Wednesday, August 22, 2012

ರಾಜಕೀಯದಲ್ಲಿ ಕುಸಿಯುತ್ತಿರುವ ಮೌಲ್ಯಗಳು

         'ನಿರಂತರ ಚುನಾವಣೆಗಳು ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಆದ್ದರಿಂದ ಇಲ್ಲಿಯೂ ಅಮೇರಿಕಾ ದೇಶದಂತೆ ಲೋಕಸಭೆ ಮತ್ತು ವಿಧಾನ ಸಭೆಗಳಿಗೆ ನಿರ್ಧಿಷ್ಟ ಅವಧಿಯನ್ನು ನಿಗದಿಪಡಿಸಿ ಆ ಅವಧಿ ಪೂರ್ಣಗೊಳ್ಳುವವರೆಗೆ ಚುನಾವಣೆಗೆ ಅವಕಾಶವೇ ಇರಕೂಡದು' ಹೀಗೆಂದು ಕೆಲವು ದಿನಗಳ ಹಿಂದೆ ದೇಶದ ಹಿರಿಯ ರಾಜಕಾರಣಿ ಶ್ರೀ ಅಡ್ವಾಣಿ ಅವರು ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದರು. ವೈಚಾರಿಕ ಚಿಂತನೆಗಳಿಂದ ಕೂಡಿದ ಪ್ರಾಮಾಣಿಕ ವ್ಯಕ್ತಿತ್ವದ ಮನಸ್ಥಿತಿ ಅದು. ಆದರೆ ಈ ದಿನಗಳಲ್ಲಿ ರಾಜಕೀಯದಲ್ಲಿ ನೈತಿಕತೆ, ಮೌಲ್ಯಾಧಾರಿತ ವಿಚಾರಗಳು, ಪ್ರಾಮಾಣಿಕತೆ ಇವುಗಳೆಲ್ಲ ಕಾಣಸಿಗುತ್ತಿಲ್ಲ. ಮೌಲ್ಯಾಧಾರಿತ ರಾಜಕಾರಣವನ್ನು ದುರ್ಬೀನು ಹಾಕಿಕೊಂಡು ಹುಡುಕುವ ಮಟ್ಟಕ್ಕೆ ರಾಜಕೀಯ ಕ್ಷೇತ್ರದಲ್ಲಿ ತತ್ವ ಮತ್ತು ಮೌಲ್ಯಗಳ ಕ್ಷೋಭೆ ಕಾಣಿಸಿಕೊಂಡಿದೆ. ಆ ಕಾಲವೊಂದಿತ್ತು ಅಲ್ಲಿ ಮೌಲ್ಯಗಳಿದ್ದವು, ನೈತಿಕತೆ ಮತ್ತು ಪ್ರಾಮಾಣಿಕತೆಗಳಿದ್ದವು. ಇಡೀ ರಾಜಕೀಯ ಬದುಕು ಮೌಲ್ಯಾಧಾರಿತವಾಗಿತ್ತು. ಪದವಿ ಮತ್ತು ಅಧಿಕಾರಕ್ಕಿಂತ ಪ್ರಾಮಾಣಿಕವಾಗಿ ನೈತಿಕತೆಯಿಂದ ಬದುಕುವುದು ಮುಖ್ಯವಾಗಿತ್ತು. ಕುರ್ಚಿಗೆ ಅಂಟಿಕೊಂಡು ಕೂಡುವ ಆಸೆ ಇದ್ದಿದ್ದರೆ ಲಾಲಬಹದ್ದೂರ ಶಾಸ್ತ್ರಿ ರೈಲು ಅಪಘಾತದ ನೈತಿಕ ಹೊಣೆ ಹೊತ್ತು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರಲಿಲ್ಲ. ಮೌಲ್ಯಾಧಾರಿತ ರಾಜಕಾರಣ ಮತ್ತು ರಾಜಕೀಯ ಧ್ರುವಿಕರಣದ ಕನಸು ಕಂಡ ರಾಮಕೃಷ್ಣ ಹೆಗಡೆ ಭೂ ಹಗರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ಕೊಟ್ಟು ಮುಖ್ಯಮಂತ್ರಿ ಹುದ್ಧೆಯನ್ನೇ ತ್ಯಜಿಸಿದರು. ಹೀಗೆ ಮಾಡುವುದರ ಮೂಲಕ ಅವರು ಸರ್ಕಾರವೊಂದು ಮುಜುಗರಕ್ಕೆ ಸಿಕ್ಕಿ ಬೀಳುವ ಅತಿ ದೊಡ್ಡ ಸಂಕಟದಿಂದ ಪಾರು ಮಾಡಿದರು. ಎಸ.ನಿಜಲಿಂಗಪ್ಪನವರು ಮುಖ್ಯಮಂತ್ರಿಗಳಾಗಿದ್ದ ಅವಧಿಯುದ್ದಕ್ಕೂ ತಮ್ಮ ಮಕ್ಕಳನ್ನು ಮತ್ತು ಸಂಬಂಧಿಕರನ್ನು ಮುಖ್ಯಮಂತ್ರಿ ಕಚೇರಿಯ ಹತ್ತಿರ ಸುಳಿಯಲು ಬಿಡುತ್ತಿರಲಿಲ್ಲ ಎಂದು ಅನೇಕರು ಇವತ್ತಿಗೂ ಸ್ಮರಿಸುತ್ತಾರೆ. ಆದರೆ ಇಂದು ಕಾಲ ಬದಲಾಗಿದೆ. 'ಯುದ್ಧ ಮತ್ತು ಪ್ರೀತಿಯಲ್ಲಿ ಎಲ್ಲವೂ ನ್ಯಾಯ ಸಮ್ಮತ' ಎನ್ನುವುದು ರಾಜಕೀಯ ಕ್ಷೇತ್ರಕ್ಕೂ ಅನ್ವಯಿಸುತ್ತಿದೆ. ರಾಜಕೀಯ ಧ್ರುವೀಕರಣ, ಮೌಲ್ಯಾಧಾರಿತ ರಾಜಕೀಯ, ನೈತಿಕತೆಗಳೆಲ್ಲ ನಮ್ಮ ನಾಯಕರುಗಳಿಗೆ ಅಪರಿಚಿತ ಪದಗಳಾಗಿ ಕಾಣಿಸುತ್ತಿವೆ. ರಾಜಕೀಯ ಎನ್ನುವುದು ಈಗ ಸಮಾಜ ಸೇವೆಯಾಗಿ ಉಳಿದುಕೊಂಡಿಲ್ಲ. ಇದು ಅನೇಕರಿಗೆ  ಹಣ ಮಾಡುವ ಅತ್ಯಂತ ಸುಲಭ ಮತ್ತು ಸರಳ ಮಾರ್ಗೋಪಾಯ. ಇಲ್ಲಿ ನೀತಿ ಮತ್ತು ಮೌಲ್ಯಗಳಿಗೆ ಕವಡೆ ಕಾಸಿನ ಬೆಲೆಯಿಲ್ಲ.
         ಜನಾದೇಶ ಮತ್ತು ಜನಾಭಿಪ್ರಾಯಕ್ಕೂ ಹಾಗೂ ನಮ್ಮ ರಾಜಕೀಯ ನಾಯಕರುಗಳಿಗೂ ಗಾವುದ ದೂರ. ಇಲ್ಲಿ ಚುನಾವಣೆಗೆ ನಿಲ್ಲದೆ ಮಂತ್ರಿಯಾಗಬಹುದು ಮತ್ತು ಚುನಾವಣೆಯಲ್ಲಿ ಸೋತ ನಂತರವೂ ಹಿಂಬಾಗಿಲ ಮೂಲಕ ಪ್ರವೇಶಿಸಿ ಮಂತ್ರಿಯಾಗಿ ಮಂದುವರಿಯಬಹುದು. ಜನಾದೇಶವನ್ನು ಗೌರವಿಸುವುದು ಮತ್ತು ಅದಕ್ಕೆ ಮನ್ನಣೆ ನೀಡುವುದು ಅದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ. ಆದರೆ ಜನರಿಂದ ತಿರಸ್ಕೃತನಾದ ವ್ಯಕ್ತಿ ಈ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮಂತ್ರಿಯಾಗಿ ಮುಂದುವರಿಯುವ ಹಕ್ಕಿದೆ. ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ರಾಷ್ಟ್ರವೊಂದರ ಪ್ರಜಾತಾಂತ್ರಿಕ ವ್ಯವಸ್ಥೆಯ ದುಸ್ಥಿತಿ ಇದು.
             ಇಲ್ಲಿ ಪ್ರಜಾಪ್ರಭುತ್ವ ಎನ್ನುವ ಪವಿತ್ರ ವ್ಯವಸ್ಥೆಯೊಂದು ರಾಜಕಾರಣಿಗಳಿಂದ ನಿರಂತರ ಶೋಷಣೆಗೆ ಒಳಗಾಗುತ್ತಿದೆ. ಈ ರಾಷ್ಟ್ರದ ರಾಜಕೀಯ ವ್ಯವಸ್ಥೆಯಲ್ಲಿ ಏನೆಲ್ಲಾ ವಿಪರ್ಯಾಸಗಳು ಮತ್ತು ವೈರುಧ್ಯಗಳು ಸಂಭವಿಸಬಹುದು ಎನ್ನುವುದಕ್ಕೆ ಪ್ರಮೋದ ಮಹಾಜನ್ ಅವರ ಈ ಹೇಳಿಕೆ ಉತ್ತಮ ಉದಾಹರಣೆಯಾಗಿದೆ. ದೇವೇಗೌಡರ ನೇತೃತ್ವದಲ್ಲಿ ಅಲ್ಪಮತದ ತೃತೀಯ ರಂಗ ಪಕ್ಷ ಕೇಂದ್ರದಲ್ಲಿ ಸರ್ಕಾರ ರಚಿಸಿದ ಆ ಸಂದರ್ಭ ಪ್ರಮೋದ ಮಹಾಜನ್ ಹೀಗೆ ಉದ್ಘರಿಸಿದ್ದರು 'ಈ ದೇಶದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿರುವ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿದೆ, ಅತಿ ಕಡಿಮೆ ಸ್ಥಾನಗಳನ್ನು ಗಳಿಸಿರುವ ಪಕ್ಷ ಸರ್ಕಾರ ರಚಿಸಿದೆ ಮತ್ತು ಎರಡನೇ ಅತಿ ದೊಡ್ಡ ಪಕ್ಷವೊಂದು ವಿಪಕ್ಷದ ಸ್ಥಾನದಲ್ಲೂ ಇರದೆ ಆಳುವ ಸ್ಥಾನದಲ್ಲೂ ಕೂಡದೆ ತಟಸ್ಥವಾಗಿ ಉಳಿದಿದೆ'. ಹೌದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂಥ ಘಟನೆಗಳು ಸಾಮಾನ್ಯ ಮತ್ತು ಜೊತೆಗೆ ಅನಿವಾರ್ಯವಾಗುತ್ತಿರುವುದು ದುರದೃಷ್ಟಕರ ಸಂಗತಿ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ವಿಭಿನ್ನ ಸೈದ್ದಾಂತಿಕ ಹಿನ್ನೆಲೆಯ ಎರಡು ರಾಜಕೀಯ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದಾಗ ಕೆಲವರು ಅದನ್ನು ಅಪವಿತ್ರ ಮೈತ್ರಿ ಎಂದು ಜರೆದರು. ಆ ಸಂದರ್ಭ ಆ ರಾಜಕೀಯ ಪಕ್ಷಗಳು ಇದು ರಾಜ್ಯದ ಅಭಿವೃದ್ಧಿಗಾಗಿ ಆದ ಮೈತ್ರಿ ಎಂದು ತಮ್ಮ ಕಾರ್ಯವನ್ನು ಸಮರ್ಥಿಸಿಕೊಂಡವು. ರಾಜ್ಯದ ಅಭಿವೃದ್ಧಿ ವಿಷಯವಾಗಿ  ಅಷ್ಟೊಂದು ಪ್ರಾಮಾಣಿಕ ಕಾಳಜಿ ಇದ್ದಿದ್ದರೆ ಅವುಗಳ ಮೈತ್ರಿ ಅವಧಿ ಪೂರ್ಣಗೊಳ್ಳುವುದಕ್ಕೆ  ಮೊದಲೇ ಮುರಿದು ಬೀಳುತ್ತಿರಲಿಲ್ಲ. ರಾಜ್ಯದ ಅಭಿವೃದ್ಧಿಯ ನಾಟಕವಾಡುವ ಈ ನಾಯಕರುಗಳು ಮಧ್ಯಂತರ ಚುನಾವಣೆಗೆ ಕಾರಣರಾಗಿ ಜನರ ಮೇಲಿನ  ತೆರಿಗೆಯ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದರು. ಇಲ್ಲಿ ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜ್ಞಾವಂತ ಮತದಾರರನ್ನು ನಿರಂತರವಾಗಿ ಮೋಸಗೊಳಿಸುತ್ತಿವೆ.
         ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣಾ ಕ್ರಿಯೆಯೊಂದು ಮತ್ತೆ ಮತ್ತೆ ಪುನರಾವರ್ತನೆಗೊಳ್ಳುತ್ತಿದೆ. ರಾಜಕೀಯ ನಾಯಕರುಗಳು ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಿರುವುದರಿಂದ ಅವಧಿಗಿಂತ ಮೊದಲೇ ಚುನಾವಣೆಗಳು ನಡೆಯುತ್ತಿವೆ. ಆಡಳಿತ ಪಕ್ಷದಲ್ಲಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ ಎನ್ನುವ ನೆಪವೊಡ್ಡಿ ಜನಾದೇಶವನ್ನು ಧಿಕ್ಕರಿಸಿ ಮತದಾರರ ಮತಗಳನ್ನು ಅಪಮೌಲ್ಯಗೊಳಿಸಿ ಮತ್ತೆ ಮತ್ತೆ ಚುನಾವಣೆಗೆ ಸ್ಪರ್ಧಿಸುತ್ತಿರುವರು. ನಖಶಿಖಾಂತ ದ್ವೇಷಿಸುತ್ತಿದ್ದ ಪಕ್ಷವನ್ನು ಸೇರಿ ವಾಚಾಮಗೋಚರ ಬೈಯ್ದುಕೊಂಡಿದ್ದವರನ್ನೇ ಅಪ್ಪಿಕೊಂಡು ಮತದಾರನ ಎದುರು ಬಂದು ನಿಲ್ಲುತ್ತಾರೆ. ಮತದಾರ ಪ್ರಭು ಗೊಂದಲದಲ್ಲಿ ಬೀಳುತ್ತಾನೆ. ಯಾರದು ಸರಿ, ಯಾರದು ತಪ್ಪು. ನಿನ್ನೆವರೆಗೆ ಬದ್ಧ ವೈರಿಗಳಾಗಿದ್ದವರು ಇಂದು ಹಿತೈಷಿಗಳು. ಇಲ್ಲಿ ತಪ್ಪು ಒಪ್ಪುಗಳ ಪ್ರಶ್ನೆಯೇ ಇಲ್ಲ. ಎಲ್ಲವೂ ಅಧಿಕಾರದ ಆಸೆಗಾಗಿ ಕುರ್ಚಿಯ ವ್ಯಾಮೋಹಕ್ಕಾಗಿ. ಆಡಳಿತ ಪಕ್ಷದಲ್ಲಿದ್ದರೆ ಅಭಿವೃದ್ಧಿ ಸಾಧ್ಯ ಎನ್ನುವುದಾದರೆ ವಿರೋಧ ಪಕ್ಷವಾದರೂ ಏಕಿರಬೇಕು? ಎಲ್ಲ 224 ಶಾಸಕರು ಆಡಳಿತ ಪಕ್ಷದಲ್ಲೇ ಇರಬಹುದಲ್ಲ.
          ಕಳೆದ ಲೋಕಸಭೆಯ ಉದಾಹರಣೆಯನ್ನೇ ತೆಗೆದುಕೊಳ್ಳಿ ಹಿರಿಯ ಮತ್ತು ಮುತ್ಸದ್ದಿ ರಾಜಕಾರಣಿ ಸೋಮನಾಥ ಚಟರ್ಜಿ ತತ್ವ, ಸಿದ್ಧಾಂತ, ಮೌಲ್ಯಗಳಿಗೆ ಅಂಟಿಕೊಂಡ ಪರಿಣಾಮ ತಾವು ದೀರ್ಘಕಾಲದಿಂದ ಪ್ರತಿನಿಧಿಸುತ್ತ ಬಂದಿದ್ದ ಪಕ್ಷದಿಂದಲೇ ಉಚ್ಚಾಟನೆಗೊಳ್ಳಬೇಕಾಯಿತು. ವಿಪರ್ಯಾಸವೆಂದರೆ  ಮೌಲ್ಯಾಧಾರಿತ ರಾಜಕೀಯವನ್ನು ಬದುಕಿದ ವ್ಯಕ್ತಿ ರಾಜಕಾರಣದ ಭಾಷೆಯಲ್ಲಿ ಶತಮೂರ್ಖನೆಂದು ಕರೆಯಿಸಿಕೊಳ್ಳುತ್ತಾನೆ. ವೈಯಕ್ತಿಕ ಲಾಭಕ್ಕಾಗಿ, ಅಧಿಕಾರದ ಆಸೆಗಾಗಿ ಪಕ್ಷದಿಂದ ಪಕ್ಷಕ್ಕೆ ಕಪ್ಪೆಯಂತೆ ಜಿಗಿಯುವ ರಾಜಕಾರಣಿ ಬದುಕನ್ನು ಚೆನ್ನಾಗಿ ಅರ್ಥ ಮಾಡಿಕೊಂಡವನು ಎನ್ನುವ ಮೆಚ್ಚುಗೆಗೆ ಪಾತ್ರನಾಗುತ್ತಾನೆ. ಕಡಿಮೆ ಹಣಕ್ಕೆ ರೈತರ ಭೂಮಿಯನ್ನು ಖರೀದಿಸಿ ಅದೇ ಭೂಮಿಯನ್ನು ಸರ್ಕಾರಕ್ಕೆ ಅಧಿಕ ಬೆಲೆಗೆ ಮಾರಿಕೊಂಡ ಮಂತ್ರಿಯೋರ್ವರು ತಮ್ಮ ಕೆಲಸವನ್ನು ಸಮರ್ಥಿಸಿಕೊಳ್ಳುತ್ತಾರೆ. ಹಣ ಮಾಡುವುದು ತಮ್ಮ ಕುಲದ ಕಸುಬು ಎಂದು ಸಮಜಾಯಿಷಿ ನೀಡುತ್ತಾರೆ. 'ಕೊಟ್ಟವ ಕೋಡಂಗಿ ಇಸಗೊಂಡವ ಈರಭದ್ರ' ಎನ್ನುವ ವ್ಯಾಪಾರಿ ಮನೋಭಾವ ಅನೇಕ ರಾಜಕಾರಣಿಗಳಲ್ಲಿ ಮನೆ ಮಾಡಿಕೊಂಡಿದೆ. ಹಾಗಾದರೆ ನಾವು ಯಾರನ್ನು ಆದರ್ಶ ನಾಯಕ ಎಂದು ಕರೆಯಬೇಕು? ಭೃಷ್ಟಾಚಾರಕ್ಕಿಳಿಯುವ, ಹಣ ಮಾಡುವ, ಅಧಿಕಾರಕ್ಕಾಗಿ ಹಪಹಪಿಸುವ ರಾಜಕಾರಣಿ ಭೇಷ್ ಎಂದು ಬೆನ್ನುತಟ್ಟಿಸಿಕೊಂಡು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರನಾಗುತ್ತಾನೆ. ತತ್ವ, ಸಿದ್ಧಾಂತಗಳಿಗೆ ಅಂಟಿಕೊಂಡ ಮೌಲ್ಯಾಧಾರಿತ ವ್ಯಕ್ತಿತ್ವದ ರಾಜಕಾರಣಿ ಸಮಾಜದ ಅವಕೃಪೆಗೆ ಮತ್ತು ನಿಂದನೆಗೆ ಒಳಗಾಗುತ್ತಾನೆ.
        ವಿರೋಧ ಪಕ್ಷದವರಿಗೆ ಹಂದಿ ಜ್ವರ ಬರಲಿ ಎಂದು ಶಪಿಸುವ, ನಮ್ಮ ತಪ್ಪುಗಳನ್ನು ಎತ್ತಿ ತೋರಿಸಿದರೆ ನಿಮ್ಮ ತಪ್ಪುಗಳನ್ನು ಬಯಲಿಗೆಳೆಯಬೇಕಾಗುತ್ತದೆ ಎಂದು ಬೆದರಿಸುವ  ಇದು ಇವತ್ತಿನ ನಮ್ಮ ರಾಜಕಾರಣಿಗಳ ರೋಗಗ್ರಸ್ತ ಮನಸ್ಥಿತಿ. ಆಳುವ ಮತ್ತು ವಿರೋಧ ಪಕ್ಷಗಳ ನಡುವೆ ಒಂದು ಸಮನ್ವಯತೆ ಬೇಕು. ವೈಯಕ್ತಿಕ ದ್ವೇಷಾಸೂಯೆಗಳಿಗೆ ಅವಕಾಶವಿರಬಾರದು. ರಾಜ್ಯದ ಮತ್ತು ಜನತೆಯ ಅಭಿವೃದ್ಧಿಯೇ ಮೂಲ ಮಂತ್ರವಾಗಬೇಕು. ಆದರೆ ಆಗುತ್ತಿರುವುದಾದರೂ ಏನು? ಆರೋಗ್ಯಕರ ಚರ್ಚೆಗೆ, ಸಂವಾದಗಳಿಗೆ ಅವಕಾಶವೇ ಇಲ್ಲ. ಅವರದೇನಿದ್ದರೂ ಪರಸ್ಪರರ ತಪ್ಪುಗಳನ್ನು ಮುಚ್ಚಿಕೊಳ್ಳುವ ಸಮಯಸಾಧಕತನ. ಅದು ಒಂದರ್ಥದಲ್ಲಿ ನನ್ನ ತಪ್ಪುಗಳನ್ನು ನೀನು ತೋರಿಸಬೇಡ, ನಿನ್ನ ತಪ್ಪುಗಳನ್ನು ನಾನು ತೋರಿಸುವುದಿಲ್ಲ ಎನ್ನುವ ಒಳ ಒಪ್ಪಂದ. ಆಳುವ ಪಕ್ಷವಾದರೂ ಸರಿಯೇ ವಿರೋಧ ಪಕ್ಷವಾದರೂ ಸರಿ ಇಬ್ಬರೂ ಸೇರಿಯೇ ಹಣ ಮಾಡಿಕೊಳ್ಳೋಣ ಎನ್ನುವ ಅಸಹ್ಯ ಮತ್ತು ಕೀಳು  ಮನೋಭಾವ. ಹೊರಗೆ ಮಾತ್ರ ಅಭಿವೃದ್ಧಿಯೇ ನಮ್ಮ ಧ್ಯೇಯ ಎಂದೆನ್ನುತ ಮತದಾರರ ಕಣ್ಣೋರಿಸುವ ನಾಟಕ ಅವ್ಯಾಹತವಾಗಿ ಮುಂದುವರಿಯುತ್ತಿದೆ. ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜ್ಞಾವಂತ ಮತದಾರನ ಜೊತೆ ಜೊತೆಗೆ ತತ್ವ ಮತ್ತು ಸಿದ್ಧಾಂತಗಳ ನೆಲೆಗಟ್ಟಿನ ಮೇಲೆ ಬದುಕನ್ನು ಕಟ್ಟಿಕೊಂಡ ಆದರ್ಶ ರಾಜಕಾರಣಿ ಕೂಡಾ ನಿರಂತರ ಶೋಷಣೆಗೆ ಗುರಿಯಾಗುತ್ತಾನೆ. ಏಕೆಂದರೆ ಕುರುಡು ಕಾಂಚಾಣ ಕುಣಿಯುತಲಿತ್ತು ಅದು ಕೆಳಗೆ ಬಿದ್ದವರ ತುಳಿಯುತಲಿತ್ತು.

ಇದ್ದದ್ದು ಇದ್ದಹಾಂಗ

        ಗುಂಡೂರಾಯರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಸಮಾರಂಭವೊಂದರಲ್ಲಿ  ಮಾತನಾಡುತ್ತ ಸಂಸ್ಕೃತ ಎಲ್ಲ ಭಾಷೆಗಳ ತಾಯಿಯೆಂದು ಶ್ಲಾಘಿಸಿದರು. ಈ ಮಾತು ಅನೇಕ ಸಾಹಿತಿಗಳ ಆಕ್ರೋಶಕ್ಕೆ ಕಾರಣವಾಯಿತು. ಹಾ.ಮಾ.ನಾಯಕರಂತೂ ಪತ್ರಿಕೆಯಲ್ಲಿ ಉಗ್ರವಾಗಿ ಟೀಕಿಸಿ 'ಇಂತಹ ವಿಚಾರವನ್ನು ತಿಳಿಸಿದ ಗುಂಡೂರಾಯರಿಗೆ ನೊಬೆಲ್ ಪ್ರಶಸ್ತಿ ನೀಡಬೇಕು' ಎಂದು ವ್ಯಂಗ್ಯವಾಡಿದರು. ಅದಾದ ಒಂದೆರಡು ತಿಂಗಳುಗಳ ನಂತರ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವ ಪ್ರಕ್ರಿಯೆ ಪ್ರಾರಂಭವಾಯಿತು. ಪಟ್ಟಿಯಲ್ಲಿ ಹಾಮಾನಾ ಅವರ ಹೆಸರೂ ಇತ್ತು. ಹಿರಿಯ ಅಧಿಕಾರಿಯೊಬ್ಬರು ಗುಂಡೂರಾಯರ ಬಳಿ ಬಂದು ಹಾಮಾನಾ ಟೀಕಿಸಿದ್ದನ್ನು ತಿಳಿಸಿ ಅವರ ಹೆಸರನ್ನು ಪರಿಗಣಿಸಬಾರದೆಂದು ಮನವಿ ಮಾಡಿದರು. ಅದಕ್ಕೆ ಗುಂಡೂರಾಯರು 'ರ್ರೀ ನಾವು ನಮ್ಮನ್ನು ಹೊಗಳಿದವರಿಗೆ ಮಾತ್ರ ಪ್ರಶಸ್ತಿ ಕೊಡುವುದಲ್ಲ. ಅವರು ಏನು ಸಾಧನೆ ಮಾಡಿದ್ದಾರೆ ಎನ್ನುವುದು ಮುಖ್ಯ. ಹಾಮಾನಾ ಕನ್ನಡದ ಕೆಲಸ ಸಾಕಷ್ಟು ಮಾಡಿದ್ದಾರೆ. ಅವರ ಹೆಸರನ್ನೂ ಪಟ್ಟಿಯಲ್ಲಿ ಸೇರಿಸಿ' ಎಂದರು. ಈ ವಿಷಯ ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ತಮ್ಮದೇ ಜಾತಿಯವರೆಂಬ ಕಾರಣಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೆಳನಾಧ್ಯಕ್ಷೆಗೆ 11 ಲಕ್ಷ ರುಪಾಯಿಗಳನ್ನು ಉಡಿ ತುಂಬಿ ಸ್ವಜನ ಪಕ್ಷಪಾತ ಮಾಡುವ ನಮ್ಮ ರಾಜಕಾರಣಿಗಳು ಗುಂಡೂರಾಯರಂತೆ  ವಿಶಾಲ ಹೃದಯವರು ಎಂದಾಗಬೇಕು.

-ರಾಜಕುಮಾರ ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

Monday, August 13, 2012

ಸ್ವತಂತ್ರ ಭಾರತದಲ್ಲಿ ನಾವು: ಮೂರು ಪ್ರಶ್ನೆಗಳೊಂದಿಗೆ ಮುಖಾಮುಖಿ

       ಭಾರತಕ್ಕೆ ಸ್ವಾತಂತ್ರ್ಯ ದೊರೆತು ಆರು ದಶಕಗಳು ಕಳೆದು ಹೋದವು. ಈ ಆರು ದಶಕಗಳ ಅವಧಿಯಲ್ಲಿ ಆದ ಪ್ರಗತಿಗಿಂತ ದೇಶವನ್ನು ಕಾಡಿದ ಸಮಸ್ಯೆಗಳೇ ಅನೇಕ. ಭೃಷ್ಟಾಚಾರ, ಭಯೋತ್ಪಾದನೆ, ನಿರುದ್ಯೋಗ, ಜನಸಂಖ್ಯೆ ಹೆಚ್ಚಳ,ಗ್ರಾಮ ಜೀವನದ ಅವನತಿ ಹೀಗೆ ಹಲವಾರು ಸಮಸ್ಯೆಗಳು ದೇಶದ ಪ್ರಗತಿಗೆ ಮಾರಕಗಳಾಗಿ ಪರಿಣಮಿಸಿವೆ. ಸ್ವಾತಂತ್ರ್ಯದ ನಂತರದ ದಿನಗಳಿಗಿಂತ ಸ್ವಾತಂತ್ರ್ಯ ಪೂರ್ವ ಭಾರತದಲ್ಲೇ ಬದುಕು ಸಮೃದ್ಧವಾಗಿತ್ತೆಂದು ಅಲ್ಲಲ್ಲಿ ಮಾತುಗಳು ಕೇಳಿ ಬರುತ್ತಿವೆ. ಈ ಸಮಸ್ಯೆಗಳಿಗೆ ಕಾರಣವಾದ ಒಂದೆರಡು ಪ್ರಶ್ನೆಗಳನ್ನುಎದುರಿಗಿಟ್ಟುಕೊಂಡು ಲೇಖನ ಸಿದ್ಧಪಡಿಸಿದ್ದೇನೆ.

    ಸ್ವತಂತ್ರ ಭಾರತದಲ್ಲಿ ಗಾಂಧೀಜಿ ವಿಚಾರಧಾರೆ ಎಷ್ಟು ಪ್ರಸ್ತುತ.

       ಗಾಂಧಿ ನಮ್ಮ ನಡುವಿನ ಸತ್ಯ. ಅಂಥದ್ದೊಂದು ಸತ್ಯಕ್ಕೆ ನಮ್ಮನ್ನು ನಾವು ಒಪ್ಪಿಕೊಳ್ಳುವಂತಹ ಪ್ರಕ್ರಿಯೆಗೆ ಮೊದಲು ಚಾಲನೆ ದೊರೆಯಬೇಕು. ಇಲ್ಲಿ ಗಾಂಧೀಜಿ ಅವರ ವಿಚಾರ ಧಾರೆಗಳು ಎನ್ನುವುದಕ್ಕಿಂತ ಮೂಲತ: ಗಾಂಧಿ ಅವರನ್ನೇ ಅಪ್ರಸ್ತುತಗೊಳಿಸುವ ಹುನ್ನಾರ ಅತ್ಯಂತ ವ್ಯವಸ್ತಿತವಾಗಿ ನಡೆದುಕೊಂಡು ಬರುತ್ತಿದೆ. ಗಾಂಧೀಜಿ ಹತ್ಯೆಯಾದ ದಿನದ ನಂತರದ ದಿನಗಳಿಂದ ಇಂಥದ್ದೊಂದು ಪ್ರಯತ್ನ ಅವ್ಯಾಹತವಾಗಿ ಮುಂದುವರಿದುಕೊಂಡು  ಬಂದಿದೆ. ಇತ್ತೀಚಿನ ದಿನಗಳಲ್ಲಿ ಗಾಂಧೀಜಿ ಅವರನ್ನು ಮಾಧ್ಯಮಗಳು ಚಿತ್ರಿಸುತ್ತಿರುವ ರೀತಿಯೇ ಅತ್ಯಂತ ಬೇಸರದ ಸಂಗತಿ. ಗಾಂಧೀಜಿ ಗತಿಸಿದ ಎಷ್ಟೋ ದಶಕಗಳ ನಂತರ ಅವರ ಲಂಪಟ ಮಗನ ಕುರಿತು ಈ ಜನ ಪುಸ್ತಕ ಬರೆಯುತ್ತಾರೆ, ಸಿನಿಮಾ ಮಾಡುತ್ತಾರೆ. ಒಬ್ಬ ಲೇಖಕ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಗಾಂಧಿಜಿ ಬದುಕಿನಲ್ಲಿ ಪ್ರೇಮ ಪ್ರಕರಣವೊಂದು ನಡೆಯಿತೆಂದು ಹೇಳಿ ಅಚ್ಚರಿ ಮೂಡಿಸುತ್ತಾನೆ. ಒಂದರ್ಥದಲ್ಲಿ ಗಾಂಧೀಜಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ವ್ಯವಸ್ಥಿತ ಹುನ್ನಾರವಿದು. 'ಭಾರತದ ನೆಲದಲ್ಲಿ ಗಾಂಧೀಜಿ ಅವರಂಥ ಸಂತನೊಬ್ಬ ನಡೆದಾಡಿದ್ದ ಎನ್ನುವುದನ್ನು ನಮ್ಮ ಮುಂದಿನ ಪೀಳಿಗೆ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ' ಎಂದ ವಿಜ್ಞಾನಿ ಅಲ್ಬರ್ಟ್ ಐನ್ ಸ್ಟೀನ್ ಮಾತನ್ನು ಅರ್ಥ ಮಾಡಿಕೊಳ್ಳದಷ್ಟು ಬಹುದೂರ ನಾವುಗಳೆಲ್ಲ ಸಾಗಿ ಬಂದಿದ್ದೇವೆ.
       ಇನ್ನು ಗಾಂಧೀಜಿ ಅವರ ವಿಚಾರ ಧಾರೆಗಳ ಕುರಿತು ಹೇಳುವುದಾದರೆ ಸಪ್ತ ಸಾಮಾಜಿಕ ಪಾಪಗಳು, ಗುಡಿ ಕೈಗಾರಿಕೆಗಳು, ಗ್ರಾಮ ಸ್ವರಾಜ್ಯ, ಶೌಚಾಲಯಗಳ ನಿರ್ಮಾಣ ಹೀಗೆ ಗಾಂಧೀಜಿ ಅವರ ಅನೇಕ ಸಮಾಜಮುಖಿ ವಿಚಾರಗಳು ಕಾರ್ಯರೂಪಕ್ಕೆ ಬಂದಲ್ಲಿ ಭ್ರಷ್ಟಾಚಾರ ಮುಕ್ತ ಭಾರತದ ನಿರ್ಮಾಣ ಸಾಧ್ಯ. ಆದರೆ ಈ ದಿನಗಳಲ್ಲಿ ಅವರ ವಿಚಾರಧಾರೆಗಳನ್ನು ಅಪ್ರಸ್ತುತಗೊಳಿಸಲಾಗುತ್ತಿದೆ. ಗುಡಿಕೈಗಾರಿಕೆಯನ್ನೇ ತೆಗೆದುಕೊಳ್ಳಿ ನನ್ನೂರಿನ ಮಾಚಪ್ಪ ಈ ಗುಡಿ ಕೈಗಾರಿಕೆಯಿಂದ ಒಂದು ಸಮೃದ್ಧ ಬದುಕನ್ನೇ ಕಟ್ಟಿಕೊಂಡ. ಚಪ್ಪಲಿ ಮಾಡುವ ವೃತ್ತಿಯಿಂದಲೇ ತನ್ನ ಮಕ್ಕಳಿಗೆಲ್ಲ ಶಿಕ್ಷಣ ಕೊಡಿಸಿದ. ಬದುಕು ನೀಡಿದ ಕಸುಬು ತನ್ನೊಂದಿಗೆ ಕೊನೆಯಾಗಬಾರದೆಂದು ಸಣ್ಣ ಮಗ ಮಾರನನ್ನು ಅದೇ ವೃತ್ತಿಯಲ್ಲಿ ಮುಂದುವರೆಸಿದ. ಒಂದು ಕಾಲದಲ್ಲಿ ಮಾಚಪ್ಪನಿಗೆ ಬದುಕು ಕಟ್ಟಿಕೊಟ್ಟ ವೃತ್ತಿ ಇಂದು ಮಾರನನ್ನು ನಿರುದ್ಯೋಗಿಯಾಗಿಸಿದೆ. ಇದಕ್ಕೆಲ್ಲ ಕಾರಣ ಜಾಗತೀಕರಣದ ಪ್ರಭಾವ. ಚೀನಾ ದೇಶದ ಬೂಟು ಚಪ್ಪಲಿಗಳೆಲ್ಲ ನಮ್ಮ ಪಾದಗಳಿಗೆ ಅಲಂಕಾರಿಕ ವಸ್ತುಗಳಾಗುತ್ತಿರುವಾಗ ಮಾರಪ್ಪನ ಚಪ್ಪಲಿಗಳಿಗೆ ಮಾರುಕಟ್ಟೆಯಲ್ಲಿ ಜಾಗವೇ ಸಿಗುತ್ತಿಲ್ಲ. ಜಾಗತೀಕರಣದ ಪರಿಣಾಮ ಭಾರತ ವಿದೇಶಿ ಉತ್ಪಾದನೆಗಳಿಗೆ ಮಾರುಕಟ್ಟೆಯಾಗುತ್ತಿದೆ. ಇದರ ನೇರ ಪರಿಣಾಮ ಉಂಟಾಗುತ್ತಿರುವುದು ಗುಡಿ ಕೈಗಾರಿಕೆಗಳ ಮೇಲೆ. ಒಂದು ಕಾಲದಲ್ಲಿ ಇಡೀ ರಾಜ್ಯಕ್ಕೆ ಸೀರೆಗಳನ್ನು ಪೂರೈಸಿದ ಇಳಕಲ್ಲಿನ ನೇಕಾರರ ಸ್ಥಿತಿ  ಇವತ್ತು ಏನಾಗಿದೆ. ಇಂಥದ್ದೊಂದು ಅಪಾಯ ಎದುರಾಗಬಹುದೆಂದು ಗಾಂಧೀಜಿ ಅನೇಕ ದಶಕಗಳ ಹಿಂದೆಯೇ ಗುಡಿ ಕೈಗಾರಿಕೆಗಳ ಅಭಿವೃದ್ಧಿಗೆ ಕರೆ ನೀಡಿದ್ದರು. ಜಾಗತಿಕರಣದಿಂದ ಲಕ್ಷ ಲಕ್ಷ ರೂಪಾಯಿಗಳ ಸಂಬಳ ಪಡೆಯುತ್ತಿರುವವರು ಯಾರು. ಅಂಥದ್ದೊಂದು ದೊಡ್ಡ ಮೊತ್ತದ ಸಂಬಳ ಗುಡಿ ಕೈಗಾರಿಕೆಯನ್ನೇ ನಂಬಿ ಬದುಕುತ್ತಿರುವ ಮಾರಪ್ಪನಿಗೆ ದೊರೆಯುತ್ತಿದೆಯೇ. ವ್ಯವಸ್ಥೆಯೊಂದರ ಅನಾವರಣದಿಂದ ಸಮಾಜದ ಕಟ್ಟ ಕಡೆಯ ಮನುಷ್ಯನಿಗೂ ಪ್ರಯೋಜನವಾಗಬೇಕು.
      ಗ್ರಾಮ ಸ್ವರಾಜ್ಯ ಗಾಂಧೀಜಿ ಅವರ ಚಿಂತನೆಯಾಗಿತ್ತು.  ಕೃಷಿ  ಪ್ರಧಾನವಾದ  ಭಾರತದಲ್ಲಿ ಕೃಷಿಗೆ ಪ್ರಾಮುಖ್ಯತೆ ದೊರೆಯಬೇಕೆನ್ನುವುದು ಅವರ ಕಳಕಳಿಯಾಗಿತ್ತು. ಸ್ವಚ್ಚತೆ ಅಥವಾ ಶೌಚಾಲಯಗಳ ನಿರ್ಮಾಣ ಗಾಂಧೀಜಿ ಅವರು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದ ಮತ್ತೊಂದು ಮೂಲಭೂತ ಅವಶ್ಯಕತೆ. ಈ ದಿನಗಳಲ್ಲಿ ಗ್ರಾಮ ಸ್ವರಾಜ್ಯ, ಗುಡಿ ಕೈಗಾರಿಕೆ, ಆರೋಗ್ಯ, ಕೃಷಿ ಭಾರತದ ಮೂಲಭೂತ ಅವಶ್ಯಕತೆಗಳಾಗಿ ಪರಿಣಮಿಸಿವೆ. ಗಾಂಧೀಜಿ ಹಲವು ದಶಕಗಳ ಹಿಂದೆಯೇ ಹೇಳಿದ ಈ ವಿಷಯಗಳ ಕುರಿತು ನಾವು ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿದ್ದರೆ ಇವತ್ತು ಆಹಾರ ಕೊರತೆ, ನಿರುದ್ಯೋಗ, ಅನಾರೋಗ್ಯದಂಥ ಸಮಸ್ಯೆಗಳು ನಮ್ಮನ್ನು ಕಾಡುತ್ತಿರಲಿಲ್ಲ. ಈ ಕಾರಣದಿಂದಲೇ ಗಾಂಧೀಜಿ ಮತ್ತು ಅವರ ವಿಚಾರಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗುತ್ತವೆ.

ಭಯೋತ್ಪಾದನೆ ಭಾರತವನ್ನು ಕಾಡುತ್ತಿರುವ ಬಹುಮುಖ್ಯ ಸಮಸ್ಯೆಯೇ 

       ಭಾರತಕ್ಕೆ ಸ್ವಾತಂತ್ರ್ಯ ದೊರೆತು ಆರು ದಶಕಗಳಾದವು. ಇಲ್ಲಿ ಪಾರ್ಲಿಮೆಂಟ್ ಮೇಲೆ ಉಗ್ರರು ದಾಳಿ ಮಾಡುತ್ತಾರೆ, ದೇಶದ ರಕ್ಷಣಾ ಮಂತ್ರಿಗಳೇ ಉಗ್ರರನ್ನು ವಿಮಾನದಲ್ಲಿ ಕರೆದೊಯ್ದು ಅವರಿದ್ದ ಸ್ಥಳಕ್ಕೆ ಬಿಟ್ಟು ಬರುತ್ತಾರೆ, ಮುಂಬೈನ ಜನನಿಬೀಡ ಪ್ರದೇಶಗಳಲ್ಲಿ ರಾಜಾರೋಷವಾಗಿ ಪ್ರವೇಶಿಸುವ ಉಗ್ರರು ಗುಂಡಿನ ಮಳೆಗೆರೆಯುತ್ತಾರೆ. ಸರಣಿ ಬಾಂಬ್ ಸ್ಫೋಟ್ ಗಳಂತೂ ಮಕ್ಕಳ ಆಟದಂತಾಗಿವೆ. ಒಟ್ಟಿನಲ್ಲಿ ಭಯೋತ್ಪಾದನೆ ಎನ್ನುವುದು ದೇಶದ ಮೂಲಭೂತ ಸಮಸ್ಯೆಯಾಗಿ ಪರಿಣಮಿಸಿದೆ. ಈ ಸಮಸ್ಯೆ ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿರುವುದರಿಂದ ನಮ್ಮನ್ನಾಳುವ ನಾಯಕರುಗಳು ಈ ಸಮಸ್ಯೆ ಕುರಿತು ತೆಲೆ  ಕೆಡಿಸಿಕೊಳ್ಳುತ್ತಿಲ್ಲ. ಅದಕ್ಕೆಂದೇ ಮುಂಬೈ ಸ್ಫೋಟದ ನಂತರ ಘಟನಾ ಸ್ಥಳಕ್ಕೆ ಭೇಟಿ ನೀಡುವ ದೇಶದ ಗೃಹಮಂತ್ರಿ ಒಂದೇ ದಿನ ಮೂರೂ ಬಾರಿ ಬಟ್ಟೆ ಬದಲಿಸಿ ತಮ್ಮ ಅಭಿರುಚಿಯನ್ನು ಅನಾವರಣಗೊಳಿಸುತ್ತಾರೆ. ಧ್ವಂಸಗೊಂಡ ತಾಜ್ ಹೋಟೆಲ್ ಗೆ ಭೇಟಿ ನೀಡುವ ಮುಖ್ಯಮಂತ್ರಿ ಸುಟ್ಟು ಕರಕಲಾದ ತಾಜ್ ನ ಕೋಣೆಗಳಲ್ಲಿ ತಮ್ಮ  ಮಗನ ಸಿನಿಮಾ ಬದುಕಿಗಾಗಿ ಕಥೆ ಹುಡುಕುತ್ತಾರೆ. ಅದೆಂಥ ಅಸಂಗತ ಘಟನೆಗಳು ನಮ್ಮ ದೇಶದಲ್ಲಿ ಘಟಿಸುತ್ತವೆ ಎನ್ನುವುದಕ್ಕೆ ಈ ಮೇಲಿನ ಎರಡು ಉದಾಹರಣೆಗಳೇ ದೃಷ್ಟಾಂತ.
        ಅಮೇರಿಕಾ ದೇಶದಲ್ಲಿ ಹತ್ತು ವರ್ಷಗಳ ಹಿಂದೆ ನಡೆದ ಭಯೋತ್ಪಾದಕರ ದಾಳಿಯ ನಂತರ ಅಲ್ಲಿ ಮತ್ತೊಮ್ಮೆ ಅಂಥ ಘಟನೆ ಮರುಕಳಿಸಲಿಲ್ಲ. ಆ ಘಟನೆಗೆ ಕಾರಣನಾದ ಭಯೋತ್ಪಾದಕನನ್ನು ಅವನು ಅಡಗಿ ಕುಳಿತ ದೇಶದಲ್ಲೇ ಅಮೆರಿಕನ್ನರು ಬೇಟೆಯಾಡಿದರು. ಆ ಕಾರ್ಯಾಚರಣೆ ಪೂರ್ಣಗೊಳ್ಳುವವರೆಗೆ ಅಮೇರಿಕಾ ದೇಶದ ಅಧ್ಯಕ್ಷ ತನ್ನ ಸೇನಾ ಪಡೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಭಯೋತ್ಪಾದನೆಯ ನಿಗ್ರಹದಲ್ಲಿ ಅಲ್ಲಿನ ಆಳುವ ಮತ್ತು ವಿರೋಧ ಪಕ್ಷಗಳೆರಡೂ ಕೈ ಜೋಡಿಸಿ ಕೆಲಸ ಮಾಡಿದವು. ರಾಷ್ಟ್ರದ ಇಡೀ ಜನತೆ ಒಂದಾಗಿ ನಿಂತರು. ಅಂಥದ್ದೊಂದು ಮನಸ್ಥಿತಿ ಭಾರತದಲ್ಲಿ ಸಾಧ್ಯವೇ ಎನ್ನುವುದು ಇಲ್ಲಿನ ಮೂಲಭೂತ ಪ್ರಶ್ನೆಯಾಗಿದೆ.
      ನಮ್ಮದು ವೋಟ್ ಬ್ಯಾಂಕ್ ರಾಜಕಾರಣವಾಗಿರುವುದರಿಂದ ಇಲ್ಲಿ ಜಾತಿ, ಧರ್ಮಗಳ ಆಧಾರದ ಮೇಲೆ ಜನರನ್ನು ಓಲೈಸುವ ತಂತ್ರ ಮಹತ್ವ ಪಡೆಯುತ್ತಿದೆ. ದೇಶದ ಪ್ರಮುಖ ಸ್ಥಳವಾದ ಪಾರ್ಲಿಮೆಂಟಿನ ಮೇಲೆ ದಾಳಿಯ ಸಂಚು ರೂಪಿಸಿದ ಭಯೋತ್ಪಾದಕ ಈ ದಿನದವರೆಗೂ ಭಾರತದ ಜೈಲಿನಲ್ಲಿ ಐಶಾರಾಮಿ ಬದುಕು ನಡೆಸುತ್ತಿರುವನು. ಮುಂಬೈ ಮೇಲೆ ದಾಳಿ ಮಾಡಿದ ಭಯೋತ್ಪಾದಕನಿಗೂ ಐಶಾರಾಮಿ ಬದುಕಿಗೆ ಅಗತ್ಯವಾದ ಎಲ್ಲ ಸವಲತ್ತುಗಳನ್ನು ಜೈಲಿನಲ್ಲಿ ಮಾಡಿಕೊಡಲಾಗಿದೆ. ಕೆಲವು ದಿನಗಳ ಹಿಂದೆ ಲೇಖನವೊಂದರಲ್ಲಿ ಲೇಖಕರು ಅನ್ಯರಾಷ್ಟ್ರಗಳಲ್ಲಿನ ಉಗ್ರರಿಗೆ ಭಾರತದ ಜೈಲುಗಳನ್ನು ಆಶ್ರಯಿಸಿ ರಕ್ಷಣೆ ಪಡೆಯುವಂತೆ ಕರೆ ನೀಡಿದ್ದರು.  ಇದು ವಿಡಂಬನಾತ್ಮಕ ಎಂದೆನಿಸಿದರೂ ಸತ್ಯಕ್ಕೆ ಹತ್ತಿರವಾದ ಸಂಗತಿ.
    ಭಯೋತ್ಪಾದನೆಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಇಲ್ಲಿ ಕಾನೂನಿನ ನಿಯಮಗಳು ಕಠಿಣವಾಗಬೇಕು. ಒಬ್ಬ ಭಯೋತ್ಪಾದಕನಿಗೆ ಕೊಡುವ ಶಿಕ್ಷೆ ಬೇರೆ ಉಗ್ರರಿಗೆ ಪಾಠವಾಗಬೇಕು. ಧರ್ಮ ಮತ್ತು ಜಾತಿಗಳನ್ನು ಓಲೈಸುವ ರಾಜಕಾರಣ ಅಳಿದು ಹೊಸ ವ್ಯವಸ್ಥೆಯೊಂದು ಅಸ್ತಿತ್ವಕ್ಕೆ ಬರಬೇಕು.

ಸ್ವತಂತ್ರ ಭಾರತದಲ್ಲಿ ಭೃಷ್ಟಾಚಾರ 

         ಭೃಷ್ಟಾಚಾರ ಮುಕ್ತ ಭಾರತ ಅದು ಅನೇಕರ ಕನಸು.  ಆದರೆ ಆ ಕನಸು ಇವತ್ತಿನವರೆಗೂ ಕನಸಾಗಿಯೇ ಉಳಿದಿರುವುದು ಮಾತ್ರ ದೇಶದ ಬಹುದೊಡ್ಡ ದುರಂತ. ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಗುಮಾಸ್ತನೋರ್ವನ ಮನೆಯಲ್ಲಿ ಕೇಜಿಗಟ್ಟಲೆ ಚಿನ್ನ, ಬೆಳ್ಳಿ ಮತ್ತು ಕೋಟ್ಯಾಂತರ ರೂಪಾಯಿಗಳು ಲೋಕಾಯುಕ್ತರು ದಾಳಿ ಮಾಡಿದಾಗ ಸಿಗುತ್ತವೆ. ಭೃಷ್ಟಾಚಾರ ಎನ್ನುವುದು ಎಲ್ಲ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಇಲ್ಲಿ ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದಕ್ಕಿಂತ ಸಮರ್ಥಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಹಿಂದೆಲ್ಲ ಸಾವಿರಾರು ರೂಪಾಯಿಗಳಿಗೆ ಸೀಮಿತವಾಗಿದ್ದ ಭೃಷ್ಟಾಚಾರ ಇಂದು ಕೋಟ್ಯಾಂತರ ರೂಪಾಯಿಗಳಿಗೆ ವಿಸ್ತರಿಸಿದೆ. ಸಾರ್ವಜನಿಕರಾದ ನಮ್ಮದೂ ಅನೇಕ ತಪ್ಪುಗಳಿವೆ. ಸರ್ಕಾರಿ ಕಛೇರಿಗಳಲ್ಲಿ ಲಂಚ ಕೊಟ್ಟು ನಮ್ಮ ಕೆಲಸಗಳನ್ನು ಅಕ್ರಮವಾಗಿ ಮಾಡಿಸಿಕೊಳ್ಳುತ್ತೇವೆ. ಪ್ರತ್ಯಕ್ಷವಾಗಿಯೇ ಆಗಲಿ ಇಲ್ಲವೇ ಅಪರೋಕ್ಷವಾಗಿಯೇ ಆಗಲಿ ನಾವು ಸಹ ಈ ಭೃಷ್ಟಾಚಾರದಲ್ಲಿ ಸಮಭಾಗಿಗಳು. ಒಂದು ಸಾಮಾಜಿಕ ಪ್ರಜ್ಞೆ ನಮ್ಮೊಳಗೆ ಜಾಗೃತಗೊಳ್ಳದ    ಹೊರತು    ಈ ಭೃಷ್ಟಾಚಾರವನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಿಲ್ಲ.
        ಇನ್ನೂ ಒಂದು ಪರಿಹಾಸ್ಯದ ಸಂಗತಿ ಎಂದರೆ ಈ ಭೃಷ್ಟಾಚಾರದ ವಿರುದ್ಧದ ಹೋರಾಟ ಎನ್ನುವುದು ನಮಗೆಲ್ಲ  ಗೀಳಾಗಿ ಅಂಟಿಕೊಂಡಿದೆ. ಅಣ್ಣಾ ಹಜಾರೆ ಅವರು ಹೋರಾಟಕ್ಕೆ ಕರೆ ನೀಡಿದಾಗ ಅವರ ಹೆಸರಿನ ಟೊಪ್ಪಿಗೆ ಧರಿಸಿ ನಾವುಗಳೆಲ್ಲ ಬೀದಿಗಿಳಿಯುತ್ತೇವೆ. ಹೀಗೆ ಬೀದಿಗಿಳಿಯುವ ನಮಗೆ ನಮ್ಮದೇ ಮನೆಯ ಪಕ್ಕ ಸರಾಯಿ ಅಂಗಡಿಯೊಂದು ಇರುವುದು ನೆನಪಿಗೆ ಬರುವುದಿಲ್ಲ. ಸರ್ಕಾರಿ ಬಸ್ಸಿನಲ್ಲಿ ನಿರ್ವಾಹಕ ಟಿಕೆಟ್ ಕೊಡದೆ ಅರ್ಧ ಹಣ ಮರಳಿಸಿದಾಗ ವಿವೇಚನೆ ಇಲ್ಲದೆ ಅದನ್ನು ಜೇಬಿಗೆ ಸೇರಿಸುತ್ತೇವೆ. ಚುನಾವಣಾ ಸಂದರ್ಭ ಹಣ ಪಡೆದು ಮತದಾನದಲ್ಲಿ ಪಾಲ್ಗೊಳ್ಳುತ್ತೇವೆ. ಭೃಷ್ಟಾಚಾರದ ವಿರುದ್ಧದ ಹೋರಾಟವೆಂದರೆ ಅದು ನಮ್ಮಗಳ ಮನೆಯಿಂದಲೇ ಪ್ರಾರಂಭವಾಗಬೇಕು.
       ಜೊತೆಗೆ ಇಲ್ಲಿ ಹೋರಾಟಗಾರರು ಜನರ ಭಾವನಾತ್ಮಕ ದೌರ್ಬಲ್ಯವನ್ನು ತಮ್ಮ ಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿರುವುದು ಇನ್ನೊಂದು ಅರ್ಥದಲ್ಲಿ ಭೃಷ್ಟಾಚಾರವೇ  ಸರಿ. ಭೃಷ್ಟಾಚಾರದ ವಿರುದ್ಧ ಹೋರಾಟಕ್ಕಿಳಿದ ಅಣ್ಣಾ ಹಜಾರೆ ಅವರ ತಂಡ ಈಗ ರಾಜಕೀಯ ಪಕ್ಷವನ್ನು ಕಟ್ಟಲು ನಿರ್ಧರಿಸಿದೆ. ವ್ಯವಸ್ಥೆಯೊಂದರ ವಿರುದ್ಧ ಹೋರಾಟಕ್ಕಿಳಿದ ಈ   ತಂಡ ಈಗ ಅದೇ ವ್ಯವಸ್ಥೆಯ ಒಂದು ಭಾಗವಾಗಲು ಹೊರಟಿರುವುದು ನ್ಯಾಯಸಮ್ಮತವಲ್ಲ. ಪರಿಣಾಮವಾಗಿ ಬಹುಪಾಲು ಸಾರ್ವಜನಿಕರಿಗೆ ಈ ಹೋರಾಟಗಳ ಕುರಿತು ಭ್ರಮನಿರಸನವಾಗಿದೆ. ನಾವು ನೈತಿಕವಾಗಿ ಬದುಕಿದರೆ ಮಾತ್ರ ಇನ್ನೊಬ್ಬರ ನೈತಿಕತೆಯನ್ನು ಪ್ರಶ್ನಿಸಲು ಸಾಧ್ಯ ಎನ್ನುವ ಮನೋಭಾವ ಜನರಲ್ಲಿ ಜಾಗೃತವಾಗಬೇಕು.

ಇದ್ದದ್ದು ಇದ್ದಹಾಂಗ 

       ಗೂಗಲ್ ನಲ್ಲಿ ಗಾಂಧಿಯನ್ನು ಹುಡುಕಲು ಹೊರಟಾಗ ಗಾಂಧಿ  ಜೊತೆ ಸಿಕ್ಕಿದ್ದು ಇಂದಿರಾ ಗಾಂಧಿ, ರಾಜೀವ ಗಾಂಧಿ, ಸಂಜಯ ಗಾಂಧಿ, ಮನೇಕಾ ಗಾಂಧಿ, ಸೋನಿಯಾ ಗಾಂಧಿ, ರಾಹುಲ ಗಾಂಧಿ, ಪ್ರಿಯಾಂಕಾ ಗಾಂಧಿ ಇವರೆಲ್ಲ. ಮೊನ್ನೆ  ಆರನೇ ತರಗತಿಯಲ್ಲಿ ಓದುತ್ತಿರುವ ಹುಡುಗನನ್ನು ಪ್ರಶ್ನಿಸಿದೆ ಗಾಂಧಿ ಗೊತ್ತಾ ಎಂದು. ಥಟ್ಟನೆ ಉತ್ತರಿಸಿದ ಭೂಪ 'ಗೊತ್ತು ಸಾರ್ ಅದೇ ನಮ್ಮ ಗಣೇಶ ಜೊತೆ ಮುಂಗಾರು ಮಳೆ ಸಿನಿಮಾದಲ್ಲಿ ಸಖತ್ತಾಗಿ ನಟಿಸಿದ್ದಾಳಲ್ಲ ಪೂಜಾ ಗಾಂಧಿ'.

-ರಾಜಕುಮಾರ ವಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ             





Wednesday, August 1, 2012

ಋಣಸಂದಾಯದ ಎರಡು ದೃಷ್ಟಾಂತಗಳು

       'ಋಣ' ಇದು ಎಲ್ಲರ ಬದುಕಿನೊಂದಿಗೆ ತಳುಕು ಹಾಕಿಕೊಂಡಿರುವ ಪದ. ಒಂದಲ್ಲ ಒಂದು ವಿಧದಲ್ಲಿ ನಾವುಗಳೆಲ್ಲ ಋಣಿಗಳೇ. ತಾಯಿಯ ಋಣ, ತಂದೆಯ ಋಣ, ಗುರುಗಳ ಋಣ, ತಾಯಿ ನಾಡಿನ ಋಣ ಹೀಗೆ ನಮ್ಮ ಜನ್ಮದಾರಂಭದಿಂದ ಸಾವಿನ ಮಡಿಲು ಸೇರುವವರೆಗೆ ನಾವು ವಿವಿಧ ಪ್ರಕಾರದಲ್ಲಿ ಉಪಕೃತರು. ಅನೇಕ ಸಂದರ್ಭಗಳಲ್ಲಿ 'ಅಯ್ಯೋ ದೇವರೇ ಅವರ ಋಣ ನನ್ನ ಮೇಲೆ ಹಾಗೇ ಇದೆ' ಎಂದು ಉದ್ಘರಿಸುವದೂ ಉಂಟು. ಆಗೆಲ್ಲ ಋಣಮುಕ್ತಿಗಾಗಿ ಮನಸ್ಸು ಕಾತರಿಸುತ್ತದೆ. ಋಣಮುಕ್ತಿ ಕುರಿತು ನಾವೆಲ್ಲಾ ಪುರಾಣ ಪುಣ್ಯಕಥೆಗಳಲ್ಲಿ ಓದಿದ್ದೇವೆ. ದೇವಾನು  ದೇವತೆಗಳು ಋಣಮುಕ್ತಿಗಾಗಿ ಭೂಲೋಕದಲ್ಲಿ ಮನುಷ್ಯ ರೂಪಿಗಳಾಗಿ ಜನಿಸಿದ್ದುಂಟು. 
          ಈ ಉಪಕಾರ ಮತ್ತು ಋಣಸಂದಾಯ  ಎನ್ನುವುದು ಕೊಟ್ಟು ತೆಗೆದು ಕೊಳ್ಳುವ ಪ್ರಕ್ರಿಯೆಯಾಗಬಾರದು. ಅದರಲ್ಲಿ ಒಂದು ಘನತೆ, ಶ್ರೇಷ್ಠತೆ ಮತ್ತು ನಿರ್ಮಲ ಅಂತ:ಕರಣವಿರಬೇಕು. ಋಣಸಂದಾಯ ಎನ್ನುವುದು ತೀರ ವ್ಯವಹಾರಕ್ಕಿಳಿದಾಗ ಅದು ಮನುಷ್ಯ ಸ್ವಭಾವದ ನೈಜ ಪ್ರಕ್ರಿಯೆ ಎಂದೆನಿಸಿಕೊಳ್ಳದೆ ಅದೊಂದು ವ್ಯಾಪಾರವಾಗಿ ಪರಿಣಮಿಸುತ್ತದೆ. ಸಾಮಾನ್ಯವಾಗಿ ಈ ದಿನಗಳಲ್ಲಿ ಉಪಕಾರ ಮತ್ತು ಋಣಸಂದಾಯ ಎನ್ನುವ ಈ ಎರಡು ಕ್ರಿಯೆಗಳು ಕೊಟ್ಟು ಕೊಳ್ಳುವ ವ್ಯಾಪಾರದ ನೆಲೆಗಟ್ಟಿನ ಮೇಲೆ ನಡೆಯುತ್ತಿವೆ. 
           ನಾನು ಓದಿದ ಮತ್ತು ನೋಡಿದ ಎರಡು ವಿಭಿನ್ನ ಋಣಸಂದಾಯದ ದೃಷ್ಟಾಂತಗಳು ಹೀಗಿವೆ.

ದೃಷ್ಟಾಂತ-1
         ಇದು ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಓದಿದ ಲೇಖನ. ಲೇಖಕರಾದ ಶ್ರೀ ಮಣಿಕಾಂತ ಆ ಒಂದು ಘಟನೆಯನ್ನು ಅತ್ಯಂತ ಹೃದಯಸ್ಪರ್ಶಿಯಾಗಿ ಬರೆದಿರುವರು. ದುರಾದೃಷ್ಟವಶಾತ್ ಆ ಲೇಖನ ಇಂದು ನನ್ನ ಬಳಿಯಿಲ್ಲ. ಆದರೆ ಓದಿದ ವಿಷಯ ಅತ್ಯಂತ ಮಾನವೀಯ ಅಂತ:ಕರಣದಿಂದ ಕೂಡಿದ್ದರಿಂದ ಅದಿನ್ನೂ ನನ್ನ ನೆನಪುಗಳಲ್ಲಿ ಹಸಿರಾಗಿದೆ. ಹಾಗೆ ನೆನಪು ಮಾಡಿಕೊಂಡ ಆ ಅಂತ:ಕರಣದ ಕಥೆಯನ್ನು ಇಲ್ಲಿ ದಾಖಲಿಸಿರುವೆ. 'ಆ ಹುಡುಗ ಚಿಕ್ಕ ವಯಸ್ಸಿನವನಿರುವಾಗಲೇ ತಂದೆ ತಾಯಿ ತೀರಿಕೊಂಡರು. ಹೇಳಿಕೊಳ್ಳುವಂಥ ಹತ್ತಿರದ ಬಂಧುಗಳೂ ಅವನಿಗಿರಲಿಲ್ಲ. ಅಕ್ಷರಶ: ಅವನೊಬ್ಬ ಅನಾಥ.  ದಿನ ಪತ್ರಿಕೆಗಳನ್ನು ಮನೆ ಮನೆಗೂ ಹಂಚಿ ಬರುತ್ತಿದ್ದ ಅಲ್ಪ ಸಂಬಳದಲ್ಲಿ ಹೇಗೋ ಬದುಕು ನಡೆಸುತ್ತಿದ್ದ. ಓದ ಬೇಕೆನ್ನುವ ಅದಮ್ಯ ಆಸೆಯನ್ನು ಅತ್ಯಂತ ಕಷ್ಟಪಟ್ಟು ತಡೆ ಹಿಡಿದಿದ್ದ. ದಿನಗಳು ಅದು ಹೇಗೋ ಕಳೆಯುತ್ತಿದ್ದವು. ಅದೊಂದು ದಿನ ಎಂದಿನಂತೆ ಪತ್ರಿಕೆಗಳನ್ನು ಹಂಚಿ ಬಂದವನಿಗೆ ವಿಪರೀತ ಹಸಿವು ಕಾಡಲಾರಂಭಿಸಿತು. ಇನ್ನು ಹಸಿವು ತಾಳಲಾರೇನು ಎಂದೆನಿಸಿದಾಗ ಒಂದಿಷ್ಟು ಮುಂಗಡ ಹಣ ಪಡೆಯಲು ತಾನು ಕೆಲಸ ಮಾಡುತ್ತಿದ್ದ ಮಾಲೀಕರ ಮನೆಗೆ ಹೊರಟು ನಿಂತ. ಕಾಲೆಳೆಯುತ್ತ ನಡೆಯುತ್ತಿದ್ದಾತನಿಗೆ ಅರ್ಧ ದಾರಿ ಕಳೆಯುವಷ್ಟರಲ್ಲಿ ಕಣ್ಣು ಕತ್ತಲಾವರಿಸ ತೊಡಗಿತು. ನೀರು ಕೇಳಲು ಅಕ್ಕ ಪಕ್ಕದ ಮನೆಗಳತ್ತ ನೋಡಿದ. ಅರ್ಧ ಬಾಗಿಲು ತೆರೆದಿದ್ದ ಮನೆ ಎದುರು ನಿಂತು ಕುಡಿಯಲು ನೀರು ಕೇಳಿದ. ಕೈಯಲ್ಲಿ ಲೋಟ ಹಿಡಿದು ಬಂದವಳು ಅವನಿಗಿಂತ ನಾಲ್ಕೈದು ವರ್ಷಕ್ಕೆ ದೊಡ್ದವಳಿರಬಹುದೆನಿಸುವ ಲಕ್ಷಣವಾದ ಹುಡುಗಿ. ಆಕೆ ಅವನೆಡೆ ಅನುಕಂಪದಿಂದ ನೋಡಿ ಜಗುಲಿಯ ಮೇಲೆ ಕೂಡಲು ಹೇಳಿದವಳೇ ಕೈಗೆ ಲೋಟವನ್ನಿತ್ತಳು. ಲೋಟ ಕೈಗೆ ತೆಗೆದುಕೊಂಡವನ ಕಣ್ಣುಗಳು ಅರಳಿದವು. ನೀರು ಕೇಳಿದವನಿಗೆ ಕುಡಿಯಲು ಲೋಟದ ತುಂಬ ಬಿಸಿ ಹಾಲು. ಹಸಿದ ಹೊಟ್ಟೆಗೆ ಹಾಲು ಸೇರುತ್ತಿದ್ದಂತೆ ಸಂತೃಪ್ತ ಭಾವ ಅವನ ಮುಖದಲ್ಲಿ ಮೂಡಿತು. ಹಾಲು ಕೊಟ್ಟು ಹಸಿವು ನೀಗಿಸಿದ ಅವಳನ್ನೊಮ್ಮೆ ಕಣ್ತುಂಬಿ ನೋಡಿದ. ಕೆಳದುಟಿಯ ಅನತಿ ದೂರದಲ್ಲಿ ಅಗಲವಾದ ಕಪ್ಪು ಚುಕ್ಕೆ. ಅವನ ಪೂರ್ವಾಪರ ವಿಚಾರಿಸಿದವಳೇ ಸಮೀಪದ ಸಿದ್ಧಗಂಗಾ ಮಠದ ವಿಳಾಸ ಕೊಟ್ಟು ಬದುಕು ಕಟ್ಟಿಕೊಳ್ಳಲು ನೆರವು ನೀಡಿದಳು. ಅಂದು ಸಿದ್ಧಗಂಗಾ ಮಠ ಸೇರಿದ ಆ ಹುಡುಗ ಮುಂದೊಂದು ದಿನ ಖ್ಯಾತ ವೈದ್ಯನಾದ.
        ಕಾಲಚಕ್ರ ಉರುಳಿತು. ಆಸ್ಪತ್ರೆಯ ತನ್ನ ಕೊಠಡಿಯಲ್ಲಿ ಕುಳಿತಿದ್ದವನಿಗೆ ಶಸ್ತ್ರ ಚಿಕಿತ್ಸಾ ಕೋಣೆಯಿಂದ ತುರ್ತಾಗಿ ಕರೆ ಬಂತು. ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಮಹಿಳೆಯನ್ನು ಹೇಗಾದರೂ ಸರಿ ಉಳಿಸಲೇ ಬೇಕೆಂದು ಅಲ್ಲಿದ್ದ ವೈದ್ಯರೆಲ್ಲ ಹರಸಾಹಸ ಪಡುತ್ತಿದ್ದರು. ಶಸ್ತ್ರ ಚಿಕಿತ್ಸಾ  ಕೋಣೆಯೊಳಗೆ ಪ್ರವೇಶಿಸಿದ ಆ ಯುವ ವೈದ್ಯ ಅರೇ ಕ್ಷಣ ಮಹಿಳೆಯ ಮುಖವನ್ನೊಮ್ಮೆ ದಿಟ್ಟಿಸಿ ನೋಡಿದ. ಕೆಳದುಟಿಯ ಅನತಿ ದೂರದಲ್ಲಿ ಅಗಲವಾದ ಕಪ್ಪು ಚುಕ್ಕೆ. ವೈದ್ಯರ ಪ್ರಯತ್ನ ಯಶಸ್ವಿಯಾಯಿತು. ಮಹಿಳೆಗೆ ಮರುಜೀವ ಕೊಟ್ಟ ಸಂಭ್ರಮ ಅಲ್ಲಿ ಮನೆ ಮಾಡಿತ್ತು. ಮಹಿಳೆ ಆಸ್ಪತ್ರೆಯಲ್ಲಿರುವಷ್ಟು ದಿನ ಆ ಕಿರಿಯ ವೈದ್ಯನೇ ವಿಶೇಷ ಕಾಳಜಿ ತೆಗೆದುಕೊಂಡ. ಪ್ರತಿದಿನ ಹತ್ತಾರು ಬಾರಿ ಬಂದು ಯೋಗಕ್ಷೇಮ ವಿಚಾರಿಸಿದ. ಅಗತ್ಯದ ಎಲ್ಲ ಸೌಲಭ್ಯಗಳನ್ನು ದೊರಕಿಸಿ ಕೊಟ್ಟ. ಕೊನೆಗೊಂದು ದಿನ ಆಸ್ಪತ್ರೆಯಿಂದ ಬಿಡುಗಡೆಯಾಗಿ ಹಣ ಪಾವತಿಸುವ  ಕೌಂಟರಿನ ಹತ್ತಿರ ಹೋದ ಆ ಮಹಿಳೆಗೆ ಬಿಲ್ ಬದಲಾಗಿ ಕಾಗದವೊಂದನ್ನು ಅಲ್ಲಿನ ಸಿಬ್ಬಂದಿ ನೀಡಿದರು. ನಡುಗುವ ಕೈಗಳಿಂದ ಆ ಕಾಗದದ ಚೂರನ್ನು ಬಿಡಿಸಿ ನೋಡಿದಾಗ ಅಲ್ಲಿ ಹೀಗೆ ಬರೆದಿತ್ತು  'ನಿಮ್ಮ ಚಿಕಿತ್ಸೆಯ ಬಿಲ್ ನ ಹಣ   ಒಂದು ಲೋಟ ಹಾಲಿನ ರೂಪದಲ್ಲಿ ಸಂದಾಯವಾಗಿದೆ'.

 ದೃಷ್ಟಾಂತ-2
         ಅದೊಂದು ಕನ್ನಡ ಸಮ್ಮೇಳನ. ಕನ್ನಡಿಗರೆಲ್ಲ ಅತ್ಯಂತ ಸಂಭ್ರಮದಿಂದ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಕವಿಗೋಷ್ಠಿ ಆ ದಿನದ ವಿಶೇಷವಾಗಿತ್ತು. ವೇದಿಕೆಯಲ್ಲಿ ಕವಿಗಳು ಮತ್ತು ಅವರನ್ನು ಕಣ್ತುಂಬಿಸಿಕೊಳ್ಳಲು ಸಾವಿರಾರು ಪ್ರೇಕ್ಷಕರು ಬಿಸಿಲನ್ನೂ ಲೆಕ್ಕಿಸದೆ ಮೈದಾನದ ತುಂಬ ತುಂಬಿಕೊಂಡಿದ್ದರು. ಕವಿಗೋಷ್ಠಿ ಆರಂಭವಾಯಿತು. ಕವಿಗಳೆಲ್ಲ ಒಬ್ಬರಾದ ನಂತರ ಒಬ್ಬರಂತೆ ತಾವು ಬರೆದು ತಂದಿದ್ದ ಕವನಗಳನ್ನು ವಾಚಿಸಲಾರಂಭಿಸಿದರು. ಮರಿಕವಿಯೊಬ್ಬನ ಸರದಿ ಬಂತು. ಇಂಥ ಹಿರಿಕವಿಯೊಬ್ಬ ಏಕೆ ಬಂದಿಲ್ಲ ಎಂದಾತ  ಕವಿತೆಯ ಮೂಲಕ ಪ್ರಶ್ನಿಸಿದ. ಅವರ ಖುರ್ಚಿ ಖಾಲಿ ಇದೆ ಅವರಿಗಿಲ್ಲ ಖುರ್ಚಿಯ ವ್ಯಾಮೋಹ ಎಂದು ಬಣ್ಣಿಸಿದ. ಈ ಸಮ್ಮೇಳನ ನಡೆಯಬಾರದೆಂದು ಅಡ್ಡಗಾಲು ಹಾಕಿದ್ದ ಆ ಹಿರಿಕವಿಯನ್ನು ಎಲ್ಲರೂ ಮರೆತಿರುವ ಹೊತ್ತಿನಲ್ಲಿ ಈ ಮರಿಕವಿ ನೆನಪಿಸಿದ್ದ. ಪ್ರೇಕ್ಷಕರಿಗೆ ಮೊಸರನ್ನದಲ್ಲಿ ಕಲ್ಲು ಸಿಕ್ಕ ಅನುಭವ. ಆದರೆ ಆ ಮರಿಕವಿ ಮುಖದಲ್ಲಿ ಮಾತ್ರ ಧನ್ಯತಾ ಭಾವ. ಯಾಕೆ ಹೀಗಾಯ್ತು ಎಂದು ವಿಚಾರಿಸಿದಾಗ ಗೊತ್ತಾಯಿತು. ಈ ಮರಿಕವಿಯ ಮೇಲೆ ಆ ಹಿರಿಕವಿಯ ಋಣ ಬೆಟ್ಟದಷ್ಟಿತ್ತು. ವಶೀಲಿ ಬಾಜಿಗಳಿಂದ ಆಯಕಟ್ಟಿನ ಜಾಗಗಳನ್ನು ಅತಿಕ್ರಮಿಸುತ್ತಲೇ ಬಂದ ಹಿರಿಕವಿ ತನ್ನ ಶಿಷ್ಯನಿಗೆ ಹಲವು ಬಗೆಯಲ್ಲಿ ಉಪಕಾರ ಮಾಡಿದ್ದ. ತನ್ನ ಶಿಫಾರಸುಗಳಿಂದ ಮರಿಯ ಪುಸ್ತಕಗಳನ್ನು ವಿಶ್ವವಿದ್ಯಾಲಯಗಳಲ್ಲಿ pathya ವಾಗಿಸಿದ್ದ. ಪುಸ್ತಕ ಮಾರಾಟ ಜೋರಾಗಿ ಮರಿಯ ಜೇಬು ಭರ್ತಿಯಾಗಿತ್ತು. ಋಣಸಂದಾಯಕ್ಕಾಗಿ ಕಾದವನಿಗೆ ಕನ್ನಡ ಸಮ್ಮೇಳನ ಸೂಕ್ತ ಅವಕಾಶವನ್ನೇ ಒದಗಿಸಿತು. ಸಮಯ, ಸಂದರ್ಭಗಳ ಕಿಂಚಿತ್ ಪ್ರಜ್ಞೆಯೂ ಇಲ್ಲದೆ ತನ್ನ ಮನಸಿನಲ್ಲಿದ್ದುದ್ದನ್ನೆಲ್ಲ ಕಾರಿಕೊಂಡ. ಒಟ್ಟಾರೆ ಆ ದಿನ ಅವನಿಂದ ಋಣಸಂದಾಯವಾಗಿತ್ತು.

ಇದ್ದದ್ದು ಇದ್ದಹಾಂಗ 
        2010 ನೇ ಸಾಲಿನ ರಾಜ್ಯ ಸರ್ಕಾರದ ಕನ್ನಡ ಸಿನಿಮಾ ಕಲಾವಿದರ ಪ್ರಶಸ್ತಿ ಈಗ ಕೋರ್ಟ್ ಮೆಟ್ಟಿಲು ಹತ್ತುವ ಹಂತದಲ್ಲಿದೆ. ಪ್ರಶಸ್ತಿ ಸಮಿತಿಯ ಅಧ್ಯಕ್ಷೆ ಹಲವರಿಗೆ ಪ್ರಶಸ್ತಿ ಕೊಡಮಾಡುವುದರ ಮೂಲಕ ತಮ್ಮ ಮೇಲಿನ ಋಣದಿಂದ ಮುಕ್ತರಾಗಿರುವರು. ಜೀವಮಾನದ ಸಾಧನೆಯ ಪ್ರಶಸ್ತಿಯನ್ನು ಕೊನೆಯ ಕ್ಷಣದವರೆಗೂ ಯಾರಿಗೆ ಎನ್ನುವುದನ್ನು ಬಿಟ್ಟು ಕೊಡದೆ ತಮ್ಮ ಪತಿಯ ಕುಚುಕು ಗೆಳೆಯನಿಗೆ ಕೊಟ್ಟರೆನ್ನುವ ಆಪಾದನೆ ಇತರ ಸದಸ್ಯರು ಮಾಡಿರುವರು.  ಇದೇ ನಟಿ 'ಋಣ ಮುಕ್ತಳು' ಚಿತ್ರದಲ್ಲಿ ನಟಿಸಿದ್ದು ಕಾಕತಾಳಿಯವಾಗಿದ್ದರೂ ಈ ಕ್ಷಣ ಆ ಚಿತ್ರ ನೆನಪಿಗೆ ಬರುತ್ತಿದೆ.

-ರಾಜಕುಮಾರ ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ