Tuesday, November 28, 2017

ಸಾಂಗತ್ಯ (ಕಥೆ)

             



(ಎಪ್ರಿಲ್ ೨೦೧೮ ರ 'ತುಷಾರ' ಪತ್ರಿಕೆಯಲ್ಲಿ ಪ್ರಕಟವಾಗಿದೆ)

       ‘ಮನಸ್ವಿನಿ ಮೇಡಂ ಷಾರ್ಪ್ 10 ಗಂಟೆಗೆ ಬಸವೇಶ್ವರ ಸರ್ಕಲ್‍ನಲ್ಲಿರೊ ಸಾಹಿತ್ಯ ಪ್ರಕಾಶನಕ್ಕೆ ಬನ್ನಿ. ಇವತ್ತು ನನ್ನ ‘ಭಾವನೆಗಳು’ ಪುಸ್ತಕ ಬಿಡುಗಡೆ ಆಗ್ತಿದೆ. ಆ ಪುಸ್ತಕದ ಮೊದಲನೆ ಓದುಗರು ನೀವೇ ಆಗ್ಬೇಕು. ಪ್ಲೀಜ್ ತಪ್ಪಿಸಬೇಡಿ ದಯವಿಟ್ಟು ಬನ್ನಿ ಸಭಾಂಗಣದ ಬಾಗಿಲಲ್ಲೆ ನಿಮಗಾಗಿ ಕಾಯ್ತಿರ್ತಿನಿ’ ರಾಘವ ಫೋನ್  ಮಾಡಿದಾಗ ಗಡಿಯಾರ ಬೆಳಗಿನ 9 ಗಂಟೆ ತೋರಿಸುತ್ತಿತ್ತು. ರವಿವಾರವಾದ್ರೂ ಮಕ್ಕಳಿಬ್ಬರು ಸ್ಪೆಷಲ್ ಕ್ಲಾಸ್ ಅಂತ ಸ್ಕೂಲಿಗೆ ರೆಡಿ ಆಗ್ತಿದ್ರು. ಪ್ರದೀಪ ಬಿಜಿನೆಸ್ ಅಂತ ಹೈದರಾಬಾದಿಗೆ ಹೋಗಿ ಎರಡು ದಿನಗಳಾಗಿತ್ತು. ಹೇಗೂ ಭಾನುವಾರ ಕಾಲೇಜಿಗೆ ರಜೆ ಬೇರೆ, ಮೇಲೆ ರಾಘವ ಸರ್ ಅವರ ಆತ್ಮೀಯ ಒತ್ತಾಯ. ಮಕ್ಕಳಿಬ್ಬರನ್ನೂ ಸ್ಕೂಲ್ ವ್ಯಾನಿಗೆ ಹತ್ತಿಸಿ ಗಡಿಯಾರ ನೋಡಿಕೊಂಡಾಗ ಕಾರ್ಯಕ್ರಮಕ್ಕೆ ಇನ್ನೂ ಅರ್ಧಗಂಟೆ ಸಮಯವಿತ್ತು. ಕಾರಿನಲ್ಲಿ ಮನೆಯಿಂದ ಸಾಹಿತ್ಯ ಪ್ರಕಾಶನಕ್ಕೆ ಹದಿನೈದು ನಿಮಿಷಗಳ ದಾರಿ. ಮಕ್ಕಳಿಗೆಂದು ಮಾಡಿಟ್ಟಿದ್ದ ಟಿಫಿನ್‍ನಲ್ಲೆ ಒಂದಿಷ್ಟನ್ನು ತಿಂದು ಅಡುಗೆ ಮನೆಯಲ್ಲಿದ್ದ ಶಾರದಮ್ಮನವರಿಗೆ ಹೇಳಿ ಹೊರಬಂದಾಗ ಫೋನ್  ರಿಂಗಣಿಸಿತು. ಆ ಕಡೆಯಿಂದ ‘ಮೇಡಂ ಎಲ್ಲಿದ್ದಿರಾ?’ ಎನ್ನುವ ರಾಘವ ಮಾತಿಗೆ ಇಲ್ಲೆ ಹತ್ತಿರದಲ್ಲಿದ್ದೇನೆಂದು ಹೇಳಿ ಕಾರನ್ನು ಬಸವೇಶ್ವರ ಸರ್ಕಲ್ ಕಡೆ ತಿರುಗಿಸಿದೆ.  

   ರಾಘವ ಇತಿಹಾಸದ ಪ್ರಾಧ್ಯಾಪಕರಾಗಿ ನಾನು ಉಪನ್ಯಾಸಕಿಯಾಗಿರುವ ಕಾಲೇಜಿಗೆ ಬಂದು ಎಂಟು ತಿಂಗಳುಗಳಾಯ್ತು. ಇತಿಹಾಸದ ಪ್ರಾಧ್ಯಾಪಕರಾದರೂ ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಅವರಿಗೆ. ಅನಂತಮೂರ್ತಿ, ಭೈರಪ್ಪ, ಯಶವಂತ ಚಿತ್ತಾಲ, ಲಂಕೇಶ್ ಅವರ ಹೆಚ್ಚಿನ ಕೃತಿಗಳನ್ನು ಓದಿಕೊಂಡವರು. ಕಿಟ್ಸ್, ಬೊದಿಲೇರ್, ಕಮೂ, ಕಾಫ್ಕಾ ಬಗ್ಗೆ ಅವರು ಆಸಕ್ತಿಯಿಂದ ಮಾತನಾಡುವುದನ್ನು ಕೇಳುವುದೆ ಚೆಂದ. ಜೊತೆಗೆ ನಾಲ್ಕಾರು ಪುಸ್ತಕಗಳನ್ನು ಬರೆದು ಸಾಹಿತ್ಯ ಕ್ಷೇತ್ರದಲ್ಲಿ ಒಂದಿಷ್ಟು ಗುರುತಿಸಿಕೊಂಡಿರುವರು ಬೇರೆ. ಸಂಕೋಚ ಸ್ವಭಾವದ ರಾಘವ ಇತರರೊಂದಿಗೆ ಬೆರೆಯುವುದು ಅತಿ ಕಡಿಮೆ. ತಮ್ಮ ಬರವಣಿಗೆ ಬಗ್ಗೆ ಕಾಲೇಜಿನ ಸ್ಟಾಪ್ ರೂಮಿನಲ್ಲಿ ಇತರ ಉಪನ್ಯಾಸಕರೊಂದಿಗೆ ಅವರು ಮಾತಾಡಿದ್ದನ್ನು ನಾನು ಕೇಳಿಯೇ ಇಲ್ಲ. ಆದರೆ ಕಾಲೇಜಿನಲ್ಲಿನ ಸಾಹಿತ್ಯಕ್ಕೆ ಸಂಬಂಧಿಸಿದ ಯಾವ ಸಮಾರಂಭಗಳನ್ನು ತಪ್ಪಿಸಿಕೊಂಡವರಲ್ಲ. ಕಾಲೇಜಿನಲ್ಲಿದ್ದಾಗ ರಾಘವ ಸರ್ ಒಂದು ಕ್ಲಾಸ್ ರೂಮಿನಲ್ಲಿ ಪಾಠ ಮಾಡ್ತಿರಬಹುದು ಅಥವಾ ಸ್ಟಾಪ್ ರೂಮಿನಲ್ಲಿ ಪುಸ್ತಕ ಓದುತ್ತ ಕುಳಿತಿರಬಹುದು ಎಂದು ಇಡೀ ಕಾಲೇಜು ಹಾಸ್ಯ ಮಾಡುತ್ತಿತ್ತು. ರಾಘವ ಮಾತ್ರ ಯಾವದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ನೆಚ್ಚಿನ ಲೇಖಕರ ಪುಸ್ತಕಗಳ ಓದಿನಲ್ಲಿ ಮಗ್ನರಾಗಿ ಸುತ್ತಲಿನ ಜಗತ್ತನ್ನೆ ಮರೆಯುತ್ತಿದ್ದರು. 

    ಕಾರು ಬಸವೇಶ್ವರ ಸರ್ಕಲ್ ಸುತ್ತುಹಾಕಿ ಎಡಕ್ಕೆ ತಿರುಗಿ ಸಾಹಿತ್ಯ ಪ್ರಕಾಶನದ ಆವರಣವನ್ನು ಪ್ರವೇಶಿಸಿದಾಗ ದೂರದಿಂದಲೆ ಬಾಗಿಲಲ್ಲಿ ರಾಘವ ನಿಂತಿರುವುದು ಕಾಣಿಸಿತು. ನನ್ನನ್ನು ನೋಡುತ್ತಲೆ ಕಾರಿನ ಸಮೀಪ ಬಂದರು. ಬಿಳಿ ಪಾಯಿಜಾಮ ಜುಬ್ಬಾದಲ್ಲಿ ಎಂದಿಗಿಂತ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತಿದ್ದರು. ಸಾಹಿತ್ಯ ಪ್ರಕಾಶನದ ಕಟ್ಟಡ ಮಾವಿನ ತೋರಣ ಮತ್ತು ಹೂಗಳಿಂದ ಶೃಂಗಾರಗೊಂಡಿತ್ತು. ಪ್ರವೇಶ ದ್ವಾರದ ಬಳಿ ಬಣ್ಣದ ಚಿತ್ತಾರಗಳಿಂದ ಕಂಗೊಳಿಸುತ್ತಿದ್ದ ರಂಗೋಲಿ ಅತಿಥಿಗಳನ್ನು ಸ್ವಾಗತಿಸುತ್ತಿತ್ತು. ‘ಮೇಡಂ ಇನ್ನೇನು ಕಾರ್ಯಕ್ರಮ ಶುರುವಾಗುತ್ತೆ ನಿಮಗಾಗಿ ಫ್ರಂಟ್ ಸೀಟ್ ಕಾಯ್ದಿರಿಸಿದ್ದಿನಿ ಬನ್ನಿ’ ರಾಘವ ಅವಸರಿಸುತ್ತ ನನ್ನನ್ನು ವೇದಿಕೆಯ ಮುಂಭಾಗಕ್ಕೆ ಕರೆದೊಯ್ದು ಕೂರಿಸಿದರು. ‘ಸರ್ ನಿಮ್ಮ ಹೆಂಡತಿ ಎಲ್ಲಿ’ ನನ್ನ ಮಾತಿನಿಂದ ಕಳೆಗುಂದಿದ ರಾಘವ ಮುಖ ನೋಡಿ ಪ್ರಶ್ನೆ ಕೇಳಬಾರದಿತ್ತೇನೋ ಅನಿಸಿತು. 

     ಅತಿಥಿಗಳ ಭಾಷಣ ಮುಗಿದು ಪುಸ್ತಕ ಬಿಡುಗಡೆಯಾಗಿ ಕಾರ್ಯಕ್ರಮ ಮುಗಿಯುವ ಹೊತ್ತಿಗೆ ಮಧ್ಯಾಹ್ನ ಒಂದು ಗಂಟೆಯಾಗಿತ್ತು. ‘ಮೇಡಂ ನಿಮಗೆ’ ರಾಘವ ಕೊಟ್ಟ ಪುಸ್ತಕ ತೆರೆದು ನೋಡಿದೆ ‘ಆತ್ಮೀಯ ಮನಸ್ವಿನಿ ಮೇಡಮ್‍ಗೆ ಪ್ರೀತಿಯಿಂದ’ ಎನ್ನುವ ಮುದ್ದಾದ ಅಕ್ಷರಗಳ ಕೆಳಗೆ ‘ನಿಮ್ಮ ರಾಘವ’ ಎಂದಿತ್ತು. ಮನಸ್ಸು ತುಂಬಿ ಬಂದು ಮಾತಿಗಾಗಿ ತಡವರಿಸಿದೆ. ರಾಘವ ಕಣ್ಣಲ್ಲೂ ಹೊಳಪು. ಊಟ ಮಾಡಿಕೊಂಡೆ ಹೋಗಬೇಕೆಂದು ರಾಘವ ಒತ್ತಾಯಿಸಿದಾಗ ‘ಇಲ್ಲ ಸರ್ ಸ್ಕೂಲಿಂದ ಮಕ್ಕಳು ಬರೊ ಹೊತ್ತು. ನನಗಾಗಿ ಕಾಯ್ತಿರ್ತಾರೆ ನಾನು ಹೋಗ್ಬೇಕು’ ಗಡಿಬಿಡಿಸಿ ಕಾರಿನಕಡೆ ನಡೆದೆ. ಕಾರಿನವರೆಗೂ ಬಿಳ್ಕೊಡಲು ಬಂದ ರಾಘವ ‘ಮೇಡಂ ನಿಧಾನವಾದರೂ ಪರ್ವಾಗಿಲ್ಲ ಪುಸ್ತಕ ಓದಿ ನಿಮ್ಮ ಅಭಿಪ್ರಾಯ ಹೇಳಿ ಕಾಯ್ತಿರ್ತಿನಿ’ ಎಂದಾಗ ಪುಸ್ತಕದ ಮೇಲೆ ಮೃದುವಾಗಿ ಕೈಯಾಡಿಸಿ ಕಣ್ಣಲ್ಲೆ ಮೆಚ್ಚುಗೆ ಸೂಚಿಸಿದೆ. ರಾಘವ ಕಣ್ಣೊಳಗಿನ ಹೊಳಪು ಇನ್ನಷ್ಟು ಹೆಚ್ಚಿದಂತೆ ಕಾಣಿಸಿತು. ಕಾರು ಸಾಹಿತ್ಯ ಪ್ರಕಾಶನ ಆವರಣದ ಮೇನ್ ಗೇಟ್ ದಾಟಿ ಮುಖ್ಯರಸ್ತೆಗೆ ಬರುವವರೆಗೂ ರಾಘವ ಅಲ್ಲೇ ನಿಂತಿರುವುದು ಕಾರಿನ ಸೈಡ್ ಮಿರರ್‍ನಲ್ಲಿ ಕಾಣಿಸಿ ಕಣ್ಣುಗಳು ಹನಿಗೂಡಿದವು. 

    ಮನೆ ಒಳಗಡೆ ಕಾಲಿಡುತ್ತಿದ್ದಂತೆ ಪ್ರದೀಪ ಮತ್ತು ಮಕ್ಕಳ ಗಲಾಟೆ ನನ್ನನ್ನು ಸ್ವಾಗತಿಸಿತು. ‘ಅರೇ ಒಂದುವಾರ ಅಂತಹೇಳಿ ಮೂರೇ ದಿನಗಳಲ್ಲಿ ಹೈದರಾಬಾದಿನಿಂದ ಹಿಂದಿರುಗಿದ್ದಿರಿ’ ಎನ್ನುತ್ತ ವ್ಯಾನಿಟಿ ಬ್ಯಾಗನ್ನು ಟೀಪಾಯ್ ಮೇಲಿಟ್ಟು ಸೋಫಾಕ್ಕೆ ಒರಗಿದೆ. ‘ಕೆಲಸ ಬೇಗ ಮುಗೀತು. ಬೇರೆ ಇನ್ನೇನೂ ಕೆಲಸ ಇರ್ಲಿಲ್ಲ ಅಲ್ಲಿ. ಅದಕ್ಕೆ ಇವತ್ತೇ ಹೊರಟು ಬಂದೆ’ ಎಂದು ಉತ್ತರಿಸಿದ ಪ್ರದೀಪ ವ್ಯಾನಿಟಿ ಬ್ಯಾಗಿನಿಂದ ಅರ್ಧ ಹೊರಕ್ಕೆ ಕಾಣಿಸುತ್ತಿದ್ದ ಪುಸ್ತಕವನ್ನು ಕೈಗೆತ್ತಿಕೊಂಡು ಒಳಪುಟದ ಮೇಲೆ ಕಣ್ಣಾಡಿಸಿದರು. ನನ್ನೆದೆ ಢವಢವ ಎಂದು ಹೊಡೆದುಕೊಳ್ಳಲಾರಂಭಿಸಿತು. ‘ಏ ಮನು ರಾಘವ ನಿನ್ನನ್ನು ಲವ್ ಮಾಡ್ತಿರಬಹುದು ಅಂತ ಅನಿಸುತ್ತೆ’ ಪ್ರದೀಪ ಮಾತಿನಲ್ಲಿ ಛೇಡಿಸುವಿಕೆ ಇತ್ತೆ ವಿನ: ಯಾವುದೇ ಕೊಂಕಿರಲಿಲ್ಲ. ಪ್ರದೀಪ ಬೆನ್ನ ಮೇಲೊಂದು ಹುಸಿಎಟು ಹಾಕಿ ತೋಳಿಗೆ ಮುಖ ಉಜ್ಜಿದಾಗ ಇವತ್ತು ನಾನೇಕೋ ಎಂದಿನಂತಿಲ್ಲ ಎನ್ನುವ ಭಾವ ಉದಿಸಿ ಕಾಡಿದಂತಾಯಿತು. 

     ಕಳೆದ ಮೂರ್ನಾಲ್ಕು ತಿಂಗಳಿಂದ ರಾಘವ ಅವರು ನನ್ನನ್ನು ನೋಡುವ ರೀತಿಯಲ್ಲಿ ಏನೋ ಬದಲಾವಣೆ ಕಾಣಿಸುತ್ತಿದೆ. ಕಾಲೇಜಿನಲ್ಲಿ ನನ್ನನ್ನು ಹುಡುಕಿಕೊಂಡು ಬಂದು ಸಾಹಿತ್ಯದ ಕುರಿತು ಮಾತನಾಡುವುದು, ತಾವು ಓದಿದ ಪುಸ್ತಕಗಳನ್ನು ನನಗೆ ಓದಲು ಕೊಡುವುದು, ನಾನು ರಜೆ ಹಾಕಿ ಮರುದಿನ ಕಾಲೇಜಿಗೆ ಹೋದಾಗ ನನಗಾಗಿಯೇ ಕಾಯುತ್ತಿರುವರೇನೋ ಎನ್ನುವಷ್ಟು ಭಾವಪರವಶರಾಗುವುದು ಅವರ ಈ ವರ್ತನೆ ಕೆಲವೊಮ್ಮೆ ಅತಿ ಎನಿಸಿ ಮನಸ್ಸಿಗೆ ಕಿರಿಕಿರಿಯಾದರೂ ರಾಘವ ಅವರ ಜೊತೆಗಿನ ಈ ಒಡನಾಟ ನನ್ನಲ್ಲೂ ಒಂದಿಷ್ಟು ಲವಲವಿಕೆಗೆ ಕಾರಣವಾಗಿದೆ. ಸಂಕೋಚ ಸ್ವಭಾವದ ರಾಘವ ಅವರೇನೂ ನೇರವಾಗಿ ನನ್ನ ಗೆಳೆತನ ಬಯಸಿರಲಿಲ್ಲ. ಸ್ಟಾಫ್ ರೂಮಿನಲ್ಲಿ ಭೇಟಿಯಾದಾಗ ಹಾಯ್ ಹಲೋಗಳಿಗಷ್ಟೆ ನಮ್ಮ ಮಾತುಕತೆ ಸೀಮಿತವಾಗಿರುತಿತ್ತು. ವಾಟ್ಸಪ್ಪಿನಲ್ಲೊಮ್ಮೆ  ಕುವೆಂಪು ಅವರ ‘ತನವು ನಿನ್ನದು ಮನವು ನಿನ್ನದು’ ಕವಿತೆಯನ್ನು ರಾಘವ ಮೆಸೆಜಿಸಿದಾಗ ನಾನು ಮೆಚ್ಚಿ ಅವರ ಪರ್ಸನಲ್ ನಂಬರಿಗೆ ಅಭಿಪ್ರಾಯ ಕಳುಹಿಸಿದ್ದೆ. ಅವತ್ತಿನಿಂದ ರಾಘವ ಅವರಿಗೆ ನನಗೂ ಸಾಹಿತ್ಯದ ಕುರಿತು ಅಭಿರುಚಿಯಿದೆ ಎಂದು ಗೊತ್ತಾಗಿ ಸಮಯ ಸಿಕ್ಕಾಗಲೆಲ್ಲ ನನ್ನೊಡನೆ ಸಾಹಿತ್ಯದ ಕುರಿತು ಚರ್ಚಿಸುತ್ತಿದ್ದರು. ಕನ್ನಡ ಸಾಹಿತ್ಯವನ್ನು ತುಂಬ ಓದಿಕೊಂಡಿರುವ ರಾಘವ ಅವರೊಂದಿಗೆ ಮಾತನಾಡುವುದು ಮತ್ತು ಚರ್ಚಿಸುವುದು ನನ್ನಲ್ಲಿಯೂ ಕನ್ನಡ ಕಥೆ, ಕಾದಂಬರಿಗಳನ್ನು ಓದುವ ಆಸಕ್ತಿಯನ್ನು ಮೂಡಿಸಿತ್ತು. ನಿದ್ದೆ ಬಾರದೆ ಮಗ್ಗುಲು ಬದಲಿಸಿದಾಗ ‘ಮನು ಯಾಕೆ ನಿದ್ದೆ ಬರ್ತಿಲ್ವಾ’ ಪ್ರದೀಪ ಕೈನ ಬೆಚ್ಚನೆ ಸ್ಪರ್ಷದಿಂದ ವಾಸ್ತವಕ್ಕೆ ಮರಳಿದೆ. ‘ನನ್ಗೊತ್ತು ನೀನು ಏನನ್ನು ಚಿಂತಿಸ್ತಿದ್ದಿಯಾ ಅಂತ’ ಪ್ರದೀಪ ನುಡಿದಾಗ ಎದೆ ಝಲ್ ಎಂದು ಆ ಚಳಿಯಲ್ಲೂ ಮುಖದ ಮೇಲೆ ಬೆವರೊಡೆಯಿತು. ‘ಕಾಲೇಜಿನ ರಾಜಕೀಯವನ್ನ ತೀರ ತಲೆಗೆ ಹಚ್ಕೊಬೇಡ. ನೀನು ಕೊರ್ಗೊದಲ್ಲದೆ ಮನೆಯಲ್ಲಿ ಎಲ್ಲರನ್ನೂ ಕೊರಗಸ್ತಿಯಾ’ ಭಾರವೊಂದು ಇಳಿದಂತಾಗಿ ದೀರ್ಘವಾಗಿ ಉಸಿರೆಳೆದುಕೊಂಡೆ. ಪ್ರದೀಪ ಮತ್ತೆ ನಿದ್ದೆಗೆ ಜಾರಿದ್ದರು. ಯಾವ ಚಿಂತೆಯನ್ನು ತಲೆಗೆ ಹಚ್ಚಿಕೊಳ್ಳದೆ ತಾನಾಯ್ತು ತನ್ನ ಬಿಜಿನೆಸ್ ಆಯ್ತು ಎನ್ನುವ ಪ್ರದೀಪ ನಿಜಕ್ಕೂ ಸುಖ ಪುರುಷ. ರಾತ್ರಿ ನಿದ್ದೆ ಬರುವವರೆಗೂ ಕಥೆ ಇಲ್ಲವೆ ಕಾದಂಬರಿಯನ್ನು ಓದುತ್ತ ಕುಳಿತಾಗಲೆಲ್ಲ ಪ್ರದೀಪ ‘ಈ ಸಾಹಿತ್ಯ ಮನುಷ್ಯನನ್ನು ಸೆಂಟಿಮೆಂಟಲ್ ಫೂಲ್ ಆಗಿಸುತ್ತೆ. ತೀರ ಓದ್ಬೇಡ ಸ್ವಲ್ಪ ವ್ಯವಹಾರ ಜ್ಞಾನ ಇರಲಿ’ ಎಂದು ರೇಗಿಸುತ್ತಿದ್ದರು. ಈ ಸಾಹಿತ್ಯ, ನಾಟಕ, ಸಂಗೀತ ಇವುಗಳಿಂದ ಪ್ರದೀಪ ಬಲುದೂರ. ಆದರೆ ನನಗೆ ಚಿಕ್ಕಂದಿನಿಂದ ಈ ಸಂಗೀತ ಮತ್ತು ನೃತ್ಯದಲ್ಲಿ ಬಹಳ ಆಸಕ್ತಿ. ನನ್ನ ಆಸಕ್ತಿಯನ್ನು ಅರಿತ ಅಪ್ಪ ಚಿಕ್ಕಂದಿನಲ್ಲೆ ನನ್ನನ್ನ ಡ್ಯಾನ್ಸ್ ಕ್ಲಾಸಿಗೆ ಸೇರಿಸಿದ್ದರು. ಕಾಲೇಜಿಗೆ ಸೇರಿದ ಮೇಲೆ ಅಲ್ಲಿ ನಡೆಯುತ್ತಿದ್ದ ಸಾಹಿತ್ಯದ ಕಾರ್ಯಕ್ರಮಗಳಿಂದ ಕಥೆ ಕಾದಂಬರಿಗಳ ಓದಿನ ಹವ್ಯಾಸವೂ ಮೊಳಕೆಯೊಡೆದು ಬೆಳೆಯಿತು. ಈ ಕೆಲವು ತಿಂಗಳುಗಳಿಂದ ರಾಘವ ಸ್ನೇಹದಿಂದಾಗಿ ಸಾಹಿತ್ಯದ ಅಭಿರುಚಿ ಮತ್ತಷ್ಟು ಹೆಚ್ಚಿದೆ. 

     ರಾಘವ ನನಗೆ ತೀರ ಹತ್ತಿರವಾಗಲು ಇದರಲ್ಲಿ ಅವರಷ್ಟೇ ನನ್ನ ಪಾಲೂ ಇದೆ. ಇಡೀ ಮನೆಯಲ್ಲಿ ಪ್ರದೀಪಗಾಗಲಿ ಅಥವಾ ಮಕ್ಕಳಿಗಾಗಲಿ ಹಾಡು, ಡ್ಯಾನ್ಸ್, ಸಾಹಿತ್ಯದ ಅಭಿರುಚಿಯಿಲ್ಲ. ಪ್ರದೀಪ್‍ಗೆ ಆಫೀಸು ಮನೆ ಒಂದೇ ಎನ್ನುವಂತೆ ದಿನದ ಹೆಚ್ಚಿನ ಸಮಯ ಕಳೆಯೊದು ತಮ್ಮ ಬಿಜಿನೆಸ್‍ನಲ್ಲೆ. ಮಕ್ಕಳು ಸ್ಕೂಲಿಂದ ಮನೆಗೆ ಬಂದವರೆ ಹೋಂವರ್ಕ್, ಟ್ಯೂಷನ್, ಪಕ್ಕದ ಮನೆಯ ಮಕ್ಕಳೊಂದಿಗೆ ಆಟ, ಕಾರ್ಟೂನ್ ನೋಡೊದು ಹೀಗೆ ಅವರಿಗೆ ನನ್ನೊಂದಿಗೆ ಮಾತಾಡೊದಕ್ಕೂ ಟೈಮ್ ಸಿಗೊಲ್ಲ. ಒಮ್ಮೊಮ್ಮೆ ಕಥೆ ಹೇಳ್ತಿನಿ ಬನ್ನಿ ಎಂದು ಕರೆದರೆ ‘ಹೋಗಮ್ಮಾ ನಿನ್ನ ಓಬೆರಾಯನ ಕಾಲದ ಕಥೆಗಳನ್ನ ಯಾರ ಕೇಳ್ತಾರೆ’ ಎಂದು ಸಿಡಿಮಿಡಿ ಗುಟ್ಟುತ್ತಾರೆ. ಸಹಜವಾಗಿಯೇ ನನಗೂ ನನ್ನ ಅಭಿರುಚಿಗಳನ್ನ ಹಂಚಿಕೊಳ್ಳಲು ಒಂದು ಗೆಳೆತನ ಬೇಕಾಗಿತ್ತು. ನನ್ನದೆ ಅಭಿರುಚಿ ಇರುವವರನ್ನು ಮನಸ್ಸು ಹುಡುಕುತ್ತಿತ್ತು ಅಂತ ಕಾಣುತ್ತೆ. ಹೀಗೆ ಹುಡುಕಾಟದಲ್ಲಿ ರಾಘವ ಪರಿಚಯವಾಯಿತು. ಅಭಿರುಚಿ ಒಂದೇ ಇರುವುದರಿಂದ ಇಬ್ಬರ ನಡುವೆ ಸಹಜವಾಗಿಯೆ ಆತ್ಮೀಯತೆ ಬೆಳೆಯಿತು. ಆದರೆ ಈ ಆತ್ಮೀಯತೆಯನ್ನು ರಾಘವ ತಪ್ಪಾಗಿ ತಿಳಿದುಕೊಂಡರೇನೋ ಎನ್ನುವ ಭಾವ ಕಳೆದ ಕೆಲವು ದಿನಗಳಿಂದ ನನ್ನನ್ನು ಕಾಡುತ್ತಿದೆ. ಎರಡು ಮಕ್ಕಳ ತಾಯಿಯಾದರು ನನ್ನ ದೈಹಿಕ ಸೌಂದರ್ಯ ಇನ್ನು ಮಾಸಿಲ್ಲ. ಮದುವೆಯಾಗುವವರೆಗೂ ಡ್ಯಾನ್ಸ್ ಕ್ಲಾಸಿಗೆ ಹೋಗುತ್ತಿದ್ದ ಕಾರಣ ಬೊಜ್ಜಿಲ್ಲದೆ ಶರೀರ ನೀಳವಾಗಿದೆ. ಅಂದರೆ ರಾಘವ ಅವರದು ನನ್ನ ಮೇಲೆ ಇನ್‍ಫ್ಯಾಚುಯೇಷನ್ ಅನ್ಬಹುದಾ. ಛೀ ರಾಘವ ಅವರಂಥ ನಿಷ್ಕಲ್ಮಶ ಮನಸ್ಸಿನ ವ್ಯಕ್ತಿಯನ್ನು ಆ ದೃಷ್ಟಿಯಲ್ಲಿ ನೋಡೊದಕ್ಕೂ ಮನಸ್ಸು ಬರಲ್ಲ. ಕಳೆದ  ಗಣೇಶ ಚತುರ್ಥಿಗೆ ನಲ್ವತ್ಮೂರು ತುಂಬಿದ  ನನಗಿಂತ ರಾಘವ ನಾಲ್ಕು ವರ್ಷ ದೊಡ್ಡವರು. ಇಂಥ ವಯಸ್ಸಿನಲ್ಲಿ ಅದೆಂಥ ದೈಹಿಕ ಆಕರ್ಷಣೆ ಇರುತ್ತೆ. ಕಳೆದ ವಾರದ ಘಟನೆಯನ್ನು ನೆನಪಿಸಿಕೊಂಡರೆ ರಾಘವ ಅವರ ಬಗೆಗಿನ ನನ್ನ ಕಲ್ಪನೆಯೇ ತಪ್ಪು ಅನಿಸುತ್ತೆ. ಆ ದಿನ ಕಾಲೇಜಿನಲ್ಲಿ ಸೇಮಿನಾರ ಮುಗಿಸಿಕೊಂಡು ಮನೆಗೆ ಹೊರಟಾಗ ಆಕಾಶದ ತುಂಬೆಲ್ಲ ಮೋಡಗಳು ದಟ್ಟವಾಗಿ ಕವಿದು ಆಗಲೋ ಈಗಲೋ ಮಳೆ ಸುರಿಯುವಂತ ವಾತಾವರಣವಿತ್ತು. ಕಾಲೇಜಿನಿಂದ ಒಂದಿಷ್ಟು ದೂರ ಬಂದದ್ದೆ ಕಾರು ಕೆಟ್ಟು ನಿಂತು ಮಳೆ ಧೋ ಎಂದು ಸುರಿಯಲಾರಂಭಿಸಿತು. ಸುತ್ತಲೂ ಕತ್ತಲು ಗಂವ್ ಎಂದು ಕವಿದ ನಿರ್ಜನ ಪ್ರದೇಶವದು. ಮನೆಗೆ ಫೋನ್ ಮಾಡಬೇಕೆಂದರೆ ಅಂದು ಪ್ರದೀಪ್ ಬೇರೆ ಊರಲ್ಲಿರಲಿಲ್ಲ. ಸ್ವಲ್ಪ ಹೊತ್ತು ಕಾರಿನಲ್ಲೆ ಕುಳಿತವಳಿಗೆ ಎರಿಸಿದ ಗ್ಲಾಸಿನಿಂದ ಆಕೃತಿಯೊಂದು ನಿಧಾನವಾಗಿ ಬರುತ್ತಿರುವುದು ಅಸ್ಪಷ್ಟವಾಗಿ ಕಾಣಿಸಿ ಹೆದರಿಕೆಯಿಂದ ಇಡೀ ಮೈಯೆಲ್ಲ ಬೆವತು ಒದ್ದೆಯಾಯಿತು. ಹತ್ತಿರ ಬಂದ ವ್ಯಕ್ತಿ ಗ್ಲಾಸಿಗೆ ಬಡಿದು ಬಾಗಿಲು ತೆರೆಯುವಂತೆ ಹೇಳಿದಾಗ ಆದದ್ದಾಗಲಿ ಎಂದು ಬಾಗಿಲು ನೂಕಿದೆ. ಮೊಬೈಲ್ ಬೆಳಕಲ್ಲಿ ರಾಘವ ನಿಂತಿರುವುದು ಕಾಣಿಸಿ ಹೋದ ಜೀವ ಮತ್ತೆ ಮರಳಿ ಬಂದಂತಾಯಿತು. ‘ಯಾಕೆ ಮೇಡಂ ಕಾರು ರಿಪೇರಿನಾ. ಮನೆಗೆ ಹೋಗ್ತಿದ್ದೆ ನಿಮ್ಮದೆ ಕಾರು ಅಂತ ಅನುಮಾನ ಬಂದು ನೋಡಿದ್ರೆ ಒಳಗಡೆ ನೀವೆ ಇದ್ದಿರಾ. ಇಂಥ ಮಳೆನಲ್ಲಿ  ಮೆಕ್ಯಾನಿಕ್ ಸಿಗೊಲ್ಲ. ನೋಡಿ ಆಟೋ ಬರ್ತಿದೆ ನಿಮ್ಮನ್ನ ಮನೆವರೆಗೂ ತಲುಪಿಸಿ ನಾನು ಹೋಗ್ತಿನಿ. ನನ್ನ ಕೊಡೆ ಹಿಡ್ಕೊಳ್ಳಿ’ ಎಂದವರೆ ರಾಘವ ಬರುತ್ತಿದ್ದ ಆಟೋ ನಿಲ್ಲಿಸಿ ನನ್ನನ್ನು ಕೂಡಲು ಹೇಳಿದರು. ನನ್ನ ಪಕ್ಕ ಇನ್ನೊಬ್ಬರು ಕೂಡುವಷ್ಟು ಜಾಗವಿದ್ದರೂ ಸಂಕೋಚದಿಂದ ರಾಘವ ಮಳೆಯಲ್ಲಿ ನೆನೆಯುತ್ತಲೆ ಚಾಲಕನ ಹತ್ತಿರ ಕೂತು ಮನೆ ಅಡ್ರೆಸ್ ಹೇಳಿದರು. ಅಂದು ರಾಘವ ಸಮೀಪ ನಿಂತಿದ್ದಾಗ ಫಳ್ಳೆಂದು ಹೊಳೆದ ಮಿಂಚಿನ ಬೆಳಕಲ್ಲಿ ಅವರ ಕಣ್ಣಲ್ಲಿ ಕಂಡದ್ದು ಅದೆ ನಿಷ್ಕಲ್ಮಶ ನೋಟವನ್ನು. ಕಾಮನೆಯಾಗಲಿ ಪರಿಸ್ಥಿತಿಯ ಉಪಯೋಗವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳಬೇಕೆಂಬ ವಾಂಛೆಯಾಗಲಿ ಅಲ್ಲಿ ಇರಲಿಲ್ಲ. ಆದರೂ ಬೆಲ್ಲಕ್ಕೆ ಮುತ್ತುವ ಇರುವೆಗಳಂತೆ  ಮನಸ್ಸು ರಾಘವ ಸುತ್ತಲೆ ಸುತ್ತುತ್ತಿದೆ.  ಸರಿ ತಪ್ಪುಗಳ ಲೆಕ್ಕಾಚಾರದಲ್ಲಿ ಇಡೀ ರಾತ್ರಿ ನಿದ್ರೆ ಕೂಡ ಹತ್ತಿರ ಸುಳಿಯದೆ ಇನ್ನೇನು ಒಂದಿಷ್ಟು ಜೊಂಪು ಹತ್ತುವ ವೇಳೆಗೆ ಪೂರ್ವ ಕೆಂಪಾಗುತ್ತಿತ್ತು. 

          ಬೆಳೆಗ್ಗೆ ಕಾಲೇಜಿಗೆ ಹೋದಾಗ ಸ್ಟಾಫ್ ರೂಮಿನಲ್ಲಿ ಶಾಲಿನಿ ಹೇಳಿದ ವಿಷಯ ಕೇಳಿ ನನಗೆ ನಂಬಲೆ ಆಗಲಿಲ್ಲ. ರಾಘವ ಅವರಿಗೆ ಮೈಸೂರಿಗೆ ವರ್ಗವಾಗಿ ಅವರು ಎರಡು ದಿನಗಳ ಹಿಂದೆಯೆ ಮನೆಯ ಸಾಮಾನುಗಳನ್ನೆಲ್ಲ ಸಾಗಿಸಿ ಹೆಂಡತಿಯನ್ನು ತವರಿಗೆ ಕಳಿಸಿದ್ದರು. ಕಾಲೇಜಿನಲ್ಲಿನ ಕೆಲವು ಕೆಲಸಗಳನ್ನು ಪೂರ್ಣಗೊಳಿಸಿ ಇವತ್ತೆ ಸಾಯಂಕಾಲ ಮೈಸೂರಿಗೆ ಹೊರಟು ನಾಳೆಯೆ ಡ್ಯೂಟಿಗೆ ರಿಪೋರ್ಟ್ ಮಾಡ್ಕೊಬೇಕಂತೆ. ವಿಷಯ ತಿಳಿದು ನನಗೆ ಒಂದು ರೀತಿಯ ಅನಾಥ ಭಾವ ಕಾಡಲಾರಂಭಿಸಿತು. ಹಾಗಾದರೆ ನಿನ್ನೆ ಭೇಟಿಯಾದಾಗಲೇ ನನಗೇಕೆ ಈ ವಿಷಯ ತಿಳಿಸಲಿಲ್ಲ ಎಂದು ರಾಘವ ಮೇಲೆ ಕೋಪಬಂತು. ಅಷ್ಟರಲ್ಲಿ ರಾಘವ ನಾನಿದ್ದ ಕಡೆಯೆ ಬರುವುದು ಕಾಣಿಸಿ ಏನೂ ಗೊತ್ತಿಲ್ಲದವಳಂತೆ ಅವತ್ತಿನ ಪಾಠದ ತಯ್ಯಾರಿ ಕಡೆ ಗಮನಹರಿಸಿದೆ. ‘ಮೇಡಂ ನಿಮಗೂ ವಿಷಯ ಗೊತ್ತಾಗಿರಬಹುದು. ನಿನ್ನೆ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಗಡಿಬಿಡಿಯಲ್ಲಿ ನಿಮಗೆ ಹೇಳೊದಕ್ಕೆ ಆಗ್ಲಿಲ್ಲ. ಇವತ್ತು ಸಂಜೆ ಆರು ಗಂಟೆ ಟ್ರೇನ್‍ಗೆ ನಾನು ಮೈಸೂರಿಗೆ ಹೋಗ್ತಿದ್ದಿನಿ. ಅದಕ್ಕೆ ಮುಂಚೆ ಐದು ಗಂಟೆಗೆ ಪಾರ್ಕ್ ಹತ್ತಿರ ಸ್ವಲ್ಪ ಬಿಡುವು ಮಾಡ್ಕೊಂಡು ಬಂದ್ರೆ ನಿಮ್ಮ ಜೊತೆ ಒಂದಿಷ್ಟು ಮಾತನಾಡೊದಿದೆ. ಮೇಡಂ ದಯವಿಟ್ಟು ಬನ್ನಿ’ ಎಂದವರೆ ರಾಘವ ಬಿ.ಎ ಫೈನಲ್ ಇಯರ್ ಕ್ಲಾಸಿನ ಕಡೆ ಹೆಜ್ಜೆ ಹಾಕಿದರು. ಮನಸ್ಸು ನನ್ನ ನಿಯಂತ್ರಣದಲ್ಲಿಲ್ಲ ಎನ್ನುವ ಭಾವ ಮೂಡಿ ಕ್ಲಾಸಿನಲ್ಲಿ ಪಾಠ ಮಾಡಲು ಕೂಡ ಆಸಕ್ತಿಯಿಲ್ಲದೆ ಪ್ರಿನ್ಸಿಪಾಲರಿಗೆ ಹೇಳಿ ಮನೆಗೆ ಹೊರಟು ಬಂದೆ. ಪ್ರದೀಪ್ ಬಿಜಿನೆಸ್‍ಗೆಂದು ಚೆನ್ನೈಗೆ ಹೋಗಿದ್ದರು. ಸ್ಕೂಲಿನಿಂದ ಮಕ್ಕಳು ಬರಲು ಇನ್ನು ಸಮಯವಿತ್ತು. ಶಾರದಮ್ಮ ಮನೆಕೆಲಸ ಮುಗಿಸಿ ಹೊರಟು ಹೋಗಿದ್ದರು. ಇಡೀ ಮನೆ ಬಿಕೋ ಎನ್ನುತ್ತಿತ್ತು. ಅಳು ಒತ್ತರಿಸಿಬಂದು ದಿಂಬಿಗೆ ಮುಖ ಕೊಟ್ಟು ಮನಸ್ಸು ಹಗುರಾಗುವವರೆಗೂ ಅತ್ತೆ. ಹಾಗೆ ನಿದ್ದೆ ಹೋದವಳಿಗೆ ಶಾಲೆಯಿಂದ ಬಂದ ಮಕ್ಕಳ ಗಲಾಟೆಯಿಂದ ಎಚ್ಚರವಾಯಿತು. ಮಕ್ಕಳಿಬ್ಬರು ಸಾಯಂಕಾಲದ ತಿಂಡಿ ತಿಂದು ಟ್ಯೂಷನ್‍ಗೆ ಹೊರಟು ಹೋದರು. ಶಾರದಮ್ಮ ರಾತ್ರಿ ಅಡುಗೆಯ ಸಿದ್ಧತೆಯಲ್ಲಿದ್ದರು. ಗಡಿಯಾರ ನೋಡಿಕೊಂಡೆ ಸಮಯ ನಾಲ್ಕೂವರೆ. ರಾಘವ ಭೇಟಿಗೆ ಹೋಗಲೊ ಬೇಡವೊ ಎಂದು ಮನಸ್ಸು ಹೊಯ್ದಾಡಿತು. ಕೊನೆಪಕ್ಷ ರಾಘವ ಮನಸ್ಸಲ್ಲೇನಿದೆ ಎಂದಾದರು ತಿಳಿಯುತ್ತದೆ ಎಂದು ಎದ್ದು ಮುಖ ತೊಳೆದು ಸೀರೆ ಬದಲಿಸಿ ತೆಳುವಾಗಿ ಮೇಕಪ್ ಮಾಡಿಕೊಂಡು ಶಾರದಮ್ಮನವರಿಗೆ ಹೇಳಿ ಹೊರಬಂದೆ. 

         ರಾಘವ ನನಗಾಗಿ ಕಾಯುತ್ತ ನಿಂತಿದ್ದರು. ಇವತ್ತು ಅವರನ್ನು ನೇರವಾಗಿ ನೋಡಲು ಆಗದೆ ತುಂಬ ನರ್ವಸ್‍ನೆಸ್ ಅನ್ನಿಸತೊಡಗಿತು. ‘ಥ್ಯಾಂಕ್ಯು ಮೇಡಂ. ಎಲ್ಲಿ ಬರಲ್ವೇನೊ ಅಂದ್ಕೊಂಡಿದ್ದೆ’ ರಾಘವ ಧ್ವನಿ ಕಂಪಿಸುತ್ತಿತ್ತು. ಇಬ್ಬರು ಮರದ ನೆರಳಿನಲ್ಲಿ ಕುಳಿತುಕೊಂಡೆವು. ಅಲ್ಲಿ ನೆಲೆಸಿದ ಮೌನ ಅಸಹನೀಯವೆನಿಸಿ ನಾನೆ ಮಾತಿಗಾರಂಭಿಸಿದೆ ‘ಏನು ರಾಘವ ಸರ್ ಹೀಗೆ ಇದ್ದಕ್ಕಿದ್ದಂತೆ ಊರು ಬಿಟ್ಟು ಹೋಗ್ತಿರೊದು’ ಧ್ವನಿಯಲ್ಲಿನ ಕೋಪ ರಾಘವಗೆ ಅರ್ಥವಾಗಿ ಮಾತು ಹೇಗೆ ಆರಂಭಿಸಬೇಕೆಂದು ತೊಚದೆ ತಲೆ ತಗ್ಗಿಸಿದರು. ‘ಪ್ಲೀಜ್ ಏನಾದರು ಮಾತಾಡಿ ಹೀಗೆ ಸುಮ್ನೆ ಕುಳಿತರೆ ನನಗೇನು ಅರ್ಥವಾಗುತ್ತೆ’ ಒತ್ತಾಯಿಸಿದೆ. ರಾಘವ ಅವರ ಕಣ್ಣುಗಳು ಹನಿಗೂಡಿದ್ದು ನೋಡಿ ಹೊಟ್ಟೆಯಲ್ಲಿ ಸಂಕಟವಾಯಿತು. ‘ಮೇಡಂ ಚಿಕ್ಕ ವಯಸ್ಸಿನಿಂದ ಕಥೆ ಕಾದಂಬರಿಗಳನ್ನು ಓದುತ್ತ ಬೆಳೆದ ನಾನು ಭಾವಜೀವಿ. ಓದು, ನೌಕರಿ, ಕುಟುಂಬದ ಜವಾಬ್ದಾರಿ, ಮದುವೆ, ಸಂಸಾರ ಈ ಎಲ್ಲದರ ನಡುವೆಯೂ ಬದುಕನ್ನು ಸಹನೀಯವಾಗಿಸಿದ್ದು ನನ್ನೊಳಗಿನ ಈ ಸಾಹಿತ್ಯದ ಅಭಿರುಚಿ. ಆದರೆ ಈ ಸಮಾನ ಅಭಿರುಚಿ ಇರುವಂಥವರ ಸಂಪರ್ಕ ನನಗೆ ಸಿಕ್ಕಿದ್ದು ತುಂಬ ಕಡಿಮೆ ಮೇಡಂ. ಆಗಾಗ ಮನಸ್ಸು ಬೌದ್ಧಿಕ ಸಾಂಗತ್ಯ ಬಯಸುತ್ತಿತ್ತು. ಈ ಊರಿಗೆ ಬಂದಮೇಲೆ ನಿಮ್ಮೊಂದಿಗೆ ಆತ್ಮೀಯತೆ ಬೆಳೆದು ಮನಸ್ಸು ಬಯಸುತ್ತಿದ್ದ ಬೌದ್ಧಿಕ ಸಾಂಗತ್ಯ ನನಗೆ ನಿಮ್ಮಿಂದ ದೊರೆಯಿತು. ಕೆಲವೊಮ್ಮೆ ಅನಿಸುತ್ತಿತ್ತು ನಿಮ್ಮೊಂದಿಗೆ ಅತಿಯಾದ ಸಲುಗೆಯಿಂದ ನಡ್ಕೊಳ್ತಿದ್ದಿನಿ ಅಂತ. ನನ್ನ ನಡುವಳಿಕೆಯಿಂದ ನಿಮಗೆ ಹರ್ಟ್ ಆಗ್ಬಹುದು ಅಂತ ವಿವೇಕ ಎಚ್ಚರಿಸುತ್ತಿತ್ತು. ಆದರೆ ತೀರ ಭಾವಜೀವಿಯಾದ ನನಗೆ ನಿಮ್ಮೊಂದಿಗಿನ ಒಡನಾಟದಿಂದ ಹೊರಬರ್ಬೇಕು ಅಂದಷ್ಟು ಮತ್ತೆ ಮತ್ತೆ ನಿಮಗೆ ಹತ್ತಿರವಾಗುತ್ತಿದ್ದೆ. ಮೇಡಂ ನಿಮ್ಮೊಂದಿಗೆ ಕಳೆದ ಈ ಎಂಟು ತಿಂಗಳುಗಳು ನನ್ನ ಬದುಕಿನ ಅತಿ ಮಹತ್ವದ ಘಳಿಗೆಗಳು. ಇಷ್ಟು ಸಾಕು ಮೇಡಂ ಉಳಿದಿರುವ ಬದುಕನ್ನು ಅತ್ಯಂತ ಅರ್ಥಪೂರ್ಣವಾಗಿ ಕಳೆಯಲು. ನನ್ನಿಂದ ನಿಮಗೆ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ. ಹೀಗೆ ಪರಸ್ಪರ  ಗೌರವಿಸುತ್ತ, ಅಭಿಮಾನಿಸುತ್ತ ನಮ್ಮ ನಡುವಿನ ಸ್ನೇಹ ಪರಿಶುದ್ಧವಾಗಿ ಇರಲಿ ಮೇಡಂ.  ಹಾಂ ಮೇಡಂ ನನ್ನ ಪುಸ್ತಕ ಬಿಡುಗಡೆಯಾಗುವ ಸಂದರ್ಭದಲ್ಲೆಲ್ಲ ನಿಮ್ಮನ್ನ ನೆನಪಿಸಿಕೊಂಡು ಕಾಗದ ಬರಿತೀನಿ. ಬರೊದಕ್ಕೆ ಆಗದೆ ಇದ್ದರೂ ಶುಭಾಷಯ ಹೇಳೊದನ್ನ ಮಾತ್ರ ಮರಿಬೇಡಿ. ಮೇಡಂ ಬರ್ತಿನಿ’ ಎಂದು ರಾಘವ ಕೈಮುಗಿದಾಗ ಅವರ ಕೈಗಳನ್ನು ಮೃದುವಾಗಿ ಸ್ಪರ್ಷಿಸಿದೆ. ಆ ಸ್ಪರ್ಷದಲ್ಲಿ ನೂರೆಂಟು ಭಾವಗಳು ಮಿಳಿತಗೊಂಡು ಮನಸ್ಸು ಆರ್ದ್ರವಾಯಿತು. ಕಣ್ಣುಗಳು ಹನಿಗೂಡಿ ದೂರದಲ್ಲಿ ನಡೆದು ಹೋಗುತ್ತಿದ್ದ ರಾಘವ ಆಕೃತಿ ಮುಸುಕು ಮುಸುಕಾಗಿ ಕಾಣಿಸಿ ನನ್ನಿಂದ ಶಾಶ್ವತವಾಗಿ ದೂರಾದಂತೆ ಭಾಸವಾಯಿತು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Thursday, November 2, 2017

ಬರಹಗಾರರಿಗೊಂದು ಬಹಿರಂಗ ಪತ್ರ

ಕನ್ನಡದ ಎಲ್ಲ ಲೇಖಕರಿಗೆ ವಂದನೆಗಳು,
ಇದಕ್ಕಿಂದ್ದಂತೆ ಇಂಥದ್ದೊಂದು ಪತ್ರ ನೋಡಿ ದಯವಿಟ್ಟು ಬೆರಗಾಗದಿರಿ ಎಂದು ಮೊದಲೇ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ. ಕನ್ನಡ ಸಾಹಿತ್ಯದ ಒಬ್ಬ ಓದುಗನಾಗಿ ಇವತ್ತು ಸಾಹಿತ್ಯ ಕ್ಷೇತ್ರದಲ್ಲಿನ ಗುಂಪುಗಾರಿಕೆ, ಜಾತಿಪ್ರೇಮ, ಪ್ರಶಸ್ತಿ ಗೌರವಗಳಿಗಾಗಿ ಮಾಡುತ್ತಿರುವ ಲಾಭಿ, ಶಕ್ತಿ ರಾಜಕಾರಣದ ಓಲೈಕೆ, ಚಳವಳಿಗಳಿಗೆ ವಿಮುಖರಾಗುತ್ತಿರುವುದು, ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಪ್ರಾಪ್ತವಾಗಿರುವ ರಾಜಕೀಯದ ಖದರು ಈ ಎಲ್ಲವುಗಳು ನಾನು ಅತಿ ಹತ್ತಿರದಿಂದ ನೋಡಿ ಅನುಭವಕ್ಕೆ ಬಂದ ಸಂಗತಿಗಳು. ಬರವಣಿಗೆಯೊಂದನ್ನು ಬಿಟ್ಟು ನಮ್ಮ ಬರಹಗಾರರು ಈ ಮೇಲೆ ಹೇಳಿದ ವಿಭಿನ್ನ ದಾರಿಗಳನ್ನು ಹಿಡಿದಿರುವುದರಿಂದ ಕನ್ನಡ ಸಾಹಿತ್ಯ ತನ್ನ ಮೊದಲಿನ ಪ್ರಖರತೆಯನ್ನು ಕಳೆದುಕೊಂಡಿದೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ. ಈ ಸಂದರ್ಭ ನಮ್ಮ ಬರಹಗಾರರಿಗೆ ನಾನು ನೊಬೆಲ್ ಪ್ರಶಸ್ತಿ ಪುರಸ್ಕೃತ ಲೇಖಕ ಮಾರಿಯೋ ವರ್ಗಾಸ್ ಯೋಸಾನ ಸಾಹಿತ್ಯದ ಕುರಿತಾದ ಅಭಿಪ್ರಾಯವನ್ನು ನೆನಪಿಸಲು ಬಯಸುತ್ತೇನೆ. ಯೋಸಾ ಸಾಹಿತ್ಯದ ಮಹತ್ವವನ್ನು ಹೀಗೆ ಹೇಳುತ್ತಾನೆ “ಬಹುಕಾಲ ಬಾಳುವಂಥ ಯಾವುದನ್ನು ರಾಜಕಾರಣ ಮಾಡಲಾಗುವುದಿಲ್ಲವೋ ಅದನ್ನು ಸಾಹಿತ್ಯ ಮಾಡಬೇಕು. ಲೇಖಕ ಕೇವಲ ವರ್ತಮಾನಕ್ಕಾಗಿ ಮಾತ್ರ ಪುಸ್ತಕ ಬರೆಯುವುದಿಲ್ಲ. ಟೀಕಿಸುವ ಮೂಲಕವೋ ತಮ್ಮ ಆಲೋಚನೆಗಳನ್ನು ಬಳಸಿ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮೂಲಕವೋ ಲೇಖಕರಾದವರು ಕಾರ್ಯಪ್ರವೃತ್ತರಾಗುವುದು ತುಂಬಾ ಮುಖ್ಯ. ಕೆಲವು ಸಂದರ್ಭಗಳಲ್ಲಿ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಬೇಕಾಗಿ ಬರುವಂಥ ಯಾವುದೇ ಅಭಿಪ್ರಾಯಕ್ಕೂ ಲೇಖಕ ಜಗ್ಗ ಕೂಡದು. ಒಂದು ಅಗತ್ಯದಂತೆ ಲೇಖಕರು ತಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕು. ನನ್ನ ಅಂತ:ಸಾಕ್ಷಿ ತುಂಬಾ ಗಡಸಾದದ್ದು. ಸಾಯುವ ಕೊನೆಯ ದಿನದವರೆಗೂ ನಾನು ಬರೆಯಬಲ್ಲೆ ಅನ್ನೊದು ನನಗೆ ಗೊತ್ತು. ಬರವಣಿಗೆಯೇ  ನನ್ನ ಧರ್ಮ ಬರವಣಿಗೆಯೇ  ನನ್ನ ಬದುಕು”. 

ಈಗ ನಾನು ಮತ್ತೆ ನಮ್ಮ ಲೇಖಕರ ವಿಷಯಕ್ಕೆ ಬರುತ್ತೇನೆ. ಯೋಸಾನಂತೆ ಬರವಣಿಗೆಯೇ  ಧರ್ಮ ಮತ್ತು ಬರವಣಿಗೆಯೇ  ಬದುಕು ಎಂದು ಭಾವಿಸಿರುವ ಲೇಖಕರ ಸಂಖ್ಯೆ ಕನ್ನಡ ಭಾಷೆಯಲ್ಲಿ ಎಷ್ಟಿದೆ?. ಜೊತೆಗೆ ತಮ್ಮ ಸ್ವಾತಂತ್ರ್ಯ ಮತ್ತು ಸ್ವಂತದ ಅಭಿಪ್ರಾಯವನ್ನು ಕಾಪಾಡಿಕೊಂಡಿರುವ ಬರಹಗಾರರು ನಮ್ಮಲ್ಲಿರುವರೇ ಎನ್ನುವ ಪ್ರಶ್ನೆ ನನ್ನದು. ಈ ಮಾತನ್ನು ನಾನು ಹೇಳಲು ಕಾರಣ ಇವತ್ತಿನ ಬಹುಪಾಲು ಯುವ ಲೇಖಕರಿಗೆ ತಮ್ಮ ಸ್ವಂತದ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶವಿಲ್ಲದಂತೆ ಕನ್ನಡ ಸಾಹಿತ್ಯ ಕ್ಷೇತ್ರ ಎಡಪಂಥೀಯ ಮತ್ತು ಬಲಪಂಥೀಯ ಎಂದು ಎರಡು ಗುಂಪುಗಳಾಗಿ ವಿಭಜನೆಗೊಂಡಿದೆ. ಹೀಗಾಗಿ ಲೇಖಕನಾದವನು ಯಾವುದಾದರೂ ಒಂದು ಗುಂಪಿನೊಂದಿಗೆ ಗುರುತಿಸಿಕೊಳ್ಳಬೇಕಾದ ಮತ್ತು ಆ ಗುಂಪಿನ ವಿಚಾರಗಳಲ್ಲೇ ತನ್ನ ಬರವಣಿಗೆಯನ್ನು ರೂಪಿಸಿಕೊಳ್ಳುವ ಅನಿವಾರ್ಯತೆಗೆ ಒಳಗಾಗಿರುವನು. ಹೀಗಾಗಿ ಇವತ್ತಿನ ಈ ವಾತಾವರಣದಲ್ಲಿ ಲೇಖಕನಾದವನು ನಿರ್ಧಿಷ್ಟ ಸಿದ್ಧಾಂತಗಳ ಕೈಗೊಂಬೆಯಾಗಿರುವನು. ಆತನಿಗೆ ತನ್ನ ಸ್ವಂತದ ಅಭಿಪ್ರಾಯವನ್ನಾಗಲಿ ಇಲ್ಲವೇ ಅನಿಸಿಕೆಯಾಗಲಿ ವ್ಯಕ್ತಪಡಿಸುವ ಸ್ವಾತಂತ್ರ್ಯ ಇಲ್ಲವಾಗಿದೆ. ನಮ್ಮ ವಿಶ್ವವಿದ್ಯಾಲಯಗಳಂತೂ ಮುಕ್ತ ಮನಸ್ಸಿನ ಬರಹಗಾರರನ್ನು ರೂಪಿಸುವುದಕ್ಕಿಂತ ಇಂಥದ್ದೆ ತತ್ವ ಮತ್ತು ಸಿದ್ಧಾಂತಗಳಿಗೆ ಬದ್ಧರಾಗಿ ಬರೆಯುವ ಲೇಖಕರನ್ನು ಹುಟ್ಟಿಸುತ್ತಿವೆ. ವಿಶ್ವವಿದ್ಯಾಲಯಗಳಲ್ಲಿ ಮೊಳಕೆಯೊಡೆಯುತ್ತಿರುವ ಇಂಥ ಲೇಖಕರನ್ನು ರಾಜಕೀಯ ಪಕ್ಷಗಳು ತಮ್ಮ ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿರುವುದರಿಂದ ನಮ್ಮ ಯುವ ಲೇಖಕರು ಬಹುಬೇಗ ಬುದ್ಧಿಜೀವಿಗಳಾಗಿಯೋ ಅಥವಾ ರಾಜಕಾರಣಿಗಳಾಗಿಯೋ ಪರಿವರ್ತನೆ ಹೊಂದುತ್ತಿರುವರು. ಕಮೂ, ಕಾಫ್ಕಾ, ಮಾರ್ಕ್ಸನನ್ನು  ಓದಿಕೊಂಡವರೆಲ್ಲ ಕ್ರಮೇಣ ತಮ್ಮ ಸಾಹಿತ್ಯಕ ಬದುಕಿಗೆ ವಿಮುಖರಾಗಿ ಜನನಾಯಕರ ಪರಿವೇಷದಲ್ಲಿ ಕಾಣಿಸಿಕೊಳ್ಳುತ್ತಿರುವರು. ಅಚ್ಚರಿಯ ಸಂಗತಿ ಎಂದರೆ ತನ್ನ ಬರವಣಿಗೆಯನ್ನು ತಾನು ಬದುಕುತ್ತಿರುವ ವ್ಯವಸ್ಥೆಯ ವಿರುದ್ಧದ ಹೋರಾಟವೆಂದು ನಂಬಿದ್ದ ಕಮೂನನ್ನು ಆದರ್ಶವಾಗಿಟ್ಟುಕೊಂಡು ಬರವಣಿಗೆಯನ್ನು ರೂಢಿಸಿಕೊಂಡ ನಮ್ಮ ಬಹುಪಾಲು ಲೇಖಕರು ಅದೇ ವ್ಯವಸ್ಥೆಯ ಒಂದು ಭಾಗವಾದದ್ದು ಮತ್ತು ಆಸ್ಥಾನಕವಿಗಳಾಗಿ ರೂಪಾಂತರ ಹೊಂದಿದ್ದು. ಬರವಣಿಗೆಯನ್ನುವುದು ಒಂದರ್ಥದಲ್ಲಿ ನಮ್ಮ ಲೇಖಕರಿಗೆ ಒಂದು ಹಸನಾದ ಬದುಕನ್ನು ಕಟ್ಟಿಕೊಳ್ಳುವ ಪ್ರಕ್ರಿಯೆಯಾಗಿದೆ.

ಇನ್ನು ನನ್ನನ್ನು ಕಾಡುತ್ತಿರುವ ಇನ್ನೊಂದು ಮಹತ್ವದ ಪ್ರಶ್ನೆ ಅದು ಬರವಣಿಗೆಯ ಶ್ರೇಷ್ಠತೆಯ ಮಾನದಂಡವೇನು ಎನ್ನುವುದು. ಕೃತಿಯೊಂದರ ಶ್ರೇಷ್ಠತೆ ಅದನ್ನು ಓದುಗವರ್ಗ ಹೇಗೆ ಸ್ವೀಕರಿಸಿದೆ ಎನ್ನುವುದೋ ಅಥವಾ ಕೃತಿಗೆ ದೊರೆತ ಪ್ರಶಸ್ತಿ ಪುರಸ್ಕಾರವೋ ಎನ್ನುವ ಜಿಜ್ಞಾಸೆ ಅನೇಕರದು. ಜೊತೆಗೆ ವಿಮರ್ಶಾಲೋಕ ಕೃತಿಯೊಂದನ್ನು ಮೆಚ್ಚಿಕೊಂಡಲ್ಲಿ ಅದನ್ನು ಶ್ರೇಷ್ಠ ಅಥವಾ ಜನಪ್ರಿಯ ಕೃತಿ ಎಂದು ಪರಿಗಣಿಸಬೇಕೇ ಎನ್ನುವ ಪ್ರಶ್ನೆ ಕೂಡ ಈ ಸಂದರ್ಭ ಎದುರಾಗುತ್ತದೆ. ಇನ್ನು ಪ್ರಶಸ್ತಿ ಮತ್ತು ವಿಮರ್ಶೆ ಕುರಿತು ಚರ್ಚಿಸುವುದಾದರೆ ಪ್ರತಿವರ್ಷ ಪ್ರಕಟವಾಗುತ್ತಿರುವ ಪುಸ್ತಕಗಳಲ್ಲಿ ಎಷ್ಟು ಪುಸ್ತಕಗಳು ಪ್ರಶಸ್ತಿಯ ಗೌರವಕ್ಕೆ ಪಾತ್ರವಾಗುತ್ತಿವೆ ಮತ್ತು ವಿಮರ್ಶಕರ ಕಣ್ಣಿಗೆ ಗೋಚರಿಸುತ್ತಿವೆ ಎನ್ನುವ ಮತ್ತೊಂದು ಪ್ರಶ್ನೆ ದುತ್ತನೆ ಎದುರಾಗುತ್ತದೆ. ಲೇಖಕ ತಿರುಮಲೇಶ ಅವರು ಹೇಳುವಂತೆ ಓದಲು ಯೋಗ್ಯವಾದದ್ದೆಲ್ಲವೂ ಮುಖ್ಯ ವಾಹಿನಿಯಲ್ಲಿ ಕಾಣಿಸಿಕೊಳ್ಳದೆ ಹೋಗಬಹುದು.  ಹಾಗಾದರೆ ಪ್ರಶಸ್ತಿ ಪಡೆಯದ ಮತ್ತು ವಿಮರ್ಶೆಗೆ ಒಳಗಾಗದ ಇನ್ನು ಮುಂದುವರೆದು ಹೇಳುವುದಾದರೆ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳದೇ ಹೋದ ಕೃತಿಗಳೆಲ್ಲವೂ ಓದಲು ಯೋಗ್ಯವಲ್ಲ ಎನ್ನುವ ನಿರ್ಧಾರವನ್ನು ಓದುಗವರ್ಗ ತಳೆಯುವುದು ಎಷ್ಟು ಸಮಂಜಸ. ಕೃತಿಯೊಂದಕ್ಕೆ ದೊರೆಯುವ ಪ್ರಶಸ್ತಿಯಾಗಲಿ ಅಥವಾ ಪುಸ್ತಕದ ಕುರಿತು ಮೂಡಿ ಬರುವ ವಿಮರ್ಶೆಯಾಗಲಿ ಅವು ಅನೇಕ ಸಂದರ್ಭಗಳಲ್ಲಿ ಅನುಮಾನಗಳಿಗೆ ಒಳಗಾಗಿವೆ. ರಾಜಕಾರಣಿಗಳ ಮತ್ತು ಅಧಿಕಾರಿ ವರ್ಗದ ಬೆನ್ನು ಬಿದ್ದು ತಮ್ಮ ಕೃತಿಗಳಿಗೆ ಪ್ರಶಸ್ತಿ ಪಡೆದು ಧನ್ಯತಾಭಾವ ಅನುಭವಿಸುವ ಲೇಖಕರ ದಂಡೆ ನಮ್ಮಲ್ಲಿದೆ. ಜೊತೆಗೆ ಇವತ್ತು ಸಾಹಿತ್ಯ ಕ್ಷೇತ್ರದಲ್ಲಿ ವಿಮರ್ಶೆ ಎನ್ನುವುದು ಕೊಟ್ಟು ತೆಗೆದುಕೊಳ್ಳುವ ವಹಿವಾಟಾಗಿದೆ. ಅದೆಷ್ಟೋ ಲೇಖಕರು ವಿಮರ್ಶಕರಿಂದ ತಮ್ಮ ಪುಸ್ತಕಕ್ಕೆ ಅನುಕೂಲವಾಗುವಂತೆ ವಿಮರ್ಶೆಯನ್ನು ಬರಿಸಿಕೊಂಡು ಅದನ್ನೇ ಪುಸ್ತಕ ಮಾರಾಟದ ಮತ್ತು ಪ್ರಶಸ್ತಿಯ ಬಂಡವಾಳ ಮಾಡಿಕೊಳ್ಳುವುದು ಗುಟ್ಟಿನ ವಿಷಯವೇನಲ್ಲ. ವಿಮರ್ಶಕರು ಕೂಡ ಎಡ ಮತ್ತು ಬಲ ಎಂದು ಪ್ರತ್ಯೇಕ ಗುಂಪುಗಳಾಗಿ ಒಡೆದುಹೋಗಿರುವುದರಿಂದ ಆಯಾ ವರ್ಗದ ವಿಮರ್ಶಕರು ತಮ್ಮ ವರ್ಗದ ಲೇಖಕರ ಕೃತಿಗಳನ್ನು ಹಾಡಿ ಹೊಗಳುವುದು ಮತ್ತು ವಿರುದ್ಧ ವರ್ಗದ ಲೇಖಕರ ಕೃತಿಗಳನ್ನು ವಿನಾಕಾರಣ ಟೀಕಿಸುವುದು ಸಾಮಾನ್ಯ ಸಂಗತಿಯಾಗಿದೆ. ಕೆಲವೊಮ್ಮೆ ವಿಮರ್ಶಕರಿಂದಲೇ ಸಾಮಾನ್ಯವೆನ್ನುವಂಥ ಕೃತಿಗಳು ಸಹ ಶ್ರೇಷ್ಠ ಕೃತಿಗಳೆಂಬ ಮನ್ನಣೆಗೆ ಪಾತ್ರವಾಗಿ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನವಾದ ಅನೇಕ ಉದಾಹರಣೆಗಳಿವೆ. ಪರಿಸ್ಥಿತಿ ಹೀಗಿರುವಾಗ ಸಾಹಿತ್ಯ ಕೃತಿಯೊಂದರ ಗುಣಾವಗುಣಗಳನ್ನು ನಿರ್ಧರಿಸುವಲ್ಲಿ ಓದುಗರ ಪಾತ್ರವೇನು ಎನ್ನುವ ಪ್ರಶ್ನೆ ಮೂಡುವುದು ಸಹಜವಾಗಿದೆ. ಲೇಖಕ ಕೆ.ಸತ್ಯನಾರಾಯಣ ತಮ್ಮ ಲೇಖನವೊಂದರಲ್ಲಿ ಹೀಗೆ ಹೇಳುತ್ತಾರೆ ‘ಮನುಷ್ಯರಾದ ನಮ್ಮೆಲ್ಲರೂ ನಮ್ಮ ಕಾಲದ ಸಾಮಾಜಿಕ ವ್ಯಕ್ತಿತ್ವವಿರುವಂತೆ ಎಲ್ಲ ಕಾಲಕ್ಕೂ ಸೇರಿದ ಸಾಮಾಜಿಕ-ರಾಜಕೀಯ ಪ್ರಭಾವಗಳಿಂದ ದೂರವಾದ ಪುಟ್ಟದಾದ ಆದರೆ ಅನೂಹ್ಯವಾದ ಒಂದು ಸಣ್ಣ ಜಾಗವೂ ಇರುತ್ತದೆ. ಇದನ್ನು ಓದುಗನ solitude ಎಂದು ಗುರುತಿಸುತ್ತಾರೆ. ಈ ಅನೂಹ್ಯ ಜಾಗದಲ್ಲಿ ಪುಳಕ ಹುಟ್ಟಿಸುವ ಕೃತಿಗಳು ಮಾತ್ರ ನಿಜವಾದ ಕಲಾಕೃತಿಗಳು’. ಹೀಗೆ ಓದುಗನ ಏಕಾಂತವನ್ನು ಪ್ರವೇಶಿಸಬಲ್ಲ ಕೃತಿಗಳು ಮಾತ್ರ ದೊಡ್ಡ ಪಲ್ಲಟಗಳಿಗೆ ಮತ್ತು ಜಿಗಿತಕ್ಕೆ ಕಾರಣವಾಗುತ್ತವೆ ಎಂದು ಅವರು ನುಡಿಯುತ್ತಾರೆ. ಹಾಗಾದರೆ ಕೃತಿಯೊಂದರ ಶ್ರೇಷ್ಠತೆಯ ಮಾನದಂಡ ಅದು ಓದುಗನಿಂದ ಪಡೆಯುವ ಮೆಚ್ಚುಗೆ ಎನ್ನುವ ಸತ್ಯವನ್ನು ನಮ್ಮ ಲೇಖಕರು ಮರೆಯುತ್ತಿರುವುದೇಕೆ?.

ಕನ್ನಡ ಭಾಷೆಯಲ್ಲಿ ಆತ್ಮಕಥನಗಳು ಮತ್ತು ಅಭಿನಂದನಾ ಗ್ರಂಥಗಳು ಪ್ರತಿವರ್ಷ ಸಾಕಷ್ಟು ಸಂಖ್ಯೆಯಲ್ಲಿ ಪ್ರಕಟವಾಗುತ್ತಿವೆ. ಆತ್ಮಕಥನಗಳು ಮತ್ತು ಅಭಿನಂದನಾ ಗ್ರಂಥಗಳು ಓಂದು ಕಾಲಘಟ್ಟದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಬದುಕನ್ನು ಕಟ್ಟಿಕೊಡಬೇಕು. ಒಂದುರೀತಿಯಲ್ಲಿ ಈ ಪ್ರಕಾರದ ಸಾಹಿತ್ಯ ಕೃತಿಗಳು ಮುಂದಿನ ಜನಾಂಗಕ್ಕೆ ಅಧ್ಯಯನಕ್ಕೆ ಅಗತ್ಯವಾದ ಮಾಹಿತಿಯನ್ನೊದಗಿಸುವ ಆಕರ ಗ್ರಂಥಗಳಾಗಬೇಕು. ಆದರೆ ಸಧ್ಯ ಪ್ರಕಟವಾಗುತ್ತಿರುವ ಆತ್ಮಕಥನಗಳು ಮತ್ತು ಅಭಿನಂದನಾ ಗ್ರಂಥಗಳು ವ್ಯಕ್ತಿಕೇಂದ್ರಿತವಾಗಿ, ಹೊಗಳಿಕೆ ಹಾಗೂ ಸ್ವಹೊಗಳಿಕೆಯ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿವೆ. ಸಾಮಾನ್ಯವಾಗಿ ಆತ್ಮಕಥನವನ್ನು ಬರೆದುಕೊಳ್ಳುವ ವ್ಯಕ್ತಿಗೆ ತನ್ನ ಗುಣಾವಗುಣಗಳನ್ನು ಹೇಳುವ ಧೈರ್ಯ ಮತ್ತು ಸ್ವವಿಮರ್ಶೆಗೆ ಒಳಗಾಗುವ ಮನೋಭಾವಬೇಕು. ಶಿವರುದ್ರಪ್ಪನವರು ಆತ್ಮಕಥನವನ್ನು ಕುರಿತು ಒಂದು ಕಡೆ ಹೀಗೆ ಹೇಳುತ್ತಾರೆ `ತನ್ನ ಬದುಕಿನ ಒಂದು ಹಂತದಲ್ಲಿ ಒಬ್ಬ ವ್ಯಕ್ತಿ ತನ್ನ ಜೀವನವನ್ನು ತಾನೇ ಅವಲೋಕಿಸಿಕೊಂಡು, ನೇರವಾಗಿ ಬರೆದುಕೊಳ್ಳುವ ಆತ್ಮ ಕಥನ ಎಂಬ ಈ ಪ್ರಕಾರ ಕನ್ನಡಕ್ಕೆ ಹೊಸತು. ಆತ್ಮ ಕಥನವನ್ನು ಬರೆಯುವುದು ತೀರಾ ಕಷ್ಟದ ಕೆಲಸ. ಆತ್ಮ ಕಥೆಯನ್ನು ಬರೆಯಲು ಮುಖ್ಯವಾಗಿ ನೈತಿಕ ಧೈರ್ಯ ಬೇಕು. ತನ್ನ ಬದುಕನ್ನು ತಾನೇ ಪರೀಕ್ಷಿಸಿಕೊಳ್ಳುವ ಧೈರ್ಯ ಬೇಕು. ತನ್ನ ಇತಿ ಮಿತಿಗಳನ್ನು ಕುರಿತ ವಿವೇಚನೆ ಬೇಕು. ಮುಚ್ಚು ಮರೆಯ ಮನಸ್ಸು ನಿಜವಾದ ಆತ್ಮಕಥೆಯನ್ನು ಬರೆದುಕೊಳ್ಳಲಾರದು’. ನನ್ನ ಓದಿನ ಅನುಭವವನ್ನು ಆಧರಿಸಿ ಹೇಳುವುದಾದರೆ ಕನ್ನಡದಲ್ಲಿ ಪ್ರಕಟವಾದ ಬಹಳಷ್ಟು ಆತ್ಮಕಥೆಗಳಲ್ಲಿ ವಾಸ್ತವಿಕೆತೆ ಎನ್ನುವುದು ಮರೆಯಾಗಿ ಅಲ್ಲೆಲ್ಲ ಕಲ್ಪನೆ ಮತ್ತು ಸ್ವಹೊಗಳಿಕೆಯೇ  ಮುನ್ನೆಲೆಗೆ ಬಂದಿರುವುದು. ಕೆಲವೊಮ್ಮೆ ಆತ್ಮಕಥೆಯ ಕಥಾನಾಯಕ ತನ್ನ ಸಾಮಾಜಿಕ ಮತ್ತು ವೈಯಕ್ತಿಕ ಬದುಕಿಗೆ ಎರವಾಗಬಲ್ಲ ಘಟನೆಗಳನ್ನು ಹೇಳುವಾಗ ಅಲ್ಲೆಲ್ಲ ಸತ್ಯವನ್ನು ಮರೆಮಾಚಿ ತಾನು ಆತ್ಮವಂಚನೆಗೆ ಒಳಗಾಗುವುದರೊಂದಿಗೆ ಓದುಗರನ್ನು ಕೂಡ ವಂಚಿಸುತ್ತಾನೆ. ಹೀಗಾಗಿ ಆತ್ಮಕಥೆಗಳಲ್ಲಿ ಅವುಗಳ ನಾಯಕರು ಅತ್ಯಂತ ವರ್ಣರಂಜಿತ ವ್ಯಕ್ತಿಗಳಾಗಿ ಬೆಳ್ಳಿತೆರೆಯ ನಾಯಕರುಗಳಂತೆ ಕಾಣಿಸಿಕೊಳ್ಳುವುದೇ ಹೆಚ್ಚು. ಈಗೀಗ ಪ್ರತಿಯೊಬ್ಬ ಲೇಖಕರಿಗೂ ಒಂದಲ್ಲ ಒಂದುಹಂತದಲ್ಲಿ ತಮ್ಮ ಬದುಕಿನ ಕುರಿತು ಆತ್ಮಕಥೆಯನ್ನು ಬರೆದುಕೊಳ್ಳುವ ವಾಂಛೆ ಹೆಚ್ಚುತ್ತಿದೆ. ಪರಿಣಾಮವಾಗಿ ಪ್ರತಿವರ್ಷ ಸಾಕಷ್ಟು ಸಂಖ್ಯೆಯಲ್ಲಿ ಕನ್ನಡ ಭಾಷೆಯಲ್ಲಿ ಆತ್ಮಕಥೆಗಳು ಪ್ರಕಟವಾಗುತ್ತಿವೆ. ಹಾಗೆಂದು ಎಲ್ಲ ಆತ್ಮಕಥೆಗಳನ್ನು ಅನುಮಾನದ ದೃಷ್ಟಿಯಿಂದ ನೋಡುವುದು ಕೂಡ ಸರಿಯಲ್ಲ. ಹೋರಾಟದ ಹಾದಿ, ಸುರಗಿಯಂಥ ಕೆಲವು ಆತ್ಮಕಥೆಗಳು ಒಂದು ಕಾಲದ ಬದುಕನ್ನು ಅತ್ಯಂತ ಅರ್ಥಪೂರ್ಣವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿವೆ. ಇನ್ನು ಅಭಿನಂದನಾ ಗ್ರಂಥಗಳ ವಿಷಯಕ್ಕೆ ಬಂದರೆ ಪ್ರತಿ ವರ್ಷ ರಾಶಿ ರಾಶಿ ಅಭಿನಂದನಾ ಗ್ರಂಥಗಳು ಕನ್ನಡ ಭಾಷೆಯಲ್ಲಿ ಪ್ರಕಟವಾಗುತ್ತಿದ್ದು ಅವುಗಳಲ್ಲಿ ಜೊಳ್ಳೆ ಹೆಚ್ಚು. ದೈಹಿಕ ವಯೋಮಾನವನ್ನೇ ಮಾನದಂಡವಾಗಿಟ್ಟುಕೊಂಡು ಅಭಿನಂದನಾ ಗ್ರಂಥಗಳನ್ನು ಪ್ರಕಟಿಸುತ್ತಿರುವುದರಿಂದ ಅವುಗಳಿಂದ ಒಂದು ಕಾಲಘಟ್ಟದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ಥಿತ್ಯಂತರವನ್ನು ನಿರೀಕ್ಷಿಸುವುದು ಶುದ್ಧ ಮೂರ್ಖತನವಾಗುತ್ತದೆ. ನೀನು ನನ್ನ ಅಭಿನಂದನಾ ಗ್ರಂಥಕ್ಕೆ ಸಂಪಾದಕ ನಾನು ನಿನ್ನ ಅಭಿನಂದನಾ ಗ್ರಂಥಕ್ಕೆ ಸಂಪಾದಕ ಎನ್ನುವ ಈ ಕೊಟ್ಟು-ಕೊಳ್ಳುವ ಸಂಪ್ರದಾಯ ಇಲ್ಲಿಯೂ ಇದೆ. ಇನ್ನೂ ಅಚ್ಚರಿಯ ಸಂಗತಿ ಎಂದರೆ ರಾಜಕೀಯ ನಾಯಕರುಗಳ ಮತ್ತು ಕೈಗಾರಿಕೋದ್ಯಮಿಗಳ ಅಭಿನಂದನಾ ಗ್ರಂಥಗಳಿಗೆ ಸಂಪಾದಕರಾಗಲು ಬರಹಗಾರರ ನಡುವೆಯೇ  ಒಂದು ರೀತಿಯ ಸ್ಪರ್ಧೆ ಮತ್ತು ಪೈಪೋಟಿ ಏರ್ಪಡುತ್ತದೆ. ಕೆಲವರು ಸಾಹಿತ್ಯಲೋಕದಲ್ಲಿ ಲೇಖಕರೆಂದು ಪ್ರವರ್ಧಮಾನಕ್ಕೆ ಬರುವುದು ಈ ಅಭಿನಂದನಾ ಗ್ರಂಥಗಳ ಸಂಪಾದಕರಾಗಿ ಎನ್ನುವುದು ಇನ್ನೂ ವಿಚಿತ್ರವಾದ ಸಂಗತಿ. ಅಭಿನಂದನಾ ಗ್ರಂಥಗಳ ಕಥಾನಾಯಕರುಗಳನ್ನು ಸಕಲ ಕಲಾವಲ್ಲಭರಂತೆ ಚಿತ್ರಿಸುವಲ್ಲೇ ನಮ್ಮ ಬಹಳಷ್ಟು ಬರಹಗಾರರ ಸೃಜನಶೀಲತೆ ವ್ಯಯವಾಗುತ್ತಿರುವುದು ಕನ್ನಡ ಸಾಹಿತ್ಯದ ದುರಂತಗಳಲ್ಲೊಂದು. 

ಇನ್ನು ಕನ್ನಡ ಸಾಹಿತ್ಯ ಪರಿಷತ್ತಿನ ವಿಷಯಕ್ಕೆ ಬಂದರೆ ನಮ್ಮ ಬರಹಗಾರರು ಪರಿಷತ್ತಿನ ಚುನಾವಣೆಗೆ ರಾಜಕೀಯದ ಖದರು ತಂದುಕೊಟ್ಟಿರುವರು. ಚುನಾವಣೆಯ ಸಂದರ್ಭ ಸಾಹಿತಿಗಳು ಮಾಡುವ ಆರೋಪ ಮತ್ತು ಪ್ರತ್ಯಾರೋಪಗಳು ಯಾವ ರಾಜಕಾರಣಿಗಳಿಗೂ ಕಮ್ಮಿಯಿಲ್ಲ. ಸುಮಾರು ನೂರುವರ್ಷಗಳಷ್ಟು ಹಳೆಯದಾದ ಕನ್ನಡ ಸಾಹಿತ್ಯ ಪರಿಷತ್ತನ್ನು ಒಂದು ಉನ್ನತ ಸಂಸ್ಥೆಯಾಗಿ ರೂಪಿಸುವ ಹೊಣೆಗಾರಿಕೆಯಿಂದ ನುಣಿಚಿಕೊಳ್ಳುವ ನಮ್ಮ ಬರಹಗಾರರು ಪರಿಷತ್ತಿನಿಂದ ಮಾತ್ರ ತಮ್ಮ ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳುತ್ತಿರುವುದು ಸುಳ್ಳಲ್ಲ. ಪರಿಷತ್ತಿನಿಂದ ಜರುಗುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ, ಪರಿಷತ್ತಿನಿಂದ ತಮ್ಮ ಪುಸ್ತಕಗಳ ಪ್ರಕಟಣೆ ಹೀಗೆ ಫಲಾನುಭವಿಗಳಾಗುತ್ತಿರುವ ಬಹುತೇಕ ಸಾಹಿತಿಗಳು ಪರಿಷತ್ತಿನ ಅಧ್ಯಕ್ಷರನ್ನು ಮತ್ತು ಪದಾಧಿಕಾರಿಗಳನ್ನು ಓಲೈಸುತ್ತ ಆಸ್ಥಾನದ ಭಟ್ಟಂಗಿಗಳಂತೆ ವರ್ತಿಸುತ್ತಿರುವರು. ಕನ್ನಡ ಸಾಹಿತ್ಯ ಪರಿಷತ್ತು ಅತ್ಯಂತ ಜಡವಾಗಿದ್ದು ಈ ನೂರು ವರ್ಷಗಳಲ್ಲಿ ಪರಿಷತ್ತಿನಿಂದ ಕನ್ನಡ ನಾಡು ನುಡಿಯ ಕುರಿತಾಗಿ ಆಗಬೇಕಾದ ಕೆಲಸ ಕಾರ್ಯಗಳು ಸಾಕಷ್ಟು ಪ್ರಮಾಣದಲ್ಲಿ ಆಗಿಲ್ಲವೆನ್ನುವ ಕೂಗು ಎಲ್ಲ ಕಡೆಯಿಂದ ಕೇಳಿಬರುತ್ತಿದೆ. ಕೆಲವೊಮ್ಮೆ ಸಾಹಿತ್ಯದ ಬಗ್ಗೆ ಆಸಕ್ತಿ ಮತ್ತು ನಾಡು ನುಡಿಯ ಕಾಳಜಿ ಇಲ್ಲದ ವ್ಯಕ್ತಿಗಳು ಪರಿಷತ್ತಿನ ಅಧ್ಯಕ್ಷರಾದ ಉದಾಹರಣೆಗಳಿವೆ. ಪರಿಷತ್ತು ಕೇವಲ ಕೆಲವೇ ವ್ಯಕ್ತಿಗಳ ವೈಯಕ್ತಿಕ ಹಿತಾಸಕ್ತಿಯನ್ನು ಪೂರೈಸುವ ತಾಣವಾಗಬಾರದು ಎನ್ನುವ ಕಾಳಜಿಯಿಂದ ನಾನು ಈ ಮಾತನ್ನು ಉಲ್ಲೇಖಿಸುತ್ತಿದ್ದೇನೆ. 

ಮೊನ್ನೆ ಸಾಹಿತ್ಯ ಸಮಾರಂಭವೊಂದರಲ್ಲಿ ಪ್ರೇಕ್ಷಕರೊಬ್ಬರು ಲೇಖಕರು ಚಳವಳಿ ಮತ್ತು ಹೋರಾಟಗಳಲ್ಲಿ ಏಕೆ ಭಾಗವಹಿಸುತ್ತಿಲ್ಲ ಎನ್ನುವ ಅತಿ ಮಹತ್ವದ ಪ್ರಶ್ನೆಯೊಂದನ್ನು ಎತ್ತಿದರು. ಸಮಾರಂಭದಲ್ಲಿ ಹೋರಾಟದ ಕುರಿತು ಒಂದು ಗೋಷ್ಠಿಯನ್ನು ಕೂಡ ಏರ್ಪಡಿಸಲಾಗಿತ್ತು ಮತ್ತು ಆ ಗೋಷ್ಠಿಯಲ್ಲಿ ಮಾತನಾಡಲು ಆಹ್ವಾನಿತರಾಗಿದ್ದವರು ಲೇಖಕರಾಗಿರದೆ ಅವರು ಹೋರಾಟಗಾರರಾಗಿದ್ದು ಗಮನಿಸಬೇಕಾದ ಸಂಗತಿಯಾಗಿತ್ತು. ಚಳವಳಿ ಮತ್ತು ಹೋರಾಟದ ಕುರಿತು ಮಾತನಾಡಲು ನಮ್ಮ ಬರಹಗಾರರಿಗೆ ಸಾಧ್ಯವಾಗದೇ ಇರಲು ಬಹುಮುಖ್ಯ ಕಾರಣ ಅವರು ಆ ಒಂದು ಪ್ರಕ್ರಿಯೆಯ ಭಾಗವಾಗದೇ ಇರುವುದು. ನದಿ ನೀರಿನ ಸಮಸ್ಯೆ ಅದು ರೈತರದು, ಪರಭಾಷಾ ಸಿನಿಮಾಗಳ ಹಾವಳಿ ಅದು ಸಿನಿಮಾದವರ ಸಮಸ್ಯೆ, ಇಂಗ್ಲಿಷ್ ಮಾಧ್ಯಮದ ಶಾಲೆಗಳು ಅದು ಪಾಲಕರ ಸಂಕಟ, ಅನ್ಯಭಾಷೆಗಳ ಪ್ರಭಾವ ಗಡಿನಾಡಿನವರ ಆತಂಕ ಹೀಗೆ ನಾಡು ನುಡಿಗೆ ಸಂಬಂಧಿಸಿದ ಸಮಸ್ಯೆಗಳೆಲ್ಲ ಹೀಗೆ ವಿಭಜನೆಗೊಂಡಿರುವುದರಿಂದ ನಮ್ಮ ಸಾಹಿತಿಗಳು ಯಾವ ಚಳವಳಿ ಮತ್ತು ಹೋರಾಟಗಳೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುತ್ತಿಲ್ಲ. ಮೂರು ದಶಕಗಳ ಹಿಂದೆ ಭಾಷೆಯ ಉಳಿವಿಗಾಗಿ ಗೋಕಾಕ ಚಳವಳಿಯಲ್ಲಿ ಒಂದಾಗಿ ಬೀದಿಗಿಳಿದ ನಮ್ಮ ಬರಹಗಾರರು ಇವತ್ತು ಭಾಷೆಯ ಅಸ್ತಿತ್ವಕ್ಕಾಗಿ ಒಗ್ಗಟ್ಟನ್ನು ತೋರಿಸುತ್ತಿಲ್ಲದಿರುವುದು ಖಂಡನಾರ್ಹ. ಯೇಟ್ಸ್ ತನ್ನ ಸುಪ್ರಸಿದ್ಧ ಕವಿತೆ ‘ದ’ಸೆಕೆಂಡ್ ಕಮಿಂಗ್’ನಲ್ಲಿ ಯುರೋಪಿನ ಸನ್ನಿವೇಶವನ್ನು ವರ್ಣಿಸುತ್ತ the best lack conviction and the worst are full of passionate intensity  ಎಂದು ಆತಂಕದಿಂದ ಬರೆಯುತ್ತಾನೆ. ಯೇಟ್ಸ್ ನ  ಈ ಹೇಳಿಕೆಯನ್ನು ಆಧರಿಸಿ ಹೇಳುವುದಾದರೆ ಬರಹಗಾರರು ಮೌನವಾಗಿರದೆ ಮಾತನಾಡುವುದನ್ನು ಮತ್ತು ಪ್ರತಿಭಟಿಸುವುದನ್ನು ಕಲಿಯಬೇಕು. ಅಧಿಕಾರದ  ಶಕ್ತಿಕೇಂದ್ರ ಮತ್ತು ರಾಜಕಾರಣವನ್ನು ಓಲೈಸದೆ ಬರಹಗಾರರು ಹೋರಾಟ ಮತ್ತು ಚಳವಳಿಯಂಥ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಸಮಾಜದ ಹಿತದ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ. 

ಇನ್ನು ಬರವಣಿಗೆ ಕುರಿತು ರಷ್ಯನ್ ಲೇಕಕಿ ಲ್ಯೂಮಿಡಿಲಾ ಅವರ ಮಾತುಗಳೊಂದಿಗೆ ನಾನು ಈ ಲೇಖನವನ್ನು/ಪತ್ರವನ್ನು ಪೂರ್ಣಗೊಳಿಸುತ್ತಿದ್ದೇನೆ ‘ಬದುಕಿನ ಹಾದಿಯಲ್ಲಿ ನಮಗೇ ಅರಿವಿಲ್ಲದಂತೆ ಅನುಭವಗಳ ಮೂಲಕ ಹಾದು ಬಂದಿರುತ್ತೇವೆ. ಹೀಗೆ ಪಯಣಿಸುವಾಗ ಎದುರಾಗುವ ಅನುಭವಗಳ ಅರಿವು ನಮಗಾಗುವುದಿಲ್ಲ. ಆದರೆ ಬರವಣಿಗೆಗೆ ಕೂತಾಗ ಆ ಅನುಭವಗಳನ್ನು ಅವುಗಳಿಂದ ಹೊರನಿಂತು ನೋಡುವುದು ಸಾಧ್ಯವಾಗುತ್ತದೆ. ಆ ಮೂಲಕ ಒಂದು ಕಾಲಘಟ್ಟದ ಬದುಕನ್ನು ನಾನು ಮತ್ತೆ ಕಟ್ಟುತ್ತಿರುತ್ತೇನೆ. ಹಾಗಾಗಿ ಬರವಣಿಗೆ ಬಗ್ಗೆ ಎಲ್ಲ ಬರಹಗಾರರಿಗೂ ಸತ್ಯಕ್ಕೆ ಎದುರಾಗುವ ಭೀತಿ ಇರುತ್ತದೆ’. ನಿಜಕ್ಕೂ ಬರವಣಿಗೆಯ ಸಾರ್ಥಕೆ ಇರುವುದು ಅದು ಸತ್ಯಕ್ಕೆ ಎದುರಾದಾಗ.

ಹೀಗೊಬ್ಬ ಕನ್ನಡ ಸಾಹಿತ್ಯದ ಓದುಗ


-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

Thursday, September 21, 2017

ಸಂದರ್ಶನ




(ಬಾಗಲಕೋಟೆಯ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಬಿ.ಇಡಿ ವಿದ್ಯಾರ್ಥಿನಿ ಶ್ರೀಮತಿ ಶ್ರೀದೇವಿ.ಸಿ.ಕುಸಬಿ ಅವರು ತಮ್ಮ ಪಠ್ಯೇತರ ಚಟುವಟಿಕೆಯ ಅಂಗವಾಗಿ ದಿನಾಂಕ 21.09.2017 ರಂದು ಮಾಡಿದ ನನ್ನ ಸಂದರ್ಶನ)

ಶ್ರೀ ರಾಜಕುಮಾರ ಕುಲಕರ್ಣಿ ಬರವಣಿಗೆಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೆ ಅಸ್ತಿತ್ವವೊಂದನ್ನು ಗುರುತಿಸಿಕೊಳ್ಳುತ್ತಿರುವ ಬರಹಗಾರರು. ಅವರ ಬರವಣಿಗೆಯ ಮುಖ್ಯವಸ್ತು ಅದು ಸಮಾಜಮುಖಿ ಚಿಂತನೆ. ತಮ್ಮ ಸುತ್ತಮುತ್ತಲಿನ ಆಗುಹೋಗುಗಳನ್ನೇ ಬರವಣಿಗೆಗಾಗಿ ಆಯ್ದುಕೊಳ್ಳುವ ಅವರು ತಮ್ಮ ವಿಶಿಷ್ಠ ಶೈಲಿಯಿಂದ ಓದುಗರನ್ನು ತಲಪುವಲ್ಲಿ ಯಶಸ್ವಿಯಾಗಿರುವರು. ಇದುವರೆಗು ಎಂಟು ಕೃತಿಗಳನ್ನು ಬರೆದು ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡುತ್ತಿರುವ ರಾಜಕುಮಾರ ಕುಲಕರ್ಣಿ ಅವರು ಕಥೆಗಳನ್ನು ಕೂಡ ಬರೆದಿರುವುದು ವಿಶಿಷ್ಠ ಸಂಗತಿ. ಶ್ರೀಯುತರೊಂದಿಗೆ ನಡೆಸಿದ ಸಂದರ್ಶನದ ಪೂರ್ಣ ವಿವರ ಇಲ್ಲಿದೆ.

ನಮಸ್ಕಾರಗಳು ಸರ್ ತಮ್ಮ ಸಂದರ್ಶನಕ್ಕಾಗಿ ಬಂದಿದ್ದೇನೆ. ಇದನ್ನು ಮಾತುಕತೆ ಅಥವಾ ಒಂದಿಷ್ಟು ಹರಟೆ ಎಂದರೂ ಅಡ್ಡಿಯಿಲ್ಲ.

ತಮಗೂ ನಮಸ್ಕಾರಗಳು. ಸಂದರ್ಶನದ ಚೌಕಟ್ಟಿಗೆ ಸೀಮಿತವಾಗಿ ಮಾತನಾಡದೆ ಮನಸ್ಸು ಬಿಚ್ಚಿ ಮಾತನಾಡಿ. ಚರ್ಚೆಯ ಮೂಲಕ ನಿಮ್ಮ ಪ್ರಶ್ನೆ ಅಥವಾ ಅನುಮಾನಗಳಿಗೆ ಒಂದಿಷ್ಟು ಉತ್ತರಗಳು ಸಿಗಬಹುದು.

ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕೆನ್ನುವ ಆಸಕ್ತಿ ನಿಮಗೆ ಬಂದಿದ್ದು ಹೇಗೆ?.

ನಾನು ಹುಟ್ಟಿದ್ದು ಮತ್ತು ಬಾಲ್ಯ ಜೀವನ ಕಳೆದದ್ದು ತೀರ ಹಳ್ಳಿಗಾಡಿನ ಪ್ರದೇಶದಲ್ಲಿ. ಊರಲ್ಲಿದ್ದ ಕನ್ನಡ ಶಾಲೆ ಬಿಟ್ಟರೆ ನಗರದ ಇಂಗ್ಲಿಷ್ ಶಾಲೆಗೆ ಹೋಗಿ ಕಲಿಯುವಷ್ಟು ಆರ್ಥಿಕ ಅನುಕೂಲವಿರಲಿಲ್ಲ. ಹೀಗಾಗಿ ಕನ್ನಡ ಮಾತೃ ಭಾಷೆಯ ಜೊತೆಗೆ ಶಿಕ್ಷಣದ ಭಾಷೆ ಕೂಡ ಆಯಿತು. ಶಾಲೆಯಲ್ಲಿದ್ದ ಕನ್ನಡದ ಕಥೆ ಕಾದಂಬರಿಗಳ ಓದು ನನ್ನಲ್ಲಿ ಓದಿನ ಆಸಕ್ತಿ ಬೆಳೆಯಲು ಕಾರಣವಾಯಿತು. ಜೊತೆಗೆ ಮನೆಯಲ್ಲಿ ನನ್ನ ತಾಯಿ ಅನೇಕ ಕಥೆ, ಕಾದಂಬರಿಗಳನ್ನು ಓದುತ್ತಿದ್ದದ್ದು ಕೂಡ ನನ್ನ ಮೇಲೆ ಪ್ರಭಾವ ಬೀರಿತು. ನನ್ನ ತಾಯಿಯವರ ಓದಿನ ಕಾರಣ ಪ್ರಾಥಮಿಕ ಶಾಲೆಯಲ್ಲಿದ್ದಾಗಲೆ ನಾನು ತ್ರಿವೇಣಿ ಅವರ ಶರಪಂಜರ, ಬೆಕ್ಕಿನ ಕಣ್ಣು ಕಾದಂಬರಿಗಳನ್ನು ಓದಿದೆ. ಮುಂದೆ ಕಾಲೇಜಿನಲ್ಲಿರುವಾಗ ಈ ಸಿನಿಮಾ ಪತ್ರಿಕೆಗಳಿಗೆ ಬರೆಯಲು ಆರಂಭಿಸಿದೆ. ಹೀಗೆ ಚಿಕ್ಕವನಿದ್ದಾಗಲೆ ಈ ಓದುವ ಮತ್ತು ಬರೆಯುವ ಹವ್ಯಾಸ ನನ್ನಲ್ಲಿ ಬೆಳೆದುಬಂತು. 

ಈ ಸಿನಿಮಾ ಬರವಣಿಗೆಯಿಂದ ಸಮಾಜ ಮತ್ತು ಸಾಹಿತ್ಯದ ಕುರಿತು ಬರೆಯಲಾರಂಭಿಸಿದ್ದು ಯಾವಾಗಿನಿಂದ?.

ಬಾಗಲಕೋಟೆಗೆ 2001 ರಲ್ಲಿ ನಾನು ಗ್ರಂಥಪಾಲಕನಾಗಿ ಬಂದ ಮೇಲೆ ನನ್ನ ಬರವಣಿಗೆಯ ಬದುಕು ಒಂದು ಮಹತ್ವದ ತಿರುವು ಪಡೆದುಕೊಂಡಿತು ಎನ್ನಬಹುದು. ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದಲ್ಲಿ ಪ್ರಕಟವಾಗುವ ‘ಸಮಾಚಾರ’ ಪತ್ರಿಕೆಗೆ ನಾನು ಬರೆಯಲಾರಂಭಿಸಿದ ನಂತರ ನನ್ನ ಬರವಣಿಗೆಯಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿತು. ಈವರೆಗೆ ಸುಮಾರು ನೂರಕ್ಕೂ ಹೆಚ್ಚು ಲೇಖನಗಳನ್ನು ನಾನು ಸಮಾಚಾರ ಪತ್ರಿಕೆಗೆ ಬರೆದಿರುವೇನು. ಈ ಎಲ್ಲ ಲೇಖನಗಳು ವಿವಿಧ ವಿಷಯಕ್ಕೆ ಸಂಬಂಧಿಸಿದ ವೈವಿದ್ಯಮಯ ಲೇಖನಗಳೆಂದು ಅನೇಕರು ಹೇಳಿರುವರು. ಇಂಥದ್ದೊಂದು ಅವಕಾಶ ನನಗೆ ದೊರೆತಿದ್ದಕ್ಕಾಗಿ ನಾನು ಸಮಾಚಾರಕ್ಕೆ ಮತ್ತು ಸಮಾಚಾರದ ಸಂಪಾದಕ ಬಳಗಕ್ಕೆ ಸದಾಕಾಲ ಕೃತಜ್ಞನಾಗಿದ್ದೇನೆ. ಜೊತೆಗೆ ನನ್ನ ಬರವಣಿಗೆಯನ್ನು ಗುರುತಿಸಿ ಸಮಾಚಾರದ ಸಂಪಾದಕ ಸಮಿತಿಯ ಸದಸ್ಯನಾಗಿ ಕೂಡ ನೇಮಕ ಮಾಡಿದ್ದು ಸಂತೋಷದ ಸಂಗತಿ. 

ನಿಮ್ಮ ಮೊದಲ ಪುಸ್ತಕ ಪ್ರಕಟವಾದದ್ದು ಯಾವಾಗ?

2012 ರಲ್ಲಿ ನನ್ನ ಮೊದಲ ಪುಸ್ತಕ ‘ಸಾಧನೆ’ ಪ್ರಕಟವಾಯಿತು. ಆವರೆಗೆ ಸಮಾಚಾರದಲ್ಲಿ ನನ್ನ 50 ರಿಂದ 60 ಲೇಖನಗಳು ಪ್ರಕಟವಾಗಿದ್ದವು. ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಯಾಗಿ ಹತ್ತು ವರ್ಷಗಳಾಗಿದ್ದರ ನೆನಪಿಗಾಗಿ ‘ಸಾಧನೆ’ ಪುಸ್ತಕ ಬರೆಯುವ ಜವಾಬ್ದಾರಿ ನನಗೆ ವಹಿಸಿದಾಗ ಆರಂಭದಲ್ಲಿ ಒಂದಿಷ್ಟು ಅಳುಕಿತ್ತು. ಏಕೆಂದರೆ ಅದುವರೆಗೂ ನನ್ನ ಒಂದು ಪುಸ್ತಕ ಕೂಡ ಪ್ರಕಟವಾಗಿರಲಿಲ್ಲ. ಆದರೂ ಕೇವಲ ಮೂರು ತಿಂಗಳಲ್ಲಿ ಪುಸ್ತಕ ಬರೆದು ಮುಗಿಸಿದೆ. ಬಿ.ವಿ.ವಿ.ಸಂಘದ  ವೈರಾಗ್ಯದ ಮಲ್ಲಣಾರ್ಯ ಪ್ರಕಾಶನದಿಂದ ಪುಸ್ತಕ ಪ್ರಕಟವಾಗಿ ಎಲ್ಲರಿಂದ ಮೆಚ್ಚುಗೆಯ ಮಾತುಗಳು ಬಂದವು. ಒಂದರ್ಥದಲ್ಲಿ ‘ಸಾಧನೆ’ ಪುಸ್ತಕ ನನ್ನ ನಂತರದ ಪುಸ್ತಕಗಳ ಪ್ರಕಟಣೆಗೆ ಪ್ರೇರಣೆಯಾಯಿತು. ಸಾಧನೆ ಪುಸ್ತಕವನ್ನು ನೋಡಿಯೇ  ಕಲಬುರಗಿಯ ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆಯವರು ನನ್ನ ‘ಪೂರ್ಣ ಸತ್ಯ’ ಪ್ರಕಟಿಸಲು ಮುಂದೆ ಬಂದರು.

ಇದುವರೆಗೂ ಎಷ್ಟು ಗ್ರಂಥಗಳು ಪ್ರಕಟವಾಗಿವೆ?

ಇದುವರೆಗೂ ಎಂಟು ಪುಸ್ತಕಗಳನ್ನು ಬರೆದಿರುವೇನು. ಈ ಎಂಟು ಕೃತಿಗಳಲ್ಲಿ ಆರು ಪುಸ್ತಕಗಳು ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆಯಿಂದ ಪ್ರಕಟವಾಗಿವೆ. ಈ ಸಂದರ್ಭ ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆಯವರ ಸಹಕಾರವನ್ನು ಕೂಡ ನಾನು ಕೃತಜ್ಞತೆಯಿಂದ ಸ್ಮರಿಸುತ್ತೇನೆ. ಕಲಬುರಗಿಯಂಥ ಊರಲ್ಲಿ ಪುಸ್ತಕ ಪ್ರಕಾಶನದ ಮೂಲಕ ಅವರು ಮಾಡುತ್ತಿರುವ ಕಾರ್ಯ ಬಹಳ ದೊಡ್ಡದು.

ನಿಮ್ಮ ಈ ಒಟ್ಟು ಎಂಟು ಕೃತಿಗಳಲ್ಲಿ ನಿಮಗೆ ಇಂಥದ್ದೆ ಕೃತಿ ತುಂಬ ತೃಪ್ತಿ ನೀಡಿದೆ ಎಂದು ಅನಿಸಿದೆಯೆ?

ನಿಮ್ಮ ಈ ಪ್ರಶ್ನೆಗೆ ಉತ್ತರಿಸುವುದು ಸ್ವಲ್ಪ ಕಷ್ಟದ ಕೆಲಸ. ಏಕೆಂದರೆ ಬರಹಗಾರನಿಗೆ ಆತನ ಎಲ್ಲ ಕೃತಿಗಳೂ ಪ್ರಿಯವಾದವುಗಳೆ. ಹಾಗೆನಾದರೂ ಹೃದಯಕ್ಕೆ ಒಂದಿಷ್ಟು ಹತ್ತಿರವಾದ ಕೃತಿ ಎಂದರೆ ‘ಮನದ ಮಾತು’ ಪುಸ್ತಕ. ಈ ಪುಸ್ತಕದ ವಿಷಯ ವ್ಯಾಪ್ತಿ ಒಂದಿಷ್ಟು ವಿಶಾಲವಾಗಿದ್ದು ಅಲ್ಲಿ ಅನೇಕ ಲೇಖನಗಳಿವೆ ಮತ್ತು ಬೇಕೆಂದೆ ನಾನು ಸಣ್ಣ  ಲೇಖನಗಳನ್ನು ಈ ಪುಸ್ತಕಕ್ಕಾಗಿ ಆಯ್ಕೆಮಾಡಿಕೊಂಡಿದ್ದೆ. ಚಿಕ್ಕ ಲೇಖನಗಳಲ್ಲಿ ಇಡೀ ವಿಷಯವನ್ನು ಪ್ರಸ್ತುತ ಪಡಿಸುವುದು ಅದು ಲೇಖಕನಿಗೆ ಸವಾಲಿನ ಕೆಲಸ. ಈ ಸವಾಲನ್ನು ಎದುರಿಸಿದ್ದು ನನಗೆ ತುಂಬಾ ಸಂತೋಷ ಕೊಟ್ಟ ಸಂಗತಿ. 

ನಿಮ್ಮ ಪುಸ್ತಕಗಳಲ್ಲಿ ಸಿನಿಮಾ ಕಲಾವಿದರ ಮತ್ತು ಸಿನಿಮಾ ಜಗತ್ತಿನ ಕುರಿತು ಲೇಖನಗಳಿವೆ. ಯಾಕೆ ಈ ಆಯ್ಕೆ?

ನೋಡಿ ನಾನು ನಿಮಗೆ ಮೊದಲೆ ಹೇಳಿರುವೇನು ಆರಂಭದಲ್ಲಿ ನಾನು ಸಿನಿಮಾ ಕುರಿತು ಲೇಖನಗಳನ್ನು ಬರೆಯುತ್ತಿದ್ದೆನೆಂದು. ಆನಂತರ ಓದು ಮತ್ತು ವಯಸ್ಸಿನ ಪ್ರಭಾವ ನನ್ನ  ಬರವಣಿಗೆಯ ವಿಷಯವಸ್ತುವಿನಲ್ಲಿ ಬದಲಾವಣೆಯಾಯಿತು. ಹಾಗೆಂದು ನಾನು ಸಿನಿಮಾ ಬರವಣಿಗೆಗೆ ಯೋಗ್ಯವಾದ ಸಂಗತಿಯಲ್ಲ ಎಂದು ವಾದಿಸುತ್ತಿಲ್ಲ. ಸಿನಿಮಾ ಕೂಡ ಒಂದು ನಾಡಿನ ಸಾಂಸ್ಕೃತಿಕ ಮಹತ್ವಗಳಲ್ಲೊಂದು. ಸಾಮಾನ್ಯವಾಗಿ ನಮ್ಮ ಅಕಾಡೆಮಿಕ್ ಬರಹಗಾರರು ಈ ಸಿನಿಮಾ ಪ್ರಪಂಚವನ್ನು ಒಂದು ರೀತಿಯ ಅಸಡ್ಡೆ ಮತ್ತು ನಿರ್ಲಕ್ಷದಿಂದಲೇ ನೋಡುತ್ತ ಬಂದಿರುವರು. ಆದರೆ ನನಗೆ ಸಿನಿಮಾ ಬೇರೆ ಇತರ ವಿಷಯಗಳಂತೆ ಅಧ್ಯಯನಕ್ಕೆ ಆಸಕ್ತಿಯ ಕ್ಷೇತ್ರವಾಗಿ ಕಾಣಿಸುತ್ತದೆ. ಈ ಕಾರಣದಿಂದಲೇ ನನ್ನ ಪುಸ್ತಕಗಳಲ್ಲಿ ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದ ಲೇಖನಗಳನ್ನು ಸಹ ನಾನು ಬರೆದಿರುವೇನು.

ನಿಮ್ಮ ಬರವಣಿಗೆಯಿಂದ ಸಮಾಜದಲ್ಲಿ ಬದಲಾವಣೆಗಳಾಬೇಕೆಂದು ನಿಮಗೆ ನಿರೀಕ್ಷೆಗಳಿವೆಯೆ?.
ನನ್ನ ಬರವಣಿಗೆ ಕುರಿತು ನನಗೆ ಅಂಥ ತೀರ ಎತ್ತರದ ನಿರೀಕ್ಷೆಗಳೆನಿಲ್ಲ. ನನ್ನ ಪುಸ್ತಕಗಳಿಂದ ಸಮಾಜದಲ್ಲಿ ಬಹುದೊಡ್ಡ ಬದಲಾವಣೆಗಳು ಮತ್ತು ಪಲ್ಲಟಗಳಾಗುತ್ತವೆ ಎಂದು ನಾನು ಭಾವಿಸಿಲ್ಲ. ನಿರೀಕ್ಷೆಗಳನ್ನಿಟ್ಟುಕೊಂಡು ಬರೆಯಲು ಹೊರಟರೆ ನಿರೀಕ್ಷೆಗಳು ಈಡೇರದಿದ್ದಾಗ ಲೇಖಕನಿಗೆ ನಿರಾಸೆಯಾಗುತ್ತದೆ. ಮತ್ತು ಇಂಥ ನಿರಾಸೆ ನಂತರದ ದಿನಗಳಲ್ಲಿ ಆತನ ಬರವಣಿಗೆಯ ಆಸಕ್ತಿಯನ್ನೇ ಕುಂಠಿತಗೊಳಿಸಬಹುದು. ಹಾಗಾಗಿ ಬರೆಯುವುದಷ್ಟೇ ನನ್ನ ಕೆಲಸ ಎಂದು ತಿಳಿದುಕೊಂಡವನು ನಾನು. ಜೊತೆಗೆ ಸಮಾಜದಲ್ಲಿ ಪರಿವರ್ತನೆಯಾಗುತ್ತದೆ ಎನ್ನುವುದಕ್ಕಿಂತ ನನ್ನ ಮನಸ್ಸಿನ ಬೇಗುದಿಯನ್ನು ಹೊರಹಾಕಲು ನಾನು ಬರವಣಿಗೆಯ ಮಾಧ್ಯಮವನ್ನು ಆಯ್ಕೆ  ಮಾಡಿಕೊಂಡೆ. ಹೀಗಾಗಿ ಸಮಾಜಗೊಸ್ಕರ ನಾನು ಬರೆಯುತ್ತಿದ್ದೇನೆ ಎನ್ನುವುದಕ್ಕಿಂತ ನನಗೊಸ್ಕರ ಬರೆಯುತ್ತಿದ್ದೇನೆ ಎನ್ನುವುದು ಸರಿಯೇನೋ. ಈ ಸಂದರ್ಭ ನೊಬಲ್ ಪ್ರಶಸ್ತಿ ಪುರಸ್ಕೃತ ಲೇಖಕ ಯೋಸಾನ ಮಾತನ್ನು ನಿಮಗೆ ನೆನಪಿಸುತ್ತೇನೆ ಆತ ಹೇಳುತ್ತಾನೆ ಬರಹಗಾರನಾದವನು ಬರೆಯುವ ಮೂಲಕ ಸಮಾಜವನ್ನು ಪ್ರಶ್ನಿಸುತ್ತಿರಬೇಕೆಂದು. ಒಂದರ್ಥದಲ್ಲಿ ನನ್ನ ಬರವಣಿಗೆ ಕೂಡ ಪ್ರಶ್ನೆಯಿದ್ದ ಹಾಗೆ ಎನ್ನುವ ನಂಬಿಕೆ ನನ್ನದು. 

ಲೇಖನಗಳ ಹೊರತಾಗಿ ಕಥೆಗಳನ್ನೆನಾದರೂ ಬರೆದ ಅನುಭವ ತಮಗಿದೆಯೆ?
ಸಾಮಾನ್ಯವಾಗಿ ನಾನು ಇದುವರೆಗೂ ಬರೆದಿರುವುದು ಲೇಖನಗಳೇ ಹೆಚ್ಚು. 2009 ರಲ್ಲಿ ಮೊದಲ ಬಾರಿಗೆ ಸಂಬಂಧಗಳು ಎನ್ನುವ ಕಥೆ ಬರೆದು ಕರ್ಮವೀರ ಪತ್ರಿಕೆಗೆ ಕಳುಹಿಸಿದೆ. ಆ ಕಥೆ ಪ್ರಕಟವಾಯಿತು. ನಂತರ ಮೂರು ದೃಶ್ಯಗಳು ಕಥೆ ತುಷಾರದಲ್ಲಿ ಪ್ರಕಟಗೊಂಡಿತು. ಆಮೇಲೆ ಪರೀಕ್ಷೆ ಕಥೆ ಕೂಡ ಪ್ರಕಟವಾಯಿತು. ಇದೆಲ್ಲ ಆದದ್ದು 2009 ರಲ್ಲಿ. ಆದರೆ ಈ ಮೂರು ಕಥೆಗಳನ್ನು ಬರೆದ ನಂತರ ಈ ಎಂಟು ವರ್ಷಗಳಲ್ಲಿ ನಾನು ಮತ್ತೆ ಕಥೆ ಬರೆಯಲು ಪ್ರಯತ್ನಿಸಲೇ ಇಲ್ಲ ಎನ್ನುವುದು ನನಗೇ ಆಶ್ಚರ್ಯದ ಸಂಗತಿಯಾಗಿದೆ. ಈಗ ಮತ್ತೆರಡು ಕಥೆಗಳನ್ನು ಬರೆದಿರುವೇನು. ಇತ್ತೀಚಿಗೆ ಬರೆದಿರುವ ‘ಸಾಂಗತ್ಯ’ ಕಥೆಯಲ್ಲಿನ ಮನಸ್ವಿನಿ ಪಾತ್ರ ನನ್ನನ್ನು ಅನೇಕ ದಿನಗಳವರೆಗೆ ಕಾಡಿದೆ. ಮುಂದಿನ ವರ್ಷ ಒಂದು ಕಥಾಸಂಕಲನ ಬರೆಯುವ ಯೋಜನೆ ಇದೆ. 

ಲೇಖನ ಮತ್ತು ಕಥೆಯನ್ನು ಹೋಲಿಸಿದಾಗ ನಿಮಗೆ ಬರವಣಿಗೆಯಲ್ಲಿ ವ್ಯತ್ಯಾಸವೆನಿಸಿದೆಯೆ ?

ನೋಡಿ ಇದು ತುಂಬ ಮಹತ್ವದ ಪ್ರಶ್ನೆ. ಸಾಮಾನ್ಯವಾಗಿ ಲೇಖನ ಎನ್ನುವುದು ವಾಸ್ತವ ಸ್ಥಿತಿಯನ್ನು ಅವಲಂಬಿಸಿದ್ದು. ಅಲ್ಲಿ ಲೇಖಕನಿಗೆ ಹೆಚ್ಚಿನ ಸ್ವಾತಂತ್ರ್ಯವಿರುವುದಿಲ್ಲ. ಲೇಖಕನಾದವನು ತಾನು ನೋಡಿದ ಸಂಗತಿಗಳಿಗೆ ಅಕ್ಷರ ರೂಪ ನೀಡಬೇಕಷ್ಟೆ. ಆದರೆ ಕಥಾ ಸಾಹಿತ್ಯ ಹಾಗಲ್ಲ ಅಲ್ಲಿ ಲೇಖಕನ ಕಲ್ಪನೆಗೆ ಹೆಚ್ಚಿನ ಸ್ವಾತಂತ್ರ್ಯವಿದೆ. ವಾಸ್ತವಕ್ಕೆ ಕಥೆಗಾರ ತನ್ನ ಕಲ್ಪನೆಯನ್ನು ಸೇರಿಸಿ ಕಥೆ ಹೆಣೆಯುತ್ತಾನೆ. ಹೀಗಾಗಿ ಲೇಖಕ ಕಥಾ ಮಾಧ್ಯಮದಲ್ಲಿ ಅಥವಾ ಕಾದಂಬರಿ ಮಾಧ್ಯಮದಲ್ಲಿ ಹೆಚ್ಚಿನ ಸ್ವಾತಂತ್ರ್ಯವನ್ನು ಅನುಭವಿಸುತ್ತಾನೆ. ಈ ಕಾರಣಕ್ಕೆ ಭೈರಪ್ಪನವರು ಕಾದಂಬರಿ ಪ್ರಕಾರಕ್ಕೆ ಮಾತ್ರ ನಿಷ್ಟರಾಗಿ ಉಳಿದಿರುವರು. 

ಭೈರಪ್ಪನವರು ಎಂದಾಗ ನೆನಪಾಯಿತು ಅವರ ಸಾಹಿತ್ಯ ನಿಮ್ಮನ್ನು ಪ್ರಭಾವಿಸಿದೆಯೆ ?

ಭೈರಪ್ಪನವರು ಕನ್ನಡದ ಪ್ರಮುಖ ಕಾದಂಬರಿಕಾರರಲ್ಲೊಬ್ಬರು. ಭೈರಪ್ಪನವರು ಅನೇಕ ಕಾದಂಬರಿಗಳನ್ನು ಓದಿಕೊಂಡಿರುವೇನು. ಅವರ ವಂಶವೃಕ್ಷ, ದಾಟು, ನಿರಾಕರಣ, ಮಂದ್ರ ಕಾದಂಬರಿಗಳು ನನ್ನನ್ನು ಹೆಚ್ಚು ಹೆಚ್ಚು ಪ್ರಭಾವಿಸಿವೆ. ಒಟ್ಟಿನಲ್ಲಿ ಅವರ ಕಾದಂಬರಿಗಳಲ್ಲಿ ನೈತಿಕತೆ ತನ್ನ ಪ್ರಾಬಲ್ಯವನ್ನು ಮೆರೆದು ಕೊನೆಗೆ ಜಯ ಸಾಧಿಸುವುದು ನನಗೆ ಅತ್ಯಂತ ಮೆಚ್ಚುಗೆಯಾದ ಸಂಗತಿಗಳಲ್ಲೊಂದು. ಅವರ ಆತ್ಮಕಥೆ ಭಿತ್ತಿ ಭೈರಪ್ಪನವರ ಬದುಕಿನ ಅನೇಕ ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತದೆ. 

ಕನ್ನಡದ ಯಾವ ಲೇಖಕರು ನಿಮ್ಮನ್ನು ಹೆಚ್ಚು ಪ್ರಭಾವಿಸಿರುವರು?

ಇಂಥದ್ದೆ ಲೇಖಕರು ಎನ್ನುವುದಕ್ಕಿಂತ ನಾನು ಕನ್ನಡದ ಬಹುತೇಕ ಲೇಖಕರನ್ನು ಓದಿಕೊಂಡಿರುವೇನು. ಲಂಕೇಶ್, ತೇಜಸ್ವಿ, ಅನಂತಮೂರ್ತಿ, ಯಶವಂತ ಚಿತ್ತಾಲ, ದೇವನೂರ ಮಹಾದೇವ, ಭೈರಪ್ಪ, ಗೀತಾ ನಾಗಭೂಷಣ ಹೀಗೆ ಪಟ್ಟಿ ಬಹಳ ದೊಡ್ಡದಿದೆ. ಇನ್ನು ಇವರಲ್ಲಿ ಹೆಚ್ಚು ಪ್ರಭಾವಿಸಿದವರಲ್ಲಿ ಯಶವಂತ ಚಿತ್ತಾಲರ ಹೆಸರು ಮೊದಲು ನೆನಪಿಗೆ ಬರುತ್ತದೆ. ಏಕೆಂದರೆ ಚಿತ್ತಾಲರ ಇಡೀ ಬರವಣಿಗೆಯಲ್ಲಿ ನಾವು ನೋಡುವುದು ಮನುಷ್ಯ ಸಂಬಂಧಗಳ ಹುಡುಕಾಟವನ್ನು. ಅವರ ಕಥೆ, ಕಾದಂಬರಿ ಅಷ್ಟೆ ಏಕೆ ಅವರ ಲೇಖನಗಳಲ್ಲೂ ಈ ಹುಡುಕಾಟವಿದೆ. ಚಿತ್ತಾಲರ ಶಿಕಾರಿ ಮತ್ತು ಪುರುಷೋತ್ತಮ ಕಾದಂಬರಿಗಳನ್ನು ನಾನು ಮತ್ತೆ ಮತ್ತೆ ಓದುತ್ತೇನೆ. ಒಟ್ಟಿನಲ್ಲಿ ಯಾವ ಪಂಥ ಪಂಗಡಗಳಿಗೂ ಸೀಮಿತಗೊಳಿಸಿಕೊಳ್ಳದೆ ತಮ್ಮ ಬರವಣಿಗೆಯ ಮೂಲಕ ಮನುಷ್ಯ ಸಂಬಂಧ ಮತ್ತು ಮನುಷ್ಯ ಪ್ರೀತಿಯನ್ನು  ಹುಡುಕಿದ ಅಪೂರ್ವ ಬರಹಗಾರ ಚಿತ್ತಾಲರು.


ಓದುಗರ ಪ್ರತಿಕ್ರಿಯೆ ಹೇಗೆ?

ಬರೆದ ಬರಹವನ್ನು ಬೇರೆಯವರು ಓದಲೇ ಬೇಕೆನ್ನುವ ಅತಿಯಾದ ನಿರೀಕ್ಷೆ ಸರಿಯಲ್ಲ. ಆದರೂ ಕೆಲವೊಮ್ಮೆ ಭೇಟಿಯಾದಾಗಲೋ ಇಲ್ಲವೇ ಪತ್ರದ ಮೂಲಕವೋ ಅಭಿಪ್ರಾಯ ತಿಳಿಸಿದಾಗ ಮನಸ್ಸಿಗೆ ಒಂದಿಷ್ಟು ಖುಷಿಯಾಗುವುದಂತೂ ನಿಜ. ಈಗ ಕೆಲವು ದಿನಗಳ ಹಿಂದೆ ನಾನು ಬ್ಲಾಗಿನಲ್ಲಿ ಬರೆದ 'ಗಾಂಧಿ ಮತ್ತು ದೇವನೂರ' ಲೇಖನವನ್ನು ಓದಿದ ಓದುಗರೊಬ್ಬರು Wonderful thought and I felt very peaceful today after reading this article ಎಂದು ಪ್ರತಿಕ್ರಿಯಿಸಿರುವರು. ಕುಂ. ವೀರಭದ್ರಪ್ಪನವರ ಆತ್ಮಕಥೆ 'ಗಾಂಧಿ ಕ್ಲಾಸು' ಕೃತಿ ಕುರಿತು ನಿಲುಮೆಯಲ್ಲಿ ಪ್ರಕಟವಾದ ನನ್ನ ಲೇಖನಕ್ಕೆ ಸ್ವತಃ ಕುಂ. ವೀರಭದ್ರಪ್ಪನವರೇ 'ಲೇಖನ ಚೆನ್ನಾಗಿದೆ' ಎಂದು ಪ್ರತಿಕ್ರಿಯಿಸಿದ್ದು ನನಗೆ ಮರೆಯಲಾಗದ ಅನುಭವ. ಇಂಥದ್ದೆ ಅಲ್ಲವೆ ಲೇಖಕನಿಗೆ ಮತ್ತೆ ಮತ್ತೆ ಬರೆಯಲು ಪ್ರೇರಣೆ ನೀಡುವುದು.

ನಿಮ್ಮ ಮುಂದಿನ ಯೋಜನೆಗಳೇನು?

ಹೀಗೆ ಬರೆಯಲೇ ಬೇಕೆನ್ನುವ ಹಠ ಏನಿಲ್ಲ. ಬರವಣಿಗೆ ಅತ್ಯಂತ ತ್ರಾಸದಾಯಕ ಕೆಲಸ. ಬರೆಯಲು ವಿಷಯ ವಸ್ತು ಹೊಳೆಯಬೇಕು ಆ ಕುರಿತು ಸಾಕಷ್ಟು ಪೂರ್ವ ಸಿದ್ಧತೆಯಾಗಬೇಕು. ಇನ್ನು ಕಥೆ ಬರೆಯುವುದು ತೀರ ಕಷ್ಟದ ಕೆಲಸ. ನನ್ನ ಕಥೆಯಾದವಳು ಕಥೆಯ ಒಂದು ಪುಟ ಬರೆದಿಟ್ಟು ಒಂದು ತಿಂಗಳ ಮೇಲಾಯ್ತು ಇನ್ನು ಎರಡನೆ ಪುಟಕ್ಕೆ ಮುಂದುವರೆಯಲು ಆಗುತ್ತಲೇ ಇಲ್ಲ. ಹೀಗಾಗಿ ನಾನು ಮುಂದಿನ ದಿನಗಳಲ್ಲಿ ಇಂತಿಷ್ಟು ಪುಸ್ತಕಗಳನ್ನು ಬರೆಯುತ್ತೇನೆ ಎನ್ನುವುದು ಹಾಸ್ಯಾಸ್ಪದ ಸಂಗತಿಯಾಗಬಹುದು. ಆದರೂ ಅಲ್ಲಲ್ಲಿ ಬರೆದಿರುವ ವ್ಯಕ್ತಿ ವಿಷಯ ಕುರಿತ ಲೇಖನಗಳನ್ನು ಒಟ್ಟುಗೂಡಿಸಿ ‘ಹೆಜ್ಜೆ ಮೂಡಿದ ಹಾದಿ’ ಮತ್ತು ಓದಿದ ಉತ್ತಮ ಪುಸ್ತಕಗಳ ಕುರಿತಾದ ಲೇಖನಗಳ ಸಂಕಲನ ‘ಪ್ರತಿಬಿಂಬ’ ಪ್ರಕಟಿಸುವ ಯೋಜನೆಯಂತು ಸಧ್ಯಕ್ಕಿದೆ. ಮುಂದಿನ ದಿನಗಳಲ್ಲಿ ಇನ್ನೊಂದಿಷ್ಟು ಕಥೆಗಳನ್ನು ಬರೆದಲ್ಲಿ ನನ್ನಿಂದ ಒಂದು ಕಥಾ ಸಂಕಲನ ಹೊರಬರಬಹುದು. ಇವಿಷ್ಟು ಯೋಜನೆಗಳಿವೆ.

ಸಮಾಜ ನಿಮ್ಮನ್ನು ಬರಹಗಾರನೆಂದು ಗುರುತಿಸಿದೆ ಎಂದೆನಿಸಿದೆಯೆ ?

ನೋಡಿ ಬರಹಗಾರನಾಗಬೇಕೆಂದು ನಾನು ಬರವಣಿಗೆಯನ್ನಾರಂಭಿಸಲಿಲ್ಲ. ಬರವಣಿಗೆ ಎನ್ನುವುದು ನನಗೆ ಒಂದು ಅಭಿವ್ಯಕ್ತಿ ಮಾಧ್ಯಮ. ನಾನು ನೋಡಿದ್ದು ಮತ್ತು ನನ್ನ ಅನುಭವಕ್ಕೆ ಬಂದಿದ್ದು ನನ್ನನ್ನು ತಲ್ಲಣಗೊಳಿಸಿದಾಗ ನಾನು ಬರವಣಿಗೆಯ ಮೊರೆ ಹೋಗುತ್ತೇನೆ. ಆತ್ಮೀಯರೊಬ್ಬರ ಪ್ರಭಾವವೇ ನನಗೆ ಮನಸ್ವಿನಿ ಪಾತ್ರ ಸೃಷ್ಟಿಸಲು ಮತ್ತು ‘ಸಾಂಗತ್ಯ’ ಕಥೆ ಬರೆಯಲು ಪ್ರೇರಣೆಯಾಯಿತು. ನನ್ನ ದೃಷ್ಟಿಯಲ್ಲಿ ಬರವಣಿಗೆ ಎನ್ನುವುದು ಕಾರ್ಯಾಗಾರದ ಮೂಲಕ ಮೂಡಿ ಬರುವ ಸೃಜನಶೀಲ ಸೃಷ್ಟಿಯಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ಅಕಾಡೆಮಿಕ್ ವಲಯದ ಲೇಖಕರು ನಾನ್-ಅಕಾಡೆಮಿಕ್ ವಲಯದ ಲೇಖಕರನ್ನು ತೀರ ನಿರ್ಲಕ್ಷದಿಂದ ಕಾಣುತ್ತಿರುವುದು ಹೊಸದೆನಲ್ಲ. ನಾನು ಕನ್ನಡ ಸಾಹಿತ್ಯದ ವಿದ್ಯಾರ್ಥಿ ಅಲ್ಲ ಮತ್ತು ರಾಘವಾಂಕ, ರನ್ನ, ಪಂಪರನ್ನು ಓದಿಕೊಂಡವನೂ ಅಲ್ಲ. ಲೇಖಕನೆಂದು ಗುರುತಿಸಿಕೊಳ್ಳಲು ಬರಹಗಾರನು ಈ ಎಡ ಅಥವಾ ಬಲ ಯಾವುದಾದರು ಒಂದು ಗುಂಪಿನೊಂದಿಗೆ ಗುರುತಿಸಿಕೊಳ್ಳುವುದು ಇವತ್ತಿನ ಅನಿವಾರ್ಯ ಸ್ಥಿತಿಯಾಗಿದೆ. ಇಂಥ ಸನ್ನಿವೇಶದಲ್ಲಿ ನಾನು ಬರಹಗಾರನೆಂದು ಗುರುತಿಸಿಕೊಳ್ಳುವುದಕ್ಕಿಂತ ನನ್ನನ್ನು ನಾನು ಅರ್ಥ ಮಾಡಿಕೊಳ್ಳಲು ನಾನು ಬರೆಯುತ್ತೇನೆ ಎನ್ನುವುದೇ ಅತ್ಯಂತ ಸಂತಸದ ವಿಷಯ ನನಗೆ.

ನಮಸ್ಕಾರಗಳು ಸರ್ ತಮ್ಮಿಂದ ಅನೇಕ ಸಂಗತಿಗಳು ತಿಳಿದವು.

ತಮಗೂ ನಮಸ್ಕಾರಗಳು.

Thursday, September 14, 2017

ಹೊನ್ನ ಕಣಜ: ವಿಭಿನ್ನ ಕಥೆಗಳ ಓದಿನ ಅಪೂರ್ವ ಅನುಭವ

           

         
           ಕಥಾ ಸಾಹಿತ್ಯದಲ್ಲಿ ‘ಪ್ರಜಾವಾಣಿ’ ಪತ್ರಿಕೆಯದು ಮಹತ್ವದ ಕೊಡುಗೆ. ಪ್ರತಿವರ್ಷ ಕಥಾಸ್ಪರ್ಧೆಯನ್ನು ಏರ್ಪಡಿಸಿ ಕಥೆಗಾರರನ್ನು ಗುರುತಿಸುವ ಪ್ರಜಾವಾಣಿಯ ಪ್ರಯತ್ನ ಶ್ಲಾಘನೀಯ. 1957 ರಿಂದ ಆರಂಭವಾದ ಈ ಪಯಣ ಇವತ್ತಿನವರೆಗೂ ನಿರಂತರವಾಗಿ ಮುನ್ನಡೆದುಕೊಂಡುಬಂದಿದೆ. ಪತ್ರಿಕೆಯ ಕಥಾಸ್ಪರ್ಧೆಯ ಮೂಲಕವೇ ಬೆಳಕಿಗೆ ಬಂದು ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ ಕಥೆಗಾರರ ಸಂಖ್ಯೆ ಕಡಿಮೆಯೇನಿಲ್ಲ. ಒಂದುಕಾಲದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕಥೆಗಾರರೇ ನಂತರದ ದಿನಗಳಲ್ಲಿ ತೀರ್ಪುಗಾರರಾಗುವ ಮಟ್ಟಕ್ಕೆ ಬೆಳೆದು ನಿಂತಿದ್ದು ಪ್ರತಿಭೆಯನ್ನು ಗುರುತಿಸುವ ಪ್ರಜಾವಾಣಿ ಪತ್ರಿಕೆಯ ಸಾಹಿತ್ಯ ಪ್ರೇಮಕ್ಕೊಂದು ನಿದರ್ಶನ. ಈ ಅರವತ್ತು ವರ್ಷಗಳ ಅವಧಿಯಲ್ಲಿ ಪ್ರಜಾವಾಣಿಯ ದೀಪಾವಳಿ ಕಥಾಸ್ಪರ್ಧೆಯಲ್ಲಿ ಆಯ್ಕೆಗೊಂಡು  ಬಹುಮಾನಿತ ಕಥೆಗಳೆಂಬ ಮಾನ್ಯತೆ ಪಡೆದ ಆ ಎಲ್ಲ ಕಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಕನ್ನಡದ ಸಾಹಿತ್ಯಾಸಕ್ತರಿಗೆ ನೀಡುವ ಪ್ರಯತ್ನಕ್ಕೆ ಪ್ರಜಾವಾಣಿಯ ಸಂಪಾದಕ ಬಳಗ ಮುಂದಾಗಿದೆ. ಒಟ್ಟು ಮೂರು ಸಂಪುಟಗಳಲ್ಲಿ ಎಲ್ಲ ಕಥೆಗಳನ್ನು ಸಂಗ್ರಹಿಸಿ ಓದುಗರ ಕೈಗಿಡುವ ಆಶಯ ಈ ಸಂಪಾದಕ ಬಳಗದ್ದು. ಪ್ರಥಮ ಪ್ರಯತ್ನವಾಗಿ ‘ಹೊನ್ನ ಕಣಜ’ ಸಂಪುಟ ಒಂದು ಹೊರಬಂದು ಓದುಗರ ಕೈಸೇರಿದೆ. 1957 ರಿಂದ 2016 ರ ಅವಧಿಯಲ್ಲಿ ಪ್ರಕಟವಾದ 50 ಕಥೆಗಳು ಈ ಸಂಪುಟದಲ್ಲಿವೆ. ಪೂರ್ಣಚಂದ್ರ ತೇಜಸ್ವಿ, ಲಂಕೇಶ್, ರಾಮಚಂದ್ರ ಶರ್ಮ, ಭಾರತೀಸುತ, ಶ್ರೀಕೃಷ್ಣ ಆಲನಹಳ್ಳಿ, ವೈದೇಹಿ, ಜಯಂತ ಕಾಯ್ಕಿಣಿ, ವಿವೇಕ ಶಾನಭಾಗ, ಕೆ.ಟಿ.ಗಟ್ಟಿ, ದಿವಾಕರ್ ಅವರಂಥ ಖ್ಯಾತನಾಮರ ಕಥೆಗಳಿರುವುದು ಈ ಸಂಪುಟದ ವೈಶಿಷ್ಟ್ಯ. ಜೊತೆಗೆ ಶಾಂತಿ ಅಪ್ಪಣ್ಣ, ಕೆ.ಎಮ್.ರಶ್ಮಿ, ಟಿ.ಕೆ.ದಯಾನಂದ, ಕೆ.ಅಲಕಾರಂಥ ಯುವ ಕಥೆಗಾರರ ಕಥೆಗಳೂ ನಮ್ಮ ಓದಿಗೆ ದಕ್ಕುತ್ತವೆ. ಒಟ್ಟಿನಲ್ಲಿ ‘ಹೊನ್ನ ಕಣಜ’ದ ಈ ಪ್ರಥಮ ಸಂಪುಟ ನವ್ಯ, ನವೋದಯ, ಬಂಡಾಯ, ದಲಿತ ಈ ಎಲ್ಲ ಪ್ರಜ್ಞೆಗಳ ಪಾತಳಿಯಲ್ಲಿ ರೂಪುಗೊಂಡು ಕಥಾಸಾಹಿತ್ಯಾಸಕ್ತರಿಗೆ ಒಂದು ಅಧ್ಯಯನ ಗ್ರಂಥವಾಗಿಯೂ ಉಪಯೋಗಕ್ಕೆ ಬರುತ್ತದೆ. 

        ಸಂಪುಟದಲ್ಲಿನ ಎಲ್ಲ ಐವತ್ತು ಕಥೆಗಳು ವೈವಿಧ್ಯಮಯವಾಗಿರುವುದರಿಂದ ಒಂದು ಸಮೃದ್ಧ ಓದಿನ ಅನುಭವ ಓದುಗನದಾಗುತ್ತದೆ. ಕಥೆಗಳು ಸೃಷ್ಟಿಗೊಂಡ ಕಾಲಾವಧಿ ಸುಮಾರು ಆರು ದಶಕಗಳಿಗೆ ವಿಸ್ತರಿಸಿರುವುದರಿಂದ ಇಡೀ ಆರು ದಶಕಗಳ ಸಾಮಾಜಿಕ ಬದುಕು ಇಲ್ಲಿನ ಕಥೆಗಳಲ್ಲಿ ರೂಪುತಾಳಿದೆ. ಜೊತೆಗೆ ಇಲ್ಲಿನ ಎಲ್ಲ ಐವತ್ತು ಕಥೆಗಾರರು ನವ್ಯ, ನವೋದಯ, ಬಂಡಾಯ, ದಲಿತ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಗುರುತಿಸಿಕೊಂಡಿರುವುದರಿಂದ ಕಥೆಗಳು ಒಂದಕ್ಕಿಂತ ಮತ್ತೊಂದು ವಿಭಿನ್ನವಾಗಿವೆ. ಮೊದಲ ಕಥೆ ‘ತಾಯಿ’ಯಿಂದ ಕೊನೆಯ ಕಥೆ ‘ಕತ್ತಲೆ ಮೌನ ಮತ್ತು’ವರೆಗಿನ ಕಥೆಗಳಲ್ಲಿ ಶೈಲಿ ಮತ್ತು ಕಥನ ಕಟ್ಟುವ ಕ್ರಮದಲ್ಲಿ ವೈವಿಧ್ಯತೆಯಿದ್ದರೂ ಎಲ್ಲ ಕಥೆಗಾರರ ಹುಡುಕಾಟ ಮಾತ್ರ ಮನುಷ್ಯ ಪ್ರೀತಿ ಹಾಗೂ ಜೀವನ ಪ್ರೀತಿಯೇ. 1958 ರಲ್ಲಿ ಪ್ರಕಟವಾದ ಪೂರ್ಣಚಂದ್ರ ತೇಜಸ್ವಿ ಅವರ ‘ಲಿಂಗಬಂದ’ ಕಥೆ ಮಲೆನಾಡಿನ ಮಳೆಗಾಲದ ದಟ್ಟ ಅನುಭವವನ್ನು ಕಟ್ಟಿಕೊಡುತ್ತದೆ. ಪ್ರಕೃತಿ ಪ್ರಿಯರಾದ ತೇಜಸ್ವಿ ಅವರ ಕಥೆಗಳಲ್ಲಿ ಪ್ರಕೃತಿ ಕೂಡ ಒಂದು ಪಾತ್ರವಾಗಿ ಕಾಣಿಸಿಕೊಳ್ಳುತ್ತದೆ ಎನ್ನುವುದು ಬಹುತೇಕ ವಿಮರ್ಶಕರ ಅನಿಸಿಕೆ. ಭೋರೆನ್ನುವ ಸದ್ದು ಮಾಡುವ ಗಾಳಿ, ಹೆಚಿಚಿನ ಮೇಲೆ ಸದ್ದು ಮಾಡುವ ಮಳೆ, ನಿರಂತರ ನಿನಾದ ಹುಟ್ಟಿಸುವ ಜೀರುಂಡೆಗಳು, ತೂಗಾಡುವ ತೆಂಗಿನ ಮರ ಹೀಗೆ ಇಡೀ ಪ್ರಕೃತಿಯೇ  ಪಾತ್ರವಾಗಿ ಮೂಡಿದ ಅನುಭವ ಓದುಗನದಾಗುತ್ತದೆ. ಮಲೆನಾಡಿನ ಮಳೆಗಾಲದ ರಾತ್ರಿಯನ್ನು ವರ್ಣಿಸುವಾಗ ತೇಜಸ್ವಿ ಅವರು ಭಾಷೆಯನ್ನು ಅತ್ಯಂತ ಸಶಕ್ತವಾಗಿ ದುಡಿಸಿಕೊಂಡಿರುವರು. ‘ಭರ್ರನೆ ಬೀಸಿದ ಗಾಳಿಗೆ ದೀಪ ತೂರಾಡಿ ಇನ್ನೇನು ಆರಿಯೇ  ಹೋಯಿತು ಎನ್ನುವಚಿತಾಗಿ ಮತ್ತೆ ಕುಣಿ ಕುಣಿದು ಉರಿಯತೊಡಗಿತು’ ಇಂಥ ಸಾಲುಗಳನ್ನು ಓದುವುದೇ ಒಂದು ಅಪೂರ್ವ ಅನುಭವವಾಗಿ ಕಥೆ ಓದುಗನ ಪ್ರಜ್ಞೆಯನ್ನು ಪ್ರವೇಶಿಸುತ್ತದೆ.

          ಪಿ.ಲಂಕೇಶ್ ಅವರ ‘ನಾನಲ್ಲ’ ಕಥೆ ನಾವು ಬದುಕುತ್ತಿರುವ ವ್ಯವಸ್ಥೆಯ ಕ್ರೌರ್ಯವನ್ನು ಅನಾವರಣಗೊಳಿಸುತ್ತದೆ. ಈ ಬದುಕಿನ ಧಾವಂತದಲ್ಲಿ ನಮ್ಮ ನಮ್ಮ ಬದುಕಷ್ಟೇ ಮುಖ್ಯವಾಗುತ್ತಿರುವಾಗ ಮನುಷ್ಯನೆನಿಸಿಕೊಂಡ ಪ್ರಾಣಿ ಮನುಷ್ಯತ್ವವನ್ನು ಕಳೆದುಕೊಂಡು ಮುಖವಾಡ ಧರಿಸಿ ಬದುಕುತ್ತಿರುವ ಎನ್ನುವುದನ್ನು ಕಥೆ ಅರ್ಥಪೂರ್ಣವಾಗಿ ಧ್ವನಿಸುತ್ತದೆ. ರಸ್ತೆಯ ಮೇಲೆ ಅನಾಥವಾಗಿ ಬಿದ್ದ ಹೆಣವನ್ನು ನೋಡದಷ್ಟೂ ಮನುಷ್ಯ ಸಂಬಂಧಗಳು ಜಾಳು ಜಾಳಾಗಿವೆ ಎನ್ನುವುದನ್ನು ಲಂಕೇಶ್ ತಮ್ಮ ಎಂದಿನ ವ್ಯಂಗ್ಯದಲ್ಲಿ ಹೀಗೆ ಹೇಳುತ್ತಾರೆ ‘ಮನೆಯಲ್ಲಿ ಇದ್ದದ್ದು ತಿಂದು, ಆಫೀಸಿನಲ್ಲಿ ವಿಧೇಯವಾಗಿ ದುಡಿದು, ಭಾರತದ ಸತ್ಪ್ರಜೆ ಅನ್ನಿಸಿಕೊಳ್ಳುವುದು ಬಿಟ್ಟು ಆ ಹೆಣದ ಹತ್ತಿರ ಏಕೆ ಹೋಗೋಣ ಎನ್ನುವಂತೆ ಹೋಗುತ್ತಿದ್ದ ಜನ’. 

          ಅಪ್ಪ ಅಮ್ಮನ ತೀರ ಸಂಪ್ರದಾಯ ಮತ್ತು ದೈವಭಕ್ತಿಯ ನಡುವೆ ಸಿಲುಕಿ ನಲುಗುವ ಹೆಣ್ಣೊಬ್ಬಳ ಕಥೆಯನ್ನು ಎಸ್.ದಿವಾಕರರ ‘ಕ್ರೌರ್ಯ’ ಅತ್ಯಂತ ಆರ್ದ್ರವಾಗಿ ಕಟ್ಟಿಕೊಡುತ್ತದೆ. ಮೂವತ್ತಾರು ವರ್ಷವಾದರೂ ಇನ್ನು ಮದುವೆಯಾಗದ ಅಲಮೇಲುಗೆ ಮನೆಯೇ  ಜೈಲಾಗಿದೆ. ಹುಟ್ಟಿದೊಡನೆ ಪೋಲಿಯೊ  ರೋಗಕ್ಕೆ ತುತ್ತಾಗಿ ಹೆಳವಳಾದ ಅಲಮೇಲು ಕಣ್ಮನ ಸೆಳೆಯುವ ಹುಡುಗಿಯೇನೂ ಅಲ್ಲ. ಇಂಥ ಅಲಮೇಲುವೂ ಪ್ರೇಮಪಾಶದಲ್ಲಿ ಸಿಕ್ಕಿಬಿದ್ದಿದ್ದಳು. ಅದು ಒಂದಲ್ಲ ಎರಡು ಸಲ. ಒಮ್ಮೆ ರಾಮಾನುಜ ಇನ್ನೊಮ್ಮೆ ಮೆಳ್ಳುಗಣ್ಣಿನ ಕುಳ್ಳ ಅವಳ ಬದುಕಲ್ಲಿ ಪ್ರವೇಶಿಸಿ ಅಲಮೇಲುವಿನಲ್ಲಿ ಪ್ರೇಮದ ನವಿರು ಭಾವನೆ ಮೂಡಿಸಿದ್ದರು. ನನ್ನನ್ನೂ ಪ್ರೀತಿಸುವವರಿದ್ದಾರೆ ಎನ್ನುವ ಭಾವವೇ ಮೆಳ್ಳುಗಣ್ಣಿನ ಹುಡುಗನನ್ನು ಹುಡುಕಿಕೊಂಡು ಅಲಮೇಲುವನ್ನು ಆ ಕೊಳಚೆಗೇರಿಗೆ ಕರೆದೊಯ್ಯುತ್ತದೆ. ಪ್ರೀತಿಯನ್ನು ಅರಸಿ ಹೋದವಳು ಅನಿರೀಕ್ಷಿತವಾಗಿ ನಡೆದ ಘಟನೆಯೊಂದರಲ್ಲಿ ಚೂರಿ ಇರಿತಕ್ಕೆ ಒಳಗಾಗಿ ನಡು ರಸ್ತೆಯಲ್ಲೇ ಪಳನಿಚಾಮಿಯ ಬತ್ತಲೆದೆಗೆ ಒರಗಿ ಕೂತಿದ್ದಾಳೆ. ಆ ಸಾವಿನ ಘಳಿಗೆಯಲ್ಲೂ ಅಲಮೇಲುಗೆ ಪಳನಿಚಾಮಿಯ ಕಣ್ಣುಗಳಲ್ಲಿ ಕರುಣೆ, ಧ್ವನಿಯಲ್ಲಿ ಅನುಕಂಪ ಕಾಣಿಸುತ್ತದೆ. ಪ್ರೀತಿಯ ಹುಡುಕಾಟದಲ್ಲೇ ಕ್ರೌರ್ಯಕ್ಕೆ ಬಲಿಯಾಗುವ ಅಲಮೇಲುವಿನ ಕಥೆ ಓದುಗರ ಅಂತ:ಕರಣವನ್ನು ತಟ್ಟುತ್ತದೆ. 

           ನಾ.ಮೊಗಸಾಲೆ ಅವರ ‘ಕಿಡ್ನಿ’ಯಲ್ಲಿ ರಾಜಕೀಯದ ಹಿತಾಸಕ್ತಿಗೆ ಬಲಿಯಾಗುವ ದಲಿತ ಯುವಕನೋರ್ವನ ಕಥೆಯಿದೆ. ವಿಡಂಬನೆ ಮತ್ತು ನವಿರು ಹಾಸ್ಯದಿಂದ ಕಥೆ ಓದುಗನಿಗೆ ತೀರ ಆಪ್ತವಾಗುತ್ತದೆ. ಒಂದು ಕಾಲದಲ್ಲಿ ಆಪ್ತರಾಗಿದ್ದ ಹಲಗೆಪ್ಪ ಮತ್ತು ತಗಡಪ್ಪ ರಾಜಕೀಯದ ಚದುರಂಗದಾಟಕ್ಕೆ ಸಿಕ್ಕು ಈಗ ಹಾವು ಮುಂಗೂಸಿಯಂತಾಗಿದ್ದಾರೆ. ಈ ನಡುವೆ ಹಲಗೆಪ್ಪ ತನ್ನ ಮನೆಯ ಜೀತದಾಳು ಹರಿಜನ ಪರ್ದೇಶಿಯ ಮಗ ಗುಡ್ಡನ ಕಿಡ್ನಿಯನ್ನು ಯಾರಿಗೂ ತಿಳಿಯದಂತೆ ತನ್ನ ಹೆಂಡತಿಗೆ ಕಸಿ ಮಾಡಿಸಿದ್ದಾನೆ. ವಿಷಯ ಹೇಗೋ ತಗಡಪ್ಪನಿಗೆ ಗೊತ್ತಾಗಿದೆ. ಹಲಗೆಪ್ಪನನ್ನು ರಾಜಕೀಯವಾಗಿ ಮುಗಿಸಲು ತಗಡಪ್ಪ ದಲಿತ ಹುಡುಗ ಗುಡ್ಡನಿಗಾದ ಅನ್ಯಾಯವನ್ನು ದಾಳವಾಗಿ ಉಪಯೋಗಿಸುತ್ತಾನೆ. ದಲಿತ ಯುವಕ ಸಿದ್ದಪ್ಪನನ್ನು ಮುಂದಿಟ್ಟುಕೊಂಡು ಮೆರವಣಿಗೆ ಮಾಡುವ ತಗಡಪ್ಪನ ಯೋಜನೆಯನ್ನು ಹಲಗೆಪ್ಪ ದಲಿತ ಯುವಕನನ್ನೇ ಮುಂದಿಟ್ಟುಕೊಂಡು ವಿಫಲಗೊಳಿಸುತ್ತಾನೆ. ಒಂದು ಸಮುದಾಯದ ಜನರನ್ನು ದಾಳವಾಗಿ ಬಳಸಿಕೊಂಡು ರಾಜಕೀಯವಾಗಿ ಬೆಳೆಯುವುದನ್ನು ಕಥೆ ವಿಡಂಬನಾತ್ಮಕವಾಗಿ ಹೇಳುತ್ತದೆ. ‘ಥೂ ಗಂಡಸಿನ ಬೀಜವನ್ನು ಹೊಟ್ಟೆಯೊಳಗಿಟ್ಟು ಹೆಂಗಸೇಕೆ ಬದುಕಬೇಕು?’ ಎನ್ನುವ ಹೆಂಗಸರ ಮಾತು, ತನ್ನ ಮಗನ ತರಡುಬೇಳೆಯನ್ನೇ ಕಿತ್ತು ಗುಡ್ಡನ ಪುಂಸತ್ವವನ್ನೇ ಧನಿಗಳು ತೆಗೆದರಲ್ಲ ಎನ್ನುವ ಪರ್ದೇಶಿಯ ಸಿಟ್ಟು ಆ ಕ್ಷಣಕ್ಕೆ ಅನಕ್ಷರಸ್ಥರ ಅಮಾಯಕತೆಯನ್ನು ಪ್ರತಿಬಿಂಬಿಸುತ್ತವೆ. 

           ಮುಖವಾಡವನ್ನು ಕಳಚಿ ಅದರ ಹಿಂದಿನ ನಿಜವಾದ ಮುಖಗಳನ್ನು ಅನಾವರಣಗೊಳಿಸುವ ಬಿ.ಎಲ್.ವೇಣು ಅವರ ‘ಸುಡುಗಾಡು ಸಿದ್ದನ ಪ್ರಸಂಗ’ ಈ ಸಂಪುಟದ ಮಹತ್ವಪೂರ್ಣ ಕಥೆಗಳಲ್ಲೊಂದು. ಮನುಷ್ಯ ಸಂಪರ್ಕದಿಂದ ದೂರಾಗಿ ಸ್ಮಶಾನದಲ್ಲಿ ವಾಸಿಸುತ್ತಿರುವ ಸಿದ್ದನಿಗೆ ಸಂಗಾತಿಯಾಗಿ ಜುಂಜಿ ಎನ್ನುವ ಹೆಣ್ಣುಜೀವವಿದೆ ಮತ್ತು ಅವರಿಬ್ಬರಿಗೂ ಹುಟ್ಟಿದ ಆರುವರ್ಷದ ಮಗುವಿದೆ. ಚಿಕ್ಕವನಿರುವಾಗಲೆ ಮನೆಬಿಟ್ಟು ಓಡಿಬಂದು ಭೈರನ ಪರಿಚಯವಾಗಿ ಸ್ಮಶಾನ ಸೇರಿದ ಸಿದ್ದನದು ಸ್ಥಿತಪ್ರಜ್ಞ ಮನೋಭಾವ. ಬೆಂಕಿಭೈರ ಸತ್ತಮೇಲೆ ಈಗ ಇಡೀ ಸ್ಮಶಾನದ ಉಸ್ತುವಾರಿ ಸಿದ್ದನದೇ. ಸಿದ್ದನಲ್ಲೂ ಒಂದು ನಿಯತ್ತಿದೆ. ಬಡವರ ಮನೆಯ ಶವವೆಂದು ತಿಳಿದಾಗ ಹೆಚ್ಚು ಕಾಸಿಗಾಗಿ ಗುಂಜಾಡುವುದಿಲ್ಲ. ಕಥೆಯ ಕೊನೆಯ ಭಾಗದಲ್ಲಿ ಮೇಷ್ಟ್ರೊಬ್ಬರ ಶವಸಂಸ್ಕಾರದ ಸನ್ನಿವೇಶ ಸಿದ್ದನ ಪೂರ್ವಾಪರವನ್ನು ಓದುಗರಿಗೆ ಪರಿಚಯಿಸುತ್ತದೆ. ಜೊತೆಗೆ ಲೇಖಕರು ಈ ಸಂದರ್ಭ ಮೇಷ್ಟ್ರ ಸುಶಿಕ್ಷಿತ ಮಕ್ಕಳ ಸಂಕುಚಿತ ಮನಸ್ಸುಗಳನ್ನು ಅನಾವರಣಗೊಳಿಸಿ ಮುಖವಾಡಗಳನ್ನು ಕಳಿಚಿ ಹಾಕುತ್ತಾರೆ.  
      ಕೆಲವೊಮ್ಮೆ ಲೇಖಕರು ತಮ್ಮ ಕಥೆ, ಕಾದಂಬರಿಗಳಲ್ಲಿ ಗ್ರಾಂಥಿಕ ಭಾಷೆಗೆ ಬದಲು ಗ್ರಾಮ್ಯಭಾಷೆಯನ್ನು ಬಳಸಿಕೊಳ್ಳುವುದುಂಟು. ರಷ್ಯನ್ ಕಥನಶಾಸ್ತ್ರಜ್ಞರು ವಾದಿಸುವಂತೆ ಗ್ರಾಂಥಿಕ ಭಾಷೆ ಅತಿಯಾದ ಶಿಷ್ಟಾಚಾರದಿಂದಾಗಿ ತನ್ನ ಧ್ವನಿಶಕ್ತಿಯನ್ನು ಕಳೆದುಕೊಂಡಿರುತ್ತದೆ. ಆದ್ದರಿಂದ ಲೇಖಕ ತನ್ನ ಕಥೆ, ಕಾದಂಬರಿಯಲ್ಲಿನ ಭಾಷೆಗೆ ಧ್ವನಿಶಕ್ತಿಯನ್ನು ನೀಡಲು ಭಾಷೆಯನ್ನು ಅಪರಿಚಿತಗೊಳಿಸುತ್ತಾನೆ (defamiliarization). ಆಗ ಆತ ಈ ಗ್ರಾಮ್ಯಭಾಷೆ (regional dialect) ಅಥವಾ ಸಮುದಾಯದ ಭಾಷೆ (caste dialect) ಬಳಸಿಕೊಳ್ಳುತ್ತಾನೆ. ಭೈರಪ್ಪನವರು ತಮ್ಮ ಕಾದಂಬರಿಗಳಲ್ಲಿನ ಪಾತ್ರಗಳ ಸಂಭಾಷಣೆಗಾಗಿ ಹಾಸನ ಸೀಮೆಯ ಭಾಷೆಯನ್ನೇ ಬಳಸಿಕೊಳ್ಳುವುದು ಇದೇ ಕಾರಣದಿಂದ. ಭಾಷೆಗೆ ಧ್ವನಿಶಕ್ತಿಯನ್ನು ನೀಡಲು ದೇವನೂರ ಮಹಾದೇವ ‘ಸಂಬಂಧ ದೊಡ್ಡದು’ ಎನ್ನುವ ಗ್ರಾಂಥಿಕ ಕನ್ನಡವನ್ನು ‘ಸಂಬಂಜ ಅನ್ನೊದು ದೊಡ್ಡದು ಕನಾ’ ಎಂದು ಗ್ರಾಮ್ಯ ಕನ್ನಡವಾಗಿಸುತ್ತಾರೆ. ‘ಹೊನ್ನ ಕಣಜ’ದ ಈ ಸಂಪುಟದಲ್ಲಿ ಅನೇಕ ಕಥೆಗಾರರು ಕಥನ ಕಟ್ಟುವಿಕೆಯಲ್ಲಿ ಗ್ರಾಮೀಣ ಭಾಷೆಯನ್ನು ಸಶಕ್ತವಾಗಿ ದುಡಿಸಿಕೊಂಡಿರುವರು. ಮಲೆನಾಡ ಸೀಮೆಯ, ದಕ್ಷಿಣ ಕನ್ನಡದ, ಕರಾವಳಿ ತೀರದ, ಉತ್ತರ ಕರ್ನಾಟಕದ ಗ್ರಾಮ್ಯ ಭಾಷೆಗಳು ಅನೇಕ ಕಥೆಗಳಲ್ಲಿ ಭಾಷೆಗೆ ಧ್ವನಿಶಕ್ತಿಯನ್ನು ನೀಡಿವೆ. ಕಥೆಗಳಲ್ಲಿನ ಗ್ರಾಮೀಣ ಭಾಷೆಯ ಸೊಗಡು ಈ ಕೆಳಗಿನ ಸಾಲುಗಳನ್ನು ಓದಿದಾಗ ಅನುಭವಕ್ಕೆ ಬರುತ್ತದೆ.

● ನೀ ಎಲ್ಲೆರೆ ಒಗಿ ಆಕಿನ್ನ ಆದರ ನಾ ಕೂತ ಟೊಂಗಿಗೆ ಶಿಕ್ಕೊಳ್ಳಾರಧಂಗ ಮಾಡು. ಈ ಟೊಂಗಿ ಭಾಳ ತ್ರಾಸಿಂದದನೋ ಬಾಳಾ (ಘಟಿತ).
● ಬ್ಯಾಡವ್ವೊ ನಾ ಸತ್ರ ಇಲ್ಲೆ ಸಾಯ್ಬೇಕು. ನೀ ಓಡಿಬುಡು ನಾ ಸತ್ನೆಂತ ತಿಳಕಂಡು ಬುಡು. ಪಾಲಿಗೆ ಬಂದದ್ದು ಯಾರ ತಪ್ಸತಾರ (ಉಡಿಯಲ್ಲಿಯ ಉರಿ).
● ಯಾರ ಏನು ಅನ್ನಲ್ಲಕನ. ಯಾಕಂದಾರೊ ಅಂತೀನಿ? ಯಾರಂಗ್ರಾಣೇಲೂ ಬದುಕ್ತಾ ಇಲ್ಲ (ಸುಗ್ಗಿ).
● ಬಿದ್ದ ನೆಲ ಹಿಡದೇ ಏಳಬೇಕ ಮಗಾ (ಕಡಿತನಕಾ ಕಾಯೋ ಅಭಿಮಾನ).
● ಆಕಾಶದ ಚಿಕ್ಕಿಗಳಿಗೆ ಒಮ್ಮೆಲೇ ಏಣಿ ಹತ್ತಿ ಮುಟ್ಟಲಿಕ್ಕೆ ಆಗತೈತಿ ಏನು? (ದಿಂಡೀ).
● ಹೊತ್ತ ಹೋಪಲ್ಲೆ ಬೇಕಾದ್ರೆ ಒಂದಿಷ್ಟು ಭಸ್ಮ, ಚೀಟು ಮಾಡದು ಕಲಿತ್ಗ. ಗುಡ್ಡೆ ಮೇಲಿಪ್ಪ ಯಾವ್ಯಾವ ನಾರು, ಬೇರು ಎಂತಕ್ಕೆ ಬೇಕು ಹೇಳಿ ತಿಳ್ಕ. ನಾಕು ಜನಕ್ಕೆ ಉಪಕಾರಾದ್ರೂ ಆಗ್ತು (ಎರವಿನೊಡವೆ).

             ಈ ಸಂಪುಟದಲ್ಲಿ ಹನ್ನೆರದು ಲೇಖಕಿಯರು ಬರೆದ ಕಥೆಗಳಿರುವುದು ಕಥಾಸಂಕಲನದ ವಿಶೇಷತೆಗಳಲ್ಲೊಂದು. ಬದಲಾದ ಕಾಲಘಟ್ಟದಲ್ಲಿ ಪುರುಷರಷ್ಟೇ ಮಹಿಳೆಯರೂ ಬರವಣಿಗೆಯನ್ನು ಒಂದು ಅಭಿವ್ಯಕ್ತಿ ಮಾಧ್ಯಮವಾಗಿ ಬಳಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಮುನ್ನೆಲೆಗೆ ಬಂದಿರುವರು. ಮಹಿಳಾ ಸಾಹಿತ್ಯವೆನ್ನುವುದು ಅಡುಗೆ ಮನೆಯ ಸಾಹಿತ್ಯವೆಂದು ಗೇಲಿ ಮಾಡುತ್ತಿದ್ದ ಪುರುಷ ಲೇಖಕ ಬಣದ ತಿರಸ್ಕಾರವನ್ನೇ ಸವಾಲಾಗಿ ತೆಗೆದುಕೊಂಡು ಲೇಖಕಿಯರು ಸಮಾಜದ ಅನೇಕ ಸಮಸ್ಯೆಗಳಿಗೆ ಮುಖಾಮುಖಿಯಾಗುತ್ತ ಪ್ರವರ್ಧಮಾನಕ್ಕೆ ಬಂದದ್ದು ಅದೊಂದು ಆಶಾದಾಯಕ ಬೆಳವಣಿಗೆ ಎನ್ನಬಹುದು. ಈ ಸಂಪುಟದ ಆರಂಭದ ನಾಲ್ಕು ದಶಕಗಳ 33 ಕಥೆಗಳಲ್ಲಿ ಕೇವಲ ಎರಡು ಕಥೆಗಳು ಮಾತ್ರ ಲೇಖಕಿಯರು ಬರೆದವುಗಳಾದರೆ ನಂತರದ ಎರಡು ದಶಕಗಳ (1997-2016) ಹದಿನೇಳು ಕಥೆಗಳಲ್ಲಿ ಹತ್ತು ಲೇಖಕಿಯರ ಕಥೆಗಳಿರುವುದು ಮಹಿಳಾ ಸಾಹಿತ್ಯದ ಸಮೃದ್ಧ ಬೆಳವಣಿಗೆಯನ್ನು ಬಿಂಬಿಸುತ್ತದೆ. ನಾಗವೇಣಿ, ಜಯಶ್ರೀ ದೇಶಪಾಂಡೆ, ಅಲಕ ತೀರ್ಥಹಳ್ಳಿ, ಕಸ್ತೂರಿ ಬಾಯಿರಿ, ಕೆ.ಎ.ಶಾಂತಿ, ಕವಿತಾ ರೈ, ವಿನಯಾ, ಪ್ರಜ್ಞಾ ಮತ್ತಿಹಳ್ಳಿ ಮುಂತಾದ ಲೇಖಕಿಯರು ಮಹಿಳಾ ಸಾಹಿತ್ಯದ ಸಿದ್ಧಸೂತ್ರವನ್ನು ಮುರಿದು ಹೊಸ ಹುಡುಕಾಟದಲ್ಲಿ ತೊಡಗಿರುವುದು ಕನ್ನಡ ಸಾಹಿತ್ಯದ ಮಹತ್ವದ ಬೆಳವಣಿಗೆಗಳಲ್ಲೊಂದು. ಆದರೆ ಈ ಸಂದರ್ಭ ಈ ಕಿರಿಯ ಲೇಖಕಿಯರಿಗೆ ಬದುಕಿನ ಅನೇಕ ಸ್ಥಿತ್ಯಂತರಗಳಿಗೆ ಮುಖಮಾಡಿ ನಿಂತು ಅಭಿವ್ಯಕ್ತಿಸಲು ಒಂದು ವೇದಿಕೆಯನ್ನು ನಿರ್ಮಿಸಿಕೊಟ್ಟಿದ್ದು ಹಿರಿಯ ಲೇಖಕಿಯರಾದ ಗೀತಾ ನಾಗಭೂಷಣ, ವೈದೇಹಿ, ಸಾರಾ ಅಬೂಬಕ್ಕರ ಎನ್ನುವುದನ್ನು ಮರೆಯಬಾರದು. 

        ಹೊನ್ನ ಕಣಜದ ಎಲ್ಲ ಹನ್ನೆರಡು ಲೇಖಕಿಯರ ಕಥೆಗಳಲ್ಲಿ ಎಂಟು ಕಥೆಗಳು ಮಹಿಳಾ ಸಂವೇದನೆಯನ್ನು ಅಭಿವ್ಯಕ್ತಗೊಳಿಸುತ್ತವೆ. ‘ಕೃಷ್ಣಾ ಮೂರ್ತಿ ಕಣ್ಣಾಮುಂದೆ’ಯ ಭಾಗೀರಥಿ, ‘ಘಟಿತ’ದ ಮೀನಾಕ್ಷಿ, ‘ಕಡಿತನಕಾ ಕಾಯೋ ಅಭಿಮಾನ’ದ ಕರಿಯಮ್ಮ, ‘ದಿಂಡೀ’ಯ ದ್ಯಾಮವ್ವ, ‘ನಾಟಿ ಓಟ’ದ ದೇವಣಿ, ‘ಅದು’ವಿನ ಸಾವಿ, ‘ತುದಿ ಬೆಟ್ಟದ ನೀರ ಹಾಡು’ದ ಸುಬೋಧಿನಿ ಇವರೆಲ್ಲ ಒಂದಲ್ಲ ಒಂದು ಹಂತದಲ್ಲಿ ಬದುಕಿನಲ್ಲಿ ಶೋಷಣೆಗೆ ಒಳಗಾದವರೇ. ಆ ಶೋಷಣೆಯನ್ನು ಎದುರಿಸಿ ಹೊರಬಂದು ಹೊಸ ಬದುಕನ್ನು ಕಟ್ಟಿಕೊಳ್ಳುವುದು ಕಥೆ ಮುಂದೆ ಮತ್ತೆಲ್ಲೋ ಬೆಳೆಯುವ ಮುನ್ಸೂಚನೆಯಾಗಿ ಕಾಣಿಸುತ್ತದೆ. ಈ ಕಥಾ ಸಂಕಲನದಲ್ಲಿ ಲೇಖಕಿಯರು ಸೃಷ್ಟಿಸಿದ ಪಾತ್ರಗಳಲ್ಲಿ ದೇವಣಿ, ಕರಿಯಮ್ಮ, ದ್ಯಾಮವ್ವ, ಸುಬೋಧಿನಿ ಪಾತ್ರಗಳು ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸುವುದರ ಮೂಲಕ ಓದುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತವೆ. ಜಯಶ್ರೀ ದೇಶಪಾಂಡೆ ಅವರ ‘ಘಟಿತ’ದ ಮೀನಾಕ್ಷಿ ಕಥೆಯ ಕೇಂದ್ರ ಪಾತ್ರವಾದರೂ ಆಕೆ ಭೌತಿಕವಾಗಿ ಕಾಣಿಸಿಕೊಳ್ಳುವುದು ಕಡಿಮೆ. ಕಥೆಯ ಮುಖ್ಯ ಸಮಸ್ಯೆ ಮೀನಾಕ್ಷಿ ಸಂಬಂಧಿಸಿದ್ದಾಗಿದ್ದರೂ ಆ ಸಮಸ್ಯೆಯಿಂದ ಅವಳನ್ನು ಬಿಡಿಸುವ ರಾಜಣ್ಣನೇ ಮುನ್ನೆಲೆಗೆ ಬರುವುದು ಕಥೆಯ ತೀವ್ರತೆಯನ್ನು ಸರಳಗೊಳಿಸುತ್ತದೆ. ನಾಗವೇಣಿ, ಶಾಂತಿ ಅಪ್ಪಣ್ಣ, ಅಲಕಾ ತೀರ್ಥಹಳ್ಳಿ ಈ ಕಥೆಗಾರ್ತಿಯರು ಮಹಿಳಾ ಶೋಷಣೆಯ ಪರಿಧಿಯಿಂದ ಹೊರಬಂದು ತಮ್ಮ ಕಥೆಗಳಲ್ಲಿ ಹೊಸ ಅನ್ವೇಷಣೆಗೆ ತೊಡಗುವುದು ಬದಲಾಗುತ್ತಿರುವ ಮಹಿಳಾ ಸಾಹಿತ್ಯಕ್ಕೆ ದಿಕ್ಸೂಚಿಯಾಗಿ ಕಾಣಿಸುತ್ತದೆ. 

     ಕಥೆ ಬರೆಯುತ್ತಿರುವ ಘಳಿಗೆ ಕಥೆಗಾರ ಓದುಗರನ್ನು ಕುತೂಹಲಿಗಳನ್ನಾಗಿಸಲು ತಂತ್ರದ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ. ಇದೊಂದು ಓದುಗರನ್ನು ಸಂಪೂರ್ಣವಾಗಿ ಕಥೆಯ ಓದಿನಲ್ಲಿ ತಲ್ಲೀನಗೊಳಿಸುವ ಸೃಜನಶೀಲ ಪ್ರಕ್ರಿಯೆ.  ಆದ್ದರಿಂದ ಬಹಳಷ್ಟು ಕಥೆಗಾರರು ಕಥೆಯ ಆರಂಭದಲ್ಲೇ ತಂತ್ರವನ್ನು ಬಳಸಿಕೊಂಡು ಓದುಗರ ಆಸಕ್ತಿ ಕೆರಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಹೊನ್ನ ಕಣಜದ ಈ ಸಂಪುಟದಲ್ಲಿ ಕೆಲವು ಕಥೆಗಾರರು ಇಂಥ ತಂತ್ರದ ಮೊರೆ ಹೋಗಿರುವುದು ಓದುಗರ ಅನುಭವಕ್ಕೆ ಬರುತ್ತದೆ. ಉದಾಹರಣೆಗೆ ನಾಗವೇಣಿ ಅವರ ‘ಒಡಲು’ ಕಥೆ ಆರಂಭವಾಗುವುದು ಹೀಗೆ ‘ಸೈಯದ್ದಿ ಆ ಊರು ಬಿಡುವ ನಿರ್ಧಾರಕ್ಕೆ ಬಂದೇ ಬಿಟ್ಟ. ಹೆಂಡತಿ ನಫೀಸಮ್ಮ ತನ್ನ ಒಡಲೊಳಗಿನ ಅಸಂಖ್ಯ ಭಾವನೆಗಳನ್ನು ಅದುಮಿಡಲು ಪ್ರಯತ್ನಿಸುತ್ತ ಸೊಂಟದಲ್ಲಿದ್ದ ಕೇಶವನಿಗೆ ಅಕ್ಕಿ ಪುಂಡಿ ತಿನ್ನಿಸುತ್ತಿದ್ದಳು. ಅಮ್ಮನ ದುಖ: ದುಗುಡಗಳ ಅರಿವಿಲ್ಲದ ಉಮ್ಮರ ಸಂಭ್ರಮದಿಂದ ಪುಟ್ಟ ಪುಟ್ಟ ಹೆಜ್ಜೆಯಿಡುತ್ತ ಓಡಾಡುತ್ತಿದ್ದ’. ಹೀಗೆ ಆರಂಭವಾಗುವ ಕಥೆ ಕೇಶವ ಎನ್ನುವ ಹೆಸರಿನೊಂದಿಗೆ ಓದುಗರಲ್ಲಿ ಕಥೆ ಕುರಿತು ಆಸಕ್ತಿಯನ್ನು ಹುಟ್ಟಿಸುತ್ತದೆ. ಶ್ರೀಕೃಷ್ಣ ಆಲನಹಳ್ಳಿ ಅವರ ‘ತೊರೆ ಬತ್ತಿರಲಿಲ್ಲ’ ಕಥೆಯನ್ನೂ ಇಂಥದ್ದೊಂದು ತಂತ್ರಕ್ಕೆ ಉದಾಹರಣೆಯಾಗಿ ಹೇಳಬಹುದು. ‘ಮಸಿ ಹಿಡಿದಿದ್ದ ದೀಪದ ಗಾಜನ್ನು ಬೂದಿಯಿಂದ ಉಜ್ಜಿ ಒರಸುತ್ತಿದ್ದ ಲಕ್ಷ್ಮಿಗೆ ನೆನ್ನೆ ಸಂಜೆ ಭಾವ ಹೇಳಿದ್ದು ಧುತ್ತೆಂದು ನೆನಪಾಯಿತು’ ಎನ್ನುವ ಆರಂಭದ ಸಾಲುಗಳನ್ನು ಓದುತ್ತಿದ್ದಂತೆ ಓದುಗ ಕಥೆಯ ಮುಂದಿನ ಸಾಲುಗಳಿಗೆ ಸಲೀಸಾಗಿ ಪಯಣಿಸುತ್ತಾನೆ. 

        ಒಟ್ಟಾರೆ ‘ಹೊನ್ನ ಕಣಜ’ ವಿಭಿನ್ನ ಕಥೆಗಳ ಓದಿನ ಒಂದು ಅಪೂರ್ವ ಅನುಭವ. ಆರು ದಶಕಗಳ ಅವಧಿಯಲ್ಲಿನ ವಿವಿಧ ಲೇಖಕರ ಕಥೆಗಳನ್ನು ಓದುವುದೇ ಒಂದು ಸಂಭ್ರಮ. ಕಥಾಸಾಹಿತ್ಯವೆನ್ನುವುದು ವಿವಿಧ ಕಾಲಘಟ್ಟದಲ್ಲಿ ಹೊಸ ಹೊಸ ಪ್ರಯೋಗಗಳಿಗೆ ತನ್ನನ್ನು ಒಡ್ಡಿಕೊಳ್ಳುತ್ತಲೇ ಬಂದಿದೆ. ಕಥನ ಕಟ್ಟುವ ಕ್ರಮ, ಶೈಲಿ, ಭಾಷೆಯನ್ನು ದುಡಿಸಿಕೊಳ್ಳುವ ಸೃಜನಶೀಲತೆ, ಕಥಾವಸ್ತುವಿನ ಆಯ್ಕೆ  ಹೀಗೆ ಅನೇಕ ಬದಲಾವಣೆಗಳನ್ನು ನಾವು ಕಥಾಸಾಹಿತ್ಯದಲ್ಲಿ ಕಾಣುತ್ತೇವೆ. ಆ ಎಲ್ಲ ಬದಲಾವಣೆಗಳನ್ನು ಇಡಿಯಾಗಿ ಒಂದೇ ಕೃತಿಯಲ್ಲಿ ಕಟ್ಟಿಕೊಟ್ಟಿರುವುದು ನಿಜವಾಗಿಯೂ ಅದೊಂದು ಸಾರ್ಥಕ ಕೆಲಸ. ಸಾಹಿತ್ಯಾಸಕ್ತರು ಮುಂದಿನ ಎರಡು ಸಂಪುಟಗಳಿಗಾಗಿ ಎದುರು ನೋಡುತ್ತಿರುವುದು ಅದು ಪ್ರಜಾವಾಣಿಯ ಕಥಾಸ್ಪರ್ಧೆಯ ಮಹತ್ವ ಮತ್ತು ಕಾಣ್ಕೆಗೆ ಪುರಾವೆಯಾಗಿದೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Friday, August 4, 2017

ಸಿನಿಮಾ ಮತ್ತು ವಾಸ್ತವಿಕ ಪ್ರಜ್ಞೆ

            ‘ನಿರ್ದೇಶಕ ಮನುಷ್ಯನ ಅನಿರೀಕ್ಷಿತ ಪದರುಗಳಿಗೆ ತನ್ನ ಒಳನೋಟವನ್ನು ಹರಿಸಿದಾಗ ಮಾತ್ರ ಅತ್ಯುತ್ತಮ ಸಿನಿಮಾಗಳ ಕಾಣ್ಕೆ ಸಾಧ್ಯ’ ಎನ್ನುತ್ತಾರೆ ಲಂಕೇಶ್. ಸಿನಿಮಾ ಎನ್ನುವುದು ಬದುಕಿಗೆ ಹತ್ತಿರವಾದ ಮತ್ತು ಫ್ಯಾಂಟಸಿಯಿಂದ ಮುಕ್ತವಾದ ಮಾಧ್ಯಮವಾದಾಗಲೇ ಉತ್ತಮ ಸಿನಿಮಾಗಳು ರೂಪುಗೊಳ್ಳಲು ಸಾಧ್ಯ ಎನ್ನುವುದು ಲಂಕೇಶರ ನಂಬಿಕೆಯಾಗಿತ್ತು. ಒಟ್ಟಾರೆ ಸಿನಿಮಾ ಎನ್ನುವುದು ಮಾನವನ ಮೂಲಭೂತ ದ್ವಂದ್ವ ಮತ್ತು ಅಸಹಾಯಕತೆಗೆ ಕನ್ನಡಿಯಾಗಬೇಕು ಎನ್ನುತ್ತಾರೆ ಲಂಕೇಶ್. ಈ ಕಾರಣದಿಂದಲೇ ಲಂಕೇಶ್ ನಿರ್ದೇಶಕರಾಗಿ ಪಲ್ಲವಿ, ಅನುರೂಪ, ಎಲ್ಲಿಂದಲೋ ಬಂದವರುನಂತಹ ಬದುಕಿಗೆ ಹತ್ತಿರವಾದ ಮತ್ತು ಫ್ಯಾಂಟಸಿಯಿಂದ ಮುಕ್ತವಾದ ಸಿನಿಮಾಗಳನ್ನು ಮಾಡಲು ಸಾಧ್ಯವಾಯಿತು. ಅವಾಸ್ತವಿಕ ನೆಲೆಯಲ್ಲಿ ರೂಪುಗೊಳ್ಳುತ್ತಿರುವ ಸಿನಿಮಾಗಳು ಮತ್ತು ಸಿನಿಮಾ ಮಾಧ್ಯಮವನ್ನು ಹೊಸ ಪರಿವೇಷದಲ್ಲಿ ನಾವು ನೋಡುತ್ತಿರುವ ಈ ಕಾಲಘಟ್ಟದಲ್ಲಿ ಲಂಕೇಶರಂಥ ನಿರ್ದೇಶಕರು ಮತ್ತೆ ಮತ್ತೆ ನೆನಪಾಗುತ್ತಾರೆ. ಸಿನಿಮಾವೊಂದು ಯಶಸ್ವಿಯಾಗಲು ಸಿನಿಮಾದ ಕಥೆಗಿಂತ ದೃಶ್ಯವೇ ಹೆಚ್ಚು ಪ್ರಸ್ತುತ ಎನ್ನುವ ಇವತ್ತಿನ ಸಿನಿಮಾ ಜನರ ಬದಲಾದ ಮನೋಭಾವ ಸಿನಿಮಾ ಅದೊಂದು ದೃಶ್ಯ ಮಾಧ್ಯಮ ಎನ್ನುವ ಮಾತನ್ನು ಮತ್ತೆ ಮತ್ತೆ ಸಾಬಿತು ಪಡಿಸುತ್ತಿದೆ. ಆಧುನಿಕ ತಂತ್ರಜ್ಞಾನ ಕೊಡಮಾಡುತ್ತಿರುವ ಏನೆಲ್ಲ ಸೌಲಭ್ಯಗಳನ್ನು ಬಳಸಿಕೊಂಡು ರೀಲು ಸುತ್ತುತ್ತಿರುವ ಸಿನಿಮಾ ಮಾಧ್ಯಮದವರು ಇಲ್ಲಿ ಕಥೆಗಿಂತ ಮೈನವಿರೆಳಿಸುವ ದೃಶ್ಯಗಳಿಗೇ ಹೆಚ್ಚು ಒತ್ತು ನೀಡುತ್ತಿರುವರು. ಬಾಹುಬಲಿಯಂಥ ಸಿನಿಮಾವೊಂದು ಎರಡು ಭಾಗಗಳಲ್ಲಿ ಮತ್ತು ಬಹುಭಾಷೆಗಳಲ್ಲಿ ನಿರ್ಮಾಣಗೊಂಡು ಭಾರೀ ಯಶಸ್ಸು ಗಳಿಸಲು ಸಾಧ್ಯವಾದದ್ದು ಸಿನಿಮಾದ ಕಥೆಗಿಂತ ಆ ಸಿನಿಮಾದಲ್ಲಿ ಗ್ರಾಫಿಕ್ ತಂತ್ರಜ್ಞಾನದಿಂದ ಬಳಸಿಕೊಂಡ ದೃಶ್ಯಗಳೇ ಮುಖ್ಯ ಕಾರಣ ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ. ಸಿನಿಮಾ ಪರದೆಯ ಮೇಲಿನ ಪ್ರೇಕ್ಷಕರ ನೋಟವನ್ನು ಅತ್ತಿತ್ತ ಕದಲದಂತೆ ಎರಡು ಎರಡೂವರೆ ತಾಸುಗಳ ಕಾಲ ಹಿಡಿದಿಟ್ಟರೆ ಯಶಸ್ಸು ಖಂಡಿತ ಎನ್ನುವುದನ್ನು ನಮ್ಮ ಸಿನಿಮಾ ಜನ ಅರ್ಥಮಾಡಿಕೊಂಡಿರುವರು. ಆದ್ದರಿಂದ ಇಲ್ಲಿ ಕಥೆಗಿಂತ ದೃಶ್ಯಗಳನ್ನು ವೈಭವೀಕರಿಸುವುದಕ್ಕೇ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ. ಆಕಾಶದೆತ್ತರದ ಬೆಟ್ಟಗಳನ್ನು ಸಲೀಸಾಗಿ ಏರಿಳಿಯುವುದು, ಬೃಹತ್ ಗಾತ್ರದ ಲಿಂಗವನ್ನು ನಿರಾಯಾಸವಾಗಿ ಎತ್ತುವುದು, ಧುಮ್ಮಿಕ್ಕುವ ಜಲಪಾತವನ್ನು ಏಣಿಯಾಗಿಸಿಕೊಂಡು ಅದರ ಮೂಲಕ್ಕೆ ಹೋಗಿ ನಿಲ್ಲುವುದು, ಸಾವಿರಾರು ಸೈನಿಕರನ್ನು ಕ್ಷಣಮಾತ್ರದಲ್ಲಿ ಹೊಡೆದುರುಳಿಸುವುದು ಹೀಗೆ ಕಲ್ಪನೆಗೂ ನಿಲುಕದ ದೃಶ್ಯಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಸಿನಿಮಾದಲ್ಲಿ ತುಂಬಿ ಪ್ರೇಕ್ಷಕರನ್ನು ಸಮ್ಮೋಹಿನಿಯಂತೆ ಸಿನಿಮಾ ಮಂದಿರಗಳ ಕಡೆ ಸೆಳೆಯಲಾಗುತ್ತಿದೆ. ಇಂಥ ಅವಾಸ್ತವಿಕ ಮತ್ತು ಅಸಹಜ ದೃಶ್ಯಗಳಿಂದ ಕೂಡಿದ ಸಿನಿಮಾದ ಅಲೆ ಎದುರು ವೃದ್ಧಾಪ್ಯದ ಸಮಸ್ಯೆಗಳನ್ನು ಆಧಾರವಾಗಿಟ್ಟುಕೊಂಡು ಬದುಕಿಗೆ ತೀರ ಹತ್ತಿರವಾದ ಸಿನಿಮಾವೊಂದು ಪ್ರೇಕ್ಷಕರ ಕೊರತೆಯಿಂದ ಸೋಲುವುದು ಸಿನಿಮಾ ಮಾಧ್ಯಮದ ದುರಂತಗಳಲ್ಲೊಂದು. 

ಇದು ಗ್ರಾಫಿಕ್ ಯುಗ


ಆಧುನಿಕ ತಂತ್ರಜ್ಞಾನ ಸಿನಿಮಾ ಮಾಧ್ಯಮದವರ ಕೆಲಸವನ್ನು ಅತ್ಯಂತ ಹಗುರಾಗಿಸಿದೆ. ತಂತ್ರಜ್ಞಾನದ ಸಹಾಯದಿಂದ ಪ್ರೇಕ್ಷರ ಕಲ್ಪನೆಗೂ ನಿಲುಕದ ದೃಶ್ಯಗಳನ್ನು ಸಿನಿಮಾದಲ್ಲಿ ಅಳವಡಿಸಲು ಸಾಧ್ಯವಾಗುತ್ತಿದೆ. ಈ ತಂತ್ರಜ್ಞಾನವನ್ನು ಮೊಟ್ಟ ಮೊದಲು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದು ಹಾಲಿವುಡ್ ಎನ್ನುವ ಸಿನಿಮಾ ಉದ್ಯಮ. ಅನಕೊಂಡ, ಜುರಾಸಿಕ್ ಪಾರ್ಕ್, ಟೈಟಾನಿಕ್, ಅವತಾರನಂಥ ಗ್ರಾಫಿಕ್ ಆಧಾರಿತ ಸಿನಿಮಾಗಳಿಗೆ ಪ್ರೇಕ್ಷಕ ವರ್ಗದಿಂದ ದೊರೆತ ಸ್ವಾಗತ ಮತ್ತು ಪಡೆದ ಅಭೂತಪೂರ್ವ ಗೆಲುವು ನಂತರದ ದಿನಗಳಲ್ಲಿ ವಿವಿಧ ಭಾಷೆಗಳ ಸಿನಿಮಾ ಮಾಧ್ಯಮದವರಿಗೆ ಸ್ಪೂರ್ತಿ ಮತ್ತು ಪ್ರೇರಣೆಯಾಯಿತು. ಹಾಲಿವುಡ್‍ನ್ ಈ ಸಿನಿಮಾಗಳನ್ನೇ ಮಾದರಿಯಾಗಿಟ್ಟುಕೊಂಡು ಹಿಂದಿ ಸಿನಿಮಾಗಳ ನಿರ್ದೇಶಕರು ಮತ್ತು ನಿರ್ಮಾಪಕರಗಳು ಗ್ರಾಫಿಕ್ ಆಧಾರಿತ ಹಲವಾರು ಸಿನಿಮಾಗಳನ್ನು ನಿರ್ಮಾಣ ಮಾಡಿ ಜನಪ್ರಿಯತೆಯೊಂದಿಗೆ ಗಲ್ಲಾಪೆಟ್ಟಿಗೆಯನ್ನು ತುಂಬಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಕಟ್ಟಡದಿಂದ ಕಟ್ಟಡಕ್ಕೆ ಸಲೀಸಾಗಿ ಜಿಗಿಯುವ, ಆಕಾಶದಲ್ಲೇ ಶತ್ರುಗಳನ್ನು ಸದೆಬಡಿಯುವ, ಖಳರಿಂದ ಜನಸಾಮಾನ್ಯರನ್ನು ರಕ್ಷಿಸಲು ನಾಯಕ ಕ್ಷಣಮಾತ್ರದಲ್ಲಿ ಪ್ರತ್ಯಕ್ಷನಾಗುವ ಕ್ರಿಶ್ ಸಿನಿಮಾ ಹಲವು ಭಾಗಗಳಲ್ಲಿ ನಿರ್ಮಾಣಗೊಂಡು ಅಪಾರ ಯಶಸ್ಸನ್ನು ಪಡೆಯಲು ಈ ಗ್ರಾಫಿಕ್ ಎನ್ನುವ ಹೊಸ ಅವಿಷ್ಕಾರವನ್ನು ಅತ್ಯಂತ ಸಶಕ್ತವಾಗಿ ದುಡಿಸಿಕೊಂಡ ನಿರ್ದೇಶಕನ ಜಾಣ್ಮೆಯೇ  ಕಾರಣವಾಯಿತು. ಇಲ್ಲಿ ನಾಯಕ ನಟನ ಸಹಜ ಅಭಿನಯದಿಂದ ಚಿತ್ರಿಕರಿಸಲು ಅಸಾಧ್ಯವಾಗುವ ಅನೇಕ ದೃಶ್ಯಗಳನ್ನು ಗ್ರಾಫಿಕ್ ತಂತ್ರಜ್ಞಾನವನ್ನು ಬಳಸಿಕೊಂಡು ಅತೀ ಸುಲಭವಾಗಿ ಮತ್ತು ಸಹಜವೆಂಬಂತೆ ರೂಪಿಸಲು ಸಾಧ್ಯವಾಗುತ್ತದೆ. ಈ ಕಾರಣದಿಂದಲೇ ಇಲ್ಲಿ ನಾಯಕ ನಟರುಗಳಿಗೆ ಪರ್ಯಾಯವಾಗಿ ರೊಬೋಟ್ ಮತ್ತು ರಾ-ವನ್‍ನಂಥ ತಂತ್ರಜ್ಞಾನ ರೂಪಿತ ನಾಯಕರು ಅವತರಿಸುತ್ತಾರೆ. ಕೊಲೆಯಾದ ಪ್ರೇಮಿ ನೊಣವಾಗಿ ಜನ್ಮತೆಳೆದು ಸೇಡು ತೀರಿಸಿಕೊಳ್ಳುವ ‘ಈಗ’ ಸಿನಿಮಾ ತೆಲುಗು ಮಾತ್ರವಲ್ಲದೆ ಹಲವು ಭಾಷೆಗಳಿಗೆ ಡಬ್ಬಿಂಗಾಗಿ ಯಶಸ್ಸನ್ನು ಪಡೆಯುವುದಕ್ಕೆ ಕಾರಣವೇನು ಎನ್ನುವ ಪ್ರಶ್ನೆಗೆ ನಾವು ಮತ್ತೆ ಮೊರೆಹೋಗುವುದು ಈ ಗ್ರಾಫಿಕ್ ತಂತ್ರಜ್ಞಾನವನ್ನೇ. ಇಲ್ಲದ ನೊಣವನ್ನು ಕಲ್ಪಿಸಿಕೊಂಡು ಮನೋಜ್ಞವಾಗಿ ಅಭಿನಯಿಸಿದ ಸುದೀಪ್ ನಟನೆಯ ಹೊರತಾಗಿಯೂ ಈ ಸಿನಿಮಾದ ಯಶಸ್ಸಿನ ಬಹುಪಾಲು ಕೀರ್ತಿ ಸಲ್ಲಬೇಕಾದದ್ದು ಆ ಸಿನಿಮಾದಲ್ಲಿ ಬಳಸಿಕೊಂಡ ತಂತ್ರಜ್ಞಾನಕ್ಕೆ. ತಂತ್ರಜ್ಞಾನ ಆಧಾರಿತ ದೃಶ್ಯಗಳನ್ನೇ ಹೇರಳವಾಗಿ ಬಳಸಿಕೊಂಡು ಯಶಸ್ಸನ್ನು ಪಡೆದ ಬಾಹುಬಲಿ, ರೊಬೋಟ್, ಕ್ರಿಶ್, ರಾ-ವನ್, ಈಗ ಈ ಸಿನಿಮಾಗಳಲ್ಲಿ ಅಭಿನಯಿಸಿದ್ದು ಅತ್ಯಂತ ಬೇಡಿಕೆಯಲ್ಲಿರುವ ತಾರಾಮೌಲ್ಯವುಳ್ಳ ಜನಪ್ರಿಯ ನಾಯಕ ನಟರು ಎನ್ನುವುದು ಗಮನಿಸಬೇಕಾದ ಸಂಗತಿ. ಒಟ್ಟಾರೆ ಯಶಸ್ಸನ್ನು ಹೇಗಾದರೂ ದಕ್ಕಿಸಿಕೊಳ್ಳಬೇಕೆನ್ನುವ ಧಾವಂತ ಮತ್ತು ವಾಂಛೆ ಸಿನಿಮಾ ಎನ್ನುವ ಈ ಮಾಧ್ಯಮವನ್ನು ವಾಸ್ತವಿಕ ಪ್ರಜ್ಞೆಯಿಂದ ಬಹುದೂರ ತಂದು ನಿಲ್ಲಿಸಿದೆ. 

ಆತ್ಮ ಮತ್ತು ಪ್ರೇತಾತ್ಮ


ಪ್ರೇತಾತ್ಮದ ಕಥೆಯುಳ್ಳ ನಾನಿನ್ನ ಬಿಡಲಾರೆ ಸಿನಿಮಾ ನಿರ್ಮಾಣಗೊಂಡ 1980 ರ ದಶಕದಲ್ಲಿ ಆಗಿನ್ನೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಈಗಿನಷ್ಟು ಬೆಳವಣಿಗೆಯಾಗಿರಲಿಲ್ಲ ಹಾಗೂ ಇಡೀ ಜಗತ್ತು ನಮ್ಮೆದುರು ತೆರೆದುಕೊಂಡಿರಲಿಲ್ಲ. ಅದೇ ಆಗ ನಗರೀಕರಣ ಮೊಳಕೆಯೊಡೆಯುತ್ತಿದ್ದ ಆ ದಿನಗಳಲ್ಲಿ ಹಳ್ಳಿಗಳಿನ್ನೂ ಜೀವಂತವಾಗಿದ್ದು ಸಮಾಜದಲ್ಲಿ ಮೂಢನಂಬಿಕೆ ಮನೆಮಾಡಿತ್ತು. ಜನರ ಮೂಢನಂಬಿಕೆಗಳನ್ನೇ ಬಂಡವಾಳವಾಗಿಟ್ಟುಕೊಂಡು ನಿರ್ಮಾಣಗೊಂಡ ನಾನಿನ್ನ ಬಿಡಲಾರೆ ಸಿನಿಮಾ ಬುದ್ಧಿಜೀವಿಗಳ ಅನುಮಾನ ಮತ್ತು ಪ್ರಶ್ನೆಗಳನ್ನು ಒಟ್ಟೊಟ್ಟಿಗೆ ಎದುರಿಸಬೇಕಾಯಿತು. ಬರ, ಕಾಡು, ಫಣಿಯಮ್ಮ, ಸಂಸ್ಕಾರದಂಥ ವಾಸ್ತವ ಬದುಕಿಗೆ ಹತ್ತಿರವಾದ ಹೊಸ ಅಲೆಯ ಸಿನಿಮಾಗಳು ನಿರ್ಮಾಣಗೊಂಡು ಅದಾಗಲೇ ಒಂದು ಸಂಚಲನವನ್ನು ಸೃಷ್ಟಿಸಿದ್ದ ಕನ್ನಡ ಸಿನಿಮಾ ಮಾಧ್ಯಮದಲ್ಲಿ ಮೂಢನಂಬಿಕೆಯ ಸಿನಿಮಾವೊಂದು ನಿರ್ಮಾಣಗೊಂಡಿದ್ದು ಅಚ್ಚರಿಗೆ ಕಾರಣವಾಗಿತ್ತು. ನಾನಿನ್ನ ಬಿಡಲಾರೆ ಸಿನಿಮಾದ ಪ್ರಚಂಡ ಯಶಸ್ಸಿಗೆ ಒಂದು ಹೊಸ ಅಲೆಯ ಸಿನಿಮಾಗಳನ್ನು ಸ್ವೀಕರಿಸುವ ಪ್ರೇಕ್ಷಕರ ಕೊರತೆ ಕಾರಣವಾದರೆ ಇನ್ನೊಂದು ಆಗಿನ್ನೂ ಸಮಾಜದಲ್ಲಿ ಮನೆಮಾಡಿದ್ದ ಮೂಢನಂಬಿಕೆ ಸಿನಿಮಾದ ಯಶಸ್ಸಿಗೆ ಅಗತ್ಯವಾದ ಪರಿಸರವನ್ನು ನಿರ್ಮಿಸಿತ್ತು. ಒಟ್ಟಾರೆ ಈ ಸಿನಿಮಾದ ಯಶಸ್ಸು ನಂತರದ ದಿನಗಳಲ್ಲಿ ಕನ್ನಡ ಸಿನಿಮಾ ಮಾಧ್ಯಮದಲ್ಲಿ ಹಲವಾರು ಪ್ರೇತಾತ್ಮದ ಕಥೆಯಾಧಾರಿತ ಸಿನಿಮಾಗಳು ನಿರ್ಮಾಣಗೊಳ್ಳಲು ಒಂದು ವೇದಿಕೆಯನ್ನು ನಿರ್ಮಿಸಿ ಕೊಟ್ಟಿತು. ಪರಿಣಾಮವಾಗಿ ಪುನರ್ಜನ್ಮದ ಮತ್ತು ಸತ್ತ ವ್ಯಕ್ತಿ ಪ್ರೇತವಾಗಿ ಸೇಡು ತೀರಿಸಿಕೊಳ್ಳುವ ಕಥೆಯುಳ್ಳ ಅನೇಕ ಸಿನಿಮಾಗಳು ಕನ್ನಡ ಭಾಷೆಯಲ್ಲಿ ನಿರ್ಮಾಣವಾದವು. ಒಂದು ಹಂತದಲ್ಲಿ ರಾಜಕುಮಾರ ಮತ್ತು ವಿಷ್ಣುವರ್ಧನ ಅವರಂಥ ತಾರಾವರ್ಚಸ್ಸುಳ್ಳ ಜನಪ್ರಿಯ ಕಲಾವಿದರು ಸಹ ಸಿನಿಮಾ ಬದುಕಿನ ಯಶಸ್ಸಿಗಾಗಿ ಕ್ರಮವಾಗಿ ಶ್ರಾವಣ ಬಂತು ಮತ್ತು ಆಪ್ತಮಿತ್ರದಂಥ ಪ್ರೇತಾತ್ಮದ ಕಥೆಯಾಧಾರಿತ ಸಿನಿಮಾಗಳಲ್ಲಿ ಅಭಿನಯಿಸಬೇಕಾದ ಅನಿವಾರ್ಯತೆಗೆ ಒಳಗಾದದ್ದು ಅಚ್ಚರಿಯ ಸಂಗತಿ. ಸತತ ಸೋಲುಗಳಿಂದ ಬಸವಳಿದಿದ್ದ ನೂರು ಸಿನಿಮಾಗಳ ನಾಯಕನಟ ಶಿವರಾಜಕುಮಾರ್‍ಗೆ ಶಿವಲಿಂಗ ಎನ್ನುವ ದೆವ್ವದ ಕಥೆಯಾಧಾರಿತ ಸಿನಿಮಾ ಪುನರ್ಜನ್ಮ ನೀಡಿದ್ದನ್ನು ಇಲ್ಲಿ ಉಲ್ಲೇಖಿಸಲೇ ಬೇಕು. ಕಳೆದ ವರ್ಷ 2016 ರಲ್ಲಿ ಹೊಸಬರ ಸಾಲು ಸಾಲು ಸಿನಿಮಾಗಳು ಯಶಸ್ವಿಯಾಗಿ ಹೊಸದೊಂದು ಭರವಸೆಯನ್ನು ಮೂಡಿಸಿದರೂ ಆ ಯಶಸ್ವಿ ಸಿನಿಮಾಗಳಲ್ಲಿ ರಂಗಿತರಂಗ, ಕರ್ವ, ಲಾಸ್ಟ್ ಬಸ್, ಯೂ ಟರ್ನ್, ಓಂ ನಮೋ ಭೂತಾತ್ಮ ಸಿನಿಮಾಗಳು ಅದೇ ಪ್ರೇತಾತ್ಮದ ಕಥೆಯುಳ್ಳ ಸಿನಿಮಾಗಳು ಎನ್ನುವ ಸಂಗತಿ ಸೃಜನಶೀಲ ಸಿನಿಮಾಗಳ ವೀಕ್ಷಕರಿಗೆ ಜೀರ್ಣಿಸಿಕೊಳ್ಳುವುದು ಕಷ್ಟಸಾಧ್ಯ. ಈ 21 ನೇ ಶತಮಾನದಲ್ಲಿ ಸಾಫ್ಟ್‍ವೇರ್ ಉದ್ಯಮದಿಂದ ಸಿನಿಮಾ ಮಾಧ್ಯಮಕ್ಕೆ ಕಾಲಿಡುತ್ತಿರುವ ಯುವ ಪೀಳಿಗೆ ಮತ್ತದೆ ಆತ್ಮ-ಪ್ರೇತಾತ್ಮದ ಕಥೆಗಳನ್ನು ಹಿಡಿದುಕೊಂಡು ಬರುತ್ತಿರುವುದು ನಾವು ಯಾವ ಕಾಲದಲ್ಲಿ ಬದುಕುತ್ತಿದ್ದೇವೆ ಎನ್ನುವ ಪ್ರಶ್ನೆ ಮತ್ತು ಅನುಮಾನವನ್ನು ಹುಟ್ಟಿಸುತ್ತದೆ. 

ಗೆದ್ದ ಸೂತ್ರದ ಬೆನ್ನು ಹತ್ತಿ


ಬದುಕಿಗೆ ದೂರವಾದ ಮತ್ತು ಅವಾಸ್ತವಿಕ ಕಥೆಯಾಧಾರಿತ ಸಿನಿಮಾಗಳು ಕನ್ನಡದಲ್ಲಿ ಸಾಲು ಸಾಲಾಗಿ ನಿರ್ಮಾಣಗೊಳ್ಳಲು ಈ ಪ್ರಕಾರದ ಸಿನಿಮಾಗಳ ಯಶಸ್ಸೇ ಮೂಲ ಕಾರಣ. ಸಿನಿಮಾ ಮಾಧ್ಯಮ ಯಾವತ್ತೂ ಯಶಸ್ಸಿನ ಸೂತ್ರವನ್ನು ಬೆನ್ನು ಹತ್ತುವ ಮಾಧ್ಯಮ. ಸಿನಿಮಾವೊಂದು ಯಶಸ್ವಿಯಾದರೆ ಅಚಿಥದ್ದೆ ಕಥೆಯುಳ್ಳ ಸಾಲು ಸಾಲು ಸಿನಿಮಾಗಳು ಇಲ್ಲಿ ನಿರ್ಮಾಣಗೊಳ್ಳುತ್ತವೆ. ಕನ್ನಡ ಮಾತ್ರವಲ್ಲದೆ ಇಡೀ ಸಿನಿಮಾರಂಗದಲ್ಲಿ ಇದೊಂದು ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ. ಹೊಸ ಹೊಸ ಪ್ರಯೋಗಗಳಿಗೆ ಸಿನಿಮಾ ಮಾಧ್ಯಮವನ್ನು ಒಳಗಾಗಿಸುವುದಕ್ಕಿಂತ ಸಿದ್ಧ ಸೂತ್ರವನ್ನೇ ನಂಬಿಕೊಂಡು ಸಿನಿಮಾ ನಿರ್ಮಾಣ ಮಾಡುವವರ ಸಂಖ್ಯೆ ಇಲ್ಲಿ ಹೆಚ್ಚಿದೆ. ಸಮಾಜಕ್ಕೆ ಮತ್ತು ಪ್ರೇಕ್ಷಕರಿಗೆ ಏನನ್ನು ಹೇಳುತ್ತಿದ್ದೇವೆ ಎನ್ನುವುದಕ್ಕಿಂತ ಯಶಸ್ಸೇ ಮುಖ್ಯವಾಗುತ್ತಿರುವುದರಿಂದ ಒಂದು ಯಶಸ್ವಿ ಸಿನಿಮಾದ ಛಾಯೆಯಾಗಿಯೋ ಅಥವಾ ಪ್ರತಿಬಿಂಬವಾಗಿಯೋ ಹಲವು ಸಿನಿಮಾಗಳು ಹುಟ್ಟಿಕೊಳ್ಳುತ್ತವೆ. ಒಂದು ಜುರಾಸಿಕ್ ಪಾರ್ಕ್‍ನ ಯಶಸ್ಸು ಹಲವು ರಾಷ್ಟ್ರಗಳ ಹಲವಾರು ಭಾಷೆಗಳಲ್ಲಿ ಗ್ರಾಫಿಕ್ ತಂತ್ರಜ್ಞಾನ ಆಧಾರಿತ ಸಿನಿಮಾಗಳ ನಿರ್ಮಾಣಕ್ಕೆ ಪ್ರೇರಣೆಯಾದರೆ ಒಂದು ರಾಝ್‍ನಂಥ ಸಿನಿಮಾ ಗಳಿಸಿದ ಪ್ರಚಂಡ ಯಶಸ್ಸು ಹಲವಾರು ಪ್ರೇತಾತ್ಮಗಳ ಕಥೆಯ ಸಿನಿಮಾಗಳಿಗೆ ಸ್ಪೂರ್ತಿಯಾಯಿತು. ವಿಷ್ಣುವರ್ಧನ ಅವರ ವೃತ್ತಿಬದುಕಿನ ಕೊನೆಯ ಸಿನಿಮಾ ಆಪ್ತಮಿತ್ರದ ಮುಂದುವರಿದ ಭಾಗ ಎನ್ನುವುದು ಗೆದ್ದ ಸೂತ್ರದ ಬೆನ್ನುಹತ್ತುವ ಸಿನಿಮಾದವರ ಮನೋಭಾವಕ್ಕೊಂದು ನಿದರ್ಶನ. ಆಪ್ತಮಿತ್ರದ ಯಶಸ್ಸೇ ಪಿ.ವಾಸು ಅವರಂಥ ಅನುಭವಿ ಮತ್ತು ಹಿರಿಯ ನಿರ್ದೇಶಕ ನಂತರದ ದಿನಗಳಲ್ಲಿ ಅಂಥದ್ದೇ ಸೂತ್ರವನ್ನಾಧರಿಸಿದ ಹಲವು ಸಿನಿಮಾಗಳನ್ನು ನಿರ್ದೇಶಿಸಬೇಕಾದದ್ದು ಸಿನಿಮಾ ಮಾಧ್ಯಮದ ವಿಪರ್ಯಾಸಗಳಲ್ಲೊಂದು. 


ಸಿನಿಮಾ ವಾಸ್ತವಿಕ ಪ್ರಜ್ಞೆಯಿಂದ ದೂರವಾಗುತ್ತಿರುವುದಕ್ಕೆ ಇವತ್ತು ಸಿನಿಮಾ ಮಾಧ್ಯಮ ಎನ್ನುವುದು ಸಿನಿಮಾ ಉದ್ಯಮವಾಗಿ ಬದಲಾಗುತ್ತಿರುವುದೇ ಪ್ರಬಲ ಕಾರಣ. ಮಾಧ್ಯಮವೊಂದು ಉದ್ಯಮವಾಗಿ ಬದಲಾದಾಗ ಅಲ್ಲಿ ಬಂಡವಾಳ ಹೂಡಿ ಲಾಭಗಳಿಸಬೇಕೆನ್ನುವ ಮನೋಭಾವ ಬಲವಾಗುತ್ತದೆ. ಹೀಗಾಗಿ ಇಂದು ಸಿನಿಮಾ ಬಂಡವಾಳ ಹೂಡುವ ಉದ್ಯಮವಾಗಿ ಪರಿವರ್ತನೆ ಹೊಂದಿದೆ. ಬೇರೆ ಬೇರೆ ಉದ್ಯಮಗಳಲ್ಲಿ ಹಣಹೂಡಿ ಲಾಭಗಳಿಸಿದವರೆಲ್ಲ ಬಂಡವಾಳ ಹೂಡಲು ಸಿನಿಮಾ ಮಾಧ್ಯಮಕ್ಕೆ ಕಾಲಿಡುತ್ತಿರುವರು. ಒಂದು ಕಾಲದಲ್ಲಿ ಲಾಭ ನಷ್ಟಗಳೆಲ್ಲ ಗೌಣವಾಗಿ ಸೃಜನಶೀಲತೆಯೇ  ಪ್ರಧಾನವಾಗಿದ್ದ ಸಿನಿಮಾ ಮಾಧ್ಯಮದಲ್ಲಿ ಇಂದು ಹಣ ಗಳಿಕೆಯೇ  ಮುನ್ನೆಲೆಗೆ ಬಂದಿರುವುದರಿಂದ ಇಲ್ಲಿ ಚಿತ್ರ ವಿಚಿತ್ರ ಕಥೆಗಳ ಸಿನಿಮಾಗಳು ನಿರ್ಮಾಣಗೊಳ್ಳುತ್ತವೆ ಮತ್ತು ಯಶಸ್ವಿಯಾಗುತ್ತಿವೆ. ಪರಿಣಾಮವಾಗಿ ಸಿನಿಮಾವನ್ನು ಸೃಜನಶೀಲ ಮಾಧ್ಯಮವೆಂದು ನಂಬಿ ಹೊಸ ಹೊಸ ಪ್ರಯೋಗಗಳಿಗೆ ಮುಂದಾಗುತ್ತಿದ್ದ ನಿರ್ದೇಶಕರು, ನಿರ್ಮಾಪಕರು ಮತ್ತು ಕಲಾವಿದರು ನೇಪಥ್ಯಕ್ಕೆ ಸರಿಯುತ್ತಿದ್ದಾರೆ. ಪ್ರೇಕ್ಷಕರು ಕೂಡ ಅದರಲ್ಲೂ ಯುವ ಪೀಳಿಗೆ ಈ ಗ್ರಾಫಿಕ್ ದೃಶ್ಯಗಳಿಂದ ಕೂಡಿದ ಮತ್ತು ಪ್ರೇತಾತ್ಮದ ಕಥೆಗಳುಳ್ಳ ಸಿನಿಮಾಗಳನ್ನೇ ಗೆಲುವಿನ ದಡಕ್ಕೆ ಮುಟ್ಟಿಸುತ್ತಿರುವರು. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಸಿನಿಮಾಕ್ಕೂ ಮತ್ತು ಕಾರ್ಟೂನ್‍ಗಳಿಗೂ ವ್ಯತ್ಯಾಸವಿರದ ದಿನಗಳು ಬರುವುದೇನೂ ದೂರವಿಲ್ಲ. 

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Wednesday, July 5, 2017

ಶಿಕಾರಿ: ಮನುಷ್ಯ ಸಂಬಂಧಗಳ ವಿಶ್ಲೇಷಣೆ

           


          ಯಶವಂತ ಚಿತ್ತಾಲರು ‘ನಾನೇಕೆ ಬರೆಯುತ್ತೇನೆ’ ಎನ್ನುವ ಲೇಖನದಲ್ಲಿ ಹೀಗೆ ಹೇಳುತ್ತಾರೆ ‘ಮಾನವೀಯ ಗ್ರಹಿಕೆಯ ಜಗತ್ತು ನಮ್ಮ ವೈಯಕ್ತಿಕ ಪ್ರಜ್ಞೆಯೊಳಗೆ ಒಡಮೂಡುವ ಬಗೆ ಎರಡು ರೀತಿಯಲ್ಲಿ. ಒಂದು ಜ್ಞಾನವಾಗಿ ಇನ್ನೊಂದು ಅನುಭವವಾಗಿ. ಉದಾಹರಣೆಗೆ ರಕ್ತದ ಬಗೆಗಿನ ಜ್ಞಾನವನ್ನು ಶರೀರಶಾಸ್ತ್ರದ ಒಂದು ಪುಸ್ತಕದಿಂದ ಪಡೆಯಬಹುದು. ರಕ್ತದ ಘಟಕಗಳೇನು, ಅದು ದೇಹದಲ್ಲಿ ಹುಟ್ಟುವ ಬಗೆಯೇನು , ಅದರ ಉಪಯೋಗ ಇತ್ಯಾದಿ ಸಂಗತಿಗಳನ್ನು ಓದಿ ತಿಳಿದುಕೊಳ್ಳಬಲ್ಲೆವು. ಆದರೆ ಇದೇ ರಕ್ತ ನನಗೆ ಮರೆಯಲಾಗದ ಅನುಭವವಾದದ್ದು 13 ವರ್ಷದ ನನ್ನ ಮಗಳು ಜಾನಕಿಗೆ ರಕ್ತದ ಕ್ಯಾನ್ಸರ್ ಎಂದು ತಿಳಿದ ಮಧ್ಯಾಹ್ನದ ದುರ್ಧರ ಘಳಿಗೆಯಲ್ಲಿ. ರಕ್ತವೆನ್ನುವುದು ಸುದ್ದಿ ಒಡೆಯುವಾಗ ಸಣ್ಣಗೆ ಕಂಪಿಸಿದ ವೈದ್ಯರ ಧ್ವನಿಯಾಗಿ, ಆಗಿನ ಅವರ ಕಣ್ಣ ನೋಟವಾಗಿ, ಹೆಂಡತಿಯ ಕೈಯನ್ನು ಒತ್ತಿ ಹಿಡಿದಾಗ ಸ್ಪರ್ಷಗೋಚರವಾದ ಬೇವರಿನ ಒದ್ದೆತನವಾಗಿ, ಮಗಳ ದೇಹದೊಳಗೆ ಹನಿಹನಿಯಾಗಿ ಸೇರುತ್ತಿರುವ ಜೀವ ಉಳಿಸುವ ಅಮೃತವಾಗಿ ನನ್ನ ಅನುಭವಕ್ಕೆ ಬಂತು. ಈ ಅನುಬವ ಶರೀರಶಾಸ್ತ್ರ ಪುಸ್ತಕದ ರಕ್ತವೆಂಬ ಅಧ್ಯಾಯದಲ್ಲಿ ವರ್ಣೀತವಾದದ್ದರಿಂದ ತೀರ ಬಿನ್ನವಾದದ್ದು’. ಈ ಹೇಳಿಕೆ ಯಶವಂತ ಚಿತ್ತಾಲರ ಸಮಗ್ರ ಬರವಣಿಗೆಗೆ ಬರೆದ ಮುನ್ನುಡಿಯಂತೆ ಭಾಸವಾಗುತ್ತದೆ. ಚಿತ್ತಾಲರ ಕತೆ, ಕಾದಂಬರಿಗಳಲ್ಲಿ ತಿಳುವಳಿಕೆಯೊಂದಿಗೆ (ಜ್ಞಾನವೆಂದೂ ಕರೆಯಬಹುದು) ಅವರ ಬದುಕಿನ ಸಮಗ್ರ ಅನುಭವವೂ ದಟ್ಟವಾಗಿದೆ. ಹೀಗೆ ಜ್ಞಾನ ಮತ್ತು ಅನುಭವ ಎರಡನ್ನೂ ಎರಕಹೊಯ್ದು ರಚಿಸಿದ ‘ಶಿಕಾರಿ’ ಕಾದಂಬರಿ ಕನ್ನಡದ ಮಹತ್ವದ ಸಾಹಿತ್ಯ ಕೃತಿಗಳಲ್ಲೊಂದು.

     1979 ರಲ್ಲಿ ಪ್ರಕಟವಾದ ಯಶವಂತ ಚಿತ್ತಾಲರ ‘ಶಿಕಾರಿ’ ಕಾದಂಬರಿ ಇದುವರೆಗು 9 ಮುದ್ರಣಗಳನ್ನು ಕಂಡಿದ್ದು ಕಾದಂಬರಿಯ ಜನಪ್ರಿಯತೆಯನ್ನು ಸೂಚಿಸುತ್ತದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ವರ್ಧಮಾನ ಪ್ರಶಸ್ತಿ ಪಡೆದ ಹೆಗ್ಗಳಿಕೆ ‘ಶಿಕಾರಿ’ ಕಾದಂಬರಿಯದು. ಇದು ಚಿತ್ತಾಲರ ಎರಡನೆ ಕಾದಂಬರಿ. ಸಂಖ್ಯಾ ದೃಷ್ಟಿಯಿಂದ ಚಿತ್ತಾಲರು ಬರೆದ ಕಾದಂಬರಿಗಳ ಸಂಖ್ಯೆ ತುಂಬ ಕಡಿಮೆ. ಅವರು ಬರೆದಿರುವುದು ಕೇವಲ ಐದು ಕಾದಂಬರಿಗಳು ಮಾತ್ರ. ಆದರೆ ಗುಣಾತ್ಮಕವಾಗಿ ಚಿತ್ತಾಲರ ಕಾದಂಬರಿಗಳಿಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಠ ಸ್ಥಾನವಿದೆ. ಮನುಷ್ಯನ ಗುಣ ಸ್ವಭಾವಗಳನ್ನು ಮನೋವಿಜ್ಞಾನದ ಹಿನ್ನೆಲೆಯಲ್ಲಿ ಚಿತ್ತಾಲರು ವಿಶ್ಲೇಷಿಸಿ ನೋಡಿದಷ್ಟು ಬೇರೆ ಬರಹಗಾರರು ನೋಡಿದ್ದು ಕಡಿಮೆ ಎಂದರೆ ಅದು ಉತ್ಪ್ರೇಕ್ಷೆಯ ಮಾತಾಗಲಾರದು. 

      ಚಿತ್ತಾಲರ ಒಟ್ಟು ಬರವಣಿಗೆಯ ಸಾರ್ಥಕತೆ ಇರುವುದು ಮನುಷ್ಯನನ್ನು ಮನುಷ್ಯನನ್ನಾಗಿ ರೂಪಿಸುವಲ್ಲಿ. ಅವರ ಕತೆ, ಕಾದಂಬರಿಗಳ ನಾಯಕ ನಾಯಕಿಯರು ಮಾನವೀಯ ಪ್ರೀತಿ, ಅಂತ:ಕರಣಗಳನ್ನು ಹುಡುಕುತ್ತ ಅಲೆಯುವುದು ಸಹಜವೆಂಬತೆ ಚಿತ್ರಿತವಾಗಿದೆ. ಚಿತ್ತಾಲರು ಸೃಷ್ಟಿಸಿದ ಕಥಾನಾಯಕ ಝೋಪಡಪಟ್ಟಿಗಳಲ್ಲಿ, ಹೂ ಮಾರುವ ಬಾಲಕಿಯಲ್ಲಿ, ರಸ್ತೆ ಬದಿಯಲ್ಲಿನ ನಿರ್ಗತಿಕರಲ್ಲಿ ಹೀಗೆ ತನಗೆ ಎದುರಾದ ಪ್ರತಿಯೊಬ್ಬರ ಮುಖದಲ್ಲಿ ಕಾಣುವ ಮನುಷ್ಯ ಪ್ರೇಮಕ್ಕಾಗಿ ಹಂಬಲಿಸುತ್ತಾನೆ. ಮನುಷ್ಯತ್ವದ ಹುಡುಕಾಟ ಚಿತ್ತಾಲರ ಬರವಣಿಗೆಯ ಪ್ರಧಾನ ನೆಲೆಯೂ ಹೌದು. ಮನುಷ್ಯತ್ವದ ಹುಡುಕಾಟವನ್ನು ಕೇಂದ್ರವಾಗಿಟ್ಟುಕೊಂಡು ತಮ್ಮ ಬರವಣಿಗೆಯನ್ನು ರೂಪಿಸಿಕೊಂಡ ಚಿತ್ತಾಲರು ಸಾಹಿತ್ಯದ ಮಹತ್ವವನ್ನು ಹೇಳುವುದು ಹೀಗೆ ‘ಸಾಹಿತ್ಯದ ಮುಖಾಂತರ ನಾವು ಮೊದಲಿನಿಂದಲೂ ತೊಡಗಿಸಿಕೊಂಡದ್ದು ಮನುಷ್ಯರಾಗಿ ಅರಳುವ ಪ್ರಕ್ರಿಯೆಯಲ್ಲಿ ಎನ್ನುವ ನಂಬಿಕೆ ನನ್ನದು. ಇಂದಿನ ಸಮಾಜದಲ್ಲಿ ನಾವು ಮನುಷ್ಯರಾಗಿ ಬಿಚ್ಚಿಕೊಳ್ಳಲು ಆರಿಸಿಕೊಳ್ಳಬಹುದಾದ ಜೀವಂತ ಮಾಧ್ಯಮಗಳಲ್ಲಿ ಸಾಹಿತ್ಯವೂ ಒಂದು. ಮನುಷ್ಯ ತನ್ನ ಬದುಕಿನ ನಕಾಶೆಯಲ್ಲಿ ಮೂಡಿಸಿಕೊಳ್ಳಲೇ ಬೇಕಾದ ಅತ್ಯಂತ ಮೌಲಿಕ ಸಂಗತಿಗಳಲ್ಲಿ ಕೆಲವು ಸಂಗತಿಗಳು ಸಾಹಿತ್ಯದಿಂದ ಮಾತ್ರ ಒದಗಬಲ್ಲಂಥವುಗಳಾಗಿವೆ. ಸಾಹಿತ್ಯ ಹೃದಯವುಳ್ಳ ಹಾದಿಯಾಗಿದೆ ಎನ್ನುವ ನಂಬಿಕೆಯಿಂದಲೇ ಓದುವ ಮತ್ತು ಬರೆಯುವ ಪ್ರಕ್ರಿಯೆಯಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ’. 

       ವಿಮರ್ಶಕ ಜಿ.ಎಸ್.ಆಮೂರ ಅವರು ಹೇಳುವಂತೆ ‘ಶಿಕಾರಿ’ ಕಾದಂಬರಿಯ ಕೇಂದ್ರ ಪ್ರತಿಮೆ ಬೇಟೆ. ಇಲ್ಲಿ ನಡೆಯುವ ಬೇಟೆ ಮನುಷ್ಯನಿಂದ ಪಶು ಪಕ್ಷಿಗಳ ಬೇಟೆಯಾಗಿರದೆ ಮನುಷ್ಯನಿಂದ ಮನುಷ್ಯನ ಬೇಟೆಯಾಗಿದೆ. ಉತ್ತರ ಕನ್ನಡದ ಹನೇಹಳ್ಳಿಯ ನಾಗಪ್ಪ ‘ಶಿಕಾರಿ’ ಕಾದಂಬರಿಯ ಕಥಾನಾಯಕ. ಈಗ ಮುಂಬಯಿಯಲ್ಲಿ ನೆಲೆ ನಿಂತಿರುವ ನಾಗಪ್ಪ ತನ್ನ ಔದ್ಯೋಗಿಕ ವಲಯದಲ್ಲಿ ಎಲ್ಲರಿಗೂ ನಾಗನಾಥ್ ಎಂದೇ ಚಿರಪರಿಚಿತ. ಕೆಮಿಕಲ್ ಫ್ಯಾಕ್ಟರಿಯಲ್ಲಿ ಉನ್ನತ ಹುದ್ದೆಯಲ್ಲಿರುವ ನಾಗಪ್ಪ ಬಡ್ತಿಹೊಂದಿ ಇನ್ನೇನು ಅಮೆರಿಕಾಗೆ ಹೋಗಬೇಕೆನ್ನುವ ಘಳಿಗೆಯಲ್ಲಿ ಫ್ಯಾಕ್ಟರಿಯ ಉನ್ನತವಲಯದ ಪಿತೂರಿಗೆ ಒಳಗಾಗಿ ಎರಡು ತಿಂಗಳುಗಳ ಕಾಲ ಕೆಲಸದಿಂದ ವಜಾಗೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇದ್ದಕ್ಕಿದ್ದಂತೆ ಹೈದರಾಬಾದಿನಿಂದ ಮುಂಬಯಿಗೆ ವರ್ಗವಾಗಿ ಬರುವ ನಾಗಪ್ಪನಿಗೆ ಆಡಳಿತ ಮಂಡಳಿ ಎರಡು ತಿಂಗಳು ರಜಾ ನೀಡಿ ತನಿಖೆಯನ್ನು ಎದುರಿಸುವಂತೆ ಆದೇಶಿಸುತ್ತದೆ. ಕಂಪನಿಯ ಡಿ.ಎಮ್.ಡಿ ಫಿರೋಜ್ ಬಂದೂಕವಾಲಾ ವ್ಯವಸ್ಥಿತ ಸಂಚೊಂದನ್ನು ರೂಪಿಸಿ ನಾಗಪ್ಪನನ್ನು ಬಲಿಪಶುವನ್ನಾಗಿಸಲು ಪ್ರಯತ್ನಿಸುತ್ತಾನೆ. ಕಂಪನಿಯಲ್ಲಿ ಕಳ್ಳತನವಾದ ಸರಕು ಆಕಸ್ಮಿಕ ಬೆಂಕಿ ಅಪಘಾತದಲ್ಲಿ ಸುಟ್ಟು ಹೋಯಿತೆನ್ನುವ ವರದಿಯನ್ನು ಸಿದ್ಧಪಡಿಸಿ ಅದಕ್ಕೆ ನಾಗಪ್ಪನ ರುಜು ಪಡೆಯುವ ಕಾರ್ಯತಂತ್ರವನ್ನು ರೂಪಿಸುವ ಫಿರೋಜ್ ಬಂದೂಕವಾಲಾ ತನ್ನ ಕಾರ್ಯತಂತ್ರದಲ್ಲಿ ಯಶಸ್ವಿಯಾಗಲು ನಾಗಪ್ಪನನ್ನು ಮಾನಸಿಕವಾಗಿ ಹಣಿಯುವ ಯೋಜನೆಯನ್ನು ರೂಪಿಸುತ್ತಾನೆ. ಅಂತರ್ಮುಖಿಯು ಮತ್ತು ಭಾವಜೀವಿಯೂ ಆದ ನಾಗಪ್ಪ ನೌಕರಿಯಿಂದ ವಜಾಗೊಂಡ ಅವಧಿಯಲ್ಲಿ ಅನುಭವಿಸುವ ಒಟ್ಟು ಮಾನಸಿಕ ಕ್ಷೋಭೆ ಕಾದಂಬರಿಯ ಕೇಂದ್ರವಸ್ತು. ಬಾಲ್ಯದಲ್ಲೇ ಕಂಡ ಅಮ್ಮನ ಸಾವು, ಓಡಿಹೋದ ಅಣ್ಣ, ಸಂತೆಯಲ್ಲಿ ಕಳೆದುಹೋದ ತಂಗಿ, ಅಪ್ಪ ಹಚ್ಚಿದ ಬೆಂಕಿಯಿಂದ ಎದೆ ಮತ್ತು ಹೊಟ್ಟೆಯ ಮೇಲೆ ಉಳಿದ ಸುಟ್ಟ ಕಲೆಗಳು, ಅಪ್ಪನ ಆತ್ಮಹತ್ಯೆ ಈ ಎಲ್ಲ ಕಹಿ ಘಟನೆಗಳು ವಾಸ್ತವವನ್ನು ಎದುರಿಸಲಾರದಷ್ಟು ನಾಗಪ್ಪನನ್ನು ಪುಕ್ಕಲನನ್ನಾಗಿಸಿವೆ. ‘ತಾನು ಅನುಭವವನ್ನು ಸ್ವೀಕರಿಸುವ ಒಟ್ಟು ರೀತಿಯನ್ನು ನಿರ್ಧರಿಸಿದ್ದೇ ತಾನು ಹನೇಹಳ್ಳಿಯಲ್ಲಿ ಕಳೆದ ಬಾಲ್ಯದ ದಿನಗಳೆಂದು ನಾಗಪ್ಪನಿಗೆ ಅನಿಸುತ್ತದೆ’ ಎನ್ನುವ ಚಿತ್ತಾಲರು ಕಾದಂಬರಿಯುದ್ದಕ್ಕೂ ಮತ್ತೆ ಮತ್ತೆ ತಮ್ಮ ಹುಟ್ಟೂರಾದ ಹನೇಹಳ್ಳಿಗೆ ಮರಳುತ್ತಾರೆ. ಹನೇಹಳ್ಳಿ ಮತ್ತು ಅಲ್ಲಿನ ಮನುಷ್ಯರನ್ನು ಚಿತ್ತಾಲರು ಹಟಕ್ಕೆ ಬಿದ್ದವರಂತೆ ತಮ್ಮ ಕತೆ, ಕಾದಂಬರಿಗಳಲ್ಲಿ ಮತ್ತೆ ಮತ್ತೆ ಮರುಹುಟ್ಟು ನೀಡಲು ಪ್ರಯತ್ನಿಸುವುದು ಅವರ ಸಾಹಿತ್ಯ ಕೃತಿಗಳನ್ನು ಓದಿದ ಓದುಗರ ಅನುಭವಕ್ಕೆ ಬರುವ ಸಂಗತಿಯಿದು. ಒಂದರ್ಥದಲ್ಲಿ ಸೃಜನಶೀಲ ಸೃಷ್ಟಿಗೆ ಸ್ಪೂರ್ತಿಯ ಸೆಲೆಯಾದ ಹನೇಹಳ್ಳಿಯನ್ನು ಮತ್ತು ಅಲ್ಲಿನ ಮನುಷ್ಯರನ್ನು ಚಿತ್ತಾಲರು ಕೃತಜ್ಞತೆಯಿಂದ ನೆನಪಿಸಿಕೊಳ್ಳುವ ಪರಿಯಿದು. ಚಿತ್ತಾಲರ ಮಾತುಗಳಲ್ಲೇ ಹೇಳುವುದಾದರೆ ‘ಉತ್ತರ ಕನ್ನಡ ಜಿಲ್ಲೆ ಮತ್ತು ನನ್ನ ಹುಟ್ಟೂರಾದ ಹನೇಹಳ್ಳಿ ಇವು ನನ್ನ ಮಟ್ಟಿಗೆ ಬರೀ ನೆಲದ ಹೆಸರುಗಳಲ್ಲ. ನನ್ನ ಸಾಹಿತ್ಯದ ಹುಟ್ಟಿಗೆ ಕಾರಣವಾಗಿ ಅದರ ಚೈತನ್ಯಕ್ಕೆ ನಿರಂತರವಾದ ಜೀವಸೆಲೆಯಾಗಿ ನಿಂತ ಮೂಲಭೂತವಾದ ಪ್ರೇರಕ ಶಕ್ತಿಗಳಾಗಿವೆ. ನನ್ನ ಮಾನಸಿಕ ಪ್ರಪಂಚದ ಭಾವ ಪ್ರತಿಮೆಗಳ ರಚನಾ ವಿನ್ಯಾಸವನ್ನು ಭಾವನೆಗಳ ಶಿಲ್ಪವನ್ನು ರೂಪಿಸಿದ ಉತ್ತುಮಿ, ಗಿರಿಯಣ್ಣ, ಬೊಮ್ಮಿ, ಬುಡಣಸಾಬ, ಎಂಕು ಇವರೆಲ್ಲ ಈ ನೆಲದವರು. ನಾನು ನನ್ನ ಹಳ್ಳಿಯನ್ನು ಬಿಟ್ಟು 36 ವರ್ಷಗಳಾದರೂ ಈಗಲೂ ಮುಂಬಯಿಯಲ್ಲಿ ಕುಳಿತು ಬರೆದ ನನ್ನೆಲ್ಲ ಕತೆ, ಕಾದಂಬರಿಗಳಲ್ಲಿ ನನ್ನ ಹನೇಹಳ್ಳಿ ಮತ್ತೆ ಮತ್ತೆ ಕಾಣಿಸಿಕೊಂಡಿದೆ’. 

      ಕಾದಂಬರಿಯಲ್ಲಿನ ಪ್ರತಿಯೊಂದು ಪಾತ್ರ ನಾಗಪ್ಪನ ಸಂಪರ್ಕಕ್ಕೆ ಬಂದೋ ಇಲ್ಲವೆ ಆತನ ಸ್ವಗತದಲ್ಲೋ ತೆರೆದುಕೊಳ್ಳುತ್ತ ಹೋಗುವುದು ಕಾದಂಬರಿಯ ವೈಶಿಷ್ಠ್ಯತೆಗಳಲ್ಲೊಂದು. ಚಿತ್ತಾಲರು ತಮ್ಮ ಅನುಭವ ಮತ್ತು ಮನೋವಿಜ್ಞಾನದ ಕುರಿತಾದ ತಮ್ಮ ತಿಳುವಳಿಕೆಯನ್ನು ಕಾದಂಬರಿಗೆ ಪೂರಕವಾಗಿ ಅತ್ಯಂತ ಸಮರ್ಥವಾಗಿ ದುಡಿಸಿಕೊಂಡಿರುವರು. ಪರಿಸ್ಥಿತಿಯನ್ನು ಎದುರಿಸುವಲ್ಲಿ ಅಸಮರ್ಥನಾಗುವ ಸಂದರ್ಭಗಳಲ್ಲೆಲ್ಲ ನಾಗಪ್ಪ ತನ್ನ ವ್ಯಕ್ತಿತ್ವವನ್ನು ತಾನೇ ವಿಶ್ಲೇಷಿಸಿಕೊಳ್ಳುವುದು ಮತ್ತು ಕಾದಂಬರಿಯ ಕಥಾನಾಯಕನನ್ನು ಸಾಧಾರಣ ಮನುಷ್ಯನಂತೆ ಚಿತ್ರಿಸಿರುವುದು ಚಿತ್ತಾಲರ ಅಸಾಧಾರಣ ಪ್ರತಿಭೆಗೆ ಸಾಕ್ಷಿಯಾಗಿದೆ. ‘ತನ್ನ ಭಯವನ್ನು ಮರೆತು ಇವರಿಬ್ಬರ ಭಯದ ಮೂಲವನ್ನು ಅರಿಯುವ ಕುತೂಹಲ ಸುಖದಾಯಕವೆನಿಸಿತು ನಾಗಪ್ಪನಿಗೆ’ ಎನ್ನುವ ಈ ಸಣ್ಣ ಹೇಳಿಕೆ ನಾಗಪ್ಪನ ಇಡೀ ವ್ಯಕ್ತಿತ್ವವನ್ನು ಸಮಗ್ರವಾಗಿ ಕಟ್ಟಿಕೊಡುತ್ತದೆ. 

      ಕಾದಂಬರಿಯ ಬರವಣಿಗೆಗಾಗಿ ಎರಡು ತಿಂಗಳ ರಜೆ ಪಡೆದಿರುವುದಾಗಿ ಸುಳ್ಳು ಹೇಳಿದ ಕ್ಷಣದಿಂದಲೇ ನಾಗಪ್ಪನನ್ನು ಹಣಿಯಬೇಕೆನ್ನುವ ಪಿತೂರಿಗೆ ಮತ್ತಷ್ಟು ಬಲ ತುಂಬಿಕೊಳ್ಳುತ್ತದೆ. ಬರೆಯುತ್ತಿರುವ ಕಾದಂಬರಿಗೆ ವಾಸ್ತವಿಕ ನೆಲೆಗಟ್ಟು ಒದಗಿಸಲು ತಾನು ಈ ಖೇತವಾಡಿಯ ಚಾಳಿನಲ್ಲಿ ವಾಸಿಸಲು ಬಂದಿರುವುದಾಗಿ ಹೇಳಿದ ಆ ಕ್ಷಣ ನಾಗಪ್ಪನ ಬದುಕಿನಲ್ಲಿ ಅವನಿಗೆ ಗೊತ್ತಿಲ್ಲದಂತೆ ದೊಡ್ಡ ಸಮಸ್ಯೆಯೊಂದು ಪ್ರವೇಶ ಪಡೆಯುತ್ತದೆ. ನಾಗಪ್ಪ ಈಗ ವಾಸಿಸುತ್ತಿರುವ ಖೇತವಾಡಿಯ ಖೇಮರಾಜ ಭವನದ ಮೂರನೇ ಮಜಲಿನ ಈ ಮನೆಯಲ್ಲೇ ಇಪ್ಪತ್ತು ವರ್ಷಗಳ ಹಿಂದೆ ಶ್ರೀನಿವಾಸನ ಪ್ರೇಯಸಿ ನೇತ್ರಾವತಿ ಆತ್ಮಹತ್ಯೆ ಮಾಡಿಕೊಂಡದ್ದು. ಹನೇಹಳ್ಳಿಯವನಾದ ಶ್ರೀನಿವಾಸನಿಗೆ ಈಗ ಮುಂಬಯಿಯ ತನ್ನ ಜಾತಿಯ ಸಮಾಜದಲ್ಲಿ ಒಂದು ಪ್ರತಿಷ್ಠೆ ಗೌರವವಿದೆ. ತನ್ನ ಪ್ರತಿಷ್ಠೆಯನ್ನು ಉಳಿಸಿಕೊಳ್ಳಲು ಎಂಥ ಕೀಳುಮಟ್ಟಕ್ಕೂ ಇಳಿಯುವ ಶ್ರೀನಿವಾಸನಿಗೆ ನಾಗಪ್ಪ ಬರೆಯುತ್ತಿರುವ ಕಾದಂಬರಿಯಿಂದ ಸಮಾಜದಲ್ಲಿ ತನ್ನ ಗೌರವ ಮಣ್ಣು ಪಾಲಾಗಲಿದೆ ಎನ್ನುವ ಆತಂಕ ಕಾಡಲಾರಂಭಿಸಿದೆ. ನಾಗಪ್ಪನ ಗೌರವವನ್ನು ಹಾಳುಗೆಡುವುವ ಉದ್ದೇಶದಿಂದ ಫಿರೋಜ್ ಬಂದೂಕವಾಲಾನ ಪಿತೂರಿಗೆ ಕೈಜೋಡಿಸುವ ಶ್ರೀನಿವಾಸ ಕಂಪನಿಗೆ ನಾಗಪ್ಪನ ಬಾಲ್ಯದ ಕಹಿ ಘಟನೆಗಳ ಮಾಹಿತಿಯನ್ನು ಒದಗಿಸುತ್ತಾನೆ. ನಾಗಪ್ಪನನ್ನು ಆತನ ವೈಯಕ್ತಿಕ ಬದುಕಿನ ಘಟನೆಗಳಿಂದ ಹಣಿಯಲು ಫಿರೋಜನಿಗೆ ಸೂಕ್ತ ಆಧಾರವೊಂದು ದೊರೆಯುತ್ತದೆ. ಫಿರೋಜನ ಈ ಸಂಚಿನಲ್ಲಿ ನಾಗಪ್ಪನ ಸ್ನೇಹಿತರಾದ ಸೀತಾರಾಮ್, ಅರ್ಜುನ ರಾವ್, ನಾಯಕ್, ಮೇರಿ ಕೂಡ ಶಾಮಿಲಾಗುತ್ತಾರೆ. ಹೀಗೆ ಇಡೀ ವ್ಯವಸ್ಥೆ ತನ್ನನ್ನು ಬಲಿಪಶುವನ್ನಾಗಿಸಲು ಸಂಚು ರೂಪಿಸುತ್ತಿದೆ ಎನ್ನುವ ಮಾನಸಿಕ ಕ್ಷೋಭೆಗೆ ಒಳಗಾಗುವ ನಾಗಪ್ಪ ಎದುರಾಗುವ ಪ್ರತಿಯೊಬ್ಬರನ್ನು ಅನುಮಾನ ಮತ್ತು ಸಂದೇಹದಿಂದ ನೋಡಲಾರಂಭಿಸುತ್ತಾನೆ. ತೊಂಬತ್ತು ವರ್ಷ ವಯಸ್ಸಿನ ಮಾಂಸದ ಮುದ್ದೆಯಂತಾಗಿರುವ ಪದ್ದಕ್ಕನನ್ನು (ಶ್ರೀನಿವಾಸನ ತಾಯಿ) ನೋಡಿದಾಗ ಸಾಯಲು ಹೊರಟವಳಲ್ಲೂ ಕೊಲ್ಲುವ ಛಲದ ಪ್ರವೃತ್ತಿ ಇನ್ನು ಜೀವಂತವಾಗಿರಬಹುದೆಂಬ ಗುಮಾನಿಯಿಂದ ನಾಗಪ್ಪ ದಿಗ್ಭ್ರಮೆಗೊಳಗಾಗುತ್ತಾನೆ. ಹೀಗೆ ಎಲ್ಲರನ್ನೂ ಸಂಶಯದಿಂದ ನೋಡುವ ನಾಗಪ್ಪ ಚಿತ್ತಾಲರ ‘ಮೂರು ದಾರಿಗಳು’ ಕಾದಂಬರಿಯ ಮಂಜುನಾಥನ ಈ ಮಾತುಗಳನ್ನು ನೆನಪಿಗೆ ತರುವಂತೆ ಭಾಸವಾಗುತ್ತದೆ ‘ಒಂದಿಬ್ಬರಿಂದ ಹುಟ್ಟಿದ ಭೀತಿ ಬೆಳೆಯುತ್ತ ಹೋದಂತೆ ನಮ್ಮ ಭೀತಿಗೆ ನಿಜವಾದ ಕಾರಣರಾದವರು ಯಾರು ಎನ್ನುವುದು ಮರೆತು ಹೋಗಿ ಇಡೀ ಕೇರಿ, ಇಡೀ ಊರು ಕೊನೆಗೆ ಇಡೀ ಜಗತ್ತೇ ನಮ್ಮನ್ನು ದ್ವೇಷಿಸುತ್ತಿದೆ ಎನ್ನುವ ಭಾವನೆ ಮೂಡಲಾರಂಭಿಸುತ್ತದೆ’. 

         ಸನ್ನಿವೇಶದಿಂದ ಸನ್ನಿವೇಶಕ್ಕೆ ಗಟ್ಟಿಯಾಗುತ್ತ ಹೋಗುವ ನಾಗಪ್ಪ ಕಾದಂಬರಿಯ ಅಂತ್ಯದಲ್ಲಿ ತನಿಖಾ ಸಮಿತಿಯ ಎದುರು ಹಾಜರಾಗಿ ಇಡೀ ಪಿತೂರಿ ಹೇಗೆ ರೂಪುಗೊಂಡಿತು ಎನ್ನುವುದನ್ನು ಸಮಿತಿಯ ಸದಸ್ಯರಿಗೆ ವಿವರಿಸುವಲ್ಲಿ ಯಶಸ್ವಿಯಾದರೂ  ಪಿತೂರಿ ಹೂಡಿದವರ ತಣ್ಣನೆಯ ಕ್ರೌರ್ಯದ ಎದುರು ಸೋಲುತ್ತಾನೆ. ಕಂಪನಿಯು ಒಡ್ಡುವ ಎಲ್ಲ ಪ್ರಲೋಭನೆಗಳನ್ನು ಪಕ್ಕಕ್ಕೆ ತಳ್ಳಿ ನೌಕರಿಗೆ ರಾಜೀನಾಮೆ ನೀಡಿ ಹೊರಬರುವ ನಾಗಪ್ಪನಿಗೆ ಕಳೆದುಹೋದ ಅಣ್ಣ ಮತ್ತು ತಂಗಿಯನ್ನು ಹುಡುಕುವುದೇ ಬದುಕಿನ ಅಂತಿಮ ಗುರಿಯಾಗುತ್ತದೆ. ಬದುಕಿನ ಎಲ್ಲ ದ್ವಂದ್ವ, ತಲ್ಲಣ, ಕ್ಷೋಭೆಗಳಿಂದ ಹೊರಬರುವ ನಾಗಪ್ಪ ಹೀಗೆ ನುಡಿಯುತ್ತಾನೆ ‘ಕ್ಷಮಿಸು ಮೇರಿ ಕಳೆದ ಎಂಟು ದಿನಗಳಿಂದ ಸರಿಯಾಗಿ ನಿದ್ದೆಯನ್ನೇ ಮಾಡಿಲ್ಲ ನೋಡು. ಈ ಹೊತ್ತು ಗಡದ್ದಾಗಿ ನಿದ್ದೆ ಮಾಡಬೇಕು. ಈಗ ನೀನು ತಂದ ಸುದ್ದಿಯಿಂದ ನನಗೆ ಖುಷಿಯಾಗಿಲ್ಲವೆಂದಲ್ಲ ಮೇರಿ ತುಂಬ ಖುಷಿಯಾಗಿದೆ. ಆದರೆ ನೀನು ತಿಳಿದಿರಬಹುದಾದ ಕಾರಣಕ್ಕಾಗಿಯಲ್ಲ. ನಾನು ರಾಜೀನಾಮೆಯನ್ನು ಕೊಟ್ಟಿದ್ದು ಬರೀ ನೌಕರಿಗಲ್ಲ. ಹೀಗೆ ಬರಿಯೇ  ನಮ್ಮ ನಮ್ಮ ಸ್ವಾರ್ಥಕ್ಕಾಗಿ, ಭಯಗಳಿಗಾಗಿ ಒಬ್ಬರನ್ನೊಬ್ಬರು ಉಪಯೋಗಿಸಿಕೊಳ್ಳುವಂತೆ ಮಾಡುವ ಈ ವ್ಯವಹಾರಿಕ ಲೋಕಕ್ಕೆ’. ಈವರೆಗೂ ಕಾಡುತ್ತ ಬಂದ ಭಯ, ಆತಂಕ, ಆಸೆ, ಆಕಾಂಕ್ಷೆ ಮುಂತಾದ ಎಲ್ಲ ಭಾವನೆಗಳನ್ನೂ ಕೆಳಕ್ಕೆ ದೂಡಿ ಬೋರ್ಡಮ್ ತಂತಾನೆ ಮೇಲಕ್ಕೆದ್ದು ಬರಹತ್ತಿದಾಗ ನಾಗಪ್ಪನಿಗೆ ತನಗೆ ಬಂದ ಆಕಳಿಕೆಯನ್ನು ತಡೆಯುವುದು ಕಠಿಣವಾಯಿತು ಈ ಮಾತು ಬದಲಾದ ನಾಗಪ್ಪನ ವ್ಯಕ್ತಿತ್ವವನ್ನು ಅರ್ಥಪೂರ್ಣವಾಗಿ ಧ್ವನಿಸುತ್ತದೆ. ಇದರೊಂದಿಗೆ ತನ್ನನ್ನು ಬಾಲ್ಯದಿಂದಲೂ ಕಾಡುತ್ತ ಬಂದ ಬೆಂಕಿ ಅಪಘಾತದ ಕಹಿ ನೆನಪಿನಿಂದಲೂ ಹೊರಬರುವ ನಾಗಪ್ಪ ಎದೆ ಹೊಟ್ಟೆಯ ಮೇಲಿನ ಸುಟ್ಟಿದ ಕಲೆಗಳನ್ನು ನೋಡಿಕೊಳ್ಳುವಷ್ಟು ಗಟ್ಟಿಯಾಗುತ್ತಾನೆ. 

ಚಿತ್ತಾಲರು ಧ್ಯಾನಿಸುವ ಸಂಗತಿಗಳು


ಸೃಜನಶೀಲನಾಗುವುದರಲ್ಲಿ ಸೋತಲ್ಲೆಲ್ಲ ಮನುಷ್ಯ ಮನುಷ್ಯನನ್ನೇ ಉಪಯೋಗಿಸಿಕೊಳ್ಳುವ ಕ್ರೂರತೆ ಕಾಣಿಸಿಕೊಳ್ಳುತ್ತದೆ ಎನ್ನುವ ಚಿತ್ತಾಲರು ‘ಶಿಕಾರಿ’ ಕಾದಂಬರಿಯುದ್ದಕ್ಕೂ ಓದುಗನನ್ನು ಒಂದು ರೀತಿಯ ಧ್ಯಾನಸ್ಥ ಸ್ಥಿತಿಗೆ ಒಳಪಡಿಸುತ್ತಾರೆ. ವ್ಯವಹಾರ ಜಗತ್ತಿನ ಅನೇಕ ಗೊಂದಲಗಳ ನಡುವೆ ಮನುಷ್ಯ ಪ್ರಜ್ಞೆಯನ್ನೇ ಕಳೆದುಕೊಳ್ಳುತ್ತಿರುವ ನಮ್ಮನ್ನು ಚಿತ್ತಾಲರು ನಾಗಪ್ಪನ ಸಂಕೀರ್ಣ ವ್ಯಕ್ತಿತ್ವದ ಮೂಲಕ ಮರು ಚಿಂತನೆಗೆ ಹಚ್ಚುತ್ತಾರೆ. 
ಒಟ್ಟಾರೆ ಕಾದಂಬರಿಯಲ್ಲಿ ಚಿತ್ತಾಲರು ಧ್ಯಾನಿಸುವ ಸಂಗತಿಗಳು ಹೀಗಿವೆ,
● ಈ ಮನುಷ್ಯನ ವ್ಯವಹಾರ ಜಗತ್ತಿನ ಅಸಹ್ಯವಾದ ಅಂದಗೇಡಿತನದಿಂದ ಮನಸ್ಸು ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲೆಂದು ಸೃಜನಶೀಲ ಕ್ರಿಯೆಗಳಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಆ ದೇವರೇ ಕೊಟ್ಟಿರಬೇಕು. ಸಭ್ಯತೆಯ ಮುಖವಾಡದ ಹಿಂದೆ ಎಂತಹ ಕ್ರೌರ್ಯದ ಹಲ್ಲು ಮಸೆತ ನೋಡಿ. 
●  ಮನುಷ್ಯ ನಿಸರ್ಗವನ್ನು ತನ್ನ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಳ್ಳಲು ಹತ್ತಿದ ರೀತಿಯಿಂದಾಗಿ ಕಳೆದ ಕೆಲವು ದಶಕಗಳಿಂದ ನಾವು ನಿಸರ್ಗವನ್ನು ನೋಡುವ ದೃಷ್ಟಿಯೇ  ಭ್ರಷ್ಟವಾಗಿ ಬಿಟ್ಟಿದೆ. ಇಂದಿನ ಮನುಷ್ಯ ತಾನೇ ತನ್ನ ಅಹಂಕಾರದ ಮೇಲೆ, ಸ್ವಾರ್ಥದ ಮೇಲೆ ನಿಲ್ಲಿಸಿದ ನಿರ್ಜೀವ ವಸ್ತುಗಳಿಂದಲೇ ಸುತ್ತುವರಿಯಲ್ಪಟ್ಟಿದ್ದಾನೆ. ಆದ್ದರಿಂದಲೇ ತನ್ನೊಬ್ಬನ ಸ್ವಾರ್ಥಕ್ಕಾಗಿ ಮನುಷ್ಯರನ್ನು ನಿರ್ಜೀವ ವಸ್ತುಗಳೇ ಎನ್ನುವ ಹಾಗೆ ಉಪಯೋಗಿಸಿಕೊಳ್ಳಲು ತೊಡಗಿದ್ದಾನೆ.
●  ಮನುಷ್ಯ ಎಷ್ಟೇ ಪ್ರಾವೀಣ್ಯತೆ ಹೊಂದಿದವನಾಗಿದ್ದರೂ ಅವನೊಬ್ಬ ಭಾವನಾಜೀವಿ, ವ್ಯವಹಾರ ಜ್ಞಾನವಿಲ್ಲದವನು ಎನ್ನುವ ಅಭಿಪ್ರಾಯವೇ ಇಡೀ ವ್ಯವಸ್ಥೆ ಅವನನ್ನು ವ್ಯಂಗ್ಯವಾಗಿ ನೋಡಲು ಕಾರಣವಾಗಬಹುದು. 
●  ಪ್ರತಿಯೊಬ್ಬನನ್ನು ಅಪನಂಬಿಕೆಯಿಂದ ನೋಡುವುದೇ ಜಾಣತನವಾದರೆ ಬದುಕಿರಬೇಕು ಎನ್ನುವ ಅಭೀಪ್ಸೆಗೆ ಅರ್ಥವಾದರೂ ಏನು?
●  ಏನಿರದಿದ್ದರೂ ಬದುಕಬಹುದೇನೋ. ಆದರೆ ಪ್ರೀತಿಯಿಲ್ಲದೆ, ಗೆಳತನವಿಲ್ಲದೆ, ಮಾನವೀಯ ಅಂತ:ಕರಣವಿಲ್ಲದೆ, ಸಹಾನುಭೂತಿಯಿಲ್ಲದೆ ಬದುಕುವುದು ಸಾಧ್ಯವೇ ಇಲ್ಲವೇನೋ?

ಕೊನೆಯ ಮಾತು


ನಾಗಪ್ಪ ತನ್ನ ವಿರುದ್ಧ ಪಿತೂರಿ ರೂಪಿಸಿದವರಿಗೆ ಪಾಠ ಕಲಿಸದೆ ನೌಕರಿಗೆ ರಾಜೀನಾಮೆ ನೀಡಿ ಕಂಪನಿಯಿಂದ ಹೊರಬರುವುದು ಕಾದಂಬರಿಯ ಕಥಾನಾಯಕನ ಸೋಲು ಎಂದೆನಿಸಿದರೂ ಬೇರೊಂದು ರೀತಿಯಲ್ಲಿ ಲೇಖಕರ ಆಶಯ ಇಡೇರಿದೆ. ತನ್ನನ್ನು ಕಾಡುತ್ತಿರುವ ಎಲ್ಲ ದ್ವಂದ್ವಗಳಿಂದ ಬಿಡುಗಡೆ ಪಡೆಯುವ ನಾಗಪ್ಪ ಹೊಸ ಮನುಷ್ಯನಾಗಿ ಮತ್ತೆ ಮರುಹುಟ್ಟು ಪಡೆಯುವುದು ಚಿತ್ತಾಲರ ದೃಷ್ಟಿಯಲ್ಲಿ (ಓದುಗರ ದೃಷ್ಟಿಯಲ್ಲಿ ಕೂಡ) ಅದು ನಾಗಪ್ಪನ ನಿಜವಾದ ಗೆಲುವಾಗಿ ಪರಿಣಮಿಸುತ್ತದೆ. ಚಿತ್ತಾಲರ ಕತೆ, ಕಾದಂಬರಿಗಳ ನಾಯಕರು ವ್ಯವಹಾರಿಕ ಬದುಕಿನಲ್ಲಿ ಸೋಲನ್ನನುಭವಿಸಿದರೂ ವೈಯಕ್ತಿಕ ಬದುಕಿನಲ್ಲಿ ಗೆಲುವು ಸಾಧಿಸುವುದು ಅವರ ಒಟ್ಟು ಬರವಣಿಗೆಯ ಪ್ರಧಾನ ನೆಲೆಯಾಗಿದೆ. ಈ ಸಂದರ್ಭ ಕತೆಗಾರ ಎಸ್.ದಿವಾಕರ ಅವರ ಹೇಳಿಕೆಯೊಂದಿಗೆ ಲೇಖನಕ್ಕೊಂದು ತಾರ್ಕಿಕ ಅಂತ್ಯವನ್ನು ಕೊಡಲು ನಾನು ಬಯಸುತ್ತೇನೆ, ‘ಮಾನವತಾವಾದಿಯಾದ ಯಶವಂತ ಚಿತ್ತಾಲರು ತಮ್ಮ ಕಥಾನಾಯಕರ ಸೋಲುಗಳಿಗೂ ಘನತೆ ತಂದು ಕೊಡುತ್ತಾರೆ. ಕಥೆ, ಕಾದಂಬರಿಗಳಲ್ಲಿ ನಾವು ಸೋಲರಿಯದ ಮಹಾ ನಾಯಕರನ್ನು ಅಪೇಕ್ಷಿಸುತ್ತೇವೆ. ಅಂಥ ನಾಯಕರು ನಮ್ಮ ಭ್ರಮಾಲೋಕವನ್ನು ಮೂರ್ತಗೊಳಿಸಬೇಕೆಂದು ಹಟ ಹಿಡಿಯುತ್ತೇವೆ. ಆದ್ದರಿಂದ ನಮ್ಮ ಕನಸಿನ ನಾಯಕರು ನಮ್ಮಂತೆಯೇ  ಮನುಷ್ಯರಾಗಿ ಮನುಷ್ಯ ಸಹಜ ಸೋಲುಗಳಿಗೆ ಗುರಿಯಾದಾಗ ನಮಗೆ ನಿರಾಶೆಯಾಗುತ್ತದೆ. ಆದರೆ ಚಿತ್ತಾಲರ ಕಥೆಗಳಲ್ಲಿ ಮನುಷ್ಯ ಮನುಷ್ಯನಿಗೆ ತೋರಿಸಬೇಕಾದ ಪ್ರೀತಿಯೇ  ಮೇಲುಗೈಯಾಗುವುದರಿಂದ ಅಲ್ಲಿ ಸೋಲುಗಳಿಗೂ ಬೆಲೆಯಿದೆ. ಒಟ್ಟಾರೆ ಚಿತ್ತಾಲರ ಕೃತಿಗಳಲ್ಲಿ ಜೀವಂತ ಮನುಷ್ಯನೊಬ್ಬನ ಬಗ್ಗೆ ಜೀವಂತ ಮನುಷ್ಯನೊಬ್ಬ ಕಿವಿಗೊಟ್ಟು ಕೇಳಿಸಿಕೊಳ್ಳಬೇಕಾದ ಜೀವನ ದರ್ಶನವಿದೆ’. 

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Saturday, June 3, 2017

ಹೀಗೊಂದು ಸಾಂಸ್ಕೃತಿಕ ತಳಮಳ

                  ಮೊನ್ನೆ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೊಗಿದ್ದೆ. ಅಂದು ಹಲವು ಲೇಖಕರ ಪುಸ್ತಕಗಳನ್ನು ಬಿಡುಗಡೆ ಮಾಡುವ ಸಮಾರಂಭವನ್ನು ಆ ಪ್ರಕಾಶನ ಸಂಸ್ಥೆಯು ಸಾಂಸ್ಕೃತಿಕ ಸಭಾಂಗಣದಲ್ಲಿ ಆಯೋಜಿಸಿತ್ತು. ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ ಬರಹಗಾರರೊಬ್ಬರು ಅಂದಿನ ಆ ಸಮಾರಂಭದ ಮುಖ್ಯ ಅತಿಥಿ. ಜೊತೆಗೆ ಒಂದಿಷ್ಟು ಆಕರ್ಷಣೆ ಇರಲಿ ಎಂದು ಓದುವ ಹಾಗೂ ಬರೆಯುವ ಹವ್ಯಾಸವಿರುವ ಸಿನಿಮಾ ಕಲಾವಿದನನ್ನು ಪುಸ್ತಕಗಳ ಬಿಡುಗಡೆಗಾಗಿ ಆಹ್ವಾನಿಸಲಾಗಿತ್ತು. ಆದರೆ ಸಭಾಂಗಣ ಮಾತ್ರ ಪ್ರೇಕ್ಷಕರಿಲ್ಲದೆ ಭಣಗುಟ್ಟುತ್ತಿತ್ತು. ಬಿಡುಗಡೆಯಾಗುತ್ತಿರುವ ಪುಸ್ತಕಗಳ ಲೇಖಕರು ಹಾಗೂ ಅವರೊಡನೆ ಬಂದ ಅವರ ಕುಟುಂಬ ವರ್ಗದವರನ್ನು ಬಿಟ್ಟರೆ ಇಡೀ ಸಭಾಂಗಣ ಖಾಲಿಯಾಗಿತ್ತು. ಸಭಾಂಗಣದ ಒಂದು ಮೂಲೆಯಲ್ಲಿ ಆ ದಿನ ಬಿಡುಗಡೆಯಾಗುತ್ತಿರುವ ಪುಸ್ತಕಗಳನ್ನು ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಜೋಡಿಸಿಡಲಾಗಿತ್ತು. ಒಂದಿಬ್ಬರು ಆಸಕ್ತರು ಒಂದೆರಡು ಪುಸ್ತಕಗಳನ್ನು ಕೈಯಲ್ಲಿ ಹಿಡಿದು ನೋಡಿದರೆ ವಿನ: ಒಂದೇ ಒಂದು ಪುಸ್ತಕ ಮಾರಾಟವಾಗಲಿಲ್ಲ. ಇನ್ನೊಂದು ಆಸಕ್ತಿಯ ಸಂಗತಿ ಎಂದರೆ ಆ ದಿನದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವಿಶೇಷ ಊಟದ ವ್ಯವಸ್ಥೆಯನ್ನು ಬಂದ ಅತಿಥಿ ಗಣ್ಯರಿಗಾಗಿ, ಲೇಖಕರಿಗಾಗಿ ಹಾಗೂ ಸಾರ್ವಜನಿಕರಿಗಾಗಿ ಮಾಡಲಾಗಿತ್ತು. ಅತಿಥಿಗಳ ಭಾಷಣ ಮತ್ತು ಪುಸ್ತಕಗಳ ಬಿಡುಗಡೆಯಾಗುತ್ತಿದ್ದಂತೆ ಬಂದವರೆಲ್ಲ ಊಟ ಮಾಡಲು ಧಾವಂತ ಪಡುತ್ತಿದ್ದರೆ ಹೊರತು ಆ ದಿನ ಬಿಡುಗಡೆಯಾದ ಪುಸ್ತಕಗಳತ್ತ ಒಂದು ದೃಷ್ಟಿಯನ್ನೂ ಬೀರಲಿಲ್ಲ.  ಹಣ ಖರ್ಚು ಮಾಡಿ ಪುಸ್ತಕಗಳನ್ನು ಪ್ರಕಟಿಸಿದ ಪ್ರಕಾಶಕರ ಎದುರೇ ಲೇಖಕರಿಂದ  ಪುಸ್ತಕಗಳನ್ನು ಗೌರವ ಪ್ರತಿಯ ರೂಪದಲ್ಲಿ ಪಡೆಯಲು ಹಲವರು ಪ್ರಯತ್ನಿಸುತ್ತಿದ್ದರು.  ಪಾಪ ಬಡಪಾಯಿ ಲೇಖಕರು ಕೆಲವರಾದರೂ ತಮ್ಮ ಪುಸ್ತಕಗಳನ್ನು ಓದಲಿ ಎನ್ನುವ ಆಸೆಯಿಂದ ಪ್ರಕಾಶಕರು ತಮಗೆ ಕೊಟ್ಟ ಗೌರವ ಪ್ರತಿಗಳನ್ನೇ ತಮ್ಮ ಸ್ನೇಹಿತರಿಗೋ ಇಲ್ಲವೇ ಸಂಬಂಧಿಕರಿಗೋ ಹಂಚುತ್ತಿದ್ದರು. ಒಟ್ಟಾರೆ ಆ ದಿನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಾನು ನೋಡಿದ ದೃಶ್ಯಗಳು ಪುಸ್ತಕೋದ್ಯಮದ ಅವನತಿಗೆ ಬಲವಾದ ಪುರಾವೆಯನ್ನು ಒದಗಿಸುವಂತಿದ್ದವು.

                     ಲೇಖನದ ಮೂಲ ವಿಷಯಕ್ಕೆ ಹೋಗುವುದಕ್ಕಿಂತ ಮೊದಲು ಇನ್ನೊಂದು ಘಟನೆಯನ್ನು ಹೇಳುತ್ತೇನೆ. ಪ್ರಿಯಾಂಕ ಛೊಪ್ರಾ ಅಭಿನಯದ 'ಮೇರಿ ಕೊಮ್' ಸಿನಿಮಾ ನೋಡಬೇಕೆನ್ನುವುದು ನನ್ನ ಬಹುದಿನಗಳ ಆಸೆಯಾಗಿತ್ತು. ಕ್ರೀಡಾಪುಟುವಿನ ಬದುಕನ್ನಾಧರಿಸಿ ತಯ್ಯಾರಾದ ಸಿನಿಮಾ ನಿಜಕ್ಕೂ ನಮ್ಮ ಯುವಜನಾಂಗಕ್ಕೆ ಸ್ಪೂರ್ತಿ ಮತ್ತು ಪ್ರೇರಣೆ ನೀಡುವಂತಿದ್ದು ಪ್ರತಿಯೊಬ್ಬರೂ ಆ ಸಿನಿಮಾ ನೋಡ ಬೇಕಿತ್ತು. ಟಿಕೇಟ್ ಸಿಗುತ್ತದೋ ಇಲ್ಲವೋ ಎನ್ನುವ ಆತಂಕದಿಂದ ಥೇಟರ್ ಒಳಗಡೆ ಪ್ರವೇಶಿಸಿದರೆ ಅಲ್ಲಿದ್ದದ್ದು ಬೆರಳೆಣಿಕೆಯಷ್ಟು ಪ್ರೇಕ್ಷಕರು ಮಾತ್ರ. ಪಕ್ಕದಲ್ಲೇ ಇದ್ದ ಥೇಟರ್ ನಲ್ಲಿ 'ಡರ್ಟಿ ಪಿಕ್ಚರ್' ಸಿನಿಮಾ ಐವತ್ತು ದಿನಗಳ ಪ್ರದರ್ಶನ ಪೂರ್ಣಗೊಳಿಸಿ ಆ ದಿನವೂ ಅನೇಕ ಜನರು ಟಿಕೇಟ್ ಸಿಗದೆ ನಿರಾಶೆಯಿಂದ ಥೇಟರ್ ಹೊರಗಡೆ ನಂತರದ ಪ್ರದರ್ಶನಕ್ಕಾಗಿ ಕಾಯುತ್ತ ನಿಂತಿದ್ದರು. ಒಂದು ಸಿನಿಮಾ ಸಮಾಜಕ್ಕೆ ಸಂದೇಶ ಸಾರುವಂಥ ಕಥೆ ಇದ್ದೂ ಪ್ರೇಕ್ಷಕರ ಬೆಂಬಲವಿಲ್ಲದೆ ಒಂದೇ ವಾರದಲ್ಲಿ ಸಿನಿಮಾ ಮಂದಿರದಿಂದ ಎತ್ತಂಗಡಿಯಾದರೆ ಇನ್ನೊಂದು ಸಿನಿಮಾ ನಟಿಯೋರ್ವಳ ಮಾದಕ ಅಭಿನಯದಿಂದ ಐವತ್ತು ದಿನಗಳಾದರೂ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿತ್ತು. ಪ್ರಿಯಾಂಕಾ ಛೊಪ್ರಾ 'ಮೇರಿ ಕೊಮ್' ಸಿನಿಮಾದಲ್ಲಿನ ಅಭಿನಯಕ್ಕಾಗಿ ನಟನೆಯಲ್ಲಿ ನೈಜತೆಯನ್ನು ತರಲು ತನ್ನ ತಲೆಯನ್ನು ಸಂಪೂರ್ಣವಾಗಿ ಕ್ಷೌರ ಮಾಡಿಸಿಕೊಂಡಿದ್ದು ಅದು ಆ ಸಿನಿಮಾ ವಾಸ್ತವಿಕತೆಗೆ ಎಷ್ಟೊಂದು ಹತ್ತಿರವಾಗಿತ್ತು ಎನ್ನುವುದಕ್ಕೆ  ಒಂದು ಉತ್ತಮ ಉದಾಹರಣೆ. ಆದರೆ ಪ್ರೇಕ್ಷಕರು ಆಕೆಯ ಅಭಿನಯಕ್ಕೆ ತೀರಾ ನಿರಸವಾಗಿ ಸ್ಪಂದಿಸಿದ್ದು ಮಾತ್ರ ಅತ್ಯಂತ ನೋವಿನ ಸಂಗತಿ. ಮಾದಕ ಸಿನಿಮಾದ ಟಿಕೇಟ್ ಪಡೆಯಲು ವಿಫಲರಾದ ಪ್ರೇಕ್ಷಕರು ಮುಂದಿನ  ಪ್ರದರ್ಶನದ ಟಿಕೇಟ್ ಗಾಗಿ ಕಾಯುತ್ತ ಸರತಿ ಸಾಲಿನಲ್ಲಿ ನಿಂತರೇ ವಿನ: ಅವರು ಪಕ್ಕದ ಥೇಟರ್ ನಲ್ಲೇ ಇರುವ ಬದುಕಿಗೆ ಅತಿ ಹತ್ತಿರವಿರುವ ಸಿನಿಮಾವನ್ನು ವೀಕ್ಷಿಸಲು ಆಸಕ್ತಿ ತೋರಲಿಲ್ಲ.

                   ಈ ಮೇಲಿನ ಎರಡು ಘಟನೆಗಳನ್ನು ನಾನು ಲೇಖನದ ಪ್ರಾರಂಭದಲ್ಲಿ ಉಲ್ಲೇಖಿಸಲು ಮುಖ್ಯ ಕಾರಣ ಇವತ್ತು ಸಾಹಿತ್ಯ ಮತ್ತು ಸಿನಿಮಾದಂಥ ಸಾಂಸ್ಕೃತಿಕ ಕ್ಷೇತ್ರಗಳು ಜನರ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ ಎನ್ನುವುದನ್ನು ಉದಾಹರಣೆಯೊಂದಿಗೆ ವಿವರಿಸಲು. ಸಾಹಿತ್ಯ ಮತ್ತು ಸಿನಿಮಾ ಒಂದು ನೆಲದ ಎರಡು ಮಹತ್ವದ ಸಾಂಸ್ಕೃತಿಕ ನೆಲೆಗಳು ಎನ್ನುವ ಅಭಿಪ್ರಾಯ ನನ್ನದು. ಜಾಗತೀಕರಣ ಮತ್ತು ತಂತ್ರಜ್ಞಾನದ ಈ ಯುಗದಲ್ಲಿ ನಮ್ಮ ಪೀಳಿಗೆ ಸಾಹಿತ್ಯದ ಓದು ಮತ್ತು ಸದಭಿರುಚಿಯ ಸಿನಿಮಾಗಳ ವೀಕ್ಷಣೆಯಿಂದ ಸಂಪೂರ್ಣವಾಗಿ ವಿಮುಖರಾಗಿರುವರು. ಜೊತೆಗೆ ಈ ತಂತ್ರಜ್ಞಾನದ ಬೆಳವಣಿಗೆಯ  ಕಾಲಘಟ್ಟದಲ್ಲಿ ಹುಟ್ಟಿ ಈಗ ತರುಣ ತರುಣಿಯರಾಗಿ ಬೆಳೆದು ನಿಂತಿರುವ ಯುವಜನಾಂಗವನ್ನು ದೃಷ್ಟಿಯಲ್ಲಿಟ್ಟುಕೊಂಡು ನಮ್ಮ ಬರಹಗಾರರು ಬರೆಯುತ್ತಿರುವುದು ಹಾಗೂ ಸಿನಿಮೊದ್ಯಮದ ಜನ ಸಿನಿಮಾಗಳನ್ನು ತಯ್ಯಾರಿಸುತ್ತಿರುವುದು ಆತಂಕದ ಸಂಗತಿ.

ಸಾಹಿತ್ಯ 


                   ಹಿರಿಯ ಸಾಹಿತಿಗಳೆಲ್ಲ ಈಗ ಬರೆಯುತ್ತಿಲ್ಲ (ಭೈರಪ್ಪನವರಿಗೆ ಈ ಆಪಾದನೆ ಅನ್ವಯಿಸುವುದಿಲ್ಲ) ಎನ್ನುವುದು ನಮ್ಮ ಬಹುಮುಖ್ಯವಾದ ಸಾಂಸ್ಕೃತಿಕ ತಳಮಳಗಳಲ್ಲೊಂದು. ಒಂದು ವಯಸ್ಸಿನವರೆಗೆ ಬರೆದು ಒಂದಿಷ್ಟು ಪ್ರಶಸ್ತಿ, ಪುರಸ್ಕಾರಗಳನ್ನು ಬಾಚಿಕೊಂಡರೆ ಬರವಣಿಗೆಯ ಕೆಲಸ ಪೂರ್ಣಗೊಂಡಂತೆ ಎನ್ನುವ ಸ್ಥಾಪಿತ ಅಭಿಪ್ರಾಯ ಅನೇಕ ಲೇಖಕರದು. ಹೀಗೆ ಬರವಣಿಗೆಯಿಂದ ಸ್ವಯಂ ನಿವೃತ್ತಿ ತೆಗೆದುಕೊಳ್ಳುವ ನಮ್ಮ ಹಿರಿಯ ಲೇಖಕರು ತಮ್ಮ ಬದುಕಿನ ಸಂಧ್ಯಾ ಕಾಲವನ್ನು ಸಭೆ ಸಮಾರಂಭಗಳಲ್ಲಿ ಅತಿಥಿಗಳಾಗಿಯೋ ಇಲ್ಲವೇ ಕಿರಿಯ ಲೇಖಕರ ಪುಸ್ತಕಗಳಿಗೆ ಮುನ್ನುಡಿ ಬೆನ್ನುಡಿ ಬರೆದೋ ಅಷ್ಟಕ್ಕೇ ಸಂತೃಪ್ತರಾಗುವುದುಂಟು. ಇನ್ನು ಕೆಲವು ಹಿರಿಯರು ತಮ್ಮಲ್ಲಿನ ಬರವಣಿಗೆಯ ಕಸುವು ಕಮ್ಮಿಯಾಗುತ್ತಿದ್ದಂತೆ ಚಳವಳಿಯ ವ್ಯಾಧಿಯನ್ನು ಅಂಟಿಸಿಕೊಂಡು ಜಾತಿ ಧರ್ಮದ ಹೆಸರಿನಿಂದ ಸಮಾಜವನ್ನು ಒಡೆಯುವ ಸಾಹಸಕ್ಕೆ ಕೈಹಾಕುವರು. ಬರಹಗಾರನೊಳಗಿನ ಸೃಜನಾತ್ಮಕತೆ ಇಂಗಲು ಬಹುಮುಖ್ಯ ಕಾರಣ ಅನೇಕ ಲೇಖಕರು ತಮ್ಮ ಬರವಣಿಗೆ ಒಂದು ಹಂತಕ್ಕೆ ಬಂದ ಮೇಲೆ ಇತರರ ಕೃತಿಗಳನ್ನು ಓದುವುದನ್ನೇ ನಿಲ್ಲಿಸಿ ಬಿಡುವರು. ಬರವಣಿಗೆಯಂಥ ಸೃಜನಶೀಲ ಕ್ರಿಯೆಗೆ  ನಿರಂತರ ಅಧ್ಯಯನವೇ  ಮೂಲ ಪ್ರೇರಣೆಯಾಗುವುದು  ಮತ್ತು ಅಗತ್ಯವಾದ ಬಂಡವಾಳವನ್ನೊದಗಿಸುವುದು. ಹೀಗಿದ್ದೂ ನಮ್ಮ ಹಿರಿಯ ತಲೆಮಾರಿನ ಬರಹಗಾರರು ಅಧ್ಯಯನದಿಂದ ವಿಮುಖರಾಗಿ ಬರೆಯುವುದನ್ನೇ ನಿಲ್ಲಿಸುತ್ತಿರುವರು. ನಿಜಕ್ಕೂ ಇದು ನಾವುಗಳು ಆತಂಕ ಪಡಬೇಕಾದ ಸಂಗತಿ. ಜೊತೆಗೆ ಬರವಣಿಗೆಯ ಕೆಲಸ ನಿಲ್ಲಿಸಿದ ನಂತರವೂ ಮುಖ್ಯವಾಹಿನಿಯಲ್ಲಿ ಸದಾಕಾಲ ಕಾಣಿಸಿಕೊಳ್ಳಬೇಕೆನ್ನುವ ಹಪಾಹಪಿಯಿಂದ ಈ ಹಿರಿಯ ಬರಹಗಾರರು ದಿನಕ್ಕೊಂದು ವಿವಾದಿತ ಹೇಳಿಕೆಗಳನ್ನು ಕೊಡುತ್ತ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವರು.

                    ಹಿರಿಯ ಲೇಖಕರೆಲ್ಲ ಸ್ವಯಂ ನಿವೃತ್ತಿ ಪಡೆಯುತ್ತಿರುವ ಈ ಸಂದರ್ಭ ಕೆಲವು ಲೇಖಕರು ವಾಲ್ಮೀಕಿ ಯಾರು? ರಾಮನ ಪ್ರೇಮ ಮತ್ತು ಕಾಮದ ಕಥೆ, ಕೃಷ್ಣನ ಲೀಲೆ ಎನ್ನುವ ವಿವಾದಿತ ಪುಸ್ತಕಗಳನ್ನು ಬರೆದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸಲು ಪ್ರಯತ್ನಿಸುವರು. ಸಾಹಿತ್ಯ ಹಿಂದೆಯೆಲ್ಲ ಚಳವಳಿಗಳಿಗೆ ಪೂರಕವಾಗಿ ಕೆಲಸ ಮಾಡಿದ ಉದಾಹರಣೆಗಳು ಚರಿತ್ರೆಯಲ್ಲಿವೆ. ಆದರೆ ಆ ಸಂದರ್ಭ ಸಾಹಿತ್ಯ ಸಮಾಜವನ್ನು ಒಂದುಗೂಡಿಸುವ ಇಲ್ಲವೇ ಅಧಿಕಾರಶಾಹಿಯ ವಿರುದ್ಧದ ಹೋರಾಟಕ್ಕೆ ಪ್ರೇರೇಪಿಸುತ್ತಿತ್ತು. ಕುವೆಂಪು ಅವರ ಕಾನೂರು ಹೆಗ್ಗಡತಿ, ಕಾರಂತರ ಚೋಮನ ದುಡಿ ಈ ಕಾದಂಬರಿಗಳು ಒಂದು ಚಳವಳಿ ಅಥವಾ ಹೋರಾಟದ ಹಿನ್ನೆಲೆಯಲ್ಲೇ  ರೂಪುಗೊಂಡ ಕೃತಿಗಳು. ಆದರೆ ಇವತ್ತಿನ ಬರಹಗಾರರು ತಮ್ಮ ಬರವಣಿಗೆಯಿಂದ ಧರ್ಮ ಮತ್ತು ಜಾತಿಗಳ ನಡುವೆ ಕಂದಕವನ್ನು ಸೃಷ್ಟಿಸಿ ಆ ಮೂಲಕ ಸಮಾಜವನ್ನು ಒಡೆಯಲು ಪ್ರಯತ್ನಿಸುತ್ತಿರುವರು. ಇನ್ನೊಂದು ಕಳವಳದ ಸಂಗತಿ ಎಂದರೆ ಈ ಸಾಹಿತಿಗಳಲ್ಲೇ ಎಡ ಮತ್ತು ಬಲಪಂಥಿಯ ಎನ್ನುವ ವರ್ಗಗಳು ಸೃಷ್ಟಿಯಾಗಿದ್ದು ಅವರು ಒಬ್ಬರ ಮೇಲೊಬ್ಬರು ಕೆಸರೆರುಚುತ್ತ ಓದುಗರು ಬರಹಗಾರರೆಂದರೆ ಅಸಹ್ಯ ಪಡುವಂತೆ ವರ್ತಿಸುತ್ತಿರುವರು. ಜೊತೆಗೆ ನಮ್ಮ ಬರಹಗಾರರು  ಬಂಡಾಯ, ನವ್ಯ, ನವೋದಯ, ದಲಿತ, ಅಲ್ಪಸಂಖ್ಯಾತ  ಎಂದು ಹತ್ತು ಹಲವು ಗುಂಪುಗಳಲ್ಲಿ ಹರಿದು ಹಂಚಿಹೋಗಿ  ತಮ್ಮ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳಲು ಹೆಣಗುತ್ತಿರುವರು. ಇತ್ತೀಚಿನ ದಿನಗಳಲ್ಲಿ ನಮ್ಮ ಬರಹಗಾರರೆಲ್ಲ ಸಂಘಟಿತರಾಗಿ ಚಳವಳಿ ಇಲ್ಲವೇ ಹೋರಾಟವನ್ನು ರೂಪಿಸಿದ ಉದಾಹರಣೆಯೇ ಇಲ್ಲ.

                ಕೆಲವು ದಿನಗಳ ಹಿಂದೆ ನಾಡಿನ ಪ್ರಸಿದ್ಧ ಸಾಹಿತಿಯೋರ್ವರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಿಮ್ಮ ಪ್ರಕಾಶನ ಸಂಸ್ಥೆಯಿಂದ ಪ್ರಕಟವಾದ ಎಷ್ಟು ಕೃತಿಗಳಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ ಎಂದು ನೇರವಾಗಿ ಪ್ರಕಾಶಕರನ್ನೇ ಪ್ರಶ್ನಿಸಿದರು. ಪ್ರಶಸ್ತಿ ಪುರಸ್ಕಾರಗಳೆಲ್ಲ ತಮ್ಮ ಮೌಲ್ಯವನ್ನು ಕಳೆದುಕೊಳ್ಳುತ್ತಿರುವ ದಿನಗಳಲ್ಲಿ ಆ ಮಹನೀಯರು ಹೀಗೆ ಪ್ರಶ್ನಿಸಿದ್ದು ತೀರ ಅಸಂಗತವಾಗಿತ್ತು. ಪ್ರಶಸ್ತಿ ಪಡೆದ ಕೃತಿಗಳೆಲ್ಲ ಮೌಲಿಕ ಕೃತಿಗಳು ಎನ್ನುವುದು ಅವರ ನಂಬಿಕೆಯಾದರೆ ಪ್ರತಿ ವರ್ಷ ಪ್ರಕಟವಾಗುವ ಎಲ್ಲ ಪುಸ್ತಕಗಳಿಗೂ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಕೊಡಲು ಸಾಧ್ಯವೇ ಎನ್ನುವ ಪ್ರಶ್ನೆ ಇಲ್ಲಿ ಎದುರಾಗುತ್ತದೆ. ಜೊತೆಗೆ ಪ್ರಶಸ್ತಿಯ ಮಾನದಂಡಗಳು ಯಾವುವು ಎನ್ನುವ ಇನ್ನೊಂದು ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಪ್ರಶಸ್ತಿ ಮಾತ್ರ ಒಂದು ಕೃತಿಯ ಮೌಲ್ಯವನ್ನು ನಿರ್ಧರಿಸುತ್ತದೆ ಎನ್ನುವುದಾದರೆ ಕನ್ನಡಕ್ಕೆ ಇದುವರೆಗೆ ದೊರೆತಿದ್ದು ಕೇವಲ ಎಂಟು ಜ್ಞಾನಪೀಠ ಮಾತ್ರ. ಈ ಅರ್ಥದಲ್ಲಿ ಜ್ಞಾನಪೀಠ ಪುರಸ್ಕೃತರಿಂದ ಮಾತ್ರ ಕನ್ನಡದಲ್ಲಿ ಮೌಲಿಕ ಸಾಹಿತ್ಯ ಸೃಷ್ಟಿಯಾಗಿದೆ ಉಳಿದದ್ದು 'ಭೂಸಾ' ಸಾಹಿತ್ಯ ಎನ್ನಬೇಕೆ? ಕಣವಿ, ಜಿಎಸ್ಸೆಸ್, ದೇವನೂರ ಮಹಾದೇವ, ತೇಜಸ್ವಿ, ಲಂಕೇಶ್, ತರಾಸು, ಕಟ್ಟಿಮನಿ, ಇಂದಿರಾ, ತ್ರಿವೇಣಿ, ಅನುಪಮಾ ಇವರೆಲ್ಲ ಜ್ಞಾನಪೀಠ ಪುರಸ್ಕೃತರಿಗೆ ಸಮಾನದ ಕೃತಿಗಳನ್ನು ಬರೆಯಲಿಲ್ಲವೇ? (ನಮ್ಮ ಕುಂವೀ ಸಮಾರಂಭವೊಂದರಲ್ಲಿ ಜ್ಞಾನಪೀಠ ನಾನ್ಸೆನ್ಸ್ ಎಂದು ಸಿಟ್ಟಿನಿಂದ ಬೈದಿದ್ದರು) ಪ್ರಶಸ್ತಿಯೇ ಕೃತಿಯ ಗುಣಮಟ್ಟದ ಮಾನದಂಡ ಎನ್ನುವುದಾದರೆ ನಮ್ಮ ಬರಹಗಾರರೆಲ್ಲ ಬರವಣಿಗೆಯನ್ನೇ ನಿಲ್ಲಿಸಬೇಕಾಗುತ್ತದೆ. ಈಗಾಗಲೇ ಹಿರಿಯ ಲೇಖಕರು ಬರವಣಿಗೆಯಿಂದ ಸ್ವಯಂ ನಿವೃತ್ತಿ ತೆಗೆದುಕೊಂಡಿರುವ ಘಳಿಗೆ ಪ್ರಶಸ್ತಿಯ ಬರದಿಂದ ನಮ್ಮ ಯುವ ಬರಹಗಾರರು ಬರವಣಿಗೆಯನ್ನು ನಿಲ್ಲಿಸಿದಲ್ಲಿ ನಾಡಿನಲ್ಲಿ ಸಾಂಸ್ಕೃತಿಕ ದಾರಿದ್ರ್ಯ ಕಾಣಿಸಿಕೊಳ್ಳುವ ಅಪಾಯ ಎದುರಾಗುತ್ತದೆ.

                   ಈ ನಡುವೆ ಲೇಖಕರೇ ಪ್ರಕಾಶಕರಾಗಿ ಪುಸ್ತಕಗಳನ್ನು ಪ್ರಕಟಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವರು. ಪರಿಣಾಮವಾಗಿ ಕನ್ನಡದಲ್ಲಿ ಪ್ರತಿವರ್ಷ ಅಸಂಖ್ಯಾತ ಪುಸ್ತಕಗಳು ಪ್ರಕಟಗೊಳ್ಳುತ್ತಿವೆಯೆಂದೂ ಮತ್ತು ಅವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪುಸ್ತಕಗಳು ಓದಲು ಯೋಗ್ಯವಾಗಿರುವುದಿಲ್ಲ ಎನ್ನುವ ಅಪವಾದ ಕೇಳಿಬರುತ್ತಿದೆ. ಇದು ಸತ್ಯಕ್ಕೆ ಹತ್ತಿರವಾದ ಮಾತು. ಏಕೆಂದರೆ ಪುಸ್ತಕಗಳನ್ನು ಪ್ರಕಟಿಸುವ ಮಹತ್ವದ ಜವಾಬ್ದಾರಿ ಪ್ರಕಾಶಕರದೇ ಹೊರತು ಲೇಖಕರದಲ್ಲ. ವಿವರವಾಗಿ ಹೇಳುವುದಾದರೆ ಪ್ರಕಾಶಕರು  ಪುಸ್ತಕವೊಂದನ್ನು ಪ್ರಕಟಿಸಲು ನಿರ್ಧಿಷ್ಟ ಮಾನದಂಡಗಳಿವೆ. ಪ್ರಕಟಣೆಗೂ ಮೊದಲು ಕೃತಿಯೊಂದರ ಗುಣಮಟ್ಟವನ್ನು ನಿರ್ಧರಿಸಲು ಅಲ್ಲಿ ಹಸ್ತಪ್ರತಿ ಪರಿಶೀಲನಾ ಸಮತಿ ಇದ್ದು  ಈ ಸಮತಿಯು ಪ್ರಕಟಣೆಗೂ ಮೊದಲು ಹಸ್ತಪ್ರತಿಯನ್ನು ಅಮೂಲಾಗ್ರವಾಗಿ ಓದಿ ಅದರ  ಮೌಲಿಕತೆಯನ್ನು ಗುರುತಿಸಿ ಪ್ರಕಟಣೆಗೆ ಒಪ್ಪಿಗೆ ಸೂಚಿಸುತ್ತದೆ. ಆದರೆ ಲೇಖಕನೇ ಪ್ರಕಾಶಕನಾದಾಗ ಕೃತಿಯ ಮೌಲ್ಯ ಪರೀಕ್ಷೆಗೆ ಒಳಪಡುವುದಿಲ್ಲ. ಇನ್ನೊಂದು ಕೆಟ್ಟ ಬೆಳವಣಿಗೆ ಎಂದರೆ ಕೆಲವರು ತಮ್ಮ ಸಂಶೋಧನಾ ಪ್ರಬಂಧವನ್ನು   ತಾವೇ ಪ್ರಕಾಶಕರಾಗಿ ಪುಸ್ತಕ ರೂಪದಲ್ಲಿ ಪ್ರಕಟಿಸುವುದುಂಟು. ಸಾಮಾನ್ಯವಾಗಿ ಸಂಶೋಧನಾ ಪ್ರಬಂಧಗಳಲ್ಲಿ ಅಂಕಿ ಸಂಖ್ಯೆಯ ಮಾಹಿತಿಯೇ  ಹೆಚ್ಚಿರುವುದರಿಂದ ಅಂಥ ಕೃತಿಗಳು ವರದಿ ಎಂದೆನಿಸಿಕೊಳ್ಳುತ್ತವೆಯೋ ವಿನ: ಅವು  ಮೌಲಿಕ ಕೃತಿಗಳ ಗುಂಪಿಗೆ ಸೇರಲಾರವು.

                          ಓದುಗರು ಕನ್ನಡ ಪುಸ್ತಕಗಳ ಓದಿನಿಂದ ವಿಮುಖರಾಗುತ್ತಿರುವುದು ನನ್ನನ್ನು ಹೆಚ್ಚು ಚಿಂತಿಸುವಂತೆ ಮಾಡುತ್ತಿರುವ ಸಾಂಸ್ಕೃತಿಕ ತಳಮಳಗಳಲ್ಲೊಂದು. ಇಂಗ್ಲಿಷ್ ಮಾಧ್ಯಮದ ಶಿಕ್ಷಣ, ಜಾಗತೀಕರಣದ ಭರಾಟೆ, ಮನೋರಂಜನಾ ಮಾಧ್ಯಮಗಳ ಹಾವಳಿ ಇತ್ಯಾದಿ ಕಾರಣಗಳಿಂದ ನಮ್ಮ ಯುವ ಪೀಳಿಗೆಗೆ ಕನ್ನಡ ಪುಸ್ತಕಗಳ ಓದು ರುಚಿಸುತ್ತಿಲ್ಲ. ಆದರೆ ಮನೆಯ ಹಿರಿಯರೂ ಸಹ ತಮ್ಮ ಅಭಿರುಚಿಯನ್ನು ಪುಸ್ತಕಗಳ ಓದಿನಿಂದ ಟಿ ವಿ ಚಾನೆಲ್ ಗಳ ವೀಕ್ಷಣೆಗೆ ರೂಪಾಂತರಿಸಿಕೊಂಡಿರುವರು. ಒಂದು ಕಾಲದಲ್ಲಿ ಮನೆಯ ಕೆಲಸದ ಬಿಡುವಿನ ನಡುವೆ ಕನ್ನಡದ ಕಥೆ, ಕಾದಂಬರಿಗಳನ್ನು ಓದುತ್ತಿದ್ದ ಗೃಹಿಣಿಯರು ಈಗ ಧಾರಾವಾಹಿಗಳ ಪುಲ್ ಟೈಮ್ ನೋಡುಗರಾಗಿ ಬದಲಾಗಿರುವರು. ಪೊಗೊ, ಕಾರ್ಟೂನ್ ನೆಟ್ ವರ್ಕ್ ಗಳನ್ನು ನೋಡುತ್ತಿರುವ ಮಕ್ಕಳಿಗೆ ಚಂದಾಮಾಮ ನೋಡಲು ವ್ಯವಧಾನವಿಲ್ಲವಾಗಿದೆ (ಚಂದಾಮಾಮ ಈಗಲೂ ಪ್ರಕಟವಾಗುತ್ತಿರುವದು ಅಚ್ಚರಿಯ ವಿಷಯ).  ಈ ನಡುವೆ ಚೇತನ್ ಭಗತ್, ಅರುಧಂತಿ ರಾಯ್, ವಿಕ್ರಮ್ ಸೇಠ ಅವರಂಥ  ಲೇಖಕರು ಕನ್ನಡದ ಯುವ ಓದುಗರನ್ನು ಇಂಗ್ಲಿಷ್ ಕಾದಂಬರಿಗಳ ಓದಿನೆಡೆ ಸೆಳೆದುಕೊಂಡಿರುವರು. ವಿಶೇಷವಾಗಿ ನಮ್ಮ ಯುವ ಜನತೆಯಲ್ಲಿ ಓದಿನ ಅಭಿರುಚಿಯಿದೆಯಾದರೂ ಅವರದು ಕಾರ್ಪೊರೇಟ್ ಸಂಸ್ಕೃತಿಯಾಗಿರುವುದರಿಂದ ಅವರು ಕನ್ನಡ ಪುಸ್ತಕಗಳ ಓದನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲ. ಆದ್ದರಿಂದ ಈ ಪ್ರಕಾರದ ಓದುಗರನ್ನು (ಸಾಪ್ಟ್ ವೇರ್ ಟೆಕ್ಕಿಗಳು) ಗಂಭೀರ ಓದುಗರೆಂದು ಕರೆಯುವ ಹಾಗಿಲ್ಲ. ಜೊತೆಗೆ ಕರ್ನಾಟಕದಲ್ಲಿ ಇಂಗ್ಲಿಷ್ ಮಾಧ್ಯದಲ್ಲಿ ಕಲಿಯುತ್ತಿರುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ವೃದ್ಧಿಸುತ್ತಿರುವುದರಿಂದ ಮುಂದೊಂದು ದಿನ ಕನ್ನಡ ಪುಸ್ತಕಗಳಿಗೆ ಓದುಗರೇ ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಲಿದೆ ಎನ್ನುವ ಆತಂಕ ಅನೇಕ ಲೇಖಕರದು.

ಸಿನಿಮಾ


                     ಲೇಖನದ ಪ್ರಾರಂಭದಲ್ಲಿ ಹೇಳಿದ 'ಮೇರಿ ಕೊಮ್' ಸಿನಿಮಾದ ಘಟನೆಯನ್ನೇ ಆಧಾರವಾಗಿಟ್ಟುಕೊಂಡು ನಾನು ಸಿನಿಮಾ ಎನ್ನುವ ಸಂಸ್ಕೃತಿಯ ಕುರಿತಾದ ನನ್ನ ತಳಮಳವನ್ನು ಅಕ್ಷರ ರೂಪಕ್ಕಿಳಿಸುತ್ತಿದ್ದೇನೆ. ಮೇರಿ ಕೋಮ್ ನಂಥ ಸಂದೇಶ ಸಾರುವ ಸಿನಿಮಾ ನಮ್ಮ ಪ್ರೇಕ್ಷಕರಿಗೆ ಬೇಕಾಗಿಲ್ಲವೆಂದರೆ ಅವರೆಂಥ ಸಿನಿಮಾಗಳನ್ನು ನಿರೀಕ್ಷಿಸುತ್ತಿರುವರು ಎನ್ನುವ ಪ್ರಶ್ನೆ ನನ್ನದು. ಹೀಗೆ ಪ್ರಶ್ನಿಸುತ್ತಿರುವ ಹೊತ್ತಿನಲ್ಲೇ ನಮ್ಮ ಪ್ರೇಕ್ಷರೆದುರು ಎರಡು ಆಯ್ಕೆಗಳಿವೆ ಎನ್ನುವ ಸಂಗತಿಯೂ ನನಗೆ ತಿಳಿದಿದೆ. ಒಂದು ಕಡೆ  ಸಮಾಜಮುಖಿ ಕಥೆಯಾಧರಿಸಿ ನಿರ್ಮಾಣಗೊಳ್ಳುತ್ತಿರುವ ಸಿನಿಮಾಗಳಿದ್ದರೆ ಇವುಗಳಿಗೆ ವಿರುದ್ಧವಾಗಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಮತ್ತು ಪ್ರೇಕ್ಷಕರನ್ನು ಹೆಚ್ಚು ಹೆಚ್ಚು ತಮ್ಮತ್ತ ಸೆಳೆಯುತ್ತಿರುವ ಸಿನಿಮಾಗಳಿವೆ. ಆದರೆ ನಮ್ಮ ಪ್ರೇಕ್ಷಕರು ಸಮಾಜಮುಖಿ ಕಥೆಯಾಧಾರಿತ ಸಿನಿಮಾಗಳನ್ನು ಕಲಾತ್ಮಕ ಎನ್ನುವ ಹಣೆಪಟ್ಟಿ ಕಟ್ಟಿ ಅವುಗಳನ್ನು ಸಿನಿಮಾ ಮಾಧ್ಯಮದ ಮೇನ್ ಸ್ಟ್ರಿಂ ನಿಂದ ದೂರವೇ ಇಟ್ಟಿರುವರು. ಅದಕ್ಕೆಂದೇ ಹಗ್ಗದ ಕೊನೆ, ಪುಟ್ಟಕ್ಕನ ಹೈವೇ, ಭಾರತ ಸ್ಟೋರ್ಸ್ ನಂಥ ಗಂಭೀರ ಕಥಾವಸ್ತುವಿನ ಸಿನಿಮಾಗಳನ್ನು ದೊಡ್ಡ ಪರದೆಯ ಮೇಲೆ ನೋಡಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಸಿನಿಮಾ ರಂಗದ ಬಹುತೇಕ ನಟ ನಟಿಯರು ಮತ್ತು ನಿರ್ದೇಶಕರು ಈ ಕಲಾತ್ಮಕ ಸಿನಿಮಾಗಳಲ್ಲಿ ಕೆಲಸ ಮಾಡಲು ಇಚ್ಛಿಸುತ್ತಿಲ್ಲದಿರುವುದು ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಪ್ರಕಾಶ್ ರೈ ನಂಥ ಕಮರ್ಷಿಯಲ್ ಸಿನಿಮಾಗಳ ಖಳನಾಯಕ ಕನ್ನಡದಲ್ಲಿ 'ಅತಿಥಿ' ಎನ್ನುವ ಕಲಾತ್ಮಕ ಸಿನಿಮಾದಲ್ಲಿ ಹಣ ಪಡೆಯದೆ ಅಭಿನಯಿಸಿ ಇಂಥ ಸಿನಿಮಾಗಳಿಗೆ ಒತ್ತಾಸೆಯಾಗಿ ನಿಂತರು. ಆದರೆ ಇದೇ ಮನೋಭಾವವನ್ನು ನಾವು  ಇತರ ಜನಪ್ರಿಯ ಕಲಾವಿದರಿಂದ ನಿರೀಕ್ಷಿಸುವುದು ಶುದ್ಧ ಮೂರ್ಖತನವಾಗುತ್ತದೆ. ಇತ್ತೀಚಿಗೆ 'ಮೈತ್ರಿ' ಎನ್ನುವ ಮಕ್ಕಳ ಸಿನಿಮಾದಲ್ಲಿ ಸ್ಟಾರ್ ಕಲಾವಿದ ಪುನೀತ್ ಹಿರೊಯಿಜಮ್ ನ ಯಾವ ನಖರಾಗಳಿಗೂ ಆಸ್ಪದ ಕೊಡದೆ ಅಭಿನಯಿಸಿದ್ದು ಎಲ್ಲೋ ಒಂದು ಹೊಸ ಬೆಳವಣಿಗೆ ಎನ್ನಬಹುದು. ಆದರೆ ಪುನೀತ್ ಮತ್ತು ಪ್ರಕಾಶ್ ರೈ ಅವರ ಕೆಲಸವನ್ನು ಸಿನಿಮಾ ರಂಗವಾಗಲಿ ಇಲ್ಲವೇ ಮಾಧ್ಯಮಗಳಾಗಲಿ ಗುರುತಿಸಿದ್ದು ಬಹಳ ಕಡಿಮೆ. ಆದರೆ ಇದೆ ಪ್ರಕಾಶ್ ರೈ ನಾನು ನನ್ನ ಕನಸು, ಒಗ್ಗರಣೆ ಸಿನಿಮಾಗಳನ್ನು ಕನ್ನಡದಲ್ಲಿ ನಿರ್ದೇಶಿಸಿ ಅಭಿನಯಿಸಿದಾಗ ಸಿನಿಮಾ ವಿಮರ್ಶಕರು ಮತ್ತು ಮಾಧ್ಯಮಗಳು ಹಳಸಲು, ರೀಮೇಕ್ ಎಂದೆಲ್ಲ ಶರಾ ಬರೆದರು. ತೀರ ಅಂಗಾಂಗ ಪ್ರದರ್ಶನ, ಅಶ್ಲೀಲ ಸಂಭಾಷಣೆ, ಹೊಡೆದಾಟಗಳ ಸಿನಿಮಾಗಳಿಗಿಂತ ಈ ಪ್ರಕಾಶ್ ರೈ ನಿರ್ದೇಶನದ ಸಿನಿಮಾಗಳು ಉತ್ತಮ ಕಥೆಯಿಂದಾಗಿ ಕುಟುಂಬದ ಸದಸ್ಯರೆಲ್ಲ ಒಟ್ಟಾಗಿ ಕುಳಿತು ನೋಡುವಂತಿದ್ದವು ಎನ್ನುವ ಮಾತನ್ನು ತಳ್ಳಿ ಹಾಕುವಂತಿಲ್ಲ.

                ಹಿಂದೆಯೆಲ್ಲ ನಾಯಕನಟನ ಅಭಿನಯ  ಸಿನಿಮಾವೊಂದರ ಮೂಲ ಪಾತ್ರಕ್ಕೆ ಮಾತ್ರ ಸೀಮಿತವಾಗಿರುತ್ತಿತ್ತು. ಹಾಸ್ಯ ಮತ್ತು ಖಳ ಪಾತ್ರಗಳ ಅಭಿನಯಕ್ಕೆ ಬೇರೆ ಕಲಾವಿದರ ಪಾತ್ರ ವರ್ಗವಿರುತ್ತಿತ್ತು.   ಒಂದೊಮ್ಮೆ  ಖಳ ಅಥವಾ ಹಾಸ್ಯ ಪಾತ್ರ ಸಿನಿಮಾ ಕಥೆಯ ಬಹುಭಾಗವನ್ನು ಆವರಿಸುವಂತಿದ್ದರೆ ಆಗ ನಟ ನಾಯಕನಾಗಿಯೂ ಮತ್ತು ಖಳ ನಾಯಕ ಇಲ್ಲವೇ  ಹಾಸ್ಯ ನಟನಾಗಿಯೂ ದ್ವಿಪಾತ್ರದಲ್ಲಿ ಅಭಿನಯಿಸುತ್ತಿದ್ದ. ಹೀಗೆ ನಾಯಕ ಮತ್ತು ಖಳ ಎರಡೂ ಪಾತ್ರಗಳಲ್ಲಿ ಅಭಿನಯಿಸುವಾಗ ಕೆಟ್ಟ ಪಾತ್ರಕ್ಕೆ ನ್ಯಾಯದ ಚೌಕಟ್ಟಿನಲ್ಲಿ  ಶಿಕ್ಷೆ ದೊರೆಯುತ್ತಿತ್ತು. ದಾರಿ ತಪ್ಪಿದ ಮಗ, ನಾನೊಬ್ಬ ಕಳ್ಳ, ವಿಜಯ ವಿಕ್ರಮ್ ಈ ಸಿನಿಮಾಗಳನ್ನು ನಾಯಕ  ನಟರ ದ್ವಿಪಾತ್ರಕ್ಕೆ ಉದಾಹರಣೆಯಾಗಿ ಹೇಳಬಹುದು. ಕಾಲಾನಂತರದಲ್ಲಿ ಸಿನಿಮಾ ರಂಗದ ಚಿತ್ರಕಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿ ನಾಯಕ  ನಟನನ್ನೇ ವಿವಿಧ ಪಾತ್ರಗಳಲ್ಲಿ ತೋರಿಸುವ  ಪ್ರಯೋಗಗಳಾದವು. ಪರಿಣಾಮವಾಗಿ ಈಗಿನ ನಾಯಕ ನಟರೆಲ್ಲ ಸಕಲ ಕಲಾವಲ್ಲಭರಾಗಿ ಯಾವ ಪಾತ್ರಕ್ಕೂ ಸೈ ಎಂದು ಅಭಿನಯಿಸತೊಡಗಿದರು. ಈ ಕಾರಣದಿಂದಲೇ ಜಗ್ಗೇಶ್, ಶರಣ್, ಕೋಮಲ್  ರಂಥ ಹಾಸ್ಯ ಕಲಾವಿದರು ತಮ್ಮ ವಿಚಿತ್ರ ಮ್ಯಾನರಿಜಂ ನಿಂದ ಇಲ್ಲಿ ನಾಯಕ ನಟರಾಗಿ ರೂಪುಗೊಂಡರು. ಪ್ರಭಾಕರ್, ದೇವರಾಜ್, ಶಶಿಕುಮಾರ್ ಇತ್ಯಾದಿ ಖಳ ನಟರು ನಾಯಕ ನಟರಾಗಿ ಬಡ್ತಿ ಪಡೆದರು. ಕಲಾವಿದರು ಹೀಗೆ ರೂಪಾಂತರಗೊಳ್ಳುವುದನ್ನು ನಾನು ವಿರೋಧಿಸುತ್ತಿಲ್ಲವಾದರೂ ಈ ಬೆಳವಣಿಗೆಯಿಂದ ನಾಯಕ ನಟ ಹೇಗಿರಬೇಕೆನ್ನುವ ಪ್ರೇಕ್ಷಕರ ಕಲ್ಪನೆಯನ್ನೇ ಬುಡಮೇಲು ಮಾಡುವಂಥ ಸಿನಿಮಾಗಳು ತಯ್ಯಾರಾಗತೊಡಗಿದವು. ನಾಯಕನನ್ನು ರೌಡಿ, ಕಳ್ಳ, ಕೊಲೆಗಾರನಾಗಿ ತೋರಿಸುವ ಸಾಲು ಸಾಲು ಸಿನಿಮಾಗಳು ಬೆಳ್ಳಿ ಪರದೆಯನ್ನು ಅಲಂಕರಿಸಿದವು. ಕೊಲೆ, ಕಳ್ಳತನ, ರಕ್ತಪಾತದ ವೈಭವೀಕರಣದಲ್ಲಿ ಸಿನಿಮಾದ ನಾಯಕ  ನಟನ ಇಮೇಜ್ ಸಂಪೂರ್ಣ ಬದಲಾಯಿತು. ನಾನೇ ರಾಜ, ಪ್ರಳಯಾಂತಕ, ಖದೀಮ ಕಳ್ಳರುನಂಥ ಸಾಲು ಸಾಲು ಕೊಲೆಗಳನ್ನು ಮಾಡುವ ಮತ್ತು ನ್ಯಾಯಾಲಯಕ್ಕೆ ಚಳ್ಳೆ ಹಣ್ಣು ತಿನ್ನಿಸುವ ಕಥಾವಸ್ತುವಿರುವ ಸಿನಿಮಾಗಳ ನಾಯಕರು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಪ್ರೇಕ್ಷಕರ ಆರಾಧ್ಯ ದೈವವಾದರು. ಅದುವರೆಗೂ ಸದಭಿರುಚಿಯ ಸಿನಿಮಾಗಳ ನಿರ್ಮಾಣಕ್ಕೆ ಹೆಸರಾಗಿದ್ದ ರಾಜಕುಮಾರ್ ನಿರ್ಮಾಣ   ಸಂಸ್ಥೆ ಸಹ ಇಂಥದ್ದೊಂದು ಬದಲಾವಣೆಗೆ ಅನಿವಾರ್ಯವಾಗಿ ತೆರೆದುಕೊಳ್ಳಬೇಕಾಯಿತು. ಪರಿಣಾಮವಾಗಿ ಅದೇ ಆಗ ಪ್ರವರ್ಧಮಾನಕ್ಕೆ ಬರುತ್ತಿದ್ದ ಶಿವಣ್ಣನನ್ನು ರೌಡಿ ಪಾತ್ರದಲ್ಲಿ ಚಿತ್ರಿಸಿದ  ಭೂಗತ ಲೋಕದ ಪಾತಕಿಗಳ ಕಥೆಯುಳ್ಳ 'ಓಂ' ಸಿನಿಮಾ ರಾಜ್ ಬ್ಯಾನರಿನಲ್ಲಿ ನಿರ್ಮಾಣಗೊಂಡಿತು. ವಿಪರ್ಯಾಸವೆಂದರ ಕನ್ನಡ ಚಿತ್ರರಂಗ ಕಳೆದೆರಡು ದಶಕಗಳಿಂದ ಈ ನಟನನ್ನು ರೌಡಿ ಪಾತ್ರಗಳ ಇಮೇಜಿಗೆ ಬ್ರ್ಯಾಂಡ್ ಮಾಡಿ  ಬಿಟ್ಟಿದೆ. ಸಿನಿಮಾ ನಾಯಕ ರೌಡಿಯಾಗುವುದು, ಸಾಲು ಸಾಲು ಕೊಲೆಗಳನ್ನು ಮಾಡುವುದು ಸಿನಿಮಾದ ಕೊನೆಯಲ್ಲಿ ನಿರಪರಾಧಿ ಎಂದು ಬಿಡುಗಡೆಯಾಗುವ ಇಂಥದ್ದೇ ಕಥೆಯ ನೂರಾರು ಸಿನಿಮಾಗಳು ಪ್ರತಿವರ್ಷ ಬಿಡುಗಡೆಯಾಗುತ್ತಿವೆ. ರೌಡಿಜಂ ಕಥೆಯ  ಸಿನಿಮಾಗಳ ನಾಯಕರನ್ನೇ ಆದರ್ಶವಾಗಿಟ್ಟುಕೊಳ್ಳುವ ನಮ್ಮ ಯುವ ಪೀಳಿಗೆ ಸತ್ಯ, ಮಸ್ತಿ, ಕಿಚ್ಚ, ಹುಚ್ಚರನ್ನು ತಮ್ಮೊಳಗೆ ಅಂತರ್ಗತಗೊಳಿಸಿಕೊಂಡು ಆ ಪಾತ್ರಗಳಂತೆಯೇ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಿರುವರು. ಹೀಗೆ ಸಿನಿಮಾ ಎನ್ನುವ ಸೃಜನಶೀಲ ಮಾಧ್ಯಮದ  ತಳಮಳದ ಕುರಿತು ಬರೆಯುತ್ತಿರುವ ಹೊತ್ತಿನಲ್ಲೇ ಒಂದು ಪ್ರೇಕ್ಷಕ ಗಣ ನನಗೆ ಸವಾಲಿನ ಪ್ರಶ್ನೆಯನ್ನು ಹಾಕಿ ನಾನು ಮತ್ತಷ್ಟು ಚಿಂತಿಸುವಂತೆ ಮಾಡುತ್ತಿರುವರು. ಅವರು ಹೀಗೆ ಪ್ರಶ್ನಿಸುತ್ತಿರುವುದರಲ್ಲೂ ನ್ಯಾಯವಿದೆ ಎನ್ನುವ ನಂಬಿಕೆ ನನ್ನದು. ಮೊನ್ನೆ ಟಿ ವಿ ಯಲ್ಲಿ 'ದೃಶ್ಯ' ಸಿನಿಮಾ ವೀಕ್ಷಿಸಿದ ಹಿರಿಯರೊಬ್ಬರು ಆ ಸಿನಿಮಾದ ನಾಯಕ ಪತ್ನಿ ಮತ್ತು ಮಗಳು ಮಾಡಿದ ಕೊಲೆಯನ್ನು ಮುಚ್ಚಿಡಲು ಮಾಡುವ ಪ್ರಯತ್ನ ಮತ್ತು ಆ ಒಂದು ಅಪವಾದದಿಂದ ಬಚಾವಾಗುವುದು ಅದು ಇಡೀ ನ್ಯಾಯಾಂಗ ವ್ಯವಸ್ಥೆಯನ್ನೇ ಅಣಕಿಸುವಂತಿತ್ತು ಇದು ಸರಿಯೇ ಎಂದು ಪ್ರಶ್ನಿಸಿದರು. ಸಿನಿಮಾ ಮಾಧ್ಯಮ ಇಡೀ ವ್ಯವಸ್ಥೆಯನ್ನೇ ಅತ್ಯಂತ ಸರಳಿಕೃತಗೊಳಿಸಿರುವದರಿಂದ ಇಲ್ಲಿ ಏನೆಲ್ಲ ಸಂಭವಿಸಬಹುದು ಹೀಗಾಗಿ ಆ ವೃದ್ಧರ ಪ್ರಶ್ನೆಗೆ ನನ್ನಲ್ಲಿ ಉತ್ತರವಿರಲಿಲ್ಲ.

                   ಇನ್ನು ಸಿನಿಮಾದಲ್ಲಿನ ಹಾಡುಗಳ ವಿಷಯಕ್ಕೆ ಬಂದರೆ ಹಿಂದೆಯೆಲ್ಲ ಸಿನಿಮಾ ಹಾಡುಗಳು ದೇವರ ಮನೆಯಲ್ಲಿ ಭಕ್ತಿ ಹಾಡಾಗಿ ಮತ್ತು ಶಾಲೆಗಳಲ್ಲಿ ಪ್ರಾರ್ಥನಾ ಗೀತೆಯಾಗಿ ಬಳಕೆಯಾದ ಸಾಕಷ್ಟು ಉದಾಹರಣೆಗಳಿವೆ. ಆಗೆಲ್ಲ ಸಿನಿಮಾ ಹಾಡುಗಳಲ್ಲಿ ಒಂದು ಸಂದೇಶವಿರುತ್ತಿತ್ತು. ಬಂಗಾರದ ಮನುಷ್ಯ ಸಿನಿಮಾದ "ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಆಗದು ಕೆಲಸವು ಎಂದೂ" ಎನ್ನುವ ಹಾಡು ಆ ದಿನಗಳ  ಕೃಷಿಕರ ಬದುಕಿನಲ್ಲಿ ಭರವಸೆಯ ಆಶಾಕಿರಣವನ್ನು ಮೂಡಿಸಿತು. "ಸ್ವಾಮಿ ದೇವನೆ ಲೋಕ ಪಾಲನೆ" ಎನ್ನುವ ಸಿನಿಮಾ ಗೀತೆ ಶಾಲೆಗಳಲ್ಲಿ ಪ್ರಾರ್ಥನಾ ಗೀತೆಯಾಯಿತು. "ಪೂಜಿಸಲೆಂದು ಹೂಗಳ ತಂದೆ" ಹಾಡನ್ನು ದೇವರ ಮನೆಯಲ್ಲಿ ಅದೆಷ್ಟೋ ಕಂಠಗಳು ದೇವರ ನಾಮವಾಗಿ ಹಾಡಿದ್ದುಂಟು. ಕನ್ನಡ ನೆಲದ ಚರಿತ್ರೆ ಮತ್ತದರ ವೈಭವ ರಾಜಕುಮಾರ ಅವರ ಕಂಠಸಿರಿಯಲ್ಲಿ ಹಾಡಿನ ರೂಪದಲ್ಲಿ  ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದೆ. ಕುವೆಂಪು, ಬೇಂದ್ರೆ, ಕೆ. ಎಸ್. ನರಸಿಂಹಸ್ವಾಮಿ ಅವರ ಹಾಡುಗಳನ್ನೂ ಸಂದರ್ಭಕ್ಕನುಸಾರವಾಗಿ ಸಿನಿಮಾಗಳಲ್ಲಿ ಬಳಸಿಕೊಂಡಿದ್ದುಂಟು.  ಆದರೆ ಕಾಲ ಬದಲಾದಂತೆ ಕನ್ನಡ ಸಿನಿಮಾಗಳ ಹಾಡುಗಳು ಸಹ ಹೊಸ ರೂಪಾಂತರ ಹೊಂದಿ ಅಪ್ಪಾ ಲೂಜು, ಹಳೆ ಕಬ್ಣ, ಸೊಂಟದ ವಿಷಯ ಹೀಗೆ ಅಸಂಬದ್ಧ ಮತ್ತು ಅಶ್ಲೀಲ ಪದಗಳು ನಮ್ಮ ಸಿನಿಮಾ ಹಾಡುಗಳಲ್ಲಿ ಹೆಚ್ಚು ಹೆಚ್ಚು ಜಾಗ ಪಡೆಯತೊಡಗಿದವು. ಒಂದು ಕಾಲದಲ್ಲಿ ಶಾಲೆಗಳಿಗೆ ಪ್ರಾರ್ಥನಾ ಗೀತೆಯನ್ನು ಕೊಟ್ಟ ಸಿನಿಮಾರಂಗ ಮುಂದಿನ ದಿನಗಳಲ್ಲಿ ಶಿಕ್ಷಕಿ ಪಾತ್ರದಿಂದ "ಅ ಆ ಇ ಈ........ ಅಂ ಆ:" ಎಂದು ಅತ್ಯಂತ ಮಾದಕವಾಗಿ ಹಾಡಿಸಿತು. ಇವತ್ತಿನ ಸಿನಿಮಾಗಳಲ್ಲಿ ಹಾಡುಗಳನ್ನು ಕೇವಲ ಪ್ರೇಕ್ಷಕರನ್ನು ಸಿನಿಮಾ ಮಂದಿರಗಳತ್ತ ಸೆಳೆಯುವ ತಂತ್ರವಾಗಿ ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಈ ಕಾರಣದಿಂದಾಗಿ ಸಿನಿಮಾವೊಂದರ ಹಾಡುಗಳಿಗೂ ಮತ್ತು ಸಿನಿಮಾ ಕಥೆಗೂ ಯಾವುದೇ ಸಂಬಂಧವಿರುವುದಿಲ್ಲ. ಹೀಗೆ ಹಾಡನ್ನು ಸಿನಿಮಾದಲ್ಲಿ ತಂತ್ರ ಇಲ್ಲವೇ ಸಾಧನವಾಗಿ ಬಳಸಿಕೊಂಡಾಗ ಅಲ್ಲಿ ಅಶ್ಲೀಲತೆ ಮತ್ತು ಅಸಹಜತೆ ಹೆಚ್ಚು ಪಾರುಪತ್ಯ ಸಾಧಿಸಿ ಸಹಜತೆ ಎನ್ನುವುದು ಗೌಣವಾಗುತ್ತದೆ.

ಕೊನೆಯ ಮಾತು 


                ಓದಿದ ಪುಸ್ತಕ ಮತ್ತು  ನೋಡಿದ ಸಿನಿಮಾ ನಮ್ಮನ್ನು ಅನೇಕ ದಿನಗಳವರೆಗೆ ಕಾಡಬೇಕು. ಜೊತೆಗೆ ಸಾಹಿತ್ಯ ಮತ್ತು ಸಿನಿಮಾ ಸಮಾಜಮುಖಿ ಆಗಿರಬೇಕಾದ ಅಗತ್ಯ ಬಹಳಷ್ಟಿದೆ. ಸಮಾಜವೊಂದರ ಪರಿವರ್ತನೆಗೆ ಈ ಎರಡು ಮಾಧ್ಯಮಗಳು ಕಾರಣವಾಗಬೇಕು. ಹಿಂದೆಯೆಲ್ಲ ಸಾಹಿತ್ಯ ಮತ್ತು ಸಿನಿಮಾದಿಂದ ಉತ್ತಮ ಸಮಾಜ ನಿರ್ಮಾಣಗೊಂಡಿದ್ದಕ್ಕೆ ಇತಿಹಾಸದಲ್ಲಿ ಸಾಕಷ್ಟು ಉದಾಹರಣೆಗಳಿವೆ. ರಾಜಕುಮಾರ ಅವರಂಥ ಕಲಾವಿದ ಸದಭಿರುಚಿಯ ಮತ್ತು ಸಮಾಜಮುಖಿ ಸಿನಿಮಾಗಳಿಂದ ಪ್ರೇಕ್ಷಕರ ಆರಾಧ್ಯ ದೈವವಾಗಿ ಬೆಳೆದು ನಿಂತರು. ಕುವೆಂಪು, ಬೇಂದ್ರೆ, ಕಾರಂತ ಈ ನೆಲದ ಜನರ ಬದುಕನ್ನೇ ಅಕ್ಷರ ರೂಪಕ್ಕಿಳಿಸಿ ಸಾಹಿತ್ಯವನ್ನು ಸಮಾಜಮುಖಿಯಾಗಿಸಿದರು. ಆದರೆ ಇವತ್ತು ಅಭಿವ್ಯಕ್ತಿ ಮಾಧ್ಯಮಗಳಾದ  ಸಾಹಿತ್ಯ ಮತ್ತು ಸಿನಿಮಾ  ಜಾಗತೀಕರಣದ ಸುಳಿಗೆ ಸಿಲುಕಿ ಸಾಕಷ್ಟು ಬದಲಾವಣೆಗೊಂಡಿವೆ. ಈ ತಂತ್ರಜ್ಞಾನದ ಯುಗದಲ್ಲಿ ಓದುಗ ಮತ್ತು ಪ್ರೇಕ್ಷಕನ ಮನೋಭಾವದಲ್ಲೂ ಬಹುದೊಡ್ಡ ಪರಿವರ್ತನೆಯಾಗಿದೆ. ಪುಸ್ತಕ ಹಾಗೂ ಸಿನಿಮಾ ಮನೋರಂಜನೆಯ ಸರಕೆಂಬ ಭಾವನೆ ಬಲವಾಗುತ್ತಿರುವ ಹೊತ್ತಿನಲ್ಲೇ ಕೆಲವು ಸೃಜನಶೀಲ ಮನಸ್ಸುಗಳು ಸಾಂಸ್ಕೃತಿಕ ವಲಯವೊಂದು ಹೀಗೆ ರೂಪಾಂತರಗೊಳ್ಳುತ್ತಿರುವುದನ್ನು ನೋಡಿ ತಲ್ಲಣಗೊಳ್ಳುತ್ತಿವೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


     

      

Thursday, May 4, 2017

ಇದು ನನ್ನದು ಆದರೆ ನನ್ನದು ಮಾತ್ರವಲ್ಲ

            ಬ್ಲೇಕ್ ತನ್ನ ಬರವಣಿಗೆಯನ್ನು ಕುರಿತು ಹೀಗೆ ಹೇಳುತ್ತಾನೆ ‘ಇದು ನನ್ನದು ಆದರೆ ನನ್ನದು ಮಾತ್ರವಲ್ಲ’. ತನ್ನ ಬರವಣಿಗೆಯ ಕೃಷಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣರಾದವರನ್ನು ಬ್ಲೇಕ್ ನೆನಪಿಸಿಕೊಳ್ಳುವ ರೀತಿ ಇದು. ಏಕೆಂದರೆ ಕಥೆ, ಕಾವ್ಯ, ಕಾದಂಬರಿ ಲೇಖಕನ ಸೃಜನಶೀಲ ಸೃಷ್ಟಿಯಾದರೂ ಆ ಸೃಷ್ಟಿಯ ಹಿಂದೆ ಅವನಿಗರಿವಿದ್ದೊ ಇಲ್ಲದೆಯೋ ಅನೇಕ ಪಾತ್ರಗಳು ಆ ಸೃಜನಶೀಲ ಸೃಷ್ಟಿಯ ಪ್ರಕ್ರಿಯೆಯಲ್ಲಿ ಭಾಗವಹಿಸಿರುತ್ತವೆ. ಲೇಖಕನಾದವನು ನೋಡಿದ, ಕೇಳಿದ ಘಟನೆಗಳಿಗೆ ತನ್ನ ಕಲ್ಪನೆಯನ್ನು ಸೇರಿಸಿ ಕಥೆಯನ್ನೋ ಕಾದಂಬರಿಯನ್ನೋ ಬರೆಯುತ್ತಾನೆ. ಹೀಗೆ ಬರೆದದ್ದು ಲೇಖಕನ ಸೃಜನಶೀಲ ಸೃಷ್ಟಿಯಾದರೂ ಆ ಪ್ರಕ್ರಿಯೆಗೆ  ಸ್ಪೂರ್ತಿ ನೀಡಿದ ಪಾತ್ರಗಳು ಹಲವು ಎನ್ನುವುದನ್ನು ಪ್ರತಿಯೊಬ್ಬ ಬರಹಗಾರ ಒಪ್ಪಿಕೊಳ್ಳುತ್ತಾನೆ. ಕುವೆಂಪು ಅವರ ಹೂವಯ್ಯ, ಕಾರಂತರ ಚೋಮ, ಚಿತ್ತಾಲರ ನಾಗಪ್ಪ, ಭೈರಪ್ಪನವರ ವಿಶ್ವನಾಥ ಹೀಗೆ ಈ ಎಲ್ಲ ಪಾತ್ರಗಳ ರಚನೆಯ ಹಿಂದೆ ನಿರ್ಧಿಷ್ಟ ಪಾತ್ರಗಳ ಪ್ರಭಾವವಿದೆ. ಈ ಅನುಭವ ಓದುಗರದೂ ಹೌದು. ಕೆಲವೊಮ್ಮೆ ಕೃತಿಯೊಂದನ್ನು ಓದುತ್ತಿರುವ ಘಳಿಗೆ ಅದರಲ್ಲಿನ ಸನ್ನಿವೇಶ ಇಲ್ಲವೇ ಪಾತ್ರವನ್ನು ಎಲ್ಲೋ ನೋಡಿದ ಮತ್ತು ಅದಕ್ಕೆ ಸಾಕ್ಷಿಯಾದ ಅನುಭವ ದುತ್ತೆಂದು ಎದುರಾಗುವುದುಂಟು. ಹೀಗೆ ಲೇಖಕ ಓದುಗರನ್ನು ಅವರು ಬದುಕುತ್ತಿರುವ ಪರಿಸರಕ್ಕೆ ಸದಾಕಾಲ ಮುಖಾಮುಖಿಯಾಗಿಸುತ್ತಲೇ ಹೋಗುತ್ತಾನೆ. ಏಕೆಂದರೆ ಲೇಖಕನ ಸೃಜನಶೀಲ ಸೃಷ್ಟಿ ಕೂಡ ತಾನು ಬದುಕುತ್ತಿರುವ ಪರಿಸರದಿಂದಲೇ ಎತ್ತಿಕೊಂಡ ಅನುಭವದ ಎಳೆಗೆ ಕಲ್ಪನೆಯ ಎರಕ ಹೊಯ್ದ ಕಲಾಸೃಷ್ಟಿ ತಾನೆ. ಆದ್ದರಿಂದ ಲೇಖಕನಾಗಲಿ ಮತ್ತು ಓದುಗನಾಗಲಿ ಆ ಕಲಾಸೃಷ್ಟಿಯಿಂದ ದೊರೆತ ಅನುಭವವನ್ನು ತನ್ನದು ಮಾತ್ರವೆಂದು ಬೀಗದೆ ಬ್ಲೇಕ್‍ನಂತೆ ಇದು ನನ್ನದು ಆದರೆ ನನ್ನದು ಮಾತ್ರವಲ್ಲ ಎನ್ನುವ ಔದಾರ್ಯವನ್ನು ಮೆರೆಯಬೇಕು. ಕಲಾಸೃಷ್ಟಿಯ ಓದಿನ ರಸಾನುಭವವನ್ನು ಓದುಗ ಅನೇಕ ಮನಸ್ಸುಗಳಿಗೆ ದಾಟಿಸುವ ಕೆಲಸ ಮಾಡಬೇಕು. ಹೀಗೆ ಓದಿದ, ಓದಿನ ನಂತರ ಅನುಭವವಾಗಿ ಮನಸ್ಸಿನಲ್ಲಿ ಕುಳಿತು ಕಂಗೆಡಿಸಿದ, ಹಗಲಿರುಳು ಚಿಂತಿಸುವಂತೆ ಮಾಡಿದ ಒಂದಿಷ್ಟು ಚಿಂತನೆಗಳನ್ನು ಓದುಗರಿಗೆ ದಾಟಿಸುವ ಪ್ರಯತ್ನವಾಗಿ ಈ ಪುಟ್ಟ ಲೇಖನ. ಹೀಗೆ ಓದಿನ ಅನುಭವವನ್ನು ಓದುಗರಿಗೆ ದಾಟಿಸುವ ಈ ಪ್ರಯತ್ನ ನನ್ನದು ಆದರೆ ನನ್ನದು ಮಾತ್ರವಲ್ಲ ಎನ್ನುವ ವಿನಮೃತೆಯೂ ನನ್ನ ಅಂತಪ್ರಜ್ಞೆಯೊಳಗೆ ಜಾಗೃತವಾಗಿದೆ. 

       ಕನ್ನಡ ಸಾಹಿತ್ಯದಲ್ಲಿ ಯಶವಂತ ಚಿತ್ತಾಲರದು ಜೀವನ್ಮುಖಿ ಸಾಹಿತ್ಯ. ಅವರ ಕಥೆ, ಕಾದಂಬರಿಗಳಲ್ಲಿ ಮನುಷ್ಯನ ಮನಸ್ಸು ಮತ್ತು ಮಾನವೀಯತೆಯ ತುಡಿತವೇ ಮುಖ್ಯ ವಸ್ತು. ಮನುಷ್ಯನ ಮನಸ್ಸನ್ನು ಮನಶಾಸ್ತ್ರದ ಹಿನ್ನೆಲೆಯಲ್ಲಿ ಚಿತ್ತಲರದು ವಿಶ್ಲೇಷಿಸಿದಷ್ಟು ಕನ್ನಡದ ಬೇರೆ ಬರಹಗಾರರು ವಿಶ್ಲೇಷಿಸಿದ್ದು ಕಡಿಮೆ. ಮನುಷ್ಯನ ಆಂತರಿಕ ತೊಳಲಾಟ, ದ್ವಂದ್ವ, ಖಿನ್ನತೆ, ಪ್ರೀತಿಯ ಹಂಬಲವನ್ನು ಚಿತ್ತಾಲರು ತಮ್ಮ ಕಥೆ ಕಾದಂಬರಿಗಳ ಪಾತ್ರಗಳ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ಅಭಿವ್ಯಕ್ತಿಗೊಳಿಸಿರುವರು. ಒಟ್ಟಾರೆ ಚಿತ್ತಾಲರ ದೃಷ್ಟಿಯಲ್ಲಿ ಮನುಷ್ಯನನ್ನು ಮನುಷ್ಯನನ್ನಾಗಿಸುವ ಪ್ರಕ್ರಿಯೆಗೆ ಒಳಪಡಿಸುವುದೇ ಸಾಹಿತ್ಯದ ಮೂಲ ಉದ್ದೇಶವಾಗಿದೆ. ಸಾಹಿತ್ಯದ ಈ ಉದ್ದೇಶವನ್ನು ಕುರಿತು ಅವರು ತಮ್ಮ ನಾನೇಕೆ ಬರೆಯುತ್ತೇನೆ ಲೇಖನದಲ್ಲಿ ಹೀಗೆ ಹೇಳುತ್ತಾರೆ “ನಾವು ವಿಚಾರ ಮಾಡುವ, ಭಾವಿಸುವ ಮತ್ತು ನೋಡುವ ಮಟ್ಟಗಳು ಎತ್ತರಗೊಂಡು ನಾವು ಮನುಷ್ಯರಾಗಿ ಅರಳುವ ಸಾಧ್ಯತೆಯೇ  ಸಾಹಿತ್ಯ ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆ. ಬದುಕಿನ ಬಗ್ಗೆ ನಾವು ಬೆಳೆಸಿಕೊಂಡ ತಪ್ಪು ಅಪೇಕ್ಷೆಗಳಿಂದಾಗಿ ಮನುಷ್ಯ ಜೀವನಕ್ಕೆ ಅರ್ಥ ತಂದುಕೊಡಬಹುದಾದಂಥ ಗಂಭೀರ ಭಾವನೆಗಳೇ ಭ್ರಷ್ಟವಾಗುತ್ತಿವೆ. ಇಂಥ ಸನ್ನಿವೇಶದಲ್ಲಿ ಮಾನವನ ಮೂಲಭೂತವಾದ ಭಾವನೆಗಳು ಕೆಡದಂತೆ, ಸಾಯದಂತೆ ಅವುಗಳನ್ನು ಕಾಪಾಡಿಕೊಳ್ಳುವುದರಲ್ಲಿ ಸಾಹಿತ್ಯದ ಪಾತ್ರ ಬಹು ದೊಡ್ಡದು. ಸಾಹಿತ್ಯ ಕಮಿಟ್ ಆಗಬೇಕಾದದ್ದು ಈ ದಿಕ್ಕಿನಲ್ಲೆಂದು ನಾನು ಭಾವಿಸುತ್ತೇನೆ’.

        ಚಿತ್ತಾಲರಿಗೆ ಸಾಹಿತ್ಯವೆನ್ನುವುದು ಮನರಂಜನೆಯ ಮಾಧ್ಯಮವಲ್ಲ. ಸಾಹಿತ್ಯ ನಾವು ಮನುಷ್ಯರಾಗಿ ರೂಪುಗೊಳ್ಳುವುದಕ್ಕೆ ಅಗತ್ಯವಾದ ನೈತಿಕ ಶಕ್ತಿ ನೀಡುವ ಸೃಜನಶೀಲ ಸೃಷ್ಟಿ ಎನ್ನುವುದರಲ್ಲಿ ಅವರಿಗೆ ಅಚಲವಾದ ನಂಬಿಕೆ. ಇಂಥದ್ದೊಂದು ನಂಬಿಕೆಯಿಂದಲೇ ಓದುಗನ ಮೇಲೆ ಗಾಢ ಪ್ರಭಾವ ಬೀರುವ ಆ ಮೂಲಕ ಬದುಕಿನಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗುವ ಮಂಜುನಾಥ, ನಾಗಪ್ಪ, ಪುರುಷೋತ್ತಮನಂಥ ಪಾತ್ರಗಳು ಚಿತ್ತಾಲರಿಂದ ಸೃಷ್ಟಿಯಾದವು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯುವ ವೇಳೆ ಚಿತ್ತಾಲರು ತಮ್ಮ ಭಾಷಣದಲ್ಲಿ ಸಾಹಿತ್ಯದ ಮಹತ್ವವನ್ನು ಕುರಿತು ಹೀಗೆ ನುಡಿಯುತ್ತಾರೆ “ಸಾಹಿತ್ಯದ ಮುಖಾಂತರ ನಾವು ಮೊದಲಿನಿಂದಲೂ ತೊಡಗಿಸಿಕೊಂಡದ್ದು ಮನುಷ್ಯರಾಗಿ ಅರಳುವ ಪ್ರಕ್ರಿಯೆಯಲ್ಲಿ ಎನ್ನುವ ನಂಬಿಕೆ ನನ್ನದು. ಇಂದಿನ ಸಮಾಜದಲ್ಲಿ ನಾವು ಮನುಷ್ಯರಾಗಿ ಬಿಚ್ಚಿಕೊಳ್ಳಲು ಆರಿಸಿಕೊಳ್ಳಬಹುದಾದ ಜೀವಂತ ಮಾಧ್ಯಮಗಳಲ್ಲಿ ಸಾಹಿತ್ಯವೂ ಒಂದು. ಮನುಷ್ಯ ತನ್ನ ಬದುಕಿನ ನಕಾಶೆಯಲ್ಲಿ ಮೂಡಿಸಿಕೊಳ್ಳಲೇಬೇಕಾದ ಅತ್ಯಂತ ಮೌಲಿಕ ಸಂಗತಿಗಳಲ್ಲಿ ಕೆಲವು ಸಂಗತಿಗಳು ಸಾಹಿತ್ಯದಿಂದ ಮಾತ್ರ ಒದಗಬಲ್ಲಂಥವುಗಳಾಗಿವೆ. ಸಾಹಿತ್ಯ ಹೃದಯವುಳ್ಳ ಹಾದಿಯಾಗಿದೆ ಎನ್ನುವ ನಂಬಿಕೆಯಿಂದಲೇ ಓದುವ ಮತ್ತು ಬರೆಯುವ ಪ್ರಕ್ರಿಯೆಯಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ”.

        ಬದುಕಿನ ಈ ಏನೆಲ್ಲ ಜಂಜಾಟಗಳ ನಡುವೆಯೂ ಮನುಷ್ಯ ತನ್ನ ಮನುಷ್ಯತ್ವದ ಅಸ್ಮಿತೆಗಾಗಿ ಆತ ತನ್ನನ್ನು ಒಂದಲ್ಲ ಒಂದು ಸೃಜನಶೀಲ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕೆನ್ನುವುದು ಯಶವಂತ ಚಿತ್ತಾಲರ ಇಡೀ ಬರವಣಿಗೆಯ ಮತ್ತು ಚಿಂತನೆಯ ಕೇಂದ್ರವಾಗಿದೆ. ಕಥೆಯಲ್ಲಿ ಬಂದಾತ ಮನೆಗೂ ಬಂದು ಬಾಗಿಲು ಬಡಿದ ಎಂದೆನ್ನುವ ಚಿತ್ತಾಲರು ತಾವು ಸೃಷ್ಟಿಸಿದ ಪಾತ್ರಗಳೊಂದಿಗೆ ಮುಖಾಮುಖಿಯಾಗುತ್ತಲೇ ಮನುಷ್ಯತ್ವದ ಹುಡುಕಾಟಕ್ಕೆ ತೊಡಗುತ್ತಾರೆ. ಸೃಜನಶೀಲತೆಯಿಂದ ಮನುಷ್ಯ ದೂರವಾದಾಗ ಎದುರಾಗುವ ಅಪಾಯವನ್ನು ಕುರಿತು ಅವರು ಎಚ್ಚರಿಸುತ್ತಾರೆ. ‘ಸಾಹಿತ್ಯ, ಸೃಜನಶೀಲತೆ ಮತ್ತು ನಾನು’ ಕೃತಿಯಲ್ಲಿ ಚಿತ್ತಾಲರು ಮನುಷ್ಯನ ಬದ್ಧತೆಯನ್ನು ಕುರಿತು ಹೇಳುವ ಮಾತು ಹೀಗಿದೆ “ಸ್ಪಿನೋಝಾ ನೈತಿಕ ನಡುವಳಿಕೆಯ ಬಗ್ಗೆ ಹೇಳಿದ ಮಾತನ್ನು ಮನಸ್ಸಿನಲ್ಲಿಟ್ಟುಕೊಂಡು ಹೇಳುವುದಾದರೆ ಗುಲಾಬಿ ಗಿಡ ಬದ್ಧವಾದದ್ದು ಗುಲಾಬಿ ಹೂಗಳನ್ನು ಬಿಡುವುದಕ್ಕೆ. ನಾವು ಬದ್ಧರಾಗಬೇಕಾದದ್ದು ಮನುಷ್ಯರ ಹಾಗೆ ಸ್ಪಂದಿಸುವುದಕ್ಕೆ, ಮನುಷ್ಯರ ಹಾಗೆ ಬದುಕುವುದಕ್ಕೆ ಮತ್ತು ಮನುಷ್ಯರಾಗುವುದಕ್ಕೆ. ಸೃಜನಶೀಲನಾಗುವುದು, ಪ್ರೀತಿಸುವ ಸಾಮರ್ಥ್ಯ ಉಳ್ಳವನಾಗುವುದು, ಮನುಷ್ಯನಾಗುವುದು ಈ ಎಲ್ಲ ಪ್ರಕ್ರಿಯೆಗಳ ಅರ್ಥ ಒಂದೇ. ಸೃಜನಶೀಲನಾಗುವುದರಲ್ಲಿ ಸೋತಲ್ಲೆಲ್ಲ ಮನುಷ್ಯ ಮನುಷ್ಯನನ್ನೇ ಉಪಯೋಗಿಸಿಕೊಳ್ಳುವ ಕ್ರೂರತೆ ಕಾಣಿಸಿಕೊಳ್ಳುತ್ತದೆ”. ದೃಷ್ಟಿ ಮಾಗಿದಂತೆ, ಅನುಭವ ವಿಸ್ತಾರವಾದಂತೆ ಜೀವನ ಅದರ ಹಲವು ಸಾಧ್ಯತೆಗಳಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನುವ ಮಾತಿದೆ. ಅನುಭವ ಎನ್ನುವುದು ನಮ್ಮ ಮನಸ್ಸನ್ನು ಮಾಗಿಸಿ ವ್ಯಕ್ತಿತ್ವಕ್ಕೊಂದು ಹೊಸ ಅರ್ಥ ತಂದುಕೊಡಬೇಕು. ಚಿತ್ತಾಲರು ಜೀವನಾನುಭವದ ಕುರಿತು ಮಾರ್ಮಿಕವಾಗಿ ಹೀಗೆ ನುಡಿಯುತ್ತಾರೆ “ಪಚನೇಂದ್ರಿಯಗಳ ಎಲ್ಲ ರಸಗಳೊಡನೆ ಬೆರೆತು ಕರಗಿದಾಗಲೇ ರಕ್ತವಾಗಿ ದೇಹಕ್ಕೆ ಪೋಷಕವಾಗುವ  ಅನ್ನದಂತೆ ನಮ್ಮ ಅನುಭವ ಕೂಡ. ಅನುಭವ ಎನ್ನುವುದು ಸಮಗ್ರ ವ್ಯಕ್ತಿತ್ವದ ಜಠರಾಗ್ನಿಯಲ್ಲಿ ಕರಗಿದಾಗಲೇ, ರಸಪಾಕ ಹೊಂದಿದಾಗಲೇ ಅನುಭವವು ವ್ಯಕ್ತಿತ್ವಕ್ಕೆ ಹೊಸ ಮೆರುಗು ತಂದು ಕೊಟ್ಟೀತು. ಅನುಭವವನ್ನು ಅರಗಿಸಿಕೊಳ್ಳುವ ತಾಕತ್ತು ನಮ್ಮ ವ್ಯಕ್ತಿತ್ವಕ್ಕೆ ಇಲ್ಲದಿದ್ದರೆ ಬಂದ ಅನುಭವ ವಿಷವಾದೀತು”.

         ಯಶವಂತ ಚಿತ್ತಾಲರಂತೆ ಎಸ್.ಎಲ್.ಭೈರಪ್ಪನವರದು ಕೂಡ ಜೀವನ್ಮುಖಿ ಸಾಹಿತ್ಯ. ಯಾವುದೇ ಸಿದ್ಧಾಂತ ಮತ್ತು ವಿಚಾರಗಳನ್ನು ಓದುಗರ ಮೇಲೆ ಬಲವಂತವಾಗಿ ಹೇರುವ ಮನೋಭಾವ ನನ್ನ ಬರವಣಿಗೆಯದಲ್ಲ ಎಂದೆನ್ನುವ ಭೈರಪ್ಪನವರ ಕೃತಿಗಳಲ್ಲಿ ಜೀವನದ ನೈತಿಕ ಮೌಲ್ಯಗಳು ಅಗಾಧವಾಗಿ ಓದುಗನ ಅನುಭವಕ್ಕೆ ದಕ್ಕುತ್ತವೆ. ಒಂದರ್ಥದಲ್ಲಿ ಭೈರಪ್ಪನವರ ಕಾದಂಬರಿಗಳು ಸಹ ಮನುಷ್ಯನನ್ನು ಮನುಷ್ಯನನ್ನಾಗಿಸುವ ಪ್ರಕ್ರಿಯೆಗೆ  ಒಳಪಡಿಸುತ್ತವೆ. ಮಂದ್ರದ ಮಧುಮಿತಾ, ಸಾಕ್ಷಿಯ ಪರಮೇಶ್ವರಯ್ಯ, ಅನ್ವೇಷಣದ ವಿಶ್ವನಾಥ, ನಿರಾಕರಣದ ನರಹರಿ ಈ ಎಲ್ಲ ಪಾತ್ರಗಳು ಓದುಗನ ಅಂತ:ಸಾಕ್ಷಿಯನ್ನು ಪ್ರವೇಶಿಸಿ ಅವನನ್ನು ಮೌಲೀಕ ಬದುಕಿನೆಡೆ ಮುಖಮಾಡಿ ನಿಲ್ಲಿಸುತ್ತವೆ. ಮನುಷ್ಯನ ಮನಸ್ಸಿನೊಡನೆ ಮತ್ತು ಮನುಷ್ಯತ್ವದೊಡನೆ ಸಾಹಿತ್ಯ ವ್ಯವಹರಿಸುತ್ತಿರುವುದರಿಂದ ಸಾಹಿತ್ಯ ಕೂಡ ಉದಾತ್ತ ಧ್ಯೇಯಗಳನ್ನು ಹೊಂದಿರಬೇಕೆನ್ನುವುದು ಭೈರಪ್ಪನವರ ಅಭಿಮತ. ಕೃತಿಯೊಂದನ್ನು ಸೃಷ್ಟಿಸುತ್ತಿರುವಾಗ ಬರಹಗಾರ ತನ್ನೆಲ್ಲ ವೈಯಕ್ತಿಕ ರಾಗ ದ್ವೇಷಗಳಿಂದ ಮುಕ್ತನಾಗಿ ಆ ಸೃಜನಶೀಲ ಸೃಷ್ಟಿಯ ಕ್ರಿಯೆಯಲ್ಲಿ  ತೊಡಗಿಸಿಕೊಳ್ಳಬೇಕೆನ್ನುವುದನ್ನು ಭೈರಪ್ಪನವರು ತಮ್ಮ ಮಾತುಗಳಲ್ಲಿ ಹೀಗೆ ಹೇಳುತ್ತಾರೆ “ಸಾಹಿತ್ಯದ ಕೆಲಸವೆಂದರೆ ಮನುಷ್ಯನ ಅಂತರಾಳಕ್ಕೆ ಪ್ರವೇಶ ದೊರಕಿಸಿಕೊಡುವುದು ಮತ್ತು ಪ್ರೀತಿ, ಅನುಕಂಪ, ಕರುಣೆಗಳನ್ನು ಹುಟ್ಟಿಸುವುದು. ನಮ್ಮ ಕಹಿ ಅನುಭವ ಏನೇ ಇರಲಿ ಪ್ರತಿಯೊಂದು ಪಾತ್ರದ ಅಂತರಂಗವನ್ನು ಹೊಕ್ಕು ಅನುಕಂಪದಿಂದ ಬಿಚ್ಚಿಡದಿದ್ದರೆ ಅದು ಮೇಲ್ಮಟ್ಟದ ಸಾಹಿತ್ಯವಾಗುವುದಿಲ್ಲ. ಇಡೀ ರಾಷ್ಟ್ರವನ್ನು ಜೈಲಾಗಿ ಪರಿವರ್ತಿಸಿದ್ದ ಸ್ಟಾಲಿನ್ನನ ಪಾತ್ರವನ್ನು ಚಿತ್ರಿಸುವಾಗ ಕೂಡ ಸೊಲ್ಜನಿಟ್ಸಿನ್ ಅನುಕಂಪ, ಅರಿವು ಮತ್ತು ಅಂತರ್ನೋಟವನ್ನು ಸಾಧಿಸದೆ ಹೋಗಿದ್ದರೆ ಅವನು ಇಷ್ಟೊಂದು ದೊಡ್ಡ ಲೇಖಕನಾಗುತ್ತಿರಲಿಲ್ಲ. ಬರವಣಿಗೆ ಸೃಜನಶೀಲವಾದಾಗ ಅದು ಲೇಖಕನ ಜಾತಿ, ಮತ, ವರ್ಗ, ಲಿಂಗ, ದೇಶ ಮೊದಲಾದ ಭೇದಗಳನ್ನು ಮೀರುತ್ತದೆ”.

          ಹೀಗೆ ರಾಗ ದ್ವೇಷಗಳ ಚೌಕಟ್ಟಿನಿಂದ ಹೊರಬಂದು ಲೇಖಕ ಕಟ್ಟಿಕೊಡುವ ಅನುಭವದಲ್ಲಿ ಲೇಖಕನೇ ತನ್ನನ್ನು ತಾನು ಕಾಣುವುದು ಸಾಹಿತ್ಯದ ಅಗಾಧತೆಗಳಲ್ಲಿ ಒಂದು. ಅನುಭವ ಯಾರದಾದರೇನು ಆ ಅನುಭವದ ಎಳೆಯೊಂದು ಹಠಾತ್ತನೆ ಮನಸ್ಸನ್ನು ಪ್ರವೇಶಿಸಿ ಆ ಕ್ಷಣಕ್ಕೆ ಕೃತಿಗೂ ಮತ್ತು ಓದುಗನಿಗೂ ಮುಖಾಮುಖಿಯಾಗಿಸುವಲ್ಲೇ ಸಾಹಿತ್ಯದ ಸಾಫಲ್ಯವಿದೆ. ಓದುಗನನ್ನು ಕೃತಿಗೆ ಮುಖಾಮುಖಿಯಾಗಿಸುವ ಲೇಖಕನದು ಬರವಣಿಗೆಯ ಆ ಎಲ್ಲ ನೋವು ನಲಿವುಗಳಿಂದ ಬಿಡುಗಡೆಯ ಭಾವ. ಬರವಣಿಗೆ ನೀಡುವ ಸಂತಸವನ್ನು ಚದುರಂಗರು ತಮ್ಮ ‘ವೈಶಾಖ’ ಕಾದಂಬರಿಯ ಮುನ್ನುಡಿಯಲ್ಲಿ ಹೀಗೆ ವಿವರಿಸುತ್ತಾರೆ “ಈ ಬರೆಯುವ ಪ್ರಕ್ರಿಯೆಯಲ್ಲಿ ನೋವು, ನೋವಿನಿಂದ ಮೂಡಿದ ನಲಿವು ಎಲ್ಲವನ್ನೂ ಅನುಭವಿಸಿದ್ದೇನೆ. ನನ್ನ ಒಳಗನ್ನು ತೋಡಿಕೊಳ್ಳುತ್ತಿರುವೆ ಎನ್ನುವ ತೃಪ್ತಿಯ ಜೊತೆಗೆ ಈವರೆಗೆ ಗುರುತಿಸಿಕೊಂಡಿರದೇ ಇದ್ದದ್ದನ್ನು ಹಠಾತ್ತನೆ ಕಂಡಂತಾಗಿ ಚಕಿತಗೊಂಡಿದ್ದೇನೆ. ಈ ರೀತಿಯಲ್ಲಿ ಪಡೆದ ಸಂತೋಷ ಒಂದು ಅನನ್ಯವಾದ ಬಿಡುಗಡೆಯ ಭಾವನೆಯನ್ನು ನನಗೆ ತಂದು ಕೊಟ್ಟಿದೆ. ನನ್ನ ಬರವಣಿಗೆಯನ್ನು ಇಡಿಯಾಗಿ ನೋಡಿದಾಗ ನನ್ನನ್ನು ನಾನೇ ಇಲ್ಲಿ ಕಂಡುಕೊಳ್ಳುತ್ತಿದ್ದೇನೆ ಎಂದು ಅನಿಸಿದ್ದುಂಟು. ಬರಹಗಾರನಾದ ನನಗೆ ಇದಕ್ಕಿಂತ ಮಿಗಿಲಾದ ಆತ್ಮಸುಖ ಬೇರೆ ಏನೂ ಕಾಣದು”.

         ಬರವಣಿಗೆಗೆ ಲೇಖಕ ಬದುಕುತ್ತಿರುವ ಪರಿಸರದ ಬದುಕು ಸ್ಪೂರ್ತಿಯಾದರೂ ಸೃಜನಶೀಲ ಸೃಷ್ಟಿಯು ಬರಹಗಾರನ ಅಂತರಾಳದಿಂದಲೇ ಕುಡಿಯೊಡೆದು ಬೆಳೆಯಬೇಕು. ತಾನು ಕಂಡು ಅನುಭವಿಸಿದ್ದನ್ನು ಸೃಜನಶೀಲವಾಗಿ ಅಭಿವ್ಯಕ್ತಿಗೊಳಿಸುವ ಸೃಜನಾತ್ಮಕ ಶಕ್ತಿ ಇದ್ದರೆ ಮಾತ್ರ ಬರಹಗಾರನಾಗಲು ಸಾಧ್ಯ. ಗೋಪಾಲಕೃಷ್ಣ ಅಡಿಗರು ತಾವು ಬರಹಗಾರನಾದ ರೀತಿಯನ್ನು ಸಂದರ್ಶನವೊಂದರಲ್ಲಿ ಹೀಗೆ ಹೇಳಿರುವರು “ಮೊದಲಿನಿಂದಲೂ ನಾನು ಅಂತರ್ಮುಖಿ. ನನ್ನಲ್ಲೇ ನಾನು ಲೀನನಾಗುವ ಸ್ವಭಾವ. ಯಾವಾಗಲೂ ನಾನು ಏಕಾಂಗಿ ಅನ್ನುವ ಭಾವನೆ. ಯಾವುದೋ ರೀತಿಯಿಂದ ಜಗತ್ತಿನಿಂದ ಉಳಿದ ಮನುಷ್ಯ ಸಂಬಂಧಗಳಿಂದ ಪ್ರತ್ಯೇಕನಾದವನು ಎನ್ನುವ ಭಾವನೆ. ಎಲ್ಲವನ್ನೂ ಕೊಂಚ ದೂರನಿಂತು ನೋಡಬೇಕು ಎನ್ನುವ ಭಾವನೆ. ಸಾಮಾನ್ಯವಾಗಿ ಮಾತನಾಡುವುದು ಬಹಳ ಕಡಿಮೆ. ಮಾತು ಕಡಿಮೆಯಾದ್ದರಿಂದ ಒಳಗಡೆ ನಾನು ಅನುಭವಿಸಿದ್ದು, ಭಾವಿಸಿದ್ದು, ಚಿಂತಿಸಿದ್ದು ಇವೆಲ್ಲಾ ಸೇರಿಕೊಂಡು ಅಭಿವ್ಯಕ್ತಿಯನ್ನು ಬಯಸುತ್ತಾ ಇರುತ್ತವೆ. ಹಾಗಾಗಿ ನಾನು ಬರಹಗಾರನಾದೆ”. 

    ಜೊತೆಗೆ ಗೋಪಾಲಕೃಷ್ಣ ಅಡಿಗರು ಬರಹಗಾರನ ಮನಸ್ಸು ಸದಾಕಾಲ ಹೊಸತನಕ್ಕೆ ತುಡಿಯುತ್ತಿದ್ದರೆ ಮಾತ್ರ ಲೇಖಕ ಹೊಸದನ್ನು ಸೃಷ್ಟಿಸಲು ಸಾಧ್ಯ ಎನ್ನುತ್ತಾರೆ. ಹೀಗಾಗಿ ಬರಹಗಾರನಲ್ಲಿ ಆತನ ವಿಚಾರಗಳು ಮತ್ತೆ ಮತ್ತೆ ಮರುಹುಟ್ಟು ಪಡೆಯುತ್ತಿರಬೇಕು. ದೇಹದ ಮೇಲಿನ ಚರ್ಮದಂತೆ ಆಲೋಚನೆಗಳು ಮತ್ತು ವಿಚಾರಗಳು ಕಾಲಕಾಲಕ್ಕೆ ಹೊಸತನವನ್ನು ಹೊಂದಬೇಕು. ಪೂರ್ವಾಗ್ರಹ ಪೀಡೆಗೆ ನಮ್ಮ ಆಲೋಚನೆಗಳು ಒಳಗಾದಲ್ಲಿ ಲೇಖಕನಿಂದ ಹೊಸ ಸೃಜನಶೀಲ ಸೃಷ್ಟಿಯ ಸಾಧ್ಯತೆ ಅಸಾಧ್ಯವಾದದ್ದು. ಮನುಷ್ಯನ ಆಲೋಚನೆಗಳ ಮರುಹುಟ್ಟನ್ನು ಕುರಿತು ಅಡಿಗರು ಹೀಗೆ ಹೇಳುತ್ತಾರೆ “ಬದುಕಿರುವಾಗಲೇ ಮತ್ತೆ ಮತ್ತೆ ಸಾಯದೇ ಹೋದ ಪಕ್ಷದಲ್ಲಿ ಹೊಸ ಸೃಷ್ಟಿ ಸಾಧ್ಯ ಆಗೋದಿಲ್ಲ. ಇಲ್ಲಿ ನಾನು ಸಾಯುವುದನ್ನು ಭೌತಿಕ ಅರ್ಥದಲ್ಲಿ ಹೇಳುತ್ತಿಲ್ಲ ಅದು ಮನಸ್ಸಿಗೆ ಸಂಬಂಧಿಸಿದ್ದು. ಮನುಷ್ಯನ ಆಲೋಚನೆಗಳು, ವಿಚಾರಗಳು ಕಾಲಕಾಲಕ್ಕೆ ಮರುಹುಟ್ಟು ಪಡೆಯುತ್ತಿರಬೇಕು. ಇಲ್ಲದೆ ಹೋದರೆ ಅವನಿಗೆ ಬೆಳೆಯೋಕಾಗೋದಿಲ್ಲ. ಇನ್ನು ನಾನು ಬರೆಯಲಾರೆ ಎನ್ನುವುದು ನನಗೆ ಸಾವಿನಂತೆ ಕಾಣಿಸುತ್ತದೆ. ಮತ್ತೆ ನಾನು ಹೊಸ ಮನುಷ್ಯನಾಗಿ ಹೊಸ ಸೃಷ್ಟಿಗಾಗಿ ಹಂಬಲಿಸುತ್ತೇನೆ. ಅದಕ್ಕೆಂದೇ ಕೀಟ್ಸ್ ಹೇಳುತ್ತಾನೆ dying in to a new life  ಎಂದು”.

     ಇನ್ನು ಸಾಹಿತ್ಯದಂಥ ಸೃಜನಶೀಲ ಸೃಷ್ಟಿಯನ್ನು ಒಂದು ಧರ್ಮದಂತೆ, ವ್ರತದಂತೆ ಅಪರಿಮಿತವಾಗಿ ಪ್ರೀತಿಸಿದ ಬರಹಗಾರರ ಸಂಖ್ಯೆ ಏನೂ ವಿರಳವಾಗಿಲ್ಲ. ಇವರ ದೃಷ್ಟಿಯಲ್ಲಿ ಸಾಹಿತ್ಯ ಸಮಾಜಿಕ ಸ್ಥಿತ್ಯಂತರಗಳಿಗೆ ಕಾರಣವಾಗುವ ಬಹುದೊಡ್ಡ ಸೃಜನಶೀಲ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಬರಹಗಾರ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಜತನದಿಂದ ಕಾಪಾಡಿಕೊಂಡಲ್ಲಿ ಸಾಹಿತ್ಯದಿಂದ ದೊಡ್ಡ ದೊಡ್ಡ ಜಿಗಿತಗಳು ಮತ್ತು ಪಲ್ಲಟಗಳಾಗಲಿವೆ ಎನ್ನುವ ನಂಬಿಕೆ ಅನೇಕ ಬರಹಗಾರರದು. ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಲೇಖಕ ಮಾರಿಯೋ ವರ್ಗಾಸ್ ಯೋಸಾ ಸಾಹಿತ್ಯದ ಮಹತ್ವವನ್ನು ಹೀಗೆ ಹೇಳುತ್ತಾನೆ “ಬಹುಕಾಲ ಬಾಳುವಂಥ ಯಾವುದನ್ನು ರಾಜಕಾರಣ ಮಾಡಲಾಗುವುದಿಲ್ಲವೋ ಅದನ್ನು  ಸಾಹಿತ್ಯ ಮಾಡಬೇಕು. ಲೇಖಕ ಕೇವಲ ವರ್ತಮಾನಕ್ಕಾಗಿ ಮಾತ್ರ ಪುಸ್ತಕ ಬರೆಯುವುದಿಲ್ಲ. ಟೀಕಿಸುವ ಮೂಲಕವೋ ತಮ್ಮ ಆಲೋಚನೆಗಳನ್ನು ಬಳಸಿ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮೂಲಕವೋ ಲೇಖಕರಾದವರು ಕಾರ್ಯಪ್ರವೃತ್ತರಾಗುವುದು ತುಂಬಾ ಮುಖ್ಯ. ಕೆಲವು ಸಂದರ್ಭಗಳಲ್ಲಿ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಬೇಕಾಗಿ ಬರುವಂಥ ಯಾವುದೇ ಅಭಿಪ್ರಾಯಕ್ಕೂ ಲೇಖಕ ಜಗ್ಗ ಕೂಡದು. ಒಂದು ಅಗತ್ಯದಂತೆ ಲೇಖಕರು ತಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕು. ನನ್ನ ಅಂತ:ಸಾಕ್ಷಿ ತುಂಬಾ ಗಡಸಾದದ್ದು. ಸಾಯುವ ಕೊನೆಯ ದಿನದವರೆಗೂ ನಾನು ಬರೆಯಬಲ್ಲೆ ಅನ್ನೊದು ನನಗೆ ಗೊತ್ತು. ಬರವಣಿಗೆಯೇ ನನ್ನ ಧರ್ಮ ಬರವಣಿಗೆಯೇ  ನನ್ನ ಬದುಕು”.

     ಯೋಸಾನ ಸಾಯುವ ಕೊನೆಯ ದಿನದವರೆಗೂ ನಾನು ಬರೆಯಬಲ್ಲೆ ಎನ್ನುವ ಮಾತು ನನಗೆ ಸಾವನ್ನು ಕುರಿತು ಫ್ರೆಂಚ್ ಲೇಖಕ ಸಾರ್ತ್ರೆ ಹೇಳಿದ ಮಾತುಗಳನ್ನು ನೆನಪಿಸುತ್ತಿದೆ. ಸಾರ್ತ್ರೆಯ ಪ್ರಕಾರ ಮನುಷ್ಯ ಸತ್ತ ನಂತರವೂ ಜೀವಿಸುತ್ತಾನೆ ಅದು ಬದುಕಿರುವವರ ಕೈಯಲ್ಲಿ. ಬದುಕಿರುವವರ ಕೈಯಲ್ಲಿ ಸತ್ತವನ ಬದುಕು ಹೊಗಳಿಕೆಯಾಗಿಯೋ ಇಲ್ಲವೇ ದಂಡನೆಗೆ ಒಳಗಾಗಿಯೋ ಮತ್ತೆ ಮರುಹುಟ್ಟು ಪಡೆಯುತ್ತದೆ ಎಂದು ಸಾರ್ತ್ರೆ ನುಡಿಯುತ್ತಾನೆ. ಅವನ ಪ್ರಕಾರ ಒಂದರ್ಥದಲ್ಲಿ ಸಾವೆನ್ನುವುದು ಸತ್ತ ವ್ಯಕ್ತಿಯ ಬಾಳನ್ನು ದಂಡನೆಗೆ ಒಳಪಡಿಸಿದಂತೆ. ಸಾವನ್ನು ಸಾರ್ತ್ರೆ ಕಾಣುವ ರೀತಿ ಹೀಗಿದೆ “ಸಾವು ವ್ಯಕ್ತಿಯ ಬಾಳಿನ ಹಿಂದಿನ ದಿನಗಳನ್ನು ಬದಲಾಯಿಸಲು ಒಂದು ನಿರ್ಧಿಷ್ಟತೆ ತಂದು ಬಿಡುತ್ತದೆ. ಸತ್ತ ನಂತರದ ಬಾಳು ಬದುಕಿರುವವರ ಸ್ವತ್ತಾಗುತ್ತದೆ. ಸತ್ತವರ ಬದುಕನ್ನು ನಂತರದ ಪೀಳಿಗೆ ಉಳಿಸಿಕೊಳ್ಳಬಹುದು ಅಥವಾ ಕತ್ತಲೆಗೆ ತಳ್ಳಬಹುದು. ಸತ್ತವರ ಅದೃಷ್ಟ ಬದುಕಿರುವವರ ಕೈಯಲ್ಲಿ. ಆದ್ದರಿಂದ ಸಾಯುವುದೆಂದರೆ ಬೇರೆಯವರ ಮೂಲಕ ದಂಡನೆಗೆ ಒಳಗಾದಂತೆ”.

      ಸಾಹಿತ್ಯದ ಓದು ಕಟ್ಟಿ ಕೊಡುವ ಅನುಭವ ಅನನ್ಯವಾದದ್ದು. ನಮ್ಮ ಅಂತ:ಸಾಕ್ಷಿಯನ್ನು ಪ್ರವೇಶಿಸಿ ಆತ್ಮವಿಮರ್ಶೆಗೆ ದಾರಿಮಾಡಿಕೊಡುವ ಸಾಹಿತ್ಯ ಮನುಷ್ಯನನ್ನು ಮನುಷ್ಯನನ್ನಾಗಿಸುವ ಪ್ರಕ್ರಿಯೆಗೆ  ಒಳಪಡಿಸುತ್ತದೆ. ನಮಗೆ ನಾವು ಸತ್ಯ ಹೇಳಿಕೊಳ್ಳುವ ಸಾಮರ್ಥ್ಯವನ್ನು ಪಡೆದಲ್ಲಿ ನಾವು ಮನುಷ್ಯರಾದಂತೆ ಎಂದು ಲೇಖಕರೊಬ್ಬರು ನುಡಿಯುತ್ತಾರೆ. ಇದು ಸಾಧ್ಯವಾಗುವುದು ಸಾಹಿತ್ಯದಂಥ ಸೃಜನಶೀಲ ಪ್ರಕ್ರಿಯೆಯಲ್ಲಿ ಮನುಷ್ಯ ಪಾಲ್ಗೊಂಡಾಗ ಮಾತ್ರ. ಏಕೆಂದರೆ ಸಾಹಿತ್ಯದಲ್ಲಿ ಜೀವಂತ ಮನುಷ್ಯನೊಬ್ಬನ ಬಗ್ಗೆ ಜೀವಂತ ಮನುಷ್ಯನೊಬ್ಬ ಕಿವಿಗೊಟ್ಟು ಕೇಳಿಸಿಕೊಳ್ಳಬೇಕಾದ ಜೀವನ ದರ್ಶನವಿದೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ