Tuesday, June 12, 2012

ರತನ್ ಟಾಟಾ: ಮಾನವೀಯ ಮೌಲ್ಯಗಳ ಹೃದಯವಂತ

          ಮುಂಬೈ ಮೇಲಿನ ಉಗ್ರರ ದಾಳಿ ಪ್ರಕರಣ ಇತಿಹಾಸದ ಪುಟ ಸೇರಿದೆ. ಪಾಪಿ ಕಸಬ್ ನನ್ನು ನ್ಯಾಯಾಲಯ ಶಿಕ್ಷಿಸಿದೆ. ತೀರ್ಪು ನೀಡಿದ ನ್ಯಾಯಾಧೀಶರಿಗೆ ಮತ್ತು ಕಸಬ್ ವಿರುದ್ಧ ವಾದಿಸಿದ ಸರಕಾರಿ ವಕೀಲರಿಗೆ ದೇಶದ ಮೂಲೆ ಮೂಲೆಯಿಂದ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ. ಕಸಬ್ ಗೆ ನೇಣು ಶಿಕ್ಷೆ ಖಾತ್ರಿ ಆಗುತ್ತಿದ್ದಂತೆ ಇಡೀ ದೇಶಕ್ಕೆ ದೇಶವೇ ಸಂಭ್ರಮಿಸಿತು. ಪಟಾಕಿ ಸಿಡಿಸಿ, ಸಿಹಿ ಹಂಚಿ ಜನರು ತಮ್ಮ ಸಂತಸ ವ್ಯಕ್ತಪಡಿಸಿದರು. ಪ್ರಕಟಣಾ ಮತ್ತು ದೃಶ್ಯ ಮಾಧ್ಯಮಗಳು ಈ ಸುದ್ಧಿಯನ್ನು ವಿಶೇಷವಾಗಿಯೇ ಬಿತ್ತರಿಸಿದವು. ಈ ನಡುವೆ ಅದೇ ಮುಂಬೈ ದಾಳಿಗೆ ಸಂಬಂಧಿಸಿದ ಆ ಒಂದು ಸುದ್ಧಿಯ ಮೇಲೆ ಯಾವ ಮಾಧ್ಯಮವೂ ಬೆಳಕು ಬೀರಲಿಲ್ಲ. ರೋಚಕ ಸುದ್ಧಿಗಳ ಸುತ್ತಲೇ ಗಿರಕಿ ಹೊಡೆಯುತ್ತಿರುವ ಮಾಧ್ಯಮಗಳಿಗೆ ಮಾನವೀಯ ಮುಖವನ್ನು ಪರಿಚಯಿಸಲು ಪುರುಸೊತ್ತು ಇಲ್ಲದಿರುವುದು ವಿಷಾದದ ಸಂಗತಿ. ಆ ಕೃತ್ಯದಿಂದ ಉಪಕೃತರಾದವರು ಮತ್ತು ರತನ್ ಟಾಟಾ ಅಭಿಮಾನಿಗಳು ಇಂಟರ್ ನೆಟ್ ನಲ್ಲಿ ಚರ್ಚಿಸದೆ ಇದ್ದಿದ್ದರೆ ಅಂಥದ್ದೊಂದು ಘಟನೆ ಯಾರ ಗಮನಕ್ಕೂ ಬರುತ್ತಿರಲಿ. ನಡೆದದ್ದಿಷ್ಟು ನವೆಂಬರ್ 26 ರಂದು ಪಾಕಿಸ್ತಾನದ ಉಗ್ರರು ಮುಂಬೈ ನಗರದ ಮೇಲೆ ದಾಳಿ ಮಾಡಿದಾಗ ಅವರು ತಮ್ಮ ವಿಧ್ವಂಸಕ ಕೃತ್ಯಕ್ಕಾಗಿ ಆಯ್ಕೆಮಾಡಿಕೊಂಡ ಸ್ಥಳಗಳಲ್ಲಿ ತಾಜ್ ಹೊಟೆಲ್ ಕೂಡಾ ಒಂದು. ಉಗ್ರರ ದಾಳಿಯಿಂದ ತಾಜ್ ಹೊಟೆಲ್  ಜಖಂ ಗೊಂಡಿತು. ನೂರಾರು ನಾಗರಿಕರು ಗಾಯಗೊಂಡರು. ಅನೇಕರು ತಮ್ಮ ಪ್ರಾಣ ಕಳೆದುಕೊಂಡರು. ಗಾಯಾಳುಗಳ ಮತ್ತು ಹತರಾದವರ ಪಟ್ಟಿಯಲ್ಲಿ ತಾಜ್ ಹೊಟೆಲ್  ನ ನೌಕರರೂ ಇದ್ದರು. ಈ ಘಟನೆಯ ನಂತರ ಅನೇಕ ದಿನಗಳವರೆಗೆ ತಾಜ್ ಹೊಟೆಲ್  ನ ಬಾಗಿಲು ಮುಚ್ಚಲ್ಪಟ್ಟಿತು. ಹೊಟೆಲ್  ಸಿಬ್ಬಂದಿಯ ವಿಷಯದಲ್ಲಿ ಇದು ಗಾಯದ ಮೇಲೆ ಬರೆ ಎಳೆದಂತೆ. ಆದರೆ ಹೊಟೆಲ್  ಮುಖ್ಯಸ್ಥ ರತನ್ ಟಾಟಾ ಸುಮ್ಮನೆ ಕೈ ಕಟ್ಟಿಕೊಂಡು ಕೂಡಲಿಲ್ಲ. ತಮ್ಮ ಹೊಟೆಲ್  ಸಿಬ್ಬಂದಿಯ ಮನೆ ಮನೆಗೂ ಭೇಟಿ ನೀಡಿದರು. ಅವರ ಕಷ್ಟ, ಸಂಕಟಗಳಿಗೆ ಕಿವಿಯಾದರು. ಅವರ ನೆಮ್ಮದಿಯ ಬದುಕಿಗೆ ಅಗತ್ಯವಾದ ಎಲ್ಲ ಸೌಕರ್ಯಗಳನ್ನು ಒದಗಿಸಿದರು. ಮುಂದಿನದು ಇಂಟರ್ ನೆಟ್ ನಲ್ಲಿ ಓದಿದ್ದರ ಕನ್ನಡ ಅನುವಾದ.
1. ಉಗ್ರರ ದಾಳಿಯ ದಿನದಿಂದ ಹೊಟೆಲ್ ಪುನ: ಕಾರ್ಯಾರಂಭಿಸುವವರೆಗಿನ ಅವಧಿಯಲ್ಲಿ ಒಂದೇ ಒಂದು ದಿನ ನೌಕರಿ ಮಾಡಿದ ನೌಕರನಿಂದ ಎಲ್ಲ ನೌಕರರನ್ನು ಕೆಲಸಕ್ಕೆ ಹಾಜರಿರುವರೆಂದೇ ಪರಿಗಣಿಸಲಾಯಿತು.
2. ಆ ದಾಳಿಯಲ್ಲಿ ಗಾಯಾಳುಗಳಾದ ಮತ್ತು ಹತರಾದ ನೌಕರರ ಕುಟುಂಬಗಳಿಗೆ ತಕ್ಷಣವೇ ಪರಿಹಾರ ಕೊಡಲಾಯಿತು.
3. ಪರಿಹಾರವನ್ನು ಕೇವಲ ಹೊಟೆಲ್ ಸಿಬ್ಬಂದಿಗೆ ಮಾತ್ರ ಸೀಮಿತಗೊಳಿಸದೆ ಉಗ್ರರ ಗುಂಡೇಟಿನಿಂದ ಗಾಯಾಳುಗಳಾದ ರೈಲ್ವೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಪಾದಚಾರಿಗಳು, ಹೊಟೆಲ್ ಸುತ್ತಲಿನ ಪಾವ್ ಭಜಿ ವ್ಯಾಪಾರಿಗಳು ಮತ್ತು ಬೀಡಾ ಅಂಗಡಿ ಮಾಲೀಕರುಗಳಿಗೆ ಆರು ತಿಂಗಳುಗಳ ಕಾಲ ತಲಾ ಹತ್ತು ಸಾವಿರ ರುಪಾಯಿಗಳನ್ನು ಕಳುಹಿಸಿ ಕೊಡಲಾಯಿತು.
4. ಹೊಟೆಲ್ ತನ್ನ ಕಾರ್ಯಾಚರಣೆ ನಿಲ್ಲಿಸಿದ್ದ ಅವಧಿಯಲ್ಲಿ ಹೊಟೆಲ್ ಸಿಬ್ಬಂದಿಗೆ ಅವರ ಸಂಬಳವನ್ನು ಮನಿ ಆರ್ಡರ್ ಮೂಲಕ ಅವರವರ ಮನೆಗೆ ತಲುಪುವಂತೆ ವ್ಯವಸ್ಥೆ ಮಾಡಲಾಗಿತ್ತು. 
5. ಗಾಯಾಳುಗಳ ಮತ್ತು ಹತರಾದವರ ಕುಟುಂಬ ವರ್ಗದವರ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಟಾಟಾ ಸಮಾಜ ವಿಜ್ಞಾನ ಸಂಸ್ಥೆಯ ನೆರವಿನೊಂದಿಗೆ ಮಾನಸಿಕ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಯಿತು.
6. ಸಿಬ್ಬಂದಿ ಸುರಕ್ಷಾ ಕೇಂದ್ರಗಳನ್ನು ಸ್ಥಾಪಿಸಿ ಅಲ್ಲಿ ಮೂಲ ಅವಶ್ಯಕತೆಗಳಾದ ಆಹಾರ, ನೀರು, ಪ್ರಥಮ ಚಿಕಿತ್ಸೆ ಇತ್ಯಾದಿ ಸೌಲಭ್ಯಗಳು ದೊರೆಯುವ ಎಲ್ಲ ವ್ಯವಸ್ಥೆ ಮಾಡಲಾಯಿತು. ತಾಜ್ ಹೊಟೆಲ್ ನ ಒಟ್ಟು 1600 ಸಿಬ್ಬಂದಿ ಈ ಸೌಲಭ್ಯವನ್ನು ಉಪಯೋಗಿಸಿಕೊಂಡರು.
7. ಗಾಯಾಳುವಾದ ಪ್ರತಿಯೊಬ್ಬ ಸಿಬ್ಬಂದಿಯ ಉಪಚಾರಕ್ಕಾಗಿ ರತನ್ ಟಾಟಾ ಖುದ್ದು ಮುತುವರ್ಜಿವಹಿಸಿ ಒಬ್ಬೊಬ್ಬ ಪರಿಚಾರಕನನ್ನು ನೇಮಿಸಿದರು. 
8. ದಾಳಿಯಲ್ಲಿ ಗಾಯಾಳುಗಳಾದ ಮತ್ತು ಹತರಾದ ಒಟ್ಟು 80 ಸಿಬ್ಬಂದಿಯ ಕುಟುಂಬ ವರ್ಗದವರನ್ನು ರತನ್ ಟಾಟಾ ವೈಯಕ್ತಿಕವಾಗಿ ಭೇಟಿ ಮಾಡಿ ನೆರವಿನ ಸಹಾಯ ಹಸ್ತ ಚಾಚಿದರು.
9. ಗಾಯಾಳುಗಳಾದ ಸಿಬ್ಬಂದಿಯ ಕುಟುಂಬ ವರ್ಗದವರು ತಮ್ಮ ತಮ್ಮ ಊರುಗಳಿಂದ ಮುಂಬೈಗೆ ಬರಲು ಎಲ್ಲ ಅನುಕೂಲಗಳನ್ನು ಮಾಡಿಕೊಡಲಾಯಿತು. ಅಲ್ಲದೆ ಅವರಿಗೆ ಮೂರು ವಾರಗಳ ಕಾಲ ಹೊಟೆಲ್ ಪ್ರೆಸಿಡೆಂಟ್ ನಲ್ಲಿ ವಸತಿ ಸೌಕರ್ಯ ಕಲ್ಪಿಸಲಾಯಿತು.
10. ರತನ್ ಟಾಟಾ ತಮ್ಮ ಸಿಬ್ಬಂದಿಯ ಕುಟುಂಬ ವರ್ಗದವರನ್ನು ಭೇಟಿ ಮಾಡಿ ಅವರು ತಮ್ಮಿಂದ ಯಾವ ರೀತಿಯ ಸಹಾಯ ನಿರಿಕ್ಷಿಸುತ್ತಿರುವರೆಂದು ಕೇಳಿದರು. 
11. ಉಗ್ರರ ದಾಳಿಯ ನಂತರ ರತನ್ ಟಾಟಾ ಕೇವಲ 20 ದಿನಗಳಲ್ಲಿ ಟ್ರಸ್ಟ್ ಸ್ಥಾಪಿಸಿ ತಮ್ಮ ಸಿಬ್ಬಂದಿಯ ಪರಿಹಾರ ಕಾರ್ಯಕ್ಕೆ ತ್ವರಿತ ಚಾಲನೆ ನೀಡಿದರು. 
12. ರಸ್ತೆ ಬದಿಯ ವ್ಯಾಪಾರಿಯ ನಾಲ್ಕು ವರ್ಷದ ಮೊಮ್ಮಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದಾಗ ಅವಳ ದೇಹವನ್ನು ಹೊಕ್ಕ ನಾಲ್ಕು ಬುಲೆಟ್ ಗಳಲ್ಲಿ ಕೇವಲ ಒಂದನ್ನು ಮಾತ್ರ ಹೊರತೆಗೆಯಲು ಸಾಧ್ಯವಾಯಿತು. ರತನ್ ಟಾಟಾ ಆ ಮಗುವನ್ನು ಬಾಂಬೆ ಆಸ್ಪತ್ರೆಗೆ ದಾಖಲಿಸಿ ಲಕ್ಷಾಂತರ ರುಪಾಯಿಗಳನ್ನು ಖರ್ಚು ಮಾಡಿ ಮಗುವಿಗೆ ಪುನರ್ಜನ್ಮ ನೀಡಿದರು. 
13. ಈ ಘಟನೆಯಲ್ಲಿ ತಮ್ಮ ತಳ್ಳು ಗಾಡಿಗಳನ್ನು ಕಳೆದುಕೊಂಡ ತಾಜ್ ಹೊಟೆಲ್ ನ ಸುತ್ತ ಮುತ್ತಲಿನ ರಸ್ತೆ ಬದಿಯ ವ್ಯಾಪಾರಿಗಳಿಗೆ ಜೀವನೋಪಾಯಕ್ಕಾಗಿ ಹೊಸ ತಳ್ಳು ಗಾಡಿಗಳನ್ನು ಖರೀದಿಸಿ ಕೊಡಲಾಯಿತು. 
14. ಉಗ್ರರ ಗುಂಡೇಟಿಗೆ ಬಲಿಯಾದ 46 ಸಿಬ್ಬಂದಿಯ ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ರತನ್ ಟಾಟಾ ವಹಿಸಿಕೊಂಡರು.
15. ಉಗ್ರರ ದಾಳಿಯ ನಂತರ ಸತತ ಮೂರು ದಿನಗಳ ಕಾಲ ರತನ್ ಟಾಟಾ ತಮ್ಮ ಹೊಟೆಲ್ ಸಿಬ್ಬಂದಿಯ ಅಂತ್ಯಕ್ರಿಯೆಗಳಲ್ಲಿ ಭಾಗವಹಿಸಿದರು.
16. ಹತನಾದ ಪ್ರತಿಯೊಬ್ಬ ಸಿಬ್ಬಂದಿಯ ಕುಟುಂಬಕ್ಕೆ 36 ಲಕ್ಷಗಳಿಂದ 85 ಲಕ್ಷ ರುಪಾಯಿಗಳವರೆಗೆ ಪರಿಹಾರ ನೀಡಲಾಯಿತು. ಜೊತೆಗೆ ಕೆಲವು ವಿಶೇಷ ಸೌಲಭ್ಯಗಳನ್ನೂ ಒದಗಿಸಲಾಯಿತು.
ಎ)    ಮೃತ ಸಿಬ್ಬಂದಿಯ ಪತ್ನಿಗೆ ಆಕೆ ಬದುಕಿರುವಷ್ಟು ಕಾಲ  ಸಂಬಳ ನೀಡಲು ನಿರ್ಧರಿಸಲಾಯಿತು.
ಬಿ)   ಸಿಬ್ಬಂದಿ ಸಂಸ್ಥೆಯಿಂದ  ಪಡೆದ ಸಾಲ ಅಥವಾ ಮುಂಗಡ  ಹಣವನ್ನು ಮನ್ನಾ ಮಾಡಲಾಯಿತು.
ಸಿ) ಮೃತ ಸಿಬ್ಬಂದಿಯ  ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ರತನ್ ಟಾಟಾ ವಹಿಸಿಕೊಂಡರು. ವಿಶ್ವದ ಯಾವುದೇ   ದೇಶದಲ್ಲಿ   ಕಲಿಯಲು ಅನುಕೂಲ ಮಾಡಿಕೊಡುವ  ಭರವಸೆ  ಕೊಡಲಾಯಿತು.
     ದುರದೃಷ್ಟವಶಾತ್ ರಿಯಾಲಿಟಿ ಷೋ, ಐಪಿಎಲ್ ಹಗರಣ, ಸೆಲೆಬ್ರಿಟಿಗಳ ವೈಯಕ್ತಿಕ   ಬದಕಿನ  ಬೆನ್ನು ಬಿದ್ದಿರುವ ಮಾಧ್ಯಮಗಳಿಗೆ ಈ ಸುದ್ಧಿ ಗೋಚರವಾಗಲೇ ಇಲ್ಲ.  ಒಂದೊಮ್ಮೆ ಗೊತ್ತಿದ್ದರೂ ದಿವ್ಯ ನಿರ್ಲಕ್ಷ ತೆಳೆದಿರಬಹುದು. ಸಿನಿಮಾ ತಾರೆಯರ  ಮನೆಯ  ನಾಯಿ ಬೆಕ್ಕುಗಳನ್ನು ತೋರಿಸುವ ಭರಾಟೆಯಲ್ಲಿ ಇಂಥದ್ದೊಂದು ಮಾನವೀಯ ಅಂತ:ಕರಣ  ಕಣ್ಣಿಗೆ  ಕಾಣಿಸದೇ ಹೋಗಿರುವ ಸಾಧ್ಯತೆಯೂ ಇರಬಹುದು.

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 
  

No comments:

Post a Comment