Saturday, September 3, 2016

ಕೊಂದು ಹುಟ್ಟುವ ಆಧುನಿಕತೆ



            ದಶಕದ  ನಂತರ ಆ ಹಳ್ಳಿಗೆ ಭೇಟಿ ನೀಡುವ ಪ್ರಸಂಗವೊಂದು ಮೊನ್ನೆ ಎದುರಾಯಿತು. ಅದನ್ನು ಈಗ ಹಳ್ಳಿ ಎನ್ನುವುದಕ್ಕಿಂತ ಅದು ತನ್ನೊಳಗಿನ ಹಳ್ಳಿಯ ಸ್ವರೂಪದಿಂದ ಬಿಡುಗಡೆ  ಹೊಂದುವ  ಹಾದಿಯಲ್ಲಿತ್ತು. ಹತ್ತು ವರ್ಷಗಳ ಹಿಂದಿನ  ಚಿತ್ರಣಕ್ಕೂ ಈಗ ನೋಡುತ್ತಿರುವ ವಾಸ್ತವಿಕತೆಗೂ ಅಜಗಜಾಂತರ ವ್ಯತಾಸವಿತ್ತು. ಹಿಂದೆ ಹತ್ತಾರು ಸಣ್ಣ ಸಣ್ಣ ಅಂಗಡಿಗಳಿದ್ದ ಜಾಗದಲ್ಲಿ ದೊಡ್ಡದೊಂದು ಸುಪರ್ ಬಜಾರ್ (ಮಾಲ್ ನ ಮೂಲ  ರೂಪ) ತಲೆ ಎತ್ತಿ ನಿಂತಿತ್ತು. ಪಟ್ಟಣದಲ್ಲಿ ಮಾರಾಟವಾಗುವ ವಿದೇಶಿ ವಸ್ತುಗಳೆಲ್ಲ ಅಲ್ಲಿ ಖರೀದಿಗೆ  ಲಭ್ಯವಿದ್ದವು. ಊರಿನ ಮಧ್ಯದಲ್ಲಿದ್ದ ನಾಟಕದ ಥೇಟರ್ ಸಿನಿಮಾ ಮಂದಿರವಾಗಿ ಬದಲಾಗಿತ್ತು. ಊರಿನ ನಾಟಕ ಪ್ರೇಮಿಗಳೆಲ್ಲ ಸಿನಿಮಾ ಪ್ರೇಕ್ಷಕರಾಗಿ ಬದಲಾಗಿ ಹೊಸದೊಂದು ಸಾಂಸ್ಕೃತಿಕ ಸ್ಥಿತ್ಯಂತರಕ್ಕೆ ಸಾಕ್ಷಿಗಳಾಗಿದ್ದರು. ಊರಿಗೆ ಒಂದೆರಡು ಮೈಲಿಗಳ ದೂರದಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆಯೊಂದು ತಲೆ ಎತ್ತಿ ಊರಿನ ಮಕ್ಕಳೆಲ್ಲ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವ ಹೊಸ ಪರಿಸರವನ್ನು ಸೃಷ್ಟಿಸಿ ಊರಿನ ಚಿತ್ರಣವನ್ನೇ ಬದಲಿಸುವ ಸನ್ನಾಹದಲ್ಲಿತ್ತು. ಊರಿಗೆ ಸಮೀಪದಲ್ಲಿದ್ದ ಹೊಲಗದ್ದೆಗಳು ತಮ್ಮ ಮೂಲ ಸ್ವರೂಪವನ್ನೇ ಬದಲಾಯಿಸಿಕೊಂಡು ಅಪಾರ್ಟ್ ಮೆಂಟ್ ಗಳೆಂಬ ಜನವಸತಿ ಪ್ರದೇಶಗಳಾಗಿ ರೂಪಾಂತರಗೊಂಡಿದ್ದವು. ಒಟ್ಟಿನಲ್ಲಿ ಆಧುನಿಕತೆಯ ಗಾಳಿ ಇಡೀ ಊರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಜನರನ್ನು ಹೊಸ ಬದುಕು ಮತ್ತು ಹೊಸಸವಾಲುಗಳಿಗೆ ತೆರೆದುಕೊಳ್ಳುವ ಅನಿವಾರ್ಯತೆಯನ್ನು ಸೃಷ್ಟಿಸಿತ್ತು. 

           ಈ ಮೇಲಿನದು ಆಧುನಿಕತೆಯ ಒಂದು ಮುಖವಾದರೆ ಅದು ಸೃಷ್ಟಿಸಿದ ಸಮಸ್ಯೆ ಇನ್ನೊಂದು ರೀತಿಯಾಗಿತ್ತು. ಊರಿನಲ್ಲಿ ದೊಡ್ಡದೊಂದು ಸುಪರ್ ಬಜಾರ್ ತಲೆ ಎತ್ತುತ್ತಿದ್ದಂತೆ ಆ ಜಾಗದಲ್ಲಿದ್ದ ಹತ್ತಾರು ಸಣ್ಣ ಸಣ್ಣ ಅಂಗಡಿಗಳು ಮುಚ್ಚಿ ಹೋದ ಪರಿಣಾಮ  ಬದುಕಿಗಾಗಿ ಆ ಅಂಗಡಿಗಳನ್ನೇ ಆಶ್ರಯಿಸಿದ್ದ ಕುಟುಂಬಗಳು ಅಕ್ಷರಶ: ಬೀದಿಗೆ ಬಂದಿವೆ. ವಿದೇಶಿ ವಸ್ತುಗಳೆಲ್ಲ ಆ ಸುಪರ್ ಬಜಾರ್ ನಲ್ಲಿ ಲಭ್ಯವಿರುವುದರಿಂದ ಆ ಹಳ್ಳಿಯ ಚಮ್ಮಾರ, ನೇಕಾರ, ದರ್ಜಿ  ಇವರೆಲ್ಲ ನಿರುದ್ಯೋಗಿಗಳಾಗಿರುವರು. ಆ ಊರಿನ ಕುಂಬಾರನ  ಗಡಿಗೆಗಳಿಗೆ ಬೇಡಿಕೆ ಸಂಪೂರ್ಣವಾಗಿ ಕುಸಿದಿರುವುದರಿಂದ ಆತ ತನ್ನ ಮನೆತನದ ಕಸುಬನ್ನೇ ಕೈಬಿಟ್ಟು ಮುಂದೆ ಬದುಕು  ಹೇಗೆ ಎಂದು ತಲೆಯ ಮೇಲೆ ಕೈಹೊತ್ತು ಕುಳಿತಿರುವನು. ಊರಿನ ಬಹಳಷ್ಟು ಕೃಷಿ ಭೂಮಿ ವಸತಿ ಸಮುಚ್ಚಯಕ್ಕಾಗಿ ಮಾರಾಟವಾಗಿರುವುದರಿಂದ ಮತ್ತು ಉಳಿದಿರುವ ಕೃಷಿ ಭೂಮಿಯಲ್ಲಿ ರೈತರು ಯಂತ್ರೋಪಕರಣಗಳನ್ನು ಬಳಸುತ್ತಿರುವುದರಿಂದ ಬಡಿಗ  ಮತ್ತು ಕಮ್ಮಾರ  ಇಬ್ಬರಿಗೂ ಕೆಲಸ ಇಲ್ಲವಾಗಿದೆ. ಪಿತ್ರಾರ್ಜಿತವಾಗಿ ಬಂದ ಮನೆತನದ ಕೆಲಸವನ್ನೇ ನಂಬಿ ಕುಳಿತ ಅವರ ಕುಟುಂಬಗಳು ಇಂದು ನಿರ್ಗತಿಕವಾಗಿವೆ. ಸಮೀಪದಲ್ಲೇ ಇಂಗ್ಲಿಷ್ ಶಾಲೆ ಇರುವುದರಿಂದ ಹಾಗೂ ಹಳ್ಳಿಯ ಬಹಳಷ್ಟು ಮಕ್ಕಳು ಕನ್ನಡ ಶಾಲೆಯಿಂದ ಆ ಶಾಲೆಗೆ ವಲಸೆ ಹೋಗುತ್ತಿರುವುದರಿಂದ ಮನೆಪಾಠವನ್ನೇ ನಂಬಿ ಕುಳಿತಿದ್ದ ಕನ್ನಡ ಮಾಧ್ಯಮದಲ್ಲಿ ಓದಿ ಡಿಗ್ರಿ ಸಂಪಾದಿಸಿರುವ ಆ ಊರಿನ ನಿರುದ್ಯೋಗಿ ಯುವಕನ  ಕುಟುಂಬಕ್ಕೆ ಬರುತ್ತಿರುವ ಅಲ್ಪ ಆದಾಯವೂ ನಿಂತು ಹೋಗುವ ಚಿಂತೆ ಕಾಡುತ್ತಿದೆ. ಊರ ಮಧ್ಯದಲ್ಲಿದ್ದ ನಾಟಕ ಥೇಟರ್ ಸಿನಿಮಾ ಮಂದಿರವಾಗಿ ಹೊಸ ರೂಪ ಪಡೆದಿರುವುದರಿಂದ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಊರಿನಲ್ಲಿನ ಅನೇಕ ಯುವಕರೊಳಗಿನ  ಕಲಾವಿದ ನೇಪಥ್ಯಕ್ಕೆ ಸರಿದಿರುವನು. ವಾರಕ್ಕೊಂದು ಹೊಸ ಸಿನಿಮಾ ಊರಿನ ಸಿನಿಮಾ ಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿರುವುದರಿಂದ ಊರ ಅಜ್ಜನ  ಜನಪದ ಹಾಡುಗಳಿಗೆ ಕಿವಿಯಾಗುವವರು ಯಾರೊಬ್ಬರೂ ಇಲ್ಲ.

              ಹೀಗೆ ಈ ಎಲ್ಲ ಸಮಸ್ಯೆಗಳನ್ನು  ತಂದೊಡ್ಡಿದ ಆಧುನಿಕತೆಯನ್ನು ನಾನು ಚಲನಶೀಲ ಎಂದಾಗಲಿ ಇಲ್ಲವೇ ಗತಿಶೀಲತೆ ಎಂದಾಗಲಿ ಕರೆಯಲು ಇಚ್ಛಿಸುವುದಿಲ್ಲ. ಏಕೆಂದರೆ ಹೊಸ ಅವಿಷ್ಕಾರ ಹಳೆಯ ವ್ಯವಸ್ಥೆಯನ್ನು ಇಲ್ಲವಾಗಿಸಿ  ಅದನ್ನು ನಂಬಿರುವ ಜನರನ್ನು ನಿರ್ಗತಿಕರನ್ನಾಗಿಸಿ  ತನ್ನ ಅಸ್ತಿತ್ವವನ್ನು ಕಟ್ಟಿಕೊಳ್ಳುತ್ತಿದೆ. ಹೀಗೆ ನಮ್ಮ ನಡುವೆ ಇದ್ದ ವ್ಯವಸ್ಥೆಯೊಂದು ಸಂಪೂರ್ಣವಾಗಿ ನೇಪಥ್ಯಕ್ಕೆ ಸರಿಯುತ್ತಿರುವುದರಿಂದ ಈ ಆಧುನಿಕ ಸ್ವರೂಪವನ್ನು ಚಲನಶೀಲತೆ ಎಂದು ಗುರುತಿಸುವುದು  ತಪ್ಪಾಗುತ್ತದೆ.

ಗುಡಿಕೈಗಾರಿಕೆಗಳ ಪತನ


           ತತ್ರಾಣಿ ಎನ್ನುವುದು ಅದೊಂದು ನೀರನ್ನು ಹಿಡಿದಿಡಲು ಉಪಯೋಗಿಸುವ ಸಾಧನ. ಮಣ್ಣಿನಿಂದ ತಯ್ಯಾರಿಸುವ ಇದನ್ನು ಸುಲಭವಾಗಿ ರೈತರು ತಮ್ಮೊಂದಿಗೆ ಹೊಲದ ಕೆಲಸಕ್ಕೆಂದು ದೂರ ಹೋಗುವಾಗ ತೆಗೆದುಕೊಂಡು ಹೋಗುತ್ತಿದ್ದರು. ಅನೇಕ ಗಂಟೆಗಳವರೆಗೆ ನೀರನ್ನು ತಂಪಾಗಿ ಹಿಡಿದಿಡುವ ನೈಸರ್ಗಿಕ ಗುಣ ಈ ಸಾಧನಕ್ಕಿದೆ. ನನ್ನ ವಯೋಮಾನದವರಿಗೆ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪರಿಸರದಿಂದ ಬಂದವರಿಗೆ ಇದರ ಬಗ್ಗೆ ಗೊತ್ತು. ಆದರೆ ಇಂದಿನ ಮಕ್ಕಳೆದುರು 'ತತ್ರಾಣಿ' ಎನ್ನುವ ಶಬ್ದವನ್ನು ನಾವು ಉಪಯೋಗಿಸಿದಲ್ಲಿ ಅದು ಅವರಿಗೆ ವಿಚಿತ್ರವಾಗಿಯೂ ಮತ್ತು ಅಪರಿಚಿತವಾಗಿಯೂ ಕಾಣುತ್ತದೆ. ಇದಕ್ಕೆಲ್ಲ ಕಾರಣ ಈ ದಿನಗಳಲ್ಲಿ ತತ್ರಾಣಿ ಎನ್ನುವ ಮಣ್ಣಿನ ಮಡಿಕೆಯ ಬಳಕೆ ಮತ್ತು ಉತ್ಪಾದನೆ ಎರಡೂ ಕಾಲನ ಗರ್ಭವನ್ನು ಸೇರಿಕೊಂಡಿವೆ. ನೀರನ್ನು ಉಪಯೋಗಿಸಲು ಪ್ಲಾಸ್ಟಿಕ್ ಬಾಟಲಿಗಳ ಬಳಕೆ ಶುರುವಾದ ಮೇಲೆ ಅದರ ಉಪಯೋಗ ನಗರ ಪ್ರದೇಶವನ್ನು ದಾಟಿ ಹಳ್ಳಿಗಳಿಗೂ ವಿಸ್ತರಿಸಿದೆ. ರೈತರು ಮತ್ತು ದನಗಾಹಿಗಳು ಈ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರನ್ನು ಕೊಂಡೊಯ್ಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಹೀಗೆ ತತ್ರಾಣಿಯ ಬಳಕೆ ಸಂಪೂರ್ಣವಾಗಿ ನಿಂತು ಹೋದ ಮೇಲೆ ಅದರ ನೇರ ಪರಿಣಾಮ ಇಂಥ ಮಣ್ಣಿನ ಮಡಿಕೆಗಳನ್ನು ತಯ್ಯಾರಿಸಿ ಮಾರುತ್ತಿದ್ದ ಕುಟುಂಬಗಳ ಮೇಲಾಯಿತು. ತಮ್ಮ ಉತ್ಪಾದಿತ ವಸ್ತುಗಳಿಗೆ ಗ್ರಾಹಕರೇ ದೊರೆಯದಿದ್ದಾಗ ಸಹಜವಾಗಿಯೇ ಅಂಥ  ಕುಟುಂಬಗಳು ಆರ್ಥಿಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಈ ಸಂದರ್ಭ ಮಣ್ಣಿನ ಮಡಿಕೆಗಳ ಬದಲಾಗಿ ಪ್ಲಾಸ್ಟಿಕ್ ಬಾಟಲಿಗಳನ್ನು ನಮ್ಮ ಊರಿನ ಕುಂಬಾರರ ಕುಟುಂಬಗಳು ತಯ್ಯಾರಿಸಲಿ ಎನ್ನುವುದು ಶುದ್ಧ ಮೂರ್ಖತನವಾಗುತ್ತದೆ. ಗ್ರಾಹಕರ ಅಗತ್ಯಗಳು ಬದಲಾದಂತೆ ಅಂಥದ್ದೊಂದು ಬದಲಾವಣೆಗೆ ಉತ್ಪಾದಕರನ್ನು ಸಿದ್ದಗೊಳಿಸುವುದು ಅಸಾಧ್ಯದ ಸಂಗತಿ. ಈ ಮಾತು ಇನ್ ವೇಟರ್ ಗಳ ಬಳಕೆ ಶುರುವಾದ ಮೇಲೆ ಕಂದಿಲುಗಳನ್ನು ತಯ್ಯಾರಿಸುವ ಕಮ್ಮಾರನಿಗೆ ಇನ್ ವೇಟರ್ ಗಳನ್ನು ತಯಾರಿಸುವಂತೆ  ಹೇಳಲು ಸಾಧ್ಯವಿಲ್ಲ ಎನ್ನುವುದಕ್ಕೂ ಅನ್ವಯವಾಗುತ್ತದೆ.

             ಈ ಮೇಲಿನ ಸಮಸ್ಯೆ ನೇಕಾರ, ಬಡಿಗ, ಸಿಂಪಿಗ, ಚಮ್ಮಾರ, ಕುಂಬಾರ, ಕಮ್ಮಾರ  ಹೀಗೆ ಪರಂಪರಾಗತವಾಗಿ ಬಂದ ಮನೆತನದ ಕಸುಬನ್ನೇ ಬದುಕಿನ ಮೂಲಾಧಾರವೆಂದು ನಂಬಿಕೊಂಡು ಕುಳಿತ ಕುಟುಂಬಗಳನ್ನು ಕಾಡುತ್ತಿದೆ. ಹೊಸ ವಸ್ತುಗಳ ಅವಿಷ್ಕಾರ ಮತ್ತು ಅವುಗಳ ಜನಪ್ರಿಯತೆ ಹೆಚ್ಚುತ್ತಿದ್ದಂತೆ ಗುಡಿಕೈಗಾರಿಕೆಗಳಲ್ಲಿನ ಉತ್ಪನ್ನಗಳ ಬೇಡಿಕೆ ಕುಸಿಯುತ್ತಿದೆ. ರೆಫಿಜಿರೆಟರ್ ಬಳಕೆ ಮಣ್ಣಿನ ಮಡಿಕೆಯನ್ನೇ ನುಂಗಿಹಾಕಿತು, ಇನ್ ವೇಟರ್ ನ ಅವಿಷ್ಕಾರ  ಕಂದಿಲು ಮತ್ತು ಚಿಮಣಿಗಳನ್ನು ನೇಪಥ್ಯಕ್ಕೆ ಸರಿಸಿತು, ಟ್ರ್ಯಾಕ್ಟರ್ ಉಪಯೋಗ ಕಬ್ಬಿಣ ಮತ್ತು ಕಟ್ಟಿಗೆಯ ಕೃಷಿ ಉಪಕರಣಗಳನ್ನು ಮೂಲೆಗುಂಪಾಗಿಸಿತು, ವಿದೇಶದಿಂದ ಆಮದಾಗುತ್ತಿರುವ ಬೂಟು ಚಪ್ಪಲಿಗಳಿಂದಾಗಿ ದೇಶಿಯ ಪಾದರಕ್ಷೆಗಳಿಗೆ ಗ್ರಾಹಕರೇ ಇಲ್ಲವಾದರು, ಸಿದ್ದ ಉಡುಪುಗಳ ಜನಪ್ರಿಯತೆ ನೇಕಾರರ ಕಸುಬನ್ನೇ ಕಸಿಯಿತು.  ಒಟ್ಟಿನಲ್ಲಿ ಆಧುನಿಕ ತಂತ್ರಜ್ಞಾನದ ಫಲವಾಗಿ ಆದ ರೂಪಾಂತರ ವ್ಯವಸ್ಥೆಯೊಂದನ್ನು ಕಾಲಗರ್ಭಕ್ಕೆ ಸೇರಿಸಿ ಅದೇನಿದ್ದರೂ ಈಗ ಇತಿಹಾಸ ಎನ್ನುವಂತಾಗಿದೆ.

ಸಾಂಸ್ಕೃತಿಕ ಪಲ್ಲಟ


           ನಾನು ಚಿಕ್ಕವನಾಗಿದ್ದಾಗ ಆಗೆಲ್ಲ ಬೆಸಿಗೆಯ ರಜೆಯಲ್ಲಿನ ಮನೋರಂಜನೆ ಎಂದರೆ ಅದು ಪ್ರತಿನಿತ್ಯ ಬಣ್ಣದ ವೇಷದವರು ಊರಿನಲ್ಲಿ ಆಡುತ್ತಿದ್ದ ನಾಟಕಗಳು. ಬೆಸಿಗೆ ಸಾಮಾನ್ಯವಾಗಿ ರೈತರನ್ನೂ ಒಳಗೊಂಡಂತೆ ಎಲ್ಲರಿಗೂ ಬಿಡುವಿನ ಕಾಲವದು. ಇಂಥ ಸಮಯದಲ್ಲೇ ಊರಿಗೆ ಬರುತ್ತಿದ್ದ ಬಣ್ಣದ ವೇಷದವರು ಪ್ರತಿನಿತ್ಯ ರಾಮಾಯಣ, ಮಹಾಭಾರತದ ಪ್ರಸಂಗಗಳನ್ನು ಊರ ಮಧ್ಯದ ಬಯಲು ಜಾಗದಲ್ಲಿ ಪ್ರದರ್ಶಿಸುತ್ತಿದ್ದರು. ಹೀಗೆ ತಿಂಗಳು ಎರಡು ತಿಂಗಳುಗಳ ಕಾಲ ಊರೂರು ಅಲೆಯುವ ಅವರು ತಮ್ಮ ನಾಟಕ ಪ್ರದರ್ಶನದಿಂದ ಒಂದು ವರ್ಷದ ಕೂಳಿಗಾಗುವಷ್ಟು ದವಸ ಧಾನ್ಯ ಸಂಗ್ರಹಿಸುವುದು ಸಾಮಾನ್ಯವಾಗಿತ್ತು. ಜನರಿಗೆಲ್ಲ ಬಣ್ಣದ ವೇಷದವರ ಹಾಡು ಮತ್ತು ಕುಣಿತವೇ ಮನೋರಂಜನೆಯಾದರೆ ಅವರಿಗೆ ಊರಿನ ಜನ ಕೊಡುತ್ತಿದ್ದ ಕಾಳು ಕಡಿಗಳೇ ಜೀವನ ನಿರ್ವಹಣೆಗೆ ಆಧಾರ.

          ಇನ್ನು ಒಂದಿಷ್ಟು ಹೆಚ್ಚು ಮನೋರಂಜನೆ ಬೇಕೆಂದರೆ ಆಗ ಇದ್ದ ಇನ್ನೊಂದು ಮಾಧ್ಯವೆಂದರೆ ಅದು ರಂಗಭೂಮಿ. ಅನೇಕ ವೃತ್ತಿಪರ ನಾಟಕ ಕಂಪನಿಗಳು ಊರುಗಳಲ್ಲಿ ಬಿಡಾರ ಹೂಡಿ ಇಡೀ ರಾತ್ರಿ ನಾಟಕ ಪ್ರದರ್ಶಿಸುತ್ತಿದ್ದವು. ಸಾಮಾನ್ಯವಾಗಿ ಆ ನಾಟಕ ಕಂಪನಿಗಳು ಪ್ರದರ್ಶಿಸುತ್ತಿದ್ದ ನಾಟಕಗಳ ಕಥೆ ಪೌರಾಣಿಕ ಕಥೆಗಳೇ ಆಗಿರುತ್ತಿದ್ದವು. ಯಾವಾಗ ಪರದೆಯ ಮೇಲೆ ಚಲಿಸುವ ಚಿತ್ರಗಳನ್ನು ಪ್ರದರ್ಶಿಸುವ ಸಿನಿಮಾ ಎನ್ನುವ ಮಾಧ್ಯಮವೊಂದು ಅವಿಷ್ಕಾರವಾಯಿತೋ ಆಗ ರಂಗಭೂಮಿಯ ಕಲಾವಿದರು ಬೆಳ್ಳಿ ಪರದೆಯ ಕಡೆಗೆ ಆಕರ್ಷಿತರಾಗ ತೊಡಗಿದರು. ಇದೊಂದು ಬಹುದೊಡ್ಡ ಸಾಂಸ್ಕೃತಿಕ ಪಲ್ಲಟ. ಇಂಥದ್ದೊಂದು ಪಲ್ಲಟಕ್ಕೆ ಸಾಕ್ಷಿಯಾಗಿ ಭಾರತದ ಮೊದಲ ಸಿನಿಮಾ 'ರಾಜಾ ಹರಿಶ್ಚಂದ್ರ' ತಯ್ಯಾರಾಯಿತು. ವಿಪರ್ಯಾಸವೆಂದರೆ ಈ ಮೂಕಿ ಸಿನಿಮಾದ ಕಥಾವಸ್ತು ನೇರವಾಗಿ ರಂಗಭೂಮಿಯಲ್ಲಿ ಪ್ರದರ್ಶನಗೊಳ್ಳುತ್ತಿದ್ದ ನಾಟಕವೇ ಆಗಿತ್ತು. ಇನ್ನೂ ಆಶ್ಚರ್ಯದ ಸಂಗತಿ ಎಂದರೆ ಪ್ರಥಮ ಟಾಕಿ ಸಿನಿಮಾ 'ಆಲಂ ಆರಾ' ದ ಕಥಾವಸ್ತು ಸಹ ರಂಗಭೂಮಿಯಲ್ಲಿ ಪ್ರದರ್ಶನಗೊಳ್ಳುತ್ತಿದ್ದ ನಾಟಕವೇ ಆಗಿತ್ತು. ಆದರೆ ಕಾಲಕ್ರಮೇಣ ಸಿನಿಮಾ ನಾಟಕದಿಂದ ಬಿಡಿಸಿಕೊಳ್ಳುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಯಿತು. ದುರಂತವೆಂದರೆ ನಾಟಕದ ಗರ್ಭಸೀಳಿ ಹೊರಬಂದ ಸಿನಿಮಾ ನಂತರದ ದಿನಗಳಲ್ಲಿ ನಾಟಕವನ್ನೇ ನುಂಗಿಹಾಕಿತು. ಒಂದರ್ಥದಲ್ಲಿ ಇದು  ತಾಯಿಯ ಗರ್ಭಸೀಳಿ ಹೊರಬಂದ ಶಿಶು ತಾಯಿಯನ್ನೇ ಕೊಂದಂತಾಯಿತು. ಸಿನಿಮಾ ನಾಟಕದಿಂದ ಬಿಡಿಸಿಕೊಂಡಂತೆ ನಾಟಕ ಕಲಾವಿದರು ಸಹ ರಂಗಭೂಮಿಯ ಪ್ರಭಾವದಿಂದ ಹೊರಬರಲಾರಂಭಿಸಿದರು. ಪ್ರಾರಂಭದಲ್ಲಿ ಇದು ಅವರಿಗೆ ಕಷ್ಟ ಎಂದೆನಿಸಿದರೂ ಹೊರಬರುವ ಅನಿವಾರ್ಯತೆ ಎದುರಾಯಿತು. ರಾಜಕುಮಾರ ಪ್ರಾರಂಭದ ಒಂದೆರಡು ಸಿನಿಮಾಗಳಲ್ಲಿ ಪೌರಾಣಿಕ ಪಾತ್ರವನ್ನೇ ಆಯ್ಕೆ ಮಾಡಿಕೊಂಡರೂ 'ರಾಯರ ಸೊಸೆ' ಎನ್ನುವ ಸಾಮಾಜಿಕ ಚಿತ್ರದ ನಂತರ ಅವರು ಸಾಮಾಜಿಕ ಮತ್ತು ಬಾಂಡ್ ಪಾತ್ರಗಳಿಗೆ ತಮ್ಮನ್ನು ಒಗ್ಗಿಸಿಕೊಂಡಿದ್ದು ಅವರು ರಂಗಭೂಮಿಯಿಂದ ಬಿಡುಗಡೆ ಹೊಂದಿದಕ್ಕೊಂದು ಉತ್ತಮ ಉದಾಹರಣೆ. ಇಂಥದ್ದೊಂದು ಹೊಸತನಕ್ಕೆ ರಂಗಭೂಮಿ  ಕಲಾವಿದರ ವಲಸೆ ನೇರವಾಗಿಯೇ ರಂಗಭೂಮಿಯನ್ನು ಬಡವಾಗಿಸಿತು.  ಸಾಂಸ್ಕೃತಿಕ ಕ್ಷೇತ್ರದಲ್ಲಾದ ಈ ಪಲ್ಲಟ ಪ್ರೇಕ್ಷಕರ ಜಿಗಿತಕ್ಕೂ ಕಾರಣವಾಗಿ ನಾಟಕಗಳನ್ನು  ನೋಡಲು ಜನರೇ ಇಲ್ಲದಂತಾಯಿತು. ಅನೇಕ ವೃತ್ತಿಪರ ನಾಟಕ ಕಂಪನಿಗಳು ಪ್ರೇಕ್ಷಕರಿಲ್ಲದೆ ಬಾಗಿಲು ಮುಚ್ಚಿದವು. ಇನ್ನು ಕೆಲವು ನಾಟಕ ಕಂಪನಿಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ದ್ವಂದ್ವಾರ್ಥ  ಸಂಭಾಷಣೆಯ ಮೊರೆ ಹೋಗಿ ಜನರ ಅಭಿರುಚಿಯನ್ನು ಬೇರೆಡೆ ಹೊರಳಿಸಿದವು.

          ನನ್ನನ್ನು ಕಾಡುವ ಇನ್ನೊಂದು ಸಾಂಸ್ಕೃತಿಕ ಪಲ್ಲಟ ಅದು ಜನರಲ್ಲಿ ಕಡಿಮೆಯಾಗುತ್ತಿರುವ  ಓದಿನ ಅಭಿರುಚಿ. ಬಣ್ಣದ ಟಿವಿ ನಮ್ಮ ನಮ್ಮ ಮನೆಯನ್ನು ಪ್ರವೇಶಿಸಿದ ಆ ಕ್ಷಣ ಪುಸ್ತಕಗಳನ್ನು ಓದುವ ಗೃಹಿಣಿಯರೆಲ್ಲ ಟಿವಿ ಪ್ರೇಕ್ಷಕರಾಗಿ ಬದಲಾದರು. ಜೊತೆಗೆ ಅದು ಮನೋರಂಜನೆಯನ್ನು ಸಾಕಷ್ಟು ಪ್ರಮಾಣದಲ್ಲಿ ಒದಗಿಸಲಾರಂಭಿಸಿದ ಮೇಲೆ ಗಂಭೀರ ಓದುಗರೂ ಸಹ ಧಾರಾವಾಹಿಗಳು ಮತ್ತು ಸಿನಿಮಾಗಳ ಪ್ರೇಕ್ಷಕರಾಗಿ ಬದಲಾದದ್ದು ಈ ದಿನಗಳಲ್ಲಿ ನಾವು ಕಂಡ ಬಹುದೊಡ್ಡ ಸಾಂಸ್ಕೃತಿಕ ಪಲ್ಲಟ. ಯಾವಾಗ ಓದುಗರ ಸಂಖ್ಯೆ ಕ್ಷೀಣಿಸಲಾರಂಭಿಸಿತೋ ಆಗ ಪುಸ್ತಕಗಳ ಪ್ರಕಾಶಕರು ಮತ್ತು ಮಾರಾಟಗಾರರಿಗೆ ನಿರುದ್ಯೋಗ ಪರ್ವ ಎದುರಾಯಿತು. ಈಗೀಗ ಅಂತರ್ಜಾಲದಲ್ಲೇ ಪುಸ್ತಕ ಮತ್ತು ಪತ್ರಿಕೆಗಳು ದೊರೆಯುತ್ತಿರುವುದರಿಂದ ಇರುವ ಅತ್ಯಲ್ಪ ಸಂಖ್ಯೆಯ ಓದುಗರೂ ಕೂಡ ಪ್ರಕಟಿತ ಪತ್ರಿಕೆ ಮತ್ತು ಪುಸ್ತಕಗಳನ್ನು ಕೊಂಡು ಓದುತ್ತಿಲ್ಲ. ಪರಿಣಾಮವಾಗಿ ಪುಸ್ತಕ ಪ್ರಕಾಶಕರು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಖರೀದಿಯನ್ನು ನಂಬಿಕೊಂಡು ಪುಸ್ತಕಗಳನ್ನು ಪ್ರಕಟಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ಒಂದು ಕಾಲದಲ್ಲಿ ಮಾರುಕಟ್ಟೆಯೊಂದರ ಅತಿ ಹೆಚ್ಚಿನ ಜಾಗವನ್ನು ಆಕ್ರಮಿಸುತ್ತಿದ್ದ ಪುಸ್ತಕ ಅಂಗಡಿಗಳೆಲ್ಲ ಇಂದು ಗ್ರಾಹಕರಿಲ್ಲದೆ ಮುಚ್ಚಿಹೋಗಿವೆ. ಅಂತರ್ಜಾಲ, ಬಣ್ಣದ ಟಿವಿ, ಮನೋರಂಜನಾ ಚಾನೆಲ್ ಗಳ ಅವಿಷ್ಕಾರ ಅನೇಕ ಶತಮಾನಗಳಿಂದ ಬಳಕೆಯಲ್ಲಿದ್ದ ಪುಸ್ತಕ ಎನ್ನುವ ಸಾಂಸ್ಕೃತಿಕ ಮಾಧ್ಯಮವನ್ನು ತೆರೆಮರೆಗೆ ಸರಿಸುತ್ತಿದೆ.

ಸಾಮಾಜಿಕ ಪರಿವರ್ತನೆ


        ಆಧುನಿಕತೆ ಎನ್ನುವ ಪ್ರವಾಹದ ಸೆಳೆತಕ್ಕೆ ಸಿಕ್ಕು ಬದಲಾದ ಸಾಮಾಜಿಕ ಪರಿವರ್ತನೆಯಲ್ಲಿ ಕುಟುಂಬ ವ್ಯವಸ್ಥೆ ಮುಖ್ಯವಾದದ್ದು. ಅವಿಭಕ್ತ ಕುಟುಂಬದಿಂದ ವಿಭಕ್ತ ಕುಟುಂಬ ಮತ್ತು ವಿಭಕ್ತ ಕುಟುಂಬ ಮತ್ತಷ್ಟು ಒಡೆದು ಸಣ್ಣ ಸಣ್ಣ ಚೂರುಗಳಾಗಿ ನ್ಯೂಕ್ಲಿಯರ್ ಕುಟುಂಬಗಳು ಅಸ್ತಿತ್ವಕ್ಕೆ ಬಂದಿವೆ. ಇದು ಒಂದರ ಗರ್ಭವನ್ನು ಮತ್ತೊಂದು ಸೀಳಿಕೊಂಡು ಹೊರಬಂದು  ತನ್ನ ಮೂಲ ಸ್ವರೂಪವನ್ನು ಸಂಪೂರ್ಣವಾಗಿ ಸಾಯಿಸಿ  ಆದ ರೂಪಾಂತರ. ಇಂಥದ್ದೊಂದು ರೂಪಾಂತರದ ಪ್ರಕ್ರಿಯೆಯಲ್ಲಿ ನಾವು ಕಳೆದುಕೊಳ್ಳುತ್ತಿರುವುದೇನು? ಎಂದು ವಿವೇಚಿಸಬೇಕಿದೆ. ಕೂಡು ಕುಟುಂಬಗಳು ಒಡೆದು ಹೋಳಾಗುತ್ತಿರುವ ಈ ಸಮಯ ಅಲ್ಲಿ ಕೇವಲ ಭೌತಿಕ ವಸ್ತುಗಳು ಒಡೆದು ಚೂರಾಗುತ್ತಿಲ್ಲ. ಇಂಥದ್ದೊಂದು ರೂಪಾಂತರದಿಂದ  ಮನುಷ್ಯ ಸಂಬಂಧಗಳು ಶಿಥಿಲಗೊಳ್ಳುತ್ತಿವೆ. ಈ ಒಂದು ರೂಪಾಂತರದ ಕ್ರಿಯೆಗೆ ಕಾರಣವಾಗುತ್ತಿರುವ ಸಂಗತಿಗಳನ್ನು ಈ  ರೀತಿಯಾಗಿ ಗುರುತಿಸಬಹುದು

೧. ಅತಿ ಎನ್ನುವಷ್ಟು ಆರ್ಥಿಕ ಸ್ವಾವಲಂಬನೆ ಮನುಷ್ಯರನ್ನು ಕುಟುಂಬದ ಸಂಬಂಧಗಳಿಂದ ಬೇರ್ಪಡಿಸುತ್ತಿ ರಬಹುದು.
೨. ಮನುಷ್ಯ ವೈಯಕ್ತಿಕ ಅಸ್ತಿತ್ವವನ್ನು ಕಟ್ಟಿಕೊಳ್ಳುವ ಮಹತ್ವಾಕಾಂಕ್ಷೆಗೆ ಒಳಗಾಗಿರುವ ಸಾಧ್ಯತೆ ಇರಬಹುದು

          ಈ ಎರಡು ಮೇಲಿನ ಕಾರಣಗಳನ್ನು ನಾವು ನಗರ ವಾಸಿಗಳಲ್ಲಿ ಕಾಣುವ ಸಾಧ್ಯತೆ ಹೆಚ್ಚು. ಈ ಕಾರಣಗಳನ್ನು ವಿಶ್ಲೇಷಿಸುವಾಗ ಇವುಗಳು ವಿಭಕ್ತ ಕುಟುಂಬಗಳನ್ನು ಮತ್ತಷ್ಟು ಒಡೆದು ಚೂರಾಗಿಸುವ ಸಾಧ್ಯತೆ ಹೆಚ್ಚು ಹೆಚ್ಚು ಕಂಡು ಬರುತ್ತದೆ. ಅದಕ್ಕೆ ಉದಾಹರಣೆ ಈ ಸಿಂಗಲ್ ಪೆರೆಂಟ್ ಕುಟುಂಬಗಳು ಮತ್ತು ಲಿವಿಂಗ್ ಟುಗೆದರ್ ಕುಟುಂಬಗಳು. ಹೀಗೆ ಕುಟುಂಬವೊಂದು ಅನೇಕ ಸ್ತರಗಳಲ್ಲಿ ಒಡೆದು ಹೊಳಾಗುತ್ತಿರುವುದರಿಂದ ಮನುಷ್ಯನಿಗೆ ನೆಮ್ಮದಿ, ಸಂತಸ, ಸುರಕ್ಷತಾ ಭಾವನೆ ಇದೆಲ್ಲ ಗಗನ ಕುಸುಮವಾಗುತ್ತಿದೆ. ಕೂಡು ಕುಟುಂಬದಿಂದ ಒಡೆದು ಹೊರಬಂದು ಪ್ರತ್ಯೇಕವಾಗಿ ನಿಲ್ಲುವ ಬದುಕು ಸ್ವಾತಂತ್ರ್ಯದ ಜೊತೆಗೆ ಸ್ವೆಚ್ಛಾಚಾರವನ್ನೂ ತಂದು ಕೊಡುತ್ತಿರುವುದರಿಂದ ಒಂದೇ ಸೂರಿನಡಿ ಬದುಕುತ್ತಿರುವಾಗಲೂ ಮನುಷ್ಯ  ಸಂಬಂಧಗಳು ಅರ್ಥಕಳೆದುಕೊಳ್ಳುತ್ತಿವೆ. ಕುಟುಂಬದ ಮೂಲ ಸ್ವರೂಪವನ್ನು ರೂಪಾಂತರಿಸಿ ಅಸ್ತಿತ್ವಕ್ಕೆ ಬಂದ ಈ ನ್ಯೂಕ್ಲಿಯರ್ ಕುಟುಂಬಗಳು ಸಹ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವುದು ಈಗ ನಾವು ನೋಡುತ್ತಿರುವ ಸಾಮಾಜಿಕ ಪರಿವರ್ತನೆಯ ಬಹುದೊಡ್ಡ ದುರಂತಗಳಲ್ಲೊಂದು.

ಹಳ್ಳಿಗಳ ನಾಶ


        ಹಳ್ಳಿಗಳೆಲ್ಲ ಬೆಳೆದು ನಗರಗಳಾಗಿವೆ. ಇನ್ನೂ ಹಳ್ಳಿಯಾಗಿಯೇ ಉಳಿದವುಗಳು ನಗರಗಳಾಗುವ ಧಾವಂತದಲ್ಲಿವೆ. ನಗರವಾಗಿ ರೂಪಾಂತರವಾಗುವ ಅರ್ಹತೆ ಇಲ್ಲದ ಊರುಗಳು ಸಂಕಷ್ಟದಲ್ಲಿವೆ. ಯಾವಾಗ ಹಳ್ಳಿ ಎನ್ನುವುದು ನಗರವಾಗಿ ಮಾರ್ಪಟ್ಟಿತೋ ಆಗ ಹಳ್ಳಿಗಳೆಲ್ಲ ಶಾಪಗ್ರಸ್ತ ಅಹಲ್ಯೆಯಂತಾದವು. ನಗರ ಬದುಕಿನ ಆಕರ್ಷಣೆ ಮತ್ತು ಅಲ್ಲಿ ದೊರೆಯುವ ಸವಲತ್ತುಗಳಿಂದಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ವೃದ್ಧಿಸುತ್ತಿದೆ. ಲಕ್ಷಾಂತರ ಜನ ವಾಸಿಸುವ ನಗರ ಪ್ರದೇಶಗಳಲ್ಲಿ ದಿನಕ್ಕೆ ೨೪ ಗಂಟೆ ವಿದ್ಯುತ್, ನೀರು, ವೈದ್ಯಕೀಯ ಸೌಲಭ್ಯ, ಉತ್ತಮ ಶಿಕ್ಷಣ, ರಸ್ತೆ ಸಂಪರ್ಕ ಹೀಗೆ ಅನೇಕ ಸೌಲಭ್ಯಗಳು ದೊರೆಯುತ್ತಿವೆ. ಅದೇ ಕಡಿಮೆ ಜನಸಂಖ್ಯೆ ಇರುವ ಹಳ್ಳಿಗಳು ಸಮಸ್ಯೆಗಳ ಆಗರಗಳಾಗಿವೆ. ವಿದ್ಯುತ್ ಸಮಸ್ಯೆ, ಕುಡಿಯುವ ನೀರಿನ ಕೊರತೆ, ವೈದ್ಯಕೀಯ ಸೌಲಭ್ಯದ ಕೊರತೆ, ಸರಿಯಾದ ರಸ್ತೆ ಸಂಪರ್ಕವಿಲ್ಲದಿರುವುದು ಹೀಗೆ ಅನೇಕ ಸಮಸ್ಯೆಗಳು ಗ್ರಾಮೀಣ ಜನರ ಬದುಕನ್ನು ಕಾಡುತ್ತಿವೆ. ಅಲ್ಲಿನ ಮಕ್ಕಳು ಬಾಗಿಲಿಲ್ಲದ ಮತ್ತು ಸೂರಿಲ್ಲದ ಕನ್ನಡ ಶಾಲೆಗಳಲ್ಲೇ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕಿದೆ. ನಮ್ಮ ಜನಪ್ರತಿನಿಧಿಗಳು ನಗರ ಪ್ರದೇಶಗಳಿಗೆ ಕೊಡುತ್ತಿರುವಷ್ಟು ಆದ್ಯತೆ ಗ್ರಾಮೀಣ ಪ್ರದೇಶಗಳಿಗೆ ಕೊಡುತ್ತಿಲ್ಲದಿರುವುದು ದುರಂತದ ಸಂಗತಿ. ಪರಿಣಾಮವಾಗಿ ಒಂದು ಕಾಲದಲ್ಲಿ ನೆಮ್ಮದಿಯ ಬದುಕಿನ ತಾಣಗಳಾಗಿದ್ದ ಹಳ್ಳಿಗಳು ಇಂದು ಸಮಸ್ಯೆಗಳ ಕೇಂದ್ರಗಳಾಗಿ ಹಳ್ಳಿಗರ ಭವಿಷ್ಯವನ್ನು ಅನಿಶ್ಚಿತತೆಗೆ ದೂಡಿವೆ.

ಕೊನೆಯ ಮಾತು 

       ಅಣ್ಣನ ಮಗಳ ಮದುವೆಗೆಂದು ಗುಲಬರ್ಗಾಕ್ಕೆ  ಹೋಗಿದ್ದಾಗ ಮನೆಯಲ್ಲಿ ಮಕ್ಕಳೆಲ್ಲ ಹಠ ಮಾಡಿ ನನ್ನನ್ನು ಶಂಕರ್ ನಿರ್ದೇಶನದ 'ಐ' ಸಿನಿಮಾ ನೋಡಲು ಕರೆದೊಯ್ದರು. ನಾನಿರುವ  ಊರಿನಲ್ಲಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಇಲ್ಲದಿರುವುದರಿಂದ ಹಾಗೂ ಅಂಥದ್ದೊಂದು ವಾತಾವರಣದಲ್ಲಿ ಸಿನಿಮಾ ನೋಡದೆ ಇದ್ದುದ್ದರಿಂದ ನನಗೂ ಮಲ್ಟಿಪ್ಲೆಕ್ಸ್ ಚಿತ್ರಮಂದಿರ ನೋಡುವ ಆಸೆಯಾಗಿ ಮನೆಯ ಮಕ್ಕಳೊಂದಿಗೆ ಸಿನಿಮಾ ನೋಡಿ ಬಂದೆ. ಸಂಕೀರ್ಣದ ಬೃಹತ್ ಕಟ್ಟಡದಲ್ಲಿರುವ ಆ ಸಿನಿಮಾ ಮಂದಿರ ಅದೊಂದು ದೊಡ್ಡ ಜೈಲಿನಂತೆ ಭಾಸವಾಯಿತು. ಚಿತ್ರಮಂದಿರದ ಒಳಗೆ ಪ್ರವೇಶಿಸಲು ಎರಡೆರಡು ಬಾರಿ ಸೆಕ್ಯೂರಿಟಿ ಗಾರ್ಡ್ ಗಳಿಂದ ತಪಾಸಣೆಗೆ ಒಳಗಾಗಬೇಕು. ಹೆಣ್ಣುಮಕ್ಕಳ ಬ್ಯಾಗ್ ಮತ್ತು ಗಂಡಸರನ್ನು ದೈಹಿಕವಾಗಿ ತಪಾಸಿಸುವ ಆ ಚಿತ್ರಮಂದಿರದಲ್ಲಿ ಹೊರಗಿನಿಂದ ಯಾವ ತಿಂಡಿ ಪದಾರ್ಥಗಳನ್ನು ಒಳಗೆ ಒಯ್ಯುವಂತಿಲ್ಲ. ದುಬಾರಿಯಾದರೂ ಚಿತ್ರಮಂದಿರದ ಒಳಗೆ ಇರುವ ಕ್ಯಾಂಟೀನ್ ನಿಂದಲೇ ಬೇಕಾದ ತಿಂಡಿ ಮತ್ತು ಪಾನೀಯಗಳನ್ನು ಖರೀದಿಸಬೇಕು. ಈ ಮೊದಲು ಒಂದು ಚಿತ್ರಮಂದಿರದ ಸುತ್ತ ಹತ್ತಾರು ತಳ್ಳು ಗಾಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದುದ್ದನ್ನು ನೋಡಿದ್ದ ನನಗೆ ಈ ಹೊಸ ಬದಲಾವಣೆ ಅಚ್ಚರಿ ತರಿಸಿತು. ಒಂದೊಮ್ಮೆ ಸಿನಿಮಾ ಮಂದಿರಗಳ ಸುತ್ತ ವ್ಯಾಪಾರ ಮಾಡಿ ನೂರಾರು ಕುಟುಂಬಗಳು ಬದುಕುತ್ತಿದ್ದ ಕಾಲ ಬದಲಾಗಿ ಈಗ ನಾಲ್ಕಾರು ಪರದೆಗಳಿರುವ ಮಲ್ಟಿಪ್ಲೆಕ್ಸ್ ನಲ್ಲಿ ಇದ್ದದ್ದು ಒಂದು ಕ್ಯಾಂಟೀನ್ ಮಾತ್ರ. ಆಧುನೀಕರಣ ಸಾವಿರಾರು ಸಣ್ಣ ಸಣ್ಣ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಿ ಅವರ ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸಿದ್ದಕ್ಕೆ ಆ ಮಲ್ಟಿಪ್ಲೆಕ್ಸ್ ಒಂದು ದೃಷ್ಟಾಂತದಂತೆ ಗೋಚರಿಸಿ ಮಧ್ಯಮ ಹಾಗೂ ಬಡ ಕುಟುಂಬಗಳ ಭವಿಷ್ಯ ಕಣ್ಣೆದುರು ಬಂದಂತಾಗಿ  ನೋಡಿದ ಸಿನಿಮಾ ಮನಸ್ಸಿನೊಳಗೆ ಇಳಿಯಲೇ ಇಲ್ಲ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ