Tuesday, August 1, 2023

ಉಡುಗೊರೆ ಮತ್ತು ಮೌಲ್ಯ ನಿರ್ಣಯ

 


(ಪ್ರಜಾವಾಣಿ ೧೬.೦೫.೨೦೨೩)

     ಇತ್ತೀಚೆಗೆ ಬಂಧುಗಳ ಮನೆಯ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದ ನನ್ನ ಸ್ನೇಹಿತರು ಅಲ್ಲಿ ತಮಗೆ ಸೂಕ್ತ ಗೌರವ, ಮನ್ನಣೆ ದೊರೆಯಲಿಲ್ಲವೆಂದು ನೊಂದುಕೊಂಡರು. ವಧು-ವರರಿಗೆ ಕಡಿಮೆ ಮೌಲ್ಯದ ಉಡುಗೊರೆ ನೀಡಿದ್ದೆ ಮದುವೆ ಮನೆಯಲ್ಲಿ ತಮ್ಮನ್ನು ಕೀಳಾಗಿ ಕಾಣಲು ಕಾರಣವಾಯಿತೆಂದು ಹೇಳಿದರು. ಸಾಮಾನ್ಯವಾಗಿ ಮದುವೆ ಮತ್ತು ಇನ್ನಿತರ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಆಹ್ವಾನಿತರು ಉಡುಗೊರೆ ನೀಡುವುದು ಅದೊಂದು ಸಂಪ್ರದಾಯ. ಉತ್ತರ ಕರ್ನಾಟಕ ಭಾಗದಲ್ಲಿ ಇದಕ್ಕೆ ಆಹೇರಿ ಎನ್ನುತ್ತಾರೆ. ಇನ್ನು ಕೆಲವು ಕಡೆ ಇದನ್ನು ಮುಯ್ಯಿ ಬರೆಸುವುದು ಎಂದು ಕರೆಯುವುದುಂಟು.

ಬಟ್ಟೆ, ಮನೆ ಬಳಕೆಯ ಸಾಮಾನುಗಳು, ಚಿನ್ನ, ಬೆಳ್ಳಿ ಅಥವಾ ಹಣ ಹೀಗೆ ಅತಿಥಿಗಳು ತಮ್ಮ ಆರ್ಥಿಕ ಅನುಕೂಲತೆಗನುಗುಣವಾಗಿ ಉಡುಗೊರೆ ಕೊಡುವರು. ಹಿಂದೆಲ್ಲ ಬಡಕುಟುಂಬಗಳಿಗೆ ಮದುವೆ ಮತ್ತಿತರ ಕಾರ್ಯಕ್ರಮಗಳ ನಿರ್ವಹಣೆಗೆ ಅನುಕೂಲವಾಗಲೆಂದು ಉಡುಗೊರೆ ರೂಪದಲ್ಲಿ ಆರ್ಥಿಕ ನೆರವು ನೀಡಲಾಗುತ್ತಿತ್ತು. ಸಹಾಯವೆಂದರೆ ಸ್ವಾಭಿಮಾನ ಅಡ್ಡಬರಬಹುದೆಂದು ಅತಿಥಿಗಳು ಮಾಡುವ ಆರ್ಥಿಕ ಸಹಾಯಕ್ಕೆ ಉಡುಗೊರೆ ಎಂದು ಕರೆದರು. ಹೀಗೆ ಕೈಸೇರುವ ಹಣ ಬಡವರಿಗೆ ಅವರ ಕುಟುಂಬ ಕಾರ್ಯಕ್ರಮದಿಂದಾದ ಸಾಲದ ಹೊರೆಯನ್ನು ಸ್ವಲ್ಪ ಮಟ್ಟಿಗೆ ತಗ್ಗಿಸುತ್ತಿತ್ತು. ಆದರೆ ಇಂದು ಉಡುಗೊರೆ ಕೊಡುವುದು ಮತ್ತು ಪಡೆಯುವುದು ಶ್ರೀಮಂತ ಕುಟುಂಬಗಳನ್ನು ಕೂಡ ಸೋಂಕಿನಂತೆ ಆವರಿಸಿಕೊಂಡಿದೆ. 

ಮದುವೆ, ಗೃಹಪ್ರವೇಶ, ತೊಟ್ಟಿಲು, ಸೀಮಂತ ಇಂಥ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಸಮಾರಂಭದ ದಿನ ಅತಿಥಿಗಳಿಂದ ದೊರೆಯುವ ಉಡುಗೊರೆಗಳ ಪಟ್ಟಿ ಮಾಡಲು ಮನೆಯ ಸದಸ್ಯರು ಅಥವಾ ಬಂಧುಗಳು ಕುಳಿತುಕೊಳ್ಳುವ ಪರಿಪಾಠ ಉತ್ತರ ಕರ್ನಾಟಕ ಭಾಗದಲ್ಲಿ ಇನ್ನೂ ಚಾಲ್ತಿಯಲ್ಲಿದೆ. ಕಲ್ಯಾಣ ಮಂಟಪದ ದ್ವಾರದಲ್ಲೇ ಇವರು ಪವಡಿಸುವುದರಿಂದ ಬಂದು ಹೋಗುವ ಅತಿಥಿಗಳು ಒಂದು ರೀತಿಯ ಮುಜುಗರದ ಸನ್ನಿವೇಶವನ್ನು ಎದುರಿಸಬೇಕಾಗುತ್ತದೆ. ಉಣಬಡಿಸಿದ ಭೋಜನಕ್ಕೆ ಪ್ರತಿಯಾಗಿ ಪ್ರತಿಫಲವನ್ನು ಅಪೇಕ್ಷಿಸುತ್ತಿರುವರೇನೋ ಎಂದು ಭಾಸವಾಗುತ್ತದೆ. ಹತ್ತಾರು ಜನರೆದುರು ಕಡಿಮೆ ಮೌಲ್ಯದ ಹಣ ಅಥವಾ ಉಡುಗೊರೆ ಬರೆಸುವಾಗ ಸಂಕೋಚ ಉಂಟಾಗುವುದು ಸಹಜ. ಕೆಲವೊಮ್ಮೆ ಬರೆದುಕೊಳ್ಳುವವರ ವ್ಯಂಗ್ಯದ ತೀಕ್ಷಣ ನೋಟಕ್ಕೆ ಅತಿಥಿಗಳು ಕೀಳರಿಮೆಗೊಳಗಾಗುವುದುಂಟು. ಅನೇಕ ಸಂದರ್ಭಗಳಲ್ಲಿ ಮದುವೆ ಮನೆಗಳಲ್ಲಿ ಆಹ್ವಾನಿತರು ವಿಶೇಷವಾಗಿ ಹೆಣ್ಣುಮಕ್ಕಳು ಒಟ್ಟಿಗೆ ಸೇರಿದಾಗ ತಾವು ತಂದ ಉಡುಗೊರೆಗಳನ್ನು ಇತರರೆದುರು ಪ್ರದರ್ಶಿಸಿ ಹಿರಿಮೆ ಮೆರೆಯುವರು. ಆಗೆಲ್ಲ ಕಡಿಮೆ ಮೌಲ್ಯದ ಉಡುಗೊರೆ ತಂದ ಆಹ್ವಾನಿತರಿಗೆ ಸಂಕೋಚದಿಂದ ಮೈ ಮುದುಡಿಕೊಳ್ಳುವಂತಾಗುತ್ತದೆ. ‘ಉಳ್ಳವರು ಶಿವಾಲಯವ ಮಾಡುವರು, ನಾನೇನು ಮಾಡಲಿ ಬಡವನಯ್ಯ’ ಎನ್ನುವ ವಚನದ ಸಾಲನ್ನು ಇಲ್ಲಿಯೂ ಅನ್ವಯಿಸಿ ಹೇಳಬಹುದು.

ಆರ್ಥಿಕ ಭಾರವನ್ನು ತಗ್ಗಿಸಲು ಈಗ ಬಟ್ಟೆಯನ್ನು ಉಡುಗೊರೆಯಾಗಿ ಕೊಡುವುದು ಸಾಮಾನ್ಯವಾಗಿದೆ. ಸಾಧಾರಣ ಗುಣಮಟ್ಟದ ಇಂಥ ಬಟ್ಟೆಗಳು ಮುಂದೊಂದು ದಿನ ಉಡುಗೊರೆ ರೂಪದಲ್ಲೇ ವಿಲೇವಾರಿಯಾಗುತ್ತವೆ. ಬಟ್ಟೆ ಅಂಗಡಿಗಳಲ್ಲೂ ಇಂಥ ಉದ್ದೇಶಕ್ಕಾಗಿಯೇ ಪ್ರತ್ಯೇಕ ವಿಭಾಗವಿದ್ದು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಬಟ್ಟೆ ಬೇಕೋ ಆಹೇರಿ ಬಟ್ಟೆ ಬೇಕೋ ಎಂದು ಮಳಿಗೆಯ ಮಾಲೀಕರು ವಿಚಾರಿಸುತ್ತಾರೆ. ಕೆಲವೊಮ್ಮೆ ಗ್ರಾಹಕರೇ ಆಹೇರಿಗಾಗಿ ಸಾಧಾರಣ ಗುಣಮಟ್ಟದ ಬಟ್ಟೆಗಳಿವೆಯೇ ಎಂದು ಬಾಯ್ಬಿಟ್ಟು ಕೇಳುವುದುಂಟು.

ದಂಡಿಯಾಗಿ ಹರಿದು ಬರುವ ಬಟ್ಟೆಯ ಮಹಾಪೂರವನ್ನು ತಡೆಗಟ್ಟಲು ಈಗ ಬಟ್ಟೆಯನ್ನು  ಸ್ವೀಕರಿಸದಿರುವ ಹೊಸ ವರಸೆಯೊಂದು ಶುರುವಾಗಿದೆ. ಲಗ್ನಪತ್ರ ಅಥವಾ ಆಹ್ವಾನಪತ್ರದಲ್ಲಿ ‘ಬಟ್ಟೆ ಉಡುಗೊರೆ ಸ್ವೀಕರಿಸುವುದಿಲ್ಲ’ ಎಂದು ಸ್ಪಷ್ಟವಾಗಿ ನಮೂದಿಸಿರುತ್ತಾರೆ. ಹಣ, ಚಿನ್ನ ಅಥವಾ ಬೆಳ್ಳಿಯನ್ನು ಕೊಡಬಹುದೆಂದು ಇದರರ್ಥ. ಕುಟುಂಬದ ಕಾರ್ಯಕ್ರಮಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ಧಾರಾಳವಾಗಿ ವ್ಯಯಿಸುವವರು ಹಣ ಅಥವಾ ಒಡವೆ ರೂಪದ ಉಡುಗೊರೆಯನ್ನು ಆಹ್ವಾನಿತರಿಂದ ನಿರೀಕ್ಷಿಸುವುದು ಸರಿಯಲ್ಲ. 

ಉಡುಗೊರೆ ಎನ್ನುವುದು ಗೋಡೆಗೆ ಬಡಿದ ಚೆಂಡಿದ್ದಂತೆ. ಕೊಡುವಾಗ ಯಾವ ರೂಪದಲ್ಲಿತ್ತೋ ಮುಂದೊಂದು ದಿನ ಅದೇ ರೂಪದಲ್ಲಿ ಮರಳಿ ಬರುತ್ತದೆ. ಹೀಗಾಗಿ ಕೊಡುವವರು ಪಡೆಯುವವರ ಆರ್ಥಿಕ ಸ್ಥಾನಮಾನವನ್ನಾಧರಿಸಿ ತಾವು ಕೊಡಬೇಕಾದದ್ದನ್ನು ನಿರ್ಧರಿಸುತ್ತಾರೆ. ಬಡವರಾದರೆ ಒಂದು ಮೌಲ್ಯ, ಶ್ರೀಮಂತರಿಗೆ ಬೇರೊಂದು ಮೌಲ್ಯ. ಒಟ್ಟಾರೆ ಉಡುಗೊರೆಯ ಸ್ವರೂಪ ಮತ್ತು ಮೌಲ್ಯದಲ್ಲಿ ಬಡವ-ಬಲ್ಲಿದ ಎನ್ನುವ ಸಂಗತಿಗಳು ನಿರ್ಣಾಯಕ ಪಾತ್ರವಹಿಸುತ್ತವೆ. ಇನ್ನು ಕೆಲವರು ಮುಂದೊಂದು ದಿನ ಉಡುಗೊರೆಗಳ ಮಹಾಪೂರವೇ ಹರಿದುಬರಲೆಂದು ಅಪೇಕ್ಷಿಸಿ ಕೊಡುವ ಪದ್ಧತಿಯನ್ನು ಮೈಗೂಡಿಸಿಕೊಂಡಿರುತ್ತಾರೆ. ಹಾಗೆಂದು ಇವರೇನು ಕೊಡುಗೈ ದಾನಿಗಳಲ್ಲ. ಇವರ ಧಾರಾಳತನ ಉಡುಗೊರೆ ಕೊಟ್ಟು ತೆಗೆದುಕೊಳ್ಳುವುದಕ್ಕಷ್ಟೆ ಸೀಮಿತ. 

ಬೃಹದಾಕಾರದ ಪುಷ್ಪಗುಚ್ಛಗಳನ್ನು ಕೊಡುವ ಪರಿಪಾಠವನ್ನು ಕೆಲವರು ರೂಢಿಸಿಕೊಂಡಿರುತ್ತಾರೆ. ಸಾವಿರಾರು ರೂಪಾಯಿಗಳನ್ನು ಪಾವತಿಸಿ ಖರೀದಿಸಿದ ಪುಷ್ಪಗುಚ್ಛಗಳು ಕೆಲವೇ ಗಂಟೆಗಳಲ್ಲಿ ಕಸದಗುಂಡಿ ಸೇರುತ್ತವೆ. ಪುಸ್ತಕಗಳು ಮತ್ತು ಸಸಿಗಳನ್ನು ಕೊಡುವ ಸುಸಂಸ್ಕೃತರೂ ಅಲ್ಲೊಮ್ಮೆ ಇಲ್ಲೊಮ್ಮೆ ಅಪರೂಪವೆಂಬಂತೆ ಕಾಣಸಿಗುವರು. ಪುಸ್ತಕಗಳಿಂದ ಉಡುಗೊರೆಯ ಮೌಲ್ಯ ಕೂಡ ಹೆಚ್ಚುವುದು. ಪುಸ್ತಕ ಸಂಸ್ಕೃತಿ ಮತ್ತು ಪರಿಸರ ಪ್ರೇಮದ ಅರಿವು ಮೂಡಿಸುವ ಈ ಪ್ರಯತ್ನ ಅಭಿನಂದನಾರ್ಹ. ಆದರೆ ಇಂಥವರ ಸಂಖ್ಯೆ ತೀರ ವಿರಳ ಎನ್ನುವುದು ಬೇಸರದ ಸಂಗತಿ.

ತಮ್ಮ ಸಂಬಂಧಿಕರ ಮಗನಿಗೆ ಮದುವೆಯಲ್ಲಿ ಹತ್ತು ಗ್ರಾಂ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ ನನ್ನ ಪರಿಚಿತರು ಹೇಳಿದ್ದು ಹೀಗೆ-‘ನನ್ನ ಸಂಬಂಧಿಕರೇನು ಬಡವರಲ್ಲ. ನಗ, ನಾಣ್ಯ, ಸ್ಥಿರಾಸ್ತಿ ಸೇರಿದಂತೆ ಭಾರೀ ಶ್ರೀಮಂತ ಕುಟುಂಬ. ಈ ಹತ್ತು ಗ್ರಾಂ ಚಿನ್ನ ಅವರಿಗೆ ಯಾವ ಲೆಕ್ಕಕ್ಕೂ ಇಲ್ಲ. ಅದೇ 60 ಸಾವಿರ ರೂಪಾಯಿಗಳನ್ನು ಅಸಾಹಾಯಕರಿಗೆ ನೆರವಿನ ರೂಪದಲ್ಲಿ ನೀಡಿದ್ದರೆ ಮನಸ್ಸಿಗೆ ಅದೆಷ್ಟೋ ತೃಪ್ತಿ, ಸಮಾಧಾನ ಸಿಗುತ್ತಿತ್ತು’. ಧನ, ಕನಕವನ್ನಾಧರಿಸಿ ಉಡುಗೊರೆಯ ಮೌಲ್ಯ ನಿರ್ಧಾರವಾಗುತ್ತಿರುವ ಹೊತ್ತಿನಲ್ಲಿ ಹೀಗೆ ಯೋಚಿಸುವವರ ಸಂಖ್ಯೆ ಇನ್ನಷ್ಟು ವೃದ್ಧಿಸಬೇಕಿದೆ.

-ರಾಜಕುಮಾರ ಕುಲಕರ್ಣಿ