Tuesday, November 20, 2018

ಕಾಲಚಕ್ರ (ಕಥೆ)




         ‘ಓಂ ಕೇಶವಾಯ ಸ್ವಾಹ, ಓಂ ನಾರಾಯಣಾಯ ಸ್ವಾಹ, ಓಂ ಮಾಧವಾಯ ಸ್ವಾಹ, ಓಂ ಗೋವಿಂದಾಯ ನಮ:’ ಎಂದು ಆಚಮನ ಮಾಡಿ  ಹನ್ನೊಂದು ಸಲ ಗಾಯತ್ರಿ ಮಂತ್ರವನ್ನು ಪಠಿಸಿ ಮನೆದೇವರಾದ ವೆಂಕಟರಮಣನಿಗೆ ದೀರ್ಘದಂಡ ಪ್ರಣಾಮ ಸಲ್ಲಿಸಿ ದೇವರ ಕೋಣೆಯಿಂದ ಮಾಧವಶಾಸ್ತ್ರಿಗಳು ಹೊರಬಂದರೆಂದರೆ ಆ ದಿನದ ಮಹತ್ವದ ಕಾರ್ಯವೊಂದು ಪೂರ್ಣಗೊಂಡಂತೆ. ಮಾಧವಶಾಸ್ತ್ರಿಗಳು ದೇವರ ಕೋಣೆಯಿಂದ ಪಡಸಾಲೆಗೆ ಬರುವುದಕ್ಕೂ ಸಾವಿತ್ರಮ್ಮನವರು ಮೊಸರವಲಕ್ಕಿ ಮತ್ತು ತಂಬಿಗೆ ನೀರಿನೊಂದಿಗೆ ಅವರಿಗಾಗಿ ಕಾಯುತ್ತ ನಿಂತಿರುವುದಕ್ಕೂ ಸರಿಹೋಯಿತು. ಹೆಂಡತಿಯ ಕೈಯಿಂದ ತಾಟನ್ನು ತೆಗೆದುಕೊಂಡು ಮೊಸರವಲಕ್ಕಿ ಮೆಲ್ಲುತ್ತಿದ್ದ ಶಾಸ್ತ್ರಿಗಳು ಅದೇನೋ ವಿಚಾರ ಮಾಡುತ್ತ ಕ್ಷಣಕ್ಕೊಮ್ಮೆ ತಲಬಾಗಿಲಿನತ್ತ ನೋಡತೊಡಗಿದರು. ಗಂಡನ ಇವತ್ತಿನ ವರ್ತನೆ ಸಾವಿತ್ರಮ್ಮನವರಿಗೆ ವಿಚಿತ್ರವಾಗಿ ಕಾಣಿಸಿ ‘ಅಷ್ಟೊತ್ಲಿಂದ ನೋಡ್ಲಿಕತ್ತಿನಿ ಘಳಿಗೆಗೊಮ್ಮೆ ತಲಬಾಗಿಲ ಕಡಿ ನೋಡ್ಲಿಕತ್ತಿರಿ. ಯಾರ ದಾರಿ ಕಾಯ್ಲಿಕತ್ತಿರಿ ಅದಾದ್ರೂ ಬಿಡಿಸಿ ಹೇಳ್ರಿ’ ಎಂದ ಹೆಂಡತಿ ಮಾತಿಗೆ ಮಾಧವ ಶಾಸ್ತ್ರಿಗಳು ‘ಏನಿಲ್ಲ ಇವತ್ತು ನಸಕಿನ್ಯಾಗ ತ್ವಾಟದ ಹತ್ರ ಕೃಷ್ಣಾಚಾರ್ಯ ಭೇಟಿಯಾಗಿದ್ದ. ನಮ್ಮ ರಾಘುಗ ಒಂದು ಹೆಣ್ಣು ನೋಡ್ಯಾನಂತ. ಬೆಳಿಗ್ಗೆ ಮನಿಗಿ ಹುಡುಗಿ ಜಾತಕ ತರ್ತಿನಿ ಅಂದಿದ್ದ. ಅದಕ್ಕ ಅವನ ದಾರಿ ಕಾಯ್ಲಿಕತ್ತಿನಿ. ಇಷ್ಟರಾಗ ಬಂದ್ರೂ ಬರಬಹುದು. ಸ್ವಲ್ಪ ಚಹಾಕ್ಕ ಇಡು’ ಎಂದುತ್ತರಿಸಿದವರು ತಾಟನ್ನು ಹೆಂಡತಿಯ ಕೈಗೆ ಕೊಟ್ಟು ತಂಬಿಗೆಯನ್ನು ಎತ್ತರಿಸಿ ಅದರೊಳಗಿನ ಇಡೀ ನೀರನ್ನು ಗಂಟಲಿಗೆ ಸುರಿದು ಕೊಂಡರು.
  
      ರಾಘವ ಮಾಧವಶಾಸ್ತ್ರಿಗಳ ಏಕೈಕ ಸಂತಾನ. ಊರಿನ ಶಾಲೆಯಲ್ಲಿ ಹೈಸ್ಕೂಲು ಶಿಕ್ಷಣ ಮುಗಿಸಿದವನು ಮುಂದೆ ಕಾಲೇಜು ಸೇರಲು ಪಟ್ಟಣಕ್ಕೆ ಹೋಗುತ್ತೇನೆಂದು ಹಠ ಹಿಡಿದರೂ ತಮಗಿರುವ ಇಪ್ಪತ್ತು ಎಕರೆ ಹೊಲ ಮತ್ತು ವಂಶಪಾರಂಪರ್ಯವಾಗಿ ಬಂದ ದೇವಸ್ಥಾನದ ಪೂಜೆಯನ್ನು ನೋಡಿಕೊಂಡು ಮನೆಯಲ್ಲೇ ಇರಲಿ ಎಂದು ಶಾಸ್ತ್ರಿಗಳು ಮಗನ ಹಠಕ್ಕೆ ಸೊಪ್ಪು ಹಾಕಿರಲಿಲ್ಲ. ಶಾಸ್ತ್ರಿಗಳ ಮನೆಯಲ್ಲಿ ಶ್ರೀಮಂತಿಕೆಗೇನೂ ಕೊರತೆ ಇರಲಿಲ್ಲ. ದೇವಸ್ಥಾನದ ಆದಾಯವೇ ಸಾಕಷ್ಟಿತ್ತು. ಹೊಲದಿಂದ ಬರುವ ಆದಾಯವೂ ತಕ್ಕಮಟ್ಟಿಗಿತ್ತು. ಪೂರ್ವಿಕರಿಂದ ಬಂದ ಚಿನ್ನ, ಬೆಳ್ಳಿ ಮನೆಯಲ್ಲಿ ಸಮೃದ್ಧವಾಗಿದ್ದು ಮನೆತುಂಬ ಮಕ್ಕಳಿಲ್ಲ ಎನ್ನುವ ಕೊರತೆಯೊಂದು ಬಿಟ್ಟರೆ ಮಾಧವಶಾಸ್ತ್ರಿಗಳ ಬದುಕಿನಲ್ಲಿ ಅಂಥ ಸಮಸ್ಯೆಗಳೇನೂ ಇರಲಿಲ್ಲ. ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡು ತವರು ಮನೆ ಸೇರಿದ ತಂಗಿ ಶಾರದಾ ಅವರಿಗೆಂದೂ ಹೊರೆ ಎನಿಸಿರಲಿಲ್ಲ. ಪೌರೋಹಿತ್ಯದ ಮನೆತನವಾದ್ದರಿಂದ ಮನೆಗೆ ಬಂದುಹೋಗುವವರ ತಿಂಡಿ, ಊಟದ ಆತಿಥ್ಯದಲ್ಲಿ ಶಾರದಾ ಅತ್ತಿಗೆ ಸಾವಿತ್ರಮ್ಮನವರಿಗೆ ನೆರವಾಗುತ್ತ ಶಾಸ್ತ್ರಿಗಳ ಮನೆಯಲ್ಲಿ ತನ್ನ ಅಸ್ತಿತ್ವದ ಅನಿವಾರ್ಯತೆಯನ್ನು ಸಾಬಿತುಪಡಿಸಿದ್ದಳು. ಹೈಸ್ಕೂಲು ಶಿಕ್ಷಣದ ನಂತರ ರಾಘವ ಉಡುಪಿಯ ಮಠದಲ್ಲಿ ಪೌರೋಹಿತ್ಯದ ಎಲ್ಲ ವಿಧಿ ವಿಧಾನಗಳನ್ನು ಕಲಿತು ಬಂದಿದ್ದ. ತಮಗೆ ವಯಸ್ಸಾಗಿದೆ ಎಂದು ಈಗೀಗ ಮಾಧವಶಾಸ್ತ್ರಿಗಳು ದೇವಸ್ಥಾನ, ಮನೆ ಮತ್ತು ಹೊಲದ ಜವಾಬ್ದಾರಿಗಳನ್ನೆಲ್ಲ ಮಗ ರಾಘವನಿಗೆ ವಹಿಸಿಕೊಟ್ಟು ರಾಮಾಯಣ, ಮಾಹಾಭಾರತಗಳನ್ನು ಓದುತ್ತ ಕಾಲ ಕಳೆಯುತ್ತಿದ್ದರು. 

       ಕೃಷ್ಣಾಚಾರ್ಯರು ಎದುಸಿರು ಬಿಡುತ್ತ ಬಂದವರೆ ಮಾಧವ ಶಾಸ್ತ್ರಿಗಳು ಕುಳಿತಿದ್ದ ಎದುರಿನ ಕುರ್ಚಿಯಲ್ಲಿ ಕೂಡುತ್ತ ಹೆಗಲ ಮೇಲಿನ ಪಂಚೆಯಿಂದ ಎದೆ ಮತ್ತು ಕಂಕುಳಲ್ಲಿನ ಬೇವರನ್ನು ಒರೆಸಿಕೊಂಡು ‘ಶಾಸ್ತ್ರಿಗಳೆ ಒಂದು ತಂಬಿಗೆ ತಣ್ಣನೆ ನೀರು ಹೊಟ್ಟೆ ಸೇರಿದರ ಜೀವ ತಂಪಾಗ್ತದ ನೋಡಿ’ ಎಂದು ಮಾಧವ ಶಾಸ್ತ್ರಿಗಳ ಮುಖ ನೋಡಿದರು. ‘ಅದಕ್ಕೆನಂತೆ ಬರೀ ನೀರೇನು ಮೊಸರವಲಕ್ಕಿನೆ ತಿನ್ನುವಿಯಂತೆ’ ಎಂದು ‘ಏ ಇವಳೇ ಕೃಷ್ಣಾಚಾರ್ಯಗ ಗಟ್ಟಿ ಮೊಸರಲ್ಲಿ ನೆನಸಿದ ಅವಲಕ್ಕಿ ತೊಗೊಂಡು ಬಾ’ ತಮ್ಮ ಹೆಂಡತಿಯನ್ನು ಕೂಗಿ ಕರೆದವರು ಆಚಾರ್ಯರು ಹೇಳಲಿದ್ದ ಸುದ್ದಿಗಾಗಿ ಕಾಯತೊಡಗಿದರು. ಮಾಧವಶಾಸ್ತ್ರಿಗಳ ಮನದಿಂಗಿತ ಅರಿತ ಕೃಷ್ಣಾಚಾರ್ಯರು ‘ಮೊದಲು ಅವಲಕ್ಕಿ ಸೇವನೆಯಾಗಲಿ ಬಂದ ವಿಷಯ ನಿಧಾನವಾಗಿ ಮಾತಾಡಿದರಾಯ್ತು ಅದಕ್ಕೇನು ಅವಸರ’ ಎಂದವರೆ ಸಾವಿತ್ರಮ್ಮನವರು ತಂದು ಕೊಟ್ಟ ಮೊಸರವಲಕ್ಕಿ ತಿನ್ನತೊಡಗಿದರು. ಆಚಾರ್ಯರೊಂದಿಗೆ ಮಾಧವಶಾಸ್ತ್ರಿಗಳೂ ಮತ್ತೊಮ್ಮೆ ಚಹ ಕುಡಿದು ಇನ್ನೇನು ವಿಷಯ ಹೇಳೊಣವಾಗಲಿ ಎನ್ನುವಂತೆ ಕೃಷ್ಣಾಚಾರ್ಯರ ಮುಖ ನೋಡಿದರು. ಖಾಲಿಯಾದ ಚಹಾ ಕಪ್ಪುಗಳನ್ನು ಒಯ್ಯಲೆಂದು ಬಂದ ಸಾವಿತ್ರಮ್ಮನವರು ಆಚಾರ್ಯರು ಹೇಳಲಿರುವ ಸುದ್ದಿ ಕೇಳಲು ಕಾತುರರಾಗಿ ಕಪ್ಪುಗಳನ್ನು ಕೈಯಲ್ಲಿ ಹಿಡಿದುಕೊಂಡು ಅಲ್ಲಿಯೇ ನಿಂತರು. ಸಾವಿತ್ರಮ್ಮನವರನ್ನು ನೋಡಿದ ಕೃಷ್ಣಾಚಾರ್ಯರು ‘ಶಾಸ್ತ್ರಿಗಳೇ ನೀವು ಹೇಗೂ ತೋಟಕ್ಕೆ ಹೋಗುವ ವೇಳೆಯಲ್ವೇ ನಾನು ನಿಮ್ಮ ಜೊತೆ ಬರ್ತಿನಿ ಹಾಗೆ ದಾರಿಯಲ್ಲಿ ಮಾತಾಡ್ಕೊಂಡು ಹೋದರಾಯ್ತು’ ಎಂದು ಮಾಧವಶಾಸ್ತ್ರಿಗಳ ಪ್ರತಿಕ್ರಿಯೆಗೂ ಕಾಯದೆ ಎದ್ದು ನಿಂತರು. ಏನೋ ಗಂಭೀರವಾದ ವಿಷಯವೇ ಇರಬಹುದು ಕೃಷ್ಣಾಚಾರ್ಯನಿಗೆ ಇಲ್ಲಿ ಸಾವಿತ್ರಿ ಎದುರು ಹೇಳಲು ಮನಸ್ಸಿಲ್ಲದಿರಬಹುದು ಎಂದರಿತ ಮಾಧವಶಾಸ್ತ್ರಿಗಳು ಹೆಂಡತಿಗೆ ಹೇಳಿ ಪಡಸಾಲೆಯಿಂದ ಅಂಗಳಕ್ಕೆ ಬಂದು ತಲಬಾಗಿಲ ಕಡೆ ನಡೆದರು. ಗಂಡಸರ ವಿಷಯವೇ ಇಷ್ಟು ಮನೆಯವರೊಂದಿಗೂ ಗುಟ್ಟು ಮಾಡ್ತಾರೆ ಎಂದು ಬೇಸರದಿಂದ ಸಾವಿತ್ರಮ್ಮನವರು ಆ ದಿನದ ಅಡುಗೆ ಸಿದ್ಧತೆಗಾಗಿ ಮನೆಯ ಒಳಗಡೆ ಕಾಲಿಟ್ಟರು. 

       ಕೃಷ್ಣಾಚಾರ್ಯರೊಂದಿಗೆ ತೋಟಕ್ಕೆ ಬಂದ ಮಾಧವಶಾಸ್ತ್ರಿಗಳು ಗಂಟೆ ಹನ್ನೆರಡಾದರೂ ಇನ್ನೂ ತೋಟದಲ್ಲೇ ಕುಳಿತಿದ್ದರು. ಕೃಷ್ಣಾಚಾರ್ಯರು ರಾಘವನ ಮದುವೆಗೆ ಸಂಬಂಧಿಸಿದ್ದ ಹೇಳಬೇಕಾಗಿದ್ದ ವಿಷಯವನ್ನು ಕೂಲಂಕುಷವಾಗಿ ಶಾಸ್ತ್ರಿಗಳೊಂದಿಗೆ ಚರ್ಚಿಸಿ ಯಾವುದಕ್ಕೂ ಇನ್ನೆರಡು ದಿನಗಳಲ್ಲಿ ಅಭಿಪ್ರಾಯ ತಿಳಿಸಿರೆಂದು ಹೇಳಿ ಮನೆಗೆ ಹಿಂತಿರುಗಿದ್ದರು. ಆಚಾರ್ಯರು ಹೇಳಿದ ವಿಷಯವನ್ನು ಒಪ್ಪಿಕೊಳ್ಳಲು ಶಾಸ್ತ್ರಿಗಳ ಮನಸ್ಸು ಹಿಂದೇಟು ಹಾಕುತ್ತಿತ್ತು. ಛೇ ಎಂಥ ಕಾಲ ಬಂತು. ಮಗನಿಗೊಂದು ಅನುರೂಪವಾದ ಹೆಣ್ಣು ಹುಡುಕಿ ಮದುವೆ ಮಾಡುವ ಸಾಮರ್ಥ್ಯವೂ ತಮಗಿಲ್ಲವಾಯಿತಲ್ಲ ಎಂದು ಶಾಸ್ತ್ರಿಗಳು ಪರಿತಪಿಸತೊಡಗಿದರು. ಊರಿನಲ್ಲಿ ಮಾತ್ರವಲ್ಲದೆ ಸುತ್ತ ಹತ್ತು ಗ್ರಾಮಗಳಲ್ಲಿ ಮಾಧವಶಾಸ್ತ್ರಿಗಳಿಗೆ ಗೌರವವಿತ್ತು. ಮದುವೆ, ಸೀಮಂತ, ಜಾವಳ, ಸತ್ಯನಾರಾಯಣ ಪೂಜೆಗೆಲ್ಲ ಮಾಧವಶಾಸ್ತ್ರಿಗಳದೇ ಪೌರೋಹಿತ್ಯ. ನೇಮ, ನಿಷ್ಠೆ, ಸಂಪ್ರದಾಯಗಳಿಗೆ ಬದ್ಧರಾಗಿದ್ದ ಮಾಧವಶಾಸ್ತ್ರಿಗಳಿಂದ ಮಾತ್ರ ಪೂಜೆ ಪುನಸ್ಕಾರಗಳು ಸಾಂಗವಾಗಿ ನೇರವೇರುವವೆನ್ನುವ ನಂಬಿಕೆ ಜನರಲ್ಲಿ ಮನೆಮಾಡಿತ್ತು. ಬೇರೆ ಜಾತಿಯವರ ಮನೆಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಪೌರೋಹಿತ್ಯ ವಹಿಸಿದರೂ ಆ ಮನೆಯಲ್ಲಿ ಒಂದು ಹನಿ ನೀರನ್ನೂ ಸೇವಿಸುತ್ತಿರಲಿಲ್ಲ. ಮನೆಗೆ ಬಂದು ಮತ್ತೆ ಸ್ನಾನ ಮಾಡಿ ಮಡಿ ಬಟ್ಟೆ ಉಟ್ಟ ನಂತರವೇ ಊಟ. ಇಷ್ಟೊಂದು ಕರ್ಮಠರಾದ ತಾವು ಮಗನ ಮದುವೆಗಾಗಿ ಕೃಷ್ಣಾಚಾರ್ಯ ಹೇಳಿದಂತೆ ಒಪ್ಪಿದ್ದೇ ಆದರೆ ಊರಿನ ಮತ್ತು ಸುತ್ತಲಿನ ಗ್ರಾಮಗಳ ಜನರ ದೃಷ್ಟಿಯಲ್ಲಿ ತಮ್ಮ ಗೌರವ, ಮರ್ಯಾದೆಯೆಲ್ಲ ಮಣ್ಣು ಪಾಲಾದಂತೆ. ನಾಲ್ಕು ತಲೆಮಾರುಗಳು ಕುಳಿತು ತಿನ್ನುವಷ್ಟು ಆಸ್ತಿಯಿದೆಯಾದರೂ ಮಗನಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಈಗಾಗಲೇ ರಾಘವನಿಗೆ ಮದುವೆ ವಯಸ್ಸು ಮೀರುತ್ತಿದೆ. ಬರುವ ಗಣೇಶ ಚತುರ್ಥಿಗೆ ಅವನಿಗೆ ಮೂವತ್ತೈದು ಮುಗಿದು ಮೂವತ್ತಾರು ಶುರು. ಅವನ ವಯಸ್ಸಿನ ಗೌಡರ ಓಣಿಯ ಶಂಕ್ರೆಗೌಡನಿಗೆ ಈಗಾಗಲೇ ಮದುವೆಯಾಗಿ ನಾಲ್ಕು ಮಕ್ಕಳಿವೆ. ಅವನ ಹಿರಿಯ ಮಗಳು ಹತ್ತನೆ ಕ್ಲಾಸಲ್ಲಿ ಊರಿಗೇ ಮೊದಲನೆಯವಳಾಗಿ ಪಾಸಾದಾಗ ಶಂಕ್ರೆಗೌಡ ಮನೆಗೆ ಬಂದು ಸಿಹಿಹಂಚಿ ಹೋಗಿದ್ದ. ಶಂಕ್ರೆಗೌಡ ಹೋದ ಮೇಲೆ ‘ನೋಡ್ರಿ ರಾಘುಗೂ ಆಗಬೇಕಾದ ವಯಸ್ಸಲ್ಲಿ ಮದ್ವಿ ಆಗಿದ್ದರ ನಮಗೂ ಮೊಮ್ಮಕ್ಕಳಿರುತ್ತಿದ್ದರು’ ಎಂದ ಸಾವಿತ್ರಿಯ ಮಾತನ್ನು ಕೇಳಿಸಿಕೊಂಡ ರಾಘವ ತುಳಿಸಿ ಕಟ್ಟೆಯಲ್ಲಿನ ಮಾರುತಿಗೆ ಮಾಡುತ್ತಿದ್ದ ಪೂಜೆಯನ್ನು ಅರ್ಧಕ್ಕೇ ಬಿಟ್ಟು ಒಳ ಹೋಗಿದ್ದ. ಈ ಬ್ರಾಹ್ಮಣರೆಲ್ಲ ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗಿ ಅಲ್ಲಿಯೇ ನೆಲೆಸುತ್ತಿರುವುದರಿಂದ ಹಳ್ಳಿಗಳಲ್ಲಿನ ಗಂಡುಗಳಿಗೆ ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡಲು ಒಪ್ಪುತ್ತಿಲ್ಲ. ಈ ಕನ್ಯಾಮಣಿಗಳಿಗೆಲ್ಲ ದೊಡ್ಡ ಪಟ್ಟಣಗಳಲ್ಲಿ ಕೆಲಸ ಮಾಡುತ್ತಿರುವ ಸಾಫ್ಟ್ ವೇರ್   ಇಂಜಿನಿಯರುಗಳೇ ಬೇಕು ಮದುವೆಯಾಗಲು. ದೇವಸ್ಥಾನದ ಆದಾಯದ ಆಸೆಯಿಂದ ಮಗನನ್ನು ಮನೆಯಲ್ಲೇ ಉಳಿಸಿಕೊಂಡಿದ್ದು ತಪ್ಪಾಯಿತೇನೋ ಎಂದು ಶಾಸ್ತ್ರಿಗಳ ಮನಸ್ಸು ಒಂದುಕ್ಷಣ ನೋವಿನಿಂದ ಒದ್ದಾಡಿತು. ತಲೆ ಎತ್ತಿ ಆಕಾಶವನ್ನೊಮ್ಮೆ ನೋಡಿದವರಿಗೆ ಹೊಟ್ಟೆ ಚುರುಗುಟ್ಟಿದ ಅನುಭವವಾಗಿ ಪಂಚೆಯನ್ನು ಹೆಗಲ ಮೇಲೆ ಹಾಕಿಕೊಂಡು ಮನೆಯ ದಾರಿ ಹಿಡಿದರು. 

     ಮಾಧವಶಾಸ್ತ್ರಿಗಳು ಮನೆಗೆ ಬಂದಾಗ ಸಾವಿತ್ರಮ್ಮನವರು ಅವರಿಗಾಗಿ ಕಾಯುತ್ತ ಪಡಸಾಲೆಯಲ್ಲಿ ಹೂ ಪೋಣಿಸುತ್ತ  ಕುಳಿತಿದ್ದರು. ಸ್ವಲ್ಪ ದೂರದಲ್ಲಿ ಬತ್ತಿ ಹೊಸೆಯುತ್ತ ದೇವರ ನಾಮವನ್ನು ಪಠಿಸುತ್ತ ಕುಳಿತಿದ್ದ ಶಾರದಾ ಅಣ್ಣನ ಆಗಮನವನ್ನು ಅತ್ತಿಗೆಗೆ ಸೂಚಿಸಲೆಂಬಂತೆ ಕೆಮ್ಮಿ ಮತ್ತೆ ತನ್ನ ಕೆಲಸದಲ್ಲಿ ಮಗ್ನಳಾದಳು. ಪತಿಯ ಮುಖದಲ್ಲಿನ ದುಗುಡವನ್ನು ಗುರುತಿಸಿದ ಸಾವಿತ್ರಮ್ಮನವರು ಮೊದಲು ಊಟ ಮಾಡಲಿ ಆಮೇಲೆ ಕೇಳಿದರಾಯ್ತೆಂದು ಶಾಸ್ತ್ರಿಗಳಿಗೆ ಊಟ ಬಡಿಸಲು ಹೂವಿನ ಬುಟ್ಟಿಯೊಂದಿಗೆ ಅಡುಗೆ ಮನೆ ಪ್ರವೇಶಿಸಿದರು. ತೋಟದಲ್ಲಿ ಕೃಷ್ಣಾಚಾರ್ಯರೊಂದಿಗೆ ಗಹನವಾದ ವಿಷಯವೇ ಚರ್ಚೆಯಾಗಿರಬೇಕೆಂದು ಶಾರದಾ ಕೂಡ ಅಣ್ಣನಿಗೆ ಏನನ್ನು ಕೇಳಲಿಲ್ಲ. ಮಾಧವಶಾಸ್ತ್ರಿಗಳಿಗೆ ಇಡೀ ಮನೆಯಲ್ಲಿ ನೆಲೆಸಿದ ಗಾಢ ಮೌನ ಅಸಹನೀಯವೆನಿಸತೊಡಗಿತು. ಆ ಮೌನವನ್ನು ಹೊಡೆದೊಡಿಸಲೆಂಬಂತೆ ತೊಟ್ಟ ಜುಬ್ಬಾವನ್ನು ಪಡಸಾಲೆಯಲ್ಲಿನ ಗೂಟಕ್ಕೆ ತೂಗು ಹಾಕುತ್ತ  ‘ರಾಘು ಎಲ್ಲಿ ಕಾಣಿಸ್ತಿಲ್ಲ’ ಎಂದು ತಂಗಿ ಶಾರದಾಳನ್ನು ಕೇಳಿ ಅವಳ ಉತ್ತರಕ್ಕಾಗಿ ಕಾಯತೊಡಗಿದರು. ಅಣ್ಣ ಹೀಗೆ ಮನೆಯವರ ಉತ್ತರಕ್ಕಾಗಿ ಕಾಯುವ ಮನೋಭಾವದವನಲ್ಲವಾದ್ದರಿಂದ ಇಂದಿನ ಅಣ್ಣನ ವರ್ತನೆ ಶಾರದಾಳಿಗೆ ಅಚ್ಚರಿಯೆನಿಸಿತು. ‘ದೇವಸ್ಥಾನದ ಪೂಜೆ ಮುಗಿಸಿ ಪಟ್ಟಣಕ್ಕೆ ಹೋಗಿ ಬರ್ತಿನಿ ಎಂದು ಹೇಳಿ ಹೋದ’ ಎಂದವಳ ಮಾತಿನಲ್ಲಿ ಅಣ್ಣನ ಬಗ್ಗೆ ಕಕ್ಕುಲಾತಿಯಿತ್ತು. ಅಣ್ಣ ಮಗನ ಮದುವೆಗಾಗಿ ಪಡುತ್ತಿರುವ ಕಷ್ಟ ಶಾರದಾಳಿಗೆ ಗೊತ್ತಿಲ್ಲದ ವಿಷಯವೇನಲ್ಲ. ಮನೆದೇವರಾದ ವೆಂಕಟೇಶ್ವರನಿಗೆ ಅಣ್ಣನ ಮಗನ ಮದುವೆ ಸಾಂಗವಾಗಿ ನೆರವೇರಿದರೆ ಕುಟುಂಬ ಸಮೇತರಾಗಿ ಬಂದು ದರ್ಶನ ಮಾಡುತ್ತೆವೆಂದು ಶಾರದಾ ಹರಕೆ ಹೊತ್ತಿದ್ದಳು. ‘ವೈನಿ ಈ ಯೆಂಕಪ್ಪಗ ಎಡಕ್ಕೊಂದು ಬಲಕ್ಕೊಂದು ಹೆಂಡ್ತಿರನ್ನ ನಿಲ್ಲಿಸಿಕೊಂಡು ಪೂಜೆ ಮಾಡಿಸಿಕೊಳ್ಳೊದು ಗೊತ್ತದ ಆದರ ನಮ್ಮ ರಾಘಪ್ಪಗೊಂದು ಹೆಣ್ಣು ಹುಡುಕಿ ಕೊಡೊದು ಗೊತ್ತಿಲ್ಲ ನೋಡ್ರಿ’ ಎಂದು ಅತ್ತಿಗೆ ಎದುರು ಅದೆಷ್ಟೋ ಸಲ ಮನೆದೇವರಾದ ವೆಂಕಟೇಶ್ವರನನ್ನು ತರಾಟೆಗೆ ತೆಗೆದುಕೊಂಡಿದ್ದಳು. ಆಗೆಲ್ಲ ಸಾವಿತ್ರಮ್ಮನವರು ‘ಬಿಡ್ತು ಅನ್ನು ಶಾರದಾ ದೇವರಿಗೆ ಹಾಗೆಲ್ಲ ಅಂತಾರೇನು’ ಎಂದು ತಿರುಪತಿ ತಿಮ್ಮಪ್ಪನೆಲ್ಲಿ ಸಿಟ್ಟಾಗಿ ಇದ್ದೊಬ್ಬ ಮಗನ ಮದುವೆಗೆ ವಿಘ್ನ ತರುವನೋ ಎಂದು ಹೆದರಿ ಗಲ್ಲ ಗಲ್ಲ ಬಡಿದುಕೊಳ್ಳುತ್ತಿದ್ದರು.
      ಊಟ ಮಾಡುವಾಗಲಾದರೂ ಗಂಡ ಕೃಷ್ಣಾಚಾರ್ಯರ ಜೊತೆಗೆ ನಡೆದ ಮಾತುಗಳನ್ನು ತಮಗೆ ಮುಟ್ಟಿಸಬಹುದೆಂದು ನಿರೀಕ್ಷಿಸಿದ್ದ ಸಾವಿತ್ರಮ್ಮನವರಿಗೆ ಶಾಸ್ತ್ರಿಗಳು ಮೌನವಾಗಿ ಊಟ ಮಾಡಿ ಕೈತೊಳೆಯಲು ಬಚ್ಚಲು ಮನೆಗೆ ಹೋಗುತ್ತಿರುವುದನ್ನು ನೋಡಿ ನಿರಾಸೆಯಾಯಿತು. ಜೊತೆಗೆ ತನ್ನ ಮಗನ ಮದುವೆಗೆ ಸಂಬಂಧಿಸಿದ ವಿಚಾರವನ್ನು ತಾಯಿಯಾಗಿ ತನಗೆ ತಿಳಿದುಕೊಳ್ಳುವ ಹಕ್ಕಿಲ್ಲವೇನು ಎಂದು ಕೋಪ ಬಂದು ‘ರ್ರೀ ಬೆಳಿಗ್ಗೆಯಿಂದ ನೋಡ್ತಿದ್ದೀನಿ ನನ್ನಿಂದ ಏನನ್ನೋ ಮುಚ್ಚಿಡ್ತಿದ್ದೀರಿ. ಆ ಕಿಷ್ಟಪ್ಪ ಕೂಡ ಅದೇನೋ ಗುಟ್ಟಿನ ವಿಷಯ ಅನ್ನೊಥರ ಮನೆಯಲ್ಲಿ ಮಾತಾಡೊದು ಬ್ಯಾಡ ಅಂತ ತ್ವಾಟಕ್ಕ ಕರೆದುಕೊಂಡು ಹೋದ. ನೀವಾಗಿಯೇ ಹೇಳಬಹುದು ಅಂತ ಕಾಯ್ತಿದ್ದೆ. ತಾಯಿಯಾಗಿ ನನಗ ಅಷ್ಟು ಹಕ್ಕಿಲೇನ್ರಿ’ ಬಚ್ಚಲುಮನೆಯಿಂದ ಕೈತೊಳೆದುಕೊಂಡು ಹೊರಗೆ ಬರುತ್ತಿದ್ದ ಗಂಡನನ್ನು ನಿಲ್ಲಿಸಿ ಕೇಳಿದ ಸಾವಿತ್ರಮ್ಮನವರನ್ನು ಕರುಣೆಯಿಂದ ನೋಡಿದ ಶಾಸ್ತ್ರಿಗಳು ‘ಚಿಂತಿ ಮಾಡೊ ಅಂಥ ವಿಷಯ ಅಲ್ಲ ಸಾವಿತ್ರಿ’ ಎಂದು ಚುಟುಕಾಗಿ ಉತ್ತರಿಸಿ ಮಲಗುವ ಕೋಣೆಯ ಕಡೆ ಹೆಜ್ಜೆ ಹಾಕಿದರು. ಇವರನ್ನು ಈ ಜನ್ಮದಲ್ಲಿ ಅರ್ಥ ಮಾಡಿಕೊಳ್ಳೊಕೆ ಸಾಧ್ಯವಿಲ್ಲವೇನೊ ಎಂದು ಗೊಣಗುತ್ತ ಸಾವಿತ್ರಮ್ಮನವರು ನಾದಿನಿ ಶಾರದಾಳನ್ನು ಊಟಕ್ಕೆ ಕರೆಯಲು ನಡುಮನೆಯಿಂದ ಹೊರಬಂದರು. 

     ಊಟಮಾಡಿ ಘಳಿಗೆ ನಿದ್ದೆ ತೆಗೆದರಾಯ್ತೆಂದು ಮಂಚದ ಮೇಲೆ ಮಲಗಿದ ಶಾಸ್ತ್ರಿಗಳಿಗೆ ನಿದ್ದೆ ಹತ್ತಿರ ಸುಳಿಯದಾಯ್ತು. ಕೃಷ್ಣಾಚಾರ್ಯರು ಹೇಳಿದ ವಿಷಯವೇ ಮನಸ್ಸನ್ನು ಕೊರೆಯುತ್ತಿದ್ದುದ್ದರಿಂದ ಎಂದಿನಂತೆ ಸುಖವಾಗಿ ನಿದ್ದೆ ಮಾಡುವುದು ಅವರಿಂದಾಗಲಿಲ್ಲ. ಬಲವಂತವಾಗಿ ಕಣ್ಣು ಮುಚ್ಚಿದವರಿಗೆ ಶಾರದಾ ಎದುರು ನಿಂತು ‘ಅಣ್ಣಾ ನಾನೇನು ತಪ್ಪ ಮಾಡೀನಿ ಅಂತ ನನ್ನ ಮದುವಿಗಿ ವಿರೋಧ ಮಾಡ್ದಿ’ ಎಂದು ಕೇಳಿದಂತಾಗಿ ಮೈಯೆಲ್ಲ ಬೆವರೊಡೆದು ಹಾಸಿಗೆಯಲ್ಲಿ ಎದ್ದು ಕುಳಿತವರಿಗೆ ಆ ಕೋಣೆಯಲ್ಲಿ ಉಸಿರು ಕಟ್ಟಿದಂತಾಗಿ ಶರೀರ ಕಂಪಿಸಿತು. ಕಣ್ಣನ್ನು ಅಗಲಗೊಳಿಸಿ ನೋಡಿದವರಿಗೆ ಇಡೀ ಕೋಣೆಯಲ್ಲಿ ತಾವೊಬ್ಬರೆ ಇರುವುದು ಅರಿವಿಗೆ ಬಂದು ಇದೆಲ್ಲ ತನ್ನ ಭ್ರಮೆ ಎಂದು ಮನಸ್ಸಿಗೆ ಸಮಾಧಾನ ತಂದುಕೊಂಡರು. ಮೂವತ್ತು ವರ್ಷಗಳ ಹಿಂದೆ ನಡೆದ ಘಟನೆಯೊಂದು ಈಗ ತನ್ನ ಮಗನ ಬದುಕಿನೊಂದಿಗೆ ತಳಕು ಹಾಕಿಕೊಳ್ಳುತ್ತಿರುವುದು ಪೂರ್ವನಿರ್ಧಾರಿತವೇ ಇರಬಹುದೇನೋ ಎಂದು ಶಾಸ್ತ್ರಿಗಳ ಮನಸ್ಸು ಆಲೋಚಿಸತೊಡಗಿತು. ಆ ಸಂದರ್ಭದ ತನ್ನ  ನಿರ್ಣಯವೊಂದು ಹೀಗೆ ಇವತ್ತು ನನ್ನೆದುರೇ ಪ್ರಶ್ನೆಯಾಗಿ ನಿಲ್ಲಬಹುದೆಂದು ಯೋಚಿಸಿರಲಿಲ್ಲ. ಯಾವ ನಿರ್ಧಾರವನ್ನು ಕೈಗೊಳ್ಳಲಿ? ಶಾರದಾಳಿಗೆ ಹೇಗೆ ಮನವರಿಕೆ ಮಾಡಿಸಲಿ? ಅವಳನ್ನು ಎದುರಿಸುವ ಮಾನಸಿಕ ಸ್ಥೈರ್ಯ ತನಗಿದೆಯೇ? ಆಲೋಚಿಸಿದಷ್ಟೂ ವಿಷಯ ಕಗ್ಗಂಟಾಗುತ್ತ ಹೋಗುತ್ತಿತ್ತು. ಕೃಷ್ಣಾಚಾರ್ಯ ಬೇರೆ ಇನ್ನೆರಡು ದಿನಗಳಲ್ಲಿ ನಿರ್ಧಾರ ತಿಳಿಸುವಂತೆ ಹೇಳಿರುವನು. ಯಾವ ನಿರ್ಧಾರಕ್ಕೂ ಬರಲಾಗದೆ ಮಾಧವಶಾಸ್ತ್ರಿಗಳು ಅಶಾಂತಿಯಿಂದ ಹಾಸಿಗೆಯಲ್ಲಿ ನಿದ್ದೆಯಿಲ್ಲದೆ ಅತ್ತಿಂದಿತ್ತ ಮಗ್ಗಲು ಬದಲಾಯಿಸತೊಡಗಿದರು. ಬಾಗಿಲಲ್ಲಿ ನಿಂತು ನೋಡುತ್ತಿದ್ದ ಸಾವಿತ್ರಮ್ಮನವರಿಗೆ ಶಾಸ್ತ್ರಿಗಳು ಯಾವುದೋ ಗಹನವಾದ ಸಮಸ್ಯೆಯಲ್ಲಿ ಸಿಲುಕಿರುವರೆಂಬ ಸಂಗತಿ ಅವರನ್ನು ಚಿಂತೆಗೀಡುಮಾಡಿತು.  

       ರಾತ್ರಿ ಹಸಿವಿಲ್ಲವೆಂದು ಲೋಟ ಹಾಲು ಕುಡಿದು ಮಲಗಿದ ಮಾಧವಶಾಸ್ತ್ರಿಗಳು ‘ರಾಘು ಬಂದನೇನೆ’ ಎಂದು ಮಲಗಿದ್ದಲ್ಲೇ ಸಾವಿತ್ರಮ್ಮನವರನ್ನು ಕೂಗಿ ಕೇಳಿ ಮಗ ಬಂದಿರುವುದನ್ನು ಖಾತ್ರಿಪಡಿಸಿಕೊಂಡು ಮನಸ್ಸಿಗೆ ಸಮಾಧಾನ ತಂದುಕೊಂಡರು. ಮದುವೆಯಾಗಿ ಅವನಿಗೂ ಹೆಂಡತಿ ಮಕ್ಕಳು ಅಂತಿದ್ದರೆ ಹೀಗೆ ಊರೂರು ಅಲೆಯುತ್ತಿರಲಿಲ್ಲ. ಮನೆತುಂಬ ಶ್ರೀಮಂತಿಕೆ ಇದೆ ಆದರೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ ವೆಂಕಪ್ಪ ನೀನೇ ದಾರಿ ತೋರಿಸಬೇಕು ಎಂದು ಹಾಸಿಗೆಯಲ್ಲೇ ಮನೆದೇವರಿಗೆ ಕೈಮುಗಿದರು. ಯೋಚಿಸುತ್ತ ಮಲಗಿದ್ದ ಶಾಸ್ತ್ರಿಗಳ ಮನಸ್ಸು ಮೂವತ್ತು ವರ್ಷಗಳ ಹಿಂದಕ್ಕೆ ಜಾರಿತು. ತಂಗಿ ಶಾರದಾಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿದಾಗ ಆಗಿನ್ನೂ ಆಕೆಗೆ ಹದಿನೆಂಟು ವರ್ಷ ವಯಸ್ಸು. ಅವಳ ದುರಾದೃಷ್ಟಕ್ಕೆ ಮದುವೆಯಾದ ಆರು ತಿಂಗಳಲ್ಲೆ ಗಂಡ ರಸ್ತೆ ಅಪಘಾತದಲ್ಲಿ ಅಸುನೀಗಿದ. ತಂಗಿ ವಿಧವೆಯಾಗಿ ತವರು ಮನೆ ಸೇರಿದಳು. ಅಪ್ಪ ಅಮ್ಮ ಇದೇ ಕೊರಗಿನಲ್ಲಿ ಹಾಸಿಗೆ ಹಿಡಿದವರು ಮುಂದಿನ ಕೆಲವೇ ತಿಂಗಳುಗಳಲ್ಲಿ ಒಬ್ಬರ ಹಿಂದೆ ಒಬ್ಬರಂತೆ ದೇವರ ಪಾದ ಸೇರಿದರು. ಮನೆಯ ಜವಾಬ್ದಾರಿ ಮಾಧವಶಾಸ್ತ್ರಿಗಳ ಹೆಗಲೇರಿತು. ಮನೆಯಲ್ಲಿ ಶ್ರೀಮಂತಿಕೆಗೇನೂ ಕೊರತೆ ಇರಲಿಲ್ಲ. ತಂಗಿ ಶಾರದಾ ಅವರಿಗೆಂದೂ ಭಾರವೆನಿಸಲಿಲ್ಲ. ಬದುಕು ನಿರಾತಂಕವಾಗಿ ಸಾಗುತ್ತಿದ್ದ ಆ ದಿನಗಳಲ್ಲಿ ಮಾಧವಶಾಸ್ತ್ರಿಗಳ ಬದುಕಿನಲ್ಲಿ ಶಾರದಾಳಿಗೆ ಸಂಬಂಧಿಸಿದ ವಿಷಯವೊಂದು ಬಿರುಗಾಳಿಯಾಗಿ ಪ್ರವೇಶಿಸಿ ಅವರ ಮನಸ್ಸಿನ ಶಾಂತಿಯನ್ನೇ ಕದಡಿತು. ಆ ಊರಿಗೆ ಮೇಷ್ಟ್ರಾಗಿ ಬಂದ ಶ್ರೀನಿವಾಸನೆಂಬ ಯುವಕ ವಿಧವೆ ಶಾರದಾಳನ್ನು ತನಗೆ ಮದುವೆ ಮಾಡಿಕೊಡುವಂತೆ ಕೇಳಿದಾಗ ಶಾಸ್ತ್ರಿಗಳು ಭೂಮಿಗಿಳಿದು ಹೋದರು. ಶ್ರೀನಿವಾಸ ತಮ್ಮದೆ ಜಾತಿಯವನಾದರೂ ವಿಧವೆಯನ್ನು ಸುಮಂಗಲಿಯಾಗಿಸುವುದು ತಮ್ಮ ಮನೆತನಕ್ಕೆ ಮಾಡುವ ಅಪಚಾರವೆಂದೇ ಭಾವಿಸಿದ ಮಾಧವಶಾಸ್ತ್ರಿಗಳು ಮದುವೆಗೆ ಸುತಾರಾಂ ಒಪ್ಪಿಗೆ ನೀಡಲಿಲ್ಲ. ಇದನ್ನು ಹೀಗೇ ಮುಂದುವರೆಯಲು ಬಿಟ್ಟರೆ ಊರಲ್ಲಿ ತಮ್ಮ ಮರ್ಯಾದೆ ಮಣ್ಣು ಪಾಲಾದಂತೆ ಎಂದು ಬಗೆದ ಶಾಸ್ತ್ರಿಗಳು ಊರ ಪಟೇಲರ ಶಿಫಾರಸ್ಸಿನಿಂದ ಶ್ರೀನಿವಾಸನನ್ನು ಬೇರೆ ಊರಿಗೆ ಎತ್ತಂಗಡಿ ಮಾಡಿಸಿ ಸಮಾಧಾನದ ನಿಟ್ಟುಸಿರು ಬಿಟ್ಟರು. ಇದೆಲ್ಲ ನಡೆದು ಮೂವತ್ತು ವರ್ಷಗಳೇ ಕಳೆದು ಹೋಗಿವೆ. ಪಾಪ ಶಾರದಾಳಲ್ಲೂ ಮದುವೆಯಾಗಿ ಹೊಸ ಬದುಕನ್ನು ಕಟ್ಟಿಕೊಳ್ಳಬೇಕೆನ್ನುವ ಆಸೆ ಇತ್ತೇನೋ. ಆದರೆ ಆ ಸಂದರ್ಭ ಅವಳ ಮನಸ್ಸಿನ ಭಾವನೆಗಳನ್ನು ತಿಳಿದುಕೊಳ್ಳುವ ಒಂದು ಸಣ್ಣ ಪ್ರಯತ್ನವನ್ನೂ ನಾನು ಮಾಡಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಈಗ ರಾಘವನಿಗೆ ನೋಡಿದ ಹೆಣ್ಣಿನ ವಿಷಯವಾಗಿ ಶಾರದಾಳ ಜೊತೆ ಹೇಗೆ ಮಾತನಾಡಬೇಕು. ಸಾವಿತ್ರಿ ಮತ್ತು ರಾಘವನನ್ನು ಒಪ್ಪಿಸುವುದು ಅಂಥ ಕಷ್ಟದ ಸಂಗತಿಯೇನಲ್ಲ. ಆದರೆ ಮನಸ್ಸು ಹಿಂಜರಿಯುವುದು ಶಾರದಾಳ ವಿಷಯದಲ್ಲಿ ಮಾತ್ರ. ಅವಳೆದುರು ನಾನು ತೀರ ಸಣ್ಣವನಾಗಬಹುದೇನೋ ಎನ್ನುವ ಆತಂಕ ಶಾಸ್ತ್ರಿಗಳ ನಿದ್ದೆಯನ್ನು ದೂರ ಮಾಡಿತು. ನಾಳೆ ಕೃಷ್ಣಾಚಾರ್ಯನಿಗೆ ಈ ಸಂಬಂಧ ಬೇಡ ಎಂದರಾಯ್ತು ಎನ್ನುವ ನಿರ್ಧಾರ ಅವರಲ್ಲಿ ಗಟ್ಟಿಯಾಗುತ್ತಿದ್ದಂತೆ ಹೊರಗೆ ಬೆಳಗಾಗುತ್ತಿರುವ ಸಂಕೇತವಾಗಿ ಹಕ್ಕಿಗಳ ಚಿಲಿಪಿಲಿ ನಿನಾದ ಕಿವಿ ತುಂಬಲಾರಂಭಿಸಿತು. 

      ಮಾಧವಶಾಸ್ತ್ರಿಗಳು ಎಂದಿನಂತೆ ಬೆಳೆಗ್ಗೆ ಸಂಧ್ಯಾವಂದನೆ ಪೂಜೆ ಮುಗಿಸಿ ಕೃಷ್ಣಾಚಾರ್ಯರ ಮನೆಗೆ ಹೊರಡುವ ತಯ್ಯಾರಿಯಲ್ಲಿದ್ದವರನ್ನು ‘ಅಣ್ಣ ನಿನ್ನ ಜೊತಿ ಸ್ವಲ್ಪ ಮಾತಾಡ್ಬೇಕಾಗ್ಯಾದ’ ಎಂದ ಶಾರದಾಳ ಧ್ವನಿ ತಡೆಯಿತು. ಏನು ಎನ್ನುವಂತೆ ನೋಡಿದವರನ್ನು ‘ಇಲ್ಲಿ ಬ್ಯಾಡ ಹಿತ್ತಲಕಡಿ ಬಾ’ ಎಂದು ಮುಂದೆ ನಡೆದ ತಂಗಿಯನ್ನು ಅನುಸರಿಸಿ ಹಿತ್ತಲಕಡೆ ಹೆಜ್ಜೆ ಹಾಕಿದರು. ‘ನಸಿಕಿನ್ಯಾಗ ದೇವಸ್ಥಾನದ ಕಸಗೂಡಿಸ್ಲಿಕ್ಕ ಹೋದಾಗ ಕೃಷ್ಣಾಚಾರ್ಯರು ಭೇಟಿಯಾಗಿದ್ರು. ಎಲ್ಲ ವಿಷಯ ನನಗ ಹೇಳ್ಯಾರ. ಸವಣೂರಿನ ನಾರಾಯಣರಾಯರ ಮಗಳು ಮದುವಿ ಆದ ಎರಡ ತಿಂಗಳಿಗೀ ಗಂಡನ್ನ ಕಳ್ಕೊಂಡು ವಿಧವಾ ಆಗ್ಯಾಳಂತ. ನಾರಾಯಣರಾಯರು ಮಗಳಿಗಿ ಮರುಮದ್ವಿ ಮಾಡಲಿಕ್ಕ ತಯ್ಯಾರ ಆದಾರಂತ. ನಮ್ಮ ರಾಘಪ್ಪಗ ಬೇರೆ ಈ ಕಾಲದಾಗ ಹೆಣ್ಣ ಸಿಗ್ತಿಲ್ಲ. ಸುಮ್ನ ಒಪ್ಕೊಂಡು ಬಿಡು. ಶಾರದಾ ಏನಂತಾಳೋ ಅಂದಿಅಂತ. ಮೂವತ್ತು ವರ್ಷದ ಹಿಂದ ವಿಧವಾಗ ಮರುಮದ್ವಿ ಅನ್ನೊದು ಈಗಿನಷ್ಟು ಸರಳ ಆಗಿರಲಿಲ್ಲ. ಅದು ನನ್ನ ಹಣೆಬರಹ ನೀ ಕೊರಗಬ್ಯಾಡ. ನನ್ನ ಮದ್ವಿ ನೀ ವಿರೋಧ ಮಾಡದಾಗ ನನ್ನ ಮನಸ್ಸಿಗೂ ಭಾಳ ಕೆಟ್ಟದನಿಸಿತ್ತು. ಈ ಮನಸಿನ್ಯಾಗೂ ಹುಚ್ಚ ಆಸೆಗಳಿದ್ವು. ಹಾಗಂತ ಸಂಪ್ರದಾಯ, ಪದ್ಧತಿಗಳನ್ನ ಬಿಡೊಕ್ಕ ಆಗ್ತಿತ್ತೇನು. ಈಗ ಕಾಲ ಬದಲಾಗ್ಯಾದ. ಬದಕನ್ಯಾಗ ಸೋತ ಹೆಣ್ಣಿಗಿ ಬಾಳ ಕೊಟ್ಟಾಂಗ ಆಗ್ತದ. ಎಲ್ಲಾ ಒಳ್ಳೆದಾಗ್ತದ ಮದುವಿಗಿ ಒಪ್ಕೊಂಡು ಬಿಡು. ವೈನಿ ಮತ್ತು ರಾಘಪ್ಪನ ಜೋಡಿನೂ ಮಾತಾಡಿ ಒಪ್ಪಿಸಿದ್ದೀನಿ. ಕೃಷ್ಣಾಚಾರ್ಯರಿಗಿ ಹೆಣ್ಣು ನೋಡ್ಲಿಕ್ಕಿ ಬರ್ತಿವಿ ಅಂತ ಭೇಟಿಯಾಗಿ ಹೇಳ್ಬಿಡು’ ಶಾರದಾ ಅಣ್ಣನಿಗೆ ಹೇಳಿ ಅವರ ಉತ್ತರಕ್ಕೂ ಕಾಯದೆ ಹಿತ್ತಲ ಬಾಗಿಲಿಂದ ಅಡುಗೆ ಮನೆಯ ಕಡೆ ಹೆಜ್ಜೆ ಹಾಕಿದಳು. ಬಂಡೆಯಂತೆ ಬಂದೆರಗಿದ ಸಮಸ್ಯೆಯನ್ನು ಶಾರದಾ ಕ್ಷಣ ಮಾತ್ರದಲ್ಲಿ ಬಗೆಹರಿಸಿದ್ದಳು. ಮಾಧವಶಾಸ್ತ್ರಿಗಳು ಕತ್ತೆತ್ತಿ ನೋಡಿದರು.  ದೂರದಲ್ಲಿ ನಡೆದು ಹೋಗುತ್ತಿರುವ ತಂಗಿ ಶಾರದೆ ಕ್ಷಣ ಕ್ಷಣಕ್ಕೂ ಆಕಾಶದೆತ್ತರಕ್ಕೆ ಬೆಳೆಯುತ್ತಿರುವಂತೆಯೂ ತಾವು ಅವಳೆದುರು ತೀರ ಕುಬ್ಜರಾದಂತೆ ಅನ್ನಿಸಿ ಕಣ್ಣಿಗೆ ಕತ್ತಲಾವರಿಸಿ ಆಸರೆಗಾಗಿ ಸುತ್ತಲೂ ನೋಡತೊಡಗಿದರು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 



Friday, November 2, 2018

ಭಾಷೆಯ ಅಸ್ತಿತ್ವದ ವಿವಿಧ ನೆಲೆಗಳು





              ಭಾಷೆಯ ಅಸ್ಮಿತೆಯ ಪ್ರಶ್ನೆ ನಮಗೆ ಎದುರಾಗುತ್ತಲೆ ಇರುತ್ತದೆ. ಭಾಷಾತಜ್ಞರ ಅಧ್ಯಯನಗಳ ಪ್ರಕಾರ ಪ್ರಪಂಚದಲ್ಲಿ ಸಾವಿರಾರು ಭಾಷೆಗಳು ಸಂವಹನದ ಕೊರತೆಯಿಂದ ನಾಶ ಹೊಂದಿವೆ. ಜೊತೆಗೆ ಪ್ರತಿವರ್ಷ ಹಲವಾರು ಭಾಷೆಗಳು ಮರೆಯಾಗುತ್ತಿವೆ. ಕನ್ನಡ ಭಾಷೆಗೆ ಅಂಥದ್ದೊಂದು ಸಮಸ್ಯೆ ಎದುರಾಗುವ ಕಾಲ ಇನ್ನೂ ದೂರವಿದೆ. ಏಕೆಂದರೆ ಕನ್ನಡ ಸಂವಹನದ ಭಾಷೆಯಾಗಿ ಇನ್ನೂ ಚಾಲ್ತಿಯಲ್ಲಿದೆ ಮತ್ತು ರಾಜ್ಯದ ಹಳ್ಳಿಗಳಲ್ಲಿ ಶಿಕ್ಷಣದ ಮಾಧ್ಯಮವಾಗಿ ಬಳಕೆಯಲ್ಲಿದೆ. ಹಾಗೆಂದು ಮೈಮರೆತು ಕೂಡುವಂತಿಲ್ಲ. ಈಗಾಗಲೇ ಒಂದು ತಲೆಮಾರಿನ ಯುವಜನಾಂಗ ಕನ್ನಡ ಭಾಷೆಯೊಂದಿಗಿನ ತಮ್ಮ ಕರುಳು ಸಂಬಂಧವನ್ನು ಕಡಿದುಕೊಂಡಾಗಿದೆ. ಅವರಿಗೆ ಇಂಗ್ಲಿಷ್ ಬದುಕಿನ ಭಾಷೆಯಾಗುವುದರ ಜೊತೆಗೆ ಅದು ಹೃದಯದ ಭಾಷೆಯಾಗಿಯೂ ಮಹತ್ವ ಪಡೆದುಕೊಳ್ಳುತ್ತಿದೆ. ಪ್ರಾಥಮಿಕ ಶಿಕ್ಷಣವನ್ನಾದರೂ ಕನ್ನಡ ಭಾಷೆಯಲ್ಲಿ ಪಡೆದ ನನ್ನ ವಯೋಮಾನದ ನಂತರದ ಪೀಳಿಗೆ ತಮ್ಮ ಮಕ್ಕಳನ್ನು ಕನ್ನಡದ ಪರಿಸರಕ್ಕೆ ಸಂಪೂರ್ಣವಾಗಿ  ಬೆನ್ನು ಮಾಡಿಸಿ ನಿಲ್ಲಿಸಿರುವರು. ಈ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ, ಇಂಗ್ಲಿಷ್ ಪುಸ್ತಕಗಳು, ಇಂಗ್ಲಿಷ್ ವಾತಾವರಣ ಜೊತೆಗೆ ಬದುಕುತ್ತಿರುವುದು ಕೂಡ ಮಹಾನಗರಗಳ ಕನ್ನಡೇತರ ಸಂಸ್ಕೃತಿಯ ಆಧುನಿಕತೆಯೇ  ಮೈವೆತ್ತ ಅಪಾರ್ಟಮೆಂಟ್‍ಗಳಲ್ಲಿ. ಹೀಗಾಗಿ ಇಂದಿನ ಮಕ್ಕಳಿಗೆ ಕನ್ನಡ ಪದಗಳೇ ಕಿವಿಯ ಮೇಲೆ ಬೀಳುತ್ತಿಲ್ಲ. ಇಂಥದ್ದೆ ಪರಿಸ್ಥಿತಿ ಒಂದು ದಶಕದ ಕಾಲ ಮುಂದುವರೆದಲ್ಲಿ ನಗರಗಳಲ್ಲಿ ಕನ್ನಡ ಭಾಷೆಯನ್ನು ಮಾತನಾಡುವವರೇ ವಿರಳರಾಗಬಹುದು. ನಾನು ಇಲ್ಲಿ ಉದ್ದೇಶ ಪೂರ್ವಕವಾಗಿ ನಗರ ಎನ್ನುತ್ತಿದ್ದೇನೆ. ಏಕೆಂದರೆ ಇಂದಿನ ಗ್ರಾಮಗಳೆಲ್ಲ ವೃದ್ಧಾಶ್ರಮಗಳಂತಾಗಿದ್ದು ಅಲ್ಲಿ ಕನ್ನಡದ ಅಸ್ಮಿತೆಯನ್ನು ಹುಡುಕುವ ಅವಶ್ಯಕತೆ ಇಲ್ಲ. ನಾವು ಮಹತ್ವ ನೀಡಬೇಕಿರುವುದು ನಗರ ಪ್ರದೇಶಗಳಿಗೆ ಮಾತ್ರ.  ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಮತ್ತು ಸಾಂಸ್ಕೃತಿಕ ಹಿನ್ನೆಲೆ ಇರುವ ಕನ್ನಡ ಭಾಷೆಯನ್ನು ಕುರಿತು ಹೀಗೆ ಆತಂಕ ವ್ಯಕ್ತಪಡಿಸುತ್ತಿರುವುದು ನಿಜಕ್ಕೂ ತುಂಬ ನೋವಿನ ಸಂಗತಿ. 

ಸಾಹಿತ್ಯ

ಕನ್ನಡದ ಅಸ್ಮಿತೆಯ ಪ್ರಶ್ನೆ ಎದುರಾದಾಗಲೆಲ್ಲ ಸಾಹಿತ್ಯದ ಕುರಿತು ಚರ್ಚೆ ಮುನ್ನೆಲೆಗೆ ಬರುತ್ತದೆ. ಏಕೆಂದರೆ ಭಾಷೆಯ ಅಸ್ತಿತ್ವದ ಪ್ರಧಾನ ನೆಲೆಯಾಗಿ ಮೊದಲು ಕಾಣಿಸುವುದು ನಮಗೆ ಸಾಹಿತ್ಯ. ಕನ್ನಡ ಸಾಹಿತ್ಯದ ಮಟ್ಟಿಗೆ ಅದು ತುಂಬ ಸಶಕ್ತವಾಗಿದೆ ಎನ್ನುವುದು ಹೆಚ್ಚಿನವರ ಅಭಿಪ್ರಾಯ. ಹಾಗೆ ಅವರು ಹೇಳುವುದಕ್ಕೂ ಅನೇಕ ಕಾರಣಗಳಿವೆ. ಪ್ರತಿವರ್ಷ ಲಕ್ಷಾಂತರ ಪುಸ್ತಕಗಳು ಕನ್ನಡ ಭಾಷೆಯಲ್ಲಿ ಪ್ರಕಟವಾಗುತ್ತಿರುವುದು ಆ ಕಾರಣಗಳಲ್ಲೊಂದು. ಕಥೆ, ಕಾವ್ಯ, ನಾಟಕ, ಕಾದಂಬರಿ, ಗದ್ಯಬರಹ ಹೀಗೆ ವಿವಿಧ ಪ್ರಕಾರಗಳಲ್ಲಿ ಪ್ರತಿವರ್ಷ ಕನ್ನಡ ಪುಸ್ತಕಗಳು ಪ್ರಕಟವಾಗುತ್ತಿವೆ. ಪುಸ್ತಕಗಳ ಪ್ರಕಟಣೆಗಾಗಿಯೇ  ಹಲವು ಪ್ರಕಾಶನ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಜೊತೆಗೆ ಬರಹಗಾರರೇ ಪ್ರಕಾಶಕರಾಗಿಯೂ ತಮ್ಮ ತಮ್ಮ ಪುಸ್ತಕಗಳನ್ನು ಪ್ರಕಟಿಸಿಕೊಳ್ಳುತ್ತಿರುವರು. ಮೊನ್ನೆ ಒಬ್ಬರು ಸುಮಾರು ಸಾವಿರದ ಸಂಖ್ಯೆಯಲ್ಲಿ ಆಧುನಿಕ ವಚನಗಳನ್ನು ಬರೆದು ಸ್ವಂತ ಖರ್ಚಿನಲ್ಲಿ ಪುಸ್ತಕ ಪ್ರಕಟಿಸಿ ಗಿನ್ನಿಸ್ ದಾಖಲೆಗೆ ಭಾಜನರಾದರು. ಇನ್ನು ಅಭಿನಂದನಾ ಗ್ರಂಥಗಳಂತೂ ಪ್ರಕಟವಾಗುತ್ತಿರುವುದಕ್ಕೆ ಲೆಕ್ಕವೇ ಇಲ್ಲ. ಹಿಂದೆಲ್ಲ ಮಹಾನ್ ಸಾಧಕರ ಬಗ್ಗೆ ಮಾತ್ರ ಅಭಿನಂದನಾ ಗ್ರಂಥಗಳು ಪ್ರಕಟವಾಗುತ್ತಿದ್ದವು. ಆದರೆ ಇಂದು ಪ್ರತಿಮನೆಗೆ ಒಬ್ಬರ ಅಥವಾ ಇಬ್ಬರ ಅಭಿನಂದನಾ ಗ್ರಂಥಗಳು ಪ್ರಕಟವಾಗುತ್ತಿವೆ. ಒಂದರ್ಥದಲ್ಲಿ ಅಭಿನಂದನಾ ಗ್ರಂಥಗಳ ಪ್ರಕಟಣೆ ಎನ್ನುವುದು ಕೊಡು-ಕೊಳ್ಳುವ ಸಂಸ್ಕೃತಿಯಾಗಿದೆ. 

ಇನ್ನು ಪ್ರಕಟವಾಗುತ್ತಿರುವ ಪುಸ್ತಕಗಳಲ್ಲಿ ಜೊಳ್ಳು ಮತ್ತು ಗಟ್ಟಿಯೆಂದು  ವರ್ಗೀಕರಿಸುವ ಅವಶ್ಯಕತೆಯೂ ಇಲ್ಲವಾಗಿದೆ. ಎಡ, ಬಲ, ದಲಿತ, ಸ್ತ್ರೀ, ಆ ಜಾತಿ, ಈ ಜಾತಿ ಎಂದು ಸಮ್ಮೇಳನಗಳನ್ನು ಸಂಘಟಿಸಿ ಆಯಾ ವರ್ಗಕ್ಕೆ ಸೇರುವ ಲೇಖಕರ ಪುಸ್ತಕಗಳಿಗೆ ಬಹುಮಾನ ನೀಡುವ ಸಂಪ್ರದಾಯ ಇಲ್ಲಿದೆ. ಪರಿಣಾಮವಾಗಿ ಪ್ರಕಟವಾಗುವ ಎಲ್ಲ ಪುಸ್ತಕಗಳೂ ಬಹುಮಾನಕ್ಕೆ ಯೋಗ್ಯವಾದವುಗಳೇ. ತನ್ನ ಪುಸ್ತಕಕ್ಕೆ ಬಹುಮಾನ ಪಡೆದ ಲೇಖಕನ ಮೇಲೆ ಸಮಾಜ ಮತ್ತು ಸಂಸ್ಕೃತಿಯ ಋಣವಿರುವುದರಿಂದ ಆತ ಋಣಮುಕ್ತಿಗಾಗಿ ಮತ್ತಷ್ಟು ಪುಸ್ತಕಗಳ ಬರವಣಿಗೆಗೆ ಕೈಹಾಕುತ್ತಾನೆ. ಪ್ರತಿವರ್ಷ ಸಾವಿರಾರು ಪುಸ್ತಕಗಳು ಪ್ರಕಟವಾಗಿ ಸಾಹಿತ್ಯಲೋಕಕ್ಕೆ ಸೇರುವುದರಿಂದ ಕನ್ನಡ ಸಾಹಿತ್ಯ ಸಂಖ್ಯಾತ್ಮಕವಾಗಿ ವೃದ್ಧಿಸುತ್ತ ಹೋಗುತ್ತದೆ. ಇಷ್ಟೆಲ್ಲ ಬೆಳವಣಿಗೆಗಳ ನಡುವೆಯೂ ಭಾಷೆಯ ಅಸ್ತಿತ್ವದ ಪ್ರಶ್ನೆ ಎದುರಾದಾಗ  ಕನ್ನಡ ಸಾಹಿತ್ಯದ ಸ್ಪಂದನೆ ಪರಿಣಾಮಕಾರಿಯಾಗಿ ಆಗುತ್ತಿಲ್ಲವೇಕೆ? ಎನ್ನುವ ಪ್ರಶ್ನೆ ಕಾಡುತ್ತದೆ. ಈಗ ಆತ್ಮವಿಮರ್ಶೆ ಮಾಡಿಕೊಳ್ಳುವ ಸರದಿ ನಮ್ಮ ಬರಹಗಾರರ ಗುಂಪಿನದು. ಓದುಗರನ್ನು ಹೋಗಿ ಮುಟ್ಟುವ ಮೌಲಿಕ ಸಾಹಿತ್ಯವನ್ನು ನಾವು ಸೃಷ್ಟಿಸುತ್ತಿದ್ದೇವೆಯೇ  ಎನ್ನುವ ವಿಷಯ ಚರ್ಚೆಗೆ ಒಳಗಾಗಬೇಕು. ಎಡ-ಬಲ ಎನ್ನುವ ಪೂರ್ವಾಗ್ರಹಪೀಡಿತ ಮನೋಭಾವದಿಂದ ಹೊರಬಂದು ಪ್ರತಿವರ್ಷ ಪ್ರಕಟವಾಗುತ್ತಿರುವ ಪುಸ್ತಕಗಳಲ್ಲಿ ಎಷ್ಟು ಪುಸ್ತಕಗಳು ಓದಲು ಯೋಗ್ಯವಾಗಿವೆ ಎನ್ನುವುದು ಮೌಲ್ಯಮಾಪನಕ್ಕೆ ಒಳಪಡಬೇಕು. ಓದಿನ ರುಚಿ ಹತ್ತಿಸಿ ಓದುಗರನ್ನು ಕನ್ನಡ ಪುಸ್ತಕಗಳ ಕಡೆ ಕರೆತರುವಂಥ ಪುಸ್ತಕಗಳ ಸಂಖ್ಯೆ ಹೆಚ್ಚಬೇಕು. ಒಟ್ಟಾರೆ ಕನ್ನಡ ಸಾಹಿತ್ಯ ಗುಣಾತ್ಮಕವಾಗಿ ಬೆಳೆಯಬೇಕೇ ವಿನ: ಸಂಖ್ಯಾತ್ಮಕವಾಗಿ ಅಲ್ಲ. 

ಸಿನಿಮಾ

ಸಿನಿಮಾ ಎಂದಾಗ ಸಾಹಿತ್ಯಲೋಕದ ಮಡಿವಂತರು ಮೂಗು ಮುರಿಯುವುದೇ ಹೆಚ್ಚು. ಇದು ಅವರ ತಪ್ಪಲ್ಲ. ಈ ಸಿನಿಮಾ ಮಾಧ್ಯಮ ಕನ್ನಡ ಭಾಷೆಯನ್ನು ದುಡಿಸಿಕೊಳ್ಳುತ್ತಿರುವ ರೀತಿ ಆ ಮಡಿವಂತರಲ್ಲಿ ರೇಜಿಗೆ ಹುಟ್ಟಿಸಿದೆ. ಹಾಗೆಂದು ಸಿನಿಮಾ ಮಾಧ್ಯಮವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವಂತಿಲ್ಲ. ಭಾಷೆಯ ಅವನತಿಗೆ ಕಾರಣವಾಗುವಂತೆ ಭಾಷೆಯ ಉನ್ನತಿಗೂ ಈ ಮಾಧ್ಯಮ ಕಾರಣವಾಗುವಷ್ಟು ಪ್ರಬಲವಾಗಿದೆ. ಭಾಷೆಯ ಉನ್ನತಿ ಎಂದು ನಾನು ಹೇಳುವುದರಲ್ಲಿ ಸತ್ಯಾಂಶವಿದೆ. ಸುಮಾರು ದಶಕಗಳ ಹಿಂದಿನ ಸಿನಿಮಾಗಳನ್ನು ವೀಕ್ಷಿಸುತ್ತಿದ್ದ ಸಿನಿಮಾ ಪ್ರಿಯರಿಗೆ ಈ ಮಾತು ಅರ್ಥವಾಗುತ್ತದೆ. ಅಂದಿನ ಸಿನಿಮಾಗಳಲ್ಲೂ ಹಾಡು, ಹೊಡೆದಾಟಗಳಿದ್ದವು ಆದರೆ ಇಂದಿನ ಸಿನಿಮಾಗಳಲ್ಲಿರುವಷ್ಟು ಅತಿಯಾಗಿರಲಿಲ್ಲ. ಅಂದಿನ ನಿರ್ದೇಶಕರು ಭಾಷೆಯನ್ನು ತಮ್ಮ ಸಿನಿಮಾಗಳಲ್ಲಿ ಅತ್ಯಂತ ಸಶಕ್ತವಾಗಿ ದುಡಿಸಿಕೊಂಡರು. ಭಾಷೆಗೆ ಅಪಚಾರವಾಗದಂತೆ ಸಿನಿಮಾಗಳನ್ನು ರೂಪಿಸಿದರು. ಪ್ರತಿ ಸಿನಿಮಾದಲ್ಲೂ ಕನ್ನಡತನವಿರುತ್ತಿತ್ತು. ನಾಡು-ನುಡಿಯ ಪ್ರೇಮ ಸಿನಿಮಾವೊಂದನ್ನು ನೋಡುತ್ತಿರುವ ಘಳಿಗೆ ಪ್ರೇಕ್ಷಕನ ಅನುಭವಕ್ಕೆ ಬರುತ್ತಿತ್ತು. ಅನೇಕ ಸಾಹಿತ್ಯ ಕೃತಿಗಳು ಸಿನಿಮಾಗಳಾಗಿ ಅಪಾರ ಮನ್ನಣೆಗೆ ಪಾತ್ರವಾದವು. ಕನ್ನಡ ಭಾಷೆಯ ಉಳುವಿಗಾಗಿ ಸಂಘಟಿಸಿದ್ದ ಗೋಕಾಕ್ ಚಳವಳಿಯಲ್ಲಿ ಸಿನಿಮಾ ಮಾಧ್ಯಮದ ಕೊಡುಗೆಯೇ  ಹೆಚ್ಚು. ಅಪಾರ ಅಭಿಮಾನಿ ಬಳಗವನ್ನು ಪಡೆದಿದ್ದ ಸಿನಿಮಾದ ಜನಪ್ರಿಯ ಕಲಾವಿದ ಚಳವಳಿಯ ನೇತೃತ್ವವನ್ನು ವಹಿಸಿದ್ದರಿಂದ ಲಕ್ಷಾಂತರ ಜನ ಸೇರಿದರು. ಭಾಷೆಯ ಅಸ್ಮಿತೆಯ ಪ್ರಶ್ನೆ ಎದುರಾದಾಗ ಸಿನಿಮಾ ಮಾಧ್ಯಮ ಗೋಕಾಕ್ ಚಳವಳಿಯ ಮೂಲಕ ಮೂಗು ಮುರಿಯುವ ಮಡಿವಂತರಿಗೆ ತಕ್ಕ ಉತ್ತರ ನೀಡಿತು. 

ಆದರೆ ಈಗ ಕಾಲ ಬದಲಾಗಿದೆ. ಸಿನಿಮಾ ಮಾಧ್ಯಮ ಎಲ್ಲವನ್ನೂ ಕೂಡಿ ಕಳೆಯುವ ಲೆಕ್ಕದ ಮನೋಭಾವದಿಂದಲೇ ನೋಡುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆಯನ್ನು ವಿಸ್ತರಿಸುವ ಧಾವಂತಕ್ಕೆ ಒಳಗಾಗಿರುವ ಈ ಮಾಧ್ಯಮಕ್ಕೆ ಭಾಷೆ ಗೌಣವಾಗಿ ಕಾಣಿಸುತ್ತದೆ. ಕನ್ನಡದ ಪ್ರೇಕ್ಷಕರನ್ನು ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳ ಪ್ರೇಕ್ಷಕರನ್ನು ತನ್ನತ್ತ ಸೆಳೆಯಬೇಕಾಗಿರುವುದರಿಂದ ಇವತ್ತು ಸಿನಿಮಾಗಳಲ್ಲಿ ಸಂವಹನದ ಭಾಷೆಯಾಗಿ ಇಂಗ್ಲಿಷ್ ಪ್ರಾಬಲ್ಯವನ್ನು ಮೆರೆಯುತ್ತಿದೆ. ಅನ್ಯಭಾಷಾ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಕನ್ನಡವೇ ಗೊತ್ತಿರದ ಕಲಾವಿದರು ಇಲ್ಲಿ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಕಲಾವಿದರೊಂದಿಗೆ ನಿರ್ಮಾಪಕ, ನಿರ್ದೇಶಕರು ಕನ್ನಡ ಸಿನಿಮಾ ಮಾಧ್ಯಮಕ್ಕೆ ವಲಸೆ ಬರುತ್ತಿರುವುದರಿಂದ ಕನ್ನಡತನ ಎನ್ನುವುದು ಇಲ್ಲಿ ಮರೀಚಿಕೆಯಾಗಿದೆ. ಬಂಗಾಳಿ ಮತ್ತು ಮಲೆಯಾಳಿ ಭಾಷೆಗಳಂಥ ಸಣ್ಣ ಮಾರುಕಟ್ಟೆಯ ಸಿನಿಮಾ ಮಾಧ್ಯಮ ಮಾಡುತ್ತಿರುವ ಪ್ರಯೋಗಶೀಲತೆ ಅತಿದೊಡ್ಡ ಮಾರುಕಟ್ಟೆಯನ್ನು ಹೊಂದಿರುವ ಕನ್ನಡ ಸಿನಿಮಾ ಮಾಧ್ಯಮದಲ್ಲಿ ಕಂಡುಬರುತ್ತಿಲ್ಲ. ಇವತ್ತಿಗೂ ಬಂಗಾಳಿ ಮತ್ತು ಮಲೆಯಾಳಿ ಭಾಷೆಗಳ ಸಿನಿಮಾಗಳಲ್ಲಿ ಅವುಗಳ ನೆಲದ ಮತ್ತು ಭಾಷೆಯ ಅಸ್ಮಿತೆ ಇದೆ. ನೆಲದ ಅಸ್ಮಿತೆಯನ್ನಿಟ್ಟುಕೊಂಡೆ ನಿರ್ಮಾಣವಾಗುವ ಈ ಭಾಷೆಗಳ ಸಿನಿಮಾಗಳು ಪ್ರತಿವರ್ಷದ ರಾಷ್ಟ್ರಿಯ ಪ್ರಶಸ್ತಿಗಳಲ್ಲಿ ಸಿಂಹಪಾಲು ಪಡೆಯುತ್ತವೆ. ಆದರೆ ಕನ್ನಡ ಸಿನಿಮಾ ಮಾಧ್ಯಮದಲ್ಲಿ ನೆಲದ ಅಸ್ಮಿತೆಯನ್ನು ಪ್ರತಿನಿಧಿಸುವ ಸಿನಿಮಾಗಳನ್ನು ಕಲಾತ್ಮಕ ಎಂದು ಹಣೆಪಟ್ಟಿ ಕಟ್ಟಿ ಅವುಗಳನ್ನು ನಿರ್ಲಕ್ಷದಿಂದ ನೋಡಲಾಗುತ್ತಿದೆ. 

ಶಿಕ್ಷಣ

ಇಂಗ್ಲಿಷ್‍ನ್ನು ಭಾಷೆಯಾಗಿ ಮಾತ್ರ ಕಲಿಯಬೇಕೆ ವಿನ: ಅದು ಶಿಕ್ಷಣದ ಮಾಧ್ಯಮವಾಗುವುದು ಸಲ್ಲದು ಎಂದು ಅನಂತಮೂರ್ತಿ ಸದಾಕಾಲ ಹೇಳುತ್ತಿದ್ದ ಮಾತಿದು. ನಾವು ಪ್ರಾಥಮಿಕ ಶಿಕ್ಷಣದ ವಿದ್ಯಾರ್ಥಿಗಳಾಗಿದ್ದಾಗ ಆಗೆಲ್ಲ ಇಂಗ್ಲಿಷ್ ಭಾಷೆಯ ಪಠ್ಯವನ್ನು ಸರಳೀಕರಿಸಿದ ಗೈಡ್ ಮಾದರಿಯ ಪುಸ್ತಕಗಳು ಇರುತ್ತಿದ್ದವು. ಈ ಗೈಡ್‍ಗಳಲ್ಲಿ ಇಂಗ್ಲಿಷ್ ಪಠ್ಯದ ಎಲ್ಲ ಪಾಠಗಳ ಕನ್ನಡ ಭಾವಾರ್ಥವಿರುತ್ತಿತ್ತು ಮತ್ತು ಇಡೀ ಪಾಠವನ್ನು ಕನ್ನಡದ ಅಕ್ಷರಗಳಲ್ಲಿ ಕೊಟ್ಟಿರುತ್ತಿದ್ದರು. ಹೀಗಾಗಿ ನಾವೆಲ್ಲ ಇಂಗ್ಲಿಷ್ ಪಾಠವನ್ನು ಕನ್ನಡ ಅಕ್ಷರಗಳ ಮೂಲಕ ಕಲಿಯುತ್ತಿದ್ದೇವು. ಇಂಗ್ಲಿಷ್ ಭಾಷೆಯ ಪ್ರವೇಶಿಕೆ ಕನ್ನಡದ ಮೂಲಕವೇ ಆಗುತ್ತಿತ್ತು. ಕಾಲಾನಂತರದಲ್ಲಿ ಜಾಗತೀಕರಣದ ಪ್ರಭಾವಕ್ಕೆ ಒಳಗಾದ ಪಾಲಕರು ಇಂಗ್ಲಿಷ್ ಭಾಷೆ ಮಾತ್ರ ಬದುಕಿನ ಭಾಷೆ ಎನ್ನುವ ನಿರ್ಣಯಕ್ಕೆ ಬಂದು ತಮ್ಮ ಮಕ್ಕಳಿಗಾಗಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾರಂಭಿಸಿದರು. ಪಾಲಕರ ಈ ಮನೋಭಾವವನ್ನೇ ತಮ್ಮ ಏಳ್ಗೆಗಾಗಿ ಉಪಯೋಗಿಸಿಕೊಂಡ ಖಾಸಗಿ ಶಿಕ್ಷಣ ಸಂಸ್ಥೆಗಳು ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತ ಕನ್ನಡ ಮಾಧ್ಯಮದ ಶಾಲೆಗಳನ್ನು ಅಕ್ಷರಶ: ನಿರ್ಲಕ್ಷಿಸತೊಡಗಿದರು. ಪರಿಣಾಮವಾಗಿ ಇವತ್ತು ಕನ್ನಡ ಮಾಧ್ಯಮದ ಶಿಕ್ಷಣ ಕೇವಲ ಸರ್ಕಾರಿ ಶಾಲೆಗಳಲ್ಲಿ ಮಾತ್ರ ದೊರೆಯುತ್ತಿದೆ ಎನ್ನುವಂಥ ಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಾತ್ಮಕ ಶಿಕ್ಷಣ ಎನ್ನುವ ವಿಷಯವನ್ನು ಮುಂದೆ ಮಾಡಿ ಇವತ್ತು ಉದ್ಯಮದ ರೂಪವನ್ನು ತಳೆದಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಒಡ್ಡುತ್ತಿರುವ ಪ್ರಬಲ ಪೈಪೋಟಿ  ಎದುರು ಸರ್ಕಾರದ ಕನ್ನಡ ಮಾಧ್ಯಮದ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಶಾಶ್ವತವಾಗಿ ಮುಚ್ಚುತ್ತಿವೆ. ದುರಂತದ ವಿಷಯವೆಂದರೆ ಖಾಸಗಿ ಶಾಲೆಗಳ ಇಂಗ್ಲಿಷ್ ಮಾಧ್ಯಮದ ಶಿಕ್ಷಣದಲ್ಲಿ ರಾಜ್ಯದ ಭಾಷೆಯಾದ ಕನ್ನಡವು ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಎಲ್ಲ ವಿಷಯಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಕಲಿಯುತ್ತಿರುವ ಮಗು ಎರಡನೇ ಭಾಷೆಯಾದ ಕನ್ನಡವನ್ನು ಕಾಟಾಚಾರಕ್ಕೆನ್ನುವಂತೆ ಕಲಿಯುತ್ತಿದೆ. ಪರಿಸ್ಥಿತಿ ಹೀಗಿರುವಾಗ ಇನ್ನು ಇಪ್ಪತ್ತು ವರ್ಷಗಳ ನಂತರ ಕನ್ನಡ ಪುಸ್ತಕಗಳನ್ನು ಓದುವವರಾರು ಎನ್ನುವ ಹಿರಿಯ ಲೇಖಕ ಎಸ್.ಎಲ್.ಭೈರಪ್ಪನವರ ಆತಂಕ ಸಹಜವಾಗಿದೆ. 

ರಾಜಕಾರಣ

ರಾಜಕಾರಣದ ಹಿತಾಸಕ್ತಿ ಕೂಡ ನಾಡಿನ ಭಾಷೆಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಸದಾಕಾಲ ಸ್ವಹಿತಾಸಕ್ತಿಯ ನೆಲೆಯಲ್ಲೇ ರಾಜಕೀಯ ಮಾಡುವ ನಮ್ಮ ರಾಜಕಾರಣಿಗಳಿಗೆ ಭಾಷೆಯ ಕುರಿತು ಕಿಂಚಿತ್ ಚಿಂತೆಯೂ ಇಲ್ಲ. ಜೊತೆಗೆ ಅನಕ್ಷರಸ್ಥರು, ರೌಡಿಗಳು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುತ್ತಿರುವುದರಿಂದ ಅಂಥ ರಾಜಕಾರಣಿಗಳಿಂದ ಭಾಷೆಯ ಅಭ್ಯುದಯವನ್ನು ನಿರೀಕ್ಷಿಸುವುದು ಮೂರ್ಖತನವಾಗುತ್ತದೆ. ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಅಕ್ಷರಶ: ನಿಷ್ಕ್ರಿಯಗೊಂಡಿದೆ. ಇವತ್ತು ಭಾಷೆಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳು ನಮ್ಮ ಜನಪ್ರತಿನಿಧಿಗಳೆದುರಿವೆ. ಅವುಗಳಲ್ಲಿ ಗಡಿನಾಡ ಸಮಸ್ಯೆಯೂ ಒಂದು. ಗಡಿನಾಡ ಕರ್ನಾಟಕದಲ್ಲಿ ಮರಾಠಿ, ತೆಲುಗು, ತಮಿಳು ಭಾಷೆಗಳು ಅತ್ಯಂತ ಪ್ರಬಲವಾಗಿವೆ. ಬೀದರ್, ಬೆಳಗಾವಿ, ಕೋಲಾರ, ರಾಯಚೂರು ಜಿಲ್ಲೆಗಳಲ್ಲಿ ಕನ್ನಡಕ್ಕಿಂತ ಅನ್ಯಭಾಷೆಗಳನ್ನೆ ತಮ್ಮ ನೆಲದ ಭಾಷೆಯಂತೆ ಬಳಸುವುದನ್ನು ಕಾಣಬಹುದು. ಇವತ್ತಿಗೂ ಚಿಕ್ಕೊಡಿಯನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸದೆ ಇರುವುದಕ್ಕೆ ಕಾರಣ ಬೆಳಗಾವಿ ಮರಾಠಿಗರ ಪ್ರಾಬಲ್ಯಕ್ಕೆ ಒಳಗಾಗಬಹುದೆನ್ನುವ ಭೀತಿ. ಸದಾಕಾಲ ಪ್ರಾದೇಶಿಕತೆಯ ಹಿತಾಸಕ್ತಿಯ  ನೆಲೆಯಲ್ಲೇ ರಾಜಕಾರಣ ಮಾಡುವ ತಮಿಳು ಮತ್ತು ಮಹಾರಾಷ್ಟ್ರದ ರಾಜಕಾರಣಿಗಳಿಂದ ನಮ್ಮ ರಾಜಕೀಯ ನಾಯಕರು ಕಲಿಯುವುದು ಸಾಕಷ್ಟಿದೆ. ಇತ್ತೀಚಿಗೆ ಸಂದರ್ಶನದಲ್ಲಿ ಹಿರಿಯ ವಿಮರ್ಶಕ ಆಮೂರ ಅವರು ‘ರಾಜಕಾರಣವನ್ನು ಹೊರಗಿಟ್ಟು ಭಾಷೆಯ ಅಭಿವೃದ್ಧಿಯನ್ನು ನಿರೀಕ್ಷಿಸುವುದು ಅಸಾಧ್ಯ. ರಾಜಕಾರಣ ಎನ್ನುವುದು ಅದೊಂದು ಬಹುದೊಡ್ಡ ಶಕ್ತಿಕೇಂದ್ರ. ಆದರೆ ನನ್ನ ವಿರೋಧ ಇರುವುದು ಕೆಟ್ಟ ರಾಜಕಾರಣದ ಕುರಿತು’ ಎಂದ ಮಾತು ರಾಜಕಾರಣದ ಮಹತ್ವಕ್ಕೊಂದು ದೃಷ್ಟಾಂತವಾಗಿದೆ.

ಕನ್ನಡಿಗ ದೊರೆ

ಭಾಷೆ ತನ್ನ ಅಸ್ತಿತ್ವದ ವಿವಿಧ ನೆಲೆಗಳನ್ನು ಕಳೆದುಕೊಳ್ಳುತ್ತಿರುವ ಈ ಘಳಿಗೆ ಕನ್ನಡಕ್ಕೆ ಅದರ ಹಿಂದಿನ ಹಿರಿಮೆಯನ್ನು ತಂದುಕೊಡುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ. ಭಾಷಾಪ್ರೇಮ ಪ್ರತಿಯೊಬ್ಬರ ಮನೆ ಮತ್ತು ಮನಸ್ಸುಗಳಲ್ಲಿ ಬೆಳೆಯಬೇಕು. ನೆಲ ಮತ್ತು ಭಾಷೆಯಿಂದ ದೂರವಾಗಿ ಬದುಕುತ್ತಿರುವ ಘಳಿಗೆ ನಮಗೆ ಕಾಡುವ ಅನಾಥ ಪ್ರಜ್ಞೆ ನಾವು ಕನ್ನಡದ ನೆಲದಲ್ಲೇ ಬದುಕುತ್ತಿರುವಾಗ ಕಾಡುವುದಿಲ್ಲ. ಆಗೆಲ್ಲ ಭಾಷೆಯನ್ನು ನಿರ್ಲಕ್ಷಿಸುತ್ತೇವೆ. ಇದು ಸರಿಯಲ್ಲ. ಜಾಗತೀಕರಣದ ಈ ದಿನಗಳಲ್ಲಿ ಇಂಗ್ಲಿಷ್ ಬದುಕಿನ ಭಾಷೆಯಾಗುತ್ತಿರುವುದರಿಂದ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಅನಿವಾರ್ಯವಾಗುತ್ತಿದೆ. ಸರ್ಕಾರ ಮಕ್ಕಳ ಪ್ರಾಥಮಿಕ ಶಿಕ್ಷಣವನ್ನಾದರೂ ಮಾತೃಭಾಷೆಯಲ್ಲಿ ಕಡ್ಡಾಯಗೊಳಿಸಬೇಕಿತ್ತು. ಆದರೆ ಅಂಥದ್ದೊಂದು ನಿರ್ಧಾರವನ್ನು ತೆಗೆದುಕೊಳ್ಳಲು ಸರ್ಕಾರ ಮನಸ್ಸು ಮಾಡುತ್ತಿಲ್ಲ. ಮಕ್ಕಳ ಶಿಕ್ಷಣದ ಮಾಧ್ಯಮವನ್ನು ಪಾಲಕರ ಆಯ್ಕೆಗೆ  ಬಿಟ್ಟು ಯಾವ ಭಾಷೆಯನ್ನಾದರೂ ಆಯ್ದುಕೊಳ್ಳಲಿ ಎಂದು ಸರ್ಕಾರ ಕೈಕಟ್ಟಿ ಕುಳಿತಿದೆ. ಹೀಗಾಗಿ ಬಹುಸಂಖ್ಯಾತ ಪಾಲಕರು ಇಂಗ್ಲಿಷ್ ಮಾಧ್ಯಮದ ಶಿಕ್ಷಣಕ್ಕೆ ಒತ್ತು ನೀಡುತ್ತಿರುವಾಗ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದ ಶಾಲೆಗಳಿಗೆ ಸೇರಿಸಿ ಎಂದು ಹೇಳುವ ನೈತಿಕ ಹಕ್ಕು ಇವತ್ತು ಯಾರಿಗೂ ಇಲ್ಲ. ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಎಂದು ಕಡ್ಡಾಯಗೊಳಿಸಿದಾಗ ಮಾತ್ರ ಆಗ ಆರ್ಥಿಕ ಸ್ಥಿತಿವಂತರ ಮತ್ತು ದುರ್ಬಲರ ಮಕ್ಕಳು ಕೂಡಿಯೇ  ಕನ್ನಡ ಶಾಲೆಗಳಿಗೆ ಹೋಗುವ ವಾತಾವರಣ ನಿರ್ಮಾಣವಾಗುತ್ತದೆ. ಆದರೆ ಸಧ್ಯದ ಪರಿಸ್ಥಿತಿಯಲ್ಲಿ ಇಂಥ ವಾತಾವರಣ ನಿರ್ಮಾಣವಾಗುವುದು ಕಷ್ಟಸಾಧ್ಯ. ಆದ್ದರಿಂದ ಮಕ್ಕಳನ್ನು ಇಂಗ್ಲಿಷ್ ಶಾಲೆಗಳಿಗೆ ಕಳುಹಿಸಿದರೂ ಪಾಲಕರು ಮನೆಯಲ್ಲಿ ಕನ್ನಡದ ವಾತಾವರಣವನ್ನು ಸೃಷ್ಟಿಸಬೇಕು. ಮಕ್ಕಳಿಗೆ ಕನ್ನಡ ಪುಸ್ತಕಗಳ ಓದಿನಲ್ಲಿ ಆಸಕ್ತಿ ಮೂಡಿಸಬೇಕು. ಕನ್ನಡದಲ್ಲಿ ಮಾತನಾಡುವುದನ್ನು ಕಲಿಸಬೇಕು. ಒಟ್ಟಿನಲ್ಲಿ ಅವರಲ್ಲಿ ಕನ್ನಡತನವನ್ನು ತುಂಬಬೇಕು. 

ಭಾಷೆಯ ಕುರಿತು ತೀರ ಅಂದಾಭಿಮಾನವೂ ಬೇಡ. ನಮ್ಮ ಭಾಷೆಯ ಜೊತೆಗೆ ಅನ್ಯಭಾಷೆಗಳ ಸೊಗಡನ್ನೂ ನಾವು ಅರಿಯುವುದರಿಂದ ಸಾಂಸ್ಕೃತಿಕವಾಗಿ ಬೆಳೆಯಲು ತುಂಬ ನೆರವಾಗುತ್ತದೆ. ಭಾಷೆಯೊಂದು ಸಾಂಸ್ಕೃತಿಕವಾಗಿ ಬೆಳೆಯಬೇಕಾದರೆ ಅದು ಬೇರೆ ಬೇರೆ ಭಾಷೆಗಳಿಂದ ಪಡೆಯುತ್ತ ಬೆಳೆಯಬೇಕಾಗುತ್ತದೆ. ಸಾಹಿತ್ಯಿಕವಾಗಿ ಇದು ತುಂಬ ಮುಖ್ಯವಾದ ಅಗತ್ಯಗಳಲ್ಲೊಂದು.  ಹಾಗೆಂದು ಬೇರೆ ಭಾಷೆಗಳು ಕನ್ನಡದ ಅಸ್ತಿತ್ವವನ್ನೇ ಪ್ರಶ್ನಿಸುವ ಮಟ್ಟಿಗೆ ತಾಳ್ಮೆ ಮತ್ತು ಔದಾರ್ಯ ಮೆರೆಯುವುದು ಸರಿಯಲ್ಲ. ಬೇರೆ ಭಾಷೆ ಮತ್ತು ಸಂಸ್ಕೃತಿಗಳಿಂದ ಪಡೆಯುತ್ತ ನಾವು ಕನ್ನಡವನ್ನು ಬೆಳೆಸಬೇಕು ಮತ್ತು ಉಜ್ವಲಗೊಳಿಸಬೇಕು. ಜೊತೆಗೆ ಕನ್ನಡದ ಸಾಹಿತ್ಯಿಕ ಮಹತ್ವ ಮತ್ತು ಸಾಂಸ್ಕೃತಿಕ ಪರಂಪರೆ ಅನುವಾದದ ರೂಪದಲ್ಲಿ ಅನ್ಯಭಾಷೆಗಳಿಗೂ ವಿಸ್ತರಿಸಬೇಕು. ಕೊಡು-ಕೊಳ್ಳುವ ಸಂಸ್ಕೃತಿಯ ಮೂಲಕ ಕನ್ನಡ ಭಾಷೆ ಶ್ರೀಮಂತಗೊಳ್ಳಬೇಕು. ಒಟ್ಟಾರೆ ಕನ್ನಡ ಭಾಷೆ ನಮ್ಮ ನಮ್ಮ ಹೃದಯದ ಭಾಷೆಯಾಗಿ ತನ್ನ ಅಸ್ತಿತ್ವದ ನೆಲೆಯನ್ನು ವಿಸ್ತರಿಸಿಕೊಳ್ಳುವುದು ಇವತ್ತಿನ ತುರ್ತು ಅಗತ್ಯವಾಗಿದೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Saturday, September 1, 2018

ಜೀವಕ್ಕೊಂದಾಸರೆ (ಕಥೆ)

           ‘ನಾಲ್ಕು ದಿನ ರಜೆಹಾಕಿ ಬೇಗ ಬಂದ್ಬಿಡು ರಾಘವ ಮನೆಯಲ್ಲಿ ಅಪ್ಪನಿಗೆ ಬಹಳ ಸಿರಿಯಸ್. ಬದುಕಿನ ಕೊನೆ ಘಳಿಗೆಯಲ್ಲಿರುವ ಅಪ್ಪನೊಂದಿಗೆ ಒಂದೆರಡು ಮಾತನಾಡಿದ ಸಮಾಧಾನನಾದ್ರೂ ಸಿಕ್ಕುತ್ತೆ’ ಅಣ್ಣ ಫೋನ್  ಮಾಡಿ ವಿಷಯ ತಿಳಿಸಿದಾಗ ಅವನ ಧ್ವನಿಯಲ್ಲಿನ ಆತಂಕ ಗುರುತಿಸಿದೆ. ಮಕ್ಕಳಿಗೆ ಪರೀಕ್ಷೆ ಇದ್ದುದ್ದರಿಂದ ಹೆಂಡತಿ ಮತ್ತು ಮಕ್ಕಳನ್ನು ಬಿಟ್ಟು ಒಬ್ಬನೇ ಊರಿಗೆ ಹೊರಡುವುದೆಂದು ನಿರ್ಧರಿಸಿದೆ. ಕಾಲೇಜಿನಲ್ಲಿ ಪ್ರಿನ್ಸಿಪಾಲರಿಗೆ ಕಾರಣ ವಿವರಿಸಿ ರಜೆ ಮಂಜೂರು ಮಾಡಿಸಿಕೊಳ್ಳಲು ಹೆಚ್ಚಿನ ತೊಂದರೆಯಾಗಲಿಲ್ಲ. ನಾನಿರುವ ನಗರದಿಂದ ಊರಿಗೆ ಏಳೆಂಟು ತಾಸುಗಳ ಪ್ರಯಾಣ. ಅಪ್ಪನಿಗೆ ಸಿರಿಯಸ್ ಎಂದು ಅಣ್ಣ ಹೇಳಿದ್ದರಿಂದ ತಡ ಮಾಡುವಂತಿರಲಿಲ್ಲ. ಹೇಗೂ ರಾತ್ರಿ ಬಸ್ಸಿದೆ ರಾತ್ರಿ ವೇಳೆಯೆ ಹೊರಡುವದೆಂದು ನಿಶ್ಚಯಿಸಿದೆ. ಹೆಂಡತಿಗೆ ಜಾಗ್ರತೆಯೆಂದು ಹೇಳಿ ಮಕ್ಕಳ ಪ್ರಶ್ನೆಗೆ ಊರಲ್ಲಿ ಅಜ್ಜನಿಗೆ ಹುಷಾರಿಲ್ಲವೆಂದು ಉತ್ತರಿಸಿ ಆಟೋ ಹಿಡಿದು ಬಸ್‍ಸ್ಟ್ಯಾಂಡ್ ತಲುಪಿದಾಗ ಗಡಿಯಾರದ ಮುಳ್ಳು ಹತ್ತು ಗಂಟೆ ತೋರಿಸುತ್ತಿತ್ತು. ಊರಿಗೆ ಹೋಗುವ ಬಸ್ ಪ್ಲಾಟ್‍ಫಾರ್ಮ್‍ನಲ್ಲಿ ಆಗಲೇ ಬಂದು ನಿಂತಿತ್ತು. ವಾರದ ಮಧ್ಯದ ದಿನವಾದ್ದರಿಂದ ಬಸ್‍ನಲ್ಲಿ ಅಷ್ಟೊಂದು ಜನಜಂಗುಳಿ ಇರಲಿಲ್ಲ. ಬಸ್ ಹತ್ತಿ ಪರಿಚಿತ ಮುಖಗಳಿಗಾಗಿ ಹುಡುಕಾಡಿದೆ ಒಬ್ಬರೂ ಪರಿಚಿತರಂತೆ ಕಾಣಲಿಲ್ಲ. ಖಾಲಿಯಿದ್ದ ಡ್ರೈವರ್ ಹಿಂದಿನ ಸೀಟಿನಲ್ಲಿ ಹೋಗಿ ಕುಳಿತೆ. ಬಸ್ ಊರು ದಾಟಿ ಹೊರವಲಯ ಪ್ರವೇಶಿಸಿದಾಗ ತೆರೆದ ಕಿಟಕಿಯಿಂದ ನುಗ್ಗಿ ಬಂದ ತಣ್ಣನೆಯ ಗಾಳಿ ಇಡೀ ದಿನದ ಆತಂಕವನ್ನು ಅರೆಕ್ಷಣದ ಮಟ್ಟಿಗಾದರೂ ದೂರವಾಗಿಸಿ ಮನಸ್ಸಿಗೆ ಆಹ್ಲಾದ ನೀಡಿತು. ಕಂಡಕ್ಟರ್ ಪ್ರಯಾಣಿಕರಿಗೆ ಟಿಕೇಟ್ ಕೊಡುವ ತನ್ನ ಕೆಲಸ ಪೂರ್ಣಗೊಳಿಸಿ ಹಿಂದಿನ ಸೀಟಿನಲ್ಲಿ ಹೋಗಿ ಕುಳಿತು ದೀಪ ಆರಿಸುವಂತೆ ಡ್ರೈವರ್‍ಗೆ ಸೂಚಿಸಿದ. ಬಸ್‍ನ ಒಳಗಡೆ ಪೂರ್ಣ ಕತ್ತಲಾವರಿಸಿ ಪ್ರಯಾಣಿಕರು ಕಪ್ಪು ಆಕೃತಿಗಳಂತೆ ಗೋಚರಿಸಲಾರಂಭಿಸಿದರು. ಅದಾಗಲೇ ಕೆಲವರು ನಿದ್ದೆಗೆ ಜಾರಿದ್ದರೆ ಹದಿಹರೆಯದ ಒಂದೆರಡು ಹುಡುಗರು ಇಯರ್ ಫೋನ್  ಕಿವಿಗೆ ಸಿಕ್ಕಿಸಿಕೊಂಡು ಹಾಡು ಕೇಳುವುದರಲ್ಲಿ ತಲ್ಲಿನರಾಗಿದ್ದರು. ಕಿಟಕಿಯ ಹೊರಗೆ ದೃಷ್ಟಿ ಹಾಯಿಸಿದವನಿಗೆ ಕಪ್ಪು ಆಕೃತಿಗಳಂತೆ ಕಾಣುವ ಮರಗಳು ವೇಗವಾಗಿ ಹಿಂದೆ ಹಿಂದೆ ಚಲಿಸುತ್ತಿರುವಂತೆ ಭಾಸವಾಯಿತು. ಗಾಢವಾದ ಕತ್ತಲೆ ಸೃಷ್ಟಿಸಿದ ಆ ನಿಶಬ್ದ ವಾತಾವರಣದಲ್ಲಿ ನನ್ನ ಮನಸ್ಸು ಕೂಡ ಹಿಂದಕ್ಕೆ ಚಲಿಸತೊಡಗಿತು. 

ಅಮ್ಮ ಸಾಯುವಾಗ ಅಪ್ಪನಿಗೆ ಇನ್ನೂ ನಲವತ್ತರ ಹರೆಯ. ಸಾಕಷ್ಟು ಆದಾಯ ತರುವ ಪಿತ್ರಾರ್ಜಿತ ಕೃಷಿ ಭೂಮಿಯ ಕಾರಣ ಬದುಕಿಗೆ ಯಾವ ಕೊರತೆಯೂ ಇರಲಿಲ್ಲ. ಅಣ್ಣ ಹುಟ್ಟಿದ ಐದು ವರ್ಷಕ್ಕೆ ನಾನು ಹುಟ್ಟಿದ್ದು. ಊರು ತೀರ ಕುಗ್ರಾಮವಾಗಿದ್ದ ಕಾರಣ ನಾನು ಮತ್ತು ಅಣ್ಣ ಪಟ್ಟಣದಲ್ಲಿದ್ದ ಸೋದರ ಮಾವನ ಮನೆಯಲ್ಲಿದ್ದು ಶಾಲೆಗೆ ಹೋಗುತ್ತಿದ್ದೇವು. ಆರ್ಥಿಕವಾಗಿ ಸ್ಥಿತಿವಂತನಾಗಿದ್ದ ಅಪ್ಪನಿಗೆ ಊರಲ್ಲಿ ತುಂಬ ಗೌರವವಿತ್ತು. ರಜೆಯ ದಿನಗಳಲ್ಲಿ ಊರಿಗೆ ಬರುತ್ತಿದ್ದ ನನ್ನನ್ನು ಮತ್ತು ಅಣ್ಣನನ್ನು ಕೂಡ ಊರ ಜನ ಗೌರವದಿಂದಲೆ ಕಾಣುತ್ತಿದ್ದರು. ಅಪ್ಪನಿಗೆ ಅಮ್ಮನ ಅನಾರೋಗ್ಯವೇ ತುಂಬ ಆತಂಕಕ್ಕೆ ಕಾರಣವಾಗಿತ್ತು. ಅಮ್ಮನ ಅನಾರೋಗ್ಯ ದಿನದಿಂದ ದಿನಕ್ಕೆ ಅಪ್ಪನನ್ನು ಮಾನಸಿಕವಾಗಿ ಕುಗ್ಗಿಸುತ್ತಿತ್ತು. ಎರಡನೆ ಹೆರಿಗೆಯ ಸಂದರ್ಭ ಹದಗೆಟ್ಟ ಅಮ್ಮನ ಆರೋಗ್ಯ ನಂತರದ ದಿನಗಳಲ್ಲಿ ಬಿಗಡಾಯಿಸುತ್ತಲೇ ಹೋಯಿತು. ಹೀಗಾಗಿ ಅಮ್ಮನಿಗೆ ಮನೆಗೆಲಸ ಮಾಡುವುದಿರಲಿ ಸಣ್ಣ ಪುಟ್ಟ ಕೆಲಸಗಳಿಂದಲೂ ಆಯಾಸವಾಗತೊಡಗಿತು. ಇಂಥ ಕಷ್ಟದ ಸಂದರ್ಭದಲ್ಲಿ ನಮ್ಮ ಕುಟುಂಬಕ್ಕೆ ಆಸರೆಯಾಗಿ ಬಂದವಳು ನೆರಮನೆಯ ಫಾತಿಮಾ. ಸಣ್ಣ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡು ಪುಟ್ಟ ಹೆಣ್ಣುಮಗುವಿನೊಂದಿಗೆ ತವರುಮನೆ ಸೇರಿದ ಫಾತಿಮಾ ಅಮ್ಮನಿಗೆ ಅಂತರಂಗದ ಆಪ್ತ ಗೆಳತಿಯಾಗಿ ತುಂಬ ಹತ್ತಿರವಾದಳು. ನಾನು ಅವಳನ್ನು ಪಾತಿ ಎಂದೇ ಕರೆಯುತ್ತಿದ್ದದ್ದು. ಹೆಣ್ಣುಮಕ್ಕಳಿಲ್ಲದ ಅಮ್ಮನಿಗೆ ಒಂದರ್ಥದಲ್ಲಿ ಫಾತಿಮಾಳ ಮಗಳು ಚಾಂದಬೀ ಚಂದಾಳಾಗಿ ಮಗಳ ಸ್ಥಾನ ತುಂಬಿದಳು. ಈ ಚಾಂದಬೀ ನೋಡಲು ಬೆಳ್ಳಗೆ ದುಂಡು ದುಂಡಾಗಿದ್ದು ನಮ್ಮೆಲ್ಲರ ಕಣ್ಮಣಿಯಾಗಿ ಬೆಳೆಯತೊಡಗಿದಳು. ಮನೆಯಲ್ಲಿ ಅಡುಗೆ ಮಾಡುವುದರಿಂದ ಕಸ ಮುಸುರೆ ಹೀಗೆ ಪ್ರತಿಯೊಂದು ಕೆಲಸದಲ್ಲಿ ಫಾತಿಮಾ ಅಮ್ಮನಿಗೆ ನೆರವಾಗುತ್ತ ಅವರಿಬ್ಬರ ನಡುವೆ ಅಕ್ಕ ತಂಗಿಯರ ಅನ್ಯೋನ್ಯತೆಯ ಭಾವ ದಿನಕಳೆದಂತೆ ಗಟ್ಟಿಯಾಗತೊಡಗಿತು. ನಾವು ಯಾವತ್ತೂ ಫಾತಿಮಾಳನ್ನಾಗಲಿ ಚಾಂದಬೀಯನ್ನಾಗಲಿ ಅನ್ಯಧರ್ಮಿಯರು, ಅನ್ಯ ಜಾತಿಯವರು ಎನ್ನುವ ಭಾವನೆಯಿಂದ ನೋಡಲೇ ಇಲ್ಲ. ರಜಾದಿನಗಳಲ್ಲಿ ಊರಿಗೆ ಹೋಗುತ್ತಿದ್ದ ನನ್ನ ಮತ್ತು ಅಣ್ಣನ ಆರೈಕೆಯಲ್ಲಿ ಫಾತಿಮಾ ಕೂಡ ತನಗಿಲ್ಲದ ಗಂಡು ಸಂತಾನದ ಕೊರಗನ್ನು ಮರೆಯುತ್ತಿದ್ದಳು.

ನಮಗೆ ಅರಿವಿಲ್ಲದಂತೆ ಬದುಕು ಅನೇಕ ಆಕಸ್ಮಿಕಗಳಿಗೆ ತನ್ನನ್ನು ತೆರೆದುಕೊಳ್ಳುತ್ತದೆ. ಬದುಕಿನಲ್ಲಿ ಎಲ್ಲವೂ ನಾವು ಆಶಿಸಿದಂತೆ ನಡೆದರೆ ಮನುಷ್ಯ ತನ್ನ ಮನುಷ್ಯತ್ವವನ್ನೇ ಕಳೆದುಕೊಳ್ಳಬಹುದೇನೋ ಎಂದು ಎಲ್ಲೋ ಓದಿದ ನೆನಪು. ಅಮ್ಮನ ಅನಾರೋಗ್ಯ ಸಹಜವೆಂಬಂತೆ ತಿಳಿದಿದ್ದ ನಮಗೆ ಸಾವು ಅವಳನ್ನು ಇಷ್ಟು ಬೇಗ ಕರೆದೊಯ್ಯುತ್ತದೆನ್ನುವ ಕಲ್ಪನೆಯೇ ಇರಲಿಲ್ಲ. ದೀಪಾವಳಿ ಹಬ್ಬಕ್ಕೆ ಮಕ್ಕಳು ಮನೆಗೆ ಬಂದ ಸಂಭ್ರಮದಲ್ಲಿ ಒಂದಿಷ್ಟು ಹೆಚ್ಚೆ ಆಯಾಸವಾಗುವಂತೆ ಮನೆಗೆಲಸದಲ್ಲಿ ತೊಡಗಿಸಿಕೊಂಡ ಅಮ್ಮ ಹಬ್ಬದ ಮಾರನೆದಿನ ಜ್ವರದಿಂದ ಹಾಸಿಗೆ ಹಿಡಿದು ಪಟ್ಟಣದ ಆಸ್ಪತ್ರೆ ಸೇರಿದವಳು ನಾಲ್ಕು ದಿನಗಳಲ್ಲಿ ಮನೆಗೆ ಮರಳಿದ್ದು ಹೆಣವಾಗಿಯೇ. ಅಮ್ಮನ ಅನುಪಸ್ಥಿತಿಯಲ್ಲಿ ಬದುಕುವುದು ನಮಗೆಲ್ಲ ಅನಿವಾರ್ಯವಾಯಿತು. ಆ ದುರ್ದರ ಘಳಿಗೆ ನಮ್ಮ ಬದುಕಿಗೆ ಆಸರೆಯಾಗಿ ಬಂದವಳು ಇದೇ ಫಾತಿಮಾ. ಅಣ್ಣ ಅಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಊರಿಗೆ ಮರಳಿದವನು ಅಪ್ಪನ ಜವಾಬ್ದಾರಿಯನ್ನು ಹಂಚಿಕೊಂಡ. ನಾನು ಮಾವನ ಮನೆಯಲ್ಲಿದ್ದುಕೊಂಡು ಓದನ್ನು ಮುಂದುವರೆಸಿದೆ. ರಜೆಯ ದಿನಗಳಲ್ಲಿ ಮನೆಗೆ ಹೋದಾಗ ಅಮ್ಮನ ನೆನಪು ಬಂದು ಅಳು ಒತ್ತರಿಸಿ ಬರುತ್ತಿದ್ದ ನನ್ನನ್ನು ಪಾತಿ ತನ್ನ ಮಡಿಲಲ್ಲಿ ಮಲಗಿಸಿಕೊಂಡು ಸಮಾಧಾನ ಮಾಡುತ್ತಿದ್ದಳು. ಚಂದಾಳೊಂದಿಗೆ ನಾನು ಮತ್ತು ಅಣ್ಣ ಪಾತಿಯ ಮಕ್ಕಳಾಗಿ ಬೆಳೆಯತೊಡಗಿದೇವು. ಮನೆಯ ಹೊರಗಿನ ಜವಾಬ್ದಾರಿ ಅಪ್ಪನದಾದರೆ ಮನೆಯ ಒಳಗಿನ ಕೆಲಸದ ಎಲ್ಲ ಜವಾಬ್ದಾರಿ ಪಾತಿಯದಾಯಿತು. ಮನೆ ಕಸಗೂಡಿಸುವುದರಿಂದ ಅಡುಗೆಯವರೆಗೆ ಎಲ್ಲ ಕೆಲಸಗಳಲ್ಲಿ ತೊಡಗಿಸಿಕೊಂಡ ಅವಳು ನಮ್ಮ ಮನೆಯ ಸದಸ್ಯಳೇ ಆದಳು. ಊರಿನ ಜನ ಮತ್ತು ನೆಂಟರಿಷ್ಟರು ತಮ್ಮ ಎಲುಬಿಲ್ಲದ ನಾಲಗೆಯಿಂದ ಕೆಲವು ದಿನ ನಮ್ಮ ಮನೆಯ ಕುರಿತು ಕೊಳಕು ಮಾತುಗಳನ್ನಾಡಿ ಸುಮ್ಮನಾದರು. ಹೆಣ್ಣು ದಿಕ್ಕಲ್ಲದ ಮನೆಗೆ ಆಸರೆಯಾಗಿ ನನಗೆ ಮತ್ತು ಅಣ್ಣನಿಗೆ ತಾಯಿಯ ಪ್ರೀತಿಯನ್ನೆಲ್ಲ ಧಾರೆ ಎರೆದಳು. ಪಾತಿಯ ಮಾತೃತ್ವದ ಆರೈಕೆಯಲ್ಲಿ ಅಮ್ಮನ ನೆನಪು ನನ್ನ ನೆನಪಿನಂಗಳದಿಂದ ಕ್ರಮೇಣ ಮಸುಕಾಗತೊಡಗಿತು.

ಅಮ್ಮನ ಸಾವಿನ ನಾಲ್ಕು ವರ್ಷಗಳ ನಂತರ ನಮ್ಮ ಬದುಕು ಅಂಥದ್ದೊಂದು ದುರ್ದರ ಘಟನೆಗೆ ಮುಖಾಮುಖಿಯಾಗಿ ನಿಲ್ಲುವ ಸಂದರ್ಭ ಎದುರಾಗುತ್ತದೆಂದು ನಾನು ಊಹಿಸಿರಲಿಲ್ಲ. ಕಾಲೇಜು ಸೇರಿದಾಗ ಮಾವನ ಮನೆಯಲ್ಲಿ ಅಭ್ಯಾಸಕ್ಕೆ ತೊಂದರೆ ಎಂದು ಹೊರಗೆ ಗೆಳೆಯರೊಂದಿಗೆ ಬಾಡಿಗೆ ರೂಮಿನಲ್ಲಿದ್ದ ದಿನಗಳವು. ದಿನನಿತ್ಯ ಊರಿನಿಂದ ಪಾತಿ ಅಡುಗೆ ಮಾಡಿ ನನಗೆ ಎರಡು ಹೊತ್ತಿಗಾಗುವಷ್ಟು ಊಟ ಕಳಿಸುತ್ತಿದ್ದಳು. ಬದುಕು ಯಾವ ಆತಂಕಗಳಿಲ್ಲದೆ ನಿರಾತಂಕವಾಗಿ ಸಾಗುತ್ತಿದ್ದ ಆ ದಿನಗಳಲ್ಲಿ ಊಹಿಸದ ರೀತಿಯಲ್ಲಿ ಬದುಕು ತಿರುವು ಪಡೆದುಕೊಂಡಿತು. ಅಂದು ಮಧ್ಯಾಹ್ನ ಕಾಲೇಜಿಗೇ ಬಂದ ಸೋದರ ಮಾವ ಈಗಿಂದೀಗಲೇ ಊರಿಗೆ ಹೋಗುವಂತೆ ಸೂಚಿಸಿದ್ದು ಆ ಸಂದರ್ಭ ಮನಸ್ಸಿನಲ್ಲಿ ಅನೇಕ ಕೆಟ್ಟ ಯೋಚನೆಗಳು ಸುಳಿದು ಮನಸ್ಸು ಆತಂಕಕ್ಕೊಳಗಾಯಿತು. ಅಪ್ಪನ ಆರೋಗ್ಯ ಹೇಗಿದೆ ಅನುಮಾನಿಸುತ್ತಲೇ ಪ್ರಶ್ನಿಸಿದವನನ್ನು ಮಾವ ‘ಊರಿಗೆ ಹೋಗು ಎಲ್ಲ ವಿಷಯ ಗೊತ್ತಾಗುತ್ತೆ’ ಎಂದಷ್ಟೆ ಹೇಳಿ ನನ್ನನ್ನು ಬಸ್‍ಸ್ಟ್ಯಾಂಡ್‍ವರೆಗೆ ಕರೆದುಕೊಂಡು ಬಂದು ಬಸ್ ಹತ್ತಿಸಿದ. ಆತಂಕ ತುಂಬಿದ ಮನಸ್ಸಿನೊಂದಿಗೆ ಮನೆಯ ಒಳಗೆ ಕಾಲಿಟ್ಟವನಿಗೆ ಪಡಸಾಲೆಯಲ್ಲಿ ಕಂಬಕ್ಕೊರಗಿ ಕುಳಿತಿದ್ದ ಅಪ್ಪನನ್ನು ನೋಡುತ್ತಲೇ ನಾನು ಊಹಿಸಿದ ಘಟನೆ ನಡೆದಿಲ್ಲವೆಂದು ಮನಸ್ಸಿಗೆ ಸಮಾಧಾನವಾಯಿತು. ಅಪ್ಪ ತೀರ ಇಳಿದು ಹೋಗಿರುವಂತೆ ಭಾಸವಾಯಿತು. ಒಂದು ಘಳಿಗೆ ನನ್ನನ್ನು ತಲೆ ಎತ್ತಿ ನೋಡಿದ ಅಪ್ಪ ಮತ್ತೆ ತಲೆತಗ್ಗಿಸಿ ಯಾವುದೋ ಗಂಭೀರ ಚಿಂತೆಯಲ್ಲಿ ಮುಳುಗಿದರು. ‘ಅಪ್ಪ ಯಾಕೆ ನನ್ನ ಬರಹೇಳಿದ್ದು’ ನನ್ನ ಪ್ರಶ್ನೆಗೆ ಮೌನವೇ ಅಪ್ಪನ ಪ್ರತಿಕ್ರಿಯೆಯಾಗಿತ್ತು. ಅಡುಗೆಮನೆಯಲ್ಲಿ ಸಪ್ಪಳವಾಗಿ ಪಾತಿ ಇರಬಹುದೆಂದು ಹೋಗಿ ನೋಡಿದವನಿಗೆ ಅಣ್ಣ ಬೆಂದ ಅನ್ನದಿಂದ ಗಂಜಿ ಬಸಿಯುತ್ತಿರುವುದು ಕಾಣಿಸಿ ಅಚ್ಚರಿಯಾಯಿತು. ‘ಅಣ್ಣ ಪಾತಿ ಎಲ್ಲಿ ಕಾಣಿಸ್ತಿಲ್ಲ’ ಎಂದ ನನ್ನ ಮಾತಿಗೆ ‘ರಾಘವ ಮೊದಲು ಕಾಲು ತೊಳೆದು ಬಾ ಊಟ ಮಾಡುವಿಯಂತೆ’ ಎಂದ ಅಣ್ಣನ ಮಾತು ಅದೇಕೋ ಮನೆಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಅನುಮಾನ ಹುಟ್ಟಿಸಿತು. ಕೈ ಕಾಲು ತೊಳೆದು ಬಂದವನು ಬಡಿಸಿಟ್ಟ ಒಂದೇ ತಟ್ಟೆ ನೋಡಿ ಅಚ್ಚರಿಯಿಂದ ‘ಅಪ್ಪ ಮತ್ತು ನೀನು’ ಎಂದವನಿಗೆ ‘ನಂದಾಗಿದೆ ಅಪ್ಪನಿಗೆ ಹಸಿವಿಲ್ವಂತೆ’ ಚುಟುಕಾಗಿ ಉತ್ತರಿಸಿದ ಅಣ್ಣ ನನ್ನ ಪ್ರತಿಕ್ರಿಯೆಗೂ ಕಾಯದೆ ಅಡುಗೆಮನೆಯಿಂದ ಹೊರನಡೆದ. ಊಟಕ್ಕೆ ಕುಳಿತವನಿಗೆ ಅನ್ನ ಗಂಟಲಲ್ಲಿಳಿಯಲಿಲ್ಲ. ಅದೇಕೋ ಅಂದು ಅಮ್ಮನ ನೆನಪು ಒತ್ತಿ ಬಂದು ಹೊಟ್ಟೆಯಲ್ಲಿ ಸಂಕಟವಾಗಿ ಊಟವನ್ನು ಅರ್ಧಕ್ಕೆ ಬಿಟ್ಟು ಕೈತೊಳೆದುಕೊಂಡು ಹೊರಬಂದೆ.

ಅಣ್ಣ ನನ್ನನ್ನು ತೋಟಕ್ಕೆ ಕರೆದುಕೊಂಡು ಹೋಗಿ ಎಲ್ಲವನ್ನು ವಿವರಿಸಿದಾಗಲೇ ನಡೆದ ಘಟನೆಯ ಅರಿವು ನನಗಾಯಿತು. ಅಪ್ಪ ಪಾತಿಯನ್ನು ತಮ್ಮ ಹೆಂಡತಿಯಾಗಿ ಸ್ವೀಕರಿಸಿ ಮನೆಯಲ್ಲೇ ಇಟ್ಟುಕೊಳ್ಳಲು ನಿರ್ಧರಿಸಿದ ಆ ಸಂಗತಿಯನ್ನು ಅರಗಿಸಿಕೊಳ್ಳಲು ನನಗೆ ಕೆಲವು ಕ್ಷಣಗಳೇ ಬೇಕಾದವು. ‘ಊರಿನವರೆಲ್ಲ ಈ ವಿಷಯವಾಗಿ ಮೊದಲೆ ಗುಸು ಗುಸು ಮಾತನಾಡಿಕೊಳ್ಳುತ್ತಿದ್ದರಂತೆ ಆದರೆ ನಾವಿನ್ನೂ ಚಿಕ್ಕವರಾಗಿದ್ದರಿಂದ ನಮಗೆ ಇದು ಹೊಳೆದಿರಲಿಲ್ಲ’ ಎಂದ ಅಣ್ಣನ ಮುಖ ಆತಂಕದಿಂದ ಬಾಡಿ ಹೋಗಿತ್ತು. ಅವಳ ಧರ್ಮದವರೆಲ್ಲ ಕೂಡಿ ಶಿಕ್ಷೆ ವಿಧಿಸಲು ಮುಂದಾಗಿದ್ದರಿಂದ ಪಾತಿ ಕಳೆದ ಎಂಟು ದಿನಗಳಿಂದ ನಮ್ಮ ಮನೆಗೆ ಬಂದಿರಲಿಲ್ಲ. ಪಾತಿ ನಮ್ಮ ಮನೆಗೆ ಬರುವುದನ್ನು ಸಹಿಸದೆ ಅಸಹ್ಯದಿಂದ ನೋಡುತ್ತಿದ್ದ ನೆಂಟರಿಷ್ಟರು ಮತ್ತು ಊರಿನ ಜನ ಅಪ್ಪನ ಈ ನಿರ್ಧಾರದಿಂದ ನಮ್ಮನ್ನು ಇಡೀ ಊರಿನಿಂದ ಬಹಿಷ್ಕರಿಸಲು ಸಂಚು ನಡೆಸುತ್ತಿರುವ ವಿಷಯ ನನ್ನಲ್ಲಿನ ಆತಂಕವನ್ನು ಮತ್ತಷ್ಟು ಹೆಚ್ಚಿಸಿತು. ‘ಈ ಘಟನೆ ನಂತರ ಪಾತಿಯನ್ನು ನೀನು ಭೇಟಿಯಾಗಿದ್ದಿಯಾ’ ನನ್ನ ಪ್ರಶ್ನೆಯ ಹಿಂದೆ ಪಾತಿಯೂ ಅಪ್ಪನ ನಿರ್ಧಾರಕ್ಕೆ ಸಮ್ಮತಿ ಸೂಚಿಸಿರಬಹುದೇ ಎನ್ನುವುದನ್ನು ತಿಳಿದುಕೊಳ್ಳುವ ಉದ್ದೇಶವಿತ್ತೆಂದು ಕಾಣುತ್ತದೆ. ಇದುವರೆಗೂ ಅವಳ ಕುರಿತು ಮನೆ ಮಾಡಿದ್ದ ಅಂತ:ಕರಣದ ಜಾಗದಲ್ಲಿ ಈಗ ದ್ವೇಷದ ಸಣ್ಣ ಎಳೆಯೊಂದು ಮೂಡಲಾರಂಭಿಸಿ ನಾನು ವಿಚಲಿತಗೊಂಡೆ. ‘ಇಲ್ಲ ಅವಳನ್ನು ಭೇಟಿಯಾಗಲು ಅದೇಕೋ ಮನಸಾಗುತ್ತಿಲ್ಲ’ ಎಂದ ಅಣ್ಣನ ಮಾತು ಅಪ್ಪನ ಈ ನಿರ್ಧಾರದಲ್ಲಿ ಪಾತಿಯೂ ಸಮಪಾಲುದಾರಳು ಎನ್ನುವ ನನ್ನ ಊಹೆಯನ್ನು ದೃಢಪಡಿಸಿತು. ಅಪ್ಪ ಮತ್ತು ಪಾತಿ ಜೊತೆಯಾಗಿ ಅಮ್ಮನಿಗೆ ಮೋಸ ಮಾಡಿದರಲ್ಲ ಎನ್ನುವ ವಿಚಾರವೇ ಅವರಿಬ್ಬರ ಬಗೆಗೆ ಅಸಹ್ಯಕ್ಕೆ ಕಾರಣವಾಗಿ ಆ ಕ್ಷಣವೇ ಮನೆ ಬಿಟ್ಟು ಹೊರಡಲು ನಿರ್ಧರಿಸಿದೆ.

ತೋಟದಿಂದ ಮನೆಗೆ ಬಂದವನೇ ತೆಗೆದುಕೊಂಡು ಬಂದಿದ್ದ ಚೀಲವನ್ನು ಹೆಗಲಿಗೇರಿಸಿಕೊಂಡು ಅಣ್ಣನಿಗೆ ಹೇಳಿ ಹೊರಟು ನಿಂತಾಗ ನನ್ನನ್ನು ನೋಡಿದ ಅಪ್ಪನ ಮುಖದಲ್ಲಿ ಅಂದು ದೈನ್ಯತೆ ಮನೆ ಮಾಡಿತ್ತೇನೋ ಎಂದು ಈಗ ಅನಿಸುತ್ತದೆ. ಬಂಧುಗಳನ್ನು ಮತ್ತು ಇಡೀ ಊರನ್ನೇ ಎದುರು ಹಾಕಿಕೊಳ್ಳಲು ಸಿದ್ಧನಾಗಿದ್ದ ಅಪ್ಪ ಹೆದರಿದ್ದು ತನ್ನ ಮಕ್ಕಳಿಗೆ. ಬದುಕಿನಲ್ಲಿ ನಾವು ನಮ್ಮವರೆಂದು ತಿಳಿದವರಿಂದಲೇ ಅನಾದಾರಕ್ಕೆ ಮತ್ತು ಅಸಹ್ಯಕ್ಕೆ ಒಳಗಾಗುವುದಕ್ಕಿಂತ ಬೇರೆ ಶಿಕ್ಷೆ ಇನ್ನೊಂದಿರಲಾರದೇನೋ. ಅಪ್ಪ ಪಾತಿಯನ್ನು ಮರೆಯಲು ಪ್ರಯತ್ನಿಸಿದ. ಅಣ್ಣನಿಗೆ ಮದುವೆ ಮಾಡಿ ಸೊಸೆಯನ್ನು ಮನೆತುಂಬಿಸಿಕೊಂಡು ಮನೆಯ ಪೂರ್ಣ ಜವಾಬ್ದಾರಿಯನ್ನು ಅವನಿಗೆ ವಹಿಸಿ ತಾನು ದಿನದ ಹೆಚ್ಚಿನ ಸಮಯವನ್ನು ದೇವಸ್ಥಾನಗಳಲ್ಲಿ ಕಳೆಯತೊಡಗಿದ. ಎರಡು ಹೊತ್ತಿನ ಊಟ ಒಂದು ಹೊತ್ತಿಗೆ ಸೀಮಿತವಾಯಿತು. ಪುರಾಣ, ಪ್ರವಚನಗಳನ್ನು ಆಲಿಸತೊಡಗಿದ. ತೋಟ, ಹೊಲ, ನೆಂಟರಿಷ್ಟರು ಎಲ್ಲದರಿಂದ ದೂರವಾಗಿ ಏಕಾಂಗಿಯಂತೆ ಬದುಕಲಾರಂಭಿಸಿದ.  ಪಾತಿ ಕೂಡ ಕ್ರಮೇಣ ನಮ್ಮ ಬದುಕು ಮತ್ತು ನೆನಪುಗಳಿಂದ ದೂರಾದಳು. ಈ ನಡುವೆ ನನ್ನ ಎಂ.ಎ ಓದಿನ ನಂತರ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕ ಕೆಲಸ ದೊರೆತು ಮದುವೆಯಾಗಿ ಬದುಕಿನ ಹೊಸ ಅಧ್ಯಾಯವೊಂದು ತೆರೆದುಕೊಳ್ಳಲಾರಂಭಿಸಿತು. ಅಣ್ಣನಿಗೆ ಮಕ್ಕಳ ಜವಾಬ್ದಾರಿಯೊಂದಿಗೆ ತೋಟದ ಜವಾಬ್ದಾರಿಯೂ ಸೇರಿ ಅವನದೇ ಪ್ರಪಂಚದಲ್ಲಿ ಮುಳುಗಿದರೆ ನಾನು ಪಟ್ಟಣದಲ್ಲಿ ಹೊಸ ಉದ್ಯೋಗ ಹೊಸ ಬದುಕು ಸಾಹಿತ್ಯದ ಗೀಳು ಎಂದು ನನ್ನದೆ ಹೊಸ ಪ್ರಪಂಚವೊಂದರಲ್ಲಿ ಬದುಕಲಾರಂಭಿಸಿದೆ. ನಮ್ಮ ನಮ್ಮ ಬದುಕಿನ ಧಾವಂತದಲ್ಲಿ ಮತ್ತು ಬದುಕನ್ನು ಕಟ್ಟಿಕೊಳ್ಳುವ ಉಮೇದಿಯಲ್ಲಿ ನಮಗೆ ಅಪ್ಪನ ಏಕಾಂಗಿತನದ ಅರಿವಾಗಲೇ ಇಲ್ಲ. ‘ಸರ್ ನೀವು ಇಳಿಯಬೇಕಾದ ಊರು ಬಂತು ನೋಡಿ’ ಕಂಡಕ್ಟರ್ ಭುಜ ಮುಟ್ಟಿ ಎಚ್ಚರಿಸಿದಾಲೇ ನಾನು ಬಸ್ಸಿನಲ್ಲಿರುವುದು ಅರಿವಾಯಿತು. ಹಿಂದಿನದೆಲ್ಲ ನೆನಪಾಗಿ ಕಣ್ಣಂಚು ಒದ್ದೆಯಾಗಿ ಮನಸ್ಸು ಭಾರವಾಯಿತು. ಹೊರಗೆ ಸೂರ್ಯ ತನ್ನ ಕಿರಣಗಳನ್ನು ಚಾಚಿ ಮೂಡಣದ ದಿಕ್ಕನ್ನು ಕೆಂಪಾಗಿಸಿದ್ದ.

ಮನೆಯ ಹೊರಗೆ ನೆರದಿದ್ದ ಜನರನ್ನು ನೋಡಿಯೇ ಮನಸ್ಸು ನಡೆದ ಘಟನೆಯನ್ನು ಊಹಿಸಿತು. ಅಂಗಳದಲ್ಲಿ ಗಿಡಕ್ಕೊರಗಿ ಕುಳಿತ ಅಣ್ಣನ ಮುಖ ದು:ಖದಿಂದ ಸೊರಗಿ ಹೋಗಿತ್ತು. ‘ನಸುಕಿನ ನಾಲ್ಕು ಗಂಟೆಗೆ ಜೀವ ಹೋಯ್ತು. ಕೊನೆ ಘಳಿಗೆಯವರೆಗೂ ಅಪ್ಪ ನಿನ್ನ ದಾರಿ ನೋಡಿದರು’ ಅಣ್ಣನ ಮಾತು ಕೇಳಿ ಹೊಟ್ಟೆಯಲ್ಲಿ ವಿಚಿತ್ರ ಸಂಕಟವಾಗಿ ಗಿಡದ ಬುಡದಲ್ಲಿ ಕುಸಿದು ಕುಳಿತೆ. ಊರಲ್ಲಿ ಅಂದು ಜಾತ್ರೆ ಇರುವುದರಿಂದ ಊರಿನವರೆಲ್ಲ ಬೇಗ ಅಂತ್ಯಕ್ರಿಯೆಗೆ ಅಣಿಗೊಳಿಸುವಂತೆ ಒತ್ತಾಯಿಸಿದರು. ಅದಾಗಲೇ ನೆಂಟರಿಷ್ಟರೆಲ್ಲ ಬಂದಾಗಿತ್ತು. ಮಕ್ಕಳಿಗೆ ಪರೀಕ್ಷೆ ಇರುವುದರಿಂದ ಶಾಲಿನಿ ಮತ್ತು ಮಕ್ಕಳು ಧರ್ಮೋದಕ ಬಿಡುವ ದಿನ ಬಂದರಾಯ್ತೆಂದು ಅಣ್ಣ ಸೂಚಿಸಿದ. ಹಿರಿಯ ಮಗನಾಗಿದ್ದರಿಂದ ಅಣ್ಣನೇ ಅಪ್ಪನ ಕರ್ಮ ಮಾಡಲು ಮುಂದಾದ. ಊರ ಹೊರಗಿನ ಮಸಣದಲ್ಲಿ ಅಪ್ಪನ ದೇಹವನ್ನು ಚಿತೆಗೇರಿಸಿದಾಗ ದೂರದ ಮರದ ನೆರಳಲ್ಲಿ ನಿಂತು ನೋಡುತ್ತಿದ್ದ ನನಗೆ ಅಪ್ಪನನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾನು ವಿಫಲನಾದೆನೇನೋ ಎನ್ನುವ ಭಾವ ಉದಿಸಿ ದು:ಖ ಉಮ್ಮಳಿಸಿಬಂದು ಬಿಕ್ಕಿದೆ.

ಹತ್ತು ದಿನಗಳ ಸೂತಕ ನಂತರದ ಕ್ರಿಯಾವಿಧಿಗಳೆಂದು ಒಟ್ಟು ಹದಿನೈದು ದಿನಗಳ ರಜೆ ಪಡೆದು ಊರಿಗೆ ಮರಳಿದೆ. ನದಿಯ ದಡದ ದೇವಸ್ಥಾನದಲ್ಲಿ ಅಪ್ಪನ ಮೂರು ದಿನಗಳ ಕ್ರಿಯಾಕರ್ಮಗಳನ್ನು ಶ್ರೀನಿವಾಸಾಚಾರ್ಯರ ನೇತೃತ್ವದಲ್ಲಿ ಅಣ್ಣ ಸಾಂಗವಾಗಿ ನೆರವೇರಿಸಿದ. ಧರ್ಮೋದಕ ಬಿಡುವ ದಿನ ಶಾಲಿನಿ ಮತ್ತು ಮಕ್ಕಳು ನಮ್ಮನ್ನು ಕೂಡಿಕೊಂಡರು. ಒಂದು ಕ್ಷಣವು ತಡವಾಗದಂತೆ ಕಾಗೆ ಪಿಂಡ ಮುಟ್ಟಿದಾಗ ‘ನಿಮ್ಮ ಅಪ್ಪನದು ಸ್ಥಿತಪ್ರಜ್ಞ ಬದುಕು. ಯಾವ ಆಸೆ ಆಕಾಂಕ್ಷೆಗಳಿಲ್ಲದೆ ತನ್ನ ಬದುಕಿನ ಯಾತ್ರೆ ಮುಗಿಸಿದ ಜೀವವದು’ ಆಚಾರ್ಯರು ನುಡಿದಾಗ ಅಪ್ಪ ಅಂಥದ್ದೊಂದು ಬದುಕಿಗೆ ತೆರೆದುಕೊಳ್ಳುವಂಥ ಪರಿಸ್ಥಿತಿಯನ್ನು ರೂಪಿಸಿದ್ದು ನಾವೆ ಅಲ್ಲವೇ ಅನಿಸಿತು. ಹದಿಮೂರನೆ ದಿನ ಉದಕಶಾಂತಿಯಂದು ಊರಿನವರನ್ನು ಮತ್ತು ಬಳಗದವರನ್ನು ಆಹ್ವಾನಿಸಿ ಅಣ್ಣ ಸಿಹಿ ಊಟ ಹಾಕಿಸಿದ. ಇನ್ನು ಎರಡು ದಿನಗಳ ರಜೆ ಇರುವುದರಿಂದ ಶಾಲಿನಿ ಮತ್ತು ಮಕ್ಕಳನ್ನು ಮೊದಲು ಕಳುಹಿಸಿ ನಾಳೆ ಬರುವೆನೆಂದು ಊರಿನಲ್ಲೇ ಉಳಿದುಕೊಂಡೆ. ನನಗೆ ಪಾತಿಯನ್ನು ನೋಡಬೇಕಿತ್ತು. ಕಳೆದ ಇಪ್ಪತ್ತು ವರ್ಷಗಳಿಂದ ಅವಳನ್ನು ಭೇಟಿಯಾಗಿರಲಿಲ್ಲ. ಅಣ್ಣನಿಗೆ ನನ್ನ ಮನದಿಂಗಿತ ತಿಳಿಸಿದಾಗ ಒಪ್ಪಿಗೆ ನೀಡಿದವನು ‘ರಾಘವ ಹಿಂದೆ ಆದ ಯಾವ ಘಟನೆಯನ್ನು ಅವಳೊಂದಿಗೆ ಮಾತನಾಡ್ಬೇಡ. ಆಕೆಗೂ ವಯಸ್ಸಾಗಿದೆ ಜೊತೆಗೆ ಕೆಲವು ವರ್ಷಗಳಾದರೂ ನಮಗೆ ಅಮ್ಮನ ಪ್ರೀತಿಕೊಟ್ಟ ಜೀವ ಅದು’ ಅಣ್ಣನ ಮಾತಿನಲ್ಲಿದ್ದ ಕಾಳಜಿ ಗುರುತಿಸಿದೆ. ಅತ್ತಿಗೆ ಮಾಡಿಕೊಟ್ಟ ಚಹಾ ಕುಡಿದು ಬೇಗ ಬರುತ್ತೇನೆಂದು ಹೇಳಿ ಪಾತಿ ಮನೆಯ ಕಡೆ ಹೆಜ್ಜೆ ಹಾಕಿದಾಗ ಕಡಿದುಹೋದ ಸಂಬಂಧವನ್ನು ಮತ್ತೆ ಬೆಸೆಯುತ್ತಿರುವ ಭಾವ ಹುಟ್ಟಿ ಮನಸ್ಸು ಆಹ್ಲಾದಗೊಂಡಿತು.

ಪಾತಿ ಈಗ ತನ್ನ ತಾಯಿಯ ಮನೆಯಿಂದ ಬೇರೆಯಾಗಿ ಊರಿನ ಹೊರವಲಯದಲ್ಲಿ ವಿಸ್ತರಿಸುತ್ತಿರುವ ಹೊಸ ಕಾಲೊನಿಯಲ್ಲಿ ಪುಟ್ಟ ಮನೆ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಳು. ಬಾಗಿಲ ಹತ್ತಿರ ನನ್ನ ಹೆಜ್ಜೆ ಸದ್ದಿಗೆ ಮುಖ ಮೇಲೆತ್ತಿ  ನೋಡಿದ ಪಾತಿ ತಲೆ ಕೂದಲೆಲ್ಲ ಬೆಳ್ಳಗಾಗಿ ವಯಸ್ಸಾದಂತೆ ಕಾಣಿಸಿದಳು. ‘ಅರೆ ರಾಘವ ಬೇಟಾ ಎಷ್ಟೊಂದು ದೊಡ್ಡವನಾಗಿದ್ದಿ ಬಾ ಒಳಗೆ’ ಅದೇ ಎಂದಿನ ಕಕ್ಕುಲಾತಿಯಿಂದ ಮೈದಡವಿ ಮಾತನಾಡಿಸಿದವಳ ಮುಖದಲ್ಲಿ ಸಂಭ್ರಮ ಮನೆ ಮಾಡಿತ್ತು. ‘ಹೇಗಿದ್ದಿಯಾ ಪಾತಿ’ ಅವಳು ಹಾಸಿದ ಚಾಪೆಯ ಮೇಲೆ ಕೂಡುತ್ತ ಮನೆಯನ್ನೊಮ್ಮೆ ಅವಲೋಕಿಸಿದೆ. ‘ಹುಂ ಹೀಗಿದ್ದೀನಿ ಬೇಟಾ. ನಿನ್ನ ಅಮ್ಮ ಹೋದ್ಳು, ನಿನ್ನ ಅಪ್ಪ ಕಣ್ಮುಚ್ಚಿದರು. ಮಗಳು ಮದುವೆಯಾಗಿ ಗಂಡನ ಮನೆಲಿದ್ದಾಳೆ. ಈಗ ಯಾವ ಜವಾಬ್ದಾರಿನೂ ಇಲ್ಲ. ಈ ಪಾಪಿ ಜೀವ ಅಲ್ಲಾನ ಕರೆಗಾಗಿ ಕಾಯ್ತಿದೆ’ ಮಾತನಾಡಿದವಳ ಧ್ವನಿಯಲ್ಲಿ ನೋವಿತ್ತು. ‘ರಾಘವ ಬೇಟಾ ನಿನ್ನ ಅಮ್ಮ ನನಗೆ ಯಜಮಾನ್ತಿ ಮಾತ್ರ ಆಗಿರಲಿಲ್ಲ. ಒಡ ಹುಟ್ಟಿದ ಅಕ್ಕನಂತಿದ್ದಳು. ತನ್ನ ಹೊಟ್ಟೆಯ ಅದೇಷ್ಟೋ ಸಂಕಟ ನನ್ನೊಂದಿಗೆ ಹಂಚ್ಕೊತಿದ್ದಳು. ಊರಿನವರು ನನ್ನ ಬಗ್ಗೆ ಸಲ್ಲದ ಮಾತನಾಡಿದಾಗ ನನ್ನ ಬೆಂಬಲಕ್ಕೆ ನಿಂತಿದ್ದು ನಿನ್ನ ಅಮ್ಮನೆ’ ಪಾತಿಗೆ ತನ್ನ ಒಡಲ ಭಾರವನ್ನೆಲ್ಲ ಇಳಿಸಿಕೊಳ್ಳುವಂತೆ ಮಾತಿನ ಉಮೇದಿ ಬಂದಿತ್ತು. ‘ನಿನ್ನ ಅಮ್ಮ ಸಾಯುವಾಗ ನಿನ್ನ ಅಪ್ಪನಿಗೆ ಇನ್ನು ಯೌವನವಿತ್ತು. ಹೆಂಡತಿ ಸಾವು ಅವರನ್ನು ಕುಗ್ಗಿಸಿತ್ತು. ಅವರಿಗೂ ಜೊತೆ ಅಂತ ಬೇಕಿತ್ತು ಅನಿಸುತ್ತೆ. ನನ್ನ ಪರಿಸ್ಥಿತಿಯೂ ಅವರಿಗಿಂತ ಬೇರೆಯಾಗಿರಲಿಲ್ಲ. ಒಂಟಿ ಹೆಣ್ಣನ್ನು ಸಮಾಜ ಅನುಭವಿಸುವ ದೃಷ್ಟಿಯಿಂದಲೇ ನೋಡುತ್ತೆ. ಗಂಡು ಮಕ್ಕಳ ಕೊರತೆ ನನಗೆ ನಿಮ್ಮಿಂದ ನೀಗಿತ್ತು. ನಿಮ್ಮ ಅಪ್ಪನಿಗೆ ಜೊತೆಯಾಗಬೇಕು ಅಂತ ಆಸೆ ನನ್ನ ಮನಸ್ಸಿನ ಮೂಲೆಯಲ್ಲೂ ಹೊಂಚಿಹಾಕಿಕೊಂಡು ಕುಳಿತಿತ್ತು ಅನಿಸುತ್ತೆ. ಆದರೆ ನಿಮ್ಮ ಅಪ್ಪ ಸಮಾಜಕ್ಕೆ ಹೆದರಲಿಲ್ಲ. ಅವರು ಹೆದರಿದ್ದು ಮಕ್ಕಳಿಗೆ. ಮಕ್ಕಳ ಕಣ್ಣಲ್ಲಿ ಸಣ್ಣವರಾಗಿ ಬದುಕನ್ನು ಹೀನವಾಗಿ ಬದುಕುವುದು ಅವರಿಗೆ ಬೇಕಿರಲಿಲ್ಲ. ನಿನ್ನ ಅಪ್ಪನ ಬದುಕು ಅದು ಬರೀ ಬದುಕಲ್ಲ ರಾಘವ ಬೇಟಾ ಅದೊಂದು ತಪಸ್ಸು’ ಪಾತಿ ಮಾತು ಮುಗಿಸಿ ಸೆರಗಿನ ಅಂಚಿನಿಂದ ಕಣ್ಣೊರಿಸಿಕೊಂಡಳು. ಅಲ್ಲಿ ಕುಳಿತುಕೊಳ್ಳಲು ಮನಸ್ಸಿಗೆ ಹಿಂಸೆಯಾಗಿ ಚಡಪಡಿಸಿದೆ. ನನ್ನ ಮನದ ಭಾವ ಅರಿತವಳಂತೆ ಪಾತಿ ‘ಮಗಾ ಮನೆನಲ್ಲಿ ಅಣ್ಣ ಕಾಯ್ತಿರಬಹುದು ಮನೆಗೆ ಹೋಗು. ನಾಳೆ ಊಟಕ್ಕೆ ಇಲ್ಲಿಗೆ ಬಾ ನಿನ್ನಿಷ್ಟದ ಅಡುಗೆ ಮಾಡ್ತಿನಿ’ ಎಂದು ಮನೆಯ ಎದುರಿನ ರಸ್ತೆಯವರೆಗೂ ಬಂದು ಬಿಳ್ಕೊಟ್ಟವಳನ್ನು ಹಿಂತಿರುಗಿ ನೋಡುತ್ತ ತೋಟದ ದಾರಿ ತುಳಿದೆ.

ಮನಸ್ಸು ಕ್ಷೋಭೆಗೊಂಡಿತ್ತು. ಅಪ್ಪನನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಅವರು ನಮ್ಮಿಂದ ದೂರಾಗಿದ್ದರು. ಹೌದು ಅಮ್ಮನ ಅನುಪಸ್ಥಿತಿಯಲ್ಲಿ ಅಪ್ಪನಿಗೂ ಒಂದು ಸಾಂಗತ್ಯದ ಅಗತ್ಯವಿತ್ತು. ಅಪ್ಪ ಪಾತಿಯನ್ನು ಬಯಸಿದ್ದು ಅಮ್ಮನ ಸಾವಿನ ನಂತರ. ಅಪ್ಪ ತಪ್ಪು ಮಾಡಿರುವರೆಂದು ಅವರನ್ನು ಅವರ ಬದುಕಿನುದ್ದಕ್ಕೂ ದೂರವಿಟ್ಟೆ. ಅಪ್ಪನದು ತಪ್ಪದೆಂದು ಹೇಳುವ ಯೋಗ್ಯತೆಯಾದರೂ ನನಗಿದೆಯೇ ಎಂದು ಮನಸ್ಸು ಪ್ರಶ್ನಿಸಿತು. ಶಾಲಿನಿ ಬದುಕಿರುವಾಗಲೇ ಕಾಲೇಜಿನಲ್ಲಿ ಮಧುರಾಳೊಂದಿಗಿನ ನನ್ನ ಒಡನಾಟಕ್ಕೆ ನಾನು ಯಾವ ಸಂಬಂಧದ ಹೆಸರು ಕೊಡಲಿ. ನನ್ನ ಸಾಹಿತ್ಯದ ಅಭಿರುಚಿಯನ್ನು ಹಂಚಿಕೊಳ್ಳಲು ನನಗೂ ಒಂದು ಸಾಂಗತ್ಯದ ಅಗತ್ಯವಿತ್ತು. ಮನಸ್ಸು ಹುಡುಕಾಟದಲ್ಲಿ ತೊಡಗಿರುವಾಗ ಸಾಹಿತ್ಯದ ಓದುಗಳಾಗಿ ಮಧುರಾ ನನಗೆ ಹತ್ತಿರವಾದಳು. ಮಧುರಾ ನನ್ನ ಬರವಣಿಗೆಯ ಬದುಕಿಗೆ ಸ್ಪೂರ್ತಿಯಾಗಿ ನನ್ನ ಭಾವದಲ್ಲಿ ನೆಲೆ ನಿಂತವಳು ಆತ್ಮೀಯ ಗೆಳತಿಯಾಗಿ, ನನ್ನ ಬರವಣಿಗೆಯ ಆರಾಧಕಳಾಗಿ ನನ್ನ ಬದುಕಿಗೊಂದು ಹೊಸ ಅರ್ಥ ತಂದುಕೊಟ್ಟಳು. ಹಾಗೆಂದು ನಾನು ಶಾಲಿನಿಗೆ ಮೋಸ ಮಾಡುತ್ತಿರುವೆನೆಂಬ ಕಿಂಚಿತ್ ಪ್ರಾಯಶ್ಚಿತದ ಭಾವವೂ ನನ್ನಲ್ಲಿಲ್ಲ. ಏಕೆಂದರೆ ನಮ್ಮಿಬ್ಬರ ನಡುವೆ ಇರುವುದು ಅದು ಬೌದ್ಧಿಕ ಸಾಂಗತ್ಯವೇ ವಿನ: ದೈಹಿಕ ಸಾಂಗತ್ಯವಲ್ಲ. ಅಪ್ಪನಿಗೂ ಅವನ ಭಾವನೆಗಳನ್ನು ಹಂಚಿಕೊಳ್ಳುವ ಒಂದು ಸಾಂಗತ್ಯದ ಅಗತ್ಯವಿದ್ದಿರಬಹುದು. ಎಲ್ಲವನ್ನೂ ಮಕ್ಕಳೆದುರು ಹೇಳಿಕೊಳ್ಳಲು ಅಪ್ಪ ಮತ್ತು ನಮ್ಮ ನಡುವೆ ವಯಸ್ಸಿನ ಅಂತರ ಎದುರಾಗಿರಬಹುದು. ಆದರೆ ಅರ್ಥವಾಗದ ಆ ವಯಸ್ಸಿನಲ್ಲಿ ಅಪ್ಪನಲ್ಲಿ ನನಗೆ ಕಂಡಿದ್ದು ದೈಹಿಕ ವಾಂಛೆ. ಅಪ್ಪನಲ್ಲಿ ಸ್ಥಿತಪ್ರಜ್ಞತೆ ಮಡುಗಟ್ಟಲು, ತಾನು ಬದುಕುತ್ತಿದ್ದ ಪರಿಸರದೊಂದಿಗೆ ಸಂಬಂಧವನ್ನೇ ಕಡಿದುಕೊಂಡು ಮೌನಿಯಾಗಿ ಬದುಕಲು ನಾನೇ ಕಾರಣನಾದೆ. ‘ಕ್ಷಮಿಸಿ ಅಪ್ಪ ಬದುಕಿನ ಯಾವ ಘಳಿಗೆಯಲ್ಲಿ ಯಾರಿಗೆ ಯಾವ ಅಗತ್ಯ ಎದುರಾಗುತ್ತದೋ ಎಂದು ಗುರುತಿಸುವಲ್ಲಿ ಮನುಷ್ಯ ಸೋಲುತ್ತಾನೆ. ಇನ್ನೊಬ್ಬನ ಜಾಗದಲ್ಲಿ ತನ್ನನ್ನು ಇರಿಸಿ ನೋಡುವ ಕಲ್ಪನಾಶಕ್ತಿ ಮನುಷ್ಯನಲ್ಲಿ ಹುಟ್ಟಿದಾಗಲೇ ಅವನಿಗೆ ಸತ್ಯದ ಅರಿವಾಗುವುದು.’ ಅಪ್ಪ ಬದುಕಿರುವಾಗ ಹೇಳಬೇಕಾದ ಮಾತುಗಳನ್ನು ಈಗ ಅಪ್ಪನ ಅನುಪಸ್ಥಿತಿಯಲ್ಲಿ ಸ್ವಗತದಲ್ಲಿ ಹೇಳಿಕೊಳ್ಳುತ್ತಿದ್ದೆ. ಮನಸ್ಸು ಭಾರವಾಗಿ ದು:ಖ ಉಮ್ಮಳಿಸಿ ಕಣ್ಣುಗಳು ತುಂಬಿ ಬಂದವು. ‘ರಾಘವ ಕತ್ತಲಾಗ್ತಿದೆ ನಡೆ ಮನೆಗೆ ಹೋಗೋಣ’ ನನ್ನನ್ನು ಹುಡುಕಿಕೊಂಡು ಬಂದು ಹಿಂದಿನಿಂದ ಭುಜದ ಮೇಲೆ ಕೈಯಿಟ್ಟು ಹೇಳಿದ ಅಣ್ಣನ ಮುಖ ನೋಡಿದೆ ಅವನಲ್ಲೂ ದು:ಖ ಮಡುಗಟ್ಟಿ ಕಣ್ಣುಗಳು ತುಂಬಿಬಂದಿದ್ದವು.  

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Wednesday, August 1, 2018

ಸಿನಿಮಾ ಮತ್ತು ಸಾಹಿತ್ಯ





     







                  ಸಿನಿಮಾ ಮತ್ತು ಸಾಹಿತ್ಯ ಒಂದು ಭಾಷೆಯ ಅತ್ಯಂತ ಸಶಕ್ತ ಅಭಿವ್ಯಕ್ತಿ ಮಾಧ್ಯಮಗಳೆಂದು ಪರಿಗಣಿಸಲ್ಪಟ್ಟಿವೆ. ಒಂದು ನೆಲದ ಶೋಷಿತರ ಧ್ವನಿಯಾಗಿ ಅನೇಕ ಕೃತಿಗಳು ರಚನೆಯಾದಂತೆ ಇಲ್ಲಿ ಹಲವಾರು ಸಿನಿಮಾಗಳೂ ನಿರ್ಮಾಣಗೊಂಡಿವೆ. ಒಡಲಾಳ, ಚೋಮನ ದುಡಿ, ಗ್ರಾಮಾಯಣ ಕೃತಿಗಳು ಈ ನೆಲದ ಒಂದು ವರ್ಗದ ಶೋಷಣೆಯ ಬದುಕನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟ ಕಾದಂಬರಿಗಳಾದರೆ, ಸಿನಿಮಾ ಮಾಧ್ಯಮ ಒಂದಾನೊಂದು ಕಾಲದಲ್ಲಿ, ಮುನಿಯನ ಮಾದರಿ, ದೂರದ ಬೆಟ್ಟ ಇತ್ಯಾದಿ ಸಿನಿಮಾಗಳ ಮೂಲಕ ಶೋಷಣೆಯ ಬದುಕನ್ನು ಅತ್ಯಂತ ಕಲಾತ್ಮಕವಾಗಿ ಬೆಳ್ಳಿಪರದೆಯ ಮೇಲೆ ಕಟ್ಟಿಕೊಟ್ಟಿದೆ. ಹಲವಾರು ಕಾದಂಬರಿಗಳು ಸಿನಿಮಾಗಳಾಗಿಯೂ ರೂಪುಗೊಂಡಿದ್ದು ಸಿನಿಮಾ ಮತ್ತು ಸಾಹಿತ್ಯಕ್ಕಿರುವ ಸಂಬಂಧಕ್ಕೊಂದು ನಿದರ್ಶನವಾಗಿದೆ.

ಕಾದಂಬರಿ ಆಧಾರಿತ ಸಿನಿಮಾಗಳು

‘ಕರುಣೆಯೇ  ಕುಟುಂಬದ ಕಣ್ಣು’ ಕನ್ನಡದ ಪ್ರಥಮ ಕಾದಂಬರಿ ಆಧಾರಿತ ಸಿನಿಮಾ ಎನ್ನುವ ಹೆಗ್ಗಳಿಕೆಯೊಂದಿಗೆ ಅಪಾರ ಯಶಸ್ಸನ್ನು ಪಡೆದು ನಂತರದ ದಿನಗಳಲ್ಲಿ ಕಾದಂಬರಿ ಆಧಾರಿತ ಸಿನಿಮಾಗಳ ನಿರ್ಮಾಣಕ್ಕೆ ವೇದಿಕೆಯನ್ನು ರೂಪಿಸಿತು. ಕುಟುಂಬ ಪ್ರಧಾನ ಕಥನದ ಈ ಸಿನಿಮಾ ರಾಜಕುಮಾರ ಮತ್ತು ಲೀಲಾವತಿ ಅವರ ಅಭಿನಯದಿಂದ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು. ಪರಿಣಾಮವಾಗಿ ಕನ್ನಡ ಸಿನಿಮಾ ಮಾಧ್ಯಮ ಕನ್ನಡ ಕಾದಂಬರಿಗಳತ್ತ ನೋಡುವಂಥ ಹೊಸ ಆಶಾದಾಯಕ ಬೆಳವಣಿಗೆ ಕಾಣಿಸಿಕೊಂಡಿತು. ನಿರ್ಮಾಪಕರು ಮತ್ತು ನಿರ್ದೇಶಕರು ಮಾತ್ರವಲ್ಲದೆ ಜನಪ್ರಿಯ ಕಲಾವಿದರೂ ಕಾದಂಬರಿ ಆಧಾರಿತ ಸಿನಿಮಾಗಳಿಗೆ ಆದ್ಯತೆ ನೀಡತೊಡಗಿದರು. ಗಮನಿಸಬೇಕಾದ ಸಂಗತಿ ಎಂದರೆ ಆ ದಿನಗಳಲ್ಲಿನ ಸದಭಿರುಚಿಯ ಪ್ರೇಕ್ಷಕ ವರ್ಗ ಕೂಡ ಕಾದಂಬರಿ ಆಧಾರಿತ ಉತ್ತೇಜನ ನೀಡುತ್ತ ಗೆಲುವನ್ನು ತಂದುಕೊಡತೊಡಗಿದರು. ಟಿ.ಕೆ.ರಾಮರಾವ ಅವರ ‘ಬಂಗಾರದ ಮನುಷ್ಯ’ ಕಾದಂಬರಿ ಆಧಾರಿತ ಅದೇ ಹೆಸರಿನ ಸಿನಿಮಾ ರಾಜಕುಮಾರ ಅಭಿನಯದಲ್ಲಿ ನಿರ್ಮಾಣಗೊಂಡು ದಾಖಲೆಯ ಪ್ರದರ್ಶನ ಕಂಡಿತು. ಅಂಬರೀಶ್‍ಗೆ ನಾಯಕನಟನಾಗಿ ಬಡ್ತಿ ನೀಡಿದ ‘ಅಂತ’ ಸಿನಿಮಾ ಎಚ್.ಕೆ.ಅನಂತರಾಮ್ ಅವರ ಕಾದಂಬರಿ ಆಧಾರಿತ ಸಿನಿಮಾ ಎನ್ನುವುದು ಕನ್ನಡ ಕಾದಂಬರಿಗಳ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಅನಂತ ನಾಗ್ ಮತ್ತು ಲಕ್ಷ್ಮಿ ಅನೇಕ ಕುಟುಂಬ ಪ್ರಧಾನ ಕಥಾವಸ್ತುವಿನ ಸಿನಿಮಾಗಳಲ್ಲಿ ಅಭಿನಯಿಸಿ ಜನಪ್ರಿಯ ಜೋಡಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲು ಕಾದಂಬರಿ ಆಧಾರಿತ ಸಿನಿಮಾಗಳೇ ಪ್ರಮುಖ ಕಾರಣ ಎನ್ನುವುದು ಸಿನಿಮಾ ವಿಮರ್ಶಕರ ಅಭಿಮತ. 

ಕನ್ನಡ ಸಿನಿಮಾ ಮಾಧ್ಯಮದಲ್ಲಿ ಕೌಟುಂಬಿಕ ಕಥಾವಸ್ತುವಿನ ಸಿನಿಮಾಗಳಿಗೆ ಆದ್ಯತೆ ನೀಡಿದ ರಾಜಕುಮಾರ ಹಲವಾರು ಕಾದಂಬರಿ ಆಧಾರಿತ ಸಿನಿಮಾಗಳಲ್ಲಿ ನಟಿಸಿ ತಮ್ಮ ಬೇರೆ ಕಲಾವಿದರಿಗೆ ಮಾದರಿಯಾದರು. ಕನ್ನಡದ ಪ್ರಥಮ ಕಾದಂಬರಿ ಆಧಾರಿತ ‘ಕರುಣೆಯೇ ಕುಟುಂಬದ ಕಣ್ಣು’ ಸಿನಿಮಾದಲ್ಲಿ ಅಭಿನಯಿಸಿದ ಹೆಗ್ಗಳಿಕೆಯೊಂದಿಗೆ ರಾಜಕುಮಾರ ನಂತರದ ದಿನಗಳಲ್ಲಿ ಬಾಂಡ್ ಪಾತ್ರಗಳೆಡೆ ವಲಸೆ ಹೋದರೂ ಕನ್ನಡ ಸಾಹಿತ್ಯದ ಮೇಲಿನ ಪ್ರೀತಿಯನ್ನು ಬಿಟ್ಟು ಕೊಡಲಿಲ್ಲ. ನಿರ್ಮಾಪಕಿ ಪಾರ್ವತಮ್ಮನವರ ಸಮೃದ್ಧ ಓದಿನ ಹಿನ್ನೆಲೆಯಲ್ಲಿ ಆಗಾಗ ರಾಜಕುಮಾರ ಕಾದಂಬರಿ ಆಧಾರಿತ ಸಿನಿಮಾಗಳಲ್ಲಿ ಅಭಿನಯಿಸಿದರು. ಅನುರಾಗ ಅರಳಿತು, ಆಕಸ್ಮಿಕ, ಸಂಧ್ಯಾರಾಗ, ಚೆಂದವಳ್ಳಿಯ ತೋಟ, ದ್ರುವತಾರೆ, ಎರಡು ಕನಸು, ಹಣ್ಣೆಲೆ ಚಿಗುರಿದಾಗ ಇತ್ಯಾದಿ ಸಿನಿಮಾಗಳು ರಾಜಕುಮಾರ ಅಭಿನಯದ ಕಾದಂಬರಿ ಆಧಾರಿತ ಸಿನಿಮಾಗಳಿಗೆ ಕೆಲವು ಉದಾಹರಣೆಗಳು. ರಾಜಕುಮಾರ ಅಭಿನಯದ ಐತಿಹಾಸಿಕ ಸಿನಿಮಾಗಳಾದ ಹುಲಿಯ ಹಾಲಿನ ಮೇವು ಮತ್ತು ಮಯೂರ ಕಾದಂಬರಿ ಆಧಾರಿತ ಸಿನಿಮಾಗಳೆನ್ನುವುದು ವಿಶೇಷ. ಮೂರು ವರ್ಷಗಳ ಅಜ್ಞಾತವಾಸದ ನಂತರ ರಾಜಕುಮಾರ ಮತ್ತೆ ಅಭಿನಯಕ್ಕಾಗಿ ಬಣ್ಣ ಹಚ್ಚಿದ ಸಿನಿಮಾ ‘ಜೀವನ ಚೈತ್ರ’ ವಿಶಾಲಾಕ್ಷಿ ದಕ್ಷಿಣಾಮೂರ್ತಿ ಅವರ ಕಾದಂಬರಿ ಆಧಾರಿತವಾಗಿತ್ತು. ಶಿವರಾಮ ಕಾರಂತರ ‘ಚಿಗುರಿದ ಕನಸು’ ಕಾದಂಬರಿಯನ್ನು ಬೆಳ್ಳಿತೆರೆಗೆ ತರಬೇಕೆನ್ನುವ ಕೈಗೂಡದೆ ಹೋದ ರಾಜಕುಮಾರ ಅವರ ಕನಸನ್ನು ನಾಗಾಭರಣ ನಿರ್ದೇಶನದಲ್ಲಿ ಶಿವರಾಜಕುಮಾರ ಅಭಿನಯದ ಮೂಲಕ ನನಸಾಗಿಸಿದ್ದು ಪಾರ್ವತಮ್ಮನವರ ಸಾಹಿತ್ಯ ಪ್ರೀತಿಗೊಂದು ದೃಷ್ಟಾಂತ.  

ಆರಂಭದ ದಿನಗಳಲ್ಲಿ ಖಳ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಅಂಬರೀಶ್‍ಗೆ ಎಚ್.ಕೆ.ಅನಂತರಾಮ್ ಅವರ ಕಾದಂಬರಿ ಆಧಾರಿತ ‘ಅಂತ’ ಸಿನಿಮಾ ನಾಯಕನಟನಾಗಿ ಬಡ್ತಿ ನೀಡಿದರೆ, ತ.ರಾಸು ಅವರ ಕಾದಂಬರಿ ಆಧಾರಿತ ‘ನಾಗರ ಹಾವು’ ಸಿನಿಮಾ ಭರ್ಜರಿ ಯಶಸ್ಸನ್ನು ಗಳಿಸುವುದರೊಂದಿಗೆ ಕನ್ನಡಕ್ಕೆ ವಿಷ್ಣುವರ್ಧನ್ ಎನ್ನುವ ಸ್ಪುರದ್ರೂಪಿ ನಟನ ಆಗಮನವಾಯಿತು. ನಿರ್ದೇಶಕ ಸಿದ್ಧಲಿಂಗಯ್ಯ ತಮ್ಮ ಪುತ್ರ ಮುರಳಿಯನ್ನು ನಾಯಕ ನಟನಾಗಿ ಪರಿಚಯಿಸಿದ ಸಿನಿಮಾ ‘ಪ್ರೇಮ ಪರ್ವ’ ಬಿ.ಎಲ್.ವೇಣು ಅವರ ಕಾದಂಬರಿ ಆಧಾರಿತ ಎನ್ನುವುದು ಮರೆಯುವಂತಿಲ್ಲ. ಕನ್ನಡ ಸಿನಿಮಾ ಮಾಧ್ಯಮಕ್ಕೆ ಶಂಕರನಾಗ ಅವರಂಥ ಪ್ರಯೋಗಶೀಲ ನಟ ಮತ್ತು ನಿರ್ದೇಶಕನನ್ನು ಕೊಡುಗೆಯಾಗಿ ನೀಡಿದ ‘ಒಂದಾನೊಂದು ಕಾಲದಲ್ಲಿ’ ಕೂಡ ಕನ್ನಡ ಸಾಹಿತ್ಯ ಕೃತಿಯಾಧಾರಿತ ಸಿನಿಮಾ. 

ಕನ್ನಡ ಸಿನಿಮಾ ಮಾಧ್ಯಮ ಹೆಣ್ಣಿನ ತಲ್ಲಣ ಮತ್ತು ಒಳತೋಟಿಯನ್ನು ಸಶಕ್ತವಾಗಿ ಸಿನಿಮಾ ಪರದೆಗೆ ತಂದದ್ದು ಕಾದಂಬರಿಗಳ ಮೂಲಕವೇ ಸಾಧ್ಯವಾಯಿತು ಎನ್ನುವುದು ಗಮನಾರ್ಹ. ಎಂ.ಕೆ.ಇಂದಿರಾ, ವಾಣಿ, ಸಾಯಿಸುತೆ, ಹೆಚ್.ಜಿ.ರಾಧಾದೇವಿ, ತ್ರಿವೇಣಿ ಅವರ ಕಾದಂಬರಿಗಳು ಸಿನಿಮಾಗಳಾಗಿ ನಿರ್ಮಾಣಗೊಂಡು ಶೋಷಣೆಗೆ ಒಳಗಾದ ಹೆಣ್ಣಿನ ಬದುಕನ್ನು ಬೆಳ್ಳಿ ಪರದೆಯ ಮೇಲೆ ಅನಾವರಣಗೊಳಿಸಿದವು. ಶುಭ ಮಂಗಳ, ಬೆಸುಗೆ, ಶರ ಪಂಜರ, ಹೊಂಬಿಸಿಲು, ಗೆಜ್ಜೆ ಪೂಜೆ, ಬೆಳ್ಳಿ ಮೋಡ, ಹೂವು ಹಣ್ಣು ಇತ್ಯಾದಿ ಕಾದಂಬರಿ ಆಧಾರಿತ ಸಿನಿಮಾಗಳು ಹೆಣ್ಣಿನ ಸಂವೇದನೆಯನ್ನು ಅಭಿವ್ಯಕ್ತಿಸುವುದರೊಂದಿಗೆ ಕನ್ನಡದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳ ನಿರ್ಮಾಣಕ್ಕೆ ನಾಂದಿ ಹಾಡಿದವು. ತ್ರಿವೇಣಿ ಅವರ ಕಾದಂಬರಿಗಳು ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದಲ್ಲಿ ಸಿನಿಮಾಗಳಾಗಿ ಕನ್ನಡ ಚಿತ್ರರಂಗದ ವಿಶಿಷ್ಠ ಮಹಿಳಾ ಪ್ರಧಾನ ಸಿನಿಮಾಗಳೆಂಬ ಹಿರಿಮೆಗೆ ಪಾತ್ರವಾದವು. ಕಲ್ಪನಾ, ಆರತಿ, ಲಕ್ಷ್ಮಿ ಯಶಸ್ವಿ ಕಲಾವಿದೆಯರಾಗಿ ಪ್ರವರ್ಧಮಾನಕ್ಕೆ ಬರಲು ಕಾದಂಬರಿ ಆಧಾರಿತ ಸಿನಿಮಾಗಳ ಕೊಡುಗೆಯೂ ಬಹಳಷ್ಟಿದೆ. ಲಂಕೇಶ್ ಅವರ ‘ಸಂಕ್ರಾಂತಿ’, ‘ದೇವೆರಿ’, ಗೀತಾ ನಾಗಭೂಷಣರ ‘ಹಸಿಮಾಂಸ ಮತ್ತು ಹದ್ದುಗಳು’, ನಾ.ಡಿಸೋಜಾರ ‘ದ್ವೀಪ’ ಕಾದಂಬರಿಗಳು ಸಿನಿಮಾಗಳಾಗಿ ಹೆಣ್ಣನ್ನು ಬಂಡಾಯದ ಹಿನ್ನೆಲೆಯಲ್ಲಿ ದಿಟ್ಟ ಹೋರಾಟಗಾರ್ತಿಯಾಗಿ ಚಿತ್ರಿಸಿದವು.

ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಪಡೆದ ಅನೇಕ ಕಲಾತ್ಮಕ ಸಿನಿಮಾಗಳಿಗೆ ಕನ್ನಡ ಸಾಹಿತ್ಯದ ಕಾದಂಬರಿ ಲೋಕ ಒತ್ತಾಸೆಯಾಗಿ ನಿಂತಿದ್ದು ಉಲ್ಲೇಖಿಸಲೆಬೇಕಾದ ಸಂಗತಿಯಾಗಿದೆ. ಅನಂತಮೂರ್ತಿ, ಎಸ್.ಎಲ್.ಭೈರಪ್ಪ, ಪೂರ್ಣಚಂದ್ರ ತೇಜಸ್ವಿ, ಶ್ರೀಕೃಷ್ಣ ಆಲನಹಳ್ಳಿ ಇತ್ಯಾದಿ ಲೇಖಕರ ಕಾದಂಬರಿಗಳು ಕಲಾತ್ಮಕ ಸಿನಿಮಾಗಳಾಗಿ ನಿರ್ಮಾಣಗೊಂಡು ಗೌರವ ಮತ್ತು ಮನ್ನಣೆಗೆ ಪಾತ್ರವಾಗಿವೆ. ಕಾದಂಬರಿ ಆಧಾರಿತ ಸಿನಿಮಾಗಳಾದ ಸಂಸ್ಕಾರ, ಅವಸ್ಥೆ, ಬರ, ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೆ, ತಬರನ ಕಥೆ, ಕಾಡು, ಘಟಶ್ರಾದ್ಧ ಕಲಾತ್ಮಕ ಸಿನಿಮಾ ಲೋಕದ ಮಹತ್ವದ ಮೈಲಿಗಲ್ಲುಗಳು ಎನ್ನುವ ಕೀರ್ತಿಗೆ ಭಾಜನವಾಗಿವೆ. ಕನ್ನಡದ ಅನೇಕ ಕಾದಂಬರಿಗಳು ಕಲಾತ್ಮಕ ಸಿನಿಮಾಗಳಾಗಿ ನಿರ್ಮಾಣಗೊಳ್ಳುವುದರ ಮೂಲಕ ಸದಭಿರುಚಿಯ ಪ್ರೇಕ್ಷಕ ವರ್ಗವೊಂದು ಬೆಳೆಯಲು ಕನ್ನಡ ಸಾಹಿತ್ಯ ಪ್ರಪಂಚ ಕಾರಣವಾಗಿದೆ ಎನ್ನುವುದು ಮರೆಯುವಂತಿಲ್ಲ.

ಕನ್ನಡದ ಕವಿತೆಗಳು

ಸಿನಿಮಾಗಳ ನಿರ್ಮಾಣಕ್ಕೆ ಕನ್ನಡ ಕಾದಂಬರಿಗಳು ಬಳಕೆಯಾದಷ್ಟು ಸಿನಿಮಾಗಳಲ್ಲಿ ಕನ್ನಡ ಕವಿತೆಗಳನ್ನು ಉಪಯೋಗಿಸಿದ್ದು ಬಹಳಷ್ಟು ಕಡಿಮೆ ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ. ಮನೋರಂಜನೆಯೇ  ಪ್ರಧಾನವಾದ ಸಿನಿಮಾ ಮಾಧ್ಯಮದಲ್ಲಿ ಪ್ರೇಕ್ಷಕರನ್ನು ಸಿನಿಮಾ ಮಂದಿರಗಳತ್ತ ಸೆಳೆಯುವುದೇ ಸಿನಿಮಾ ಹಾಡುಗಳ ಉದ್ದೇಶವಾಗಿರುವುದರಿಂದ ಇಲ್ಲಿ ನಿರ್ದೇಶಕರು ಕನ್ನಡ ಕವಿತೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿಲ್ಲ. ಜೊತೆಗೆ ರಾಗಕ್ಕೆ ಅನುಗುಣವಾಗಿ ಸಿನಿಮಾ ಹಾಡುಗಳನ್ನು ಬರೆಯುವ ಸಂಪ್ರದಾಯವಿರುವುದರಿಂದ ಈ ಮೊದಲೆ ರಚನೆಯಾದ ಕನ್ನಡ ಕವಿತೆಗಳು ಸಂಗೀತ ನಿರ್ದೇಶಕರ ರಾಗಗಳಿಗೆ ಹೊಂದಿಕೊಳ್ಳದೇ ಹೋದದ್ದು ಕೂಡ ಒಂದು ಕಾರಣವಾಗಿರಬಹುದು. ಸಿನಿಮಾ ಹಾಡುಗಳಲ್ಲಿ ಪದಗಳಿಗಿಂತ ಸಂಗೀತಕ್ಕೇ ಹೆಚ್ಚಿನ ಪ್ರಾಧಾನ್ಯತೆಯಿರುವುದರಿಂದ ಅನೇಕ ಸಾಹಿತಿಗಳು ಸಿನಿಮಾ ಹಾಡುಗಳನ್ನು ಬರೆಯಲು ಒಪ್ಪಿಕೊಳ್ಳದೇ ಇರುವುದು ಇನ್ನೊಂದು ಕಾರಣವಾಗಿದೆ. ಈ ಎಲ್ಲ ವಿಪರ್ಯಾಸಗಳ ನಡುವೆಯೂ ಕನ್ನಡದ ಕೆಲವು ಮಹತ್ವದ ಕವಿತೆಗಳನ್ನು ಸಿನಿಮಾ ಮಾಧ್ಯಮ ಉಪಯೋಗಿಸಿಕೊಂಡಿದ್ದು ಪ್ರಶಂಸನೀಯ. ಕುವೆಂಪು, ದ.ರಾ.ಬೇಂದ್ರೆ, ಜಿ,ಎಸ್.ಶಿವರುದ್ರಪ್ಪ, ಪಿ.ಲಂಕೇಶ್, ದೊಡ್ಡರಂಗೇಗೌಡರ ಕೆಲವು ಕವಿತೆಗಳು ಸಿನಿಮಾ ಹಾಡುಗಳಾಗಿ ಜನಪ್ರಿಯವಾಗಿವೆ. ಬೆಳ್ಳಿಮೋಡ, ಶರಪಂಜರ, ಹೊಸಬೆಳಕು, ಮಿಸ್ ಲೀಲಾವತಿ, ಆಲೆಮನೆ, ಕಾಕನ ಕೋಟೆ, ಎಲ್ಲಿಂದಲೋ ಬಂದವರು, ಮಾನಸ ಸರೋವರ ಸಿನಿಮಾಗಳಲ್ಲಿ ಕನ್ನಡ ಕವಿತೆಗಳನ್ನು ಸಂದರ್ಭಕ್ಕನುಗುಣವಾಗಿ ಚಿತ್ರಿಸಿ ಸಿನಿಮಾ ಮಾಧ್ಯಮ ತನ್ನ ಸೃಜನಶೀಲತೆಯನ್ನು ಮೆರೆದಿದೆ. ಮೂಡಲ ಮನೆಯ ಮುತ್ತಿನ ನೀರಿನ, ಹಾಡು ಹಳೆಯದಾದರೇನು, ತೆರೆದಿದೆ ಮನೆ ಓ ಬಾ ಅತಿಥಿ, ದೋಣಿ ಸಾಗಲಿ ಮುಂದೆ ಹೋಗಲಿ, ನೇಸರ ನೋಡು, ನಮ್ಮೂರ ಮಂದಾರ ಹೂವೆ, ಕೆಂಪಾದವೋ ಎಲ್ಲ ಕೆಂಪಾದವೋ ಕವಿತೆಗಳು ಸಿನಿಮಾ ಹಾಡುಗಳಾಗಿ ಚಿತ್ರರಸಿಕರ ನೆನಪಿನಲ್ಲಿ ಹಚ್ಚ ಹಸಿರಾಗಿವೆ. ಕೆ.ಎಸ್.ನರಸಿಂಹ ಸ್ವಾಮಿ ಅವರ ‘ಮೈಸೂರು ಮಲ್ಲಿಗೆ’ ಕವನ ಸಂಕಲನ ಆಧರಿಸಿ ಅದೇ ಹೆಸರಿನ ಸಿನಿಮಾ ನಿರ್ಮಾಣಗೊಂಡದ್ದು ಕನ್ನಡದಲ್ಲಿ ಅದೊಂದು ವಿಶಿಷ್ಠ ಪ್ರಯೋಗ ಎನಿಸಿತು.

ಸಾಹಿತಿಗಳ ಸಿನಿಮಾ ಪ್ರೀತಿ

ಕನ್ನಡ ಸಾಹಿತ್ಯದಲ್ಲಿ ಸಿನಿಮಾವನ್ನು ಒಂದು ಸೃಜನಶೀಲ ಮಾಧ್ಯಮವೆಂದು ಒಪ್ಪಿಕೊಳ್ಳುವ ಬರಹಗಾರರ ಸಂಖ್ಯೆ ಬಹಳಷ್ಟು ಕಡಿಮೆ. ಸಿನಿಮಾ ಅದೊಂದು ಮನೋರಂಜನಾ ಮಾಧ್ಯಮ, ಸೃಜನಶೀಲತೆಗಿಂತ ಜನಪ್ರಿಯತೆಯೇ  ಇಲ್ಲಿ ಮಾನದಂಡ, ಕಲೆ ಎನ್ನುವುದು ಬಿಕರಿಯಾಗುತ್ತಿರುವ ಸರಕು ಹೀಗೆ ಹಲವು ಕಾರಣಗಳಿವೆ. ಈ ಎಲ್ಲ ಕಾರಣಗಳ ನಡುವೆಯೂ ಲಂಕೇಶ್, ಶೇಷಗೀರಿರಾವ್, ದೊಡ್ಡರಂಗೇಗೌಡ, ಬರಗೂರು ರಾಮಚಂದ್ರಪ್ಪ, ನಾಗತಿಹಳ್ಳಿ ಚಂದ್ರಶೇಖರ ಇತ್ಯಾದಿ ಸಾಹಿತಿಗಳ ಸಿನಿಮಾ ಪ್ರೀತಿ ಮತ್ತು ಒಲವು ಶ್ಲಾಘನೀಯ. ನಿರ್ದೇಶಕ ಮನುಷ್ಯನ ಅನಿರೀಕ್ಷಿತ ಪದರುಗಳಿಗೆ ತನ್ನ ಒಳನೋಟವನ್ನು ಹರಿಸಿದಾಗ ಮಾತ್ರ ಅತ್ಯುತ್ತಮ ಸಿನಿಮಾಗಳ ಕಾಣ್ಕೆ ಸಾಧ್ಯ ಎನ್ನುತ್ತಾರೆ ಲಂಕೇಶ್. 1969 ರಲ್ಲಿ ಲಂಕೇಶ್ ‘ಸಂಸ್ಕಾರ’ ಸಿನಿಮಾದಲ್ಲಿ ಅಭಿನಯಿಸುವುದರೊಂದಿಗೆ ಸಿನಿಮಾದೊಂದಿಗಿನ ಅವರ ನಂಟು ಪ್ರಾರಂಭವಾಯಿತು. ‘ಸಂಸ್ಕಾರ ನನ್ನ ಆಳದಲ್ಲಿ ಟಿಪ್ಪಣಿಗಳಾಗಿ, ಹಲವಾರು ಶಾಟ್‍ಗಳ ತುಣುಕುಗಳಾಗಿ ನನ್ನಲ್ಲಿ ನಿಂತು ಹೋಯಿತು. ಆದರೆ ನನ್ನ ಅಂತರಾಳ ಏನನ್ನೂ ಸೃಷ್ಟಿಸಲಾಗದ ಹತಾಶೆಯಿಂದ ಅಲ್ಲೋಲಕಲ್ಲೋಲವಾಗಿತ್ತು’ ಎಂದೆನ್ನುವ ಲಂಕೇಶ್ ಮುಂದೆ ‘ಪಲ್ಲವಿ’, ‘ಅನುರೂಪ’, ‘ಎಲ್ಲಿಂದಲೋ ಬಂದವರು’ ಸಿನಿಮಾಗಳ ಮೂಲಕ ತನ್ನೊಳಗಿನ ಹತಾಶೆಯನ್ನು ಶಮನಗೊಳಿಸಲು ಪ್ರಯತ್ನಿಸಿದರು. ಬರವಣಿಗೆಯಷ್ಟೇ ಸಿನಿಮಾವನ್ನು ಉತ್ಕಟವಾಗಿ ಪ್ರೀತಿಸುವ ನಾಗತಿಹಳ್ಳಿ ಚಂದ್ರಶೇಖರ ನಿರ್ದೇಶಕರಾಗಿ ಇವತ್ತಿಗೂ ಸಿನಿಮಾ ಮಾಧ್ಯಮದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವರು. ಸಿನಿಮಾ ಮಾಧ್ಯಮದ ಸಿದ್ಧಸೂತ್ರವನ್ನು ಮುರಿದು ಸೃಜನಶೀಲತೆಯ ನೆಲೆಯಲ್ಲಿ ಸಿನಿಮಾ ರೂಪಿಸುವ ನಾಗತಿಹಳ್ಳಿ ಚಂದ್ರಶೇಖರ ಅವರ ಮನೋಭಾವಕ್ಕೆ ಅವರು ನಿರ್ದೇಶಿಸಿದ ಅನೇಕ ಸಿನಿಮಾಗಳು ಸಾಕ್ಷಿಯಾಗಿವೆ. ವ್ಯಾಪಾರಿ ಸಿನಿಮಾಗಳ ಮಾನದಂಡಕ್ಕೆ ಒಳಪಡದೇ ನಿರ್ಮಾಣಗೊಂಡ ‘ದೊರೆ’ ಮತ್ತು ‘ಹಗಲು ವೇಷ’ ಸಿನಿಮಾ ಮಾಧ್ಯಮಕ್ಕೆ ಬರಗೂರು ರಾಮಚಂದ್ರಪ್ಪನವರ ವಿಶಿಷ್ಠ ಕೊಡುಗೆಗಳಾಗಿವೆ.

ಗೋಕಾಕ ಚಳವಳಿ

ಕನ್ನಡ ನಾಡು ನುಡಿಗೆ ಸಂಕಷ್ಟ ಎದುರಾದಾಗಲೆಲ್ಲ ಬರಹಗಾರರು ಮತ್ತು ಸಿನಿಮಾ ಕಲಾವಿದರು ಒಂದಾಗಿ ನಿಂತಿದ್ದು ಬಹಳ ಅಪರೂಪ. ಗೋಕಾಕ ಚಳವಳಿ ಮಾತ್ರ ಈ ಮಾತಿಗೆ ಅಪವಾದವೆನ್ನುವಂತೆ ಈ ನೆಲದಲ್ಲಿ ರೂಪುಗೊಂಡ ಹೋರಾಟವಾಗಿದೆ. ಕನ್ನಡ ಭಾಷೆ ಮತ್ತು ನೆಲಕ್ಕೆ ಸಂಕಷ್ಟವೆದುರಾದ ಆ ಸಂದಿಗ್ಧ ಸ್ಥಿತಿಯಲ್ಲಿ ಸಿನಿಮಾ ಕಲಾವಿದರು ಮತ್ತು ಬರಹಗಾರರು ಒಂದಾಗಿ ಹೋರಾಟಕ್ಕಿಳಿದಿದ್ದು ಕರ್ನಾಟಕದ ಇತಿಹಾಸದಲ್ಲಿ ಅದೊಂದು ಅವಿಸ್ಮರಣೀಯ ಘಟನೆ. ಇದು ನಡೆದದ್ದು 1982 ರಲ್ಲಿ. ಕನ್ನಡ ಭಾಷೆಗೆ ಸಂಬಂಧಿಸಿದಂತೆ ಗೋಕಾಕ ಸಮಿತಿಯ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರುವಂತೆ ಸರ್ಕಾರವನ್ನು ಒತ್ತಾಯಿಸಲು ಕನ್ನಡ ಸಾಹಿತಿಗಳೆಲ್ಲ ಚಳವಳಿಗೆ ಮುಂದಾದರು. ಆದರೆ ಅಂದು ಅವರ ಮುಂದಿದ್ದ ಪ್ರಶ್ನೆ ಜನರನ್ನು ಹೇಗೆ ಒಂದುಗೂಡಿಸುವುದು ಎನ್ನುವುದಾಗಿತ್ತು. ಆಗ ಸಾಹಿತ್ಯ ಲೋಕಕ್ಕೆ ಗೋಚರಿಸಿದ್ದು ರಾಜಕುಮಾರ ಅವರ ಹೆಸರು. ಸಾಹಿತಿಗಳ ಕರೆಗೆ ಓಗೊಟ್ಟು ರಾಜಕುಮಾರ ಸಿನಿಮಾ ಕಲಾವಿದರೊಂದಿಗೆ ಚಳವಳಿಗೆ ಧುಮಿಕಿದರು. ನ ಭೂತೋ ನ ಭವಿಷ್ಯತಿ ಎನ್ನುವಂತೆ ಚಳವಳಿ ಯಶಸ್ವಿಯಾಯಿತು. ನಾಡಿನ ಮೂಲೆ ಮೂಲೆಗೂ ಹೋದ ಚಳವಳಿಗಾರರು ಕನ್ನಡ ಪ್ರೇಮವನ್ನು ಜಾಗೃತಗೊಳಿಸಿದರು. ರಾಜಕುಮಾರ ಅವರ ಹಿಂದೆ ಇಡೀ ಚಿತ್ರರಂಗ ಮತ್ತು ಸಾಹಿತ್ಯ ವಲಯ ಬೆಂಗಾವಲಾಗಿ ನಿಂತಿತ್ತು. ಚಳವಳಿಯ ತೀವ್ರತೆಗೆ ಮಣಿದ ಸರ್ಕಾರ ಗೋಕಾಕ ಸಮಿತಿಯಲ್ಲಿನ ಎಲ್ಲ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರುವ ಭರವಸೆ ನೀಡಿತು.

ಕಾಲ ಬದಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಸೃಜನಶೀಲ ಮನಸ್ಸುಗಳು ಕಣ್ಮರೆಯಾಗಿವೆ. ಸಿನಿಮಾ ಮಾಧ್ಯಮ ಉದ್ಯಮವಾಗಿ ಬದಲಾಗಿ ಬಂಡವಾಳ ಹೂಡಿ ಲಾಭ ಗಳಿಸಬೇಕೆನ್ನುವ ವ್ಯಾಪಾರಿ ಮನೋಭಾವ ಢಾಳುಢಾಳಾಗಿ ಗೋಚರಿಸುತ್ತಿದೆ. ಒಂದು ವರ್ಗದ ಸದಭಿರುಚಿಯ ಪ್ರೇಕ್ಷಕರು ಅಂತರರಾಷ್ಟ್ರೀಯ ಸಿನಿಮಾಗಳೆಡೆ ವಲಸೆ ಹೋಗಿರುವರು. ಸಿನಿಮಾದ ಜನಪ್ರಿಯತೆ ಮತ್ತು ಜನಾಕರ್ಷಣೆಯ ನಡುವೆಯೂ ಸೃಜನಶೀಲ ಬರಹಗಾರರು ಸಿನಿಮಾದಿಂದ ಒಂದು ಅಂತರವನ್ನು ಕಾಯ್ದುಕೊಳ್ಳುತ್ತಿರುವರು. ಸೃಜನಶೀಲತೆ ಇನ್ನು ಉಳಿಸಿಕೊಂಡಿದ್ದ ಕಾಲದಲ್ಲೇ ತರಾಸು ಅವರಿಂದ ‘ನನ್ನ ನಾಗರ ಹಾವನ್ನು ಕೆರೆಯ ಹಾವಾಗಿ ಮಾಡಿರುವಿರಿ’ ಎಂದು ತೆಗಳಿಸಿಕೊಂಡಿದ್ದ ಸಿನಿಮಾ ಮಾಧ್ಯಮದಲ್ಲಿ ಇಂದು ಮನೋರಂಜನೆಯೇ  ಮುನ್ನೆಲೆಗೆ ಬರುತ್ತಿರುವಾಗ ಕಾದಂಬರಿ ಆಧಾರಿತ ಸಿನಿಮಾಗಳು ನಿರ್ಮಾಣಗೊಳ್ಳುವುದು ದೂರದ ಮಾತು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Sunday, July 1, 2018

ಡಾ.ಬಿ.ಸಿ.ರಾಯ್: ವೃತ್ತಿ ಘನತೆ ಹೆಚ್ಚಿಸಿದ ವೈದ್ಯ ಬ್ರಹ್ಮ




God and the Doctor we alike adore
But only when in danger, not before;
The danger over, both are alike requited,

God is forgotten, and the Doctor slighted. — Robert Owen

      
       ಭಾರತದಲ್ಲಿ ಪ್ರತಿವರ್ಷ ಜುಲೈ 1 ರಂದು ‘ವೈದ್ಯರ ದಿನ’ ಆಚರಿಸಲಾಗುತ್ತದೆ. ಮನುಷ್ಯನ ಜೀವ ಉಳಿಸುವ ವೈದ್ಯ ವೃತ್ತಿಯನ್ನು ಅತ್ಯಂತ ಪವಿತ್ರವೆಂದು ಭಾವಿಸಿದ ನೆಲವಿದು. ‘ವೈದ್ಯೋ ನಾರಾಯಣ ಹರಿ’ ಎಂದು ವೈದ್ಯರನ್ನು ದೇವರಿಗೆ ಸಮಾನವಾಗಿ ಪೂಜಿಸುವ ಭಾವನಾತ್ಮಕ ಹೃದಯ ಭಾರತೀಯರದು. ಖಾಸಗಿ ಆಸ್ಪತ್ರೆಗಳು ಮತ್ತು ಕಾರ್ಪೊರೇಟ್  ಆಸ್ಪತ್ರೆಗಳು ವೈದ್ಯಕೀಯ ವೃತ್ತಿಯನ್ನು ಬಂಡವಾಳ ಹೂಡಿ ಹಣಗಳಿಕೆಯ ಉದ್ಯಮವಾಗಿ ಪರಿಗಣಿಸಿರುವ ಈ ಸಂದರ್ಭ ‘ವೈದ್ಯೋ ನಾರಾಯಣ ಹರಿ’ ಎನ್ನುವ ಹೇಳಿಕೆ ಸವಕಲಾಗಿದೆ ಎನ್ನುವ ಸಿನಿಕತನ ಅನೇಕರಲ್ಲಿ ಮನೆ ಮಾಡಿಕೊಂಡಿದೆ. ಈ ಮಾತನ್ನು ಪೂರ್ಣವಾಗಿ ಅಲ್ಲಗಳೆಯುವಂತಿಲ್ಲ. ಮಹಾನಗರಗಳಲ್ಲಿ ಬೃಹತ್ ಕಟ್ಟಡಗಳಲ್ಲಿ ತಲೆ ಎತ್ತಿ ನಿಂತಿರುವ ಸುಸಜ್ಜಿತ ಆಸ್ಪತ್ರೆಗಳು ಇವತ್ತು ರೋಗಿಗಳಿಂದ ಹಣ ವಸೂಲಿಗಿಳಿದಿವೆ. ಇನ್ನೊಂದೆಡೆ ಸೌಲಭ್ಯಗಳಿಲ್ಲದ ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯುತ್ತಮ ಆರೋಗ್ಯಕರ ಸೇವೆ ಎನ್ನುವುದು ಮರೀಚಿಕೆಯಾಗಿ ಗೋಚರವಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಬಡವರು, ಅಸಹಾಯಕರು, ನಿರ್ಗತಿಕರು ಸಮಯಕ್ಕೆ ಸರಿಯಾಗಿ ಅಗತ್ಯದ ವೈದ್ಯಕೀಯ ಸೇವೆ ದೊರೆಯದೇ ಸಾಯುತ್ತಿರುವುದು ಸಹಜ ದೃಶ್ಯವಾಗಿ ಕಾಣಿಸುತ್ತಿದೆ. ಹಾಗೆಂದು ತೀರ ನಿರಾಶಾದಾಯಕ ವಾತಾವರಣ ಇಲ್ಲಿದೆ ಎಂದು ಭಾವಿಸುವಂತಿಲ್ಲ. ಕೆಲವು ಖಾಸಗಿ ಆಸ್ಪತ್ರೆಗಳಲ್ಲಿನ ವೈದ್ಯರಲ್ಲಿ ಬಡಜನರ ಸಮಸ್ಯೆಗಳಿಗೆ ಮಿಡಿಯುವ ಹೃದಯವಿದೆ. ಅನೇಕ ಸಂಘ ಸಂಸ್ಥೆಗಳು ಹಣ ದಾಹದಿಂದ ದೂರನಿಂತು ಜನ ಸೇವೆಯೇ ಜನಾರ್ಧನನ ಸೇವೆಯೆಂದು ತಿಳಿದು ಆಸ್ಪತ್ರೆಗಳನ್ನು ಸ್ಥಾಪಿಸಿ ಆ ಮೂಲಕ ಕೈಗೆಟುಕುವ ದರದಲ್ಲಿ ಮತ್ತು ಉಚಿತವಾಗಿ ಸಾರ್ವಜನಿಕರಿಗೆ ಆರೋಗ್ಯ ಸೇವೆಯನ್ನು ಒದಗಿಸುತ್ತಿರುವ ಹಲವು ಉದಾಹರಣೆಗಳಿವೆ. ಅತ್ಯಂತ ಪವಿತ್ರವೂ ಮತ್ತು ಪೂಜ್ಯನೀಯವೂ ಆದ ವೈದ್ಯ ವೃತ್ತಿ ಹಣದಾಹಿಗಳ ಕೈಗೆ ಸಿಲುಕಿ ತನ್ನ ಮೂಲ ಸೇವಾ ಮನೋಭಾವವನ್ನೇ ಕಳೆದುಕೊಳ್ಳುತ್ತಿರುವ ಈ ದಿನಗಳಲ್ಲಿ ಭಾರತದಲ್ಲಿ ವೈದ್ಯ ವೃತ್ತಿಗೆ ಒಂದು ಘನತೆ ತಂದಿತ್ತ ಡಾ.ಬಿ.ಸಿ.ರಾಯ್ ಅವರನ್ನು ಸ್ಮರಿಸಿಕೊಳ್ಳುವುದು ಇವತ್ತಿನ ತುರ್ತು ಅಗತ್ಯವಾಗಿದೆ. ಜುಲೈ 1 ಡಾ.ಬಿ.ಸಿ.ರಾಯ್ ಅವರ ಜನ್ಮ ದಿನವೂ ಹೌದು. 

ಡಾ.ಬಿ.ಸಿ.ರಾಯ್ ಭಾರತದ ವೈದ್ಯಕೀಯ ಕ್ಷೇತ್ರದಲ್ಲಿ ಈ ಹೆಸರು ಅಜರಾಮರ. ಡಾ.ಬಿಧಾನಚಂದ್ರ ರಾಯ್ ಜನಿಸಿದ್ದು ಜುಲೈ 1, 1882 ರಂದು ಬಿಹಾರದ ಪಾಟ್ನಾದಲ್ಲಿ. ಸುಸಂಸ್ಕೃತ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಕುಟುಂಬದಲ್ಲಿ ಜನಿಸಿದ ಬಿಧಾನಚಂದ್ರ ರಾಯ್ ಅವರಿಗೆ ಬಾಲ್ಯದಿಂದಲೇ ಸಾರ್ವಜನಿಕ ಸೇವೆಯಲ್ಲಿ ಆಸಕ್ತಿಯಿತ್ತು. ಗಣೀತಶಾಸ್ತ್ರದಲ್ಲಿ ಪದವಿ ಶಿಕ್ಷಣ ಪೂರೈಸಿ ನಂತರ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಈ ಎರಡೂ ವಿಷಯಗಳಲ್ಲಿ ಅರ್ಹತೆಯ ಆಧಾರದ ಮೇಲೆ ಪ್ರವೇಶ ಪಡೆದ ಬಿಧಾನಚಂದ್ರ ರಾಯ್ ತಮ್ಮ ವ್ಯಾಸಂಗಕ್ಕಾಗಿ ಆರಿಸಿಕೊಂಡಿದ್ದು ವೈದ್ಯಕೀಯ ಕ್ಷೇತ್ರವನ್ನು. ತಮ್ಮೊಳಗಿನ ಸೇವಾಮನೋಭಾವವನ್ನು ಕಾರ್ಯರೂಪಕ್ಕೆ ತರಲು ವೈದ್ಯರಾಗಲು ಬಯಸಿದ ಬಿಧಾನಚಂದ್ರ ರಾಯ್ 1901 ರಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ ಕಲ್ಕತ್ತದ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದರು. ಒಂದು ವೇಳೆ ರಾಯ್ ಅವರು ಇಂಜಿನಿಯರಿಂಗ್ ಕ್ಷೇತ್ರವನ್ನು ಆರಿಸಿಕೊಂಡಿದ್ದಲ್ಲಿ ಭಾರತ ಒಬ್ಬ ಸೇವಾ ಮನೋಭಾವದ ವೈದ್ಯನನ್ನು ಕಳೆದುಕೊಳ್ಳುತ್ತಿತ್ತು. ಕಲ್ಕತ್ತ ವೈದ್ಯಕೀಯ ಕಾಲೇಜಿನ ಪ್ರವೇಶ ದ್ವಾರದ ಬಳಿ ತೂಗುಹಾಕಿದ್ದ ಫಲಕದಲ್ಲಿನ ‘Whatever your hand finds to do, do it with all your might’ ಬರಹ  ಬಿಧಾನಚಂದ್ರ ರಾಯ್ ಅವರ ಬದುಕಿನ ಗತಿಯನ್ನೇ ಬದಲಿಸಿತು. ವಿದ್ಯಾರ್ಥಿ ದೆಸೆಯಲ್ಲೇ ವೈದ್ಯಕೀಯ ಶಿಕ್ಷಣದ ನಂತರ ತಮ್ಮ ಬದುಕನ್ನೇ ಬಡವರ ಸೇವೆಗೆ ಮುಡುಪಾಗಿಡಲು ನಿರ್ಧರಿಸಿದರು. ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸಿ ಕೆಲವು ವರ್ಷಗಳ ಕಾಲ ಕಲ್ಕತ್ತದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದರು. ಈ ಮಧ್ಯೆ ವಿರಾಮ ಸಮಯದಲ್ಲಿ ಖಾಸಗಿಯಾಗಿ ಕೇವಲ 2 ರೂಪಾಯಿಗಳ ಶುಲ್ಕ ಪಡೆದು ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಅತ್ಯಂತ ಜನಾನುರಾಗಿ ವೈದ್ಯರೆಂದು ಖ್ಯಾತಿ ಪಡೆದರು. ನಂತರದ ದಿನಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ 1909 ರಲ್ಲಿ ಇಂಗ್ಲೆಂಡಿಗೆ ತೆರಳಿದ ಡಾ.ಬಿ.ಸಿ.ರಾಯ್ ವಿದೇಶದಲ್ಲಿ ಎಮ್.ಆರ್.ಪಿ.ಸಿ ಮತ್ತು ಎಫ್.ಆರ್.ಸಿ.ಎಸ್ ಪದವಿ ಪಡೆದು 1911 ರಲ್ಲಿ ಬಡಜನರಿಗೆ ಆರೋಗ್ಯ ಸೇವೆ ಒದಗಿಸಬೇಕೆನ್ನುವ ಮಹತ್ವಾಕಾಂಕ್ಷೆಯೊಂದಿಗೆ ತಾಯ್ನಾಡಿಗೆ ಮರಳಿದರು. 

ಡಾ.ಬಿ.ಸಿ.ರಾಯ್ ವೈದ್ಯಕೀಯ ಶಿಕ್ಷಣದ ವಿದ್ಯಾರ್ಥಿಯಾಗಿದ್ದ ಆ ದಿನಗಳು ಭಾರತದಲ್ಲಿ ಸ್ವಾತಂತ್ರ್ಯ ಚಳವಳಿ ದಟ್ಟವಾಗಿದ್ದ ಕಾಲವದು. ಗಾಂಧೀಜಿ ಅವರ ನೇತೃತ್ವದಲ್ಲಿ ಭಾರತೀಯರೆಲ್ಲ ಬ್ರಿಟಿಷರ ವಿರುದ್ಧ ‘ಮಾಡು ಇಲ್ಲವೆ ಮಡಿ’ ಎನ್ನುವ ಮನೋಭಾವದಿಂದ ತಮ್ಮನ್ನು ಭಾರತಾಂಬೆಗೆ ಸಮರ್ಪಿಸಿಕೊಂಡಿದ್ದರು. ಡಾ.ಬಿ.ಸಿ.ರಾಯ್ ಅವರಲ್ಲೂ ದೇಶ ಪ್ರೇಮ ದಟ್ಟವಾಗಿತ್ತು. ವಿದ್ಯಾರ್ಥಿ ದೆಸೆಯಲ್ಲೇ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದರು. ಆ ಸಂದರ್ಭ ಭಾರತೀಯರು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾದರೆ ಮಾತ್ರ ಸ್ವರಾಜ್ಯ ಭಾರತದ ಕಲ್ಪನೆ ಸಾಧ್ಯವೆಂದು ಅವರು ನಂಬಿದ್ದರು. ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾದ ಭಾರತೀಯರೆಲ್ಲ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ಸಮರ್ಪಿಸಿಕೊಂಡರೆ ದೇಶ ಸ್ವತಂತ್ರವಾಗುವ ದಿನಗಳೇನೂ ದೂರವಿಲ್ಲ ಎನ್ನುವ ನಂಬಿಕೆ ಡಾ.ಬಿ.ಸಿ.ರಾಯ್ ಅವರದಾಗಿತ್ತು. ಇದಕ್ಕಿರುವ ಏಕೈಕ ಪರಿಹಾರ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳನ್ನು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪಿಸಬೇಕೆನ್ನುವುದಾಗಿತ್ತು. ಪರಿಣಾಮವಾಗಿ ಪಶ್ಚಿಮ ಬಂಗಾಳದಲ್ಲಿ ಜಾಧವಪೂರ ಕ್ಷಯರೋಗ ಆಸ್ಪತ್ರೆ, ಚಿತ್ತರಂಜನ್ ಸೇವಾಸದನ, ಆರ್.ಜಿ.ಖಾರ್ ವೈದ್ಯಕೀಯ ಕಾಲೇಜು, ಕಮಲಾ ನೆಹರು ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ಚಿತ್ತರಂಜನ್ ಕ್ಯಾನ್ಸರ್ ಆಸ್ಪತ್ರೆ ಹೀಗೆ ಹಲವಾರು ವೈದ್ಯಕೀಯ ಸೇವಾ ಸಂಸ್ಥೆಗಳನ್ನು ಸ್ಥಾಪಿಸಿದರು. ಮಹಿಳೆಯರು ಮತ್ತು ಮಕ್ಕಳಿಗಾಗಿ 1926 ರಲ್ಲಿ ಪ್ರತ್ಯೇಕ ಆಸ್ಪತ್ರೆಯನ್ನೇ ಸ್ಥಾಪಿಸಿದರು. ಭಾರತದಲ್ಲಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗಾಗಿ ನಿಯಮಗಳನ್ನು ರೂಪಿಸಲು ಮತ್ತು ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಕಾಪಾಡಲು ಡಾ.ಬಿ.ಸಿ.ರಾಯ್ 1939 ರಲ್ಲಿ ಭಾರತೀಯ ವೈದ್ಯಕೀಯ ಮಂಡಳಿಯನ್ನು ಸ್ಥಾಪಿಸಿ 1945 ರ ವರೆಗೆ ಈ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ರಾಯ್ ಅವರು ಮಹೋನ್ನತ ಉದ್ದೇಶದಿಂದ ಸ್ಥಾಪಿಸಿದ ಮಂಡಳಿ ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರದ ಕೂಪಕ್ಕೆ ಸಿಲುಕಿ ತನ್ನ ಮೂಲ ಉದ್ದೇಶವನ್ನೆ ಮರೆತದ್ದು ಬಹುದೊಡ್ಡ ದುರಂತ. 

ಡಾ.ಬಿ.ಸಿ.ರಾಯ್ ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಆ ಮೂಲಕ ಗಾಂಧೀಜಿ ಅವರಿಗೆ ನಿಕಟವರ್ತಿಯಾದರು. 1942 ರಲ್ಲಿ ‘ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಭಾಗವಹಿಸಿದ್ದ ಗಾಂಧೀಜಿ ಅವರು ಪೂನಾದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದಾಗ ಅವರ ಆರೋಗ್ಯವನ್ನು ನೋಡಿಕೊಳ್ಳಲು ಡಾ.ಬಿ.ಸಿ.ರಾಯ್ ಕೂಡ ಈ ಚಳವಳಿಯಲ್ಲಿ ಭಾಗವಹಿಸಿದರು. ಪ್ರಾರಂಭದಲ್ಲಿ ಗಾಂಧೀಜಿ ಭಾರತೀಯ ಬಡ ಜನತೆಗೆ ಲಭ್ಯವಿರದ ವೈದ್ಯಕೀಯ ಸೇವೆಯನ್ನು ತಾವು ಪಡೆಯಲು ನಿರಾಕರಿಸುತ್ತಾರೆ. ‘ನಾನೇಕೆ ನಿಮ್ಮಿಂದ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲಿ. ನನ್ನ ದೇಶದ ನಲವತ್ತು ಕೋಟಿ ಜನರಿಗೆ ನೀವು ಉಚಿತ ಚಿಕಿತ್ಸೆಯನ್ನು ನೀಡುವಿರಾ?’ ಎಂದ ಗಾಂಧೀಜಿ ಪ್ರಶ್ನೆಗೆ ಡಾ.ಬಿ.ಸಿ.ರಾಯ್ ಉತ್ತರಿಸಿದ್ದು ಹೀಗೆ ‘ಇಲ್ಲ ಬಾಪೂ ನಾನು ಎಲ್ಲ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡದೆ ಇರಬಹುದು. ಆದರೆ ನಾನು ಇಲ್ಲಿ ಬಂದಿರುವುದು ಮೋಹನದಾಸ ಕರಮಚಂದ ಗಾಂಧಿ ಎನ್ನುವ ವ್ಯಕ್ತಿಗೆ ಚಿಕಿತ್ಸೆ ನೀಡಲು ಅಲ್ಲ. ನಾನು ಚಿಕಿತ್ಸೆ ನೀಡುತ್ತಿರುವುದು ನನ್ನ ದೇಶದ ನಲವತ್ತು ಕೋಟಿ ಜನರನ್ನು ಪ್ರತಿನಿಧಿಸುತ್ತಿರುವ ಪರಮ ಪೂಜ್ಯ ಮನುಷ್ಯನಿಗೆ’ ಬಿ.ಸಿ.ರಾಯ್ ಅವರ ಮಾತುಗಳಿಂದ ಭಾವಪರವಶರಾದ ಗಾಂಧೀಜಿ ವೈದ್ಯಕೀಯ ಚಿಕಿತ್ಸೆಯನ್ನು ಸ್ವೀಕರಿಸಲು ಅನುಮತಿ ನೀಡುತ್ತಾರೆ. ಗಾಂಧೀಜಿ ಅವರೊಂದಿಗಿನ ಈ ನಿಕಟ ಒಡನಾಟವೇ ಡಾ.ಬಿ.ಸಿ.ರಾಯ್ ಅವರು ರಾಜಕೀಯ ಪ್ರವೇಶಿಸಲು ಪ್ರೇರಣೆಯಾಯಿತು.

ಭಾರತದ ಸ್ವಾತಂತ್ರ್ಯಾ ನಂತರ ಗಾಂಧೀಜಿ ಅವರ ಸಲಹೆ ಮೇರೆಗೆ ಡಾ.ಬಿ.ಸಿ.ರಾಯ್ 1948 ಜನೆವರಿ 23 ರಂದು ಪಶ್ಚಿಮ ಬಂಗಾಳದ ಎರಡನೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಡಾ.ಬಿ.ಸಿ.ರಾಯ್ ಮುಖ್ಯ ಮಂತ್ರಿಯಾದ ಆ ಸಂದರ್ಭ ಕೋಮು ದಳ್ಳುರಿ, ಆಹಾರದ ಕೊರತೆ, ನಿರುದ್ಯೋಗ, ಪೂರ್ವ ಪಾಕಿಸ್ತಾನದಿಂದ ವಲಸೆ ಬರುವ ನಿರಾಶ್ರಿತರು ಹೀಗೆ ಅನೇಕ ಸಮಸ್ಯೆಗಳು ಪಶ್ಚಿಮ ಬಂಗಾಳ ರಾಜ್ಯವನ್ನು ಕಾಡುತ್ತಿದ್ದವು. ಡಾ.ಬಿ.ಸಿ.ರಾಯ್ ಕೇವಲ ಮೂರು ವರ್ಷಗಳ ಅವಧಿಯಲ್ಲಿ ಈ ಎಲ್ಲ ಸಮಸ್ಯೆಗಳನು ಹತ್ತಿಕ್ಕಿ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದರು. ಅನೇಕ ಯಶಸ್ವಿ ಕಾರ್ಯಯೋಜನೆಗಳ ಮೂಲಕ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಎಂದು ಸಾರ್ವಜನಿಕರ ಗೌರವಕ್ಕೆ ಪಾತ್ರರಾದರು. ತಮ್ಮ ಪ್ರಾಮಾಣಿಕ ಮತ್ತು ದಕ್ಷ ಆಡಳಿತದಿಂದ 1948 ರಿಂದ ತಮ್ಮ ಬದುಕಿನ ಕೊನೆಯ ದಿನಗಳವರೆಗೆ ಸುಮಾರು 14 ವರ್ಷಗಳ ಕಾಲ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಯಿತು. ವೈದ್ಯಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ 1961 ರಲ್ಲಿ ಡಾ.ಬಿ.ಸಿ.ರಾಯ್ ಅವರನ್ನು ಭಾರತ ಸರ್ಕಾರ ದೇಶದ ಅತ್ಯುನ್ನತ ಗೌರವ ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಿತು. 

ಸ್ವಾತಂತ್ರ್ಯ ಹೋರಾಟಗಾರರಾಗಿ, ವೈದ್ಯರಾಗಿ, ವೈದ್ಯಕೀಯ ವಿಜ್ಞಾನದ ಶಿಕ್ಷಕರಾಗಿ, ಕಲ್ಕತ್ತ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ, ಹಲವಾರು ಆಸ್ಪತ್ರೆಗಳ ಮತ್ತು ವೈದ್ಯಕೀಯ ಕಾಲೇಜುಗಳ ಸ್ಥಾಪಕರಾಗಿ, ಮುಖ್ಯ ಮಂತ್ರಿಯಾಗಿ ಹೀಗೆ ಹಲವು ಸಮಾಜೋದ್ಧಾರ ಕಾರ್ಯಗಳನ್ನು ನಿರ್ವಹಿಸಿದ ಡಾ.ಬಿ.ಸಿ.ರಾಯ್ 1962 ರ ಜುಲೈ 1 ರಂದು ನಿಧನರಾದರು. ತಮ್ಮ 80 ನೇ ಜನ್ಮದಿನದಂದು ಬೆಳಿಗ್ಗೆ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಿ ನಂತರ ಮುಖ್ಯಮಂತ್ರಿ ಕಚೇರಿಯಲ್ಲಿ ಆ ದಿನದ ರಾಜ್ಯದ ಕಾರ್ಯಭಾರವನ್ನು ನಿರ್ವಹಿಸಿ ರಾತ್ರಿ ಇಹಲೋಕವನ್ನು ತ್ಯಜಿಸಿದ ರಾಯ್ ತಮ್ಮ ಸಾವಿನ ದಿನದಂದೂ ಕರ್ತವ್ಯ ಪ್ರಜ್ಞೆಯನ್ನು ಮೆರೆದರು. ರಾಯ್ ಸಾವಿಗಿಂತ ಮೊದಲು ನಿಧನಾನಂತರ ತಮ್ಮ ಮನೆಯನ್ನು ಬಡವರ ಮತ್ತು ದೀನದಲಿತರ ಸೇವೆಗಾಗಿ ಆಸ್ಪತ್ರೆಯಾಗಿ ಉಪಯೋಗಿಸಬೇಕೆಂದು ಸರ್ಕಾರಕ್ಕೆ ದೇಣಿಗೆಯಾಗಿ ನೀಡಿದರು. ಅವರ ಆಸೆಯಂತೆ ಪಶ್ಚಿಮ ಬಂಗಾಳ ಸರ್ಕಾರ ರಾಯ್ ಅವರ ತಾಯಿಯ ಹೆಸರಿನಲ್ಲಿ ಆಸ್ಪತ್ರೆಯನ್ನು ಸ್ಥಾಪಿಸಿತು. ಈ ಮಹಾನ್ ಸಾಧಕನ ಸ್ಮರಣಾರ್ಥ ಭಾರತ ಸರ್ಕಾರ 1976 ರಿಂದ ವೈದ್ಯಕೀಯ, ಸಾಮಾಜಿಕ, ಸಾಹಿತ್ಯ, ಕಲೆ ಇತ್ಯಾದಿ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ‘ಡಾ.ಬಿ.ಸಿ.ರಾಯ್ ರಾಷ್ಟ್ರೀಯ ಪ್ರಶಸ್ತಿ’ಯನ್ನು ಪ್ರತಿವರ್ಷ ನೀಡಿ ಗೌರವಿಸುತ್ತಿದೆ. ಡಾ.ಬಿ.ಸಿ.ರಾಯ್ ಅವರ ಜನ್ಮದಿನವಾದ ಜುಲೈ 1 ರಂದು ಭಾರತದಾದ್ಯಂತ ‘ವೈದ್ಯರ ದಿನ’ ಆಚರಿಸುವುದರ ಮೂಲಕ ಆ ವೈದ್ಯ ಬ್ರಹ್ಮನಿಗೆ ಗೌರವ ಸೂಚಿಸಲಾಗುತ್ತಿದೆ.  

ಶಿಕ್ಷಣ ಕ್ಷೇತ್ರದಲ್ಲಿ ವ್ಯಾಪಾರೀಕರಣದ ಮನೋಭಾವ ದಟ್ಟವಾಗಿ ಬೆಳೆಯುತ್ತಿರುವ ಈ ಸಂದರ್ಭ ವಿದ್ಯಾರ್ಥಿಗಳಿಗೆ ವಿಶೇಷವಾಗಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಡಾ.ಬಿ.ಸಿ.ರಾಯ್ ಅವರಂಥ ಸೇವಾ ಮನೋಭಾವದ ಉನ್ನತ ವ್ಯಕ್ತಿತ್ವವನ್ನು ಪರಿಚಯಿಸುವ ಕೆಲಸ ಪ್ರತಿ ವೈದ್ಯಕೀಯ ಕಾಲೇಜುಗಳಲ್ಲಿ ಹಮ್ಮಿಕೊಳ್ಳುವುದು ಅಗತ್ಯವಾಗಿದೆ. ಇಂಥ ಸಾಧಕರ ಸ್ಮರಣೆಯಿಂದ ಕಲುಷಿತಗೊಳ್ಳುತ್ತಿರುವ ವ್ಯವಸ್ಥೆಯನ್ನು ಒಂದಿಷ್ಟಾದರೂ ಹಸನಾಗಿಸಲು ಸಾಧ್ಯ. ಈ ಮಹಾನ್ ಸಾಧಕನ ಸ್ಮರಣೆ ಕೇವಲ ‘ವೈದ್ಯರ ದಿನ’ಕ್ಕೆ ಮಾತ್ರ ಸೀಮಿತವಾಗದೆ ನಮ್ಮ ಪ್ರತಿ ನಿತ್ಯದ ಬದುಕಿನಲ್ಲಿ ಅವರು ದಾರಿದೀಪವಾಗಬೇಕು. ಇಂಥ ನಿಸ್ವಾರ್ಥ ಸಾಧಕರು ಹಾಕಿಕೊಟ್ಟ ಮಾರ್ಗದಲ್ಲಿ ನಾವುಗಳೆಲ್ಲ ನಡೆಯುವುದೇ ಡಾ.ಬಿ.ಸಿ.ರಾಯ್ ಅವರಂಥ ಮಹಾಚೇತನಕ್ಕೆ ನಾವು ಸಲ್ಲಿಸುವ ಗೌರವವಾಗಿದೆ.  


- ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ , 9945975403

(ಜುಲೈ ೧, ೨೦೧೮ ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾಗಿದೆ)




Sunday, June 3, 2018

ಮೋಹನಸ್ವಾಮಿ: ಒಂದು ಪ್ರಯೋಗಶೀಲ ಕಥನ

                



         ಆರಂಭದಲ್ಲೇ ಕಥೆಗಾರ ವಸುಧೇಂದ್ರರಿಗೊಂದು ಕೃತಜ್ಞತೆ ಹೇಳುತ್ತೇನೆ. ಕಾರಣ ತೃತೀಯ ಲಿಂಗಿಗಳ ಕುರಿತು ಇಷ್ಟೊಂದು ಪೂರ್ಣಪ್ರಮಾಣದ ಕಥೆ ಕನ್ನಡ ಸಾಹಿತ್ಯದಲ್ಲಿ ಓದಿದ ನೆನಪು ನನಗಿಲ್ಲ. ತಮ್ಮದಲ್ಲದ ತಪ್ಪಿಗೆ ತಾವು ಬದುಕುತ್ತಿರುವ ಸಮಾಜದ ನಿಂದನೆ ಮತ್ತು ತಿರಸ್ಕಾರಕ್ಕೊಳಗಾದ ಒಂದು ನಿಕೃಷ್ಟ ಬದುಕಿಗೆ ಅಕ್ಷರ ರೂಪ ನೀಡಿ ಕಥೆಯ ಚೌಕಟ್ಟಿನಲ್ಲಿ ಕಟ್ಟಿಕೊಟ್ಟ ವಸುಧೇಂದ್ರರ ಪ್ರಯತ್ನ ಮೆಚ್ಚುವಂಥದ್ದು. ಈ ವಸುಧೇಂದ್ರ ಸಾಫ್ಟ್ ವೇರ್  ಕಂಪನಿಯಲ್ಲಿ ಕೈತುಂಬ ಸಂಬಳ ತರುವ ಉದ್ಯೋಗದಲ್ಲಿದ್ದೂ ಅಲ್ಲಿನ ಏಕತಾನತೆಯಿಂದ ಬೇಸತ್ತು ಮುಲಾಜಿಲ್ಲದೆ ನೌಕರಿ ಬಿಟ್ಟು ಬರವಣಿಗೆಯಲ್ಲಿ ನೆಮ್ಮದಿ ಕಂಡ ಬರಹಗಾರನೀತ. ಬರವಣಿಗೆಯೊಂದಿಗೆ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ ಬೇರೆ ಲೇಖಕರ ಪುಸ್ತಕಗಳನ್ನು ಪ್ರಕಟಿಸುತ್ತ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸುತ್ತಿರುವ ವಸುಧೇಂದ್ರ ಕನ್ನಡದ ಬಹುಮುಖ್ಯ ಕಥೆಗಾರರಲ್ಲೊಬ್ಬರು ಎಂದು ಗುರುತಿಸಿಕೊಂಡಿರುವರು. ಮನೀಷೆ, ಯುಗಾದಿ, ಚೇಳು, ಮೋಹನಸ್ವಾಮಿ ಅವರ ಪ್ರಮುಖ ಕಥಾಸಂಕಲನಗಳಾದರೆ ಹರಿಚಿತ್ತ ಸತ್ಯ ಅವರು ಬರೆದಿರುವ ಕಾದಂಬರಿ. 2013 ರಲ್ಲಿ ಪ್ರಕಟಗೊಂಡ ‘ಮೋಹನಸ್ವಾಮಿ’ ಕಥಾಸಂಕಲನ ತನ್ನ ವಿನೂತನ ಕಥಾವಸ್ತುವಿನಿಂದ ಕನ್ನಡ ಸಾಹಿತ್ಯವಲಯದಲ್ಲಿ ಸಂಚಲನ ಸೃಷ್ಟಿಸಿ ಓದುಗರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಹಾಗೂ ಪ್ರಶಂಸೆಗೆ ಒಳಗಾಗಿದೆ. ಇದುವರೆಗೂ ನಾಲ್ಕು ಮುದ್ರಣಗಳನ್ನು ಕಂಡ ಈ ಕೃತಿ ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಭಾಷೆಗಳಿಗೆ ಅನುವಾದಗೊಂಡಿದೆ. ಸ್ಪ್ಯಾನಿಷ್ ಭಾಷೆಗೆ ಅನುವಾದಗೊಂಡ ಕನ್ನಡದ ಮೊದಲ ಕೃತಿ ಎನ್ನುವ ಹೆಗ್ಗಳಿಕೆ ಈ ಕಥಾಸಂಕಲನದ್ದು. 

   ಮೋಹನಸ್ವಾಮಿ ಕಥಾಸಂಕಲನದಲ್ಲಿ ಲೇಖಕರು ವಿವಿಧ ಸಂದರ್ಭಗಳಲ್ಲಿ ಬರೆದ ಒಟ್ಟು ಹನ್ನೊಂದು ಕಥೆಗಳಿವೆ. ಈ ಹನ್ನೊಂದು ಕಥೆಗಳಲ್ಲಿ ಆರಂಭದ ಆರು ಕಥೆಗಳ ನಾಯಕರು ತೃತೀಯ ಲಿಂಗಿ ಗುಂಪಿಗೆ ಸೇರಿದವರು ಎನ್ನುವುದು ಕನ್ನಡದ ಕಥಾಲೋಕಕ್ಕೆ ವಿನೂತನ ವಿಷಯವೊಂದು ಸೇರ್ಪಡೆಯಾಗಿದೆ ಎನ್ನಬಹುದು. ಅದರಲ್ಲೂ ಮೊದಲ ಐದು ಕಥೆಗಳಲ್ಲಿ ಮೋಹನಸ್ವಾಮಿಯ ಕಥೆಯಿದೆ. ಸಾಫ್ಟ್ ವೇರ್  ಕಂಪನಿಯಲ್ಲಿ ಆಕರ್ಷಕ ಸಂಬಳದ ಉದ್ಯೋಗಿಯಾಗಿರುವ ಮೋಹನಸ್ವಾಮಿ ಹುಟ್ಟಿನಿಂದಲೇ ತೃತೀಯ ಲಿಂಗಿ. ಹಳ್ಳಿಯಲ್ಲಿ ಹುಟ್ಟಿ ಬೆಳೆದ ಸ್ವಭಾವತ: ಮೃದು ಸ್ವಭಾವದ ಮೋಹನಸ್ವಾಮಿ ಉತ್ತಮ ವಿದ್ಯೆಯಿಂದ ಸ್ವತಂತ್ರವಾಗಿ ಬದುಕನ್ನು ರೂಪಿಸಿಕೊಂಡವನು. ಹೆಣ್ಣೆಂದರೆ ಆಕರ್ಷಣೆಯೇ  ಇಲ್ಲದ ಗಂಡುಗಳೆಡೆ ಆಕರ್ಷಿತನಾಗುವ ಮೋಹನಸ್ವಾಮಿ ತನ್ನ ಮನದ ಬಯಕೆಯನ್ನು ಗುಟ್ಟಾಗಿಟ್ಟುಕೊಳ್ಳಲು ಮಾಡುವ ಪ್ರಯತ್ನ ಮತ್ತು ಆ ಸಂದರ್ಭದ ಅವನ ಅಸಹಾಯಕತೆಯನ್ನು ಲೇಖಕರು ಅತ್ಯಂತ ಮನೋಜ್ಞವಾಗಿ ಚಿತ್ರಿಸಿರುವರು. 

    ತನ್ನದೇ ಊರಿನ ಕಾಶೀವೀರನನ್ನು ಮೋಹಿಸಿ ಅಪಮಾನಕ್ಕೆ ಒಳಗಾಗುವ ಮೋಹನಸ್ವಾಮಿಯ ಮನೋಕ್ಷೋಭೆಯನ್ನು ‘ಕಾಶೀವೀರರು’ ಕಥೆ ತುಂಬ ಅರ್ಥಪೂರ್ಣವಾಗಿ ಕಟ್ಟಿಕೊಡುತ್ತದೆ. ತನಗಿಂತ ಐದು ವರ್ಷ ದೊಡ್ಡವನಾದ ಕಾಶೀವೀರನನ್ನು ಕಂಡರೆ ಮೋಹನಸ್ವಾಮಿಗೆ ಕಡು ಪ್ರೀತಿ ಮತ್ತು ಅವನ ದೇಹವನ್ನೊಮ್ಮೆ ಸ್ಪರ್ಷಿಸಬೇಕೆನ್ನುವ ಅದಮ್ಯ ಬಯಕೆ ಅವನಿಗಿದೆ. ಆ ಒಂದು ಸಂದರ್ಭಕ್ಕಾಗಿ ಕಾಯುತ್ತಿದ್ದವನಿಗೆ ಅನಿರೀಕ್ಷಿತವಾಗಿ ಅವಕಾಶವೊಂದು ಕೂಡಿ ಬರುತ್ತದೆ. ಸ್ನಾನದ ಮನೆಯಲ್ಲಿ ಕಾಶೀವೀರನ ತಲೆಯ ಮೇಲೆ ನೀರು ಸುರಿಯುವ ಸಂದರ್ಭ ಮೋಹನಸ್ವಾಮಿ ತನ್ನ ಬಯಕೆಯನ್ನು ಅದುಮಿಡಲು ಅಸಹಾಯಕನಾಗಿ ಕಾಶೀವೀರನ ದೇಹವನ್ನು ಸ್ಪರ್ಷಿಸುತ್ತಾನೆ. ‘ಅವನ ದೇಹದ ಸ್ಪರ್ಷ ಸಿಕ್ಕಿದ್ದೇ ಮೋಹನಸ್ವಾಮಿ ತನ್ನ ಮನಸ್ಸಿನ ಮೇಲಿನ ನಿಯಂತ್ರಣ ಕಳೆದುಕೊಂಡ. ಬೆನ್ನಿಗೆ ಕೈ ಹಚ್ಚಿದವನು ಹಗೂರಕ್ಕೆ ಎದೆ, ಹೊಟ್ಟೆ, ಪಾದ, ಕಾಲು, ತೊಡೆ ಎಲ್ಲವನ್ನೂ ಉಜ್ಜಲಾರಂಭಿಸಿದ. ಮೋಹನನಿಗೆ ಅದ್ಯಾವ ಭೂತ ಮೈಯಲ್ಲಿ ಹೊಕ್ಕಿತ್ತೋ ಗೊತ್ತಿಲ್ಲ ಕಾಶೀವೀರನ ಚಡ್ಡಿಯಲ್ಲೂ ಕೈಹಾಕಿದ. ಗರ್ಭಗುಡಿಯನ್ನು ಪ್ರವೇಶಿಸಿ ಮೂಲ ವಿಗ್ರಹವನ್ನು ಮುಟ್ಟಿದ ವಿಚಿತ್ರ ತಲ್ಲಣ, ಖುಷಿ, ಭಯಗಳು ಮೋಹನಸ್ವಾಮಿಯನ್ನು ಆಕ್ರಮಿಸಿ ಕಣ್ಣನ್ನು ಗಟ್ಟಿಯಾಗಿ ಮುಚ್ಚಿಕೊಂಡು ಅವನ ಬೆನ್ನಿಗೆ ತಲೆಯನ್ನು ಆನಿಸಿ ವಾಸ್ತವದ ಸುಖವನ್ನು ಅರಗಿಸಿಕೊಳ್ಳಲು ಪ್ರಯತ್ನಿಸಿದ. ಬದುಕಿನಲ್ಲಿ ಮೊದಲ ಬಾರಿಗೆ ಸ್ಪರ್ಷ ಸುಖಕ್ಕೆ ಒಳಗಾಗಿದ್ದ’ ಈ ಸಾಲುಗಳು ಮೋಹನಸ್ವಾಮಿಯ ಇಡೀ ವ್ಯಕ್ತಿತ್ವವನ್ನು ಅತ್ಯಂತ ಅರ್ಥಪೂರ್ಣವಾಗಿ ಓದುಗರಿಗೆ ಪರಿಚಯಿಸುತ್ತವೆ. ಈ ಘಟನೆಯ ನಂತರ ತನ್ನ ವ್ಯಕ್ತಿತ್ವದ ಬಗ್ಗೆಯೇ  ಅಸಹ್ಯ ಪಟ್ಟುಕೊಳ್ಳುವ ಮೋಹನಸ್ವಾಮಿ ಅನುಭವಿಸುವ ಮಾನಸಿಕ ಹಿಂಸೆ ಮತ್ತು ಅವನೊಳಗಿನ ತೊಳಲಾಟ ಮನಸ್ಸನ್ನು ಆರ್ದ್ರಗೊಳಿಸಿ ಕಣ್ಣುಗಳು ಹನಿಗೂಡುತ್ತವೆ. ಈ ಸಂದರ್ಭವನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವ ಕಾಶೀವೀರನ ನಡೆ ಅವನೊಳಗಿನ ಸ್ವಾರ್ಥಕ್ಕೆ ಕನ್ನಡಿ ಹಿಡಿಯುತ್ತದೆ. ಕಾಶೀವೀರ ಕೇಳಿದಾಗಲೆಲ್ಲ ಹಣ ಕೊಡುವ ಮೋಹನಸ್ವಾಮಿ ಒಂದು ಹಂತದಲ್ಲಿ ರೋಸಿಹೋಗಿ ಸಿಡಿದು ನಿಲ್ಲುತ್ತಾನೆ. ಆಗ ಮೋಹನಸ್ವಾಮಿ ತೃತೀಯ ಲಿಂಗಿ ಎನ್ನುವುದು ಅನಾವರಣಗೊಂಡು ಆ ಇಡೀ ಪರಿಸರ ಅವನನ್ನು ತಿರಸ್ಕಾರದಿಂದ ನೋಡುತ್ತದೆ. 

   ‘ತುತ್ತತುದಿಯಲಿ ಮೊತ್ತ ಮೊದಲು’ ಕಥೆಯಲ್ಲಿ ಇಬ್ಬರು ಪ್ರೇಮಿಗಳ ನಡುವಿನ ದಟ್ಟ ಪ್ರೀತಿಯಿದೆ. ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಮೋಹನಸ್ವಾಮಿ ಮತ್ತು ಕಾರ್ತಿಕ್ ಒಂದೇ ಮನೆಯಲ್ಲಿ ವಾಸಿಸುತ್ತ ಪರಸ್ಪರ ಪ್ರೀತಿಸುತ್ತಿರುವರು. ಮೋಹನಸ್ವಾಮಿಗೆ ಕಾರ್ತಿಕನ ಹೃದಯದ ಪ್ರತಿ ಮಿಡಿತದ ಪರಿಚಯವಿದೆ. ಕಾರ್ತಿಕನ ವ್ಯಕ್ತಿತ್ವ, ಅವನ ಬೇಕು ಬೇಡುಗಳು, ಅವನ ದೇಹದ ಪ್ರತಿ ಅಂಗಗಳು ಹೀಗೆ ಮೋಹನಸ್ವಾಮಿಗೆ ಕಾರ್ತಿಕ ತನ್ನವನೆನ್ನುವ ಭಾವವಿದೆ. ಕಾರ್ತಿಕ್ ಸಹ ಮೋಹನಸ್ವಾಮಿಯನ್ನು ಉತ್ಕಟವಾಗಿ ಪ್ರೀತಿಸಬಲ್ಲ. ವಿಮಾನ ಪ್ರಯಾಣದ ವೇಳೆ ಸಹ ಪ್ರಯಾಣಿಕ ರಮೇಶನಿಗೆ ಮೋಹನಸ್ವಾಮಿ ತನ್ನ ಪ್ರೇಮದ ಕಥೆ ಹೇಳುವುದರ ಮೂಲಕ ಮೋಹನಸ್ವಾಮಿ ಮತ್ತು ಕಾರ್ತಿಕರ ನಡುವಣ ಪ್ರೀತಿ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಕಾರ್ತಿಕ್ ಎಂದರೆ ಹೆಣ್ಣು ಎಂದು ತಪ್ಪಾಗಿ ಭಾವಿಸಿದ ರಮೇಶನಿಗೆ ಪ್ರಯಾಣದ ಕೊನೆಯಲ್ಲಿ ಕಾರ್ತಿಕ್ ಗಂಡು ತಾನೊಬ್ಬ ಗೇ ಎಂದು ಮೋಹನಸ್ವಾಮಿ ಹೇಳಿದಾಗ ರಮೇಶ ಅದನ್ನು ಸಹಜವಾಗಿ ಸ್ವೀಕರಿಸುತ್ತಾನೆ. ಇಲ್ಲಿ ಬದಲಾದ ಕಾಲಘಟ್ಟದಲ್ಲಿ ಬದಲಾಗುತ್ತಿರುವ ನಿಲುವು ವ್ಯಕ್ತವಾಗುತ್ತದೆ. 

     ‘ಕಗ್ಗಂಟು’ ಕಥೆ ಹಿಂದಿನ ಕಥೆಯ ಮುಂದುವರೆದ ಭಾಗದಂತಿದೆ. ಈಗ ಕಾರ್ತಿಕನಿಗೆ ಮದುವೆಗೆ ಹೆಣ್ಣು ಗೊತ್ತಾಗಿದೆ. ಇಷ್ಟರಲ್ಲೇ ಕಾರ್ತಿಕ್ ಮದುವೆಯಾಗಲಿರುವ ವಿಷಯ ಮೋಹನಸ್ವಾಮಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ತನ್ನನ್ನು ಪ್ರೀತಿಸುವ ಕಾರ್ತಿಕ್ ಬೇರೆಯವರನ್ನು ಮದುವೆಯಾಗಲಾರ ಎನ್ನುವ ನಂಬಿಕೆ ಮೋಹನಸ್ವಾಮಿಯದು. ಒಂದು ಕಾಲದಲ್ಲಿ ಮೋಹನಸ್ವಾಮಿಯನ್ನು ಉತ್ಕಟವಾಗಿ ಪ್ರೀತಿಸುತ್ತಿದ್ದ ಕಾರ್ತಿಕನಿಗೆ ಈಗ ಅವನೆಂದರೆ ಅಸಹ್ಯ ಮತ್ತು ತಿರಸ್ಕಾರ. ರಶ್ಮಿಯ ಸಾಂಗತ್ಯದಲ್ಲಿ ಕಾರ್ತಿಕ್ ಸಂಪೂರ್ಣವಾಗಿ ಮೋಹನಸ್ವಾಮಿಯಿಂದ ದೂರಾಗುತ್ತಾನೆ. ಕಾರ್ತಿಕ್ ದೂರವಾದ ನೋವು ಒಂದಡೆಯಾದರೆ, ಎಲ್ಲಿ ಕಾರ್ತಿಕ್ ತನ್ನ ಕುರಿತು ರಶ್ಮಿಗೆ ನಿಜ ಹೇಳುವನೋ ಎನ್ನುವ ಭಯ, ಆತಂಕ ಮೋಹನಸ್ವಾಮಿಯನ್ನು ಕಂಗೆಡಿಸುತ್ತದೆ. ತಾನೊಬ್ಬ ಕ್ರಿಮಿ ಈ ಭೂಮಿಯ ಮೇಲೆ ತನಗೆ ಬದುಕಲೂ ಹಕ್ಕಿಲ್ಲವೇನೋ ಎಂದು ಮೋಹನಸ್ವಾಮಿ ಸ್ವನಿಂದನೆಯಲ್ಲಿ ಜರ್ಜರಿತನಾಗುತ್ತಾನೆ. 

    ‘ತಗಣಿ’ ಕಥೆಯ ಶಂಕರಗೌಡನದು ಮೋಹನಸ್ವಾಮಿಗೆ ತದ್ವಿರುದ್ಧವಾದ ವ್ಯಕ್ತಿತ್ವ. ಹಳ್ಳಿಯಲ್ಲಿ ವಾಸಿಸುತ್ತಿರುವ ಹೆಚ್ಚು ಓದಿರದ ಶಂಕರನಿಗೆ ತಾನೊಬ್ಬ ಹಿಜಡಾ ಎಂದು ಇಡೀ ಊರಿಗೇ ತೋರಿಸಿಕೊಳ್ಳುವ ಧಾಡಸೀತನವಿದೆ. ಸಮಾಜಕ್ಕೆ ಹೆದರುವ ಮೋಹನಸ್ವಾಮಿಗೂ ಮತ್ತು ತಾನು ಇದ್ದಂತೆ ಬದುಕಲು ಇಚ್ಛಿಸುವ ಶಂಕರನಿಗೂ ಇರುವ ವ್ಯತ್ಯಾಸವಿದು. ಮುಂಬೈಗೆ ಹೋಗಿ ಬಂದ ದಿನದಿಂದ ಶಂಕರ ಥೇಟು ಹೆಣ್ಣಿನಂತೆ ವರ್ತಿಸಲು ತೊಡಗುತ್ತಾನೆ. ಅವನ ವೇಷ ಭೂಷಣ ಕೂಡ ಹೆಣ್ಣಿನಂತೆ ಬದಲಾಗಿದೆ. ಶಂಕರನಲ್ಲಾದ ಈ ಬದಲಾವಣೆ ಮನೆಯವರನ್ನು ಆತಂಕಕ್ಕೀಡು ಮಾಡಿದೆ. ಅವರೆಲ್ಲ ಊರಿನಲ್ಲಿ ತಲೆ ಎತ್ತಿ ನಡೆಯಲಾರದಂತಾಗಿದೆ. ಶಂಕರನ ಈ ವರ್ತನೆಗೆ ರೋಸಿಹೋದ ಅಪ್ಪ ಮತ್ತು ಅಣ್ಣಂದಿರು ಅವನನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸುತ್ತಾರೆ. ನಗರ ಪ್ರದೇಶದಲ್ಲಿ ತನ್ನ ದೇಹದ ನ್ಯೂನ್ಯತೆಯೊಂದಿಗೆ ಬದುಕಲು ಮೋಹನಸ್ವಾಮಿಗೆ ಸಾಧ್ಯವಾದದ್ದು ಶಂಕರನಿಗೆ ಹಳ್ಳಿಗಾಡಿನ ಪರಿಸರದಲ್ಲಿ ಸಾಧ್ಯವಾಗುವುದಿಲ್ಲ. 

       ‘ಕಿಲಿಮಂಜಾರೋ’ ಕಥೆಯಲ್ಲಿ ಲೇಖಕರ ಪರ್ವತಾರೋಹಣದ ದಟ್ಟ ಅನುಭವವಿದೆ. ತಾಂಜಾನಿಯಾ ದೇಶದ ಈ ಕಿಲಿಮಂಜಾರೋ ಪರ್ವತ ಆಫ್ರಿಕಾ ಖಂಡದ ಅತ್ಯಂತ ಎತ್ತರದ ಪ್ರದೇಶವೆಂದು ಹೆಸರುವಾಸಿಯಾಗಿದೆ. ದಿಢೀರನೆ ಬದಲಾಗುವ ಹವಾಮಾನದ ಪರಿಣಾಮ ಕಿಲಿಮಂಜಾರೋದಲ್ಲಿ ಯಾವುದೇ ಪ್ರಾಣಿಗಳು ಬದುಕಲು ಸಾಧ್ಯವಿಲ್ಲ. ಇಂಥ ಪ್ರದೇಶದಲ್ಲಿ ಪರ್ವತಾರೋಹಣದ ಸಾಹಸಕ್ಕೆ ಮುಂದಾಗುವ ಮೋಹನಸ್ವಾಮಿ ಬದುಕಿನ ಪ್ರತಿ ಹಂತದಲ್ಲೂ ಸೋಲನುಭವಿಸಿದವನು. ಗೆಲ್ಲಬೇಕೆನ್ನುವ ಛಲವೇ ಅವನನ್ನು ಕಿಲಿಮಂಜಾರೋದ ತುದಿಗೆ ತಂದು ನಿಲ್ಲಿಸುತ್ತದೆ. ಪರ್ವತದ ನೆತ್ತಿಯ ಮೇಲೆ ನಿಂತ ಮೋಹನಸ್ವಾಮಿಗೆ ಪ್ರಕೃತಿ ಎದುರು ಮನುಷ್ಯನ ಸಾಧನೆಗಳೆಲ್ಲ ಶೂನ್ಯದಂತೆ ಭಾಸವಾಗುತ್ತದೆ. ನಿಸರ್ಗದೆದುರು ನನ್ನ ಕಷ್ಟಗಳ್ಯಾವವು ದೊಡ್ಡವಲ್ಲ ಎಂದರಿತ ಮೋಹನಸ್ವಾಮಿ ಈಗ ಆತ್ಮವಿಶ್ವಾಸದ ಪ್ರತೀಕವಾಗಿದ್ದಾನೆ. ಅವನ ಕತ್ತಲೆಯ ಬದುಕಿನಲ್ಲಿ ಭರವಸೆಯ ಬೆಳ್ಳಿ ಕಿರಣ ಮೂಡಿದೆ. 

    ಬಹುರಾಷ್ಟ್ರೀಯ ಕಂಪನಿಗಳಲ್ಲಿನ ಉದ್ಯೋಗಿಗಳ ಬದುಕಿನ ಅನಿಶ್ಚಿತತೆಯನ್ನು ‘ದುರ್ಭಿಕ್ಷಕಾಲ’ ಅತ್ಯಂತ ಮನೋಜ್ಞವಾಗಿ ಕಟ್ಟಿಕೊಡುತ್ತದೆ. ದೇವಿಕಾ ಮತ್ತು ವಿನಾಯಕ ಪರಸ್ಪರ ಪ್ರೀತಿಸಿ ಮದುವೆಯಾದವರು. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಇಬ್ಬರಿಗೂ ಎಲ್ಲರಂತೆ  ತಮಗೂ ತಲೆಯ ಮೇಲೊಂದು ಸೂರಿರಲಿ ಎನ್ನುವ ಆಸೆ ಇದೆ. ಲಕ್ಷಾಂತರ ರೂಪಾಯಿಗಳ ಸಾಲ ಮಾಡಿ ಪುಟ್ಟ ಅಪಾರ್ಟಮೆಂಟ್ ಖರೀದಿಸಿದ್ದಾರೆ. ಬದುಕಿನ ಈ ಎಲ್ಲ ಜಂಜಾಟಗಳ ಮಧ್ಯೆ ತಮಗೂ ಒಂದು ಮಗುವಾಗಲಿ ಎನ್ನುವ ಅವರ ಆಸೆ ಕೈಗೂಡಿಲ್ಲ. ಈ ನಡುವೆ ಬಹುರಾಷ್ಟ್ರೀಯ ಕಂಪನಿಗಳಿಗೆ ದುರ್ಭಿಕ್ಷ ಕಾಲದ  ಬಿಸಿ ತಟ್ಟಿದೆ. ಪರಿಣಾಮವಾಗಿ ದೇವಿಕಾ ತನ್ನ ಈ ಮೊದಲ ಕೆಲಸ ಕಳೆದುಕೊಂಡಿದ್ದಾಳೆ. ಸಾಲದ ಹೊರೆ ಹೆಚ್ಚುತ್ತಿರುವುದರಿಂದ ಬೇರೊಂದು ಕೆಲಸ ಹುಡುಕುವುದು ಅವಳಿಗೆ ಅನಿವಾರ್ಯವಾಗಿದೆ. ಕೆಲಸ ಸಿಕ್ಕು ಸಂಸಾರ ಸಹಜ ಸ್ಥಿತಿಗೆ ಮರಳಿತು ಎನ್ನುವಷ್ಟರಲ್ಲಿ ದೇವಿಕಾ ಗರ್ಭೀಣಿಯಾದ ಸುದ್ಧಿ ಕಂಪನಿಗೆ ತಲೆ ನೋವಾಗಿ ಪರಿಣಮಿಸಿದೆ. ಸಧ್ಯದ ಅವಳ ಪರಿಸ್ಥಿತಿಯಲ್ಲಿ ಈಗ ಪ್ರಾಜೆಕ್ಟ್ ಗೆ  ಆಕೆಯ ಅವಶ್ಯಕತೆಯಿಲ್ಲ ಎಂದರಿತ ಕಂಪನಿ ಅವಳನ್ನು ಕೆಲಸದಿಂದ ತೆಗೆದುಹಾಕಲು ನಿರ್ಧರಿಸಿದೆ. ಈ ಮಧ್ಯೆ ವಿನಾಯಕ ಕೂಡ ಕೆಲಸ ಕಳೆದುಕೊಂಡಿದ್ದಾನೆ. ಮಗು ಮತ್ತು ಬದುಕು ಈ ಎರಡರಲ್ಲಿ ಒಂದನ್ನು ಆಯ್ಕೆ  ಮಾಡುವ ಅನಿವಾರ್ಯತೆ ಎದುರಾದಾಗ ದೇವಿಕಾ ಬದುಕನ್ನು ಆಯ್ಕೆ  ಮಾಡಿಕೊಳ್ಳುತ್ತಾಳೆ.

     ಆಧುನಿಕ ತಂತ್ರಜ್ಞಾನದ ಅವಿಷ್ಕಾರವೊಂದು ಸಾವಿಗೆ ಕಾರಣವಾಗುವ ಕಥೆ ‘ಪೂರ್ಣಾಹುತಿ’ಯಲ್ಲಿದೆ. ಗಂಡನನ್ನು ಕಳೆದುಕೊಂಡ ಕುಸುಮಾಳಿಗೆ ಮಗಳೇ ದಿಕ್ಕು ಮತ್ತು ಭರವಸೆ. ಕಾಲೇಜಿನಲ್ಲಿ ಓದುತ್ತಿರುವ ಅಂಕಿತಾಳಿಗೆ ಹೊಸ ಮೊಬೈಲೊಂದು ಬೇಕಾಗಿದೆ. ಹಠ ಹಿಡಿದು ಅಮ್ಮನನ್ನು ಕಾಡಿ ತನ್ನ ಆಸೆಯನ್ನು ಪೂರೈಸಿಕೊಳ್ಳುವುದರಲ್ಲಿ ಯಶ ಕಾಣುವ ಅಂಕಿತಾ ದಿನದಿಂದ ದಿನಕ್ಕೆ ಅಮ್ಮನ ಆತಂಕ ಮತ್ತು ಭೀತಿಗೆ ಕಾರಣಳಾಗುತ್ತಿದ್ದಾಳೆ. ಅಮ್ಮ ಕುಸುಮಾ ಈ ಆಧುನಿಕ ತಂತ್ರಜ್ಞಾನದ ಕಡುವೈರಿ. ಅವಳೆಂದೂ ಮೊಬೈಲ್ ಬಳಸುವುದಿಲ್ಲ. ಆದರೆ ಮೊಬೈಲ್ ಎನ್ನುವ ಈ ಪುಟ್ಟ ಮಾಂತ್ರಿಕ ಸಲಕರಣೆಯೇ  ತಾಯಿ-ಮಗಳ ಸಾವಿಗೆ ಕಾರಣವಾಗುವುದು ಈ ಆಧುನಿಕ ಅವಿಷ್ಕಾರದ ಕ್ರೂರ ವ್ಯಂಗ್ಯ. ಅಮ್ಮ ದೇವಸ್ಥಾನಕ್ಕೆ ಹೋದ ಸಂದರ್ಭ ಮನೆಯಲ್ಲಿ ಒಬ್ಬಳೇ ಇರುವುದನ್ನು ಫೋಟೋ  ಸಹಿತ ಸ್ಟೇಟಸ್ ಹಾಕಿಕೊಳ್ಳುವ  ಅಂಕಿತಾಳ ಬದುಕಿಗೆ ಅದೇ ಮುಳುವಾಗಿ ಅವಳ ಬದುಕು ದಾರುಣ ಕೊಲೆಯಲ್ಲಿ ಅಂತ್ಯಗೊಳ್ಳುತ್ತದೆ. ಮಗಳು ಇನ್ನೂ ದೇವಸ್ಥಾನಕ್ಕೆ ಬರದಿದ್ದನ್ನು ಅರಿತು ಕರೆ ಮಾಡಲು ಫೋನ್  ಬೂತ್ ಹುಡುಕಿ ಹೊರಡುವ ತಾಯಿ ಲಿಫ್ಟಿನಲ್ಲಿ ಸಿಲುಕಿ ಯಾರ ಸಹಾಯ ದೊರೆಯದೆ ಕೊನೆಯುಸಿರೆಳೆಯುತ್ತಾಳೆ. ಈ ಆಧುನಿಕ ತಂತ್ರಜ್ಞಾನದ ಅವಿಷ್ಕಾರವನ್ನು ಹಿತಮಿತವಾಗಿ ಬಳಸುವಂತೆ ಕಥೆ ಓದುಗರ ಕಣ್ಣು ತೆರೆಸುತ್ತದೆ. 

    ‘ದ್ರೌಪದಮ್ಮನ ಕಥಿ’ಯಲ್ಲಿ ಮಹಾಭಾರತದ ಕಥೆಯಿದೆ. ಇಡೀ ಕಥೆಯನ್ನು ಬಳ್ಳಾರಿ ಸೀಮೆಯ ಭಾಷೆಯಲ್ಲಿ ಓದುವುದೇ ಒಂದು ವಿಶಿಷ್ಠ ಅನುಭವ. ಇಡೀ ಕಥೆಯಲ್ಲಿ ದ್ರೌಪದಿಯದೇ ಕೇಂದ್ರ ಪಾತ್ರ. ಅರ್ಜುನನಿಂದ ಸ್ವಯಂವರದಲ್ಲಿ ಗೆದ್ದು ಐದು ಜನ ಪಾಂಡವರೊಂದಿಗೆ ಮದುವೆಯಾಗಿ ಹಲವು ವರ್ಷಗಳೇ ಗತಿಸಿದರೂ ದ್ರೌಪದಿಗೆ ಇನ್ನೂ ಮಕ್ಕಳಾಗಿಲ್ಲ. ಮಕ್ಕಳಿಲ್ಲದ ಕೊರಗು ಅವಳನ್ನು ದಹಿಸುತ್ತಿದೆ. ಅಂತ:ಪುರಕ್ಕೆ ಭೇಟಿ ನೀಡಿದ ನಾರದರೆದುರು ದ್ರೌಪದಿ ತನ್ನ ಆತಂಕವನ್ನು ಹೇಳಿಕೊಳ್ಳುತ್ತಾಳೆ. ವರ್ಷಕ್ಕೊಬ್ಬರಂತೆ ದ್ರೌಪದಿಯ ಗಂಡನಾಗಿ ಬಾಳ್ವೆ ಮಾಡಬೇಕು ಎಂದ ನಾರದರ ಸಲಹೆ ಫಲಿಸಿ ದ್ರೌಪದಿ ಗರ್ಭೀಣಿಯಾಗುತ್ತಾಳೆ. ಧರ್ಮನ ಅವಧಿ ಮುಗಿದು ಭೀಮನ ಅವಧಿಯಲ್ಲಿ ಒಂದುಸಲ ಮುಟ್ಟಾಗಿ ಕಟ್ಟಿದ ಬಸಿರದು. ದ್ರೌಪದಿಗೆ ಈ ಬಸಿರು ಭೀಮನದೆಂದು ತಿಳಿದಿದೆ. ಆದರೆ ಧರ್ಮನನ್ನು ಸಮಾಜ ಜೊಳ್ಳು ಎಂದು ಜರೆಯಬಾರದೆನ್ನುವ ಆತಂಕ ಕುಂತಿಯದು. ಆದ್ದರಿಂದ ಈ ಬಸಿರು ಧರ್ಮನದೆಂದು ಬಿಂಬಿಸಬೇಕೆನ್ನುವ ಕುಂತಿಯ ರಾಜಾಜ್ಞೆ ಹಾಗೂ ಒತ್ತಾಯ ದ್ರೌಪದಿಯ ಮೇಲೆ. ಇಷ್ಟು ದಿನ ಮಕ್ಕಳಾಗಲಿಲ್ಲ ಎನ್ನುವ ಕೊರಗು ಕಾಡಿದರೆ ಈಗ ಬಸಿರಿಗೆ ಕಾರಣನಲ್ಲದವನನ್ನು ಒಪ್ಪಿಕೊಳ್ಳುವ ಅನಿವಾರ್ಯತೆ. ದ್ರೌಪದಿಯದು ನಮ್ಮ ನಡುವೆಯೇ  ಬದುಕುತ್ತಿರುವ ಪಾತ್ರವೇನೋ ಎನ್ನುವಷ್ಟು ಮನಸ್ಸಿಗೆ ಹತ್ತಿರವಾಗುತ್ತದೆ. 

‘ಭಗವಂತ, ಭಕ್ತ ಮತ್ತು ರಕ್ತ’ ಹಾಗೂ ‘ಇವತ್ತು ಬೇರೆ’ ಕಥೆಗಳಲ್ಲಿ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಅರ್ಥಕಳೆದುಕೊಳ್ಳುತ್ತಿರುವ ಮನುಷ್ಯ ಸಂಬಂಧಗಳ ಚಿತ್ರಣವಿದೆ. ‘ಅಯ್ಯೋ ಪ್ಯಣ್ಯಾತ್ಮ ಮೀಟಿಂಗ್ ಬಿಟ್ಟು ಬರಲಾರದ ಮುಂಡೆಗಂಡ ನಿನಗ್ಯಾಕೆ ಅವರ ಚಿಂತಿ. ತನ್ನ ಭಕ್ತರನ್ನು ಆ ಭಗವಂತ ಯಾವತ್ತೂ ಕೈ ಬಿಡಲ್ಲ ತಿಳ್ಕೋ. ನಿನ್ನ ಕೈಲೆ ಆಗಲ್ಲ ಅಂದರೆ  ಜಗತ್ತು ನಿಂತು ಹೋಗಲ್ಲ. ಮತ್ತೊಂದು ದಾರಿ ತೋರಿಸ್ತಾನೆ. ನೀನೇನೂ ಬ್ಭೆಜಾರು ಮಾಡಿಕೋ ಬೇಡೋ ನಮ್ಮಪ್ಪ. ನಿನ್ನ ಮೀಟಿಂಗ್ ನೀನು ಮಾಡ್ಕೋ’ ಎನ್ನುವ ರಿಂದತ್ತಿಯ ಮಾತುಗಳು ಓದುಗರನ್ನು ವಿವೆಚನೆಗೆ ಹಚ್ಚುತ್ತವೆ. 

‘ಕಥೆ ಎಂದರೆ ಜೊತೆಯ ಜೀವದ ಜೀವನದಲ್ಲಿ ಸಹಾನುಭೂತಿಯಿಂದ ಬೆರೆತು ಅದರ ಸಂಗತಿಯನ್ನು ಬೇರೆ ಜೀವಕ್ಕೆ ತಿಳಿಸುವುದು’ ಎನ್ನುತ್ತಾರೆ ಮಾಸ್ತಿ. ಚಿತ್ತಾಲರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ‘ಕಥೆಯಲ್ಲಿ ನಾನು ಹೇಳುತ್ತಿರುವುದು ನನ್ನ ವೈಯಕ್ತಿಕ ಯಾತನೆಯಾದರೇನಂತೆ, ಮುಖ್ಯವಾದದ್ದು ಅದರಲ್ಲಿ ನೀವು ನಿಮ್ಮ ದು:ಖವನ್ನು ಕಂಡುಕೊಳ್ಳುವ ಸಾಧ್ಯತೆ ಹುಟ್ಟಿದೆಯೇ  ಎನ್ನುವ ಪ್ರಶ್ನೆ. ಅಂದರೆ ಕಥೆಯಲ್ಲಿ ಚಿತ್ರಿತವಾದ ಯಾತನೆ ಯಾರ ಯಾತನೆಯೂ ಆಗುವಷ್ಟು ಬಲವುಳ್ಳದ್ದೇ ಎನ್ನುವ ಪ್ರಶ್ನೆ’. 

ಇಲ್ಲಿನ ವಸುಧೇಂದ್ರರ ಕಥೆಗಳನ್ನು ಓದುತ್ತಿರುವಾಗ ಅವರು ತಾವು ಬದುಕುತ್ತಿರುವ ಪರಿಸರದಲ್ಲಿ ಕಂಡು  ನೋಡಿದ ಪಾತ್ರಗಳ ಸಂಗತಿಯನ್ನು ನಮಗೆ ತಿಳಿಸುತ್ತಿದ್ದಾರೆ ಎನ್ನಿಸುತ್ತದೆ. ಮತ್ತು ಆ ಪಾತ್ರಗಳ ಯಾತನೆ ನಮ್ಮ ಯಾತನೆಯೂ ಆಗಿ ಬಹಳ ದಿನಗಳ ಕಾಲ ಕಾಡತೊಡಗುತ್ತದೆ. ಇಂಥ ಅನುಭವಕ್ಕೆ ಓದುಗರನ್ನು ಒಳಗಾಗಿಸುವಲ್ಲೇ ಕಥೆಯೊಂದರ ಸಾರ್ಥಕತೆ ಇರುವುದು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

  

Thursday, May 3, 2018

ಚಿತ್ತಾಲರ ಬರವಣಿಗೆಯಲ್ಲಿ ಮನುಷ್ಯ ಪ್ರಜ್ಞೆ

           


            ಯಶವಂತ ಚಿತ್ತಾಲರು ಕನ್ನಡದ ಅನನ್ಯ ಮತ್ತು ಅಪೂರ್ವ ಬರಹಗಾರ. ಕನ್ನಡ ಸಾಹಿತ್ಯಕ್ಕೆ ಅವರದು ಬಹುದೊಡ್ಡ ಕೊಡುಗೆ. ಐದು ದಶಕಗಳ ಕಾಲ ಕನ್ನಡದ ನೆಲದಿಂದ ದೂರವಾದ ಮುಂಬಯಿಯಲ್ಲಿ ಕುಳಿತು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡ ಚಿತ್ತಾಲರು ತಮ್ಮ ಕೃತಿಗಳಲ್ಲಿ ಕಟ್ಟಿಕೊಟ್ಟಿದ್ದು ದಟ್ಟವಾದ ಜೀವನಾನುಭವವನ್ನು. ಮನುಷ್ಯನ ಗುಣ, ಸ್ವಭಾವಗಳನ್ನು ಮನೋವಿಜ್ಞಾನದ ಹಿನ್ನೆಲೆಯಲ್ಲಿ ಚಿತ್ತಾಲರು ವಿಶ್ಲೇಷಿಸಿ ನೋಡಿದಷ್ಟು ಬೇರೆ ಬರಹಗಾರರು ನೋಡಿದ್ದು ಕಡಿಮೆ ಎಂದರೆ ಉತ್ಪ್ರೇಕ್ಷೆಯಾಗಲಾರದು. ಚಿತ್ತಾಲರ ಕಥೆ, ಕಾದಂಬರಿ, ಪ್ರಬಂಧಗಳಲ್ಲಿ (ಚಿತ್ತಾಲರು ಪ್ರಬಂಧವನ್ನೂ ಕಥೆಯಂತೆ ಬರೆಯುತ್ತಾರೆ ಎನ್ನುತ್ತಾರೆ ಲೇಖಕ ಜೋಗಿ) ಮನುಷ್ಯ ಪ್ರಜ್ಞೆ ಎನ್ನುವುದು ಮತ್ತೆ ಮತ್ತೆ ಓದುಗನ ಅನುಭವಕ್ಕೆ ಒಳಗಾಗುವುದು ತೀರ ಸಹಜವೆಂಬಂತಿದೆ. ಚಿತ್ತಾಲರ ಕೃತಿಗಳಲ್ಲಿ ಮನುಷ್ಯ ಪ್ರಜ್ಞೆ ಎಂಬುದು ಸಾಮಾಜಿಕ ಪ್ರಜ್ಞೆಗೆ ಒಂದು ಪ್ರವೇಶಿಕೆಯಾಗಿ ಗೋಚರಿಸುತ್ತದೆ. ಸಮಾಜ ಎನ್ನುವುದು ಮನುಷ್ಯನಿಂದ ಪ್ರತ್ಯೇಕವಾದ ವ್ಯವಸ್ಥೆಯೇನಲ್ಲ. ಮನುಷ್ಯರಿಂದ ಕೂಡಿದ ಒಂದು ಸಂಘಟನೆಯೇ  ಸಮಾಜ. ಈ ಕಾರಣದಿಂದಲೇ ಅರಿಸ್ಟಾಟಲ್ ಮನುಷ್ಯ ಮೂಲತ: ಸಮಾಜ ಜೀವಿ ಎನ್ನುತ್ತಾನೆ. ಪರಿಣಾಮವಾಗಿ ಸಮಾಜ ಪರಿವರ್ತನೆ ಎನ್ನುವುದು ಮನುಷ್ಯ ಪರಿವರ್ತನೆಯಲ್ಲೇ ಅಡಕವಾಗಿದೆ. ಆದ್ದರಿಂದ ಚಿತ್ತಾಲರು ತಮ್ಮ ಕೃತಿಗಳಲ್ಲಿ ನೇರವಾಗಿ ಸಮಾಜಿಕ ಪ್ರಜ್ಞೆಯನ್ನು ಪ್ರವೇಶಿಸದೇ ಮನುಷ್ಯ ಪ್ರಜ್ಞೆಯ ಕಡೆ ಹೊರಳುತ್ತಾರೆ. ನಾನೇಕೆ ಬರೆಯುತ್ತೇನೆ ಎನ್ನುವ ಪ್ರಬಂಧದಲ್ಲಿ ಚಿತ್ತಾಲರು ತಮ್ಮ ಸಾಹಿತ್ಯ ಸೃಷ್ಟಿಯ ಕಾರಣವನ್ನು ಹೀಗೆ ವಿವರಿಸುತ್ತಾರೆ ‘ನೀವೇಕೆ ಬರೆಯುತ್ತೀರಿ ಎನ್ನುವ ಪ್ರಶ್ನೆಗೆ ನನ್ನಲ್ಲಿ ನೇರವಾದ ಉತ್ತರವಿಲ್ಲ. ಬರೆಯುವ ಅನುಭವ ನನ್ನ ಬದುಕಿಗೆ ಅರ್ಥಪೂರ್ಣತೆಯನ್ನು ತಂದುಕೊಟ್ಟ ಅನುಭವಗಳಲ್ಲೇ ಅತ್ಯಂತ ಮಹತ್ವದ್ದೆಂದು ಅನಿಸಿದ್ದುಂಟು. ನನ್ನ ಹುಟ್ಟನ್ನು, ಅಸ್ತಿತ್ವವನ್ನು ಅಲ್ಲಗಳೆಯುವಷ್ಟರ ಮಟ್ಟಿಗೆ ನಿರಾಸಕ್ತವಾದ ಈ ವಿಶಾಲ ವಿಶ್ವದಲ್ಲಿ ನನ್ನ ವೈಯಕ್ತಿಕ ಇರುವಿಕೆಯ ಪ್ರಸ್ತುತತೆಯನ್ನು ಕಂಡುಕೊಳ್ಳುವ ಹಾಗೂ ಆ ಮೂಲಕ ನನ್ನ ಸಮಾಜವನ್ನು ನನಗೆ ಜೀವಂತವಾಗಿಸುವ ಕ್ರಿಯೆಯಲ್ಲಿ ನನನ್ ಬರವಣಿಗೆ ಮಹತ್ವಪೂರ್ಣವಾಗಿ ಭಾಗವಹಿಸಿದೆ ಎಂದು ನನಗನಿಸುತ್ತದೆ. ಒಟ್ಟಿನಲ್ಲಿ ನಾನು ಬರೆಯಲು ಕಾರಣ ನಾನು ನಾನೇ ಆಗಲು, ನಾನು ನಾನೇ ಆಗಿ ಉಳಿದು ಉಳಿದವರೊಂದಿಗೆ ಬೆರೆಯಲು, ಪ್ರೀತಿಸಲು, ಪ್ರೀತಿಸುವುದನ್ನು ಕಲಿಯಲು, ಪ್ರೀತಿಸುವುದರ ಮೂಲಕ ಜೀವಂತ ಸಂಬಂಧಗಳನ್ನು ಹುಟ್ಟಿಸಿಕೊಳ್ಳಲು. ನಾನು ಬರೆಯುವುದು ಬೇರೆಯವರನ್ನು ತಿದ್ದುವುದಕ್ಕಲ್ಲ. ಆ ಯೋಗ್ಯತೆಯಾಗಲಿ, ಅಧಿಕಾರವಾಗಲಿ ನನಗಿಲ್ಲ’. ಒಟ್ಟಾರೆ ಚಿತ್ತಾಲರು ತಮ್ಮ ಬರವಣಿಗೆಯನ್ನು ತಾವೊಬ್ಬ ಮನುಷ್ಯರಾಗಿ ಉಳಿಯಲು ಅಗತ್ಯವಾದ ಸೃಜನಶೀಲ ಕ್ರಿಯೆ  ಎನ್ನುವ ಅರ್ಥದಲ್ಲಿ ಭಾವಿಸುತ್ತಾರೆ.

      ಸಾಹಿತ್ಯಕ್ಕೂ ಮತ್ತು ಮನುಷ್ಯ ಪ್ರಜ್ಞೆಗೂ ಇರುವ ಸಂಬಂಧದ ಕುರಿತು ಚಿತ್ತಾಲರಿಗಿರುವ ಒಂದು ಸ್ಪಷ್ಟ ಕಲ್ಪನೆಯನ್ನು ನಾವು ಅವರ ಅನೇಕ ಲೇಖನಗಳಲ್ಲಿ ಕಾಣಬಹುದು. ಮನುಷ್ಯನನ್ನು ಮನುಷ್ಯನನ್ನಾಗಿಸುವ ಸಾಧ್ಯತೆಗೆ ಒಳಪಡಿಸುವ ಮಾಧ್ಯಮಗಳಲ್ಲಿ ಸಾಹಿತ್ಯವೇ ಮುಖ್ಯವಾದದ್ದು ಎನ್ನುತ್ತಾರೆ ಚಿತ್ತಾಲರು. ‘ನಾವು ವಿಚಾರ ಮಾಡುವ, ಭಾವಿಸುವ ಹಾಗೂ ನೋಡುವ ಮಟ್ಟಗಳು ಎತ್ತರಗೊಂಡು ನಾವು ಮಾನವರಾಗಿ ಅರಳುವ ಸಾಧ್ಯತೆಯೇ  ಸಾಹಿತ್ಯ ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆಯೆಂದು  ನಾನು ನಂಬುತ್ತೇನೆ. ಬದುಕಿನ ಬಗ್ಗೆ ನಾವು ಬೆಳೆಸಿಕೊಂಡ ತಪ್ಪು ಅಪೇಕ್ಷೆಗಳಿಂದಾಗಿ ಮನುಷ್ಯ ಜೀವನಕ್ಕೆ ಅರ್ಥ ತಂದುಕೊಡಬಹುದಾದಂಥ ಗಂಭೀರ ಭಾವನೆಗಳೇ ಭ್ರಷ್ಟವಾಗುತ್ತ ನಮ್ಮ ಸಾಮಾಜಿಕ ಜೀವನದ ಮೇಲೆ, ರಾಜಕೀಯ ನಡುವಳಿಕೆಯ ಮೇಲೆ ಅತ್ಯಂತ ದುಷ್ಟವಾದ, ಅನಾರೋಗ್ಯಕರವಾದ ಪರಿಣಾಮ ಉಂಟಾಗುತ್ತಿರುವ ಇಂದಿನ ಕಾಲದಲ್ಲಿ ಮಾನವನ ಮೂಲಭೂತವಾದ ಭಾವನೆಗಳು ಕೆಡದಂತೆ, ಸಾಯದಂತೆ ಅವುಗಳನ್ನು ಕಾಪಾಡಿಕೊಳ್ಳುವುದರಲ್ಲಿ ಕಲೆಗಳು ಬಹುಮುಖ್ಯವಾಗಿ ಸಾಹಿತ್ಯ ವಹಿಸಬಹುದಾದ ಪಾತ್ರವನ್ನು ಒತ್ತಿ ಹೇಳಿದಷ್ಟೂ ಕಡಿಮೆಯೆನಿಸುತ್ತದೆ. ಸಾಹಿತ್ಯ ಕಮಿಟ್ ಆಗಬೇಕಾದದ್ದು ಈ ದಿಕ್ಕಿನಲ್ಲೆಂದು ನಾನು ಭಾವಿಸುತ್ತೇನೆ’ ಸಾಹಿತ್ಯವನ್ನು ಮನುಷ್ಯ ಪ್ರಜ್ಞೆಯ ಹಿನ್ನೆಲೆಯಲ್ಲಿ ಚಿತ್ತಾಲರು ವಿಶ್ಲೇಷಿಸಿ ನೋಡುವ ಪರಿಯಿದು. 

      ಆಧುನಿಕತೆಯ ಈ ಯುಗದಲ್ಲಿ ಬದಲಾಗುತ್ತಿರುವ ಮನುಷ್ಯ ಸ್ವಭಾವ ಮತ್ತು ಹೆಚ್ಚುತ್ತಿರುವ ತಣ್ಣನೆಯ ಕ್ರೌರ್ಯ ಚಿತ್ತಾಲರ ಬರವಣಿಗೆಯಲ್ಲಿ ಮತ್ತೆ ಮತ್ತೆ ವಿಮರ್ಶೆಗೆ ಒಳಗಾಗುತ್ತವೆ. ಮನುಷ್ಯ ಮನುಷ್ಯನನ್ನೇ ತನ್ನ ಸ್ವಾರ್ಥಕ್ಕಾಗಿ, ಸುಖಕ್ಕಾಗಿ ಉಪಯೋಗಿಸಿಕೊಳ್ಳಲು ತೊಡಗಿರುವ ಹಿಂಸಕ ಪ್ರವೃತ್ತಿಯನ್ನು ಚಿತ್ತಾಲರು ತಮ್ಮ ಬರವಣಿಗೆಯಲ್ಲಿ ವಿಶ್ಲೇಷಣೆಗೆ ಒಳಪಡಿಸುತ್ತಾರೆ. ಮಾನವೀಯ ಮೌಲ್ಯಗಳಲ್ಲಿನ ಶ್ರದ್ಧೆ ಕುಸಿಯುತ್ತಿರುವ ರೀತಿಗೆ ಅವರ ಸಾಹಿತ್ಯಿಕ ಮನಸ್ಸು ದಿಗಿಲುಗೊಳ್ಳುತ್ತದೆ. ಮನುಷ್ಯನ ಕ್ರೌರ್ಯ ಹೀಗೆ ಮುಂದುವರೆದಲ್ಲಿ ಮನುಷ್ಯ ಚೇತನ ಬದುಕಿನ ಕ್ರಿಯಾ ಕ್ಷೇತ್ರದಿಂದಲೇ ಪಲಾಯನ ಹೇಳಬಹುದಾದ ಭಯಾನಕ ಸ್ಥಿತಿ ಹುಟ್ಟಿಕೊಳ್ಳಬಹುದೆಂದು ಎಚ್ಚರಿಸುತ್ತಾರೆ.

    ಮನುಷ್ಯ ಪ್ರಜ್ಞೆ ಚಿತ್ತಾಲರ ಬರವಣಿಗೆಯಲ್ಲಿ ಒಡಮೂಡುವ ಬಗೆಗೆ ಉದಾಹರಣೆಯಾಗಿ ಅವರ ‘ಸುತ್ತು ಸುತ್ತೋ ಸುತ್ತಾಟ’ ಕಥೆಯನ್ನು ನೋಡಬಹುದು. ತನ್ನ ಹಿಂದೆ ನಡೆದು ಬರುತ್ತಿದ್ದ ಹುಡುಗ ಕಾಣೆಯಾದದ್ದಕ್ಕೂ ಅದೇ ದಾರಿಯಲ್ಲಿದ್ದ ಉಪಯೋಗದಲ್ಲಿಲ್ಲದ ಹಳೆ ಕೊಳವೆ ಬಾವಿಗೂ ಸಂಬಂಧ ಕಲ್ಪಿಸಿ ಹುಡುಗನ ಸಾವಿಗೆ ನಾನೇ ಕಾರಣನೆಂದು ಪರಿತಪಿಸುವ ದಾರಿಹೋಕನ ನೋವು ಮನುಷ್ಯ ಪ್ರಜ್ಞೆಯಾಗಿ ಓದುಗನ ಅಂತ:ಕರಣವನ್ನು ತಟ್ಟುತ್ತದೆ. ‘ಆ ದಿನ ಮನೆಯನ್ನು ತಲುಪುವ ಆತುರದಲ್ಲಿ ಬಸ್ ನಿಲ್ದಾಣದಿಂದ ನಮ್ಮ ಕಟ್ಟಡಕ್ಕೆ ಹೋಗುವ ರಾಜರಸ್ತೆಯನ್ನು ಹಿಡಿಯದೇ ಶೀಘ್ರದಾರಿಯಾದ ಸಮೀಪದ ಕಚ್ಚಾ ನೆಲದ ಬಯಲು ಭೂಮಿಯನ್ನು ಹಾದು ಹೋಗುತ್ತಿದ್ದಾಗ ಯಾವ ಸ್ಪಷ್ಟ ಕಾರಣವೂ ಇಲ್ಲದೇ ಸರಕ್ಕನೆ ಹಿಂತಿರುಗಿ ನೋಡಿದೆ. ಸುಮಾರು ಆರೇಳು ವರ್ಷದ ಹುಡುಗನೊಬ್ಬ ನನ್ನ ಬೆನ್ನ ಹಿಂದೆಯೇ  ಬರುತ್ತಿದ್ದದ್ದು ಕಣ್ಣಿಗೆ ಬಿತ್ತು. ಹುಡುಗ ನನ್ನಿಂದ ಸಾಕಷ್ಟು ದೂರದಲ್ಲಿದ್ದ. ಶಾಲೆಗೆ ಹೋಗುವ ಡ್ರೆಸ್‍ನಲ್ಲಿದ್ದ. ನಾನು ತುಳಿಯುತ್ತಿದ್ದ ದಾರಿಯಲ್ಲಿ ದಿನವೂ ದಾಟಿಯೇ  ಹೋಗಬೇಕಾಗಿದ್ದ ಉಪಯೋಗದಲ್ಲಿಲ್ಲದ ಹಳೇ ಕೊಳವೆ ಬಾವಿಯಿತ್ತು. ಅದರ ಬಾಯಿಯನ್ನು ಹರಕು ಮುರಕು ಜಂಗು ಹಿಡಿದ ಲೋಹದ ತಗಡಿನಿಂದ ಮುಚ್ಚಿದ್ದರು. ಅದನ್ನು ದಾಟುವಾಗ ಪ್ರತಿಸಾರಿ ಒಂದು ದಿನ ಈ ದರ್ವೇಶಿ ಯಾರದಾದರೂ ಜೀವಕ್ಕೆ ಅಪಾಯ ತರದೇ ಇರಲಾರದು ಎಂದು ಮನಸ್ಸಿನಲ್ಲೇ ಶಪಿಸುತ್ತಿದ್ದೆ. ಬಾವಿಯನ್ನು ದಾಟುವಾಗ ನನ್ನಹಾಗೇ ಮನಸ್ಸಿನಲ್ಲೇ ಬಾವಿಯನ್ನು ಬೈದವರು ಹಲವರಿರಬೇಕು. ಬಾವಿ ದಾಟಿಹೋದ ಕೆಲ ಹೊತ್ತಿನ ಮೇಲೆ ಬಂದ ಒಂದು ವಿಚಾರಕ್ಕೆ ಜೀವ ಝಲ್ ಎಂದು ನಡುಗಿತು. ಹಿಂತಿರುಗಿ ನೋಡಿದೆ. ಇಲ್ಲ ಹುಡುಗ ಇರಲಿಲ್ಲ. ಇಷ್ಟರಲ್ಲೇ ಬಾವಿಯನ್ನು ದಾಟಿ ಬರಬೇಕಾಗಿತ್ತು. ಇನ್ನೂ ದಾಟಿಯೇ  ಇಲ್ಲವೋ ಅಥವಾ ನಾವು ಇಷ್ಟು ದಿನ ಯಾವುದು ನಡೆಯಬಹುದೆಂದು ಹೆದರಿದ್ದೆವೋ ಅದು ಎಲ್ಲ ಬಿಟ್ಟು ಇವತ್ತು ಇದೀಗ ನನ್ನನ್ನು ಹಿಂಬಾಲಿಸುತ್ತಿದ್ದಾಗ ನಡೆದು ಹೋಯಿತೇ?’ ಎಂದು ಕ್ಷೋಭೆಗೊಳಗಾಗುವ ದಾರಿಹೋಕ ನಡೆದದ್ದರಲ್ಲಿ ನನ್ನ ಪಾತ್ರವನ್ನು ಕುರಿತು ನೀವು ಕೊಡುವ ತೀರ್ಪು ಕೊನೆಯದೆಂದು ಮೊರೆ ಹೋಗುತ್ತಾನೆ. ಕಾಣೆಯಾದ ಮಗುವಿನ ಬಗ್ಗೆ ಸುದ್ದಿ ಬರಲು ತಡವಾಗಿ ಹುಡುಗ ಬಾವಿಯಲ್ಲಿ ಬಿದ್ದಿರುವ ಬಗೆಗಿನ ಸಂಶಯ ತೀವ್ರವಾಗುತ್ತ ಹೋದಂತೆ ದಾರಿಹೋಕನ ಯಾತನೆ ತನ್ನ ಪರಾಕಾಷ್ಠೆಯನ್ನು ಮುಟ್ಟುತ್ತದೆ. ಹೀಗೆ ಘಟನೆಯೊಂದನ್ನು ಕಲ್ಪಿಸಿಕೊಂಡು ಅದರಲ್ಲಿ ತನ್ನ ಪಾತ್ರವೇನು ಎನ್ನುವ ಮಾನಸಿಕ ಕ್ಷೋಭೆಗೆ ಒಳಗಾಗುವ ಪಾತ್ರದಲ್ಲಿ ನಾವು ಕಾಣುವುದು ಮತ್ತದೇ ಮನುಷ್ಯ ಪ್ರಜ್ಞೆಯನ್ನು. ನಿವೃತ್ತಿಯ ದಿನವೇ ನಡೆಯುವ ಈ ಘಟನೆ ನಂತರದ ಹಲವು ದಿನಗಳ ಕಾಲ ಆತನ ಮಾನಸಿಕ ನೆಮ್ಮದಿಯನ್ನೇ ಕದಡುತ್ತದೆ. ನಡೆದಿದೆ ಎಂದು ಕಲ್ಪಿಸಿಕೊಂಡ ಒಂದು ಅಸಂಗತ ಘಟನೆಗೆ ನಾನು ಕಾರಣನಾದೆ ಎನ್ನುವ ವಿಚಾರ ಆತನನ್ನು ಕಾಡಲು, ಕ್ಷೋಭೆಗೆ ಒಳಪಡಿಸಲು ಅವನೊಬ್ಬ ರಕ್ತ ಮಾಂಸಗಳಿಂದ ಕೂಡಿದ ಮನುಷ್ಯನಾಗಿರುವುದೇ ಕಾರಣವಾಗುತ್ತದೆ. ಚಿತ್ತಾಲರೇ ಹೇಳುವಂತೆ ‘ಪ್ರೀತಿ, ದ್ವೇಷ, ಕ್ರೋಧ ಇವೇ ಮೊದಲಾದವು ಯಾವ ಕಾಲಕ್ಕೂ ಸಲ್ಲಬಹುದಾದ ಭಾವನೆಗಳಾದರೂ ಅವು ನಮ್ಮನ್ನು ತಟ್ಟಲು ಸಾಧ್ಯವಾಗುವುದು ನಿಜವಾದ ಮಾನವೀಯ ಯುಗದಲ್ಲಿ ಬದುಕುತ್ತಿರುವ ರಕ್ತ ಮಾಂಸಗಳ ಜೀವಂತ ವ್ಯಕ್ತಿಗಳಲ್ಲಿ ಉದ್ಭವಿಸಿದಾಗ’. 

        1971 ರಲ್ಲಿ ಪ್ರಕಟವಾದ ಮತ್ತು ಚಿತ್ತಾಲರಲ್ಲಿ ಒಂದು ರೋಮಾಂಚಕಾರಿ ಅನುಭವವಾಗಿ ಉಳಿದ ಶಿಕಾರಿ ಕಾದಂಬರಿಯಲ್ಲಿ ಮನುಷ್ಯ ಸಂಬಂಧಗಳ ವಿಶ್ಲೇಷಣೆಯಿದೆ. ‘ಶಿಕಾರಿ’ ಅಂದಿನ ದಿನಗಳಲ್ಲಿ ಮೈಯಲ್ಲಿ ಹೊಕ್ಕ ದೆವ್ವವಾಗಿತ್ತು ಎನ್ನುತ್ತಾರೆ ಚಿತ್ತಾಲರು ಕಾದಂಬರಿಯನ್ನು ಬರೆಯುವಾಗಿನ ತಮ್ಮ ಅನುಭವವನ್ನು ಕುರಿತು. ವಿಮರ್ಶಕ ಜಿ.ಎಸ್.ಆಮೂರ ಅವರು ಹೇಳುವಂತೆ ‘ಶಿಕಾರಿ ಕಾದಂಬರಿಯ ಕೇಂದ್ರ ಪ್ರತಿಮೆ ಬೇಟೆ. ಇಲ್ಲಿ ನಡೆಯುವ ಬೇಟೆ ಮನುಷ್ಯನಿಂದ ಪಶು ಪಕ್ಷಿಗಳ ಬೇಟೆಯಾಗಿರದೆ ಮನುಷ್ಯನಿಂದ ಮನುಷ್ಯನ ಬೇಟೆಯಾಗಿದೆ’. ಉತ್ತರ ಕನ್ನಡದ ಹನೇಹಳ್ಳಿಯ ನಾಗಪ್ಪ ‘ಶಿಕಾರಿ’ ಕಾದಂಬರಿಯ ಕಥಾನಾಯಕ. ಅಂತರ್ಮುಖಿ ಮತ್ತು ಭಾವಜೀವಿಯೂ ಆದ ನಾಗಪ್ಪ ನೌಕರಿಯಿಂದ ವಜಾಗೊಂಡ ಅವಧಿಯಲ್ಲಿ ಅನುಭವಿಸುವ ಒಟ್ಟು ಮಾನಸಿಕ ಕ್ಷೋಭೆ ಕಾದಂಬರಿಯ ಮುಖ್ಯ ವಸ್ತುವಾಗಿದೆ. 

          ಶಿಕಾರಿ ಕಾದಂಬರಿಯಲ್ಲಿ ಮನುಷ್ಯ ಪ್ರಜ್ಞೆಯೊಂದು ಹೇಗೆ ಪ್ರಜ್ಞಾಪೂರ್ವಕವಾಗಿ ಮೈದಾಳಿದೆ ಎನ್ನುವುದನ್ನು ಈ ಕೆಳಗಿನ ಸಾಲುಗಳು ಪುಷ್ಟೀಕರಿಸುತ್ತವೆ.

● ಈ ಮನುಷ್ಯನ ವ್ಯವಹಾರಿಕ ಜಗತ್ತಿನ ಅಸಹ್ಯವಾದ ಅಂದಗೇಡಿತನದಿಂದ ಮನಸ್ಸು ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲೆಂದು ಸೃಜನಶೀಲ ಕ್ರಿಯೆಗಳಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಆ ದೇವರೇ ಕೊಟ್ಟಿರಬೇಕು. ಸಭ್ಯತೆಯ ಮುಖವಾಡದ ಹಿಂದೆ ಎಂತಹ ಕ್ರೌರ್ಯದ ಹಲ್ಲು ಮಸೆತ ನೋಡಿ.

● ಮನುಷ್ಯ ಎಷ್ಟೇ ಪ್ರಾವೀಣ್ಯತೆ ಹೊಂದಿದವನಾಗಿದ್ದರೂ ಅವನೊಬ್ಬ ಭಾವನಾಜೀವಿ, ವ್ಯವಹಾರ ಜ್ಞಾನವಿಲ್ಲದವನು ಎನ್ನುವ ಅಭಿಪ್ರಾಯವೇ ಇಡೀ ವ್ಯವಸ್ಥೆ ಅವನನ್ನು ವ್ಯಂಗ್ಯವಾಗಿ ನೋಡಲು ಕಾರಣವಾಗಬಹುದು. 

● ಪ್ರತಿಯೊಬ್ಬನನ್ನು ಅಪನಂಬಿಕೆಯಿಂದ ನೋಡುವುದೇ ಜಾಣತನವಾದರೆ ಬದುಕಿರಬೇಕು ಎನ್ನುವ ಅಭೀಪ್ಸೆಗೆ ಅರ್ಥವಾದರೂ ಏನು?

● ಏನಿರದಿದ್ದರೂ ಬದುಕಬಹುದೇನೋ ಆದರೆ ಪ್ರೀತಿಯಿಲ್ಲದೆ, ಗೆಳೆತನವಿಲ್ಲದೆ, ಮಾನವೀಯ ಅಂತ:ಕರಣವಿಲ್ಲದೆ, ಸಹಾನುಭೂತಿಯಿಲ್ಲದೆ ಬದುಕುವುದು ಸಾಧ್ಯವೇ ಇಲ್ಲವೇನೋ?

         ಚಿತ್ತಾಲರ ಒಟ್ಟು ಬರವಣಿಗೆಯ ಪ್ರಧಾನ ಉದ್ದೇಶ ಮನುಷ್ಯ ಬದುಕಿನ ಹುಡುಕಾಟವಾಗಿದೆ. ಹನೇಹಳ್ಳಿಯಾಗರಲಿ ಅಥವಾ ಮುಂಬಯಿ ಮಹಾನಗರವಾಗಿರಲಿ ಅವರು ಸೃಷ್ಟಿಸುವ ಪಾತ್ರಗಳು ಆಯಾ ಪರಿಸರದ ಸಂಕೀರ್ಣ ಬದುಕಿನಲ್ಲಿ ಮನುಷ್ಯತ್ವದ ಹುಡುಕಾಟಕ್ಕೆ ತೊಡಗುತ್ತವೆ. ಸಾಹಿತ್ಯದ ಮೂಲಕವೇ ಮನುಷ್ಯ ಬದುಕಿನ ಹುಡುಕಾಟಕ್ಕೆ ಚಿತ್ತಾಲರು ಕೊಡುವ ಕಾರಣ ಹೀಗಿದೆ ‘ಒಬ್ಬ ಲೇಖಕನಾಗಿ ನನಗೆ ಆಸ್ಥೆಯಿದ್ದದ್ದು ಮನುಷ್ಯನನ್ನು ಅವನ ಮೂಲಕ ಬದುಕನ್ನು ಅರಿಯುವುದರಲ್ಲಿ. ಮನುಷ್ಯನನ್ನು ಅರಿಯುವುದಕ್ಕೆ ನಮಗೆ ಲಭ್ಯವಿದ್ದ ಮಾಧ್ಯಮಗಳಲ್ಲಿ ಸಾಹಿತ್ಯವೂ ಒಂದಾಗಿದೆ ಮಾತ್ರವಲ್ಲ ಇತರ ಮಾಧ್ಯಮಗಳಿಗೆ ಇಲ್ಲದ ಕೆಲವು ಶಕ್ತಿಗಳು ಸಾಹಿತ್ಯಕ್ಕೆ ಮಾತ್ರ ಇವೆ ಎನ್ನುವುದು ನನ್ನ ತಿಳುವಳಿಕೆಯಾಗಿದೆ, ಭರವಸೆಯಾಗಿದೆ’. ಹೀಗೆ ಮನುಷ್ಯ ಬದುಕಿನ ಹುಡುಕಾಟಕ್ಕೆ ತಮ್ಮ ಬರವಣಿಗೆಯನ್ನು ಸಶಕ್ತವಾಗಿ ದುಡಿಸಿಕೊಂಡ ಚಿತ್ತಾಲರು ಓದುಗರು ಸಾಹಿತ್ಯದ ಸೃಷ್ಟಿಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದನ್ನು ಬಯಸುತ್ತಾರೆ. ಏಕೆಂದರೆ ಸ್ಪಿನೋಝಾ ನೈತಿಕ ನಡವಳಿಕೆಯ ಬಗ್ಗೆ ಹೇಳಿದ ಮಾತನ್ನು ಆಧರಿಸಿ ಹೇಳುವುದಾದರೆ ನಾವು ಬದ್ಧರಾಗಬೇಕಾದದ್ದು ಮನುಷ್ಯರ ಹಾಗೆ ಬದುಕುವುದಕ್ಕೆ, ಪ್ರೀತಿಸುವುದಕ್ಕೆ ಮತ್ತು ಮನುಷ್ಯರಾಗುವುದಕ್ಕೆ. ಮನುಷ್ಯ ಸೃಜನಶೀಲನಾದರೆ ಆತ ಮನುಷ್ಯನಾದಂತೆಯೇ. ಏಕೆಂದರೆ ಸೃಜನಶೀಲನಾಗುವುದು, ಪ್ರೀತಿಸುವ ಸಾಮರ್ಥ್ಯವುಳ್ಳವನಾಗುವುದು, ಮನುಷ್ಯನಾಗುವುದು ಇವೆಲ್ಲವುಗಳ ಅರ್ಥ ಒಂದೇ. ಆದ್ದರಿಂದ ಸಾಹಿತ್ಯವನ್ನು ಮನುಷ್ಯತ್ವದ ಅನ್ವೇಷಣೆಗೆ ಉಪಯೋಗಿಸಿಕೊಂಡಲ್ಲಿ ಮನುಷ್ಯ ಪ್ರಜ್ಞೆಯನ್ನು ನಾವು ಪ್ರತಿಯೊಬ್ಬರಲ್ಲಿ ಕಾಣಲು ಸಾಧ್ಯವಾಗುವುದು ಎನ್ನುವ ಆಶಯ ಚಿತ್ತಾಲರದಾಗಿತ್ತು. ಈ ಸಾಧ್ಯತೆಯನ್ನು ಚಿತ್ತಾಲರ ಸಾಹಿತ್ಯದ ಕುರಿತಾದ ಇಲ್ಲಿನ ಹೇಳಿಕೆಯಲ್ಲಿ ಕಾಣಬಹುದು ‘ಮನುಷ್ಯನಿಗೆ ಮನುಷ್ಯತ್ವದ ಸಾಕ್ಷಾತ್ಕಾರವಾಗುವುದು ಕೆಲವೇ ಕೆಲವು ವಿರಳ ಕ್ಷಣಗಳಲ್ಲಿ ಮಾತ್ರ. ಅಂಥ ವಿರಳ ಕ್ಷಣಗಳಲ್ಲಿ ಸಾಹಿತ್ಯಕ್ಕೆ ಮುಖಾಮುಖಿಯಾಗುವ ಕ್ಷಣ ಕೂಡ ಒಂದು. ಆದ್ದರಿಂದ ಸಾಹಿತ್ಯದ ಪ್ರಭಾವಕ್ಕೆ ಒಳಗಾದ ವ್ಯಕ್ತಿ ಮುಕ್ತ ಮನಸ್ಸಿನ, ಜೀವಂತ ಸೃಷ್ಟಿಶೀಲ ವ್ಯಕ್ತಿ ಎನ್ನುವ ನಂಬಿಕೆ ನನ್ನದು’.

          ‘ಚಿತ್ತಾಲರ ಶಿಕಾರಿ ನಮ್ಮಲ್ಲಿ ತುಂಬುವ ಆತ್ಮವಿಶ್ವಾಸವನ್ನು, ಕಳ್ಳಗಿರಿಯಣ್ಣ ಕಥೆ ನಮಗೆ ತೋರಿಸುವ ಉಲ್ಲಾಸದ ಜಗತ್ತನ್ನು, ಪಯಣ ತೋರಿಸುವ ಸಾವನ್ನು, ಆಟ ಕತೆಯಲ್ಲಿ ಬರುವ ಬುಡಾಣ ಸಾಬರ ಉಲ್ಲಾಸವನ್ನು ಬೇರೆ ಯಾವ ಓದು ಕೂಡ ಕಟ್ಟಿಕೊಡಲಾರದು’ ಎಂದು ಲೇಖಕ ಜೋಗಿ ಚಿತ್ತಾಲರ ಒಟ್ಟು ಸಾಹಿತ್ಯವನ್ನು ಮನುಷ್ಯ ಪ್ರಜ್ಞೆಯ ಹಿನ್ನೆಲೆಯಲ್ಲಿ ತುಂಬ ಅರ್ಥಪೂರ್ಣವಾಗಿ ವಿವರಿಸುತ್ತಾರೆ. ಸಂಖ್ಯಾ ದೃಷ್ಟಿಯಿಂದ ಯಶವಂತ ಚಿತ್ತಾಲರ ಕೃತಿಗಳ ಸಂಕ್ಯೆ ತುಂಬ ಕಡಿಮೆ. ಆದರೆ ಗುಣಾತ್ಮಕವಾಗಿ ಚಿತ್ತಾಲರ ಕೃತಿಗಳಿಗೆ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಠ ಸ್ಥಾನವಿದೆ. ಚಿತ್ತಾಲರ ಒಟ್ಟು ಬರವಣಿಗೆಯ ಸಾರ್ಥಕತೆಯಿರುವುದು ಮನುಷ್ಯನನ್ನು ಮನುಷ್ಯನನ್ನಾಗಿ ರೂಪಿಸುವಲ್ಲಿ. ಅವರ ಕಥೆ, ಕಾದಂಬರಿಗಳ ಪಾತ್ರಗಳು ಮಾನವೀಯ ಪ್ರೀತಿ, ಅಂತ:ಕರಣವನ್ನು ಹುಡುಕುತ್ತ ಅಲೆಯುವುದು ಸಹಜವೆಂಬಂತೆ ಚಿತ್ರಿತವಾಗಿದೆ. ಚಿತ್ತಾಲರು ಸೃಷ್ಟಿಸಿದ ಕಥಾನಾಯಕ ಝೋಪಡಪಟ್ಟಿಗಳಲ್ಲಿ, ಹೂ ಮಾರುವ ಬಾಲಕಿಯಲ್ಲಿ, ರಸ್ತೆ ಬದಿಯಲ್ಲಿನ ನಿರ್ಗತಿಕರಲ್ಲಿ ಹೀಗೆ ತನಗೆ ಎದುರಾಗುವ ಪ್ರತಿಯೊಬ್ಬರಲ್ಲಿ ಮನುಷ್ಯ ಪ್ರೇಮಕ್ಕಾಗಿ ಹಂಬಲಿಸುತ್ತಾನೆ. ಚಿತ್ತಾಲರ ಕಥೆ, ಕಾದಂಬರಿಗಳ ನಾಯಕರು ವ್ಯವಹಾರಿಕ ಬದುಕಿನಲ್ಲಿ ಸೋಲನ್ನನುಭವಿಸಿದರೂ ವೈಯಕ್ತಿಕ ಬದುಕಿನಲ್ಲಿ ಗೆಲುವು ಸಾಧಿಸುವುದು ಆ ಮೂಲಕ ಮನುಷ್ಯ ಪ್ರಜ್ಞೆಯನ್ನು ಗೆಲ್ಲಿಸುವುದು ಅವರ ಒಟ್ಟು ಬರವಣಿಗೆಯ ಪ್ರಧಾನ ನೆಲೆಯಾಗಿದೆ. ಕಥೆಗಾರ ದಿವಾಕರ್ ಅವರು ಹೇಳುವಂತೆ ಚಿತ್ತಾಲರ ಕೃತಿಗಳಲ್ಲಿ ಜೀವಂತ ಮನುಷ್ಯನೊಬ್ಬನ ಬಗ್ಗೆ ಜೀವಂತ ಮನುಷ್ಯನೊಬ್ಬ ಕಿವಿಗೊಟ್ಟು ಕೇಳಿಸಿಕೊಳ್ಳಬೇಕಾದ ಜೀವನ ದರ್ಶನವಿದೆ.   

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Tuesday, April 3, 2018

ಮಲಿನಗೊಂಡಿದೆ ರಾಜಕಾರಣ

           



        ಕರ್ನಾಟಕ ಈಗ ಚುನಾವಣೆಯ ಹೊಸ್ತಿಲಲ್ಲಿದೆ. ಚುನಾವಣೆಗೆ ಸ್ಪರ್ಧಿಸುವ ಪ್ರತಿ ಅಭ್ಯರ್ಥಿಯು ಕನಿಷ್ಠ 20 ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ಸಾಧ್ಯತೆಯಿದೆ ಎಂದು ನನ್ನ ಮಿತ್ರರೊಬ್ಬರು ಆತಂಕ ವ್ಯಕ್ತಪಡಿಸಿದಾಗ ದೇಶದ ರಾಜಕಾರಣ ಚಿಂತಾಜನಕ ಸ್ಥಿತಿಯಲ್ಲಿದೆ ಎಂದೆನಿಸಿತು. ರಾಜ್ಯದಲ್ಲಿ ಮೂರು ಪ್ರಬಲ ಪಕ್ಷಗಳಿರುವುದರಿಂದ ಒಂದು ಮತ ಕ್ಷೇತ್ರದಿಂದ ಕೇವಲ ಮೂರು ಅಭ್ಯರ್ಥಿಗಳನ್ನು ಲೆಖ್ಖಕ್ಕೆ ತೆಗೆದುಕೊಂಡರೆ ಈ ಸಲದ ವಿಧಾನಸಭಾ ಚುನುವಾಣೆಗೆ ಅಭ್ಯರ್ಥಿಗಳಿಂದ ಖರ್ಚಾಗುವ ಅಂದಾಜು ಹಣ 1344 ಕೋಟಿ ರೂಪಾಯಿಗಳಾಗುತ್ತದೆ. ಹಣ ಮತ್ತು ಹೆಂಡ ನೀರಿನಂತೆ ಹರಿಯಲಿವೆ, ಮತದಾರರಿಗೆ ಬಾಡೂಟದ ಆತಿಥ್ಯ ದೊರೆಯಲಿದೆ, ಸೀರೆ ಮತ್ತು ಪಂಚೆಗಳ ವಿತರಣೆಯಾಗಲಿದೆ, ಬಣ್ಣದ ಟಿ ವಿ ಮತದಾರರ ಮನೆಗಳನ್ನು ಅಲಂಕರಿಸಲಿವೆ ಇದೆಲ್ಲ ಭಾರತದ ರಾಜಕಾರಣದಿಂದ ಮತದಾರ ಪ್ರಭುಗಳಿಗೆ ಪ್ರಾಪ್ತವಾಗುವ ಭಾಗ್ಯ. ಜೊತೆಗೆ ನಮ್ಮ ರಾಜಕಾರಣಿಗಳು ಪ್ರಣಾಳಿಕೆಯ ಮೂಲಕ ಸಾರ್ವಜನಿಕರಿಗೆ ಇಲ್ಲದ ಆಮಿಷಗಳನ್ನು ಒಡ್ಡಿ ಮತಗಳನ್ನು ಸೆಳೆಯುವ ನಾಟಕ ಮಾಡುತ್ತಾರೆ. ಒಟ್ಟಿನಲ್ಲಿ ಅಧಿಕಾರದ ಆಕಾಂಕ್ಷೆಗೆ ಒಳಗಾಗುವ ರಾಜಕಾರಣಿಗಳು ತಮ್ಮ ಹಣ ಮತ್ತು ತೋಳ್ಬಲದಿಂದ ರಾಜಕೀಯ ಕ್ಷೇತ್ರವನ್ನು ಅಪವಿತ್ರಗೊಳಿಸಿ ಸುಗುಣರು, ಪ್ರಾಮಾಣಿಕರು ಮತ್ತು ಕರ್ತವ್ಯನಿಷ್ಟರು ರಾಜಕೀಯಕ್ಕೆ ವಿಮುಖರಾಗುವಂಥ ವಾತಾವರಣವನ್ನು ನಿರ್ಮಿಸುತ್ತಿರುವರು. ಒಟ್ಟಿನಲ್ಲಿ ರಾಜಕಾರಣ  ಮಲಿನಗೊಂಡಿದೆ ಎನ್ನುವುದು ಪ್ರಾಮಾಣಿಕರ ಕೂಗಾಗಿದೆ.  

ನಿರ್ಣಾಯಕರಾಗುತ್ತಿರುವ ಅನಕ್ಷರಸ್ಥರು

ಇವತ್ತು ರಾಜಕೀಯದಲ್ಲಿ ಅಸಮರ್ಥರು, ಅಪ್ರಾಮಾಣಿಕರು ಮತ್ತು ಅದಕ್ಷರು ಚುನಾಯಿತರಾಗಿ ಅಧಿಕಾರ ನಡೆಸುತ್ತಿರುವುದಕ್ಕೆ ದೇಶದ ಬಹುಸಂಖ್ಯಾತ ಅನಕ್ಷರಸ್ಥರೆ ಪ್ರಮುಖ ಕಾರಣರಾಗಿರುವರು. ಚುನಾವಣೆಯಲ್ಲಿ ಗೆಲುವು ಸಾಧಿಸಲು ಅನಕ್ಷರಸ್ಥರ ಮತ್ತು ಬಡವರ ಮತಗಳನ್ನು ಸುಲಭವಾಗಿ ಸೆಳೆದುಕೊಳ್ಳಬಹುದೆನ್ನುವುದು ವಾಸ್ತವಿಕ ಸತ್ಯವಾಗಿದೆ. ಹೀಗಾಗಿ ನಮ್ಮ ರಾಜಕಾರಣಿಗಳು ತಮ್ಮ ಗೆಲುವಿಗಾಗಿ ಹೆಚ್ಚು ಅವಲಂಬಿತರಾಗಿರುವುದು ಈ ಬಡ ಮತ್ತು ಅವಿದ್ಯಾವಂತ ಮತದಾರರ ಮೇಲೆಯೇ. ಬಡತನ ಮತ್ತು ನಿರುದ್ಯೋಗದಂಥ ಸಮಸ್ಯೆಗಳು ಒಂದು ವರ್ಗದ ಜನರನ್ನು ರಾಜಕಾರಣಿಗಳು ಕೊಡಮಾಡುತ್ತಿರುವ ಆಮಿಷಕ್ಕೆ ಸುಲಭವಾಗಿ ಬಲಿಯಾಗಿಸುತ್ತಿವೆ. ಹಣ ಮತ್ತು ಹೆಂಡಕ್ಕೆ ಮಾರುಹೋಗುವ ಬಡವರು ಹಾಗೂ ಅನಕ್ಷರಸ್ಥರು ಚುನಾವಣೆಯಲ್ಲಿ ಹಣಬಲವಿರುವ ಅಭ್ಯರ್ಥಿಗಳಿಗೆ ಜಯ ತಂದು ಕೊಡುತ್ತಿರುವರು. ವಿದ್ಯಾವಂತರೆಂದು ಗುರುತಿಸಿಕೊಂಡಿರುವ ಒಂದು ಇಡೀ ವರ್ಗ ಚುನಾವಣೆಯ ಸಂದರ್ಭ ಮತದಾನಕ್ಕೆ ವಿಮುಖವಾಗುತ್ತಿರುವುದರಿಂದ ರಾಜಕೀಯ ಪ್ರಜ್ಞೆಯೇ  ಇಲ್ಲದ ಅನಕ್ಷರಸ್ಥರ ಸಮೂಹ ಇವತ್ತಿನ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿದೆ. 

ಸಾಹಿತ್ಯವಲಯದ ಓಲೈಕೆ

ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಲೇಖಕ ಮಾರಿಯೋ ವರ್ಗಾಸ್ ಯೋಸಾ ಸಾಹಿತ್ಯದ ಮಹತ್ವವನ್ನು ಹೀಗೆ ಹೇಳುತ್ತಾನೆ “ಬಹುಕಾಲ ಬಾಳುವಂಥ ಯಾವುದನ್ನು ರಾಜಕಾರಣ ಮಾಡಲಾಗುವುದಿಲ್ಲವೋ ಅದನ್ನು ಸಾಹಿತ್ಯ ಮಾಡಬೇಕು. ಲೇಖಕ ಕೇವಲ ವರ್ತಮಾನಕ್ಕಾಗಿ ಮಾತ್ರ ಪುಸ್ತಕ ಬರೆಯುವುದಿಲ್ಲ. ಟೀಕಿಸುವ ಮೂಲಕವೋ ತಮ್ಮ ಆಲೋಚನೆಗಳನ್ನು ಬಳಸಿ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮೂಲಕವೋ ಲೇಖಕರಾದವರು ಕಾರ್ಯಪ್ರವೃತ್ತರಾಗುವುದು ತುಂಬಾ ಮುಖ್ಯ. ಕೆಲವು ಸಂದರ್ಭಗಳಲ್ಲಿ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಬೇಕಾಗಿ ಬರುವಂಥ ಯಾವುದೇ ಅಭಿಪ್ರಾಯಕ್ಕೂ ಲೇಖಕ ಜಗ್ಗ ಕೂಡದು. ಒಂದು ಅಗತ್ಯದಂತೆ ಲೇಖಕರು ತಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕು”. ಯೋಸಾನ ಒಟ್ಟು ಹೇಳಿಕೆಯ ಅರ್ಥ ಬರಹಗಾರ ರಾಜಕೀಯ ಅಥವಾ ರಾಜಕಾರಣದೊಂದಿಗೆ ರಾಜೀ ಮಾಡಿಕೊಳ್ಳದೆ ಸಮಾಜವನ್ನು ಭ್ರಷ್ಟ ರಾಜಕಾರಣದಿಂದ ಕಾಯುವ ಕೆಲಸ ಮಾಡಬೇಕು. ಮುಖ್ಯಮಂತ್ರಿ ಭೇಟಿಯಾಗಲು ಮನೆಗೆ ಬರುವ ವಿಚಾರ ತಿಳಿದು  ಭೇಟಿಯನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುವ ದೇವನೂರ ಮಹಾದೇವರಂಥ ಸೂಕ್ಷ್ಮ ಸಂವೇದನೆಯ ಬರಹಗಾರ ರಾಜಕೀಯದಿಂದ ಅಂತರವನ್ನು ಕಾಯ್ದುಕೊಂಡು ರಾಜಕಾರಣವನ್ನು ಶುಚಿಗೊಳಿಸುವ ಕೆಲಸ ಮಾಡಬಲ್ಲ. ಆದರೆ ದುರಂತದ ಸಂಗತಿ ಎಂದರೆ ನಮ್ಮ ಬಹುಪಾಲು ಬರಹಗಾರರು ಅಧಿಕಾರ ಕೇಂದ್ರವನ್ನು ಓಲೈಸುವ ಮತ್ತು ರಾಜಕಾರಣಿಗಳನ್ನು ಹೊಗಳುವ ಬಹುಪರಾಕ್ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವರು. ಸಾಹಿತ್ಯ ಸಮ್ಮೇಳನದಂಥ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷರು ಆಳುವ ಸರ್ಕಾರದ ಪರ ಮಾತನಾಡುವುದು, ಪ್ರಶಸ್ತಿ ಪುರಸ್ಕಾರಗಳಿಗಾಗಿ ಲಾಬಿಗಿಳಿಯುವುದು, ಅಕಾಡೆಮಿಗಳ ಅಧ್ಯಕ್ಷ ಸ್ಥಾನಕ್ಕಾಗಿ ರಾಜಕಾರಣಿಗಳ ಮನೆ ಬಾಗಿಲನ್ನು ಕಾಯುವುದು ಇಂಥ ಕಾರ್ಯಗಳಲ್ಲಿ ತಮ್ಮ ಸೃಜನಶೀಲತೆಯನ್ನು ಮೆರೆಯುತ್ತಿರುವ ಸಾಹಿತಿಗಳು ರಾಜಕಾರಣಕ್ಕೆ ತಮ್ಮ ಬರವಣಿಗೆ ಮೂಲಕ ಪರಿಶುದ್ಧತೆಯ ರೂಪವನ್ನು ನೀಡುವುದು ದೂರದ ಮಾತು. ಅಕಾಡೆಮಿಗಳ ಚುನಾವಣೆಗೆ ಸ್ವತ: ರಾಜಕೀಯದ ಖದರು ನೀಡಿರುವ ನಮ್ಮ ಸಾಹಿತ್ಯವಲಯದಿಂದ ಹೆಚ್ಚಿನದೇನನ್ನೂ ಅಪೇಕ್ಷಿಸುವಂತಿಲ್ಲ. ಯೇಟ್ಸ್  ತನ್ನ ಸುಪ್ರಸಿದ್ಧ ಕವಿತೆ ‘ದ’ಸೆಕೆಂಡ್ ಕಮಿಂಗ್’ನಲ್ಲಿ ಯುರೋಪಿನ ಸನ್ನಿವೇಶವನ್ನು ವರ್ಣಿಸುತ್ತ the best lack conviction and the worst are full of passionate intensity  ಎಂದು ಆತಂಕದಿಂದ ಬರೆಯುತ್ತಾನೆ. ಯೇಟ್ಸ್ ನ  ಈ ಹೇಳಿಕೆಯನ್ನು ಆಧರಿಸಿ ಹೇಳುವುದಾದರೆ ಬರಹಗಾರರು ಮೌನವಾಗಿರದೆ ಮಾತನಾಡುವುದನ್ನು ಮತ್ತು ಪ್ರತಿಭಟಿಸುವುದನ್ನು ಕಲಿಯಬೇಕು. ಅಧಿಕಾರದ  ಶಕ್ತಿಕೇಂದ್ರ ಮತ್ತು ರಾಜಕಾರಣವನ್ನು ಓಲೈಸದೆ ಬರಹಗಾರರು ಹೋರಾಟ ಮತ್ತು ಚಳವಳಿಯಂಥ ಪ್ರಕ್ರಿಯೆಯಲ್ಲಿ  ಪಾಲ್ಗೊಳ್ಳುವುದು ಸಮಾಜದ ಹಿತದ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ. 

ಸಮಿತಿಯ ನಿಷ್ಕ್ರಿಯತೆ

ಟಿ.ಎನ್.ಶೇಷನ್ ಅವರ ಅಧಿಕಾರವಧಿಯ ನಂತರ ಭಾರತದ ಚುನಾವಣಾ ಸಮಿತಿಯು ಜಡವಾದಂತೆ ಕಾಣುತ್ತಿದೆ. ಭಾರತದ ಚುನಾವಣಾ ರಾಜಕಾರಣಕ್ಕೆ ಒಂದು ಪಾರದರ್ಷಕತೆಯನ್ನು ತಂದುಕೊಟ್ಟ ಹಿರಿಮೆ ಟಿ.ಎನ್.ಶೇಷನ್ ಅವರದು. ಶೇಷನ್ ಚುನಾವಣಾ ಸಮಿತಿಯ ಆಯುಕ್ತರಾಗುವುದಕ್ಕಿಂತ ಪೂರ್ವದಲ್ಲಿ ಚುನಾವಣೆಯಲ್ಲಿ ಹಣ ಮತ್ತು ತೋಳ್ಬಲದ ಅಬ್ಬರ ಬಲವಾಗಿತ್ತು. ಚುನಾವಣೆ ಎನ್ನುವುದು ಅಕ್ಷರಶ: ಹಣವಂತರ ಮತ್ತು ತೋಳ್ಬಲವಿರುವವರ ಅಖಾಡ ಎನ್ನುವ ವಾತಾವರಣ ರಾಜಕೀಯದಲ್ಲಿ ಮನೆ ಮಾಡಿತ್ತು. ಶೇಷನ್ ಆಯುಕ್ತರಾಗಿ ಬಂದವರೆ ಚುನಾವಣಾ ಸಮಿತಿಗೆ ಪರಮಾಧಿಕಾರದ ಸ್ಪರ್ಷ ನೀಡಿ ಚುನಾವಣೆಯಲ್ಲಿ ಅಭ್ಯರ್ಥಿಗಳು ಮಾಡುವ ಖರ್ಚಿಗೆ ಕಡಿವಾಣ ಹಾಕಿದರು. ಪ್ರತಿ ಅಭ್ಯರ್ಥಿಯು ಖರ್ಚು ಮಾಡುವ ಒಟ್ಟು ಹಣವನ್ನು ನಿಗದಿಪಡಿಸಿದ್ದಲ್ಲದೆ ಚುನಾವಣಾ ಖರ್ಚು ವೆಚ್ಚದ ಲೆಕ್ಕ ಒಪ್ಪಿಸುವ ನಿಯಮವನ್ನು ಜಾರಿಗೆ ತಂದದ್ದು ಭಾರತದ ರಾಜಕೀಯದಲ್ಲಿ ಅದೊಂದು ಮಹತ್ವದ ಸಾಧನೆಯಾಯಿತು. ಟಿ.ಎನ್.ಶೇಷನ್ ಅವರ ಪ್ರಯತ್ನದ ಪರಿಣಾಮ ದೇಶದ ರಾಜಕಾರಣದಲ್ಲಿ ಒಂದಿಷ್ಟು ಪ್ರಮಾಣಿಕತೆಯ ಗಾಳಿಯೇನೋ  ಬೀಸಿತಾದರೂ ಅವರ ನಂತರದ ಅಧಿಕಾರಿಗಳಲ್ಲಿನ ಅದಕ್ಷತೆಯ ಪರಿಣಾಮ ಇವತ್ತು ಚುನಾವಣಾ ಸಮಿತಿ ನಿಷ್ಕ್ರಿಯಗೊಂಡಿದೆ. 

ಮಠ ಮತ್ತು ಮಸೀದಿಗಳು

ಭಾರತ ಧಾರ್ಮಿಕ ನೆಲೆಯ ರಾಷ್ಟ್ರವಾಗಿರುವುದರಿಂದ ಇಲ್ಲಿ ರಾಜಕಾರಣದ ಸ್ಥಿತಿಗತಿಯನ್ನು ನಿರ್ಧರಿಸುವ ಮಟ್ಟಿಗೆ ಮಠ ಮತ್ತು ಮಸೀದಿಗಳು ರಾಜಕೀಯ ಮಹತ್ವವನ್ನು ಪಡೆದುಕೊಂಡಿವೆ. ಇವತ್ತು ಮಠ ಮತ್ತು ಮಸೀದಿಗಳು ರಾಜಕೀಯ ವೇದಿಕೆಗಳಾಗಿ ರೂಪಾಂತರಗೊಂಡಿವೆ. ಮಠಗಳನ್ನು ಮತ್ತು ಮಸೀದಿಗಳನ್ನು ಓಲೈಸಿದರೆ ತಮ್ಮದೆ ಆದ ಮತಬ್ಯಾಂಕವೊಂದನ್ನು ಸೃಷ್ಟಿಸಿಕೊಳ್ಳಲು ಸಾಧ್ಯ ಎನ್ನುವುದು ನಮ್ಮ ರಾಜಕಾರಣಿಗಳಿಗೆ ಮನವರಿಕೆಯಾಗಿದೆ. ಧರ್ಮ ಮತ್ತು ಜಾತಿಗೊಂದರಂತೆ ತಲೆ ಎತ್ತುತ್ತಿರುವ ಮಠಗಳು ಇವತ್ತು ದೇಶದ ರಾಜಕೀಯದ ನಡೆಯನ್ನು ನಿರ್ಣಯಿಸುವಷ್ಟು ಪ್ರಬಲವಾಗಿವೆ. ಪುರಾಣ, ಪ್ರವಚನದಂಥ ಸಾತ್ವಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾದ ಮಠಗಳು ಮತ್ತು ಮಸೀದಿಗಳು ಚುನಾವಣೆಯ ಸಂದರ್ಭ ತಮ್ಮದೆ ನಿರ್ಧಿಷ್ಟ ಧರ್ಮದ ಮತ್ತು ಜಾತಿಯ ಅಭ್ಯರ್ಥಿಗಳ ಬೆಂಬಲಕ್ಕೆ ನಿಲ್ಲುತ್ತಿವೆ. ಧರ್ಮ ಮತ್ತು ಜಾತಿಯ ವ್ಯಾಮೋಹಕ್ಕೆ ಸಿಲುಕಿರುವ ಧಾರ್ಮಿಕ ಸಂಸ್ಥೆಗಳು ರಾಜಕಾರಣಿಗಳ ಅಪ್ರಾಮಾಣಿಕತೆ ಮತ್ತು ಅನೀತಿಯ ನಡೆಯನ್ನು ಗುರುತಿಸಿಯೂ ಅಂಥವರನ್ನು ಪ್ರೋತ್ಸಾಹಿಸುತ್ತಿರುವುದು  ದೇಶದ ಘೋರ ದುರಂತಗಳಲ್ಲೊಂದು.  

ಕುಲದ ಕಸುಬು

ಭಾರತದಲ್ಲಿ ರಾಜಕಾರಣ ಎನ್ನುವುದು ಅದೊಂದು ಸಮಾಜಸೇವೆ ಎನ್ನುವುದಕ್ಕಿಂತ ಹಣಮಾಡುವ ದಂಧೆ ಮತ್ತು ವಂಶಪಾರಂಪರ್ಯವಾಗಿ ಪ್ರಾಪ್ತವಾಗುವ ಕುಲದ ಕಸುಬಿನಂತಾಗಿದೆ. ಅನೇಕ ರಾಜಕಾರಣಿಗಳು ತಮ್ಮ ಇಳಿ ವಯಸ್ಸಿನಲ್ಲಿ ಮಕ್ಕಳಿಗಾಗಿ ಮತ್ತು ಮೊಮ್ಮಕ್ಕಳಿಗಾಗಿ ರಾಜಕೀಯ ವೇದಿಕೆಯನ್ನು ಸಿದ್ಧ ಪಡಿಸುವುದು ಇವತ್ತಿನ ವಾಸ್ತವಿಕ ಚಿತ್ರಣವಾಗಿದೆ. ನಾಲ್ಕೈದು ದಶಕಗಳ ಕಾಲ ಶಾಸಕರಾಗಿ, ಸಂಸದರಾಗಿ ಮತ್ತು ಮಂತ್ರಿಗಳಾಗಿ ಅಧಿಕಾರ ಅನುಭವಿಸುವ ರಾಜಕಾರಣಿಗಳು ತಮ್ಮ ನಂತರ ಮಕ್ಕಳನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡುತ್ತಿರುವುದು ಬಹುದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ದೇಶದ ವಿಪರ್ಯಾಸಗಳಲ್ಲೊಂದು. ಒಂದೇ ಕುಟುಂಬದಲ್ಲಿ ಇಬ್ಬರು ಅಥವಾ ಮೂರು ಶಾಸಕರು, ಸಂಸದರು, ಮಂತ್ರಿಗಳಿರುವುದು ಸಹಜ ಚಿತ್ರಣವಾಗಿದೆ. ಪ್ರಜಾಪ್ರಭುತ್ವದಡಿಯಲ್ಲಿ ವಂಶಪಾರಂಪರ್ಯದ ರಾಜಾಡಳಿತವನ್ನು ಅಸ್ತಿತ್ವಕ್ಕೆ ತರುತ್ತಿರುವ ನಮ್ಮ ರಾಜಕಾರಣಿಗಳು ರಾಜಕೀಯವನ್ನು ಕುಲದ ಕಸುಬಾಗಿ ರೂಪಾಂತರಿಸುತ್ತಿರುವಾಗ ಪ್ರಾಮಾಣಿಕತೆ ಮತ್ತು ನೈತಿಕತೆಯ ನೆಲೆಯಲ್ಲಿ ರಾಜಕೀಯ ಮಾಡಬೇಕೆನ್ನುವ ಸುಶಿಕ್ಷಿತರು ಭ್ರಮನಿರಸನಗೊಂಡಿರುವರು. 

ವಿದ್ಯಾವಂತರ  ಗೈರು

ರಾಜಕೀಯಕ್ಕೆ ವಿದ್ಯಾವಂತರು ಮತ್ತು ಸುಶಿಕ್ಷಿತರು ಪ್ರವೇಶಿಸುತ್ತಿಲ್ಲವೇಕೆ ಎನ್ನುವುದು ಬಹುಮುಖ್ಯ ಪ್ರಶ್ನೆಯಾಗಿದೆ. ಜೊತೆಗೆ ಸುಶಿಕ್ಷಿತರೆಂದು ಗುರುತಿಸಿಕೊಂಡಿರುವ ಒಂದು ವರ್ಗ ಚುನಾವಣೆಯ ಸಂದರ್ಭ ಮತದಾನದಂಥ ಪವಿತ್ರ ಕಾರ್ಯದಲ್ಲಿಯೂ ಪಾಲ್ಗೊಳ್ಳುತ್ತಿಲ್ಲದಿರುವುದು ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ವಿದ್ಯಾವಂತರು ರಾಜಕಾರಣಕ್ಕೆ ಬೆನ್ನು ಮಾಡಿ ನಿಂತಿರುವುದರಿಂದ ಇವತ್ತು ಅನಕ್ಷರಸ್ಥ ರಾಜಕಾರಣಿಗಳು ದೇಶದ ಕಾನೂನನ್ನು ರೂಪಿಸುವ ನಿರ್ಣಾಯಕ ಸ್ಥಾನದಲ್ಲಿರುವರು. ಶಿಕ್ಷಣ, ವೈದ್ಯಕೀಯ, ಕಾನೂನು, ಆರೋಗ್ಯದಂಥ ಕ್ಷೇತ್ರಗಳು ಅನಕ್ಷರಸ್ಥ ಜನಪ್ರತಿನಿಧಿಗಳ ಕೈಗೆ ಸಿಲುಕಿ ಭ್ರಷ್ಟಾಚಾರದ ಕೂಪಗಳಾಗಿವೆ. ವಿದ್ಯಾವಂತರು ಮತದಾನದ ಪ್ರಕ್ರಿಯೆಯಲ್ಲಿ  ಪಾಲ್ಗೊಳ್ಳುತ್ತಿಲ್ಲವಾದುದರಿಂದ ಚುನಾವಣೆಯ ಸೋಲು ಗೆಲುವಿನಲ್ಲಿ ಅವಿದ್ಯಾವಂತ ಮತದಾರರ ಮತಗಳೇ ನಿರ್ಣಾಯಕವಾಗುತ್ತಿವೆ. ಮತದಾನದ ದಿನದಂದು ಕುಟುಂಬ ಸಮೇತರಾಗಿ ಪ್ರವಾಸಕ್ಕೆ ಹೋಗುವ, ಮನೆ ಸ್ವಚ್ಛಗೊಳಿಸುವ, ಸುತ್ತಲಿನ ಕಸ ತೆಗೆಯುವ ಚಟುವಟಿಕೆಗಳಲ್ಲಿ ಧನ್ಯತೆ ಅನುಭವಿಸುವ ಸುಶಿಕ್ಷಿತರು ಮತ ಕೇಂದ್ರಗಳ ಕಡೆ ಮಾತ್ರ ತಲೆಹಾಕಲಾರರು. ಆಶ್ಚರ್ಯವೆಂದರೆ ಇದೇ ಸುಶಿಕ್ಷಿತ ವರ್ಗದವರು ಅತ್ಯಂತ ಪ್ರಾಮಾಣಿಕರಾಗಿ ಉದ್ದನೆಯ ಸಾಲಿನಲ್ಲಿ ನಿಂತು ವಿದ್ಯುತ್, ನೀರು, ದೂರವಾಣಿ ಬಿಲ್ಲನ್ನು ಪಾವತಿಸುತ್ತಾರೆ, ಸರ್ಕಾರಕ್ಕೆ ಮೋಸ ಮಾಡದೆ ಕಾಲ ಕಾಲಕ್ಕೆ ತೆರಿಗೆ ಕಟ್ಟುತ್ತಾರೆ ಮತ್ತು ತರಕಾರಿ, ದಿನಸಿ ಪದಾರ್ಥ ಖರೀದಿಸುವಾಗ ಗಂಟೆಗಟ್ಟಲೆ ಚೌಕಾಸಿ ಮಾಡುತ್ತಾರೆ.

ಒಟ್ಟಿನಲ್ಲಿ ದೇಶದ ರಾಜಕಾರಣವನ್ನು ಪರಿಶುದ್ಧಗೊಳಿಸುವ ಕೆಲಸ ಇವತ್ತಿನ ತುರ್ತು ಅಗತ್ಯವಾಗಿದೆ. ಸುಶಿಕ್ಷಿತರು, ವಿದ್ಯಾವಂತರು, ರಾಷ್ಟ್ರ ಪ್ರೇಮಿಗಳು, ಪ್ರಾಮಾಣಿಕರು ರಾಜಕೀಯಕ್ಕೆ ಪ್ರವೇಶಿಸಬೇಕು. ರಾಜಕೀಯ ಎನ್ನುವುದು ಹಣಗಳಿಸುವ ಉದ್ದಿಮೆಯಾಗದೆ, ಕುಟುಂಬದ ಕಸುಬಾಗದೆ ಅದೊಂದು ಸಮಾಜ ಸೇವೆ ಎನ್ನುವ ಮನೋಭಾವ ಬೆಳೆಯಬೇಕು. ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಅತ್ಯುತ್ತಮ ರಾಜಕಾರಣಿಗಳನ್ನು ರೂಪಿಸುವ ಕೇಂದ್ರಗಳಾಗಬೇಕು.  ಜಯಪ್ರಕಾಶ ನಾರಾಯಣ, ಲೋಹಿಯಾ, ವಾಜಪೇಯಿ ಅವರಂಥ ಸಮರ್ಥ ಮತ್ತು ನಿಸ್ವಾರ್ಥ ರಾಜಕಾರಣಿಗಳು ನಮ್ಮ ವಿದ್ಯಾರ್ಥಿ ಸಮುದಾಯದಿಂದ ಬೆಳೆದು ಬರಬೇಕು. 

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ