Thursday, March 3, 2022

ಎಲ್ಲೆ ಮೀರುವ ನಾಗರಿಕರು

     


(ದಿನಾಂಕ ೧೫.೦೨.೨೦೨೨ ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ)

       ಇತ್ತೀಚೆಗೆ ನಮ್ಮ ಪಕ್ಕದ ಮನೆಯಲ್ಲಿ ಮಗುವಿನ ಮೊದಲ ವರ್ಷದ ಹುಟ್ಟುಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಿದರು. ಮನೆಯ ಮಾಳಿಗೆ ಮೇಲಿನ ಖಾಲಿ ಜಾಗವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಿ ಜನ್ಮದಿನದ ಆಚರಣೆಗೆ ಸುಂದರ ವೇದಿಕೆಯನ್ನು ಸಜ್ಜುಗೊಳಿಸಿದ್ದರು. ರಾತ್ರಿ ಏಳು ಗಂಟೆಗೆ ಆರಂಭಗೊಂಡ ಜನ್ಮದಿನದ ಆಚರಣೆ ಬೆಳಗಿನ ಎರಡು ಗಂಟೆಯವರೆಗೆ ಹಾಡು, ಕುಣಿತ ಇತ್ಯಾದಿ ಮನೋರಂಜನೆಗಳಿಂದ ಅವ್ಯಾಹತವಾಗಿ ಸಾಗಿತು. ಧ್ವನಿವರ್ಧಕ ಮತ್ತು ಅಲ್ಲಿ ನೆರೆದಿದ್ದವರ ಜೋರಾದ ಸದ್ದುಗದ್ದಲಕ್ಕೆ ಅಕ್ಕಪಕ್ಕದ ಮನೆಯವರು ಬೆಳಗಿನ ಎರಡು ಗಂಟೆಯವರೆಗೆ ನಿದ್ದೆ ಇಲ್ಲದೆ ಜಾಗರಣೆ ಮಾಡಬೇಕಾಯಿತು. ಪಕ್ಕದ ಕೆಲವು ಮನೆಗಳಲ್ಲಿ ಮಕ್ಕಳು ವಾರದ ಪರೀಕ್ಷೆಗಾಗಿ ಓದಿಕೊಳ್ಳುತ್ತಿದ್ದರು. ಮತ್ತೊಂದು ಮನೆಯಲ್ಲಿ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಎಂಬತ್ತು ವಯಸ್ಸಿನ ಅಜ್ಜ ಆಸ್ಪತ್ರೆಯಿಂದ ಮರಳಿಬಂದು ವಿಶ್ರಾಂತಿ ಪಡೆಯುತ್ತಿದ್ದರು. ಒಂದಿಷ್ಟು ಮನೆಗಳಲ್ಲಿ ದಿನವಿಡೀ ದುಡಿದು ಹೈರಾಣಾದವರು ಹಾಸಿಗೆಗೆ ಮೈಚಾಚಿ ಮಲಗುವ ಸಿದ್ಧತೆಯಲ್ಲಿದ್ದರು. ಮಗುವಿನ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಮೈಮರೆತಿದ್ದವರಿಗೆ ಈ ಯಾವ ಸಂಗತಿಗಳೂ ನೆನಪಿಗೆ ಬರಲಿಲ್ಲ. ತಮ್ಮ ವೈಯಕ್ತಿಕ ಖುಷಿಯ ಆದ್ಯತೆಯೊಂದೆ ಮುನ್ನೆಲೆಗೆ ಬಂದು ಆ ಸಂದರ್ಭ ಬೇರೆಯವರಿಗಾಗುತ್ತಿದ್ದ ಹಿಂಸೆಯ ಅರಿವು ಹಿನ್ನೆಲೆಗೆ ಸರಿದಿತ್ತು.

ನಿವೃತ್ತಿಯ ಅಂಚಿಗೆ ತಲುಪಿರುವ ನಮ್ಮ ಓಣಿಯಲ್ಲಿನ ಹಿರಿಯರೋರ್ವರು ಪ್ರತಿನಿತ್ಯ ತಾವು ಕೆಲಸ ಮಾಡುತ್ತಿರುವ ಕಚೇರಿಯಿಂದ ಸಾಯಂಕಾಲ ಮನೆಗೆ ನಡೆದುಕೊಂಡು ಬರುವುದನ್ನು ರೂಢಿಸಿಕೊಂಡಿರುವರು. ಸಮೀಪದ ಕೆಲಸ ಕಾರ್ಯಗಳಿಗೂ ಅವರು ಕಾಲ್ನಡಿಗೆಯನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಅವರು ಕಚೇರಿಯಿಂದ ಹಿಂದಿರುಗುವ ವೇಳೆ ಓಣಿಯಲ್ಲಿ ಯಾರಾದರೂ ಎದುರಾದರೆ ಇವತ್ತು ಜೀವಂತವಾಗಿ ಮನೆಗೆ ಬಂದೆ ನೋಡಿ ಎಂದು ನುಡಿದು ಮುಗುಳ್ನಗುತ್ತಾರೆ. ಆ ಹಿರಿಯರು ಹೀಗೆ ಹೇಳುವುದಕ್ಕೂ ಕಾರಣವಿದೆ. ವಾಹನ ಸವಾರರು ಅದರಲ್ಲೂ ವಿಶೇಷವಾಗಿ ಈ ಯುವಕರು ರಸ್ತೆಯ ಮೇಲೆ ವಾಹನ ಓಡಿಸುವುದನ್ನು ನೋಡಿಯೇ ಆನಂದಿಸಬೇಕು. ದ್ವಿಚಕ್ರ ವಾಹನದ ಮೇಲೆ ಸಂಚರಿಸುವ ಯುವಕರಂತೂ ಇನ್ನೇನು ಪಾತಾಳವನ್ನೇ ಸ್ಪರ್ಷಿಸುತ್ತಿರುವರೇನೋ ಎನ್ನುವಂತೆ ವಾಹನವನ್ನು ಡೊಂಕಾಗಿಸಿ ಓಡಿಸುವುದು ಸಾಮಾನ್ಯ ದೃಶ್ಯವಾಗಿದೆ. ಇಂಥ ಸಂದರ್ಭದಲ್ಲೆಲ್ಲ ರಸ್ತೆಯ ಮೇಲಿನ ಪಾದಚಾರಿಗಳಿಗೆ ಆ ಯುವಕರು ತಾವು ಅಪಘಾತಕ್ಕೆ ಒಳಗಾಗುವುದರೊಂದಿಗೆ ನಮ್ಮನ್ನೂ ಅಪಘಾತಕ್ಕೆ ಒಳಗಾಗಿಸುವರೇನೋ ಎನ್ನುವಷ್ಟು ಭಯ ಮುತ್ತಿಕೊಳ್ಳುತ್ತದೆ. ಈ ನಡುವೆ ಮಧ್ಯಪಾನ ಸೇವಿಸಿ ಇಲ್ಲವೇ ಮೊಬೈಲ್‍ನಲ್ಲಿ ಮಾತನಾಡುತ್ತ ಸಂಚರಿಸುವ ವಾಹನ ಸವಾರರ ಸಂಖ್ಯೆಯೇನೂ ಕಡಿಮೆ ಇರುವುದಿಲ್ಲ. ಸಾರ್ವಜನಿಕ ರಸ್ತೆಯನ್ನೇ ಸರ್ಕಸ್ಸಿನ ಡೇರೆಯಾಗಿಸಿಕೊಂಡು ಎರಡೂ ಕೈಗಳನ್ನು ಹಿಂದೆಕಟ್ಟಿಕೊಂಡು ವಾಹನ ಓಡಿಸುವ ಸಾಹಸಿಗರನ್ನು ಕಡೆಗಣಿಸುವಂತಿಲ್ಲ. ತಮ್ಮ ಎಂಟ್ಹತ್ತು ವರ್ಷದ ಪುಟಾಣಿಯ ಕೈಗೆ ವಾಹನದ ಲಗಾಮು ಕೊಟ್ಟು ಹಿಂದೆ ಕುಳಿತು ಅತ್ಯಂತ ಉಮೇದಿಯಿಂದ ನಿರ್ದೇಶಿಸುವ ಪಾಲಕರೂ ಆಗಾಗ ದೃಷ್ಟಿಗೆ ಗೋಚರಿಸುತ್ತಾರೆ. ರಸ್ತೆಯ ಮೇಲೆ ವಾಹನ ಸವಾರಿಯ ಇಂಥ ವಿಭಿನ್ನ ಸಂಗತಿಗಳು ಜರುಗುತ್ತಿರುವಾಗ ಸದಾಕಾಲ ಕಾಲ್ನಡಿಗೆಯನ್ನೆ ತಮ್ಮ ಸಂಚಾರದ ಅಭ್ಯಾಸವಾಗಿಸಿಕೊಂಡಿರುವ ನನ್ನ ಹಿರಿಯ ಮಿತ್ರರು ರಸ್ತೆಯಲ್ಲಿ ಯಾವ ಅಪಘಾತಕ್ಕೂ ಒಳಗಾಗದೆ ಸಧ್ಯ ಈ ದಿನ ಬದುಕುಳಿದೆ ಎಂದು ನಿಟ್ಟುಸಿರು ಬಿಡುವುದರಲ್ಲೂ ಅರ್ಥವಿದೆ.

ನನ್ನ ಇನ್ನೊಬ್ಬ ಮಿತ್ರನಿಗಾದ ಅನುಭವ ತುಂಬ ವಿಭಿನ್ನವಾದದ್ದು. ನೀಟಾಗಿ ಡ್ರೆಸ್ ಮಾಡಿಕೊಂಡು ತನ್ನ ದ್ವಿಚಕ್ರ ವಾಹನದ ಮೇಲೆ ಪ್ರತಿದಿನದಂತೆ ಆಫೀಸಿಗೆ ಹೊರಟವನಿಗೆ ದಾರಿ ಮಧ್ಯದಲ್ಲಿ ತಲೆ ಮೇಲೆ ನೀರಿನ ಸಿಂಚನವಾದ ಅನುಭವವಾಯಿತು. ಮೋಡವಿಲ್ಲದ ಶುಭ್ರವಾದ ಆಕಾಶ, ಕಣ್ಣುಕೊರೈಸುವ ಬೀಸಿಲು ಇಂಥ ವಾತಾವರಣದಲ್ಲಿ ಇದೆಂಥ ಮಳೆ ಎಂದು ತಲೆ ಎತ್ತಿ ಪಕ್ಕಕ್ಕೆ ನೋಡಿದವನಿಗೆ ಸರ್ಕಾರಿ ಬಸ್ಸಿನ ಕಿಟಕಿಯೊಳಗಿಂದ ಹೊರಗೆ ಚಾಚಿದ ಮುಖ ಗೋಚರಿಸಿತು. ಹೊರಚಾಚಿದ ಆ ಮುಖದ ಬಾಯಿಯೊಳಗಿಂದ ಪಿಚಕಾರಿಯಂತೆ ಸಿಡಿದುಬಂದ ರಸೋತ್ಪತ್ತಿ ಮತ್ತೊಮ್ಮೆ ನನ್ನ ಸ್ನೇಹಿತನ ಶಿರದ ಮೇಲೆ ಶಿವನ ಜಡೆಯಲ್ಲಡಗಿ ಕುಳಿತ ಗಂಗೆಯಂತೆ ಶಿರಸ್ಥಾಯಿಯಾಯಿತು. ಕ್ಷಣಮಾತ್ರದಲ್ಲಿ ಗುಟಕಾಪ್ರೀಯ ತನ್ನ ಬಾಯಿಯೊಳಗೆ ತುಂಬಿದ್ದ ಎಂಜಲನ್ನು ನನ್ನ ಸ್ನೇಹಿತನ ತಲೆಯ ಮೇಲೆ ಪ್ರೋಕ್ಷಣೆಗೈದು ಮುಂದೆ ಸಾಗಿದ್ದ. ಅರ್ಧದಾರಿವರೆಗೂ ಬಂದಿದ್ದ ನನ್ನ ಸ್ನೇಹಿತನ ಪರಿಸ್ಥಿತಿ ವರ್ಣಿಸಲಸದಳವಾಗಿತ್ತು. ತಾನಿರುವ ಸ್ಥಿತಿಯಲ್ಲೇ ಕಚೇರಿಗೆ ಹೋಗುವಂತಿಲ್ಲ, ಮನೆಗೆ ಹಿಂತಿರುಗಿ ಬಟ್ಟೆ ಬದಲಿಸಿಕೊಂಡು ಬರಲು ಸಮಯದ ಕೊರತೆ. ಜೊತೆಗೆ ಸಾರ್ವಜನಿಕ ರಸ್ತೆಯಲ್ಲಿ ತನ್ನದಲ್ಲದ ತಪ್ಪಿಗೆ ಎದುರಿಸಬೇಕಾದ ಅಪಮಾನದ ಭಾವ ಮನಸ್ಸನ್ನು ಆವರಿಸಿ ಆ ಕ್ಷಣಕ್ಕೆ ಭೂಮಿಯೊಳಗೆ ಹೂತುಹೋದ ಅನುಭವ ಅವನದಾಗಿತ್ತು.

ಖಾಸಗಿ ಸಮಾರಂಭಕ್ಕಾಗಿ ಮನೆಯ ಎದುರಿನ ಸಾರ್ವಜನಿಕ ರಸ್ತೆಯನ್ನು ಅತಿಕ್ರಮಿಸಿಕೊಳ್ಳುವುದು, ಖಾಸಗಿ ಸಮಾರಂಭದ ಮೆರವಣಿಗೆ ಸಂದರ್ಭ ರಸ್ತೆಮೇಲೆ ಸಾರ್ವಜನಿಕರ ಓಡಾಟಕ್ಕೆ ತೊಂದರೆಯನ್ನುಂಟು ಮಾಡುವುದು, ಅಮವಾಸೆ-ಹಬ್ಬಗಳ ದಿನಗಳಂದು ವಾಹನಗಳನ್ನು ತೊಳೆಯಲು ಸಾವಿರಾರು ಲೀಟರ್ ನೀರು ವ್ಯರ್ಥಮಾಡುವುದು, ವಿದ್ಯುತ್ ಯಂತ್ರದಿಂದ ಸಾರ್ವಜನಿಕ ನಲ್ಲಿಯಿಂದ ಒಂದು ತೊಟ್ಟೂ ಬಿಡದಂತೆ ನೀರನ್ನು ಹೀರಿ ಉಳಿದ ಮನೆಗಳಲ್ಲಿ ನೀರಿನ ಕೊರತೆ ಹುಟ್ಟಿಸುವುದು ಹೀಗೆ ಅದೆಷ್ಟೋ ಸಮಾಜ ವಿರೋಧಿ ಕೆಲಸಗಳಲ್ಲಿ ಮನುಷ್ಯರು ತೊಡಗಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ತನ್ನ ಇಂಥ ಅನಾಗರಿಕ ವರ್ತನೆಯಿಂದ ಬೇರೆಯವರ ಬದುಕಿಗೆ ತೊಂದರೆಯಾಗುತ್ತಿದೆ ಎನ್ನುವ ಕಿಂಚಿತ್ ಪ್ರಜ್ಞೆಯೂ ಇಲ್ಲದಂತೆ ಮನುಷ್ಯ ಅಸಂವೇದಿಯಾಗುತ್ತಿರುವನು.

ಭೈರಪ್ಪನವರ ‘ತಂತು’ ಕಾದಂಬರಿಯಲ್ಲಿ ಹೀಗೊಂದು ಮಾತಿದೆ ‘ಜನರು ಮೂಲತ: ಒಳ್ಳೆಯವರು, ಕೆಟ್ಟೋರು ಅನ್ನೂ ವಿಂಗಡಣೆ ಸರಿಯಲ್ಲ. ಅವರು ಗೊಬ್ಬರದ ಥರ ಇದ್ದಾರೆ. ಗೊಬ್ಬರ ಒಯ್ದು ತೆಂಗಿನ ಮರಕ್ಕೆ ಹಾಕಿದರೆ ಅದೂ ಫಲ ಕೊಡುತ್ತೆ. ಪಾಪಾಸುಕಳ್ಳಿಗೆ ಹಾಕಿದರೆ ಅದೂ ಹೊರವಾಗಿ ಬೆಳೆಯುತ್ತೆ. ಗೊಬ್ಬರದ ಹಂಗಿರೊ ಅವರನ್ನು ನಿಜವಾದ ಜನರ ಹಂಗೆ ಮನುಷ್ಯರ ಹಂಗೆ ಮಾಡೂದೇ ಮೂಲ ಪ್ರಶ್ನೆ’. ಆದ್ದರಿಂದ ಮನುಷ್ಯನ ಆಲೋಚನಾ ಮಟ್ಟದಲ್ಲಿ, ಅವನ ವರ್ತನೆಯಲ್ಲಿ, ಬದುಕಿನ ರೀತಿಯಲ್ಲಿ, ಸಮಾಜವನ್ನು ನೋಡುವ ಕ್ರಮದಲ್ಲಿ ಸಾಕಷ್ಟು ಸುಧಾರಣೆಯಾಗಬೇಕಿದೆ.

ಮನುಷ್ಯ ಸಂಘಜೀವಿ ಎಂದು ತತ್ವಜ್ಞಾನಿ ಅರಿಸ್ಟಾಟಲ್ ಹೇಳಿರುವನು. ಸಂಘಜೀವಿಯಾದ ಮನುಷ್ಯನಿಗೆ ತನ್ನ ವೈಯಕ್ತಿಕ ಆದ್ಯತೆಗಳ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕಾದ ಹೊಣೆಗಾರಿಕೆಯೂ ಇದೆ. ತನ್ನ ವೈಯಕ್ತಿಕ ಆದ್ಯತೆಗಳಿಂದ ಸಮಾಜದ ಸ್ವಾಸ್ಥ್ಯ ಕೆಡದಂತೆ ಮತ್ತು ತನ್ನಂತೆ ಸಮಾಜದಲ್ಲಿ ಬದುಕುತ್ತಿರುವ ಬೇರೆಯವರ ಬದುಕಿನ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಬದುಕುವುದನ್ನು ಮನುಷ್ಯ ರೂಢಿಸಿಕೊಳ್ಳಬೇಕಿದೆ. ಬದುಕುವ ಸ್ವಾತಂತ್ರ್ಯವನ್ನು ನೀಡಲಾಗಿದೆ ಎಂದರೆ ಅದು ಸ್ವೇಚ್ಛಾಚಾರವೆಂದರ್ಥವಲ್ಲ. ತಾನು ಬದುಕಿ ಬೇರೆಯವರು ಬದುಕಲು ಅಗತ್ಯವಾದ ವಾತಾವರಣವನ್ನು ನಿರ್ಮಿಸಿಕೊಡುವುದೇ ಮನುಷ್ಯ ನಿರ್ವಹಿಸಬೇಕಾಗಿರುವ ಅತ್ಯಂತ ಮಹತ್ವದ ಸಾಮಾಜಿಕ ಜವಾಬ್ದಾರಿಯಾಗಿದೆ. ಆದ್ದರಿಂದ ನಾವುಗಳೆಲ್ಲ ನಮ್ಮ ನಮ್ಮ ಬದುಕಿನ ವೈಯಕ್ತಿಕ ಆದ್ಯತೆಗಳನ್ನು ಒಂದುಕ್ಷಣ ಬದಿಗಿಟ್ಟು ನಾವು ಬದುಕುತ್ತಿರುವ ಸಮಾಜದ ಬಗ್ಗೆ ಅರೆಕ್ಷಣ ಯೋಚಿಸುವುದೊಳಿತು.

-ರಾಜಕುಮಾರ ಕುಲಕರ್ಣಿ