Wednesday, August 3, 2022

ಇರಲಿ ವೃತ್ತಿಘನತೆಯ ಪ್ರಜ್ಞೆ



(೧೩.೦೬.೨೦೨೨ ರ ಪ್ರಜಾವಾಣಿಯಲ್ಲಿ ಪ್ರಕಟ)

    ಕಳೆದ ವರ್ಷದ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ  ರ್ಯಾಂಕ್‍ನೊಂದಿಗೆ ತೇರ್ಗಡೆಯಾದ ನನ್ನ ಪರಿಚಿತರ ಮಗ ವೈದ್ಯಕೀಯ ಕೋರ್ಸಿಗೆ ಪ್ರವೇಶ ಪಡೆಯಲು ನಿರಾಕರಿಸಿದ ಸಂಗತಿ ನನಗೆ ಅಚ್ಚರಿಯನ್ನುಂಟು ಮಾಡಿತು. ಮಾತಿನ ನಡುವೆ ಈ ಕುರಿತು ಪ್ರಶ್ನಿಸಿದಾಗ ‘ವೈದ್ಯಕೀಯ ವೃತ್ತಿ ಸದಾಕಾಲ ಸೇವೆಯನ್ನು ಬಯಸುವಂತಹದ್ದು. ಅಲ್ಲಿ ವೈಯಕ್ತಿಕ ಬದುಕಿಗೆ ಹೆಚ್ಚಿನ ಅವಕಾಶವಿಲ್ಲ. ಹಗಲು ಹೊತ್ತು ಬಿಡಿ, ರಾತ್ರಿ ವೇಳೆಯಲ್ಲೂ ರೋಗಿಗಳ ಚಿಕಿತ್ಸೆಗೆ ಮುಂದಾಗಬೇಕು. ವೈಯಕ್ತಿಕ ಬದುಕಿನ ಆಶೋತ್ತರಗಳನ್ನು ಬದಿಗೊತ್ತಿ ಆ ವೃತ್ತಿಯಲ್ಲಿ ಸಾಧಿಸುವಂತಹದ್ದಾದರೂ ಏನಿದೆ?’ ಎಂದು ಹೇಳಿದ. ಒಂದುಕ್ಷಣ ಅವನ ಪ್ರತಿಕ್ರಿಯೆ ಕೇಳಿ ನಾನು ದಂಗಾಗಿ ಹೋದೆ. ಪ್ರತಿಭಾವಂತನಾದ ಅವನು ವೈದ್ಯಕೀಯ ವೃತ್ತಿಯನ್ನು ಆರಿಸಿಕೊಂಡರೆ ಸಮಾಜಕ್ಕೊಬ್ಬ ಸೇವಾಮನೋಭಾವದ ವೈದ್ಯ ದೊರೆಯುವನೆಂದು ಮೊದಲಿನಿಂದ ಭರವಸೆ ಇಟ್ಟುಕೊಂಡಿದ್ದ ನನಗೆ ಆ ಸಂದರ್ಭ ಅವನ ಪ್ರತಿಕ್ರಿಯೆಯಿಂದ ಒಂದಿಷ್ಟು ನಿರಾಸೆಯ ಜೊತೆಗೆ ಅವನಲ್ಲಿನ ವೃತ್ತಿ ಘನತೆಯ ಅರಿವಿನ ಕೊರತೆಯಿಂದ  ಮನಸ್ಸಿಗೆ ನೋವಾಗಿದ್ದಂತೂ ಸತ್ಯ.

ಕೆಲವು ವೃತ್ತಿಗಳೆ ಹಾಗೆ ಸದಾಕಾಲ ಒಂದಿಷ್ಟು ಅಗತ್ಯಗಳನ್ನು ಬಯಸುತ್ತವೆ. ವೃತ್ತಿ ಘನತೆಯನ್ನು ಎತ್ತಿ ಹಿಡಿಯುವುದಕ್ಕಾಗಿ ವೃತ್ತಿಯೊಂದು ಬಯಸುವ ಅಗತ್ಯಗಳಿಗೆ ಮನ್ನಣೆ ನೀಡಲೆಬೇಕು. ವೈದ್ಯಕೀಯ ವೃತ್ತಿಯನ್ನು ಆರಿಸಿಕೊಳ್ಳುವ ವ್ಯಕ್ತಿ ಹಗಲು ರಾತ್ರಿಗಳೆಂಬ ಭೇದವಿಲ್ಲದೆ ಸದಾಕಾಲ ರೋಗಿಗಳ ಸೇವೆಗೆ ತೆರೆದುಕೊಳ್ಳುವ ಮುಕ್ತ ಮನಸ್ಸು ಹೊಂದಿರಬೇಕು. ಶಿಕ್ಷಕ ವೃತ್ತಿ ತುಂಬ ಶಿಸ್ತನ್ನು ಬಯಸುತ್ತದೆ. ಶಿಕ್ಷಕ ವಿದ್ಯಾರ್ಥಿಗಳಿಗೆ ಮಾದರಿಯಾಗುವ ವ್ಯಕ್ತಿತ್ವವನ್ನು ರೂಪಿಸಿಕೊಂಡಿರಬೇಕು. ಪೊಲೀಸ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುವವರು ಕಾನೂನಿನ ಪರಿಪಾಲಕರಾಗಿರಬೇಕು. ಗ್ರಂಥಪಾಲಕ ಪುಸ್ತಕಗಳ ಓದಿನ ಆರಾಧಕನಾಗಿರಬೇಕು. ಪತ್ರಕರ್ತ ಸತ್ಯ, ನ್ಯಾಯ, ನಿಷ್ಟುರತೆಗಳಿಗೆ ಬದ್ಧನಾಗಿರಬೇಕು. 

ವ್ಯಕ್ತಿಯು ಸಮಾಜಕ್ಕಲ್ಲವಾದರೂ ತನ್ನ ವೃತ್ತಿಗಾದರೂ ಉತ್ತರದಾಯಿಯಾಗಿರಬೇಕಾಗುತ್ತದೆ. ವೃತ್ತಿಯೊಂದನ್ನು ಆಯ್ಕೆಮಾಡಿಕೊಳ್ಳುವ ಪೂರ್ವದಲ್ಲಿ ಆ ವೃತ್ತಿ ನಮ್ಮಿಂದ ಏನನ್ನು ಬಯಸುತ್ತಿದೆ ಎನ್ನುವುದನ್ನು ಮನಗಾಣಬೇಕು. ವೃತ್ತಿಯ ಅಗತ್ಯಗಳಿಗನುಗುಣವಾಗಿ ಹುದ್ದೆಯನ್ನು ನಿರ್ವಹಿಸಲು ಮಾನಸಿಕವಾಗಿ ಸಿದ್ಧನಾಗಬೇಕು. ಇಲ್ಲಿ ತ್ಯಾಗ ಅಥವಾ ವೈಯಕ್ತಿಕ ಬದುಕನ್ನು ಕಳೆದುಕೊಳ್ಳುತ್ತಿದ್ದೇನೆ ಎನ್ನುವುದಕ್ಕಿಂತ ವೃತ್ತಿಯ ಘನತೆಯನ್ನು ಎತ್ತಿ ಹಿಡಿಯುವುದು ಮೊದಲ ಆದ್ಯತೆಯಾಗಬೇಕು. ವೃತ್ತಿಯು ತರುವ ಸಂಬಳ ಮತ್ತು ಸವಲತ್ತುಗಳು ಬೇಕು ಎನ್ನುವುದಾದರೆ ಅದರೊಂದಿಗೆ ವೃತ್ತಿಯು ಬೇಡುವ ಕೆಲವು ಅವಶ್ಯಕತೆಗಳನ್ನು ಮೈಗೂಡಿಸಿಕೊಳ್ಳಲು ಹಿಂಜರಿಯುವುದು ಇಲ್ಲವೇ ಲೆಕ್ಕಾಚಾರ ಹಾಕುವುದು ಯಾವ ನ್ಯಾಯ?.

ನಾನೇಕೆ ಸಾರ್ವಜನಿಕರ ಆರೋಗ್ಯದ ಕುರಿತು ಚಿಂತಿಸಲಿ ಎಂದು ವೈದ್ಯನೊಬ್ಬ ಕೇಳಿದರೆ ಎಷ್ಟು ಅಸಂಗತವೆನಿಸುತ್ತದೆಯೋ ಅಷ್ಟೇ ಅಸಂಗತತೆ ಪೊಲೀಸ್ ಅಧಿಕಾರಿ ನಾನೇಕೆ ಕಾನೂನಿಗೆ ನಿಷ್ಠೆಯಿಂದಿರಲಿ ಎಂದು ಯೋಚಿಸುವುದರಿಂದ ಅನಿಸುತ್ತದೆ. ಪುಸ್ತಕಗಳ ದ್ವೇಷಿ ಗ್ರಂಥಪಾಲಕ ಹುದ್ದೆಗೆ ನ್ಯಾಯಸಲ್ಲಿಸುವುದಿಲ್ಲ. ‘ವಿದ್ಯಾರ್ಥಿಗಳಿಗೆ ಪರೋಕ್ಷವಾಗಿಯಾದರೂ ತಿಳಿದು ಅವರ ಚಾರಿತ್ರ್ಯಕ್ಕೆ ಕೆಟ್ಟ ಮಾದರಿಯಾಗುವ ಯಾವ ಕೆಲಸವನ್ನೂ ಖಾಸಗಿಯಲ್ಲಿ ಕೂಡ ಮಾಡುವುದು ಅಧ್ಯಾಪಕನಿಗೆ ಸಲ್ಲುವುದಿಲ್ಲ. ಅಂಥವನು ಆ ವೃತ್ತಿಯನ್ನು ಬಿಟ್ಟುಬಿಡಬೇಕು ಎಂದು ನಾನು ದೃಢವಾಗಿ ನಂಬಿದವನು. ಉಪಾಧ್ಯಾಯನ ಘನತೆ ಇರುವುದು ಅವನ ಸಂಬಳದಿಂದಲ್ಲ-ವಿದ್ವತ್ತು, ಚಾರಿತ್ರ್ಯದಿಂದ ಕೂಡಿದ ವ್ಯಕ್ತಿತ್ವ ಮತ್ತು ಬೋಧನಾಶಕ್ತಿಗಳಿಂದ’ ಎಂದಿರುವರು ಎಸ್.ಎಲ್.ಭೈರಪ್ಪ ತಮ್ಮ ಆತ್ಮಕತೆ ಭಿತ್ತಿಯಲ್ಲಿ.

ತಮ್ಮ ವ್ಯಕ್ತಿತ್ವದ ಹಿರಿಮೆಯಿಂದ ತಾವು ಮಾಡುವ ವೃತ್ತಿಗೆ ಒಂದು ಘನತೆ ತಂದುಕೊಟ್ಟವರ ಅನೇಕ ಉದಾಹರಣೆಗಳಿವೆ. ಬಿಪಿನ್‍ಚಂದ್ರ ರಾಯ್ ತಮ್ಮ ಸೇವಾ ಮನೋಭಾವದಿಂದ ವೈದ್ಯಕೀಯ ಲೋಕದಲ್ಲಿ ಚಿರಸ್ಮರಣಿಯರಾಗಿ ಉಳಿದಿರುವರು. ಪ್ರತಿವರ್ಷ ಜುಲೈ 1 ರಂದು ಅವರ ಜನ್ಮದಿನವನ್ನು ವೈದ್ಯರ ದಿನವೆಂದು ಆಚರಿಸಲಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆಸಲ್ಲಿಸಿದ ವೈದ್ಯರಿಗೆ ‘ಬಿ.ಸಿ.ರಾಯ್’ ಪ್ರಶಸ್ತಿಯನ್ನು ಕೊಡುವುದರ ಮೂಲಕ ಬಿಪಿನ್‍ಚಂದ್ರ ರಾಯ್ ಅವರ ಹೆಸರನ್ನು ಅಜರಾಮರಗೊಳಿಸಲಾಗಿದೆ. ಎಂಜಿನಿಯರ್ ಹುದ್ದೆಗೆ ಎಮ್.ವಿಶ್ವೇಶ್ವರಯ್ಯನವರು ತಮ್ಮ ಪ್ರತಿಭೆ ಮತ್ತು ಪ್ರಾಮಾಣಿಕತೆಯಿಂದ ವಿಶಿಷ್ಟ ಘನತೆ ತಂದುಕೊಟ್ಟರು. ಪತ್ರಿಕಾಲೋಕದಲ್ಲಿ ಕೆ.ಶಾಮರಾವ್, ವೈ.ಎನ್.ಕೆ ಹೆಸರು ಚಿರಸ್ಥಾಯಿಯಾಗಿವೆ. ವಿಜ್ಞಾನಿ ಎಂದಾಕ್ಷಣ ಥಟ್ಟನೆ ನೆನಪಾಗುವುದು ಅಬ್ದುಲ್ ಕಲಾಮ್ ಅವರ ಹೆಸರು. ಕುವೆಂಪು ತಮ್ಮ ಮಹಾಕೃತಿ ರಾಮಾಯಣ ದರ್ಶನಂ ಸಮರ್ಪಿಸಿದ್ದು ತಮ್ಮನ್ನು ತುಂಬ ಪ್ರಭಾವಿಸಿದ ಗುರುಗಳಾದ ವೆಂಕಣ್ಣಯ್ಯನವರಿಗೆ. ರಾಜಕುಮಾರ ಅವರಿಗೆ ನಟನೆ ಪ್ರವೃತ್ತಿಯಾಗಿರಲಿಲ್ಲ ಅದೊಂದು ಪವಿತ್ರ ವೃತ್ತಿಯಾಗಿತ್ತು. ಕಲೆಯ ಘನತೆಗೆ ಕುಂದುಬರದಂತೆ ಅವರು ಬದುಕಿದರು. ರಾಜಕಾರಣಿಯಾಗಿ ರಾಮಮನೋಹರ ಲೋಹಿಯಾ ಇವತ್ತಿಗೂ ಮಾದರಿ ವ್ಯಕ್ತಿ.

ಬದಲಾದ ಕಾಲಘಟ್ಟದಲ್ಲಿ ವೃತ್ತಿಘನತೆ ಹಿನ್ನೆಲೆಗೆ ಸರಿದು ಹಣ ಗಳಿಕೆಯೇ ಮುನ್ನೆಲೆಗೆ ಬಂದಿದೆ. ವೃತ್ತಿಯ ಮೂಲ ಉದ್ದೇಶವೇ ಅದು ಅಕ್ರಮವಾದರೂ ಸರಿ ಸಂಪತ್ತಿನ ಗಳಿಕೆ ಎನ್ನುವ ಮನೋಭಾವ ಬಲವಾಗುತ್ತಿದೆ. ಯುದ್ಧ ಮತ್ತು ಪ್ರೀತಿಯಲ್ಲಿ ಎಲ್ಲವೂ ನ್ಯಾಯಸಮ್ಮತ ಎನ್ನುವುದು ಇಂದು ಬದುಕಿನ ಪ್ರತಿಹಂತದಲ್ಲೂ ಅನ್ವಯವಾಗುತ್ತಿದೆ. ಅದಕ್ಕೆಂದೆ ಇಲ್ಲಿ ನೀತಿ ಪಾಠ ಬೋಧಿಸುವ ಶಿಕ್ಷಕರೂ ಕೂಡ ಅಕ್ರಮ ಗಳಿಕೆಗೆ ಮುಂದಾಗುತ್ತಾರೆ. ಕಾನೂನನ್ನು ಎತ್ತಿಹಿಡಿಯಬೇಕಾದ ವೃತ್ತಿಯಲ್ಲಿರುವವರೆ ಅನ್ಯಾಯ ಎಸಗುತ್ತಾರೆ. ದೇಶದ ನೀತಿ, ನಿಯಮಗಳನ್ನು ರೂಪಿಸುವವರೆ ಅನೀತಿಯ ಮಾರ್ಗ ಹಿಡಿಯುತ್ತಾರೆ. ಒಟ್ಟಾರೆ ಬೇಲಿಯೇ ಎದ್ದು ಹೊಲ ಮೇಯ್ದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. 

ಕೆಲವೊಮ್ಮೆ ಪಾಲಕರ ಒತ್ತಾಯ ಮತ್ತು ಮಹತ್ವಾಕಾಂಕ್ಷೆಗೆ ಮಣಿದು ಮಕ್ಕಳು ತಮಗೆ ಇಷ್ಟವಿಲ್ಲದ ಕೋರ್ಸು-ವೃತ್ತಿಗೆ ಸೇರಿಕೊಳ್ಳುವುದುಂಟು. ವೃತ್ತಿಯಲ್ಲಿ ಆಸಕ್ತಿಯೇ ಇಲ್ಲದ ವ್ಯಕ್ತಿಯಿಂದ ವೃತ್ತಿ ಘನತೆಯನ್ನು ನಿರೀಕ್ಷಿಸುವುದಾದರೂ ಹೇಗೆ?. ಆಗ ನಷ್ಟವಾಗುವುದು ಸಮಾಜಕ್ಕೆ ವಿನಾ ವ್ಯಕ್ತಿ ಅಥವಾ ಕುಟುಂಬಕ್ಕಲ್ಲ.

ಶಿಕ್ಷಕ, ವೈದ್ಯ, ಎಂಜಿನಿಯರ್, ನ್ಯಾಯವಾದಿ, ರಾಜಕಾರಣಿ ಈ ಎಲ್ಲ ವೃತ್ತಿಗಳು ಸಮಾಜವನ್ನು ಪ್ರಭಾವಿಸುವಷ್ಟು ಮಹತ್ವದ್ದಾಗಿವೆ. ವಿದ್ಯಾರ್ಥಿ ಸಮೂಹ ತಮಗೆ ಆಸಕ್ತಿಯಿರುವ ವೃತ್ತಿಯಲ್ಲಿ ಹೆಸರು ಮಾಡಿದವರನ್ನು ಆದರ್ಶವಾಗಿಟ್ಟುಕೊಳ್ಳುವುದು ಸಹಜ. ಪರಿಣಾಮವಾಗಿ ಕೆಲವೊಂದು ವೃತ್ತಿಯಲ್ಲಿರುವವರು  ತಾವು ಸಮಾಜಕ್ಕೆ ಮಾದರಿಯಾಗಿದ್ದೇವೆ ಮತ್ತು ಯುವಶಕ್ತಿಯನ್ನು ಪ್ರಭಾವಿಸುತ್ತಿದ್ದೇವೆ ಎನ್ನುವ ಪ್ರಜ್ಞೆಯನ್ನು ಸದಾಕಾಲ ಜಾಗೃತವಾಗಿರಿಸಿಕೊಂಡಿರಬೇಕು. ಈ ಘನತೆಯ ಪ್ರಜ್ಞೆಯನ್ನು ಕಳೆದುಕೊಂಡರೆ ಸಾಲು ಸಾಲು ಕೊಲೆಗಳನ್ನು ಮಾಡಿಯೂ ಜನಮನ್ನಣೆಗೆ ಪಾತ್ರವಾಗುವ ಸಿನಿಮಾ ಮಾಧ್ಯಮದ ಕಥಾನಾಯಕರ ಪಾತ್ರಗಳೇ ನಮ್ಮ ಯುವಜನಾಂಗಕ್ಕೆ ಮಾದರಿಯೂ ಮತ್ತು ಆದರ್ಶವೂ ಆಗುವ ದುರಂತಕ್ಕೆ ನಾವೇ ಹೊಣೆಯಾಗಬೇಕಾಗುತ್ತದೆ. 

ಯಶವಂತ ಚಿತ್ತಾಲರ ‘ಪುರುಷೋತ್ತಮ’ದಲ್ಲಿ ಹೀಗೊಂದು ಮಾತಿದೆ ‘ನಿರ್ಜೀವ ಕಲ್ಲಿನಂತೆ ತೆಪ್ಪಗೆ ಬಿದ್ದ ಮಾವಿನ ಗೊರಟೆಗೂ ತಿಳುವಳಿಕೆ ಉಂಟಂತಲ್ಲಪ್ಪಾ, ತನ್ನ ಜನ್ಮದ ಸಾರ್ಥಕ್ಯ ಇರುವುದು ಸೂರ್ಯನತ್ತ ಮುಖ ಮಾಡಿದ ಮರವಾಗುವುದರಲ್ಲೆಂದು’. ಇಂಥದ್ದೊಂದು ಘನತೆಯನ್ನು ಮನುಷ್ಯ ರೂಢಿಸಿಕೊಳ್ಳಬೇಕಿದೆ.

-ರಾಜಕುಮಾರ ಕುಲಕರ್ಣಿ