Monday, May 15, 2023

ದೊಕಾಚಿ ಮೇಷ್ಟ್ರ ಶಾಂತಿ-ಕ್ರಾಂತಿ (ಕಥಾಸಂಕಲನ)

 

ದೊಕಾಚಿ ಮೇಷ್ಟ್ರ ಶಾಂತಿ-ಕ್ರಾಂತಿ (ಕಥಾಸಂಕಲನ)





ಇತ್ತೀಚಿಗೆ ನನ್ನ ‘ದೊಕಾಚಿ ಮೇಷ್ಟ್ರ ಶಾಂತಿ-ಕ್ರಾಂತಿ’ ಕಥಾಸಂಕಲನ ಪ್ರಕಟವಾಯಿತು. ಇದು 2023 ರಲ್ಲಿ ಪ್ರಕಟವಾದ ನನ್ನ ಕಥಾಸಂಕಲನ. ಬೆಂಗಳೂರಿನ ಅಕ್ಷರ ಮಂಟಪ ಪ್ರಕಾಶಕರು ಈ ಕಥಾಸಂಕಲನವನ್ನು ಪ್ರಕಟಿಸಿರುವರು. ಚೇತನ್ ಕಣಬೂರ ಅವರು ಪ್ರೀತಿಯಿಂದ ಪ್ರಕಟಿಸಿರುವರು. ಅವರಿಗೆ ನನ್ನ ಧನ್ಯವಾದಗಳು.
ಈ ಕಥಾಸಂಕಲನದಲ್ಲಿ 15 ಕಥೆಗಳಿವೆ. ಮಯೂರ, ತರಂಗ, ತುಷಾರ, ಕನ್ನಡಪ್ರಭ ಮತ್ತು ಮಾನಸ ಪತ್ರಿಕೆಗಳ ಸಂಪಾದಕರು ಈ ಕಥೆಗಳನ್ನು ಪ್ರಕಟಿಸಿ ನನ್ನನ್ನು ಕನ್ನಡದ ಕಥಾಲೋಕಕ್ಕೆ ಪರಿಚಿಯಿಸಿರುವರು. ಎಲ್ಲ 15 ಕಥೆಗಳನ್ನು ಸೇರಿಸಿ ಈಗ ಕಥಾಸಂಕಲನ ಪ್ರಕಟವಾಗಿದೆ. 
 ನಾನು ಕಥೆಗಳನ್ನು ಬರೆಯುತ್ತೇನೆಂದು ಭಾವಿಸಿರಲಿಲ್ಲ. ಈ ಸೃಜನಶೀಲ ಸಾಹಿತ್ಯದ ಸೃಷ್ಟಿಗೆ ಮೂಲ ಪ್ರೇರಣೆ ಅಮ್ಮನ ಕಥೆಗಳ ಓದು. ಮನೆಗೆಲಸದ ಬಿಡುವಿನ ವೇಳೆ ಅಕ್ಕಪಕ್ಕದ ಮನೆಯ ಹೆಂಗಸರೆಲ್ಲ ಪಟ್ಟಾಂಗ ಕುಳಿತು ಮಾತುಕತೆಯಲ್ಲಿ ತೊಡಗಿರುವಾಗ ನನ್ನ ಅಮ್ಮ ಕಥೆಯ ಪುಸ್ತಕ ಕೈಯಲ್ಲಿ ಹಿಡಿದು ಓದಿನಲ್ಲಿ ಮೈಮರೆಯುತ್ತಿದ್ದಳು. ಹೀಗೆ ಅಮ್ಮನ ಓದಿಗಾಗಿ ಮನೆಗೆ ಬಂದು ಸೇರಿದ ಕಥಾ ಪುಸ್ತಕಗಳು ನನ್ನನ್ನೂ ಬಾಚಿತಬ್ಬಿಕೊಂಡವು. ಈಗ ಅನಿಸುತ್ತದೆ ಅಮ್ಮ ಆ ಕಥೆಗಳಲ್ಲಿ ತನ್ನ ಬದುಕನ್ನು ಹುಡುಕುತ್ತಿದ್ದಳೇನೋ ಎಂದು. ಎಷ್ಟೆಂದರೂ ಕಥೆ ಎನ್ನುವುದು ಒಬ್ಬರ ಬದುಕಲ್ಲದೆ ಮತ್ತೆನಲ್ಲವಲ್ಲ. ಅಮ್ಮ ನನಗೂ ಒಂದಿಷ್ಟು ಕಥೆಯ ಓದಿನ ಗೀಳು ಅಂಟಿಸಿ ಸಾಹಿತ್ಯದ ಮೂಲಕವೇ ಬದುಕಿನ ಅರ್ಥ ಅರಿಯುವ ಪಯಣದ ದಾರಿ ತೋರಿಸಿಕೊಟ್ಟಳು. ಹಾಗೆಂದೆ ಈ ಕಥಾಸಂಕಲನ ನನ್ನಮ್ಮನಿಗೆ, ಭಾವದಲ್ಲಿ ನೆಲೆ ನಿಂತಿರುವ ಅವಳ ನೆನಪುಗಳಿಗೆ ಸಮರ್ಪಿಸಿದ್ದೇನೆ.
-ರಾಜಕುಮಾರ ಕುಲಕರ್ಣಿ

Tuesday, May 2, 2023

ರೈತನಲ್ಲಿವೆ ಪ್ರಶ್ನೆ: ಉತ್ತರದಾಯಿ ಯಾರು?

 



(೧೦.೦೨.೨೦೨೩ ರ ಪ್ರಜಾವಾಣಿಯಲ್ಲಿ ಪ್ರಕಟ)

   ಈ ವರ್ಷ ಜೋಳದ ಉತ್ಪಾದನೆ ಕ್ಷೀಣಿಸಲಿದೆ ಎನ್ನುವ ಆತಂಕ ಬಾಗಲಕೋಟೆ ಜಿಲ್ಲೆಯ ಸಾರ್ವಜನಿಕರಲ್ಲಿ ಮನೆಮಾಡಿದೆ. ಈ ಬಾರಿ ಜಿಲ್ಲೆಯಲ್ಲಿ 60 ಸಾವಿರ ಹೆಕ್ಟೇರ್ ಕೃಷಿಭೂಮಿಯಲ್ಲಿ ಜೋಳ ಬಿತ್ತನೆಯಾಗಿದೆ. ಕಳೆದ ವರ್ಷ ಬಿತ್ತನೆಯಾದ 1.20 ಲಕ್ಷ ಹೆಕ್ಟೇರ್ ಕೃಷಿಭೂಮಿಗೆ ಹೋಲಿಸಿದರೆ ಈ ವರ್ಷ ಪ್ರತಿಶತ 50 ರಷ್ಟು ಕಡಿಮೆ ಪ್ರಮಾಣ ಜೋಳ ಬಿತ್ತನೆಯಾಗಿದೆ. ರೈತರು ವಾಣಿಜ್ಯ ಬೆಳೆಗಳಾದ ಕಬ್ಬು, ರೇಷ್ಮೆ, ಮೆಣಸಿನಕಾಯಿ ಬೆಳೆಗಳನ್ನು ಹೆಚ್ಚು ನೆಚ್ಚಿಕೊಂಡಿರುವುದೇ ಇದಕ್ಕೆ ಕಾರಣ. ಇನ್ನೊಂದು ಸಂಗತಿ ಎಂದರೆ ಒಣಬೇಸಾಯವನ್ನು ಆಶ್ರಯಿಸಿರುವ ರೈತರು ಮಾತ್ರ ಜೋಳದ ಬಿತ್ತನೆ ಮಾಡುತ್ತಿರುವರು. ನೀರಾವರಿ ಸೌಲಭ್ಯ ಹೊಂದಿರುವ ರೈತರು ಹೆಚ್ಚಾಗಿ ಬೆಳೆಯುತ್ತಿರುವುದು ವಾಣಿಜ್ಯ ಬೆಳೆಗಳನ್ನು. ಜೋಳ ಮುಖ್ಯ ಆಹಾರ ಬೆಳೆಯಾಗಿರುವುದರಿಂದ ಜೋಳದ ಉತ್ಪಾದನೆ ಕ್ಷೀಣಿಸುತ್ತಿರುವುದು ಸಹಜವಾಗಿಯೇ ಜಿಲ್ಲೆಯ ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಆತಂಕ ಕೇವಲ ಬಾಗಲಕೋಟೆ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ, ಅದು ಇಡೀ ಉತ್ತರ ಕರ್ನಾಟಕ ಭಾಗಕ್ಕೆ ಅನ್ವಯಿಸುತ್ತದೆ. 

ಒಂದರ್ಥದಲ್ಲಿ ನಾನೇಕೆ ಆರ್ಥಿಕ ನಷ್ಠ ಅನುಭವಿಸಿ ಬೇರೆಯವರ ಹಸಿವು ತಣಿಸಲಿ ಎಂದು ಅನ್ನದಾತ ಮುನಿಸಿಕೊಂಡಂತಿದೆ. ಸಾರ್ವಜನಿಕರ ಆತಂಕವನ್ನೆ ಆಧಾರವಾಗಿಟ್ಟುಕೊಂಡು ರೈತರಿಗೆ ಆಹಾರ ಬೆಳೆಗಳನ್ನೇ ಗಣನೀಯ ಪ್ರಮಾಣದಲ್ಲಿ ಬೆಳೆಯುವಂತೆ ಆಗ್ರಹಿಸುವಂತಿಲ್ಲ. ಆ ಒಂದು ನೈತಿಕತೆಯನ್ನು ಸರ್ಕಾರ ಮತ್ತು ಸಾರ್ವಜನಿಕರು ಅದೆಂದೊ ಕಳೆದುಕೊಂಡಾಗಿದೆ. ದಶಕದ ಹಿಂದೆ ಆಂಧ್ರಪ್ರದೇಶದಲ್ಲಿ ಕೃಷಿಗೆ ಸಂಬಂಧಿಸಿದಂತೆ ವಿಚಿತ್ರ ಸನ್ನಿವೇಶ ಎದುರಾಗಿತ್ತು. 2011 ರಲ್ಲಿ ಪೂರ್ವಗೋದಾವರಿ ಪ್ರಾಂತ್ಯದಲ್ಲಿನ ಎಲ್ಲ ಜಿಲ್ಲೆಗಳ ರೈತರು ಸಾಮೂಹಿಕವಾಗಿ ಕೃಷಿ ಚಟುವಟಿಕೆಯನ್ನು ಸ್ಥಗಿತಗೊಳಿಸಿದ್ದರು. ಒಂದು ವರ್ಷದ ಕಾಲ ವ್ಯವಸಾಯ ಮಾಡದಿರಲು ನಿರ್ಧರಿಸಿದ್ದರು. ಒಂದು ವರ್ಷ ಕಾಲಾವಧಿಯ ಆ ಸಾಮೂಹಿಕ ಸ್ಥಗಿತವನ್ನು ಅವರು ರಜೆ ಎಂದು ಘೋಷಿಸಿಕೊಂಡರು. ನಿರಂತರ ಕೃಷಿ ಚಟುವಟಿಕೆಯಿಂದ ಬಳಲಿರುವ ತಮಗೆ ವಿಶ್ರಾಂತಿಯ ಅಗತ್ಯವಿದೆ ಎನ್ನುವುದು ಅವರ ಬೇಡಿಕೆಯಾಗಿತ್ತು. ಪರಿಣಾಮವಾಗಿ ಆ ರಾಜ್ಯದ ಮುಖ್ಯಆಹಾರ ಬೆಳೆಯಾದ ಭತ್ತದ ಕೊರತೆ ಎದುರಾಗಲಿದೆ ಎನ್ನುವ ಆತಂಕ ಜನರಲ್ಲಿ ಮೂಡಿ ಅನಂತರ ಸರ್ಕಾರವೇ ಮುಂದಾಗಿ ರೈತರ ಮನವೊಲಿಸಬೇಕಾದ ಸಂದರ್ಭ ಸೃಷ್ಟಿಯಾಗಿತ್ತು. 

  ರೈತರು ಹೀಗೆ ಕಾಲಕಾಲಕ್ಕೆ ಮುನಿದುಕೊಳ್ಳಲು ಅನೇಕ ಕಾರಣಗಳಿವೆ. ರೈತರಿಗೆ ಕೃಷಿ ಚಟುವಟಿಕೆಯಿಂದ ಅದರಲ್ಲೂ ಒಣಬೇಸಾಯವನ್ನೇ ಆಶ್ರಯಿಸಿರುವವರಿಗೆ ಹೇಳಿಕೊಳ್ಳುವಂಥ ಆದಾಯ ದೊರೆಯುತ್ತಿಲ್ಲ. ಕಳಪೆ ಬೀಜಗಳ ಬಳಕೆ, ಅಧಿಕ ಬೆಲೆಗೆ ಖರೀದಿಸಿದ ರಸಗೊಬ್ಬರ, ಸಕಾಲಕ್ಕೆ ಆಗದ ಮಳೆ, ಕ್ರಿಮಿ ಕೀಟಗಳಿಂದ ಹಾನಿಗೊಳಗಾಗುವ ಬೆಳೆ ಇಷ್ಟೆಲ್ಲ ತೊಂದರೆಗಳನ್ನೆದುರಿಸಿ ಬೆಳೆ ಕೈಗೆ ಬರುವ ಹೊತ್ತಿಗೆ ದೇಶದ ಬಡ ರೈತರ ಸ್ಥಿತಿ ಚಿಂತಾಜನಕವಾಗಿರುತ್ತದೆ. ಸಾಲದ ಹೊರೆಯಿಂದ ಬೆನ್ನು ಬಾಗಿರುತ್ತದೆ. ಬೆಳೆದ ಬೆಳೆಯನ್ನು ಹೊಲದಿಂದಲೇ ನೇರವಾಗಿ ಮಾರುಕಟ್ಟೆಗೆ ಸಾಗಿಸುವ ಪರಿಸ್ಥಿತಿ ರೈತನದು. ಗಗನಕ್ಕೆರಿದ್ದ ಬೆಲೆ ಬೆಳೆ ರೈತನ ಕೈಗೆ ಬರುವ ಹೊತ್ತಿಗೆ ಪಾತಾಳಕ್ಕಿಳಿದಿರುತ್ತದೆ. ರೈತ ತನ್ನ ಬೆಳೆಯನ್ನು ಮಧ್ಯವರ್ತಿಗಳು ನಿಗದಿಪಡಿಸಿದ ಬೆಲೆಗೆ ಮಾರಾಟ ಮಾಡಬೇಕು. ಅನೇಕ ಮಾರಾಟಗಾರರು ರೈತರಿಂದ ಕಡಿಮೆ ಬೆಲೆಗೆ ದವಸ ಧಾನ್ಯಗಳನ್ನು ಖರೀದಿಸಿ ನಂತರ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಸಾರ್ವತ್ರಿಕ ಸತ್ಯ.

ಒಂದೆಡೆ ಮಧ್ಯವರ್ತಿಗಳ ಹಾವಳಿ ಇನ್ನೊಂದೆಡೆ ರೈತರಿಂದಲೇ ನೇರವಾಗಿ ಖರೀದಿಸಲು ಸಿದ್ಧರಿಲ್ಲದ ಗ್ರಾಹಕರು. ಈ ನಡುವೆ ರೈತರ ಬೆಂಬಲಕ್ಕೆ ನಿಲ್ಲದ ಆಯಾ ಕಾಲಕ್ಕೆ ಆಡಳಿತ ನಡೆಸುವ ಸರ್ಕಾರ. ಉದ್ಯಮಿಗಳನ್ನು ರತ್ನಗಂಬಳಿ ಹಾಸಿ ಸ್ವಾಗತಿಸುವ ಸರ್ಕಾರ ತನ್ನದೆ ನೆಲದ ರೈತರ ಸಮಸ್ಯೆಗಳಿಗೆ ಕಿವುಡಾಗುತ್ತದೆ. ಕೈಗಾರಿಕೆಗಳಿಗೆ ಉಚಿತ ವಿದ್ಯುತ್, ಉಚಿತ ನೀರು ಜೊತೆಗೆ ಅತ್ಯುತ್ತಮ ರಸ್ತೆ ಸೌಲಭ್ಯ ಒದಗಿಸುವ ಸರ್ಕಾರ ತನ್ನದೇ ನಾಡಿನ ರೈತರ ಸಮಸ್ಯೆಗಳನ್ನು ಪರಿಹರಿಸಲು ಅಸಾಹಾಯಕವಾಗಿದೆ. ರಾತ್ರಿಯೆಲ್ಲ ನಿದ್ದೆ ಇಲ್ಲದೆ ಹೊಲಗಳಿಗೆ ನೀರು ಉಣಿಸುವ ರೈತರ ಸಂಖ್ಯೆ ಹೇರಳವಾಗಿದೆ. ಅದೆಷ್ಟೋ ರೈತರು ರಾತ್ರಿ ವೇಳೆ ವಿಷಜಂತುಗಳಿಗೆ ಬಲಿಯಾಗಿ ಪ್ರಾಣ ಕಳೆದುಕೊಂಡ ಉದಾಹರಣೆಗಳೂ ಉಂಟು.

ವ್ಯವಸಾಯ ಮಾಡಿಕೊಂಡು ಹಳ್ಳಿಗಳಲ್ಲಿ ಬದುಕುತ್ತಿರುವ ರೈತರ ಮಕ್ಕಳಿಗೆ ಅಲ್ಲಿ ಉತ್ತಮ ಶೈಕ್ಷಣಿಕ ಸೌಲಭ್ಯ ದೊರೆಯುತ್ತಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ವೈದ್ಯರ ಕೊರತೆಯಿಂದಾಗಿ ದೊರೆಯಬೇಕಾದ ಆರೋಗ್ಯ ಸೌಲಭ್ಯಗಳಿಂದಲೂ ಅವರು ವಂಚಿತರಾಗಿರುವರು. ರಸ್ತೆ ಸಂಪರ್ಕದ ಕೊರತೆಯಿಂದಾಗಿ ಅನೇಕ ಹಳ್ಳಿಗಳು ಮಳೆಗಾಲದಲ್ಲಿ ದ್ವೀಪಗಳಾಗುತ್ತಿವೆ. ಹಳ್ಳಿಗರೆಲ್ಲ ದಿನಗೂಲಿಗಳಾಗಿ ನಗರ ಪ್ರದೇಶಗಳಿಗೆ ವಲಸೆ ಬರುತ್ತಿರುವುದರಿಂದ ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗಾಗಿ ಕೆಲಸಗಾರರು ದೊರೆಯದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದು ಪ್ರವಾಹಕ್ಕೆ ಬೆಳೆ ಕೊಚ್ಚಿ ಹೋದಾಗ ಇಲ್ಲವೆ ಮಳೆ ಬಾರದೆ ಭೀಕರ ಬರಗಾಲ ತಲೆದೂರಿದಾಗ ಆಗಲೂ ಸಂಕಷ್ಟಕ್ಕೊಳಗಾಗುವುದು ರೈತನ ಬದುಕೇ. ಬೆಳೆ ಬೆಳೆದು ಸಕಾಲದಲ್ಲಿ ಲಾಭವಾಗದೇ ಇದ್ದರೆ ರಸಗೊಬ್ಬರಗಳ ಸಾಲ ಗಂಭೀರ ಸಮಸ್ಯೆಯನ್ನು ತಂದೊಡ್ಡುತ್ತದೆ. ರಸಗೊಬ್ಬರಗಳ ವಿತರಕರ ಕಿರುಕುಳ ತಾಳದೆ ಅನೇಕ ರೈತರು ಸಾವಿಗೆ ಶರಣಾಗುವುದುಂಟು. ಮನೆಯ ಯಜಮಾನನನ್ನು ಕಳೆದುಕೊಂಡ ರೈತ ಕುಟುಂಬದ ಬದುಕು ಬೀದಿ ಪಾಲಾಗುತ್ತದೆ.

ಈಗ ಕೃಷಿಭೂಮಿ ವಸತಿ ಪ್ರದೇಶವಾಗಿ ಪರಿವರ್ತನೆಯಾಗುತ್ತಿದೆ. ನಗರ ಪ್ರದೇಶಗಳಿಗೆ ಹೊಂದಿಕೊಂಡಿರುವ ರೈತರ ಹೊಲಗಳಲ್ಲಿ ವಸತಿ ಸಮುಚ್ಛಯಗಳು ತಲೆ ಎತ್ತುತ್ತಿವೆ. ರಿಯಲ್ ಎಸ್ಟೇಟ್ ಉದ್ದಿಮೆಯಿಂದ ರೈತರ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಅದೆಷ್ಟೋ ರೈತರು ಬಂಡವಾಳದಾರರಿಗೆ ಕೃಷಿಭೂಮಿಯನ್ನು ಮಾರಾಟಮಾಡಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವರು. ಇಲ್ಲಿ ಸಾರ್ವಜನಿಕರದೂ ಅನೇಕ ತಪ್ಪುಗಳಿವೆ. ರೈತನಿಂದ ಒಂದು ಕಟ್ಟು ಸೊಪ್ಪು ಖರೀದಿಸಲು ನೂರೆಂಟು ಚೌಕಾಸಿ ಮಾಡುತ್ತಾರೆ. ರೈತನೆದುರು ತೂಕದಲ್ಲಿ ಮೋಸ, ಕಳಪೆ ತರಕಾರಿ ಎಂದು ಗಂಟೆಗಟ್ಟಲೆ ಉಪನ್ಯಾಸ ನೀಡುತ್ತಾರೆ. ಇದೇ ಜನ ಬೃಹದಾಕಾರದ ಮಾಲ್‍ಗಳಲ್ಲಿ ನಿಗದಿಪಡಿಸಿದ ಬೆಲೆಗೆ ಯಾವ ತಕರಾರು ಇಲ್ಲದೆ ಪದಾರ್ಥಗಳನ್ನು ಖರೀದಿಸುತ್ತಾರೆ.

ಈಗಾಗಲೇ ಜಗತ್ತಿನಲ್ಲಿ ಆಹಾರ ಕೊರತೆ ಉಂಟಾಗಿದೆ. ಜೊತೆಗೆ ಕೃಷಿಭೂಮಿ ಕ್ಷೀಣಿಸುತ್ತಿರುವುದು ನೋವಿನ ಮೇಲೆ ಬರೆ ಎಳೆದಂತಾಗಿದೆ. ಈ ಗಂಭೀರ ಸಮಸ್ಯೆಯನ್ನು ಹೋಗಲಾಡಿಸಲು ಮೊದಲು ರೈತರ ಸಮಸ್ಯೆಗಳು ಪರಿಹಾರ ಕಾಣುವಂತಾಗಬೇಕು. ಕೇವಲ ವೇದಿಕೆಗಳಲ್ಲಿನ ಚರ್ಚೆ ಮತ್ತು ಸಂವಾದಗಳಿಂದಾಗಲಿ, ಪ್ರದರ್ಶನ ಮೇಳಗಳಿಂದಾಗಲಿ ರೈತರ ಸಮಸ್ಯೆಗಳು ಪರಿಹಾರವಾಗಲಾರವು. ಸರ್ಕಾರ ಮತ್ತು ಸಾರ್ವಜನಿಕರು ಜೊತೆಗೂಡಿ ರೈತರ ಪ್ರಶ್ನೆಗಳಿಗೆ ಮತ್ತು ಸಮಸ್ಯೆಗಳಿಗೆ ಉತ್ತರದಾಯಿಯಾಗಬೇಕಿದೆ. 

-ರಾಜಕುಮಾರ ಕುಲಕರ್ಣಿ