Wednesday, February 10, 2021

ಬೇರಿಗಂಟಿದ ಮರ: ಕಥಾಸಂಕಲನ ಬಿಡುಗಡೆ






ಫೆಬ್ರವರಿ ೭, ೨೦೨೧ ರಂದು ಕಲಬುರಗಿಯಲ್ಲಿ ನನ್ನ 'ಬೇರಿಗಂಟಿದ ಮರ' ಕಥಾಸಂಕಲನ ಬಿಡುಗಡೆಯಾಯಿತು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ವಿಮರ್ಶಕ ಡಾ.ರಹಮತ್  ತರೀಕೆರೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕಲಬುರಗಿಯ ಬಸವ ಪ್ರಕಾಶನ ಪ್ರಕಟಿಸಿ ಬಿಡುಗಡೆಗೊಳಿಸಿರುವ ಈ ಕಥಾಸಂಕಲನ ನನ್ನ ಮೊದಲ ಕಥಾಸಂಕಲನವಾಗಿದೆ. 

ಕಥೆ ಬರೆಯುತ್ತೆನೆಂದು ಅಂದುಕೊಂಡಿರಲಿಲ್ಲ ಆದರೂ ಕಥೆಗಳನ್ನು ಬರೆದೆ. ನನ್ನ ಮನಸ್ಸಿನ ಮೂಲೆಯಲ್ಲಿ ಕುಳಿತಿದ್ದ ಕಥೆಗಳು ಅಭಿವ್ಯಕ್ತಿಗಾಗಿ ಕಾತರಿಸುತ್ತಿದ್ದವೆಂದು ಕಾಣುತ್ತದೆ. 2008 ರಲ್ಲಿ ನನ್ನ ‘ಮೂರು ದೃಶ್ಯಗಳು’ ಕಥೆ ತುಷಾರ ಪತ್ರಿಕೆಯಲ್ಲಿ ಪ್ರಕಟವಾಗುವುದರೊಂದಿಗೆ ನಾನು ಕೂಡ ಕಥೆಗಾರನಾದೆ. ಹಾಗೆಂದು ನಿರಂತರವಾಗಿ ಕಥೆಗಳನ್ನು ಬರೆಯಲಿಲ್ಲ. ಹೀಗಾಗಿ ಕಥೆಗಳನ್ನು ಬರೆದದ್ದು ತುಂಬ ಕಡಿಮೆ. ಬೇರಿಗಂಟಿದ ಮರ ಕಥಾ ಸಂಕಲನದ ಹೆಸರಾದರೂ ಆ ಹೆಸರಿನ ಕಥೆ ಇಲ್ಲಿಲ್ಲ. ಇಲ್ಲಿನ ಕಥೆಗಳೆಲ್ಲವೂ ನಾನು ಬದುಕುತ್ತಿರುವ ಪರಿಸರದಿಂದಲೇ ಸ್ಪೂರ್ತಿ ಪಡೆದವುಗಳು ಆದ್ದರಿಂದ ಈ ನೆಲದ ಕಥೆಗಳಿವು. ಒಂದರ್ಥದಲ್ಲಿ ನೆಲದಾಳಕ್ಕಿಳಿದ ಬೇರಿಗಂಟಿದ ಕಥೆಗಳಿವು ಎನ್ನುವ ನಂಬಿಕೆ ನನ್ನದು.

ನಾನು ಬರೆದ ಕಥೆಗಳನ್ನು ಓದಿ ವಿಮರ್ಶಿಸುವ ಒಂದಿಷ್ಟು ಗೆಳೆಯರಿದ್ದಾರೆ. ಅವರೆಲ್ಲರಿಗೂ ನಾನು ಋಣಿಯಾಗಿದ್ದೇನೆ. 

ನನ್ನ ಕುಟುಂಬದ ಸದಸ್ಯರ ಸಹಕಾರ ಮತ್ತು ಪ್ರೀತಿಯನ್ನು ಈ ಸಂದರ್ಭ ಮರೆಯಲಾರೆ.

ಕಥಾ ಸಂಕಲನವನ್ನು ಪ್ರಕಟಿಸಿದ  ಕಲಬುರಗಿಯ ಬಸವ  ಪ್ರಕಾಶನದವರಿಗೆ  ನನ್ನ ಕೃತಜ್ಞತೆಗಳು.

-ರಾಜಕುಮಾರ ಕುಲಕರ್ಣಿ