Thursday, September 2, 2021

ಬದುಕುವ ಕಲೆ ಕರಗತವಾಗಿದೆಯೇ?


(೨೪.೦೭.೨೦೨೧ ರ ಪ್ರಜಾವಾಣಿಯಲ್ಲಿ ಪ್ರಕಟ)

 ನನ್ನೂರಿಗೆ ಭೇಟಿ ನೀಡಿದ ಸಂದರ್ಭದಲ್ಲೆಲ್ಲ ಅಲ್ಲಿನ ಶಾಲೆಯ ಶಿಕ್ಷಕರೊಬ್ಬರನ್ನು ಸಂಧಿಸಿ ಮಾತನಾಡುವುದು ಲಾಗಾಯ್ತಿನಿಂದಲೂ ನಾನು ರೂಢಿಸಿಕೊಂಡು ಬಂದ ಪದ್ಧತಿಯಾಗಿದೆ. ಆದರೆ ಕಳೆದ ಬಾರಿ ಊರಿಗೆ ಹೋಗಿದ್ದಾಗ ಅವರು ಶಾಲೆಯಲ್ಲಿರಲಿಲ್ಲ. ಡೆಪ್ಯುಟೇಷನ್  ಮೇಲೆ ಜಿಲ್ಲಾ ಕೇಂದ್ರದಲ್ಲಿರುವ ಇಲಾಖೆಯ ಕಚೇರಿಗೆ ವರ್ಗಗೊಂಡಿರುವರೆಂದು  ಅಲ್ಲಿನ ಮುಖ್ಯೋಪಾಧ್ಯಾಯರು ಹೇಳಿದರು. ಕೆಲವು ದಿನಗಳ ನಂತರ ಅವರಿಗೆ ಫೋನ್ ಮಾಡಿ ಆರೋಗ್ಯ ವಿಚಾರಿಸಿ ಈ ಸಲ ಊರಿಗೆ ಬಂದಿದ್ದಾಗ ಅವರನ್ನು ಭೇಟಿ ಮಾಡಲೆಂದು ಶಾಲೆಗೆ ಹೋಗಿದ್ದ ಸಂಗತಿಯನ್ನು ನೆನಪಿಸಿದೆ. ತಾವು ಈಗ ಆ ಶಾಲೆಯಲ್ಲಿಲ್ಲವೆಂದು, ಡೆಪ್ಯುಟೇಷನ್ ಮೇಲೆ ಸಂಬಂಧಪಟ್ಟ ಜಿಲ್ಲಾ ಇಲಾಖೆಗೆ ವರ್ಗ ಮಾಡಿಸಿಕೊಂಡಿದ್ದು ಇಲ್ಲಿ ಮೇಲುಸಂಪಾದನೆ ಚೆನ್ನಾಗಿದೆಯೆಂದು ಈ ಕಾರಣದಿಂದ ಮಕ್ಕಳನ್ನು ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಪ್ರವೇಶ ದೊರಕಿಸಲು ಮತ್ತು ನಾಲ್ಕಾರು ಸೈಟುಗಳನ್ನು ಖರೀದಿಸಲು ಸಾಧ್ಯವಾಗಿದೆಯೆಂದು ಹೇಳಿ ಮುಂದಿನ ಸಲ ಊರಿಗೆ ಬಂದಾಗ ಭೇಟಿಯಾಗುವಂತೆ ತಿಳಿಸಿದರು. ಅವರ ಧ್ವನಿಯಲ್ಲಿ ಸಂತೃಪ್ತಿಯ ಭಾವ ತುಂಬಿ ತುಳುಕುತ್ತಿತ್ತು.

ಈ ಮೇಲಿನ ಘಟನೆಗೆ ವಿರುದ್ಧವಾದ ಮತ್ತು ನಂಬಲಸಾಧ್ಯವಾದ ಇನ್ನೊಂದು ಸಂಗತಿ ನನ್ನೂರಿನ ಆ ನೆಲದಲ್ಲೇ ನಡೆದದ್ದು. ನನ್ನ ಕಣ್ಣೆದುರು ಬೆಳೆದು ಓದಿ ವಿದ್ಯಾವಂತನಾದ ಹುಡುಗ ಲೋಕೊಪಯೋಗಿ ಇಲಾಖೆಯಲ್ಲಿ ಅಸಿಸ್ಟಂಟ್ ಎಂಜಿನಿಯರ್‌ನಾಗಿ ನೌಕರಿಗೆ ಸೇರಿದ. ಆ ಕ್ಷಣ ‘ಅಂವ ಇನ್ಮುಂದ ಹ್ಯಾಂಗ ಮನುಷ್ಯಾ ಆಗ್ತಾನ ನೋಡ್ರಿ’ ಎಂದು ಇಡೀ ಊರು ಸಂಭ್ರಮಿಸಿತು. ‘ಅಂವ ಕೇಳದೆ ಮನ್ಯಾಗ ರೊಕ್ಕ ಬಂದು ಬೀಳ್ತದ. ರೊಕ್ಕ ಎಣಿಸಾಕ ಆಳು ಇಟ್ಗೊಬೇಕಾಗ್ತದ’ ಎಂದು ಜನ ಮಾತನಾಡಿಕೊಂಡರು. ಆದರೆ ಆ ಹುಡುಗ ನೌಕರಿಗೆ ರಾಜೀನಾಮೆ ನೀಡಿ ಊರಿನ ಜನರನ್ನು ನಿರಾಸೆಗೊಳಿಸಿದ. ವಿಚಾರಿಸಿದಾಗ ಅಲ್ಲಿನ ವಾತಾವರಣಕ್ಕೆ ತನಗೆ ಹೊಂದಿಕೊಳ್ಳಲಾಗುತ್ತಿಲ್ಲವೆಂದು  ಹೇಳಿದ. ಇನ್ನಷ್ಟು ದಿನಗಳ ಕಾಲ ನೌಕರಿಯಲ್ಲೇ ಮುಂದುವರೆದಿದ್ದರೆ ತಾನು ಮಾನಸಿಕ ಕ್ಷೋಭೆಗೆ ಒಳಗಾಗುತ್ತಿದ್ದೆ ಎಂದು ಅಳಲು ತೋಡಿಕೊಂಡ. ಸಹಜವಾಗಿಯೇ ಅವನ ಈ ನಿರ್ಧಾರದಿಂದ ಅಪ್ಪ ಅಮ್ಮನಿಗೆ ಬೇಸರವಾಯಿತು. ‘ಮನುಷ್ಯಾ ಆಗೋ ಆವಕಾಶ ಮನೆಬಾಗಿಲಿಗಿ ಹುಡ್ಕೊಂಡು ಬಂದ್ರ ಖೋಡಿ ಹುಡುಗ ಚಾನ್ಸ್ ಕಳ್ಕೊಂಡ್ತು’ ಎಂದು ಊರ ಜನ ಲೊಚಗುಟ್ಟಿದರು. ಮುಂದೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕನಾಗಿ ನೇಮಕಗೊಂಡು ಈಗ ವಿದ್ಯಾರ್ಥಿಗಳಿಂದ ಉತ್ತಮ ಶಿಕ್ಷಕನೆಂದು ಮೆಚ್ಚುಗೆ ಗಳಿಸಿ ಸಂತೃಪ್ತಿಯ ಜೀವನ ನಡೆಸುತ್ತಿರುವನು.

ಒಂದೇ ಕಾಲದ ಒಂದೇ ನೆಲದ ಎರಡು ಪರಸ್ಪರ ವಿರುದ್ಧ ಘಟನೆಗಳಿವು. ಒಬ್ಬರು ಪವಿತ್ರ ವೃತ್ತಿಯನ್ನು ತೊರೆದು ಮೇಲುಸಂಪಾದನೆಯತ್ತ ಮುಖ ಮಾಡಿದರೆ ಇನ್ನೊಬ್ಬ ಮೇಲುಸಂಪಾದನೆಗೆ ಬೆನ್ನುಮಾಡಿ ಪಾಠ ಹೇಳುವ ಪವಿತ್ರ ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡ. ಇಲ್ಲಿ ಯಾವ ಘಟನೆಯನ್ನು ಆದರ್ಶವೆಂದು ನೋಡಬೇಕು ಎನ್ನುವ ಪ್ರಶ್ನೆ ಎದುರಾಗುತ್ತದೆ. ಪ್ರಶ್ನೆಗೆ ಉತ್ತರ ಕೂಡ ಸರಳವಾಗಿದೆ ಸಮಾಜ ಆಯ್ದುಕೊಳ್ಳುವುದು ಮೊದಲನೆಯ ಘಟನೆಯನ್ನು. ಏಕೆಂದರೆ ಮನುಷ್ಯನಾಗುವ ಪ್ರಕ್ರಿಯೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಸಮಾಜ ‘ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ನ್ಯಾಯ ಸಮ್ಮತ’ ಎನ್ನುವ ಮನೋಭಾವವನ್ನು ರೂಢಿಸಿಕೊಂಡಿದೆ. ಇಲ್ಲಿ ಅನ್ಯಾಯ, ಅನೀತಿ ಎಲ್ಲವನ್ನೂ ಸಮಾಜ ಸಮ್ಮತಿಸಿ ಅದಕ್ಕೆ ತನ್ನ ಅಂಗೀಕಾರದ ಮುದ್ರೆ ಒತ್ತಿದೆ. ಹೀಗಾಗಿ ವೃತ್ತಿಯಲ್ಲಿ ಮೇಲುಸಂಪಾದನೆ ಬೇಡ ಎನ್ನುವವನು ಸಮಾಜದ ಅವಹೇಳನಕ್ಕೆ, ಅವಮಾನಕ್ಕೆ ಒಳಗಾಗುತ್ತಾನೆ. ಬೇಕು ಎನ್ನುವವನು ಸಮಾಜಕ್ಕೆ ಆದರ್ಶಪ್ರಾಯನಾಗಿ ಮನುಷ್ಯನಾಗುತ್ತ ಬೆಳೆಯತೊಡಗುತ್ತಾನೆ. 

ಎಸ್.ಎಲ್.ಭೈರಪ್ಪನವರ ‘ತಂತು’ ಕಾದಂಬರಿಯಲ್ಲಿ ಪಾತ್ರವೊಂದರ ಸಂಭಾಷಣೆ ಹೀಗಿದೆ ‘ನಾನು ಒಂದು ಕಾಸೂ ಸಂಬಳ ತಗೊಳ್ಳದೆ ಕೆಲಸ ಮಾಡಬೇಕು ಅಂತಿದ್ದೆ. ಆ ಮೇಲೆ ದೊಡ್ಡಪನನ್ನೇ ಕೇಳಿದೆ. ಅವರು ಏನಂತಾರೆ ಗೊತ್ತಾ? ಸಂಬಳ ತಗೊಂಡರೆ ತಪ್ಪಿಲ್ಲ. ವಿಶ್ವೇಶ್ವರಯ್ಯನೋರು ತಗೋತಿದ್ದರು. ಆದರೆ ಇಪ್ಪತ್ತನಾಲ್ಕು ಗಂಟೆಯೂ ಕೆಲಸದಲ್ಲೇ ಮನಸ್ಸಿಟ್ಟು ಒಂದು ಕಾಸೂ ಲಂಚ, ರುಷುವತ್ತು ಮುಟ್ಟದೆ ನಮ್ಮ ಸಂಬಳದಲ್ಲಿ ಮಾತ್ರ ಜೀವನ ಮಾಡಬೇಕು. ವಿಶ್ವೇಶ್ವರಯ್ಯನೋರು ಟೂರ್ ಹೋದಾಗ ಸರ್ಕಾರಿ ಕೆಲಸ ಮಾಡುಕ್ಕೆ ಸರ್ಕಾರದ ಮೋಂಬತ್ತಿ ಉರಿಸುತ್ತಿದ್ದರಂತೆ. ಅದು ಮುಗಿದ ಮೇಲೆ ಮಲಗುವ ಮುಂಚೆ ತಮ್ಮ ಸ್ವಂತ ಜ್ಞಾನಾರ್ಜನೆಗೆ ಬೇರೆ ಪುಸ್ತಕ ಓದುವಾಗ ಸ್ವಂತ ಖರ್ಚಿನಿಂದ ಕೊಂಡು ಹೋಗಿದ್ದ ಬೇರೆ ಮೋಂಬತ್ತಿ ಹತ್ತಿಸಿ ಸರ್ಕಾರದ ಮೋಂಬತ್ತಿಯನ್ನು ಆರಿಸಿಬಿಡ್ತಿದ್ದರಂತೆ’. ಇಂಥ ಉದಾತ್ತ ನಡೆ ಆದರ್ಶವಾಗಿರಬೇಕಿದ್ದ ಸಮಾಜದಲ್ಲಿ ಇಂದು ಲಂಚ, ರುಷುವತ್ತು ಸ್ವೀಕರಿಸುವುದೇ ಅದೊಂದು ಪ್ರತಿಷ್ಠೆಯ ವಿಷಯವಾಗಿದೆ. ಸರ್ಕಾರಿ ನೌಕರಿ ಎಂದಾಕ್ಷಣ ಮೇಲುಸಂಪಾದನೆ ಎಷ್ಟು ಎಂದು ನಾಚಿಕೆ ಬಿಟ್ಟು ಕೇಳುತ್ತಾರೆ. ಅದೆಷ್ಟೋ ಪಾಲಕರು ತಮ್ಮ ಮಕ್ಕಳಿಗೆ ಸಂಬಳದ ಜೊತೆ ಗಿಂಬಳವೂ ಸಿಗುತ್ತಿದೆ ಎಂದು ಹೆಮ್ಮೆ ಮತ್ತು ಅಭಿಮಾನದಿಂದ ಹೇಳಿಕೊಳ್ಳುತ್ತಾರೆ. ಒಟ್ಟಾರೆ ಸರ್ಕಾರಿ ಉದ್ಯೋಗ ಎನ್ನುವುದು ಅದು ಮೇಲುಸಂಪಾದನೆಗೆ ಸರಳವಾದ ಮಾರ್ಗ ಎನ್ನುವ ಮನೋಭಾವ ನಮ್ಮ ವಿದ್ಯಾವಂತ ಯುವಪೀಳಿಗೆಯಲ್ಲಿ ಹೆಚ್ಚುತ್ತಿದೆ. ಪಾಲಕರೇ ವಿದ್ಯಾವಂತ ಯುವಪೀಳಿಗೆಯಲ್ಲಿನ ಈ ಮನೋಭಾವಕ್ಕೆ ಅವರ ಬಾಲ್ಯದಿಂದಲೇ ಭದ್ರವಾದ ತಳಹದಿಯನ್ನು ನಿರ್ಮಿಸುತ್ತಿರುವರು. ಭವಿಷ್ಯದಲ್ಲಿ ಏನಾಗುವಿರಿ ಎನ್ನುವ ಪ್ರಶ್ನೆಗೆ ಮಕ್ಕಳ ಬಾಯಿಂದ ಮೇಲುಸಂಪಾದನೆಗೆ ಅವಕಾಶವಿರುವ ಉದ್ಯೋಗಳ ಹೆಸರುಗಳೇ  ಪುಂಖಾನುಪುಂಖವಾಗಿ ಹೊರಬರುತ್ತವೆ.

ಇಲ್ಲಿ ನಮ್ಮದೂ ನೂರೆಂಟು ತಪ್ಪುಗಳಿವೆ. ಮನುಷ್ಯರನ್ನು ಗುರುತಿಸುವಲ್ಲಿ ನಾವುಗಳು ಎಡವುತ್ತಿದ್ದೇವೆ. ವ್ಯಕ್ತಿತ್ವ ಮತ್ತು ಸಾಧನೆಗಳಿಗಿಂತ ಒಣ ಪ್ರತಿಷ್ಠೆ ಮತ್ತು ಆಡಂಬರಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದೇವೆ. ಅಪ್ರಾಮಾಣಿಕತೆಯಿಂದ ಅಪಾರ ಸಂಪತ್ತು ಗಳಿಸಿದವನೇ ನಮ್ಮ ದೃಷ್ಟಿಯಲ್ಲಿ ನಿಜವಾದ ಮನುಷ್ಯ. ಇಲ್ಲಿ ಬದುಕುವ ರೀತಿಗಿಂತ ಬದುಕುವ ಕಲೆ ಮುಖ್ಯ ಎನಿಸಿಕೊಳ್ಳುತ್ತದೆ. ಹೀಗೇ ಬದುಕ ಬೇಕೆನ್ನುವುದಕ್ಕಿಂತ ಹೇಗಾದರೂ ಸರಿ ಬದುಕ ಬೇಕೆನ್ನುವುದು ನಿಯಮವಾಗುತ್ತದೆ. ಬದುಕುವ ಕಲೆ ಗೊತ್ತಿರುವಾತ ಸಮಾಜದ ಮೆಚ್ಚುಗೆಗೆ ಪಾತ್ರನಾಗುತ್ತಾನೆ. ಹೀಗೇ ಬದುಕಬೇಕೆಂದು ಹೊರಡುವವನು ಸಮಾಜದ ಅವಕೃಪೆಗೆ ಮತ್ತು ನಿಂದನೆಗೆ ಒಳಗಾಗಿ ಶತಮೂರ್ಖನೆಂದು ಕರೆಸಿಕೊಳ್ಳುತ್ತಾನೆ. ಅನೀತಿಯ ಮಾರ್ಗದ ಮೂಲಕ ಮೇಲುಸಂಪಾದನೆ ಮಾಡುತ್ತ ಕೆಲವರು ಮನುಷ್ಯರಾಗುತ್ತ ಸಮಾಜದ ಗೌರವಕ್ಕೆ ಪಾತ್ರರಾಗುತ್ತಾರೆ. ಹಾಗಾದರೆ ಮನುಷ್ಯನಾಗುವುದೆಂದರೇನು? ಇಂಥದ್ದೊಂದು  ಜಿಜ್ಞಾಸೆ ಬದುಕುವ ಕಲೆ ಗೊತ್ತಿಲ್ಲದವರನ್ನು ಅವರ ಬದುಕಿನುದ್ದಕ್ಕೂ ಕಾಡುತ್ತಲೇ ಇರುವ ಯಕ್ಷ ಪ್ರಶ್ನೆಯಾಗಿ ಉಳಿಯುತ್ತದೆ. 

-ರಾಜಕುಮಾರ ಕುಲಕರ್ಣಿ