Tuesday, October 5, 2021

ಕೃಷಿಭೂಮಿ ಮತ್ತು ನಿವೇಶನದ ಹವಣಿಕೆ

 



      

(೨೩.೮.೨೦೨೧ ರ ಪ್ರಜಾವಾಣಿಯಲ್ಲಿ ಪ್ರಕಟ) 

    ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ನನ್ನ ಮಿತ್ರನಿಗೆ ನಗರದಲ್ಲಿ ಸ್ವಂತ ಮನೆ ಕಟ್ಟಿಕೊಳ್ಳುವಾಸೆÉ. ನಿವೇಶನ ಖರೀದಿಸಲು 20 ರಿಂದ 25 ಲಕ್ಷ ರೂಪಾಯಿಗಳ ಅಗತ್ಯ ಎದುರಾಯಿತು. ಹಳ್ಳಿಯಲ್ಲಿರುವ ಎರಡು ಎಕರೆ ಕೃಷಿಭೂಮಿಯನ್ನು ಮಾರಾಟ ಮಾಡಿ ಬಂದ ಹಣದಿಂದ ನಗರದಲ್ಲಿ 30x40 ಅಡಿಗಳ ಅಳತೆಯ ನಿವೇಶನ ಖರೀದಿಸಿದ. ಎರಡೆಕರೆ ಕೃಷಿಭೂಮಿಯನ್ನು ಮಾರಾಟ ಮಾಡಿದ್ದರಿಂದ ಕೈಸೇರಿದ ಹಣ ನಿವೇಶನ ಖರೀದಿಗಾಗಿಯೇ ಖರ್ಚಾಯಿತು. ಈಗ ಮನೆಕಟ್ಟಲು ಉಳಿದಿರುವ ಎರಡು ಎಕರೆ ಕೃಷಿಭೂಮಿಯನ್ನು ಮಾರಾಟ ಮಾಡುವ ಹವಣಿಕೆಯಲ್ಲಿರುವನು. ಒಂದು ಅಂದಾಜಿನ ಪ್ರಕಾರ ನಗರ ಪ್ರದೇಶದಲ್ಲಿನ ಎರಡು ಗುಂಟೆಗಳ ನಿವೇಶನದ ಮೌಲ್ಯ ಗ್ರಾಮೀಣ ಪ್ರದೇಶದಲ್ಲಿನ 80 ಗುಂಟೆಗಳ ಕೃಷಿಭೂಮಿಯ ಮೌಲ್ಯಕ್ಕೆ ಸರಿಸಮವಾಗಿದೆ.

ನಗರೀಕರಣದ ದಾಹಕ್ಕೆ ಕೃಷಿಭೂಮಿ ಬಲಿಯಾಗುತ್ತಿದೆ. ವಸತಿ ಪ್ರದೇಶಗಳ ಬೇಡಿಕೆ ಹೆಚ್ಚುತ್ತಿರುವ ಕಾರಣ ರೈತರಿಂದ ಕೃಷಿಭೂಮಿಯನ್ನು ಖರೀದಿಸಿ ಅದನ್ನು ನಿವೇಶನಗಳಾಗಿ ಪರಿವರ್ತಿಸಿ ಮಧ್ಯವರ್ತಿಗಳು ಲಾಭ ಮಾಡಿಕೊಳ್ಳುತ್ತಿರುವರು. ಕೃಷಿಭೂಮಿಯನ್ನು ವಸತಿ ಪ್ರದೇಶವಾಗಿ ಪರಿವರ್ತಿಸಲು ಅದನ್ನು ಕೃಷಿಯೇತರ ಭೂಮಿಯೆಂದು ಸರ್ಕಾರದ ಸಂಬಂಧಪಟ್ಟ ಇಲಾಖೆಯಿಂದ ಒಪ್ಪಿಗೆ/ಅನುಮತಿ ಪಡೆಯಬೇಕು. ಆಶ್ಚರ್ಯದ ಸಂಗತಿಯೆಂದರೆ ಕೆಲವೊಮ್ಮೆ ಮಧ್ಯವರ್ತಿಗಳು ಸಂಬಂಧಿಸಿದ ಇಲಾಖೆಯಿಂದ ಯಾವ ಒಪ್ಪಿಗೆಯನ್ನು ಪಡೆಯದೆ ಕೃಷಿಭೂಮಿಯನ್ನು ನಿವೇಶನಗಳಾಗಿ ಪರಿವರ್ತಿಸುವರು. ಇತ್ತೀಚಿಗೆ ನನ್ನ ಪರಿಚಿತರೋರ್ವರು ನಗರದ ಹೊರವಲಯದಲ್ಲಿರುವ ಕೃಷಿಭೂಮಿಯಲ್ಲಿ ಮನೆಕಟ್ಟಿಕೊಳ್ಳಲೆಂದು ಮೂರು ಲಕ್ಷ ರೂಪಾಯಿಗಳಿಗೆ ಒಂದು ಗುಂಟೆ ಜಾಗ ಖರೀದಿಸಿರುವರು. ಅವರು ಹೇಳಿದ ಪ್ರಕಾರ ಮಧ್ಯವರ್ತಿಯು 50 ಲಕ್ಷ ರೂಪಾಯಿಗಳಿಗೆ ರೈತನಿಂದ ಐದು ಎಕರೆ ಕೃಷಿಭೂಮಿಯನ್ನು ಖರೀದಿಸಿ ನಂತರ ಪ್ರತಿ ಒಂದುಗುಂಟೆ ವಿಸ್ತೀರ್ಣದ ಜಾಗವನ್ನು 3 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿರುವನು. ಸ್ವಂತ ಮನೆಯ ಆಕಾಂಕ್ಷಿಗಳು ಅದು ಅಕ್ರಮ ಎಂದು ಗೊತ್ತಿದ್ದೂ ಅಲ್ಲಿ ನಿವೇಶನಗಳನ್ನು ಖರೀದಿಸಿರುವರು. ಮುಂದೊಂದುದಿನ ಸರ್ಕಾರ ಅಕ್ರಮವನ್ನು ಸಕ್ರಮಗೊಳಿಸಬಹುದೆನ್ನುವ ದೂರದ ಆಸೆ ಅವರದು. ರೈತನಿಂದ 50 ಲಕ್ಷ ರೂಪಾಯಿಗಳಿಗೆ ಆ ಕೃಷಿಭೂಮಿಯನ್ನು ಖರೀದಿಸಿದ ಮಧ್ಯವರ್ತಿಗೆ ಒಂದೆರಡು ತಿಂಗಳುಗಳಲ್ಲೇ 4 ರಿಂದ 5 ಕೋಟಿ ರೂಪಾಯಿಗಳ ನಿವ್ವಳ ಲಾಭವಾಗಿದೆ. 

ನಗರ ಪ್ರದೇಶಗಳಲ್ಲಿ ವಸತಿ ಸಮಸ್ಯೆಯನ್ನು ಪರಿಹರಿಸಲು ಸರ್ಕಾರದ ಗೃಹಮಂಡಳಿಯಿಂದ ಕಡಿಮೆ ಬೆಲೆಗೆ ಮನೆ ಅಥವಾ ನಿವೇಶನಗಳನ್ನು ಒದಗಿಸುವ ವ್ಯವಸ್ಥೆ ಚಾಲ್ತಿಯಲ್ಲಿದೆ. ಇಲ್ಲಿಯೂ ಸರ್ಕಾರ ವಸತಿ ಪ್ರದೇಶಕ್ಕಾಗಿ ಕೃಷಿಭೂಮಿಯನ್ನೇ ವಶಪಡಿಸಿಕೊಳ್ಳುತ್ತದೆ. ಒಂದು ಸಾವಿರ ನಿವೇಶನಗಳಿದ್ದರೆ ಬೇಡಿಕೆಕೋರಿ ಒಂದು ಲಕ್ಷ ಅರ್ಜಿಗಳು ಬಂದಿರುತ್ತವೆ. ಈಗಾಗಲೇ ಸ್ವಂತ ಮನೆ ಅಥವಾ ನಿವೇಶನ ಇರುವವರೂ ಸರ್ಕಾರದ ಗೃಹಮಂಡಳಿಯಡಿ ಕಡಿಮೆ ಬೆಲೆಗೆ ನಿವೇಶನ ಖರೀದಿಸಲು ಅರ್ಜಿ ಗುಜರಾಯಿಸುತ್ತಾರೆ. ಕಡಿಮೆ ಬೆಲೆಗೆ ಖರೀದಿಸಿದ ನಿವೇಶನ ಭವಿಷ್ಯದಲ್ಲಿ ಆರ್ಥಿಕವಾಗಿ ಲಾಭ ತಂದುಕೊಡಬಹುದೆನ್ನುವ ದೂರಾಲೋಚನೆ ಅವರದು. ಇಲಾಖೆಯ ಅಧಿಕಾರಿಗಳಿಗೆ ಒಂದಿಷ್ಟು ಕಾಣಿಕೆ ಸಂದಾಯ ಮಾಡಿ ಸ್ವಂತ ಮನೆ ಮತ್ತು ನಿವೇಶನಗಳಿದ್ದವರೂ ಕೂಡ ಗೃಹಮಂಡಳಿಯಿಂದ ನಿವೇಶನಗಳನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಸರ್ಕಾರದ ಗೃಹಮಂಡಳಿಯಿಂದ ಮನೆಕಟ್ಟಲು ಖರೀದಿಸಿದ ನಿವೇಶವನ್ನು ಮುಂದೊಂದು ದಿನ ಅಧಿಕ ಬೆಲೆಗೆ ಮಾರಿಕೊಳ್ಳುತ್ತಾರೆ.

ಕಾರ್ಖಾನೆಗಳು, ವಿಶ್ವವಿದ್ಯಾಲಯಗಳು, ಸರ್ಕಾರದ ಆಡಳಿತ ಕಚೇರಿಗಳು ಇವೆಲ್ಲವುಗಳ ಸ್ಥಾಪನೆಗೆ ಸಾವಿರಾರು ಎಕರೆ ಕೃಷಿಭೂಮಿ ಬಳಕೆಯಾಗುತ್ತಿದೆ. ರಸ್ತೆಗಳ ಅಗಲೀಕರಣ, ಹೆದ್ದಾರಿಗಳ ನಿರ್ಮಾಣದಲ್ಲಿಯೂ ಕೃಷಿಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತದೆ. ನಗರ ಪ್ರದೇಶಗಳಿಗೆ ಸಮೀಪದಲ್ಲಿರುವ ಹಳ್ಳಿಗಳ ಕೃಷಿಭೂಮಿಯಲ್ಲಿ ಇಟ್ಟಂಗಿ ಕಾರ್ಖಾನೆಗಳು, ಕಂಕರ್ ಉತ್ಪಾದನೆ ಕೇಂದ್ರಗಳು, ರೆಸಾರ್ಟ್‍ಗಳು ಮತ್ತು ಡಾಬಾಗಳು ಕಾರ್ಯನಿರ್ವಹಿಸುತ್ತಿವೆ. ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಎಡ-ಬಲದ ಕೃಷಿಭೂಮಿಯಲ್ಲಿ ಸಾಲುಸಾಲು ಮನೆಗಳು ಮತ್ತು ವಾಣಿಜ್ಯ ಸಂಕೀರ್ಣಗಳು ನಿರ್ಮಾಣಗೊಳ್ಳುತ್ತಿರುವುದು ಪ್ರತಿಹಳ್ಳಿಯಲ್ಲೂ ಕಂಡುಬರುವ ಸಾಮಾನ್ಯ ದೃಶ್ಯವಾಗಿದೆ.

ಭೂಮಿ ಈಗ ಹಣ ಹೂಡಿಕೆಯ ಉತ್ಪಾದನಾ ಕ್ಷೇತ್ರವಾಗಿ ಬಂಡವಾಳದಾರರನ್ನು ಆಕರ್ಷಿಸುತ್ತಿದೆ. ಆರ್ಥಿಕ ಸ್ಥಿತಿವಂತರು ಭೂಮಿ ಖರೀದಿಗಾಗಿ ಹಣ ಹೂಡುತ್ತಿರುವರು. ಸ್ವಂತದ ಮನೆಯಿದ್ದೂ ಲಾಭದ ದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ನಿವೇಶನಗಳನ್ನು ಖರೀದಿಸುವ ದುರಾಸೆ ಜನರಲ್ಲಿ ಹೆಚ್ಚುತ್ತಿದೆ. ಜನರ ಈ ದುರಾಸೆಯನ್ನೇ ಬಂಡವಾಳವಾಗಿಟ್ಟುಕೊಂಡು ಉದ್ಯಮಿಗಳು ರೈತರಿಂದ ಕಡಿಮೆ ಬೆಲೆಗೆ ಕೃಷಿಭೂಮಿಯನ್ನು ಖರೀದಿಸಿ ನಿವೇಶನಗಳನ್ನಾಗಿಸಿ ಮಾರಾಟ ಮಾಡುತ್ತಿರುವರು. ಕಪ್ಪುಹಣ ಭೂಮಿ ಖರೀದಿಗಾಗಿ ಹರಿದುಬರುತ್ತಿದೆ. ಕೃಷಿಭೂಮಿ ಅಥವಾ ನಿವೇಶನದ ಖರೀದಿ ಸಂದರ್ಭ ಕೈಬದಲಾಗುವ ಹಣ  ಮತ್ತು ನೋಂದಣಿ ಇಲಾಖೆಯಲ್ಲಿ ದಾಖಲಿಸುವ ಬೆಲೆ ನಡುವೆ ತುಂಬ ವ್ಯತ್ಯಾಸವಿರುತ್ತದೆ. ಖರೀದಿಸುವಾತ ಪಾವತಿಸುವ ಒಟ್ಟುಹಣ ನೋಂದಣಿ ಇಲಾಖೆಯಲ್ಲಿ ದಾಖಲಾಗುವುದೇ ಇಲ್ಲ. ಇದು ಸರ್ಕಾರದಿಂದ ಶ್ರೀಸಾಮಾನ್ಯನವರೆಗೆ ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ. ಈ ಅನುಕೂಲದಿಂದಾಗಿ ಹಪ್ಪುಹಣ ಭೂಮಿ ಖರೀದಿಯಲ್ಲಿ ಯಾವ ಅಡ್ಡಿ ಆತಂಕಗಳಿಲ್ಲದೆ ಚಲಾವಣೆಯಾಗುತ್ತದೆ.

ವರ್ಷದಿಂದ ವರ್ಷಕ್ಕೆ ಕೃಷಿಭೂಮಿ ಕ್ಷಿಣಿಸುತ್ತಿರುವುದು ಮುಂದೊಂದು ದಿನ ತೀವ್ರ ಆಹಾರ ಕ್ಷಾಮವನ್ನು ಸೃಷ್ಟಿಸಲಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡುತ್ತಿರುವರು. ಪೌಷ್ಠಿಕ ಆಹಾರವಿರಲಿ ದಿನನಿತ್ಯದ ಸರಳ ಊಟಕ್ಕೆ ಅಗತ್ಯವಾದ ಆಹಾರವೂ ದೊರೆಯದ ಸಮಸ್ಯೆ ಎದುರಾಗಲಿದೆ. ಹಣ ಕೊಟ್ಟರೂ ಹಿಡಿ ಅನ್ನ ಸಿಗದ ಪರಿಸ್ಥಿತಿ ನಿರ್ಮಾಣವಾಗಲಿದೆ. ಈಗಲಾದರೂ ಸರ್ಕಾರ ಮತ್ತು ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು.  ಒಂದು ಕುಟುಂಬಕ್ಕೆ ಒಂದೇ ನಿವೇಶನ ಅಥವಾ ಮನೆ ಎನ್ನುವ ಕಟ್ಟುನಿಟ್ಟಿನ ನಿಯಮವನ್ನು ಸರ್ಕಾರ ಜಾರಿಗೆ ತರಬೇಕು. ಭೂಮಿಯ ಮೇಲೆ ಬಂಡವಾಳ ಹೂಡಿಕೆಯನ್ನು ನಿಯಂತ್ರಿಸಬೇಕು. ಕೃಷಿಭೂಮಿಯನ್ನು ಅಕ್ರಮವಾಗಿ ವಸತಿ ಪ್ರದೇಶವಾಗಿ ಪರಿವರ್ತಿಸುವವರಿಗೆ ಶಿಕ್ಷೆಯಾಗಬೇಕು. ವಿಪರ್ಯಾಸದ ಸಂಗತಿ ಎಂದರೆ ಕೃಷಿಕರಲ್ಲದವರು ಕೃಷಿಭೂಮಿಯನ್ನು ಖರೀದಿಸಲು ಅನುಕೂಲವಾಗುವಂತೆ ಇತ್ತೀಚಿಗೆ ಸರ್ಕಾರ ಕಾಯ್ದೆಯಲ್ಲಿ ತಿದ್ದುಪಡಿ ತಂದಿದೆ. ನಿಜಕ್ಕೂ ಇದು ಆತಂಕ ಪಡುವ ಬೆಳವಣಿಗೆ. ಈಗಾಗಲೇ ವರ್ಷದಿಂದ ವರ್ಷಕ್ಕೆ ಕೃಷಿಭೂಮಿಯ ವ್ಯಾಪ್ತಿ ಕ್ಷಿಣಿಸುತ್ತಿದೆ. ಕಾಯ್ದೆಯಲ್ಲಾದ ತಿದ್ದುಪಡಿಯಿಂದಾಗಿ ಬಂಡವಾಳದಾರರು ಕೃಷಿಭೂಮಿಯನ್ನು ಖರೀದಿಸಿ ಅದನ್ನು ವಸತಿ ಪ್ರದೇಶಗಳಾಗಿ ಪರಿವರ್ತಿಸಲು ಹಳ್ಳಿಗಳಿಗೆ ಲಗ್ಗೆಯಿಡಲಿರುವರು. ನಿವೇಶನಗಳನ್ನು ಖರೀದಿಸಲು ಸ್ಥಿತಿವಂತರು ಪೈಪೋಟಿಗಿಳಿಯಲಿರುವರು. ಇವರುಗಳ ನಡುವೆ ವರ್ಷವಿಡೀ ಮಣ್ಣಲ್ಲಿ ಮಣ್ಣಾಗಿ ದುಡಿದರೂ ನಾಲ್ಕು ಕಾಸು ಕಾಣದ ರೈತರು ಬಂಡವಾಳದಾರರ ಆಮೀಷಕ್ಕೆ ಬಲಿಯಾಗಿ ಕೃಷಿಭೂಮಿಯನ್ನು ಪರಭಾರೆ ಮಾಡಿ ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಿರುವರು.

-ರಾಜಕುಮಾರ ಕುಲಕರ್ಣಿ