Wednesday, December 26, 2012

ಗಾಂಧಿ ಕ್ಲಾಸು

   

          'ಬದುಕು ನನ್ನನ್ನು ರೂಪಿಸಿತೋ, ನಾನೇ ನನ್ನ ಬದುಕನ್ನು ಹೀಗೆ ರೂಪಿಸಿಕೊಂಡೆನೋ ಆದರೆ ಒಂದಂತೂ ಸತ್ಯ ನನ್ನೀ ಬದುಕು ನನ್ನ ಪ್ರಾರಬ್ಧ ಮತ್ತು ಸವಾಲಿನದು. ನಾನು ಬಾಲ್ಯವನ್ನಾಗಲಿ, ಹದಿಹರೆಯದ ದಿನಗಳನ್ನಾಗಲಿ ಉತ್ಕಟವಾಗಿ ಎಲ್ಲರಂತೆ ಅನುಭವಿಸುವುದು ಆಗಲೇ ಇಲ್ಲ. ದುರ್ಬರ ಬದುಕು ಅದಕ್ಕೆ ಆಸ್ಪದ ಮಾಡಿಕೊಡಲೇ ಇಲ್ಲ. ಬಾಲ್ಯದ, ಹದಿಹರೆಯದ ಅನುಭವಗಳಿಗೆ ಅಕ್ಷರ ರೂಪ ಕೊಡುವಾಗ ನನ್ನ ಕಣ್ಣುಗಳು ಒದ್ದೆಯಾಗಿರುವುದುಂಟು. ಹಿಂಬಾಲಿಸುತ್ತಲೇ ಇದ್ದ ಆತಂಕ, ಅನಿಶ್ಚಿತತೆಗಳನ್ನು ನಿರಾಸೆಗೊಳಿಸಿ ಬದುಕು ಅರವತ್ತರ ಹೊಸ್ತಿಲ ಬಳಿ ತಂದು ನಿಲ್ಲಿಸಿರುವುದು ಪವಾಡವೇ ಸರಿ' ಈ ಸಾಲುಗಳು ನಾನು ಇತ್ತೀಚಿಗೆ ಓದಿದ 'ಗಾಂಧಿ ಕ್ಲಾಸು' ಪುಸ್ತಕದಿಂದ ಹೆಕ್ಕಿ ತೆಗೆದವುಗಳು. 
           'ಗಾಂಧಿ ಕ್ಲಾಸು' ಕನ್ನಡದ ಖ್ಯಾತ ಬರಹಗಾರ ಕುಂವೀ ಎಂದೇ ಹೆಸರಾದ ಕುಂಬಾರ ವೀರಭದ್ರಪ್ಪನವರ ಆತ್ಮಕಥನ. ಕುಂವೀ ನಾನು ಮೆಚ್ಚುವ ಹಾಗೂ ಅತಿಯಾಗಿ ಹಚ್ಚಿಕೊಂಡಿರುವ ಲೇಖಕ. ಅವರ ಆತ್ಮಕಥನ ಪ್ರಕಟವಾಗಿದೆ ಎಂದು ಗೊತ್ತಾದದ್ದೇ ತಡ ಓದಲೇ ಬೇಕೆನ್ನುವ ಉತ್ಕಟ ಆಸೆ ಪುಸ್ತಕವನ್ನು ಹುಡುಕಿಕೊಂಡು ಹೋಗಿ ಖರೀದಿಸಿಯೇ ಬಿಟ್ಟಿತು. ಬಳ್ಳಾರಿ ಜಿಲ್ಲೆ ಕೊಟ್ಟೂರಿನವರಾದ ಕುಂ.ವೀರಭದ್ರಪ್ಪನವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕೆಲಸ ಮಾಡಿ 2009ರಲ್ಲಿ ನಿವೃತ್ತರಾಗಿರುವರು. ನೂರಾರು ಕಥೆಗಳನ್ನು ಬರೆದಿರುವ ಇವರು ಕಾದಂಬರಿಗಳು ಮತ್ತು ಜೀವನ ಚರಿತ್ರೆ ಬರೆದು ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿರುವರು. ಅವರ ಅನೇಕ ಕಥೆಗಳು ಮತ್ತು ಕಾದಂಬರಿಗಳು ಸಿನಿಮಾಗಳಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳುವುದರ ಜೊತೆಗೆ ಶ್ರೀಯುತರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಸಂಧಿವೆ. ಕಥೆ, ಕಾದಂಬರಿ, ಜೀವನ ಚರಿತ್ರೆ ಪ್ರತಿಯೊಂದರಲ್ಲಿ ಕುಂವೀ ಶೈಲಿ ತನ್ನ ಛಾಪು ಮೂಡಿಸಿ ಓದುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ತಮ್ಮ ಕೃತಿಗಳ ಓದಿಗಾಗಿ ಓದುಗರ ಒಂದು ವಲಯವನ್ನೇ ಸೃಷ್ಟಿಸಿಕೊಂಡಿರುವ ವಿಶಿಷ್ಟ ಬರಹಗಾರ ಕುಂವೀ. ಹಲವು ದಶಕಗಳಿಂದ ಸಾಹಿತ್ಯಾಸಕ್ತರನ್ನು ಕಾಡುತ್ತಲೇ ಬಂದಿರುವ ಈ ಲೇಖಕನ ವೈಯಕ್ತಿಕ ಬದುಕು ಹೇಗಿರಬಹುದೆಂಬ ಕುತೂಹಲ ನನ್ನದಾಗಿತ್ತು. 'ಗಾಂಧಿ ಕ್ಲಾಸು' ಆ ಕೃತಿ ಕೈಯಲ್ಲಿ ಹಿಡಿದ ಘಳಿಗೆ ಅದು ಹೇಗೆ ಸಮಯ ಸರಿದು ಹೋಯಿತು ಎಂದು ಅರಿವಿಗೆ ಬರದಂತೆ ಆರು ದಶಕಗಳ ಕುಂವೀ ಬದುಕು ಕಣ್ಣೆದುರು ಅನಾವರಣಗೊಂಡಿತು. ಅದು ವ್ಯಕ್ತಿಯೋರ್ವನ ತೀರ ಖಾಸಗಿ ಬದುಕು ಎನ್ನುವುದಕ್ಕಿಂತ ಅದೊಂದು ಆರು ದಶಕಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ತವಕ, ತಲ್ಲಣ ಮತ್ತು ಹಿರಿಮೆಗಳ ಹಿನ್ನೋಟ. ಆ ಹಿನ್ನೋಟದಲ್ಲಿ ಅಪ್ರತಿಮ ಸಾಧಕನ ಯಶೋಗಾಥೆ ಇದೆ, ಎದುರಾದ ಸಂಕಷ್ಟಗಳಿವೆ, ಸಂಪ್ರದಾಯಗಳ ಸಂಘರ್ಷವಿದೆ, ಸಾರಸ್ವತ ಲೋಕದ ಸಣ್ಣತನಗಳಿವೆ, ಶೋಷಿತರ ಬದುಕಿನ ಬವಣೆಗಳಿವೆ ಇವುಗಳೆಲ್ಲವನ್ನೂ ಮೀರಿ ಕುಂವೀ ಅವರ ಮುಗ್ಧತೆ ಇಲ್ಲಿ ಮೈಚಾಚಿಕೊಂಡಿದೆ.

ಗಾಂಧಿ ಕ್ಲಾಸು 
       'ಅದ್ಯಾಕೆ ಬಾಪೂಜಿ ನೀವು ಮೂರನೆ ತರಗತಿಯ ಭೋಗಿಗಳಲ್ಲಿ ಪ್ರಯಾಣಿಸುವುದು?' 'ನಾಲ್ಕನೇ ತರಗತಿಯ ಭೋಗಿಗಳಿಲ್ವಲ್ಲ ಅದಕ್ಕೆ'. ಕುಂವೀ ಅವರ ಆತ್ಮಕಥೆ ಪ್ರಾರಂಭವಾಗುವುದೇ ಈ ಸಾಲುಗಳೊಂದಿಗೆ. ತಮ್ಮ ಆತ್ಮಕಥೆಯನ್ನು ಹೇಳುತ್ತ ಹೋಗುವ ಲೇಖಕರು ಒಂದು ಹಂತದಲ್ಲಿ ಹೀಗೆ ಹೇಳುತ್ತಾರೆ 'ಹನುಮಂತನ ಬಾಲದೋಪಾದಿಯಲ್ಲಿರುವ ಘಟನೆಗಳು ಒಂದೇ ಎರಡೇ ಲೆಕ್ಕ ಹಾಕಿದಲ್ಲಿ ನೂರಾರು ಸಾವಿರಾರು. ಇವುಗಳ ಪೈಕಿ ಕೆಲವು ಮುಖ್ಯವಾದವುಗಳನ್ನು ಪ್ರಸ್ತಾಪಿಸದಿದ್ದಲ್ಲಿ ನನ್ನ ಆತ್ಮಕಥೆ ಬಾಲ್ಕನಿಯಾಗಬಹುದೇ ಹೊರತು ಗಾಂಧಿ ಕ್ಲಾಸ್ ಆಗಲಾರದು'. ಒಟ್ಟಾರೆ ಗಾಂಧಿ ಕ್ಲಾಸ್ ಅದು ಸರಳತೆಯ, ಬಡತನದ ಹಾಗು ಸಾವಿರಾರು ಸಂಕಷ್ಟಗಳ ಸಂಕೇತ. ಕುಂವೀ ಅವರ ಬದುಕು ಕೂಡ ದಾರಿದ್ರ್ಯ, ಸಂಕಟಗಳ ಮತ್ತು ಸರಳತೆಯ ಸಮ್ಮಿಶ್ರಣ. ಅದಕ್ಕೆಂದೇ ಅವರು ತಮ್ಮ ಆತ್ಮಕಥೆಗೆ 'ಗಾಂಧಿ ಕ್ಲಾಸು' ಎಂದು ಹೆಸರಿಸುತ್ತಾರೆ.
          ಸಪ್ನ ಬುಕ್ ಹೌಸ್ ನವರು ಪ್ರಕಟಿಸಿರುವ 390 ಪುಟಗಳಿಗೆ ವಿಸ್ತರಿಸಿರುವ ಆತ್ಮಕಥನ ಒಟ್ಟು ಹನ್ನೊಂದು ಅಧ್ಯಾಯಗಳಲ್ಲಿ ಅನಾವರಣಗೊಂಡಿದೆ. ಪ್ರಾರಂಭದ ಎರಡು ಅಧ್ಯಾಯಗಳಲ್ಲಿನ ಬರವಣಿಗೆಯನ್ನು ಲೇಖಕರು ತಮ್ಮ ತಂದೆಗಾಗಿ ಮೀಸಲಿಟ್ಟಿರುವರು. ಅಪ್ಪನ ದೈಹಿಕ ಸೌಂದರ್ಯ, ಆತನೊಳಗಿನ ಸಿಟ್ಟು, ಹಟ, ಬಡವರ ಕುರಿತು ಇರುವ ಅನುಕಂಪ, ಮಗನನ್ನು ಓದಿಸಿ ದೊಡ್ಡ ವ್ಯಕ್ತಿಯನ್ನಾಗಿ ಮಾಡಬೇಕೆನ್ನುವ ಹಂಬಲ ಹೀಗೆ ಅಪ್ಪನ ವ್ಯಕ್ತಿತ್ವದ ವಿಭಿನ್ನ ಮುಖಗಳನ್ನು ಈ ಎರಡು ಅಧ್ಯಾಯಗಳಲ್ಲಿ ಪರಿಚಯಿಸುತ್ತಾರೆ. ತಂದೆಯ ಅತಿಯಾದ ಕೋಪ ಮತ್ತು ಹಟ ಒಮ್ಮೊಮ್ಮೆ ಸಿಟ್ಟು ತರಿಸಿದರೆ ಮಗದೊಮ್ಮೆ ಮಕ್ಕಳಿಗಾಗಿ ಅಹರ್ನಿಶಿ ದುಡಿಯುತ್ತಿರುವ ಅಪ್ಪ ಆದರ್ಶಪ್ರಾಯನಾಗುತ್ತಾನೆ. ಆಪ್ಪನಲ್ಲಿನ ಆದರ್ಶ ಮತ್ತು ಸಿಟ್ಟಿನ ಸ್ವಭಾವದಿಂದ ಆಸ್ತಿಯನ್ನೆಲ್ಲ ಕಳೆದುಕೊಂಡು ನಾವು ಬಡತನದ ಬದುಕನ್ನು ಅಪ್ಪಿಕೊಳ್ಳಬೇಕಾಯಿತು ಎಂದು ಹೇಳುವ ಕುಂವೀ ತಂದೆಯ ಸಾವಿನ ನಂತರ ಇರುವ ಸಾಲವನ್ನೆಲ್ಲ ತೀರಿಸಿ ಅಪ್ಪನನ್ನು ಋಣಮುಕ್ತನನ್ನಾಗಿಸುವ ಸನ್ನಿವೇಶ ಓದುಗರ ಮನಸ್ಸನ್ನು ಆರ್ದ್ರವಾಗಿಸುತ್ತದೆ. ಆ ಸಂದರ್ಭ ಅರಿವಿಲ್ಲದೆ ಕಣ್ಣೀರು ಕಪಾಳಕ್ಕಿಳಿದು ಭಾವ ತಿವೃತೆಯಿಂದ ಹೃದಯ ಹೊಯ್ದಾಡುತ್ತದೆ.
          ನಂತರದ ಅಧ್ಯಾಯಗಳಲ್ಲಿ ಕುಂವೀ ಶಿಕ್ಷಣ, ನಿರುದ್ಯೋಗ, ದಿನಗೂಲಿಯಾಗಿ ಕೆಲಸ ಮಾಡಿದ ಸಂದರ್ಭಗಳನ್ನು ಕುರಿತು ಹೇಳಿಕೊಂಡಿರುವರು. ಒಂದು ಸಂದರ್ಭ ಮನೆಯಿಂದ ದೂರಾಗಿ ಕೆಲಸ ಸಿಗದೆ 36 ಗಂಟೆಗಳ ಕಾಲ ಉಪವಾಸವಿದ್ದ ಪ್ರಸಂಗವನ್ನು ಓದುವಾಗ ಕಣ್ಣುಗಳು ಮತ್ತೆ ಹನಿಗೂಡುತ್ತವೆ. ಆ ಸಮಯ ಯುವ ಈರಭದ್ರನಲ್ಲಿರುವ ಹಸಿವನ್ನು ಗುರುತಿಸಿ ತಾನು ತಂದ ಬುತ್ತಿಯನ್ನೇ ಅರ್ಧ ಹಂಚಿಕೊಂಡು ಉಣ್ಣುವ ದುರುಗ್ಯಾ ನಾಯ್ಕನನ್ನು ಅವನ ಕೊನೆಗಾಲದಲ್ಲಿ ಸತ್ಕರಿಸುವ ಕುಂವೀ ವ್ಯಕ್ತಿತ್ವ ಓದುಗನಿಗೆ ಹೆಚ್ಚು ಆಪ್ತವಾಗುತ್ತದೆ.
        ಪುಸ್ತಕದ ಒಂಬತ್ತನೇ ಅಧ್ಯಾಯ ಕುಂವೀ ಬದುಕಿನ ಬಹುಮುಖ್ಯ ತಿರುವಿಗೆ ಸಂಬಂಧಿಸಿದೆ. 'ನೀನು ಯಾವುದೇ ಕಾರಣಕ್ಕೂ ಊರಿಗೆ ಬರಕೂಡದು. ತೊಲಗು ಇಲ್ಲಿಂದ. ಮುಂದೆಯೂ ನಿನ್ನ ಮುಖ ತೋರಿಸಬೇಡ' ಹೆತ್ತ ಅಪ್ಪನೇ ಫತ್ವಾ ಹೊರಡಿಸಿದ ಮೇಲೆ ಅದು ಗಡಿಪಾರೋ, ಬಹಿಷ್ಕಾರವೋ ಯಾವ ಸುಡುಗಾಡೆಂಬುದು ತಿಳಿಯದು ಎನ್ನುತ್ತ ಊರು ಬಿಟ್ಟು ಹೊರಡುವ ಕುಂವೀ ನೇರವಾಗಿ ಹೋಗಿ ಸೇರುವುದು ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಆಲೂರು ತಾಲೂಕಿಗೆ ಸೇರಿದ ವಾಗಿಲಿ ಎನ್ನುವ ಕುಗ್ರಾಮವನ್ನು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಆ ಪುಟ್ಟ ಗ್ರಾಮವನ್ನು ಸೇರಿಕೊಳ್ಳುವ ಕುಂವೀಗೆ ನಂತರದ ದಿನಗಳಲ್ಲಿ ಆ ಗ್ರಾಮ ಅವರಲ್ಲಿನ ಅಭಿವ್ಯಕ್ತಿ ಮಾಧ್ಯಮಕ್ಕೆ ವೇದಿಕೆಯಾಗುತ್ತ ಹೋಗುತ್ತದೆ. ಗಾಂಧಿ ಕ್ಲಾಸಿನ ಕಥಾ ನಾಯಕನ ಬದುಕಿಗೆ ಒಂದು ಸೃಜನಶೀಲತೆಯ ಆಯಾಮ ದೊರೆಯುವುದು ವಾಗಿಲಿ ಎನ್ನುವ ಪುಟ್ಟ ಪ್ರಪಂಚದಲ್ಲೇ. ವಾಗಿಲಿ ಅವರಿಗೆ ಬಡತನ, ಅಜ್ಞಾನ, ಅಂಧಾನುಕರಣೆ, ಶೋಷಣೆ, ವರ್ಗ ಸಂಘರ್ಷ, ದಬ್ಬಾಳಿಕೆ, ಜೀತ ಪದ್ಧತಿ, ಸೇಡು, ಪ್ರತಿಕಾರ, ಮುಗ್ಧತೆ, ಸುಶಿಕ್ಷಿತರ ಸಣ್ಣತನ ಹೀಗೆ ಅನೇಕ ವಿಷಯಗಳನ್ನು ಪರಿಚಯಿಸುತ್ತದೆ. ಅವರ ಕಥೆ, ಕಾದಂಬರಿಗಳ ರಚನೆಗೆ ವಾಗಿಲಿ ಸ್ಫೂರ್ತಿಯ ಸೆಲೆಯಾಗುತ್ತದೆ. ಇಲ್ಲಿ ಕುಂವೀ ಬದುಕಿನ ಜೊತೆ ಜೊತೆಗೆ ಆಂಧ್ರದ ರಾಯಲಸೀಮಾದ ರಕ್ತಸಿಕ್ತ ಚರಿತ್ರೆ ನಮ್ಮೆದುರು ತೆರೆದುಕೊಳ್ಳುತ್ತದೆ. ಓದುತ್ತ ಹೋದಂತೆ  ಇದು ಆತ್ಮಕಥೆಯೋ ಅಥವಾ ರೋಚಕ ನಿರೂಪಣೆಯಿಂದ ಕೂಡಿದ ಕಾದಂಬರಿಯೋ ಎನ್ನುವ ಅನುಮಾನ ಒಂದು ಹಂತದಲ್ಲಿ ಓದುಗನ ಮನಸ್ಸಿನಲ್ಲಿ ಮೂಡದೇ ಇರದು. ಕುಂವೀ ಇಲ್ಲಿ ಬಳಸಿಕೊಂಡಿರುವ ಭಾಷಾ ಶೈಲಿ ತುಂಬ ವಿಶಿಷ್ಟವಾಗಿದ್ದು ಆಕರ್ಷಕವಾಗಿದೆ. ಆಂಧ್ರ ಮತ್ತು ಕರ್ನಾಟಕದ ಗಡಿ ಭಾಗದ ಬಯಲು ಸೀಮೆ ಆಡು ಭಾಷೆಯನ್ನು ಇಲ್ಲಿ ಲೇಖಕರು ದುಡಿಸಿಕೊಂಡ ರೀತಿ ಓದುಗನಿಗೆ ಮೆಚ್ಚುಗೆಯಾಗುತ್ತದೆ. ಯಾವ ವಿಶ್ವವಿದ್ಯಾಲಯ ಮತ್ತು ಅಕಾಡೆಮಿ ಕಟ್ಟಿ ಕೊಡದ ಅನುಭವವನ್ನು ವಾಗಿಲಿ ನನಗೆ ನೀಡಿತು ಎಂದು ಹೇಳುವ ಲೇಖಕರು ಒಂದು ಹಂತದಲ್ಲಿ ನನ್ನೊಳಗಿನ ಸೃಜನಶೀಲತೆ ಕಥೆ, ಕಾವ್ಯ, ಕಾದಂಬರಿಗಳ ವಿವಿಧ ಅಭಿವ್ಯಕ್ತಿ ಮಾಧ್ಯಮಕ್ಕೆ ವಿಸ್ತರಿಸುತ್ತ ಹೋಗಲು ಆ ಪುಟ್ಟ ಗ್ರಾಮವೇ ಕಾರಣ ಎಂದು ತಮ್ಮ ಕೃತಜ್ಞತೆ ಮೆರೆಯುತ್ತಾರೆ. ಬಂಡಾಯ ಮನೋಭಾವದ ಕುಂವೀ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಆ ಗ್ರಾಮವನ್ನು ಪ್ರವೇಶಿಸಿ ಮುಂದೊಂದು ದಿನ ಅಲ್ಲಿ ಬಹುದೊಡ್ಡ ಸಾಮಾಜಿಕ ಪರಿವರ್ತನೆಗೆ ಕಾರಣರಾಗುತ್ತಾರೆ. ನಂತರದ ದಿನಗಳಲ್ಲಿ ಆ ಸಾಮಾಜಿಕ ಪರಿವರ್ತನೆಯೇ ಲೇಖಕರು ವಾಗಿಲಿಯನ್ನು ಬಿಡಲು ಕಾರಣವಾಗುವುದು ಮಾತ್ರ ವಿಪರ್ಯಾಸದ ಸಂಗತಿ.
          ಹತ್ತನೇ ಅಧ್ಯಾಯ ಲೇಖಕರು ಗೂಳ್ಯಮ್ ನಲ್ಲಿ ಕಟ್ಟಿಕೊಂಡ ವೃತ್ತಿ ಮತ್ತು ವೈಯಕ್ತಿಕ ಬದುಕಿನ ಮೇಲೆ ಬೆಳಕು ಚೆಲ್ಲುತ್ತದೆ. ನಕ್ಸಲ್ ರ ಪರಿಚಯ, ರಾಯಲ ಸೀಮಾದಲ್ಲಿನ ಹೊಡೆದಾಟಗಳು, ಗಡಿನಾಡಿನಲ್ಲಿ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಮಾಡುವ ಪ್ರಯತ್ನ, ಶಾಮಣ್ಣ ಕಾದಂಬರಿಯ ರಚನೆ ಹೀಗೆ ಅನೇಕ ವಿಷಯಗಳು ಓದಲು ಸಿಗುತ್ತವೆ.
        ಕುಂವೀ  ವೃತ್ತಿ ಬದುಕಿನ ಕೊನೆಯ ದಿನಗಳು ಹನ್ನೊಂದನೇ  ಅಧ್ಯಾಯದಲ್ಲಿ ತೆರೆದುಕೊಳ್ಳುತ್ತವೆ. ಗೂಳ್ಯಮ್ ನಿಂದ ಹಿರೇಹಾಳಿಗೆ ಬಂದು ನೆಲೆಸುವ ಕುಂವೀ ಇಲ್ಲಿ ತಮ್ಮ ಮಹತ್ವಾಕಾಂಕ್ಷೆಯ 'ಅರಮನೆ' ಕಾದಂಬರಿಯನ್ನು ಬರೆಯುತ್ತಾರೆ. ಅರಮನೆಯಂಥ ಬೃಹತ್ ಕಾದಂಬರಿಯನ್ನು ಬರೆಯಬೇಕೆನ್ನುವ ತುಡಿತ, ಪಾತ್ರಗಳ ಹುಡುಕಾಟ, ಅರಮನೆಗಳನ್ನು ಹುಡುಕುತ್ತ ಅಲೆದಾಟ, ಕಟ್ಟಿ ಕೆಡವಿ ಮತ್ತೆ ಮತ್ತೆ ಬರೆಯುವ ಅನಿವಾರ್ಯತೆ, ಕೊನೆಗೂ ಹದಿನೈದು ವರ್ಷಗಳ ಕಾಲ ಕಾಡಿದ ಸೃಜನಶೀಲ ತಾಕತ್ತು ಕೃತಿಯಾಗಿ ರೂಪಾಂತರಗೊಂಡ ಸಂದರ್ಭ ಇದೆಲ್ಲವನ್ನು ಲೇಖಕರು ಕೊನೆಯ ಅಧ್ಯಾಯದಲ್ಲಿ ವಿವರಿಸುತ್ತಾರೆ.
         ಪುಸ್ತಕದ ಅಲ್ಲಲ್ಲಿ ಇನ್ನು ಅನೇಕ ವಿಷಯಗಳು ಓದಲು ಸಿಗುತ್ತವೆ. ಶೋಷಣೆಯ ವಿರುದ್ಧ ಕುಂವೀ ಹೋರಾಟ, ಅವರ  ಅಕ್ಷರ ಕ್ರಾಂತಿ, ಬಣ್ಣದ ಬದುಕಿನ ಜನರ ಸಣ್ಣತನ, ಸಾಹಿತ್ಯಿಕ ಬದುಕು ತಂದೊಡ್ಡಿದ ಅವಾಂತರಗಳು, ರೌಡಿಗಳೊಂದಿಗಿನ ಒಡನಾಟ ಪ್ರತಿಯೊಂದನ್ನು ಓದುತ್ತ ಹೋದಂತೆ ಒಂದು ಸೃಜನಶೀಲ ಬದುಕಿನ ವಿಭಿನ್ನ ಮುಖಗಳು ಓದುಗರೆದುರು ಅನಾವರಣಗೊಳ್ಳುತ್ತವೆ. ಜೊತೆಗೆ ಕುಂವೀ ಆಗೊಮ್ಮೆ ಈಗೊಮ್ಮೆ ಕಚುಗುಳಿಯಿಟ್ಟು ಓದುಗರನ್ನು ನಕ್ಕು ನಗಿಸುತ್ತಾರೆ. ಒಟ್ಟಿನಲ್ಲಿ ಪುಸ್ತಕ ಓದಿ ಮುಗಿಸಿದ ನಂತರವೂ ಕುಂವೀ ಎನ್ನುವ ಸೃಜನಶೀಲ ವ್ಯಕ್ತಿತ್ವ ನಮ್ಮನ್ನು ಅನೇಕ ದಿನಗಳವರೆಗೆ ಕಾಡುತ್ತದೆ.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 


No comments:

Post a Comment