Wednesday, August 5, 2020

ಮನದ ಬೆಸುಗೆಗೇಕೆ ಪ್ರತಿಷ್ಠೆಯ ಗೊಡವೆ?

       




(ದಿನಾಂಕ ೧೪.೦೭.೨೦೨೦ ರ ಪ್ರಜಾವಾಣಿ ಪತ್ರಿಕೆಯ ಸಂಗತ ಅಂಕಣದಲ್ಲಿ ಪ್ರಕಟ)

ಕೊರೊನಾ ವೈರಾಣು ತಂದೊಡ್ಡಿರುವ ಆತಂಕದ ಕಾರಣ ಬಾಗಲಕೋಟ ಜಿಲ್ಲೆಯಲ್ಲಿ ಈ ಸಂದರ್ಭ ಸಾರ್ವಜನಿಕ ಸ್ಥಳಗಳಲ್ಲಿ ಮದುವೆ ಮತ್ತಿತರ ಖಾಸಗಿ ಕಾರ್ಯಕ್ರಮಗಳನ್ನು ನಿಷೇಧಿಸಿರುವ ಜಿಲ್ಲಾಡಳಿತ ರಿಜಿಸ್ಟರ್ ಮದುವೆಗೆ ಮಾತ್ರ ಅನುಮತಿಯನ್ನು ನೀಡಿದೆ. ಈ ಮೊದಲು ಮದುವೆ ಇತ್ಯಾದಿ ಕಾರ್ಯಕ್ರಮಗಳಲ್ಲಿ 50 ಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವಂತಿಲ್ಲ ಎನ್ನುವ ಆದೇಶ ಜಾರಿಯಲ್ಲಿದ್ದಾಗೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಕೋವಿಡ್ ರೋಗದ ವ್ಯಾಪಕ ವಿಸ್ತರಣೆಗೆ ಕಾರಣವಾಗುತ್ತಿರುವುದರಿಂದ ಈಗ ಜಿಲ್ಲಾಡಳಿತ ಈ ನಿರ್ಣಯವನ್ನು ಕೈಗೊಂಡಿದೆ. ಜೊತೆಗೆ ನಾಮಕರಣ, ಸೀಮಂತದಂಥ ಕಾರ್ಯಕ್ರಮಗಳನ್ನು ಸಾರ್ವಜನಿಕ ಸಭಾಗೃಹಗಳಲ್ಲಿ ಆಚರಿಸುವುದಕ್ಕೆ ತಡೆಯೊಡ್ಡಿದೆ. ಸರ್ಕಾರದ ಈ ಕ್ರಮ ಸ್ವಾಗತಾರ್ಹ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಹೊತ್ತಿನಲ್ಲೇ ಕೆಲವರು ಈ ಕ್ರಮವನ್ನು ಟೀಕಿಸುತ್ತಿರುವುದು ಸಂಕುಚಿತ ಮನಸ್ಸುಗಳಿಗೆ ಹಿಡಿದ ಕೈಗನ್ನಡಿಯಾಗಿದೆ.

    ಮದುವೆ ಎನ್ನುವುದು ಎರಡು ಮನಸ್ಸುಗಳ ಬೆಸುಗೆ ಮತ್ತು ಎರಡು ಕುಟುಂಬಗಳ ನಡುವಣ ಹೊಸ ಸಂಬಂಧವೊಂದರ ಚಿಗುರೊಡೆಯುವಿಕೆ. ಅದೊಂದು ಎರಡು ಕುಟುಂಬಗಳಿಗೆ ಸಂಬಂಧಿಸಿದ ಖಾಸಗಿ ಕಾರ್ಯಕ್ರಮವೇ ವಿನ: ಅದೇನು ಸಾರ್ವಜನಿಕ ಕಾರ್ಯಕ್ರಮವಲ್ಲ. ಕುವೆಂಪು ಮದುವೆಯ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ತಮ್ಮ ಮದುವೆಯ ಸಂದರ್ಭದಲ್ಲಿ ಮಂತ್ರಮಾಂಗಲ್ಯ ಪದ್ಧತಿಗೆ ನಾಂದಿ ಹಾಡಿದರು ಮತ್ತು ತಮ್ಮ ಮಕ್ಕಳ ವಿವಾಹ ಸಂದರ್ಭದಲ್ಲೂ ಅದೇ ವಿಧಾನವನ್ನು ಅನುಸರಿಸಿದರು. ಮದುವೆಯಂಥ ಖಾಸಗಿ ಕಾರ್ಯಕ್ರಮದಲ್ಲಾಗುವ ದುಂದುವೆಚ್ಚವನ್ನು ನಿಯಂತ್ರಿಸುವುದೇ ಈ ಮಂತ್ರಮಾಂಗಲ್ಯ ವಿಧಾನದ ಹಿಂದಿನ ಆಶಯವಾಗಿತ್ತು. ಕುವೆಂಪು ಅವರ ಅನೇಕ ವಿದ್ಯಾರ್ಥಿಗಳು ಮತ್ತು ಅಭಿಮಾನಿಗಳು ಇಂಥ ಸರಳ ವಿಧಾನವನ್ನು ಅನುಸರಿಸಿದ್ದು ಅದೊಂದು ಬಹುಮುಖ್ಯವಾದ ಚಾರಿತ್ರಿಕ ಘಟನೆ ಎನ್ನಬಹುದು. ಉತ್ತರ ಕರ್ನಾಟಕದ ಹಲವು ಮಠಗಳಲ್ಲಿ ಮದುವೆಯ ಸಂದರ್ಭ ಅಕ್ಕಿಕಾಳುಗಳನ್ನು ಅಕ್ಷತೆಯ ರೂಪದಲ್ಲಿ ವಧು ವರರ ಮೇಲೆ ಪ್ರೋಕ್ಷಿಸುವ  ಬದಲು ಹೂವಿನ ಎಸಳುಗಳನ್ನು ಪ್ರೋಕ್ಷಿಸುವ  ರೂಢಿಯನ್ನು ಅನುಸರಿಸುತ್ತಿರುವುದು ಒಂದರ್ಥದಲ್ಲಿ ಆಹಾರ ಪದಾರ್ಥವೊಂದು ಅನಾವಶ್ಯಕವಾಗಿ ವ್ಯಯವಾಗುವುದನ್ನು ತಡೆಗಟ್ಟುವ ಒಂದು ಉತ್ತಮ ಬೆಳವಣಿಗೆ.

           ಇವತ್ತು ಸಮಾಜದಲ್ಲಿ ಮದುವೆ ಎನ್ನುವುದು ಅದೊಂದು ಪ್ರತಿಷ್ಠೆಯ ಸಂಗತಿಯಾಗಿದೆ. ಐಷಾರಾಮಿ ಕಲ್ಯಾಣ ಮಂಟಪ, ವಿದ್ಯುದ್ದೀಪಗಳ ಅಲಂಕಾರ, ಆಕಾಶದಲ್ಲಿ ಬಾಣಬಿರುಸುಗಳ ಚಿತ್ತಾರ, ಕಿವಿಗಡಚಿಕ್ಕುವ ವಾದ್ಯಮೇಳ, ಹಲವು ಬಗೆಯ ಖಾದ್ಯಗಳ ತಯ್ಯಾರಿ, ಊಟದ ನಂತರ ಹಣ್ಣು, ಐಸ್‍ಕ್ರೀಮ್, ಬೀಡಾಗಳ ವಿತರಣೆ ಹೀಗೆ ಲಕ್ಷ ಲಕ್ಷ ರೂಪಾಯಿಗಳನ್ನು ಖರ್ಚುಮಾಡಿದಾಗಲೇ ಅದೊಂದು ಮದುವೆ ಮತ್ತು ಗಂಡು-ಹೆಣ್ಣಿನ ದಾಂಪತ್ಯಕ್ಕೆ ಸಮಾಜದ ಒಪ್ಪಿಗೆಯ ಮುದ್ರೆ ಲಭ್ಯವಾದಂತೆ ಎನ್ನುವ ಭಾವನೆ ಅನೇಕ ತಂದೆ ತಾಯಿಗಳಲ್ಲಿ ಮನೆಮಾಡಿದೆ. ಇನ್ನು ಕೆಲವರಿಗೆ ಮದುವೆ ಎನ್ನುವುದು ಅದೊಂದು ಪ್ರತಿಷ್ಠೆಯ ಮತ್ತು ಗೌರವದ ಸಂಕೇತ. ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಮದುವೆ ಮಾಡಿದಾಗಲೇ ಸಮಾಜದಲ್ಲಿ ತಮ್ಮ ಪ್ರತಿಷ್ಠೆ ಹೆಚ್ಚುವುದೆನ್ನುವ ಮನೋಭಾವ. ಸಮಾಜದಲ್ಲಿ ತಮ್ಮ ಶ್ರೀಮಂತಿಕೆಯನ್ನು ಪ್ರದರ್ಶಿಸಿ ಜನರ ದೃಷ್ಟಿಯಲ್ಲಿ ಪ್ರತಿಷ್ಠಿತರಾಗಿ ಮೆರೆಯಲು ಕೆಲವರು ಈ ಮದುವೆಯ ದುಂದುವೆಚ್ಚಕ್ಕೆ ಮುಂದಾಗುತ್ತಾರೆ. ಅಚ್ಚರಿಯ ಸಂಗತಿ ಎಂದರೆ ಈಗೀಗ ಮದುವೆ ಮಾತ್ರವಲ್ಲದೆ ನಿಶ್ಚಿತಾರ್ಥ, ನಾಮಕರಣ, ಸೀಮಂತ, ಹುಟ್ಟುಹಬ್ಬದಂಥ ಕಾರ್ಯಕ್ರಮಗಳನ್ನು ಕೂಡ ಐಷಾರಾಮಿ ಕಲ್ಯಾಣ ಮಂಟಪಗಳಲ್ಲಿ ಆಚರಿಸಲಾಗುತ್ತಿದೆ. ವೈಕುಂಠ ಸಮಾರಾಧನೆಯಂಥ ಶೋಕಕ್ಕೂ ಕಲ್ಯಾಣ ಮಂಟಪಗಳು ವೇದಿಕೆಯಾಗುತ್ತಿವೆ.

    ಈ ವರ್ಷದ ಆರಂಭದ ತಿಂಗಳಲ್ಲಿ ನನ್ನ ಪರಿಚಿತರ ಒಂದು ವರ್ಷದ ಮಗುವಿನ ಮೊದಲ ಹುಟ್ಟು ಹಬ್ಬವಿತ್ತು. ನಗರದ ಭವ್ಯ ಹೋಟೆಲ್ ಒಂದರಲ್ಲಿ ಏರ್ಪಡಿಸಿದ್ದ ಆ ಔತಣಕೂಟಕ್ಕೆ ಸರಿಸುಮಾರು 500 ಜನರನ್ನು ಆಹ್ವಾನಿಸಿದ್ದರು. ಅವರೇ ಹೇಳಿದಂತೆ ಅಲ್ಲಿ ಪ್ರತಿ ಊಟಕ್ಕೆ ಸುಮಾರು 300 ರೂಪಾಯಿಗಳ ಬೆಲೆಯಿದ್ದು ಒಟ್ಟಾರೆ ಆ ದಿನದ ಎರಡು ಗಂಟೆಗಳ ಔತಣಕೂಟಕ್ಕೆ ಏನಿಲ್ಲವೆಂದರೂ ಎರಡು ಲಕ್ಷಕ್ಕೂ ಹೆಚ್ಚು ಹಣ ಖರ್ಚಾಗಿತ್ತು. ಊಟದ ನಂತರ ಆಹ್ವಾನಿತ ಅತಿಥಿಗಳಿಗೆ ಹೈದರಾಬಾದಿನಿಂದ ಕರೆತಂದ ಸುಂದರ ತರುಣಿ ಬೀಡಾ ತಯ್ಯಾರಿಸಿ ಕೊಡುತ್ತಿದ್ದ ದೃಶ್ಯ ನಯನ ಮನೋಹರವಾಗಿತ್ತು. ಅತ್ಯಂತ ಸಣ್ಣ ಊರಾಗಿರುವುದರಿಂದ ಇಲ್ಲಿ ಇದಕ್ಕಿಂತ ಹೆಚ್ಚು ಅದ್ದೂರಿಯಾಗಿ ತಮ್ಮ ಮಗನ ಹುಟ್ಟುಹಬ್ಬವನ್ನು ಆಚರಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಕೊರಗು ಪಾಲಕರದಾಗಿತ್ತು. ಇನ್ನು ಅಚ್ಚರಿಯ ಸಂಗತಿ ಎಂದರೆ ಆಹ್ವಾನ ಪತ್ರದ ಹೊರತಾಗಿಯೂ ದಿನಪತ್ರಿಕೆಗಳಲ್ಲಿ ಮತ್ತು ಟಿ.ವಿ ಚಾನೆಲ್‍ಗಳಲ್ಲಿ ಆಹ್ವಾನ ಪತ್ರ ಪ್ರಕಟವಾಗುವುದರ ಜೊತೆಗೆ ನಗರದ ಪ್ರಮುಖ ಸ್ಥಳಗಳಲ್ಲಿ ಮಗುವಿನ ಭಾವಚಿತ್ರವಿರುವ ಫ್ಲೆಕ್ಸ್‍ಗಳನ್ನೂ ತೂಗುಹಾಕಿದ್ದರು.

    ಈ ರೀತಿ ಖಾಸಗಿ ಕಾರ್ಯಕ್ರಮಗಳನ್ನು ಸಾರ್ವಜನಿಕವಾಗಿ ಲಕ್ಷಾಂತರ ರೂಪಾಯಿಗಳನ್ನು ಖರ್ಚುಮಾಡಿ ಆಚರಿಸುವಾಗ ಅದರಿಂದಾಗುವ ಸಮಸ್ಯೆಗಳ ಕುರಿತು ನಾವು ಯೋಚಿಸಬೇಕು. ಇಂಥ ಕಾರ್ಯಕ್ರಮಗಳಲ್ಲಿ ನೀರು, ವಿದ್ಯುತ್, ಆಹಾರ ವ್ಯಯವಾಗುವುದು ಸರ್ವೇಸಾಮಾನ್ಯ. ಹಾಗೆಂದು ತಮ್ಮ ಖಾಸಗಿ ಕಾರ್ಯಕ್ರಮಗಳನ್ನು ಸಾರ್ವಜನಿಕವಾಗಿ ಆಚರಿಸುತ್ತಿರುವ ಕುಟುಂಬ ವರ್ಗದವರು ನಾವು ಪರ್ಯಾಯವಾಗಿ ಹಣವನ್ನು ಸಂದಾಯ ಮಾಡುತ್ತಿದ್ದೇವೆ ಎಂದು ವಾದಿಸಬಹುದು. ನೆನಪಿರಲಿ ನೀರು, ವಿದ್ಯುತ್, ಆಹಾರ ಇದೆಲ್ಲ ರಾಷ್ಟ್ರದ ಸಂಪತ್ತು. ಹಣವಿದೆ ಎಂದ ಮಾತ್ರಕ್ಕೆ ಇದನ್ನೆಲ್ಲ ಅತಿಯಾದ ಪ್ರಮಾಣದಲ್ಲಿ ಉಪಯೋಗಿಸುವ ಅಧಿಕಾರ ನಮಗಿಲ್ಲ. ರಾಷ್ಟ್ರದ ಈ ನೈಸರ್ಗಿಕ ಸಂಪತ್ತಿನ ಮೇಲೆ ಎಲ್ಲರಿಗೂ ಸಮಾನವಾದ ಅಧಿಕಾರವಿದೆ ಮತ್ತು ಅದು ಪ್ರತಿಯೊಬ್ಬರಿಗೂ ಲಭ್ಯವಾಗಬೇಕು.

      ಇದೇ ಸಂದರ್ಭ ಖಾಸಗಿ ಕಾರ್ಯಕ್ರಮಗಳನ್ನು ದುಂದುವೆಚ್ಚ ಮಾಡಿ ಸಾರ್ವಜನಿಕವಾಗಿ ಆಚರಿಸಿಕೊಳ್ಳುತ್ತಿರುವ ನಾವು ಸಾರ್ವತ್ರಿಕವಾಗಿ ಆಚರಿಸಬೇಕಾದ ಕಾರ್ಯಕ್ರಮಗಳನ್ನೇಕೆ ವೈಯಕ್ತಿಕವಾಗಿಸುತ್ತಿದ್ದೇವೆ? ಎನ್ನುವ ಪ್ರಶ್ನೆ ಎದುರಾಗುತ್ತದೆ.  ಗಾಂಧಿ ಜಯಂತಿ, ಅಂಬೇಡ್ಕರ್ ಜಯಂತಿ, ರೈತರ ದಿನ, ಸ್ವಾತಂತ್ರ್ಯ ದಿನ, ಗಣರಾಜ್ಯ ದಿನ ಇಂಥ ಯಾವ ದಿನಗಳಲ್ಲಿ ನಾವುಗಳೆಲ್ಲ ಸಾಮೂಹಿಕವಾಗಿ ಪಾಲ್ಗೊಳ್ಳುತ್ತಿದ್ದೇವೆ ಎಂದು ನಮ್ಮನ್ನೆ ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ. ನಮ್ಮ ಕೌಟಂಬಿಕ ವ್ಯಾಪ್ತಿಗೆ ಮಾತ್ರ ಸೀಮಿತವಾಗಿರಬೇಕಾದ ಕಾರ್ಯಕ್ರಮಗಳನ್ನು ಅತ್ಯಂತ ಉಮೇದಿಯಿಂದ ಸಾರ್ವಜನಿಕವಾಗಿ ಆಚರಿಸಿಕೊಳ್ಳುವ ಅನೇಕರಿಗೆ ಸ್ವಾತಂತ್ರ್ಯ ದಿನದಂದು ಕಡ್ಡಾಯವಾಗಿ ಧ್ವಜಾರೋಹಣ ಸಮಾರಂಭದಲ್ಲಿ ಪಾಲ್ಗೊಳ್ಳುವ ಕನಿಷ್ಠ ಪ್ರಜ್ಞೆಯೂ ಇರುವುದಿಲ್ಲ. ಅಕ್ಟೋಬರ್ 2 ದೇಶ ಕಂಡ ಪ್ರಾಮಾಣಿಕ ಪ್ರಧಾನ ಮಂತ್ರಿ ಲಾಲಬಹಾದ್ದೂರ ಶಾಸ್ತ್ರಿ ಅವರ ಜನ್ಮದಿನವೆಂದು ಅದೆಷ್ಟು ಜನರಿಗೆ ಗೊತ್ತಿದೆ?. ಸಿನಿಮಾ ಜಗತ್ತಿನ ನಟನ ಹುಟ್ಟುಹಬ್ಬದಂದು ಆಳೆತ್ತರದ ಕಟೌಟ್ ನಿಲ್ಲಿಸಿ ಕ್ಷೀರಾಭಿಷೇಕ ಮಾಡುವ ನಮಗೆ ಜನೆವರಿ 30 ರಂದು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ವೀರಮರಣವನ್ನಪ್ಪಿದ ಹುತಾತ್ಮರನ್ನು ಸ್ಮರಿಸಿಕೊಳ್ಳುವ ದಿನವೆಂದು ನೆನಪಿಗೇ ಬರುವುದಿಲ್ಲ. 

     ಕೊರೊನಾ ಎಲ್ಲ ಖಾಸಗಿ ಆಚರಣೆಗಳ ದುಂದುವೆಚ್ಚಕ್ಕೆ ಕಡಿವಾಣ ಹಾಕಿದೆ. ಈ ಅವಧಿಯಲ್ಲಿ ಸಾರ್ವಜನಿಕರು ತಮ್ಮ ತಮ್ಮ ಕುಟುಂಬಗಳ ಖಾಸಗಿ ಕಾರ್ಯಕ್ರಮಗಳನ್ನು ಕುಟುಂಬ ವರ್ಗಕ್ಕಷ್ಟೆ ಸೀಮಿತಗೊಳಿಸಿಕೊಳ್ಳುತ್ತಿರುವರು. ಈ ಅವಧಿಯಲ್ಲಿ ಯಾವ ಸಿನಿಮಾ ಕಲಾವಿದರ ಮತ್ತು ರಾಜಕಾರಣಿಗಳ ಹುಟ್ಟುಹಬ್ಬಗಳನ್ನು ಅವರ ಅಭಿಮಾನಿಗಳು ಸಾರ್ವಜನಿಕವಾಗಿ ಆಚರಿಸಲಿಲ್ಲ ಮತ್ತು ಕಟೌಟ್‍ಗಳ ಮೇಲೆ ಸುರಿಯಬೇಕಿದ್ದ ಲಕ್ಷಾಂತರ ಲೀಟರ್‍ಗಳಷ್ಟು ಹಾಲು ವ್ಯರ್ಥವಾಗಿ ಹಾಳಾಗುವುದು ತಪ್ಪಿತು. ಕೊರೊನಾ ವೈರಾಣು ಸೃಷ್ಟಿಸಿದ ಆತಂಕದ ಪರಿಣಾಮ ಖಾಸಗಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ಅರಿವು ಸಾರ್ವಜನಿಕರಲ್ಲಿ ಮೂಡಿದೆ. ಆದರೆ ಆ ಅರಿವು ಈ ಲಾಕ್‍ಡೌನ್ ಅವಧಿಗೆ ಮಾತ್ರ ಸೀಮಿತವಾಗದೆ ಭವಿಷ್ಯದಲ್ಲೂ ಸದಾಕಾಲ ನಮ್ಮೊಳಗಿರಬೇಕು.  
---000---

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ