Friday, June 14, 2013

ಎದೆಗೆ ಬಿದ್ದ ಅಕ್ಷರ: ಸಮಾನತೆಯ ಕನಸು ಮತ್ತು ಕಾಣ್ಕೆ






           'ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು' ದೇವನೂರ ಮಹಾದೇವರ 'ಎದೆಗೆ ಬಿದ್ದ ಅಕ್ಷರ' ಪುಸ್ತಕದ ಪುಟಗಳು ತೆರೆದುಕೊಳ್ಳುವುದೇ ಈ ಮೇಲಿನ ನುಡಿಯೊಂದಿಗೆ. ಪ್ರಕಟವಾದ ಕೆಲವೇ ತಿಂಗಳುಗಳಲ್ಲಿ ಅನೇಕ ಮುದ್ರಣಗಳನ್ನು ಕಂಡ ಪುಸ್ತಕವಿದು. ದೇವನೂರ ಮಹಾದೇವ ಕನ್ನಡ ಸಾಹಿತ್ಯ ಲೋಕದ ಅನನ್ಯ ಬರಹಗಾರ. ಅವರ ಅನೇಕ ಬಿಡಿ ಲೇಖನಗಳು ಮತ್ತು ಕಥೆಗಳು ಪ್ರಕಟವಾಗಿವೆಯಾದರೂ ಪುಸ್ತಕ ರೂಪದಲ್ಲಿ ಅವರ ಬರಹ ಬೆಳಕು ಕಂಡಿದ್ದು ಬಹಳಷ್ಟು ಕಡಿಮೆ ಎಂದೇ ಹೇಳಬಹುದು. ೧೯೭೩ ರಲ್ಲಿ ದ್ಯಾವನೂರು, ೧೯೮೨ ರಲ್ಲಿ ಒಡಲಾಳ, ೧೯೮೮ ರಲ್ಲಿ ಕುಸುಮ ಬಾಲೆಯ ನಂತರ ಪ್ರಕಟವಾದ ಕೃತಿ ಈ 'ಎದೆಗೆ ಬಿದ್ದ ಅಕ್ಷರ'. 

         ಕನ್ನಡದ ಪ್ರತಿಭಾವಂತ ಲೇಖಕರಲ್ಲಿ ಒಬ್ಬರಾದ ದೇವನೂರ ಮಹಾದೇವ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರಿನವರು. ಆರಂಭದ ಕೆಲವು ವರ್ಷಗಳ ಕಾಲ ಅಧ್ಯಾಪಕರಾಗಿ ಕೆಲಸ ಮಾಡಿದ ಮಹಾದೇವ ಅದು ತಮ್ಮ ಜಾಯಮಾನಕ್ಕೆ ಒಗ್ಗದೇ ಹೋದಾಗ ಯಾವ ಮುಲಾಜಿಲ್ಲದೆ ನೌಕರಿಗೆ ರಾಜೀನಾಮೆಯಿತ್ತು ಕೃಷಿಯಲ್ಲಿ ತೊಡಗಿಸಿಕೊಂಡವರು. ಜೊತೆ ಜೊತೆಗೆ ದಲಿತ ಚಳುವಳಿ ಮತ್ತು ಬಂಡಾಯ ಸಾಹಿತ್ಯದೊಂದಿಗೆ ತಮ್ಮನ್ನು ಗುರುತಿಸಿಕೊಂಡವರು. ಹಾಗೆಂದು ದಲಿತ ಚಳುವಳಿಯ ಬಗ್ಗೆ ಅವರದು ಸಂಪೂರ್ಣ ಕುರುಡು ನಂಬಿಕೆಯಲ್ಲ. ದಲಿತ ಸಂಘರ್ಷ ಸಮಿತಿಯಲ್ಲಿನ ಒಳಜಗಳ ಹಾಗೂ ಒಡಕುಗಳ ಬಗ್ಗೆ ನಿಷ್ಠುರವಾಗಿ ಮಾತನಾಡುವ ಎದೆಗಾರಿಕೆ ಅವರದು. ಕುವೆಂಪು ಮತ್ತು ಬೇಂದ್ರೆ ಅವರ ಸಾಹಿತ್ಯದ ಜೊತೆಗೆ ಶೇಕ್ಸ್ ಪಿಯರ್ ಮತ್ತು ಟಾಲ್ ಸ್ಟಾಯ್ ಅವರನ್ನೂ ಓದಿಕೊಂಡಿರುವ ದೇವನೂರ ಮಹಾದೇವ ಅಂಬೇಡ್ಕರ್ ರಷ್ಟೇ ಗಾಂಧಿಯನ್ನೂ  ಪ್ರೀತಿಸಬಲ್ಲರು. ಅವರು ಗತದ ನೆನಪುಗಳೊಂದಿಗೆ ವರ್ತಮಾನದಲ್ಲಿ ಬದುಕುತ್ತ ನಾಳಿನ ಕನಸುಗಳನ್ನು ಕಾಣುವರು. ಅವರ ಈ ವ್ಯಕ್ತಿತ್ವಕ್ಕೊಂದು ನಿದರ್ಶನ ಕೊಡುವುದಾದರೆ 'ಗಾಂಧಿಗೆ ಅಬ್ರಾಹಿಂ ಲಿಂಕನ್ ಸಿಕ್ಕಿದ್ರೆ ಭಾಳ ದೊಡ್ಡ ಸಂಗತಿಗಳು ಆಗ್ತಿದ್ವೇನೋ' ಎನ್ನುವ ಅವರ ಹೇಳಿಕೆಯೇ ಒಂದು ದೃಷ್ಟಾಂತ. ತಳ ಸಮುದಾಯದ ಸಾಮಾಜಿಕ  ಬದುಕಿನ ತಲ್ಲಣಗಳನ್ನು ಬರವಣಿಗೆಯ ಮೂಲಕ ತೆರೆದಿಡುತ್ತಿರುವ ಮಹಾದೇವರ ಬರಹಗಳಲ್ಲಿ ಸಂವೇದನೆ ಹಾಗೂ ಸಮಾಜದ ಕುರಿತಾದ ಕಾಳಜಿ ಈ ಗುಣಗಳು ಎದ್ದು ಕಾಣುತ್ತವೆ. 'ನನಗೆ ಏನೂ ಗೊತ್ತಿಲ್ಲ ಎಂಬ ರೀತಿಯಲ್ಲಿ ಎಂಬಂತೆ ಚಿಂತಿಸುವವರು ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ದೊಡ್ಡ ಚಿಂತಕರು' ಸಂದರ್ಶನವೊಂದರಲ್ಲಿ ಶಂಕರ ಮೊಕಾಶಿ ಪುಣೇಕರ್ ಅವರು ಹೇಳಿದ ಈ ಮಾತು ದೇವನೂರ ಮಹಾದೇವರಿಗೆ ಹೆಚ್ಚು ಅನ್ವಯಿಸುತ್ತದೆ.

             ಇನ್ನು 'ಎದೆಗೆ ಬಿದ್ದ ಅಕ್ಷರ' ಕೃತಿಯ ಕುರಿತು ಹೇಳುವುದಾದರೆ ಓದಿದ ನಂತರ ನನ್ನನ್ನು ಒಂದಿಷ್ಟು ಹೆಚ್ಚೇ ಎನ್ನುವಂತೆ ಕಾಡಿದ ಹಾಗೂ ಚಿಂತಿಸುವಂತೆ ಮಾಡಿದ ಪುಸ್ತಕವಿದು. ಪುಸ್ತಕದಲ್ಲಿ ಒಟ್ಟು ೯೦ ಲೇಖನಗಳಿದ್ದು ಸಂಖ್ಯೆ ಅತಿಯಾಯಿತೇನೋ ಎನ್ನಿಸಿದರೂ ಪುಸ್ತಕವೇನೂ ಬೃಹತ್ ಗಾತ್ರದಲ್ಲಿಲ್ಲ. ಲೇಖನಗಳನ್ನು ಹೆಚ್ಚು ಲಂಬಿಸದೆ ಹೇಳಬೇಕಾದದ್ದನ್ನು ತಮ್ಮ ಎಂದಿನ ರೂಪಕ ಶೈಲಿಯನ್ನು ಬಳಸಿಕೊಂಡು ನೇರವಾಗಿ ಹೇಳಿರುವ ವಿಧಾನ ಮೆಚ್ಚುಗೆ ಎನಿಸುತ್ತದೆ. ದೇವನೂರ ಮಹಾದೇವರೇ ಹೇಳಿಕೊಂಡಂತೆ ಇಲ್ಲಿರುವ ಲೇಖನಗಳಿಗೆ ಹಲವು ವರ್ಷ ವಯಸ್ಸಾಗಿದೆ. ಅವರು ಅಲ್ಲಲ್ಲಿ ಬರೆದ ಲೇಖನಗಳು ಮತ್ತು ಆಗೀಗ ಮಾಡಿದ ಭಾಷಣಗಳನ್ನು ಒಟ್ಟು ಸೇರಿಸಿ ಈ ಪುಸ್ತಕ ಪ್ರಕಟಿಸಲಾಗಿದೆ. ಲೇಖನಗಳಿಗೆ ವಯಸ್ಸಾಗಿದ್ದರೂ ಅವುಗಳಲ್ಲಿನ ವಿಷಯವಸ್ತು ತನ್ನ ತಾಜಾತನವನ್ನು ಹಾಗೆಯೇ ಉಳಿಸಿಕೊಂಡಿರುವುದು ಇಲ್ಲಿನ ವಿಶೇಷ. ಅದು ಆಯ್ದುಕೊಂಡ ವಿಷಯದ ವ್ಯಾಪ್ತಿ ಮತ್ತು ದೇವನೂರರ ಬರವಣಿಗೆಯ ಜನಪ್ರಿಯತೆ ಎರಡನ್ನೂ ಸೂಚಿಸುತ್ತದೆ.


            ಪುಸ್ತಕದ ಪ್ರಥಮದಲ್ಲಿ ದೇವನೂರ ಮಹಾದೇವ ಅವರು  ನನ್ನ ದೇವರು, ಕೊಳಕು ಎಲ್ಲಿದೆ, ಯಾರಿಗೆ ಯಾವ ಚಿಕಿತ್ಸೆ, ಅಹಿಂಸೆಯ ಹುಡುಕುತ್ತ, ಬುದ್ಧನೆಡೆಗೆ ಒಂದು ನಡಿಗೆ ಇತ್ಯಾದಿ ಲೇಖನಗಳಲ್ಲಿ ತಮ್ಮನ್ನು ಕಾಡಿದ ಅನೇಕ ಸಂಗತಿಗಳನ್ನು ಅಕ್ಷರಗಳಲ್ಲಿ  ಹಿಡಿದಿಟ್ಟಿರುವರು. ಬುದ್ಧ, ಗಾಂಧಿ, ಪರಮಹಂಸ, ಅಂಬೇಡ್ಕರ್ ರಲ್ಲಿನ  ಸತ್ಯ ಹಾಗೂ ಸಮಾನತೆಯ ಸಮಷ್ಟಿಯನ್ನು ಗುರುತಿಸುವ ಪ್ರಯತ್ನ ನಡೆಯಬೇಕಿದೆ ಎಂದೆನ್ನುವ ಲೇಖಕರು ಇವರೆಲ್ಲರ ಅಸ್ತಿತ್ವ ಪುಣ್ಯದಂತೆ ಕಾಣಿಸುತ್ತದೆ ಎಂದು ಕೃತಜ್ಞತೆ ಮೆರೆವರು. ಒಂದು ಸಮುದಾಯದ ಬದುಕನ್ನು ಬಂಡೆಗಳಿಗೆ ಹೋಲಿಸುತ್ತಲೇ ಮೂರ್ಛಾವಸ್ಥೆಯಲ್ಲಿರುವ  ನಮ್ಮೊಳಗಿನ  ಕಾರುಣ್ಯವನ್ನು ಎಚ್ಚರಗೊಳಿಸಬೇಕಾಗಿದೆ ಎಂದು ಇನ್ನೊಂದು ಸಮುದಾಯಕ್ಕೆ ಕರೆ ಕೊಡುತ್ತಾರೆ. ಕೆಲವರಲ್ಲಿನ ಕಾರುಣ್ಯ ಎಚ್ಚರಗೊಳ್ಳದೆ ಇದ್ದಲ್ಲಿ ಹಲವರ ಬದುಕು ಬಂಡೆಗಳ ಮೇಲೆಯೇ ಚಿಗುರೊಡೆಯಬೇಕಾಗಬಹುದು ಎನ್ನುವ ಆತಂಕ ಲೇಖಕರದು. ಒಟ್ಟಿನಲ್ಲಿ ಕೀಳು ಹುಚ್ಚುರೋಗದಿಂದ ಬಿಡುಗಡೆ ಪಡೆದು ಮೇಲು ಹುಚ್ಚುರೋಗದವರನ್ನು ವಿಮೋಚನೆಗೊಳಿಸಿದಾಗಲೇ ಸಮಾನತೆ ಸಾಧ್ಯ ಎನ್ನುವುದು ಇಲ್ಲಿನ ಎಲ್ಲ ಲೇಖನಗಳ ತಿರುಳಾಗಿದೆ.


            ತಳಸಮುದಾಯದ ಬದುಕಿನ ದಾರುಣತೆಯ ಜೊತೆಗೆ  ಅಸ್ಪೃಶ್ಯ ಸಮುದಾಯದೊಳಗಿನ ಭಿನ್ನಾಭಿಪ್ರಾಯಗಳು ಮತ್ತು ಅವರೊಳಗಿನ ಒಡಕುಗಳ ಕುರಿತು ಮಾತನಾಡಲು ದೇವನೂರ ಮಹಾದೇವ ಹಿಂಜರಿಯುವುದಿಲ್ಲ. ಸೌಲಭ್ಯಗಳಡಿ ಒಂದು ಬಹಿಷ್ಕೃತ ಬದುಕನ್ನು ಬಾಳುವುದಕ್ಕಿಂತ ಅದನ್ನು ಪ್ರತಿಭಟಿಸುವ ಮನೋಭಾವ ಜಾಗೃತಗೊಳ್ಳಬೇಕು ಎಂದು ಕರೆ ಕೊಡುವರು. ಇನ್ನೊಂದೆಡೆ ದಲಿತ ನಾಯಕರಲ್ಲಿನ ಹಾಗೂ ದಲಿತ ಸಂಘರ್ಷ ಸಮಿತಿಯ ರಾಜಕೀಯ ವಾಂಛೆ, ರಾಜಕಾರಣವೊಂದು ವ್ಯವಸ್ಥಿತವಾಗಿ ಚಳುವಳಿಯನ್ನು ದಮನಗೊಳಿಸುತ್ತಿರುವ ಕುರಿತು ಅವರ ಆತಂಕ ಮತ್ತು ವೇದನೆ ಇಲ್ಲಿ ವ್ಯಕ್ತಗೊಳ್ಳುತ್ತದೆ. ಎಡಗೈ, ಬಲಗೈ, ಹೆಬ್ಬೆರಳು, ಕಿರು ಬೆರಳು ಎನ್ನುವ ನೂರೆಂಟು ಭಿನ್ನತೆಗಳು ಇಡೀ ಅಸ್ಪೃಶ್ಯ ಸಮುದಾಯವನ್ನೇ ಸಾಯಿಸಬಹುದು ಎಂದು ಚಿಂತಿಸುವ ದೇವನೂರ ಈ ಭಿನ್ನತೆಗಳನ್ನು ಕಿತ್ತೆಸೆದರೆ ಮಾತ್ರ ನಮ್ಮ ಉಳಿವು ಎಂದು ಹೇಳಲು ಮರೆಯುವುದಿಲ್ಲ. ಅವಮಾನಿತರು (ದಲಿತರು) ಮತ್ತು ಅನುಮಾನಿತರು (ಮುಸ್ಲಿಮರು) ಜೊತೆಗೂಡಿ ಹೋರಾಡಿದಲ್ಲಿ ಜಾತಿರಹಿತ, ವರ್ಗರಹಿತ ಸಮಾಜ ಸ್ಥಾಪನೆ ಸಾಧ್ಯ ಎನ್ನುವ ಆಶಯವನ್ನು ಲೇಖಕರು ವ್ಯಕ್ತಪಡಿಸುವರು.


           ಪುಸ್ತಕದಲ್ಲಿ  ಹೆಚ್ಚುತ್ತಿರುವ ಕೋಮುವಾದ ಮತ್ತು ಅದು ತಂದೊಡ್ಡುತ್ತಿರುವ ಸಮಸ್ಯೆಗಳನ್ನು ಕುರಿತಾದ ಲೇಖಕರ ಕಾಳಜಿ ಕೂಡ  ವ್ಯಕ್ತವಾಗಿದೆ. ಮತಾಂಧತೆ ಹೀಗೇ ಮುಂದುವರೆದಲ್ಲಿ ಅದು ಭಾರತ ಎಂಬ ವೃಕ್ಷದ ಬೇರುಗಳನ್ನು ಕತ್ತರಿಸಿ ಹಾಕುತ್ತದೆ ಎನ್ನುವ ಕಳವಳ ಅವರದು. ಹಿಂದಿನ ಜನ್ಮದಲ್ಲಿ ಅಸ್ಪೃಶ್ಯತೆ ಆಚರಣೆ ಮಾಡಿದ ಕಾರಣಕ್ಕಾಗಿ ಈ ಜನ್ಮದಲ್ಲಿ ಕರ್ಮಕಳೆಯಲು ನಾನು ಅಸ್ಪೃಶ್ಯನಾಗಿ ಹುಟ್ಟಿರಬಹುದು ಎಂದು ಎಚ್ಚರಿಸುವ ಮಹಾದೇವ ಮಠಗಳು ಜಾತಿ, ಧರ್ಮದಿಂದ ದೂರಾಗಿ ರಚನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಆಶಿಸುವರು.  ತಳ ಸಮುದಾಯಗಳ ಬದುಕಿನ ತಲ್ಲಣಗಳ ಆಚೆಯೂ ಇಲ್ಲಿ ಮಹಾದೇವ ಖಾಸಗೀಕರಣ, ಜಾಗತೀಕರಣ, ಉದಾರೀಕರಣ, ಅಪವಿತ್ರಗೊಳ್ಳುತ್ತಿರುವ ರಾಜಕಾರಣ ಮತ್ತು ಇಂಗ್ಲಿಷ್ ಮಾಧ್ಯಮ ಶಿಕ್ಷಣದ ಕುರಿತು ಬರೆಯುತ್ತ ಇದು ಹೀಗೇ ಮುಂದುವರೆದರೆ ಏನಾಗಬಹುದು ಎಂದು ಚಿಂತಿಸುತ್ತಾರೆ. ಜಾಗತೀಕರಣ ಮತ್ತು ಖಾಸಗೀಕರಣ ತಳ ಸಮುದಾಯಗಳ ಜೊತೆಗೆ ಇಡೀ ದೇಶವನ್ನೇ ನುಂಗಲು ಹೊಂಚು ಹಾಕುತ್ತಿರುವ ಸಾಧ್ಯತೆಯನ್ನು ವಿವರಿಸುತ್ತಾರೆ. ಇಂಗ್ಲಿಷನ್ನು ಭಾಷೆಯಾಗಿ ಒಂದನೇ ತರಗತಿಯಿಂದಲೇ ಕಲಿಸದೆ ಇದ್ದಲ್ಲಿ ಇಂಗ್ಲಿಷ್ ದಾಹ ಮಾತೃ ಭಾಷಾ ಶಿಕ್ಷಣ ಮಾಧ್ಯಮವನ್ನೇ  ತಿಂದು ಹಾಕಿಬಿಡುವ ಅಪಾಯವಿದೆ ಎನ್ನುವ ಕಿವಿಮಾತು ಇಲ್ಲಿದೆ.


            ಪುಸ್ತಕದ ಒಂದು  ಭಾಗದಲ್ಲಿ ದೇವನೂರ ಮಹಾದೇವ ಕನ್ನಡದ ಹಿರಿಯ ಬರಹಗಾರರು, ಚಿಂತಕರು, ಚಳುವಳಿಗಾರರು ಮತ್ತು ರಾಜಕೀಯ ನಾಯಕರುಗಳೊಂದಿಗಿನ ಒಡನಾಟ ಮತ್ತು ಅವರ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿರುವರು. ಇಲ್ಲಿ ಎಲ್.ಬಸವರಾಜು, ಪಿ.ಲಂಕೆಶ್, ಯು. ಆರ್. ಅನಂತ ಮೂರ್ತಿ, ದೇವರಾಜ ಅರಸು, ಎಂ. ಡಿ. ನಂಜುಂಡ ಸ್ವಾಮಿ ಕುರಿತು ಲೇಖನಗಳಿವೆ. ಪ್ರೊ. ಎಲ್. ಬಸವರಾಜು ಅವರನ್ನು ಕುರಿತು ಬರೆಯುವಾಗ ಮಹಾದೇವ ಹೆಚ್ಚು ಆರ್ದ್ರರಾಗುತ್ತಾರೆ. ಅವರೊಳಗಿನ ಬೆರಗು, ಪ್ರತಿಭೆ, ಜೀವನ ಪ್ರೀತಿ ಎಲ್ಲವನ್ನೂ ನೆನಪಿಸಿಕೊಳ್ಳುತ್ತಾರೆ. ಅದೇ ಲಂಕೇಶರ ಬಗ್ಗೆ ಬರೆಯುವಾಗ ಗೊತ್ತಿಲ್ಲದಂತೆಯೇ ಒಂದು ತುಂಟತನ ಅಲ್ಲಿ ಹಣಿಕಿಕ್ಕುತ್ತದೆ. ಜೊತೆಗೆ ವರ್ತಮಾನದ ತಲ್ಲಣಗಳಿಗೆ ಪ್ರತಿಕ್ರಿಯಿಸಿ ಪ್ರಭಾವಿಸಿದ ಲೇಖಕ ಕನ್ನಡದಲ್ಲಿ ಲಂಕೇಶ್ ಬಿಟ್ಟರೆ ಬೇರೊಬ್ಬರಿಲ್ಲ ಎನ್ನುವ ಮೆಚ್ಚುಗೆಯ ಮಾತುಗಳೂ ಅಲ್ಲಿವೆ. ಅನಂತಮೂರ್ತಿ ಮತ್ತು ದೇವರಾಜ ಅರಸು ಅವರೊಳಗಿನ ತಳಸಮುದಾಯಗಳ ಬಗೆಗಿನ ಪ್ರೀತಿಯನ್ನು ಪರಿಚಯಿಸುತ್ತಾರೆ. ಇನ್ನು ಎಂ. ಡಿ. ನಂಜುಂಡ ಸ್ವಾಮಿ ಅವರೊಡನೆ ದೇವನೂರರ ಸಂದರ್ಶನ ಅತ್ಯಂತ ಚೇತೋಹಾರಿಯಾಗಿದೆ. ಸಂದರ್ಶನದುದ್ದಕ್ಕೂ ಮಹಾದೇವ ನಂಜುಂಡಸ್ವಾಮಿ ಅವರನ್ನು ಕೆಣಕುತ್ತ ಮತ್ತು ಕಾಲೆಳೆಯುತ್ತಲೇ ಹೋಗುತ್ತಾರೆ. ಇದೊಂದು ಕತ್ತಿವರಸೆಯಂತೆ ಓದುಗನಿಗೆ ಭಾಸವಾಗುತ್ತದೆ. ಪಂಪ, ಚದುರಂಗ, ಖಾಸನೀಸರನ್ನೂ ಲೇಖಕರು ಇಲ್ಲಿ ಸ್ಮರಿಸಿಕೊಂಡಿರುವರು. ಲೋಹಿಯಾರ ಕುರಿತು ಮಹಾದೇವರೇ ಅನುವಾದಿಸಿದ ಲೇಖನದಲ್ಲಿ ಲೋಹಿಯಾರ ವ್ಯಕ್ತಿತ್ವ ಹಾಗೂ ಹೋರಾಟವನ್ನು ಅತ್ಯಂತ ಅರ್ಥಪೂರ್ಣವಾಗಿ ಚಿತ್ರಿಸಲಾಗಿದೆ.


        ಒಂದು ಹಂತದಲ್ಲಿ  ದೇವನೂರ ಮಹಾದೇವ ಅಸ್ಪೃಶ್ಯತಾ ಆಚರಣೆಗೆ ಕುಮ್ಮಕ್ಕು ನೀಡುತ್ತಿರುವ ವ್ಯವಸ್ಥೆಗೆ ಮುಖಾಮುಖಿಯಾಗಿ ನಿಲ್ಲುತ್ತಾರೆ. ವ್ಯವಸ್ಥೆಯೊಂದಿಗಿನ ಲೇಖಕರ ಸುದೀರ್ಘ ಹೋರಾಟವನ್ನು ನಾವು ಇಲ್ಲಿ ಕಾಣಬಹುದು. ಪ್ರತಿಯೊಂದು ಹೋರಾಟದ ಅನುಭವವನ್ನು ಅಕ್ಷರ ರೂಪಕ್ಕಿಳಿಸಿ ತಳಸಮುದಾಯದ ತಲ್ಲಣಗಳನ್ನು ಓದುಗರೆದುರು ಹಿಡಿದು ನಿಲ್ಲಿಸುವ ಪ್ರಯತ್ನ ಇಲ್ಲಿದೆ. ಜೀತ ಪದ್ಧತಿ, ದಲಿತರ ವಸತಿ ಸಮಸ್ಯೆ, ಜಾತಿ ಸಂಘರ್ಷ ಇತ್ಯಾದಿ ಸಂದರ್ಭಗಳಲ್ಲಿನ ಹೋರಾಟ ಹಾಗೂ ರಾಜಕೀಯ ಬೆಳವಣಿಗೆಗಳಿಗೆ ತಾವು ಸಾಕ್ಷಿಯಾಗಿದ್ದನ್ನು ಮಹಾದೇವ ದಾಖಲಿಸಿರುವರು.


         ಕೃತಿಯ ಕೊನೆಯ ಭಾಗದಲ್ಲಿ ಲೇಖಕರು ಸಮಾನತೆಯ ಅಗತ್ಯವನ್ನು ಮನಗಾಣಿಸುತ್ತ ಅದಕ್ಕಾಗಿ ಆಗ ಬೇಕಾದ ಬದಲಾವಣೆಗಳನ್ನು ಕುರಿತು ಹೇಳುತ್ತಾರೆ. ಸಮಾನತೆಗಾಗಿ ಬೇಕಿರುವುದು ಯಾವ ಧರ್ಮ, ಜಾತಿಯಲ್ಲ ಬೇಕಿರುವುದು ಮಾನವೀಯತೆ ಎನ್ನುವುದು ಮಹಾದೇವರ ಕಳಕಳಿಯಾಗಿದೆ. ಊರಾಚೆ ಪರಕೀಯವಾಗಿ ಬಿದ್ದು ನರಳುತ್ತಿರುವ ಅಸ್ಪೃಶ್ಯತೆಯ ಆಕ್ರಂದನ, ಕೋಪ, ತಾಪ ಅದು ಪ್ರೀತಿಗಾಗಿ ಮಾನವತೆಯ ಸ್ಪರ್ಶಕ್ಕಾಗಿ ಎನ್ನುವುದನ್ನು ಹೇಳಲು ಲೇಖಕರು ಮರೆಯುವುದಿಲ್ಲ. ಸಮಾನತೆಗಾಗಿ ಮಾನವೀಯತೆಯ ಜೊತೆಗೆ ಒಂದಿಷ್ಟು ಅಗತ್ಯಗಳನ್ನು ಮನಗಾಣಿಸಿ ಕೊಡುವರು. ಮೀಸಲಾತಿ, ಖಾಸಗಿಯಲ್ಲಿ ಮೀಸಲಾತಿ, ಒಳಮೀಸಲಾತಿ ನಿಷೇಧ, ಗಾಂಧಿ ಮತ್ತು ಅಂಬೇಡ್ಕರ್ ವಿಚಾರಗಳು ಒಂದುಗೂಡುವಿಕೆ, ವಿಕೇಂದ್ರೀಕರಣ, ಎಲ್ಲರಿಗೂ ಉದ್ಯೋಗ, ಸ್ವಾವಲಂಬನೆ ಇವುಗಳಿಂದ ಸಮಾನತೆ ತರಲು ಸಾಧ್ಯ ಎನ್ನುವ ಅಭಿಪ್ರಾಯ ಲೇಖಕರದಾಗಿದೆ.

ದೇವನೂರರ ಗಾಂಧಿ ಪ್ರೀತಿ


              ದೇವನೂರ ಮಹಾದೇವ ಅಂಬೇಡ್ಕರ್ ರನ್ನು ಪ್ರೀತಿಸುವಷ್ಟೇ ಗಾಂಧಿಯನ್ನು ಕೂಡ ಉತ್ಕಟವಾಗಿ ಪ್ರೀತಿಸಬಲ್ಲರು ಎನ್ನುವುದು ಈ ಪುಸ್ತಕದಲ್ಲಿನ ಕೆಲವು ಅಧ್ಯಾಯಗಳನ್ನು ಓದಿದಾಗ ವ್ಯಕ್ತವಾಗುತ್ತದೆ. ಹೀಗೆ ನಾನು ಹೇಳಲು ಕಾರಣ ಈಗಿನ ದಲಿತ ಯುವಕರು ಅಂಬೇಡ್ಕರ್ ರನ್ನು ಪ್ರೀತಿಸುವುದರ ಜೊತೆಗೆ ಗಾಂಧಿಯನ್ನು ದ್ವೇಷಿಸುತ್ತಿರುವರು. ಗಾಂಧೀಜಿಯ ದಲಿತೋದ್ಧಾರದ ಕನಸು ಹಾಗೂ ಅದಕ್ಕಾಗಿ ಮಾಡಿದ ಪ್ರಯತ್ನ ಇಂದಿನ ದಲಿತ ಯುವಕರಿಗೆ ಪರಿಚಯಿಸುವ ಕೆಲಸವಾಗಬೇಕಿದೆ. ಇಂಥದ್ದೊಂದು ಕೆಲಸ ದಲಿತ ಲೇಖಕರಿಂದಲೇ ನಡೆದಲ್ಲಿ ಅದು ಹೆಚ್ಚು ಪರಿಣಾಮಕಾರಿಯಾಗಬಲ್ಲದು. 'ಎದೆಗೆ ಬಿದ್ದ ಅಕ್ಷರ' ಕೃತಿಯಲ್ಲಿ ದೇವನೂರ ಮಹಾದೇವ ಗಾಂಧೀಜಿ ಬಗ್ಗೆ ಬರೆಯುತ್ತ ಅಂಥದ್ದೊಂದು ಪ್ರಕ್ರಿಯೆಗೆ ಚಾಲನೆ ನೀಡಿರುವರೆಂದೇ ನನ್ನ ಭಾವನೆ.

           'ಸಾಯಲು ಮಾನಸಿಕವಾಗಿ ದೃಢವಾಗಿ ಸಿದ್ಧನಾದವನು ಮಾತ್ರ ಗಾಂಧಿಯಾಗಬಲ್ಲ. ಅಹಿಂಸಾವಾದಿಯಾದ ಗಾಂಧಿಯ ದೇಹದ ಒಂದು ರೋಮದಲ್ಲೂ ಹೇಡಿತನದ ಸುಳಿವು ಇಲ್ಲದಿರುವುದು ನನ್ನನ್ನು ನಡುಗಿಸಿತು' ಎಂದು ದೇವನೂರ ಮಹಾದೇವ ಗಾಂಧಿ ಕುರಿತು ಬರೆಯುತ್ತಾರೆ. ಇಡೀ ದಲಿತ ಸಂಘರ್ಷ ಸಮಿತಿ 'ಗಾಂಧಿ' ಸಿನಿಮಾ ನೋಡದಂತೆ ಬಹಿಷ್ಕರಿಸಿದಾಗ ಗಾಂಧಿ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದ ಮಹಾದೇವ ಆ ಚಿತ್ರವನ್ನು ವೀಕ್ಷಿಸುತ್ತಾರೆ. ಗಾಂಧಿ ಮತ್ತು ಅಂಬೇಡ್ಕರ್ ರ ಸಮಾನತೆಯ ಹೋರಾಟ ಮಹಾದೇವರಿಗೆ ಹೀಗೆ ಕಾಣಿಸುತ್ತದೆ 'ಹಿಂದೂ ಧರ್ಮ ಎಂಬ ಮನೆಯೊಳಗೆ ಭಿನ್ನ ಭಾವ ಜಾತಿ ತಾರತಮ್ಯದ ಕಂಬಗಳನ್ನು ಒಳಗೊಳಗೇ ಕೊಯ್ಯುವವನಂತೆ ಗಾಂಧಿ ಕಾಣಿಸುತ್ತಾರೆ. ಅದೇ ಅಂಬೇಡ್ಕರ್ ಹೊರಗಿನಿಂದ ಆ ಅಸಮಾನತೆಯ ಮನೆಗೆ ಕಲ್ಲೆಸೆಯುವವನಂತೆ ಕಾಣಿಸುತ್ತಾರೆ. ಈ ಪ್ರಕ್ರಿಯೆಯಿಂದಾಗಿ ಅಂಬೇಡ್ಕರ್ ಎಸೆದ ಕಲ್ಲು ಒಳಗಿದ್ದ ಗಾಂಧಿಗೂ ಬಿದ್ದು ರಕ್ತ ಚೆಲ್ಲಿರಬಹುದು. ಇದನ್ನು ಕಂಡು ಹೊರಲೋಕವು ಗಾಂಧಿಗೂ ಅಂಬೇಡ್ಕರ್ ಗೂ ಮಾರಾಮಾರಿ ಹೊಡೆದಾಟ ಎನ್ನಬಹುದು. ಆದರೆ ಇಬ್ಬರೂ ಮಾಡುತಿದ್ದುದು ಹೆಚ್ಚು ಕಮ್ಮಿ ಒಂದೇ ಕೆಲಸವನ್ನಲ್ಲವೇ'. ಇನ್ನೂ ಮುಂದುವರೆದು ಗಾಂಧಿಯ ವ್ಯಕ್ತಿತ್ವವನ್ನು ಕಟ್ಟಿಕೊಡಲು ಪ್ರಯತ್ನಿಸುತ್ತಾರೆ 'ಗಾಂಧಿ ಅಸಮಾನತೆಯ ವ್ಯವಸ್ಥೆ ಎಂಬ ಬಚ್ಚಲು ಕೊಳಕು ನೀರನ್ನು ಭಟ್ಟಿ ಇಳಿಸುತ್ತ ತಿಳಿಗೊಳಿಸುತ್ತಿದ್ದರು. ಚಿಟ್ಟೆಯಾಗಲಾರದ ಬಚ್ಚಲು ಹುಳುಗಳಿಗೆ ಉಸಿರು ಕಟ್ಟಿತ್ತು. ಗಾಂಧಿಯನ್ನು ಹೀಗಲ್ಲದೆ ಬೇರೆ ಯಾವ ರೀತಿ ಅರ್ಥಮಾಡಿಕೊಳ್ಳಲು ಸಾಧ್ಯ'.

           ಹೀಗಿದ್ದೂ ಗಾಂಧಿ ಯಾಕೆ ಅಪಾರ್ಥಕ್ಕೆ ಒಳಗಾದರು? ಎನ್ನುವ ಪ್ರಶ್ನೆ ಮಹಾದೇವರ ಮನದಲ್ಲಿ ಮೂಡಿ ಕಾಡುತ್ತದೆ. ಅದಕ್ಕೆ ಪರಿಹಾರವನ್ನೂ ಅವರೇ ಸೂಚಿಸುತ್ತಾರೆ 'ಗಾಂಧಿಯನ್ನು ದಲಿತರು ಹೇಗೆ ಸ್ವೀಕರಿಸಬೇಕು? ಒಂದು ಮಾಡಬಹುದು- ಗಾಂಧಿ ಸಾಹಿತ್ಯವನ್ನು ದಲಿತನ ಒಡಲಿಗೆ ಹಿತಾಸಕ್ತಿಗೆ ಎಷ್ಟು ಒಗ್ಗುತ್ತದೋ ಅಷ್ಟನ್ನು ಮಾತ್ರ ಸಂಪಾದಿಸಿ ಇಟ್ಟುಕೊಂಡರೆ ಅಲ್ಲಿಂದ ಗಾಂಧಿ ಮತ್ತೆ ಹುಟ್ಟುತ್ತಾನೆ. ಇಡೀ ಜಗತ್ತಿನ ಹಿತವೂ ಇದರೊಳಗೆ ಇರಬಹುದು'.

ಒಂದಿಷ್ಟು ಝಲಕ್ ಗಳು 


        ಒಂದಿಷ್ಟು ಎದೆಗೆ ಬಿದ್ದ ನುಡಿಗಳು ಓದುಗರಿಗಾಗಿ

# ಗಾಂಧಿ ಕಾಠಿಣ್ಯದ ತಂದೆಯಂತೆ, ಜೆಪಿ ಅಸಹಾಯಕ ತಾಯಿ, ವಿನೋಬಾ ಮದುವೆಯಾಗದ ವೃತನಿಷ್ಠ ಅಕ್ಕನಂತೆ, ಲೋಹಿಯಾ ಊರೂರು ಅಲೆಯುವ ಮನೆ ಸೇರದ ಅಲೆಮಾರಿ ಮಗ, ಅಂಬೇಡ್ಕರ್ ತಾರತಮ್ಯಕ್ಕೆ ಒಳಗಾಗಿ ಮುನಿಸಿಕೊಂಡು ಮನೆ ಹೊರಗೆ ಇರುವ ಮಗ. ಇದು ನಮ್ಮ ಕುಟುಂಬ. ನಾವು ಇಲ್ಲಿನ ಸಂತಾನ.

# ದೈಹಿಕವಾಗಿ ದುರ್ಬಲನಾದ ಶೋಷಿತನ ನಿಜದ ಎದುರು ದೈಹಿಕ ಪ್ರಬಲನಾದ ಶೋಷಕ ತಂತಾನೆ ಕುಸಿಯುತ್ತಾನೆ.

# ಒಬ್ಬನ ಭುಜದ ಮೇಲೆ ಇನ್ನೊಬ್ಬ ಕೂತಿದ್ದಾನೆ. ಮೇಲೆ ಕೂತಿರುವವನು ತನ್ನನ್ನು ಹೊತ್ತವನ ಭಾರವನ್ನು ತಾನೇ ಹೊತ್ತಿರುವುದು ಎಂದು ಆ ಭಾರ ಹೊತ್ತವನಿಗೆ ನಂಬಿಸುತ್ತಿದ್ದಾನೆ. ದುರಂತವೆಂದರೆ ಅದನ್ನೇ ತಾನೂ ನಂಬುತ್ತಿದ್ದಾನೆ.

# ನೋಡುವ ಕ್ರಮ ಬದಲಾಗುವುದಾದರೆ ಬದಲಾವಣೆಯ ದಾರಿಗಳೂ ತಂತಾನೆ ತೆರೆದುಕೊಳ್ಳಬಹುದು.

# ಮಾತೃಭೂಮಿಯನ್ನೇ ಮಾರ್ಕಂಡು ತಿನ್ನುವವರಿಗೆ ಮಾತೃ ಭಾಷೆ ಯಾವ ಲೆಕ್ಕ.

# ಈ ಎನರ್ಜಿಯ ಚೈತನ್ಯ ಉಕ್ಕಿ ಹರಿಯಲು ಲಂಕೇಶರಿಗೆ ಒಂದು ಹುಲ್ಲುಕಡ್ಡಿಯಾದರೂ ವೈರಿಯಾಗಿ ಅವರ ಎದುರಿಗೆ ಬಂದು ತಲೆ ಕುಣಿಸಬೇಕಿತ್ತು, ತೊಡೆ ತಟ್ಟ ಬೇಕಿತ್ತು.

# ಗುಲಾಮನನ್ನು ಪಳಗಿಸಲು ಹೆಣಗುವ ಮಾಲೀಕನ ಮನಸ್ಸಿನ ತುಂಬಾ ಗುಲಾಮತನ ತುಂಬಿರುತ್ತದೆ.

# ಕಠೋರ ಮಡಿ ಆಚರಿಸುವವರನ್ನು ಪಳೆಯುಳಿಕೆ ಎಂದು ಭಾವಿಸಿದರೆ ಸಮಸ್ಯೆ ಇಲ್ಲ. ಆದರೆ ಅವರ ಮಡಿಯನ್ನು ಪಾರಂಪರಿಕ ಮೌಲ್ಯ ಎಂದು ಗೌರವಿಸಿದರೆ ಅಪಾಯ ಆರಂಭವಾಗುತ್ತದೆ.


ಕೊನೆಯ ಮಾತು 


           'ಎದೆಗೆ ಬಿದ್ದ ಅಕ್ಷರ' ಕೃತಿಯುದ್ದಕ್ಕೂ ತಳಸಮುದಾಯಗಳ ಬದುಕಿನ ಸಮಸ್ಯೆಗಳು ಅನಾವರಣಗೊಳ್ಳುತ್ತ ಹೋಗುತ್ತವೆ. ಜೊತೆಗೆ ಅಲ್ಲಲ್ಲಿ   ಲೇಖಕರು  ಖಾಸಗೀಕರಣ,  ಜಾಗತೀಕರಣ, ರೈತರ ಸಮಸ್ಯೆಗಳು, ಕನ್ನಡ ಮಾಧ್ಯಮದ ಹಿನ್ನಡೆ  ಇತ್ಯಾದಿ ಸಂಗತಿಗಳನ್ನೂ  ಚರ್ಚಿಸುವರು. ಒಟ್ಟಾರೆ ಬರಹಗಾರ ತನ್ನ ಬರವಣಿಗೆಯ ಮೂಲಕ ಪ್ರತಿಭಟನೆಯ ಕಾವನ್ನು ಕಾಯ್ದುಕೊಳ್ಳಬೇಕೆನ್ನುವ ಸಿದ್ಧಾಂತವನ್ನು ದೇವನೂರ ಮಹಾದೇವರ ಬರವಣಿಗೆ ಕಾಲಕಾಲಕ್ಕೆ ಎತ್ತಿಹಿಡಿಯುತ್ತಲೇ ಬಂದಿದೆ. ಹಾಗೆಂದ ಮಾತ್ರಕ್ಕೆ ದೇವನೂರ ಮಹಾದೇವ ವಿತಂಡವಾದಿಯಾಗಲಿ ಇಲ್ಲವೇ ಖಂಡಿತವಾದಿಯಾಗಲಿ ಅಲ್ಲ. ಪ್ರಕಾಶಕರು ಹೇಳುವಂತೆ ಮಾತಿನಲ್ಲಾಗಲಿ, ಬದುಕಿನಲ್ಲಾಗಲಿ ಯಾರನ್ನೂ, ಯಾವುದನ್ನೂ ನೋಯಿಸುವ ಜಾಯಮಾನ ಮಹಾದೇವ ಅವರದಲ್ಲ. ಅದಕ್ಕೆಂದೇ ಇಲ್ಲಿನ ಲೇಖನಗಳಿಗೆ  ಧುಮ್ಮಿಕ್ಕಿ ಹರಿಯುವ ಜಲಪಾತದ ವೇಗವಿಲ್ಲ. ಇಲ್ಲಿನ ಬರಹದ ಪ್ರತಿಭಟನೆಗೆ ಶಾಂತವಾಗಿ ಹರಿಯುವ ನದಿಯ ಮನಸ್ಥಿತಿ ಇದೆ.


-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 



2 comments: