Tuesday, December 29, 2020

ಬೇರಿಗಂಟಿದ ಮರ (ಕಥೆ)

        


(೧೭ ಡಿಸೆಂಬರ್ ೨೦೨೦ ರ 'ತರಂಗ' ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ) 

 ಬೆಳಗಿನ ವಾಕಿಂಗ್ ಮುಗಿಸಿ ಮನೆಗೆ ಮರಳಿದ ಕೃಷ್ಣಭಟ್ಟರಿಗೆ ಮನೆಯ ಕಾಂಪೌಂಡ್ ಗೋಡೆಯ ಮೇಲೆ ರಾರಾಜಿಸುತ್ತಿದ್ದ ಹೂವಿನ ಹಾರದಿಂದ ಅಲಂಕರಿಸಿದ್ದ ‘ರಾಧಾಕೃಷ್ಣ ಸಂಸ್ಕಾರ ಸರ್ವಿಸ್ ಸೆಂಟರ್’ ಎನ್ನುವ ಬೋರ್ಡ್ ಕಣ್ಣಿಗೆ ಬಿದ್ದು ಅವರಲ್ಲಿ ವಿಚಿತ್ರ ಸಂಕಟವನ್ನು ಮತ್ತು ಮಗನ ಮೇಲೆ ಕೋಪವನ್ನು ಒಟ್ಟೊಟ್ಟಿಗೆ ಮೂಡಲು ಕಾರಣವಾಯಿತು. ಮನೆಯ ಎದುರಿನಿಂದ ಹಾದು ಹೋಗುತ್ತಿದ್ದವರು ಒಂದು ಕ್ಷಣ ನಿಂತು ಬೋರ್ಡಿನ ಮೇಲೆ ಕಣ್ಣು ಹಾಯಿಸಿ ಮನೆಯನ್ನೊಮ್ಮೆ ವಿಚಿತ್ರವಾಗಿ ನೋಡಿ ಹೊರಟುಹೋಗುತ್ತಿದ್ದ ದೃಶ್ಯ ಕೃಷ್ಣಭಟ್ಟರಲ್ಲಿನ ಸಂಕಟ ಮತ್ತು ಕೋಪವನ್ನು ಮತ್ತಷ್ಟು ಹೆಚ್ಚಿಸಿ ಕಾಂಪೌಂಡ್ ಬಾಗಿಲನ್ನು ಧಡಾರನೇ ನೂಕಿದರು. ಅವರು ನೂಕಿದ ರಭಸಕ್ಕೆ ಕಾಂಪೌಂಡಿನ ಬಾಗಿಲು ಕಿರ್ರ್ ಎಂದು ಸದ್ದು ಮಾಡಿ ಆ ಪ್ರಶಾಂತ ಮುಂಜಾನೆಯ ನೀರವ ವಾತಾವರಣಕ್ಕೆ ಒಂದು ವಿಚಿತ್ರ ಕಳೆಯನ್ನು ನೀಡಿತು. ಕಾಂಪೌಂಡು ಧಾಟಿ ಒಳಗೆ ಬಂದವರು ಬಲಭಾಗಕ್ಕೆ ದೃಷ್ಟಿ ಹರಿಸಿದವರ ಮುಖವನ್ನು ಮತ್ತಷ್ಟು ಕಳಾಹೀನವಾಗಿಸುವಂತೆ ಮುಕ್ತಿರಥ ಎನ್ನುವ ಹೆಸರುಹೊತ್ತ ವಾಹನ ಕಣ್ಣಿಗೆ ಬಿದ್ದು ಕೃಷ್ಣಭಟ್ಟರು ಮತ್ತಷ್ಟು ಕೋಪಗೊಂಡರು. ‘ರಾಧಾ ಇವನದು ಯಾಕೋ ಅತಿಯಾಯ್ತು ಅಂತ ಅನಿಸುತ್ತೆ’ ಹೆಗಲ ಮೇಲಿದ್ದ ಪಂಚೆಯಿಂದ ಮುಖದ ಬೆವರನ್ನು ಒರೆಸುತ್ತ ಅಡುಗೆ ಮನೆಗೆ ಬಂದವರು ಅಲ್ಲೆ ಇದ್ದ ಕುರ್ಚಿಯ ಮೇಲೆ ಕುಳಿತು ನೀರಿನ ಲೋಟವನ್ನು ಕೈಗೆತ್ತಿಕೊಂಡು ಅದರಲ್ಲಿದ್ದ ನೀರನ್ನೆಲ್ಲ ಒಂದೇ ಗುಕ್ಕಿಗೆ ತಮ್ಮ ಗಂಟಲಿಗೆ ಸುರಿದುಕೊಂಡರು. ಚಹಾ ಮಾಡುತ್ತಿದ್ದ ರಾಧಮ್ಮನವರಿಗೆ ಪತಿಯ ಸಂಕಟ ಅರ್ಥವಾದರೂ ಅವರು ಅಸಹಾಯಕರಾಗಿದ್ದರು. ‘ಎಲ್ಲಿದ್ದಾನೆ ನಿನ್ನ ಸುಪುತ್ರ. ಇನ್ನು ಬೆಳಗಾಗಿಲ್ಲವಂತೊ’ ಕೃಷ್ಣಭಟ್ಟರ ಮಾತಿನಲ್ಲಿ ವ್ಯಂಗ್ಯವಿತ್ತು. ಅಪ್ಪ ಮತ್ತು ಮಗನ ಶೀತಲ ಸಮರದ ನಡುವೆ ರಾಧಮ್ಮನವರು ಹೈರಾಣಾಗಿದ್ದರು. ‘ನೀವು ವಾಕಿಂಗ್ ಅಂತ ಹೊರಗೆ ಹೋದ ಹಿಂದೆನೆ ಫೆÇೀನ್ ಬಂತು. ಅರ್ಜೆಂಟ್ ಕೆಲಸಯಿದೆ ಅಂತ ಹೋದ. ಬರೋದು ಲೇಟಾಗುತ್ತೆ ಊಟಕ್ಕೆ ಕಾಯ್ಬೇಡಿ ಅಂತ ಹೇಳ್ದ’ ರಾಧಮ್ಮನವರು ಗಂಡನಿಗೆ ವರದಿ ಒಪ್ಪಿಸಿ ಕುದಿಯುತ್ತಿದ್ದ ಚಹಾವನ್ನು ಸ್ಟೌವ್‍ನಿಂದ ಕೆಳಗಿಳಿಸಿ ಕಪ್ಪಿಗೆ ಸುರಿಯತೊಡಗಿದರು. ‘ಸತ್ತವರು ಯಾವ ಪೈಕಿಯಂತೆ ಏನಾದರೂ ಹೇಳಿದನೋ ಹೇಗೆ’ ಕೃಷ್ಣಭಟ್ಟರ ಮಾತಿನಲ್ಲಿ ಸಹಜತೆ ಇದ್ದರೂ ಅದು ರಾಧಮ್ಮನವರಿಗೆ ತನಿಖೆಯ ಧಾಟಿಯಂತೆ ಅನ್ನಿಸಿತು. ‘ಕೆಲಸ ಅಂದರೆ ಅದು ಯಾವಾಗಲೂ ಸಾವೇ ಅಂತ ಯಾಕೆ ಅನ್ಕೊತೀರಿ’ ಅಪೇಕ್ಷಿಸುವ ಧಾಟಿಯಲ್ಲಿ ಕೇಳಿದರಾದರೂ ಅವರ ಒಳ ಮನಸ್ಸು ಮಗ ಹೋಗಿರುವ ಕಾರಣವನ್ನು ಊಹಿಸುತ್ತಿತ್ತು. ಮಾತಿಗೆ ಮಾತು ಬೆಳೆದು ಸುಮ್ಮನೆ ತಮ್ಮಿಬ್ಬರ ನಡುವೆ ಅದು ಜಗಳಕ್ಕೆ ಕಾರಣವಾಗುತ್ತದೆಂದು ಹಿಂದಿನ ಅನುಭವದಿಂದ ಅರಿತಿದ್ದ ಕೃಷ್ಣಭಟ್ಟರು ಮಾತು ಬೆಳೆಸದೆ ಕುಡಿದು ಖಾಲಿಯಾದ ಕಪ್ಪನ್ನು ಡೈನಿಂಗ್ ಟೇಬಲ್ ಮೇಲಿಟ್ಟು ಹಾಲ್‍ಗೆ ಬಂದು ಅಂದಿನ ದಿನಪತ್ರಿಕೆಯ ಮೇಲೆ ಕಣ್ಣಾಡಿಸತೊಡಗಿದರು.

ಮುಕುಂದ ಕೃಷ್ಣಭಟ್ಟ ಮತ್ತು ರಾಧಮ್ಮ ದಂಪತಿಗಳ ಏಕಮಾತ್ರ ಸಂತಾನ. ಮದುವೆಯಾದ ಎಂಟು ವರ್ಷಗಳ ನಂತರ ಹುಟ್ಟಿದ ಪುತ್ರಸಂತಾನವೆಂದು ತುಂಬ ಮುದ್ದಿನಿಂದಲೇ ಬೆಳೆಸಿದ್ದರು. ಮುಕುಂದ ಬಾಲ್ಯದಿಂದಲೇ ತುಂಬ ಚುರುಕಾಗಿದ್ದ. ಓದು, ಆಟ ಎಲ್ಲದರಲ್ಲೂ ಮುಂದಿದ್ದ. ಮಗನನ್ನು ಡಾಕ್ಟರ್ ಇಲ್ಲವೇ ಎಂಜಿನಿಯರ್ ಮಾಡಬೇಕೆನ್ನುವ ಆಸೆ ಕೃಷ್ಣಭಟ್ಟರಿಗಿದ್ದರೂ ಅವನಿಗೆ ಈವೆಂಟ್ ಮ್ಯಾನೇಜಮೆಂಟ್‍ಗಳಲ್ಲಿ ಆಸಕ್ತಿ ಇದ್ದುದ್ದರಿಂದ ಬಿ.ಬಿ.ಎ ಓದುತ್ತೆನೆಂದು ಹಟ ಹಿಡಿದಾಗ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಅಡ್ಮಿಷನ್ ಕೊಡಿಸಿದ್ದರು. ಮುಂದೆ ಎಂ.ಬಿ.ಎ ಗೂ ಸುಲಭವಾಗಿ ಪ್ರವೇಶ ಸಿಕ್ಕು ಮುಕುಂದ ಎರಡು ವರ್ಷ ಪರಿಶ್ರಮಪಟ್ಟು ಓದಿ ಫಸ್ಟ್ ಕ್ಲಾಸಿನಲ್ಲಿ ಉತ್ತೀರ್ಣನಾಗಿದ್ದ. ಈಗೀಗ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಓದಿದವರು ಮಾತ್ರವಲ್ಲದೆ ಎಂ.ಬಿ.ಎ ಓದಿದವರೂ ಅಮೆರಿಕಾ, ಇಂಗ್ಲೆಂಡ್‍ಗಳಿಗೆ ಹೋಗುತ್ತಿದ್ದಾರೆಂದು ಕೇಳಿ ತಿಳಿದಿದ್ದ ಕೃಷ್ಣಭಟ್ಟರಿಗೂ ಮಗ ಫಾರೆನ್ನಿಗೆ ಹೋಗುತ್ತಾನೆನ್ನುವ ಮಹದಾಸೆಯಿತ್ತು. ಕಾಲೊನಿಯ ಗಣಪತಿ ದೇವಸ್ಥಾನದ ಅರ್ಚಕರಾದ ಶ್ರೀಪತಿರಾಯರ ಮಗ ಎಂ.ಬಿ.ಎ ಓದಿ ಈಗ ಅಮೆರಿಕಾದ ದೊಡ್ಡ ಕಂಪನಿಯಲ್ಲಿ ಡಾಲರಿನಲ್ಲಿ ಸಂಬಳ ಪಡೆಯುತ್ತಿರುವ ವಿಷಯ ತಿಳಿದಾಗಿನಿಂದ ಕೃಷ್ಣಭಟ್ಟರ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿತ್ತು. ಮಗ ಅಮೆರಿಕಾ ಸೇರಿದ್ದೆ ಅವನಿಗೊಂದು ಮದುವೆಮಾಡಿ ತಾವು ಹೆಂಡತಿಯೊಂದಿಗೆ ಅಮೆರಿಕಾ ಮತ್ತು ಭಾರತದ ನಡುವೆ ಓಡಾಡುತ್ತ ಬದುಕಿನ ಸಂಧ್ಯಾಕಾಲವನ್ನು ಸಂತೃಪ್ತವಾಗಿ ಕಳೆದರಾಯ್ತು ಎನ್ನುವ ದೂರದ ಆಸೆ ಅವರದಾಗಿತ್ತು. ತಮಗೂ ನೌಕರಿಯಿಂದ ನಿವೃತ್ತಿಯಾಗಿದೆ ಮಗನನ್ನು ಬಿಟ್ಟರೆ ನಮ್ಮವರು ಅಂತ ಸಮೀಪದವರು ಯಾರೂ ಇಲ್ಲ ಹೀಗಿರುವಾಗ ನೆಲೆ ನಿಲ್ಲಲು ಭಾರತವೇನು ಅಮೆರಿಕಾವೇನು ಎನ್ನುವ ಲೆಕ್ಕಚಾರ ಭಟ್ಟರದಾಗಿತ್ತು. ಎಂ.ಬಿ.ಎ ಓದಿ ವರ್ಷ ಕಳೆದರೂ ಮುಕುಂದ ಅಮೆರಿಕಾಗೆ ಹೋಗುವುದಿರಲಿ ಇಲ್ಲೇ ಯಾವ ಕಂಪನಿಯಲ್ಲೂ ಕೆಲಸಕ್ಕೆ ಸೇರದೆ ಇದ್ದಾಗ ಕೃಷ್ಣಭಟ್ಟರಿಗೆ ಆತಂಕ ಶುರುವಾಯಿತು. ಒಂದೆರಡು ಸಲ ರಾಧಮ್ಮನವರಿಂದ ಹೇಳಿಸಿ ನೋಡಿದರೂ ಮಗನಿಂದ ಯಾವ ಪ್ರತಿಕ್ರಿಯೆಯೂ ಬರದೆ ಇದ್ದಾಗ ನೇರವಾಗಿ ವಿಷಯವನ್ನು ತಾವೇ ಪ್ರಸ್ತಾಪಿಸಿದರು. ‘ನನಗೆ ಬೇರೆಯವರ ಕೈಕೆಳಗೆ ಕೆಲಸ ಮಾಡೋ ಆಸಕ್ತಿ ಇಲ್ಲ ಅಪ್ಪ. ನಾನೇ ಒಂದು ಕಂಪನಿ ಶುರು ಮಾಡ್ಬೇಕು ಅಂತಿದ್ದೀನಿ’ ಮುಕುಂದ ತನ್ನ ಆಸೆಯನ್ನು ಅಪ್ಪ ಅಮ್ಮನ ಮುಂದೆ ತೋಡಿಕೊಂಡ. ಕೃಷ್ಣಭಟ್ಟರಿಗೂ ಮಗನ ಮಾತು ಸರಿ ಅನಿಸಿತು. ಆರ್ಥಿಕವಾಗಿ ಸ್ಥಿತಿವಂತರಾಗಿದ್ದ ಕೃಷ್ಣಭಟ್ಟರೇನೂ ಮಗನ ದುಡಿಮೆಯನ್ನು ಅವಲಂಬಿಸಿರಲಿಲ್ಲ. ಮೂವತ್ತು ವರ್ಷಗಳ ಕಾಲ ಹೈಸ್ಕೂಲು ಮಾಸ್ತರರಾಗಿ ದುಡಿದು ಗಳಿಸಿದ್ದೇ ಬೇಕಾದಷ್ಟಿತ್ತು. ವಾಸಿಸಲು ಸ್ವಂತ ಮನೆ ಹತ್ತಿರದ ಊರಿನಲ್ಲಿ ತೋಟ ಆರ್ಥಿಕವಾಗಿ ಯಾವ ತೊಂದರೆಯೂ ಇರಲಿಲ್ಲ. ಮಗ ಸ್ವಂತದ ವ್ಯವಹಾರ ಶುರು ಮಾಡ್ತೀನಿ ಅಂದಾಗ ಖುಷಿಯಿಂದಲೇ ಒಪ್ಪಿಗೆ ನೀಡಿದ್ದರು.

ಕಳೆದ ಹಲವು ದಿನಗಳಿಂದ ಕೃಷ್ಣಭಟ್ಟರಿಗೆ ಸಮಾಧಾನವೇ ಇಲ್ಲ. ಹೊಟ್ಟೆಯಲ್ಲೆಲ್ಲ ವಿಚಿತ್ರ ಸಂಕಟದ ಅನುಭವ. ರಾತ್ರಿ ನಿದ್ದೆಯಲ್ಲಿ ಕನವರಿಸುತ್ತಾರೆ. ಎಚ್ಚರವಾಗಿ ಎದ್ದು ಕುಳಿತರೆ ಮತ್ತೆ ನಿದ್ದೆ ಹತ್ತಿರ ಸುಳಿಯಲಾರದು. ಎಷ್ಟೋ ರಾತ್ರಿಗಳನ್ನು ನಿದ್ದೆಯಿಲ್ಲದೆ ಕಳೆದದ್ದುಂಟು. ಹೆಂಡತಿ ಜೊತೆ ಹಂಚಿಕೊಳ್ಳಬೇಕೆಂದರೂ ಆ ಜೀವಕ್ಕಾದರೂ ಯಾಕೆ ನೋವು ಕೊಡಬೇಕೆನ್ನುವ ಭಾವವೇ ಮುಂದೆ ಬಂದು ಆಡಬೇಕೆಂದ ಮಾತುಗಳೆಲ್ಲ ತಮ್ಮೊಳಗೇ ಉಳಿಯುತ್ತವೆ. ಕಾಲೊನಿಯಲ್ಲಿ ತಮಗೆ ಪರಿಚಯವಿರುವವರ ಹತ್ತಿರ ಹೇಳಿಕೊಳ್ಳಬೇಕೆಂದರೂ ಎಷ್ಟಾದರೂ ಇದು ತಮ್ಮ ಸಂಸಾರದ ವಿಷಯ ತಾವೇ ಬೇರೆಯವರು ಆಡಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿಕೊಳ್ಳಲೂ ಆಗದೆ ನೋವನ್ನು ಒಳಗೊಳಗೆ ಅನುಭವಿಸುತ್ತ ಹಣ್ಣಾಗುತ್ತಿರುವರು. ಅಷ್ಟಕ್ಕೂ ಇದೆಲ್ಲ ಶುರುವಾದದ್ದು ಆ ದಿನ ಮುಕುಂದ ಮನೆಗೆ ಬರುವಾಗ ಕೈಯಲ್ಲಿ ಹಿಡಿದು ತಂದಿದ್ದ ಆ ಲಕೋಟೆಯಿಂದಲೇ. ಅವತ್ತು ತುಂಬ ಖುಷಿಯಾಗಿದ್ದ. ಮನೆಗೆ ಬಂದವನೆ ನಮ್ಮಿಬ್ಬರನ್ನೂ ಹಾಲ್‍ಗೆ ಕರೆದು ನಿಲ್ಲಿಸಿ ತಾನು ತಂದಿದ್ದ ಲಕೋಟೆಯನ್ನು ಕೈಗೆ ಕೊಟ್ಟು ಕಾಲಿಗೆರಗಿದ್ದ. ನಾಳೆಯಿಂದ ಕೆಲಸ ಶುರು ಮಾಡುತ್ತಿರುವುದಾಗಿಯೂ ಕಂಪನಿಯನ್ನು ರಜಿಸ್ಟ್ರೇಶನ್ ಮಾಡಿಸಿದ ಪತ್ರವಿದು ಎಂದು ಹೇಳಿದ. ಲಕೋಟೆಯ ಒಳಗಿದ್ದ ಪತ್ರದಲ್ಲಿನ ‘ರಾಧಾಕೃಷ್ಣ ಸಂಸ್ಕಾರ ಸರ್ವಿಸ್ ಸೆಂಟರ್’ ಎನ್ನುವ ಹೆಸರನ್ನು ಓದಿದಾಗ ಏನೊಂದೂ ಅರ್ಥವಾಗಲಿಲ್ಲ. ಮುಕುಂದನೆ ವಿವರಿಸಿ ಹೇಳಿದಾಗ ಅರ್ಥವಾಯಿತು. ಆ ಕ್ಷಣ ಪತ್ರ ಕೈಯಿಂದ ಜಾರಿ ಕೆಳಗೆ ಬಿದ್ದು ಕೃಷ್ಣಭಟ್ಟರ ಮುಖ ಕಪ್ಪಿಟ್ಟಿತು. ಇಂಥ ಉದ್ಯೋಗಕ್ಕಿಂತ ಕೆಲಸವಿಲ್ಲದೆ ಸುಮ್ಮನೆ ಮನೆಯಲ್ಲಿರುವುದು ಒಳಿತು ಎಂದು ಖಾರವಾಗಿಯೇ ಮಗನಿಗೆ ಹೇಳಿದರು. ‘ಅಪ್ಪ ಈ ಈವೆಂಟ್ ಮ್ಯಾನೇಜಮೆಂಟ್‍ಗಳಿಗೆ ಇಂಥದ್ದೆ ಕೆಲಸ ಅಂತ ಇಲ್ಲ. ಇದರಿಂದ ನಾನೊಬ್ಬನೆ ಅಲ್ಲ ಹತ್ತಾರು ಕುಟುಂಬಗಳಿಗೆ ಆಶ್ರಯ ಸಿಗುತ್ತೆ’ ಮಗ ತನ್ನ ಕಂಪನಿಯ ಕೆಲಸವನ್ನು ಸಮರ್ಥಿಸಿಕೊಂಡ. ‘ಎಷ್ಟೆಂದರೂ ಓದಿದವನು ಏನಾದರೂ ಮಾಡ್ಕೋ’ ಕೃಷ್ಣಭಟ್ಟರ ಮಾತಿನಲ್ಲಿನ ಅಸಹಾಯಕತೆಯನ್ನು ಗುರುತಿಸಿದ ರಾಧಮ್ಮನವರ ಕರುಳು ಚುರುಕ್ಕೆಂದಿತು.

ನಾಲ್ಕಾರು ತಿಂಗಳುಗಳಲ್ಲೆ ಮುಕುಂದನ ಕಂಪನಿ ಸಾಕಷ್ಟು ಪ್ರಗತಿಯನ್ನು ಕಂಡಿತು. ಈಗೀಗ ಅವನಿಗೂ ಬಿಡುವಿಲ್ಲದ ಕೆಲಸದಿಂದ ಮನೆಯಲ್ಲಿ ಸಮಯ ಕಳೆಯುವುದೇ ಅಪರೂಪವಾಗುತ್ತಿದೆ. ನಗರದಲ್ಲಿ ಮಾತ್ರವಲ್ಲದೆ ದೂರದ ಹೊರ ಊರುಗಳಲ್ಲೂ ಸಿಗುತ್ತಿರುವ ಕೆಲಸಗಳಿಂದಾಗಿ ಮುಕುಂದನ ಬ್ಯಾಂಕ್ ಬ್ಯಾಲೆನ್ಸ್ ಬೆಳೆಯುತ್ತಿದೆ. ಮನೆಯ ಕಾಂಪೌಂಡಿನೊಳಗೆ ಬಲಭಾಗದಲ್ಲಿದ್ದ ಖಾಲಿ ಜಾಗದಲ್ಲಿ ತನ್ನದೇ ಸಣ್ಣದೊಂದು ಆಫೀಸ್ ಮಾಡಿಕೊಂಡು ನಾಲ್ಕಾರು ಜನರನ್ನು ಕೆಲಸಕ್ಕೆ ನೇಮಿಸಿಕೊಂಡಿರುವನು. ಕಳೆದ ತಿಂಗಳಷ್ಟೆ ಶವಸಾಗಿಸಲು ಹೊಸ ವಾಹನವನ್ನು ಖರೀದಿಸಿ ಅದಕ್ಕೆ ಮುಕ್ತಿರಥ ಎಂದು ಹೆಸರು ಕೊಟ್ಟಿರುವನು. ಕೆಲವೊಮ್ಮೆ ಶವಸಂಸ್ಕಾರಕ್ಕೆ ನಾಲ್ಕಾರು ದಿನ ವಿಳಂಬವಾಗುವಂತಿದ್ದರೆ ಶವಗಳು ಕೊಳೆಯದಂತೆ ಸುರಕ್ಷಿತವಾಗಿಡಲು ಜಪಾನ್ ದೇಶದಿಂದ ಆಮದು ಮಾಡಿಕೊಂಡ ಮಾರ್ಚ್ಯುರಿ ಕ್ಯಾಬೆನೇಟ್ ಮನೆಗೆ ಬಂದು ಅದು ಈಗ ಕಾಲೊನಿಯ ಜನರ ಆಕರ್ಷಣೆಯ ಕೇಂದ್ರವಾಗಿದೆ. ಈ ಮಾರ್ಚ್ಯುರಿ ಕ್ಯಾಬಿನೇಟ್‍ನಲ್ಲಿ ಒಮ್ಮಲೇ ನಾಲ್ಕು ಶವಗಳನ್ನಿಡುವ ಅನುಕೂಲವಿದೆ. ಮುಕುಂದನ ಕಂಪನಿ ಅವರವರ ಅಗತ್ಯಕ್ಕೆ ತಕ್ಕಂತೆ ಸೇವೆಯನ್ನು ಒದಗಿಸುತ್ತಿತ್ತು. ಶವಸಂಸ್ಕಾರಕ್ಕೆ ಬೇಕಾದ ಸಾಮಗ್ರಿಗಳಿಂದ ಹಿಡಿದು ಕುಣಿ ತೋಡುವುದು ಇಲ್ಲವೇ ಚಿತೆಗೆ ಕಟ್ಟಿಗೆಗಳನ್ನು ಪೂರೈಸುವುದು, ಶವ ಸಾಗಿಸುವುದು, ಅಪರಕರ್ಮಗಳನ್ನು ಮಾಡಿಸುವುದು, ಸಂಸ್ಕಾರಕ್ಕೆ ಬರುವ ದೂರದೂರಿನ ನೆಂಟರಿಷ್ಟರಿಗೆ ಉಳಿದುಕೊಳ್ಳಲು ಲಾಡ್ಜಗಳ ವ್ಯವಸ್ಥೆ, ಸಾವು ಸಂಭವಿಸಿದ ಮನೆಯವರಿಗೆ ಶವಸಂಸ್ಕಾರದ ನಂತರ ಊಟದ ವಿಲೇವಾರಿ, ಶ್ರಾದ್ಧದ ಆಚರಣೆ ಹೀಗೆ ಬಿಡಿಯಾಗಿ ಇಲ್ಲವೇ ಪ್ಯಾಕೇಜ್ ರೂಪದಲ್ಲಿ ಶುಲ್ಕವನ್ನು ಪಾವತಿಸಿ ಸಾರ್ವಜನಿಕರು ಸೇವೆಯನ್ನು ಪಡೆಯಲು ಅನುಕೂಲವಿತ್ತು. ಮುಕುಂದ ತನ್ನ ಕಂಪನಿಯ ಪ್ರತ್ಯೇಕ ವೆಬ್‍ಸೈಟ್ ರೂಪಿಸಿದ್ದರಿಂದ ಜನರು ಆನ್‍ಲೈನ್ ಮೂಲಕ ಕೂಡ ಸಂಪರ್ಕಿಸಬಹುದಿತ್ತು. ವಿದೇಶಗಳಲ್ಲಿ ವಾಸಿಸುವ ಅಥವಾ ಬಿಡುವಿಲ್ಲದ ಕೆಲಸದ ಮಧ್ಯೆ ತಮ್ಮ ತಂದೆ ತಾಯಿಯ ಶ್ರಾದ್ಧ, ಮಾಸಿಕಗಳನ್ನು ಆಚರಿಸಲು ಸಾಧ್ಯವಾಗದೆ ಇದ್ದಾಗ ಅಂಥವರು ಮುಕುಂದನ ಕಂಪನಿಗೆ ಶುಲ್ಕ ಪಾವತಿಸಿ ಪ್ರತಿವರ್ಷ ಆಚರಿಸುವಂತೆ ಕೇಳಿಕೊಳ್ಳುತ್ತಿದ್ದರು. ಊರಿನ ಅನೇಕ ಪುರೋಹಿತರು ‘ರಾಧಾಕೃಷ್ಣ ಸಂಸ್ಕಾರ ಸರ್ವಿಸ್ ಸೆಂಟರ್’ನ ಖಾಯಂ ಪುರೋಹಿತರಾಗಿ ಬದುಕನ್ನು ಕಟ್ಟಿಕೊಂಡಿರುವರು.

ಈಗೀಗ ಊರ ತುಂಬ ಮುಕುಂದನದೆ ಗುಣಗಾನ. ಯಾವುದೇ ಶುಭ, ಅಶುಭ ಕಾರ್ಯಗಳಿರಲಿ ನಾಲ್ಕಾರು ಜನ ಸೇರಿದ ಕಡೆ ಮುಕುಂದನ ಮಾತು ಬರದೇ ಹೋಗುವುದಿಲ್ಲ. ಮೊನ್ನೆಯಷ್ಟೇ ಪರಿಚಿತರ ಮನೆಯ ಮದುವೆಗೆಂದು ಪತ್ನಿಯೊಂದಿಗೆ ಹೋಗಿದ್ದ ಕೃಷ್ಣಭಟ್ಟರ ಎದುರು ಶ್ರೀಪತಿರಾಯರು ಮುಕುಂದನನ್ನು ಬಾಯಿತುಂಬ ಹೊಗಳಿದ್ದೆ ಹೊಗಳಿದ್ದು. ಇಂಡಸ್ಟ್ರಿಯಲಿಸ್ಟ್ ಲಕ್ಷ್ಮಣದಾಸ ತೀರಿಕೊಂಡಾಗ ಅವನ ಗಂಡುಮಕ್ಕಳಿಬ್ಬರೂ ಅಮೆರಿಕಾದಲ್ಲಿದ್ದರು. ಸುದ್ದಿ ತಿಳಿದು ಅವರು ಭಾರತಕ್ಕೆ ಬರಲು ನಾಲ್ಕಾರು ದಿನಗಳು ಬೇಕಾದವು. ಆಗ ಮುಕುಂದನೆ ತನ್ನ ಕಂಪನಿಯ ಮಾರ್ಚ್ಯುರಿ ಕ್ಯಾಬಿನೇಟ್‍ನಲ್ಲಿ ಲಕ್ಷ್ಮಣದಾಸರ ಶವವಿಟ್ಟು ಕೊಳೆಯದಂತೆ ನೋಡಿಕೊಂಡ. ನೆಂಟರಿಷ್ಟರ ಊಟ, ವಸತಿಗೆ ವ್ಯವಸ್ಥೆ ಮಾಡಿದ. ಮಕ್ಕಳು ಬಂದದ್ದೆ ಶವಸಂಸ್ಕಾರದಿಂದ ಶ್ರಾದ್ಧದವರೆಗಿನ ಎಲ್ಲ ಕೆಲಸಗಳನ್ನು ತುಂಬ ಅಚ್ಚುಕಟ್ಟಾಗಿ ನಿರ್ವಹಿಸಿ ಎಲ್ಲರ ಪ್ರಶಂಸೆಗೆ ಪಾತ್ರನಾದ. ಮುಕುಂದನ ಅಚ್ಚುಕಟ್ಟುತನವನ್ನು ಮೆಚ್ಚಿ ಲಕ್ಷ್ಮಣದಾಸನ ಮಕ್ಕಳು ಹತ್ತು ಲಕ್ಷ ರೂಪಾಯಿಗಳನ್ನು ಕಂಪನಿಗೆ ಪಾವತಿಸಿದ್ದರು. ‘ಅಂತೂ ಮಗ ಛಲೋ ನೆಲೆಕಂಡ. ಇನ್ನು ನಿಮಗ ಚಿಂತಿ ಇಲ್ಲ ಬಿಡಿ’ ಎಂದು ಮಾತು ಮುಗಿಸಿದ್ದರು ಶ್ರೀಪತಿರಾಯರು.

ರಾತ್ರಿ ಊಟ ಮಾಡಿ ಮಲಗಿದ ಕೃಷ್ಣಭಟ್ಟರಿಗೆ ನಿದ್ದೆ ಹತ್ತಿರ ಸುಳಿಯುತ್ತಿಲ್ಲ. ತಾವು ಯಾವುದು ಬೇಡವೆಂದು ದೂರಸರಿದು ಬಂದಿದ್ದರೊ ಅದು ಬಂದು ಕೊರಳಿಗೆ ಸುತ್ತಿಕೊಂಡಂತಾಗಿತ್ತು ಅವರ ಸ್ಥಿತಿ. ಹೀಗಾಗಬಹುದೆಂದು ಅವರು ಕನಸಿನಲ್ಲೂ ಯೋಚಿಸಿರಲಿಲ್ಲ. ತಾವೊಂದು ಬಗೆದರೆ ದೈವವೊಂದು ಬಗೆದಿತ್ತು. ಇಷ್ಟೆಲ್ಲ ತಾವು ಕಷ್ಟಪಟ್ಟಿದ್ದು ನೀರಿನಲ್ಲಿ ಹೋಮ ಮಾಡಿದಂತಾಯಿತಲ್ಲ ಎಂದು ಅವರಿಗೆ ಅವ್ಯಕ್ತ ಸಂಕಟವಾಯಿತು. ಪಕ್ಕದಲ್ಲೇ ಮಲಗಿದ್ದ ರಾಧಮ್ಮನವರನ್ನು ಗಾಢ ನಿದ್ದೆ ಆವರಿಸಿತ್ತು. ಹೆಂಡತಿಯತ್ತ ನೋಡಿದ ಕೃಷ್ಣಭಟ್ಟರಿಗೆ ಒಂದು ಕ್ಷಣ ಅಸೂಯೆಯ ಎಳೆಯೊಂದು ಮನಸ್ಸಿನಲ್ಲಿ ಹಾಯ್ದುಹೋದ ಅನುಭವವಾಯಿತು. ಮರುಕ್ಷಣ ನನ್ನ ಹಣೆಬರಹಕ್ಕೆ ಪಾಪ ಅವಳಾದರೂ ಏನು ಮಾಡಬೇಕು ಎನ್ನುವ ಭಾವವೊಂದು ಉದಿಸಿ ಪತ್ನಿಯ ಹಣೆಯಮೇಲೆ ಮೃದುವಾಗಿ ಕೈಯಾಡಿಸಿ ಹೊದಿಕೆಯನ್ನು ಸರಿಯಾಗಿ ಹೊದಿಸಿ ಎದ್ದು ಕಿಟಕಿಯ ಹತ್ತಿರ ಬಂದು ನಿಂತರು. ಹೊರಗೆ ಆಕಾಶ ಶುಭ್ರವಾಗಿ ಹೊಳೆಯುತ್ತಿತ್ತು. ಆಕಾಶದಲ್ಲಿನ ಅಸಂಖ್ಯಾತ ನಕ್ಷತ್ರಗಳನ್ನು ನೋಡುತ್ತ ಮೈಮರೆತು ನಿಂತವರ ಕಣ್ಣೆದುರು ಅವರ ಗತಬದುಕಿನ ಚಿತ್ರಗಳು ಒಂದೊಂದಾಗಿ ಮೂಡತೊಡಗಿದವು.

● ● ●

ಶೇಷಭಟ್ಟರು ಹೆಂಡತಿಯೊಂದಿಗೆ ಆ ಊರಿಗೆ ಬಂದು ನೆಲೆನಿಂತಾಗ ಅವರಿಗೆ ಬದುಕಿನ ಪ್ರಶ್ನೆಯೇ ದೊಡ್ಡದಾಗಿತ್ತು. ಕೃಷ್ಣಾ ನದಿಯ ದಂಡೆಯಮೇಲಿರುವ ಆ ಸಣ್ಣ ಊರಿನ ಹೆಸರು ಕೃಷ್ಣಾ ಎಂದು. ಈ ಊರಿಗೆ ಬರುವುದಕ್ಕಿಂತ ಮೊದಲು ಶೇಷಭಟ್ಟರು ನಗರದ ಮಠವೊಂದರಲ್ಲಿ ಪುರೋಹಿತರಾಗಿ ಬರುವ ಅಲ್ಪಸ್ವಲ್ಪ ಆದಾಯದಲ್ಲೇ ಕುಟುಂಬದ ಖರ್ಚನ್ನು ನಿಭಾಯಿಸುತ್ತಿದ್ದರು. ಶೇಷಭಟ್ಟರು ಸ್ವಲ್ಪ ತಡವರಿಸಿ ಮಾತಾಡುತ್ತಿದ್ದರಿಂದ ಉಳಿದ ಪುರೋಹಿತರು ಅವರನ್ನು ತಮ್ಮೊಂದಿಗೆ ಹೆಚ್ಚು ಸೇರಿಸಿಕೊಳ್ಳುತ್ತಿರಲಿಲ್ಲ. ಕೆಲವೊಮ್ಮೆ ದೊಡ್ಡ ಪೂಜೆಯ ಸಂದರ್ಭಗಳಲ್ಲಿ ಪುರೋಹಿತರ ಕೊರತೆಯಿದ್ದಾಗ ಶೇಷಭಟ್ಟರಿಗೂ ಆಹ್ವಾನವಿರುತ್ತಿತ್ತು. ಹಾಗಾಗಿ ಉಪ್ಪಿಗಾದರೆ ಎಣ್ಣೆಗಿಲ್ಲ ಎನ್ನುವಂತೆ ಶೇಷಭಟ್ಟರ ಬದುಕಿನ ಬಂಡಿ ಉರುಳಿಕೊಂಡು ಹೋಗುತ್ತಿತ್ತು. ಪ್ರತಿವರ್ಷದಂತೆ ಆ ವರ್ಷ ಕೂಡ ಮಠದಲ್ಲಿ ಚತುರ್ಮಾಸವನ್ನು ತುಂಬ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಪ್ರತಿದಿನ ಅಸಂಖ್ಯಾತ ಭಕ್ತರು ಮಠಕ್ಕೆ ಭೇಟಿ ನೀಡುತ್ತಿದ್ದರಿಂದ ಪುರೋಹಿತರಿಗೆ ದಿನವೆಲ್ಲ ಬಿಡುವಿಲ್ಲದ ಕೆಲಸ. ಅಂಥ ಸಂದರ್ಭಗಳಲ್ಲೂ ಮಠದ ಪುರೋಹಿತವರ್ಗ ಶೇಷಭಟ್ಟರನ್ನು ತುಂಬ ಕೀಳಾಗಿಯೇ ನಡೆಸಿಕೊಳ್ಳುತ್ತಿತ್ತು. ಕೆಲವೊಮ್ಮೆ ಶೇಷಭಟ್ಟರಿಗೆ ಈ ಪೌರೋಹಿತ್ಯವನ್ನೇ ಬಿಟ್ಟು ಬೇರೆ ಏನಾದರೂ ಕೆಲಸ ಮಾಡಬೇಕೆನ್ನಿಸಿದರೂ ಯಾವ ದಾರಿಯೂ ಹೊಳೆಯದೆ ಮಠದಲ್ಲಿನ ಅಪಮಾನವನ್ನು ಅನಿವಾರ್ಯವೆಂಬಂತೆ ಸಹಿಸಿಕೊಳ್ಳುತ್ತಿದ್ದರು. ಈ ಚತುರ್ಮಾಸದ ದಿನಗಳಲ್ಲಿ ಹತ್ತಿರದ ಕೃಷ್ಣಾ ಎನ್ನುವ ಹಳ್ಳಿಯಲ್ಲಿ ಸಂಭವಿಸಿದ ಸಾವಿನಿಂದ ತಮ್ಮ ಬದುಕು ಹೊಸ ತಿರುವು ಪಡೆಯುವುದೆಂದು ಸ್ವತ: ಶೇಷಭಟ್ಟರೆ ಭಾವಿಸಿರಲಿಲ್ಲ. ನಗರದಿಂದ ನಾಲ್ಕಾರು ಮೈಲಿಗಳ ದೂರದಲ್ಲಿರುವ ಆ ಸಣ್ಣ ಹಳ್ಳಿಯಲ್ಲಿ ಪಾರಿಜಾತ ಎನ್ನುವ ಎಂಬತ್ತು ವಯಸ್ಸಿನ ಪಾತರದ ಮುದುಕಿ ರಾತ್ರಿ ಮಲಗಿದವಳು ಹಾಸಿಗೆಯಲ್ಲೇ ಸಾವನ್ನಪ್ಪಿದ್ದು ಊರ ಜನರಿಗೆ ಗೊತ್ತಾಗಿದ್ದು ಬೆಳಗ್ಗೆ ಊರ ಶ್ಯಾನುಭೋಗರ ಮನೆಯ ಆಳು ತೋಟದ ಮನೆಗೆ ಬಂದು ನೋಡಿದಾಗಲೆ. ಒಂದುಕಾಲದಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಪಾರಿಜಾತ ಊರ ಶಾನುಭೋಗರ ಮನ ಮತ್ತು ಮನೆಯನ್ನು ಪ್ರವೇಶಿಸಲು ತಡವಾಗಲಿಲ್ಲ. ಶಾನುಭೋಗರು ಹತ್ತೆಕರೆ ತೋಟ ಮತ್ತು ತೋಟದ ಮನೆಯನ್ನು ಪಾರಿಜಾತಳ ಹೆಸರಿಗೆ ಬರೆದು ಅವಳನ್ನು ಮನೆ ತುಂಬಿಸಿಕೊಂಡರು. ಶಾನುಭೋಗರ ಮೊದಲ ಹೆಂಡತಿ ಕೆಲವು ದಿನ ತಕರಾರು ಮಾಡಿದರೂ ನಂತರ ಪಾರಿಜಾತ ಮತ್ತು ಆಕೆಯ ನಡುವೆ ಅಕ್ಕ ತಂಗಿಯರ ಅನ್ಯೋನ್ಯತೆ ಬೆಳೆಯಿತು. ಪಾರಿಜಾತಳ ಶವಸಂಸ್ಕಾರ ಬ್ರಾಹ್ಮಣ ಪದ್ಧತಿಯಂತೆ ಆಗಬೇಕೆನ್ನುವುದು ಶ್ಯಾನುಭೋಗರ ಇಚ್ಛೆಯಾಗಿತ್ತು. ಚತುರ್ಮಾಸದ ಧಾರ್ಮಿಕ ಕಾರ್ಯಗಳು ನಡೆಯುತ್ತಿದ್ದುದ್ದರಿಂದ ಪಾರಿಜಾತಳ ಅಪರಕರ್ಮಗಳಿಗೆ ಪುರೋಹಿತರನ್ನು ಕರೆತರುವುದೇ ದೊಡ್ಡ ಸಮಸ್ಯೆಯಾಯಿತು. ಯಾವ ಕೆಲಸ ಕಾರ್ಯಗಳಿಲ್ಲದೆ ಮಠದ ಮೂಲೆಯಲ್ಲಿ ಜೋಲು ಮೊರೆಹಾಕಿ ಕುಳಿತಿದ್ದ ಶೇಷಭಟ್ಟರೆ ಶಾನುಭೋಗರು ಕಳುಹಿಸಿದ್ದ ಆಳುಗಳಿಗೆ ಮಹಾಜ್ಞಾನಿಯಂತೆ ಕಾಣಿಸಿದರು. ಶೇಷಭಟ್ಟರೂ ಬೇರೆ ದಾರಿಕಾಣದೆ ಅವರೊಂದಿಗೆ ಪಾರಿಜಾತಳ ತೋಟದ ಮನೆಯತ್ತ ಹೆಜ್ಜೆ ಹಾಕಿದರು. ಶವಸಂಸ್ಕಾರದಿಂದ ಉದಕಶಾಂತಿಯವರೆಗೆ ಪಾರಿಜಾತಳ ಕ್ರಿಯಾವಿಧಿಗಳೆಲ್ಲ ಸಾಂಗೋಪಾಂಗವಾಗಿ ನೆರವೇರಿದವು. ಸಂತುಷ್ಟರಾದ ಶಾನುಭೋಗರು ಶೇಷಭಟ್ಟರಿಗೆ ತೃಪ್ತಿಯಾಗುವಷ್ಟು ದಾನ ದಕ್ಷಿಣೆ ಕೊಟ್ಟು ಗೌರವಿಸಿದರು. ಮಠದ ಪುರೋಹಿತವರ್ಗ ಈ ಸುದ್ದಿ ತಿಳಿದು ಕೆಂಡಾಮಂಡಲಗೊಂಡಿತು. ಶೇಷಭಟ್ಟರನ್ನು ಮಠಕ್ಕೆ ಕಾಲಿಡದಂತೆ ಬಹಿಷ್ಕರಿಸಿತು.

ಶೇಷಭಟ್ಟರು ಆ ಕೂಡಲೇ ತಮ್ಮ ಸಾಮಾನು ಸರಂಜಾಮುಗಳನ್ನು ಕಟ್ಟಿಕೊಂಡು ಹೆಂಡತಿಯೊಂದಿಗೆ ಕೃಷ್ಣಾಗೆ ಬಂದು ನೆಲೆಸಿದರು. ಶ್ಯಾನುಭೋಗರು ತಮ್ಮ ಹಳೆಯ ಮನೆಯನ್ನು ಶೇಷಭಟ್ಟರ ವಾಸಕ್ಕೆಂದು ಬಿಟ್ಟುಕೊಟ್ಟರು. ಕ್ರಮೇಣ ಶೇಷಭಟ್ಟರು ಅಪರಕರ್ಮಗಳಿಗೆ ಪ್ರಸಿದ್ಧರಾದರು. ಹತ್ತಿರದಲ್ಲೇ ಇರುವ ಕೃಷ್ಣೆಯ ದಡ ಅಪರಕರ್ಮಗಳಿಗೆ ಪ್ರಶಸ್ತವಾಗಿತ್ತು. ಶೇಷಭಟ್ಟರೊಂದಿಗೆ ಊರು ಕೃಷ್ಣಾ ಕೂಡ ಪ್ರಸಿದ್ಧಿಗೆ ಬಂತು. ವರ್ಷದ ಎಲ್ಲ ದಿನಗಳಲ್ಲೂ ಕಾಗೆಗಳ ಕಲರವ, ಮಂತ್ರಗಳ ಘೋಷ, ಹೊಗೆ ತುಂಬಿದ ಕುಂಡಗಳು, ಕ್ಷೌರಗೊಂಡ ನುಣ್ಣನೆಯ ತಲೆಗಳು ಆ ಊರಿನ ಸಾಮಾನ್ಯ ದೃಶ್ಯಗಳಾದವು. ಊರಿಗೆ ಬರುವವರ ಸಂಖ್ಯೆ ಹೆಚ್ಚಿದಂತೆ ಸಣ್ಣದೊಂದು ರೈಲು ನಿಲ್ದಾಣ ತಲೆ ಎತ್ತಿತು. ಸಣ್ಣಪುಟ್ಟ ವ್ಯಾಪಾರದಂಗಡಿಗಳು ಆರಂಭಗೊಂಡವು. ಶೇಷಭಟ್ಟರೆ ಒಂದೆರಡು ಲಾಡ್ಜಗಳನ್ನು ಕಟ್ಟಿಸಿ ಪರವೂರಿನಿಂದ ಬರುವವರು ರಾತ್ರಿ ತಂಗಲು ವ್ಯವಸ್ಥೆ ಮಾಡಿದರು. ಒಬ್ಬರೆ ಕೆಲಸ ನಿರ್ವಹಿಸುವುದು ಅಸಾಧ್ಯವಾದಾಗ ತಮ್ಮ ಹೆಂಡತಿಯ ತವರಿನಿಂದ ಕೆಲವರನ್ನು ಕರೆತಂದು ಪೌರೋಹಿತ್ಯಕ್ಕೆ ಹಚ್ಚಿದರು. ನೋಡು ನೋಡುತ್ತಿರುವಂತೆ ಶೇಷಭಟ್ಟರ ಹೆಸರಿನೊಂದಿಗೆ ಅವರ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಿ ನಗ, ನಾಣ್ಯ, ಭೂಮಿಯನ್ನು ಕಾಣುವಂತಾದರು. ಬದುಕು ನೀಡಿದ ಊರ ಮೇಲಿನ ಕೃತಜ್ಞತೆಯಿಂದ ತಮ್ಮ ಏಕಮಾತ್ರ ಸಂತಾನಕ್ಕೆ ಕೃಷ್ಣಭಟ್ಟ ಎಂದು ಹೆಸರಿಟ್ಟರು.

ಶೇಷಭಟ್ಟರಿಗೆ ತಮ್ಮ ಪುತ್ರ ಕೃಷ್ಣಭಟ್ಟ ತಮ್ಮಂತೆ ಪೌರೋಹಿತ್ಯದಲ್ಲೆ ಮುಂದುವರೆಯಲೆಂಬ ಆಸೆ ಪ್ರಬಲವಾಗಿತ್ತು. ಆದರೆ ಕೃಷ್ಣಭಟ್ಟನಿಗೆ ವೈದಿಕಶಾಲೆಗಿಂತ ಸರ್ಕಾರಿ ಶಾಲೆಯಲ್ಲಿನ ಪಾಠವೇ ತಲೆಗೆ ಬೇಗ ಹತ್ತಿತು. ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಪಟ್ಟಣ ಸೇರಿದ ಮೇಲೆ ಕೃಷ್ಣಭಟ್ಟನಿಗೆ ತಂದೆಯಪೌರೋಹಿತ್ಯವೇ ಅದೊಂದು ಡಾಂಭಿಕತನವೆಂದೂ ಮುಗ್ಧರಿಂದ ಹಣ ದೋಚುವ ತಂತ್ರವೆಂದು ಅನಿಸಲು ತೊಡಗಿತು. ಊರಿಗೆ ಹೋದಾಗಲೆಲ್ಲ ಅಪ್ಪನೆದುರು ತನ್ನ ಸಿಟ್ಟನ್ನು ತೋಡಿಕೊಳ್ಳುತ್ತಿದ್ದ. ಇಡೀ ಊರು ಒಂದು ಸ್ಮಶಾನ ಮೌನದಿಂದ ಭಣಗುಟ್ಟುತ್ತಿರುವಂತೆಯೂ ಇದಕ್ಕೆಲ್ಲ ತನ್ನ ತಂದೆಯೇ ಕಾರಣನೆಂದೂ ಅವನಿಗೆ ಭಾಸವಾಗತೊಡಗಿತು. ಆ ವಾತಾವರಣದಿಂದ ಹೊರಬಂದು ಹೊಸ ಬದುಕನ್ನು ಕಟ್ಟಿಕೊಳ್ಳಲು ಅವನ ಮನಸ್ಸು ತವಕಿಸುತ್ತಿತ್ತು. ಶೇಷಭಟ್ಟರು ಹಲವು ಸಲ ಮಗನನ್ನು ತಮ್ಮ ದಾರಿಗೆ ತರಲು ಪ್ರಯತ್ನಿಸಿ ಕೊನೆಗೆ ಅದು ಸಾಧ್ಯವಿಲ್ಲವೆಂದರಿತು ಸುಮ್ಮನಾದರು. ಕೃಷ್ಣಭಟ್ಟ ವಿದ್ಯಾಭ್ಯಾಸ ಮುಗಿದದ್ದೆ ಹೈಸ್ಕೂಲು ಶಿಕ್ಷಕನಾಗಿ ನೇಮಕಗೊಂಡು ದೂರದ ಪಟ್ಟಣವನ್ನು ಸೇರಿ ಹೊಸ ಬದುಕನ್ನು ಕಟ್ಟಿಕೊಂಡ. ಶೇಷಭಟ್ಟರು ತಮ್ಮ ಕೊನೆಯ ದಿನದವರೆಗೂ ಆ ಹಳ್ಳಿಯಲ್ಲೇ ಬದುಕಿ ಹೆಂಡತಿ ತೀರಿಕೊಂಡ ನಾಲ್ಕು ತಿಂಗಳ ನಂತರ ತಾವು ಕೂಡ ಇಹಲೋಕ ಯಾತ್ರೆ ಮುಗಿಸಿದರು. 

ಕಾಂಪೌಂಡ ಗೇಟಿನ ಕಿರ್ರ್ ಎನ್ನುವ ಸದ್ದಿಗೆ ಕೃಷ್ಣಭಟ್ಟರು ವಾಸ್ತವಕ್ಕೆ ಮರಳಿದರು. ದೀರ್ಘವಾದ ಉಸಿರು ಅವರಿಂದ ಹೊರಬಂತು. ಕಾರು ಪಾರ್ಕಿಂಗ್ ಮಾಡಿ ಮಗ ಆಫೀಸ್ ರೂಮಿನತ್ತ ಹೋಗುತ್ತಿರುವುದು ಕಿಟಕಿಯಿಂದ ಕಾಣುತ್ತಿತ್ತು. ಗಡಿಯಾರದ ಮುಳ್ಳು ನಾಲ್ಕು ಗಂಟೆ ತೋರಿಸುತ್ತಿತ್ತು. ಮಗ ನಡೆದು ಹೋದ ದಿಕ್ಕಿನಿಂದ ಬೀಸಿ ಬಂದ ಗಾಳಿಯೊಂದಿಗೆ ಶವದ ವಾಸನೆ ಮೂಗಿನೊಳಗೆ ಸೇರಿದಂತೆನಿಸಿ ಕೃಷ್ಣಭಟ್ಟರಿಗೆ ಉಸಿರು ಕಟ್ಟಿದಂತಾಗಿ ಅಲ್ಲಿ ನಿಲ್ಲಲಾಗದೆ ಹಾಲ್‍ಗೆ ಬಂದು ಸೋಫಾದ ಮೇಲೆ ಕುಸಿದು ಕುಳಿತರು. ತಾವು ಕುಳಿತ ಸೋಫಾದ ಎದುರು  ಗೋಡೆಯಮೇಲೆ ಶೇಷಭಟ್ಟರ ಆಳೆತ್ತರದ ಫೆÇೀಟೋ ರಾರಾಜಿಸುತ್ತಿತ್ತು. ಫೋಟೋದೊಳಗಿದ್ದ ಅಪ್ಪ ತಮ್ಮನ್ನು ನೋಡಿ ನಕ್ಕಂತೆ ಭಾಸವಾಗಿ ಕೃಷ್ಣಭಟ್ಟರ ಮೈ ಆ ಕೊರೆಯುವ ಚಳಿಯಲ್ಲೂ ಬೆವರಲಾರಂಭಿಸಿತು.

-ರಾಜಕುಮಾರ ಕುಲಕರ್ಣಿ 



Saturday, November 21, 2020

ದೊಕಾಚಿ ಮೇಷ್ಟ್ರ ಶಾಂತಿ-ಕ್ರಾಂತಿ

                 



(ಅಕ್ಟೊಬರ್ ೨೦೨೦ ರ ಮಯೂರ ಪತ್ರಿಕೆಯಲ್ಲಿ ಪ್ರಕಟವಾಗಿದೆ)

            ‘ಕ್ರಾಂತಿ ಆಗ್ಬೇಕರಯ್ಯ ಕ್ರಾಂತಿ. ಈ ದೇಶದಲ್ಲಿ ಯಾವುದೂ ಸುಲಭವಾಗಿ ಬದಲಾಗೊಲ್ಲ. ಒಂದು ವೈಚಾರಿಕ ಕ್ರಾಂತಿಯಾಗಿ ಜನರಲ್ಲಿ ತಿಳಿವಳಿಕೆ ಮೂಡ್ಬೇಕು. ಶಾಲೆ ಪಕ್ಕದಲ್ಲಿ ಬೆಳೆದು ನಿಂತ ಗಿಡಕ್ಕೆ ಈ ಜನ ಎಂಥ ದುರ್ಗತಿ ತಂದಿದ್ದಾರೆ ನೋಡಿದ್ರೇನ್ರೋ. ಕಟ್ಟೆ ಕಟ್ಟಿ, ಅದಕ್ಕೆ ಬಟ್ಟೆ ಸುತ್ತಿ, ಸುತ್ತೆಲ್ಲ ಎಣ್ಣೆ ದೀಪ ಹಚ್ಚಿ, ಭಯಪಡೊವಷ್ಟು ಕುಂಕುಮ ಅರಿಷಿಣ ಚೆಲ್ಲಿ ಇನ್ನೂ ಯಾವ ಸ್ಥಿತಿಗೆ ತಂದಿಡ್ತಾರೊ. ಮರ ಬೆಳೆದ ಆ ಜಾಗ ಪವಿತ್ರ, ಪುಣ್ಯ ಅಂತ ಹೇಳಿ ಜನರನ್ನ ಭಯ ಬೀಳಿಸ್ತಾರೆ. ಯಾವುದೋ ಹಕ್ಕಿ ತನ್ನ ಉದರ ಭಾದೆ ತಾಳದೆ ಹೇತು ಅದರೊಳಗಿದ್ದ ಬೀಜದಿಂದ ಬೆಳೆದ ಗಿಡ ಅದು. ಇಂಥ ಮೂಢ ಆಚರಣೆಗಳನ್ನೆಲ್ಲ ಬಿಟ್ಟು ಮರದ ನೆರಳ ಕೆಳಗೆ ನಾಲ್ಕಾರು ಪುಸ್ತಕಗಳನ್ನಿಟ್ಟಿದ್ದರೆ ಅವುಗಳನ್ನು ಓದಿ ಅದರಿಂದ ತಿಳಿವಳಿಕೆ ಮೂಡಿ ಒಂದು ವೈಚಾರಿಕ ಕ್ರಾಂತಿ ಆದರೂ ಆಗ್ತಿತ್ತು’ ದೊಕಾಚಿ ಮೇಷ್ಟ್ರು ಕಾರ್ಲ್‍ಮಾರ್ಕ್ಸ್‍ನನ್ನೋ ಲೆನಿನ್‍ನನ್ನೋ ಮೈಮೇಲೆ ಆವಾಹಿಸಿಕೊಂಡವರಂತೆ ತಮ್ಮ ವಿಚಾರಗಳನ್ನು ಓತಪೆÇ್ರೀತವಾಗಿ ಹರಿಬಿಡುತ್ತಿದ್ದರೆ ಅವರೆದುರು ಕುಳಿತ ಮಕ್ಕಳು ಅರ್ಥವಾಗದೆ ಮೇಷ್ಟ್ರನ್ನೇ ಪಿಳಿಪಿಳಿ ಕಣ್ಣುಬಿಟ್ಟು ನೋಡುತ್ತಿದ್ದವು. ದೊಕಾಚಿ ಮೇಷ್ಟ್ರು ಇವತ್ತೇಕೋ ಒಂದಿಷ್ಟು ರಾಂಗ್ ಆಗಿದ್ದಾರೆ ಅನಿಸಿದ್ದೆ ತಮ್ಮ ಕ್ರಾಂತಿಯ ಮಾತುಗಳಿಂದ ಅವರು ಸಧ್ಯಕ್ಕೆ ಹೊರಬರಲಾರರು ಎನ್ನುವುದು ಮಕ್ಕಳಿಗೆ ಲಾಗಾಯ್ತಿನಿಂದಲೂ ರೂಢಿಯಾಗಿದ್ದರಿಂದ ಗುಜುಗುಜು ಮಾತನಾಡುತ್ತ ಆ ಸದ್ದು ಕ್ರಮೇಣ ದೊಡ್ಡದಾಗುತ್ತ ಮೇಷ್ಟ್ರ ಚಿಂತನೆಗೆ ಭಗ್ನಬಂದಿದ್ದೆ ಉರಿಗಣ್ಣು ಬಿಟ್ಟು ನೇರವಾಗಿ ಲಂಬರೇಖೆಯಲ್ಲಿ ತಮಗೆದುರಾಗಿ ಕುಳಿತಿದ್ದ ನಿನ್ನೆಯಷ್ಟೆ ಶಾಲೆಗೆ ದಾಖಲಾಗಿದ್ದ ಹುಡುಗನನ್ನೇ ದಿಟ್ಟಿಸಿ ನೋಡುತ್ತ ‘ಏನೋ ನಿನ್ನ ಹೆಸರು’ ಎಂದು ಕೇಳಿದರು. ಮೇಷ್ಟ್ರ ಉಗ್ರರೂಪಕ್ಕೆ ಹೆದರಿ ಚಡ್ಡಿಯಲ್ಲೇ ಉಚ್ಚೆ ಹೊಯ್ದುಕೊಂಡ ಹುಡುಗ ತಡವರಿಸುತ್ತ ಉತ್ತರಿಸಿದ ‘ಕಮೂ ಸರ್’. ಆ ಹುಡುಗ ಹೇಳಿದ ಹೆಸರು ಕೇಳಿದ್ದೆ ದೊಕಾಚಿ ಮೇಷ್ಟ್ರ ಸಿಟ್ಟೆಲ್ಲ ಜರ್ರನೆ ಇಳಿದು ಮುಖದ ಮೇಲೆ ಪ್ರಸನ್ನತೆ ಮೂಡಿತು. ಮೇಷ್ಟ್ರು ಅನುಮಾನ ಪರಿಹರಿಸಿಕೊಳ್ಳಲೆಂಬಂತೆ ಮತ್ತೊಮ್ಮೆ ಕೇಳಿದಾಗ ಹುಡುಗ ಅಂಜುತ್ತಲೇ ‘ಕಮೂ ಸರ್’ ಅಂದವನೆ ಚಡ್ಡಿಯೊಳಗಿಂದ ತೊಟ್ಟಿಕ್ಕುತ್ತಿದ್ದ ಉಚ್ಚೆಯ ಹನಿ ಇಡೀ ಕ್ಲಾಸಿಗೆ ಪ್ರದರ್ಶಿತವಾದ ಅವಮಾನದಿಂದ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ. ದೊಕಾಚಿ ಮೇಷ್ಟ್ರಿಗೆ ಮರಳುಗಾಡಿನಲ್ಲಿ ನೀರು ಸಿಕ್ಕಷ್ಟೇ ಖುಷಿಯಾಗಿತ್ತು ಹುಡುಗನ ಹೆಸರು ಕೇಳಿ. ಅಕ್ಷರದ ಗಂಧಗಾಳಿ ಗೊತ್ತಿಲ್ಲದ ಈ ಕುಗ್ರಾಮದ ಗೊಡ್ಡು ಜನರ ನಡುವೆ ತನ್ನೊಳಗಿನ ವೈಚಾರಿಕ ಚಿಂತನೆ ವ್ಯರ್ಥವಾಗುತ್ತಿದೆ ಎಂದು ನಿರಾಶರಾದವರು ಎದುರು ನಿಂತ ಕಮೂನನ್ನು ಆ ಮೇರು ಬರಹಗಾರ ಆಲ್ಬರ್ಟ್ ಕಮೂನೇನೋ ಎನ್ನುವಂತೆ ಅವನನ್ನು ವಿವಿಧ ಕೋನಗಳಿಂದ ದಿಟ್ಟಿಸಿ ನೋಡಲಾರಂಭಿಸಿದರು. ದೊಕಾಚಿ ಮೇಷ್ಟ್ರೇಕೆ ತನ್ನನ್ನು ಅಷ್ಟೊಂದು ಸುದೀರ್ಘವಾಗಿ ದಿಟ್ಟಿಸಿ ನೋಡುತ್ತಿರುವರೆನ್ನುವುದು ತರಗತಿಯಲ್ಲಿನ ಇತರ ಮಕ್ಕಳಿಗಿರಲಿ ಸ್ವತ: ಕಮೂಗೂ ಅರ್ಥವಾಗದೆ ಅವರೆಲ್ಲ ಒಂದರ ಮುಖ ಇನ್ನೊಂದು ನೋಡಿ ತಮ್ಮ ತಮ್ಮ ಮುಖದಲ್ಲಿ ಪ್ರಶ್ನಾರ್ಥಕ ಚಿನ್ಹೆ ಮೂಡಿಸಿಕೊಂಡವು. ನಿಂತು ಕಾಲು ನೋಯ್ಯಲಾರಂಭಿಸಿದಾಗ ಕಮೂ ಒಮ್ಮೆ ಬಲಗಾಲಿನ ಮೇಲೂ ಇನ್ನೊಮ್ಮೆ ಎಡಗಾಲಿನ ಮೇಲೂ ತನ್ನ ದೇಹದ ಭಾರವನ್ನು ವರ್ಗಾಯಿಸುತ್ತ ನಿಂತ ಭಂಗಿಯನ್ನು ಘಳಿಗೆಗೊಮ್ಮೆ ಬದಲಿಸುತ್ತಿರುವಾಗ ಮೇಷ್ಟ್ರ ಇನ್ನೊಂದು ಪ್ರಶ್ನೆ ತೂರಿಬಂತು ‘ನಿನ್ನ ಅಪ್ಪನ ಹೆಸರೇನೋ’. ‘ಬೋದಿಲೇರ ಸರ್’ ಕಮೂ ಬಾಯಿ ತೆರೆಯುವ ಮೊದಲೆ ಅವನ ಹಿಂದೆ ಕುಳಿತಿದ್ದ ಹುಡುಗ ಜೋರಾಗಿ ಉತ್ತರಿಸಿದ. ಬೋದಿಲೇರನ ಹೆಸರು ಕೇಳಿದ್ದೆ ದೊಕಾಚಿ ಮೇಷ್ಟ್ರಿಗೆ ಎದ್ದು ಕುಣಿಯುವಷ್ಟು ಖುಷಿಯಾಗಿತ್ತು. ಆ ಕ್ಷಣಕ್ಕೆ ಅವರಿಗೆ ಇಡೀ ಊರು ಆಕ್ಸಫರ್ಡ್‍ನಂತೆಯೂ, ಆ ಕನ್ನಡ ಶಾಲೆ ಒಂದು ವಿಶ್ವವಿದ್ಯಾಲಯವಾಗಿಯೂ ತಮ್ಮೆದುರು ಕುಳಿತಿದ್ದ ಮಕ್ಕಳೆಲ್ಲ ಶೇಕ್ಸ್‍ಪಿಯರ್‍ನ ವಾರಸುದಾರರಂತೆಯೂ ಗೋಚರಿಸಲಾರಂಭಿಸಿತು. ‘ಲೋ ಕಮೂ ನಾಳೆ ನಿನ್ನಪ್ಪ ಬೋದಿಲೇರನನ್ನು ಬಂದು ನನ್ನನ್ನು ಕಾಣೊದಕ್ಕೆ ಹೇಳು’ ಎಂದು ನುಡಿದ ಮೇಷ್ಟ್ರು ತರಗತಿಯಿಂದ ಹೊರಹೋಗುತ್ತಿರುವಾಗ ಅವರ ನಡಿಗೆಯಲ್ಲಿ ಒಂದುರೀತಿಯ ಎಂದೂ ಇಲ್ಲದ ಲವಲವಿಕೆ ಇತ್ತು. ಮಕ್ಕಳಿಗೂ ಇಂದು ಮೇಷ್ಟ್ರು ಎಂದಿಗಿಂತ ಹೆಚ್ಚು ಖುಷಿಯಾಗಿದ್ದಾರೆ ಅನಿಸಿತು.

* * *

ದೊಡ್ಡವೀರಯ್ಯ ಕಾಡಬಸಯ್ಯ ಚಿಕ್ಕೋಡಿಮಠ್ ಹೆಸರು ಉದ್ದವೂ ಮತ್ತು ಹಳೆಯದೆಂದು ಕಾಲೇಜಿನಲ್ಲಿರುವಾಗಲೇ ದೊಡ್ಡವೀರಯ್ಯ ತನ್ನ ಹೆಸರನ್ನು ‘ದೊಕಾಚಿ’ ಎಂದು ಮೂರಕ್ಷರಕ್ಕಿಳಿಸಿ ಮೊಟಕುಗೊಳಿಸಿಕೊಂಡು ಜನ್ಮಕ್ಕೆ ಕಾರಣನಾದ ಅಪ್ಪನಿಗೆ ಏಕಕಾಲಕ್ಕೆ ಸಮಸ್ಯೆಯಾಗಿಯೂ ಮತ್ತು ಒಗಟಾಗಿಯೂ ಕಂಡಿದ್ದ. ಒಮ್ಮೊಮ್ಮೆ ಈ ಹೆಸರು ಮನುಷ್ಯನದೋ ಪ್ರಾಣಿಯದೋ ಎಂದು ಗಲಿಬಿಲಿಗೊಳ್ಳುತ್ತಿದ್ದ ಕಾಡಬಸಯ್ಯ ಅಷ್ಟೊಂದು ಓದಿರುವ ತನ್ನ ಮಗ ಯಾರದೋ ಹೋರಾಟಗಾರರದೋ ಇಲ್ಲ ಸಮಾಜ ಸುಧಾರಕರದೋ ಹೆಸರಿಟ್ಟುಕೊಂಡಿರಬಹುದೆಂದು ಸಮಾಧಾನಪಟ್ಟುಕೊಳ್ಳುತ್ತಿದ್ದ. ಕಾಡಬಸಯ್ಯನ ಆರು ಗಂಡುಮಕ್ಕಳು ಮತ್ತು ನಾಲ್ಕು ಹೆಣ್ಣು ಸಂತಾನಗಳಲ್ಲಿ ದೊಡ್ಡವೀರಯ್ಯನೇ ಕೊನೆಯವನು. ಕಾಡಬಸಯ್ಯನ ಮಕ್ಕಳಲ್ಲಿ ಮಾತ್ರವಲ್ಲದೆ ಆ ಚಿಕ್ಕೋಡಿಮಠ್ ಮನೆತನದಲ್ಲಿ ಕಾಲೇಜು ಮೆಟ್ಟಿಲು ಹತ್ತಿದ್ದು ದೊಡ್ಡವೀರಯ್ಯ ಒಬ್ಬನೇ ಎನ್ನುವುದು ಆ ಇಡೀ ಮನೆತನಕ್ಕೆ ಗೌರವದ ಮತ್ತು ಅಭಿಮಾನದ ವಿಷಯವಾಗಿತ್ತು. ಕಲಬುರಗಿಯ ಎಸ್.ಬಿ ಕಾಲೇಜಿನಲ್ಲಿ ಡಿಗ್ರಿ ಪೂರೈಸಿ ಜ್ಞಾನಗಂಗಾದಲ್ಲಿ ಕನ್ನಡ ಎಂ.ಎ ಗೆ ಸೇರಿ ಭಾರತೀಯ ಸಾಹಿತ್ಯದೊಂದಿಗೆ ಪಾಶ್ಚಿಮಾತ್ಯ ಸಾಹಿತ್ಯವನ್ನೂ ಓದಿಕೊಂಡು ಈ ನಡುವೆ ಕ್ರಾಂತಿಯ ಸೆಳೆತದಿಂದ ಪಿ.ಹೆಚ್.ಡಿ ಅರ್ಧಕ್ಕೆ ಬಿಟ್ಟು ಊರಿಗೆ ಬಂದು ಕೂತಿದ್ದ ದೊಕಾಚಿ ಅಪ್ಪ ಕಾಡಬಸಯ್ಯನಿಗೆ ದೊಡ್ಡ ತಲೆ ನೋವಾಗಿದ್ದ. ಕ್ರಾಂತಿಯ ಮಾತುಗಳನ್ನಾಡುತ್ತ ತಲೆತಲಾಂತರದಿಂದ ಊರಿನಲ್ಲಿ ರೂಢಿಗತವಾಗಿದ್ದ ಸಂಪ್ರದಾಯಗಳ ವಿರುದ್ಧ ಭಾಷಣ ಬಿಗಿಯುತ್ತ ಅಪ್ಪ ಕಾಡಬಸಯ್ಯನಿಗೊಂದು ಗಂಭೀರ ಸಮಸ್ಯೆಯಾಗಿ ಕಾಡತೊಡಗಿದ. ಈ ಸಂದರ್ಭದಲ್ಲೇ ಅವನ ಸಮಸ್ಯೆಯನ್ನು ಪರಿಹರಿಸಲೆಂಬಂತೆ ಮಠದ ಅನುದಾನಿತ ಪ್ರೈಮರಿ ಶಾಲೆಯಲ್ಲಿ ಖಾಲಿಯಿದ್ದ ಶಿಕ್ಷಕ ಹುದ್ದೆ ತುಂಬಲು ಪತ್ರಿಕೆಯಲ್ಲಿ ಜಾಹೀರಾತು ಪ್ರಕಟವಾಗಿದ್ದೆ ತಡ ಕಾಡಬಸಯ್ಯ ಮಠದ ಅಪಗೊಳ ಕಾಲಿಗೆ ಬಿದ್ದು ಆ ಕೆಲಸ ಮಗನಿಗೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದ. ಮಠಕ್ಕೆ ಕಾಡಬಸಯ್ಯ ಕಾಲಕಾಲಕ್ಕೆ ನೀಡುತ್ತ ಬಂದ ದೇಣಿಗೆ ಮತ್ತು ಮಠದ ಮೇಲೆ ಅವನಿಗಿರುವ ಭಕ್ತಿ ಶ್ರದ್ಧೆಯಿಂದ ಅಪಗೊಳು ಸಹಜವಾಗಿಯೇ ಅವನ ಬೇಡಿಕೆಗೆ ತಥಾಸ್ತು ಎಂದಿದ್ದರು. ಅಂತೂ ತಾನು ಓದಿದ ಮಠದ ಶಾಲೆಯಲ್ಲೇ ತನಗೆ ಪಾಠ ಮಾಡುವ ಕೆಲಸ ಸಿಕ್ಕಿರುವುದು ಅದೊಂದು ಯೋಗಾಯೋಗವೆಂದೇ ಬಗೆದ ದೊಕಾಚಿ ಮೇಷ್ಟ್ರಿಗೆ ಇಡೀ ಊರಿನಲ್ಲಿ ಒಂದು ದೊಡ್ಡ ವೈಚಾರಿಕ ಕ್ರಾಂತಿಗೆ ತಾನು ಕಾರಣನಾಗಬೇಕೆಂಬ ಭಾವನೆ ಮನಸ್ಸಿನ ಒಂದು ಮೂಲೆಯಲ್ಲಿ ಮೊಳಕೆಯೊಡೆಯತೊಡಗಿತು.

* * *

‘ಮೇಷ್ಟ್ರೆ ಬಂದು ಕಾಣಿ ಅಂತ ಹೇಳಿದ್ರಂತೆ’ ದೊಕಾಚಿ ಮೇಷ್ಟ್ರು ತರಗತಿಯಲ್ಲಿ ಮಕ್ಕಳಿಗೆ ಬೇಂದ್ರೆ ಅವರ ಹಕ್ಕಿ ಹಾರುತಿದೆ ಕವಿತೆಯ ಸಾಲುಗಳನ್ನು ವಿವರಿಸಿ ಹೇಳುತ್ತ ತನ್ಮಯರಾಗಿರುವ ಹೊತ್ತಿಗೆ ಅಪಶ್ರುತಿಯೊಂದು ಮಿಡಿದಂತಾಗಿ ಧ್ವನಿ ಬಂದ ದಿಕ್ಕಿನತ್ತ ದೃಷ್ಟಿ ಹರಿಸಿದವರಿಗೆ ಬಾಗಿಲಲ್ಲಿ ತನ್ನ ಭೀಮಕಾಯವನ್ನು ಸಂಕೋಚದಿಂದ ಹಿಡಿಯಾಗಿಸಿಕೊಂಡು ನಿಂತಿದ್ದ ಮನುಷ್ಯಾಕೃತಿಯೊಂದು ಕಣ್ಣಿಗೆ ಬಿತ್ತು. ಹುಬ್ಬುಗಳನ್ನು ಮೇಲೇರಿಸಿ ಮುಖದಲ್ಲಿ ಪ್ರಶ್ನಾರ್ಥಕ ಚಿನ್ಹೆ ಮೂಡಿಸಿಕೊಂಡ ಮೇಷ್ಟ್ರನ್ನು ನೋಡಿದ್ದೆ ‘ಅಪ್ಪ ಸರ್’ ಎಂದು ಕಮೂನ ಧ್ವನಿ ಕಿವಿಗೆ ಬಿದ್ದಿದ್ದೆ ಲಂಕೇಶರು ಅನುವಾದಿಸಿದ ಬೋದಿಲೇರನ ಪಾಪದಹೂಗಳು ಕವಿತೆಯ ಸಾಲುಗಳು ದೊಕಾಚಿ ಮೇಷ್ಟ್ರ ಮೆದುಳಿನೊಳಗೆ ಗಿರಗಿಟ್ಲೆಯಾಡಲಾರಂಭಿಸಿದವು. ‘ನಾನು ಬಲ್ಲೆ ನಿನ್ನ ಹೃದಯ ಬೇರುಕಿತ್ತು ಬಿದ್ದು ಹಳೆಯ ಪ್ರೇಮಗಳಿಂದ ತುಂಬಿ ಒಡೆಯುತ್ತಿದೆ. ನಿನ್ನೆದೆ ಕಮ್ಮಾರನ ಕುಲುಮೆಯಂತೆ ಧಗಧಗಿಸುತ್ತಿದೆ. ಅಲ್ಲಿ ಪತಿತಳ ಧಿಮಾಕು ಇಟ್ಟುಕೊಂಡಿದ್ದೀ’ ಮೇಷ್ಟ್ರು ಕ್ಷಣಮಾತ್ರದಲ್ಲಿ ಹಕ್ಕಿ ಹಾರುತಿದೆಯಿಂದ ಬೋದಿಲೇರನ ದು:ಖದ ಪದಕ್ಕೆ ಹನುಮ ಜಿಗಿತ ಜಿಗಿದಿದ್ದರು. ಮೇಷ್ಟ್ರ ಮಾತು ಅರ್ಥವಾಗದೆ ಬೋದಿಲೇರನಿಗೆ ಎಲ್ಲವೂ ಅಯೋಮಯ ಅಗೋಚರ ಅನಿಸಲಾರಂಭಿಸಿತು. ‘ಅಲ್ಲಯ್ಯ ನೀನೋ ಬೋದಿಲೇರ. ನಿನ್ನ ಮಗ ಆಲ್ಬರ್ಟ್ ಕಮೂ. ಇಷ್ಟು ದಿನ ನೀನು ಎಲ್ಲಿದ್ದೆ ಮಾರಾಯ. ನಿಮ್ಮಂಥವರೆ ನನ್ನ ವೈಚಾರಿಕ ಕ್ರಾಂತಿ ಎಂಬ ಯಜ್ಞಕುಂಡದಿಂದ ಸಿಡಿದು ಬರುವ ಕಿಡಿಗಳು’ ಮೇಷ್ಟ್ರು ಹತ್ತಿರ ಹೋಗಿ ಪ್ರೀತಿಯಿಂದ ಅವನ ಮೈಯನ್ನೊಮ್ಮೆ ದಡವಿದರು. ನನ್ನಲ್ಲಿ ಅದ್ಯಾವ ವಿಶೇಷ ಈ ಮೇಷ್ಟ್ರಿಗೆ ಕಾಣಿಸಿದೆ ಎಲ್ಲೋ ತಲೆ ಕೆಟ್ಟಿರಬಹುದೆಂದು ಭಾವಿಸಿದ ಬೋದಿಲೇರ ನಾಲ್ಕು ಹೆಜ್ಜೆ ಹಿಂದೆ ಸರಿದ. ‘ನೀನು ಬೋದಿಲೇರನಾಗಿ ನಿನ್ನ ಮಗನಿಗೆ ಆಲ್ಬರ್ಟ್ ಕಮೂ ಎಂದು ಕರೆದಿರಬೇಕಾದರೆ ಎಷ್ಟೊಂದು ಸಾಹಿತ್ಯ ಓದಿಕೊಂಡಿರಬೇಕು. ಹೇಳು ಯಾರನ್ನೆಲ್ಲ ಓದಿಕೊಂಡಿದ್ದಿ’ ಮೇಷ್ಟ್ರು ಕೇಳಿದ ಪ್ರಶ್ನೆಯಿಂದ ಬೋದಿಲೇರನಿಗೆ ಈಗ ನಿಚ್ಚಳವಾಗಿ ಎಲ್ಲ ಅರಿವಾಗತೊಡಗಿ ಅವನಿಗೆ ನಗು ತಡೆಯಲಾಗಲಿಲ್ಲ. ‘ಅಯ್ಯೋ ಮೇಷ್ಟ್ರೆ ಶಾಲೆಕಡಿ ತಲೆಹಾಕಿ ಮಲಿಗದವನಲ್ಲ ನಾ. ಅಂಥದ್ದರಲ್ಲಿ ನಾನೇನು ಓದ್ಲಿ ಹೇಳಿ. ಮಂಗಳೂರು ಕಡೆ ಕೂಲಿ ಕೆಲಸಕ್ಕಂತ ಹೋಗಿದ್ದಾಗ ದೊಡ್ಡ ಸಾಹೇಬರೊಬ್ಬರು ನನಗೆ ಮತ್ತು ಮಗನಿಗೆ ಇಟ್ಟ ಹೆಸರುಗಳಿವು. ಯಾಕೋ ಛಲೋ ಅನಿಸ್ತು ಅವೇ ಖಾಯಂ ಉಳಿಕೊಂಡಿವೆ ನೋಡಿ’ ಬೋದಿಲೇರನ ವಿವರಣೆಯಿಂದ ದೊಕಾಚಿ ಮೇಷ್ಟ್ರಿಗೆ ಭ್ರಮನಿರಸನವಾದರೂ ಆ ಕ್ಷಣಕ್ಕೆ ಅವರ ತಲೆಯಲ್ಲಿ ಇಂಥ ಹೆಸರುಗಳ ಮೂಲಕವೇ ವೈಚಾರಿಕ ಕ್ರಾಂತಿಯನ್ನು ಇಲ್ಲಿ ಪಸರಿಸಬೇಕೆಂಬ ಆಲೋಚನೆಯೊಂದು ಹೊಳೆದು ಅದನ್ನು ಮುಂದಿನ ಕೆಲವೇ ದಿನಗಳಲ್ಲಿ ಕಾರ್ಯಗತಗೊಳಿಸಿಯೂ ಬಿಟ್ಟರು. ಊರಿನಲ್ಲಿರುವ ಚಿತ್ರ ವಿಚಿತ್ರ ಹೆಸರಿನ ಮಕ್ಕಳಿಗೆಲ್ಲ ಹೊಸ ಹೆಸರುಗಳನ್ನಿಟ್ಟು ಆ ಹೆಸರುಗಳನ್ನು ಕಾನೂನಿನ ಕಕ್ಷೆಗೊಳಪಡಿಸಿ ಕಪ್ಪೆರಾಯನನ್ನು ಕಾಫ್ಕಾ, ಸಿಂಕ್ರಿಯನ್ನು ಸಿಲ್ವಿಯಾ, ಬೀರನನ್ನು ಬ್ರೆಕ್ಟ್ ಆಗಿಸಿದರು. ದೊಕಾಚಿ ಮೇಷ್ಟ್ರ ಈ ಖ್ಯಾತಿ ಸುತ್ತಮುತ್ತಲಿನ ಊರುಗಳಿಗೆಲ್ಲ ಹರಡಿ ಯಾರದೇ ಮನೆಯಲ್ಲಿ ಮಗು ಜನಿಸಿದರೂ ‘ಮೇಷ್ಟ್ರೆ ಒಂದು ಛಲೋ ಹೆಸರು ಇಡಿ ಕೂಸಿಗೆ’ ಎಂದು ಹುಡುಕಿಕೊಂಡು ಬರುವುದು ಅದೊಂದು ರೂಢಿಯಂತಾಯಿತು. ದೊಕಾಚಿ ಮೇಷ್ಟ್ರ ಈ ವೈಚಾರಿಕ ಕ್ರಾಂತಿಯ ಫಲವಾಗಿ ಊರು ಮತ್ತು ಸುತ್ತಲಿನ ಫಾಸಲೆಯಲ್ಲಿ ಕಾಫ್ಕಾ, ನೆರೂಡ್, ನೆಪೆÇಲಿಯನ್, ಗಾರ್ಕಿ, ಮಾರ್ಕ್ವೇಜ್ ಹೆಸರುಗಳು ಜನರ ನಾಲಿಗೆಯ ಮೇಲೆ ಲೀಲಾಜಾಲವಾಗಿ ಹರಿದಾಡತೊಡಗಿದವು. 

* * *

ಹೆಸರು ಬದಲಾವಣೆಗಷ್ಟೇ ದೊಕಾಚಿ ಮೇಷ್ಟ್ರ ವೈಚಾರಿಕ ಕ್ರಾಂತಿ ಸೀಮಿತಗೊಂಡಿದ್ದರೆ ಮಠದ ಅಪಗೊಳಾಗಲಿ, ಆಡಳಿತ ಮಂಡಳಿಯಾಗಲಿ ಅಷ್ಟೊಂದು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಹೆಸರು ಬದಲಾವಣೆಯಿಂದ ಆರಂಭಗೊಂಡ ವೈಚಾರಿಕ ಕ್ರಾಂತಿ ಸಮಾಜದಲ್ಲಿ ಮನೆಮಾಡಿದ್ದ ಕೆಲವು ಪದ್ಧತಿಗಳ ಬದಲಾವಣೆಗೆ ವಿಸ್ತರಿಸಿದ್ದು ಮಠದ ಆಡಳಿತ ಮಂಡಳಿಗೆ ನುಂಗಲಾರದ ತುತ್ತಾಯಿತು. ನಡೆದದ್ದಿಷ್ಟು ಶಾಲೆಯ ಪರಿಸರದಲ್ಲಿನ ಸ್ವಚ್ಛತೆಯನ್ನು ಪರಿಶೀಲಿಸಲೆಂದು ವಿಭಾಗೀಯ ಶಿಕ್ಷಣಾಧಿಕಾರಿಗಳು ಮಠದ ಶಾಲೆಗೆ ಭೇಟಿ ನೀಡಲಿರುವರೆನ್ನುವ ಸುಳಿವು ದೊರೆತದ್ದೆ ಹೆಡ್ ಮಾಸ್ಟರ್ ರೇವಣ್ಣ ಪಾಟೀಲ ಇಡೀ ಕಾರ್ಯಕ್ರಮದ ಜವಾಬ್ದಾರಿಯನ್ನು ದೊಕಾಚಿ ಮೇಷ್ಟ್ರ ಹೆಗಲಿಗೇರಿಸಿ ನಿರಾಳರಾದರು. ಹೀಗೆ ದೊಕಾಚಿ ಮೇಷ್ಟ್ರನ್ನು ಹೊಸ ಜವಾಬ್ದಾರಿಗೆ ಒಳಗಾಗಿಸುವ ಈ ಯೋಜನೆಯು ಅವರ ವೈಚಾರಿಕ ಕ್ರಾಂತಿಗೆ ಒಂದಷ್ಟು ಹಿನ್ನೆಡೆ ಒದಗಿಸಬೇಕೆನ್ನುವ ಮಠದ ಆಡಳಿತ ಮಂಡಳಿಯ ಪಿತೂರಿಯ ಭಾಗವಾಗಿದೆ ಎನ್ನುವ ಗುಮಾನಿ ಕೆಲವರಲ್ಲಿ ಬರದೇ ಇರಲಿಲ್ಲ. ವಿಭಾಗೀಯ ಶಿಕ್ಷಣಾಧಿಕಾರಿಗಳ ಭೇಟಿಗೆ ಇನ್ನು ಹದಿನೈದು ದಿನಗಳಿರುವಾಗಲೇ ದೊಕಾಚಿ ಮೇಷ್ಟ್ರ ನೇತೃತ್ವದಲ್ಲಿ ಇಡೀ ಶಾಲೆಯ ಮಕ್ಕಳೆಲ್ಲ ಒಂದಾಗಿ ಗೋಡೆಗಳಿಗೆ ಸುಣ್ಣ ಬಣ್ಣ ಬಳಿದು, ಕಸಕಡ್ಡಿ ಗುಡಿಸಿ, ತಳೀರು ತೋರಣಗಳಿಂದ ಶಾಲೆಯನ್ನು ನವವಧುವಿನಂತೆ ಸಿಂಗರಿಸಿದರು. ಶಾಲೆಯ ಸ್ವಚ್ಛತಾ ಕಾರ್ಯಕ್ರಮದ ಸಿದ್ಧತೆಯಲ್ಲಿರುವಾಗಲೇ ಅಸ್ತವ್ಯಸ್ತವಾಗಿ ತಲೆಗೂದಲು ಬೆಳೆದು ನಿಂತ ಕೇರಿಯ ಮಕ್ಕಳು ಮೇಷ್ಟ್ರ ಎದುರಿಗೆ ಬರುವುದಕ್ಕೂ ಮೇಷ್ಟ್ರ ಗಮನ ಅವುಗಳ ತಲೆಯ ಕಡೆ ಹರಿಯುವುದಕ್ಕೂ ಸರಿಹೋಯಿತು. ತಮ್ಮ ಕೆಲಸದ ವಿರಾಮದ ನಡುವೆ ಅವರನ್ನೆಲ್ಲ ಹತ್ತಿರ ಕರೆದು ಮೇಷ್ಟ್ರು ‘ಯಾಕ್ರೋ ಕೂದಲು ಈ ಪರಿ ಬೆಳೆಸಿದ್ದಿರಿ. ಹೇನಾದರೆ ನಿಮಗೇ ಕಷ್ಟ ನೋಡಿ’ ಎಂದು ವಿಚಾರಿಸಿಕೊಂಡರು. ‘ಏನ್ಮಾಡೊದು ಸರ್ ಪ್ಯಾಟಿಕಡೆ ಹೋಗ್ದೆ ಆರು ತಿಂಗಳಾಯ್ತು’ ಮಕ್ಕಳು ತಮ್ಮ ಅಸಹಾಯಕತೆ ತೋಡಿಕೊಂಡವು. ಈ ವಿಷಯವಾಗಿ ಕ್ಷೌರಿಕರ ಅಪಣ್ಣನನ್ನು ಕರೆದು ವಿಚಾರಿಸಿದಾಗ ಲಾಗಾಯ್ತಿನಿಂದಲೂ ಕೇರಿಯವರಿಗೆ ಕ್ಷೌರ ಮಾಡುವ ಪದ್ಧತಿ ಊರಲಿಲ್ಲವೆಂದೂ ತಾನೆನಾದರೂ ಸಂಪ್ರದಾಯ ಮುರಿದಲ್ಲಿ ಊರಿನವರು ತನ್ನನ್ನು ಬಹಿಷ್ಕರಿಸುವರೆಂದು’ ಅಳಲು ತೋಡಿಕೊಂಡ. ಅಪ್ಪಣ್ಣನ ಮನಪರಿವರ್ತಿಸುವಲ್ಲಿ ದೊಕಾಚಿ ಮೇಷ್ಟ್ರು ಮಾಡಿದ ಪ್ರಯತ್ನ ಫಲಕಾಣಲಿಲ್ಲ. ‘ಮೇಷ್ಟ್ರೇ ನಿಮಗೇನೋ ಸರ್ಕಾರದವರು ಪಗಾರ ಕೊಡ್ತಾರ. ನಾನು ಊರನ್ನೇ ನಂಬಿದ್ದೀನಿ. ದಯವಿಟ್ಟು ಬಡವನ ಹೊಟ್ಟಿ ಮ್ಯಾಗ ಹೊಡಿಬ್ಯಾಡರಿ’ ಅಪ್ಪಣ್ಣ ಕೈಮುಗಿದು ಬೇಡಿಕೊಂಡ. ಇಲ್ಲಿ ಯಾವುದೂ ಸುಲಭವಾಗಿ ಬದಲಾಗೊಲ್ಲ ಅದಕ್ಕೆ ಕ್ರಾಂತಿಯೇ ಮದ್ದು ಎಂದು ಭಾವಿಸಿದ ದೊಕಾಚಿ ಮೇಷ್ಟ್ರಿಗೆ ಸಮಸ್ಯೆ ಜಟಿಲವಾಗಿದೆ ಅನಿಸಿ ಈ ಸಮಸ್ಯೆಯನ್ನು ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲೇ ಅನಾವರಣಗೊಳಿಸಬೇಕೆಂದು ನಿಶ್ಚಯಿಸಿ ಅದಕ್ಕೆ ಅಗತ್ಯವಾದ ಯೋಜನೆಯನ್ನು ರೂಪಿಸಿದರು. ಹೆಡ್‍ಮಾಸ್ಟರ್ ರೇವಣ್ಣ ಪಾಟೀಲ ನಗರದಿಂದ ಬಿ.ಇ.ಒ ಸಾಹೇಬರ ಜೊತೆ ಬರುವುದೆಂದು ಮತ್ತು ಇಲ್ಲಿನ ಕಾರ್ಯಕ್ರಮದ ಸಿದ್ಧತೆಯನ್ನು ದೊಕಾಚಿ ಮೇಷ್ಟ್ರು ಖುದ್ದು ಎದುರು ನಿಂತು ನೋಡಿಕೊಳ್ಳುವುದೆಂದು ಮೊದಲೆ ನಿರ್ಧಾರವಾಗಿದ್ದರಿಂದ ಮಠದ ಆಡಳಿತ ಮಂಡಳಿಗಾಗಲಿ, ಶಾಲೆಯ ಇತರ ಶಿಕ್ಷಕರಿಗಾಗಲಿ ಕೇರಿಯ ಮಕ್ಕಳ ಕ್ಷೌರದ ಸಮಸ್ಯೆ ಕುರಿತು ದೊಕಾಚಿ ಮೇಷ್ಟ್ರು ರೂಪಿಸಿದ ಯೋಜನೆಯ ಸಂಚು ಯಾರ ಗಮನಕ್ಕೂ ಬರಲಿಲ್ಲ. 

ಕಾರ್ಯಕ್ರಮದ ದಿನ ಶಾಲೆಯ ಆವರಣವನ್ನು ಕಂಪೌಂಡ್ ಗೇಟ್ ಮೂಲಕ ಬಿ.ಇ.ಒ ಸಾಹೇಬರು ಮೊದಲು ಪ್ರವೇಶಿಸುವರೆಂದು ಅವರ ಹಿಂದೆ ಮಠದ ಅಪಗೊಳು, ಆಡಳಿತ ಮಂಡಳಿ ಸದಸ್ಯರು, ಹೆಡ್ ಮಾಸ್ಟರ್ ರೇವಣ್ಣ ಹಾಗೂ ಉಳಿದ ಶಿಕ್ಷಕರು ಬರುವುದೆಂದು ಪೂರ್ವನಿರ್ಧಾರಿತವಾಗಿತ್ತು. ಬಿ.ಇ.ಒ ಸಾಹೇಬರು ಮೊದಲು ಮಠಕ್ಕೆ ಭೇಟಿ ನೀಡಿ ಹಿಂದಿನ ಅಪಗೊಳ ಗದ್ದುಗೆಗೆ ನಮಸ್ಕರಿಸಿ ಈಗಿನ ಅಪಗೊಳ ಪಾದಗಳಿಗೆ ಅಡ್ಡಬಿದ್ದು ಮಠದ ವತಿಯಿಂದ ಸನ್ಮಾನ ಸ್ವೀಕರಿಸಿ ಪಕ್ಕದಲ್ಲಿದ್ದ ಶಾಲೆಯ ಆವರಣದೊಳಗೆ ಅಡಿಯಿಟ್ಟರು. ಅಪಗೊಳನ್ನೊಳಗೊಂಡಂತೆ ಬಿ.ಇ.ಒ ಸಾಹೇಬರನ್ನು ಹಿಂಬಾಲಿಸಿ ಒಳಬಂದ ಎಲ್ಲರೂ ಎದುರು ಕಂಡ ದೃಶ್ಯ ನೋಡಿ ಒಂದು ಕ್ಷಣ ದಂಗುಬಡಿದವರಂತೆ ನಿಂತರು. ಶಾಲೆಯ ಆವರಣದ ಒಂದು ಮಗ್ಗುಲಲ್ಲಿ ಕೇರಿಯ ಮಕ್ಕಳನ್ನು ಸಾಲಾಗಿ ಕೂಡಿಸಿ ಕೈಯಲ್ಲಿ ಕತ್ತರಿ ಹಿಡಿದಿದ್ದ ದೊಕಾಚಿ ಮೇಷ್ಟ್ರು ಅವರ ತಲೆಗೂದಲನ್ನು ಬೋಳಿಸುವ ಕೆಲಸದಲ್ಲಿ ಮಗ್ನರಾಗಿದ್ದರು. ಅಪಗೊಳ ಮುಖ ನಖಶಿಖಾಂತ ಉರಿಯುತ್ತಿತ್ತು. ಹೆಡ್ ಮಾಸ್ಟರ್ ರೇವಣ್ಣ ಪಾಟೀಲರಿಗೆ ದೊಕಾಚಿ ಮೇಷ್ಟ್ರ ಈ ಕಾರ್ಯತಂತ್ರದ ಅರಿವಿಲ್ಲದೆ ಬೆಚ್ಚಿ ಬಿದ್ದಿದ್ದರು. ಆಡಳಿತ ಮಂಡಳಿಗೆ ಅದು ಮಠದ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಈ ಎಲ್ಲದರ ನಡುವೆ ಬಿ.ಇ.ಒ ಸಾಹೇಬರು ಮಾತ್ರ ತುಂಬ ಶಾಂತರಾಗಿದ್ದು ಆ ಸಂದರ್ಭದ ಸನ್ನಿವೇಶವನ್ನು ಖುಷಿಯಿಂದ ಆಸ್ವಾದಿಸುತ್ತಿರುವಂತೆ ಕಾಣಿಸುತ್ತಿತ್ತು. ಕೇರಿಯ ಸಂಕಷ್ಟದ ಬದುಕನ್ನು ಸ್ವತ: ಅನುಭವಿಸಿ ಗೊತ್ತಿದ್ದ ಅವರಿಗೆ ದೊಕಾಚಿ ಮೇಷ್ಟ್ರು ರೂಪಿಸಿದ ಈ ಕಾರ್ಯಯೋಜನೆ ಮನಸ್ಸಿಗೆ ಹಿಡಿಸಿತಲ್ಲದೆ ಅವರೊಳಗೊಬ್ಬ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್‍ರನ್ನು ಕಂಡಷ್ಟೆ ಖುಷಿಯಾಯಿತು ಮತ್ತು ಅದನ್ನು ಎಲ್ಲರೆದುರು ಹೇಳಿ ಬಾಯಿತುಂಬ ಹೊಗಳಿದರು ಕೂಡ. ಆ ಕೂಡಲೇ ಅಪ್ಪಣ್ಣನನ್ನು ಕರೆಕಳುಹಿಸಿ ಇನ್ನು ಮುಂದೆ ಕೇರಿಯವರಿಗೂ ಅವನು ಕ್ಷೌರ ಮಾಡಬೇಕೆಂದು ಈ ವಿಷಯವಾಗಿ ತಹಸೀಲ್ದಾರರಿಗೂ, ಜಿಲ್ಲಾಧಿಕಾರಿಗಳಿಗೂ ಪತ್ರ ಬರೆಯುವುದಾಗಿ ಹೇಳಿ ತಪ್ಪಿದಲ್ಲಿ ಕೋರ್ಟಿನಲ್ಲಿ ಕೇಸು ದಾಖಲಿಸುವುದಾಗಿ ಫರ್ಮಾನು ಹೊರಡಿಸಿದರು. ಶಾಲೆಯ ಸಣ್ಣ ಕಾರ್ಯಕ್ರಮವೊಂದು ಊರಿನ ಸಮಸ್ಯೆಯನ್ನು ಬಗೆಹರಿಸುವ ವೇದಿಕೆಯಾಗುತ್ತದೆಂದು ಯಾರೂ ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಬಿ.ಇ.ಒ ಸಾಹೇಬರು ಕಾರ್ಯಕ್ರಮ ಮುಗಿಸಿ ಹೋಗುವಾಗ ದೊಕಾಚಿ ಮೇಷ್ಟ್ರ ಕಿವಿಯಲ್ಲಿ ಯಾರಿಗೂ ಕೇಳಿಸದಂತೆ ಮೆಲ್ಲನೆ ಉಸಿರಿದ್ದರು ‘ಮೇಷ್ಟ್ರೆ ಒಂದು ಛಂದದ ಹೆಸರು ಹುಡುಕಿ ಕೊಡಿ ನಂಗೂ ಬದಲಿಸಿಕೊಳ್ಳಬೇಕಿದೆ’ ಎಂದು.

ಊರಿಗೆ ಕಂಟಕಪ್ರಾಯವಾದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶಾಂತವೀರಪ್ಪಗೌಡರ ಮನೆಯಲ್ಲಿ ಅಪಗೊಳ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ದೊಕಾಚಿ ಮೇಷ್ಟ್ರು ಸಭೆಗೆ ಬಂದವರೆ ಅಪಗೊಳಿಗೆ ನಿಂತೇ ನಮಸ್ಕರಿಸಿ ಎದುರು ಸಾಲಿನಲ್ಲಿದ್ದ ಖುರ್ಚಿಯಲ್ಲಿ ಆಸೀನರಾದರು. ಊರಿನಲ್ಲಿ ಈ ಮೊದಲಿನ ಯಥಾಸ್ಥಿತಿಯನ್ನೆ ಕಾಯ್ದುಕೊಂಡು ಹೋಗುವುದೆಂದು ಬಿ.ಇ.ಒ ಸಾಹೇಬರ ಮನವೊಲಿಸಿ ದೂರನ್ನು ಹಿಂಪಡೆಯುವಂತೆ ಮಾಡುವ ಜವಾಬ್ದಾರಿ ದೊಕಾಚಿ ಮೇಷ್ಟ್ರಿಗೆ ಸೇರಿದ್ದೆಂದು ಇನ್ನು ಮುಂದೆ ಇಂಥ ಅನುಚಿತ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಒಂದು ವೇಳೆ ಮಠದ ಪ್ರತಿಷ್ಠೆಗೆ ಕುಂದಾಗುವಂತೆ ವರ್ತಿಸಿದಲ್ಲಿ ನೌಕರಿಯಿಂದ ವಜಾಗೊಳಿಸಲಾಗುವುದೆಂದು ಸಭೆಯಲ್ಲಿ ಠರಾವು ಹೊರಡಿಸಲಾಯಿತು. ಸಭೆಯಲ್ಲಿನ ಎಲ್ಲ ಸದಸ್ಯರೂ ಅಪಗೊಳ ಈ ನಿರ್ಧಾರವನ್ನು ಒಕ್ಕೊರಳಿನಿಂದ ಅನುಮೋದಿಸಿದರು. ಈ ನಿರ್ಧಾರದ ಕುರಿತು ಸಭೆ ದೊಕಾಚಿ ಮೇಷ್ಟ್ರ ಅಭಿಪ್ರಾಯ ಕೇಳಿದಾಗ ತಿಳಿವಳಿಕೆಯೇ ಇಲ್ಲದ ಈ ತಿರಕ್ಲಾಂಡಿಗಳೆದುರು ವಾದಿಸುವುದು ವ್ಯರ್ಥ ಕಾಲಹರಣವೆಂದು ಬಗೆದ ಮೇಷ್ಟ್ರು ಯಾವ ಪ್ರತ್ಯುತ್ತರವನ್ನು ನೀಡದೆ ಗಂಭೀರವಾಗಿ ಕುಳಿತೆ ಇದ್ದರು. ಅವರ ಈ ಮೌನವನ್ನೆ ಒಪ್ಪಿಗೆಯೆಂದು ಭಾವಿಸಿದ ಸಭೆಯು ಉಪ್ಪಿಟ್ಟು ಚಹಾದ ಸಮಾರಾಧನೆಯ ನಂತರ ಬರಕಾಸ್ತುಗೊಂಡಿತು. ಈ ನಡುವೆ ಬಿ.ಇ.ಒ ಸಾಹೇಬರು ಬೇರೆ ತಾಲೂಕಿಗೆ ವರ್ಗಾವಣೆಗೊಂಡು ತಮ್ಮ ಕಾರ್ಯಭಾರದ ಗಡಿಬಿಡಿಯಲ್ಲಿ ದೊಕಾಚಿ ಮೇಷ್ಟ್ರ ಕ್ರಾಂತಿಯ ಯೋಜನೆಯನ್ನು ಸಂಪೂರ್ಣವಾಗಿ ಮರೆತು ಬಿಟ್ಟರು. ಪರಿಣಾಮವಾಗಿ ಕೇರಿಯವರ ತಲೆಕ್ಷೌರದ ಸಮಸ್ಯೆ ಯಾವ ಬದಲಾವಣೆಯನ್ನೂ ಕಾಣದೆ ಯಥಾಸ್ಥಿತಿ ಮುಂದುವರೆಯಿತು.

* * *

ಶಾಂತವೀರಪ್ಪಗೌಡರ ಮನೆಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ದೊಕಾಚಿ ಮೇಷ್ಟ್ರ ಘನಗಾಂಭೀರ್ಯ ಮೌನ ಅಲ್ಲಿದ್ದ ಯಾರ ಮೇಲೂ ಅಷ್ಟೊಂದು ವಿಶೇಷ ಪರಿಣಾಮ ಬೀರದೆ ಹೋದರೂ ಗೌಡರ ಮಗಳು ಶಾಂತಿಲಕ್ಷ್ಮಿಯ ಎದೆಯಲ್ಲಿ ಮಾತ್ರ ಅಚ್ಚಳಿಯದ ಮುದ್ರೆಯಾಗಿ ಠಳಾಯಿಸಿಬಿಟ್ಟಿತು. ಈ ಶಾಂತಿಲಕ್ಷ್ಮಿ ಶಾಂತವೀರಪ್ಪಗೌಡರ ನಾಲ್ಕು ಗಂಡು ಮಕ್ಕಳ ನಂತರ ಹುಟ್ಟಿದ ಏಕಮಾತ್ರ ಹೆಣ್ಣುಸಂತಾನ. ಊರಿನ ಮಠದ ಶಾಲೆಯಲ್ಲಿ ಮ್ಯಾಟ್ರಿಕ್‍ವರೆಗೆ ಓದಿದ ಶಾಂತಿಲಕ್ಷ್ಮಿ ಮುಂದೆ ಕಾಲೇಜು ಸೇರಲು ಪಟ್ಟಣಕ್ಕೆ ಹೋಗುತ್ತೆನೆಂದು ಹಟ ಹಿಡಿದಾಗ ಶಾಂತವೀರಪ್ಪಗೌಡರು ಹೌಹಾರಿದ್ದರು. ದಿನದಿನಕ್ಕೂ ವಯಸ್ಸನ್ನು ಮೀರಿ ಬೆಳೆಯುತ್ತಿರುವ ಮಗಳ ದೇಹ ಗೌಡರ ಆತಂಕಕ್ಕೆ ಕಾರಣವಾಗಿತ್ತು. ಶಾಂತಿಲಕ್ಷ್ಮಿ ಒಳ್ಳೆ ಸ್ಪುರದ್ರೂಪಿ ಹೆಣ್ಣು. ಬೆಳದಿಂಗಳ ಬಣ್ಣದ ದೇಹ ಕಾಂತಿ, ಒತ್ತಾದ ಕಪ್ಪು ತಲೆಗೂದಲು, ತಿದ್ದಿ ತೀಡಿದ ಹುಬ್ಬು, ವಿಶಾಲ ನೇತ್ರಗಳು, ನೀಳ ಮೂಗು, ತುಂಬಿದೆದೆ, ಸಣ್ಣ ನಡು, ಬಾಳೆದಿಂಡಿನಂತಹ ಕಾಲುಗಳು ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆನ್ನುವಷ್ಟು ರೂಪವತಿ. ದಾರಿಯಲ್ಲಿ ಅವಳು ನಡೆದು ಹೋಗುತ್ತಿದ್ದರೆ ಅವಳೆದೆಯ ಕುಲುಕಾಟಕ್ಕೆ ಯುವಕರಿರಲಿ ವಯಸ್ಸಾದವರ ಎದೆ ಕೂಡ ಝಲ್ ಎನ್ನುತ್ತಿತ್ತು. ಊರಿನ ಅದೆಷ್ಟೋ ಪಡ್ಡೆ ಹುಡುಗರು ಶಾಂತಿಲಕ್ಷ್ಮಿಯ ನೆನಪಲ್ಲಿ ರಾತ್ರಿಯೆಲ್ಲ ತಮ್ಮ ಮೈ ಬಿಸಿಯಾಗಿಸಿಕೊಂಡು ರೋಮಾಂಚನಗೊಳ್ಳುತ್ತಿದ್ದರು. ರೂಪವತಿಯಾದ ಮಗಳನ್ನು ದೂರದ ಊರಿನಲ್ಲಿಟ್ಟು ಕಾಲೇಜಿಗೆ ಸೇರಿಸುವುದು ಗೌಡರಿಗೆ ಸುತಾರಾಂ ಇಷ್ಟವಿರಲಿಲ್ಲ. ಶಾಂತಿಲಕ್ಷ್ಮಿ ಕೆಲವು ದಿನ ಅನ್ನ ನೀರು ಬಿಟ್ಟು ಮುಷ್ಕರ ಹೂಡಿದಳಾದರೂ ಕೊನೆಗೆ ಮನೆಯವರೆಲ್ಲರ ಪ್ರತಿರೋಧಕ್ಕೆ ಮಣಿದು ಕ್ರಮೇಣ ಬದಲಾದ ಈ ಜೀವನಗತಿಗೆ ಹೊಂದಿಕೊಂಡಳು. ದಿನದ ಬಹುಪಾಲು ವೇಳೆಯನ್ನು ಟೀವಿ ನೋಡುವುದು ಇಲ್ಲವೆ ಕಥೆ ಕಾದಂಬರಿಗಳ ಓದಿನಲ್ಲಿ ಕಳೆಯುತ್ತಿದ್ದ ಶಾಂತಿಲಕ್ಷ್ಮಿಗೆ ವಯೋಸಹಜವಾಗಿ ಪ್ರೀತಿ ಪ್ರಣಯದ ಸಿನಿಮಾ, ಕಥೆ, ಕಾದಂಬರಿಗಳು ಇಷ್ಟವಾಗತೊಡಗಿದವು. ಸಿನಿಮಾ ಮತ್ತು ಕಾದಂಬರಿಗಳ ನಾಯಕರಲ್ಲಿ ತನ್ನ ಕನಸಿನ ರಾಜಕುಮಾರನನ್ನು ಹುಡುಕುತ್ತಿದ್ದ ಶಾಂತಿಲಕ್ಷ್ಮಿಗೆ ಮನೆಯಲ್ಲಿ ಸಭೆ ಸೇರಿದ ದಿನದಿಂದ ದೊಕಾಚಿ ಮೇಷ್ಟ್ರ ಚಿತ್ರ ಕಣ್ಣೊಳಗೆ ಕುಳಿತು ಅವಳೆದೆಯಲ್ಲಿ ಪ್ರೇಮಗೀತೆ ಪಲ್ಲವಿಸತೊಡಗಿತು. ಡಾಂಬರು ಬಣ್ಣದ ಬೋಳು ಬೋಳಾದ ತಲೆಯ ಕಡ್ಡಿಪೈಲ್ವಾನನಂತಿರುವ ಈ ಮೇಷ್ಟ್ರು ಅನಾಮತ್ತು ನಲವತ್ತಾರು ಕಿಲೋ ತೂಕದ ದೇಹದೊಂದಿಗೆ ಅವಳ ಹೃದಯದಲ್ಲಿ ಪ್ರತಿಷ್ಠಾಪನೆಗೊಂಡಿದ್ದು ಸ್ವತ: ಶಾಂತಿಲಕ್ಷ್ಮಿಗೂ ಸೋಜಿಗದ ವಿಷಯವಾಗಿತ್ತು.

ಮಠದ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಆಗಾಗ ಪಾಲ್ಗೊಳ್ಳುತ್ತಿದ್ದ ಶಾಂತಿಲಕ್ಷ್ಮಿಗೆ ದೊಕಾಚಿ ಮೇಷ್ಟ್ರನ್ನು ಸುಲಭವಾಗಿ ಸಂಧಿಸಲು ಯಾವ ಅಡೆತಡೆಯೂ ಇರಲಿಲ್ಲ. ಬೇರೆ ವಿಚಾರಗಳಲ್ಲಿ ಮೇಷ್ಟ್ರು ಎಡವಟ್ಟು ಎಂದೆನಿಸಿದರೂ ಹೆಣ್ಣಿನ ವಿಷಯದಲ್ಲಿ ತುಂಬ ಸ್ಟ್ರಿಕ್ಟ್ ಎಂಬ ನಂಬಿಕೆ ಗೌಡರಿಗಿದ್ದುದ್ದರಿಂದಲೇ ಶಾಂತಿಲಕ್ಷ್ಮಿ ಮತ್ತು ಮೇಷ್ಟ್ರ ಭೇಟಿ ವಿಷಯದಲ್ಲಿ ಅವರು ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಅದುವರೆಗೂ ಬಡ ಮತ್ತು ಕೆಳವರ್ಗದ ಜನರಷ್ಟೇ ತಮ್ಮ ವೈಚಾರಿಕ ಕ್ರಾಂತಿಯ ವಾರಸುದಾರರು ಎಂದು ಭಾವಿಸಿದ್ದ ದೊಕಾಚಿ ಮೇಷ್ಟ್ರು  ಶಾಂತಿಲಕ್ಷ್ಮಿಯ ಜೊತೆಗಿನ ಒಡನಾಟದಿಂದ ತಮ್ಮ ವೈಚಾರಿಕ ಕ್ರಾಂತಿಗೆ ಹೊಸ ನೆಲೆ ದೊರೆತ ಖುಷಿಯಿಂದ ಪುಳಕಿತರಾಗಿ ಅವಳಿಗೆ ತೇಜಸ್ವಿ, ಅನಂತಮೂರ್ತಿ, ದೇವನೂರರ ಪುಸ್ತಕಗಳನ್ನೆಲ್ಲ ಓದುವಂತೆ ಶಿಫಾರಸ್ಸು ಮಾಡಿದ್ದಲ್ಲದೆ ತಮ್ಮಲ್ಲಿದ್ದ ಒಂದೆರಡು ಪುಸ್ತಕಗಳನ್ನು ಓದಲು ಕೊಟ್ಟು ರೋಮಾಂಚನಗೊಂಡರು. ಆರಂಭದಲ್ಲಿ ಉತ್ಸಾಹ ತೋರಿದ ಶಾಂತಿಲಕ್ಷ್ಮಿ ಬರಬರುತ್ತ ಮೇಷ್ಟ್ರ ವೈಚಾರಿಕ ಕ್ರಾಂತಿಯ ವಿಚಾರಗಳಿಗೆ ರೋಸಿ ಅವರ ದಡ್ಡ ತಲೆಗೆ ನಿಜವಾದ ಅರ್ಥ ಹೊಳೆಯುತ್ತಿಲ್ಲವೆಂದು ಗೊತ್ತಾದದ್ದೆ ಆಪರೇಷನ್ ಲವ್ ಕಾರ್ಯಾಚರಣೆಗೆಂದು ಖುದ್ದು ಅಖಾಡಕ್ಕಿಳಿದಳು. ಚಿಕ್ಕಪ್ಪನ ಮಗ ಗುರುಲಿಂಗನ ಮೂಲಕ ಪುಸ್ತಕದಲ್ಲಿ ಪ್ರೇಮ ಪತ್ರವನ್ನು ಬಚ್ಚಿಟ್ಟು ಮೇಷ್ಟ್ರಿಗೆ ರವಾನಿಸಿದವಳು ಪ್ರತ್ಯುತ್ತರಕ್ಕಾಗಿ ಕ್ಷಣವನ್ನು ಯುಗವಾಗಿಸಿ ಕಾಯ್ದಳು. ಕೊನೆಗೂ ಬಂದಿದ್ದು ಪ್ರತ್ಯುತ್ತರವಲ್ಲ ಅವಳದೇ ಪತ್ರ ಅಲ್ಲಲ್ಲಿ ದೀರ್ಘ, ಒತ್ತಕ್ಷರ, ಅಲ್ಪಪ್ರಾಣ, ಮಹಾಪ್ರಾಣಗಳ ತಿದ್ದುಪಡಿಯೊಂದಿಗೆ ಮರಳಿ ಬಂದಿತ್ತು. ಪತ್ರ ಕೈಗಿತ್ತ ಗುರುಲಿಂಗ ಹೇಳಿದ ‘ಅಕ್ಕಾ ಮೇಷ್ಟ್ರು ಹೇಳಿದರು ನೀನು ಗ್ರಾಮರ್‍ನಲ್ಲಿ ಭಾಳ ವೀಕ್ ಅಂತೆ’ ಅಸಹಾಯಕತೆಯಿಂದ ಶಾಂತಿಲಕ್ಷ್ಮಿ ತಲೆ ಚಚ್ಚಿಕೊಂಡಳು. ಈಗಾಗಲೇ ಒಂದು ಹೆಜ್ಜೆ ಮುಂದಿಟ್ಟವಳಿಗೆ ಇನ್ನೊಂದು ಹೆಜ್ಜೆ ಮುಂದಿಡುವುದು ಅಷ್ಟೇನು ದೊಡ್ಡ ಕಷ್ಟದ ಕೆಲಸವಾಗಿರಲಿಲ್ಲ. ಆ ದಿನ ಮನೆಯ ಮೇಲಿನ ಮಹಡಿಯಲ್ಲಿ ದೊಕಾಚಿ ಮೇಷ್ಟ್ರೊಂದಿಗೆ ಸಾಹಿತ್ಯದ ಚರ್ಚೆಯಲ್ಲಿ ತೊಡಗಿದ್ದಾಗ ಶಾಂತಿಲಕ್ಷ್ಮಿ ಇದ್ದಕ್ಕಿದ್ದಂತೆ ಮೈಮೇಲಿನ ಬಟ್ಟೆ ಕಿತ್ತೊಗೆದು ಹುಟ್ಟುಡುಗೆಯಲ್ಲಿ ನಿಂತು ‘ನೋಡಿ ಮೇಷ್ಟ್ರೆ ಏನನಿಸುತ್ತೆ’ ಎಂದು ಕೇಳಿದಳು. ದೊಕಾಚಿ ಮೇಷ್ಟ್ರು ಏಕಕಾಲಕ್ಕೆ ಒಂದು ತೆರನಾದ ನಿರ್ಲಿಪ್ತತೆ ಮತ್ತು ಭಕ್ತಿಯ ಭಾವದಿಂದ ‘ಅಕ್ಕ ಮಹಾದೇವಿಯ ದರುಶನವಾದ ಅನುಭವವಾಯಿತು’ ಎಂದವರೆ ಎದ್ದು ಶಾಂತಿಲಕ್ಷ್ಮಿಯ ಕಾಲಿಗೆರಗಿ ತನುಕರಗದವರಲ್ಲಿ ವಚನ ವಾಚಿಸತೊಡಗಿದರು. ಶಾಂತಲಕ್ಷ್ಮಿಯ ಹೃದಯದಲ್ಲಿ ಈಗ ಪ್ರೇಮದ ಜಾಗದಲ್ಲಿ ಕ್ರೋಧ ಹೆಡೆಯಾಡತೊಡಗಿತು. ಪ್ರೀತಿಯ ಜಾಗವನ್ನು ಸೇಡು ಆಕ್ರಮಿಸಿಕೊಂಡಿತು. ಮೈಗೆ ಅರೆಬರೆ ಬಟ್ಟೆ ಸುತ್ತಿಕೊಂಡವಳೆ ಮೇಷ್ಟ್ರನ್ನು ಬಿಗಿದಪ್ಪಿ ಕಿಟಾರನೆ ಕಿರುಚಿಕೊಂಡಳು. ಆ ಸಂಜೆಯೇ ಸಭೆ ಸೇರಿದ ಮಠದ ಆಡಳಿತ ಮಂಡಳಿ ಅನುಚಿತ ವರ್ತನೆಯ ಕಾರಣ ನೀಡಿ ದೊಕಾಚಿ ಮೇಷ್ಟ್ರನ್ನು ನೌಕರಿಯಿಂದ ವಜಾಗೊಳಿಸಿದ್ದಾಗಿ ಆದೇಶ ಹೊರಡಿಸಿತು. ಮೇಷ್ಟ್ರ ವೈಚಾರಿಕ ಕ್ರಾಂತಿಯನ್ನು ದಮನಗೊಳಿಸಲು ಮಠದ ಆಡಳಿತ ಮಂಡಳಿ ಶಾಂತಿಲಕ್ಷ್ಮಿಯನ್ನು ಬಳಸಿಕೊಂಡಿತು ಎನ್ನುವ ಅನುಮಾನದ ಮಾತುಗಳು ಅಲ್ಲಲ್ಲಿ ಕೇಳಿಬಂದವು.

* * *

ಇದೆಲ್ಲ ನಡೆದು ಹಲವು ವರ್ಷಗಳೇ ಗತಿಸಿ ಹೋಗಿವೆ. ಶಾಂತಿಲಕ್ಷ್ಮಿಗೆ ಸೋದರ ಮಾವನ ಮಗನೊಂದಿಗೆ ಮದುವೆಯಾಗಿ ಎರಡು ಮಕ್ಕಳಾಗಿವೆ. ಮಠ ಈಗ ಮೊದಲಿಗಿಂತ ದೊಡ್ಡದಾಗಿ ಬೆಳೆದು ಸುತ್ತಲೂ ಕಾಲೇಜು, ವಾಣಿಜ್ಯ ಸಂಕೀರ್ಣಗಳು ತಲೆ ಎತ್ತಿವೆ. ಕೇರಿಯವರ ತಲೆಗಳನ್ನು ಅಪ್ಪಣ್ಣ ಮತ್ತು ಅವನ ಮಕ್ಕಳ ಕ್ಷೌರಿಕ ವೃತ್ತಿಯ ವ್ಯಾಪ್ತಿಯಿಂದ ಹೊರಗೇ ಇರಿಸಲಾಗಿದೆ. ಕಾಫ್ಕಾ, ನೆರೂಡ, ಕಮೂ, ಬ್ರೆಕ್ಟ್, ಮಾರ್ಕ್ವೇಜ್ ಇವರೆಲ್ಲ ಗೌಡರ ಹೊಲದಲ್ಲಿ ಕೂಲಿ ಆಳುಗಳಾಗಿ ದುಡಿಯುತ್ತ ಬದುಕಿನ ಬಂಡಿ ಎಳೆಯುತ್ತಿರುವರು. ಮೊದಲಿಗಿಂತ ವಯಸ್ಸಾದಂತೆ ಕಾಣುತ್ತಿರುವ ದೊಕಾಚಿ ಮೇಷ್ಟ್ರು ‘ಕ್ರಾಂತಿ ಆಗ್ಬೇಕರಯ್ಯ ಕ್ರಾಂತಿ. ಒಂದು ವೈಚಾರಿಕ ಕ್ರಾಂತಿಯಾಗಿ ಜನರಲ್ಲಿ ತಿಳಿವಳಿಕೆ ಮೂಡಿದಾಗಲೇ ಬದಲಾವಣೆ ಸಾಧ್ಯ ನೋಡಿ’ ಎಂದು ಎದುರು ಸಿಕ್ಕಿದವರಿಗೆಲ್ಲ ಹೇಳುತ್ತ ಊರ ತುಂಬ ಈಗಲೂ ತಿರುಗಾಡುತ್ತಿರುತ್ತಾರೆ.                 

---000---


-ರಾಜಕುಮಾರ ಕುಲಕರ್ಣಿ

Saturday, October 3, 2020

ಈ ಹೊತ್ತಿನ ತುರ್ತು ಇ-ಹೊತ್ತಿಗೆ

         


(ದಿನಾಂಕ ೧೨.೦೮.೨೦೨೦ ರ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ)

       ಕೊರೊನಾ ವೈರಾಣು ಸೃಷ್ಟಿಸಿರುವ ಈ ಆತಂಕದ ಸನ್ನಿವೇಶದಲ್ಲಿ ಹಲವು ಉದ್ಯಮಗಳಂತೆ ಪುಸ್ತಕೋದ್ಯಮ ಕೂಡ ತನ್ನ ಮಗ್ಗಲು ಬದಲಿಸಿದೆ. ಈ ಮೊದಲು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗಷ್ಟೇ ಸೀಮಿತವಾಗಿದ್ದ ಇ-ಪುಸ್ತಕ ಎನ್ನುವ ಪರಿಕಲ್ಪನೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೂ ಕಾಲಿಟ್ಟಿದೆ. ಲಾಕ್‍ಡೌನ್ ಅವಧಿಯಲ್ಲಿ ಪುಸ್ತಕ ಪ್ರಕಟಣೆಯ ಕೆಲಸ ಸ್ಥಗಿತಗೊಂಡಿದ್ದರ ಕಾರಣ ಕೆಲವು ಪ್ರಕಾಶಕರು ಇ-ಪುಸ್ತಕದ ಮೊರೆ ಹೋದರು. ‘ಛಂದ’ದ ವಸುಧೇಂದ್ರ ತಮ್ಮ ಪ್ರಕಾಶನದ ಎಲ್ಲ ಪುಸ್ತಕಗಳನ್ನು 50 ಪ್ರತಿಶತ ರಿಯಾಯಿತಿ ದರದಲ್ಲಿ ಇ-ಪುಸ್ತಕ ರೂಪದಲ್ಲಿ ಓದುಗರಿಗೆ ಒದಗಿಸುವ ವ್ಯವಸ್ಥೆ ಮಾಡಿದರು. ವಸುಧೇಂದ್ರರ ಈ ಯೋಜನೆ ಅನೇಕ ಪ್ರಕಾಶಕರಿಗೆ ಸ್ಪೂರ್ತಿ ನೀಡಿ ಅವರು ಕೂಡ ಭವಿಷ್ಯದಲ್ಲಿ ಇ-ಪುಸ್ತಕ ಪ್ರಕಟಣೆಯನ್ನು ಕಾರ್ಯರೂಪಕ್ಕೆ ತರುವ ಮಾತುಗಳನ್ನಾಡಿದರು. ಮನೋಹರ ಗ್ರಂಥಮಾಲೆಯವರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಪ್ರಕಾಶನ ಸಂಸ್ಥೆಯಲ್ಲಿ ಈ ಮೊದಲು ಪ್ರಕಟವಾದ ಪುಸ್ತಕಗಳ ಡಿಜಿಟಲೀಕರಣದ ಕೆಲಸ ಆರಂಭಗೊಂಡಿದೆ ಎಂದು ಹೇಳಿದರು.

    ಕನ್ನಡದ ಬಹುತೇಕ ಪ್ರಕಾಶಕರು ಇ-ಪುಸ್ತಕದ ಕುರಿತು ಆಸ್ಥೆ ತಳೆಯಲು ಕಾರಣಗಳಿಲ್ಲದಿಲ್ಲ. ಪುಸ್ತಕ ಪ್ರಕಟಣೆಗಾಗಿ ಬಳಸುವ ಕಚ್ಚಾ ಸಾಮಗ್ರಿಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಪ್ರಕಾಶಕರಿಗೆ ಪುಸ್ತಕ ಪ್ರಕಟಣೆ ಎನ್ನುವುದು ಆರ್ಥಿಕವಾಗಿ ಹೊರೆಯಾಗುತ್ತಿದೆ. ಕಾಗದ, ಮುದ್ರಣದ ಖರ್ಚು, ಲೇಖಕರಿಗೆ ಗೌರವಧನ, ಪುಸ್ತಕಗಳ ಸಾಗಾಣಿಕೆಯ ವೆಚ್ಚ ಇದನ್ನೆಲ್ಲ ಪ್ರಕಾಶಕರು ಭರಿಸಬೇಕಾಗಿದೆ. ಈ ನಡುವೆ ಪ್ರಕಟವಾದ ಪುಸ್ತಕಗಳನ್ನು ವರ್ಣರಂಜಿತ ಸಮಾರಂಭದ ಅದ್ದೂರಿ ವೇದಿಕೆಯ ಮೇಲೆ ಬಿಡುಗಡೆ ಮಾಡಬೇಕಾದ ಅನಿವಾರ್ಯತೆ. ಪುಸ್ತಕ ಬಿಡುಗಡೆಯ ಆಹ್ವಾನ ಪತ್ರಿಕೆ, ಸಮುದಾಯ ಭವನದ ಬಾಡಿಗೆ, ಗಣ್ಯರ ಅಧ್ಯಕ್ಷತೆ, ಆಹ್ವಾನಿತರಿಗೆ ಭೋಜನ/ಉಪಹಾರದ ವ್ಯವಸ್ಥೆ, ಪತ್ರಿಕಾ ಮಾಧ್ಯಮದವರಿಗೆ ಗೌರವ ಪ್ರತಿ ಹೀಗೆ ಅನೇಕ ಗಿಮಿಕ್‍ಗಳನ್ನು ಪುಸ್ತಕ ಬಿಡುಗಡೆಗಾಗಿ ಅನುಸರಿಸಬೇಕು. ಪುಸ್ತಕಗಳ ಬಿಡುಗಡೆಯ ನಂತರವೂ ಚರ್ಚೆ, ಸಂವಾದಗಳ ಮೂಲಕÀ ವ್ಯಾಪಕ ಪ್ರಚಾರ ಒದಗಿಸಬೇಕು. ಈ ಎಲ್ಲ ತಂತ್ರಗಳನ್ನು ಅನುಸರಿಸಿದಾಗ ಮಾತ್ರ ಪ್ರಕಾಶಕ ಪುಸ್ತಕೋದ್ಯಮದಲ್ಲಿ ತಳವೂರಿ ನಿಲ್ಲಲು ಸಾಧ್ಯ ಎನ್ನುವಂಥ ವಾತಾವರಣ ನಿರ್ಮಾಣವಾಗಿದೆ.

    ಕನ್ನಡ ಪುಸ್ತಕೋದ್ಯಮದಲ್ಲಿ ಪ್ರಕಾಶಕರು ಎದುರಿಸುತ್ತಿರುವ ಇನ್ನೊಂದು ಮುಖ್ಯ ಸಮಸ್ಯೆ ಎಂದರೆ ಅದು ಓದುಗರು ಪುಸ್ತಕಗಳ ಖರೀದಿಯಲ್ಲಿ ಅಪೇಕ್ಷಿಸುತ್ತಿರುವ ಅಧಿಕ ಪ್ರಮಾಣದ ರಿಯಾಯಿತಿ. ಇಂಗ್ಲಿಷ್ ಭಾಷೆಯಲ್ಲಿನ ಪುಸ್ತಕಗಳ ಮಾರಾಟಕ್ಕಾಗಿ ರಿಯಾಯಿತಿಯಲ್ಲಿ ತೋರಿಸುತ್ತಿರುವ ಧಾರಾಳತನ ಕನ್ನಡ ಭಾಷೆಯ ಪುಸ್ತಕಗಳ ಮಾರಾಟಕ್ಕೆ ತೊಡಕಾಗಿ ಪರಿಣಮಿಸಿದೆ. ಇಂಗ್ಲಿಷ್ ಪುಸ್ತಕಗಳ ಮಾರಾಟಕ್ಕೆ ವಿಸ್ತೃತ ಮಾರುಕಟ್ಟೆ ಇರುವುದರಿಂದ ಅದೇ ಧಾರಾಳತನವನ್ನು ಸೀಮಿತ ಮಾರುಕಟ್ಟೆ ಹೊಂದಿರುವ ಕನ್ನಡ ಪುಸ್ತಕಗಳ ಖರೀದಿಯಲ್ಲಿ ಅಪೇಕ್ಷಿಸುವುದು ತಪ್ಪು. ಇಂಥ ತಪ್ಪುಗಳು ಓದುಗರಿಗೆ ಮನವರಿಕೆಯಾಗಬೇಕು.

ಮಧ್ಯವರ್ತಿಗಳು ಅಂದರೆ ಮಾರಾಟಗಾರರು ವಸ್ತುಗಳ ಖರೀದಿಯಲ್ಲಿ ಉತ್ಪಾದಕರಿಗೆ ಮುಂಗಡ ಹಣ ಪಾವತಿಸಿದ ಉದಾಹರಣೆಯೇ ಇಲ್ಲ. ವಸ್ತುಗಳ ಮಾರಾಟದ ನಂತರ ಉತ್ಪಾದಕರಿಗೆ ಹಣ ಪಾವತಿಸುವ ರೂಢಿಯನ್ನು ಅನುಚಾನವಾಗಿ ಪಾಲಿಸಿಕೊಂಡು ಬರಲಾಗುತ್ತಿದೆ. ಈ ರೂಢಿ ಪುಸ್ತಕಗಳ ಮಾರಾಟಕ್ಕೂ ಅನ್ವಯವಾಗುತ್ತಿದೆ. ಸಾಮಾನ್ಯವಾಗಿ ಪುಸ್ತಕ ಮಾರಾಟಗಾರರು ಪ್ರಕಾಶಕರಿಗೆ ಹಣವನ್ನು ವಿಳಂಬವಾಗಿ ಪಾವತಿಸುವರು. ಪ್ರಕಾಶಕರು ತಮ್ಮ ಪುಸ್ತಕಗಳ ಮಾರಾಟಕ್ಕಾಗಿ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಪುಸ್ತಕ ವ್ಯಾಪಾರಿಗಳನ್ನು ಅವಲಂಬಿಸಿರುವರು. ಶಿಕ್ಷಣ ಸಂಸ್ಥೆಗಳಾಗಲಿ ಮತ್ತು ಪುಸ್ತಕ ವ್ಯಾಪಾರಿಗಳಾಗಲಿ ಮುಂಗಡ ಹಣ ಪಾವತಿಸಿ ಪ್ರಕಾಶಕರಿಂದ ಪುಸ್ತಕಗಳನ್ನು ಖರೀದಿಸುವುದಿಲ್ಲ. ಮಾರಟವಾದ ಪುಸ್ತಕಗಳ ಹಣ ಪಡೆಯುವುದಕ್ಕಾಗಿ ಪ್ರಕಾಶಕರು ಹಲವು ತಿಂಗಳುಗಳ ಕಾಲ ಕಾಯಬೇಕಾಗುತ್ತದೆ. ಹಣ ಪಡೆಯುವುದಕ್ಕಾಗಿ ಪ್ರಕಾಶಕರು ನ್ಯಾಯಾಲಯದ ಮೊರೆ ಹೋಗಬೇಕಾದ ಸಂದರ್ಭಗಳೂ ಉಂಟು. ಕೆಲವೊಮ್ಮೆ ಖರೀದಿಯಾದ ಪುಸ್ತಕಗಳು ತಿರಸ್ಕೃತಗೊಂಡು ಮತ್ತೆ ಮರಳಿ ಪ್ರಕಾಶಕರ ಕೈಸೇರುವುದುಂಟು.

    ಪ್ರಕಾಶಕರಿಗೆ ಆರ್ಥಿಕವಾಗಿ ಅನುಕೂಲವಾಗಲೆಂದು ಸಾರ್ವಜನಿಕ ಗ್ರಂಥಾಲಯಗಳಿಗೆ ಇಂತಿಷ್ಟು ಸಂಖ್ಯೆಯಲ್ಲಿ ಪುಸ್ತಕಗಳನ್ನು ಮಾರಾಟ ಮಾಡುವ ಯೋಜನೆ ಚಾಲ್ತಿಯಲ್ಲಿದೆ. ಆದರೂ ಈ ಯೋಜನೆಯಲ್ಲಿಯೂ ಅನೇಕ ಸಮಸ್ಯೆಗಳು ಮತ್ತು ಲೋಪದೋಷಗಳಿವೆ. ಸಾರ್ವಜನಿಕ ಗ್ರಂಥಾಲಯಕ್ಕೆ ಪುಸ್ತಕ ಖರೀದಿಸುವಾಗ ಪುಸ್ತಕದ ಮುಖಬೆಲೆಯ ಬದಲಾಗಿ ಪ್ರತಿಪುಟಕ್ಕೆ ಇಂತಿಷ್ಟು ಪೈಸೆಗಳೆಂದು ಸರ್ಕಾರ ನಿಗದಿಪಡಿಸಿದೆ. ಜೊತೆಗೆ ಖರೀದಿಸುವ ಪುಸ್ತಕದ ಪ್ರತಿಗಳ ಸಂಖ್ಯೆಯನ್ನು ಕೂಡ ನಿಗದಿಪಡಿಸಲಾಗಿದೆ. ಈ ಎಲ್ಲ ನಿರ್ಬಂಧನೆಗಳಿಗೆ ಒಳಗಾಗಿಯೂ ಪ್ರಕಾಶಕರು ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಮಾರಾಟ ಮಾಡುವುದೇ ಅದೊಂದು ದೊಡ್ಡ ಸಾಹಸವಾಗಿ ಪರಿಣಮಿಸಿದೆ. ಲಾಬಿ, ಶಿಫಾರಸ್ಸು, ಅಧಿಕಾರಿಗಳ ಓಲೈಕೆಯಂಥ ತಂತ್ರಗಳ ಮೊರೆ ಹೋಗಬೇಕಾಗುವುದು. ಜೊತೆಗೆ ಸಾರ್ವಜನಿಕ ಗ್ರಂಥಾಲಯಗಳಿಗೆಂದೇ ಪುಸ್ತಕಗಳನ್ನು ಪ್ರಕಟಿಸುವ ಪ್ರಕಾಶಕರ ಪೈಪೋಟಿಯನ್ನು ಎದುರಿಸಬೇಕು. ಇಂಥ ಸನ್ನಿವೇಶದಲ್ಲಿ ಪುಸ್ತಕ ಪ್ರಕಟಣೆಯಲ್ಲಿ ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುವ ಪ್ರಕಾಶನ ಸಂಸ್ಥೆಗಳು ಉಳಿದು ಬೆಳೆಯುವುದು ಕಷ್ಟಸಾಧ್ಯವಾದ ಸಂಗತಿ.

     ಕನ್ನಡ ಪುಸ್ತಕೋದ್ಯಮ ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಹೊತ್ತಿನಲ್ಲಿ ಇ-ಪುಸ್ತಕ ಪ್ರಕಟಣೆಯು ಪ್ರಕಾಶಕರಿಗೆ ಅದೊಂದು ಪರಿಹಾರ ಮಾರ್ಗವಾಗಿ ಕಾಣಿಸುತ್ತಿದೆ. ಪ್ರಕಟಣೆಗೆ ಅಗತ್ಯವಾದ ಕಚ್ಚಾ ಸಾಮಗ್ರಿಗಳ ಖರೀದಿ, ಪ್ರಕಟಿತ ಪುಸ್ತಕಗಳ ಬಿಡುಗಡೆ ಸಮಾರಂಭ, ಗಣ್ಯರಿಗೆ ಗೌರವ ಪ್ರತಿ, ಪುಸ್ತಕಗಳ ಸಾಗಾಣಿಕೆ ಈ ಎಲ್ಲ ಖರ್ಚುಗಳನ್ನು ಉಳಿಸುವ ‘ಇ-ಪುಸ್ತಕ’ದ ಪರಿಕಲ್ಪನೆಯೇ ಪ್ರಕಾಶಕರಿಗೆ ಈ ಯೋಜನೆಯತ್ತ ಹೊರಳುವಂತೆ ಉತ್ತೇಜಿಸುತ್ತಿದೆ. ಪರಿಣಾಮವಾಗಿ ಅನೇಕ ಪ್ರಕಾಶಕರು ಇ-ಪುಸ್ತಕ ಯೋಜನೆಯನ್ನು ಆದಷ್ಟು ಬೇಗನೆ ಅನುಷ್ಠಾನಗೊಳಿಸುವ ಉತ್ಸಾಹದಲ್ಲಿರುವರು.

ಪ್ರಕಾಶಕರು ಇ-ಪುಸ್ತಕದ ಮೊರೆ ಹೋಗುತ್ತಿರುವ ಸಂದರ್ಭ ಈ ಯೋಜನೆಯ ಅಂತಿಮ ಫಲಾನುಭವಿಗಳ ಅಂದರೆ ಓದುಗರ ಕುರಿತು ವಿವೇಚಿಸುವುದು ಒಳಿತು. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‍ಗಳನ್ನು ಬಳಸಿ ಆನ್‍ಲೈನ್ ಮೂಲಕ ಪುಸ್ತಕಗಳನ್ನು ಖರೀದಿಸುವ ಓದುಗರ ಸಂಖ್ಯೆಯೇ ವಿರಳವಾಗಿರುವಾಗ ಇನ್ನು ಇ-ಪುಸ್ತಕಗಳಿಗೆ ಓದುಗರನ್ನು ಲಭ್ಯವಾಗಿಸುವುದೊಂದು ದೊಡ್ಡ ಸಾಹಸವೇ ಸರಿ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇ-ಪುಸ್ತಕವನ್ನು ಅಸಂಖ್ಯಾತ ಓದುಗರಿಗೆ ಸುಲಭವಾಗಿ ತಲುಪಿಸಬಹುದು. ಆದರೆ ಇದೇ ಮಾತನ್ನು ಕನ್ನಡ ಸಾಹಿತ್ಯ ಕೃತಿಗಳನ್ನು ಓದುವ ಓದುಗರಿಗೆ ಅನ್ವಯಿಸಿ ಹೇಳುವುದು ತಪ್ಪು ನಿರ್ಧಾರವಾಗುತ್ತದೆ. ವೃತ್ತಿಯ ಕಾರಣದಿಂದ ಪ್ರತಿನಿತ್ಯ ಬಹುಪಾಲು ಸಮಯವನ್ನು ಇ-ಪುಸ್ತಕಗಳು, ಇ-ನಿಯತಕಾಲಿಕೆಗಳ ನಡುವೆಯೇ ಕಳೆಯುವ ನನಗೆ ಕನ್ನಡ ಸಾಹಿತ್ಯ ಕೃತಿಗಳನ್ನು ಪ್ರಕಟಿತ ಪುಸ್ತಕ ರೂಪದಲ್ಲಿ ಓದುವುದೇ ಚೆಂದದ ಸಂಗತಿ. ಅಲ್ಲಲ್ಲಿ ಸಾಲುಗಳ ಕೆಳಗೆ ಗೆರೆ ಎಳೆದು, ಪ್ರಶ್ನಾರ್ಥಕ ಚಿನ್ಹೆ ಮೂಡಿಸಿ, ಪಕ್ಕದ ಖಾಲಿಯಿರುವ ಮಾರ್ಜಿನ್‍ನಲ್ಲಿ ಟಿಪ್ಪಣಿ ಬರೆದು ಪುಸ್ತಕವನ್ನು ಓದಿದಾಗಲೇ ಅದರಲ್ಲಿನ ವಿಚಾರಗಳು ಅಂತರಾಳಕ್ಕಿಳಿಯಲು ಸಾಧ್ಯ ಎನ್ನುವ ಮನೋಭಾವದ ಓದುಗರ ಸಂಖ್ಯೆ ಬಹಳಷ್ಟಿದೆ. ಜೊತೆಗೆ ಕನ್ನಡ ಪುಸ್ತಕಗಳನ್ನೊದುವ ಓದುಗರ ವಯೋಮಾನವನ್ನು ಪರಿಗಣನೆಗೆ ತೆಗೆದುಕೊಂಡಾಗ ಅವರಲ್ಲಿ ವೃದ್ಧರ ಮತ್ತು ಮಧ್ಯವಯಸ್ಕರ ಸಂಖ್ಯೆಯೇ ಹೆಚ್ಚು. ಈ ವಯೋಮಾನದ ಓದುಗರನ್ನು ಇ-ಪುಸ್ತಕದ ಓದಿಗೆ ಹೊಂದಿಕೊಳ್ಳುವಂತೆ ಮಾಡುವುದು ಅದೊಂದು ಸವಾಲಿನ ಕೆಲಸ. ಪುಸ್ತಕವನ್ನು ಕೈಯಲ್ಲಿ ಹಿಡಿದು ಅದರ ಹಾಳೆಗಳನ್ನು ಮುಗುಚುತ್ತ ಓದುವಾಗ ದೊರೆಯುವ ಅನುಭೂತಿ ಅದೇ ಪುಸ್ತಕವನ್ನು ಕಂಪ್ಯೂಟರ್ ಪರದೆಯ ಮೇಲೆ ಓದುವಾಗ ಪ್ರಾಪ್ತವಾಗಲಾರದು. ಪ್ರಕಾಶಕರು ಇ-ಪುಸ್ತಕ ಯೋಜನೆಯನ್ನು ಕಾರ್ಯರೂಪಕ್ಕೆ ತಂದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರ ಅಸಂಖ್ಯಾತ ಓದುಗರನ್ನು ಕಳೆದುಕೊಳ್ಳಬಹುದೆನ್ನುವ ಆತಂಕ ಸೃಷ್ಟಿಯಾಗಿದೆ. ಈ ಆತಂಕದ ನಡುವೆಯೂ ಕೆಲವು ಪ್ರಕಾಶಕರು ಪುಸ್ತಕ ತನ್ನ ಮೊದಲಿನ ರೂಪದಲ್ಲೇ ಓದುಗರಿಗೆ ಲಭ್ಯವಾಗಲಿದೆ ಎನ್ನುವ ಭರವಸೆಯ ಮಾತುಗಳನ್ನಾಡಿರುವರು. ಅವರ ಪ್ರಕಾರ ಇ-ಪುಸ್ತಕವು ಸಧ್ಯದ ಪರಿಸ್ಥಿತಿಯನ್ನು ನಿಭಾಯಿಸಲು ಅದೊಂದು ಪರ್ಯಾಯವೇ ವಿನ: ಅದೇ ಪರಿಹಾರವಲ್ಲ.

-ರಾಜಕುಮಾರ ಕುಲಕರ್ಣಿ 



Thursday, September 10, 2020

ದೇವರ ಅಸ್ತಿತ್ವ ಮತ್ತು ನೈತಿಕ ಶ್ರದ್ಧೆ



(ದಿನಾಂಕ  ೨೫.೦೭.೨೦೨೦ ರ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ)

        ಕೊರೊನಾ ಸೋಂಕು ಸೃಷ್ಟಿಸಿದ ಸಮಸ್ಯೆಯ ಬಿಸಿ ಮನುಷ್ಯರಿಗೆ ಮಾತ್ರವಲ್ಲ ಅದು ದೇವರಿಗೂ ತಟ್ಟಿದೆ. ಲಾಕ್‍ಡೌನ್ ಅವಧಿಯಲ್ಲಿ ಕರ್ನಾಟಕವನ್ನೊಳಗೊಂಡಂತೆ ದೇಶದ ಎಲ್ಲ ರಾಜ್ಯಗಳಲ್ಲಿನ ದೇವಾಲಯಗಳಿಗೆ ಬೀಗ ಹಾಕಲಾಗಿತ್ತು. ಗಂಟೆ, ಜಾಗಟೆ, ಕರ್ಪೂರ, ದೀಪ, ಧೂಪ, ಭಕ್ತರ ಗೈರು ಹಾಜರಿಯಿಂದ ದೇವಾಲಯಗಳ ಪ್ರಾಂಗಣಗಳು ಬಿಕೋ ಎನ್ನುತ್ತಿದ್ದವು. ಅರ್ಚಕರ ಮುಖ ಕಳೆಗುಂದಿದ್ದವು. ಒಟ್ಟಾರೆ ಗರ್ಭಗುಡಿಯೊಳಗೆ ಕುಳಿತಿದ್ದ ದೇವರು ತನಗೆ ಬಂದೊದಗಿದ ಪರಿಸ್ಥಿತಿಯಿಂದ ಆತಂಕಕ್ಕೊಳಗಾಗಿದ್ದನೋ ಅಥವಾ ಭಕ್ತಗಣದ ಭಾವಾವೇಷದ ಒತ್ತಡವಿಲ್ಲದೆ ನಿರಾತಂಕನಾಗಿದ್ದನೋ ಆತನೇ ಬಲ್ಲ.

ಲಾಕ್‍ಡೌನ್ ತೆರವುಗೊಳಿಸಿದ ನಂತರ ಸರ್ಕಾರ ದೇವಾಲಯಗಳಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಿದೆ. ಅನ್ಯರಾಜ್ಯಗಳಲ್ಲಿ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿರುವ ಕನ್ನಡ ನಾಡಿನ ದೇವಾಲಯಗಳಲ್ಲಿನ ದೇವರುಗಳಿಗೆ ದರುಶನ ಕರುಣಿಸುವ ಭಾಗ್ಯ ಇನ್ನೂ ದೊರೆತಿಲ್ಲ. ಸೃಷ್ಟಿಕರ್ತನಾದ ದೇವರು ತನ್ನ ಬಿಡುಗಡೆಗಾಗಿ ಹುಲುಮಾನವರ ಅಪ್ಪಣೆಗಾಗಿ ಕಾಯ್ದು ಕುಳಿತುಕೊಳ್ಳಬೇಕಾಗಿದೆ. ಇನ್ನು ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.

ಈ ಅವಧಿಯಲ್ಲಿ ಬೇರೆ ಕ್ಷೇತ್ರಗಳಿಗೆ ಎದುರಾದಂತೆ ದೇವಸ್ಥಾನಗಳಿಗೂ ಆರ್ಥಿಕ ಸಮಸ್ಯೆ ಎದುರಾಯಿತು. ವಿವಿಧ ಪ್ರಕಾರದ ಪೂಜೆಗಳಿಂದ ಮತ್ತು ಹುಂಡಿಗೆ ಭಕ್ತಗಣದಿಂದ ಕಾಣಿಕೆ ರೂಪದಲ್ಲಿ ಸಂದಾಯವಾಗುತ್ತಿದ್ದ ಹಣವನ್ನೇ ದೈನಂದಿನ ಖರ್ಚುವೆಚ್ಚಗಳಿಗೆ ವಿನಿಯೋಗಿಸುತ್ತಿದ್ದ ದೇವಾಲಯಗಳು ಬೀಗಮುದ್ರೆ ಬಿದ್ದದ್ದೆ ತಡ ಸಂಕಷ್ಟಕ್ಕೆ ಒಳಗಾದವು. ಕೆಲವು ದೇವಾಲಯಗಳ ಆಡಳಿತ ಮಂಡಳಿಯವರು ದೇವಾಲಯಗಳ ಒಡೆತನದಲ್ಲಿರುವ ಸ್ಥಿರಾಸ್ತಿಯನ್ನು ಮಾರಾಟಮಾಡಿ ಖರ್ಚುಗಳನ್ನು ನಿಭಾಯಿಸುವ ಹೇಳಿಕೆ ನೀಡಿದರು. ಆಯಾ ರಾಜ್ಯಗಳಲ್ಲಿನ ಸರ್ಕಾರಗಳು ಹಣಕಾಸಿನ ನೆರವು ನೀಡಲು ಮುಂದೆಬಂದವು. ಈ ಸಂದರ್ಭ ದೇವಸ್ಥಾನಗಳ ಸುತ್ತಲಿನ ಸಣ್ಣವ್ಯಾಪಾರಿಗಳನ್ನು ಕುರಿತು ಯಾರೂ ಚಿಂತಿಸಲಿಲ್ಲ ಎನ್ನುವುದು ಬೇರೆ ಮಾತು.

ಮನುಷ್ಯ ಸಾಮಾನ್ಯವಾಗಿ ದೈವಶ್ರದ್ಧೆ ಉಳ್ಳವನು. ನಾವು ಮಾಡುವ ಪ್ರತಿಕೆಲಸಕ್ಕೂ ದೇವರನ್ನು ನಂಬುತ್ತೇವೆ. ದೇವರ ಅಸ್ತಿತ್ವವನ್ನು ಅಲ್ಲಗಳೆದು ಬದುಕುವುದು ಸಾಧ್ಯವೇ ಇಲ್ಲ. ಅದಕ್ಕೆಂದೇ ಇಲ್ಲಿ ಹೆಜ್ಜೆಗೊಂದು ಮಂದಿರ, ಮಸೀದಿ, ಚರ್ಚ್‍ಗಳು ಕಾಣಸಿಗುತ್ತವೆ. ನಮ್ಮ ಬದುಕಿನಲ್ಲಿ ಸಂಭವಿಸುವ ಒಳ್ಳೆಯದು, ಕೆಟ್ಟದು ಎರಡಕ್ಕೂ ದೇವರನ್ನೇ ಹೊಣೆಯಾಗಿಸುತ್ತೇವೆ. ಚಿನ್ನದ ಕಳಶ, ವಜ್ರದ ಕಿರೀಟ, ಬೆಳ್ಳಿಯ ಪಾದರಕ್ಷೆ, ಲಕ್ಷಾಂತರ ರೂಪಾಯಿಗಳ ಕಾಣಿಕೆ ಸಮರ್ಪಿಸಿ ಪುನೀತರಾಗುತ್ತೇವೆ. ತುಪ್ಪ, ಶ್ರೀಗಂಧದ ಚಕ್ಕೆ, ರೇಷ್ಮೆವಸ್ತ್ರವನ್ನು ಅಗ್ನಿಗೆ ಸಮರ್ಪಿಸಿ ಧನ್ಯರಾಗುತ್ತೇವೆ. ಬಡವಿದ್ಯಾರ್ಥಿಗಳ ಶಿಕ್ಷಣಕ್ಕೆ, ಅನಾಥ ವೃದ್ಧರ ಬದುಕಿಗೆ ಒಂದಿಷ್ಟು ಆಸರೆಯಾಗಲು ನೂರೆಂಟು ಬಾರಿ ಯೋಚಿಸುವ ನಾವು ಅದೇ ದೇವಾಲಯಗಳಿಗೆಂದರೆ ಧಾರಾಳಿಗಳಾಗುತ್ತೇವೆ. ಇಲ್ಲಿ ಕುರಿ, ಕೋಳಿ, ಕೋಣಗಳನ್ನು ಬಲಿಕೇಳುವ ಹಿಂಸಾಪ್ರವೃತ್ತಿಯ ದೇವರುಗಳಿದ್ದಂತೆ, ಒಂದುಲೋಟ ನೀರಿಗೂ ಮತ್ತು ತಲೆಗೂದಲಿನ ಸಮರ್ಪಣೆಗೂ ಸಂತೃಪ್ತರಾಗುವ ಅಲ್ಪತೃಪ ದೇವರೂ ಇರುವರು. ಒಟ್ಟಿನಲ್ಲಿ ಮನುಷ್ಯ ತನಗೆ ಅನುಕೂಲವಾಗುವಂತೆ ದೇವರುಗಳನ್ನು ಸೃಷ್ಟಿಸಿಕೊಂಡಿರುವನು. ದೇವರನ್ನು ಸೃಷ್ಟಿ-ಸ್ಥಿತಿ-ಲಯ ಎಂದು ವರ್ಣಿಸುತ್ತೇವೆ. ಆದರೆ ಆ ದೇವರು ಸೃಷ್ಟಿಕರ್ತನೋ ಅಥವಾ ದೇವರನ್ನೇ ಸೃಷ್ಟಿಸುವ ಮನುಷ್ಯ ಸೃಷ್ಟಿಕರ್ತನೋ ಎನ್ನುವ ಗೊಂದಲ ನನ್ನಂಥವರಿಗೆ.

ಇಷ್ಟೆಲ್ಲ ದೈವಶ್ರದ್ಧೆಯಿರುವ ಮನುಷ್ಯ ಈಗ ದೇವಾಲಯಗಳನ್ನು ಪ್ರವೇಶಿಸಲು ಹಿಂಜರಿಯುತ್ತಿದ್ದಾನೆ. ಪ್ರಾಣಭಯ ಎನ್ನುವುದು ಭಕ್ತಿಯನ್ನು ಹಿಂದಿಕ್ಕಿ ಮುನ್ನೆಲೆಗೆ ಬಂದಿದೆ. ಪ್ರಾಣಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎನ್ನುವ ಮನಸ್ಥಿತಿಗೆ ಮನುಷ್ಯ ಬಂದು ತಲುಪಿದ್ದಾನೆ. ಹಾಗಾದರೆ ಮನುಷ್ಯನಲ್ಲಿರುವ ದೈವಶ್ರದ್ಧೆ ಏನಾಯಿತು? ಎನ್ನುವ ಪ್ರಶ್ನೆ ಈ ಸಂದರ್ಭ ಎದುರಾಗುತ್ತದೆ. ಜೊತೆಗೆ ದೈವಶ್ರದ್ಧೆ ಇಲ್ಲದೆಯೂ ಮನುಷ್ಯ ಬದುಕಬಹುದೆನ್ನುವ ವಾಸ್ತವ ಸತ್ಯವೊಂದು ಅನಾವರಣಗೊಂಡಿದೆ. ದೈವಶ್ರದ್ಧೆಗಿಂತಲೂ ಮಿಗಿಲಾದದ್ದು ನೈತಿಕಶ್ರದ್ಧೆ ಎನ್ನುವುದನ್ನು ಮನುಷ್ಯ ಅರ್ಥಮಾಡಿಕೊಳ್ಳಬೇಕಾಗಿದೆ. ನೈತಿಕಶ್ರದ್ಧೆ ಇರುವ ಮನುಷ್ಯ ಎಷ್ಟು ದೇವರುಗಳನ್ನಾದರೂ ನಂಬಲಿ ಯಾವುದೇ ಅಪಾಯವಿಲ್ಲ. ಆದರೆ ದೈವಶ್ರದ್ಧೆಯಿರುವ ಮನುಷ್ಯ ನೀತಿವಂತನಾಗಿರದಿದ್ದರೆ ಅದು ಅತ್ಯಂತ ಅಪಾಯಕಾರಿ.

ದೇವರ ಅಸ್ತಿತ್ವವನ್ನು ಕುರಿತು ವಿಜ್ಞಾನಿ ಆಲ್ಬರ್ಟ್ ಐನ್‍ಸ್ಟೀನ್ ತನ್ನ ‘ಐನ್‍ಸ್ಟೀನ್-ದಿ ಹ್ಯೂಮನ್ ಸೈಡ್’ ಪುಸ್ತಕದಲ್ಲಿ ಹೀಗೆ ವಿವರಿಸುತ್ತಾರೆ ‘ನಾನು ದೇವರು ಎಂಬ ವ್ಯಕ್ತಿಯೊಬ್ಬನಿದ್ದಾನೆ ಎಂದು ನಂಬುವುದಿಲ್ಲ. ದೇವರು ಎಂಬ ವ್ಯಕ್ತಿಯನ್ನು ಕಲ್ಪಿಸಿಕೊಳ್ಳುವುದೂ ನನಗೆ ಸಾಧ್ಯವಿಲ್ಲ. ಮನುಷ್ಯನ ಪ್ರಯತ್ನಗಳಲ್ಲಿ ಅತ್ಯಂತ ಮುಖ್ಯವಾದದ್ದೆಂದರೆ ನಮ್ಮ ಕರ್ಮವೆಲ್ಲ ನೀತಿಯುತವಾಗಿರಬೇಕೆಂದು ಮಾಡುವ ಪ್ರಯತ್ನ. ನಮ್ಮ ಉಳಿವು, ಅಸ್ತಿತ್ವ ಕೂಡ ಅದನ್ನು ಅವಲಂಬಿಸಿದೆ. ನಾವು ಮಾಡುವ ಕೆಲಸ ನೀತಿಯುತವಾಗಿದ್ದರೆ ಮಾತ್ರ ಬದುಕಿಗೊಂದು ಸೌಂದರ್ಯ, ಗಾಂಭೀರ್ಯ ಇರುತ್ತದೆ’. 

ಅಂಧಶ್ರದ್ಧೆ ಎನ್ನುವುದು ಅದು ನಮ್ಮ ಮನೆಯ ವಾತಾವರಣದಿಂದಲೇ ಶುರುವಾಗುತ್ತದೆ. ಮಗುವನ್ನು ದೇವರ ಪಟದ ಎದುರು ನಿಲ್ಲಿಸಿ ತಪ್ಪು ಮಾಡಿದರೆ ದೇವರು ಶಿಕ್ಷಿಸುತ್ತಾನೆಂದು ಹೆದರಿಸುತ್ತೇವೆ. ನೀತಿವಂತನಾಗಿರಬೇಕು ಎನ್ನುವುದಕ್ಕಿಂತ ದೇವರು ಶಿಕ್ಷಿಸುತ್ತಾನೆಂಬ ಹೆದರಿಕೆಯಿಂದ ತಪ್ಪು ಮಾಡಬಾರದೆನ್ನುವ ಭಾವನೆ ಮಗುವಿನಲ್ಲಿ ಬಲವಾಗುತ್ತದೆ. ಹೀಗೆ ನೈತಿಕಶ್ರದ್ಧೆಯನ್ನು ದೈವಶ್ರದ್ಧೆ ಹಿಂದಕ್ಕೆ ತಳ್ಳುತ್ತದೆ. ದೈವಶ್ರದ್ಧೆಯನ್ನು ಮೈಗೂಡಿಸಿಕೊಳ್ಳುವ ಮನುಷ್ಯ ತಾನು ಮಾಡಿದ ತಪ್ಪುಗಳಿಗಾಗಿ ದೇವರ ಶಿಕ್ಷೆಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳಲು ಅದಕ್ಕೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುತ್ತಾನೆ. ಪರಿಣಾಮವಾಗಿ ಕಂಚಿನ ಕಳಶ, ವಜ್ರದ ಕಿರೀಟ, ಬೆಳ್ಳಿ ಗದೆ, ಚಿನ್ನದ ಓಲೆಗಳು ಪರ್ಯಾಯ ಮಾರ್ಗಗಳಾಗಿ ಅನುಷ್ಠಾನಕ್ಕೆ ಬರುತ್ತವೆ. ಭಕ್ತರ ಮನೋದೌರ್ಬಲ್ಯಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ದೇವಾಲಯಗಳ ಆಡಳಿತ ಮಂಡಳಿಯವರು ಪೂಜೆ, ಪುನಸ್ಕಾರಗಳ ಹೆಸರಿನಲ್ಲಿ ಹಗಲು ದರೋಡೆಗಿಳಿಯುತ್ತಾರೆ.

ಕೊರೊನಾ ಸೋಂಕು ಸೃಷ್ಟಿಸಿದ ಆತಂಕದ ದಿನಗಳಲ್ಲಿ ನಾವುಗಳೆಲ್ಲ ದೇವಾಲಯಗಳ ಕಡೆ ಮುಖ ಹಾಕಲಿಲ್ಲ. ದೇವಸ್ಥಾನಗಳಲ್ಲಿ ಯಾವ ಪೂಜಾ ಕೈಂಕರ್ಯಗಳನ್ನೂ ಕೈಗೊಳ್ಳಲಿಲ್ಲ. ಕಿರೀಟ, ಗದೆ, ಡಾಬು, ಓಲೆಗಳನ್ನು ಕಾಣಿಕೆಯಾಗಿ ಸಲ್ಲಿಸಲಿಲ್ಲ. ಹಾಗೆಂದು ಪಾಪ ಆ ದೇವರು ಮನುಷ್ಯರ ಮೇಲೆ ಮುನಿಸಿಕೊಳ್ಳಲಿಲ್ಲ ಮತ್ತು ಯಾವ ಶಾಪವನ್ನೂ ಕೊಡಲಿಲ್ಲ. ಎಷ್ಟೆಂದರೂ ಅಂಧಶ್ರದ್ಧೆಗೆ ಒಗ್ಗಿಕೊಂಡ ಮನುಷ್ಯ ಪ್ರಕೃತಿದತ್ತವಾದ ಸಮಸ್ಯೆಗಳನ್ನೆಲ್ಲ ದೇವರ ಶಾಪವೆಂದೇ ಭಾವಿಸುತ್ತಾನೆ. ಪ್ರವಾಹ, ಭೂಕಂಪ, ಬರ ಇವೆಲ್ಲ ಪ್ರಕೃತಿದತ್ತವಾದ ಸಮಸ್ಯೆಗಳು. ಈ ಸಮಸ್ಯೆಗಳಲ್ಲಿ ಮನುಷ್ಯನ ಪಾತ್ರ ಕೂಡ ಇದೆ. ಆದರೆ ಮನುಷ್ಯ ತನ್ನ ವರ್ತನೆಯಿಂದ ಎದುರಾಗುವ ಪ್ರಕೃತಿಯ ವಿಕೋಪಗಳಿಗೆ ದೇವರ ಕಡೆ ಕೈತೋರಿಸಿ ನಿರುಮ್ಮಳನಾಗುತ್ತಾನೆ. ಮನುಷ್ಯನ ಪ್ರಕಾರ ಕೊರೊನಾ ಮಾನವ ನಿರ್ಮಿತ ಸಮಸ್ಯೆಯಲ್ಲ ಇದು ಸಹ ದೇವರ ಶಾಪ.

ತಮ್ಮ ಬದುಕಿನುದ್ದಕ್ಕೂ ದೇವಸ್ಥಾನಗಳಿಂದ ದೂರವೇ ಉಳಿದ ಕುವೆಂಪು ಕರುನಾಡಿನ ಶಿಲ್ಪಕಲಾ ವೈಭವವನ್ನು ವರ್ಣಿಸುತ್ತ ಹೀಗೆ ಹೇಳುತ್ತಾರೆ ‘ಗಂಟೆಗಳ ದನಿಯಿಲ್ಲ, ಜಾಗಟೆಗಳಿಲ್ಲಿಲ್ಲ, ಕರ್ಪೂರದಾರತಿಯ ಜ್ಯೋತಿಯಿಲ್ಲ’. ದೇವಾಲಯದ ಪರಿಕಲ್ಪನೆಯನ್ನೇ ಕುವೆಂಪು ತಿರಸ್ಕರಿಸುವ ಬಗೆಯಿದು. ಎ.ಎನ್.ಮೂರ್ತಿರಾವ್ ತಮ್ಮ ‘ದೇವರು’ ಕೃತಿಯಲ್ಲಿ ದೇವರ ಅಸ್ತಿತ್ವವನ್ನೇ ಪ್ರಶ್ನಿಸುತ್ತಾರೆ. ಅಂತಿಮವಾಗಿ ಅವರು ಹೇಳುವುದು ಹೀಗೆ ‘ದೇವರಿದ್ದರೆ ಅವನಿಗೆ ನಮ್ಮ ಸೇವೆಯಿಂದ ಆಗಬೇಕಾದ ಪ್ರಯೋಜನವೇನೂ ಇಲ್ಲ. ನಮ್ಮ ಕೈಂಕರ್ಯಕ್ಕೆ, ಸೇವೆಗೆ ಪಾತ್ರವಾಗಬೇಕಾದದ್ದು, ಅದರಿಂದ ಪ್ರಯೋಜನ ಪಡೆಯಬಹುದಾದದ್ದು-ಮಾನವಕುಲ’. ದೇವರು ಮಂದಿರ, ಮಸೀದಿ, ಚರ್ಚ್‍ಗಳಲ್ಲಿಲ್ಲ. ದೇವರಿಗೆ ಮಾಡುವ ಸೇವೆ ಅದು ನ್ಯಾಯುತವಾಗಿ ಸಲ್ಲಬೇಕಾದದ್ದು ಅನಾಥರಿಗೆ, ಬಡವರಿಗೆ ಮತ್ತು ದು:ಖಿಗಳಿಗೆ. ಆದ್ದರಿಂದ ದೀನ, ದುರ್ಬಲರಲ್ಲಿ ದೇವರನ್ನು ಕಾಣುವ ಮನಸ್ಥಿತಿಯನ್ನು ಮನುಷ್ಯ ರೂಢಿಸಿಕೊಳ್ಳಬೇಕು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

---000---