Thursday, January 1, 2015

ಓದುಗ ದೊರೆಗೊಂದು ಅಹವಾಲು















                ಜಿ.ಎಸ್.ಶಿವರುದ್ರಪ್ಪನವರ ಸಾವಿನ ನಂತರ ನಾನೊಂದು ಲೇಖನ ಬರೆದೆ. ಅವರು ಶಿಷ್ಯ ಪರಂಪರೆಯನ್ನು ಬೆಳೆಸಿದ ರೀತಿಯನ್ನು ವಿವರಿಸುವಾಗ ಯು.ಆರ್.ಅನಂತಮೂರ್ತಿಯವರ 'ಅವರು ನಮ್ಮ ಕಾಲದ ದ್ರೋಣ' ಎನ್ನುವ ಹೇಳಿಕೆಯನ್ನು ಲೇಖನದ ಒಂದು ಕಡೆ ಬಳಸಿಕೊಂಡಿದ್ದೆ. ಲೇಖನವನ್ನು ಓದಿದ ಪರಿಚಿತರೊಬ್ಬರು ಈ ವಿಷಯವಾಗಿ ನನ್ನನ್ನು ಪ್ರಶ್ನಿಸಿದರು. ಅನಂತಮೂರ್ತಿಯವರು ಜಿಎಸ್ಎಸ್ ಅವರನ್ನು 'ದ್ರೋಣ' ಎಂದೇಕೆ ಕರೆದರು ಎನ್ನುವುದೇ ಅವರ ಪ್ರಶ್ನೆಯಾಗಿತ್ತು. ನಿಜವಾಗಿ ಹೇಳಬೇಕೆಂದರೆ ಶ್ರೀಯುತರಿಗೆ ದ್ರೋಣ ಎನ್ನುವ ವ್ಯಕ್ತಿತ್ವದ ಪರಿಚಯವೇ ಇಂದ್ದಂತಿರಲಿಲ್ಲ. ಅವರ ಮಾತಿನಿಂದ ಅವರು ಮಹಾಭಾರತವನ್ನು ಓದಿಕೊಂಡಿಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತಿತ್ತು. ಇಲ್ಲಿ ನಾನು ಅವರಿಗೆ ದ್ರೋಣರನ್ನು ಪರಿಚಯಿಸುವ ಕೆಲಸವನ್ನು ಮಾಡಬೇಕಾಯಿತು. ಮಹಾಭಾರತದಲ್ಲಿ ಬರುವ ಈ ದ್ರೋಣ ಎನ್ನುವ ಪಾತ್ರ ಕೌರವರು ಮತ್ತು ಪಾಂಡವರಿಗೆ ಮಾತ್ರವಲ್ಲದೆ ಏಕಲವ್ಯನಂಥ ಸಾಮಾನ್ಯ ಹುಡುಗನಿಗೂ ಅಪರೋಕ್ಷವಾಗಿ ವಿದ್ಯಾಗುರುವಾಗಿದ್ದರು ಎನ್ನುವುದನ್ನು ವಿವರಿಸಿ ಹೇಳಬೇಕಾಯಿತು. ಅನಂತಮೂರ್ತಿ ಅವರು ಜಿಎಸ್ಎಸ್ ಅವರನ್ನು ಮಹಾಭಾರತದ ದ್ರೋಣ ಪಾತ್ರದೊಂದಿಗೆ ಹೋಲಿಸಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಜಿಎಸ್ಎಸ್ ಅನೇಕರಿಗೆ ಗುರುವಾಗಿದ್ದರು ಎನ್ನುವುದೇ 'ಅವರು ನಮ್ಮ ಕಾಲದ ದ್ರೋಣ' ಎನ್ನುವ ಮಾತಿನ ತಾತ್ಪರ್ಯ ಎಂದು ವಿವರಣೆ ನೀಡಿದಾಗ ಶ್ರೀಯುತರಿಗೆ ಅರ್ಥವಾಯಿತು. 

            ಇಲ್ಲಿ ನಾನು ಬೇರೆ ಯಾರನ್ನೋ ಅವಮಾನಿಸಬೇಕೆನ್ನುವ ಉದ್ದೇಶದಿಂದ ಈ ಮೇಲಿನ ಉದಾಹರಣೆಯನ್ನು ಹೇಳುತ್ತಿಲ್ಲ. ಓದುಗರ ಓದಿನ ವ್ಯಾಪ್ತಿ ಸೀಮಿತವಾಗಿದ್ದರೆ ಆಗ ಓದುಗ ಸಹಜವಾಗಿಯೇ ಓದಿನ ಆಸ್ವಾದನೆಯನ್ನು ಕಳೆದುಕೊಳ್ಳುವನು ಎನ್ನುವುದಕ್ಕೆ ದೃಷ್ಟಾಂತವಾಗಿ ಇದನ್ನು ಹೇಳಬೇಕಾಯಿತು. ಇಂಥದ್ದೇ ಇನ್ನೊಂದು ಪ್ರಸಂಗ ನಾನು 'ಮೈನಾ: ಒಂದು ಸುಂದರ ದೃಶ್ಯಕಾವ್ಯ' ಎನ್ನುವ ಲೇಖನ ಬರೆದ ಘಳಿಗೆಯೂ ಎದುರಿಸಬೇಕಾಯಿತು. ಆಗೆಲ್ಲ ಒಂದಿಷ್ಟು ಓದುಗರು ಲೇಖನದ ಶೀರ್ಷಿಕೆಯನ್ನಷ್ಟೇ ಓದಿ 'ಮೈನಾ' ಅದೊಂದು ಕವಿತೆಯಾಗಿರಬಹುದು ಎನ್ನುವ ಅಭಿಪ್ರಾಯವನ್ನು ನೇರವಾಗಿ ನನ್ನೆದುರೆ ವ್ಯಕ್ತಪಡಿಸಿದ್ದರು. ನಿಜವಾಗಿಯೂ ಅದು ನಾನು 'ಮೈನಾ' ಎನ್ನುವ ಸಿನಿಮಾದ ಕುರಿತು ಬರೆದ ಲೇಖನವಾಗಿತ್ತು. ಲೇಖನದ ಶೀರ್ಷಿಕೆಯಲ್ಲಿ ನಾನು 'ಕಾವ್ಯ' ಎನ್ನುವ ಪದವನ್ನು ಬಳಸಿಕೊಂಡಿದ್ದೇ ತಪ್ಪಾಗಿ ಅರ್ಥೈಸಿಕೊಳ್ಳಲು ಕಾರಣವಾಗಿತ್ತು. ಆದರೆ ಅಚ್ಚರಿಯ ಸಂಗತಿ ಎಂದರೆ 'ದೃಶ್ಯಕಾವ್ಯ' ಎನ್ನುವ ಪದ ಅನೇಕ ಓದುಗರಿಗೆ ಅಪರಿಚಿತ ಪದವಾಗಿತ್ತು. ಆದ್ದರಿಂದ ಅವರು ಕೇವಲ 'ಕಾವ್ಯ' ಪದವನ್ನಾಧರಿಸಿ ಇಡೀ ಲೇಖನ ಒಂದು ಕಾವ್ಯದ ಕುರಿತು ಬರೆದಿರಬಹುದು ಅಂದು ಅರ್ಥೈಸಿಕೊಂಡಿದ್ದರು. ಇಂಥ ಆಭಾಸಗಳಿಗೆಲ್ಲ ಓದುಗರ ಓದಿನ ವ್ಯಾಪ್ತಿ ಸೀಮಿತವಾಗಿರುವುದೇ ಕಾರಣ. ಭೈರಪ್ಪನವರ 'ಸಾರ್ಥ' ಕಾದಂಬರಿಯನ್ನು ಓದುವುದಕ್ಕಿಂತ ಪೂರ್ವದಲ್ಲಿ  ನಾನು ಮಾಡಿದ ಮೊದಲ ಕೆಲಸ ಸಾರ್ಥ ಪದದ ಅರ್ಥವನ್ನು ನಿಘಂಟುವಿನಲ್ಲಿ ಹುಡುಕಿದ್ದು. ಸಧ್ಯದ ವಾತಾವರಣದಲ್ಲಿ ಕನ್ನಡ ಪುಸ್ತಕಗಳ ಓದುಗರ ವಲಯ ಅನೇಕ ಇತಿಮಿತಿಗಳ ನಡುವೆ ಸಿಲುಕಿಕೊಂಡಿದೆ. ಓದುಗರು ತಮ್ಮನ್ನು ತಾವು ನಿರ್ಧಿಷ್ಟ ಓದಿಗೆ ಸೀಮಿತಗೊಳಿಸಿಕೊಳ್ಳುತ್ತಿರುವುದರಿಂದ ಕನ್ನಡ ಸಾಹಿತ್ಯ ಕ್ಷೇತ್ರ ಬಹುದೊಡ್ಡ ಓದುಗರ ಸಮೂಹವನ್ನು ಕಳೆದುಕೊಳ್ಳುತ್ತಿದೆ ಎನ್ನುವ ಭಯ ಅನೇಕ ಪ್ರಜ್ಞಾವಂತ ಲೇಖಕರನ್ನು ಕಾಡುತ್ತಿದೆ. ಸಾಹಿತ್ಯದ ನಿರ್ಧಿಷ್ಟ ಪ್ರಕಾರಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡ ಓದುಗರನ್ನು ಅಂಥದ್ದೊಂದು ಸಂಕುಚಿತ ಮನೋಭಾವದಿಂದ ಹೊರತರುವ ಕೆಲಸವಾಗಬೇಕಿರುವುದು ಇಂದಿನ ತುರ್ತು ಅಗತ್ಯವಾಗಿದೆ.

ಓದು ತೋರಿಕೆಯಾಗದಿರಲಿ 


                  ನನ್ನ ಪರಿಚಿತರ  ಮನೆಯಲ್ಲಿ ಪುಸ್ತಕಗಳ ದೊಡ್ಡ ಸಂಗ್ರಹವೇ ಇದೆ. ಹೋದ ಕಡೆಯಲ್ಲೆಲ್ಲ ಕಣ್ಣಿಗೆ ಕಾಣಿಸುವ ಹಿರಿಯ ಸಾಹಿತಿಗಳ ಪುಸ್ತಕಗಳನ್ನು ಖರೀದಿಸಿ ಸಂಗ್ರಹಿಸಿಡುವ ಹವ್ಯಾಸ ಅವರದು. ಅವರ ಸಂಗ್ರಹದಲ್ಲಿ ರಾಮಾಯಣ ದರ್ಶನಂ, ಮಂಕುತಿಮ್ಮನ ಕಗ್ಗ, ಮೂಕಜ್ಜಿಯ ಕನಸುಗಳಂಥ ಶ್ರೇಷ್ಠ ಕೃತಿಗಳಿವೆ. ಮನೆಗೆ ಬಂದವರಿಗೆಲ್ಲ ತಮ್ಮ ಪುಸ್ತಕಗಳ ಸಂಗ್ರಹವನ್ನು ಅತ್ಯಂತ ಅಭಿಮಾನದಿಂದ ತೋರಿಸುವ ಶ್ರೀಯುತರು ಅವುಗಳಲ್ಲಿ ಯಾವೊಂದು ಕೃತಿಯನ್ನೂ ಓದಿಲ್ಲ ಎನ್ನುವುದು ಅತ್ಯಂತ ಅಚ್ಚರಿಯ ವಿಷಯ. ಹಾಗೆಂದು ಅವರು ತಮ್ಮ ಸಂಗ್ರಹದಲ್ಲಿನ ಪುಸ್ತಕಗಳನ್ನು ಬೇರೆಯವರಿಗೆ ಕೊಟ್ಟ ಉದಾಹರಣೆಯೂ ಇಲ್ಲ. ದಶಕದ ಹಿಂದೆ ಖರೀದಿಸಿದ ಪುಸ್ತಕಗಳು ಇವತ್ತಿಗೂ ಹೊಚ್ಚ ಹೊಸ ಪುಸ್ತಕಗಳಂತೆ ಹೊಳೆಯುತ್ತವೆ. ಪುಸ್ತಕಗಳು ಅವರಿಗೆ ಇತರ ಭೌತಿಕ ವಸ್ತುಗಳಿಗೆ ಸಮವೇ ವಿನ: ಅವರೆಂದೂ ಅವುಗಳನ್ನು ವೈಚಾರಿಕ ದೃಷ್ಟಿಕೋನದಿಂದ ನೋಡಿಲ್ಲ. ಅವರು ತಮ್ಮಲ್ಲಿನ ಸಂಗ್ರಹದಿಂದ ಬೇರೆಯವರಿಗೆ ಓದಲು ಕೊಟ್ಟ ಉದಾಹರಣೆಯೂ ಇಲ್ಲ. ಇಂಥ ಮನೋಭಾವದ ಓದುಗರನ್ನು (ಪುಸ್ತಕಗಳ ಸಂಗ್ರಹದಿಂದ ಅವರನ್ನು ಓದುಗರೆನ್ನಬಹುದು) ನಾವು ಅನೇಕ ಕಡೆಗಳಲ್ಲಿ ನೋಡಬಹುದು. ಇಂಥ ಓದುಗರಿಂದ ಕನ್ನಡ ಸಾಹಿತ್ಯ ವಲಯಕ್ಕೆ ಹೆಚ್ಚಿನ ಅಪಾಯವಿಲ್ಲವಾದರೂ ಇವರನ್ನು ತೀರ ನಿರ್ಲಕ್ಷಿಸುವಂತಿಲ್ಲ. ಪುಸ್ತಕಗಳನ್ನು ಪ್ರಾಚೀನ ವಸ್ತುಗಳಂತೆ ಸಂಗ್ರಹಿಸಿಟ್ಟಾಗ ಅವುಗಳಲ್ಲಿನ ವಿಚಾರ ಕೊಳೆತು ಹೋಗುವ ಸಾಧ್ಯತೆಯೇ ಹೆಚ್ಚು. ಪುಸ್ತಕವೊಂದು ಓದುಗರಿಂದ ಓದುಗರಿಗೆ ದಾಟಬೇಕು. ಆದರೆ ಈ ಪ್ರಕಾರದ ಓದುಗರು ಪುಸ್ತಕದಲ್ಲಿನ ವಿಚಾರಗಳನ್ನು ಹಲವಾರು ಮನಸ್ಸುಗಳಿಗೆ ವಿಸ್ತರಿಸುವ ಕೆಲಸವನ್ನು ಮಾಡಲಾರರು.

ಸೀಮಿತ ವ್ಯಾಪ್ತಿಯಿಂದ ಹೊರಬನ್ನಿ 


                   ಸಾಹಿತ್ಯ ಕ್ಷೇತ್ರದಲ್ಲಿ ನವ್ಯ, ನವೋದಯ, ಬಂಡಾಯ, ದಲಿತ ಪ್ರಕಾರಗಳಿದ್ದಂತೆ ಓದುಗರ ವಲಯದಲ್ಲೂ ನಿರ್ಧಿಷ್ಟ ಗುಂಪುಗಳಿವೆ. ಸಾಹಿತ್ಯದ ಒಂದು ಪ್ರಕಾರಕ್ಕೆ ತಮ್ಮ ಓದನ್ನು ಸೀಮಿತಗೊಳಿಸಿಕೊಂಡ ಅನೇಕ ಓದುಗರು ಇನ್ನೊಂದು ಪ್ರಕಾರದತ್ತ ಹೊರಳಿ ನೋಡಲಾರರು. ಉದಾಹರಣೆಯಾಗಿ ಹೇಳುವುದಾದರೆ ಕನ್ನಡದಲ್ಲಿ ದೇವನೂರು, ಲಂಕೇಶ್, ಅನಂತಮೂರ್ತಿ ಅವರ ಕೃತಿಗಳನ್ನು ಓದುವ ಓದುಗರಿಗೆ ಭೈರಪ್ಪನವರ ಕಾದಂಬರಿಗಳು ಇಂದಿಗೂ ಅಪಥ್ಯ. ಇದೇ ಮಾತನ್ನು ನಾವು ಹೀಗೂ ಹೇಳಬಹುದು ಭೈರಪ್ಪನವರ ಕಾದಂಬರಿಗಳ ಓದುಗರಿಗೆ ದೇವನೂರು, ಲಂಕೇಶ್, ಅನಂತಮೂರ್ತಿ ಅವರ ಬರವಣಿಗೆ ರುಚಿಸಲಾರದು. ಓದುಗರ ಈ ಮನೋಭಾವವನ್ನು ಚೆನ್ನಾಗಿಯೇ ಅರ್ಥಮಾಡಿಕೊಂಡಿರುವ ನಮ್ಮ ಲೇಖಕರು ಭೈರಪ್ಪನವರ 'ಆವರಣ' ಕಾದಂಬರಿ ಪ್ರಕಟವಾದಾಗ ಅದನ್ನು ವಿರೋಧಿಸಿ 'ಅನಾವರಣ' ಎನ್ನುವ ಕೃತಿ ರಚಿಸುತ್ತಾರೆ. ಮೊನ್ನೆ ಮೊನ್ನೆ ಕುಂ.ವೀರಭದ್ರಪ್ಪನವರು 'ಜ್ಞಾನಪೀಠ ನಾನ್ಸೆನ್ಸ್' ಎಂದು ಜರೆದಾಗ ಪರ ಮತ್ತು ವಿರೋಧಿಸಿ ಚರ್ಚೆಯಾಗುತ್ತದೆ. ಹೀಗೆ ಚರ್ಚೆಗೆ ಪೀಠಿಕೆ ಹಾಕುವವರಿಗೂ ಮತ್ತು ಚರ್ಚೆಯಲ್ಲಿ ಪಾಲ್ಗೊಳ್ಳುವವರಿಗೂ ಪರ ಮತ್ತು ವಿರೋಧಿ ಓದುಗರ ಗುಂಪುಗಳಿವೆ ಎನ್ನುವುದು ಗೊತ್ತಿದೆ. ಓದುಗರ ಈ ಪ್ರತ್ಯೇಕ ಗುಂಪುಗಳಿಂದಾಗಿ ಚಲಾವಣೆಯಲ್ಲಿರುವ ಲೇಖಕರ ಹೆಸರುಗಳ ಜೊತೆಗೆ ಚಲಾವಣೆಯಲ್ಲಿಲ್ಲದ ಹೆಸರುಗಳೂ ಚರ್ಚೆಗೆ ಬರುತ್ತವೆ. ಒಟ್ಟಿನಲ್ಲಿ ಓದುಗರ ನೆನಪುಗಳಲ್ಲಿ ನಾವಿನ್ನೂ ಮನೆಮಾಡಿಕೊಂಡಿದ್ದೆವೆಂದು ಲೇಖಕ ವರ್ಗ ಸಂಭ್ರಮಿಸುತ್ತದೆ. ಆದರೆ ಇಲ್ಲಿ ನಿಜವಾಗಿಯೂ ಹಾನಿಗೊಳಗಾಗುವುದು ಓದುಗರ ಸಮೂಹ. ಅನಂತಮೂರ್ತಿಯವರ 'ಸಂಸ್ಕಾರ'ವನ್ನು ಓದುವ ಓದುಗ ಭೈರಪ್ಪನವರ 'ದಾಟು'ವನ್ನು ಕೂಡ ಓದಬೇಕು. ಇವೆರಡೂ ಕನ್ನಡದ ಕ್ಲಾಸಿಕ್ ಕೃತಿಗಳು ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಇಲ್ಲಿ ಓದುಗ ಮಾಡುತ್ತಿರುವ ತಪ್ಪೆಂದರೆ ಆತ ಅನಂತಮೂರ್ತಿಯವರ ಆರಾಧನೆಯಲ್ಲಿ ಭೈರಪ್ಪನವರ 'ದಾಟು'ವಿನ ಓದಿನಿಂದ ವಂಚಿತನಾಗುತ್ತಿರುವನು. ನಾವು ಸಾಹಿತ್ಯದ ಒಂದು ಪ್ರಕಾರಕ್ಕೆ ಇಲ್ಲವೇ ನಿರ್ಧಿಷ್ಟ ಲೇಖಕರ ಕೃತಿಗಳಿಗೆ ನಮ್ಮ ಓದನ್ನು ಸೀಮಿತಗೊಳಿಸಿಕೊಂಡರೆ ಅತ್ಯುತ್ತಮ ಪುಸ್ತಕಗಳ ಓದಿನಿಂದ ವಂಚಿತರಾಗುತ್ತೇವೆ ಎನ್ನುವ ಅರಿವು ಓದುಗರಿಗಾಗಬೇಕು. ಅಚ್ಚರಿಯ ಸಂಗತಿ ಎಂದರೆ ಹೀಗೆ ಓದುಗರನ್ನು ನಿರ್ಧಿಷ್ಟ ಪುಸ್ತಕಗಳ ಓದಿಗೆ ಸೀಮಿತಗೊಳಿಸುವ ಕೆಲಸವನ್ನು ನಮ್ಮ ಲೇಖಕರೇ ಮಾಡುತ್ತಿರುವರು.

ಓದು ಮತ್ತು ಅನುವಾದಿತ ಕಾದಂಬರಿಗಳು 


                 ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅನುವಾದಿತ ಕಾದಂಬರಿಗಳು ಓದುಗರನ್ನು ಸಮ್ಮೋಹಿನಿಯಂತೆ ಆವರಿಸಿದ್ದ ಸಂದರ್ಭವನ್ನು ಓದುಗನಾಗಿ ನಾನು ಅತಿ ಹತ್ತಿರದಿಂದ ನೋಡಿದ್ದೇನೆ. ಒಂದು ಹಂತದಲ್ಲಿ ಯಂಡಮೂರಿ ವೀರೇಂದ್ರನಾಥ, ಸರಿತಾ ಜ್ಞಾನಾನಂದ, ಮಲ್ಲಾಡಿ ಕೃಷ್ಣಮೂರ್ತಿ ಅವರ ತೆಲುಗು ಕಾದಂಬರಿಗಳು ಕನ್ನಡಕ್ಕೆ ಅನುವಾದಗೊಂಡು ದೊಡ್ಡ ಓದುಗರ ಸಮೂಹ ಅನುವಾದಿತ ಕಾದಂಬರಿಗಳೆಡೆ ವಲಸೆ ಹೋಗುವಂತಾಯಿತು. ರೋಚಕ ಕಥಾವಸ್ತುವನ್ನು ಒಳಗೊಂಡಿರುತ್ತಿದ್ದ ಈ ಕಾದಂಬರಿಗಳನ್ನು ಓದಿದ ನಂತರ ಓದುಗನಿಗೆ ಮಸಾಲೆ ಸಿನಿಮಾವೊಂದನ್ನು ನೋಡಿದ ಅನುಭವವಾಗುತ್ತಿತ್ತು. ಒಂದು ವಯೋಮಾನದ ಓದುಗರನ್ನು ತಮ್ಮತ್ತ ಸೆಳೆಯುವಲ್ಲಿ ಈ ಅನುವಾದಿತ ಕಾದಂಬರಿಗಳು ಯಶಸ್ವಿಯಾದವು. ಆಗೆಲ್ಲ ಈ ಓದುಗರಿಗೆ ಅನುವಾದಿತ ಕಾದಂಬರಿಗಳೆದುರು ಕನ್ನಡ ಕೃತಿಗಳ ಓದು ಸಪ್ಪೆಯಾಗಿ ಕಾಣುತ್ತಿತ್ತು. ಪುಸ್ತಕ ಮಳಿಗೆಗಳ ಹಾಗೂ ಸಾರ್ವಜನಿಕ ಗ್ರಂಥಾಲಯಗಳ ಅಲ್ಮೆರಾಗಳಲ್ಲಿನ ಹೆಚ್ಚಿನ ಜಾಗವನ್ನು ಈ ಪ್ರಕಾರದ ಕಾದಂಬರಿಗಳೇ ಆಕ್ರಮಿಸಿಕೊಂಡಿದ್ದವು. ಆಗೆಲ್ಲ ಸಂಕಷ್ಟಕ್ಕೆ ಸಿಲುಕಿದ್ದು ಕನ್ನಡ ಸಾಹಿತ್ಯ ಕ್ಷೇತ್ರ. ಅನುವಾದಿತ ಕಾದಂಬರಿಗಳ ಓದುಗರನ್ನು ಕನ್ನಡದ ಕೃತಿಗಳತ್ತ ಹೊರಳುವಂತೆ ಮಾಡುವುದು ಸವಾಲಿನ ವಿಷಯವಾಗಿತ್ತು. ಕಾಲಕ್ರಮೇಣ ತೆಲುಗು ಕಾದಂಬರಿಗಳು ಕನ್ನಡಕ್ಕೆ ಅನುವಾದಗೊಳ್ಳುವುದು ಕಡಿಮೆಯಾಯಿತು. ಜೊತೆಗೆ ಯಂಡಮೂರಿ ವೀರೇಂದ್ರನಾಥರಂಥ ಲೇಖಕರೆ ರೋಚಕ ಕಾದಂಬರಿಗಳ ಬರವಣಿಗೆಯಿಂದ ಬೇಸತ್ತು ಬರವಣಿಗೆಯ ಬೇರೆ ಮಾರ್ಗವನ್ನು ಕಂಡುಕೊಂಡರು. ವಿಪರ್ಯಾಸದ ಸಂಗತಿ ಎಂದರೆ ಅಂದಿನ ಅನುವಾದಿತ ಕಾದಂಬರಿಗಳ ಓದುಗರು ಕನ್ನಡ ಸಾಹಿತ್ಯ ಕೃತಿಗಳ ಓದಿಗೆ ಮರಳಿ ಬರಲಿಲ್ಲ. ಕೆಲವರು ಸಿನಿಮಾ ಪ್ರೇಕ್ಷಕರಾಗಿ ಬದಲಾದರೆ ಇನ್ನು ಕೆಲವು ಓದುಗರು ಇವತ್ತಿಗೂ ಸಾರ್ವಜನಿಕ ಗ್ರಂಥಾಲಯಗಳ ಅಲ್ಮೆರಾಗಳಲ್ಲಿ ಯಂಡಮೂರಿ, ಸರಿತಾ, ಮಲ್ಲಾಡಿಯವರ ಅನುವಾದಿತ ಕಾದಂಬರಿಗಳನ್ನು ಹುಡುಕುತ್ತಿರುವರು. ಇಂಥ ಓದುಗರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಎಂದಿಗೂ ಅಪಾಯವೇ ಸರಿ. ಏಕೆಂದರೆ ಈ ಪ್ರಕಾರದ ಓದುಗರ ಪ್ರಭಾವದಿಂದ  ಓದುಗರ ಒಂದು ದೊಡ್ಡ ಸಮೂಹವೇ ಅನುವಾದಿತ ಕಾದಂಬರಿಗಳ ಓದಿಗೆ ವಲಸೆ ಹೋಗಬಹುದು.

ಎಲೆಕ್ಟ್ರಾನಿಕ್ ಮಾಧ್ಯಮದಿಂದ ಹೊರಬನ್ನಿ 


                ಇವತ್ತು ಓದುಗರನ್ನು ಪುಸ್ತಕಗಳಿಂದ ವಿಮುಖರನ್ನಾಗಿಸುವಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮದ ಕೊಡುಗೆ ಅಪಾರವಾಗಿದೆ. ಈ ಮಾಧ್ಯಮ ದಿನದ ೨೪ ಗಂಟೆಗಳ ಕಾಲ ಮನೋರಂಜನೆಯನ್ನು ಕೊಡುತ್ತಿರುವುದರಿಂದ ಒಂದು ಕಾಲದ ಕಥೆ, ಕಾದಂಬರಿಗಳ ಓದುಗರೆಲ್ಲ ಇವತ್ತು ಪ್ರೇಕ್ಷಕರಾಗಿ ಬದಲಾಗಿರುವರು. ಸಿನಿಮಾ, ಧಾರಾವಾಹಿ, ಹಾಡುಗಳು, ನಗೆ ದೃಶ್ಯಗಳು, ರಿಯಾಲಿಟಿ ಶೋ ಗಳನ್ನು ನಿರಂತರವಾಗಿ ಪ್ರಸಾರ ಮಾಡುವುದರ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮ ಓದುಗರಿಂದ ಪುಸ್ತಕ ಓದಿನ ಸಮಯವನ್ನು ಕಸಿದುಕೊಂಡಿದೆ. ಇಂಟರ್ ನೆಟ್ ಪರಿಣಾಮ ಯುವ ಪೀಳಿಗೆಗೆ ಪುಸ್ತಕಗಳ ಓದೆಂದರೆ ಅಪಥ್ಯವಾಗಿ ಪರಿಣಮಿಸಿದೆ. ಇನ್ನು ಕೆಲವು  ಯುವ ಪೀಳಿಗೆಗೆ ತ್ರೀ ಇಡಿಯಟ್ಸ್, ಹಾಫ್ ಗರ್ಲ್ ಫ್ರೆಂಡ್ ನಂಥ ಮನರಂಜನಾ ಸರಕಿನ ಪುಸ್ತಕಗಳ ಓದಿನಲ್ಲಿರುವಷ್ಟು ಆಸಕ್ತಿ ಗಂಭೀರ ಪುಸ್ತಕಗಳ ಓದಿನಲ್ಲಿಲ್ಲ.  ಓದನ್ನು ಗಂಭೀರವಾಗಿ ಪರಿಗಣಿಸಿರುವ ಓದುಗರು ಮಾತ್ರ ಪುಸ್ತಕ ಪ್ರಕಾಶಕರಿಗೆ ಆಧಾರವಾಗಿರುವರು. ಚಿಂತಿಸಬೇಕಾದ ಸಂಗತಿ ಎಂದರೆ ಎಲೆಕ್ಟ್ರಾನಿಕ್ ಮಾಧ್ಯಮ ನಿರಂತರ ಸುದ್ಧಿ ವಾಹಿನಿಗಳ ಮೂಲಕ ಇಂಥ ಗಂಭೀರ ಓದುಗರನ್ನೂ ತನ್ನತ್ತ ಸೆಳೆಯುವ ಕೆಲಸ ಮಾಡುತ್ತಿದೆ.

ಮಕ್ಕಳನ್ನು ಓದುಗರನ್ನಾಗಿಸಿ 


                       ಕನ್ನಡದಲ್ಲಿ ಮುಂದೊಂದು ದಿನ ಓದುಗರ ಕೊರತೆ ಎದುರಾಗಬಹುದು ಎನ್ನುವ ಆತಂಕವನ್ನು ಹಿರಿಯ ಸಾಹಿತಿ ಭೈರಪ್ಪನವರು ವ್ಯಕ್ತಪಡಿಸಿರುವರು. ನಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಕೊಡಿಸುತ್ತಿರುವುದರಿಂದ ಮುಂದಿನ ಹದಿನೈದಿಪ್ಪತ್ತು ವರ್ಷಗಳ ನಂತರ ಕನ್ನಡದಲ್ಲಿ ಓದುಗರ ಕೊರತೆ ಕಾಣಿಸಿಕೊಳ್ಳಬಹುದೆನ್ನುವ ವಿಚಾರವನ್ನು ಅವರು ಮುಂದಿಡುತ್ತಾರೆ. ನಿಜಕ್ಕೂ ಇದು ನಾವುಗಳೆಲ್ಲ ಆತಂಕ ಪಡಬೇಕಾದ ಸಂಗತಿ. ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಬದುಕನ್ನು ರೂಪಿಸುತ್ತದೆ ಎನ್ನುವ ಭಾವನೆ ದಟ್ಟವಾಗುತ್ತಿರುವ ಈ ಘಳಿಗೆ ಬಹುಪಾಲು  ಮಕ್ಕಳು ಇಂಗ್ಲಿಷ್ ಶಿಕ್ಷಣಕ್ಕೆ ವಲಸೆ ಹೋಗುತ್ತಿರುವರು. ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಉದ್ದಿಮೆಯಾಗಿ ಬೆಳೆಯುತ್ತಿರುವುದರಿಂದ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. ಮುಂದೊಂದು ದಿನ ಕನ್ನಡ ಶಾಲೆಗಳೆಲ್ಲ ಶಾಶ್ವತವಾಗಿ ಮುಚ್ಚಿ ಹೋಗಬಹುದು. ಕನ್ನಡ ಶಾಲೆಗಳು ಮುಚ್ಚಿ ಹೋಗುತ್ತಿವೆ ಎನ್ನುವ  ಆತಂಕದ ಜೊತೆಗೆ ಕನ್ನಡ ಪುಸ್ತಕಗಳನ್ನು ಓದುವ ಓದುಗರ ಸಂಖ್ಯೆಯೂ ಇದರೊಂದಿಗೆ ಕ್ಷೀಣಿಸಬಹುದೆನ್ನುವ ಆತಂಕ ಎದುರಾಗಿದೆ. ಈಗ ಕನ್ನಡ ಪುಸ್ತಕಗಳ ಓದುಗರ ಮೇಲೆ ತಮ್ಮ ನಂತರದ ಪೀಳಿಗೆಯನ್ನೂ ಓದುಗರನ್ನಾಗಿ ರೂಪಿಸುವ ಮಹತ್ವದ ಜವಾಬ್ದಾರಿ ಇದೆ. ಹಾಗೆಂದ ಮಾತ್ರಕ್ಕೆ ಇಂಗ್ಲಿಷ್ ಮಾಧ್ಯಮದ ಶಿಕ್ಷಣದಿಂದ ಮಕ್ಕಳನ್ನು ದೂರವಾಗಿಸಬೇಕೆ? ಎನ್ನುವ  ಪ್ರಶ್ನೆ ಇಲ್ಲಿ ಉದ್ಭವವಾಗದು. ಮಕ್ಕಳನ್ನು ಜಾಗತೀಕರಣಕ್ಕೆ ಮುಖಮಾಡಿ ನಿಲ್ಲಿಸಬೇಕಾದ ಅಗತ್ಯ ಎದುರಾಗಿರುವುದರಿಂದ ಇಂಗ್ಲಿಷ್ ಮಾಧ್ಯಮದ ಆಯ್ಕೆ ಅನಿವಾರ್ಯವಾಗುತ್ತಿದೆ. ನಾವು ಇಲ್ಲಿ ಮಾಡಬೇಕಾದದ್ದಿಷ್ಟೇ ನಮ್ಮ ಮಕ್ಕಳಲ್ಲಿ  ಕನ್ನಡವನ್ನು ಹೃದಯದ ಭಾಷೆಯನ್ನಾಗಿಸಿ ಅವರನ್ನು ಕನ್ನಡ ಸಾಹಿತ್ಯ ಕೃತಿಗಳ ಓದುಗರನ್ನಾಗಿಸುವುದು.

 ಪುಸ್ತಕ ಓದಿದ್ದಕ್ಕೆ ಪುಸ್ತಕವೇ ಸಾಕ್ಷಿ 

              ಸಾಮಾನ್ಯವಾಗಿ ಪುಸ್ತಕಗಳನ್ನು ಕೊಳ್ಳುವವರಲ್ಲಿ ಮೂರು ಬಗೆ. ಮೊದಲ ಬಗೆಯವರು ಕಣ್ಣಿಗೆ ಚೆಂದ ಕಾಣುವ ದಪ್ಪ ದಪ್ಪ ಪುಸ್ತಕಗಳನ್ನು ಕೊಂಡು ತಮ್ಮ ಮನೆಯ ದಿವಾನ ಖಾನೆಯನ್ನು ಸಿಂಗರಿಸುವರು. ಎರಡನೆಯ ಬಗೆಯವರು ತುಂಬ ಪುಸ್ತಕಗಳನ್ನು ಖರಿದಿಸಿಟ್ಟುಕೊಂಡಿದ್ದರೂ ಕೆಲವನ್ನು ಮಾತ್ರ ಓದಿ ಹಾಗೆ ಓದಿದ್ದನ್ನೂ ಹಾಳಾಗದಂತೆ ಇಟ್ಟುಕೊಳ್ಳುವವರು. ಮೂರನೆಯ ಬಗೆಯವರಲ್ಲಿ ಕೆಲವೇ ಕೆಲವೋ ಲೆಕ್ಕವಿಲ್ಲದಷ್ಟೋ ಪುಸ್ತಕಗಳಿರಬಹುದು. ಆ ಪುಸ್ತಕಗಳ ರಟ್ಟು ಕಿತ್ತು ಹೋಗಿರಬಹುದು, ಅವುಗಳ ಪುಟಗಳು ನಾಯಿ ಕಿವಿಗಳಾಗಿರಬಹುದು, ಹೊಲಿಗೆಯೋ ಅಂಟು ಬಿಚ್ಚಿಕೊಂಡು ಕೆಲವು ಹಾಳೆಗಳೇ ಸಡಿಲವಾಗಿರಬಹುದು. ಅವು ಮತ್ತೆ ಮತ್ತೆ ಓದಿಸಿಕೊಂಡು ತಮ್ಮ ಸುಸ್ವರೂಪ ಕಳೆದುಕೊಂಡ ಪುಸ್ತಕಗಳು, ಅಂಥ ಪುಸ್ತಕಗಳ ಮಾರ್ಜಿನ್ನಿನ ತುಂಬ ಪೆನ್ಸಿಲಿನಲ್ಲೋ ಪೆನ್ನಿನಲ್ಲೋ ಗೀಚಿರುವ ಬರಹಗಳಿದ್ದರೆ ಆಶ್ಚರ್ಯವಿಲ್ಲ. 

('ಪ್ರಜಾವಾಣಿ' ಯಲ್ಲಿ ಪ್ರಕಟವಾದ ಎಸ್. ದಿವಾಕರ ಅವರ ಲೇಖನದಿಂದ)


ಕೊನೆಯ ಮಾತು 


           ಓದುಗ ಪೂರ್ವಾಗ್ರಹ ಪೀಡಿತ ಮನೋಭಾವದಿಂದ ಹೊರಬರದೇ ಇದ್ದಲ್ಲಿ ಆತ ಹೆಚ್ಚಿನದನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನುವುದನ್ನು ನನ್ನದೇ ಅನುಭವದಲ್ಲಿ ಹೇಳುವುದಾದರೆ ನಾನು ರಹಮತ್ ತರಿಕೇರಿ ಅವರನ್ನು ಓದಿದ್ದು ಇತ್ತೀಚಿಗೆ ಮಾತ್ರ. ಅವರ 'ಕತ್ತಿಯಂಚಿನ ದಾರಿ' ಪುಸ್ತಕಕ್ಕೆ ಕೇಂದ್ರ ಅಕಾಡೆಮಿ ಪ್ರಶಸ್ತಿ ಬಂದಾಗ ನಾನು ಆಸಕ್ತಿಯಿಂದ ಅದನ್ನು ಓದಲು ಕೈಗೆತ್ತಿಕೊಂಡೆ. ರಹಮತ್ ತರಿಕೇರಿ ಅವರ ಕುರಿತು ಪ್ರಾರಂಭದಲ್ಲಿ ಒಂದಿಷ್ಟು ತಪ್ಪಾಭಿಪ್ರಯಗಳಿದ್ದ  ಕಾರಣ ಮೊದಲ ಓದಿನಲ್ಲಿ 'ಕತ್ತಿಯಂಚಿನ ದಾರಿ' ಅರ್ಥವೇ ಆಗಲಿಲ್ಲ. ನಂತರ ಅಲ್ಲಲ್ಲಿ ಅವರ ಒಂದೆರಡು ಲೇಖನಗಳನ್ನು ಓದಿದ ಮೇಲೆ ತರಿಕೇರಿ ಅವರ ಬರಹದ ಕುರಿತು  ಆಸಕ್ತಿ ಮೂಡಿತು. ಎರಡನೇ ಬಾರಿಗೆ 'ಕತ್ತಿಯಂಚಿನ ದಾರಿ' ಕೈಗೆತ್ತಿಕೊಂಡಾಗ ನಾನು ಕಳೆದುಕೊಂಡಿದ್ದೆನೆಂದು ತಡವಾಗಿಯಾದರೂ ಅರ್ಥವಾಯಿತು. ನಂತರ ಅವರ 'ವಿತಂಡವಾದಿಗಳೊಂದಿಗೆ' ಮತ್ತು 'ಅಮೀರಬಾಯಿ ಕರ್ನಾಟಕಿ' ಪುಸ್ತಕಗಳನ್ನು ಓದಿದ ನಂತರ ರಹಮತ್ ತರಿಕೇರಿ ಅವರ ಬರಹ ಮತ್ತಷ್ಟು ಆಪ್ತವಾಯಿತು.  ತಪ್ಪು ತಿಳುವಳಿಕೆಯಿಂದ ಹೊರಬರದೇ ಇದ್ದಲ್ಲಿ ಲೇಖಕನಿಗಾಗುವಷ್ಟೇ ನಷ್ಟ  ಓದುಗನಿಗೂ ಆಗುತ್ತದೆ ಎನ್ನುವುದನ್ನು ಓದುಗರು ಅರ್ಥ ಮಾಡಿಕೊಳ್ಳಬೇಕಿದೆ.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ