Thursday, July 6, 2023

ಕೃತಕತೆಯ ಗೂಡಲ್ಲಿ ವಾಸ್ತವದ ಹುಡುಕಾಟ

        


(೨೭.೦೩.೨೦೨೩ ರ ಪ್ರಜಾವಾಣಿಯಲ್ಲಿ ಪ್ರಕಟ)

    ಪಕ್ಕದ ಮನೆಯ ಹುಡುಗ ತನ್ನ ಸ್ನೇಹಿತನೆದುರು ತಾನು ನೋಡಿದ ಸ್ಥಳಗಳನ್ನು ಬಣ್ಣಿಸುತ್ತಿದ್ದ. ಅವನ ಮಾತಿನಲ್ಲಿ ಜಲಪಾತಗಳು, ಹೊಳೆ, ಬೆಟ್ಟ, ಕಾಡು, ಹಳ್ಳಿಮನೆಗಳೆಲ್ಲ ಸುಳಿದುಹೋದವು. ‘ಏನೋ ಅಜ್ಜನ ಊರಿಗೆ ಯಾವಾಗ ಹೋಗಿದ್ದೆ’ ಎಂದು ಕೇಳಿದೆ. ‘ನೋ ಅಂಕಲ್ ಪಿಕ್‍ನಿಕ್ ಹೋಗಿದ್ವಿ. ರೆಡಿಮೇಡ್ ವಿಲೇಜ್ ಅಂತ ಪಿಕ್‍ನಿಕ್ ಸ್ಪಾಟ್ ಇತ್ತು. ಅಲ್ಲ್ಲಿ ಹೊಳೆ, ಕಾಡು, ಬೆಟ್ಟ ಎಲ್ಲ ನೋಡಿದ್ದು’ ಎಂದು ಉತ್ತರಿಸಿದ. ನಾನು ಊಹಿಸಿದ ಆ ಎಲ್ಲ ವಾಸ್ತವಗಳನ್ನು ಅವನು ಕೃತಕವಾಗಿ ನಿರ್ಮಿಸಿರುವ ಪ್ರೇಕ್ಷಣಿಯ ತಾಣದಲ್ಲಿ ವೀಕ್ಷಿಸಿದ್ದೆಂದು ಅರಿವಾಗಲು ಕೆಲವು ಕ್ಷಣಗಳೇ ಬೇಕಾದವು. ಇತ್ತೀಚಿನ ದಿನಗಳಲ್ಲಿ ಭೌತಿಕ ಮತ್ತು ಭಾವನಾತ್ಮಕ ಸಂಗತಿಗಳೆರಡನ್ನೂ ಕೃತಕ ವಾತಾವರಣದಲ್ಲಿ ಅರಸುವ ಪ್ರವೃತ್ತಿ ಮನುಷ್ಯರಲ್ಲಿ ಹೆಚ್ಚುತ್ತಿದೆ.

ಮನುಷ್ಯ ತನ್ನ ದಿನನಿತ್ಯದ ಧಾವಂತದ ಬದುಕಿನಲ್ಲಿ ಸಹಜ ಬದುಕಿಗೆ ವಿಮುಖನಾಗಿ ಬಾಳುತ್ತಿರುವನು. ವಿಶೇಷವಾಗಿ ನಗರಪ್ರದೇಶಗಳಲ್ಲಿ ಉದ್ಯೋಗವೇ ಕೇಂದ್ರಿತವಾದ ಬದುಕಿನಲ್ಲಿ ಬಿಡುವು ಪಡೆಯಲು ಒಂದಿಷ್ಟೂ ಪುರಸೊತ್ತಿಲ್ಲದಂತಾಗಿದೆ. ಉದ್ಯೋಗದ ಅಭದ್ರತೆ, ಸ್ಪರ್ಧೆಯ ವಾತಾವರಣ, ಮಕ್ಕಳ ಪಾಲನೆ, ಉಳಿತಾಯದ ಯೋಜನೆಗಳು, ಭವಿಷ್ಯದ ಚಿಂತೆಯಿಂದ ಕಂಗಾಲಾಗಿರುವ ಮನುಷ್ಯ ದಣಿವರಿಯದ ದುಡಿಮೆಗೆ ತನ್ನನ್ನು ಒಳಗಾಗಿಸಿಕೊಂಡಿರುವನು. ಈ ಆಧುನಿಕ ಬದುಕಿನ ಒತ್ತಡಗಳು ಮನುಷ್ಯನನ್ನು ಯಂತ್ರವಾಗಿ ಪರಿವರ್ತಿಸಿವೆ. ಭಾವನೆಗಳು ಮತ್ತು ಮನುಷ್ಯ ಸಂಬಂಧಗಳು ತಮ್ಮ ಅರ್ಥ ಕಳೆದುಕೊಂಡು ಸವಕಲಾಗಿವೆ.

ಭಾವನೆಗಳು ಮತ್ತು ಸಂಬಂಧಗಳನ್ನೇ ಕಳೆದುಕೊಂಡು ಬದುಕು ಯಾಂತ್ರೀಕವಾಗುತ್ತಿರುವುದು ಒಂದುಕಡೆಯಾದರೆ ಇನ್ನೊಂದೆಡೆ ಮನುಷ್ಯನ ದುರಾಸೆಗೆ ಒಳಗಾಗಿ ಪ್ರಕೃತಿ ಬರಡಾಗುತ್ತಿದೆ. ಒಂದರ್ಥದಲ್ಲಿ ಮನುಷ್ಯನ ಯಾಂತ್ರೀಕ ಬದುಕಿನ ಚೇತರಿಕೆಗೆ ಪ್ರಕೃತಿಯೇ ಮುಲಾಮು. ಆದರೆ ಮನುಷ್ಯ ಪ್ರಕೃತಿಯ ಮೇಲೆ ಅಟ್ಟಹಾಸಗೈಯುತ್ತ ನಿಸರ್ಗವನ್ನು ಅವಸಾನದ ಅಂಚಿಗೆ ತಂದು ನಿಲ್ಲಿಸಿರುವನು. ತಾನು ಕಳೆದುಕೊಂಡ ಪ್ರಕೃತಿಯ ಚೆಲುವು ಮತ್ತು ಮನದ ಭಾವನೆಗಳನ್ನು ಕೃತಕ ನಿಸರ್ಗ ತಾಣಗಳಲ್ಲಿ, ಸಿನಿಮಾಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಹುಡುಕುತ್ತಿದ್ದಾನೆ. ಇಂದಿನ ನ್ಯೂಕ್ಲಿಯರ್ ಕುಟುಂಬಗಳಿಗೆ ಸಿನಿಮಾಗಳೆ ಕುಟುಂಬ ಸಂಬಂಧಗಳ ಪಾಠವನ್ನು ಬೋಧಿಸುವ ಶಾಲೆಗಳಾಗಿವೆ. ಅವಿಭಕ್ತ ಕುಟುಂಬ, ಮನೆಗೊಬ್ಬ ಹಿರಿಯ ಯಜಮಾನ, ಕಡಿದುಹೋದ ಸಂಬಂಧಗಳ ಬೆಸೆಯುವಿಕೆ, ಮದುವೆಕಾರ್ಯದ ವೈಭವೊಪೇತ ದೃಶ್ಯಗಳು, ಒಂದಿಷ್ಟು ನಗು-ಅಳು-ಖುಷಿ ಈ ರೀತಿಯ ಸಿನಿಮಾಗಳು ಸಂಬಂಧಗಳ ಕುರಿತಾದ ಮನುಷ್ಯನ ಭಾವನಾತ್ಮಕ ಹಸಿವನ್ನು ತಣಿಸುತ್ತಿವೆ. ಅವಿಭಕ್ತ ಕುಟುಂಬಗಳು ಒಡೆದು ಸಣ್ಣ ಘಟಕಗಳಾಗಿ ರೂಪಾಂತರ ಹೊಂದುತ್ತಿರುವ ಈ ಸಂದರ್ಭ ಸಿನಿಮಾದ ಮೂಲಕ ನಮ್ಮ ಯುವಪೀಳಿಗೆಗೆ ಕುಟುಂಬದ ಸಂಬಂಧಗಳನ್ನು ಪರಿಚಯಿಸುವ ಸನ್ನಿವೇಶ ಎದುರಾಗಿದೆ. 

ಇತ್ತೀಚಿನ ದಿನಗಳಲ್ಲಿ ಪ್ರಕೃತಿಯ ಸುಂದರ ಮತ್ತು ರಮಣೀಯ ತಾಣಗಳನ್ನು ಕೃತಕವಾಗಿ ನಿರ್ಮಿಸಿ ಸಾರ್ವಜನಿಕರನ್ನು ಆಕರ್ಷಿಸಲಾಗುತ್ತಿದೆ. ನಾಲ್ಕೈದು ಎಕರೆಯಷ್ಟು ವಿಶಾಲವಾದ ಜಾಗದಲ್ಲಿ ನಿರ್ಮಾಣಗೊಳ್ಳುವ ಕೃತಕ ನಿಸರ್ಗ ತಾಣಗಳು ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಸಾರ್ವಜನಿಕರು ಸಾವಿರಾರು ರೂಪಾಯಿಗಳನ್ನು ಖರ್ಚುಮಾಡಿ ಇಂಥ ಕೃತಕ ತಾಣಗಳಿಗೆ ಭೇಟಿ ನೀಡಿ ನಿಜವಾದ ಪರಿಸರದಲ್ಲೇ ತಾವು ನಿಂತಿರುವೆವೇನೋ ಎಂದು ಪುಳಕಗೊಳ್ಳುವರು. ಈ ಕೃತಕ ತಾಣಗಳಲ್ಲಿ ಜಲಪಾತಗಳು ಸೃಷ್ಟಿಯಾಗುತ್ತವೆ, ನೀರು ನದಿಯಂತೆ ಹರಿಯುತ್ತದೆ, ಗಿಡ-ಮರಗಳು ತೊನೆದಾಡುತ್ತವೆ, ಮಳೆ ಸುರಿಯುತ್ತದೆ, ಪಕ್ಷಿಗಳ ಕಲರವ ಕಿವಿಗಳನ್ನು ಇಂಪಾಗಿಸುತ್ತದೆ. ಹಳ್ಳಿಯ ಪರಿಸರದಲ್ಲೆ ಓಡಾಡುತ್ತಿರುವ ಭಾವಹುಟ್ಟಿಸುವ ಹಳ್ಳಿಮನೆಗಳು ನಿರ್ಮಾಣಗೊಳ್ಳುತ್ತವೆ. ಗೌಡರ ಮನೆ, ಜಗಲಿ, ಅಂಗಳ, ದನದ ಕೊಟ್ಟಿಗೆ, ಪಂಚಾಯಿತಿ ಕಟ್ಟೆ, ಹರಟೆಕಟ್ಟೆ, ನೀರುಸೇದುವ ಭಾವಿ ಇರುವ ಹಳ್ಳಿಯ ಮರುಸೃಷ್ಟಿಯಾಗುತ್ತದೆ. ಹಳ್ಳಿಗಳೆಂದರೆ ಮಾರು ದೂರ ಸರಿಯುವವರು ಸಾವಿರಾರು ರೂಪಾಯಿಗಳನ್ನು ಪಾವತಿಸಿ ಕೃತಕವಾಗಿ ನಿರ್ಮಿಸಲಾದ ಹಳ್ಳಿಮನೆಗಳಲ್ಲಿ ವಾರಾಂತ್ಯದ ರಜೆಯ ಮೋಜು ಅನುಭವಿಸುತ್ತಾರೆ. 

ಸಿಟ್ಟು, ದ್ವೇಷ, ಪ್ರೀತಿ, ನಗು, ಅಳು, ಖುಷಿ ಇಂಥ ಮನುಷ್ಯ ಸಹಜವಾದ ಭಾವನೆಗಳನ್ನು ಕೂಡ ರಿಯಾಲಿಟಿ ಶೋ ಎನ್ನುವ ಹೆಸರಿನಲ್ಲಿ ಕೃತಕವಾಗಿ ಸೃಷ್ಟಿಸಿ ಪ್ರೇಕ್ಷಕರನ್ನು ಭಾವಾವೇಶಕ್ಕೆ ಒಳಗಾಗಿಸುತ್ತಿರುವರು. ನಿರ್ಧಿಷ್ಟ ಸಂಖ್ಯೆಯ ಸ್ಪರ್ಧಿಗಳನ್ನು ಒಂದೆಡೆ ಸೇರಿಸಿ ಅಖಾಡಕ್ಕೆ ಇಳಿಸುವ ಕಾರ್ಯಕ್ರಮದ ನಿರ್ವಾಹಕರು ಅವರನ್ನು ಬಗೆಬಗೆಯ ಚಟುವಟಿಕೆಗಳಲ್ಲಿ ತೊಡಗಿಸಿ ವಿಭಿನ್ನ ಭಾವನೆಗಳು ಅಭಿವ್ಯಕ್ತಗೊಳ್ಳುವಂತೆ ನೋಡಿಕೊಳ್ಳುತ್ತಾರೆ. ಸ್ಪರ್ಧಿಗಳ ನಡುವೆ ತುರುಸಿನ ಸ್ಪರ್ಧೆ ಏರ್ಪಡುತ್ತದೆ. ಗೆಲ್ಲಬೇಕೆಂಬ ತುಡಿತ, ಎದುರಾಳಿಯನ್ನು ಹಣಿಯುವ ತಂತ್ರ, ಪ್ರತಿತಂತ್ರ, ಪರಸ್ಪರ ಅವಮಾನಿಸುವ ಮಾನಸಿಕ ಕ್ರೌರ್ಯ ಹೀಗೆ ಇಡೀ ಕಾರ್ಯಕ್ರಮದುದ್ದಕ್ಕೂ ಮನುಷ್ಯನ ರಾಗ-ದ್ವೇಷದ ಗುಣಗಳು ಅನಾವರಣಗೊಳ್ಳುತ್ತಹೋಗುತ್ತವೆ. ಈ ಒಟ್ಟು ಕ್ರಿಯೆ ನಿರ್ದೇಶಕನ ಆಣತಿಯಂತೆ ಜರುಗುತ್ತ ಪ್ರೇಕ್ಷಕರನ್ನು ಸಮ್ಮೋಹಿನಿಯಂತೆ ತನ್ನತ್ತ ಸೆಳೆಯುತ್ತದೆ. ಕಾರ್ಯಕ್ರಮವನ್ನು ವೀಕ್ಷಿಸುತ್ತಿರುವ ಪ್ರೇಕ್ಷಕ ಆ ಸ್ಪರ್ಧಿಗಳಲ್ಲಿ ತನ್ನನ್ನು ಒಬ್ಬನಾಗಿ ಕಲ್ಪಿಸಿಕೊಂಡು ಸ್ಪರ್ಧಿಯೊಬ್ಬ ಅನುಭವಿಸುವ ಎಲ್ಲ ಮಾನಸಿಕ ವೇದನೆಗಳಿಗೆ ತಾನು ಒಳಗಾಗುತ್ತಾನೆ. ವಿಪರ್ಯಾಸವೆಂದರೆ ನಿಜವಾದ ಬದುಕಿನಲ್ಲಿ ಭಾವನೆಗಳಿಲ್ಲದೆ ಯಂತ್ರದಂತೆ ಬದುಕುತ್ತಿರುವ ಮನುಷ್ಯ ರಿಯಾಲಿಟಿ ಶೋನಂಥ ಕಾರ್ಯಕ್ರಮವನ್ನು ವೀಕ್ಷಿಸುತ್ತ ತನ್ನ ಭಾವನೆಗಳನ್ನು ಉದ್ದೀಪನಗೊಳಿಸುತ್ತಾನೆ.  

ತನ್ನ ದೈನಂದಿನ ವಾಸ್ತವದ ಬದುಕಿನಲ್ಲಿ ಹುಡುಕಬೇಕಾದ ಈ ಎಲ್ಲ ಸಂಗತಿಗಳನ್ನು ಮನುಷ್ಯ ಕೃತಕ ವಾತಾವರಣದಲ್ಲಿ ಕಂಡುಕೊಳ್ಳುತ್ತಿರುವನು. ಆ ಕೃತಕತೆಯನ್ನೇ ನಿಜವಾದ ಬದುಕು ಎಂದು ಭಾವಿಸಿ ತನ್ನ ವಾಸ್ತವದ ಬದುಕನ್ನು ಒಂದು ಯಂತ್ರದಂತೆ ಬಾಳುತ್ತಿರುವನು. ಮನುಷ್ಯನ ಯಾಂತ್ರೀಕೃತ ಬದುಕಿಗೆ ಕಾರಣವಾದ ಸಂಗತಿಯನ್ನು ತತ್ವಜ್ಞಾನಿ ಕಾರ್ಲ್‍ಮಾರ್ಕ್ಸ್ ಅವರು ಗುರುತಿಸಿದ್ದು ಹೀಗೆ- ‘ಮನುಷ್ಯನ ದುಡಿಮೆ ಹಾಗೂ ಬಿಡುವು ಎರಡೂ ಒಂದಕ್ಕೊಂದು ತೆಕ್ಕೆ ಹಾಕಿಕೊಂಡಿರುವಂಥ, ಒಂದನ್ನೊಂದು ಪ್ರಭಾವಿಸುವಂಥ ಕ್ಷೇತ್ರಗಳಾಗಿವೆ. ಮಾನವನ ಅಂತ:ಕರಣಕ್ಕೆ ಮತ್ತು ಮನಸ್ಸಿಗೆ ಸಂತೋಷ ಕೊಡುವಂಥ ಅವನ ಸೃಜನಶೀಲತೆಗೆ ಎಡೆಕೊಡಬಲ್ಲ ‘ಕೆಲಸ’ವನ್ನೇ ಅಸಾಧ್ಯ ಮಾಡಿರುವಂಥ ದುಡಿಮೆಯ ಕ್ಷೇತ್ರ ಕ್ರಮೇಣ ಮನುಷ್ಯನ ಆತ್ಮ-ಮನಸ್ಸುಗಳನ್ನು ಕೊಲ್ಲುವ ಬೇನೆಯ ತಾಣವಾಗುತ್ತಿದೆ’. ಮಾರ್ಕ್ಸ್ ವ್ಯಕ್ತಪಡಿಸಿದ ಈ ಅಭಿಪ್ರಾಯವನ್ನಾಧರಿಸಿ ಯಶವಂತ ಚಿತ್ತಾಲರು ಹೇಳುವುದು ಹೀಗೆ ‘ದುಡಿಮೆಯ ಕ್ಷೇತ್ರದಿಂದ ಪ್ರಭಾವಿತಗೊಂಡ ಮನಸ್ಸನ್ನು ಅಲ್ಲೆ ಬಿಟ್ಟುಬರುವುದು ಸಾಧ್ಯವಿದ್ದಿದ್ದರೆ- ಬಿಟ್ಟುಬರುವುದುಳಿಯಲಿ, ನಮ್ಮೊಳಗಿನ ಅತ್ಯಂತ ಮಹತ್ವದ್ದೇನೋ ಅಲ್ಲಿ ನಾಶವಾಗುತ್ತಿದೆ ಎಂಬ ಅರಿವೂ ನಮಗೆ ಇಲ್ಲದಿರುವುದು ಇಂದಿನ ನಮ್ಮ ಬದುಕಿನ ದುರದೃಷ್ಟವಾಗಿದೆ’. ಒಟ್ಟಾರೆ ಬದುಕು ಹೆಚ್ಚು ಹೆಚ್ಚು ಯಾಂತ್ರೀಕವಾಗುತ್ತ ಹೋದಂತೆ ಕೃತಕತೆಯೇ ವಾಸ್ತವವೆನಿಸುವ ಅಪಾಯದ ದಿನಗಳು ದೂರವಿಲ್ಲ. 

-ರಾಜಕುಮಾರ ಕುಲಕರ್ಣಿ