Tuesday, December 29, 2015

ಅನ್ವೇಷಣೆ: ಪುಸ್ತಕ ಬಿಡುಗಡೆ


  




ದಿನಾಂಕ ೨೭. ೧೨. ೨೦೧೫ ರಂದು ನನ್ನ ಆರನೇ ಕೃತಿ 'ಅನ್ವೇಷಣೆ' ಬಿಡುಗಡೆಯಾಯಿತು. ಕಲಬುರಗಿಯ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆ ಪ್ರಕಟಿಸುತ್ತಿರುವ ನನ್ನ ನಾಲ್ಕನೇ ಕೃತಿಯಿದು. ಇನ್ನುಳಿದ ಎರಡು ಪುಸ್ತಕಗಳು ಬಾಗಲಕೋಟೆಯಲ್ಲಿ ಪ್ರಕಟವಾಗಿವೆ. ಇನ್ನು ಅನ್ವೇಷಣೆ ಕೃತಿಯ ಕುರಿತು ಹೇಳುವುದಾದರೆ ಇಲ್ಲಿನ ಎಲ್ಲ ಲೇಖನಗಳು ನಾನು ನನ್ನ ಬ್ಲಾಗಿಗೆ ಬರೆದವುಗಳು. ಈ ಬ್ಲಾಗಿಗೆ ಬರೆಯುವಾಗಲೆಲ್ಲ ನಾನು ಪತ್ರಿಕೆಯೊಂದಕ್ಕೆ ಬರೆಯುವ ಬದ್ಧತೆಯಿಂದಲೇ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಬ್ಲಾಗ್ ಬರವಣಿಗೆಯನ್ನು ಸಮಾಜಕ್ಕೆ ಮುಖಾಮುಖಿಯಾಗಿ ನಿಲ್ಲಿಸುವ ಕಾಳಜಿ ನನ್ನದು. 

ಇನ್ನು ನನ್ನ ಪುಸ್ತಕಗಳ ಪ್ರಕಟಣೆಯ ವಿಷಯವಾಗಿ ನಾನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳಬೇಕಾದ ವ್ಯಕ್ತಿತ್ವ ಶ್ರೀ ಬಸವರಾಜ ಕೊನೇಕ ಅವರದು. ಕಲಬುರಗಿಯಲ್ಲಿ ಪ್ರಕಾಶನ ಸಂಸ್ಥೆ ಮತ್ತು ಬೃಹತ್ ಪುಸ್ತಕ ಮಳಿಗೆಯನ್ನು ಸ್ಥಾಪಿಸಿ ಅವರು ಮಾಡುತ್ತಿರುವ ಕನ್ನಡದ ಈ ಕೆಲಸ ನಿಜಕ್ಕೂ ಅಭಿನಂದನಾರ್ಹ. ಅವರ ಈ ಕನ್ನಡದ ಸೇವಾ ಕೈಂಕರ್ಯ ನಿರಂತರವಾಗಿ ಮುಂದುವರೆಯಲಿ. 

ನನ್ನ ಬರವಣಿಗೆಯ ಬದುಕಿನಲ್ಲಿ ನನ್ನ ಜೊತೆಗೆ ನಿಂತು ಸಹಕರಿಸುತ್ತಿರುವವರಿಗೆಲ್ಲ ನಾನು ಈ ಸಂದರ್ಭ ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ. 








-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Sunday, November 1, 2015

ಕನ್ನಡ ಭಾಷೆಯ ಆತಂಕಗಳು



        ಕನ್ನಡ ಭಾಷೆ ತುಂಬ ಆತಂಕದಲ್ಲಿರುವ ದಿನಗಳಿವು. ಸಾವಿರಾರು ವರ್ಷಗಳ ಇತಿಹಾಸವಿರುವ ಮತ್ತು ಬಹುದೊಡ್ಡ ರಾಜ್ಯದ ನಾಡ ಭಾಷೆಯಾಗಿರುವ ಕನ್ನಡ ಭಾಷೆ ಈಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಭಾಷೆಯ ಮಟ್ಟಿಗೆ ಬೆಳವಣಿಗೆ ಎನ್ನುವುದು ಅದು ನಿರಂತರವಾಗಿ ಪ್ರವಹಿಸುತ್ತಿರಬೇಕು. ಏಕೆಂದರೆ ಭಾಷೆ ಕೇವಲ ಸಂವಹನದ ಮಾಧ್ಯಮ ಮಾತ್ರವಲ್ಲ. ಅದು ಒಂದು ನೆಲದ ಹಾಗೂ ಅನೇಕ ತಲೆಮಾರುಗಳ ಸಂಸ್ಕೃತಿಯನ್ನು ಅತ್ಯಂತ ಜತನದಿಂದ ಕಾಪಿಟ್ಟುಕೊಂಡು ಬಂದ ಮಾಧ್ಯಮ. ಆದ್ದರಿಂದ ಭಾಷೆಗೂ ಮತ್ತು ನೆಲದ ಸಂಸ್ಕೃತಿಗೂ ನಿಕಟವಾದ ಸಂಬಂಧವಿದೆ. ಇಂಥದ್ದೊಂದು ಸಂಬಂಧವಿಲ್ಲದೆ ಹೋದಲ್ಲಿ ಭಾಷೆ ಕೇವಲ ಮಾತನಾಡುವ ಸಂಕೇತ ಮಾತ್ರವಾಗಿ ಉಳಿದು ಜನಮಾನಸದಿಂದ ಬಹುಬೇಗ ಮರೆಯಾಗಿ ಹೋಗುತ್ತದೆ. ಇದಕ್ಕೆ ಉದಾಹರಣೆಯಾಗಿ ಲಿಪಿಯಿಲ್ಲದ ಭಾಷೆಗಳಾದ ಲಂಬಾಣಿ, ತುಳು, ಕೊಡವ ಇತ್ಯಾದಿ ಭಾಷೆಗಳನ್ನು ಉದಾಹರಣೆಯಾಗಿ ಹೇಳಬಹುದು. ಭಾಷೆಯೊಂದು ಗಟ್ಟಿಯಾಗಿ ತಳವೂರಿ ಬೆಳೆಯಲು ಆ ಭಾಷೆಯನ್ನು ಎಷ್ಟು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ ಎನ್ನುವುದು ಮುಖ್ಯವಾಗುತ್ತದೆ. ಈ ದೃಷ್ಟಿಯಿಂದ ಕನ್ನಡ ಭಾಷೆಯನ್ನು ಈ ನಾಡಿನಲ್ಲಿ ಸಮರ್ಥವಾಗಿ ಬಳಸಿಕೊಳ್ಳಲಾಗಿದೆ. ಅದಕ್ಕೆಂದೇ ಕನ್ನಡ ಭಾಷೆಯಲ್ಲಿ ಸಾಹಿತ್ಯ ಮತ್ತಿತರ ಸೃಜನಶೀಲತೆಯ ಫಸಲು ಸಮೃದ್ಧವಾಗಿ ಬೆಳೆಯಲು ಸಾಧ್ಯವಾಯಿತು. ಅಮೋಘವರ್ಷ ನೃಪತುಂಗನ ಕಾಲದಿಂದ ಕುವೆಂಪು, ಕಾರಂತ, ಬೇಂದ್ರೆ ಮತ್ತು ನವೋದಯದ ಅಡಿಗರು, ಅನಂತಮೂರ್ತಿ, ಲಂಕೇಶ್, ಭೈರಪ್ಪನವರವರೆಗೆ ಕನ್ನಡ ಭಾಷೆಯಲ್ಲಿ ಉತ್ಕೃಷ್ಟ ಕೃತಿಗಳು ರಚನೆಯಾದವು. ಹಳೆಗನ್ನಡ, ಹೊಸಗನ್ನಡ, ನವ್ಯ, ನವೋದಯ, ಬಂಡಾಯ ಹೀಗೆ ವಿವಿಧ ಕಾಲಘಟ್ಟದಲ್ಲಿ ಕನ್ನಡ ಭಾಷೆ ಅನೇಕ ಅಗ್ನಿದಿವ್ಯಗಳನ್ನು ಹಾದು ತನ್ನತನ ಮತ್ತು ಸಮೃದ್ಧತೆಯನ್ನು ಉಳಿಸಿಕೊಂಡು ಬಂದಿದೆ. ಆದರೆ ಕಳೆದ ಮೂರು ದಶಕಗಳಿಂದ  ಕನ್ನಡ ಭಾಷೆಗೆ ಎದುರಾದ ಸಮಸ್ಯೆಗಳು ಮಾತ್ರ ಈ ನೆಲದ ಭಾಷೆಯನ್ನು ಜರ್ಜರಿತಗೊಳಿಸಿವೆ. ಪರಭಾಷೆಗಳ ಪೈಪೋಟಿ, ಶಿಕ್ಷಣದ ಮಾಧ್ಯಮವಾಗಿ ಬೇರೂರಿರುವ ಇಂಗ್ಲಿಷ್ ಭಾಷೆ, ಕನ್ನಡ ಪುಸ್ತಕಗಳನ್ನು ಖರೀದಿಸಿ ಓದುವ ಓದುಗರ ಕೊರತೆ, ರಾಜಕಾರಣಿಗಳ ಸ್ವಹಿತಾಸಕ್ತಿ ಈ ಎಲ್ಲ ಸಮಸ್ಯೆಗಳ ನಡುವೆ ಕನ್ನಡ ಭಾಷೆ ತನ್ನ ನೆಲದಲ್ಲೇ ಅಪರಿಚಿತವಾಗುತ್ತಿದೆ.

ಕನ್ನಡ ಮಾಧ್ಯಮದ ಅವನತಿ 


          ಇವತ್ತು ರಾಜ್ಯದಲ್ಲಿ ಕನ್ನಡ ಶಾಲೆಗಳು ವಿದ್ಯಾರ್ಥಿಗಳ ಕೊರತೆಯನ್ನು ಎದುರಿಸುತ್ತಿವೆ. ಜಾಗತೀಕರಣದ ಪರಿಣಾಮ ಇಂಗ್ಲಿಷ್ ಭಾಷೆ ಮಹತ್ವ ಪಡೆದಿರುವುದರಿಂದ ಅದನ್ನು ಭಾಷೆ ಮಾತ್ರವಾಗಿ ಕಲಿಯದೆ ಅದನ್ನೇ ಶಿಕ್ಷಣದ ಮಾಧ್ಯಮವಾಗಿ ಮಾಡಿಕೊಳ್ಳಲಾಗಿದೆ. ಹೀಗೆ ಇಂಗ್ಲಿಷ್ ಭಾಷೆ ಶಿಕ್ಷಣದ ಮಾಧ್ಯಮವಾಗಿ ಬಳಕೆಯಾಗುತ್ತಿರುವ ಈ ದಿನಗಳಲ್ಲಿ ಈ ನೆಲದ ಭಾಷೆ ಕನ್ನಡವನ್ನು ಶಾಲೆಗಳಲ್ಲಿ ಭಾಷೆಯಾಗಿ ಕಲಿಸುವ ದುರಂತ ಎದುರಾಗಿದೆ. ವಿಪರ್ಯಾಸ ನೋಡಿ ಮಾತನಾಡುವ ಭಾಷೆಯಾಗಿ ಕನ್ನಡ ನಮಗೆಲ್ಲ ಚಿರಪರಿಚಿತ ಹೀಗಿದ್ದೂ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಯುವ ದಿನಗಳು ಬಂದಿವೆ. ಯಾವ ಭಾಷೆಯನ್ನು ಶಿಕ್ಷಣದ ಮಾಧ್ಯಮವಾಗಿ ಬಳಸಿಕೊಳ್ಳಬೇಕೋ ಅದನ್ನು ಕೇವಲ ಭಾಷೆಯಾಗಿ ನಮ್ಮ ಮಕ್ಕಳು ಕಲಿಯುತ್ತಿರುವರು. ಭಾಷೆಯಾಗಿ ಕಲಿಯುವ ಅಗತ್ಯವಿರುವ ಇಂಗ್ಲಿಷ್ ಇಂದು ಶಿಕ್ಷಣದ ಮಾಧ್ಯಮವಾಗಿ ಬಹುಮುಖ್ಯ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಮಕ್ಕಳು ತಮ್ಮ  ಮಾತ್ರಭಾಷೆ ಮೂಲಕ ವಿವಿಧ ವಿಷಯಗಳನ್ನು ಸುಲಭವಾಗಿ ಕಲಿಯಬಲ್ಲರು ಎನ್ನುವ ವೈಜ್ಞಾನಿಕ ಸತ್ಯವನ್ನು ಕಡೆಗಣಿಸಿ ರಾಜ್ಯದಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣಕ್ಕೆ ಮಣೆ ಹಾಕಲಾಗುತ್ತಿದೆ. ಪರಿಣಾಮವಾಗಿ ರಾಜ್ಯದಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಉದ್ಯಮದ ರೂಪ ಪಡೆದು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಿಗೂ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿದೆ. ತಮ್ಮ ಮಕ್ಕಳನ್ನು ಜಾಗತೀಕರಣಕ್ಕೆ ಮುಖಾಮುಖಿಯಾಗಿಸುವ ಧಾವಂತದಲ್ಲಿ ಉಳ್ಳವರು ಮತ್ತು ಉಳ್ಳದವರು ಎಲ್ಲರೂ ಕೂಡಿಯೇ ಇಂಗ್ಲಿಷ್ ಶಾಲೆಗಳ ಪ್ರವೇಶಕ್ಕೆ ಮುಗಿಬಿಳುತ್ತಿರುವರು. ಪಾಲಕರ ಇಂಗಿತವನ್ನು ತಮ್ಮ ಸ್ವಾರ್ಥ ಮತ್ತು ಧನದಾಹಕ್ಕೆ ಬಳಸಿಕೊಳ್ಳುತ್ತಿರುವ ಖಾಸಗಿ ಇಂಗ್ಲಿಷ್ ಶಾಲೆಗಳ ಆಡಳಿತ ಮಂಡಳಿಗಳು ಲಕ್ಷಾಂತರ ರೂಪಾಯಿಗಳ ಶುಲ್ಕವನ್ನು ವಸೂಲಿ ಮಾಡುತ್ತಿವೆ. ಇನ್ನೊಂದೆಡೆ ಕನ್ನಡ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿ ಹೋಗುವ ದುಸ್ಥಿತಿಗೆ ಬಂದು ನಿಂತಿವೆ. ಯಾವಾಗ ಇಂಗ್ಲಿಷ್ ಭಾಷೆ ಶಿಕ್ಷಣದ ಮಾಧ್ಯಮವಾಗಿ ತನ್ನ ಪಾರುಪತ್ಯವನ್ನು ಮೆರೆಯತೊಡಗಿತೋ ಆಗ ನಿಜವಾಗಿ ಸಂಕಷ್ಟದಲ್ಲಿ ಸಿಲುಕಿದ್ದು ಕನ್ನಡ ಭಾಷೆ.

ಸಾಹಿತ್ಯ ವಲಯದ ಗುಂಪುಗಾರಿಕೆ 


         ಕನ್ನಡದ ವೈಚಾರಿಕ ವಲಯ ವಿಶೇಷವಾಗಿ ಸಾಹಿತ್ಯ ವಲಯ ಇಂದು ವಿವಿಧ ಗುಂಪುಗಳಾಗಿ ಒಡೆದು ಹೋಳಾಗಿದೆ. ಭಿನ್ನಾಭಿಪ್ರಾಯ ಅದು ಪ್ರಜಾಪ್ರಭುತ್ವದ ಜೀವಂತ ಲಕ್ಷಣ ನಿಜ ಆದರೆ ನಾವು ತಿಳಿದುಕೊಂಡಂತೆ ಡೆಮಾಕ್ರೆಟಿಕ್ ವಾತಾವರಣ ಇವತ್ತಿನ ಕನ್ನಡ ಸಾಹಿತ್ಯ ವಲಯದಲ್ಲಿಲ್ಲ. ಅಸಹನೆ, ವರ್ಗತಾರತಮ್ಯ, ಅಸೂಯೆ, ಗುಂಪುಗಾರಿಕೆ, ರಾಜಕಾರಣ, ಅಧಿಕಾರದ ಲಾಲಸೆ, ಪ್ರಶಸ್ತಿ ಪುರಸ್ಕಾರಗಳ ವಾಂಛೆ ಇವತ್ತಿನ ಸಾಹಿತ್ಯವಲಯದ ವಾತಾವರಣವನ್ನು ಅಸಹನೀಯಗೊಳಿಸಿವೆ. ಸಾಹಿತ್ಯ ವಲಯ ಎಡಪಂಥಿಯ ಮತ್ತು ಬಲಪಂಥಿಯ ಎಂದು ಎರಡು ವಿಭಿನ್ನ ವರ್ಗಗಳಲ್ಲಿ ಗುರುತಿಸಿಕೊಂಡಿದೆ. ಒಬ್ಬ ಬರಹಗಾರ ಈ ಯಾವುದಾದರು ಒಂದು ಗುಂಪಿನೊಂದಿಗೆ ಗುರುತಿಸಿಕೊಂಡಲ್ಲಿ ಮಾತ್ರ ಆತ ತನ್ನದೇ ಆದ ಐಡೆಂಟಿಟಿ ಹೊಂದಲು ಸಾಧ್ಯ ಎನ್ನುವಂಥ ವಾತಾವರಣ ಸಾಹಿತ್ಯ ಕ್ಷೇತ್ರದಲ್ಲಿ ನಿರ್ಮಾಣವಾಗಿದೆ. ಪ್ರತಿ ಗುಂಪಿಗೂ ಬರೆಯಲು ಅವರದೇ ಆದ ಅಜೆಂಡಾಗಳಿವೆ. ಅಂಥದ್ದೊಂದು ಸ್ಥಾಪಿತ ಅಜೆಂಡಾದ ಚೌಕಟ್ಟಿನಲ್ಲೇ ಬರೆಯಬೇಕಾದ ಅನಿವಾರ್ಯತೆ ಲೇಖಕನದು. ಒಂದು ಗುಂಪಿನ ಬರಹಗಾರರ ವಿರುದ್ಧ ಇನ್ನೊಂದು ಗುಂಪಿನವರು ಇಲ್ಲಿ ಕತ್ತಿ ಮಸೆಯುತ್ತಾರೆ. ಅದಕ್ಕೆಂದೇ ಭೈರಪ್ಪನವರ ಆವರಣದ ವಿರುದ್ಧ ಇಲ್ಲಿ ಅನಾವರಣ  ಕೃತಿ ಪ್ರಕಟವಾಗುತ್ತದೆ. ಸಂಸ್ಕಾರದ ಎದುರು ವಂಶವೃಕ್ಷವನ್ನು ಹತಾರವಾಗಿಸುತ್ತಾರೆ. ಅಕಾಡೆಮಿಗಳ ಅಧ್ಯಕ್ಷರಾಗುವ ಸೃಜನಶೀಲರು ಪ್ರಶಸ್ತಿ ಪುರಸ್ಕಾರಗಳಿಗಾಗಿ ತಮ್ಮದೇ ಗುಂಪಿನ ಲೇಖಕರಿಗೆ ಮಣೆಹಾಕುತ್ತಾರೆ. ಗುಂಪುಗಾರಿಕೆ, ದ್ವೇಷಾಸೂಯೆಗಳ ಪರಿಣಾಮ ಇಲ್ಲಿ ಭಾಷೆಯ ಕುರಿತಾದ ಕಾಳಜಿ ಮೂಲೆಗುಂಪಾಗುತ್ತದೆ.

ಭಾಷಾ ಚಳವಳಿ 


           ಕನ್ನಡ ಭಾಷೆಯ ಉಳಿವಿಗಾಗಿ  ಗೋಕಾಕ ಚಳವಳಿಯ ನಂತರ ಮತ್ತೊಂದು ಅಂಥ ಮಹತ್ವದ ಚಳವಳಿ ಕನ್ನಡದ ನೆಲದಲ್ಲಿ ಕಾಣಿಸಿಕೊಂಡಿಲ್ಲ. ಗೋಕಾಕ ಚಳವಳಿ ಕಾಣಿಸಿಕೊಂಡ ೧೯೮೦ ರ ದಶಕದ ಅಂದಿನ ಕನ್ನಡ ಭಾಷೆಯ ಸ್ಥಿತಿಗೂ ಮತ್ತು ಇವತ್ತು ಭಾಷೆ ಎದುರಿಸುತ್ತಿರುವ ಸಮಸ್ಯೆಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ೧೯೮೦ ರ ದಶಕದಲ್ಲಿ ಆಗಿನ್ನೂ ಜಾಗತೀಕರಣ ಈಗಿನಷ್ಟು ತನ್ನ ಪ್ರಾಬಲ್ಯವನ್ನು ಮೆರೆದಿರಲಿಲ್ಲ ಮತ್ತು ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಅದೇ ಆಗ ನೆಲೆಯೂರಲು ಪ್ರಯತ್ನಿಸುತ್ತಿತ್ತು. ಅಂಥ ದಿನಗಳಲ್ಲಿ ಕನ್ನಡದ ಸಾಹಿತ್ಯಿಕ ವಲಯ ಹಾಗೂ ಸಿನಿಮಾ ಕಲಾವಿದರು ಒಟ್ಟಾಗಿ ಪ್ರತಿಭಟನೆಗಿಳಿದು ಬಹುದೊಡ್ಡ ಚಳವಳಿಗೆ ಕಾರಣರಾದರು. ಅಂದಿನ ಸರ್ಕಾರ ಸಹ ಹೋರಾಟಗಾರರ ಪ್ರತಿಭಟನೆಗೆ ಸ್ಪಂದಿಸಿ ಅನೇಕ ಭರವಸೆಗಳನ್ನು ನೀಡಿತು. ಗೋಕಾಕ ಚಳವಳಿಯ ನಂತರದ ಈ ಮೂರು ದಶಕಗಳಲ್ಲಿ ಕನ್ನಡ ಭಾಷೆ ಬಲಾಢ್ಯವಾಗಿ ಬೆಳೆಯುವ ಯಾವ ಅವಕಾಶಗಳಿಲ್ಲದೆ ನಿರ್ಲಕ್ಷಕ್ಕೆ ಒಳಗಾಗಿದೆ. ಇಂಗ್ಲಿಷ್ ಮಾಧ್ಯಮದ ಶಾಲೆಗಳ ಸಂಖ್ಯೆ ಹೆಚ್ಚುತ್ತಿರುವ ಈ ಘಳಿಗೆ ಕನ್ನಡ ಶಾಲೆಗಳ ಸಂಖ್ಯೆ ಕ್ಷಿಣಿಸುತ್ತಿದೆ. ಗಡಿ ಪ್ರದೇಶಗಳಲ್ಲಿ ಪರಭಾಷೆಗಳ ಪ್ರಾಬಲ್ಯದೆದುರು ಗಡಿನಾಡ ಕನ್ನಡಿಗರು ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವುದೇ ಬಹುದೊಡ್ಡ ಸಾಹಸವಾಗಿದೆ. ಗೋವಾ ರಾಜ್ಯದಲ್ಲಿರುವ ಅನಿವಾಸಿ ಕನ್ನಡಿಗರ ಬದುಕು ತನ್ನ ನೆಲೆಯನ್ನು ಕಳೆದುಕೊಂಡಿದೆ. ಸೃಜನಶೀಲ ಮಾಧ್ಯಮವಾದ ಸಿನಿಮಾ ಇಂದು ಭಾಷೆಯನ್ನು ಅತಿ ಕೆಟ್ಟದಾಗಿ ಬಳಸಿಕೊಳ್ಳುತ್ತಿದೆ. ಈ ಸಮಯದಲ್ಲಿ ಒಂದಾಗಿ ಪ್ರತಿಭಟಿಸಬೇಕಾದ ಮತ್ತು ಚಳವಳಿಯನ್ನು ರೂಪಿಸಬೇಕಾದ ನಮ್ಮ ಸಾಹಿತ್ಯವಲಯ ತನ್ನ ಗುಂಪುಗಾರಿಕೆಯಿಂದ ಚಳವಳಿಗಳಿಗೆ ವಿಮುಖವಾಗುತ್ತಿದೆ.

ಜಾತ್ರೆಯಾಗುತ್ತಿರುವ ಸಮ್ಮೇಳನಗಳು 


         ಕನ್ನಡ ಸಾಹಿತ್ಯ ಸಮ್ಮೇಳನಗಳು ಭಾಷೆಯ ಶ್ರೇಷ್ಠತೆ ಮತ್ತು ಅದು ಎದುರಿಸುತ್ತಿರುವ ಸಮಸ್ಯೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಜನರಿಗೆ ಒಯ್ದು ತಲುಪಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಸಮ್ಮೇಳನಗಳ ಮೇಲೆ ಮಹತ್ವದ ಜವಾಬ್ದಾರಿಯಿದೆ. ಕನ್ನಡ ಭಾಷೆ ಎದುರಿಸುತ್ತಿರುವ ಸವಾಲುಗಳು ಮತ್ತು ಅದಕ್ಕೆ ಎದುರಾಗಿರುವ ಆತಂಕದ ಕುರಿತು ಸಮ್ಮೇಳನದ ವೇದಿಕೆಯಲ್ಲಿ ಚರ್ಚೆಯಾಗಬೇಕು. ಕನ್ನಡವನ್ನು ಭಾಷೆಯಾಗಿ ಮತ್ತು ಶಿಕ್ಷಣದ ಮಾಧ್ಯಮವಾಗಿ ಉಳಿಸಿಕೊಳ್ಳುವ ಕುರಿತು ಅಭಿಪ್ರಾಯಗಳು ಮತ್ತು ಪರಿಹಾರಗಳು ಮೂಡಬೇಕು. ಕನ್ನಡ ಭಾಷೆಯನ್ನು ಜನ ಸಮೂಹಕ್ಕೆ ಇನ್ನಷ್ಟು ಹತ್ತಿರಗೊಳಿಸುವ ಪ್ರಯತ್ನಗಳಾಗಬೇಕು. ದುರಂತದ ಸಂಗತಿ ಎಂದರೆ ಅಧ್ಯಕ್ಷ ಸ್ಥಾನದ ಲಾಲಸೆ, ವೇದಿಕೆಯಲ್ಲಿ ಅವಕಾಶ ಪಡೆಯುವ ಹುನ್ನಾರ, ಪ್ರಶಸ್ತಿ ಪುರಸ್ಕಾರಗಳಿಗಾಗಿ ಲಾಭಿ, ಸ್ವಜಾತಿ ಸ್ವಧರ್ಮದ ಮೋಹಗಳಿಗೆ ಕಟ್ಟು ಬಿದ್ದು ನಮ್ಮ ಸಾಹಿತ್ಯ ವಲಯ ಸಮ್ಮೇಳನಗಳಿಗೆ  ಅಕ್ಷರಶ: ಜಾತ್ರೆಯ ಸ್ವರೂಪವನ್ನು ತಂದಿರುವರು. ಜೊತೆಗೆ ಸಮ್ಮೇಳನದ ವೇದಿಕೆಯನ್ನು ಸಾಹಿತಿಗಳು ರಾಜಕಾರಣಿಗಳೊಂದಿಗೆ ಹಂಚಿಕೊಳ್ಳುತ್ತಿರುವುದು ಕನ್ನಡ ಭಾಷೆಯ ದೃಷ್ಟಿಯಿಂದ ಇನ್ನೊಂದು ಆತಂಕದ ಸಂಗತಿ. ಹೀಗೆ ರಾಜಕಾರಣಿಗಳನ್ನು ಸಮ್ಮೇಳನಗಳ ವೇದಿಕೆಗೆ ಕರೆತರುತ್ತಿರುವುದರಿಂದ ಸಮ್ಮೇಳನಗಳು ರಾಜಕಾರಣಿಗಳ ಒಡ್ಡೋಲಗದಂತೆ ಭಾಸವಾಗುತ್ತಿದೆ. ಅವರವರ ವೈಯಕ್ತಿಕ ಹಿತಾಸಕ್ತಿಗಳ ನಡುವೆ ನಲುಗಿಹೋಗುತ್ತಿರುವುದು ಮಾತ್ರ ಕನ್ನಡ ಭಾಷೆ ಎನ್ನುವುದು ಅಕ್ಷರಶ: ಸತ್ಯ.

ಕನ್ನಡ ಸಾಹಿತ್ಯ ಪರಿಷತ್ತು 


          ಕನ್ನಡ ಸಾಹಿತ್ಯ ಪರಿಷತ್ತಿಗೆ ಈಗ ನೂರರ ಸಂಭ್ರಮ. ಭಾಷೆ ಮತ್ತು ನಾಡಿನ ರಕ್ಷಣೆಗಾಗಿ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಕೆಲವು ದಶಕಗಳಿಂದ ತನ್ನ ಮೂಲ ಉದ್ದೇಶದಿಂದ ಕಳಚಿಕೊಂಡು ಸ್ವಾರ್ಥಿಗಳ ಮತ್ತು ಅಧಿಕಾರ ಲಾಲಸೆಯ ಕೇಂದ್ರವಾಗಿ ರೂಪಾಂತರಗೊಂಡಿದೆ. ಈಗ ಅಲ್ಲಿಯೂ ರಾಜಕೀಯ ತಲೆ ಹಾಕಿದೆ. ಪರಿಣಾಮವಾಗಿ ಕಸಾಪದ ರಾಜ್ಯಾಧ್ಯಕ್ಷರ ಮತ್ತು ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರ ಸ್ಥಾನಗಳಿಗಾಗಿ ನಡೆಯುವ ಚುನಾವಣೆ ವಿಶೇಷ ಮಹತ್ವ ಪಡೆದುಕೊಂಡಿದೆ. ಕಸಾಪದ ಚುನಾವಣೆಯಲ್ಲಿ ರಾಜಕಾರಣಿಗಳ ಪ್ರವೇಶದಿಂದಾಗಿ ಅಲ್ಲಿ ಜಾತಿ ಮತ್ತು ಪ್ರಾದೇಶಿಕ ಗುಂಪುಗಾರಿಕೆ ಪರಿಷತ್ತಿನ ನಡೆಯನ್ನು ನಿರ್ಣಯಿಸುವ ಮಟ್ಟಕ್ಕೆ ಬೆಳೆದು ನಿಂತಿದೆ. ಪುಸ್ತಕಗಳ ಪ್ರಕಟಣೆ, ಪ್ರಶಸ್ತಿ ಪುರಸ್ಕಾರ, ಸಮ್ಮೇಳನದ ಅಧ್ಯಕ್ಷರ ಆಯ್ಕ,  ಗೋಷ್ಠಿಗಳ ಅಧ್ಯಕ್ಷತೆ, ಗೋಷ್ಠಿಗಳಲ್ಲಿ ಕವನಗಳ ವಾಚನ ಮತ್ತು ಪ್ರಬಂಧಗಳ ಮಂಡನೆ ಹೀಗೆ ಪ್ರತಿ ಹಂತದಲ್ಲೂ ಜಾತಿ ಮತ್ತು ಪ್ರಾದೇಶಿಕತೆಯ ಕೋಟಾ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಸಮ್ಮೇಳನದ ಸರ್ವಾಧ್ಯಕ್ಷರ ಮಾತುಗಳನ್ನು ವೇದಿಕೆಯಲ್ಲೇ ಮೊಟಕುಗೊಳಿಸುವಂತೆ ಒತ್ತಾಯಿಸುವಷ್ಟು ಕಸಾಪದ ಕೈಗಳು ಉದ್ದವಾಗಿವೆ. ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತು ಭಾಷೆಯ ಉಳುವಿಗಾಗಿ ಹೋರಾಟಗಳನ್ನು ಸಂಘಟಿಸುತ್ತಿಲ್ಲ ಮತ್ತು ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಭಾಷೆಯ ಅಸ್ತಿತ್ವದ ಪ್ರಶ್ನೆ ಎದುರಾದಾಗ ಹೋರಾಟ ಮತ್ತು ಚಳವಳಿಗಳನ್ನು ಸಂಘಟಿಸಬೇಕಾದ ಮಹತ್ವದ ಜವಾಬ್ದಾರಿಯಿದೆ. ಆದರೆ ಪರಿಷತ್ತು ಈ ವಿಷಯವಾಗಿ ನುಣುಚಿಕೊಂಡಿದ್ದೆ ಹೆಚ್ಚು.

ಓದುಗರ ಕೊರತೆ 


       ಕನ್ನಡ ಭಾಷೆಯಲ್ಲಿ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಟವಾಗುತ್ತಿರುವ ಈ ಹೊತ್ತು ಓದುಗರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷಿಣಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಪುಸ್ತಕಗಳನ್ನು ಅವುಗಳ ಮುಖಬೆಲೆಗೆ ಖರೀದಿಸಿ ಓದುವ ಓದುಗರ ಸಂಖ್ಯೆ ಕನ್ನಡದಲ್ಲಿ ಅಷ್ಟೇನೂ ಆಶಾದಾಯಕವಾಗಿಲ್ಲ. ಬೆರಳೆಣಿಕೆಯ ಲೇಖಕರ ಪುಸ್ತಕಗಳು ಹತ್ತಾರು ಬಾರಿ ಮುದ್ರಣಗೊಂಡು ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿರುವಾಗ  ಅದನ್ನೇ ಇಡೀ ಕನ್ನಡ ಪುಸ್ತಕೋದ್ಯಮಕ್ಕೆ ಅನ್ವಯಿಸುವುದು ತಪ್ಪು ನಡೆಯಾಗುತ್ತದೆ. ಸಾಹಿತ್ಯದಂತೆ ಓದುಗರ ವಲಯದಲ್ಲಿನ  ಗುಂಪುಗಾರಿಕೆಯ ಪರಿಣಾಮ ಪ್ರಕಟವಾದ ಪುಸ್ತಕವೊಂದು ಅದು ಹೆಚ್ಚಿನ ಸಂಖ್ಯೆಯ ಓದುಗರ ಓದಿಗೆ ದಕ್ಕುವ ಸಾಧ್ಯತೆ ತೀರ ಕಡಿಮೆ. ಅನಂತಮೂರ್ತಿ ಅವರನ್ನು ಓದುವ ಓದುಗ ಭೈರಪ್ಪನವರನ್ನು ಓದಲಾರದಂಥ ವಾತಾವರಣ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಲೆದೂರಿದೆ. ಪರಿಣಾಮವಾಗಿ ಲೇಖಕ ಒಂದು ಗುಂಪಿನೊಂದಿಗೆ ಗುರುತಿಸಿಕೊಂಡಲ್ಲಿ ಮಾತ್ರ ಅವನ ಕೃತಿಗಳ ಓದಿಗೆ ಒಂದಿಷ್ಟು ಓದುಗರು ದಕ್ಕಬಹುದು. ಪರಿಸ್ಥಿತಿ ಹೀಗಿರುವಾಗ ಯಾವ ಗುಂಪಿನೊಂದಿಗೂ ಗುರುತಿಸಿಕೊಳ್ಳದ ಲೇಖಕರ ಪುಸ್ತಕಗಳು ಸಾರ್ವಜನಿಕ ಗ್ರಂಥಾಲಯಗಳಲ್ಲಿನ ಅಲ್ಮೆರಾಗಳಿಗೆ ಅಲಂಕಾರಿಕ ವಸ್ತುಗಳಾಗಿಬಿಡಬಹುದು. ಸಾಹಿತಿ ತಿರುಮಲೇಶ್ ಅವರು ಹೇಳುವಂತೆ ಓದುಗರು ಸಾಹಿತ್ಯದ ಮುಖ್ಯವಾಹಿನಿಯಲ್ಲಿ ಗುರುತಿಸಲ್ಪಟ್ಟ ಲೇಖಕರ ಪುಸ್ತಕಗಳನ್ನು ಮಾತ್ರ ತಮ್ಮ ಓದಿಗಾಗಿ ಆಯ್ಕೆ ಮಾಡುತ್ತಿರುವರು. ಅವರೇ ಹೇಳುವಂತೆ ಇದು ನಿಜಕ್ಕೂ ಕನ್ನಡ ಸಾಹಿತ್ಯಕ್ಕೆ ತುಂಬ ಅಪಾಯಕಾರಿಯಾದ ನಡೆ. ಏಕೆಂದರೆ ಮುಖ್ಯವಾಹಿನಿ ಎನ್ನುವುದು ಎಲ್ಲರನ್ನೂ ಮತ್ತು ಎಲ್ಲರ ಕೃತಿಗಳನ್ನು ಒಳಗೊಂಡಿರುವ ಸಮಗ್ರವಾಹಿನಿಯಲ್ಲ. ಗಟ್ಟಿಯಾದ ವಿಷಯ ವಸ್ತುವನ್ನು ಒಳಗೊಂಡಿರುವ ಅನೇಕ ಪುಸ್ತಕಗಳು ಮುಖ್ಯವಾಹಿನಿಯಲ್ಲೇ ಕಾಣಿಸಿಕೊಳ್ಳದೆ ಹೋಗಬಹುದು. ಆಗೆಲ್ಲ ಅಂಥ ಪುಸ್ತಕಗಳು ಓದುಗರ ಓದಿನ ವ್ಯಾಪ್ತಿಯಿಂದ ದೂರವೇ ಉಳಿಯುತ್ತವೆ.

ಕನ್ನಡ ಸಿನಿಮಾಗಳು 


        ಸೃಜನಶೀಲ ಮಾಧ್ಯಮವೆಂದೆ ಗುರುತಿಸಿಕೊಂಡಿರುವ ಕನ್ನಡ ಸಿನಿಮಾ ಮಾಧ್ಯಮ ಇವತ್ತು ಭಾಷೆಯನ್ನು ಅತ್ಯಂತ ಕೆಟ್ಟದಾಗಿ ಬಳಸಿಕೊಳ್ಳುತ್ತಿದೆ. ಒಂದು ಕಾಲದಲ್ಲಿ  ಸಿನಿಮಾವನ್ನು ಅದೊಂದು ಸೃಜನಶೀಲ ಮಾಧ್ಯಮವೆಂದು ಭಾವಿಸಿದ್ದ ಕಲಾವಿದರು ಮತ್ತು ತಂತ್ರಜ್ಞರು ಕನ್ನಡ ಸಿನಿಮಾ ಮಾಧ್ಯಮದಲ್ಲಿದ್ದರು. ಆಗ ನಿರ್ಮಾಣಗೊಳ್ಳುತ್ತಿದ್ದ ಸಿನಿಮಾಗಳು ನಾಡು ನುಡಿಯ ಆಶಯಕ್ಕೆ ಪೂರಕವಾಗಿರುತ್ತಿದ್ದವು. ಸಿನಿಮಾವನ್ನು ಸೃಜನಶೀಲ ಮಾಧ್ಯಮವೆಂದು ಭಾವಿಸಿ ಅನೇಕ ಬರಹಗಾರರು ಸಿನಿಮಾಗಳಿಗೆ ಸಂಭಾಷಣೆ ಬರೆದ ಮತ್ತು ಹಾಡುಗಳನ್ನು ರಚಿಸಿದ ಅನೇಕ ಉದಾಹರಣೆಗಳಿವೆ.  ಕಾಲಾನಂತರದಲ್ಲಿ ಸಿನಿಮಾ ಅದೊಂದು ಹಣ ಮಾಡುವ ಉದ್ಯಮ ಎನ್ನುವ ಭಾವನೆ ಬಲವಾದಂತೆ ಸಿನಿಮಾದ ಕಥೆ ಹೆಣೆಯುವ ಮತ್ತು ಸಂಭಾಷಣೆಗಳನ್ನು ಹೇಳಿಸುವ ರೀತಿನೀತಿಗಳು ಬದಲಾದವು. ಸಿನಿಮಾ ಮಾಧ್ಯಮ ತನ್ನದೇ ಭಾಷೆಯನ್ನು ರೂಪಿಸಿಕೊಂಡು ಮನರಂಜನೆಯನ್ನೇ ತನ್ನ ಮೂಲ ಉದ್ದೇಶವಾಗಿಸಿಕೊಂಡಾಗ ಅಲ್ಲಿ ನಿಜವಾಗಿಯೂ ಸಂಕಷ್ಟಕ್ಕೆ ಒಳಗಾಗಿದ್ದು ಈ ನೆಲದ ಭಾಷೆ. ಜೊತೆಗೆ ಕನ್ನಡ ಸಿನಿಮಾದ ಮಾರುಕಟ್ಟೆ ವಿಸ್ತರಿಸಿದಂತೆಲ್ಲ ಕನ್ನಡೇತರ  ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಅನ್ಯಭಾಷೆಯ ಪದಗಳಿಗೆ ಸಿನಿಮಾಗಳಲ್ಲಿ ಮುಕ್ತ ಪ್ರವೇಶ ದೊರೆಯಲಾರಂಭಿಸಿತು. ವ್ಯಾಕರಣವೇ ಇಲ್ಲದ ವಾಕ್ಯಗಳು, ಇಂಗ್ಲಿಷ್ ಮಿಶ್ರಿತ ಕನ್ನಡ, ತೆಲಗು ತಮಿಳು ಸಂಭಾಷಣೆ ಹೀಗೆ ಹೊಸ ಹೊಸ ಪ್ರಯೋಗಗಳ ಮೂಲಕ ಕನ್ನಡ ಪ್ರೇಕ್ಷಕರನ್ನು ಹಿಡಿದಿಡಲು ಮಾಡಿದ ಪ್ರಯತ್ನಗಳು ಕನ್ನಡ ಭಾಷೆಗೆ ಬಹುದೊಡ್ಡ ಆತಂಕವನ್ನು ತಂದೊಡ್ಡಿವೆ.

ಪರಭಾಷೆಗಳ ಪ್ರಾಬಲ್ಯ 


           ಇವತ್ತು ಕನ್ನಡ ಭಾಷೆ ತನ್ನದೇ ನೆಲದಲ್ಲಿ ಅನೇಕ ಭಾಷೆಗಳೊಡನೆ ಸೇಣಿಸಬೇಕಿದೆ. ರಾಜ್ಯದ ರಾಜಧಾನಿ ಅದು ಅನೇಕ ಭಾಷೆಗಳ ಮತ್ತು ಸಂಸ್ಕೃತಿಗಳ ಸಂಗಮ. ಅಲ್ಲಿ ಕನ್ನಡಕ್ಕಿಂತ ತಮಿಳು ಮತ್ತು ಮಲೆಯಾಳಂ ಭಾಷಿಕರ ಸಂಖ್ಯೆಯೇ ಹೆಚ್ಚು. ಸಾಫ್ಟ್ ವೇರ್ ಉದ್ಯಮ ಬೆಂಗಳೂರಿಗೆ ಕಾಲಿಟ್ಟು ಅದು ಸಿಲಿಕಾನ್ ವ್ಯಾಲಿ ಎನ್ನುವ ಮನ್ನಣೆಗೆ ಪಾತ್ರವಾದ ಮೇಲೆ ಇಲ್ಲಿ ಇಂಗ್ಲಿಷ್ ಸಹ ಬಹುಮುಖ್ಯ ಸಂವಹನದ ಭಾಷೆ ಎಂದು ಪರಿಗಣಿಸಲ್ಪಟ್ಟಿದೆ. ಹೀಗಾಗಿ ಬೆಂಗಳೂರಿನಲ್ಲಿ ಕನ್ನಡವನ್ನು ಬರಿಕಣ್ಣಿನಿಂದ ಹುಡುಕಿದರೆ ಅದು ನಮಗೆ ಸಿಗದು. ಇನ್ನು ಗಡಿನಾಡಿನ ಪ್ರದೇಶಗಳಲ್ಲಿ ಮಲೆಯಾಳಂ, ತೆಲುಗು  ತಮಿಳು ಮತ್ತು ಮರಾಠಿ ಭಾಷೆಗಳು ಕನ್ನಡಕ್ಕೆ ತೀವ್ರ ಪೈಪೋಟಿ ಒಡ್ಡುತ್ತಿವೆ. ಬೆಳಗಾವಿಯ ಮನೆಗಳ ಮೇಲೆ ಇವತ್ತಿಗೂ ಮರಾಠಿ ಧ್ವಜ ಹಾರಾಡುವುದನ್ನು ಕಾಣಬಹುದು. ಈ  ಜಿಲ್ಲೆಯ ಅದೆಷ್ಟೋ ಹಳ್ಳಿಗಳು ಭೌತಿಕವಾಗಿ ಕರ್ನಾಟಕದಲ್ಲಿದ್ದರೂ ಮಾನಸಿಕವಾಗಿ ಮಹಾರಾಷ್ಟ್ರದೊಂದಿಗೆ ಗುರುತಿಸಿಕೊಂಡಿವೆ. ಬಳ್ಳಾರಿ, ರಾಯಚೂರು ಮತ್ತು ಕೋಲಾರದ ಜನ ತೆಲುಗು  ಸಿನಿಮಾಗಳನ್ನು ಮುಗಿಬಿದ್ದು ನೋಡುತ್ತಾರೆ. ಹೀಗಾಗಿ ಕನ್ನಡ ಭಾಷೆ ಇವತ್ತು ತನ್ನ ಅಸ್ತಿತ್ವವನ್ನು ಹುಡುಕಿ ಅಲೆಯಬೇಕಾದ ಪ್ರಸಂಗ ಎದುರಾಗಿದೆ.

ರಾಜಕೀಯದ ಸ್ವಹಿತಾಸಕ್ತಿ 


        ಚುನಾವಣೆಯ ಸಂದರ್ಭದಲ್ಲಿ ಸ್ವಜಾತಿ, ಸ್ವಧರ್ಮ ಮತ್ತು ಪ್ರಾದೇಶಿಕತೆಯ ಹಿತಾಸಕ್ತಿಯನ್ನು ತಮ್ಮಲ್ಲಿ ಆವಾಹಿಸಿಕೊಳ್ಳುವ ನಮ್ಮ ಜನಪ್ರತಿನಿಧಿಗಳು ಭಾಷೆ ಮತ್ತು ನಾಡಿನ ವಿಷಯವಾಗಿ ಯಾವತ್ತೂ ನಿರಾಸಕ್ತರು. ಈ ವಿಷಯದಲ್ಲಿ ನಾವು ತೆಲಗು, ತಮಿಳು ಮತ್ತು ಮರಾಠಿಗರಿಗೆ ಅನುಕರಣಿಯರಾಗಿರಬೇಕು. ಎಂದಿಗೂ ಪ್ರಾದೇಶಿಕ ನೆಲೆಯಲ್ಲಿ ಚಿಂತಿಸುವ ನಮ್ಮ ನೆರೆಯ ರಾಜ್ಯಗಳ ರಾಜಕಾರಣಿಗಳು ರಾಜ್ಯದ ಹಿತಾಸಕ್ತಿಗೆ ತೊಂದರೆ ಎದುರಾದಾಗ ತಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗುತ್ತಾರೆ. ಆದರೆ ನಮ್ಮ ರಾಜಕಾರಣಿಗಳಲ್ಲಿನ ಅಂಥದ್ದೊಂದು ಮನೋಭಾವದ ಕೊರತೆಯ ಪರಿಣಾಮ ಇವತ್ತು ರಾಜ್ಯ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೆ ಹೆಚ್ಚು. ಅದು ಕಾವೇರಿ ನದಿಯ ನೀರಿನ ವಿಷಯವಾಗಿರಬಹುದು ಅಥವಾ ಮಹಾದಾಯಿ ನದಿಗೆ ಸಂಬಂಧಿಸಿದ್ದಾಗಿರಬಹುದು. ಆಲಮಟ್ಟಿ ಅಣೆಕಟ್ಟಿನ ಎತ್ತರ, ಪರಭಾಷಾ ಸಿನಿಮಾಗಳ ಬಿಡುಗಡೆಗೆ ನಿಷೇಧ, ಗಡಿನಾಡಿನಲ್ಲಿ ಕನ್ನಡ ಶಾಲೆಗಳ ಸ್ಥಾಪನೆ ಹೀಗೆ ಅನೇಕ ವಿಷಯಗಳಲ್ಲಿ ರಾಜ್ಯಕ್ಕೆ ಸೋಲಾಗಿದೆ. ಈ ಎಲ್ಲದರ  ಹಿಂದೆ ನಮ್ಮನ್ನಾಳುವ ರಾಜಕಾರಣಿಗಳ ಸ್ವಹಿತಾಸಕ್ತಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ.

ಕೊನೆಯ ಮಾತು 


       ಕನ್ನಡ ಭಾಷೆಯ ಗತವೈಭವವನ್ನು ಮತ್ತೆ ಮರಳಿ ತರುವ ಕೆಲಸ ಇವತ್ತಿನ ತುರ್ತು ಅಗತ್ಯಗಳಲ್ಲೊಂದು. ನಮ್ಮ ಪ್ರಯತ್ನಗಳು ರಾಜ್ಯೋತ್ಸವದ ಒಂದು ದಿನದ ಆಚರಣೆಗೆ ಸೀಮಿತವಾಗಬಾರದು. ಕನ್ನಡ ಪುಸ್ತಕಗಳ ಓದು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ, ಉತ್ತಮ ಸಿನಿಮಾಗಳ ನಿರ್ಮಾಣ, ಸಮ್ಮೇಳನಗಳಲ್ಲಿ ಭಾಷೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ, ಸಾಹಿತ್ಯವಲಯದ ಸಹಸ್ಪಂದನ, ಸ್ವಹಿತಾಸಕ್ತಿಯನ್ನು ಮರೆತ ರಾಜಕಾರಣ ಹೀಗೆ ಹತ್ತು ಹಲವು ಪ್ರಯತ್ನಗಳ ಮೂಲಕ ಭಾಷೆಯ ಆತಂಕವನ್ನು ದೂರಮಾಡಬೇಕಾಗಿದೆ. ನೆಲದ ಭಾಷೆಯ ಆತಂಕ ಮತ್ತು ತಲ್ಲಣಗಳು ನಮ್ಮ ವೈಯಕ್ತಿಕ ಆತಂಕಗಳಾಗಬೇಕು.  ಜೊತೆಗೆ ಪ್ರಜ್ಞಾಪೂರ್ವಕವಾಗಿ ಕನ್ನಡವನ್ನು  ಹೃದಯದ ಭಾಷೆಯಾಗಿಸಿಕೊಳ್ಳುವತ್ತ  ಹೆಜ್ಜೆಯನ್ನು ನಾವಿಡಬೇಕಿದೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 





Wednesday, October 14, 2015

ಪೂರ್ಣ ಸತ್ಯ: ಪ್ರಚಲಿತ ವಿದ್ಯಮಾನದ ಹೂರಣ








'ಪೂರ್ಣಸತ್ಯ' ನನ್ನ  ಈ ಪುಸ್ತಕದ ವಿಮರ್ಶೆ ಅಕ್ಟೋಬರ್ ೧೧ ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ಪ್ರಕಟವಾಗಿದೆ. ವಿಮರ್ಶಿಸಿದ ಪ್ರೊ. ಬಿ. ಜಿ. ಕುಲಕರ್ಣಿ ಅವರಿಗೆ ಕೃತಜ್ಞತೆಗಳು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

Saturday, October 3, 2015

ಪಿ. ಸಾಯಿನಾಥ ನೆನಪಾಗುತ್ತಾರೆ

     




                    ಮೊನ್ನೆ ಮೊನ್ನೆ ತೆಹಲ್ಕಾ ನಿಯತಕಾಲಿಕೆಯ ಪ್ರಧಾನ  ಸಂಪಾದಕ ಲೈಂಗಿಕ ಹಗರಣದಲ್ಲಿ ಸಿಲುಕಿದ ಸುದ್ದಿ ಇಡೀ ದೇಶದಾದ್ಯಂತ ಸಂಚಲನ ಮೂಡಿಸಿತು. ಹೆಸರು ಮಾಡಿ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಪತ್ರಕರ್ತನೋರ್ವನ ಈ ಅಸಹ್ಯದ ಕೆಲಸ ಸಾರ್ವಜನಿಕರು ಇಡೀ ಪತ್ರಿಕಾ ಸಮೂಹವನ್ನೇ ಅನುಮಾನದ ಕಣ್ಣುಗಳಿಂದ ನೋಡುವಂತೆ ಮಾಡಿತು. ಇದಕ್ಕಾಗಿಯೇ ಕಾಯುತ್ತಿದ್ದ ಕೆಲವರು ಆತನ ಸಂಪೂರ್ಣ ತೆಜೋವಧೆಗಾಗಿ ಪ್ರಯತ್ನಿಸಿದರು. ನಿಜಕ್ಕೂ ಪತ್ರಕರ್ತನಾದವನು ಪ್ರತಿ ಘಳಿಗೆ ಎಚ್ಚರದಿಂದ ಮೈಯೆಲ್ಲ ಕಣ್ಣಾಗಿರಬೇಕು. ಸಮಾಜದ ಹುಳುಕುಗಳ ಮೇಲೆ ಬೆಳಕು ಚೆಲ್ಲುವ ಆತನಿಗೆ ಒಂದು ಕಪ್ಪು ಹನಿ ಸಿಡಿದರೂ ಅದು ಆತನನ್ನು ಮುಳುಗಿಸಿ ಬಿಡಬಲ್ಲದು. ಕೆಟ್ಟ ವ್ಯವಸ್ಥೆಯನ್ನು ಜನರೆದುರು ಅನಾವರಣಗೊಳಿಸಲು ಹೋಗುವವನು ತಾನೆ ಕೆಟ್ಟ ವ್ಯವಸ್ಥೆಯ ಭಾಗವಾದಾಗ ಅದು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು. ಒಂದು ಕಾಲದಲ್ಲಿ ರಾಜಕಾರಣಿಗಳ ಭ್ರಷ್ಟಾಚಾರವನ್ನು ತೆಹಲ್ಕಾ ಪತ್ರಿಕೆಯು ಹೊರಗೆಳೆದಾಗ ಅದು ತೆಹಲ್ಕಾ ಹಗರಣವೆಂದೇ ಖ್ಯಾತಿ ಪಡೆಯಿತು. ಭ್ರಷ್ಟಾಚಾರದಂಥ ಹಗರಣವನ್ನು ಬಯಲಿಗೆಳೆದ ಪತ್ರಕರ್ತ ಸಹಜವಾಗಿಯೇ ಜನರ ದೃಷ್ಟಿಯಲ್ಲಿ ಆದರ್ಶ ವ್ಯಕ್ತಿಯಾದ. ಪತ್ರಿಕೋದ್ಯಮದ ವಿದ್ಯಾರ್ಥಿಗಳು ತಾವುಗಳೂ ಮುಂದೊಂದು ದಿನ ಅಂಥದ್ದೆ ದಿಟ್ಟ ವ್ಯಕ್ತಿತ್ವದ ಪತ್ರಕರ್ತರಾಗಬೇಕೆಂದು ಕನಸಿಸಿದರು. ಅನೇಕರು ತಮ್ಮ ಆದರ್ಶದ ಪತ್ರಕರ್ತನನ್ನು ಅನುಕರಣೆ ಮಾಡತೊಡಗಿದರು. ಒಟ್ಟಿನಲ್ಲಿ ಅಪರೋಕ್ಷವಾಗಿ ಆತ ಅನೇಕರಿಗೆ ಗುರುವಾದ. ಆದರೆ ಯಾವಾಗ ಆತ ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡನೋ ಆಗ ಆತನನ್ನು ಪೂಜಿಸಿದ, ಗೌರವಿಸಿದ, ಅನುಕರಿಸಿದ ಅದೇ ಪತ್ರಿಕಾ ಮಾಧ್ಯಮ ತೆಜೋವಧೆಗಾಗಿ ಅವನ ಬೆನ್ನು ಬಿದ್ದಿತು. ಆತನ ವಿಕ್ಷಿಪ್ತ ವ್ಯಕ್ತಿತ್ವದ ಅನೇಕ ಮುಖಗಳನ್ನು ಪರಿಚಯಿಸಲಾರಂಭಿಸಿತು. ಪತ್ರಕರ್ತರು ಆತನದು ಅಕ್ರಮ ಗಳಿಕೆಯ ಸಂಪತ್ತು ಎಂದು ಲೇಖನಗಳನ್ನು ಬರೆಯತೊಡಗಿದರು. ಹಲವು ವರ್ಷಗಳ ಕಾಲ ಸಾರ್ವಜನಿಕ ವಲಯದಲ್ಲಿ ಮತ್ತು ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಆದರ್ಶ ಮತ್ತು ಅನುಕರಣೆಗೆ ಯೋಗ್ಯನಾಗಿದ್ದ ವ್ಯಕ್ತಿ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಅದೇ ಜನರ ನಿಂದನೆಗೆ ಮತ್ತು ಆಕ್ರೋಶಕ್ಕೆ ಪಾತ್ರನಾದ. ಪತ್ರಿಕೋದ್ಯಮದಿಂದ ದೊರೆತ ಹಣ ಮತ್ತು ಜನಪ್ರಿಯತೆಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಲು ಆತ ವಿಫಲನಾದದ್ದೆ ಅವನ ಅವನತಿಗೆ ಕಾರಣವಾಯಿತು. ಜೊತೆಗೆ ಪತ್ರಕರ್ತನಾದ ತಾನು ಹೇಗೆ ವರ್ತಿಸಿದರೂ ಅದು ತಪ್ಪಲ್ಲ ಎನ್ನುವ ಧಾರ್ಷ್ಟ್ಯ ಮನೋಭಾವ ಕೂಡ ಆತ ತಪ್ಪುದಾರಿ ತುಳಿಯುವಂತೆ ಮಾಡಿತು. ಹೆಚ್ಚಿನ ಪತ್ರಕರ್ತರು ದಾರಿ ತಪ್ಪುತ್ತಿರುವುದು ಈ ಹಂತದಲ್ಲೇ. ಪತ್ರಕರ್ತನಾದವನು ಸಮಾಜದ ತಪ್ಪುಗಳನ್ನು ಜನರಿಗೆ ಪರಿಚಯಿಸುವ ಕೆಲಸ ಮಾಡಬೇಕೇ ವಿನ: ತಾನೇ ತಪ್ಪು ದಾರಿ ತುಳಿಯಬಾರದು. ಹೀಗೆ ಪತ್ರಿಕೋದ್ಯಮ ತಪ್ಪು ದಾರಿ ತುಳಿಯುತ್ತಿರುವ ಈ ಹೊತ್ತು ನಮಗೆ ಸಾಯಿನಾಥ ನೆನಪಾಗುತ್ತಾರೆ.

                   ಪತ್ರಿಕೋದ್ಯಮದಿಂದ ದೊರೆತ ಜನಪ್ರಿಯತೆಯ ಅಮಲಿನಿಂದ ಪತ್ರಕರ್ತರು ತಪ್ಪು ದಾರಿಗಿಳಿಯುತ್ತಿದ್ದರೆ ಇನ್ನು ಕೆಲವರಿಗೆ ಈ ಪತ್ರಿಕೋದ್ಯಮವು ಹಣ ಮಾಡುವ ದಂಧೆಯಾಗಿ ಪರಿಣಮಿಸಿದೆ. ಕೆಲವು ದಿನಗಳ ಹಿಂದೆ ಪರಿಚಯದ ಹುಡುಗನೊಬ್ಬ ಭೇಟಿಯಾಗಿದ್ದ. ಈ ಮೊದಲು ಕೆಲಸವಿಲ್ಲದೇ ಅಲೆದಾಡುತ್ತಿದ್ದ ಆತ ಇವತ್ತು ಪತ್ರಿಕೆಯೊಂದರ ವರದಿಗಾರ. ಕೇವಲ ಹತ್ತನೇ ತರಗತಿಯವರೆಗೆ ಓದಿದ ಮತ್ತು ಪತ್ರಿಕೋದ್ಯಮದ ಅನುಭವವೇ ಇಲ್ಲದ ಆತ ಪತ್ರಿಕಾ ವರದಿಗಾರನಾಗಿ ಕೆಲಸ ಮಾಡುತ್ತಿರುವ ವಿಷಯ ಕೇಳಿ ಅಚ್ಚರಿಯಾಯಿತು. ನಾನು ಅಚ್ಚರಿ ಮತ್ತು ಆಶ್ಚರ್ಯದಲ್ಲಿ ಮುಳುಗಿಹೋದ ಆ ಕ್ಷಣ ಆತ ತನ್ನ ಹೆಸರಿನ ವಿಸಿಟಿಂಗ್ ಕಾರ್ಡ್ ಕೊಟ್ಟು ಏನಾದರೂ ಸಮಸ್ಯೆಯಿದ್ದರೆ ಸಂಪರ್ಕಿಸಿ ಎಂದು ಹೇಳಿ ಮರೆಯಾದ. ಆನಂತರ ಗೊತ್ತಾಯಿತು ಪತ್ರಕರ್ತನೆನ್ನುವುದು ಅವನಿಗೆ ಹಣ ಗಳಿಸುವ ಕೆಲಸವಾಗಿತ್ತು. ಸ್ಥಳೀಯ ರಾಜಕಾರಣಿಗಳನ್ನು, ಸರ್ಕಾರಿ ಅಧಿಕಾರಿಗಳನ್ನು ಮತ್ತು ಅಕ್ರಮ ದಂಧೆಯ ವ್ಯಾಪಾರಿಗಳನ್ನು ಆತ ವರದಿಗಾರನ ಹೆಸರಿನಲ್ಲಿ ಹೆದರಿಸಿ ಅವರಿಂದ ಪ್ರತಿ ತಿಂಗಳು ಇಂತಿಷ್ಟು ಹಣವನ್ನು ವಸೂಲಿ ಮಾಡುತ್ತಿದ್ದ. ಒಂದು ಸಂದರ್ಭ ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿ ನೀಡಿ ಅಲ್ಲಿನ ಸಹಾಯಕ ಪುಸ್ತಕಗಳನ್ನು ಜೋಡಿಸಿಡುತ್ತಿರುವ ಹೊತ್ತು ಖಾಲಿ ಕುರ್ಚಿಯ ಫೋಟೋ ಕ್ಲಿಕ್ಕಿಸಿ ಅವನ ಹುದ್ದೆಗೇ ಸಂಚಕಾರ ತಂದಿದ್ದ. ಅಂದಿನಿಂದ ಸರ್ಕಾರಿ ನೌಕರರು ಮತ್ತು ರಾಜಕಾರಣಿಗಳು ಈ ಪತ್ರಕರ್ತನನ್ನು ಕಂಡರೆ ಹೆದರತೊಡಗಿದರು. ಅವರೊಳಗಿನ ಭಯವನ್ನೇ ಬಂಡವಾಳವಾಗಿಸಿಕೊಂಡು ಈತ ಒಂದಿಷ್ಟು ಹಣ ಗಳಿಸಿ ತಕ್ಕ ಮಟ್ಟಿಗೆ ಆಸ್ತಿಯನ್ನೂ ಮಾಡಿಕೊಂಡಿದ್ದ.

                ಇನ್ನೂ ಅಚ್ಚರಿಯ ಸಂಗತಿ ಎಂದರೆ ಈ ಜಿಲ್ಲಾ ಮತ್ತು ತಾಲೂಕು ಪ್ರದೇಶಗಳಲ್ಲಿ ಹಣ ಗಳಿಕೆಗಾಗಿಯೇ ಪತ್ರಿಕೆಗಳನ್ನು ಪ್ರಕಟಿಸುವ ಪತ್ರಕರ್ತರಿರುವರು. ಒಮ್ಮೆ ಇವರು ಪತ್ರಿಕೆಯ ಪ್ರಥಮ ಸಂಚಿಕೆಯೊಂದನ್ನು ಪ್ರಕಟಿಸಿ ನೊಂದಣಿ ಮಾಡಿಸಿದರೆಂದರೆ ಮತ್ತೆಂದೂ ಪತ್ರಿಕೆಯನ್ನು ಪ್ರಕಟಿಸುವ ಗೊಡವೆಗೆ ಹೋಗುವುದಿಲ್ಲ. ಆದರೆ ತಮ್ಮ ಪ್ರಥಮ ಸಂಚಿಕೆಯನ್ನೇ ಬಗಲಲ್ಲಿಟ್ಟುಕೊಂಡು ತಾವು ಪತ್ರಕರ್ತರೆಂಬ ಫೋಜು ನೀಡುತ್ತಾರೆ. ಅದನ್ನೇ ಈ ಭ್ರಷ್ಟ ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ತೋರಿಸಿ ಹಣ ವಸೂಲಿಗಿಳಿಯುತ್ತಾರೆ. ಪತ್ರಕರ್ತರ ಇನ್ನೊಂದು ವರ್ಗವಿದೆ ಅವರು ಪತ್ರಿಕೆಗಳನ್ನು ಪ್ರಕಟಿಸುವುದು ಜಾಹಿರಾತುಗಳಿಂದ ಬರುವ ಹಣಕ್ಕಾಗಿ. ಅಂಥ ಪತ್ರಿಕೆಗಳ ಬಹುಪಾಲು ಜಾಗವನ್ನು ಜಾಹಿರಾತುಗಳೇ ಆಕ್ರಮಿಸಿಕೊಂಡಿರುತ್ತವೆ. ಪತ್ರಿಕೆಯೊಂದು ಹಣ ಗಳಿಸುವ ಉದ್ಯಮ ಎನ್ನುವ ಕಾರಣದಿಂದಾಗಿ ಇವತ್ತು ಜಿಲ್ಲಾ ಮತ್ತು ತಾಲೂಕು ಪ್ರದೇಶಗಳಲ್ಲೇ ನೂರಾರು ಪತ್ರಿಕೆಗಳು ಪ್ರಕಟವಾಗುತ್ತಿವೆ. ಹೀಗೆ ಪ್ರಕಟವಾಗುತ್ತಿರುವ ಪತ್ರಿಕೆಗಳಿಗಾಗಲಿ ಮತ್ತು ಅವುಗಳನ್ನು ಪ್ರಕಟಿಸುತ್ತಿರುವ ಪತ್ರಕರ್ತರಿಗಾಗಲಿ ಸಮಾಜದ ಕುರಿತಾದ ಕನಿಷ್ಠ ಕಾಳಜಿಯಾಗಲಿ ಇಲ್ಲವೇ ಸಾಮಾಜಿಕ ಬದ್ಧತೆಯಾಗಲಿ ಇಲ್ಲ. ಅವರೇನಿದ್ದರೂ ಪತ್ರಕರ್ತರ ವೇಷದಲ್ಲಿರುವ ಭ್ರಷ್ಟರು. ಇಂಥ ಭ್ರಷ್ಟರು ಪತ್ರಿಕೋದ್ಯಮವನ್ನು ತಪ್ಪು ದಾರಿಗೆಳೆಯುತ್ತಿರುವ ಈ ಹೊತ್ತಿನಲ್ಲೇ ನಮಗೆ ಸಾಯಿನಾಥ ನೆನಪಾಗುತ್ತಾರೆ.

                   ಮೂವತ್ತು ವರ್ಷಗಳ ಹಿಂದೆ ಗುಲಬರ್ಗಾದಂಥ ಸಣ್ಣ ಊರಿನಲ್ಲಿ (ಈಗ ಅದು ದೊಡ್ಡ ಊರಾಗಿ ಬೆಳೆದಿದೆ) ಸ್ಥಳೀಯ ಪತ್ರಿಕೆಯ ಸಂಪಾದಕನ ಕೊಲೆಯಾಯಿತು. ಅದು ರಾತ್ರಿ ಒಂಬತ್ತರ ವೇಳೆಗೆ ಮುಖ್ಯ ರಸ್ತೆಯ ಮೇಲೆ ಕೊಲೆಯಾದಾಗ ಅನೇಕರಿಗೆ ಪತ್ರಿಕೆಯ ಕೆಲಸ ಅದು ಎಷ್ಟೊಂದು ಅಪಾಯಕಾರಿ ಎಂದೆನಿಸಿತು. ಜೊತೆಗೆ ಅಪಾಯ ಎದುರಾಗದೆ ಇದ್ದಲ್ಲಿ ಪತ್ರಿಕೋದ್ಯಮದ ಕೆಲಸ  ತೀರ ಸಪ್ಪೆಯಾಗುತ್ತದೆ ಎನ್ನುವುದು ಕೆಲವರ ಅಭಿಮತವಾಗಿತ್ತು. ಈ ಎಲೆಕ್ಟ್ರಾನಿಕ್ ಮಾಧ್ಯಮ ಇನ್ನು ಕಣ್ಣು ತೆರೆಯದಿದ್ದ ಆ ದಿನಗಳಲ್ಲಿ ಪತ್ರಿಕೆಗಳು ಸಮಾಜವನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದವು. ಪತ್ರಕರ್ತರು ಪ್ರಾಮಾಣಿಕರಾಗಿದ್ದರು. ತಮ್ಮ ದಿಟ್ಟ ವರದಿಗಳಿಂದ ಭ್ರಷ್ಟರನ್ನು ಎದುರು ಹಾಕಿಕೊಂಡು ಪ್ರಾಣಕೊಟ್ಟ ಪತ್ರಕರ್ತರ ಸಂಖ್ಯೆಗೇನೂ ಕೊರತೆ ಇರಲಿಲ್ಲ. ಆದರೆ ಕಾಲಾನಂತರದಲ್ಲಿ ಭ್ರಷ್ಟತೆಯ ಪ್ರಮಾಣ ಹೆಚ್ಚಿದಂತೆ ಪತ್ರಕರ್ತರೂ ಕೂಡ ಭ್ರಷ್ಟತೆಯ ಭಾಗವಾಗತೊಡಗಿದರು. ಅವರಿಗೆ ಪತ್ರಿಕೋದ್ಯಮವು ಹಣ ಮಾಡುವ ಸುಲಭ ಮತ್ತು ಸರಳ ಮಾರ್ಗೋಪಾಯ ಎಂದೆನಿಸತೊಡಗಿತು. ಈ ಬದಲಾವಣೆಯಿಂದಾಗಿ ಒಂದು ಸಮಯದಲ್ಲಿ ಭ್ರಷ್ಟರನ್ನು ವಿರೋಧಿಸುತ್ತಿದ್ದವರು ಕಾಲಕ್ರಮೇಣ ಭ್ರಷ್ಟರನ್ನೇ ಓಲೈಸಲು ಮುಂದಾದರು. ಈ ಬದಲಾವಣೆಗೆ ಪೂರಕವಾಗಿ ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳು ತಾವು ಬೆಳೆಯಲು ಮತ್ತು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪತ್ರಕರ್ತರ ಓಲೈಕೆಗೆ ತೊಡಗಿದರು. ಒಟ್ಟಿನಲ್ಲಿ ಪತ್ರಕರ್ತರು ಮತ್ತು ಭ್ರಷ್ಟರ ನಡುವೆ ಕೊಡು ಕೊಳ್ಳುವಿಕೆಯ ಸಂಪ್ರದಾಯ ಕಾಣಿಸಿಕೊಂಡಿತು. ಅನೇಕ ಪತ್ರಕರ್ತರು ಪತ್ರಿಕೆಯ ಹೆಸರಿನಲ್ಲಿ ಗಳಿಸಿದ ಹಣವನ್ನೇ ಬೇರೆ ಬೇರೆ ಉದ್ಯಮಗಳಲ್ಲಿ ತೊಡಗಿಸಿ ಆರ್ಥಿಕವಾಗಿ ಸ್ಥಿತಿವಂತರಾದರು. ಈ ಎಲೆಕ್ಟ್ರಾನಿಕ್ ಮಾಧ್ಯಮ ಕಣ್ಣು ತೆರೆದ ಮೇಲಂತೂ ಹಿಡನ್ ಕ್ಯಾಮೆರಾವನ್ನು ಕಿಸೆಯಲ್ಲಿಟ್ಟು ಕೊಂಡು ಸಮಾಜದಲ್ಲಿನ ಭ್ರಷ್ಟರ ಜೊತೆಗೆ ಗೌರವಸ್ಥರನ್ನೂ ಬ್ಲಾಕ್ ಮೇಲ್ ಮಾಡಿ ಹಣ ಗಳಿಸುವ ಹೊಸ ಪೀಳಿಗೆಯ ಪತ್ರಕರ್ತರ ಪರಂಪರೆಯೇ ಜನ್ಮ ತಳೆಯಿತು. ಪಂಚತಾರಾ ಹೊಟೇಲ್ ಗಳಲ್ಲಿ ವಾಸ, ವರ್ಷಕ್ಕೆ ಒಂದೆರಡು ವಿದೇಶ ಪ್ರಯಾಣ, ಓಡಾಡಲು ಐಶಾರಾಮಿ ಕಾರು ಒಟ್ಟಿನಲ್ಲಿ ಇವತ್ತಿನ ಪತ್ರಕರ್ತರ ಬದುಕಿನ ಶೈಲಿ ಬದಲಾಗಿದೆ. ಹೀಗೆ ನಮ್ಮ ಪತ್ರಕರ್ತರು ಐಶಾರಾಮಿ ಬದುಕನ್ನು ಹುಡುಕಿಕೊಂಡು ಹೋಗುತ್ತಿರುವ ಈ ಘಳಿಗೆ ತಮ್ಮ ಬದುಕಿನ ಬಹುಸಮಯವನ್ನು ಹಳ್ಳಿಗಳಲ್ಲೇ ಕಳೆಯುತ್ತಿರುವ ಭಾರತದ ಪತ್ರಿಕೋದ್ಯಮಕ್ಕೊಂದು ಹೊಸ ಅರ್ಥ ತಂದುಕೊಟ್ಟ ಸಾಯಿನಾಥ ನೆನಪಾಗುತ್ತಾರೆ.

ಪಿ.ಸಾಯಿನಾಥ


                   ಈ ಮೇಲೆ ಹೇಳಿದ ಉದಾಹರಣೆಗಳಿಗೆ ಅಪವಾದ ಎನ್ನುವಂತೆ  ಅನೇಕ ಪತ್ರಕರ್ತರು ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿರುವರು. ಅಂಥ ಹೆಸರುಗಳಲ್ಲಿ ತಟ್ಟನೆ ನೆನಪಿಗೆ ಬರುವ ಹೆಸರು ಅದು ಪಿ. ಸಾಯಿನಾಥ ಅವರದು. ಪತ್ರಿಕೆ ಕೆಲಸಕ್ಕಾಗಿ ಮ್ಯಾಗ್ಸಸೆ ಪ್ರಶಸ್ತಿ ಪಡೆದ ಪತ್ರಕರ್ತರಿವರು. ಬರಗಾಲ ಮತ್ತು ರೈತರ ಬವಣೆಗಳನ್ನು ಕುರಿತು ಅಧ್ಯಯನ ಮಾಡುವ ಆಸಕ್ತಿ ಅವರದು. ೧೯೯೩ ರಲ್ಲಿ ಟೈಮ್ಸ್ ಆಫ್ ಇಂಡಿಯಾ ಫೆಲೋಶಿಪ್ ನೊಂದಿಗೆ ತಮ್ಮ ಅಧ್ಯಯನವನ್ನಾರಂಭಿಸಿದ ಸಾಯಿನಾಥ ೧೮ ತಿಂಗಳುಗಳ  ಅವಧಿಯಲ್ಲಿ ಒಂದು ಲಕ್ಷ ಕಿಲೋ ಮೀಟರ್ ಸಂಚರಿಸಿರುವರು. ಅದರಲ್ಲಿ ಸುಮಾರು ಐದು ಸಾವಿರ ಕಿಲೋ ಮೀಟರ್ ಗಳಷ್ಟು ದಾರಿಯನ್ನು ನಡೆದುಕೊಂಡೇ ಸಂಚರಿಸಿದರು. ತಮ್ಮ ಅಧ್ಯಯನಕ್ಕಾಗಿ ಭಾರತದ ಐದು ರಾಜ್ಯಗಳಲ್ಲಿನ ಹತ್ತು ಜಿಲ್ಲೆಗಳನ್ನು ಆಯ್ದುಕೊಂಡ ಅವರು ಈ ಅವಧಿಯಲ್ಲಿ ಒಟ್ಟು ೮೪ ವರದಿಗಳನ್ನು ಪ್ರಕಟಿಸಿದರು. ಅವರ ಪ್ರತಿಯೊಂದು ವರದಿ ರೈತರ ಸಮಸ್ಯೆಗಳನ್ನು ಮತ್ತು ಅವರು ಅನುಭವಿಸುತ್ತಿರುವ ಬದುಕಿನ ದಾರುಣತೆಯನ್ನು ಕಟ್ಟಿಕೊಡುತ್ತದೆ. ಈ ೮೪ ವರದಿಗಳನ್ನೇ ಆಧರಿಸಿ ಸಾಯಿನಾಥ 'ಎವರಿ ಬಡಿ ಲವ್ಸ್ ಎ ಗುಡ್ ಡ್ರಾಟ್' ಎನ್ನುವ ಪುಸ್ತಕ ಪ್ರಕಟಿಸಿರುವರು. ಈ ಪುಸ್ತಕಕ್ಕೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸೇರಿ ೧೮ ಕ್ಕೂ ಹೆಚ್ಚು ಪ್ರಶಸ್ತಿಗಳು ಲಭಿಸಿವೆ. ಭಾರತದ ಪತ್ರಿಕೋದ್ಯಮದಲ್ಲಿ ಬರಗಾಲ ಮತ್ತು ರೈತರ ಸಮಸ್ಯೆಗಳನ್ನು ಸಾಯಿನಾಥರಷ್ಟು ಆಳವಾಗಿ ಅಧ್ಯಯನ ಮಾಡಿದ ಪತ್ರಕರ್ತ ಬೇರೊಬ್ಬರಿಲ್ಲ.  ಪತ್ರಕರ್ತರೆಲ್ಲ ರಾಜಕೀಯ, ಕ್ರೀಡೆ, ಭ್ರಷ್ಟಾಚಾರ, ಸಿನಿಮಾ ಅಪರಾಧ ಪ್ರಕರಣ ಇತ್ಯಾದಿ ರೋಚಕ ಸುದ್ದಿಗಳ ಸುತ್ತ ಗಿರಕಿ ಹೊಡೆಯುತ್ತಿರುವಾಗ ಸಾಯಿನಾಥ ಹಳ್ಳಿಗಳತ್ತ ಮುಖ ಮಾಡುತ್ತಾರೆ. ರೈತರ ಸಮಸ್ಯೆಗಳನ್ನು ತಮ್ಮ ಲೇಖನಗಳ ಮೂಲಕ ಒಂದೊಂದಾಗಿ ಸರ್ಕಾರದ ಮುಂದಿಡುತ್ತಾರೆ. ಆಂಧ್ರ ಪ್ರದೇಶ, ರಾಜಸ್ಥಾನ, ಒರಿಸ್ಸಾ ರಾಜ್ಯಗಳಲ್ಲಿನ ರೈತರ ಆತ್ಮಹತ್ಯೆಯ ಮಾಹಿತಿಯನ್ನು ಸ್ಪಷ್ಟ ಅಂಕಿ ಸಂಖ್ಯೆಗಳೊಂದಿಗೆ ಪ್ರಕಟಿಸಿದ ಸಾಯಿನಾಥ ಸರ್ಕಾರಕ್ಕೆ ರೈತರ ಸಮಸ್ಯೆಗಳನ್ನು ಮನಗಾಣಿಸಿ ಕೊಟ್ಟಿರುವರು. ವರ್ಷದಲ್ಲಿ ೨೭೦ ರಿಂದ ೩೦೦ ದಿನಗಳನ್ನು ಹಳ್ಳಿಗಳಲ್ಲಿ ಕಳೆಯುವ ಅವರು ರೈತರ ಸಮಸ್ಯೆಗಳಿಗೆ ಧ್ವನಿಯಾಗಿರುವರು. ಪತ್ರಿಕೆಗಳಿಂದ ಹಣಕಾಸಿನ ನೆರವು ದೊರೆಯದಿದ್ದಾಗ ತಮ್ಮ ಉಳಿತಾಯದ ಹಣ, ಪ್ರಾವಿಡೆಂಟ್ ಫಂಡ್, ಪ್ರಶಸ್ತಿಗಳಿಂದ ದೊರೆತ ಹಣವನ್ನೆಲ್ಲ ಅಧ್ಯಯನಕ್ಕಾಗಿ ಖರ್ಚು ಮಾಡುವರು. ಬರವಣಿಗೆ ಅವರಿಗೆ ಹಣ ಮಾಡುವ ದಂಧೆ ಅಲ್ಲ. ಈ ವೃತ್ತಿ ರೈತರ, ಬಡವರ, ಅಸಾಹಾಯಕರ ಧ್ವನಿಯಾಗಬೇಕೆನ್ನುವುದು ಸಾಯಿನಾಥರ ಪ್ರಬಲ ಇಚ್ಛೆಯಾಗಿದೆ.

ಸಾಯಿನಾಥ ಬರೆಯುತ್ತಾರೆ 


               ಭಾರತದ ಗ್ರಾಮೀಣ ಬದುಕನ್ನು ಆಳವಾಗಿ ಕೆದಕಿ ನೋಡಿದ ಪತ್ರಕರ್ತರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಹೆಸರು ಪಿ. ಸಾಯಿನಾಥ ಅವರದು. ಗ್ರಾಮೀಣ ಬದುಕಿನ ಅದರಲ್ಲೂ ರೈತರ ಸಮಸ್ಯೆಗಳ ಹಸಿಹಸಿ ಚಿತ್ರಣವನ್ನು ತಮ್ಮ ವರದಿಗಳ ಮೂಲಕ ತೋರಿಸಿಕೊಟ್ಟ ಅನನ್ಯ ಪತ್ರಕರ್ತ. ಸಾಯಿನಾಥ ರೈತರ ಆತ್ಮಹತ್ಯೆ, ಬತ್ತುತ್ತಿರುವ ಬಾವಿಗಳು, ನೀರಿನ ಖಾಸಗೀಕರಣ, ಭೂಕಬಳಿಕೆ, ಸಾಲದ ಗಂಡಾಂತರ, ಕಳಪೆ ಬೀಜದ ಸಮಸ್ಯೆಗಳು, ಕುಸಿಯುತ್ತಿರುವ ಕೃಷಿ ಆದಾಯ ಹೀಗೆ ರೈತರ ಬದುಕಿನ ಅನೇಕ ಸಂಕಟಗಳನ್ನು ತಮ್ಮ ಬರಹದ ಮೂಲಕ ಅನಾವರಣಗೊಳಿಸಿರುವರು. ಅವರ ಬರಹದಲ್ಲಿ ಆಡಂಬರವಾಗಲಿ ಇಲ್ಲವೇ ಅತಿಶಯೋಕ್ತಿಯಾಗಲಿ ಇರುವುದಿಲ್ಲ. ರೈತರ ಸಮಸ್ಯೆಗಳನ್ನು ಅತ್ಯಂತ ಸರಳ ಪದಗಳು ಮತ್ತು ವಾಕ್ಯಗಳ ಮೂಲಕ ಹೇಳುವ ಸಾಯಿನಾಥರಿಗೆ ಮಣ್ಣಿನ ಮಕ್ಕಳ ಕುರಿತು ಪ್ರಾಮಾಣಿಕ ಕಾಳಜಿ ಇದೆ. ಅದಕ್ಕೆಂದೇ ವರ್ಷದ ೧೨ ತಿಂಗಳಲ್ಲಿ ಹೆಚ್ಚಿನ ಸಮಯವನ್ನು ಅವರು ಹಳ್ಳಿಗಳಲ್ಲೇ ಕಳೆಯುತ್ತಾರೆ. ಬಸ್, ಲಾರಿ, ಜೀಪು, ಸೈಕಲ್ ಇದಾವುದೂ ಇಲ್ಲದಿದ್ದರೆ ನಡೆದುಕೊಂಡೇ ಹಳ್ಳಿಗಳನ್ನು ಸಂಚರಿಸುತ್ತಾರೆ. ರೈತರನ್ನು ನೇರವಾಗಿ ಭೇಟಿಮಾಡಿ ಅವರೊಂದಿಗೆ ಮಾತಿಗಿಳಿಯುತ್ತಾರೆ. ರೈತರ ಹೊಲಗಳಿಗೆ ಹೋಗಿ ಪರೀಕ್ಷಿಸುತ್ತಾರೆ. ಸಮಸ್ಯೆಯ ಮೂಲ ಎಲ್ಲಿದೆ ಎಂದು ಹುಡುಕುತ್ತಾರೆ. ಪತ್ರಕರ್ತರೆಂದರೆ ಚುನಾವಣಾ ಸಂದರ್ಭದಲ್ಲಿ ಮಾತ್ರ ಹಳ್ಳಿಗಳಿಗೆ ಭೇಟಿ ನೀಡುವರು ಎನ್ನುವ ಅಪವಾದವನ್ನು ಪಿ. ಸಾಯಿನಾಥ ತಮ್ಮ ಹಳ್ಳಿಗಳ ಸುತ್ತಾಟ ಮತ್ತು ಅಧ್ಯಯನದಿಂದ ಸುಳ್ಳಾಗಿಸಿರುವರು. ಪ್ರಾದೇಶಿಕ ಭಾಷೆಯ ಪತ್ರಕರ್ತರೇ ಹಳ್ಳಿಗಳಿಗೆ ಹೋಗಲು ಹಿಂದೇಟು ಹಾಕುತ್ತಿರುವಾಗ ಇಂಗ್ಲಿಷ್ ಪತ್ರಕರ್ತರೋರ್ವರು ಹೀಗೆ ಹಳ್ಳಿಹಳ್ಳಿಗಳನ್ನು ಸುತ್ತುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿಗಳಲ್ಲೊಂದು. ಹೆಚ್ಚಿನ ಪತ್ರಕರ್ತರೆಲ್ಲ ರಾಜಕೀಯ, ಸಿನಿಮಾ, ಕ್ರೀಡೆ, ಕ್ರೈಮ್ ಈ ರೋಚಕ ಮತ್ತು ವರ್ಣರಂಜಿತ ಸುದ್ದಿಗಳ ಸುತ್ತ ಸುತ್ತುತ್ತಿರುವಾಗ ಪಿ. ಸಾಯಿನಾಥ ಆ ಎಲ್ಲ ರೋಚಕ ಸುದ್ದಿಗಳಿಗೆ ಬೆನ್ನುಮಾಡಿ ಹಳ್ಳಿಗಳತ್ತ ಮುಖಮಾಡುತ್ತಾರೆ. ೧೯೯೭-೨೦೦೫ ರ ಈ ೯ ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಒಂದೂವರೆ ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡ ಅಧಿಕೃತ ಅಂಕಿಅಂಶಗಳನ್ನು ತಮ್ಮ ವರದಿಯ ಮೂಲಕ ಸರ್ಕಾರದೆದುರು ಇಟ್ಟು ಅದಕ್ಕೆ ಕಾರಣ ಕೇಳುತ್ತಾರೆ. ಈ ಅವಧಿಯಲ್ಲಿ ಭಾರತದಲ್ಲಿ ಪ್ರತಿ ಅರ್ಧಗಂಟೆಗೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿರುವನೆಂಬ ಸಾಯಿನಾಥರ ವರದಿ ನಮ್ಮನ್ನು ಬೆಚ್ಚಿ ಬಿಳಿಸುತ್ತದೆ. ಇಂಡಿಯನ್ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಗಳ ಮನೋರಂಜನಾ ತೆರಿಗೆಯ ಕೋಟ್ಯಾಂತರ ರೂಪಾಯಿಗಳನ್ನು ಮನ್ನಾ ಮಾಡುವ ಸರ್ಕಾರ ರೈತರ ಸಾಲ ಮನ್ನಾ ಮಾಡದೆ ವಂಚಿಸುತ್ತಿದೆ ಏಕೆ ಎಂದು ಪ್ರಶ್ನಿಸುತ್ತಾರೆ.

                  ದೇಶದ ಜಲ ಸಂಪನ್ಮೂಲ ಅದು ಹೇಗೆ ದುರ್ಬಳಕೆಯಾಗುತ್ತಿದೆ ಎನ್ನುವುದರ ಮೇಲೂ ಸಾಯಿನಾಥರ ವರದಿಗಳು ಬೆಳಕು ಚೆಲ್ಲುತ್ತವೆ. ಮುಂಬೈನ ಕೊಳೆಗೇರಿಗಳು ಮತ್ತು ಚಾಲ್ ಗಳಲ್ಲಿ ವಾಸಿಸುವ ಅಸಂಖ್ಯಾತ ಮಹಿಳೆಯರು ಕೇವಲ ೨೦ ಲೀಟರ್ ನೀರಿಗಾಗಿ ಗಂಟೆಗಟ್ಟಲೇ ಸರತಿಯಲ್ಲಿ ಕಾಯುತ್ತಿರುವ ಇದೇ ಸಮಯದಲ್ಲಿ ಮುಂಬೈ ಸುತ್ತಮುತ್ತಲಿನ ಖಾಸಗಿ ಮನೋರಂಜನಾ ಪಾರ್ಕ್ ಗಳು ಪ್ರತಿನಿತ್ಯ ೫೦ ಶತಕೋಟಿ ನೀರನ್ನು ಬಳಸುತ್ತಿವೆ ಎಂದು ಬರೆದು ಸರ್ಕಾರದ ಕಣ್ಣು ತೆರೆಸುತ್ತಾರೆ. ಹತ್ತು ದಿನಗಳಿಗೊಮ್ಮೆ ಟ್ಯಾಂಕರ್ ಮೂಲಕ ನೀರನ್ನು ಪೂರೈಸುತ್ತಿರುವ ಅನೇಕ ಹಳ್ಳಿಗಳ ಪಕ್ಕದಲ್ಲೇ ದಿನಕ್ಕೆ ಹತ್ತಾರು ಲಕ್ಷ ಲೀಟರ್ ನೀರನ್ನು ವ್ಯರ್ಥಗೊಳಿಸುತ್ತಿರುವ ಫನ್ ಅಂಡ್ ಫುಡ್ ವಿಲೇಜ್ ಗಳಿವೆ ಎನ್ನುವ ವಿಪರ್ಯಾಸವನ್ನು ಸಾಯಿನಾಥ ಸಾರ್ವಜನಿಕರ ಗಮನಕ್ಕೆ ತರುತ್ತಾರೆ.

               ಇನ್ನೊಂದೆಡೆ ರೈತರ ಊಟ ಖೈದಿಗಳಿಗಿಂತಲೂ ಕಳಪೆಯಾಗಿದೆ ಎಂದು ಬರೆಯುವ ಸಾಯಿನಾಥ ಸರ್ಕಾರದ ವೈಫಲ್ಯವನ್ನು ಬಿಚ್ಚಿಡುತ್ತಾರೆ. ಮಂಡ್ಯ ಜಿಲ್ಲೆಯ ಹುಲುಗನ ಹಳ್ಳಿಯ ಜಯಲಕ್ಷ್ಮಮ್ಮ ಒಬ್ಬ ರೈತ ವಿಧವೆ. ರೈತನಾಗಿದ್ದ ಆಕೆಯ ಗಂಡ ೨೦೦೩ ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೇಲೆ ಆಕೆಗೆ ಪ್ರತಿತಿಂಗಳು ೪ ಕೆ ಜಿ ಅಕ್ಕಿ ಸಬ್ಸಿಡಿ ದರದಲ್ಲಿ ಸರ್ಕಾರದಿಂದ ಸಿಗುತ್ತಿದೆ. ಆಕೆ ಪ್ರತಿನಿತ್ಯ ಮೂರು ಹೊತ್ತು ಊಟ ಮಾಡುತ್ತಾಳೆಂದರೆ ಪ್ರತಿಹೊತ್ತಿನ ಆಹಾರ ಕೇವಲ ೪೫ ಗ್ರಾಂ ಅನ್ನ ಮಾತ್ರ. ಅದೇ ಶಿಕ್ಷೆಗೆ ಒಳಗಾಗಿರುವ ಒಬ್ಬ ಖೈದಿಯು ಒಂದು ಹೊತ್ತಿನ ಊಟದಲ್ಲಿ ೭೧೦ ಗ್ರಾಂ ಅನ್ನ ಪಡೆಯುತ್ತಾನೆ. ಅಂದರೆ ರೈತರ ಊಟ ಖೈದಿಗಳ ಊಟಕ್ಕಿಂತಲೂ ಕಳಪೆಯಾಗಿದೆ ಎನ್ನುವ ಸತ್ಯ  ಓದುಗರ ಮನಸ್ಸನ್ನು ಕಲಕುತ್ತದೆ. ಆತ್ಮಹತ್ಯೆಗೆ ಯತ್ನಿಸಿದ ರೈತನೋರ್ವನನ್ನು ಗೆಳೆಯರು ಸಕಾಲದಲ್ಲಿ ಆಸ್ಪತ್ರೆಗೆ ಸೇರಿಸಿ ಅವನ ಜೀವ ಉಳಿಸುತ್ತಾರೆ. ಬದುಕುಳಿದ ರೈತ ನೆರವಾದ ಗೆಳೆಯರನ್ನೇ ಬಯ್ಯುತ್ತಾನೆ. ಕಾರಣವಿಷ್ಟೇ ಒಂದೂವರೆ ;ಲಕ್ಷ ಸಾಲ ತೀರಿಸಲು ಆಗುವುದಿಲ್ಲವೆಂದು ಆತ  ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಈಗ ಬದುಕುಳಿಯಲು ೪೫,೦೦೦ ರೂಪಾಯಿ ಆಸ್ಪತ್ರೆಗೆ ಖರ್ಚಾಗಿತ್ತು. ಇನ್ನೂ ಹೆಚ್ಚು ಸಾಲ ತೀರಿಸಬೇಕಲ್ಲ ಎನ್ನುವ ಆತಂಕ ಅವನದು. ಇದು ಅನಂತಪುರ ಜಿಲ್ಲೆಯ ನಲ್ಲಮಡ ಗ್ರಾಮದ ರೈತ ಕುಟುಂಬದ ಕಥೆ ಎಂದು ಸಾಯಿನಾಥ ಹೇಳುತ್ತಾರೆ.

               ಕೃಷಿ ಪರಿಸ್ಥಿತಿ ಹದಗೆಟ್ಟಾಗ ರೈತರು ಮಾತ್ರವಲ್ಲ ಎಲ್ಲರ ಪರಿಸ್ಥಿತಿಯೂ ಬಿಗಡಾಯಿಸುತ್ತದೆ ಎನ್ನುತ್ತಾರೆ ಸಾಯಿನಾಥ. ಅದಕ್ಕೆ ನಲಗೊಂಡದ ಬಡಗಿ ರಾಮಾಚಾರಿಯ ಉದಾಹರಣೆ ನೀಡುತ್ತಾರೆ. ರಾಮಾಚಾರಿ ರೈತನಲ್ಲ ಆದರೆ ಅವನ ಬದುಕು ನಲಗೊಂಡದ ಹಳ್ಳಿಯಲ್ಲಿ ಕೃಷಿ ಹೇಗಿದೆ ಎನ್ನುವುದರ ಮೇಲೆ ನಿಂತಿತ್ತು. ಕಳೆದ ಮೂರು ವರ್ಷಗಳಲ್ಲಿ ನೇಗಿಲನ್ನಾಗಲಿ, ಕೊಡಲಿಯ ಅಥವಾ ಪಿಕಾಸಿಯ ಹಿಡಿಯನ್ನಾಗಲಿ ಮಾಡಿಸಲು ಯಾರೂ ಬರಲಿಲ್ಲ. ಪರಿಣಾಮವಾಗಿ ರಾಮಾಚಾರಿ ಕೆಲಸವಿಲ್ಲದೆ ತೊಂದರೆಗೆ ಸಿಲುಕಿದ. ತೊಂದರೆ ಹೆಚ್ಚಾಗಿ ಅವನು ಒಂದು ದಿನ ಹಸಿವಿನಿಂದ ಸತ್ತು ಹೋದ. ಅನೇಕ ತಲೆಮಾರುಗಳಿಂದ ಕೃಷಿಯೊಂದಿಗೆ ಬೆಸೆದುಕೊಂಡ ವೃತ್ತಿಗಳೆಲ್ಲ ಈಗ ತೀವ್ರ ಸಂಕಷ್ಟಕ್ಕೆ ಒಳಗಾಗಿವೆ ಎನ್ನುವ ಸಂಗತಿ ಆತಂಕವನ್ನುಂಟು ಮಾಡುತ್ತದೆ.

              ಹೀಗೆ ಸಾಯಿನಾಥರ ವರದಿಗಳನ್ನು ಓದುತ್ತ ಹೋದಂತೆ ಅವರೊಳಗಿನ ಪ್ರಾಮಾಣಿಕ ಮತ್ತು ರೈತಪರ ಕಾಳಜಿಯಿರುವ ಲೇಖಕ ನಮ್ಮೆದುರು ನಿಲ್ಲುತ್ತಾನೆ. ನಿಜಕ್ಕೂ ರೈತರ ಸಮಸ್ಯೆಗಳಿಗೆ ಮುಖಾಮುಖಿಯಾಗಿ ನಿಲ್ಲುವ ಪತ್ರಕರ್ತನ ಅವಶ್ಯಕತೆಯಿತ್ತು. ರೈತರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಆ ಮೂಲಕ ಸರ್ಕಾರವೊಂದನ್ನು ಜಾಗೃತ ಸ್ಥಿತಿಗೆ ತಂದು ನಿಲ್ಲಿಸುವ ತುರ್ತು  ಪತ್ರಿಕೋದ್ಯಮಕ್ಕೆ ಬೇಕಿತ್ತು. ಇಂಥದ್ದೊಂದು ಅಗತ್ಯದ ನಡುವೆ ಪಿ.ಸಾಯಿನಾಥರ ಆಗಮನ ಅದೊಂದು ಆಶಾಕಿರಣದಂತೆ ಗೋಚರಿಸುತ್ತದೆ. ರೈತರ ಸಮಸ್ಯೆಗಳೂ ಪತ್ರಿಕೆಗಳ ಪುಟಗಳಲ್ಲಿ ಜಾಗಪಡೆಯತೊಡಗುತ್ತವೆ. ಸರ್ಕಾರ ಒಂದಿಷ್ಟು ಎಚ್ಚೆತ್ತುಕೊಳ್ಳುತ್ತದೆ. ಮುಂದೆ ಆಗಬೇಕಿರುವ ಕೆಲಸ ಪಿ.ಸಾಯಿನಾಥರ ವಾರಸುದಾರರ ಸಂಖ್ಯೆ ಹೆಚ್ಚಬೇಕು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

Thursday, September 3, 2015

ಕತ್ತಿಯಂಚಿನ ದಾರಿ: ಸಾಹಿತ್ಯ ಮತ್ತು ಸಂಸ್ಕೃತಿ





              ರಹಮತ್ ತರೀಕೆರೆ ಕನ್ನಡದ ಸಮಕಾಲೀನ ಬರಹಗಾರರಲ್ಲಿ ಅತ್ಯಂತ ವಿಶಿಷ್ಠ ಬರಹಗಾರ. ಕನ್ನಡದ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಕುರಿತು ನೂರಾರು ಲೇಖನಗಳನ್ನು ಬರೆದಿರುವ ಶ್ರೀಯುತರು ಅಂಕಣ ಬರಹಗಾರರಾಗಿಯೂ ಕನ್ನಡದ ಓದುಗರಿಗೆ ಪರಿಚಿತರು. ಸಂಶೋಧನಾ ಮತ್ತು ವಿಮರ್ಶಾ ಲೇಖನಗಳನ್ನೂ ಸಾಮಾನ್ಯ ಓದುಗರಿಗೂ ಸುಲಭವಾಗಿ ಅವರ ಓದಿಗೆ ದಕ್ಕುವಂತೆ ಬರೆಯುವ ಶೈಲಿ ರಹಮತ್ ತರೀಕೆರೆ ಅವರಿಗೆ ಸಿದ್ಧಿಸಿದೆ. ವಿಶ್ವವಿದ್ಯಾಲಯಗಳಲ್ಲಿನ ಪಂಡಿತೊತ್ತಮರು ಸಾಮಾನ್ಯ ಓದುಗರನ್ನು ಕಡೆಗಣಿಸಿ ಗಂಭೀರ ಸಾಹಿತ್ಯದಲ್ಲಿ ಮುಳುಗಿರುವ ಈ ವೇಳೆ ವಿಶ್ವವಿದ್ಯಾಲಯದ ಉನ್ನತ ಹುದ್ದೆಯಲ್ಲಿದ್ದುಕೊಂಡೇ ರಹಮತ್ ತರೀಕೆರೆ ತಮ್ಮ ಸಾಹಿತ್ಯ ವಿಮರ್ಶೆಯನ್ನು ಪಾಂಡಿತ್ಯಪೂರ್ಣವೂ ಶುದ್ಧಶಾಸ್ತ್ರವೂ ಆಗದಂತೆ ಬರೆಯುತ್ತಾರೆ. ತಮ್ಮ ಬರಹ ಸಾಹಿತ್ಯದ ಗಂಭೀರ ವಿದ್ಯಾರ್ಥಿಗಳಲ್ಲದ ಓದುಗರಿಗೂ ತಲುಪಲಿ ಎನ್ನುವ ತುಡಿತ ಅವರದು. ಇದು ನಿಜವಾದ ಬರಹಗಾರನಲ್ಲಿರಬೇಕಾದ ಸಮಾಜದ ಕುರಿತಾದ ಕಾಳಜಿ. ಹೀಗೆ ಬರವಣಿಗೆ ಸಾಹಿತ್ಯದ ಗಂಭೀರ ವಿದ್ಯಾರ್ಥಿಗಳಲ್ಲದವರಿಗೂ ಹೋಗಿ ಮುಟ್ಟುವುದರಲ್ಲಿ ಬರಹಗಾರನ ಮತ್ತು ಆತನ ಬರವಣಿಗೆಯ ಸಾರ್ಥಕತೆ ಅಡಗಿದೆ. ಈ ಕಾರಣದಿಂದಲೇ ರಹಮತ್ ತರೀಕೆರೆ ಅವರ ಬರವಣಿಗೆಯ ಕೃಷಿ ಅನೇಕ ಕ್ಷೇತ್ರಗಳಿಗೆ ಚಾಚಿಕೊಂಡಿದೆ. ವಿಶ್ವವಿದ್ಯಾಲಯಗಳ ಪಂಡಿತೊತ್ತಮರು ಮಡಿವಂತಿಕೆ ಎಂದು ಮೂಗು ಮುರಿದು ದೂರ ಸರಿಸಿದ್ದನ್ನೆಲ್ಲ ರಹಮತ್ ತಮ್ಮ ತೆಕ್ಕೆಗೆ ತೆಗೆದುಕೊಂಡಿರುವರು. ಅವರೇ ಹೇಳಿಕೊಂಡಂತೆ ಸಾಹಿತ್ಯ ಕೃತಿಯೊಂದಕ್ಕೆ ಪ್ರತಿಕ್ರಿಯಿಸುವುದು, ಪಂಥಗಳನ್ನು ಅಧ್ಯಯನ ಮಾಡುವುದು, ಮೂಲಭೂತವಾದಗಳಿಗೆ ಪ್ರತಿರೋಧಿಸುವುದು, ಕಣ್ಮರೆಯಾದ ಲೇಖಕನಿಗೆ ಸ್ಪಂದಿಸುವುದು, ಕಲಾವಿದನ ಸಾವಿಗೆ ಪ್ರತಿಕ್ರಿಯಿಸುವುದು ಹೀಗೆ ಅನೇಕ ಸಂದರ್ಭಗಳಲ್ಲಿ ಅವರಿಂದ ಸಾಹಿತ್ಯ ಸೃಷ್ಟಿಯಾಗಿದೆ. ಜನರ ನೆನಪುಗಳಿಂದ ಮಾಸಿಹೋದ ಕಲಾವಿದೆಯೋರ್ವಳ ಬದುಕನ್ನು ಸತತ ಐದು ವರ್ಷಗಳ ಹುಡುಕಾಟದಿಂದ ಸಂಗ್ರಹಿಸಿ ಬರೆದ 'ಅಮೀರಬಾಯಿ ಕರ್ನಾಟಕಿ' ರಹಮತ್ ತರೀಕೆರೆ ಅವರ ಅತ್ಯುತ್ತಮ ಕೃತಿಗಳಲ್ಲೊಂದು. ೨೦೦೬ ರಲ್ಲಿ ಪ್ರಕಟವಾದ ಅವರ 'ಕತ್ತಿಯಂಚಿನ ದಾರಿ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.

                'ಕತ್ತಿಯಂಚಿನ ದಾರಿ' ಈ ಪುಸ್ತಕದಲ್ಲಿ ಒಟ್ಟು ೨೦ ಲೇಖನಗಳಿವೆ. ಈ ಎಲ್ಲ ಲೇಖನಗಳನ್ನು ಲೇಖಕರು ಸಾಹಿತ್ಯ ಮತ್ತು ಸಂಸ್ಕೃತಿ ಲೇಖನಗಳೆಂದು ಕರೆದಿರುವರು. ಲೇಖಕನಿಗೆ  ಎದುರಾಗುವ  ಬಹುಮುಖ್ಯ ಸವಾಲು  ಎಂದರೆ ಆತ ವರ್ತಮಾನದ ಸಮಸ್ಯೆಗಳಿಂದ ದೂರನಿಂತು  ಬರೆಯುವಂತಿಲ್ಲ. ತಾನು ಬದುಕುತ್ತಿರುವ ವರ್ತಮಾನದ ಸಮಸ್ಯೆಗಳಿಗೆ ಸ್ಪಂದಿಸಿ ಲೇಖಕ ಬರೆಯಬೇಕಾದ ಅನಿವಾರ್ಯತೆ ಇದೆ. ಸ್ಪಂದಿಸಿ ಬರೆದರೆ ಬರೆದ ಬರಹ ಪ್ರಶ್ನೆಯಾಗಿ ಎದುರು ನಿಂತು ಕಾಡುತ್ತದೆ. ಇದನ್ನೇ ಲೇಖಕರು ಕತ್ತಿಯಂಚಿನ ದಾರಿಯಲ್ಲಿ ನಡೆಯುವ ಕಷ್ಟ ಎಂದು ಭಾವಿಸಿರುವರು. ಅಂಥದ್ದೊಂದು ಎಚ್ಚರಿಕೆಯಿಂದಲೇ ಅವರು ಕನ್ನಡ ಸಾಹಿತ್ಯದ ವಿಮರ್ಶೆ ಹಾಗೂ ಬರಹಗಾರರ ಮತ್ತು ಚಿಂತಕರ ನೆನಪಿಗಿಳಿಯುತ್ತಾರೆ. ಪುಸ್ತಕದ ಕೆಲವು ಲೇಖನಗಳು ಸಾಹಿತ್ಯ ವಿಮರ್ಶೆಯಾಗಿವೆ ಮತ್ತು ತಮ್ಮ ಆಪ್ತ ಲೇಖಕರನ್ನು ಸ್ಮರಿಸಿಕೊಂಡು ಬರೆದ ಲೇಖನಗಳು ಕೆಲವಿವೆ. ಇನ್ನುಳಿದಂತೆ ಆಯಾ ಸಂದರ್ಭಕ್ಕೆಹಾಗೂ ವಿದ್ಯಮಾನಗಳಿಗೆ  ಲೇಖಕರು ಪ್ರತಿಕ್ರಿಯಿಸಿ ಬರೆದ ಲೇಖನಗಳು ಒಂದಿಷ್ಟಿವೆ.

          ಪುಸ್ತಕದ ಪ್ರಾರಂಭದಲ್ಲಿ ಕುವೆಂಪು ಕುರಿತು ಲೇಖಕರು ಅಭಿಮಾನದಿಂದ ಬರೆದ ಲೇಖನವಿದೆ. ಲೇಖಕರು ವಿವರಿಸುವಂತೆ ಕುವೆಂಪು ಕೇವಲ ಬರಹಗಾರ ಮಾತ್ರವಲ್ಲ ಅವರು ಕರ್ನಾಟಕದ ಸಾಂಸ್ಕೃತಿಕ ನಾಯಕ. ಕನ್ನಡದಲ್ಲಿ ಅನೇಕ ಸಮುದಾಯಗಳನ್ನು ವೈಚಾರಿಕವಾಗಿ ಪ್ರಭಾವಿಸಿದ ಕುವೆಂಪು ಅವರನ್ನು ರಹಮತ್ ಬಸವಣ್ಣನೊಂದಿಗೆ ಹೋಲಿಸುತ್ತಾರೆ. ಕನ್ನಡದ ಅನೇಕ ಲೇಖಕರು, ಹೋರಾಟಗಾರರು, ರಾಜಕೀಯ ನೇತಾರರು ಕುವೆಂಪು ಅವರಿಂದ ಪ್ರಭಾವಿತರಾಗಿರುವುದರಿಂದ ಅವರೊಬ್ಬ ಬಹುಮುಖಿಗಳು, ಬಹುಪ್ರಕಾರಿಗಳು ಮತ್ತು ಬಹುವಿಷಯ ಚಿಂತಕರು ಎಂದು ಲೇಖಕರು ಕುವೆಂಪು ಅವರ ವ್ಯಕ್ತಿತ್ವವನ್ನು ವಿಶ್ಲೇಷಿಸುತ್ತಾರೆ. ಇಲ್ಲಿ ಕುವೆಂಪು ಅವರಲ್ಲಿದ್ದ ಮಾನವೀಯತೆ ಮತ್ತು ತಾಯ್ತನದ ಗುಣವನ್ನು 'ಕುವೆಂಪು ಹಾದಿಬದಿಯ ಹೂವನ್ನು ಬಾಗಿ ಎತ್ತಿಕೊಳ್ಳುತ್ತಾರೆ' ಎಂಬ ರೂಪಕದಲ್ಲಿ ವರ್ಣಿಸುತ್ತಾರೆ. ಅಂಥದ್ದೊಂದು ತಾಯ್ತನದ ಗುಣದಿಂದಲೇ ಕುವೆಂಪು ಅವರಿಗೆ ಈ ಲೋಕ ದಮನಿಸಿದ ಜಗತ್ತನ್ನು, ನಿರ್ಲಕ್ಷಿಸಿದ ಸಂಗತಿಗಳನ್ನು ಪ್ರೀತಿಯಿಂದ ಕುತೂಹಲದಿಂದ ನೋಡಲು ಸಾಧ್ಯವಾಯಿತು. ಹಾಗಾದರೆ ಕುವೆಂಪು ಅವರನ್ನು ಕನ್ನಡದ ವಿಮರ್ಶಾಲೋಕ ಹೇಗೆ ಪರಿಭಾವಿಸಿದೆ. ಇಲ್ಲಿ ಲೇಖಕರು ಕುವೆಂಪು ವಿಮರ್ಶಾ ಲೋಕಕ್ಕೆ ದಕ್ಕಿದ ಪರಿಯನ್ನು ವಿಶ್ಲೇಷಿಸಲು ಮುಂದಾಗುತ್ತಾರೆ. ಸಂಸ್ಕೃತ ಭಾಷೆ ಮತ್ತು ಆಧ್ಯಾತ್ಮಿಕತೆಗೆ ಹತ್ತಿರವಾಗಿದ್ದ ಕುವೆಂಪು ವಚನ ಸಾಹಿತ್ಯ ಹಾಗೂ ಜನಪದ ಭಾಷೆಯಿಂದ ದೂರವಾಗಿ ಉಳಿದದ್ದೇ ಅವರನ್ನು ಕನ್ನಡದ ವಿಮರ್ಶಕರು ಅಪಾರ್ಥಮಾಡಿಕೊಳ್ಳಲು ಕಾರಣವಾಯಿತು ಎನ್ನುವುದು ಲೇಖಕರ ಅಭಿಮತ. ಈ ಸಂದರ್ಭ  ಲೇಖಕರಿಗೆ ಬೇಂದ್ರೆ ನೆನಪಾಗುತ್ತಾರೆ. ಬೇಂದ್ರೆ ಜನಪದ ಭಾಷೆಯನ್ನು ಪಳಗಿಸುತ್ತಿದ್ದರು ಎಂದು ಸ್ಮರಿಸಿಕೊಳ್ಳುತ್ತಾರೆ. ಯಾವ ಸಾಂಸ್ಕೃತಿಕ ಸಂದರ್ಭ ಕುವೆಂಪು ಬೇಂದ್ರೆಯವರಿಗೆ ಇಂಥ 'ವಿರುದ್ಧ' ನೆಲೆಗಳತ್ತ ಹೋಗಲು ಪ್ರೇರೇಪಿಸಿತು ಎಂದು ತಮಗೆ ತಾವೇ ಪ್ರಶ್ನೆ ಹಾಕಿಕೊಳ್ಳುತ್ತಾರೆ. ಕುವೆಂಪು ದಲಿತ ಬದುಕಿನ ಆಳಕ್ಕೆ ಇಳಿಯದಿರುವುದು ಹಾಗೂ ತಮ್ಮ ಕೃತಿಗಳಲ್ಲಿ ಮುಸ್ಲಿಂ ಮತ್ತು ಕ್ರೈಸ್ತರನ್ನು ಕೇಡಿಗಳನ್ನಾಗಿ ಚಿತ್ರಿಸಿರುವರು ಎಂದ ವಿಮರ್ಶಕರ ಆರೋಪವನ್ನು ಲೇಖಕರು  ಇಲ್ಲಿ ಉಲ್ಲೇಖಿಸುವಾಗ ಆ ಸಂದರ್ಭದ ವರ್ತಮಾನ ಕುವೆಂಪು ಅವರಿಗೆ ಹೀಗೆ ಪ್ರೇರೇಪಿಸಿರಬಹುದು ಎಂದು ರಾಷ್ಟ್ರಕವಿಯ ಪರ ಮೆದು ಧೋರಣೆ ತಾಳುತ್ತಾರೆ. ಒಟ್ಟಾರೆ ಕುವೆಂಪು ಸಾಹಿತ್ಯವನ್ನು ಹೊಸ ದೃಷ್ಟಿಕೋನದ ಬೆಳಕಿನಲ್ಲಿ ಪುನರ್ವಿಮರ್ಶಿಸುವ ಕೆಲಸವಾಗಬೇಕಿದೆ ಮತ್ತು ಕನ್ನಡದ ಪರಂಪರೆ ಇಂತಹ ಹುಡುಕಾಟದಲ್ಲಿ ತೊಡಗಿಸಿಕೊಂಡಿದೆ ಎನ್ನುವ ಆಶಯ ಲೇಖಕರದು.

    'ಶೂನ್ಯಸಂಪಾದನೆ ಹಾಗೂ ಡೆಮಾಕ್ರಸಿ' ಲೇಖನದಲ್ಲಿ ಲೇಖಕರು ತಮ್ಮ ವಿಮರ್ಶೆಗಾಗಿ ವಚನಗಳನ್ನು  ಕೈಗೆತ್ತಿಕೊಳ್ಳುತ್ತಾರೆ. ವಚನಗಳ ಸೃಷ್ಟಿ ಕನ್ನಡ ಸಾಹಿತ್ಯದ ಬಹುಮುಖ್ಯವಾದ ಬೆಳವಣಿಗೆ. ೧೨ ನೇ ಶತಮಾನದಲ್ಲಿ ಕನ್ನಡದ ನೆಲದಲ್ಲಿ ಕಾಣಿಸಿಕೊಂಡ ಸಾಮಾಜಿಕ ಪಲ್ಲಟಗಳಿಗೆ ವಚನಗಳ ಕೊಡುಗೆ ಅಪಾರವಾಗಿದೆ. ಅಲ್ಲಮ, ಬಸವಣ್ಣ, ಚೆನ್ನಬಸವಣ್ಣ, ಅಕ್ಕಮಹಾದೇವಿ, ಮುಕ್ತಾಯಕ್ಕ, ಮೋಳಿಗೆ ಮಾರಯ್ಯ, ಹಡಪದ ಅಪ್ಪಣ್ಣ, ಡೋಹರ ಕಕ್ಕಯ್ಯ ಅನೇಕ ವಚನಕಾರರು ಮತ್ತು ವಚನಕಾರ್ತಿಯರು ವಚನಗಳ ಮೂಲಕ ಬಹುದೊಡ್ಡ ಸಾಮಾಜಿಕ ಪರಿವರ್ತನೆಗೆ ಕಾರಣರಾದರು. ಮೇಲ್ವರ್ಗದ ಹಾಗೂ ಕೆಳವರ್ಗದ ವಚನಕಾರರು ಜೊತೆಯಾಗಿಯೇ ಸಾಮಾಜಿಕ ಅಸಮಾನತೆ ವಿರುದ್ಧ ಚಳವಳಿಯನ್ನು ಸಂಘಟಿಸಿದ್ದು ೧೨ನೇ ಶತಮಾನದಲ್ಲಿ ಕಾಣಿಸಿಕೊಂಡ ಹೋರಾಟದ ವೈಶಿಷ್ಥ್ಯತೆಗಳಲ್ಲೊಂದು. ಆ ಕಾಲದಲ್ಲಿ ರಚನೆಯಾದ ವಚನಗಳ ಉದ್ದೇಶ ಹಾಗೂ ಅವುಗಳು ಉಂಟುಮಾಡಬಹುದಾದ ಪರಿಣಾಮದಲ್ಲಿ ಸಮನ್ವಯತೆ ಇದ್ದಂತೆ ಅಲ್ಲಿ ವೈರುಧ್ಯಗಳೂ ಇವೆ. ಇದಕ್ಕೆಲ್ಲ ವಚನಗಳು ಅನೇಕ ಜಾತಿ, ಸಮುದಾಯಗಳಿಗೆ ಸೇರಿದ ನೂರಾರು ಜನರಿಂದ ರಚನೆಯಾದದ್ದೇ ಬಹುಮುಖ್ಯ ಕಾರಣ. ವಿಶೇಷವಾಗಿ ವಚನಗಳಲ್ಲಿ ಕೆಳವರ್ಗದ ವಚನಕಾರರು ಪ್ರಶ್ನೆಗಳನ್ನೆತ್ತುತ್ತಾರೆ. ಅದಕ್ಕೆ ಉದಾಹರಣೆಯಾಗಿ ನಾವು ಮಡಿವಾಳಯ್ಯನ ಈ ನುಡಿಯನ್ನು ಗಮನಿಸಬೇಕು 'ಮರಳುಗೊಂಡೆಯಲ್ಲಾ ಬಸವಣ್ಣಾ ಪಿತ್ತತಲೆಗೇರಿತೆ ನಿನಗೆ'. ವಚನ ಸಾಹಿತ್ಯದಲ್ಲಿ ಈ ವೈವಿಧ್ಯತೆಯನ್ನೇ ಲೇಖಕ ರಹಮತ್ ತರೀಕೆರೆ ಅವರು ಸಂವಾದ ಅಥವಾ ವಾಗ್ವಾದವೆಂದು ಗುರುತಿಸುತ್ತಾರೆ. ತಮ್ಮ ಈ ಹೇಳಿಕೆಗೆ ನಿದರ್ಶನವಾಗಿ ಅವರು ಅಲ್ಲಮ-ಬಸವಣ್ಣ, ಅಲ್ಲಮ-ಸಿದ್ಧರಾಮ, ಅಲ್ಲಮ-ಅಕ್ಕಮಹಾದೇವಿ, ಅಲ್ಲಮ-ಮುಕ್ತಾಯಕ್ಕ ಅವರ ನಡುವಿನ ವಾಗ್ವಾದಗಳನ್ನು ಹೆಸರಿಸುತ್ತಾರೆ. ಹೀಗೆ ಚರ್ಚೆ, ಸಂವಾದ, ಭಿನ್ನಮತದ ಹಿನ್ನೆಲೆಯಲ್ಲಿ ರಚನೆಯಾದ ವಚನಗಳನ್ನು ಆಧಾರವಾಗಿಟ್ಟುಕೊಂಡು  ೪೦೦ ವರ್ಷಗಳ ನಂತರ ಅಂದರೆ ೧೬ ನೇ ಶತಮಾನದಲ್ಲಿ ಶಿವಗಣಪ್ರಸಾದಿ 'ಶೂನ್ಯಸಂಪಾದನೆ' ಕೃತಿಯನ್ನು ರಚಿಸುತ್ತಾನೆ. ಮೂಲವಚನಗಳ ಮುಖ್ಯ ಆಶಯ ಹಾಗೂ ಅವುಗಳ ನಡುವಣ ವೈರುಧ್ಯವನ್ನು ಆಧಾರವಾಗಿಟ್ಟುಕೊಂಡು 'ಶೂನ್ಯಸಂಪಾದನೆ' ಕೃತಿಯನ್ನು ವಿಮರ್ಶಿಸುವ ಲೇಖಕರಿಗೆ ಈ ಕೃತಿ ಚರ್ಚೆ ಬೆಳೆಸುವ ಡೆಮಾಕ್ರಟಿಕ್ ಗುಣದ ಭಾಗವಾಗಿ ಕಾಣಿಸುತ್ತದೆ. 'ಶೂನ್ಯಸಂಪಾದನೆ' ಯ ಡೆಮಾಕ್ರಟಿಕ್ ಗುಣಕ್ಕೆ ಲೇಖಕರು ಕೊಡುವ ಕಾರಣಗಳು ಹೀಗಿವೆ

೧. ಶೂನ್ಯಸಂಪಾದನೆಯದು ಪ್ರಜಾಪ್ರಭುತ್ವ ಸತ್ವವುಳ್ಳ ಸಂವಾದದ ಸ್ವರೂಪ.
೨. ಶೂನ್ಯಸಂಪಾದನೆಯಲ್ಲಿರುವ ಜಾನಪದ ಪರಂಪರೆಯ ಗುಣ. ಅಂದರೆ ಹಠಮಾರಿಯಾಗದೆ ಸಹಿಸುವ, ಸರಿಕಂಡಿದ್ದೆಲ್ಲವನ್ನೂ ಒಳಗೊಳ್ಳುವ ಗುಣ. ಹಾಗೆ ಒಳಗೊಂಡದ್ದನ್ನು ಅರಗಿಸಿಕೊಂಡು ಮೂರನೆಯದೊಂದನ್ನು ಹುಟ್ಟಿಸಲು ಯತ್ನಿಸುವ ಸಮನ್ವಯ ಗುಣ.
೩. 'ಸೇರುವೆ ತಪ್ಪುಳ್ಳೊಡೆ ನಿಮ್ಮ ಪರಿಜ್ಞಾನದಿಂದ ತಿದ್ದಿ' ಎಂದು ಶಿವಗಣಪ್ರಸಾದಿ ತನ್ನ ಕೃತಿಗೆ ಕೊಡುವ ಡೆಮಾಕ್ರಟಿಕ್ಕಾದ ಕೊನೆ.

               ಆದರೆ ಲೇಖಕರ ವಿರೋಧವಿರುವುದು ಡೆಮಾಕ್ರಟಿಕ್ ಗುಣವಿರುವ 'ಶೂನ್ಯ ಸಂಪಾದನೆ' ಕೃತಿಯನ್ನು ವೀರಶೈವ ಸಮುದಾಯದ ಧರ್ಮಶಾಸ್ತ್ರವೆಂದು ಸೀಮಿತಗೊಳಿಸುತ್ತಿರುವ ಬೆಳವಣಿಗೆ ಕುರಿತು. ತಮಗೊಂದು ಸೂಕ್ತವಾದ ಧರ್ಮಶಾಸ್ತ್ರವಿಲ್ಲವೆಂದು ಕೊರಗುತ್ತಿದ್ದ ವೀರಶೈವ ಮತದವರಿಗೆ 'ಶೂನ್ಯ ಸಂಪಾದನೆ' ಒಂದು ದಾರಿದೀಪವಾಗಿ ಕಂಡಿತು. ಪರಿಣಾಮವಾಗಿ ಆಧುನಿಕ ವೀರಶೈವ ವಿದ್ವಾಂಸರು 'ಶೂನ್ಯ ಸಂಪಾದನೆ'ಯನ್ನು ವೀರಶೈವ ಧರ್ಮದ ಧರ್ಮಗ್ರಂಥವೆಂದು ಉದ್ಘೋಷಿಸಿದರು. ಅನೇಕ ಸಮುದಾಯಗಳಿಗೆ ಸೇರಿದ ವಚನಕಾರರು ರಚಿಸಿದ ವಚನಗಳಲ್ಲಿನ ಮುಕ್ತತೆ ಯಾವುದೇ ಒಂದು ಧಾರ್ಮಿಕ ಸಮುದಾಯವನ್ನು ಸಂಘಟಿಸುವಲ್ಲಿ ತೊಡಕಾಗಿರುವುದರಿಂದ 'ಶೂನ್ಯ ಸಂಪಾದನೆ' ಕೃತಿಯನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದನ್ನು ಲೇಖಕರು ಒಪ್ಪುವುದಿಲ್ಲ. ವೀರಶೈವ ಧರ್ಮಕ್ಕೆ ವ್ಯತಿರಿಕ್ತವಾದ ಅನೇಕ ಸಂಗತಿಗಳು ಶೂನ್ಯ ಸಂಪಾದನೆ ಕೃತಿಯಲ್ಲಿರುವುದನ್ನು ಲೇಖಕರು ತಮ್ಮ ವಿರೋಧದ ನಿಲುವಿಗೆ ಪ್ರಮುಖ ಕಾರಣಗಳಾಗಿ ಉದಾಹರಿಸುವರು.

೧. ಸಿದ್ಧರಾಮ ಲಿಂಗದೀಕ್ಷೆ ಪ್ರಕರಣದಲ್ಲಿ ಇಷ್ಟಲಿಂಗ ಅಗತ್ಯವಿಲ್ಲ ಎಂಬ ವಾದವು ಕೊನೆಗೆ ಗೆಲ್ಲುವುದು.
೨. ಅಲ್ಲಮನನ್ನು ಕೃತಿಯ ನಾಯಕನನ್ನಾಗಿ ಮಾಡಿರುವುದು. ಅಲ್ಲಮನನ್ನು ಇಟ್ಟುಕೊಂಡು ವೀರಶೈವ ಸಿದ್ಧಾಂತ ಕಟ್ಟುತ್ತೇನೆ ಎಂಬುದೆ ಕಷ್ಟದ ಕೆಲಸ. ಏಕೆಂದರೆ ಅಲ್ಲಮನೊಬ್ಬ ಮಹಾ ತಿರುಗಾಡಿ. ತಿರುಗಾಟಕ್ಕೂ ಮತ್ತು ಸಾಂಸ್ಥಿಕವಲ್ಲದ ಧರ್ಮಕ್ಕೂ ಸಂಬಂಧವಿದೆ (ಆದರೆ ವೀರಶೈವ ಸಾಂಸ್ಥಿಕ ಧರ್ಮ).
 
         ಹೀಗಿದ್ದೂ ಶಿವಗಣಪ್ರಸಾದಿ ತನ್ನ 'ಶೂನ್ಯ ಸಂಪಾದನೆ'ಯನ್ನು ವೀರಶೈವ ಸಮುದಾಯದ ಧರ್ಮಗ್ರಂಥವೆಂದು ಬಿಂಬಿಸಲು ಪ್ರಯತ್ನಿಸಿರುವನು ಎನ್ನುವುದು ಲೇಖಕರ ಆರೋಪ. ಅದಕ್ಕೆ ಉದಾಹರಣೆಯಾಗಿ ಕೃತಿಯಲ್ಲಿನ ಕೆಲವು ನ್ಯೂನ್ಯತೆಗಳನ್ನು ಪಟ್ಟಿ ಮಾಡುತ್ತಾರೆ.

೧. ಕೆಳವರ್ಗದ ವಚನಕಾರರಿಗೆ ಈ ಕೃತಿಯಲ್ಲಿ ತಮ್ಮ ವಾದವನ್ನು ಮಂಡಿಸಲು ಅವಕಾಶ ದೊರೆತಿಲ್ಲ.
೨. ೯೫೯ ವಚನಗಳಲ್ಲಿ ೮೦೦ ವಚನಗಳು ಮೇಲ್ವರ್ಗದ ವಚನಕಾರರದಾಗಿವೆ.
೩. ಬಸವಣ್ಣನ ಸಂಗಾತಿಗಳಾಗಿದ್ದ ನೂರಾರು ಕೆಳವರ್ಗದ ವಚನಕಾರರು ಇಲ್ಲಿಲ್ಲ.

     ನಿಸಾರ್ ಅಹ್ಮದ್, ಪೂರ್ಣಚಂದ್ರ ತೇಜಸ್ವಿ, ಶಾಂತಿನಾಥ ದೇಸಾಯಿ, ಶಿವರಾಮ ಕಾರಂತರ ಬರವಣಿಗೆಯ ವಿಮರ್ಶೆ ಕೃತಿಯ ಮುಖ್ಯ ಭಾಗಗಳಲ್ಲೊಂದು. ಮುಸ್ಲಿಂ ಬರಹಗಾರರ ಬರವಣಿಗೆಯನ್ನು  ಒಂದಿಷ್ಟು ಅನುಮಾನದಿಂದ ನೋಡುವುದು ವಿಮರ್ಶಾ ಲೋಕದಲ್ಲಿ ಸಾಮಾನ್ಯವಾಗಿ ಬೆಳೆದು ಬಂದಿರುವ ಸಂಗತಿಗಳಲ್ಲೊಂದು. ಇಂಥದ್ದೊಂದು ಅನುಮಾನವನ್ನು ತನ್ನದಲ್ಲದ ಜಾತಿ ಸಮುದಾಯದ ಕುರಿತು ಲೇಖಕ ಬರೆದಾಗಲೂ ಆತ ಎದುರಿಸಬೇಕಾಗುತ್ತದೆ. ಈ ಸಂದರ್ಭ ಚೋಮನ ದುಡಿ ಬರೆದ ಕಾರಂತರನ್ನು ನೆನಪಿಸಿಕೊಳ್ಳಬಹುದು. ಗಾಂಧಿಯಂಥ ಅಪ್ರತಿಮ ಹೋರಾಟಗಾರನನ್ನೇ ಅಸ್ಪೃಶ್ಯತಾ ಆಚರಣೆಯ ವಿರುದ್ಧದ ಹೋರಾಟ ಹಾಗೂ ಹರಿಜನರ ಕುರಿತಾದ ಆತನ ಬರವಣಿಗೆಯನ್ನು ಗುಮಾನಿಯಿಂದ ನೋಡಿದ ಅನೇಕ ಉದಾಹರಣೆಗಳಿವೆ. ಈ ನೆಲದ ಭಾಷೆ ಸಂಸ್ಕೃತಿ ಕುರಿತು ಬರೆಯುವಾಗ ನಿಸಾರ್ ಅಹ್ಮದ್ ಅವರ ಕಾವ್ಯ ಒಂದು ಬಗೆಯ ಸಾಂಸ್ಕೃತಿಕ ಕಷ್ಟಗಳಿಗೆ ಸಿಲುಕುತ್ತದೆ. ಲೇಖಕನಾದವನು ತನ್ನ ಧಾರ್ಮಿಕ ಸಮುದಾಯದ ಅನುಭವದ ಜೊತೆ ಅನುಸಂಧಾನ ಮಾಡಲು ಕೆಲವೊಮ್ಮೆ ಹಿಂಜರಿಯಬಹುದು. ಇದನ್ನೇ ಲೇಖಕ ರಹಮತ್ ತರೀಕೆರೆ ಸೃಜನಶೀಲತೆಯ ಕಷ್ಟ ಹಾಗೂ ಸಾಂಸ್ಕೃತಿಕ ಬಿಕ್ಕಟ್ಟು ಎಂದು ಕರೆಯುತ್ತಾರೆ. ಜೊತೆಗೆ ಕನ್ನಡದಲ್ಲಿ ಇತರ ಮುಸ್ಲಿಂ ಬರಹಗಾರರಿಗೆ ಎದುರಾಗದ ಸಾಂಸ್ಕೃತಿಕ ಕಷ್ಟ ನಿಸಾರ್ ಅವರಿಗೇ ಎದುರಾಗಲು ಕಾರಣಗಳಾದರೂ ಏನು ಎಂದು ಹುಡುಕಲು ಹೊರಟಾಗ ಅವರು ಕಂಡುಕೊಂಡ ಉತ್ತರ ಉಳಿದವರು ನಿಸಾರರಂತೆ ಕವಿಗಳಲ್ಲ ಎಂದು. ಇತರ ಮುಸ್ಲಿಂ ಲೇಖಕರು ಕಥೆ ಕಾದಂಬರಿ ಪ್ರಕಾರಗಳ ಮೂಲಕ ಮುಸ್ಲಿಂ ಸಂವೇದನೆಯನ್ನು ಅಭಿವ್ಯಕ್ತಗೊಳಿಸಲು ಯಾವುದೇ ಮುಜುಗರಕ್ಕೆ ಒಳಗಾಗಲಿಲ್ಲ. ಜೊತೆಗೆ ನಿಸಾರ್ ಅಹ್ಮದ್ ಬರೆಯಲು ಪ್ರಾರಂಭಿಸಿದ ಮೊದಲ ದಿನಗಳಲ್ಲಿ ಮುಸ್ಲಿಂ ಲೇಖಕರು ಬಹಳ ಇರಲಿಲ್ಲ. ಹೀಗಾಗಿ ತನ್ನ ಸಮುದಾಯದ ಅನುಭವವನ್ನು ಬಳಸಿಕೊಳ್ಳುವುದಕ್ಕೆ ಮುಜುಗರ ಪಡುವ ಸನ್ನಿವೇಶವಿತ್ತು ಎನ್ನುವುದು ಲೇಖಕರ ಅಭಿಮತ. ಕಾಲಾನಂತರದಲ್ಲಿ ನಿಸಾರ್ ಅಹ್ಮದ್ ಅವರ ಬರವಣಿಗೆ ಸಾಂಸ್ಕೃತಿಕ ಕಷ್ಟಗಳಿಂದ ಪಾರಾಯಿತು ಎನ್ನುವುದಕ್ಕೆ ರಹಮತ್ ಅವರು ಕೊಡುವ ಉದಾಹರಣೆಯನ್ನು ಗಮನಿಸಬೇಕು, 'ಹಲವೆನ್ನದ ಹಿರಿಮೆಯೆ ಕುಲವೆನ್ನದ ಗರಿಮೆಯೆ' ಎಂದು ಸಂಭ್ರಮಿಸಿದ ಕವಿಯಲ್ಲಿ ಮುಂದೊಂದು ದಿನ 'ನಾಡ ದೇವಿಯೇ ನಿನ್ನ ಮಡಿಲಲ್ಲಿ ಕಂಡೆ ಎಂಥ ದೃಶ್ಯ ಒಂದೆದೆಯ ಹಾಲು ಕುಡಿದವರ ನಡುವೆ ಎಷ್ಟೊಂದು ಭೇದ ತಾಯೆ' ಎಂಬ ದುಗುಡವು ತನ್ನ ಶ್ರದ್ಧೆಯನ್ನು ತಾನೇ ಭಗ್ನಗೊಳಿಸಿಕೊಂಡು ಹುಟ್ಟುತ್ತದೆ.

   ಪೂರ್ಣಚಂದ್ರ ತೇಜಸ್ವಿ ಅವರ ಬರವಣಿಗೆಯ ವೈರುಧ್ಯಗಳನ್ನು ರಹಮತ್ ತರೀಕೆರೆ ಅತ್ಯಂತ ತೀಕ್ಷ್ಣವಾಗಿ ಪ್ರಶ್ನಿಸುತ್ತಾರೆ. ಮನುಷ್ಯನ ಕಲ್ಪನೆಗೂ ಎಟುಕದ ಪ್ರಕೃತಿಯ ಒಳಗನ್ನು ತೇಜಸ್ವಿ ಅತ್ಯಂತ ನಿರಾಯಾಸವಾಗಿ ಪ್ರವೇಶಿಸಿ ಅದರೊಳಗಿನ ಅಚ್ಚರಿ ಮತ್ತು ಅದ್ಭುತಗಳನ್ನು ತಮ್ಮ ತಮ್ಮ ಬರವಣಿಗೆಯ ವಸ್ತುವಾಗಿಸಿಕೊಂಡು ಅತ್ಯುತ್ತಮ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದರು. ತೇಜಸ್ವಿ ಅವರ ಒಟ್ಟಾರೆ ಬರವಣಿಗೆಯ ಕ್ರಮವನ್ನು ಲೇಖಕರು ಒಬ್ಬ ವ್ಯಕ್ತಿಗೆ ಸಂಬಂಧಿಸಿದ ಸಂಗತಿ, ಒಂದು ವಸ್ತುವಿನ ಹಿಂದೆ ವಿಸ್ತಾರವಾದ ಸಮಾಜವಿದೆ ಎನ್ನುವ ಅರಿವಿನಲ್ಲಿ ಹುಟ್ಟುವ ಕಥನ ಮತ್ತು ಮನುಷ್ಯರ ಜೊತೆ ಪ್ರಾಣಿ, ಗಿಡ, ಬಳ್ಳಿ, ಹಳ್ಳ, ಕೀಟ, ಮಳೆ, ಗಾಳಿ ಸಮಸ್ತ ಚರಾಚರಗಳನ್ನು ಒಟ್ಟಿಗೆ ನೋಡುತ್ತ ಬರೆಯುವ ಕಥನ ಎಂದು ವಿಭಾಗಿಸುತ್ತಾರೆ. ಈ ಹಿನ್ನೆಲೆಯಲ್ಲಿ ತೇಜಸ್ವಿ ಅವರ 'ಮಾಯಾಲೋಕ' ಕೃತಿ ಇಲ್ಲಿ ವಿಮರ್ಶೆಗೆ ಒಳಪಡುತ್ತದೆ. ತೇಜಸ್ವಿ ನಿಸರ್ಗಕ್ಕೆ ಮುಖಾಮುಖಿಯಾಗಿ ನಿಂತು 'ಮಾಯಾಲೋಕ' ದಂಥ ಕೃತಿ ರಚಿಸಲು ಸಾಮಾಜಿಕ ಬದುಕಿನ ಅನುಭವದ ಒಳಹರಿವು ಅವರಿಗೆ ಕಡಿಮೆಯಾದದ್ದೆ ಬಹುಮುಖ್ಯ ಕಾರಣ ಎಂದು ಅಭಿಪ್ರಾಯಪಡುತ್ತಾರೆ. ಅಂಥದ್ದೊಂದು ಅನುಭವದ ಕೊರತೆ ತುಂಬಿಕೊಳ್ಳಲು ತೇಜಸ್ವಿ ಹೊಸ ಉಪಾಯಗಳನ್ನು ಕಂಡುಕೊಳ್ಳುತ್ತಲೇ ಬಂದರು ಎಂದೆನ್ನುವ ರಹಮತ್ ಒಟ್ಟಾರೆ ಈ ಹೊಸ ಅನುಭವ ಅವರ ಕಥನಕ್ಕೆ ಹೊಸ ದೃಷ್ಟಿಕೋನಗಳನ್ನು ಪಡೆದುಕೊಳ್ಳಲು ಕಾರಣವಾಯಿತು ಎನ್ನುತ್ತಾರೆ. ಅವರು ತೇಜಸ್ವಿ ಅವರ ಒಟ್ಟು ಬರವಣಿಗೆಯಲ್ಲಿನ ಕೊರತೆಗಳನ್ನು ಹೀಗೆ ಪಟ್ಟಿ ಮಾಡುತ್ತಾರೆ

೧. ಜುಗಾರಿ ಕ್ರಾಸಿನಲ್ಲಿ ಬರುವ ಒಂದು ಸಾಂಕೇತಿಕ ಪಾತ್ರ ಬಿಟ್ಟರೆ ತೇಜಸ್ವಿ ಕಥನದ ಯಾವ ಶೋಧದಲ್ಲಿಯೂ ಸ್ತ್ರೀಯಿಲ್ಲ.
೨. ತೇಜಸ್ವಿ ತಮ್ಮ  ಕಥನದಲ್ಲಿ ಹಾಗೂ ಶೋಧದಲ್ಲಿ ಗಂಡು ಪ್ರಧಾನ ಮನೋಭಾವದಿಂದ ಹೊರಬರಲು ಆಗುತ್ತಿಲ್ಲ.
೩. ತೇಜಸ್ವಿ ಅವರ ಬರಹದಲ್ಲಿ ಸಮಾಜದ ವರ್ಗವೈರುಧ್ಯಗಳು ತೀವ್ರ ಪ್ರಶ್ನೆಗೆ ಒಳಗಾಗುವುದಿಲ್ಲ.
೪. ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲಿನ ಮಹಾಸೆಳೆತ ಅವರನ್ನು ಪಶ್ಚಿಮ ಆಧುನಿಕತೆಯನ್ನು ಅವಿಮರ್ಶಾತ್ಮಕವಾಗಿ ನೋಡುವಂತೆ ಮಾಡಿದೆ.

      ಶಾಂತಿನಾಥ ದೇಸಾಯಿ ಅವರ ಕುರಿತು ವಿಮರ್ಶಿಸುವಾಗ ಲೇಖಕರು ಕನ್ನಡದ ನವ್ಯ ಲೇಖಕರಲ್ಲೊಬ್ಬರಾದ ಇವರು ಯಾವ ತಾತ್ವಿಕ ಇಕ್ಕಟ್ಟುಗಳಿಗೂ ಸಿಲುಕದೆ ಆಧುನಿಕತೆಯ ಪರವಾಗಿ ನಿಂತರು ಎಂದು ಮೆಚ್ಚುಗೆಯ ನುಡಿಗಳನ್ನಾಡುತ್ತಾರೆ. ಹೀಗೆ ಹೇಳುವಾಗ ಅವರಿಗೆ ವೈದಿಕ ಸನಾತನತೆಯ ವಿರುದ್ಧ ದಂಗೆ ಎಳುವಂತಹ (ಸಂಸ್ಕಾರ) ಅಥವಾ ಆಧುನಿಕತೆ ವಿರೋಧಿಸುತ್ತ ಸಾಂಪ್ರದಾಯಿಕ ಸಮಾಜವನ್ನು ಸಮರ್ಥಿಸುವಂತಹ (ಸೂರ್ಯನ ಕುದುರೆ) ತಾತ್ವಿಕ ಇಕ್ಕಟ್ಟುಗಳ ನಡುವೆ ಬರೆದ ಅನಂತಮೂರ್ತಿ ನೆನಪಾಗುತ್ತಾರೆ. ಆದರೆ ಶಾಂತಿನಾಥ ದೇಸಾಯಿಯವರು ಮಾತ್ರ ಯಾವ ಇಕ್ಕಟ್ಟುಗಳಿಗೂ ಸಿಲುಕದೆ ಕೊನೆಯತನಕ ಆಧುನಿಕತೆಯ ಆರಾಧಕರಾಗಿಯೇ ಉಳಿದರು. ಶಾಂತಿನಾಥ ದೇಸಾಯಿ ಅವರ ಬರವಣಿಗೆಯಲ್ಲಿನ ಆಧುನಿಕ ದೃಷ್ಟಿಕೋನವನ್ನು ರಹಮತ್ ಈ ಕೆಳಗಿನ ಸಂಗತಿಗಳ ಮೂಲಕ ಗುರುತಿಸುತ್ತಾರೆ,

೧. ದೇಸಾಯಿಯವರ ಕಥನ ಲೋಕ ಬಿಡುಗಡೆಗೊಳ್ಳಲು ಬಯಸುವ ಸ್ತ್ರೀ ಸಮುದಾಯವನ್ನು ಅತ್ಯಂತ ತೀವ್ರವಾಗಿ ಚಿತ್ರಿಸುತ್ತದೆ.
೨. ದೇಸಾಯಿ ಕಥೆಗಳ ಸ್ತ್ರೀಯರು ಸ್ವತಂತ್ರ ವ್ಯಕ್ತಿತ್ವವುಳ್ಳವರು ಮತ್ತು ಧೀಮಂತಿಕೆ ಉಳ್ಳವರು.
೩. ದೇಸಾಯಿ ಅವರ ಕತೆಗಳಲ್ಲಿ ತಮ್ಮನ್ನು ನಿಯಂತ್ರಿಸುವ ಸಂಪ್ರದಾಯಗಳ ವಿರುದ್ಧ ಸ್ವತಂತ್ರಗೊಂಡ ಕಿರಿಯ ತಲೆಮಾರು ಮುಖಾಮುಖಿಮಾಡುವುದು ಕಡ್ಡಾಯವೆಂಬಂತೆ ಇದೆ.
೪. ದೇಸಾಯಿ ಕತೆಗಳ ಹೆಚ್ಚಿನ ನಾಯಕರು ಕ್ರೈಸ್ತ ಮಹಿಳೆಯರನ್ನು ಸಂಗಾತಿಗಳನ್ನಾಗಿ ಪಡೆದವರು.

        ಪುಸ್ತಕದ ಒಂದು ಭಾಗದಲ್ಲಿ ಕೆ ವಿ ಸುಬ್ಬಣ್ಣ, ಲಂಕೇಶ್, ಶಂಕರ್ ಮೊಕಾಶಿ ಪುಣೇಕರ, ಚೆನ್ನಯ್ಯನವರ ಕುರಿತಾದ ಗಾಢ ನೆನಪುಗಳಿವೆ. ಇಲ್ಲಿ ಅವರ ಬರವಣಿಗೆಯ ವಿಮರ್ಶೆ ಎನ್ನುವುದಕ್ಕಿಂತ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿರುವರು. ನೀನಾಸಂ ಮೂಲಕ ಹೆಗ್ಗೋಡಿನಂಥ ಸಣ್ಣ ಊರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಕೆ ವಿ ಸುಬ್ಬಣ್ಣ ಅವರನ್ನು ನನ್ನ ಮನಸ್ಸನ್ನು ಬೆಳೆಸಿದ ಕನ್ನಡದ ಚಿಂತಕರಲ್ಲೊಬ್ಬರು ಎಂದು ಸ್ಮರಿಸಿಕೊಳ್ಳುತ್ತಾರೆ. ತಾತ್ವಿಕ ಭಿನ್ನಾಭಿಪ್ರಾಯ ಇರಿಸಿಕೊಂಡೂ ಮನುಷ್ಯ ಪ್ರೀತಿ ತೋರುವ ಮತ್ತು ವೈಯಕ್ತಿಕವಾಗಿ ಪರಸ್ಪರ ಗೌರವಿಸುವ ಸುಬ್ಬಣ್ಣನವರ   ಮನೋಭಾವ ಲೇಖಕರಿಗೆ ಮೆಚ್ಚುಗೆ ಯಾಗುವ ಗುಣಗಳಲ್ಲೊಂದು. ಹೀಗಿದ್ದೂ ನೀನಾಸಂ ಶೂದ್ರರು ಹಾಗೂ ದಲಿತರಿಗೆ ಯಾಕೆ ಅದು ನಮ್ಮದು ಎಂದೆನಿಸಿಲ್ಲ. ಎಡಪಂಥಿಯರು ಹಾಗೂ ದಲಿತರು ಯಾಕೆ ಅಲ್ಲಿಗೆ ಹೋಗಲು ಹಿಂಜರಿಯುತ್ತಾರೆ? ಲಂಕೇಶ್, ತೇಜಸ್ವಿ, ದೇವನೂರ ಮುಂತಾದ ಎಷ್ಟೋ ಲೇಖಕರು ಹೆಗ್ಗೋಡಿನ ಜೊತೆ ಗುರುತಿಸಿಕೊಳ್ಳಲು ಯಾಕೆ ಬಯಸಲಿಲ್ಲ? ಎನ್ನುವ ಪ್ರಶ್ನೆಗಳು ಲೇಖಕರನ್ನು ಕಾಡುತ್ತವೆ. ತಮ್ಮ ಗುರುಗಳಾದ ಚನ್ನಯ್ಯನವರನ್ನು ಕುರಿತು ಬರೆಯುವಾಗ  ರಹಮತ್ ಹೆಚ್ಚು ಆರ್ದ್ರರಾಗುತ್ತಾರೆ. ಅಷ್ಟೊಂದು ಮಹತ್ವಾಕಾಂಕ್ಷಿಯಲ್ಲದ, ಅಧಿಕಾರಕ್ಕಾಗಿ ಹಂಬಲಿಸದ, ಯಾರೊಂದಿಗೂ ಸ್ಪರ್ಧೆಗಿಳಿಯದ ಈ ಗುಣಗಳೇ ಚನ್ನಯ್ಯನವರು ನೈತಿಕತೆಯನ್ನು ಕಳೆದುಕೊಳ್ಳದಂತೆ ಬದುಕಲು ಕಾರಣಗಳಾಗಿರಬಹುದು ಎನ್ನುವ ಅನಿಸಿಕೆ ಲೇಖಕರದು. ಚನ್ನಯ್ಯನವರ ಮಹತ್ವಾಕಾಂಕ್ಷೆಯಂತೆ ಅವರ ಅವರ ಬರವಣಿಗೆ ಕೂಡ ಬಹಳ ಕಡಿಮೆ. ನಿವೃತ್ತಿಯ ನಂತರ ತೀರ ಒಂಟಿಯಾಗಿ ಬದುಕಿದ ಚನ್ನಯ್ಯನವರಿಗೆ ಸಾವು ಮತ್ತು ಅದರ ಕಠೋರತೆ ಅವರ ಬದುಕಿನ ಕಲ್ಪನೆಯನ್ನು ಗಾಢವಾಗಿ ಪ್ರಭಾವಿಸಿತೆನ್ನುವ ಲೇಖಕರು ಒಟ್ಟಾರೆ ಅವರು ಸಾವನ್ನು ಧೇನಿಸುತ್ತಿದ್ದ ಲೇಖಕನಾಗಿದ್ದರು ಎನ್ನುತ್ತಾರೆ.

    ಲಂಕೇಶ್ ೨೦ ನೇ ಶತಮಾನದ ಕರ್ನಾಟಕ ಸೃಷ್ಟಿಸಿದ ಮುಖ್ಯ ಸಾಂಸ್ಕೃತಿಕ ವ್ಯಕ್ತಿಗಳಲ್ಲಿ ಒಬ್ಬರು ಎಂದೆನ್ನುವ ರಹಮತ್ ಲಂಕೇಶ್ ಅವರನ್ನು ಮೆಚ್ಚುವಂತೆ ಅವರಲ್ಲಿನ ವೈರುಧ್ಯಗಳತ್ತಲೂ ಬೆರಳು ಮಾಡುತ್ತಾರೆ. ಅನ್ಯರ ಭಿನ್ನಾಭಿಪ್ರಾಯಗಳನ್ನು ಕೇಳಿಸಿಕೊಳ್ಳುವ ಸಂಯಮವಾಗಲಿ ಮತ್ತು ಸಂವಾದವನ್ನು ಮುಂದುವರೆಸಲು ಬೇಕಾದ ತಾಳ್ಮೆಯಾಗಲಿ ಲಂಕೇಶ್ ಅವರಲ್ಲಿ ಇರಲಿಲ್ಲ ಎನ್ನುವ ತಕರಾರು ಲೇಖಕರದು. ಹೀಗಿದ್ದೂ ಲಂಕೇಶ್ ತನ್ನ ಕಾಲದ ಎಲ್ಲ ಯಜಮಾನಿಕೆ, ಬೂಟಾಟಿಕೆ, ಓಲೈಸಿಕೆಗಳ ವಿರುದ್ಧ ಬಹುದೊಡ್ಡ ನೈತಿಕಶಕ್ತಿಯಾಗಿದ್ದರು ಎಂದು ಬರೆಯುತ್ತಾರೆ. ನಮ್ಮಲ್ಲಿ ಲೇಖಕರು ಎಂದರೆ ಬರೆಯುವವರು ಮಾತ್ರ, ಮತ್ತೊಬ್ಬರು ಬರೆದದ್ದನ್ನು ಓದಬೇಕಾದವರಲ್ಲ ಎಂಬ ಗ್ರಹಿಕೆ ಇರುವಾಗ ಕನ್ನಡದಲ್ಲಿ ತಮ್ಮ ಕಾಲದ ಎಲ್ಲ ತಲೆಮಾರಿನ ಬರಹಗಾರರು ಬರೆದುದನ್ನು ಗಂಭೀರವಾಗಿ ಓದಿ ಪ್ರತಿಕ್ರಿಯಿಸುತ್ತಿದ್ದ ಕೆಲವೇ ಲೇಖಕರಲ್ಲಿ ಲಂಕೇಶ್ ಒಬ್ಬರಾಗಿದ್ದರು ಎಂದು ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತಾರೆ. ಶಂಕರ್ ಮೊಕಾಶಿ ಪುಣೇಕರ್ ಅವರ ಕುರಿತು ಬರೆಯುವಾಗ ಯಾವ ಟೀಕೆ ಟಿಪ್ಪಣೆಗೂ ಆಸ್ಪದವಿಲ್ಲದಂತೆ ಅವರ ವಿದ್ವತ್ತು ಮತ್ತು ಅವರೊಳಗಿನ ಭೋಳೆತನವನ್ನು ಅತ್ಯಂತ ಆಪ್ತವಾಗಿ ಬರೆಯುತ್ತಾರೆ. ಪುಣೇಕರರ 'ಗಂಗವ್ವ ಗಂಗಾಮಾಯಿ' ಕನ್ನಡದ ಶ್ರೇಷ್ಠ ಕಾದಂಬರಿ ಎಂದೆನ್ನುವ ಲೇಖಕರು ಅವರು ತಮ್ಮ ಬರಹದ ಬಗ್ಗೆ ಯಾವ ಮಮಕಾರವನ್ನೂ ಬೆಳೆಸಿಕೊಂಡಿರಲಿಲ್ಲ ಎನ್ನುತ್ತಾರೆ.

     ಪುಸ್ತಕದ ಕೊನೆಯ ಭಾಗದಲ್ಲಿ ಲೇಖಕರು ವಿವಿಧ ಸಾಹಿತ್ಯಕ ವಿದ್ಯಮಾನಗಳಿಗೆ ಪ್ರತಿಕ್ರಿಯೆಯಾಗಿ ಬರೆದ ಟಿಪ್ಪಣಿಗಳಿವೆ. ಲೇಖನದ ಪ್ರಾರಂಭದಲ್ಲಿ ಹೂವಿನಹಡಗಲಿಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ತಮ್ಮ ಅಧ್ಯಕ್ಷಿಯ ಭಾಷಣದಲ್ಲಿ ಕುಂವೀ ಆಡಿದ ಮಾತುಗಳಿಗೆ ಪ್ರತಿಕ್ರಿಯಿಸುತ್ತ ರಹಮತ್ ಹಲವು ಪ್ರಶ್ನೆಗಳನ್ನೆತ್ತುತ್ತಾರೆ. ಹಗರಿಸೀಮೆಯ ಲೋಕ ಲೇಖಕನನ್ನು ಸೃಷ್ಟಿಸಬಲ್ಲದು ಎಂದು ಸಾಹಿತ್ಯಕ ಕಾರಣದಿಂದ ಮೆಚ್ಚುವಾಗ ಲೇಖಕ ಅದನ್ನು ವೈಭವೀಕರಿಸುತ್ತಿದ್ದಾನೆಯೋ ಅಥವಾ ಇದು ಬದಲಾಗಬೇಕು ಎಂಬ ದನಿಯನ್ನು ಹೊರಡಿಸುತ್ತಿದ್ದಾನೆಯೋ ಎಂದು ಪ್ರಶ್ನಿಸುತ್ತಾರೆ. ರಹಮತ್ ಅವರ ಪ್ರಕಾರ ವಿಶಿಷ್ಠ ಅನುಭವ ನೀಡುವ ಲೋಕವೊಂದೇ ಲೇಖಕನನ್ನು ರೂಪಿಸಲಾರದು. ಒಬ್ಬನನ್ನು ಕಥೆಗಾರನಾಗಿಸುವ ಪರಿಸರ ಮತ್ತು ಆ ಪರಿಸರವನ್ನು ಕತೆಯಾಗಿಸುವ ಮನುಷ್ಯ ಎರಡೂ ತಮ್ಮ ಒಳ ಅವಶ್ಯಕತೆಯಲ್ಲಿ ಏಕೀಭವಿಸಿದಾಗ ಮಾತ್ರ ಸಾಹಿತ್ಯ ಸೃಷ್ಟಿಯಾಗಬಲ್ಲದು. ಅಂಥದ್ದೊಂದು ಪ್ರಜ್ಞೆ ರೂಪುಗೊಳ್ಳುವುದು ಹೊರಗಿನ ನಾಗರಿಕ ಜಗತ್ತಿನಲ್ಲಿ ಎನ್ನುವ ಸ್ಪಷ್ಟ ನಿಲುವು ಅವರದು. ತಾನು ಲೇಖಕನಾಗಿ ರೂಪುಗೊಳ್ಳಲು ನೆರವಾಯಿತು ಎಂದು ಮೆಚ್ಚುಗೆವ್ಯಕ್ತಪಡಿಸುವಾಗ ಅನೇಕ ಸಲ ಆ ಪರಿಸರ (ಲೋಕ) ಆಧುನಿಕಗೊಳ್ಳಬೇಕಿಲ್ಲ ಎಂಬ ಅರ್ಥ ಹೊರಡುವ ಅಪಾಯವನ್ನು ಕುರಿತು ರಹಮತ್ ಇಲ್ಲಿ ಎಚ್ಚರಿಸುತ್ತಾರೆ.

    'ವಿಮರ್ಶೆ ಸೃಜನಶೀಲ ಸಾಹಿತ್ಯದಿಂದ ಕಲಿಯಬೇಕಾಗಿದೆ' ಎಂದ ಕವಿಯೊಬ್ಬರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಲೇಖಕರು  ಯಾರಿಂದ ಯಾರು ಕಲಿಯಬೇಕು ಎಂದು ಪ್ರಶ್ನಿಸುತ್ತಾರೆ. ಈ ಟಿಪ್ಪಣಿಯಲ್ಲಿ ವಿಮರ್ಶೆ ಎನ್ನುವುದು ಹೇಗಿರಬೇಕು ಎಂದು ವಿವರಿಸುತ್ತಾರೆ. ಜೊತೆಗೆ ಕನ್ನಡದಲ್ಲಿ ಸಧ್ಯದ ವಿಮರ್ಶಾ ಬರಹಗಳನ್ನು ವಿಶ್ಲೇಷಿಸಿ ವ್ಯಾಖ್ಯಾನಿಸುತ್ತಾರೆ. ಒಟ್ಟಾರೆ ರಹಮತ್ ಅವರಿಗೆ ಸಧ್ಯದ ವಾತಾವರಣದಲ್ಲಿ ವಿಮರ್ಶೆ ಎನ್ನುವುದು ಏಕಕಾಲಕ್ಕೆ ಬುದ್ಧಿ ಹೇಳಿಸಿಕೊಳ್ಳುವ ದಡ್ದನಂತೆ, ಪರಿಚಾರಿಕೆ ಮಾಡುವ ಊಳಿಗದವನಂತೆ, ಪ್ರಾಡೆಕ್ಟನ್ನು ಪ್ರಚಾರ ಮಾಡುವ ಜಾಹಿರಾತುದಾರನಂತೆ ಬಹುರೂಪಿಯಾಗಿ ಕಾಣುತ್ತದೆ. ತಮ್ಮ ಕೊನೆಯ ಟಿಪ್ಪಣಿಯಲ್ಲಿ ಲೇಖಕರು ಭೈರಪ್ಪನವರ ಕಾದಂಬರಿಗಳು ಹುಟ್ಟು ಹಾಕುವ ಪ್ರತಿಪಾದನೆಯನ್ನು ಕುರಿತು ಪ್ರತಿಕ್ರಿಯಿಸಿರುವರು. ಭೈರಪ್ಪನವರ ಹೆಸರು ಹಾಗೂ ಬದುಕಿನ ಹಿನ್ನೆಲೆಯನ್ನು ಆಧಾರವಾಗಿಟ್ಟುಕೊಂಡು ಇಂಥ ಭೈರಪ್ಪನವರು ಸೈದ್ದಾಂತಿಕವಾಗಿಯಾದರೂ ವರ್ಗವಾದಿ ಚಿಂತಕರಾಗಬೇಕಿತ್ತು ಆದರೆ ಅವರು ಎಡ ಚಿಂತನೆಯನ್ನು ವಿರೋಧಿಸುತ್ತಾರೆ ಎಂದು ವಿಮರ್ಶಿಸುತ್ತಾರೆ. ತಮ್ಮ ಐಡಿಯಾಲಜಿ ಮಂಡನೆಗಾಗಿ ಭೈರಪ್ಪನವರು ಪಾತ್ರಗಳನ್ನು ನಿರ್ದಯವಾಗಿ ಕುರೂಪಗೊಳಿಸಬಲ್ಲರು ಎಂದು ನುಡಿಯುವ ಲೇಖಕರು ಇದರಿಂದ ಒಬ್ಬ ಕಥೆಗಾರ ತನ್ನ ಇಂಟಿಗ್ರಿಟಿಯನ್ನು ಕಳೆದುಕೊಳ್ಳುವನು ಎಂದು ಆತಂಕ ವ್ಯಕ್ತಪಡಿಸುವರು. ಭೈರಪ್ಪನವರು ಕುರೂಪಗೊಳಿಸಿದ ಪಾತ್ರಗಳಿಗೆ ಉದಾಹರಣೆಯಾಗಿ ಅವರ ಕಾದಂಬರಿಗಳ ಕೆಲವು ಪಾತ್ರಗಳನ್ನು ಹೆಸರಿಸುವ ಲೇಖಕರು ಭೈರಪ್ಪನವರ ಕಾದಂಬರಿಗಳಿಗೂ ಹಾಗೂ ಸಂಘ ಪರಿವಾರಕ್ಕೂ ಸಂಬಂಧ ಕಲ್ಪಿಸುತ್ತಾರೆ. ಕನ್ನಡಕ್ಕೆ ಶ್ರೇಷ್ಠ ಕಾದಂಬರಿಗಳನ್ನು ಕೊಡುಗೆಯಾಗಿ ನೀಡಿರುವ ಒಬ್ಬ ಕಾದಂಬರಿಕಾರನ ಮೇಲೆ ರಹಮತ್ ಒಂದಿಷ್ಟು ಹೆಚ್ಚೆ ಎನ್ನುವಂತೆ ಪ್ರಹಾರ ಮಾಡಿರುವರು ಎನ್ನುವ ಧೋರಣೆ ನನ್ನದು.

    ಪುಸ್ತಕದಲ್ಲಿ ರಾಮಚಂದ್ರ ಶರ್ಮ, ಕಾರಂತ, ಬಸವಣ್ಣ, ರಾಘವಾಂಕ, ಮುಸ್ಲಿಂ ತತ್ವಪದಕಾರರು, ವಡ್ಡಾರಾಧನೆ ಕುರಿತು ವಿಮರ್ಶಾ ಲೇಖನಗಳಿವೆ. ಒಟ್ಟಿನಲ್ಲಿ ಕನ್ನಡದ ಸಾಹಿತ್ಯ ಹಾಗೂ ಸಂಸ್ಕೃತಿ ಕುರಿತು ತಮ್ಮ ವಸ್ತುನಿಷ್ಠ ವಿಮರ್ಶೆಯಿಂದ ಪುಸ್ತಕದ ಎಲ್ಲ ಲೇಖನಗಳು ಓದುಗರಿಗೆ ಮಹತ್ವದ ಮಾಹಿತಿಯನ್ನೊದಗಿಸುತ್ತವೆ. ರಹಮತ್ ತರೀಕೆರೆ ಅವರ ಪ್ರಯತ್ನ, ಪೂರ್ವ ತಯ್ಯಾರಿ, ಆಳವಾದ ಅಧ್ಯಯನ, ಸಂಶೋಧನ ಮನೋಭಾವ, ವಸ್ತುನಿಷ್ಠ ಗ್ರಹಿಕೆ ಪ್ರತಿ ಲೇಖನದ ಓದಿನಲ್ಲೂ ಓದುಗನ ಅನುಭವಕ್ಕೆ ದಕ್ಕುತ್ತವೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 



Monday, August 10, 2015

ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ ಗೊಂದಲಗಳು

       






         








                ಕೆಲವು ದಿನಗಳಿಂದ ಶಿಕ್ಷಣ ಕ್ಷೇತ್ರ ಬಹು ಚರ್ಚಿತ ವಿಷಯವಾಗಿ ರೂಪಾಂತರಗೊಂಡಿದೆ. ಅದಕ್ಕೆ ಸಾಕಷ್ಟು ಕಾರಣಗಳಿವೆ. ಹೀಗೆ ಚರ್ಚೆಗೆ ಎತ್ತಿಕೊಂಡ ಬಹುಮುಖ್ಯ ವಿಷಯಗಳಲ್ಲಿ ಹತ್ತನೇ ತರಗತಿಯ ಫಲಿತಾಂಶದಲ್ಲಾದ ಇಳಿಕೆ, ದ್ವಿತೀಯ ಪಿಯುಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿ ಮತ್ತು ಫಲಿತಾಂಶದಲ್ಲಾದ ನ್ಯೂನ್ಯತೆ, ಸಿ ಇ ಟಿ ಫಲಿತಾಂಶದಲ್ಲಿನ ಗೊಂದಲಗಳು, ಉನ್ನತ ಶಿಕ್ಷಣದಲ್ಲಿನ ಸಂಶೋಧನಾ ವಿದ್ಯಾರ್ಥಿಗಳ ಗೋಳು, ಉಪಕುಲಪತಿಗಳ ನೇಮಕಾತಿಯಲ್ಲಿನ ವಿಳಂಬ ಹೀಗೆ ನೂರೆಂಟು ಸಮಸ್ಯೆಗಳು ಚರ್ಚೆಗೆ ಗ್ರಾಸವಾಗುತ್ತಿವೆ. ಹೀಗೆ ಮಾಧ್ಯಮಗಳು ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಕುರಿತು ಚರ್ಚಿಸುತ್ತಿರುವ ಹೊತ್ತಿನಲ್ಲೇ ವಿದ್ಯಾರ್ಥಿಗಳು ಮತ್ತು ಪಾಲಕರು ಈ ಎಲ್ಲ ಗೊಂದಲಗಳಿಂದ ಆತಂಕ ಪಡುತ್ತಿರುವರು. ಕೆಲವು ದಿನಗಳ ಹಿಂದೆ ಹತ್ತನೇ ತರಗತಿಯ ಫಲಿತಾಂಶ ಪ್ರಕಟವಾದ ಸಂದರ್ಭ ನನ್ನ ಪರಿಚಯದ ಹುಡುಗ ತಾನು ನಿರೀಕ್ಷಿಸಿದ ಫಲಿತಾಂಶ ಬರಲಿಲ್ಲವೆನ್ನುವ ಕಾರಣಕ್ಕೆ ತೀರ ಖಿನ್ನತೆಗೆ ಒಳಗಾದ. ಮಗನ ವರ್ತನೆ ಪಾಲಕರಿಗೆ ಚಿಂತೆಯನ್ನುಂಟು ಮಾಡಿತು. ದುಬಾರಿ ಫೀಜು ಕೊಟ್ಟು ಖಾಸಗಿ ಶಾಲೆಯಲ್ಲಿ ಪ್ರವೇಶ ದೊರಕಿಸಿ ಕೊಡುವಷ್ಟು ಅವರು ಆರ್ಥಿಕವಾಗಿ ಸ್ಥಿತಿವಂತರಲ್ಲದ ಕಾರಣ ತಮ್ಮ ಮಗನನ್ನು ಸರ್ಕಾರಿ ಶಾಲೆಗೇ ಸೇರಿಸಿದ್ದರು. ಓದಿನಲ್ಲಿ ಜಾಣನಾದ ಹುಡುಗ ಸರ್ಕಾರಿ ಶಾಲೆಯಾದರೂ ಪ್ರತಿವರ್ಷ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗುತ್ತಿದ್ದ. ಆದರೆ ಆತ ಹತ್ತನೇ ತರಗತಿಗೆ ಪ್ರವೇಶ ಪಡೆಯುವ ವೇಳೆಗೆ ಅಲ್ಲಿದ್ದ ಕೆಲವು ಶಿಕ್ಷಕರನ್ನು ಹಠಾತ್ತನೆ ವರ್ಗಾವಣೆ ಮಾಡಿದ್ದು ವಿದ್ಯಾರ್ಥಿಗಳ ಓದಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಹೊಸ ಶಿಕ್ಷಕರು ಬರುವಲ್ಲಿನ ವಿಳಂಬ, ತರಗತಿಗಳನ್ನು ನಡೆಸುವಲ್ಲಿ ಆದ ಅವ್ಯವಸ್ಥೆ ಇತ್ಯಾದಿ ಕಾರಣಗಳಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳು ವಾರ್ಷಿಕ ಪ್ರಶ್ನೆ ಪತ್ರಿಕೆಗಳಿಗೆ ಸರಿಯಾಗಿ ಉತ್ತರಿಸಲು ಸಾಧ್ಯವಾಗದೆ ಅನೇಕ ವಿದ್ಯಾರ್ಥಿಗಳು ಅನುತ್ತೀರ್ಣರಾದರು. ಕೆಲವು ಸರ್ಕಾರಿ ಶಾಲೆಗಳಲ್ಲಿ ಪರೀಕ್ಷಾ ಫಲಿತಾಂಶದ ಶೇಕಡಾವಾರು ಪ್ರಮಾಣ ತೀರ ಕುಸಿಯಿತು. ಈಗಾಲೇ ಸರ್ಕಾರಿ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳಿಗೆ ತಮ್ಮ ಭವಿಷ್ಯದ ಬಗ್ಗೆ ಆತಂಕವಾಗಬಹುದು. ಪರಿಣಾಮವಾಗಿ ಕೆಲವು ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಂದ ಖಾಸಗಿ ಶಾಲೆಗಳಿಗೆ ಕರೆದೊಯ್ಯುವ ಸಾಧ್ಯತೆ ಹೆಚ್ಚುತ್ತದೆ. ಇನ್ನು ಆರ್ಥಿಕವಾಗಿ ಸ್ಥಿತಿವಂತರಲ್ಲದ ಪಾಲಕರಿಗೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲೇ ಓದಿಸುವ ಅನಿವಾರ್ಯತೆ ಎದುರಾಗುತ್ತದೆ. ಇಂಥದ್ದೊಂದು ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ಸರ್ಕಾರದ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ಕಡಿಮೆ ಫಲಿತಾಂಶ ಹೊಂದಿದ ಶಾಲೆಗಳಿಗೆ ಫಲಿತಾಂಶ ಸುಧಾರಣೆಗೆ ನೋಟಿಸ್ ಜಾರಿ ಮಾಡುತ್ತದೆ. ಜೊತೆಗೆ ಫಲಿತಾಂಶದಲ್ಲಿ ಸುಧಾರಣೆ ಆಗದೆ ಇದ್ದಲ್ಲಿ ಅಂಥ ಶಾಲೆಗಳನ್ನು ಮುಚ್ಚುವ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡುತ್ತದೆ. ಹೀಗೊಂದು ವೇಳೆ ಶಾಲೆಯನ್ನು ಮುಚ್ಚುವುದಾದರೆ ಅಲ್ಲಿ ಈಗಾಗಲೇ ಓದುತ್ತಿರುವ ಮಕ್ಕಳ ಶಿಕ್ಷಣದ ಗತಿ ಏನು ? ಅವರು ಯಾವ ಶಾಲೆಯಲ್ಲಿ ಪ್ರವೇಶ ಪಡೆಯಬೇಕು ? ಈ ಪ್ರಶ್ನೆಗಳಿಗೆ ಶಿಕ್ಷಣ ಇಲಾಖೆ ಉತ್ತರಿಸಬೇಕು.

                 ಇನ್ನು ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ ಮತ್ತದರ ಫಲಿತಾಂಶದಲ್ಲಿ ಅನೇಕ ಗೊಂದಲಗಳು ಕಾಣಿಸಿಕೊಂಡವು. ಹೀಗೆ ೨೦೧೫ ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿನ ಅನೇಕ ಗೊಜಲುಗಳು ನಮ್ಮ ವಿದ್ಯಾರ್ಥಿಗಳ ಮಾನಸಿಕ ಸ್ಥೈರ್ಯ ಕುಸಿಯುವಂತೆ ಮಾಡಿದವು. ಪ್ರಶ್ನೆ ಪತ್ರಿಕೆಯಲ್ಲಿನ ಕೆಲವು ತಪ್ಪುಗಳಿಂದಾಗಿ ಪ್ರಶ್ನೆ ಪತ್ರಿಕೆಗಳನ್ನು ತಯಾರು ಮಾಡುವ ಉಪನ್ಯಾಸಕರ ವಿದ್ಯಾರ್ಹತೆಯನ್ನೇ ಪ್ರಶ್ನಿಸುವಂತಾಯಿತು. ಜೊತೆಗೆ ಹೀಗೆ ತಪ್ಪುಗಳಿಂದ ಕೂಡಿದ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಮಂಡಳಿಯು ಆಯ್ಕೆ ಮಾಡಿದ್ದು ಕೂಡ ಪರೀಕ್ಷಾ ಮಂಡಳಿಯ ಬದ್ಧತೆ ಮತ್ತು ಪ್ರಾಮಾಣಿಕತೆಯನ್ನು ಪಾಲಕರು ಹಾಗೂ ವಿದ್ಯಾರ್ಥಿಗಳು ಸಂಶಯದಿಂದ ನೋಡುವಂತಾಯಿತು. ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳು ಮಂಡಳಿಯು ನಿರ್ಧಿಷ್ಟ ಪಡಿಸಿರುವ ಪಠ್ಯಕ್ರಮಕ್ಕೆ ಸೀಮಿತವಾಗಿರಬೇಕು. ಪಠ್ಯಕ್ರಮದ ವ್ಯಾಪ್ತಿಯನ್ನು ಮೀರಿದ ಪ್ರಶ್ನೆಗಳು ಎದುರಾದಾಗ ವರ್ಷಪೂರ್ತಿ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳು ಸಹಜವಾಗಿಯೇ ಆತಂಕಕ್ಕೆ ಒಳಗಾಗುವರು. ಹೀಗೆ ಪರೀಕ್ಷೆಯ ಒಂದು ಹಂತದಲ್ಲಿ ಎದುರಾಗುವ ಸಮಸ್ಯೆ ಮತ್ತು ಆತಂಕ ಅದು ವಿದ್ಯಾರ್ಥಿಗಳ ಮಾನಸಿಕ ಧೃಡತೆಯನ್ನು ಕುಗ್ಗಿಸಿ ಮುಂದಿನ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಲು ಅವರಿಗೆ ಸಾಧ್ಯವಾಗದೇ ಹೋಗಬಹುದು. ನಿಜಕ್ಕೂ ಸರ್ಕಾರದ ಶಿಕ್ಷಣ ಇಲಾಖೆ ಇಲ್ಲಿ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿದೆ. ಪರೀಕ್ಷಾ ವೇಳೆಯಲ್ಲಿ ಕಾಣಿಸಿಕೊಂಡ ಗೊಂದಲ ಫಲಿತಾಂಶದ ಸಂದರ್ಭದಲ್ಲೂ ಕಾಣಿಸಿಕೊಂಡಿದ್ದು ವಿಪರ್ಯಾಸದ ಸಂಗತಿ. ಪದವಿಪೂರ್ವ ಶಿಕ್ಷಣ ಇಲಾಖೆ ಫಲಿತಾಂಶ ಪ್ರಕಟಣೆಗೆ ಹೊರಗುತ್ತಿಗೆ ನೀಡಿದ್ದರಿಂದ ಫಲಿತಾಂಶವನ್ನು ಅನೇಕ ವೆಬ್ ತಾಣಗಳು ಪ್ರಕಟಿಸಿದವು. ಆದರೆ ಸಮಸ್ಯೆ ಎದುರಾದದ್ದು ಒಂದು ವೆಬ್ ತಾಣದಲ್ಲಿ ಉತ್ತೀರ್ಣನಾದ ವಿದ್ಯಾರ್ಥಿ ಇನ್ನೊಂದು ವೆಬ್ ತಾಣದಲ್ಲಿ ಅನುತ್ತೀರ್ಣನಾಗಿದ್ದ. ಈ ಖಾಸಗಿ ವೆಬ್ ತಾಣಗಳಲ್ಲಿ ಫಲಿತಾಂಶವನ್ನು ಸರಿಯಾಗಿ ಹೊಂದಿಸದೆ ಇದ್ದುದ್ದರಿಂದ ಇಂಥ ಅಚಾತುರ್ಯ ಸಂಭವಿಸಿತು. ಈ ಅಚಾತುರ್ಯದಿಂದಾಗಿ ಉತ್ತೀರ್ಣರಾದ ಅನೇಕ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದೆವೆನ್ನುವ ಅಪಮಾನದಿಂದ ಆತ್ಮಹತ್ಯೆಗೆ ಯತ್ನಿಸಿದರು. ಫಲಿತಾಂಶ ವಿದ್ಯಾರ್ಥಿಗಳಿಗೆ ಬೇಗ ತಲುಪಲಿ ಎನ್ನುವ ಕಾರಣಕ್ಕೆ ಪದವಿ ಪೂರ್ವ ಶಿಕ್ಷಣ ಮಂಡಳಿಯು ಅನೇಕ ಖಾಸಗಿ ವೆಬ್ ತಾಣಗಳಿಗೆ ಫಲಿತಾಂಶವನ್ನು ಪ್ರಕಟಿಸುವ ಕೆಲಸ ನೀಡಿದ್ದು ಸ್ವಾಗತಾರ್ಹ ನಡೆ. ಆದರೆ ಯಾವ ಪೂರ್ವಭಾವಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸದೆ ಏಕಾಏಕಿ ಹೀಗೆ ನಿರ್ಧಾರ ತೆಗೆದುಕೊಂಡಿದ್ದು ಅನೇಕ ವಿದ್ಯಾರ್ಥಿಗಳ ಬದುಕಿಗೆ ಕಂಟಕವಾಯಿತು. ಮಂಡಳಿಯು ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳುವ ಪೂರ್ವದಲ್ಲಿ ಅದರ ಸಾಧಕ ಬಾಧಕಗಳನ್ನು ಕುರಿತು ಯೋಚಿಸಬೇಕಿತ್ತು. ಆದರೆ ನಿರ್ಧಾರ ತೆಗೆದುಕೊಳ್ಳುವವರು ಅಸಮರ್ಥರೂ  ಮತ್ತು ಅದಕ್ಷರೂ ಆದಾಗ ಇಂಥ ಸಮಸ್ಯೆಗಳು ಎದುರಾಗುತ್ತವೆ. ಇದೆ ಸಂದರ್ಭ ಪ್ರಶ್ನೆ ಪತ್ರಿಕೆಯಲ್ಲಿ ನುಸುಳಿದ ತಪ್ಪುಗಳನ್ನು ಕುರಿತು ಮಂಡಳಿಯು ಯಾವ ನಿರ್ಧಾರ ತೆಗೆದುಕೊಂಡಿತು ಎನ್ನುವ ಪ್ರಶ್ನೆ ಎದುರಾಗುತ್ತದೆ. ಹೀಗೆ ತನ್ನಿಂದಾದ ತಪ್ಪುಗಳನ್ನು ಸರಿಪಡಿಸಲು ಮಂಡಳಿಯು ವಿದ್ಯಾರ್ಥಿಗಳಿಗೆ ಆದ ತಪ್ಪುಗಳ ಸಂಖ್ಯೆಯನ್ನಾಧರಿಸಿ ಹೆಚ್ಚುವರಿ ಅಂಕಗಳನ್ನು (ಗ್ರೇಸ್) ಕೊಡಲು ನಿರ್ಧರಿಸಿತು. ಇಲ್ಲಿ ಮತ್ತೆ ಮಂಡಳಿ ವಿದ್ಯಾರ್ಥಿಗಳ ಮತ್ತು ಪಾಲಕರ ಪ್ರತಿಭಟನೆಯನ್ನು ಎದುರಿಸಬೇಕಾಯಿತು. ಏಕೆಂದರೆ ಯಾವ ವಿದ್ಯಾರ್ಥಿ ಪಠ್ಯಕ್ರಮಕ್ಕೆ ಸೇರದೆ ಇದ್ದ ಪ್ರಶ್ನೆಗಳಿಗೂ ಉತ್ತರಿಸಲು ಪ್ರಯತ್ನಿಸಿದ್ದಲ್ಲಿ ಅಂಥ ವಿದ್ಯಾರ್ಥಿಗಳಿಗೆ ಮಾತ್ರ ಹೆಚ್ಚುವರಿ ಅಂಕಗಳನ್ನು ನೀಡಲಾಯಿತು. ಯಾವ ವಿದ್ಯಾರ್ಥಿ ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸದೆ ಕೈ ಬಿಟ್ಟಲ್ಲಿ ಅಂಥವರು ಈ ಹೆಚ್ಚುವರಿ ಅಂಕಗಳನ್ನು ಪಡೆಯುವ ಸೌಲಭ್ಯದಿಂದ ವಂಚಿತರಾಗಬೇಕಾಯಿತು. ತಪ್ಪು ಪ್ರಶ್ನೆಗಳನ್ನು (ಪಠ್ಯಕ್ರಮಕ್ಕೆ ಸೇರದ) ಆಯ್ಕೆ ಮಾಡಿದ್ದೆ ಮಂಡಳಿಯ ಹಾಸ್ಯಾಸ್ಪದ ನಡೆಯಾಗಿರುವಾಗ ಹೆಚ್ಚುವರಿ ಅಂಕಗಳ ಫಲಾನುಭವಿಗಳನ್ನು ನಿರ್ಧರಿಸಲು ಉಪಯೋಗಿಸಿದ ಮಾನದಂಡ ಮಂಡಳಿಯ ಅಧಿಕಾರಿಗಳ ಅನರ್ಹತೆಗೆ ಕನ್ನಡಿ ಹಿಡಿಯಿತು. ಈ ವಿಷಯವಾಗಿ ಮಂಡಳಿಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಲು ಪಾಲಕರು ಮತ್ತು ವಿದ್ಯಾರ್ಥಿಗಳು ಪ್ರಯತ್ನಿಸಿದಾಗ ಅಧಿಕಾರಿಗಳ ಭೇಟಿ ಲಭ್ಯವಾಗದೆ ಅನಿವಾರ್ಯವಾಗಿ ಪ್ರತಿಭಟನೆಗಿಳಿಯಬೇಕಾಯಿತು. ಉನ್ನತ ಅಧಿಕಾರಿಗಳು ಪ್ರತಿಭಟನೆ ಕಾಣಿಸಿಕೊಂಡ ಎರಡು ದಿನಗಳ ನಂತರ ವಿದ್ಯಾರ್ಥಿಗಳು ಮತ್ತು ಪಾಲಕರನ್ನು ಭೇಟಿಯಾದದ್ದು ಹಾಗೂ ಶಿಕ್ಷಣ ಸಚಿವರು ಪತ್ರಿಕಾಗೊಷ್ಠಿಯನ್ನು ವಿಳಂಬವಾಗಿ ಕರೆದ ಆ ನಡೆಯನ್ನು ಗಮನಿಸಿದಾಗ ಸರ್ಕಾರ ಮಕ್ಕಳ ಶಿಕ್ಷಣದಂಥ ಗಂಭೀರ ವಿಷಯವನ್ನು ಎಷ್ಟು ಲಘುವಾಗಿ ಪರಿಗಣಿಸಿದೆ ಎಂದು ಗೊತ್ತಾಗುತ್ತದೆ. ಈ ದ್ವಿತೀಯ ಪಿಯುಸಿ ಪರೀಕ್ಷೆ ಮತ್ತು ಅದರ ಫಲಿತಾಂಶದಲ್ಲಿ ಕಾಣಿಸಿಕೊಂಡ ಸಮಸ್ಯೆಗಳಿಂದಾಗಿ ಸಿ ಇ ಟಿ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಕೆಲವು ದಿನಗಳವರೆಗೆ ಮುಂದೂಡಬೇಕಾದ ಅನಿವಾರ್ಯತೆ ಎದುರಾಯಿತು. ತಾವು ಬರೆದ ಪ್ರವೇಶ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾದು ಕುಳಿತಿದ್ದ ವಿದ್ಯಾರ್ಥಿಗಳಿಗೆ ಶಿಕ್ಷಣ ಮಂಡಳಿಯ ಈ ನಿರ್ಧಾರದಿಂದ ಮತ್ತಷ್ಟು ಆಘಾತವಾಯಿತು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಣಿಸಿಕೊಂಡ ತಪ್ಪುಗಳಂತೆ ಸಿ ಇ ಟಿ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲೂ ಕೆಲವೊಂದು ತಪ್ಪುಗಳು ನುಸುಳಿದವು. ಇದು ನಮ್ಮ ಮಕ್ಕಳಿಗೆ ಪಾಠ ಮಾಡುವ ಉಪನ್ಯಾಸಕರ ಯೋಗ್ಯತೆ ಮತ್ತು ಅರ್ಹತೆಯನ್ನು ಮತ್ತೊಮ್ಮೆ ಅನಾವರಣಗೊಳಿಸಿತು. ಆದ ತಪ್ಪನ್ನು ಮುಚ್ಚಿಕೊಳ್ಳಲು ಸರ್ಕಾರ ಮತ್ತದರ ಭಾಗವಾದ ಶಿಕ್ಷಣ ಮಂಡಳಿ ಜೊತೆಗೂಡಿ ಮತ್ತೆ ಹೆಚ್ಚುವರಿ ಅಂಕಗಳ ಮೊರೆ ಹೋದವು. ಅತಿ ಕಡಿಮೆ ಅಂಕಗಳ ಅಂತರದಲ್ಲಿ ಸಿ ಇ ಟಿ ಪ್ರವೇಶ ಪರೀಕ್ಷೆಯ Rank ನಿರ್ಧಾರವಾಗುವುದರಿಂದ ಮಂಡಳಿಯ ಹೆಚ್ಚುವರಿ ಅಂಕಗಳನ್ನು ನೀಡುವ ನಡೆ ಮೆರಿಟ್ ವಿದ್ಯಾರ್ಥಿಗಳ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಒಟ್ಟಿನಲ್ಲಿ ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಶಿಕ್ಷಣ ಮಂಡಳಿಯು ಮಾಡಿದ ತಪ್ಪುಗಳಿಂದಾಗಿ ವಿದ್ಯಾರ್ಥಿಗಳು ಮತ್ತು ಪಾಲಕರು ಆತಂಕ ಹಾಗೂ ಒತ್ತಡದಲ್ಲಿ ಅನೇಕ ದಿನಗಳನ್ನು ಕಳೆಯಬೇಕಾಯಿತು.

                 ಶಿಕ್ಷಣದ ವಿಷಯವಾಗಿ ಇನ್ನೊಂದು ಬಹು ಚರ್ಚಿತ ಸಂಗತಿ ಎಂದರೆ ಅದು ಏಕರೂಪ ಪಠ್ಯಕ್ರಮಕ್ಕೆ ಸಂಬಂಧಿಸಿದ್ದು. ಕೇಂದ್ರ ಸರ್ಕಾರ ಕೆಲವು ವರ್ಷಗಳ ಹಿಂದೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಜಾರಿಗೆ ತರುವ ಪ್ರಯತ್ನ ಮಾಡಿದಾಗ ಆಗ ಎಲ್ಲ ರಾಜ್ಯಗಳಲ್ಲಿ ಏಕರೂಪ ಪಠ್ಯಕ್ರಮದ ಮೂಲಕ ಬೋಧಿಸುವ ಸಿದ್ಧತೆ ಪ್ರಾರಂಭವಾಯಿತು. ಪರಿಣಾಮವಾಗಿ ಪಠ್ಯ ಪುಸ್ತಕಗಳಲ್ಲಿ ಪ್ರಾದೇಶಿಕತೆ ಮಾಯವಾಗಿ ಮಕ್ಕಳ ಮೇಲೆ ರಾಷ್ಟ್ರೀಯ ಸಂಗತಿಗಳನ್ನು ಬಲವಂತವಾಗಿ ಹೇರಿದಂತಾಗುತ್ತದೆ. ತನ್ನ ಪರಿಸರದಲ್ಲಿನ ಪರಿಚಿತ ಸಂಗತಿಗಳನ್ನು ಓದುತ್ತಿದ್ದ ಮಗು ತನ್ನದಲ್ಲದ ಅಪರಿಚಿತ ವಿಷಯಗಳನ್ನು ಅಭ್ಯಾಸ ಮಾಡಬೇಕಾದ ಅನಿವಾರ್ಯತೆ ಎದುರಾಯಿತು. ಇದು ಭಾಷಾ ವಿಜ್ಞಾನ ಮತ್ತು ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದ ಸಮಸ್ಯೆಯಾದರೆ ಗಣಿತ ಮತ್ತು ವಿಜ್ಞಾನದ ವಿಷಯಗಳು ಅತ್ಯಂತ ಜಟಿಲವಾಗಿವೆ. ಏನೆಲ್ಲ ಸಮಸ್ಯೆಗಳ ನಡುವೆಯೂ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಕೇಂದ್ರೀಯ ಪಠ್ಯಕ್ರಮವನ್ನು ಪರಿಚಯಿಸುವ ಯೋಜನೆಗೆ ಚಾಲನೆ ದೊರೆತಿದೆ. ರಾಷ್ಟ್ರ ಮಟ್ಟದ ಅರ್ಹತಾ ಪರೀಕ್ಷೆಯಲ್ಲಿ ಪ್ರಾದೇಶಿಕ ಅಸಮಾನತೆ ಇಲ್ಲದೆ ಎಲ್ಲ ಮಕ್ಕಳೂ ಜೊತೆಯಾಗಿ ಸ್ಪರ್ಧಿಸಲಿ ಎನ್ನುವ ಸರ್ಕಾರದ ಕ್ರಮವೇನೋ ಸ್ವಾಗತಾರ್ಹ. ಆದರೆ ಹೀಗೆ ಮಾಡುವಾಗ ಇಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪ್ರಶ್ನೆ ಎದುರಾಗುತ್ತದೆ. ಏಕರೂಪ ಪಠ್ಯಕ್ರಮದ ವ್ಯಾಪ್ತಿಗೆ ಕನ್ನಡ ಮಾಧ್ಯಮದ ಪಠ್ಯಕ್ರಮವನ್ನು ಸೇರಿಸುವುದಾದರೂ ಹೇಗೆ. ಪಿಯುಸಿ ಹಂತದಲ್ಲಿ ಗಣಿತ ಮತ್ತು ವಿಜ್ಞಾನವನ್ನು ಕನ್ನಡ ಮಾಧ್ಯಮದಲ್ಲಿ ಕಲಿಯಲು ಅನುಕೂಲ ಮತ್ತು ಅವಕಾಶವಿಲ್ಲದಂತ ಹೊತ್ತಿನಲ್ಲಿ ಕನ್ನಡ ಮಾಧ್ಯಮದ ಶಿಕ್ಷಣವನ್ನು ಕೇಂದ್ರೀಯ ಪಠ್ಯಕ್ರಮಕ್ಕನುಗುಣವಾಗಿ ಅಣಿಗೊಳಿಸಲು ಸಾಧ್ಯವೇ? ಸಾಧ್ಯವಿಲ್ಲ ಎನ್ನುವುದಾದರೆ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳು ಇಂಗ್ಲಿಷ್ ಮಾಧ್ಯಮದ ಏಕರೂಪ ಪಠ್ಯಕ್ರಮವನ್ನು ಅಭ್ಯಸಿಸುತ್ತಿರುವ ಮಕ್ಕಳ ಪ್ರಬಲ ಸ್ಪರ್ಧೆಯ ಎದುರು ಅವರುಗಳೆಂದು ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯಬೇಕು? ಅಂಥದ್ದೊಂದು ಸಾಧ್ಯತೆ ಅಸಾಧ್ಯವಾಗಿರುವುದರಿಂದ ಕನ್ನಡ ಭಾಷೆಯಲ್ಲಿ ಓದುತ್ತಿರುವ ಬಡ ಮಕ್ಕಳು ಹೋಟೆಲ್ಲುಗಳಲ್ಲೋ, ಕಿರಾಣಿ ಅಂಗಡಿಗಳಲ್ಲೋ ಕೆಲಸ ಮಾಡುತ್ತ ತಮ್ಮ ಬದುಕು ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳಬೇಕಾಗುತ್ತದೆ.

               ಶಿಕ್ಷಣದ ವಿಷಯವಾಗಿ ಯಾವುದೇ ಕಾಯ್ದೆ ಕಾನೂನು ರೂಪಿಸುವುದಕ್ಕಿಂತ ಮೊದಲು ಸರ್ಕಾರ ಅದರ ಸಾಧಕ ಬಾಧಕಗಳನ್ನು ಕುರಿತು ವಿವೇಚಿಸುವುದೊಳಿತು. ಸ್ಥಿತಿವಂತರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಕಳುಹಿಸಿದರೆ ಬಡ ಮಕ್ಕಳಿಗಾಗಿ ಸರ್ಕಾರದ ಕನ್ನಡ ಶಾಲೆಗಳಿವೆ ಎನ್ನುವ ವಿತಂಡವಾದ ಸರಿಯಲ್ಲ. ಶಿಕ್ಷಣದ ಮಾಧ್ಯಮವನ್ನು ಸಾಮರ್ಥ್ಯದ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳುವುದಕ್ಕಿಂತ ಅದನ್ನು ಆಸಕ್ತಿಗನುಗುಣವಾಗಿ ಆಯ್ಕೆ ಮಾಡಿಕೊಳ್ಳುವಂತ ವಾತಾವರಣ ನಿರ್ಮಾಣವಾಗಬೇಕು. ಬಡವರ ಮತ್ತು ಶ್ರೀಮಂತರ ಮಕ್ಕಳು ಕೂಡಿಯೇ ಕನ್ನಡ ಶಾಲೆಗಳಲ್ಲೂ ಮತ್ತು ಇಂಗ್ಲಿಷ್ ಶಾಲೆಗಳಲ್ಲೂ ಕಲಿಯುವಂತಹ ದಿನಗಳು ಬರಬೇಕು.

                 ಇದೇ ಸಂದರ್ಭ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿನ ಗೊಜಲುಗಳು ನಮ್ಮ ವಿದ್ಯಾರ್ಥಿಗಳನ್ನು ಆತಂಕಕ್ಕೆ ದೂಡಿವೆ. ಕೆಲವು ದಿನಗಳ ಹಿಂದೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ತಾವು ಕೇಳಿದಷ್ಟು ಹಣ ನೀಡಿದಲ್ಲಿ ಸಂಶೋಧನೆಗೆ ಸಹಕರಿಸುವುದಾಗಿ ತಮ್ಮ ಸಂಶೋಧನಾ ವಿದ್ಯಾರ್ಥಿಗಳಿಗೆ ಬೆದರಿಸಿದ ಪ್ರಸಂಗ ಮಾಧ್ಯಮಗಳಲ್ಲಿ ವರದಿಯಾಯಿತು. ನಿಜಕ್ಕೂ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಈ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬಹುದೊಡ್ಡ ಸಮಸ್ಯೆ ಇದು. ಜೊತೆಗೆ ಸಂಶೋಧನೆಯಲ್ಲಿ ಮಾರ್ಗದರ್ಶನ ಮಾಡುತ್ತಿರುವ ಪ್ರಾಧ್ಯಾಪಕರು ತಮ್ಮ ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಸಂಗತಿ ಎಲ್ಲರಿಗೂ ಗೊತ್ತಿರುವ ಸತ್ಯ. ಈಗಾಗಲೇ ಈ ವಿಷಯವಾಗಿ ವಿಶ್ವವಿದ್ಯಾಲಯಗಳಲ್ಲಿನ ಅನೇಕ ಪ್ರಾಧ್ಯಾಪಕರ ಮೇಲೆ ದೂರುಗಳನ್ನು ದಾಖಲಿಸಲಾಗಿದೆ. ಆದರೂ ಸರ್ಕಾರ ಈ ವಿಷಯವಾಗಿ ಯಾವ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡ ಉದಾಹರಣೆಗಳಿಲ್ಲ. ವಿಶ್ವವಿದ್ಯಾಲಯಗಳಲ್ಲಿನ ಪ್ರಾಧ್ಯಾಪಕರಿಗೆ ಸಂಶೋಧನಾ ಮಾರ್ಗದರ್ಶನವೆನ್ನುವುದು ಹಣ ಮಾಡುವ ದಂಧೆಯಾದಾಗ ಆಗ ಸಹಜವಾಗಿಯೇ ಸಂಶೋಧನಾ ಶಿಕ್ಷಣದಲ್ಲಿನ ಗುಣಮಟ್ಟ ಕುಸಿಯುತ್ತದೆ.

                  ಕೆಲವು ತಿಂಗಳುಗಳ ಹಿಂದೆ ಕೇಂದ್ರ ಸರ್ಕಾರ ಕರ್ನಾಟಕದ ಆರು ಜಿಲ್ಲೆಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ವಿಶೇಷ ಸೌಲಭ್ಯವನ್ನು ಒದಗಿಸಿದೆ. ಶಿಕ್ಷಣದ ವಿಷಯವಾಗಿ ಈ ಆರು ಜಿಲ್ಲೆಗಳಲ್ಲಿನ ಒಟ್ಟು ಕೋರ್ಸುಗಳಲ್ಲಿನ ಶೇಕಡಾ ೭೫ ರಷ್ಟು ಸೀಟುಗಳನ್ನು ಹೈದರಾಬಾದ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗಾಗಿ ಮೀಸಲಿಡಲಾಗಿದೆ. ಹೈದರಾಬಾದ ಕರ್ನಾಟಕದ ವ್ಯಾಪ್ತಿಯಲ್ಲಿನ ಆರು ಜಿಲ್ಲೆಗಳು ಮಾತ್ರವಲ್ಲದೆ ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿನ ಕಾಲೇಜುಗಳಲ್ಲಿಯೂ ಶೇಕಡಾ ೮ ರಷ್ಟು ಮೀಸಲಾತಿ ಸೌಲಭ್ಯ ಆ ಆರು ಜಿಲ್ಲೆಗಳಲ್ಲಿನ ವಿದ್ಯಾರ್ಥಿಗಳಿಗೆ ದೊರೆಯಲಿದೆ. ವಿಶೇಷವಾಗಿ ಈ ಒಂದು ವ್ಯವಸ್ಥೆ ವೈದ್ಯಕೀಯ ಕೋರ್ಸಿನಲ್ಲಿ ಪ್ರವೇಶ ಪಡೆಯಲಿಚ್ಚಿಸುವ ರಾಜ್ಯದ ಉಳಿದ ಜಿಲ್ಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ವೈದ್ಯಕೀಯ ಕಾಲೇಜುಗಳ ಸಂಖ್ಯೆ ಸೀಮಿತವಾಗಿದ್ದು ಜೊತೆಗೆ ಪ್ರತಿ ಕಾಲೇಜಿನಲ್ಲಿ ಮೆರಿಟ್ ಆಧಾರಿತ ಸೀಟುಗಳ ಸಂಖ್ಯೆ ಪ್ರತಿಶತ ೪೦ ರಷ್ಟು ಮಾತ್ರವಿರುವಾಗ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಇಂಥದ್ದೊಂದು ಮೀಸಲಾತಿ ಸೌಲಭ್ಯ ರಾಜ್ಯದ ಬೇರೆ ಜಿಲ್ಲೆಗಳಲ್ಲಿನ ವಿದ್ಯಾರ್ಥಿಗಳನ್ನು ಚಿಂತೆಗೀಡು ಮಾಡಿದೆ. ಈ ಸಮಸ್ಯೆಯನ್ನು ನಾನು ಉದಾಹರಣೆಯೊಂದಿಗೆ ಹೀಗೆ ವಿವರಿಸುತ್ತೇನೆ, ವಿಜಯಪುರದ ಮೋಹನ ಮತ್ತು ಕಲಬುರಗಿಯ ಶ್ರೀನಿವಾಸ ಇವರಿಬ್ಬರೂ ಪಿಯುಸಿ ವಿಜ್ಞಾನದ ವಿದ್ಯಾರ್ಥಿಗಳಾಗಿದ್ದು ಈ ವರ್ಷದ ಸಿ ಇ ಟಿ ಪ್ರವೇಶ ಪರೀಕ್ಷೆಯಲ್ಲಿ ಅನುಕ್ರಮವಾಗಿ ೧೯೧೦ ಮತ್ತು ೫೬೦೦ Rank ನೊಂದಿಗೆ ತೇರ್ಗಡೆಯಾಗಿರುವರು. ವಿಜಯಪುರದ ಮೋಹನ ೧೯೧೦ Rank ನೊಂದಿಗೆ ತೇರ್ಗಡೆಯಾಗಿದ್ದರೂ ಅವನು ವೈದ್ಯಕೀಯ ಕಾಲೇಜಿನಲ್ಲಿ ತನ್ನ ಫಲಿತಾಂಶದಡಿ ಪ್ರವೇಶ ಪಡೆಯಲು ವಿಫಲನಾದ. ಆದರೆ ೫೬೦೦ Rank ನೊಂದಿಗೆ ತೇರ್ಗಡೆಯಾದ ಕಲಬುರಗಿಯ ಶ್ರೀನಿವಾಸ ಹೈದರಾಬಾದ ಕರ್ನಾಟಕದ ಮೀಸಲಾತಿಯಡಿ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾದ. ಅಚ್ಚರಿಯ ಸಂಗತಿ ಎಂದರೆ ಶ್ರೀನಿವಾಸ ಓದಿದ್ದು ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ. ಹೀಗಿದ್ದೂ ಅವನ ಪಾಲಕರು ಕಲಬುರಗಿ ಜಿಲ್ಲೆಯ ನಿವಾಸಿಗಳೆಂಬ ಕಾರಣಕ್ಕೆ ಅವನಿಗೆ ಪ್ರವೇಶ ದೊರೆಯುವಲ್ಲಿ ಯಾವುದೇ ಸಮಸ್ಯೆಯಾಗಲಿಲ್ಲ. ವಿಜಯಪುರ ಜಿಲ್ಲೆ ಸಹ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯಾಗಿದ್ದು ಆದರೆ ಮೋಹನನಿಗೆ ಅಂಥ ಯಾವ ಮೀಸಲಾತಿ ಸೌಲಭ್ಯ ದೊರೆಯದೆ ಇರುವುದರಿಂದ ಸಹಜವಾಗಿಯೇ ಆತ ವೈದ್ಯಕೀಯ ಕೋರ್ಸಿನ ಪ್ರವೇಶದಿಂದ ವಂಚಿತನಾದ. ಇದು ಒಬ್ಬ ಮೋಹನನ ಕಥೆಯಲ್ಲ. ಇಂಥ ಸಾವಿರಾರು ವಿದ್ಯಾರ್ಥಿಗಳು ಸರ್ಕಾರ ಕೊಡಮಾಡುತ್ತಿರುವ ಮೀಸಲಾತಿ ಸೌಲಭ್ಯಗಳಿಂದ ಸಮಸ್ಯೆಗಳನ್ನೆದುರಿಸುತ್ತಿರುವರು. ಹೀಗೆ ಹೈದರಾಬಾದ ಕರ್ನಾಟಕಕ್ಕೆ ಸೇರಿದ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಮೀಸಲಾತಿ ಸೌಲಭ್ಯ ಕೊಡುವಾಗ ಅವರ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ಆರ್ಥಿಕವಾಗಿ ದುರ್ಬಲರಾದವರಿಗೆ ಸೌಲಭ್ಯ ನೀಡಿದ್ದಲ್ಲಿ ಇಂಥದ್ದೊಂದು ಪ್ರಯತ್ನವನ್ನು ಎಲ್ಲರೂ ಸ್ವಾಗತಿಸುತ್ತಿದ್ದರು. ಆದರೆ ಸೌಲಭ್ಯಗಳು ತಮ್ಮ ಮೌಲ್ಯಗಳನ್ನು ಕಳೆದುಕೊಂಡಾಗ ಸಹಜವಾಗಿಯೇ ವಂಚಿತರಾದ ವಿದ್ಯಾರ್ಥಿಗಳು ಅಂಥ ಸೌಲಭ್ಯಗಳನ್ನು ವಿರೋಧಿಸುತ್ತಾರೆ.

ಕೊನೆಯ ಮಾತು 


                 ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾದ ವೇಳೆ ನನ್ನನ್ನು ತೀರ ಕಾಡಿದ ಸಂಗತಿ ಎಂದರೆ ಪರೀಕ್ಷಾ ಫಲಿತಾಂಶಕ್ಕಿಂತ ಮೊದಲು ಸಾವನ್ನಪ್ಪಿದ ಬೆಂಗಳೂರಿನ ಕಾಲೇಜಿನಲ್ಲಿ ಓದುತ್ತಿದ್ದ ತುಮಕೂರು ಮೂಲದ ವಿದ್ಯಾರ್ಥಿನಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾದದ್ದು. ಬದುಕಿದ್ದರೆ ವೃತ್ತಿಪರ ಕೋರ್ಸಿಗೆ ಇಲ್ಲವೇ ತನ್ನ ಇಷ್ಟದ ಕೋರ್ಸಿಗೆ ಪ್ರವೇಶ ಪಡೆದು ತನ್ನ ಬದುಕು ಮತ್ತು ಭವಿಷ್ಯವನ್ನು ಆಕೆ ಉತ್ತಮವಾಗಿ ರೂಪಿಸಿಕೊಳ್ಳುತ್ತಿದ್ದಳು. ಆದರೆ ಕ್ರೂರ ವಿಧಿ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ. ಈ ಘಟನೆಯ ನಂತರ ಪಾಲಕರು ತಮ್ಮ ಮಕ್ಕಳನ್ನು ಶಾಲೆ ಮತ್ತು ಕಾಲೇಜುಗಳ ವಸತಿ ನಿಲಯದಲ್ಲಿಡಲು ಯೋಚಿಸುವಂತಾಗಿದೆ. ಒಂದೆಡೆ ಶಿಕ್ಷಣದ ಕುರಿತಾದ ಸರ್ಕಾರದ ಬದಲಾಗುತ್ತಿರುವ ನೀತಿ ನಿಯಮಗಳು. ಇನ್ನೊಂದೆಡೆ ಶಾಲೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ರಕ್ಷಣೆ ಇಲ್ಲವಾಗಿದೆ. ಒಟ್ಟಾರೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿನ ಗೊಜಲು ಮತ್ತು ಗೊಂದಲಗಳು ವಿದ್ಯಾರ್ಥಿಗಳು ಮತ್ತು ಪಾಲಕರನ್ನು ಚಿಂತೆಗೀಡುಮಾಡುತ್ತಿವೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


   

Tuesday, July 28, 2015

ನಮ್ಮ ಮೇಷ್ಟ್ರು ಕಲಾಂ







             ನಿನ್ನೆ ಡಾ. ಅಬ್ದುಲ್ ಕಲಾಂ ನಿಧನರಾದರು. ದೇಶಕ್ಕೆ ತುಂಬಲಾರದ ನಷ್ಟವಿದು. ಕಲಾಂ ಅವರು ಬದುಕಿದ್ದರೆ ಇನ್ನು ಅದೆಷ್ಟೋ ಯುವಕರ ಕನಸುಗಳಿಗೆ ನೀರೆರೆಯುತ್ತಿದ್ದರು. ನಾವುಗಳೆಲ್ಲ ಕನಸಿಸುವಂತೆ ಮತ್ತು ಕಂಡ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಪ್ರಯತ್ನಿಸುವಂತೆ ಸದಾ ಕಾಲ ಪ್ರೇರಣೆಯಾಗಿದ್ದ ಹಾಗೂ ಸ್ಪೂರ್ತಿ ನೀಡುತ್ತಿದ್ದ ವ್ಯಕ್ತಿತ್ವ ಅವರದು. ಅಬ್ದುಲ್ ಕಲಾಂ ಭಾರತದ ರಾಷ್ಟ್ರಪತಿಯಾದ ಘಳಿಗೆ ರಾಜಕಾರಣಿಯಲ್ಲದ ವ್ಯಕ್ತಿ ಅದುಹೇಗೆ ಅಂಥದ್ದೊಂದು ಹುದ್ದೆಯನ್ನು ನಿಭಾಯಿಸ ಬಲ್ಲರು ಎನ್ನುವುದು ಅನೇಕರ ಆತಂಕವಾಗಿತ್ತು. ಒಂದರ್ಥದಲ್ಲಿ ಈ ಹುದ್ದೆ ಮತ್ತು ಅದನ್ನು ನಿರ್ವಹಿಸಿದ ಹಿಂದಿನವರ ನಿಷ್ಕ್ರಿಯತೆ ಕಲಾಂ ಅವರನ್ನು ಕೂಡ ನಿಷ್ಕ್ರಿಯಗೊಳಿಸಬಹುದೆನ್ನುವ ಆತಂಕ ಎಲ್ಲರದಾಗಿತ್ತು. ಆದರೆ ಅಬ್ದುಲ್ ಕಲಾಂ ತಮ್ಮ ಕಾರ್ಯನಿರ್ವಹಣೆ, ಘನ ವ್ಯಕ್ತಿತ್ವ, ಸರಳ ಜೀವನ, ಪ್ರಾಮಾಣಿಕತೆ, ಹೃದಯವಂತಿಕೆ, ವಿಶಾಲ ಮನೋಭಾವ, ರಾಷ್ಟ್ರ ಪ್ರೇಮ ಈ ಎಲ್ಲ ಗುಣಗಳಿಂದ ರಾಷ್ಟ್ರಪತಿ ಹುದ್ದೆಗೊಂದು ಘನತೆ ಮತ್ತು ಗೌರವ ತಂದುಕೊಟ್ಟರು. ಅವರು ರಾಷ್ಟ್ರಪತಿಗಳಾಗಿದ್ದ ಅವಧಿಯಲ್ಲಿ ಜನಸಾಮಾನ್ಯರ ರಾಷ್ಟ್ರಪತಿ ಎನ್ನುವ ಮನ್ನೆಣೆಗೆ ಪಾತ್ರರಾದರು. ರಾಷ್ಟ್ರಪತಿ ಭವನ  ಅದೊಂದು ರಾಜಕಾರಣಿಗಳ ಬದುಕಿನ ಕೊನೆಯ ದಿನಗಳ ವಿಶ್ರಾಂತಿ ತಾಣ ಎನ್ನುವ ಕಲ್ಪನೆಯನ್ನು ದೂರವಾಗಿಸಿದರು. ಜನಸಾಮಾನ್ಯರ ಸಮಸ್ಯೆಗಳು ರಾಷ್ಟ್ರಪತಿ ಭವನವನ್ನು ಪ್ರವೇಶಿಸಲು ಮುಕ್ತ ಅವಕಾಶ ಮಾಡಿಕೊಟ್ಟರು. ದೂರದಲ್ಲೆಲ್ಲೋ ಮರಗಳು ಉರುಳಿದಾಗ, ಹಳ್ಳಿಯ ಶಾಲೆಯಲ್ಲಿ ಮಕ್ಕಳಿಗೆ ಕುಡಿಯುವ ನೀರು ಇಲ್ಲದಿದ್ದಾಗ, ಸಾರ್ವಜನಿಕರಿಗೆ ಓಡಾಡಲು ರಸ್ತೆ ಇಲ್ಲದಿದ್ದರೆ, ಅನಾರೋಗ್ಯದಿಂದ ಬಳಲುವವರಿಗೆ ವೈದ್ಯಕೀಯ ನೆರವು ದೊರೆಯದಿದ್ದಾಗ  ಕಲಾಂ ರಾಷ್ಟ್ರಪತಿ ಭವನದಿಂದಲೇ ಆ ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು. ಬದುಕಿನುದ್ದಕ್ಕೂ ಪಾಠ ಮಾಡುವುದನ್ನು ಪ್ರೀತಿಸುತ್ತಿದ್ದ ಕಲಾಂ ತಾವೊಬ್ಬ ಆದರ್ಶ ಶಿಕ್ಷಕನೆಂಬ ಗೌರವಕ್ಕೆ ಪಾತ್ರರಾಗಿದ್ದರು. ಶಿಕ್ಷಕ ವೃತ್ತಿ ಅವರ ಬದುಕಿನ ಮಹೋನ್ನತ ಸಾಧನೆಗಳಲ್ಲೊಂದು. ಪಾಠ ಮಾಡುತ್ತಲೇ ಕೊನೆಯುಸಿರೆಳೆದದ್ದು ಅವರು ಶಿಕ್ಷಕ ವೃತ್ತಿಯನ್ನು ಎಷ್ಟೊಂದು ಪ್ರೀತಿಸುತ್ತಿದ್ದರು ಎನ್ನುವುದಕ್ಕೆ ನಿದರ್ಶನ.

ಕಲಾಂ ಮತ್ತು ಕರ್ನಾಟಕ 

   
      ನವೆಂಬರ್ ೨೦, ೨೦೦೫ ಕರ್ನಾಟಕದ ಇತಿಹಾಸದಲ್ಲಿ ಇದೊಂದು ಮಹತ್ವದ ದಿನ. ಆ ದಿನ ಡಾ. ಅಬ್ದುಲ್ ಕಲಾಂ ಕರ್ನಾಟಕದ ವಿಧಾನ ಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದರು. ಸುವರ್ಣ ಕರ್ನಾಟಕದ ಆಚರಣೆಯ ಆ ಸಂದರ್ಭದಲ್ಲಿ ಡಾ. ಅಬ್ದುಲ್ ಕಲಾಂ ಅವರು ಮಾಡಿದ ಭಾಷಣ ಅತ್ಯಂತ ಮಹತ್ವ ಪಡೆದುಕೊಂಡಿತು. ೨೦೧೫ ರ ವೇಳೆಗೆ ಕರ್ನಾಟಕವನ್ನು ಹೇಗೆ ಮಾದರಿ ರಾಜ್ಯವಾಗಿ ಮಾಡಬಹುದೆಂದು ಕಲಾಂ ಮಾತನಾಡಿದರು. ತಮ್ಮ ಭಾಷಣದ ಪ್ರಾರಂಭದಲ್ಲಿ ಕಲಾಂ ತಮಗೂ ಹಾಗೂ ಕರ್ನಾಟಕಕ್ಕಿರುವ ಸಂಬಂಧವನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ೧೯೫೮ ರಲ್ಲಿ ತಮ್ಮ ವೃತ್ತಿ ಜೀವನವನ್ನು ಕರ್ನಾಟಕದಿಂದಲೇ ಪ್ರಾರಂಭಿಸಿದ್ದಾಗಿ ತಿಳಿಸಿದ ಕಲಾಂ ಅವರು ಆ ದಿನಗಳಲ್ಲಿ ತಮಗೆ ಸಹಕಾರ ನೀಡಿದ ಅಂದಿನ ಮುಖ್ಯಮಂತ್ರಿ ಶ್ರೀ ಎಸ್ ನಿಜಲಿಂಗಪ್ಪನವರನ್ನು ನೆನೆದರು. ಭಾರತೀಯ ಬಾಹ್ಯಾಕಾಶ ಸಂಶೋಧನೆಗೆ ವಿಶಿಷ್ಠ ಮೆರುಗು ನೀಡಿದ ತಮ್ಮ ಗುರುಗಳಾದ ಪ್ರೊ ಸತೀಶ್ ಧವನ್ ಅವರನ್ನು ತಾವು ಮೊದಲು ಭೇಟಿ ಮಾಡಿದ್ದು ಇದೆ ಬೆಂಗಳೂರಿನಲ್ಲಿ ಎಂದು ಹೇಳಿ ಇಡೀ ಸಭಾಂಗಣವನ್ನು ಭಾವಾವೇಶದಲ್ಲಿ ಮುಳುಗಿಸಿದರು. ಮಧ್ಯವತಿ ರಾಗದಲ್ಲಿರುವ 'ಭಾಗ್ಯದ ಲಕ್ಷ್ಮಿ ಬಾರಮ್ಮ' ಇವತ್ತಿಗೂ ತಮ್ಮ ಕಿವಿಯಲ್ಲಿ ಗುಂಯಿಗುಡುತ್ತಿದ್ದೆ ಎಂದು ಹೇಳಿದಾಗ ಇಡೀ ಸಭೆ ಮೂಕವಿಸ್ಮಯವಾಯಿತು. ಕರ್ನಾಟಕದ ಸಂಸ್ಕೃತಿ, ಗಡಿ ಪ್ರದೇಶಗಳು, ಹರಿಯವ ನದಿಗಳು, ಕೃಷಿ, ಮುಖ್ಯ ಬೆಳೆಗಳು, ಶೈಕ್ಷಣಿಕ ಸೌಲಭ್ಯ, ಶಿಲ್ಪಕಲೆ, ಪ್ರಮುಖ ಪ್ರವಾಸಿ ತಾಣಗಳು ಹೀಗೆ ಕರ್ನಾಟಕದ  ಸಂಪೂರ್ಣ ಮಾಹಿತಿ   ಅವರ ಭಾಷಣದಲ್ಲಿತ್ತು. ಜೊತೆಗೆ ಇಲ್ಲಿ ದೊರೆಯುವ ರುಚಿ ರುಚಿಯಾದ ಬಿಸಿಬೇಳೆ ಭಾತ್, ಹೋಳಿಗೆ, ಮೈಸೂರು ಬೊಂಡ, ಮದ್ದೂರು ವಡೆ ಕುರಿತು ಮಾತನಾಡಿ ಸಭಿಕರ ಬಾಯಿಯಲ್ಲಿ ನೀರೂರಿಸಿದರು. ತಮ್ಮ ವೃತ್ತಿ ಬದುಕಿಗೊಂದು ವೇದಿಕೆ ನೀಡಿದ ಕರ್ನಾಟಕ ರಾಜ್ಯದ ಕುರಿತು ಡಾ ಅಬ್ದುಲ್ ಕಲಾಂ ಭಾವುಕರಾಗಿ ಮಾತನಾಡಿದರು.

 
          ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಗಳಾಗಿದ್ದ ಅವಧಿಯಲ್ಲಿ ಅವರ ಕಾರ್ಯದರ್ಶಿಯಾಗಿದ್ದ ಪಿ ಎಂ ನಾಯರ್ ಅವರು ಬರೆದು ಅದನ್ನು ಶ್ರೀ ವಿಶ್ವೇಶ್ವರ ಭಟ್ ಅವರು ಕನ್ನಡಕ್ಕೆ ಅನುವಾದಿಸಿರುವ 'ಕಲಾಮ್ ಕಮಾಲ್' ಪುಸ್ತಕದಲ್ಲಿನ ಒಂದಿಷ್ಟು ಪ್ರಸಂಗಗಳು ನಿಮಗಾಗಿ........

            ನಾನು ರಾಷ್ಟ್ರಪತಿಯೆಂದು ತೋರಿಸಿಕೊಳ್ಳಬೇಕೆಂಬ  ಹುಸಿ ಆಡಂಬರ ಕಲಾಂ ಅವರಿಗಿರಲಿಲ್ಲ. ಅದಕ್ಕೊಂದು ಸರಳ ನಿದರ್ಶನ. ರಾಷ್ಟ್ರಪತಿ ಅವರ ಅಧಿಕೃತ ಚಿತ್ರವೊಂದಿರುತ್ತದೆ. ಅದರ ಒಂದು ಮೂಲೆಯಲ್ಲಿ ಅವರ ಸಹಿ ಇರುತ್ತದೆ. ಈ ಫೋಟೋವನ್ನು ಎಲ್ಲ ಸರ್ಕಾರಿ ಕಛೇರಿಗಳಲ್ಲಿ ಹಾಗೂ ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ತಾಣಗಳಲ್ಲಿ ತೂಗು ಹಾಕಬೇಕು. ಕಲಾಂ ರಾಷ್ಟ್ರಪತಿಯಾದಾಗ ಸಂಗತಿಯನ್ನು ಅವರಿಗೆ ತಿಳಿಸಲಾಯಿತು. ಕಲಾಂ ಒಲ್ಲದ ಮನಸ್ಸಿನಿಂದ ಒಪ್ಪಿದರು. ಶಿಷ್ಟಾಚಾರದ ಸೂಕ್ಷ್ಮ ವಿಷಯಗಳ ಬಗ್ಗೆ ಅವರೆಂದೂ ತಲೆ ಕೆಡಿಸಿಕೊಂಡವರಲ್ಲ. ರಾಷ್ಟ್ರಪತಿ ಭವನದ ಒಳಗಿರಬಹುದು, ಹೊರಗಿರಬಹುದು ಅಥವಾ ವಿದೇಶಗಳಿಗೆ ಅಧಿಕೃತ ಭೇಟಿ ನೀಡಿದ ಸಂದರ್ಭವಿರಬಹುದು ಕಲಾಂ ಶಿಷ್ಟಾಚಾರಕ್ಕೆ ಒತ್ತು ನೀಡುತ್ತಿರಲಿಲ್ಲ. ಶಿಷ್ಟಾಚಾರದ ಆಡಂಬರ, ವೈಭವ, ಅಟ್ಟಹಾಸಗಳೆಂದರೆ ಅವರಿಗೆ ಆಗುತ್ತಿರಲಿಲ್ಲ. ರಾಷ್ಟ್ರಪತಿ ಭವನದಲ್ಲಿರುವ ನಾವು ಹೆಚ್ಚಾಗಿ ವಿದೇಶಾಂಗ ವ್ಯವಹಾರಗಳ ಅಧಿಕಾರಿಗಳು ರಾಷ್ಟ್ರಪತಿಯವರು ಕನಿಷ್ಠ ಅನುಸರಿಸಲೇ ಬೇಕಾದ ಶಿಷ್ಟಾಚಾರದ ಬಗ್ಗೆ ಮನವರಿಕೆ ಮಾಡಿಕೊಡುವ ಹೊತ್ತಿಗೆ ಸುಸ್ತಾಗಿ ಹೋಗುತ್ತಿದ್ದೆವು. ಅದರಲ್ಲೂ ಮುಖ್ಯವಾಗಿ ವಿದೇಶ ಪ್ರವಾಸದಲ್ಲಿ ಶಿಷ್ಟಾಚಾರದ ಅಗತ್ಯದ ಬಗ್ಗೆ ಕಲಾಂ ಅವರಿಗೆ ಒತ್ತಿ ಹೇಳಿ ಅವರ ಮನವೊಲಿಸುವುದು ಕಷ್ಟವಾಗುತ್ತಿತ್ತು.

---೦೦೦---

        "ಮಿಸ್ಟರ್ ನಾಯರ್ ನನ್ನ ಬಂಧುಗಳು ವಾರ ಅಥವಾ ಹತ್ತು ದಿನಗಳಮಟ್ಟಿಗೆ ಬರುತ್ತಾರೆ. ಅವರು ಬರುವುದು ಪಕ್ಕಾ ಖಾಸಗಿ ಉದ್ದೇಶಕ್ಕಾಗಿ ಇದರಲ್ಲಿ ಅಧಿಕೃತ ಎಂಬುದೇನೂ ಇರುವುದಿಲ್ಲ" ಎಂದರು ಕಲಾಂ. ಕೆಲದಿನಗಳಲ್ಲಿ ಕಲಾಂ ಅವರ ೫೨ ಮಂದಿ ಬಂಧು ಬಳಗದವರು ರಾಷ್ಟ್ರಪತಿ ಭವನಕ್ಕೆ ಬರುವವರಿದ್ದರು. ಅವರಲ್ಲಿ ತೊಬತ್ತು ವರ್ಷದ ಕಲಾಂ ಹಿರಿಯಣ್ಣನಿಂದ ಹಿಡಿದು ಒಂದೂವರೆ ವರ್ಷದ ಪುಟ್ಟು ಮಗು ಸಹ ಸೇರಿತ್ತು. ಕಲಾಂ ಅವರು ಹೇಳಿದ ಪ್ರತಿ ಪದ ನನಗೆ ಅರ್ಥವಾಗಿತ್ತು. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆಂಬುದು ಗೊತ್ತಿತ್ತು.

           ಅವರೆಲ್ಲ ಆಗಮಿಸಿದರು. ಎಂಟು ದಿನಗಳ ಕಾಲ ಉಳಿದರು. ಅವರೆಲ್ಲ ಅಜ್ಮೀರ್ ಶರಿಫ್ ಗೆ ಹೋದರು. ಕೆಲವು ಕಿರಿಯರು ದಿಲ್ಲಿಯಲ್ಲಿ ಶಾಪಿಂಗ್ ಮಾಡಿದರು. ಅನಂತರ ಅವರೆಲ್ಲ ಊರಿಗೆ ವಾಪಸ್ ಹೋದರು. ಅಚ್ಚರಿಯ ಸಂಗತಿ ಎಂದರೆ ಒಂದೇ ಒಂದು ಸಲವೂ ಆಫೀಸಿನ ವಾಹನ ಬಳಸಲಿಲ್ಲ. ರಾಷ್ಟ್ರಪತಿ ಭವನದಲ್ಲಿ ಅವರೆಲ್ಲ ಉಳಿದುದಕ್ಕಾಗಿ ಕಲಾಂ ತಮ್ಮ ಕೈಯಿಂದ ಬಾಡಿಗೆ ಕಟ್ಟಿದರು. ಅವರೆಲ್ಲ ಕುಡಿದ ಸಿಂಗಲ್ ಚಹದ ಹಣವನ್ನೂ ಕಲಾಂ ಭರಿಸಿದರು. ಅವರೆಲ್ಲ ಅಷ್ಟು ದಿನ ಉಳಿದುದಕ್ಕೆ ೩.೫೨ ಲಕ್ಷ ರೂಪಾಯಿಗಳ ಬಿಲ್ ಬಂತು. ಕಲಾಂ ತಮ್ಮ ಕಿಸೆಯಿಂದ ಹಣ ಎಣಿಸಿದರು. ಇದನ್ನು ಕಲಾಂ ಯಾರ ಮುಂದೆಯೂ ಹೇಳಿಕೊಳ್ಳಲಿಲ್ಲ. ಪತ್ರಿಕೆಗಳಿಗೆ ತಿಳಿಯುವಂತೆ ಮಾಡಿ ಪ್ರಚಾರವನ್ನೂ ಗಿಟ್ಟಿಸಿಕೊಳ್ಳಲಿಲ.

---೦೦೦---

       ದೇವರು ಹಾಗೂ ಧಾರ್ಮಿಕ ಆಚರಣೆಗಳಲ್ಲಿ ನಂಬಿಕೆಯುಳ್ಳವರಾದ ಕಲಾಂ 'ಮಿಸ್ಟರ್ ನಾಯರ್ ಈ ಇಫ್ತಾರ್ ಕೂಟಗಳನ್ನೇಕೆ ಏರ್ಪಡಿಸಬೇಕು? ಈ ಕೂಟಗಳಿಗೆ ಆಹ್ವಾನಿಸುವ ವ್ಯಕ್ತಿಗಳು ಹೇಗಿದ್ದರೂ ಚೆನ್ನಾಗಿ ಬದುಕಿರುವವರೆ. ಹೀಗಿರುವಾಗ ಹಣವನ್ನೇಕೆ ವೃಥಾ ವ್ಯಯಿಸಬೇಕು? ಈ ಕೂಟಗಳಿಗೆ ಎಷ್ಟು ಹಣ ಖರ್ಚು ಮಾಡುತ್ತಿರಿ?' ಎಂದು ಪ್ರಶ್ನಿಸಿದರು. ರಾಷ್ಟ್ರಪತಿ ಭವನದ ವಸತಿ ನಿಯಂತ್ರಣ ಅಧಿಕಾರಿಯನ್ನು ಕರೆದು ಖರ್ಚಿನ ವಿವರ ಕೇಳಿದೆ. ಒಂದು ಕೂಟಕ್ಕೆ ಭೋಜನದ ಖರ್ಚಿಗೆ ಕನಿಷ್ಠ ಎರಡೂವರೆ ಲಕ್ಷ ರೂಪಾಯಿಗಳು ತಗಲುವುದೆಂದು ಅವರು ಹೇಳಿದರು. ಇದನ್ನು ನಾನು ರಾಷ್ಟ್ರಪತಿಯವರಿಗೆ ತಿಳಿಸಿದೆ. ಒಂದು ಕ್ಷಣ ಅವರು ಯೋಚಿಸಿದರು 'ಈ ಹಣವನ್ನೇಕೆ ನಿರ್ಗತಿಕ ಮಕ್ಕಳ ಸಂಸ್ಥೆಗಳಿಗೆ ನೀಡಬಾರದು? ನಿಮ್ಮ ಅಭಿಪ್ರಾಯವೇನು?' ಎಂದು ಕೇಳಿದರು.

      'ಯಾವ ನಿರ್ಗತಿಕ ಮಕ್ಕಳ ಸಂಸ್ಥೆಗಳಿಗೆ ಹಣ ನೀಡಬೇಕೆಂಬುದನ್ನು ನೀವು ನಿರ್ಧರಿಸಿ' ಎಂದು ಕಲಾಂ ನನಗೆ ಸೂಚಿಸಿದರು. 'ಈ ಹಣ ಪೋಲಾಗದಂತೆ ಖಾತ್ರಿ ಪಡಿಸಿಕೊಳ್ಳಿ' ಎಂದೂ ಹೇಳಿದರು. ಕಲಾಂರ ಇಚ್ಛೆಯಂತೆ ಇಪ್ಪತ್ತೆಂಟು ನಿರ್ಗತಿಕ ಮಕ್ಕಳ ಸಂಸ್ಥೆಗಳಿಗೆ ನಮ್ಮ ತಂಡದ ಕಾರ್ಯಕರ್ತರು ಅಕ್ಕಿ, ಹಿಟ್ಟು, ಬೇಳೆ, ಬ್ಲಾಂಕೆಟ್ ಹಾಗೂ ಸ್ವೆಟರ್ ಗಳನ್ನು ವಿತರಿಸಿ ಬಂದರು. ಮಕ್ಕಳೆಲ್ಲ ಬಹಳ ಆನಂದ ಪಟ್ಟರು. ಈ ವಿವರಗಳನ್ನು ನಾನು ಕಲಾಂ ಅವರಿಗೆ ತಿಳಿಸಿದೆ.

            ಆದರೆ ನನಗೆ ಮತ್ತೊಂದು ಅಚ್ಚರಿ ಕಾದಿತ್ತು. ಕಲಾಂ ಪುನ: ನನ್ನನ್ನು ಕರೆದರು. ರೂಮಿನಲ್ಲಿ ನಾವಿಬ್ಬರೇ ಇದ್ದೆವು. ಅವರು ಸುತ್ತ ನೋಡಿ ಹೇಳಿದರು 'ನೀವು ಆ ಎಲ್ಲ ಸಾಮಾನು ಸರಂಜಾಮುಗಳನ್ನು ಸರಕಾರಿ ಹಣದಲ್ಲಿ ಖರೀದಿಸಿ ವಿತರಿಸಿದ್ದಿರಿ. ಇಫ್ತಾರ್ ಗೆ ನಾನು ನನ್ನ ಸ್ವಂತ ಹಣವನ್ನು ನೀಡುವವನಿದ್ದೆ. ನನ್ನ ವೈಯಕ್ತಿಕ ಖಾತೆಯಿಂದ ಒಂದು ಲಕ್ಷ ರೂ. ಚೆಕ್ ನೀಡುತ್ತೇನೆ. ಸರ್ಕಾರಿ ಹಣವನ್ನು ಬಳಸದಂತೆ ಈ ಹಣವನ್ನು ಉಪಯೋಗಿಸಿ. ಆದರೆ ನಾನು ಹಣ ಕೊಟ್ಟಿದ್ದನ್ನು ಮಾತ್ರ ಯಾರಿಗೂ ಹೇಳಬೇಡಿ'.

---೦೦೦---

          ಗಲ್ಲುಶಿಕ್ಷೆಗೆ ಸಂಬಂಧಿಸಿದಂತೆ ಕಲಾಂ ಅವರು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು ಸೇರಿದಂತೆ ಹಲವು ಕಾನೂನು ಪರಿಣಿತರೊಂದಿಗೆ ಸಮಾಲೋಚನೆ ನಡೆಸಿದ್ದರು. ಪಕ್ಕದ ರೂಮಿನಲ್ಲಿ ಕುಳಿತಿರುವಂತೆ ನನಗೆ ಸೂಚಿಸಲಾಗಿತ್ತು. ಹದಿನೈದು ನಿಮಿಷಗಳ ನಂತರ ಬೆಲ್ ಸದ್ದಾಯಿತು ಸಹಾಯಕ ಬಂದು 'ಸರ್  ನಿಮ್ಮನ್ನು ಕರೆಯುತ್ತಿದ್ದಾರೆ ಬರಬೇಕಂತೆ' ಎಂದ.

           ನಾನು ಒಳ ಹೋದೆ. ರಾಷ್ಟ್ರಪತಿ ಹಾಗೂ ಅವರ ಗೆಸ್ಟ್ ಸೋಫಾದಲ್ಲಿ ಕುಳಿತಿದ್ದರು. ನಾನು ಅವರ ಮುಂದಿನ ಆಸನದಲ್ಲಿ ಕುಳಿತೆ. ಗೆಸ್ಟ್ ಹೇಳಿದರು 'ಮಿಸ್ಟರ್ ನಾಯರ್ ಗಲ್ಲು ಶಿಕ್ಷೆ ಬಗ್ಗೆ  ಚರ್ಚಿಸುತ್ತಿದ್ದೇವೆ.  ರಾಷ್ಟ್ರಪತಿಯವರು ಈ ಬಗ್ಗೆ ಸ್ಪಷ್ಟ ನಿಲುವು ಹೊಂದಿದ್ದಾರೆ ಹಾಗೂ ಅದೆನೆಂಬುದು ನಿಮಗೂ ಗೊತ್ತಿದೆ. ರಾಷ್ಟ್ರಪತಿಯವರ ನಿಲುವಿಗೆ ನಾನು ಸಮ್ಮತಿ ಸೂಚಿಸುತ್ತೇನೆ. ನಿಮ್ಮ ಅನಿಸಿಕೆ ಏನು?'

            ನಾನು ಕಲಾಂ ಅವರನ್ನು ನೋಡಿದೆ. ನಾನೇನು ಹೇಳುತ್ತೆನೆಂಬುದು ಅವರಿಗೆ ಗೊತ್ತಿತ್ತು. ಅವರು ಮುಗುಳ್ನಕ್ಕರು. 'ಸರ್ ನಾನು ನನ್ನ ಅನಿಸಿಕೆ ಹೇಳಬಹುದೇ?' ಎಂದೆ. ಕಲಾಂ ತಲೆಯಾಡಿಸಿದರು. ಗೌರವಯುತವಾಗಿ ನಾನು ನನ್ನ ಅಭಿಪ್ರಾಯ ತಿಳಿಸಿದೆ. ನನ್ನ ಮಾತು ಕೇಳಿ ಆ ಕಾನೂನು ಪರಿಣಿತರಿಗೆ ಬಹಳ ಅಚ್ಚರಿಯಾಯಿತು. ಆ  ಚರ್ಚೆ ಅಲ್ಲಿಗೇ ಮುಗಿಯಿತು. ನಾನು ಅವರನ್ನು ಕಳಿಸಲು  ಹೊರಟೆ. ಕಾರನ್ನೇರುವ ಮೊದಲು ಕಾನೂನು ಪರಿಣಿತರು ನನ್ನನ್ನು ನೋಡಿ 'ಭಾರತದ ರಾಷ್ಟ್ರಪತಿಯವರೊಂದಿಗೆ ನೀವು ಈ ರೀತಿ ಮಾತನಾಡಬಹುದಾ?' ಎಂದು ಕೇಳಿದರು.
'ಹೌದು ಸರ್ ಅದರಲ್ಲೇನು ಬಂತು? ಅದು ಅವರ ತಾಕತ್ತು ಹಾಗೂ ನನ್ನ ತಾಕತ್ತೂ ಹೌದು' ಎಂದೆ. ಕಾರು ಹೊರಟಿತು.

          ಒಬ್ಬ ಅಧಿಕಾರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಲಾಂ ದೊರಕಿಸಿಕೊಟ್ಟಿದ್ದರು.

ಕೊನೆಯ ಮಾತು 


           ಹೀಗೆ ಹೇಳುತ್ತ ಹೋದರೆ ಕಲಾಂ ಅವರ ಸರಳ ಮತ್ತು ಪ್ರಾಮಾಣಿಕ ಬದುಕಿನ ಅನೇಕ ಘಟನೆಗಳು  ಮನಸ್ಸನ್ನು ಆರ್ದ್ರಗೊಳಿಸುತ್ತವೆ. ಹೃದಯ ಆತ್ಮಿಯರೊಬ್ಬರನ್ನು ಕಳೆದುಕೊಂಡ ಅನಾಥ ಪ್ರಜ್ಞೆಯಿಂದ ಹೊಯ್ದಾಡುತ್ತದೆ. ಕಲಾಂ ಅವರ ಇರುವಿಕೆ ಮತ್ತು ಅವರ ಬದುಕು ಅನೇಕರಿಗೆ ಸ್ಪೂರ್ತಿಯ ಸೆಲೆಯಾಗಿತ್ತು. ನಿಜಕ್ಕೂ ಕಲಾಂ ನಮ್ಮ ನಡುವಿನ ಅದ್ಭುತ ಮತ್ತು ಅಚ್ಚರಿಗಳಲ್ಲೊಂದಾಗಿದ್ದರು. ಕಡುಬಡತನದಲ್ಲಿ ಹುಟ್ಟಿದ ಪೇಪರ್ ಮಾರುವ ಹುಡುಗನೊಬ್ಬ ತನ್ನಲ್ಲಿನ ಪ್ರತಿಭೆ ಮತ್ತು ಪ್ರಯತ್ನದಿಂದ ರಾಷ್ಟ್ರಪತಿ ಭವನದವರೆಗೆ ಪಯಣಿಸಿದ ಅವರ ಬದುಕಿನ ಆ ಪಯಣ ಸಣ್ಣ ಸಾಧನೆಯಲ್ಲ. ಅವರ ಆ ಪಯಣದ ದಾರಿಯಲ್ಲಿ ಹೂವುಗಳಿಗಿಂತ ಕಲ್ಲು ಮುಳ್ಳುಗಳೇ ತುಂಬಿದ್ದವು. ತನ್ನ ಸಾಧನೆಯ ದಾರಿಗೆ ಎದುರಾದ ಎಲ್ಲ ಅಡೆತಡೆಗಳನ್ನು ಬದಿಗೆ ಸರಿಸಿ ತಾನು ನಡೆಯಬೇಕಾದ ಪಥವನ್ನು ಸ್ವತ: ನಿರ್ಮಿಸಿಕೊಂಡ ಪಥಿಕರವರು. ಅವರ ಬದುಕಿನ ಯಶೋಗಾಥೆ ಅವರ ನಂತರದ ಪೀಳಿಗೆಗೆ ಅದು ಯಾವತ್ತಿಗೂ ದಾರಿದೀಪ. ಇಂಥ ಸಾಧಕ ಸಾಧನೆ ಮಾಡುತ್ತಿರುವ ಕಾಲದಲ್ಲಿ ನಾವು ಬದುಕಿರುವುದು ನಿಜಕ್ಕೂ ಅದು ನಮ್ಮ ಬದುಕಿನ ಬಹುದೊಡ್ಡ ಅದೃಷ್ಟ. ಅವರನ್ನು ನೆನಪಿಸಿಕೊಂಡಾಗಲೆಲ್ಲ ಮನಸ್ಸು ಹೇಳುತ್ತದೆ 'ಮೇಷ್ಟ್ರೆ ನೀವು ಇನ್ನೊಂದಿಷ್ಟು ಕಾಲ ಬದುಕಿರಬೇಕಿತ್ತು'.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Wednesday, July 1, 2015

ಮಹಿಳಾ ಅಸ್ತಿತ್ವದ ವಿವಿಧ ನೆಲೆಗಳು






            ರಾಮಾಯಣದಲ್ಲಿ ಊರ್ಮಿಳೆ ಎನ್ನುವ ಪಾತ್ರವೊಂದಿದೆ. ಈಕೆ ಲಕ್ಷ್ಮಣನ ಹೆಂಡತಿ. ರಾಮ ಕಾಡಿಗೆ ಹೋಗುವ ಸಂದರ್ಭ ಅಣ್ಣನನ್ನು ಅನುಸರಿಸಿ ಲಕ್ಷ್ಮಣ ಸಹ ಕಾಡಿಗೆ ತೆರಳುತ್ತಾನೆ. ಕಾಡಿಗೆ ಹೋಗುತ್ತಿರುವ ಲಕ್ಷ್ಮಣನಿಗೆ ತನ್ನನ್ನೇ ನಂಬಿಕೊಂಡ ಜೀವವೊಂದಿದೆ ಎನ್ನುವ ನೆನಪಾಗುವುದಿಲ್ಲ. ಹೆಂಡತಿ ಸೀತೆಯನ್ನೂ ತನ್ನೊಂದಿಗೆ ಕಾಡಿಗೆ ಕರೆದೊಯ್ಯುತ್ತಿರುವ ರಾಮನಿಗೂ ತನ್ನ ತಮ್ಮ ಲಕ್ಷ್ಮಣನಿಗೂ ಪತ್ನಿ ಇರುವ ಸತ್ಯ ಗೋಚರವಾಗುವುದಿಲ್ಲ. ರಾವಣ ಕಾಡಿನಲ್ಲಿ ಸೀತೆಯನ್ನು ಅಪಹರಿಸಿದಾಗ ವಿರಹ ವೇದನೆಯಿಂದ ಬಳಲುವ ರಾಮ ತಮ್ಮ ಲಕ್ಷ್ಮಣನೆದುರು ಸೀತೆಯ ಅಗಲುವಿಕೆಯಿಂದಾದ ದು:ಖವನ್ನು ತೋಡಿಕೊಳ್ಳುತ್ತಾನೆ. ದಾರಿಯಲ್ಲಿ ಎದುರಾಗುವ ಮರ, ಗಿಡ, ಬಳ್ಳಿ, ನದಿ, ಬೆಟ್ಟಗಳನ್ನು ಮಾತನಾಡಿಸಿ ನನ್ನ ಸೀತೆಯನ್ನು ಕಂಡಿರಾ ಎಂದು ಪ್ರಲಾಪಿಸುತ್ತಾನೆ. ಹೀಗೆ ದು:ಖಿಸುತ್ತಿರುವ ರಾಮನಿಗೆ ಲಕ್ಷ್ಮಣನೂ ವಿರಹಾಗ್ನಿಯಿಂದ ಬಳಲುತ್ತಿರಬಹುದೆನ್ನುವ ಕಿಂಚಿತ್ ಸಂದೇಹವೂ ಮನಸ್ಸಿನಲ್ಲಿ ಸುಳಿಯದೇ ಹೋಗುತ್ತದೆ. ರಾಮ ರಾವಣನನ್ನು ಜಯಿಸಿ ಹದಿನಾಲ್ಕು ವರ್ಷಗಳ ವನವಾಸವನ್ನು ಪೂರ್ಣಗೊಳಿಸಿ ಸೀತೆ ಮತ್ತು ಲಕ್ಷ್ಮಣನೊಂದಿಗೆ ಅಯೋಧ್ಯೆಗೆ ಮರಳುತ್ತಾನೆ. ಹಾಗಾದರೆ ಆ ಹದಿನಾಲ್ಕು ವರ್ಷಗಳ ಕಾಲ ಪತಿಯಿಂದ ದೂರಾಗಿ ಊರ್ಮಿಳೆ ಅನುಭವಿಸಿದ ವೇದನೆ ಮತ್ತು ಸಂಕಟಗಳ ಕಥೆ ಏನಾಯಿತು? ರಾಮಾಯಣವನ್ನು ಓದುತ್ತಿರುವ ಘಳಿಗೆ ಓದುಗ ಊರ್ಮಿಳೆಯ ಪಾತ್ರದೊಂದಿಗೆ ಮುಖಾಮುಖಿಯಾಗುವುದೇ ಇಲ್ಲ. ಭಾತೃತ್ವದ   ಪ್ರಶ್ನೆ  ಎದುರಾದಾಗ ಅದಕ್ಕೆ ಶ್ರೇಷ್ಠ ಉದಾಹರಣೆಯಾಗಿ ಲಕ್ಷ್ಮಣನ ಹೆಸರನ್ನು ಹೇಳುವ ನಾವು ಊರ್ಮಿಳೆಯನ್ನು ಮರೆತು ಬಿಡುತ್ತೇವೆ. ಹಾಗಾದರೆ ಊರ್ಮಿಳೆಯದು ಶ್ರೇಷ್ಠ ತ್ಯಾಗವಲ್ಲವೇ? ಹದಿನಾಲ್ಕು ವರ್ಷಗಳ ಕಾಲ ಗಂಡನಿಂದ ದೂರವೇ ಉಳಿದು ಆತನನ್ನು ಅಣ್ಣನ ಸೇವೆಗಾಗಿ ಪ್ರಾಂಜಲ ಮನಸ್ಸಿನಿಂದ ಕಳಿಸಿಕೊಟ್ಟ ಊರ್ಮಿಳೆಯ ವ್ಯಕ್ತಿತ್ವಕ್ಕೆ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ದೊರೆಯಬೇಕಾದ ಮನ್ನಣೆ ಸಿಗಲೇ ಇಲ್ಲ. ಅಂದರೆ ಮಹಿಳೆಯನ್ನು ಪುರುಷ ಪ್ರಧಾನ ನೆಲೆಯಲ್ಲಿ ಶೋಷಣೆಗೊಳಪಡಿಸುತ್ತ ಬಂದಿರುವುದಕ್ಕೆ ನಮ್ಮ ಪ್ರಾಚೀನ ಪರಂಪರೆಯ ಒತ್ತಾಸೆಯಿದೆ ಎಂದರ್ಥ. ರಾಮಾಯಣ ಮತ್ತು ಮಹಾಭಾರತದ ಕಾಲದಿಂದಲೂ ಸ್ತ್ರೀ ಶೋಷಣೆಯ ವಸ್ತುವಾಗಿಯೇ ಬಿಂಬಿತವಾಗುತ್ತ ಬಂದಿರುವಳು.

             ಇತಿಹಾಸದ ಪಾತ್ರವೊಂದು ಸ್ತ್ರೀ ಶೋಷಣೆಯ ವಸ್ತುವಾಗಿ ಪುರುಷ ಪ್ರಧಾನ ವ್ಯವಸ್ಥೆಗೆ ಒತ್ತಾಸೆಯಾಗಿ ನಿಂತಾಗ ಇತಿಹಾಸದ ಮತ್ತೊಂದು ಪಾತ್ರವಾದ ಅಕ್ಕ ಮಹಾದೇವಿಯದು ಪುರುಷ ಪ್ರಧಾನ ವ್ಯವಸ್ಥೆಯನ್ನು ಧಿಕ್ಕರಿಸಿ ಹೊಸ ವ್ಯವಸ್ಥೆಯನ್ನು ಕಟ್ಟುವ ತಹತಹಿಕೆ. ಚೆನ್ನಮಲ್ಲಿಕಾರ್ಜುನನನ್ನೇ ತನ್ನ ಪತಿಯೆಂದು ಮಾನಸಿಕವಾಗಿ ಪರಿಭಾವಿಸಿದ ಅಕ್ಕ ಕೌಶಿಕ ರಾಜನ ಕಾಮನೆಗಳನ್ನು ಮೆಟ್ಟಿನಿಂತು ಮಹಿಳಾ ವಿಮೋಚನೆಗೆ ಹೊಸ ದಾರಿ ತೋರುತ್ತಾಳೆ. ಒಂದು ಪಾತ್ರದ ಮೂಲಕ ಸ್ತ್ರೀ ಶೋಷಣೆಗೆ ಸಾಕ್ಷಿಯಾದ ಇತಿಹಾಸ ಮತ್ತೊಂದು ಪಾತ್ರದ ಮೂಲಕ ಸ್ತ್ರೀ ವಿಮೋಚನೆಗೂ ಸಾಕ್ಷಿಯಾದದ್ದು ಇತಿಹಾಸದ ಮಹತ್ವಗಳಲ್ಲೊಂದು.  ಇತಿಹಾಸದಿಂದ ಬಿಡುವಷ್ಟೇ ಪಡೆಯುವುದು ಕೂಡ ಬಹುಮುಖ್ಯವಾದದ್ದು. ನಮ್ಮ ನೆಲದ ಮಹಿಳೆಯರು ಅಕ್ಕ ಮಹಾದೇವಿಯ ಧೋರಣೆ ಹಾಗೂ ಪುರುಷ ಸಮಾಜವನ್ನು ಧಿಕ್ಕರಿಸಿ ನಿಂತ ಆಕೆಯ ಮನೋಸ್ಥೈರ್ಯವನ್ನು ಬಳುವಳಿಯಾಗಿ ಪಡೆದು ಸ್ತ್ರೀ ವಿಮೋಚನೆಯ ಅನೇಕ ಸ್ಥಿತ್ಯಂತರಗಳಿಗೆ ಪ್ರಯತ್ನಿಸಿದರು. ಒಂದು ರೀತಿಯಲ್ಲಿ ಮಹಿಳೆ ತನ್ನ ಅಸ್ಮಿತೆಯನ್ನು ವಿವಿಧ ನೆಲೆಗಳಲ್ಲಿ ಗುರುತಿಸಿಕೊಳ್ಳಲು ಮಾಡಿದ ಪ್ರಯತ್ನವೂ ಅದಾಗಿತ್ತು.

          ಮಹಿಳೆ ಪುರುಷ ಪ್ರಧಾನ ವ್ಯವಸ್ಥೆಯ ನೆರಳಿನಿಂದ  ಹೊರಬಂದು  ತನ್ನದೇ ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಳ್ಳಲು ಮಾಡಿದ ಪ್ರಯತ್ನಗಳಲ್ಲಿ ಆಕೆ ಅತ್ಯಂತ ಸಮರ್ಥನಿಯವಾಗಿ ಬಳಸಿಕೊಂಡಿದ್ದು  ಬರವಣಿಗೆಯನ್ನು ಎನ್ನುವ ನಂಬಿಕೆ ನನ್ನದು. ಅಕ್ಕ ಮಹಾದೇವಿಯ ಜೊತೆಗೆ ಅನೇಕ ವಚನಕಾರ್ತಿಯರು ೧೨ನೇ ಶತಮಾನದಲ್ಲಿ ಬರವಣಿಗೆಯನ್ನೇ ತಮ್ಮ ಅಭಿವ್ಯಕ್ತಿ ಮಾಧ್ಯಮವಾಗಿಸಿಕೊಂಡು ಸಾವಿರಾರು ವಚನಗಳನ್ನು ಬರೆದು ಆ ಮೂಲಕ ಹೆಣ್ಣಿನ ತುಮುಲ ಹಾಗೂ ಒಳತೋಟಿಗಳನ್ನು ತೆರೆದಿಡುವ ಪ್ರಯತ್ನ ಮಾಡಿದರು. ವಚನಕಾರ್ತಿಯರ ಆ ಒಂದು ಪ್ರಯತ್ನವನ್ನೇ ಆಧಾರವಾಗಿಟ್ಟುಕೊಂಡು ೧೯ನೇ ಶತಮಾನದಲ್ಲಿ ಅನೇಕ ಮಹಿಳೆಯರು ಬರವಣಿಗೆಯ ಮೂಲಕ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಯತ್ನಿಸಿದರು. ಪ್ರಾರಂಭದಲ್ಲಿ ಮಹಿಳೆ ತನ್ನ ಗೃಹ ಕೃತ್ಯಗಳ ನಡುವೆ ದೊರೆಯುವ ಬಿಡುವಿನ ಸಮಯವನ್ನು ದೇವರ ಹಾಡು, ಕೀರ್ತನೆ, ಭಜನೆಯಂಥ ಬರವಣಿಗೆಗೆ ವಿನಿಯೋಗಿಸಿಕೊಂಡು ಪುರುಷ ದಬ್ಬಾಳಿಕೆಯಿಂದ ಯಾತನೆಗೊಂಡ ಮನಸ್ಸಿಗೆ ಒಂದಿಷ್ಟು ಸಾಂತ್ವನದ ಸಿಂಚನ ಗೈದಳು. ನಂತರದ ದಿನಗಳಲ್ಲಿ ದೇವರ ಕೋಣೆಯಿಂದ ನಡುಮನೆ ಹಾಗೂ ಹಿತ್ತಲನ್ನು ಪ್ರವೇಶಿಸಿದ ಮಹಿಳಾ ಬರವಣಿಗೆ ದೇವರ ನಾಮ, ಕೀರ್ತನೆಗಳಿಂದ ಕಥೆ ಕವಿತೆಗಳಿಗೆ ವಿಸ್ತರಿಸತೊಡಗಿತು. ಆದರೂ ಮಹಿಳಾ ಸಾಹಿತ್ಯವೆಂದರೆ ಅದು ಅಡುಗೆ ಮನೆಯ ಸಾಹಿತ್ಯ ಎನ್ನುವ ಗೇಲಿಗೆ ಒಳಗಾಗಬೇಕಾಯಿತು. ಅಂಥದ್ದೊಂದು ಗೇಲಿಗೆ ಪುರಾವೆಯಾಗಿ ಕೆಲವು ಬರಹಗಾರ್ತಿಯರ ಬರವಣಿಗೆ ಅಡುಗೆ, ಶೃಂಗಾರ, ಗಂಡ, ಮಕ್ಕಳ ಪಾಲನೆಗೆ ಮಾತ್ರ ಸೀಮಿತವಾಗಿರುತ್ತಿತ್ತು. ಇಂಥದ್ದೊಂದು ಆರೋಪದಿಂದ ಹೊರಬರುವುದು ಆ ದಿನಗಳಲ್ಲಿನ ಮಹಿಳಾ ಸಾಹಿತ್ಯದ ತುರ್ತು ಅಗತ್ಯವಾಗಿತ್ತು. ಅದಕ್ಕೆಂದೇ ಅನೇಕ ಲೇಖಕಿಯರು ತಮ್ಮದೇ ಮನೆಯ ಮಹಿಳೆಯರ ಸಮಸ್ಯೆಗಳನ್ನು ಬರವಣಿಗೆಯ ಮೂಲಕ ತೆರೆದಿಡಲಾರಂಭಿಸಿದರು. ನಡುಮನೆ ಮತ್ತು ಹಿತ್ತಲಿಗೆ ಸೀಮಿತವಾಗಿದ್ದ ಮಹಿಳಾ ಸಾಹಿತ್ಯದ ಬಿಕ್ಕಳಿಕೆ ಮನೆಯ ಅಂಗಳ ಹಾಗೂ ಜಗುಲಿಯನ್ನು ಹೋಗಿ ತಲುಪಿದಾಗಲೇ ಬರವಣಿಗೆ ಮಹಿಳೆಯರ ದು:ಖ ಮತ್ತು ಸಂಕಟಗಳಿಗೆ ವೇದಿಕೆಯಾಗುತ್ತಿದೆ ಎನ್ನುವ ಅನುಮಾನ ಮೊಳಕೆಯೊಡೆಯಲಾರಂಭಿಸಿತು. ಪ್ರಾರಂಭದ ದಿನಗಳಲ್ಲಿನ ಮಹಿಳಾ ಸಾಹಿತ್ಯದ ವಿಷಯವಸ್ತು ಅಡುಗೆ ಕೋಣೆ ಹಾಗೂ ಮಲಗುವ ಕೋಣೆಗಳ ನಾಲ್ಕು ಗೋಡೆಗಳ ನಡುವಿನ ಆಕೆಯ ಬಿಸಿಯುಸಿರು ಮತ್ತು ಬಿಕ್ಕಳಿಕೆಗೆ ಸೀಮಿತವಾಗಿದ್ದರೂ ಒಂದಿಷ್ಟಾದರೂ ಸ್ತ್ರೀ ಸಮಸ್ಯೆಗಳು ಸಮಾಜದ ಮುಖ್ಯಸ್ತರಕ್ಕೆ ಹೋಗಿ ತಲುಪಲು ಸಾಧ್ಯವಾಯಿತು. ಇಂಥದ್ದೊಂದು ಪ್ರಯತ್ನದ ಪರಿಣಾಮ ಮಹಿಳೆ ತನ್ನ ಸುತ್ತಲಿನ ನಿರ್ಬಂಧನೆಗಳಿಂದ ಬಿಡಿಸಿಕೊಂಡು ಹೊರಬಂದು ತನ್ನದಲ್ಲದೆ ಬೇರೆ ಸ್ತ್ರೀಯರ ಬದುಕಿನ ಬವಣೆಗಳನ್ನೂ ಬರಹಕ್ಕಿಳಿಸಲು ಯತ್ನಿಸತೊಡಗಿದಳು.

            ನಂತರದ ದಿನಗಳಲ್ಲಿ ಬರವಣಿಗೆಯ ಮೂಲಕ ಇಂದಿರಾ, ತ್ರಿವೇಣಿ, ಪ್ರೇಮಾ ಭಟ್ಟ, ಉಷಾನವರತ್ನ ರಾಮ್, ಅನುಪಮಾ ಇತ್ಯಾದಿ ಲೇಖಕಿಯರು ಸ್ತ್ರೀ ಸಮಸ್ಯೆಗಳನ್ನು ಅತ್ಯಂತ ಸಮರ್ಥವಾಗಿ ಸಮಾಜದ ಮುಖ್ಯವಾಹಿನಿಗೆ ಒಯ್ದು ಮುಟ್ಟಿಸುವಲ್ಲಿ ಯಶಸ್ವಿಯಾದರು. ಮಹಿಳಾ ಸಂವೇದನೆಯ ಅನೇಕ ಮುಖಗಳು ಈ ಲೇಖಕಿಯರ ಬರಹಗಳಿಂದ ಅನಾವರಣಗೊಂಡವು. ತ್ರಿವೇಣಿ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮಹಿಳೆಯ ಮನಸ್ಸಿಗೆ ಕನ್ನಡಿ ಹಿಡಿಯುವ ಕೆಲಸ ಮಾಡಿದರು. ಕನ್ನಡ ಸಾಹಿತ್ಯದಲ್ಲಿ ಮಹಿಳಾ ಲೇಖಕಿಯಿಂದಾದ ಬಹುದೊಡ್ಡ ಬದಲಾವಣೆ ಇದು. ಮಹಿಳಾ ಲೇಖಕಿಯರದು ಅಡುಗೆ ಮನೆಯ ಸಾಹಿತ್ಯ ಎಂದು ಗೇಲಿ ಮಾಡುತ್ತಿದ್ದ ಪುರುಷ ಲೇಖಕ ಬಣದ ಅಹಂಕಾರಕ್ಕೆ ತ್ರಿವೇಣಿ ತಮ್ಮ ಕಾದಂಬರಿಗಳ ಕಥಾವಸ್ತುವಿನ ಮೂಲಕವೇ ದೊಡ್ಡ ಪೆಟ್ಟು ನೀಡಿದರು. ಅವರ ಬೆಕ್ಕಿನ ಕಣ್ಣು, ಶರಪಂಜರ, ಬೆಳ್ಳಿ ಮೋಡ ಕಾದಂಬರಿಗಳು ಹೆಣ್ಣಿನ ಸಂಕಟ ಹಾಗೂ ಸಂವೇದನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟವು. ಆದರೆ ಈ ಮೇಲೆ ಹೆಸರಿಸಿದ ಮಹಿಳಾ ಲೇಖಕಿಯರ ಬಹುತೇಕ ಕಥೆ ಕಾದಂಬರಿಗಳಲ್ಲಿ ಹೆಣ್ಣಿನ ಬದುಕು ಒಂದೋ ಪುರುಷ ಪ್ರಧಾನ ವ್ಯವಸ್ಥೆ ಎದುರು ಸೋಲೊಪ್ಪಿಕೊಳ್ಳುವುದು ಇಲ್ಲವೇ ಆತ್ಮಹತ್ಯೆಯಂಥ ದುರಂತದಲ್ಲಿ ಕೊನೆಗೊಳ್ಳುತ್ತಿತ್ತು. ಅವರ ಕಥೆಯ ನಾಯಕಿಯರು ಶೋಷಣೆಯನ್ನು ವಿರೋಧಿಸಿ ಹೊರಬರುವ ಪ್ರಯತ್ನ ಮಾಡಲಿಲ್ಲವಾದರೂ ಸ್ತ್ರೀ ಶೋಷಿತಳು ಎನ್ನುವುದನ್ನು ತೋರಿಸಿಕೊಟ್ಟಿದ್ದು ನಿಜಕ್ಕೂ ಬಹುದೊಡ್ಡ ಸಾಮಾಜಿಕ ಪಲ್ಲಟಕ್ಕೆ ಕಾರಣವಾಯಿತು. ಇಂಥದ್ದೊಂದು ಪ್ರಯತ್ನದ ಪರಿಣಾಮ ಮಹಿಳಾ ಸಾಹಿತ್ಯಕ್ಕೆ ಮಹತ್ವದ ತಿರುವು ಸಿಕ್ಕು ಶೋಷಣೆಯನ್ನು ವಿರೋಧಿಸಿ ಹೊರಬರುವ ನಾಯಕಿಯರು ನಂತರದ ತಲೆಮಾರಿನ ಲೇಖಕಿಯರ ಬರಹಗಳಲ್ಲಿ ರೂಪುಗೊಳ್ಳತೊಡಗಿದರು.

         ಹೀಗೆ ಮಹಿಳಾ ಸಾಹಿತ್ಯದ ಪರಂಪರೆಯನ್ನೇ ಮುರಿದು ಕಟ್ಟುವ ಪ್ರಯತ್ನಕ್ಕೆ ಮುಂದಾದ ಲೇಖಕಿಯರಲ್ಲಿ ಬಹುಮುಖ್ಯವಾಗಿ ಕೇಳಿಬರುವ ಹೆಸರುಗಳಲ್ಲಿ ಗೀತಾ ನಾಗಭೂಷಣ, ಸಾರಾ ಅಬೂಬಕ್ಕರ, ವೈದೇಹಿ, ಲಲಿತಾ ನಾಯಕ್, ವೀಣಾ ಶಾಂತೇಶ್ವರ ಪ್ರಮುಖವಾದವುಗಳು. ಈ ಲೇಖಕಿಯರು ತಮ್ಮ ಕಥೆ ಕಾದಂಬರಿಗಳ ನಾಯಕಿಯ ಪಾತ್ರದ ಮೂಲಕ ಸಮಾಜದಲ್ಲಿ ಮನೆಮಾಡಿಕೊಂಡಿರುವ ಪುರುಷ ಪ್ರಧಾನ ವ್ಯವಸ್ಥೆಯನ್ನು ಪ್ರಶ್ನಿಸತೊಡಗಿದರು. ಇವರು ಸೃಷ್ಟಿಸಿದ ನಾಯಕಿಯರು ಶೋಷಣೆಯನ್ನು ಧಿಕ್ಕರಿಸಿ ಹೊರಬಂದು ಹೊಸಬದುಕನ್ನು ಕಟ್ಟಿಕೊಳ್ಳುವಷ್ಟು ಸಮರ್ಥರು. ಇದುವರೆಗೂ ಮನೆಯ ಹಿತ್ತಲು ಮತ್ತು ಜಗುಲಿಯವರೆಗೆ ಮಾತ್ರ ಓಡಾಡಿಕೊಂಡಿದ್ದ ಮಹಿಳಾ ಸಮಸ್ಯೆಗಳಿಗೆ ರಸ್ತೆಯ ಮುಖ ಕಾಣುವ ಅವಕಾಶ ದೊರೆಯಿತು. ಗೀತಾ ನಾಗಭೂಷಣ ಅವರ ಅನೇಕ ಕಾದಂಬರಿಗಳ ನಾಯಕಿಯರು ರಸ್ತೆಯ ಮೇಲೆ ನಿಂತು ಗಂಡಸಿನ ಕೊರಳುಪಟ್ಟಿ ಹಿಡಿದು ಜಗಳವಾಡುವಷ್ಟು ಗಟ್ಟಿಗರು. ಜೊತೆಗೆ ಗಮನಿಸಬೇಕಾದ ಇನ್ನೊಂದು ಗಮನಾರ್ಹವಾದ ಬೆಳವಣಿಗೆ ಎಂದರೆ ಇದುವರೆಗೂ ಮಧ್ಯಮ ವರ್ಗದ ಮಹಿಳೆಯರ ಸಮಸ್ಯೆಗಳನ್ನು ಮಾತ್ರ ತಮ್ಮ ಬರವಣಿಗೆಯ ವಸ್ತುವಾಗಿಸಿಕೊಳ್ಳುತ್ತಿದ್ದ ಲೇಖಕಿಯರು ಈ ಬಂಡಾಯ ಲೇಖಕಿಯರ ಆಗಮನದ ನಂತರ ಕೆಳವರ್ಗದ ಮಹಿಳೆಯರ ಸಮಸ್ಯೆಗಳನ್ನೂ ತಮ್ಮ ಬರವಣಿಗೆಗೆ ದಕ್ಕಿಸಕೊಳ್ಳತೊಡಗಿದರು. ಇನ್ನು ಕಾರ್ಪೊರೇಟ್ ಸಂಸ್ಕೃತಿಗೆ ಸೇರಿದ ಮಹಿಳೆಯರ ಸಮಸ್ಯೆಗಳನ್ನು ನೇಮಿಚಂದ್ರ, ಸುನಂದಾ ಅವರಂಥ ಉದಯೋನ್ಮುಖ ಬರಹಗಾರ್ತಿಯರು ಸಮರ್ಥವಾಗಿ ಕನ್ನಡ ಸಾಹಿತ್ಯಕ್ಕೆ ಎಳೆದುತಂದರು. ಅಕ್ಷಿತಾ ಹುಂಚನಕಟ್ಟೆ, ಸಬೀಹಾ ಭೂಮಿಗೌಡ, ರೂಪ ಹಾಸನ, ಶಶಿಕಲಾ, ನಾಗವೇಣಿ ಇತ್ಯಾದಿ ಈ ದಿನಗಳಲ್ಲಿನ ಲೇಖಕಿಯರು ಮಹಿಳೆಯನ್ನು ಪುರುಷ ಪ್ರಧಾನ ನೆಲೆಯಿಂದ ಸಂಪೂರ್ಣವಾಗಿ ಹೊರತಂದು ಅವಳದೇ ಒಂದು ಅಸ್ಮಿತೆಯನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತಿರುವುದು ಕನ್ನಡ ಸಾಹಿತ್ಯದಲ್ಲಿ ಮಹಿಳಾ ಸಾಹಿತ್ಯದಲ್ಲಾಗುತ್ತಿರುವ ಪ್ರಮುಖ ಬೆಳವಣಿಗೆಗಳಲ್ಲೊಂದು. ಅಕ್ಷತಾ ಹುಂಚನಕಟ್ಟೆ ಬರವಣಿಗೆಯೊಂದಿಗೆ ಪುಸ್ತಕ ಪ್ರಕಾಶನಕ್ಕೂ ಕೈಹಾಕಿ ಪ್ರತ್ಯೇಕ ಅಸ್ತಿತ್ವದಿಂದ ಗುರುತಿಸಿಕೊಂಡಿರುವರು.

                ಸ್ತ್ರೀ ತನ್ನ ಅಸ್ಮಿತೆಯ ಹುಡುಕಾಟದಲ್ಲಿ ಸಿನಿಮಾ ಮಾಧ್ಯಮವನ್ನೂ ಒಂದು ನೆಲೆಯಾಗಿ ರೂಪಿಸಿಕೊಂಡಿದ್ದುಂಟು. ಆದರೆ ಸಿನಿಮಾ ಮಾಧ್ಯಮಕ್ಕೆ ಕಾಲಿಡುವುದಕ್ಕಿಂತ ಪೂರ್ವದಲ್ಲಿ ಆಕೆ ಅಭಿನಯದ ಒಂದಿಷ್ಟು ತಾಲೀಮು ಮಾಡಿ ತರಬೇತಿ ಪಡೆದದ್ದು ರಂಗಭೂಮಿಯಲ್ಲಿ. ಆದರೆ ಮಹಿಳೆ ಸಂಪ್ರದಾಯದ ಚೌಕಟ್ಟಿನಿಂದ ಹೊರಬಂದು ರಂಗಭೂಮಿಯನ್ನು ಪ್ರವೇಶಿಸಲು ಸಾಕಷ್ಟು ಕಾಲಾವಕಾಶ ಬೇಕಾಯಿತು. ಜೊತೆಗೆ ಗಮನಿಸಬೇಕಾದ ಸಂಗತಿ ಎಂದರೆ ಮಹಿಳೆ ರಂಗಭೂಮಿಗೆ ಕಲಾವಿದೆಯಾಗಿ ಬಂದದ್ದು ನಟನೆಯನ್ನು ತನ್ನ ಅಭಿವ್ಯಕ್ತಿ ಮಾಧ್ಯಮವಾಗಿ ಬಳಸಿಕೊಳ್ಳಲು ಅಲ್ಲ. ಹೊಟ್ಟೆಪಾಡಿನ ಸಮಸ್ಯೆಗೆ ಪರಿಹಾರವಾಗಿ ಆಕೆ ರಂಗಭೂಮಿಯನ್ನು ಆಶ್ರಯಿಸಿದಳೇ ವಿನ: ಅದನ್ನು ತನ್ನ ಸಮಸ್ಯೆಗಳ ಹಾಗೂ ಸಂವೇದನೆಯ ಅನಾವರಣಕ್ಕಾಗಿ ಉಪಯೋಗಿಸಿಕೊಳ್ಳಬೇಕೆನ್ನುವ ಘನ ಉದ್ದೇಶ ಅವಳದಾಗಿರಲಿಲ್ಲ. ಈ ಕಾರಣದಿಂದಾಗಿ ಆರ್ಥಿಕವಾಗಿ ತೀರ ಸಂಕಷ್ಟದಲ್ಲಿರುವ ಹಾಗೂ ಕೆಳಸಮುದಾಯಗಳ ಮಹಿಳೆಯರೇ ಪ್ರಾರಂಭದ ದಿನಗಳಲ್ಲಿ ರಂಗಭೂಮಿಯನ್ನು ಪ್ರವೇಶಿಸಿದರು. ಈ ಕಾರಣದಿಂದಾಗಿ ಆ ದಿನಗಳಲ್ಲಿನ ಮಹಿಳಾ ಕಲಾವಿದೆಯರ ಅಭಿನಯ ನಾಟಕದ ಮಧ್ಯದಲ್ಲಿ ಪ್ರೇಕ್ಷಕರಿಗೆ ಮನರಂಜನೆ ನೀಡಲು ಹಾಡು ಮತ್ತು ಕುಣಿತಕ್ಕಷ್ಟೇ ಸೀಮಿತವಾಗಿತ್ತು. ಇದು ಪ್ರೇಕ್ಷಕರನ್ನು ರಂಗಭೂಮಿಯತ್ತ ಸೆಳೆಯುವ ನಾಟಕ ಕಂಪನಿಗಳ ಮಾಲೀಕರ ತಂತ್ರವೂ ಆಗಿತ್ತು. ಪುರುಷ ಕಲಾವಿದರೇ ಸ್ತ್ರೀ ಪಾತ್ರಗಳಲ್ಲೂ ಅಭಿನಯಿಸುತ್ತಿದ್ದುದ್ದರಿಂದ ಮಹಿಳಾ ಕಲಾವಿದರ ಅಭಿನಯವನ್ನು ರಂಗಭೂಮಿ ಸಮರ್ಥವಾಗಿ ಬಳಸಿಕೊಳ್ಳಲಿಲ್ಲ. ಹಾಡು, ಕುಣಿತದಿಂದ ನಾಟಕದ ಮುಖ್ಯ ಪಾತ್ರಗಳಿಗೆ ಮಹಿಳಾ ಕಲಾವಿದರು ಬಡ್ತಿ ಪಡೆದರಾದರೂ ಅವರು ಪುರುಷ ಪ್ರಧಾನ ನಾಟಕಗಳಲ್ಲೇ ಅಭಿನಯಿಸಬೇಕಾಯಿತು. ಇಂಥ ವೈಪರಿತ್ಯಗಳ ನಡುವೆಯೂ ಚಿಂದೋಡಿ ಲೀಲಾ, ಮಾಲತಿ ಸುಧೀರ ಅವರಂಥ ಕೆಲ ನಟಿಯರು ಅಭಿನಯದೊಂದಿಗೆ ನಾಟಕ ಕಂಪನಿಗಳ ಮಾಲೀಕರಾಗುವಷ್ಟು ಎತ್ತರಕ್ಕೆರಿದ್ದೇ ಬಹುದೊಡ್ಡ ಸಾಧನೆ ಎನ್ನಬಹುದು. ಮಹಿಳಾ ಕಲಾವಿದೆಯರನ್ನು ರಂಗಭೂಮಿಯಲ್ಲಿ ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದ್ದೆ ವಿದ್ಯಾವಂತ ಮಹಿಳೆಯರು ರಂಗಭೂಮಿಯನ್ನು ಪ್ರವೇಶಿಸಲು ತೊಡಕಾಗಿ ಪರಿಣಮಿಸಿತು. ನಂತರದ ದಿನಗಳಲ್ಲಿ ಹವ್ಯಾಸಿ ನಾಟಕಗಳ ಮೂಲಕ ವಿದ್ಯಾವಂತ ಮಹಿಳೆಯರು ಅಭಿನಯದಲ್ಲಿ ತಮ್ಮ ಅಸ್ಮಿತೆಯ ಹುಡುಕಾಟಕ್ಕೆ ತೊಡಗಿ ಯಶಸ್ವಿಯಾದರು.

            ವೃತ್ತಿ ರಂಗಭೂಮಿ ಹಾಗೂ ಹವ್ಯಾಸಿ ನಾಟಕಗಳಲ್ಲಿ ಅಭಿನಯದ ತರಬೇತಿ ಪಡೆದ ಮಹಿಳಾ ಕಲಾವಿದೆಯರು ಸಿನಿಮಾ ಮಾಧ್ಯಮಕ್ಕೂ ಕಾಲಿಟ್ಟು ಹೆಸರು ಮತ್ತು  ಹಣ  ಸಂಪಾದಿಸಿದರು. ಸಿನಿಮಾ ನಿರ್ಮಾಣದ ಪ್ರಾರಂಭದ ದಿನಗಳಲ್ಲಿ ನಾಯಕ ಪ್ರಧಾನ ಸಿನಿಮಾಗಳಿಗೆ ಮಾತ್ರ ಮಹಿಳಾ ಕಲಾವಿದರ ಅಭಿನಯ ಸೀಮಿತವಾಗಿದ್ದರೂ ನಂತರದ ದಿನಗಳಲ್ಲಿ ನಾಯಕಿ ಪ್ರಧಾನ ಸಿನಿಮಾಗಳೂ ನಿರ್ಮಾಣಗೊಳ್ಳತೊಡಗಿದವು. ಅನೇಕ ಕಲಾವಿದೆಯರು ಮಹಿಳಾ ಪ್ರಧಾನ ಸಿನಿಮಾಗಳಿಗೆ ತಮ್ಮ ಅಭಿನಯದ ಮೂಲಕ ಜೀವತುಂಬಿದರು. ಮಲ್ಲಮ್ಮನ ಪವಾಡ, ಕಿತ್ತೂರು ರಾಣಿ ಚೆನ್ನಮ್ಮ, ಶರಪಂಜರ, ಇಬ್ಬನಿ ಕರಗಿತು, ಗೆಜ್ಜೆಪೂಜೆ ಯಂಥ ಸಿನಿಮಾಗಳ ಮೂಲಕ ಹೆಣ್ಣಿನ ಸಂಕಟ ಹಾಗೂ ಒಳತೋಟಿಗಳು ಸಶಕ್ತವಾಗಿ ಬೆಳ್ಳಿಪರದೆಯ ಮೇಲೆ ಮೂಡಿ ಪ್ರೇಕ್ಷಕ ವರ್ಗವನ್ನು ತಲುಪಲು ಸಾಧ್ಯವಾಯಿತು. ಮಹಿಳಾ ಪ್ರಧಾನ ಸಿನಿಮಾಗಳನ್ನು ಕನ್ನಡ ಸಿನಿಮಾ ರಂಗದಲ್ಲಿ ತಯ್ಯಾರಿಸಿದ್ದು ಪುಟ್ಟಣ್ಣ ಕಣಗಾಲ್, ದೊರೈ ಭಗವಾನ್, ಕೆ ವಿ ಜಯರಾಂ ಅವರಂಥ ಪುರುಷ ನಿರ್ದೇಶಕರು ಎನ್ನುವುದು ಗಮನಾರ್ಹವಾದ ಸಂಗತಿ. ಮಹಿಳೆಯರೇ ನಿರ್ದೇಶಕಿಯಾಗಿ ಮಹಿಳಾ ಪ್ರಧಾನ ಸಿನಿಮಾಗಳನ್ನು ತಯ್ಯಾರಿಸಿದಲ್ಲಿ ಸ್ತ್ರೀ ಸಂವೇದನೆಯನ್ನು ಇನ್ನಷ್ಟು ಸಶಕ್ತವಾಗಿ ಅನಾವರಣಗೊಳಿಸಲು ಸಾಧ್ಯವಾಗುತ್ತಿತ್ತು. ಆದರೆ ನೂರು ವರ್ಷಗಳ ಇತಿಹಾಸವಿರುವ ಸಾವಿರಾರು ಸಿನಿಮಾಗಳು ನಿರ್ಮಾಣಗೊಂಡಿರುವ ಇಲ್ಲಿ ಮಹಿಳೆ ಸಿನಿಮಾ ನಿರ್ದೇಶನವನ್ನು ತನ್ನ ಅಭಿವ್ಯಕ್ತಿ ಮಾಧ್ಯಮವಾಗಿ ಬಳಸಿಕೊಂಡಿದ್ದು ತೀರ ಕಡಿಮೆ.

          ಇನ್ನೊಂದು ಚರ್ಚಿಸಲೇ ಬೇಕಾದ ಮುಖ್ಯ ಸಂಗತಿ ಎಂದರೆ ನಮ್ಮ ಕನ್ನಡ ಸಿನಿಮಾಗಳಲ್ಲಿ ಮುಸ್ಲಿಂ ಮತ್ತು ದಲಿತ ಮಹಿಳೆ ಅವಳು ಅನುಭವಿಸುತ್ತಿರುವ ಸಮಸ್ಯೆಗಳೊಂದಿಗೆ ಚಿತ್ರಿತವಾಗಿರುವುದು ತೀರ ಕಡಿಮೆ. ಈ ಮಾತನ್ನು ನಾವು ಇತರ ವರ್ಗಗಳ ಮಹಿಳೆಯರ ಸಮಸ್ಯೆಗಳಿಗೂ ಅನ್ವಯಿಸಿ ಹೇಳಬಹುದು. ಹೀಗೆ ಹೇಳುವಾಗ ಮಹಿಳೆ ಅನುಭವಿಸುತ್ತಿರುವ ಸಮಸ್ಯೆಗಳು ಒಂದು ವರ್ಗದಿಂದ ಇನ್ನೊಂದು ವರ್ಗಕ್ಕೆ ಬೇರೆ ಬೇರೆಯಾಗಿವೆ ಎನ್ನುವುದನ್ನೂ ನಾವು ಗಮನಿಸಬೇಕು. ಫಣಿಯಮ್ಮ ಸಿನಿಮಾವೊಂದೇ ಎಲ್ಲ ವರ್ಗದ ಮಹಿಳೆಯರನ್ನು ಪ್ರತಿನಿಧಿಸಲಾರದು. ನಮ್ಮದು ವಿಭಿನ್ನ ಜಾತಿ ಸಮುದಾಯಗಳ ಸಮಾಜವಾಗಿರುವುದರಿಂದ ಇಡೀ ಮಹಿಳಾ ಸಮುದಾಯದ ಸಮಸ್ಯೆಗಳನ್ನು ಚಿತ್ರಿಸುವಲ್ಲಿ ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಸೋತಿದೆ ಎನ್ನುವ ಸಂಗತಿಯನ್ನು ನಮ್ಮ ಮಹಿಳಾ ಕಲಾವಿದರು ಅರ್ಥಮಾಡಿಕೊಂಡಿಲ್ಲ.

            ಆಗಾಗ ಮಹಿಳೆಯರು ರಾಜಕಾರಣ ಮತ್ತು ಹೋರಾಟಗಳಲ್ಲೂ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳಲು ಪ್ರಯತ್ನ ಮಾಡಿದ ಅನೇಕ ಉದಾಹರಣೆಗಳಿವೆ. ರಾಜಕಾರಣದ ವಿಷಯ ಬಂದಾಗ ನಾಗರತ್ನಮ್ಮ, ಬಸವರಾಜೇಶ್ವರಿ, ಚಂದ್ರಪ್ರಭ ಅರಸು ಲೀಲಾದೇವಿ ಪ್ರಸಾದ  ಇತ್ಯಾದಿ ಮಹಿಳಾ ನಾಯಕಿಯರು ರಾಜ್ಯದ ಮಂತ್ರಿಗಳಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿದರು. ಆದರೂ ಕರ್ನಾಟಕದಲ್ಲಿ ಜಯಲಲಿತಾ, ಮಾಯಾವತಿ, ಮಮತಾ ಬ್ಯಾನರ್ಜಿ ಅವರಂಥ ಇಡೀ ಪಕ್ಷ   ಹಾಗೂ ಸರ್ಕಾರವನ್ನು ನಿಯಂತ್ರಿಸುವ ಧಾಡಸೀತನದ ಮಹಿಳಾ ರಾಜಕಾರಣಿಗಳು ಕಾಣಿಸಿಕೊಳ್ಳಲೇ ಇಲ್ಲ. ಮಹಿಳಾ ಮೀಸಲಾತಿಯ ಮೂಲಕ ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ರಾಜಕೀಯ ಅಧಿಕಾರ ನೀಡಲಾಗಿದೆಯಾದರೂ ಅಲ್ಲಿ ಅಧಿಕಾರ ನಡೆಸುವವರೆಲ್ಲ ಪುರುಷರೇ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಇನ್ನು ಹೋರಾಟದ ವಿಷಯಕ್ಕೆ ಬಂದರೆ ಇಲ್ಲಿ ಮೇಧಾ ಪಾಟ್ಕರ್ ಅವರಂಥ ಹೋರಾಟಗಾರ್ತಿ ರೂಪುಗೊಳ್ಳಲೇ ಇಲ್ಲ. ಹೋರಾಟ ಮತ್ತು ಚಳವಳಿಯ ಇತಿಹಾಸವನ್ನು ಬಗೆದು ನೋಡಿದಾಗ ಶಾಂತವೇರಿ ಗೋಪಾಲಗೌಡರು, ಗಣಪತಿಯಪ್ಪನವರು, ನಂಜುಂಡ ಸ್ವಾಮಿ, ಕಡಿದಾಳು ಶಾಮಣ್ಣ ಅವರ ಹೆಸರುಗಳ ಸಾಲಿನಲ್ಲಿ ನಿಲ್ಲುವಂಥ ಒಬ್ಬ ಮಹಿಳಾ ಹೋರಾಟಗಾರ್ತಿಯ ಹೆಸರೂ ಸಿಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಕೆಲವು ಲೇಖಕಿಯರು ಹೋರಾಟದ ಮುಂಚೂಣಿಗೆ ಬರಲು ಪ್ರಯತ್ನಿಸುತ್ತಿರುವರಾದರೂ ಎಡ ಬಲ ಎನ್ನುವ ಸಿದ್ಧಾಂತಗಳು ಅವರನ್ನು ತಪ್ಪು ದಾರಿಗೆ ಎಳೆಯುತ್ತಿವೆ.

           ಒಟ್ಟಿನಲ್ಲಿ ಮಹಿಳೆ ತನ್ನೊಳಗಿನ ಸಂವೇದನೆಯನ್ನು ಅಭಿವ್ಯಕ್ತಗೊಳಿಸಲು ವಿವಿಧ ನೆಲೆಗಳಲ್ಲಿ ಪ್ರಯತ್ನಿಸಿದಳಾದರೂ ಆಕೆ ಬರವಣಿಗೆ ಮಾಧ್ಯಮವನ್ನು ಸಶಕ್ತವಾಗಿ ಮತ್ತು ಸಮರ್ಥವಾಗಿ ಬಳಸಿಕೊಂಡಷ್ಟು ಬೇರೆ ಮಾಧ್ಯಮಗಳಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳುವಲ್ಲಿ ವಿಫಲಳಾಗಿರುವಳು. ಇದಕ್ಕೆಲ್ಲ ಪುರುಷ ಪ್ರಧಾನ ವ್ಯವಸ್ಥೆ ಸೂಕ್ತ ಅವಕಾಶ ನೀಡದೆ ಇರುವುದು ಒಂದು ಕಾರಣವಾದರೆ ಇನ್ನೊಂದು ಬರವಣಿಗೆ ಹೊರತಾಗಿ ಬೇರೆ ನೆಲೆಗಳಿಗೆ ತನ್ನ ಅಸ್ತಿತ್ವವನ್ನು ವಿಸ್ತರಿಸಲು ತಾನು ದುರ್ಬಲಳು ಎನ್ನುವ ಭಾವನೆ ಅವಳದಾಗಿರಬಹುದು.

            ಸಿಂಡ್ರೆಲಾ ಇದು ನಮಗೆಲ್ಲ ಗೊತ್ತಿರುವ ಕಥೆ. ಸುಂದರಿಯೂ ಮತ್ತು ಮುಗ್ಧಳೂ ಆದ ಸಿಂಡ್ರೆಲಾಳದು ಅತ್ಯಂತ ಸಂಕಷ್ಟದ ಬದುಕು. ಅವಳಿಗೆ ಕಷ್ಟಕೊಡಲೆಂದೇ ಮನೆಯಲ್ಲಿ ರಾಕ್ಷಸ ರೂಪದ ಮಲತಾಯಿ ಹಾಗೂ ಮಲ ಸಹೋದರಿಯರಿದ್ದಾರೆ. ಮನೆಯ ಮಗಳಾದರೂ ಅವಳದು ಆಳಿನ ದುಡಿಮೆ. ಅದೊಂದು ದಿನ ರಾಜಕುಮಾರ ಊರಿನವರಿಗಾಗಿ ಔತಣಕೂಟವನ್ನು ಏರ್ಪಡಿಸಿದ್ದಾನೆ. ತನ್ನಿಬ್ಬರು ಮಕ್ಕಳೊಂದಿಗೆ ಔತಣಕೂಟಕ್ಕೆ ಹೊರಡುವ ಮಲತಾಯಿ ಸಿಂಡ್ರೆಲಾಳನ್ನು ಜೊತೆಗೆ ಕರೆದೊಯ್ಯುವುದಿಲ್ಲ. ಸಿಂಡ್ರೆಲಾಳ ಪ್ರಾರ್ಥನೆಗೆ ಪ್ರತ್ಯಕ್ಷನಾಗುವ ದೇವರು ಆಕೆಯನ್ನು ಶೃಂಗರಿಸಿ ಪುಷ್ಪಕ ವಿಮಾನದಲ್ಲಿ ರಾಜಕುಮಾರನ ಅರಮನೆಗೆ ಕರೆದೊಯ್ಯುತ್ತಾನೆ. ಸಿಂಡ್ರೆಲಾಳ ಸೌಂದರ್ಯ ಹಾಗೂ ಮುಗ್ಧತೆಗೆ ಮಾರುಹೋಗುವ ರಾಜಕುಮಾರ ಅವಳನ್ನು ಎಲ್ಲ ಸಂಕಷ್ಟಗಳಿಂದ ಪಾರುಮಾಡಿ ಮದುವೆಯಾಗುವುದರೊಂದಿಗೆ ಆಕೆಯ ಬದುಕಿನ ಕಥೆ ಸುಖಾಂತ್ಯಗೊಳ್ಳುತ್ತದೆ. ಸಿಂಡ್ರೆಲಾಳದು ಮಹಿಳೆಯರಿಂದ ಶೋಷಣೆಗೆ ಒಳಗಾಗುವ ಪಾತ್ರ ಮತ್ತು ಆಕೆಯನ್ನು ಶೋಷಣೆಯಿಂದ ಮುಕ್ತಿಗೊಳಿಸಿ ಅವಳಿಗೊಂದು ಸುಖದ ಬಾಳು ನೀಡುವವನು ಪುರುಷನಾದ ರಾಜಕುಮಾರ. ಮಹಿಳೆ ಮಹಿಳೆಯಿಂದಲೇ ಶೋಷಣೆಗೆ ಒಳಗಾಗುತ್ತಿರುವುದು ಮತ್ತು ಆ ಒಂದು ಶೋಷಣೆಯಿಂದ ಹೊರಬರಲು ಪುರುಷನನ್ನಾಶ್ರಯಿಸುತ್ತಿರುವುದು ವ್ಯಂಗ್ಯವಾದರೂ ಸತ್ಯ. ಆದರೆ ಮಹಿಳೆ ಪರಾವಲಂಬನೆಯಿಂದ ಹೊರಬಂದು ತನ್ನ ಅಸ್ತಿತ್ವದ ನೆಲೆಯನ್ನು ಇನ್ನೂ ವಿಸ್ತರಿಸಿಕೊಳ್ಳಬೇಕಿದೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

    

Monday, June 1, 2015

ಪೀಕೂ: ಅಪ್ಪ ಮಗಳ ಬಾಂಧವ್ಯದ ಕಥನ





          ಪೀಕೂ ಸಿನಿಮಾ ವೀಕ್ಷಣೆಯಿಂದ ಬಹಳ  ದಿನಗಳ ನಂತರ ಒಂದು ಒಳ್ಳೆಯ ಸಿನಿಮಾ ನೋಡಿದ ಅನುಭವವಾಯಿತು. ಹಾಡು ಹೊಡೆದಾಟಗಳಿಗೆ  ಸೀಮಿತವಾಗುತ್ತಿರುವ   ಇತ್ತೀಚಿನ ಸಿನಿಮಾಗಳ ನಡುವೆ ಪೀಕೂ ವಿಶಿಷ್ಠ ಕತೆಯಿಂದ ಒಂದು ಸದಭಿರುಚಿಯ ಸಿನಿಮಾ ಎನ್ನಬಹುದು. ಹಾಡು ಮತ್ತು ಹೊಡೆದಾಟಗಳಿಲ್ಲದೆ ಸಿನಿಮಾ ನಿರ್ಮಾಣ ಮಾಡುವುದು ಅಸಾಧ್ಯ ಎನ್ನುವ ವಾತಾವರಣ ಸ್ಥಾಪಿತವಾಗಿರುವ ಹಿನ್ನೆಲೆಯಲ್ಲಿ ಕೇವಲ ಕಥೆ ಮತ್ತು ಕಲಾವಿದರ ಅಭಿನಯವನ್ನೇ ನೆಚ್ಚಿಕೊಂಡು ಸಿನಿಮಾ ಮಾಡುವುದು ಅದು ನಿರ್ದೆಶಕನಿಗೂ ನಿಜಕ್ಕೂ ಸವಾಲಿನ ಕೆಲಸ. ಜೊತೆಗೆ ಪೀಕೂ ಸಿನಿಮಾದ ಕಥಾವಸ್ತು ಸಹ ಅಷ್ಟೇನೂ ಸಂಕೀರ್ಣವಾದದ್ದಲ್ಲ. ಮಲಬದ್ಧತೆಯಂಥ ಸಣ್ಣ ಮತ್ತು ಈ ವಿಷಯವಾಗಿ ಬೇರೆಯವರೊಂದಿಗೆ ಮಾತನಾಡಲು ಹಿಂಜರಿಯುವಂಥ ಸಮಸ್ಯೆಯನ್ನು ಆಧಾರವಾಗಿಟ್ಟುಕೊಂಡು ಕಥೆ ಹೆಣೆದ ನಿರ್ದೇಶಕನ ಜಾಣ್ಮೆ ಮೆಚ್ಚಲೇ ಬೇಕು. ಆದರೆ ದೈಹಿಕ ಸಮಸ್ಯೆಯನ್ನು ಮನುಷ್ಯ ಸಂಬಂಧಗಳಿಗೆ ತಳುಕು ಹಾಕುವ ನಿರ್ದೇಶಕ ನೇರವಾಗಿ ಕೈಹಾಕುವುದು ಪ್ರೇಕ್ಷಕರ ಮನಸ್ಸುಗಳಿಗೆ. ಇಲ್ಲೇ ನಿರ್ದೇಶಕ ಗೆಲುವು ಸಾಧಿಸುವುದು. ಒಂದರ್ಥದಲ್ಲಿ ಇದು ಹೀರೋ ಹೀರೋಯಿನ್ ಗಳ ಸಿನಿಮಾ ಎನ್ನುವುದಕ್ಕಿಂತ ಇದೊಂದು ನಿರ್ದೇಶಕನ ಸಿನಿಮಾ. ನಾಯಕ ಪ್ರಧಾನ ಸಿನಿಮಾಗಳೇ ಹೆಚ್ಚು ಹೆಚ್ಚು ನಿರ್ಮಾಣವಾಗುತ್ತಿರುವ ಹಿಂದಿ ಚಿತ್ರರಂಗದಲ್ಲಿ ನಿರ್ದೇಶಕನ ಸಿನಿಮಾವೊಂದು ನಿರ್ಮಾಣಗೊಂಡಿರುವುದು ಅದೊಂದು ಆಶಾದಾಯಕ ಬೆಳವಣಿಗೆ ಎನ್ನಬಹುದು. 

           ಇನ್ನು ಪೀಕೂ ಸಿನಿಮಾದ ಕಥೆಯ ಕುರಿತು ಹೇಳುವುದಾದರೆ ಅದು ಹೀಗಿದೆ, ತನ್ನ ಮಗಳು ಪೀಕೂವಿನೊಂದಿಗೆ ವಾಸಿಸುತ್ತಿರುವ ಭಾಸ್ಕೊರ್ ಬ್ಯಾನರ್ಜಿಗೆ (ಆತ ಕೊಲಕತ್ತಾ ಮೂಲದವನು) ಚಿಕ್ಕ ವಯಸ್ಸಿನಿಂದಲೇ ಮಲಬದ್ಧತೆಯ ಸಮಸ್ಯೆ ಇದೆ. ಆ ಒಂದು ಸಮಸ್ಯೆಯನ್ನೇ ಕುರಿತು ಯಾವ ಸಂಕೋಚವೂ ಇಲ್ಲದೆ ಆತ ಎಲ್ಲರೊಡನೆ ಚರ್ಚಿಸಬಲ್ಲ . ದಿನಕ್ಕೆ ಎಷ್ಟು ಸಲ ಮಲವಿಸರ್ಜನೆಗೆ ಹೋದೆ, ಪ್ರತಿಸಾರಿ ಹೇಗಾಯಿತು ಎನ್ನುವುದನ್ನು ಆತ ವಿವರವಾಗಿ ತನ್ನ ಮಗಳಿಗೆ ಮತ್ತು ಕುಟುಂಬದ ವೈದ್ಯರಿಗೆ ಹೇಳುತ್ತಿರುತ್ತಾನೆ. ತನ್ನ ಆರೋಗ್ಯದ ಏರು ಪೇರುಗಳ ಬಗ್ಗೆ ಆತನಿಗೆ ಸದಾ ಎಚ್ಚರಿಕೆ. ಇದೇ ವಿಷಯವಾಗಿ ಅಪ್ಪ ಮತ್ತು ಮಗಳ ನಡುವೆ ಭಾರೀ ಜಗಳ. ದಿನಕ್ಕೆ ಏನಿಲ್ಲವೆಂದರೂ ಹತ್ತಾರು ಬಾರಿ ಅವರು ಜಗಳವಾಡುತ್ತಾರೆ. ಮಗಳು ತನ್ನನ್ನು ನಿರ್ಲಕ್ಷಿಸಬಾರದು ಎನ್ನುವುದು ಅಪ್ಪನ ಇರಾದೆಯಾದರೆ ಅಪ್ಪನಿಗಾಗಿ ತಾನು ತ್ಯಾಗ ಮಾಡುತ್ತಿದ್ದೇನೆ ಎನ್ನುವ ಭಾವನೆ ಮಗಳದು. ಕಣ್ಣೀರು ತರಿಸುವ ತೀರ ಭಾವನಾತ್ಮಕ ಸನ್ನಿವೇಶಗಳೇನೂ ಈ ಸಿನಿಮಾದಲ್ಲಿಲ್ಲ. ಆದರೆ ಅಪ್ಪ ಮತ್ತು ಮಗಳ ನಡುವಣ ಬಾಂಧವ್ಯವೇ ಸಿನಿಮಾದ ಹೈಲೇಟ್. 

         ಮಲಬದ್ಧತೆಯ ಸಮಸ್ಯೆಯ ಜೊತೆಗೆ ಆತನಿಗಿರುವ ಇನ್ನೊಂದು ಸಮಸ್ಯೆ ಎಂದರೆ ಭಾಸ್ಕೊರ್ ಬ್ಯಾನರ್ಜಿ ತೀರ ವಾಚಾಳಿ. ಯಾವದಾದರೊಂದು ವಿಷಯದ ಕುರಿತು ಆತ ಮಾತನಾಡತೊಡಗಿದರೆ ಎದುರಿನವರಿಗೆ ತಲೆ ಚಿಟ್ಟು ಹಿಡಿಯುತ್ತದೆ. ವಾಚಾಳಿತನದೊಂದಿಗೆ ಆತ ಮಹಾ ಜಗಳಗಂಟ. ಬಾತ್ ರೂಮ್ ಸ್ವಚ್ಛಗೊಳಿಸಲಿಲ್ಲವೆಂದು ಆತ ಮನೆಯ ಕೆಲಸದಾಕೆಯೊಂದಿಗೂ ಜಗಳಕ್ಕೆ ನಿಲ್ಲಬಲ್ಲ. ಅಕ್ಕಪಕ್ಕದ ಮನೆಯವರ ಪ್ರಶ್ನೆಗಳಿಗೂ  ವ್ಯಂಗ್ಯವೇ ಅವನ ಉತ್ತರ. ತಾನು ಸಾಯುವವರೆಗೂ ಮಗಳು ತನ್ನ ಸೇವೆ ಮಾಡಬೇಕೆನ್ನುವ ಹಠಮಾರಿ ಆತ. ಅದಕ್ಕೆಂದೇ ಮಗಳನ್ನು  ಮದುವೆ ಮಾಡಿ  ಕಳುಹಿಸಲು ಆತನಿಗೆ ಸುತಾರಾಂ ಇಷ್ಟವಿಲ್ಲ. ಮದುವೆಯನ್ನು ತಪ್ಪಿಸಲು ತನ್ನ ಮಗಳು ಕನ್ಯೆಯಾಗಿ ಉಳಿದಿಲ್ಲ ಎಂದು ಹೇಳಲೂ ಆತ ಹಿಂಜರಿಯಲಾರ. ಮಗಳು ಮಗುವಾಗಿದ್ದಾಗ ಅವಳನ್ನು ನೋಡಿಕೊಂಡ ಆಕೆಗೆ ಈಗ ನಾನೇ ಮಗು ಎನ್ನುವ ಭಾವನೆ ಅವನದು.

             ಕೆಲಸ ಮಾಡುತ್ತ ಅಪ್ಪನನ್ನು ನೋಡಿಕೊಳ್ಳುತ್ತಿರುವ ಪೀಕೂಗೆ ಕೆಲಸದ ಸ್ಥಳದಲ್ಲೂ ಅಪ್ಪನ ವರ್ತನೆಯಿಂದ ಮುಜುಗರ ಪಡುವ ಸ್ಥಿತಿ. ಅಪ್ಪನ ಮಲಬದ್ಧತೆಯ ವಿಷಯ ಪೀಕೂ ಕೆಲಸ ಮಾಡುತ್ತಿರುವ ಕಂಪನಿಯಲ್ಲೂ ಚರ್ಚೆಯ ವಿಷಯ. ಒಮ್ಮೊಮ್ಮೆ ತಾನು ಮಾಡುತ್ತಿರುವ ಕೆಲಸವನ್ನು ಅರ್ಧಕ್ಕೆ ಬಿಟ್ಟು ಮಗಳು ತನ್ನ ಆರೋಗ್ಯ ವಿಚಾರಿಸಲು ಬರಬೇಕೆನ್ನುವ ಅಪ್ಪನ ಸ್ವಾರ್ಥ ಪೀಕೂಗೆ ಅನೇಕ ಸಂದರ್ಭಗಳಲ್ಲಿ ಪೇಚಿಗೆ ಸಿಲುಕಿಸುತ್ತದೆ. ಅದೊಂದು ದಿನ ಕೊಲಕತ್ತಾಗೆ ಹೊರಟು ನಿಲ್ಲುವ ಅಪ್ಪನಿಗಾಗಿ ಮಗಳು ಪೀಕೂ ತನ್ನ ಕೆಲಸವನ್ನು ಬಿಟ್ಟು ಅಪ್ಪನೊಂದಿಗೆ ಜೊತೆಯಾಗುತ್ತಾಳೆ. ಕಾರ್ ಬಾಡಿಗೆ ಪಡೆದು ಹೋಗಬೇಕೆನ್ನುವ ಅಪ್ಪನ ಹಟದ ಎದುರು ಸೋಲುವ ಮಗಳು ಕಾರ್ ಬಾಡಿಗೆಗೆ ಗೊತ್ತು ಮಾಡುತ್ತಾಳೆ. ಡ್ರೈವರ್ ಗಳಿಲ್ಲದೆ ಟ್ಯಾಕ್ಸಿ ಮಾಲೀಕ ರಾಣಾ ಚೌಧರಿ ತಾನೇ ಡ್ರೈವರ್ ಆಗಿ ಬರುವುದುರೊಂದಿಗೆ ಕಥೆ ಮತ್ತಷ್ಟು ರಂಜನೀಯವಾಗುತ್ತದೆ. ಸಿನಿಮಾದ ಕಥೆ ಬಹುಮುಖ್ಯ ತಿರುವು ಪಡೆಯುವುದು ಇಲ್ಲಿಂದಲೇ.  ರಾಣಾ ಚೌಧರಿಗೆ ಅಪ್ಪ ಮಗಳ ಈ ಸಂಬಂಧ ವಿಚಿತ್ರವಾಗಿ ಕಾಣಿಸುತ್ತದೆ. ಒಮ್ಮೊಮ್ಮೆ ಪೀಕೂ ಬ್ಯಾನರ್ಜಿಯ ಮಗಳಲ್ಲವೇನೋ ಎನ್ನುವ ಅನುಮಾನ ಆತನನ್ನು ಕಾಡುತ್ತದೆ. ಅದನ್ನು ಆತ ನೇರವಾಗಿ ಪೀಕೂಗೆ ಕೇಳಿ ತನ್ನ ಅನುಮಾನವನ್ನು ಪರಿಹರಿಸಿಕೊಳ್ಳುತ್ತಾನೆ. ಜೊತೆಗೆ ಬ್ಯಾನರ್ಜಿಯ ಮಲಬದ್ಧತೆಯ ಸಮಸ್ಯೆಗೆ ರಾಣಾ ಹಲವು ಸಲಹೆಗಳನ್ನು ಕೂಡ ನೀಡುತ್ತಾನೆ. ರಸ್ತೆಯ ಮೇಲೆ ಅಪ್ಪ ಮಗಳು ಮತ್ತು ರಾಣಾ ಜಗಳವಾಡುತ್ತಲೇ ಕೊಲಕತ್ತಾ ತಲಪುತ್ತಾರೆ. ಅಲ್ಲಿ ಹೋದ ಕೆಲ ದಿನಗಳಲ್ಲೇ ಒಂದು ದಿನ ತನ್ನ ಮಲಬದ್ಧತೆಯ ಸಮಸ್ಯೆಯಿಂದ ಹೊರಬರುವ ರಾಣಾ ಅದೇ ರಾತ್ರಿ ಸುಖದ ಸಾವನ್ನು ಕಾಣುತ್ತಾನೆ. ಪೀಕೂಗೆ ಅಪ್ಪನ ಸಾವು ಆಘಾತ ತಂದರೂ ಆತ ಬದುಕಿನ ಕೊನೆಯ ದಿನವಾದರೂ ನೆಮ್ಮದಿ ಕಂಡ ಎನ್ನುವ ಸಂತಸ ಅವಳಲ್ಲಿದೆ. ಇಲ್ಲಿ ಸ್ವಾರ್ಥವಿದೆ, ಸಣ್ಣತನವಿದೆ, ಜಗಳ ಕಾಯುವ ಮನಸ್ಸುಗಳಿವೆ, ಬೇಸರದಿಂದ ಸಿಡಿಮಿಡಿ ಗುಟ್ಟುವ ನಿಟ್ಟುಸಿರಿದೆ, ಹಠಮಾರಿತನವಿದೆ ಒಟ್ಟಾರೆ ನಮ್ಮಗಳ ಬದುಕಿನ ಅನೇಕ ಸಣ್ಣ ಸಣ್ಣ ಸಂಗತಿಗಳು ಇಲ್ಲಿವೆ. ಆದರೆ ಅವೆಲ್ಲವನ್ನೂ ಮೀರಿದ ಮನುಷ್ಯ ಸಂಬಂಧ ಇಲ್ಲಿದೆ.

                ಅಪ್ಪ- ಮಗಳು, ತಾಯಿ-ಮಗ, ಪತಿ-ಪತ್ನಿ, ಅಣ್ಣ-ತಂಗಿ ಇಂಥ ಸಂಬಂಧಗಳ ಅನೇಕ ಸಿನಿಮಾಗಳು ಭಾರತೀಯ ಚಿತ್ರರಂಗದಲ್ಲಿ ನಿರ್ಮಾಣಗೊಂಡಿವೆಯಾದರೂ ಅಲ್ಲಿ ವಾಸ್ತವಿಕತೆ ಮರೆಯಾಗಿ ಒಣ ಆದರ್ಶವೇ ಮೇಲುಗೈ ಸಾಧಿಸಿದೆ. ಕರಳು ಹಿಂಡುವ, ಕಣ್ಣೀರು ಸುರಿಸುವ ಸನ್ನಿವೇಶಗಳಿಗೆ ಹೆಚ್ಚಿನ ಒತ್ತು ನೀಡಿ ಜನರ ಭಾವಾನೆಗಳನ್ನೇ ಬಂಡವಾಳವಾಗಿಸಿಕೊಂಡು ಕೋಟಿ ಕೋಟಿ ಹಣ ಮಾಡುತ್ತಿರುವ ಸಿನಿಮಾ ರಂಗದಲ್ಲಿ ಪೀಕೂ ಆ ಯಾವ ಗಿಮಿಕ್ ಗಳಿಗೆ ಆಸ್ಪದೆ ಕೊಡದೆ ತನ್ನ ನೇರ ಮತ್ತು ಸರಳ ಕಥಾ ಹಂದರದಿಂದ ಗಮನ ಸೆಳೆಯುತ್ತದೆ.   ಮನುಷ್ಯ   ಸಂಬಂಧಗಳನ್ನು ವ್ಯಾಪಾರಿ ಮನೋಭಾವದಿಂದ ನೋಡುತ್ತಿರುವ ಅವಕಾಶವಾದಿಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಪೀಕೂ ಸಿನಿಮಾದ   ನಿರ್ದೇಶಕ ನಮ್ಮ ಮನಸ್ಸುಗಳಿಗೆ ಕನ್ನಡಿ ಹಿಡಿಯುವ ಕೆಲಸ ಮಾಡಿದ್ದಾರೆ. ಮನುಷ್ಯ ಸಂಬಂಧವನ್ನು ತೀರ ಆದರ್ಶದ ನೆಲೆಯಲ್ಲಿ ತೋರಿಸಿ ಮನುಷ್ಯರನ್ನು ದೇವತಾ ಸ್ವರೂಪಿಯಾಗಿ ಚಿತ್ರಿಸದೆ ಆ ಎಲ್ಲ ಸಂಬಂಧಗಳನ್ನು ವಾಸ್ತವಿಕತೆಯ ನೆಲೆಗಟ್ಟಿನ ಮೇಲೆ ತೋರಿಸುವುದರ ಮೂಲಕ ಇಲ್ಲಿ ಮನುಷ್ಯ ಮನುಷ್ಯನಾಗಿಯೇ ಚಿತ್ರಿತವಾಗಿರುವನು. ಕೋಪ ತಾಪ ಜಗಳ ಪ್ರೀತಿ ಪ್ರೇಮ ವಾತ್ಸಲ್ಯಗಳೆಲ್ಲ ಮನುಷ್ಯನ ಸಹಜ ಗುಣಗಳೆನ್ನುವ   ಸಿನಿಮಾ ದ ಮೂಲ ಉದ್ದೇಶ ಜನರನ್ನು ಹೋಗಿ ತಲುಪಬೇಕು ಆಗ ನಿರ್ದೇಶಕನ ಪ್ರಯತ್ನ ಸಾರ್ಥಕವಾದಂತೆ.

      ಇಲ್ಲಿ ವಾಸ್ತವಿಕತೆಗೆ ಒತ್ತು ಕೊಟ್ಟರೂ ನಿರ್ದೇಶಕ ಸಂಬಂಧಗಳ ಮಹತ್ವ ಮತ್ತು ಮಕ್ಕಳ ಜವಾಬ್ದಾರಿಯನ್ನು ಕುರಿತು ಪ್ರೇಕ್ಷಕರನ್ನು ವಿವೇಚಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿರುವರು. ತ್ಯಾಗದಿಂದಲೇ ಸಂಬಂಧಕ್ಕೊಂದು ಅರ್ಥವಿದೆ ಎನ್ನುವ ಒಣ ವೇದಾಂತ ಇಲ್ಲಿಲ್ಲ. ಸಂಬಂಧಗಳ ನಡುವೆಯೂ ಅಲ್ಲಿ ಸ್ವಾರ್ಥವಿದೆ ಮನಸ್ಸುಗಳನ್ನು ನೋಯಿಸುವ ಕೋಪ ತಾಪಗಳಿವೆ. ಆದರೆ ಅದೆಲ್ಲವನ್ನೂ ಮೀರಿ ಕೊನೆಗೆ ಉಳಿಯುವುದು ಮನುಷ್ಯ ಮನುಷ್ಯರ  ನಡುವಿನ ಸಂಬಂಧ ಮಾತ್ರ ಎನ್ನುವ ಅರಿವು ಪ್ರೇಕ್ಷಕನಿಗಾಗುತ್ತದೆ. ನಿರ್ದೇಶಕರ ಉದ್ದೇಶವೇ ಅದು ಸಂಬಂಧಗಳನ್ನು ವಾಸ್ತವಿಕತೆಯ ಮೂಲಕ ಬೆಸುಗೆ ಹಾಕುವ ಪ್ರಯತ್ನ ಅವರದು. ಭಾವನೆಗಳೇ ಮೇಲುಗೈ ಸಾಧಿಸಿದಾಗ ಅಲ್ಲಿ ಮನುಷ್ಯ ದೇವತಾ ಸ್ವರೂಪಿಯಾಗುತ್ತಾನೆ. ಮನುಷ್ಯ ದೇವರಾದಾಗ ಆತ ಕೋಪ ತಾಪ ಸಿಟ್ಟು ರೋಷಗಳಿಂದ ಮುಕ್ತನಾಗಿ ವರ ಕೊಡುವ ಕಾಮಧೇನುವಾಗುತ್ತಾನೆ. ಹೀಗೆ ಮನುಷ್ಯ ದೇವತಾ ಸ್ವರೂಪಿಯಾದಾಗ ಅಲ್ಲಿ ಸಂಬಂಧಗಳ ನಡುವೆ ಬಹುದೊಡ್ಡ ಕಂದಕ ನಿರ್ಮಾಣವಾಗಿ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತವೆ. ಮನುಷ್ಯ ಸ್ವಾರ್ಥಿಯಾದಾಗ ಮಾತ್ರ ಸಂಬಂಧಗಳನ್ನು ಹುಡುಕಿ ಹೊರಡುತ್ತಾನೆ. ಹೀಗೆ ಸಂಬಂಧಗಳನ್ನು ಹುಡುಕಿ ಹೊರಟಾಗಲೇ ಆತನಿಗೆ ಸಂಬಂಧಗಳ ಮಹತ್ವದ ಅರಿವಾಗಿ ಆತ ಅವುಗಳೆದುರು ಸೋಲುತ್ತಾನೆ. ಮನುಷ್ಯನ ಸೋಲೇ ಸಂಬಂಧಗಳು ಮತ್ತಷ್ಟು ಗಟ್ಟಿಗೊಳ್ಳಲು ಕಾರಣವಾಗುತ್ತದೆ.

    ಸಿನಿಮಾವೊಂದರ ಸಂದೇಶ ಹೆಚ್ಚು ಜನರನ್ನು ಹೋಗಿ ತಲುಪುವುದು ಮತ್ತು ಅದು ಅನೇಕ ದಿನಗಳವರೆಗೆ ನೆನಪಿನಲ್ಲುಳಿಯುವುದು ಪೀಕೂ ವಿನಂಥ ಸಿನಿಮಾಗಳಿಂದ ಮಾತ್ರ ಸಾಧ್ಯ. ಒಂದೆಡೆ ಹೊಡೆದಾಟ ರಕ್ತಪಾತಗಳಂಥ ಸಿನಿಮಾಗಳು ನಿರ್ಮಾಣಗೊಳ್ಳುತ್ತಿದ್ದರೆ ಇನ್ನೊಂದೆಡೆ ಮನುಷ್ಯ ಸಂಬಂಧಗಳನ್ನು ತೀರ ವೈಭವಿಕರಿಸುತ್ತಿರುವ ಸಿನಿಮಾಗಳು. ಈ ನಡುವೆ ಕೆಲ ನಾಯಕ ನಟರು ಹಾಸ್ಯಪ್ರಧಾನ ಕಥಾವಸ್ತುವಿನ ಸಿನಿಮಾಗಳಲ್ಲಿ ನಟಿಸುತ್ತ ಜನರಿಗೆ ಮನರಂಜನೆ ನೀಡುತ್ತಿರುವರು. ಹೀಗಾಗಿ ಇಲ್ಲಿ ಕಥೆಯೇ ಇಲ್ಲದ ಸಿನಿಮಾಗಳು ಮತ್ತು ಕಥೆಯಿದ್ದೂ ತೀರ ಡ್ರಾಮಾಟಿಕ್ ಆಗಿ ಚಿತ್ರಿತವಾಗುತ್ತಿರುವ ಸಿನಿಮಾಗಳು ಎನ್ನುವ ಎರಡು ವರ್ಗಗಳಿವೆ. ಈ ಎರಡೂ ವರ್ಗದ ಸಿನಿಮಾಗಳು ಪ್ರೇಕ್ಷಕರ ಮನ್ನಣೆ ಮತ್ತು ಜನಾದಾರಕ್ಕೆ ಪಾತ್ರವಾಗುತ್ತಿದ್ದರೂ ಅವುಗಳು  ಸಮಾಜಕ್ಕೊಂದು ಸಂದೇಶ ನೀಡುವಲ್ಲಿ ಎಡುವುತ್ತಿವೆ. ಈ ದೃಷ್ಟಿಯಿಂದ ಪೀಕೂ ಸಿನಿಮಾವನ್ನು ಮೂರನೆಯ ವರ್ಗಕ್ಕೆ ಸೇರಿದ ಸಿನಿಮಾ ಎಂದು ಪರಿಗಣಿಸಬಹುದು. ಆ ಮೂರನೆ ವರ್ಗದ ಸಿನಿಮಾವನ್ನೇ  ನಾವೆಲ್ಲ ಕಲಾತ್ಮಕ ಸಿನಿಮಾ ಎನ್ನುವ ಹಣೆಪಟ್ಟಿ ಕಟ್ಟಿ ನಿರ್ಲಕ್ಷಿಸುತ್ತಿದ್ದೇವೆ. ಒಂದು ವೇಳೆ ಅಮಿತಾಭ್, ದೀಪಿಕಾ ರಂಥ ಜನಪ್ರಿಯ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸದೇ ಹೋಗಿದ್ದರೆ ಪೀಕೂ ಕೂಡ ಕಲಾತ್ಮಕ ಸಿನಿಮಾ ಎನ್ನುವ ನಿರ್ಲಕ್ಷಕ್ಕೆ ಒಳಗಾಗುವ ಅಪಾಯವಿತ್ತು.

                ಇಲ್ಲಿ ಅಮಿತಾಭ್ ಬಚ್ಚನ್ ಬಗ್ಗೆ ಒಂದೆರಡು ಮಾತು ಹೇಳಲೇ ಬೇಕು. ನಾಯಕ ನಟನಿಂದ ಆತ ನಿವೃತ್ತಿ ಪಡೆದು ಪೋಷಕ ಪಾತ್ರಗಳ ನಟನೆಯತ್ತ ಹೊರಳಿದ ನಂತರ ಈ ಕಲಾವಿದನಿಗೆ  ಅನೇಕ ಚಾರಿತ್ರಿಕ ಪಾತ್ರಗಳಲ್ಲಿ ಅಭಿನಯಿಸುವ ಅವಕಾಶ ದೊರೆಯಿತು. ನಟನೋರ್ವ ಕಲಾವಿದನಾಗಿ ರೂಪುಗೊಳ್ಳುವುದೇ ಆತ ವಿಭಿನ್ನ ಪಾತ್ರಗಳಲ್ಲಿ ನಟಿಸಿದಾಗ. ಈ ದೃಷ್ಟಿಯಿಂದ ಅಮಿತಾಭ್ ಕೇವಲ ನಟನಲ್ಲ ಅವನೊಬ್ಬ ಪರಿಪೂರ್ಣ ಕಲಾವಿದ. ಹಟಕ್ಕೆ  ಬಿದ್ದಂತೆ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿರುವ ಅಮಿತಾಭ್ ಇನ್ನಷ್ಟು ಚಾರಿತ್ರಿಕ ಪಾತ್ರಗಳಲ್ಲಿ ಅಭಿನಯಿಸುವ ಅವಕಾಶಗಳು ಹೇರಳವಾಗಿವೆ. ಆತನ ಸಮಕಾಲೀನ ನಟರು ಮರಸುತ್ತುವ ನಾಯಕ ಪಾತ್ರಗಳಿಂದ ನಿವೃತ್ತರಾಗಿ ಮೂಲೆ ಗುಂಪಾಗಿರುವ ಈ ಹೊತ್ತಿನಲ್ಲಿ ಅಮಿತಾಬ್ ಇವತ್ತಿಗೂ ತನ್ನ ನಟನೆಯಿಂದ ನಾಯಕನಿಗೆ ಸಮನಾದ ಪಾತ್ರಗಳಲ್ಲಿ ಅಭಿನಯಿಸುತ್ತಿರುವರು. ಕೇವಲ ಇಮೇಜಿಗೆ ಅಂಟಿಕೊಂಡು ಒಬ್ಬ ಕಲಾವಿದನಾಗಿ ಬೆಳೆಯುವ ಅವಕಾಶದಿಂದ ವಂಚಿತರಾಗುವ ನಟ ನಟಿಯರ ನಡುವೆ ಅಮಿತಾಭ್ ತಮ್ಮ ಅಭಿನಯ ಮತ್ತು ಪಾತ್ರಗಳ ಆಯ್ಕೆಯಿಂದ ವಿಭಿನ್ನರಾಗಿ ನಿಲ್ಲುತ್ತಾರೆ. ಒಟ್ಟಿನಲ್ಲಿ ಅಮಿತಾಭ್ ನಿರ್ದೇಶಕರ ನಟನಾಗಿ ಬದಲಾಗಿ ತಮ್ಮ ಎರಡನೇ ಇನ್ನಿಂಗ್ಸ್ ನ್ನು ಭರ್ಜರಿಯಾಗೇ ಆರಂಭಿಸಿರುವರು. ಇಲ್ಲಿ ಅಮಿತಾಭ್ ನಟಿಸಿರುವ ಅಪ್ಪನ ಪಾತ್ರ ಅದೇನು ಆದರ್ಶದ್ದಲ್ಲ. ಆದರೆ ತನ್ನ ಮನೋಜ್ಞ ಅಭಿನಯದಿಂದ ಅಮಿತಾಭ್ ಸ್ವಾರ್ಥ ಮತ್ತು ವಾಚಾಳಿತನದ ಅಪ್ಪನ ಪಾತ್ರವನ್ನು ಕಥೆಯ ಕೇಂದ್ರವಾಗಿಸಿರುವರು. ಬ್ಲ್ಯಾಕ್, ಪಾ ದಂಥ ಸಿನಿಮಾಗಳಲ್ಲಿನ ಅಮಿತಾಭ್ ಅಭಿನಯ ಇಲ್ಲಿ ನಮಗೆ ಮತ್ತೊಮ್ಮೆ ನೆನಪಾಗುತ್ತದೆ.

                 ಅಮಿತಾಭ್, ದೀಪಿಕಾ ಪಡುಕೋಣೆ, ಇರ್ಫಾನ್ ತಮ್ಮ ಪಾತ್ರಗಳಿಗೆ ಈ ಸಿನಿಮಾದಲ್ಲಿ ಜೀವತುಂಬಿ  ನಟಿಸಿರುವರು. ಸಿನಿಮಾದಲ್ಲಿ ಹಾಡುಗಳು ಇಲ್ಲದೆ ಇರುವುದು ಅದೇನು ದೊಡ್ಡ ಕೊರತೆ ಎನಿಸುವುದಿಲ್ಲ. ಇರ್ಫಾನ್ ರಂಗಭೂಮಿಯಿಂದ ಬಂದ ಕಲಾವಿದನಾಗಿರುವುದರಿಂದ ಆತನ ನಟನೆಯಲ್ಲಿ ಸಹಜತೆ ಇದೆ. ದೀಪಿಕಾಳಂಥ ಕಮರ್ಷಿಯಲ್ ಸಿನಿಮಾಗಳ ನಟಿ  ದೇಹ ಮತ್ತು ಸೌಂದರ್ಯವನ್ನು ಪ್ರದರ್ಶಿಸಲು  ಅವಕಾಶವಿಲ್ಲದಂಥ ಪೀಕೂ ಸಿನಿಮಾದಲ್ಲಿ ನಟಿಸಿದ್ದು ನಿಜಕ್ಕೂ ಆರೋಗ್ಯಕರ ಬೆಳವಣಿಗೆ. ಇಂಥ ಪಾತ್ರಗಳಲ್ಲಿ  ಅಭಿನಯಿಸುವುದರಿಂದಲೇ ನಟ ನಟಿಯರು ಕಲಾವಿದರಾಗಿ ರೂಪುಗೊಳ್ಳುವುದು. ಆದರೆ ಪ್ರೇಕ್ಷಕರು ಮಾತ್ರ ಇಂಥ ಸದಭಿರುಚಿಯ ಸಿನಿಮಾಗಳನ್ನು ಪ್ರೋತ್ಸಾಹಿಸದಿರುವುದು ದುರಾದೃಷ್ಟದ ಸಂಗತಿ. ಬಿಡುಗಡೆಯಾದ ಎರಡನೇ ದಿನಕ್ಕೆ ಅಲ್ಲಿದ್ದ ಪ್ರೇಕ್ಷಕರ ಸಂಖ್ಯೆ  ಬೆರಳೆಣಿಕೆಯಷ್ಟು ಎನ್ನುವುದು ನಮ್ಮ ಸಿನಿಮಾ ನೋಡುಗರ  ಅಭಿರುಚಿಗೆ ಕನ್ನಡಿ ಹಿಡಿಯುತ್ತದೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ