Thursday, January 16, 2014

ಸಾಹಿತ್ಯ ಸಮ್ಮೇಳನ ಮತ್ತು ಪ್ರಚಲಿತ ಸವಾಲುಗಳು




(ಚಿತ್ರ ಕೃಪೆ: www.oneindia.com)



           ೮೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದ್ದಾಯಿತು. ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆದ ಸಮ್ಮೇಳನದ ಫಲಶ್ರುತಿ ಅದು ಎಷ್ಟರ ಮಟ್ಟಿಗೆ ನಾಡು ನುಡಿಯ ಬೆಳವಣಿಗೆಗೆ ಸಹಾಯವಾಗಲಿದೆಯೋ ಗೊತ್ತಿಲ್ಲ. ಪ್ರತಿವರ್ಷ ಸಮ್ಮೇಳನ ಏರ್ಪಡಿಸಿದಾಗ ಕೊನೆಯ ದಿನ ಒಂದಿಷ್ಟು ನಿರ್ಣಯಗಳನ್ನು ತೆಗೆದುಕೊಂಡು ಅವುಗಳನ್ನು ಕಾರ್ಯರೂಪಕ್ಕೆ ತರುವ ಹೊಣೆಗಾರಿಕೆಯನ್ನು ಸರ್ಕಾರದ ಹೆಗಲಿಗೇರಿಸಿ ನಮ್ಮ ಸಾಹಿತಿಗಳು ತಮ್ಮ ಕೆಲಸ ಇಷ್ಟಕ್ಕೇ ಮುಗಿಯಿತು ಎಂದು ಕೈತೊಳೆದುಕೊಳ್ಳುವುದು ಪರಂಪರಾಗತವಾದ  ರೂಢಿಯಾಗಿ ಬಿಟ್ಟಿದೆ. ಹೀಗೆ ತೆಗೆದುಕೊಂಡ ನಿರ್ಣಯಗಳು ನಂತರದ ದಿನಗಳಲ್ಲಿ ಕಾರ್ಯರೂಪಕ್ಕೆ ಬಂದಿವೆಯೋ ಇಲ್ಲವೋ ಎಂದು ತಿಳಿದುಕೊಳ್ಳಲು ಯಾರೂ ಹೋಗಲಾರರು. ಮತ್ತೊಂದು ಸಮ್ಮೇಳನ ಮತ್ತೊಂದಿಷ್ಟು ನಿರ್ಣಯಗಳು ಇದು ಪ್ರತಿವರ್ಷ ಪುನರಾವರ್ತನೆಯಾಗುತ್ತಿದೆ. ನಮ್ಮನ್ನಾಳುವ ಪ್ರಭುಗಳಿಗೂ ಹೀಗೆ ಸಮ್ಮೇಳನಗಳಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳುವುದು ಅದೊಂದು ಸಾಹಿತಿಗಳ ಚಟ ಎನ್ನುವಷ್ಟು ಸಹಜವಾಗಿದೆ. ಜೊತೆಗೆ ದುರಂತದ ಸಂಗತಿ ಎಂದರೆ ನಮ್ಮ ಸಾಹಿತಿ ಗಣ್ಯರು ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಳ್ಳುವ ನಿರ್ಣಯಗಳೆಲ್ಲ ಭಾಷೆಯ ಸುತ್ತಲೇ ಗಿರಕಿ ಹೊಡೆಯುತ್ತವೆ. ಕನ್ನಡ ಶಾಲೆಗಳನ್ನು ಮುಚ್ಚ ಬೇಡಿ, ಕೋರ್ಟಿನಲ್ಲಿ ಕನ್ನಡ ಬಳಸಿ, ಆಡಳಿತದಲ್ಲಿ ಕನ್ನಡ ಬಳಸಿ, ಮಕ್ಕಳಿಂದ ನಾಡಗೀತೆ ಹಾಡಿಸಿ ಹೀಗೆ ಇಂಥದ್ದೇ ಹತ್ತು ಹಲವು ಸಲಹೆಗಳನ್ನು ನೀಡಿ ಕೃತಾರ್ಥರಾಗುವರು. ನಿಜಕ್ಕೂ ಸಾಹಿತ್ಯ ಸಮ್ಮೇಳನದ ವೇದಿಕೆ ಕನ್ನಡ ಭಾಷೆಯ ಜೊತೆಗೆ ಸಮಾಜದ ಸಮಸ್ಯೆಗಳಿಗೂ ಮುಖಾಮುಖಿಯಾಗಬೇಕು.

ಶಿಕ್ಷಣೋದ್ಯಮದ ವಿರುದ್ಧ ಆಕ್ರೋಶವಿಲ್ಲ 


            ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಬೇಡಿ ಎಂದು ಸರ್ಕಾರದೆದುರು ಅಲವತ್ತುಕೊಳ್ಳುವ  ಸಾಹಿತ್ಯ ವಲಯ ಇವತ್ತು ಶಿಕ್ಷಣ ಕ್ಷೇತ್ರ ಒಂದು ಉದ್ಯಮವಾಗಿ ಬದಲಾಗುತ್ತಿರುವುದರ ವಿರುದ್ಧ ಆಕ್ರೋಶದ ಮಾತುಗಳನ್ನಾಡಲು ಸಿದ್ಧರಿಲ್ಲ. ೮೦ನೇ ಸಾಹಿತ್ಯ ಸಮ್ಮೇಳನ ನಡೆದ ಕೊಡಗಿನ ಆ ನೆಲದಲ್ಲೇ ಇವತ್ತು ಅನೇಕ ಕುಟುಂಬಗಳು ಶಿಕ್ಷಣವನ್ನು ಕುಟುಂಬದ ಖಾಸಗಿ ಉದಮ್ಯವನ್ನಾಗಿ ಮಾಡಿಕೊಂಡಿರುವರು. ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರ ಖಾಸಗಿಯವರ ಸುಪರ್ದಿಗೆ ಒಳಪಟ್ಟು ಅನೇಕ ದಶಕಗಳಾದವು. ಈ ಶಿಕ್ಷಣದ ಖಾಸಗೀಕರಣ ಇಂಗ್ಲಿಷ್ ಮಾಧ್ಯಮದ ಶಾಲೆಗಳ ಸ್ಥಾಪನೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತ ಇನ್ನೊಂದೆಡೆ ಕನ್ನಡ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣದ ಕೊರತೆಯನ್ನು ಹುಟ್ಟುಹಾಕುತ್ತಿದೆ. ಕನ್ನಡ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎಂದರಿತ ಬಹುಪಾಲು ಪಾಲಕರು ಖಾಸಗಿ ಇಂಗ್ಲಿಶ್ ಶಾಲೆಗಳತ್ತ ವಲಸೆ ಹೋಗುತ್ತಿರುವರು. ಗುಣಾತ್ಮಕ ಶಿಕ್ಷಣದ ಮೂಲಕ ಮಕ್ಕಳ ಬದುಕನ್ನು ಕಟ್ಟಿಕೊಡಬೇಕೆನ್ನುವ ಪಾಲಕರ ಈ ಮನೋಭಾವವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಲಕ್ಷಾಂತರ ರುಪಾಯಿಗಳನ್ನು ಶುಲ್ಕದ ರೂಪದಲ್ಲಿ ಪಡೆಯುತ್ತಿರುವರು. ಇವತ್ತು ನಾಡಿನ ಉದ್ಯಮಿಗಳು ಮತ್ತು ರಾಜಕಾರಣಿಗಳು ಮಾತ್ರವಲ್ಲದೆ ನೆರೆಯ ರಾಜ್ಯಗಳ ಉದ್ಯಮಿಗಳೂ ಸಹ ರಾಜ್ಯಕ್ಕೆ ಬಂದು ಶಿಕ್ಷಣದ ಮೇಲೆ ಬಂಡವಾಳ ಹೂಡುತ್ತಿರುವರು. ಒಂದು ಕಾಲದಲ್ಲಿ ಶಾಲೆಗಳ ಸ್ಥಾಪನೆ ಎನ್ನುವುದು ಸಾಮಾಜಿಕ ಸೇವೆ ಎಂದೇ ಪರಿಗಣಿಸಲ್ಪಟ್ಟಿದ್ದ ನಾಡಿನಲ್ಲಿ ಇವತ್ತು ಶಿಕ್ಷಣ ಲಾಭತರುವ ಬೃಹತ್ ಉದ್ಯಮವಾಗಿ ಬದಲಾಗಿದೆ. ಮಠ ಮಾನ್ಯಗಳು ಮತ್ತು ಸಂಘ ಸಂಸ್ಥೆಗಳು  ಮಾತ್ರವಲ್ಲದೆ ಶ್ರೀಮಂತ ಕುಟುಂಬಗಳು ಇವತ್ತು ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಶಿಕ್ಷಣವನ್ನು ಕುಟುಂಬದ ಬಂಡವಾಳ ಹೂಡಿ ಲಾಭ ಮಾಡಿಕೊಳ್ಳುವ ಉದ್ದಿಮೆಯಾಗಿ ಪರಿವರ್ತಿಸಿರುವರು. ಪರಿಸ್ಥಿತಿ ಹೀಗಿರುವಾಗ ಇವತ್ತು ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಬೇಡಿ, ಇಂಗ್ಲಿಷ್ ಶಾಲೆಗಳಲ್ಲಿಯೂ ನಾಡಗೀತೆ ಹಾಡಿಸಿ ಎನ್ನುವ ನಿರ್ಣಯಗಳನ್ನು ತೆಗೆದುಕೊಳ್ಳುವುದರಿಂದ ಯಾವುದೇ ಪ್ರಯೋಜನವಾಗಲಾರದು. ಬದಲಾಗಿ ಹತ್ತನೇ ತರಗತಿಯವರೆಗೂ ಇಂಗ್ಲಿಷ್ ಶಾಲೆಗಳನ್ನು ಮುಚ್ಚಿಸಿ ಎನ್ನುವ ಆಕ್ರೋಶದ ಮಾತುಗಳು ಕೇಳಿಬರಬೇಕು. ಏಕೆಂದರೆ  ಶಿಕ್ಷಣವನ್ನು ಉದ್ಯಮದ ಸ್ವರೂಪದಿಂದ ಬಿಡುಗಡೆಗೊಳಿಸುವುದು ಇವತ್ತಿನ ತುರ್ತು ಅಗತ್ಯಗಳಲ್ಲೊಂದು.

ಮಹಿಳಾ ಗೋಷ್ಠಿ ಮತ್ತು ಸ್ತ್ರೀ ಸಮಸ್ಯೆ 


              ಪ್ರತಿವರ್ಷ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳಾ ಸಮಸ್ಯೆಗಳನ್ನು ಚರ್ಚಿಸಲು ಹಾಗೂ ಪರಿಹಾರಗಳನ್ನು ಸೂಚಿಸಲು ಪ್ರತ್ಯೇಕ ಮಹಿಳಾ ಗೋಷ್ಠಿಯನ್ನು ಏರ್ಪಡಿಸುವುದು ಒಂದು ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ. ಮಹಿಳಾ ಲೇಖಕಿಯರನ್ನು ಒಂದುಗೂಡಿಸಿ ಆ ಮೂಲಕ ಮಹಿಳೆಯರ ಪ್ರಚಲಿತ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಆದರೆ ಸಮ್ಮೇಳನದ ವೇದಿಕೆಯಲ್ಲಿ ಹೀಗೆ ಒಂದೆಡೆ ಸೇರುವ ಮಹಿಳಾ ಲೇಖಕಿಯರ ಬಹುಪಾಲು ಚರ್ಚೆ ಮಹಿಳಾ ಸಾಹಿತ್ಯಕ್ಷೆತ್ರಕ್ಕಷ್ಟೇ ಸೀಮಿತವಾಗುತ್ತಿದೆ. ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ, ಸಾಹಿತ್ಯ ವಲಯದಲ್ಲಿನ ಲಿಂಗ ತಾರತಮ್ಯ, ಅನುವಾದಕಿಯಾಗಿ ಸ್ತ್ರೀ, ಲೇಖಕಿಯಾಗಿ ಸ್ತ್ರೀ ಹೀಗೆ ಸಾಹಿತ್ಯ ಸಮ್ಮೇಳನಗಳಲ್ಲಿ  ಮಹಿಳಾ ಲೇಖಕಿಯರ ಮಹಿಳಾಪರ ಚರ್ಚೆ ಯಲ್ಲಿ ಹೆಣ್ಣನ್ನು  ಕೇವಲ ಲೇಖಕಿಯಾಗಿ ಮಾತ್ರ ನೋಡಲಾಗುತ್ತಿದೆ. ಅವರುಗಳ ಚರ್ಚೆ  ಸಾಹಿತ್ಯವಲಯವನ್ನು ದಾಟಿ ಹೋಗುತ್ತಿಲ್ಲ. ದೇವದಾಸಿಯರ ಬಗ್ಗೆ, ಶೋಷಿತ ಹೆಣ್ಣಿನ ಬಗ್ಗೆ ತಮ್ಮ ಕಥೆ, ಕಾವ್ಯ, ಕಾದಂಬರಿಗಳಲ್ಲಿ ಪುಂಖಾನುಪುಂಖವಾಗಿ ಬರೆಯುವ ಮಹಿಳಾ ಲೇಖಕಿಯರು ಯಾವತ್ತೂ ಸಾಹಿತ್ಯ ಸಮ್ಮೇಳನದ ಚರ್ಚಾ ವೇದಿಕೆಗೆ ತಮ್ಮ ಬರವಣಿಗೆಗೆ ವಸ್ತುವಾಗುವ ಹೆಣ್ಣಿನ ಸಮಸ್ಯೆಗಳನ್ನು ತೆಗೆದುಕೊಂಡು ಹೋಗುತ್ತಿಲ್ಲ.

ದಲಿತ ಸಾಹಿತ್ಯ ಗೋಷ್ಠಿ 


          ದಲಿತ ಸಾಹಿತ್ಯ ಚರ್ಚೆಗೆ ಸಾಹಿತ್ಯ ಸಮ್ಮೇಳನದಲ್ಲಿ ಪ್ರತ್ಯೇಕ ಗೋಷ್ಠಿಗೆ ಅವಕಾಶ ಒದಗಿಸಬೇಕೆನ್ನುವುದು ಬಹುವರ್ಷಗಳ ಬೇಡಿಕೆಯಾಗಿತ್ತು. ಕೆಲವು ಸಂದರ್ಭಗಳಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಾಗಿ ದಲಿತ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಿದ ಉದಾಹರಣೆಯೂ ಉಂಟು. ಈ ವರ್ಷದ ೮೦ನೇ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಸಾಹಿತ್ಯ  ಗೋಷ್ಠಿಗೆ ವೇದಿಕೆ ಒದಗಿಸಿದ್ದು ನಿಜಕ್ಕೂ ಅದೊಂದು ಉತ್ತಮ ಪ್ರಯತ್ನ. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿದ್ದಲಿಂಗಯ್ಯನವರು ದಲಿತರ ಸಮಸ್ಯೆಗಳನ್ನು ವೈಯಕ್ತಿಕ ನೆಲೆಯಲ್ಲಿ ನೋಡದೆ ಸಾಮಾಜಿಕ ನೆಲೆಯಲ್ಲಿ ನೋಡುವಂತಾಗಬೇಕೆನ್ನುವ ಆಶಯ ವ್ಯಕ್ತಪಡಿಸಿದರು. ಹೀಗೆ ತಳ ಸಮುದಾಯದ ಸಮಸ್ಯೆಗಳನ್ನು ಚರ್ಚಿಸುವಾಗಲೆಲ್ಲ ನಮ್ಮ ದಲಿತ ಸಾಹಿತಿಗಳು ತಮ್ಮ ಚರ್ಚೆಯನ್ನು ಅಂಬೇಡ್ಕರ್ ವಿಚಾರಗಳಿಗೆ ಮತ್ತು ಮೇಲ್ವರ್ಗದವರನ್ನು ತೆಗಳುವುದಕ್ಕೆ ಸೀಮಿತಗೊಳಿಸುತ್ತಿರುವರು. ಯಾವ ದಲಿತ ಬರಹಗಾರರೂ ದಲಿತ ಸಮುದಾಯವನ್ನು ಆರ್ಥಿಕವಾಗಿ ಪ್ರಬಲರಾದ ಮತ್ತು ದುರ್ಬಲರಾದ ಎಂದು ಎರಡು ಬಣಗಳಾಗಿ ವಿಂಗಡಿಸಿ ಚರ್ಚಿಸಲು ಮುಂದೆ ಬರುತ್ತಿಲ್ಲ. ಆರ್ಥಿಕವಾಗಿ ಪ್ರಬಲರಾದ ದಲಿತರು ಇವತ್ತಿಗೂ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿರುವುದು ಒಂದರ್ಥದಲ್ಲಿ ಅದು ಆರ್ಥಿಕವಾಗಿ ದುರ್ಬಲರಾದ ದಲಿತರಿಗೆ ಮಾಡುತ್ತಿರುವ ಅನ್ಯಾಯ. ದಲಿತ ರಾಜಕಾರಣಿಗಳ ಮತ್ತು ದಲಿತ ಅಧಿಕಾರಿಗಳ ಮಕ್ಕಳು ಸರ್ಕಾರ ಕೊಡಮಾಡುತ್ತಿರುವ ಸೌಲಭ್ಯಗಳನ್ನು ಬಳಸಿಕೊಳ್ಳುವುದನ್ನು ನಿಲ್ಲಿಸಿದಲ್ಲಿ ಆರ್ಥಿಕವಾಗಿ ಹಿಂದುಳಿದ ದಲಿತರಿಗೆ ಇನ್ನು ಹೆಚ್ಚಿನ ಸವಲತ್ತುಗಳನ್ನು  ಒದಗಿಸಲು ಸರ್ಕಾರಕ್ಕೆ ಸಾಧ್ಯವಾಗುವುದು. ಇಂಥದ್ದೊಂದು ಚರ್ಚೆಗೆ ಸಾಹಿತ್ಯ ಸಮ್ಮೇಳನದ ದಲಿತ ಸಾಹಿತ್ಯ ಗೋಷ್ಠಿ ಮುನ್ನುಡಿ ಬರೆಯಬೇಕು. ಆದರೆ ವೇದಿಕೆಯಲ್ಲಿ ನಿಂತು ಮಾತನಾಡುವ ನಮ್ಮ ಬಹುಪಾಲು ದಲಿತ ಸಾಹಿತಿಗಳಿಗೆ ಸರ್ಕಾರದ ಸೌಲಭ್ಯಗಳಿಂದ ತಮ್ಮ ಮಕ್ಕಳನ್ನು ವಂಚಿತರನ್ನಾಗಿಸುವ ಇಚ್ಛೆ ಇಲ್ಲದಿರುವುದರಿಂದ ಅವರಿಂದ ಅಂಥದ್ದೊಂದು ಪ್ರಾಮಾಣಿಕ ಪ್ರಯತ್ನವನ್ನು ನಿರೀಕ್ಷಿಸುವುದು ಅಸಾಧ್ಯದ ಸಂಗತಿ.

ರೈತಪರ ದನಿ ಮೊಳಗುತ್ತಿಲ್ಲ 


               ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ರೈತಪರ ದನಿ ಮೊಳಗಿದ ಉದಾಹರಣೆಯೇ ಇಲ್ಲ. ನಮ್ಮ ಸಾಹಿತಿಗಳು ಯಾವತ್ತೂ ರೈತನ ಸಮಸ್ಯೆಗಳನ್ನು ಕುರಿತು ಮಾತನಾಡಲಾರರು. ಬೆಳೆಯುತ್ತಿರುವ ನಗರೀಕರಣ ಮತ್ತು ಕ್ಷಿಣೀಸುತ್ತಿರುವ ಕೃಷಿ ಭೂಮಿ ಇವತ್ತು ನಾವು ಎದುರಿಸುತ್ತಿರುವ ಸವಾಲುಗಳಲ್ಲಿ ಬಹುಮುಖ್ಯವಾದವುಗಳು. ಇವುಗಳನ್ನು ಕೇವಲ ರೈತನ ಸಮಸ್ಯೆಗಳೆಂದು ಉದಾಸಿನ ತೋರದೆ ಅವುಗಳನ್ನು ಸಾರ್ವತ್ರಿಕ ನೆಲೆಯಲ್ಲಿ ಚರ್ಚಿಸಬೇಕಾದ ಅಗತ್ಯ ಎದುರಾಗಿದೆ. ಆ ಕೆಲಸವನ್ನು ಮಾಡಬೇಕಾದ ಮಹತ್ವದ ಜವಾಬ್ದಾರಿ ಸಾಹಿತ್ಯದ ಮೇಲಿದೆ. ಆದ್ದರಿಂದ ಬರಹಗಾರನು ತನ್ನ ನೆಲದ ಸಮಸ್ಯೆಗೂ ದನಿಯಾಗಬೇಕು. ದುರಂತವೆಂದರೆ ರೈತನ ಸಮಸ್ಯೆಗಳನ್ನು ಸಮಾಜದ ಸಮಸ್ಯೆಗಳೆಂದು ತೆಗೆದುಕೊಂಡು ಬರೆದ ಬರಹಗಾರರ ಸಂಖ್ಯೆ ಕನ್ನಡದಲ್ಲಿ ಬಹಳಷ್ಟು ಕಡಿಮೆ. ಈ ವಿಷಯದಲ್ಲಿ ನಾವು ಪೂರ್ಣಚಂದ್ರ ತೇಜಸ್ವಿ ಮತ್ತು ಶಿವರಾಮ ಕಾರಂತರನ್ನು ಅಭಿನಂದಿಸಲೇ ಬೇಕು. ಆದರೆ ಇವರುಗಳ ನಂತರ ರೈತಪರವಾದ ಸಾಹಿತ್ಯ ಸಂಪೂರ್ಣವಾಗಿ ಕ್ಷಿಣೀಸಿದೆ. ಯಾವ ಲೇಖಕನೂ ರೈತರ ಪರವಾಗಿ ಬರೆಯಲು ಮನಸ್ಸು ಮಾಡುತ್ತಿಲ್ಲ. ಗತಕಾಲದ ನೆನಪುಗಳೊಂದಿಗೆ ಬದುಕುತ್ತ ಆ ನೆನಪುಗಳಿಗೆ ಅಕ್ಷರ ರೂಪ ಕೊಡುತ್ತಿರುವ ನಮ್ಮ ಬರಹಗಾರರು ಪ್ರಚಲಿತ ಸಮಸ್ಯೆಗಳಿಗೆ ಮುಖಾಮುಖಿಯಾಗಿ ನಿಲ್ಲುತ್ತಿಲ್ಲ. ನಿಜಕ್ಕೂ ಇದು ಯೋಚಿಸಬೇಕಾದ ಸಂಗತಿ. ಸಾಹಿತ್ಯ ಸಮ್ಮೇಳನದಲ್ಲಿ ಇಂಥ ಸಮಸ್ಯೆಗಳು ಚರ್ಚೆಗೆ ಬರಬೇಕು.

ಸ್ವಜಾತಿ ಮತ್ತು ಪ್ರಾದೇಶಿಕ ಪ್ರೇಮ


            ಸಾಹಿತ್ಯ ವಲಯವನ್ನು ಆವರಿಸಿಕೊಂಡಿರುವ ಬಹುದೊಡ್ಡ ಪಿಡುಗಿದು. ಯಾವ ವರ್ಣ ವ್ಯವಸ್ಥೆಯನ್ನು ವಿರೋಧಿಸಿ  ನಮ್ಮ ಸಾಹಿತಿಗಳು ಆಕ್ರೋಶದಿಂದ ಬರೆಯುವರೋ ಅವರು ತಮ್ಮ ಆಂತರ್ಯದಲ್ಲಿ ಆ ವ್ಯವಸ್ಥೆಯನ್ನು ಅಷ್ಟೇ ಗಾಢವಾಗಿ ಪ್ರೀತಿಸುತ್ತಿರುವುದು ನಿಜಕ್ಕೂ ಬಹುದೊಡ್ಡ ವಿಪರ್ಯಾಸ. ಈ ಸ್ವಜಾತಿ ಪ್ರೇಮ ಮತ್ತು ಪ್ರಾದೇಶಿಕ ಪ್ರೇಮದ ಬಿಸಿ ಸಾಹಿತ್ಯ ಸಮ್ಮೇಳನಕ್ಕೂ ತಟ್ಟಿದೆ. ಮೊನ್ನೆ ಕೊಡಗಿನಲ್ಲಿ ನಡೆದ ಸಮ್ಮೇಳನದಲ್ಲಿ ಒಂದು ಕವಿಗೋಷ್ಠಿಯ ಬದಲಾಗಿ ಎರಡು ಕವಿಗೋಷ್ಠಿಗಳನ್ನು ಆಯೋಜಿಸಲಾಗಿತ್ತು. ಇದಕ್ಕೆ ಕವಿತೆಗಳನ್ನು ವಾಚಿಸುವ ಕವಿಗಳ ಸಂಖ್ಯೆ ಬಹಳಷ್ಟಿದ್ದದ್ದೆ ಕಾರಣವಾಗಿತ್ತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷರು  ಸ್ವಜಾತಿ ಮತ್ತು ಪ್ರಾದೇಶಿಕ ಪ್ರೇಮ ಮೆರೆದು ತಮ್ಮ ತಮ್ಮ ಕೋಟಾದಲ್ಲಿ ಅನೇಕ ಕವಿಗಳಿಗೆ ಅವಕಾಶ ಮಾಡಿಕೊಟ್ಟಿದ್ದರ ಪರಿಣಾಮವಿದು. ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಬರಹಗಾರ ಅಬ್ದುಲ್ ರಶೀದ ಈ ಬೆಳವಣಿಗೆಗೆ ವೇದಿಕೆಯಲ್ಲೇ ಖಾರವಾಗಿ ಪ್ರತಿಕ್ರಿಯಿಸಿದರು. ಮುಂದಿನ ದಿನಗಳಲ್ಲಿ ಸಾಹಿತ್ಯ ಮತ್ತು ಸಾಹಿತ್ಯ ಸಮ್ಮೇಳನ ಇಂಥದ್ದೊಂದು ದುರಂತದಿಂದ ಮುಕ್ತವಾಗಲಿ ಎನ್ನುವ ಕಿವಿಮಾತು ಹೇಳಿದರು. ಆದ್ದರಿಂದ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ವಲಯವನ್ನು ಜಾತಿ ಮತ್ತು ಪ್ರಾದೇಶಿಕ ಪ್ರೇಮದಿಂದ ಮುಕ್ತಗೊಳಿಸಿ ಅದನ್ನು ಪರಿಶುದ್ಧಗೊಳಿಸುವ ಕೆಲಸವಾಗಬೇಕು. ಇಂಥದ್ದೊಂದು ಸವಾಲಿಗೆ ಪರಿಹಾರ ಕಂಡುಕೊಳ್ಳಬೇಕಿರುವುದು ಸಾಹಿತ್ಯವನ್ನು ಅದರ ಮೂಲ ಉದ್ದೇಶದಿಂದ ಬೇರ್ಪಡಿಸದೆ ಇರುವ ಕಾರಣದಿಂದ  ಇವತ್ತಿನ ತುರ್ತು ಅಗತ್ಯವಾಗಿದೆ.

ನಾನ್ ಅಕಾಡೆಮಿಕ್  ಎನ್ನುವ ಅಸ್ಪೃಶ್ಯತೆ


          ಕನ್ನಡ ಸಾಹಿತ್ಯ ವಲಯದಲ್ಲಿ ಬಹುಕಾಲದಿಂದ ನಡೆದುಕೊಂಡು ಬಂದ ಸಂಸ್ಕೃತಿ ಇದು. ಇಡೀ ಕನ್ನಡ ಸಾಹಿತ್ಯವಲಯವನ್ನು ನಮ್ಮ ಪ್ರಜ್ಞಾವಂತ ಬರಹಗಾರರು ಅಕಾಡೆಮಿಕ್ ಮತ್ತು ನಾನ್ ಅಕಾಡೆಮಿಕ್ ಎಂದು ವಿಭಜಿಸಿ ನಾನ್ ಅಕಾಡೆಮಿಕ್ ಬರಹಗಾರರನ್ನು ಅಸ್ಪೃಶ್ಯರಂತೆ ನಡೆಸಿಕೊಳ್ಳುತ್ತಿರುವರು. ೮೦ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ    ನಾ. ಡಿಸೋಜಾ ಅವರನ್ನು ಆಯ್ಕೆ ಮಾಡಿದಾಗಲೇ ಅವರು ನಾನ್ ಅಕಾಡೆಮಿಕ್ ಬರಹಗಾರ ಎನ್ನುವ ಅಪಸ್ವರದ ಮಾತುಗಳು ಅಲ್ಲಲ್ಲಿ ಕೇಳಿ ಬಂದವು. ಜೊತೆಗೆ ಅವರನ್ನು ಆಯ್ಕೆಮಾಡುವ ಮೂಲಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ತಮ್ಮ ಜಾತ್ಯಾತೀತ ಮನೋಭಾವವನ್ನು ಪ್ರದರ್ಶಿಸುವ ಆಕಾಂಕ್ಷೆ ದಟ್ಟವಾಗಿತ್ತು. ಹೀಗೆ ನಾ. ಡಿಸೋಜಾ ಅವರನ್ನು ನಾನ್ ಅಕಾಡೆಮಿಕ್ ಮತ್ತು ಅನ್ಯ ಧರ್ಮೀಯ ಎಂದು ಬಿಂಬಿಸುವ ನಮ್ಮ ಸಾಹಿತ್ಯ ವಲಯದ ಹುನ್ನಾರ ಅತ್ಯಂತ ವ್ಯವಸ್ಥಿತವಾಗಿ ಕೆಲಸ ಮಾಡಿತು. ಇವರ ನಾನ್ ಅಕಾಡೆಮಿಕ್ ಹಿನ್ನೆಲೆಯನ್ನು ಸರಿಯಾಗಿಯೇ ಬಳಸಿಕೊಂಡ ಪರಿಷತ್ತಿನ ಅಧ್ಯಕ್ಷರು ಸಮ್ಮೇಳನದ ಅಧ್ಯಕ್ಷರಿಗೆ ಭಾಷಣದ ಮಧ್ಯದಲ್ಲೇ ಮೊಟಕುಗೊಳಿಸುವಂತೆ ಚೀಟಿ ಕಳುಹಿಸುವರು. ಒಂದು ಗುಂಪು ವೇದಿಕೆಯನ್ನೇರಿ ಸಮ್ಮೇಳನದ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಳ್ಳುತ್ತದೆ. ಬೇಸರದ ಸಂಗತಿ ಎಂದರೆ ಈ ಎರಡೂ ಘಟನೆಗಳಿಗೆ ನಮ್ಮ ಅಕಾಡೆಮಿಕ್ ಸಾಹಿತ್ಯದ ವಲಯದಿಂದ ಒಂದೇ ಒಂದು ವಿರೋಧದ ಮಾತುಗಳು ಕೇಳಿ ಬರದಿರುವುದು. ಇಂಥದ್ದೊಂದು ಘಟನೆಗಾಗಿ ಕಾದವರಂತೆ ಅವರೆಲ್ಲ ಸಂಭ್ರಮಿಸುತ್ತಾರೆ. ಇಂಥದ್ದೊಂದು ಕೆಟ್ಟ ಸಂಪ್ರದಾಯದಿಂದ ಕನ್ನಡ ಸಾಹಿತ್ಯ ವಲಯ ಮುಕ್ತವಾಗಬೇಕು. ಈ ಮುಕ್ತಿಗೊಳಿಸುವ ಕೆಲಸ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಾಗಬೇಕು.

ಸಿನಿಮಾ ಎಂದರೆ ಮಾರು ದೂರ 


                ಸಿನಿಮಾ ಮಾಧ್ಯಮ ಕನ್ನಡ ಸಂಸ್ಕೃತಿಯನ್ನು ಶ್ರೀಮಂತಗೊಳಿಸುವಲ್ಲಿ ಕನ್ನಡ ಸಾಹಿತ್ಯಕ್ಕೆ ಸಮಾನಾಂತರವಾಗಿ ಕೆಲಸ ಮಾಡಿದೆ. ರಾಜಕುಮಾರ, ಬಾಲಕೃಷ್ಣ, ಪಂಢರೀಬಾಯಿ ಅವರಂಥ ಪ್ರತಿಭಾನ್ವಿತ ಕಲಾವಿದರು ಮತ್ತು ನಾಗೇಂದ್ರರಾಯರು,  ಅಯ್ಯರ, ಪುಟ್ಟಣ್ಣ ಕಣಗಾಲ್ ಅವರಂಥ ಸೃಜನಶೀಲ ನಿರ್ದೇಶಕರು ಕನ್ನಡ ಸಿನಿಮಾಗಳ ಮೂಲಕ ನಾಡಿನ ಭವ್ಯ ಪರಂಪರೆಯನ್ನು ಇಡೀ ದೇಶಕ್ಕೆ ಪರಿಚಯಿಸಿದರು. ಬಂಗಾರದ ಮನುಷ್ಯ, ಭೂದಾನ, ಭೂತಯ್ಯನ ಮಗು ಅಯ್ಯು, ಚೋಮನ ದುಡಿಯಂಥ ಸಿನಿಮಾಗಳಲ್ಲಿ ಸಾಮಾಜಿಕ ಕಾಳಜಿ ಅನಾವರಣಗೊಂಡಿದೆ. ಅನೇಕ ಕಾದಂಬರಿಗಳನ್ನು ಸಿನಿಮಾ ಚೌಕಟ್ಟಿಗೆ ಒಗ್ಗಿಸಿ ಒಂದರ್ಥದಲ್ಲಿ ಕನ್ನಡ ಸಾಹಿತ್ಯವನ್ನು ಈ ಸಿನಿಮಾ ಮಾಧ್ಯಮ ಜನಪ್ರಿಯಗೊಳಿಸಿತು. ತರಾಸು, ಶಿವರಾಮ ಕಾರಂತ, ಅನಂತಮೂರ್ತಿ, ಭೈರಪ್ಪನವರ ಕಾದಂಬರಿಗಳನ್ನು ಸಿನಿಮಾ ಪರದೆಯ ಮೇಲೆ ನೋಡುವ ಭಾಗ್ಯ ಕನ್ನಡಿಗರಿಗೆ ಸಿಕ್ಕಿದ್ದು ಈ ಸಿನಿಮಾ ಮಾಧ್ಯಮದ ಮೂಲಕವೇ. ಕನ್ನಡಕ್ಕೆ ಅನ್ಯಾಯವಾದಾಗಲೆಲ್ಲ ಕನ್ನಡ ಚಿತ್ರರಂಗ ಸಾಹಿತ್ಯ ವಲಯದೊಡನೆ ದನಿಗೂಡಿಸಿದೆ. ಚಳುವಳಿಯ ಸಂದರ್ಭ ಸಿನಿಮಾ ಕಲಾವಿದರೆಲ್ಲ ಮುಂಚೂಣಿಯಲ್ಲಿ ನಿಂತು ಹೋರಾಡಿದ ಉದಾಹರಣೆಗಳಿವೆ. ಗೋಕಾಕ ಚಳುವಳಿಯೇ ಅದಕ್ಕೆ ಪ್ರತ್ಯಕ್ಷ ಸಾಕ್ಷಿ. ಹೀಗಿದ್ದೂ ನಮ್ಮ ಸಾಹಿತ್ಯ ವಲಯ ಸಿನಿಮಾ ಮಾಧ್ಯಮವನ್ನು ಈ ನೆಲದ ಸೃಜನಶೀಲ ಹಿರಿಮೆಯಂದು ಪರಿಗಣಿಸಿಯೇ ಇಲ್ಲ. ಸಿನಿಮಾ, ಸಿನಿಮಾ ಕಲಾವಿದರು ಮತ್ತು ಸಿನಿಮಾ ಸಾಹಿತಿಗಳನ್ನು ನಮ್ಮ ಸಾಹಿತ್ಯ ವಲಯ ಎಂದಿಗೂ ಅಸ್ಪೃಶ್ಯತೆಯ ಭಾವನೆಯಿಂದಲೇ ಕಾಣುತ್ತ ಬಂದಿದೆ. ಅದಕ್ಕೆಂದೇ ಸಿನಿಮಾ ಮಾಧ್ಯಮದ ಕುರಿತಾದ ಚರ್ಚೆಗೆ ಸಾಹಿತ್ಯ ಸಮ್ಮೇಳನದಲ್ಲಿ ವೇದಿಕೆ ಲಭ್ಯವಾಗಿಲ್ಲ (ಒಂದೆರಡು ಸಮ್ಮೇಳನಗಳಲ್ಲಿ ಪರಭಾಷೆಗಳಿಂದ ಕನ್ನಡಕ್ಕೆ ಸಿನಿಮಾ ಡಬ್ಬಿಂಗ್ ನ್ನು ನಿಲ್ಲಿಸಬೇಕೆನ್ನುವ ನಿರ್ಣಯ ಕೈಗೊಳ್ಳಲಾಗಿತ್ತು ಆದರೆ ಈ ವಿಷಯ ಚರ್ಚೆಗೆ ಒಳಗಾಗಿರಲಿಲ್ಲ). ಸಿನಿಮಾ ಮಾಧ್ಯಮವನ್ನು ಒಂದು ಸೃಜನಶೀಲತೆಯ ನೆಲೆಯಲ್ಲಿ ನೋಡುವ ಮತ್ತು ಅದರ ಕೊಡುಗೆಯನ್ನು ಸ್ಮರಿಸುವ ಜೊತೆಗೆ ಸಮಾಜದ ಮೇಲೆ ಅದರಿಂದಾಗುವ ಪರಿಣಾಮಗಳನ್ನು ಕುರಿತು ಚರ್ಚಿಸಲು ಸಾಹಿತ್ಯ ಸಮ್ಮೇಳಗಳು ಅವಕಾಶ ಒದಗಿಸಬೇಕು. ಸಾಂಸ್ಕೃತಿಕ ಸಂಕ್ರಮಣದ ಈ ಕಾಲಘಟ್ಟದಲ್ಲಿ ಸಿನಿಮಾ ಮಾಧ್ಯಮ ತನ್ನ ಮೂಲ ಆಶಯದಿಂದ ಬಹುದೂರ ಸಾಗಿಬಂದಿದೆ. ಅದಕ್ಕೆಂದೇ ಇಲ್ಲಿ ಚಿತ್ರ ವಿಚಿತ್ರ ಸಿನಿಮಾಗಳು ಈಗ ನಿರ್ಮಾಣವಾಗುತ್ತಿವೆ.  ಸಾಹಿತ್ಯ ವಲಯ ತನ್ನ ಸುತ್ತಲಿನ ಈ ಎಲ್ಲ ರೂಪಾಂತರಗಳಿಗೆ  ಕಣ್ಣಾದಲ್ಲಿ ಒಂದಿಷ್ಟು ಭರವಸೆಯ ಹೊಸ ಗಾಳಿ ಬೀಸಬಹುದು. ಆದ್ದರಿಂದ ಸಿನಿಮಾ ಮಾಧ್ಯಮವನ್ನು ಸಾಹಿತ್ಯ ಸಮ್ಮೇಳನಗಳು ತಮ್ಮ ಚರ್ಚಾ ವೇದಿಕೆಗೆ ಎಳೆದುಕೊಳ್ಳುವುದು ಸಮಾಜದ ಆರೋಗ್ಯದ ದೃಷ್ಟಿಯಿಂದ ಅಗತ್ಯವಾಗಿದೆ.

ಕೊನೆಯ ಮಾತು 


         ಸಾಹಿತ್ಯ ಸಮ್ಮೇಳನ ನಮ್ಮ ಸಾಹಿತಿಗಳ ಒಣ ಪ್ರತಿಷ್ಠೆ ಮತ್ತು ಅವರವರ ಅನುಕೂಲಸಿಂಧುವಿಗೆ ವೇದಿಕೆಯಾಗುತ್ತಿರುವುದು ಅದು ಎಲ್ಲರಿಗೂ ತಿಳಿದಿರುವ ಸಂಗತಿ. ಅದಕ್ಕೆಂದೇ ವೇದಿಕೆಯಲ್ಲಿ ಸಾಹಿತಿಗಳು ಸಮಾಜದ ಸಮಸ್ಯೆಗಳನ್ನು ಮೂಲೆಗುಂಪಾಗಿಸಿ ವೈಯಕ್ತಿಕ ನಿಂದನೆಗೆ ತೊಡಗುವರು. ಜೊತೆಗೆ ಸಾಹಿತ್ಯದ ಉದ್ದೇಶ ಕೇವಲ ಭಾಷಾಭಿವೃದ್ಧಿ ಮಾತ್ರವಲ್ಲ ಅದು ಸಮಾಜದ ಎಲ್ಲ ಸಮಸ್ಯೆಗಳಿಗೂ ಮುಖಾಮುಖಿಯಾಗಬೇಕು. ಬರಹಗಾರರನ್ನು ಮತ್ತು ಸಾರ್ವಜನಿಕರನ್ನು ಸಮ್ಮೇಳನ, ವಿಚಾರ ಸಂಕೀರಣಗಳ ಮೂಲಕ ಒಂದು ವೇದಿಕೆಗೆ ಕರೆತಂದಾಗ ಅಲ್ಲಿ ಭಾಷೆಯೊಂದು ಎದುರಿಸುತ್ತಿರುವ ಸಮಸ್ಯೆಗಳ ಜೊತೆಗೆ ಸಾಮಾಜಿಕ ಸಮಸ್ಯೆಗಳೂ ಚರ್ಚೆಗೆ ಒಳಪಡಬೇಕು. ಎಲ್ಲವನ್ನೂ ಭಾಷೆ ಮತ್ತು ಸಾಹಿತ್ಯದ ನೆಲೆಯಲ್ಲಿ ಮಾತ್ರ ನೋಡಿದರೆ ಸಾಹಿತ್ಯ ಸಮ್ಮೇಳನಗಳು ಜನರಿಗೆ ಹತ್ತಿರವಾಗಲಾರವು. ಹಳೆಗನ್ನಡ, ನಡುಗನ್ನಡಗಳ  ಕುರಿತು ಚರ್ಚಿಸುವುದಕ್ಕಿಂತ ಸಮಾಜದ ಜ್ವಲಂತ ಸಮಸ್ಯೆಗಳಿಗೆ ಸಾಹಿತ್ಯ ಸಮ್ಮೇಳನಗಳು ವೇದಿಕೆಯಾಗಲಿ. ಮುಂದಿನ ದಿನಗಳಲ್ಲಾದರೂ ಇಂಥದ್ದೊಂದು ಬದಲಾವಣೆಗೆ  ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು  ಮತ್ತು ನಮ್ಮ ಅಕಾಡೆಮಿಕ್ ಬರಹಗಾರರು ತಮ್ಮನ್ನು ತಾವು ತೆರೆದುಕೊಳ್ಳಲಿ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Saturday, January 4, 2014

ಲೂಯಿ ಬ್ರೈಲ್: ಅಂಧರ ಬದುಕಿನ ಆಶಾಕಿರಣ

     

                                                       ( ಲೂಯಿ ಬ್ರೈಲ್ : ೧೮೦೯- ೧೮೫೨)


     (ಇಂದು ಲೂಯಿ ಬ್ರೈಲ್ ಜನ್ಮದಿನ ಅದಕ್ಕಾಗಿ ಒಂದಿಷ್ಟು ಸ್ಮರಣೆ)

        ಅಂಧತ್ವ ಅದು ಬದುಕಿನ ಬಹುದೊಡ್ಡ ಸಮಸ್ಯೆ. ಎರಡೂ ಕಣ್ಣುಗಳ ದೃಷ್ಟಿಯನ್ನು ಕಳೆದುಕೊಂಡು ಬದುಕುವ ರೀತಿ ನಿಜಕ್ಕೂ ಅದೊಂದು ಹೋರಾಟದ ಬದುಕು. ಎಲ್ಲ ಅಂಗಗಳು ಸರಿಯಿದ್ದೂ ಸಮಾಜಕ್ಕೆ ಹೊರೆಯಾಗಿ ಬದುಕುವವರ ನಡುವೆ ಅಂಧರು ಇಂದು ಸಮಾಜದಿಂದ ಯಾವುದೇ ರೀತಿಯ ಅನುಕಂಪ ನಿರೀಕ್ಷಿಸದೆ ಸಹಜ ರೀತಿಯಿಂದ ಬದುಕು ನಡೆಸುತ್ತಿರುವರು. ಅಂಗವೈಕಲ್ಯವನ್ನು ಮರೆತು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮೆರೆಯುತ್ತಿರುವರು. ಬದುಕು ಅವರಿಗೆ ಯಾವತ್ತಿಗೂ ಹೊರೆಯಾಗಿಲ್ಲ. ಅಮೇರಿಕ ದೇಶದ ಲೇಖಕಿ ಹೆಲನ್ ಕೆಲ್ಲರ್, ತನ್ನ ೪೩ ನೇ ವಯಸ್ಸಿನಲ್ಲಿ ಅಂಧನಾದ ಕವಿ ಜಾನ್ ಮಿಲ್ಟನ್,  ಕಾರ್ಟೂನಿಸ್ಟ್ ಜೆಮ್ಸ್  ಟರ್ಬರ್, ಹುಟ್ಟು ಅಂಧರಾಗಿ ಸಂಗೀತ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿದ ಪುಟ್ಟರಾಜ ಗವಾಯಿಗಳು ಈ ಎಲ್ಲ ಮಹನೀಯರು ತಮ್ಮ ದೈಹಿಕ ವೈಕಲ್ಯವನ್ನು ಮರೆತು ಮಾಡಿದ ಸಾಧನೆ ಮತ್ತು ಪಡೆದ ಯಶಸ್ಸು ಅಪಾರ.  ಅಂಧರ ಬದುಕಿನ ಇವತ್ತಿನ ಆತ್ಮವಿಶ್ವಾಸ ಮತ್ತು ಅವರ ಸಾಧನೆಗಳ ಹಿಂದೆ ಲೂಯಿ ಬ್ರೈಲ್ ಎನ್ನುವ ಸಾಧಕನ ಪರಿಶ್ರಮವಿದೆ. ಬ್ರೈಲ್ ನ ಬದುಕು ಮತ್ತು ಆತ ಮಾಡಿದ ಸಾಧನೆ ಅದೊಂದು ಯಶೋಗಾಥೆ. ತನ್ನ ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು ಆತ  ಮಾಡಿದ ಸಾಧನೆ ಅದು ಅನೇಕ ದೃಷ್ಟಿಹೀನರ ಬದುಕಿಗೆ ಸ್ಪೂರ್ತಿಯ ಸೆಲೆಯಾಗಿದೆ.

ಬಾಲ್ಯ ಮತ್ತು ಎದುರಾದ ಸಂಕಷ್ಟ 


        ಜನವರಿ ೪, ೧೮೦೯ ರಂದು ಪ್ಯಾರಿಸ್ ಸಮೀಪದ ಗ್ರಾಮವೊಂದರಲ್ಲಿ ಜನಸಿದ ಲೂಯಿ ಬ್ರೈಲ್ ಹುಟ್ಟು ಕುರುಡನಾಗಿರಲಿಲ್ಲ. ಜನಿಸಿದಾಗ ಅವನು ಸಾಮಾನ್ಯ ಮಕ್ಕಳಂತೆಯೇ ಇದ್ದ. ಲೂಯಿಯದು ತಂದೆ ತಾಯಿ ಮತ್ತು ನಾಲ್ಕು ಜನ ಸಹೋದರರಿಂದ ಕೂಡಿದ  ದೊಡ್ಡ ಕುಟುಂಬ.  ಲೂಯಿಯ ತಂದೆ ಅತ್ಯಂತ ಬಡವನಾಗಿದ್ದು ಪಾದರಕ್ಷೆಗಳನ್ನು ತಯ್ಯಾರಿಸುವ ಒಂದು ಸಣ್ಣ ಅಂಗಡಿಯೇ ಅವರ ಕುಟುಂಬದ ಜೀವನ ನಿರ್ವಹಣೆಗೆ ಆಧಾರವಾಗಿತ್ತು. ಚಿಕ್ಕ ಮಗುವಾಗಿದ್ದ ಲೂಯಿ ತನ್ನ ದಿನದ ಬಹುಪಾಲು ಸಮಯವನ್ನು ತಂದೆಯೊಂದಿಗೆ ಪಾದರಕ್ಷೆಗಳ ಅಂಗಡಿಯಲ್ಲೇ ಕಳೆಯುತ್ತಿದ್ದ. ಬದುಕಿನಲ್ಲಿ ನಡೆಯುವ ಆಕಸ್ಮಿಕ ಘಟನೆಗಳು ಬದುಕಿನ ದಿಕ್ಕನ್ನೇ ಬದಲಿಸುವಂತೆ ಲೂಯಿ ಬ್ರೈಲ್ ಚಿಕ್ಕವನಾಗಿದ್ದಾಗ ನಡೆದ ಒಂದು ಘಟನೆ ಶಾಶ್ವತವಾಗಿ ಆತ ತನ್ನ ದೃಷ್ಟಿಯನ್ನು ಕಳೆದುಕೊಳ್ಳುವಂತೆ ಮಾಡಿತು. ಒಮ್ಮೆ ತಂದೆ ತಯ್ಯಾರಿಸುತ್ತಿದ್ದ ಚಪ್ಪಲಿ ಅಂಗಡಿಗೆ ಹೋದ ಲೂಯಿ ಬ್ರೈಲ್ ಒಂದು ದಪ್ಪ ಚರ್ಮವನ್ನು ತೆಗೆದುಕೊಂಡು ಸೂಜಿಯಿಂದ ಹೊಲಿಯ ತೊಡಗಿದ. ಹೀಗೆ ಚರ್ಮದ ಮೇಲೆ ದಾರದಿಂದ ಚಿತ್ರ ಬಿಡಿಸುತ್ತಿದ್ದ ಆ ಘಳಿಗೆ ಆಕಸ್ಮಿಕವಾಗಿ ಸೂಜಿ ಲೂಯಿಯ ಬಲ  ಕಣ್ಣಿಗೆ ತಾಗಿತು. ಶಸ್ತ್ರ ಚಿಕಿತ್ಸೆಯ ನಂತರವೂ ಗಾಯ ಗುಣವಾಗುವ ಲಕ್ಷಣ ಕಂಡುಬರಲಿಲ್ಲ. ಒಂದು ಕಣ್ಣಿಗೆ ಆದ ಗಾಯದ ಸೋಂಕು ಮತ್ತೊಂದು ಕಣ್ಣಿಗೆ ತಗುಲಿತು. ಪರಿಣಾಮವಾಗಿ  ಲೂಯಿ ಬ್ರೈಲ್ ತನ್ನ ಎರಡೂ ಕಣ್ಣುಗಳ ದೃಷ್ಟಿಯನ್ನು ಕಳೆದುಕೊಂಡ. ಹೀಗೆ ದೃಷ್ಟಿಹೀನನಾದ ಆ ಹೊತ್ತು ಲೂಯಿಗೆ ಆಗಿನ್ನೂ ಕೇವಲ ೪ ವರ್ಷ ವಯಸ್ಸು. ಪಾಲಕರಿಗೆ ಲೂಯಿಯ ಬದುಕು ಒಂದು ಸಮಸ್ಯೆಯಾಗಿ ಕಾಡತೊಡಗಿತು. ಆತನನ್ನು ಬೇರೆ ಮಕ್ಕಳಂತೆ ಶಾಲೆಗೆ ಕಳುಹಿಸಲಾಯಿತಾದರೂ ಅಲ್ಲಿ ಅನೇಕ ಸಮಸ್ಯೆಗಳು ಎದುರಾದವು. ಶಿಕ್ಷಕರಿಗೂ ಆ ಅಂಧ ಮಗುವಿಗೆ ಪಾಠ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿತು. ಅಂಥ ಸಮಸ್ಯೆಗಳ ನಡುವೆಯೂ ಲೂಯಿ ಬ್ರೈಲ್ ಆ ಶಾಲೆಯಲ್ಲಿ  ಕೆಲವು ವರ್ಷ ಅಭ್ಯಾಸ ಮಾಡಿದ. ಆದರೆ ಆ ಶಾಲೆಯಲ್ಲಿ ಅಂಧ ಮಕ್ಕಳಿಗಾಗಿ ಓದಲು ಪುಸ್ತಕಗಳಿರಲಿಲ್ಲ.  ತನ್ನ ಅಂಧತ್ವದಿಂದಾಗಿ ಲೂಯಿಗೆ ಶಾಲೆಯಲ್ಲಿ ಏನನ್ನೂ ಕಲಿಯಲು ಸಾಧ್ಯವಾಗಲಿಲ್ಲ. ಇನ್ನು ಅದೇ ಶಾಲೆಯಲ್ಲಿ ಮುಂದುವರಿದರೆ ಶಿಕ್ಷಣ ಪಡೆಯುವುದು ಅಸಾಧ್ಯ ಎಂದರಿತ ಲೂಯಿಯ ತಂದೆ ತನ್ನ ಮಗನಿಗಾಗಿ ಹೊಸ ಶಾಲೆಯನ್ನು ಹುಡುಕತೊಡಗಿದ.

ಪ್ಯಾರಿಸ್ ನಡೆಗೆ ಪಯಣ   


            ಲೂಯಿಗೆ ಉತ್ತಮ ಶಿಕ್ಷಣ ಒದಗಿಸಿ ಆತನನ್ನು ಸ್ವಾವಲಂಬಿಯಾಗಿಸಬೇಕೆನ್ನುವುದು ಆತನ ತಂದೆಯ ಬಯಕೆಯಾಗಿತ್ತು. ಆ ದಿನಗಳಲ್ಲಿ ಅಂಧ ಮಕ್ಕಳು ಪ್ಯಾರಿಸ್  ಬೀದಿಗಳಲ್ಲಿ ಬಿಕ್ಷೆ ಬೇಡುವುದು ಸಾಮಾನ್ಯ ದೃಶ್ಯವಾಗಿತ್ತು. ಲೂಯಿ ಬ್ರೈಲ್ ನ   ತಂದೆಗೆ ತನ್ನ ಮಗ ಬಿಕ್ಷೆ ಬೇಡುವ ಚಿತ್ರವನ್ನು ಕಲ್ಪಿಸಿಕೊಳ್ಳುವುದೂ ಕಷ್ಟದ ಸಂಗತಿಯಾಗಿತ್ತು. ಸ್ವತಹ ಅಕ್ಷರಸ್ಥನಾದ ಲೂಯಿಯ  ತಂದೆಗೆ ಶಿಕ್ಷಣದ ಮಹತ್ವದ ಅರಿವಿತ್ತು. ಆತ ತನ್ನ ಕುರುಡು ಮಗನ ಭವಿಷ್ಯವನ್ನು ಉಜ್ವಲಗೊಳಿಸಲು ಶಿಕ್ಷಣದ ಮೊರೆ ಹೋದ.   ಸಾಮಾನ್ಯ ಮಕ್ಕಳ ಶಾಲೆಯಲ್ಲಿ  ಲೂಯಿಗೆ ಸಮಸ್ಯೆ ಎದುರಾದಾಗ ಆತನ ತಂದೆ ಅವನನ್ನು ಪ್ಯಾರಿಸ್ ನಲ್ಲಿರುವ ವಿಶ್ವದ ಪ್ರಥಮ ಅಂಧರ ಶಾಲೆಯಾದ 'ರಾಯಲ್ ಇನ್ಸ್ಟಿಟ್ಯೂಟ್ ಆಫ್ ಬ್ಲೈಂಡ್ ಯುಥ್' ಎನ್ನುವ  ಅಂಧರ ಶಾಲೆಗೆ ಸೇರಿಸಿದ. ಲೂಯಿ ಬ್ರೈಲ್ ಗೆ ಎರಡನೇ ಆಯ್ಕೆಯೇ ಇರಲಿಲ್ಲ. ಉತ್ತಮ ಶಿಕ್ಷಣ ಪಡೆಯಬೇಕೆನ್ನುವ ಅವನೊಳಗಿನ ಮಹತ್ವಾಕಾಂಕ್ಷೆ ಆತನನ್ನು ಪ್ಯಾರಿಸ್ ನಲ್ಲಿರುವ ಅಂಧರ ಶಾಲೆಗೆ ಕರೆದೊಯ್ಯಿತು. ಪ್ಯಾರಿಸ್ ನಡೆಗಿನ ಆ ಪಯಣ ನಂತರದ  ದಿನಗಳಲ್ಲಿ ಲೂಯಿ ಬ್ರೈಲ್ ನ ಬದುಕಿನ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತು. ೧೭೮೬ ರಲ್ಲಿ ಸ್ಥಾಪನೆಯಾದ ಈ ಶಾಲೆ ಪ್ರಥಮ ಅಂಧ ಮಕ್ಕಳ ಶಾಲೆ ಎನ್ನುವ ಕೀರ್ತಿಗೆ ಪಾತ್ರವಾಗಿದೆ.  ಆ ಶಾಲೆಯ ಸ್ಥಾಪಕನಾದ ವಾಲೆಂಟಿನ್ ಹೂಯಿ ಅಂಧ ಮಕ್ಕಳು ಓದಲು ಮತ್ತು ಬರೆಯಲು ತನ್ನದೇ ವಿಧಾನವನ್ನು ಅನುಸರಿಸುತ್ತಿದ್ದ. ಅಂಧನಾಗಿರದ ವಾಲೆಂಟಿನ್ ಗೆ ಅಂಧ ಮಕ್ಕಳ ಸಮಸ್ಯೆಯನ್ನು ಸಹಜವಾಗಿ ಗುರುತಿಸಿ ಅದಕ್ಕೆ ಪರಿಹಾರ ಕಂಡುಹಿಡಿಯುವುದು ಅಸಾಧ್ಯದ ಸಂಗತಿಯಾಗಿತ್ತು. ಅಂಧ ಮಕ್ಕಳಿಗೆ ಸಹಾಯ ಮಾಡಬೇಕೆನ್ನುವ ಅವನೊಳಗಿನ ಇಂಗಿತ ಅವನನ್ನು ಅಂಧ ಮಕ್ಕಳ ಶಾಲೆ ತೆರೆಯಲು ಪ್ರೇರೇಪಿಸಿತ್ತು.  ಆದರೆ ಆ ಶಾಲೆಯಲ್ಲಿನ ಪುಸ್ತಕಗಳನ್ನು ಅಂಧ ಮಕ್ಕಳು ಸರಾಗವಾಗಿ ಓದಲು ಸಾಧ್ಯವಾಗುತ್ತಿರಲಿಲ್ಲ. ಜೊತೆಗೆ ಪುಸ್ತಕಗಳ ಗಾತ್ರ ಮತ್ತು ಭಾರ ಮಕ್ಕಳಿಗೆ ಹೊಂದಾಣಿಕೆಯಾಗುತ್ತಿರಲಿಲ್ಲ. ಆ ಸಂದರ್ಭ ಶಾಲೆಯಲ್ಲಿನ ಅದೆಷ್ಟೋ ಅಂಧ ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಹೋಗುತ್ತಿದ್ದದುಂಟು. ಆಗೆಲ್ಲ ಆ ಶಾಲೆಯ ಸಂಸ್ಥಾಪಕನಾದ ವಾಲೆಂಟಿನ್ ಹೂಯಿಗೆ ನಿರಾಶೆ ಎದುರಾಗುತ್ತಿತ್ತು. ಲೂಯಿ ಬ್ರೈಲ್ ಮಾತ್ರ ಎಂಥ ಕಷ್ಟದ ಪರಿಸ್ಥಿತಿಯಲ್ಲೂ ಅತ್ಯಂತ ಶ್ರದ್ಧೆಯಿಂದ ಓದುತ್ತಿದ್ದ. ಆ ಶಾಲೆಯಲ್ಲಿದ್ದ ಅಂಧ ಮಕ್ಕಳಿಗೆಂದೇ  ಪ್ರಕಟವಾಗಿದ್ದ ಎಲ್ಲ ೧೪ ಪುಸ್ತಕಗಳನ್ನೂ ಓದಿ ಮುಗಿಸಿದ. ತನ್ನ ಬದುಕನ್ನು ಕವಿದ ಕಾರ್ಮೋಡದಿಂದ ಹೊರಬರಬೇಕೆನ್ನುವ ಮಹತ್ವಾಕಾಂಕ್ಷೆ ಆತನದಾಗಿತ್ತು. ಪರೀಕ್ಷೆಯಲ್ಲಿ ಉತ್ತಿರ್ಣನಾದ ಲೂಯಿ ಬ್ರೈಲ್ ತನ್ನ ಗುರುವಿನ ಆಸೆಯಂತೆ ತಾನೊದಿದ ಶಾಲೆಯಲ್ಲೇ ಶಿಕ್ಷಕನಾಗಿ ವೃತ್ತಿಯನ್ನಾರಂಭಿಸಿದ.

ಬ್ರೈಲ್ ಲಿಪಿಯ ಅವಿಷ್ಕಾರ 


          ಅಂಧ ಮಕ್ಕಳಿಗಾಗಿ ಏನಾದರೂ ಉಪಯುಕ್ತವಾದದ್ದನ್ನು ಮಾಡಬೇಕೆನ್ನುವ ಆಸೆಯೊಂದಿಗೇ ಲೂಯಿ ಬ್ರೈಲ್ ಆ ಶಾಲೆಯಲ್ಲಿ ಶಿಕ್ಷಕನಾಗಿ ಸೇರಿದ. ಆತನ ಮೊದಲ ಆದ್ಯತೆ ಮಕ್ಕಳು  ಓದಲು ಮತ್ತು ಬರೆಯಲು ಅನುಕೂಲವಾಗುವಂತೆ ಹೊಸ ಬರವಣಿಗೆಯ ವಿಧಾನವೊಂದನ್ನು ಕಂಡು ಹಿಡಿಯ ಬೇಕೆನ್ನುವುದಾಗಿತ್ತು. ಆ ಶಾಲೆಯಲ್ಲಿ ಅಂಧ ಮಕ್ಕಳಿಗಾಗಿ  ಪುಸ್ತಕಗಳಿದ್ದರೂ ಅಕ್ಷರಗಳನ್ನು ಬೇಗನೆ ಗುರುತಿಸಿ ಸಾಮಾನ್ಯ ಮಕ್ಕಳಂತೆ ವೇಗವಾಗಿ ಓದಲು ಸಾಧ್ಯವಾಗುತ್ತಿರಲಿಲ್ಲ. ಅಕ್ಷರಗಳನ್ನು ಗುರುತಿಸಿ ವಾಕ್ಯಗಳನ್ನು ಓದುವುದು  ಕಷ್ಟದ ಕೆಲಸವಾಗಿತ್ತು.  ಆದ್ದರಿಂದ ಅಕ್ಷರಗಳನ್ನು ಬಲುಬೇಗನೆ ಗುರುತಿಸಿ ವೇಗವಾಗಿ ಓದಲು   ಸಹಾಯವಾಗುವಂಥ ಲಿಪಿಯನ್ನು ಕಂಡು ಹಿಡಿಯಬೇಕೆನ್ನುವುದು ಲೂಯಿ ಬ್ರೈಲ್ ನ ಉದ್ದೇಶವಾಗಿತ್ತು.   ಅವನು ವಿದ್ಯಾರ್ಥಿಯಾಗಿದ್ದ ಸಂದರ್ಭ  ಆ ಶಾಲೆಯಲ್ಲಿ ನಡೆದ ಒಂದು ಘಟನೆ ಲೂಯಿ ಬ್ರೈಲ್ ನ ಸಮಸ್ಯೆಗೆ ಶಾಶ್ವತ ಪರಿಹಾರವನ್ನೊದಗಿಸಿತು. ಆ ಘಟನೆ ಹೀಗಿದೆ ೧೮೨೧ ರಲ್ಲಿ  ಚಾರ್ಲ್ಸ್ ಬಾರ್ಬೈರ್ ಎನ್ನುವ ಸೈನಿಕ ಲೂಯಿ ಓದುತ್ತಿದ್ದ ಅಂಧರ ಶಾಲೆಗೆ ಭೇಟಿ ನೀಡಿ ತಾನು ಕಂಡುಹಿಡಿದಿದ್ದ 'ನೈಟ್ ರೈಟಿಂಗ್' ಎನ್ನುವ ಯಂತ್ರದ ಕುರಿತು ವಿವರಿಸಿದನು. ನೈಟ್ ರೈಟಿಂಗ್ ಸೈನಿಕರು ದೂರದಿಂದಲೇ ಪರಸ್ಪರ ಸಂದೇಶಗಳನ್ನು ರವಾನಿಸುವ ಒಂದು ಯಂತ್ರವಾಗಿದ್ದು ಅದು ೧೨ ರಂಧ್ರಗಳನ್ನೊಳಗೊಂಡಿತ್ತು. ಆ ಎಲ್ಲ ೧೨ ರಂಧ್ರಗಳು ವಿಭಿನ್ನ ಶಬ್ದಗಳನ್ನು ಹೊರಡಿಸುತ್ತಿದ್ದವು. ದುರದೃಷ್ಟವಶಾತ್ ಸೈನಿಕರು ಈ ಯಂತ್ರವನ್ನು ಉಪಯೋಗಿಸಲು ವಿಫಲರಾದ ಕಾರಣ ಅದರ ಉಪಯೋಗವನ್ನು ತಿರಸ್ಕರಿಸಲಾಯಿತು. 

            ನೈಟ್ ರೈಟಿಂಗ್ ಯಂತ್ರದ ಪ್ರಾತ್ಯಕ್ಷಿಕತೆ ಲೂಯಿ ಬ್ರೈಲ್ ಮೇಲೆ ತುಂಬ ಪ್ರಭಾವ ಬೀರಿತು. ಈ ಯಂತ್ರ ಅಂಧ ಮಕ್ಕಳ ಓದಿಗೆ ಅನುಕೂಲವಾಗಬಹುದೆನ್ನುವ ಮಹತ್ವಾಕಾಂಕ್ಷೆ ಅವನಲ್ಲಿ ಚಿಗುರೊಡೆಯಿತು. ಪರಿಣಾಮವಾಗಿ ಲೂಯಿ ಬ್ರೈಲ್ ರಂಧ್ರಗಳ ಸಹಾಯದಿಂದ ಬರೆಯುವ ಮತ್ತು ಓದುವ ವಿಧಾನವನ್ನು ಕಂಡು ಹಿಡಿಯಲು ಪ್ರಯತ್ನಿಸಿದ. ಲೂಯಿ  ಹಗಲಿರುಳೆನ್ನದೆ ಶ್ರಮಿಸಿದ.ಕೊನೆಗೂ ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗಿ ಆತ ಬ್ರೈಲ್ ಲಿಪಿಯನ್ನು ಅವಿಷ್ಕರಿಸಿದ ಆ ಸಂದರ್ಭ ಅವನಿಗಿನ್ನೂ ೧೫ ವರ್ಷ ವಯಸ್ಸು. ಲೂಯಿ ಬ್ರೈಲ್ ಪ್ರಾರಂಭದಲ್ಲಿ ಗಣಿತ ಮತ್ತು ಸಂಗೀತ ವಿಷಯಗಳನ್ನು ಓದಲು ಮತ್ತು ಬರೆಯಲು ಸಂಕೇತಗಳನ್ನು ಕಂಡುಹಿಡಿದ. ೧೮೨೭ ರಲ್ಲಿ ಪ್ರಥಮ ಬಾರಿಗೆ ಬ್ರೈಲ್ ಲಿಪಿಯಲ್ಲಿ ಪುಸ್ತಕ ಪ್ರಕಟವಾಯಿತು. ಆದರೆ ಆಗ ಲೂಯಿ ಬ್ರೈಲ್ ಗೆ ದೊರೆಯಬೇಕಾದ ಸೂಕ್ತ ಪ್ರೋತ್ಸಾಹ ದೊರೆಯಲಿಲ್ಲ. ಅವನು ಪಾಠ ಮಾಡುತ್ತಿದ್ದ ಶಾಲೆಯಲ್ಲಿ ಬ್ರೈಲ್ ಲಿಪಿಯನ್ನು ಬಳಸಲು  ಅವಕಾಶ ನೀಡಲಿಲ್ಲ. ಇದರಿಂದ ಆತ ನಿರಾಶನಾಗದೆ  ಬ್ರೈಲ್ ಲಿಪಿಯಲ್ಲಿ ಅನೇಕ ಪುಸ್ತಕಗಳನ್ನು ಪ್ರಕಟಿಸಿ ಆ  ಮೂಲಕ ಅಂಧರ ಬದುಕಿಗೆ ಬೆಳಕು ನೀಡಲು ಪ್ರಯತ್ನಿಸಿದ. ಲೂಯಿ ಬದುಕಿರುವ ಅವಧಿಯಲ್ಲಿ ಆತನ ಪ್ರಯೋಗ ನಿರೀಕ್ಷಿತ ಮಟ್ಟದ ಯಶಸ್ಸು ಕಾಣಲಿಲ್ಲ. ಸತತ ಅನಾರೋಗ್ಯದಿಂದ ಬಳಲುತ್ತಿದ್ದ ಲೂಯಿ ಬ್ರೈಲ್ ಕ್ಷಯರೋಗದಿಂದ ೧೮೫೨ ರಲ್ಲಿ ಅಸುನೀಗಿದಾಗ ಅವನ ವಯಸ್ಸು ೪೩ ವರ್ಷಗಳು. ತನ್ನ ಮರಣದ ನಂತರ ಆತ ತನ್ನಲ್ಲಿದ್ದ ಹಣವನ್ನೆಲ್ಲ ಅಂಧರ ಸಂಘಗಳಿಗೆ ದೇಣಿಯಾಗಿ ಕೊಡುವಂತೆ ಸೂಚಿಸಿದ್ದ.


                                                                  (ಬ್ರೈಲ್ ಲಿಪಿಯ ಮಾದರಿ)


ದೊರೆತ ಗೌರವ 


               ಲೂಯಿ ಬ್ರೈಲ್ ನ ಸಾವಿನ ನಂತರ ಅನೇಕ ವರ್ಷಗಳವರೆಗೆ ಬ್ರೈಲ್ ಲಿಪಿ ಜನರ ನೆನಪಿನಿಂದ ಮರೆಯಾಯಿತು. ಆದರೆ ೧೮೬೮ ರಲ್ಲಿ ಡಾ. ಥಾಮಸ್ ಆರ್ಮಿಟೆಜ್ ಫ್ರಾನ್ಸ್ ನಲ್ಲಿ ಅಂಧರ ಒಂದು ಸಂಘವನ್ನು ಸ್ಥಾಪಿಸಿ ಬ್ರೈಲ್ ಲಿಪಿಯ ಸಹಾಯದಿಂದ ಅನೇಕ ಪುಸ್ತಕಗಳನ್ನು ಪ್ರಕಟಿಸಿದರು. ಥಾಮಸ್ ಆರ್ಮಿಟೆಜ್ ಅವರ ನಿರಂತರ  ಪ್ರಯತ್ನದ ಪರಿಣಾಮ ಅಂತರಾಷ್ಟ್ರೀಯ ಮಟ್ಟದಲ್ಲಿ ಬ್ರೈಲ್ ಲಿಪಿಯ ಬಳಕೆ ಹೆಚ್ಚಿತು. ೧೯೯೦ ರ ಹೊತ್ತಿಗೆ ಪ್ರತಿಯೊಂದು ರಾಷ್ಟ್ರದಲ್ಲಿನ ಎಲ್ಲ ಪ್ರಮುಖ ಭಾಷೆಗಳಲ್ಲಿ ಬ್ರೈಲ್ ಲಿಪಿಯಲ್ಲಿ ಪುಸ್ತಕಗಳು ಪ್ರಕಟವಾದವು. ಇದೇ ವೇಳೆ 'ಬ್ರೈಲ್ ಲಿಪಿಯನ್ನು ಬಳಸದೇ ಇರುವ ಅಂಧರ ಶಾಲೆ ಜಗತ್ತಿನ  ಯಾವ ದೇಶದಲ್ಲೂ  ಇಲ್ಲ' ಎಂದು ಥಾಮಸ್ ಆರ್ಮಿಟೆಜ್ ಘೋಷಿಸಿದರು.  ಇಂದು ಜಗತ್ತಿನ ಆಲ್ಬೇನಿಯನ್ (Albanian) ಭಾಷೆಯಿಂದ ಝುಲು (Zulu) ಭಾಷೆಯವರೆಗೆ ಎಲ್ಲ ಭಾಷೆಗಳಲ್ಲಿ ಬ್ರೈಲ್ ಲಿಪಿ ಬಳಕೆಯಲ್ಲಿದೆ. 

            ನಂತರದ ವರ್ಷಗಳಲ್ಲಿ ಬ್ರೈಲ್ ಲಿಪಿಯ ಯಶಸ್ಸು, ಜನಪ್ರಿಯತೆ ಮತ್ತು ಅದರ ಉಪಯುಕ್ತತೆಯನ್ನು ಪರಿಗಣಿಸಿ ಫ್ರಾನ್ಸ್ ರಾಷ್ಟ್ರದಲ್ಲಿ ಲೂಯಿ ಬ್ರೈಲ್ ಗೆ ದೊರೆಯಬೇಕಾದ ಮನ್ನಣೆ ಮತ್ತು ಗೌರವ ದೊರೆತವು. ವಿಪರ್ಯಾಸದ ಸಂಗತಿ ಎಂದರೆ ಆ ಹೊತ್ತಿಗೆ ಪ್ರಶಸ್ತಿ ಪುರಸ್ಕಾರಗಳನ್ನು ಸ್ವೀಕರಿಸಲು ಲೂಯಿ ಬ್ರೈಲ್ ಬದುಕಿರಲಿಲ್ಲ. ಬದುಕಿನುದ್ದಕ್ಕೂ ಸಂಕಷ್ಟಗಳ ಮಧ್ಯೆಯೇ ಜೀವನ ಸಾಗಿಸಿದ ಲೂಯಿ ಬ್ರೈಲ್ ಸಾವಿನ ನಂತರವೂ ನೆನಪಿನಲ್ಲುಳಿಯುವಂಥ ಮಹತ್ವದ ಕಾಣಿಕೆಯನ್ನು ಪ್ರಪಂಚಕ್ಕೆ ನೀಡಿ ಫ್ರಾನ್ಸ್ ದೇಶದ ಮಹಾನ್ ನಾಯಕನೆನಸಿಕೊಂಡ. ಲೂಯಿಯ ಸಾವಿನ ನಂತರ ಆತ ಜನಿಸಿದ ಮನೆಯನ್ನು ಐತಿಹಾಸಿಕ ಸ್ಥಳವಾಗಿ ಪರಿವರ್ತಿಸಲಾಯಿತು.  ೧೯೫೨ ರಲ್ಲಿ ಲೂಯಿ ಬ್ರೈಲ್ ನ ಸಮಾಧಿಯನ್ನು ಫ್ರಾನ್ಸ್ ದೇಶದ ರಾಷ್ಟ್ರೀಯ ನಾಯಕರ ಸಮಾಧಿ ಸ್ಥಳವಾದ ಪ್ಯಾಂಥೆನ್ (Pantheon) ರುದ್ರಭೂಮಿಗೆ ಸ್ಥಳಾಂತರಿಸಿ ಆತನ ಸಾಧನೆಯನ್ನು ಗೌರವಿಸಲಾಯಿತು. ೨೦೦೯ ರಲ್ಲಿ ಲೂಯಿ ಬ್ರೈಲ್ ನ ೨೦೦ನೇ ಜನ್ಮದಿನದ ಸ್ಮರಣಾರ್ಥ ಅಮೇರಿಕ, ಭಾರತ, ಇಟಲಿ ಮತ್ತು ಬೆಲ್ಜಿಯಂ ದೇಶಗಳಲ್ಲಿ ಲೂಯಿ ಚಿತ್ರವಿರುವ ನಾಣ್ಯಗಳನ್ನು ಹೊರತರಲಾಯಿತು. ಜರ್ಮನ್ ರಾಷ್ಟ್ರವು ಲೂಯಿ ಬ್ರೈಲ್ ಭಾವಚಿತ್ರವಿರುವ ಅಂಚೆ ಚೀಟಿಯನ್ನು ಬಿಡುಗಡೆಮಾಡಿ ಆ ಸಾಧಕನನ್ನು ಗೌರವಿಸಿತು. ಜೊತೆಗೆ ಲೂಯಿ ಬ್ರೈಲ್ ನ ಸಾಧನೆ ಕುರಿತು ಅನೇಕ ಭಾಷೆಗಳಲ್ಲಿ ಮಕ್ಕಳ ಪುಸ್ತಕಗಳು ಪ್ರಕಟವಾಗಿವೆ. ಫ್ರಾನ್ಸ್  ದೇಶದಲ್ಲಿ ಲೂಯಿ ಬ್ರೈಲ್ ನ  ಸಾಧನೆಯ ಮೇಲೆ ಬೆಳಕು ಚೆಲ್ಲುವ ನಾಟಕಗಳು ಅಲ್ಲಲ್ಲಿ ಪ್ರದರ್ಶನಗೊಂಡವು ಮತ್ತು ೨೦೦೮ ರಲ್ಲಿ ಫ್ರಾನ್ಸ್ ಭಾಷೆಯಲ್ಲಿ ಸಿನಿಮಾ ಕೂಡ ತಯ್ಯಾರಾಯಿತು. 

ಕೊನೆಯ ಮಾತು 


ರಸಲ್ ಫ್ರೀಡಮನ್ ಬರೆದ 'ಔಟ್ ಆಫ್ ಡಾರ್ಕ್ ನೆಸ್' (Out of Darkness) ಪುಸ್ತಕದಲ್ಲಿನ ಪ್ರಾರಂಭದ ಈ ಕೆಳಗಿನ ಸಾಲುಗಳು ಲೂಯಿ ಬ್ರೈಲ್ ನೊಳಗಿನ ಮಹತ್ವಾಕಾಂಕ್ಷೆ ಮತ್ತು ತಹತಹಿಕೆಗೆ ಕನ್ನಡಿ ಹಿಡಿಯುತ್ತವೆ.

'More than anything else Louis Braille wanted to read. He could not accept the fact that as a blind boy, in the year 1821 he was unable to communicate by the written word. So each night in the darkness of his dormitory room he punched tiny holes in paper. His friends told him he was wasting his time, but Braille's experiment with dots became a system that as the plaque on the front of Braille's house reads, 'Open the doors of knowledge to all those who cannot see'.


-ರಾಜಕುಮಾರ.ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ