Monday, April 3, 2023

ಸಂಕಲ್ಪಿಸುವ ಮನಸ್ಸು ದೃಢವಾಗಿರಲಿ

 





(೦೪. ೦೧. ೨೦೨೩ ರ ಪ್ರಜಾವಾಣಿಯಲ್ಲಿ ಪ್ರಕಟ)

       ಹೊಸ ವರ್ಷದ ಅಂಗವಾಗಿ ಸಾರ್ವಜನಿಕರು ಅನೇಕ ಸಂಕಲ್ಪಗಳನ್ನು ತೊಡುತ್ತಾರೆ. ಕೆಟ್ಟ ಹವ್ಯಾಸಗಳನ್ನು ತ್ಯಜಿಸುವ, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವ, ವರ್ತನೆಯನ್ನು ತಿದ್ದಿಕೊಳ್ಳುವ, ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ತರಹೇವಾರಿ ಸಂಕಲ್ಪಗಳು ಆಚರಣೆಗೆ ಬರುತ್ತವೆ. ಜನರು ತಮ್ಮ ನಿರ್ಧಾರಗಳನ್ನು ಎಷ್ಟರಮಟ್ಟಿಗೆ ಕಾರ್ಯಗತಗೊಳಿಸುವರು ಎನ್ನುವುದು ಅದು ಅವರವರ ಮನಸ್ಸಿನ ದೃಢತೆಯನ್ನು ಅವಲಂಬಿಸಿದೆ. ಹೆಚ್ಚಿನ ನಿರ್ಣಯಗಳು ಕೆಲವು ದಿನಗಳ ಕಾಲ ಕಾಟಾಚಾರಕ್ಕೆ ರೂಢಿಯಲ್ಲಿದ್ದು ಅನಂತರ ಮರೆತು ಹೋಗುವುದು ಸಾಮಾನ್ಯ ಸಂಗತಿಯಾಗಿದೆ. 

ಇತ್ತೀಚೆಗೆ ನನ್ನ ಮಿತ್ರರೋರ್ವರು ತಮ್ಮ ಮಗಳ ಮದುವೆಯನ್ನು ಅತ್ಯಂತ ಸರಳವಾಗಿ ನೆರವೇರಿಸಿದರು. ಯಾವ ಆಡಂಬರ, ಅದ್ದೂರಿ ಆಚರಣೆಗಳಿಲ್ಲದೆ ಮದುವೆ ಕಾರ್ಯಕ್ರಮ ಕೆಲವೇ ಗಂಟೆಗಳಲ್ಲಿ ಕೊನೆಗೊಂಡಿತು. ವಧು-ವರರ ಕುಟುಂಬ ಸದಸ್ಯರಷ್ಟೇ ಪಾಲ್ಗೊಂಡಿದ್ದ ಸಮಾರಂಭದಲ್ಲಿ ಆಹಾರ ಕೂಡ ಮಿತವಾಗಿ ಬಳಕೆಯಾಗಿತ್ತು. ‘ಜಗತ್ತಿನಲ್ಲಿ ಆಹಾರ ಕೊರತೆಯ ಸಮಸ್ಯೆ ಉಲ್ಬಣಿಸುತ್ತಿರುವಾಗ ಅದ್ದೂರಿ ಮದುವೆ ಸಮಾರಂಭವನ್ನು ಏರ್ಪಡಿಸುವುದಕ್ಕೆ ಮನಸ್ಸು ಒಪ್ಪಲಿಲ್ಲ. ಇನ್ನುಮುಂದೆ ಕುಟುಂಬದ ಎಲ್ಲ ಕಾರ್ಯಕ್ರಮಗಳನ್ನು ಸರಳವಗಿ ಆಚರಿಸಬೇಕೆಂದು ಸಂಕಲ್ಪ ಮಾಡಿದ್ದೇನೆ. ಆ ಸಂಕಲ್ಪದ ಮೊದಲ ಹೆಜ್ಜೆಯಾಗಿ ಮಗಳ ಮದುವೆಯನ್ನು ಸರಳವಾಗಿ ನೆರವೇರಿಸಿದ್ದು ತೃಪ್ತಿ ನೀಡಿದೆ’ ಎಂದು ನುಡಿದ ಮಿತ್ರರ ಮಾತಿನಲ್ಲಿ ಹೆಮ್ಮೆ ಇತ್ತು. ದೇಶದ ಆಹಾರ ಕೊರತೆಯನ್ನು ನೀಗಿಸಲು ಪ್ರತಿಯೊಬ್ಬ ಪ್ರಜೆ ವಾರಕ್ಕೊಮ್ಮೆ ಉಪವಾಸವಿರುವಂತೆ ಲಾಲ ಬಹಾದ್ದೂರ ಶಾಸ್ತ್ರಿ ಅವರು ಪ್ರಧಾನ ಮಂತ್ರಿಯಾಗಿದ್ದ ಸಂದರ್ಭ ಕರೆ ನೀಡಿದ್ದರು. ಈ ಸಂಕಲ್ಪವನ್ನು ಸ್ವತ: ಶಾಸ್ತ್ರಿ ಅವರು ತಾವು ರೂಢಿಗೆ ತರುವುದರ ಮೂಲಕ ಜನರಿಗೆ ಆದರ್ಶವೂ ಮತ್ತು ಮಾದರಿಯೂ ಆಗುಳಿದರು.

ಆಹಾರ ಕೊರತೆಯ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಅದ್ದೂರಿ, ಆಡಂಬರವನ್ನು ತ್ಯಜಿಸಿ ಸರಳ ಬದುಕನ್ನು ರೂಢಿಸಿಕೊಳ್ಳುವುದು ನಾವು ಮಾಡಬೇಕಾದ ಅತ್ಯಂತ ಅಗತ್ಯದ ಸಂಕಲ್ಪವಾಗಿದೆ. ಮದುವೆ ಮತ್ತಿತರ ಕಾರ್ಯಕ್ರಮಗಳಲ್ಲಿ ಆಹಾರ ವ್ಯಯವಾಗುವುದು ಸಾಮಾನ್ಯ ಚಿತ್ರಣವಾಗಿದೆ. ವೈಯಕ್ತಿಕ ಮತ್ತು ಕೌಟುಂಬಿಕ ಸಮಾರಂಭಗಳು ಸಮಾಜದಲ್ಲಿ ಸಾರ್ವಜನಿಕ ಸಮಾರಂಭಗಳಂತೆ ಆಚರಿಸಲ್ಪಡುತ್ತಿವೆ. ಸಾವಿರಾರು ಜನರನ್ನು ಆಮಂತ್ರಿಸಿ ಭೂರಿ ಭೋಜನ ಉಣಬಡಿಸುವ ಮನೋವ್ಯಾಧಿ ಸೋಂಕಿನಂತೆ ಆವರಿಸಿಕೊಂಡಿದೆ. ಹಿತಮಿತವಾಗಿ ಬಳಕೆಯಾಗಬೇಕಾದ ಆಹಾರ ಕೌಟುಂಬಿಕ ಸಮಾರಂಭಗಳಲ್ಲಿ ಹಳಸಿ ಹಾಳಾಗಿ ತಿಪ್ಪೆಗುಂಡಿಗಳನ್ನು ಸೇರುತ್ತಿದೆ. ಸಮಾಜದಲ್ಲಿ ಅದೆಷ್ಟೋ ಜನರಿಗೆ ದಿನದ ಒಂದು ಹೊತ್ತಿನ ಊಟ ಕೂಡ ದೊರೆಯುತ್ತಿಲ್ಲ. ಆಹಾರ ಉತ್ಪಾದನೆಯ ಕೃಷಿಭೂಮಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವಾಗ ಅದ್ದೂರಿ ಸಮಾರಂಭಗಳ ಅಗತ್ಯವಿದೆಯೇ ಎಂದು ನಾವು ಯೋಚಿಸಬೇಕಿದೆ. ಅದ್ದೂರಿಯಾಗಿ ಆಚರಿಸುತ್ತಿರುವ ಕೌಟುಂಬಿಕ ಸಮಾರಂಭಗಳಲ್ಲಿ ಆಹಾರದ ಜೊತೆಗೆ ನೀರು ಮತ್ತು ವಿದ್ಯುತ್ ಕೂಡ ದುರ್ಬಳಕೆಯಾಗುತ್ತಿವೆ.

ವರ್ಷದಿಂದ ವರ್ಷಕ್ಕೆ ಕೃಷಿಭೂಮಿ ಕ್ಷಿಣಿಸುತ್ತಿರುವುದು ಮುಂದೊಂದು ದಿನ ತೀವ್ರ ಆಹಾರ ಕ್ಷಾಮವನ್ನು ಸೃಷ್ಟಿಸಲಿದೆ ಎಂದು ತಜ್ಞರು ಈಗಾಗಲೇ ಎಚ್ಚರಿಕೆ ನೀಡಿರುವರು. ದಿನನಿತ್ಯದ ಎರಡು ಹೊತ್ತಿನ ಊಟಕ್ಕೆ ಅಗತ್ಯವಾದ ಆಹಾರ ದೊರೆಯದ ಸಮಸ್ಯೆ ಭವಿಷ್ಯದಲ್ಲಿ ಎದುರಾಗಲಿದೆ. ತಮ್ಮ ನಂತರದ ಪೀಳಿಗೆಗೆ ಸಕಲ ಐಶ್ವರ್ಯಗಳನ್ನು ಕೊಟ್ಟು ಹೋಗುವ ಧಾವಂತದಲ್ಲಿ ಮನುಷ್ಯರು ಬದುಕಿಗೆ ಮೂಲ ಸೆಲೆಯಾದ ಆಹಾರದಂಥ ಅತಿಮುಖ್ಯವಾದ ಅವಶ್ಯಕತೆಯನ್ನೆ ಮರೆತಿರುವರು. ಶಿವರಾಮ ಕಾರಂತರು ತಮ್ಮ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಕೃತಿಯ ಮುನ್ನುಡಿಯಲ್ಲಿ ಹೀಗೆ ಹೇಳುತ್ತಾರೆ ‘ನಾವು ಭೂಮಿಗೆ ಬಂದ ದಿನ ನಮ್ಮ ಸುತ್ತಣ ಬದುಕು ಇದಕ್ಕಿಂತ ಒಂದಿಷ್ಟು ಹೆಚ್ಚು ಚಂದವಾಗುವಂತೆ ಮಾಡಿ ಇಲ್ಲಿಂದ ಹೊರಡಬೇಕು ಎಂಬ ಭಾವನೆ ನನ್ನದು. ಜಾತ್ರೆಗೆ ಬಂದವರು ಜಾತ್ರೆ ಮುಗಿಸಿ ಹೊರಡುವಾಗ ತಾವು ನಲಿದು ಉಂಡು ಹೋದ ನೆಲದ ಮೇಲೆ ಎಲ್ಲೆಲ್ಲೂ ತಮ್ಮ ಉಚ್ಚಿಷ್ಟವನ್ನು ಚೆಲ್ಲಿ ಹೋದರೆ ಹೇಗಾದಿತು? ಅಲ್ಲಿಗೆ ನಾವು ತಿರುಗಿ ಬಾರದಿದ್ದರೇನಾಯಿತು? ಅಲ್ಲಿಗೆ ಬರುವ ನಮ್ಮ ಮಕ್ಕಳು ಏನೆಂದುಕೊಂಡಾರು? ಅಷ್ಟನ್ನಾದರೂ ಯೋಚಿಸುವ ಬುದ್ಧಿ ಈ ದೇಶವನ್ನು ನಡೆಸುವ ಹಿರಿಯರಿಗೆ ಇಲ್ಲದೆ ಹೋದರೆ ಹೇಗೆ?’. 

ತನ್ನ ಹಕ್ಕುಗಳನ್ನು ಪ್ರತಿಪಾದಿಸುತ್ತಿರುವ ಮನುಷ್ಯ ತಾನು ನಿರ್ವಹಿಸಬೇಕಾದ ಕರ್ತವ್ಯಗಳನ್ನು ಮರೆಯುತ್ತಿರುವನು. ಆಹಾರ, ನೀರು, ವಿದ್ಯುತ್ ಇವುಗಳನ್ನು ರಾಷ್ಟ್ರೀಯ ಸಂಪತ್ತು ಎಂದು ಪರಿಗಣಿಸಲಾಗಿದೆ. ಖರೀದಿಸುವ ಸಾಮರ್ಥ್ಯ ತನಗಿದೆ ಎಂದ ಮಾತ್ರಕ್ಕೆ ರಾಷ್ಟ್ರೀಯ ಸಂಪತ್ತನ್ನು ದುರ್ಬಳಕೆ ಮಾಡುವ ಅಧಿಕಾರ ಮನುಷ್ಯನಿಗಿಲ್ಲ. ಪ್ರಕೃತಿಯು ನೀಡುತ್ತಿರುವ ಅಮೂಲ್ಯ ಕೊಡುಗೆಗಳಲ್ಲಿ ಮನುಷ್ಯನಿಗಷ್ಟೇ ಅಲ್ಲ ಈ ಭೂಮಿಯ ಮೇಲಿನ ಸಕಲ ಚರಾಚರ ಜೀವಿಗಳಿಗೂ ಪಾಲಿದೆ. ಆದರೆ ಅತಿಯಾದ ಅಹಂಕಾರ ಮತ್ತು ಹಣದ ದರ್ಪದಿಂದ ಮನುಷ್ಯ ತನ್ನ ಹಕ್ಕನ್ನು ಹೆಚ್ಚು ಹೆಚ್ಚು ಪ್ರತಿಪಾದಿಸುತ್ತಿರುವನು. 

ಎಚ್.ಎಸ್.ವೆಂಕಟೇಶಮೂರ್ತಿ ತಮ್ಮ ‘ಇರಬೇಕು ಇರುವಂತೆ’ ಕವಿತೆಯಲ್ಲಿ ಪ್ರಕೃತಿಯ ಉದಾತ್ತ ಗುಣಗಳನ್ನು ವರ್ಣಿಸುತ್ತ ಮನುಷ್ಯ ಕೂಡ ಪ್ರಕೃತಿಯಂತೆ ಬಾಳಬೇಕು ಎನ್ನುವ ಸದಾಶಯವನ್ನು ವ್ಯಕ್ತಪಡಿಸುತ್ತಾರೆ. ಕವಿತೆಯ ಒಂದು ಸಾಲು ಹೀಗಿದೆ-‘ತಾನು ಬಿಸಿಲಲಿ ನಿಂತು/ತನ್ನ ಬಳಿ ಬರುವವಗೆ/ತಣ್ಣಗಿನ ಆಸರೆಯ ನೆರಳ ಕೊಟ್ಟು/ಹೇಗೆ ಗೆಲುವಾಗುವುದೊ/ಹಸಿರೆಲೆಯ ಹೊಂಗೆಮರ/ಹಾಗೆ ಬಾಳಿಸು ಗುರುವೇ ಪ್ರೀತಿಯಿಟ್ಟು’. ಮನುಷ್ಯ ತಾನು ಪ್ರಕೃತಿಯಂತೆ ಬಾಳುವ ಸಂಕಲ್ಪ ತೊಟ್ಟು ಬದುಕನ್ನು ಇನ್ನಷ್ಟು ಚೆಂದಗೊಳಿಸಬೇಕಿದೆ. ಆದರೆ ಮನುಷ್ಯ ಪ್ರಕೃತಿಯ ಕೊಡುಗೆಗಳನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಂಡು ಅದೇ ಪ್ರಕೃತಿಯ ಮೇಲೆ ಅಟ್ಟಹಾಸ ಗೈಯುತ್ತಿರುವನು.  

ಬದುಕನ್ನು ಸರಳತೆಯ ನೆಲೆಯಲ್ಲಿ ಜೀವಿಸುವ ಮನುಷ್ಯನಿಗೆ ಸಮಾಜ ಗುರುತಿಸಿ ಗೌರವಿಸುತ್ತಿದೆಯೇ ಎನ್ನುವ ಪ್ರಶ್ನೆ ಎದುರಾಗುತ್ತದೆ. ಸಮಾಜಕ್ಕೆ ಉಪಯುಕ್ತವಾದ ಗುಣಗಳನ್ನು ಮೈಗೂಡಿಸಿಕೊಂಡು ಬದುಕುತ್ತಿರುವವರಿಗೆ ಇದೇ ಸಮಾಜ ಶತಮೂರ್ಖ ಎನ್ನುವ ಹಣೆಪಟ್ಟಿ ಕಟ್ಟುತ್ತದೆ. ಬದುಕುವ ಕಲೆ ಗೊತ್ತಿಲ್ಲದವರೆಂದು ಹಿಯ್ಯಾಳಿಸುತ್ತದೆ. ನಿಂದನೆಯ ಮಾತುಗಳಿಗೆ ಹೆದರಿ ಸಮಾಜೋಪಯೋಗಿ ಗುಣಗಳನ್ನು ತ್ಯಜಿಸಿ ಬದುಕುವುದು ತಪ್ಪು ನಡೆಯಾಗುತ್ತದೆ. ಕೆಲವೊಮ್ಮೆ ಮನುಷ್ಯ ನಿಂದನೆ, ಅವಮಾನಗಳನ್ನು ಮೀರಿ ಅಂತರಂಗದ ಧ್ವನಿಗೆ ಆದ್ಯತೆ ನೀಡಬೇಕು. ಸಂಕಲ್ಪಿಸುವ ಮನಸ್ಸು ದೃಢವಾಗಿದ್ದರೆ ಯಾವ ಅವಮಾನ, ನಿಂದನೆಗಳು ನಮ್ಮ ಧೃತಿಗೆಡಿಸಲಾರವು. 

-ರಾಜಕುಮಾರ ಕುಲಕರ್ಣಿ