Tuesday, July 5, 2022

ಪಯಣ ಪಥದ ಪಥಿಕರಾಗಿ

 


(೧೯.೫.೨೦೨೨ ರ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ)

ಇತ್ತೀಚೆಗೆ ಅಂತಿಮ ಪದವಿ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಹಾಸ್ಟೆಲಿನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮನಸ್ಸಿಗೆ ತುಂಬ ದು:ಖವನ್ನುಂಟುಮಾಡಿತು. ಖಿನ್ನತೆಯೇ ಅವನು ಆತ್ಮಹತ್ಯೆಯಂಥ ಹೇಯ ಮಾರ್ಗವನ್ನು ಆಯ್ದುಕೊಳ್ಳಲು ಕಾರಣವಾಗಿತ್ತು ಎನ್ನುವ ಮಾತುಗಳು ಕೇಳಿಬಂದವು. ಬದುಕಿ ಸಾಧಿಸಬೇಕಾದ ವಿಪುಲ ಅವಕಾಶ ಅವನೆದುರಿಗಿದ್ದರೂ ಅವನು ಸಾವನ್ನೇ ಆಯ್ಕೆ ಮಾಡಿಕೊಂಡ. ಆ ನಿರ್ಧಾರಕ್ಕೆ ಬಂದ ಗಳಿಗೆ ತಂದೆ-ತಾಯಿಯನ್ನು ಆತ ಜ್ಞಾಪಿಸಿಕೊಳ್ಳಬೇಕಿತ್ತು. ಜೀವನದ ಸವಾಲುಗಳಲ್ಲಿ ಗೆದ್ದು ನಿಂತ ಸಾಧಕರನ್ನು ಸ್ಮರಿಸಿಕೊಳ್ಳಬೇಕಿತ್ತು. ದೇಹದ ಅಂಗವೈಕಲ್ಯವನ್ನು ಮೆಟ್ಟಿನಿಂತು ಪ್ರಪಂಚಕ್ಕೇ ಮಾದರಿಯಾದ ಪ್ರಾತ:ಸ್ಮರಣೀಯರನ್ನು ನೆನಪಿಸಿಕೊಳ್ಳಬೇಕಿತ್ತು. ಕ್ಷಣಮಾತ್ರದ ನಿರ್ಧಾರ ಬದುಕನ್ನೇ ಬಲಿ ತೆಗೆದುಕೊಂಡಿತು. ಅಪ್ಪ ಅಮ್ಮನಿಗೆ ಮಗನ ಸಾವು ಅವರು ಬದುಕಿರುವವರೆಗೆ ಕಾಡುವ, ಕಂಗೆಡಿಸುವ ನೋವಾಗಿ ಉಳಿದು ಹೋಯಿತು. 

ಪ್ರಾಣಿವರ್ಗಗಳಲ್ಲೇ ಮನುಷ್ಯ ಅತ್ಯಂತ ಶ್ರೇಷ್ಠ ಪ್ರಾಣಿ ಎಂದು ಪರಿಗಣಿಸಲ್ಪಟ್ಟಿರುವನು. ಭೂಮಿಯ ಮೇಲಿನ ಉಳಿದ ಯಾವ ಪ್ರಾಣಿಗಳಿಗೂ ಇಲ್ಲದ ಯೋಚನಾಶಕ್ತಿ ಎಂಬ ವೈಶಿಷ್ಟ್ಯತೆ ಮನುಷ್ಯನಿಗಿದೆ. ತನ್ನ ಬುದ್ಧಿಶಕ್ತಿಯ ಬಲದಿಂದಲೇ ಮನುಷ್ಯ ಭೂಮಿ, ಆಕಾಶ, ಅಗ್ನಿ, ನೀರು, ವಾಯು ಈ ಪಂಚಭೂತಗಳ ಮೇಲೆ ತನ್ನ ನಿಯಂತ್ರಣ ಸಾಧಿಸಿರುವನು. ವಿಜ್ಞಾನವನ್ನು ಮಾನವ ಜಗತ್ತಿನ ಏಳ್ಗೆಗೆ ಏಣಿಯಾಗಿಸಿಕೊಂಡು ಹೊಸ ಹೊಸ ಅವಿಷ್ಕಾರಗಳಿಂದ ಅಭಿವೃದ್ಧಿಯ ಪಥದತ್ತ ನಾಗಾಲೋಟದಿಂದ ಮುನ್ನಡೆಯುತ್ತಿರುವನು. ಈ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿ ವಿದ್ಯಾವಂತ ಯುವಜನಾಂಗ ಪ್ರೇಮ ವೈಫಲ್ಯ, ಅಭ್ಯಾಸದ ಹೊರೆ, ಪರೀಕ್ಷೆಯಲ್ಲಿ ಅನುತ್ತೀರ್ಣ, ಇಚ್ಛಿಸಿದ ಕೋರ್ಸಿಗೆ ದೊರೆಯದ ಪ್ರವೇಶ ಇಂತಹ ಕಾರಣಗಳನ್ನು ನೀಡಿ ಆತ್ಮಹತ್ಯೆಗೆ ಶರಣಾಗುತ್ತಿರುವುದು ಇಡೀ ಮಾನವ ಕುಲವೇ ನಾಚಿಕೆಯಿಂದ ತಲೆತಗ್ಗಿಸಬೇಕಾದ ಸಂಗತಿ.

ಈ ಸಂದರ್ಭ ಪಾಲಕರು ಎಚ್ಚೆತ್ತುಕೊಳ್ಳುವುದೊಳಿತು. ಏಕೆಂದರೆ ಪಾಲಕರ ಅತಿಯಾದ ಮಹತ್ವಾಕಾಂಕ್ಷೆ ಮಕ್ಕಳನ್ನು ಸಾವಿನಂಚಿಗೆ ದೂಡುತ್ತಿದೆ. ಅಪ್ಪ, ಅಮ್ಮನ ಒತ್ತಾಯಕ್ಕೆ ತಮಗೆ ಇಷ್ಟವಿಲ್ಲದ ಕಾಲೇಜು, ಕೋರ್ಸಿಗೆ ಪ್ರವೇಶ ಪಡೆಯುವ ಯುವಜನಾಂಗ ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳದೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಪ್ರಯತ್ನಿಸುವುದುಂಟು. ಮಕ್ಕಳನ್ನು ಡಾಕ್ಟರ್, ಎಂಜಿನಿಯರ್, ಸರ್ಕಾರಿ ಅಧಿಕಾರಿಗಳನ್ನಾಗಿ ಮಾಡಬೇಕೆನ್ನುವ ಮಹತ್ವಾಕಾಂಕ್ಷೆಯಲ್ಲಿ ಬಹಳಷ್ಟು ಪಾಲಕರು ಮಕ್ಕಳ ಆಸಕ್ತಿ ಮತ್ತು ಬುದ್ಧಿಮತ್ತೆಯನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಮಕ್ಕಳು ಬಹುಪಾಲು ಸಮಯವನ್ನು ಶೈಕ್ಷಣಿಕ ಪರಿಸರದಲ್ಲಿ ಕಳೆಯುವಂಥ ವಾತಾವರಣವನ್ನು ಪಾಲಕರೇ ನಿರ್ಮಿಸಿಕೊಡುತ್ತಿರುವರು. ವಸತಿಶಾಲೆ, ಬೇಸಿಗೆ ಶಿಬಿರ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳೆಂದು ಮಕ್ಕಳು ಮನೆಯ ಪರಿಸರದಿಂದ ಹೊರಗೇ ಉಳಿಯುತ್ತಿರುವರು. ಮನೆ ಮತ್ತು ಕುಟುಂಬದ ಸದಸ್ಯರೊಂದಿಗಿನ ಈ ಭಾವನಾತ್ಮಕ ಮತ್ತು ಮಾನಸಿಕ ಅಂತರ ಅದೆಷ್ಟೋ ವಿದ್ಯಾರ್ಥಿಗಳನ್ನು ಖಿನ್ನತೆಗೆ ಒಳಗಾಗಿಸುತ್ತಿದೆ.  

ಇಂದಿನ ಶಿಕ್ಷಣ ಪದ್ಧತಿಯಲ್ಲೂ ಲೋಪದೋಷಗಳಿವೆ. ವ್ಯಾಪಾರೀಕರಣ ಶಿಕ್ಷಣವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಮೇಲೆ ಶಿಕ್ಷಣದ ಉದ್ದೇಶಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇಂದು ಶಿಕ್ಷಣದಿಂದ ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಯಾಗುತ್ತಿಲ್ಲ. ಶಿಕ್ಷಕರು ಪಠ್ಯಕ್ರಮದಾಚೆ ಏನನ್ನೂ ಬೋಧಿಸುತ್ತಿಲ್ಲ. ನೀತಿಶಿಕ್ಷಣ ಎನ್ನುವುದು ಶಾಲಾ ಕಾಲೇಜುಗಳ ವೇಳಾಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡಿದೆ. ವಾರ್ಷಿಕ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರುಗೊಳಿಸುವುದರಲ್ಲೇ ತಮ್ಮ ಪೂರ್ಣ ಸಮಯವನ್ನು ವಿನಿಯೋಗಿಸುತ್ತಿರುವ ಶಿಕ್ಷಕರು ವಿದ್ಯಾರ್ಥಿಗಳ ಮಾನಸಿಕ ಒತ್ತಡವನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳುತ್ತಿಲ್ಲ. ಹಿಂದಿನ ದಿನಗಳಲ್ಲಿ ಶಾಲಾ ಅವಧಿಯ ನಂತರವೂ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಸಮಯ ಕಳೆಯುತ್ತಿದ್ದರು. ಪಠ್ಯಕ್ರಮದಾಚೆ ಬದುಕಿನ ತತ್ವಗಳನ್ನು ಬೋಧಿಸುತ್ತಿದ್ದರು. ಪ್ರತಿವಿದ್ಯಾರ್ಥಿಯ ಯೋಗಕ್ಷೇಮ ವಿಚಾರಿಸುತ್ತಿದ್ದರು. ದಾರಿ ತಪ್ಪಿದಾಗ ಕಿವಿ ಹಿಂಡಿ ಬುದ್ಧಿ ಹೇಳುತ್ತಿದ್ದರು. ಇಂದು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮಧ್ಯದ ಸಂಬಂಧ ನಾಲ್ಕು ಗೋಡೆಗಳ ನಡುವಣ ಪಠ್ಯಕ್ರಮದ ಬೋಧನೆಗೆ ಮಾತ್ರ ಸೀಮಿತವಾಗಿದೆ.

ಬದುಕು ಒಡ್ಡಿದ ಸವಾಲುಗಳನ್ನು ಎದುರಿಸಿ ಅಪ್ರತಿಮ ಸಾಧನೆಗೈದವರು ನಮ್ಮ ನಡುವಿರುವರು. ಸ್ಟೀಫನ್ ಹಾಕಿಂಗ್, ಪುಟ್ಟರಾಜ ಗವಾಯಿಗಳು, ಸುಧಾಚಂದ್ರನ್, ಜಾನ್ ಮಿಲ್ಟನ್ ಈ ಸಾಧಕರು ತಮ್ಮ ದೈಹಿಕ ವೈಕಲ್ಯವನ್ನು ಮೀರಿನಿಂತು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅದ್ಭುತವಾದದ್ದನ್ನು ಸಾಧಿಸಿದರು. ಈ ಸಾಧಕರು ಕ್ರಮಿಸಿದ ದಾರಿ ಅದು ಹೂವಿನ ಹಾದಿಯಾಗಿರಲಿಲ್ಲ. ಪಯಣದ ಪಥದಲ್ಲಿ ಎದುರಾದ ಕಲ್ಲು ಮುಳ್ಳುಗಳನ್ನು ಬದಿಗೆ ಸರಿಸಿ ತಾವು ನಡೆಯಬೇಕಾದ ದಾರಿಯನ್ನು ಸ್ವತ: ತಾವೇ ನಿರ್ಮಿಸಿಕೊಂಡ ಪಥಿಕರಿವರು. ಒಂದೊಮ್ಮೆ ಅವರು ಸಮಸ್ಯೆಗಳಿಗೆ ಹೆದರಿ ಸಾಧನೆಯ ಪಥದಿಂದ ವಿಮುಖರಾಗಿದ್ದರೆ ಇಂದು ಜಗತ್ತು ಅವರನ್ನು ನೆನಪಿಟ್ಟುಕೊಳ್ಳುತ್ತಿರಲಿಲ್ಲ. ಪ್ರಪಂಚ ಸದಾ ಸ್ಮರಿಸುವುದು ಸಾಧಕರನ್ನೇ ವಿನಾ ಆತ್ಮಹತ್ಯೆಗೆ ಶರಣಾಗುವ ಹೇಡಿಗಳನ್ನಲ್ಲ. ಅಮೆರಿಕಾದ ಅಧ್ಯಕ್ಷ ಹುದ್ದೆಗೆ ಆಯ್ಕೆಯಾಗುವ ಪೂರ್ವದಲ್ಲಿ ಅಬ್ರಾಹಂ ಲಿಂಕನ್‍ಗೆ ವಿವಿಧ ಚುನಾವಣೆಗಳಲ್ಲಿ ಸತತ ಒಂಬತ್ತು ಸೋಲುಗಳು ಎದುರಾಗಿದ್ದವು. ಇಂಥ ಸಾಧಕರ ಬದುಕು ಮಕ್ಕಳಿಗಷ್ಟೇ ಅಲ್ಲ ಪಾಲಕರಿಗೂ ಸ್ಪೂರ್ತಿಯಾಗಬೇಕು. ಕೇವಲ ಬೇಸಿಗೆ ಶಿಬಿರ, ವಸತಿ ಶಾಲೆಗಳು ಮತ್ತು ತರಬೇತಿ ಕೇಂದ್ರಗಳಲ್ಲಷ್ಟೇ ಮಕ್ಕಳ ಭವ್ಯ ಭವಿಷ್ಯ ನಿರ್ಮಾಣಗೊಳ್ಳುತ್ತಿದೆ ಎನ್ನುವ ಭ್ರಮೆಯಿಂದ ಪಾಲಕರು ಹೊರಬರಬೇಕಿದೆ. 

ಯಶವಂತ ಚಿತ್ತಾಲರು ಮನುಷ್ಯನ ಬದುಕಬೇಕೆನ್ನುವ ಉತ್ಸಾಹವನ್ನು ವಿವರಿಸುತ್ತ ‘ಜೀವಕೋಟಿಯ ವಿಕಾಸದಲ್ಲಿ ‘ಬದುಕಬೇಕು’ ಎಂಬ ಅಭೀಪ್ಸೆಯ ಹಿಂದೆ ಕೋಟಿ ವರ್ಷಗಳ ಇತಿಹಾಸವಿದ್ದರೆ ‘ಯಾಕೆ ಬದುಕಬೇಕು?’ ಎಂದು ಕೇಳಿಕೊಳ್ಳುವ ಪ್ರಜ್ಞೆ ತೀರ ಸಧ್ಯದ್ದು. ಬದುಕುವುದರಲ್ಲಿ ಅದಮ್ಯ ಉತ್ಸಾಹವಿರುವ ಜೀವಕ್ಕೆ ಯಾಕೆ ಬದುಕಬೇಕು? ಎಂಬ ಪ್ರಶ್ನೆಗಿಂತ ಹೇಗೆ ಬದುಕಬೇಕು? ಎಂಬ ಪ್ರಶ್ನೆಯೇ ಹೆಚ್ಚು ಸಹಜವಾದದ್ದು. ನಿವೇಕೆ ಬದುಕಿದ್ದೀರಾ? ಎಂಬ ಪ್ರಶ್ನೆಗೆ ಬದುಕಿನಲ್ಲಿ ವಿಶ್ವಾಸವಿದ್ದ ಜೀವಿಯಿಂದ ಉತ್ತರವಿಲ್ಲ. ಆದರೆ ನೀವು ನಂಬಿಕೆ ಇಟ್ಟುಕೊಂಡ ಜೀವನ ಮೌಲ್ಯಗಳಾವುವು? ಯಾವ ಸಂಗತಿಗಳಿಂದಾಗಿ ನಿಮಗೆ ಬದುಕು ಅರ್ಥಪೂರ್ಣವೆನ್ನಿಸಿದೆ? ಎಂಬ ಪ್ರಶ್ನೆಗೆ ಉತ್ತರ ಸಿಗಬಹುದು’ ಎಂದಿರುವರು.

‘ಕಹಾ ಮೈನೆ ಕಿತನಾ ಹೈ ಗುಲ್ ಕಾ ಸಬಾತ್/ಕಾಲಿನೆ ಯೆ ಸುನ್ಕರ್ ತಬಸ್ಸೂಂ ಕಿಯಾ’ (‘ಎಷ್ಟು ಕಾಲ?’ ನಾನು ಕೇಳಿದೆ ಗುಲಾಬಿಯ ಆಯಸ್ಸು. ಮೊಗ್ಗು ಮೊಗವೆತ್ತಿ ಮುಗುಳ್ನಕ್ಕಿತ್ತಷ್ಟೆ)- ಬದುಕಿನ ಮಹತ್ವವನ್ನು ಅತ್ಯಂತ ಅರ್ಥಪೂರ್ಣವಾಗಿ ವಿವರಿಸುವ ಮಿರ್ಜಾ ಗಾಲಿಬ್‍ನ ಗಝಲ್ ಸಾಲುಗಳಿವು. ಅರಳಿ ನಿಂತ ಹೂವು ತನ್ನ ಬದುಕು ಕ್ಷಣಿಕವೆಂದು ಎಂದಿಗೂ ಶೋಕಿಸುವುದಿಲ್ಲ. ಅದು ಬದುಕಿರುವವರೆಗೂ ತನ್ನ ಪರಿಮಳವನ್ನು ಸುತ್ತಲೂ ಬೀರುತ್ತದೆ. ಕಲ್ಲುಬಂಡೆ ಕೆಳಗಿನ ಗರಿಕೆ ಹುಲ್ಲು ಸಿಕ್ಕ ಅವಕಾಶದಲ್ಲೇ ಹೊರಚಾಚಿ ಚಿಗುರೊಡೆಯುತ್ತದೆ. ಬಚ್ಚಲಿನ ಕೊಳೆಯ ನೀರಲ್ಲಿ ಬೆಳೆದು ನಿಲ್ಲುವ ಮಲ್ಲಿಗೆ ಬಳ್ಳಿ ಗಿಡದ ಕೊನೆಗೆ ಘಮಘಮಿಸುವ ಹೂಗಳನ್ನು ಬಿಡುತ್ತದೆ. ಆದರೆ ದೇಹದಲ್ಲಿ ದೊಡ್ಡ ಮೆದುಳಿರುವ ಮನುಷ್ಯ ಮಾತ್ರ ಸೋಲುಗಳಿಗೆ ಅಧೀರನಾಗಿ ಸಾವಿನಲ್ಲಿ ಪರಿಹಾರ ಹುಡುಕುತ್ತಿರುವುದು ಎಷ್ಟು ನ್ಯಾಯ?. 

-ರಾಜಕುಮಾರ ಕುಲಕರ್ಣಿ