Friday, November 3, 2023

ಗ್ರಾಮೀಣ ಗ್ರಂಥಾಲಯ ಜನಸ್ನೇಹಿ ಆಗಲಿ

 


(೨೨.೦೯.೨೦೨೩ ರ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ)

      ಇತ್ತೀಚೆಗೆ ಗ್ರಾಮಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರ ತರಬೇತಿ ಶಿಬಿರದಲ್ಲಿ ನಾನು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದೆ. ಶಿಬಿರಾರ್ಥಿಗಳಲ್ಲಿ ಗ್ರಂಥಾಲಯ ಸಂಬಂಧಿತ ಹೊಸ ಸಂಗತಿಗಳನ್ನು ತಿಳಿದುಕೊಳ್ಳಬೇಕೆನ್ನುವ ಆಸಕ್ತಿ ಮತ್ತು ಕುತೂಹಲಗಳಿದ್ದದ್ದು ಕಂಡುಬಂತು. ಉಪನ್ಯಾಸದ ಕೊನೆಗೆ ಇಪ್ಪತ್ತು ಪ್ರಶ್ನೆಗಳ ಕಿರುಪರೀಕ್ಷೆಯನ್ನು ತೆಗೆದುಕೊಳ್ಳಲಾಯಿತು. ಪಡೆದ ಅಂಕಗಳನ್ನಾಧರಿಸಿ ಅವರಿಗೆ ವೃತ್ತಿಯಲ್ಲಿ ಆಸಕ್ತಿ ಇದೆ ಅಥವಾ ಇಲ್ಲ ಎಂದು ಮೌಲ್ಯಮಾಪನದ ಮೂಲಕ  ಗುರುತಿಸಲಾಯಿತು. ಪ್ರತಿಶತ 90 ರಷ್ಟು ಶಿಬಿರಾರ್ಥಿಗಳು ವೃತ್ತಿಯಲ್ಲಿ ಆಸಕ್ತಿ ಇದೆ ಎನ್ನುವ ಗುಂಪಿಗೆ ಸೇರ್ಪಡೆಯಾದರು. 

ಉಪನ್ಯಾಸದ ಸಂದರ್ಭ ಶಿಬಿರಾರ್ಥಿಗಳನ್ನು ನಿಮ್ಮ ಗ್ರಂಥಾಲಯ ವ್ಯಾಪ್ತಿಯಲ್ಲಿನ ಓದುಗರಿಗೆ ಅಗತ್ಯವಾದ ಪುಸ್ತಕಗಳು ನಿಮ್ಮಲ್ಲಿವೆಯೇ ಎಂದು ಕೇಳಿದೆ. ಆಗ ಹೆಚ್ಚಿನ ಸಂಖ್ಯೆಯ ಶಿಬಿರಾರ್ಥಿಗಳ ಉತ್ತರ ನಕರಾತ್ಮಕವಾಗಿತ್ತು. ಪುಸ್ತಕ ಆಯ್ಕೆ ಸಮಿತಿಯಾಗಲಿ ಮತ್ತು ಕೇಂದ್ರ ಗ್ರಂಥಾಲಯವಾಗಲಿ ಗ್ರಾಮೀಣ ಗ್ರಂಥಾಲಯಗಳಿಂದ ಬೇಡಿಕೆಯ ಪುಸ್ತಕಗಳ ಪಟ್ಟಿಯನ್ನು ಪಡೆಯುವುದಿಲ್ಲವೆಂಬ ಸಂಗತಿ ತಿಳಿದುಬಂತು. ಕೇಂದ್ರ ಗ್ರಂಥಾಲಯವು ಪೂರೈಸುವ ಪುಸ್ತಕಗಳನ್ನಷ್ಟೆ ಸಂಗ್ರಹಿಸಿಡುವ ಕೆಲಸ ತಮ್ಮದೆಂದು ಕೆಲವರು ಬೇಸರ ವ್ಯಕ್ತಪಡಿಸಿದರು. ಪರಿಣಾಮವಾಗಿ ಗ್ರಾಮೀಣ ಭಾಗದ ಓದುಗರಿಗೆ ಅಗತ್ಯವಾದ ಪುಸ್ತಕಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲವೆಂದು ತಮ್ಮ ಅಸಹಾಯಕತೆ ತೋಡಿಕೊಂಡರು.

ಕರ್ನಾಟಕದ ಗ್ರಾಮೀಣ ಭಾಗದ ಜನಜೀವನ, ಉದ್ಯೋಗ, ಕೃಷಿ ಇವುಗಳಲ್ಲಿ ವಿಭಿನ್ನತೆ ಇದೆ. ಹೀಗಾಗಿ ಒಂದೇ ಪ್ರಕಾರದ ಪುಸ್ತಕಗಳನ್ನು ಎಲ್ಲ ಗ್ರಾಮಪಂಚಾಯಿತಿ ಗ್ರಂಥಾಲಯಗಳಿಗೆ ಒದಗಿಸುವುದು ವೈಜ್ಞಾನಿಕವಾಗಿ ಸರಿಯಾದ ಕ್ರಮವಲ್ಲ. ಐದು ಸಾವಿರಕ್ಕೂ ಹೆಚ್ಚು ಗ್ರಾಮಪಂಚಾಯಿತಿ ಗ್ರಂಥಾಲಯಗಳು ಕರ್ನಾಟಕದಲ್ಲಿವೆ. ಈ ಎಲ್ಲ ಗ್ರಂಥಾಲಯಗಳನ್ನು ವಿಭಾಗವಾರು ವಿಂಗಡಿಸಿ ಆಯಾ ಭಾಗದ ಗ್ರಾಮೀಣ ಜನತೆಯ ಅಗತ್ಯಗಳಿಗನುಸಾರವಾಗಿ ಪುಸ್ತಕಗಳು ಪೂರೈಕೆಯಾಗಬೇಕು. ಕೇವಲ ಕಥೆ, ಕಾದಂಬರಿಗಳಂತಹ ಸಾಹಿತ್ಯ ಕೃತಿಗಳನ್ನು ಮಾತ್ರ ಗ್ರಂಥಾಲಯಗಳಲ್ಲಿ ಸಂಗ್ರಹಿಸಿಡುತ್ತೇವೆ ಎನ್ನುವುದು ವಿತಂಡವಾದವಾಗುತ್ತದೆ. ಗ್ರಂಥಾಲಯಗಳು ಮಾಹಿತಿ ಕೇಂದ್ರಗಳೂ ಆಗಬೇಕಾಗಿರುವುದರಿಂದ ಆಯಾ ಗ್ರಾಮೀಣ ಪ್ರದೇಶಗಳ ಕೃಷಿ, ಪರಿಸರ, ಸರ್ಕಾರದ ಸವಲತ್ತುಗಳು ಮತ್ತು ಜನಜೀವನವನ್ನಾಧರಿಸಿದ ಪುಸ್ತಕಗಳು ಗ್ರಾಮೀಣ ಗ್ರಂಥಾಲಯಗಳಲ್ಲಿ ಸಿಗುವಂತಾಗಬೇಕು. ಗ್ರಾಮೀಣ ಭಾಗದ ಮಕ್ಕಳ ಓದಿನ ಅಭಿರುಚಿಯ ವಿಕಸನಕ್ಕೆ ಅಗತ್ಯವಾದ ಪುಸ್ತಕಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನೆರವಾಗುವ ಮಾಹಿತಿ ಕೂಡ ಗ್ರಾಮೀಣ ಗ್ರಂಥಾಲಯಗಳಲ್ಲಿ ಲಭ್ಯವಾಗಬೇಕು.  

ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಗ್ರಂಥಾಲಯಗಳ ದುಸ್ಥಿತಿ ಕುರಿತು ಬರೆಯುತ್ತ ಹೀಗೆ ಹೇಳುತ್ತಾರೆ ‘ಗ್ರಾಮಪಂಚಾಯಿತಿ ಗ್ರಂಥಾಲಯಗಳಿಗೆ ಬೇಕಾದ ಮೂಲಭೂತ ಅಗತ್ಯಗಳಾದ ಸುಸಜ್ಜಿತ ಕಟ್ಟಡ, ಕಪಾಟುಗಳು, ಅಗತ್ಯದ ಗ್ರಂಥಗಳು, ಎಲ್ಲ ಪತ್ರಿಕೆಗಳು ಇವುಗಳನ್ನು ಕಲ್ಪಿಸಿಕೊಟ್ಟರೆ ನಮ್ಮ ಸಾಮಾಜಿಕ ರಚನೆಯ ಸ್ವರೂಪವೇ ಬದಲಾಗಬಹುದು. ಹಳ್ಳಿಯ ರೈತನೊಬ್ಬನಿಗೆ ಅಗತ್ಯದ ಮಾಹಿತಿ ಇಂತಹ ಗ್ರಂಥಾಲಯಗಳಲ್ಲಿ ಸಿಗುವಂತೆ ಅದರ ಸ್ವರೂಪವನ್ನು ರೂಪಿಸಿದರೆ ನಮ್ಮ ಗ್ರಂಥಾಲಯಗಳು ಜನಸ್ನೇಹಿಯಾಗಬಹುದು’.

ರಾಜ್ಯದ ಗ್ರಂಥಾಲಯ ಇಲಾಖೆಯು ಪುಸ್ತಕ ಆಯ್ಕೆ ಮತ್ತು ಖರೀದಿಯ ಪ್ರಕ್ರಿಯೆಯನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದೆ. ಪುಸ್ತಕಗಳ ಆಯ್ಕೆ ಸಂದರ್ಭ ಗ್ರಾಮಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರ ಸಲಹೆ ಸೂಚನೆಗಳನ್ನು ಪಡೆಯುತ್ತಿಲ್ಲ. ಜಿಲ್ಲಾ ಕೇಂದ್ರ ಗ್ರಂಥಾಲಯಗಳಿಗೂ ಸಹ ಜಿಲ್ಲೆಯ ಲೇಖಕರ/ಪ್ರಕಾಶಕರ ಇಂತಿಷ್ಟು ಪ್ರಮಾಣದ ಪುಸ್ತಕಗಳ ಖರೀದಿಯನ್ನು ಹೊರತುಪಡಿಸಿದರೆ ಹೆಚ್ಚಿನ ಅಧಿಕಾರವಿಲ್ಲ. ಅನೇಕ ಪ್ರಕಾಶಕರು ಆರೋಪಿಸುವಂತೆ ಕೆಲವು ಪುಸ್ತಕ ಪ್ರಕಾಶಕರು ಆಯ್ಕೆ ಸಮಿತಿ ಮತ್ತು ಗ್ರಂಥಾಲಯ ಇಲಾಖೆಯ ಮೇಲೆ ಸಂಪೂರ್ಣ ಹಿಡಿತ ಹೊಂದಿರುವರು.  ಸಾರ್ವಜನಿಕ ಗ್ರಂಥಾಲಯಗಳಿಗೆಂದೆ ಪುಸ್ತಕಗಳನ್ನು ಪ್ರಕಟಿಸುವ ಇಂಥ ಪ್ರಕಾಶಕರು ಒಬ್ಬರೆ ಹಲವು ಹೆಸರಿನ ಪ್ರಕಾಶನ ಸಂಸ್ಥೆಗಳ ಮೂಲಕ ಪುಸ್ತಕಗಳನ್ನು ಪೂರೈಸುವರು. ಇಲ್ಲಿ ಅಧಿಕಾರಿಗಳ ಮತ್ತು ಪ್ರಕಾಶಕರ ವೈಯಕ್ತಿಕ ಹಿತಾಸಕ್ತಿ ಮುನ್ನೆಲೆಗೆ ಬಂದು ಓದುಗರ ಬೇಡಿಕೆ ಮತ್ತು ಅಗತ್ಯ ಹಿನ್ನೆಲೆಗೆ ಸರಿಯುತ್ತವೆ. ಇಂಥ ವಾತಾವರಣದಲ್ಲಿ ಗ್ರಾಮಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರು ಓದುಗರ ಬೇಡಿಕೆಗೆ ಸ್ಪಂದಿಸುವುದು ದೂರದ ಮಾತು. 

ಇತ್ತೀಚೆಗೆ ನಿಧನರಾದ ವಿಮರ್ಶಕ ಜಿ.ಎಚ್.ನಾಯಕ್ ಅವರ ಕುರಿತು ಬರೆದ ಲೇಖನದಲ್ಲಿ ಎಚ್.ಎಸ್.ರಾಘವೇಂದ್ರರಾವ್ ಉಲ್ಲೇಖಿಸಿರುವ ಒಂದು ಘಟನೆ ಹೀಗಿದೆ-‘ನಾಯಕ್ ಅವರು ಗ್ರಂಥಾಲಯ ಇಲಾಖೆಯ ಪುಸ್ತಕ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ನೇಮಕವಾದಾಗ ಎರಡೋ ಮೂರೋ ದಿನಗಳಲ್ಲಿ ಸಾವಿರಾರು ಪುಸ್ತಕಗಳನ್ನು ಆಯ್ಕೆ ಮಾಡಬೇಕಾಗಿ ಬಂತು. ಸರಿಯಾಗಿ ಓದಿ ಮೌಲ್ಯಮಾಪನ ಮಾಡಲು ಅವಕಾಶ ಕೊಡದಿದ್ದರೆ ಈ ಕೆಲಸವೇ ಬೇಡವೆಂದು ಆ ಕ್ಷಣವೇ ರಾಜಿನಾಮೆ ಕೊಟ್ಟವರು ನಮ್ಮ ನಾಯಕರು. ಅವರ ಅಧ್ಯಕ್ಷ ಪದವಿ ಆ ಸಭೆಗೇ ಮುಗಿದು ಹೋಯಿತು’. ಆದರೆ ಜಿ.ಎಚ್.ನಾಯಕ್ ಅವರಂತೆ ಮನಸಾಕ್ಷಿಗನುಗುಣವಾಗಿ ನಡೆದುಕೊಳ್ಳುವ ವ್ಯಕ್ತಿಗಳು ಈಗ ಸಿಗುವುದು ವಿರಳ. 

ಗ್ರಾಮಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರು ಎದುರಿಸುತ್ತಿರುವ ಇನ್ನೊಂದು ಸಮಸ್ಯೆ ಎಂದರೆ ಅವರು ಎರಡು ಪ್ರತ್ಯೇಕ ಇಲಾಖೆಗಳ ಅಧೀನದಲ್ಲಿ ಕಾರ್ಯನಿರ್ವಹಿಸಬೇಕಿದೆ. ಸಂಬಳ ಜಿಲ್ಲಾಪಂಚಾಯಿತಿ ಇಲಾಖೆ ಪಾವತಿಸಿದರೆ, ಗ್ರಂಥಾಲಯ ಇಲಾಖೆ ಪುಸ್ತಕಗಳನ್ನು ಪೂರೈಸುತ್ತದೆ. ಈ ಎರಡು ಇಲಾಖೆಗಳ ನಡುವೆ ಹೊಂದಾಣಿಕೆಯಿದ್ದಾಗ ಮಾತ್ರ ಗ್ರಾಮಪಂಚಾಯಿತಿ ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸಲು ಸಾಧ್ಯ. ಜೊತೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿ.ಡಿ.ಒ) ಮತ್ತು ಮೇಲ್ವಿಚಾರಕರ ಮಧ್ಯೆ ಸಮನ್ವಯತೆಯ ಕೊರತೆ ಕೂಡ ಪ್ರಮುಖ ಸಮಸ್ಯೆಯಾಗಿದೆ. ಸಂಬಳವನ್ನು ಪ್ರತಿತಿಂಗಳು ನಿಯಮಿತವಾಗಿ ಪಾವತಿಸದೆ ವಿಳಂಬ ಮಾಡುತ್ತಿರುವುದು ಮೇಲ್ವಿಚಾರಕರಲ್ಲಿ ಕೆಲಸದ ನಿರಾಸಕ್ತಿಗೆ ಕಾರಣವಾಗಿದೆ. ಇಲಾಖೆಗಳ ನಡುವಣ ಸಂಘರ್ಷ ಮತ್ತು ಪುಸ್ತಕ ಖರೀದಿ ಪ್ರಕ್ರಿಯೆಯ ಕೇಂದ್ರಿಕೃತ ವ್ಯವಸ್ಥೆಯಿಂದಾಗಿ ಗ್ರಾಮೀಣ ಗ್ರಂಥಾಲಯಗಳ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಒಟ್ಟಾರೆ ಸುಧಾರಣೆ ಆಗಬೇಕಾಗಿರುವುದು ತಳಮಟ್ಟದಲ್ಲಲ್ಲ, ನೀತಿ ನಿಯಮಗಳನ್ನು ರೂಪಿಸುವ ಮತ್ತು ದೂರದಲ್ಲಿ ಕುಳಿತು ಏಕಪಕ್ಷಿಯ ನಿರ್ಧಾರ ತೆಗೆದುಕೊಳ್ಳುವ ಮೇಲ್ಮಟ್ಟದಲ್ಲಾಗಬೇಕು. ದುರಂತವೆಂದರೆ ನಾವು ಸದಾಕಾಲ ತಳಮಟ್ಟದ ಸುಧಾರಣೆಗಳತ್ತ ಗಮನಹರಿಸುತ್ತ ಮೇಲ್ಮಟ್ಟದ ಆಡಳಿತಶಾಹಿಯನ್ನು ಮರೆತು ಬಿಡುತ್ತೇವೆ. 

-ರಾಜಕುಮಾರ ಕುಲಕರ್ಣಿ


No comments:

Post a Comment