Thursday, December 6, 2012

ಪ್ರಾಮಾಣಿಕರ ಸ್ಮರಣೆಯೂ ಒಂದು ಪ್ರಾಮಾಣಿಕತೆ

     ಸಾಹಿತಿಗಳ, ಕಲಾವಿದರ, ರಾಜಕಾರಣಿಗಳ, ಮಠಾಧಿಪತಿಗಳ ಇಲ್ಲವೆ ಖ್ಯಾತನಾಮರ ಕುರಿತು ಅಭಿನಂದನಾ ಗ್ರಂಥಗಳನ್ನು ಪ್ರಕಟಿಸುವುದು ಸಾಮಾನ್ಯ ಸಂಗತಿ. ಅದರಲ್ಲೂ ಅಂಥ ವ್ಯಕ್ತಿಗಳು ಬದುಕಿರುವಾಗಲೇ ಈ ಅಭಿನಂದನಾ ಗ್ರಂಥಗಳನ್ನು ಸಮರ್ಪಿಸುವುದುಂಟು. ಅಭಿನಂದನಾ ಗ್ರಂಥಗಳ ಪ್ರಕಟಣೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಬರೆಯುವ ಉಮೇದಿ ಮತ್ತು ಸ್ವಹಿತಾಸಕ್ತಿಯ ಪರಿಣಾಮ ಅಭಿನಂದನೆಗೆ ಪಾತ್ರವಾಗುವ ವ್ಯಕ್ತಿತ್ವದ ಲೋಪದೊಷಗಳೆಲ್ಲ ಗೌಣವಾಗುತ್ತಿವೆ. ಒಂದರ್ಥದಲ್ಲಿ ಅಪಾತ್ರರೂ ಅಭಿನಂದನೆಗೆ ಪಾತ್ರರಾಗುತ್ತಿರುವುದು ಅಭಿನಂದನಾ ಗ್ರಂಥಗಳ ಪ್ರಾಮುಖ್ಯತೆಯನ್ನೇ ಕಡಿಮೆ ಮಾಡುತ್ತಿದೆ. ಹೊಗಳುವವರ ವೈಯಕ್ತಿಕ ಹಿತಾಸಕ್ತಿ, ಹೊಗಳಿಸಿಕೊಳ್ಳುವವರ ಸ್ವಕುಚ ಮರ್ಧನದ ನಡುವೆಯೂ ಅಲ್ಲಲ್ಲಿ ಅಪರೂಪದ ಅಭಿನಂದನಾ ಗ್ರಂಥಗಳು ಪ್ರಕಟವಾಗುತ್ತಿರುವುದು ಕನ್ನಡ ಸಾಹಿತ್ಯ ಲೋಕಕ್ಕೆ ಸಧ್ಯದ ಮಟ್ಟಿಗೆ ನೆಮ್ಮದಿಯ ಸಂಗತಿ.
        ಬೆಳಗಾಂವಿಯ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ ಒಂದು ಮಹತ್ವದ ಅಭಿನಂದನಾ ಗ್ರಂಥವನ್ನು ಪ್ರಕಟಿಸುವ ಮೂಲಕ ಮೆಚ್ಚುವಂತಹ ಕೆಲಸ ಮಾಡಿದೆ. ಈ ಸಂಸ್ಥೆ ಪ್ರಕಟಿಸಿ ಹೊರತಂದ 'ಸೌಜನ್ಯ' ಹೆಸರಿನ ಅಭಿನಂದನಾ ಗ್ರಂಥ ಎರಡು ಕಾರಣಗಳಿಂದ ವಿಶಿಷ್ಟವಾದದ್ದು. ಒಂದು 'ಸೌಜನ್ಯ' ಅಭಿನಂದನಾ ಗ್ರಂಥದ ಕಥಾ ನಾಯಕ ಕೆ.ಎಲ್.ಇ ಸಂಸ್ಥೆಯಲ್ಲಿ ಒಬ್ಬ ಸಾಮಾನ್ಯ ಕಾರಕೂನನಾಗಿ ಸೇವೆ ಸಲ್ಲಿಸಿದ ಸರಳಾತಿ ಸರಳ ವ್ಯಕ್ತಿ. ಇನ್ನೊಂದು 2006ರಲ್ಲಿ ಈ ಅಭಿನಂದನಾ ಗ್ರಂಥ ಪ್ರಕಟವಾಗುವ ವೇಳೆಗಾಗಲೇ ಆ ಕೃತಿಯ ನಾಯಕ ಕಾಲವಾಗಿ ಎರಡು ವರ್ಷಗಳಾಗಿದ್ದವು. ಮೇಲಿನ ಎರಡು ಕಾರಣಗಳಿಂದ ಪುಸ್ತಕ ವಿಶಿಷ್ಟ ಎಂದೆನಿಸಿಕೊಳ್ಳುತ್ತದೆ.
       'ಸೌಜನ್ಯ' ಪುಸ್ತಕದ ಹೆಸರೇ ಹೇಳುವಂತೆ ಇದು ಅತ್ಯಂತ ಸೌಜನ್ಯಪೂರ್ಣ ವ್ಯಕ್ತಿತ್ವದ ಬದುಕಿನ ವಿವಿಧ ಮಗ್ಗಲುಗಳ ಪರಿಚಯಾತ್ಮಕ ಕೃತಿ. ಈ ಸಂಸ್ಮರಣ ಗ್ರಂಥದ ನಾಯಕ ಕೆ.ಎಲ್.ಇ ಸಂಸ್ಥೆಯಲ್ಲಿ ತಮ್ಮ ಬದುಕಿನ ಕೊನೆಯ ದಿನದವರೆಗೂ ನಿಸ್ವಾರ್ಥ ಸೇವೆ ಸಲ್ಲಿಸಿದ ಶ್ರೀ ಶಿವಶಂಕರ ಭೋಜ. ಕಾರಕೂನನಾಗಿ, ಅಧೀಕ್ಷಕರಾಗಿ ಕರ್ನಾಟಕದ ಖ್ಯಾತ ಶಿಕ್ಷಣ ಸಂಸ್ಥೆಯಲ್ಲಿ ಸುದೀರ್ಘ ಐದು ದಶಕಗಳ ಸೇವೆ ಸಲ್ಲಿಸಿ ಪ್ರಾಮಾಣಿಕ ಮತ್ತು ನಿಸ್ವಾರ್ಥ ಸೇವೆಗೊಂದು ವಿಶಿಷ್ಟ ಮುನ್ನುಡಿ ಬರೆದ ಶ್ರೀ ಶಿವಶಂಕರ ಭೋಜ ಅವರ ಕುರಿತು ವಿಸ್ತೃತ ಮಾಹಿತಿ ಪುಸ್ತಕದಲ್ಲಿದೆ. ಅವರ ಸೇವೆಯನ್ನು ಸಂಸ್ಥೆಯ ಕಾರ್ಯಾಧ್ಯಕ್ಷರಾದಿಯಾಗಿ ಸಹೋದ್ಯೋಗಿಗಳು, ಕುಟುಂಬದವರು, ಬಂಧುಗಳು ಮತ್ತು ಮಿತ್ರರೆಲ್ಲ ಸ್ಮರಿಸಿ ಕೊಂಡಿರುವರು.
        1952ರಲ್ಲಿ ಒಬ್ಬ ಕಾರಕೂನನಾಗಿ ಕೆ.ಎಲ್.ಇ ಸಂಸ್ಥೆಯನ್ನು ಸೇರಿದ ಶಿವಶಂಕರ ಭೋಜ ಅವರು 2004ರ ವರೆಗೆ ಅಂದರೆ ತಮ್ಮ ಬದುಕಿನ ಕೊನೆಯ ದಿನದವರೆಗೆ ಅಖಂಡ ಐದು ದಶಕಗಳ ಕಾಲ ಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರು. 1990ರಲ್ಲಿ ಅವರು ಸೇವೆಯಿಂದ ನಿವೃತ್ತರಾದರೂ ಅವರ ಪ್ರಾಮಾಣಿಕ ಸೇವೆ ಮತ್ತು ಅಗತ್ಯತೆಯನ್ನು ಅರಿತು ಸಂಸ್ಥೆ ಶ್ರೀಯುತರ ಸೇವಾವಧಿಯನ್ನು ವಿಸ್ತರಿಸುತ್ತಲೇ ಹೋಯಿತು. ಈ ಐದು ದಶಕಗಳ ಅವಧಿಯಲ್ಲಿ ಶ್ರೀ ಭೋಜ ಅವರು ಕೆ.ಎಲ್.ಇ ಸಂಸ್ಥೆಯ ಅವಿಭಾಜ್ಯ ಅಂಗವಾಗಿ ಬೆಳೆದರು. ಆಡಳಿತ ಮಂಡಳಿಗೆ ನಂಬಿಗಸ್ಥರಾಗಿ, ಸಹೋದ್ಯೋಗಿಗಳಿಗೆ ಸಲಹೆಗಾರರಾಗಿ, ಹೊಸದಾಗಿ ಕೆಲಸಕ್ಕೆ ಸೇರುವ ಯುವ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶಕರಾಗಿ ಅವರು ಸಂಸ್ಥೆಯಲ್ಲಿ ಬೆಳೆದು ನಿಂತ ಪರಿ ಇತರರಿಗೊಂದು ಶ್ರೇಷ್ಠ ಉದಾಹರಣೆ. ಬದುಕು ರೂಪಿಸಿದ ಸಂಸ್ಥೆಯ ಮೇಲಿನ ಅಭಿಮಾನವನ್ನು ಅವರು ತಮ್ಮ ಕೊನೆಯ ಉಸಿರಿರುವವರೆಗೂ ಕಾಪಿಟ್ಟುಕೊಂಡು ಬಂದದ್ದು ಸಂಸ್ಥೆಯ ಮೇಲೆ ಅವರಿಗಿದ್ದ ನಿರ್ವಾಜ್ಯ ಪ್ರೀತಿಗೆ ಸಾಕ್ಷಿ. ಅವರ ಕುರಿತಾದ ಲೇಖನಗಳನ್ನು ಓದುತ್ತ ಹೋದಂತೆಲ್ಲ ವ್ಯಕ್ತಿಯೊಬ್ಬ ಇಷ್ಟೊಂದು ನಿಸ್ವಾರ್ಥದಿಂದ ಅದು ಪ್ರಾಮಾಣಿಕ ಗುಣಗಳೊಂದಿಗೆ ಸರಳವಾಗಿ ಬದುಕಲು ಅದು ಹೇಗೆ ಸಾಧ್ಯ ಎನ್ನುವ ಅಚ್ಚರಿಯೊಂದು ತಟ್ಟನೆ ಬಂದು ಕೈಹಿಡಿಯುತ್ತದೆ. ಸಂಸ್ಥೆಯ ಕಾರ್ಯಾಧ್ಯಕ್ಷರು ಶ್ರೀ ಭೋಜ ಅವರನ್ನು ನಂಬಿಗಸ್ಥ ಎಂದು ಕರೆಯುತ್ತಾರೆ. ಕೆಲವರು ನಿಷ್ಟಾವಂತ ಎಂದು ಹೊಗಳುತ್ತಾರೆ. ಕಾಯಕ ನಿಷ್ಠ  ಎಂದು ಹಲವರು ಬರೆಯುತ್ತಾರೆ. ಮೌನ ತಪಸ್ವಿ, ಆದರ್ಶ ಪ್ರಾಯರು, ಸೌಜನ್ಯ ಮೂರ್ತಿ, ಸಮರ್ಪಿತರು, ಮಾರ್ಗದರ್ಶಿ, ಕಾಯಕಯೋಗಿ, ಅನುಕರಣಿಯರು, ತುಂಬಿದ ಕೊಡ ಎನ್ನುವುದು ಅನೇಕರ ಅಭಿಪ್ರಾಯ.
        ಈ ನಡುವೆ ಶ್ರೀ ಶಿವಶಂಕರ ಭೋಜ ಅವರ ವೈಯಕ್ತಿಕ ಬದುಕನ್ನು ಓದುತ್ತಿದ್ದಂತೆ ನಮಗರಿವಿಲ್ಲದೆ ಕಣ್ಣುಗಳು ಹನಿಗೂಡುತ್ತವೆ. ಅವರ ಪತ್ನಿ 1977ರಲ್ಲಿ ನಿಧನರಾದಾಗ ಕೊನೆಯ ಮಗು ಆಗಿನ್ನೂ ಎಂಟು ತಿಂಗಳ ಹಸುಗೂಸು. ಸಂಸ್ಥೆಯ ಕೆಲಸದೊಂದಿಗೆ ಮೂರು ಮಕ್ಕಳ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿ ಮಕ್ಕಳ ಪಾಲಿಗೆ ಮಾತೃ ಹೃದಯಿ ಎನಿಸಿದರು. ಕೌಟಂಬಿಕ ಬದುಕಿನಲ್ಲಿ ಎದುರಾದ ಸಂಕಷ್ಟಗಳನ್ನೆಲ್ಲ ಸಮಚಿತ್ತದಿಂದ ಎದುರಿಸಿ ಮಕ್ಕಳಿಗೆ ವಾತ್ಸಲ್ಯ ಮೂರ್ತಿಯಾಗಿ, ಮೊಮ್ಮಕ್ಕಳಿಗೆ ಪ್ರೀತಿಯ ತಾತನಾಗಿ, ಬಂಧುಗಳಿಗೆ ಮಧುರ ಬಾಂಧವ್ಯದ ವ್ಯಕ್ತಿಯಾಗಿ ಒಂದು ಆದರ್ಶದ ಬದುಕನ್ನು ಬಾಳಿದ ಶ್ರೀ ಭೋಜ ಅವರ ವ್ಯಕ್ತಿತ್ವ ನಿಜಕ್ಕೂ ಸ್ಮರಣೀಯ. ನಿವೃತ್ತಿ ಇಲ್ಲದೆ ದುಡಿದ ಶ್ರೀಯುತರು ನಿಧನರಾದದ್ದು ರವಿವಾರದ ರಜಾ ದಿನದಂದು ಇದು ಕಾಕತಾಳಿಯವಾದರೂ ಸಂಸ್ಥೆಯೊಂದಿಗಿನ ಅವರ ಅವಿನಾಭಾವ ಸಂಬಂಧಕ್ಕೆ ನಿದರ್ಶನ. ನಿಧನರಾಗುವ ಹಿಂದಿನ ದಿನ ರಾತ್ರಿ ಎಂಟು ಗಂಟೆವರೆಗೂ ತಮ್ಮ ಪಾಲಿನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಬದುಕಿನ ಕೊನೆಯ ಉಸಿರಿನ ತನಕ ಕರ್ತವ್ಯ ಪ್ರಜ್ಞೆ ಮೆರೆದರು. ಆಡದೆ ಮಾಡಿದವರು ಎಂಬ ಮಾತಿಗೆ ಅನ್ವರ್ಥವಾಗಿ ಬದುಕಿ ಬಾಳಿದ ಶ್ರೀ ಭೋಜ ಅವರ ವೈಯಕ್ತಿಕ ಮತ್ತು ವೃತ್ತಿ ಬದುಕು ಇತರರಿಗೆ ಸದಾ ಕಾಲ ಮಾದರಿ.
          ಪ್ರಾಮಾಣಿಕರ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವ ಈ ದಿನಗಳಲ್ಲಿ ಇರುವ ಅತ್ಯಲ್ಪ ಸಂಖ್ಯೆಯ ಪ್ರಾಮಾಣಿಕರನ್ನು ಗುರುತಿಸಿ ಗೌರವಿಸುವಂಥ ಕೆಲಸಗಳಾಬೇಕು. ತನ್ನ ಸಂಸ್ಥೆಯಲ್ಲಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ ಒಬ್ಬ ಕರ್ತವ್ಯ ನಿಷ್ಠ ನೌಕರನನ್ನು ಗುರುತಿಸಿ ಅಭಿನಂದನಾ ಗ್ರಂಥ ಪ್ರಕಟಿಸಿರುವ ಕೆ.ಎಲ್.ಇ ಸಂಸ್ಥೆಯ ಕಾರ್ಯ ಶ್ಲಾಘನೀಯ. ಅಷ್ಟರಮಟ್ಟಿಗೆ ಸಂಸ್ಥೆ ಒಂದು ಉತ್ತಮ ಕೆಲಸ ಮಾಡಿದೆ. ಜೊತೆಗೆ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಬೆಳಗಾಂವಿ ಜಿಲ್ಲೆಯಲ್ಲಿ ಮರಾಠಿಗರ ನಿರಂತರ ಉಪಟಳಗಳ ನಡುವೆಯೂ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಕೆ.ಎಲ್.ಇ ಸಂಸ್ಥೆ ಶ್ರಮಿಸುತ್ತಿದೆ. ಇಂಥ ಸೃಜನಾತ್ಮಕ ಚಟುವಟಿಕೆಗಳೇ ಸಂಸ್ಥೆಯೊಂದರ ಜೀವಂತಿಕೆಯ ಲಕ್ಷಣಗಳು.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

No comments:

Post a Comment