Monday, May 15, 2023

ದೊಕಾಚಿ ಮೇಷ್ಟ್ರ ಶಾಂತಿ-ಕ್ರಾಂತಿ (ಕಥಾಸಂಕಲನ)

 

ದೊಕಾಚಿ ಮೇಷ್ಟ್ರ ಶಾಂತಿ-ಕ್ರಾಂತಿ (ಕಥಾಸಂಕಲನ)





ಇತ್ತೀಚಿಗೆ ನನ್ನ ‘ದೊಕಾಚಿ ಮೇಷ್ಟ್ರ ಶಾಂತಿ-ಕ್ರಾಂತಿ’ ಕಥಾಸಂಕಲನ ಪ್ರಕಟವಾಯಿತು. ಇದು 2023 ರಲ್ಲಿ ಪ್ರಕಟವಾದ ನನ್ನ ಕಥಾಸಂಕಲನ. ಬೆಂಗಳೂರಿನ ಅಕ್ಷರ ಮಂಟಪ ಪ್ರಕಾಶಕರು ಈ ಕಥಾಸಂಕಲನವನ್ನು ಪ್ರಕಟಿಸಿರುವರು. ಚೇತನ್ ಕಣಬೂರ ಅವರು ಪ್ರೀತಿಯಿಂದ ಪ್ರಕಟಿಸಿರುವರು. ಅವರಿಗೆ ನನ್ನ ಧನ್ಯವಾದಗಳು.
ಈ ಕಥಾಸಂಕಲನದಲ್ಲಿ 15 ಕಥೆಗಳಿವೆ. ಮಯೂರ, ತರಂಗ, ತುಷಾರ, ಕನ್ನಡಪ್ರಭ ಮತ್ತು ಮಾನಸ ಪತ್ರಿಕೆಗಳ ಸಂಪಾದಕರು ಈ ಕಥೆಗಳನ್ನು ಪ್ರಕಟಿಸಿ ನನ್ನನ್ನು ಕನ್ನಡದ ಕಥಾಲೋಕಕ್ಕೆ ಪರಿಚಿಯಿಸಿರುವರು. ಎಲ್ಲ 15 ಕಥೆಗಳನ್ನು ಸೇರಿಸಿ ಈಗ ಕಥಾಸಂಕಲನ ಪ್ರಕಟವಾಗಿದೆ. 
 ನಾನು ಕಥೆಗಳನ್ನು ಬರೆಯುತ್ತೇನೆಂದು ಭಾವಿಸಿರಲಿಲ್ಲ. ಈ ಸೃಜನಶೀಲ ಸಾಹಿತ್ಯದ ಸೃಷ್ಟಿಗೆ ಮೂಲ ಪ್ರೇರಣೆ ಅಮ್ಮನ ಕಥೆಗಳ ಓದು. ಮನೆಗೆಲಸದ ಬಿಡುವಿನ ವೇಳೆ ಅಕ್ಕಪಕ್ಕದ ಮನೆಯ ಹೆಂಗಸರೆಲ್ಲ ಪಟ್ಟಾಂಗ ಕುಳಿತು ಮಾತುಕತೆಯಲ್ಲಿ ತೊಡಗಿರುವಾಗ ನನ್ನ ಅಮ್ಮ ಕಥೆಯ ಪುಸ್ತಕ ಕೈಯಲ್ಲಿ ಹಿಡಿದು ಓದಿನಲ್ಲಿ ಮೈಮರೆಯುತ್ತಿದ್ದಳು. ಹೀಗೆ ಅಮ್ಮನ ಓದಿಗಾಗಿ ಮನೆಗೆ ಬಂದು ಸೇರಿದ ಕಥಾ ಪುಸ್ತಕಗಳು ನನ್ನನ್ನೂ ಬಾಚಿತಬ್ಬಿಕೊಂಡವು. ಈಗ ಅನಿಸುತ್ತದೆ ಅಮ್ಮ ಆ ಕಥೆಗಳಲ್ಲಿ ತನ್ನ ಬದುಕನ್ನು ಹುಡುಕುತ್ತಿದ್ದಳೇನೋ ಎಂದು. ಎಷ್ಟೆಂದರೂ ಕಥೆ ಎನ್ನುವುದು ಒಬ್ಬರ ಬದುಕಲ್ಲದೆ ಮತ್ತೆನಲ್ಲವಲ್ಲ. ಅಮ್ಮ ನನಗೂ ಒಂದಿಷ್ಟು ಕಥೆಯ ಓದಿನ ಗೀಳು ಅಂಟಿಸಿ ಸಾಹಿತ್ಯದ ಮೂಲಕವೇ ಬದುಕಿನ ಅರ್ಥ ಅರಿಯುವ ಪಯಣದ ದಾರಿ ತೋರಿಸಿಕೊಟ್ಟಳು. ಹಾಗೆಂದೆ ಈ ಕಥಾಸಂಕಲನ ನನ್ನಮ್ಮನಿಗೆ, ಭಾವದಲ್ಲಿ ನೆಲೆ ನಿಂತಿರುವ ಅವಳ ನೆನಪುಗಳಿಗೆ ಸಮರ್ಪಿಸಿದ್ದೇನೆ.
-ರಾಜಕುಮಾರ ಕುಲಕರ್ಣಿ

No comments:

Post a Comment