Tuesday, March 27, 2012

ನೋಡಿ ಇದು ಕನ್ನಡದ ಸ್ಥಿತಿ


ಬಾಗಲಕೋಟೆಯ ವಿದ್ಯಾಗಿರಿಯಲ್ಲೊಂದು ಉಪಹಾರ ಗೃಹ ಉದ್ಘಾಟನೆಗೊಳ್ಳಲಿದೆ. ಆ ಉಪಹಾರ ಗೃಹದ ಹೆಸರು ¥ÀkªÁ£Àß' ಎಂದು. ಅದರ ಅರ್ಥಕ್ಕಾಗಿ ಮತ್ತು ಹೇಗೆ ಉಚ್ಚರಿಸಬೇಕೆಂದು ಅನೇಕರು ತಲೆ ಬಿಸಿ ಮಾಡಿಕೊಂಡಿದ್ದುಂಟು. ಶುದ್ಧಗನ್ನಡದಲ್ಲಿ ಅದು 'ಪಕ್ವಾನ್ನ' ಎಂದಾಗಬೇಕು. ಪಕ್ವಾನ್ನ ಪದದ ಅರ್ಥ ವಿಶೇಷ ಭೋಜನ ಎಂದಾಗುತ್ತದೆ. ಒಂದಿಷ್ಟು ಹೊಸತನ ಇರಲಿ ಎನ್ನುವುದು ಆ ಉಪಹಾರ ಗೃಹದ ಮಾಲೀಕರ ವಿಚಾರವಾಗಿರಬಹುದು. ಇದರಲ್ಲಿ ಉಪಹಾರ ಗೃಹಕ್ಕೆ ಗಿರಾಕಿಗಳನ್ನು ಸೆಳೆಯುವ ತಂತ್ರವೂ ಅಡಗಿದೆ. ಈ ಹೊಸತನ ಮತ್ತು ಸೆಳೆಯುವ ಆಟಗಳ ನಡುವೆ ಭಾಷೆಯ ಅಂದವನ್ನು ಕೆಡಿಸುವ ಅಧಿಕಾರ ನಮಗಿಲ್ಲ. ಒಟ್ಟಿನಲ್ಲಿ ಕನ್ನಡದ ಪದವೊಂದನ್ನು ಇಲ್ಲಿ ಅಪಭ್ರಂಶಗೊಳಿಸಲಾಗಿದೆ. ಈ ರೀತಿ ಪದ ಪ್ರಯೋಗ ಇತ್ತಿಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಒಂದಿಷ್ಟು ಬದಲಾವಣೆ ಮತ್ತು ಹೊಸತನಕ್ಕಾಗಿ ಹೀಗೆ ಮಾಡಿದ್ದೇವೆಂದು ಸಮರ್ಥಿಸಿಕೊಳ್ಳುವವರ ಸಂಖ್ಯೆ ಏನೂ ಕಡಿಮೆ ಇಲ್ಲ. ಒಂದು ಕಾಲದಲ್ಲಿ ಕನ್ನಡದ ನಂಬರ್ ಒನ್ ದಿನಪತ್ರಿಕೆ ಎಂದೇ ಗುರುತಿಸಿಕೊಂಡಿದ್ದ ಪತ್ರಿಕೆ ತನ್ನ ಪುರವಣಿಗೆ ®ªÀ®vk’ ಎಂದು ಹೆಸರಿಸಿತು. ಸಂಪಾದಕರು ವಿವರಣೆ ಕೊಡುವವರೆಗೆ ಅನೇಕರಿಗೆ ಅದರ ಅರ್ಥವೇ ಹೊಳೆದಿರಲಿಲ್ಲ. ಮಹಿಳಾ ಪುರವಣಿಗೆ ಏನೆಂದು ಹೆಸರಿಸಬೇಕೆಂದಾಗ ಓದುಗರೊಬ್ಬರು vk’ಎಂದು ವ್ಯಂಗ್ಯವಾಗಿ ಬರೆದಿದ್ದರು.
ಹೀಗೆ ಹೊಸತನದ ವ್ಯಾಮೋಹಕ್ಕೆ ಸಿಲುಕಿ ನಮ್ಮದೇ ಭಾಷೆಯನ್ನು ಅವಹೇಳನಕಾರಿಯಾಗಿ ಬರೆಯುತ್ತಿರುವ ಸಮಯದಲ್ಲೇ ಅಲ್ಲಿ ಗಡಿನಾಡಿನಲ್ಲಿ ಪರಭಾಷಿಕರು ಕನ್ನಡ ನಾಮಫಲಕಗಳ ಮೇಲೆ ಮಸಿ ಬಳಿಯುತ್ತಾರೆ. ಕನ್ನಡ ಭಾಷೆಯ ವಿರುದ್ಧ ಉಗ್ರ ಪ್ರತಿಭಟನೆಗೆ ಇಳಿಯುತ್ತಾರೆ. ಕನ್ನಡದಲ್ಲಿ ಮಾತನಾಡುವುದೇ ತಪ್ಪು ಎನ್ನುವಂತೆ ವರ್ತಿಸುತ್ತಾರೆ. ಕನ್ನಡ ರಾಜ್ಯೋತ್ಸವ ದಿನದಂದೇ ಕರಾಳ ದಿನ ಆಚರಿಸುತ್ತಾರೆ. ತನ್ನ ನೆಲದಲ್ಲೇ ಕನ್ನಡ ಅನಾಥವಾಗುತ್ತದೆ.
ಈ ನಡುವೆ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ರಾಜಕೀಯ ಬಣ್ಣ ಪಡೆಯುತ್ತದೆ. ಯಾವ ರಾಜಕೀಯ ನಾಯಕರುಗಳಿಗೂ ಕಡಿಮೆ ಇಲ್ಲದಂತೆ ನಮ್ಮ ಸೃಜನಶೀಲ ಸಾಹಿತಿಗಳು ವರ್ತಿಸುತ್ತಾರೆ. ಪರಿಷತ್ತಿನ ಸದಸ್ಯರನ್ನು ಓಲೈಸಲು ಭಾರಿ ಭೋಜನದ ವ್ಯವಸ್ಥೆ, ಪ್ರಣಾಳಿಕೆ ಬಿಡುಗಡೆ, ಸಾಧನೆಗಳ ಪಟ್ಟಿ ಹೀಗೆ ಹತ್ತು ಹಲವು ಚಟುವಟಿಕೆಗಳಿಂದ ಕನ್ನಡದ ಸೃಜನಶೀಲ ಕ್ಷೇತ್ರ ರಣಾಂಗಣವಾಗಿ ಮಾರ್ಪಡುತ್ತದೆ. ಲಕ್ಷಾಂತರ ರುಪಾಯಿಗಳನ್ನು ವ್ಯಯಿಸಿ ಪರಿಷತ್ತಿಗೆ ಆಯ್ಕೆಯಾಗಲು ನಮ್ಮ ಸಾಹಿತಿಗಳು ನಡೆಸುವ ಹುನ್ನಾರ ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಡುತ್ತದೆ. ಪರಿಷತ್ತಿನ ಕೆಲಸ ಅದು ಲಾಭದಾಯಕ ಕೆಲಸ ಎಂದಾದರೆ ಈ ಲಾಭ ನಷ್ಟದ ಸಂಗತಿಗಳಲ್ಲಿ ನಾಡು ನುಡಿಯ ಬೆಳವಣಿಗೆ ಆಗುವುದಾದರೂ ಹೇಗೆ ಸಾಧ್ಯ?
ಇವರೆಲ್ಲರ ನಡುವೆ ಇನ್ನೊಂದು ಗುಂಪಿದೆ ಅದು ಭಾಷೆಯ ರಕ್ಷಣೆಯ ಹೆಸರಿನಲ್ಲಿ ಹಣ ಕೊಳ್ಳೆ ಹೊಡೆಯುವ ಕೆಲಸಕ್ಕೆ ಇಳಿಯುತ್ತದೆ. ಭಾಷೆಯ ಹೆಸರಿನಲ್ಲಿ ಒಂದಿಷ್ಟು ಹಣ ಮಾಡುವುದು ಮತ್ತು ಒಂದಿಷ್ಟು ಹೆಸರುಗಳಿಸುವುದು ಅವರ ಮುಖ್ಯ ಉದ್ದೇಶ. ಭಾಷೆಯೊಂದು ಅಪಭ್ರಂಶವಾಗುತ್ತಿರುವುದಾಗಲಿ, ಗಡಿನಾಡಿನಲ್ಲಿ ಭಾಷೆ ಅನಾಥ ಪ್ರಜ್ಞೆಯಿಂದ ಬಳಲುತ್ತಿರುವುದಾಗಲಿ, ಸಾಹಿತ್ಯ ಪರಿಷತ್ತು ರಾಜಕೀಯದ ರಂಗು ಪಡೆಯುತ್ತಿರುವುದಾಗಲಿ ಈ ಯಾವ ಸಮಸ್ಯೆಯೂ ಅವರಿಗೆ  ತಟ್ಟುವುದಿಲ್ಲ. ಭಾಷೆಯ ರಕ್ಷಣೆಯನ್ನು ಫುಲ್ ಟೈಮ್ ಕೆಲಸವಾಗಿಸಿಕೊಂಡಿರುವ ಆ ಮಹನೀಯರು ಕನ್ನಡ ಭಾಷೆಯನ್ನು ಅಪಭ್ರಂಶವಾಗದಂತೆ ಉಚ್ಚರಿಸಿದರೆ ಅದೇ ಅವರು ಭಾಷೆಗೆ ಮಾಡುವ ಬಹು ದೊಡ್ಡ ಉಪಕಾರ.
ಈ ಎಲ್ಲ ಸಮಸ್ಯೆಗಳ ನಡುವೆಯೂ ಒಂದಿಷ್ಟು ಸಂವೇದನಾಶೀಲರು ನಾಡು ನುಡಿಯ ಕುರಿತು ವ್ಯಕ್ತಪಡಿಸುತ್ತಿರುವ ಕಾಳಜಿ ಮತ್ತು ಸದ್ದಿಲ್ಲದೇ ಅವರು ಮಾಡುತ್ತಿರುವ ಪ್ರಯತ್ನಗಳಿಂದ  ಕನ್ನಡ ಭಾಷೆ ತನ್ನ ತನವನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ ಎನ್ನುವುದು ನಾವುಗಳೆಲ್ಲ ಒಪ್ಪಿಕೊಳ್ಳುವಂತ ಮಾತು. ಅಂಥ ಸೃಜನಶೀಲರ ಸಂಖ್ಯೆ ಹೆಚ್ಚಾಗಲಿ ಎನ್ನುವ ಆಶಯ ಅನೇಕರದು.

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

Saturday, March 24, 2012

ಆ ಪುಟ್ಟ ಮಕ್ಕಳ ಕಾಲಲ್ಲಿ ಚಪ್ಪಲಿ ಇರಲಿಲ್ಲ


    ಮೊನ್ನೆ ಮಾರ್ಚ್ ೨೨ ರಂದು ಗದಗಿಗೆ ಹೋಗಿ ಮರಳಿ ಬರುವಾಗ ದಾರಿಯಲ್ಲಿ ಚಿಕ್ಕ ಮಕ್ಕಳು ರಸ್ತೆ ದಾಟಲು ನಿಂತಿರುವುದು ಕಾಣಿಸಿತು. ಶಾಲಾ ಸಮವಸ್ತ್ರ ಧರಿಸಿ ಹೆಗಲಿಗೆ ಚೀಲ ಹಾಕಿಕೊಂಡು ದೂರದ ಶಾಲೆಯಿಂದ ಮನೆಗೆ ಹೋಗಲು ರಸ್ತೆ ದಾಟುತ್ತಿದ್ದ ಆ ಮಕ್ಕಳಲ್ಲಿ ಬಹುತೇಕ ಮಕ್ಕಳು ಬರಿಗಾಲಿನಲ್ಲೇ ಇದ್ದರು. ಮಧ್ಯಾಹ್ನದ ಸುಡುವ ಬಿಸಿಲಿನಲ್ಲಿ ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಕ್ಕಳನ್ನು ನೋಡಿ ಕರುಳು ಚುರುಕ್ ಎಂದಿತು. ಹಿರಿಯರು ಮತ್ತು ಶಿಕ್ಷಣದ ಕುರಿತು ಅಪಾರ ಕಾಳಜಿಯುಳ್ಳವರೂ ಆದ ಶ್ರೀ ಏನ್.ಜಿ.ಕರೂರ ಅವರು ಆ ಶಾಲಾ ಮಕ್ಕಳ ಪರಿಸ್ಥಿತಿಗೆ ಕನಿಕರ ವ್ಯಕ್ತಪಡಿಸಿದರು. ಮಕ್ಕಳಿಗೆ ಓದಬೇಕೆನ್ನುವ ಆಸೆ ಇದೆ ಪಾಲಕರಿಗೂ ಶಿಕ್ಷಣ ಕೊಡಿಸಬೇಕೆನ್ನುವ ಬಯಕೆ ಇದೆ. ಆದರೆ ಸರ್ಕಾರ ಮಾತ್ರ ಸ್ಪಂದಿಸುವ ರೀತಿ ಮಾತ್ರ ಸರಿಯಿಲ್ಲ ಎಂದು ನಿರಾಸೆ ವ್ಯಕ್ತಪಡಿಸಿದರು.
    ಸರ್ಕಾರ ಸಮವಸ್ತ್ರ, ಬಿಸಿಯೂಟದಂಥ ಯೋಜನೆಗಳನ್ನು ಜಾರಿಗೆ ತಂದು ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಜೊತೆಗೆ ಪುಸ್ತಕಗಳನ್ನು ಉಚಿತವಾಗಿ ವಿತರಿಸುತ್ತಿದೆ. ಆದರೆ ಅದೆಷ್ಟೋ ಹಳ್ಳಿಗಳಲ್ಲಿ ಇವತ್ತಿನವರೆಗೂ ಮಕ್ಕಳ ಮನೆ ಸಮೀಪದಲ್ಲೇ ಶಾಲೆಗಳಿಲ್ಲ. ಮಕ್ಕಳು ನಡೆದುಕೊಂಡೇ ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
    ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಮತ್ತು ಕಾನ್ವೆಂಟ್ ಶಾಲೆಗಳಿಗೆ ಆಟೋ ಬಸ್ಸುಗಳಲ್ಲಿ ಮಕ್ಕಳನ್ನು ಕಳುಹಿಸುತ್ತಿರುವ ಎಷ್ಟೋ ಪಾಲಕರಿಗೆ ಹಳ್ಳಿಗಳಲ್ಲಿ ಮಕ್ಕಳು ಬರಿಗಾಲಿನಲ್ಲಿ ನಡೆದುಕೊಂಡು ಶಾಲೆಗೆ ಹೋಗುತ್ತಿರುವ ವಿಷಯ ಗೊತ್ತಿಲ್ಲ. ಈ ನಡುವೆ ಸರ್ಕಾರ ಏಕರೂಪ ಶಿಕ್ಷಣ ಪದ್ಧತಿ ಜಾರಿಗೆ ತರಲು ಯೋಜನೆ ರೂಪಿಸುತ್ತಿದೆ. ಶಾಲೆಗಳಲ್ಲಿ ಪಾಠ ಮಾಡುತ್ತಿರುವ ಶಿಕ್ಷಕರಿಗೆ ವೇತನ ಆಯೋಗದ ಶಿಫಾರಸ್ಸುಗಳ ಕುರಿತು ಚಿಂತೆ ಶುರುವಾಗಿದೆ. ಖಾಸಗಿ ಶಾಲೆಗಳ ಆಡಳಿತ ವರ್ಗದವರಿಗೆ ಸರ್ಕಾರದ ಅನುದಾನ ಪಡೆಯುವ ತವಕ. ಇವರೆಲ್ಲರ ನಡುವೆ ಆ ಪುಟ್ಟ ಮಕ್ಕಳು ಮಾತ್ರ ಹೆಗಲಿಗೆ ಚೀಲ ಏರಿಸಿಕೊಂಡು ಭವಿಷ್ಯದ ಕನಸು ಕಾಣುತ್ತ ಬರಿಗಾಲಿನಲ್ಲೇ ನಡೆದುಕೊಂಡು ಶಾಲೆಗೆ ಹೋಗುತ್ತಿವೆ.
    ಈ ನಡುವೆ ಸರ್ಕಾರಿ ಶಾಲೆಗಳಿಗೆ ಮಕ್ಕಳೇ ಬರುತ್ತಿಲ್ಲ ಎಂದು ಸರ್ಕಾರ ತಗಾದೆ ತೆಗೆಯುತ್ತಿದೆ. ಅದಕ್ಕೆಂದೇ ನಾಲ್ಕಾರು ಹಳ್ಳಿಗಳ ನಡುವೆ ಒಂದೇ ಶಾಲೆ ಇಟ್ಟು ಉಳಿದವುಗಳನ್ನು ಮುಚ್ಚಿ ಬಿಡುವ ನಿರ್ಧಾರಕ್ಕೆ ಬರುತ್ತಿದೆ. ಹಾಗೇನಾದರೂ ಶಾಲೆಗಳನ್ನು ಮುಚ್ಚಿ ಬಿಟ್ಟರೆ ಆ ಬರಿಗಾಲಿನ ಪುಟ್ಟ ಮಕ್ಕಳು ಇನ್ನಷ್ಟು ದೂರ ನಡೆದುಕೊಂಡು ಹೋಗಬೇಕು. ಸರ್ಕಾರಕ್ಕಾಗಲಿ ಶಿಕ್ಷಣ ಮಂತ್ರಿಗಳಿಗಾಗಲಿ ಈ ಕುರಿತು ತಿಳುವಳಿಕೆ ಇಲ್ಲವಾಗಿದೆ.
     ಮಕ್ಕಳ ಶಿಕ್ಷಣಕ್ಕಾಗಿ ಇವತ್ತು ಹಳ್ಳಿಗಳಲ್ಲಿನ ಅನೇಕ ಕುಟುಂಬಗಳು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿವೆ ಎನ್ನುವುದು ಕೆಲವರ ವಾದ. ಹೌದು ಎಂದು ಒಪ್ಪಿಕೊಂಡರೂ ಅದೆಷ್ಟು ಕುಟುಂಬಗಳಿಗೆ ಹೀಗೆ ನಗರ ಪ್ರದೇಶಗಳಿಗೆ ವಲಸೆ ಹೋಗಲು ಸಾಧ್ಯವಾಗುತ್ತಿದೆ. ಬದುಕಿನ ಬಡತನ ಅನೇಕ ಕುಟುಂಬಗಳಿಗೆ ಇವತ್ತಿಗೂ ಹಳ್ಳಿಯಲ್ಲೇ ನೆಲೆ ನಿಲ್ಲುವ ಅನಿವಾರ್ಯತೆ ಸೃಷ್ಟಿಸಿದೆ. ಆದ್ದರಿಂದ ಸರ್ಕಾರಿ ಶಾಲೆಗಳಿಗೆ ಹೋಗುತ್ತಿರುವ ಎಲ್ಲ ಮಕ್ಕಳೂ ಬಡವರ ಮಕ್ಕಳೆ. ಕಡು ಬಡತನ ಆ ಮಕ್ಕಳು ಬರಿಗಾಲಿನಲ್ಲಿ ನಡೆದು ಶಾಲೆಗೆ ಹೋಗಲು ಕಾರಣವಾಗಿದೆ. ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವ ನೆಪವೊಡ್ಡಿ ಶಾಲೆಗಳನ್ನು ಮುಚ್ಚಿದರೆ ಆ ಮಕ್ಕಳು ಈಗ ನಡೆಯುವ ದೂರಿಗಿಂತ ಹೆಚ್ಚು ದೂರ ನಡೆಯಬೇಕಾಗುತ್ತದೆ. ಚಪ್ಪಲಿ ಇಲ್ಲದ ಆ ಪುಟ್ಟ ಮಕ್ಕಳ ಪಾದದ ನೋವು ಮತ್ತಷ್ಟು ಹೆಚ್ಚಲಿದೆ. ಹವಾನಿಯಂತ್ರಿತ ಕೊಣೆಯಲ್ಲಿ ಕುಳಿತು ನಿರ್ಧಾರಗಳನ್ನು ಕೈಗೊಳ್ಳುವ ರಾಜಕೀಯ ನಾಯಕರುಗಳಿಗೆ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಮಕ್ಕಳ ಆ ನೋವು ಅರ್ಥವಾಗುವುದಿಲ್ಲ.  

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

Tuesday, March 13, 2012

ಎಲ್ಲವನ್ನೂ ಧಿಕ್ಕರಿಸಿ ನಡೆಯುವ ಪರಿ


    ಮೊನ್ನೆ ಮುಕ್ತ ಮುಕ್ತ ಧಾರಾವಾಹಿಯ ದೃಶ್ಯವೊಂದನ್ನು ನೋಡುತ್ತಿದ್ದಾಗ ನಿರ್ದೇಶಕ ಟಿ.ಏನ್.ಸೀತಾರಾಂ ನೆನಪಾದರು. ಅನೇಕ ವರ್ಷಗಳ ಹಿಂದೆ ಆಗಿನ್ನೂ ಖಾಸಗಿ ಟಿ.ವಿ ಚಾನೆಲ್ಲಗಳ ಹಾವಳಿ ಇಷ್ಟೊಂದು ಇರದಿದ್ದ ದಿನಗಳಲ್ಲಿ ದೂರದರ್ಶನಕ್ಕಾಗಿ ಇದೇ ಸೀತಾರಾಂ ಮಾಯಾ ಮೃಗ ಧಾರಾವಾಹಿ ನಿರ್ದೇಶಿಸಿ ಕೊಟ್ಟಿದ್ದರು. ಅದು ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತ್ತು. ಅದುವರೆಗೂ ನೋಡಿದಂಥ ಕಥೆಗಳನ್ನೇ ಮತ್ತೆ ಮತ್ತೆ ನೋಡಿ ಬೇಸತ್ತಿದ್ದ ಪ್ರೇಕ್ಷಕ ವರ್ಗಕ್ಕೆ ಮಾಯಾ ಮೃಗ ಧಾರವಾಹಿ ಹೊಸ ಲೋಕವೊಂದನ್ನು ಅವರೆದುರು ತೆರೆದಿಟ್ಟಿತು. ಆಗಲೇ ಅನಿಸಿದ್ದು ಈ ನಿರ್ದೇಶಕನಲ್ಲಿ ಏನೋ ಒಂದು ವಿಶೇಷತೆ ಇದೆ ಎಂದು. 
      ಟಿ.ಏನ್.ಸೀತಾರಾಂ ರಾಜಕೀಯ, ಸಿನಿಮಾ, ಸಮಾಜ ಸೇವೆ, ಕಿರುತೆರೆ ಹೀಗೆ ಅನೇಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೂ ಅವರು ಅಭಿವ್ಯಕ್ತಿಯ ಮಾಧ್ಯಮವಾಗಿ ಆರಿಸಿಕೊಂಡಿದ್ದು ದೃಶ್ಯ ಮಾಧ್ಯಮವನ್ನು. ಒಂದೆರಡು ಸಿನಿಮಾಗಳನ್ನು ನಿರ್ದೇಶಿಸಿದ್ದರೂ ಅದೇಕೋ ಏನೋ ಹಿರಿತೆರೆಯಲ್ಲಿ ಯಶಸ್ಸು ಅವರಿಗೆ ಕೈಹಿಡಿಯಲಿಲ್ಲ. ಅಥವಾ ಸಿನಿಮಾ ಪ್ರೇಕ್ಷಕರ ಅಭಿರುಚಿಯನ್ನು ಅರಿತುಕೊಳ್ಳಲು ಟಿ.ಏನ್.ಸೀತಾರಾಂ ವಿಫಲರಾಗಿರಬಹುದು. ಸಿನಿಮಾ ಪ್ರೇಕ್ಷಕರ  ಅಭಿರುಚಿಯಲ್ಲಿ ಮನೋರಂಜನೆಯದೇ ಸಿಂಹ ಪಾಲಿರುವುದರಿಂದ ಆ ಕ್ಷೇತ್ರ ಟಿಏನ್ಎಸ್ ಗೆ ಒಗ್ಗದೆ ಇರುವುದೂ ಒಂದು ಕಾರಣವಾಗಿರಬಹುದು. ಅವರ ನಿರ್ದೇಶನದ ಎರಡು ಸಿನಿಮಾಗಳು ಈ ಸಿನಿಮಾ ಲೋಕದ ಜನ ಹಾಕಿಕೊಂಡ ಚೌಕಟ್ಟಿನ ಹೊರಗೇ ಉಳಿದು ಹೋದವು.
     ಇನ್ನು ಕಿರುತೆರೆಯ ವಿಷಯಕ್ಕೆ ಬಂದರೆ ಟಿ.ಏನ್.ಸೀತಾರಾಂ ಸ್ಟಾರ್ ನಿರ್ದೇಶಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಮದುವೆಯಾಚೆಯ ಸಂಬಂಧಗಳು, ವರದಕ್ಷಿಣೆ ಕಿರುಕುಳ, ಅತ್ತೆ ಸೊಸೆ ಜಗಳ ಅದೇ ಚರ್ವಿತ ಚರ್ವಣ ಕಥೆಗಳನ್ನು ನೋಡಿ ಬೇಸತ್ತಿದ್ದ ಪ್ರೇಕ್ಷಕ ವರ್ಗಕ್ಕೆ ಹೊಸದೊಂದು ಲೋಕವನ್ನು ತೋರಿಸಿದ ಇವರು ಕಿರುತೆರೆಯ ಪ್ರೇಕ್ಷಕರ ವಿಶೇಷವಾಗಿ ಮಹಿಳಾ ಪ್ರೇಕ್ಷಕರ ಅಭಿರುಚಿಯನ್ನೇ ಬದಲಿಸಿದರು. ನಮ್ಮ ನಡುವಿನ ಇಲ್ಲವೇ ನಮ್ಮದೇ ಬದುಕಿನ ದಿನನಿತ್ಯದ ಸಮಸ್ಯೆಗಳೇ ಇವರ ಧಾರಾವಾಹಿಗಳ ಕಥಾವಸ್ತು. ಅದರಲ್ಲೂ ರೈತರ ಬದುಕಿನ ಬವಣೆಗಳನ್ನು ಧಾರಾವಾಹಿ ರೂಪದಲ್ಲಿ ತೋರಿಸಿದ ನಿರ್ದೇಶಕ ಟಿ.ಏನ್.ಸೀತಾರಾಂ ಅವರನ್ನು ಬಿಟ್ಟರೆ ಬೇರೊಬ್ಬರಿಲ್ಲ. ಅದುವರೆಗೂ ರೈತರ ಸಮಸ್ಯೆಗಳನ್ನು ಡಾಕ್ಯುಮೆಂಟರಿ ರೂಪದಲ್ಲಿ ನೋಡಿದ್ದ ಅನೇಕರಿಗೆ ಟಿಏನ್ಎಸ್ ಅವರ ಧಾರಾವಾಹಿಗಳು ಹೊಸ ಅನುಭವವನ್ನೇ ನೀಡಿದವು. ಜಾಗತೀಕರಣದ ಹೊಡೆತಕ್ಕೆ ಸಿಲುಕಿರುವ ರೈತನ ಬದುಕಿನ ಸಂಕಟವನ್ನು ಅತ್ಯಂತ ಪ್ರಾಮಾಣಿಕವಾಗಿ ಚಿತ್ರಿಸಿ ದೃಶ್ಯ ಮಾಧ್ಯಮದ ಮೂಲಕ ಪ್ರೇಕ್ಷಕರೆದುರು ಇಟ್ಟಾಗಲೇ ಆ ಬದುಕು ಅದೆಷ್ಟು ಸಂಕಟಗಳ ಸರಮಾಲೆ ಎಂದು ಅನೇಕರಿಗೆ ಅರಿವಾಗಿದ್ದು. ರಾಜಕೀಯ ಕ್ಷೇತ್ರದ ಕೆಟ್ಟತನ, ನಗರ ಬದುಕಿನ ಸಂಕಿರ್ಣತೆ, ಜಾಗತೀಕರಣ ತಂದೊಡ್ಡುತ್ತಿರುವ ಅಪಾಯಗಳು ಹೀಗೆ ಅನೇಕ ಸಮಸ್ಯೆಗಳು ಅವರ ಧಾರಾವಾಹಿಗಳಲ್ಲಿ ಬಿಚ್ಚಿಕೊಳ್ಳುತ್ತ ಹೋಗುತ್ತವೆ.
     ಮೊನಚು ಮತ್ತು ವ್ಯಂಗ್ಯ ಸಂಭಾಷಣೆಗಳೇ ಅವರ ಧಾರಾವಾಹಿಗಳ ಜೀವಾಳ. ಸರ್ಕಾರಿ ಅಧಿಕಾರಿಗಳನ್ನು, ರಾಜಕೀಯ ನಾಯಕರುಗಳನ್ನು ಅವರ ಪಾತ್ರಗಳ ಮೂಲಕ ತರಾಟೆಗೆ ತೆಗೆದುಕೊಳ್ಳುವ ರೀತಿ ಅನೇಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತದೆ. ತಾನು ತನ್ನ ದೈನಂದಿನ ಬದುಕಿನಲ್ಲಿ ಹೀಗೆ ಮಾಡಲಾಗದ ಅಸಾಹಾಯಕತೆಯನ್ನು ಮರೆತ ಪ್ರೇಕ್ಷಕ ಪಾತ್ರವೇ ತಾನಾಗಿ ಖುಷಿ ಪಡುತ್ತಾನೆ. ಜನಸಾಮಾನ್ಯನೆ ಟಿಏನ್ ಎಸ್ ಅವರ ಧಾರಾವಾಹಿಗಳ ನಿಜವಾದ ನಾಯಕ. ಅದೇ ಕಾರಣಕ್ಕೆ ಇರಬೇಕು ರಾತ್ರಿಯಾಗುತ್ತಿದ್ದಂತೆ ಅನೇಕ ಮನೆಗಳಿಂದ ಮುಕ್ತ ಮುಕ್ತ ಹಾಡಿನ ಸಾಲುಗಳು ಅಲೆ ಅಲೆಯಾಗಿ ತೇಲಿ ಬಂದು ಮನಸ್ಸನ್ನು ತುಂಬಿ ಕೊಳ್ಳುತ್ತವೆ. ಕಿರುತೆರೆಗೆ ಅಂಟಿಕೊಂಡಿದ್ದ ಧಾರವಾಹಿ ಎಂದರೆ ಹೀಗೆ ಇರಬೇಕು ಎನ್ನುವ ಸಿದ್ದ ಸೂತ್ರವನ್ನೇ ಬದಲಿಸಿ ಹೊಸದೊಂದು ವ್ಯಾಖ್ಯಾನ ನೀಡಿದ ಟಿ.ಏನ್.ಸೀತಾರಾಂ ಎಲ್ಲವನ್ನೂ ಧಿಕ್ಕರಿಸಿ ನಡೆಯುವ ಪರಿ ನಮ್ಮಲ್ಲಿ ಬೆರಗು ಹುಟ್ಟಿಸುತ್ತದೆ.

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ