Thursday, December 22, 2022

ಪ್ರಜಾವಾಣಿ ವಾರ್ತೆಯಲ್ಲಿ ನನ್ನ ಲೇಖನ 'ವೃತ್ತಿಗೌರವ ಮತ್ತು ಅನುಚಿತ ವರ್ತನೆ' ಕೇಳಿ

ಪ್ರಜಾವಾಣಿ ಪತ್ರಿಕೆಯಲ್ಲಿ ದಿನಾಂಕ ೨೨.೧೨.೨೦೨೨ ರಂದು ಪ್ರಕಟವಾದ ನನ್ನ ಲೇಖನ 'ವೃತ್ತಿಗೌರವ ಮತ್ತು ಅನುಚಿತ ವರ್ತನೆ' ಅದೇ ದಿನ ಪ್ರಜಾವಾಣಿಯ ಕನ್ನಡ ಧ್ವನಿಯಲ್ಲಿ (ಪ್ರಜಾವಾಣಿ ವಾರ್ತೆ) ಬಿತ್ತರವಾಯಿತು. -ರಾಜಕುಮಾರ ಕುಲಕರ್ಣಿ

Tuesday, December 13, 2022

ಪ್ರಜಾವಾಣಿ ವಾರ್ತೆಯಲ್ಲಿ ನನ್ನ ಲೇಖನ 'ಪಯಣ ಪಥದ ಪಥಿಕರಾಗಿ' ಕೇಳಿ

 ಪ್ರಜಾವಾಣಿ ವಾರ್ತೆಯಲ್ಲಿ ನನ್ನ ಲೇಖನ 'ಪಯಣ ಪಥದ ಪಥಿಕರಾಗಿ' 

-ರಾಜಕುಮಾರ ಕುಲಕರ್ಣಿ 



ಪ್ರಜಾವಾಣಿ ವಾರ್ತೆಯಲ್ಲಿ ನನ್ನ ಲೇಖನ 'ಗಾಳಕ್ಕೆ ಸಿಲುಕುವುದು ಬೇಡ' ಕೇಳಿ

 

ಪ್ರಜಾವಾಣಿ ವಾರ್ತೆಯಲ್ಲಿ ನನ್ನ ಲೇಖನ 'ಗಾಳಕ್ಕೆ ಸಿಲುಕುವುದು ಬೇಡ' 



Wednesday, December 7, 2022

ಪ್ರಜಾವಾಣಿ ಕನ್ನಡ ಧ್ವನಿಯಲ್ಲಿ ‘ಹೊತ್ತಿಗೆ ಪ್ರಕಟಣೆಯ ಈ ಹೊತ್ತು’ ಲೇಖನ ಕೇಳಿ

ದಿನಾಂಕ 07.12.2022 ರ ಪ್ರಜಾವಾಣಿಯ ‘ಸಂಗತ’ ಅಂಕಣದಲ್ಲಿ ಪ್ರಕಟವಾದ ನನ್ನ ಲೇಖನ ‘ಹೊತ್ತಿಗೆ ಪ್ರಕಟಣೆಯ ಈ ಹೊತ್ತು’ ಅದೇ ದಿನ ಪ್ರಜಾವಾಣಿಯ ಕನ್ನಡ ಧ್ವನಿಯಲ್ಲಿ ಬಿತ್ತರವಾಯಿತು.

Monday, December 5, 2022

ಮಕ್ಕಳ ಪಾಲನೆ: ಸಾಂಸ್ಕೃತಿಕ ಲೋಕದ ಹೊಣೆ

    



(೦೪.೧೦.೨೦೨೨ ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ)


     ಮಕ್ಕಳ ಮೊಬೈಲ್ ಗೀಳು ಕೊರೊನಾ ನಂತರ ಕಾಲದ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೊರೊನಾ ಸಂದರ್ಭದ ಅನಿವಾರ್ಯತೆ ಈಗ ಸಂಕಷ್ಟವಾಗಿ ರೂಪಾಂತರಗೊಂಡಿದೆ. ಸಧ್ಯದ ಪರಿಸ್ಥಿತಿಯಲ್ಲಿ ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತರಬೇಕಾದ ಮಹತ್ವದ ಜವಾಬ್ದಾರಿ ಪಾಲಕರ ಮತ್ತು ಶಿಕ್ಷಕರದು ಮಾತ್ರವಲ್ಲದೆ ಸಾಂಸ್ಕೃತಿಕಲೋಕ ಕೂಡ ಈ ಹೊಣೆಗಾರಿಕೆಯನ್ನು ನಿಭಾಯಿಸಬೇಕಾಗಿದೆ. ಅತ್ಯುತ್ತಮ ಪುಸ್ತಕಗಳ ಓದು ಮತ್ತು ಸದಭಿರುಚಿಯ ಸಿನಿಮಾಗಳ ವೀಕ್ಷಣೆಗೆ ಮಕ್ಕಳನ್ನು ಒಳಗಾಗಿಸುವುದು ಈ ಸಮಸ್ಯೆಯ ಪರಿಹಾರಕ್ಕಿರುವ ಸೂಕ್ತ ಮಾರ್ಗವಾಗಿದೆ. ‘ಯೌವನದ ದಿನಗಳಲ್ಲಿ ಮಾಡಿದ ತಪ್ಪನ್ನು ಒಪ್ಪಿಕೊಂಡು ಪ್ರಾಯಶ್ಚಿತಹೊಂದಲು ಬಾಲ್ಯದಲ್ಲಿ ಓದಿದ ಉತ್ತಮ ಪುಸ್ತಕಗಳು ಮತ್ತು ನೋಡಿದ ನಾಟಕಗಳ ಪ್ರಭಾವ ನನಗೆ ನೆರವಾಯಿತು ಎಂದು ಗಾಂಧೀಜಿ ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿಕೊಂಡಿರುವರು. ಆತಂಕದ ಸಂಗತಿ ಎಂದರೆ ಮಕ್ಕಳ ಮಾನಸಿಕ ವಿಕಾಸಕ್ಕೆ ನೆರವಾಗಬಲ್ಲ ಸಾಹಿತ್ಯಿಕ ಪುಸ್ತಕಗಳ ಮತ್ತು ಸಿನಿಮಾಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ.

ಮಕ್ಕಳ ಮನೋವಿಕಾಸದ ನಿರ್ಮಾಣದಲ್ಲಿ ಸಾಹಿತ್ಯ ಮತ್ತು ಸಿನಿಮಾದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಾಲೆಯು ನಾಲ್ಕು ಗೋಡೆಗಳ ನಡುವೆ ಮಗುವಿನ ವ್ಯಕ್ತಿತ್ವವನ್ನು ರೂಪಿಸುವ ಒಂದು ವ್ಯವಸ್ಥೆಯಾದರೆ, ಸಿನಿಮಾ ಮತ್ತು ಸಾಹಿತ್ಯ ಆ ನಾಲ್ಕು ಗೋಡೆಗಳ ಹೊರಗೆ ಮಗುವಿನ ವ್ಯಕ್ತಿತ್ವವನ್ನು ರೂಪಿಸುತ್ತವೆ. ಶಾಲೆ ಮತ್ತು ಅಲ್ಲಿನ ಪರಿಸರದಷ್ಟೇ ಸಿನಿಮಾ ಮತ್ತು ಸಾಹಿತ್ಯದ ಜವಾಬ್ದಾರಿ ಕೂಡ ಮಗುವಿನ ಬೆಳವಣಿಗೆಯಲ್ಲಿ ಪರಿಗಣನೆಗೆ ಬರುತ್ತದೆ. ಅತ್ಯುತ್ತಮ ಶಿಕ್ಷಕರಂತೆ ಅತ್ಯುತ್ತಮ ಪುಸ್ತಕಗಳು ಮತ್ತು ಸಿನಿಮಾಗಳು ಸಹ ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸುತ್ತವೆ.

ಮಕ್ಕಳನ್ನು ಸಾಹಿತ್ಯದ ಓದುಗರನ್ನಾಗಿಸುವುದು ಅತ್ಯಂತ ಅವಶ್ಯಕವಾಗಿದೆ. ಸಾಹಿತ್ಯದ ಮೂಲಕವೇ ಮಗು ಪ್ರೀತಿ ಮತ್ತು ಅಂತ:ಕರಣ ತುಂಬಿರುವ ಭಾಷೆಯನ್ನು ಕಲಿಯಬೇಕಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತ ಕವಿ ಜೋಸೆಫ್ ಬ್ರಾಡ್‍ಸ್ಕೀ ‘ಸಾಹಿತ್ಯದಲ್ಲಿ ಭಾಷೆ ಬಳಕೆಯಾಗುವುದಿಲ್ಲ, ಸೃಷ್ಟಿಯಾಗುತ್ತದೆ’ ಎನ್ನುತ್ತಾರೆ. ಬ್ರಾಡ್‍ಸ್ಕೀಯೇ ಹೇಳಿದಂತೆ ‘ಮೌನದ ಸಂತ ಸಮಾಧಾನದಲ್ಲಿ ಸತ್ಯ ಪ್ರಕಟಗೊಳ್ಳುವ ಹಾಗೆ, ಬದುಕಿನ ಅರ್ಥ ಹೊಳೆಯುವ ಹಾಗೆ ಸಾಹಿತ್ಯದಲ್ಲಿ ಭಾಷೆ ಕಾವ್ಯವಾಗುತ್ತದೆ. ಭಾಷೆ ಕಾವ್ಯವಾಗುವುದು ಮನುಷ್ಯ ಸಾಂಸ್ಕೃತಿಕವಾಗಿ ವಿಕಾಸಗೊಳ್ಳುವ ದಿಕ್ಕನ್ನು ಸೂಚಿಸುವ ಸಂಗತಿ’. 

ಭಾಷೆಯ ಈ ಮಹತ್ವವನ್ನರಿತು ಮಕ್ಕಳನ್ನು ಪುಸ್ತಕಗಳ ಓದುಗರನ್ನಾಗಿಸಬೇಕಾದದ್ದು ಶಿಕ್ಷಕರ ಮತ್ತು ಪಾಲಕರ ಜವಾಬ್ದಾರಿಯಾಗಿದೆ. ಒಂದು ಕಾಲದಲ್ಲಿ ಕನ್ನಡ ಭಾಷೆಯಲ್ಲಿ ಸಮೃದ್ಧವಾಗಿ ಮಕ್ಕಳ ಪುಸ್ತಕಗಳು ಪ್ರಕಟಗೊಂಡಿವೆ. ಎಮ್.ಎಸ್.ಪುಟ್ಟಣ್ಣನವರ ‘ನೀತಿ ಚಿಂತಾಮಣಿ’ ಕುವೆಂಪು ಅವರ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ಮತ್ತು ‘ಮೋಡಣ್ಣನ ತಮ್ಮ’ ಮಕ್ಕಳ ಮೆಚ್ಚಿನ ಕೃತಿಗಳಾಗಿವೆ. ಪಂಜೆ ಮಂಗೇಶರಾಯರು, ಶಿವರಾಮ ಕಾರಂತ, ಜೆ.ಪಿ.ರಾಜರತ್ನಂ, ನಾ.ಕಸ್ತೂರಿ, ಚಿ.ಸದಾಶಿವಯ್ಯ, ಸಿಸು ಸಂಗಮೇಶ, ಜಯವಂತ ಕಾಡದೇವರ, ಕಂಚ್ಯಾಣಿ ಶಾಣಪ್ಪ ಕನ್ನಡ ಭಾಷೆಯಲ್ಲಿ ಮಕ್ಕಳ ಸಾಹಿತ್ಯವನ್ನು ಸಮೃದ್ಧಗೊಳಿಸಿದವರಲ್ಲಿ ಪ್ರಮುಖರು. ಎಮ್.ಆರ್.ಕೃಷ್ಣಶಾಸ್ತ್ರಿಗಳ ‘ನಿರ್ಮಲ ಭಾರತಿ’ ಮಕ್ಕಳ ಸಾಹಿತ್ಯಕ್ಕೆ ಶ್ರೇಷ್ಠ ಕೊಡುಗೆ ಎಂದು ಪರಿಗಣಿತವಾಗಿದೆ. ಅನುಪಮಾ ನಿರಂಜನ ಅವರ ‘ದಿನಕ್ಕೊಂದು ಕಥೆ’ ಮಕ್ಕಳಿಗಾಗಿ ಬರೆದ 365 ಕಥೆಗಳ ಸಂಪುಟ. ಶಿವರಾಮ ಕಾರಂತರು ‘ಬಾಲ ಪ್ರಪಂಚ’ದ ಮೂಲಕ ಮಕ್ಕಳಿಗಾಗಿ ವಿಜ್ಞಾನಲೋಕದ ವಿಸ್ಮಯಗಳನ್ನು ಮನೆ ಮನೆಗೂ ಮುಟ್ಟಿಸಿದರು. 

ಪರಂಪರೆಯ ಸಮೃದ್ಧ ಹಿನ್ನೆಲೆ ಇರುವ ಮಕ್ಕಳ ಸಾಹಿತ್ಯ ಈಗ ಬೆಳವಣಿಗೆ ಕಾಣದೆ ನಿಂತ ನೀರಾಗಿದೆ. ಜನಪ್ರಿಯ ಮಾದರಿಯನ್ನು ಮೈಗೂಡಿಸಿಕೊಂಡಿರುವ ಕನ್ನಡ ಸಾಹಿತ್ಯವಲಯ ಮಕ್ಕಳ ಆಸಕ್ತಿ ಮತ್ತು ಅಭಿರುಚಿಯ ಕಡೆಗೆ ಗಮನ ನೀಡುತ್ತಿಲ್ಲ. ಪತ್ರಿಕೆಗಳಲ್ಲಿ ಅರ್ಧ ಪುಟಕ್ಕಷ್ಟೇ ಮಕ್ಕಳ ಸಾಹಿತ್ಯ ಸೀಮಿತವಾಗುತ್ತಿದೆ. ಸಾಹಿತ್ಯ ಸಮ್ಮೇಳನಗಳ ಕಾರ್ಯಕ್ರಮಗಳಲ್ಲಿ ಮಕ್ಕಳ ಸಾಹಿತ್ಯಕ್ಕೆ ವೇದಿಕೆ ದೊರೆಯುತ್ತಿಲ್ಲ. ಈ ಮೊದಲು ಪ್ರಕಟವಾದ ಮಕ್ಕಳ ಪುಸ್ತಕಗಳನ್ನು ಪುನರ್ ಮುದ್ರಿಸುವ ಕೆಲಸಕ್ಕೆ ಸಾಹಿತ್ಯ ಪರಿಷತ್ತು ಚಾಲನೆ ನೀಡಬೇಕಿದೆ.

ಇನ್ನು ಮಕ್ಕಳ ಸಿನಿಮಾಗಳ ವಿಷಯದಲ್ಲಿ ಆಶಾದಾಯಕ ಬೆಳವಣಿಗೆ ಕಾಣಿಸುತ್ತಿಲ್ಲ. ಪುಟಾಣಿ ಎಜೆಂಟ್ 123, ಸಿಂಹದ ಮರಿಸೈನ್ಯ, ಮಕ್ಕಳ ಸೈನ್ಯ, ಬೆಟ್ಟದ ಹೂ, ನಾಗರ ಹೊಳೆ, ಚಿನ್ನಾರಿಮುತ್ತದಂತಹ ಅತ್ಯುತ್ತಮ ಮಕ್ಕಳ ಸಿನಿಮಾಗಳು ನಿರ್ಮಾಣಗೊಂಡ ಕನ್ನಡ ಬಾಷೆಯಲ್ಲಿ ಈಗ ಮಕ್ಕಳ ಸಿನಿಮಾಗಳ ಕ್ಷಾಮ ದಟ್ಟವಾಗಿ ಆವರಿಸಿದೆ. ಮಕ್ಕಳ ಸಿನಿಮಾದಲ್ಲಿನ ‘ಸ್ವಾಮಿದೇವನೆ ಲೋಕಪಾಲನೆ’ ಎನ್ನುವ ಹಾಡು ಒಂದು ಕಾಲದಲ್ಲಿ ಶಾಲೆಗಳಲ್ಲಿ ಪ್ರಾರ್ಥನಾ ಗೀತೆಯಾಗಿತ್ತು. ರಾಜಕುಮಾರ್ ಅವರಂತಹ ಜನಪ್ರಿಯ ಕಲಾವಿದ ಮಕ್ಕಳ ಸಿನಿಮಾದ ಪ್ರಾಮುಖ್ಯತೆಯನ್ನು ಅರಿತು ‘ಭಕ್ತ ಪ್ರಹ್ಲಾದ’ ಮತ್ತು ‘ಎರಡು ನಕ್ಷತ್ರಗಳು’ ಎನ್ನುವ ಮಕ್ಕಳ ಸಿನಿಮಾಗಳಲ್ಲಿ ನಟಿಸಿದರು. 

ಇತ್ತೀಚಿನ ಮಕ್ಕಳ ಸಿನಿಮಾಗಳು ಮಕ್ಕಳ ಅಭಿರುಚಿ ಮತ್ತು ಆಸಕ್ತಿಗೆ ಪೂರಕವಾಗಿ ನಿರ್ಮಾಣವಾಗುತ್ತಿಲ್ಲ. ಸಿನಿಮಾಗಳಲ್ಲಿ ಬಾಲಕಲಾವಿದರು ಅಭಿನಯಿಸುತ್ತಿರುವ ಪಾತ್ರಗಳು ವಾಸ್ತವಿಕತೆಗೆ ತುಂಬಾ ದೂರವಾಗಿವೆ. ಅಪ್ರಾಪ್ತ ವಯಸ್ಸಿನ ಬಾಲಕ, ಬಾಲಕಿ ಪರಸ್ಪರ ಪ್ರೀತಿಸುವುದು, ಚಿಕ್ಕವಯಸ್ಸಿನಲ್ಲಿ ಅಪರಾಧ ಪ್ರಪಂಚ ಪ್ರವೇಶಿಸುವುದು, ಅಪಾಯಕಾರಿ ಆಯುಧಗಳನ್ನು ಬಳಸುವುದು ಇಂತಹ ದೃಶ್ಯಗಳಲ್ಲಿ ಅಭಿನಯಿಸಲು ಬಾಲಕಲಾವಿದರನ್ನು ಬಳಸಿಕೊಳ್ಳಲಾಗುತ್ತಿದೆ. ಸಹಜ ಬದುಕಿಗೆ ಹತ್ತಿರವಾದ, ಮಕ್ಕಳ ಮನೋವಿಕಾಸಕ್ಕೆ ಪೂರಕವಾದ ಸಿನಿಮಾಗಳ ಸಂಖ್ಯೆ ಕ್ಷೀಣಿಸುತ್ತಿದೆ. ಸಂವಾದ ಕಾರ್ಯಕ್ರಮದಲ್ಲಿ ‘ಸಿನಿಮಾ ನೋಡಿ ಬಂದ ತಕ್ಷಣ ಕೈಯಲ್ಲಿ ಮಚ್ಚು ಹಿಡಿಯಬೇಕೆನಿಸುತ್ತದೆ’ ಎಂದು ಮಗುವೊಂದು ವ್ಯಕ್ತಪಡಿಸಿದ ಅಭಿಪ್ರಾಯ ಸಧ್ಯದ ಕನ್ನಡ ಸಿನಿಮಾರಂಗದ ದುಸ್ಥಿತಿಗೆ ಕನ್ನಡಿ ಹಿಡಿದಂತಿದೆ. 

ಸಾಹಿತ್ಯ ಮತ್ತು ಸಿನಿಮಾ ಮಾಧ್ಯಮದ ನಿಷ್ಕ್ರಿಯತೆಯ ಪರಿಣಾಮ ಈಗ ಮಕ್ಕಳು ಸೋಷಿಯಲ್ ಮೀಡಿಯಾವನ್ನು ವ್ಯಾಪಕವಾಗಿ ಉಪಯೋಗಿಸುತ್ತಿರುವರು. ಮನೋರಂಜನೆಯ ಹೆಸರಿನಲ್ಲಿ ಆಧುನಿಕ ತಂತ್ರಜ್ಞಾನದ ಅವಿಷ್ಕಾರಗಳು ಮಕ್ಕಳನ್ನು ದಾರಿ ತಪ್ಪಿಸುತ್ತಿವೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಮಕ್ಕಳ ಮನೋವಿಕಾಸಕ್ಕೆ ಸಹಾಯಕವಾಗುವಂತಹ ಮಕ್ಕಳ ಸಾಹಿತ್ಯ ಮತ್ತು ಸಿನಿಮಾಗಳು ಕನ್ನಡ ಭಾಷೆಯಲ್ಲಿ ಸಮೃದ್ಧವಾಗಿ ರಚನೆಯಾಗಬೇಕು. ಅಂತಹ ಸಿನಿಮಾ ಮತ್ತು ಸಾಹಿತ್ಯವನ್ನು ಪ್ರೋತ್ಸಾಹಿಸಿ  ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಬೆಳೆಸುವ ಹೊಣೆಗಾರಿಕೆ ಮತ್ತು ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

-ರಾಜಕುಮಾರ ಕುಲಕರ್ಣಿ