Saturday, November 2, 2019

ಚಹರೆ (ಕಥೆ)




(ನವೆಂಬರ್ ೨೦೧೯ ರ 'ಮಯೂರ' ಪತ್ರಿಕೆಯಲ್ಲಿ ಪ್ರಕಟವಾಗಿದೆ)

           ಕಳೆದ ಇಪ್ಪತ್ತು ವರ್ಷಗಳಿಂದ ಕಂಪನಿಯ ಪ್ರತಿಷ್ಠೆಗೆ ಯಾವ ಕುಂದು ಬರದಂತೆ ಪ್ರಾಮಾಣಿಕವಾಗಿ ದುಡಿಯುತ್ತಿದ್ದ ತನ್ನನ್ನು ‘ಯಾರು ನೀನು?’ ಎಂದು ಕಂಪನಿಯ ಮುಖ್ಯಸ್ಥರಾದ ಕೇಶವರಾವ ಸಾಳುಂಕೆ ಕೇಳಿದ ಪ್ರಶ್ನೆ ಭೂತಾಕಾರದಂತೆ ಬೆಳೆದು ಕೂತಲ್ಲಿ ನಿಂತಲ್ಲಿ ಬೆನ್ನು ಬಿಡದ ಬೇತಾಳದಂತೆ ಕಾಡತೊಡಗಿದಾಗ ಪ್ರೇಮಚಂದ ಗಲಗಲಿಗೆ ತನ್ನ ಅಸ್ತಿತ್ವವೇ ಎದುರು ನಿಂತು ಅಣಕಿಸಿದಂತಾಯಿತು. ಅದೇ ಪ್ರಶ್ನೆಯನ್ನು ತಲೆಯಲ್ಲಿ ಹೊತ್ತು ಆಫೀಸಿನಿಂದ ಮನೆಗೆ ಬಂದವನು ಹೆಂಡತಿ ಮಾಡಿಕೊಟ್ಟ ಚಹಾ ಕೂಡ ಕುಡಿಯಲು ಪುರುಸೊತ್ತು ಇಲ್ಲದವನಂತೆ ಮಲಗುವ ಕೋಣೆಯೊಳಗೆ ಹೋಗಿ ಧಡಾರನೇ ಬಾಗಿಲು ಮುಚ್ಚಿದವನು ಅಲೆಮಾರದ ಎದುರಿನ ಒಂದು ಭಾಗದಲ್ಲಿದ್ದ ಆಳೆತ್ತರದ ನಿಲುವುಗನ್ನಡಿಯ ಎದುರು ನಿಂತು ತನ್ನ ಮುಖವನ್ನೇ ದಿಟ್ಟಿಸಿ ನೋಡತೊಡಗಿದ. ನಿರ್ಲಿಪ್ತತೆಯೇ ಹಾಸಿಗೆ ಹಾಸಿಕೊಂಡು ಮಲಗಿದೆಯೇನೋ ಎನ್ನುವಷ್ಟು ಸಪ್ಪೆಯಾಗಿದ್ದ ಮುಖ, ಕಂಪ್ಯೂಟರಿನ ಪರದೆಯ ಮೇಲೆ ಕಣ್ಣು ಕೀಲಿಸಿ ದೃಷ್ಟಿ ಮಂದವಾದ ಕಣ್ಣುಗಳಿಗೆ ಬೆಳಕು ನೀಡಲೆಂಬಂತೆ ಅರ್ಧಮುಖವನ್ನಾವರಿಸಿದ್ದ ದಪ್ಪ ಗಾಜಿನ ಕನ್ನಡಕ, ಕನ್ನಡಕದ ಒಳಗಿನಿಂದ ಕಾಣುತ್ತಿದ್ದ ನಿರ್ಭಾವುಕ ಕಣ್ಣುಗಳು, ಬೆಂದ ಆಲುಗಡ್ಡೆಯಂಥ ಮೂಗು ಯಾವ ಕೋನದಿಂದ ನೋಡಿದರೂ ತನ್ನದು ನೆನಪಿನಲ್ಲಿಟ್ಟುಕೊಳ್ಳಬಹುದಾದ ಚಹರೆ ಅಲ್ಲವೆನಿಸಿ ಪ್ರೇಮಚಂದ ಒಂದುಕ್ಷಣ ಅಧೀರನಾದ. ತನ್ನ ಇದುವರೆಗಿನ ಐವತ್ತು ವರ್ಷಗಳ ಆಯುಷ್ಯದಲ್ಲಿ ತನ್ನ ಮುಖದ ಚಹರೆಯ ಬಗ್ಗೆ ಮೂಡದೇ ಇದ್ದ ಜಿಗುಪ್ಸೆ ಈಗ ತನ್ನಲ್ಲಿ ಮೂಡುತ್ತಿರುವ ಬಗಗೆ ಮತ್ತು ಆ ಜಿಗುಪ್ಸೆಯೇ ಹೆಮ್ಮರವಾಗಿ ಬೆಳೆದು ತನ್ನನ್ನೆಲ್ಲಿ ನುಂಗಿಬಿಡುತ್ತದೆಯೋ ಎನ್ನುವ ಆತಂಕ ಮನಸ್ಸಿನಲ್ಲಿ ಮೂಡಿದ್ದೇ ಪ್ರೇಮಚಂದ ಎದುರಿನ ನಿಲುವುಗನ್ನಡಿಯಲ್ಲಿ ಕಾಣುತ್ತಿದ್ದ ತನ್ನ ಪ್ರತಿಬಿಂಬದ ಮೇಲಿನ ದೃಷ್ಟಿಯನ್ನು ಸರಕ್ಕನೆ ಬದಲಿಸಿ ಕೋಣೆಯಿಂದ ಹೊರಬಂದ. ಕೋಣೆಯ ಹೊರಗೆ ಚಹಾದ ಕಪ್ಪು ಕೈಯಲ್ಲಿ ಹಿಡಿದು ನಿಂತಿದ್ದ ಸರಳಾಬಾಯಿಗೆ ತನ್ನ ಗಂಡನ ಇವತ್ತಿನ ವರ್ತನೆ ವಿಚಿತ್ರವಾಗಿ ಕಾಣಿಸಿತು. ಆ ರಾತ್ರಿ ಊಟ ಸೇರದೆ, ನಿದ್ದೆ ಹತ್ತಿರ ಸುಳಿಯದೆ ಇಡೀ ರಾತ್ರಿ ಪ್ರೇಮಚಂದನ ಮನಸ್ಸು ಒಂದುರೀತಿ ಕ್ಷೋಭೆಯಿಂದ ನರಳಿತು.

ನಡೆದದ್ದಿಷ್ಟು. ವರ್ಷಕ್ಕೆ ನಾಲ್ಕಾರು ಬಾರಿ ಕಂಪನಿಯ ಬ್ರ್ಯಾಂಚ್ ಆಫೀಸಿಗೆ ಭೇಟಿ ನೀಡುವ ಮುಖ್ಯಸ್ಥ ಕೇಶವರಾವ ಸಾಳುಂಕೆ ವಾಡಿಕೆಯಂತೆ ಈ ಸಲವೂ ಪ್ರೇಮಚಂದ ಕೆಲಸ ಮಾಡುವ ಬ್ರ್ಯಾಂಚಾಫೀಸಿಗೆ ಭೇಟಿ ನೀಡಿದ್ದರು. ಹೀಗೆ ಭೇಟಿ ನೀಡುವ ಪ್ರತಿಸಂದರ್ಭ ಕಚೇರಿಯ ಎಲ್ಲ ಸಿಬ್ಬಂದಿಯನ್ನು ಪರಿಚಯಿಸಿಕೊಂಡು ಅವರ ಮತ್ತು ಕುಟುಂಬ ವರ್ಗದವರ ಯೋಗಕ್ಷೇಮವನ್ನು ವಿಚಾರಿಸುವುದು ಕೇಶವರಾವ ಸಾಳುಂಕೆ ಲಾಗಾಯ್ತಿನಿಂದಲೂ ರೂಢಿಸಿಕೊಂಡು ಬಂದ ಪದ್ಧತಿಯಾಗಿತ್ತು. ಇದೆಲ್ಲ ಆತನ ವ್ಯಾಪಾರಿ ಮನೋಭಾವದ ಚಾಣಾಕ್ಷತನವೆಂದು ಕೆಲವರು ಮಾತನಾಡಿಕೊಂಡರೂ ಯಾರೂ ಅವರೆದುರು ಬಾಯಿಬಿಟ್ಟು ಹೇಳುವ ಧೈರ್ಯ ತೋರುತ್ತಿರಲಿಲ್ಲ. ವಾಡಿಕೆಯಂತೆ ಜನರಲ್ ಮ್ಯಾನೇಜರ್ ರಾಮನಾಥ ಚಿದ್ರಿ ತನ್ನ ಆಫೀಸಿನ ಸಿಬ್ಬಂದಿಯನ್ನು ಮುಖ್ಯಸ್ಥರಿಗೆ ಪರಿಚಯಿಸುತ್ತಿರುವಾಗ ಶೇಷಗಿರಿ ಪುರೋಹಿತನನ್ನು ನೋಡಿದ್ದೆ ಸಾಳುಂಕೆ ‘ಏನ್ರಿ ಪುರೋಹಿತ ಹೇಗಿದ್ದೀರಿ’ ಎಂದು ತಾವೇ ಮುಂದಾಗಿ ಮಾತನಾಡಿಸಿ ಕೈ ಕುಲುಕಿದವರು ಪ್ರೇಮಚಂದನನ್ನು ನೋಡುತ್ತಲೇ ಯಾರು ನೀನು ಎಂದು ಪ್ರಶ್ನಿಸಿದ್ದು ಪ್ರೇಮಚಂದನಿಗೆ ಸಾಳುಂಕೆ ಸಾಹೇಬರು ತನ್ನ ಅಸ್ತಿತ್ವವನ್ನೇ ಪ್ರಶ್ನಿಸಿದಂತಾಗಿ ಅವಮಾನದಿಂದ ಕುಗ್ಗಿಹೋದ. ಕಳೆದ ನಾಲ್ಕು ತಿಂಗಳ ಹಿಂದಷ್ಟೆ ಜನರಲ್ ಮ್ಯಾನೇಜರ್ ರಾಮನಾಥ ಕಂಪನಿಯ ಇಪ್ಪತ್ತೈದನೇ ವರ್ಷಾಚರಣೆಯ ನಿಮಿತ್ಯ ಕಂಪನಿಯ ಬೆಳವಣಿಗೆ ಮತ್ತು ಸಾಧನೆ ಕುರಿತು ದಿನಪತ್ರಿಕೆಗೆ ಲೇಖನ ಬರೆಯುವಂತೆ ಪ್ರೇಮಚಂದನನ್ನು ನಿಯೋಜಿಸಿ ಅವನನ್ನು ಮುಖ್ಯಸ್ಥ ಕೇಶವರಾವ ಸಾಳುಂಕೆ ಅವರ ಸಂದರ್ಶನ ಮಾಡಲು ಹೆಡ್ ಆಫೀಸಿಗೆ ಕಳುಹಿಸಿದ್ದ. ಸಾಳುಂಕೆ ಸಂದರ್ಶನದೊಂದಿಗೆ ಪ್ರೇಮಚಂದ ಬರೆದ ಸವಿವರವಾದ ಲೇಖನ ಪತ್ರಿಕೆಯ ಇಡೀ ಪುಟದ ತುಂಬ ಪ್ರಕಟವಾಗಿ ಪ್ರೇಮಚಂದನಲ್ಲಿ ಧನ್ಯತೆ ಮತ್ತು ಅಭಿಮಾನ ಒಟ್ಟೊಟ್ಟಿಗೆ ಮೂಡಲು ಕಾರಣವಾಗಿತ್ತು. ಆ ದಿನ ಕೇಶವರಾವ ಸಾಳುಂಕೆ ಹೆಡ್ ಆಫೀಸಿನ ತಮ್ಮ ಚೆಂಬರಿನಲ್ಲಿ ಪ್ರೇಮಚಂದನನ್ನು ಗೌರವದಿಂದಲೇ ಕಂಡಿದ್ದರು. ಸಂದರ್ಶನದುದ್ದಕ್ಕೂ ಪ್ರೀತಿಯಿಂದಲೇ ಮಾತನಾಡಿಸಿ ಮಧ್ಯಾಹ್ನದ ಲಂಚ್ ಕೂಡ ತಮ್ಮ ಚೆಂಬರಿನಲ್ಲೇ ವ್ಯವಸ್ಥೆಗೊಳಿಸಿದ್ದರು. ಮಧ್ಯದಲ್ಲಿ ತಮಗೆ ಭೇಟಿಯಾಗಲು ಯಾರನ್ನೂ ಒಳಗಡೆ ಬಿಡಬಾರದೆಂದು ಆದೇಶಿಸಿದ್ದ ಸಾಳುಂಕೆ ಆ ಇಡೀ ಅರ್ಧ ದಿನವನ್ನು ಪ್ರೇಮಚಂದನೊಂದಿಗೆ ಕಳೆದು ಅವನಲ್ಲಿ ಧನ್ಯತೆಯ ಭಾವವನ್ನು ಮೂಡಿಸಿದ್ದರು. ಆ ದಿನದ ಭೇಟಿಯ ನಂತರ ಕಂಪನಿಯ ಮುಖ್ಯಸ್ಥರ ಭಾವದಲ್ಲಿ ತನ್ನ ಚಿತ್ರ ಸ್ಥಿರವಾಗಿ ನಿಲ್ಲುತ್ತದೆಂದು ಸಂಭ್ರಮಿಸಿದ ಪ್ರೇಮಚಂದನ ಆಶಾಗೋಪುರ ಇವತ್ತಿನ ಸಾಳುಂಕೆ ಅವರ ಪ್ರಶ್ನೆಯಿಂದ ಕುಸಿದು ಬಿದ್ದು ಅವನಲ್ಲಿ ಒಂದುರೀತಿಯ ಅಶಾಂತಿಯನ್ನು ಮತ್ತು ಅಸ್ತಿತ್ವದ ಪ್ರಶ್ನೆಯನ್ನು ಏಕಕಾಲಕ್ಕೆ ಹುಟ್ಟಿಸಿತ್ತು.

ಕಳೆದ ಇಪ್ಪತ್ತು ವರ್ಷಗಳಿಂದ ಬಹುರಾಷ್ಟ್ರೀಯ ಕಂಪನಿಯ ಶಾಖಾ ಕಚೇರಿಯೊಂದರಲ್ಲಿ ಲೆಕ್ಕ ಪರಿಶೋಧಕನಾಗಿ ಕೆಲಸ ಮಾಡುತ್ತಿರುವ ಪ್ರೇಮಚಂದ ಗಲಗಲಿ ಆ ಕಡೆ ಶ್ರೀಮಂತನೂ ಅಲ್ಲದ ಈ ಕಡೆ ಬಡವನೂ ಅಲ್ಲದ ಮಧ್ಯಮವರ್ಗಕ್ಕೆ ಸೇರಿದ ಭಾರತದ ಸತ್ಪ್ರಜೆ. ತಾನು, ತನ್ನ ಕೆಲಸ, ತನ್ನ ಕುಟುಂಬ ಎಂದು ಸೀಮಿತ ಚೌಕಟ್ಟಿನಲ್ಲಿ ಬದುಕುತ್ತ ಉಳಿದ ಯಾವ ಉಸಬಾರಿಗೂ ಹೋಗದೆ ಬದುಕುತ್ತಿರುವ ಸಾಧು ಸ್ವಭಾವದ ಮನುಷ್ಯ. ತನ್ನ ದೈನಂದಿನ ಉಪದ್ರವಗಳ ನಡುವೆಯೂ ಆಗಾಗ ಕಥೆ ಕಾದಂಬರಿಗಳನ್ನು ಓದುವ ಮತ್ತು ತನಗನಿಸಿದ್ದನ್ನು ಬರೆಯುವ ಚಟವಿದೆ. ಪ್ರೇಮಚಂದನ ನಾಲ್ಕಾರು ಪುಸ್ತಕಗಳನ್ನು ಪ್ರಕಾಶಕರೊಬ್ಬರು ಪ್ರಕಟಿಸಿದ್ದರಿಂದ ಮನೆಯ ಕಪಾಟಿನಲ್ಲಿ ಕುವೆಂಪು, ಕಾರಂತ, ಭೈರಪ್ಪ, ತೇಜಸ್ವಿ ಅವರ ಪುಸ್ತಕಗಳ ಸಾಲಿನಲ್ಲಿ ಕುಳಿತ ತನ್ನ ಪುಸ್ತಕಗಳ ಮೈದಡವಿ ತಾನೊಬ್ಬ ಬರಹಗಾರನೆಂದು ಆಗಾಗ ಪುಳಕಗೊಳ್ಳುತ್ತಾನೆ. ತಾನೊಬ್ಬ ಬರಹಗಾರನೆಂಬ ಕಾರಣಕ್ಕೆ ಜನರಲ್ ಮ್ಯಾನೇಜರ್ ರಾಮನಾಥ ತನ್ನನ್ನು ಕಂಪನಿಯ ಬಗ್ಗೆ ಲೇಖನ ಬರೆಯಲು ಪುಸಲಾಯಿಸಿದ್ದನೆಂದು ಮತ್ತು ಬಾಸ್‍ನ ಸಂದರ್ಶನಕ್ಕೆ ಅವಕಾಶ ಮಾಡಿಕೊಟ್ಟನೆಂದು ತಿಳಿದುಕೊಂಡಿದ್ದ ಪ್ರೇಮಚಂದನಿಗೆ ತನ್ನೊಳಗಿನ ಬರವಣಿಗೆಯ ಈ ಪ್ರತಿಭೆಯಿಂದಾಗಿ ಕಂಪನಿಯಲ್ಲಿ ತನ್ನ ಗೌರವ ಮತ್ತು ಸ್ಥಾನಮಾನ ಹೆಚ್ಚಲಿದೆಯೆಂದು ಭಾವಿಸಿದ್ದವನಿಗೆ ಕಂಪನಿಯ ಬಾಸ್ ತನ್ನನ್ನು ಅಪರಿಚಿತನಂತೆ ನಡೆಸಿಕೊಂಡಿದ್ದು ನಿರಾಸೆಗೆ ಕಾರಣವಾಗಿತ್ತು. ಸಂದರ್ಶನದ ನೆಪದಲ್ಲಿ ತನ್ನೊಂದಿಗೆ ಇಡೀ ಅರ್ಧ ದಿನವನ್ನು ಕಳೆದ ಕೇಶವರಾವ ಸಾಳುಂಕೆ ತನ್ನನ್ನು ಮರೆತು ವರ್ಷಕ್ಕೆ ನಾಲ್ಕಾರು ಬಾರಿ ಅದು ನಾಲ್ಕೈದು ನಿಮಿಷದ ಭೇಟಿಯಲ್ಲೇ ಶೇಷಗಿರಿ ಪುರೋಹಿತನನ್ನು ನೆನಪಿಟ್ಟುಕೊಳ್ಳುವುದೆಂದರೇನು ಅವನನ್ನು ಎಲ್ಲರೆದುರು ಹೆಸರು ಹಿಡಿದು ಮಾತನಾಡಿಸಿ ಯೋಗಕ್ಷೇಮ ವಿಚಾರಿಸುವುದೇನು ಪ್ರೇಮಚಂದನಿಗೆ ಎಲ್ಲವೂ ಅಯೋಮಯ ಎನಿಸಿ ಕಾರಣ ತಿಳಿಯದೇ ತಲೆಕೆಡಿಸಿಕೊಂಡಿದ್ದ. ಕಳೆದ ಇಪ್ಪತ್ತು ವರ್ಷಗಳಿಂದ ತಾನು ಪ್ರತಿನಿತ್ಯ ನೋಡುತ್ತಿರುವ ಶೇಷಗಿರಿ ಪುರೋಹಿತನ ಮುಖವನ್ನು ಪದೆಪದೆ ಕಣ್ಣೆದುರು ತಂದು ನಿಲ್ಲಿಸಿಕೊಳ್ಳಲು ಪ್ರಯತ್ನಿಸಿದ ಪ್ರೇಮಚಂದನಿಗೆ ಆ ಮುಖದಲ್ಲಿ ಯಾವ ಹೊಸ ಚಹರೆಯೂ ಗೋಚರಿಸಲಿಲ್ಲ. ಕೋಲು ಮುಖ, ನೀಳ ಮೂಗು, ಭ್ರೂಮಧ್ಯದಲ್ಲಿ ಪ್ರತಿಷ್ಠಾಪಿತಗೊಂಡ ಮಂತ್ರಾಕ್ಷತೆ ಸಹಿತ ಉದ್ದನೆಯ ತಿಲಕ, ಹಣೆಯ ಎಡ ಬಲದಲ್ಲಿ ಗಂಧದಿಂದ ನಿರ್ಮಾತೃಗೊಂಡ ಶಂಖ ಮತ್ತು ಚಕ್ರ, ತಲೆಯ ಹಿಂಬಾಗದಲ್ಲಿ ದೃಷ್ಟಿಗೆ ಗೋಚರವಾಗುವ ಶಿಖೆ ಇಪ್ಪತ್ತು ವರ್ಷಗಳಿಂದ ತಾನು ನೋಡುತ್ತಿರುವುದು ಶೇಷಗಿರಿ ಪುರೋಹಿತನ ಇದೊಂದೆ ಚಹರೆ ಅದು ಹೇಗೆ ಕಂಪನಿಯ ಮುಖ್ಯಸ್ಥರನ್ನು ಆಕರ್ಷಿಸಿತು ಎನ್ನುವ ಸಂದಿಗ್ಧತೆಗೆ ಬಿದ್ದು ಪ್ರೇಮಚಂದ ರಾತ್ರಿಯೆಲ್ಲ ಆಲೋಚಿಸಿದ. ಶೇಷಗಿರಿಯ ಈ ಸಿಗ್ನೆಚರ್ ಚಹರೆಯೇ ಕೇಶವರಾವ ಸಾಳುಂಕೆ ಅವನ ಬಗ್ಗೆ ವಿಶೇಷ ಆಸ್ಥೆ ತಾಳಲು ಕಾರಣವಾಗಿತ್ತು ಎನ್ನುವುದು ಪ್ರೇಮಚಂದನ ಮುಗ್ಧ ಮನಸ್ಸಿನ ತಿಳುವಳಿಕೆಗೆ ನಿಲುಕದ ಸಂಗತಿಯಾಗಿತ್ತು. 

ಒಟ್ಟಾರೆ ವಿವಿಧ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯ ಪ್ರಕಾರ ಕೇಶವರಾವ ಸಾಳುಂಕೆಯ ಅಳಿಯ ವಾಸಿಸುತ್ತಿರುವುದು ಶೇಷಗಿರಿ ಪುರೋಹಿತನ ಸ್ವಂತ ಮನೆಯಿದ್ದ ಸಾರಸ್ವತ ಕಾಲೋನಿಯ ಐದನೇ ವಾರ್ಡಿನಲ್ಲಿ. ಅಳಿಯ ಮಹಾಶಯ ಅರ್ಧದಲ್ಲೇ ಎಂಜಿನಿಯರ್ ವಿದ್ಯಾಭ್ಯಾಸಕ್ಕೆ ಎಳ್ಳು-ನೀರು ಬಿಟ್ಟು ವ್ಯಾಪಾರ ವಹಿವಾಟೆಂದು ನಾಲ್ಕೈದು ವರ್ಷ ಊರೂರು ಅಲೆದಾಡಿ ಆದಾಯಕ್ಕಿಂತ ನಷ್ಟದ ಬಾಬತ್ತನ್ನೆ ತೋರಿಸಿ ಮಾವ ಕೇಶವರಾವ ಸಾಳುಂಕೆಗೆ ತಲೆ ನೋವಾಗಿದ್ದ. ಮಗಳ ಬದುಕಿಗೊಂದು ದಾರಿ ಮಾಡಿಕೊಡಬೇಕೆಂದು ಆಲೋಚಿಸುತ್ತಿದ್ದವರಿಗೆ ಇನ್ನು ಆರು ತಿಂಗಳಲ್ಲಿ ನಡೆಯಲಿರುವ ನಗರಸಭೆ ಎಲೆಕ್ಶನ್ ಕತ್ತಲಲ್ಲಿ ತಡಕಾಡುವವನಿಗೆ ಬೆಳಕಿನ ಕಿರಣದಂತೆ ತೋರಿ ಅವರಲ್ಲಿ ಸಣ್ಣದೊಂದು ಆಸೆ ಚಿಗುರಿಸಿತ್ತು. ಐದನೇ ವಾರ್ಡಿನ ಕ್ಯಾಂಡಿಡೇಟ್ ಆಗಿ ಅಳಿಯನಿಗೆ ಪ್ರಮುಖ ಪಕ್ಷದಿಂದ ಟಿಕೇಟ್ ದೊರಕಿಸಿಕೊಂಡುವಲ್ಲಿ ಯಶಸ್ವಿಯಾದರೂ ಪಕ್ಷ ಮತಗಳನ್ನು ಕ್ರೋಡಿಕರಿಸುವ ಜವಾಬ್ದಾರಿಯನ್ನು ಸಾಳುಂಕೆ ಅವರಿಗೇ ಒಪ್ಪಿಸಿತ್ತು. ಬ್ರಾಹ್ಮಣ ಮತದಾರರೇ ಅಧಿಕವಾಗಿದ್ದ ಆ ವಾರ್ಡಿನಲ್ಲಿ ಹೆಚ್ಚಿನ ಮತದಾರರನ್ನು ಸೆಳೆಯಲು ಕೇಶವರಾವ ಸಾಳುಂಕೆ ಅವರಿಗೆ ಸಹಜವಾಗಿಯೇ ಅದೇ ಸಮುದಾಯಕ್ಕೆ ಸೇರಿದ್ದ ಮತ್ತು ಬಾಹ್ಯ ನೋಟದಲ್ಲಿ ಆ ಎಲ್ಲ ಗುಣಲಕ್ಷಣಗಳನ್ನು ರೂಢಿಸಿಕೊಂಡಿದ್ದ ಶೇಷಗಿರಿ ಪುರೋಹಿತನೇ ಸೂಕ್ತ ವ್ಯಕ್ತಿಯಾಗಿ ಕಾಣಿಸಿದ್ದ. ಕಂಪನಿಯ ಶಾಖಾ ಕಚೇರಿಯ ಭೇಟಿ ಎಂದು ಅಂದಿನ ಕಾರ್ಯಕ್ರಮದ ಪಟ್ಟಿಯಲ್ಲಿತ್ತಾದರೂ ಅವರ ಭೇಟಿಯ ಹಿಂದಿನ ಮಸಲತ್ತು ಶೇಷಗಿರಿಯನ್ನು ಮಾತನಾಡಿಸುವುದೇ ಆಗಿತ್ತು ಎನ್ನುವ ಗುಮಾನಿ ಜನರಲ್ ಮ್ಯಾನೇಜರ್ ರಾಮನಾಥನ ತಲೆಯಲ್ಲಿ ಹೊಳೆಯದೆ ಇರಲಿಲ್ಲ. ಪ್ರೇಮಚಂದನ ಹೆಸರಿಗಾಗಲಿ, ಅವನ ಬಾಹ್ಯ ನೋಟಕ್ಕಾಗಲಿ ಮತ್ತು ಅವನು ಪ್ರತಿನಿಧಿಸುತ್ತಿದ್ದ ಸಮುದಾಯಕ್ಕಾಗಲಿ ಒಂದಕ್ಕೊಂದು ಯಾವ ಸಂಬಂಧಗಳು ಗೋಚರಿಸದೆ ಕಂಪನಿಯ ಮುಖ್ಯಸ್ಥರಿಗೆ ಅವನೊಬ್ಬ ನಿರುಪದ್ರವಿ ಜೀವಿಯಂತೆಯೂ ಅಪರಿಚಿತನಂತೆಯೂ ಕಾಣಿಸಿದ್ದರಲ್ಲಿ ಹೆಚ್ಚು ಅಚ್ಚರಿ ಪಡುವಂಥದ್ದೇನು ಇರಲಿಲ್ಲ.

ಪ್ರೇಮಚಂದ ಗಲಗಲಿಗೆ ಅವನ ಹೆಸರಿನ ಬಗ್ಗೆ ತಕರಾರು ಎದುರಾದದ್ದು ಇಪ್ಪತ್ತೈದು ವರ್ಷಗಳ ಹಿಂದೆ ಅದು ಖುದ್ದು ತನ್ನಿಂದ ತಾಳಿಕಟ್ಟಿಸಿಕೊಂಡ ಹೆಂಡತಿಯಿಂದ ಎನ್ನುವುದು ಇವತ್ತಿಗೂ ಅರಗಿಸಿಕೊಳ್ಳಲಾಗದ ಕಟುಸತ್ಯವಾಗಿ ಅವನನ್ನು ಆಗಾಗ ಕಾಡಿ ಕಂಗೆಡಿಸುತ್ತದೆ. ಅದೆಲ್ಲವನ್ನು ಸರಳಾಬಾಯಿ ಮರೆತರೂ ಪ್ರೇಮಚಂದನ ನೆನಪಿನಾಳದಲ್ಲಿ ಅದಿನ್ನೂ ಮರೆಯಲಾಗದ ಕಹಿ ಅನುಭವವಾಗಿ ಉಳಿದುಕೊಂಡಿದೆ. ಮದುವೆಯಾದ ಆ ಆರಂಭದ ದಿನಗಳಲ್ಲಿ ಗಂಡ ಹೆಂಡತಿ ಇಬ್ಬರೇ ಇದ್ದಾಗ ಸರಳಾಬಾಯಿ ಸುಮ್ಮನೆ ಮಾತಿಗೆ ಅಂತಲೋ ಇಲ್ಲವೆ ಛೇಡಿಸಬೇಕೆಂದೋ ಪ್ರೇಮಚಂದನ ಹೆಸರಿನ ಮೂಲಕ್ಕೆ ಕೈಹಾಕಿದ್ದಳು. ‘ಅಲ್ರೀ ಲಗ್ನ ಪತ್ರದಾಗ ಏನು ಹಾಕ್ಬೇಕು ಅಂತ ನಮ್ಮ ಅಪ್ಪ ಕೇಳಿದರ ನಿಮ್ಮ ಅಪ್ಪ ವ್ಹಿ.ಎಸ್.ಗಲಗಲಿ ಅವರ ಜೇಷ್ಠಪುತ್ರ ಚಿ.ಪ್ರೇಮಚಂದ ಅಂತ ಹಾಕ್ಸಿ ಅಂದರಂತ. ನಮ್ಮ ಅಪ್ಪ ಕೂಡ ಹಿಂದ ಮುಂದ ವಿಚಾರ ಮಾಡ್ದ ಹಂಗೇ ಪ್ರಿಂಟ್ ಹಾಕಿಸಿಬಿಟ್ರು. ಈ ದೇಶಮುಖಗ ತಲಿ ಕೆಟ್ಟಾದೇನು ಮಗಳ್ನ ಯಾರ್ದೋ ಪೈಕಿ ಹುಡಗನಿಗಿ ಲಗ್ನಾ ಮಾಡಿ ಕೊಡ್ಲಿಕತ್ತಾನ ಅಂತ ಊರ ಮಂದಿ ಬೈದಕೊಂಡರಂತ. ಯಾಕ ವೆಂಕೋಬರಾವ ಶ್ರೀಹರಿರಾವ ಗಲಗಲಿ ಅವರ ಜೇಷ್ಠಪುತ್ರ ಚಿ.ಪ್ರೇಮಚಂದ ಅಂತ ಹಾಕಿಸಿದ್ರ ಒಂದಿಷ್ಟು ಮಾನನಾದರೂ ಉಳಿತಿತ್ತು. ನಿಮ್ಮ ಹೆಸರು ಕೇಳಿದ ಮ್ಯಾಲ ನಮ್ಮ ಅಜ್ಜಿ ಹಿಂಗ ಬ್ಯಾರೆ ಜ್ಯಾತಿಪೈಕಿ ಹುಡುಗಗ ಪೋರಿ  ಕೊಟ್ರ ನಾ ಭಾವಿಗಿ ಹಾರಿ ಸಾಯ್ತಿನಿ ಅಂತ ಸಾಯ್ಲಿಕ್ಕಿ ಹೋಗಿದ್ಳು. ಅವಳಿಗಿ ತಿಳಿಸಿ ಹೇಳೊದ್ರೊಳ್ಗ ನಮ್ಮ ಅಪ್ಪನ ಬುದ್ಧಿಯೆಲ್ಲಾ ಖರ್ಚಾಯ್ತು’. ಸರಳಾಬಾಯಿ ಚೇಷ್ಠೆಗೆಂದು ಅಂದು ಆಡಿದ ಮಾತು ಪ್ರೇಮಚಂದನ ಮನಸ್ಸಿನಲ್ಲಿ ಬಹಳ ದಿನಗಳ ಕಾಲ ನೆಲೆಯೂರಿ ಕುಳಿತಿತ್ತು. ಹಿಂದಿ ಸಾಹಿತ್ಯ ಪ್ರೇಮಿಯಾಗಿದ್ದ ಅಪ್ಪ ಹಿಂದಿ ಸಾಹಿತ್ಯದ ಮೇರು ಬರಹಗಾರ ಪ್ರೇಮಚಂದರ ಹೆಸರನ್ನು ಮಗನಿಗಿಟ್ಟು ಅಭಿಮಾನ ಮೆರೆದಿದ್ದರು. ಮನೆಯ ಕಪಾಟುಗಳಲ್ಲಿ ಪ್ರೇಮಚಂದರ ಎಲ್ಲ ಕೃತಿಗಳನ್ನು ಒಪ್ಪಓರಣವಾಗಿ ಜೋಡಿಸಿಟ್ಟಿರುತ್ತಿದ್ದ ಚಿತ್ರ ಇವತ್ತಿಗೂ ಕಣ್ಮುಂದೆ ಕಟ್ಟಿದಂತಿದೆ. ಅದೇಕೋ ಏನೋ ತನ್ನ ಅಸ್ತಿತ್ವವನ್ನೇ ಮಸುಕಾಗಿಸಿದ ಈ ಹೆಸರಿನ ಬದಲು ಅಪ್ಪನಿಗೆ ಬೇರೆ ಯಾವ ಹೆಸರೂ ಮನಸ್ಸಿಗೆ ಹೊಳೆಯಲಿಲ್ಲವೆ ಎಂದು ಅಪ್ಪನ ಮೇಲೆ ಕೋಪ ಮತ್ತು ತನ್ನ ಹೆಸರಿನ ಬಗ್ಗೆ ಜಿಗುಪ್ಸೆ ಮೊದಲ ಬಾರಿಗೆ ಪ್ರೇಮಚಂದನ ಮನಸ್ಸಿನಲ್ಲಿ ಮೂಡಿತು.

ಈಗೀಗ ಪ್ರೇಮಚಂದನಿಗೆ ಮನೆಯ ಮಲಗುವ ಕೋಣೆಯಲ್ಲಿದ್ದ ಅಲ್ಮೆರಾಗೆ ಹಚ್ಚಿದ್ದ ಆಳೆತ್ತರದ ನಿಲುವುಗನ್ನಡಿಯಲ್ಲಿ ದಿನಕ್ಕೆ ನೂರಾರು ಬಾರಿ ತನ್ನ ಮುಖವನ್ನು ವಿವಿಧ ಭಾವ ಭಂಗಿಗಳಲ್ಲಿ ಸೃಷ್ಟಿಸಿಕೊಳ್ಳುತ್ತ ನೋಡುತ್ತ ನಿಲ್ಲುವುದು ಅದೊಂದು ವಾಸಿಯಾಗದ ಕಾಯಿಲೆಯಂತೆ ಅಂಟಿಕೊಂಡು ಬಿಟ್ಟಿದೆ. ಹೀಗೆ ನಿಲುವುಗನ್ನಡಿಯ ಎದುರು ನಿಂತ ಒಂದು ಅಪೂರ್ವ ಘಳಿಗೆ ಬುದ್ಧಿಜೀವಿಗಳಂತೆ ಗಡ್ಡಬಿಟ್ಟರೆ ತನ್ನ ಚಹರೆ ಇತರರನ್ನು ಬಲುಬೇಗ ಆಕರ್ಷಿಸಬಹುದೇನೋ ಎನ್ನುವ ವಿಚಾರ ಹೊಳೆದದ್ದೆ ಅದನ್ನು ಮುಂದಿನ ಕೆಲವೇ ದಿನಗಳಲ್ಲಿ ಕಾರ್ಯರೂಪಕ್ಕೆ ತಂದ. ಮನೆಯಲ್ಲಿ ಹೆಂಡತಿ ಈ ಕುರಿತು ಕೆಲವು ದಿನ ಆಡಿಕೊಂಡಳಾದರೂ ಇದು ವಾಸಿಯಾಗದ ಕಾಯಿಲೆಯೆಂದೂ ಇದಕ್ಕೆಲ್ಲ ತನ್ನ ದಿವ್ಯ ನಿರ್ಲಕ್ಷವೇ ಮದ್ದದೆಂದು ಸುಮ್ಮನಾಗಿಬಿಟ್ಟಳು. ಆಫೀಸಿನಲ್ಲಿ ಮತ್ತು ಪರಿಚಿತರಲ್ಲಿ ಕೆಲವು ದಿನ ಉತ್ತೇಜನಾತ್ಮಕ ಪ್ರತಿಕ್ರಿಯೆ ದೊರೆತರೂ ಬರಬರುತ್ತ ಪ್ರೇಮಚಂದನಿಗೆ ವಿಚಿತ್ರವಾದ ಕಾಯಿಲೆ ಅಂಟಿಕೊಂಡಿದೆಯೆಂದೂ ಅವನ ಗಲ್ಲಗಳು ಊದಿಕೊಂಡು ಅಸಹ್ಯವಾಗಿ ಕಾಣುತ್ತಿವೆಯೆಂದೂ ಅದನ್ನು ಮರೆಮಾಚಲೆಂದೇ ಅವನು ಗಡ್ಡಬೆಳೆಸಿದ್ದಾನೆಂಬ ಗುಮಾನಿಯ ಮಾತುಗಳು ಎಲ್ಲ ಕಡೆ ಹರಿದಾಡತೊಡಗಿ ಅವು ಪ್ರೇಮಚಂದನ ಕಿವಿಗಳಿಗೂ ತಲುಪಲು ಹೆಚ್ಚಿನ ವೇಳೆ ಹಿಡಿಯಲಿಲ್ಲ. ಈ ಗುಮಾನಿಯ ಮಾತುಗಳಿಂದ ಪ್ರೇಮಚಂದ ಸ್ವತ: ಎಷ್ಟು ದಿಗಿಲುಗೊಂಡನೆಂದರೆ ಆ ದಿನ ಆಫೀಸಿನಿಂದ ನೇರವಾಗಿ ಮನೆಗೆ ಹೋಗದೆ ದಾರಿಮಧ್ಯದಲ್ಲಿ ಸಿಗುವ ಸಲೂನ್ ಅಂಗಡಿಯನ್ನು ಹೊಕ್ಕು ಕ್ಷೌರಿಕನಿಗೆ ಮುಖಕೊಟ್ಟು ಕುಳಿತವನು ಗಡ್ಡ ಧರೆಗಿಳಿದು ನುಣುಪಾದ ತನ್ನ ಹೊಳೆಯುವ ಮುಖ ಸಲೂನ್ ಅಂಗಡಿಯಲ್ಲಿದ್ದ ತನ್ನೆದುರಿನ ಕನ್ನಡಿಯಲ್ಲಿ ಕಂಡಾಗಲೆ ಅವನಿಗೆ ಸಮಾಧಾನವಾಯಿತು. ಗಂಡನ ಇತ್ತೀಚಿನ ವಿಚಿತ್ರ ವರ್ತನೆಗಳನ್ನೆಲ್ಲ ನೋಡಿ ಬೇಸತ್ತಿದ್ದ ಸರಳಾಬಾಯಿ ಅವತ್ತು ರಾತ್ರಿ ಊಟ ಬಡಿಸುವಾಗ ಅವನಿಗೆ ಕೇಳಿಸುವಂತೆ ಜೋರಾಗಿಯೇ ತನ್ನ ಮನದ ಬೇಗುದಿಯನ್ನು ಹೊರಹಾಕಿದ್ದಳು ‘ಮೊದಲಿಂದ ಹೇಳಲಿಕತ್ತಿನಿ ಗುರುವಾರಕ್ಕೊಮ್ಯಾದರೂ ರಾಯರ ಮಠಕ್ಕ ಹೋಗಿ ಬರೋಣಾಂತ. ಎಲ್ಲಿ ಕಿವ್ಯಾಗ ಹಾಕೋತಿರಿ. ಹಾಂಗ ಮಂದಿ ಕೂಡು ಜಾಗಕ್ಕ ಹೋದ್ರ ನಾಲ್ಕು ಮಂದಿ ಪರಿಚಯ ಆಗ್ತಾರ ನೀವು ಯಾರು ಎಂಥವರು ನಿಮ್ಮ ಪ್ರತಿಭಾ ಎಂಥದ್ದು ಅಂತ ಬೆಳಕಿಗಿ ಬರ್ತದ. ಆಫೀಸು ಬಿಟ್ರ ಮನಿ. ಟಾಂಗಾಕ ಕಟ್ಟಿದ ಕುದರಿ ಹಾಂಗ. ಬಂಧು ಇಲ್ಲ ಬಳಗ ಇಲ್ಲ. ಮನ್ಯಾಗರ ಗಡಗಡ ಮಾತಾಡ್ತಿರೇನು. ಪುಸ್ತಕ ಹಿಡಿದು ಕೂತ್ರ ಗುಮ್ಮನ ಗುಸಕ’. ಹೆಂಡತಿ ಆರೋಪ ಕೇಳಿಸಿಕೊಂಡ ಪ್ರೇಮಚಂದನ ಮನಸ್ಸಿನಲ್ಲಿ ಎರಡನೆ ಬಾರಿಗೆ ಅಪ್ಪನ ಮೇಲೆ ಕೋಪ ಮತ್ತು ತನ್ನ ಹೆಸರಿನ ಬಗ್ಗೆ ಜಿಗುಪ್ಸೆ ಮೂಡಿತು.

ಈ ನಡುವೆ ಆಫೀಸಿನಲ್ಲಿ ಶೇಷಗಿರಿ ಪುರೋಹಿತ ಎಂದೂ ಇಲ್ಲದ ಉಮೇದಿಯಿಂದ ಪ್ರೇಮಚಂದನ ಹತ್ತಿರ ಬಂದು ‘ನೋಡಪಾ ಪ್ರೇಮಚಂದ ಮಧ್ಯಾರಾಧನಾ ದಿವಸ ಮಠದಾಗ ಸಂಜಿಗಿ ನಮ್ಮ ಸಮುದಾಯದ ಸಾಧಕರಿಗಿ ಸನ್ಮಾನ ಕಾರ್ಯಕ್ರಮ ಇಟಗೊಂಡಾರ. ಕಾರ್ಯಕ್ರಮದ ನಿರ್ವಾಹಕರಿಗಿ ಹೇಳಿ ಲಿಸ್ಟ್‍ನಲ್ಲಿ ನಿನ್ನ ಹೆಸರು ಬರಿಸೀನಿ. ಇನ್ನೆರಡು ದಿವಸದಾಗ ಮಠದಿಂದ ಫೋನ್  ಬರ್ತದ. ಅವತ್ತು ತಪ್ಪಸಬ್ಯಾಡ ಮರೀದಂಗ ಬಾ ನೋಡು’ ಎಂದು ಹೇಳಿದ ಮಾತು ಸಮಾಜ ತನ್ನ ಸಾಹಿತ್ಯ ಕೃಷಿಯನ್ನು ಗುರುತಿಸಿದೆ ಎನ್ನುವ ಪುಳಕಕ್ಕೆ ಕಾರಣವಾಗಿ ಆ ಅನುಭೂತಿಯನ್ನು ಮುಂದಿನ ಹಲವು ದಿನಗಳಕಾಲ ಅನುಭವಿಸಿದ ಪ್ರೇಮಚಂದ ತನ್ನ ಹಾವ ಭಾವ ಭಂಗಿಗಳಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡು ಹೆಂಡತಿಗೆ ಒಗಟಾಗಿಯೂ ಮತ್ತು ಸಮಸ್ಯೆಯಾಗಿಯೂ ಗೋಚರಿಸಿದ. ಮಧ್ಯಾರಾಧನಾ ದಿನ ಸಮೀಪಿಸುತ್ತಿದ್ದರೂ ಮಠದಿಂದ ಕರೆ ಬರದೆ ಪ್ರೇಮಚಂದ ಕಂಗಾಲಾದ. ಕೆಲಸವಿಲ್ಲದಿದ್ದರೂ ಸುಮ್ಮನೆ ಮಠದ ಸುತ್ತ ಸುಳಿದಾಡುತ್ತ ತನ್ನ ಅಸ್ತಿತ್ವವನ್ನು ಅಲ್ಲಿದ್ದವರ ಗಮನಕ್ಕೆ ತರಲು ಪ್ರಯತ್ನಿಸಿದ. ಶೇಷಗಿರಿ ಪುರೋಹಿತ ಅಲ್ಲೆಲ್ಲಾದರೂ ಕಾಣಿಸುವನೇನೋ ಎಂದು ಹುಡುಕಾಡಿದ. ಮಧ್ಯಾರಾಧನೆಯ ದಿನ ಆಫೀಸಿಗೆ ರಜೆಹಾಕಿ ಮನೆಯಲ್ಲೇ ಕುಳಿತವನಿಗೆ ಕ್ಷಣವೊಂದು ಯುಗದಂತೆ ಭಾಸವಾಗತೊಡಗಿತು. ಮಧ್ಯಾಹ್ನ ಊಟ ರುಚಿಸಲಿಲ್ಲ. ಹಾಸಿಗೆಗೆ ಮೈ ಅಡ್ಡವಾಗಿಸಿ ಕಣ್ಣು ಮುಚ್ಚಿದ್ದೆ ತಡ ತನ್ನನ್ನು ಸನ್ಮಾನಿಸಿದಂತೆಯೂ ಪ್ರೇಕ್ಷಕ ಗಣ ಹರ್ಷೋದ್ಘಾರಗಳಿಂದ ಚಪ್ಪಾಳೆ ತಟ್ಟುತ್ತಿರುವಂತೆಯೂ ತಾನು ಮಂದಸ್ಮಿತನಾಗಿ ಸಭೀಕರತ್ತ ದೃಷ್ಟಿ ಬೀರುತ್ತಿರುವಂತೆಯೂ ದೃಶ್ಯಗಳು ಕಣ್ಮುಂದೆ ಸುಳಿದು ಪ್ರೇಮಚಂದ ಧಗ್ಗನೆ ಹಾಸಿಗೆಯಿಂದ ಎದ್ದು ಕುಳಿತ. ಹಗಲು ಕಳೆದು ಇರುಳು ಆರಂಭವಾಗುತ್ತಿದ್ದಂತೆ ಕಾರ್ಯಕ್ರಮ ನಿರ್ವಾಹಕರೆಲ್ಲಿ ತನ್ನನ್ನು ಮರೆತು ಹೋದರೇನೋ ಎನ್ನುವ ಆತಂಕ ಶುರುವಾಯಿತು. ಘಳಿಗೆಗೊಮ್ಮೆ ಎದ್ದು ಹೊರಗೆ ಹೋಗುವುದು ರಸ್ತೆಯ ಕೊನೆಯವರೆಗೂ ದೃಷ್ಟಿ ಹರಿಸಿ ಯಾರೂ ಕಾಣಿಸದೆ ನಿರಾಸೆಯಿಂದ ಒಳಗೆ ಬಂದು ಕೂಡುವುದು ಗಂಡನ ಈ ವಿಚಿತ್ರ ವರ್ತನೆಯನ್ನು ಟಿ.ವಿ ಪರದೆಯ ಮೇಲೆ ಮೂಡಿಬರುತ್ತಿದ್ದ ಧಾರಾವಾಹಿಯಿಂದ ಆಗಾಗ ತನ್ನ ನೋಟವನ್ನು ಗಂಡನ್ನತ್ತ ಬೀರುತ್ತ ನೋಡುತ್ತಿದ್ದ ಸರಳಾಬಾಯಿ ಎಂಟು ಗಂಟೆಯಾಯಿತೆಂದು ರಾತ್ರಿಯ ಊಟಕ್ಕೆ ಅಣಿಮಾಡಲು ಅಡುಗೆ ಕೋಣೆಯತ್ತ ಹೆಜ್ಜೆಹಾಕಿದಳು.

‘ಸುಮ್ನ ಒಂದು ವಾರದಿಂದ ಕಾಯ್ಲಿಕತ್ತಿದ್ದಿರಿ. ನೋಡ್ರಿ ಇವತ್ತಿನ ಪೇಪರ್. ಆ ಎದುರು ಮನಿ ಶಾಮರಾಯ ಜೋಶಿಗಿ ಸಾಹಿತ್ಯ ತಪೋನಿಧಿ  ಅಂತ ಬಿರುದು ನೀಡಿ ಸನ್ಮಾನಿಸಿದ್ರಂತ ಮಠದಾಗ’ ಇನ್ನು ಹಾಸಿಗೆಯಲ್ಲಿ ಇರುವಾಗಲೆ ಹೆಂಡತಿ ಪೇಪರ್ ತೋರಿಸಿ ಆಡಿದ ಮಾತುಗಳು ಕಿವಿಯಲ್ಲಿ ಕಾದಸೀಸೆ ಸುರಿದಂತೆಯೂ ಮತ್ತು ಪೇಪರ್‍ನಲ್ಲಿದ್ದ ಚಿತ್ರ ಕಣ್ಣಿಗೆ ಚೂರಿಯಿಂದ ಇರಿದಂತೆಯೂ ಭಾಸವಾಗಿ ಪ್ರೇಮಚಂದ ಕುಳಿತಲ್ಲೆ ತಲ್ಲಣಿಸಿದ. ವರ್ಷಕ್ಕೊಮ್ಮೆ ದಿನಪತ್ರಿಕೆಯ ಸ್ಥಳೀಯ ಸುದ್ಧಿಗೆ ಮೀಸಲಾದ ಪುಟದಲ್ಲಿ ಬರೆಯುವ ಶಾಮರಾಯ ಜೋಶಿಯ ಬರವಣಿಗೆ ಎದುರು ತಾನು ಬರೆದ ನಾಲ್ಕಾರು ಪುಸ್ತಕಗಳು ಸೋತು ಹೋದವೆಂಬ ಭಾವವೇ ಮನಸ್ಸಿನಿಂದ ಕ್ರಮೇಣ ಮೆದುಳನ್ನು ಆವರಿಸುತ್ತ ಬಂದು ದೃಷ್ಟಿ ಮಂದವಾಗಿ ಇಡೀ ಕೋಣೆಯ ತುಂಬ ಕತ್ತಲು ತುಂಬಿಕೊಂಡಂತಾಗಿ ಎಲ್ಲವೂ ಅಯೋಮಯ ಅಗೋಚರ ಎನಿಸಲಾರಂಭಿಸಿತು. ಆಫೀಸಿನಲ್ಲಿ ಶೇಷಗಿರಿ ಪುರೋಹಿತನನ್ನು ನೋಡಿದ್ದೆ ಹೇಸಿಗೆ ಕಂಡಂತಾಗಿ ಹೊಟ್ಟೆ ತೊಳಿಸದಂತಾದ ಅನುಭವಕ್ಕೆ ಒಳಗಾಗಿ ಹೀಗೆ ಮನುಷ್ಯನನ್ನು ನೋಡಿ ತನ್ನಲ್ಲಿ ಮೂಡಿದ ಮೊದಲ ಅಸಹ್ಯ ಭಾವವಿದು ಎನ್ನುವ ಯೋಚನೆ ಬಂದಿದ್ದೆ ಪ್ರೇಮಚಂದ ತನಗಾದ ಅನುಭವಕ್ಕೆ ತಾನೆ ಬೆಚ್ಚಿಬಿದ್ದ. ಶೇಷಗಿರಿ ಪುರೋಹಿತ ಸಮಾಧಾನ ಪಡಿಸುವಂತೆ ಹತ್ತಿರ ಬಂದು ‘ಅಲ್ಲಯ್ಯಾ ಪ್ರೇಮಚಂದ ನಿನ್ನ ಹೆಸರಿನದೇ ದೊಡ್ಡ ಸಮಸ್ಯೆ ನೋಡು. ನೀನು ನಮ್ಮ ಸಮುದಾಯದವನೇ ಅಲ್ಲ ಅಂತ ಮಠದವರು ವಾದ ಮಾಡಿದ್ರು. ನಾನು ಎಷ್ಟು ಹೇಳಿದ್ರೂ ಕೇಳಲಿಲ್ಲ. ಪ್ರೇಮಚಂದ, ರೂಪಚಂದ, ಗುಲಾಬಚೆಂದ ಇಂಥ ಹೆಸರೆಲ್ಲ ಇರ್ತಾವೆನಯ್ಯ ನಮ್ಮಲ್ಲಿ. ನಿನ್ನಪ್ಪ ನಿನಗ ಅದ್ಯಾರೋ ಕಥಿ ಬರೆದವನ ಹೆಸರಿಟ್ಟು ಕುಲಗೆಡಿಸಿಬಿಟ್ಟ. ಇನ್ನು ಮುಖ ನೋಡಿದ್ರೆ ಅಲ್ಲಿ ನಿರ್ಲಿಪ್ತತೆ, ನಿರ್ಭಾವುಕತೆ ಬಿಟ್ರೆ ಬೇರೆ ಏನಿದೆ. ನಿನ್ನ ಹೆಸರು ನಿನ್ನ ಚಹರೆ ಸಮುದಾಯದೊಂದಿಗೆ ಸ್ವಲ್ಪನೂ ಮ್ಯಾಚ್ ಆಗ್ತಿಲ್ಲ. ಏನೂ ಬೇಜಾರು ಮಾಡ್ಕೊಬೇಡ ಮುಂದಿನ ವರ್ಷ ಪ್ರಯತ್ನಿಸಿದರಾಯ್ತು’ ಸಹಜವೆಂಬಂತೆ ಹೇಳಿ ಹೋಗಿದ್ದ.


ಉಪಸಂಹಾರ:


ಈಗ ಪ್ರೇಮಚಂದ ಗಲಗಲಿ ಸಮಾಜದ ಅವಶ್ಯಕತೆಗಳಿಗೆ ಅನುಗುಣವಾಗಿ ತನ್ನ ಮುಖದ ಚಹರೆಯನ್ನು ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಪ್ರಯತ್ನದ ಮೊದಲ ಹಂತವಾಗಿ ಅವನ ಮನೆಯಲ್ಲಿ ವ್ಯಕ್ತಿತ್ವ ವಿಕಾಸದ ಪುಸ್ತಕಗಳ ಗುಡ್ಡೆ ಬಿದ್ದಿದೆ. ಕಾರಂತ, ಭೈರಪ್ಪ, ಚಿತ್ತಾಲರ ಪುಸ್ತಕಗಳನ್ನೆಲ್ಲ ಗಂಟುಕಟ್ಟಿ ಅಟ್ಟದಲ್ಲಿಟ್ಟು ಈಗ ಬರೇ ವ್ಯಕ್ತಿತ್ವ ವಿಕಸನದ ಪುಸ್ತಕಗಳ ಮಧ್ಯೆ ಹುದುಗಿ ಹೋಗಿರುವನು. ಆನ್ ಲೈನ್‍ನಲ್ಲಿ ಗಂಟೆಗಟ್ಟಲೆ ಬದುಕುವುದು ಹೇಗೆಂಬ ಉಪನ್ಯಾಸ ಆಲಿಸುತ್ತಾನೆ. ಆಗಾಗ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ವ್ಯಕ್ತಿತ್ವ ವಿಕಸನದ ಶಿಬಿರಗಳಿಗೆ ಹಾಜರಾಗುತ್ತಾನೆ. ಪ್ರತಿಮುಂಜಾನೆ ಕಾಲೋನಿಯ ಗಾರ್ಡನ್‍ನಲ್ಲಿ ಸೇರಿ ಹೋ ಹೋ ಎಂದು ನಗುವ ಜನರ ಮಧ್ಯೆ ಸೇರಿ ತಾನೂ ನಗಲು ಪ್ರಯತ್ನಿಸುತ್ತಾನೆ. ಬೆಳಗ್ಗೆ ನಿದ್ದೆಯಿಂದ ಎಚ್ಚೆತ್ತವನೇ ಅಲ್ಮೆರಾದ ಬಾಗಿಲಿಗೆ ಅಂಟಿಸಿರುವ ಆಳೆತ್ತರದ ನಿಲುವುಗನ್ನಡಿ ಎದುರು ನಿಂತು ತನ್ನ ಮುಖದಲ್ಲಿ ಹೊಸ ಚಹರೆಯೇನಾದರೂ ಆವಿರ್ಭವಿಸುತ್ತಿದೆಯೇ ಎಂದು ಆ ಒಂದು ದಿವ್ಯ ಕ್ಷಣಕ್ಕಾಗಿ ಕಾದವನಂತೆ ಕಾತರದಿಂದ ನೋಡಿಕೊಳ್ಳುತ್ತಾನೆ. ಮುಂದೊಂದುದಿನ ಬದಲಾದ ಮುಖಚಹರೆಯ ಪ್ರೇಮಚಂದ ನಿಮಗೆ ದಾರಿಯಲ್ಲಿ ಎದುರಾದರೂ ಎದುರಾಗಬಹುದು. ನಾನೂ ಅವನಿಗಾಗಿ ಕಾಯುತ್ತಿದ್ದೇನೆ.


-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Monday, September 16, 2019

ಕೊನೆಯ ಅಂಕ (ಕಥೆ)

           ‘ಮೂವತ್ತು ವರ್ಷಗಳಾಯ್ತು ನಿನ್ನಕೂಡ ಬಾಳ್ವೆ ಮಾಡ್ಲಿಕತ್ತು. ಒಂದು ಸೀರೆ ಅನ್ಲಿಲ್ಲ, ಒಂದು ಒಡವೆ ಅನ್ಲಿಲ್ಲ. ಈ ಬದಕನ್ಯಾಗ ನಾಕು ಮಕ್ಕಳನ್ನ ಹೆತ್ತಿದ್ದೊಂದೆ ಬಂತು ನಿನ್ನಿಂದ ಯಾವ ಸಿಂಗಾರನೂ ಕಾಣ್ಲಿಲ್ಲ. ಸಂಸಾರ ಕಟ್ಕೊಂಡು ಊರೂರು ತಿರುಗೋದು ಈ ಜೀವಕ್ಕೂ ಬ್ಯಾಸರ ಆಗ್ಯಾದಾ. ಮಕ್ಕಳಿಗೊಂದು ಉದ್ಯೋಗ ಇಲ್ಲ ತಲಿಮ್ಯಾಲ ಸೂರಿಲ್ಲ. ಈ ನಾಟಕದ ಕಂಪನಿನೇ ನೆಚ್ಚಿಕೊಂಡು ಕೂತರ ನಾವು ಬದುಕಿದಾಂಗ. ಮಕ್ಕಳನ್ನ ಕರಕೊಂಡು ನಾ ಹೋಗ್ತಿದ್ದೀನಿ. ಎಂದಾದರೂ ನಮ್ಮ ನೆನಪಾದರ ಹುಡ್ಕೊಂಡು ಬಾ’ ಹೆಂಡತಿ ಕಮಲಾಬಾಯಿಯ ಮಾತುಗಳು ಬೇಡವೆಂದರೂ ಮತ್ತೆ ಮತ್ತೆ ನೆನಪಾಗಿ ಚೆನ್ನಬಸಣ್ಣ ಕುಗ್ಗಿಹೋಗುತ್ತಿದ್ದ. ರಾತ್ರಿ ಝಗಮಗಿಸುವ ಬೆಳಕು, ಕಲಾವಿದರ ಸಂಭ್ರಮ, ಪ್ರೇಕ್ಷಕರ ಹರ್ಷೋದ್ಘಾರಗಳಿಂದ ಜೀವಕಳೆಯಾಗಿ ನಳನಳಿಸುತ್ತಿದ್ದ ನಾಟಕದ ಥೇಟರ್ ಹಗಲಾದರೆ ಬೇಸಿಗೆಯ ಭೂಮಿಯಂತೆ ಜೀವಕಳೆ ಇಲ್ಲದೆ ಮಂಕಾಗಿ ಕಾಣಿಸುತ್ತಿತ್ತು. ರಾತ್ರಿಯ ನಾಟಕ ಪ್ರದರ್ಶನದಿಂದ ದಣಿದಿದ್ದ ಕಲಾವಿದರು ಅಲ್ಲಲ್ಲಿ ಮಲಗಿ ಗೊರಕೆ ಹೊಡೆಯುತ್ತಿದ್ದ ಸದ್ದು ಚೆನ್ನಬಸಣ್ಣನ ಕಿವಿಗೆ ಬಂದು ಅಪ್ಪಳಿಸುತ್ತ ಅವನಿಂದ ನಿದ್ದೆಯನ್ನು ಕಸಿದೊಯ್ಯುತ್ತಿರುವಂತೆ ಭಾಸವಾಗುತ್ತಿತ್ತು. ಬದುಕಿನ ಹಲವು ಮಗ್ಗುಲುಗಳನ್ನು ನೋಡಿದ ಅನುಭವದ ಬದುಕು ಚೆನ್ನಬಸಣ್ಣನದು. ಕಮಲಾಬಾಯಿ ಹರೆಯಕ್ಕೆ ಬಂದ ತನ್ನ ನಾಲ್ಕು ಮಕ್ಕಳನ್ನು ಕಟ್ಟಿಕೊಂಡು ಕಂಪನಿ ಬಿಟ್ಟು ಹೋಗಿ ಇವತ್ತಿಗೆ ಒಂದು ವಾರ ಕಳೆದೋಯ್ತು. ಚೆನ್ನಬಸಣ್ಣನ ‘ಮೈಲಾರಲಿಂಗೇಶ್ವರ ನಾಟಕ ಮಂಡಳಿ’ ಬದಾಮಿಗೆ ಬನಶಂಕರಿ ಜಾತ್ರೆಗೆಂದು ಬಂದು ಇಲ್ಲಿ ಠಿಕಾಣಿ ಹೂಡಿ ಇಪ್ಪತ್ತು ದಿನಗಳಾದವು. ಇನ್ನು ಹತ್ತು ದಿನಗಳಲ್ಲಿ ಜಾತ್ರೆ ಮುಗಿದದ್ದೆ ಹೊಟ್ಟೆಪಾಡಿಗಾಗಿ ಬೇರೆ ಊರನ್ನು ಅರಸಿ ಹೊರಡಬೇಕಾದ ಅನಿವಾರ್ಯತೆ ಈ ನಾಟಕ ಕಲಾವಿದರದು. ಜಾತ್ರೆಗೆಂದೇ ಪ್ರತಿರಾತ್ರಿ ಎರಡೆರಡು ಆಟಗಳನ್ನಾಡುತ್ತಿದ್ದರೂ ಕಲೆಕ್ಶನ್ ಮಾತ್ರ ಮೊದಲಿನಂತಾಗುತ್ತಿಲ್ಲ ಎನ್ನುವ ಬೇಸರ ನಾಟಕ ಕಂಪನಿಯ ಎಲ್ಲ ಕಲಾವಿದರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸಿತ್ತು. ಒಂದುವಾರದ ಹಿಂದೆ ರಾತ್ರಿ ಎರಡನೆ ಆಟ ಮುಗಿದದ್ದೆ ನಾಟಕದಲ್ಲಿ ಕುಂಟನ ಪಾತ್ರ ಮಾಡುತ್ತಿದ್ದ ಶಂಕ್ರೆಪ್ಪ ಊರಲ್ಲಿ ಅವ್ವನಿಗೆ ಹುಷಾರಿಲ್ಲವೆಂದು ಹೊರಟು ನಿಂತಿದ್ದ. ಹಲವು ವರ್ಷಗಳಿಂದ ಕಷ್ಟ ಸುಖದಲ್ಲಿ ಜೊತೆಗಿದ್ದ ಸ್ನೇಹಿತ ಅವನು. ಅವನ ಊರಿಗೆ ಹೋದಾಗಲೆಲ್ಲ ನನ್ನನ್ನೂ ಮಗನಂತೆ ಕಂಡ ಹಿರಿಯಜೀವ ಹಾಸಿಗೆ ಹಿಡಿದು ಸಂಕಟ ಪಡುತ್ತಿರುವಾಗ ಮನಸ್ಸು ಕೇಳಲಿಲ್ಲ. ಯಾವುದಕ್ಕೂ ಇರಲಿ ಅಂತ ಅವತ್ತಿನ ಎರಡೂ ಪ್ರದರ್ಶನಗಳಿಂದ ಬಂದ ಹಣವನ್ನು ಬೇಡವೆಂದರೂ ಅವನ ಕಿಸೆಗೆ ತುರುಕಿ ಕಳುಹಿಸಿದ್ದೇ ತಪ್ಪಾಗಿ ಕಾಣಿಸಿತು ಹೆಂಡತಿ ಮಕ್ಕಳಿಗೆ. ಎಷ್ಟೆಂದರೂ ತಾವು ಕಂಪನಿಯ ಮಾಲೀಕರು ಎನ್ನುವ ಭಾವ ಅವರದು. ತನಗಾದರೂ ಈ ನಾಟಕ ಕಂಪನಿಯ ಮೇಲೆ ಯಾವ ಹಕ್ಕಿದೆ ಎಂದು ತನ್ನನ್ನೇ ತಾನು ಪ್ರಶ್ನಿಸಿಕೊಂಡ ಚೆನ್ನಬಸಣ್ಣನ ಮುಖದಲ್ಲಿ ವಿಚಿತ್ರವಾದ ನಗೆಯ ಎಳೆಯೊಂದು ಮೂಡಿ ಕೆಲವು ಕ್ಷಣಗಳ ಕಾಲ ನೆಲೆನಿಂತು ಮಾಯವಾಯಿತು. 

     ಸಾಕುತಾಯಿ ಚಂದ್ರಾಬಾಯಿ ಕೈಹಿಡಿಯದಿದ್ದರೆ ನನ್ನ ಬಾಳು ಏನಾಗುತ್ತಿತ್ತು ಎನ್ನುವ ಪ್ರಶ್ನೆ ಮನಸ್ಸಲ್ಲಿ ಹೊಕ್ಕು ಅರೆಕ್ಷಣ ಚೆನ್ನಬಸಣ್ಣನನ್ನು ಕಳವಳಗೊಳಿಸಿತು. ಆಗ ಮೈಲಾರಲಿಂಗೇಶ್ವರ ನಾಟಕ ಮಂಡಳಿ ಗದಗಿನಲ್ಲಿ ಠಿಕಾಣಿ ಹೂಡಿತ್ತಂತೆ. ಜಾತ್ರೆ ಎಂದು ಎರಡೆರಡು ಪ್ರದರ್ಶನಗಳನ್ನು ಆಡಿ ನಾಟಕ ಮಂಡಳಿಯವರೆಲ್ಲ ದಣಿದು ನಿದ್ದೆಗೆ ಜಾರಿದ ಹೊತ್ತು. ಕೋಳಿ ಕೂಗುವ ಸಮಯಕ್ಕೆ ಸರಿಯಾಗಿ ಸಮೀಪದಲ್ಲೆಲ್ಲೊ ಮಗುವೊಂದು ಅಳುವ ಸದ್ದಿಗೆ ಚಂದ್ರಾಬಾಯಿಗೆ ಎಚ್ಚರವಾಗಿದೆ. ಕಿವಿಗೊಟ್ಟು ಆಲಿಸುತ್ತಿದ್ದವಳಿಗೆ ಆ ಅಳುವಿನ ಶಬ್ದ ತೀರ ಹತ್ತಿರದಲ್ಲಿದೆಯೆಂದು ಭಾಸವಾಗಿ ಹೊರಗೆ ಬಂದು ನೋಡಿದವಳಿಗೆ ರಂಗಸ್ಥಳದ ಮಧ್ಯದಲ್ಲಿ ಬಟ್ಟೆಯಲ್ಲಿ ಸುತ್ತಿದ ಮಗುವೊಂದು ಕಣ್ಣಿಗೆ ಬಿದ್ದಿದೆ. ಅದೆ ಆಗ ಜನಿಸಿದಂತೆ ಕಾಣುವ ಕೆಂಪು ಕೆಂಪಾಗಿರುವ ಚಿವುಟಿದರೆ ರಕ್ತ ಬರುವಂತಿರುವ ಮಗುವನ್ನು ನೋಡಿದ್ದೆ ಚಂದ್ರಾಬಾಯಿಯ ಕರಳು ಚುರಕ್ಕೆಂದು ಮಗುವನ್ನು ಎತ್ತಿಕೊಂಡು ಎದೆಗವಚಿಕೊಂಡವಳಲ್ಲಿ ಮಾತೃತ್ವದ ಭಾವ ಸ್ಪುರಿಸಲಾರಂಭಿಸಿ ಅದು ತನ್ನದೇ ಮಗುವೆನ್ನುವಂತೆ ಕಣ್ಣಿಂದ ಆನಂದಭಾಷ್ಪ ಹರಿಯಲಾರಂಭಿಸಿತು. ಕತ್ತಲು ನಿಧಾನವಾಗಿ ಕರಗುತ್ತ ಬೆಳಕು ತನ್ನ ಆಧಿಪತ್ಯ ಸ್ಥಾಪಿಸುತ್ತಿದ್ದಂತೆ ನಾಟಕದ ಡೇರೆಯ ಸುತ್ತ ಎಷ್ಟು ಹುಡುಕಾಡಿದರೂ ಜನ್ಮ ನೀಡಿದವಳ ಸುಳಿವಿಲ್ಲ. ತನ್ನ ಒಂಟಿ ಬಾಳಿಗೆ ಆಸರೆಯಾಗಿ ಆ ದೇವರೆ ಕರುಣಿಸಿದ ವರಪ್ರಸಾದವೆಂದು ಭಾವಿಸಿದ ಚಂದ್ರಾಬಾಯಿ ಮಗುವಿಗೆ ಚೆನ್ನಬಸಣ್ಣನೆಂದು ತನ್ನ ಅಪ್ಪನ ಹೆಸರಿಟ್ಟು ಹೊಸ ಬದುಕನ್ನು ನೀಡಿದವಳು ಮುಂದೆ ಕಂಪನಿಯನ್ನು ಅವನ ಕೈಗಿತ್ತು ಜೀವನಕ್ಕೊಂದು ಭದ್ರತೆ ಒದಗಿಸಿದಳು. ಯೌವನದ ದಿನಗಳಲ್ಲಿ ಹಡೆದವ್ವನ ನೆನಪಾದಾಗಲೆಲ್ಲ ಕಣ್ಣೆದುರು ಬಂದರೆ ಅವಳನ್ನು ಕಡಿದು ಹಾಕುವಷ್ಟು ಕೋಪ ಬರುತ್ತಿತ್ತು ಚೆನ್ನಬಸಣ್ಣನಿಗೆ. ಕಾಲಕ್ರಮೇಣ ಹಡೆದವ್ವನ ಮೇಲಿನ ದ್ವೇಷ ಕಡಿಮೆಯಾಗುತ್ತ ದೇಹಕ್ಕೆ ವಯಸ್ಸಾಗುತ್ತಿದ್ದಂತೆ ಮನಸ್ಸೂ ಮಾಗತೊಡಗಿತು. ಪಾಪ ಅವಳಾದರೂ ಏನು ಮಾಡಬೇಕಿತ್ತು. ಯಾವನೋ ಮದುವೆಯಾಗುತ್ತೆನೆಂದು ನಂಬಿಸಿ ವಂಚಿಸಿರಬಹುದು. ನನ್ನನ್ನು ಹೊಟ್ಟೆಯಲ್ಲಿಟ್ಟುಕೊಂಡು ಸಮಾಜಕ್ಕೆ ಅಂಜಿ ಬದುಕಿದ ಆ ಜೀವ ಒಂಬತ್ತು ತಿಂಗಳು ಅದೆಷ್ಟು ಸಂಕಟಪಟ್ಟಿರಬಹುದು ಎಂದು ಈಗ ನೆನಪಾದಾಗಲೆಲ್ಲ ಹೊಟ್ಟೆಯಲ್ಲಿ ವಿಚಿತ್ರ ಸಂಕಟದ ಅನುಭವವಾಗುತ್ತದೆ. ಹಳೆಯದೆಲ್ಲ ನೆನಪಾಗಿ ಚೆನ್ನಬಸಣ್ಣನ ಕಣ್ಣುಗಳು ಒದ್ದೆಯಾದವು. 

     ಪಾಪ ಚಂದ್ರಾಬಾಯಿದಾದರೋ ಪರಿತ್ಯಕ್ತ ಬದುಕು. ಮದುವೆಯಾದ ನಾಲ್ಕು ತಿಂಗಳಿಗೇ ನಾಟಕದವಳೆಂದು ಗಂಡನ ಮನೆಯಿಂದ ಹೊರದಬ್ಬಿಸಿಕೊಂಡ ಚಂದ್ರಾಬಾಯಿಗೆ ಅಭಿನಯವೇ ಉಸಿರಾಗಿತ್ತು. ಅಪ್ಪ ಕಟ್ಟಿದ ನಾಟಕ ಮಂಡಳಿ ಅವಳ ಬದುಕಿಗಾಧಾರವಾಗಿತ್ತು. ಗಂಡನ ಮನೆಯಿಂದ ಹೊರಬಂದು ಹೊಸ ಬದುಕನ್ನು ಕಟ್ಟಿಕೊಳ್ಳಲು ಅಪ್ಪನ ಸಾವಿನ ನಂತರ ಮುಚ್ಚಿದ್ದ ನಾಟಕ ಕಂಪನಿಯನ್ನು ಮತ್ತೆ ಕಟ್ಟುವಲ್ಲಿ ಚಂದ್ರಾಬಾಯಿ ಸಫಲಳಾದಳು. ಹೋದಕಡೆಯಲ್ಲೆಲ್ಲ ನಾಟಕಗಳು ತುಂಬಿದ ಪ್ರೇಕ್ಷಕರಿಂದ ಪ್ರದರ್ಶನಗೊಳ್ಳತೊಡಗಿದವು. ಒಂಟಿ ಬದುಕು ಬೇಸರವೆನಿಸುತ್ತಿತ್ತು. ತನ್ನ ಬದುಕು ಈ ದುಡಿಮೆ ಯಾರಿಗಾಗಿ ಎನ್ನುವ ಪ್ರಶ್ನೆ ಚಂದ್ರಾಬಾಯಿಯನ್ನು ಆಗಾಗ ಬದುಕಿಗೆ ವಿಮುಖಳನ್ನಾಗಿಸುತ್ತಿತ್ತು. ಕಂಪನಿಯನ್ನೇ ನಂಬಿರುವ ಕುಟುಂಬಗಳ ಜೀವನ ನಿರ್ವಹಣೆಗಾಗಿ ಆದರೂ ತಾನು ಬದುಕಬೇಕೆನ್ನುವ ಛಲವೇ ಅವಳಲ್ಲಿ ಆತ್ಮಸ್ಥೈರ್ಯವನ್ನು ಬದುಕಿನ ಬಗ್ಗೆ ಭರವಸೆಯನ್ನು ಮೂಡಿಸುತ್ತಿತ್ತು. ಒಂಟಿತನ ಬದುಕನ್ನು ಭಾದಿಸುತ್ತಿರುವ ಹೊತ್ತಲ್ಲೇ ಆ ದೇವರು ಕರುಣಿಸಿ ಅನಾಥ ಮಗುವನ್ನು ಅವಳ ಮಡಿಲಿಗೆ ಹಾಕಿದ್ದ. ಕೂಸಿನ ಆಗಮನದಿಂದ ಭರವಸೆ ಕಳೆದುಕೊಂಡಿದ್ದ ಚಂದ್ರಾಬಾಯಿಯ ಬದುಕಲ್ಲಿ ಮತ್ತೆ ಬಣ್ಣ ತುಂಬತೊಡಗಿತು. ಯಾರು ಯಾರಿಗೆ ದಿಕ್ಕಾದೆವು ಎನ್ನುವ ಪ್ರಶ್ನೆ ಚೆನ್ನಬಸಣ್ಣನ ಮನಸ್ಸಿನಲ್ಲಿ ಅನೇಕ ಸಂದರ್ಭಗಳಲ್ಲಿ ಹಾದು ಹೋಗಿ ಅದು ಇವತ್ತಿಗೂ ಉತ್ತರವೇ ಇಲ್ಲದ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. 

      ನನ್ನ ಬದುಕಿನಲ್ಲಿ ರಂಗಸ್ಥಳವೇ ಪಾಠಶಾಲೆಯಾಯಿತು. ಹಗಲು ಹೊತ್ತಿನಲ್ಲಿ ನಾಟಕದ ತಾಲೀಮು, ರಾತ್ರಿಯಾದರೆ ನಾಟಕ ಪ್ರದರ್ಶನ. ಊರೂರು ಅಲೆದಾಟ. ಅವಶ್ಯಕತೆ ಎದುರಾದಾಗಲೆಲ್ಲ ಬಾಲನಟನಾಗಿ ಅಭಿನಯ. ಬದುಕು ಎಲ್ಲಿಯೂ ಸ್ಥಿರವಾಗಿ ನೆಲೆ ನಿಲ್ಲಲಿಲ್ಲ. ಅಭಿನಯವೇ ಮನಸ್ಸನ್ನು ತುಂಬಿಕೊಂಡಿತ್ತು. ಮೂವತ್ತು ವರ್ಷಗಳ ಹಿಂದೆ ಹುಬ್ಬಳ್ಳಿಯ ಸಿದ್ಧಾರೂಢ ಜಾತ್ರೆಯಲ್ಲಿ ನಾಟಕವಾಡಲು ಹೋದಾಗ ಕಮಲಾಳ ಪರಿಚಯವಾಗಿದ್ದು, ಬೇರೆ ಬೇರೆ ನಾಟಕ ಕಂಪನಿಗಳಲ್ಲಿ ಅಭಿನಯಿಸುತ್ತ ಕೊನೆಗೆ ನಮ್ಮ ನಾಟಕ ಕಂಪನಿಗೆ ಬಂದವಳು ಮುಂದೊಂದು ದಿನ ಬದುಕನ್ನೇ ಹಂಚಿಕೊಳ್ಳುತ್ತಾಳೆಂದು ಭಾವಿಸಿರಲಿಲ್ಲ. ಆ ತುಂಬು ಯೌವನದ ದಿನಗಳು ನೆನಪಾಗಿ ಚೆನ್ನಬಸಣ್ಣನ ಮುಖ ಲಜ್ಜೆಯಿಂದ ಕೆಂಪಾಯಿತು. ಕೃಷ್ಣ ಸತ್ಯಭಾಮ ನಾಟಕದಲ್ಲಿ ನನ್ನದು ಕೃಷ್ಣನ ಪಾತ್ರವಾದರೆ ಅವಳು ಸತ್ಯಭಾಮೆ. ನಾಟಕ ಅದ್ಭುತ ಯಶಸ್ಸು ಕಂಡಿತು. ನಮ್ಮಿಬ್ಬರ ಅಭಿನಯಕ್ಕೆ ಪ್ರೇಕ್ಷಕರಿಂದ ಪ್ರಶಂಸೆಯ ಸುರಿಮಳೆ. ಹಗಲು ಹೊತ್ತಿನಲ್ಲಿ ತಾಲೀಮಿನ ಕೊಠಡಿಯಲ್ಲಿ ಇಬ್ಬರೇ ಇದ್ದಾಗ ಅವ್ಯಕ್ತ ಭಾವನೆಗಳು ಪುಟಿದೇಳುತ್ತಿದ್ದವು. ಕೆನೆಹಾಲಿನ ಮೈಬಣ್ಣ, ದಟ್ಟವಾದ ಕೇಶರಾಶಿ, ಸಪೂರ ನಿಲುವಿನ ನೋಡಿದರೆ ಮತ್ತೆ ಮತ್ತೆ ನೋಡಬೇಕೆನ್ನುವ ಸ್ನಿಗ್ಧ ಸೌಂದರ್ಯದ ಕಮಲ ಹಾಗೇ ಭಾವದಲ್ಲಿ ಬೆರೆತು ಹೋದಳು. ರಂಗಸ್ಥಳದ ಮೇಲೆ ಜೊತೆಯಾಗಿ ನಿಂತ ಆ ಕ್ಷಣ ಅದು ಅಭಿನಯ ಎನ್ನುವುದಕ್ಕಿಂತ ವಾಸ್ತವದ ಘಳಿಗೆ ಎಂಬ ಭಾವ ಉದಿಸುತ್ತಿತ್ತು. ಯಾರೂ ಇಲ್ಲದ ಏಕಾಂತದ ಸಂದರ್ಭ ರಂಗಸ್ಥಳದ ಮೇಲೆ ತನ್ನನ್ನು ನನಗೆ ಇಡೀಯಾಗಿ ಸಮರ್ಪಿಸಿಕೊಂಡ ಕಮಲಳ ಸ್ಪರ್ಷಕ್ಕೆ ದೇಹದಲ್ಲಿ ನವಿರಾದ ಭಾವಗಳ ಕಂಪನ ಹುಟ್ಟಿ ಬದುಕು ಹೊಸ ಅರ್ಥದಲ್ಲಿ ಗ್ರಹೀತವಾಗಲಾರಂಭಿಸಿತು. ಕಮಲಳ ಒಡಲಲ್ಲಿ ಜೀವವೊಂದು ಚಿಗಿತುಕೊಳ್ಳತೊಡಗಿದ್ದೆ ಚಂದ್ರಾಬಾಯಿಗೆ ನಮ್ಮ ಪ್ರೇಮದ ವಾಸನೆ ಬಡಿಯಿತು. ರಂಗಸ್ಥಳವೇ ಮದುವೆ ಮಂಟಪವಾಗಿ, ಸಂಗೀತವೇ ಮಂತ್ರಘೋಷವಾಗಿ ನೂರಾರು ಪ್ರೇಕ್ಷಕರ ಸಾಕ್ಷಿಯಾಗಿ ನಾವಿಬ್ಬರೂ ಸತಿಪತಿಗಳಾಗಿ ದಾಂಪತ್ಯದ ಬದುಕಿಗೆ ಕಾಲಿಟ್ಟೆವು. ಹರೆಯದ ದಿನಗಳ ನೆನಪು ಅವ್ಯಕ್ತ ಅನುಭವದ ಭಾವತಂತಿಯನ್ನು ಮೀಟಿದಂತಾಗಿ ಚೆನ್ನಬಸಣ್ಣನ ಮುಖದಲ್ಲಿ ಅಪೂರ್ವ ಕಳೆಯೊಂದು ಮೂಡಿ ಮರೆಯಾಯಿತು. 

    ಅದೆಷ್ಟು ಸಂತೋಷದ ದಿನಗಳಾಗಿದ್ದವು. ಇಬ್ಬರೂ ಜೊತೆಯಾಗಿ ಅಭಿನಯಿಸಿದ ಸಾಲು ಸಾಲು ನಾಟಕಗಳು ಭರ್ಜರಿ ಯಶಸ್ಸು ಕಂಡ ದಿನಗಳವು. ಪ್ರತಿ ಪ್ರದರ್ಶನ ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿರುತ್ತಿತ್ತು. ದಿನಗಳು ಹೇಗೆ ಸರಿದು ಹೋದವೋ. ಸರಿದು ಹೋದ ಸಮಯದ ವೇಗ ಅನುಭವಕ್ಕೇ ಬರಲಿಲ್ಲ. ಕಾಲ ಆಗಾಗ ನಿಂತು ನೆನಪಿಸಿದ್ದು ಮಕ್ಕಳ ಹುಟ್ಟು ಮತ್ತು ಚಂದ್ರಾಬಾಯಿಯ ಸಾವನ್ನು ಮಾತ್ರ. ಹಸಿವಿನಿಂದ ಚೆನ್ನಬಸಣ್ಣನ ಹೊಟ್ಟೆ ಚುರುಗುಟ್ಟತೊಡಗಿತು. ಸೂರ್ಯ ನೆತ್ತಿಯ ಮೇಲೆ ಬಂದ ಗುರುತಾಗಿ ಛಾವಣಿಯೊಳಗಿಂದ ಬಂದ ಬಿಸಿಲು ಡೇರೆಯ ನಟ್ಟನಡುವೆ ಬೆಳಕಿನಕೋಲನ್ನು ಸೃಷ್ಟಿಸಿತ್ತು. ಕಲಾವಿದರು ಒಬ್ಬೊಬ್ಬರಾಗಿ ಎದ್ದು ಅದೇ ಆಗ ಬೆಳಗಾಗಿದೆ ಎನ್ನುವಂತೆ ತಮ್ಮ ದೈನಿಕದಲ್ಲಿ ತೊಡಗಿದ್ದರು. ಕಂಪನಿಯ ಸಾಮಾನು ಸರಂಜಾಮುಗಳ ದೇಖರೇಖಿಗೆಂದು ಗೊತ್ತು ಮಾಡಿದ್ದ ಆಳು ಈರಣ್ಣನನ್ನು ಕೂಗಿ ಕರೆದು ಎಲ್ಲರಿಗೂ ಊಟಕ್ಕೆ ಬಡಿಸಲು ಹೇಳಿ ಚೆನ್ನಬಸಣ್ಣ ಸ್ನಾನದ ಮನೆಯತ್ತ ಹೆಜ್ಜೆ ಹಾಕಿದ. 

    ‘ಚೆನ್ನಬಸಣ್ಣ ಮುಂದಿನ ಠಿಕಾಣಿ ಎಲ್ಲಿ ಅಂತ ನಿರ್ಧಾರ ಮಾಡಿಯೇನು?’ ಪೇಟಿ ಮಾಸ್ತರ ನೀಲಕಂಠಪ್ಪ ಕೇಳಿದ ಪ್ರಶ್ನೆಯಿಂದ ಭವಿಷ್ಯ ಭೂತದ ರೂಪತಾಳಿ ತನ್ನನ್ನು ಇಡೀಯಾಗಿ ನುಂಗುತ್ತಿರುವಂತೆ ಭಾಸವಾಗಿ ಚೆನ್ನಬಸಣ್ಣ ಅಧೀರನಾದ. ಎದೆಯಲ್ಲಿ ಸಳ್ ಎಂದಂತಾಗಿ ಲೋಟದಲ್ಲಿದ್ದ ನೀರನ್ನೆಲ್ಲ ಗಂಟಲಿಗೆ ಸುರಿದುಕೊಂಡ. ಉತ್ತರಕ್ಕಾಗಿ ಎಲ್ಲರೂ ಚೆನ್ನಬಸಣ್ಣನ ಮುಖ ನೋಡತೊಡಗಿದರು. ಪೇಟಿ ಮಾಸ್ತರ ನೀಲಕಂಠಪ್ಪ ಆಗಲೇ ತನ್ನ ಒಂದು ಕಾಲನ್ನು ಕಂಪನಿಯಿಂದ ಹೊರಗೆ ಇಟ್ಟಿರುವ ವಿಷಯ ಚೆನ್ನಬಸಣ್ಣನಿಗೆ ಹೊಸದೇನಲ್ಲ. ಹಾಗೆ ಹೊರಗೆ ಹೋಗುವವನು ತಾನೊಬ್ಬನೇ ಹೋಗಲಾರ ಎನ್ನುವುದೂ ಗೊತ್ತಿದೆ. ಅವನೊಂದಿಗೆ ಹತ್ತಾರು ಕಲಾವಿದರು ಬಿಟ್ಟು ಹೋದಲ್ಲಿ ಕಂಪನಿಯ ಬಾಗಿಲು ಮುಚ್ಚಬೇಕಾಗುತ್ತದೆ ಎನ್ನುವ ವಿಚಾರ ಕಳೆದ ಹಲವು ದಿನಗಳಿಂದ ಮನಸ್ಸಿನಲ್ಲಿ ಹೊಳೆದು ಚೆನ್ನಬಸಣ್ಣನನ್ನು ಹಣ್ಣು ಹಣ್ಣು ಮಾಡುತ್ತಿತ್ತು. ಹಿಂದಿನಂತೆ ನಾಟಕಗಳಿಗೆ ಪ್ರೇಕ್ಷಕರ ಬೆಂಬಲ ಈಗಿಲ್ಲ. ದಿನನಿತ್ಯದ ಖರ್ಚುವೆಚ್ಚಗಳನ್ನು ಸರಿದೂಗಿಸುವುದೇ ಕಷ್ಟವಾಗುತ್ತಿರುವಾಗ ಕೆಲವು ಕಲಾವಿದರು ಕಂಪನಿ ಬಿಟ್ಟು ಹೋದರೆ ಮತ್ತೆ ಹೊಸ ಕಲಾವಿದರನ್ನು ಹುಡುಕುವುದು ಕಷ್ಟದ ಕೆಲಸ. ‘ನಾಳೆ ಗದಗಿಗಿ ಹೋಗಿ ಮಠದ ಸ್ವಾಮಿಗಳನ್ನು ಕಂಡು ಬರ್ತೀನಿ. ನೋಡೋಣ ಅವರಾದ್ರೂ ದಾರಿ ತೋರಿಸಬಹುದು’ ತಟ್ಟೆಯಲ್ಲಿ ಕೈತೊಳೆದುಕೊಂಡು ಎದ್ದ ಚೆನ್ನಬಸಣ್ಣ ತಾಲೀಮು ಕೊಠಡಿಯತ್ತ ತೆರಳಿದ. ಹಾಗೆ ಚೆನ್ನಬಸಣ್ಣ ತಾಲೀಮು ಕೊಠಡಿಯತ್ತ ತೆರಳಿದನೆಂದರೆ ಅದು ರೀಹರ್ಸಲ್ ಸಮಯವೆಂದು ಎಲ್ಲರಿಗೂ ಗೊತ್ತು. ಊಟ ಮಾಡಿ ಕೈ ತೊಳೆದುಕೊಂಡು ಒಬ್ಬೊಬ್ಬರಾಗಿ ತಾಲೀಮು ಕೊಠಡಿಯಲ್ಲಿ ಸೇರತೊಡಗಿದರು. ನೀಲಕಂಠಪ್ಪ ಮಾಸ್ತರರ ‘ವಂದಿಸುವೆ ಗಜವದನಗೆ’ ಪ್ರಾರ್ಥನೆಯೊಂದಿಗೆ ನಾಟಕದ ರೀಹರ್ಸಲ್‍ಗೆ ರಂಗೇರತೊಡಗಿತು.

    ಎಲ್ಲರನ್ನೂ ರೀಹರ್ಸಲ್‍ಗೆ ಹಚ್ಚಿ ಚೆನ್ನಬಸಣ್ಣ ಸ್ವಲ್ಪ ಅಡ್ಡಾಗಲೆಂದು ರಂಗಸ್ಥಳದ ಮೂಲೆಗೆ ತೆರಳಿದ. ನಾಟಕದ ಪರದೆಗಳತ್ತ ಲಕ್ಷ್ಯ ಹರಿದು ಪರದೆಗಳೆಲ್ಲ ಬಣ್ಣ ಕಳೆದುಕೊಂಡು ಹಳತಾಗಿರುವುದು ಜ್ಞಾಪಕಕ್ಕೆ ಬಂದು ಹೊಸ ಪರದೆಗಳನ್ನು ಬರೆಸಬೇಕೆಂದು ಯೋಚಿಸುತ್ತ ದೇಹವನ್ನು ನೆಲಕ್ಕೆ ಅಡ್ಡಾಗಿಸಿದ. ಹಳೆಯ ನೆನಪುಗಳಿಂದ ಮನಸ್ಸಿನಲ್ಲಿ ದೆವ್ವ ಹೊಕ್ಕಿದಂತಾಗಿ ಕಣ್ಣು ಮುಚ್ಚಿದರೂ ನಿದ್ದೆ ಹತ್ತಿರ ಸುಳಿಯುತ್ತಿಲ್ಲ. ಸುಧನ್ವ, ಸುಶೇಷ, ಸುಚೇತ, ಸುಭದ್ರೆ ಮಕ್ಕಳಿಗೆ ನಾಟಕದ ಹೆಸರುಗಳೆ. ನನ್ನಂತೆ ಮೊದಲ ಮೂರು ಗಂಡು ಮಕ್ಕಳಿಗೆ ರಂಗಸ್ಥಳವೇ ಪಾಠಶಾಲೆಯಾಯಿತು. ಸುಭದ್ರೆಗೂ ಅಭಿನಯದಲ್ಲಿ ಆಸಕ್ತಿಯಿತ್ತು. ಆದರೆ ಕಮಲಳದು ಒಂದೇ ಹಟ. ಮಗಳು ಓದಿ ವಿದ್ಯಾವಂತೆಯಾಗಿ ಹೊಸಬದುಕನ್ನು ರೂಪಿಸಿಕೊಳ್ಳಲೆಂದು ನಾಟಕದಿಂದ ದೂರವೇ ಇಟ್ಟಿದ್ದಳು. ಮಗಳ ನೆನಪಾಗಿ ಚೆನ್ನಬಸಣ್ಣನ ಮನಸ್ಸು ಆರ್ದ್ರವಾಯಿತು. ಮೂರುಗಂಡು ಮಕ್ಕಳ ನಂತರ ಹುಟ್ಟಿದ ಅಕ್ಕರೆಯ ಹೆಣ್ಣುಮಗು. ಉಳಿದ ಮಕ್ಕಳಿಗಿಂತ ಸುಭದ್ರೆಯ ಮೇಲೆ ಒಂದು ಹಿಡಿ ಪ್ರೀತಿ ಹೆಚ್ಚು. ನಾಟಕದವರ ಮಗಳೆಂದು ಮದುವೆಗೆ ಕಂಕಣಬಲ ಕೂಡಿಯೇ ಬರುತ್ತಿಲ್ಲ. ಅವ್ವ ಮತ್ತು ಅಣ್ಣಂದಿರೊಂದಿಗೆ ಹೊರಟು ನಿಂತವಳಿಗೆ ಅಪ್ಪನನ್ನು ಬಿಟ್ಟುಹೋಗುವ ಇಚ್ಛೆಯೇ ಇರಲಿಲ್ಲ. ಪಾಪ ಇನ್ನೂ ಸಣ್ಣ ವಯಸ್ಸು ಅದರ ಮೇಲೆ ಅಣ್ಣಂದಿರ ಭಯ ಬೇರೆ ಚೆನ್ನಬಸಣ್ಣ ಮನಸ್ಸಿಗೆ ಸಮಾಧಾನ ಮಾಡಿಕೊಂಡ.

    ಚೆನ್ನಬಸಣ್ಣ ಗದಗಿನ ಮಠದ ಆವರಣದೊಳಗೆ ಕಾಲಿಟ್ಟಾಗ ಸೂರ್ಯ ನೆತ್ತಿಯ ಮೇಲೆ ಬಂದಿದ್ದ. ಮಠದ ಸ್ವಾಮಿಗಳು ಪೂಜೆ, ಊಟ ಮುಗಿಸಿ ವಿಶ್ರಮಿಸುತ್ತಿದ್ದರು. ಕೋಣೆಯೊಳಗೆ ಕಾಲಿಟ್ಟ ಚೆನ್ನಬಸಣ್ಣ ಸ್ವಾಮಿಗಳ ಪಾದಕ್ಕೆರಗಿ ದೂರದಲ್ಲಿ ಗೋಡೆಯನ್ನು ಬೆನ್ನಿಗೆ ಆಸರೆಯಾಗಿಸಿಕೊಂಡು ಕುಳಿತು ಅವರ ಮಾತಿಗಾಗಿ ಕಾಯತೊಡಗಿದ. ಚೆನ್ನಬಸಣ್ಣನನ್ನು ಅನೇಕ ವರ್ಷಗಳಿಂದ ಬಲ್ಲ ಸ್ವಾಮಿಗಳು ‘ಏನು ಬಸಣ್ಣ ಭಾಳ ದಿವಸಗಳ್ಯಾದ ಮ್ಯಾಲ ಸವಾರಿ ಈ ಕಡಿ. ನಮ್ಮಿಂದ ಏನಾದರೂ ಕೆಲಸ ಆಗಬೇಕಿತ್ತೇನು. ಊಟದ ವ್ಯಾಳಿ ಆಗ್ಯಾದ ಮೊದಲು ಪ್ರಸಾದ ಆಗಲಿ’ ಎಂದು ಉಪಚರಿಸಿದರು. ಮಠದ ಊಟ ಹೊಟ್ಟೆ ಮತ್ತು ಮನಸ್ಸು ಎರಡನ್ನೂ ತುಂಬಿಸಿತು. ‘ಬುದ್ದಿ ಈ ವರ್ಷ ಜಾತ್ರಿಗಿ ನಾಟಕ ಆಡ್ಲಿಕ್ಕ ದೊಡ್ಡ ಮನಸ್ಸು ಮಾಡಿ ಜಾಗ ಕೊಡ್ಬೇಕು ತಾವು’ ಚೆನ್ನಬಸಣ್ಣನ ಮಾತಿನಲ್ಲಿ ಬೇಡಿಕೆಯಿತ್ತು. ‘ಬಸಣ್ಣ ಈಗ ಕಾಲ ಭಾಳ ಬದಲಾಗ್ಯಾದಪ. ಹಿಂದಿನಂಗ ಈಗಿನ ಜನ ಇಲ್ಲ. ಸಿನೆಮಾ ನೋಡೋ ವ್ಯಾಳಾದಾಗ ನಿನ್ನ ನಾಟಕ ಯಾರು ನೋಡ್ತಾರ’ ಸ್ವಾಮಿಗಳ ಧ್ವನಿಯಲ್ಲಿ ಬೇಸರವಿತ್ತು. ‘ಬುದ್ದಿ ಇದೊಂದು ಸಲ ಅವಕಾಶ ಕೊಡಿ. ಸಂಸಾರನೌಕೆ ಅನ್ನೊ ಸಾಮಾಜಿಕ ನಾಟಕ ಆಡ್ತೀವಿ’ ಚೆನ್ನಬಸಣ್ಣ ಪಟ್ಟು ಹಿಡಿದ. ಅವನಿಗೆ ಗೊತ್ತಿತ್ತು ಅದು ಸ್ವಾಮಿಗಳಿಗೆ ಬಹಳ ಇಷ್ಟದ ನಾಟಕವೆಂದು. ‘ಆಯ್ತು ನಿನಗ ಇಲ್ಲ ಅನ್ನೊದಕ್ಕ ಮನಸಾದ್ರು ಹ್ಯಾಂಗ ಬರ್ತದ ಬಸಣ್ಣ. ಜಾಗ ಅಂದರ ಅದೇ ನೀ ಕೂಸಿದ್ದಾಗ ಚಂದ್ರಾಬಾಯಿಗಿ ಸಿಕ್ಕ ಜಾಗ ಹೌದಲ್ಲೊ’ ಚೆನ್ನಬಸಣ್ಣನಿಗೆ ಆ ಜಾಗದೊಂದಿಗೆ ಇರುವ ಅವಿನಾಭಾವ ಸಂಬಂಧದ ಅರಿವು ಸ್ವಾಮಿಗಳಿಗಿತ್ತು. ತಲೆಯಾಡಿಸಿದ ಚೆನ್ನಬಸಣ್ಣ ‘ಬುದ್ದಿ ಈ ಜೀವದಾಗ ಉಸಿರಿರೊತನಕ ನಿಮ್ಮ ಉಪಕಾರ ಮರೆಯೊದಿಲ್ಲ’ ಮತ್ತೊಮ್ಮೆ ಸ್ವಾಮಿಗಳ ಪಾದಕ್ಕೆರಗಿ ಹೊರಡಲು ಎದ್ದು ನಿಂತ. ‘ಸಂಸಾರ ನೌಕೆಯ ಕೊನಿ ಅಂಕದಾಗ ವಿಷ ಕುಡಿದು ಸಾಯೋ ಪ್ರಸಂಗದಾಗ ಬಸಣ್ಣ ನಿನ್ನ ಅಭಿನಯ ಪ್ರೇಕ್ಷಕರನ್ನ ಮೂಕರನ್ನಾಗಿಸ್ತದ’ ಸ್ವಾಮಿಗಳ ಮೆಚ್ಚುಗೆಯ ಮಾತುಗಳಿಂದ ಚೆನ್ನಬಸಣ್ಣನ ಮನಸ್ಸು ತುಂಬಿಬಂತು. ನಾಟಕ ಕಂಪನಿ ಠಿಕಾಣಿ ಹೂಡಬೇಕಿದ್ದ ಜಾಗವನ್ನು ಮತ್ತೊಮ್ಮೆ ಕಣ್ತುಂಬಿಕೊಂಡು ಬಸ್‍ಸ್ಟ್ಯಾಂಡಿಗೆ ಬಂದ ಚೆನ್ನಬಸಣ್ಣ ಬದಾಮಿಗೆ ಹೋಗುವ ಬಸ್ ಹತ್ತಿ ಕುಳಿತ.

      ಬನಶಂಕರಿ ಜಾತ್ರೆ ಮುಗಿದದ್ದೆ ಮೈಲಾರಲಿಂಗೇಶ್ವರ ನಾಟಕ ಮಂಡಳಿ ಗದಗಿಗೆ ಸ್ಥಳಾಂತರಗೊಂಡಿತು. ಒಂದು ವಾರದಲ್ಲಿ ಮಠದ ಆವರಣದೊಳಗೆ ನಾಟಕ ಕಂಪನಿಯ ಡೇರೆ ಎದ್ದು ನಿಂತಿತು. ಹೆಂಡತಿ ಮಕ್ಕಳು ಬರುವ ನಿರೀಕ್ಷೆ ದಿನಕಳೆದಂತೆ ಹುಸಿಯಾಗತೊಡಗಿದಾಗ ಚೆನ್ನಬಸಣ್ಣ ಮಾನಸಿಕವಾಗಿ ಕುಗ್ಗಿ ಹೋದ. ಮೇಲೆ ಮಾತ್ರ ಏನನ್ನೂ ತೋರಿಸಕೊಡದೆ ನಾಟಕ ಪ್ರದರ್ಶನಕ್ಕೆ ಎಲ್ಲ ಕಲಾವಿದರನ್ನು ಹುರುದುಂಬಿಸತೊಡಗಿದ. ಮಠದ ಆವರಣಕ್ಕೆ ಜನರ ಗದ್ದಲದಿಂದ ಹೊಸಕಳೆ ಬಂದಿತ್ತು. ಅಂಗಡಿಗಳು, ಹೋಟೆಲುಗಳು, ನಾಟಕದ ಟೆಂಟುಗಳು, ಸರ್ಕಸ್ ಡೇರೆ ಮಠದ ಆವರಣದಲ್ಲಿ ತಲೆ ಎತ್ತಿ ಗೌಜುಗದ್ದಲಗಳಿಂದ ಇಡೀ ಮಠದ ಆವರಣ ಜೀವಕಳೆಯಿಂದ ನಳನಳಿಸುತ್ತಿತ್ತು. ಹೆಂಗಸರು ಬಳೆ, ಸೀರೆ, ಮನೆಗೆ ಬೇಕಾದ ವಸ್ತುಗಳ ಖರೀದಿಯಲ್ಲಿ ತಲ್ಲಿನರಾಗಿದ್ದರೆ ಗಂಡಸರು ಕೃಷಿಗೆ ಅಗತ್ಯವಾದ ವಸ್ತುಗಳನ್ನು ಖರೀದಿಸುವಲ್ಲಿ ಮಗ್ನರಾಗಿದ್ದರು. ಮಕ್ಕಳು ಆಟದ ಸಾಮಾನುಗಳನ್ನು ಮತ್ತು ಹೋಟೆಲುಗಳಲ್ಲಿನ ಕಾಜೀನ ಬುರುಡೆಗಳಲ್ಲಿ ತುಂಬಿಸಿಟ್ಟ ತರೇವಾರಿ ತಿನಿಸುಗಳನ್ನು ಆಸೆಯ ಕಂಗಳಿಂದ ದಿಟ್ಟಿಸುತ್ತ ಅಪ್ಪ ಅಮ್ಮನನ್ನು ಕೊಡಿಸುವಂತೆ ಕಾಡಿಸುತ್ತಿದ್ದವು. ಮಕ್ಕಳ ಕೈಯಲ್ಲಿ ಹಾರಾಡುತ್ತಿದ್ದ ವಿವಿಧ ಬಣ್ಣದ ಬಲೂನ್‍ಗಳಿಂದ ಜಾತ್ರೆಗೆ ಹೊಸದೊಂದು ಮೆರುಗು ಬಂದಿತ್ತು. ವಯಸ್ಸಾದ ಹಿರಿಯ ಜೀವಗಳಿಗೆ ಗದ್ದಲದಲ್ಲಿ ಚಿಕ್ಕಮಕ್ಕಳು ಕಳೆದುಹೋಗದಂತೆ ಕಾಯುವುದೇ ದೊಡ್ಡ ಕೆಲಸವಾಗಿತ್ತು. ಯುವಕ ಯುವತಿಯರ ಕಣ್ಣುಗಳು ತಮ್ಮ ತಮ್ಮ ಕನಸಿನ ರಾಜಕುಮಾರ, ರಾಜಕುಮಾರಿಯರನ್ನು ಅರಸುತ್ತಿದ್ದವು. ತಮ್ಮ ಮಕ್ಕಳಿಗೆ ಮದುವೆಗಾಗಿ ಗಂಡು, ಹೆಣ್ಣುಗಳನ್ನು ಹುಡುಕುತ್ತಿದ್ದ ಅಪ್ಪ ಅಮ್ಮಂದಿರಿಗೆ ನಾಲ್ಕು ಜನ ಸೇರುವ ಇಂಥ ಜಾತ್ರೆಗಳು ಸಂಬಂಧಿಕರ ಭೇಟಿಗೆ, ಮಕ್ಕಳ ಮದುವೆ ನಿಶ್ಚಯಕ್ಕೆ ಅನುಕೂಲಕರವಾಗಿ ತೋರುತ್ತಿತ್ತು. ಅಂಗಡಿಗಳ ಕೆಲಸಗಾರರ ಮಧ್ಯೆ ತುರುಸಿನ ಸ್ಪರ್ಧೆಯೇ ಏರ್ಪಟ್ಟಂತೆ ಅವರು ತಮ್ಮ ತಮ್ಮ ಅಂಗಡಿಗಳ ಎದುರು ನಿಂತು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಜನರನ್ನು ಆಕರ್ಷಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದದ್ದು ನೋಡುವವರಿಗೆ ಪುಕ್ಕಟ್ಟೆ ಮನೋರಂಜನೆ ಒದಗಿಸುತ್ತಿತ್ತು. ಮಠದ ಇನ್ನೊಂದು ಮಗ್ಗುಲಲ್ಲಿ ದನದ ಸಂತೆ ಇದ್ದು ವಿವಿಧ ತಳಿಯ ದನಗಳನ್ನು ನೋಡುವುದೇ ಜನರಿಗೆ ಹಬ್ಬವಾಗಿತ್ತು. ದಿನವೆಲ್ಲ ಮಠದ ಗದ್ದುಗೆಯ ದರ್ಶನ, ಪ್ರಸಾದ ಸ್ವೀಕಾರ, ಅಂಗಡಿಗಳಲ್ಲಿ ಖರೀದಿ, ದನಗಳ ಮಾರಾಟ- ಖರೀದಿ, ಮನೋರಂಜನೆಯಲ್ಲಿ ಮಗ್ನರಾದ ಜನ ರಾತ್ರಿಯಾಗುತ್ತಿದ್ದಂತೆ ನಾಟಕದ ಡೇರೆಯ ಕಡೆ ಹೆಜ್ಜೆ ಹಾಕತೊಡಗಿದರು. ನಾಟಕ ಶುರುವಾಗುವ ವೇಳೆಗೆ ಸಾಕಷ್ಟು ಪ್ರೇಕ್ಷಕರು ಜಮಾಯಿಸಿದ್ದರು. ರಂಗಸ್ಥಳದ ಸೈಡ್‍ವಿಂಗ್‍ನಿಂದ ಹಣಿಕಿಕ್ಕಿದ ಚೆನ್ನಬಸಣ್ಣನಿಗೆ ಸಮಾಧಾನವಾಯಿತು. ಮತ್ತೊಮ್ಮೆ ಪ್ರೇಕ್ಷಕರನ್ನು ಕಣ್ತುಂಬಿಕೊಂಡು ಮೇಕಪ್ ರೂಮಿನತ್ತ ಹೆಜ್ಜೆ ಹಾಕಿದ ಚೆನ್ನಬಸಣ್ಣನ ಮನಸ್ಸಿನಲ್ಲಿ ಬೆಳಿಗ್ಗೆಯಿಂದ ಅಸ್ಪಷ್ಟ ರೂಪದಲ್ಲಿದ್ದ ಒಂದು ನಿರ್ಧಾರ ಈಗ ಘನೀಕರಿಸತೊಡಗಿತು. 

     ನಾಟಕದ ಪ್ರತಿದೃಶ್ಯಕ್ಕೆ ಪ್ರೇಕ್ಷಕರು ಚಪ್ಪಾಳೆಯ ಮೂಲಕ ಅಭಿನಂದಿಸುತ್ತಿದ್ದರು. ತನ್ನ ಅವಿರತ ದುಡಿಮೆಯಿಂದ ಕುಟುಂಬವನ್ನು ಒಂದು ನೆಲೆಗೆ ತಂದ ಮನೆಯ ಯಜಮಾನನೇ ಈಗ ಅನಾಥನಾಗಿದ್ದಾನೆ. ಹೆಂಡತಿಯ ಸಾವು ಅವನನ್ನು ಮಾನಸಿಕವಾಗಿ ಜರ್ಜರಿತಗೊಳಿಸಿದೆ. ಮಕ್ಕಳ, ಸೊಸೆಯಂದಿರ ಅನಾದಾರಕ್ಕೆ ಒಳಗಾದವನಿಗೆ ಈಗ ಆತ್ಮಹತ್ಯೆಯೊಂದೇ ಕೊನೆಯ ದಾರಿ. ರಂಗಸ್ಥಳದ ಮೇಲೆ ಕತ್ತಲು ನಿಧಾನವಾಗಿ ಕರಗುತ್ತ ಬೆಳಕು ಮೂಡುತ್ತಿದ್ದಂತೆ ಮನೆಯ ದೃಶ್ಯವಿರುವ ಪರದೆ ಕೆಳಗಿಳಿಯಲಾರಂಭಿಸಿತು. ರಂಗಸ್ಥಳದ ಮಧ್ಯದಲ್ಲಿ ಪ್ರೇಕ್ಷಕರಿಗೆ ಎದುರಾಗಿ ಚೆನ್ನಬಸಣ್ಣ ನಾಟಕದ ಕೊನೆಯ ಅಂಕದ ಅಭಿನಯಕ್ಕಾಗಿ ರಘುಪತಿರಾಯರ ಪಾತ್ರಧಾರಿಯಾಗಿ ಸಿದ್ಧನಾಗಿ ನಿಂತಿದ್ದಾನೆ. ಚೆನ್ನಬಸಣ್ಣ ಈಗ ತನ್ನನ್ನು ಇಡಿಯಾಗಿ ಪಾತ್ರಕ್ಕೆ ಸಮರ್ಪಿಸಿಕೊಂಡಿರುವುದು ಅವನ ಮುಖದಲ್ಲಿ ಮಡುಗಟ್ಟಿದ ಭಾವನೆಗಳೇ ಹೇಳುತ್ತಿವೆ. ರಂಗಸ್ಥಳದ ಮಧ್ಯಭಾಗದಲ್ಲಿದ್ದ ಮೈಕ್‍ಗೆ ಹತ್ತಿರ ಬಂದು ಚೆನ್ನಬಸಣ್ಣ ನಿಧಾನವಾಗಿ ತನ್ನ ಸಂಭಾಷಣೆಯನ್ನು ಹೇಳತೊಡಗಿದ ‘ಸಾವಿತ್ರಿ ಸಾವಿತ್ರಿ ಬದುಕಿನುದ್ದಕ್ಕೂ ಜೊತೆಯಾಗಿರ್ತಿನಿ ಎಂದವಳು ಹೀಗೆ ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಿದ್ದು ಸರೀನಾ. ನೀನಿಲ್ಲದೆ ನಾನು ಬದುಕಿರಬಲ್ಲೆ ಎಂದು ನಿನಗೆ ಹೇಗಾದ್ರೂ ಅನಿಸಿತು. ಇಲ್ಲಿ ಪ್ರತಿದಿನ ಪ್ರತಿಕ್ಷಣ ನಿನ್ನ ಮಕ್ಕಳು ನನ್ನ ಬದುಕನ್ನ ನರಕ ಮಾಡ್ತಿದ್ದಾರೆ ಸಾವಿತ್ರಿ. ಅವರಿಗೆ ಜನ್ಮಕ್ಕೆ ಕಾರಣನಾದ ಈ ಅಪ್ಪ ಬೇಕಿಲ್ಲ. ಆ ಅಯೋಗ್ಯರಿಗೆ ಬೇಕಿರೋದು ನಾನು ದುಡಿದು ಗಳಿಸಿದ ಹಣ, ಒಡವೆ, ಆಸ್ತಿ. ನನ್ನನ್ನು ಕೊಲೆ ಮಾಡೋದಕ್ಕೂ ಹೇಸದ ಪಾಪಿಗಳಿವರು. ನೀನೇ ಜೊತೆಗಿಲ್ಲದಾಗ ಈ ಆಸ್ತಿ, ಹಣ ಇದನೆಲ್ಲ ತೊಗೊಂಡು ನಾನೇನು ಮಾಡ್ಲಿ. ನೀನಿಲ್ಲದೆ ಅರೆಘಳಿಗೆ ಕೂಡ ನನಗೆ ಬದುಕೊಕೆ ಸಾಧ್ಯ ಆಗ್ತಿಲ್ಲ. ಇದೋ ಸಾವಿತ್ರಿ ನೋಡು ಈ ಕ್ಷಣವೇ ನಾನು ನಿನಿದ್ದಲ್ಲಿಗೇ ಬರ್ತಿದ್ದೀನಿ’ ಜೇಬಿನಿಂದ ವಿಷದ ಬಾಟಲಿ ಹೊರತೆಗೆದು ಗಟಗಟನೆ ಕುಡಿದ ಚೆನ್ನಬಸಣ್ಣ ರಂಗಸ್ಥಳದ ಮೇಲೆ ಕುಸಿದು ಬಿದ್ದ. ಹೊಟ್ಟೆಯಲ್ಲಿ ಆರಂಭವಾದ ಸಂಕಟ ಕ್ರಮೇಣ ನರನಾಡಿಯಿಂದ ಪ್ರವಹಿಸುತ್ತ ದೇಹದ ತುಂಬೆಲ್ಲ ವ್ಯಾಪಿಸಿ ಚೆನ್ನಬಸಣ್ಣನ ಕಣ್ಣುಗಳು ಮಂಜಾಗತೊಡಗಿದವು. ಎದುರಿನದೆಲ್ಲ ಮಸುಕು ಮಸುಕಾಗಿ ಕಾಣಲಾರಂಭಿಸಿತು. ಬಾಯಿಯಿಂದ ಹನಿಹನಿಯಾಗಿ ತೊಟ್ಟಿಕ್ಕಲಾರಂಭಿಸಿದ ರಕ್ತದಹನಿ ಸ್ವಲ್ಪ ಸಮಯದ ನಂತರ ತನ್ನ ವೇಗವನ್ನು ಹೆಚ್ಚಿಸಿಕೊಂಡು ಚೆನ್ನಬಸಣ್ಣನ ದೇಹವನ್ನು ತೋಯಿಸತೊಡಗಿತು. ಸಾವು ಸಮೀಪಿಸುತ್ತಿದ್ದೆ ಎಂದರಿವಾಗಿ ತಾನು ಒಂದೊಮ್ಮೆ ಕೂಸಾಗಿ ಮಲಗಿದ್ದ ಜಾಗವನ್ನು ಬಿಗಿದಪ್ಪಿಕೊಳ್ಳುವಂತೆ ಒಂದಿಷ್ಟು ಮುಂದೆ ತೆವಳಿದ ಚೆನ್ನಬಸಣ್ಣನ ದೇಹ ಬಳಲಿಕೆಯಿಂದ ನಿಸ್ತೇಜಗೊಂಡು ಪಕ್ಕಕ್ಕೆ ವಾಲಿತು. ನಿಧಾನವಾಗಿ ದೀಪಗಳು ಒಂದೊಂದಾಗಿ ಆರುತ್ತಿದ್ದಂತೆ ಇಡೀ ರಂಗಸ್ಥಳದ ತುಂಬ ಕತ್ತಲಾವರಿಸಿತು. ಪ್ರೇಕ್ಷಕಗಣ ಎದ್ದುನಿಂತು ದೀರ್ಘ ಕರತಾಡನದ ಮೂಲಕ ಚೆನ್ನಬಸಣ್ಣನ ಅಭಿನಯಕ್ಕೆ ತಮ್ಮ ಮೆಚ್ಚುಗೆ ಸೂಚಿಸಿತು. 


- ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 



Saturday, August 17, 2019

ಶಿಕ್ಷಣದ ಉದಾರೀಕರಣ ಮತ್ತು ಗುಣಮಟ್ಟದ ಕುಸಿತ

    

    ನಮ್ಮ ರಾಷ್ಟ್ರದಲ್ಲಿ ಶಿಕ್ಷಣವೆನ್ನುವುದು ಅದೊಂದು ಪ್ರಯೋಗಾತ್ಮಕ ಕ್ಷೇತ್ರವಾಗಿದೆ. ಕಾಲಕಾಲಕ್ಕೆ ಜನರಿಂದ ಆಯ್ಕೆಯಾಗಿ  ಬರುವ ಚುನಾಯಿತ ಪ್ರತಿನಿಧಿಗಳು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ಮಾಡುತ್ತಿರುವರು. ಈ ಮಂತ್ರಿಮಹೋದಯರ ತಾಳಕ್ಕೆ ತಕ್ಕಂತೆ ಕುಣಿಯುವ ಸರ್ಕಾರಿ ಅಧಿಕಾರಿಗಳು ಕೂಡ ಏನೊಂದೂ ಯೋಚಿಸದೆ ಬದಲಾವಣೆಗಳನ್ನು ತರುತ್ತಿರುವರು. ದಿನಕ್ಕೊಂದು ಹೊಸ ನಿಯಮಗಳು ಶಿಕ್ಷಣ ಕ್ಷೇತ್ರದಲ್ಲಿ ಜಾರಿಯಾಗುತ್ತವೆ. ಹಳೆಯ ನಿಯಮಗಳು ಮರೆಯಾಗುತ್ತವೆ. ಪಾಠ ಕಲಿಸುವವರಿಗೂ ಮತ್ತು ಕಲಿಯುವವರಿಗೂ ಒಂದರ್ಥದಲ್ಲಿ ಕಣ್ಣುಕಟ್ಟಿ ಕಾಡಿನಲ್ಲಿ ಬಿಟ್ಟ ಸ್ಥಿತಿ. ಪರಿಣಾಮವಾಗಿ ಶಿಕ್ಷಣದ ಗುಣಮಟ್ಟ ಇಲ್ಲಿ ಹಂತಹಂತವಾಗಿ ಕುಸಿಯುತ್ತಿದೆ. ಹೊಸ ಹೊಸ ನಿಯಮಗಳನ್ನು ಜಾರಿಗೆ ತರುವ ಭರದಲ್ಲಿ ಮಕ್ಕಳನ್ನು ಇವತ್ತಿಗೂ ಮೆಕಾಲೆಯ ಶಿಕ್ಷಣಕ್ಕೆ ಜೋತು ಬೀಳಿಸುವಂಥ ವ್ಯವಸ್ಥೆ ಇಲ್ಲಿದೆ. ಶಿಕ್ಷಣವೆನ್ನುವುದು ಮಗುವಿನ ಆಸಕ್ತಿಗನುಗುಣವಾಗಿ ದೊರೆತು ಆ ಮೂಲಕ ಸರ್ವಾಂಗೀಣ ಬೆಳವಣಿಗೆಗೆ ಕಾರಣವಾಗಬೇಕು. ಶಿಕ್ಷಣದ ಮೂಲಕವೇ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತಾಗಬೇಕು. ಶಾಲಾ ಕಾಲೇಜುಗಳಲ್ಲಿನ ಓದಿನಿಂದ ಕೇವಲ ಗುಮಾಸ್ತರು, ಶಿಕ್ಷಕರು, ವೈದ್ಯರು, ಇಂಜಿನಿಯರರು ಮಾತ್ರ ರೂಪುಗೊಳ್ಳದೆ ರೈತರೂ ಹುಟ್ಟಿಬರಬೇಕು ಆಗ ಮಾತ್ರ ಶಿಕ್ಷಣದ ಘನವಾದ ಉದ್ದೇಶ ಈಡೇರಲು ಸಾಧ್ಯ. ಆದರೆ ಶಾಲೆ ಕಾಲೇಜುಗಳ ಸ್ಥಾಪನೆಯಲ್ಲಿ ಹೆಚ್ಚಿನ ಮುತುವರ್ಜಿವಹಿಸುವ ಸರ್ಕಾರ ಶಿಕ್ಷಣದ ಮೂಲ ಉದ್ದೇಶವನ್ನೇ ಮರೆತು ಬಿಟ್ಟಿದೆ. ಇಲ್ಲಿ ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಶಿಕ್ಷಣದವರೆಗೆ ಅನೇಕ ವಿಪರ್ಯಾಸಗಳಿರುವುದು ಸತ್ಯ. 

ಪ್ರಾಥಮಿಕ ಶಿಕ್ಷಣ

ಉದಾಹರಣೆಗೆ ಪ್ರಾಥಮಿಕ ಶಿಕ್ಷಣವನ್ನೇ ತೆಗೆದುಕೊಳ್ಳಿ. ಒಂದೆಡೆ ಸರ್ಕಾರದ ಕನ್ನಡ ಮಾಧ್ಯಮ ಶಾಲೆಗಳ ಕುರಿತು ತುಂಬ ಕಾಳಜಿ ಇರುವಂತೆ ಮಾತನಾಡುವ ಜನಪ್ರತಿನಿಧಿಗಳು ಇನ್ನೊಂದೆಡೆ ಇಂಗ್ಲಿಷ್ ಮಾಧ್ಯಮದ ಶಾಲೆಗಳ ಸ್ಥಾಪನೆಗೆ ಹೆಚ್ಚಿನ ಒಲವು ತೋರುತ್ತಾರೆ. ಶಿಕ್ಷಣದ ನೀತಿ ನಿಯಮಗಳನ್ನು ಸಡಿಲಗೊಳಿಸಿ ಇಂಗ್ಲಿಷ್ ಮಾಧ್ಯಮದ ಶಾಲೆಗಳ ಸ್ಥಾಪನೆಗೆ ಒಪ್ಪಿಗೆ ನೀಡುತ್ತಾರೆ. ಈ ಮೊದಲಿನ ಕಾನ್ವೆಂಟ್ ಶಾಲೆಗಳೆಲ್ಲ ಈಗ ಕೇಂದ್ರೀಯ ಪಠ್ಯಕ್ರಮದ ಶಾಲೆ ಎನ್ನುವ ಹೊಸ ರೂಪವನ್ನು ತೆಳೆದು ಪಾಲಕರನ್ನು ಆಕರ್ಷಿಸುತ್ತಿವೆ. ಆರಂಭದಲ್ಲಿ ಜಿಲ್ಲೆಗೊಂದರಂತಿದ್ದ ಸಿ.ಬಿ.ಎಸ್.ಇ  ಶಾಲೆಗಳನ್ನು ಈಗ ಹೊಬಳಿಗಳಲ್ಲೂ ನಾವು ಕಾಣಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರೀಯ ಪಠ್ಯಕ್ರಮದ ಶಾಲೆಗಳು ಸ್ಥಾಪನೆಯಾಗುತ್ತಿರುವುದರಿಂದ ಪಾಲಕರಿಗೆ ತಮ್ಮ ಮಕ್ಕಳನ್ನು ಇಂಥ ಶಾಲೆಗಳಿಗೆ ಸೇರಿಸುವುದು ಅತ್ಯಂತ ಸುಲಭವಾಗಿದೆ. ಒಂದೆರಡು ದಶಕಗಳ ಹಿಂದೆ ಊರಿನಲ್ಲಿನ ಕೆಲವೇ ಆರ್ಥಿಕವಾಗಿ ಸ್ಥಿತಿವಂತರಾಗಿರುವ ಕುಟುಂಬವರ್ಗದವರು ತಮ್ಮ ಮಕ್ಕಳನ್ನು ದೂರದ ವಸತಿ ಶಾಲೆಗಳಿಗೆ ಸೇರಿಸುತ್ತಿದ್ದರು. ಉಳಿದವರೆಲ್ಲ ತಮ್ಮ ಮಕ್ಕಳನ್ನು  ಊರಿನಲ್ಲೇ ಇರುವ ಕನ್ನಡ ಮಾಧ್ಯಮದ ಶಾಲೆಗಳಿಗೆ ಕಳುಹಿಸುತ್ತಿದ್ದರು. ಬದಲಾದ ಕಾಲಘಟ್ಟದಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆಗಳು ಅದರಲ್ಲೂ ಸಿ.ಬಿ.ಎಸ್.ಇ  ಎನ್ನುವ ಹಣೆಪಟ್ಟಿಯೊಂದಿಗೆ ಜಿಲ್ಲೆ, ತಾಲೂಕುಗಳಲ್ಲಿ ಮಾತ್ರವಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲೂ ಅಸ್ತಿತ್ವಕ್ಕೆ ಬರಲಾರಂಭಿಸಿದ ಪರಿಣಾಮ ಗ್ರಾಮಗಳ ಬಹುತೇಕ ಕುಟುಂಬಗಳ ಮಕ್ಕಳು ಈ ಹೊಸ ಖಾಸಗಿ ಶಾಲೆಗಳ ಫಲಾನುಭವಿಗಳಾದರು. ಜೊತೆಗೆ ಕೇಂದ್ರೀಯ ಪಠ್ಯಕ್ರಮದ ಶಾಲೆಗಳಿಂದ ಮಾತ್ರ ಮಕ್ಕಳು ವೈದ್ಯಕೀಯ ಮತ್ತು ಇಂಜಿನಿಯರಿಂಗ್‍ನಂಥ ವೃತ್ತಿಪರ ಕೋರ್ಸುಗಳಿಗೆ ಸುಲಭವಾಗಿ ಪ್ರವೇಶ ಪಡೆಯಲು ಸಾಧ್ಯ ಎನ್ನುವ ಆಸೆ ಹುಟ್ಟಿಸುವ ಆಡಳಿತ ಮಂಡಳಿಗಳ ಹುನ್ನಾರ ಕೂಡ ಇಲ್ಲಿ ಕೆಲಸ ಮಾಡಿತು. ಇರಲಿ ಕೇವಲ ಕೆಲವೇ ಕುಟುಂಬಗಳ ಕೈಗೆ ದಕ್ಕುತ್ತ ಉಳಿದವರಿಗೆ ಮರೀಚಿಕೆಯಾಗಿಯೇ  ಉಳಿದಿದ್ದ ಈ ಹೊಸ ರೂಪದ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಎಲ್ಲರಿಗೂ ದೊರಕುವಂತಾದದ್ದು ಸಂತೋಷದ ಸಂಗತಿ. ಆದರೆ ಹೀಗೆ ಗ್ರಾಮಾಂತರ ಪ್ರದೇಶಗಳಲ್ಲೂ ಕೇಂದ್ರೀಯ ಪಠ್ಯಕ್ರಮದ ಶಾಲೆಗಳ ಸ್ಥಾಪನೆಗೆ ಒತ್ತು ನೀಡಿದ ಸರ್ಕಾರ ಅಲ್ಲಿನ ಗುಣಮಟ್ಟವನ್ನು ನಿರ್ಲಕ್ಷಿಸಿದ್ದು ಮನ್ನಿಸಲಾಗದ ಅಪರಾಧ. ಈ ಶಾಲೆಗಳಲ್ಲಿನ ಪಠ್ಯಕ್ರಮ ಮೊದಲೇ ವಿದ್ಯಾರ್ಥಿಗಳಿಗೆ ಅದೊಂದು ಕಬ್ಬಿಣದ ಕಡಲೆ. ಪರಿಸ್ಥಿತಿ ಹೀಗಿರುವಾಗ ಅಲ್ಲಿ ಪಾಠ ಮಾಡುವ ಶಿಕ್ಷಕರ ಶೈಕ್ಷಣಿಕ ಅರ್ಹತೆಯ ಪ್ರಶ್ನೆ ಮುನ್ನೆಲೆಗೆ ಬರುತ್ತದೆ. ಶಿಕ್ಷಕರ ನೇಮಕಾತಿಗೆ ನಿರ್ಧಿಷ್ಟ ಮಾನದಂಡಗಳಿಲ್ಲದಿರುವುದರಿಂದ ಈ ಶಾಲೆಗಳಲ್ಲಿ ಪಿ.ಯು.ಸಿ ವಿದ್ಯಾರ್ಹತೆಯಿಂದ ಸ್ನಾತಕೋತ್ತರ ಪದವಿ ಪಡೆದವರವರೆಗೆ ಯಾರೂ ಬೇಕಾದರೂ ಪಾಠ ಮಾಡಬಹುದು. ಕಡಿಮೆ ವಿದ್ಯಾರ್ಹತೆ ಇರುವ ಶಿಕ್ಷಕರನ್ನು ಪೂರ್ವಪ್ರಾಥಮಿಕಕ್ಕೂ ಮತ್ತು ಹೆಚ್ಚಿನ ವಿದ್ಯಾರ್ಹತೆಯ ಶಿಕ್ಷಕರನ್ನು ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣಕ್ಕೂ ನೇಮಕಾತಿ ಮಾಡುವುದುಂಟು. ಕೆಲವೊಮ್ಮೆ ವಿದ್ಯಾರ್ಹತೆಗಿಂತ ಅನುಭವವೇ ಮುಖ್ಯವಾಗುವುದುಂಟು. ಬಿ.ಇಡಿ ಮತ್ತು ಎಮ್.ಇಡಿ ವಿದ್ಯಾರ್ಹತೆಗೆ ಇಲ್ಲಿ ಹೆಚ್ಚಿನ ಪ್ರಾಧಾನ್ಯತೆ ಇಲ್ಲ. ಜೊತೆಗೆ ಸರ್ಕಾರದ ನಿಯಂತ್ರಣವಿಲ್ಲದಿರುವುದರಿಂದ ಖಾಸಗಿ ಸಂಸ್ಥೆಗಳ ಆಡಳಿತ ವರ್ಗದವರು ಕಡಿಮೆ ಸಂಬಳಕ್ಕೆ ಅರ್ಹರಲ್ಲದವರನ್ನು ಶಿಕ್ಷಕರನ್ನಾಗಿ ನೇಮಿಸುವ ಪರಿಪಾಠವಿದೆ. ಒಟ್ಟಾರೆ ಈ ಎಲ್ಲ ವೈರುಧ್ಯಗಳ ಪರಿಣಾಮ ಇಂಗ್ಲಿಷ್ ಮಾಧ್ಯಮದ ಪ್ರಾಥಮಿಕ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. 

ಇಂಜಿನಿಯರಿಂಗ್ ಕಾಲೇಜುಗಳು

ನಿಮಗೆ ನೆನಪಿರಬಹುದು ಕೆಲವು ವರ್ಷಗಳ ಹಿಂದೆ ಅಂದಿನ ಸರ್ಕಾರ ತಾಲೂಕಿಗೊಂದರಂತೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆಗೆ ಅನುಮತಿ ನೀಡಿ ಅದನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಿತು. ಕೆಲವು ತಾಲೂಕುಗಳಲ್ಲಿ ಇನ್ನು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಲು ಸಾಧ್ಯವಾಗಿಲ್ಲ ಎನ್ನುವುದು ಬೇರೆ ವಿಷಯ. ಆದರೆ ಸರ್ಕಾರದ ಈ ಹೊಸ ನೀತಿಯಿಂದಾಗಿ ಸಾಕಷ್ಟು ಸಂಖ್ಯೆಯಲ್ಲಿ ಹೊಸ ಇಂಜಿನಿಯರಿಂಗ್ ಕಾಲೇಜುಗಳು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದವು. ಗಮನಿಸಬೇಕಾದ ಸಂಗತಿ ಎಂದರೆ ಆ ವೇಳೆಗಾಗಲೇ ವಿದ್ಯಾರ್ಥಿಗಳ ಕೊರತೆಯನ್ನು ಅನುಭವಿಸುವಷ್ಟು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ರಾಜ್ಯದಲ್ಲಿ ಸ್ಥಾಪನೆಯಾಗಿದ್ದವು. ಹೀಗಿದ್ದೂ ಸರ್ಕಾರ ಖಾಸಗಿ ಕಾಲೇಜುಗಳಿಗೆ ಅನುಮತಿ ನೀಡುವುದರೊಂದಿಗೆ ಸರ್ಕಾರಿ ಕಾಲೇಜುಗಳ ಸ್ಥಾಪನೆಗೂ ಮುಂದಾಯಿತು. ಹೀಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜುಗಳನ್ನು ಸ್ಥಾಪಿಸುವ ಮತ್ತು ಅನುಮತಿ ನೀಡುವ ಸರ್ಕಾರಕ್ಕೆ ಅಲ್ಲಿನ ಗುಣಮಟ್ಟವನ್ನು ಕುಸಿಯದಂತೆ ನೋಡಿಕೊಳ್ಳುವ ಮಹತ್ವದ ಜವಾಬ್ದಾರಿಯೂ ಇದೆ. ಹೀಗೆ ಪ್ರಾಥಮಿಕ ಶಾಲೆಗಳಂತೆ ಊರಿಗೊಂದು ವೃತ್ತಿಪರ ಕಾಲೇಜುಗಳನ್ನು ಸ್ಥಾಪಿಸುವುದರಿಂದ ನಿರುದ್ಯೋಗ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು ಎನ್ನುವುದು ಮೂರ್ಖತನವಾಗುತ್ತದೆ. ಇವತ್ತು ಪ್ರವೇಶಕ್ಕೆ ವಿದ್ಯಾರ್ಥಿಗಳು ದೊರೆಯದಷ್ಟು ಸಂಖ್ಯೆಯಲ್ಲಿ ಇಂಜಿನಿಯರಿಂಗ್ ಕಾಲೇಜುಗಳು ರಾಜ್ಯದಲ್ಲಿವೆ. ಈ ವರ್ಷ ಪ್ರತಿಶತ 50 ರಷ್ಟು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಶೂನ್ಯವಾಗಿದೆ ಎಂದು ತಾಂತ್ರಿಕ ಶಿಕ್ಷಣ ಮಂಡಳಿಯೇ  ಹೇಳಿಕೊಂಡಿದೆ. ಐ.ಐ.ಟಿ ಮತ್ತು ಕೆಲವೇ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳನ್ನು ಹೊರತುಪಡಿಸಿದರೆ ಇನ್ನುಳಿದ ಕಾಲೇಜುಗಳಲ್ಲಿನ ಶಿಕ್ಷಣದ ಗುಣಮಟ್ಟ ಅಷ್ಟೊಂದು ಆಶಾದಾಯಕವಾಗಿಲ್ಲ. ಪರಿಣಾಮವಾಗಿ ಇಂಥ ವಿದ್ಯಾಲಯಗಳಿಂದ ಹೊರಬರುತ್ತಿರುವ ಇಂಜಿನಿಯರಿಂಗ್ ಪದವಿಧರರು ನಿರುದ್ಯೋಗದ ಭೀತಿಯನ್ನು ಎದುರಿಸುತ್ತಿರುವರು. 

ವೈದ್ಯಕೀಯ ಶಿಕ್ಷಣ

ಕೇಂದ್ರ ಸರ್ಕಾರ ವೈದ್ಯಕೀಯ ಶಿಕ್ಷಣದ ನೀತಿ ನಿಯಮಗಳನ್ನು ರೂಪಿಸುತ್ತಿದ್ದ ‘ಭಾರತೀಯ ವೈದ್ಯಕೀಯ ಮಂಡಳಿ’ಯನ್ನು 2018 ನೇ ವರ್ಷಕ್ಕೆ ಅನ್ವಯಿಸುವಂತೆ ವಿಸರ್ಜಿಸಿದೆ. ಇನ್ನು ಮುಂದೆ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಅನುಮತಿ ನೀಡುವುದು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಸುಪರ್ದಿಗೆ ಒಳಪಡಲಿದೆ. ವೈದ್ಯಕೀಯ ಶಿಕ್ಷಣವೆನ್ನುವುದು ಖಾಸಗಿ ಒಡೆತನಕ್ಕೆ ಒಳಪಟ್ಟು ಬಂಡವಾಳ ಹೂಡುವ ಉದ್ದಿಮೆಯಾಗುವುದನ್ನು ತಪ್ಪಿಸಲು ಭಾರತ ರತ್ನ ಡಾ.ಬಿ.ಸಿ.ರಾಯ್  ಅವರ ಮಾರ್ಗದರ್ಶನದಲ್ಲಿ 1939 ರಲ್ಲಿ ‘ಭಾರತೀಯ ವೈದ್ಯಕೀಯ ಮಂಡಳಿ’ಯನ್ನು ಸ್ಥಾಪಿಸಲಾಯಿತು.   ಭಾರತೀಯ ವೈದ್ಯಕೀಯ ಮಂಡಳಿ ವೈದ್ಯಕೀಯ ಶಿಕ್ಷಣದ ಉದ್ದೇಶಗಳನ್ನು ರೂಪಿಸಿದೆ. ಆ ಉದ್ದೇಶಗಳು ಹೀಗಿವೆ;
1. ವೈದ್ಯಕೀಯ ಶಿಕ್ಷಣವು ರಾಷ್ಟ್ರೀಯ ಆರೋಗ್ಯ ಜಾಗೃತಾ ಸಮಿತಿಯ ಶಿಫಾರಸ್ಸುಗಳನ್ನು ಅನುಷ್ಟಾನಕ್ಕೆ ತರಲು ಪ್ರಯತ್ನಿಸುವುದು.
2. ವೈದ್ಯಕೀಯ ಶಿಕ್ಷಣದ ಮೇಲೆ ರಾಷ್ಟ್ರ ಮತ್ತು ಜನರು ಇಟ್ಟಿರುವ ನಿರೀಕ್ಷೆಗಳನ್ನು ಸಾಕಾರಗೊಳಿಸುವುದು.
3. ವೈದ್ಯನಾದವನಲ್ಲಿ ತನ್ನ ವೃತ್ತಿಯ ಹೊರತಾಗಿಯೂ ಆದಾಯದ ಮೂಲವನ್ನು ಕಂಡು ಕೊಂಡು ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸುವ ಸಾಮಥ್ರ್ಯವನ್ನು ಬೆಳೆಸುವುದು.
ಹೀಗೆ ಒಂದು ಘನ ಉದ್ದೇಶದೊಂದಿಗೆ ಅಸ್ತಿತ್ವಕ್ಕೆ ಬಂದ ಭಾರತೀಯ ವೈದ್ಯಕೀಯ ಮಂಡಳಿಯು ಕಾಲಕ್ರಮೇಣ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸ್ಥಿತಿಗೆ ಬಂದು ನಿಂತಿತು. ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ಕೂಡಿಯೇ  ಹಣಮಾಡುವ ದಂಧೆಗಿಳಿದರು. ಒಂದೆಡೆ ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಕಾಪಾಡುವ ಮಾತನಾಡುತ್ತ ಇನ್ನೊಂದೆಡೆ ಸೌಲಭ್ಯಗಳ ಕೊರತೆಯ ನಡುವೆಯೂ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಅನುಮತಿ ನೀಡುತ್ತ ಬಂದಿದ್ದು ವಿಪರ್ಯಾಸ. ವೈದ್ಯಕೀಯ ಶಿಕ್ಷಣದಂಥ ವೃತ್ತಿಪರ ಶಿಕ್ಷಣವನ್ನು ಬಂಡವಾಳದಾರರ ಕುಟುಂಬದ ಕಸುಬಾಗಿಸುವುದನ್ನು ತಪ್ಪಿಸಬೇಕಿದ್ದ ಮಂಡಳಿಯೇ  ವೈದ್ಯಕೀಯ ಶಿಕ್ಷಣದ ಮೇಲೆ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡತೊಡಗಿತು. ಪರಿಣಾಮವಾಗಿ ನೂರಾರು ಕೊರತೆಗಳ ನಡುವೆಯೂ ಅಸ್ಥಿತ್ವಕ್ಕೆ ಬಂದ ವೈದ್ಯಕೀಯ ಕಾಲೇಜುಗಳಿಂದಾಗಿ ಇವತ್ತು ಶಿಕ್ಷಣದ ಗುಣಮಟ್ಟ ಗಮನಾರ್ಹವಾಗಿ ಕುಸಿದಿದೆ. ಈ ಸಂದರ್ಭ ಭಾರತೀಯ ವೈದ್ಯಕೀಯ ಮಂಡಳಿಯನ್ನು ವಿಸರ್ಜಿಸಿದ ಸರ್ಕಾರದ ನಡೆ ಮೆಚ್ಚುವಂತಹದ್ದು. ಆದರೆ ಮುಂದೊಂದು ದಿನ ಸರ್ಕಾರವೇ ವೈದ್ಯಕೀಯ ಶಿಕ್ಷಣದ ಅಧ:ಪತನಕ್ಕೆ ಕಾರಣವಾಗಲಾರದೆನ್ನುವ ಭರವಸೆ ಇಲ್ಲ. ವೈದ್ಯಕೀಯ ಕಾಲೇಜುಗಳ ಅನುಮತಿ ನೇರವಾಗಿ ಸರ್ಕಾರದ ನಿಯಂತ್ರಣಕ್ಕೆ ಒಳಪಡುವುದರಿಂದ ಇಲ್ಲಿ ಜಾತಿ, ವರ್ಗ, ಧರ್ಮ, ರಾಜಕೀಯ ಪಕ್ಷಗಳು ಮುನ್ನೆಲೆಗೆ ಬರುತ್ತವೆ. ವಿವಿಧ ಕೋಟಾದಡಿ ವೈದ್ಯಕೀಯ ಕಾಲೇಜುಗಳ ಅನುವ್ಮತಿಗೆ ಅವಕಾಶ ದೊರೆತು ಮುಂದೊಂದು ದಿನ ಈ ಹಿಂದಿನ ವೈದ್ಯಕೀಯ ಮಂಡಳಿಯನ್ನು ಮೀರಿಸಿದ ಅವ್ಯವಹಾರ ಕಾಣಿಸಿಕೊಳ್ಳುತ್ತದೆ. ವೈದ್ಯಕೀಯ ಕಾಲೇಜುಗಳೇನೋ ಸಂಖ್ಯೆಯಲ್ಲಿ ವೃದ್ಧಿಸಬಹುದು ಆದರೆ ಶಿಕ್ಷಣದ ಗುಣಮಟ್ಟ ಕುಸಿಯುವುದು ನಿಶ್ಚಿತ.

ಡೀಮ್ಡ್ ವಿಶ್ವವಿದ್ಯಾಲಯಗಳು

ದೇಶದಲ್ಲಿ ವಿಶ್ವವಿದ್ಯಾಲಯಗಳ ಸಂಖ್ಯೆಯನ್ನು ಹೆಚ್ಚಿಸುವ ದೃಷ್ಠಿಯಿಂದ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವಿಶ್ವವಿದ್ಯಾಲಯದ ಸ್ಥಾನ ಮಾನವನ್ನು ನೀಡುವ ನಿರ್ಧಾರ ಕೈಗೊಂಡಿತು. ಪರಿಣಾಮವಾಗಿ ಖಾಸಗಿ ಕಾಲೇಜುಗಳು ವಿಶ್ವವಿದ್ಯಾಲಯ ಎನ್ನುವ ಹಣೆಪಟ್ಟಿ ಹಚ್ಚಿಕೊಳ್ಳಲಾರಂಭಿಸಿವೆ. ಖಾಸಗಿ ಕಾಲೇಜುಗಳು ವಿಶ್ವವಿದ್ಯಾಲಯದ ಸ್ಥಾನಮಾನ ಪಡೆಯುತ್ತಿದ್ದಂತೆ ಶಿಕ್ಷಣ ಮತ್ತಷ್ಟು ದುಬಾರಿಯಾಗತೊಡಗಿತು ಮತ್ತು ಶಿಕ್ಷಣದಲ್ಲಿನ ಗುಣಾತ್ಮಕತೆ ಕುಸಿಯತೊಡಗಿತು. ಯಾವಾಗ ಖಾಸಗಿ ಶಿಕ್ಷಣ ಸಂಸ್ಥೆಯೊಂದು ಡೀಮ್ಡ್ ವಿಶ್ವವಿದ್ಯಾಲಯದ ಗೌರವಕ್ಕೆ ಪಾತ್ರವಾಗುತ್ತದೆಯೋ ಆಗ ಅದು ತನ್ನ ಮೊದಲಿನ ವಿಶ್ವವಿದ್ಯಾಲಯದಿಂದ ಹೊರಬಂದು ತನ್ನದೇ ಪ್ರತ್ಯೇಕ ನೀತಿ ನಿಯಮಗಳನ್ನು ರೂಪಿಸಿಕೊಳ್ಳುತ್ತದೆ. ಪ್ರವೇಶ, ಬೋಧನೆ, ಪರೀಕ್ಷೆ, ಮೌಲ್ಯಮಾಪನ, ಫಲಿತಾಂಶ ಎಲ್ಲವೂ ಆ ಸಂಸ್ಥೆಯ ಸುಪರ್ದಿಯಲ್ಲೇ ನಡೆಯುತ್ತವೆ. ಯಾವ ಡೀಮ್ಡ್ ವಿಶ್ವವಿದ್ಯಾಲಯವು ತನ್ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅನುತ್ತೀರ್ಣರಾಗುವುದನ್ನು ಬಯಸಲಾರದು. ಆದ್ದರಿಂದ ಇಲ್ಲಿ ಒಬ್ಬ ಸಾಮಾನ್ಯ ವಿದ್ಯಾರ್ಥಿಯೂ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣನಾಗುವನು. ಒಂದು ರೀತಿಯಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯಲು ಈ ಡೀಮ್ಡ್ ವಿಶ್ವವಿದ್ಯಾಲಯಗಳು ಕಾರಣವಾಗುತ್ತಿವೆ. ಹೀಗೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಡೀಮ್ಡ್ ವಿಶ್ವವಿದ್ಯಾಲಯದ ಸ್ಥಾನಮಾನ ನೀಡುವುದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಉದಾಹರಣೆಗೆ 150 ದಾಖಲಾತಿ ಸೌಲಭ್ಯವಿರುವ ಖಾಸಗಿ ವೈದ್ಯಕೀಯ ಕಾಲೇಜೊಂದು ಡೀಮ್ಡ್ ವಿಶ್ವವಿದ್ಯಾಲಯದ ಮಾನ್ಯತೆ ಪಡೆದರೆ ಆಗ ಸರ್ಕಾರಕ್ಕೆ 60 ವೈದ್ಯಕೀಯ ಸೀಟುಗಳ ಕೊರತೆ ಉಂಟಾಗುತ್ತದೆ. ಅಂದರೆ 60 ಪ್ರತಿಭಾವಂತ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗಬೇಕಾಗುತ್ತದೆ. ವಿದ್ಯಾರ್ಥಿಗಳು ಡೀಮ್ಡ್ ವಿಶ್ವವಿದ್ಯಾಲಯದ ಪರಿಕಲ್ಪನೆಯನ್ನು ಸಂಪೂರ್ಣವಾಗಿ ವಿರೋಧಿಸಲು ಇಂಥದ್ದೊಂದು ಅನ್ಯಾಯವೇ ಬಹುಮುಖ್ಯ ಕಾರಣ. 

ಮುಕ್ತ ವಿಶ್ವವಿದ್ಯಾಲಯಗಳು

ಭಾರತದಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಸ್ಥಾಪನೆಯೊಂದಿಗೆ ಅಂಚೆ ಮೂಲಕ ಪಡೆಯುವ ಶಿಕ್ಷಣಕ್ಕೆ ಅಡಿಪಾಯ ಹಾಕಲಾಯಿತು. ಸಾಮಾನ್ಯವಾಗಿ ಉನ್ನತ ಶಿಕ್ಷಣದಿಂದ ವಂಚಿತರಾದವರಿಗೆ ಈ ಒಂದು ಪದ್ಧತಿ ವರದಾನವಾಯಿತು. ನೌಕರ ವರ್ಗದವರು ಮಾತ್ರವಲ್ಲದೆ ಗೃಹಿಣಿಯರು ಕೂಡ ಈ ಮುಕ್ತ ವಿಶ್ವವಿದ್ಯಾಲಯಗಳ ಮೂಲಕ ಶಿಕ್ಷಣ ಪಡೆಯತೊಡಗಿದರು. ಈ ವಿಶ್ವವಿದ್ಯಾಲಯಗಳಲ್ಲಿ ಹಾಜರಾತಿಯ ಅವಶ್ಯಕತೆ ಇಲ್ಲದೆ ಪರೀಕ್ಷೆಗೆ ಮಾತ್ರ ಹಾಜರಾಗುವ ವ್ಯವಸ್ಥೆ ಇರುವುದರಿಂದ ಅನೇಕರಿಗೆ ಇದು ಅನುಕೂಲವಾಗಿ ಪರಿಣಮಿಸಿತು. ಪ್ರಾರಂಭದಲ್ಲಿ ವಿದ್ಯಾಕಾಂಕ್ಷಿಗಳ ನೆಲೆಯಾದ ಮುಕ್ತ ವಿಶ್ವವಿದ್ಯಾಲಯಗಳು ನಂತರದ ದಿನಗಳಲ್ಲಿ ಯಾರೂ ಊಹಿಸದ ರೀತಿಯಲ್ಲಿ ಬದಲಾಗತೊಡಗಿದವು. ನೌಕರಿ ಮತ್ತು ಬಡ್ತಿಗಾಗಿ ಅಗತ್ಯವಾದ ಪ್ರಮಾಣ ಪತ್ರಗಳನ್ನು ಮುಕ್ತ ವಿಶ್ವವಿದ್ಯಾಲಯಗಳಿಂದ ಸುಲಭವಾಗಿ ಪಡೆಯಬಹುದೆನ್ನುವ ಯೋಚನೆ ವಿದ್ಯಾರ್ಥಿಗಳಲ್ಲಿ ಮೂಡಿದಾಗ ಅದಕ್ಕೆ ತಕ್ಕಂತೆ ವಿಶ್ವವಿದ್ಯಾಲಯಗಳೂ ವರ್ತಿಸತೊಡಗಿದವು. ಆರಂಭದಲ್ಲಿ ಕೆಲವೇ ವಿಷಯಗಳಿಗೆ ಸೀಮಿತವಾಗಿದ್ದ ಶಿಕ್ಷಣ ನಂತರ ಅನೇಕ ವಿಷಯಗಳಿಗೆ ವಿಸ್ತರಿಸಿತು. ಪ್ರಾಯೋಗಿಕವಾಗಿ ಕಲಿಯಬೇಕಾದ ವಿಷಯಗಳ ಅಧ್ಯಯನಕ್ಕೂ ಮುಕ್ತ ವಿಶ್ವವಿದ್ಯಾಲಯಗಳಲ್ಲಿ ಅವಕಾಶವಿರುವುದು ಶಿಕ್ಷಣ ಕ್ಷೇತ್ರದ ಬಹುದೊಡ್ಡ ದುರಂತ. ಪ್ರವೇಶ ಪಡೆದ ಆರು ತಿಂಗಳಲ್ಲೇ ಅಂಕಪಟ್ಟಿ ಕೊಡುವ ಈ ವಿಶ್ವವಿದ್ಯಾಲಯಗಳಲ್ಲಿ ಪ್ರಮಾಣ ಪತ್ರಗಳು ಮಾರಾಟವಾಗುತ್ತಿವೆ. ಕೆಲವು ವರ್ಷಗಳ ಹಿಂದೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಯುಜಿಸಿ ವೇತನ ಶ್ರೇಣಿಯ ಅಧ್ಯಾಪಕರ ನೇಮಕಾತಿಗಾಗಿ ಎಂ.ಫಿಲ್ ಪದವಿಯನ್ನು ನಿಗದಿಪಡಿಸಿತು. ಆಗ ಪ್ರಾರಂಭವಾಯಿತು ನೋಡಿ ಮುಕ್ತ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶದ ನೂಕು ನುಗ್ಗಲು. ವಿಶ್ವವಿದ್ಯಾಲಯಗಳು ಪದವಿ ನೀಡಿ ಕೃತಾರ್ಥವಾದರೆ ಪ್ರಮಾಣ ಪತ್ರ ಪಡೆದವರು ಧನ್ಯರಾದರು. ಬೆಚ್ಚಿ ಬಿದ್ದ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ನೇಮಕಾತಿಗಾಗಿ ನಿಗದಿಪಡಿಸಿದ ಎಂ.ಫಿಲ್ ಅರ್ಹತೆಯನ್ನೇ ರದ್ದುಗೊಳಿಸಬೇಕಾಯಿತು. ಒಟ್ಟಾರೆ ಶಿಕ್ಷಣ ಕ್ಷೇತ್ರವನ್ನು ಅತ್ಯಂತ ಹೀನ ಸ್ಥಿತಿಗೆ ತಂದು ನಿಲ್ಲಿಸಿದ ಕೀರ್ತಿ ಮುಕ್ತ ವಿಶ್ವವಿದ್ಯಾಲಯಗಳಿಗೆ ಸಲ್ಲಬೇಕು. 

-ರಾಜಕುಮಾರ. ವ್ಹಿ . ಕುಲಕರ್ಣಿ (ಕುಮಸಿ), ಬಾಗಲಕೋಟೆ 


Monday, July 1, 2019

ಸಿನಿಮಾಗಳಲ್ಲಿ ಅಮ್ಮ

          






           ‘ಮೇರಾ ಪಾಸ್ ಗಾಡಿ ಹೈ, ಬಂಗ್ಲಾ ಹೈ, ದೌಲತ್ ಹೈ. ತೇರಾ ಪಾಸ್ ಕ್ಯಾ ಹೈ’ ಅಮಿತಾಬ ಬಚ್ಚನ್‍ನ ತಣ್ಣನೆಯ ಕ್ರೌರ್ಯ ತುಂಬಿದ ಪ್ರಶ್ನೆಗೆ ಶಶಿಕಪೂರ್ ಎದೆಯುಬ್ಬಿಸಿ ಅಭಿಮಾನದಿಂದ ಉತ್ತರಿಸುತ್ತಾನೆ ‘ಮೇರಾ ಪಾಸ್ ಮಾ ಹೈ’. ಆಗ ಇಡೀ ಸಿನಿಮಾ ಮಂದಿರದ ತುಂಬ ಕಿವಿಗಡಚಿಕ್ಕುವ ಚಪ್ಪಾಳೆಯ ಶಬ್ದ ಮೊಳಗುತ್ತದೆ. 1980 ರ ದಶಕದ ಹಿಂದಿ ಸಿನಿಮಾವೊಂದರ ಈ ಸಂಭಾಷಣೆ ಅಂದಿನ ಸಿನಿಮಾ ಪ್ರೇಕ್ಷಕರ ನೆನಪಿನಂಗಳದಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿದೆ. ನಾಯಕ, ನಾಯಕಿಯರೆ ಪ್ರಧಾನ ಭೂಮಿಕೆಯಲ್ಲಿರುವ ಭಾರತೀಯ ಚಿತ್ರರಂಗದ ಸಿನಿಮಾಗಳಲ್ಲಿ ಆಗಾಗ ತಾಯಿ ಪ್ರಧಾನ ಸಿನಿಮಾಗಳೂ ತೆರೆಕಂಡು ಜನಪ್ರಿಯವಾಗಿವೆ. ಕನ್ನಡ ಸಿನಿಮಾ ರಂಗದಲ್ಲಿ ರಾಜಕುಮಾರ ಅವರಿಂದ ಇಂದಿನ ಯುವ ನಾಯಕ ನಟರವರೆಗೆ ಪ್ರತಿಯೊಬ್ಬರು ತಮ್ಮ ವೃತ್ತಿ ಬದುಕಿನಲ್ಲಿ ಒಂದಲ್ಲ ಒಂದು ಸಂದರ್ಭ ಮಾತೃ ಪ್ರಧಾನ ಸಿನಿಮಾಗಳಲ್ಲಿ ಅಭಿನಯಿಸಿದ ಅನೇಕ ಉದಾಹರಣೆಗಳಿವೆ. 

ನ್ನಡ ಸಿನಿಮಾರಂಗದಲ್ಲಿ ತಾಯಿ ಪ್ರಧಾನ ಸಿನಿಮಾಗಳ ಕುರಿತು ಚರ್ಚಿಸುವಾಗ ಪಂಢರಿಬಾಯಿ ಅವರ ಹೆಸರು ಮುಂಚೂಣಿಯಲ್ಲಿ ಬರುತ್ತದೆ. ಕನ್ನಡ ಸಿನಿಮಾ ಮಾಧ್ಯಮದಲ್ಲಿ ದೀರ್ಘಕಾಲ ಅಮ್ಮನ ಪಾತ್ರದಲ್ಲಿ ಅಭಿನಯಿಸಿದ ಹೆಗ್ಗಳಿಕೆ ಅವರದು. ಒಂದುಕಾಲದಲ್ಲಿ ನಾಯಕ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪಂಢರಿಬಾಯಿ ಜನಮಾನಸದಲ್ಲಿ ಶಾಶ್ವತವಾಗಿ ನೆಲೆ ನಿಂತಿದ್ದು ತಮ್ಮ ತಾಯಿ ಪಾತ್ರದ ಅಭಿನಯದ ಮೂಲಕವೇ. ರಾಜಕುಮಾರ ಅವರೊಂದಿಗೆ ನಾಯಕಿಯಾಗಿ ಅಭಿನಯಿಸಿದ ಪಂಢರಿಬಾಯಿ ಕಾಲಾನಂತರದಲ್ಲಿ ಅದೇ ರಾಜಕುಮಾರ ಅವರಿಗೆ ತಾಯಿಯಾಗಿ ಅಭಿನಯಿಸ ಬೇಕಾಗಿಬಂದದ್ದು ಸಿನಿಮಾ ಮಾಧ್ಯಮದಲ್ಲಿ ಮಹಿಳಾ ಕಲಾವಿದರ ವೃತ್ತಿ ಬದುಕಿನ ಅನಿಶ್ಚಿತತೆಗೊಂದು ದೃಷ್ಟಾಂತ. ರಾಜಕುಮಾರ ಮಾತ್ರವಲ್ಲದೆ ವಿಷ್ಣುವರ್ಧನ್ ಅವರ ಸಮಕಾಲಿನ ಎಲ್ಲ ನಾಯಕ ನಟರಿಗೆ ಅಮ್ಮನಾಗಿ ಅಭಿನಯಿಸಿದ ಈ ಕಲಾವಿದೆ ತಮ್ಮ ಅಭಿನಯದ ಮೂಲಕ ತಾಯಿ ಪಾತ್ರಕ್ಕೊಂದು ವಿಶಿಷ್ಠ ಮೆರುಗು ನೀಡಿದ್ದು ಕನ್ನಡ ಸಿನಿಮಾ ರಂಗದ ಮಹತ್ವಗಳಲ್ಲೊಂದು. 

ಲೀಲಾವತಿ, ಸಾಹುಕಾರ್ ಜಾನಕಿ, ಆದವಾನಿ ಲಕ್ಷ್ಮಿದೇವಮ್ಮ, ಶಾಂತಮ್ಮ ಇತ್ಯಾದಿ ಕಲಾವಿದೆಯರು ಕೂಡ ಕನ್ನಡ ಸಿನಿಮಾರಂಗದಲ್ಲಿ ಅಮ್ಮನ ಪಾತ್ರದಲ್ಲಿ ಅಭಿನಯಿಸಿ ತಮ್ಮದೇ ಛಾಪು ಮೂಡಿಸಿರುವರು. ಲೀಲಾವತಿ ಕೂಡ ಒಂದು ಕಾಲದಲ್ಲಿ ರಾಜಕುಮಾರ ಹಾಗೂ ಅವರ ಸಮಕಾಲಿನ ಕಲಾವಿದರೊಂದಿಗೆ ನಾಯಕಿಯಾಗಿ ಅಭಿನಯಿಸಿ ಜನಪ್ರಿಯ ತಾರೆಯಾಗಿ ಗುರುತಿಸಿಕೊಂಡವರು. ರಾಜಕುಮಾರ ಮತ್ತು ಲೀಲಾವತಿ ಅವರದು ಅತ್ಯಂತ ಜನಪ್ರಿಯ ಜೋಡಿ ಎಂದೇ ಹೆಸರಾಗಿತ್ತು. ಕಾಲಕ್ರಮೇಣ ಭಾರತಿ, ಜಯಂತಿ, ಲಕ್ಷ್ಮಿ, ಆರತಿ, ಮಂಜುಳಾ ಅವರ ಆಗಮನದಿಂದ ಅತ್ತೆ, ಅಮ್ಮನ ಇತ್ಯಾದಿ ಪೋಷಕ  ಪಾತ್ರಗಳಿಗೆ ಬಡ್ತಿ ಪಡೆದ ಲೀಲಾವತಿ ನಂತರದ ದಿನಗಳಲ್ಲಿ ಹಲವಾರು ಸಿನಿಮಾಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ತಾಯಿ ಪಾತ್ರಕ್ಕೆ ಜೀವ ತುಂಬಿದರು. ಒಂದು ಕಾಲದಲ್ಲಿ ತಮ್ಮ ಆಗಮನದಿಂದ ಹಿರಿಯ ನಾಯಕಿ ನಟಿಯರಿಗೆ ಪೋಷಕ  ಪಾತ್ರಗಳೆಡೆ ವಲಸೆ ಹೋಗುವಂತ ಸನ್ನಿವೇಶ ಸೃಷ್ಟಿಸಿದ್ದ ಭಾರತಿ, ಜಯಂತಿ, ಲಕ್ಷ್ಮಿ, ಜಯಮಾಲ, ಬಿ.ಸರೋಜಾದೇವಿ ಮುಂದೊಂದು ದಿನ ತಾವು ಕೂಡ ತಾಯಿಯ ಪಾತ್ರದಲ್ಲಿ ಅಭಿನಯಿಸಬೇಕಾದ ಅನಿವಾರ್ಯತೆ ಎದುರಾಯಿತು. ಸಿನಿಮಾ ಮಾಧ್ಯಮವೆ ಹಾಗೆ ಸದಾಕಾಲ ಅನಿಶ್ಚಿತತೆಯ ನಡುವೆ ತೂಗುಯ್ಯಾಲೆಯಾಡುವ ಬದುಕದು. ಕಲಾವಿದೆಯೋರ್ವಳು ದೀರ್ಘಕಾಲ ಇಲ್ಲಿ ನಾಯಕಿ ನಟಿಯಾಗಿ ನೆಲೆ ನಿಂತ ಉದಾಹರಣೆಗಳಿಲ್ಲ. ನಾಯಕಿಯನ್ನು ಕಾಮ ಮತ್ತು ಶೃಂಗಾರದ ಹಿನ್ನೆಲೆಯಲ್ಲೇ ಚಿತ್ರಿಸಲು ಬಯಸುವ ಸಿನಿಮಾ ಮಾಧ್ಯಮ ಯುವ ಕಲಾವಿದೆಯರಿಗೆ ಮಣೆಹಾಕಲು ಹಾತೊರೆಯುತ್ತದೆ. ವಯಸ್ಸು ಮತ್ತು ದೇಹ ಸೌಂದರ್ಯವಿರುವವರೆಗೆ ಮಾತ್ರ ಇಲ್ಲಿ ಕಲಾವಿದೆ ನಾಯಕಿ ನಟಿಯಾಗಿ ಚಲಾವಣೆಯಲ್ಲಿರಲು ಸಾಧ್ಯ. ದೇಹದ ಸೌಂದರ್ಯ ಮಾಸಿದಂತೆ ಕಲಾವಿದೆ ನೇಪಥ್ಯಕ್ಕೆ ಸರಿಯುವುದು ಅನಿವಾರ್ಯವಾಗಿರುವ ಸಿನಿಮಾ ಮಾಧ್ಯಮದಲ್ಲಿ ಅನೇಕ ಕಲಾವಿದೆಯರು ಪೋಷಕ  ಪಾತ್ರಗಳಿಗೆ ಜೀವ ತುಂಬಿ ನಾಯಕಿಗೆ ಸಮನಾದ ಪಾತ್ರಗಳಲ್ಲಿ ಅಭಿನಯಿಸುತ್ತಿರುವರು. ಒಂದುಕಾಲದಲ್ಲಿ ದ್ವಂದ್ವಾರ್ಥ ಸಂಭಾಷಣೆ ಹೇಳುವ ಗಯ್ಯಾಳಿ ಪಾತ್ರಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿದ್ದ ಉಮಾಶ್ರೀ ವಯಸ್ಸಾದಂತೆ ಪೋಷಕ  ಪಾತ್ರಗಳಿಗೆ ಬಡ್ತಿ ಪಡೆದು ‘ಪುಟ್ನಂಜ’, ‘ದಿಗ್ಗಜರು’, ‘ವೀರಪ್ಪ ನಾಯ್ಕ’ ಸಿನಿಮಾಗಳಲ್ಲಿ ಅಮ್ಮನ ಪಾತ್ರದಲ್ಲಿ ಅವಿಸ್ಮರಣೀಯ ಅಭಿನಯ ನೀಡಿದರು. 

ಕನ್ನಡ ಸಿನಿಮಾಗಳಲ್ಲಿ ತಾಯಿಯನ್ನು ತ್ಯಾಗ ಮತ್ತು ಸಹನಾ ಮೂರ್ತಿಯಾಗಿ ಬಿಂಬಿಸಿದ್ದೇ ಹೆಚ್ಚು. ಕುಟುಂಬದ ಆಧಾರ ಸ್ತಂಬವಾಗಿ ಪತಿ, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳೊಂದಿಗೆ ಏಗುತ್ತ ಸಂಸಾರದ ನೌಕೆಯನ್ನು ದಡಕ್ಕೆ ಮುಟ್ಟಿಸುವ ಅಮ್ಮನ ಪಾತ್ರದಲ್ಲಿ ಅನೇಕ ಕಲಾವಿದೆಯರು ಸಶಕ್ತವಾಗಿ ಅಭಿನಯಿಸಿ ಪಾತ್ರಗಳಿಗೆ ಜೀವಕಳೆ ತುಂಬಿರುವರು. ಮಗಳನ್ನು ಸಮಾಜದ ಕ್ರೂರ ದೃಷ್ಟಿಯಿಂದ ರಕ್ಷಿಸಿ ಅವಳಿಗೊಂದು ನೆಮ್ಮದಿಯ ಬದುಕನ್ನು ಕಟ್ಟಿಕೊಡಲು ಪ್ರಯತ್ನಿಸುವ ತಾಯಿಯಾಗಿ ‘ಹೂವು ಹಣ್ಣು’ ಸಿನಿಮಾದಲ್ಲಿ ಲಕ್ಷ್ಮಿ ಅವರದು ಮನೋಜ್ಞ ಅಭಿನಯ. ಪತಿ ಮತ್ತು ಮಕ್ಕಳ ಹೋರಾಟದ ನಡುವೆ ಮೂಕವೇದನೆ ಅನುಭವಿಸುತ್ತ ನಲುಗುವ ತಾಯಿಯ ಪಾತ್ರ ‘ಪ್ರೀತಿ ವಾತ್ಸಲ್ಯ’, ‘ಭಾಗ್ಯವಂತರು’, ‘ಲಯನ್ ಜಗಪತಿರಾವ್’ ಇತ್ಯಾದಿ ಸಿನಿಮಾಗಳಲ್ಲಿ ಮೂಡಿ ಬಂದಿದೆ. ಒಂದೆಡೆ ಕನೂನು ರಕ್ಷಿಸುವ ಪತಿ ಇನ್ನೊಂದೆಡೆ ಸಮಾಜ ಕಂಟಕ ಮಗ ಇವರಿಬ್ಬರ ನಡುವೆ ಪತ್ನಿ ಮತ್ತು ತಾಯಿಯಾಗಿ ಕಾಂಚನಾ ಅವರದು ‘ನಾನೊಬ್ಬ ಕಳ್ಳ’ ಸಿನಿಮಾದಲ್ಲಿ ಬಹುಕಾಲ ನೆನಪಿನಲ್ಲುಳಿಯುವ ಅಭಿನಯ. 

ತ್ಯಾಗ ಮತ್ತು ಸಹನೆಗೆ ವಿರುದ್ಧವಾಗಿ ತನ್ನ ಮಕ್ಕಳ ಮೂಲಕ ಪ್ರತಿಕಾರ ತೀರಿಸಿಕೊಳ್ಳುವ ತಾಯಿ ಪಾತ್ರ ಹಲವು ಸಂದರ್ಭಗಳಲ್ಲಿ ಸಿನಿಮಾ ಪರದೆಯ ಮೇಲೆ ಕಾಣಿಸಿಕೊಂಡಿದೆ. ತನ್ನ ಪತಿಯಿಂದಾದ ಅನ್ಯಾಯಕ್ಕೆ ಮಗನ ಮೂಲಕ ಪ್ರತಿಕಾರ ತೀರಿಸಿಕೊಳ್ಳುವ ಪಾತ್ರದಲ್ಲಿ ಜಯಂತಿ ಅಭಿನಯಿಸಿದ ‘ಆನಂದ’, ಊರ ಜಮೀನ್ದಾರನನ್ನು ಮಗನಿಂದ ಸದೆಬಡಿದು ಸೇಡು ತೀರಿಸಿಕೊಳ್ಳುವ ಅಮ್ಮನಾಗಿ ಭಾರತಿ ಅಭಿನಯಿಸಿದ ‘ದೊರೆ’ ಈ ಸಿನಿಮಾಗಳು ಅಮ್ಮನ ಹೋರಾಟದ ಮುಖವನ್ನು ಪರಿಚಯಿಸಿದವು. ಸಂದರ್ಭದ ಸುಳಿಗೆ ಸಿಲುಕಿ ರೌಡಿಯಾದ ಮಗನನ್ನು ತಾಯಿಯೇ  ವಿಷ ಹಾಕಿ ಕೊಲ್ಲಲು ಪ್ರಯತ್ನಿಸುವ ‘ವಂಶಿ’ ಸಿನಿಮಾದ ಮೂಲಕ ಕನ್ನಡ ಸಿನಿಮಾ ಮಾಧ್ಯಮದಲ್ಲಿ ಅಮ್ಮನನ್ನು ಹೊಸ ಪರಿವೇಷದಲ್ಲಿ ನೋಡುವಂತಾಯಿತು. ಕಾಶಿನಾಥ ಅಭಿನಯದ ಅನೇಕ ಸಿನಿಮಾಗಳಲ್ಲಿ ತಾಯಿಯ ಪಾತ್ರವನ್ನು ಹಾಸ್ಯದ ಹಿನ್ನೆಲೆಯಲ್ಲಿ ಚಿತ್ರಿಸಲಾಗಿದೆ. ಇಲ್ಲಿ ವರದಕ್ಷಿಣೆಗಾಗಿ ಆಸೆ ಪಡುವ ಜೀಪುಣ ಹೆಣ್ಣಾಗಿ ತಾಯಿಯ ಇನ್ನೊಂದು ಮುಖ ಅನಾವರಣಗೊಂಡಿದೆ. 

ಕನ್ನಡ ಚಿತ್ರರಂಗದಲ್ಲಿ ತಾಯಿ ಪದಕ್ಕೆ ಹೆಚ್ಚಿನ ಮಹತ್ವ ನೀಡಿದ ನಿರ್ಮಾಪಕರಲ್ಲಿ ಅಬ್ಬಯ್ಯ ನಾಯ್ಡು ಮೊದಲಿಗರು. ಅವರ ಬ್ಯಾನರ್‍ನಲ್ಲಿ ನಿರ್ಮಾಣಗೊಂಡ ಬಹುತೇಕ ಸಿನಿಮಾಗಳ ಶೀರ್ಷಿಕೆಯಲ್ಲಿ ತಾಯಿ ಪದ ಹೆಚ್ಚು ಹೆಚ್ಚು ಬಳಕೆಯಾಗಿದೆ. ತಾಯವ್ವ, ತಾಯಿಯ ಆಸೆ, ತಾಯಿಗೊಬ್ಬ ಕರ್ಣ, ಭೂಮಿ ತಾಯಾಣೆ, ತಾಯಿಯ ಮಡಿಲಲ್ಲಿ, ತಾಯಿ ಕನಸು, ತಾಯಿಯ ಹೊಣೆ, ತಾಯಿಯ ನುಡಿ, ಮಾತೃ ಭೂಮಿ ಹೀಗೆ ತಾಯಿಯ ಮಹತ್ವವನ್ನು ಸಾರುವ ಹಲವಾರು ಸಿನಿಮಾಗಳನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆ ಅಬ್ಬಯ್ಯ ನಾಯ್ಡು ಅವರದು.  

ಗ್ಲಾಮರ್ ಅಮ್ಮ

ರಾಜಕುಮಾರ ಮತ್ತು ವಿಷ್ಣುವರ್ಧನ್ ಅವರ ಸಮಕಾಲಿನ ನಾಯಕ ನಟರ ಬಹುತೇಕ ಸಿನಿಮಾಗಳಲ್ಲಿ ಪಂಢರೀಬಾಯಿ, ಲೀಲಾವತಿ, ಶಾಂತಮ್ಮ, ಸಾಹುಕಾರ್ ಜಾನಕಿ ಶಾಶ್ವತ ಅಮ್ಮಂದಿರಾಗಿ ಅಭಿನಯಿಸಿದರು. ಆದರೆ ನಂತರದ ಯುವ ನಾಯಕ ನಟರ ಸಿನಿಮಾಗಳಲ್ಲಿ ತಾಯಿ ಪಾತ್ರದ ಅಭಿನಯಕ್ಕಾಗಿ ಕಲಾವಿದೆಯರ ಕೊರತೆ ಎದುರಾಯಿತು. ಈಗಾಗಲೇ ಅಮ್ಮನ ಪಾತ್ರದಲ್ಲಿ ತಮ್ಮ ವಿಶಿಷ್ಠ ಛಾಪು ಮೂಡಿಸಿದ್ದ ಹಿರಿಯ ಕಲಾವಿದೆಯರನ್ನು ಯುವ ಪೀಳಿಗೆಯ ನಾಯಕ ನಟರ ಸಿನಿಮಾಗಳಲ್ಲಿ ಅಮ್ಮಂದಿರಾಗಿ ತೋರಿಸಲು ಸಿನಿಮಾ ಮಾಧ್ಯಮ ಆಸಕ್ತಿ ತೋರಿಸಲಿಲ್ಲ. ರವಿಚಂದ್ರನ್ ಅಭಿನಯದ ‘ಯುದ್ಧಕಾಂಡ’ ಸಿನಿಮಾದಲ್ಲಿ ಭಾರತಿ ಅಮ್ಮನಾಗಿ ಅಭಿನಯಿಸುವುದರೊಂದಿಗೆ ಕನ್ನಡ ಚಿತ್ರರಂಗದಲ್ಲಿ ಅಮ್ಮನ ಪಾತ್ರಕ್ಕೆ ಗ್ಲಾಮರ್ ಕಳೆ ಬಂದಿತು. ಒಂದು ಕಾಲದಲ್ಲಿ ನಾಯಕ ನಟಿಯರಾಗಿದ್ದ ಜಯಂತಿ, ಭಾರತಿ, ಜಯಮಾಲ, ಲಕ್ಷ್ಮಿ ಯುವ ನಟ ನಟಿಯರ ಅಮ್ಮಂದಿರಾಗಿ ಅಭಿನಯಿಸುವುದರ ಮೂಲಕ ಗ್ಲಾಮರ್ ಅಮ್ಮಂದಿರಾಗಿ ಬಡ್ತಿ ಪಡೆದರು. 

ಕೇವಲ ನಾಯಕ ನಟಿ ಮಾತ್ರವಲ್ಲದೆ ತಾಯಿ ಪಾತ್ರಕ್ಕೂ ಬೇರೆ ಭಾಷೆಯ ಕಲಾವಿದೆಯರು ಕನ್ನಡ ಸಿನಿಮಾರಂಗಕ್ಕೆ ಆಮದಾದದ್ದು ಕನ್ನಡ ಸಿನಿಮಾ ಮಾಧ್ಯಮದ ಮಹತ್ವದ ಬೆಳವಣಿಗೆಗಳಲ್ಲೊಂದು. ಇಲ್ಲಿ ಕೂಡ ಗ್ಲಾಮರ್ ಅಂಶವೇ ಮುಖ್ಯ ಕಾರಣವಾಯಿತು. ಜಯಸುಧಾ, ರೋಜಾ ಇತ್ಯಾದಿ ಪರಭಾಷಾ ನಾಯಕಿಯರು ಕನ್ನಡದ ಸಿನಿಮಾಗಳಲ್ಲಿ ಅಮ್ಮನಾಗಿ ಅಭಿನಯಿಸಿದರು. ಅಣ್ಣಯ್ಯ ಸಿನಿಮಾದ ತಾಯಿ ಪಾತ್ರಕ್ಕಾಗಿ ಅದರ ಮೂಲ ಹಿಂದಿ ಸಿನಿಮಾದಲ್ಲಿ ಅಭಿನಯಿಸಿದ್ದ ಅರುಣಾ ಇರಾನಿ ಅವರನ್ನು ಕರೆ ತಂದದ್ದು ಸಿನಿಮಾದ ಯಶಸ್ಸಿಗೂ ಕಾರಣವಾಯಿತು. ಇದೇ ಸಿನಿಮಾದಲ್ಲಿ ನಾಯಕಿಯಾಗಿ ಮುದ್ದು ಮುದ್ದಾಗಿ ಕಾಣಿಸುತ್ತಿದ್ದ ನಟಿ ಮಧುಬಾಲ ಮುಂದೊಂದು ದಿನ ತಮ್ಮ ಗ್ಲಾಮರ್ ಕಾರಣದಿಂದಾಗಿಯೇ  ಅಮ್ಮನಾಗಿ ಅಭಿನಯಿಸುವ ಅವಕಾಶ ಪಡೆದರು. 

ಸಿನಿಮಾ ಹಾಡುಗಳಲ್ಲಿ ಅಮ್ಮ

ಕನ್ನಡ ಸಿನಿಮಾಗಳಲ್ಲಿ ಅಮ್ಮನ ಮಹತ್ವವನ್ನು ಸಾರುವ ಅನೇಕ ಹಾಡುಗಳು ರಚನೆಯಾಗಿವೆ. ‘ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು’, ‘ಅಮ್ಮ ಎಂದರೆ ಏನೋ ಹರುಷವು ನಮ್ಮ ಪಾಲಿಗೆ ಅವಳೆ ದೈವವು’, ‘ಅಮ್ಮ ನೀನು ನಮಗಾಗಿ’, ‘ಕೈ ತುತ್ತು ಕೊಟ್ಟವಳೆ ಮೈ ಮದರ್ ಇಂಡಿಯಾ’, ‘ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೆ’ ಹೀಗೆ ಹಲವಾರು ಸಿನಿಮಾ ಹಾಡುಗಳಲ್ಲಿ ತ್ಯಾಗ ಮತ್ತು ಸಹನಾ ಮೂರ್ತಿ ಅಮ್ಮ ಕಾಣಿಸಿಕೊಂಡಿದ್ದಾಳೆ. ‘ಅಲ್ಲೊಂದು ಲೋಕವುಂಟು ಇಲ್ಲೊಂದು ದಾರಿಯುಂಟು’ ಹಾಡಿನಲ್ಲಿ ಬಡತನದ ಬೆಗೆಯಲ್ಲಿ ನೊಂದ ಮಕ್ಕಳು ಅಗಲಿದ ಅಮ್ಮನ ಮಡಿಲು ಸೇರುವ ಕರುಣಾಜನಕ ಕಥೆಯಿದೆ. ಅನುರಾಗ ಅರಳಿತು ಚಿತ್ರದ ‘ಶ್ರೀಕಂಠ ವಿಷಕಂಠ’ ಹಾಡಿನಲ್ಲಿ ರಾಜಕುಮಾರ ಭಕ್ತಿ ಪರವಶರಾಗಿ ಅಮ್ಮನ ಸೇವೆ ಮಾಡುವ ದೃಶ್ಯ ಸಿನಿಮಾದ ಪ್ರಮುಖ ಭಾಗವಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಇದೇ ರಾಜಕುಮಾರ ಅವರ ಕಂಠಸಿರಿಯಲ್ಲಿ ಮೂಡಿಬಂದ ವಂಶಿ ಚಿತ್ರದ ‘ತಾಯಿ ತಾಯಿ ಲಾಲಿ ಹಾಡೋ ಭೂಮಿತಾಯಿಗೆ’ ಹಾಡಿನಲ್ಲಿ ಅಮ್ಮನಿಗೆ ಜೋಗುಳ ಹಾಡುವ ದೃಶ್ಯದಲ್ಲಿ ಲಕ್ಷ್ಮಿ ಮತ್ತು ಪುನಿತ್ ಅಭಿನಯ ಅತ್ಯಂತ ಹೃದಯಸ್ಪರ್ಷಿಯಾಗಿತ್ತು. ಜೋಗಿ ಚಿತ್ರದ ‘ಬೇಡುವೆನು ವರವನ್ನು ಕೊಡು ತಾಯೆ  ಜನ್ಮವನು’ ಮತ್ತು ಎಕ್ಸ್‍ಕ್ಯೂಜ್ ಮಿ ಸಿನಿಮಾದ ‘ಬೃಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೊ’ ಅಮ್ಮನ ಮಹತ್ವವನ್ನು ವಿವರಿಸುವ ಈ ಎರಡು ಸಿನಿಮಾ ಹಾಡುಗಳು ಇವತ್ತಿಗೂ ಜನಪ್ರಿಯ ಹಾಡುಗಳಾಗಿ ಜನಮನ್ನಣೆಗೆ ಪಾತ್ರವಾಗಿವೆ. ಈ ಎರಡೂ ಸಿನಿಮಾಗಳ ನಿರ್ದೇಶಕ ಪ್ರೇಮ ಎನ್ನುವುದು ಆ ನಿರ್ದೇಶಕನಿಗೆ ತಾಯಿ ಪಾತ್ರದ ಬಗೆಗಿರುವ ಗೌರವಕ್ಕೆ ಒಂದು ದೃಷ್ಟಾಂತ.  

ಸಾಹಿತ್ಯದಿಂದ ಸಿನಿಮಾಗೆ

ತಾಯಿ ಪ್ರಧಾನ ಕನ್ನಡದ ಕಾದಂಬರಿಗಳು ಸಿನಿಮಾಗಳಾಗಿ ಬೆಳ್ಳಿತೆರೆಯ ಮೇಲೆ ಮೂಡಿಬಂದಿವೆ. ಆದರೆ ಹೀಗೆ ನಿರ್ಮಾಣವಾದ ಚಿತ್ರಗಳ ಸಂಖ್ಯೆ ಕನ್ನಡದ ಸಿನಿಮಾ ಪ್ರೇಕ್ಷಕರು ಹೆಮ್ಮೆಪಡುವಷ್ಟೆನಿಲ್ಲ. ಒಟ್ಟಾರೆ ಕನ್ನಡ ಸಿನಿಮಾ ಮಾಧ್ಯಮದಲ್ಲಿ ಕಾದಂಬರಿ ಆಧಾರಿತ ಸಿನಿಮಾಗಳ ಸಂಖ್ಯೆ ಬಹಳಷ್ಟು ಕಡಿಮೆ. ಅದರಲ್ಲೂ ಕಾದಂಬರಿ ಆಧಾರಿತಿ ಸಿನಿಮಾಗಳಲ್ಲಿ ನಾಯಕ ಇಲ್ಲವೆ ನಾಯಕಿ ಪ್ರಧಾನ ಚಿತ್ರಗಳದೆ ಸಿಂಹಪಾಲು. ಜೊತೆಗೆ ಪೋಷಕ  ಕಲಾವಿದೆಯನ್ನು ಪ್ರಧಾನ ಭೂಮಿಕೆಯಲ್ಲಿ ಚಿತ್ರಿಸಿ ಸಿನಿಮಾ ಮಾಡಿ ಗೆಲ್ಲುವುದು ಅತ್ಯಂತ ಕಷ್ಟದ ಸಂಗತಿ. ಈ ಕಾರಣದಿಂದ ಎಲ್ಲೋ ಒಂದು ಕಡೆ ಅಭಿರುಚಿ ಇರುವ ನಿರ್ಮಾಪಕ ಮತ್ತು ನಿರ್ದೇಶಕರು ತಾಯಿ ಪ್ರಧಾನ ಕಾದಂಬರಿಗಳನ್ನು ಸಿನಿಮಾ ರೂಪದಲ್ಲಿ ಬೆಳ್ಳಿತೆರೆಗೆ ತಂದಿದ್ದುಂಟು. ಹೀಗೆ ನಿರ್ಮಾಣವಾದ ಸಿನಿಮಾಗಳಲ್ಲಿ ತಾಯಿಸಾಹೇಬ, ಗೆಜ್ಜೆಪೂಜೆ, ಹೂವು ಹಣ್ಣು, ಋಣಮುಕ್ತಳು ಪ್ರಮುಖವಾದವುಗಳು. ಲೀಲಾವತಿ ಅಭಿನಯದ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ 1980 ರಲ್ಲಿ ತೆರೆಕಂಡ ಗೆಜ್ಜೆಪೂಜೆ ಎಂ.ಕೆ.ಇಂದಿರಾರ ಅದೇ ಹೆಸರಿನ ಕಾದಂಬರಿ ಆಧಾರಿತ ಸಿನಿಮಾ. ವೈಶ್ಯೆಯಾದ ತಾಯಿ ತನ್ನ ಮಗಳು ತನ್ನಂತೆ ನೋವಿನ ಮತ್ತು ಬಹಿಷ್ಕೃತ ಬದುಕಿಗೆ ಪ್ರವೇಶಿಸುವುದನ್ನು ತಪ್ಪಿಸುವ ಅಮ್ಮನ ಪಾತ್ರದಲ್ಲಿ ಲೀಲಾವತಿ ಅವರ ಅಭಿನಯ ಹೃದಯಸ್ಪರ್ಷಿಯಾಗಿತ್ತು. ಹೂವುಹಣ್ಣು ಚಿತ್ರದಲ್ಲೂ ವೈಶ್ಯೆಯಾದ ತಾಯಿ ಮಗಳಿಗೆ ಸುಂದರ ಬಾಳನ್ನು ಕಟ್ಟಿಕೊಟ್ಟು ಮುಂದೊಂದು ದಿನ ಅದೇ ಮಗಳಿಂದ ಅವಮಾನಕ್ಕೆ ಒಳಗಾಗುವ ಕಥೆಯಿದೆ. ತಾಯಿ ಸಾಹೇಬ ಸಿನಿಮಾದಲ್ಲಿ ಬಾಳಾಸಾಹೇಬರ ಎರಡನೆ ಹೆಂಡತಿಯಾಗಿ ಬರುವ ನರ್ಮದೆ ಗಂಡನ ಸಾವಿನ ನಂತರ ಸವತಿಯ ಮಕ್ಕಳಿಗಾಗಿ ಇಡೀ ಜಗತ್ತನ್ನು ಎದುರುಹಾಕಿಕೊಳ್ಳುವ ಪಾತ್ರದಲ್ಲಿ ಜಯಮಾಲಾ ಅವರದು ಮನೋಜ್ಞ ಅಭಿನಯ. ಭಾರತಿ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಂಡ ಪುಟ್ಟಣ್ಣ ಕಣಗಾಲ ನಿರ್ದೇಶನದ ಋಣಮುಕ್ತಳು ಅನುಪಮ ನಿರಂಜನರ ತಾಯಿ ಪ್ರಧಾನ ಕಾದಂಬರಿ ಆಧಾರಿತ ಸಿನಿಮಾ. 

ಕನ್ನಡ ಸಿನಿಮಾಗಳಲ್ಲಿ ಅಮ್ಮ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಕ್ಕಿಂತ ಪೋಷಕ  ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೆ ಹೆಚ್ಚು. ಹಾಗೆ ನೋಡಿದಲ್ಲಿ ತಾಯಿ ಪ್ರಧಾನ ಪಾತ್ರದ ಸಿನಿಮಾಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಕುಟುಂಬದ ಸದಸ್ಯರೆಲ್ಲ ಒಟ್ಟಾಗಿ ಕುಳಿತು ನೋಡುವಂಥ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದ ರಾಜಕುಮಾರ ಮತ್ತು ವಿಷ್ಣುವರ್ಧನ್ ಅವರಂಥ ಕೆಲವೇ ಕಲಾವಿದರ ಸಿನಿಮಾಗಳಲ್ಲಿ ಮಾತ್ರ ತಾಯಿ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ. ಇನ್ನು ಕೆಲವು ನಟರ ಸಿನಿಮಾಗಳಲ್ಲಿ ತಾಯಿ ಪಾತ್ರವನ್ನು ಗಯ್ಯಾಳಿಯಾಗಿಯೋ ಇಲ್ಲವೆ ಸೊಸೆಯ ಜೀವ ಹಿಂಡುವ ದುಷ್ಟ ಅತ್ತೆಯಾಗಿಯೋ ಚಿತ್ರಿತವಾದ ಉದಾಹರಣೆ ಇದೆ. ಇತ್ತೀಚಿನ ದಿನಗಳಲ್ಲಿ ಹಣಗಳಿಕೆಯೇ  ಮುನ್ನೆಲೆಗೆ ಬರುತ್ತಿರುವುದರಿಂದ ನಾಯಕ ಪ್ರಧಾನ ಸಿನಿಮಾಗಳ ಅಬ್ಬರದ ನಡುವೆ ತಾಯಿ ಪಾತ್ರ ತನ್ನ ಮಹತ್ವವನ್ನು ಕಳೆದುಕೊಂಡು ಸಾಮಾನ್ಯ ಪೋಷಕ  ಪಾತ್ರದಂತೆ ಚಿತ್ರಿತವಾಗುತ್ತಿದೆ. 

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

    

Friday, May 31, 2019

ಅಪ್ಪಣ್ಣನ ಸಮಾಜವಾದ (ಕಥೆ)

    


       

            ಪ್ರತಿ ಎರಡು ತಿಂಗಳಿಗೊಮ್ಮೆ ರವಿವಾರದ ಬೆಳಗ್ಗೆ ಸಲೂನ್‍ಗೆ ಭೇಟಿ ನೀಡಿ ಕ್ಷೌರಕ್ಕೆ ತಲೆಯೊಡ್ಡಿ ಕೂಡುವುದು ಲಾಗಾಯ್ತಿನಿಂದಲೂ ನಾನು ಅನುಸರಿಸಿಕೊಂಡು ಬಂದ ಸಂಪ್ರದಾಯ. ಅದೇಕೋ ಗೊತ್ತಿಲ್ಲ ಮೊದಲಿನಿಂದಲೂ ಈ ಸಲೂನ್, ಟೇಲರ್, ಚಪ್ಪಲಿ ಅಂಗಡಿಗಳನ್ನು ಪದೆ ಪದೆ ಬದಲಿಸುವುದು ನನಗೊಂದುಥರ ಅಲರ್ಜಿ. ಹೀಗಾಗಿ ಈ ಕ್ಷೌರಿಕ, ದರ್ಜಿ, ಚಪ್ಪಲಿ ಮಾಡುವ ಮೋಚಿ ಇವರುಗಳೊಂದಿಗೆ ಪರಿಚಯ ಬೆಳೆದು ಅವರು ನನಗೆ ರಸ್ತೆಯಲ್ಲಿ ಎದುರಾದಾಗಲೆಲ್ಲ ನಮಸ್ಕಾರ ಹೇಳುವುದು, ಹಸ್ತಲಾಘವ ಮಾಡುವುದು, ಅರೆಘಳಿಗೆ ಮಾತನಾಡುತ್ತ ನಿಲ್ಲುವುದು ಸಾಮಾನ್ಯ ಎಂಬಂತಾಗಿದೆ. ನಾನೇನೋ ಒಬ್ಬನೆ ರಸ್ತೆಯಲ್ಲಿ ನಡೆದು ಹೋಗುತ್ತಿರುವಾಗ ಇವರಲ್ಲಿ ಯಾರಾದರೂ ಭೇಟಿ ಆಗಿ ಮಾತನಾಡುತ್ತ ನಿಲ್ಲುವುದರಿಂದ ನನಗೆ ಯಾವ ತೊಂದರೆಯಾಗಲಿ ಸಂಕೋಚವಾಗಲಿ ಇಲ್ಲ. ಕೆಲವೊಮ್ಮೆ ಹೆಂಡತಿ ಮಗಳೊಡನೆ ಮಾರ್ಕೆಟಿಗೆ ಹೋಗುವಾಗಲೊ ಅಥವಾ ಪರಿಚಿತರ, ಬಂಧುಗಳ ಮನೆಯ ಸಮಾರಂಭಕ್ಕೆ ಹೋಗುವಾಗ ಇವರು ಎದರು ಸಿಕ್ಕರೆ ಆಗೆಲ್ಲ ನನಗೆ ತುಂಬ ಇರುಸು ಮುರುಸಾಗುತ್ತದೆ. ನಾನು ಅವರೊಂದಿಗೆ ಮಾತನಾಡುತ್ತ ನಿಂತಿರುವಷ್ಟು ಹೊತ್ತು ಹೆಂಡತಿ ಮತ್ತು ಮಗಳು ದೂರದಲ್ಲಿ ನಿಂತು ಅಸಹನೆಯಿಂದ ನನ್ನ ದಾರಿಕಾಯುತ್ತಿರುತ್ತಾರೆ. ಅವಸರವಸರವಾಗಿ ಮಾತನಾಡಿ ಹೆಂಡತಿ ಮತ್ತು ಮಗಳ ಹತ್ತಿರ ಹೋಗುವಷ್ಟರಲ್ಲಿ ಅವರಿಬ್ಬರ ಮುಖದಲ್ಲಿ ಸಿಟ್ಟು ಮತ್ತು ನನ್ನ ಬಗ್ಗೆ ಜಿಗುಪ್ಸೆ ಜಿನುಗುತ್ತಿರುತ್ತದೆ. ನಾನು ತೀರ ಬಡಕುಟುಂಬದಲ್ಲಿ ಹುಟ್ಟಿ ನಮ್ಮ ಮನೆಯ ಎದುರಿನ ದೊಡ್ಡ ಆಲದ ಮರದಡಿ ವರ್ಷದಲ್ಲಿ ನಾಲ್ಕಾರು ತಿಂಗಳು ಕಾಲ ಬಿಡಾರ ಹೂಡುತ್ತಿದ್ದ ಕಮ್ಮಾರರ ಕುಟುಂಬದಲ್ಲಿನ ಮಕ್ಕಳೊಂದಿಗೆ ಆಡಿ ಬೆಳೆದಿದ್ದೆ ನನ್ನ ಈ ವ್ಯಸನಕ್ಕೆ ಕಾರಣವೆಂದು ಒಮ್ಮೊಮ್ಮೆ ನನ್ನ ಹೆಂಡತಿ ತೀರ್ಮಾನಕ್ಕೆ ಬರುತ್ತಾಳೆ. ಆಗೆಲ್ಲ ನಾನು ಹೆಂಡತಿಯ ಆರೋಪಕ್ಕೆ ಸಿಟ್ಟು ಮಾಡಿಕೊಳ್ಳದೆ ಒಳಗೊಳಗೆ ತುಂಬ ಖುಷಿಯಿಂದ ನನ್ನೊಂದಿಗೆ ಆಡುತ್ತಿದ್ದ ರುಕ್ಮಿ, ಸಂಭ್ಯಾ, ಜೀತ್ಯಾ, ಪೊನ್ನಿ  ಅವರನ್ನು ನೆನಪಿಸಿಕೊಂಡು ಪುಳಕಗೊಳ್ಳುತ್ತೇನೆ. ಅವರೆಲ್ಲ ಈಗ ದೊಡ್ಡವರಾಗಿ ಬೇರೆ ಬೇರೆ ಊರುಗಳಲ್ಲಿ ವಾಸಿಸುತ್ತಿರಬಹುದೆಂದು ಯಾವುದೇ ಊರಿಗೆ ಹೋದರೂ ಕಮ್ಮಾರರ ಟೆಂಟ್‍ಗಳು ಕಣ್ಣಿಗೆ ಕಾಣಿಸಿದ್ದೆ ಈ ರುಕ್ಮಿ, ಸಂಭ್ಯಾರೆಲ್ಲ ಅಲ್ಲಿರಬಹುದೇನೋ ಎನ್ನುವ ಆಸೆಯಿಂದ ಅರೆಘಳಿಗೆ ನಿಂತು ಹುಡುಕುತ್ತೇನೆ. 

    ನೋಡಿ ಹೇಳಬೇಕಾದ ಮುಖ್ಯ ವಿಷಯವನ್ನೆ ಮರೆತು ಬಿಟ್ಟೆ. ಅಂದಹಾಗೆ ನಾನು ನಿಮಗೆ ಹೇಳುತ್ತಿದ್ದದ್ದು ನಾನು ಪ್ರತಿ ಎರಡು ತಿಂಗಳಿಗೊಮ್ಮೆ ರವಿವಾರದ ರಜಾದಿನದಂದು ಸಲೂನಿಗೆ ಹೋಗುವ ವಿಷಯ. ಮೊನ್ನೆ ಸಲೂನ್‍ಗೆ ಹೋದಾಗ ರಜಾದಿನವಾದ್ದರಿಂದ ಕೂಡಲು ಜಾಗವಿಲ್ಲದಷ್ಟು ಗಿರಾಕಿಗಳಿದ್ದರು. ನಾನು ರೆಗ್ಯೂಲರ್ ಗಿರಾಕಿಯಾದ್ದರಿಂದ ಅಂಗಡಿಯಾತ ಪಕ್ಕದ ಅಂಗಡಿಯಿಂದ ಕುರ್ಚಿ ತರಿಸಿ ನನ್ನನ್ನು ಕೂಡುವಂತೆ ವಿನಂತಿಸಿಕೊಂಡ. ಅಲ್ಲಿರುವ ದಿನಪತ್ರಿಕೆಯನ್ನು ಈಗಾಗಲೆ ಹಲವು ಗಿರಾಕಿಗಳು ಹಂಚಿಕೊಂಡಿದ್ದರಿಂದ ಸುಮ್ಮನೆ ಅಂಗಡಿಯ ಮಾಲೀಕ ಕ್ಷೌರ ಮಾಡುವುದನ್ನೇ ನೋಡುತ್ತ ಕೂಡುವುದು ಒಳಿತೆಂಬ ಸಮ್ಮತಿಯ ಭಾವ ಮೂಡಿತು.  ನಾನು ಹಾಗೆ ಕುಳಿತುಕೊಂಡ ಘಳಿಗೆ ಒಂದು ಅನೂಹ್ಯವಾದ ಅನುಭವಕ್ಕೆ ಒಳಗಾದಂತೆ ಭಾಸವಾಗಿ ಅಲ್ಲಿದ್ದ ಕ್ಷೌರಿಕ ನನಗೆ ಹಲವು ವರ್ಷಗಳಿಂದ ಪರಿಚಿತ ಪಾತ್ರದಂತೆಯೂ ಅವನೊಂದಿಗೆ ಒಡನಾಡಿದ ಭಾವ ನನ್ನ ಅನುಭವಕ್ಕೆ ಬರತೊಡಗಿತು. ಕಣ್ಣುಗಳನ್ನು ಒಂದಷ್ಟು ಅಗಲಗೊಳಿಸಿ ನೋಡಿದಾಗ ಅವನು ಥೇಟ್ ನಮ್ಮ ಊರಿನ ಕ್ಷೌರಿಕ ಅಪ್ಪಣ್ಣನಂತೆ ಕಾಣಿಸುತ್ತಿರುವ ರೀತಿಗೆ ನನಗೇ ಅಚ್ಚರಿ ಅನ್ನಿಸತೊಡಗಿತು. 

    ಈ ಅಪ್ಪಣ್ಣ ನನ್ನೂರಿನ ಅತೀ ಸಂಭಾವಿತ ಮನುಷ್ಯ. ಅವನದು ಕ್ಷೌರಿಕ ವೃತ್ತಿ. ಇಡೀ ಊರಿಗೆ ಇರೋದು ಅವನೊಬ್ಬನದೆ ಕ್ಷೌರಿಕರ ಮನೆ. ಈ ಅಪ್ಪಣ್ಣನೇನೂ ನಮ್ಮ ಊರಿನವನಾಗಿರಲಿಲ್ಲ. ಅವನ ಅಕ್ಕನಿಗೆ ನಮ್ಮೂರಿನ ಕ್ಷೌರಿಕರ ತಮ್ಮಣ್ಣನಿಗೆ ಮದುವೆ ಮಾಡಿಕೊಟ್ಟು ಪಕ್ಕದೂರಿನವರು ನಮ್ಮೂರಿನೊಂದಿಗೆ ಬೀಗಸ್ತನ ಬೆಳೆಸಿದ್ದರು. ತಮ್ಮಣ್ಣನಿಗೆ ಮದುವೆಯಾಗಿ ಹತ್ತು ವರ್ಷಗಳು ಮಕ್ಕಳೇ ಆಗಿರಲಿಲ್ಲ. ಆಗೆಲ್ಲ ಮತ್ತೊಂದು ಮದುವೆಗೆ ಎಷ್ಟೇ ಒತ್ತಾಯಿಸಿದರೂ ತಮ್ಮಣ್ಣ ಹೆಂಡತಿಯ ಮೇಲಿನ ಪ್ರೀತಿಯಿಂದ ಮರುಮದುವೆಗೆ ಸಮ್ಮತಿಸಿರಲಿಲ್ಲ. ಅಫಜಲಪುರದ ಹತ್ತಿರದ ಘತ್ತರಗಿಯ ಭಾಗಮ್ಮನಿಗೆ ಹರಕೆ ಕಟ್ಟಿಕೊಂಡ ಮೇಲೆ ತಮ್ಮಣ್ಣನ ಹೆಂಡತಿ ಬಸಿರಾಗಿ ಹೆಣ್ಣುಮಗಳನ್ನು ಹೆತ್ತಿದ್ದೆ ಬಂತು ಮತ್ತೆ ಅವಳ ಒಡಲು ತುಂಬಲೇ ಇಲ್ಲ. ಮಗಳು ಬೆಳೆದು ದೊಡ್ಡವಳಾಗಿ ಮದುವೆ ವಯಸ್ಸಿಗೆ ಬಂದಾಗ ತಮ್ಮಣ್ಣ ಹೆಂಡತಿಯ ತಮ್ಮ ಅಪ್ಪಣ್ಣನನ್ನೆ ಮನೆಅಳಿಯನಾಗಿ ಮಾಡಿಕೊಂಡ. ಗಂಡು ಮಕ್ಕಳಿಲ್ಲದ ತಮ್ಮಣ್ಣ ದಂಪತಿಗಳಿಗೂ ಅಪ್ಪಣ್ಣ ಮನೆಅಳಿಯನಾಗಿ ಬಂದದ್ದು ಆಸರೆಯಾಯಿತು. ಮಾವನ ಜೊತೆಗೆ ಕ್ಷೌರಿಕ ವೃತ್ತಿಯನ್ನು ಆರಂಭಿಸಿದ ಅಪ್ಪಣ್ಣ ಮೊದಮೊದಲು ಚಿಕ್ಕ ಮಕ್ಕಳ ಕ್ಷೌರ ಮಾತ್ರ ಮಾಡುತ್ತಿದ್ದವನು ಕಾಲಕ್ರಮೇಣ ಊರಿನ ಗೌಡ, ಕುಲಕರ್ಣಿ, ಶ್ಯಾನುಭೋಗರಿಗೆಲ್ಲ ಕ್ಷೌರಕ್ಕೆ  ಅಪ್ಪಣ್ಣನೇ ಅನಿವಾರ್ಯವಾದ. ಚುರುಕು ಮಾತಿನ ಎಂಥ ಗಂಭೀರ ಸ್ವಭಾವದವರನ್ನೂ ಮಾತಿಗೆ ಎಳೆಯುತ್ತಿದ್ದ ಅಪ್ಪಣ್ಣ ತನ್ನ ಹಾಸ್ಯಸ್ವಭಾವದಿಂದ ಊರಿನಲ್ಲಿ ಬಲುಬೇಗ ಎಲ್ಲರಿಗೂ ಬೇಕಾದವನಾಗಿ ಬೆಳೆದ. ತಮ್ಮಣ್ಣನ ಆರೋಗ್ಯ ಕ್ಷೀಣಿಸಿ ಅವನು ಕೆಲಸದಿಂದ ದೂರ ಉಳಿಯತೊಡಗಿದ ಮೇಲೆ ಇಡೀ ಊರು ಅಪ್ಪಣ್ಣನ ಸುಪರ್ದಿಗೆ ಬಂತು. ಅಪ್ಪಣ್ಣನ ಹೆಂಡತಿ ಮಾಲಕ್ಷ್ಮಿ ಒಂಟಿಯಾಗಿ ಬೆಳೆದಿದ್ದರಿಂದಲೊ ಅಥವಾ ಘತ್ತರಗಿ ಭಾಗಮ್ಮನ ಹರಕೆ ಈಗ ಫಲಿಸಿದ್ದರಿಂದಲೊ ಆಕೆ ಸಾಲಾಗಿ ಎರಡು ಗಂಡು ಎರಡು ಹೆಣ್ಣು ಮಕ್ಕಳನ್ನು ಹೆತ್ತು ಮನೆತುಂಬ ಮಕ್ಕಳಿಲ್ಲ ಎಂಬ ಅವ್ವ ಅಪ್ಪನ ಕೊರಗನ್ನು ನೀಗಿಸಿದ್ದಳು.

     ಅಪ್ಪಣ್ಣನ ದಿನನಿತ್ಯದ ಕಾಯಕ ಅವನು ಬೆಳಗ್ಗೆ ಎಳುವುದರೊಂದಿಗೇ ಶುರುವಾಗುತ್ತಿತ್ತು. ಮುಂಜಾನೆ ಆರು ಗಂಟೆಗೇ ಅವನ ಮನೆಯ ಎದುರು ಜನರೆಲ್ಲ ಸರತಿಸಾಲಿನಲ್ಲಿ ಕಾಯುತ್ತ ಕೂಡುತ್ತಿದ್ದದ್ದು ಸಾಮಾನ್ಯ ದೃಶ್ಯವಾಗಿತ್ತು. ಹೀಗೆ ಕೂತವರಲ್ಲಿ ಶಾಲೆಗೆ ಹೋಗುವ ಮಕ್ಕಳು ಮತ್ತು ಪಟ್ಟಣಕ್ಕೆ ಕೆಲಸಕ್ಕೆ ಹೋಗುವವರ ಸಂಖ್ಯೆಯೇ ಹೆಚ್ಚಿರುತ್ತಿತ್ತು. ಊರಲ್ಲೇ ಇರುವವರು ಅವಸರವಿರುವವರು ಮೊದಲು ಕ್ಷೌರ ಮಾಡಿಸಿಕೊಳ್ಳಲಿ ನಾವು ನಿಧಾನವಾಗಿ ಮಾಡಿಸಿಕೊಂಡರಾಯ್ತು ಎನ್ನುವ ಅಲಿಖಿತ ಒಪ್ಪಂದಕ್ಕೆ ಬಂದಂತೆ ಕಾಣುತ್ತಿತ್ತು. ಭಾನುವಾರ ಇಲ್ಲವೇ ಯಾವುದೇ ಸರ್ಕಾರಿ ರಜಾದಿನವಾಗಿದ್ದರೆ ಅಪ್ಪಣ್ಣನ ಮನೆಯ ಎದುರಿನ ಸರತಿ ಸಾಲು ಹನುಮಂತನ ಬಾಲದಂತೆ ಬೆಳೆಯುತ್ತಿತ್ತು. ಒಮ್ಮೊಮ್ಮೆ ಬಯಲಿಗೆ ಹೋಗುವವರು ತಮ್ಮ ದಿನನಿತ್ಯದ ಕೆಲಸ ಮುಗಿಸಿಕೊಂಡು ಕೈಯಲ್ಲಿ ತಂಬಿಗೆ ಹಿಡಿದು ನೇರವಾಗಿ ಅಪ್ಪಣ್ಣನ ಮನೆಗೇ ಬರುತ್ತಿದ್ದರು. ಊರ ಮುಂದಿನ ಭಾವಿಯಿಂದ ನೀರು ತರಲು ಹೋಗುವವರು ಹೊಲಕ್ಕೆ ಹೋಗುವವರು ತಮ್ಮ ಮಕ್ಕಳನ್ನು ನಿದ್ದೆಯಿಂದ ಎಬ್ಬಿಸಿ ಅಪ್ಪಣ್ಣನ ಮನೆಗೆ ಕರೆತಂದು ಸರತಿ ಸಾಲಿನಲ್ಲಿ ಕೂಡಿಸಿ ಹೋಗುತ್ತಿದ್ದರು. ಅಪ್ಪಣ್ಣ ಚುಮುಚುಮು ಬೆಳಕಿನಲ್ಲೆ ಪ್ರಾತ:ವಿಧಿಗಳನ್ನು ಮುಗಿಸಿ ಸ್ನಾನ ಮಾಡಿ ವಿಭೂತಿ ಧರಿಸಿ ಬೆಳಗ್ಗಿನ ಚಹಾಸೇವಿಸಿದವನೇ ಕಾಯಕಕ್ಕೆ ನಿಲ್ಲುತ್ತಿದ್ದ. ಮನೆಯ ಎಡಗಡೆ ದನದ ಕೊಟ್ಟಿಗೆಗೆ ಹೊಂದಿಕೊಂಡಂತೆ ಇರುವ ಕಟ್ಟೆಯ ಮೇಲೆ ಕ್ಷೌರ ಸಾಮಗ್ರಿಗಳ ಪೆಟ್ಟಿಗೆಯೊಂದಿಗೆ ಬಂದು ಕುಳಿತು ಪೆಟ್ಟಿಗೆಗೆ ನಮಸ್ಕರಿಸಿ ತನ್ನ ಕಾಯಕ ಶುರು ಮಾಡುವ ಅಪ್ಪಣ್ಣನ ಕೆಲಸ ಮಧ್ಯಾಹ್ನದವರೆಗೂ ಬಿಡುವಿಲ್ಲದಂತೆ ಸಾಗುತ್ತಿತ್ತು. ಅಪ್ಪಣ್ಣನ ಮೊದಲ ಆದ್ಯತೆ ಯಾವತ್ತೂ ಶಾಲೆಗೆ ಹೋಗುವ ಮಕ್ಕಳಿಗೆ. ಮಕ್ಕಳ ಶಾಲೆಗೆ ತಡವಾದರೆ ಮಾಸ್ತರರು ಬೈಯುವರೆಂಬ ಕಳಕಳಿಯಿಂದ ಸರತಿ ಸಾಲಿನಲ್ಲಿ ಎಷ್ಟೇ ಹಿಂದಿದ್ದರೂ ಶಾಲೆಗೆ ಹೋಗುವ ಮಕ್ಕಳನ್ನು ಮುಂದೆ ಕರೆದು ಕ್ಷೌರ ಮಾಡಿ ಸಾಗಹಾಕಿದ ಮೇಲೆಯೇ ಉಳಿದವರ ತಲೆಗೆ ಅವನು ಕೈಹಚ್ಚುತಿದ್ದದ್ದು. ‘ಅಪ್ಪಣ್ಣ ನಸಕಿನ್ಯಾಗೆ ಬಂದು ನಿನ್ನ ಮನಿ ಎದುರು ಕೂತೀನಿ ಆಗ ಇವರ್ಯಾರು ಇನ್ನು ಬಂದಿರಲಿಲ್ಲ. ನನ್ನ ನಂತರ ಬಂದವರಿಗಿ ಕಟಿಂಗ್ ಮಾಡೋದು ತಪ್ಪ ನೋಡು’ ಎಂದು ಯಾರಾದರು ಎದುರಾಡಿದರೆ ‘ಪಾಪ ಸಾಲಿಗಿ ಹೋಗೋ ಮಕ್ಕಳು. ಅವಕ್ಕ ಅವಸರ ಇರ್ತದ. ಮನ್ಯಾಗ ಇರಾವ ನೀ ಸ್ವಲ್ಪ ತಡಿ’ ಎಂದು ಸಮಾಧಾನ ಹೇಳಿ ಅಂಗಳದಲ್ಲಿ ಕಸಗುಡಿಸುತ್ತಿದ್ದ ಹೆಂಡತಿಗೆ ‘ಶಿವರಾಯಣ್ಣಗ ಒಂದೀಟು ಚಹಾ ತಂದು ಕೊಡು’ ಎಂದು ತನ್ನ ಕಾಯಕದಲ್ಲಿ ಮಗ್ನನಾಗುತ್ತಿದ್ದ. ಅಪ್ಪಣ್ಣನ ಹಿರಿಯ ಮಗನಿಗೆ ವಿದ್ಯೆ ತಲೆಗೆ ಹತ್ತದೆ ಅವನು ಅಪ್ಪನ ಕಸುಬಿನಲ್ಲೇ ಮುಂದುವರೆಯುವ ಇಚ್ಛೆಯಿಂದ ಊರಲ್ಲೇ ಉಳಿದರೆ ಎರಡನೆ ಮಗ ಕಲಬುರಗಿಯ ಕಾಲೇಜೊಂದರಲ್ಲಿ ಬಿ.ಎ ಓದುತ್ತಿದ್ದ. ಎರಡು ಹೆಣ್ಣು ಮಕ್ಕಳು ಇನ್ನು ಚಿಕ್ಕವರಿದ್ದು ಊರಲ್ಲೇ ಶಾಲೆಗೆ ಹೋಗುತ್ತಿದ್ದರು. 

    ಅಪ್ಪಣ್ಣನಿಗೆ ಹೇಳಿಕೊಳ್ಳುವಂಥ ಆಸ್ತಿ ಇರಲಿಲ್ಲ. ಅಕ್ಕನ ಗಂಡ ಕಟ್ಟಿಸಿದ ಮನೆಯೊಂದು ಬಿಟ್ಟರೆ ತನ್ನ ದಿನನಿತ್ಯದ ಕ್ಷೌರದ ಕಾಯಕವೇ ಅನ್ನಕ್ಕೆ ಆಸರೆಯಾಗಿತ್ತು. ವರ್ಷಕ್ಕೆ ದವಸಧಾನ್ಯ ಕೊಟ್ಟು ಕ್ಷೌರ ಮಾಡಿಸಿಕೊಳ್ಳುವ ಕುಟುಂಬಗಳೇ ಊರಲ್ಲಿ ಹೆಚ್ಚಿದ್ದುದ್ದರಿಂದ ಹಣಕೊಡುವವರ ಸಂಖ್ಯೆ ತೀರ ಕಡಿಮೆಯಿತ್ತು. ಬೇಸಾಯವಿಲ್ಲದ ಕುಟುಂಬದವರು ಮಾತ್ರ ಹಣಕೊಟ್ಟು ಕ್ಷೌರ ಮಾಡಿಸಿಕೊಳ್ಳುತ್ತಿದ್ದರು. ಸಾಮಾನ್ಯವಾಗಿ ಅಂಥವರು ಅಪ್ಪಣ್ಣನಿಗಿಂತ ಪಟ್ಟಣದ ಸಲೂನ್ ಅಂಗಡಿಗಳಲ್ಲೇ ಕಟಿಂಗ್ ಮಾಡಿಸಿಕೊಳ್ಳುವುದಿತ್ತು. ಮೆತ್ತನೆಯ ಖುರ್ಚಿ, ಎದುರಿಗೆ ಪ್ರತಿಬಿಂಬ ತೋರಿಸುವ ದೊಡ್ಡಗಾತ್ರದ ಕನ್ನಡಿ, ಮುಖಕ್ಕೆ ಲೇಪಿಸುವ ಸುವಾಸನೆಯುಕ್ತ ಪೌಡರ್ ಇವುಗಳಿಂದ ವಂಚಿತರಾಗಿ ಅಪ್ಪಣ್ಣನಿಂದ ಕ್ಷೌರ ಮಾಡಿಸಿಕೊಳ್ಳಲು ಅವರ ಮನ್ನಸ್ಸು ಒಪ್ಪುತ್ತಿರಲಿಲ್ಲ. ಆಗೆಲ್ಲ ಅಪ್ಪಣ್ಣನಿಗೂ ಊರಲ್ಲಿ ಅಂಥದ್ದೊಂದು ಅಂಗಡಿ ತೆರೆಯುವ ಆಸೆಯಾಗುತ್ತಿತ್ತಾದರೂ ಅದಕ್ಕೆ ಬೇಕಾದ ಬಂಡವಾಳವಿಲ್ಲದೆ ಅಂಥದ್ದೆಲ್ಲ ನನ್ನಂಥವರಿಗಲ್ಲ ಎಂದು ಮನಸ್ಸಿಗೆ ಸಮಾಧಾನ ತಂದುಕೊಳ್ಳುತ್ತಿದ್ದ. ವರ್ಷವಿಡೀ ಕ್ಷೌರ ಮಾಡಿಸಿಕೊಳ್ಳುವ ಕುಟುಂಬಗಳು ಕೆಲವೊಮ್ಮೆ ಬೇಸಾಯದಲ್ಲಿ ನಷ್ಟವಾಯಿತೆಂದು ಅಪ್ಪಣ್ಣನಿಗೆ ಕೊಡಬೇಕಾದ ದವಸಧಾನ್ಯದಲ್ಲಿ ಅರ್ಧದಷ್ಟನ್ನೋ ಇಲ್ಲವೇ ಪೂರ್ತಿ ಕೊಡದೆ ಸತಾಯಿಸುತ್ತಿದ್ದರು. ಆಗೆಲ್ಲ ಈ ಹಳ್ಳಿಯ ಸಹವಾಸವೇ ಸಾಕು ಪಟ್ಟಣಕ್ಕೆ ಹೋಗಿ ತಾನೂ ಅಲ್ಲಿನವರಂತೆ ಕ್ಷೌರದ ಅಂಗಡಿಯನ್ನಿಡಬೇಕೆಂಬ ಅಪ್ಪಣ್ಣನ ಆಸೆ ಮತ್ತೆ ಚಿಗುರುತ್ತಿತ್ತು. ವರ್ಷದ ಬಾಬತ್ತನ್ನು ಸರಿಯಾದ ಸಮಯದಲ್ಲಿ ಕೊಡದೆ ಸತಾಯಿಸುವವರನ್ನು ಅಪ್ಪಣ್ಣ ಕೂಡ ಆಟವಾಡಿಸುತ್ತಿದ್ದ. ಕೆಲವು ದಿನಗಳ ಕಾಲ ಕ್ಷೌರದ ಕೆಲಸವನ್ನೇ ನಿಲ್ಲಿಸಿ ಬೇರೆ ಊರುಗಳಲ್ಲಿನ ಬಂಧುಗಳ ಮನೆಗೆ ಹೋಗಿ ಕುಳಿತು ಬಿಡುತ್ತಿದ್ದ. ಇಲ್ಲಿ ಊರಿನಲ್ಲಿ ಮಕ್ಕಳ, ಯುವಕರ, ಮುದುಕರ ತಲೆಕೂದಲು ಬೆಳೆದು ತಲೆಯಲ್ಲಿ ಹೇನುಗಳಾಗಿ ಅಪ್ಪಣ್ಣ ಯಾವಾಗ ಬರುವನೋ ಎಂದು ಇಡೀ ಊರು ಅವನ ದಾರಿ ಕಾಯುತ್ತಿತ್ತು. ಅಪ್ಪಣ್ಣ ಬಂದದ್ದು ಗೊತ್ತಾದದ್ದೆ ವರ್ಷದ ಬಾಬತ್ತಿನಲ್ಲಿ ಒಂದಷ್ಟನ್ನಾದರೂ ಕೊಟ್ಟು ಸಮಾಧಾನಪಡಿಸಿ ತಮ್ಮ ತಲೆಯನ್ನು ನುಣ್ಣಗೆ ಬೋಳಿಸಿಕೊಂಡು ಹೇನುಗಳ ಕಾಟದಿಂದ ಮುಕ್ತರಾಗುತ್ತಿದ್ದರು. 

      ಅಪ್ಪಣ್ಣ ಮಧ್ಯಾಹ್ನದವರೆಗೂ ಮನೆಯ ಎದುರಿನ ಜಗುಲಿಯ ಮೇಲೆ ಕುಳಿತು ಮನೆಗೆ ಬರುವ ಗಿರಾಕಿಗಳ ತಲೆ ಕ್ಷೌರ ಮಾಡಿ ಇನ್ನು ಉಳಿದವರನ್ನು ನಾಳೆ ಬರಲು ಸಾಗಹಾಕಿ ಮತ್ತೊಮ್ಮೆ ಚಹಾ ಕುಡಿದವನೇ ಪೆಟ್ಟಿಗೆಯನ್ನು ಕೈಯಲ್ಲಿ ಹಿಡಿದು ಊರ ಗೌಡರ ಮನೆಗೆ ಹೋಗುತ್ತಿದ್ದ. ಗೌಡರು, ಶ್ಯಾನುಭೋಗರು ಅಪ್ಪಣ್ಣನ ಮನೆಯ ಎದುರಿನ ಜಗುಲಿಯ ಮೇಲೆ ಕುಳಿತು ಕ್ಷೌರ ಮಾಡಿಸಿಕೊಳ್ಳುವುದೆಂದರೆ ಅದು ಅವರಿಗೆ ಮಾತ್ರವಲ್ಲ ಇಡೀ ಊರಿನ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಊರ ಕ್ಷೌರಿಕ ಗೌಡರ ಮನೆಯಲ್ಲಿ ಒಂದೆರಡು ತಾಸು ಮತ್ತು ಶ್ಯಾನುಭೋಗರ ಮನೆಯಲ್ಲಿ ಒಂದೆರಡು ತಾಸು ಪ್ರತಿದಿನ ಕಳೆಯುವುದು ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿತ್ತು. ಅಪ್ಪಣ್ಣನೂ ಚಾಚೂತಪ್ಪದೆ ಆ ಪದ್ಧತಿಯನ್ನು ಪಾಲಿಸಿಕೊಂಡು ಬಂದಿದ್ದ. ಆಗೆಲ್ಲ ಗೌಡರು ಮತ್ತು ಶ್ಯಾನುಭೋಗರಿಗೆ ಮಾತ್ರವಲ್ಲದೆ ಮನೆಯಲ್ಲಿನ ಮಕ್ಕಳಿಗೂ ಈ ವಿಶೇಷ ಸೌಲಭ್ಯ ಸಿಗುತ್ತಿತ್ತು. ಗೌಡರು ಮತ್ತು ಶ್ಯಾನುಭೋಗರಿಗೆ ಕ್ಷೌರ ಮಾಡುವುದರ ಜೊತೆಗೆ ಕೈಕಾಲುಗಳ ಉಗುರು ಕತ್ತರಿಸುವುದು, ತಲೆಗೆ ಎಣ್ಣೆಹಚ್ಚಿ ಮಸಾಜ್ ಮಾಡುವುದು ಇಂಥ ವಿಶೇಷ ಸೇವೆಗಳನ್ನು ಅಪ್ಪಣ್ಣ ಮಾಡಬೇಕಾಗುತ್ತಿತ್ತು. ಆಗೆಲ್ಲ ಅವನಿಗೆ ವರ್ಷದ ಬಾಬತ್ತಿನ ಹೊರತಾಗಿಯೂ ಒಂದಷ್ಟು ಚಿಲ್ಲರೆ ಕಾಸು ಭಕ್ಷಿಸಾಗಿ ಸಿಗುತ್ತಿತ್ತು. ಇದೆಲ್ಲ ಮುಗಿದು ಮನೆಗೆ ಹೋಗುವಷ್ಟರಲ್ಲಿ ಮಧ್ಯಾಹ್ನವಾಗಿರುತ್ತಿತ್ತು. ಮನೆಗೆ ಹೋಗಿ ಮತ್ತೊಮ್ಮೆ ಸ್ನಾನ ಮಾಡಿದ ನಂತರ ಅಪ್ಪಣ್ಣ ಕ್ಷೌರದ ಪೆಟ್ಟಿಗೆಯನ್ನು ಮತ್ತೆ ಮುಟ್ಟುವುದು ಮರುದಿನದ ಬೆಳಗ್ಗೆಯೇ.  

    ಯಾವ ತಂಟೆ ತಕರಾರುಗಳಿಲ್ಲದೆ ಅಪ್ಪಣ್ಣನ ಬದುಕಿನ ಬಂಡಿ ಸಲೀಸಾಗಿ ನಡೆದುಕೊಂಡು ಹೋಗುತ್ತಿರುವಾಗ ಇದ್ದಕ್ಕಿದ್ದಂತೆ ಒಂದು ದಿನ ಅಪ್ಪಣ್ಣ ತಳೆದ ನಿಲುವು ಆ ಊರಿನಲ್ಲಿ ಬಹುದೊಡ್ಡ ಸಾಮಾಜಿಕ ಸ್ಥಿತ್ಯಂತರಕ್ಕೆ ಕಾರಣವಾಗಬಹುದೆಂದು ಯಾರೂ ಊಹಿಸಿರಲಿಲ್ಲ. ಅಪ್ಪಣ್ಣನ ಕಿರಿಯ ಮಗ ಆನಂದ ಪಟ್ಟಣದ ಕಾಲೇಜಿನಲ್ಲಿ ಓದುತ್ತಿದ್ದು ಊರಿಗೆ ಬರುವಾಗಲೆಲ್ಲ ದೊಡ್ಡ ದೊಡ್ಡ ಪುಸ್ತಕಗಳನ್ನು ಹಿಡಿದುಕೊಂಡು ಮನೆಗೆ ಬರುತ್ತಿದ್ದ. ಆಗೆಲ್ಲ ಅಪ್ಪಣ್ಣನಿಗೆ ತನಗೂ ನಾಲ್ಕಕ್ಷರ ಗೊತ್ತಿದ್ದರೆ ಮಗ ಮನೆಗೆ ತರುತ್ತಿದ್ದ ಆ ದಪ್ಪ ಪುಸ್ತಕಗಳನ್ನು ಓದಿ ಅದರಲ್ಲಿರುವುದನ್ನು ತಿಳಿದುಕೊಳ್ಳುತ್ತಿದ್ದೆ ಎಂದೆನಿಸುತ್ತಿತ್ತು. ಮಗನಿಂದ ಆ ಪುಸ್ತಕದಲ್ಲಿರುವುದನ್ನು ಕೇಳಿ ತಿಳಿದುಕೊಳ್ಳುವ ಮೂಲಕ ಅಪ್ಪಣ್ಣ ತನಗಾಗುವ ನಿರಾಸೆಯನ್ನು ಮರೆಯುತ್ತಿದ್ದ. ಮಗನ ಪುಸ್ತಕಗಳಲ್ಲಿದ್ದ ಗಾಂಧಿ, ಅಂಬೇಡ್ಕರ್, ಲೋಹಿಯಾ, ಕಾರ್ಲ್ ಮಾರ್ಕ್ಸ್ ಹೀಗೆ ಒಬ್ಬೊಬ್ಬರಾಗಿ ಅಪ್ಪಣ್ಣನ ಭಾವದಲ್ಲಿ ಸೇರತೊಡಗಿದಂತೆ ತನ್ನ ಸುತ್ತಲಿನ ಜಗತ್ತನ್ನು ಅಪ್ಪಣ್ಣ ಹೊಸ ರೀತಿಯಲ್ಲಿ ಗ್ರಹಿಸತೊಡಗಿದ. ಹೀಗೆ ಅಪ್ಪಣ್ಣನ ಬದುಕಿನಲ್ಲಿ ಬದಲಾವಣೆಯ ಹೊಸಗಾಳಿ ಬೀಸುತ್ತಿರುವ ಘಳಿಗೆ ಅವನ ಮಗನೊಂದಿಗೆ ಪಟ್ಟಣದ ಕಾಲೇಜಿನಲ್ಲಿ ಓದುತ್ತಿದ್ದ ಹರಿಜನ ಕೇರಿಯ ಚೆನ್ನ ಆನಂದನನ್ನು ಹುಡುಕಿಕೊಂಡು ಒಂದು ಬೆಳಗ್ಗೆ ಮನೆ ಎದುರು ಬಂದು ನಿಲ್ಲುವುದಕ್ಕೂ ಅಪ್ಪಣ್ಣ ಎರ್ರಾಬಿರ್ರಿ ಕೂದಲು ಬೆಳೆದ ಚೆನ್ನನ ತಲೆಯನ್ನು ನೋಡುವುದಕ್ಕೂ ಸರಿಹೋಯಿತು. ‘ಯಾಕ್ಲ ಚೆನ್ನ ಯಾಪರಿ ಕೂದ್ಲು ಬೆಳೆಸಿದ್ದಿ. ಹೇನಾದ್ರ ನಿಂಗೆ ಕಷ್ಟ ನೋಡು’ ಅಪ್ಪಣ್ಣ ಲೊಚಗುಟ್ಟಿದ. ‘ಏನ್ಮಾಡ್ಲಿ ಕಣಣ್ಣೊ ಕಾಲೇಜಿಗಿ ರಜೆ ಅಂತ ಪಟ್ಟಣಕ ಹೋಗದೆ ಎರಡು ತಿಂಗಳಾಯ್ತು’ ಚೆನ್ನ ತನ್ನ ಅಸಹಾಯಕತೆ ತೋಡಿಕೊಂಡ. ‘ಕೂಡು ಮತ್ತೆ ತಲೆ ಬೋಳುಸ್ತೀನಿ’ ಅಪ್ಪಣ್ಣ ತನ್ನೆದುರು ಕುಳಿತ ಸಾಲನ್ನು ಲಕ್ಷಕ್ಕೆ ತೆಗೆದುಕೊಳ್ಳದೆ ಪೆಟ್ಟಿಗೆಯೊಳಗಿನ ಕ್ಷೌರದ ಸಾಮಗ್ರಿಗಳನ್ನು ಹೊರತೆಗೆದವನೇ ಚೆನ್ನನ ತಲೆಗೆ ಕೈ ಹಚ್ಚಿದ. ನೋಡು ನೋಡುವಷ್ಟರಲ್ಲಿ ಅಪ್ಪಣ್ಣನ ಕೈಯೊಳಗಿನ ಕತ್ತರಿ ಚೆನ್ನನ ತಲೆಯಲ್ಲಿ ಸಲೀಸಾಗಿ ಆಡಿ ಕೂದಲನ್ನೆಲ್ಲ ಧರೆಗಿಳಿಸಿ ನುಣ್ಣಗೆ ಹೊಳೆಯುವಂತೆ ಮಾಡಿತು. ಅಪ್ಪಣ್ಣನ ಮನೆ ಎದುರು ಕ್ಷೌರಕ್ಕಾಗಿ ಕಾದು ಕುಳಿತಿದ್ದ ಊರ ಜನ ದಂಗಾಗಿ ಹೋದರು. ಕ್ಷೌರಕ್ಕಾಗಿ ಕಾದು ಕುಳಿತವರೆಲ್ಲ ಒಬ್ಬೊಬ್ಬರಾಗಿ ಎದ್ದು ಹೋಗುತ್ತಿದ್ದಂತೆ ಅಪ್ಪಣ್ಣನ ಮನೆ ಎದುರಿನ ಸಾಲು ಕರಗತೊಡಗಿತು.

      ಊರ ಗೌಡರಿಗೆ ಸುದ್ದಿ ಮುಟ್ಟಿತು. ಊರವರೆಲ್ಲ ಸಭೆ ಸೇರಿ ಪಂಚಾಯಿತಿ ಕಟ್ಟೆಗೆ ಅಪ್ಪಣ್ಣನನ್ನು ಕರೆಕಳಿಸಿದರು. ಪಂಚಾಯಿತಿ ತೀರ್ಪು ತಿಳಿಯಲು ಇಡೀ ಊರು ಅಲ್ಲಿ ನೆರೆದಿತ್ತು. ಮಗ ಆನಂದನ ಜೊತೆಗೂಡಿ ಅಪ್ಪಣ್ಣ ಪಂಚಾಯ್ತಿ ಕಟ್ಟೆಗೆ ಬಂದಾಗ ಸಭೆಯಲ್ಲಿ ಗುಸುಗುಸು ಮಾತುಗಳಿಂದ ಗದ್ದಲ ಮೂಡಿ ಒಬ್ಬರ ಮಾತು ಇನ್ನೊಬ್ಬರಿಗೆ ಕೇಳಿಸದಾಯಿತು. ಪಂಚಾಯಿತಿ ಕಟ್ಟೆಯ ಮೇಲೆ ಕುಳಿತಿದ್ದ ಊರ ಪ್ರಮುಖರನ್ನು ನಮಸ್ಕರಿಸಿ ಅಪ್ಪಣ್ಣ ಕಟ್ಟೆಯ ಎಡಬದಿಗೆ ಹೋಗಿ ಕೈಕಟ್ಟಿ ನಿಂತುಕೊಂಡ. ‘ಏನು ಅಪ್ಪಣ್ಣ ಇವತ್ತು ಬೆಳಗ್ಗೆ ಕೇರಿಯ ಮಾದನ ಮಗ ಚೆನ್ನನಿಗೆ ನೀನು ಊರಿನವರೆದುರೇ ಅದು ಹಾಡ ಹಗಲು ಕ್ಷೌರ ಮಾಡಿದಿಯಂತೆ ನಿಜಾನಾ’ ನ್ಯಾಯಸ್ಥರ ಮಧ್ಯದಲ್ಲಿ ಕುಳಿತಿದ್ದ ಶಾಂತಪ್ಪಗೌಡರು ತಮ್ಮ ಎಂದಿನ ಗಂಭೀರ ಧ್ವನಿಯಲ್ಲಿ ಮಾತಿಗೆ ಪೀಠಿಕೆ ಹಾಕಿದರು. ‘ನಾನು ಮಾಡಿದ್ದರಲ್ಲಿ ತಪ್ಪೆನಿದೆ ಗೌಡ್ರೆ’ ಅಪ್ಪಣ್ಣ ಸಮಾಧಾನದ ಸ್ವರದಲ್ಲೇ ಉತ್ತರಿಸಿದ. ಸಭೆಯಲ್ಲಿ ಮತ್ತೊಮ್ಮೆ ಗುಸುಗುಸು ಮಾತುಗಳಿಂದ ಗದ್ದಲ ಶುರುವಾಯಿತು. ಶಾಂತಪ್ಪಗೌಡರು ಎಲ್ಲರಿಗೂ ಸುಮ್ಮನಿರುವಂತೆ ಹೇಳಿ ‘ತಲತಲಾಂತರದಿಂದ ನಡೆದುಕೊಂಡು ಬಂದ ಸಂಪ್ರದಾಯ ಕಡೆಗಣಿಸಿದರೆ ಊರಿಗೆ ಕೇಡು ತಪ್ಪಿದ್ದಲ್ಲ ಅಪ್ಪಣ್ಣ’ ಈ ಸಲ ಗೌಡರ ಧ್ವನಿಯಲ್ಲಿ ಬೆದರಿಸುವ ಗಡಸುತನವಿತ್ತು. ‘ಪ್ಯಾಟಿನ್ಯಾಗ ಕಟಿಂಗ್ ಮಾಡಿಸಿಕೊಳ್ಳೊರಿಗಿ ಕೇಳ್ರಿ. ಅಲ್ಲಿ ಊರವರು ಕೇರಿಯವರು ಅಂತ ಭೇದ ಇರಲ್ಲ. ಪ್ಯಾಟ್ಯಾಗ ಇಲ್ಲದ್ದು ಈ ಊರಿನ್ಯಾಗ್ಯಾಕೆ’ ಅಪ್ಪಣ್ಣ ತಾನು ಮಾಡಿದ್ದಕ್ಕೆ ಸಮಜಾಯಿಷಿ ಕೊಡುತ್ತಿರುವನೋ ಅಥವಾ ಪ್ರಶ್ನಿಸುತ್ತಿರುವನೋ ಎನ್ನುವ ಗೊಂದಲ ಅಲ್ಲಿ ನೆರೆದಿದ್ದವರಲ್ಲಿ ಮೂಡಿತು. ‘ಅಪ್ಪಣ್ಣ ಎದುರುತ್ತರಾ ಬ್ಯಾಡ. ಪಂಚಾಯಿತಿ ಕಠಿಣ ತೀರ್ಮಾನ ತಗೊಬೇಕಾಗ್ತದ’ ವಾಡ್ಯಾದ ಶಿವನಿಂಗೇಗೌಡ ಅದುಮಿಟ್ಟುಕೊಂಡ ಸಿಟ್ಟು ಹೊರಹಾಕಿದ. ‘ಗೌಡ ಕೈಯಾಗ ಅಧಿಕಾರ ಅದ ಅಂತ ಏನು ಬೇಕಾದ್ರ ಮಾಡ್ತೀನಿ ಅಂದ್ರ ಈಗ ಕಾನೂನು ಕೇಳಂಗಿಲ್ಲ. ಸರ್ಕಾರನೇ ಸಮಾನತೆ ಬರಬೇಕು ಅಂತ ಹೇಳ್ಯಾದಂತ. ಗಾಂಧೀಜಿ ಅಂಥ ದೊಡ್ಡ ವ್ಯಕ್ತಿನೇ ಕೇರಿ ಕೇರಿಗಿ ಹೋಗಿ ಹೇಲ ಬಳದಮ್ಯಾಲ ನಮ್ಮ ನಿಮ್ಮಂಥೊರು ಯಾವ ಲೆಕ್ಕಕ್ಕ. ನಾನು ಇನ್ಮುಂದ ಯಾರೇ ಬರಲಿ ಕಟಿಂಗ್ ಮಾಡೋನೆ. ನೀವು ಏನ್ ಬೇಕಾದ್ರೂ ಮಾಡಿ’ ಅಪ್ಪಣ್ಣ ಎದ್ದುನಿಂತು ಮಗನ ಕೈಹಿಡಿದು ಸೇರಿದ್ದ ಜನರ ನಡುವಿನಿಂದ ದಾರಿ ಮಾಡಿಕೊಂಡು ಮನೆಯಕಡೆ ಹೆಜ್ಜೆ ಹಾಕಿದ. ಮತ್ತೆ ಸಭೆಯಲ್ಲಿ ಗದ್ದಲ ಶುರುವಾಯಿತು. ಪಂಚಾಯಿತಿ ಕಟ್ಟೆಯಲ್ಲಿನ ನ್ಯಾಯಸ್ಥರು ತಮ್ಮ ತಮ್ಮಲ್ಲೆ ಮಾತನಾಡಿಕೊಂಡು ಒಂದು ತೀರ್ಮಾನಕ್ಕೆ ಬಂದವರಂತೆ ಶಾಂತಪ್ಪಗೌಡರನ್ನು ಮಾತನಾಡಲು ಅನುವು ಮಾಡಿಕೊಟ್ಟರು. ಶಾಂತಪ್ಪಗೌಡರು ನೆರೆದಿದ್ದ ಜನಸ್ತೋಮದತ್ತ ಒಮ್ಮೆ ದೃಷ್ಟಿ ಹರಿಸಿ ಕೆಮ್ಮಿ ಗಂಟಲನ್ನು ಸರಿಮಾಡಿಕೊಂಡು ಎಂದಿನ ತಮ್ಮ ಸಹಜ ಗಂಭೀರ ಧ್ವನಿಯಲ್ಲಿ ಪಂಚಾಯಿತಿ ತೀರ್ಮಾನ ಹೇಳಿದರು ‘ನೋಡಿ ನಾವು ನ್ಯಾಯಸ್ಥರೆಲ್ಲ ಕೂಡಿ ತೀರ್ಮಾನ ತೆಗೆದುಕೊಂಡಿದ್ದೀವಿ. ಆ ಪ್ರಕಾರ ಇನ್ಮುಂದೆ ಊರಿನ ಯಾವ ನರಪಿಳ್ಳೆಯೂ ಕ್ಷೌರಕ್ಕಾಗಿ ಅಪ್ಪಣ್ಣನ ಮನೆಗೆ ಹೋಗುವಂತಿಲ್ಲ. ಬೇರೆ ಊರಿಂದ ಕ್ಷೌರಿಕನನ್ನು ಊರಿಗೆ ಕರೆತಂದರಾಯ್ತು. ಅಲ್ಲಿವರೆಗೂ ಎಲ್ಲರೂ ಪಂಚಾಯಿತಿ ನ್ಯಾಯಕ್ಕೆ ಚ್ಯುತಿ ಬರದಂಗ ನಡ್ಕೊಳ್ಳಬೇಕು’. ಸಭೆ ಮುಗಿದು ಒಬ್ಬಬ್ಬೊರಾಗಿ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ತೆರಳಿದರು.

      ಅಪ್ಪಣ್ಣನ ಹೆಂಡತಿ ಮಾಲಕ್ಷ್ಮಿಗೆ ತನ್ನ ಗಂಡ ಮಾಡಿದ್ದು ಸರಿ ಅನಿಸಲಿಲ್ಲ. ಅಪ್ಪಣ್ಣನಿಗೂ ಆರಂಭದಲ್ಲಿ ಊರವರನ್ನು ಎದುರುಹಾಕಿಕೊಂಡೆನೇನೋ ಎನ್ನುವ ಭಯ ಕಾಡಿದರೂ ಮನೆಯಲ್ಲಿ ತೂಗು ಹಾಕಿದ್ದ ಗಾಂಧೀಜಿ ಫೆÇೀಟೋ ನೋಡುವಾಗಲೆಲ್ಲ ತಾನು ಮಾಡಿದ್ದು ಸರಿ ಅನಿಸತೊಡಗಿತು. ಊರಲ್ಲಿ ಜನರು ಕೂತಲ್ಲಿ ನಿಂತಲ್ಲಿ ಇದೇ ಮಾತನ್ನು ಆಡಿಕೊಂಡು ಕೆಲವರು ಅಪ್ಪಣ್ಣನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರೆ ಇನ್ನು ಕೆಲವರು ಅಪ್ಪಣ್ಣನಿಗೆ ಕೇಡು ಸಮೀಪಿಸಿದೆಯೆಂದೂ ಇದರಿಂದ ಊರಿಗೆ ಒಳ್ಳೆಯದಾಗುವುದಿಲ್ಲವೆಂದು ಆತಂಕಪಟ್ಟರು. ಒಂದೆರಡು ದಿನ ಮನೆಯಲ್ಲಿ ಸುಮ್ಮನೆ ಕುಳಿತಿದ್ದ ಅಪ್ಪಣ್ಣ ಒಂದು ದಿನ ಬೆಳಗ್ಗೆ ಎದ್ದವನೇ ಸ್ನಾನ ಮಾಡಿ ಕ್ಷೌರದ ಪೆಟ್ಟಿಗೆ ಹಿಡಿದು ಊರ ಹೊರಗಿನ ಕೇರಿಯ ಕಡೆ ನಡೆದ. ಗಂಡನನ್ನು ತಡೆಯಬೇಕೆಂದ ಮಾಲಕ್ಷ್ಮಿಗೆ ಧೈರ್ಯ ಸಾಲದೆ ಆತ ಹೋಗುವುದನ್ನೇ ನೋಡುತ್ತ ನಿಂತವಳಿಗೆ ಕೊಟ್ಟಿಗೆಯ ಕಸ ಹಾಗೇ ಇರುವುದು ನೆನಪಾಗಿ ಕೈಯಲ್ಲಿ ಕಸಬಾರಿಗೆ ಹಿಡಿದು ಗುಡಿಸತೊಡಗಿದಳು. ಅಪ್ಪಣ್ಣ ಊರಿನ ಮುಖ್ಯ ಬೀದಿಗಳನ್ನು ಹಾದು ಆಂಜನೇಯ ಗುಡಿಯನ್ನು ದಾಟಿ ಕೇರಿಯನ್ನು ಪ್ರವೇಶಿಸಿ ಮಾದನ ಮನೆಯ ಎದುರಿನ ದೊಡ್ಡ ಆಲದ ಮರದ ಕೆಳಗೆ ಕೂತು ಪೆಟ್ಟಿಗೆ ಕೆಳಗಿಟ್ಟು ಬೀಡಿ ಹೊತ್ತಿಸಿದ. ಜನ ಒಬ್ಬೊಬ್ಬರಾಗಿ ಮನೆಯೊಳಗಿಂದ ಹೊರಬಂದು ಅಪ್ಪಣ್ಣನನ್ನು ವಿಚಿತ್ರವಾಗಿ ನೋಡುತ್ತ ಕ್ಷಣಕಾಲ ನಿಂತು ಮತ್ತೆ ಮನೆ ಸೇರತೊಡಗಿದರು. ಕೊನೆಗೆ ಮಾದ ಮನೆಯಿಂದ ಹೊರಬಂದವನೆ ಅಪ್ಪಣ್ಣನ ಎದುರು ಕುಳಿತು ತಲೆ ಬಗ್ಗಿಸಿದ. ಅಪ್ಪಣ್ಣ ಬೀಡಿಯ ತುಂಡನ್ನು ನೆಲಕ್ಕೆ ಒರಸಿ ದೂರ ಒಗೆದು ಬಟ್ಟಲಲ್ಲಿದ್ದ ನೀರನಲ್ಲಿ ಕೈ ಅದ್ದಿ ಮಾದನ ತಲೆಗೆ ರಪರಪನೆ ಬಡಿಯತೊಡಗಿದ. 

    ಅಪ್ಪಣ್ಣನ ಬದುಕು ಮತ್ತೆ ನಿರಾತಂಕವಾಗಿ ಸಾಗತೊಡಗಿತು. ಅವನ ಹಿರಿಮಗ ಪ್ರತಿನಿತ್ಯ ಪಟ್ಟಣಕ್ಕೆ ಹೋಗಿ ಅಲ್ಲಿನ ಸಲೂನ್ ಅಂಗಡಿಗಳಲ್ಲಿ ದುಡಿಯತೊಡಗಿದ್ದರಿಂದ ಈಗ ಮನೆಯಲ್ಲಿ ಯಾವ ಆರ್ಥಿಕ ಅಡಚಣೆಗಳೂ ಇರಲಿಲ್ಲ. ಕೇರಿಯ ಜನ ಕೂಡ ಹಣ ಕೊಟ್ಟು ಅಪ್ಪಣ್ಣನಿಂದ ಕ್ಷೌರ ಮಾಡಿಸಿಕೊಳ್ಳುತ್ತಿದ್ದರಿಂದ ಒಂದಷ್ಟು ಕಾಸು ಕೂಡತೊಡಗಿತು. ಸಮಸ್ಯೆ ಎದುರಾದದ್ದು ಊರಿನವರಿಗೆ. ಪಂಚಾಯಿತಿಯಲ್ಲೇನೋ ತೀರ್ಮಾನ ತೆಗೆದುಕೊಂಡಾಗಿತ್ತು. ಆದರೆ ಒಂದೆರಡು ತಿಂಗಳಲ್ಲಿ ಅಪ್ಪಣ್ಣನ ಅನಿವಾರ್ಯತೆ ಎಲ್ಲರಿಗೂ ಅರ್ಥವಾಗತೊಡಗಿತು. ವರ್ಷಕ್ಕೊಮ್ಮೆ ಕಾಳುಕಡಿ ನೀಡಿ ಕ್ಷೌರ ಮಾಡಿಸಿಕೊಳ್ಳುತ್ತಿದ್ದವರಿಗೆ ಪಟ್ಟಣದ ಸಲೂನ್‍ಗಳಲ್ಲಿ ಅವರು ಹೇಳಿದಷ್ಟು ಹಣ ಕೊಡುವುದು ದುಬಾರಿ ಅನಿಸಲಾರಂಭಿಸಿತು. ಒಮ್ಮೊಮ್ಮೆ ಸಲೂನ್ ಅಂಗಡಿಯಲ್ಲಿ ಊರಿನವರು ಮತ್ತು ಕೇರಿಯವರು ಜೊತೆಯಾಗಿಯೇ ಕೂಡುವುದಿತ್ತು. ಆಗೆಲ್ಲ ಒಂದೇ ಕತ್ತರಿ ಇಬ್ಬರ ತಲೆಯಲ್ಲೂ ಆಡುತ್ತಿತ್ತು. ಈ ವಿಷಯವಾಗಿ ರುಕ್ಮೋಜಿ ಊರ ಪಟೇಲರಾದ ಶಾಂತಪ್ಪಗೌಡರ ಎದುರು ತನ್ನ ಅಸಮಾಧಾನವನ್ನು ತೋಡಿಕೊಂಡಿದ್ದ ‘ಗೌಡ್ರೆ ಇಲ್ಲಿ ಊರಾಗೇನೋ ಅಪ್ಪಣ್ಣ ಮಾಡಿದ್ದು ತಪ್ಪು ಅಂತೀರಿ. ಮೊನ್ನೆ ಶಹರದಾಗ ಸಲೂನ್ ಅಂಗಡ್ಯಾಗ ಮಾದರ ಲಕ್ಕ್ಯಾ ನನ್ನ ಪಕ್ಕದಾಗೆ ಕೂತಿದ್ದ. ಲಕ್ಕ್ಯಾಗ ಮಾಡಿದ ಕತ್ತರಿನಿಂದೇ ನನಗೂ ಕಟಿಂಗ್ ಮಾಡ್ದ ಆ ಅಂಗಡಿಯವ. ಆಗ ನಮಗ ಇಲ್ಲಿ ಮಾಡದಂಗ ಜಬರ್ದಸ್ತಿ ಮಾಡ್ಲಿಕ್ಕಿ ಬರ್ತಿತ್ತೇನು’. ಗೌಡರಿಗೂ ಸಮಸ್ಯೆಯ ಬಿಸಿ ತಟ್ಟಿತ್ತು. ಅವರೂ ಕಳೆದ ಎರಡು ವಾರಗಳಿಂದ ಅಕ್ಕಪಕ್ಕದ ಊರುಗಳಲ್ಲಿದ್ದ ತಮ್ಮ ನೆಂಟರಿಷ್ಟರನ್ನು ಸಂಪರ್ಕಿಸಿ ಒಬ್ಬ ಕ್ಷೌರಿಕನನ್ನು ತಮ್ಮೂರಿಗೆ ಕಳುಹಿಸಿಕೊಡಲು ವಿನಂತಿಸಿಕೊಂಡಿದ್ದರು. ಸುತ್ತಮುತ್ತಲಿನ ಫಾಸಲೆಯಲ್ಲೆಲ್ಲ ಅಪ್ಪಣ್ಣನ ಸಂಬಂಧಿಕರೇ ಇದ್ದುದ್ದರಿಂದ ಯಾರೂ ಬರಲು ತಯ್ಯಾರಿರಲಿಲ್ಲ. 

   ನಾಲ್ಕಾರು ತಿಂಗಳಲ್ಲಿ ಊರಿನ ಅರ್ಧದಷ್ಟು ಜನರ ತಲೆ ಕೂದಲು ಸಿಕ್ಕಾಪಟ್ಟೆ ಬೆಳೆದು ಅವರೆಲ್ಲ ನೋಡಲು ನಾಟಕಗಳಲ್ಲಿನ ಋಷಿಮುನಿಗಳಂತೆ ಕಾಣಿಸತೊಡಗಿದರು. ಮಕ್ಕಳ ಕೂದಲೂ ಬೆಳೆದು ಅವುಗಳು ಬಾಲಮುನಿಗಳಂತೆ ಗೋಚರಿಸತೊಡಗಿದವು.  ತಲೆಯಲ್ಲಿ ಹೇನುಗಳಾಗಿ ಕುಳಿತಲ್ಲಿ ನಿಂತಲ್ಲಿ ತಲೆ ಕೆರೆದುಕೊಳ್ಳುತ್ತ ಇಡೀ ಊರು ವಿಚಿತ್ರವಾಗಿಯೂ ಮತ್ತು ನಿಗೂಢವಾದ ಸಮಸ್ಯೆಯಲ್ಲಿ ಸಿಲುಕಿರುವಂತೆ ಅನುಭವಕ್ಕೆ ಬರತೊಡಗಿತು. ಗಡ್ಡ ಮತ್ತು ತಲೆ ಕೂದಲು ಬೆಳೆದು ಅಸಹ್ಯವಾಗಿ ಕಾಣುತ್ತಿದ್ದ ತಮ್ಮ ಗಂಡಂದಿರನ್ನು ಹೆಣ್ಣುಮಕ್ಕಳು ರಾತ್ರಿ ತಮ್ಮ ಪಕ್ಕದಲ್ಲಿ ಮಲಗಲು ಬಿಡದೆ ಇರುವುದರಿಂದ ಊರ ಹರೆಯದ ಗಂಡುಗಳೆಲ್ಲ ಮನೆಯ ಅಂಗಳದಲ್ಲೊ ಇಲ್ಲವೇ ಊರಗುಡಿಯ ಪ್ರಾಂಗಣದಲ್ಲೊ ಮಲಗಿ ಊರ ನ್ಯಾಯಸ್ಥರಿಗೆ ಹಿಡಿಶಾಪ ಹಾಕತೊಡಗಿದರು.  ಊರಿನಲ್ಲಿ ಮದುವೆಗೆ ಬೆಳೆದುನಿಂತ ಗಂಡುಗಳಿಗೆ ಬೇರೆ ಊರಿನವರು ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡಲು ಹಿಂದೇಟು ಹಾಕತೊಡಗಿದರು. ಮಕ್ಕಳ ತಲೆಯಿಂದ ಹೇನುಗಳು ತಮ್ಮ ತಲೆಗೆ ಸೇರಿ ಎಲ್ಲಿ ಆರೋಗ್ಯ ಹಾಳಾಗುವುದೋ ಎಂದು ಹೆದರಿ ಊರಿನಲ್ಲಿದ್ದ ಒಂದೇ ಒಂದು ಸರ್ಕಾರಿ ಶಾಲೆಗೆ ಪಟ್ಟಣದಿಂದ ಬರುತ್ತಿದ್ದ ಶಿಕ್ಷಕರು ಯಾವುದ್ಯಾವುದೋ ಸಬೂಬು ಹೇಳಿ ಗೈರುಹಾಜರಾಗತೊಡಗಿದ್ದರಿಂದ ಮಕ್ಕಳು ಅಂಕೆಗೆ ಸಿಗದೆ ಉಡಾಳರಂತೆ ವರ್ತಿಸಲಾರಂಭಿಸಿದವು. ಮಕ್ಕಳ ಕಷ್ಟ ಮತ್ತು ಅವುಗಳ ಉಡಾಳತನ ನೋಡಲಾಗದೆ ಊರ ಕೆಲವು ಸೊಸೆಯಂದಿರು ಊರಿಗೆ ಕ್ಷೌರಿಕನನ್ನು ಕರೆತಂದ ಮೇಲಷ್ಟೆ ಮರಳಿ ಬರುವುದಾಗಿ  ಹೇಳಿ  ಮಕ್ಕಳನ್ನು ಕಟ್ಟಿಕೊಂಡು ತಮ್ಮ ತಮ್ಮ ತವರುಮನೆಯ ಹಾದಿ ಹಿಡಿದರು. ಊರು ತನ್ನ ಮೊದಲಿನ ಹೊಳಪನ್ನು ಕಳೆದುಕೊಂಡು ಸೂತಕದ ಛಾಯೆ ಇಡೀ ಊರನ್ನು ಆವರಿಸಿದಂತೆಯೂ ಮತ್ತು ಅಲ್ಲಿ ವಾಸಿಸುತ್ತಿದ್ದ ಜನ ಯಾವುದೋ ಅನ್ಯಗ್ರಹದಿಂದ ಬಂದ ಜೀವಿಗಳಂತೆ ನೋಡುವ ಕಣ್ಣುಗಳಿಗೆ ಗೋಚರಿಸತೊಡಗಿದರು.

   ಒಂದು ಬೆಳಗ್ಗೆ ಅಪ್ಪಣ್ಣ ಕ್ಷೌರದ ಪೆಟ್ಟಿಗೆ ಕೈಯಲ್ಲಿ ಹಿಡಿದು ಬಾಗಿಲು ತೆರೆದು ಹೊರಬಂದಾಗ ಮನೆಯ ಎದುರು ಊರಿನ ಜನ ಉದ್ದನೆಯ ಸರತಿ ಸಾಲಿನಲ್ಲಿ ನಿಂತಿರುವುದು ಕಾಣಿಸಿತು. ಮಕ್ಕಳು, ವಯಸ್ಕರು, ವೃದ್ಧರು ಮಾತ್ರವಲ್ಲದೆ ಊರ ಗೌಡರು, ಶ್ಯಾನುಭೋಗರು, ಪಟೇಲರು ಎಲ್ಲರೂ ಅಪ್ಪಣ್ಣ ಬಾಗಿಲು ತೆರೆದು ಹೊರಬರುವುದನ್ನೇ ಕಾಯುತ್ತ ನಿಂತಿದ್ದರು. ಅಪ್ಪಣ್ಣ ಕಟ್ಟೆಯನ್ನು ಏರಿ ಕುಳಿತು ಕ್ಷೌರದ ಪೆಟ್ಟಿಗೆಗೆ ನಮಸ್ಕರಿಸಿ ಬಟ್ಟಲಲ್ಲಿ ನೀರು ಹುಯ್ದು ನೀರಿನಲ್ಲಿ ಕೈ ಅದ್ದಿ ತನ್ನೆದುರು ಕುಳಿತ ಶಾಂತಪ್ಪಗೌಡರ ತಲೆಗೆ ರಪರಪನೆ ಬಡಿಯತೊಡಗಿದ. ಅಪ್ಪಣ್ಣನ ಕೈಯ ತಾಳಕ್ಕೆ ಗೌಡರಿಗೆ ವಿಚಿತ್ರ ಅಮಲೇರಿದಂತಾಗಿ ಅವರ ಮುಖದಲ್ಲಿ ಒಂದು ರೀತಿಯ ನೆಮ್ಮದಿ ಮತ್ತು ಸಮಾಧಾನದ ಭಾವ ಮೂಡತೊಡಗಿತು. ಆ ಕ್ಷಣಕ್ಕೆ ಇಡೀ ಊರು ಆ ಒಂದು ನೆಮ್ಮದಿಗಾಗಿ ಅಪ್ಪಣ್ಣನ ಮನೆ ಎದುರು ಕಾದು ಕುಳಿತಂತೆ ಭಾಸವಾಗತೊಡಗಿತು.

(ಜೂನ್ ೬, ೨೦೧೯ ರ  'ತರಂಗ' ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ)


-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟ 


Tuesday, March 26, 2019

ನೆನಪು (ಕಥೆ)

           ದಾಮೋದರ ಜೋಷಿ ಒಂದು ಬೆಳಗ್ಗೆ ಹಾಸಿಗೆಯಲ್ಲಿ ನಿದ್ದೆಯಿಂದ ಎದ್ದು ಕುಳಿತವನು ಮಲಗುವ ಕೋಣೆಯಲ್ಲಿನ ವಸ್ತುಗಳನ್ನೆಲ್ಲ ಹೊಸದಾಗಿ ನೋಡುತ್ತಿರುವವನಂತೆ ಪ್ರತಿಯೊಂದು ವಸ್ತುವನ್ನು ದಿಟ್ಟಿಸಿ ನೋಡತೊಡಗಿದ. ದೇಹ ಮತ್ತು ಮನಸ್ಸು ಭಾರವನ್ನು ಕಳೆದುಕೊಂಡು ಹಗುರಾದಂತೆಯೂ ತಾನು ಯಾವುದೋ ಒಂದು ಅನೂಹ್ಯ ಅನುಭವಕ್ಕೆ ಒಳಗಾದಂತೆಯೂ ಅವನಿಗೆ ಭಾಸವಾಗತೊಡಗಿತು. ಎಷ್ಟು ಪ್ರಯತ್ನಿಸಿದರೂ ನಿನ್ನೆ ನಡೆದ ಘಟನೆಗಳು ಅವನ ನೆನಪಿಗೆ ಬರುತ್ತಿಲ್ಲ. ನೆನಪಿನ ಕೋಶದ ಭಾಗವೊಂದು ತನ್ನಿಂದ ಕಳಚಿ ಬಿದ್ದಂತೆಯೂ ಮತ್ತು ಹೀಗಾಗಿದ್ದರಿಂದ ತನ್ನಲ್ಲಿ ಲವಲವಿಕೆ ಮೂಡಿದಂತೆಯೂ ಅನಿಸಲುತೊಡಗಿತು. ರಾತ್ರಿ ಅಂಗಡಿ ಬಾಗಿಲು ಹಾಕಿ ಮನೆಗೆ ಬಂದು ಊಟ ಮಾಡಿದ್ದಷ್ಟೆ ತನಗೆ ನಿದ್ದೆ ಯಾವಾಗ ಬಂತು ಎನ್ನುವುದಾಗಲಿ ರಾತ್ರಿ ಏನು ನಡೆಯಿತೆನ್ನುವುದಾಗಲಿ ನೆನಪಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದ ದಾಮೋದರನಿಗೆ ಎಲ್ಲವೂ ಗೋಜಲುಗೋಜಲಾಗಿ ಕಾಣಿಸಿತು. ಅಲ್ಲಲ್ಲಿ ಚದುರಿದ ನೆನಪಿನ ತುಣುಕುಗಳನ್ನು ಒಂದೊಂದಾಗಿ ಜೋಡಿಸಿದಾಗ ರಾತ್ರಿ ಕನಸಿನಲ್ಲಿ ಶ್ವೇತ ವಸ್ತ್ರಧಾರಿಯಾದ ಜಟಾಧಾರಿ ಮುದುಕನೊಬ್ಬ ಕಾಣಿಸಿಕೊಂಡು ತನಗೆ ಏನನ್ನೊ ಹೇಳಿದನೆಂದೂ ಮತ್ತು ಹತ್ತಿರ ಬಂದು ತನ್ನ ಕೈಯಿಂದ ನನ್ನ ತಲೆಯನ್ನು ಸವರಿದನೆನ್ನುವ ಅಸ್ಪಷ್ಟ ಸಂಗತಿಯೊಂದು ಅವನ ಸ್ಮೃತಿ ಪಟಲದ ಮೇಲೆ ಮೂಡಿತು. ಆ ಮುದುಕ ಹಾಗೆ ತನ್ನ ತಲೆಯನ್ನು ಸವರಿದ ಕ್ಷಣದಿಂದಲೇ ನನಗೆ ಆ ದಿನವೆಲ್ಲ ನಡೆದ ಘಟನೆಗಳ ಯಾವ ನೆನಪೂ ಮನಸ್ಸಿನಲ್ಲಿ ಉಳಿಯದ ಅನುಭವವಾಯಿತೆನ್ನುವ ಅರಿವು ಬಂದದ್ದೆ ದಾಮೋದರ ದಗ್ಗನೆ ಹಾಸಿಗೆಯಿಂದ ಎದ್ದು ಹತ್ತಿರದ ಕಿಟಕಿಯ ಬಳಿ ಹೋಗಿ ನಿಂತ. ಕಿಟಕಿಯ ಹೊರಗೆ ಕಾಣುತ್ತಿದ್ದ ಮನೆಯ ಅಂಗಳದಲ್ಲಿನ ಮರಗಿಡಗಳು, ಹೂ ಹಣ್ಣುಗಳು, ಅಮ್ಮ ಬಿಡಿಸಿದ ರಂಗೋಲಿ ಸುಂದರ ದೃಶ್ಯಗಳಂತೆ ಗೋಚರಿಸಿ ಅವುಗಳನ್ನೆ ನೋಡುತ್ತ ಮೈಮರೆತು ನಿಂತ. 

  ಬೆಳ್ಳನೆಯ ಪಂಚೆಯನ್ನು ಉಟ್ಟಿದ್ದ ಬರೀ ಮೈಯ ಸಣಕಲು ದೇಹದ ಗಡ್ಡ ಮೀಸೆ ಬಿಟ್ಟಿದ್ದ ಜಟಾಧಾರಿ ಆ ಮುದುಕ ನಿನ್ನೆಯಷ್ಟೆ ಕನಸಿನಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಕಳೆದ ಹಲವು ದಿನಗಳಿಂದ ಪ್ರತಿನಿತ್ಯ ಕನಸಿನಲ್ಲಿ ಬಂದು ಕೆಲವು ಕ್ಷಣಗಳ ಕಾಲ ಸುಮ್ಮನೆ ಹತ್ತಿರ ನಿಂತು ಹೊರಟು ಹೋಗುತ್ತಿದ್ದ. ದಾಮೋದರನಿಗೂ ಅದೊಂದು ವಿಚಿತ್ರ ಸಂಗತಿಯಾಗಿ ಕಾಣಿಸಿದರೂ ತನ್ನ ದಿನನಿತ್ಯದ ಬಿಡುವಿಲ್ಲದ ದುಡಿಮೆಯಲ್ಲಿ ಮರೆತು ಬಿಟ್ಟಿದ್ದ. ನಿನ್ನೆಯಷ್ಟೆ ಅವನು ಹತ್ತಿರ ಬಂದು ತನ್ನನ್ನು ಸ್ಪರ್ಷಿಸಿದ್ದು. ಮುದುಕನ ಕೈ ತನ್ನ ತಲೆಯನ್ನು ಸ್ಪರ್ಷಿಸಿದ್ದೆ ದಾಮೋದರನಿಗೆ ದೇಹ ಹಗುರಾದಂತೆಯೂ ತಾನು ಗಾಳಿಯಲ್ಲಿ ತೇಲಾಡುತ್ತಿರುವಂತೆಯೂ ಭಾಸವಾಗತೊಡಗಿತು. ಆ ಮುದುಕನ ಸ್ಪರ್ಷದಲ್ಲಿ ಅದೇನೋ ಮಾಂತ್ರಿಕತೆ ಇದ್ದಂತೆ ಭಾಸವಾಗಿ ತಾನು ಅನಿವರ್ಚನೀಯ ಆನಂದಕ್ಕೆ ಒಳಗಾದ. ನರನಾಡಿಗಳಲ್ಲಿ ವಿದ್ಯುತ್ ಸಂಚಾರವಾದಂತಾಗಿ ಅವನ ಮೈ ವಿಚಿತ್ರವಾದ ಅನುಭವದಿಂದ ಕಂಪಿಸಿತು. 

   ಕೋಣೆಯಿಂದ ಹೊರಬಂದ ದಾಮೋದರನಿಗೆ ಮನೆಯ ಎದುರಿನ ರಸ್ತೆಯಲ್ಲಿದ್ದ ಸಾರ್ವಜನಿಕ ನಲ್ಲಿಯಿಂದ ನೀರಿನ ಕೊಡವನ್ನು ಬಗಲಲ್ಲಿಟ್ಟುಕೊಂಡು ಏದುಸಿರು ಬಿಡುತ್ತ ಪಡಸಾಲೆಯ ಮೆಟ್ಟಿಲುಗಳನ್ನು ಏರುತ್ತಿರುವ ಅಮ್ಮ ಕಣ್ಣಿಗೆ ಬಿದ್ದಳು. ಅಮ್ಮನ ಮುಖದಲ್ಲಿನ ಆಯಾಸ ಮತ್ತು ಬಳಲಿಕೆ ಅವನಲ್ಲಿ ವಿಚಿತ್ರ ಸಂಕಟವನ್ನುಂಟು ಮಾಡಿತು. ಲಗುಬಗೆಯಿಂದ ಮೆಟ್ಟಿಲಿಳಿದು ಅಮ್ಮನ ಹತ್ತಿರ ಹೋದವನು ಅವಳ ಕಂಕುಳಲ್ಲಿದ್ದ ನೀರಿನ ಕೊಡವನ್ನು ತನ್ನ ಕೈಗೆ ತೆಗೆದುಕೊಂಡು ಅಡುಗೆ ಕೋಣೆಯತ್ತ ಹೋಗುತ್ತ ‘ಅಮ್ಮ ನಿನಗೆ ಈಗ ಮೊದಲಿನಂತೆ ಆಗೋದಿಲ್ಲ. ಯಾಕೆ ಆಯಾಸ ಮಾಡ್ಕೊತಿ’ ಎಂದು ನುಡಿದ. ಸಾವಿತ್ರಮ್ಮನವರು ದಂಗು ಬಡಿದಂತೆ ಒಂದು ಕ್ಷಣ ತಮ್ಮ ಇರುವಿಕೆಯನ್ನೇ ಮರೆತು ಅಡುಗೆ ಕೋಣೆಯತ್ತ ಹೋಗುತ್ತಿದ್ದ ಮಗನನ್ನೇ ನೋಡುತ್ತ ನಿಂತರು. ಅಡುಗೆ ಮನೆಯಲ್ಲಿ ಒಲೆಯ ಮೇಲಿಟ್ಟಿದ್ದ ಡಿಕಾಕ್ಷನ್ನಿಗೆ ಹಾಲು ಬೆರೆಸುತ್ತಿದ್ದ ಅಕ್ಕ ಶಾರದಾ ತಮ್ಮ ದಾಮೋದರ ನೀರಿನ ಕೊಡ ಹಿಡಿದುಕೊಂಡು ಬಂದದ್ದನ್ನು ನೋಡಿ ‘ಯಾಕೋ ದಾಮೂ ಅಮ್ಮ ಎಲ್ಲಿ’ ಎಂದು ಕೇಳಿದವಳೇ ತಮ್ಮನನ್ನು ಹೊಸದಾಗಿ ನೋಡುತ್ತಿರುವಂತೆ ನೋಡತೊಡಗಿದಳು. ಬೆಳಗಿನ ಪ್ರಾತ:ವಿಧಿಗಳನ್ನು ಮುಗಿಸಿ ಚಹಾ ಕುಡಿಯಲೆಂದು ಅಡುಗೆ ಮನೆಗೆ ಬಂದ ಶ್ರೀನಿವಾಸರಾಯರಿಗೂ ಮಗ ಇವತ್ತು ಬೇಗನೆ ಎದ್ದು ಮನೆಕೆಲಸದಲ್ಲಿ ತೊಡಗಿರುವುದು ನೋಡಿ ಅಚ್ಚರಿ ಎನಿಸಿತು. ದಾಮೋದರ ಕೊಡದಲ್ಲಿದ್ದ ನೀರನ್ನು ಬಚ್ಚಲು ಮನೆಯಲ್ಲಿದ್ದ ಹಂಡೆಗೆ ಸುರಿದು ಖಾಲಿಯಾದ ಕೊಡವನ್ನು ಕೈಯಲ್ಲಿ ಹಿಡಿದು ಲಗುಬಗೆಯಿಂದ ಅಡುಗೆ ಕೋಣೆಯನ್ನು ದಾಟಿ ಪಡಸಾಲೆಯ ಮೆಟ್ಟಿಲಿಳಿದು ರಸ್ತೆಗೆ ಹೋದ. ಅಡುಗೆ ಕೋಣೆಯಲ್ಲಿ ಒಲೆಯ ಮುಂದೆ ಕುಳಿತಿದ್ದ ಶ್ರೀನಿವಾಸರಾಯರು ಮತ್ತು ಶಾರದಾ ಅರ್ಥವಾಗದವರಂತೆ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಅಷ್ಟರಲ್ಲಿ ಸಾವಿತ್ರಮ್ಮನವರು ಅಡುಗೆ ಮನೆಗೆ ಬಂದು ಅವರನ್ನು ಕೂಡಿಕೊಂಡರು. ‘ಏನ್ರೀ ಇದು ವಿಚಿತ್ರ. ಬೆಳಗ್ಗೆ ಎದ್ದ ಕೂಡಲೇ ದುರ್ವಾಸಮುನಿ ಅವತಾರ ತಾಳ್ತಿದ್ದವನು ಇವತ್ತು ಎಷ್ಟೊಂದು ಶಾಂತನಾಗಿದ್ದಾನೆ. ಏನಾಯ್ತುರಿ ಇವನಿಗೆ’ ಒಲೆಯ ಮುಂದೆ ಕೂಡುತ್ತ ಸಾವಿತ್ರಮ್ಮನವರು ಗಂಡ ಮತ್ತು ಮಗಳ ಮುಖ ನೋಡುತ್ತ ಅಚ್ಚರಿ ವ್ಯಕ್ತಪಡಿಸಿದರು. ರಾಯರಿಗಾಗಲಿ ಮತ್ತು ಶಾರದಾಳಿಗಾಗಲಿ ಏನು ಉತ್ತರಿಸುವುದೆಂದು ತಿಳಿಯದೆ ಎದುರಿನಲ್ಲಿದ್ದ ಚಹಾದ ಲೋಟವನ್ನು ಕೈಗೆತ್ತಿಕೊಂಡು ಚಹಾ ಕುಡಿಯಲಾರಂಭಿಸಿದರು. ಅಲ್ಲಿದ್ದ ಮೂರೂ ಜನರ ಮುಖಗಳಲ್ಲಿ ಅಚ್ಚರಿಯೊಂದು ಮನೆ ಮಾಡಿತ್ತು.

   ಹೊರಗೆ ರಸ್ತೆಯಲ್ಲಿ ದಾಮೋದರ ಖಾಲಿ ಕೊಡ ಹಿಡಿದು ಬಂದದ್ದನ್ನು ನೋಡಿದ ನಲ್ಲಿಯ ಹತ್ತಿರ ಜಮಾಯಿಸಿದ್ದ ಅಕ್ಕಪಕ್ಕದ ಮನೆಯವರು ಪರಸ್ಪರ ಮುಖ ನೋಡಿಕೊಂಡು ದೂರ ಸರಿದು ಅವನಿಗೆ ಜಾಗ ಮಾಡಿಕೊಟ್ಟರು. ಅದುವರೆಗೂ ಗೌಜು ಗದ್ದಲದಿಂದ ಕೂಡಿದ್ದ ಆ ಜಾಗ ದಾಮೋದರ ಬರುತ್ತಿದ್ದಂತೆ ಸದ್ದು ಕಡಿಮೆಯಾಗಿ ನೀರವ ಮೌನವನ್ನು ಹೊದ್ದು ಮಲಗಿರುವಂತೆ ಭಾಸವಾಗತೊಡಗಿತು. ದಾಮೋದರನಿಗೂ ಅಲ್ಲಿ ನೆಲೆಸಿದ ಮೌನ ಅಸಹನೀಯ ಎನಿಸಿತು. ನಿಂತಿದ್ದವರ ಮೇಲೊಮ್ಮೆ ತನ್ನ ದೃಷ್ಟಿಯನ್ನು ಹರಿಸಿದವನಿಗೆ ಅಲ್ಲಿ ತನಗಿಂತ ವಯಸ್ಸಾದವರೆ ಗೋಚರಿಸಿದರು. ಪಕ್ಕದ ಮನೆಯ ಕಾಮಾಕ್ಷಮ್ಮ, ಎದುರು ಮನೆಯ ಗೌರಜ್ಜಿ, ಹಿಂದಿನ ಮನೆಯ ಲಿಂಗಜ್ಜ ಅವರನ್ನೆಲ್ಲ ನೋಡಿ ಅವನಿಗೆ ಅಯ್ಯೋಪಾಪ ಎನಿಸಿತು. ಮನೆಯಲ್ಲಿ ಮೊಮ್ಮಕ್ಕಳೊಡನೆ ಆಡುತ್ತಲೋ ಇಲ್ಲವೇ ಸಮವಯಸ್ಸಿನವರೊಂದಿಗೆ ಹರಟುತ್ತಲೋ ಕಾಲಕಳೆಯಬೇಕಾದವರು ಇಲ್ಲಿ ನೀರಿಗಾಗಿ ಪಾಳಿಗೆ ನಿಂತಿರುವುದು ನೋಡಿ ಅವನಿಗೆ ಬೇಸರವೆನಿಸಿತು. ನಲ್ಲಿಯ ನೀರು ವ್ಯರ್ಥ ಹರಿಯುತ್ತಿದ್ದುದ್ದರಿಂದ ದಾಮೋದರ ಕೊಡವನ್ನು ತುಂಬಿಸಿಕೊಳ್ಳಲಿ ಎಂದು ದೂರ ಸರಿದು ನಿಂತವರಿಗೆ ಅವನು ದೂರದಲ್ಲೇ ಕೈಕಟ್ಟಿಕೊಂಡು ನಿಂತಿರುವುದು ನೋಡಿ ಅಲ್ಲಿದ್ದವರಿಗೆಲ್ಲ ತುಂಬ ಆಶ್ಚರ್ಯವಾಯಿತು. ‘ದಾಮೂ ನಿನಗೆ ಅಂಗಡಿಗೆ ಹೊತ್ತಾಗುತ್ತೆ ನೀನು ನೀರು ತುಂಬ್ಕೊ. ನಾವೆಷ್ಟೆಂದರೂ ಕೆಲಸವಿಲ್ಲದೆ ಮನೆಯಲ್ಲಿರೋ ದಂಡಪಿಂಡಗಳು ತಾನೆ’ ಗೌರಜ್ಜಿ ದಾಮೋದರನನ್ನು ನೋಡುತ್ತ ನುಡಿದಳಾದರೂ ಅವನು ನೀಡಬಹುದಾದ ಪ್ರತ್ಯುತ್ತರವನ್ನು ಊಹಿಸಿಕೊಂಡು ಅವಳ ಧ್ವನಿ ಹೆದರಿಕೆಯಿಂದ ನಡುಗುತ್ತಿತ್ತು. ದಾಮೋದರ ಗೌರಜ್ಜಿಯ ಮುಖವನ್ನೊಮ್ಮೆ ನೋಡಿ ಸಮಾಧಾನದ ಧ್ವನಿಯಲ್ಲಿ ‘ಗೌರಜ್ಜಿ ಪಾಪ ನೀವೆಲ್ಲ ವಯಸ್ಸಾದವರು ಹೀಗೆ ಬಿಸಿಲಲ್ಲಿ ನಿಂತಿರುವುದು ನೋಡಿದರೆ ಕರುಳು ಚುರುಕ್ ಅನ್ನುತ್ತೆ. ಮೊದಲು ನೀವು ನೀರು ತುಂಬಿಸಿಕೊಳ್ಳಿ. ನಾನು ಆಮೇಲೆ ತೊಗೊಳ್ತೀನಿ’ ಎಂದವನೇ ಖಾಲಿ ಕೊಡವನ್ನು ನಲ್ಲಿಯ ಸಮೀಪದಲ್ಲಿಟ್ಟು ಮನೆಯ ಒಳಗಡೆ ಹೋದ. ಅಲ್ಲಿದ್ದ ಮೂರೂಜನ ಅವಕ್ಕಾಗಿ ಮನೆಯ ಒಳಗೆ ಹೋಗುತ್ತಿದ್ದ ದಾಮೋದರನನ್ನೇ ನೋಡುತ್ತ ಕ್ಷಣಕಾಲ ಮೈಮರೆತು ನಿಂತವರು ನಂತರ ಎಚ್ಚೆತ್ತುಕೊಂಡು ಲಗುಬಗೆಯಿಂದ ನೀರು ತುಂಬಿಸಿಕೊಳ್ಳತೊಡಗಿದರು.

  ದಾಮೋದರ ಜೋಷಿಗೆ ಈಗ ಮೂವತ್ತರ ಹರೆಯ. ಇನ್ನೂ ಮದುವೆಯಾಗಿಲ್ಲ. ಅಪ್ಪ ಶ್ರೀನಿವಾಸರಾಯರು ಮಗನಿಗಾಗಿ ಹೆಣ್ಣು ನೋಡುತ್ತಿರುವರಾದರೂ ಪಾಪ ದಾಮೋದರನಿಗೆ ಇನ್ನೂ ಕಂಕಣಭಾಗ್ಯ ಕೂಡಿ ಬಂದಿಲ್ಲ. ಮದುವೆಯಾಗಿ ಅತ್ತೆ ಮನೆಯಲ್ಲಿನ ನೂರಾರು ಸಮಸ್ಯೆಗಳಿಂದ ಗಂಡನೊಡನೆ ಜಗಳವಾಡಿ ತವರುಮನೆಗೆ ಬಂದು ಕುಳಿತ ಅಕ್ಕ ಶಾರದಾಳಿಂದಾಗಿ ತನಗೆ ಯಾರೂ ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ ಎನ್ನುವ ಸಿಟ್ಟು ಅವನಿಗಿದೆ. ಶ್ರೀನಿವಾಸರಾಯರದೋ ಪಾಪ ಬಡತನದ ಸಂಸಾರ. ತಲಾತಲಾಂತರದಿಂದ ನಡೆಸಿಕೊಂಡು ಬರುತ್ತಿರುವ ದಿನಸಿ ಅಂಗಡಿಯೇ ಅವರ ಸಂಸಾರಕ್ಕೆ ಆಧಾರವಾಗಿತ್ತು. ಸಾವಿತ್ರಮ್ಮನವರದು ಆರತಿ ತೊಗೊಂಡರೆ ಉಷ್ಣ ತೀರ್ಥ ಕುಡಿದರೆ ಶೀತ ಎನ್ನುವ ಆರೋಗ್ಯ. ಮಕ್ಕಳನ್ನು ತಮ್ಮ ಬಡತನದ ಕಾರಣ ಹೆಚ್ಚಿಗೆ ಓದಿಸಲು ಸಾಧ್ಯವಾಗಲಿಲ್ಲ ಎನ್ನುವ ಕೊರಗು ಶ್ರೀನಿವಾಸರಾಯರನ್ನು ಆಗಾಗ ಕಾಡುವುದುಂಟು. ಊರಿನಲ್ಲಿರುವ ಹೈಸ್ಕೂಲು ಶಿಕ್ಷಣ ಮುಗಿದದ್ದೆ ಶ್ರೀನಿವಾಸರಾಯರು ಮಗನನ್ನು ತಮ್ಮ ನಿತ್ಯದ ದಿನಸಿ ಅಂಗಡಿಯ ವ್ಯವಹಾರದಲ್ಲಿ ಜೊತೆಯಾಗಿಸಿಕೊಂಡರು. ಮುಂದೆ ಓದಬೇಕೆನ್ನುವ ಆಸೆ ಇದ್ದರೂ ಮನೆಯ ಬಡತನ ಅಮ್ಮನ ಅನಾರೋಗ್ಯ ಅಕ್ಕನ ಮದುವೆ ಅದಕ್ಕೆ ಅಡ್ಡಿಯಾಗಿವೆ ಎನ್ನುವ ಭಾವನೆ ದಾಮೋದರನಲ್ಲಿ ಮೊಳಕೆಯೊಡೆದು ಈಗ ಆ ಭಾವನೆಯೇ ಬಲಿತುಕೊಂಡಿತ್ತು. ತನ್ನ ಜೊತೆಯಲ್ಲಿ ಓದಿದವರೆಲ್ಲ ಕಾಲೇಜು ಸೇರಿ ಈಗ ಕೈತುಂಬ ಸಂಬಳ ತರುವ ಉದ್ಯೋಗದಲ್ಲಿರುವಾಗ ನಾನಿನ್ನೂ ಇದೇ ಹಳ್ಳಿಯಲ್ಲಿ ಆರಕ್ಕೇರದ ಮೂರಕ್ಕಿಳಿಯಿದ ವ್ಯಾಪಾರದಲ್ಲಿ ಬದುಕನ್ನೇ ಹಾಳು ಮಾಡಿಕೊಂಡೆ ಎನ್ನುವ ಸಿಟ್ಟು ದಾಮೋದರನಿಗಿದೆ. ಅದಕ್ಕೆಂದೇ ಅವನು ಮನೆಯಲ್ಲಾಗಲಿ ಅಕ್ಕಪಕ್ಕದ ಮನೆಯವರೊಂದಿಗಾಗಲಿ ನಗುನಗುತ್ತ ಮಾತನಾಡುವುದೇ ಕಡಿಮೆ. ಅವನ ಸಮವಯಸ್ಸಿನವರಲ್ಲಿ ಹಲವು ಸ್ನೇಹಿತರು ದೂರದ ಊರುಗಳಲ್ಲಿಯೂ ಮತ್ತು ಇನ್ನು ಕೆಲವರು ಮದುವೆಯಾಗಿ ಅದೇ ಊರಿನಲ್ಲಿದ್ದರೂ ಅವರೊಂದಿಗೆ ದಾಮೋದರನ ಒಡನಾಟ ಯಾವತ್ತೋ ಕಡಿದು ಹೋಗಿತ್ತು. ಮನೆ ಬಿಟ್ಟರೆ ಅಂಗಡಿ ಇವರಡೇ ಅವನ ಪ್ರಪಂಚ ಎಂಬಂತಾಗಿ ದಿನದಿಂದ ದಿನಕ್ಕೆ ಯಾರನ್ನೇ ಕಂಡರೂ ಸಿಡಿಮಿಡಿಗೊಳ್ಳುವುದು ಮಾತಿಗೆ ಪ್ರತಿ ಮಾತನ್ನಾಡಿ ಜಗಳಕ್ಕೆ ನಿಲ್ಲುವುದು ಸಹಜ ಸ್ವಭಾವ ಎನ್ನುವಂತಾಯಿತು. ಇಡೀ ಸಂಸಾರದ ಖರ್ಚನ್ನೆಲ್ಲ ಮಗನೇ ಈಗ ನಿಭಾಯಿಸುತ್ತಿದ್ದರಿಂದ ಮನೆಯಲ್ಲಿ ಅವನಿಗೆ ಯಾರೂ ಎದುರಾಡುತ್ತಿರಲಿಲ್ಲ. ಶಾರದಾ ಗಂಡನ ಮನೆಯಲ್ಲಿ ಜಗಳವಾಡಿ ತವರು ಮನೆ ಸೇರಿದವಳಿಗೆ ಇಲ್ಲಿ ಒಂದೊತ್ತಿನ ಊಟಕ್ಕೂ ಹೊರೆಯಾದೆನೇನೋ ಎನ್ನುವ ಭಾವವೇ ಬೆಳೆದು ಹೆಮ್ಮರವಾಗಿ ತಮ್ಮನೆದುರು ನಿಂತು ಮಾತನಾಡುವುದಕ್ಕೂ ಹೆದರುತ್ತಿದ್ದಳು. ಒಂದುದಿನವಂತೂ ಖರ್ಚಿಗೆಂದು ಒಂದಿಷ್ಟು ಹಣ ಕೇಳಿದ ಶಾರದಾಳನ್ನು ದಾಮೋದರ ಅಪ್ಪ ಅಮ್ಮನ ಎದುರೇ ಬಾಯಿಗೆ ಬಂದಂತೆ ಬಯ್ದು ಹೊಡೆಯಲು ಹೋಗಿದ್ದ. ಮಗನ ಅವತಾರ ನೋಡಿ ಶ್ರೀನಿವಾಸರಾಯರು ಮತ್ತು ಸಾವಿತ್ರಮ್ಮ ಭೂಮಿಗಿಳಿದು ಹೋಗಿದ್ದರು. ಆ ಘಟನೆಯ ನಂತರ ಮಗನ ಎದುರು ನಿಂತು ಮಾತನಾಡಲೂ ಅವರು ಹೆದರುತ್ತಿದ್ದರು.

      ಇಂಥ ಸ್ವಭಾವದ ದಾಮೋದರ ಜೋಷಿ ಒಂದು ದಿನ ಇದ್ದಕ್ಕಿದ್ದಂತೆ ಅಕ್ಕರೆ ತುಂಬಿದ ಮಾತುಗಳನ್ನಾಡತೊಡಗಿದಾಗ ಊರಿನವರಿರಲಿ ಮನೆಯವರಿಗೂ ಅವನ ಬದಲಾದ ಸ್ವಭಾವ ವಿಚಿತ್ರ ಸಮಸ್ಯೆಯಾಗಿ ತೋರಿತು. ಅಕ್ಕಪಕ್ಕದ ಮನೆಯವರು ದಾಮೋದರ ಅಂಗಡಿಗೆ ಹೋದ ಸಮಯವನ್ನು ನೋಡಿಕೊಂಡು ಸಾವಿತ್ರಮ್ಮನವರಿಗೆ ನಿಮ್ಮ ಮಗನಿಗೆ ಯಾವುದೋ ದೆವ್ವ ಮೆಟ್ಟಿಕೊಂಡಿರಬಹುದು ಯಾವುದಕ್ಕೂ ಮಂತ್ರಗಾರನ ಹತ್ತಿರ ಕರೆದೊಯ್ಯಿರಿ ಎಂದು ಸಲಹೆ ನೀಡಿದರು. ಇನ್ನು ಕೆಲವರು ದೇವರಿಗೆ ಹರಕೆ ಕಟ್ಟುವಂತೆಯೂ ಕೆಲವರು ಬೇಗ ಮದುವೆ ಮಾಡಿದರೆ ಸರಿಹೋಗಬಹುದೆಂದು ಹೇಳಿದರು. ಇದೇ ವೇಳೆ ದಾಮೋದರ ಭಾವನನ್ನು ಭೇಟಿ ಮಾಡಿ ಅಕ್ಕನ ಸಂಸಾರ ಸರಿಮಾಡಲು ಪ್ರಯತ್ನಿಸಿದ ವಿಷಯ ಎದುರು ಮನೆಯ ಶಾಮರಾಯರಿಂದ ತಿಳಿದು ಮನೆಯವರು ಇನ್ನಷ್ಟು ಗಾಬರಿಯಾದರು. ದಾಮೋದರನ ದಿನಚರಿಯಲ್ಲೂ ಸಾಕಷ್ಟು ಮಾರ್ಪಾಡುಗಳಾದವು. ಈ ಮೊದಲು ತಡರಾತ್ರಿ ಮನೆಗೆ ಬಂದು ಬೆಳಗ್ಗೆ ಲೇಟಾಗಿ ಎಳುತ್ತಿದ್ದವನು ಈಗ ಅಂಗಡಿ ಬಾಗಿಲು ಹಾಕಿದ್ದೆ ಬೇಗನೆ ಮನೆ ಸೇರಿಕೊಳ್ಳತೊಡಗಿದ. ಬೆಳಗ್ಗೆ ಮನೆಯ ಎದುರಿನ ನಲ್ಲಿಯಿಂದ ನೀರು ತರುವುದು, ದೇವರ ಪೂಜೆ, ಅಡುಗೆ ಮನೆಯಲ್ಲಿ ಅಕ್ಕನಿಗೆ ನೆರವಾಗುವುದು, ಅಮ್ಮನಿಗೆ ಸಮಯಕ್ಕೆ ಸರಿಯಾಗಿ ಔಷಧಿ ಕೊಡುವುದು ದಿನದಿಂದ ದಿನಕ್ಕೆ ಹೊಸ ವ್ಯಕ್ತಿಯಾಗಿ ಬದಲಾಗುತ್ತ ಹೋದ. ಈಗ ಸಾವಿತ್ರಮ್ಮನವರಿಗಾಗಲಿ ಶ್ರೀನಿವಾಸರಾಯರಿಗಾಗಲಿ ಮಗನೊಂದಿಗೆ ಮಾತನಾಡುವಾಗ ಈ ಮೊದಲಿನ ಹೆದರಿಕೆ ಇಲ್ಲದೆ ತುಂಬ ಸಲುಗೆಯಿಂದ ಮಾತನಾಡುವ ಧೈರ್ಯ ಬಂದಿದೆ. ಅಕ್ಕ ಶಾರದಾಳಿಗೆ ತಮ್ಮನೊಂದಿಗೆ ತನ್ನ ಕಷ್ಟ ಸುಖ ಹೇಳಿಕೊಳುವಷ್ಟು ಅವರಿಬ್ಬರ ನಡುವೆ ಅನ್ಯೋನ್ಯತೆ ಬೆಳೆದಿದೆ. ಅಕ್ಕಪಕ್ಕದ ಮನೆಯವರೊಂದಿಗೆ ಮತ್ತು ಅಂಗಡಿಗೆ ಬರುವ ಗಿರಾಕಿಗಳೊಂದಿಗೆ ದಾಮೋದರ ನಗುನಗುತ್ತ ಮಾತನಾಡುತ್ತ ಅವರ ಯೋಗಕ್ಷೇಮ ವಿಚಾರಿಸುವನು. ಮೊದಲಿನ ಸಿಡುಕು ಮೋರೆಯ ಸದಾ ಸಿಡಿಸಿಡಿಗುಟ್ಟುತ್ತಿದ್ದ ದಾಮೋದರ ಇವನೇ ಏನು ಎಂದು ಇಡೀ ಊರೇ ಅಚ್ಚರಿಪಡುತ್ತ ಮೂಗಿನ ಮೇಲೆ ಬೆರಳಿಟ್ಟುಕೊಂಡು ಅವನನ್ನು ನೋಡುವಷ್ಟು ನಮ್ಮ ಕಥಾನಾಯಕನ ವ್ಯಕ್ತಿತ್ವದಲ್ಲಿ ಬದಲಾವಣೆಯಾಯಿತು. ಇದಕ್ಕೆಲ್ಲ ಕಾರಣ ಮನಸ್ಸಿಗೆ ದು:ಖ ಕೊಡುವ ಸಂಗತಿಗಳು ಈಗ ದಾಮೋದರನ ನೆನಪಿನಲ್ಲುಳಿಯುತ್ತಿಲ್ಲ. ಕನಸಿನಲ್ಲಿ ಕಾಣಿಸಿಕೊಂಡ ಮುದುಕ ಅವನ ತಲೆಯನ್ನು ಸವರಿಹೋದ ಕ್ಷಣದಿಂದ ಹಿತಕರ ನೆನಪುಗಳಷ್ಟೇ ಮನಸ್ಸಿನಲ್ಲಿ ಉಳಿಯುತ್ತಿವೆ. ಸ್ವತ: ದಾಮೋದರನಿಗೂ ತನ್ನಲ್ಲಾದ ಬದಲಾವಣೆ ಅಚ್ಚರಿ ತಂದಿದೆ. ಕೆಟ್ಟ ಘಟನೆಗಳು ನೆನಪಿನಲ್ಲುಳಿಯದ ಈ ಹೊಸ ಬದುಕು ಅವನಲ್ಲಿ ಜೀವನೋತ್ಸಾಹವನ್ನು ಇಮ್ಮಡಿಗೊಳಿಸಿದೆ.

      ಹೊಸ ಮನುಷ್ಯನಾಗಿ ರೂಪಾಂತರ ಹೊಂದಿದ ನಮ್ಮ ದಾಮೋದರನಲ್ಲಿ ಮನಸ್ಸಿನ ನೆಮ್ಮದಿ ಕೆಡಿಸುವ ಘಟನೆಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಶಕ್ತಿ ಮತ್ತೆ ಪ್ರಾಪ್ತವಾಗುತ್ತೆದೆಂದು ಪಾಪ ಅವನಿಗೂ ಗೊತ್ತಿರಲಿಲ್ಲ. ಇವತ್ತು ಬೆಳಗ್ಗೆ ನಿದ್ದೆಯಿಂದ ಎಚ್ಚರವಾಗಿ ಹಾಸಿಗೆಯಲ್ಲಿ ಎದ್ದು ಕುಳಿತವನಿಗೆ ಮೈಯೆಲ್ಲ ಭಾರವಾದ ಅನುಭವ. ನಿನ್ನೆ ಇಡೀ ದಿನ ನಡೆದ ಘಟನೆಗಳೆಲ್ಲ ಒಂದೊಂದಾಗಿ ನೆನಪಿನ ಕೋಶದಿಂದ ಹೊರಬಂದು ತನ್ನ ಮೇಲೆ ದಾಳಿಯಿಡುತ್ತಿರುವಂತೆ ಭಾಸವಾಗಿ ತಲೆ ನೋವಿನಿಂದ ಸಿಡಿಯಲಾರಂಭಿಸಿತು. ತಲೆಯಲ್ಲಿ ಕಾಣಿಸಿಕೊಂಡ ನೋವು ಕ್ರಮೇಣ ದೇಹವನ್ನೆಲ್ಲ ವ್ಯಾಪಿಸುತ್ತಿರುವಂತೆ ಅನಿಸತೊಡಗಿತು.  ನಿನ್ನೆ ಬೆಳಗ್ಗೆ ರಸ್ತೆಯಲ್ಲಿ ನೀರು ತರುವಾಗ ಪಕ್ಕದ ಮನೆಯ ಗೋವಿಂದ ಬೈಯ್ದದ್ದು ಯಾವುದೋ ಮಾತಿಗೆ ಅಪ್ಪ ಹರಿಹಾಯ್ದದ್ದು ಅಂಗಡಿಯಲ್ಲಿ ಕೆಲವು ಗಿರಾಕಿಗಳು ಸಿಟ್ಟಿನಿಂದ ಮಾತನಾಡಿದ್ದು ಎಲ್ಲವೂ ಒಂದೊಂದಾಗಿ ನೆನಪಿಗೆ ಬಂದು ದಾಮೋದರನ ಮನಸ್ಸು ಕ್ಷೋಭೆಗೊಂಡಿತು. ಮರುಕ್ಷಣವೆ ಅರೇ ಕಳೆದ ಹದಿನೈದು ದಿನಗಳಿಂದ ಯಾವ ಕೆಟ್ಟ ಘಟನೆಗಳೂ ನೆನಪಿಗೆ ಬರದಿರುವ ತನಗೆ ಇವತ್ತು ಇದ್ದಕ್ಕಿದ್ದಂತೆ ಮತ್ತೆ ನೆನಪಾಗುತ್ತಿರುವುದು ಅವನಿಗೆ ಆಶ್ಚರ್ಯವೆನಿಸಿತು. ದಾಮೋದರ ತಾನು ಮತ್ತೆ ಮೊದಲಿನ ಸ್ಥಿತಿಗೆ ಮರಳಿದ್ದಕ್ಕೆ ಅಧೀರನಾದ. ಕಳೆದ ಹಲವು ದಿನಗಳಿಂದ ಯಾವ ಅಹಿತಕರ ಘಟನೆಗಳು ನೆನಪಿನಲ್ಲಿ ಸ್ಥಿರವಾಗಿ ನಿಲ್ಲದೆ ಇದ್ದುದ್ದರಿಂದ ಅವನ ಮನಸ್ಸು ತುಂಬ ಹಗುರವಾಗಿತ್ತು. ಮನೆ ಮತ್ತು ಸುತ್ತಲಿನ ಪರಿಸರ ತುಂಬ ಹಿತಕರವಾಗಿಯೂ ಮತ್ತು ಸಹನೀಯವಾಗಿಯೂ ಅವನಿಗೆ ಗೋಚರಿಸಿತ್ತು. ಮನಸ್ಸಿನೊಂದಿಗೆ ದೇಹವೂ ಲವಲವಿಕೆಯಿಂದ ಇದ್ದು ಬದುಕಿನಲ್ಲಿ ಆಸಕ್ತಿ ಮೂಡತೊಡಗಿತ್ತು. ಆದರೆ ಇವತ್ತು ಮನಸ್ಸಿನ ನೆಮ್ಮದಿ ಕದಡಿಹೋದಂತಾಗಿ ದೇಹ ಮಣಭಾರವಾದಂತಾಗಿತ್ತು. ಇಡೀ ದಿನ ದಾಮೋದರ ಒಂದು ರೀತಿಯ ಅಶಾಂತಿಯಲ್ಲೇ ಕಾಲಕಳೆದ.

     ರಾತ್ರಿ ಅಂಗಡಿಯಿಂದ ಮನೆಗೆ ಬಂದು ಊಟ ಮಾಡಿ ಮಲಗುವ ಕೋಣೆ ಸೇರಿದ ದಾಮೋದರ ಬೇಗ ನಿದ್ದೆಗೆ ಜಾರಲು ಹಂಬಲಿಸಿದ. ಕನಸಿನಲ್ಲಿ ಇಂದು ಮುದುಕ ಬರಬಹುದೇನೋ ಅನ್ನುವ ನಿರೀಕ್ಷೆ ಅವನದಾಗಿತ್ತು. ಮಲಗಿ ಒಂದೆರಡು ಗಂಟೆಗಳಾದರೂ ನಿದ್ದೆ ಹತ್ತಿರ ಸುಳಿಯದೆ ಹಾಸಿಗೆಯಲ್ಲಿ ಹೋರಳಾಡಿದ. ಘಳಿಗೆಗೊಮ್ಮೆ ಎದ್ದು ತಂಬಿಗೆಯಲ್ಲಿದ್ದ ನೀರು ಕುಡಿಯುವುದು ಗಡಿಯಾರ ನೋಡಿಕೊಳ್ಳುವುದು ಮತ್ತೆ ಮತ್ತೆ ಪುನರಾವರ್ತನೆಯಾಗತೊಡಗಿತು. ಮುದುಕನ ಆಗಮನದ ನಿರೀಕ್ಷೆಯಲ್ಲಿ ಒಂದೊಂದು ಕ್ಷಣ ಯುಗದಂತೆ ಭಾಸವಾಗತೊಡಗಿತು. ಸೂರ್ಯ ಉದಯಿಸಲು ಇನ್ನೇನು ಒಂದೆರಡು ಗಂಟೆಗಳಿವೆ ಎನ್ನುವಾಗ ದಾಮೋದರ ಗಾಢ ನಿದ್ದೆಗೆ ಜಾರಿದ. ಹಾಗೆ ನಿದ್ದೆ ಹೋದವನಿಗೆ ಕನಸಿನಲ್ಲಿ ತನ್ನ ಹತ್ತಿರ ಯಾರೋ ನಿಂತು ಮೃದುವಾದ ಧ್ವನಿಯಲ್ಲಿ ಮಾತನಾಡುತ್ತಿರುವಂತೆ ಅನ್ನಿಸಿ ದಾಮೋದರ ಕಣ್ಣು ಬಿಟ್ಟ. ಇಡೀ ಕೋಣೆ ಪ್ರಕಾಶಮಾನವಾಗಿ ಬೆಳಗಲಾರಂಭಿಸಿದಂತೆ ಅನ್ನಿಸತೊಡಗಿತು. ಎದುರಿಗೆ ಹಸನ್ಮುಖಿಯಾಗಿ ಶ್ವೇತವಸ್ತ್ರ ಧರಿಸಿದ್ದ ಜಟಾಧಾರಿ ಮುದುಕ ನಿಂತಿರುವುದು ಕಾಣಿಸಿತು. ದಾಮೋದರ ಎದ್ದು ಮುದುಕನ ಹತ್ತಿರ ಹೋದ. ಮುದುಕ ತಾನು ಮೊದಲು ನಿಂತಿದ್ದ ಸ್ಥಳದಿಂದ ಸ್ವಲ್ಪ ಹಿಂದೆ ಸರಿದ. ದಾಮೋದರ ಮುದುಕನನ್ನು ಸಮೀಪಿಸುವುದು ಅವನು ದೂರ ಸರಿಯುವುದು ಸ್ವಲ್ಪ ಹೊತ್ತು ಈ ಆಟ ಮುಂದುವರಿಯಿತು. ಕೊನೆಗೆ ದಾಮೋದರ ಹತಾಶನಾಗಿ ಕೇಳಿದ ‘ದಯವಿಟ್ಟು ನಿನ್ನ ಕೈಯನ್ನೊಮ್ಮೆ ನನ್ನ ತಲೆಯ ಮೇಲಿಡು. ನನ್ನ ನೆನಪಿನ ಶಕ್ತಿ ಕುಂದಲಿ’. ಮುದುಕ ದಾಮೋದರನನ್ನು ಕರುಣೆಯಿಂದ ನೋಡಿ ಮುಗುಳ್ನಕ್ಕ. ಮುದುಕನ ಮುಖದಲ್ಲಿ ಗೋಚರಿಸಿದ ಆ ದೇದಿಪ್ಯಮಾನ ಪ್ರಭೆಗೆ ದಾಮೋದರ ಬೆರಗಾದ. ‘ನನ್ನನ್ನು ನಿನ್ನಂತೆ ಮಾಡು ತಂದೆ’ ಕೈಮುಗಿದು ಬೇಡಿಕೊಂಡ ಕಾಲು ಹಿಡಿದು ಅಂಗಲಾಚಿದ. ‘ಲೌಕಿಕ ಬದುಕಿನಿಂದ ನನ್ನನ್ನು ಪಾರು ಮಾಡು. ಈ ಬದುಕು ನನಗೆ ಬೇಡ. ನನ್ನ ಬದುಕೆಂಬುದು ಶಾಂತಿಯ ಕಡಲಾಗಲಿ’ ಅವನ ಧ್ವನಿಯಲ್ಲಿ ದೈನ್ಯತೆ ಇತ್ತು. ಮುದುಕ ಕರಗಿಹೋದ. ಹತ್ತಿರ ಬಂದು ಕರುಣೆಯಿಂದ ದಾಮೋದರನ ತಲೆಯನ್ನೊಮ್ಮೆ ತನ್ನ ಕೈಯಿಂದ ಸವರಿದ. ಅದುವರೆಗೂ ಆವರಿಸಿಕೊಂಡಿದ್ದ ಜಡತ್ವ ದೂರಾಗಿ ದಾಮೋದರನಿಗೆ ಮನಸ್ಸು ಮತ್ತು ದೇಹ ಹಗುರವಾದ ಅನುಭವವಾಗಿ ಅವನ ಮುಖದಲ್ಲಿ ದೇದಿಪ್ಯಮಾನದ ಪ್ರಭೆ ಬೆಳಗಲಾರಂಭಿಸಿತು.
---000---

(ಎಪ್ರಿಲ್ ೨೦೧೯ ರ ತುಷಾರ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ)

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Saturday, March 2, 2019

ಮಾಧ್ಯಮ ಮತ್ತು ಉದ್ಯಮ

     


         ಹೊಸ ಬದಲಾವಣೆಯ ಕಾಲಘಟ್ಟದಲ್ಲಿ ನಾವು ನಿಂತಿದ್ದೇವೆ. ಜಾಗತೀಕರಣದ ಪ್ರಭಾವಕ್ಕೆ ಒಳಗಾಗಿ ಮಾನವನ ಸಾಧನೆಯ ಕ್ಷೇತ್ರಗಳೆಲ್ಲ ಬದಲಾವಣೆ ಹೊಂದಿ ಅವುಗಳೆಲ್ಲ ಹೊಸ ಪರಿವೇಷದಲ್ಲಿ ನಮಗೆ ಗೋಚರಿಸುತ್ತಿವೆ. ಬದಲಾವಣೆಯನ್ನುವುದು ನಿರಂತರವಾದದ್ದು ಮತ್ತು ಅದು ಬೆಳವಣಿಗೆಯ ಸಂಕೇತ ಕೂಡ ಹೌದು. ಹರಿಯದೇ ನಿಂತ ನೀರು ಕೂಡ ಪಾಚಿಗಟ್ಟಿ ಮಲೀನಗೊಳ್ಳುತ್ತದೆ. ಇನ್ನು ಮಾನವನ ಕಾರ್ಯಕ್ಷೇತ್ರಗಳೂ ಬದಲಾವಣೆಯಿಂದ ಹೊರತಾಗಿಲ್ಲ. ಸದಾ ಹೊಸತನಕ್ಕೆ ತೆರೆದುಕೊಳ್ಳುತ್ತಿರುವುದು ಮಾನವ ಜನಾಂಗದ ಅಭ್ಯುದಯಕ್ಕೆ ಅಗತ್ಯವಾದ ಪ್ರಕ್ರಿಯೆಯಾಗಿದೆ. ಮನುಷ್ಯನ ಸಾಧನೆಯ ಕಾರ್ಯ ಕ್ಷೇತ್ರಗಳಾದ ಶಿಕ್ಷಣ, ಪತ್ರಿಕೆ, ಸಿನಿಮಾ ಮತ್ತು ಬರವಣಿಗೆ ಕಾಲಕಾಲಕ್ಕೆ ಆಧುನಿಕತೆಯನ್ನು ಮೈಗೂಡಿಸಿಕೊಳ್ಳುತ್ತ ಹೊಸ ಹೊಸ ಪರಿವೇಷದಲ್ಲಿ ನಮಗೆ ಗೋಚರಿಸುತ್ತಿವೆ. ಒಂದುಕಾಲದಲ್ಲಿ ಮಾಧ್ಯಮಗಳಾಗಿ ಮಾನವ ಜನಾಂಗದ ಪ್ರಗತಿಯನ್ನೇ ತಮ್ಮ ಮೂಲ ಧ್ಯೇಯವಾಗಿಸಿಕೊಂಡಿದ್ದ ಈ ನಾಲ್ಕು ಮಾಧ್ಯಮ ಕ್ಷೇತ್ರಗಳು ಇಂದು ಉದ್ಯಮದ ಅವತಾರವನ್ನು ಆವಾಹಿಸಿಕೊಂಡು ಬಂಡವಾಳ ಹೂಡಿಕೆದಾರರ ದುರಾಸೆಗೆ ಸಿಲುಕಿ ತಮ್ಮ ಮೂಲ ಅರ್ಥವನ್ನೇ ಕಳೆದುಕೊಂಡು ವಿಕಾರಗೊಳ್ಳುತ್ತಿವೆ. ಮಾಧ್ಯಮವೊಂದು ಉದ್ಯಮವಾಗಿ ರೂಪಾಂತರಗೊಂಡಾಗ ಅಲ್ಲಿ ಹಣಗಳಿಕೆಯೇ  ಮುನ್ನೆಲೆಗೆ ಬಂದು ಸಮಾಜದ ಕಳಕಳಿ ಮತ್ತು ಅಭ್ಯುದಯ ಎನ್ನುವುದು ಹಿನ್ನೆಲೆಗೆ ಸರಿಯುತ್ತದೆ.

ಶಿಕ್ಷಣ

    ಇವತ್ತು ರಾಷ್ಟ್ರದಲ್ಲಿ ಸಾರ್ವಜನಿಕರಿಗೆ ಅಗತ್ಯವಾದ ಶಿಕ್ಷಣವು ಬೃಹತ್ ಉದ್ಯಮದ ರೂಪವನ್ನು ತಾಳಿ ಸಾಮಾನ್ಯ ಜನರಿಗೆ ಕೈಗೆಟುಕದಷ್ಟು ದುಬಾರಿಯಾಗಿದೆ. ಶಿಕ್ಷಣ ಮನುಷ್ಯನ ಮೂಲಭೂತ ಅಗತ್ಯಗಳಲ್ಲೊಂದು. ಹೀಗಾಗಿ ಈ ರಾಷ್ಟ್ರದಲ್ಲಿ ಬದುಕುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣ ಉಚಿತವಾಗಿ ಮತ್ತು ಗುಣಾತ್ಮಕವಾಗಿ ದೊರೆಯಬೇಕು. ಜೊತೆಗೆ ಉಚಿತ ಮತ್ತು ಗುಣಾತ್ಮಕ ಶಿಕ್ಷಣವನ್ನು ತನ್ನದಾಗಿಸಿಕೊಳ್ಳುವುದು ಇಲ್ಲಿರುವ ಪ್ರತಿಯೊಬ್ಬ ಪ್ರಜೆಯ ಹಕ್ಕು ಕೂಡ ಹೌದು. ಹಾಗೆಂದು ಸರ್ಕಾರವನ್ನಾಗಲಿ ಮತ್ತು ಜನಪ್ರತಿನಿಧಿಗಳನ್ನಾಗಲಿ ನೇರವಾಗಿ ಆರೋಪಿಗಳನ್ನಾಗಿಸುವುದು ತುಂಬ ಕಷ್ಟವಾದ ಕೆಲಸ. ಏಕೆಂದರೆ ಈ ರಾಷ್ಟ್ರದಲ್ಲಿ ಉಚಿತ ಶಿಕ್ಷಣಕ್ಕಾಗಿ ನಮ್ಮ ಸರ್ಕಾರ ಕಾನೂನನ್ನೇ ಮಾಡಿದೆ. ಪ್ರತಿಯೊಂದು ಮಗು ಹತ್ತು ವರ್ಷಗಳವರೆಗಿನ ಶಿಕ್ಷಣವನ್ನು ಉಚಿತವಾಗಿ ಪಡೆಯುವ ಎಲ್ಲ ಅವಕಾಶಗಳನ್ನು ರೂಪಿಸಲಾಗಿದೆ. ಹೀಗೆ ಸರ್ಕಾರ ಕಾನೂನನ್ನು ರೂಪಿಸಿದ್ದೆ ತಪ್ಪಾಯೊತೇನೋ ಎನ್ನುವಂತೆ ಬಂಡವಾಳ ಹೂಡಿಕೆದಾರರಿಗೆ ಮತ್ತು ಉದ್ಯಮಪತಿಗಳಿಗೆ ಶಿಕ್ಷಣ ಎನ್ನುವುದು ಮನುಷ್ಯನ ಮೂಲಭೂತ ಅಗತ್ಯಗಳಲ್ಲೊಂದು ಎನ್ನುವ ಅರಿವು ಮೂಡಿ ಶಿಕ್ಷಣವನ್ನು ಕೂಡ ಅವರು ಬಂಡವಾಳ ಹೂಡಿಕೆಗೆ ತುಂಬ ಫಲವತ್ತಾದ ಕ್ಷೇತ್ರವೆಂದು ಪರಿಭಾವಿಸಲಾರಂಭಿಸಿದರು. ಪರಿಣಾಮವಾಗಿ ಉದ್ಯಮಿಗಳು ಬೇರೆ ಬೇರೆ ಉದ್ಯಮದಲ್ಲಿ ತಾವು ಗಳಿಸಿದ್ದನ್ನು ಶಿಕ್ಷಣ ಕ್ಷೇತ್ರದಲ್ಲಿ ಬಂಡವಾಳ ಹೂಡತೊಡಗಿದರು. ಪಾಲಕರನ್ನು ಮತ್ತು ವಿದ್ಯಾರ್ಥಿಗಳನ್ನು ಆಕರ್ಷಿಸಲು ಮಗುವಿನ ಶಿಕ್ಷಣ ಮಾಧ್ಯಮವನ್ನು ಇಂಗ್ಲಿಷಾಗಿ ಪರಿವರ್ತಿಸಿ ಬೃಹದಾಕಾರದ ಕಟ್ಟಡಗಳು, ಆಧುನಿಕ ತಂತ್ರಜ್ಞಾನದಡಿ ನಿರ್ಮಾಣಗೊಂಡ ಪಾಠದ ಕೊಠಡಿಗಳು, ಡಿಜಿಟಲ್ ಗ್ರಂಥಾಲಯಗಳು, ವಿಶಾಲವಾದ ಆಟದ ಆವರಣ, ಸುಸಜ್ಜಿತ ಪ್ರಯೋಗಾಲಯಗಳು, ಅರಳು ಹುರಿದಂತೆ ಮಾತನಾಡುವ ಶಿಕ್ಷಕರು ಹೀಗೆ ಒಟ್ಟಿನಲ್ಲಿ ಉದ್ಯಮಕ್ಕೆ ಅಗತ್ಯವಾದ ಎಲ್ಲ ಸಿದ್ಧತೆಗಳೊಂದಿಗೆ ಶಿಕ್ಷಣ ಕ್ಷೇತ್ರಕ್ಕೆ ಉದ್ಯಮಪತಿಗಳು ಕಾಲಿಟ್ಟರು. ಒಟ್ಟಾರೆ ಅದುವರೆಗಿನ ಸರ್ಕಾರಿ ಶಾಲೆಗಳಲ್ಲಿನ ಕೊರತೆಗಳನ್ನೇ ತಮ್ಮ ಲಾಭಕ್ಕೆ ಪರಿವರ್ತಿಸಿಕೊಂಡ ಉದ್ಯಮಪತಿಗಳು ಪಾಲಕರ ಮತ್ತು ವಿದ್ಯಾರ್ಥಿಗಳ ಮೂಗಿಗೆ ಗುಣಾತ್ಮಕ ಶಿಕ್ಷಣ ಎನ್ನುವ ತುಪ್ಪ ಸವರಿದ್ದು ಮಾತ್ರ ಸತ್ಯವಾದ ಸಂಗತಿ.
    ಹೀಗೆ ಪ್ರತಿ ಮಗುವಿಗೂ ಅಗತ್ಯವಾದ ಶಿಕ್ಷಣವು ಉದ್ಯಮಪತಿಗಳ ನೇರ ಪ್ರವೇಶದಿಂದಾಗಿ ಖಾಸಗೀಕರಣವಾಗಿ ರೂಪಾಂತರಗೊಂಡಿತ್ತು. ಅಚ್ಚರಿಯ ಸಂಗತಿ ಎಂದರೆ ಈ ನೆಲದಲ್ಲಿ ಶಿಕ್ಷಣವನ್ನು ಆರಂಭದಲ್ಲಿ ಖಾಸಗೀಕರಣಗೊಳಿಸಿದ್ದು ಧಾರ್ಮಿಕ ಕೇಂದ್ರಗಳಾದ ಮಠಗಳು. ಎಲ್ಲಿ ಸರ್ಕಾರಕ್ಕೆ ಉಚಿತ ಮತ್ತು ಪರಿಣಾಮಕಾರಿಯಾದ ಶಿಕ್ಷಣವನ್ನು ಒದಗಿಸಲು ಸಾಧ್ಯವಾಗುತ್ತಿರಲಿಲ್ಲವೋ ಅಲ್ಲೆಲ್ಲ ಮಠಗಳು ಸರ್ಕಾರದ ಅನುಮತಿಯೊಂದಿಗೆ ಖಾಸಗಿ ಶಾಲೆಗಳನ್ನು ಸ್ಥಾಪಿಸಲಾರಂಭಿಸಿದವು. ಮಠಗಳು ಸ್ಥಾಪಿಸುತ್ತಿದ್ದ ಖಾಸಗಿ ಶಾಲೆಗಳಲ್ಲೂ ಕೂಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿತ್ತು ಎನ್ನುವುದು ಗಮನಿಸಬೇಕಾದ ಸಂಗತಿ. ಸರ್ಕಾರ ಕೂಡ ತನ್ನ ಹೊರೆ ಅಥವಾ ಜವಾಬ್ದಾರಿಯನ್ನು ಮಠಗಳು ನಿರ್ವಹಿಸಲು ಮುಂದೆ ಬಂದಾಗ ಅದು ಸಹಜವಾಗಿಯೇ  ಒಪ್ಪಿಗೆ ನೀಡಿತು. ಮಠಗಳ ಉದ್ದೇಶ ಕೂಡ ಶಿಕ್ಷಣದ ಮೂಲಕವೇ ನಿರ್ಲಕ್ಷಿತ ತಳಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತಂದು ನಿಲ್ಲಿಸಬೇಕೆನ್ನುವ ಒಂದು ಕಳಕಳಿ ಇದ್ದುದ್ದರಿಂದ ಇಲ್ಲಿ ಧಾರ್ಮಿಕ ಮಠಗಳ ನಡೆಯನ್ನು ಅನುಮಾನಿಸುವಂತಿರಲಿಲ್ಲ. ಮಠಗಳು ಸಹ ಶಿಕ್ಷಣವನ್ನು ಸಮಾಜದ ಅಭಿವೃದ್ಧಿಗಾಗಿ ತುಂಬ ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಂಡವು ಎನ್ನುವುದು ಗಮನಾರ್ಹ ಸಂಗತಿ.  
   ಶಿಕ್ಷಣದ ಖಾಸಗೀಕರಣ ಉದ್ಯಮದ ರೂಪವನ್ನು ತಳೆಯಲು ಜಾಗತೀಕರಣದ ಪ್ರಭಾವ ಮತ್ತು ಪಾತ್ರ ಗಣನೀಯವಾಗಿದೆ. ಇಂಗ್ಲಿಷ್ ಮಾಧ್ಯಮದ ಮೂಲಕ ಶಿಕ್ಷಣ ಪಡೆದ ನಮ್ಮ ಯುವ ಪೀಳಿಗೆ ಜಾಗತೀಕರಣದ ಕಾರಣ ನಾಲ್ಕಂಕಿ ಸಂಬಳ ಪಡೆಯುವ ಉದ್ಯೋಗವನ್ನು ದಕ್ಕಿಸಿಕೊಳತೊಡಗಿದರು. ಜೊತೆಗೆ ಇದೇ ವಿದ್ಯಾವಂತ ಪೀಳಿಗೆಗೆ ಸಲೀಸಾಗಿ ವಿದೇಶಗಳಿಗೆ ಉದ್ಯೋಗದ ನೆಪದಲ್ಲಿ ವಲಸೆಹೋಗಲು ಜಾಗತೀಕರಣ ಅನುವು ಮಾಡಿಕೊಟ್ಟಿತು. ಪರಿಣಾಮವಾಗಿ ಪಾಲಕರೆಲ್ಲ ಸರ್ಕಾರದ ಕನ್ನಡ ಶಾಲೆಗಳಿಗೆ ಬದಲಾಗಿ ಖಾಸಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಪ್ರವೇಶ ದೊರಕಿಸಿಕೊಡಲು ಆರಂಭಿಸಿದರು. ಇದು ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ ಹಳ್ಳಿಗಳಲ್ಲಿನ ಕೃಷಿಕರು ಕೂಡ ತಮ್ಮ ಮಕ್ಕಳಿಗೂ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಕೊಡಿಸಲು ನಗರ ಪ್ರದೇಶಗಳಿಗೆ ವಲಸೆ ಬರಲಾರಂಭಿಸಿದರು. ಪಾಲಕರ ಈ ಮಹತ್ವಾಕಾಂಕ್ಷೆಯನ್ನೇ ತಮ್ಮ ಬಂಡವಾಳವಾಗಿಸಿಕೊಂಡ ಖಾಸಗಿ ಶಿಕ್ಷಣ ಸಂಸ್ಥೆಗಳು ಲಕ್ಷಾಂತರ ರೂಪಾಯಿಗಳ ಶುಲ್ಕವನ್ನು ವಸೂಲು ಮಾಡುತ್ತ ಬೆಳೆಯತೊಡಗಿದವು. ಸರ್ಕಾರ ಕೂಡ ಖಾಸಗಿ ಶಿಕ್ಷಣ ಸಂಸ್ಥೆಗಳ ನಡೆಗೆ ಸಮ್ಮತಿ ಸೂಚಿಸಿ ಒಂದರ್ಥದಲ್ಲಿ ಶಿಕ್ಷಣ ಮಾಧ್ಯಮವನ್ನು ಉದ್ಯಮವಾಗಿಸಲು ಉದ್ಯಮ ಪತಿಗಳೊಂದಿಗೆ ಕೈಜೋಡಿಸಿತು. ಇವತ್ತು ನಾವುಗಳೆಲ್ಲ ಬಹುದೂರ ಸಾಗಿ ಬಂದಿದ್ದೇವೆ. ಒಂದೆಡೆ ಅನೇಕ ಸಮ್ಸ್ಯೆಗಳು ಮತ್ತು ಕೊರತೆಗಳಿಂದ ಕುಂಟುತ್ತ ಸಾಗಿರುವ ಸರ್ಕಾರದ ಕನ್ನಡ ಶಾಲೆಗಳು ಇನ್ನೊಂದೆಡೆ ಲಕ್ಷಾಂತರ ರೂಪಾಯಿಗಳ ಶುಲ್ಕವನ್ನು ವಸೂಲಿ ಮಾಡುತ್ತ ಶಿಕ್ಷಣವನ್ನು ವ್ಯಾಪಾರದ ಮಟ್ಟಕ್ಕಿಳಿಸಿರುವ ಖಾಸಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳು. ಮೊದಲಿನದನ್ನು ನೆಚ್ಚಿಕೊಂಡು ಕೂಡುವಂತಿಲ್ಲ ಮತ್ತು ಎರಡನೆಯದನ್ನು ನಿಭಾಯಿಸುವಷ್ಟು ಆರ್ಥಿಕ ಸಾಮರ್ಥ್ಯವಿಲ್ಲ. ಇಂಥ ವಾತಾವರಣದಲ್ಲಿ ಬಡವರ ಮಕ್ಕಳ ಗೋಳು ಕೇಳುವವರಿಲ್ಲದಂತಾಗಿದೆ. ಸರ್ಕಾರದ ಉಚಿತ ಮತ್ತು ಕಡ್ಡಾಯ ಶಿಕ್ಷಣ ತನ್ನ ಅರ್ಥವನ್ನು ಕಳೆದುಕೊಂಡು ಸಾರ್ವಜನಿಕರ ಕಣ್ಣೊರೆಸುವ ಒಂದು ತಂತ್ರವಾಗಿ ಗೋಚರಿಸುತ್ತದೆ. ಈಗ ಆಗಬೇಕಾಗಿರುವುದು ಶಿಕ್ಷಣವನ್ನು ಉದ್ಯಮದ ಸ್ವರೂಪದಿಂದ ಹೊರತಂದು ಅದನ್ನು ಮೊದಲಿನಂತೆ ಮಾಧ್ಯಮವಾಗಿ ರೂಪಾಂತರಿಸಬೇಕಾಗಿದೆ. 

ಪತ್ರಿಕೋದ್ಯಮ


     ಆರಂಭದಲ್ಲೇ ಒಂದು ವಿಷಯವನ್ನು ಹೇಳುವುದೊಳಿತು. ಕನ್ನಡಿಗರಾದ ಶಾರದಾ ಪ್ರಸಾದ ಇಪ್ಪತ್ತು ವರ್ಷಗಳಷ್ಟು ದೀರ್ಘಕಾಲ ಪ್ರಧಾನ ಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿ ಕಾರ್ಯನಿರ್ವಹಿಸಿದವರು. ನಾಲ್ಕು ಜನ ಪ್ರಧಾನ ಮಂತ್ರಿಗಳನ್ನು ತೀರ ಹತ್ತಿರದಿಂದ ಕಂಡವರು. ಅವರು ಮನಸ್ಸು ಮಾಡಿದಿದ್ದರೆ ಪ್ರಧಾನ ಮಂತ್ರಿಗಳನ್ನು ಕುರಿತು ಹಲವಾರು ಪುಸ್ತಕಗಳನ್ನು ಬರೆಯಬಹುದಿತ್ತು. ಅವರ ಎದೆಗೂಡಲ್ಲಿ ಅದೆಷ್ಟು ರಹಸ್ಯಗಳು ಅಡಕವಾಗಿದ್ದವೋ ಬಲ್ಲವರಾರು. ಆದರೆ ಅವರೆಂದು ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ. ಮಾಧ್ಯಮ ಸಲಹೆಗಾರರಾಗಿದ್ದ ಅವರಲ್ಲಿ ಒಂದು ಎಥಿಕ್ಸ್ ಇತ್ತು. ನಿಮಗೆಲ್ಲ ನೆನಪಿರುವಂತೆ ಇತ್ತೀಚಿಗೆ ‘The Accidental Primeminister’   ಎನ್ನುವ ಹೆಸರಿನ ಸಿನಿಮಾ ಬಿಡುಗಡೆಗೆ ಮೊದಲೇ ಸ್ವಲ್ಪ ಹೆಚ್ಚೆ ಎನ್ನುವಂತೆ ಸುದ್ದಿ ಮಾಡಿತು. ಇದು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಕುರಿತು ತಯ್ಯಾರಾದ ಸಿನಿಮಾ. ಈ ಸಿನಿಮಾಕ್ಕೆ ‘The Accidental Primeminister’ ಎನ್ನುವ ಹೆಸರಿನ ಪುಸ್ತಕ ಆಧಾರವಾಗಿತ್ತು. ಈ ಪುಸ್ತಕದ ಲೇಖಕ ಮನಮೋಹನ ಸಿಂಗ್ ಪ್ರಧಾನ ಮಂತ್ರಿಯಾಗಿದ್ದಾಗ ನಾಲ್ಕು ವರ್ಷಗಳ ಕಾಲ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ ಬಾರು. ಮನಮೋಹನ ಸಿಂಗ್ ಅವರ ಅಧಿಕಾರವಧಿ ಕೊನೆಗೊಂಡ ತಕ್ಷಣ ಈ ಕೃತಿ ಪ್ರಕಟವಾಗಿ ಹೊರಬಂತು. ಸಹಜವಾಗಿಯೇ  ಪುಸ್ತಕ ಸಾರ್ವಜನಿಕ ವಲಯದಲ್ಲಿ ಕುತೂಹಲ ಹುಟ್ಟಿಸಿತು. ಕೊನೆಗೆ ಸಿನಿಮಾ ಆಗಿ ದೇಶದ ಹೆಚ್ಚಿನ ಜನರನ್ನು ತಲುಪಿತು. ಈ ಪುಸ್ತಕ ಮತ್ತು ಸಿನಿಮಾದಿಂದ ಕೆಲವರ ವ್ಯಕ್ತಿತ್ವಕ್ಕೆ ಅಪಚಾರವಾದರೂ ಲೇಖಕರಿಗೆ ಸಾಕಷ್ಟು ಖ್ಯಾತಿಯನ್ನು ತಂದುಕೊಟ್ಟಿತು. ಇನ್ನು ಮುಂದೆ ಭವಿಷ್ಯದಲ್ಲಿ ಮಾಧ್ಯಮ ಸಲಹೆಗಾರರನ್ನು ಆಯ್ಕೆ  ಮಾಡುವಾಗ ಪ್ರಧಾನ ಮಂತ್ರಿ ಸಾವಿರಾರು ಸಲ ಯೋಚಿಸಬಹುದು. ಕೊನೆಗೂ ಇಲ್ಲಿ ಮಾಧ್ಯಮವು ಉದ್ಯಮವಾಗಿ ಎಥಿಕ್ಸ್ ಎನ್ನುವುದು ಗಾಳಿಗೆ ತೂರಿ ಹೋಯಿತು. 
     ಈ ಮೇಲಿನ ಉದಾಹರಣೆ ಹೇಳಲು ಕಾರಣವಿಷ್ಟೇ ಇವತ್ತು ದೇಶದಲ್ಲಿ ಪತ್ರಿಕಾ ಮಾಧ್ಯಮ ಎನ್ನುವುದು ಉದ್ಯಮದ ರೂಪವನ್ನು ತಾಳಿದೆ. ದೇಶದ ಸ್ವಾತಂತ್ರ್ಯ ಚಳವಳಿಯ ಕಾಲಘಟ್ಟದಲ್ಲಿ ಹೋರಾಟಕ್ಕೆ ಲೇಖನಗಳ ಮೂಲಕವೇ ಸಕಾರಾತ್ಮಕವಾಗಿ ಸ್ಪಂದಿಸಿದ ಪತ್ರಿಕಾ ಮಾಧ್ಯಮ ನಂತರದ ದಿನಗಳಲ್ಲಿ ಉದ್ಯಮಪತಿಗಳ ಮತ್ತು  ರಾಜಕಾರಣಿಗಳ ಸ್ವಹಿತಾಸಕ್ತಿಗೆ ಬಲಿಯಾಯಿತು. ಅಕ್ಷರಗಳ ಪ್ರಾಮುಖ್ಯತೆಯ ಅರಿವಿಲ್ಲದ ರಾಜಕಾರಣಿಗಳು ಮತ್ತು ಉದ್ಯಮಪತಿಗಳು ಇವತ್ತು ತಮ್ಮ ರಕ್ಷಣೆಗಾಗಿ ಪತ್ರಿಕಾ ಮಾಧ್ಯಮವನ್ನು ಬೆಂಗಾವಲು ಪಡೆಯಂತೆ ಉಪಯೋಗಿಸುತ್ತಿರುವರು. ಪತ್ರಿಕಾ ಮಾಧ್ಯಮವರು ಕೂಡ ಆಸ್ಥಾನದ ಹೊಗಳು ಭಟ್ಟರಾಗಿ ರಾಜಕಾರಣಿಗಳನ್ನು ಮತ್ತು ಉಳ್ಳವರನ್ನು ಓಲೈಸುತ್ತ ತಮ್ಮ ತಮ್ಮ ಬದುಕನ್ನು ಹಸನಾಗಿಸಿಕೊಳ್ಳುತ್ತಿರುವರು. ಆಧುನಿಕ ತಂತ್ರಜ್ಞಾನದ ಈ ದಿನಗಳಲ್ಲಿ ಪತ್ರಿಕಾ ಮಾಧ್ಯಮ ತಂತ್ರಜ್ಞಾನದ ಛದ್ಮವೇಷದಲ್ಲಿ ಇಡೀ ಮಾಧ್ಯಮವನ್ನು ಉದ್ಯಮದ ಸ್ವರೂಪಕ್ಕೆ ಕೊಂಡೊಯ್ದಿದೆ. ಹಣವಿರುವವರು ಬಂಡವಾಳ ಹೂಡಲು ಪತ್ರಿಕಾ ಮಾಧ್ಯಮಕ್ಕೆ ಕಾಲಿಡುತ್ತಿರುವುದರಿಂದ ಇಲ್ಲಿ ಲಾಭ-ನಷ್ಟಗಳ ಸಂಗತಿ ಮೇಲುಗೈ ಸಾಧಿಸುತ್ತಿದೆ. ಪತ್ರಿಕಾ ಧರ್ಮ ಮತ್ತು ಪತ್ರಿಕಾ ಸ್ವಾತಂತ್ರ್ಯ ತೆರೆಮರೆಗೆ ಸರಿದಿವೆ. ಇಂಥದ್ದೊಂದು ವಿಪ್ಲವದ ನಡುವೆಯೂ ಪಿ.ಸಾಯಿನಾಥ ಅವರಂಥ ಪ್ರಾಮಾಣಿಕ ಮತ್ತು ಸಾಮಾಜಿಕ ಕಳಕಳಿಯುಳ್ಳ ಪತ್ರಕರ್ತರು ಪತ್ರಿಕಾ ಧರ್ಮವನ್ನು ಮತ್ತೆ ಮರು ಸ್ಥಾಪಿಸಲು ಪ್ರಯತ್ನಿಸುತ್ತಿರುವುರಾದರೂ ಅಂಥವರ ಸಂಖ್ಯೆ ಆಶಾದಾಯಕವಾಗೇನೂ ಇಲ್ಲ ಎನ್ನುವುದು ಆತಂಕದ ಸಂಗತಿ.

ಸಿನಿಮೋದ್ಯಮ


     ಆ ಕಾಲವೊಂದಿತ್ತು. ಆಗ ಸಿನಿಮಾ ಮಾಧ್ಯಮವಾಗಿತ್ತು ಮತ್ತು ಸಮಾಜದ ಜ್ವಲಂತ ಸಮಸ್ಯೆಗಳು ಸಿನಿಮಾ ಪರದೆಯ ಮೇಲೆ ಪ್ರತಿಫಲಿಸುತ್ತಿದ್ದವು. ಸಿನಿಮಾದ ಮೂಲಕವೇ ಸಮಾಜದಲ್ಲಿ ಬಹುದೊಡ್ಡ ಪರಿವರ್ತನೆಗಳಾದ ಅನೇಕ ಉದಾಹರಣೆಗಳಿವೆ. ಬಾಲ್ಯವಿವಾಹ ಮತ್ತು ಸತಿಸಗಮನ ಪದ್ಧತಿಯ ವಿರುದ್ಧದ ಹೋರಾಟ, ಮಧ್ಯಪಾನ ವಿರೋಧಿ ಚಳವಳಿ, ಸಾಕ್ಷರತೆಯ ಮಹತ್ವ, ವರದಕ್ಷಿಣೆಯ ಸಮಸ್ಯೆ, ಮಹಿಳಾ ಸಮಸ್ಯೆಗಳು, ರೈತರ ಬದುಕಿನ ಸಮಸ್ಯೆಗಳು ಹೀಗೆ ಸಿನಿಮಾ ಮಾಧ್ಯಮ ಸಮಾಜದ ಇಂಥ ಹಲವಾರು ಸಮಸ್ಯೆಗಳಿಗೆ ಧ್ವನಿಯಾಗಿತ್ತು. ಸಮಾಜ ಕೂಡ ಅಂಥ ಸಿನಿಮಾಗಳನ್ನು ಸ್ವೀಕರಿಸಿ ಬದಲಾವಣೆಗೆ ತನ್ನನ್ನು ತಾನು ತೆರೆದುಕೊಳ್ಳುತ್ತಿತ್ತು. ರಾಜಕುಮಾರರಂಥ ಕಲಾವಿದ ನಾವು ಬದುಕುತ್ತಿರುವ ಇಡೀ ಸಮಾಜದ ಪ್ರತಿನಿಧಿ ಎನ್ನುವಂತೆ ಆಗೆಲ್ಲ ಸಿನಿಮಾಗಳನ್ನು ವೀಕ್ಷಿಸಿದಾಗ ಭಾಸವಾಗುತ್ತಿತ್ತು. ಕಮರ್ಷಿಯಲ್ ಸಿನಿಮಾಗಳ ಉದ್ದೇಶ ಹಣ ಗಳಿಕೆಯೇ  ಆಗಿದ್ದರೂ ಆ ಸಿನಿಮಾಗಳಲ್ಲಿ ಸಮಾಜಕ್ಕೆ ಒಂದು ಸಂದೇಶವಿರುತ್ತಿತ್ತು. ಕಮರ್ಷಿಯಲ್ ಸಿನಿಮಾಗಳ ಮೂಲಕ ಹೇಳಲು ಸಾಧ್ಯವಾಗದೆ ಇದ್ದದ್ದನ್ನು ಕಲಾತ್ಮಕ ಸಿನಿಮಾಗಳು ಅಭಿವ್ಯಕ್ತಿಸುತ್ತಿದ್ದವು. ಕಾಡು, ಬರ, ಫಣಿಯಮ್ಮ ಇತ್ಯಾದಿ ಕಲಾತ್ಮಕ ಸಿನಿಮಾಗಳು ಸಮಾಜದಲ್ಲಿನ ಜ್ವಲಂತ ಸಮಸ್ಯೆಗಳನ್ನು ಸಿನಿಮಾ ಪರದೆಯ ಮೂಲಕ ಜನರನ್ನು ತಲುಪಿಸುವಲ್ಲಿ ಯಶಸ್ವಿಯಾದವು. ಮನೋರಂಜನೆ ಮತ್ತು ನಾಯಕ ಪ್ರಧಾನ ಸಿನಿಮಾಗಳ ಮಧ್ಯೆಯೂ ಆಗ ಸಿನಿಮಾ ಮಾಧ್ಯಮ ತನ್ನ ಮೂಲ ಉದ್ದೇಶಕ್ಕೆ ಬದ್ಧವಾಗಿತ್ತು. 
       ಸಿನಿಮಾ ಮಾಧ್ಯಮ ಉದ್ಯಮವಾಗಿ ರೂಪಾಂತರ ಹೊಂದಲು ಕಾರಣವೇನು ಎನ್ನುವ ಪ್ರಶ್ನೆ ಎದುರಾದಾಗ ನಾವು ಮತ್ತೆ ಮುಖ ಮಾಡುವುದು ಜಾಗತೀಕರಣದತ್ತಲೆ. ಜಾಗತೀಕರಣದ ಕಾರಣ ಇಲ್ಲಿನ ಪ್ರೇಕ್ಷಕನಿಗೆ ವಿದೇಶಿ ಸಿನಿಮಾಗಳನ್ನು ನೋಡುವ ಹೇರಳ ಅವಕಾಶ ಮುಕ್ತವಾಗಿ ದೊರೆಯಲಾರಂಭಿಸಿತು. ಆಗೆಲ್ಲ ಅವನ ಮನಸ್ಸು ಇಲ್ಲಿನ ಸಿನಿಮಾಗಳನ್ನು ಬೇರೆ ರಾಷ್ಟ್ರಗಳ ಸಿನಿಮಾಗಳೊಂದಿಗೆ ತುಲನಾತ್ಮಕವಾಗಿ ನೋಡಲು ಆರಂಭಿಸಿತು. ಪ್ರೇಕ್ಷಕರಲ್ಲಾದ ಬದಲಾವಣೆ ಮತ್ತು ಅವರಲ್ಲಿ ಒಡಮೂಡಿದ ಹೊಸ ಅಭಿರುಚಿಯನ್ನು ಗುರುತಿಸಿದ ಕನ್ನಡ ಸಿನಿಮಾ ಮಾಧ್ಯಮದವರು ತಾವು ಕೂಡ ಹೊಸದೊಂದು ಬದಲಾವಣೆಗೆ ತೆರೆದುಕೊಳ್ಳತೊಡಗಿದರು. ಜೊತೆಗೆ ಅದೇ ಆಗ ಕಾಲಿಟ್ಟ ತಂತ್ರಜ್ಞಾನದ ಬಿಸಿ ಸಿನಿಮಾ ಮಾಧ್ಯಮಕ್ಕೂ ತಟ್ಟಿತು. ಅಷ್ಟೊತ್ತಿಗಾಗಲೇ ಇಂಗ್ಲಿಷ್ ಭಾಷೆಯಲ್ಲಿ ವಿಜ್ಞಾನದ ಅನ್ವೇಷಣೆಯಾದ ಗ್ರಾಫಿಕ್ ತಂತ್ರಜ್ಞಾನವನ್ನು ಅತ್ಯಂತ ಸಶಕ್ತವಾಗಿ ದುಡಿಸಿಕೊಂಡು ನಿರ್ಮಾಣವಾದ ಹಲವಾರು ಸಿನಿಮಾಗಳು ತೆರೆಗೆ ಬಂದು ಪ್ರೇಕ್ಷಕರನ್ನು ಸಮ್ಮೋಹಿನಿಯಂತೆ ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದವು. ಪರಿಣಾಮವಾಗಿ ಕನ್ನಡ ಸಿನಿಮಾ ಮಾಧ್ಯಮದೆದುರು ಜಾಗತಿಕ ಮಟ್ಟದ ಪ್ರೇಕ್ಷಕರಿಗೆ ಒಪ್ಪಿಗೆಯಾಗುವ ಸಿನಿಮಾಗಳನ್ನು ನಿರ್ಮಿಸುವ ಸವಾಲು ಎದುರಾಯಿತು. ಒಟ್ಟಾರೆ ದೇಶ ಭಾಷೆಗಳ ಗಡಿಯನ್ನು ಮೀರಿ ಅಸಂಖ್ಯಾತ ಪ್ರೇಕ್ಷಕರಿಗೆ ತಮ್ಮ ಸಿನಿಮಾಗಳನ್ನು ತೋರಿಸಬೇಕೆನ್ನುವ ಇಲ್ಲಿನ ನಿರ್ದೇಶಕರು ಮತ್ತು ನಿರ್ಮಾಪಕರ ಹಂಬಲದಿಂದಾಗಿ ಕನ್ನಡ ಸಿನಿಮಾ ಮಾಧ್ಯಮದ ಮಾರುಕಟ್ಟೆ ಅಚಿತರರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿತು. ಇಲ್ಲಿ ಸವಾಲು ಸ್ವೀಕರಿಸಿ ಗೆಲುವು ಸಾಧಿಸಿದವರು ಉಳಿದುಕೊಂಡರು ಮತ್ತು ಹೊಸ ಸವಾಲಿಗೆ ಎದೆಗುಂದಿದವರು ಸಿನಿಮಾ ಮಾಧ್ಯಮದಿಂದ ದೂರಸರಿದರು. ಹೀಗೆ ದೂರ ಸರಿದವರಲ್ಲಿ ಸಿನಿಮಾ ಕುರಿತು ಅಪಾರ ಪ್ರೀತಿ ಮತ್ತು ಪ್ರತಿಭೆ ಹೊಂದಿದವರ ಸಂಖ್ಯೆಯೇ  ಬಹಳಷ್ಟು ಎನ್ನುವುದು ಗಮನಿಸಬೇಕಾದ ವಿಷಯ. 
     ಈಗ ಸಿನಿಮಾ ಮಾಧ್ಯಮದಲ್ಲಿ ಅದೇನಿದ್ದರೂ ಹೊಸಬರ ಭರಾಟೆ0iÉು. ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ ಹುಟ್ಟಿದ ಈ ನವ ನಾಗರಿಕರಿಗೆ ಸಿನಿಮಾ ಅದೇನಿದ್ದರೂ ಉದ್ಯಮವೇ ವಿನ: ಮಾಧ್ಯಮವಲ್ಲ. ಎಲ್ಲವೂ ಲಾಭ ಮತ್ತು ನಷ್ಟದ ಲೆಕ್ಕಾಚಾರದಲ್ಲೇ ತೂಗಿ ನೋಡುವ ಮನೋಭಾವ. ಪರಿಣಾಮವಾಗಿ ಇಲ್ಲಿ ಪ್ರೇಕ್ಷಕರನ್ನು ಸಮ್ಮೋಹಿನಿಯಂತೆ ಹಿಡಿದಿಟ್ಟು ಕಾಸು ಮಾಡಿಕೊಳ್ಳುವ ಲೆಕ್ಕಾಚಾರ ಈ ಸಿನಿಮಾ ಜನಗಳದ್ದು. ಆದ್ದರಿಂದ ಸಿನಿಮಾ ಎನ್ನುವುದು ವಾಸ್ತವಿಕತೆಗೆ ಹತ್ತಿರವಾಗಿರಬೇಕು ಎನ್ನುವುದಾಗಲಿ ಅಥವಾ ಸಿನಿಮಾವನ್ನು ಹೀಗೆ ತೆಗೆಯಬೇಕೆನ್ನುವ ಆ ಒಂದುಕಾಲದ ಫಾರ್ಮುಲಾ ಆಗಲಿ ಈಗಿಲ್ಲ. ಏನಿದ್ದರೂ ಮನೋರಂಜನೆಯೇ  ಪ್ರಧಾನ ಮತ್ತು ಗ್ರಾಫಿಕ್ ತಂತ್ರಜ್ಞಾನವೇ ಮೂಲ ಬಂಡವಾಳ. 

ಪುಸ್ತಕೋದ್ಯಮ  


     ಪುಸ್ತಕ ಪ್ರಕಟಣೆ ಕೂಡ ಇವತ್ತು ಬಂಡವಾಳ ಹೂಡಿ ಲಾಭ ಗಳಿಸುವ ಉದ್ದಿಮೆಯಾಗಿ ಪರಿವರ್ತಿತಗೊಂಡಿದೆ. ಪುಸ್ತಕ ಎನ್ನುವುದು ಕೂಡ ಬರಹಗಾರ ತನ್ನ ಅಭಿವ್ಯಕ್ತಿಗಾಗಿ ಆಯ್ಕೆ  ಮಾಡಿಕೊಳ್ಳುವ ಮಾಧ್ಯಮ. ಆಗೆಲ್ಲ ಪುಸ್ತಕ ಪ್ರಕಟಣೆ ಎನ್ನುವುದು ಈಗಿನಷ್ಟು ಸುಲಭವಾಗಿರಲಿಲ್ಲ. ಲೇಖಕರಂತೂ ಸ್ವತ: ಪ್ರಕಾಶಕರಾಗಿ ಪುಸ್ತಕಗಳನ್ನು ಪ್ರಕಟಿಸಲು ಆಗ ಮುಂದಾಗುತ್ತಿರಲಿಲ್ಲ. ಪುಸ್ತಕಗಳ ಪ್ರಕಟಣೆಗಾಗಿಯೇ  ಪ್ರಕಾಶನ ಸಂಸ್ಥೆಗಳಿದ್ದವು. ಜಿ.ಬಿ.ಜೋಷಿ ಅಂಥವರು ಪುಸ್ತಕಗಳ ಪ್ರಕಟಣೆಯನ್ನು ಒಂದು ತಪಸ್ಸಿನಂತೆ ಪಾಲಿಸಿಕೊಂಡು ಬಂದರು. ಪುಸ್ತಕಗಳ ಪ್ರಕಟಣೆ ಎನ್ನುವುದು ಆರ್ಥಿಕ ಹೊರೆಯಾಗಿದ್ದ ಆ ದಿನಗಳಲ್ಲಿ ಮನೋಹರ ಗ್ರಂಥಮಾಲೆಯವರು ಓದುಗರಿಂದ ಚಂದಾ ಹಣವನ್ನು ಪಡೆದು ಪುಸ್ತಕಗಳನ್ನು ಪ್ರಕಟಿಸುತ್ತಿದ್ದರು. ಮನೋಹರ ಗ್ರಂಥಮಾಲೆಯ ಪ್ರಕಾಶಕರಾಗಿದ್ದ ಜಿ.ಬಿ.ಜೋಷಿ ಅವರು ಪ್ರಕಟಿತ ಪುಸ್ತಕಗಳ ಗಂಟನ್ನು ತಲೆಯ ಮೇಲೆ ಹೊತ್ತೊಯ್ದು ಮಾರಾಟ ಮಾಡುತ್ತಿದ್ದರು. ಪುಸ್ತಕ ಓದುವವರ ಸಂಖ್ಯೆ ಅಪಾರ ಪ್ರಮಾಣದಲ್ಲಿದ್ದ ದಿನಗಳಲ್ಲೂ ಪುಸ್ತಕಗಳ ಪ್ರಕಟಣೆ ಎನ್ನುವುದು ಪ್ರಕಾಶಕರಿಗೆ ಹೊರೆಯಾಗುತ್ತಿತ್ತು. ಅದೆಷ್ಟೋ ಪ್ರತಿಭಾನ್ವಿತ ಲೇಖಕರು ತಮ್ಮ ಕೃತಿಗಳು ಬೆಳಕು ಕಾಣದ ಕಾರಣ ತೆರೆಮರೆಗೆ ಸರಿದು ಹೋದರು. 
       ಪುಸ್ತಕ ಪ್ರಕಾಶಕರ ಸಮಸ್ಯೆಯನ್ನು ಅರಿತು ಸರ್ಕಾರ ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಖರೀದಿಸುವ ಕಾಯ್ದೆ  ತಂದ ನಂತರ ಪುಸ್ತಕ ಮಾಧ್ಯಮದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದವು. ಈಗ ಪುಸ್ತಕ ಪ್ರಕಟಣೆ ಎನ್ನುವುದು ಪ್ರಕಾಶಕರಿಗೆ ಲಾಭ ತರುವ ಉದ್ದಿಮೆಯಾಗಿ ಬೆಳೆದು ನಿಂತಿದೆ. ಪರಿಣಾಮವಾಗಿ ಅಸಂಖ್ಯಾತ ಪ್ರಕಾಶನ ಸಂಸ್ಥೆಗಳು ಹುಟ್ಟಿಕೊಂಡಿವೆ. ಲಾಭದ ಆಸೆಯಿಂದ ಲೇಖಕರೇ ಪ್ರಕಾಶಕರಾಗಿ ಪುಸ್ತಕಗಳನ್ನು ಪ್ರಕಟಿಸುತ್ತಿರುವರು. ಕೆಲವರಂತೂ ತಮ್ಮ ಪಿ.ಹೆಚ್.ಡಿ ಪ್ರಬಂಧಗಳನ್ನೇ ಪುಸ್ತಕ ರೂಪದಲ್ಲಿ ಪ್ರಕಟಿಸಿ ಸಾರ್ವಜನಿಕ ಗ್ರಂಥಾಲಯಗಳಿಗೆ ಮಾರಾಟ ಮಾಡುತ್ತಿರುವರು. ಕೆಲವು ವರ್ಷಗಳ ಹಿಂದೆ ರಾಜ್ಯದ ಮಂತ್ರಿಯೋರ್ವರು ತಮ್ಮ ಸಂಬಂಧಿಕರ ಪ್ರಕಾಶನ ಸಂಸ್ಥೆಯಿಂದಲೇ ಪುಸ್ತಕಗಳನ್ನು ಖರೀದಿಸುವಂತೆ ಒತ್ತಡ ತಂದು ಕೋಟ್ಯಾಂತರ ರೂಪಾಯಿಗಳ ವಹಿವಾಟು ನಡೆಸಿದರು. ಹೀಗೆ ಲಾಭದ ಆಸೆಯಿಂದ ಪುಸ್ತಕಗಳನ್ನು ಪ್ರಕಟಿಸುವುದರಿಂದ ಸಾಹಿತ್ಯದ ಗುಣಮಟ್ಟ ಕುಸಿಯುತ್ತದೆ ಎನ್ನುವ ಆತಂಕ ಹಲವರದು. ಬರವಣಿಗೆ ಎನ್ನುವುದು ಅದೊಂದು ಸೃಜನಶೀಲ ಸೃಷ್ಟಿ. ಸಮಾಜದ ಹಿತವೇ ಬರವಣಿಗೆಯ ಉದ್ದೇಶ. ಆದರೆ ಲಾಭದ ಆಸೆಯಿಂದ ಈಗ ಕನ್ನಡ ಸಾಹಿತ್ಯದಲ್ಲಿ ಪ್ರಕಟವಾಗುತ್ತಿರುವ ಪುಸ್ತಕಗಳನ್ನು ಗಮನಿಸಿದಾಗ ಹೆಚ್ಚಿನ ಪುಸ್ತಕಗಳು ಕಾಟಾಚಾರಕ್ಕೆಂಬಂತೆ ಪ್ರಕಟವಾಗುತ್ತಿವೆ. ಧನದಾಹ ಮತ್ತು ವ್ಯಾಪಾರಿ ಮನೋಭಾವದ ಲೇಖಕರು ಹಾಗೂ ಪ್ರಕಾಶಕರಿಂದಾಗಿ ಸಾಹಿತ್ಯ ಇಲ್ಲಿ ಮಾರಾಟವಾಗುತ್ತಿದೆ. 

ಕೊನೆಯ ಮಾತು


     ಹಿರಿಯ ಬರಹಗಾರರಾದ ಬರಗೂರು ರಾಮಚಂದ್ರಪ್ಪನವರು ಮಾದ್ಯಮ ಮತ್ತು ಉದ್ಯಮದ ನಡುವಣ ವ್ಯತ್ಯಾಸವನ್ನು ಬಹಳ ಅರ್ಥಪೂರ್ಣವಾಗಿ ಗುರುತಿಸುತ್ತಾರೆ. ಅವರ ದೃಷ್ಟಿಯಲ್ಲಿ ಮಾಧ್ಯಮದಲ್ಲಿ ಸಂವೇದನೆಯೆ   ಮುಖ್ಯವಾಗಿದ್ದರೆ ಉದ್ಯಮದಲ್ಲಿ ಲಾಭದ ಹಿತಾಸಕ್ತಿ ಮುಖ್ಯವಾಗಿರುತ್ತದೆ. ಶ್ರೀಯುತರ ಚಿಂತನೆ ಸತ್ಯಕ್ಕೆ ಹತ್ತಿರವಾಗಿದೆ. ಮಾಧ್ಯಮ ಸಂವೇದನಾಶೀಲವಾಗಿದ್ದಾಗ ಮಾತ್ರ ಬದುಕುತ್ತಿರುವ ವ್ಯವಸ್ಥೆ ಕುರಿತು ಅದಕ್ಕೆ ಸಹಜವಾದ ಕಾಳಜಿ ಇರಲು ಸಾಧ್ಯ. ಉದ್ಯಮವಾದಾಗ ಬಂಡವಾಳ ಮತ್ತು ಲಾಭ-ನಷ್ಟಗಳೇ ಮುನ್ನೆಲೆಗೆ ಬಂದು ಸಮಾಜದ ಕುರಿತಾದ ಕಳಕಳಿ ಹಿನ್ನೆಲೆಗೆ ಸರಿಯುತ್ತದೆ. ಜಾಗತೀಕರಣದ ಈ ಯುಗದಲ್ಲಿ ಪುಸ್ತಕ, ಪತ್ರಿಕೆ, ಸಿನಿಮಾ ಮತ್ತು ಶಿಕ್ಷಣ ಮಾಧ್ಯಮಗಳು ಉದ್ಯಮಗಳಾಗಿ ಬದಲಾಗುತ್ತಿರುವುದು ತುಂಬ ಆತಂಕದ ಸಂಗತಿ. ಹೀಗೆ ಸಮಾಜದ ಪ್ರಮುಖ ಮಾಧ್ಯಮಗಳು ಉದ್ಯಮದ ರೂಪವನ್ನು ತಾಳುತ್ತಿರುವುದರಿಂದ ಇಲ್ಲಿ ಬದುಕುತ್ತಿರುವ ಮನುಷ್ಯರು ಕೂಡ ಸಂವೇದನೆಯನ್ನು ಕಳೆದುಕೊಂಡು ಕ್ರೂರರಾಗುತ್ತಿರುವರು. ನಾವುಗಳೆಲ್ಲ ತುಂಬ ಆತಂಕ ಪಡುವ ವಿಷಯವಿದು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ