Tuesday, November 2, 2021

ಪ್ರತಿಮನೆಗೂ ಬೇಕು ಹಿರಿಯ ಜೀವ

       

(೨೦.೦೯.೨೦೨೧ ರ   ಪ್ರಜಾವಾಣಿಯಲ್ಲಿ ಪ್ರಕಟ)

             ನನ್ನ ಬಂಧುವೊಬ್ಬರು ತುಂಬ ಶಿಸ್ತಿನ ಮನುಷ್ಯ. ಇತ್ತೀಚೆಗೆ ಎರಡು ದಿನಗಳ ಕಾಲ ಹೆಂಡತಿ ಮತ್ತು ಮಗಳೊಂದಿಗೆ ಅವರ ಮನೆಯಲ್ಲಿ ತಂಗಬೇಕಾದ ಪ್ರಸಂಗ ಎದುರಾಯಿತು. ಆ ಎರಡು ದಿನಗಳು ನಮಗೆ ಅಕ್ಷರಶ: ಜೈಲಿನಲ್ಲಿದ್ದ ಅನುಭವವಾಯಿತು. ಅವರ ಮನೆಯಲ್ಲಿ ಧ್ವನಿ ಎತ್ತರಿಸಿ ಮಾತನಾಡುವಂತಿಲ್ಲ, ಜೋರಾಗಿ ನಗುವಂತಿಲ್ಲ, ಸೀನು ಕೆಮ್ಮುಗಳಿಗೆ ಅವಕಾಶವೇ ಇಲ್ಲ, ಅಪಾನುವಾಯುವನ್ನು ಕೂಡ ಜಠರದೊಳಗೇ ಇಂಗಿಸಿಕೊಳ್ಳಬೇಕು. ನನಗೋ ಚಹಾ ಬಾಯಿ ಚಪ್ಪರಿಸಿ ಕುಡಿದೇ ರೂಢಿ. ಹಾಗೆ ಕುಡಿದಾಗಲೇ ಬಾಯಿಗೂ ಮತ್ತು ಭಾವಕ್ಕೂ ತೃಪ್ತಿ. ಆದರೆ ಬಾಯಿಚಪ್ಪರಿಸುವುದಾಗಲಿ, ಕಚ್ಚಿ ನೀರು ಕುಡಿಯುವುದಾಗಲಿ ಅನಾಗರೀಕತೆಯ ಲಕ್ಷಣ ಎಂದು ಭಾವಿಸಿದ ಮನೆಯದು. ಆ ಮನೆಯ ಜನ ಮಾತಿನಲ್ಲಷ್ಟೇ ತೂಕಬದ್ಧರಲ್ಲ ಆಹಾರವನ್ನು ಕೂಡ ಅವರು ತೂಗಿಯೇ ತಿನ್ನುವರು. ವಯಸ್ಸಾದ ಅಜ್ಜಿಯೊಬ್ಬರಿದ್ದಾರೆ ಅವರ ಮನೆಯಲ್ಲಿ. ಬದುಕಿನ ಬಹುಭಾಗ ಹಳ್ಳಿಯಲ್ಲೇ ಕಳೆದವಳು ಈಗ ವಯಸ್ಸಾಗಿದೆಯೆಂದು ಆಶ್ರಯಕ್ಕಾಗಿ ಮಗನ ಮನೆಗೆ ಬಂದಿರುವಳು. ನಗರ ಬದುಕಿನ ನಾಗರೀಕತೆಯ ಸ್ಪರ್ಷ ಆ ಅಜ್ಜಿಗೆ ಇನ್ನು ಸೋಕಿಲ್ಲದ ಕಾರಣ ಮನೆಯ ಸದಸ್ಯರಿಗೆ ಅವಳನ್ನು ಸಂಭಾಳಿಸುವುದೇ ದೊಡ್ಡ ಸಮಸ್ಯೆಯಾಗಿದೆ.  ನಾವಿದ್ದ ಸಮಯದಲ್ಲೇ ತುಂಬ ಸಿವಿಲೈಜ್ಡ್ ಕುಟುಂಬವೊಂದು ಆ ಮನೆಗೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಗೊಂಡಿದ್ದ ಕಾರಣ ಅಜ್ಜಿಯನ್ನು ಒಂದು ದಿನದ ಮಟ್ಟಿಗೆ ದೂರದ ಸಂಬಂಧಿಕರ ಮನೆಗೆ ಸಾಗಹಾಕಲಾಯಿತು. ಅದುವರೆಗೂ ಸಮಾಜದಲ್ಲಿ ತಾವು ಕಾಯ್ದುಕೊಂಡುಬಂದಿದ್ದ ಗೌರವ, ಪ್ರತಿಷ್ಠೆಗೆ ಆ ಅನಾಗರೀಕ ಅಜ್ಜಿಯಿಂದ ಧಕ್ಕೆ ಬರಬಹುದೆನ್ನುವ ಆತಂಕ ಅವರದಾಗಿತ್ತು. ಪ್ರತಿರೋಧಿಸುವುದು ಎಲ್ಲಿ ಅನಾಗರೀಕತೆಯಾದಿತೋ ಎಂದು ಹೆದರಿ ಬಾಯಿಮುಚ್ಚಿ ಕುಳಿತುಕೊಳ್ಳಬೇಕಾದ ಅಸಹಾಯಕತೆ ನನ್ನದಾಗಿತ್ತು. ಆ ಅಸಹಾಯಕತೆಯೂ ಒಂದರ್ಥದಲ್ಲಿ ಅನಾಗರೀಕತೆಯ ರೂಪಾಂತರವಾಗಿತ್ತು ಎಂದು ಈಗ ನನಗನಿಸುತ್ತಿದೆ.

  ಆಧುನಿಕ ನಾಗರೀಕತೆಯ ಇನ್ನೊಂದು ಘಟನೆ ಹೀಗಿದೆ. ನನ್ನ ಪರಿಚಿತರೊಬ್ಬರು ಮಗಳಿಗೆ ಗಂಡು ಹುಡುಕುತ್ತಿರುವರು. ಸಾಫ್ಟ್ ವೇರ್ ಓದಿರುವ ಮಗಳನ್ನು ಸಾಫ್ಟ್ ಆದ ಕುಟುಂಬಕ್ಕೆ ಸೇರಿಸುವ ಇರಾದೆ ಅವರದು. ಅವರ ಆದ್ಯತೆಗಳ ಪಟ್ಟಿಯೇನೂ ಉದ್ದವಾಗಿಲ್ಲ. ಗಂಡು ಸಾಫ್ಟ್ ವೇರ್  ಉದ್ಯೋಗಿಯಾಗಿದ್ದು ಸ್ವಂತಕ್ಕೊಂದು ಸೂರಿದ್ದರೆ ಸಾಕು. ಆದರೆ ಇನ್ನುಳಿದ ಬೇಡಿಕೆಗಳು ಬೆಚ್ಚಿಬೀಳಿಸುವಂತಿವೆ. ತಂದೆ ತಾಯಿಗೆ ಒಬ್ಬನೇ ಮಗನಾಗಿರಬೇಕು. ನಾದಿನಿಯರ ಕಾಟದಿಂದ ಮನೆ ಮುಕ್ತವಾಗಿರಬೇಕಾದ ಕಾರಣ ಮದುವೆಯ ಗಂಡಿಗೆ ಅಕ್ಕ-ತಂಗಿಯರ ಅಗತ್ಯವಿಲ್ಲ. ಅಪ್ಪ-ಅಮ್ಮ ಸ್ವರ್ಗಸ್ಥರಾಗಿದ್ದರೆ ಅದಕ್ಕಿಂತ ಹೆಚ್ಚಿನ ಸಂತೋಷ ಇನ್ನೊಂದಿಲ್ಲ. ದೊಡ್ಡಪ್ಪ, ಚಿಕ್ಕಪ್ಪ, ಸೋದರತ್ತೆ, ಸೋದರಮಾವ ಈ ಎಲ್ಲ ಸಂಬಂಧಗಳಿಂದ ಮದುವೆಗಂಡು ಒಂದು ನಿರ್ಧಿಷ್ಟ ಅಂತರವನ್ನು ಕಾಯ್ದುಕೊಂಡಿರಬೇಕು. ಒಟ್ಟಾರೆ ಬಂಧು-ಬಳಗ ಇಲ್ಲದ ಅನಾಥನಾಗಿದ್ದರೆ ಮೊದಲ ಆದ್ಯತೆ. ಬಹುತೇಕ ಕನ್ಯಾಮಣಿಗಳ ಅಪ್ಪ-ಅಮ್ಮಂದಿರ ಬೇಡಿಕೆಗಳಿವು. ಹಾಗೆಂದು ಇದನ್ನು ಅನಾಗರೀಕತೆ ಎಂದು ಸಾರಾಸಗಟಾಗಿ ತಳ್ಳಿಹಾಕುವಂತಿಲ್ಲ. ಆಧುನಿಕ ಸಮಾಜದ ಸುಶಿಕ್ಷಿತ ಅಪ್ಪ ಅಮ್ಮಂದಿರ ನಾಗರೀಕ ಬೇಡಿಕೆಗಳಿವು. 

   ಆಧುನಿಕ ತಂತ್ರಜ್ಞಾನದ ಫಲವಾಗಿ ಇಂದು ಮಾಹಿತಿ ಪ್ರಸರಣ ಅತೀ ವೇಗವನ್ನು ಪಡೆದುಕೊಂಡಿದೆ. ಕ್ಷಣಮಾತ್ರದಲ್ಲಿ ಸುದ್ಧಿಯನ್ನು ತಲುಪಿಸಲು ಅತ್ಯಾಧುನಿಕ ವ್ಯವಸ್ಥೆಯನ್ನು ತಂತ್ರಜ್ಞಾನ ಕಲ್ಪಿಸಿಕೊಟ್ಟಿದೆ. ಸುದ್ಧಿ ಬಿತ್ತರಣೆಯ ವ್ಯಾಮೋಹಕ್ಕೆ ಬಲಿಯಾದ ಮನುಷ್ಯ ಶುದ್ಧ ಎಡಬಿಡಂಗಿಯಂತೆ ವರ್ತಿಸುತ್ತಿರುವನು. ರಸ್ತೆ ಅಪಘಾತ, ಬೆಂಕಿ ಅಪಘಾತದಂಥ ದುರಂತದ ಸಂದರ್ಭದಲ್ಲೂ ಮನುಷ್ಯತ್ವದ ಸಂವೇದನೆಯನ್ನೇ ಕಳೆದುಕೊಂಡು ಘಟನೆಯನ್ನು ಚಿತ್ರೀಕರಿಸಿ ಶೀಘ್ರವಾಗಿ ಮಾಹಿತಿಯನ್ನು ಇತರರಿಗೆ ತಲುಪಿಸುವ ಧಾವಂತಕ್ಕೆ ಒಳಗಾಗುತ್ತಿರುವನು. ಸಂಗತಿಯೊಂದನ್ನು ವಿಶ್ಲೇಷಿಸಿ ವಿಮರ್ಶಿಸುವ ವ್ಯವಧಾನವಾಗಲಿ ಸಂಯಮವಾಗಲಿ ಇಲ್ಲದ ಮನುಷ್ಯ ಮಾಡುತ್ತಿರುವುದು ಸುದ್ಧಿಯ ವಿಲೇವಾರಿಯೊಂದೇ. ಎಲೆಕ್ಟ್ರಾನಿಕ್ ವಾಹಿನಿಗಳಲ್ಲಿ ಕಿರಿಚಾಡುವ ಸುದ್ಧಿ ಓದುಗರನ್ನು ನೋಡುವಾಗಲೆಲ್ಲ ಅವರು ಸಂವೇದನಾರಹೀತರೇನೋ ಎಂದು ಭಾಸವಾಗುತ್ತದೆ. ತನ್ನ ನೆರೆಹೊರೆಯವರ ಮುಖಪರಿಚಯವೂ ಇಲ್ಲದ ಮನುಷ್ಯ  ಸಮಾಜಮುಖಿಯಾಗುತ್ತಿರುವುದು ಈ ವಾಟ್ಸಪ್ ಮತ್ತು ಫೇಸ್‍ಬುಕ್‍ಗಳಲ್ಲೆ. ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಿಕೊಂಡು ಬದುಕನ್ನು ದ್ವೀಪವಾಗಿಸಿಕೊಂಡಿರುವ ವiನುಷ್ಯ ಇಡೀ ಪ್ರಪಂಚ ತನ್ನ ಅಂಗೈಯಲ್ಲಿದೆ ಎಂದು ಭ್ರಮಿಸುತ್ತಿರುವನು. ಸಾವಿನ ಮನೆಯ ಸೂತಕವೂ ಇವತ್ತು ಪ್ರಸರಣಕ್ಕೆ ಯೋಗ್ಯವಾದ ಸಂಗತಿಯಾಗಿದೆ. ನನ್ನ ಸ್ನೇಹಿತರೋರ್ವರು ತಮ್ಮ ಫೇಸ್‍ಬುಕ್ ಪುಟದಲ್ಲಿ ಹಂಚಿಕೊಂಡ ಅವರ ತಂದೆಯ ಸಾವಿನ ಸುದ್ಧಿಗೆ ಸರಿಸುಮಾರು ನೂರು ಕಾಮೆಂಟ್‍ಗಳು ಮತ್ತು ಐದುನೂರು ಲೈಕ್‍ಗಳು ಪ್ರಾಪ್ತವಾಗಿದ್ದವು. ವಿಪರ್ಯಾಸವೆಂದರೆ ಅಂತಿಮ ಸಂಸ್ಕಾರಕ್ಕಾಗಿ ಸ್ಮಶಾನದಲ್ಲಿ ಹಾಜರಿದ್ದವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ.

ಆಧುನಿಕ ಪರಿವೇಷ ಧರಿಸಿರುವ ಇಂಥ (ಅ)ನಾಗರೀಕತೆಗಳನ್ನು ನೋಡುತ್ತಿದ್ದರೆ ನನಗೆ ನನ್ನೂರಿನ ಗಂಗಜ್ಜಿ ನೆನಪಾಗುತ್ತಾಳೆ. ಹತ್ತು ಹಡೆದು ಗಂಡನೊಡನೆ ಮಣ್ಣಲ್ಲಿ ಮಣ್ಣಾಗಿ ದುಡಿದು ಬದುಕು ಕಟ್ಟಿಕೊಂಡ ಗಂಗಜ್ಜಿ ಅವಿಭಕ್ತ ಕುಟುಂಬದ ಸದಸ್ಯೆ. ಈಗ ವಯಸ್ಸಾಗಿದೆ. ಮನೆಯ ಯಜಮಾನಿಕೆಯನ್ನು ಸೊಸೆಯಂದಿರಿಗೆ ಒಪ್ಪಿಸಿ ಊರ ಉಸಾಬರಿಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವಳು. ಊರಿನ ಯಾರದೇ ಮನೆಯ ಶುಭ, ಅಶುಭ ಕಾರ್ಯಗಳಿರಲಿ ಅಲ್ಲಿ ಗಂಗಜ್ಜಿ ಹಾಜರಿರುತ್ತಾಳೆ. ಮನೆಯ ಹಿರಿತನದ ಜವಾಬ್ದಾರಿ ವಹಿಸಿಕೊಂಡು ಸಲಹೆ ನೀಡುತ್ತಾಳೆ. ಆ ಮನೆಯವರ ಹಿಗ್ಗಿನ ಸಂಭ್ರಮದಲ್ಲಿ ಪಾಲ್ಗೊಂಡು ತಾನೂ ಸಂಭ್ರಮಿಸುತ್ತಾಳೆ. ಸಾವಿನ ಮನೆಯಾಗಿದ್ದರೆ ಆ ಕುಟುಂಬದ ಸದಸ್ಯರ ದು:ಖದಲ್ಲಿ ಭಾಗಿಯಾಗಿ ಅವರ ಕಣ್ಣೊರಿಸುತ್ತಾಳೆ. ಯಾರದೋ ಮನೆಯ ರಚ್ಚೆಹಿಡಿದ ಮಗು ಅವಳ ಸೊಂಟದಲ್ಲಿ ಕುಳಿತು ಅಳು ಮರೆಯುತ್ತದೆ. ಅತಿಥಿ ಸತ್ಕಾರದಲ್ಲಿ ಗಂಗಜ್ಜಿ ಅಕ್ಷರಶ: ಮಾತೃ ಸಮಾನಳು. ಅತಿಥಿಗಳಿಗೆ ಹೊಟ್ಟೆ ಬಿರಿಯುವಂತೆ ಉಣಿಸಿದರೇ ಅವಳಿಗೆ ಸಮಾಧಾನ. ನಾಗರೀಕತೆಯ ಯಾವ ಶಿಷ್ಠಾಚಾರಕ್ಕೂ ಅವಳು ಒಳಗಾಗಿಲ್ಲ. ಬಾಯಿತುಂಬ ಕವಳ ಹಾಕಿಕೊಂಡು ಅಂಗಳದಲ್ಲೆಲ್ಲ ಉಗುಳುತ್ತಾಳೆ. ಹಾಳಾದ್ದು ಹೊರಗೆ ಹಾಕದಿದ್ದರೆ ದೇಹ ಪ್ರಕೃತಿಗೆ ಕೇಡೆಂದು ಬೈಯುತ್ತಲೆ ಕುಂಡೆ ಎತ್ತಿ ಕುಳಿತಲ್ಲೇ ಹೂಸು ಬಿಡುತ್ತಾಳೆ. ಆಧುನಿಕತೆಗೆ ಪಕ್ಕಾದ ಮೊಮ್ಮಕ್ಕಳಿಗೆ ಗಂಗಜ್ಜಿಯ ವರ್ತನೆ ಅನಾಗರೀಕವಾಗಿ ಕಾಣಿಸುತ್ತಿದೆ.

ಶಿಕ್ಷಣದೊಂದಿಗೆ ಆಧುನಿಕತೆ ಜೊತೆಗೂಡಿ ಮನುಷ್ಯನ ಭಾವನೆಗಳು ಜಡವಾಗುತ್ತಿವೆ. ಸಂಬಂಧಗಳು ಸಂಕುಚಿತಗೊಂಡು ಮನುಷ್ಯ ತನ್ನ ಸುತ್ತಲೂ ಕೋಟೆ ಕಟ್ಟಿಕೊಳ್ಳುತ್ತಿರುವ ಪರಿಣಾಮ ಬದುಕು ದ್ವೀಪವಾಗುತ್ತಿದೆ. ವಿಪರ್ಯಾಸವೆಂದರೆ ಹೀಗೆ ಬದುಕುವುದನ್ನೇ ಜನರು ನಾಗರೀಕತೆ ಎಂದು ಭಾವಿಸಿರುವರು. ನಾವು, ನಮ್ಮದು ಎನ್ನುವುದರ ಬದಲು ನಾನು ಎನ್ನುವ ಸ್ವಾರ್ಥದ ನೆಲೆಯಲ್ಲಿ ಮನುಷ್ಯ ಯೋಚಿಸುತ್ತಿರುವನು. ಪ್ರೀತಿ, ವಾತ್ಸಲ್ಯದ ಭಾವನೆಗಳು ಹಿಂದೆ ಸರಿದು ಲಾಭ, ನಷ್ಟದ ವ್ಯಾಪಾರಿ ಮನೋಭಾವವೇ ಮುನ್ನೆಲೆಗೆ ಬಂದಿದೆ. ಮನಸ್ಸು ಮನಸ್ಸಿನ ನಡುವೆ ಗೋಡೆಗಳು ನಿರ್ಮಾಣಗೊಳ್ಳುತ್ತಿವೆ. ಕಟ್ಟುವುದಾದರೆ ಸೇತುವೆಗಳನ್ನು ಕಟ್ಟಿ, ಕೆಡವುವುದಾದರೆ ಗೋಡೆಗಳನ್ನು ಕೆಡವಿ ಎಂದಿರುವರು ಅನುಭಾವಿಗಳು. ಆದರೆ ಮನುಷ್ಯ ಸೇತುವೆಗಳನ್ನು ಕೆಡವುತ್ತ ಗೋಡೆಗಳನ್ನು ಕಟ್ಟುತ್ತಿರುವನು. ಗೋಡೆಗಳನ್ನು ಕೆಡವಿ ನಾಗರೀಕತೆಯ ಆಧುನಿಕ ಮುಖವಾಡಗಳನ್ನು ಕಿತ್ತೊಗೆಯಲು ಪ್ರತಿಮನೆಗೂ ಗಂಗಜ್ಜಿಯಂಥ ಹಿರಿಯ ಜೀವದ ಅಗತ್ಯವಿದೆ.

-ರಾಜಕುಮಾರ ಕುಲಕರ್ಣಿ