Monday, July 15, 2013

ಸಿನಿಮಾ ಎನ್ನುವ ಆ ಕ್ಷಣದ ಸತ್ಯ

       



 





           ಸಿನಿಮಾ ಎನ್ನುವುದರ ವಾಸ್ತವಿಕತೆ ಅದು ನಾವು ಸಿನಿಮಾ ಮಂದಿರದೊಳಗೆ ಕುಳಿತ ಆ ಘಳಿಗೆಯ ಸತ್ಯ ಮಾತ್ರವಾಗಬಾರದು. ಸಿನಿಮಾ ಸೃಜಿಸುವ ವಾಸ್ತವಿಕತೆ ಅದು ಎಲ್ಲ ಕಾಲಕ್ಕೂ ಸಲ್ಲಬೇಕು. ಸಿನಿಮಾವೊಂದರ ವಾಸ್ತವಿಕತೆ ಅದು ಹೇಗೆ ಕಾಲಾತೀತವಾಗಿರಬೇಕು ಎನ್ನುವುದನ್ನು ನಾನು ಉದಾಹರಣೆಯೊಂದಿಗೆ ಹೇಳಬಯಸುತ್ತೇನೆ. 

            ಇದು ಮೂರು ದಶಕಗಳ ಹಿಂದಿನ ಮಾತು. ಆಗೆಲ್ಲ ಈಗಿನಂತೆ ಮನೆ ಮನೆಗಳಲ್ಲಿ ಟಿವಿಯಾಗಲಿ ಮತ್ತು ವಿವಿಧ ಮನೋರಂಜನಾ ಚಾನೆಲ್ ಗಳಾಗಲಿ ಇರಲಿಲ್ಲ. ಶಾಲೆಯಲ್ಲೋ ಇಲ್ಲವೇ ಪಂಚಾಯಿತಿ ಕಚೇರಿಯಲ್ಲೋ ಇಟ್ಟಿರುತ್ತಿದ್ದ ಕಪ್ಪು ಬಿಳುಪಿನ ಟಿವಿಯೇ ಆಗೆಲ್ಲ ಇಡೀ ಗ್ರಾಮಸ್ಥರಿಗೆ ಏಕೈಕ ಮನೋರಂಜನೆಯ ಆಧುನಿಕ ಸಾಧನವಾಗಿತ್ತು. ಅದರಲ್ಲಿ ಪ್ರತಿ ರವಿವಾರಕ್ಕೊಮ್ಮೆ ಪ್ರಸಾರವಾಗುತ್ತಿದ್ದ ಕನ್ನಡ ಸಿನಿಮಾವೇ ಬಹುಮುಖ್ಯ ಆಕರ್ಷಣೆಯಾಗಿರುತ್ತಿತ್ತು. ಜನರೆಲ್ಲ ಅತ್ಯಂತ ಉಮೇದಿಯಿಂದ ದೂರದರ್ಶನದಲ್ಲಿ ಪ್ರಸಾರವಾಗುವ ಕನ್ನಡ ಸಿನಿಮಾಗಳನ್ನು ನೋಡುವಂಥ ಆ ಸಂದರ್ಭದಲ್ಲೇ ಬಂಗಾರದ ಮನುಷ್ಯ ಸಿನಿಮಾವನ್ನು ಪ್ರಸಾರ ಮಾಡುವ ಸೂಚನೆಯನ್ನು ಒಂದು ವಾರ ಮೊದಲೇ ಪ್ರಕಟಿಸಲಾಯಿತು. ರಾಜಕುಮಾರ ಅಭಿನಯದ ಕೃಷಿಕನ ಯಶೋಗಾಥೆಯ ಆ ಸಿನಿಮಾ ಕನ್ನಡ ಚಿತ್ರರಂಗದಲ್ಲೇ ಒಂದು ಮೈಲಿಗಲ್ಲು. ಆ ಚಿತ್ರ ಸೃಷ್ಟಿಸಿದ ಸಾಮಾಜಿಕ ಪರಿಣಾಮ ಹಾಗೂ ಕಟ್ಟಿಕೊಟ್ಟ ಅನುಭವ ಇವತ್ತಿಗೂ ಅನನ್ಯ. ಅಂಥದ್ದೊಂದು ಸಿನಿಮಾ ವೀಕ್ಷಿಸಲು ನನ್ನೂರಿನ ಇಡೀ ಜನತೆ ಕಾತರದಿಂದ ಕಾಯುತ್ತಿದ್ದರು. ಆದರೆ ದುರಾದೃಷ್ಟಕ್ಕೆ ಸಿನಿಮಾ ಪ್ರಸಾರವಾಗಬೇಕಿದ್ದ ಆ ಭಾನುವಾರ ಬೆಳೆಗ್ಗೆಯಿಂದಲೇ ತಾಂತ್ರಿಕ ತೊಂದರೆಯಿಂದಾಗಿ ನನ್ನೂರಿಗೆ ವಿದ್ಯುಶ್ಚಕ್ತಿ ಕಡಿತಗೊಂಡಿತು. ವಿಚಾರಿಸಿದಾಗ ಆ ಸಮಸ್ಯೆ ಇನ್ನು ಒಂದೆರಡು ದಿನಗಳು ಮುಂದುವರೆಯುವುದಾಗಿ ತಿಳಿದು ಬಂತು. ಅದುವರೆಗೆ 'ಬಂಗಾರದ ಮನುಷ್ಯ' ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದವರಿಗೆ ನಿರಾಸೆಯಾಯಿತು. ಅಂಥ ಪರಿಸ್ಥಿತಿಯಲ್ಲೂ ಸಿನಿಮಾವನ್ನು ನೋಡಲೇ ಬೇಕೆನ್ನುವ ಅವರೊಳಗಿನ ಉತ್ಸಾಹ ಮಾತ್ರ ಕಡಿಮೆಯಾಗಲಿಲ್ಲ. ಕೊನೆಗೆ ಅರ್ಧ ಉರಿನಷ್ಟು ಜನ ಎತ್ತಿನ ಗಾಡಿಗಳಲ್ಲಿ ಎರಡು ಮೈಲಿ ದೂರದಲ್ಲಿರುವ ಪಕ್ಕದ ಹಳ್ಳಿಗೆ ಹೋಗಿ ಸಿನಿಮಾ ವೀಕ್ಷಿಸಿ ಅವರೆಲ್ಲ ಮರಳಿ ಊರಿಗೆ ಬರುವಷ್ಟರಲ್ಲಿ ಮಧ್ಯರಾತ್ರಿಯಾಗಿತ್ತು. ಈ ಘಟನೆ ಸಿನಿಮಾವೊಂದು ಬೀರುವ ಸಾಮಾಜಿಕ ಪರಿಣಾಮಕ್ಕೆ ಒಂದು ದೃಷ್ಟಾಂತ.

         ಇಲ್ಲಿ ಈ ಮೇಲಿನ ಘಟನೆ ನೆನಪಾಗಲು ಕಾರಣ ಈ ದಿನಗಳಲ್ಲಿ ತಯ್ಯಾರಾಗುತ್ತಿರುವ ಸಿನಿಮಾಗಳು ಮತ್ತು ಅವುಗಳಲ್ಲಿನ ಕಥಾವಸ್ತು. ಇವತ್ತಿನ ಬಹುತೇಕ ಕನ್ನಡ ಸಿನಿಮಾಗಳಲ್ಲಿ ವಾಸ್ತವಿಕತೆಯಾಗಲಿ ಅಥವಾ ಸಾಮಾಜಕ್ಕೆ ಹತ್ತಿರವಾದ ಕಥಾವಸ್ತುವಾಗಲಿ ಕಾಣಸಿಗುತ್ತಿಲ್ಲ. ಹೆಚ್ಚಿನ ಸಿನಿಮಾಗಳಲ್ಲಿ ನೈಜತೆಗಿಂತ ಫ್ಯಾಂಟಸಿಯೇ ವಿಜೃಂಭಿಸುತ್ತಿದೆ. ಸಿನಿಮಾವೊಂದನ್ನು ವೀಕ್ಷಿಸಿ ಚಿತ್ರಮಂದಿರದಿಂದ ಹೊರಬರುವಷ್ಟರಲ್ಲಿ ಆ ಸಿನಿಮಾದ ಕಥೆ ಮತ್ತು ಅದರೊಳಗಿನ ಕಲಾವಿದರು ಪ್ರೇಕ್ಷಕರ ನೆನಪಿನಿಂದ ಮರೆಯಾಗುತ್ತಿರುವುದು ಸಿನಿಮಾ ಅದು ಕೇವಲ ಆ ಕ್ಷಣದ ಸತ್ಯ ಎನ್ನುವ ಆಪಾದನೆಯನ್ನು ನಿಜವಾಗಿಸುತ್ತಿದೆ.

ಸಿನಿಮಾ ಮತ್ತು ಸಾಮಾಜಿಕ ಪ್ರಜ್ಞೆ 


             ಸಮಾಜದಲ್ಲಿನ ಸಮಸ್ಯೆಗಳಿಗೆ ಪ್ರೇಕ್ಷಕರನ್ನು ಮುಖಾಮುಖಿಯಾಗಿ ನಿಲ್ಲಿಸುವ ಸಿನಿಮಾಗಳ ಸಂಖ್ಯೆ ಕಳೆದೆರಡು ದಶಕಗಳಿಂದ ಗಮನಾರ್ಹವಾಗಿ ಕ್ಷೀಣಿಸುತ್ತಿದೆ. ಸಿನಿಮಾವೊಂದನ್ನು ವೀಕ್ಷಿಸಿದ ನಂತರ ಅದರ ಕಥಾವಸ್ತು ಅನೇಕ ದಿನಗಳವರೆಗೆ ನೋಡುಗನನ್ನು ಕಾಡಬೇಕು. ಸಮಾಜದಲ್ಲಿನ ಜ್ವಲಂತ ಸಮಸ್ಯೆಗಳ ಅರಿವು ಆತನಿಗಾಗಬೇಕು. ಆ ಸಮಸ್ಯೆಗಳ ಬಿಸಿ ಅವನನ್ನು ತಟ್ಟಬೇಕು. ಪ್ರೇಕ್ಷಕರನ್ನು ಹೀಗೆ ಸ್ಪಂದಿಸುವ ಪ್ರಕ್ರಿಯೆಗೆ ಒಳಪಡಿಸದೇ  ಹೋದಲ್ಲಿ ಸಿನಿಮಾ ಸಮಾಜದ ದರ್ಪಣ  ಎನ್ನುವ ಸತ್ಯ  ಸುಳ್ಳಾಗಬಹುದು.

        ಈ ದಿನಗಳಲ್ಲಿ ಈ ಸಿನಿಮಾದವರು ವಿಶೇಷವಾಗಿ ಕನ್ನಡ ಚಿತ್ರರಂಗದವರು ತಮ್ಮ ಸುತ್ತ ಒಂದು ಬೇಲಿಯನ್ನು ಕಟ್ಟಿಕೊಂಡು ಅದರ ನಡುವೆ ಕುಳಿತು ಒಂದು ಸಿದ್ದ ಸೂತ್ರವನ್ನಿಟ್ಟುಕೊಂಡು ಸಿನಿಮಾಗಳಿಗೆ ಕಥೆ ಹೆಣೆಯುತ್ತಿರುವರು. ಹೀಗೆ ಅವರು ಕಟ್ಟುತ್ತಿರುವ ಕಥೆಗಳಲ್ಲಿ ಪ್ರೇಮ, ಕಾಮ, ಕೊಲೆಗಳದೆ ಸಿಂಹಪಾಲು. ಸಿನಿಮಾವೊಂದು ಸಮಾಜವನ್ನು ಪ್ರತಿಫಲಿಸುವುದಕ್ಕಿಂತ ಸಿನಿಮಾದಿಂದ ಸಮಾಜದಲ್ಲಿನ ರೀತಿ ನೀತಿಗಳು ರೂಪಿತಗೊಳ್ಳುತ್ತಿವೆ. ಈ ಸಿನಿಮಾಜನ ತಾವೇ ಹಾಕಿಕೊಂಡ ಬೇಲಿಯಿಂದ ಹೊರಬಂದಲ್ಲಿ ಅವರಿಗೆ ಸಮಾಜ ಸಾಕಷ್ಟು ಕಥಾವಸ್ತುವನ್ನು  ಒದಗಿಸಬಲ್ಲದು. ಭ್ರಷ್ಟಾಚಾರ, ಕೈಗಾರೀಕರಣದ ಸಮಸ್ಯೆಗಳು, ಶಿಕ್ಷಣದ ಸಮಸ್ಯೆಗಳು, ರೈತರ ಬದುಕಿನ ಸಂಕಟ, ವಿನಾಶದ ಅಂಚಿಗೆ ಬಂದು ನಿಂತಿರುವ ಹಳ್ಳಿಗಳು, ವಿಭಕ್ತ ಕುಟುಂಬಗಳು ಎದುರಿಸುತ್ತಿರುವ ಸಮಸ್ಯೆಗಳು, ಜಾಗತೀಕರಣ ತಂದೊಡ್ಡುತ್ತಿರುವ ಅಪಾಯ, ಮಾತೃ ಭಾಷೆಯ ಅವನತಿ ಹೀಗೆ ಇಡೀ ಒಂದು ಶತಮಾನಕ್ಕಾಗುವಷ್ಟು ಕಥೆಗಳು ಸಮಾಜದಲ್ಲಿವೆ. ಆದರೆ ಸಮಾಜದ ಸಮಸ್ಯೆಗಳಿಗೆ ಈ ಸಿನಿಮಾ ಜನ ಕುರುಡಾಗಿರುವುದರಿಂದ ಅವರು ಸಿನಿಮಾದ ಮೂಲಕ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಿರುವರು.

          ಕನ್ನಡದಲ್ಲಿ ಚೋಮನ ದುಡಿ, ಸಂಸ್ಕಾರ, ಭಾಗ್ಯ ಜ್ಯೋತಿ ಹೀಗೆ ಬೆರಳೆಣಿಕೆಯ ಚಿತ್ರಗಳನ್ನು ಹೊರತುಪಡಿಸಿ ಜಾತಿ ಸಂಘರ್ಷದ ಕಥಾವಸ್ತು ಆಧಾರಿತ ಸಿನಿಮಾಗಳು ಸಂಖ್ಯಾ ದೃಷ್ಟಿಯಿಂದ ಬಹಳ ಕಡಿಮೆ. ಜಾತಿ ಸಮಸ್ಯೆ ಆಧಾರಿತ  ಸಿನಿಮಾಗಳನ್ನು ನಿರ್ಮಿಸಿದಲ್ಲಿ ಅದು ನಿರ್ಧಿಷ್ಟ ಜಾತಿಯ ಪ್ರೇಕ್ಷಕರಿಗೆ ಸೀಮಿತವಾಗಬಹುದೆನ್ನುವ ಭಯ ಅವರನ್ನು ಕಾಡಿರಲೂಬಹುದು. ಲಗಾನ್ ನಂಥ ರೈತ ಪ್ರಧಾನ ಸಿನಿಮಾ ಕನ್ನಡದಲ್ಲಿ ನಿರ್ಮಾಣಗೊಂಡಿದ್ದು ತುಂಬ ಕಡಿಮೆ. ಎಲ್ಲೋ ಒಂದು ಕಡೆ ರಾಜಕುಮಾರ ಒಂದಿಷ್ಟು ರೈತ ಪ್ರಧಾನ ಸಿನಿಮಾಗಳಲ್ಲಿ ನಟಿಸಿ ಆ ಬದುಕಿನ ಸಂಕಟಗಳನ್ನು ಬೆಳ್ಳಿತೆರೆಗೆ ತರಲು ಪ್ರಯತ್ನಿಸಿ ಯಶಸ್ವಿಯಾದರು. ಆದರೆ ಅವರ ನಂತರ ಅಂಥ ಪಾತ್ರಗಳಿಗೆ ವಾರಸುದಾರನಿಲ್ಲದೆ ಕನ್ನಡ ಚಿತ್ರರಂಗ ರೈತನ ಬದುಕಿನಿಂದ ಸಂಪೂರ್ಣವಾಗಿ ವಿಮುಖವಾಯಿತು.

        ಈ ಸಂದರ್ಭ ಭ್ರಷ್ಟಾಚಾರದಂಥ ಕಥಾವಸ್ತು ಆಧಾರಿತ ಸಿನಿಮಾಗಳು ಪ್ರತಿವರ್ಷ ಕನ್ನಡದಲ್ಲಿ ಹೇರಳವಾಗಿ ನಿರ್ಮಾಣಗೊಳ್ಳುತ್ತಿವೆ ಎಂದು ಕೆಲವರು ವಾದಿಸಬಹುದು. ಹಿಂಸೆಯ ವೈಭವಿಕರಣವೇ ಸಾಮಾಜಿಕ ಪ್ರಜ್ಞೆ ಎನ್ನುವುದಾದರೆ ಅಂಥ ಸಿನಿಮಾಗಳಿಂದ ಸಮಾಜಕ್ಕೆ ಉಪಯೋಗವಾಗಿದೆಯೇ? ಸಿನಿಮಾ ನಾಯಕ ಕೈಯಲ್ಲಿ ಮಚ್ಚು ಹಿಡಿದು ಭೂಗತ ಸಾಮ್ರಾಜ್ಯದ ಅಧಿಪತಿಯಾಗಿ ಮೆರೆಯುವುದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿಲ್ಲವೇ? ಸಾಲು ಸಾಲು ಕೊಲೆಗಳನ್ನು ಮಾಡುವ ಸಿನಿಮಾದ ನಾಯಕನನ್ನು ಸಮಾಜ ಆದರ್ಶ ವ್ಯಕ್ತಿಯೆಂದು ಒಪ್ಪಿಕೊಳ್ಳಬೇಕೆ? ಸಾಮಾಜಿಕ ಪ್ರಜ್ಞೆಯ ಹೆಸರಿನಲ್ಲಿ ಇಂಥ ಸಿನಿಮಾಗಳನ್ನು ನಿರ್ಮಿಸುವುದು ಕಾನೂನು ಬಾಹಿರ ಎನ್ನುವ ಅರಿವಿನ ನಡುವೆಯೂ ಈ ಪ್ರಕಾರದ ಸಿನಿಮಾಗಳೇ ಪ್ರತಿವರ್ಷ ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣವಾಗುತ್ತಿರುವುದು ಮತ್ತು ಪ್ರೇಕ್ಷಕರು ಪ್ರೋತ್ಸಾಹಿಸುತ್ತಿರುವುದು ಸಧ್ಯದ ಮಟ್ಟಿಗೆ ಕನ್ನಡ ಚಿತ್ರರಂಗ ಎದುರಿಸುತ್ತಿರುವ ಬಹುದೊಡ್ಡ ಅಪಾಯವಿದು.

ಮಹಿಳಾ ಪ್ರಧಾನ ಚಿತ್ರಗಳ ಕೊರತೆ 

         
             ಪುರುಷ ಪ್ರಧಾನ ನೆಲೆಯಲ್ಲೇ ವ್ಯವಹರಿಸುತ್ತ ಬಂದಿರುವ ಕನ್ನಡ ಚಿತ್ರರಂಗದಲ್ಲಿ ಮಹಿಳಾ ಕಲಾವಿದರಿಗೆ ದೊರೆಯಬೇಕಾದ ಪ್ರಾಮುಖ್ಯತೆ ಇದುವರೆಗೂ ಸಿಕ್ಕಿಲ್ಲ ಎನ್ನುವುದನ್ನು ನಾವು ಒಪ್ಪಿಕೊಳ್ಳಲೇಬೇಕು. ಇದುವರೆಗೂ ಸ್ತ್ರೀಯನ್ನು ಪ್ರೇಮ ಮತ್ತು ಕಾಮದ ನೆಲೆಯಲ್ಲಿ ಪ್ರದರ್ಶನದ ಗೊಂಬೆಯಂತೆ ಚಿತ್ರಿಸುತ್ತ ಬಂದಿರುವ ಕನ್ನಡ ಭಾಷೆಯ ಸಿನಿಮಾಗಳಲ್ಲಿ ಮಹಿಳಾ ಪ್ರಧಾನ ಸಿನಿಮಾಗಳ ಕೊರತೆ ಎದ್ದು ಕಾಣುವಂತಿದೆ. ಒಂದು ಕಾಲದಲ್ಲಿ ಪುಟ್ಟಣ್ಣ ಕಣಗಾಲ್, ಕೆ.ವಿ. ಜಯರಾಂ, ದೊರೈ ಭಗವಾನ್ ಅವರಂಥ ನಿರ್ದೇಶಕರುಗಳಿಂದ ಸಾಲು ಸಾಲು ಮಹಿಳಾ ಪ್ರಧಾನ ಸಿನಿಮಾಗಳು ತೆರೆ ಕಂಡರೂ ಎಲ್ಲೋ ಒಂದು ಕಡೆ ಪೂರ್ಣ ಪ್ರಮಾಣದಲ್ಲಿ ಮಹಿಳೆಯರ ಸಮಸ್ಯೆಗಳನ್ನು ಬೆಳ್ಳಿತೆರೆಯ ಮೇಲೆ ತರುವಲ್ಲಿ ಕನ್ನಡ ಚಿತ್ರರಂಗ ಸೋತಿದೆ ಎನ್ನುವ ಕೊರಗು ಪ್ರೇಕ್ಷಕರದು.

         'ಶರ ಪಂಜರ', 'ಇಬ್ಬನಿ ಕರಗಿತು', 'ಗಾಳಿ ಮಾತು' ಇತ್ಯಾದಿ  ಚಿತ್ರಗಳನ್ನು ಮಹಿಳಾ ಪ್ರಧಾನ ಸಿನಿಮಾಗಳಿಗೆ ಉದಾಹರಣೆಯಾಗಿ ಹೆಸರಿಸಬಹುದಾದರೂ ಪುಟ್ಟಣ್ಣ ಮತ್ತು ಅವರ ಸಮಕಾಲಿನ ನಿರ್ದೇಶಕರು ಸುಶಿಕ್ಷಿತ ಮಧ್ಯಮ ವರ್ಗದ ಕುಟುಂಬಗಳಲ್ಲಿನ ಸ್ತ್ರೀ ಸಮಸ್ಯೆಗಳಾದ ಸೊಸೆಯಂದಿರ ಸಂಕಟ, ವರದಕ್ಷಿಣೆ ಪಿಡುಗು, ಗಂಡನ ವಿವಾಹೇತರ ಸಂಬಂಧಗಳಿಂದ ನೊಂದ ಪತ್ನಿ ಹೀಗೆ ಸೀಮಿತ ಸಮಸ್ಯೆಗಳ ಸುತ್ತಲೇ ಮಹಿಳಾ ಪ್ರಧಾನ ಸಿನಿಮಾಗಳನ್ನು ನಿರ್ದೇಶಿಸಿದರು.

      ಮಹಿಳೆಯರ ಸಮಸ್ಯೆಗಳ ಕುರಿತು ಚರ್ಚಿಸುವಾಗ ಈ ಮೇಲೆ ಹೇಳಿದ ಸಮಸ್ಯೆಗಳನ್ನಷ್ಟೇ ಆಧರಿಸಿ ಸಿನಿಮಾಗಳು ನಿರ್ಮಾಣಗೊಂಡರೆ ಸಾಕೆ? ಸ್ತ್ರೀ ಶಿಕ್ಷಣ, ಉದ್ಯೋಗಸ್ಥ ಮಹಿಳೆಯರು ಎದುರಿಸುವ ಸಮಸ್ಯೆಗಳು, ಲಿಂಗ ತಾರತಮ್ಯ ಇತ್ಯಾದಿ ಸಮಸ್ಯೆಗಳನ್ನಾಧರಿಸಿ ಎಷ್ಟು ಮಹಿಳಾ ಪ್ರಧಾನ ಸಿನಿಮಾಗಳು ಕನ್ನಡ ಭಾಷೆಯಲ್ಲಿ ತೆರೆ ಕಂಡಿವೆ? ಈ ಸಂದರ್ಭ ಉಲ್ಲೇಖಿಸಲೇ ಬೇಕಾದ ಇನ್ನೊಂದು ಮಾತೆಂದೆರೆ ಸಿನಿಮಾ ಕಥೆಗೆ ಅನಿವಾರ್ಯ ಇಲ್ಲದಿದ್ದಾಗೂ ಕೂಡ ಹೆಣ್ಣನ್ನು ಹಾಡು, ನೃತ್ಯ, ಸ್ನಾನದ ದೃಶ್ಯಗಳಲ್ಲಿ ಚಿತ್ರಿಸುವುದನ್ನು ನಾವು ಪ್ರತಿ ಸಿನಿಮಾದಲ್ಲೂ ಕಾಣುತ್ತೇವೆ. ಏಕೆ ಹೀಗೆ ಎಂದು ಒಂದಿಷ್ಟು ವಿಶ್ಲೇಷಿಸಿ ನೋಡಿದಾಗ ಅದು ಸಿನಿಮಾವೊಂದರ ಮಾರಾಟಕ್ಕೆ ಹೆಚ್ಚು ಸಹಾಯಕವಾಗುತ್ತಿದೆ ಎನ್ನುವ ಮಾತು ಸಿನಿಮಾ ವಲಯದಲ್ಲಿ ಕೇಳಿ ಬರುತ್ತಿದೆ. ಈ ಮಾತನ್ನು ಒಪ್ಪುವುದಾದರೆ ನಮ್ಮ ಸಿನಿಮಾ ಉದ್ಯಮ ಹೆಣ್ಣನ್ನು  ಒಂದು ಮಾರಾಟದ ಸರಕಾಗಿ ನೋಡುತ್ತಿದೆ  ಎನ್ನುವ ಸಂಗತಿ ನಿಚ್ಚಳವಾವಾಗುತ್ತದೆ. ಹೀಗೆ ಹೆಣ್ಣನ್ನು ಅರೆಬತ್ತಲೆಯಲ್ಲೇ ಚಿತ್ರಿಸಲು ಇಷ್ಟ ಪಡುತ್ತಿರುವ ಸಿನಿಮಾ ಜನರಿಗೆ   ಸ್ತ್ರೀ ಸಂವೇದನೆಯ ಸೂಕ್ಷ್ಮ  ಒಳತೋಟಿಗಳನ್ನು ಬೆಳ್ಳಿಪರದೆಯ ಮೇಲೆ ತೋರಿಸಲು ಮನಸ್ಸು ಒಪ್ಪುತ್ತಿಲ್ಲ.

          ಇನ್ನೊಂದು ಚರ್ಚಿಸಲೇ ಬೇಕಾದ ಮುಖ್ಯ ಸಂಗತಿ ಎಂದರೆ ನಮ್ಮ ಕನ್ನಡ ಸಿನಿಮಾಗಳಲ್ಲಿ ಮುಸ್ಲಿಂ ಮತ್ತು ದಲಿತ ಮಹಿಳೆ ಅವಳು ಅನುಭವಿಸುತ್ತಿರುವ ಸಮಸ್ಯೆಗಳೊಂದಿಗೆ ಚಿತ್ರಿತವಾಗಿರುವುದು  ತೀರ  ಕಡಿಮೆ. ಈ ಮಾತನ್ನು ನಾವು ಇತರ ವರ್ಗಗಳ ಮಹಿಳೆಯರಿಗೂ ಅನ್ವಯಿಸಿ ಹೇಳಬಹುದು. ಹೀಗೆ ಹೇಳುವಾಗ ಮಹಿಳೆ ಅನುಭವಿಸುತ್ತಿರುವ ಸಮಸ್ಯೆಗಳು ಒಂದು  ವರ್ಗದಿಂದ ಇನ್ನೊಂದು ವರ್ಗಕ್ಕೆ ವಿಭಿನ್ನವಾಗಿವೆ ಎನ್ನುವುದನ್ನು ನಾವು ಗಮನಿಸಬೇಕು. 'ಫಣಿಯಮ್ಮ' ಸಿನಿಮಾವೊಂದೆ ಎಲ್ಲ ವರ್ಗದ ಮಹಿಳೆಯರನ್ನು ಪ್ರತಿನಿಧಿಸಲಾರದು. ನಮ್ಮದು ವಿಭಿನ್ನ ಜಾತಿ ಸಮುದಾಯಗಳ ಸಮಾಜವಾಗಿರುವುದರಿಂದ ಇಡೀ ಮಹಿಳಾ ಸಮುದಾಯದ ಸಮಸ್ಯೆಗಳನ್ನು ಚಿತ್ರಿಸುವಲ್ಲಿ ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಸೋತಿದೆ ಎನ್ನುವುದನ್ನು ಕನ್ನಡ ಪ್ರೇಕ್ಷಕ ಅತ್ಯಂತ ನೋವಿನಿಂದ ಒಪ್ಪಿಕೊಳ್ಳಬೇಕಿದೆ.

ಕಲಾತ್ಮಕ ಎನ್ನುವ ಹಣೆಪಟ್ಟಿ 


        ಸಿನಿಮಾವನ್ನು ವ್ಯಾಪಾರಿ ಮತ್ತು ಕಲಾತ್ಮಕ ಎಂದು ವರ್ಗೀಕರಿಸಿ ಅನೇಕ ದಶಕಗಳಾದವು. ವ್ಯಾಪಾರಿ ಸಿನಿಮಾವೊಂದು ಬಹುಸಂಖ್ಯೆಯ ಪ್ರೇಕ್ಷಕರನ್ನು ತಲುಪಿದರೆ ಕಲಾತ್ಮಕ ಸಿನಿಮಾಗಳು ವೈಚಾರಿಕ ಪ್ರಜ್ಞೆಯುಳ್ಳ ಸೀಮಿತ ಸಂಖ್ಯೆಯ ಪ್ರೇಕ್ಷಕ ವರ್ಗಕ್ಕೆ ಮಾತ್ರ ತಲುಪಬಲ್ಲವು. ಹಾಗೆ ನೋಡಿದರೆ ವ್ಯಾಪಾರಿ ಸಿನಿಮಾಗಳಿಗಿಂತ ಕಲಾತ್ಮಕ ಸಿನಿಮಾಗಳಲ್ಲೇ ನಾವು ಸಾಮಾಜಿಕ ಕಳಕಳಿಯನ್ನು ಕಾಣಲು ಸಾಧ್ಯ. ಈ ಕಲಾತ್ಮಕ ಸಿನಿಮಾಗಳು  ಕಾಲಕಾಲಕ್ಕೆ ಸಮಾಜದಲ್ಲಿನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿವೆ. ಆದರೆ ಪ್ರತಿವರ್ಷ ನಿರ್ಮಾಣವಾಗುತ್ತಿರುವ ಇಂಥ ಸಿನಿಮಾಗಳ ಸಂಖ್ಯೆ ಕನ್ನಡ ಚಿತ್ರರಂಗದಲ್ಲಿ   ಬೆರಳೆಣಿಕೆಯಷ್ಟು   ಮಾತ್ರ.

           ಕನ್ನಡ ಚಿತ್ರರಂಗದಲ್ಲಿ ಕಲಾತ್ಮಕ ಸಿನಿಮಾಗಳ ನಿರ್ಮಾಣ ಕಡಿಮೆಯಾಗುತ್ತಿರುವುದಕ್ಕೆ ಅಂಥ ಸಿನಿಮಾಗಳಿಗೆ ಸೂಕ್ತ ಉತ್ತೇಜನ ಇಲ್ಲದಿರುವುದೇ ಪ್ರಬಲ ಕಾರಣ. ಕಲಾತ್ಮಕ ಸಿನಿಮಾಗಳನ್ನು ನಿರ್ಮಿಸಲು ಹೆಚ್ಚಿನ ನಿರ್ಮಾಪಕರು ಆಸಕ್ತಿ ತೋರುವುದಿಲ್ಲ ಜೊತೆಗೆ ಈ ಪ್ರಕಾರದ ಸಿನಿಮಾಗಳನ್ನು ಪ್ರದರ್ಶಿಸಲು ಯಾವ ಸಿನಿಮಾ ಮಂದಿರಗಳ ಮಾಲೀಕರು ಮುಂದೆ ಬರುತ್ತಿಲ್ಲ. ಒಟ್ಟಿನಲ್ಲಿ ಸಾಮಾಜಿಕ ಪ್ರಜ್ಞೆಯುಳ್ಳ ಕಲಾತ್ಮಕ ಚಿತ್ರಗಳ ನಿರ್ಮಾಣ ಆರ್ಥಿಕವಾಗಿ ಹೊರೆಯಾಗುತ್ತಿದೆ. ಎಲ್ಲೋ ಒಂದು ಕಡೆ ಕಲಾತ್ಮಕ ಸಿನಿಮಾಗಳನ್ನು ಪ್ರಶಸ್ತಿಗಾಗಿಯೇ ನಿರ್ಮಾಣ ಮಾಡಲಾಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಹೀಗೆ ಪ್ರಶಸ್ತಿಯ ಹಿಂದೆ ಬಿದ್ದಿರುವ ನಿರ್ದೇಶಕರು ಮತ್ತು ನಿರ್ಮಾಪಕರು ಕಲಾತ್ಮಕ ಸಿನಿಮಾಗಳನ್ನು ಪ್ರೇಕ್ಷಕರ ಸಮೂಹಕ್ಕೆ ಒಯ್ದು ತಲುಪಿಸುವ ಇಚ್ಛೆ ತೋರುತ್ತಿಲ್ಲ.

      ಕಲಾತ್ಮಕ ಸಿನಿಮಾಗಳು ಬಹುಸಂಖ್ಯೆಯ ಪ್ರೇಕ್ಷಕರಿಗೆ ತಲುಪದೇ ಇರಲು ಜನಪ್ರಿಯ ಕಲಾವಿದರು ಇಂಥ ಚಿತ್ರಗಳಲ್ಲಿ ನಟಿಸದೇ ಇರುವುದು ಕೂಡ ಒಂದು ಕಾರಣವಾಗುತ್ತಿದೆ. ಸದಾಕಾಲ ಮೆನ್ ಸ್ಟ್ರೀಮ್ ನಲ್ಲೇ ಕಾಣಿಸಿಕೊಳ್ಳಲು ಇಚ್ಛಿಸುವ ಜನಪ್ರಿಯ ಕಲಾವಿದರಿಗೆ ಕಲಾತ್ಮಕ ಸಿನಿಮಾಗಳೆಂದರೆ ಯಾವತ್ತಿಗೂ ಅಪಥ್ಯ. ರಾಜಕುಮಾರ, ವಿಷ್ಣುವರ್ಧನ ಅವರಂಥ ಖ್ಯಾತ ಮತ್ತು ಪ್ರತಿಭಾನ್ವಿತ ಕಲಾವಿದರೂ ಈ ಅಪವಾದದಿಂದ ಹೊರಾತಾಗಿರಲಿಲ್ಲ. ಜನಪ್ರಿಯ ಕಲಾವಿದರ ನಿರ್ಲಕ್ಷದಿಂದಾಗಿಯೇ ಕಲಾತ್ಮಕ ಸಿನಿಮಾಗಳಲ್ಲಿ ಸಾಮಾಜಿಕ ಕಾಳಜಿ ಇದ್ದೂ ಸಿನಿಮಾ ಎನ್ನುವ ಮಾಧ್ಯಮ ಸಮಾಜದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಲ್ಲಿ ವಿಫಲವಾಯಿತು.

ಜಾಗತೀಕರಣಕ್ಕೆ ಮುಖಾಮುಖಿ 


       ಕನ್ನಡ ಚಿತ್ರರಂಗದ ಮೇಲೆ ಜಾಗತೀಕರಣ ತನ್ನ ಪ್ರಭಾವ ಬೀರಿದೆ. ಇದಕ್ಕೆ ಪೂರಕವಾಗಿ ಕನ್ನಡ ಸಿನಿಮಾ ಉದ್ಯಮ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಿದೆ. ಇವತ್ತು  ಕರ್ನಾಟಕ ಮಾತ್ರವಲ್ಲದೆ ಕನ್ನಡ ಸಿನಿಮಾಗಳು ಮುಂಬೈ, ದೆಹಲಿ, ದುಬೈ, ಅಮೆರಿಕಾ, ಜಪಾನ್, ಜರ್ಮನಿಗಳಲ್ಲಿ ಬಿಡುಗಡೆಯಾಗುತ್ತಿವೆ. ಸಿನಿಮಾದ ಮಾರುಕಟ್ಟೆ ವಿಸ್ತರಿಸಿದಂತೆಲ್ಲ ಈ ವಿಸ್ತರಣೆಗೆ ಪೂರಕವಾಗಿ ಕನ್ನಡ ಸಿನಿಮಾಗಳ ಕಥಾವಸ್ತು ಮತ್ತು ಚಿತ್ರೀಕರಣದ ಲೊಕೇಷನ್ ಗಳಲ್ಲಿ ಸಾಕಷ್ಟು ಮಾರ್ಪಾಡುಗಳಾಗುತ್ತಿವೆ. ಜಾಗತೀಕರಣದ ಪರಿಣಾಮ ಇಂದಿನ ಕನ್ನಡ ಸಿನಿಮಾಗಳಲ್ಲಿ ಕಾರ್ಪೋರೆಟ್ ಸಂಸ್ಕೃತಿ ಕಾಣಿಸಿಕೊಳ್ಳುತ್ತಿದೆ. ಒಂದು ಕಾಲದಲ್ಲಿ ಮಧ್ಯಮ ವರ್ಗದ ಜನರ ಬದುಕನ್ನು ಪ್ರತಿನಿಧಿಸುತ್ತಿದ್ದ ಸಿನಿಮಾಗಳಲ್ಲಿ ಕಾಲಾನಂತರದಲ್ಲಿ ಶ್ರೀಮಂತ ವರ್ಗದ ವಿಲಾಸಿ ಬದುಕು ಸಿಂಹಪಾಲು  ಪಡೆಯತೊಡಗಿತು. ಜೊತೆಗೆ ವಿಸ್ತರಿಸುತ್ತಿರುವ ಮಾರುಕಟ್ಟೆಗೆ ಅನುಗುಣವಾಗಿ ಕನ್ನಡ ಸಿನಿಮಾಗಳನ್ನು ವಿದೇಶದಲ್ಲಿ ಚಿತ್ರೀಕರಿಸಲು ಪೈಪೋಟಿ ಕಾಣಿಸುತ್ತಿದೆ. ಒಂದು ಕಾಲದಲ್ಲಿ ಸಿನಿಮಾವೊಂದರ ಒಂದೆರಡು ಹಾಡುಗಳನ್ನು ಮಾತ್ರ ವಿದೇಶದಲ್ಲಿ ಚಿತ್ರೀಕರಿಸುತ್ತಿದ್ದ ಕನ್ನಡ ಸಿನಿಮಾರಂಗದಲ್ಲಿ ಈಗ ಸಿನಿಮಾವೊಂದರ ಅರ್ಧದಷ್ಟು ಭಾಗ ವಿದೇಶದಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ಇದಕ್ಕೆಲ್ಲ ಜಾಗತೀಕರಣದ ಪ್ರಭಾವವೇ ಮುಖ್ಯ ಕಾರಣ.

           ಜಾಗತೀಕರಣಕ್ಕೆ ಕನ್ನಡ ಸಿನಿಮಾ ರಂಗವನ್ನು ಮುಖಾಮುಖಿಯಾಗಿ ನಿಲ್ಲಿಸುತ್ತಿರುವ ಹೊತ್ತಿನಲ್ಲೇ ನಮ್ಮ ಸಿನಿಮಾಗಳು ಪ್ರಾದೇಶಿಕತೆಯಿಂದ ದೂರವಾಗುತ್ತಿವೆ. ಉದಾಹರಣೆಯಾಗಿ ಹೇಳುವುದಾದರೆ ಕೊಡವರ ಬದುಕಿನ ಸಮಸ್ಯೆಗಳನ್ನು ಸಿನಿಮಾದ ಮೂಲಕ ಹೇಳಲು ಅವರಿಗೆ ಕೊಡವ ಭಾಷೆಯೇ ಬೇಕಾಯಿತು. ಇದೇ ಮಾತನ್ನು ತುಳು ಮತ್ತು ಲಂಬಾಣಿ ಭಾಷೆಯ ಸಿನಿಮಾಗಳಿಗೂ ಅನ್ವಯಿಸಿ ಹೇಳಬಹುದು. ಪ್ರಾದೇಶಿಕ ಸಮಸ್ಯೆಯೊಂದನ್ನು ಪ್ರಾದೇಶಿಕ ಭಾಷೆಯಲ್ಲೇ ಚಿತ್ರಿಸಿದಾಗ ಅದು ನಾಡಿನ ಎಲ್ಲ ಪ್ರೇಕ್ಷಕರನ್ನು ತಲುಪಲಾರದು. ಕನ್ನಡ ಸಿನಿಮಾ ಜಾಗತೀಕರಣಕ್ಕೆ ಮುಖಾಮುಖಿಯಾಗಿ ನಿಂತಿರುವ ಹೊತ್ತಿನಲ್ಲಿ ತಮ್ಮ ನೆಲದ ಸಮಸ್ಯೆಗಳನ್ನು ಸಿನಿಮಾದ ಮೂಲಕ ಹೇಳಲು ಕೆಲವೊಂದು ಪ್ರದೇಶಗಳಿಗೆ ಪ್ರಾದೇಶಿಕ ಭಾಷೆಗಳಾದರೂ ಇವೆ. ಆದರೆ ಪ್ರಾದೇಶಿಕ ಭಾಷೆಯಿಲ್ಲದೇ ರಾಜ್ಯ ಭಾಷೆಯನ್ನೇ ಅವಲಂಬಿಸಿರುವ ಮುಂಬೈ ಕರ್ನಾಟಕ, ಹೈದರಾಬಾದ ಕರ್ನಾಟಕ, ಮೈಸೂರು ಕರ್ನಾಟಕ ಭಾಗಗಳ ಪ್ರಾದೇಶಿಕತೆ ಬೆಳ್ಳಿತೆರೆಯ ಮೇಲೆ ಮೂಡಲು ಕನ್ನಡ ಭಾಷೆಯೇ ಅನಿವಾರ್ಯವಾಗಿರುವ ಹೊತ್ತಿನಲ್ಲೇ ನಮ್ಮ ಚಿತ್ರರಂಗ ಜಾಗತೀಕರಣಕ್ಕೆ ತೆರೆದುಕೊಳ್ಳುತ್ತಿದೆ.

ಕೊನೆಯ ಮಾತು


            ಕೆಲವು ವರ್ಷಗಳ ಹಿಂದೆ ಹಿಂದಿಯಲ್ಲಿ 'ಗಂಗಾ ಜಲ್' ಎನ್ನುವ ಸಿನಿಮಾ ಬಿಡುಗಡೆಯಾದಾಗ ಬಿಹಾರ ರಾಜ್ಯದಲ್ಲಿನ ಭೂಮಾಲಿಕರುಗಳು ಸಿನಿಮಾ ಬಿಡುಗಡೆಗೆ ಅಡ್ಡಿಪಡಿಸಿದರು. ಸಿನಿಮಾದ ನಿರ್ದೇಶಕನಿಗೆ ಬೆದರಿಕೆಯೊಡ್ಡಿದರು. ಏಕೆಂದರೆ   ಆ ಸಿನಿಮಾದ ಕಥಾವಸ್ತು ಭೂಮಾಲಿಕರ ಅಟ್ಟಹಾಸ ಹಾಗೂ ದೌರ್ಜನ್ಯಕ್ಕೆ  ಹತ್ತಿರವಾಗಿತ್ತು. ಆದ್ದರಿಂದ  ಸಿನಿಮಾದ ಬಿಡುಗಡೆಯೇ ಒಂದು ರೀತಿ ಸಂಚಲನವನ್ನು ಉಂಟುಮಾಡಿತ್ತು. ಇದು ಸಿನಿಮಾವೊಂದು ಸಮಾಜದಲ್ಲಿ ಸೃಷ್ಟಿಸುವ ಪರಿಣಾಮಕ್ಕೆ ಉತ್ತಮ ಉದಾಹರಣೆ. ಹೀಗೆ ಸಿನಿಮಾ ಸಮಾಜಿಕ ಪಲ್ಲಟಕ್ಕೆ ಮತ್ತು ಜಿಗಿತಕ್ಕೆ ಕಾರಣವಾಗಬೇಕು. ಆದರೆ ಕಳೆದ ಒಂದು ದಶಕದಿಂದ ಕನ್ನಡದಲ್ಲಿ ಇಂಥ ಪ್ರಯೋಗ ತುಂಬ ಕಡಿಮೆಯಾಗುತ್ತಿದೆ.  ಪ್ರೇಕ್ಷಕರು ಸಿನಿಮಾವನ್ನು ಮನೋರಂಜನೆ ಎನ್ನುವ ಸೀಮಿತ ಚೌಕಟ್ಟಿಗೆ ಸ್ಥಿರಗೊಳಿಸಿ ನೋಡುತ್ತಿರುವುದರಿಂದ ಪ್ರಯೋಗಶೀಲ ಮನೋಭಾವದ ನಿರ್ದೇಶಕರು ಸಹ ಸಿನಿಮಾವನ್ನು ಸಮಾಜಕ್ಕೆ ಮುಖಾಮುಖಿಯಾಗಿ ನಿಲ್ಲಿಸುವ ಧೈರ್ಯ ತೋರುತ್ತಿಲ್ಲ. ಸಧ್ಯದ ಮಟ್ಟಿಗೆ ಇದು ಕನ್ನಡ ಚಿತ್ರರಂಗದ ಹಾಗೂ ಸಮಾಜದ ಆರೋಗ್ಯದ ದೃಷ್ಟಿಯಿಂದ ಸರಿಯಾದ ನಿರ್ಧಾರವಲ್ಲ.


-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


           

Monday, July 1, 2013

ಪರಿಸರ ಪ್ರಜ್ಞೆ














          ಪರಿಸರ ಮಾನವನ ಬದುಕಿನ ಬಹುಮುಖ್ಯ ಅಗತ್ಯಗಳಲ್ಲೊಂದು. ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವಿತಾವಧಿಯುದ್ದಕ್ಕೂ ಪರಿಸರದಿಂದ ಪಡೆಯುವುದು ನಮ್ಮ ಅಂಕಿ ಸಂಖ್ಯೆಗೂ ನಿಲುಕದ ಲೆಕ್ಕವದು. ಹೀಗಿದ್ದೂ ಮನುಷ್ಯ ಪರಿಸರಕ್ಕೆ ಕೃತಜ್ಞನಾಗಿರದೆ ಕೃತಘ್ನನಾಗಿರುವುದೇ ಹೆಚ್ಚು. ಮಾನವನ ಅನಾಗರಿಕ ಆಟಾಟೋಪಗಳಿಗೆ ಪರಿಸರ ಬಲಿಯಾಗುತ್ತಿದೆ. ನಾಗರಿಕ ಸಮಾಜ ನಿರಂತರವಾಗಿ ಪರಿಸರವನ್ನು ಹಾಳುಗೆಡುವುತ್ತ ಅದನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿದೆ. ಇದು ಹೀಗೆ ಮುಂದುವರೆದಲ್ಲಿ ನಾವು ನಮ್ಮ ನಂತರದ ಪೀಳಿಗೆಯನ್ನು ಉಸಿರು ಕಟ್ಟುವ ವಾತಾವರಣದಲ್ಲಿ ಬಿಟ್ಟು ಹೋಗಬೇಕಾದಿತು. ಎಚ್ಚರಿಸುವ ಕೆಲಸ ಸಾಹಿತ್ಯ, ಸಿನಿಮಾ, ನಾಟಕಗಳಂಥ ಸೃಜನಶೀಲ ಕ್ಷೇತ್ರಗಳಿಂದಾಗಬೇಕು. ಜೊತೆಗೆ ಸರ್ಕಾರ ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಕಡೆಗಣಿಸುವಂತಿಲ್ಲ.

ಪರಿಸರ ಪ್ರಜ್ಞೆ: ಸಾಹಿತ್ಯ ಮತ್ತು ಸಿನಿಮಾ 


           ಜೂನ್ ತಿಂಗಳಂದು ಪರಿಸರ ದಿನವನ್ನು ಆಚರಿಸುವುದು ನಮ್ಮಲ್ಲಿ ಒಂದು ಸಂಪ್ರದಾಯದಂತೆ ಬೆಳೆದು ಬಂದಿದೆ. ಪತ್ರಿಕೆಗಳಲ್ಲಿ, ದೂರದರ್ಶನದ ವಿವಿಧ ವಾಹಿನಿಗಳಲ್ಲಿ ಮತ್ತು ಸಂಘ ಸಂಸ್ಥೆಗಳಲ್ಲಿ ಪರಿಸರ ದಿನಾಚರಣೆಯು ಒಂದು ಪ್ರತಿಷ್ಠೆಯ ವಿಷಯವಾಗುತ್ತಿರುವುದು ಅದೊಂದು ಕಳವಳಕಾರಿ ಸಂಗತಿ. ಈ ಪ್ರಯತ್ನದ ಹಿಂದೆ ನಿಜವಾದ ಕಾಳಜಿ ಇದ್ದಲ್ಲಿ ಇವತ್ತು ಪರಿಸರ ಇಷ್ಟೊಂದು ಮಾಲಿನ್ಯಗೊಳ್ಳುತ್ತಿರಲಿಲ್ಲ. ಪರಿಸರ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸುವ ಕೆಲಸ ಅದು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಇಂಥದ್ದೊಂದು ಅನುಸಂಧಾನ ದಿನನಿತ್ಯ ನಡೆಯಬೇಕು.

           ಜೊತೆಗೆ ಸೃಜನಶೀಲ ಮಾಧ್ಯಮಗಳಾದ ಸಾಹಿತ್ಯ ಮತ್ತು ಸಿನಿಮಾಗಳಿಂದ ಜನರಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸುವ ಕೆಲಸವಾಗುತ್ತಿಲ್ಲ ಎನ್ನುವುದನ್ನು ನಾನಿಲ್ಲಿ ಬೇಸರದಿಂದ ಹೇಳುತ್ತಿದ್ದೇನೆ. ಈ ಸಿನಿಮಾ ಮತ್ತು ಸಾಹಿತ್ಯ ಜನರನ್ನು ಮುಟ್ಟಬಲ್ಲ ಪರಿಣಾಮಕಾರಿ ಮಾಧ್ಯಮಗಳು. ಹೀಗಾಗಿ ಈ ಎರಡು ಮಾಧ್ಯಮಗಳು ಪ್ರಯತ್ನಿಸಿದಲ್ಲಿ ನಾಶವಾಗುತ್ತಿರುವ ಪರಿಸರವನ್ನು ಖಂಡಿತವಾಗಿ ನಾವು ಉಳಿಸಿಕೊಳ್ಳಬಹುದು. ಕನ್ನಡ ಸಾಹಿತ್ಯದ ವಿಷಯಕ್ಕೆ ಬಂದರೆ ಇಲ್ಲಿ ಪರಿಸರದ ಮೇಲೆ ರಚನೆಯಾದ ಸಾಹಿತ್ಯ ಬಹಳಷ್ಟು ಕಡಿಮೆ. ನಮ್ಮ ಹೆಚ್ಚಿನ ಬರಹಗಾರರು ಪರಿಸರವನ್ನು ಒಂದು ಆಕರ್ಷಣೆ ಇಲ್ಲವೇ ಶೃಂಗಾರವಾಗಿ ನೋಡಿದ್ದೆ ಹೆಚ್ಚು. ಪರಿಸರದ ಒಳಗಿಳಿದು ಅದರ ಅಗತ್ಯ ಮತ್ತು ಅದು ಎದುರಿಸುತ್ತಿರುವ ಅಪಾಯವನ್ನು ಶೋಧಿಸಿದ ಬರಹಗಾರರು ಬೆರಳೆಣಿಕೆಯಷ್ಟು ಮಾತ್ರ. ಅವರಲ್ಲಿ ನಾವು ತೇಜಸ್ವಿ ಮತ್ತು ಕಾರಂತರ ಹೆಸರನ್ನು ಸೂಚಿಸಬಹುದು. ಈ ಇಬ್ಬರೂ ಬರಹಗಾರರು ಪರಿಸರವನ್ನು ವಿಜ್ಞಾನವಾಗಿ ಮತ್ತು ಮಾನವ ಸಂಕುಲದ ಅಗತ್ಯವಾಗಿ ನೋಡಿದ್ದರಿಂದಲೇ ಕರ್ವಾಲೋ, ಚಿದಂಬರ ರಹಸ್ಯ, ಮಾಯಾಲೋಕ, ಚಿಗುರಿದ ಕನಸು ಇತ್ಯಾದಿ ಮಹತ್ವದ ಕೃತಿಗಳು ರಚನೆಯಾದವು. ತೇಜಸ್ವಿ ಕಾಡಿನೊಳಗಿನ ಬಗೆಬಗೆಯ ಸಸ್ಯ, ಕೀಟಗಳ ಕುರಿತು ಬರೆದರು. ಕಾಡಿನೊಂದಿಗೆ ನಿರಂತರ ಒಡನಾಟವಿಟ್ಟುಕೊಂಡು ಬದುಕುತ್ತಿದ್ದ ಮಂದಣ್ಣ, ಚೀಂಕ್ರ, ಅಣ್ಣಪ್ಪಣ್ಣ, ಪ್ಯಾರಾ, ಕರಾಟೆ ಮಂಜನಂಥವರು ಅವರ ಕಥೆ ಕಾದಂಬರಿಗಳ ನಾಯಕರಾದರು. ತೇಜಸ್ವಿ ಅವರ ಕಥೆ ಕಾದಂಬರಿಗಳಲ್ಲಿ ಧಾರಾಕಾರ ಮಳೆ, ಕಾಡ್ಗಿಚ್ಚು, ಭೀಕರ ಗಾಳಿ ಮುಖ್ಯ ಪಾತ್ರಗಳಾಗಿ ಬಂದಿವೆ. ಅವರು ಮಾನವ ಸಮಾಜಕ್ಕೆ ಎಚ್ಚರಿಕೆಯನ್ನು ಪರಿಸರದ ಮೂಲಕ ಒದಗಿಸುತ್ತಾರೆ. ಪರಿಸರದೊಂದಿಗೆ ತೇಜಸ್ವಿ ಅವರದು ನಿರಂತರ ಅನುಸಂಧಾನ. ಹೀಗೆ ಪರಿಸರವನ್ನು ತನ್ನೊಳಗೆ ಆವಾಹಿಸಿಕೊಂಡು ಬರೆದ ಲೇಖಕ ಕನ್ನಡದಲ್ಲಿ ತೇಜಸ್ವಿ ಅವರನ್ನು ಬಿಟ್ಟರೆ ಬೇರೊಬ್ಬರಿಲ್ಲ. ಶಿವರಾಮ ಕಾರಂತರು ಸಾಮಾಜಿಕ ಬದುಕಿನ ಸಂಕೀರ್ಣಗಳ ಜೊತೆ ಪರಿಸರದ ಬಗ್ಗೆಯೂ ಒಂದಿಷ್ಟು ಕೆಲಸ ಮಾಡಿದ್ದು ಶ್ಲಾಘನೀಯ. ಇಲ್ಲಿ ನಾವು ಕಾರಂತರು ಪರಿಸರದ ಬಗ್ಗೆ ಎಷ್ಟು ಬರೆದಿರುವರು ಎನ್ನುವುದಕ್ಕಿಂತ ಅವರು ಪರಿಸರ ರಕ್ಷಣೆಗಾಗಿ ಮಾಡಿದ ಚಳುವಳಿ ಕುರಿತು ಗಮನಹರಿಸಬೇಕು. ದಕ್ಷಿಣ ಕನ್ನಡದಲ್ಲಿ ಅಣುಸ್ಥಾವರ ಸ್ಥಾಪನೆಯನ್ನು ಅವರು ತಮ್ಮ ಬದುಕಿನುದ್ದಕ್ಕೂ ವಿರೋಧಿಸುತ್ತಲೇ ಬಂದರು. ಆದರೆ ಇಂಥದ್ದೊಂದು ಹೋರಾಟದ ಮನೋಭಾವ ಹೆಚ್ಚಿನ ಲೇಖಕರಿಂದ ವ್ಯಕ್ತವಾಗಿದ್ದು ಕನ್ನಡದಲ್ಲಿ ಕಡಿಮೆ.

          ಇನ್ನು ಸಿನಿಮಾ ಕುರಿತು ಮಾತನಾಡುವುದಾದರೆ ನಮ್ಮ ಸಿನಿಮಾ ಜನ ವಿದೇಶಿ ಸಿನಿಮಾಗಳಿಂದ ಕಲಿಯುವುದು ಬಹಳಷ್ಟಿದೆ. ಜಾಗತಿಕ ತಾಪಮಾನ ತಂದೊಡ್ಡಬಹುದಾದ ಅಪಾಯ, ವಿನಾಶದಂಚಿಗೆ ಬಂದು ನಿಂತಿರುವ ಪ್ರಾಣಿ ಸಂಕುಲ ಹೀಗೆ ಪರಿಸರ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಿನಿಮಾಗಳು ಇವತ್ತಿಗೂ ಹಾಲಿವುಡ್ ನಲ್ಲಿ ನಿರ್ಮಾಣಗೊಳ್ಳುತ್ತಿವೆ. ಆದರೆ ನೂರು ವರ್ಷಗಳ ಇತಿಹಾಸವುಳ್ಳ ನಮ್ಮ ಕನ್ನಡ ಚಿತ್ರರಂಗದಲ್ಲಿ ಪರಿಸರದ ಕುರಿತಾದ ಸಿನಿಮಾಗಳೇ ನಿರ್ಮಾಣಗೊಂಡಿಲ್ಲ. ಎಲ್ಲೋ ಒಂದು ಕಡೆ 'ದ್ವೀಪ' ದಂಥ ಸಿನಿಮಾದ ಮೂಲಕ ಒಂದು ಸಣ್ಣ ಪ್ರಯತ್ನವನ್ನು ಮಾಡಲಾಯಿತಾದರೂ ಅಲ್ಲಿಯೂ ಮನುಷ್ಯ ಬದುಕಿನ ಸಂಕೀರ್ಣತೆಯೇ ಮೇಲುಗೈ ಸಾಧಿಸಿ ನಿಜವಾದ ಕಾಳಜಿ ಮೂಲೆಗುಂಪಾಯಿತು. ೨೦೦೪ ರಲ್ಲಿ ಹಾಲಿವುಡ್ ನಲ್ಲಿ ನಿರ್ಮಾಣಗೊಂಡ 'ಡೇ ಆಫ್ಟರ್ ಟುಮಾರೋ' ಸಿನಿಮಾವನ್ನು ನೀವು ನೋಡಿರಬೇಕು. ಜಾಗತಿಕ ತಾಪಮಾನ ತಂದೊಡ್ಡುವ ಅಪಾಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟ ಚಿತ್ರವಿದು. ನೀರೆಲ್ಲ ಹೆಪ್ಪುಗಟ್ಟಿ ಹಿಮರಾಶಿಯ ನಡುವೆ ಸಿಕ್ಕಿಕೊಂಡ ನಾಗರಿಕ ಸಮಾಜ ಎದುರಿಸುವ ಅಪಾಯವನ್ನು ವೀಕ್ಷಿಸುತ್ತಿರುವ ಆ ಸಂದರ್ಭ ಪ್ರಕೃತಿ ವಿಕೋಪದ ಮುಂದೆ ಅತ್ಯಾಧುನಿಕ ತಂತ್ರಜ್ಞಾನ ಅದೆಷ್ಟು ಅಸಹಾಯಕ ಎಂದು ಆ ಕ್ಷಣ ಯಾರಿಗಾದರೂ ಅನಿಸುತ್ತದೆ. ಹೀಗೆ ಸಾಹಿತ್ಯ ಮತ್ತು ಸಿನಿಮಾ ಮಾಧ್ಯಮಗಳು ಕಟ್ಟಿಕೊಡುವ ಅನುಭವ ಅನನ್ಯ. ಆದ್ದರಿಂದ ಪರಿಸರ ಪ್ರೇಮವನ್ನು ಜಾಗೃತಗೊಳಿಸುವ ಪ್ರಯತ್ನ ಸೃಜನಶೀಲ ಮಾಧ್ಯಮಗಳಾದ ಸಾಹಿತ್ಯ ಮತ್ತು ಸಿನಿಮಾಗಳಿಂದ ಪ್ರಾರಂಭವಾದಲ್ಲಿ ಅದು ಅತಿ ಹೆಚ್ಚಿನ ಪರಿಣಾಮವನ್ನು ಬೀರಬಲ್ಲದು. ಆದರೆ ಸಧ್ಯದ ಪರಿಸ್ಥಿತಿಯಲ್ಲಿ ಅಂಥದ್ದೊಂದು ಪ್ರಯತ್ನವಾಗಲಿ ಮತ್ತು ಬೆಳವಣಿಗೆಯಾಗಲಿ ಕಾಣಿಸುತ್ತಿಲ್ಲ.

                 ಈ ಸಂದರ್ಭ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ ಮತ್ತು ಸೇನಾನಿ ಈ ಇರ್ವರೂ ಪರಿಸರ ಸಂರಕ್ಷಣೆಗಾಗಿ ಮಾಡುತ್ತಿರುವ ಪ್ರಯತ್ನವನ್ನೊಮ್ಮೆ ಅವಲೋಕಿಸಬೇಕು. ಸಂಘ ಸಂಸ್ಥೆಗಳಿಂದ ಹಣ ಸಂಗ್ರಹಿಸಿ ಬಂಡಿಪುರ ಅರಣ್ಯದಂಚಿನಲ್ಲಿರುವ ಸುಮಾರು ಎರಡುನೂರು ಹಳ್ಳಿಗಳಲ್ಲಿನ ಮೂರು ಸಾವಿರ ಕುಟುಂಬಗಳಿಗೆ ಅಡುಗೆ ಅನಿಲದ ಸೌಲಭ್ಯವನ್ನು ಒದಗಿಸಿ ಆ ಮೂಲಕ ಅರಣ್ಯ ನಾಶವನ್ನು ತಡೆಗಟ್ಟಿದ ಇವರ ಪ್ರಯತ್ನ ಅಭಿನಂದನಾರ್ಹ. ಇಂಥ ಮನೋಭಾವ ಸೃಜನಶೀಲ ಮನಸ್ಸುಗಳಲ್ಲಿ ಹೆಚ್ಚಬೇಕು.

ಪರಿಸರ ಪ್ರಜ್ಞೆ ಮತ್ತು ಸರ್ಕಾರ 


             ಪರಿಸರ ರಕ್ಷಣೆ ಕುರಿತಾಗಿ ಸರ್ಕಾರೇತರ ಸಂಸ್ಥೆಗಳು ಮಾಡುತ್ತಿರುವ ಪ್ರಯತ್ನದಲ್ಲಿ ಅರ್ಧದಷ್ಟನ್ನಾದರೂ ಕಾಲಕಾಲಕ್ಕೆ ಬಂದ ನಮ್ಮ ಸರ್ಕಾರಗಳು ಮಾಡಲೇ ಇಲ್ಲ. ನಿಮಗೆ ನೆನಪಿರಬಹುದು ಕೆಲವು ದಿನಗಳ ಹಿಂದೆ ಗೊರಿಲ್ಲಾಗಳ ನಾಮಕರಣಕ್ಕೆ ಸಂಬಂಧಿಸಿದ ಲೇಖನವೊಂದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇದು ನಡೆದದ್ದು ಆಫ್ರಿಕಾದ ರವಾಂಡಾ ಎನ್ನುವ ಪುಟ್ಟ ದೇಶದಲ್ಲಿ. ಇದು ನಮ್ಮ ಕರ್ನಾಟಕಕ್ಕಿಂತಲೂ ವಿಸ್ತೀರ್ಣದಲ್ಲಿ ಚಿಕ್ಕದಾದ ದೇಶ. ಅಲ್ಲಿ ನಶಿಸಿ ಹೋಗುತ್ತಿರುವ ಗೊರಿಲ್ಲಾಗಳನ್ನು ಉಳಿಸಿಕೊಳ್ಳಲು ಹಾಗೂ ಅವುಗಳಿಗಾಗಿ ಅರಣ್ಯದ ಸಂರಕ್ಷಣೆಗೆ ಸರ್ಕಾರವೇ ಮುಂದಾಗಿದೆ. ಸರ್ಕಾರವೇ ಖುದ್ದು ಆಸಕ್ತಿವಹಿಸಿ ಪ್ರತಿವರ್ಷ ಗೊರಿಲ್ಲಾಗಳ ನಾಮಕರಣದ ಸಮಾರಂಭ ಏರ್ಪಡಿಸುತ್ತದೆ. ಹೀಗೆ ಸರ್ಕಾರವೇ ಪಾಲ್ಗೊಳ್ಳುವುದರ ಮೂಲಕ ಸಾರ್ವಜನಿಕರಲ್ಲಿ ಪ್ರಾಣಿಸಂಕುಲ ಮತ್ತು ಪರಿಸರದ ಕುರಿತಾದ ಅರಿವು ಮೂಡಿಸುತ್ತಿದೆ. ಆದರೆ ಇಲ್ಲಿ ಯಾವುದೇ ಸರ್ಕಾರದಿಂದ ಅಂಥದ್ದೊಂದು ಪ್ರಯತ್ನ ಇದುವರೆಗೆ ಕಂಡುಬಂದಿಲ್ಲ. ಸುಂದರಲಾಲ ಬಹುಗುಣ, ಅಣ್ಣಾ ಹಜಾರೆ, ಮೇಧಾ ಪಾಟ್ಕರ್, ಪಾಳೇಕರ್ ಅವರು ಮಾಡಿದ ಮತ್ತು ಮಾಡುತ್ತಿರುವ ಪರಿಸರ ಸಂರಕ್ಷಣೆ ಕುರಿತಾದ ಪ್ರಯತ್ನಗಳು ವೈಯಕ್ತಿಕ ಮಟ್ಟದಲ್ಲಾದವೇ  ವಿನ: ಈ ವಿಷಯವಾಗಿ ಸರ್ಕಾರದ ಪ್ರಯತ್ನ ಹೇಳಿಕೊಳ್ಳುವಂಥದ್ದೆನಿಲ್ಲ.

                ಕರ್ನಾಟಕದ ಅರ್ಧದಷ್ಟೂ ಇರದ ಪುಟ್ಟ ದೇಶವೊಂದು ಪರಿಸರ ಸಂರಕ್ಷಣೆಗೆ ಮುಂದಾಗುವುದರ ಮೂಲಕ ಅದನ್ನೇ ರಾಷ್ಟ್ರದ ಬಂಡವಾಳವಾಗಿಸಿಕೊಂಡು ಅಧಿಕ ಕಂದಾಯವನ್ನು ಸಂಗ್ರಹಿಸುತ್ತಿರುವಾಗ ಜಗತ್ತಿನ ಎರಡನೇ ಅತಿ ದೊಡ್ಡ ದೇಶವೆನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಅರಣ್ಯ ನಾಶವಾಗುತ್ತಿರುವ ಜೊತೆಗೆ ಪ್ರಾಣಿಗಳ ಸಂತತಿಯೂ ನಶಿಸುತ್ತಿದೆ. ದೇಶವೊಂದು ಸುಭಿಕ್ಷವಾಗಿರಬೇಕೆಂದರೆ ಅದು ಕೇವಲ ಕೈಗಾರೀಕರಣ ಮತ್ತು ಜಾಗತೀಕರಣದಿಂದ ಸಾಧ್ಯವಿಲ್ಲ. ರಾಷ್ಟ್ರದ ಪ್ರಗತಿಯಲ್ಲಿ ಪರಿಸರ ಸಹ ಅತ್ಯುತ್ತಮ ಪಾತ್ರವನ್ನು ನಿರ್ವಹಿಸುತ್ತದೆ. ಭೂಮಿ ಅಗೆಯುವ, ಅರಣ್ಯ ಸಂಪತ್ತು ಕೊಳ್ಳೆ ಹೊಡೆಯುವ ಪ್ರಕರಣಗಳಿಗೆ ಸರ್ಕಾರ ಕಡಿವಾಣ ಹಾಕುವ ಪ್ರಯತ್ನಕ್ಕೆ ಮುಂದಾಗಬೇಕು. ಇದು ಯಾರೋ ವೈಯಕ್ತಿಕವಾಗಿ ಮಾಡುವಂಥ ಕೆಲಸವಲ್ಲ. ಸರ್ಕಾರ ಮನಸ್ಸು ಮಾಡಬೇಕು.

ಸಾರ್ವಜನಿಕರ ಪಾತ್ರ 


        ನಾವುಗಳ ನಮ್ಮ ಇತಿಮಿತಿಯೊಳಗೆ ಪರಿಸರವನ್ನು ಸಂರಕ್ಷಿಸುವ ಕೆಲಸಕ್ಕೆ ಮುಂದಾಗಬೇಕು. ಈ ಸಂದರ್ಭ ನಾವು ಮಾಡಬೇಕಾಗಿರುವುದೆನೆಂದರೆ,

೧. ವಾಹನಗಳ ಉಪಯೋಗ ಕಡಿಮೆ ಮಾಡುವುದು ನಾವು ಪರಿಸರಕ್ಕೆ ನೀಡುವ ಬಹುಮೂಲ್ಯ ಕೊಡುಗೆಯಾಗಿದೆ. ವಾಹನಗಳ ಕಡಿಮೆ ಉಪಯೋಗದಿಂದ ಆರ್ಥಿಕವಾಗಿ ನಮಗೆ ಉಳಿತಾಯವಾಗುವುದಲ್ಲದೆ ಪರಿಸರಕ್ಕೆ ಸೇರಿ ಮಲಿನಗೊಳಿಸುವ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು ನಾವು ಕಡಿಮೆಮಾಡಿದಂತಾಗುತ್ತದೆ.

೨. ಬಿಸಿ ನೀರಿನ ಉಪಯೋಗ ಕಡಿಮೆ ಮಾಡುವುದರಿಂದ ನಾವು ಕಾರ್ಬನ್ ಡೈ  ಆಕ್ಸೈಡ್ ನ ವಿಸರ್ಜನೆಯ ಪ್ರಮಾಣವನ್ನು ತಗ್ಗಿಸಬಹುದು.

೩. ಗೃಹ ಬಳಕೆಯ ವಿದ್ಯುತ್ ನ್ನು ಮಿತವಾಗಿ ಬಳಸುವುದು ಸಹ ನಾವು ಪರಿಸರಕ್ಕೆ ನೀಡುವ ಬಹುದೊಡ್ಡ ಕೊಡುಗೆಯಾಗಿದೆ. ಮನೆಯ ಎಲ್ಲ ಕೋಣೆಗಳಲ್ಲಿ ಅನಾವಶ್ಯಕವಾಗಿ ದೀಪಗಳನ್ನು ಉರಿಸದೆ ಅಗತ್ಯದ ಸಂದರ್ಭಗಳಲ್ಲಿ ಮಾತ್ರ ವಿದ್ಯುತ್ ದೀಪವನ್ನು ಉಪಯೋಗಿಸಬೇಕು. ಟಿ.ವಿ ಮತ್ತು ಕಂಪ್ಯೂಟರ್ ಗಳನ್ನು ಅಗತ್ಯವಿದ್ದಾಗ ಮಾತ್ರ ಉಪಯೋಗಿಸುವುದು ಉತ್ತಮ.

೪. ಪರಿಸರ ನೈರ್ಮಲ್ಯಕ್ಕಾಗಿ ಮರಗಳನ್ನು ಬೆಳೆಸುವುದು ಅದು ಎಲ್ಲರ ಕರ್ತವ್ಯವಾಗಬೇಕು. ಮರಗಳು ಪರಿಸರ ಸಮತೋಲನದ ಕಾಪಾಡುವಿಕೆಗಾಗಿ ಭೂಮಿಯ ಮೇಲಿರುವ ನೈಸರ್ಗಿಕ ರಕ್ಷಣಾ ವ್ಯವಸ್ಥೆಯ ಅತಿ ಮುಖ್ಯ ಭಾಗಗಳಾಗಿವೆ. ಆದ್ದರಿಂದ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸುವುದರ ಮೂಲಕ ತಾಪಮಾನದ ಏರಿಕೆಯನ್ನು ತಡೆಗಟ್ಟಬಹುದು.

೫. ರೈತರು ತಮ್ಮ ಬೇಸಾಯ ಪದ್ಧತಿಯಲ್ಲಿ ಯಂತ್ರೋಪಕರಣಗಳ  ಬದಲಾಗಿ ಪ್ರಾಣಿಗಳನ್ನು ಬಳಸುವ ಪದ್ಧತಿಯನ್ನೇ ಹೆಚ್ಚು ಹೆಚ್ಚು ಅನುಸರಿಸಬೇಕು. ಜೊತೆಗೆ ಆಧುನಿಕ ರಸಗೊಬ್ಬರಗಳ ಉಪಯೋಗ ಕಡಿಮೆಮಾಡಿ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು.

೬. ಜನಸಂಖ್ಯಾ ಸ್ಫೋಟ ಕೇವಲ ನಿರುದ್ಯೋಗ ಸಮಸ್ಯೆಯನ್ನು ಮಾತ್ರ ತಂದೊಡ್ಡುವುದಿಲ್ಲ. ಅದು ಪರಿಸರಕ್ಕೂ ಮಾರಕವಾಗಿ ಪರಿಣಮಿಸುತ್ತದೆ. ಜನರ ಸಂಖ್ಯೆ ಹೆಚ್ಚಿದಂತೆಲ್ಲ ವಾಹನಗಳ ಉಪಯೋಗ ಅಧಿಕವಾಗುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು ಕಾರ್ಖಾನೆಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಈ ವಾಹನಗಳ ಮತ್ತು ಕಾರ್ಖಾನೆಗಳ ಹೊಗೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ಪರಿಸರದ ಸಮತೋಲನಕ್ಕಾಗಿ ಜನಸಂಖ್ಯಾ ನಿಯಂತ್ರಣ ಕಡ್ಡಾಯವಾಗಬೇಕು.

ಕೊನೆಯ ಮಾತು 


            ನಿಸರ್ಗದ ಮೇಲೆ ಮಾನವನ ದಾಳಿ ಇದು ಇಂದು ನಿನ್ನೆಯದಲ್ಲ. ಅನಾದಿ ಕಾಲದಿಂದಲೂ ಮನುಷ್ಯ ನಿಸರ್ಗದೊಂದಿಗೆ ಆಟವಾಡುತ್ತಲೇ ಬಂದಿರುವನು. ಪ್ರತಿಯೊಂದು ಆರಂಭಕ್ಕೆ ಅಂತ್ಯವಿರುವಂತೆ ಮನುಷ್ಯನ ಈ ಆಟಕ್ಕೆ ಕೊನೆ ಎನ್ನುವುದಿದೆ. ತನ್ನ ಮಿತಿಯನ್ನು ಅರ್ಥ ಮಾಡಿಕೊಳ್ಳದೆ ಮಾನವನ ಈ ದುಷ್ಕೃತ್ಯಗಳು ಹೀಗೆ ಮುಂದುವರೆದಲ್ಲಿ ಇಡೀ ಮನುಕುಲವೇ ನಾಶ ಹೊಂದಬಹುದು. ಈಗಾಗಲೇ ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಗಳು ನಾಗರಿಕ ಸಮಾಜವನ್ನು ಕಂಗೆಡಿಸಿವೆ. ಜಾಗತಿಕ ತಾಪಮಾನ ಮನುಕುಲಕ್ಕೆ ತನ್ನ ಬಿಸಿ ಮುಟ್ಟಿಸಿದೆ. ಇನ್ನಾದರೂ ಮನುಷ್ಯ ಎಚ್ಚೆತ್ತುಕೊಳ್ಳುವುದೊಳಿತು.

-ರಾಜಕುಮಾರ.ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ