Saturday, June 1, 2013

ಕಟ್ಟಿದ್ದನ್ನು ಕೆಡವಿದರು

     




           ಭಾರತ ಬಹುಧರ್ಮಗಳ ಸಂಗಮ. ಇದು ಅನೇಕತೆಯಲ್ಲಿ  ಏಕತೆಯನ್ನು ಮೈಗೂಡಿಸಿಕೊಂಡ ದೇಶ. ಇಲ್ಲಿ ಬಹುಸಂಖ್ಯಾತ ಹಿಂದೂಗಳಿರುವಂತೆ ಕ್ರೈಸ್ತರು, ಮುಸ್ಲಿಮರು, ಬೌದ್ಧರು, ಪಾರ್ಸಿಗಳು ಹೀಗೆ ಹಲವಾರು ಧರ್ಮೀಯರು ಬದುಕು ಕಟ್ಟಿಕೊಂಡಿರುವರು. ದೇಶದ ಸಾಹಿತ್ಯ, ವಿಜ್ಞಾನ, ಕಲೆ, ಸಂಸ್ಕೃತಿ ಎಲ್ಲ ಧರ್ಮೀಯರ ಕೊಡುಗೆಗಳಿಂದ ಶ್ರೀಮಂತ ಮತ್ತು ಸಂಪದ್ಭರಿತವಾಗಿವೆ. ಶರಣರು ಹಾಗೂ ಸೂಫಿಗಳು ಕೂಡಿಯೇ ಈ ನಾಡಿನ ಸಾಮಾಜಿಕ ಚಳುವಳಿಯನ್ನು ಅನನ್ಯವಾಗಿ ಕಟ್ಟಿರುವರು. ಶಂಕರಾಚಾರ್ಯ, ಸ್ವಾಮಿವಿವೇಕಾನಂದ, ಗೌತಮ ಬುದ್ಧ, ಮಹಾವೀರನಂಥ ದಾರ್ಶನಿಕರು  ಜನ್ಮತೆಳೆದ ನೆಲವಿದು. ಇಲ್ಲಿ ದಸರಾ, ದೀಪಾವಳಿ ಹಬ್ಬಗಳ ಜೊತೆಗೆ ಮೊಹರಂ, ರಂಜಾನ್, ಕ್ರಿಸ್ ಮಸ್ ಹಬ್ಬಗಳನ್ನೂ ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ಆಚರಿಸುವರು. ಭಾರತದ ಸಂವಿಧಾನ ಎಲ್ಲ ಧರ್ಮೀಯರ ಬಾಳ್ವೆಗೆ ಇಲ್ಲಿ ಅವಕಾಶ ಮಾಡಿಕೊಟ್ಟಿದೆ. ಹಿಂದೂ ಧರ್ಮೀಯರು ಬಹುಸಂಖ್ಯಾತರಾಗಿದ್ಡಾಗೂ ಅನ್ಯಧರ್ಮಿಯರಿಗೆ ಅವರದೇ ನೀತಿ ಸಂಪ್ರದಾಯಗಳ ಬದುಕಿಗೆ ಇಲ್ಲಿ ಅವಕಾಶವಿದೆ. ಹೀಗೆ ವಿವಿಧತೆಯಲ್ಲಿ ಏಕತೆಯನ್ನು ಕಂಡ ರಾಷ್ಟ್ರ ಭಾರತ ಬಿಟ್ಟರೆ ವಿಶ್ವದಲ್ಲಿ ಬೇರೊಂದಿಲ್ಲ. 

ಈಗ ಒಂದಿಷ್ಟು ಹಿಂದೆ ಹೋಗೋಣ 


           'ಮೊಹರಂ' ಮುಸ್ಲಿಮರು ಆಚರಿಸುವ ವಿಶಿಷ್ಠ ಹಬ್ಬಗಳಲ್ಲೊಂದು. ನಗರ ಮತ್ತು ಹಳ್ಳಿಗಳು ಸೇರಿದಂತೆ ಎಲ್ಲಕಡೆಯೂ ಈ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸುವರು. ನಾವು ಚಿಕ್ಕವರಾಗಿದ್ದಾಗ ಆ ಹಬ್ಬದ ದಿನಗಳಲ್ಲಿ ಪೀರದೇವರನ್ನು ಪ್ರತಿಷ್ಟಾಪಿಸಿದ ಅಷ್ಟೂ ದಿನಗಳು ಬೆಳೆಗ್ಗೆ ಹಾಗೂ ರಾತ್ರಿ ಹೋಗಿ ನಮಸ್ಕರಿಸಿ ಬರುತ್ತಿದ್ದೇವು. ಆ ಘಳಿಗೆ ಅಲ್ಲೇ ಪಕ್ಕದಲ್ಲೇ ಕುಳಿತಿರುತ್ತಿದ್ದ ಮುಲ್ಲಾ ತಲೆಯ ಮೇಲೆ ನವಿಲು ಗರಿಕೆಗಳಿಂದ ಆಶೀರ್ವದಿಸಿ ಕೈಗೆ ಪ್ರಸಾದದ ರೂಪದಲ್ಲಿ ಸಕ್ಕರೆಯನ್ನು ಹಾಕಿದಾಗ ನಮ್ಮಲ್ಲಿ ಒಂದು ರೀತಿಯ ಧನ್ಯತೆ ಮನೆಮಾಡುತ್ತಿತ್ತು. ಪೀರದೇವರ ಮೆರವಣಿಗೆಯ ಕೊನೆಯ ದಿನದಂದು ಇಡೀ ಊರಿಗೆ ಊರೇ ಶೃಂಗಾರಗೊಳ್ಳುತ್ತಿತ್ತು. ಮೆರವಣಿಗೆ ತಮ್ಮ ತಮ್ಮ ಮನೆಯೆದುರು ಬರುತ್ತಿದ್ದಂತೆ ದೇವರ ಕಾಲಿಗೆ ನೀರು ಹಾಕುವುದು ಮತ್ತು ಸಕ್ಕರೆಯನ್ನು ನೈವೇದ್ಯೆಯಾಗಿ ಸಮರ್ಪಿಸುವುದನ್ನು ಊರಿನ ಎಲ್ಲರೂ ಸಂಪ್ರದಾಯದಂತೆ ಆಚರಿಸುತ್ತಿದ್ದರು.

        ರಂಜಾನ್ ಆಚರಣೆಯಂತೂ ಇನ್ನೂ ವಿಶಿಷ್ಠವಾಗಿರುತ್ತಿತ್ತು. ಆ ಸಮಯದಲ್ಲಿ ಮುಸ್ಲಿಮರು ಇಡೀ ತಿಂಗಳು ಹಗಲು ಹೊತ್ತಿನಲ್ಲಿ ಉಪವಾಸವಿರುತ್ತಿದ್ದರು. ರಾತ್ರಿ ಪ್ರಾರ್ಥನೆಯ  ನಂತರ ಅವರು ಉಪವಾಸ ಬಿಡುವ ಇಫ್ತಿಯಾರ್ ಕೂಟದಲ್ಲಿ ಅನ್ಯಧರ್ಮಿಯರೂ ಪಾಲ್ಗೊಳ್ಳುತ್ತಿದ್ದುದೊಂದು ವಿಶೇಷ. ರಂಜಾನ್ ಹಬ್ಬದ ದಿನದಂದು ಮುಸ್ಲಿಂ ಬಾಂಧವರ ಮನೆಗಳಲ್ಲಿ ಹಾಲಿನಿಂದ ತಯ್ಯಾರಿಸುವ 'ಸುರಕುಂಬಾ' ಎನ್ನುವ ಖಾದ್ಯವನ್ನು ಸೇವಿಸುವುದೇ ಒಂದು ಸಂಭ್ರಮದ ವಿಷಯವಾಗಿರುತ್ತಿತ್ತು. ಆ ದಿನ ಅವರು ಹಿಂದೂ ಬಾಂಧವರಿಗಾಗಿ ಪ್ರತ್ಯೇಕ ಅಡುಗೆಯನ್ನು (ಸಸ್ಯಾಹಾರದ) ತಯ್ಯಾರಿಸಿ ಊಟಕ್ಕೆ ಆಮಂತ್ರಿಸುತ್ತಿದ್ದರು. ಆ ದಿನ ಪರಸ್ಪರ ಆಲಂಗಿಸಿಕೊಂಡು ಶುಭಾಷಯ ವಿನಿಮಯ ಮಾಡಿಕೊಳ್ಳುವುದರಿಂದ ಇಡೀ ಊರಿನಲ್ಲಿ ಭಾತೃತ್ವದ ಭಾವನೆಯೊಂದು ಅನಾವರಣಗೊಳ್ಳುತ್ತಿತ್ತು.

       ನಾವುಗಳು ಆಚರಿಸುವ ದೀಪಾವಳಿ, ಹೋಳಿ ಹುಣ್ಣಿಮೆ, ಕಾರ ಹುಣ್ಣಿಮೆ ಹಬ್ಬಗಳಲ್ಲೂ ಮುಸ್ಲಿಮರು ಅತ್ಯಂತ ಉತ್ಸಾಹದಿಂದಲೇ ಪಾಲ್ಗೊಳ್ಳುತ್ತಿದ್ದರು. ದೀಪಾವಳಿ ಹಬ್ಬದ ಆ ಮೂರೂ ದಿನಗಳಂದು ಅವರುಗಳ ಮನೆಗಳಲ್ಲೂ ಪಟಾಕಿ ಸಿಡಿಯುತ್ತಿದ್ದವು. ಹೋಳಿ ಹುಣ್ಣಿಮೆಯಂದು ಪರಸ್ಪರ ಬಣ್ಣ ಎರೆಚಿ ಸಂಭ್ರಮಿಸುತ್ತಿದ್ದರು. ಕಾರ ಹುಣ್ಣಿಮೆಯ ದಿನ ಓಡುವ ಎತ್ತಿನ ಬಂಡೆಯ ಮೇಲೆ ನನ್ನೂರಿನ ಖಬಲಾ ಸಾಬ್ ನಿಂತರೆ ಅವನನ್ನು ಸ್ಪರ್ಧೆಯಲ್ಲಿ ಸೋಲಿಸಲು ಬೇರೆ ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ಯುಗಾದಿ ಹಬ್ಬದ ದಿನ ಆಂಜನೇಯನ ಗುಡಿಯಲ್ಲಿ ಸ್ವಾಮಿಗಳು ಪಂಚಾಗ ಪಠಿಸುತ್ತಿದ್ದರೆ ಆ ವರ್ಷದ ಮಳೆ ಬೆಳೆಯನ್ನು ತಿಳಿದುಕೊಳ್ಳಲು ಜನರ ಗುಂಪಿನಲ್ಲಿ ಟೋಲಾಸಾಬ್, ನಜೀರ್ ಸಾಬ್, ಖಾಸಿಂ, ಮಶಾಖ್, ರಸೂಲ್ ಸಾಬ್ ಇವರೆಲ್ಲ ಕುಳಿತಿರುತ್ತಿದ್ದರು. ಮಳೆಗಾಗಿ ಪ್ರಾರ್ಥಿಸುವ ಊರ ಬುತ್ತಿ ಜಾತ್ರೆಗೆ ಎಲ್ಲರೂ ಒಟ್ಟಾಗಿ ಕೆರೆಗೆ ಹೋಗಿ ಪೂಜೆ ಸಲ್ಲಿಸಿ ಊಟ ಮಾಡಿಕೊಂಡು ಬರುತ್ತಿದ್ದರು. ಊರೂರಿಗೆ ಹೋಗಿ ನಾಟಕಗಳನ್ನು ಕಲಿಸುತ್ತಿದ್ದ ಪೇಟಿ ಮಾಸ್ತರ್ ಮಸ್ತಾನ್ ಸಾಬ್ ರಾಮಾಯಣ ಮಾಹಾಭಾರತದ ಜೊತೆಗೆ ಅನೇಕ ಪೌರಾಣಿಕ ಪುಸ್ತಕಗಳನ್ನು ಓದಿಕೊಂಡಿದ್ದ. ಮೀಸೆ ಇಲ್ಲದೆ ಉದ್ದನೆ ಬಿಳಿ ಗಡ್ಡ ಬಿಟ್ಟಿದ್ದ ಟೋಲಾಸಾಬ್ ಸಂತ ಪ್ರವಾದಿಯಂತೆ ಕಾಣಿಸುತ್ತಿದ್ದ

         ನನ್ನನ್ನು ಇವತ್ತಿಗೂ ಅಚ್ಚರಿಗೊಳಿಸುವ ಸಂಗತಿ ಎಂದರೆ ಆಗ ನಮ್ಮ ಮನೆಗೆಲಸಕ್ಕೆ ಬರುತ್ತಿದ್ದ ಮುಸ್ಲಿಂ ಹೆಣ್ಣುಮಗಳು ಹೀರಾಳಿಗೆ ಕನ್ನಡ ಭಾಷೆ ಬಿಟ್ಟರೆ ಬೇರೆ ಭಾಷೆಯೇ ಗೊತ್ತಿರಲಿಲ್ಲ. ಸಾಮಾನ್ಯವಾಗಿ ಮುಸ್ಲಿಮರ ಸಂವಹನದ ಪ್ರಮುಖ ಭಾಷೆ ಉರ್ದು. ಹೀಗಿದ್ದೂ ಆಕೆ ಉರ್ದು ಕಲಿಯುವ ಗೋಜಿಗೆ ಹೋಗಿರಲಿಲ್ಲ. ನನ್ನ ತಾಯಿಯನ್ನು ಅಕ್ಕ ಎಂದೇ ಸಂಬೋಧಿಸುತ್ತಿದ್ದ ಆಕೆಗೆ ಸಾಲಾಗಿ ಮೂರು ಹೆಣ್ಣುಮಕ್ಕಳಿದ್ದರೆ ನನ್ನ ತಾಯಿಗೆ ನಾವು ಮೂರು ಜನ ಗಂಡು ಮಕ್ಕಳು. ಹೆಣ್ಣುಮಕ್ಕಳಿಲ್ಲ ಎನ್ನುವ ನನ್ನ ತಾಯಿಯ ಕೊರಗನ್ನು ಹೀರಾಳ ಮಕ್ಕಳು ನೀಗಿಸಿದ್ದರೆ ಗಂಡು ಮಕ್ಕಳಿಲ್ಲ ಎನ್ನುವ ಹೀರಾಳ ಚಿಂತೆಯನ್ನು ನಾವು ದೂರಾಗಿಸಿದ್ದೇವು. ಒಂದು ಅನ್ಯೋನ್ಯತೆಯ ನಡುವೆ ಧರ್ಮ ಎಂದೂ ತಲೆ ಹಾಕಿರಲಿಲ್ಲ

         ನನ್ನೂರಿಗೆ ಅತೀ ಸಮೀಪದಲ್ಲಿರುವ ಕಲಬುರ್ಗಿಯಲ್ಲಿ ದರ್ಗಾವೊಂದಿದೆ. ದರ್ಗಾದ ಹೆಸರು ರಾಣೇಶಪೀರ ಎಂದು. ಅದು ರಾಣೇಶ ಮತ್ತು ಪೀರ ಎನ್ನುವ ಹಿಂದೂ ಮತ್ತು ಮುಸ್ಲಿಂ ಸ್ನೇಹಿತರಿಬ್ಬರ ಸಮಾಧಿ ಸ್ಥಳ. ದರ್ಗಾಕ್ಕೆ ಹಿಂದೂ ಮತ್ತು ಮುಸ್ಲಿಂ ಭಕ್ತರಿಬ್ಬರೂ  ಭೇಟಿ ನೀಡುವರು. ಅದು ಹಿಂದೂ ಮತ್ತು ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿದೆ. ಪ್ರತಿವರ್ಷ ನಡೆಯುವ ಶರಣಬಸವೇಶ್ವರ ರಥೋತ್ಸವದಲ್ಲಿ ಹಿಂದುಗಳಂತೆ ಮುಸ್ಲಿಮರೂ ಪಾಲ್ಗೊಂಡು ಶರಣನ ದರ್ಶನ ಪಡೆದು ಕಾಣಿಕೆ ಸಮರ್ಪಿಸುವರು. ಅದೇ ರೀತಿ ಬಂದೇ ನವಾಜ್ ಉರುಸನಲ್ಲಿ ಪಾಲ್ಗೊಳ್ಳುವ ಹಿಂದೂ ಭಕ್ತರ ಸಂಖ್ಯೆಯೂ ಅಧಿಕ

        ಒಟ್ಟಿನಲ್ಲಿ ಇಂಥದ್ದೊಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ಭಾವೈಕ್ಯತೆಯನ್ನು ಖಾಸಗಿಯಾಗಿ ನಾವುಗಳು ಕಟ್ಟಿಕೊಂಡಿದ್ದೆ ಹೊರತು ಇದನ್ನು ಸರ್ಕಾರವಾಗಲಿ ಇಲ್ಲವೇ ಯಾವ ರಾಜಕೀಯ ಪಕ್ಷವಾಗಲಿ ಕಟ್ಟಿದ್ದಲ್ಲ. ಆದರೆ ಕಾಲಾನಂತರದಲ್ಲಿ ಈ ಭಾವೈಕ್ಯತೆ ಕೆಲವರಿಗೆ ಸಹನೀಯವಾಗಲಿಲ್ಲ. ಪರಿಣಾಮವಾಗಿ ನಮ್ಮ ಹಿರಿಯರು ಶ್ರಮಪಟ್ಟು ಕಟ್ಟಿದ ಈ ಭಾವೈಕ್ಯತೆಯಲ್ಲಿ ಬಿರುಕು ಮೂಡಲಾರಂಭಿಸಿದ್ದಂತೂ ನಿಜ. 


ಕ್ರಿಕೆಟ್  ಭಾವೈಕ್ಯತೆಯನ್ನು  ಒಡೆಯಿತಾ?


        ಪಾಕಿಸ್ತಾನಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್  ನಮ್ಮ ಕಿರಣ್ ಮೋರೆ ಕಡೆ ಮುಖಮಾಡಿ ಆತನ ಎತ್ತರಕ್ಕೆ ಜಿಗಿದಾಗಲೇ ಅಲ್ಲಲ್ಲಿ  ಅಪಸ್ವರಗಳು ಕೇಳಿ ಬಂದವು. ಮಿಯಾಂದಾದ್ ನ  ಈ ವರ್ತನೆಯನ್ನು ಭಾರತದ ಕೆಲವು ಮುಸ್ಲಿಂ ಯುವಕರು ಸಮರ್ಥಿಸಿಕೊಂಡರೆನ್ನುವ ಅನುಮಾನ ಸದ್ದಿಲ್ಲದೇ ಹರಿದಾಡ ತೊಡಗಿತು. ಈ ಕ್ರಿಕೆಟ್ ಆಟ ನಮ್ಮ ಭಾವೈಕ್ಯತೆಯ ನಡುವೆ ಬಿರುಕು ಮೂಡಿಸಬಹುದು ಎನ್ನುವ ಆತಂಕ ಕಾಡುತ್ತಿರುವ ಹೊತ್ತಿನಲ್ಲೇ ಮಿಯಾಂದಾದ್ ಕೊನೆಯ ಓವರ್ ನ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಪಾಕಿಸ್ತಾನವನ್ನು ಗೆಲ್ಲಿಸಿದ. ಆ ಗೆಲುವಿನಿಂದ ಖುಷಿಗೊಂಡ ಮುಸ್ಲಿಂ ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರೆಂಬ ಮಾತುಗಳು ಕೇಳಿ ಬಂದವು. ಭಾರತದ ಸೋಲಿನಿಂದ ಕಂಗೆಟ್ಟಿದ್ದ ಹಿಂದೂ ಹುಡುಗರಿಗೆ ಆ ಮಾತುಗಳು ಗಾಯದ ಮೇಲೆ ಬರೆ ಎಳೆದಂತಾಯಿತು. ಈ ಕ್ರಿಕೆಟ್  ಆಟವನ್ನು ನಮ್ಮ ಯುವಪೀಳಿಗೆ ಅತಿಯಾಗಿ ಹಚ್ಚಿಕೊಂಡಿದೆ  ಎಂದು ನಮ್ಮ ಹಿರಿಯರು ಚಿಂತಿಸುತ್ತಿರುವ ಹೊತ್ತಿನಲ್ಲೇ ಅದೇ ಆಟ ಭಾರತದ ಹಿಂದೂ ಮತ್ತು ಮುಸ್ಲಿಂ ಯುವಕರ ನಡುವೆ ಗೆರೆ ಎಳೆದು ಬಿಟ್ಟಿತ್ತು.

            ನಂತರದ ದಿನಗಳಲ್ಲಿ ಕ್ರಿಕೆಟ್  ಭಾರತದ ಭಾವೈಕ್ಯತೆಯ ಮನಸ್ಸುಗಳನ್ನು ಒಡೆದು ನಮ್ಮಗಳ ನಡುವಣ ಕಂದಕವನ್ನು ಮತ್ತಷ್ಟು ವಿಸ್ತರಿಸುವಂತೆ ಮಾಡಿತು. ಇಲ್ಲಿ ನಮ್ಮ ನಮ್ಮ ಗ್ರಹಿಕೆಯೇ ತಪ್ಪು ಎಂದು ಅರ್ಥೈಸಬಹುದಾದರೂ ಅಂಥದ್ದೊಂದು ಗ್ರಹಿಕೆಯನ್ನು ಮೂಲೋಚ್ಚಾಟನೆ ಮಾಡುವಂಥ ಪ್ರಯತ್ನ ಇಲ್ಲಿ ನಡೆಯಲೇ ಇಲ್ಲ. ಬದಲಾಗಿ ನಮ್ಮ ಆ ಒಂದು ಗ್ರಹಿಕೆಯನ್ನೇ ಮೂಲವಾಗಿಸಿಕೊಂಡು ಮಾಧ್ಯಮಗಳು ಮತ್ತಷ್ಟು ತುಪ್ಪ ಸುರಿಯುತ್ತ ಹೋದರೆ ಕ್ರಿಕೆಟ್  ಮಂಡಳಿ ಅದನ್ನೇ ತನ್ನ ಲಾಭದ ಉದ್ದಿಮೆಗೆ ಉಪಯೋಗಿಸಿಕೊಂಡಿತು. ಭಾರತ ಮತ್ತು ಪಾಕಿಸ್ತಾನ ಈ ಎರಡು ರಾಷ್ಟ್ರಗಳ ನಡುವಣ ಕ್ರಿಕೆಟ್  ಆಟವನ್ನು ಮಾಧ್ಯಮಗಳು ಒಂದು ಯುದ್ಧ ಎನ್ನುವ ಅರ್ಥದಲ್ಲೇ ವರದಿ ಮಾಡಿದ್ದೆ ಹೆಚ್ಚು. ಕ್ರಿಕೆಟ್  ಮಂಡಳಿ ಸಹ ತನ್ನ ಖಜಾನೆಯನ್ನು ತುಂಬಿಸಿಕೊಳ್ಳಲು ಭಾರತದ ಹಿಂದೂ ಹಾಗೂ ಮುಸ್ಲಿಂ ಕ್ರಿಕೆಟ್  ಪ್ರೇಮಿಗಳ ಆ ಕ್ರೀಡೆಯೊಂದಿಗಿನ  ಭಾವನೆಗಳನ್ನೇ ಬಂಡವಾಳವಾಗಿಸಿಕೊಂಡು ಈ ಎರಡೂ ರಾಷ್ಟ್ರಗಳ ಆಟವನ್ನು ಸಂಘಟಿಸುತ್ತಲೇ ಹೋಯಿತು. ಅದಕ್ಕೆ ತಕ್ಕಂತೆ ಹಿಂದೂ ಯುವಕರುಗಳಿಗೆ ಆಫ್ರಿದಿ, ಶೋಯೆಬ್, ಅಜ್ಮಲ್ ಇವರುಗಳು ಕೇವಲ ಕ್ರೀಡಾಪಟುಗಳಾಗಿ ಕಾಣಿಸದೆ ಒಂದು ರೀತಿಯಲ್ಲಿ ಯುದ್ಧಕ್ಕೆ ದಂಡೆತ್ತಿ ಬಂದ ಶತ್ರುಗಳಂತೆ ಕಾಣಿಸತೊಡಗಿದರು. ಹಾಗೆಯೇ ನಮ್ಮ ಮುಸ್ಲಿಂ ಯುವಕರಿಗೆ ಸಚಿನ್, ಧೋನಿ, ಗಂಭೀರ್ ಎಂದಿಗೂ ಹಮಾರಾ ಕ್ರಿಕೆಟರ್ಸ್ ಆಗಲೇ ಇಲ್ಲ. ಈ ಕ್ರಿಕೆಟ್  ಆಟ ಹಿಂದೂ ಮತ್ತು ಮುಸ್ಲಿಂ ಮನಸ್ಸುಗಳನ್ನು ಬೆಸೆಯುವುದಕ್ಕಿಂತ ಬೇರ್ಪಡಿಸಿದ್ದೆ  ಹೆಚ್ಚು.

ಮತ್ತಷ್ಟು ಹೆಚ್ಚಿದ ಅಂತರ


             ೧೯೯೨ ರ ಆ ದಿನ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕೆಡುವುದರೊಂದಿಗೆ ಭಾರತದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಂಪೂರ್ಣವಾಗಿ ಮುರಿದು ಬಿತ್ತು. ಆ ದಿನದ ಘಟನೆಯ ಕಪ್ಪು ನೆರಳು  ಕ್ಷಣಾರ್ಧದಲ್ಲಿ ಇಡೀ ರಾಷ್ಟ್ರವನ್ನು ವ್ಯಾಪಿಸಿತು. ನಗರಗಳನ್ನು ಮಾತ್ರವಲ್ಲದೆ ಹಳ್ಳಿ ಹಳ್ಳಿಗಳಿಗೂ ಅದರ ಬಿಸಿ ತಟ್ಟಿತು. ನಿನ್ನೆಯವರೆಗೂ ಅನ್ಯೋನ್ಯತೆಯಿಂದ ಬಾಳಿ ಬದುಕಿದವರು ಈಗ ಪರಸ್ಪರ ಅನುಮಾನದಿಂದ ನೋಡುವಂತಾಯಿತು. ಮುಸ್ಲಿಮರು ಹಿಂದೂಗಳ ಮನೆಗಳ ಮೇಲೂ ಹಿಂದೂಗಳು ಮುಸ್ಲಿಮರ ಮನೆಗಳ ಮೇಲೂ ದಾಳಿ ಮಾಡತೊಡಗಿದರು. ಕೊಲೆ,ಅತ್ಯಾಚಾರ, ಹೊಡೆದಾಟಗಳಾದವು. ಜನರು ಜೀವ ಕೈಯಲ್ಲಿ ಹಿಡಿದುಕೊಂಡು ರಾತ್ರಿಗಳನ್ನು ಕಳೆಯಬೇಕಾಯಿತು. ತಮ್ಮ ತಮ್ಮ ಧರ್ಮಿಯರೇ ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಿಗೆ ಅನೇಕ ಕುಟುಂಬಗಳು ವಲಸೆ ಹೋದವು.

          ಈ ಘಟನೆಯ ನಂತರ ಅದುವರೆಗೂ ಕೇವಲ ಯುವಕರಿಗೆ ಮಾತ್ರ ಸೀಮಿತವಾಗಿದ್ದ ದ್ವೇಷ ಅದು ಹಿರಿಯ ಮನಸ್ಸುಗಳಿಗೂ ವಿಸ್ತರಿಸಿತು. ಮಂದಿರ, ಮಸೀದಿಗಳಲ್ಲಿ ಚರ್ಚೆಯಾಗತೊಡಗಿದವು. ಅಲ್ಲಿಯವರೆಗೂ ಪ್ರಾರ್ಥನಾ ಸ್ಥಳಗಳಾಗಿದ್ದ ಮಂದಿರ ಮತ್ತು ಮಸಿದಿಗಳು ಕೋಮುಗಲಭೆಯನ್ನು ಸೃಷ್ಟಿಸುವ ಕೇಂದ್ರಗಳಾಗಿ ರೂಪಾಂತರಗೊಂಡವು. ಹಣೆಗೆ ಕುಂಕುಮ ಧರಿಸುವವರೆಲ್ಲ ಅವರಿಗೆ ಪ್ರಬಲ ಕೋಮುವಾದಿಗಳಂತೆ ಕಾಣಿಸತೊಡಗಿದರೆ ತಲೆಗೆ ಹಸಿರು ಟೊಪ್ಪಿಗೆ ಧರಿಸಿ ಉದ್ದನೆಯ ಗಡ್ಡ ಬಿಟ್ಟವರೆಲ್ಲ ಇವರಿಗೆ ಭಯೋತ್ಪಾದಕರಂತೆ ರಾಷ್ಟ್ರದ್ರೋಹಿಗಳಂತೆ ಗೋಚರಿಸತೊಡಗಿದರು. ಸೇಡು, ಪ್ರತಿಕಾರ ಬೆಳೆಯುತ್ತ ಹೋಯಿತು. ಸರಣಿ ಬಾಂಬ್ ಸ್ಫೋಟಗಳಿಗೆ ನೂರಾರು ಅಮಾಯಕ ಜೀವಗಳು  ಬಲಿಯಾದವು. ಅನುಮಾನಗೊಂಡ ಮನಸ್ಸುಗಳನ್ನು ಇನ್ನಷ್ಟು ವ್ಯಗ್ರಗೊಳಿಸಲು ಅಲ್ಲಲ್ಲಿ ಅನ್ಯರಾಷ್ಟ್ರದ ಧ್ವಜ ಹಾರಾಡತೊಡಗಿತು. ಒಟ್ಟಿನಲ್ಲಿ ಕೋಮುಸೌಹಾರ್ದತೆ ಅಳಿದು ಬಹುದೊಡ್ಡ ಕಂದಕವೊಂದು ಸೃಷ್ಟಿಯಾಯಿತು.

ಒಡೆದು ಆಳುವ ನೀತಿ


           ನಮ್ಮದು ವೋಟ್ ಬ್ಯಾಂಕ್  ರಾಜಕಾರಣವಾಗಿರುವುದರಿಂದ ನಮ್ಮ ರಾಜಕೀಯ ನಾಯಕರುಗಳು ಈ ಒಡೆದು ಆಳುವ ನೀತಿಯನ್ನು ಪ್ರಜ್ಞಾಪೂರ್ವಕವಾಗಿಯೇ ಮೈಗೂಡಿಸಿಕೊಂಡಿರುವರು. ಧರ್ಮ ಧರ್ಮದ ನಡುವೆ ಜಾತಿ ಜಾತಿಯ ನಡುವೆ ಬಹುದೊಡ್ಡ ಕಂದಕವನ್ನು ಸೃಷ್ಟಿಸಿದಾಗಲೇ ರಾಜಕೀಯದಲ್ಲಿ ಯಶಸ್ಸು ಸಾಧ್ಯ ಎನ್ನುವ ಮನೋಭಾವ ಇವತ್ತಿನ ರಾಜಕಾರಣಿಗಳದು. ಅದಕ್ಕೆಂದೇ ಅವರು ಎಂದಿಗೂ ಎರಡು ಧರ್ಮಗಳಾಗಲಿ ಇಲ್ಲವೇ ಜಾತಿಗಳಾಗಲಿ ಒಂದುಗೂಡಲು ಬಿಡಲಾರರು.

          ಇವತ್ತಿನ ದಿನಗಳಲ್ಲಿ ರಾಜಕೀಯ ಪಕ್ಷವೊಂದರ ಅಸ್ತಿತ್ವ ಅದು ಯಾವ ಧರ್ಮ, ಜಾತಿಯನ್ನು ಓಲೈಸುತ್ತಿದೆ ಎನ್ನುವುದನ್ನು ಆಧರಿಸಿದೆ. ಪರಿಣಾಮವಾಗಿ ರಾಜಕೀಯ ಪಕ್ಷಗಳು ದೇಶದ ಅಭಿವೃದ್ಧಿಗಿಂತ ಧರ್ಮ ಮತ್ತು ಜಾತಿಗಳ ಓಲೈಕೆಗೆ ಒತ್ತು ನೀಡುತ್ತಿವೆ. ಇದಕ್ಕೆ ಪೂರಕವಾಗಿ ರಾಜಕೀಯ ಪಕ್ಷಗಳು ಧರ್ಮ ಗುರುಗಳ ಹಾಗೂ ಧರ್ಮಾಂಧರ ಕಪಿಮುಷ್ಟಿಗೆ ಸಿಲುಕಿ ನರಳುತ್ತಿವೆ. ಪಕ್ಷಗಳ ಪ್ರಣಾಳಿಕೆಗಳಲ್ಲಿ ಸಾರ್ವಜನಿಕ ಹಿತಾಸಕ್ತಿಗಿಂತಲೂ ಧಾರ್ಮಿಕ ಹಿತಾಸಕ್ತಿ ಮೇಲುಗೈ ಸಾಧಿಸುತ್ತಿದೆ. ಮಠ, ಮಸೀದಿ, ಮಂದಿರಗಳು ದೇಶದ ರಾಜಕೀಯ ಸ್ಥಿತಿಗತಿಯನ್ನು ನಿರ್ಧರಿಸುವ ಮಟ್ಟಕ್ಕೆ ಬೆಳೆದು ನಿಂತಿರುವುದರ ಹಿಂದೆ ವಿವಿಧ ಧರ್ಮಗಳು ನಿರಂತರವಾಗಿ ಕೆಲಸ ಮಾಡಿವೆ. 

           ಇಲ್ಲಿ ಎಲ್ಲ ರಾಜಕೀಯ ಪಕ್ಷಗಳು ಹಿಂದೂ ಮತ್ತು ಮುಸ್ಲಿಮರ ಧಾರ್ಮಿಕ ಉನ್ಮತ್ತತೆ ಹಾಗೂ ಪರಸ್ಪರರ ನಡುವಣ ಸಂಘರ್ಷವನ್ನು ತಮ್ಮ ರಾಜಕೀಯ ಏಳ್ಗೆಯ ಲಾಭಕ್ಕಾಗಿ ಬಳಸಿಕೊಂಡಿದ್ದೆ ಹೆಚ್ಚು. ಮಠ, ಮಸೀದಿ, ಮಂದಿರ, ಚರ್ಚ್ ಗಳಿಗೆ ಕೋಟ್ಯಾಂತರ ರೂಪಾಯಿಗಳ ಅನುದಾನ, ಹಜ್ ಯಾತ್ರಿಕರಿಗೆ ವಿಶೇಷ ಸಹಾಯಧನ ಹೀಗೆ ಪ್ಯಾಕೇಜ್ ಗಳ ಮೂಲಕ ತಮ್ಮ ತಮ್ಮ ರಾಜಕೀಯದ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಂಡರೆ ವಿನ: ಒಂದು ಕೋಮು ಸೌಹಾರ್ದ ವಾತಾವರಣವನ್ನು ನೆಲೆಗೊಳಿಸಲು ಅವರುಗಳು ಪ್ರಯತ್ನಿಸಲೇ ಇಲ್ಲ.

           ಬಹುಸಂಖ್ಯಾತ ಹಿಂದುಗಳಿರುವ ಪ್ರದೇಶಗಳಿಗೆ ಹಿಂದೂ ಅಭ್ಯರ್ಥಿಗಳನ್ನು ಹಾಗೂ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಪ್ರದೇಶಗಳಿಗೆ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಡೆಯನ್ನು ನಾವು ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಎಂದಿನಿಂದಲೂ ನೋಡುತ್ತ ಬಂದಿದ್ದೇವೆ. ಯಾವಾಗ ಧರ್ಮವೊಂದು ರಾಜಕೀಯದ ಜೊತೆಗೆ ಗುರುತಿಸಿಕೊಳ್ಳಲಾರಂಭಿಸುತ್ತದೆಯೋ ಆಗ ರಾಜಕಾರಣದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೂಲೆಗುಂಪಾಗಿ ಧಾರ್ಮಿಕ ಓಲೈಕೆ ಪ್ರಬಲವಾಗುತ್ತ ಹೋಗುತ್ತದೆ. ಜೊತೆಗೆ ನಮ್ಮ ರಾಜಕಾರಣಿಗಳ ಇಂಥದ್ದೊಂದು ನಡೆ ಧರ್ಮ ಧರ್ಮದ ನಡುವೆ ಗೋಡೆಯನ್ನು ಕಟ್ಟಲಾರಂಭಿಸುತ್ತದೆ. ನಮ್ಮ ರಾಜಕಾರಣಿಗಳು ಇಲ್ಲಿ ಮಾಡಿದ್ದೂ ಇದನ್ನೇ. ಅವರೆಂದೂ ಭಾರತದ ಈ ಎರಡು ಬಲಿಷ್ಠ ಧರ್ಮಗಳ ನಡುವೆ  ಸೇತುವೆಯಾಗಲೇ ಇಲ್ಲ.

       ಜೊತೆಗೆ ಉಲ್ಲೇಖಿಸಲೇ ಬೇಕಾದ ಇನ್ನೊಂದು ಮಹತ್ವದ ಕಾರಣವೆಂದರೆ ಅದು ಬೆಳೆಯುತ್ತಿರುವ ನಗರೀಕರಣ. ಹಳ್ಳಿ ಪ್ರದೇಶಗಳಲ್ಲಿ ಧಾರ್ಮಿಕ ಆಚರಣೆ ಹೆಚ್ಚಿದ್ದರೂ ಅಲ್ಲಿ ಅತಿಯಾದ ಧರ್ಮಾಂದತೆಗೆ ಅವಕಾಶ ತೀರ ಕಡಿಮೆ. ಆದರೆ ಆಧುನಿಕತೆಗೆ ತೆರೆದುಕೊಳ್ಳುತ್ತಿರುವ ನಗರಗಳಲ್ಲಿ ಮಾತ್ರ ನಾವು ಅತಿಯಾದ ಧರ್ಮಾಂದತೆಯನ್ನು ಕಾಣಬಹುದು. ಈ ಹಳ್ಳಿಗರು ನಗರ ಪ್ರದೇಶಗಳಿಗೆ ವಲಸೆ ಹೋಗಿ ಹಿಂತಿರುಗಿ ಬರುವಾಗ ತಮ್ಮ ಜೊತೆಯಲ್ಲಿ ಗ್ರಾಮಗಳಿಗೆ ಧರ್ಮಾಂದತೆಯನ್ನೂ ಬಳುವಳಿಯಾಗಿ ತಂದಿದ್ದು ಬಹುದೊಡ್ಡ ದುರಂತ.

ಇವತ್ತು ಏನಾಗಿದೆ?


              ನನ್ನೂರಿನ ಹಿರಿಯ ತಲೆಮಾರಿನವರೆಲ್ಲ ಈಗ ನೆನಪು ಮಾತ್ರ. ಅವರ ನಂತರದ ಪೀಳಿಗೆ ರಾಜಕಾರಣದ ಕಪಿಮುಷ್ಟಿಗೆ ಸಿಲುಕಿ ಕೋಮು ಸೌಹಾರ್ದತೆಯನ್ನೇ ಹೊಸಕಿ ಹಾಕಿದೆ. ಮೊಹರಂ, ರಂಜಾನ್, ದೀಪಾವಳಿ, ಹೋಳಿ ಹುಣ್ಣಿಮೆ ಹಬ್ಬಗಳು ತಮ್ಮ ಗತಕಾಲದ ವೈಭವವನ್ನು ಕಳೆದುಕೊಂಡಿವೆ. ಆಗೆಲ್ಲ ಕನ್ನಡ ಮಾತನಾಡುತ್ತಿದ್ದ ಮುಸ್ಲಿಂ ಕುಟುಂಬಗಳಲ್ಲಿ ಈಗ ಉರ್ದು ತನ್ನ ಪ್ರಾಬಲ್ಯವನ್ನು ಸ್ಥಾಪಿಸಿದೆ. ಕನ್ನಡ ಶಾಲೆಗಳಿಗೆ ಓದಲು ಬರುತ್ತಿದ್ದ ಮುಸ್ಲಿಂ ಮಕ್ಕಳ ಸಂಖ್ಯೆ ಕಡಿಮೆಯಾಗಿ ಅವರೆಲ್ಲ ಮದರಸಾಗಳಿಗೆ ಹೋಗುತ್ತಿರುವರು. ಕಲ್ಲು ಮಣ್ಣುಗಳಿಂದ ನಿರ್ಮಾಣಗೊಂಡಿದ್ದ ಗುಡಿ, ಮಸೀದಿಗಳಿಗೆ ನಮ್ಮ ರಾಜಕಾರಣಿಗಳ ಕೃಪೆಯಿಂದ ಅಮೃತಶಿಲೆಯ ಭಾಗ್ಯ ದೊರೆತಿದೆ. ರಾಣೇಶ ಮತ್ತು ಪೀರರನ್ನು ಭಕ್ತರು ತಮ್ಮ ತಮ್ಮ ಧರ್ಮಕ್ಕನುಗುಣವಾಗಿ ಹಂಚಿಕೊಂಡಿರುವರು. ಶರಣಬಸವನ ರಥೋತ್ಸವದಲ್ಲಿ ಮುಸ್ಲಿಂ ಭಕ್ತರು ಪಾಲ್ಗೊಳ್ಳುತ್ತಿಲ್ಲವಾದರೆ ಖಾಜಾ ಬಂದೇನವಾಜ್ ನ ದರ್ಗಾಕ್ಕೆ ಭೇಟಿ ನೀಡುವ ಹಿಂದೂ ಭಕ್ತರ ಸಂಖ್ಯೆ ಗಣನೀಯವಾಗಿ ಕುಸಿದಿದೆ.   ಒಂದೇ ಊರಿನಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದರೂ ಎರಡು ಪ್ರತ್ಯೇಕ ದೇಶಗಳಲ್ಲಿ ಬದುಕುತ್ತಿರುವ ಮನಸ್ಥಿತಿ ಅಲ್ಲಿ ಮನೆ ಮಾಡಿದೆ. ಒಂದು ಕಾಲದಲ್ಲಿ ಸೌಹಾರ್ದತೆ, ಸಹಬಾಳ್ವೆಗೆ ಒತ್ತುಕೊಟ್ಟು ನಮ್ಮ ಹಿರಿಯರು ಬದುಕಿ ಬಾಳಿದ ಆ ನೆಲದಲ್ಲಿ ಇವತ್ತು ತೀರ ಧರ್ಮಾಂಧರಂತೆ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗದಂತೆ ಬಾಳುತ್ತಿರುವರು. ನನ್ನೂರು ಎನ್ನುವುದು ಇಲ್ಲಿ ರೂಪಕ ಮಾತ್ರ. ಇದು ಇಡೀ ದೇಶಕ್ಕೆ ಅನ್ವಯವಾಗುವ ಚಿತ್ರಣ.

ಕೊನೆಯ ಮಾತು


            ಅಜ್ಮೀರ್ ದರ್ಗಾ ಭಾರತದ ಪುಣ್ಯಕ್ಷೇತ್ರಗಳಲ್ಲೊಂದು. ಈ ದರ್ಗಾಕ್ಕೆ ಕೆಲವು ತಿಂಗಳುಗಳ ಹಿಂದೆ ಪಾಕಿಸ್ತಾನದ ಪ್ರಧಾನಿ ಭೇಟಿನೀಡಿದಾಗ ವಾಡಿಕೆಯಂತೆ ದರ್ಗಾದ ದಿವಾನ್ ಅವರನ್ನು ಸ್ವಾಗತಿಸಬೇಕಿತ್ತು. ಆದರೆ ಹಾಗಾಗಲಿಲ್ಲ. ಏಕೆಂದರೆ ಅಜ್ಮೀರ್ ದರ್ಗಾದ ದಿವಾನರು ಪಾಕಿಸ್ತಾನದ ಪ್ರಧಾನಿಯನ್ನು ಸ್ವಾಗತಿಸಲು ನಿರಾಕರಿಸಿ ಗೈರುಹಾಜರಾದರು. ಒಂದು ವೇಳೆ ಪಾಕಿಸ್ತಾನದ ಪ್ರಧಾನಿಯನ್ನು  ಸ್ವಾಗತಿಸಲೇ ಬೇಕೆನ್ನುವುದಾದರೆ ಆ ರಾಷ್ಟ್ರ ಮೊದಲು ಭಾರತೀಯ ಸೈನಿಕರ ಮೇಲೆ ಮಾಡುತ್ತಿರುವ ಮೋಸದ ಆಕ್ರಮಣವನ್ನು ನಿಲ್ಲಿಸಬೇಕು ಹಾಗೂ ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗೆ ರಕ್ಷಣೆ ನೀಡಬೇಕೆಂದು ಷರತ್ತು ವಿಧಿಸಿದರು. ಇದು ಧರ್ಮವನ್ನೂ ಮೀರಿದ ರಾಷ್ಟ್ರೀಯತೆ. ಇಂಥದ್ದೊಂದು ರಾಷ್ಟ್ರಪ್ರೇಮ ಪ್ರತಿಯೊಬ್ಬರಲ್ಲೂ ಮೂಡಿದಾಗಲೇ ಈ ಧರ್ಮಾಂಧತೆ ಅಳಿಯಲು ಸಾಧ್ಯ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

No comments:

Post a Comment