Saturday, May 18, 2013

ನನ್ನ ಬರವಣಿಗೆಗೆ ಸ್ಪೂರ್ತಿ ನೀಡಿದ ಬರಹಗಳು


        ಪುಸ್ತಕಗಳ ಓದು ನನ್ನ ಅತ್ಯಂತ ಇಷ್ಟದ ಸಂಗತಿಗಳಲ್ಲೊಂದು. ಕೆಲವೊಮ್ಮೆ ಓದಿಲ್ಲದೆ ಕಳೆಯುವ ಬದುಕೇ ದುಸ್ತರ ಎಂದೆನಿಸುತ್ತದೆ. ಏಕೆಂದರೆ  ಬೇಸರದ ಅನೇಕ ಸಂದರ್ಭಗಳಲ್ಲಿ ಓದು ಕೈ ಹಿಡಿದು ನನಗೆ ಮರು ಚೈತನ್ಯ ನೀಡಿದೆ. ಅದಕ್ಕೆಂದೇ ನನ್ನನ್ನು ನಾನು ಓದುವ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಓದುವ ಸಂದರ್ಭ ಮನಸ್ಸಿಗೆ ಹಿಡಿಸಿದ ಸಂಗತಿಗಳನ್ನು ಟಿಪ್ಪಣಿ ಮಾಡಿಕೊಂಡು ನನ್ನ ಬರವಣಿಗೆಯಲ್ಲಿ ಬಳಸಿಕೊಂಡ ಉದಾಹರಣೆಯೂ ಉಂಟು. ಇವತ್ತಿನ ಯುವ ಲೇಖಕರಿಂದ ಹಿಡಿದು ಹಿರಿಯ ತಲೆಮಾರಿನ ಲೇಖಕರವರೆಗೆ ಯಾವ ಅಸುಯಾ ಪರ ಭಾವನೆಗಳಿಗೆ ಆಸ್ಪದ ನೀಡದಂತೆ ನಾನು ಓದಿದ್ದುಂಟು. ಹೀಗಾಗಿ ನನ್ನ ಓದು ಇಂಥ ಸಾಹಿತ್ಯ ಪ್ರಕಾರಕ್ಕೆ ಮತ್ತು ಇಂಥ ಲೇಖಕರಿಗೆಂದು ಸೀಮಿತವಾಗಿಲ್ಲ. ಪುಸ್ತಕವೊಂದರಲ್ಲಿನ ವಿಷಯ ನನ್ನ ಏಕಾಂತದ ವಲಯವನ್ನು ಪ್ರವೇಶಿಸಿದರೆ ಅಂಥ ಪುಸ್ತಕಗಳನ್ನು ಒಂದೇ ಗುಕ್ಕಿಗೆ ಓದಿಕೊಂಡು ಹೋಗಿದ್ದೇನೆ. ಕೆಲವೊಮ್ಮೆ ಪ್ರಾರಂಭದ ಪುಟಗಳಲ್ಲೇ ಬೇಸರ ಇಣುಕಿದಾಗ ಅಂಥ ಪುಸ್ತಕಗಳ ಓದು ಅರ್ಧಕ್ಕೆ ಬಿಟ್ಟಿದ್ದೂ ನಿಜ. ಒಟ್ಟಿನಲ್ಲಿ ಪುಸ್ತಕಗಳ ಓದು ನನಗೆ ಬರೆಯುವ ಚೈತನ್ಯ ನೀಡಿದೆ. ಹೀಗಾಗಿ ನನ್ನ ಪ್ರತಿ ಲೇಖನದಲ್ಲಿ ಅದಕ್ಕೆ ಪೂರಕವಾಗುವಂತಹ ಬರಹಗಳನ್ನು ನಾನೋದಿದ ಪುಸ್ತಕಗಳಿಂದ ಆಯ್ದು ಕೊಟ್ಟ ನಿದರ್ಶನ ಸಾಕಷ್ಟಿವೆ. ಒಂದರ್ಥದಲ್ಲಿ ನನಗೆ ಬರೆಯಲು ಸ್ಪೂರ್ತಿ ನೀಡಿದ ಲೇಖಕ ಮತ್ತು ಆತನ ಬರವಣಿಗೆಗೆ ನಾನು ಈ ರೀತಿ ಋಣಿಯಾಗಿರುವ ಸಾಧ್ಯತೆಯೂ ಇರಬಹುದು. ಹೀಗೆ ಸ್ಪೂರ್ತಿ ನೀಡಿದ ಕೆಲವೊಂದು ಬರಹಗಳನ್ನು ಇಲ್ಲಿ ಕೊಡುತ್ತಿದ್ದೇನೆ. ಯಾರಿಗೆ ಗೊತ್ತು ಓದಿದ ನಂತರ ನಿಮ್ಮಲ್ಲೂ ಬರೆಯುವ ಉಮೇದಿಯೊಂದು ನಿಮಗರಿವಿಲ್ಲದಂತೆಯೇ ನಿಮ್ಮೊಳಗಡೆ ಟಿಸಿಲೊಡೆಯಬಹುದು. ಓದಿ ನೋಡಿ,

ಸಾವಿನ ನೆನಪು ಬದಲಾವಣೆ ತಂದ ಆ ಕ್ಷಣ.....


          ಸಾವು ತನ್ನ ತಣ್ಣನೆಯ ಹಸ್ತವನ್ನು ನಮ್ಮ ಮೇಲಿಟ್ಟಾಗ ಹೇಗಿರುತ್ತದೆ?. ಹುಟ್ಟಿದವನು ಸಾಯಲೇ ಬೇಕು ಎಂದು ಕೊಂಡು ಬದುಕುತ್ತಿರುವುದಕ್ಕೂ, ಸಾವಿನ ಸ್ಪರ್ಷಕ್ಕೂ ವ್ಯತ್ಯಾಸವೇನು? ಬದುಕುತ್ತಿರುವವರು ಯಾರೂ ಸಾವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಮನುಷ್ಯ ತನ್ನ ಸೋಮಾರಿತನದಲ್ಲಿ, ನಿರ್ಲಕ್ಷ್ಯದಲ್ಲಿ ಸಾವಿನ ಕಟು ನಿಷ್ಟುರತೆಯನ್ನು ಎದುರಿಸುವುದಿಲ್ಲವಾದ್ದರಿಂದ ಆತನ ನೆನಪು, ಆಶೆ, ರೋಮಾಂಚನಗಳು ಫೋಕಸ್ ಆಗಿರುವುದೇ ಇಲ್ಲ. ಸಾವಿನ ಶಾಕ್ ಮಾತ್ರ ಆತ  ತನಗೆ ಉಳಿದ ಕ್ಷಣಗಳನ್ನು ಜೀವಿಸುವಂತೆ ಮಾಡಬಲ್ಲದು.

      ನನ್ನ ಗಾಢ ದುಗುಡದ ವೇಳೆಯಲ್ಲಿ ಸಾವಿನ ಹತ್ತಿರ ಇದ್ದಂತ್ತಿದ್ದಾಗ ಮುತ್ಸದ್ದಿತನ, ಖ್ಯಾತಿ, ಪ್ರಶಸ್ತಿ ಮುಂತಾದವೆಲ್ಲ ಬದುಕಿನೆದುರು, ಸಾವಿನೆದುರು ಗೌಣ ಅನ್ನಿಸುತ್ತಿದ್ದಾಗ ನನ್ನ ಬರವಣಿಗೆಯ ರೀತಿ ಬದಲಾಯಿತು. ಸಾವು ಇನ್ನು ಮೇಲೆ ನನಗೆ ಕೇವಲ ಕತೆಯಾಗದೆ, ಬದುಕುವ ಅಂತ್ಯ ಎಂಬ ಸತ್ಯ ಮಾತ್ರವಾಗದೆ ನನ್ನ ಉಳಿದ ದಿನಗಳಲ್ಲಿ ಬರೆದ ಸಾಲುಗಳಲ್ಲಿ ನೆಲೆಸಿ ಎಚ್ಚರಿಸುವ ಛಾಯೆ ಅನ್ನಿಸತೊಡಗಿತು.

(ಪಿ.ಲಂಕೇಶ್ ಅವರ 'ಹುಳಿ ಮಾವಿನ ಮರ' ಕೃತಿಯಿಂದ)

ಬರವಣಿಗೆಯೇ  ನನ್ನ ಧರ್ಮ 


       ಬಹುಕಾಲ ಬಾಳುವಂಥ ಯಾವುದನ್ನು ರಾಜಕಾರಣ ಮಾಡಲಾಗದಿಲ್ಲವೋ ಅದನ್ನು ಸಾಹಿತ್ಯ ಮಾಡಬೇಕು. ರಾಜಕೀಯ ಕ್ರಿಯೆ ಅಲ್ಪಾಯುಷ್ಯದ್ದು. ಸಾಹಿತ್ಯಕ್ಕೆ ಈ ಮಾತು ಅನ್ವಯಿಸುವುದಿಲ್ಲ. ಲೇಖಕ ಕೇವಲ ವರ್ತಮಾನಕ್ಕಾಗಿ ಮಾತ್ರ ಪುಸ್ತಕ ಬರೆಯುವುದಿಲ್ಲ ಅನ್ನುವುದು ನಮ್ಮ ಗಮನದಲ್ಲಿರಬೇಕು. ಟೀಕಿಸುವ ಮೂಲಕವೋ, ತಮ್ಮ ಆಲೋಚನೆಗಳನ್ನು ಬಳಸಿ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮೂಲಕವೋ ಒಂದಲ್ಲ ಒಂದು ವಿಧದಲ್ಲಿ ಲೇಖಕರಾದವರು ಕಾರ್ಯಪ್ರವೃತ್ತರಾಗುವುದು ತುಂಬಾ ಮುಖ್ಯ. ಯಾವುದು ನಮ್ಮನ್ನು ಆಳಬೇಕು ಅಂತ ಬಯಸುತ್ತೆವೆಯೋ ಅಂತಹ ನ್ಯಾಯ, ಸ್ವಾತಂತ್ರ್ಯದಿಂದ ಎಂದಿಗೂ ಪ್ರತ್ಯೇಕಿಸಲ್ಪಡಕೂಡದು. ಕೆಲವು ಸಂದರ್ಭಗಳಲ್ಲಿ ಸ್ವಾತಂತ್ರ್ಯವನ್ನು ತ್ಯಾಗ ಮಾಡಬೇಕಾಗಿ ಬರುವಂಥ ಯಾವುದೇ ಅಭಿಪ್ರಾಯಕ್ಕೂ ಲೇಖಕ ಜಗ್ಗ ಕೂಡದು. ಕೆಲಸದ ಹಕ್ಕಿನಂತೆ ಅಥವಾ ಒಳ್ಳೆಯ ಸಂಬಳದಂತೆ ಲೇಖಕರು ತಮ್ಮ ಸ್ವಾತಂತ್ರ್ಯವನ್ನು ಒಂದು ಅಗತ್ಯದಂತೆ ಕಾಪಾಡಿಕೊಳ್ಳಬೇಕು.

       ನನ್ನ ಅಂತ:ಸಾಕ್ಷಿ ತುಂಬಾ ಗಡಸಾದದ್ದು. ಸಾಯುವ ಕೊನೆಯ ದಿನದವರೆಗೂ ನಾನು ಬರೆಯಬಲ್ಲೆ ಎನ್ನುವುದು ನನಗೆ ಗೊತ್ತು. ಬರವಣಿಗೆಯೇ ನನ್ನ ಧರ್ಮ, ಬರವಣಿಗೆಯೇ ನನ್ನ ಬದುಕು.

(ಮಯೂರ ೨೦೧೦ ರ ಸಂಚಿಕೆಯಲ್ಲಿ ಪ್ರಕಟವಾದ ನೊಬೆಲ್ ಪ್ರಶಸ್ತಿ ಪುರಸ್ಕೃತ ಮಾರಿಯೋ ವರ್ಗಾಸ್ ಯೋಸಾನ ಸಂದರ್ಶನದಿಂದ)

ಚಲಂ ಗೆ ಅದು ಹೇಗೆ ಸಾಧ್ಯವಾಯಿತು?


       ಕಡು ವ್ಯಾಮೋಹಿಯ ಹಾಗೆ, ಸಂತನ ಹಾಗೆ, ಎಲ್ಲವನ್ನು ಮೀರಿಯೂ ಮೀರದವನ ಹಾಗೆ, ನಮ್ಮನ್ನು ಕಂಗೆಡಿಸುವವನ ಹಾಗೆ, ನಾವು ಸಾಧನೆ, ಸುಖ, ತೃಪ್ತಿ, ನೆಮ್ಮದಿ ಅಂದುಕೊಂಡಿದ್ದನ್ನೆಲ್ಲ ಕೇವಲ ನಮಗೆ ನಾವೇ ಹೇಳಿಕೊಂಡ ಅಪ್ಯಾಯಮಾನ ಸುಳ್ಳು ಎಂದೆನಿಸಿ ಕಂಗಾಲಾಗುವ ಹಾಗೆ, ಅದು ಅರಿವಾಗಿಯೂ ಆ ಸುಳ್ಳನ್ನು ಧಿಕ್ಕರಿಸುವ ಧೈರ್ಯವಾಗದ ಹಾಗೆ. ಚಲಂ ನಿಜಕ್ಕೂ ಹಾಗಿದ್ದರಾ? ಅವರು ಹಾಗಿದ್ದರೆ ನಾವೇಕೆ ಹೀಗಿದ್ದೇವೆ? ಅದೇ ಭೂಮಿ, ಅದೇ ಬಾನು, ಅದೇ ಗಾಳಿ, ಅದೇ ನೀರು ಸೃಷ್ಟಿ ಮಾತ್ರ ಬೇರೆ ಬೇರೆ. ಅದು ನಮ್ಮ ಮಿತಿಯಾ?

       ಅಹಂಕಾರದ ಲವಲೇಶವೂ ಇಲ್ಲದೆ ಆತ್ಮ ಚರಿತ್ರೆ ಬರೆಯುವುದಾದರೂ ಹೇಗೆ? ನಾನೆಂಬ ಮಮಕಾರವನ್ನು ತೊರೆದು ತನ್ನ ಬದುಕನ್ನು ನಡುದಾರಿಯಲ್ಲಿ ಸತ್ತು ಬಿದ್ದ ಅಪರಿಚಿತ ಶವವನ್ನು ನೋಡುವಷ್ಟು ಪರಕೀಯ ಭಾವದಿಂದ ನೋಡುವುದು ಸಾಧ್ಯವಾ? ಚಲಂ ಗೆ ಅದು ಹೇಗೆ ಸಾಧ್ಯವಾಯಿತು?

(ರವಿ ಬೆಳಗೆರೆ ಅನುವಾದಿಸಿರುವ 'ಚಲಂ' ಆತ್ಮಕಥೆಯಲ್ಲಿನ ಜೋಗಿ ಅವರ ಲೇಖನದಿಂದ)

ಓದುಗರ ಏಕಾಂತ 


         ಬರಹಗಾರರಿಗೆ ಆಶ್ಚರ್ಯವಾಗಬಹುದು. ಬರಹಗಾರರ ಪ್ರವೇಶವೆಂಬುವುದು (ರೈಟರ್ಸ್ ಸ್ಪೇಸ್) ಕೊನೆಗೂ ಇರುವುದು ಓದುಗರ ಏಕಾಂತದಲ್ಲಿ. ಓದುಗನ ಏಕಾಂತವನ್ನು ಪ್ರವೇಶಿಸಬಲ್ಲ ಕೃತಿಗಳು ದೊಡ್ಡ ದೊಡ್ಡ ಪಲ್ಲಟಗಳಿಗೆ, ಜಿಗಿತಗಳಿಗೆ ಕಾರಣವಾಗುತ್ತವೆ. ಒಂದು ಕೃತಿ ಸುಂದರವಾಗಿದ್ದು, ನಿಪುಣವಾಗಿದ್ದು, ಕುಶಲತೆಯಿಂದ ಕೂಡಿದ್ದು ಕೂಡ ಓದುಗನ ಏಕಾಂತವನ್ನು ಪ್ರವೇಶಿಸದೇ ಹೋಗಬಹುದು. ಇಲ್ಲ ಏಕಾಂತದ ಹೊರವಲಯವನ್ನು ಪ್ರವೇಶಿಸಿ ಏನೂ ಪ್ರಭಾವ ಬೀರದೆ ಹೋಗಬಹುದು. ನಾವೆಲ್ಲಾ ಪ್ರತಿನಿತ್ಯವೂ ಎದುರಿಸುವ ಬಹುಪಾಲು ಕೃತಿಗಳು ಈ ಪೈಕಿಯವೆ. ಓದುಗ ಏಕಾಂತದಲ್ಲಿದ್ದಾಗ ತನ್ನನ್ನೂ, ತಾನು ಓದುತ್ತಿರುವ ಕೃತಿಯನ್ನೂ ಹೇಗೆ ಪರಿಭಾವಿಸುತ್ತಾನೆ ಎಂಬುದರ ಬಗ್ಗೆ ಯೋಚಿಸದೆ ಬರೆಯುವ ಬಹುಪಾಲು ಲೇಖಕರು ಸಹಸ್ರಾರು ಪ್ರತಿಗಳಲ್ಲಿ, ಗ್ರಂಥಾಲಯದ ಅಲ್ಮೆರಾಗಳಲ್ಲಿ ಉಳಿದು ಬಿಡುತ್ತಾರೆ. ಕೆಲವು ಲೇಖಕರು ಮಾತ್ರ ಓದುಗನ ಏಕಾಂತಕ್ಕೆ ಲಗ್ಗೆ ಹಾಕಲು ಪ್ರಯತ್ನಿಸುತ್ತಾರೆ. 

(ಕೆ.ಸತ್ಯನಾರಾಯಣ ಅವರ 'ಖಾಸಗಿ ವಿಮರ್ಶೆ' ಪುಸ್ತಕದಿಂದ)

ಸತ್ಯವಲ್ಲದೆ ಬೇರೇನೂ ಇಲ್ಲ 


        ಈ ಎಲ್ಲಾ ಪುಟಗಳೊಳಗೆ ಇರುವುದೆಲ್ಲವೂ ಸತ್ಯ. ಸತ್ಯವಲ್ಲದೆ ಬೇರೇನೂ ಇಲ್ಲ. ನಾನು ಹೇಳಿರುವುದೆಲ್ಲವೂ ಸತ್ಯ. ಓದುಗರು ಅರಗಿಸಿಕೊಳ್ಳಬಹುದಾದ ಬದುಕಿನ ಅಪರೂಪವೆನ್ನಿಸಬಹುದಾದ ಬಹುಪಾಲು ಘಟನೆಗಳನ್ನು ಶೇಕಡಾ ನೂರಕ್ಕೆ ತೊಂಬತ್ತರಷ್ಟು ನೈಜವಾಗಿ ಬರೆದಿರುವೆ. ಇದು ನನ್ನ ಕಥೆ ಮಾತ್ರವಲ್ಲ. ನನ್ನ ವಾರಿಗೆಯ ಮತ್ತು ಪ್ರಥಮ ಪಂಚ ವಾರ್ಷಿಕ ಯೋಜನೆಯ ಎಡ ಬಲ ಹುಟ್ಟಿರುವ ಎಲ್ಲರ ಜೀವನದ ಕಥೆ ಕೂಡ. ನಮ್ಮೆಲ್ಲರ ಸಂಕಟಗಳು ಆಯಾ ಕಾಲ ಘಟ್ಟದ ನಿಸ್ತೇಜ ಚಹರೆಗಳಿಗೆ ಸಂಬಂಧಿಸಿದವು ಕೂಡ. ಆದ್ದರಿಂದ ನನ್ನ ವಾರಿಗೆಯ ನಮ್ಮನ್ನು ಹುರಿದು ಮುಕ್ಕಿದ ಆ ದಿನಗಳ ಪ್ರತಿನಿಧಿಯಾಗಿ ನಾನಿಷ್ಟೊಂದು ಬರೆಯಲೇ ಬೇಕಾಯಿತು. ಈ ಬರಹದೊಳಗೆ ಸ್ಲಂಗಳಿರುವಂತೆಯೇ ಹಲವು ಸುಂದರ ಬಡಾವಣೆಗಳೂ ಇವೆ. ಹತಾಶೆ, ಸಂಕಟಗಳು, ಹುಂಬತನ, ಸಾಹಸಗಳು, ಕನಸುಗಳು, ನನಸುಗಳಿರುವಂತೆಯೇ ಒಂದು ಕಾಲ ಘಟ್ಟದ, ಒಂದು ಸಮಾಜದ, ಒಂದು ಪ್ರದೇಶದ, ಸಾಹಿತ್ಯದ ಇತಿಹಾಸವೂ ಇದೆ. ಇಲ್ಲಿನ ಅಕ್ಷರಗಳು ಕೇವಲ ಅಕ್ಷರಗಳಲ್ಲ. ಒಂದೊಂದು ಅಕ್ಷರ ಸಂಕಟದ ಕನ್ನಡಿಯಲ್ಲಿ ಗೋಚರಿಸುವ ಪ್ರತಿಬಿಂಬವೂ ಹೌದು. ಗ್ರಹಿಕೆ ಮತ್ತು ಸತ್ಯದ ನಡುವಿನ ಕಂದಕವನ್ನು ಮುಚ್ಚುವ ಪ್ರಯತ್ನವೇ ನನ್ನೀ 'ಗಾಂಧಿ ಕ್ಲಾಸು'.

(ಕುಂವೀ ಆತ್ಮಕಥೆ 'ಗಾಂಧಿ ಕ್ಲಾಸು' ಪುಸ್ತಕದಿಂದ)


ಪ್ರೀತಿಸುವವರು ಬಹುಶ: ಲೇಖಕರಾಗಿರುವುದಿಲ್ಲ 


        ರಮ್ಯತೆಯು ಕಲ್ಪನಾ ಶಕ್ತಿಯನ್ನು ಅಣಕವಾಡುತ್ತದೆಂದು ಅಮೇರಿಕನ್  ಕವಿ ವಾಲೇಸ್ ಸ್ಟೀವನ್ಸ್ ಹೇಳಿದ್ದನ್ನು ಇಲ್ಲಿ ಜ್ಞಾಪಿಸೋಣ. ಭಾವುಕತೆಯ ಭಾವುಕತೆಯು ಸಂವೇದನಾ ಶಕ್ತಿಗೆ  ಹೇಗೋ ಹಾಗೆ ರಮ್ಯತೆಯು ಕಲ್ಪನಾ ಶಕ್ತಿಗೆ ಎನ್ನುತ್ತಾನೆ ಈತ. ಅತಿ ರಮ್ಯತೆಯು ನಮ್ಮನ್ನು ಆತ್ಮರತಿಗೂ ಅತಿ ಭಾವುಕತೆಯು ಆತ್ಮಾವಲೊಕನಕ್ಕೂ ಕೊಂಡೊಯ್ದು ಕೂಡ್ರಿಸಬಹುದೆಂಬುದು ವಾಲೇಸ್ ಸ್ಟೀವನ್ಸ್ ನ  ಮತ. ಲೇಖಕನಾದವನಿಗೆ, ಕಲಾವಿದನಿಗೆ ಸಂವೇದನಾ ಶಕ್ತಿ ಮತ್ತು ಕಲ್ಪನಾ ಶಕ್ತಿಗಳು ಎಲ್ಲರಕ್ಕಿಂತ ಹೆಚ್ಚು. ಇವೆರಡನ್ನೂ ಆತ ಎಂಥ ಸಂದರ್ಭಗಳಲ್ಲೂ ಬಿಟ್ಟು ಕೊಡಬಾರದು. ಈ ಗುಣಗಳೇ ಆತನನ್ನು ಎಲ್ಲರ ಮಧ್ಯೆ ಒಂಟಿಯನ್ನಾಗಿ ಮಾಡುತ್ತದೆಂದು ತೋರುತ್ತದೆ.

        ಲಾರೆನ್ಸ್ ತನ್ನನ್ನು ಪ್ರೀತಿಸಿದ ಹುಡುಗಿಯರನ್ನೇ ತನ್ನ ಕತೆ ಕಾದಂಬರಿಗಳ ನಾಯಕಿಯರನ್ನಾಗಿ ಮಾಡಿದಾಗ ಆತನ ಪ್ರೀತಿ  ಯಾವ ಬಗೆಯದಿತ್ತು ಎಂಬ ಸಂದೇಹವೆಳುತ್ತದೆ. ನಿಜಕ್ಕೂ ಪ್ರೀತಿಸುವವರು ಬಹುಶ: ಲೇಖಕರಾಗಿರುವುದಿಲ್ಲ. ಅವರು ನಾವು ದಿನವೂ ಬಸ್ಸಿನಲ್ಲಿ, ಪಾರ್ಕಿನಲ್ಲಿ, ಸಿನಿಮಾಗಳಲ್ಲಿ, ಹೋಟೆಲುಗಳಲ್ಲಿ, ಗುಡಿಸಿಲುಗಳಲ್ಲಿ ಕಾಣಬಹುದಾದ ಸಾಮಾನ್ಯ ಜನರು. ಅದೇ ರೀತಿ ನಿಜಕ್ಕೂ ಕ್ರಾಂತಿಕಾರಿಗಳಾದವರು ಕೂಡ ಲೇಖಕರಾಗಿರುವುದಿಲ್ಲ. ಕ್ರಾಂತಿಕಾರಿಗಳು ಕ್ರಾಂತಿಯನ್ನು ಮಾಡುತ್ತಲೇ ಇರುತ್ತಾರೆ. ಇಲ್ಲಿ ಮತ್ತೆ ಲಾರೆನ್ಸ್ ನದೇ  ಉದಾಹರಣೆಯನ್ನು ಕೊಡುವುದಾದರೆ ಆತ ಫ್ಲೋರಿಡಾದಲ್ಲೋ ಇನ್ನೆಲ್ಲೋ ಒಂದು ಆದರ್ಶ ಗ್ರಾಮವನ್ನು  ಕಟ್ಟುತ್ತೇನೆ ಎನ್ನುತ್ತಿದ್ದ. ಅದಕ್ಕೆ ಹೊಸ ಹೊಸ ಹೆಸರುಗಳನ್ನು ಹುಡುಕುತ್ತಿದ್ದ. ಇಡಿಯ ಲೋಕದ ವಿರುದ್ಧವೇ ಲಾರೆನ್ಸ್ ಗೆ ಸಿಟ್ಟಿತ್ತು. ಆದ್ದರಿಂದಲೇ ಇಂಥ ಲೋಕವನ್ನು ನಾಶಪಡಿಸಿ ತಾನು ಹೊಸದೊಂದು ಲೋಕವನ್ನು  ಸೃಷ್ಟಿಸುತ್ತೇನೆ ಎಂದುಕೊಳ್ಳುತ್ತಿದ್ದ. ಆದರೆ ಲಾರೆನ್ಸ್ ನ ಈ ಯೋಜನೆ ಕಾರ್ಯ ರೂಪಕ್ಕೆ ಬರಲಿಲ್ಲ. ಬಹುಶ: ಅದರಿಂದ ಯಾರಿಗೂ ಅಚ್ಚರಿಯೆನಿಸಲಿಲ್ಲ. ಅಲ್ದಸ್ ಹಕ್ಸಲಿ ಹೇಳುವಂತೆ ಇದೊಂದೂ ಮುಖ್ಯವಾಗಿರಲಿಲ್ಲ. ಮುಖ್ಯವಾಗಿದ್ದುದ್ದೆಂದರೆ ಲಾರೆನ್ಸ್ ಮಾತ್ರ ಹಾಗೂ ಆತನ ಒಳಗೆ ಉರಿಯುತ್ತಿದ್ದ ಆತ ಬರೆದ ಪ್ರತಿಯೊಂದು ಬರಹದಿಂದಲೂ ಉಜ್ವಲವಾಗಿ ಬೆಳಗುತ್ತಿದ್ದ ಬೆಂಕಿ.

        ಲಾರೆನ್ಸ್ ಫ್ಲೋರಿಡಾದಲ್ಲಿ ಕಾಲನಿಯನ್ನು ಸ್ಥಾಪಿಸಲಿಲ್ಲ. ಅಂಥ ಕಾಲನಿಗಳನ್ನು ಸ್ಥಾಪಿಸುವುದಕ್ಕೆ ರಜನೀಶರಂಥವರು  ಇದ್ದಾರೆ. ಒಂದು ವೇಳೆ ಲಾರೆನ್ಸ್ ಒಂದು ಆದರ್ಶ ಲೋಕವನ್ನು ಸೃಷ್ಟಿಸಿದ್ದರೂ ಅದು ಹೆಚ್ಚು ಕಾಲ ಹಾಗೆ ಉಳಿಯುತ್ತಿರಲಿಲ್ಲ. ಮಾತ್ರವಲ್ಲ ಅವನಿಂದ ಶ್ರೇಷ್ಠ ಕೃತಿಗಳ  ನಿರ್ಮಾಣವೂ ಆಗುತ್ತಿರಲಿಲ್ಲ. ಆದರ್ಶಗಳು ಕನಸಾಗಿ ಉಳಿಯುವುದೇ ಒಳ್ಳೆಯದೆಂದು ಕಾಣುತ್ತದೆ. ಇದರರ್ಥ ಆದರ್ಶಗಳು ಯಾವ ಗಳಿಗೆಯಲ್ಲೂ  ನನಸಾಗಲಾರವು ಎಂದಲ್ಲ. ಆದರೆ ನೆನಪಾಗಿ ಅವು ಬಹಳ ಕಾಲ ಉಳಿಯಲಾರವು. ಕನಸು ಮತ್ತು ನೆನಪುಗಳ  ಸಂಘರ್ಷ  ನಿರಂತರವಾದುದು ಮತ್ತು ಈ ಸಂಘರ್ಷ   ಇರುವ ತನಕ ಕನಸುಗಳೂ ಬೇಕು ಮತ್ತು ಅವನ್ನು ಕಾಣುವವರೂ ಬೇಕು.

(ಶೂದ್ರ ಶ್ರೀನಿವಾಸ ಅವರ 'ಕನಸಿಗೊಂದು ಕಣ್ಣು' ಪುಸ್ತಕದ ಕೆ.ವಿ.ತಿರುಮಲೇಶ ಅವರ ಮುನ್ನುಡಿಯಿಂದ)

ಕೊನೆಯ ಮಾತು 


               ಪುಸ್ತಕವೊಂದು ಅದು ಅನೇಕ ಗೆಳೆಯರಿಗೆ ಸಮ ಎಂದು ಪುಸ್ತಕ ಪ್ರಿಯನೊಬ್ಬ ಹೇಳಿದ ಮಾತಿದು. ಒಂದು ಉತ್ತಮ ಪುಸ್ತಕದ ಓದು ಅದು ನಮ್ಮ ಬದುಕಿನ  ದಿಕ್ಕನ್ನೇ ಬದಲಿಸಬಲ್ಲದು. ಇವತ್ತಿನ ಏನೆಲ್ಲಾ ಮನೋರಂಜನಾ ಮಾಧ್ಯಮಗಳೆದರು ಪುಸ್ತಕದ ಓದು ಕಡಿಮೆಯಾಗುತ್ತಿದೆ ಎನ್ನುವ ಮಾತು ನಿಜ. ಆದರೆ ಪುಸ್ತಕವೊಂದನ್ನು ಓದಿದ ಆ ಕ್ಷಣ ಮನಸ್ಸಿಗೆ ಸಿಗುವ ತೃಪ್ತಿ ಮತ್ತು ಸಮಾಧಾನ ಯಾವ ಆಧುನಿಕ ಮನೋರಂಜನಾ ಮಾಧ್ಯಮಗಳಿಂದಲೂ ದೊರೆಯಲಾರದು. ಒಂದು ಓದು ನಮ್ಮನ್ನು ವಿವೇಚನೆಗೆ ಹಚ್ಚುತ್ತದೆ, ಚಿಂತನೆಯ ಕಡೆಗೆ  ಕರೆದೊಯ್ಯುತ್ತದೆ, ನಮ್ಮಲ್ಲೊಂದು ಸೃಜನಶೀಲತೆ ವಿಕಸಿಸಲು ನೆರವಾಗುತ್ತದೆ. ಒಂದರ್ಥದಲ್ಲಿ ನಮ್ಮನ್ನು ಮನುಷ್ಯರಾಗುವತ್ತ ಹೆಜ್ಜೆ ಹಾಕುವಂತೆ ಮಾಡುವ ಶಕ್ತಿ ಮತ್ತು ಸಾಮರ್ಥ್ಯ ಓದಿಗಿದೆ.  

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 


Tuesday, May 7, 2013

ಕನ್ನಡ ಪುಸ್ತಕೋದ್ಯಮ ಎದುರಿಸುತ್ತಿರುವ ಸವಾಲುಗಳು

       


        ಈ ವಿಷಯ ಮೊನ್ನೆ ಗೊತ್ತಾಯಿತು. ಲೇಖಕ ಮತ್ತು ಪ್ರಕಾಶಕರಾಗಿರುವ ನನ್ನ ಸ್ನೇಹಿತರೋರ್ವರಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಪುಸ್ತಕ ಖರೀದಿಗೆ ಸಂಬಂಧಿಸಿದಂತೆ ಪತ್ರ ಬಂದಿತ್ತು. ಆ ಪತ್ರದಲ್ಲಿ ಉಲ್ಲೇಖಿಸಿದಂತೆ ಪುಸ್ತಕದ ಮೂರು ನೂರು ಪ್ರತಿಗಳನ್ನು ಕಳುಹಿಸಿಕೊಡುವಂತೆ ಹಾಗೂ ಪುಸ್ತಕದ ಪ್ರತಿ ಪುಟಕ್ಕೆ ೪೦ ಪೈಸೆಗಳ ಬೆಲೆ  ನಿಗದಿಪಡಿಸಲಾಗಿತ್ತು. ನನ್ನ ಸ್ನೇಹಿತನ ಪುಸ್ತಕ ಒಟ್ಟು ನೂರು ಪುಟಗಳಲ್ಲಿದ್ದು ಅದರ ಮುಖ ಬೆಲೆ ಎಪ್ಪತ್ತು ರೂಪಾಯಿಗಳಾಗಿತ್ತು. ಹೀಗಿದ್ದೂ ಆತ ಒಂದು ಪ್ರತಿಗೆ ೪೦ ರೂಪಾಯಿಗಳಂತೆ ೩೦೦ ಪ್ರತಿಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಮಾರಾಟಮಾಡಬೇಕಾದ ಅನಿವಾರ್ಯತೆ ಎದುರಾಯಿತು. ಈ ಪುಸ್ತಕ ಮಾರಾಟದಿಂದ ಅವನಿಗೇನಾದರೂ ಲಾಭವಾಗಿರಬಹುದೇ ಎನ್ನುವ ಸಂದೇಹ ನನ್ನನ್ನು ಕಾಡುತ್ತಿರುವ ಹೊತ್ತಿನಲ್ಲೇ ಆತ ಪ್ರಕಟಣೆಯ ಮೇಲೆ ಆದ ಖರ್ಚಿನ ಲೆಕ್ಕ ಒಪ್ಪಿಸಿದ. ಪುಸ್ತಕದ ಒಟ್ಟು ಸಾವಿರ ಪ್ರತಿಗಳ ಪ್ರಕಟಣೆಗಾಗಿ ಆತ ಮುದ್ರಕರಿಗೆ ಕೊಟ್ಟ ಹಣ ಬರೋಬ್ಬರಿ ಮೂವತ್ತು ಸಾವಿರ ರೂಪಾಯಿಗಳು. ಈ ನಡುವೆ ಪುಸ್ತಕ ಬಿಡುಗಡೆಗಾಗಿ ನಾಲ್ಕೈದು ಸಾವಿರ ರೂಪಾಯಿಗಳು ಖರ್ಚಾದವು. ಸಾವಿರ ಪ್ರತಿಗಳು ಪ್ರಕಟವಾಗಿ ಕೈಸೇರಿದಾಗ ಅವುಗಳಲ್ಲಿ ನೂರರಿಂದ ನೂರೈವತ್ತು ಪ್ರತಿಗಳು ಗೌರವ ಪ್ರತಿ ರೂಪದಲ್ಲಿ ಪುಕ್ಕಟ್ಟೆಯಾಗಿ ಕೈಬಿಟ್ಟವು. ಮೂರು ನೂರು ಪ್ರತಿಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಮಾರಾಟ ಮಾಡಿದ್ದರಿಂದ ಬಂದ ಹಣ ಹನ್ನೆರಡು ಸಾವಿರ ರೂಪಾಯಿಗಳು. ಪರಿಚಯದ ಪುಸ್ತಕ ಮಾರಾಟಗಾರರನ್ನು ಸಂಪರ್ಕಿಸಿದಾಗ ಎರಡು ನೂರು ಪ್ರತಿಗಳೆನೋ ಶೇಕಡಾ ೨೦ ರ ರಿಯಾಯಿತಿ ದರದಲ್ಲಿ ಮಾರಾಟವಾದರೂ ಅವರಿಂದ ಬರಬೇಕಾದ ರೂ. ೧೧,೨೦೦/- ಇನ್ನೂ ಆತನ ಕೈಸೇರಿಲ್ಲ. ಸುಮಾರು ಮೂರು ನೂರು ಪ್ರತಿಗಳು ಮಾರಾಟವಾಗದೆ ಹಾಗೇ ಉಳಿದುಕೊಂಡಿವೆ. 

          ಪುಸ್ತಕ ಪ್ರಕಟಣೆಗಾಗಿ ಆದ ಖರ್ಚು ಮತ್ತು ಮಾರಾಟದಿಂದ ಕೈಸೇರಿದ ಹಣ ಎರಡನ್ನೂ ಕೂಡಿ ಕಳೆದು ನೋಡಿದಾಗ ಆತನಿಗೆ ಈ ಪುಸ್ತಕ ಪ್ರಕಟಣೆಯಿಂದ ಅಂದಾಜು ೧೨,೦೦೦ ರೂಪಾಯಿಗಳ ನಷ್ಟವಾಯಿತು. ಬಳಿಯಲ್ಲಿ ಮೂರು ನೂರು ಪ್ರತಿಗಳು ಇವೆಯಾದರೂ ಅವು ಮಾರಾಟವಾಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಇಂಥದ್ದೊಂದು ಸಮಸ್ಯೆಯನ್ನು ಎದುರಿಸಿರುವ ಆತ ಭವಿಷ್ಯದಲ್ಲಿ ಪುಸ್ತಕ ಪ್ರಕಟಣೆಯ ಕೆಲಸಕ್ಕೆ ಕೈಹಾಕದಿರಲು ನಿರ್ಧರಿಸಿರುವನು. ಒಂದಿಷ್ಟು ಉತ್ತೇಜನ ದೊರೆತಿದ್ದರೆ ಬೇರೆ ಬೇರೆ ಲೇಖಕರ ಪುಸ್ತಕಗಳನ್ನು ಪ್ರಕಟಿಸುವ ಇರಾದೆ ಅವನದಾಗಿತ್ತು. ಆದರೆ ಎದುರಾದ ನಿರುತ್ಸಾಹ ಆತನನ್ನು ಶಾಶ್ವತವಾಗಿ ಕನ್ನಡ ಪುಸ್ತಕೋದ್ಯಮದಿಂದ ದೂರಾಗುವಂತೆ ಮಾಡಿತು.

     ಈ ಮೇಲೆ ಹೇಳಿದಂಥ ಸಮಸ್ಯೆಯನ್ನು ಇವತ್ತು ಕನ್ನಡದ ಎಲ್ಲ ಪುಸ್ತಕ ಪ್ರಕಾಶಕರು ಎದುರಿಸುತ್ತಿರುವರು. ಪುಸ್ತಕಗಳ ಪ್ರಕಟಣೆಯ ಖರ್ಚು, ಅದ್ದೂರಿ ಸಮಾರಂಭದಲ್ಲಿ ಪುಸ್ತಕಗಳ ಬಿಡುಗಡೆ, ಪುಸ್ತಕಗಳ ಮಾರಾಟಕ್ಕಾಗಿ ವಿತರಕರನ್ನು ಹುಡುಕಿಕೊಂಡು ಅಲೆದಾಟ, ಓದುಗರು ಅಪೇಕ್ಷಿಸುತ್ತಿರುವ ಅಧಿಕ ರಿಯಾಯಿತಿ ಈ ಎಲ್ಲದರ ಪರಿಣಾಮ ಪುಸ್ತಕ ಪ್ರಕಟಣೆ ಎನ್ನುವುದು ಪ್ರಕಾಶಕರಿಗೆ ಹೊರೆಯಾಗುತ್ತಿದೆ. ಇಂಥದ್ದೊಂದು ಸಮಸ್ಯೆಯ ನಡುವೆಯೂ ಕರ್ನಾಟಕದಲ್ಲಿ ನೂರಾರು ಪ್ರಕಾಶಕರು ಪುಸ್ತಕೋದ್ಯಮದಲ್ಲಿ ತೊಡಗಿಕೊಂಡಿರುವುದನ್ನು ಕೆಲವರು ಉಲ್ಲೇಖಿಸಬಹುದು. ನಿಜವಾದ ಸಂಗತಿ ಎಂದರೆ ಅವರಲ್ಲಿ ಹೆಚ್ಚಿನವರು ಲೇಖಕರೇ ಪ್ರಕಾಶಕರಾಗಿ ತಮ್ಮ ಪುಸ್ತಕಗಳನ್ನು ಪ್ರಕಟಿಸಿರುವರೆ ವಿನಃ ಪೂರ್ಣ ಪ್ರಮಾಣದಲ್ಲಿ ಪುಸ್ತಕೋದ್ಯಮದಲ್ಲಿ ತೊಡಗಿಸಿಕೊಂಡವರ ಸಂಖ್ಯೆ ಬಹಳಷ್ಟು ಕಡಿಮೆ. ಹೀಗೆ ಲೇಖಕರೇ ಪ್ರಕಾಶಕರಾದಾಗ ಒಂದೆರಡು ಪುಸ್ತಕಗಳ ಪ್ರಕಟಣೆಯ ಹೊತ್ತಿಗೆ ಹೈರಾಣಾಗಿ ಅವರು ಪುಸ್ತಕ ಪ್ರಕಟಣೆಯ ಕೆಲಸವನ್ನೇ ಕೈ ಬಿಡುತ್ತಿರುವರು. ಹೀಗಾಗಿ ಕನ್ನಡದಲ್ಲಿ ಪ್ರಕಾಶನ ಸಂಸ್ಥೆಗಳು ಹುಟ್ಟಿಕೊಂಡಷ್ಟೇ ವೇಗದಲ್ಲಿ ನಶಿಸಿ ಹೋಗುತ್ತಿವೆ. ಆದರೆ ಏನೆಲ್ಲ ಸಮಸ್ಯೆಗಳ ನಡುವೆಯೂ ಕೆಲವೊಂದು ಪ್ರಕಾಶನ ಸಂಸ್ಥೆಗಳು ಗಟ್ಟಿಯಾಗಿ ತಳವೂರಿ ಕನ್ನಡ ಪುಸ್ತಕಗಳ ಪ್ರಕಟಣೆಯ ಕೆಲಸವನ್ನು ಒಂದು ವೃತದಂತೆ ಮುನ್ನಡೆಸಿಕೊಂಡು ಹೋಗುತ್ತಿವೆ. ಅಂಥ ಸಂಸ್ಥೆಗಳಿಗೆ ಉದಾಹರಣೆಯಾಗಿ ಮನೋಹರ ಗ್ರಂಥಮಾಲೆ, ಲೋಹಿಯಾ ಪ್ರಕಾಶನ, ನವಕರ್ನಾಟಕ ಪಬ್ಲಿಕೇಷನ್ಸ್, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ, ಅಂಕಿತ ಪ್ರಕಾಶನ, ಸಪ್ನಾ ಬುಕ್ ಹೌಸ್ ಹೀಗೆ ಬೆರಳೆಣಿಕೆಯಷ್ಟು ಪ್ರಕಾಶನ ಸಂಸ್ಥೆಗಳ ಹೆಸರುಗಳನ್ನು ಹೇಳಬಹುದು.

           ನಿಜಕ್ಕೂ ಪುಸ್ತಕ ಪ್ರಕಟಣೆ ಎನ್ನುವುದು ಅದೊಂದು ಪವಿತ್ರ ಕಾರ್ಯ. ಇಲ್ಲಿ ಪ್ರಕಾಶಕರು ಪುಸ್ತಕ ಪ್ರಕಟಣೆಯ ಮೂಲಕ ನಾಡಿನ ಸಾಂಸ್ಕೃತಿಕ ಬೆಳವಣಿಗೆಗೆ ಅವರು ಸಲ್ಲಿಸುತ್ತಿರುವ ಕೊಡುಗೆ ಅಭಿನಂದನಾರ್ಹ. ಕರ್ನಾಟಕ ಏಕೀಕರಣದಲ್ಲಿ ಲೋಕ ಶಿಕ್ಷಣ ಟ್ರಸ್ಟ್ ತನ್ನ ಪ್ರಕಟಣೆಯ ಮೂಲಕ ಅದು ಅಂದು ನಿರ್ವಹಿಸಿದ ಪಾತ್ರ ಕರ್ನಾಟಕದ ಇತಿಹಾಸದಲ್ಲಿ ದಾಖಲೆಯಾಗಿ ಉಳಿಯಿತು. ಲೇಖಕನೋರ್ವನ ಬೌದ್ಧಿಕ ವಿಚಾರವೊಂದು ಪುಸ್ತಕ ರೂಪದಲ್ಲಿ ಪ್ರಕಟವಾಗಿ ಅದು ಸಮಾಜದಲ್ಲಿ ಸೃಷ್ಟಿಸುವ ಸಂಚಲನ ಮತ್ತು ಆಗುವ ಬದಲಾವಣೆಗಳ ಹಿಂದೆ ಪ್ರಕಾಶಕರ ಪಾತ್ರ ಮಹೋನ್ನತವಾದದ್ದು. ತತ್ವಜ್ಞಾನಿಯೋರ್ವ ಪುಸ್ತಕಗಳನ್ನು ಮುಂದಿನ ಜನಾಂಗದ ಆಸ್ತಿ ಎಂದು ಕರೆದು ಪುಸ್ತಕಗಳ ಮಹತ್ವವನ್ನು ಇಡೀ ಜಗತ್ತಿಗೇ ತೋರಿಸಿಕೊಟ್ಟಿರುವನು. 'ದಾಸ್ ಕ್ಯಾಪಿಟಲ್' ನಂಥ ಕೃತಿ ದೇಶವೊಂದರ ಕ್ರಾಂತಿಗೆ ಕಾರಣವಾಯಿತು. ಗಾಂಧೀಜಿ ಅವರ 'ಸತ್ಯದೊಂದಿಗೆ ನನ್ನ ಪ್ರಯೋಗಗಳು' ಪುಸ್ತಕ ಇವತ್ತಿಗೂ ಓದುಗರನ್ನು ಆತ್ಮ ವಿಮರ್ಶೆ ಎನ್ನುವ ಕಟಕಟೆಯಲ್ಲಿ ಒಯ್ದು ನಿಲ್ಲಿಸುವ ಮಹತ್ವದ ಕೃತಿ. ಹೀಗೆ ಪುಸ್ತಕವೊಂದು ಕಟ್ಟಿಕೊಡುವ ಅನುಭವ ಮತ್ತು ಸೃಷ್ಟಿಸುವ ಸಂಚಲನದ ಹಿಂದೆ ಪ್ರಕಾಶಕರ ಶ್ರಮ ಹಾಗೂ ಅವರ ಸೃಜನಾತ್ಮಕ ಚಟುವಟಿಕೆಯಿದೆ. ಆದರೆ ಕಾಲಾನಂತರದಲ್ಲಿ ಆದ ಅನೇಕ ಬದಲಾವಣೆಗಳು ಮತ್ತು ಬೆಳವಣಿಗೆಗಳು ಇವತ್ತು ಕನ್ನಡ ಪುಸ್ತಕೋದ್ಯಮವನ್ನು ವಿನಾಶದಂಚಿಗೆ ತಂದು ನಿಲ್ಲಿಸಿವೆ. ಪರಿಣಾಮವಾಗಿ ಪುಸ್ತಕ ಪ್ರಕಟಣೆಯನ್ನು ಒಂದು ಉದ್ಯಮವಾಗಿ ಒಪ್ಪಿಕೊಳ್ಳುವ ಪ್ರಕಾಶಕರ ಸಂಖ್ಯೆ ರಾಜ್ಯದಲ್ಲಿ ಕ್ಷೀಣಿಸುತ್ತಿದೆ.

೧. ಪುಸ್ತಕದ ಓದು ಮತ್ತು ವಾಹಿನಿಗಳ ಭರಾಟೆ 


        ಕಳೆದ ಒಂದು ದಶಕದಿಂದ ಕನ್ನಡದಲ್ಲಿ ವಾಹಿನಿಗಳ ಸಂಖ್ಯೆ ದಿನದಿಂದ ದಿನಕ್ಕೆ ವೃದ್ಧಿಸುತ್ತಿದೆ. ಈ ಮೊದಲು ಸರ್ಕಾರದ ನಿಯಂತ್ರಣದಲ್ಲಿದ್ದ ದೂರದರ್ಶನವೊಂದೇ ಏಕೈಕ ಎಲೆಕ್ಟ್ರಾನಿಕ್ ಮನೋರಂಜನಾ ಮಾಧ್ಯಮವಾಗಿತ್ತು. ಆ ದೂರದರ್ಶನದಲ್ಲಿ ಮನೋರಂಜನೆ ಎನ್ನುವುದು ಅದರ ಕಾರ್ಯಕ್ರಮಗಳ ಒಂದು ಭಾಗವಾಗಿತ್ತೆ ವಿನಃ ಮನೋರಂಜನೆಯೇ ಅದರ ಪೂರ್ಣ ಉದ್ದೇಶವಾಗಿರಲಿಲ್ಲ. ಪರಿಣಾಮವಾಗಿ ಅಂದಿನ ದೂರದರ್ಶನದ ವೀಕ್ಷಕರು ಪುಸ್ತಕದ ಓದುಗರೂ ಸಹ ಆಗಿದ್ದರು. ಇದಕ್ಕೆ ಕಾರಣವೇನೆಂದರೆ ದೂರದರ್ಶನದ ಕಾರ್ಯಕ್ರಮಗಳ ನಡುವೆಯೂ ಓದುಗರಿಗೆ ಪುಸ್ತಕಗಳ ಓದಿಗಾಗಿ ಸಾಕಷ್ಟು ಕಾಲಾವಕಾಶವಿರುತ್ತಿತ್ತು. ಆದರೆ ಯಾವಾಗ ಮಾಧ್ಯಮದಲ್ಲಿ ಖಾಸಗಿ ವಾಹಿನಿಗಳು ಪ್ರಭುತ್ವ ಸಾಧಿಸಿದವೋ ಆಗ ಮನೋರಂಜನೆಯೇ ಪ್ರಧಾನವಾಗುತ್ತ ಹೋಯಿತು. ದಿನದ ೨೪ ಗಂಟೆಗಳೂ ಖಾಸಗಿ ವಾಹಿನಿಗಳಲ್ಲಿ ಮನೋರಂಜನಾ ಕಾರ್ಯಕ್ರಮಗಳು ವೀಕ್ಷಿಸಲು ಲಭ್ಯವಿರುವುದರಿಂದ ಅತಿ ಹೆಚ್ಚಿನ ಓದುಗರು ವಾಹಿನಿಗಳ ವೀಕ್ಷಕರಾಗಿ ಬದಲಾದರು. ಹಿಂದೆ ಎಲ್ಲ ಮನೆಗಳಲ್ಲಿ ಗೃಹಿಣಿಯರು ತಮ್ಮ ಮನೆ ಕೆಲಸದ ಬಿಡುವಿನ ವೇಳೆಯನ್ನು ಓದುವಂಥ ಸೃಜನಾತ್ಮಕ ಹವ್ಯಾಸಕ್ಕಾಗಿ ಬಳಸಿಕೊಳ್ಳುತ್ತಿದ್ದರು. ಯಾವಾಗ ಖಾಸಗಿ ವಾಹಿನಿಗಳು ಭರಪೂರ ಮನೋರಂಜನೆಯನ್ನು ಕೊಡಲು ಪ್ರಾರಂಭಿಸಿದವೋ ಆಗ ಅವರೆಲ್ಲ ಓದಿನಿಂದ ದೂರಾದರು. ಇದರ ನೇರ ಪರಿಣಾಮವಾಗಿದ್ದು ಪುಸ್ತಕೋದ್ಯಮವನ್ನೇ ನಂಬಿಕೊಂಡು ಬದುಕುತ್ತಿದ್ದ ಪ್ರಕಾಶಕರ ಮೇಲೆ. ಮನೋರಂಜನೆಯು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ದೊರೆಯಲು ಪ್ರಾರಂಭಿಸಿದ ಮೇಲೆ ಪುಸ್ತಕಗಳನ್ನು ಖರೀದಿಸುವವರ ಸಂಖ್ಯೆ ಕ್ಷೀಣಿಸಲಾರಂಭಿಸಿತು. ಯಾವ ರೀತಿ ಈ ಎಲೆಕ್ಟ್ರಾನಿಕ್ ಮಾಧ್ಯಮಗಳು ಸುದ್ದಿಯನ್ನು ಬಿತ್ತರಿಸುತ್ತಿವೆ ಎಂದರೆ ಮುಂಜಾನೆ ಮನೆ ಬಾಗಿಲಿಗೆ ಬಂದು ಬೀಳುವ ದಿನಪತ್ರಿಕೆಯಲ್ಲಿನ ಸುದ್ದಿಯೇ ನಮಗೆ ಹಳೆಯದಾಗಿ ಕಾಣಿಸುತ್ತಿದೆ. ಪೈಪೋಟಿಯ ಪರಿಣಾಮ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಲು ವಾಹಿನಿಗಳು ರೋಚಕ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವುದರಿಂದ ಈ ಕಾರ್ಯಕ್ರಮಗಳೆದುರು ಪುಸ್ತಕದ ಓದು ಸಪ್ಪೆಯಾಗಿ ಕಾಣುತ್ತಿದೆ. ಒಟ್ಟಿನಲ್ಲಿ ಸಧ್ಯದ ಪರಿಸ್ಥಿತಿಯಲ್ಲಿ ಕನ್ನಡದ ಸಾಹಿತ್ಯವಲಯ ಅತಿ ಹೆಚ್ಚಿನ ಸಂಖ್ಯೆಯ ಓದುಗರನ್ನು ಕಳೆದುಕೊಂಡಿರುವುದು ಸತ್ಯಕ್ಕೆ ಹತ್ತಿರವಾದ ಸಂಗತಿ. ಪರಿಸ್ಥಿತಿ ಹೀಗಿರುವಾಗ ಪ್ರಕಾಶಕರು ಕನ್ನಡ ಪುಸ್ತಕಗಳ ಪ್ರಕಟಣೆಗೆ ಮುಂದಾಗುತ್ತಿಲ್ಲ.

೨. ಮಾರಾಟ ಮತ್ತು ರಿಯಾಯಿತಿ 


           ಕನ್ನಡ ಪುಸ್ತಕಗಳ ಮಾರಾಟದಲ್ಲಿ ಪ್ರಕಾಶಕರು ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ ಎಂದರೆ ಅದು ಓದುಗರು ಪುಸ್ತಕಗಳ ಖರೀದಿಗಾಗಿ ಅಪೇಕ್ಷಿಸುತ್ತಿರುವ ಪುಸ್ತಕದ ಬೆಲೆಯ ಮೇಲಿನ ರಿಯಾಯಿತಿ.  ಹೆಚ್ಚಿನ ಓದುಗರು ಪುಸ್ತಕವೊಂದನ್ನು ಅದರ ಪ್ರಕಟಿತ ಬೆಲೆಗೆ ಖರೀದಿಸುವ ಔದಾರ್ಯ ತೋರಿಸುತ್ತಿಲ್ಲದಿರುವುದರಿಂದ ಪ್ರಕಾಶಕರಿಗೆ ಕನ್ನಡ ಪುಸ್ತಕಗಳ ಮಾರಾಟದಲ್ಲಿ ಹಿನ್ನಡೆ ಉಂಟಾಗುತ್ತಿದೆ. ಇಂಗ್ಲಿಷ್ ಭಾಷೆಯ ಪುಸ್ತಕಗಳ ಮಾರಾಟದಲ್ಲಿನ ರಿಯಾಯಿತಿಯ ಧಾರಾಳತನವೇ ಕನ್ನಡ ಪುಸ್ತಕೋದ್ಯಮಕ್ಕೆ ಉರುಳಾಗಿ ಪರಿಣಮಿಸಿದೆ. ಇಂಗ್ಲಿಷ್ ಭಾಷೆಯ ಪುಸ್ತಕಗಳ ಖರೀದಿಯಲ್ಲಿ   ೩೦ ರಿಂದ ೪೦ ಪ್ರತಿಶತ ರಿಯಾಯಿತಿ ಕೊಡುತ್ತಿರುವುದರಿಂದ ಓದುಗರು ಕನ್ನಡ ಪುಸ್ತಕಗಳಿಂದಲೂ ಇದನ್ನೇ ನಿರೀಕ್ಷಿಸುತ್ತಿರುವರು. ಇಂಗ್ಲಿಷ್ ಭಾಷೆಯ ಪುಸ್ತಕಗಳಿಗೆ ವಿಸ್ತಾರವಾದ ಮಾರುಕಟ್ಟೆ ಇರುವುದರಿಂದ ಹಾಗೂ ಕೆಲವೊಮ್ಮೆ ಪುಸ್ತಕ ವ್ಯಾಪಾರಿಗಳೇ ನಕಲು ಪ್ರತಿಗಳನ್ನು ಮುದ್ರಿಸಿ ಮಾರಾಟ ಮಾಡುವುದರಿಂದ ಇಲ್ಲಿ ನಷ್ಟಕ್ಕಿಂತ ಲಾಭವೇ ಹೆಚ್ಚು. ಆದರೆ ಇದೇ ಮಾತನ್ನು ಕನ್ನಡ ಪುಸ್ತಕಗಳ ಮಾರಾಟಕ್ಕೆ ಅನ್ವಯಿಸಿ ಹೇಳಲಾಗದು. ಕನ್ನಡ ಪುಸ್ತಕಗಳಿಗೆ ಸೀಮಿತ ಮಾರುಕಟ್ಟೆ ಇರುವುದರಿಂದ ಹೆಚ್ಚಿನ ರಿಯಾಯಿತಿ ನೀಡಿದಲ್ಲಿ ಪ್ರಕಾಶಕರಿಗೆ ನಷ್ಟವಾಗುವ ಸಾಧ್ಯತೆಯೇ ಅಧಿಕ.

           ಕನ್ನಡ ಪುಸ್ತಕಗಳ ಮಾರಾಟದಲ್ಲಿ ಪ್ರಕಾಶಕರು ಎದುರಿಸುತ್ತಿರುವ ಇನ್ನೊಂದು ಬಹುಮುಖ್ಯ ಸಮಸ್ಯೆ ಎಂದರೆ ಅದು ಹಣ ಪಾವತಿಸುವಲ್ಲಿ ಆಗುತ್ತಿರುವ ವಿಳಂಬ. ಸಾಮಾನ್ಯವಾಗಿ ಪ್ರಕಾಶಕರು ತಮ್ಮ ಪುಸ್ತಕಗಳ ಮಾರಾಟಕ್ಕಾಗಿ ಅವರು ಹೆಚ್ಚು ಅವಲಂಬಿತವಾಗಿರುವುದು ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಪುಸ್ತಕ ಮಾರಾಟಗಾರರನ್ನು. ಆದರೆ ಯಾವ ಶಿಕ್ಷಣ ಸಂಸ್ಥೆಗಳಾಗಲಿ ಇಲ್ಲವೇ ಪುಸ್ತಕ ಮಳಿಗೆಗಳಾಗಲಿ ಮುಂಗಣ ಹಣ ಪಾವತಿಸಿ ಪ್ರಕಾಶಕರಿಂದ ಪುಸ್ತಕಗಳನ್ನು ಖರೀದಿಸುತ್ತಿರುವ ಉದಾಹರಣೆಯೇ ಇಲ್ಲ. ಇಲ್ಲಿ ಪ್ರಕಾಶಕ ಹಣ ಪಡೆಯುವುದಕ್ಕಾಗಿ ಅನೇಕ ತಿಂಗಳುಗಳ ಕಾಲ ಕಾಯಬೇಕಾಗುತ್ತದೆ. ಕೆಲವೊಮ್ಮೆ ಹಣ ಪಡೆಯುವುದಕ್ಕಾಗಿ ಪ್ರಕಾಶಕರು ನ್ಯಾಯಾಲಯದ ಮೆಟ್ಟಿಲು ಏರಿದ ಉದಾಹರಣೆಯೂ ಉಂಟು. ಹಲವು ಸಂದರ್ಭಗಳಲ್ಲಿ ಖರೀದಿಯಾದ ಪುಸ್ತಕಗಳು ತಿರಸ್ಕೃತಗೊಂಡು ಮತ್ತೆ ಮರಳಿ  ಪ್ರಕಾಶಕರ ಕೈ ಸೇರುವುದುಂಟು. ಹೀಗೆ ಹೆಚ್ಚಿನ ರಿಯಾಯಿತಿಯ ಅಪೇಕ್ಷೆ, ಹಣ ಪಾವತಿಸುವಲ್ಲಿನ ವಿಳಂಬ, ಕನ್ನಡ ಪುಸ್ತಕಗಳ ಖರೀದಿಯಲ್ಲಿ ತೋರಿಸುತ್ತಿರುವ ನಿರಾಸಕ್ತಿ ಈ ಎಲ್ಲ ಕಹಿ ಘಟನೆಗಳಿಂದ ಅನೇಕ ಕನ್ನಡ ಪ್ರಕಾಶನ ಸಂಸ್ಥೆಗಳು ಶಾಶ್ವತವಾಗಿ ಬಾಗಿಲು ಮುಚ್ಚಿವೆ.

೩. ಪುಸ್ತಕ ಪ್ರಕಟಣೆ ಮತ್ತು ಪ್ರಚಾರ 


           ಪುಸ್ತಕ ಪ್ರಕಟಣೆಗಾಗಿ ಬಳಸುವ ಕಚ್ಚಾ ಸಾಮಗ್ರಿಗಳ ಬೆಲೆ ಗಗನಕ್ಕೇರುತ್ತಿರುವುದರಿಂದ ಪ್ರಕಾಶಕರಿಗೆ ಪುಸ್ತಕಗಳ ಪ್ರಕಟಣೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಈ ನಡುವೆ ಪುಸ್ತಕಗಳನ್ನು ವರ್ಣರಂಜಿತ ಸಮಾರಂಭದ ಅದ್ದೂರಿ ವೇದಿಕೆಯ ಮೇಲೆ ಬಿಡುಗಡೆ  ಮಾಡುವ  ಪರಿಸ್ಥಿತಿ ಎದುರಾಗಿದೆ. ಪುಸ್ತಕ ಬಿಡುಗಡೆಯ ಆಹ್ವಾನ ಪತ್ರಿಕೆ, ಅತಿ ಗಣ್ಯರ ಅಧ್ಯಕ್ಷತೆ, ಆಹ್ವಾನಿತರಿಗೆ ಭೋಜನದ ವ್ಯವಸ್ಥೆ, ಪತ್ರಿಕಾ ಮಾಧ್ಯಮದವರಿಗೆ ಗೌರವ ಪ್ರತಿ ಹೀಗೆ ಅನೇಕ ಗಿಮಿಕ್ ಗಳನ್ನು ಕನ್ನಡ ಪುಸ್ತಕಗಳ ಬಿಡುಗಡೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಕನ್ನಡ ಪುಸ್ತಕೋದ್ಯಮದಲ್ಲಿ ಪ್ರಕಾಶಕರು ಉಳಿಯಲು ಇವುಗಳೆಲ್ಲ ಅನಿವಾರ್ಯವಾಗುತ್ತಿವೆ. ಜೊತೆಗೆ ಈ ದಿನಗಳಲ್ಲಿ ಪುಸ್ತಕವೊಂದು ಓದುಗರ ವರ್ಗವನ್ನು ತಲುಪುವಂತಾಗಲು ಪ್ರಕಾಶಕರು ಈ ಹೊಸ ಬದಲಾವಣೆಗಳಿಗೆ ತಮ್ಮನ್ನು ತಾವು ತೆರೆದುಕೊಳ್ಳಬೇಕಾಗಿದೆ. ಪುಸ್ತಕಗಳ ಬಿಡುಗಡೆಯ ನಂತರವೂ ಚರ್ಚೆ, ಸಂವಾದಗಳ ಮೂಲಕ ವ್ಯಾಪಕ ಪ್ರಚಾರ ಒದಗಿಸಬೇಕಾಗಿದೆ. ಹೀಗೆ ಮಾಡಿದಾಗ ಮಾತ್ರ ಪ್ರಕಾಶಕ ಪುಸ್ತಕೋದ್ಯಮದಲ್ಲಿ ತಳವೂರಿ ನಿಲ್ಲಲು ಸಾಧ್ಯ. ಆದರೆ ಇದೆಲ್ಲ ಎಲ್ಲ ಪ್ರಕಾಶಕರಿಂದ ಸಾಧ್ಯವೇ ಎನ್ನುವುದೇ ಇಲ್ಲಿ ಎದುರಾಗುವ ಪ್ರಶ್ನೆ. ಆದ್ದರಿಂದ ಇಲ್ಲಿ ಬಲವಿರುವ ಪ್ರಕಾಶಕ ಮಾತ್ರ ಉಳಿದು ಬೆಳೆಯಲು ಸಾಧ್ಯ.

೪. ಓದುಗರ ಸೀಮಿತ ಓದು 


             ದೇವನೂರು ಮಹಾದೇವರ 'ಎದೆಗೆ ಬಿದ್ದ ಅಕ್ಷರ' ಪ್ರಕಟವಾದ ಒಂದು ತಿಂಗಳಲ್ಲೇ ಎರಡನೇ ಮುದ್ರಣ ಕಂಡಿತು. ದೇವನೂರರ ಪುಸ್ತಕಗಳ ಪ್ರಕಟಣೆಯ ನಡುವೆ ಸಾಕಷ್ಟು ಅಂತರವಿರುವುದರಿಂದ ಅವರ ಬರವಣಿಗೆಯ ಓದಿಗಾಗಿ ಕಾದು ಕುಳಿತಿದ್ದ ಓದುಗರು ಸಹಜವಾಗಿಯೇ ಪುಸ್ತಕವನ್ನು ಮುಗಿಬಿದ್ದು ಖರೀದಿಸಿದರು. ಓದುಗರ ಈ ಪ್ರಕಾರದ ಬೇಡಿಕೆಯನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವ ಪ್ರಕಾಶಕ ಬಹು ಬೇಗನೆ ಕೃತಿಯ ಎರಡನೇ ಮುದ್ರಣ ಹೊರತರುವನು. ಅನಂತಮೂರ್ತಿಯವರ 'ಸುರಗಿ' ಗೂ ಇದೇ ರೀತಿಯ ಅನುಕೂಲಕರ ವಾತಾವರಣ ಎದುರಾಗಬಹುದು. ಭೈರಪ್ಪನವರ ಕಾದಂಬರಿಗಳಿಗೆ ದೊಡ್ಡ ಓದುಗರ ಸಮೂಹವೇ ಇರುವುದರಿಂದ ಅದರ ಲಾಭವೇನಿದ್ದರೂ 'ಸಾಹಿತ್ಯ ಭಂಡಾರ' ಪ್ರಕಾಶನ ಸಂಸ್ಥೆಗೆ ಮೀಸಲು. ಇದಕ್ಕೆಲ್ಲ ಕನ್ನಡ ಪುಸ್ತಕಗಳ ಓದುಗರ ಓದಿನ ವ್ಯಾಪ್ತಿ ಸೀಮಿತವಾಗಿರುವುದೇ ಕಾರಣ.

            ಕನ್ನಡದಲ್ಲಿ ಹೊಸ ಲೇಖಕರ ಪುಸ್ತಕಗಳನ್ನು ಓದುವ ಹಾಗೂ ಪ್ರೋತ್ಸಾಹಿಸುವ ಔದಾರ್ಯವನ್ನು ಓದುಗರು ತೋರಿಸುತ್ತಿಲ್ಲ. ಉತ್ತಮವಾದದ್ದು ಯಾವ ಲೇಖಕನಿಂದ ಬಂದರೂ ಅದನ್ನು ಓದಿ ಪ್ರೋತ್ಸಾಹಿಸುವ ಗುಣ ಕನ್ನಡದ ಓದುಗರಲ್ಲಿ ಬರಬೇಕು. ಹಾಗಾದಾಗ ಮಾತ್ರ ಲೇಖಕರೊಂದಿಗೆ ಪ್ರಕಾಶಕರೂ ಬೆಳೆಯಲು ಸಾಧ್ಯ. ನಮ್ಮ ಓದು ನಿರ್ಧಿಷ್ಟ ಲೇಖಕರ ಕೃತಿಗಳಿಗೆ ಸೀಮಿತವಾದರೆ ಒಂದರ್ಥದಲ್ಲಿ ಕೆಲವೇ ಪ್ರಕಾಶಕರು ಉಳಿದು ಬೆಳೆಯಲು ಅಪರೋಕ್ಷವಾಗಿ ನಾವುಗಳೇ ಕಾರಣರಾದಂತಾಗುವುದು. ಆದ್ದರಿಂದ ಕನ್ನಡ ಪುಸ್ತಕೋದ್ಯಮವನ್ನು ಉಳಿಸಿ ಬೆಳೆಸುವ ಮಹತ್ವದ ಜವಾಬ್ದಾರಿ ಓದುಗರ ಮೇಲಿದೆ.

೫. ಎಲೆಕ್ಟ್ರಾನಿಕ್ ಮಾಧ್ಯಮ 


             ಕನ್ನಡದಲ್ಲಿ ಅನೇಕ ಯುವ ಬರಹಗಾರರು ಎಲೆಕ್ಟ್ರಾನಿಕ್ ಮಾಧ್ಯಮವಾದ ಇಂಟರ್ ನೆಟ್ ಮೂಲಕ ಬರವಣಿಗೆಯ ಕೃಷಿಯಲ್ಲಿ ತೊಡಗಿಸಿಕೊಂಡಿರುವರು. ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಬರಹಗಾರ ತನ್ನ ಬರವಣಿಗೆಯ ಪ್ರಕಟಣೆಗಾಗಿ ಪ್ರಕಾಶಕರನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇಲ್ಲದಿರುವುದರಿಂದ ಅತಿ ಹೆಚ್ಚಿನ ಬರಹಗಾರರು ಈ ಮಾಧ್ಯಮಕ್ಕೆ ವಲಸೆ ಬರುತ್ತಿರುವರು. ಇವತ್ತು ಎಲೆಕ್ಟ್ರಾನಿಕ್ ಮಾಧ್ಯಮ ಯುವ ಬರಹಗಾರರನ್ನಲ್ಲದೆ ಹಿರಿಯ ಲೇಖಕರನ್ನೂ  ತನ್ನತ್ತ ಸೆಳೆಯುತ್ತಿದೆ. ಕನ್ನಡದ ಬ್ಲಾಗ್ ಗಳಲ್ಲಿ ಅತ್ಯುತ್ತಮ ಲೇಖನಗಳು ಪ್ರಕಟವಾಗುತ್ತಿವೆ. ಜೊತೆಗೆ ಪ್ರಕಟವಾದ ಕೆಲವೇ ಕ್ಷಣಗಳಲ್ಲಿ ಪ್ರಾದೇಶಿಕ ಗಡಿಯನ್ನೂ ದಾಟಿ ಆ ಬರಹಗಳು ಹೆಚ್ಚಿನ ಸಂಖ್ಯೆಯ ಓದುಗರನ್ನು ಹೋಗಿ ತಲುಪುತ್ತಿವೆ. ಪರಿಣಾಮವಾಗಿ ಲೇಖಕರು ಈ ದಿನಗಳಲ್ಲಿ ತಮ್ಮ ಬರಹಗಳ ಪ್ರಕಟಣೆಗಾಗಿ ಪತ್ರಿಕೆ, ನಿಯತಕಾಲಿಕೆ ಮತ್ತು ಪುಸ್ತಕಗಳಿಗಾಗಿ ಕಾಯಬೇಕಾಗಿಲ್ಲ. ಒಂದು ಕಾಲದಲ್ಲಿ ಸಂಪಾದಕೀಯ ಲೇಖನಕ್ಕೆ ಮಾತ್ರ ಸೀಮಿತವಾಗಿರುತ್ತಿದ್ದ ಪತ್ರಿಕೆಯೊಂದರ ಸಂಪಾದಕರ ಬರವಣಿಗೆ ಇವತ್ತು ಪತ್ರಿಕೆಯ ಹೆಚ್ಚಿನ ಭಾಗಗಳಿಗೆ ವಿಸ್ತರಿಸುತ್ತಿದೆ. ಇದಕ್ಕೆಲ್ಲ ಕಾರಣ ಈಗಿನ ಬರಹಗಾರರು ಪತ್ರಿಕೆ ಮತ್ತು ಪ್ರಕಾಶಕರನ್ನೇ ನೆಚ್ಚಿಕೊಂಡು ಕುಳಿತುಕೊಳ್ಳಬೇಕಾದ ಅನಿವಾರ್ಯತೆ ದೂರವಾಗಿದೆ. ಒಂದರ್ಥದಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮ ಬರಹಗಾರರಿಗೆ ಒಂದು ವೇದಿಕೆಯೊದಗಿಸುವುದರ ಜೊತೆಗೆ ಪ್ರಕಾಶಕರನ್ನು ನಿರುದ್ಯೋಗಿಗಳನ್ನಾಗಿಸುತ್ತಿದೆ.

ಕೊನೆಯ ಮಾತು 


           ಕನ್ನಡದಲ್ಲಿ ಪುಸ್ತಕೋದ್ಯಮದ ಮಾತು ಬಂದಾಗ ನೆನೆಯಲೇ ಬೇಕಾದ ವ್ಯಕ್ತಿತ್ವ ಜಿ.ಬಿ.ಜೋಶಿ ಅವರದು. ಮನೋಹರ ಗ್ರಂಥಮಾಲೆ ಮೂಲಕ ಕನ್ನಡ ಪುಸ್ತಕಗಳನ್ನು ಪ್ರಕಟಿಸಿ ನಾಡಿನ ಮೂಲೆ ಮೂಲೆಗೂ ತಲುಪುವಂತೆ ಮಾಡಿದ ಅವರನ್ನು ಸಹಜವಾಗಿಯೇ ಕನ್ನಡ ಪುಸ್ತಕೋದ್ಯಮದ ಭೀಷ್ಮ ಎಂದು ಕರೆಯಲಾಗಿದೆ. ಜಿ. ಬಿ. ಜೋಶಿ ಅವರ ನೆನಪಿಗಾಗಿ ಹೊರತಂದ 'ಜಿಬಿ ಶತನಮನ' ಕೃತಿ  ಪುಸ್ತಕ ಪ್ರಕಾಶಕರ ಸಮಸ್ಯೆಗಳನ್ನು ಸವಿವರವಾಗಿ ಕಟ್ಟಿಕೊಡುವ ಕೃತಿ. ಪುಸ್ತಕದ ಗಂಟನ್ನು ತಲೆಯ ಮೇಲೆ ಹೊತ್ತುಕೊಂಡು ಊರೂರು ಅಲೆದ ಜಿಬಿ ಅವರ ಪರಿಶ್ರಮ ಹಾಗೂ ಕನ್ನಡ ಪ್ರೇಮ ಇವತ್ತಿನ ಓದುಗರಿಗೆ ಅರ್ಥವಾಗಬೇಕು ಜೊತೆಗೆ  ಅದು ಕನ್ನಡ ಪುಸ್ತಕಗಳನ್ನು ಓದಬೇಕೆನ್ನುವ ವಾಂಛೆಯೊಂದು ನಮ್ಮೊಳಗೆ ಟಿಸಿಲೊಡೆದು ಬೆಳೆಯಲು ಪ್ರೇರಣೆಯಾಗಬೇಕು. ಅದುವೇ ನಾವು ಆ ಪುಸ್ತಕ ಪ್ರಕಟಣೆಯ ಭೀಷ್ಮನಿಗೆ ಸಲ್ಲಿಸುವ ಗೌರವ.


-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ