಮತ್ತು ಅಲ್ಲಿ ನೆರೆದಿದ್ದವರ ಜೋರಾದ ಸದ್ದುಗದ್ದಲಕ್ಕೆ ಅಕ್ಕಪಕ್ಕದ ಮನೆಯವರು ಬೆಳಗಿನ ಎರಡು ಗಂಟೆಯವರೆಗೆ ನಿದ್ದೆ ಇಲ್ಲದೆ ಜಾಗರಣೆ ಮಾಡಬೇಕಾಯಿತು. ಪಕ್ಕದ ಕೆಲವು ಮನೆಗಳಲ್ಲಿ ಮಕ್ಕಳು ವಾರದ ಪರೀಕ್ಷೆಗಾಗಿ ಓದಿಕೊಳ್ಳುತ್ತಿದ್ದರು. ಮತ್ತೊಂದು ಮನೆಯಲ್ಲಿ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಎಂಬತ್ತು ವಯಸ್ಸಿನ ಅಜ್ಜ ಆಸ್ಪತ್ರೆಯಿಂದ ಮರಳಿಬಂದು ವಿಶ್ರಾಂತಿ ಪಡೆಯುತ್ತಿದ್ದರು. ಒಂದಿಷ್ಟು ಮನೆಗಳಲ್ಲಿ ದಿನವಿಡೀ ದುಡಿದು ಹೈರಾಣಾದವರು ಹಾಸಿಗೆಗೆ ಮೈಚಾಚಿ ಮಲಗುವ ಸಿದ್ಧತೆಯಲ್ಲಿದ್ದರು. ಮಗುವಿನ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಮೈಮರೆತಿದ್ದವರಿಗೆ ಈ ಯಾವ ಸಂಗತಿಗಳೂ ನೆನಪಿಗೆ ಬರಲಿಲ್ಲ. ತಮ್ಮ ವೈಯಕ್ತಿಕ ಖುಷಿಯ ಆದ್ಯತೆಯೊಂದೆ ಮುನ್ನೆಲೆಗೆ ಬಂದು ಆ ಸಂದರ್ಭ ಬೇರೆಯವರಿಗಾಗುತ್ತಿದ್ದ ಹಿಂಸೆಯ ಅರಿವು ಹಿನ್ನೆಲೆಗೆ ಸರಿದಿತ್ತು.

ನಿವೃತ್ತಿಯ ಅಂಚಿಗೆ ತಲುಪಿರುವ ನಮ್ಮ ಓಣಿಯಲ್ಲಿನ ಹಿರಿಯರೋರ್ವರು ಪ್ರತಿನಿತ್ಯ ತಾವು ಕೆಲಸ ಮಾಡುತ್ತಿರುವ ಕಚೇರಿಯಿಂದ ಸಾಯಂಕಾಲ ಮನೆಗೆ ನಡೆದುಕೊಂಡು ಬರುವುದನ್ನು ರೂಢಿಸಿಕೊಂಡಿರುವರು. ಸಮೀಪದ ಕೆಲಸ ಕಾರ್ಯಗಳಿಗೂ ಅವರು ಕಾಲ್ನಡಿಗೆಯನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಅವರು ಕಚೇರಿಯಿಂದ ಹಿಂದಿರುಗುವ ವೇಳೆ ಓಣಿಯಲ್ಲಿ ಯಾರಾದರೂ ಎದುರಾದರೆ ಇವತ್ತು ಜೀವಂತವಾಗಿ ಮನೆಗೆ ಬಂದೆ ನೋಡಿ ಎಂದು ನುಡಿದು ಮುಗುಳ್ನಗುತ್ತಾರೆ. ಆ ಹಿರಿಯರು ಹೀಗೆ ಹೇಳುವುದಕ್ಕೂ ಕಾರಣವಿದೆ. ವಾಹನ ಸವಾರರು ಅದರಲ್ಲೂ ವಿಶೇಷವಾಗಿ ಈ ಯುವಕರು ರಸ್ತೆಯ ಮೇಲೆ ವಾಹನ ಓಡಿಸುವುದನ್ನು ನೋಡಿಯೇ ಆನಂದಿಸಬೇಕು. ದ್ವಿಚಕ್ರ ವಾಹನದ ಮೇಲೆ ಸಂಚರಿಸುವ ಯುವಕರಂತೂ ಇನ್ನೇನು ಪಾತಾಳವನ್ನೇ ಸ್ಪರ್ಷಿಸುತ್ತಿರುವರೇನೋ ಎನ್ನುವಂತೆ ವಾಹನವನ್ನು ಡೊಂಕಾಗಿಸಿ ಓಡಿಸುವುದು ಸಾಮಾನ್ಯ ದೃಶ್ಯವಾಗಿದೆ. ಇಂಥ ಸಂದರ್ಭದಲ್ಲೆಲ್ಲ ರಸ್ತೆಯ ಮೇಲಿನ ಪಾದಚಾರಿಗಳಿಗೆ ಆ ಯುವಕರು ತಾವು ಅಪಘಾತಕ್ಕೆ ಒಳಗಾಗುವುದರೊಂದಿಗೆ ನಮ್ಮನ್ನೂ ಅಪಘಾತಕ್ಕೆ ಒಳಗಾಗಿಸುವರೇನೋ ಎನ್ನುವಷ್ಟು ಭಯ ಮುತ್ತಿಕೊಳ್ಳುತ್ತದೆ. ಈ ನಡುವೆ ಮಧ್ಯಪಾನ ಸೇವಿಸಿ ಇಲ್ಲವೇ ಮೊಬೈಲ್‍ನಲ್ಲಿ ಮಾತನಾಡುತ್ತ ಸಂಚರಿಸುವ ವಾಹನ ಸವಾರರ ಸಂಖ್ಯೆಯೇನೂ ಕಡಿಮೆ ಇರುವುದಿಲ್ಲ. ಸಾರ್ವಜನಿಕ ರಸ್ತೆಯನ್ನೇ ಸರ್ಕಸ್ಸಿನ ಡೇರೆಯಾಗಿಸಿಕೊಂಡು ಎರಡೂ ಕೈಗಳನ್ನು ಹಿಂದೆಕಟ್ಟಿಕೊಂಡು ವಾಹನ ಓಡಿಸುವ ಸಾಹಸಿಗರನ್ನು ಕಡೆಗಣಿಸುವಂತಿಲ್ಲ. ತಮ್ಮ ಎಂಟ್ಹತ್ತು ವರ್ಷದ ಪುಟಾಣಿಯ ಕೈಗೆ ವಾಹನದ ಲಗಾಮು ಕೊಟ್ಟು ಹಿಂದೆ ಕುಳಿತು ಅತ್ಯಂತ ಉಮೇದಿಯಿಂದ ನಿರ್ದೇಶಿಸುವ ಪಾಲಕರೂ ಆಗಾಗ ದೃಷ್ಟಿಗೆ ಗೋಚರಿಸುತ್ತಾರೆ. ರಸ್ತೆಯ ಮೇಲೆ ವಾಹನ ಸವಾರಿಯ ಇಂಥ ವಿಭಿನ್ನ ಸಂಗತಿಗಳು ಜರುಗುತ್ತಿರುವಾಗ ಸದಾಕಾಲ ಕಾಲ್ನಡಿಗೆಯನ್ನೆ ತಮ್ಮ ಸಂಚಾರದ ಅಭ್ಯಾಸವಾಗಿಸಿಕೊಂಡಿರುವ ನನ್ನ ಹಿರಿಯ ಮಿತ್ರರು ರಸ್ತೆಯಲ್ಲಿ ಯಾವ ಅಪಘಾತಕ್ಕೂ ಒಳಗಾಗದೆ ಸಧ್ಯ ಈ ದಿನ ಬದುಕುಳಿದೆ ಎಂದು ನಿಟ್ಟುಸಿರು ಬಿಡುವುದರಲ್ಲೂ ಅರ್ಥವಿದೆ.

ನನ್ನ ಇನ್ನೊಬ್ಬ ಮಿತ್ರನಿಗಾದ ಅನುಭವ ತುಂಬ ವಿಭಿನ್ನವಾದದ್ದು. ನೀಟಾಗಿ ಡ್ರೆಸ್ ಮಾಡಿಕೊಂಡು ತನ್ನ ದ್ವಿಚಕ್ರ ವಾಹನದ ಮೇಲೆ ಪ್ರತಿದಿನದಂತೆ ಆಫೀಸಿಗೆ ಹೊರಟವನಿಗೆ ದಾರಿ ಮಧ್ಯದಲ್ಲಿ ತಲೆ ಮೇಲೆ ನೀರಿನ ಸಿಂಚನವಾದ ಅನುಭವವಾಯಿತು. ಮೋಡವಿಲ್ಲದ ಶುಭ್ರವಾದ ಆಕಾಶ, ಕಣ್ಣುಕೊರೈಸುವ ಬೀಸಿಲು ಇಂಥ ವಾತಾವರಣದಲ್ಲಿ ಇದೆಂಥ ಮಳೆ ಎಂದು ತಲೆ ಎತ್ತಿ ಪಕ್ಕಕ್ಕೆ ನೋಡಿದವನಿಗೆ ಸರ್ಕಾರಿ ಬಸ್ಸಿನ ಕಿಟಕಿಯೊಳಗಿಂದ ಹೊರಗೆ ಚಾಚಿದ ಮುಖ ಗೋಚರಿಸಿತು. ಹೊರಚಾಚಿದ ಆ ಮುಖದ ಬಾಯಿಯೊಳಗಿಂದ ಪಿಚಕಾರಿಯಂತೆ ಸಿಡಿದುಬಂದ ರಸೋತ್ಪತ್ತಿ ಮತ್ತೊಮ್ಮೆ ನನ್ನ ಸ್ನೇಹಿತನ ಶಿರದ ಮೇಲೆ ಶಿವನ ಜಡೆಯಲ್ಲಡಗಿ ಕುಳಿತ ಗಂಗೆಯಂತೆ ಶಿರಸ್ಥಾಯಿಯಾಯಿತು. ಕ್ಷಣಮಾತ್ರದಲ್ಲಿ ಗುಟಕಾಪ್ರೀಯ ತನ್ನ ಬಾಯಿಯೊಳಗೆ ತುಂಬಿದ್ದ ಎಂಜಲನ್ನು ನನ್ನ ಸ್ನೇಹಿತನ ತಲೆಯ ಮೇಲೆ ಪ್ರೋಕ್ಷಣೆಗೈದು ಮುಂದೆ ಸಾಗಿದ್ದ. ಅರ್ಧದಾರಿವರೆಗೂ ಬಂದಿದ್ದ ನನ್ನ ಸ್ನೇಹಿತನ ಪರಿಸ್ಥಿತಿ ವರ್ಣಿಸಲಸದಳವಾಗಿತ್ತು. ತಾನಿರುವ ಸ್ಥಿತಿಯಲ್ಲೇ ಕಚೇರಿಗೆ ಹೋಗುವಂತಿಲ್ಲ, ಮನೆಗೆ ಹಿಂತಿರುಗಿ ಬಟ್ಟೆ ಬದಲಿಸಿಕೊಂಡು ಬರಲು ಸಮಯದ ಕೊರತೆ. ಜೊತೆಗೆ ಸಾರ್ವಜನಿಕ ರಸ್ತೆಯಲ್ಲಿ ತನ್ನದಲ್ಲದ ತಪ್ಪಿಗೆ ಎದುರಿಸಬೇಕಾದ ಅಪಮಾನದ ಭಾವ ಮನಸ್ಸನ್ನು ಆವರಿಸಿ ಆ ಕ್ಷಣಕ್ಕೆ ಭೂಮಿಯೊಳಗೆ ಹೂತುಹೋದ ಅನುಭವ ಅವನದಾಗಿತ್ತು.

ಖಾಸಗಿ ಸಮಾರಂಭಕ್ಕಾಗಿ ಮನೆಯ ಎದುರಿನ ಸಾರ್ವಜನಿಕ ರಸ್ತೆಯನ್ನು ಅತಿಕ್ರಮಿಸಿಕೊಳ್ಳುವುದು, ಖಾಸಗಿ ಸಮಾರಂಭದ ಮೆರವಣಿಗೆ ಸಂದರ್ಭ ರಸ್ತೆಮೇಲೆ ಸಾರ್ವಜನಿಕರ ಓಡಾಟಕ್ಕೆ ತೊಂದರೆಯನ್ನುಂಟು ಮಾಡುವುದು, ಅಮವಾಸೆ-ಹಬ್ಬಗಳ ದಿನಗಳಂದು ವಾಹನಗಳನ್ನು ತೊಳೆಯಲು ಸಾವಿರಾರು ಲೀಟರ್ ನೀರು ವ್ಯರ್ಥಮಾಡುವುದು, ವಿದ್ಯುತ್ ಯಂತ್ರದಿಂದ ಸಾರ್ವಜನಿಕ ನಲ್ಲಿಯಿಂದ ಒಂದು ತೊಟ್ಟೂ ಬಿಡದಂತೆ ನೀರನ್ನು ಹೀರಿ ಉಳಿದ ಮನೆಗಳಲ್ಲಿ ನೀರಿನ ಕೊರತೆ ಹುಟ್ಟಿಸುವುದು ಹೀಗೆ ಅದೆಷ್ಟೋ ಸಮಾಜ ವಿರೋಧಿ ಕೆಲಸಗಳಲ್ಲಿ ಮನುಷ್ಯರು ತೊಡಗಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ತನ್ನ ಇಂಥ ಅನಾಗರಿಕ ವರ್ತನೆಯಿಂದ ಬೇರೆಯವರ ಬದುಕಿಗೆ ತೊಂದರೆಯಾಗುತ್ತಿದೆ ಎನ್ನುವ ಕಿಂಚಿತ್ ಪ್ರಜ್ಞೆಯೂ ಇಲ್ಲದಂತೆ ಮನುಷ್ಯ ಅಸಂವೇದಿಯಾಗುತ್ತಿರುವನು.

ಭೈರಪ್ಪನವರ ‘ತಂತು’ ಕಾದಂಬರಿಯಲ್ಲಿ ಹೀಗೊಂದು ಮಾತಿದೆ ‘ಜನರು ಮೂಲತ: ಒಳ್ಳೆಯವರು, ಕೆಟ್ಟೋರು ಅನ್ನೂ ವಿಂಗಡಣೆ ಸರಿಯಲ್ಲ. ಅವರು ಗೊಬ್ಬರದ ಥರ ಇದ್ದಾರೆ. ಗೊಬ್ಬರ ಒಯ್ದು ತೆಂಗಿನ ಮರಕ್ಕೆ ಹಾಕಿದರೆ ಅದೂ ಫಲ ಕೊಡುತ್ತೆ. ಪಾಪಾಸುಕಳ್ಳಿಗೆ ಹಾಕಿದರೆ ಅದೂ ಹೊರವಾಗಿ ಬೆಳೆಯುತ್ತೆ. ಗೊಬ್ಬರದ ಹಂಗಿರೊ ಅವರನ್ನು ನಿಜವಾದ ಜನರ ಹಂಗೆ ಮನುಷ್ಯರ ಹಂಗೆ ಮಾಡೂದೇ ಮೂಲ ಪ್ರಶ್ನೆ’. ಆದ್ದರಿಂದ ಮನುಷ್ಯನ ಆಲೋಚನಾ ಮಟ್ಟದಲ್ಲಿ, ಅವನ ವರ್ತನೆಯಲ್ಲಿ, ಬದುಕಿನ ರೀತಿಯಲ್ಲಿ, ಸಮಾಜವನ್ನು ನೋಡುವ ಕ್ರಮದಲ್ಲಿ ಸಾಕಷ್ಟು ಸುಧಾರಣೆಯಾಗಬೇಕಿದೆ.

ಮನುಷ್ಯ ಸಂಘಜೀವಿ ಎಂದು ತತ್ವಜ್ಞಾನಿ ಅರಿಸ್ಟಾಟಲ್ ಹೇಳಿರುವನು. ಸಂಘಜೀವಿಯಾದ ಮನುಷ್ಯನಿಗೆ ತನ್ನ ವೈಯಕ್ತಿಕ ಆದ್ಯತೆಗಳ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕಾದ ಹೊಣೆಗಾರಿಕೆಯೂ ಇದೆ. ತನ್ನ ವೈಯಕ್ತಿಕ ಆದ್ಯತೆಗಳಿಂದ ಸಮಾಜದ ಸ್ವಾಸ್ಥ್ಯ ಕೆಡದಂತೆ ಮತ್ತು ತನ್ನಂತೆ ಸಮಾಜದಲ್ಲಿ ಬದುಕುತ್ತಿರುವ ಬೇರೆಯವರ ಬದುಕಿನ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಬದುಕುವುದನ್ನು ಮನುಷ್ಯ ರೂಢಿಸಿಕೊಳ್ಳಬೇಕಿದೆ. ಬದುಕುವ ಸ್ವಾತಂತ್ರ್ಯವನ್ನು ನೀಡಲಾಗಿದೆ ಎಂದರೆ ಅದು ಸ್ವೇಚ್ಛಾಚಾರವೆಂದರ್ಥವಲ್ಲ. ತಾನು ಬದುಕಿ ಬೇರೆಯವರು ಬದುಕಲು ಅಗತ್ಯವಾದ ವಾತಾವರಣವನ್ನು ನಿರ್ಮಿಸಿಕೊಡುವುದೇ ಮನುಷ್ಯ ನಿರ್ವಹಿಸಬೇಕಾಗಿರುವ ಅತ್ಯಂತ ಮಹತ್ವದ ಸಾಮಾಜಿಕ ಜವಾಬ್ದಾರಿಯಾಗಿದೆ. ಆದ್ದರಿಂದ ನಾವುಗಳೆಲ್ಲ ನಮ್ಮ ನಮ್ಮ ಬದುಕಿನ ವೈಯಕ್ತಿಕ ಆದ್ಯತೆಗಳನ್ನು ಒಂದುಕ್ಷಣ ಬದಿಗಿಟ್ಟು ನಾವು ಬದುಕುತ್ತಿರುವ ಸಮಾಜದ ಬಗ್ಗೆ ಅರೆಕ್ಷಣ ಯೋಚಿಸುವುದೊಳಿತು.

-ರಾಜಕುಮಾರ ಕುಲಕರ್ಣಿ


Thursday, February 3, 2022

ಬಿತ್ತಿದಂತಲ್ಲದೆ ಬೆಳೆ ಇನ್ನೇನಾಗಬೇಕು?

 


(೭.೧೨.೨೦೨೧ ರ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ)

       ‘ನಮ್ಮಪ್ಪಗ ನಾವು ಆರು ಮಕ್ಕಳು. ಸಣ್ಣವರಿದ್ದಾಗ ಒಂದು ದಿವಸರೆ ನಮ್ಮಪ್ಪ ನಮ್ಮನ್ನು ಎತ್ತಿಕೊಂಡು ಆಡಿಸಿದ್ದು ನೆನಪಿಲ್ಲ. ತಪ್ಪು ಮಾಡಿದರ ದನಕ್ಕ ಬಡಿದಂಗ ಬಡಿತಿದ್ದ. ನಾವು ಏನು ಓದ್ಲಿಕತ್ತಿವಿ ಅಂತ ವಿಚಾರಿಸಿದವನೇ ಅಲ್ಲ. ಕೂಡು ಕುಟುಂಬ ಇರೊದರಿಂದ ಎಲ್ಲಾ ಜವಾಬ್ದಾರಿ ನಮ್ಮ ದೊಡ್ಡಪ್ಪಂದೆ ಆಗಿತ್ತು. ನಮಗೂ ನಮ್ಮಪ್ಪ ನಮ್ಮನ್ನ ವಿಚಾರಿಸ್ತಿಲ್ಲ ಅನ್ನೊದು ಮನಸ್ಸಿಗಿ ಅಂಥ ಹಳಹಳಕಿ ಸಂಗತಿ ಆಗಿರಲಿಲ್ಲ. ಆದರ ಮುಪ್ಪಿನ ಕಾಲಕ್ಕ ಅಪ್ಪಗ ಬ್ಯಾನಿ ಬ್ಯಾಸರಕಿ ಬಂದರ ಕರಳ ಕಿವುಚಿದಂಗ ಆಗ್ತಿತ್ತು. ಹಿರಿಜೀವ ಆರಾಮಾಗಿರಲಿ ಅಂತ ಮನಸ ಬಯಿಸ್ತಿತ್ತು. ಅದೇ ನನ್ನ ಮಗನ ವಿಷಯಕ್ಕ ಬಂದರ ಇದ್ದೊಬ್ಬ ಮಗ ಅಂತ ಅಂಗೈದಾಗ ಇಟಗೊಂಡು ಬೆಳೆಸೀನಿ. ಒಂದು ದಿವಸ ಕೂಡ ಸಿಟ್ಟಿನಿಂದ ಗದರಿಸಿಲ್ಲ. ನಡೆದರ ಕಾಲು ನೋವಾಗ್ತಾವಂತ ಸ್ಕೂಲ್‍ತನಕ ಎತಕೊಂಡು ಹೋಗೀನಿ. ರೆಕ್ಕಿ ಬಲಿತ ಮ್ಯಾಗ ಈಗ ಅಮೆರಿಕಾಕ ಹೋಗಿ ಕೂತಾನ. ವಿಡಿಯೋ ಕಾಲ್ ಮಾಡದಾಗಷ್ಟೇ ನೋಡಿ ಖುಷಿ ಪಡಬೇಕು. ಆ ಚೋಟುದ್ದ ಮೊಮ್ಮಗ ಈ ಆಯಿ ಮುತ್ತ್ಯಾಗ ಹಾಯ್ ಗಾಯ್ಸ್ ಅಂತ ಕರೀತದ. ಕಾಲನ ಪ್ರವಾಹದಾಗ ಕುಟುಂಬ ಪ್ರೀತಿ, ವಾತ್ಸಲ್ಯ ಅನ್ನೋವು ಕೊಚ್ಚಿ ಹೋಗ್ಯಾವ’ ನಿವೃತ್ತಿಯ ಅಂಚಿನಲ್ಲಿರುವ ಹಿರಿಯ ಮಿತ್ರರೊಬ್ಬರು ತಮ್ಮ ಅಳಲು ತೋಡಿಕೊಂಡರು.

ನ್ಯೂಕಿಯರ್ ಕುಟುಂಬಗಳ ಸಂಖ್ಯೆ ವೃದ್ಧಿಸುತ್ತಿರುವ ಈ ಕಾಲದಲ್ಲಿ ಕುಟುಂಬ ಪ್ರೇಮ ಎನ್ನುವುದು ಕಥೆ, ಕಾದಂಬರಿಗಳಲ್ಲಿನ ಶಬ್ದವಾಗಿಯೂ ಸಿನಿಮಾ ಪರದೆಯ ಮೇಲಿನ ದೃಶ್ಯವಾಗಿಯೂ ಗೋಚರಿಸುತ್ತಿದೆ. ಹಿಂದೆಲ್ಲ ಅವಿಭಕ್ತ ಕುಟುಂಬಗಳಲ್ಲಿ ಮನೆಯ ಒಂದೇ ಸೂರಿನಡಿ ಹಲವು ಸಂಬಂಧಗಳು ಅನ್ಯೋನ್ಯತೆಯಿಂದ ಬಾಳುತ್ತಿದ್ದವು. ಅಜ್ಜ, ಅಜ್ಜಿ, ಅಪ್ಪ, ಅಮ್ಮ, ದೊಡ್ಡಪ್ಪ, ಚಿಕ್ಕಪ್ಪ, ಅತ್ತೆ, ಅಣ್ಣ, ತಂಗಿ ಹೀಗೆ ಹತ್ತು ಹಲವು ಸಂಬಂಧಗಳ ಪರಿಚಯ ಪ್ರತಿ ಕುಟುಂಬದಲ್ಲಿನ ಮಗುವಿಗಾಗುತ್ತಿತ್ತು. ಮಗು ತನ್ನ ದಿನನಿತ್ಯದ ಅಗತ್ಯಗಳಿಗಾಗಿ ಅಪ್ಪ ಅಮ್ಮನನ್ನೇ ಆಶ್ರಯಿಸಬೇಕಾಗುತ್ತಿರಲಿಲ್ಲ. ಯಾರದೋ ಮಗು ಇನ್ನಾರದೋ ಕಂಕುಳಲ್ಲಿ ಕುಳಿತು ಊಟ ಮಾಡುತ್ತಿತ್ತು, ಬೇರೆ ಯಾರದೋ ತೊಡೆಯ ಮೇಲೆ ನಿದ್ರಿಸುತ್ತಿತ್ತು, ಅಜ್ಜಿಯ ಮಗ್ಗುಲಲ್ಲಿ ಮಲಗಿ ಕಥೆ ಕೇಳುತ್ತಿತ್ತು, ಸೋದರ ಸಂಬಂಧಿಗಳ ಜೊತೆ ಆಡಿ ನಲಿಯುತ್ತಿತ್ತು. ಇಂಥ ಕೂಡುಕುಟುಂಬಗಳಲ್ಲಿ ಮಕ್ಕಳಿಗೆ ಪ್ರೀತಿ, ವಾತ್ಸಲ್ಯದ ಜೊತೆಗೆ ಸುರಕ್ಷತೆಯ ಭರವಸೆ ಅಗಣಿತವಾಗಿ ಸಿಗುತ್ತಿತ್ತು.

ಕಾಲಕ್ರಮೇಣ ಕುಟುಂಬ ಘಟಕ ಒಡೆದು ನ್ಯೂಕ್ಲಿಯರ್ ಕುಟುಂಬಗಳು ಅಸ್ತಿತ್ವಕ್ಕೆ ಬಂದು ಈಗ ಮಕ್ಕಳಿಗೆ ಅಪ್ಪ ಅಮ್ಮನನ್ನು ಹೊರತುಪಡಿಸಿ ಕುಟುಂಬದ ಉಳಿದ ಸದಸ್ಯರ ಪ್ರೀತಿ, ವಾತ್ಸಲ್ಯ ಎನ್ನುವುದು ಮರೀಚಿಕೆಯಾಗಿದೆ. ಅದೆಷ್ಟೋ ಕುಟುಂಬಗಳಲ್ಲಿ ಗಂಡ ಹೆಂಡತಿ ಇಬ್ಬರೂ ಉದ್ಯೋಗಸ್ಥರಾಗಿರುವುದರಿಂದ ಇನ್ನೂ ಅಂಬೆಗಾಲಿಕ್ಕುವ ವಯಸ್ಸಿನಲ್ಲೇ ಮಕ್ಕಳ ಹೊಣೆ ಮನೆಯಲ್ಲಿ ಕೆಲಸ ಮಾಡುವ ಆಯಾಗಳಿಗೋ ಇಲ್ಲವೇ ಈ ಕೆಲಸಕ್ಕೆಂದೇ ಅಸ್ತಿತ್ವಕ್ಕೆ ಬಂದಿರುವ ಮಕ್ಕಳ ಪಾಲನಾ ಕೇಂದ್ರಗಳಿಗೋ ವರ್ಗಾವಣೆಗೊಳ್ಳುತ್ತದೆ. ತಮ್ಮ ಬಾಲ್ಯ ಜೀವನದ ಅತಿ ಮಹತ್ವದ ಸಮಯವನ್ನು ಬೇರೆಯವರ ಆಶ್ರಯದಲ್ಲಿ ಕಳೆಯುವ ಮಕ್ಕಳಲ್ಲಿ ಅನಾಥ ಪ್ರಜ್ಞೆ ಬೆಳೆಯುತ್ತಿದೆ. ಇಂಥ ಮಕ್ಕಳಿಗೆ ಒಂದು ಕುಟುಂಬ ವ್ಯವಸ್ಥೆಯಲ್ಲಿನ ವಿವಿಧ ಸಂಬಂಧಗಳ ಅರಿವೇ ಇರುವುದಿಲ್ಲ. ಅದಕ್ಕೆಂದೆ ಇವತ್ತಿನ ಮಕ್ಕಳಿಗೆ ಎಲ್ಲ ಸಂಬಂಧಗಳೂ ಅಂಕಲ್ ಆಂಟಿಗಳೆ.

ಹಿಂದೆಲ್ಲ ಅಮ್ಮಂದಿರು ಆಕಾಶದಲ್ಲಿನ ಹೊಳೆಯುವ ಚಂದ್ರ, ಮಿನುಗುತ್ತಿರುವ ನಕ್ಷತ್ರಗಳು, ಗಿಡ, ಮರ, ಬಳ್ಳಿ, ಹೂವುಗಳನ್ನು ತೋರಿಸಿ ಮಕ್ಕಳಿಗೆ ಉಣಿಸುತ್ತಿದ್ದರು. ನನ್ನ ವಯೋಮಾನದವರು ಅಮ್ಮನ ಕಂಕುಳಲ್ಲಿ ಕುಳಿತು ಚಂದ್ರ, ನಕ್ಷತ್ರಗಳನ್ನು ನೋಡುತ್ತ ಕೈತುತ್ತು ತಿಂದು ಬಾಲ್ಯವನ್ನು ಕಳೆದವರು. ಆದರೆ ಈಗಿನ ಮಕ್ಕಳಿಗೆ ಆ ಸೌಭಾಗ್ಯವಿಲ್ಲ. ಇಂದಿನ ಮಮ್ಮಿಗಳು ಲ್ಯಾಪ್‍ಟಾಪ್ ಎದುರಿಟ್ಟು ಕಾರ್ಟೂನ್ ತೋರಿಸಿ ಮುಳ್ಳುಚಮಚದಿಂದ ಜಂಕ್ ಫುಡ್ ತಿನ್ನಿಸುವ ಕಾಲವಿದು. ಮಗು ತನ್ನೆದುರಿರುವ ಲ್ಯಾಪ್‍ಟಾಪನ್ನೆ ಸರ್ವಸ್ವ ಎಂದು ಭಾವಿಸಿ ರಕ್ತಸಂಬಂಧಗಳ ಪ್ರೀತಿ ವಾತ್ಸಲ್ಯದಿಂದ ದೂರಾಗುತ್ತಿದೆ. 

ಭವಿಷ್ಯವನ್ನು ರೂಪಿಸುವ ಹುನ್ನಾರದಲ್ಲಿ ಪಾಲಕರು ಮಕ್ಕಳ ಸಹಜ ಬಾಲ್ಯ ಜೀವನವನ್ನೇ ಹೊಸಕಿಹಾಕುತ್ತಿರುವರು. ಸಹಜ ಶಿಕ್ಷಣಕ್ಕೆ ಒತ್ತು ನೀಡುವುದಕ್ಕಿಂತ ಪಾಲಕರು ತಮ್ಮ ಮಕ್ಕಳನ್ನು ಸ್ಪರ್ಧೆಗೆ ಸಿದ್ಧಗೊಳಿಸಲು ನೆರವಾಗುವ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿರುವರು. ಇಂದಿನ ದಿನಗಳಲ್ಲಿ ಮಕ್ಕಳು ತಮ್ಮ ಎರಡನೇ ವಯಸ್ಸಿನಿಂದಲೇ ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಮೆಟ್ರೊಪಾಲಿಟನ್ ನಗರಗಳಲ್ಲಿ ಮಗು ತಾಯಿಯ ಗರ್ಭದಲ್ಲಿರುವಾಗಲೇ ಶಾಲೆಗೆ ಪ್ರವೇಶ ದೊರಕಿಸುವ ವ್ಯವಸ್ಥೆ ಇದೆ. ಮಕ್ಕಳನ್ನು ಡಾಕ್ಟರ್, ಎಂಜಿನಿಯರ್, ಐಎಎಸ್, ಐಪಿಎಸ್‍ಗಳನ್ನಾಗಿಸಬೇಕೆನ್ನುವ ಧಾವಂತಕ್ಕೆ ಕಟ್ಟು ಬೀಳುವ ಪಾಲಕರು ಮಗುವಿನ ಶಿಶುವಿಹಾರದ ಅನೌಪಚಾರಿಕ ಶಿಕ್ಷಣದಿಂದಲೇ ತಮ್ಮ ಪ್ರಯತ್ನ ಆರಂಭಿಸುವರು. ಪಾಲಕರ ವಾಂಛೆಯ ಪರಿಣಾಮ ಮಗು ಸ್ಪರ್ಧಾತ್ಮಕ ಜಗತ್ತಿಗೆ ಇಷ್ಟವಿರಲಿ, ಇಲ್ಲದಿರಲಿ ತನ್ನನ್ನು ಒಡ್ಡಿಕೊಳ್ಳಲೇ ಬೇಕು. ಶಾಲೆ, ಮನೆಪಾಠದ ಬಿಡುವಿರದ ಚಟುವಟಿಕೆಗಳ ನಡುವೆ ಮಕ್ಕಳು ತಮ್ಮ ಸಹಜ ಬಾಲ್ಯ ಜೀವನದಿಂದ ವಂಚಿತರಾಗುತ್ತಿರುವರು. ದೊರೆಯುವ ಅಲ್ಪವಿರಾಮದ ವೇಳೆ ಕೂಡ ನೃತ್ಯ, ಸಂಗೀತ, ಅಬ್ಯಾಕಸ್‍ದಂಥ ತರಬೇತಿಗಳಿಗೆ ವಿನಿಯೋಗವಾಗುತ್ತಿದೆ. ಆರ್ಥಿಕವಾಗಿ ಸ್ಥಿತಿವಂತರಾಗಿರುವ ಪಾಲಕರು ಮಕ್ಕಳನ್ನು ವಸತಿ ಶಾಲೆಗಳಿಗೆ ದಾಖಲಿಸಿ ಓದಿಸುವರು. ಈ ವ್ಯವಸ್ಥೆಯಲ್ಲಿ ಮಕ್ಕಳು ವರ್ಷಪೂರ್ತಿ ಕುಟುಂಬ ವಾತಾವರಣದಿಂದ ದೂರವಿರಬೇಕಾದ ಅನಿವಾರ್ಯತೆ. ಪರಿಣಾಮವಾಗಿ ಮಕ್ಕಳಲ್ಲಿ ಪ್ರೀತಿ ವಾತ್ಸಲ್ಯದ ಭಾವನೆಗಳು ಬರಡಾಗುತ್ತಿವೆ.

ನನ್ನ ಹಿರಿಯ ಮಿತ್ರರ ಮಗ ಭಾರತಕ್ಕೆ ಬಂದಿದ್ದ ಸಂದರ್ಭ ಭೇಟಿಯಾಗುವ ಪ್ರಸಂಗ ಎದುರಾಯಿತು. ಅವನು ಮಾತಿನ ನಡುವೆ ಹೇಳಿದ್ದು ಹೀಗೆ ‘ಹಳ್ಳಿಯಲ್ಲಿ ಎಲ್ಲ ಸೌಕರ್ಯವಿರುವ ಮನೆ ಕಟ್ಟಿಸಿದ್ದೀನಿ. ಕೆಲಸಕ್ಕೆ ಆಳುಗಳಿವೆ. ಕಾಲಕಾಲಕ್ಕೆ ಹಣ ಕಳಿಸ್ತೀನಿ. ಓಡಾಡೊಕೆ ಕಾರಿದೆ. ಅಮೆರಿಕಾದಿಂದಲೇ ಕಾಲ್ ಮಾಡಿ ಡಾಕ್ಟರ್‍ನ ಮನೆಗೆ ಕರೆಯಿಸಿ ಚಿಕಿತ್ಸೆ ಕೊಡಿಸ್ತೀನಿ. ಇನ್ನೇನು ಬೇಕು ಇವರಿಗೆ ಬದುಕೊಕೆ?’. ಇದು ಇವತ್ತಿನ ಮಕ್ಕಳ ಮನಸ್ಥಿತಿ. ಹಣವೇ ಪ್ರಧಾನ ಎಂದು ಭಾವಿಸಿದವರಿಗೆ ಬದುಕಲು ಹಣಕ್ಕಿಂತ ಪ್ರೀತಿ ವಾತ್ಸಲ್ಯದ ಅಗತ್ಯವಿದೆ ಎಂದು ತಿಳಿಸಿ ಹೇಳುವುದಾದರೂ ಹೇಗೆ? ಹಾಗೆ ಹೇಳುವ ನೈತಿಕ ಸ್ಥೈರ್ಯವನ್ನೆ ಪಾಲಕರು ಕಳೆದುಕೊಂಡಿರುವಾಗ ಯಾರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದು. ಸ್ಪರ್ಧಾತ್ಮಕ ಯುಗದಲ್ಲಿ ನಾವು ಮಕ್ಕಳನ್ನು ಬಿತ್ತುತ್ತಿದ್ದೇವೆ. ಸ್ಪರ್ಧಾತ್ಮಕ ಬೆಳವಣಿಗೆಗೆ ಅಗತ್ಯವಾದ ಎಲ್ಲ ರಸಗೊಬ್ಬರಗಳನ್ನು ಬಿತ್ತಿದ ಬೆಳೆಗೆ ಉಣಿಸುತ್ತಿದ್ದೇವೆ. ಬಿತ್ತಿದಂತೆ ಬೆಳೆ ಎನ್ನುವುದು ನಿಸರ್ಗದ ಸಹಜ ಧರ್ಮವೇ ಆಗಿರುವಾಗ ಇನ್ನು ಮಕ್ಕಳು ಯಂತ್ರಗಳಂತಾಗದೆ ಇನ್ನೇನಾಗಬೇಕು?  

-ರಾಜಕುಮಾರ ಕುಲಕರ್ಣಿ 


Tuesday, January 4, 2022

ರೂಪದರ್ಶಿ: ಮನುಷ್ಯ ಸಂಬಂಧಗಳ ಹುಡುಕಾಟ (ಉಪನ್ಯಾಸ)

 ದಿನಾಂಕ ೨೬.೧೨.೨೦೨೧ ರಂದು ಭಾವೈಸಿರಿ ಕಾರ್ಯಕ್ರಮದವರು ರೂಪದರ್ಶಿ ಕಾದಂಬರಿ ಕುರಿತು ನನ್ನ ಉಪನ್ಯಾಸವನ್ನು ಆಯೋಜಿಸಿದ್ದರು. ಉಪನ್ಯಾಸ ಕಾರ್ಯಕ್ರಮ ಈಗ ಯೂಟೂಬ್ ಚಾನೆಲ್‌ನಲ್ಲಿ ಲಭ್ಯವಿದ್ದು ಈ ಕೆಳಗಿನ ಕೊಂಡಿಯನ್ನು ಬಳಸಿಕೊಂಡು ಉಪನ್ಯಾಸವನ್ನು ಕೇಳಬಹುದು.

https://www.youtube.com/watch?v=2NIKkkXhMLc

ರೂಪದರ್ಶಿ: ಮನುಷ್ಯ ಸಂಬಂಧಗಳ ಹುಡುಕಾಟ ಎನ್ನುವ ನನ್ನ ಲೇಖನದ ಓದಿಗಾಗಿ ಈ ಕೆಳಗಿನ ಕೊಂಡಿಯನ್ನು ಉಪಯೋಗಿಸಿ

https://manadamatu-rvk.blogspot.com/2016/12/blog-post.html


-ರಾಜಕುಮಾರ ಕುಲಕರ್ಣಿ 

Monday, January 3, 2022

ಪ್ರಶಸ್ತಿ ಬೇಕೇ ಪ್ರಶಸ್ತಿ?

 

(ದಿನಾಂಕ ೨೩.೧೦.೨೦೨೧ ರ ಪ್ರಜಾವಾಣಿಯಲ್ಲಿ ಪ್ರಕಟ) 

     ಇತ್ತೀಚೆಗೆ ನನ್ನ ಇ-ಮೇಲ್‍ಗೆ ಒಂದು ಪತ್ರ ಬಂದಿತ್ತು. ನಿಮ್ಮನ್ನು 2021 ನೇ ಸಾಲಿನ ಅತ್ಯುತ್ತಮ ಸಮಾಜ ಸೇವಾಕರ್ತ ಎನ್ನುವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವರ್ಣರಂಜಿತ ಸಮಾರಂಭದಲ್ಲಿ ಗಣ್ಯರಿಂದ ನಿಮಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಕೊನೆಯ ದಿನಾಂಕದೊಳಗಾಗಿ ನಿಮ್ಮ ವೈಯಕ್ತಿಕ ವಿವರಗಳನ್ನು ಕಳುಹಿಸಿಕೊಡಿ. ಜೊತೆಗೆ 25,000 ರೂಪಾಯಿಗಳನ್ನು ನಮ್ಮ ಸಂಸ್ಥೆಯ ಬ್ಯಾಂಕ್ ಖಾತೆಗೆ ಸಂದಾಯ ಮಾಡಿ’ ಇದಿಷ್ಟು ಆ ಪತ್ರದ ಒಕ್ಕಣೆಯಾಗಿತ್ತು. ಪತ್ರ ಓದಿ ಅಚ್ಚರಿಯುಂಟಾಯಿತು. ಯಾವುದೇ ಸೇವಾಸಂಸ್ಥೆಯೊಂದಿಗೆ ಗುರುತಿಸಿಕೊಂಡಿರದ ನನ್ನನ್ನು ಹೀಗೆ ಧಿಡೀರನೆ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅಶ್ಚರ್ಯವನ್ನುಂಟು ಮಾಡಿತು. ಪ್ರಶಸ್ತಿ ಸ್ವೀಕರಿಸಲು ಹಣ ಸಂದಾಯ ಮಾಡಬೇಕಾಗಿರುವ ಸಂಗತಿ ಸಂಶಯಕ್ಕೆ ಕಾರಣವಾಗಿ ನಾನು ಆ ಸಂಸ್ಥೆಯೊಂದಿಗೆ ಯಾವುದೇ ಪತ್ರವ್ಯವಹಾರವನ್ನು ಮುಂದುವರೆಸಲಿಲ್ಲ.

ಇಂಥ ಅನುಭವ ಕೇವಲ ನನ್ನೊಬ್ಬನದಲ್ಲ. ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಆಗಾಗ ಈ ರೀತಿಯ ಪ್ರಶಸ್ತಿ ವಂಚನೆಯ ಪತ್ರಗಳು ಬರುತ್ತಿರುತ್ತವೆ. ಅತ್ಯುತ್ತಮ ವೈದ್ಯ, ಶಿಕ್ಷಕ, ಉದ್ಯಮಿ, ಸಾಮಾಜಿಕ ಸೇವಾಕರ್ತ ಎನ್ನುವ ಪ್ರಶಸ್ತಿಗಳನ್ನು ಒಂದು ನಿರ್ಧಿಷ್ಟ ಮೊತ್ತಕ್ಕೆ ವಿತರಿಸುವ ಪರಿಪಾಠ ಚಾಲ್ತಿಗೆ ಬಂದಿದೆ. ಹೆಸರನ್ನೇ ಕೇಳಿರದ ಸಂಸ್ಥೆಗಳು ಧಿಡೀರೆಂದು ಸಂಪರ್ಕಿಸಿ ಸಂದಾಯ ಮಾಡಬೇಕಾದ ಮೊತ್ತವನ್ನು ತಿಳಿಸಿ ಪ್ರಶಸ್ತಿಗೆ ಆಯ್ಕೆಯಾದ ಕುರಿತು ಮಾಹಿತಿ ನೀಡುತ್ತವೆ. ಹಣ ಪಡೆದು ಸಮಾರಂಭ ಆಯೋಜಿಸಿ ಗಣ್ಯರಿಂದ ಪ್ರಶಸ್ತಿ ಫಲಕವನ್ನು ಕೊಡಿಸಿದ ಉದಾಹರಣೆಗಳೂ ಉಂಟು. ಹಣ ಸಂದಾಯ ಮಾಡಿ ಪ್ರಶಸ್ತಿ ಸ್ವೀಕರಿಸಿ ಫಲಕವನ್ನು ಮನೆಯ ಹಜಾರದ ಗೋಡೆಯ ಮೇಲೆ ತೂಗುಹಾಕಿ ಧನ್ಯತೆ ಅನುಭವಿಸಿದ ಸಾಧಕರ ಸಂಖ್ಯೆಯೂ ಬಹಳಷ್ಟಿದೆ.

ಪ್ರಶಸ್ತಿ ಪುರಸ್ಕಾರದ ಒಂದು ಮುಖ ಮೇಲಿನ ಘಟನೆಯಾದರೆ ಇನ್ನುಳಿದ ಸಂಗತಿಗಳನ್ನು  ಲೇಖನದಲ್ಲಿ ವಿವರಿಸಲು ಪ್ರಯತ್ನಿಸಿದ್ದೇನೆ. ಕೆಲವು ದಿನಗಳ ಹಿಂದೆ ಸನ್ಮಾನ ಸಮಾರಂಭಕ್ಕೆ ಹಾಜರಾಗಲೆಂದು ಊರಿಗೆ ಹೋಗಬೇಕಾದ ಸಂದರ್ಭ ಎದುರಾಯಿತು. ಊರಿನಲ್ಲಿ ನನ್ನ ಮಿತ್ರನ ಶತಾಯುಷಿ ಅಜ್ಜನನ್ನು ಸನ್ಮಾನಿಸಿ ಅಭಿನಂದನ ಗ್ರಂಥವನ್ನು ಸಮರ್ಪಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ದಿನದ ಸಮಾರಂಭಕ್ಕೆ ಬಂಧುಗಳು, ಹಿತೈಷಿಗಳು, ರಾಜಕಾರಣಿಗಳ ಮಹಾದಂಡೆ ನೆರೆದಿತ್ತು. ಸನ್ಮಾನಿತ ಅಜ್ಜ ಅವರೇನೂ ದೊಡ್ಡ ಸಾಧಕರಲ್ಲ. ನೂರು ವರ್ಷಗಳನ್ನು ಪೂರೈಸಿದ್ದೆ ಅಭಿನಂದನೆಗೆ ಕಾರಣವಾಗಿತ್ತು. ಅಭಿನಂದನಗ್ರಂಥಗಳನ್ನು ಸಮರ್ಪಿಸುವ ಮತ್ತು ಸ್ವೀಕರಿಸುವ ವಾಂಛೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಹೀಗೆ ಅಭಿನಂದನಗ್ರಂಥಗಳನ್ನು ಸಮರ್ಪಿಸಲು ವ್ಯಕ್ತಿಯೇನೂ ಯಾವುದೇ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಬೇಕೆಂದೇನಿಲ್ಲ. ಹಿಂದಿನ ದಿನಗಳಲ್ಲಿ ಮಹಾನ್ ಸಾಧಕರಿಗೆ ಅವರ ಅಭಿಮಾನಿಗಳು ಅಭಿನಂದನಾ ಗ್ರಂಥಗಳನ್ನು ಸಮರ್ಪಿಸುವ ಪರಿಪಾಠವಿತ್ತು. ಆದರೆ ಇಂದು ಸಾಧನೆಗಿಂತ ವಯೋಮಾನವೇ ಅಭಿನಂದನಾ ಗ್ರಂಥದ ಸಮರ್ಪಣೆಗೆ ನಿರ್ಧಿಷ್ಟ ಮಾನದಂಡವಾಗಿದೆ. ರಜತ ಮಹೋತ್ಸವ, ಷಷ್ಟ್ಯಬ್ಧಿ, ಸಹಸ್ರ ಚಂದ್ರಮಾನ ದರ್ಶನ ಇಂಥವೇ ಕಾರಣಗಳನ್ನು ನೀಡಿ ಸಾವಿರಾರು ಸಂಖ್ಯೆಯಲ್ಲಿ ಅಭಿನಂದನಗ್ರಂಥಗಳು ಪ್ರಕಟವಾಗುತ್ತಿವೆ. ಅದೆಷ್ಟೋ ಸಲ ಅಭಿನಂದನೆಗೆ ಒಳಗಾಗುವ ವ್ಯಕ್ತಿಯೇ ಅಭಿಮಾನಿ ಬಳಗವನ್ನು ಹುಟ್ಟುಹಾಕಿ ಇಡೀ ಖರ್ಚುವೆಚ್ಚವನ್ನು ಭರಿಸಿ ಸನ್ಮಾನಕ್ಕೆ ಒಳಗಾದ ಅನೇಕ ಉದಾಹರಣೆಗಳಿವೆ. ನಾನು ನಿನ್ನನ್ನು ಅಭಿನಂದಿಸುತ್ತೇನೆ, ನೀನು ನನ್ನನ್ನು ಎನ್ನುವ ಕೊಡು-ಕೊಳ್ಳುವ ಸಂಪ್ರದಾಯವೂ ಇಲ್ಲಿ ರೂಢಿಯಲ್ಲಿದೆ. ಇನ್ನು ಅಭಿನಂದನಗ್ರಂಥದ ಶೀರ್ಷಿಕೆಗೂ ಮತ್ತು ಅಭಿನಂದನೆಗೆ ಒಳಗಾಗುವ ವ್ಯಕ್ತಿಯ ಬದುಕಿಗೂ ಸಂಬಂಧವೇ ಇರುವುದಿಲ್ಲ. ಬುದ್ಧ, ಗಾಂಧಿ, ಬಸವ, ಮಹಾವೀರರೆಲ್ಲ ಶೀರ್ಷಿಕೆಗಳಲ್ಲಿ ಮೈದಾಳುತ್ತಾರೆ.

ಅತ್ಯುತ್ತಮ ಸಾಹಿತ್ಯ ಕೃತಿಗಳನ್ನು ಗುರುತಿಸಿ ಪ್ರಶಸ್ತಿ ನೀಡಲು ಕರ್ನಾಟದಲ್ಲಿ ಸರ್ಕಾರ ಸೇರಿದಂತೆ ಅನೇಕ ಪ್ರತಿಷ್ಠಾನಗಳು ಅಸ್ತಿತ್ವದಲ್ಲಿವೆ. ಇಂಥ ಘನಸಂಸ್ಥೆಗಳ ಪ್ರಶಸ್ತಿ ಪುರಸ್ಕಾರವನ್ನೆ ಅನುಮಾನದಿಂದ ನೋಡುವಂತೆ ಪ್ರತಿವರ್ಷ ಪ್ರಕಟವಾಗುವ ಪುಸ್ತಕಗಳಿಗೆ ಪ್ರಶಸ್ತಿ ನೀಡಲು ಕರ್ನಾಟಕದಲ್ಲಿ ನೂರಾರು ಸಣ್ಣಪುಟ್ಟ ಸಂಸ್ಥೆಗಳು ಹುಟ್ಟಿಕೊಂಡಿವೆ. ಪ್ರಶಸ್ತಿ ಎನ್ನುವ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಲೇಖಕ ತನ್ನ ಪ್ರಕಟಿತ ಪುಸ್ತಕದ ಮೂರು ಪ್ರತಿಗಳನ್ನು ಪ್ರಶಸ್ತಿ ಸಂಸ್ಥೆಗೆ ಕಳುಹಿಸಿಕೊಡಬೇಕು. ಒಂದು ಪ್ರಶಸ್ತಿಗಾಗಿ ನೂರಾರು ಲೇಖಕರು ಭಾಗವಹಿಸುತ್ತಾರೆ. ಸಂಸ್ಥೆಗೆ ಸಾವಿರಾರು ಸಂಖ್ಯೆಯಲ್ಲಿ ಪುಸ್ತಕಗಳು ಜಮೆಯಾಗುತ್ತವೆ. ಈ ನಡುವೆ ಪ್ರಶಸ್ತಿಗಾಗಿ ಲಾಬಿ ಮತ್ತು ಶಿಫಾರಸುಗಳು ಬೇರೆ. ಜಾತಿ, ಧರ್ಮ, ಸಮುದಾಯ, ಪ್ರಾಂತ್ಯ ನೇರವಾಗಿ ಪ್ರಶಸ್ತಿ ವಿತರಣೆಯಲ್ಲಿ ಮೇಲುಗೈ ಸಾಧಿಸುತ್ತವೆ.    

ಈ ನಡುವೆ ವಿಶ್ವವಿದ್ಯಾಲಯಗಳು ಕೊಡಮಾಡುವ ಗೌರವ ಡಾಕ್ಟರೇಟಗಳು ತಮ್ಮ ಮೌಲ್ಯವನ್ನೇ ಕಳೆದುಕೊಂಡಿವೆ. ವಿಶ್ವವಿದ್ಯಾಲಯಗಳ ಸಂಖ್ಯೆ ಹೆಚ್ಚುತ್ತಿರುವಂತೆ ಪ್ರತಿವರ್ಷ ‘ಗೌಡಾ’ಗಳ ಸಂಖ್ಯೆಯೂ ವೃದ್ಧಿಸುತ್ತಿದೆ. ಇಲ್ಲಿಯೂ ಜಾತಿ, ಸಮುದಾಯ, ಭೌಗೋಳಿಕ ಪ್ರದೇಶ ಆಯ್ಕೆ ಹಿಂದಿನ ಕಸರತ್ತಿನಲ್ಲಿ ಪ್ರಧಾನ ಪಾತ್ರವಹಿಸುತ್ತಿವೆ. ಈಗೀಗ ವಿದೇಶಿ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪಡೆಯುತ್ತಿರುವ ಭಾರತೀಯ ಸಾಧಕರ ಸಂಖ್ಯೆ ಹೆಚ್ಚುತ್ತಿದೆ. ಪ್ರಶಸ್ತಿಯೂ ಈಗ ಗ್ಲೋಬಲೀಕರಣಗೊಂಡಿದೆ. ಪ್ರಶಸ್ತಿಗಾಗಿ ಸಾವಿರಾರು ಡಾಲರ್‍ಗಳ ಮೊತ್ತ ಕೈ ಬದಲಾಯಿಸುತ್ತದೆ.

ಕರ್ನಾಟಕದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಇನ್ನು ಕೆಲವು ತಿಂಗಳುಗಳ ಸಮಯವಿರುವಾಗಲೇ ರಾಜ್ಯೋತ್ಸವ ಪ್ರಶಸ್ತಿಯ ಚಟುವಟಿಕೆ ಬಿರುಸುಗೊಳ್ಳುತ್ತದೆ. ಪ್ರಶಸ್ತಿಯ ಆಕಾಂಕ್ಷಿ ತನ್ನ ಸಾಧನೆಯ ಕಿರುಹೊತ್ತಿಗೆ ತಯ್ಯಾರಿಸಿ ರಾಜಕೀಯ ನಾಯಕರ ಶಿಫಾರಸಿನೊಂದಿಗೆ ಸಂಬಂಧಿಸಿದ ಇಲಾಖೆಗೆ ಅರ್ಜಿ ಗುಜರಾಯಿಸಬೇಕು. ಸಾಧಕನೇ ಪ್ರಶಸ್ತಿಯನ್ನು ಹುಡುಕಿಹೋಗುವ ಪರಿಪಾಠವಿದು. ಪ್ರಶಸ್ತಿ ಆಯ್ಕೆಯ ಕಸರತ್ತು ಪ್ರಶಸ್ತಿ ಸಮಾರಂಭದ ಹಿಂದಿನ ದಿನದವರೆಗೂ ನಡೆಯುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಕೊನೆ ಗಳಿಗೆಯಲ್ಲಿ ಪ್ರಶಸ್ತಿ ಪುರಸ್ಕೃತರ ಆಯ್ಕೆ ಪಟ್ಟಿಯೇ ಬದಲಾಗಿರುವುದುಂಟು. ಬೇಡದ ಹೆಸರುಗಳನ್ನು ಕೈಬಿಟ್ಟು ಬೇಕಾದ ಹೆಸರುಗಳನ್ನು ಸೇರಿಸಿ ಪುರಸ್ಕೃತರೇ ಮುಜುಗರಕ್ಕೊಳಗಾದ ಸನ್ನಿವೇಶ ನಿರ್ಮಾಣಗೊಂಡು ಪ್ರಶಸ್ತಿಯ ಘನತೆಯೇ ಹಾಳಾದ ಹಲವು ಉದಾಹರಣೆಗಳಿವೆ.

ಈಗ ಕೇಂದ್ರ ಸರ್ಕಾರ ಪದ್ಮಪ್ರಶಸ್ತಿಗಾಗಿ ಸಾರ್ವಜನಿಕರೇ ಸಾಧಕರನ್ನು ನಾಮನಿರ್ದೇಶನ ಮಾಡುವ ಪ್ರಕ್ರಿಯೆಯನ್ನು ಜಾರಿಗೆ ತಂದಿದೆ. ಪರಿಣಾಮವಾಗಿ ಎಲೆಮರೆಯ ಕಾಯಿಯಂತೆ ಕಾರ್ಯನಿರ್ವಹಿಸುತ್ತಿರುವ ಎಷ್ಟೋ ಸಾಧಕರು ಗೌರವಕ್ಕೆ ಪಾತ್ರರಾಗಲು ಸಾಧ್ಯವಾಯಿತು. ಸರ್ಕಾರವಾಗಲಿ ಮತ್ತು ಸಂಘ ಸಂಸ್ಥೆಗಳಾಗಲಿ ಸಾಧಕರನ್ನು ಗುರುತಿಸಿ ಗೌರವಿಸುವಂಥ ಸಂಪ್ರದಾಯವನ್ನು ರೂಢಿಸಿಕೊಳ್ಳಬೇಕು. ಸಾಧಕರೇ ಮುಂದಾಗಿ ಪ್ರಶಸ್ತಿಗೆ ಅರ್ಜಿ ಗುಜರಾಯಿಸುವ ಪದ್ಧತಿ ಕೊನೆಗೊಳ್ಳಬೇಕು. ಪ್ರಶಸ್ತಿಗೆ ಅನರ್ಹರು ಆಯ್ಕೆಯಾಗುತ್ತಿರುವರು ಎನ್ನುವುದಕ್ಕಿಂತ ಅರ್ಹನು ವಂಚಿತನಾಗುತ್ತಿರುವನು ಎನ್ನುವ ಪ್ರಜ್ಞೆ ಸರ್ಕಾರ, ಸಂಘ ಸಂಸ್ಥೆಗಳು ಮತ್ತು ಶಿಫಾರಸು ಮಾಡುವ ರಾಜಕಾರಣಿಗಳಲ್ಲಿ ಮೂಡಬೇಕು. 

-ರಾಜಕುಮಾರ ಕುಲಕರ್ಣಿ