Monday, February 4, 2019

ಹೆಜ್ಜೆ ಮೂಡಿದ ಹಾದಿ: ಪುಸ್ತಕ ಬಿಡುಗಡೆ






ಫೆಬ್ರುವರಿ ೩, ೨೦೧೯ ರಂದು ಕಲಬುರಗಿಯಲ್ಲಿ ನನ್ನ 'ಹೆಜ್ಜೆ ಮೂಡಿದ ಹಾದಿ' ಪುಸ್ತಕ ಬಿಡುಗಡೆಯಾಯಿತು. ಕನ್ನಡದ ಮಹತ್ವದ ಲೇಖಕರಾದ ಡಾ.ಬರಗೂರು ರಾಮಚಂದ್ರಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. 

ಬರವಣಿಗೆ ಎನ್ನುವುದು ನನ್ನನ್ನು ನಾನು ಕಂಡುಕೊಳ್ಳುವ ಪ್ರಯತ್ನ. ಈ ಸಾಹಿತ್ಯ ಕೃತಿಗಳ ಓದಿನಿಂದ ನನ್ನ ಭಾವದಲ್ಲಿ ಹರಳುಗಟ್ಟಿ ನಿಲ್ಲುವ ವಿಚಾರಗಳಿಗೆ ಅಕ್ಷರರೂಪ ನೀಡಬೇಕೆನ್ನುವ ನನ್ನೊಳಿಗಿನ ತುಡಿತ ಇದುವರೆಗೆ ಕೆಲವು ಪುಸ್ತಕಗಳನ್ನು ನಾನು ಬರೆಯಲು ಕಾರಣವಾಗಿದೆ. ಒಟ್ಟಾರೆ ಈ ಓದು ಮತ್ತು ಬರವಣಿಗೆಯಂಥ ಸೃಜನಶೀಲ ಚಟುವಟಿಕೆ ನನ್ನನ್ನು ಹೆಚ್ಚು ಹೆಚ್ಚು ಕ್ರಿಯಾಶೀಲಗೊಳಿಸುವುದರಿಂದ ನಾನು ಸಾಹಿತ್ಯ ಕೃತಿಗಳ ಓದನ್ನು ಹೆಚ್ಚು ಪ್ರೀತಿಸುತ್ತೇನೆ. ಜೊತೆಗೆ ಈ ಬರವಣಿಗೆ ಎನ್ನುವುದು ಬದುಕುತ್ತಿರುವ ಈ ಸಮಾಜದಲ್ಲಿ ನಾನು ಒಂಟಿಯಲ್ಲ ಎನ್ನುವ ಭಾವ ಹುಟ್ಟಿಸಿ ಬರೆಯುವ ಕ್ರಿಯೆಯಲ್ಲಿ ನಾನು ಮತ್ತೆ ಮತ್ತೆ ತೊಡಗಿಸಿಕೊಳ್ಳುವಂತೆ ಆ ಭಾವವೆ ಪ್ರೇರೇಪಿಸುತ್ತದೆ. ಒಂದರ್ಥದಲ್ಲಿ ಅಕ್ಷರಗಳ ಸಾಂಗತ್ಯದಲ್ಲಿ ನೆಮ್ಮದಿಯನ್ನು ಕಂಡುಕೊಳ್ಳುವ ಮನೋಭಾವ ನನ್ನದು. 
ಬರವಣಿಗೆ ವಿಷಯವಾಗಿ ನನ್ನನ್ನು ಕಾಡುವ ಸಂಗತಿಗಳು ಅನೇಕ. ಬರವಣಿಗೆಯು ಲೇಖಕನ ಸ್ವಂತದ ಹಿತಾಸಕ್ತಿಯನ್ನು ಕಾಪಾಡುವ ಕ್ರಿಯೆಯಾಗದೆ ಅದು ಸಮಾಜಮುಖಿಯಾಗಿರಬೇಕು ಎನ್ನುವುದರಲ್ಲಿ ನನಗೆ ಅಚಲವಾದ ನಂಬಿಕೆ. ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಲೇಖಕ ಮಾರಿಯೋ ವರ್ಗಾಸ್ ಯೋಸಾ ಸಾಹಿತ್ಯದ ಮಹತ್ವವನ್ನು ಹೀಗೆ ಹೇಳುತ್ತಾನೆ “ಬಹುಕಾಲ ಬಾಳುವಂಥ ಯಾವುದನ್ನು ರಾಜಕಾರಣ ಮಾಡಲಾಗುವುದಿಲ್ಲವೋ ಅದನ್ನು ಸಾಹಿತ್ಯ ಮಾಡಬೇಕು. ಲೇಖಕ ಕೇವಲ ವರ್ತಮಾನಕ್ಕಾಗಿ ಮಾತ್ರ ಪುಸ್ತಕ ಬರೆಯುವುದಿಲ್ಲ. ಟೀಕಿಸುವ ಮೂಲಕವೋ ತಮ್ಮ ಆಲೋಚನೆಗಳನ್ನು ಬಳಸಿ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮೂಲಕವೋ ಲೇಖಕರಾದವರು ಕಾರ್ಯಪ್ರವೃತ್ತರಾಗುವುದು ತುಂಬಾ ಮುಖ್ಯ. ಕೆಲವು ಸಂದರ್ಭಗಳಲ್ಲಿ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಬೇಕಾಗಿ ಬರುವಂಥ ಯಾವುದೇ ಅಭಿಪ್ರಾಯಕ್ಕೂ ಲೇಖಕ ಜಗ್ಗ ಕೂಡದು. ಒಂದು ಅಗತ್ಯದಂತೆ ಲೇಖಕರು ತಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕು”. ಯೋಸಾನ ಒಟ್ಟು ಹೇಳಿಕೆಯ ಅರ್ಥ ಬರಹಗಾರ ರಾಜಕೀಯ ಅಥವಾ ರಾಜಕಾರಣದೊಂದಿಗೆ ರಾಜೀ ಮಾಡಿಕೊಳ್ಳದೆ ಸಮಾಜವನ್ನು ಭ್ರಷ್ಟ ರಾಜಕಾರಣದಿಂದ ಕಾಯುವ ಕೆಲಸ ಮಾಡಬೇಕು. ಆತಂಕದ ಸಂಗತಿ ಎಂದರೆ ಇವತ್ತು ಬರವಣಿಗೆಯು ರಾಜಕಾರಣಿಗಳನ್ನು ಮತ್ತು ಉಳ್ಳವರನ್ನು ಓಲೈಸುವ  ಒಂದು ಸಾಂಸ್ಕೃತಿಕ ಚಟುವಟಿಕೆಯಾಗಿದೆ.

ಇನ್ನು ಈ ಕೃತಿಯ ವಿಷಯಕ್ಕೆ ಬಂದರೆ ಇಲ್ಲಿ 22 ಸಾಧಕರ ಬದುಕಿನ ಸಾಧನೆಯ ಚಿತ್ರಣವಿದೆ. ಹಾಗೆಂದು ಇದು ಜೀವನ ಚರಿತ್ರೆ ಗ್ರಂಥವಾಗಲಿ ಇಲ್ಲವೇ ಅಭಿನಂದನಾ ಗ್ರಂಥವಾಗಲಿ ಅಲ್ಲ. ಜೊತೆಗೆ ಇಲ್ಲಿ ದಾಖಲಿಸಿದ್ದಷ್ಟೆ ಅವರ ಸಾಧನೆ ಎಂದು ಸೀಮಿತಗೊಳಿಸುವುದೂ ತಪ್ಪು ನಿರ್ಧಾರವಾಗುತ್ತದೆ. ಆಯಾ ಸಂದರ್ಭಕ್ಕನುಗುಣವಾಗಿ ಈ ಕೃತಿಯಲ್ಲಿ ವ್ಯಕ್ತಿ ಚಿತ್ರಣ ರೂಪುಗೊಂಡಿದೆ.


-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ