Thursday, December 27, 2012

'ಸಾಧನೆ' ಪುಸ್ತಕ ಬಿಡುಗಡೆ

     'ಸಾಧನೆ' ಇದು ನನ್ನ ಮೊದಲ ಕೃತಿ. ಇದುವರೆಗೆ ನೂರಕ್ಕೂ ಹೆಚ್ಚು ಲೇಖನಗಳನ್ನು ಮತ್ತು ಒಂದೆರಡು ಕಥೆಗಳನ್ನು ಬರೆದಿರುವೆನಾದರೂ ಪುಸ್ತಕ ರೂಪದಲ್ಲಿ ಪ್ರಕಟವಾದ ಮೊದಲ ಕೃತಿ ಇದು. ನನ್ನ ಎರಡನೇ ಕೃತಿ 'ಪೂರ್ಣ ಸತ್ಯ' ಅಚ್ಚಿನಲ್ಲಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಪ್ರಕಟವಾಗಿ ಹೊರಬರಲಿದೆ. ಈ ಸಂದರ್ಭ ನನ್ನ ಮೊದಲ ಪುಸ್ತಕ 'ಸಾಧನೆ'ಯನ್ನು ಪ್ರಕಟಿಸಿದ ಬಾಗಲಕೋಟೆಯ ಬಿ.ವಿ.ವಿ.ಸಂಘದ ವೈರಾಗ್ಯದ ಮಲ್ಲಣಾರ್ಯ ಪ್ರಕಾಶನ ಸಂಸ್ಥೆಗೂ ಮತ್ತು 'ಪೂರ್ಣ ಸತ್ಯ' ಕೃತಿಯನ್ನು ಪ್ರಕಟಿಸುತ್ತಿರುವ ಗುಲಬರ್ಗಾದ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆಗೂ ನನ್ನ ಕೃತಜ್ಞತೆಗಳು.

'ಸಾಧನೆ' ಪುಸ್ತಕ ಬಿಡುಗಡೆ ಸಂದರ್ಭದಲ್ಲಿನ ಕೆಲವು ಚಿತ್ರಗಳು.








Wednesday, December 26, 2012

ಗಾಂಧಿ ಕ್ಲಾಸು

   

          'ಬದುಕು ನನ್ನನ್ನು ರೂಪಿಸಿತೋ, ನಾನೇ ನನ್ನ ಬದುಕನ್ನು ಹೀಗೆ ರೂಪಿಸಿಕೊಂಡೆನೋ ಆದರೆ ಒಂದಂತೂ ಸತ್ಯ ನನ್ನೀ ಬದುಕು ನನ್ನ ಪ್ರಾರಬ್ಧ ಮತ್ತು ಸವಾಲಿನದು. ನಾನು ಬಾಲ್ಯವನ್ನಾಗಲಿ, ಹದಿಹರೆಯದ ದಿನಗಳನ್ನಾಗಲಿ ಉತ್ಕಟವಾಗಿ ಎಲ್ಲರಂತೆ ಅನುಭವಿಸುವುದು ಆಗಲೇ ಇಲ್ಲ. ದುರ್ಬರ ಬದುಕು ಅದಕ್ಕೆ ಆಸ್ಪದ ಮಾಡಿಕೊಡಲೇ ಇಲ್ಲ. ಬಾಲ್ಯದ, ಹದಿಹರೆಯದ ಅನುಭವಗಳಿಗೆ ಅಕ್ಷರ ರೂಪ ಕೊಡುವಾಗ ನನ್ನ ಕಣ್ಣುಗಳು ಒದ್ದೆಯಾಗಿರುವುದುಂಟು. ಹಿಂಬಾಲಿಸುತ್ತಲೇ ಇದ್ದ ಆತಂಕ, ಅನಿಶ್ಚಿತತೆಗಳನ್ನು ನಿರಾಸೆಗೊಳಿಸಿ ಬದುಕು ಅರವತ್ತರ ಹೊಸ್ತಿಲ ಬಳಿ ತಂದು ನಿಲ್ಲಿಸಿರುವುದು ಪವಾಡವೇ ಸರಿ' ಈ ಸಾಲುಗಳು ನಾನು ಇತ್ತೀಚಿಗೆ ಓದಿದ 'ಗಾಂಧಿ ಕ್ಲಾಸು' ಪುಸ್ತಕದಿಂದ ಹೆಕ್ಕಿ ತೆಗೆದವುಗಳು. 
           'ಗಾಂಧಿ ಕ್ಲಾಸು' ಕನ್ನಡದ ಖ್ಯಾತ ಬರಹಗಾರ ಕುಂವೀ ಎಂದೇ ಹೆಸರಾದ ಕುಂಬಾರ ವೀರಭದ್ರಪ್ಪನವರ ಆತ್ಮಕಥನ. ಕುಂವೀ ನಾನು ಮೆಚ್ಚುವ ಹಾಗೂ ಅತಿಯಾಗಿ ಹಚ್ಚಿಕೊಂಡಿರುವ ಲೇಖಕ. ಅವರ ಆತ್ಮಕಥನ ಪ್ರಕಟವಾಗಿದೆ ಎಂದು ಗೊತ್ತಾದದ್ದೇ ತಡ ಓದಲೇ ಬೇಕೆನ್ನುವ ಉತ್ಕಟ ಆಸೆ ಪುಸ್ತಕವನ್ನು ಹುಡುಕಿಕೊಂಡು ಹೋಗಿ ಖರೀದಿಸಿಯೇ ಬಿಟ್ಟಿತು. ಬಳ್ಳಾರಿ ಜಿಲ್ಲೆ ಕೊಟ್ಟೂರಿನವರಾದ ಕುಂ.ವೀರಭದ್ರಪ್ಪನವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕೆಲಸ ಮಾಡಿ 2009ರಲ್ಲಿ ನಿವೃತ್ತರಾಗಿರುವರು. ನೂರಾರು ಕಥೆಗಳನ್ನು ಬರೆದಿರುವ ಇವರು ಕಾದಂಬರಿಗಳು ಮತ್ತು ಜೀವನ ಚರಿತ್ರೆ ಬರೆದು ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿರುವರು. ಅವರ ಅನೇಕ ಕಥೆಗಳು ಮತ್ತು ಕಾದಂಬರಿಗಳು ಸಿನಿಮಾಗಳಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳುವುದರ ಜೊತೆಗೆ ಶ್ರೀಯುತರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಸಂಧಿವೆ. ಕಥೆ, ಕಾದಂಬರಿ, ಜೀವನ ಚರಿತ್ರೆ ಪ್ರತಿಯೊಂದರಲ್ಲಿ ಕುಂವೀ ಶೈಲಿ ತನ್ನ ಛಾಪು ಮೂಡಿಸಿ ಓದುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ತಮ್ಮ ಕೃತಿಗಳ ಓದಿಗಾಗಿ ಓದುಗರ ಒಂದು ವಲಯವನ್ನೇ ಸೃಷ್ಟಿಸಿಕೊಂಡಿರುವ ವಿಶಿಷ್ಟ ಬರಹಗಾರ ಕುಂವೀ. ಹಲವು ದಶಕಗಳಿಂದ ಸಾಹಿತ್ಯಾಸಕ್ತರನ್ನು ಕಾಡುತ್ತಲೇ ಬಂದಿರುವ ಈ ಲೇಖಕನ ವೈಯಕ್ತಿಕ ಬದುಕು ಹೇಗಿರಬಹುದೆಂಬ ಕುತೂಹಲ ನನ್ನದಾಗಿತ್ತು. 'ಗಾಂಧಿ ಕ್ಲಾಸು' ಆ ಕೃತಿ ಕೈಯಲ್ಲಿ ಹಿಡಿದ ಘಳಿಗೆ ಅದು ಹೇಗೆ ಸಮಯ ಸರಿದು ಹೋಯಿತು ಎಂದು ಅರಿವಿಗೆ ಬರದಂತೆ ಆರು ದಶಕಗಳ ಕುಂವೀ ಬದುಕು ಕಣ್ಣೆದುರು ಅನಾವರಣಗೊಂಡಿತು. ಅದು ವ್ಯಕ್ತಿಯೋರ್ವನ ತೀರ ಖಾಸಗಿ ಬದುಕು ಎನ್ನುವುದಕ್ಕಿಂತ ಅದೊಂದು ಆರು ದಶಕಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ತವಕ, ತಲ್ಲಣ ಮತ್ತು ಹಿರಿಮೆಗಳ ಹಿನ್ನೋಟ. ಆ ಹಿನ್ನೋಟದಲ್ಲಿ ಅಪ್ರತಿಮ ಸಾಧಕನ ಯಶೋಗಾಥೆ ಇದೆ, ಎದುರಾದ ಸಂಕಷ್ಟಗಳಿವೆ, ಸಂಪ್ರದಾಯಗಳ ಸಂಘರ್ಷವಿದೆ, ಸಾರಸ್ವತ ಲೋಕದ ಸಣ್ಣತನಗಳಿವೆ, ಶೋಷಿತರ ಬದುಕಿನ ಬವಣೆಗಳಿವೆ ಇವುಗಳೆಲ್ಲವನ್ನೂ ಮೀರಿ ಕುಂವೀ ಅವರ ಮುಗ್ಧತೆ ಇಲ್ಲಿ ಮೈಚಾಚಿಕೊಂಡಿದೆ.

ಗಾಂಧಿ ಕ್ಲಾಸು 
       'ಅದ್ಯಾಕೆ ಬಾಪೂಜಿ ನೀವು ಮೂರನೆ ತರಗತಿಯ ಭೋಗಿಗಳಲ್ಲಿ ಪ್ರಯಾಣಿಸುವುದು?' 'ನಾಲ್ಕನೇ ತರಗತಿಯ ಭೋಗಿಗಳಿಲ್ವಲ್ಲ ಅದಕ್ಕೆ'. ಕುಂವೀ ಅವರ ಆತ್ಮಕಥೆ ಪ್ರಾರಂಭವಾಗುವುದೇ ಈ ಸಾಲುಗಳೊಂದಿಗೆ. ತಮ್ಮ ಆತ್ಮಕಥೆಯನ್ನು ಹೇಳುತ್ತ ಹೋಗುವ ಲೇಖಕರು ಒಂದು ಹಂತದಲ್ಲಿ ಹೀಗೆ ಹೇಳುತ್ತಾರೆ 'ಹನುಮಂತನ ಬಾಲದೋಪಾದಿಯಲ್ಲಿರುವ ಘಟನೆಗಳು ಒಂದೇ ಎರಡೇ ಲೆಕ್ಕ ಹಾಕಿದಲ್ಲಿ ನೂರಾರು ಸಾವಿರಾರು. ಇವುಗಳ ಪೈಕಿ ಕೆಲವು ಮುಖ್ಯವಾದವುಗಳನ್ನು ಪ್ರಸ್ತಾಪಿಸದಿದ್ದಲ್ಲಿ ನನ್ನ ಆತ್ಮಕಥೆ ಬಾಲ್ಕನಿಯಾಗಬಹುದೇ ಹೊರತು ಗಾಂಧಿ ಕ್ಲಾಸ್ ಆಗಲಾರದು'. ಒಟ್ಟಾರೆ ಗಾಂಧಿ ಕ್ಲಾಸ್ ಅದು ಸರಳತೆಯ, ಬಡತನದ ಹಾಗು ಸಾವಿರಾರು ಸಂಕಷ್ಟಗಳ ಸಂಕೇತ. ಕುಂವೀ ಅವರ ಬದುಕು ಕೂಡ ದಾರಿದ್ರ್ಯ, ಸಂಕಟಗಳ ಮತ್ತು ಸರಳತೆಯ ಸಮ್ಮಿಶ್ರಣ. ಅದಕ್ಕೆಂದೇ ಅವರು ತಮ್ಮ ಆತ್ಮಕಥೆಗೆ 'ಗಾಂಧಿ ಕ್ಲಾಸು' ಎಂದು ಹೆಸರಿಸುತ್ತಾರೆ.
          ಸಪ್ನ ಬುಕ್ ಹೌಸ್ ನವರು ಪ್ರಕಟಿಸಿರುವ 390 ಪುಟಗಳಿಗೆ ವಿಸ್ತರಿಸಿರುವ ಆತ್ಮಕಥನ ಒಟ್ಟು ಹನ್ನೊಂದು ಅಧ್ಯಾಯಗಳಲ್ಲಿ ಅನಾವರಣಗೊಂಡಿದೆ. ಪ್ರಾರಂಭದ ಎರಡು ಅಧ್ಯಾಯಗಳಲ್ಲಿನ ಬರವಣಿಗೆಯನ್ನು ಲೇಖಕರು ತಮ್ಮ ತಂದೆಗಾಗಿ ಮೀಸಲಿಟ್ಟಿರುವರು. ಅಪ್ಪನ ದೈಹಿಕ ಸೌಂದರ್ಯ, ಆತನೊಳಗಿನ ಸಿಟ್ಟು, ಹಟ, ಬಡವರ ಕುರಿತು ಇರುವ ಅನುಕಂಪ, ಮಗನನ್ನು ಓದಿಸಿ ದೊಡ್ಡ ವ್ಯಕ್ತಿಯನ್ನಾಗಿ ಮಾಡಬೇಕೆನ್ನುವ ಹಂಬಲ ಹೀಗೆ ಅಪ್ಪನ ವ್ಯಕ್ತಿತ್ವದ ವಿಭಿನ್ನ ಮುಖಗಳನ್ನು ಈ ಎರಡು ಅಧ್ಯಾಯಗಳಲ್ಲಿ ಪರಿಚಯಿಸುತ್ತಾರೆ. ತಂದೆಯ ಅತಿಯಾದ ಕೋಪ ಮತ್ತು ಹಟ ಒಮ್ಮೊಮ್ಮೆ ಸಿಟ್ಟು ತರಿಸಿದರೆ ಮಗದೊಮ್ಮೆ ಮಕ್ಕಳಿಗಾಗಿ ಅಹರ್ನಿಶಿ ದುಡಿಯುತ್ತಿರುವ ಅಪ್ಪ ಆದರ್ಶಪ್ರಾಯನಾಗುತ್ತಾನೆ. ಆಪ್ಪನಲ್ಲಿನ ಆದರ್ಶ ಮತ್ತು ಸಿಟ್ಟಿನ ಸ್ವಭಾವದಿಂದ ಆಸ್ತಿಯನ್ನೆಲ್ಲ ಕಳೆದುಕೊಂಡು ನಾವು ಬಡತನದ ಬದುಕನ್ನು ಅಪ್ಪಿಕೊಳ್ಳಬೇಕಾಯಿತು ಎಂದು ಹೇಳುವ ಕುಂವೀ ತಂದೆಯ ಸಾವಿನ ನಂತರ ಇರುವ ಸಾಲವನ್ನೆಲ್ಲ ತೀರಿಸಿ ಅಪ್ಪನನ್ನು ಋಣಮುಕ್ತನನ್ನಾಗಿಸುವ ಸನ್ನಿವೇಶ ಓದುಗರ ಮನಸ್ಸನ್ನು ಆರ್ದ್ರವಾಗಿಸುತ್ತದೆ. ಆ ಸಂದರ್ಭ ಅರಿವಿಲ್ಲದೆ ಕಣ್ಣೀರು ಕಪಾಳಕ್ಕಿಳಿದು ಭಾವ ತಿವೃತೆಯಿಂದ ಹೃದಯ ಹೊಯ್ದಾಡುತ್ತದೆ.
          ನಂತರದ ಅಧ್ಯಾಯಗಳಲ್ಲಿ ಕುಂವೀ ಶಿಕ್ಷಣ, ನಿರುದ್ಯೋಗ, ದಿನಗೂಲಿಯಾಗಿ ಕೆಲಸ ಮಾಡಿದ ಸಂದರ್ಭಗಳನ್ನು ಕುರಿತು ಹೇಳಿಕೊಂಡಿರುವರು. ಒಂದು ಸಂದರ್ಭ ಮನೆಯಿಂದ ದೂರಾಗಿ ಕೆಲಸ ಸಿಗದೆ 36 ಗಂಟೆಗಳ ಕಾಲ ಉಪವಾಸವಿದ್ದ ಪ್ರಸಂಗವನ್ನು ಓದುವಾಗ ಕಣ್ಣುಗಳು ಮತ್ತೆ ಹನಿಗೂಡುತ್ತವೆ. ಆ ಸಮಯ ಯುವ ಈರಭದ್ರನಲ್ಲಿರುವ ಹಸಿವನ್ನು ಗುರುತಿಸಿ ತಾನು ತಂದ ಬುತ್ತಿಯನ್ನೇ ಅರ್ಧ ಹಂಚಿಕೊಂಡು ಉಣ್ಣುವ ದುರುಗ್ಯಾ ನಾಯ್ಕನನ್ನು ಅವನ ಕೊನೆಗಾಲದಲ್ಲಿ ಸತ್ಕರಿಸುವ ಕುಂವೀ ವ್ಯಕ್ತಿತ್ವ ಓದುಗನಿಗೆ ಹೆಚ್ಚು ಆಪ್ತವಾಗುತ್ತದೆ.
        ಪುಸ್ತಕದ ಒಂಬತ್ತನೇ ಅಧ್ಯಾಯ ಕುಂವೀ ಬದುಕಿನ ಬಹುಮುಖ್ಯ ತಿರುವಿಗೆ ಸಂಬಂಧಿಸಿದೆ. 'ನೀನು ಯಾವುದೇ ಕಾರಣಕ್ಕೂ ಊರಿಗೆ ಬರಕೂಡದು. ತೊಲಗು ಇಲ್ಲಿಂದ. ಮುಂದೆಯೂ ನಿನ್ನ ಮುಖ ತೋರಿಸಬೇಡ' ಹೆತ್ತ ಅಪ್ಪನೇ ಫತ್ವಾ ಹೊರಡಿಸಿದ ಮೇಲೆ ಅದು ಗಡಿಪಾರೋ, ಬಹಿಷ್ಕಾರವೋ ಯಾವ ಸುಡುಗಾಡೆಂಬುದು ತಿಳಿಯದು ಎನ್ನುತ್ತ ಊರು ಬಿಟ್ಟು ಹೊರಡುವ ಕುಂವೀ ನೇರವಾಗಿ ಹೋಗಿ ಸೇರುವುದು ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಆಲೂರು ತಾಲೂಕಿಗೆ ಸೇರಿದ ವಾಗಿಲಿ ಎನ್ನುವ ಕುಗ್ರಾಮವನ್ನು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಆ ಪುಟ್ಟ ಗ್ರಾಮವನ್ನು ಸೇರಿಕೊಳ್ಳುವ ಕುಂವೀಗೆ ನಂತರದ ದಿನಗಳಲ್ಲಿ ಆ ಗ್ರಾಮ ಅವರಲ್ಲಿನ ಅಭಿವ್ಯಕ್ತಿ ಮಾಧ್ಯಮಕ್ಕೆ ವೇದಿಕೆಯಾಗುತ್ತ ಹೋಗುತ್ತದೆ. ಗಾಂಧಿ ಕ್ಲಾಸಿನ ಕಥಾ ನಾಯಕನ ಬದುಕಿಗೆ ಒಂದು ಸೃಜನಶೀಲತೆಯ ಆಯಾಮ ದೊರೆಯುವುದು ವಾಗಿಲಿ ಎನ್ನುವ ಪುಟ್ಟ ಪ್ರಪಂಚದಲ್ಲೇ. ವಾಗಿಲಿ ಅವರಿಗೆ ಬಡತನ, ಅಜ್ಞಾನ, ಅಂಧಾನುಕರಣೆ, ಶೋಷಣೆ, ವರ್ಗ ಸಂಘರ್ಷ, ದಬ್ಬಾಳಿಕೆ, ಜೀತ ಪದ್ಧತಿ, ಸೇಡು, ಪ್ರತಿಕಾರ, ಮುಗ್ಧತೆ, ಸುಶಿಕ್ಷಿತರ ಸಣ್ಣತನ ಹೀಗೆ ಅನೇಕ ವಿಷಯಗಳನ್ನು ಪರಿಚಯಿಸುತ್ತದೆ. ಅವರ ಕಥೆ, ಕಾದಂಬರಿಗಳ ರಚನೆಗೆ ವಾಗಿಲಿ ಸ್ಫೂರ್ತಿಯ ಸೆಲೆಯಾಗುತ್ತದೆ. ಇಲ್ಲಿ ಕುಂವೀ ಬದುಕಿನ ಜೊತೆ ಜೊತೆಗೆ ಆಂಧ್ರದ ರಾಯಲಸೀಮಾದ ರಕ್ತಸಿಕ್ತ ಚರಿತ್ರೆ ನಮ್ಮೆದುರು ತೆರೆದುಕೊಳ್ಳುತ್ತದೆ. ಓದುತ್ತ ಹೋದಂತೆ  ಇದು ಆತ್ಮಕಥೆಯೋ ಅಥವಾ ರೋಚಕ ನಿರೂಪಣೆಯಿಂದ ಕೂಡಿದ ಕಾದಂಬರಿಯೋ ಎನ್ನುವ ಅನುಮಾನ ಒಂದು ಹಂತದಲ್ಲಿ ಓದುಗನ ಮನಸ್ಸಿನಲ್ಲಿ ಮೂಡದೇ ಇರದು. ಕುಂವೀ ಇಲ್ಲಿ ಬಳಸಿಕೊಂಡಿರುವ ಭಾಷಾ ಶೈಲಿ ತುಂಬ ವಿಶಿಷ್ಟವಾಗಿದ್ದು ಆಕರ್ಷಕವಾಗಿದೆ. ಆಂಧ್ರ ಮತ್ತು ಕರ್ನಾಟಕದ ಗಡಿ ಭಾಗದ ಬಯಲು ಸೀಮೆ ಆಡು ಭಾಷೆಯನ್ನು ಇಲ್ಲಿ ಲೇಖಕರು ದುಡಿಸಿಕೊಂಡ ರೀತಿ ಓದುಗನಿಗೆ ಮೆಚ್ಚುಗೆಯಾಗುತ್ತದೆ. ಯಾವ ವಿಶ್ವವಿದ್ಯಾಲಯ ಮತ್ತು ಅಕಾಡೆಮಿ ಕಟ್ಟಿ ಕೊಡದ ಅನುಭವವನ್ನು ವಾಗಿಲಿ ನನಗೆ ನೀಡಿತು ಎಂದು ಹೇಳುವ ಲೇಖಕರು ಒಂದು ಹಂತದಲ್ಲಿ ನನ್ನೊಳಗಿನ ಸೃಜನಶೀಲತೆ ಕಥೆ, ಕಾವ್ಯ, ಕಾದಂಬರಿಗಳ ವಿವಿಧ ಅಭಿವ್ಯಕ್ತಿ ಮಾಧ್ಯಮಕ್ಕೆ ವಿಸ್ತರಿಸುತ್ತ ಹೋಗಲು ಆ ಪುಟ್ಟ ಗ್ರಾಮವೇ ಕಾರಣ ಎಂದು ತಮ್ಮ ಕೃತಜ್ಞತೆ ಮೆರೆಯುತ್ತಾರೆ. ಬಂಡಾಯ ಮನೋಭಾವದ ಕುಂವೀ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಆ ಗ್ರಾಮವನ್ನು ಪ್ರವೇಶಿಸಿ ಮುಂದೊಂದು ದಿನ ಅಲ್ಲಿ ಬಹುದೊಡ್ಡ ಸಾಮಾಜಿಕ ಪರಿವರ್ತನೆಗೆ ಕಾರಣರಾಗುತ್ತಾರೆ. ನಂತರದ ದಿನಗಳಲ್ಲಿ ಆ ಸಾಮಾಜಿಕ ಪರಿವರ್ತನೆಯೇ ಲೇಖಕರು ವಾಗಿಲಿಯನ್ನು ಬಿಡಲು ಕಾರಣವಾಗುವುದು ಮಾತ್ರ ವಿಪರ್ಯಾಸದ ಸಂಗತಿ.
          ಹತ್ತನೇ ಅಧ್ಯಾಯ ಲೇಖಕರು ಗೂಳ್ಯಮ್ ನಲ್ಲಿ ಕಟ್ಟಿಕೊಂಡ ವೃತ್ತಿ ಮತ್ತು ವೈಯಕ್ತಿಕ ಬದುಕಿನ ಮೇಲೆ ಬೆಳಕು ಚೆಲ್ಲುತ್ತದೆ. ನಕ್ಸಲ್ ರ ಪರಿಚಯ, ರಾಯಲ ಸೀಮಾದಲ್ಲಿನ ಹೊಡೆದಾಟಗಳು, ಗಡಿನಾಡಿನಲ್ಲಿ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಮಾಡುವ ಪ್ರಯತ್ನ, ಶಾಮಣ್ಣ ಕಾದಂಬರಿಯ ರಚನೆ ಹೀಗೆ ಅನೇಕ ವಿಷಯಗಳು ಓದಲು ಸಿಗುತ್ತವೆ.
        ಕುಂವೀ  ವೃತ್ತಿ ಬದುಕಿನ ಕೊನೆಯ ದಿನಗಳು ಹನ್ನೊಂದನೇ  ಅಧ್ಯಾಯದಲ್ಲಿ ತೆರೆದುಕೊಳ್ಳುತ್ತವೆ. ಗೂಳ್ಯಮ್ ನಿಂದ ಹಿರೇಹಾಳಿಗೆ ಬಂದು ನೆಲೆಸುವ ಕುಂವೀ ಇಲ್ಲಿ ತಮ್ಮ ಮಹತ್ವಾಕಾಂಕ್ಷೆಯ 'ಅರಮನೆ' ಕಾದಂಬರಿಯನ್ನು ಬರೆಯುತ್ತಾರೆ. ಅರಮನೆಯಂಥ ಬೃಹತ್ ಕಾದಂಬರಿಯನ್ನು ಬರೆಯಬೇಕೆನ್ನುವ ತುಡಿತ, ಪಾತ್ರಗಳ ಹುಡುಕಾಟ, ಅರಮನೆಗಳನ್ನು ಹುಡುಕುತ್ತ ಅಲೆದಾಟ, ಕಟ್ಟಿ ಕೆಡವಿ ಮತ್ತೆ ಮತ್ತೆ ಬರೆಯುವ ಅನಿವಾರ್ಯತೆ, ಕೊನೆಗೂ ಹದಿನೈದು ವರ್ಷಗಳ ಕಾಲ ಕಾಡಿದ ಸೃಜನಶೀಲ ತಾಕತ್ತು ಕೃತಿಯಾಗಿ ರೂಪಾಂತರಗೊಂಡ ಸಂದರ್ಭ ಇದೆಲ್ಲವನ್ನು ಲೇಖಕರು ಕೊನೆಯ ಅಧ್ಯಾಯದಲ್ಲಿ ವಿವರಿಸುತ್ತಾರೆ.
         ಪುಸ್ತಕದ ಅಲ್ಲಲ್ಲಿ ಇನ್ನು ಅನೇಕ ವಿಷಯಗಳು ಓದಲು ಸಿಗುತ್ತವೆ. ಶೋಷಣೆಯ ವಿರುದ್ಧ ಕುಂವೀ ಹೋರಾಟ, ಅವರ  ಅಕ್ಷರ ಕ್ರಾಂತಿ, ಬಣ್ಣದ ಬದುಕಿನ ಜನರ ಸಣ್ಣತನ, ಸಾಹಿತ್ಯಿಕ ಬದುಕು ತಂದೊಡ್ಡಿದ ಅವಾಂತರಗಳು, ರೌಡಿಗಳೊಂದಿಗಿನ ಒಡನಾಟ ಪ್ರತಿಯೊಂದನ್ನು ಓದುತ್ತ ಹೋದಂತೆ ಒಂದು ಸೃಜನಶೀಲ ಬದುಕಿನ ವಿಭಿನ್ನ ಮುಖಗಳು ಓದುಗರೆದುರು ಅನಾವರಣಗೊಳ್ಳುತ್ತವೆ. ಜೊತೆಗೆ ಕುಂವೀ ಆಗೊಮ್ಮೆ ಈಗೊಮ್ಮೆ ಕಚುಗುಳಿಯಿಟ್ಟು ಓದುಗರನ್ನು ನಕ್ಕು ನಗಿಸುತ್ತಾರೆ. ಒಟ್ಟಿನಲ್ಲಿ ಪುಸ್ತಕ ಓದಿ ಮುಗಿಸಿದ ನಂತರವೂ ಕುಂವೀ ಎನ್ನುವ ಸೃಜನಶೀಲ ವ್ಯಕ್ತಿತ್ವ ನಮ್ಮನ್ನು ಅನೇಕ ದಿನಗಳವರೆಗೆ ಕಾಡುತ್ತದೆ.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 


Thursday, December 20, 2012

ವೈಯಕ್ತಿಕವಾದದ್ದು ಸಾರ್ವತ್ರಿಕವಾಗುತ್ತಿರುವಾಗ......

        ಮೊನ್ನೆ ನನ್ನ ಪರಿಚಿತರು ಗೃಹಪ್ರವೇಶದ ಆಮಂತ್ರಣ ಪತ್ರ ಹಿಡಿದುಕೊಂಡು ಆಹ್ವಾನಿಸಲು ಬಂದಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಅವರು ಇನ್ನೇನು ಕೆಲವೇ ತಿಂಗಳಲ್ಲಿ ನಿವೃತ್ತರಾಗಲಿರುವರು. ವೃತ್ತಿ ಬದುಕಿನುದ್ದಕ್ಕೂ ಮಕ್ಕಳ ವಿದ್ಯಾಭ್ಯಾಸ, ಹೆಣ್ಣು ಮಕ್ಕಳ ಮದುವೆ  ಎಂದು ದುಡಿದುದ್ದನ್ನೆಲ್ಲ ಖರ್ಚು ಮಾಡಿ ಹೈರಾಣಾಗಿರುವ ಅವರಿಗೆ ನಿವೃತ್ತಿಗಿಂತ ಮೊದಲು ತೆಲೆಯ ಮೇಲೊಂದು ಸೂರಿರಲಿ ಎನ್ನುವ  ಆಸೆ. ಯಾವ ಕಾಲದಲ್ಲೋ ಖರೀದಿಸಿದ್ದ ಸೈಟು ಖಾಲಿಯಾಗಿಯೇ ಉಳಿದಿತ್ತು. ಬಳಿಯಲ್ಲಿರುವ ಒಂದಿಷ್ಟು ಈಡುಗಂಟಿಗೆ ಮತ್ತೊಂದಿಷ್ಟನ್ನು ಸಾಲಸೋಲ ಮಾಡಿ ಸೇರಿಸಿ ಕೊನೆಗೂ ಸಣ್ಣದೊಂದು ಮನೆಯನ್ನು ಕಟ್ಟಿಸಿರುವರು. ಎಲ್ಲ ಮುಗಿಯಿತು ಎನ್ನುವಾಗಲೇ ಹೆಂಡತಿ ಮತ್ತು ಮಕ್ಕಳ ವರಾತ ಶುರುವಾಗಿದ್ದು. ನನ್ನ ಪರಿಚಿತರಿಗೋ ಒಂದು ಸಣ್ಣ ಪೂಜೆ ಮಾಡಿ ಅತ್ಯಂತ ಸರಳವಾಗಿ ಗೃಹಪ್ರವೇಶದ ಸಂಪ್ರದಾಯವನ್ನು ಮುಗಿಸಿಬಿಟ್ಟರಾಯಿತು ಎನ್ನುವ ಆಲೋಚನೆ. ಆದರೆ ಅವರ ಯೋಚೆನೆಗೆ ವಿರುದ್ಧವಾಗಿ ಹೆಂಡತಿ ಮಕ್ಕಳದು ಅತ್ಯಂತ ಅದ್ದೂರಿಯಾಗಿಯೇ ಈ ಕಾರ್ಯಕ್ರಮವನ್ನು ಮಾಡಬೇಕೆನ್ನುವ ಹಟ. ಮನೆ ಕಟ್ಟುವುದಕ್ಕೆಂದೇ ಈಗಾಗಲೇ ಐದಾರು ಲಕ್ಷ ರುಪಾಯಿಗಳನ್ನು ಸಾಲ ಮಾಡಿರುವಾಗ ಮತ್ತಷ್ಟು ಸಾಲ ಮಾಡುವ ಪ್ರಾರಬ್ಧವನ್ನೇಕೆ ಮೈಮೇಲೆ ಎಳೆದುಕೊಳ್ಳಬೇಕೆನ್ನುವ ಇರಾದೆ ಈ ಯಜಮಾನರದು. ಸಾಲಮಾಡಿಯಾದರೂ ಸರಿ ಬಂಧುಗಳು ಮತ್ತು ಪರಿಚಿತರನ್ನು ಆಹ್ವಾನಿಸಿ ಭರ್ಜರಿ ಊಟದ ವ್ಯವಸ್ಥೆ ಮಾಡಿ ಎಲ್ಲರೂ ಅನೇಕ ದಿನಗಳವರೆಗೆ ನೆನಪಿನಲ್ಲಿಟ್ಟುಕೊಳ್ಳುವಂತೆ ಅದ್ದೂರಿಯಾಗಿ ಗೃಹಪ್ರವೇಶದ ಸಮಾರಂಭ ಮಾಡಲೇ ಬೇಕೆಂದು ಕುಟುಂಬದ ಸದಸ್ಯರು ಅವರ ಮೇಲೆ ಒತ್ತಡ ತರುತ್ತಿರುವರು. ಕುಟುಂಬದವರ ಮಾತಿಗೆ ಒಪ್ಪಿಕೊಂಡ ಈ ಯಜಮಾನರು ಸುಮಾರು ಒಂದು ಲಕ್ಷ ರುಪಾಯಿಗಳನ್ನು ಸಾಲ ಮಾಡಿ ಸಮಾರಂಭವನ್ನು ಭರ್ಜರಿಯಾಗಿಯೇ ಏರ್ಪಡಿಸಲು ಸಿದ್ಧರಾಗಿದ್ದಾರೆ. ಆದರೆ ಈಗಾಗಲೇ ಮನೆ ಕಟ್ಟುವುದಕ್ಕಾಗಿ ಸಾಲ ಮಾಡಿರುವಾಗ ಮತ್ತೊಮ್ಮೆ ಸಾಲ ಮಾಡುವಂಥ ಅವಶ್ಯಕತೆ ಏನಿತ್ತು ಎನ್ನುವ ಆತಂಕ ಮಾತ್ರ ಅವರಲ್ಲಿ ಜೀವಂತವಾಗಿದೆ.
         ಅವರು ಹೊರಟು ಹೋದ ನಂತರ ನನ್ನನ್ನು ಕಾಡಿದ ಸಂಗತಿ ಎಂದರೆ ನಮ್ಮ ಜನರೇಕೆ ತೀರ ವೈಯಕ್ತಿಕವಾದ ಸಂಗತಿಗಳನ್ನು ಮತ್ತು ಆಚಾರ ವಿಚಾರಗಳನ್ನು ಸಾರ್ವತ್ರಿಕರಣಗೊಳಿಸುತ್ತಿರುವುರೆನ್ನುವುದು. ಹೀಗೆ ಯೋಚಿಸುತ್ತಿರುವ ಹೊತ್ತಿನಲ್ಲೇ ಮೇಜಿನ ಮೇಲಿದ್ದ  ಆಹ್ವಾನ ಪತ್ರವೊಂದು ನನ್ನ ಗಮನ ಸೆಳೆಯಿತು. ಅದು ನನ್ನ ಪರಿಚಿತರ ಒಂದು ವರ್ಷದ ಮಗುವಿನ  ಮೊದಲ ಹುಟ್ಟುಹಬ್ಬದ ಆಹ್ವಾನ ಪತ್ರ. ನಗರದ ಭವ್ಯ ಹೋಟೆಲ್ ಒಂದರಲ್ಲಿ ಏರ್ಪಡಿಸಿರುವ ಆ ಔತಣಕೂಟಕ್ಕೆ ಸರಿ ಸುಮಾರು ೫೦೦ ಜನರನ್ನು ಆಹ್ವಾನಿಸಿರುವರಂತೆ. ಅವರೇ ಹೇಳಿದಂತೆ ಅಲ್ಲಿ ಪ್ರತಿ ಊಟಕ್ಕೆ ಸುಮಾರು ೨೦೦ ರುಪಾಯಿಗಳು ಖರ್ಚಾಗುವ ಸಾಧ್ಯತೆಯಿದ್ದು ಒಟ್ಟಾರೆ ಆ ದಿನದ ಎರಡು ಗಂಟೆಗಳ ಔತಣಕೂಟಕ್ಕೆ ಏನಿಲ್ಲವೆಂದರೂ ಒಂದು ಲಕ್ಷಕ್ಕೂ ಹೆಚ್ಚು ಹಣ ಖರ್ಚಾಗಲಿದೆ. ಅತ್ಯಂತ ಸಣ್ಣ ಊರಾಗಿರುವುದರಿಂದ ಇಲ್ಲಿ ಇದಕ್ಕಿಂತ ಹೆಚ್ಚು ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಕೊರಗು ಅವರದಾಗಿದೆ. ಇನ್ನು ಅಚ್ಚರಿಯ ಸಂಗತಿ ಎಂದರೆ ಆಹ್ವಾನ  ಪತ್ರದ ಹೊರತಾಗಿಯೂ ದಿನಪತ್ರಿಕೆಗಳಲ್ಲಿ ಮತ್ತು ಟಿ.ವಿ.ಚಾನೆಲ್ ಗಳಲ್ಲಿ ಆಹ್ವಾನ ಪತ್ರ ಬಿತ್ತರವಾಗುವುದರ ಜೊತೆಗೆ ನಗರದ ಪ್ರಮುಖ ಸ್ಥಳಗಳಲ್ಲಿ ಫ್ಲೆಕ್ಸ್ ಗಳನ್ನೂ ತೂಗು ಹಾಕಿರುವರು. ತಮ್ಮ  ಮಗನ ಹುಟ್ಟುಹಬ್ಬವನ್ನು ಅತ್ಯಂತ ಉಮೇದಿಯಿಂದ  ಆಚರಿಸುತ್ತಿರುವ ಅವರಿಗೆ ನಾನೊಂದು ಪ್ರಶ್ನೆ ಕೇಳಿದೆ. 'ಡಿಸೆಂಬರ್ ೨೩ ರಂದು ನಿಮ್ಮ ಮಗನ ಜನ್ಮದಿನ ಆಚರಿಸುತ್ತಿರುವ ನಿಮಗೆ ಆ ದಿನದ ವಿಶೇಷತೆ ಏನೆಂದು ಗೊತ್ತೇ?'. ಅವರು ಗೊತ್ತಿಲ್ಲ ಎಂದು ಪೆಚ್ಚಾಗಿ ನನ್ನ ಮುಖ ನೋಡಿದರು. ಅವರ ಸಂಭ್ರಮಕ್ಕೆ ನಾನೇಕೆ ತಣ್ಣೀರೆರಚಲೆಂದು ಏನಿಲ್ಲ ಎಂದು ಹೇಳಿ ಅವರನ್ನು ಕಳುಹಿಸಿದೆ. ನಿಜಕ್ಕೂ ಆ ದಿನ 'ಕಿಸಾನ್ ದಿವಸ್' (ರೈತರ ದಿನ) ಎಂದು ಆಚರಿಸಲಾಗುತ್ತದೆ. ಅನ್ನ ನೀಡುತ್ತಿರುವ ರೈತರನ್ನು ಸ್ಮರಿಸಿಕೊಳ್ಳುವ ದಿನವದು. ಆದರೆ ತೀರ ಖಾಸಗಿ ಆಚರಣೆಗಳನ್ನು ಸಾರ್ವತ್ರಿಕರಣಗೊಳಿಸುತ್ತಿರುವ ನಾವು  ಸಾರ್ವತ್ರಿಕವಾಗಿ ಆಚರಣೆಯಾಗಬೇಕಾದ ದಿನವನ್ನು ಕೇವಲ ಅವಶ್ಯಕತೆ ಇರುವವರು ಆಚರಿಸಿಕೊಳ್ಳಲಿ ಎಂದು ಅದನ್ನು ವೈಯಕ್ತಿಕಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಯಾರನ್ನಾದರೂ ಕೇಳಿ ನೋಡಿ ಆಚರಿಸಲು ನಾವೇನು ರೈತರೇ ಎನ್ನುವ ವಿತಂಡವಾದ ಕೇಳಿ ಬರುತ್ತದೆ. ಹಗಲಿರುಳೆನ್ನದೆ ದುಡಿದು ಆತ  ನಮಗೆ ಅನ್ನ  ನಿಡುತ್ತಿರುವನೆಂಬ ಸಣ್ಣ ಕೃತಜ್ಞತೆಯೂ ನಮಗಿಲ್ಲ.
       ನೀವುಗಳೆಲ್ಲ ಡಾ.ಸ.ಜ.ನಾಗಲೋಟಿಮಠ ಅವರ ಹೆಸರು ಕೇಳಿರಬಹುದು. ದೇಶದ ಅತ್ಯುನ್ನತ ಪ್ರಶಸ್ತಿಯಾದ 'ಬಿ.ಸಿ.ರಾಯ್ ಪ್ರಶಸ್ತಿ' ಪಡೆದ ಅಂತಾರಾಷ್ಟ್ರೀಯ ಖ್ಯಾತಿಯ ವೈದ್ಯರವರು. ಬಾಗಲಕೋಟೆಯ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಸಮಯ ಅವರ ಮಗನ ಮದುವೆ ನಡೆಯಿತು. ಆ ಮದುವೆಯನ್ನು ಅವರು ಅತ್ಯಂತ ಸರಳವಾಗಿ ಮಠವೊಂದರಲ್ಲಿ ಏರ್ಪಡಿಸಿದ್ದರು. ಕಾಲೇಜಿನ ಯಾವ ಸಿಬ್ಬಂದಿಯನ್ನು ಮದುವೆಗೆ ಆಹ್ವಾನಿಸಿರಲಿಲ್ಲ. ಮರುದಿನ ಅವರು ಕೆಲಸಕ್ಕೆ ಹಾಜರಾದಾಗಲೇ ಗೊತ್ತಾಗಿದ್ದು ನಿನ್ನೆ ಸಜನಾ ಅವರ ಮಗನ ಮದುವೆ ಇತ್ತೆಂದು. ಅನೇಕರು ತಮಗೇಕೆ ಆಹ್ವಾನಿಸಲಿಲ್ಲವೆಂದು ಕೋಪ ತೋರ್ಪಡಿಸಿದರು. ಅದ್ದೂರಿಯಾಗಿ ಆಚರಿಸುವುದರ ಮೂಲಕ ಅನಾವಶ್ಯಕವಾಗಿ ಖರ್ಚು ಮಾಡುವುದೇಕೆ ಎನ್ನುವುದು ಸಜನಾ ಅವರ ವಾದವಾಗಿತ್ತು. ಅದಕ್ಕೂ ಮಿಗಿಲಾಗಿ ಅವರು ಹೇಳಿದ ವಿಷಯವೆಂದರೆ ಇದು ನನ್ನ ಕುಟುಂಬದ ಖಾಸಗಿ ಕಾರ್ಯಕ್ರಮ ಎಲ್ಲರನ್ನೂ ಆಹ್ವಾನಿಸುವುದಕ್ಕೆ ಅದೇನು ರಾಷ್ಟ್ರೀಯ ಕಾರ್ಯಕ್ರಮವಾಗಿರಲಿಲ್ಲ. ಇವತ್ತಿನ  ರಾಜಕಾರಣಿಗಳು ಮತ್ತು ಸಿನಿಮಾ ಕಲಾವಿದರ ಖಾಸಗಿ ಕಾರ್ಯಕ್ರಮಗಳ ಆಚರಣೆಯನ್ನು ನೋಡಿದಾಗ ಸಜನಾ ಅವರು ಅಂದು ಹೇಳಿದ ಮಾತು ಮತ್ತೆ ಮತ್ತೆ ನೆನಪಾಗುತ್ತದೆ.
         ಇರಲಿ ಈ ರೀತಿಯ ಖಾಸಗಿ ಆಚರಣೆಗಳನ್ನು ಖುಷಿಯನ್ನೋ ಅಥವಾ ಸಂತೋಷವನ್ನೋ ಹಂಚಿಕೊಳ್ಳಲು  ಸಾರ್ವತ್ರಿಕವಾಗಿ ಆಚರಿಸಿಕೊಳ್ಳುತ್ತಾರೆಂದುಕೊಳ್ಳೋಣ. ಆದರೆ ಸಾರ್ವತ್ರಿಕವಾಗಿ ಆಚರಿಸಬೇಕಾದ ಕಾರ್ಯಕ್ರಮಗಳನ್ನು ನಾವೇಕೆ ವೈಯಕ್ತಿಕವಾಗಿಸುತ್ತಿದ್ದೇವೆ. ಉದಾಹರಣೆಯಾಗಿ  ಹೇಳಬೇಕಾದರೆ ಗಾಂಧಿ ಜಯಂತಿ, ಅಂಬೇಡ್ಕರ್ ಜಯಂತಿ, ರೈತರ ದಿನ, ಸ್ವಾತಂತ್ರ್ಯ ದಿನ, ಗಣರಾಜ್ಯ ದಿನ ಇಂಥ ಯಾವ ದಿನಗಳಲ್ಲಿ ನಾವುಗಳೆಲ್ಲ ಸಾಮೂಹಿಕವಾಗಿ ಪಾಲ್ಗೊಳ್ಳುತ್ತಿದ್ದೇವೆ. ನಮ್ಮ ಕೌಟಂಬಿಕ ಆಚರಣೆಗೆ ಮಾತ್ರ ಸೀಮಿತವಾಗಿರಬೇಕಿದ್ದ ಕಾರ್ಯಕ್ರಮಗಳನ್ನು ಅತ್ಯಂತ ಉಮೇದಿಯಿಂದ ಸಾರ್ವಜನಿಕವಾಗಿ ಆಚರಿಸಿಕೊಳ್ಳುವ ಅನೇಕರಿಗೆ ಸ್ವಾತಂತ್ರ್ಯ ದಿನದಂದು ಕಡ್ಡಾಯವಾಗಿ ಧ್ವಜಾರೋಹಣ ಸಮಾರಂಭದಲ್ಲಿ ಪಾಲ್ಗೊಳ್ಳಬೇಕೆನ್ನುವ ಕನಿಷ್ಟ ಪ್ರಜ್ಞೆಯೂ ಇರುವುದಿಲ್ಲ. ಅಕ್ಟೋಬರ್ ೨  ದೇಶ ಕಂಡ ಪ್ರಾಮಾಣಿಕ ಪ್ರಧಾನ ಮಂತ್ರಿ ಲಾಲ ಬಹಾದ್ದೂರ ಶಾಸ್ತ್ರಿ ಅವರ ಜನ್ಮದಿನವೆಂದು ಅದೆಷ್ಟು ಜನರಿಗೆ ಗೊತ್ತಿದೆ?. ಹೊಸ ಸಿನಿಮಾವೊಂದು ಬಿಡುಗಡೆಯಾದಾಗ ಆ ಚಿತ್ರದ  ನಾಯಕನ ಆಳೆತ್ತರದ ಕಟೌಟ್ ನಿಲ್ಲಿಸಿ ಕ್ಷಿರಾಭಿಷೇಕ ಮಾಡುವ ನಮಗೆ ಜನೆವರಿ ೩೦ ರಂದು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ವೀರಮರಣವನ್ನಪ್ಪಿದ ಹುತಾತ್ಮರನ್ನು ಸ್ಮರಿಸಿಕೊಳ್ಳುವ ದಿನವೆಂದು ನೆನಪಿಗೇ ಬರುವುದಿಲ್ಲ.
             ಇನ್ನೂ ಆಘಾತಕಾರಿ ಸಂಗತಿ ಎಂದರೆ ಎಲ್ಲರೂ ಒಟ್ಟಾಗಿ ಆಚರಿಸಬೇಕಾದ ಆಚರಣೆಗಳನ್ನು ನಾವು  ಸಂಕುಚಿತ ಮನಸ್ಸಿನಿಂದ ಒಂದು  ಗುಂಪು, ಸಮುದಾಯಕ್ಕೆ ಸೀಮಿತಗೊಳಿಸುತ್ತಿರುವುದು. ಗಾಂಧಿ ರಾಷ್ಟ್ರಪಿತನಾದರೂ    ಅವರ  ಜನ್ಮದಿನದ ಆಚರಣೆ ಕೆಲವೇ ವರ್ಗದವರಿಗೆ ಸೀಮಿತ. ಅದರಲ್ಲೂ ರಾಜಕೀಯ ಪಕ್ಷವೊಂದು ಗಾಂಧಿ ಜಯಂತಿಯನ್ನು  ಗುತ್ತಿಗೆಗೆ ಹಿಡಿದಂತೆ ವರ್ತಿಸುತ್ತಿದೆ. ಹೀಗಿರುವಾಗ ವೀರ ಸಾವರ್ಕರ್, ಭಗತ್ ಸಿಂಗ್ ರ ನೆನಪು ಮತ್ತೊಂದು ಪಕ್ಷದ ಪಿತ್ರಾರ್ಜಿತ ಆಸ್ತಿ ಎನ್ನುವಂತಾಗಿದೆ. ಅಂಬೇಡ್ಕರ್ ಏನಿದ್ದರೂ ದಲಿತರ ಮತ್ತು ದಮನಿತರ ನೇತಾರ. ಈ ನಡುವೆ ಜಯಪ್ರಕಾಶ ನಾರಾಯಣ, ಸುಭಾಷಚಂದ್ರ ಭೋಸ್, ವಿವೇಕಾನಂದರಂಥ ಮಹಾನ್ ನಾಯಕರು ನೇಪಥ್ಯಕ್ಕೆ ಸರಿಯುತ್ತಾರೆ. ರೈತರ ದಿನವನ್ನು ರೈತ ಸಂಘದವರೇ ಆಚರಿಸುವುದಿಲ್ಲ. ಎರಡು ದಿನಗಳ ಹಿಂದೆ ಇಲ್ಲೊಂದು ಕವಿರತ್ನ ಕಾಳಿದಾಸ ವೃತ್ತ ಉದ್ಘಾಟನೆಯಾಯಿತು. ಅಲ್ಲಿದ್ದ ಬೆರಳೆಣಿಕೆಯ ಜನರಲ್ಲಿ ಹೆಚ್ಚಿನವರು ಕುರುಬ ಸಮುದಾಯದವರಾಗಿದ್ದೊಂದು ವಿಶೇಷ. ಮೇಘದೂತ, ಅಭಿಜ್ಞಾನ ಶಾಕುಂತಲದಂಥ ಮಹಾ ಕಾವ್ಯಗಳನ್ನು ಬರೆದ ಮೇರು ಕವಿಯನ್ನು ನಾವು ಕುರುಬ ಸಮುದಾಯಕ್ಕೆ ಸಿಮಿತಗೊಳಿಸುತ್ತಿರುವುದಕ್ಕೆ ಸಾಕ್ಷಿಯಾಗಿ  ಅಂದಿನ ಆ ದೃಶ್ಯ  ನಮ್ಮ ಸಂಕುಚಿತ ಮನಸ್ಸಿಗೆ ಹಿಡಿದ ಕೈಗನ್ನಡಿಯಾಗಿತ್ತು.
        ಕೆಲವೊಮ್ಮೆ ವೈಯಕ್ತಿಕ ಸಂಗತಿಗಳು ಸಾರ್ವತ್ರಿಕವಾದಾಗ ಅದಕ್ಕೆ ಸಮಾಜದ ಒಪ್ಪಿಗೆಯ ಮುದ್ರೆ ಇರುತ್ತದೆ. ಇದಕ್ಕೊಂದು ಉದಾಹರಣೆ ಹೇಳುವುದಾದರೆ ಕೆಲದಿನಗಳ ಹಿಂದೆ ನಾನೊಂದು ಪುಸ್ತಕ ಓದಿದೆ. ಆ ಪುಸ್ತಕದ ಹೆಸರು 'ಊರು ಕೇರಿ' ಎಂದು. ಕವಿ ಸಿದ್ಧಲಿಂಗಯ್ಯನವರ ಆತ್ಮಕಥನವದು. ಇದು ಕವಿಯ ವೈಯಕ್ತಿಕ ವಿಷಯವಾದರೂ ಓದುತ್ತ ಹೋದಂತೆ ಒಂದು ವರ್ಗದ ಸಮಸ್ಯೆಗಳು ನಮ್ಮೆದುರು ತೆರೆದುಕೊಳ್ಳುತ್ತ ಹೋಗುತ್ತವೆ. ದಲಿತ ಸಮುದಾಯದ ಸಮಸ್ಯೆಗಳನ್ನು ಹೇಳುವ ಕವಿ ಇಲ್ಲಿ ಕೇವಲ ಒಂದು ರೂಪಕವಾಗುತ್ತಾನೆ. ಹಾಗಾಗಿ ಇದನ್ನು ಲೇಖಕರ ತೀರ ಖಾಸಗಿ ವಿಷಯ  ಎನ್ನುವಂತಿಲ್ಲ. ತಮ್ಮೊಳಗಿನ ಆಂತರಿಕವನ್ನು ಬಾಹ್ಯಿಕರಿಸುವ ಕವಿಯ ಈ ಕಾರ್ಯ ಸಾರ್ವಜನಿಕ ಒಪ್ಪಿಗೆ ಪಡೆಯುತ್ತದೆ.
           ಈ ನಡುವೆ ರಾಷ್ಟ್ರದ ಮಹತ್ವದ ದಿನಗಳು ಮತ್ತು ಮಹಾನ್ ನಾಯಕರುಗಳ ನೆನಪುಗಳೆಲ್ಲ ನೇಪಥ್ಯಕ್ಕೆ  ಸರಿಯುತ್ತಿರುವ ಹೊತ್ತಿನಲ್ಲೇ ಸಿನಿಮಾ ನಟನೊಬ್ಬನ ಹುಟ್ಟುಹಬ್ಬ ಬರುತ್ತದೆ. ಅಭಿಮಾನಿಗಳೆಲ್ಲ ಮಧ್ಯರಾತ್ರಿಯಿಂದಲೇ ಆತನ ಮನೆ ಎದುರು ಉದ್ದನೇ ಸಾಲಿನಲ್ಲಿ ನಿಂತು ದರ್ಶನ ಮಾಡಿ ಕೃತಾರ್ಥರಾಗುತ್ತಾರೆ. ಇನ್ನಾರದೋ ಮನೆಯ ಮಗುವಿನ ಹುಟ್ಟುಹಬ್ಬದ ಆಹ್ವಾನ ಪತ್ರ ಮನೆಯ ಬಾಗಿಲ ಬಳಿ ಬಂದು ಬೀಳುತ್ತದೆ. ಅದರ ಹಿಂದೆಯೇ ಸಾಂಸ್ಕೃತಿಕ ಸಭಾಭವನದಲ್ಲಿ ಅತ್ಯಂತ  ಅದ್ದೂರಿಯಾಗಿ ವೈಕುಂಠ  ಸಮಾರಾಧನೆ ಏರ್ಪಡಿಸಿದ್ದೇವೆ ಬರಲೇ ಬೇಕೆನ್ನುವ ಒತ್ತಾಯ. ಹೀಗೆ ವೈಯಕ್ತಿಕವಾದದ್ದು ಸಾರ್ವತ್ರಿಕರಣಗೊಳ್ಳುತ್ತ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತ ಹೋಗುತ್ತದೆ.

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ       



Wednesday, December 12, 2012

ಕಾಡುವ ಖಾಲಿತನದ ನಡುವೆ ಕದಡುವ ನೆನಪುಗಳು

      ದಯವಿಟ್ಟು ಕ್ಷಮಿಸಿ ಒಂದಿಷ್ಟು ಖಾಸಗಿ ವಿಷಯಗಳನ್ನು ಹಂಚಿಕೊಳ್ಳುತ್ತಿರುವುದಕ್ಕೆ. ಹನ್ನೊಂದು ವರ್ಷಗಳು ಕಳೆದು ಹೋದವು ನಾನು ಬಾಗಲಕೋಟೆಯ  ಬಿ.ವಿ.ವಿ.ಸಂಘದ 'ಸಮಾಚಾರ' ಪತ್ರಿಕೆಗೆ ಬರೆಯಲು ಪ್ರಾರಂಭಿಸಿ. ಈ ಹನ್ನೊಂದು ವರ್ಷಗಳಲ್ಲಿ ಪತ್ರಿಕೆಗೆ ಬರೆದ ನನ್ನ ಲೇಖನಗಳ ಸಂಖ್ಯೆ ನೂರರ ಸಮೀಪ ಬಂದು ನಿಂತಿದೆ. 'ಸಮಾಚಾರ'ಕ್ಕೆ ನಿಯಮಿತವಾಗಿ ಪ್ರತಿ ತಿಂಗಳು ಬರೆಯುವುದು ಒಂದು ಹವ್ಯಾಸವಾಗಿ ಬದಲಾಗಿದೆ. ಪತ್ರಿಕೆಯ ಮೇಲಿನ ಅಭಿಮಾನ ಮತ್ತು ಪ್ರೀತಿ ನನ್ನನ್ನು ಬರೆಯುವಂತೆ ಪ್ರಚೋದಿಸುತ್ತದೆ. ಅನೇಕ ಸಂದರ್ಭಗಳಲ್ಲಿ ಹಲವು ತಿಂಗಳುಗಳ ಮೊದಲೇ ಲೇಖನಗಳನ್ನು ಸಿದ್ದಪಡಿಸಿ ಸಂಪಾದಕರಿಗೆ ಕಳಿಸಿದ್ದುಂಟು. ಕೆಲವೊಮ್ಮೆ ಪತ್ರಿಕೆ ಅಚ್ಚಿಗೆ ಹೋಗಲು ಇನ್ನೇನು ಮೂರ್ನಾಲ್ಕು ದಿನಗಳಿವೆ ಎನ್ನುವಾಗ ಆತುರಾತುರವಾಗಿ ಬರೆದದ್ದುಂಟು. ಇನ್ನು ಕೆಲವೊಮ್ಮೆ ಏನನ್ನೂ ಬರೆಯಲು ಸಾಧ್ಯವಿಲ್ಲವೇನೋ ಎನ್ನುವ ಖಾಲಿತನ ಕಾಡಿದ್ದುಂಟು. ಈ ಬರೆಯುವ ಉಮೇದಿ, ಬರೆಯುವ ಆತುರತೆ ಮತ್ತು ಬರೆಯಲಾರೆನೆನ್ನುವ ಖಾಲಿತನದ ನಡುವೆಯೂ ಪತ್ರಿಕೆಯೊಂದಿಗಿನ ನನ್ನ ಒಡನಾಟ ಒಂದು ದಶಕದಿಂದ ಅವ್ಯಾಹತವಾಗಿ ಮುಂದುವರಿದುಕೊಂಡು  ಬಂದಿದೆ.

ಅರಳಿಕೊಂಡ ಬದುಕು 

       2001 ರಲ್ಲಿ ಬಾಗಲಕೋಟೆಗೆ ಬಂದ ಪ್ರಾರಂಭದ ಆ ಹೊಸದರಲ್ಲಿ ಇಡೀ ಜಿಲ್ಲೆಯಾದ್ಯಂತ ಮುಳುಗಡೆಯ ಭೀತಿ ಆವರಿಸಿತ್ತು. ಮುಳುಗಡೆಯ ನಾಡಿನಲ್ಲಿ ಬದುಕು ಕಟ್ಟಿಕೊಳ್ಳಲು ಬಂದ ನನ್ನ ಪರಿಸ್ಥಿತಿಯೂ ಭಿನ್ನವಾಗಿರಲಿಲ್ಲ. ನೂರಾರು ಮೈಲಿ ದೂರದ ಒಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಯಿಂದ ದೂರವಾಗಿ ಹೊಸ ನೆಲದಲ್ಲಿ ಅಪರಿಚಿತರ ನಡುವೆ ಬದುಕಲು ಪ್ರಯತ್ನಿಸಿದ ಆ ಕ್ಷಣ ಹಲವು ಸಂದರ್ಭಗಳಲ್ಲಿ ಮನಸ್ಸು ತಲ್ಲಣಗೊಳ್ಳುತ್ತಿತ್ತು. ಇಲ್ಲಿಯೂ ಒಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನಿಂದ ಬೇರು ಸಮೇತ ಕಿತ್ತು ಬೇರೊಂದು ಸಾಮಾಜಿಕ ತಾಣದಲ್ಲಿ ಬದುಕನ್ನು ರೂಪಿಸಿಕೊಳ್ಳಲು ಹೆಣಗಾಡುತ್ತಿದ್ದ ನನ್ನಂಥ ಸಾವಿರಾರು ಜನರಿದ್ದುದ್ದರಿಂದಲೇ ಬೇಗನೆ ಹೊಂದಿಕೊಳ್ಳಲು ಸಾಧ್ಯವಾಗಿರಬಹುದು. ಕೃಷ್ಣೆಯ ಹಿನ್ನೀರು ವರ್ಷದಿಂದ ವರ್ಷಕ್ಕೆ ನಗರದ ವಸತಿ ಪ್ರದೇಶಗಳನ್ನು ತನ್ನ ಒಡಲಿಗೆ ಸೇರಿಸಿಕೊಳ್ಳುತ್ತಿದ್ದುದ್ದನ್ನು ಕಣ್ಣಾರೆ ಕಂಡ ಆ ದಿನಗಳಲ್ಲಿ ಮುಳುಗಡೆಯ ಊರಿಗೆ ಬಂದು ತಪ್ಪು ಮಾಡಿದೆನೇನೋ ಎನ್ನುವ ಆತಂಕ ಕಾಡುತ್ತಿತ್ತು. ಆದರೆ ಈ ದಿಗಿಲು, ಆತಂಕಗಳನ್ನೆಲ್ಲ ಮೀರಿಸುವ ಅಚ್ಚರಿಯ ಸಂಗತಿ ಎಂದರೆ ಅದು ನಾನು ವೈದ್ಯಕೀಯ ಕಾಲೇಜಿನಂಥ ದೊಡ್ಡ ಮಹಾವಿದ್ಯಾಲಯದ ಗ್ರಂಥಪಾಲಕನಾಗಿ ನೇಮಕಗೊಂಡಿದ್ದು. ಉಪನ್ಯಾಸಕನಾಗಿ ಕೆಲಸ ಮಾಡಿ ಅನುಭವಿದ್ದ ನನಗೆ ಬಿ.ವಿ.ವಿ.ಸಂಘದ ಸಂದರ್ಶನ ಸಮಿತಿಯವರು ಅದು ಹೇಗೆ ನನ್ನಂಥ ಅನನುಭವಿಯನ್ನು ಗ್ರಂಥಪಾಲಕನಾಗಿ ಆಯ್ಕೆ ಮಾಡಿದರೆನ್ನುವ ಸಂಗತಿ ಇವತ್ತಿಗೂ ನನಗೆ ಅಚ್ಚರಿಯ ವಿಷಯ.
      ಮನಸ್ಸು ಕೃತಜ್ಞತೆಯಿಂದ ಭಾರವಾಗುತ್ತದೆ. ಈ ಹನ್ನೊಂದು ವರ್ಷಗಳ ಸುದೀರ್ಘ ಪಯಣ ವಿಶಿಷ್ಟ ಅನುಭವಗಳನ್ನು ನೀಡಿದೆ. ಮುಳುಗಡೆಯ ನಾಡಿನಲ್ಲಿ ಬದುಕು ಅರಳಿಕೊಂಡಿದೆ. ವೃತ್ತಿ ಬದುಕು ತೃಪ್ತಿ ನೀಡಿದೆ. ಹೊಸ ಹೊಸ ವಿಷಯಗಳನ್ನು ಕಲಿಯಲು ವೃತ್ತಿ ಅನುವುಮಾಡಿಕೊಟ್ಟಿದೆ. ಬದುಕಿನ ಅನೇಕ ಸಮಸ್ಯೆಗಳು ಮತ್ತು ಸವಾಲುಗಳಿಗೆ ಮುಖಾಮುಖಿಯಾಗಿ ನಿಲ್ಲುವ ಸಾಮರ್ಥ್ಯ ಈ ನೆಲ ತಂದುಕೊಟ್ಟಿದೆ. ಒಂದು ಗೌರವ, ಒಂದು ಸ್ವಾಭಿಮಾನ, ಒಂದಿಷ್ಟು ಸಾಮರ್ಥ್ಯ, ಒಂದಿಷ್ಟು ಸಂತೃಪ್ತಿ ಜೊತೆಗೊಂದಿಷ್ಟು ಅಸ್ತಿತ್ವ ಇವುಗಳನ್ನು ಬಿಟ್ಟು ಇನ್ನೇನು ಬೇಕು ಬದುಕಿಗೆ.

ವೃತ್ತಿ ಮತ್ತು ಪ್ರವೃತ್ತಿ 

     ವೃತ್ತಿ ಮತ್ತು ಪ್ರವೃತ್ತಿಗಳೆರಡೂ ಒಂದೇ ಸ್ಥಳದಲ್ಲಿ ಅದು ಹೇರಳವಾಗಿ ಸಿಗುವುದು ತೀರಾ ಅಪರೂಪದ ಸಂಗತಿ. ಆದರೆ ಈ ಮಾತಿಗೆ ಅಪವಾದ ಎನ್ನುವಂತೆ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ವೃತ್ತಿ ಮತ್ತು ಪ್ರವೃತ್ತಿಗಳೆರಡನ್ನೂ ಕಟ್ಟಿಕೊಡುವ ಸಂಸ್ಥೆ. ಇಲ್ಲಿ ಉದ್ಯೋಗದ ಜೊತೆ ಜೊತೆಗೆ ನನ್ನೊಳಗಿನ ಬರವಣಿಗೆಯ ಪ್ರವೃತ್ತಿಯೂ ಅರಳಿಕೊಂಡಿದೆ. ಬಿ.ವಿ.ವಿ.ಸಂಘ ಕಳೆದ ಹದಿನೆಂಟು ವರ್ಷಗಳಿಂದ ಪ್ರಕಟಿಸುತ್ತಿರುವ 'ಸಮಾಚಾರ' ಪತ್ರಿಕೆ ಅನೇಕ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ಬರೆಯಲು ವೇದಿಕೆ ಒದಗಿಸಿದೆ. 'ಸಮಾಚಾರ' ಪತ್ರಿಕೆಯ ಮೂಲಕವೇ ಅನೇಕ ನೌಕರರು ಮತ್ತು ವಿದ್ಯಾರ್ಥಿಗಳು ಬರವಣಿಗೆಯ ಕ್ಷೇತ್ರಕ್ಕೆ ಕಾಲಿಟ್ಟಿರುವರು. ಹಲವಾರು ಲೇಖಕರ ಲೇಖನಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ. ಸಣ್ಣ ಪುಟ್ಟ ಲೇಖನಗಳನ್ನು ಪತ್ರಿಕೆಗೆ ಬರೆಯುತ್ತಲೇ ತಮ್ಮ ಬರವಣಿಗೆಯನ್ನು ಹದಗೊಳಿಸಿಕೊಂಡ ಬರಹಗಾರರು ಇಲ್ಲಿರುವರು. ಹೀಗೆ ಬರವಣಿಗೆಯ ಮೂಲಕ 'ಸಮಾಚಾರ' ಪತ್ರಿಕೆ ಸಂಘದ ಅನೇಕ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ನಿಲ್ಲಿಸಿದೆ. ಒಂದು ಅಸ್ತಿತ್ವದ ನಿರಂತರ ಹುಡುಕಾಟದಲ್ಲಿರುವ ಮನಸ್ಸುಗಳಿಗೆ ನಿಜಕ್ಕೂ ಇಂಥದ್ದೊಂದು ನೆಲೆಯ ಅವಶ್ಯಕತೆ ಇದೆ.

ಬರವಣಿಗೆ ಖುಷಿ ನೀಡಿದೆ 

    ನನಗಿನ್ನೂ ನೆನಪಿದೆ ಹನ್ನೊಂದು ವರ್ಷಗಳ ಹಿಂದೆ 'ಸಮಾಚಾರ'ಕ್ಕೆ  ನಾನು ಬರೆದ ಮೊದಲ ಲೇಖನ ಗ್ರಂಥಾಲಯ ಚಳುವಳಿಯ ಜನಕರೆಂದೇ ಖ್ಯಾತರಾದ ಡಾ.ಎಸ್.ಆರ್.ರಂಗನಾಥನ್ ಅವರನ್ನು ಕುರಿತಾಗಿತ್ತು. ಸಂಘದಲ್ಲಿ ಪತ್ರಿಕೆಯೊಂದು ಪ್ರಕಟವಾಗುತ್ತಿದೆ ಎಂದು ಗೊತ್ತಾಗಿ ನನಗೆ ತಿಳಿದಂತೆ ಒಂದು ಲೇಖನ ಬರೆದು ಪತ್ರಿಕೆಯ ಕಾರ್ಯಾಲಯಕ್ಕೆ ಕಳುಹಿಸಿದ್ದೆ. ಲೇಖನ ಪ್ರಕಟವಾಗಿ ಪತ್ರಿಕೆ ಕೈಸೇರಿದಾಗ ನೋಡಿ ಖುಷಿಯಾಗಿತ್ತು. ಆದರೆ ಅಂದು ಬರೆದ ಲೇಖನವನ್ನು ಇಂದು ಓದಿದಾಗ ಇನ್ನೂ ಚೆನ್ನಾಗಿ ಬರೆಯಬೇಕಿತ್ತು ಎಂದೆನಿಸದೆ ಇರದು. ಆ ಲೇಖನದಲ್ಲಿನ ಪದಗಳು ಮತ್ತು ಬರವಣಿಗೆಯ ಶೈಲಿ ಸಪ್ಪೆಯಾಗಿತ್ತು ಎಂದೆನಿಸುತ್ತದೆ. ಹಾಗಿದ್ದಾಗೂ ಕೂಡಾ ಸಂಪಾದಕರು ಹೊಸ ಬರಹಗಾರ ಎನ್ನುವ ಕಾರಣದಿಂದ ಪ್ರೋತ್ಸಾಹಿಸಲು ಒಪ್ಪಿಕೊಂಡಿರಬಹುದು. ಅದೇ  ಉತ್ಸಾಹದಲ್ಲಿ ಮತ್ತೆರಡು ಲೇಖನಗಳನ್ನು ಗ್ರಂಥಾಲಯದ ಕುರಿತೇ ಬರೆದು ಪತ್ರಿಕೆಗೆ ಕಳುಹಿಸಿದೆ. ಅವುಗಳು ಕೂಡಾ ಪ್ರಕಟಗೊಂಡವು. ಹೀಗೆ ಬರೆಯಲು ಪ್ರಾರಂಭಿಸಿದ ಆರಂಭದ ದಿನಗಳಲ್ಲೇ ನಾನೊಂದು ನಿರ್ಧಾರಕ್ಕೆ ಬಂದಿದ್ದು ಅದೆಂದರೆ ನನ್ನ ಬರವಣಿಗೆ ಏಕತಾನತೆಯಿಂದ ಹೊರಬರಬೇಕು ಎಂದು. ಈ ಕಾರಣದಿಂದಲೇ ಸಂಚಿಕೆಯಿಂದ ಸಂಚಿಕೆಗೆ ನಾನು ವಿಭಿನ್ನ ವಿಷಯಗಳ ಮೇಲೆ ಬರೆಯಲು ಪ್ರಯತ್ನಿಸಿದ್ದು.
      'ಸಮಾಚಾರ' ಪತ್ರಿಕೆಯ ಬಹಳಷ್ಟು ಲೇಖನಗಳನ್ನು ನಾನು ಅತ್ಯಂತ ಖುಷಿಯಿಂದಲೇ ಬರೆದಿದ್ದೇನೆ. ಕೆಲವೊಮ್ಮೆ ಸಂಪಾದಕರ ಪ್ರೀತಿಯ ಒತ್ತಾಯಕ್ಕೆ ಮಣಿದು ಬರೆದ ಉದಾಹರಣೆಗಳೂ ಉಂಟು. ಓದಿದ ಉತ್ತಮ ಪುಸ್ತಕಗಳನ್ನು ಕುರಿತು ಪ್ರತಿಕ್ರಿಯಿಸಲು ನಾನು 'ಸಮಾಚಾರ' ಪತ್ರಿಕೆಯನ್ನೇ ವೇದಿಕೆಯಾಗಿ ಮಾಡಿಕೊಂಡಿರುವುದುಂಟು. ಒಟ್ಟಿನಲ್ಲಿ ಅಭಿವ್ಯಕ್ತಿ ಮಾಧ್ಯಮವಾಗಿ 'ಸಮಾಚಾರ' ಪತ್ರಿಕೆ ನನ್ನೊಳಗಿನ ಅನೇಕ ವಿಚಾರಗಳು ಅಕ್ಷರ ರೂಪದಲ್ಲಿ ಅನಾವರಣಗೊಳ್ಳಲು ನೆರವಾಗಿದೆ. ಸಂಚಿಕೆಯಿಂದ ಸಂಚಿಕೆಗೆ ನನ್ನ ಬರವಣಿಗೆ ಒಂದಿಷ್ಟು ಪಕ್ವಗೊಂಡಿದೆ ಎನ್ನುವುದನ್ನು ನಾನು ಅತ್ಯಂತ ವಿನಮೃತೆಯಿಂದ ಒಪ್ಪಿಕೊಳ್ಳುತ್ತೇನೆ. ಪತ್ರಿಕೆ ಬರೆಯುವ ಚೈತನ್ಯ ನೀಡಿದೆ. 'ಸಮಾಚಾರ'ದ ಬರವಣಿಗೆ ಬೇರೆ ಬೇರೆ ಪತ್ರಿಕೆಗಳಿಗೆ ಒಂದಿಷ್ಟು ಲೇಖನಗಳು ಮತ್ತು ಒಂದೆರಡು ಕಥೆಗಳನ್ನು ಬರೆಯಲು ಸಾಧ್ಯವಾಗಿಸಿದೆ. ಒಟ್ಟಿನಲ್ಲಿ ಬರವಣಿಗೆ ಖುಷಿ ನೀಡಿದೆ.
    ಈ ನಡುವೆ ನಾನೊಂದು  ಪುಸ್ತಕ ಬರೆದೆ ಎನ್ನುವುದು ಹೆಮ್ಮೆ ಮತ್ತು ಅಭಿಮಾನಕ್ಕಿಂತ ಅದು ನನಗೆ ಅತ್ಯಂತ ಅಚ್ಚರಿಯ ವಿಷಯ. 'ಸಮಾಚಾರ'ಕ್ಕೆ ನಿಯಮಿತವಾಗಿ ಬರೆಯುತ್ತಿರುವುದನ್ನು ಗಮನಿಸಿಯೇ ಅಂಥದ್ದೊಂದು ಜವಾಬ್ದಾರಿ ನನಗೆ ಕೊಟ್ಟಿರಲೂ ಬಹುದು. ಹೀಗೆ 'ಸಮಾಚಾರ' ಪತ್ರಿಕೆ ನನ್ನನ್ನು ಪುಸ್ತಕ ಬರೆಯುವ ಮಟ್ಟಕ್ಕೆ ಕರೆತಂದು ನಿಲ್ಲಿಸಿದೆ. ಈ ದಿನ ಮನೆಯ ಅಲ್ಮೇರಾದಲ್ಲಿ ಕಲಾಮ್,  ತೇಜಸ್ವಿ, ವಿಶ್ವೇಶ್ವರ ಭಟ್ ಅವರ ಪುಸ್ತಕಗಳ ಸಾಲಿನಲ್ಲಿ ಕುಳಿತಿರುವ ನನ್ನ 'ಸಾಧನೆ' ಪುಸ್ತಕವನ್ನು ನೋಡಿದಾಗಲೆಲ್ಲ ಮನಸ್ಸು ಮತ್ತದೇ ಕೃತಜ್ಞತೆಯಿಂದ ಭಾರವಾಗುತ್ತದೆ.
    ಈ ಪ್ರಶ್ನೆ ನನ್ನನ್ನು ಅನೇಕ ಸಾರಿ ಕಾಡಿದ್ದಿದೆ. ನಾನೇಕೆ ಬರೆಯುತ್ತೇನೆ? ಎಂದು. 'ಸಮಾಚಾರ'ಕ್ಕೆ ನಾನು ಬರೆದಿದ್ದು ಯಾವುದೇ ಉದ್ದೆಶಗಳನ್ನಿಟ್ಟುಕೊಂಡು ಅಲ್ಲ. ಬರವಣಿಗೆ ಎನ್ನುವುದು ಅದು ನನಗೆ ಖುಷಿ ಕೊಡುವ ನನ್ನ ಖಾಸಗಿ ವಿಷಯ. ಸಮಾಚಾರಕ್ಕೆ ಬರೆಯುವುದರಿಂದ ನನ್ನ ಬರವಣಿಗೆಯ ಶೈಲಿ ಸುಧಾರಿಸಿದೆ. ಪ್ರತಿ ತಿಂಗಳು ಹೊಸ ಹೊಸ ವಿಷಯಗಳ ಹುಡುಕಾಟದಿಂದ ಅನೇಕ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯವಾಗಿದೆ. ಅನಗತ್ಯ ವಿಷಯಗಳಲ್ಲಿ ಬದುಕು ಕಳೆದು ಹೋಗದೆ ಒಂದು ಅಸ್ತಿತ್ವದ ಹುಡುಕಾಟದಲ್ಲಿ ತೊಡಗಿಸಿಕೊಳ್ಳಲು ಬರವಣಿಗೆ ನೆರವಾಗಿದೆ. ಜೊತೆಗೆ ಬೇರೆಯವರು ಓದಲೇ ಬೇಕೆನ್ನುವ ಹಟದಿಂದ ನಾನು ಬರೆಯುತ್ತಿಲ್ಲ. ಬರವಣಿಗೆ ನನ್ನ ಖಾಸಗಿ ವಿಷಯ ಎಂದು ತಿಳಿದುಕೊಂಡಿರುವುದರಿಂದಲೇ ಈ ವಿಷಯದ ಕುರಿತು ಬೇರೆಯವರೊಂದಿಗೆ ಮಾತನಾಡುವಾಗಲೆಲ್ಲ ಸಂಕೋಚ ನನಗೆ ಗೊತ್ತಿಲ್ಲದಂತೆ ಇಣುಕುತ್ತದೆ.

ವಾಸ್ತವಿಕತೆಯ ಅರಿವಿದೆ 

       ಬರವಣಿಗೆ ವಾಸ್ತವಿಕತೆಗೆ ಹತ್ತಿರವಾಗಿರಬೇಕು  ಎನ್ನುವುದರಲ್ಲಿ ನನಗೆ ಹೆಚ್ಚು ನಂಬಿಕೆ ಇದೆ. ಬರಹ ಲೇಖಕನ ಕಲ್ಪನೆಯಲ್ಲಿ ಮೂಡಿಬಂದರೂ ಇನ್ನಾರದೋ ಬದುಕಿಗೆ ಹತ್ತಿರವಾಗಿರಬೇಕು ಅಂದರೆ ಮಾತ್ರ ಅಂಥ ಬರಹ ಒಂದಿಷ್ಟು ದಿನಗಳವರೆಗಾದರೂ ಉಳಿಯಬಲ್ಲದು. ಜೊತೆಗೆ ಬರವಣಿಗೆಗೆ ಒಂದಿಷ್ಟು ಸಿದ್ಧತೆಯ ಅಗತ್ಯವೂ ಇದೆ. ಲೇಖನವೊಂದನ್ನು ಬರೆಯುತ್ತಿರುವ ಸಂದರ್ಭ ಅದಕ್ಕೆ ಪೂರಕವಾದ ಮಾಹಿತಿಗಾಗಿ ಪುಸ್ತಕವನ್ನೋ ಅಥವಾ ಪತ್ರಿಕೆಯನ್ನೋ ಓದುವುದು ಅತ್ಯವಶ್ಯಕ. ಇಲ್ಲದೆ ಇದ್ದಲ್ಲಿ ಸಾಹಿತ್ಯಕ್ಕೊಂದು ಹೊಸ ಆಯಾಮ ದೊರಕಿಸಿ ಕೊಡುವ ಭರಾಟೆಯಲ್ಲಿ ಮುನ್ನುಗ್ಗುವಾಗ ನಮ್ಮಿಂದಾಗುವ ತಪ್ಪುಗಳಿಂದ ಸಾಹಿತ್ಯ ಕ್ಷೇತ್ರ ವಿರೂಪಗೊಳ್ಳುವುದು ಸರಿಯಲ್ಲ. ಅದರೊಂದಿಗೆ ಬರವಣಿಗೆ ಕುರಿತು ಒಂದು ಸಣ್ಣ ನಿರ್ಲಿಪ್ತತೆ ಬರೆಯುವಾತನಿಗೆ ಇರುವುದು ಕೂಡಾ ಅತ್ಯಂತ ಅಗತ್ಯವಾಗಿದೆ. ಏಕೆಂದರೆ ನಿರೀಕ್ಷೆಗಳು ಹುಸಿಯಾದಾಗ ಬರಹಗಾರನ ಆತ್ಮವಿಶ್ವಾಸ ಕುಸಿದು ಅದರಿಂದ ಅವನ ಬರವಣಿಗೆಯ ದಾರಿ ತಪ್ಪುವ ಅಪಾಯವಿದೆ. ಈ ಎಲ್ಲ ವಿಚಾರಗಳನ್ನು  ಜೊತೆಯಲ್ಲಿಟ್ಟುಕೊಂಡೇ ನಾನು 'ಸಮಾಚಾರ' ಪತ್ರಿಕೆಗೆ ಲೇಖನಗಳನ್ನು ಬರೆಯುತ್ತಿರುವುದು.
     ಬರವಣಿಗೆ ಅದು ನನ್ನ ವೃತ್ತಿಯಲ್ಲ. ಬರವಣಿಗೆಯಿಂದಲೇ ಕಟ್ಟಿಕೊಂಡ ಬದುಕೂ ನನ್ನದಲ್ಲ. ಬರೆಯಲೇ ಬೇಕೆನ್ನುವ ತೀವೃತರವಾದ ಬೇಗುದಿಯೂ ನನಗಿಲ್ಲ. ಆದರೆ ಇವುಗಳೆಲ್ಲವನ್ನೂ ಮೀರಿದ ಒಂದು ಖುಷಿ ಬರವಣಿಗೆ ನನಗೆ ನೀಡಿದೆ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

    

Thursday, December 6, 2012

ಪ್ರಾಮಾಣಿಕರ ಸ್ಮರಣೆಯೂ ಒಂದು ಪ್ರಾಮಾಣಿಕತೆ

     ಸಾಹಿತಿಗಳ, ಕಲಾವಿದರ, ರಾಜಕಾರಣಿಗಳ, ಮಠಾಧಿಪತಿಗಳ ಇಲ್ಲವೆ ಖ್ಯಾತನಾಮರ ಕುರಿತು ಅಭಿನಂದನಾ ಗ್ರಂಥಗಳನ್ನು ಪ್ರಕಟಿಸುವುದು ಸಾಮಾನ್ಯ ಸಂಗತಿ. ಅದರಲ್ಲೂ ಅಂಥ ವ್ಯಕ್ತಿಗಳು ಬದುಕಿರುವಾಗಲೇ ಈ ಅಭಿನಂದನಾ ಗ್ರಂಥಗಳನ್ನು ಸಮರ್ಪಿಸುವುದುಂಟು. ಅಭಿನಂದನಾ ಗ್ರಂಥಗಳ ಪ್ರಕಟಣೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಬರೆಯುವ ಉಮೇದಿ ಮತ್ತು ಸ್ವಹಿತಾಸಕ್ತಿಯ ಪರಿಣಾಮ ಅಭಿನಂದನೆಗೆ ಪಾತ್ರವಾಗುವ ವ್ಯಕ್ತಿತ್ವದ ಲೋಪದೊಷಗಳೆಲ್ಲ ಗೌಣವಾಗುತ್ತಿವೆ. ಒಂದರ್ಥದಲ್ಲಿ ಅಪಾತ್ರರೂ ಅಭಿನಂದನೆಗೆ ಪಾತ್ರರಾಗುತ್ತಿರುವುದು ಅಭಿನಂದನಾ ಗ್ರಂಥಗಳ ಪ್ರಾಮುಖ್ಯತೆಯನ್ನೇ ಕಡಿಮೆ ಮಾಡುತ್ತಿದೆ. ಹೊಗಳುವವರ ವೈಯಕ್ತಿಕ ಹಿತಾಸಕ್ತಿ, ಹೊಗಳಿಸಿಕೊಳ್ಳುವವರ ಸ್ವಕುಚ ಮರ್ಧನದ ನಡುವೆಯೂ ಅಲ್ಲಲ್ಲಿ ಅಪರೂಪದ ಅಭಿನಂದನಾ ಗ್ರಂಥಗಳು ಪ್ರಕಟವಾಗುತ್ತಿರುವುದು ಕನ್ನಡ ಸಾಹಿತ್ಯ ಲೋಕಕ್ಕೆ ಸಧ್ಯದ ಮಟ್ಟಿಗೆ ನೆಮ್ಮದಿಯ ಸಂಗತಿ.
        ಬೆಳಗಾಂವಿಯ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ ಒಂದು ಮಹತ್ವದ ಅಭಿನಂದನಾ ಗ್ರಂಥವನ್ನು ಪ್ರಕಟಿಸುವ ಮೂಲಕ ಮೆಚ್ಚುವಂತಹ ಕೆಲಸ ಮಾಡಿದೆ. ಈ ಸಂಸ್ಥೆ ಪ್ರಕಟಿಸಿ ಹೊರತಂದ 'ಸೌಜನ್ಯ' ಹೆಸರಿನ ಅಭಿನಂದನಾ ಗ್ರಂಥ ಎರಡು ಕಾರಣಗಳಿಂದ ವಿಶಿಷ್ಟವಾದದ್ದು. ಒಂದು 'ಸೌಜನ್ಯ' ಅಭಿನಂದನಾ ಗ್ರಂಥದ ಕಥಾ ನಾಯಕ ಕೆ.ಎಲ್.ಇ ಸಂಸ್ಥೆಯಲ್ಲಿ ಒಬ್ಬ ಸಾಮಾನ್ಯ ಕಾರಕೂನನಾಗಿ ಸೇವೆ ಸಲ್ಲಿಸಿದ ಸರಳಾತಿ ಸರಳ ವ್ಯಕ್ತಿ. ಇನ್ನೊಂದು 2006ರಲ್ಲಿ ಈ ಅಭಿನಂದನಾ ಗ್ರಂಥ ಪ್ರಕಟವಾಗುವ ವೇಳೆಗಾಗಲೇ ಆ ಕೃತಿಯ ನಾಯಕ ಕಾಲವಾಗಿ ಎರಡು ವರ್ಷಗಳಾಗಿದ್ದವು. ಮೇಲಿನ ಎರಡು ಕಾರಣಗಳಿಂದ ಪುಸ್ತಕ ವಿಶಿಷ್ಟ ಎಂದೆನಿಸಿಕೊಳ್ಳುತ್ತದೆ.
       'ಸೌಜನ್ಯ' ಪುಸ್ತಕದ ಹೆಸರೇ ಹೇಳುವಂತೆ ಇದು ಅತ್ಯಂತ ಸೌಜನ್ಯಪೂರ್ಣ ವ್ಯಕ್ತಿತ್ವದ ಬದುಕಿನ ವಿವಿಧ ಮಗ್ಗಲುಗಳ ಪರಿಚಯಾತ್ಮಕ ಕೃತಿ. ಈ ಸಂಸ್ಮರಣ ಗ್ರಂಥದ ನಾಯಕ ಕೆ.ಎಲ್.ಇ ಸಂಸ್ಥೆಯಲ್ಲಿ ತಮ್ಮ ಬದುಕಿನ ಕೊನೆಯ ದಿನದವರೆಗೂ ನಿಸ್ವಾರ್ಥ ಸೇವೆ ಸಲ್ಲಿಸಿದ ಶ್ರೀ ಶಿವಶಂಕರ ಭೋಜ. ಕಾರಕೂನನಾಗಿ, ಅಧೀಕ್ಷಕರಾಗಿ ಕರ್ನಾಟಕದ ಖ್ಯಾತ ಶಿಕ್ಷಣ ಸಂಸ್ಥೆಯಲ್ಲಿ ಸುದೀರ್ಘ ಐದು ದಶಕಗಳ ಸೇವೆ ಸಲ್ಲಿಸಿ ಪ್ರಾಮಾಣಿಕ ಮತ್ತು ನಿಸ್ವಾರ್ಥ ಸೇವೆಗೊಂದು ವಿಶಿಷ್ಟ ಮುನ್ನುಡಿ ಬರೆದ ಶ್ರೀ ಶಿವಶಂಕರ ಭೋಜ ಅವರ ಕುರಿತು ವಿಸ್ತೃತ ಮಾಹಿತಿ ಪುಸ್ತಕದಲ್ಲಿದೆ. ಅವರ ಸೇವೆಯನ್ನು ಸಂಸ್ಥೆಯ ಕಾರ್ಯಾಧ್ಯಕ್ಷರಾದಿಯಾಗಿ ಸಹೋದ್ಯೋಗಿಗಳು, ಕುಟುಂಬದವರು, ಬಂಧುಗಳು ಮತ್ತು ಮಿತ್ರರೆಲ್ಲ ಸ್ಮರಿಸಿ ಕೊಂಡಿರುವರು.
        1952ರಲ್ಲಿ ಒಬ್ಬ ಕಾರಕೂನನಾಗಿ ಕೆ.ಎಲ್.ಇ ಸಂಸ್ಥೆಯನ್ನು ಸೇರಿದ ಶಿವಶಂಕರ ಭೋಜ ಅವರು 2004ರ ವರೆಗೆ ಅಂದರೆ ತಮ್ಮ ಬದುಕಿನ ಕೊನೆಯ ದಿನದವರೆಗೆ ಅಖಂಡ ಐದು ದಶಕಗಳ ಕಾಲ ಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರು. 1990ರಲ್ಲಿ ಅವರು ಸೇವೆಯಿಂದ ನಿವೃತ್ತರಾದರೂ ಅವರ ಪ್ರಾಮಾಣಿಕ ಸೇವೆ ಮತ್ತು ಅಗತ್ಯತೆಯನ್ನು ಅರಿತು ಸಂಸ್ಥೆ ಶ್ರೀಯುತರ ಸೇವಾವಧಿಯನ್ನು ವಿಸ್ತರಿಸುತ್ತಲೇ ಹೋಯಿತು. ಈ ಐದು ದಶಕಗಳ ಅವಧಿಯಲ್ಲಿ ಶ್ರೀ ಭೋಜ ಅವರು ಕೆ.ಎಲ್.ಇ ಸಂಸ್ಥೆಯ ಅವಿಭಾಜ್ಯ ಅಂಗವಾಗಿ ಬೆಳೆದರು. ಆಡಳಿತ ಮಂಡಳಿಗೆ ನಂಬಿಗಸ್ಥರಾಗಿ, ಸಹೋದ್ಯೋಗಿಗಳಿಗೆ ಸಲಹೆಗಾರರಾಗಿ, ಹೊಸದಾಗಿ ಕೆಲಸಕ್ಕೆ ಸೇರುವ ಯುವ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶಕರಾಗಿ ಅವರು ಸಂಸ್ಥೆಯಲ್ಲಿ ಬೆಳೆದು ನಿಂತ ಪರಿ ಇತರರಿಗೊಂದು ಶ್ರೇಷ್ಠ ಉದಾಹರಣೆ. ಬದುಕು ರೂಪಿಸಿದ ಸಂಸ್ಥೆಯ ಮೇಲಿನ ಅಭಿಮಾನವನ್ನು ಅವರು ತಮ್ಮ ಕೊನೆಯ ಉಸಿರಿರುವವರೆಗೂ ಕಾಪಿಟ್ಟುಕೊಂಡು ಬಂದದ್ದು ಸಂಸ್ಥೆಯ ಮೇಲೆ ಅವರಿಗಿದ್ದ ನಿರ್ವಾಜ್ಯ ಪ್ರೀತಿಗೆ ಸಾಕ್ಷಿ. ಅವರ ಕುರಿತಾದ ಲೇಖನಗಳನ್ನು ಓದುತ್ತ ಹೋದಂತೆಲ್ಲ ವ್ಯಕ್ತಿಯೊಬ್ಬ ಇಷ್ಟೊಂದು ನಿಸ್ವಾರ್ಥದಿಂದ ಅದು ಪ್ರಾಮಾಣಿಕ ಗುಣಗಳೊಂದಿಗೆ ಸರಳವಾಗಿ ಬದುಕಲು ಅದು ಹೇಗೆ ಸಾಧ್ಯ ಎನ್ನುವ ಅಚ್ಚರಿಯೊಂದು ತಟ್ಟನೆ ಬಂದು ಕೈಹಿಡಿಯುತ್ತದೆ. ಸಂಸ್ಥೆಯ ಕಾರ್ಯಾಧ್ಯಕ್ಷರು ಶ್ರೀ ಭೋಜ ಅವರನ್ನು ನಂಬಿಗಸ್ಥ ಎಂದು ಕರೆಯುತ್ತಾರೆ. ಕೆಲವರು ನಿಷ್ಟಾವಂತ ಎಂದು ಹೊಗಳುತ್ತಾರೆ. ಕಾಯಕ ನಿಷ್ಠ  ಎಂದು ಹಲವರು ಬರೆಯುತ್ತಾರೆ. ಮೌನ ತಪಸ್ವಿ, ಆದರ್ಶ ಪ್ರಾಯರು, ಸೌಜನ್ಯ ಮೂರ್ತಿ, ಸಮರ್ಪಿತರು, ಮಾರ್ಗದರ್ಶಿ, ಕಾಯಕಯೋಗಿ, ಅನುಕರಣಿಯರು, ತುಂಬಿದ ಕೊಡ ಎನ್ನುವುದು ಅನೇಕರ ಅಭಿಪ್ರಾಯ.
        ಈ ನಡುವೆ ಶ್ರೀ ಶಿವಶಂಕರ ಭೋಜ ಅವರ ವೈಯಕ್ತಿಕ ಬದುಕನ್ನು ಓದುತ್ತಿದ್ದಂತೆ ನಮಗರಿವಿಲ್ಲದೆ ಕಣ್ಣುಗಳು ಹನಿಗೂಡುತ್ತವೆ. ಅವರ ಪತ್ನಿ 1977ರಲ್ಲಿ ನಿಧನರಾದಾಗ ಕೊನೆಯ ಮಗು ಆಗಿನ್ನೂ ಎಂಟು ತಿಂಗಳ ಹಸುಗೂಸು. ಸಂಸ್ಥೆಯ ಕೆಲಸದೊಂದಿಗೆ ಮೂರು ಮಕ್ಕಳ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿ ಮಕ್ಕಳ ಪಾಲಿಗೆ ಮಾತೃ ಹೃದಯಿ ಎನಿಸಿದರು. ಕೌಟಂಬಿಕ ಬದುಕಿನಲ್ಲಿ ಎದುರಾದ ಸಂಕಷ್ಟಗಳನ್ನೆಲ್ಲ ಸಮಚಿತ್ತದಿಂದ ಎದುರಿಸಿ ಮಕ್ಕಳಿಗೆ ವಾತ್ಸಲ್ಯ ಮೂರ್ತಿಯಾಗಿ, ಮೊಮ್ಮಕ್ಕಳಿಗೆ ಪ್ರೀತಿಯ ತಾತನಾಗಿ, ಬಂಧುಗಳಿಗೆ ಮಧುರ ಬಾಂಧವ್ಯದ ವ್ಯಕ್ತಿಯಾಗಿ ಒಂದು ಆದರ್ಶದ ಬದುಕನ್ನು ಬಾಳಿದ ಶ್ರೀ ಭೋಜ ಅವರ ವ್ಯಕ್ತಿತ್ವ ನಿಜಕ್ಕೂ ಸ್ಮರಣೀಯ. ನಿವೃತ್ತಿ ಇಲ್ಲದೆ ದುಡಿದ ಶ್ರೀಯುತರು ನಿಧನರಾದದ್ದು ರವಿವಾರದ ರಜಾ ದಿನದಂದು ಇದು ಕಾಕತಾಳಿಯವಾದರೂ ಸಂಸ್ಥೆಯೊಂದಿಗಿನ ಅವರ ಅವಿನಾಭಾವ ಸಂಬಂಧಕ್ಕೆ ನಿದರ್ಶನ. ನಿಧನರಾಗುವ ಹಿಂದಿನ ದಿನ ರಾತ್ರಿ ಎಂಟು ಗಂಟೆವರೆಗೂ ತಮ್ಮ ಪಾಲಿನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಬದುಕಿನ ಕೊನೆಯ ಉಸಿರಿನ ತನಕ ಕರ್ತವ್ಯ ಪ್ರಜ್ಞೆ ಮೆರೆದರು. ಆಡದೆ ಮಾಡಿದವರು ಎಂಬ ಮಾತಿಗೆ ಅನ್ವರ್ಥವಾಗಿ ಬದುಕಿ ಬಾಳಿದ ಶ್ರೀ ಭೋಜ ಅವರ ವೈಯಕ್ತಿಕ ಮತ್ತು ವೃತ್ತಿ ಬದುಕು ಇತರರಿಗೆ ಸದಾ ಕಾಲ ಮಾದರಿ.
          ಪ್ರಾಮಾಣಿಕರ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವ ಈ ದಿನಗಳಲ್ಲಿ ಇರುವ ಅತ್ಯಲ್ಪ ಸಂಖ್ಯೆಯ ಪ್ರಾಮಾಣಿಕರನ್ನು ಗುರುತಿಸಿ ಗೌರವಿಸುವಂಥ ಕೆಲಸಗಳಾಬೇಕು. ತನ್ನ ಸಂಸ್ಥೆಯಲ್ಲಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ ಒಬ್ಬ ಕರ್ತವ್ಯ ನಿಷ್ಠ ನೌಕರನನ್ನು ಗುರುತಿಸಿ ಅಭಿನಂದನಾ ಗ್ರಂಥ ಪ್ರಕಟಿಸಿರುವ ಕೆ.ಎಲ್.ಇ ಸಂಸ್ಥೆಯ ಕಾರ್ಯ ಶ್ಲಾಘನೀಯ. ಅಷ್ಟರಮಟ್ಟಿಗೆ ಸಂಸ್ಥೆ ಒಂದು ಉತ್ತಮ ಕೆಲಸ ಮಾಡಿದೆ. ಜೊತೆಗೆ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಬೆಳಗಾಂವಿ ಜಿಲ್ಲೆಯಲ್ಲಿ ಮರಾಠಿಗರ ನಿರಂತರ ಉಪಟಳಗಳ ನಡುವೆಯೂ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಕೆ.ಎಲ್.ಇ ಸಂಸ್ಥೆ ಶ್ರಮಿಸುತ್ತಿದೆ. ಇಂಥ ಸೃಜನಾತ್ಮಕ ಚಟುವಟಿಕೆಗಳೇ ಸಂಸ್ಥೆಯೊಂದರ ಜೀವಂತಿಕೆಯ ಲಕ್ಷಣಗಳು.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

Wednesday, November 28, 2012

ದೀಪಾವಳಿ ಅಂದು-ಇಂದು

       

       'ದೀಪಾವಳಿ ಹಬ್ಬಕ್ಕ ಟಿವ್ಯಾಗ ಹೊಸ ಸಿನಿಮಾ ಹಾಕ್ತಾರ. ಮೂರ ದಿನಾ ಸಿನಿಮಾ ನೋಡ್ಕೊತ ಫುಲ್ ಎಂಜಾಯ್' ಎಂದು ಮಗಳು ಮೂರು ಮೂರು ಸಲ ತಿವಿದು ಹೇಳಿದಾಗಲೇ ಗೊತ್ತಾಯ್ತು ದೀಪಾವಳಿ ಹಬ್ಬಕ್ಕೆ ಇನ್ನು ಎರಡೇ ದಿನ ಬಾಕಿ ಅಂತ (ಈ ಲೇಖನ ವಿಜಯ ಕರ್ನಾಟಕದ ಬಾಗಲಕೋಟೆ ಪುರವಣಿಗೆ ಬರೆಯುತ್ತಿರುವ ಹೊತ್ತು ದೀಪಾವಳಿ ಹಬ್ಬ ಆಗಿರಲಿಲ್ಲ ಮತ್ತು ಮಗಳು ಈ ಸಾರಿ ಹಬ್ಬಕ್ಕೆಂದು ತಾತನ ಮನೆಗೆ ಹೋಗಿ ಬರ್ಜರಿಯಾಗಿ ಆಚರಿಸಿದ್ದಾಳೆ). ಇವತ್ತಿನ ಮಕ್ಕಳ ದೀಪಾವಳಿ ಹಬ್ಬ ಕೇವಲ ಟಿ.ವಿ ಕಾರ್ಯಕ್ರಮಗಳಿಗೆ ಸೀಮಿತವಾಗುತ್ತಿರುವುದು ನೆನಪಾಗಿ ಬೇಸರವಾಯಿತು. ಈ ದಿನಗಳಲ್ಲಿ ನಾವುಗಳೆಲ್ಲ ಹಬ್ಬಗಳನ್ನು ಆಚರಿಸುವುದಕ್ಕಿಂತ ಅವುಗಳನ್ನು ಟಿ.ವಿ ಚಾನೆಲ್ ಗಳಲ್ಲಿ ನೋಡಿ ಸಂಭ್ರಮಿಸುತ್ತಿದ್ದೇವೆ. ಈ ಹಬ್ಬ ಹರಿದಿನಗಳಂದು ಮನೆಯ ಸದಸ್ಯರೆಲ್ಲ ಟಿ.ವಿ ಎದುರು ಯಾವಾಗ ಕುಳಿತೆವೋ ಎಂದು ಕಾತರಿಸುತ್ತಾರೆ. ನಮ್ಮ ಸಂಪ್ರದಾಯ, ಆಚರಣೆಗಳೆಲ್ಲ ಟಿವಿ ಎನ್ನುವ ಮೂರ್ಖ ಪೆಟ್ಟಿಗೆಯೊಳಗೆ ಬಂಧಿಸಲ್ಪಟ್ಟಿರುವುದು ಸಧ್ಯದ ಮಟ್ಟಿಗೆ ಸಾಂಸ್ಕೃತಿಕ ಲೋಕದ ಬಹುದೊಡ್ಡ ತಳಮಳ.
           ಇನ್ನು ದೀಪಾವಳಿ ಹಬ್ಬದ ವಿಷಯಕ್ಕೆ ಬಂದರೆ ಅದು ನಾವು ಆಚರಿಸುವ ಹಬ್ಬಗಳಲ್ಲೇ ಬಹುದೊಡ್ಡ ಹಬ್ಬ. ಹಿಂದೆ ನಾವು ಚಿಕ್ಕವರಿದ್ದಾಗ ದೀಪಾವಳಿ ಹಬ್ಬ ಇನ್ನೂ ಎಂಟು ದಿನಗಳಿವೆ ಎನ್ನುವಾಗಲೇ ನಮ್ಮ ಸಡಗರಕ್ಕೆ ಎಲ್ಲೆ ಇರುತ್ತಿರಲಿಲ್ಲ. ಮನೆಯಲ್ಲಿ ಅಮ್ಮ, ಅಜ್ಜಿ, ಅಕ್ಕ ಹಬ್ಬಕಾಗಿ  ತಯ್ಯಾರಿಸುವ  ಉಂಡಿ, ಚೆಕ್ಕುಲಿ, ಗಿಲಗಂಚಿ, ಚುಡುವಾ, ಸೇವು, ಜಾಮೂನು, ಅನಾರಸ ಹೀಗೆ ವಿವಿಧ ಖಾದ್ಯಗಳು  ಬಾಯಲ್ಲಿ ನೀರೂರಿಸುತ್ತಿದ್ದವು. ತಿಂಡಿಯ ಆಸೆಗಾಗಿ ನಾವು ಮಕ್ಕಳೆಲ್ಲ ಅಡುಗೆ ಮನೆಯೊಳಗೆ ಹತ್ತಾರು ಸಲ ಹೋಗಿ ಬರುವುದು ಮತ್ತು ಅಮ್ಮನಿಂದ ಬಯ್ಯಿಸಿಕೊಳ್ಳುವುದು ನಡೆಯುತ್ತಿತ್ತು. ನಮ್ಮ ಮನದ ಇಂಗಿತ ಅರಿತ ಅಜ್ಜಿ ಅಮ್ಮನ ಕಣ್ತಪ್ಪಿಸಿ ಮನೆಯ ಹಿತ್ತಲಿಗೆ ನಮ್ಮನ್ನು ಕರೆದೊಯ್ದು ಒಂದಿಷ್ಟು ತಿಂಡಿ ತಿನ್ನಲು ಕೊಡುತ್ತಿದ್ದಳು. ತಿಂಡಿಗಳೆಲ್ಲ ಸಿದ್ಧವಾದ ನಂತರ ನಮ್ಮ ಕೈಗೆ ನಿಲುಕದಂತೆ ದೊಡ್ಡ ಡಬ್ಬಿಗಳಲ್ಲಿ ತುಂಬಿ ಅಟ್ಟದ ಮೇಲೆ ಒಯ್ದಿಡುತ್ತಿದ್ದರು. ನಾವುಗಳೆಲ್ಲ ಅಟ್ಟದ ಮೇಲಿನ ತಿಂಡಿಗಳಿಂದ ತುಂಬಿದ ಡಬ್ಬಿಗಳನ್ನು ಆಸೆಯಿಂದ ನೋಡುತ್ತ ದೀಪಾವಳಿ ಹಬ್ಬಕ್ಕಾಗಿ ಕಾಯುತ್ತಿದ್ದೇವು. ಒಮ್ಮೊಮ್ಮೆ ಮನೆಯಲ್ಲಿ ಯಾರೂ ಇಲ್ಲದಿದ್ದ ಸಂದರ್ಭ ಅಟ್ಟ ಹತ್ತಿ ತಿಂಡಿ ತಿನ್ನುವ ಸಾಹಸ ಮಾಡುತ್ತಿದ್ದದುಂಟು.
            ದೀಪಾವಳಿ ಹಬ್ಬದ ಹಿಂದಿನ ದಿನ ಅಪ್ಪ ಪೇಟೆಯಿಂದ ನಮಗೆಲ್ಲ ಹೊಸ ಬಟ್ಟೆಗಳನ್ನು ಮತ್ತು ಹಬ್ಬಕ್ಕಾಗಿ ಪಟಾಕಿಗಳನ್ನು ತರುತ್ತಿದ್ದ. ಹೊಸ ಬಟ್ಟೆಗಳನ್ನು ಪದೆ ಪದೆ ಮುಟ್ಟಿ ನೋಡುವಾಗಿನ ಸಂಭ್ರಮ ಮತ್ತು ಸಡಗರ ವರ್ಣನಾತೀತ. ನರಕಚತುರ್ದಶಿಯಂದು ನಸುಕಿನಲ್ಲೇ ಏಳಬೇಕಿರುವುದರಿಂದ ಹಿಂದಿನ ರಾತ್ರಿ ನಮಗೆಲ್ಲ ಬೇಗನೆ ಊಟ ಮಾಡಿಸಿ ಮಲಗಿಸುತ್ತಿದ್ದರು. ಪಟಾಕಿ ಸಿಡಿಸುವ ಮತ್ತು ಹೊಸ ಬಟ್ಟೆ ಧರಿಸುವ ಕನಸುಗಳೊಂದಿಗೆ ನಾವೆಲ್ಲ ನಿದ್ರೆಗೆ ಜಾರುತ್ತಿದ್ದೇವು. ನರಕ ಚತುರ್ದಶಿಯಂದು ಬೆಳಿಗ್ಗೆ ನಾಲ್ಕು ಗಂಟೆಗೇ ಆರತಿ ಬೆಳಗುವ ಸಂಪ್ರದಾಯವಿತ್ತು. ಕೃಷ್ಣ ನರಕಾಸುರನನ್ನು ಕೊಂದು ಬಂದಿದ್ದರ ಪ್ರತೀಕವಾಗಿ ಎಲ್ಲ ಮನೆಗಳಲ್ಲಿ ವಿಶೇಷವಾಗಿ ಮಕ್ಕಳನ್ನು ಸಾಲಾಗಿ ಕೂಡಿಸಿ ಹೆಣ್ಣು ಮಕ್ಕಳು ಆರತಿ ಮಾಡುತ್ತಿದ್ದರು. ಈ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ನಾವೆಲ್ಲ ಪಟಾಕಿ ಸಿಡಿಸಲು ಅಂಗಳಕ್ಕೆ ಲಗ್ಗೆ ಇಡುತ್ತಿದ್ದೇವು. ಒಂದಾದ ಮೇಲೊಂದರಂತೆ ಪಟಾಕಿಗಳು ಸಿಡಿದು ಆಕಾಶದಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸುತ್ತಿದ್ದವು. ಇಡೀ ಊರು ಪಟಾಕಿಗಳ ಸದ್ದಿನಲ್ಲಿ ಮುಳುಗೆಳುತ್ತಿತ್ತು.
          ಬೆಳಕು ಹರಿಯುವವರೆಗೂ ಪಟಾಕಿಗಳ ಸಂಭ್ರಮದಲ್ಲಿ ಮೈಮರೆತು ಕುಣಿಯುತ್ತಿದ್ದ ನಮ್ಮನ್ನೆಲ್ಲ ಅಮ್ಮ ಬಲವಂತವಾಗಿ ಕರೆದೊಯ್ದು ಬಚ್ಚಲ ಮನೆಯಲ್ಲಿ ಕೂಡಿಸುತ್ತಿದ್ದಳು. ಮೈಗೆಲ್ಲ ಎಣ್ಣೆ ಸವರಿದ ಬಿಸಿ ನೀರಿನ ಸ್ನಾನ ಮೈಗೆ ಹಿತವೆನಿಸುತ್ತಿತ್ತು. ಸ್ನಾನ ಮಾಡಿ ಹೊಸಬಟ್ಟೆ ತೊಟ್ಟು ಫಲಹಾರಕ್ಕೆ ಅಣಿಯಾಗುತ್ತಿದ್ದೇವು. ಮಕ್ಕಳು, ಗಂಡಸರು, ನೆರೆಹೊರೆಯವರು ಮತ್ತು ಆಳುಕಾಳುಗಳು ಸೇರಿ ಹದಿನೈದಿಪ್ಪತ್ತು ಜನ ಇರುತ್ತಿದ್ದರು. ಮನೆಯ ಪಡಸಾಲೆಯಲ್ಲಿ ಎಲ್ಲರೂ ಸಾಲಾಗಿ ಕುಳಿತ ನಂತರ ಅಕ್ಕ ನಮ್ಮೆದುರು ಉದ್ದಕ್ಕೂ ಬಿಡಿಸುತ್ತಿದ್ದ ಬಣ್ಣದ ರಂಗೋಲಿ ಚಿತ್ತಾಕರ್ಷಕವಾಗಿರುತ್ತಿತ್ತು. ಪ್ರತಿಯೊಬ್ಬರೆದುರು ಪುಟ್ಟ ಮಗುವಿನ ಹಾಸಿಗೆ ಗಾತ್ರದ ಬಾಳೆ ಎಲೆ. ಎಳೆಯ ಸುತ್ತಲೂ ಉಂಡಿ, ಚೆಕ್ಕುಲಿ, ಗಿಲಗಂಚಿ, ಅನಾರಸ, ಜಾಮೂನುಗಳಿದ್ದರೆ ಮಧ್ಯದಲ್ಲಿ ಹಬೆಯಾಡುವ ಬಿಸಿ ಉಪಿಟ್ಟು ಅದರ ಮೇಲೆ ಕೆನೆ ಮೊಸರು. ಎಲೆಯ ಎಡಭಾಗದಲ್ಲಿ ರಸಬಾಳೆ ಹಣ್ಣು. ಬಾಯಲ್ಲಿ ನೀರೂರಿಸುವ ವಿವಿಧ ಭಕ್ಷಗಳ ಜೊತೆಗೆ ಅಮ್ಮ ಮತ್ತು ಅಜ್ಜಿಯ ಅಂತ:ಕರಣದ ಒತ್ತಾಯದಿಂದಾಗಿ ತಿಂಡಿಗಳೆಲ್ಲ ಒಂದೊಂದಾಗಿ ಹೊಟ್ಟೆಗಿಳಿಯುತ್ತಿದ್ದವು. ಆ ದಿನ ಊಟದ ನೆನಪೇ ಆಗದಂತೆ ಫಲಹಾರದಿಂದ ಹೊಟ್ಟೆ ಭಾರವಾಗುತ್ತಿತ್ತು. ರಾತ್ರಿಯಂತೂ ಊರಿನ ಎಲ್ಲ ಮನೆಗಳಲ್ಲಿ ಸ್ಪರ್ಧೆಯಂತೆ ಪಟಾಕಿಗಳನ್ನು ಸಿಡಿಸಿ ಬಾನಂಗಳದಲ್ಲಿ ಬಣ್ಣದ ಚಿತ್ತಾರ ಮೂಡಿಸುತ್ತಿದ್ದರು.
       ದೀಪಾವಳಿ ಹಬ್ಬದ ಮೂರನೆ ದಿನವಾದ ಬಲಿಪಾಡ್ಯಮಿಯದು ಇನ್ನೊಂದು ವಿಶೇಷ ಆ ದಿನ ನಸುಕಿನ ನಾಲ್ಕು ಗಂಟೆಗೇ ಅಗಸರ ಚೆಂದಪ್ಪ ನಮಗೆಲ್ಲ ಆರತಿ ಬೆಳಗಲು ಬರುತ್ತಿದ್ದ. ತೆಲೆಯ ಮೇಲೆ ಕಂಬಳಿ ಹೊದ್ದು ಕೈಯಲ್ಲಿ ಆರತಿ ತಟ್ಟೆ ಹಿಡಿದು ಬರುವ ಚೆಂದಪ್ಪ ದೇವಧೂತನಂತೆ ಕಾಣಿಸುತ್ತಿದ. ಮನೆಯವರೆಲ್ಲರೂ ಸಾಲಾಗಿ  ಕುಳಿತು ಅವನಿಂದ ಆರತಿ ಮಾಡಿಸಿಕೊಳ್ಳುತ್ತಿದ್ದೇವು. ಮನೆಯ ಹಿರಿಯರು ಅವನ ಆರತಿ ತಟ್ಟೆಗೆ ಒಂದಿಷ್ಟು ಹಣ ಹಾಕುತ್ತಿದ್ದರು. ಆ ದಿನ ಫಲಹಾರದ ಜೊತೆಗೆ ಮಧ್ಯಾಹ್ನದ ಊಟಕ್ಕೆ ವಿಶೇಷ ಅಡುಗೆ ಸಿದ್ಧವಾಗುತ್ತಿತ್ತು. ನೆರೆಹೊರೆಯವರನ್ನೂ ಉಪಹಾರಕ್ಕೆ ಮತ್ತು ಊಟಕ್ಕೆ ಕರೆಯುತ್ತಿದ್ದರು. ಒಂದು ಸೌಹಾರ್ದ ವಾತಾವರಣ ಈ ಹಬ್ಬ ತಂದುಕೊಡುತ್ತಿತ್ತು. ದೀಪಾವಳಿ ಹಬ್ಬದ ಆ ಮೂರು ದಿನಗಳು ಮನೆಯಲ್ಲಿನ ದನಕರುಗಳಿಗೂ ಆರತಿ ಬೆಳಗುತ್ತಿದ್ದುದೊಂದು ವಿಶೇಷ. ಊರಿನ ದನ ಕಾಯುವ ಹುಡುಗರು ಹುಲ್ಲಿನಿಂದ ಆರತಿ ತಟ್ಟೆಯನ್ನು ತಯ್ಯಾರಿಸಿ ಅದರೊಳಗೆ ಮಣ್ಣಿನ ಹಣತೆಯನ್ನಿಟ್ಟುಕೊಂಡು ರಾತ್ರಿ ಮನೆ ಮನೆಗೂ ತೆರಳಿ ದನಕರುಗಳಿಗೆ ಆರತಿ ಬೆಳಗುತ್ತಿದ್ದರು. ಆ ಹುಡುಗರಿಗೆ ಕೆಲವರು ಪಟಾಕಿಗಳನ್ನೋ ಇನ್ನು ಕೆಲವರು ಒಂದೆರಡು ರೂಪಾಯಿಗಳನ್ನೋ ಕೊಡುತ್ತಿದ್ದರು. ದೀಪಾವಳಿ ಹಬ್ಬದ ಆ ಮೂರು ದಿನಗಳ ಸಡಗರ ಸಂಭ್ರಮ ವರ್ಣನಾತೀತ. ಹೊಸ ಬಟ್ಟೆ, ವಿವಿಧ ಭಕ್ಷ ಭೋಜನಗಳು, ತರೇಹವಾರಿ ಪಟಾಕಿಗಳು ಈ ಎಲ್ಲ ಸಂಭ್ರಮಗಳ ನಡುವೆ ಮೂರು ದಿನಗಳು ಕಳೆದು ಹೋದದ್ದೇ ಗೊತ್ತಾಗುತ್ತಿರಲಿಲ್ಲ. ದೀಪಾವಳಿ ಮತ್ತೆ ಯಾವಾಗ ಬರುತ್ತದೋ ಎನ್ನುವ ಬೇಸರದಿಂದಲೇ ನಾವು ಮಕ್ಕಳೆಲ್ಲ ದೀಪಾವಳಿ ಹಬ್ಬಕ್ಕೆ ವಿದಾಯ ಹೇಳುತ್ತಿದ್ದೇವು.

ಇಂದು 

       'ರ್ರೀ ಸುಜಾತಾ ಈ ಸಲದ ದಿಪಾವಳಿಗಿ ಟಿವ್ಯಾಗ ಮುಂಜಾನಿ ಎಂಟರಿಂದ ರಾತ್ರಿ ಹತ್ತರತನಕ ಸ್ಪೆಷಲ್ ಪ್ರೋಗ್ರಾಮ್ ಹಾಕ್ಲಿಕತ್ತಾರ. ನಾನಂತೂ ಹನ್ನೊಂದರೊಳಗ ಹಬ್ಬದ ಕೆಲ್ಸಾ ಎಲ್ಲಾ ಮುಗಿಸಿ ಟಿವಿ ಎದರ ಕೂಡ್ತಿನಿ ನೋಡ್ರಿ' ಪಕ್ಕದ ಮನೆ ಸಾವಿತ್ರಮ್ಮ ಹೇಳುತ್ತಿದ್ದರೆ ಇಡೀ ಓಣಿ ಹೆಂಗಸರೆಲ್ಲ ಹಬ್ಬದ ಮೂರು ದಿನಗಳಂದು ಟಿವಿಯಲ್ಲಿ ಏನೇನು ಕಾರ್ಯಕ್ರಮಗಳಿವೆಯಂದು ಚರ್ಚಿಸುತ್ತಿದ್ದರು.  ಹೌದು ಈ ಟಿವಿ ಚಾನೆಲ್ ಗಳಲ್ಲಿ ಮನೋರಂಜನಾ ಕಾರ್ಯಕ್ರಮಗಳ ಹಾವಳಿ ಪ್ರಾರಂಭವಾದ ಮೇಲಂತೂ ಹಬ್ಬಗಳು ತಮ್ಮ ವಿಶೇಷತೆಗಳನ್ನೇ ಕಳೆದು ಕೊಂಡಿವೆ. ಮೂರು ದಿನಗಳ ದೀಪಾವಳಿ ಹಬ್ಬವೂ ಇದರಿಂದ ಹೊರತಾಗಿಲ್ಲ. ಹಬ್ಬಕ್ಕೆಂದು ಮನೆಗಳಲ್ಲಿ ವಿಶೇಷ ತಿಂಡಿಗಳನ್ನು ತಯ್ಯಾರಿಸುವ ಸಂಪ್ರದಾಯ ನಮ್ಮ ಅಮ್ಮಂದಿರ ಕಾಲಕ್ಕೇ ಮುಗಿದು ಹೋಗಿದೆ. ಅಂಗಡಿಗಳಿಂದ ಹಬ್ಬಕ್ಕೆಂದು ಕಟ್ಟಿಸಿಕೊಂಡು ಬರುವ ಕಾಲು ಕೇಜಿ ತಿಂಡಿಯನ್ನೂ ಮಕ್ಕಳು ಮ್ಯಾಗಿ ಮತ್ತು ಪಿಜ್ಜಾದ ಪ್ರಭಾವದಿಂದಾಗಿ ಮೂಸಿಯೂ ನೋಡುತ್ತಿಲ್ಲ. ಹೊಸ ಬಟ್ಟೆ ಹಬ್ಬಕ್ಕೇ ತೊಡಬೇಕೆನ್ನುವ ನಿಯಮವಿಲ್ಲ. ಸಾಲು ಸಾಲು ಮರಗಳನ್ನು ನೆಲಕ್ಕುರುಳಿಸಿ ಪರಿಸರವನ್ನು ಹಾಳುಗೆಡುವುತ್ತಿರುವ ನಾವು ಪರಿಸರ ಮಾಲಿನ್ಯ ಎಂದು ನೆಪವೊಡ್ಡಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿದ್ದೇವೆ. ಹಿಂದೆ ಎಲ್ಲ ದೀಪಾವಳಿ ಹಬ್ಬದಂದು ಪರಿಚಿತರ ಮತ್ತು ಸಂಬಂಧಿಕರ ಮನೆಗಳಿಗೆ ಹೋಗಿ ಫಲಹಾರ ಸೇವಿಸಿ ಪರಸ್ಪರ ಶುಭಾಷಯ ಕೊರುತ್ತಿದ್ದ ದಿನಗಳು ಮರೆಯಾಗಿ ಇಂದು ಪಕ್ಕದ ಮನೆಯವರಿಗೇ ಶುಭಾಷಯವನ್ನು ಎಸ್.ಎಮ್.ಎಸ್ ಮೂಲಕ ತಿಳಿಸುತ್ತಿದ್ದೇವೆ. ಇನ್ನು ನಮ್ಮ ನಂತರದ ಪೀಳಿಗೆಗೆ ದನಕರುಗಳಿಗೆ ದೀಪ ಬೆಳಗುವುದಾಗಲಿ, ನಸುಕಿನಲ್ಲಿ ಚೆಂದಪ್ಪ ಬಂದು ಆರತಿ ಮಾಡುವುದಾಗಲಿ, ಸಗಣಿಯಿಂದ ಪಾಂಡವರ ಮೂರ್ತಿಗಳನ್ನು ಮಾಡಿ ಪೂಜಿಸುವುದಾಗಲಿ ಗೊತ್ತೇ ಇಲ್ಲ. ಅದೆಲ್ಲ ಇತಿಹಾಸದ ಪುಟಗಳನ್ನು ಸೇರಿಕೊಂಡಿದೆ. ದೀಪಾವಳಿ ಅನ್ನುವುದು ಕೂಡಾ ಅದೊಂದು ಸಾಮಾನ್ಯ ದಿನದಂತೆಯೇ ಆಗಿ ಹೋಗಿದೆ. ಈ ಬದಲಾವಣೆಯನ್ನೆಲ್ಲ ಬೆರಗುಗಣ್ಣಿನಿಂದ ಗಮನಿಸುತ್ತಿರುವ 90 ವರ್ಷದ ನನ್ನ ಪರಿಚಯದ ಅಜ್ಜಿಯೊಬ್ಬಳು ಗೊಣಗುತ್ತಾಳೆ 'ನಮ್ಮ ಕಾಲದಾಗ ದೀಪಾವಳಿ ಇನ್ನು ಎಂಟು ದಿನ ಅನ್ನೋವಾಗಲೇ ಹಬ್ಬದ ತಯ್ಯಾರಿ ಶುರು ಆಗ್ತಿತ್ತು. ಮುಂದ ತುಳಸಿ ಲಗ್ನ ಮುಗಿಯೋವರೆಗೂ ಮನೆಯಲ್ಲಿ ದೀಪಾವಳಿ ಹಬ್ಬಾನೆ. ಆದರ ಈಗಿನ ಕಾಲದಾಗ ದೀಪಾವಳಿ ಯಾವಾಗ ಬರ್ತದ ಯಾವಾಗ ಹೋಗ್ತದ ಗೊತ್ತೇ ಆಗಂಗಿಲ್ಲ'.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

Thursday, November 22, 2012

ತುರ್ತು ನಿಗಾಘಟಕದಲ್ಲಿ ಸಾರ್ವಜನಿಕ ಗ್ರಂಥಾಲಯಗಳು

        

        ಇಡೀ ದೇಶದಾದ್ಯಂತ ನವೆಂಬರ್ 14 ರಿಂದ 20ರ ವರೆಗೆಗಿನ ಏಳು ದಿನಗಳ ಅವಧಿ ಸಾರ್ವಜನಿಕ ಗ್ರಂಥಾಲಯಗಳಿಗೆ 'ಗ್ರಂಥಾಲಯ ಸಪ್ತಾಹ' ಆಚರಣೆಯ ಸಂಭ್ರಮದ ಸಮಯ. ಆ ಏಳು ದಿನಗಳಲ್ಲಿ ಪುಸ್ತಕ ಪ್ರದರ್ಶನ, ಚಿಂತಕರಿಂದ  ಉಪನ್ಯಾಸ, ಓದುಗರಿಗೆ ಬಹುಮಾನ ಇತ್ಯಾದಿ ಚಟುವಟಿಕೆಗಳ ಮೂಲಕ ಓದುಗರನ್ನು ಗ್ರಂಥಾಲಯದೆಡೆಗೆ ಸೆಳೆಯುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತದೆ. ಎಲೆಕ್ಟ್ರಾನಿಕ್ ಮಾಧ್ಯಮಗಳ ನಿರಂತರ 24 ತಾಸುಗಳ ಮನೋರಂಜನಾ ಕಾರ್ಯಕ್ರಮ ಮತ್ತು ಸಾರ್ವಜನಿಕ ಗ್ರಂಥಾಲಯಗಳಲ್ಲಿನ ಸಮಸ್ಯೆಗಳ ಕಾರಣ ಓದುವ ಕ್ರಿಯೆಯಂಥ ಸೃಜನಾತ್ಮಕ ಹವ್ಯಾಸ ಕ್ರಮೇಣ ಕ್ಷೀಣಿಸುತ್ತಿದೆ. ಪರಿಣಾಮವಾಗಿ ಸಾರ್ವಜನಿಕ ಗ್ರಂಥಾಲಯಗಳು ಓದುಗರ ಕೊರತೆಯನ್ನು ಅನುಭವಿಸುತ್ತಿವೆ.
        ಕರ್ನಾಟಕದಲ್ಲಿ ಸರ್ ಎಂ.ವಿಶ್ವೇಶ್ವರಯ್ಯನವರು ಕಬ್ಬನ್ ಪಾರ್ಕಿನ ಶೇಷಾದ್ರಿ ಮೆಮೋರಿಯಲ್ ಹಾಲ್ ನಲ್ಲಿ ಪ್ರಥಮ ಬಾರಿಗೆ ಸಾರ್ವಜನಿಕರಿಗಾಗಿ ಗ್ರಂಥಾಲಯವನ್ನು ಸ್ಥಾಪಿಸಿದರು. ಇದು ಸ್ಥಾಪನೆಯಾದದ್ದು 1914 ರಲ್ಲಿ. ಭಾರತ ಸ್ವಾತಂತ್ರ್ಯಾ ನಂತರ ಡಾ.ಎಸ್.ಆರ್.ರಂಗನಾಥನ್ ಮತ್ತು ಅಂದಿನ ಶಿಕ್ಷಣ ಮಂತ್ರಿ ಶ್ರೀ ಎಸ್.ಆರ್.ಕಂಠಿ ಅವರ ಪ್ರಯತ್ನದ ಫಲವಾಗಿ 1965ರಲ್ಲಿ ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಕಾಯ್ದೆ ಜಾರಿಗೆ ಬಂದಿತು. ಸಾರ್ವಜನಿಕ ಗ್ರಂಥಾಲಯಗಳಿಗೆ ಅಗತ್ಯವಾದ ಹಣಕಾಸಿನ ನೆರವು ದೊರೆಯುವಂತಾಗಲು ಈ ಕಾಯ್ದೆಯ ರಚನೆ ಅವಶ್ಯಕವಾಗಿತ್ತು. ಈ ಕಾಯ್ದೆಯನ್ವಯ ಆಸ್ತಿ ತೆರಿಗೆಯಿಂದ ಸಂಗ್ರಹವಾಗುವ ಹಣದಲ್ಲಿ ಪ್ರತಿ ಒಂದು ರೂಪಾಯಿಗೆ ಆರು ಪೈಸೆಗಳಷ್ಟು ಹಣವನ್ನು ಸಾರ್ವಜನಿಕ ಗ್ರಂಥಾಲಯಗಳಿಗಾಗಿ ಮೀಸಲಾಗಿಡಲಾಗುತ್ತದೆ. ಜೊತೆಗೆ ಪ್ರತಿ ಜಿಲ್ಲೆಯಲ್ಲಿನ ಸಾರ್ವಜನಿಕ ಗ್ರಂಥಾಲಯಗಳು ಆಯಾ ಜಿಲ್ಲೆಯಲ್ಲಿ ಸಂಗ್ರಹವಾಗುವ ಭೂಕಂದಾಯದಿಂದ ಪ್ರತಿಶತ 6ರಷ್ಟು ಹಣವನ್ನು ಸರ್ಕಾರದಿಂದ ಅನುದಾನದ ರೂಪದಲ್ಲಿ ಪಡೆಯುತ್ತವೆ. ಕೊಲ್ಕತ್ತಾದ ರಾಜಾ ರಾಮಮೋಹನ ರಾಯ್ ಲೈಬ್ರರಿ ಫೌಂಡೆಶನ್ ನಿಂದಲೂ ಸಾರ್ವಜನಿಕ ಗ್ರಂಥಾಲಯಗಳಿಗೆ ವಿಶೇಷ ಅನುದಾನ ದೊರೆಯುತ್ತಿದೆ. 
       ಸಾರ್ವಜನಿಕ ಗ್ರಂಥಾಲಯವೇ ಒದಗಿಸಿದ ಅಂಕಿಅಂಶಗಳ ಪ್ರಕಾರ ಇಂದು ರಾಜ್ಯದಲ್ಲಿ 27 ಜಿಲ್ಲಾ ಕೇಂದ್ರ ಗ್ರಂಥಾಲಯಗಳು, 19 ನಗರ ಕೇಂದ್ರ ಗ್ರಂಥಾಲಯಗಳು, 16 ಸಂಚಾರಿ ಗ್ರಂಥಾಲಯಗಳು ಮತ್ತು 2751 ಗ್ರಾಮೀಣ ಗ್ರಂಥಾಲಯಗಳಿವೆ. ಇವುಗಳ ಜೊತೆಗೆ ಒಟ್ಟು 451 ಶಾಖಾ ಗ್ರಂಥಾಲಯಗಳು ನಗರ ಮತ್ತು ಜಿಲ್ಲಾ ಕೇಂದ್ರಗಳಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಸಂಖ್ಯಾ ದೃಷ್ಟಿಯಿಂದ ಕರ್ನಾಟಕದಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಸೌಲಭ್ಯ ಸಮೃದ್ಧವಾಗಿದೆ. ಆದರೆ ಗುಣಾತ್ಮಕ ಸೇವೆಯ ದೃಷ್ಟಿಯಿಂದ ನೋಡಿದಾಗ ಇವುಗಳ ಸಾಧನೆ ಶೂನ್ಯ. ಜನಸಾಮಾನ್ಯರ ವಿಶ್ವವಿದ್ಯಾಲಯಗಳೆನ್ನುವ ಘನ ಉದ್ದೇಶದೊಂದಿಗೆ ಅಸ್ತಿತ್ವಕ್ಕೆ ಬಂದ ಸಾರ್ವಜನಿಕ ಗ್ರಂಥಾಲಯಗಳು ಕ್ರಮೇಣ ಸಾರ್ವಜನಿಕರಿಂದಲೇ ದೂರವಾಗುತ್ತಿರುವುದು ವಿಪರ್ಯಾಸ.
      ಸಾರ್ವಜನಿಕ ಗ್ರಂಥಾಲಯಗಳಲ್ಲ ಏನಿದೆ, ಏನಿಲ್ಲ ಎನ್ನುವುದನ್ನು ಪಟ್ಟಿ ಮಾಡುತ್ತ ಹೋದರೆ ಅಲ್ಲಿ ಇಲ್ಲಗಳ ಸಂಖ್ಯೆಯೇ ಬೆಳೆಯುತ್ತ ಹೋಗುತ್ತದೆ. ಸ್ವಂತ ಕಟ್ಟಡ ಇಲ್ಲದಿರುವುದು, ಪುಸ್ತಕಗಳ ಕೊರತೆ, ಸಿಬ್ಬಂದಿ ಸಮಸ್ಯೆ, ಉಪಕರಣಗಳ ಅಭಾವ ಹೀಗೆ ಸಾರ್ವಜನಿಕ ಗ್ರಂಥಾಲಯಗಳು ಸಮಸ್ಯೆಗಳ ಆಗರಗಳಾಗಿವೆ. ಅದೆಷ್ಟೋ ಸಾರ್ವಜನಿಕ ಗ್ರಂಥಾಲಯಗಳಿಗೆ ಸ್ವಂತ ಕಟ್ಟಡಗಳಿಲ್ಲ. ಬಹಳಷ್ಟು ಗ್ರಂಥಾಲಯಗಳು ಸರಿಯಾದ ಗಾಳಿ ಬೆಳಕಿನ ವ್ಯವಸ್ಥೆ ಇಲ್ಲದ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಓದುಗರಿಗೆ ಕುಳಿತು ಓದಲು ಕುರ್ಚಿ, ಟೇಬಲ್ ಗಳ ಕೊರತೆಯಿಂದಾಗಿ ಅನೇಕ ಗ್ರಂಥಾಲಯಗಳಲ್ಲಿ ಓದುಗರು ನಿಂತು ಓದುವ ದೃಶ್ಯ ಸಾಮಾನ್ಯವಾಗಿದೆ. ಪುಸ್ತಕಗಳ ಬಗ್ಗೆ ಹೇಳದಿರುವುದೇ ಒಳಿತು ಏಕೆಂದರೆ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಹರಿದು ಓದಲಾರದಂಥ ಸ್ಥಿತಿಗೆ ಬಂದ ಪುಸ್ತಕಗಳ ಸಂಖ್ಯೆಯೇ ಸಿಂಹಪಾಲು. ಇರುವ ಕೆಲವೇ ಉತ್ತಮ ಪುಸ್ತಕಗಳು ಸಹ ಓದಲು ಉಪಯುಕ್ತವಾಗಿರುವುದಿಲ್ಲ. ಸಾಮಾನ್ಯವಾಗಿ ಸಾರ್ವಜನಿಕ ಗ್ರಂಥಾಲಯಗಳಿಗೆ ಅಧಿಕಾರಿಗಳು ತಮಗೆ ಬೇಕಾದ ಲೇಖಕರಿಂದ ಪುಸ್ತಕಗಳನ್ನು ಬರೆಸಿ ಮತ್ತು ಬೇಕಾದ ಪ್ರಕಾಶಕರಿಂದ ಪುಸ್ತಕಗಳನ್ನು ಪ್ರಕಟಿಸಿ ಖರೀದಿಸುವರೆಂಬ ದೂರಿದೆ. ಅಧಿಕಾರಿಗಳು ಈ ಮಾತನ್ನು ಅಲ್ಲಗಳೆದರೂ ಅಲ್ಲಿನ ಪುಸ್ತಕಗಳನ್ನು ನೋಡಿದಾಗ ಆ ಮಾತು ನಿಜವೆಂದು ತೋರುತ್ತದೆ. ಅಧಿಕಾರಿಗಳು, ಪ್ರಕಾಶಕರು ಮತ್ತು ಲೇಖಕರ ನಡುವೆ ಕಮಿಷನ್ ರೂಪದಲ್ಲಿ ಹಣ ಹರಿದಾಡಿ ಅವರವರ ಜೇಬು ಭರ್ತಿಯಾಗುತ್ತದೆ ಎನ್ನುವ ಮಾತಿಗೆ ಪುಷ್ಟಿ ಕೊಡುವಂತೆ ಅಲ್ಲಿನ ಪುಸ್ತಕಗಳು ಸಾಹಿತ್ಯ ಲೋಕಕ್ಕೆ ಪರಿಚಯವೇ ಇಲ್ಲದ ಲೇಖಕರಿಂದ ಬರೆದವುಗಳಾಗಿರುತ್ತವೆ. ಅಲ್ಲಿರುವ ಪುಸ್ತಕಗಳಲ್ಲಿ ಅಡುಗೆ ಮನೆಯ ಸಾಹಿತ್ಯದ್ದೆ ಅಧಿಕ ಪಾಲು. ಕುವೆಂಪು, ಬೇಂದ್ರೆ, ಕಾರಂತ, ಅಡಿಗರ ಪುಸ್ತಕಗಳನ್ನು ದುರ್ಬೀನು ಹಾಕಿಕೊಂಡು ಹುಡುಕಬೇಕು. ಇನ್ನು ಅಲ್ಲಿ ಕೆಲಸ ಮಾಡುವ ಸಿಬ್ಬಂದಿಯ ವರ್ತನೆ ಆ ದೇವರಿಗೆ ಪ್ರೀತಿ. ಪುಸ್ತಕ ದ್ವೇಷಿಗಳಂತೆ ವರ್ತಿಸುವವರಿಗೆ ಪುಸ್ತಕಗಳ ನಡುವೆ ಕಾರ್ಯನಿರ್ವಹಿಸುವ ಅವಕಾಶ ದೊರೆತದ್ದು ಕುಚೋದ್ಯದ ಸಂಗತಿ. ಗ್ರಂಥಾಲಯದಲ್ಲಿ ಶಾಂತಿ ಮತ್ತು ಶಿಸ್ತನ್ನು ಕಾಪಾಡಬೇಕಾದವರೇ ಅಶಿಸ್ತಿಗೆ ದಾರಿಮಾಡಿ ಕೊಡುತ್ತಾರೆ. ದಿನದ ಹೆಚ್ಚಿನ ಸಮಯ ಅವರುಗಳು ಗ್ರಂಥಾಲಯದ ಒಳಗಿರುವುದಕ್ಕಿಂತ ಹೊರಗಿರುವುದೇ ಹೆಚ್ಚು. ಓದಲು ಮತ್ತು ಬರೆಯಲು ಬರದವರು ಸಹ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಗ್ರಂಥಪಾಲಕರಾಗಿಯೋ ಅಥವಾ ಗ್ರಂಥಾಲಯ ಸಹಾಯಕರಾಗಿಯೋ ಕೆಲಸಕ್ಕೆ ಸೇರಬಹುದೆನ್ನುವ ಮನೋಭಾವ ಬಲವಾಗುತ್ತಿದೆ. ಪರಿಣಾಮವಾಗಿ ಯಾವುದೋ ಮೂಲಗಳಿಂದ ವಿದ್ಯಾರ್ಹತೆ ಪಡೆದು ಸಾರ್ವಜನಿಕ ಗ್ರಂಥಾಲಯಗಳಲ್ಲಿ ಕೆಲಸಕ್ಕೆ ಸೇರುವವರ ಸಂಖ್ಯೆ ಹೆಚ್ಚುತ್ತಿದೆ. ಓದುಗರದು ಮಾತ್ರ ಸಾರ್ವಜನಿಕ ಗ್ರಂಥಾಲಯಗಳಲ್ಲಿನ ಸಿಬ್ಬಂದಿಯನ್ನು ಸರಸ್ವತಿಯ ಆರಾಧಕರೆನ್ನಬೇಕೋ ಅಥವಾ ವಿಧ್ವಂಸಕರೆಂದು ಕರೆಯಬೇಕೋ ಎನ್ನುವ ಜಿಜ್ಞಾಸೆ.
        ಉತ್ತಮ ಪುಸ್ತಕಗಳ ಕೊರತೆಯ ನಡುವೆಯೂ ಸರ್ಕಾರ ಸಾರ್ವಜನಿಕ ಗ್ರಂಥಾಲಯಗಳಿಗೆ ಕಂಪ್ಯೂಟರ್ ಗಳನ್ನೂ ಒದಗಿಸಿದೆ. ಒಂದರ್ಥದಲ್ಲಿ ಅದು 'ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ' ಎನ್ನುವಂತಿದೆ. ಪುಸ್ತಕಗಳ ಕೊರತೆಯೇ ಪ್ರಮುಖ ಸಮಸ್ಯೆಯಾಗಿರುವಾಗ ಸರ್ಕಾರ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿ ಸಾರ್ವಜನಿಕ ಗ್ರಂಥಾಲಯಗಳಿಗೆ ಕಂಪ್ಯೂಟರ್ ಗಳನ್ನು  ಒದಗಿಸಿದ ಯೋಜನೆಯ ಹಿಂದಿನ ಉದ್ದೇಶ ಅನುಮಾನ ಬರಿಸುವಂತಿದೆ. ಗ್ರಂಥಾಲಯಗಳಿಗೆ ಕೊಟ್ಟ ಕಂಪ್ಯೂಟರ್ ಗಳೆನಾದರೂ ಕೆಲಸ ಮಾಡುತ್ತಿವೆಯೇ? ಕಂಪ್ಯೂಟರ್ ಶಿಕ್ಷಣ ಮತ್ತು ತರಬೇತಿ ಪಡೆದ ಸಿಬ್ಬಂದಿಯ ಕೊರತೆಯಿಂದಾಗಿ ಇವತ್ತು ಸಾರ್ವಜನಿಕ ಗ್ರಂಥಾಲಯಗಳಲ್ಲಿ ಕಂಪ್ಯೂಟರ್ ಗಳು ಧೂಳು ತಿನ್ನುತ್ತ ಕುಳಿತಿವೆ. ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿನ ಒಂದೆರಡು ಗ್ರಂಥಾಲಯಗಳನ್ನು ಗಣಕೀಕರಣಗೊಳಿಸಿದ ಮಾತ್ರಕ್ಕೆ ರಾಜ್ಯದಲ್ಲಿನ ಎಲ್ಲ ಸಾರ್ವಜನಿಕ ಗ್ರಂಥಾಲಯಗಳನ್ನು ಗಣಕೀಕೃತಗೊಳಿಸಬಹುದೆನ್ನುವ ನಿರ್ಧಾರಕ್ಕೆ ಬರುವುದು ತಪ್ಪು. ಕೋಟ್ಯಾಂತರ ರೂಪಾಯಿಗಳನ್ನು ಕಂಪ್ಯೂಟರ್ ಗಳ ಮೇಲೆ ಖರ್ಚು ಮಾಡುವುದಕ್ಕಿಂತ ಅದೇ ಹಣವನ್ನು ಪುಸ್ತಕಗಳು ಮತ್ತು ಉಪಕರಕಣಗಳ ಮೇಲೆ ಖರ್ಚು ಮಾಡಬಹುದಿತ್ತು. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಬೇಕಿದ್ದ ಅಧಿಕಾರಿಗಳೇ ಇಂಥದ್ದೊಂದು ಯೋಜನೆಯ ಫಲಾನುಭವಿಗಳಾಗುತ್ತಿರುವುದು ವ್ಯವಸ್ಥೆಯೊಂದರ ದುರಂತಕ್ಕೆ ಸಾಕ್ಷಿ.
            ಗ್ರಾಮಾಂತರ ಪ್ರದೇಶದ ಜನತೆಗೂ ಪತ್ರಿಕೆ ಮತ್ತು ಪುಸ್ತಕಗಳನ್ನೊದುವ ಸೌಲಭ್ಯ ದೊರೆಯಲಿ ಎನ್ನುವ ಉದ್ದೇಶದಿಂದ ಗ್ರಾಮೀಣ ಗ್ರಂಥಾಲಯಗಳ ಸ್ಥಾಪನೆಗೆ ಮುಂದಾದ ಸರ್ಕಾರದ ಕ್ರಮ ಸ್ವಾಗತಾರ್ಹ. ಈ ಕಾರಣದಿಂದಾಗಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮೀಣ ಗ್ರಂಥಾಲಯಗಳನ್ನು ಸ್ಥಾಪಿಸುವ ಯೋಜನೆ ಹಮ್ಮಿಕೊಳ್ಳಲಾಯಿತು. ಇದುವರೆಗೆ 2751 ಗ್ರಾಮೀಣ ಗ್ರಂಥಾಲಯಗಳನ್ನು ಕರ್ನಾಟಕ ರಾಜ್ಯದಾದ್ಯಂತ ಸ್ಥಾಪಿಸಲಾಗಿದೆ. ಇಲ್ಲಿಯೂ ಕಟ್ಟಡ, ಪುಸ್ತಕಗಳು, ಸಿಬ್ಬಂದಿ ಮತ್ತು ಉಪಕರಣಗಳದ್ದೆ ಸಮಸ್ಯೆ. ಜಿಲ್ಲಾ ಮತ್ತು ನಗರ ಕೇಂದ್ರ ಗ್ರಂಥಾಲಯಗಳಲ್ಲಿ ಮುರಿದು ದುರಸ್ಥಿಯಾದ ಕುರ್ಚಿ ಮೇಜುಗಳನ್ನೇ ಗ್ರಾಮೀಣ ಗ್ರಂಥಾಲಯಗಳಿಗೆ ಕೊಡಲಾಗುವುದು. ಪುಸ್ತಕಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರುವುದಿಲ್ಲ. ಮುಖ್ಯ ಗ್ರಂಥಾಲಯಗಳಲ್ಲಿ ಓದಿ ಹಾಳಾದ ಪುಸ್ತಕಗಳೇ ಇಲ್ಲಿ ಓದಲು ಸಿಗುತ್ತವೆ. ಗ್ರಾಮೀಣ ಪರಿಸರದ ಓದುಗರಿಗೆ ಅವರ ಅಭಿರುಚಿಗನುಗುಣವಾದ ಪುಸ್ತಕಗಳು ಇಲ್ಲಿ ಓದಲು ಸಿಗುವುದಿಲ್ಲ. ಗ್ರಂಥಾಲಯಕ್ಕೆ ದಿನಪತ್ರಿಕೆ ಮತ್ತು ನಿಯತಕಾಲಿಕೆಗಳು ಬರುತ್ತವೆಯಾದರೂ ಅವುಗಳು ಸ್ಥಳೀಯ ರಾಜಕೀಯ ನಾಯಕರುಗಳ ಮನೆಯ ಪಡಸಾಲೆಯ ಅಲಂಕಾರಿಕ ವಸ್ತುಗಳಾಗುತ್ತಿವೆ. ಓದುಗರಿಲ್ಲದೆ ಗ್ರಂಥಾಲಯಗಳು ಹಾಳು ಹರಟೆಯ ಇಲ್ಲವೇ ಇಸ್ಪಿಟ್ ಆಟದ ಕೇಂದ್ರಗಳಾಗಿವೆ. ಗ್ರಾಮೀಣ ಗ್ರಂಥಾಲಯಗಳಲ್ಲಿ ಕೆಲಸ ಮಾಡಲು ನೇಮಕಗೊಂಡ ಮೇಲ್ವಿಚಾರಕರಿಗೆ ಸರ್ಕಾರದಿಂದ ಪ್ರತಿ ತಿಂಗಳು 1500 ರೂಪಾಯಿಗಳ ಸಹಾಯಧನ ದೊರೆಯುತ್ತಿದೆ. ಈ ಸಂಬಳದಲ್ಲಿ ಆ ಮೇಲ್ವಿಚಾರಕರು ಪ್ರತಿದಿನ 6 ರಿಂದ 8 ಗಂಟೆಗಳವರೆಗೆ ಗ್ರಂಥಾಲಯದಲ್ಲಿ ಕಾರ್ಯನಿರ್ವಹಿಸಬೇಕು. ಕಡಿಮೆ ಸಂಬಳಕ್ಕೆ ಹೆಚ್ಚಿನ ಅವಧಿಗೆ ಗ್ರಂಥಾಲಯಗಳಲ್ಲಿ ಕೆಲಸ ಮಾಡಲು ಮಾನಸಿಕವಾಗಿ ಸಿದ್ಧರಿಲ್ಲದ ಮೇಲ್ವಿಚಾರಕರಿಂದ ಹೆಚ್ಚಿನದನ್ನು  ನಿರೀಕ್ಷಿಸುವುದು ದೂರದ ಮಾತು. ಹಾಗೆ ನಿರೀಕ್ಷಿಸುವುದು ಕೂಡಾ ತಪ್ಪು. ಈ ನಡುವೆ ತಿಂಗಳು ಪೂರ್ತಿ ಕೆಲಸ ಮಾಡಿದರೂ ಅವರಿಗೆ ದೊರೆಯಬೇಕಾದ ಸಂಬಳ ದೊರೆಯುತ್ತಿಲ್ಲ ಎನ್ನವ ಮಾತೂ ಕೇಳಿ ಬರುತ್ತಿದೆ.
       ಇಷ್ಟೆಲ್ಲ ಸಮಸ್ಯೆಗಳ ಮಧ್ಯೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಮಕ್ಕಳ ಗ್ರಂಥಾಲಯಗಳ ಸ್ಥಾಪನೆಗೆ ಚಾಲನೆ ನೀಡಿತು. ಈ ಒಂದು ಯೋಜನೆಯಲ್ಲಾದರೂ ಯಶಸ್ವಿಯಾಗಬಹುದೆಂಬ ಸಾರ್ವಜನಿಕರ ನಿರೀಕ್ಷೆಯನ್ನು ಅದು ಹುಸಿಗೊಳಿಸಿತು. ಮಕ್ಕಳ ವಿಭಾಗ ಎನ್ನುವ ಹೆಸರಿನ ವಿಭಾಗ ಗ್ರಂಥಾಲಯಗಳಲ್ಲಿ ಹೆಸರಿಗೆ ಮಾತ್ರವಿದ್ದು ಅಲ್ಲಿ ಮಕ್ಕಳ ಅಭಿರುಚಿ ಮತ್ತು ಅವರ ವಯೋಮಾನಕ್ಕನುಗುಣವಾದ ಪುಸ್ತಕಗಳೇ ಇರುವುದಿಲ್ಲ. ಮಕ್ಕಳ ಉಪಯೋಗಕ್ಕೆಂದು ತಂದಿಟ್ಟ ಒಂದೆರಡು ಕಂಪ್ಯೂಟರ್ ಗಳನ್ನು ಅಲ್ಲಿನ ಸಿಬ್ಬಂದಿ ಮಕ್ಕಳಿಗೆ ಉಪಯೋಗಿಸಲು ಬಿಡುವುದಿಲ್ಲವಾದ್ದರಿಂದ ಪವಿತ್ರ ಗೋವನ್ನು ತೋರಿಸುವಂತೆ ದೂರದಿಂದಲೇ ತೋರಿಸಬೇಕು. ಒಟ್ಟಿನಲ್ಲಿ ಸಮಸ್ಯೆ ಕೇಂದ್ರಿತವಾದ ಸಾರ್ವಜನಿಕ ಗ್ರಂಥಾಲಯಗಳನ್ನು ಪುನಶ್ಚೇತನಗೊಳಿಸುವ ಕಾರ್ಯಕ್ಕೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಮುಂದಾಗಬೇಕು. ಸಂಬಂಧಪಟ್ಟ ಮಂತ್ರಿಗಳು ಈ ಬಗ್ಗೆ ಗಮನಹರಿಸಬೇಕು. ಸಾರ್ವಜನಿಕ ಗ್ರಂಥಾಲಯಗಳು ಜನಸಾಮಾನ್ಯರ ವಿಶ್ವವಿದ್ಯಾಲಯಗಳೆನ್ನುವ ನಂಬಿಕೆ ನಿಜವಾಗಬೇಕು.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

Thursday, November 15, 2012

ಮಲಾಲಾ ಎನ್ನುವ ಭರವಸೆಯ ಬೆಳಕು

   
Malala Yousafzai


     ಆಕೆಗಿನ್ನೂ ಹದಿನಾಲ್ಕು ವರ್ಷ ವಯಸ್ಸು. ಆಟ ಆಡುತ್ತ, ಗೆಳತಿಯರೊಂದಿಗೆ ಚೇಷ್ಟೆ ಮಾಡುತ್ತ, ಮನೆಯಲ್ಲಿ ಅಪ್ಪ ಅಮ್ಮನೊಂದಿಗೆ ಹಠ ಮಾಡುತ್ತ, ತಮ್ಮಂದಿರೊಂದಿಗೆ ಜಗಳವಾಡುತ್ತ ಕಾಲ ಕಳೆಯಬೇಕಾದ ಪುಟ್ಟ ಹುಡುಗಿ ಅವಳು. ಅಂಥ ಹುಡುಗಿ ಅಕ್ಟೋಬರ್ 9 ರಂದು ಶಾಲೆಯಿಂದ ಮರಳುತ್ತಿರುವ ಹೊತ್ತು ಅವಳಿದ್ದ ಶಾಲಾವಾಹನವನ್ನು ತಡೆಗಟ್ಟಿದ ಕ್ರೂರ ತಾಲಿಬಾನಿಗಳು ಅವಳ ಮೇಲೆ ಗುಂಡು ಹಾರಿಸಿ ಹತ್ಯೆಗೈಯಲು ಪ್ರಯತ್ನಿಸಿದರು. ಉಗ್ರರ ಒಂದು ಗುಂಡು ತೆಲೆಯನ್ನು ಮತ್ತು ಇನ್ನೊಂದು ಕುತ್ತಿಗೆಯನ್ನು ಹೊಕ್ಕು ಅವಳ ಪರಿಸ್ಥಿತಿ ಚಿಂತಾಜನಕವಾಗಿದೆ. ಇಂಗ್ಲೆಂಡಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆ ಹುಡುಗಿಯನ್ನು ಉಳಿಸಿಕೊಳ್ಳಲು ಅಲ್ಲಿನ ವೈದ್ಯರು ಹರಸಾಹಸ ಮಾಡುತ್ತಿರುವರು. ಆಸ್ಪತ್ರೆಯ ವೈದ್ಯರ ಪ್ರಕಾರ ಅವಳು ಬದುಕುಳಿಯುವ ಸಾಧ್ಯತೆ ಪ್ರತಿಶತ 70 ರಷ್ಟಿದೆ. ಇಡೀ ಜಗತ್ತು ಅವಳಿಗಾಗಿ ಪ್ರಾರ್ಥಿಸುತ್ತಿದೆ. ಬದುಕಿ ಬರಲೆಂದು ಅವಳ ವಯಸ್ಸಿನ ಪುಟ್ಟ ಮಕ್ಕಳೆಲ್ಲ ಆಸೆ ಕಂಗಳಿಂದ ನಿರೀಕ್ಷಿಸುತ್ತಿದ್ದಾರೆ. ಕೋಟ್ಯಾಂತರ ಜನರ ಹರಕೆ ಹಾರೈಕೆಗಳೆಲ್ಲ ನಿಜವಾಗಲಿವೆ ಎನ್ನುವ ಸಣ್ಣ ಆಸೆ ಎಲ್ಲರಲ್ಲೂ ಇದೆ (ಈ ಲೇಖನ ಬರೆದು ಮುಗಿಸುವ ವೇಳೆಗೆ ಆ ಪುಟ್ಟ ಹುಡುಗಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾಳೆ).
            ನಮಗೆಲ್ಲ ಗೊತ್ತಿರುವಂತೆ ಇಡೀ ಜಗತ್ತಿನ ಗಮನ ಸೆಳೆದ ಈ ಘಟನೆ ನಡೆದದ್ದು ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ. ತಾಲಿಬಾನಿಗಳ ಗುಂಡಿಗೆ ಬಲಿಯಾಗಿ ಇವತ್ತು ಜೀವನ್ಮರಣದ ನಡುವೆ ಹೋರಾಡುತ್ತಿರುವ ಆ ಪುಟ್ಟ ಬಾಲಕಿಯ ಹೆಸರು ಮಲಾಲಾ. ಪಾಕಿಸ್ತಾನದ ಸ್ವಾತ್ ಕಣಿವೆಯ ಮೇಲೆ ಉಗ್ರರು ಮಾಡುತ್ತಿರುವ ಹೀನ ಕೃತ್ಯವನ್ನು ಹೊರ ಪ್ರಪಂಚಕ್ಕೆ ತಿಳಿಸಿ ಕೊಟ್ಟಿದ್ದೆ ಮಲಾಲಾ ಮಾಡಿದ ಬಹುದೊಡ್ಡ ತಪ್ಪು. ಒಂದು ಮಾನವೀಯ ನೆಲೆಯಲ್ಲಿ ಚಿಂತಿಸಿ ಜನರ ಕಲ್ಯಾಣಕ್ಕಾಗಿ ಪ್ರಯತ್ನಿಸಿದ ಮಲಾಲಾಳ ಕಾರ್ಯ ತಾಲಿಬಾನಿಗಳಿಗೆ ಸರಿ ಕಾಣಲಿಲ್ಲ. ಈ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲೂ ಅತೀ ಮತಾಂಧರಂತೆ ವರ್ತಿಸುವ ಆ ಉಗ್ರರಿಗೆ ದೇಶಾಭಿಮಾನಕ್ಕಿಂತ ಧರ್ಮಾಭಿಮಾನವೇ ಅಧಿಕ. ದೇಶದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕು ಅಧ:ಪತನಕ್ಕಿಳಿದರೂ ಸರಿ ಧರ್ಮ ಮಾತ್ರ ಉಚ್ಚ ಸ್ಥಾನದಲ್ಲಿರಲಿ ಎನ್ನುವ ಕರ್ಮಠ ಮನಸ್ಸು ಅವರದು.
           ಅಂಥದ್ದೊಂದು ಧರ್ಮಾಂಧತೆಯ ಪರಿಣಾಮ ದೇಶದಲ್ಲಿ ಹೆಚ್ಚುತ್ತಿರುವ ಸಮಸ್ಯೆಗಳನ್ನು ಜನರಿಗೆ ಮನಗಾಣಿಸಲು ಪ್ರಯತ್ನಿಸಿದ ಮಲಾಲಾಳ ವರ್ತನೆ ಉಗ್ರರಿಗೆ ಸರಿಕಾಣಿಸಲಿಲ್ಲ. ಅದಕ್ಕೆಂದೆ ಅವಳನ್ನು ಹತ್ಯೆಗೈಯಲು ಸಂಚು ರೂಪಿಸಿದರು. ಪುಟ್ಟ ಹುಡುಗಿ ಎನ್ನುವುದನ್ನೂ ಯೋಚಿಸದೆ ನಿರ್ದಯವಾಗಿ ಗುಂಡಿನ ಮಳೆಗರೆದರು.
          ಮಲಾಲಾ ಜನಿಸಿದ್ದು ಪಾಕಿಸ್ತಾನದ ಸ್ವಾತ್ ಜಿಲ್ಲೆಯ ಮುಸ್ಲಿಂ ಕುಟುಂಬದಲ್ಲಿ ಜುಲೈ 1997 ರಲ್ಲಿ. ಪಾಕಿಸ್ತಾನದ ಕವಿಯಿತ್ರಿ ಮತ್ತು ವೀರ ವನಿತೆ ಮಲಾಲಾಳ ಹೆಸರನ್ನೇ ಆಕೆಗಿಡಲಾಯಿತು. ಮಲಾಲಾಳ ತಂದೆ ಜಿಯಾವುದ್ದೀನ್ ಯೂಸುಪ್ ಝೈ ಸ್ವಾತ್ ಕಣಿವೆಯಲ್ಲಿ ಕೆಲವು ಶಾಲೆಗಳನ್ನು ನಡೆಸುತ್ತಿದ್ದರು. ಕವಿ, ವಿಚಾರವಾದಿ, ಶಿಕ್ಷಣ ಪ್ರೇಮಿಯಾಗಿದ್ದ ಜಿಯಾವುದ್ದೀನ್ ವ್ಯಕ್ತಿತ್ವ ಮಗಳನ್ನು ತುಂಬ ಪ್ರಭಾವಿಸಿತ್ತು. ಸುಶಿಕ್ಷಿತ ತಂದೆ ತಾಯಿ, ನಲ್ಮೆಯ ತಮ್ಮಂದಿರಿಂದ ಕೂಡಿದ ಅತ್ಯಂತ ಸುಖಿ ಕುಟುಂಬದಲ್ಲಿ ಬೆಳೆದ ಹುಡುಗಿ ಅವಳು. ಆ ಕುಟುಂಬದಲ್ಲಿ ಪ್ರೀತಿಯ ಒರತೆಗೆ ಕೊರತೆಯಿರಲಿಲ್ಲ. ಜೊತೆಗೆ ಆತ್ಮಾಭಿಮಾನ ಮತ್ತು ರಾಷ್ಟ್ರ ಭಕ್ತಿ ಅವರುಗಳ ಕಣ ಕಣದಲ್ಲೂ ತುಂಬಿ ಕೊಂಡಿದ್ದವು. ಗೆಳತಿಯರೊಂದಿಗೆ ಆಟವಾಡಿಕೊಂಡಿರಬೇಕಾದ ಆ  ವಯಸ್ಸಿನಲ್ಲೇ ಮಲಾಲಾ ತನ್ನ ತಂದೆಯೊಡನೆ ರಾಷ್ಟ್ರದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿಗತಿಯ ಕುರಿತು ಚರ್ಚಿಸುತ್ತಿದ್ದಳು.
             ಅಂಥದ್ದೊಂದು ಕೌಟಂಬಿಕ ಹಿನ್ನೆಲೆಯೇ ಮಲಾಲಾಳಿಗೆ ಬರೆಯಲು ಪ್ರೇರಣೆ ನೀಡಿತು. ಅದು ಆರಂಭಗೊಂಡಿದ್ದು 2009 ರ ಪ್ರಾರಂಭದಲ್ಲಿ. ಆ ಸಂದರ್ಭ ಮೌಲಾನಾ ಫಜ್ಲುಲ್ಲಾ ನೇತೃತ್ವದ ತಾಲಿಬಾನಿಗಳ ತಂಡ ಇಡೀ ಸ್ವಾತ್ ಕಣಿವೆಯ ಮೇಲೆ ತನ್ನ ನಿಯಂತ್ರಣ ಹೊಂದಿತ್ತು. ದಿನದಿಂದ ದಿನಕ್ಕೆ ಅಲ್ಲಿ ಉಗ್ರರ ಉಪಟಳ ಹೆಚ್ಚುತ್ತಿತ್ತು. ತಾಲಿಬಾನಿಗಳು ಆ ಇಡೀ ಪ್ರದೇಶದಲ್ಲಿ ಮನೋರಂಜನಾ ಕಾರ್ಯಕ್ರಮಗಳು ಬಿತ್ತರವಾಗದಂತೆ ತಡೆ ಹಿಡಿದಿದ್ದರು. ದೂರದರ್ಶನ ತನ್ನ ಪ್ರಸರಣಾ ಕಾರ್ಯಕ್ರಮವನ್ನು ನಿಲ್ಲಿಸಿತ್ತು. ಸಿನಿಮಾ ಮಂದಿರಗಳು ಬಾಗಿಲು ಹಾಕಿದ್ದವು. ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನು ನಿಷೇಧಿಸಲಾಗಿತ್ತು. ಈ ಸಂದರ್ಭದಲ್ಲೇ ಬಿಬಿಸಿಯ ಉರ್ದು ಚಾನೆಲ್ ಎಚ್ಚೆತ್ತುಕೊಂಡಿತು. ಉಗ್ರರ ಅಟ್ಟಹಾಸ ಸಹಿಸಲಸಾಧ್ಯವಾದಾಗ ಅವರ ವಿರುದ್ಧ ಸಾರ್ವಜನಿಕರನ್ನು ಒಂದುಗೂಡಿಸಲು ಯೋಜನೆಯೊಂದನ್ನು ರೂಪಿಸಿತು. ಪಾಕಿಸ್ತಾನದಲ್ಲಿರುವ ತನ್ನ ವರದಿಗಾರ ಅಬ್ದುಲ್  ಹೈ  ಕಕ್ಕರ್ ನನ್ನು ಈ ಕೆಲಸಕ್ಕಾಗಿ ನಿಯೋಜಿಸಿತು. ಕಕ್ಕರ್ ನೇರವಾಗಿ ಹೋಗಿ ಭೇಟಿ ಮಾಡಿದ್ದು ಸ್ವಾತ್ ಕಣಿವೆಯಲ್ಲಿ ಶಾಲೆಗಳನ್ನು ಪ್ರಾರಂಭಿಸಿ ಒಂದಿಷ್ಟು ಹೆಸರು ಮಾಡಿದ್ದ ಜಿಯಾವುದ್ದೀನ್ ಅವರನ್ನು. ಅಂಥದ್ದೊಂದು ಅಗತ್ಯವನ್ನು ಅವರಿಗೆ ಮನಗಾಣಿಸಿಕೊಟ್ಟ ನಂತರವೇ ಜಿಯಾವುದ್ದೀನ್ ತಮ್ಮ ಮಗಳು ಮಲಾಲಾಳನ್ನು ಬರೆಯುವಂತೆ ಹೇಳಿದ್ದು. ಸ್ವಾತ್ ಕಣಿವೆಯಲ್ಲಿನ ಒಬ್ಬ ಪುಟ್ಟ ಹುಡುಗಿಗೆ ಬರೆಯಲು ಒಪ್ಪಿಸಿದ ಕೆಲಸವನ್ನು ಬಿಬಿಸಿ ಉರ್ದು ಚಾನೆಲ್ ಮುಖ್ಯಸ್ಥ ಮಿರ್ಜಾ ವಾಹಿದ್ ಹೀಗೆ ಸಮರ್ಥಿಸಿಕೊಳ್ಳುತ್ತಾರೆ 'ಸ್ವಾತ್ ಕಣಿವೆಯಲ್ಲಿನ ಹಿಂಸೆ ಮತ್ತು ರಾಜಕೀಯವನ್ನು ಬಿಬಿಸಿ ಉರ್ದು ಚಾನೆಲ್ ಈಗಾಗಲೇ ಸಾಕಷ್ಟು ವರದಿ ಮಾಡಿದೆ. ಆದರೆ ತಾಲಿಬಾನಿಗಳ ಹಿಡಿತದಲ್ಲಿ ಸಾಮಾನ್ಯ ಜನರು ಹೇಗೆ ಬದುಕುತ್ತಿರುವರು ಎನ್ನುವ ವಿಷಯವಾಗಿ ನಾವು ಇನ್ನಷ್ಟು ವರದಿ ಮಾಡಬೇಕಿದೆ. ಅದು ಸಾಧ್ಯವಾಗುವುದು ಸ್ವಾತ್ ಕಣಿವೆಯಲ್ಲೇ ವಾಸಿಸುತ್ತಿರುವ ಸಾರ್ವಜನಿಕರಿಂದ ಮಾತ್ರ ಸಾಧ್ಯ. ಅದಕ್ಕೆಂದೇ ಈ ಒಂದು ಕೆಲಸವನ್ನು ನಾವು ಮಲಾಲಾಳಿಗೆ ಒಪ್ಪಿಸಿದ್ದು'. ಇದರಿಂದ ಮಲಾಲಾಳ ಜೀವಕ್ಕೆ ಆಪತ್ತಿದೆ ಎನ್ನುವ ಆತಂಕ ಬಿಬಿಸಿಗೆ ಇದ್ದುದ್ದರಿಂದಲೇ ಗುಲ್ ಮಕಾಯ್ ಎನ್ನುವ ಗುಪ್ತನಾಮದಿಂದ ಮಲಾಲಾಳ ಲೇಖನಗಳು ಪ್ರಕಟವಾಗತೊಡಗಿದವು.
           ಬಿಬಿಸಿ ಉರ್ದು ಚಾನೆಲ್ ನಲ್ಲಿ ಮಲಾಲಾಳ ಬರವಣಿಗೆಗೆ ವ್ಯಾಪಕ ಪ್ರಚಾರ ದೊರೆಯತೊಡಗಿತು. ತಾಲಿಬಾನ್ ಉಗ್ರರ ಅಟ್ಟಹಾಸ ಮತ್ತು ಸಾರ್ವಜನಿಕರು ದಿನನಿತ್ಯ ಎದುರಿಸುತ್ತಿರುವ ಸಮಸ್ಯೆಗಳನ್ನು ಲೇಖನಗಳ ಮೂಲಕ ಒಂದೊಂದಾಗಿ ಬಿಚ್ಚಿಡತೊಡಗಿದಳು. ದೇಶದ ಮೂಲೆ ಮೂಲೆಗಳಿಂದ ಉತ್ತಮ ಪ್ರತಿಕ್ರಿಯೆ ಬರತೊಡಗಿತು. ಅನೇಕರು ಮಲಾಲಾಳ ಲೇಖನಗಳನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ನಡುವೆ ಮಲಾಲಾ ಮತ್ತು ಅವಳ ತಂದೆ ನ್ಯೂಯಾರ್ಕ್ ಟೈಮ್ಸ್ ವರದಿಗಾರ ಎಲ್ಲಿಕ್ ನನ್ನು ಸಂಪರ್ಕಿಸಿ ಸ್ವಾತ್ ಕಣಿವೆ ಕುರಿತು ಡಾಕ್ಯುಮೆಂಟರಿ ಸಿದ್ಧಪಡಿಸುವಂತೆ ಕೇಳಿಕೊಂಡರು. ಹೀಗೆ ಅವರುಗಳ ಪ್ರಯತ್ನದಿಂದ ತಯ್ಯಾರಾದ ಡಾಕ್ಯುಮೆಂಟರಿ ಅಲ್ಲಿನ ಜನಜೀವನವನ್ನು ವಿವರವಾಗಿ ಸೆರೆಹಿಡಿದು ಪ್ರದರ್ಶಿಸಿತು. 2009ರ ಕೊನೆಯಲ್ಲಿ ಯುನಿಸೆಫ್ ನ ಸಹಕಾರದೊಂದಿಗೆ ಕೆ.ಕೆ.ಫೌಂಡೆಶನ್ ಅಣಕು ಶಾಸನ ಸಭೆಯನ್ನು ನಿರ್ಮಿಸಿ ಸ್ವಾತ್ ಕಣಿವೆಯಲ್ಲಿನ ಮಕ್ಕಳನ್ನೆಲ್ಲ ಚರ್ಚೆಗೆ ಆಹ್ವಾನಿಸಿತು. ಶಾಸನ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡ ಮಲಾಲಾ ಸ್ತ್ರೀ ಶಿಕ್ಷಣ ಮತ್ತು ಮಕ್ಕಳ ಹಕ್ಕುಗಳನ್ನು ಕುರಿತು ವಿವರವಾಗಿ ಮಾತನಾಡಿದಳು. ತಾನು ರಾಜಕೀಯಕ್ಕೆ ಸೇರುವ ಇಚ್ಛೆಯನ್ನು ವ್ಯಕ್ತಪಡಿಸಿ ಬೆನಜಿರ್ ಭುಟ್ಟೊ ತನಗೆ ಸ್ಫೂರ್ತಿ ಎಂದು ಹೇಳಿದಳು. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದರ ಮೂಲಕ ತಾಲಿಬಾನ್ ವಿರುದ್ಧದ ತನ್ನ  ಹೋರಾಟವನ್ನು ಮತ್ತಷ್ಟು ತೀವೃಗೊಳಿಸಿದಳು. ನಂತರದ ದಿನಗಳಲ್ಲಿ ಇನ್ಸ್ಟಿಟ್ಯೂಟ್ ಆಫ್ ವಾರ್ ಆಯಿಂಡ್ ಪೀಸ್ ಪ್ರಾರಂಭಿಸಿದ ಮುಕ್ತ ಮನಸ್ಸು ಯೋಜನೆಯಲ್ಲಿ ಮಲಾಲಾ ಪಾಲ್ಗೊಳ್ಳಲಾರಂಭಿಸಿದ ಪರಿಣಾಮ ಪಾಕಿಸ್ತಾನದ 42 ಶಾಲೆಗಳಲ್ಲಿ ಪತ್ರಿಕೋದ್ಯಮದ ತರಬೇತಿ ಪ್ರಾರಂಭವಾಯಿತು. ಮಲಾಲಾಳ ಬರವಣಿಗೆಯಿಂದ ಸ್ಫೂರ್ತಿಗೊಂಡ ಅನೇಕ ವಿದ್ಯಾರ್ಥಿನಿಯರು ಬರವಣಿಗೆಯ ತರಬೇತಿಯನ್ನು ಪಡೆಯಲು ಬಯಸಿದರು. 2012 ರ ಎಫ್ರಿಲ್ ನಲ್ಲಿ ಮಲಾಲಾ 'ಮಲಾಲಾ ಎಜ್ಯುಕೇಶನ್ ಫೌಂಡೆಶನ್' ಸ್ಥಾಪಿಸಿ ಬಡ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಗತ್ಯವಾದ ನೆರವು ನೀಡಲಾರಂಭಿಸಿದಳು. ಮಲಾಲಾ ತನ್ನ ಹೋರಾಟ ಮತ್ತು ಸಾಮಾಜಿಕ ಕಳಕಳಿಯಿಂದಾಗಿ ಬಹುಬೇಗ ಜನಪ್ರಿಯಳಾದಳು. ಅಂತರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿಗೆ ಮಲಾಲಾಳ ಹೆಸರನ್ನು ಸೂಚಿಸಲಾಯಿತು. ಇದಾದ ಎರಡು ತಿಂಗಳುಗಳ ನಂತರ ಪಾಕಿಸ್ತಾನ ರಾಷ್ಟ್ರದ ಪ್ರಥಮ ರಾಷ್ಟ್ರೀಯ ಯುವ ಶಾಂತಿ ಪ್ರಶಸ್ತಿಗೆ ಭಾಜನಳಾದಳು.

ಮಲಾಲಾ ಬರೆಯುತ್ತಾಳೆ 
    ಮಲಾಲಾಳ ಬರವಣಿಗೆಯ ಒಂದಿಷ್ಟು ಸ್ಯಾಂಪಲ್ ಗಳು
# ನನ್ನ ಶಿಕ್ಷಣದ ಮೂಲಭೂತ ಹಕ್ಕನ್ನು ಕಸಿದುಕೊಳ್ಳಲು ತಾಲಿಬಾನಿಗಳಿಗೆ ಅದೆಷ್ಟು ಧೈರ್ಯ.
# ನಿನ್ನೆ ನಾನೊಂದು ಭಯಾನಕ ಕನಸು ಕಂಡೆ. ಸ್ವಾತ್ ಕಣಿವೆಯಲ್ಲಿ ಮಿಲ್ಟ್ರಿ ಕಾರ್ಯಾಚರಣೆ ಪ್ರಾರಂಭವಾದ ದಿನದಿಂದ ನಾನು ಈ ರೀತಿಯ ಕನಸು ಕಾಣಲಾರಂಭಿಸಿದ್ದೇನೆ. ಆ ಕನಸಿನಲ್ಲಿ ನಾನು ಶಾಲೆಗೆ ಹೋಗಲು ಹೆದರುತ್ತಿದ್ದೇನೆ. ಏಕೆಂದರೆ ತಾಲಿಬಾನಿಗಳು ಹುಡುಗಿಯರು ಶಾಲೆಗೆ ಹೋಗದಿರುವಂತೆ ರಾಜಾಜ್ಞೆ ವಿಧಿಸಿರುವರು.
# 27 ವಿದ್ಯಾರ್ಥಿನಿಯರಲ್ಲಿ ಕೇವಲ 11 ಹುಡುಗಿಯರು ಮಾತ್ರ ಶಾಲೆಗೆ ಹಾಜರಾಗಿದ್ದರು. ಉಗ್ರರ ಅಟ್ಟಹಾಸಕ್ಕೆ  ನನ್ನ ಮೂವರು ಗೆಳತಿಯರು ಪೇಶಾವರ, ಲಾಹೋರ ಮತ್ತು ರಾವಲ್ಪಿಂಡಿಗೆ ತಮ್ಮ ಪೋಷಕರೊಂದಿಗೆ ವಲಸೆ ಹೋಗಿರುವರು.
# ನಾನು ನನ್ನ ಇಷ್ಟದ ಪಿಂಕ್ ಬಣ್ಣದ ಉಡುಪು ಧರಿಸಲು ನಿರ್ಧರಿಸಿದೆ. ಉಳಿದ ವಿದ್ಯಾರ್ಥಿನಿಯರೂ ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸಿ ಬಂದಿದ್ದರು.
# ಇನ್ನು ಐದು ಶಾಲೆಗಳನ್ನು ನಾಶ ಪಡಿಸಿದರು. ಅವುಗಳಲ್ಲಿ ಒಂದು ಶಾಲೆ ನಮ್ಮ ಮನೆಯ ಹತ್ತಿರವೇ ಇದೆ. ನನಗೆ ಆಶ್ಚರ್ಯವಾಯಿತು ಏಕೆಂದರೆ ಈಗಾಗಲೇ ಶಾಲೆಗಳು ಮುಚ್ಚಲ್ಪಟ್ಟಿವೆ. ಅವುಗಳನ್ನು ನಾಶಪಡಿಸುವ ಅಗತ್ಯವಾದರೂ ಏಕೆ?
# ರಜೆಯ ನಂತರ ನಮಗೆ ವಾರ್ಷಿಕ ಪರೀಕ್ಷೆಗಳಿವೆ. ಆದರೆ ಇದು ಸಾಧ್ಯವಾಗುವುದು ತಾಲಿಬಾನಿಗಳು ಹುಡುಗಿಯರನ್ನು ಶಾಲೆಗೆ ಹೋಗಲು ಅನುಮತಿ ನೀಡಿದರೆ ಮಾತ್ರ.
# ಪಾಕಿಸ್ತಾನದ ಸೇನೆ ಉಗ್ರರ ವಿರುದ್ಧದ ತನ್ನ ಕಾರ್ಯಾಚರಣೆಯನ್ನು ಸಮರ್ಪಕವಾಗಿ ನಿರ್ವಹಿಸಿದ್ದರೆ ಇಂದು ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ.
# ಇಸ್ಲಾಮಾಬಾದಿಗೆ ಇದು ನನ್ನ ಮೊದಲ ಭೇಟಿ. ಸುಂದರ ಕಟ್ಟಡಗಳು ಮತ್ತು ವಿಶಾಲ ರಸ್ತೆಗಳಿಂದಾಗಿ ನಗರ ಆಕರ್ಷಕವಾಗಿ ಕಾಣಿಸುತ್ತದೆ. ಆದರೆ ನನ್ನ ಸ್ವಾತ್ ಕಣಿವೆಗೆ ಹೋಲಿಸಿದಾಗ ಇಲ್ಲಿ ನಿಸರ್ಗ ಸೌಂದರ್ಯದ ಕೊರತೆ ಇದೆ.
# ಜನರು ಸರ್ಕಾರಕ್ಕಿಂತ ಸೇನಾಪಡೆಯ ಮಾತುಗಳನ್ನು ಹೆಚ್ಚು ನಂಬುತ್ತಿರುವರು.
# ಓ ದೇವರೆ ಸ್ವಾತ್ ಕಣಿವೆಗೆ ಶಾಂತಿಯನ್ನು ತಂದುಕೊಡು. ಅದು ಸಾಧ್ಯವಾಗದಿದ್ದರೆ ಅಮೇರಿಕ ಇಲ್ಲವೇ ಚೀನಾ ದೇಶವನ್ನಾದರೂ ಇಲ್ಲಿಗೆ ಕಳಿಸಿಕೊಡು.
# ನನಗೆ ನಿಜವಾಗಿಯೂ ಬೇಸರವಾಗುತ್ತಿದೆ. ಏಕೆಂದರೆ ಇಲ್ಲಿ ಓದಲು ಪುಸ್ತಕಗಳೇ ಇಲ್ಲ.
# ನನ್ನದೊಂದು ಕನಸಿದೆ. ಈ ದೇಶವನ್ನು ಉಳಿಸಲು ನಾನು ರಾಜಕಾರಣಿಯಾಗಲೇ ಬೇಕಿದೆ. ನನ್ನ ದೇಶದಲ್ಲಿ ಅನೇಕ ಸಮಸ್ಯೆಗಳಿವೆ. ರಾಜಕಾರಣಿಯಾಗಿ ನಾನು ಆ ಎಲ್ಲ ಸಮಸ್ಯೆಗಳನ್ನು ನಿರ್ಮೂಲನೆ ಮಾಡಬೇಕಿದೆ.
# ಒಂದು ವೇಳೆ ಅಧ್ಯಕ್ಷ ಜರ್ದಾರಿ ಮಗಳು ಸ್ವಾತ್ ಕಣಿವೆಯಲ್ಲಿ ಓದುತ್ತಿದ್ದರೆ ಇಲ್ಲಿನ ಶಾಲೆಗಳು ಮುಚ್ಚುತ್ತಿರಲಿಲ್ಲ.
# ತಾಲಿಬಾನಿಗಳು ನನ್ನನ್ನು ಕೊಲ್ಲಲು  ಬಂದರೆ ಅವರಿಗೆ ಸ್ಪಷ್ಟವಾಗಿ ಹೇಳುತ್ತೇನೆ ನೀವು ಮಾಡಲು ಹೊರಟಿರುವುದು ತಪ್ಪು ಎಂದು. ಏಕೆಂದರೆ ಶಿಕ್ಷಣ ನಮ್ಮ ಆಜನ್ಮಸಿದ್ಧ ಹಕ್ಕು.

          ಹೇಳಿಕೇಳಿ ಪಾಕಿಸ್ತಾನ ಭಯೋತ್ಪಾದಕರ ಬೀಡು. ವಿಶ್ವದ ಪರಮಪಾತಕಿ ಬಿನ್ ಲಾಡೆನ್ ಗೆ ಸೇನಾ ತರಬೇತಿ ಶಿಬಿರದ ಅನತಿ ದೂರದಲ್ಲೇ ರಾಜಾಶ್ರಯ ನೀಡಿದ ನೆಲವದು. ಇವತ್ತಿಗೂ ಭಾರತದ ಮೇಲೆ ದಾಳಿಯ ಸಂಚು ರೂಪಿಸಿದ ಉಗ್ರರನ್ನು ತನ್ನ ಮಡಿಲಲ್ಲಿಟ್ಟುಕೊಂಡು ಸಾಕುತ್ತಿದೆ. ಅಂಥ ನೆಲದ ಉಗ್ರರಿಗೆ ತಮ್ಮದೇ ನೆಲದ ಕುಡಿಯೊಂದು ಹೀಗೆ ತಿರುಗಿ ಬೀಳುವುದನ್ನು ಸಹಿಸಲಾದರೂ ಹೇಗೆ ಸಾಧ್ಯ. ಅದಕ್ಕೆಂದೇ ಮಲಾಲಾಳ ಹತ್ಯೆಗೆ ಸಂಚು ರೂಪಿಸುತ್ತಾರೆ. ಅಕ್ಟೋಬರ್ 9, 2012 ರಂದು ಪರೀಕ್ಷೆ ಬರೆದು ಶಾಲಾವಾಹನದಲ್ಲಿ ಮನೆಗೆ ತೆರಳುತ್ತಿದ್ದ ಮಲಾಲಾಳನ್ನು ಮಾರ್ಗ ಮಧ್ಯದಲ್ಲೇ ಅಡ್ಡಗಟ್ಟಿದ ಉಗ್ರರು ಅವಳ ಮೇಲೆ ಗುಂಡಿನ ಮಳೆಗರೆಯುತ್ತಾರೆ. ಉಗ್ರರ ಗುಂಡೇಟಿನಿಂದ ಮಲಾಲಾಳ ದೇಹ ನೆಲಕ್ಕೊರಗುತ್ತದೆ. ಆದರೆ ಆಕೆಯದು ಗಟ್ಟಿ ಜೀವ ನೋಡಿ. ಅವಳ ಹೆಸರಿನಲ್ಲೇ ಶೂರತ್ವ ಇರುವುದರಿಂದ ಗುಂಡೇಟಿನ ನಡುವೆಯೂ ಉಸಿರಾಡುತ್ತಾಳೆ. ತಕ್ಷಣವೇ ಅವಳನ್ನು ವಿಮಾನದ ಮೂಲಕ ಪೇಶಾವರ್ ನ ಮಿಲ್ಟ್ರಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಮೂರು ಗಂಟೆಗಳ ಸತತ ಚಿಕಿತ್ಸೆಯ ನಂತರ ಕೊನೆಗೂ ಮಲಾಲಾಳ ದೇಹದಲ್ಲಿನ ಗುಂಡುಗಳನ್ನು ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗುತ್ತಾರೆ. ಅಕ್ಟೋಬರ್ 11 ರಂದು  ಹೆಚ್ಚಿನ ಚಿಕಿತ್ಸೆಗಾಗಿ ರಾವಲ್ಪಿಂಡಿಯ ಆರ್ಮ್ ಫೋರ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತದೆ. ವಿದೇಶಿ ಆಸ್ಪತ್ರೆಗಳಿಂದ ಚಿಕಿತ್ಸೆಗೆ ನೆರವು ನೀಡುವ ಭರವಸೆಯ ಮಾತುಗಳು ಕೇಳಿ ಬಂದಾಗ ಕೊನೆಗೆ ಅಕ್ಟೋಬರ್ 15 ರಂದು ಮಲಾಲಾ ಇಂಗ್ಲೆಂಡಿಗೆ ಪ್ರಯಾಣ ಬೆಳೆಸುತ್ತಾಳೆ. ಸಧ್ಯ ಬರ್ಮಿಂಗ್ ಹ್ಯಾಮ್ ನ ಕ್ವಿನ್ ಎಲಿಜಿಬತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಲಾಲಾ ಚೇತರಿಸಿಕೊಳ್ಳುತ್ತಿದ್ದಾಳೆ. ವೈದ್ಯರು ಪ್ರತಿಶತ 70 ರಷ್ಟು ಬದುಕುಳಿಯುವ ಸಾಧ್ಯತೆ ಇದೆ ಎಂದು ಭರವಸೆ ನೀಡಿರುವರು. ಇಡೀ ಜಗತ್ತು ಮಲಾಲಾಳಿಗಾಗಿ ಪ್ರಾರ್ಥಿಸುತ್ತಿದೆ.
           ಪಾಕಿಸ್ತಾನದ ಸರ್ಕಾರ ಮಲಾಲಾಳನ್ನು ಉಳಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಿದೆ. ಆಕೆಯ ತಂದೆ ಜಿಯಾವುದ್ದೀನ್ ಗೆ ಲಂಡನ್ನಿನ ರಾಯಭಾರಿ ಕಚೇರಿಯಲ್ಲಿ ಕೆಲಸ ಕೊಟ್ಟು ಇಡೀ ಕುಟುಂಬವನ್ನು ಸ್ಥಳಾಂತರಿಸಿದೆ. ಮುಂದಿನ ದಿನಗಳಲ್ಲಿ ತಾಲಿಬಾನಿಗಳಿಂದ ಮಲಾಲಾಳ ಕುಟುಂಬಕ್ಕೆ ತೊಂದರೆ ಆಗದಿರಲಿ ಎನ್ನುವ ಮುನ್ನೆಚ್ಚರಿಕೆ ಇದು. ಈ ನಡುವೆ ತಾಲಿಬಾನ್ ಉಗ್ರರ ಪಡೆ ಮಲಾಲಾಳ ಮೇಲಾದ ಹತ್ಯಾ ಯತ್ನದ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಮಲಾಲಾ ಧರ್ಮ ನಿಂದಕ ಮತ್ತು ಅಶ್ಲೀಲತೆಯ ಸಂಕೇತ ಎಂದು ಜರೆದಿದೆ. ಆಕೆ ಬದುಕುಳಿದರೂ ಅವಳನ್ನು ಕೊಲ್ಲಲು ಮತ್ತೊಮ್ಮೆ ಪ್ರಯತ್ನಿಸುವುದಾಗಿ ಘೋಷಿಸಿದೆ.
          ಮಲಾಲಾ ಬದುಕಿ ಬರಲಿ ಇದು ಎಲ್ಲರ ಹಾರೈಕೆ. ಮಲಾಲಾಳ ಸ್ನೇಹಿತೆ ಹೇಳಿದಂತೆ "ಸ್ವಾತ್ ಕಣಿವೆಯಲ್ಲಿನ ಪ್ರತಿಯೊಬ್ಬ ಹೆಣ್ಣುಮಗು ಮಲಾಲಾ. ನಾವು ಶಿಕ್ಷಿತರಾಗುತ್ತೇವೆ. ನಾವು ಜಯಶಾಲಿಗಳಾಗುತ್ತೇವೆ. ತಾಲಿಬಾನಿಗಳು ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ". ಅಲ್ಲಿ ಮಲಾಲಾಳ ಧ್ವನಿ ಪ್ರತಿಧ್ವನಿಸುತ್ತಿದೆ. ಕ್ರಮೇಣ ಆ ಧ್ವನಿ ಇಡೀ ಪಾಕಿಸ್ತಾನವನ್ನು ವ್ಯಾಪಿಸಲಿದೆ.
           ನವೆಂಬರ್ 14 ಮಕ್ಕಳ ದಿನ (ಈಗಾಗಲೇ ವಿಶ್ವಸಂಸ್ಥೆ ನವೆಂಬರ್ 10 ಮಲಾಲಾ ದಿನ ಎಂದು ಘೋಷಿಸಿದೆ). ಅದಕ್ಕಾಗಿ ದೂರದ ಇಂಗ್ಲೆಂಡಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ  ಆ ಹೆಣ್ಣು ಮಗು ನೆನಪಾಯಿತು. ಇಂಟರ್ ನೆಟ್ ನಲ್ಲಿ ಹುಡುಕಿದಾಗ ಒಂದಿಷ್ಟು ಮಾಹಿತಿ ದೊರೆಯಿತು. ಹೀಗೆ ದೊರೆತ ಮಾಹಿತಿಗೆ ಒಂದಿಷ್ಟು ರೆಕ್ಕೆ ಪುಕ್ಕ ಜೋಡಿಸಿದಾಗ ಅದೊಂದು ಲೇಖನವಾಗಿ ಈಗ ನಿಮ್ಮೆದುರು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

Thursday, November 8, 2012

ಅಭಿನಂದನೆಗಳು ಸರ್ ನಿಮಗೆ

     

         ಶಿಕ್ಷಣ ತಜ್ಞರು ಮತ್ತು  ಬಿ.ವಿ.ವಿ.ಸಂಘದ ಆಡಳಿತಾಧಿಕಾರಿಗಳಾದ  ಪ್ರೊ.ಎನ್.ಜಿ.ಕರೂರ ಅವರಿಗೆ 2012ನೆ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಅತ್ಯಂತ ಸಂತಸದ ಸಂಗತಿ. ಸುಮಾರು ಐದು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವ ಮನಸ್ಸು ಅವರದು. ಎಲ್ಲರೂ ಹೇಳುವಂತೆ ಈ ಪ್ರಶಸ್ತಿ ಶಿಕ್ಷಣದ ಕುರಿತು ಅಪಾರ ಕಾಳಜಿಯುಳ್ಳ  ಅವರಿಗೆ ಎಂದೋ ದೊರೆಯಬೇಕಿತ್ತು. ತಡವಾಗಿಯಾದರೂ ಪ್ರಶಸ್ತಿ ದೊರೆಯಿತಲ್ಲ ಎನ್ನುವ ಸಂತಸ ಮತ್ತು ಸಮಾಧಾನ ಅವರನ್ನು ಬಲ್ಲವರಿಗೆ.
         ಪ್ರೊ.ಎನ್.ಜಿ.ಕರೂರ ವಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದವರು. ಅವರು ಚಡಚಣದ ಗೆಳೆಯರ ಗುಂಪಿನ ಪ್ರಭಾವಳಿಯಲ್ಲಿ ಬೆಳೆದವರು. ಮಧುರ ಚೆನ್ನರ ಮತ್ತು ಸಿಂಪಿ ಲಿಂಗಣ್ಣನವರ ವ್ಯಕ್ತಿತ್ವದ ಗಾಢ ಪ್ರಭಾವಳಿ ಇವರ ವೃತ್ತಿ ಮತ್ತು ವೈಯಕ್ತಿಕ ಬದುಕಿನೊಂದಿಗೆ ಬೆಸೆದು ಕೊಂಡಿದೆ. ಗೆಳೆಯರ ಗುಂಪಿನ ಎರಡನೆ ತೆಲೆಮಾರಿನ ಶ್ರೀ ಗುರುಲಿಂಗ ಕಾಪಸೆ ಅವರೊಂದಿಗೆ ಇವರದು ಅನ್ಯೋನ್ಯ ಸ್ನೇಹ ಸಂಬಂಧ. ಒಂದು ಸಾಹಿತ್ಯಕ ವಾತಾವರಣದಲ್ಲಿ ತಮ್ಮ   ವ್ಯಕ್ತಿತ್ವವನ್ನು ರೂಪಿಸಿಕೊಂಡ ಶ್ರೀಯುತರದು ಅತ್ಯಂತ ಸಂವೇದನಾಶೀಲ ಮನೋಭಾವ. 
        ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ, ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾಗಿ ಪ್ರೊ.ಎನ್.ಜಿ.ಕರೂರ ಅವರದು ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ ಐದು ದಶಕಗಳ ಅನುಭವ. ಈ ಐದು ದಶಕಗಳ ಅವಧಿಯಲ್ಲಿ ಅವರಿಂದ ವಿದ್ಯಾರ್ಜನೆಗೊಂಡ ವಿದ್ಯಾರ್ಥಿಗಳ ಸಂಖ್ಯೆ ಸಾವಿರಾರು. ಜೊತೆಗೆ ಅವರ ಅನುಭವದ ಮೂಸೆಯಲ್ಲಿ ರೂಪಿತಗೊಂಡ ಶಿಕ್ಷಣ ಸಂಸ್ಥೆಗಳು ಹಲವಾರು. ತಮ್ಮ ಸುದೀರ್ಘ ಸೇವಾವಧಿಯಲ್ಲಿ ಅವರ ಶಿಕ್ಷಣದ ಕುರಿತಾದ ಉಪನ್ಯಾಸಗಳು ಅಸಂಖ್ಯಾತ ಮತ್ತು ಬರೆದ ಪುಸ್ತಕಗಳು ಅನೇಕ.
       ಶಿಕ್ಷಣದ ಔನತ್ಯ ಮತ್ತು ಅದರ ಪಾವಿತ್ರ್ಯತೆಯ ಕಾಯ್ದುಕೊಳ್ಳುವಿಕೆಗಾಗಿ ಅವರದು ನಿರಂತರ ಹುಡುಕಾಟ. ಅದು ಪ್ರಾಥಮಿಕ ಶಿಕ್ಷಣವಾಗಿರಲಿ, ಮಾಧ್ಯಮಿಕ ಶಿಕ್ಷಣ ಇರಲಿ ಉನ್ನತ ಹಾಗೂ ವೃತ್ತಿಪರ ಶಿಕ್ಷಣವಿರಲಿ ಒಟ್ಟಾರೆ ವಿದ್ಯಾರ್ಥಿ ಸಮೂಹಕ್ಕೆ ಗುಣಾತ್ಮಕ ಶಿಕ್ಷಣ ದೊರೆಯಬೇಕೆನ್ನುವುದು ಅವರ ಕಳಕಳಿ. ಗುಣಾತ್ಮಕ ಶಿಕ್ಷಣಕ್ಕೆ ಏನು ಬೇಕೆನ್ನುವುದನ್ನೂ ಅವರು ಪ್ರತಿಪಾದಿಸುತ್ತಾರೆ. ಪರಿಣಿತ ಮತ್ತು ಅನುಭವಿಕ ಬೋಧಕ ವೃಂದ, ಸುಸಜ್ಜಿತ ಪ್ರಯೋಗಾಲಯಗಳು, ಅತ್ಯುತ್ತಮ ಸೌಕರ್ಯದ ಗ್ರಂಥಾಲಯ, ವಿಶಾಲ ಆಟದ ಬಯಲು, ಆಧುನಿಕ ಬೋಧನಾ ಸಲಕರಣೆಗಳಿಂದ ಕೂಡಿದ ಪಾಠದ ಕೊಠಡಿಗಳು ಶಿಕ್ಷಣದ ಗುಣ ಮಟ್ಟದ ಹೆಚ್ಚಳಕ್ಕೆ ಅಗತ್ಯವಾದ ಅವಶ್ಯಕತೆಗಳಿವು ಎನ್ನುವುದು ಅವರ ಕಿವಿಮಾತು. ವಿಶೇಷವಾಗಿ ಪ್ರಾಥಮಿಕ ಶಿಕ್ಷಣದ ಬಗ್ಗೆ ಅವರಿಗೆ ಅಪರಿಮಿತವಾದ ಕಾಳಜಿ. ಪ್ರಾಥಮಿಕ ಶಿಕ್ಷಣವೇ ಶೈಕ್ಷಣಿಕ ಬದುಕಿನ ಅಡಿಪಾಯ ಎನ್ನುವುದನ್ನು ಬಲವಾಗಿ ಸಮರ್ಥಿಸುವ ಶ್ರೀಯುತರದು ಉನ್ನತ ಶಿಕ್ಷಣದ ಸಂದರ್ಭದಲ್ಲಿ ದೊರೆಯುವ ಎಲ್ಲ ಪ್ರಕಾರದ ಶೈಕ್ಷಣಿಕ ಸೌಲಭ್ಯಗಳು ಮಗುವಿಗೆ ಪ್ರಾಥಮಿಕ ಹಂತದಲ್ಲೇ ದೊರೆಯಬೇಕೆನ್ನುವ ಅಭಿಪ್ರಾಯ. ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯನ್ನು ನೋಡಿ ಖುಷಿ ಪಡುವ ಅವರದು ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳನ್ನೂ ತೀರ ವೈಯಕ್ತಿಕವಾಗಿ ತೆಗೆದುಕೊಂಡು ನೊಂದುಕೊಳ್ಳುವ ಸಂವೇದನಾಶೀಲ ಮನಸ್ಸು. 
ಶಿಕ್ಷಣದ ಕುರಿತಾದ ಅವರ ಕಾಳಜಿಗಳು:-
1. ಶಿಕ್ಷಕ ಅಧ್ಯಯನ ಶೀಲ ಪ್ರವೃತ್ತಿಯನ್ನು ಸದಾ ಜಾಗೃತವಾಗಿಟ್ಟುಕೊಂಡು ವಿದ್ಯಾರ್ಥಿಗಳನ್ನು ಪ್ರೀತಿಸುತ್ತ ಎಲ್ಲಕ್ಕೂ ಮಿಗಿಲಾಗಿ ಶೀಲ ಸಂಪನ್ನರಾಗಿ ಬಾಳಬೇಕು.
2. ವಿದ್ಯಾರ್ಥಿಗಳಿಗೆ ಒಳ್ಳೆಯ ಸಂಸ್ಕಾರ ನೀಡುವುದು, ಅಭಿರುಚಿಯನ್ನು ತಿದ್ದುವುದು ಶಿಕ್ಷಣದ ಉದ್ದೇಶ. ಅದು ಫಲಿಸದಿದ್ದರೆ ಎಲ್ಲವೂ ವ್ಯರ್ಥ. 
3. ಸರಕಾರ ಕೊಡುವ ಪ್ರಶಸ್ತಿಗಿಂತಲೂ ಶಿಕ್ಷಕರಿಗೆ ವಿದ್ಯಾರ್ಥಿಗಳು ಕೊಡುವ ಪ್ರಶಸ್ತಿ ಶ್ರೇಷ್ಠ. ಬೋಧನಾ ಕೌಶಲ್ಯದ ಜೊತೆ ವಿದ್ಯಾರ್ಥಿಗಳನ್ನು ಪ್ರೀತಿಸುವ ಕಕ್ಕುಲಾತಿ ಮುಖ್ಯ. 
4. ರಾಜ್ಯದಲ್ಲಿ ಈ ವರ್ಷ ನೂರಿನ್ನೂರು ಬಿ.ಎಡ್ ಕಾಲೇಜುಗಳು ಅಸ್ತಿತ್ವಕ್ಕೆ. ನೀತಿ ನಿಯಮಗಳನ್ನು ಗಾಳಿಗೆ ತೂರಿ ಯದ್ವಾ ತದ್ವಾ ಅನುಮತಿ ನೀಡಿ ಶಿಕ್ಷಣ ಕ್ಷೇತ್ರ ಹದಗೆಡಲಿಕ್ಕೆ ಇದೊಂದು ಹೆದ್ದಾರಿ.
5. ದೇಶದ ಭವಿಷ್ಯ ನಿರ್ಮಾಣವಾಗುವುದು ಶಾಲೆ, ಕಾಲೇಜುಗಳಲ್ಲಿ. ಅಲ್ಲಿ ವಿದ್ಯಾರ್ಥಿಗಳ ಮಾರ್ಗದರ್ಶಕರಾದ ಶಿಕ್ಷಕರೇ ಶ್ರೇಷ್ಠ ನಾಗರಿಕರ ನಿರ್ಮಾಪಕರು.

        ಖ್ಯಾತ ವಿಮರ್ಶಕರು ಮತ್ತು ಸಾಹಿತಿಗಳಾದ ಡಾ.ಗುರುಲಿಂಗ ಕಾಪಸೆ ಅವರು ಪ್ರೊ.ಎನ್.ಜಿ.ಕರೂರ ಅವರನ್ನು ಅತಿ ಹತ್ತಿರದಿಂದ ಬಲ್ಲವರು. ಡಾ.ಕಾಪಸೆ ಅವರ ಮಾತುಗಳಲ್ಲಿ ಹೇಳುವುದಾರೆ ಶಿಕ್ಷಣ, ಸಾಹಿತ್ಯ, ಆಡಳಿತ, ಸನ್ನಡತೆ ಇವು ಪ್ರೊ.ಎನ್.ಜಿ.ಕರೂರ ಅವರ ಜೀವನದ ಚತುರ್ಮುಖಗಳು. ಅವುಗಳಿಂದಾಗಿ ಆದರ್ಶ ಶಿಕ್ಷಕ, ಅಧ್ಯಯನಶೀಲ ಸಾಹಿತಿ, ದಕ್ಷ ಆಡಳಿತಗಾರ ಹಾಗು ತತ್ವ ನಿಷ್ಠ ನಡೆ-ನುಡಿ ಇವು ಅವರ ವ್ಯಕ್ತಿತ್ವದ ವಿಶೇಷತೆಗಳಾಗಿ ಕಂಗೊಳಿಸಿವೆ. ವಿದ್ಯಾರ್ಥಿ ದೆಸೆಯಿಂದಲೂ, ಪ್ರಾಪಂಚಿಕ ತೊಂದರೆಗಳಲ್ಲಿಯೂ ತೂಕ ತಪ್ಪದಂತೆ ನಡೆಯುವ ಅವರ ಜಾಗೃತ ಮನಸ್ಸು ಅರ್ಧಶತಮಾನಕ್ಕೂ ಮಿಕ್ಕಿ ಶಿಕ್ಷಣ ಕ್ಷೇತ್ರದಲ್ಲಿ ತನ್ಮಯತೆಯಿಂದ ಕಾರ್ಯ ಮಾಡಿದೆ, ಮಾಡುತ್ತಲೂ ಇದೆ.
               ಸಾಹಿತ್ಯದ ವಿದ್ಯಾರ್ಥಿಯಾಗಿ ಕನ್ನಡ, ಇಂಗ್ಲಿಷ್ ಎರಡರಲ್ಲೂ ಸಮಾನ ಆಸಕ್ತಿ ಹೊಂದಿದ ಅವರು ವರ್ಡ್ಸವರ್ಥ್, ಶೆಲ್ಲಿ, ಇಲಿಯಟ್ ರನ್ನು ತಿಳಿದು ಕೊಂಡಂತೆ ಮಧುರ ಚೆನ್ನ, ಬೇಂದ್ರೆ, ಕುವೆಂಪು ಅವರನ್ನೂ ಬಲ್ಲವರು. ರನ್ನನಂಥ ಪ್ರಾಚೀನ ಕವಿಯನ್ನು ಕುರಿತು ಅಧಿಕಾರವಾಣಿಯಿಂದಲೇ ಮಾತನಾಡಬಲ್ಲವರು. ಹೀಗಿದ್ದರೂ ಅವರ ಬಿ.ಇಡಿ ಮತ್ತು ಎಂ.ಇಡಿಗಳು ಶಿಕ್ಷಣ ಕ್ಷೇತ್ರದ ಕಡೆಗೆ ವಾಲುವಂತೆ ಮಾಡಿದವು. ಅವುಗಳಿಂದಾಗಿ ಅವರು ಪ್ರಾಚಾರ್ಯರಾದರು. ಜೊತೆಗೆ ಸಂಸ್ಥೆಗಳನ್ನು ಕಟ್ಟುವ, ಬೆಳೆಸುವ ಕಾರ್ಯದಲ್ಲಿ ನಿಮಗ್ನರಾದರು. ಸಂಸ್ಥೆಗಾಗಿ ಹೊಸ ಹೊಸ ಯೋಜನೆಗಳನ್ನು ರೂಪಿಸುವುದು, ಅವುಗಳನ್ನು ಕಾರ್ಯಗತಗೊಳಿಸುವುದು, ಶಿಸ್ತಿನಿಂದ ಹಿಡಿದ ಕೆಲಸವನ್ನು ಪೂರೈಸುವುದು ಇವು ಅವರ ನಿರಂತರದ ಕಾರ್ಯಚಟುವಟಿಕೆಗಳಾದವು.

ಅವರೊಳಗಿನ ಬರಹಗಾರ 
         ಪ್ರೊ.ಎನ್.ಜಿ.ಕರೂರ ಅವರದು ಸೃಜನಶೀಲ ಮನಸ್ಸು. ಇಂಗ್ಲಿಷ್ ಸಾಹಿತ್ಯವನ್ನು ಓದಿಕೊಂಡಿರುವ ಅವರು ಬರವಣಿಗೆಯ ಕ್ಷೇತ್ರದಲ್ಲೂ ಕೃಷಿ ಮಾಡಿರುವರು. ಭಾಷೆ, ಶಿಕ್ಷಣ, ಸಾಮಾಜಿಕ ಸಮಸ್ಯೆಗಳು, ಸಾಹಿತ್ಯ, ಕಲೆಗೆ ಸಂಬಂಧಿಸಿದಂತೆ ಹಲವಾರು ಲೇಖನಗಳನ್ನು ಬರೆದಿರುವರು. ಅಪರೂಪದವರು, ಶಿಕ್ಷಣ ಮಾರ್ಗ, ಮಿಂಚು ಮಾಲೆ, ಬಾನ್ದನಿ, ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಇವು ಶ್ರೀಯುತರು ಬರೆದಿರುವ ಪ್ರಮುಖ ಕೃತಿಗಳು. ಸಾರ್ಥಕ ಮತ್ತು ಅಂತರಂಗದ ರತ್ನ ಅವರ ಸಂಪಾದಿತ ಕೃತಿಗಳು. 
         ಬಾಗಲಕೋಟೆಯ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘಕ್ಕೆ ಅವರು ಆಡಳಿತಾಧಿಕಾರಿಗಳಾಗಿ ಬಂದ ಪ್ರಾರಂಭದ ದಿನಗಳಲ್ಲಿ ಅವರು ಮಾಡಿದ ಮೊದಲ ಕೆಲಸ ಕಾರ್ಯಾಧ್ಯಕ್ಷರ ಇಚ್ಛೆಯಂತೆ 'ಸಮಾಚಾರ' ಪತ್ರಿಕೆಯನ್ನು ಪ್ರಾರಂಭಿಸಿದ್ದು. ಬಿ.ವಿ.ವಿ.ಸಂಘದ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಪತ್ರಿಕೆಯಲ್ಲಿ ಸಿಬ್ಬಂದಿ ವರ್ಗದವರ ಲೇಖನಗಳ ಪ್ರಕಟಣೆಗೆ ಪ್ರೋತ್ಸಾಹ ನೀಡಿದರು. ಪತ್ರಿಕಾ ಪ್ರಕಟಣೆಯ ಪರಿಣಾಮ ಒಂದು ಸಾಹಿತ್ಯಕ ವಾತಾವರಣ ನಿರ್ಮಾಣವಾಗಿ  ಬಿ.ವಿ.ವಿ.ಸಂಘದಲ್ಲಿ ಅನೇಕ ಲೇಖಕರು ರೂಪಗೊಳ್ಳಲು ಸಾಧ್ಯವಾಯಿತು. ಶ್ರೀಯುತರ ನೂರಕ್ಕೂ ಹೆಚ್ಚು ಸಂಪಾದಕೀಯ ಲೇಖನಗಳು 'ಸಮಾಚಾರ' ಪತ್ರಿಕೆಯಲ್ಲಿ ಪ್ರಕಟಗೊಂಡವು. ಅವರ ಸಂಪಾದಕೀಯ ಲೇಖನಗಳು ಒಂದಕ್ಕಿಂತ ಇನ್ನೊಂದು ವಿಭಿನ್ನ. ತಮ್ಮ ಸಂಪಾದಕೀಯದಲ್ಲಿ ಉತ್ತಮವಾದದ್ದನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿದರೆ ಸಮಸ್ಯೆಗಳನ್ನು ಯಾವ ಮುಲಾಜು ಮತ್ತು ಬಿಡೆಗೆ ಸಿಲುಕದೆ ಟಿಕಿಸಿರುವರು. ತಮ್ಮ ಮೊನಚು ಬರವಣಿಗೆಯಿಂದ ಒಂದು ಜಾಗೃತ ವಾತಾವರಣವನ್ನು ನಿರ್ಮಿಸಿ ಆ ಮೂಲಕ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಕಾರಣರಾಗಿರುವರು. ಅವರ ಬಹಳಷ್ಟು ಲೇಖನಗಳಲ್ಲಿ ಒಂದು ತುಡಿತ, ಸಂವೇದನೆ, ಪ್ರಾಮಾಣಿಕ ಕಳಕಳಿ, ಸಾತ್ವಿಕ ಸಿಟ್ಟು ಮತ್ತು ಬದಲಾಗದ ಪರಿಸ್ಥಿತಿ ಕುರಿತಾದ ಹತಾಶ ಸ್ಥಿತಿ ಎದ್ದು ಕಾಣುತ್ತವೆ. ಒಂದು ಸೂಕ್ಷ್ಮ ಸಂವೇದನಾಶೀಲ ಮನಸ್ಸಿನ ನಿಜವಾದ ಕಳಕಳಿ  ಇದು.

  ಅವರೊಂದಿಗೆ ಒಂದು ದಶಕದ ನಂಟು 
          ನಾನು 2001ರಲ್ಲಿ ಬಿ.ವಿ.ವಿ.ಸಂಘದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಗ್ರಂಥಪಾಲಕನಾಗಿ ನಿಯುಕ್ತಿಗೊಂಡ ದಿನದಿಂದ ನನಗೆ ಅವರ ನಿಕಟ ಸಂಪರ್ಕವಿದೆ. 'ಸಮಾಚಾರ' ಪತ್ರಿಕೆಗೆ ನಾನು ಬರೆಯುವ ಲೇಖನಗಳನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲೇಖನ ಮೆಚ್ಚುಗೆಯಾಗದೇ ಇದ್ದಲ್ಲಿ ಬೇಸರಿಸಿದ್ದಾರೆ. ಹೇಗೆ ಬರೆಯ ಬೇಕೆಂದು ತಿಳಿ ಹೇಳಿದ್ದಾರೆ. ಒಂದರ್ಥದಲ್ಲಿ ನನ್ನೊಳಗಿನ ಬರೆಯುವ ಹವ್ಯಾಸಕ್ಕೆ ನೀರೆರೆದು ಪೋಷಿಸಿದ್ದಾರೆ. 'ಸಾಧನೆ' ಪುಸ್ತಕ ಬರೆಯುತ್ತಿರುವ ಸಂದರ್ಭ ಪ್ರತಿ ಘಳಿಗೆ ಜೊತೆಗೆ ನಿಂತು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಪುಸ್ತಕ ಪ್ರಕಟವಾಗಿ ಹೊರಬಂದ ನಂತರ ಅನೇಕ ವ್ಯಕ್ತಿಗಳೆದುರು ಕರೆದೊಯ್ದು ನಿಲ್ಲಿಸಿ ನನ್ನನ್ನು ಅವರಿಗೆ ಪರಿಚಯಿಸಿದ್ದಾರೆ. ಅವರಿಂದ ನನ್ನ ಓದಿನ ವ್ಯಾಪ್ತಿ ವಿಸ್ತರಿಸಿದೆ. ತಾವು ಓದಿದ ಅನೇಕ ಉತ್ತಮ ಪುಸ್ತಕಗಳನ್ನು ಕೊಟ್ಟು ಓದುವಂತೆ ಪ್ರಚೋದಿಸಿದ್ದಾರೆ. ಒಂದು ಸೃಜನಶೀಲ ಹವ್ಯಾಸ ಮೊಳಕೆಯೊಡೆದು ಬೆಳೆಯಲು ಕಾರಣರಾಗಿರುವ ಶ್ರೀಯುತರಿಗೆ ನಾನು ಮತ್ತು ನನ್ನೊಳಗಿನ ಬರಹಗಾರ ಕೃತಜ್ಞರಾಗಿದ್ದೇವೆ.
           ಒಮ್ಮೆ ಪುಸ್ತಕವೊಂದರ ಪ್ರಕಟಣಾ ಕೆಲಸಕ್ಕೆ ಸಂಬಂಧಿಸಿದಂತೆ ನಾನು ಮತ್ತು ಸ್ನೇಹಿತರಾದ ಶ್ರೀ ಪಿ.ಎನ್.ಸಿಂಪಿ ಅವರು ಹಿರಿಯರಾದ ಶ್ರೀ ಎನ್.ಜಿ.ಕರೂರ ಅವರೊಂದಿಗೆ ಗದುಗಿಗೆ ಹೋಗುವ ಸಂದರ್ಭ ಒದಗಿ ಬಂತು. ಹೊರ ನೋಟಕ್ಕೆ ಗಂಭೀರ ವದನರಾಗಿ ಮತ್ತು ಮಿತಭಾಷಿಯಾಗಿ ಕಾಣುವ ಅವರು ಆ ಘಳಿಗೆ ನಮ್ಮಗಳ ಊಟ ತಿಂಡಿಯ ಬಗ್ಗೆ ತೋರಿದ ಕಾಳಜಿ, ಕಕ್ಕುಲಾತಿ ಕಂಡು ಮೂಕವಿಸ್ಮಿತನಾಗಿದ್ದೇನೆ. ರಾತ್ರಿ ಬಹಳ ತಡವಾಯಿತೆಂದು ನಮ್ಮನ್ನು ವಾಹನದಲ್ಲಿ ನಮ್ಮ ನಮ್ಮ ಮನೆಯವರೆಗೂ ಬಿಟ್ಟು ಹೋದ ಅವರ ಔದಾರ್ಯ ಅವರ ವ್ಯಕ್ತಿತ್ವಕ್ಕೊಂದು ದೃಷ್ಟಾಂತ. ಆ ಪ್ರಯಾಣದ ವೇಳೆ ಅವರಿಂದ ಅನೇಕ ವಿಷಯಗಳನ್ನು ಕಲಿಯಲು ಸಾಧ್ಯವಾಯಿತು.
   
           ಶ್ರೀಯುತರಿಗೆ ಅಭಿನಂದನೆಗಳು ಮತ್ತೊಮ್ಮೆ.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 
      

Thursday, November 1, 2012

ಕರುನಾಡಿನಲ್ಲಿ ಕನ್ನಡ: ಎರಡು ಪ್ರಶ್ನೆಗಳು

ಭಾಷೆಯ ಮೇಲೆ ಜಾಗತೀಕರಣದ ಪ್ರಭಾವ ಮತ್ತು ಚಳುವಳಿಗಳ ಪಾತ್ರ 

         ಜಾಗತೀಕರಣ ಎನ್ನುವುದು ಈ ದಿನಗಳಲ್ಲಿ ಇಡೀ ನಾಡಿನ ಸಾಂಸ್ಕೃತಿಕ ಮತ್ತು ಸಾಮಾಜಿಕ ಬದುಕನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಜಾಗತೀಕರಣದ ಪರಿಣಾಮವಾಗಿ ಇವತ್ತು ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ  ಕ್ಷೀಣಿಸುತ್ತಿದೆ. ಇದಕ್ಕೆ ವಿರುದ್ಧವಾಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆಲ್ಲ ಕಾರಣವೇನು? ಅದು ಇಂಗ್ಲಿಷ್ ಭಾಷೆಯ ಪರವಾಗಿ ಪಾಲಕರು ತೋರುತ್ತಿರುವ ಒಲವು. ಇಂಗ್ಲಿಷ್ ಭಾಷೆ ಜಾಗತೀಕರಣದ ಪರಿಣಾಮ ಅದು ನಮ್ಮ ಬದುಕಿನ ಭಾಷೆ ಎನ್ನುವ ನಿರ್ಧಾರಕ್ಕೆ ಪಾಲಕರೆಲ್ಲ ಬಂದು ನಿಂತಿರುವರು. ಇಂಗ್ಲಿಷ್ ಭಾಷೆಯಿಂದ ಮಾತ್ರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎನ್ನುವ ಮನೋಭಾವ ಬಲಗೊಳ್ಳುತ್ತಿದೆ. ಅದಕ್ಕೆ ತಕ್ಕಂತೆ ಜಾಗತೀಕರಣ ಇಂಗ್ಲಿಷ್ ಮಾಧ್ಯಮ ಶಿಕ್ಷಣಕ್ಕೆ ಪೂರಕವಾದ ವೇದಿಕೆಯನ್ನು ಸಜ್ಜುಗೊಳಿಸುತ್ತಿದೆ.
       ಒಂದು ಕಾಲದಲ್ಲಿ ಬೆಂಗಳೂರಿನ ಗಾಂಧಿ ನಗರದಲ್ಲಿ ಕನ್ನಡದಲ್ಲಿ ಮಾತನಾಡುವ ವ್ಯಾಪಾರಿಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿತ್ತು. ಆದರೆ ಇವತ್ತು ಏನಾಗಿದೆ ಅದೇ ಗಾಂಧಿನಗರದಲ್ಲಿ ಇಂಗ್ಲಿಷ್ ಭಾಷೆ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಉಪಹಾರ ಮಂದಿರಗಳಲ್ಲಿ ಕೆಲಸ ಮಾಡುವ ಮಾಣಿಗಳೆಲ್ಲ ಇಂಗ್ಲಿಷನಲ್ಲೆ ಮಾತನಾಡುತ್ತಿರುವರು. ಇದು ವ್ಯಂಗ್ಯವಲ್ಲ ಆದರೆ ಸಂವಹನದ ಭಾಷೆಯಾಗಿ ಕನ್ನಡ ಮರೆಯಾಗುತ್ತಿರುವುದರ ದುರಂತಕ್ಕೆ ಇದೊಂದು ನಿದರ್ಶನ.
        ಈ ಜಾಗತೀಕರಣವನ್ನು ನಾವುಗಳೆಲ್ಲ ನಮ್ಮ ಮನೆಯೊಳಗೂ ಬಿಟ್ಟು ಕೊಂಡಿದ್ದೇವೆ. ನಮ್ಮ ಬಾಲ್ಯದ ದಿನಗಳಲ್ಲಿ ನಮಗೆಲ್ಲ ಪಾಶ್ಚಾತ್ಯ ಕಲಾವಿದರಿರಲಿ ನಮ್ಮ ನೆರೆಯ ರಾಜ್ಯಗಳ ಭಾಷೆಗಳಲ್ಲಿನ ಸಿನಿಮಾಗಳ ಹೆಸರುಗಳು ಕೂಡ ಅಪರಿಚಿತವಾಗಿದ್ದವು. ಇವತ್ತಿನ ಮಕ್ಕಳನ್ನು ಕೇಳಿ ನೋಡಿ ಅವರಿಗೆ ಇಂಗ್ಲಿಷ್, ಜರ್ಮನ್, ಫ್ರೆಂಚ್ ಭಾಷೆಗಳ ಕಲಾವಿದರೆಲ್ಲ ಗೊತ್ತು. ಜಾಗತೀಕರಣದ ಪರಿಣಾಮ ವಿದೇಶಿ ಸಿನಿಮಾಗಳೆಲ್ಲ ನಮ್ಮ ನೆಲದಲ್ಲಿ ಪ್ರದರ್ಶನಗೊಳ್ಳುತ್ತಿವೆ. ಒಂದರ್ಥದಲ್ಲಿ ವಿದೇಶಿ ಸಿನಿಮಾಗಳ ಪ್ರಭಾವದಿಂದಾಗಿ ನಮ್ಮ ಮಕ್ಕಳು ನಮ್ಮ ನೆಲದ ಸಂಸ್ಕೃತಿಯಿಂದ ದೂರವಾಗಿ ನಮ್ಮದಲ್ಲದ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುತ್ತಿರುವರು. ಅವರಿಗೆಲ್ಲ ಕನ್ನಡ ಎನ್ನುವುದು ಅದು ಕೇವಲ ಕಿಚನ್ ಭಾಷೆ ಎನ್ನುವ ಅಸಡ್ಡೆ. ಇದನ್ನೇ ವಿಪರ್ಯಾಸ ಎನ್ನುವುದು. ಜಾಗತೀಕರಣದಿಂದಾಗಿ ನಾವುಗಳೆಲ್ಲ ಜಗತ್ತಿನ ಎಲ್ಲ ಆಗು ಹೋಗುಗಳಿಗೆ ಮುಖಾಮುಖಿಯಾಗಿ ನಿಂತಿರುವ ಹೊತ್ತಿನಲ್ಲೇ ನಮ್ಮದೇ ನೆಲದ ಸಾವಿರಾರು ವರ್ಷಗಳ ಇತಿಹಾಸವಿರುವ ಭಾಷೆಯನ್ನು ನಾಲ್ಕು ಗೋಡೆಗಳ ಅಡುಗೆ ಕೋಣೆಗೆ ಸೀಮಿತಗೊಳಿಸುತ್ತಿರುವೆವು.
         ಇನ್ನು ಕನ್ನಡ ಚಳುವಳಿಗಳ ಕುರಿತು ಹೇಳುವುದಾದರೆ ಜಾಗತೀಕರಣಕ್ಕೂ ಮತ್ತು ಚಳುವಳಿಗೂ ಒಂದು ರೀತಿಯ ನಿಕಟ ಸಂಬಂಧವಿದೆ. ಜಾಗತೀಕರಣದಿಂದ ಒಂದು ನೆಲದ ಸಂಸ್ಕೃತಿ ಮತ್ತು ಭಾಷೆ ತಲ್ಲಣಗೊಳ್ಳುತ್ತಿರುವ ಸಂದರ್ಭದಲ್ಲೇ ಚಳುವಳಿಗಳು ರೂಪಗೊಳ್ಳಬೇಕು. ಆ ಚಳುವಳಿಗಳು ಜಾಗತೀಕರಣಕ್ಕೆ ಮುಖಾಮುಖಿಯಾಗಿ ನಿಂತು ಈ ನೆಲದ ಸಂಸ್ಕೃತಿ ಮತ್ತು ಭಾಷೆಯನ್ನು ಕಾಯ್ದುಕೊಳ್ಳಬೇಕು. ಆದರೆ ಈ ದಿನಗಳಲ್ಲಿ ಕನ್ನಡ ಪರ ಚಳುವಳಿಗಳು ಯಾವ ಮಟ್ಟದಲ್ಲಿ ಕೆಲಸ ಮಾಡಬೇಕಿತ್ತೋ ಆ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ.
         ನಮಗೆಲ್ಲ ಗೊತ್ತಿರುವಂತೆ 25 ವರ್ಷಗಳ ಹಿಂದೆ ಕನ್ನಡದ ಪರವಾಗಿ ಸಂಘಟಿಸಿದ್ದ ಗೋಕಾಕ ಚಳುವಳಿ ಅಭೂತಪೂರ್ವ ಯಶಸ್ಸು ಕಂಡಿತು. ಸಾಹಿತಿಗಳು, ಸಿನಿಮಾ ಕಲಾವಿದರು ಮತ್ತು ಜನಸಾಮಾನ್ಯರೆಲ್ಲ ಒಂದಾಗಿ ಈ ನಾಡಿನ ಪರ ಹೋರಾಟ ಮಾಡಿದರು. ಆ ಚಳುವಳಿಯ ತೀವೃತೆಗೆ ಮಣಿದ ಅಂದಿನ ಸರ್ಕಾರ ಎಲ್ಲ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವ ಭರವಸೆ ನೀಡಿತು. ಅಂದಿನ ಚಳುವಳಿಗಾರರಲ್ಲಿ ಸ್ವಹಿತಾಸಕ್ತಿಗಿಂತ ನಾಡಿನ ರಕ್ಷಣೆ ಮುಖ್ಯವಾಗಿತ್ತು. ಆದರೆ ಈ ದಿನಗಳಲ್ಲಿ ಏನಾಗುತ್ತಿದೆ. ಚಳುವಳಿ ಎನ್ನುವುದು ನಾಡಿನ ರಕ್ಷಣೆಗಾಗಿ ಮಾಡುವ ಹೋರಾಟ ಎನ್ನುವುದಕ್ಕಿಂತ ಅದೊಂದು ಉದ್ಯೋಗವಾಗಿ ಪರಿವರ್ತಿತವಾಗುತ್ತಿದೆ. ನಿರುದ್ಯೋಗಿಗಳೆಲ್ಲ ಒಂದು ಗುಂಪು ಕಟ್ಟಿಕೊಂಡು ಅದಕ್ಕೊಂದು ಹೆಸರಿಟ್ಟು ಬೀದಿಗಿಳಿದರೆ ಇಂಥವರಿಂದ ಕನ್ನಡದ ರಕ್ಷಣೆ ಸಾಧ್ಯವೇ?. ಇನ್ನು ಕೆಲವರಿಗೆ ಈ ಚಳುವಳಿ ಎನ್ನುವುದು ರಾಜಕೀಯ ಪ್ರವೇಶಕ್ಕೆ ವೇದಿಕೆಯಾಗಿ ಬಳಕೆಯಾಗುತ್ತಿರುವುದು ದುರ್ದೈವದ ಸಂಗತಿ. ಅನೇಕರು ಕನ್ನಡ ಪರ ಹೋರಾಟದ ಹೆಸರಿನಲ್ಲಿ ತಮ್ಮ ತಮ್ಮ ಬದುಕನ್ನು ಸಮೃದ್ಧವಾಗಿ ಕಟ್ಟಿಕೊಂಡರೆ ವಿನಃ ಅಂಥವರಿಂದ ನಾಡು ನುಡಿಗೆ ಸಂಬಂಧಿಸಿದಂತೆ ಯಾವ ಕೆಲಸಗಳೂ ಆಗುತ್ತಿಲ್ಲ. ಇದಕ್ಕೆಲ್ಲ ಕಾರಣ ನಮ್ಮ ಚಳುವಳಿಗಾರರಲ್ಲಿ ವೈಯಕ್ತಿಕ ಹಿತಾಸಕ್ತಿ ಬಹು ಮುಖ್ಯವಾಗಿ ಕೆಲಸಮಾಡುತ್ತಿದೆ.
        ಆಯಾ ಕಾಲಘಟ್ಟದಲ್ಲಿ ಒಂದು ನೆಲದ ಸಾಂಸ್ಕೃತಿಕ ಬದುಕಾಗಲಿ ಮತ್ತು ಭಾಷೆಯಾಗಲಿ ಸಮಸ್ಯೆಗಳನ್ನೆದುರಿಸುವುದು ಸಹಜ. ಆದರೆ ಆ ಎಲ್ಲ ಸಮಸ್ಯೆಗಳು ಮತ್ತು ತಲ್ಲಣಗಳ ನಡುವೆಯೂ ನೆಲದ ಸಂಸ್ಕೃತಿ ಮತ್ತು ಭಾಷೆ ತನ್ನ ಮೂಲ ಗುಣವನ್ನು ಮತ್ತು ಸಹಜತೆಯನ್ನು ಕಾಯ್ದುಕೊಂಡು ಬರಬೇಕು. ಇದು ಚಳುವಳಿಗಳಿಂದ ಸಾಧ್ಯ. ಸಧ್ಯದ ಪರಿಸ್ಥಿತಿಯಲ್ಲಿ ನಮ್ಮ ನಾಡಿನ ಚಳುವಳಿಗಳಿಂದ ಇಂಥದ್ದೊಂದು ಆಶಾದಾಯಕ ಬೆಳವಣಿಗೆ ಕಾಣಿಸುತ್ತಿಲ್ಲ.

ಕನ್ನಡ ಭಾಷೆಯ ಬೆಳವಣಿಗೆಗೆ ಸಿನಿಮಾ ಮಾಧ್ಯಮದ ಕೊಡುಗೆ 

         ಸಿನಿಮಾ ಎನ್ನುವುದು ಅತ್ಯಂತ ಪರಿಣಾಮಕಾರಿಯಾದ ಅಭಿವ್ಯಕ್ತಿ ಮಾಧ್ಯಮ. ಆದ್ದರಿಂದ ಸಿನಿಮಾವನ್ನು ಒಂದು ನೆಲದ ಸಾಂಸ್ಕೃತಿಕ ಮಾಧ್ಯಮವಾಗಿ ಪರಿಗಣಿಸಬೇಕಾದ ಅಗತ್ಯತೆ ಇದೆ. ಸಿನಿಮಾ ಮಾಧ್ಯಮ ಅನೇಕ ಸಂದರ್ಭಗಳಲ್ಲಿ ತನ್ನ ನೆಲದ ಇಡೀ ಸಾಂಸ್ಕೃತಿಕ ಬದುಕನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರತಿಬಿಂಬಿಸಿದೆ. ಕನ್ನಡ ಭಾಷೆಯನ್ನೇ ತೆಗೆದುಕೊಳ್ಳಿ ಸರ್ವಕಾಲಿಕ ಶ್ರೇಷ್ಠ ಎನ್ನುವ ಮೆಚ್ಚುಗೆಗೆ ಪಾತ್ರವಾದ ಸಿನಿಮಾಗಳು ಈ ನೆಲದಲ್ಲಿ ನಿರ್ಮಾಣಗೊಂಡಿವೆ. ನಾಂದಿ, ಸ್ಕೂಲ್ ಮೇಷ್ಟ್ರು, ಬಂಗಾರದ ಮನುಷ್ಯ, ಅಮರಶಿಲ್ಪಿ ಜಕಣಾಚಾರಿಯಂಥ ಚಿತ್ರಗಳು ಈ ನೆಲದ ಹಿರಿಮೆಯನ್ನು ಇಡೀ ದೇಶಕ್ಕೆ ಪರಿಚಯಿಸಿದವು. ತಬರನ ಕಥೆ, ದ್ವೀಪ, ಘಟಶ್ರಾದ್ಧದಂಥ ಕಲಾತ್ಮಕ ಚಿತ್ರಗಳು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಪರಿಣಾಮ ವಿದೇಶಿಯರಿಗೂ ಈ ನಾಡಿನ ಸಂಸ್ಕೃತಿಯ ಪರಿಚಯವಾಯಿತು.
        ಈ ಸಿನಿಮಾ ಎನ್ನುವ ಮಾಧ್ಯಮವನ್ನು ನಾಡು-ನುಡಿಯ ಬೆಳವಣಿಗೆಗೆ ಪೂರಕವಾಗುವಂತೆ ಹೇಗೆ ಪರಿಣಾಮಕಾರಿಯಾಗಿ ದುಡಿಸಿಕೊಳ್ಳಬೇಕು ಎನ್ನುವ ಪ್ರಶ್ನೆ ಎದುರಾದಾಗ ನಮಗೆ ತಟ್ಟನೆ ನೆನಪಾಗುವುದು ಈ ಬೆಂಗಾಲಿಗಳು ಮತ್ತು ಮಲೆಯಾಳಿಗಳು. ಈ ಜಾಗತೀಕರಣದ ಯುಗದಲ್ಲೂ ಅವರುಗಳು ಸಿನಿಮಾವನ್ನು ತಮ್ಮ ನೆಲದ ಸಂಸ್ಕೃತಿಗೆ ಪೂರಕವಾಗಿ ಬಳಸಿಕೊಳ್ಳುತ್ತಿರುವರು. ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುವ ಬಹುತೇಕ ಸಿನಿಮಾಗಳಲ್ಲಿ ಈ ಬಂಗಾಳಿ ಮತ್ತು ಮಲೆಯಾಳಂ ಭಾಷೆಗಳದ್ದೆ ಸಿಂಹಪಾಲು. ಇವತ್ತಿಗೂ ಅವರ ಸಿನಿಮಾಗಳು ತಮ್ಮ ಮೂಲ ಭಾಷೆ ಮತ್ತು ಸಂಸ್ಕೃತಿಯಿಂದ ದೂರವಾಗಿಲ್ಲ.
      ಕನ್ನಡ ಭಾಷೆಯಲ್ಲಿ ಏನಾಗುತ್ತಿದೆ? ಕಳೆದ ಎರಡು ದಶಕಗಳ ನಮ್ಮ ಸಿನಿಮಾ ಮಾಧ್ಯಮದ ಬೆಳವಣಿಗೆಯನ್ನು ಅವಲೋಕಿಸಿದರೆ ವಸ್ತುಸ್ಥಿತಿಯ ಅರಿವಾಗುತ್ತದೆ. ಒಂದು ಕಾಲದಲ್ಲಿ ಈ ನೆಲದ ಸಂಸ್ಕೃತಿ ಮತ್ತು ಹಿರಿಮೆಯನ್ನು ಎತ್ತಿ ಹಿಡಿದ ಸಿನಿಮಾ ಮಾಧ್ಯಮ ಕಾಲಾನಂತರದಲ್ಲಿ ಅನೇಕ ಬದಲಾವಣೆಗಳನ್ನು ಕಂಡಿದೆ. ಜಾಗತೀಕರಣ ಎನ್ನುವುದು ನಮ್ಮ ಈ ಸಿನಿಮಾ ಮಾಧ್ಯಮವನ್ನು ವಿನಾಶದಂಚಿಗೆ ತಳ್ಳಿದೆ. ಈ ದಿನಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಬಹುತೇಕ ಸಿನಿಮಾಗಳಲ್ಲಿ ನಮ್ಮ ನೆಲದ ಸೊಗಡು ಕಾಣಿಸುತ್ತಿಲ್ಲ. ಅಲ್ಲಿ ಬಳಕೆಯಾಗುತ್ತಿರುವ ಭಾಷೆಯ ಬಗ್ಗೆ ಅನೇಕ ತಕರಾರುಗಳಿವೆ. ಸಿನಿಮಾಕ್ಕೆ ಅದರದೇ ಆದ ಭಾಷೆಯಿದೆ ಎಂದು ಯಾರು ಹೇಳಿದರೋ ಗೊತ್ತಿಲ್ಲ. ಅದನ್ನೇ ಆಧಾರವಾಗಿಟ್ಟುಕೊಂಡು ಈ ಸಿನಿಮಾ ಜನ ಪ್ರತ್ಯೇಕವಾದ ಸಿನಿಮಾ ಭಾಷೆಯೊಂದನ್ನು ಸೃಷ್ಟಿಸುತ್ತಿರುವರು.
         ಸಿನಿಮಾ ನಿಜಕ್ಕೂ ಅದು ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ಪ್ರತಿಬಿಂಬ. ಅದು ನಮ್ಮ ಭಾಷೆಯ ಹಿರಿಮೆ. ಆತಂಕದ ಸಂಗತಿ ಎಂದರೆ ಸಂಸ್ಕೃತಿ, ಸಮಾಜ, ಭಾಷೆ ಎಲ್ಲವನ್ನೂ ಮೀರಿ ಅಲ್ಲಿ ವ್ಯಾಪಾರಿ ಮನೋಭಾವ ಪ್ರಮುಖ ಪಾತ್ರವಹಿಸುತ್ತಿದೆ. ಜಾಗತೀಕರಣಕ್ಕೆ ಈ ಸಿನಿಮಾ ಮಾಧ್ಯಮವನ್ನು ಮುಖ ಮಾಡಿ ನಿಲ್ಲಿಸುವ ಹುನ್ನಾರ ಅನೇಕರದು. ತಮ್ಮ ಸಿನಿಮಾವೊಂದು ಅನ್ಯ ರಾಜ್ಯಗಳಲ್ಲಿ, ಅನ್ಯ ರಾಷ್ಟ್ರಗಳಲ್ಲಿ ಪ್ರದರ್ಶನಗೊಂಡು ಹಣಗಳಿಸಬೇಕೆನ್ನುವ ಇಚ್ಛಾಶಕ್ತಿ ಪ್ರಬಲವಾದಾಗ ಅಲ್ಲಿ ನಾಡು ನುಡಿಯ ಹಿತಾಸಕ್ತಿ ಮೂಲೆಗುಂಪಾಗುತ್ತದೆ. ಒಂದು ಕಾಲದಲ್ಲಿ ತನ್ನ ಸೃಜನಶೀಲತೆಯ ಮೂಲಕ ಕನ್ನಡ ಭಾಷೆಯ ಹಿರಿಮೆಯನ್ನು ಎತ್ತಿ ಹಿಡಿದ ನಮ್ಮ ಸಿನಿಮಾ ಮಾಧ್ಯಮದ ಸಧ್ಯದ ಪರಿಸ್ಥಿತಿ ಇದು.
       ಭಾಷೆಯೊಂದರ ಬೆಳವಣಿಗೆ ಹಾಗೂ ಮತ್ತದರ ಹಿರಿಮೆ ಅದನ್ನು ನಾವು ಹೇಗೆ ಬಳಸುತ್ತಿರುವೆವು ಎನ್ನುವುದನ್ನು ಅವಲಂಬಿಸಿದೆ. ಜಾಗತೀಕರಣದ ಪರಿಣಾಮ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಅನಿವಾರ್ಯವಾದರೂ ಕನ್ನಡವನ್ನು ನಮ್ಮ ನಮ್ಮ ಮನೆಗಳಲ್ಲಿ ಹೃದಯದ ಭಾಷೆಯಾಗಿ ನೆಲೆಗೊಳಿಸುವ ಕೆಲಸವಾಗಬೇಕು. ಕುವೆಂಪು, ಬೇಂದ್ರೆ ಅವರಿಂದ ದೂರವಾಗಿ ಹ್ಯಾರಿ ಪಾಟರ್ ಗೆ ನಮ್ಮ ಮಕ್ಕಳು ಹತ್ತಿರವಾಗುತ್ತಿರುವುದು ಸಧ್ಯದ ಮಟ್ಟಿಗೆ ಅದು ಕನ್ನಡ ಭಾಷೆಯ ಬಹುದೊಡ್ಡ ಸೋಲು. ಇಂಥದ್ದೊಂದು ಸೋಲಿನ ವಾತಾವರಣದ ನಡುವೆಯೂ ಕನ್ನಡ ಪುಸ್ತಕಗಳ ಓದು ಮತ್ತು ಸದಭಿರುಚಿಯ  ಕನ್ನಡ ಸಿನಿಮಾಗಳ ವೀಕ್ಷಣೆ ನನಗೆ ಅತ್ಯಂತ ಖುಷಿಕೊಡುವ ಸಂಗತಿಗಳಲ್ಲೊಂದು.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

Monday, October 22, 2012

ಮುಳುಗಡೆ ನೆಲದ ನೋವಿನ ಧ್ವನಿ

        ನಾನು ಚಿಕ್ಕವನಿದ್ದಾಗ ನನ್ನೂರಿನಲ್ಲಿ ಸರ್ಕಾರ ಸುಮಾರು ಒಂದು ಸಾವಿರ ಎಕರೆಗಳಷ್ಟು ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಲು ಬೃಹತ್ ಕೆರೆಯೊಂದನ್ನು ಕಟ್ಟಲು ಯೋಜನೆ ರೂಪಿಸಿತು. ಅದಕ್ಕೆ ಅಗತ್ಯವಾದ ಭೂಮಿಯನ್ನು ರೈತರಿಂದ ವಶಪಡಿಸಿಕೊಳ್ಳಲಾಯಿತು. ಹಲವು ವರ್ಷಗಳ ನಂತರ ಕಾಮಗಾರಿ ಪೂರ್ಣಗೊಂಡು ಕೆರೆ ತುಂಬಿ ನಿಂತಿತು. ಕೆರೆಯ ನೀರಿನಿಂದ ಅನೇಕ ರೈತರ ಬದುಕು ಹಸಿರಾಯಿತು ಮತ್ತು ಹಸನಾಯಿತು. ವರ್ಷಕ್ಕೆ ಎರಡು ಬೆಳೆ ಮಾತ್ರ ಬೆಳೆಯುತ್ತಿದ್ದ ರೈತರು ನಂತರದ ದಿನಗಳಲ್ಲಿ ಕೆರೆಯ ನೀರನ್ನು ಉಪಯೋಗಿಸಿಕೊಂಡು ಮೂರು ಬೆಳೆಗಳನ್ನು ಬೆಳೆಯಲಾರಂಭಿಸಿದರು. ರೈತರ ಕೈಯಲ್ಲಿ ಹಣ ಹರಿದಾಡಿ ತಕ್ಕ ಮಟ್ಟಿಗೆ ಸ್ಥಿತಿವಂತರಾದರು. ನಿಜವಾಗಿಯೂ ಸಂಕಷ್ಟಕ್ಕೆ ಸಿಲುಕಿದವರು ಯಾರು ಕೆರೆಯ ನಿರ್ಮಾಣಕ್ಕಾಗಿ ತಮ್ಮ ಭೂಮಿಯನ್ನು ಕಳೆದುಕೊಂಡಿದ್ದರೋ ಆ ರೈತರು. ಸರ್ಕಾರವೇನೋ ಭೂಮಿಗೆ ಬದಲಾಗಿ ಅವರಿಗೆ ಪರಿಹಾರ ರೂಪದಲ್ಲಿ ಹಣ ನೀಡಿತ್ತು. ಆದರೆ ಸರ್ಕಾರ ಕೊಟ್ಟ ಪರಿಹಾರದ ಹಣ ನಿಧಾನವಾಗಿ ಕರಗಲಾರಂಭಿಸಿತು. ಒಂದು ಕಾಲದಲ್ಲಿ ರೈತರಾಗಿದ್ದ ಅವರೆಲ್ಲ ಬದುಕಿಗಾಗಿ ಬೇರೆಯವರ ಹೊಲದಲ್ಲಿ ಕೂಲಿಗಳಾಗಿ ದುಡಿಯಬೇಕಾಯಿತು. ಕೆಲವರಂತೂ ತಮ್ಮ ಕುಟುಂಬದೊಂದಿಗೆ ದೂರದ ನಗರ ಪ್ರದೇಶಕ್ಕೆ ವಲಸೆ ಹೋದರು. ಆ ಕೆರೆಯ ನೀರು ಕಾಲುವೆಯ ಮೂಲಕ ಹರಿದು ಬರುವಾಗ ಆ ಸದ್ದಿನಲ್ಲಿ ಇವತ್ತಿಗೂ ಅಲ್ಲಿ ಅನೇಕರ ನೋವಿನ ನಿಟ್ಟುಸಿರು ಕೇಳಿಸುತ್ತದೆ. ಆ ಕೆರೆಯ ಒಡಲಲ್ಲಿ ಅನೇಕ ರೈತರ ಬದುಕು ಮುಳುಗಿ ಹೋಗಿದೆ. 
       ಇದೆಲ್ಲ ನೆನಪಾಗಲು ಕಾರಣ ಮೊನ್ನೆ ಮಹಾಲಿಂಗಪುರದಲ್ಲಿ ಏರ್ಪಡಿಸಿದ್ದ ಗ್ರಂಥಪಾಲಕರ ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡು ಮರಳಿ ಬರುತ್ತಿರುವಾಗ ನಾನು ಕೇಳಿಸಿಕೊಂಡ ಇಬ್ಬರು ಸಹಪ್ರಯಾಣಿಕರ ಸಂಭಾಷಣೆ. ಮಧ್ಯವಯಸ್ಸಿನವರಾಗಿದ್ದ ಅವರಿಬ್ಬರೂ ಬಾಲ್ಯದಿಂದಲೇ ಪರಿಚಿತರು ಎನ್ನುವುದು ಅವರಿಬ್ಬರ ಸಂಭಾಷಣೆಯಿಂದ ತಿಳಿಯುತ್ತಿತ್ತು. ಹತ್ತು ವರ್ಷಗಳ ನಂತರ ಹೀಗೆ ಆಕಸ್ಮಿಕವಾಗಿ ಅವರಿಬ್ಬರೂ ಬಸ್ಸಿನಲ್ಲಿ ಪ್ರಯಾಣದ ಮಧ್ಯೆ ಭೇಟಿಯಾಗುವಂತಹ ಪ್ರಸಂಗ ಎದುರಾಯಿತು. ಬಾಲ್ಯದ ದಿನಗಳು, ಆ ಪರಿಸರ, ಮುಳುಗಡೆಯಾದ ಮನೆಗಳು, ಬೇರೆಡೆಗೆ ಸ್ಥಳಾಂತರಗೊಂಡಿದ್ದು ಹೀಗೆ ಅನೇಕ ವಿಷಯಗಳು ಅವರ ಮಾತಿನ ನಡುವೆ ಸುಳಿದು ಹೋದವು. ಒಬ್ಬರಂತೂ ತಾವು ಈ ಮೊದಲು ವಾಸಿಸುತ್ತಿದ್ದ ಪರಿಸರಕ್ಕೆ ಈಗ ಅಪರಿಚಿತರಾಗಿ ಹೋಗಿದ್ದೆವೆಂದೂ ಅಲ್ಲಿ ಭೇಟಿ ನೀಡಿದಾಗ ಯಾರೊಬ್ಬರೂ ತನ್ನನ್ನು ಗುರುತಿಸಲಿಲ್ಲವೆಂದು ತುಂಬಾ ಭಾವುಕರಾಗಿ ನುಡಿದರು. ಒಟ್ಟಿಗೆ ಒಂದೇ ಪರಿಸರದಲ್ಲಿ ಸಹೋದರ ಸಂಬಂಧಿಗಳಂತೆ ವಾಸಿಸುತ್ತಿದ್ದ ಕುಟುಂಬಗಳೆಲ್ಲ ಈಗ ಹೊಸ ಪರಿಸರದಲ್ಲಿ ತಮ್ಮ ತಮ್ಮ ಅಸ್ತಿತ್ವವನ್ನು ಕಟ್ಟಿಕೊಳ್ಳಲು ಹೆಣಗುತ್ತಿವೆ ಎನ್ನುವ ಬೇಸರ ಅವರಲ್ಲಿತ್ತು. ಬಸ್ಸಿನಿಂದ ಇಳಿಯುವಾಗ ಮತ್ತೆ ಯಾವಾಗ ಈ ಭೇಟಿ ಎನ್ನುವ ನೋವಿನ ಸಣ್ಣ ಎಳೆಯೊಂದು ಅವರ ಮಾತಿನಲ್ಲಿ ಹಾಗೂ ಮುಖದಲ್ಲಿ ಗೋಚರಿಸುತ್ತಿತ್ತು. 
       ಹೌದು ಮುಳುಗಡೆ ತಂದೊಡ್ಡುವ ಸಮಸ್ಯೆ ಮತ್ತದರ ಭೀಕರತೆ ಅದು ಅನುಭವಿಸಿದವರಿಗೆ ಮಾತ್ರ ಗೊತ್ತು. ನದಿ ಪಾತ್ರವೊಂದಕ್ಕೆ ಅಣೆಕಟ್ಟು ಕಟ್ಟಿ ಅದರಿಂದ ಅನೇಕರ ಬದುಕಿಗೆ ಆಸರೆಯೊದಗಿಸುವುದರ ಹಿಂದೆ ಹಲವಾರು ಜನರ ತ್ಯಾಗ ಮತ್ತು ಬಲಿದಾನದ ಕಥೆಗಳು ಅಡಕವಾಗಿವೆ. ಸರ್ಕಾರವೇನೋ ಸೂಕ್ತ ಹಣಕಾಸಿನ ನೆರವು ನೀಡಿ ಸಂತ್ರಸ್ತರ ಬದುಕಿಗೆ ಅಗತ್ಯವಾದ ನೆಲೆ ಒದಗಿಸಲಾಗುವುದು ಎಂದು ಹೇಳಿ ತನ್ನ ಕಾರ್ಯವನ್ನು ಸಮರ್ಥಿಸಿಕೊಳ್ಳಬಹುದು. ಆದರೆ ಒಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನಿಂದ ಸಂಪೂರ್ಣವಾಗಿ ಬೇರು ಸಮೇತ ಕಿತ್ತು ಬೇರೊಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ತಾಣದಲ್ಲಿ ಬದುಕನ್ನು ಕಟ್ಟಿಕೊಳ್ಳುವುದು ಸಣ್ಣ ಸಂಗತಿಯಲ್ಲ. ಒಂದೆಡೆ ಒಂದೇ ನೆಲದಲ್ಲಿ ಭಾತೃತ್ವದ ಭಾವನೆಯಿಂದ ಹಲವು ತೆಲೆಮಾರುಗಳಿಂದ ಬದುಕಿ ಬಾಳಿದ ಕುಟುಂಬಗಳು ತಮ್ಮ ನೆಲದ ಸಂಬಂಧವನ್ನೇ ಕಡಿದುಕೊಂಡು ಅಪರಿಚಿತ ಪ್ರದೇಶದಲ್ಲಿ ಬದುಕುವಾಗ ಕಾಡುವ ಅನಾಥ ಪ್ರಜ್ಞೆ ನಿಜಕ್ಕೂ ಸಂತ್ರಸ್ತರ ಬದುಕಿಗೆ ಎದುರಾಗುವ ಬಹುದೊಡ್ಡ ಸವಾಲು. ಮುಳುಗಡೆ ಎನ್ನುವುದು ಕೇವಲ ಮನೆ ಎನ್ನುವ ಭೌತಿಕ ವಸ್ತುವನ್ನು ಮಾತ್ರ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದಿಲ್ಲ. ಅದು ಒಂದು ಇಡೀ ಸಾಂಸ್ಕೃತಿಕ ಬದುಕನ್ನೇ ತನ್ನ ಮಡಲಿಗೆಳೆದುಕೊಳ್ಳುತ್ತದೆ. ಒಂದು ಭೌಗೋಳಿಕ ಪ್ರದೇಶದ ಮುಳುಗಡೆಯಿಂದ ಅಲ್ಲಿನ ಸಾಮಾಜಿಕ ಜನಜೀವನ, ಅಲ್ಲಿನ ಸಂಪ್ರದಾಯಗಳು, ಅಲ್ಲಿ ಆಚರಿಸುವ ಹಬ್ಬಗಳು, ಧಾರ್ಮಿಕ ವಿಧಿ ವಿಧಾನಗಳು, ನಾಟಕ, ಬಯಲಾಟ, ಕೋಲಾಟಗಳಂಥ ಸಾಂಸ್ಕೃತಿಕ ಚಟುವಟಿಕೆಗಳು ಇವುಗಳೆಲ್ಲವನ್ನೂ ಮೀರಿದ ಮನುಷ್ಯ ಸಂಬಂಧಗಳು ಹೀಗೆ ಒಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕೇ ಮುಳುಗಿ ಹೋಗುತ್ತದೆ.
      ಪ್ರತಿವಾರದ ಸಂತೆಗೆ ತರಕಾರಿ ಮಾರಲು ಬರುವ ನಿಂಗಜ್ಜಿ ಮುಳುಗಡೆ ತಂದೊಡ್ಡುವ ಮತ್ತೊಂದು ಭೀಕರತೆಯನ್ನು ಅನಾವರಣಗೊಳಿಸುತ್ತಾಳೆ. ಅವಳು ಹೇಳುವಂತೆ ಹಳ್ಳಿಯಲ್ಲಿದ್ದ ಹತ್ತೆಕ್ಕರೆ ಜಮೀನು ಮತ್ತು ಮೂರು ತೆಲೆಮಾರುಗಳಿಂದ ವಾಸಿಸುತ್ತಿದ್ದ ಮನೆ ಜಲಾಶಯದ ಒಡಲು ಸೇರಿವೆ. ಸರ್ಕಾರ ನೀಡಿದ ಪರಿಹಾರದ ಹಣವನ್ನು ಅವಳ ನಾಲ್ಕು ಮಕ್ಕಳೂ ಸಮನಾಗಿ ಹಂಚಿಕೊಂಡಿದ್ದಾರೆ. ಜೀವನದಲ್ಲಿ ಒಮ್ಮೆಯೂ ಅಷ್ಟೊಂದು ದೊಡ್ಡ ಮೊತ್ತದ ಹಣ ಕಾಣದಿದ್ದ ಅವರಿಗೆ ಮಂಗನ ಕೈಗೆ ಮಾಣಿಕ್ಯ ಸಿಕ್ಕಂತಾಯಿತು. ಕೈಯಲ್ಲಿನ ಹಣದ ಪರಿಣಾಮ ವಿಲಾಸಿ ಜೀವನ ಅವರನ್ನು ಕೈ ಬೀಸಿ ಕರೆಯಿತು. ದ್ವಿಚಕ್ರ ವಾಹನ, ಮೋಜು ಮಸ್ತಿಗಾಗಿ ಹಣವೆಲ್ಲ ಖರ್ಚಾಗಿ ಈಗ ಕೈ ಬರಿದಾಗಿದೆ. ಮನೆಯೂ ಮುಳುಗಿ ಹೋಗಿರುವುದರಿಂದ ಹಾಗೂ ಪುನರ್ವಸತಿ ಕೇಂದ್ರದಲ್ಲಿ ಸರ್ಕಾರ ನೀಡಿದ ಜಾಗದಲ್ಲಿ ಮನೆ ಕಟ್ಟಿಸಿಕೊಳ್ಳಲು ಹಣವೂ ಇಲ್ಲದಿರುವುದರಿಂದ ಅವರ ಇಡೀ ಕುಟುಂಬ ನಗರಕ್ಕೆ ಗುಳೆ ಬಂದಿದೆ. ಎರಡು ಕೋಣೆಗಳ ಸಣ್ಣ ಬಾಡಿಗೆ ಮನೆಯೊಂದರಲ್ಲಿ ಮಕ್ಕಳು ಮೊಮ್ಮಕ್ಕಳೊಂದಿಗೆ ದಿನದೂಡುತ್ತಿರುವ ನಿಂಗಜ್ಜಿ ಈ ಇಳಿವಯಸ್ಸಿನಲ್ಲೂ ದುಡಿಯುತ್ತಿರುವಳು. ಆಕೆ ಹೇಳುವಂತೆ ಇದು ಕೇವಲ ನಿಂಗಜ್ಜಿಯ ಕುಟುಂಬವೊಂದರ ಕಥೆಯಲ್ಲ. ಮುಳುಗಿ ಹೋಗಿರುವ ಅನೇಕ ಹಳ್ಳಿಗಳಲ್ಲಿನ ಕುಟುಂಬಗಳ ಕಥೆಯಿದು.
      ಮುಳುಗಡೆಯಾದವರು ಹೊಸ ಪರಿಸರದಲ್ಲಿ ಹೊಸ ಬದುಕನ್ನು ಕಟ್ಟಿಕೊಳ್ಳಲು ಸ್ಥಳಾಂತರಗೊಂಡರು. ಆದರೆ ಮುಳುಗಡೆಯಾಗದೆಯೂ ಮುಳುಗಿ ಹೋಗುವ ಕುಟುಂಬಗಳದ್ದು ಇನ್ನೊಂದು ರೀತಿಯ ದುರ್ಗತಿ. ಜಲಾಶಯಗಳ ಹಿನ್ನೀರಿನ ಸಮೀಪದಲ್ಲಿ ವಾಸಿಸುವ ಕುಟುಂಬಗಳದ್ದು ಅಕ್ಷರಶ: ನರಕಯಾತನೆ. ಹಿನ್ನೀರಿನಿಂದ ಹೊರಸೂಸುವ ದುರ್ಗಂಧ, ಹಾವು ಚೇಳುಗಳ ಹರಿದಾಟ, ಸೊಳ್ಳೆಗಳ ಕಾಟದಿಂದ ದಿನನಿತ್ಯದ ಬದುಕು ಅಸಹನೀಯ ಎಂದೆನಿಸುತ್ತದೆ. ಇಡೀ ಮನೆ ರೋಗ ರುಜಿನಗಳ ಕೊಂಪೆಯಾಗುತ್ತದೆ. ಕತ್ತಲಾಗುತ್ತಿದ್ದಂತೆ ಚಿತ್ರ ವಿಚಿತ್ರ ಕ್ರಿಮಿ ಕೀಟಗಳ ಹಾವಳಿಯಿಂದ ಅವರಿಗೆ ಪ್ರತಿ ರಾತ್ರಿಯೂ ಸುದೀರ್ಘ ಎನಿಸುತ್ತದೆ. ಜೊತೆಗೆ ಸಾಮಾಜಿಕ ಜೀವನವೊಂದು ಚದುರಿ ಹೋಗುವುದರಿಂದ ಅನಾಥ ಪ್ರಜ್ಞೆ ಇನ್ನಿಲ್ಲದಂತೆ ಕಾಡಲಾರಂಭಿಸುತ್ತದೆ. ಹಣವಿರುವ ಸ್ಥಿತಿವಂತರು ಅಂಥದ್ದೊಂದು ಅಸಹನೀಯ ಬದುಕಿನಿಂದ ದೂರಾಗಿ ಹೊಸ ಬದುಕನ್ನು ಕಟ್ಟಿ ಕೊಳ್ಳಬಹುದು. ಆದರೆ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಆ ಒಂದು ಪರಿಸರದಲ್ಲೇ ಬದುಕುವ ಅನಿವಾರ್ಯತೆಯಿಂದ ದಿನನಿತ್ಯದ ಬದುಕು ಘೋರವಾಗುತ್ತದೆ.
      ಮುಳುಗಡೆ ನಾಡಿನಲ್ಲಿ ಸೂರಿದ್ದವರದು ಒಂದು ಕಥೆಯಾದರೆ ಸ್ವಂತ ಸೂರಿಲ್ಲದೆ ಬಾಡಿಗೆ ಮನೆಗಳಲ್ಲಿ ವಾಸಿಸುವ ಕುಟುಂಬಗಳದ್ದು ಇನ್ನೊಂದು ರೀತಿಯ ವ್ಯಥೆ. ನಗರ ಪ್ರದೇಶಗಳಲ್ಲಿ ವಸತಿ ಪ್ರದೇಶ ಜಲಾಶಯದ ಒಡಲು ಸೇರುತ್ತಿದ್ದಂತೆ ಇರುವ ಅತ್ಯಲ್ಪ ಮನೆಗಳ ಬೇಡಿಕೆ ಹೆಚ್ಚಲಾರಂಭಿಸುತ್ತದೆ. ಬೇಡಿಕೆ ಹೆಚ್ಚಿದಂತೆ ಮನೆ ಬಾಡಿಗೆ ಗಗನಕ್ಕೆರುತ್ತದೆ. ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ವಾಸಿಸಲು ಸೂರೊಂದನ್ನು ಹೊಂದಿಸುವುದೇ ಬಹುದೊಡ್ಡ ಸಮಸ್ಯೆಯಾಗುತ್ತದೆ. ಈ ಸಮಸ್ಯೆಯನ್ನು ತಮ್ಮ ಲಾಭಕ್ಕೆ ಉಪಯೋಗಿಸಿಕೊಳ್ಳುವ ಮನೆ ಮಾಲೀಕರುಗಳು ವ್ಯಾಪಾರಕ್ಕಿಳಿಯುತ್ತಾರೆ. ವ್ಯಾಪಾರ ಮತ್ತು ವ್ಯವಹಾರಗಳೆದುರು ಮನುಷ್ಯ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತವೆ. ಒಂದೆಡೆ ಮುಳುಗಡೆ ಅನೇಕರ ಬದುಕನ್ನು ಮುಳುಗಿಸಿದರೆ ಅದೇ ಮುಳುಗಡೆ ಇನ್ನೊಂದೆಡೆ ಕೆಲವರನ್ನು ಲಾಭಕ್ಕಾಗಿ ವ್ಯಾಪಾರಕ್ಕಿಳಿಸುತ್ತದೆ. ಜೊತೆಗೆ ಹಳ್ಳಿಗಳೆಲ್ಲ ಮುಳುಗಡೆಯಾಗುತ್ತಿದ್ದಂತೆ ಅನೇಕ ಕುಟುಂಬಗಳು ಹಳ್ಳಿಗಳಿಂದ ನಗರ ಪ್ರದೇಶಗಳಿಗೆ ವಲಸೆ ಬರುತ್ತಿವೆ. ಪರಿಣಾಮವಾಗಿ ಮನೆ ಬಾಡಿಗೆ ಎನ್ನುವ ಬಿಸಿಯ ದಳ್ಳುರಿಯಲ್ಲಿ ಬಡ ಮತ್ತು ಮಧ್ಯಮ ವರ್ಗದವರ ಬದುಕು ಬೆಂದು ಹೋಗುತ್ತದೆ. ದುಡಿಮೆಯ ಬಹುಪಾಲು ಹಣವನ್ನು ವಸತಿ ವ್ಯವಸ್ಥೆಗಾಗಿ ವಿನಿಯೋಗಿಸುವ ಪರಿಸ್ಥಿತಿ ಎದುರಾದಾಗ ಮಕ್ಕಳ ಶಿಕ್ಷಣ ಹಾಗೂ ಇನ್ನಿತರ ಸೌಲಭ್ಯಗಳೆಲ್ಲ ಮರೀಚಿಕೆಯಾಗುತ್ತವೆ.
        ಹರಿಯುವ ನೀರಿಗೆ ಕಟ್ಟುವ ಅಣೆಕಟ್ಟು ಎಲ್ಲೋ ಕೆಲವರ ಬದುಕನ್ನು ಸಮೃದ್ಧಗೊಳಿಸಬಹುದು. ಆದರೆ ಅದು ಕೊಡಮಾಡುವ ಸಮೃದ್ಧತೆಯ ಹಿಂದಿನ ಕರಾಳ ಮುಖ ಮಾತ್ರ ಅತ್ಯಂತ ಭೀಕರ. ಹೀಗೆ ಜಲಾಶಯಗಳ ಒಡಲನ್ನು ಸೇರುವ ಮುಳುಗಡೆಯ ನಾಡಿನಲ್ಲಿ ಒಂದೆರಡು ಹೆಜ್ಜೆ ನಡೆದು ಬಂದರೆ ಕಣ್ಣೆದುರು ಅಲ್ಲಿನ ದುರಂತ ಬದುಕು ಅನಾವರಣಗೊಳ್ಳುತ್ತ ಹೋಗುತ್ತದೆ. ಅನೇಕರ ನಿಟ್ಟುಸಿರು, ನಿಸ್ಸಾಹಯಕ ಕೂಗು, ಆಕ್ರಂದನ ಕಿವಿಗಪ್ಪಳಿಸುತ್ತವೆ.

ಮುಗಿಸುವ ಮುನ್ನ:

        ಬಾಗಲಕೋಟೆಯಲ್ಲೊಂದು ವಿಶಿಷ್ಟ ಮ್ಯೂಜಿಯಂ ಇದೆ. ಅಲ್ಲಿ ಗ್ರಾಮೀಣ ಪರಿಸರದ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನವನ್ನು ಅತ್ಯಂತ ಸುಂದರವಾಗಿ ಮತ್ತು ಅಷ್ಟೇ ಆಕರ್ಷಕವಾಗಿ ಚಿತ್ರಿಸಲಾಗಿದೆ. ಅಲ್ಲಿ ಗೌಡರ ಮನೆಯಿದೆ, ದನಗಳ ಕೊಟ್ಟಿಗೆ ಇದೆ, ಊರ ನಡುವಿನ ಭಾವಿಯಿದೆ, ಅರಳಿ ಮರದ ಕೆಳಗೆ ಹರಟೆಯಲ್ಲಿ ತೊಡಗಿರುವ ಜನರ ಗುಂಪಿದೆ, ಕಮ್ಮಾರ, ಕುಂಬಾರ, ನೇಕಾರ, ಬಡಿಗ, ಬಳೆಗಾರ ಇತ್ಯಾದಿ ಕಸುಬುದಾರರ ಪ್ರತಿಕೃತಿಗಳಿವೆ. ಹಬ್ಬ ಹರಿದಿನಗಳ ಚಿತ್ರಗಳಿವೆ. ಒಟ್ಟಾರೆ ಗ್ರಾಮೀಣ ಪರಿಸರದಲ್ಲಿ ನಡೆದಾಡಿ ಬಂದ ಅನುಭವ ನೋಡುಗನದಾಗುತ್ತದೆ. ಮುಳುಗಡೆ ನಾಡಿನ ಇಡೀ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕನ್ನು ಇಲ್ಲಿ ನಾಲ್ಕು ಗೋಡೆಗಳ ನಡುವೆ ಬಂಧಿಸಿಟ್ಟಿರುವರೇನೋ ಎನ್ನುವ ಪ್ರಶ್ನೆ ಮನದಲ್ಲಿ ಉಳಿದು ಕಾಡುತ್ತದೆ.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

Saturday, October 13, 2012

ಜಾತಿ ವ್ಯವಸ್ಥೆಯ ಕರಿ ನೆರಳಲ್ಲಿ ವಿಶ್ವವಿದ್ಯಾಲಯಗಳು

         ಕೆಲವು ವರ್ಷಗಳ ಹಿಂದೆ ನನ್ನ ಪರಿಚಯದ ಹುಡುಗನೊಬ್ಬ ಪಿಹೆಚ್.ಡಿ ಪದವಿಗಾಗಿ ವಿಶ್ವವಿದ್ಯಾಲಯವೊಂದರಲ್ಲಿ ಹೆಸರು ನೊಂದಾಯಿಸಿದ್ದ. ಕಾಲೇಜು ವಿದ್ಯಾರ್ಥಿಯಾಗಿದ್ದ ದಿನಗಳಿಂದಲೂ ಡಾಕ್ಟರೇಟ್ ಕನಸು ಕಾಣುತ್ತಿದ್ದವನಿಗೆ ವಿಶ್ವವಿದ್ಯಾಲಯದಲ್ಲಿ ಪ್ರವೇಶ ದೊರೆತದ್ದು ಸಹಜವಾಗಿಯೇ ಖುಷಿ ನೀಡಿತ್ತು. ಸಮಾಜ ವಿಜ್ಞಾನ ವಿದ್ಯಾರ್ಥಿಯಾದ ಅವನಿಗೆ ತನ್ನ ಸಂಶೋಧನೆಯಿಂದ ಸಮಾಜಕ್ಕೊಂದು ವಿಶಿಷ್ಠ ಕೊಡುಗೆ ನೀಡುವ ಆಸೆಯಿತ್ತು. ಓದಿನಲ್ಲಿ ಜಾಣ ವಿದ್ಯಾರ್ಥಿಯಾಗಿದ್ದ ಆತ  ಹಲವು ಕನಸುಗಳನ್ನು ಕಟ್ಟಿಕೊಂಡು ಸಂಶೋಧನಾ ವಿದ್ಯಾರ್ಥಿಯಾಗಿ ವಿಶ್ವವಿದ್ಯಾಲಯದ ಮೆಟ್ಟಿಲು ಹತ್ತಿದ. ಹತ್ತಿರದಿಂದ ಅವನ ಏಳ್ಗೆಯನ್ನು ಗಮನಿಸುತ್ತ ಬಂದಿದ್ದ ನನಗೆ ಕೂಡಾ ಅವನಿಗೆ ದೊರೆತ ಆ ಅವಕಾಶ ಸಂತಸ ತಂದಿತ್ತು. ಅದಾದ ನಂತರ ಹಲವು ತಿಂಗಳುಗಳ ಕಾಲ ನಾನು ನನ್ನ ಕೆಲಸದ ನಡುವೆ ಆ ವಿಷಯವನ್ನು ಮರೆತು ಬಿಟ್ಟೆ. ಅವನೂ ಸಹ ತನ್ನ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದರಿಂದ ನನ್ನನ್ನು ಅನೇಕ ತಿಂಗಳುಗಳ ಕಾಲ ಸಂಪರ್ಕಿಸಲಿಲ್ಲ. 
        ಈ ನಡುವೆ ವೈಯಕ್ತಿಕ ಕೆಲಸಕ್ಕೆಂದು ನನ್ನೂರಿಗೆ ಹೋಗುತ್ತಿದ್ದ ಸಮಯ ಬಸ್ ನಿಲ್ದಾಣದಲ್ಲಿ ಚಹಾ ಕುಡಿಯಲೆಂದು ಇಳಿದಾಗ ಇದ್ದಕ್ಕಿದ್ದಂತೆ ಅನಿರೀಕ್ಷಿತವಾಗಿ ಅವನ ಭೇಟಿಯಾಯಿತು. ದೈಹಿಕವಾಗಿ ತುಂಬಾ ಬಳಲಿದವನಂತೆ  ಕಾಣುತ್ತಿದ್ದ. ಮಾತಿನ ನಡುವೆ ಅವನ ಸಂಶೋಧನಾ ವಿಷಯ ಚರ್ಚೆಗೆ ಬಂದಿತು. ಎಲ್ಲಿಯವರೆಗೆ ಬಂದಿದೆ ನಿನ್ನ ಸಂಶೋಧನಾ ಕಾರ್ಯ ಎಂದು ಕೇಳಿದ ನನ್ನ ಪ್ರಶ್ನೆಗೆ ಅಳುವೇ ಅವನ ಉತ್ತರವಾಗಿತ್ತು. ಮಾರ್ಗದರ್ಶಕರು ಸಹಕರಿಸುತ್ತಿಲ್ಲವೆಂದು ತಾನು ಸಂಶೋಧನಾ ಅಧ್ಯಯನವನ್ನು ಅರ್ಧಕ್ಕೇ ಬಿಟ್ಟು ಬಿಡಲು ನಿರ್ಧರಿಸಿರುವುದಾಗಿ ಹೇಳಿದ. ಜೊತೆಗೆ ವಿಶ್ವವಿದ್ಯಾಲಯದಲ್ಲಿ ಜಾತಿಯತೆಯ ಲಾಬಿ ಬಹಳಷ್ಟಿದೆ ಎಂದು ಮತ್ತು ಆ ವಾತಾವರಣದಲ್ಲಿ ಅಧ್ಯಯನ ಮಾಡಲು ಸಾಧ್ಯವಾಗುತ್ತಿಲ್ಲವೆಂದು ತನ್ನ ಅಸಹಾಯಕತೆಯನ್ನು ತೋಡಿಕೊಂಡ. ನಿರುತ್ಸಾಹಗೊಳ್ಳದಿರೆಂದು ಧೈರ್ಯ ಹೇಳಿ  ಅವನನ್ನು ಬಿಳ್ಕೊಟ್ಟು  ನಾನು ಹೋಗಬೇಕಿದ್ದ ಬಸ್ ಹತ್ತಿದೆ.
        ಇತ್ತೀಚಿನ ದಿನಗಳಲ್ಲಿ ಇಂಥದ್ದೊಂದು ಸಮಸ್ಯೆ ವ್ಯಾಪಕವಾಗಿ ವಿಸ್ತರಿಸುತ್ತ ಹೋಗುತ್ತಿದೆ. ಜ್ಞಾನವನ್ನು ವೃದ್ಧಿಸಬೇಕಾದ  ವಿಶ್ವವಿದ್ಯಾಲಯಗಳು ಜಾತಿ ಕೇಂದ್ರಗಳಾಗಿ ರೂಪಾಂತರಗೊಳ್ಳುತ್ತಿವೆ. ಪ್ರತಿಯೊಂದು ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧರಿಸಿ ಗುಂಪುಗಾರಿಕೆ ಬೆಳೆಯುತ್ತಿದೆ. ಈ ಜಾತಿ ವ್ಯವಸ್ಥೆ ಎನ್ನುವುದು ಎಷ್ಟೊಂದು ವ್ಯವಸ್ಥಿತವಾಗಿ ಜಾತಿ, ಉಪಜಾತಿಗಳಾಗಿ ವಿಭಿನ್ನ ಸ್ತರಗಳಲ್ಲಿ  ಬೆಳೆಯುತ್ತಿದೆ ಎನ್ನುವುದನ್ನು ನೋಡಲು ನಾವು ಬೇರೆಲ್ಲೂ ಹೋಗಬೇಕಿಲ್ಲ. ಈ ವಿಶ್ವವಿದ್ಯಾಲಯಗಳೇ ಅಂಥದ್ದೊಂದು ಮಾಹಿತಿಯನ್ನು ಪ್ರಾಯೋಗಿಕವಾಗಿ ತೋರಿಸಿಕೊಡುತ್ತಿವೆ. ಒಟ್ಟಿನಲ್ಲಿ ಈ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲೂ ಜಾತಿ ವ್ಯವಸ್ಥೆಯನ್ನು ಅತ್ಯಂತ ಜೋಪಾನವಾಗಿ ಕಾಯ್ದಿಟ್ಟುಕೊಂಡು ಬರುತ್ತಿರುವ ಸಂಪೂರ್ಣ ಶ್ರೇಯಸ್ಸು ನಮ್ಮ ಈ ವಿಶ್ವವಿದ್ಯಾಲಯಗಳಿಗೆ ಸಲ್ಲಬೇಕು.
        ಬ್ರಾಹ್ಮಣ ಪ್ರಾಧ್ಯಾಪಕರಿಗೆ ಸಂಶೋಧನಾ ವಿದ್ಯಾರ್ಥಿ ಬ್ರಾಹ್ಮಣನೇ ಆಗಿರಬೇಕು. ಅದೇರೀತಿ ಲಿಂಗಾಯತ, ಜಂಗಮ, ಕುರುಬ, ಕುಂಬಾರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹೀಗೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ವಿದ್ಯಾರ್ಥಿ  ಗಣ ಹತ್ತು ಹಲವು ಜಾತಿ, ಉಪಜಾತಿಗಳಾಗಿ  ವಿಂಗಣೆಗೊಂಡಿವೆ. ಇಲ್ಲಿ ಅರ್ಹತೆಗೆ ಮಾನದಂಡ ಜಾತಿ ಮತ್ತು ಉಪಜಾತಿಯೇ ಹೊರತು ವಿದ್ಯಾರ್ಥಿಯಲ್ಲಿರುವ ಬುದ್ದಿಮತ್ತೆಯಲ್ಲ. ಒಂದು ಕೋಮಿಗೆ ಸೇರಿದ ಪ್ರಾಧ್ಯಾಪಕ ಇನ್ನೊಂದು ಕೋಮಿಗೆ ಸೇರಿದ ವಿದ್ಯಾರ್ಥಿಯನ್ನು ಸಂಶೋಧನಾ  ವಿದ್ಯಾರ್ಥಿಯಾಗಿ ಸೇರಿಸಿಕೊಳ್ಳಲು ಸುತಾರಾಂ ಇಷ್ಟಪಡುವುದಿಲ್ಲ. ತನ್ನ ಜಾತಿಗೆ ಸೇರಿದ ವಿದ್ಯಾರ್ಥಿ ಅದೆಷ್ಟೇ ಅಯೋಗ್ಯನಾದರೂ ಸರಿ ಅಂಥವರನ್ನು ಹಿಡಿದು ತಂದು ಸಂಶೋಧನೆಗೆ ಹಚ್ಚುವಂಥ ಪ್ರಭೃತಿಗಳ ಸಂಖ್ಯೆಯೇನೂ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಕಡಿಮೆ ಇಲ್ಲ. ಜಾತಿಯೊಂದನ್ನು ಅತ್ಯಂತ ವ್ಯವಸ್ಥಿತವಾಗಿ ಸೀಳಿ ಅದನ್ನು ಅನೇಕ ಉಪಜಾತಿಗಳಲ್ಲಿ ವರ್ಗೀಕರಿಸಿ ನೋಡುವ ವಿಶ್ವವಿದ್ಯಾಲಯಗಳಲ್ಲಿನ ಪ್ರಾಧ್ಯಾಪಕರುಗಳ ಜಾತಿ ಪ್ರೀತಿ ನಿಜಕ್ಕೂ ಕುತೂಹಲಕರ ಸಂಗತಿಗಳಲ್ಲೊಂದು.
       ಇನ್ನೂ ಆಶ್ಚರ್ಯದ ಸಂಗತಿ ಎಂದರೆ ಕೆಲವೊಮ್ಮೆ ವಿಶ್ವವಿದ್ಯಾಲಯಗಳ ಉಪಕುಲಪತಿಗಳೇ ಈ ಜಾತಿ ವ್ಯವಸ್ಥೆಗೆ ಕುಮ್ಮುಕು ಕೊಡುವುದುಂಟು. ಅಂಥ ಸಂದರ್ಭಗಳಲ್ಲೆಲ್ಲ ಉಪಕುಲಪತಿಗಳ ಜಾತಿಗೆ ಸೇರಿದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇಡೀ ವಿಶ್ವವಿದ್ಯಾಲಯವನ್ನೇ ತಮ್ಮ ಹತೋಟಿಗೆ ತೆಗೆದುಕೊಂಡು ಆಡಳಿತ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುವುದೂ ಇದೆ. ನಾನು ಸ್ನಾತಕೋತ್ತರ ಶಿಕ್ಷಣದ ವಿದ್ಯಾರ್ಥಿಯಾಗಿದ್ದ ಸಂದರ್ಭ ಒಂದು ನಿರ್ಧಿಷ್ಟ ಜಾತಿಗೆ (ಕ್ಷಮಿಸಿ) ಸೇರಿದ್ದ ವಿದ್ಯಾರ್ಥಿಗಳು ಸ್ನಾತಕೋತ್ತರ ಶಿಕ್ಷಣ ಪೂರೈಸಿದ ನಂತರವೂ ಅನೇಕ ವರ್ಷಗಳಿಂದ ವಿಶ್ವವಿದ್ಯಾಲಯದ ವಸತಿ ಗೃಹದಲ್ಲೇ ಉಳಿದು ಕೊಂಡಿದ್ದರು. ವಸತಿ ಜೊತೆಗೆ ಊಟವು ಸಹ ಅವರಿಗೆ ಪುಕ್ಕಟ್ಟೆಯಾಗಿ ಕೊಡುತ್ತಿದ್ದ ಸಂಗತಿ ನಮಗೆಲ್ಲ ಅಚ್ಚರಿಯನ್ನುಂಟು ಮಾಡುತ್ತಿತ್ತು. ಆನಂತರ ತಿಳಿದು ಬಂದಂತೆ ಅವರಿಗೆಲ್ಲ ಹಿಂದೆ ಅಲ್ಲಿ ಇದ್ದ ಉಪಕುಲಪತಿಗಳ ಬೆಂಬಲವಿತ್ತು ಅದಕ್ಕೆ ಕಾರಣ ಅವರೆಲ್ಲ ಒಂದೇ ಜಾತಿಗೆ ಸೇರಿದವರಾಗಿದ್ದರು. ನಂತರ ಬಂದ ಉಪಕುಲಪತಿ ಅವರನ್ನೆಲ್ಲ ವಿಶ್ವವಿದ್ಯಾಲಯದಿಂದ ಹೊರಹಾಕಲು ಹರಸಾಹಸ ಪಡಬೇಕಾಯಿತು.
      ಅನೇಕ ಸಂದರ್ಭಗಳಲ್ಲಿ ಜಾತಿಯನ್ನೇ ಆಧಾರವಾಗಿಟ್ಟುಕೊಂಡು ಸಂಶೋಧನಾ ವಿದ್ಯಾರ್ಥಿಯಾಗಿ ವಿಶ್ವವಿದ್ಯಾಲಯವನ್ನು ಪ್ರವೇಶಿಸುವ ವಿದ್ಯಾರ್ಥಿಗಳ ಸಂಖ್ಯೆ ಏನೂ ಕಡಿಮೆ ಇಲ್ಲ. ಹೀಗೆ ಒಂದು ಸಲ ವಿಶ್ವವಿದ್ಯಾಲಯವನ್ನು ಪ್ರವೇಶಿಸುವ ವಿದ್ಯಾರ್ಥಿಗಳು ಅನೇಕ ವರ್ಷಗಳ ಕಾಲ ವಿಶ್ವವಿದ್ಯಾಲಯ ಕೊಡ ಮಾಡುವ ಸೌಲಭ್ಯಗಳನ್ನು ಅನುಭವಿಸುತ್ತ ಇಲ್ಲವೆ ಅನೇಕ ವರ್ಷಗಳವರೆಗೆ ಸಂಶೋಧನಾ  ಕೆಲಸವನ್ನು ವಿಸ್ತರಿಸುತ್ತ ಕಾಲ ತಳ್ಳುವುದುಂಟು. ಇನ್ನು ಅದೆಷ್ಟೋ ವಿಷಯ ಜ್ಞಾನವಿಲ್ಲದ ವಿದ್ಯಾರ್ಥಿಗಳು ಪ್ರಾಧ್ಯಾಪಕರ ನೆರವಿನಿಂದ ಸಂಶೋಧನೆಯನ್ನು ಪೂರ್ಣಗೊಳಿಸಿ ಡಾಕ್ಟರೇಟ್ ಪ್ರಮಾಣ ಪತ್ರ ಪಡೆಯುವುದುಂಟು. ಒಟ್ಟಾರೆ ಇದಕ್ಕೆಲ್ಲ ಜಾತಿ ಎನ್ನುವ ಒಂದು ಪ್ರಬಲ ಅನಿಷ್ಟ ವ್ಯವಸ್ಥೆಯ ವ್ಯಾಪಕ ಬೆಂಬಲ ನಿರಂತರವಾಗಿ ದೊರೆಯುತ್ತಿದೆ. ಹೊರಗೆ ಸಮಾಜದಲ್ಲಿ ಯಾವ ಜಾತಿ ವ್ಯವಸ್ಥೆಯ ನಿರ್ಮೂಲನೆ ಕುರಿತು ಗಂಟೆಗಟ್ಟಲೆ ಭಾಷಣ ಬಿಗಿಯುವ ನಮ್ಮ ವಿಶ್ವವಿದ್ಯಾಲಯಗಳಲ್ಲಿನ ವೈಚಾರಿಕ ಪ್ರಜ್ಞೆಯ ಪ್ರಕಾಂಡ  ಪಂಡಿತರು ಆಂತರ್ಯದಲ್ಲಿ ಅದನ್ನು ಅತ್ಯಂತ ಜೋಪಾನವಾಗಿ ಕಾಯ್ದುಕೊಂಡು ಬರುತ್ತಿರುವುದು ವೈಚಾರಿಕ ಕ್ರಾಂತಿಯ ನೆಲೆಯೆಂದೇ ನಂಬಿರುವ ವಿಶ್ವವಿದ್ಯಾಲಯಕ್ಕೆ ಮಾಡುತ್ತಿರುವ  ದೊಡ್ಡ ಅಪಚಾರ.
         ಪರಿಸ್ಥಿತಿ ಹೀಗಿರುವಾಗ ನಮ್ಮ ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನಾ ಫಲಿತಾಂಶದ ಕುರಿತು ಮಾತನಾಡದಿರುವುದೇ ಲೇಸು. ವಿಶೇಷವಾಗಿ ಸಮಾಜ ವಿಜ್ಞಾನ ವಿಷಯಗಳಲ್ಲಿನ ಸಂಶೋಧನಾ ಚಟುವಟಿಕೆಗಳಿಂದ ಉತ್ತಮ ಮತ್ತು ಪರಿಣಾಮಕಾರಿಯಾದ ಫಲಿತಾಂಶ ಹೊರಬರುತ್ತಿಲ್ಲ ಎನ್ನುವುದು ಸತ್ಯಕ್ಕೆ ಹತ್ತಿರವಾದ ಮಾತು. ಜನಿವಾರ, ಶಿವದಾರ, ಸಂಧ್ಯಾವಂದನೆ, ಶಿವಪೂಜೆ, ರುದ್ರಾಕ್ಷಿ ಮಾಲೆ, ಕಳಸಮ್ಮ, ದುರ್ಗಮ್ಮ ಇಂಥ ನಿರುಪಯುಕ್ತ ವಿಷಯಗಳ ಮೇಲೆ ಸಂಶೋಧನಾ ಪ್ರಬಂಧಗಳು ಪ್ರಕಟಗೊಳ್ಳುತ್ತಿವೆ. ಸಾಹಿತ್ಯ, ಸಂಗೀತ , ಸಮಾಜಸೇವೆ ಇತ್ಯಾದಿ ಕ್ಷೇತ್ರಗಳನ್ನು ಜಾತಿಯ ಚೌಕಟ್ಟಿಗೆ ಸೀಮಿತಗೊಳಿಸಿ ಸಂಶೋಧನೆ ಮಾಡುತ್ತಿರುವರು. ಕುವೆಂಪು ಒಕ್ಕಲಿಗ ವಿದ್ಯಾರ್ಥಿಗಳಿಗಾದರೆ, ಬೇಂದ್ರೆ ಬ್ರಾಹ್ಮಣರಿಗೆ, ಶಿವರುದ್ರಪ್ಪ ಲಿಂಗಾಯಿತರಿಗೆ, ಕುಂವೀ ಕುಂಬಾರರಿಗೆ, ಕಟ್ಟಿಮನಿ ಇನ್ನುಳಿದವರಿಗೆ ಈ ರೀತಿಯಾದ ಅಚ್ಚುಕಟ್ಟಾದ ವಿಂಗಡಣೆಯನ್ನು ನಮ್ಮ ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಮಾಡುತ್ತಿರುವರು. ಜಾತಿ ವ್ಯವಸ್ಥೆಯ ವಿರುದ್ಧ ವೈಚಾರಿಕ ಪ್ರತಿಭಟನೆಗಿಳಿಯಬೇಕಿದ್ದ ವಿಶ್ವವಿದ್ಯಾಲಯಗಳೇ ಆ ವ್ಯವಸ್ಥೆಯನ್ನು ರಕ್ಷಿಸಿಕೊಂಡು ಬರುತ್ತಿವೆ. ಜಾತಿ, ಉಪಜಾತಿ, ಉಪಪಂಗಡಗಳ ಒಂದು ಶ್ರೇಣಿಕೃತ ವ್ಯವಸ್ಥೆಯನ್ನು ಈ ಜಾಗತೀಕರಣದ ದಿನಗಳಲ್ಲೂ ಅತ್ಯಂತ ಅಚ್ಚುಕಟ್ಟಾಗಿ ಕಟ್ಟಿ ಕೊಡುತ್ತಿರುವ ವಿಶ್ವವಿದ್ಯಾಲಯಗಳು ಮುಂದಿನ ದಿನಗಳಲ್ಲಿ ಜಾತಿ, ಉಪಜಾತಿಗೊಂದರಂತೆ ಪ್ರತ್ಯೇಕಗೊಂಡರೂ ಆಶ್ಚರ್ಯವಿಲ್ಲ.

ಮುಗಿಸುವ ಮುನ್ನ:

       ಮೊನ್ನೆ ಸಂಗೀತ ಗೋಷ್ಠಿಯೊಂದಕ್ಕೆ ಹೋಗಿದ್ದೆ. ಸಂಗೀತಗಾರರಲ್ಲಿ ಬಹುತೇಕರು ಗದುಗಿನ ಪಂಡಿತ ಪುಟ್ಟರಾಜ ಗವಾಯಿಗಳಲ್ಲಿ ಕಲಿತು ಬಂದವರಾಗಿದ್ದರು. ಕೆಲವರನ್ನು ಪರಿಚಯಿಸಿಕೊಂಡು ಮಾತಿಗಿಳಿದೆ. ಎಲ್ಲರಿಗೂ 'ವೀರೆಶ್ವರ ಪುಣ್ಯಾಶ್ರಮ'ದಲ್ಲಿ ಕಲಿತು ಬಂದ ಅಭಿಮಾನವಿತ್ತು. ಮಾತಿನ ನಡುವೆ ಆ ಸಂಗೀತಗಾರರು ತಮ್ಮ ಗುರುಗಳ ಕುರಿತು ಅನೇಕ ವಿಷಯಗಳನ್ನು ಹೇಳಿದರು. ಅವರುಗಳು ಹೇಳಿದ ವಿಷಯಗಳಲ್ಲಿ ನನ್ನನ್ನು ಆ ಕ್ಷಣಕ್ಕೆ ಮತ್ತು ಅನಂತರದ ಅನೇಕ ದಿನಗಳವರೆಗೆ ಕಾಡಿದ ಸಂಗತಿ ಎಂದರೆ ಆ ಆಶ್ರಮದಲ್ಲಿ (ಸಂಗೀತ ಶಾಲೆ) ಜಾತಿಯ ಪ್ರಶ್ನೆಯೇ ಇಲ್ಲ. ಗುರುಗಳು ಪ್ರತಿಯೊಬ್ಬ ಶಿಕ್ಷಣಾರ್ಥಿಯನ್ನು ಆತನ ಹೆಸರಿನೊಂದಿಗೆ ಊರ ಹೆಸರನ್ನು ಸೇರಿಸಿ ಕರೆಯುತ್ತಿದ್ದರಂತೆ. ವಿದ್ಯಾರ್ಥಿಯ ಮನೆತನದ ಹೆಸರನ್ನು ತಪ್ಪಿಯೂ ಕೂಡ ಬಳಸುತ್ತಿರಲಿಲ್ಲವಂತೆ. ಅದೇಕೆ ಹೀಗೆ ಎಂದು ಪ್ರಶ್ನಿಸಿದಾಗ ಮನೆತನದ ಹೆಸರು ಜಾತಿ ಸೂಚಕವಾಗಿರುವುದರಿಂದ ಆಶ್ರಮದಲ್ಲಿ ಜಾತಿ ವ್ಯವಸ್ಥೆಯೊಂದು ಅನಾವರಣಗೊಳ್ಳುವುದು ಗುರುಗಳಿಗೆ ಇಷ್ಟವಿರಲಿಲ್ಲವಂತೆ. ನಿಜಕ್ಕೂ ಜ್ಯಾತ್ಯಾತೀತ ಪರಿಕಲ್ಪನೆ ಎಂದರೆ ಇದು. ಜಾತಿ ವ್ಯವಸ್ಥೆಯಿಂದ ದೂರವಿರುವ ಕಾರಣದಿಂದಲೇ ಇರಬೇಕು ಇವತ್ತಿಗೂ ಗದುಗಿನ 'ವೀರೆಶ್ವರ ಪುಣ್ಯಾಶ್ರಮ' ರಾಜ್ಯದ ರಾಜಕೀಯ ಸ್ಥಿತಿಗತಿಯನ್ನು ನಿರ್ಧರಿಸುವ ಮಟ್ಟಕ್ಕೆ ಪ್ರಾಮುಖ್ಯತೆ ಪಡೆದಿಲ್ಲ. ಲೇ ಹಾರವ, ಜಂಗಮ, ಕುಂಬಾರ ಎಂದು ಜಾತಿಯಿಂದ ವಿದ್ಯಾರ್ಥಿಗಳನ್ನು ಕೂಗಿ ಕರೆಯುವ ನಮ್ಮ ವಿಶ್ವವಿದ್ಯಾಲಯಗಳಲ್ಲಿನ ಬುದ್ಧಿವಂತ ಪ್ರಾದ್ಯಾಪಕರುಗಳು ಪಂಡಿತ ಪುಟ್ಟರಾಜ ಗವಾಯಿಗಳಂಥ ವಿಶಾಲ ಮನೋಭಾವದ ವ್ಯಕ್ತಿತ್ವದಿಂದ ಕಲಿಯುವುದು ಬಹಳಷ್ಟಿದೆ.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

Monday, October 1, 2012

ಕ್ಷಮಿಸಿ ಬಿಡಿ ಬಾಪು ನಾವು ಕೃತಘ್ನರು

      ಮತ್ತೊಂದು ಗಾಂಧಿ ಜಯಂತಿ ಆಚರಣೆಗೆ ಇಡೀ ರಾಷ್ಟ್ರಕ್ಕೆ ರಾಷ್ಟ್ರವೇ ಸಿದ್ಧವಾಗುತ್ತಿದೆ. ಪ್ರತಿ ವರ್ಷ ಅಕ್ಟೋಬರ್ ಎರಡರಂದು ಗಾಂಧೀಜಿ ಅವರ ಹುಟ್ಟುಹಬ್ಬ ಆಚರಿಸಿ ದೇಶ ರಾಷ್ಟ್ರಪಿತನ ಗುಣಗಾನ ಮಾಡುತ್ತದೆ. ಗ್ರಾಮ ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೆ ಅಂದು ಸಂಭ್ರಮವೋ ಸಂಭ್ರಮ. ಗಾಂಧಿ ಟೊಪ್ಪಿಗೆಗೆ ಅಂದು ಎಲ್ಲಿಲ್ಲದ ಬೇಡಿಕೆ ಮತ್ತು ಗೌರವ. ಕರವಸ್ತ್ರವಾದರೂ ಸರಿ ಜನ ಖಾದಿ ಬಟ್ಟೆಯನ್ನು ಖರೀದಿಸಿ ಪುನೀತರಾಗುತ್ತಾರೆ. 'ಈಶ್ವರ ಅಲ್ಲಾ ತೇರೋ ನಾಮ' ಹಾಡು ಎಲ್ಲರ ಬಾಯಲ್ಲೂ ಕೇಳಿ ಬರುತ್ತದೆ. ವರ್ಷವಿಡೀ ಧೂಳಿನಿಂದ ಮುಚ್ಚಿ ಹೋದ ಗಾಂಧಿ ಪ್ರತಿಮೆಯನ್ನು ಸ್ವಚ್ಚಗೊಳಿಸಿ ಹೂಗಳಿಂದ ಅಲಂಕಾರಗೊಳಿಸಲಾಗುತ್ತದೆ. ಗಾಂಧೀಜಿ ಅವರ ನೆನಪಿಗಾಗಿ ಶಾಲಾ, ಕಾಲೇಜುಗಳಿಗೆ ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗುತ್ತದೆ. ಮಹಾತ್ಮಾ ಗಾಂಧಿ ಹತ್ಯೆಯಾಗಿ ಹತ್ತಿರ ಹತ್ತಿರ ಅರವತ್ತು ವರ್ಷಗಳಾದವು. ಅನೇಕ ವರ್ಷಗಳಿಂದ ಗಾಂಧಿ ಜಯಂತಿ ಆಚರಿಸುತ್ತಿರುವ ನಾವು ಗಾಂಧೀಜಿ ಅವರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೆವೆಯೇ? ಅಂಹಿಸಾ ಪರಮೋಧರ್ಮ ಎಂದು ಅಚಲವಾಗಿ ನಂಬಿದ್ದ ಗಾಂಧೀಜಿ ಅವರ ವಿಚಾರಧಾರೆ ಇಂದು ಬಳಕೆಯಲ್ಲಿದೆಯೇ? ಗಾಂಧೀಜಿ ಅವರು ಬೋಧಿಸಿದ ಸಪ್ತ ಸಾಮಾಜಿಕ ಪಾಪಗಳೇನಾದವು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾದ ಸಮಯವಿದು. ದುರಂತವೆಂದರೆ ಇಂದು ನಾವು ಗಾಂಧೀಜಿ ಅವರನ್ನು ಬೇರೆಯೇ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಗಾಂಧೀಜಿ ಅವರ ಆದರ್ಶ, ತತ್ವಗಳೇನು ಎನ್ನುವುದಕ್ಕಿಂತ ಅವರಲ್ಲಿನ ದೌರ್ಬಲ್ಯಗಳು ಮತ್ತು ವೈಯಕ್ತಿಕ ಬದುಕಿನ ಸಮಸ್ಯೆಗಳನ್ನು ಅರಿಯುವ ಪ್ರಯತ್ನ ನಡೆದಿದೆ. ಗಾಂಧೀಜಿ ಅನೇಕ ದೌರ್ಬಲ್ಯಗಳಿರುವ ಒಬ್ಬ ಸಾಮಾನ್ಯ ಮನುಷ್ಯ ಎಂದು ಹೇಳುವ ಹುನ್ನಾರ ವ್ಯವಸ್ಥಿತವಾಗಿ ಅನಾವರಣಗೊಳ್ಳುತ್ತಿದೆ.

ಗಾಂಧಿ ಮತ್ತು ಸಿನಿಮಾ 

       ಇದುವರೆಗೆ ಗಾಂಧೀಜಿ ಪಾತ್ರವಿರುವ ಅನೇಕ ಸಿನಿಮಾಗಳು ಭಾರತೀಯ ಭಾಷೆಗಳಲ್ಲಿ ತಯ್ಯಾರಾಗಿವೆ. ಆ ಎಲ್ಲ ಸಿನಿಮಾಗಳಲ್ಲಿ ಗಾಂಧೀಜಿ ಅವರನ್ನು ಸ್ವಾತಂತ್ರ್ಯ ಹೋರಾಟಗಾರನಾಗಿ ಮತ್ತು ಒಬ್ಬ ಪರಿಪೂರ್ಣ ವ್ಯಕ್ತಿಯಾಗಿ ಚಿತ್ರಿಸಲಾಗಿದೆ. 1982ರಲ್ಲಿ ರಿಚರ್ಡ್ ಆಟೆನ್ ಬರೋ ನಿರ್ದೇಶಿಸಿದ 'ಗಾಂಧಿ' ಸಿನಿಮಾ ಇದುವರೆಗೆ ನಾವು ನೋಡಿದ ಗಾಂಧಿ ಬದುಕು ಆಧರಿಸಿ ನಿರ್ಮಾಣಗೊಂಡ ಸಿನಿಮಾಗಳಲ್ಲೇ ಇದೊಂದು ಪರಿಪೂರ್ಣ ಚಿತ್ರ. ಆದರೆ ಕೆಲವು ವರ್ಷಗಳ ಹಿಂದೆ ಗಾಂಧೀಜಿ ಕುರಿತು ಸಿನಿಮಾವೊಂದು ಬಿಡುಗಡೆಯಾಯಿತು. ಆ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಇದೊಂದು ವಿಭಿನ್ನ ಚಿತ್ರ ಎಂದು ಹೇಳಿಕೊಂಡರು. ಈ ಚಿತ್ರದಲ್ಲಿ ಗಾಂಧೀಜಿ ಅವರನ್ನು ಒಬ್ಬ ಸಾಮಾನ್ಯ ವ್ಯಕ್ತಿಯಂತೆ ತೋರಿಸಿರುವುದೇ ಅದರಲ್ಲಿನ ವಿಭಿನ್ನತೆ. ವಿಕ್ಷಿಪ್ತ ವ್ಯಕ್ತಿತ್ವದ ಹರಿಲಾಲ ಗಾಂಧಿ ಎನ್ನುವ ಮತ್ತೊಬ್ಬ ಗಾಂಧಿ ಈ ಚಿತ್ರದ ನಿಜವಾದ ಹೀರೋ. ಹರಿಲಾಲನ ಪಾತ್ರವನ್ನು ವೈಭವೀಕರಿಸಿ ಆ ಮೂಲಕ ಗಾಂಧೀಜಿ ಅವರ ಬದುಕಿನ ದೌರ್ಬಲ್ಯಗಳನ್ನು ತೋರಿಸಲು ಪ್ರಯತ್ನಿಸಲಾಗಿದೆ. ಗಾಂಧೀಜಿ ಮೊದಲ ಮಗನಾದ ಈ ಹರಿಲಾಲ ಕುಡುಕ ಮತ್ತು ಸೋಮಾರಿ. ವಿದ್ಯಾಭ್ಯಾಸವನ್ನು ಮಧ್ಯೆದಲ್ಲೇ ಬಿಟ್ಟ ಹರಿಲಾಲನದು ಬೇಜವಾಬ್ದಾರಿಯಿಂದ ವರ್ತಿಸುವ ವ್ಯಕ್ತಿತ್ವ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿರುವ ತಂದೆ ಅದಕ್ಕಾಗಿ ಕುಟುಂಬವನ್ನು ನಿರ್ಲಕ್ಷಿಸುತ್ತಿರುವರು ಎನ್ನುವ ಮನೋಭಾವ ಆತನದು. ಈ ಕಾರಣದಿಂದಾಗಿಯೇ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಗಾಂಧೀಜಿಯನ್ನು ಅವಮಾನಿಸಿ ಅವರಿಗೆ ಮುಜುಗರವನ್ನುಂಟು ಮಾಡಲು ಪ್ರಯತ್ನಿಸುತ್ತಾನೆ. ತನ್ನ ತಾಯಿಯೊಂದಿಗೆ ತಂದೆ ಕ್ರೂರವಾಗಿ ವರ್ತಿಸುತ್ತಿರುವರು ಎನ್ನುವ ಸಂದೇಹ ಅವನನ್ನು ಕಾಡುತ್ತಿರುತ್ತದೆ. ಆದ್ದರಿಂದ ತಂದೆಯನ್ನು ಸಮಾಜದಲ್ಲಿ ತೆಲೆ  ಎತ್ತದಂತೆ ನಿರಂತರವಾಗಿ ಅವಮಾನ ಮಾಡುವುದು ಹರಿಲಾಲನ ಉದ್ದೇಶವಾಗಿರುತ್ತದೆ. ಹೀಗೆ ಗಾಂಧೀಜಿ ಮತ್ತು ಹರಿಲಾಲನ ನಡುವಿನ ಸಂಕೀರ್ಣ ಸಂಬಂಧದ ಚಿತ್ರಣ ಈ ಸಿನಿಮಾದಲ್ಲಿದೆ. ಗಾಂಧೀಜಿ ಮತ್ತು ಹರಿಲಾಲ ನಡುವಣ ಸಂಬಂಧ ಹೇಗಿತ್ತು ಎಂದು ಹೇಳಲು ಗಾಂಧೀಜಿ ಇವತ್ತು ನಮ್ಮ ನಡುವೆ ಇಲ್ಲ. ಅವರ ಹತ್ಯೆಯಾದ  ಆರು ತಿಂಗಳಿಗೆ  ಹರಿಲಾಲ ಅಸುನೀಗಿದ. ಇವರಿಬ್ಬರ ಸಂಬಂಧಕ್ಕೆ ಸಾಕ್ಷಿಯಾಗಿದ್ದ ಕಸ್ತೂರಬಾ ಗಾಂಧೀಜಿ ಹತ್ಯೆಗಿಂತ ಮೊದಲೇ ಸಾವನ್ನಪ್ಪಿದರು. ಹೀಗಾಗಿ ಈ ಚಿತ್ರದಲ್ಲಿ ನೈಜತೆಗಿಂತ ಕಾಲ್ಪನಿಕತೆಯೇ ಹೆಚ್ಚು. ಈ ಚಿತ್ರವನ್ನು ನೋಡಿದ ವೀಕ್ಷಕರಲ್ಲಿ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ. ಗಾಂಧೀಜಿ ಅವರ ವೈಯಕ್ತಿಕ ಬದುಕಿನ ಘಟನೆಗಳಿಗೆ ಕಾಲ್ಪನಿಕತೆಯನ್ನು ಬೆರೆಸಿ ಸಿನಿಮಾ ತಯ್ಯಾರಿಸುವ ಅವಶ್ಯಕತೆಯಾದರೂ ಏನಿತ್ತು? ಗಾಂಧೀಜಿ ಅವರನ್ನು ಸಾಮಾನ್ಯ ವ್ಯಕ್ತಿಯಂತೆ ಚಿತ್ರಿಸುವುದರಿಂದ ಆಗುವ ಉಪಯೋಗವಾದರೂ ಏನು? ಸಿನಿಮಾದ ಮೂಲಕ ಹರಿಲಾಲ ಗಾಂಧಿಯನ್ನು ಇಡೀ ಜಗತ್ತಿಗೆ ಪರಿಚಯಿಸುವ ಅಗತ್ಯವಾದರೂ ಏಕೆ? ಒಂದು ವಿಷಯವಂತೂ ಸ್ಪಷ್ಟವಾಗಿದೆ ಗಾಂಧೀಜಿ ಅವರ ಜನಪ್ರಿಯತೆಯನ್ನು ಬಳಸಿಕೊಂಡು ಸಿನಿಮಾದ ಮೂಲಕ ಹಣ ಮತ್ತು ಪ್ರಶಸ್ತಿಗಳನ್ನು ಗಳಿಸುವುದು ಈ ಸಿನಿಮಾ ಜನರ ಉದ್ದೇಶವಾಗಿದೆ. ಆದರೆ ಅವರು ಅದಕ್ಕಾಗಿ ಬಳಸಿಕೊಂಡ ವಿಧಾನ ಮಾತ್ರ ಸರಿಯಿಲ್ಲ. ಒಬ್ಬ ವ್ಯಕ್ತಿ ಸತ್ತ ಅರವತ್ತು ವರ್ಷಗಳ ನಂತರ ಅವರ ವೈಯಕ್ತಿಕ ಬದುಕಿನ ಘಟನೆಗಳನ್ನು ತೆರೆದಿಟ್ಟು ಒಬ್ಬ ಸಾಮಾನ್ಯ ವ್ಯಕ್ತಿ ಎಂದು ಹೇಳಲು ಹೊರಟಿರುವುದು ಅಕ್ಷಮ್ಯ ಅಪರಾಧ.

ಮೋಹನದಾಸ ಮತ್ತು ಪ್ರೇಮ ಪ್ರಕರಣ 

        ಗಾಂಧೀಜಿ ಅವರ ಬದುಕಿನ ಕುರಿತು ಅನೇಕ ಪುಸ್ತಕಗಳು ಪ್ರಕಟವಾಗಿವೆ. ಇತ್ತೀಚಿಗೆ ಪ್ರಕಟವಾದ ಪುಸ್ತಕವೊಂದರಲ್ಲಿ ಲೇಖಕರು ಗಾಂಧೀಜಿ ಅವರ ಬದುಕಿನಲ್ಲಿ ಪ್ರೇಮಪ್ರಕರಣವೊಂದು ನಡೆಯಿತೆಂದು ಹೇಳಿರುವರೆಂದು ಕೆಲವರು ವಿಮರ್ಶಿಸುವುದರ  ಮೂಲಕ ಓದುಗರ ಸಮೂಹದಲ್ಲಿ ಕುತೂಹಲ ಹುಟ್ಟಿಸುತ್ತಾರೆ. ಆ ಪ್ರಭೃತಿಗಳು  ಮುಂದುವರೆದು ಪುಸ್ತಕದ ಕೆಲವು ಪುಟಗಳು ಗಾಂಧೀಜಿ ಮತ್ತು ಬಂಗಾಳದ ಸಾಮಾಜಿಕ ಕಾರ್ಯಕರ್ತೆ ಸರಳಾದೇವಿಯ ನಡುವಣ ಸಂಬಂಧಕ್ಕೆ ಮೀಸಲಾಗಿವೆ ಎಂದು ಹೇಳುತ್ತಾರೆ. ಕವಿ ರವೀಂದ್ರನಾಥ ಟ್ಯಾಗೋರರ ಸೋದರ ಸಂಬಂಧಿ ಸರಳಾದೇವಿ ಹಾಗೂ ಮಹಾತ್ಮಾ ಗಾಂಧಿ ಪರಸ್ಪರ ಪ್ರೀತಿಸುತ್ತಿದ್ದರು ಎನ್ನುವ ವಿಷಯ ಪುಸ್ತಕದಲ್ಲಿದೆ ಎಂದು ಅನೇಕ ಪತ್ರಿಕೆಗಳು ವಿಮರ್ಶಾ ಲೇಖನವನ್ನು ಪ್ರಕಟಿಸಿದವು. ಆ ಸಂದರ್ಭ ಗಾಂಧೀಜಿಗೆ ಐವತ್ತು ವರ್ಷ ವಯಸ್ಸು ಮತ್ತು ಸರಳಾದೇವಿ ವಯಸ್ಸು ನಲವತ್ತೇಳು ಎಂದು ಹೇಳುವ ಅಕ್ಯಾಡೆಮಿಕ ವಿಮರ್ಶಕರು  ಗಾಂಧೀಜಿ ಅವರ ಆದರ್ಶಗಳನ್ನೆಲ್ಲ ಗಾಳಿಗೆ ತೂರಿರುವರು. ಕೊನೆಗೆ ಎರಡೂ ಕುಟುಂಬಗಳ ಒತ್ತಡದಿಂದಾಗಿ ಈ ಪ್ರೇಮ ಸಂಬಂಧ ಮುರಿದುಬಿತ್ತು ಎಂದೆನ್ನುವ ಇವರುಗಳು   ಅವರಿಬ್ಬರ ನಡುವೆ ಇದ್ದದ್ದು ಅದೊಂದು ಅಧ್ಯಾತ್ಮಿಕ ಪ್ರೀತಿ ಎಂದು ಮರೆತಿರುವುದು ಬಹುದೊಡ್ಡ ದುರಂತ.  ಇತಿಹಾಸದಲ್ಲಿ ಮುಚ್ಚಿಹೋದ ಸಂಗತಿಯೊಂದನ್ನು ಬೆಳಕಿಗೆ ತಂದಂತೆ ಕಪೋಕಲ್ಪಿತ ವಿಷಯಗಳನ್ನೆಲ್ಲ ಸೇರಿಸಿ ಗಾಂಧೀಜಿ ಅವರ ಕುರಿತು ಪುಸ್ತಕ ಬರೆಯುತ್ತಿರುವುದು ಮತ್ತು ಅಂಥ ಬರವಣಿಗೆಯನ್ನು ಪೂರ್ವಾಗ್ರಹ ಪೀಡಿತ ಮನೋಭಾವದಿಂದ ವಿಮರ್ಶಿಸುತ್ತಿರುವುದು ನಾವು ಗಾಂಧೀಜಿ ಅವರಿಗೆ ಮಾಡುತ್ತಿರುವ ಬಹುದೊಡ್ಡ ಅಪಮಾನ. ಹೀಗೆ ಅನಗತ್ಯವಾದ ವಿಷಯವನ್ನು ಅನಾವರಣಗೊಳಿಸುವುದರಿಂದ ಲೇಖಕರು ಹಾಗೂ ವಿಮರ್ಶಕರನ್ನು ಹೊರತುಪಡಿಸಿ ಬೇರೆ ಯಾರಿಗೂ ಪ್ರಯೋಜನವಾಗಲಾರದು. ಇಂಥ ಕಾಮಾಲೆ ಮನಸ್ಸಿನ ವಿಮರ್ಶೆಗಳಿಂದ   ಪುಸ್ತಕಗಳು ಪ್ರಕಟವಾದ ಕೆಲವೇ ದಿನಗಳಲ್ಲಿ ಅವುಗಳ ಲಕ್ಷಾಂತರ ಪ್ರತಿಗಳು ಮಾರಾಟವಾಗುತ್ತವೆ. ಓದುಗರೊಬ್ಬರು  ಹೇಳಿದಂತೆ  ಈ ಪ್ರಕಾರದ  ವಿಮರ್ಶೆಗಳಿಂದ  ಪುಸ್ತಕಗಳ ಪ್ರತಿಗಳು ಮಾರಾಟವಾಗಿ ಲೇಖಕರ ಜೇಬುಗಳು ಭರ್ತಿಯಾಗುತ್ತವೆ. ಅನೇಕ ಇತಿಹಾಸಕಾರರು ಇಂಥ ವಿಷಯಗಳನ್ನು ಸಮರ್ಥಿಸುವುದರ ಮೂಲಕ ಗಾಂಧೀಜಿ ಅವರ ವ್ಯಕ್ತಿತ್ವಕ್ಕೆ ಕಳಂಕ ತರುತ್ತಿರುವರು.

ಇನ್ನು ಕೆಲವು ಅಪ್ರಿಯ ಸತ್ಯಗಳು 

1. ಗಾಂಧಿ ಜಯಂತಿಯಂದು ಮಧ್ಯ ಮತ್ತು ಮಾಂಸದಂಗಡಿಗಳನ್ನು ತೆರೆಯಬಾರದು ಎನ್ನುವ ಆದೇಶವಿದ್ದರೂ ಇದರ ಉಲ್ಲಂಘನೆಯಾಗುತ್ತಿದೆ. ಗಾಂಧಿ ಜನ್ಮದಿನ ಎನ್ನುವುದನ್ನು ಮರೆತು ಜನರು ಮಾಂಸ ಮತ್ತು ಮಧ್ಯ ಸೇವನೆ ಮಾಡುವುದು ಸಾಮಾನ್ಯವಾಗಿದೆ.
2. ಗಾಂಧಿ ಜಯಂತಿಯಂದು ಸರ್ಕಾರಿ ರಜೆ ಇರುವುದರಿಂದ ಶಾಲಾ ಕಾಲೇಜುಗಳಲ್ಲಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಗಾಂಧಿ ಜಯಂತಿ ಆಚರಣೆ ವಿರಳವಾಗುತ್ತಿದೆ.
3. ಪ್ರತಿವರ್ಷ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯ ದಿನಗಳಂದು ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಸಂಪ್ರದಾಯ ಕಡಿಮೆಯಾಗುತ್ತಿದೆ.
4. ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಗಾಂಧೀಜಿ ಭಾವಚಿತ್ರ ಕಣ್ಮರೆಯಾಗುತ್ತಿದೆ.
5. ಗಾಂಧೀಜಿ ಪ್ರತಿಮೆಗೆ ಅಪಮಾನವಾದರೂ ಜನರು ಪ್ರತಿಭಟಿಸುತ್ತಿಲ್ಲ. ಸರ್ಕಾರ ಕೂಡ ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷಿಸುವ ದಿಸೆಯಲ್ಲಿ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ.
6. ಭಾರತದ ನೋಟುಗಳಲ್ಲಿರುವ ಗಾಂಧೀಜಿ ಅವರ ಚಿತ್ರವನ್ನು ವಿರೂಪಗೊಳಿಸಿ ಆನಂದ ಪಡೆಯುವ ವಿಕೃತರ ಸಂಖ್ಯೆ ಹೆಚ್ಚುತ್ತಿದೆ.
7. ಗಾಂಧೀಜಿ ಸ್ವಾತಂತ್ರ್ಯ ಚಳುವಳಿಯಲ್ಲಿ ಮಂದಗಾಮಿ ಗುಂಪಿಗೆ ಸೇರಿದವರಾಗಿದ್ದು ರಾಷ್ಟ್ರಕ್ಕೆ ಅವರು ನೀಡಿದ ಕೊಡುಗೆ ಅತ್ಯಲ್ಪ ಎಂದು ಹೇಳುತ್ತಿರುವುದು ನಿಜಕ್ಕೂ ಆಶ್ಚರ್ಯದ ಸಂಗತಿ.
8. ಗಾಂಧೀಜಿ ಕುರಿತು ಅನೇಕ ಜೋಕುಗಳು ಚಾಲ್ತಿಯಲ್ಲಿವೆ. ವ್ಯಂಗ್ಯ ಚಿತ್ರಕಾರರಿಗಂತೂ ಗಾಂಧೀಜಿ ಚಿತ್ರ ರಚನೆ ಅತ್ಯಂತ ಸರಳ. ಗಾಂಧೀಜಿ ಹಾಸ್ಯ ಬರಹಗಾರರಿಗೆ ಮತ್ತು ವ್ಯಂಗ್ಯ ಚಿತ್ರಕಾರರಿಗೆ ವಿಷಯವಸ್ತುವಾಗುತ್ತಿರುವುದು ಅತ್ಯಂತ ಖೇದದ ಸಂಗತಿ.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

Tuesday, September 25, 2012

ಆಂದೋಲನಗಳೂ ಮತ್ತು ಅವುಗಳ ಹಿಂದಿನ ಮಹತ್ವಾಕಾಂಕ್ಷೆಯೂ

       ಜನರಿಗೆ ಈ ಆಂದೋಲನಗಳ ಕುರಿತು ಬಹುದೊಡ್ಡ ಭ್ರಮನಿರಸನ ಉಂಟಾಗಿದೆ. ಅದಕ್ಕೆ ಕಾರಣಗಳಿಲ್ಲದಿಲ್ಲ. ಅಣ್ಣಾ ಹಜಾರೆ ಅವರ ನೇತೃತ್ವದ 'ಭ್ರಷ್ಟಾಚಾರ ವಿರೋಧಿ ಆಂದೋಲನ'ವನ್ನೇ ತೆಗೆದುಕೊಳ್ಳಿ. ಈ ಆಂದೋಲನ ಶುರುವಾದ ಪ್ರಾರಂಭದ ದಿನಗಳಲ್ಲಿ ಇಡೀ ದೇಶದ ಜನತೆ ಬಹುದೊಡ್ಡ ಬದಲಾವಣೆಯೊಂದು ಇನ್ನೇನು ಕೆಲವೇ ದಿನಗಳಲ್ಲಿ ಸಂಭವಿಸಲಿದೆ ಎಂದೆನ್ನುವ ನಿರೀಕ್ಷೆಗಳನ್ನಿಟ್ಟುಕೊಂಡಿದ್ದರು. ಪರಿಣಾಮವಾಗಿ ಅವರೆಲ್ಲ ಅಣ್ಣಾ ಹಜಾರೆ ಅವರಲ್ಲಿ ಮತ್ತೊಬ್ಬ ಗಾಂಧೀಜಿಯನ್ನು ಕಂಡು ಕೊಂಡರು. ಆಂದೋಲನ ಶುರುವಾಗಿದ್ದೆ ತಡ ನಾಗರೀಕರೆಲ್ಲ ಅಣ್ಣಾ ಹೆಸರಿನ ಗಾಂಧಿ ಟೊಪ್ಪಿಗೆ ಧರಿಸಿ ಬೀದಿಗಿಳಿದರು. ಲಕ್ಷಾಂತರ ಜನ ಪ್ರವಾಹದೋಪಾದಿಯಲ್ಲಿ ಅಣ್ಣಾ ಹಜಾರೆ ಅವರನ್ನು ಕೂಡಿ ಕೊಂಡರು.  ಭ್ರಷ್ಟಾಚಾರ ವಿರೋಧಿ ಆಂದೋಲನದ ತಂಡ ದೂರದ ದೆಹಲಿಯಲ್ಲಿ ಆಂದೋಲನದ ಕಿಡಿ ಹೊತ್ತಿಸಿದರೆ ಅದು ದೇಶದಾದ್ಯಂತ ವ್ಯಾಪಿಸಿತು. ಪ್ರತಿ ನಗರ ಹಳ್ಳಿಗಳಲ್ಲಿ ಜನ ಸ್ವ ಇಚ್ಚೆಯಿಂದ ಆಂದೋಲನಕ್ಕೆ ಧುಮುಕಿದರು. ಉತ್ತರದಿಂದ ಬೀಸಿ ಬರಲಿರುವ ಗಾಳಿ ಬಹುದೊಡ್ಡ ಬದಲಾವಣೆಯನ್ನು ಹೊತ್ತು ತರಲಿದೆ ಎಂದು ಎಲ್ಲರೂ ಕಾದದ್ದೇ ಬಂತು. ಬದಲಾವಣೆ ಮಾತ್ರ ಸಂಭವಿಸಲೇ ಇಲ್ಲ.
      ಈ ನಡುವೆ ಭ್ರಷ್ಟಾಚಾರ  ವಿರೋಧಿ ಆಂದೋಲನದ ತಂಡ ರಾಜಕೀಯ ಪಕ್ಷವೊಂದನ್ನು ಕಟ್ಟುವ ತನ್ನ ನಿರ್ಧಾರ ಪ್ರಕಟಿಸಿತು.  2014ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಆ ತಂಡದ ಸದಸ್ಯರು ಪಾರ್ಲಿಮೆಂಟಿನಲ್ಲಿ ಭ್ರಷ್ಟಾಚಾರ ಮುಕ್ತ ಸದಸ್ಯರನ್ನು ಪ್ರತಿಷ್ಠಾಪಿಸುವ ಪ್ರಬಲ ನಿರೀಕ್ಷೆಯೊಂದನ್ನು ಜನರಲ್ಲಿ ಮೂಡಿಸತೊಡಗಿದರು. ಏತನ್ಮಧ್ಯೆ ಆ ತಂಡದಲ್ಲೇ ಭಿನ್ನಾಭಿಪ್ರಾಯಗಳು ಮೂಡಿ  ಅದೊಂದು ಒಡೆದ ಮನೆಯಾಯಿತು. ಒಂದು ತಂಡ ಜನಾಭಿಪ್ರಾಯಕ್ಕೆ ಹೆದರಿ ರಾಜಕಾರಣದಿಂದ ನಿರ್ಧಿಷ್ಟ ಅಂತರವನ್ನು ಕಾಯ್ದುಕೊಳ್ಳಲು ಬಯಸಿದರೆ ಇನ್ನೊಂದು ತಂಡ ರಾಜಕೀಯ ಪ್ರವೇಶದ ತನ್ನ ಮಹತ್ವಾಕಾಂಕ್ಷೆಗೆ ಅಂಟಿ ಕೊಂಡಿತು. ಹೀಗೆ ಅವರವರ ಭಿನ್ನಾಭಿಪ್ರಾಯಗಳ ನಡುವೆ   ಭ್ರಷ್ಟಾಚಾರ ವಿರೋಧಿ ಆಂದೋಲನವು ತನ್ನ ಮಹತ್ವ ಕಳೆದು ಕೊಂಡು ಮೂಲೆಗುಂಪಾಯಿತು.
           ಭ್ರಷ್ಟಾಚಾರ  ವಿರೋಧಿ ಆಂದೋಲನ ಆರಂಭಗೊಂಡ ಮೊದಲ ದಿನಗಳಲ್ಲೇ ಮುಂದೊಂದು ದಿನ ಇಂಥದ್ದೇ ಪರಿಸ್ಥಿತಿ ಎದುರಾಗಬಹುದೆಂದು ಅನೇಕರು ಆತಂಕ ವ್ಯಕ್ತಪಡಿಸಿದ್ದರು. ಏಕೆಂದರೆ ಪ್ರತಿಯೊಂದು ಹೋರಾಟ ಮತ್ತು ಚಳುವಳಿಗಳು ರಾಜಕೀಯ ಪಕ್ಷಗಳಾಗಿ ರೂಪಾಂತರಗೊಳ್ಳುತ್ತಿವೆ. ಇದು ಬಹು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. 1977ರಲ್ಲಿ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಆಗ ಹುಟ್ಟಿಕೊಂಡ ಚಳುವಳಿ ಭಾರತದಲ್ಲಿ ಅನೇಕ ಬದಲಾವಣೆಗಳಿಗೆ ಕಾರಣವಾಯಿತು. ಈ ಚಳುವಳಿಯ ಪರಿಣಾಮ ಕೇಂದ್ರದಲ್ಲಿ ಮೊದಲ ಬಾರಿಗೆ ಕಾಂಗ್ರೆಸೇತರ ಸರ್ಕಾರ ಅಧಿಕಾರಕ್ಕೆ ಬಂದಿತು. ಈ ಚಳುವಳಿ ಸಮಾಜವಾದಿ ಸಿದ್ಧಾಂತದ ಹಿನ್ನೆಲೆಯುಳ್ಳ ಅನೇಕ ಯುವ ರಾಜಕಾರಣಿಗಳನ್ನು ಪರಿಚಯಿಸಿತು. ಕಾಲಾನಂತರದಲ್ಲಿ ಜೆಪಿ ಚಳುವಳಿಯಿಂದ ಸಿಡಿದು ಬಂದ ಯುವಕರೆಲ್ಲ ಫುಲ್ ಟೈಂ ರಾಜಕಾರಣಕ್ಕಿಳಿದು ಜನರು ಅವರುಗಳ ಮೇಲಿಟ್ಟಿದ್ದ ಭರವಸೆಗಳನ್ನೆಲ್ಲ ಹುಸಿಗೊಳಿಸಿದರು. ಒಂದು ಕಾಲದಲ್ಲಿ ಅನ್ಯಾಯ, ಅಕ್ರಮಗಳನ್ನು ಕಂಡು ಸಿಡಿದೆಳುತ್ತಲಿದ್ದ ಅದೇ ಯುವಕರು ಮುಂದೊಂದು ದಿನ ಅನೇಕ  ಭ್ರಷ್ಟಾಚಾರಗಳಿಗೆ ಕಾರಣರಾಗಬೇಕಾಗಿ ಬಂದದ್ದು ಜೆಪಿ ಚಳುವಳಿಯ ಬಹುದೊಡ್ಡ ದುರಂತಗಳಲ್ಲೊಂದು.
      ಕರ್ನಾಟಕದಲ್ಲೂ ಒಂದು ಕಾಲದಲ್ಲಿ ಸಮಾಜವಾದಿ ಚಳುವಳಿ ಪ್ರಖರವಾಗಿತ್ತು. ಶಾಂತವೇರಿ ಗೋಪಾಲಗೌಡರ ಗರಡಿಯಲ್ಲಿ ಪಳಗಿದ ಅನೇಕ ಯುವನಾಯಕರು ಸಮಾಜವಾದಿ ಸಿದ್ಧಾಂತವನ್ನು ರಾಜ್ಯದ ಮೂಲೆ ಮೂಲೆಗೂ ಪ್ರಚುರ ಪಡಿಸಿದರು. ಅನ್ಯಾಯ, ಅಕ್ರಮಗಳ ವಿರುದ್ಧ ದೊಡ್ಡ ಮಟ್ಟದ ಹೋರಾಟವನ್ನೇ ಮಾಡಿದರು. ವಿಪರ್ಯಾಸವೆಂದರೆ ಅದೇ ಯುವ ನಾಯಕರು ಮುಂದೊಂದು ದಿನ ರಾಜಕೀಯ ಪಕ್ಷಗಳನ್ನು ಸೇರಿ ಸಮಾಜವಾದಿ ಸಿದ್ಧಾಂತವನ್ನೇ ಮೂಲೆಗುಂಪಾಗಿಸಿದರು. ಸಮಾಜವಾದದ ಹಿನ್ನೆಲೆಯನ್ನೇ ಬಂಡವಾಳವಾಗಿಸಿಕೊಂಡು ರಾಜಕೀಯದಲ್ಲಿ ಮೇಲೆರಿದ ಇವರುಗಳು ಅಧಿಕಾರದ ರುಚಿ ಹತ್ತಿಸಿಕೊಂಡು ಇತಿಹಾಸ ಕಂಡು  ಕೇಳರಿಯದ ಅನೇಕ   ಭ್ರಷ್ಟಾಚಾರಗಳಿಗೆ ಕಾರಣರಾದರು.
           ಗೋಕಾಕ ಚಳುವಳಿಯ ನಂತರ ಕರ್ನಾಟಕದಲ್ಲಿ ಭಾಷೆಯ ರಕ್ಷಣೆಗಾಗಿ ಅನೇಕ ಸಂಘ ಸಂಸ್ಥೆಗಳು ಹುಟ್ಟಿ ಕೊಂಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ರಾಜಕುಮಾರ ಅವರ ನೇತೃತ್ವದಲ್ಲಿ ಗೋಕಾಕ ಚಳುವಳಿಯಿಂದ ದೊರಕಿಸಿಕೊಂಡ ಅಭೂತಪೂರ್ವ ಯಶಸ್ಸು ನಂತರದ ದಿನಗಳಲ್ಲಿ ಕನ್ನಡ ಪರ ಚಳುವಳಿಯನ್ನು ಅನೇಕರ ಮುಖ್ಯ ಉದ್ಯೋಗವಾಗಿಸಿತು. ಕನ್ನಡದ ರಕ್ಷಣೆಗಾಗಿ ಅಸ್ತಿತ್ವಕ್ಕೆ ಬಂದ ಸಂಘ ಸಂಸ್ಥೆಗಳೆಲ್ಲ ಕಾಲಾನಂತರದಲ್ಲಿ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳಲಾರಂಭಿಸಿದವು. ಅನೇಕ ಹೋರಾಟಗಾರರು ಚುನಾವಣೆಗೂ ಸ್ಪರ್ಧಿಸಿ ಸೋತಿದ್ದು ಬೇರೆ ವಿಷಯ. ಒಟ್ಟಿನಲ್ಲಿ ಕನ್ನಡ ಪರ ಹೋರಾಟದ ಹಿಂದೆ ರಾಜಕೀಯ ಪ್ರವೇಶಿಸಬೇಕೆನ್ನುವ ಚಳುವಳಿಗಾರರ ಪ್ರಬಲ ಮಹತ್ವಾಕಾಂಕ್ಷೆಯನ್ನು ಕನ್ನಡಿಗರು ಗುರುತಿಸದೇ ಇರಲಿಲ್ಲ. ಕನ್ನಡ ಭಾಷೆಗಿಂತಲೂ ಘೋರವಾದ ಇನ್ನೊಂದು ಸಂಗತಿ ಎಂದರೆ ಅದು ಅನ್ನ ನೀಡುವ  ರೈತನ ಹೆಸರಿನಲ್ಲಿ ಸಂಘ ಸಂಸ್ಥೆಗಳನ್ನು ಕಟ್ಟಿ ಹಸಿರು ಶಾಲು ಹೊದೆದು ಕೆಲವರು ಹೋರಾಟಕ್ಕಿಳಿದಿದ್ದು. ಈ ಹೋರಾಟದ ಹಿಂದೆ ರೈತನ ಬದುಕನ್ನು ಹಸನಾಗಿಸಬೇಕೆನ್ನುವುದಕ್ಕಿಂತ ಅವರವರ ವೈಯಕ್ತಿಕ ಹಿತಾಸಕ್ತಿಯೇ ಪ್ರಧಾನವಾಗಿತ್ತು. ರೈತ ಸಂಘದ ನೇತಾರರಲ್ಲೂ ರಾಜಕೀಯ ವಾಂಛೆ ಮನೆ ಮಾಡಿತ್ತು. ರೈತರ ಹೆಸರಿನಲ್ಲಿ ಕೆಲವರು ತಾವು ಪಡೆದ ಜನಪ್ರಿಯತೆಯನ್ನೇ ಬಂಡವಾಳವಾಗಿಟ್ಟುಕೊಂಡು ಚುನಾವಣೆಗೆ ನಿಂತು ಗೆಲುವಿನ ರುಚಿಯನ್ನು ಕಂಡರು. ಹೀಗೆ ರೈತರ ಹೆಗಲ ಮೇಲೆ ಕಾಲಿಟ್ಟು ಮೇಲೆರಿದವರೆಲ್ಲ ಮುಂದಿನ ದಿನಗಳಲ್ಲಿ ತಮ್ಮ  ತಮ್ಮ ಬದುಕನ್ನು ಹಸನಾಗಿಸಿ ಕೊಂಡರೆ ಹೊರತು ರೈತರ ಬದುಕಿನ ಬವಣೆಯನ್ನು ಸ್ವಲ್ಪವೂ ನೀಗಿಸಲಿಲ್ಲ. ಹಾಗೇನಾದರೂ ಅವರುಗಳು ಪ್ರಯತ್ನಿಸಿದ್ದರೆ ಕಾವೇರಿ ಪ್ರತಿವರ್ಷ ನೆರೆಯ ರಾಜ್ಯಕ್ಕೆ ಹರಿದು ಹೋಗುತ್ತಿರಲಿಲ್ಲ
        ಒಟ್ಟಿನಲ್ಲಿ ಅದು ರೈತಪರ ಚಳುವಳಿಯಾಗಲಿ ,   ಭ್ರಷ್ಟಾಚಾರ  ವಿರೋಧಿ ಆಂದೋಲನವಾಗಲಿ, ಕನ್ನಡಪರ ಹೋರಾಟವಾಗಲಿ ಈ ಎಲ್ಲ ಚಳುವಳಿಗಳಲ್ಲಿನ ಹೋರಾಟಗಾರರ ಮನಸ್ಥಿತಿ ಒಂದೆ. ಪ್ರತಿ ಹೋರಾಟದ ಹಿಂದೆ ರಾಜಕೀಯದ ಮಹತ್ವಾಕಾಂಕ್ಷೆ ಪ್ರಬಲವಾಗಿದೆ. ಪ್ರತಿಯೊಂದು ಆಂದೋಲನ ರಾಜಕೀಯದಲ್ಲಿ ಪರ್ಯಾವಸಾನ  ಗೊಳ್ಳುತ್ತಿರುವುದು ಸತ್ಯಕ್ಕೆ ಹತ್ತಿರವಾದ ಸಂಗತಿ. ಈ ನಡುವೆ ಇಂಗ್ಲಿಷ್ ದೈನಿಕವೊಂದರಲ್ಲಿ ಹೀಗೊಂದು ವರದಿ ಪ್ರಕಟವಾಗಿತ್ತು. ಮುಂಬೈ ಮೂಲದ ನಿವಾಸಿ ನಾರಾಯಣ ಪಾಟೀಲ ಎನ್ನುವ ವ್ಯಕ್ತಿ ಕಳೆದ ನಾಲ್ಕು ವರ್ಷಗಳಿಂದ ಕಸಬ್ ನನ್ನು ಗಲ್ಲಿಗೆರಿಸುವಂತೆ ಪ್ರತಿ ನಿತ್ಯ ದೇಶದ ಪ್ರಧಾನಿ ಮತ್ತು ರಾಷ್ಟ್ರಪತಿಗಳಿಗೆ ಪತ್ರ ಬರೆದು ಒತ್ತಾಯಿಸುತ್ತಿರುವರು. ಕಸಬ್ ನನ್ನು ಗಲ್ಲಿಗೇರಿಸುವ ತನಕ ಯಾವ ಹಬ್ಬ ಹರಿದಿನಗಳಲ್ಲೂ ಪಾಲ್ಗೊಳ್ಳದಿರಲು ಅವರು ನಿರ್ಧರಿಸಿರುವರಂತೆ. ರಾಜಕೀಯ ಮಹತ್ವಾಕಾಂಕ್ಷೆಯನ್ನಿಟ್ಟುಕೊಂಡು  ಸದ್ದು ಮಾಡುವ ಈ ಹೋರಾಟಗಾರರಿಗಿಂತ ಸದ್ದಿಲ್ಲದೇ ಒಂದು ಹೋರಾಟದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ನಾರಾಯಣ ಪಾಟೀಲ ನಿಜಕ್ಕೂ ರಾಷ್ಟ್ರ ಕಂಡ ಅಪರೂಪದ ದೇಶಪ್ರೇಮಿಗಳಲ್ಲೊಬ್ಬರು.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

Saturday, September 15, 2012

ಸರ್.ಎಂವಿ ಎನ್ನುವ ಅಪ್ರತಿಮ ಪ್ರತಿಭೆ

       ಈ ದಿನ ಅಂದರೆ ಸೆಪ್ಟೆಂಬರ್ 15 ದೇಶ ಕಂಡ ಅಪ್ರತಿಮ ಪ್ರತಿಭೆ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮ ದಿನ. ನೂರು ವರ್ಷಗಳ ಸಾರ್ಥಕ ಬದುಕು ಬಾಳಿದ ಸರ್.ಎಂ.ವಿಶ್ವೇಶ್ವರಯ್ಯನವರು ರಾಷ್ಟ್ರಕ್ಕೆ ನೀಡಿದ ಕೊಡುಗೆ ಅನನ್ಯ. ದಕ್ಷ ಆಡಳಿತಗಾರರಾಗಿ, ಇಂಜಿನಿಯರ್ ರಾಗಿ, ಹಲವು ರಾಜ್ಯಗಳ ಸಲಹೆಗಾರರಾಗಿ, ಎಂವಿ ಅವರು ನಿರ್ವಹಿಸಿದ ಪಾತ್ರಗಳು ಅನೇಕ. ಮೂಸಿ ಜಲಾಶಯ, ಕೃಷ್ಣರಾಜ ಸಾಗರ, ಮೈಸೂರು ವಿಶ್ವವಿದ್ಯಾಲಯ, ಭದ್ರಾವತಿಯ ಉಕ್ಕಿನ ಕಾರ್ಖಾನೆ, ಶ್ರೀ ಜಯಚಾಮ ರಾಜೇಂದ್ರ ಔದ್ಯೋಗಿಕ ವಿದ್ಯಾಸಂಸ್ಥೆ, ಸುಕ್ಕೂರು ಬ್ಯಾರೆಜು, ಗ್ರಾಮೀಣ ಕೈಗಾರೀಕರಣ ಯೋಜನೆ, ದಿ ಹಿಂದುಸ್ತಾನ್ ವಿಮಾನ ಕಾರ್ಖಾನೆ ಇತ್ಯಾದಿ ಯೋಜನೆಗಳು ವಿಶ್ವೇಶ್ವರಯ್ಯ ನವರ ಪ್ರತಿಭೆ ಮತ್ತು ಪರಿಶ್ರಮಕ್ಕೆ ಕೆಲವು ಉದಾಹರಣೆಗಳು. ಕೃಷಿ, ಕೈಗಾರಿಕೆ ಮತ್ತು ಶೈಕ್ಷಣಿಕ ಅಭಿವೃದ್ಧಿಯಿಂದ ರಾಷ್ಟ್ರದ ಅಭಿವೃದ್ಧಿ ಸಾಧ್ಯ ಎನ್ನುವ ಸೈದ್ದಾಂತಿಕ ನಿಲುವು ಅವರದಾಗಿತ್ತು. ಅವರ ದೂರದರ್ಶಿತ್ವ ಮತ್ತು ಕೃರ್ತತ್ವ ಶಕ್ತಿಯ ಪರಿಣಾಮ ವಿಶೇಷವಾಗಿ ಕರ್ನಾಟಕ ರಾಜ್ಯ ಕೃಷಿ ಮತ್ತು ಕೈಗಾರಿಕೆಯಲ್ಲಿ ಸಾಕಷ್ಟು ಅಭಿವೃದ್ದಿ ಹೊಂದಿದೆ. ಸರಳತೆ, ಸನ್ನಡತೆ ಮತ್ತು ಪ್ರಾಮಾಣಿಕತೆಯನ್ನು ತಮ್ಮ ವೈಯಕ್ತಿಕ ಬದುಕು ಮತ್ತು ವೃತ್ತಿ ಬದುಕುಗಳೆರಡರಲ್ಲೂ ಒಂದು ವ್ರತದಂತೆ ಪಾಲಿಸಿಕೊಂಡು ಬಂದರು. ಅವರ ಬದುಕಿನ ಪ್ರಾಮಾಣಿಕತೆಗೊಂದು ನಿದರ್ಶನ ಹೀಗಿದೆ, ಒಮ್ಮೆ ಮೈಸೂರಿನ ಮಾಹಾರಾಜರು ವಿಶ್ವೇಶ್ವರಯ್ಯನವರನ್ನು ಕರೆದು 'ನಿಮ್ಮನ್ನು ಮೈಸೂರಿನ ದಿವಾನರನ್ನಾಗಿ ಮಾಡ ಬೇಕೆಂದಿದ್ದೇನೆ ಒಪ್ಪಿಕೊಳ್ಳಬೇಕು' ಎಂದರು. ವಿಶ್ವೇಶ್ವರಯ್ಯನವರ ಜಾಗದಲ್ಲಿ ಬೇರೆ ಯಾರೇ ಇದ್ದರೂ ತಕ್ಷಣವೇ ಒಪ್ಪಿಕೊಂಡು ಬಿಡುತ್ತಿದ್ದರು. ಆದರೆ ವಿಶ್ವೇಶ್ವರಯ್ಯನವರು  'ನನಗೆ ಯೋಚಿಸಲು ಸ್ವಲ್ಪ ಸಮಯ ಬೇಕು. ನಾನು  ನನ್ನ ತಾಯಿಯ ಜೊತೆ ಈ ವಿಷಯ ಚರ್ಚಿಸಬೇಕು ಅನಂತರ ನಾನು ನನ್ನ ನಿರ್ಧಾರವನ್ನು ಕುರಿತು ತಿಳಿಸುವೇನು' ಎಂದರು. ಅವರ  ಮಾತಿಗೆ ಮಾಹಾರಾಜರು ಸಮ್ಮತಿಸಿದರು. ವಿಶ್ವೇಶ್ವರಯ್ಯನವರು ಮನೆಗೆ ಬಂದು ಮಾಹಾರಾಜರೊಂದಿಗೆ ನಡೆದ ಮಾತುಕತೆಯನ್ನು ತಾಯಿಗೆ ವಿವರಿಸಿದರು. ಅದಕ್ಕೆ ಅವರ ತಾಯಿ 'ನನ್ನ ಒಪ್ಪಿಗೆ ಪಡೆದು ನಿನ್ನ ಅಭಿಪ್ರಾಯ ತಿಳಿಸುತ್ತೇನೆಂದು ಏಕೆ ಹೇಳಿದೆ' ಎಂದು ಕೇಳಿದರು. ಆಗ ವಿಶ್ವೇಶ್ವರಯ್ಯನವರು ಮಾರ್ಮಿಕವಾಗಿ ನುಡಿದರು 'ನಾನು ದಿವಾನನಾದ ಅವಧಿಯಲ್ಲಿ ರಾಜ್ಯದ ಕೆಲಸವನ್ನು ಮಾತ್ರ ಮಾಡುತ್ತೇನೆ ಹೊರತು ಬೇರೆಯವರ ವೈಯಕ್ತಿಕ ಕೆಲಸಗಳನ್ನು ಮಾಡಲಾರೆನು. ಬೇರೆಯವರಾದರೆ ನಾನು ನೇರವಾಗಿ ಹೇಳಬಲ್ಲೆ. ಆದರೆ ಹಾಗೆ ಖಡಾಖಡಿಯಾಗಿ ನಿನಗೆ ಹೇಳಲು ಆಗುವುದಿಲ್ಲ. ಆದ್ದರಿಂದ ನೀನು ನನಗೆ ಮಾತು ಕೊಡಬೇಕು. ನಿನ್ನ ಬಂಧುಗಳ, ಪರಿಚಿತರ, ಊರಿನವರ ಕೆಲಸ ತರಬಾರದು. ನಿನಗೆ ಬೇಕಾದವರಿಗೆ, ಹತ್ತಿರದವರಿಗೆ, ಬಂಧುಗಳಿಗೆ, ಕುಲಬಾಂಧವರಿಗೆ ನೌಕರಿ, ಬಡ್ತಿ ಮತ್ತಿತರ ಸಹಾಯ ಮಾಡೆಂದು ನೀನು ನನಗೆ ಒತ್ತಾಯಿಸಬಾರದು. ನೀನು ನನ್ನ ಮೇಲೆ ಯಾವುದೇ ಒತ್ತಡ ಹೇರುವುದಿಲ್ಲವೆಂದು ಭಾಷೆ ಕೊಟ್ಟರೆ ನಾನು ದಿವಾನನಾಗಲು ಸಮ್ಮತಿಸುತ್ತೇನೆ'. ರಾಜ್ಯದ, ರಾಷ್ಟ್ರದ ಹಿತಾಸಕ್ತಿ ಮರೆತು ವೈಯಕ್ತಿಕ ಹಿತಾಸಕ್ತಿಗೆ ಮಹತ್ವ ನೀಡುವ ನಮ್ಮ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಸರ್.ಎಂ.ವಿಶ್ವೇಶ್ವರಯ್ಯನವರಿಂದ ಕಲಿಯುವುದು ಬಹಳಷ್ಟಿದೆ.
            ಹೀಗೆ ವಿಶ್ವೇಶ್ವರಯ್ಯನವರ ಕುರಿತು ಯೋಚಿಸಲು ಈ ದಿನ ಅವರ ಜನ್ಮದಿನ ಕಾರಣ ಎನ್ನುವುದರ ಜೊತೆಗೆ ನಿನ್ನೆ ನಾನು ಪುಸ್ತಕವೊಂದನ್ನು ಖರೀದಿಸಿದೆ. ಆ ಪುಸ್ತಕದ ಹೆಸರು 'ನನ್ನ ವೃತ್ತಿ ಜೀವನದ ನೆನಪುಗಳು' ಎಂದು. ಇದು ಸರ್.ಎಂ.ವಿಶ್ವೇಶ್ವರಯ್ಯನವರು ಬರೆದಿರುವ 'Memoirs of My Working Life' (Memories) ಎನ್ನುವ ಮೂಲ ಕೃತಿಯ ಅನುವಾದಿತ ಪುಸ್ತಕ. ಡಾ.ಗಜಾನನ ಶರ್ಮ ಅವರು ಅನುವಾದಿಸಿರುವ ಈ ಪುಸ್ತಕವನ್ನು ಅಂಕಿತ ಪ್ರಕಾಶನದವರು ಪ್ರಕಟಿಸಿರುವರು. ಪುಸ್ತಕದಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರು ತಮ್ಮ ವೃತ್ತಿ ಬದುಕಿನಲ್ಲಿನ ಅವಿಸ್ಮರಣೀಯ ಅನುಭವಗಳನ್ನು ಕುರಿತು ಮಾತನಾಡಿರುವರು. ವಿಶೇಷವಾಗಿ ಅಲ್ಲಿ ಉತ್ಪ್ರೇಕ್ಷೆಗಳಿಲ್ಲ. ಅತ್ಯಂತ ಸರಳವಾಗಿ ಅವರು ತಮ್ಮ ಅನುಭವಗಳನ್ನು ದಾಖಲಿಸಿರುವರು. ಡಾ.ಗಜಾನನ ಶರ್ಮಾ ಅವರು ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸುವುದರ ಮೂಲಕ ಒಂದು ಒಳ್ಳೆಯ ಕೆಲಸ ಮಾಡಿರುವರು.
        ಪುಸ್ತಕ ಓದಿದ ನಂತರ ನನ್ನನ್ನು ವಿಶೇಷವಾಗಿ ಆಕರ್ಷಿಸಿದ್ದು ರಾಷ್ಟ್ರ ನಿರ್ಮಾಣದ ಕುರಿತು ಸರ್.ಎಂ.ವಿಶ್ವೇಶ್ವರಯ್ಯನವರು ಆಡಿದ ಮಾತುಗಳು ಮತ್ತು ಅವರ ವಿಚಾರ ಧಾರೆ. ಆ ವಿಚಾರಧಾರೆಗಳನ್ನು ಅವರ ಮಾತುಗಳಲ್ಲೇ ಕೇಳಿ  'ಪ್ರಬಲ ರಾಷ್ಟ್ರವೊಂದನ್ನು ಕಟ್ಟಲು ಪ್ರಬುದ್ಧ ವ್ಯಕ್ತಿತ್ವವುಳ್ಳ ಪ್ರಜಾವರ್ಗವನ್ನು ರೂಪಿಸಬೇಕು. ಯಶಸ್ವೀ ರಾಷ್ಟ್ರವೊಂದರ ಬಹುತೇಕ ಪ್ರಜೆಗಳು ದಕ್ಷರೂ, ಗುಣಸಂಪನ್ನರೂ, ಕರ್ತವ್ಯ ನಿಷ್ಟರೂ ಆಗಿರುತ್ತಾರೆ. ಯಾವ ವ್ಯಕ್ತಿಯು ಇತರರ ನಂಬಿಕೆಗೆ ಪಾತ್ರನಾಗಲು ಬಯಸುತ್ತಾನೋ ಆತ ಸ್ವಯಂ ಸನ್ನಡತೆಯನ್ನು ರೂಡಿಸಿಕೊಳ್ಳಬೇಕು. ನಾವು ತಿಳಿದಿರುವಂತೆ ವ್ಯವಹಾರದ ಅಡಿಪಾಯವೇ ದೃಢ ವಿಶ್ವಾಸ. ವಿಶ್ವಾಸಕ್ಕೆ ಭರವಸೆಯ ಭದ್ರತೆ ಬೇಕು. ಭರವಸೆ ಹುಟ್ಟುವುದು ವ್ಯಕ್ತಿತ್ವದಲ್ಲಿ ಒಡಮೂಡಿರುವ ಸದ್ಗುಣಗಳಿಂದ. ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತದ ಬಹುಪಾಲು ಜನಸಮುದಾಯ ಅನಕ್ಷರಸ್ತರು ಮತ್ತು ಅಶಿಸ್ತಿನಿಂದ ಕೂಡಿದವರು. ಬಹುತೇಕ ಪ್ರಜೆಗಳು ಮೂಢ ನಂಬಿಕೆ ಮತ್ತು ಅಜ್ಞಾನದಿಂದ ಬಳಲುತ್ತಿದ್ದು ಆಲಸಿಗಳು ಮತ್ತು ಉದಾಸೀನರಾಗಿದ್ದಾರೆ. ಭಾರತವು ದಕ್ಷ ರಾಷ್ಟ್ರವಾಗಿ ಪ್ರಬಲವಾಗಿ ಪ್ರವರ್ಧಮಾನಕ್ಕೆ ಬರುವ ಮಾರ್ಗವನ್ನು ಕುರಿತು ವಿದೇಶಗಳು ಉಪದೇಶ ನೀಡುತ್ತವೆ ಎಂದು ನಾವು ನಿರೀಕ್ಷಿಸಬಾರದು. ಈ ಜವಾಬ್ದಾರಿಯನ್ನು ನಮ್ಮ ಜನನಾಯಕರು ಮತ್ತು ಸರ್ಕಾರವೇ ಹೊತ್ತು ಕೊಳ್ಳಬೇಕು. ಸರ್ಕಾರ ಮತ್ತು ಸಾರ್ವಜನಿಕ ಕ್ಷೇತ್ರದ ಮುಖಂಡರು ದೇಶದ ಜನತೆಯಲ್ಲಿ ರಾಷ್ಟ್ರೀಯತೆ, ಪ್ರಗತಿಶೀಲ ಮನೋಭಾವ ಮತ್ತು ದಕ್ಷ ರಾಷ್ಟ್ರ ನಿರ್ಮಾಣಕ್ಕೆ ಅಗತ್ಯವಾದ ಗುಣ ನಡತೆಗಳನ್ನು ಹುಟ್ಟುಹಾಕುವ ಹೊಣೆಗಾರಿಕೆಯನ್ನು ಹೊರಬೇಕು'.
         ಅವರು ಮುಂದುವರಿದು ಹೀಗೆ ಹೇಳುತ್ತಾರೆ 'ಭಾರತೀಯ ಪ್ರಜೆಗಳಿಗೆ ಸಚ್ಚಾರಿತ್ರ್ಯವನ್ನು ಬದುಕಿನಲ್ಲಿ ಅಳವಡಿಸಿ ಕೊಳ್ಳಲು ಕೆಲವೊಂದು ನಿಯಮಗಳನ್ನು ಸಂಕ್ಷಿಪ್ತವಾಗಿ ನಿಡಬಯಸುತ್ತೇನೆ.
1. ಪರಿಶ್ರಮ ಪೂರ್ಣ ಕೆಲಸ: ಸಾಧಾರಣವಾಗಿ ಭಾರತೀಯರು ಯಾವುದೇ ವಿಷಯವನ್ನು ಹಗುರವಾಗಿ ತೆಗೆದುಕೊಳ್ಳುವ ಸ್ವಭಾವದವರು. ಅವರು ಯಾವುದೇ ಕೆಲಸಕ್ಕೆ ಹೂಡುವ ಶ್ರಮ, ಪ್ರಮಾಣ ಮತ್ತು ಪ್ರಯತ್ನ ಅತ್ಯಲ್ಪ. ಇದರ ಪರಿಣಾಮವಾಗಿ ಇಡೀ ದೇಶದ ದಕ್ಷತೆ ಮತ್ತು ಆರ್ಥಿಕ ಸಮೃದ್ಧಿ ಅತ್ಯಂತ ಕೆಳಮಟ್ಟದಲ್ಲಿವೆ.
2. ಯೋಜಿತ ಶಿಸ್ತುಬದ್ಧ ಕೆಲಸ: ಪ್ರತಿದಿನವೂ ನಿಗದಿಗೊಳಿಸಲ್ಪಟ್ಟ ಅವಧಿಯಲ್ಲಿ ನಿಯಮಿತವಾಗಿ, ಶಿಸ್ತುಬದ್ಧವಾಗಿ ಕೆಲಸವನ್ನು ಮಾಡುತ್ತಾ ಹೋದರೆ ಪ್ರಯತ್ನಕ್ಕೆ ಹೆಚ್ಚು ಮೌಲ್ಯ ದೊರೆಯುವುದು. ಶಿಸ್ತುಬದ್ಧವಾಗಿ ಶ್ರಮವಹಿಸಿ ಕೆಲಸ ಮಾಡುವುದರಿಂದ ಶ್ರಮಿಕನ ಆರೋಗ್ಯ ಮತ್ತು ಆಯುಷ್ಯ ಎರಡೂ ವೃದ್ಧಿಯಾಗುವುದು.
3. ದಕ್ಷತೆ: ಉನ್ನತ ಮಟ್ಟದ ಕಾರ್ಯತತ್ಪರತೆ, ಕಾಲನಿಷ್ಟ ಕಾರ್ಯವೈಖರಿ, ಶಿಸ್ತುಬದ್ಧತೆ, ಉನ್ನತ ಧ್ಯೇಯೋದ್ದೇಶ, ಉನ್ನತ ಗುಣಮಟ್ಟದಲ್ಲಿ ಕಾರ್ಯನಿರ್ವಹಿಸುವ ತವಕ ಮುಂತಾದ ಗುಣಗಳನ್ನು ಪಡೆದಿರುವುದು ದಕ್ಷತೆಯ ಲಕ್ಷಣ. ಸಾಧಾರಣವಾಗಿ ಕೆಲಸದ ಗುಣಮಟ್ಟ ಅಧಿಕವಾಗಿದ್ದರೆ ಅದರ ಫಲಿತಾಂಶವೂ ಅಧಿಕವಾಗಿರುತ್ತದೆ.
4. ಸೇವೆ ಮತ್ತು ಸೌಜನ್ಯ: ಪ್ರತಿ ಪ್ರಜೆಯು ತನ್ನ ಸಹೋದ್ಯೋಗಿಯೊಡನೆ, ತನ್ನ ನೆರೆಹೊರೆಯವರೊಂದಿಗೆ ನಡೆಸುವ ವರ್ತನೆ ಸೌಹಾರ್ದತೆ ಮತ್ತು ಸೌಜನ್ಯದೊಂದಿಗೆ ಕೂಡಿರಬೇಕು.
      ಯಶಸ್ವಿಯಾಗಲು ಇಚ್ಚಿಸುವ ಪ್ರತಿಯೊಬ್ಬ ಪ್ರಜೆಯೂ ಮೇಲ್ಕಂಡ ನಾಲ್ಕು ನಿಯಮಗಳನ್ನು ಪಟ್ಟು ಹಿಡಿದು ಕೃತಿಗಿಳಿಸಬೇಕು'.
        ಇನ್ನೊಂದೆಡೆ ನೈತಿಕ ಬದುಕನ್ನು ಕುರಿತು ಅವರು ಹೀಗೆ ವ್ಯಾಖ್ಯಾನಿಸುತ್ತಾರೆ 'ಯಾವುದೇ ವೃತ್ತಿ-ವ್ಯವಹಾರಗಳಲ್ಲಿ ಯಶಸ್ಸು ವ್ಯಕ್ತಿಯ ಸಾಮರ್ಥ್ಯ, ವ್ಯಕ್ತಿತ್ವ, ಪ್ರಾಮಾಣಿಕತೆ ಮತ್ತು ಮುಂದಾಲೋಚನೆ ಮುಂತಾದವುಗಳನ್ನು ಆಧರಿಸಿ ಲಭಿಸುತ್ತದೆ. ಮನುಷ್ಯರ ಬದುಕಿನ ಯಶಸ್ಸಿಗೆ ಅವರ ಪರಿಶ್ರಮವೇ ಆಧಾರ. ಬಹಳಷ್ಟು ಬದುಕೆಂಬ ಹಡಗುಗಳು ಅಪಘಾತಕ್ಕಿಡಾಗುವುದು ಆಕಸ್ಮಿಕಗಳಿಂದಲ್ಲ. ಅವು ನಾಶವಾಗುವುದು ಜನ ಸಂಕಷ್ಟಗಳನ್ನು ಎದುರಿಸಲಿಚ್ಚಿಸದೆ ಕೇವಲ ಸಂತೋಷದ ಬೆನ್ನು ಹತ್ತುವುದರಿಂದ ಮಾತ್ರ. ಯಾವ ಮನುಷ್ಯನ ಬದುಕಿನ ಸಿದ್ಧಾಂತವು ನೋವನ್ನು ತಪ್ಪಿಸಿಕೊಂಡು ಕೇವಲ ಸಂತೋಷವನ್ನು ಅನುಭವಿಸುವುದಾಗಿದೆಯೋ ಆತ ಅಪಯಶಸ್ಸು ಗಳಿಸುವುದು ಶತಸ್ಸಿದ್ದ. ಸುಖ ದು:ಖಗಳೆರಡನ್ನು ಸಮನಾಗಿ ಸ್ವೀಕರಿಸುವುದು ಬದುಕಿನ ನಿತ್ಯ ನಿರಂತರ ಯಶಸ್ಸಿನ ಸಿದ್ದ ಸೂತ್ರ. ನೀತಿಯುತ ವರ್ತನೆಯೇ ಘನತೆವೆತ್ತ ಬದುಕಿನ ಹೆಗ್ಗುರುತು. ನೈತಿಕ ಸಾಧನೆಯೇ ಶ್ರೇಷ್ಠ ವ್ಯಕ್ತಿಯ ಬದುಕಿನ ಔನ್ನತ್ಯ'.
      ಇಂಥ ಉನ್ನತ ವಿಚಾರಗಳನ್ನು ಕೇವಲ ಉಪದೇಶಿಸದೆ ಅದರಂತೆ ಬದುಕಿ ತೋರಿಸಿದ ಹಿರಿದಾದ ವ್ಯಕ್ತಿತ್ವ ಸರ್.ಎಂ.ವಿಶ್ವೇಶ್ವರಯ್ಯನವರದು. ಅದಕ್ಕೆಂದೇ ಅವರು ಇಂದಿಗೂ ಪ್ರಾತ:ಸ್ಮರಣಿಯರು. ಅವರ ಜನ್ಮದಿನವಾದ ಈ ದಿನವಾದರೂ ಅವರನ್ನು ಸ್ಮರಿಸುತ್ತ ಅವರು ನಡೆದ ದಾರಿಯಲ್ಲಿ ಒಂದೆರಡು ಹೆಜ್ಜೆಗಳನ್ನಾದರೂ ನಡೆಯಲು ಪ್ರಯತ್ನಿಸೋಣ. ಇದೇ ನಾವುಗಳು ಆ ಅಪ್ರತಿಮ ಪ್ರತಿಭೆಯ ಕಾಯಕ ಯೋಗಿಗೆ ಸಲ್ಲಿಸುವ ನಮನಗಳು.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ