Tuesday, December 12, 2023

ಸೇಡು, ದ್ವೇಷದ ಸಂದೇಶ ಬೇಕೆ?

    


(05.10.2023 ರ ಪ್ರಜಾವಾಣಿಯ 'ಸಂಗತ' ಅಂಕಣದಲ್ಲಿ  ಪ್ರಕಟ)

       ಬೆಳಗ್ಗೆ ವಾಕಿಂಗ್ ವೇಳೆ ಎದುರಾದ ಹಿರಿಯರ ತಂಡ ಗಹನವಾದ ಚರ್ಚೆಯಲ್ಲಿ ತೊಡಗಿತ್ತು. ಸಾಮಾಜಿಕ ಮಾಧ್ಯಮವಾದ ವಾಟ್ಸ್‍ಆ್ಯಪ್ ಬಳಕೆಗೆ ಭವಿಷ್ಯದಲ್ಲಿ ನಿರ್ಧಿಷ್ಟ ಶುಲ್ಕವನ್ನು ಗ್ರಾಹಕರು ಭರಿಸುವಂತಾಗಬೇಕು ಎನ್ನುವ ಆಶಯ ತಂಡದಲ್ಲಿದ್ದ ಹಿರಿಯರದಾಗಿತ್ತು. ಈ ಮೂಲಕವಾದರೂ ವಾಟ್ಸ್‍ಆ್ಯಪ್‍ನ ದುರ್ಬಳಕೆ ಕಡಿಮೆಯಾಗಬಹುದು ಎನ್ನುವುದು ಈ ಆಶಯದ ಹಿಂದಿನ ಸದುದ್ದೇಶವಾಗಿತ್ತು. ಸಧ್ಯದ ಸಂದರ್ಭದಲ್ಲಿ ಕೆಟ್ಟ ಮತ್ತು ದ್ವೇಷಪೂರಿತ ಸಂದೇಶಗಳು ವಾಟ್ಸ್‍ಆ್ಯಪ್‍ನಲ್ಲಿ ಅವ್ಯಾಹತವಾಗಿ ಹರಿದಾಡುತ್ತಿರುವುದೆ ಇಂಥದ್ದೊಂದು ಅಭಿಪ್ರಾಯ ರೂಪುಗೊಳ್ಳಲು ಕಾರಣವಾಗಿದೆ ಎನ್ನಬಹುದು.

‘ನಿನಗೆ ಮೋಸ ಮಾಡಿದ ಜನರು ಸಧ್ಯದ ಪರಿಸ್ಥಿತಿಯಲ್ಲಿ ನಗುನಗುತ್ತಾ ಇರಬಹುದು, ಆದರೆ ಆ ನಗು ಶಾಶ್ವತವಲ್ಲ. ಮಾಡಿದ ಮೋಸಕ್ಕೆ ನರಳಿ ನರಳಿ ಕಣ್ಣೀರಿಡುವ ದಿನ ಬಂದೇ ಬರುತ್ತದೆ, ಕಾದು ನೋಡಿ’ ಇಂಥದ್ದೊಂದು ಸಂದೇಶವನ್ನು ಪರಿಚಿತರೊಬ್ಬರು ತಮ್ಮ ವಾಟ್ಸ್‍ಆ್ಯಪ್ ಸ್ಟೇಟಸ್ ಮೂಲಕ ಹಂಚಿಕೊಂಡಿದ್ದರು. ಓದಿ ಒಂದು ಕ್ಷಣ ಹಂಚಿಕೊಂಡವರ ಮನಸ್ಥಿತಿ ಕುರಿತು ಕಳವಳವಾಯಿತು. ಇನ್ನೊಬ್ಬರಿಗೆ ಕೆಟ್ಟದ್ದನ್ನು ಬಯಸುವ ಈ ಸಂದೇಶ ಮನಸ್ಸಿನ ವಿಕೃತಿಗೆ ಕನ್ನಡಿ ಹಿಡಿದಂತಿದೆ. ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಇಂಥ ಸಂದೇಶಗಳು ಬಹಳ ಅಪಾಯಕಾರಿ. ವಿಷ ಉಣಿಸಿದವನಿಗೆ ಹಾಲನೆರೆ, ಕಲ್ಲು ಹೊಡೆದವನ ಮನೆಗೆ ಹೂವನೆಸೆ ಎಂದು ಹಿರಿಯರು ನುಡಿದು, ಅವರು ನುಡಿದಂತೆ ಬದುಕಿ ಬಾಳಿದ ಈ ಸಮಾಜದಲ್ಲಿ ಈಗ ವಿಕೃತ ಸಂದೇಶಗಳು ರವಾನೆಯಾಗುತ್ತಿವೆ. 

ದ್ವೇಷ ಮತ್ತು ಪ್ರತೀಕಾರದಿಂದ ಕೂಡಿದ ಸಂದೇಶಗಳನ್ನು ಹರಡುವುದರ ಮೂಲಕ ನಾವು ನಮ್ಮ ಮಕ್ಕಳಿಗೆ ಏನನ್ನು ಕಲಿಸುತ್ತಿದ್ದೇವೆ ಎಂದು ಪಾಲಕರು ಯೋಚಿಸಬೇಕಿದೆ. ಬುದ್ಧಗುರುವಿನ ಕರುಣೆ, ಬಸವಣ್ಣನವರ ಚಿಂತನೆ, ಗಾಂಧೀಜಿಯ ಸತ್ಯಸಂಧತೆಯನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತಿ ಬೆಳೆಯಬೇಕಾದ ಪಾಲಕರೆ ಸಾಮಾಜಿಕ ಮಾಧ್ಯಮಗಳಲ್ಲಿ ಅನಾರೋಗ್ಯಕರವಾದ ಸಂದೇಶಗಳನ್ನು ಹಂಚಿಕೊಳ್ಳುತ್ತಿರುವರು. ಒಂದರ್ಥದಲ್ಲಿ ಇಂಥ ಸಂದೇಶಗಳ ಮೂಲಕ ಸ್ವತ: ಪಾಲಕರೆ ಮಕ್ಕಳಲ್ಲಿ ದ್ವೇಷದ ಬೀಜವನ್ನು ಬಿತ್ತಿದಂತಾಗುತ್ತದೆ. ಇನ್ನೊಂದು ವಿಧದಲ್ಲಿ ಇಂಥ ಕೆಟ್ಟ ಸಂದೇಶಗಳು ಮಕ್ಕಳ ಓದಿನ ಅಭಿರುಚಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ. ಈಗಾಗಲೇ ಮಕ್ಕಳು ಮೊಬೈಲ್ ವ್ಯಸನಿಗಳಾಗಿದ್ದು ಪುಸ್ತಕಗಳ ಓದಿನ ಅಭಿರುಚಿ ಕ್ಷೀಣಿಸುತ್ತಿರುವ ಹೊತ್ತಿನಲ್ಲಿ ಭಾಷೆಯೊಂದನ್ನು ಕೆಟ್ಟ ಸಂದೇಶಗಳ ಮೂಲಕ ಮಕ್ಕಳಿಗೆ ಪರಿಚಯಿಸುವುದರಿಂದ ಮತ್ತಷ್ಟು ಅಪಾಯವನ್ನು ಆಹ್ವಾನಿಸಿದಂತಾಗುತ್ತದೆ.

ಸಾಮಾಜಿಕ ಮಾಧ್ಯಮದ ಮೂಲಕ ದ್ವೇಷ, ಸೇಡು ಮತ್ತು ಪ್ರತೀಕಾರದ ಸಂದೇಶಗಳನ್ನು ಹರಡುವುದು ಅದೊಂದು ರೀತಿಯ ಮಾನಸಿಕ ಕ್ರೌರ್ಯ. ಇಲ್ಲಿ ಕೇವಲ ಶಬ್ದಗಳ ಮೂಲಕ ವ್ಯಕ್ತಿ ಇನ್ನೊಬ್ಬನ ಮೇಲೆ ಹಲ್ಲೆ ಮಾಡುತ್ತಾನೆ. ಪ್ರಖ್ಯಾತ ಮನೋವಿಶ್ಲೇಷಣಾ ತಜ್ಞ ಎರಿಕ್ ಫ್ರಾಮ್ ತನ್ನ ‘ದಿ ಅನಾಟಮಿ ಆಫ್ ಹ್ಯೂಮನ್ ಡಿಸ್ಟ್ರಕ್ಟಿವನೆಸ್’ ಎಂಬ ಗ್ರಂಥದಲ್ಲಿ ವಿಶ್ಲೇಷಿರುವ ಮಾನವ ಸ್ವಭಾವದ ವ್ಯಾಖ್ಯಾನವನ್ನು ಕಥೆಗಾರ ಎಸ್.ದಿವಾಕರ್ ತಮ್ಮ ಲೇಖನದಲ್ಲಿ ಉಲ್ಲೇಖಿಸಿರುವರು. ಆ ವ್ಯಾಖ್ಯಾನ ಹೀಗಿದೆ-‘ಇತರರನ್ನು ಹಂಗಿಸುವ, ಅವರ ಭಾವನೆಗಳ ಮೇಲೆ ಹಲ್ಲೆಮಾಡುವ ಮಾನಸಿಕ ಕ್ರೌರ್ಯವಿದೆಯಲ್ಲ, ಅದು ದೈಹಿಕ ಕ್ರೌರ್ಯಕ್ಕಿಂತ ಹೆಚ್ಚು ವ್ಯಾಪಕ. ಇಂಥ ಕ್ರೌರ್ಯ ಎಸಗುವವನು ಸ್ವತ: ಸುರಕ್ಷಿತವಾಗಿರುತ್ತಾನೆ. ಯಾಕೆಂದರೆ ಅವನು ಉಪಯೋಗಿಸುವುದು ದೈಹಿಕ ಶಕ್ತಿಯನ್ನಲ್ಲ ಕೇವಲ ಶಬ್ದಗಳನ್ನು ಮಾತ್ರ’. 

ಓದಿದ ಉತ್ತಮ ಪುಸ್ತಕ, ಕೇಳಿದ ಸನ್ಮಾರ್ಗದ ಮಾತು, ನೋಡಿದ ಒಳ್ಳೆಯ ಸಿನಿಮಾ, ಭೇಟಿನೀಡಿದ ಸುಂದರ ಪ್ರವಾಸಿತಾಣದಂತಹ ಮಹತ್ವದ ಮತ್ತು ಆರೋಗ್ಯಕರವಾದ ಮಾಹಿತಿಯನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಬೌದ್ಧಿಕವಾಗಿ ಮತ್ತು ಸಾಮಾಜಿಕವಾಗಿ ಅದೊಂದು ಉತ್ತಮವಾದ ನಡೆ. ವಿಷಯಾಧಾರಿತ ಚರ್ಚೆ ಮತ್ತು ಸಂವಾದಗಳಿಗೆ ಸಾಮಾಜಿಕ ಮಾಧ್ಯಮ ವೇದಿಕೆಯಾಗಬೇಕು. ಒಟ್ಟಾರೆ ಹಂಚಿಕೊಂಡ ಸಂದೇಶಗಳು ನಮ್ಮ ಬೌದ್ಧಿಕ ವಿಕಾಸಕ್ಕೆ ನೆರವಾಗಬೇಕು. ವಿಪರ್ಯಾಸವೆಂದರೆ ಸಾಮಾಜಿಕ ಮಾಧ್ಯಮವನ್ನು ದ್ವೇಷ, ಪ್ರತೀಕಾರದ ಸಾಧನೆಗೆ ಗುರಾಣಿಯಾಗಿಸಿಕೊಳ್ಳುವವರ ಸಂಖ್ಯೆಯೇ ಹೆಚ್ಚು.  ಧರ್ಮ ಮತ್ತು ಸಮುದಾಯಗಳ ಬಗ್ಗೆ ಅವಹೇಳನಕಾರಿಯಾದ ಸಂದೇಶಗಳನ್ನು ಹರಡುವುದರ ಮೂಲಕ ಸಮಾಜದಲ್ಲಿನ ಸೌಹಾರ್ದ ವಾತಾವರಣವನ್ನು ಕದಡಲಾಗುತ್ತಿದೆ. ಚುನಾವಣೆಯ ಸಂದರ್ಭ ಫೇಸ್‍ಬುಕ್ ಮತ್ತು ವಾಟ್ಸ್‍ಆ್ಯಪ್‍ಗಳನ್ನು ಎದುರಾಳಿಗಳ ತೇಜೊವಧೆಗಾಗಿ ರಾಜಕಾರಣಿಗಳು ವ್ಯಾಪಕವಾಗಿ ಬಳಸಿಕೊಳ್ಳುತ್ತಿರುವರು. ಸೃಜನಶೀಲ ಕ್ಷೇತ್ರವೆಂದೆ ಪರಿಗಣಿತವಾದ ಸಾಹಿತ್ಯದಲ್ಲೂ ಬರಹಗಾರರು ಪರಸ್ಪರ ನಿಂದನೆಗೆ ಪ್ರಬಲ ಅಸ್ತ್ರವಾಗಿ ಈ ಮಾಧ್ಯಮವನ್ನು ಉಪಯೋಗಿಸುತ್ತಿರುವುದು ಆತಂಕದ ಸಂಗತಿ.

ಸಾಮಾಜಿಕ ಮಾಧ್ಯಮದ ಮೂಲಕ ಕೆಟ್ಟ ಸಂದೇಶಗಳನ್ನು ರವಾನಿಸುತ್ತಿರುವ ರೋಗಗ್ರಸ್ಥ ಮನಸ್ಥಿತಿಯನ್ನು ನಿಯಂತ್ರಿಸಲು ಮನಶಾಸ್ತ್ರಜ್ಞ ಎರಿಕ್ ಬರ್ನ್‍ಸ್ಟೀನ್ ಪರಿಚಯಿಸಿದ ‘ಟ್ರಾನ್ಸಾಕ್ಷನಲ್ ಅನ್ಯಾಲಿಸಿಸ್’  ಎನ್ನುವ ಪರಿಕಲ್ಪನೆಯನ್ನು ಶಿಕ್ಷಣ ಮತ್ತು ಬೋಧನೆಯ ಮೂಲಕ ಕಾರ್ಯಗತಗೊಳಿಸಬೇಕಾದ ಅಗತ್ಯವಿದೆ. ಈ ಪರಿಕಲ್ಪನೆಯು ಮನುಷ್ಯ ಮನುಷ್ಯನಂತೆ ಬದುಕುವುದನ್ನು ಹೇಳಿಕೊಡುತ್ತದೆ. ಈ ವಿಧಾನದಲ್ಲಿ ಮನುಷ್ಯ ಬೇರೆಯವರೊಂದಿಗೆ ಮಾತನಾಡುವ ಪೂರ್ವದಲ್ಲಿ ತನ್ನ ವರ್ತನೆ, ಆಲೋಚನೆ ಮತ್ತು ತನ್ನೊಳಗಿನ ಸಂಘರ್ಷ ಇವುಗಳ ಬಗ್ಗೆ ವಿಶೇಷ ಎಚ್ಚರವಹಿಸಬೇಕು ಎನ್ನುತ್ತಾರೆ ಮನೋವಿಜ್ಞಾನಿಗಳು. ಸಂಭಾಷಣೆ ಸಂದರ್ಭ ತನ್ನ ಮಾತು ಮತ್ತು ವರ್ತನೆ ಎದುರಿಗಿರುವ ವ್ಯಕ್ತಿಗೆ ನೋವನ್ನು ಉಂಟುಮಾಡದಂತೆ ಪೂರ್ವ ಸಿದ್ಧತೆಯೊಂದಿಗೆ ಮಾತಿಗಿಳಿಯುವುದೇ ಟ್ರಾನ್ಸಾಕ್ಷನಲ್ ಅನ್ಯಾಲಿಸಿಸ್ ಸಿದ್ಧಾಂತದ ಪ್ರಮುಖ ಲಕ್ಷಣವಾಗಿದೆ.

ನಿನ್ನನ್ನು ಎಷ್ಟು ನಿಂದಿಸಿದರೂ ನಿನಗೆ ನೋವಾಗುವುದಿಲ್ಲವೆ ಎಂದ ದೇವದತ್ತನ ಮಾತಿಗೆ ಭಗವಾನ್ ಬುದ್ಧ ಪ್ರತಿಕ್ರಿಯಿಸಿದ್ದು ಹೀಗೆ-‘ಒಬ್ಬ ಇನ್ನೊಬ್ಬನಿಗೆ ಏನಾದರೂ ಕೊಡುತ್ತಾನೆ. ಆ ಇನ್ನೊಬ್ಬನು ಅದನ್ನು ತೆಗೆದುಕೊಳ್ಳದೆ ಹೋದರೆ, ಅದು ಕೊಡುವವನಿಗೇ ಸೇರುತ್ತದೆ. ನೀನು ನನಗೆ ರಾಶಿರಾಶಿ ಬೈಗುಳಗಳನ್ನು ಕೊಟ್ಟೆ, ಅದನ್ನು ನಾನು ತೆಗೆದುಕೊಳ್ಳಲಿಲ್ಲ. ಆಗ ಬೈಗುಳಗಳ ರಾಶಿ ಯಾರಿಗೆ ಸೇರಬೇಕು? ನಿನಗೇ ತಾನೆ’. ಸಾಮಾಜಿಕ ಜಾಲತಾಣಗಳಲ್ಲಿ ಅನಾರೋಗ್ಯಕರವಾದ ಸಂದೇಶಗಳು ಪುಂಖಾನುಪುಂಖವಾಗಿ ಹರಿದಾಡುತ್ತಿರುವ ಈ ಸಂದರ್ಭ ಬುದ್ಧ ಗುರುವಿನ ನಿರ್ಲಿಪ್ತ ಗುಣವನ್ನು ಮೈಗೂಡಿಸಿಕೊಳ್ಳಬೇಕಾದದ್ದು ತುರ್ತು ಅಗತ್ಯವಾಗಿದೆ.

-ರಾಜಕುಮಾರ ಕುಲಕರ್ಣಿ

Friday, November 3, 2023

ಗ್ರಾಮೀಣ ಗ್ರಂಥಾಲಯ ಜನಸ್ನೇಹಿ ಆಗಲಿ

 


(೨೨.೦೯.೨೦೨೩ ರ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ)

      ಇತ್ತೀಚೆಗೆ ಗ್ರಾಮಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರ ತರಬೇತಿ ಶಿಬಿರದಲ್ಲಿ ನಾನು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದೆ. ಶಿಬಿರಾರ್ಥಿಗಳಲ್ಲಿ ಗ್ರಂಥಾಲಯ ಸಂಬಂಧಿತ ಹೊಸ ಸಂಗತಿಗಳನ್ನು ತಿಳಿದುಕೊಳ್ಳಬೇಕೆನ್ನುವ ಆಸಕ್ತಿ ಮತ್ತು ಕುತೂಹಲಗಳಿದ್ದದ್ದು ಕಂಡುಬಂತು. ಉಪನ್ಯಾಸದ ಕೊನೆಗೆ ಇಪ್ಪತ್ತು ಪ್ರಶ್ನೆಗಳ ಕಿರುಪರೀಕ್ಷೆಯನ್ನು ತೆಗೆದುಕೊಳ್ಳಲಾಯಿತು. ಪಡೆದ ಅಂಕಗಳನ್ನಾಧರಿಸಿ ಅವರಿಗೆ ವೃತ್ತಿಯಲ್ಲಿ ಆಸಕ್ತಿ ಇದೆ ಅಥವಾ ಇಲ್ಲ ಎಂದು ಮೌಲ್ಯಮಾಪನದ ಮೂಲಕ  ಗುರುತಿಸಲಾಯಿತು. ಪ್ರತಿಶತ 90 ರಷ್ಟು ಶಿಬಿರಾರ್ಥಿಗಳು ವೃತ್ತಿಯಲ್ಲಿ ಆಸಕ್ತಿ ಇದೆ ಎನ್ನುವ ಗುಂಪಿಗೆ ಸೇರ್ಪಡೆಯಾದರು. 

ಉಪನ್ಯಾಸದ ಸಂದರ್ಭ ಶಿಬಿರಾರ್ಥಿಗಳನ್ನು ನಿಮ್ಮ ಗ್ರಂಥಾಲಯ ವ್ಯಾಪ್ತಿಯಲ್ಲಿನ ಓದುಗರಿಗೆ ಅಗತ್ಯವಾದ ಪುಸ್ತಕಗಳು ನಿಮ್ಮಲ್ಲಿವೆಯೇ ಎಂದು ಕೇಳಿದೆ. ಆಗ ಹೆಚ್ಚಿನ ಸಂಖ್ಯೆಯ ಶಿಬಿರಾರ್ಥಿಗಳ ಉತ್ತರ ನಕರಾತ್ಮಕವಾಗಿತ್ತು. ಪುಸ್ತಕ ಆಯ್ಕೆ ಸಮಿತಿಯಾಗಲಿ ಮತ್ತು ಕೇಂದ್ರ ಗ್ರಂಥಾಲಯವಾಗಲಿ ಗ್ರಾಮೀಣ ಗ್ರಂಥಾಲಯಗಳಿಂದ ಬೇಡಿಕೆಯ ಪುಸ್ತಕಗಳ ಪಟ್ಟಿಯನ್ನು ಪಡೆಯುವುದಿಲ್ಲವೆಂಬ ಸಂಗತಿ ತಿಳಿದುಬಂತು. ಕೇಂದ್ರ ಗ್ರಂಥಾಲಯವು ಪೂರೈಸುವ ಪುಸ್ತಕಗಳನ್ನಷ್ಟೆ ಸಂಗ್ರಹಿಸಿಡುವ ಕೆಲಸ ತಮ್ಮದೆಂದು ಕೆಲವರು ಬೇಸರ ವ್ಯಕ್ತಪಡಿಸಿದರು. ಪರಿಣಾಮವಾಗಿ ಗ್ರಾಮೀಣ ಭಾಗದ ಓದುಗರಿಗೆ ಅಗತ್ಯವಾದ ಪುಸ್ತಕಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲವೆಂದು ತಮ್ಮ ಅಸಹಾಯಕತೆ ತೋಡಿಕೊಂಡರು.

ಕರ್ನಾಟಕದ ಗ್ರಾಮೀಣ ಭಾಗದ ಜನಜೀವನ, ಉದ್ಯೋಗ, ಕೃಷಿ ಇವುಗಳಲ್ಲಿ ವಿಭಿನ್ನತೆ ಇದೆ. ಹೀಗಾಗಿ ಒಂದೇ ಪ್ರಕಾರದ ಪುಸ್ತಕಗಳನ್ನು ಎಲ್ಲ ಗ್ರಾಮಪಂಚಾಯಿತಿ ಗ್ರಂಥಾಲಯಗಳಿಗೆ ಒದಗಿಸುವುದು ವೈಜ್ಞಾನಿಕವಾಗಿ ಸರಿಯಾದ ಕ್ರಮವಲ್ಲ. ಐದು ಸಾವಿರಕ್ಕೂ ಹೆಚ್ಚು ಗ್ರಾಮಪಂಚಾಯಿತಿ ಗ್ರಂಥಾಲಯಗಳು ಕರ್ನಾಟಕದಲ್ಲಿವೆ. ಈ ಎಲ್ಲ ಗ್ರಂಥಾಲಯಗಳನ್ನು ವಿಭಾಗವಾರು ವಿಂಗಡಿಸಿ ಆಯಾ ಭಾಗದ ಗ್ರಾಮೀಣ ಜನತೆಯ ಅಗತ್ಯಗಳಿಗನುಸಾರವಾಗಿ ಪುಸ್ತಕಗಳು ಪೂರೈಕೆಯಾಗಬೇಕು. ಕೇವಲ ಕಥೆ, ಕಾದಂಬರಿಗಳಂತಹ ಸಾಹಿತ್ಯ ಕೃತಿಗಳನ್ನು ಮಾತ್ರ ಗ್ರಂಥಾಲಯಗಳಲ್ಲಿ ಸಂಗ್ರಹಿಸಿಡುತ್ತೇವೆ ಎನ್ನುವುದು ವಿತಂಡವಾದವಾಗುತ್ತದೆ. ಗ್ರಂಥಾಲಯಗಳು ಮಾಹಿತಿ ಕೇಂದ್ರಗಳೂ ಆಗಬೇಕಾಗಿರುವುದರಿಂದ ಆಯಾ ಗ್ರಾಮೀಣ ಪ್ರದೇಶಗಳ ಕೃಷಿ, ಪರಿಸರ, ಸರ್ಕಾರದ ಸವಲತ್ತುಗಳು ಮತ್ತು ಜನಜೀವನವನ್ನಾಧರಿಸಿದ ಪುಸ್ತಕಗಳು ಗ್ರಾಮೀಣ ಗ್ರಂಥಾಲಯಗಳಲ್ಲಿ ಸಿಗುವಂತಾಗಬೇಕು. ಗ್ರಾಮೀಣ ಭಾಗದ ಮಕ್ಕಳ ಓದಿನ ಅಭಿರುಚಿಯ ವಿಕಸನಕ್ಕೆ ಅಗತ್ಯವಾದ ಪುಸ್ತಕಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನೆರವಾಗುವ ಮಾಹಿತಿ ಕೂಡ ಗ್ರಾಮೀಣ ಗ್ರಂಥಾಲಯಗಳಲ್ಲಿ ಲಭ್ಯವಾಗಬೇಕು.  

ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಗ್ರಂಥಾಲಯಗಳ ದುಸ್ಥಿತಿ ಕುರಿತು ಬರೆಯುತ್ತ ಹೀಗೆ ಹೇಳುತ್ತಾರೆ ‘ಗ್ರಾಮಪಂಚಾಯಿತಿ ಗ್ರಂಥಾಲಯಗಳಿಗೆ ಬೇಕಾದ ಮೂಲಭೂತ ಅಗತ್ಯಗಳಾದ ಸುಸಜ್ಜಿತ ಕಟ್ಟಡ, ಕಪಾಟುಗಳು, ಅಗತ್ಯದ ಗ್ರಂಥಗಳು, ಎಲ್ಲ ಪತ್ರಿಕೆಗಳು ಇವುಗಳನ್ನು ಕಲ್ಪಿಸಿಕೊಟ್ಟರೆ ನಮ್ಮ ಸಾಮಾಜಿಕ ರಚನೆಯ ಸ್ವರೂಪವೇ ಬದಲಾಗಬಹುದು. ಹಳ್ಳಿಯ ರೈತನೊಬ್ಬನಿಗೆ ಅಗತ್ಯದ ಮಾಹಿತಿ ಇಂತಹ ಗ್ರಂಥಾಲಯಗಳಲ್ಲಿ ಸಿಗುವಂತೆ ಅದರ ಸ್ವರೂಪವನ್ನು ರೂಪಿಸಿದರೆ ನಮ್ಮ ಗ್ರಂಥಾಲಯಗಳು ಜನಸ್ನೇಹಿಯಾಗಬಹುದು’.

ರಾಜ್ಯದ ಗ್ರಂಥಾಲಯ ಇಲಾಖೆಯು ಪುಸ್ತಕ ಆಯ್ಕೆ ಮತ್ತು ಖರೀದಿಯ ಪ್ರಕ್ರಿಯೆಯನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದೆ. ಪುಸ್ತಕಗಳ ಆಯ್ಕೆ ಸಂದರ್ಭ ಗ್ರಾಮಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರ ಸಲಹೆ ಸೂಚನೆಗಳನ್ನು ಪಡೆಯುತ್ತಿಲ್ಲ. ಜಿಲ್ಲಾ ಕೇಂದ್ರ ಗ್ರಂಥಾಲಯಗಳಿಗೂ ಸಹ ಜಿಲ್ಲೆಯ ಲೇಖಕರ/ಪ್ರಕಾಶಕರ ಇಂತಿಷ್ಟು ಪ್ರಮಾಣದ ಪುಸ್ತಕಗಳ ಖರೀದಿಯನ್ನು ಹೊರತುಪಡಿಸಿದರೆ ಹೆಚ್ಚಿನ ಅಧಿಕಾರವಿಲ್ಲ. ಅನೇಕ ಪ್ರಕಾಶಕರು ಆರೋಪಿಸುವಂತೆ ಕೆಲವು ಪುಸ್ತಕ ಪ್ರಕಾಶಕರು ಆಯ್ಕೆ ಸಮಿತಿ ಮತ್ತು ಗ್ರಂಥಾಲಯ ಇಲಾಖೆಯ ಮೇಲೆ ಸಂಪೂರ್ಣ ಹಿಡಿತ ಹೊಂದಿರುವರು.  ಸಾರ್ವಜನಿಕ ಗ್ರಂಥಾಲಯಗಳಿಗೆಂದೆ ಪುಸ್ತಕಗಳನ್ನು ಪ್ರಕಟಿಸುವ ಇಂಥ ಪ್ರಕಾಶಕರು ಒಬ್ಬರೆ ಹಲವು ಹೆಸರಿನ ಪ್ರಕಾಶನ ಸಂಸ್ಥೆಗಳ ಮೂಲಕ ಪುಸ್ತಕಗಳನ್ನು ಪೂರೈಸುವರು. ಇಲ್ಲಿ ಅಧಿಕಾರಿಗಳ ಮತ್ತು ಪ್ರಕಾಶಕರ ವೈಯಕ್ತಿಕ ಹಿತಾಸಕ್ತಿ ಮುನ್ನೆಲೆಗೆ ಬಂದು ಓದುಗರ ಬೇಡಿಕೆ ಮತ್ತು ಅಗತ್ಯ ಹಿನ್ನೆಲೆಗೆ ಸರಿಯುತ್ತವೆ. ಇಂಥ ವಾತಾವರಣದಲ್ಲಿ ಗ್ರಾಮಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರು ಓದುಗರ ಬೇಡಿಕೆಗೆ ಸ್ಪಂದಿಸುವುದು ದೂರದ ಮಾತು. 

ಇತ್ತೀಚೆಗೆ ನಿಧನರಾದ ವಿಮರ್ಶಕ ಜಿ.ಎಚ್.ನಾಯಕ್ ಅವರ ಕುರಿತು ಬರೆದ ಲೇಖನದಲ್ಲಿ ಎಚ್.ಎಸ್.ರಾಘವೇಂದ್ರರಾವ್ ಉಲ್ಲೇಖಿಸಿರುವ ಒಂದು ಘಟನೆ ಹೀಗಿದೆ-‘ನಾಯಕ್ ಅವರು ಗ್ರಂಥಾಲಯ ಇಲಾಖೆಯ ಪುಸ್ತಕ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ನೇಮಕವಾದಾಗ ಎರಡೋ ಮೂರೋ ದಿನಗಳಲ್ಲಿ ಸಾವಿರಾರು ಪುಸ್ತಕಗಳನ್ನು ಆಯ್ಕೆ ಮಾಡಬೇಕಾಗಿ ಬಂತು. ಸರಿಯಾಗಿ ಓದಿ ಮೌಲ್ಯಮಾಪನ ಮಾಡಲು ಅವಕಾಶ ಕೊಡದಿದ್ದರೆ ಈ ಕೆಲಸವೇ ಬೇಡವೆಂದು ಆ ಕ್ಷಣವೇ ರಾಜಿನಾಮೆ ಕೊಟ್ಟವರು ನಮ್ಮ ನಾಯಕರು. ಅವರ ಅಧ್ಯಕ್ಷ ಪದವಿ ಆ ಸಭೆಗೇ ಮುಗಿದು ಹೋಯಿತು’. ಆದರೆ ಜಿ.ಎಚ್.ನಾಯಕ್ ಅವರಂತೆ ಮನಸಾಕ್ಷಿಗನುಗುಣವಾಗಿ ನಡೆದುಕೊಳ್ಳುವ ವ್ಯಕ್ತಿಗಳು ಈಗ ಸಿಗುವುದು ವಿರಳ. 

ಗ್ರಾಮಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರು ಎದುರಿಸುತ್ತಿರುವ ಇನ್ನೊಂದು ಸಮಸ್ಯೆ ಎಂದರೆ ಅವರು ಎರಡು ಪ್ರತ್ಯೇಕ ಇಲಾಖೆಗಳ ಅಧೀನದಲ್ಲಿ ಕಾರ್ಯನಿರ್ವಹಿಸಬೇಕಿದೆ. ಸಂಬಳ ಜಿಲ್ಲಾಪಂಚಾಯಿತಿ ಇಲಾಖೆ ಪಾವತಿಸಿದರೆ, ಗ್ರಂಥಾಲಯ ಇಲಾಖೆ ಪುಸ್ತಕಗಳನ್ನು ಪೂರೈಸುತ್ತದೆ. ಈ ಎರಡು ಇಲಾಖೆಗಳ ನಡುವೆ ಹೊಂದಾಣಿಕೆಯಿದ್ದಾಗ ಮಾತ್ರ ಗ್ರಾಮಪಂಚಾಯಿತಿ ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸಲು ಸಾಧ್ಯ. ಜೊತೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿ.ಡಿ.ಒ) ಮತ್ತು ಮೇಲ್ವಿಚಾರಕರ ಮಧ್ಯೆ ಸಮನ್ವಯತೆಯ ಕೊರತೆ ಕೂಡ ಪ್ರಮುಖ ಸಮಸ್ಯೆಯಾಗಿದೆ. ಸಂಬಳವನ್ನು ಪ್ರತಿತಿಂಗಳು ನಿಯಮಿತವಾಗಿ ಪಾವತಿಸದೆ ವಿಳಂಬ ಮಾಡುತ್ತಿರುವುದು ಮೇಲ್ವಿಚಾರಕರಲ್ಲಿ ಕೆಲಸದ ನಿರಾಸಕ್ತಿಗೆ ಕಾರಣವಾಗಿದೆ. ಇಲಾಖೆಗಳ ನಡುವಣ ಸಂಘರ್ಷ ಮತ್ತು ಪುಸ್ತಕ ಖರೀದಿ ಪ್ರಕ್ರಿಯೆಯ ಕೇಂದ್ರಿಕೃತ ವ್ಯವಸ್ಥೆಯಿಂದಾಗಿ ಗ್ರಾಮೀಣ ಗ್ರಂಥಾಲಯಗಳ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಒಟ್ಟಾರೆ ಸುಧಾರಣೆ ಆಗಬೇಕಾಗಿರುವುದು ತಳಮಟ್ಟದಲ್ಲಲ್ಲ, ನೀತಿ ನಿಯಮಗಳನ್ನು ರೂಪಿಸುವ ಮತ್ತು ದೂರದಲ್ಲಿ ಕುಳಿತು ಏಕಪಕ್ಷಿಯ ನಿರ್ಧಾರ ತೆಗೆದುಕೊಳ್ಳುವ ಮೇಲ್ಮಟ್ಟದಲ್ಲಾಗಬೇಕು. ದುರಂತವೆಂದರೆ ನಾವು ಸದಾಕಾಲ ತಳಮಟ್ಟದ ಸುಧಾರಣೆಗಳತ್ತ ಗಮನಹರಿಸುತ್ತ ಮೇಲ್ಮಟ್ಟದ ಆಡಳಿತಶಾಹಿಯನ್ನು ಮರೆತು ಬಿಡುತ್ತೇವೆ. 

-ರಾಜಕುಮಾರ ಕುಲಕರ್ಣಿ


Tuesday, October 3, 2023

ಭೌತಿಕ ಶುಚಿತ್ವ ಮತ್ತು ಬೌದ್ಧಿಕ ವಿಕಸನ

     



( ೧೦.೦೭.೨೦೨೩ ರ ಪ್ರಜಾವಾಣಿಯ 'ಸಂಗತ' ಅಂಕಣದಲ್ಲಿ ಪ್ರಕಟ)

         ಇತ್ತೀಚೆಗೆ ಮಿತ್ರರೊಬ್ಬರ ಊರಿನಲ್ಲಿ ಮುಖ್ಯ ಬಸ್ ನಿಲ್ದಾಣಕ್ಕಿಂತ ಪೂರ್ವದ ನಿಲ್ದಾಣದಲ್ಲಿ ಇಳಿದು ಮೂತ್ರವಿಸರ್ಜನೆಗಾಗಿ ಸುತ್ತಲು ದೃಷ್ಟಿ ಬೀರಿದವನಿಗೆ ಅಲ್ಲೆಲ್ಲೂ ಸಾರ್ವಜನಿಕ ಶೌಚಾಲಯ ಗೋಚರಿಸಲಿಲ್ಲ. ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳಿಂದ ದಟ್ಟವಾದ ಆ ಪ್ರದೇಶದಲ್ಲಿ ಬಯಲುಭೂಮಿಯನ್ನು ಹುಡುಕಿಕೊಂಡು ಹೋಗುವುದು ಅಸಾಧ್ಯವಾದ ಕೆಲಸವಾಗಿತ್ತು. ಕೊನೆಗೆ ಈ ಸಮಸ್ಯೆಗೆ ಪರಿಹಾರ ಸ್ನೇಹಿತರ ಮನೆ ತಲುಪಿದ ನಂತರವೇ ಪ್ರಾಪ್ತವಾಯಿತು. ಮನೆ ತಲುಪವರೆಗೂ ನನಗಾದ ಸಂಕಟ ವರ್ಣಿಸಲಸಾಧ್ಯವಾಗಿತ್ತು. ‘ಹೆಜ್ಜೆ ಹೆಜ್ಜೆಗೂ ದೇವಾಲಯಗಳಿರುವ ಈ ಊರಿನಲ್ಲಿ ಸಾರ್ವಜನಿಕರ ಅನುಕೂಲಕ್ಕೆಂದು ರಸ್ತೆಬದಿ ಶೌಚಾಲಯಗಳಿಲ್ಲ ನೋಡಿ’ ಎಂದ ಸ್ನೇಹಿತರ ಮಾತಿನಲ್ಲಿ ಸ್ಥಳೀಯ ಆಡಳಿತದ ವೈಫಲ್ಯ ಢಾಳಾಗಿ ಎದ್ದು ಕಾಣುತ್ತಿತ್ತು 

ಇದೇ ಸಮಯದಲ್ಲಿ ನನ್ನ ಸ್ನೇಹಿತರ ಮನೆಗೆ ಅತಿಥಿಯಾಗಿ ಬಂದ ಹಿರಿಯರೊಬ್ಬರು ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದರು. ಮನೆಯಿಂದ ಸಾರ್ವಜನಿಕ ಗ್ರಂಥಾಲಯ ಬಹಳ ದೂರದಲ್ಲಿರುವುದರಿಂದ ಸ್ನೇಹಿತರು ತಮ್ಮ ಅಸಹಾಯಕತೆ ತೋಡಿಕೊಂಡರು. ಹಿರಿಯರು ಸಮೀಪದಲ್ಲಿ ಶಾಖಾ ಗ್ರಂಥಾಲಯ ಇದೆಯೇ ಎಂದು ಕೇಳಿದರು. ಆಗ ಸ್ನೇಹಿತರ ಉತ್ತರ ನಕಾರಾತ್ಮಕವಾಗಿತ್ತು. ಕೊನೆಗೆ ಖಾಸಗಿ ಗ್ರಂಥಾಲಯದ ಬಗ್ಗೆ ಪ್ರಶ್ನಿಸಿದರು. ಈ ಖಾಸಗಿ ಗ್ರಂಥಾಲಯ ಎನ್ನುವ ವ್ಯವಸ್ಥೆ ಮರೆಯಾಗಿ ಹಲವು ದಶಕಗಳೇ ಸಂದಿರುವಾಗ ಆ ಹಿರಿಯರಿಗೆ ಉತ್ತರಿಸಲು ತುಂಬ ಇರಿಸುಮುರಿಸಾಯಿತು. ಪುಸ್ತಕಗಳ ಓದಿನ ಸಂಸ್ಕೃತಿಯೇ ನಾಶವಾಗುತ್ತಿದೆಯಲ್ಲ ಎಂದು ಅವರು ಬಹಳ ವೇದನೆಪಟ್ಟುಕೊಂಡರು. 

ಶೌಚಾಲಯ ಮತ್ತು ಗ್ರಂಥಾಲಯ ನಾಗರಿಕ ಸಮಾಜದ ಎರಡು ಬಹುಮುಖ್ಯ ಅಗತ್ಯಗಳಾಗಿವೆ. ಒಂದು ಭೌತಿಕÀ ಶುಚಿತ್ವಕ್ಕೆ ಆದ್ಯತೆ ನೀಡಿದರೆ ಇನ್ನೊಂದು ಬೌದ್ಧಿಕ ವಿಕಸನಕ್ಕೆ ದಾರಿ ಮಾಡಿಕೊಡುತ್ತದೆ. ಮನುಷ್ಯ ಭೌತಿಕವಾಗಿ ಮತ್ತು ಬೌದ್ಧಿಕವಾಗಿ ಎರಡೂ ಸ್ತರಗಳಲ್ಲಿ ಪ್ರಗತಿ ಸಾಧಿಸಬೇಕಿರುವುದರಿಂದ ಶೌಚಾಲಯ ಮತ್ತು ಗ್ರಂಥಾಲಯಗಳು ಅತಿ ಅಗತ್ಯದ ಬೇಡಿಕೆಗಳಾಗಿವೆ. ಈ ದಿಸೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸರ್ಕಾರ ಸಾರ್ವಜನಿಕ ಶೌಚಾಲಯಗಳನ್ನು ಮತ್ತು ಗ್ರಂಥಾಲಯಗಳನ್ನು ಸ್ಥಾಪಿಸಿದೆ. ಆದರೆ ಸ್ಥಾಪನೆಯಲ್ಲಿರುವ ಆಸಕ್ತಿ ನಂತರದ ದಿನಗಳಲ್ಲಿ ಅವುಗಳ ನಿರ್ವಹಣೆಯಲ್ಲಿ ಕಾಣಿಸುತ್ತಿಲ್ಲದಿರುವುದು ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಶೌಚಾಲಯ ಮತ್ತು ಗ್ರಂಥಾಲಯಗಳ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಬಸ್ ನಿಲ್ದಾಣ, ಸರ್ಕಾರಿ ಕಚೇರಿಗಳು ಮತ್ತು ಜನನಿಬಿಡ ಮಾರುಕಟ್ಟೆ ಪ್ರದೇಶಗಳಲ್ಲಿನ ಶೌಚಾಲಯಗಳು ಅವ್ಯವಸ್ಥೆಯ ಆಗರಗಳಾಗಿವೆ. ಶೌಚಾಲಯಗಳನ್ನು ಪ್ರವೇಶಿಸಿ ಅಲ್ಲಿನ ದುರ್ಗಂಧವನ್ನು ಸಹಿಸಿಕೊಳ್ಳುವುದಕ್ಕಿಂತ ದೈಹಿಕ ಒತ್ತಡವನ್ನು ಸಹಿಸಿಕೊಳ್ಳುವುದು ಎಷ್ಟೋ ಪಾಲು ಉತ್ತಮ ಎನಿಸುತ್ತದೆ. ‘ಶುಚಿತ್ವವಿದ್ದಲ್ಲಿ ದೈವತ್ವವಿದೆ’ ಎಂದ ಮಹಾತ್ಮ ಗಾಂಧೀಜಿ ಅವರ ಮಾತನ್ನು ಸರ್ಕಾರ ಮತ್ತು ಸಾರ್ವಜನಿಕರು ಅರ್ಥಮಾಡಿಕೊಂಡಿಲ್ಲ. ಇನ್ನು ಸಾರ್ವಜನಿಕ ಗ್ರಂಥಾಲಯಗಳಲ್ಲಿಯೂ ಅನೇಕ ಸಮಸ್ಯೆಗಳಿವೆ. ಪುಸ್ತಕ, ಪಿಠೋಪಕರಣಗಳು ಮತ್ತು ಸಿಬ್ಬಂದಿಯ ಕೊರತೆಯಿಂದ ಸಾರ್ವಜನಿಕ ಗ್ರಂಥಾಲಯಗಳು ಓದುಗರನ್ನು ಆಕರ್ಷಿಸುವಲ್ಲಿ ವಿಫಲವಾಗುತ್ತಿವೆ. ಅಗತ್ಯದ ಪುಸ್ತಕಗಳಿಗಿಂತ ಅನಗತ್ಯದ ಪುಸ್ತಕಗಳ ಸಂಖ್ಯೆಯೇ ಅಲ್ಲಿ ಹೆಚ್ಚು. ಗುಣಾತ್ಮಕ ಪುಸ್ತಕಗಳ ಕೊರತೆಯಿಂದಾಗಿ ಸಾರ್ವಜನಿಕ ಗ್ರಂಥಾಲಯಗಳಿಗೆ ಭೇಟಿ ನೀಡುವ ಓದುಗರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ.  

ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯದ ಪರಿಕಲ್ಪನೆ ಪೂರ್ಣಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ. ಅದೆಷ್ಟೋ ಹಳ್ಳಿಗಳಲ್ಲಿ ಸರ್ಕಾರದ ಅನುದಾನದಲ್ಲಿ ಕಟ್ಟಿದ ಶೌಚಾಲಯಗಳನ್ನು ಮನೆಯ ಅನುಪಯುಕ್ತ ವಸ್ತುಗಳನ್ನು ಶೇಖರಿಸಿಡಲು ಜನರು ಉಪಯೋಗಿಸುತ್ತಿರುವರು. ಅನೇಕ ಸಂದರ್ಭಗಳಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸರ್ಕಾರದ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುವರು. ಪರಿಣಾಮವಾಗಿ ‘ಬಯಲುಶೌಚ ಮುಕ್ತ’ ಎನ್ನುವುದು ಸರ್ಕಾರದ ದಸ್ತಾವೇಜುಗಳಲ್ಲಿ ಮಾತ್ರ ದಾಖಲಾಗುತ್ತಿದೆ ವಿನಾ ಪ್ರಾಯೋಗಿಕವಾಗಿ ಸಾಕಾರಗೊಂಡಿಲ್ಲ. ಇದೇ ಮಾತು ಗ್ರಾಮೀಣ ಗ್ರಂಥಾಲಯಗಳಿಗೂ ಅನ್ವಯಿಸುತ್ತದೆ. ಕಾಟಾಚಾರಕ್ಕೆನ್ನುವಂತೆ ಗ್ರಾಮೀಣ ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದೆ ವಿನಾ ಅವುಗಳ ನಿರ್ವಹಣೆ ಸಮರ್ಪಕವಾಗಿಲ್ಲ. ಸ್ಥಳೀಯರನ್ನೇ ಗ್ರಂಥಾಲಯಗಳ ಮೇಲ್ವಿಚಾರಕರನ್ನಾಗಿ ನೇಮಿಸುತ್ತಿರುವುದರಿಂದ ಅವರ ಕಾರ್ಯನಿರ್ವಹಣೆ ಕುರಿತು ಪ್ರಶ್ನಿಸುವಂತಿಲ್ಲ. ಬಹಳಷ್ಟು ಗ್ರಾಮಗಳಲ್ಲಿ ಗ್ರಂಥಾಲಯಗಳು ಜೂಜು ಮತ್ತು ಇಸ್ಪಿಟ್ ಆಟದ ಅಡ್ಡಾಗಳಾಗಿ ಪರಿವರ್ತನೆಗೊಂಡಿವೆ.

ಸರ್ಕಾರಿ ಶಾಲೆಗಳಲ್ಲಿ ಗ್ರಂಥಾಲಯ ಮತ್ತು ಶೌಚಾಲಯದ ಕೊರತೆ ಬಹುಮುಖ್ಯ ಸಮಸ್ಯೆಯಾಗಿದೆ. ಗ್ರಾಮೀಣ ಭಾಗ ಮಾತ್ರವಲ್ಲದೆ ನಗರ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿಯೂ ಗ್ರಂಥಾಲಯ ಮತ್ತು ಶೌಚಾಲಯಗಳಿಲ್ಲ. ಶೌಚಾಲಯಗಳ ಕೊರತೆಯಿಂದಾಗಿ ಮಕ್ಕಳು ದೈಹಿಕ ಒತ್ತಡವನ್ನು ಸಹಿಸಿಕೊಂಡು ಪಾಠದತ್ತ ಗಮನವನ್ನು ಕೇಂದ್ರೀಕರಿಸುವುದು ಕಷ್ಟಸಾಧ್ಯ. ವಿಶೇಷವಾಗಿ ವಿದ್ಯಾರ್ಥಿನಿಯರು ಶೌಚಾಲಯ ಸಂಬಂಧಿತ ಸಮಸ್ಯೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಎದುರಿಸುತ್ತಿರುವರು. ಈ ಸಮಸ್ಯೆಯಿಂದಾಗಿ ಪ್ರತಿತಿಂಗಳ ಮುಟ್ಟಿನ ಸಂದರ್ಭ ವಿದ್ಯಾರ್ಥಿನಿಯರು ಶಾಲೆಗೆ ಗೈರುಹಾಜರಾಗುವುದು ಕಡ್ಡಾಯ ಎನ್ನುವಂತಾಗಿದೆ. 

ಜ್ಞಾನ ಕಲಿಕೆಯ ಕೇಂದ್ರವಾದ ಶಾಲೆಗಳಲ್ಲಿ ಅತ್ಯುತ್ತಮ ಗ್ರಂಥಾಲಯಗಳನ್ನು ಸ್ಥಾಪಿಸಲು ಸರ್ಕಾರ ನಿರಾಸಕ್ತಿ ತೋರಿಸುತ್ತಿದೆ. ಮುಖ್ಯೋಪಾಧ್ಯಾಯರ ಕೋಣೆಯಲ್ಲಿ ಕಾಟಾಚಾರಕ್ಕೆನ್ನುವಂತೆ ಕೆಲವು ಪುಸ್ತಕಗಳನ್ನು ಅಲ್ಮೆರಾದಲ್ಲಿ ಜೋಡಿಸಿಟ್ಟು ಗ್ರಂಥಾಲಯವೆಂದು ಮಕ್ಕಳಿಗೆ ತೋರಿಸಲಾಗುತ್ತಿದೆ. ಪಠ್ಯಪುಸ್ತಕಗಳ ಪೂರೈಕೆಯಲ್ಲೆ ಅನೇಕ ಸಮಸ್ಯೆಗಳಿರುವಾಗ ಇನ್ನು ಶಾಲಾಗ್ರಂಥಾಲಯಗಳಿಗೆ ಸಾಹಿತ್ಯ ಮತ್ತಿತರ ಪಠ್ಯೇತರ ಪುಸ್ತಕಗಳನ್ನು ಪೂರೈಸುವುದು ದೂರದ ಮಾತು. ಶಿಕ್ಷಕರಲ್ಲಿನ ಓದಿನ ಅಭಿರುಚಿಯ ಕೊರತೆ ಕೂಡ ಶಾಲೆಗಳಲ್ಲಿ ಗ್ರಂಥಾಲಯ ಸ್ಥಾಪನೆಯ ಹಿನ್ನೆಡೆಗೆ ಕಾರಣವಾಗುತ್ತಿದೆ. ಶಾಲಾಹಂತದಲ್ಲೆ ಮಕ್ಕಳಲ್ಲಿ ಓದಿನ ಹವ್ಯಾಸವನ್ನು ಬೆಳೆಸುವಲ್ಲಿ ವಿಫಲವಾಗುತ್ತಿರುವುದರಿಂದ ಸಹಜವಾಗಿಯೇ ಪುಸ್ತಕಗಳ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ.

ಸರ್ಕಾರ ದೇವಾಲಯಗಳ ನಿರ್ಮಾಣದಲ್ಲಿ ತೋರುವ ಆಸಕ್ತಿ ಶೌಚಾಲಯ ಮತ್ತು ಗ್ರಂಥಾಲಯಗಳ ಸ್ಥಾಪನೆಯಲ್ಲಿ ತೋರಿಸುತ್ತಿಲ್ಲದಿರುವುದು ವಿಪರ್ಯಾಸದ ಸಂಗತಿ. ನಾಗರಿಕ ಸಮಾಜದ ಈ ಎರಡು ಅಗತ್ಯದ ಬೇಡಿಕೆಗಳನ್ನು ಅನುಷ್ಠಾನಕ್ಕೆ ತಂದು ಅವುಗಳನ್ನು ನಿರ್ವಹಿಸಬೇಕಾದ ಹೊಣೆಗಾರಿಕೆ ಸರ್ಕಾರದ್ದಾಗಿದೆ. ಜೊತೆಗೆ ಅವುಗಳನ್ನು ಸಮರ್ಪಕವಾಗಿ ಉಪಯೋಗಿಸುವ ಜವಾಬ್ದಾರಿ ನಾಗರಿಕ ಸಮಾಜದ ಮೇಲಿದೆ ಎನ್ನುವುದನ್ನು ಮರೆಯಬಾರದು.

-ರಾಜಕುಮಾರ ಕುಲಕರ್ಣಿ


Saturday, September 2, 2023

ದೈವಭಕ್ತಿ ಮತ್ತು ದೈಹಿಕ ಹಿಂಸೆ

      



(12.06.2023 ರ ಪ್ರಜಾವಾಣಿಯಲ್ಲಿ ಪ್ರಕಟ)

    ಇತ್ತೀಚೆಗೆ ಮಿತ್ರರೊಬ್ಬರು ಬೆಳಗ್ಗಿನ ವಾಕಿಂಗ್ ಸಮಯ ಸಂಭಾಷಣೆಯ ನಡುವೆ ‘ದೇವರು ಹಿಂಸಾಪ್ರಿಯನೋ ಅಥವಾ ಶಾಂತಿಪ್ರಿಯನೋ’ ಎಂದು ಕೇಳಿದರು.  ಅವರು ಹಾಗೆ ಕೇಳುವುದಕ್ಕೂ ಕಾರಣವಿತ್ತು. ಕೆಲಕ್ಷಣಗಳ ಹಿಂದಷ್ಟೆ ದೂರದ ದೇವಸ್ಥಾನಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ಜನರ ಗುಂಪೊಂದು ನಮಗೆ ಎದುರಾಗಿತ್ತು. ಆ ಗುಂಪಿನಲ್ಲಿ ಕೆಲವರು ಸುಮಾರು ಮೂರರಿಂದ ನಾಲ್ಕು ಅಡಿಗಳಷ್ಟು ಉದ್ದದ ಕೋಲುಗಳನ್ನು ಪಾದದ ಕೆಳಗೆ ಕಟ್ಟಿಕೊಂಡು ನಡೆಯುತ್ತಿದ್ದರು. ನೂರಾರು ಕಿಲೋಮೀಟರ್‍ಗಳ ದೂರದ ದಾರಿಯನ್ನು ಹೀಗೆ ಯಾವ ಆಸರೆಯೂ ಇಲ್ಲದೆ ಕೋಲುಗಳ ಮೇಲೆ ಕ್ರಮಿಸುವ ಈ ವಿಧಾನವೇ ನಮ್ಮ ಅಚ್ಚರಿ ಮತ್ತು ಕುತೂಹಲಕ್ಕೆ ಕಾರಣವಾಗಿತ್ತು. ವಿಚಾರಿಸಿದಾಗ ತಿಳಿಯಿತು ಈ ರೀತಿ ಕೋಲುಗಳ ಮೇಲೆ ನಡೆದುಬಂದು ದೇವರ ದರ್ಶನ ಪಡೆಯುವ ಹರಕೆ ಅವರದಾಗಿತ್ತು. ಸಹಜವಾಗಿಯೇ ಈ ನಡೆ ನನ್ನ ಮಿತ್ರರಿಗೆ ಮತ್ತು ನನಗೆ ಹಿಂಸೆಯಾಗಿ ತೋರಿತು.

ದೇವರ ಹೆಸರಿನಲ್ಲಿ ದೇಹಕ್ಕೆ ಬಗೆಬಗೆಯ ಹಿಂಸೆಯನ್ನು ನೀಡುವ ಭಕ್ತರ ಸಂಖ್ಯೆ ಸಮಾಜದಲ್ಲಿ ಬಹಳಷ್ಟಿದೆ. ಕೆಂಡದ ಮೇಲೆ ನಡೆಯುವುದು, ಅಂಗೈಯಲ್ಲಿ ಕರ್ಪೂರದಾರತಿ ಬೆಳಗುವುದು, ಮುಳ್ಳಿನ ಪಾದುಕೆಗಳ ಮೇಲೆ ನಿಲ್ಲುವುದು, ರಕ್ತಜಿನುಗುವಂತೆ ಚಾಟಿಯಿಂದ ಮೈಮೇಲೆ ಹೊಡೆದುಕೊಳ್ಳುವುದು, ಬೆನ್ನಿಗೆ ಕಬ್ಬಿಣದಕೊಂಡಿ ಸಿಕ್ಕಿಸಿಕೊಂಡು ಗಾಳಿಯಲ್ಲಿ ತೇಲಾಡುವುದು, ನಾಲಗೆಗೆ ಕಬ್ಬಿಣದ ಸಲಾಕೆ ಚುಚ್ಚಿಕೊಳ್ಳುವುದು, ಅನ್ನ ಆಹಾರ ತ್ಯಜಿಸಿ ವೃಥಾ ಉಪವಾಸವಿರುವುದು ಹೀಗೆ ಆಯಾ ದೇವಸ್ಥಾನಗಳ ನಿಯಮಗಳಿಗನುಗುಣವಾಗಿ ಭಕ್ತಗಣ ದೈಹಿಕ ಹಿಂಸೆಗೆ ಒಳಗಾಗುತ್ತಾರೆ. ಹಾಗೆಂದು ಇದೇನು ದೇವರು ಮಾಡಿದ ನಿಯಮವಲ್ಲ. ದೇವರ ಹೆಸರಿನಲ್ಲಿ ಮನುಷ್ಯರು ರೂಢಿಸಿಕೊಂಡ ಪದ್ಧತಿಗಳಿವು. 

ಕೆಲವು ವರ್ಷಗಳ ಹಿಂದೆ ಭಕ್ತನೊಬ್ಬ ದೇವರಿಗೆ ತನ್ನ ನಾಲಗೆಯನ್ನೇ ಸಮರ್ಪಿಸಿದ್ದ. ಬಾಗಲಕೋಟೆ ಹತ್ತಿರದ ಊರಿನಲ್ಲಿ ಅನಕ್ಷರಸ್ಥನೋರ್ವ ದೇವರಿಗೆ ತನ್ನ ಕಣ್ಣುಗಳನ್ನು ನೀಡಿ ಭಕ್ತಿಯ  ಪರಾಕಾಷ್ಠೆ ಮೆರೆದಿದ್ದ. ಗ್ರಹಣದ ದಿನ ಪಾರ್ಶ್ವವಾಯುಪೀಡಿತರನ್ನು ಗುಂಡಿಗಳಲ್ಲಿ ಕುತ್ತಿಗೆಯವರೆಗೆ ಹೂಳುವುದರಿಂದ ರೋಗ ಗುಣಪಡಿಸಬಹುದು ಎನ್ನುವ ನಂಬಿಕೆ ಗ್ರಾಮೀಣ ಭಾಗಗಳಲ್ಲಿ ಬಲವಾಗಿದೆ. ಇಂಥ ಅಸಂಗತ ಘಟನೆಗಳು ಅನೇಕ ಸಂದರ್ಭಗಳಲ್ಲಿ ಪತ್ರಿಕೆಗಳಲ್ಲಿ ಸುದ್ಧಿಯಾಗಿ ಸಾರ್ವಜನಿಕರ ಗಮನ ಸೆಳೆದಿವೆ. ಬಿಗಿಯಾದ ಕಾನೂನು ರೂಪಿಸಬೇಕಾದ ಸರ್ಕಾರವೇ ಗುಡಿ-ಗುಂಡಾರಗಳಿಗೆ ಕೋಟ್ಯಾಂತರ ರೂಪಾಯಿಗಳ ಅನುದಾನ ನೀಡಿ ದೇವಸ್ಥಾನಗಳಲ್ಲಿನ ಅಂಧಾನುಚರಣೆಗಳನ್ನು ಪೋಷಿಸುತ್ತಿದೆ.

ಪ್ರಾಣಿ ಬಲಿ ಬೇಡುವ ಹಿಂಸಾಪ್ರಿಯ ದೇವರನ್ನು ಸಹ ಮನುಷ್ಯ ಸೃಷ್ಟಿಸಿರುವನು.  ಕುರಿ-ಕೋಳಿ-ಕೋಣಗಳನ್ನು ಬಲಿ ಕೊಡುವ ಸಂಪ್ರದಾಯ ಇನ್ನು ಅನೇಕ ಊರುಗಳಲ್ಲಿ ಚಾಲ್ತಿಯಲ್ಲಿದೆ. ಪ್ರಾಣಿ ಬಲಿಕೊಡುವ ದಿನ ದೇವಸ್ಥಾನದ ಬೀದಿಯಲ್ಲಿ ರಕ್ತದೊಕುಳಿ ಹರಿಯುತ್ತದೆ. ಭಕ್ತರು ತಮ್ಮ ಆರ್ಥಿಕ ಶಕ್ತ್ಯಾನುಸಾರ ಪ್ರಾಣಿಗಳನ್ನು ಖರೀದಿಸಿ ಬಲಿ ಕೊಡುತ್ತಾರೆ. ಹಣವಿಲ್ಲದವರು ದೇವರ ಇಷ್ಟಾರ್ಥವನ್ನು ಪೂರೈಸಲು ಸಾಲ ಮಾಡಿ ಪ್ರಾಣಿಗಳನ್ನು ಬಲಿಕೊಡುವುದುಂಟು. ಇಂಥ ಸಂಪ್ರದಾಯಕ್ಕನುಗುಣವಾಗಿ ಪ್ರಾಣಿಪ್ರಿಯ ದೇವರ ಹೆಸರುಗಳು ಕೂಡ ಬೀಭತ್ಸವಾಗಿರುತ್ತವೆ.

ಸಮಾಜದಲ್ಲಿ ಮನುಷ್ಯ ನೀತಿ ಮತ್ತು ಪ್ರಾಮಾಣಿಕತೆಗೆ ಹೆದರುವುದಿಲ್ಲವಾದರೂ ದೇವರಿಗೆ ಹೆದರುತ್ತಾನೆ. ದೇವರನ್ನು ಸಂತೃಪ್ತಿಪಡಿಸಲು ನಾನಾರೀತಿಯ ಪ್ರಯತ್ನಗಳನ್ನು ಮಾಡುತ್ತಾನೆ. ದೇವರನ್ನು ಮೆಚ್ಚಿಸಲು ಮನುಷ್ಯ ಮಾಡುವ ಪ್ರಯತ್ನಗಳಲ್ಲಿ ಸ್ವಯಂ ಹಿಂಸೆಗೆ ಒಳಗಾಗುವುದು ಕೂಡ ಒಂದು. ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ನ್ಯಾಯ ಸಮ್ಮತ ಎನ್ನುವ ಮಾತು ದೇವರ ಮೇಲಿನ ಭಕ್ತಿಗೂ ಅನ್ವಯಿಸುತ್ತಿದೆ. ಆದರೆ ಇಂಥ ಪದ್ಧತಿಗಳ ಮೊರೆ ಹೋಗುವವರು ದುರ್ಬಲ ಮನಸ್ಸಿನವರೆಂದು ಅನೇಕ ಅಧ್ಯಯನಗಳು ರುಜುವಾತುಪಡಿಸಿವೆ. ಪ್ರಾಣಿವರ್ಗಗಳಲ್ಲೇ ಶ್ರೇಷ್ಠನೆಂದು ಪರಿಗಣಿಸಲ್ಪಟ್ಟ ಮನುಷ್ಯ ಹೀಗೆ ದೇವರ ಹೆಸರಿನಲ್ಲಿ ಹಿಂಸೆಗೆ ಒಳಗಾಗುವುದು ಮಾನವ ಬದುಕಿನ ದುರಂತಗಳಲ್ಲೊಂದು. ಗೋಕಾಕರ ‘ಭಾರತ ಸಿಂಧುರಶ್ಮಿ’ ಕೃತಿಯಲ್ಲಿ ಮನುಷ್ಯವರ್ಗದ ಮಹತ್ವವನ್ನು ಕುರಿತು ಹೀಗೆ ಹೇಳಲಾಗಿದೆ- ‘ಜಗತ್ತಿನಲ್ಲಿ ಮನುಷ್ಯನಿಗಿಂತ ಕೆಳಸ್ತರದ ಪ್ರಾಣಿಗಳು ಮಾತ್ರವಲ್ಲ ಮೇಲಿನ ವರ್ಗಗಳ ವಿದ್ಯಾಧರ, ಗಂಧರ್ವ, ಅಪ್ಸರರು ಸಹ ಸ್ವಪ್ರಯತ್ನದಿಂದ ಬೆಳೆಯಲಾರರು. ಭಾವ-ಬುದ್ಧಿ-ಕರ್ಮದ ಮಿಲನದಿಂದ ಬೆಳೆಯಬಲ್ಲವನು ಮನುಷ್ಯ ಮಾತ್ರ’.

ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದರು. ಇದರರ್ಥ ಕೆಲಸದಲ್ಲಿ ಶ್ರದ್ಧೆ ಮತ್ತು ಪ್ರೀತಿ ಇರುವವರಿಗೆ ತಾವು ಮಾಡುವ ಕಾಯಕದಲ್ಲೇ ದೇವರು ಕಾಣಿಸುತ್ತಾನೆ. ಅಂಗೈಯಲ್ಲಿ ಆರತಿ, ಕೋಲಿನ ಮೇಲೆ ನಡಿಗೆ, ಕಬ್ಬಿಣದ ಮೊಳೆಗಳ ಮೇಲೆ ನಿಲ್ಲುವುದು, ಚಾಟಿಯಿಂದ ಹೊಡೆದುಕೊಳ್ಳುವುದು ಇಂಥ ಪ್ರಯತ್ನಗಳಿಂದ ಸಮಯ ಮತ್ತು ಶ್ರಮ ವ್ಯರ್ಥವೇ ವಿನಾ ಯಾವ ಪ್ರಯೋಜನವೂ ಇಲ್ಲ. ಕಾಯವನ್ನು ಕಾಯಕದ ಮೂಲಕ ದಂಡಿಸಬೇಕೆ ಹೊರತು ಅನಗತ್ಯವಾದ ಮೂಢನಂಬಿಕೆಗಳನ್ನು ಆಚರಿಸುವುದರಲ್ಲಿ ಮನುಷ್ಯರ ಶ್ರಮ ವ್ಯರ್ಥವಾಗಬಾರದು. ಜನಪದರು ಹೇಳಿದಂತೆ ಜಂಗಮನ ಜೋಳಿಗೆಯೆಂದು ಅದನ್ನು ಮೂಲೆಯಲ್ಲಿಟ್ಟರೆ ಅದು ತುಂಬುವುದಿಲ್ಲ. ಬದುಕಿನ ಪ್ರತಿಯೊಂದು ಆಗು-ಹೋಗುಗಳಿಗೆ ಹಣೆಬರಹ, ಕೆಟ್ಟಕಾಲ ಎಂದು ದೈವದ ಮೇಲೆ ಭಾರಹಾಕಿ ಕೈಕಟ್ಟಿ ಕುಳಿತುಕೊಳ್ಳುವವರಿಗೆ ಯಾವ ದೇವರು ಸಹಾಯಹಸ್ತ ಚಾಚುವುದಿಲ್ಲ.

ದೇವರ ಅಸ್ತಿತ್ವವನ್ನು ಕುರಿತು ವಿಜ್ಞಾನಿ ಆಲ್ಬರ್ಟ್ ಐನ್‍ಸ್ಟೀನ್ ತಮ್ಮ ‘ಐನ್‍ಸ್ಟೀನ್-ದಿ ಹ್ಯೂಮನ್ ಸೈಡ್’ ಪುಸ್ತಕದಲ್ಲಿ ಹೀಗೆ ವಿವರಿಸುತ್ತಾರೆ ‘ನಾನು ದೇವರು ಎಂಬ ವ್ಯಕ್ತಿಯೊಬ್ಬನಿದ್ದಾನೆ ಎಂದು ನಂಬುವುದಿಲ್ಲ. ದೇವರು ಎಂಬ ವ್ಯಕ್ತಿಯನ್ನು ಕಲ್ಪಿಸಿಕೊಳ್ಳುವುದೂ ನನಗೆ ಸಾಧ್ಯವಿಲ್ಲ. ಮನುಷ್ಯನ ಪ್ರಯತ್ನಗಳಲ್ಲಿ ಅತ್ಯಂತ ಮುಖ್ಯವಾದದ್ದೆಂದರೆ ನಮ್ಮ ಕರ್ಮವೆಲ್ಲ ನೀತಿಯುತವಾಗಿರಬೇಕೆಂದು ಮಾಡುವ ಪ್ರಯತ್ನ. ನಮ್ಮ ಉಳಿವು, ಅಸ್ತಿತ್ವ ಕೂಡ ಅದನ್ನು ಅವಲಂಬಿಸಿದೆ. ನಾವು ಮಾಡುವ ಕೆಲಸ ನೀತಿಯುತವಾಗಿದ್ದರೆ ಮಾತ್ರ ಬದುಕಿಗೊಂದು ಸೌಂದರ್ಯ, ಗಾಂಭೀರ್ಯ ಇರುತ್ತದೆ’. 

‘ದೇವರು’ ಪುಸ್ತಕ ಬರೆದು ದೇವರ ಅಸ್ತಿತ್ವವನ್ನೇ ಪ್ರಶ್ನಿಸಿದ ಎ.ಎನ್.ಮೂರ್ತಿರಾವ್ ಅವರು ‘ನಾವು ನಂಬಿಕೆ ಇಡಬಹುದಾದ ಏಕಮೇವ ದೇವರು ಮನುಷ್ಯರಲ್ಲಿ ವಾಸಿಸುವ ಒಳ್ಳೆಯತನ-ದುಷ್ಟತನದೊಂದಿಗೆ ವಾಸಿಸುವ ಒಳ್ಳೆಯತನ. ನಾವು ನಮ್ಮೊಳಗಿರುವ ಒಳ್ಳೆಯತನವೆನ್ನುವ ಆ ದೇವರನ್ನು ಚೈತನ್ಯಗೊಳಿಸಬೇಕು, ಅವನನ್ನು ದುಷ್ಟತನಕ್ಕೆ ಎದಿರಾಗಿ ನಿಲ್ಲಿಸಬೇಕು’ ಎಂದಿರುವರು. ಮನುಷ್ಯ ಹಿಂಸಾಪ್ರಿಯನೇ ವಿನಾ ದೇವರು ಹಿಂಸಾವಿನೋದಿಯಲ್ಲ. ದೇವರ ಹೆಸರಿನಲ್ಲಿ ಮನುಷ್ಯ ರೂಢಿಗೆ ತಂದಿರುವ ಪದ್ಧತಿಗಳಿವು. ಆದರೆ ನ್ಯಾಯ, ಸತ್ಯ ಮತ್ತು ಪ್ರಾಮಾಣಿಕವಾಗಿ ಬದುಕುವ ಮನುಷ್ಯ ಅಂಧಾನುಚರಣೆಗಳಿಗೆ ಹೆದರುವ ಅಗತ್ಯವಿಲ್ಲ. ನಾವು ಹೆದರಬೇಕಾಗಿರುವುದು ನಮ್ಮೊಳಗಿನ ದುಷ್ಟತನಕ್ಕೆ ಎನ್ನುವುದನ್ನು ಮನುಷ್ಯರು ಅರ್ಥಮಾಡಿಕೊಳ್ಳಬೇಕಿದೆ.

-ರಾಜಕುಮಾರ ಕುಲಕರ್ಣಿ


Tuesday, August 1, 2023

ಉಡುಗೊರೆ ಮತ್ತು ಮೌಲ್ಯ ನಿರ್ಣಯ

 


(ಪ್ರಜಾವಾಣಿ ೧೬.೦೫.೨೦೨೩)

     ಇತ್ತೀಚೆಗೆ ಬಂಧುಗಳ ಮನೆಯ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದ ನನ್ನ ಸ್ನೇಹಿತರು ಅಲ್ಲಿ ತಮಗೆ ಸೂಕ್ತ ಗೌರವ, ಮನ್ನಣೆ ದೊರೆಯಲಿಲ್ಲವೆಂದು ನೊಂದುಕೊಂಡರು. ವಧು-ವರರಿಗೆ ಕಡಿಮೆ ಮೌಲ್ಯದ ಉಡುಗೊರೆ ನೀಡಿದ್ದೆ ಮದುವೆ ಮನೆಯಲ್ಲಿ ತಮ್ಮನ್ನು ಕೀಳಾಗಿ ಕಾಣಲು ಕಾರಣವಾಯಿತೆಂದು ಹೇಳಿದರು. ಸಾಮಾನ್ಯವಾಗಿ ಮದುವೆ ಮತ್ತು ಇನ್ನಿತರ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಆಹ್ವಾನಿತರು ಉಡುಗೊರೆ ನೀಡುವುದು ಅದೊಂದು ಸಂಪ್ರದಾಯ. ಉತ್ತರ ಕರ್ನಾಟಕ ಭಾಗದಲ್ಲಿ ಇದಕ್ಕೆ ಆಹೇರಿ ಎನ್ನುತ್ತಾರೆ. ಇನ್ನು ಕೆಲವು ಕಡೆ ಇದನ್ನು ಮುಯ್ಯಿ ಬರೆಸುವುದು ಎಂದು ಕರೆಯುವುದುಂಟು.

ಬಟ್ಟೆ, ಮನೆ ಬಳಕೆಯ ಸಾಮಾನುಗಳು, ಚಿನ್ನ, ಬೆಳ್ಳಿ ಅಥವಾ ಹಣ ಹೀಗೆ ಅತಿಥಿಗಳು ತಮ್ಮ ಆರ್ಥಿಕ ಅನುಕೂಲತೆಗನುಗುಣವಾಗಿ ಉಡುಗೊರೆ ಕೊಡುವರು. ಹಿಂದೆಲ್ಲ ಬಡಕುಟುಂಬಗಳಿಗೆ ಮದುವೆ ಮತ್ತಿತರ ಕಾರ್ಯಕ್ರಮಗಳ ನಿರ್ವಹಣೆಗೆ ಅನುಕೂಲವಾಗಲೆಂದು ಉಡುಗೊರೆ ರೂಪದಲ್ಲಿ ಆರ್ಥಿಕ ನೆರವು ನೀಡಲಾಗುತ್ತಿತ್ತು. ಸಹಾಯವೆಂದರೆ ಸ್ವಾಭಿಮಾನ ಅಡ್ಡಬರಬಹುದೆಂದು ಅತಿಥಿಗಳು ಮಾಡುವ ಆರ್ಥಿಕ ಸಹಾಯಕ್ಕೆ ಉಡುಗೊರೆ ಎಂದು ಕರೆದರು. ಹೀಗೆ ಕೈಸೇರುವ ಹಣ ಬಡವರಿಗೆ ಅವರ ಕುಟುಂಬ ಕಾರ್ಯಕ್ರಮದಿಂದಾದ ಸಾಲದ ಹೊರೆಯನ್ನು ಸ್ವಲ್ಪ ಮಟ್ಟಿಗೆ ತಗ್ಗಿಸುತ್ತಿತ್ತು. ಆದರೆ ಇಂದು ಉಡುಗೊರೆ ಕೊಡುವುದು ಮತ್ತು ಪಡೆಯುವುದು ಶ್ರೀಮಂತ ಕುಟುಂಬಗಳನ್ನು ಕೂಡ ಸೋಂಕಿನಂತೆ ಆವರಿಸಿಕೊಂಡಿದೆ. 

ಮದುವೆ, ಗೃಹಪ್ರವೇಶ, ತೊಟ್ಟಿಲು, ಸೀಮಂತ ಇಂಥ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಸಮಾರಂಭದ ದಿನ ಅತಿಥಿಗಳಿಂದ ದೊರೆಯುವ ಉಡುಗೊರೆಗಳ ಪಟ್ಟಿ ಮಾಡಲು ಮನೆಯ ಸದಸ್ಯರು ಅಥವಾ ಬಂಧುಗಳು ಕುಳಿತುಕೊಳ್ಳುವ ಪರಿಪಾಠ ಉತ್ತರ ಕರ್ನಾಟಕ ಭಾಗದಲ್ಲಿ ಇನ್ನೂ ಚಾಲ್ತಿಯಲ್ಲಿದೆ. ಕಲ್ಯಾಣ ಮಂಟಪದ ದ್ವಾರದಲ್ಲೇ ಇವರು ಪವಡಿಸುವುದರಿಂದ ಬಂದು ಹೋಗುವ ಅತಿಥಿಗಳು ಒಂದು ರೀತಿಯ ಮುಜುಗರದ ಸನ್ನಿವೇಶವನ್ನು ಎದುರಿಸಬೇಕಾಗುತ್ತದೆ. ಉಣಬಡಿಸಿದ ಭೋಜನಕ್ಕೆ ಪ್ರತಿಯಾಗಿ ಪ್ರತಿಫಲವನ್ನು ಅಪೇಕ್ಷಿಸುತ್ತಿರುವರೇನೋ ಎಂದು ಭಾಸವಾಗುತ್ತದೆ. ಹತ್ತಾರು ಜನರೆದುರು ಕಡಿಮೆ ಮೌಲ್ಯದ ಹಣ ಅಥವಾ ಉಡುಗೊರೆ ಬರೆಸುವಾಗ ಸಂಕೋಚ ಉಂಟಾಗುವುದು ಸಹಜ. ಕೆಲವೊಮ್ಮೆ ಬರೆದುಕೊಳ್ಳುವವರ ವ್ಯಂಗ್ಯದ ತೀಕ್ಷಣ ನೋಟಕ್ಕೆ ಅತಿಥಿಗಳು ಕೀಳರಿಮೆಗೊಳಗಾಗುವುದುಂಟು. ಅನೇಕ ಸಂದರ್ಭಗಳಲ್ಲಿ ಮದುವೆ ಮನೆಗಳಲ್ಲಿ ಆಹ್ವಾನಿತರು ವಿಶೇಷವಾಗಿ ಹೆಣ್ಣುಮಕ್ಕಳು ಒಟ್ಟಿಗೆ ಸೇರಿದಾಗ ತಾವು ತಂದ ಉಡುಗೊರೆಗಳನ್ನು ಇತರರೆದುರು ಪ್ರದರ್ಶಿಸಿ ಹಿರಿಮೆ ಮೆರೆಯುವರು. ಆಗೆಲ್ಲ ಕಡಿಮೆ ಮೌಲ್ಯದ ಉಡುಗೊರೆ ತಂದ ಆಹ್ವಾನಿತರಿಗೆ ಸಂಕೋಚದಿಂದ ಮೈ ಮುದುಡಿಕೊಳ್ಳುವಂತಾಗುತ್ತದೆ. ‘ಉಳ್ಳವರು ಶಿವಾಲಯವ ಮಾಡುವರು, ನಾನೇನು ಮಾಡಲಿ ಬಡವನಯ್ಯ’ ಎನ್ನುವ ವಚನದ ಸಾಲನ್ನು ಇಲ್ಲಿಯೂ ಅನ್ವಯಿಸಿ ಹೇಳಬಹುದು.

ಆರ್ಥಿಕ ಭಾರವನ್ನು ತಗ್ಗಿಸಲು ಈಗ ಬಟ್ಟೆಯನ್ನು ಉಡುಗೊರೆಯಾಗಿ ಕೊಡುವುದು ಸಾಮಾನ್ಯವಾಗಿದೆ. ಸಾಧಾರಣ ಗುಣಮಟ್ಟದ ಇಂಥ ಬಟ್ಟೆಗಳು ಮುಂದೊಂದು ದಿನ ಉಡುಗೊರೆ ರೂಪದಲ್ಲೇ ವಿಲೇವಾರಿಯಾಗುತ್ತವೆ. ಬಟ್ಟೆ ಅಂಗಡಿಗಳಲ್ಲೂ ಇಂಥ ಉದ್ದೇಶಕ್ಕಾಗಿಯೇ ಪ್ರತ್ಯೇಕ ವಿಭಾಗವಿದ್ದು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಬಟ್ಟೆ ಬೇಕೋ ಆಹೇರಿ ಬಟ್ಟೆ ಬೇಕೋ ಎಂದು ಮಳಿಗೆಯ ಮಾಲೀಕರು ವಿಚಾರಿಸುತ್ತಾರೆ. ಕೆಲವೊಮ್ಮೆ ಗ್ರಾಹಕರೇ ಆಹೇರಿಗಾಗಿ ಸಾಧಾರಣ ಗುಣಮಟ್ಟದ ಬಟ್ಟೆಗಳಿವೆಯೇ ಎಂದು ಬಾಯ್ಬಿಟ್ಟು ಕೇಳುವುದುಂಟು.

ದಂಡಿಯಾಗಿ ಹರಿದು ಬರುವ ಬಟ್ಟೆಯ ಮಹಾಪೂರವನ್ನು ತಡೆಗಟ್ಟಲು ಈಗ ಬಟ್ಟೆಯನ್ನು  ಸ್ವೀಕರಿಸದಿರುವ ಹೊಸ ವರಸೆಯೊಂದು ಶುರುವಾಗಿದೆ. ಲಗ್ನಪತ್ರ ಅಥವಾ ಆಹ್ವಾನಪತ್ರದಲ್ಲಿ ‘ಬಟ್ಟೆ ಉಡುಗೊರೆ ಸ್ವೀಕರಿಸುವುದಿಲ್ಲ’ ಎಂದು ಸ್ಪಷ್ಟವಾಗಿ ನಮೂದಿಸಿರುತ್ತಾರೆ. ಹಣ, ಚಿನ್ನ ಅಥವಾ ಬೆಳ್ಳಿಯನ್ನು ಕೊಡಬಹುದೆಂದು ಇದರರ್ಥ. ಕುಟುಂಬದ ಕಾರ್ಯಕ್ರಮಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ಧಾರಾಳವಾಗಿ ವ್ಯಯಿಸುವವರು ಹಣ ಅಥವಾ ಒಡವೆ ರೂಪದ ಉಡುಗೊರೆಯನ್ನು ಆಹ್ವಾನಿತರಿಂದ ನಿರೀಕ್ಷಿಸುವುದು ಸರಿಯಲ್ಲ. 

ಉಡುಗೊರೆ ಎನ್ನುವುದು ಗೋಡೆಗೆ ಬಡಿದ ಚೆಂಡಿದ್ದಂತೆ. ಕೊಡುವಾಗ ಯಾವ ರೂಪದಲ್ಲಿತ್ತೋ ಮುಂದೊಂದು ದಿನ ಅದೇ ರೂಪದಲ್ಲಿ ಮರಳಿ ಬರುತ್ತದೆ. ಹೀಗಾಗಿ ಕೊಡುವವರು ಪಡೆಯುವವರ ಆರ್ಥಿಕ ಸ್ಥಾನಮಾನವನ್ನಾಧರಿಸಿ ತಾವು ಕೊಡಬೇಕಾದದ್ದನ್ನು ನಿರ್ಧರಿಸುತ್ತಾರೆ. ಬಡವರಾದರೆ ಒಂದು ಮೌಲ್ಯ, ಶ್ರೀಮಂತರಿಗೆ ಬೇರೊಂದು ಮೌಲ್ಯ. ಒಟ್ಟಾರೆ ಉಡುಗೊರೆಯ ಸ್ವರೂಪ ಮತ್ತು ಮೌಲ್ಯದಲ್ಲಿ ಬಡವ-ಬಲ್ಲಿದ ಎನ್ನುವ ಸಂಗತಿಗಳು ನಿರ್ಣಾಯಕ ಪಾತ್ರವಹಿಸುತ್ತವೆ. ಇನ್ನು ಕೆಲವರು ಮುಂದೊಂದು ದಿನ ಉಡುಗೊರೆಗಳ ಮಹಾಪೂರವೇ ಹರಿದುಬರಲೆಂದು ಅಪೇಕ್ಷಿಸಿ ಕೊಡುವ ಪದ್ಧತಿಯನ್ನು ಮೈಗೂಡಿಸಿಕೊಂಡಿರುತ್ತಾರೆ. ಹಾಗೆಂದು ಇವರೇನು ಕೊಡುಗೈ ದಾನಿಗಳಲ್ಲ. ಇವರ ಧಾರಾಳತನ ಉಡುಗೊರೆ ಕೊಟ್ಟು ತೆಗೆದುಕೊಳ್ಳುವುದಕ್ಕಷ್ಟೆ ಸೀಮಿತ. 

ಬೃಹದಾಕಾರದ ಪುಷ್ಪಗುಚ್ಛಗಳನ್ನು ಕೊಡುವ ಪರಿಪಾಠವನ್ನು ಕೆಲವರು ರೂಢಿಸಿಕೊಂಡಿರುತ್ತಾರೆ. ಸಾವಿರಾರು ರೂಪಾಯಿಗಳನ್ನು ಪಾವತಿಸಿ ಖರೀದಿಸಿದ ಪುಷ್ಪಗುಚ್ಛಗಳು ಕೆಲವೇ ಗಂಟೆಗಳಲ್ಲಿ ಕಸದಗುಂಡಿ ಸೇರುತ್ತವೆ. ಪುಸ್ತಕಗಳು ಮತ್ತು ಸಸಿಗಳನ್ನು ಕೊಡುವ ಸುಸಂಸ್ಕೃತರೂ ಅಲ್ಲೊಮ್ಮೆ ಇಲ್ಲೊಮ್ಮೆ ಅಪರೂಪವೆಂಬಂತೆ ಕಾಣಸಿಗುವರು. ಪುಸ್ತಕಗಳಿಂದ ಉಡುಗೊರೆಯ ಮೌಲ್ಯ ಕೂಡ ಹೆಚ್ಚುವುದು. ಪುಸ್ತಕ ಸಂಸ್ಕೃತಿ ಮತ್ತು ಪರಿಸರ ಪ್ರೇಮದ ಅರಿವು ಮೂಡಿಸುವ ಈ ಪ್ರಯತ್ನ ಅಭಿನಂದನಾರ್ಹ. ಆದರೆ ಇಂಥವರ ಸಂಖ್ಯೆ ತೀರ ವಿರಳ ಎನ್ನುವುದು ಬೇಸರದ ಸಂಗತಿ.

ತಮ್ಮ ಸಂಬಂಧಿಕರ ಮಗನಿಗೆ ಮದುವೆಯಲ್ಲಿ ಹತ್ತು ಗ್ರಾಂ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ ನನ್ನ ಪರಿಚಿತರು ಹೇಳಿದ್ದು ಹೀಗೆ-‘ನನ್ನ ಸಂಬಂಧಿಕರೇನು ಬಡವರಲ್ಲ. ನಗ, ನಾಣ್ಯ, ಸ್ಥಿರಾಸ್ತಿ ಸೇರಿದಂತೆ ಭಾರೀ ಶ್ರೀಮಂತ ಕುಟುಂಬ. ಈ ಹತ್ತು ಗ್ರಾಂ ಚಿನ್ನ ಅವರಿಗೆ ಯಾವ ಲೆಕ್ಕಕ್ಕೂ ಇಲ್ಲ. ಅದೇ 60 ಸಾವಿರ ರೂಪಾಯಿಗಳನ್ನು ಅಸಾಹಾಯಕರಿಗೆ ನೆರವಿನ ರೂಪದಲ್ಲಿ ನೀಡಿದ್ದರೆ ಮನಸ್ಸಿಗೆ ಅದೆಷ್ಟೋ ತೃಪ್ತಿ, ಸಮಾಧಾನ ಸಿಗುತ್ತಿತ್ತು’. ಧನ, ಕನಕವನ್ನಾಧರಿಸಿ ಉಡುಗೊರೆಯ ಮೌಲ್ಯ ನಿರ್ಧಾರವಾಗುತ್ತಿರುವ ಹೊತ್ತಿನಲ್ಲಿ ಹೀಗೆ ಯೋಚಿಸುವವರ ಸಂಖ್ಯೆ ಇನ್ನಷ್ಟು ವೃದ್ಧಿಸಬೇಕಿದೆ.

-ರಾಜಕುಮಾರ ಕುಲಕರ್ಣಿ

Thursday, July 6, 2023

ಕೃತಕತೆಯ ಗೂಡಲ್ಲಿ ವಾಸ್ತವದ ಹುಡುಕಾಟ

        


(೨೭.೦೩.೨೦೨೩ ರ ಪ್ರಜಾವಾಣಿಯಲ್ಲಿ ಪ್ರಕಟ)

    ಪಕ್ಕದ ಮನೆಯ ಹುಡುಗ ತನ್ನ ಸ್ನೇಹಿತನೆದುರು ತಾನು ನೋಡಿದ ಸ್ಥಳಗಳನ್ನು ಬಣ್ಣಿಸುತ್ತಿದ್ದ. ಅವನ ಮಾತಿನಲ್ಲಿ ಜಲಪಾತಗಳು, ಹೊಳೆ, ಬೆಟ್ಟ, ಕಾಡು, ಹಳ್ಳಿಮನೆಗಳೆಲ್ಲ ಸುಳಿದುಹೋದವು. ‘ಏನೋ ಅಜ್ಜನ ಊರಿಗೆ ಯಾವಾಗ ಹೋಗಿದ್ದೆ’ ಎಂದು ಕೇಳಿದೆ. ‘ನೋ ಅಂಕಲ್ ಪಿಕ್‍ನಿಕ್ ಹೋಗಿದ್ವಿ. ರೆಡಿಮೇಡ್ ವಿಲೇಜ್ ಅಂತ ಪಿಕ್‍ನಿಕ್ ಸ್ಪಾಟ್ ಇತ್ತು. ಅಲ್ಲ್ಲಿ ಹೊಳೆ, ಕಾಡು, ಬೆಟ್ಟ ಎಲ್ಲ ನೋಡಿದ್ದು’ ಎಂದು ಉತ್ತರಿಸಿದ. ನಾನು ಊಹಿಸಿದ ಆ ಎಲ್ಲ ವಾಸ್ತವಗಳನ್ನು ಅವನು ಕೃತಕವಾಗಿ ನಿರ್ಮಿಸಿರುವ ಪ್ರೇಕ್ಷಣಿಯ ತಾಣದಲ್ಲಿ ವೀಕ್ಷಿಸಿದ್ದೆಂದು ಅರಿವಾಗಲು ಕೆಲವು ಕ್ಷಣಗಳೇ ಬೇಕಾದವು. ಇತ್ತೀಚಿನ ದಿನಗಳಲ್ಲಿ ಭೌತಿಕ ಮತ್ತು ಭಾವನಾತ್ಮಕ ಸಂಗತಿಗಳೆರಡನ್ನೂ ಕೃತಕ ವಾತಾವರಣದಲ್ಲಿ ಅರಸುವ ಪ್ರವೃತ್ತಿ ಮನುಷ್ಯರಲ್ಲಿ ಹೆಚ್ಚುತ್ತಿದೆ.

ಮನುಷ್ಯ ತನ್ನ ದಿನನಿತ್ಯದ ಧಾವಂತದ ಬದುಕಿನಲ್ಲಿ ಸಹಜ ಬದುಕಿಗೆ ವಿಮುಖನಾಗಿ ಬಾಳುತ್ತಿರುವನು. ವಿಶೇಷವಾಗಿ ನಗರಪ್ರದೇಶಗಳಲ್ಲಿ ಉದ್ಯೋಗವೇ ಕೇಂದ್ರಿತವಾದ ಬದುಕಿನಲ್ಲಿ ಬಿಡುವು ಪಡೆಯಲು ಒಂದಿಷ್ಟೂ ಪುರಸೊತ್ತಿಲ್ಲದಂತಾಗಿದೆ. ಉದ್ಯೋಗದ ಅಭದ್ರತೆ, ಸ್ಪರ್ಧೆಯ ವಾತಾವರಣ, ಮಕ್ಕಳ ಪಾಲನೆ, ಉಳಿತಾಯದ ಯೋಜನೆಗಳು, ಭವಿಷ್ಯದ ಚಿಂತೆಯಿಂದ ಕಂಗಾಲಾಗಿರುವ ಮನುಷ್ಯ ದಣಿವರಿಯದ ದುಡಿಮೆಗೆ ತನ್ನನ್ನು ಒಳಗಾಗಿಸಿಕೊಂಡಿರುವನು. ಈ ಆಧುನಿಕ ಬದುಕಿನ ಒತ್ತಡಗಳು ಮನುಷ್ಯನನ್ನು ಯಂತ್ರವಾಗಿ ಪರಿವರ್ತಿಸಿವೆ. ಭಾವನೆಗಳು ಮತ್ತು ಮನುಷ್ಯ ಸಂಬಂಧಗಳು ತಮ್ಮ ಅರ್ಥ ಕಳೆದುಕೊಂಡು ಸವಕಲಾಗಿವೆ.

ಭಾವನೆಗಳು ಮತ್ತು ಸಂಬಂಧಗಳನ್ನೇ ಕಳೆದುಕೊಂಡು ಬದುಕು ಯಾಂತ್ರೀಕವಾಗುತ್ತಿರುವುದು ಒಂದುಕಡೆಯಾದರೆ ಇನ್ನೊಂದೆಡೆ ಮನುಷ್ಯನ ದುರಾಸೆಗೆ ಒಳಗಾಗಿ ಪ್ರಕೃತಿ ಬರಡಾಗುತ್ತಿದೆ. ಒಂದರ್ಥದಲ್ಲಿ ಮನುಷ್ಯನ ಯಾಂತ್ರೀಕ ಬದುಕಿನ ಚೇತರಿಕೆಗೆ ಪ್ರಕೃತಿಯೇ ಮುಲಾಮು. ಆದರೆ ಮನುಷ್ಯ ಪ್ರಕೃತಿಯ ಮೇಲೆ ಅಟ್ಟಹಾಸಗೈಯುತ್ತ ನಿಸರ್ಗವನ್ನು ಅವಸಾನದ ಅಂಚಿಗೆ ತಂದು ನಿಲ್ಲಿಸಿರುವನು. ತಾನು ಕಳೆದುಕೊಂಡ ಪ್ರಕೃತಿಯ ಚೆಲುವು ಮತ್ತು ಮನದ ಭಾವನೆಗಳನ್ನು ಕೃತಕ ನಿಸರ್ಗ ತಾಣಗಳಲ್ಲಿ, ಸಿನಿಮಾಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಹುಡುಕುತ್ತಿದ್ದಾನೆ. ಇಂದಿನ ನ್ಯೂಕ್ಲಿಯರ್ ಕುಟುಂಬಗಳಿಗೆ ಸಿನಿಮಾಗಳೆ ಕುಟುಂಬ ಸಂಬಂಧಗಳ ಪಾಠವನ್ನು ಬೋಧಿಸುವ ಶಾಲೆಗಳಾಗಿವೆ. ಅವಿಭಕ್ತ ಕುಟುಂಬ, ಮನೆಗೊಬ್ಬ ಹಿರಿಯ ಯಜಮಾನ, ಕಡಿದುಹೋದ ಸಂಬಂಧಗಳ ಬೆಸೆಯುವಿಕೆ, ಮದುವೆಕಾರ್ಯದ ವೈಭವೊಪೇತ ದೃಶ್ಯಗಳು, ಒಂದಿಷ್ಟು ನಗು-ಅಳು-ಖುಷಿ ಈ ರೀತಿಯ ಸಿನಿಮಾಗಳು ಸಂಬಂಧಗಳ ಕುರಿತಾದ ಮನುಷ್ಯನ ಭಾವನಾತ್ಮಕ ಹಸಿವನ್ನು ತಣಿಸುತ್ತಿವೆ. ಅವಿಭಕ್ತ ಕುಟುಂಬಗಳು ಒಡೆದು ಸಣ್ಣ ಘಟಕಗಳಾಗಿ ರೂಪಾಂತರ ಹೊಂದುತ್ತಿರುವ ಈ ಸಂದರ್ಭ ಸಿನಿಮಾದ ಮೂಲಕ ನಮ್ಮ ಯುವಪೀಳಿಗೆಗೆ ಕುಟುಂಬದ ಸಂಬಂಧಗಳನ್ನು ಪರಿಚಯಿಸುವ ಸನ್ನಿವೇಶ ಎದುರಾಗಿದೆ. 

ಇತ್ತೀಚಿನ ದಿನಗಳಲ್ಲಿ ಪ್ರಕೃತಿಯ ಸುಂದರ ಮತ್ತು ರಮಣೀಯ ತಾಣಗಳನ್ನು ಕೃತಕವಾಗಿ ನಿರ್ಮಿಸಿ ಸಾರ್ವಜನಿಕರನ್ನು ಆಕರ್ಷಿಸಲಾಗುತ್ತಿದೆ. ನಾಲ್ಕೈದು ಎಕರೆಯಷ್ಟು ವಿಶಾಲವಾದ ಜಾಗದಲ್ಲಿ ನಿರ್ಮಾಣಗೊಳ್ಳುವ ಕೃತಕ ನಿಸರ್ಗ ತಾಣಗಳು ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಸಾರ್ವಜನಿಕರು ಸಾವಿರಾರು ರೂಪಾಯಿಗಳನ್ನು ಖರ್ಚುಮಾಡಿ ಇಂಥ ಕೃತಕ ತಾಣಗಳಿಗೆ ಭೇಟಿ ನೀಡಿ ನಿಜವಾದ ಪರಿಸರದಲ್ಲೇ ತಾವು ನಿಂತಿರುವೆವೇನೋ ಎಂದು ಪುಳಕಗೊಳ್ಳುವರು. ಈ ಕೃತಕ ತಾಣಗಳಲ್ಲಿ ಜಲಪಾತಗಳು ಸೃಷ್ಟಿಯಾಗುತ್ತವೆ, ನೀರು ನದಿಯಂತೆ ಹರಿಯುತ್ತದೆ, ಗಿಡ-ಮರಗಳು ತೊನೆದಾಡುತ್ತವೆ, ಮಳೆ ಸುರಿಯುತ್ತದೆ, ಪಕ್ಷಿಗಳ ಕಲರವ ಕಿವಿಗಳನ್ನು ಇಂಪಾಗಿಸುತ್ತದೆ. ಹಳ್ಳಿಯ ಪರಿಸರದಲ್ಲೆ ಓಡಾಡುತ್ತಿರುವ ಭಾವಹುಟ್ಟಿಸುವ ಹಳ್ಳಿಮನೆಗಳು ನಿರ್ಮಾಣಗೊಳ್ಳುತ್ತವೆ. ಗೌಡರ ಮನೆ, ಜಗಲಿ, ಅಂಗಳ, ದನದ ಕೊಟ್ಟಿಗೆ, ಪಂಚಾಯಿತಿ ಕಟ್ಟೆ, ಹರಟೆಕಟ್ಟೆ, ನೀರುಸೇದುವ ಭಾವಿ ಇರುವ ಹಳ್ಳಿಯ ಮರುಸೃಷ್ಟಿಯಾಗುತ್ತದೆ. ಹಳ್ಳಿಗಳೆಂದರೆ ಮಾರು ದೂರ ಸರಿಯುವವರು ಸಾವಿರಾರು ರೂಪಾಯಿಗಳನ್ನು ಪಾವತಿಸಿ ಕೃತಕವಾಗಿ ನಿರ್ಮಿಸಲಾದ ಹಳ್ಳಿಮನೆಗಳಲ್ಲಿ ವಾರಾಂತ್ಯದ ರಜೆಯ ಮೋಜು ಅನುಭವಿಸುತ್ತಾರೆ. 

ಸಿಟ್ಟು, ದ್ವೇಷ, ಪ್ರೀತಿ, ನಗು, ಅಳು, ಖುಷಿ ಇಂಥ ಮನುಷ್ಯ ಸಹಜವಾದ ಭಾವನೆಗಳನ್ನು ಕೂಡ ರಿಯಾಲಿಟಿ ಶೋ ಎನ್ನುವ ಹೆಸರಿನಲ್ಲಿ ಕೃತಕವಾಗಿ ಸೃಷ್ಟಿಸಿ ಪ್ರೇಕ್ಷಕರನ್ನು ಭಾವಾವೇಶಕ್ಕೆ ಒಳಗಾಗಿಸುತ್ತಿರುವರು. ನಿರ್ಧಿಷ್ಟ ಸಂಖ್ಯೆಯ ಸ್ಪರ್ಧಿಗಳನ್ನು ಒಂದೆಡೆ ಸೇರಿಸಿ ಅಖಾಡಕ್ಕೆ ಇಳಿಸುವ ಕಾರ್ಯಕ್ರಮದ ನಿರ್ವಾಹಕರು ಅವರನ್ನು ಬಗೆಬಗೆಯ ಚಟುವಟಿಕೆಗಳಲ್ಲಿ ತೊಡಗಿಸಿ ವಿಭಿನ್ನ ಭಾವನೆಗಳು ಅಭಿವ್ಯಕ್ತಗೊಳ್ಳುವಂತೆ ನೋಡಿಕೊಳ್ಳುತ್ತಾರೆ. ಸ್ಪರ್ಧಿಗಳ ನಡುವೆ ತುರುಸಿನ ಸ್ಪರ್ಧೆ ಏರ್ಪಡುತ್ತದೆ. ಗೆಲ್ಲಬೇಕೆಂಬ ತುಡಿತ, ಎದುರಾಳಿಯನ್ನು ಹಣಿಯುವ ತಂತ್ರ, ಪ್ರತಿತಂತ್ರ, ಪರಸ್ಪರ ಅವಮಾನಿಸುವ ಮಾನಸಿಕ ಕ್ರೌರ್ಯ ಹೀಗೆ ಇಡೀ ಕಾರ್ಯಕ್ರಮದುದ್ದಕ್ಕೂ ಮನುಷ್ಯನ ರಾಗ-ದ್ವೇಷದ ಗುಣಗಳು ಅನಾವರಣಗೊಳ್ಳುತ್ತಹೋಗುತ್ತವೆ. ಈ ಒಟ್ಟು ಕ್ರಿಯೆ ನಿರ್ದೇಶಕನ ಆಣತಿಯಂತೆ ಜರುಗುತ್ತ ಪ್ರೇಕ್ಷಕರನ್ನು ಸಮ್ಮೋಹಿನಿಯಂತೆ ತನ್ನತ್ತ ಸೆಳೆಯುತ್ತದೆ. ಕಾರ್ಯಕ್ರಮವನ್ನು ವೀಕ್ಷಿಸುತ್ತಿರುವ ಪ್ರೇಕ್ಷಕ ಆ ಸ್ಪರ್ಧಿಗಳಲ್ಲಿ ತನ್ನನ್ನು ಒಬ್ಬನಾಗಿ ಕಲ್ಪಿಸಿಕೊಂಡು ಸ್ಪರ್ಧಿಯೊಬ್ಬ ಅನುಭವಿಸುವ ಎಲ್ಲ ಮಾನಸಿಕ ವೇದನೆಗಳಿಗೆ ತಾನು ಒಳಗಾಗುತ್ತಾನೆ. ವಿಪರ್ಯಾಸವೆಂದರೆ ನಿಜವಾದ ಬದುಕಿನಲ್ಲಿ ಭಾವನೆಗಳಿಲ್ಲದೆ ಯಂತ್ರದಂತೆ ಬದುಕುತ್ತಿರುವ ಮನುಷ್ಯ ರಿಯಾಲಿಟಿ ಶೋನಂಥ ಕಾರ್ಯಕ್ರಮವನ್ನು ವೀಕ್ಷಿಸುತ್ತ ತನ್ನ ಭಾವನೆಗಳನ್ನು ಉದ್ದೀಪನಗೊಳಿಸುತ್ತಾನೆ.  

ತನ್ನ ದೈನಂದಿನ ವಾಸ್ತವದ ಬದುಕಿನಲ್ಲಿ ಹುಡುಕಬೇಕಾದ ಈ ಎಲ್ಲ ಸಂಗತಿಗಳನ್ನು ಮನುಷ್ಯ ಕೃತಕ ವಾತಾವರಣದಲ್ಲಿ ಕಂಡುಕೊಳ್ಳುತ್ತಿರುವನು. ಆ ಕೃತಕತೆಯನ್ನೇ ನಿಜವಾದ ಬದುಕು ಎಂದು ಭಾವಿಸಿ ತನ್ನ ವಾಸ್ತವದ ಬದುಕನ್ನು ಒಂದು ಯಂತ್ರದಂತೆ ಬಾಳುತ್ತಿರುವನು. ಮನುಷ್ಯನ ಯಾಂತ್ರೀಕೃತ ಬದುಕಿಗೆ ಕಾರಣವಾದ ಸಂಗತಿಯನ್ನು ತತ್ವಜ್ಞಾನಿ ಕಾರ್ಲ್‍ಮಾರ್ಕ್ಸ್ ಅವರು ಗುರುತಿಸಿದ್ದು ಹೀಗೆ- ‘ಮನುಷ್ಯನ ದುಡಿಮೆ ಹಾಗೂ ಬಿಡುವು ಎರಡೂ ಒಂದಕ್ಕೊಂದು ತೆಕ್ಕೆ ಹಾಕಿಕೊಂಡಿರುವಂಥ, ಒಂದನ್ನೊಂದು ಪ್ರಭಾವಿಸುವಂಥ ಕ್ಷೇತ್ರಗಳಾಗಿವೆ. ಮಾನವನ ಅಂತ:ಕರಣಕ್ಕೆ ಮತ್ತು ಮನಸ್ಸಿಗೆ ಸಂತೋಷ ಕೊಡುವಂಥ ಅವನ ಸೃಜನಶೀಲತೆಗೆ ಎಡೆಕೊಡಬಲ್ಲ ‘ಕೆಲಸ’ವನ್ನೇ ಅಸಾಧ್ಯ ಮಾಡಿರುವಂಥ ದುಡಿಮೆಯ ಕ್ಷೇತ್ರ ಕ್ರಮೇಣ ಮನುಷ್ಯನ ಆತ್ಮ-ಮನಸ್ಸುಗಳನ್ನು ಕೊಲ್ಲುವ ಬೇನೆಯ ತಾಣವಾಗುತ್ತಿದೆ’. ಮಾರ್ಕ್ಸ್ ವ್ಯಕ್ತಪಡಿಸಿದ ಈ ಅಭಿಪ್ರಾಯವನ್ನಾಧರಿಸಿ ಯಶವಂತ ಚಿತ್ತಾಲರು ಹೇಳುವುದು ಹೀಗೆ ‘ದುಡಿಮೆಯ ಕ್ಷೇತ್ರದಿಂದ ಪ್ರಭಾವಿತಗೊಂಡ ಮನಸ್ಸನ್ನು ಅಲ್ಲೆ ಬಿಟ್ಟುಬರುವುದು ಸಾಧ್ಯವಿದ್ದಿದ್ದರೆ- ಬಿಟ್ಟುಬರುವುದುಳಿಯಲಿ, ನಮ್ಮೊಳಗಿನ ಅತ್ಯಂತ ಮಹತ್ವದ್ದೇನೋ ಅಲ್ಲಿ ನಾಶವಾಗುತ್ತಿದೆ ಎಂಬ ಅರಿವೂ ನಮಗೆ ಇಲ್ಲದಿರುವುದು ಇಂದಿನ ನಮ್ಮ ಬದುಕಿನ ದುರದೃಷ್ಟವಾಗಿದೆ’. ಒಟ್ಟಾರೆ ಬದುಕು ಹೆಚ್ಚು ಹೆಚ್ಚು ಯಾಂತ್ರೀಕವಾಗುತ್ತ ಹೋದಂತೆ ಕೃತಕತೆಯೇ ವಾಸ್ತವವೆನಿಸುವ ಅಪಾಯದ ದಿನಗಳು ದೂರವಿಲ್ಲ. 

-ರಾಜಕುಮಾರ ಕುಲಕರ್ಣಿ


Saturday, June 3, 2023

ರಾಜಕಾರಣಕ್ಕೆ ಓದಿನ ದೀಕ್ಷೆಯಾಗಲಿ

 



(ಪ್ರಜಾವಾಣಿ 24.02.2023)

   ರಾಜಕಾರಣಿಗಳಿಗೆ ಘನತೆಯಿಂದ ಮಾತಾಡಲು ಗೊತ್ತಿಲ್ಲ ಎಂದು ಕೆಲವರು ಆಗಾಗ ಆತಂಕ ವ್ಯಕ್ತಪಡಿಸುತ್ತಾರೆ. ರಾಜಕಾರಣದಲ್ಲಿ ಭಾಷೆಯನ್ನು ದ್ವೇಷದ ನುಡಿಗಟ್ಟಾಗಿ ಪರಿವರ್ತಿಸಿರುವುದಕ್ಕೆ ನಮ್ಮ ಬಹಳಷ್ಟು ರಾಜಕಾರಣಿಗಳಿಗೆ ಪುಸ್ತಕ ಪ್ರೀತಿ ಇಲ್ಲದಿರುವುದೇ ಕಾರಣ. ಸೃಜನಶೀಲತೆಗೂ ಮತ್ತು ರಾಜಕಾರಣಕ್ಕೂ ಎಣ್ಣೆ-ಸೀಗೆಕಾಯಿ ಸಂಬಂಧ. ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯ ಮೇಲೂ ನಮ್ಮ ರಾಜಕಾರಣಿಗಳು ಸಾಹಿತ್ಯವನ್ನು ಬದಿಗೆ ಸರಿಸಿ ರಾಜಕೀಯದ ಮಾತುಗಳನ್ನಾಡುತ್ತಾರೆ. ಸಾಹಿತ್ಯ ಅಕಾಡೆಮಿ ಮತ್ತು ಪರಿಷತ್ತಿನ ಅಧ್ಯಕ್ಷರ ಹಾಗೂ ಸದಸ್ಯರ ನೇಮಕಾತಿಯಲ್ಲೂ ರಾಜಕಾರಣಿಗಳ ಶಿಫಾರಸು ಮಹತ್ವದ ಪಾತ್ರವಹಿಸುತ್ತದೆ. 

ಪುಸ್ತಕ ಪ್ರೀತಿಯನ್ನು ಮೈಗೂಡಿಸಿಕೊಂಡಿದ್ದ ರಾಜಕಾರಣದ ಪರಂಪರೆ ನಮ್ಮ ಕಣ್ಣೆದುರಿಗಿದೆ. ಜವಹರಲಾಲ ನೆಹರು ‘ಡಿಸ್ಕವರಿ ಆಫ್ ಇಂಡಿಯಾ’ ಕೃತಿ ರಚಿಸಲು ಅವರಿಗಿದ್ದ ಓದಿನ ಅಪಾರ ಅನುಭವವೇ ಕಾರಣವಾಯಿತು. ನರಸಿಂಹರಾವ್ ತಮ್ಮ ಓದಿನ ಬಲದಿಂದ ಭಾರತದ ಅನೇಕ ಭಾಷೆಗಳನ್ನೊಳಗೊಂಡಂತೆ ವಿದೇಶಿ ಭಾಷೆಗಳಲ್ಲೂ ವ್ಯವಹರಿಸಬಲ್ಲವರಾಗಿದ್ದರು. ಪುಸ್ತಕಗಳ ಓದಿನ ಜ್ಞಾನ ರಾಜಕೀಯದಲ್ಲಿದ್ದೂ ಅಟಲ್ ಬಿಹಾರಿ ವಾಜಪೇಯಿ ಅವರನ್ನು ವಾಗ್ಮಿ ಮತ್ತು ಸೂಕ್ಷ್ಮಸಂವೇದನೆಯ ಕವಿಯಾಗಿ ರೂಪಿಸಿತು. ಸೋಮನಾಥ ಚಟರ್ಜಿ, ಪ್ರಣಬ್ ಮುಖರ್ಜಿ, ಕರಣಸಿಂಗ್, ಅಡ್ವಾಣಿ ತಮ್ಮ ಓದಿನ ವಿದ್ವತ್ತಿನಿಂದ ಅತ್ಯುತ್ತಮ ಸಂಸದೀಯಪಟುಗಳೆಂಬ ಗೌರವಕ್ಕೆ ಪಾತ್ರರಾದರು. ಕರ್ನಾಟಕದ ರಾಜಕಾರಣದಲ್ಲಿ ಕಡಿದಾಳು ಮಂಜಪ್ಪ, ಶಾಂತವೇರಿ ಗೋಪಾಲಗೌಡರು, ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ, ಎಂ.ಪಿ.ಪ್ರಕಾಶ್ ಇನ್ನು ಅನೇಕ ರಾಜಕಾರಣಿಗಳು ತಮ್ಮ ಬಿಡುವಿಲ್ಲದ ರಾಜಕಾರಣದ ನಡುವೆಯೂ ಪುಸ್ತಕ ಪ್ರೀತಿಯನ್ನು ಕಾಪಿಟ್ಟುಕೊಂಡಿದ್ದರು. ಎಂ.ಪಿ.ಪ್ರಕಾಶ್ ಓದಿನ ಪ್ರೀತಿಯೊಂದಿಗೆ ಕಲಾವಿದರಾಗಿಯೂ ಈ ನೆಲದ ಸಾಂಸ್ಕೃತಿಕ ಹಿರಿಮೆಯನ್ನು ಎತ್ತರಕ್ಕೆ ಕೊಂಡೊಯ್ದರು. ವೀರಪ್ಪ ಮೊಯ್ಲಿ ಬರಹಗಾರರಾಗಿ ಅನೇಕ ಸಾಹಿತ್ಯ ಕೃತಿಗಳನ್ನು ರಚಿಸಿರುವರು. ಚಂದ್ರಶೇಖರ್ ಮತ್ತು ಸುರೇಶ್ ಕುಮಾರ ಇವತ್ತಿಗೂ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಾರೆ.

ಭಾಷೆ ಸುಧಾರಿಸಲು ಸಾಹಿತ್ಯದ ಓದು ಒಂದು ಪರ್ಯಾಯ ಮಾರ್ಗ. ಜೊತೆಗೆ ಓದು ಮನುಷ್ಯನ ಹೃದಯಾಂತರಾಳದಲ್ಲಿ ಪ್ರೀತಿ, ಅನುಕಂಪ ಮತ್ತು ಕರುಣೆಯನ್ನು ಹುಟ್ಟಿಸುವ ಕೆಲಸ ಮಾಡುತ್ತದೆ. ಲೋಕಾಂತದಲ್ಲೂ ಏಕಾಂತವನ್ನು ಒದಗಿಸುವ ಶಕ್ತಿ ಓದಿಗಿದೆ. ಆದರೆ ಸದಾ ಲೋಕಾಂತದ ಬದುಕಿನಲ್ಲೇ ಧನ್ಯತೆ ಅನುಭವಿಸುವ ರಾಜಕಾರಣಿಗಳಿಗೆ ಮೌನದ ಸುಖ ಅರ್ಥವಾಗುವುದಾದರೂ ಹೇಗೆ?. ಗ್ರಂಥಾಲಯ ಇಲಾಖೆ ಎನ್ನುವ ಒಂದು ಸಾಂಸ್ಕೃತಿಕ ಇಲಾಖೆ ಇವತ್ತು ರಾಜಕಾರಣದ ಅವಕೃಪಗೆ ಮತ್ತು ನಿರ್ಲಕ್ಷ್ಯಕ್ಕೆ ಒಳಗಾಗಿರುವ ದೃಷ್ಟಾಂತ ನಮ್ಮ ಕಣ್ಣೆದುರಿಗಿದೆ.  

‘ರಾಜಕಾರಣದಲ್ಲಿ ಸದ್ದನ್ನೇ ತುಂಬ ನೆಚ್ಚಿಕೊಂಡ ಭಾಷೆಗೆ ಮೌನದ ಪರಿಚಯವಿಲ್ಲ. ಶಬ್ದ ಮತ್ತು ಆವೇಶ ರಾಜಕಾರಣದ ಪ್ರಧಾನ ಮೆಚ್ಚುಗೆಗಳಾಗಿವೆ. ಮೌನ ಅರ್ಥವಾಗಲು ರಾಜಕಾರಣಿಗಳಿಗೆ ಓದಿನಲ್ಲಿ ಆಸಕ್ತಿ ಹುಟ್ಟುವಂತಾಗಬೇಕು, ರಾಜಕಾರಣಕ್ಕೆ ಸಾಹಿತ್ಯದ ದೀಕ್ಷೆಯಾಗಬೇಕು’ ಎಂದು ಯಶವಂತ ಚಿತ್ತಾಲರು ‘ಸಾಹಿತ್ಯದ ಸಪ್ತಧಾತುಗಳು’ ಪುಸ್ತಕದಲ್ಲಿ ಹೇಳಿರುವರು. ನೊಬೆಲ್ ಬಹುಮಾನ ಸ್ವೀಕರಿಸುವಾಗ ಕವಿ ಬ್ರಾಡ್‍ಸ್ಕೀ ತನ್ನ ಭಾಷಣದಲ್ಲಿ ಹೀಗೆ ಹೇಳುತ್ತಾನೆ ‘ನಾವು ನಮ್ಮ ನಾಯಕರುಗಳನ್ನು ಅವರ ರಾಜಕೀಯ ಕಾರ್ಯಸೂಚಿಗಿಂತ ಅವರ ಓದಿನ ಅನುಭವವನ್ನು ಆಧರಿಸಿ ಆಯ್ಕೆ ಮಾಡಿದ್ದಲ್ಲಿ ಭೂಮಿಯ ಮೇಲೆ ಅತ್ಯಂತ ಕಡಿಮೆ ದು:ಖವಿರುತ್ತಿತ್ತು’.

ಓದಿನ ಅನುಭವದ ಕೊರತೆಯಿಂದ ಸಭೆ ಸಮಾರಂಭಗಳಲ್ಲಿ, ಶಾಸನ ಸಭೆಗಳಲ್ಲಿ, ಚುನಾವಣೆ ಪ್ರಚಾರದ ಸಂದರ್ಭ ನಮ್ಮ ರಾಜಕಾರಣಿಗಳು ಭಾಷೆಯನ್ನು ಕೀಳುಮಟ್ಟಕ್ಕಿಳಿಸಿ ಮಾತನಾಡುವುದು ಸಾಮಾನ್ಯವಾಗಿದೆ. ರಾಜಕಾರಣವೇ ಸಾರ್ವಜನಿಕರ ನಡೆ ನುಡಿಯನ್ನು ನಿರ್ಧರಿಸುತ್ತಿರುವ ಇಂಥ ಹೊತ್ತಿನಲ್ಲಿ ಸಹಜವಾಗಿಯೇ ರಾಜಕಾರಣಿಗಳು ಯುವಪೀಳಿಗೆಗೆ ಐಕಾನ್‍ಗಳಾಗಿ ಕಾಣಿಸುತ್ತಿರುವರು. ಹೀಗಾಗಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಕಾರಿಡಾರ್‍ಗಳಲ್ಲಿ ರಾಜಕಾರಣದ ಭಾಷೆಯೇ ಹೆಚ್ಚು ಹೆಚ್ಚು ಬಳಕೆಯಾಗುತ್ತಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೂಡಿಯೇ ಶಿಕ್ಷಣಕ್ಕೆ ರಾಜಕಾರಣದ ವೇಷ ತೊಡಿಸುತ್ತಿರುವುದು ಇವತ್ತಿನ ಶಿಕ್ಷಣ ವ್ಯವಸ್ಥೆಯ ದುರಂತ.

ಹಿರಿಯರ ಸದನವೆಂದೇ ಪರಿಗಣಿಸಲ್ಪಟ್ಟಿರುವ ವಿಧಾನ ಪರಿಷತ್ತಿಗೆ ಒಂದುಕಾಲದಲ್ಲಿ ಸಾಹಿತಿಗಳು, ಕಲಾವಿದರು, ಚಿಂತಕರು ಸರ್ಕಾರದಿಂದ ನೇಮಕಗೊಳ್ಳುತ್ತಿದ್ದರು. ಚಿಂತಕರು ಮತ್ತು ಬುದ್ಧಿಜೀವಿಗಳಿಂದ ತುಂಬಿರುತ್ತಿದ್ದ ವಿಧಾನ ಪರಿಷತ್ ಒಂದರ್ಥದಲ್ಲಿ ವಿಧಾನ ಸಭೆಯಲ್ಲಿನ ರಾಜಕಾರಣಿಗಳಿಗೆ ಮಾರ್ಗದರ್ಶನ ಮಾಡುವ ಹಿರಿಯಣ್ಣನಂತೆ ಕೆಲಸ ಮಾಡುತ್ತಿತ್ತು. ಶಾಸನ ಸಭೆಯಲ್ಲಿನ ಭಾಷಣಗಳು ಐತಿಹಾಸಿಕ ದಾಖಲೆಗಳಾಗಿ ಉಳಿದುಕೊಂಡಿರುವುದರ ಹಿಂದೆ ಅಂದಿನ ರಾಜಕಾರಣಿಗಳ ಓದಿನ ವಿಸ್ತಾರವಾದ ಅನುಭವವೇ ಕಾರಣ. ಇಂದು ವಿಧಾನ ಪರಿಷತ್ತಿಗೂ ಫುಲ್‍ಟೈಮ್ ರಾಜಕಾರಣಿಗಳೇ ಸಾಹಿತ್ಯ, ಕಲೆ, ಸಮಾಜ ಸೇವೆಯ ಕೋಟಾದಡಿ ಪ್ರವೇಶ ಪಡೆಯುತ್ತಿರುವುದರಿಂದ ಶಾಸನ ಸಭೆಯ ಮಾತುಗಳು ವಿದ್ವತ್‍ನ್ನು ಕಳೆದುಕೊಂಡು ಅಲ್ಲಿ ವಾಚಾಳಿತನ ಗೋಚರಿಸುತ್ತಿದೆ. ಇನ್ನೊಂದು ಆತಂಕದ ಸಂಗತಿ ಎಂದರೆ ವಿಧಾನ ಪರಿಷತ್ತನ್ನೆ ರದ್ದುಗೊಳಿಸಲು ಕೆಲವು ರಾಜ್ಯಗಳಲ್ಲಿ ಪ್ರಯತ್ನಿಸಲಾಗುತ್ತಿದೆ. 

ಅಮೆರಿಕಾ, ಇಂಗ್ಲೆಂಡ್ ಮುಂತಾದ ದೇಶಗಳಲ್ಲಿ ರಾಜಕಾರಣಿಗಳು ನಿವೃತ್ತಿಯ ನಂತರ ಪುಸ್ತಕಗಳ ಓದಿನಲ್ಲಿ ಮತ್ತು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ತಮ್ಮ ರಾಜಕೀಯದ ಅನುಭವವನ್ನು ಪುಸ್ತಕದ ರೂಪದಲ್ಲಿ ಪ್ರಕಟಿಸುತ್ತಾರೆ. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತ ತಮ್ಮ ಅನುಭವ ಮತ್ತು ಓದಿನ ಜ್ಞಾನವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಸಧ್ಯದ ರಾಜಕಾರಣವನ್ನು ನೋಡಿದಾಗ ಭಾರತದ ರಾಜಕಾರಣದಲ್ಲಿ ಇಂಥದ್ದೊಂದು ಪ್ರಬುದ್ಧ ಮತ್ತು ವಿದ್ವತ್ತಿನ ನಡೆಯನ್ನು ನಿರೀಕ್ಷಿಸುವುದು ಅಸಾಧ್ಯದ ಸಂಗತಿ. 

---000---

-ರಾಜಕುಮಾರ ಕುಲಕರ್ಣಿ

Monday, May 15, 2023

ದೊಕಾಚಿ ಮೇಷ್ಟ್ರ ಶಾಂತಿ-ಕ್ರಾಂತಿ (ಕಥಾಸಂಕಲನ)

 

ದೊಕಾಚಿ ಮೇಷ್ಟ್ರ ಶಾಂತಿ-ಕ್ರಾಂತಿ (ಕಥಾಸಂಕಲನ)





ಇತ್ತೀಚಿಗೆ ನನ್ನ ‘ದೊಕಾಚಿ ಮೇಷ್ಟ್ರ ಶಾಂತಿ-ಕ್ರಾಂತಿ’ ಕಥಾಸಂಕಲನ ಪ್ರಕಟವಾಯಿತು. ಇದು 2023 ರಲ್ಲಿ ಪ್ರಕಟವಾದ ನನ್ನ ಕಥಾಸಂಕಲನ. ಬೆಂಗಳೂರಿನ ಅಕ್ಷರ ಮಂಟಪ ಪ್ರಕಾಶಕರು ಈ ಕಥಾಸಂಕಲನವನ್ನು ಪ್ರಕಟಿಸಿರುವರು. ಚೇತನ್ ಕಣಬೂರ ಅವರು ಪ್ರೀತಿಯಿಂದ ಪ್ರಕಟಿಸಿರುವರು. ಅವರಿಗೆ ನನ್ನ ಧನ್ಯವಾದಗಳು.
ಈ ಕಥಾಸಂಕಲನದಲ್ಲಿ 15 ಕಥೆಗಳಿವೆ. ಮಯೂರ, ತರಂಗ, ತುಷಾರ, ಕನ್ನಡಪ್ರಭ ಮತ್ತು ಮಾನಸ ಪತ್ರಿಕೆಗಳ ಸಂಪಾದಕರು ಈ ಕಥೆಗಳನ್ನು ಪ್ರಕಟಿಸಿ ನನ್ನನ್ನು ಕನ್ನಡದ ಕಥಾಲೋಕಕ್ಕೆ ಪರಿಚಿಯಿಸಿರುವರು. ಎಲ್ಲ 15 ಕಥೆಗಳನ್ನು ಸೇರಿಸಿ ಈಗ ಕಥಾಸಂಕಲನ ಪ್ರಕಟವಾಗಿದೆ. 
 ನಾನು ಕಥೆಗಳನ್ನು ಬರೆಯುತ್ತೇನೆಂದು ಭಾವಿಸಿರಲಿಲ್ಲ. ಈ ಸೃಜನಶೀಲ ಸಾಹಿತ್ಯದ ಸೃಷ್ಟಿಗೆ ಮೂಲ ಪ್ರೇರಣೆ ಅಮ್ಮನ ಕಥೆಗಳ ಓದು. ಮನೆಗೆಲಸದ ಬಿಡುವಿನ ವೇಳೆ ಅಕ್ಕಪಕ್ಕದ ಮನೆಯ ಹೆಂಗಸರೆಲ್ಲ ಪಟ್ಟಾಂಗ ಕುಳಿತು ಮಾತುಕತೆಯಲ್ಲಿ ತೊಡಗಿರುವಾಗ ನನ್ನ ಅಮ್ಮ ಕಥೆಯ ಪುಸ್ತಕ ಕೈಯಲ್ಲಿ ಹಿಡಿದು ಓದಿನಲ್ಲಿ ಮೈಮರೆಯುತ್ತಿದ್ದಳು. ಹೀಗೆ ಅಮ್ಮನ ಓದಿಗಾಗಿ ಮನೆಗೆ ಬಂದು ಸೇರಿದ ಕಥಾ ಪುಸ್ತಕಗಳು ನನ್ನನ್ನೂ ಬಾಚಿತಬ್ಬಿಕೊಂಡವು. ಈಗ ಅನಿಸುತ್ತದೆ ಅಮ್ಮ ಆ ಕಥೆಗಳಲ್ಲಿ ತನ್ನ ಬದುಕನ್ನು ಹುಡುಕುತ್ತಿದ್ದಳೇನೋ ಎಂದು. ಎಷ್ಟೆಂದರೂ ಕಥೆ ಎನ್ನುವುದು ಒಬ್ಬರ ಬದುಕಲ್ಲದೆ ಮತ್ತೆನಲ್ಲವಲ್ಲ. ಅಮ್ಮ ನನಗೂ ಒಂದಿಷ್ಟು ಕಥೆಯ ಓದಿನ ಗೀಳು ಅಂಟಿಸಿ ಸಾಹಿತ್ಯದ ಮೂಲಕವೇ ಬದುಕಿನ ಅರ್ಥ ಅರಿಯುವ ಪಯಣದ ದಾರಿ ತೋರಿಸಿಕೊಟ್ಟಳು. ಹಾಗೆಂದೆ ಈ ಕಥಾಸಂಕಲನ ನನ್ನಮ್ಮನಿಗೆ, ಭಾವದಲ್ಲಿ ನೆಲೆ ನಿಂತಿರುವ ಅವಳ ನೆನಪುಗಳಿಗೆ ಸಮರ್ಪಿಸಿದ್ದೇನೆ.
-ರಾಜಕುಮಾರ ಕುಲಕರ್ಣಿ

Tuesday, May 2, 2023

ರೈತನಲ್ಲಿವೆ ಪ್ರಶ್ನೆ: ಉತ್ತರದಾಯಿ ಯಾರು?

 



(೧೦.೦೨.೨೦೨೩ ರ ಪ್ರಜಾವಾಣಿಯಲ್ಲಿ ಪ್ರಕಟ)

   ಈ ವರ್ಷ ಜೋಳದ ಉತ್ಪಾದನೆ ಕ್ಷೀಣಿಸಲಿದೆ ಎನ್ನುವ ಆತಂಕ ಬಾಗಲಕೋಟೆ ಜಿಲ್ಲೆಯ ಸಾರ್ವಜನಿಕರಲ್ಲಿ ಮನೆಮಾಡಿದೆ. ಈ ಬಾರಿ ಜಿಲ್ಲೆಯಲ್ಲಿ 60 ಸಾವಿರ ಹೆಕ್ಟೇರ್ ಕೃಷಿಭೂಮಿಯಲ್ಲಿ ಜೋಳ ಬಿತ್ತನೆಯಾಗಿದೆ. ಕಳೆದ ವರ್ಷ ಬಿತ್ತನೆಯಾದ 1.20 ಲಕ್ಷ ಹೆಕ್ಟೇರ್ ಕೃಷಿಭೂಮಿಗೆ ಹೋಲಿಸಿದರೆ ಈ ವರ್ಷ ಪ್ರತಿಶತ 50 ರಷ್ಟು ಕಡಿಮೆ ಪ್ರಮಾಣ ಜೋಳ ಬಿತ್ತನೆಯಾಗಿದೆ. ರೈತರು ವಾಣಿಜ್ಯ ಬೆಳೆಗಳಾದ ಕಬ್ಬು, ರೇಷ್ಮೆ, ಮೆಣಸಿನಕಾಯಿ ಬೆಳೆಗಳನ್ನು ಹೆಚ್ಚು ನೆಚ್ಚಿಕೊಂಡಿರುವುದೇ ಇದಕ್ಕೆ ಕಾರಣ. ಇನ್ನೊಂದು ಸಂಗತಿ ಎಂದರೆ ಒಣಬೇಸಾಯವನ್ನು ಆಶ್ರಯಿಸಿರುವ ರೈತರು ಮಾತ್ರ ಜೋಳದ ಬಿತ್ತನೆ ಮಾಡುತ್ತಿರುವರು. ನೀರಾವರಿ ಸೌಲಭ್ಯ ಹೊಂದಿರುವ ರೈತರು ಹೆಚ್ಚಾಗಿ ಬೆಳೆಯುತ್ತಿರುವುದು ವಾಣಿಜ್ಯ ಬೆಳೆಗಳನ್ನು. ಜೋಳ ಮುಖ್ಯ ಆಹಾರ ಬೆಳೆಯಾಗಿರುವುದರಿಂದ ಜೋಳದ ಉತ್ಪಾದನೆ ಕ್ಷೀಣಿಸುತ್ತಿರುವುದು ಸಹಜವಾಗಿಯೇ ಜಿಲ್ಲೆಯ ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಆತಂಕ ಕೇವಲ ಬಾಗಲಕೋಟೆ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ, ಅದು ಇಡೀ ಉತ್ತರ ಕರ್ನಾಟಕ ಭಾಗಕ್ಕೆ ಅನ್ವಯಿಸುತ್ತದೆ. 

ಒಂದರ್ಥದಲ್ಲಿ ನಾನೇಕೆ ಆರ್ಥಿಕ ನಷ್ಠ ಅನುಭವಿಸಿ ಬೇರೆಯವರ ಹಸಿವು ತಣಿಸಲಿ ಎಂದು ಅನ್ನದಾತ ಮುನಿಸಿಕೊಂಡಂತಿದೆ. ಸಾರ್ವಜನಿಕರ ಆತಂಕವನ್ನೆ ಆಧಾರವಾಗಿಟ್ಟುಕೊಂಡು ರೈತರಿಗೆ ಆಹಾರ ಬೆಳೆಗಳನ್ನೇ ಗಣನೀಯ ಪ್ರಮಾಣದಲ್ಲಿ ಬೆಳೆಯುವಂತೆ ಆಗ್ರಹಿಸುವಂತಿಲ್ಲ. ಆ ಒಂದು ನೈತಿಕತೆಯನ್ನು ಸರ್ಕಾರ ಮತ್ತು ಸಾರ್ವಜನಿಕರು ಅದೆಂದೊ ಕಳೆದುಕೊಂಡಾಗಿದೆ. ದಶಕದ ಹಿಂದೆ ಆಂಧ್ರಪ್ರದೇಶದಲ್ಲಿ ಕೃಷಿಗೆ ಸಂಬಂಧಿಸಿದಂತೆ ವಿಚಿತ್ರ ಸನ್ನಿವೇಶ ಎದುರಾಗಿತ್ತು. 2011 ರಲ್ಲಿ ಪೂರ್ವಗೋದಾವರಿ ಪ್ರಾಂತ್ಯದಲ್ಲಿನ ಎಲ್ಲ ಜಿಲ್ಲೆಗಳ ರೈತರು ಸಾಮೂಹಿಕವಾಗಿ ಕೃಷಿ ಚಟುವಟಿಕೆಯನ್ನು ಸ್ಥಗಿತಗೊಳಿಸಿದ್ದರು. ಒಂದು ವರ್ಷದ ಕಾಲ ವ್ಯವಸಾಯ ಮಾಡದಿರಲು ನಿರ್ಧರಿಸಿದ್ದರು. ಒಂದು ವರ್ಷ ಕಾಲಾವಧಿಯ ಆ ಸಾಮೂಹಿಕ ಸ್ಥಗಿತವನ್ನು ಅವರು ರಜೆ ಎಂದು ಘೋಷಿಸಿಕೊಂಡರು. ನಿರಂತರ ಕೃಷಿ ಚಟುವಟಿಕೆಯಿಂದ ಬಳಲಿರುವ ತಮಗೆ ವಿಶ್ರಾಂತಿಯ ಅಗತ್ಯವಿದೆ ಎನ್ನುವುದು ಅವರ ಬೇಡಿಕೆಯಾಗಿತ್ತು. ಪರಿಣಾಮವಾಗಿ ಆ ರಾಜ್ಯದ ಮುಖ್ಯಆಹಾರ ಬೆಳೆಯಾದ ಭತ್ತದ ಕೊರತೆ ಎದುರಾಗಲಿದೆ ಎನ್ನುವ ಆತಂಕ ಜನರಲ್ಲಿ ಮೂಡಿ ಅನಂತರ ಸರ್ಕಾರವೇ ಮುಂದಾಗಿ ರೈತರ ಮನವೊಲಿಸಬೇಕಾದ ಸಂದರ್ಭ ಸೃಷ್ಟಿಯಾಗಿತ್ತು. 

  ರೈತರು ಹೀಗೆ ಕಾಲಕಾಲಕ್ಕೆ ಮುನಿದುಕೊಳ್ಳಲು ಅನೇಕ ಕಾರಣಗಳಿವೆ. ರೈತರಿಗೆ ಕೃಷಿ ಚಟುವಟಿಕೆಯಿಂದ ಅದರಲ್ಲೂ ಒಣಬೇಸಾಯವನ್ನೇ ಆಶ್ರಯಿಸಿರುವವರಿಗೆ ಹೇಳಿಕೊಳ್ಳುವಂಥ ಆದಾಯ ದೊರೆಯುತ್ತಿಲ್ಲ. ಕಳಪೆ ಬೀಜಗಳ ಬಳಕೆ, ಅಧಿಕ ಬೆಲೆಗೆ ಖರೀದಿಸಿದ ರಸಗೊಬ್ಬರ, ಸಕಾಲಕ್ಕೆ ಆಗದ ಮಳೆ, ಕ್ರಿಮಿ ಕೀಟಗಳಿಂದ ಹಾನಿಗೊಳಗಾಗುವ ಬೆಳೆ ಇಷ್ಟೆಲ್ಲ ತೊಂದರೆಗಳನ್ನೆದುರಿಸಿ ಬೆಳೆ ಕೈಗೆ ಬರುವ ಹೊತ್ತಿಗೆ ದೇಶದ ಬಡ ರೈತರ ಸ್ಥಿತಿ ಚಿಂತಾಜನಕವಾಗಿರುತ್ತದೆ. ಸಾಲದ ಹೊರೆಯಿಂದ ಬೆನ್ನು ಬಾಗಿರುತ್ತದೆ. ಬೆಳೆದ ಬೆಳೆಯನ್ನು ಹೊಲದಿಂದಲೇ ನೇರವಾಗಿ ಮಾರುಕಟ್ಟೆಗೆ ಸಾಗಿಸುವ ಪರಿಸ್ಥಿತಿ ರೈತನದು. ಗಗನಕ್ಕೆರಿದ್ದ ಬೆಲೆ ಬೆಳೆ ರೈತನ ಕೈಗೆ ಬರುವ ಹೊತ್ತಿಗೆ ಪಾತಾಳಕ್ಕಿಳಿದಿರುತ್ತದೆ. ರೈತ ತನ್ನ ಬೆಳೆಯನ್ನು ಮಧ್ಯವರ್ತಿಗಳು ನಿಗದಿಪಡಿಸಿದ ಬೆಲೆಗೆ ಮಾರಾಟ ಮಾಡಬೇಕು. ಅನೇಕ ಮಾರಾಟಗಾರರು ರೈತರಿಂದ ಕಡಿಮೆ ಬೆಲೆಗೆ ದವಸ ಧಾನ್ಯಗಳನ್ನು ಖರೀದಿಸಿ ನಂತರ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಸಾರ್ವತ್ರಿಕ ಸತ್ಯ.

ಒಂದೆಡೆ ಮಧ್ಯವರ್ತಿಗಳ ಹಾವಳಿ ಇನ್ನೊಂದೆಡೆ ರೈತರಿಂದಲೇ ನೇರವಾಗಿ ಖರೀದಿಸಲು ಸಿದ್ಧರಿಲ್ಲದ ಗ್ರಾಹಕರು. ಈ ನಡುವೆ ರೈತರ ಬೆಂಬಲಕ್ಕೆ ನಿಲ್ಲದ ಆಯಾ ಕಾಲಕ್ಕೆ ಆಡಳಿತ ನಡೆಸುವ ಸರ್ಕಾರ. ಉದ್ಯಮಿಗಳನ್ನು ರತ್ನಗಂಬಳಿ ಹಾಸಿ ಸ್ವಾಗತಿಸುವ ಸರ್ಕಾರ ತನ್ನದೆ ನೆಲದ ರೈತರ ಸಮಸ್ಯೆಗಳಿಗೆ ಕಿವುಡಾಗುತ್ತದೆ. ಕೈಗಾರಿಕೆಗಳಿಗೆ ಉಚಿತ ವಿದ್ಯುತ್, ಉಚಿತ ನೀರು ಜೊತೆಗೆ ಅತ್ಯುತ್ತಮ ರಸ್ತೆ ಸೌಲಭ್ಯ ಒದಗಿಸುವ ಸರ್ಕಾರ ತನ್ನದೇ ನಾಡಿನ ರೈತರ ಸಮಸ್ಯೆಗಳನ್ನು ಪರಿಹರಿಸಲು ಅಸಾಹಾಯಕವಾಗಿದೆ. ರಾತ್ರಿಯೆಲ್ಲ ನಿದ್ದೆ ಇಲ್ಲದೆ ಹೊಲಗಳಿಗೆ ನೀರು ಉಣಿಸುವ ರೈತರ ಸಂಖ್ಯೆ ಹೇರಳವಾಗಿದೆ. ಅದೆಷ್ಟೋ ರೈತರು ರಾತ್ರಿ ವೇಳೆ ವಿಷಜಂತುಗಳಿಗೆ ಬಲಿಯಾಗಿ ಪ್ರಾಣ ಕಳೆದುಕೊಂಡ ಉದಾಹರಣೆಗಳೂ ಉಂಟು.

ವ್ಯವಸಾಯ ಮಾಡಿಕೊಂಡು ಹಳ್ಳಿಗಳಲ್ಲಿ ಬದುಕುತ್ತಿರುವ ರೈತರ ಮಕ್ಕಳಿಗೆ ಅಲ್ಲಿ ಉತ್ತಮ ಶೈಕ್ಷಣಿಕ ಸೌಲಭ್ಯ ದೊರೆಯುತ್ತಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ವೈದ್ಯರ ಕೊರತೆಯಿಂದಾಗಿ ದೊರೆಯಬೇಕಾದ ಆರೋಗ್ಯ ಸೌಲಭ್ಯಗಳಿಂದಲೂ ಅವರು ವಂಚಿತರಾಗಿರುವರು. ರಸ್ತೆ ಸಂಪರ್ಕದ ಕೊರತೆಯಿಂದಾಗಿ ಅನೇಕ ಹಳ್ಳಿಗಳು ಮಳೆಗಾಲದಲ್ಲಿ ದ್ವೀಪಗಳಾಗುತ್ತಿವೆ. ಹಳ್ಳಿಗರೆಲ್ಲ ದಿನಗೂಲಿಗಳಾಗಿ ನಗರ ಪ್ರದೇಶಗಳಿಗೆ ವಲಸೆ ಬರುತ್ತಿರುವುದರಿಂದ ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗಾಗಿ ಕೆಲಸಗಾರರು ದೊರೆಯದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದು ಪ್ರವಾಹಕ್ಕೆ ಬೆಳೆ ಕೊಚ್ಚಿ ಹೋದಾಗ ಇಲ್ಲವೆ ಮಳೆ ಬಾರದೆ ಭೀಕರ ಬರಗಾಲ ತಲೆದೂರಿದಾಗ ಆಗಲೂ ಸಂಕಷ್ಟಕ್ಕೊಳಗಾಗುವುದು ರೈತನ ಬದುಕೇ. ಬೆಳೆ ಬೆಳೆದು ಸಕಾಲದಲ್ಲಿ ಲಾಭವಾಗದೇ ಇದ್ದರೆ ರಸಗೊಬ್ಬರಗಳ ಸಾಲ ಗಂಭೀರ ಸಮಸ್ಯೆಯನ್ನು ತಂದೊಡ್ಡುತ್ತದೆ. ರಸಗೊಬ್ಬರಗಳ ವಿತರಕರ ಕಿರುಕುಳ ತಾಳದೆ ಅನೇಕ ರೈತರು ಸಾವಿಗೆ ಶರಣಾಗುವುದುಂಟು. ಮನೆಯ ಯಜಮಾನನನ್ನು ಕಳೆದುಕೊಂಡ ರೈತ ಕುಟುಂಬದ ಬದುಕು ಬೀದಿ ಪಾಲಾಗುತ್ತದೆ.

ಈಗ ಕೃಷಿಭೂಮಿ ವಸತಿ ಪ್ರದೇಶವಾಗಿ ಪರಿವರ್ತನೆಯಾಗುತ್ತಿದೆ. ನಗರ ಪ್ರದೇಶಗಳಿಗೆ ಹೊಂದಿಕೊಂಡಿರುವ ರೈತರ ಹೊಲಗಳಲ್ಲಿ ವಸತಿ ಸಮುಚ್ಛಯಗಳು ತಲೆ ಎತ್ತುತ್ತಿವೆ. ರಿಯಲ್ ಎಸ್ಟೇಟ್ ಉದ್ದಿಮೆಯಿಂದ ರೈತರ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಅದೆಷ್ಟೋ ರೈತರು ಬಂಡವಾಳದಾರರಿಗೆ ಕೃಷಿಭೂಮಿಯನ್ನು ಮಾರಾಟಮಾಡಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವರು. ಇಲ್ಲಿ ಸಾರ್ವಜನಿಕರದೂ ಅನೇಕ ತಪ್ಪುಗಳಿವೆ. ರೈತನಿಂದ ಒಂದು ಕಟ್ಟು ಸೊಪ್ಪು ಖರೀದಿಸಲು ನೂರೆಂಟು ಚೌಕಾಸಿ ಮಾಡುತ್ತಾರೆ. ರೈತನೆದುರು ತೂಕದಲ್ಲಿ ಮೋಸ, ಕಳಪೆ ತರಕಾರಿ ಎಂದು ಗಂಟೆಗಟ್ಟಲೆ ಉಪನ್ಯಾಸ ನೀಡುತ್ತಾರೆ. ಇದೇ ಜನ ಬೃಹದಾಕಾರದ ಮಾಲ್‍ಗಳಲ್ಲಿ ನಿಗದಿಪಡಿಸಿದ ಬೆಲೆಗೆ ಯಾವ ತಕರಾರು ಇಲ್ಲದೆ ಪದಾರ್ಥಗಳನ್ನು ಖರೀದಿಸುತ್ತಾರೆ.

ಈಗಾಗಲೇ ಜಗತ್ತಿನಲ್ಲಿ ಆಹಾರ ಕೊರತೆ ಉಂಟಾಗಿದೆ. ಜೊತೆಗೆ ಕೃಷಿಭೂಮಿ ಕ್ಷೀಣಿಸುತ್ತಿರುವುದು ನೋವಿನ ಮೇಲೆ ಬರೆ ಎಳೆದಂತಾಗಿದೆ. ಈ ಗಂಭೀರ ಸಮಸ್ಯೆಯನ್ನು ಹೋಗಲಾಡಿಸಲು ಮೊದಲು ರೈತರ ಸಮಸ್ಯೆಗಳು ಪರಿಹಾರ ಕಾಣುವಂತಾಗಬೇಕು. ಕೇವಲ ವೇದಿಕೆಗಳಲ್ಲಿನ ಚರ್ಚೆ ಮತ್ತು ಸಂವಾದಗಳಿಂದಾಗಲಿ, ಪ್ರದರ್ಶನ ಮೇಳಗಳಿಂದಾಗಲಿ ರೈತರ ಸಮಸ್ಯೆಗಳು ಪರಿಹಾರವಾಗಲಾರವು. ಸರ್ಕಾರ ಮತ್ತು ಸಾರ್ವಜನಿಕರು ಜೊತೆಗೂಡಿ ರೈತರ ಪ್ರಶ್ನೆಗಳಿಗೆ ಮತ್ತು ಸಮಸ್ಯೆಗಳಿಗೆ ಉತ್ತರದಾಯಿಯಾಗಬೇಕಿದೆ. 

-ರಾಜಕುಮಾರ ಕುಲಕರ್ಣಿ


Monday, April 3, 2023

ಸಂಕಲ್ಪಿಸುವ ಮನಸ್ಸು ದೃಢವಾಗಿರಲಿ

 





(೦೪. ೦೧. ೨೦೨೩ ರ ಪ್ರಜಾವಾಣಿಯಲ್ಲಿ ಪ್ರಕಟ)

       ಹೊಸ ವರ್ಷದ ಅಂಗವಾಗಿ ಸಾರ್ವಜನಿಕರು ಅನೇಕ ಸಂಕಲ್ಪಗಳನ್ನು ತೊಡುತ್ತಾರೆ. ಕೆಟ್ಟ ಹವ್ಯಾಸಗಳನ್ನು ತ್ಯಜಿಸುವ, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವ, ವರ್ತನೆಯನ್ನು ತಿದ್ದಿಕೊಳ್ಳುವ, ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ತರಹೇವಾರಿ ಸಂಕಲ್ಪಗಳು ಆಚರಣೆಗೆ ಬರುತ್ತವೆ. ಜನರು ತಮ್ಮ ನಿರ್ಧಾರಗಳನ್ನು ಎಷ್ಟರಮಟ್ಟಿಗೆ ಕಾರ್ಯಗತಗೊಳಿಸುವರು ಎನ್ನುವುದು ಅದು ಅವರವರ ಮನಸ್ಸಿನ ದೃಢತೆಯನ್ನು ಅವಲಂಬಿಸಿದೆ. ಹೆಚ್ಚಿನ ನಿರ್ಣಯಗಳು ಕೆಲವು ದಿನಗಳ ಕಾಲ ಕಾಟಾಚಾರಕ್ಕೆ ರೂಢಿಯಲ್ಲಿದ್ದು ಅನಂತರ ಮರೆತು ಹೋಗುವುದು ಸಾಮಾನ್ಯ ಸಂಗತಿಯಾಗಿದೆ. 

ಇತ್ತೀಚೆಗೆ ನನ್ನ ಮಿತ್ರರೋರ್ವರು ತಮ್ಮ ಮಗಳ ಮದುವೆಯನ್ನು ಅತ್ಯಂತ ಸರಳವಾಗಿ ನೆರವೇರಿಸಿದರು. ಯಾವ ಆಡಂಬರ, ಅದ್ದೂರಿ ಆಚರಣೆಗಳಿಲ್ಲದೆ ಮದುವೆ ಕಾರ್ಯಕ್ರಮ ಕೆಲವೇ ಗಂಟೆಗಳಲ್ಲಿ ಕೊನೆಗೊಂಡಿತು. ವಧು-ವರರ ಕುಟುಂಬ ಸದಸ್ಯರಷ್ಟೇ ಪಾಲ್ಗೊಂಡಿದ್ದ ಸಮಾರಂಭದಲ್ಲಿ ಆಹಾರ ಕೂಡ ಮಿತವಾಗಿ ಬಳಕೆಯಾಗಿತ್ತು. ‘ಜಗತ್ತಿನಲ್ಲಿ ಆಹಾರ ಕೊರತೆಯ ಸಮಸ್ಯೆ ಉಲ್ಬಣಿಸುತ್ತಿರುವಾಗ ಅದ್ದೂರಿ ಮದುವೆ ಸಮಾರಂಭವನ್ನು ಏರ್ಪಡಿಸುವುದಕ್ಕೆ ಮನಸ್ಸು ಒಪ್ಪಲಿಲ್ಲ. ಇನ್ನುಮುಂದೆ ಕುಟುಂಬದ ಎಲ್ಲ ಕಾರ್ಯಕ್ರಮಗಳನ್ನು ಸರಳವಗಿ ಆಚರಿಸಬೇಕೆಂದು ಸಂಕಲ್ಪ ಮಾಡಿದ್ದೇನೆ. ಆ ಸಂಕಲ್ಪದ ಮೊದಲ ಹೆಜ್ಜೆಯಾಗಿ ಮಗಳ ಮದುವೆಯನ್ನು ಸರಳವಾಗಿ ನೆರವೇರಿಸಿದ್ದು ತೃಪ್ತಿ ನೀಡಿದೆ’ ಎಂದು ನುಡಿದ ಮಿತ್ರರ ಮಾತಿನಲ್ಲಿ ಹೆಮ್ಮೆ ಇತ್ತು. ದೇಶದ ಆಹಾರ ಕೊರತೆಯನ್ನು ನೀಗಿಸಲು ಪ್ರತಿಯೊಬ್ಬ ಪ್ರಜೆ ವಾರಕ್ಕೊಮ್ಮೆ ಉಪವಾಸವಿರುವಂತೆ ಲಾಲ ಬಹಾದ್ದೂರ ಶಾಸ್ತ್ರಿ ಅವರು ಪ್ರಧಾನ ಮಂತ್ರಿಯಾಗಿದ್ದ ಸಂದರ್ಭ ಕರೆ ನೀಡಿದ್ದರು. ಈ ಸಂಕಲ್ಪವನ್ನು ಸ್ವತ: ಶಾಸ್ತ್ರಿ ಅವರು ತಾವು ರೂಢಿಗೆ ತರುವುದರ ಮೂಲಕ ಜನರಿಗೆ ಆದರ್ಶವೂ ಮತ್ತು ಮಾದರಿಯೂ ಆಗುಳಿದರು.

ಆಹಾರ ಕೊರತೆಯ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಅದ್ದೂರಿ, ಆಡಂಬರವನ್ನು ತ್ಯಜಿಸಿ ಸರಳ ಬದುಕನ್ನು ರೂಢಿಸಿಕೊಳ್ಳುವುದು ನಾವು ಮಾಡಬೇಕಾದ ಅತ್ಯಂತ ಅಗತ್ಯದ ಸಂಕಲ್ಪವಾಗಿದೆ. ಮದುವೆ ಮತ್ತಿತರ ಕಾರ್ಯಕ್ರಮಗಳಲ್ಲಿ ಆಹಾರ ವ್ಯಯವಾಗುವುದು ಸಾಮಾನ್ಯ ಚಿತ್ರಣವಾಗಿದೆ. ವೈಯಕ್ತಿಕ ಮತ್ತು ಕೌಟುಂಬಿಕ ಸಮಾರಂಭಗಳು ಸಮಾಜದಲ್ಲಿ ಸಾರ್ವಜನಿಕ ಸಮಾರಂಭಗಳಂತೆ ಆಚರಿಸಲ್ಪಡುತ್ತಿವೆ. ಸಾವಿರಾರು ಜನರನ್ನು ಆಮಂತ್ರಿಸಿ ಭೂರಿ ಭೋಜನ ಉಣಬಡಿಸುವ ಮನೋವ್ಯಾಧಿ ಸೋಂಕಿನಂತೆ ಆವರಿಸಿಕೊಂಡಿದೆ. ಹಿತಮಿತವಾಗಿ ಬಳಕೆಯಾಗಬೇಕಾದ ಆಹಾರ ಕೌಟುಂಬಿಕ ಸಮಾರಂಭಗಳಲ್ಲಿ ಹಳಸಿ ಹಾಳಾಗಿ ತಿಪ್ಪೆಗುಂಡಿಗಳನ್ನು ಸೇರುತ್ತಿದೆ. ಸಮಾಜದಲ್ಲಿ ಅದೆಷ್ಟೋ ಜನರಿಗೆ ದಿನದ ಒಂದು ಹೊತ್ತಿನ ಊಟ ಕೂಡ ದೊರೆಯುತ್ತಿಲ್ಲ. ಆಹಾರ ಉತ್ಪಾದನೆಯ ಕೃಷಿಭೂಮಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವಾಗ ಅದ್ದೂರಿ ಸಮಾರಂಭಗಳ ಅಗತ್ಯವಿದೆಯೇ ಎಂದು ನಾವು ಯೋಚಿಸಬೇಕಿದೆ. ಅದ್ದೂರಿಯಾಗಿ ಆಚರಿಸುತ್ತಿರುವ ಕೌಟುಂಬಿಕ ಸಮಾರಂಭಗಳಲ್ಲಿ ಆಹಾರದ ಜೊತೆಗೆ ನೀರು ಮತ್ತು ವಿದ್ಯುತ್ ಕೂಡ ದುರ್ಬಳಕೆಯಾಗುತ್ತಿವೆ.

ವರ್ಷದಿಂದ ವರ್ಷಕ್ಕೆ ಕೃಷಿಭೂಮಿ ಕ್ಷಿಣಿಸುತ್ತಿರುವುದು ಮುಂದೊಂದು ದಿನ ತೀವ್ರ ಆಹಾರ ಕ್ಷಾಮವನ್ನು ಸೃಷ್ಟಿಸಲಿದೆ ಎಂದು ತಜ್ಞರು ಈಗಾಗಲೇ ಎಚ್ಚರಿಕೆ ನೀಡಿರುವರು. ದಿನನಿತ್ಯದ ಎರಡು ಹೊತ್ತಿನ ಊಟಕ್ಕೆ ಅಗತ್ಯವಾದ ಆಹಾರ ದೊರೆಯದ ಸಮಸ್ಯೆ ಭವಿಷ್ಯದಲ್ಲಿ ಎದುರಾಗಲಿದೆ. ತಮ್ಮ ನಂತರದ ಪೀಳಿಗೆಗೆ ಸಕಲ ಐಶ್ವರ್ಯಗಳನ್ನು ಕೊಟ್ಟು ಹೋಗುವ ಧಾವಂತದಲ್ಲಿ ಮನುಷ್ಯರು ಬದುಕಿಗೆ ಮೂಲ ಸೆಲೆಯಾದ ಆಹಾರದಂಥ ಅತಿಮುಖ್ಯವಾದ ಅವಶ್ಯಕತೆಯನ್ನೆ ಮರೆತಿರುವರು. ಶಿವರಾಮ ಕಾರಂತರು ತಮ್ಮ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಕೃತಿಯ ಮುನ್ನುಡಿಯಲ್ಲಿ ಹೀಗೆ ಹೇಳುತ್ತಾರೆ ‘ನಾವು ಭೂಮಿಗೆ ಬಂದ ದಿನ ನಮ್ಮ ಸುತ್ತಣ ಬದುಕು ಇದಕ್ಕಿಂತ ಒಂದಿಷ್ಟು ಹೆಚ್ಚು ಚಂದವಾಗುವಂತೆ ಮಾಡಿ ಇಲ್ಲಿಂದ ಹೊರಡಬೇಕು ಎಂಬ ಭಾವನೆ ನನ್ನದು. ಜಾತ್ರೆಗೆ ಬಂದವರು ಜಾತ್ರೆ ಮುಗಿಸಿ ಹೊರಡುವಾಗ ತಾವು ನಲಿದು ಉಂಡು ಹೋದ ನೆಲದ ಮೇಲೆ ಎಲ್ಲೆಲ್ಲೂ ತಮ್ಮ ಉಚ್ಚಿಷ್ಟವನ್ನು ಚೆಲ್ಲಿ ಹೋದರೆ ಹೇಗಾದಿತು? ಅಲ್ಲಿಗೆ ನಾವು ತಿರುಗಿ ಬಾರದಿದ್ದರೇನಾಯಿತು? ಅಲ್ಲಿಗೆ ಬರುವ ನಮ್ಮ ಮಕ್ಕಳು ಏನೆಂದುಕೊಂಡಾರು? ಅಷ್ಟನ್ನಾದರೂ ಯೋಚಿಸುವ ಬುದ್ಧಿ ಈ ದೇಶವನ್ನು ನಡೆಸುವ ಹಿರಿಯರಿಗೆ ಇಲ್ಲದೆ ಹೋದರೆ ಹೇಗೆ?’. 

ತನ್ನ ಹಕ್ಕುಗಳನ್ನು ಪ್ರತಿಪಾದಿಸುತ್ತಿರುವ ಮನುಷ್ಯ ತಾನು ನಿರ್ವಹಿಸಬೇಕಾದ ಕರ್ತವ್ಯಗಳನ್ನು ಮರೆಯುತ್ತಿರುವನು. ಆಹಾರ, ನೀರು, ವಿದ್ಯುತ್ ಇವುಗಳನ್ನು ರಾಷ್ಟ್ರೀಯ ಸಂಪತ್ತು ಎಂದು ಪರಿಗಣಿಸಲಾಗಿದೆ. ಖರೀದಿಸುವ ಸಾಮರ್ಥ್ಯ ತನಗಿದೆ ಎಂದ ಮಾತ್ರಕ್ಕೆ ರಾಷ್ಟ್ರೀಯ ಸಂಪತ್ತನ್ನು ದುರ್ಬಳಕೆ ಮಾಡುವ ಅಧಿಕಾರ ಮನುಷ್ಯನಿಗಿಲ್ಲ. ಪ್ರಕೃತಿಯು ನೀಡುತ್ತಿರುವ ಅಮೂಲ್ಯ ಕೊಡುಗೆಗಳಲ್ಲಿ ಮನುಷ್ಯನಿಗಷ್ಟೇ ಅಲ್ಲ ಈ ಭೂಮಿಯ ಮೇಲಿನ ಸಕಲ ಚರಾಚರ ಜೀವಿಗಳಿಗೂ ಪಾಲಿದೆ. ಆದರೆ ಅತಿಯಾದ ಅಹಂಕಾರ ಮತ್ತು ಹಣದ ದರ್ಪದಿಂದ ಮನುಷ್ಯ ತನ್ನ ಹಕ್ಕನ್ನು ಹೆಚ್ಚು ಹೆಚ್ಚು ಪ್ರತಿಪಾದಿಸುತ್ತಿರುವನು. 

ಎಚ್.ಎಸ್.ವೆಂಕಟೇಶಮೂರ್ತಿ ತಮ್ಮ ‘ಇರಬೇಕು ಇರುವಂತೆ’ ಕವಿತೆಯಲ್ಲಿ ಪ್ರಕೃತಿಯ ಉದಾತ್ತ ಗುಣಗಳನ್ನು ವರ್ಣಿಸುತ್ತ ಮನುಷ್ಯ ಕೂಡ ಪ್ರಕೃತಿಯಂತೆ ಬಾಳಬೇಕು ಎನ್ನುವ ಸದಾಶಯವನ್ನು ವ್ಯಕ್ತಪಡಿಸುತ್ತಾರೆ. ಕವಿತೆಯ ಒಂದು ಸಾಲು ಹೀಗಿದೆ-‘ತಾನು ಬಿಸಿಲಲಿ ನಿಂತು/ತನ್ನ ಬಳಿ ಬರುವವಗೆ/ತಣ್ಣಗಿನ ಆಸರೆಯ ನೆರಳ ಕೊಟ್ಟು/ಹೇಗೆ ಗೆಲುವಾಗುವುದೊ/ಹಸಿರೆಲೆಯ ಹೊಂಗೆಮರ/ಹಾಗೆ ಬಾಳಿಸು ಗುರುವೇ ಪ್ರೀತಿಯಿಟ್ಟು’. ಮನುಷ್ಯ ತಾನು ಪ್ರಕೃತಿಯಂತೆ ಬಾಳುವ ಸಂಕಲ್ಪ ತೊಟ್ಟು ಬದುಕನ್ನು ಇನ್ನಷ್ಟು ಚೆಂದಗೊಳಿಸಬೇಕಿದೆ. ಆದರೆ ಮನುಷ್ಯ ಪ್ರಕೃತಿಯ ಕೊಡುಗೆಗಳನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಂಡು ಅದೇ ಪ್ರಕೃತಿಯ ಮೇಲೆ ಅಟ್ಟಹಾಸ ಗೈಯುತ್ತಿರುವನು.  

ಬದುಕನ್ನು ಸರಳತೆಯ ನೆಲೆಯಲ್ಲಿ ಜೀವಿಸುವ ಮನುಷ್ಯನಿಗೆ ಸಮಾಜ ಗುರುತಿಸಿ ಗೌರವಿಸುತ್ತಿದೆಯೇ ಎನ್ನುವ ಪ್ರಶ್ನೆ ಎದುರಾಗುತ್ತದೆ. ಸಮಾಜಕ್ಕೆ ಉಪಯುಕ್ತವಾದ ಗುಣಗಳನ್ನು ಮೈಗೂಡಿಸಿಕೊಂಡು ಬದುಕುತ್ತಿರುವವರಿಗೆ ಇದೇ ಸಮಾಜ ಶತಮೂರ್ಖ ಎನ್ನುವ ಹಣೆಪಟ್ಟಿ ಕಟ್ಟುತ್ತದೆ. ಬದುಕುವ ಕಲೆ ಗೊತ್ತಿಲ್ಲದವರೆಂದು ಹಿಯ್ಯಾಳಿಸುತ್ತದೆ. ನಿಂದನೆಯ ಮಾತುಗಳಿಗೆ ಹೆದರಿ ಸಮಾಜೋಪಯೋಗಿ ಗುಣಗಳನ್ನು ತ್ಯಜಿಸಿ ಬದುಕುವುದು ತಪ್ಪು ನಡೆಯಾಗುತ್ತದೆ. ಕೆಲವೊಮ್ಮೆ ಮನುಷ್ಯ ನಿಂದನೆ, ಅವಮಾನಗಳನ್ನು ಮೀರಿ ಅಂತರಂಗದ ಧ್ವನಿಗೆ ಆದ್ಯತೆ ನೀಡಬೇಕು. ಸಂಕಲ್ಪಿಸುವ ಮನಸ್ಸು ದೃಢವಾಗಿದ್ದರೆ ಯಾವ ಅವಮಾನ, ನಿಂದನೆಗಳು ನಮ್ಮ ಧೃತಿಗೆಡಿಸಲಾರವು. 

-ರಾಜಕುಮಾರ ಕುಲಕರ್ಣಿ

Wednesday, March 1, 2023

ವೃತ್ತಿಗೌರವ ಮತ್ತು ಅನುಚಿತ ವರ್ತನೆ

  


   

(೨೨.೧೨.೨೦೨೨ ರ ಪ್ರಜಾವಾಣಿಯಲ್ಲಿ ಪ್ರಕಟ)

     ಶಿಕ್ಷಕನೋರ್ವ ಹತ್ತು ವರ್ಷದ ಬಾಲಕನ ಮೇಲೆ ಕಬ್ಬಿಣದ ಸಲಕೆಯಿಂದ ಮಾರಣಾಂತಿಕ ಹಲ್ಲೆ ಮಾಡಿ ಹತ್ಯೆಗೈದ ವಿಷಯ ಓದಿ ದಿಗ್ಭ್ರಮೆಯಾಯಿತು. ತಮಸೋಮಾ ಜ್ಯೋತಿರ್ಗಮಯ ಎಂದು ವಿದ್ಯಾರ್ಥಿಗಳನ್ನು ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆ ಕೈಹಿಡಿದು ಕರೆದೊಯ್ದು ಮಾದರಿಯಾಗಬೇಕಾದ ಶಿಕ್ಷಕನೇ ಕ್ರೌರ್ಯ ಮೆರೆದು ಇಡೀ ಶಿಕ್ಷಕ ಸಮೂಹಕ್ಕೆ ಕಳಂಕ ತಂದಿರುವನು. ಶಿಕ್ಷಕರ ಇಂತಹ ಅಸಂಗತ ವರ್ತನೆಗಳು ಮಾಧ್ಯಮಗಳಲ್ಲಿ ಆಗಾಗ ಪ್ರಕಟವಾಗುತ್ತಿವೆ. ಕೆಲವು ದಿನಗಳ ಹಿಂದೆ ಕಾಮುಕ ಶಿಕ್ಷಕ ಕುಡಿದ ಮತ್ತಿನಲ್ಲಿ ವಿದ್ಯಾರ್ಥಿನಿಯರ ವಸತಿ ಗೃಹಕ್ಕೆ ಹೋಗಿ ಏಟುತಿಂದ ಪ್ರಕರಣ ವರದಿಯಾಗಿತ್ತು. ವಿದ್ಯಾರ್ಥಿಗಳ ಮೇಲೆ ಲೈಗಿಂಕ ದೌರ್ಜನ್ಯ, ದೈಹಿಕವಾಗಿ ಹಿಂಸಿಸುವುದು, ಅಸಭ್ಯ ಮಾತುಗಳನ್ನಾಡುವುದು ಇಂಥ ವರ್ತನೆಗಳು ಇತ್ತೀಚಿನ ದಿನಗಳಲ್ಲಿ ಶಿಕ್ಷಕರಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ.  

ಶಿಕ್ಷಕ ವೃತ್ತಿ ಅತ್ಯಂತ ಗೌರವದ ವೃತ್ತಿಯಾಗಿದೆ. ಭಾರತದ ಈ ನೆಲದಲ್ಲಿ ಶಿಕ್ಷಕರಿಗೆ ವಿಶೇಷ ಗೌರವ ನೀಡಲಾಗಿದೆ. `ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು ಗುರುವನ್ನು ಅತೀ ಎತ್ತರದ ಸ್ಥಾನದಲ್ಲಿ ಕೂಡಿಸಿ ಹಾಡಿದ ನಾಡಿದು. `ಮುಂದೆ ಗುರಿ ಇರಲು ಹಿಂದೆ ಗುರುವಿರಲು ನಡೆ ಮುಂದೆ ನುಗ್ಗಿ ನಡೆ ಮುಂದೆ’ಎಂದು ಗುರುವಿನ ಮೇಲೆ ಅಚಲ ಮತ್ತು ಅಪರಿಮಿತ ವಿಶ್ವಾಸವಿರಿಸಿದ ನೆಲವಿದು. ಹರ ಮುನಿದರೂ ಗುರು ಕಾಯುವನು ಎನ್ನುವಷ್ಟು ನಂಬಿಕೆ ಗುರುವಿನ ಮೇಲೆ. ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ತಮ್ಮ ಮಕ್ಕಳನ್ನು ಅರಮನೆಯ ಸುಖ ವೈಭೋಗದಿಂದ ದೂರವಾಗಿಸಿ ಗುರುಗಳ ಆಶ್ರಯದಲ್ಲಿ ಬಿಡುತ್ತಿದ್ದರು. ಕರ್ಣ, ಏಕಲವ್ಯನಂಥ ಮಹಾಯೋಧರು ವಿದ್ಯೆಗಾಗಿ ಗುರುವನ್ನು ಹುಡುಕುತ್ತ ಅಲೆದದ್ದು ಗುರುವಿನ ಪ್ರಾಮುಖ್ಯತೆಗೊಂದು ಉದಾಹರಣೆ.

`ವಿದ್ಯೆ ಕಲಿಸದ ಗುರು, ಬುದ್ಧಿ ಹೇಳದ ತಂದೆ, ಬಿದ್ದಿರಲು ಬಂದು ನೋಡದ ತಾಯಿ ಶುದ್ಧ ವೈರಿಗಳು’ ಎಂದು  ಸರ್ವಜ್ಞ ಗುರುವಿಗೆ ತಂದೆ-ತಾಯಿಗಳಷ್ಟೇ ಮಹತ್ವದ ಜವಾಬ್ದಾರಿ ನೀಡಿರುವುದು ಶಿಕ್ಷಕ ವೃತ್ತಿಯ ಘನತೆಗೊಂದು ದೃಷ್ಟಾಂತ. ಹಿಂದೆಲ್ಲ ಗುರುವಿಗೆ ತನ್ನ ಶಿಷ್ಯನ ಶ್ರೇಯೋಭಿವೃದ್ಧಿಯೇ ಮುಖ್ಯವಾಗಿರುತ್ತಿತ್ತು. ಗುರುವಾದವನಿಗೆ ಶಿಷ್ಯ ತನ್ನನ್ನೂ ಮೀರಿ ಬೆಳೆಯಬೇಕೆಂಬ ಉತ್ಕಟ ಹಂಬಲ. ಗುರು-ಶಿಷ್ಯ ಪರಂಪರೆ ಈ ನೆಲದ ಉತ್ಕೃಷ್ಟ ಸಂಸ್ಕೃತಿ. ಈ ಪರಂಪರೆ ಅನೇಕ ದೇಶಗಳಿಗೆ ಮಾದರಿಯಾಗಿದೆ. ಈ ಸಂಸ್ಕೃತಿಯ ಪ್ರಭಾವದ ಕಾರಣ ಅನ್ಯ ರಾಷ್ಟ್ರಗಳ ಅನೇಕ ವಿದ್ಯಾರ್ಥಿಗಳು ಗುರುವನ್ನು ಹುಡುಕಿಕೊಂಡು ಭಾರತಕ್ಕೆ ಬಂದಿದ್ದು. `ಭಾರತದಲ್ಲಿ ನಾನು ಪಾದ ಮುಟ್ಟಿ ನಮಸ್ಕರಿಸುವುದು ನನಗೆ ಗುರು ಸಮಾನರಾದ ಶ್ರೀಧರನ್ ಅವರಿಗೆ ಮಾತ್ರ. ನಾನು ಆ ಗುರುವಿನ ಪಾದವನ್ನು ಕೈಯಿಂದ ಸ್ಪರ್ಷಿಸಿದರೆ ಸಾಲದು ನನ್ನ ತಲೆಯನ್ನೆ ಅವರ ಪಾದಕ್ಕೆ ಮುಟ್ಟಿಸಬೇಕು’ ಎಂದು ಅಮೇರಿಕಾ ದೇಶದ ಇಂಜಿನಿಯರ್ ಹೇಳಿದ ಮಾತು ಈ ದೇಶದಲ್ಲಿ ಗುರುವಿನ ಸ್ಥಾನಕ್ಕಿರುವ ಪ್ರಾಮುಖ್ಯತೆಗೊಂದು ಅನನ್ಯ ಉದಾಹರಣೆ.

ಶಿಕ್ಷಕನಾದವನು ಕ್ರೌರ್ಯ, ಹಿಂಸೆ, ದ್ವೇಷಗಳಂಥ ಮಾನವ ವಿರೋಧಿ ಗುಣಗಳನ್ನು ಮೈಗೂಡಿಸಿಕೊಳ್ಳುವುದು ಸರಿಯಲ್ಲ. ಶಿಕ್ಷಕ ಬದುಕಿನ ಕಹಿಯನ್ನು ಮನದಾಳದಲ್ಲಿ ಉಳಿಸಿಕೊಂಡು ಕೇಡು ಬಯಸುವ ವ್ಯಕ್ತಿಯಾಗಬಾರದು. ಬದುಕಿನ ಸಿಹಿಯನ್ನು ಸಂತೋಷದಿಂದ ಹಂಚಿಕೊಳ್ಳುವ ಮನಸ್ಸು ಶಿಕ್ಷಕನದ್ದಾಗಿರಬೇಕು. ಅಗ್ರಹಾರ ಕೃಷ್ಣಮೂರ್ತಿ `ನನ್ನ ಮೇಷ್ಟ್ರು’ ಲೇಖನದಲ್ಲಿ ಆದರ್ಶ ಶಿಕ್ಷಕರಾಗಿ ಜಿ.ಎಸ್.ಶಿವರುದ್ರಪ್ಪನವರ ವ್ಯಕ್ತಿತ್ವವನ್ನು ಬಹಳ ಸುಂದರವಾಗಿ ಚಿತ್ರಿಸಿರುವರು. ಅಗ್ರಹಾರ ಕೃಷ್ಣಮೂರ್ತಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ ಅಂತಿಮ ವರ್ಷದಲ್ಲಿ ಓದುತ್ತಿದ್ದಾಗ ಒಂದು ಘಟನೆ ನಡೆಯಿತು. ಆಗ ಡಾ.ಶಿವರುದ್ರಪ್ಪ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿದ್ದ ಅವಧಿ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಸಂಬಂಧಿಸಿದಂತೆ ಅಗ್ರಹಾರ ಕೃಷ್ಣಮೂರ್ತಿ ಮತ್ತು ಜಿ.ಎಸ್.ಎಸ್ ನಡುವೆ ಸಣ್ಣ ಜಗಳವಾಯಿತು. ಶಿವರುದ್ರಪ್ಪನವರಿಗೆ ನೋವಾಗುವಂತೆ ಅಗ್ರಹಾರ ವರ್ತಿಸಿದರು. ಈ ಘಟನೆಯಿಂದ ಅಗ್ರಹಾರ ಕೃಷ್ಣಮೂರ್ತಿ ಎಂ.ಎ ಪದವಿ ಗಳಿಸುವುದಿಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಈ ಕುರಿತು  ಕೃಷ್ಣಮೂರ್ತಿ ಅವರಿಗೂ ಹೆದರಿಕೆ ಇತ್ತು. ಆದರೆ ಪರೀಕ್ಷೆಯ ಫಲಿತಾಂಶ ಬಂದಾಗ ಅವರು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದರು. ಅದಾದ ಎಷ್ಟೋ ತಿಂಗಳುಗಳ ನಂತರ ಕೃಷ್ಣಮೂರ್ತಿ ಗುರುಗಳಿಗೆ ಪತ್ರ ಬರೆದು ತಮ್ಮ ಅಂದಿನ ಅವಿವೇಕದ ವರ್ತನೆಯನ್ನು ಪ್ರಸ್ತಾಪಿಸಿ ಕ್ಷಮೆ ಕೇಳಿದ್ದರು. ಆಗ ಶಿವರುದ್ರಪ್ಪನವರಿಂದ ಬಂದ ಉತ್ತರ ಹೀಗಿತ್ತು `ನೀವು ನಿಮ್ಮ ವಿದ್ಯಾರ್ಥಿ ಜೀವನದ ಅವಿವೇಕದ ವರ್ತನೆಗಳ ಬಗ್ಗೆ ಪ್ರಸ್ತಾಪಿಸಿದ್ದಿರಿ. ನನಗೆ ಅವೆಲ್ಲಾ ನೆನಪಿನಲ್ಲೆ ಇಲ್ಲ. ನೀವು ಯಾವ ತಪ್ಪನ್ನೂ ಮಾಡಿಲ್ಲ. ಒಂದು ವಯಸ್ಸಿನಲ್ಲಿ ಒಂದೊಂದು ರೀತಿಯಿಂದ ನಡೆದು ಕೊಳ್ಳುವುದು ತೀರಾ ಸಹಜ. ವೈಪರಿತ್ಯಗಳು, ವೈವಿಧ್ಯತೆಗಳು ಇದ್ದರೇ ಅದು ಜೀವಂತಿಕೆಯ ಲಕ್ಷಣ’.

ಶಿಕ್ಷಕ ವೃತ್ತಿಯ ಘನತೆಯನ್ನು ಭೈರಪ್ಪನವರು ತಮ್ಮ ಆತ್ಮಕಥೆಯಲ್ಲಿ ವಿವರಿಸುವುದು ಹೀಗೆ ‘ಅಧ್ಯಾಪಕತನವೂ ಒಂದು ವೃತ್ತಿ ನಿಜ. ಬ್ಯಾಂಕ್ ನೌಕರನು, ರೈಲ್ವೆ ನೌಕರನು, ಫ್ಯಾಕ್ಟರಿ ಎಂಜಿನಿಯರನು ನನ್ನ ಕೆಲಸದ ವೇಳೆಯ ನಂತರ ನಾನೇನು ಮಾಡುತ್ತೇನೆಂದು ಕೇಳುವ ಅಧಿಕಾರ ನಿನಗಿಲ್ಲ ಎಂದರೂ ನಡೆದೀತು. ಆದರೆ ಇದೇ ಮಾತನ್ನು ಹೇಳುವ ಅಧಿಕಾರ ಅಧ್ಯಾಪಕನಿಗಿಲ್ಲ. ವಿದ್ಯಾರ್ಥಿಗಳಿಗೆ ಪರೋಕ್ಷವಾಗಿಯಾದರೂ ತಿಳಿದು ಅವರ ಚಾರಿತ್ರ್ಯಕ್ಕೆ ಕೆಟ್ಟ ಮಾದರಿಯಾಗುವ ಯಾವ ಕೆಲಸವನ್ನೂ ಖಾಸಗಿಯಲ್ಲಿ ಕೂಡ ಮಾಡುವುದು ಅಧ್ಯಾಪಕನಿಗೆ ಸಲ್ಲುವುದಿಲ್ಲ. ಅಂಥವನು ಆ ವೃತ್ತಿಯನ್ನು ಬಿಟ್ಟುಬಿಡಬೇಕು ಎಂದು ನಾನು ದೃಢವಾಗಿ ನಂಬಿದವನು. ಉಪಾಧ್ಯಾಯನ ಘನತೆ ಇರುವುದು ಅವನ ಸಂಬಳದಿಂದಲ್ಲ. ವಿದ್ವತ್ತು, ಚಾರಿತ್ರ್ಯದಿಂದ ಕೂಡಿದ ಸ್ವಾತಂತ್ರ್ಯ ಮತ್ತು ಬೋಧನಾ ಶಕ್ತಿಗಳಿಂದ’. 

ಇಂದು ಅಪ್ರಾಮಾಣಿಕರು ಮತ್ತು ಅನೀತಿವಂತರಿಂದ ಶಿಕ್ಷಕ ವೃತ್ತಿ ಸಮಾಜದಲ್ಲಿ ತನ್ನ ಮೊದಲಿನ ಗೌರವವನ್ನು ಕಳೆದುಕೊಳ್ಳುತ್ತಿದೆ. ಶಾಲೆಯಲ್ಲಿ ಪಾಠ ಮಾಡಬೇಕಾದ ಶಿಕ್ಷಕರು ಪಡೆಯುತ್ತಿರುವ ಅತ್ಯಾಕರ್ಷಕ ಸಂಬಳದ ಹೊರತಾಗಿಯೂ ಹಣಗಳಿಸುವ ಬೇರೆ ಬೇರೆ ದಂಧೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳೊಡನೆ ಅನುಚಿತವಾಗಿ ವರ್ತಿಸುತ್ತ ಶಿಕ್ಷಕನ ಸ್ಥಾನಕ್ಕೆ ಕಪ್ಪುಮಸಿ ಬಳಿಯುತ್ತಿರುವರು. ಆದರ್ಶ ಶಿಕ್ಷಕರು ಇಲ್ಲವೆಂದಲ್ಲ. ಆದರೆ ಅಂಥ ಶಿಕ್ಷಕರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿರುವುದು ಇವತ್ತಿನ ಶಿಕ್ಷಣ ಕ್ಷೇತ್ರದ ಬಹುಮುಖ್ಯ ಸಮಸ್ಯೆಯಾಗಿದೆ. 

-ರಾಜಕುಮಾರ ಕುಲಕರ್ಣಿ 


 


Friday, February 24, 2023

ಪ್ರಜಾವಾಣಿಯ ಕನ್ನಡ ಧ್ವನಿಯಲ್ಲಿ ನನ್ನ ಲೇಖನ 'ರಾಜಕಾರಣಕ್ಕೆ ಓದಿನ ದೀಕ್ಷೆಯಾಗಲಿ' ಕೇಳಿ

ಪ್ರಜಾವಾಣಿಯ ಸಂಗತ ಅಂಕಣದಲ್ಲಿ ಫೆಬ್ರುವರಿ ೨೪, ೨೦೨೩ ರಂದು ಪ್ರಕಟವಾದ ನನ್ನ ಲೇಖನ 'ರಾಜಕಾರಣಕ್ಕೆ ಓದಿನ ದೀಕ್ಷೆಯಾಗಲಿ' ಲೇಖನವನ್ನು ಪ್ರಜಾವಾಣಿಯ ಕನ್ನಡ ಧ್ವನಿಯಲ್ಲಿ ಕೇಳಿ (ಲೇಖನ ಪ್ರಕಟವಾದ ದಿನದಂದೇ ಪ್ರಜಾವಾಣಿ ವಾರ್ತೆಯಲ್ಲಿ ಬಿತ್ತರವಾಯಿತು)

Wednesday, February 1, 2023

ಹೊತ್ತಿಗೆ ಪ್ರಕಟಣೆಯ ಈ ಹೊತ್ತು

 




 (೭.೧೨.೨೦೨೨ ರ ಪ್ರಜಾವಾಣಿಯಲ್ಲಿ ಪ್ರಕಟ)

ಕನ್ನಡದಲ್ಲಿ ಪ್ರತಿವರ್ಷ ಅಸಂಖ್ಯಾತ ಪುಸ್ತಕಗಳು ಪ್ರಕಟಗೊಳ್ಳುತ್ತಿವೆ. ಈ ಮಾತಿಗೆ ಪತ್ರಿಕೆಗಳ ಪುರವಣಿಗಳಲ್ಲಿ ಪ್ರತಿವಾರ ಪ್ರಕಟವಾಗುವ ಹೊಸ ಪುಸ್ತಕಗಳ ಪಟ್ಟಿಯೇ ಪುರಾವೆ ಒದಗಿಸುತ್ತದೆ. ಪುಸ್ತಕಗಳ ಪ್ರಕಟಣೆ ಹೆಚ್ಚುತ್ತಿರುವುದಕ್ಕೆ ಪ್ರಕಾಶಕರ ಸಂಖ್ಯೆ ಹೆಚ್ಚುತ್ತಿರುವುದೇ ಮೂಲ ಕಾರಣವಾಗಿದೆ. ಪ್ರತಿವರ್ಷ ಹೊಸಬರು ಪ್ರಕಾಶನ ಕ್ಷೇತ್ರಕ್ಕೆ ಕಾಲಿಡುತ್ತಿರುವರು. ಪುಸ್ತಕಗಳ ಪ್ರಕಟಣೆಯಲ್ಲಿ ಆಶಾದಾಯಕ ಬೆಳವಣಿಗೆ ಗೋಚರಿಸುತ್ತಿರುವ ಈ ಹೊತ್ತಿನಲ್ಲಿ ಲೇಖಕರ ಸಮಸ್ಯೆಗಳತ್ತಲ್ಲೂ ಗಮನ ಹರಿಸಬೇಕಾಗಿದೆ. ಪ್ರಕಾಶಕರಿಂದ ಲೇಖಕರ ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಟಿಯಾಗುತ್ತಿದೆಯೇ ಎನ್ನುವುದೇ ಈ ಸಂದರ್ಭದ ಮೂಲಭೂತ ಪ್ರಶ್ನೆಯಾಗಿದೆ.

ಹೊಸ ಲೇಖಕನಾಗಿ ಸಾಹಿತ್ಯಲೋಕಕ್ಕೆ ಕಾಲಿಟ್ಟಿರುವ ಮಿತ್ರ ಇತ್ತೀಚಿಗೆ ನನ್ನನ್ನು ಪುಸ್ತಕ ಮಳಿಗೆಗೆ ಕರೆದೊಯ್ದಿದ್ದ. ಕೆಲವು ತಿಂಗಳುಗಳ ಹಿಂದೆ ಮಿತ್ರನ ಪುಸ್ತಕವನ್ನು ಪ್ರಕಟಿಸಿ ಬಿಡುಗಡೆಗೊಳಿಸಿದ್ದ ಪ್ರಕಾಶಕರ ಪುಸ್ತಕದಂಗಡಿ ಅದಾಗಿತ್ತು. ಆ ಅಂಗಡಿಯಲ್ಲಿ ತನ್ನ ಪ್ರಕಟಿತ ಪುಸ್ತಕವನ್ನು ನನಗೆ ತೋರಿಸಬೇಕೆಂಬ ಉಮೇದಿಯಿಂದ ಕರೆದೊಯ್ದ ಮಿತ್ರನಿಗೆ ಅಲ್ಲಿ ಅವನ ಪುಸ್ತಕ ಕಾಣಿಸದೆ ನಿರಾಸೆಯಾಯಿತು. ಪ್ರಖ್ಯಾತ ಸಾಹಿತಿಗಳ ಪುಸ್ತಕಗಳ ಸಾಲಿನಲ್ಲಿ ತನ್ನ ಪುಸ್ತಕ ಗೋಚರಿಸಬಹುದೆನ್ನುವ ಆತನ ನಿರೀಕ್ಷೆ ಹುಸಿಯಾಗಿ ಅವನ ಉತ್ಸಾಹಕ್ಕೆ ತಣ್ಣೀರೆರೆಚಿದಂತಾಯಿತು. ಮಳಿಗೆಯಲ್ಲಿದ್ದ ಕೆಲಸಗಾರರನ್ನು ಪ್ರಶ್ನಿಸಿದಾಗ ಅವರು ಮಾಲೀಕರ ಕಡೆ ಕೈತೋರಿಸಿದರು. ಮಾಲೀಕರು ಸಾರ್ವಜನಿಕ ಗ್ರಂಥಾಲಯಗಳಿಗೆ ಮತ್ತು ಕಾಲೇಜು ಗ್ರಂಥಾಲಯಗಳಿಗೆ ಪೂರೈಸಲೆಂದು ಪುಸ್ತಕ ಪ್ರಕಟಿಸಿದ್ದೆ ವಿನಾ ಮಳಿಗೆಯಲ್ಲಿಟ್ಟು ಮಾರಾಟಮಾಡಲಿಕ್ಕಲ್ಲ ಎಂದು ತೀಕ್ಷಣವಾಗಿ ಪ್ರತಿಕ್ರಿಯಿಸಿದರು. ತಾನು ಪ್ರಕಟಿಸಿದ ಪುಸ್ತಕಕ್ಕೆ ತನ್ನದೇ ಪುಸ್ತಕ ಮಳಿಗೆಯಲ್ಲಿ ಜಾಗ ಕೊಡದ ಪ್ರಕಾಶಕ ಅದು ಹೇಗೆ ನನ್ನ ಪುಸ್ತಕವನ್ನು ಅನೇಕ ಓದುಗರಿಗೆ ಮುಟ್ಟಿಸುತ್ತಾನೆ ಎನ್ನುವುದು ಬರಹಗಾರ ಮಿತ್ರನ ಪ್ರಶ್ನೆಯಾಗಿತ್ತು. 

ಪ್ರಕಾಶಕರ ಗೊಡವೆಯೇ ಬೇಡವೆಂದು ನನ್ನ ಇನ್ನೊರ್ವ ಮಿತ್ರ ಸ್ವತ: ಪ್ರಕಾಶಕರಾಗಿ ಪುಸ್ತಕ ಪ್ರಕಟಿಸಿರುವರು.  ನಲವತ್ತು ಸಾವಿರ ರೂಪಾಯಿಗಳನ್ನು ಮುದ್ರಕರಿಗೆ ಪಾವತಿಸಿ ಒಂದು ಸಾವಿರ ಪ್ರತಿಗಳನ್ನು ಪ್ರಕಟಿಸಿದರು. ಹತ್ತು ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ ಆಯೋಜಿಸಿದ್ದ ಪುಸ್ತಕ ಬಿಡುಗಡೆಯ ದಿನ ನೂರು ಪ್ರತಿಗಳು ಗೌರವ ಪ್ರತಿಯ ರೂಪದಲ್ಲಿ ಉಚಿತವಾಗಿ ವಿತರಣೆಯಾದವು. ಪರಿಚಯದ ಪುಸ್ತಕ ಮಾರಾಟಗಾರರನ್ನು ಸಂಪರ್ಕಿಸಿದಾಗ ಎರಡು ನೂರು ಪ್ರತಿಗಳು ಶೇಕಡಾ 20ರ ರಿಯಾಯಿತಿ ದರದಲ್ಲಿ ಮಾರಾಟವಾದವು. ಮೂರು ನೂರು ಪ್ರತಿಗಳನ್ನು ಸಾರ್ವಜನಿಕ ಗ್ರಂಥಾಲಯಕ್ಕೆ ಮಾರಾಟ ಮಾಡಿದರೂ ಆ ಹಣ ಇನ್ನೂ ಅವರ ಕೈಸೇರಿಲ್ಲ. ಈಗ ಸುಮಾರು ನಾಲ್ಕು ನೂರು ಪ್ರತಿಗಳು ಮಾರಾಟವಾಗದೆ ಅವರ ಬಳಿ ಉಳಿದುಕೊಂಡಿವೆ. ಒಂದು ಅಂದಾಜಿನ ಪ್ರಕಾರ ಈ ಪುಸ್ತಕ ಪ್ರಕಟಣೆಯಿಂದ ಅವರಿಗೆ 20,000 ರೂಪಾಯಿಗಳ ನಷ್ಟವಾಗಿದೆ. ಒಂದಿಷ್ಟು ಉತ್ತೇಜನ ದೊರೆತಿದ್ದರೆ ಬೇರೆ ಬೇರೆ ಲೇಖಕರ ಪುಸ್ತಕಗಳನ್ನು ಪ್ರಕಟಿಸುವ ಯೋಜನೆಯನ್ನು ಹಾಕಿಕೊಂಡಿದ್ದರು. ಆದರೆ ಎದುರಾದ ನಿರುತ್ಸಾಹ ಅವರನ್ನು ಶಾಶ್ವತವಾಗಿ ಪುಸ್ತಕ ಪ್ರಕಾಶನದಿಂದ ದೂರಾಗುವಂತೆ ಮಾಡಿತು. 

ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳು ಸ್ಥಾಪಿತ ಲೇಖಕರಿಗೆ ಮಣೆ ಹಾಕುತ್ತಿವೆಯೇ ವಿನಾ ಹೊಸ ಲೇಖಕರ ಪುಸ್ತಕಗಳನ್ನು ಪ್ರಕಟಿಸಲು ಮುಂದಾಗುತ್ತಿಲ್ಲ. ಹೊಸ ಲೇಖಕರ ಪುಸ್ತಕಗಳನ್ನು ಪ್ರಕಟಿಸಿ ಆರ್ಥಿಕವಾಗಿ ಕೈಸುಟ್ಟುಕೊಳ್ಳುವುದೇಕೆ ಎನ್ನುವ ಮನೋಭಾವ ಅವರದಾಗಿರಬಹುದು. ಕೆಲವು ಪ್ರಕಾಶಕರು ಈಗಾಗಲೇ ಪತ್ರಿಕೆಗಳಲ್ಲಿ ಪ್ರಕಟವಾದ ಬರಹ ಅಥವಾ ಕಥೆಗಳಾಗಿದ್ದರೆ ಪುಸ್ತಕ ಪ್ರಕಟಿಸಲು ಆಸಕ್ತಿ ತೋರಿಸುವುದಿಲ್ಲ. ಇನ್ನು ಕೆಲವು ಪ್ರಕಾಶಕರು ಪ್ರತಿವರ್ಷ ಅವರು ಆಯೋಜಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಆಯ್ಕೆಯಾಗುವ ಹಸ್ತಪ್ರತಿಗಳನ್ನು ಮಾತ್ರ ಪ್ರಕಟಿಸುವ ಯೋಜನೆ ಹಾಕಿಕೊಂಡಿರುತ್ತಾರೆ. ಮೂರ್ನಾಲ್ಕು ವರ್ಷಗಳಿಗಾಗುವಷ್ಟು ಕೆಲಸವಿದೆಯೆಂದು ಹೊಸ ಲೇಖಕರತ್ತ ಕಣ್ಣೆತ್ತಿಯೂ ನೋಡದ ಪ್ರಕಾಶಕರೂ ಇರುವರು. ಕೆಲವರಂತೂ ಹೊಸ ಲೇಖಕರಿಗೆ ಪ್ರತಿಕ್ರಿಯಿಸುವ ಗೋಜಿಗೇ ಹೋಗುವುದಿಲ್ಲ.  

ಇನ್ನು ಕೊಟ್ಟಿದ್ದನ್ನೆಲ್ಲ ಪ್ರಕಟಿಸುವ ಪ್ರಕಾಶಕರ ಸಂಖ್ಯೆಯೂ ಬಹಳಷ್ಟಿದೆ. ಇಂಥ ಪ್ರಕಾಶಕರ ದೃಷ್ಟಿಯಲ್ಲಿ ಪುಸ್ತಕ ಪ್ರಕಟಣೆ ಎನ್ನುವುದು ಸಂಖ್ಯಾತ್ಮಕ ಪ್ರಗತಿಯೇ ವಿನಾ ಗುಣಾತ್ಮಕ ಬೆಳವಣಿಗೆಯಲ್ಲ. ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತಾರೆ. ಒಂದೇ ದಿನ ಒಂದೇ ವೇದಿಕೆಯಲ್ಲಿ 100 ರಿಂದ 200 ಶೀರ್ಷಿಕೆಗಳ ಪುಸ್ತಕಗಳು ಬಿಡುಗಡೆಯಾಗುತ್ತವೆ. ಅದೆಷ್ಟೋ ಸಂದರ್ಭಗಳಲ್ಲಿ ಅತಿಥಿಗಳಾಗಿ ಆಗಮಿಸಿದ ವಿದ್ವಾಂಸರು ಸಂಖ್ಯೆಗಲ್ಲ ಗುಣಾತ್ಮಕತೆಗೆ ಆದ್ಯತೆ ನೀಡಿ ಎಂದು ವೇದಿಕೆಯಲ್ಲೆ ಕಿವಿಮಾತು ಹೇಳಿದ್ದುಂಟು. ಇಂಥ ಪ್ರಕಾಶಕರಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಮತ್ತು ಶಿಕ್ಷಣ ಸಂಸ್ಥೆಗಳ ಗ್ರಂಥಾಲಯಗಳೇ ಕೃಪಾಪೋಷಿತ  ಮಂಡಳಿಗಳಾಗಿವೆ. ಒಬ್ಬರೆ ಪ್ರಕಾಶಕರು ಬೇರೆ ಬೇರೆ ಪ್ರಕಾಶನ ಸಂಸ್ಥೆಗಳ ಹೆಸರುಗಳಲ್ಲಿ ಪುಸ್ತಕಗಳನ್ನು ಪ್ರಕಟಿಸಿ ಸಾರ್ವಜನಿಕ ಗ್ರಂಥಾಲಯಗಳಿಗೆ ಮಾರಾಟ ಮಾಡಿ ಧನ್ಯರಾಗುತ್ತಾರೆ. ಲೇಖಕರ ಪುಸ್ತಕಗಳು ಗ್ರಂಥಾಲಯಗಳಲ್ಲಿನ ಅಲ್ಮೆರಾಗಳಿಗೆ ಶೋಭೆ ತರುವ ಅಲಂಕಾರಿಕ ವಸ್ತುಗಳಾಗುತ್ತಿವೆ. ಇಲ್ಲಿ ನಿಜವಾದ ನಷ್ಟವಾಗುವುದು ಗುಣಾತ್ಮಕ ಪುಸ್ತಕಗಳ ಲೇಖಕರಿಗೆ.

ಇನ್ನೊಂದೆಡೆ ಓದುಗರು ಕನ್ನಡ ಪುಸ್ತಕಗಳ ಖರೀದಿಯಲ್ಲಿ ಧಾರಾಳತನ ತೋರಿಸುತ್ತಿಲ್ಲ. ಓದುಗರು ಅಪೇಕ್ಷಿಸುತ್ತಿರುವ ಅಧಿಕ ಪ್ರಮಾಣದ ರಿಯಾಯಿತಿ ಹೊಸ ಲೇಖಕರ ಪುಸ್ತಕಗಳ ಪ್ರಕಟಣೆಯ ಹಿನ್ನೆಡೆಗೆ ಕಾರಣವಾಗಿದೆ. ಹೆಚ್ಚಿನ ಓದುಗರು ಪುಸ್ತಕವನ್ನು ಅದರ ಪ್ರಕಟಿತ ಬೆಲೆಗೆ ಖರೀದಿಸುವ ಔದಾರ್ಯ ತೋರುತ್ತಿಲ್ಲ. ಇಂಗ್ಲಿಷ್ ಭಾಷೆಯ ಪುಸ್ತಕಗಳ ಮಾರಾಟದಲ್ಲಿನ ರಿಯಾಯಿತಿಯ ಧಾರಾಳತನವೇ ಕನ್ನಡ ಪುಸ್ತಕಗಳ ಮಾರಾಟಕ್ಕೆ ಉರುಳಾಗಿ ಪರಿಣಮಿಸಿದೆ. ಇಂಗ್ಲಿಷ್ ಭಾಷೆಯ ಪುಸ್ತಕಗಳನ್ನು ಖರೀದಿಸುವಾಗ ಸಿಗುತ್ತಿರುವ ಹೆಚ್ಚಿನ ರಿಯಾಯಿತಿಯನ್ನು ಓದುಗರು ಕನ್ನಡ ಪುಸ್ತಕಗಳನ್ನು ಖರೀದಿಸುವಾಗಲೂ ನಿರೀಕ್ಷಿಸುತ್ತಿರುವರು. ಈ ಕಾರಣದಿಂದಾಗಿ ಜನಪ್ರಿಯ ಲೇಖಕರ ಪುಸ್ತಕ ಪ್ರಕಟಣೆಯಲ್ಲಿನ ಪ್ರಕಾಶಕರ ಆಸಕ್ತಿ ಹೊಸ ಲೇಖಕರ ಪುಸ್ತಕಗಳ ಪ್ರಕಟಣೆಯಲ್ಲಿ ಕಾಣಿಸುತ್ತಿಲ್ಲ.

ಇಂಥ ಸನ್ನಿವೇಶದಲ್ಲಿ ಓದುಗರು ಪತ್ರಿಕೆಗಳಲ್ಲಿ ಪ್ರಕಟವಾಗುವ ವಿಮರ್ಶೆಗಳನ್ನು ಓದಿ ಹೊಸ ಲೇಖಕರ ಪುಸ್ತಕಗಳನ್ನು ಖರೀದಿಸುತ್ತಿರುವರು. ಪ್ರತಿವರ್ಷ ಪ್ರಕಟವಾಗುತ್ತಿರುವ ಎಲ್ಲ ಪುಸ್ತಕಗಳ ವಿಮರ್ಶೆಯಾಗುತ್ತಿದೆಯೇ ಎನ್ನುವ ಪ್ರಶ್ನೆ ಈ ಸಂದರ್ಭ ಎದುರಾಗುತ್ತದೆ. ಹಿರಿಯ ಸಾಹಿತಿ ಕೆ.ವಿ.ತಿರುಮಲೇಶ ಅವರು ಹೇಳಿದಂತೆ ಕೆಲವೇ ಪುಸ್ತಕಗಳ ವಿಮರ್ಶೆಯು ಅದು ಇಡೀ ಸಾಹಿತ್ಯ ಲೋಕದ ವಿಮರ್ಶೆಯಾಗಲಾರದು ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ. ಪರಿಸ್ಥಿತಿ ಹೀಗಿರುವಾಗ ಹೊಸ ಲೇಖಕರು ಬರವಣಿಗೆಯ ಕ್ಷೇತ್ರದಲ್ಲಿ ಕಾಲೂರಿ ನಿಲ್ಲಲು ಅಗತ್ಯವಾದ ಆಶಾದಾಯಕ ವಾತಾವರಣ ಕಾಣಿಸುತ್ತಿಲ್ಲ ಎನ್ನುವ ಮಾತನ್ನು ಬೇಸರದಿಂದ ಹೇಳಬೇಕಾಗಿದೆ.

-ರಾಜಕುಮಾರ ಕುಲಕರ್ಣಿ

Wednesday, January 4, 2023

ನನ್ನ ಲೇಖನ 'ಸಂಕಲ್ಪಿಸುವ ಮನಸ್ಸು ದೃಢವಾಗಿರಲಿ' ಲೇಖನವನ್ನು ಪ್ರಜಾವಾಣಿಯ ಕನ್ನಡ ಧ್ವನಿಯಲ್ಲಿ ಕೇಳಿ

ಪ್ರಜಾವಾಣಿಯ ಸಂಗತ ಅಂಕಣದಲ್ಲಿ ಜನವರಿ ೪, ೨೦೨೩ ರಂದು ಪ್ರಕಟವಾದ ನನ್ನ ಲೇಖನ 'ಸಂಕಲ್ಪಿಸುವ ಮನಸ್ಸು ದೃಢವಾಗಿರಲಿ' ಲೇಖನವನ್ನು ಪ್ರಜಾವಾಣಿಯ ಕನ್ನಡ ಧ್ವನಿಯಲ್ಲಿ ಕೇಳಿ (ಲೇಖನ ಪ್ರಕಟವಾದ ದಿನದಂದೇ ಪ್ರಜಾವಾಣಿ ವಾರ್ತೆಯಲ್ಲಿ ಬಿತ್ತರವಾಯಿತು) 

Monday, January 2, 2023

ಗ್ರಂಥಾಲಯ: ಓದುಗರ ಕೊರತೆಯೇಕೆ?




      (೭.೧೧.೨೦೨೨ ರ ಪ್ರಜಾವಾಣಿಯಲ್ಲಿ ಪ್ರಕಟ)

     ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ಗ್ರಂಥಾಲಯ ಸಪ್ತಾಹವನ್ನು ಆಚರಿಸಲಾಗುವುದು. ವಾರಪೂರ್ತಿ ಪುಸ್ತಕ ಪ್ರದರ್ಶನ, ಪರಿಣತರಿಂದ ವಿಶೇಷ ಉಪನ್ಯಾಸಗಳ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಇಂಥ ಕಾರ್ಯಕ್ರಮಗಳಿಂದ ಗ್ರಂಥಾಲಯದತ್ತ ಓದುಗರನ್ನು ಆಕರ್ಷಿಸುವ ಪ್ರಯತ್ನ ಸಾರ್ವಜನಿಕ ಗ್ರಂಥಾಲಯ ಇಲಾಖೆಯದ್ದು.  

    ಇದೇ ಸಂದರ್ಭ ಸಾರ್ವಜನಿಕ ಗ್ರಂಥಾಲಯಗಳಿಗೆ ಬರುವ ಓದುಗರ ಸಂಖ್ಯೆ ಏಕೆ ಇಳಿಮುಖವಾಗುತ್ತಿದೆ ಎಂದು ಯೋಚಿಸಬೇಕಿದೆ. ಸಾರ್ವಜನಿಕರಲ್ಲಿ ಓದುವ ಅಭಿರುಚಿ ಮತ್ತು ಹವ್ಯಾಸ ಕಡಿಮೆಯಾಗುತ್ತಿದೆ ಎಂದು ಆರೋಪಿಸುವುದರಲ್ಲಿ ಯಾವುದೇ ಹುರುಳಿಲ್ಲ. ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸರತಿಸಾಲಿನಲ್ಲಿ ನಿಂತು ಪುಸ್ತಕಗಳನ್ನು ಖರೀದಿಸುವ ಚಿತ್ರಣ ನಮ್ಮ ಕಣ್ಣೆದುರಿಗಿದೆ. ಅನೇಕ ಪ್ರಕಾಶನ ಸಂಸ್ಥೆಗಳು ಆನ್‍ಲೈನ್ ಮೂಲಕವೇ ಪುಸ್ತಕಗಳ ಮಾರಾಟದಿಂದ ಲಕ್ಷಾಂತರ ರೂಪಾಯಿಗಳ ವಹಿವಾಟು ಮಾಡುತ್ತಿವೆ. ಅದೆಷ್ಟೋ ಪ್ರಕಾಶನ ಸಂಸ್ಥೆಗಳು ತಮ್ಮ ಪುಸ್ತಕಗಳ ಮಾರಾಟಕ್ಕಾಗಿ ಪ್ರಜ್ಞಾವಂತ ಓದುಗರನ್ನು ನೆಚ್ಚಿಕೊಂಡಿವೆಯೇ ವಿನಾ ಸಾರ್ವಜನಿಕ ಗ್ರಂಥಾಲಯಗಳನ್ನಲ್ಲ. 

    ಸನ್ನಿವೇಶ ಹೀಗಿರುವಾಗ ಸಾರ್ವಜನಿಕ ಗ್ರಂಥಾಲಗಳಲ್ಲೇಕೆ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ ಎನ್ನುವ ಪ್ರಶ್ನೆ ಎದುರಾಗುತ್ತದೆ. ಈ ಪ್ರಶ್ನೆಗೆ ಉತ್ತರವಾಗಿ ಓದುಗರಿಗೆ ಗುಣಮಟ್ಟದ ಪುಸ್ತಕಗಳು ಗ್ರಂಥಾಲಯಗಳಲ್ಲಿ ಸಿಗುತ್ತಿಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ. ಈ ಆರೋಪ ಸತ್ಯಕ್ಕೆ ಹತ್ತಿರವಾಗಿದೆ. ಏಕೆಂದರೆ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಪುಸ್ತಕಗಳ ಖರೀದಿಯ ಒಟ್ಟು ವಿಧಾನವೇ ಅವೈಜ್ಞಾನಿಕವಾಗಿದೆ. ಪ್ರಕಾಶಕರಿಂದ ಇಂತಿಷ್ಟು ಪ್ರಮಾಣದಲ್ಲಿ ಪುಸ್ತಕಗಳ ಪ್ರತಿಗಳನ್ನು ಖರೀದಿಸಬೇಕೆಂಬ ನಿಯಮ ಚಾಲ್ತಿಯಲ್ಲಿದೆ. ಪ್ರತಿಪುಟಕ್ಕೆ ನಿರ್ಧಿಷ್ಟ ಬೆಲೆಯನ್ನು ನಿಗದಿಪಡಿಸಲಾಗಿದೆ. ಪ್ರಕಾಶಕರಿಗೆ ಉತ್ತೇಜನ ಕೊಡಲು ಜಾರಿಯಲ್ಲಿರುವ ಈ ವಿಧಾನದಿಂದಾಗಿ ಗುಣಮಟ್ಟದ ಪುಸ್ತಕಗಳ ಕೊರತೆ ಗ್ರಂಥಾಲಯಗಳಲ್ಲಿ ಎದ್ದುಕಾಣುತ್ತಿದೆ. 

    ಅದೆಷ್ಟೋ ಪ್ರಕಾಶಕರು ಸಾರ್ವಜನಿಕ ಗ್ರಂಥಾಲಯಗಳಿಗೆಂದೇ ಪುಸ್ತಕಗಳನ್ನು ಪ್ರಕಟಿಸುತ್ತಿರುವರು. ಒಬ್ಬರೇ ಪ್ರಕಾಶಕರು ಬೇರೆ ಬೇರೆ ಹೆಸರುಗಳ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಾಶನ ಸಂಸ್ಥೆಗಳನ್ನು ಹುಟ್ಟುಹಾಕಿ ಪುಸ್ತಕಗಳನ್ನು ಪ್ರಕಟಿಸುತ್ತಿರುವರು. ಕೆಲವು ವರ್ಷಗಳ ಹಿಂದೆ ಹಿಂದುಳಿದ ಭಾಗವೆಂಬ ಕಾರಣದಿಂದ ಹೈದರಾಬಾದ ಕರ್ನಾಟಕ ಭಾಗದ (ಈಗಿನ ಕಲ್ಯಾಣ ಕರ್ನಾಟಕ) ಪ್ರಕಾಶಕರಿಂದ ಪ್ರತಿ ಪುಸ್ತಕದ 1500 ಪ್ರತಿಗಳನ್ನು ಖರೀದಿಸಬೇಕೆನ್ನುವ ಆದೇಶವನ್ನು ಸರ್ಕಾರ ಹೊರಡಿಸಿತ್ತು. ಇದಕ್ಕಾಗಿ ಪ್ರಕಟಣಾ ವರ್ಷದ ನಿರ್ಬಂಧವನ್ನು ಕೂಡ ತೆಗೆದುಹಾಕಲಾಗಿತ್ತು. ಪರಿಣಾಮವಾಗಿ ಆ ಭಾಗದ ಪ್ರಕಾಶಕರು ತಮ್ಮ ಪ್ರಕಟಣೆಯ ಅಳಿದುಳಿದ ಸರಕನ್ನೆಲ್ಲ ಮಾರಾಟಮಾಡಿ ಧನ್ಯರಾದರು. 

    ಪರಿಸ್ಥಿತಿ ಹೀಗಿರುವಾಗ ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಅದೆಷ್ಟೋ ಪ್ರಕಾಶನ ಸಂಸ್ಥೆಗಳು ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಪೂರೈಸುವ ಪ್ರಕಾಶಕರ ಪಟ್ಟಿಯಿಂದ ಹೊರಗೇ ಉಳಿದಿವೆ. ಪುಸ್ತಕದಂತಹ ಸಂಸ್ಕೃತಿಗೆ ಈ ರೀತಿಯ ವಿನಾಯಿತಿ ಮತ್ತು ಔದಾರ್ಯವನ್ನು ತೋರಿಸುವ ಅಗತ್ಯವಿತ್ತೆ ಎನ್ನುವ ಸಂದೇಹ ಕಾಡದೆ ಇರದು. ಪುಸ್ತಕ ಪ್ರಕಟಣೆ ಎನ್ನುವುದು ಉದ್ಯಮವಲ್ಲ, ಅದೊಂದು ಮಾಧ್ಯಮ. ಪುಸ್ತಕ ಪ್ರಕಟಣೆಯ ಕೆಲಸವನ್ನು ಮಾಧ್ಯಮ ಎಂದು ಭಾವಿಸಿದವರು ಒಂದು ನೀತಿಯ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಾರೆ. ಪುಸ್ತಕ ಪ್ರಕಟಣೆಯನ್ನು ಪುಸ್ತಕೋದ್ಯಮವಾಗಿಸಿದವರು ನೀತಿಯ ಚೌಕಟ್ಟಿನಿಂದ ಹೊರಗುಳಿಯುತ್ತಾರೆ. ನೀತಿಯ ಚೌಕಟ್ಟಿನಲ್ಲಿರುವ ಪ್ರಕಾಶಕರಿಗೆ ಓದುಗರೇ ಅನ್ನದಾತರು. ಚೌಕಟ್ಟನ್ನು ಮೀರಿ ನಿಂತವರು ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಪೂರೈಸಿ ಕುಬೇರರಾಗುತ್ತಿರುವರು. 

    ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲೇ ಗ್ರಂಥಾಲಯಗಳು ಅವ್ಯವಸ್ಥೆಗಳ ಆಗರವಾಗಿರುವಾಗ ಇನ್ನು ಗ್ರಾಮೀಣ ಭಾಗದಲ್ಲಿನ ಗ್ರಂಥಾಲಯಗಳು ಚಿಂತಾಜನಕ ಸ್ಥಿತಿಯಲ್ಲಿವೆ. ಸ್ಥಳೀಯರನ್ನೆ ಗ್ರಂಥಾಲಯ ಮೇಲ್ವಿಚಾರಕರೆಂದು ನೇಮಕಮಾಡಿಕೊಳ್ಳುತ್ತಿರುವುದರಿಂದ ಅಲ್ಲಿನ ಗ್ರಂಥಾಲಯಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸ್ಥಳೀಯರ ಬೆಂಬಲವಿರುವುದರಿಂದ ಮೇಲ್ವಿಚಾರಕರು ಗ್ರಂಥಾಲಗಳಿಗೆ ಬೀಗಹಾಕಿ ತಮ್ಮ ಖಾಸಗಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿರುವರು. ಈ ಮೊದಲು ಗ್ರಾಮೀಣ ಗ್ರಂಥಾಲಯಗಳಲ್ಲಿ ಕಾರ್ಯನಿರ್ವಹಿಸುವ ಮೇಲ್ವಿಚಾರಕರಿಗಾಗಿ ಪುನಶ್ಚೇತನ ಶಿಬಿರಗಳನ್ನು ಆಯೋಜಿಸಲಾಗುತ್ತಿತ್ತು. ನಾನು ಕೆಲವು ಶಿಬಿರಗಳಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿದ್ದಿದೆ. ಮೇಲ್ವಿಚಾರಕರಲ್ಲಿ ವಿಷಯಜ್ಞಾನ ಮತ್ತು ತರಬೇತಿಯ ಕೊರತೆ ಎದ್ದು ಕಾಣುತ್ತಿತ್ತು. ಈಗ ಶಿಬಿರಗಳನ್ನು ಆಯೋಜಿಸುತ್ತಿಲ್ಲವೋ ಅಥವಾ ಸರ್ಕಾರದ ದಸ್ತಾವೇಜುಗಳ ಮಟ್ಟದಲ್ಲಿ ಮಾತ್ರ ದಾಖಲಾಗುತ್ತಿದೆಯೋ ತಿಳಿಯುತ್ತಿಲ್ಲ. 

    ಪುಸ್ತಕಗಳ ಓದಿನ ಸಂಸ್ಕೃತಿಯನ್ನು ಬಿತ್ತುವ ಕೆಲಸ ಆರೋಗ್ಯಕರ ಸಮಾಜದ ದೃಷ್ಟಿಯಿಂದ ಅತ್ಯಂತ ಮಹತ್ವದ್ದು. ಪುಸ್ತಕಗಳ ಮಹತ್ವವನ್ನು ನೊಬೆಲ ಪ್ರಶಸ್ತಿ ಪುರಸ್ಕೃತ ಕವಿ ಜೋಸೆಫ್ ಬ್ರಾಡ್‍ಸ್ಕಿ ಹೀಗೆ ಹೇಳಿರುವರು-‘ನಾವು ನಮ್ಮ ನಾಯಕರುಗಳನ್ನು ರಾಜಕೀಯ ಕಾರ್ಯತಂತ್ರಕ್ಕಿಂತ ಅವರ ಓದಿನ ಅನುಭವವನ್ನಾಧರಿಸಿ ಆಯ್ಕೆ ಮಾಡಿದ್ದೆ ಆಗಿದ್ದಲ್ಲಿ ಈಗ ಭೂಮಿಯ ಮೇಲಿರುವ ದು:ಖಕ್ಕಿಂತ ಅತ್ಯಂತ ಕಡಿಮೆ ದು:ಖವಿರುತ್ತಿತ್ತು’. ಈ ಮಾತನ್ನು ಅವರು ನೊಬೆಲ್ ಪ್ರಶಸ್ತಿ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ಹೇಳಿರುವರು. ಈ ನಡುವೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಪುಸ್ತಕಗಳ ಡಿಜಿಟಲೀಕರಣಕ್ಕೆ ಮುಂದಾಗಿದೆ. ಡಿಜಿಟಲೀಕರಣದಿಂದ ಪುಸ್ತಕಗಳನ್ನು ಅಸಂಖ್ಯಾತ ಓದುಗರಿಗೆ ತಲುಪಿಸಬಹುದು ಎನ್ನುವ ನಿರ್ಧಾರಕ್ಕೆ ಬರುವುದು ತಪ್ಪು ನಿರ್ಣಯವಾಗುತ್ತದೆ. ಜೊತೆಗೆ ಡಿಜಿಟಲೀಕರಣಗೊಳ್ಳುತ್ತಿರುವ ಪುಸ್ತಕಗಳು ಯಾವುವು ಮತ್ತು ಯಾವ ವಯೋಮಾನದ ಓದುಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಯೋಚನೆಮಾಡಬೇಕಾಗಿದೆ. ಇಲಾಖೆಯ ಜಾಲತಾಣದ ಮುಖಪುಟವನ್ನು ಆಕರ್ಷಣೀಯಗೊಳಿಸಿದ ಮಾತ್ರಕ್ಕೆ ಡಿಜಿಟಲೀಕರಣದ ಕಾರ್ಯವನ್ನು ಸಮರ್ಥಿಸಿಕೊಂಡಂತಾಗುವುದಿಲ್ಲ. ಒಟ್ಟಾರೆ ಇಲಾಖೆಯ ಪ್ರಯತ್ನ ‘ಟೊಳ್ಳುಗಟ್ಟಿ’ಯಂತಾಗಬಾರದು. ಡಿಜಿಟಲೀಕರಣಕ್ಕೆ ಖರ್ಚಾಗುವ ಹಣವನ್ನೇ ಯೋಗ್ಯ ಗುಣಮಟ್ಟದ ಪುಸ್ತಕಗಳ ಖರೀದಿಗಾಗಿ ವಿನಿಯೋಗಿಸಿದರೆ ಗ್ರಂಥಾಲಯಗಳನ್ನು ಪುನಶ್ಚೇತನಗೊಳಿಸಿದಂತಾಗುತ್ತಿತ್ತು. 

    ಒಂದುಕಡೆ ಅತಿಯಾದ ಮೊಬೈಲ್ ಬಳಕೆಯಿಂದ ಪುಸ್ತಕಗಳ ಓದಿನಿಂದ ವಿಮುಖರಾಗುತ್ತಿರುವ ಯುವಜನಾಂಗ. ಇನ್ನೊಂದುಕಡೆ ಗ್ರಂಥಾಲಯಗಳನ್ನು ತಮ್ಮ ಹೊತ್ತುಗಳೆಯುವ ತಾಣಗಳೆಂದು ಭಾವಿಸಿರುವ ವಯೋವೃದ್ಧರು. ಮತ್ತೊಂದುಕಡೆ ಸಂಚಾರಿ ಗ್ರಂಥಾಲಯ ಸೇವೆ ಸ್ಥಗಿತಗೊಂಡು ಧಾರಾವಾಹಿಗಳ ವೀಕ್ಷಕರಾಗಿ ಬದಲಾಗಿರುವ ಮನೆಯ ಗೃಹಿಣಿಯರು. ಈ ಎಲ್ಲರ ನಡುವೆ ಪುಸ್ತಕ ಮಳಿಗೆಗಳೇ ತಮ್ಮ ಓದಿನ ಶಮನಕ್ಕಿರುವ ಏಕೈಕ ಪರ್ಯಾಯಮಾರ್ಗವೆಂದು ಪುಸ್ತಕಗಳನ್ನು ಖರೀದಿಸಿ ಓದುತ್ತಿರುವ ಓದುಗರು. ಹೀಗೆ ಸಾರ್ವಜನಿಕ ಗ್ರಂಥಾಲಯಗಳ ಓದುಗ ವರ್ಗ ವಿಭಿನ್ನ ಕವಲುಗಳಾಗಿ ಒಡೆದುಹೋಗಿದೆ. ಇಂಥ ಸನ್ನಿವೇಶದಲ್ಲಿ ಪುಸ್ತಕಗಳ ಓದಿನ ಸಂಸ್ಕೃತಿಯನ್ನು ಬಿತ್ತಿ ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಗ್ರಂಥಾಲಯ ಇಲಾಖೆ ಮಹತ್ವದ ಪಾತ್ರ ನಿರ್ವಹಿಸಬೇಕಿದೆ. ಕೊನೆಗೂ ಇಲಾಖೆ ಉತ್ತರದಾಯಿಯಾಗಿರಬೇಕಾದದ್ದು ತೆರಿಗೆ ಕಟ್ಟುತ್ತಿರುವ ಸಾರ್ವಜನಿಕರಿಗೆ ಎನ್ನುವ ಸತ್ಯ ಅರಿವಾಗಬೇಕು. 

-ರಾಜಕುಮಾರ ಕುಲಕರ್ಣಿ