Saturday, June 3, 2023

ರಾಜಕಾರಣಕ್ಕೆ ಓದಿನ ದೀಕ್ಷೆಯಾಗಲಿ

 



(ಪ್ರಜಾವಾಣಿ 24.02.2023)

   ರಾಜಕಾರಣಿಗಳಿಗೆ ಘನತೆಯಿಂದ ಮಾತಾಡಲು ಗೊತ್ತಿಲ್ಲ ಎಂದು ಕೆಲವರು ಆಗಾಗ ಆತಂಕ ವ್ಯಕ್ತಪಡಿಸುತ್ತಾರೆ. ರಾಜಕಾರಣದಲ್ಲಿ ಭಾಷೆಯನ್ನು ದ್ವೇಷದ ನುಡಿಗಟ್ಟಾಗಿ ಪರಿವರ್ತಿಸಿರುವುದಕ್ಕೆ ನಮ್ಮ ಬಹಳಷ್ಟು ರಾಜಕಾರಣಿಗಳಿಗೆ ಪುಸ್ತಕ ಪ್ರೀತಿ ಇಲ್ಲದಿರುವುದೇ ಕಾರಣ. ಸೃಜನಶೀಲತೆಗೂ ಮತ್ತು ರಾಜಕಾರಣಕ್ಕೂ ಎಣ್ಣೆ-ಸೀಗೆಕಾಯಿ ಸಂಬಂಧ. ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯ ಮೇಲೂ ನಮ್ಮ ರಾಜಕಾರಣಿಗಳು ಸಾಹಿತ್ಯವನ್ನು ಬದಿಗೆ ಸರಿಸಿ ರಾಜಕೀಯದ ಮಾತುಗಳನ್ನಾಡುತ್ತಾರೆ. ಸಾಹಿತ್ಯ ಅಕಾಡೆಮಿ ಮತ್ತು ಪರಿಷತ್ತಿನ ಅಧ್ಯಕ್ಷರ ಹಾಗೂ ಸದಸ್ಯರ ನೇಮಕಾತಿಯಲ್ಲೂ ರಾಜಕಾರಣಿಗಳ ಶಿಫಾರಸು ಮಹತ್ವದ ಪಾತ್ರವಹಿಸುತ್ತದೆ. 

ಪುಸ್ತಕ ಪ್ರೀತಿಯನ್ನು ಮೈಗೂಡಿಸಿಕೊಂಡಿದ್ದ ರಾಜಕಾರಣದ ಪರಂಪರೆ ನಮ್ಮ ಕಣ್ಣೆದುರಿಗಿದೆ. ಜವಹರಲಾಲ ನೆಹರು ‘ಡಿಸ್ಕವರಿ ಆಫ್ ಇಂಡಿಯಾ’ ಕೃತಿ ರಚಿಸಲು ಅವರಿಗಿದ್ದ ಓದಿನ ಅಪಾರ ಅನುಭವವೇ ಕಾರಣವಾಯಿತು. ನರಸಿಂಹರಾವ್ ತಮ್ಮ ಓದಿನ ಬಲದಿಂದ ಭಾರತದ ಅನೇಕ ಭಾಷೆಗಳನ್ನೊಳಗೊಂಡಂತೆ ವಿದೇಶಿ ಭಾಷೆಗಳಲ್ಲೂ ವ್ಯವಹರಿಸಬಲ್ಲವರಾಗಿದ್ದರು. ಪುಸ್ತಕಗಳ ಓದಿನ ಜ್ಞಾನ ರಾಜಕೀಯದಲ್ಲಿದ್ದೂ ಅಟಲ್ ಬಿಹಾರಿ ವಾಜಪೇಯಿ ಅವರನ್ನು ವಾಗ್ಮಿ ಮತ್ತು ಸೂಕ್ಷ್ಮಸಂವೇದನೆಯ ಕವಿಯಾಗಿ ರೂಪಿಸಿತು. ಸೋಮನಾಥ ಚಟರ್ಜಿ, ಪ್ರಣಬ್ ಮುಖರ್ಜಿ, ಕರಣಸಿಂಗ್, ಅಡ್ವಾಣಿ ತಮ್ಮ ಓದಿನ ವಿದ್ವತ್ತಿನಿಂದ ಅತ್ಯುತ್ತಮ ಸಂಸದೀಯಪಟುಗಳೆಂಬ ಗೌರವಕ್ಕೆ ಪಾತ್ರರಾದರು. ಕರ್ನಾಟಕದ ರಾಜಕಾರಣದಲ್ಲಿ ಕಡಿದಾಳು ಮಂಜಪ್ಪ, ಶಾಂತವೇರಿ ಗೋಪಾಲಗೌಡರು, ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ, ಎಂ.ಪಿ.ಪ್ರಕಾಶ್ ಇನ್ನು ಅನೇಕ ರಾಜಕಾರಣಿಗಳು ತಮ್ಮ ಬಿಡುವಿಲ್ಲದ ರಾಜಕಾರಣದ ನಡುವೆಯೂ ಪುಸ್ತಕ ಪ್ರೀತಿಯನ್ನು ಕಾಪಿಟ್ಟುಕೊಂಡಿದ್ದರು. ಎಂ.ಪಿ.ಪ್ರಕಾಶ್ ಓದಿನ ಪ್ರೀತಿಯೊಂದಿಗೆ ಕಲಾವಿದರಾಗಿಯೂ ಈ ನೆಲದ ಸಾಂಸ್ಕೃತಿಕ ಹಿರಿಮೆಯನ್ನು ಎತ್ತರಕ್ಕೆ ಕೊಂಡೊಯ್ದರು. ವೀರಪ್ಪ ಮೊಯ್ಲಿ ಬರಹಗಾರರಾಗಿ ಅನೇಕ ಸಾಹಿತ್ಯ ಕೃತಿಗಳನ್ನು ರಚಿಸಿರುವರು. ಚಂದ್ರಶೇಖರ್ ಮತ್ತು ಸುರೇಶ್ ಕುಮಾರ ಇವತ್ತಿಗೂ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಾರೆ.

ಭಾಷೆ ಸುಧಾರಿಸಲು ಸಾಹಿತ್ಯದ ಓದು ಒಂದು ಪರ್ಯಾಯ ಮಾರ್ಗ. ಜೊತೆಗೆ ಓದು ಮನುಷ್ಯನ ಹೃದಯಾಂತರಾಳದಲ್ಲಿ ಪ್ರೀತಿ, ಅನುಕಂಪ ಮತ್ತು ಕರುಣೆಯನ್ನು ಹುಟ್ಟಿಸುವ ಕೆಲಸ ಮಾಡುತ್ತದೆ. ಲೋಕಾಂತದಲ್ಲೂ ಏಕಾಂತವನ್ನು ಒದಗಿಸುವ ಶಕ್ತಿ ಓದಿಗಿದೆ. ಆದರೆ ಸದಾ ಲೋಕಾಂತದ ಬದುಕಿನಲ್ಲೇ ಧನ್ಯತೆ ಅನುಭವಿಸುವ ರಾಜಕಾರಣಿಗಳಿಗೆ ಮೌನದ ಸುಖ ಅರ್ಥವಾಗುವುದಾದರೂ ಹೇಗೆ?. ಗ್ರಂಥಾಲಯ ಇಲಾಖೆ ಎನ್ನುವ ಒಂದು ಸಾಂಸ್ಕೃತಿಕ ಇಲಾಖೆ ಇವತ್ತು ರಾಜಕಾರಣದ ಅವಕೃಪಗೆ ಮತ್ತು ನಿರ್ಲಕ್ಷ್ಯಕ್ಕೆ ಒಳಗಾಗಿರುವ ದೃಷ್ಟಾಂತ ನಮ್ಮ ಕಣ್ಣೆದುರಿಗಿದೆ.  

‘ರಾಜಕಾರಣದಲ್ಲಿ ಸದ್ದನ್ನೇ ತುಂಬ ನೆಚ್ಚಿಕೊಂಡ ಭಾಷೆಗೆ ಮೌನದ ಪರಿಚಯವಿಲ್ಲ. ಶಬ್ದ ಮತ್ತು ಆವೇಶ ರಾಜಕಾರಣದ ಪ್ರಧಾನ ಮೆಚ್ಚುಗೆಗಳಾಗಿವೆ. ಮೌನ ಅರ್ಥವಾಗಲು ರಾಜಕಾರಣಿಗಳಿಗೆ ಓದಿನಲ್ಲಿ ಆಸಕ್ತಿ ಹುಟ್ಟುವಂತಾಗಬೇಕು, ರಾಜಕಾರಣಕ್ಕೆ ಸಾಹಿತ್ಯದ ದೀಕ್ಷೆಯಾಗಬೇಕು’ ಎಂದು ಯಶವಂತ ಚಿತ್ತಾಲರು ‘ಸಾಹಿತ್ಯದ ಸಪ್ತಧಾತುಗಳು’ ಪುಸ್ತಕದಲ್ಲಿ ಹೇಳಿರುವರು. ನೊಬೆಲ್ ಬಹುಮಾನ ಸ್ವೀಕರಿಸುವಾಗ ಕವಿ ಬ್ರಾಡ್‍ಸ್ಕೀ ತನ್ನ ಭಾಷಣದಲ್ಲಿ ಹೀಗೆ ಹೇಳುತ್ತಾನೆ ‘ನಾವು ನಮ್ಮ ನಾಯಕರುಗಳನ್ನು ಅವರ ರಾಜಕೀಯ ಕಾರ್ಯಸೂಚಿಗಿಂತ ಅವರ ಓದಿನ ಅನುಭವವನ್ನು ಆಧರಿಸಿ ಆಯ್ಕೆ ಮಾಡಿದ್ದಲ್ಲಿ ಭೂಮಿಯ ಮೇಲೆ ಅತ್ಯಂತ ಕಡಿಮೆ ದು:ಖವಿರುತ್ತಿತ್ತು’.

ಓದಿನ ಅನುಭವದ ಕೊರತೆಯಿಂದ ಸಭೆ ಸಮಾರಂಭಗಳಲ್ಲಿ, ಶಾಸನ ಸಭೆಗಳಲ್ಲಿ, ಚುನಾವಣೆ ಪ್ರಚಾರದ ಸಂದರ್ಭ ನಮ್ಮ ರಾಜಕಾರಣಿಗಳು ಭಾಷೆಯನ್ನು ಕೀಳುಮಟ್ಟಕ್ಕಿಳಿಸಿ ಮಾತನಾಡುವುದು ಸಾಮಾನ್ಯವಾಗಿದೆ. ರಾಜಕಾರಣವೇ ಸಾರ್ವಜನಿಕರ ನಡೆ ನುಡಿಯನ್ನು ನಿರ್ಧರಿಸುತ್ತಿರುವ ಇಂಥ ಹೊತ್ತಿನಲ್ಲಿ ಸಹಜವಾಗಿಯೇ ರಾಜಕಾರಣಿಗಳು ಯುವಪೀಳಿಗೆಗೆ ಐಕಾನ್‍ಗಳಾಗಿ ಕಾಣಿಸುತ್ತಿರುವರು. ಹೀಗಾಗಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಕಾರಿಡಾರ್‍ಗಳಲ್ಲಿ ರಾಜಕಾರಣದ ಭಾಷೆಯೇ ಹೆಚ್ಚು ಹೆಚ್ಚು ಬಳಕೆಯಾಗುತ್ತಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೂಡಿಯೇ ಶಿಕ್ಷಣಕ್ಕೆ ರಾಜಕಾರಣದ ವೇಷ ತೊಡಿಸುತ್ತಿರುವುದು ಇವತ್ತಿನ ಶಿಕ್ಷಣ ವ್ಯವಸ್ಥೆಯ ದುರಂತ.

ಹಿರಿಯರ ಸದನವೆಂದೇ ಪರಿಗಣಿಸಲ್ಪಟ್ಟಿರುವ ವಿಧಾನ ಪರಿಷತ್ತಿಗೆ ಒಂದುಕಾಲದಲ್ಲಿ ಸಾಹಿತಿಗಳು, ಕಲಾವಿದರು, ಚಿಂತಕರು ಸರ್ಕಾರದಿಂದ ನೇಮಕಗೊಳ್ಳುತ್ತಿದ್ದರು. ಚಿಂತಕರು ಮತ್ತು ಬುದ್ಧಿಜೀವಿಗಳಿಂದ ತುಂಬಿರುತ್ತಿದ್ದ ವಿಧಾನ ಪರಿಷತ್ ಒಂದರ್ಥದಲ್ಲಿ ವಿಧಾನ ಸಭೆಯಲ್ಲಿನ ರಾಜಕಾರಣಿಗಳಿಗೆ ಮಾರ್ಗದರ್ಶನ ಮಾಡುವ ಹಿರಿಯಣ್ಣನಂತೆ ಕೆಲಸ ಮಾಡುತ್ತಿತ್ತು. ಶಾಸನ ಸಭೆಯಲ್ಲಿನ ಭಾಷಣಗಳು ಐತಿಹಾಸಿಕ ದಾಖಲೆಗಳಾಗಿ ಉಳಿದುಕೊಂಡಿರುವುದರ ಹಿಂದೆ ಅಂದಿನ ರಾಜಕಾರಣಿಗಳ ಓದಿನ ವಿಸ್ತಾರವಾದ ಅನುಭವವೇ ಕಾರಣ. ಇಂದು ವಿಧಾನ ಪರಿಷತ್ತಿಗೂ ಫುಲ್‍ಟೈಮ್ ರಾಜಕಾರಣಿಗಳೇ ಸಾಹಿತ್ಯ, ಕಲೆ, ಸಮಾಜ ಸೇವೆಯ ಕೋಟಾದಡಿ ಪ್ರವೇಶ ಪಡೆಯುತ್ತಿರುವುದರಿಂದ ಶಾಸನ ಸಭೆಯ ಮಾತುಗಳು ವಿದ್ವತ್‍ನ್ನು ಕಳೆದುಕೊಂಡು ಅಲ್ಲಿ ವಾಚಾಳಿತನ ಗೋಚರಿಸುತ್ತಿದೆ. ಇನ್ನೊಂದು ಆತಂಕದ ಸಂಗತಿ ಎಂದರೆ ವಿಧಾನ ಪರಿಷತ್ತನ್ನೆ ರದ್ದುಗೊಳಿಸಲು ಕೆಲವು ರಾಜ್ಯಗಳಲ್ಲಿ ಪ್ರಯತ್ನಿಸಲಾಗುತ್ತಿದೆ. 

ಅಮೆರಿಕಾ, ಇಂಗ್ಲೆಂಡ್ ಮುಂತಾದ ದೇಶಗಳಲ್ಲಿ ರಾಜಕಾರಣಿಗಳು ನಿವೃತ್ತಿಯ ನಂತರ ಪುಸ್ತಕಗಳ ಓದಿನಲ್ಲಿ ಮತ್ತು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ತಮ್ಮ ರಾಜಕೀಯದ ಅನುಭವವನ್ನು ಪುಸ್ತಕದ ರೂಪದಲ್ಲಿ ಪ್ರಕಟಿಸುತ್ತಾರೆ. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತ ತಮ್ಮ ಅನುಭವ ಮತ್ತು ಓದಿನ ಜ್ಞಾನವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಸಧ್ಯದ ರಾಜಕಾರಣವನ್ನು ನೋಡಿದಾಗ ಭಾರತದ ರಾಜಕಾರಣದಲ್ಲಿ ಇಂಥದ್ದೊಂದು ಪ್ರಬುದ್ಧ ಮತ್ತು ವಿದ್ವತ್ತಿನ ನಡೆಯನ್ನು ನಿರೀಕ್ಷಿಸುವುದು ಅಸಾಧ್ಯದ ಸಂಗತಿ. 

---000---

-ರಾಜಕುಮಾರ ಕುಲಕರ್ಣಿ