Tuesday, February 5, 2013

ವಿಶ್ವರೂಪಂ, ಶಾರುಕ್ ಖಾನ್ ಮತ್ತು ಪಾಕಿಸ್ತಾನ

   



     ಕಳೆದ ತಿಂಗಳು ಕಮಲ ಹಾಸನ್ ಚಿತ್ರ ಬದುಕಿನ ಮಹತ್ವಾಕಾಂಕ್ಷೆಯ ಸಿನಿಮಾ 'ವಿಶ್ವ ರೂಪಂ' ದೇಶದಾದ್ಯಂತ ಬಿಡುಗಡೆಯಾಗಬೇಕಿತ್ತು. ಪ್ರೇಕ್ಷಕರೂ ಸಹ ಸಿನಿಮಾ ವೀಕ್ಷಣೆಗಾಗಿ ಕಾತುರದಿಂದಲೇ ಕಾಯುತ್ತಿದ್ದರು. ಸಿನಿಮಾ ಏನೋ ಬಿಡುಗಡೆಯಾಯಿತು ಆದರೆ ಅದು ಕಮಲ ಹಾಸನ್ ತವರು ರಾಜ್ಯ ತಮಿಳು ನಾಡೊಂದನ್ನು ಹೊರತು ಪಡಿಸಿ. ಕಮಲ ಹಾಸನ್ ಗೆ ಅತಿ ಹೆಚ್ಚಿನ ಅಭಿಮಾನಿಗಳಿರುವುದು ಮತ್ತು ಆತ ಅತ್ಯಂತ ಜನಪ್ರಿಯತೆ ಪಡೆದಿರುವುದು ತಮಿಳು ನಾಡಿನಲ್ಲೇ. ಜೊತೆಗೆ  ತನ್ನ ಈ ಮಹತ್ವಾಕಾಂಕ್ಷೆಯ ಚಿತ್ರಕ್ಕಾಗಿ ಆತ ತನ್ನ ಸಿನಿಮಾ ಬದುಕಿನುದ್ದಕ್ಕೂ ದುಡಿದು ಗಳಿಸಿರುವುದನ್ನೆಲ್ಲ ಖರ್ಚು ಮಾಡಿದ್ದ. ಆದ್ದರಿಂದ ಆತ 'ವಿಶ್ವ ರೂಪಂ' ನಿಂದ ಅತಿ ಹೆಚ್ಚಿನ ಲಾಭವನ್ನು ನಿರೀಕ್ಷಿಸಿದ್ದು ಈ ತಮಿಳು ನಾಡು ರಾಜ್ಯದಿಂದಲೇ. ಏಕಾಏಕಿ ಹೀಗೆ 'ವಿಶ್ವ ರೂಪಂ' ಸಿನಿಮಾ ಬಿಡುಗಡೆಗೆ ಆ ರಾಜ್ಯದಲ್ಲಿ ನಿಷೇಧ ಹೇರಿದಾಗ ಸಹಜವಾಗಿಯೇ ಕೋಟ್ಯಾಂತರ ರೂಪಾಯಿಗಳ ಬಂಡವಾಳ ಹೂಡಿದ ನಟ, ನಿರ್ಮಾಪಕ ಮತ್ತು ನಿರ್ದೇಶಕ ಕಮಲ ಹಾಸನ್ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂಥ ಪರಿಸ್ಥಿತಿ ಎದುರಾಯಿತು. ಈ ಚಿತ್ರದ ನಿರ್ಮಾಣದಿಂದಾದ ಸಾಲ ತೀರಿಸಲು ತನ್ನ ಮನಯನ್ನೇ ಕಳೆದು ಕೊಳ್ಳಬೇಕಾಯಿತು ಎಂದು ಹೇಳಿಕೊಂಡ ಆ ಹಿರಿಯ ನಟ ಒಂದು ಹಂತದಲ್ಲಿ ದೇಶವನ್ನೇ ಬಿಟ್ಟು ಹೋಗುವುದಾಗಿ ನುಡಿದ. ಇದು ಆ ಕ್ಷಣಕ್ಕೆ ಆಕ್ರೋಶದ ಮಾತು ಎಂದೆನಿಸಿದರೂ ಒಂದು ಸೃಜನಶೀಲ ಮನಸ್ಸು ಸರ್ಕಾರದ ಮತ್ತು ಒಂದು ಧರ್ಮದ ಪಿತೂರಿಗೆ ಘಾಸಿಗೊಂಡು ವ್ಯಕ್ತ ಪಡಿಸಿದ ಸಾತ್ವಿಕ ಸಿಟ್ಟು ಅದಾಗಿತ್ತು.

       ತಮಿಳು ನಾಡಿನಲ್ಲಿ 'ವಿಶ್ವ ರೂಪಂ' ಚಿತ್ರ ಪ್ರದರ್ಶನವನ್ನು ನಿಷೇಧಿಸಿದ ಮೇಲೆ ಆ ಸಿನಿಮಾ ಬಿಡುಗಡೆಯಾದ ಬೇರೆ ಬೇರೆ ರಾಜ್ಯಗಳಲ್ಲೂ ನಾಟಕೀಯ ಬೆಳವಣಿಗೆಗಳು ಕಾಣಿಸತೊಡಗಿದವು. ಕರ್ನಾಟಕದ ಕೆಲವು ನಗರಗಳಲ್ಲೂ ಒಂದಿಷ್ಟು ಜನ ಗುಂಪಾಗಿ ಸಿನಿಮಾ ಪ್ರದರ್ಶನಗೊಳ್ಳುತ್ತಿದ್ದ ಚಿತ್ರ ಮಂದಿರಗಳ ಮೇಲೆ ಕಲ್ಲೆಸೆದು ಪ್ರತಿಭಟಿಸಿದರು. ಮುಂಬೈನಲ್ಲೂ ಚಿತ್ರದ ವಿರುದ್ಧ ಅಪಸ್ವರದ ಧ್ವನಿಗಳು ಕೇಳಿಸಿದವು. ಉತ್ತರ ಪ್ರದೇಶದಲ್ಲಿ 'ವಿಶ್ವ ರೂಪಂ' ಸಿನಿಮಾ ಬಿಡುಗಡೆಗೆ ಅವಕಾಶವೇ ನೀಡಕೂಡದೆಂದು ಅಲ್ಲಿನ ಮುಖ್ಯ ಮಂತ್ರಿಯ ಮೇಲೆ ಒತ್ತಡ ಹೇರಲಾಯಿತು. ಹೀಗೆ ಆ ಸಿನಿಮಾ ದೇಶದ ಬಹುತೇಕ ರಾಜ್ಯಗಳಲ್ಲಿ ಪ್ರತಿಭಟನೆಯನ್ನು ಎದುರಿಸಬೇಕಾಯಿತು.

      ಅಷ್ಟಕ್ಕೂ ಈ ಸಿನಿಮಾದ ವಿರುದ್ಧ ಒಂದು ಧರ್ಮದ ಜನ ಅಷ್ಟೊಂದು ಉಗ್ರವಾಗಿ ಪ್ರತಿಭಟಿಸಲು ಕಾರಣವಾದರೂ ಏನು? ಎಂದು ಹುಡುಕಲು ಹೊರಟರೆ ಆ ಒಂದು ಪ್ರತಿಭಟನೆಗೆ ಪೂರಕವಾಗುವ ಯಾವ ಪುರಾವೆಗಳೂ ದಕ್ಕುವ ಸಾಧ್ಯತೆ ನಿಚ್ಚಳವಾಗಿ ಇಲ್ಲ. ಆ ಸಿನಿಮಾದಲ್ಲಿ ತಾಲಿಬಾನಿ ಉಗ್ರರನ್ನು ಉಗ್ರರಾಗಿ ಚಿತ್ರಿಸಿದ್ದೆ ನಟ, ನಿರ್ದೇಶಕ ಕಮಲ ಹಾಸನ್ ಮಾಡಿರುವ ಬಹುದೊಡ್ಡ ತಪ್ಪೆನ್ನುವಂತೆ ಪ್ರತಿಭಟನಾಕಾರರು ವರ್ತಿಸುತ್ತಿರುವರು. ಹೀಗೆ ಉಗ್ರರಾಗಿ ಕಾಣಿಸುವ ತಾಲಿಬಾನಿಗಳು 'ಮುಸ್ಲಿಂ' ಧರ್ಮಕ್ಕೆ ಸೇರಿದವರೆನ್ನುವುದು ಸಿನಿಮಾದ ವಿರುದ್ಧದ ಪ್ರತಿಭಟನೆಗೆ ಮೂಲ ಕಾರಣಗಳಲ್ಲೊಂದು. ಒಂದು ಧರ್ಮದ ಒಬ್ಬ ಉಗ್ರರನನ್ನು ಉಗ್ರನೆಂದು ತೋರಿಸುವುದರಿಂದಾಗಲಿ ಇಲ್ಲವೇ ಕರೆಯುವುದರಿಂದಾಗಲಿ ಇಡೀ ಧರ್ಮಕ್ಕೆ ಅವಮಾನ ಮಾಡಿದಂತೆ ಎನ್ನುವ ಅತಾರ್ಕಿಕ ನಿಲುವಿಗೆ ಬಂದು ನಿಲ್ಲುವುದು ಅತ್ಯಂತ ಮೂರ್ಖತನ. ಜೊತೆಗೆ ನೆರೆಯ ರಾಷ್ಟ್ರದ ಅನೇಕ ಮುಸ್ಲಿಂ ಸಂಘಟನೆಗಳು ಭಾರತದ ವಿರುದ್ಧ ಜಿಹಾದ್ ಘೋಷಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ (ಇಲ್ಲಿ ತಾಲಿಬಾನಿಗಳು ತಮ್ಮ ವಿಧ್ವಂಸಕ ದಾಳಿಗಾಗಿ ಅಮೆರಿಕಾ ದೇಶವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ). ಅಂಥದ್ದೊಂದು ಎಳೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲು ಹೊರಡುವ ನಿರ್ದೇಶಕ ಸಹಜತೆಗೆ ಒತ್ತು ಕೊಡುವುದು ಸಾಮಾನ್ಯ ಸಂಗತಿಗಳಲ್ಲೊಂದು. ಇಲ್ಲಿ ಕಮಲ ಹಾಸನ್ ಮಾಡಿದ್ದು ಅದನ್ನೇ. ಸಿನಿಮಾ ವಾಸ್ತವಿಕತೆಗೆ ಹತ್ತಿರವಾಗಿರಲಿ ಎನ್ನುವ ಕಾರಣದಿಂದ ಆತ  ಸಹಜತೆಗೆ ಒತ್ತು ನೀಡಿದ. ಆದರೆ ಕೆಲವು ಕರ್ಮಠರು ಈ ವಿಷಯವನ್ನೇ ದೊಡ್ಡದಾಗಿಸಿ ಸಿನಿಮಾ ಪ್ರದರ್ಶನವನ್ನು ನಿಷೇಧಿಸಬೇಕೆಂದು ಪ್ರತಿಭಟಿಸುತ್ತಿರುವುದು ಸರಿಯಲ್ಲ. ಹೀಗೆ ಪ್ರತಿಭಟಿಸುತ್ತಿರುವವರು ಕಾಶ್ಮೀರದಲ್ಲಾಗಲಿ ಇಲ್ಲವೇ ನೆರೆಯ ರಾಷ್ಟ್ರದಲ್ಲಾಗಲಿ ಅಲ್ಲಿನ ಹಿಂದೂಗಳ ಮೇಲೆ ಆಗುತ್ತಿರುವ ಅಮಾನವೀಯ ಕೃತ್ಯಗಳ ವಿರುದ್ಧ ಎಂದಾದರೂ ಧ್ವನಿ ಎತ್ತಿರುವರೆ? ಕಸಬ್ ಎನ್ನುವ ಪಾಪಿ ಭಾರತಕ್ಕೆ ಕಾಲಿಟ್ಟು ಇಲ್ಲಿನ ನೂರಾರು ಅಮಾಯಕರನ್ನು ನಿರ್ದಯವಾಗಿ ಗುಂಡಿಟ್ಟು ಹತ್ಯೆಗೈದಾಗ ಅವನನ್ನು ಮುಸ್ಲಿಂ ಎಂದು ಕರೆಯುವುದು ತಪ್ಪೇ? ಹಾಗೆಂದ ಮಾತ್ರಕ್ಕೆ ಇಡೀ ಮುಸ್ಲಿಂ ಧರ್ಮವೇ ಅನ್ಯಾಯಕ್ಕೋ ಇಲ್ಲವೇ ಅವಮಾನಕ್ಕೋ ಒಳಗಾಯಿತು ಎಂದುಕೊಳ್ಳುವುದು ಅದು ನಮ್ಮ ಸಂಕುಚಿತ ಮನಸ್ಸಿಗೆ ಹಿಡಿದ ಕೈಗನ್ನಡಿ. ಜೊತೆಗೆ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಿ ಬಿಡುಗಡೆಗೆ ಅನುಮತಿ ನೀಡಿದೆ. ಹಾಗೊಂದುವೇಳೆ ಸಿನಿಮಾದಲ್ಲಿ ಆಕ್ಷೇಪಾರ್ಹ ದೃಶ್ಯಗಳಿದ್ದರೆ ಇಲ್ಲವೇ ಯಾವುದಾದರು ಧರ್ಮಕ್ಕೆ ನೋವುಂಟು ಮಾಡುವಂತಹ ಸನ್ನಿವೇಶಗಳಿದ್ದರೆ ಸೆನ್ಸಾರ್ ಮಂಡಳಿಯೇ ಸಿನಿಮಾದ ಬಿಡುಗಡೆಗೆ  ತಡೆಯೊಡ್ಡುತಿತ್ತು. ಹಿಂದೆಯೆಲ್ಲ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಅನೇಕ ಉದಾಹರಣೆಗಳು ನಮ್ಮೆದುರಿವೆ. ಮಂಡಳಿಯೇ ಅನುಮತಿ ನೀಡಿರುವಾಗ ಧರ್ಮವೊಂದರ ಸಂಘಟನೆ ಸಿನಿಮಾದ ಬಿಡುಗಡೆ ಕುರಿತು ನಿರ್ಧಾರ ತೆಗೆದುಕೊಳ್ಳುವುದಿದೆಯಲ್ಲ ಅದು ರಾಷ್ಟ್ರದ  ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾದುದ್ದು.

      ಸಿನಿಮಾ ನಮ್ಮ ಬದುಕಿನ ಮತ್ತು ನಮ್ಮ ಸುತ್ತಮುತ್ತಲಿನ  ಸಮಾಜದ ದರ್ಪಣಸಿನಿಮಾವೊಂದು ಸಮಾಜದ ಗುಣಾವಗುಣಗಳಿಗೆ ಕನ್ನಡಿ ಹಿಡಿದು ತೋರಿಸುವ ಕೆಲಸ ಮಾಡುತ್ತದೆಬ್ರಾಹ್ಮಣ ಸಮುದಾಯದಲ್ಲಿನ ವಿಧವಾ ಸಮಸ್ಯೆ ಕುರಿತು ಎಪ್ಪತ್ತರ ದಶಕದಲ್ಲೇ 'ಸಂಸ್ಕಾರಎನ್ನುವ ಸಿನಿಮಾ ನಿರ್ಮಾಣವಾಯಿತು ದೇಶದಲ್ಲಿನ ಜಾತಿ ಸಮಸ್ಯೆಭೃಷ್ಟಾಚಾರಕೋಮು ಗಲಭೆಕೆಟ್ಟ ರಾಜಕೀಯ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಅನೇಕ ಸಿನಿಮಾಗಳು ಭಾರತದ ವಿವಿಧ ಭಾಷೆಗಳಲ್ಲಿ ನಿರ್ಮಾಣಗೊಂಡಿವೆಹೀಗೆ ಪ್ರತಿ ಸಂದರ್ಭದಲ್ಲಿ ನಾವುಗಳು ಪ್ರತಿಭಟನೆ ಮಾಡುತ್ತ ಕುಳಿತರೆ ಸಿನಿಮಾ ಎನ್ನುವ ಸೃಜನಶೀಲ ಮಾಧ್ಯಮ ಕೇವಲ ಮನೋರಂಜನೆಗೆ ಸೀಮಿತವಾಗುವ ಅಪಾಯ ಎದುರಾಗುತ್ತದೆ.

           ನಡುವೆ ನಟ ಶಾರುಕ್ ಖಾನ್ ಭಾರತದಲ್ಲಿ ತನ್ನನ್ನು ಅನುಮಾನದಿಂದ ಕಾಣುತ್ತಿರುವರು ಎನ್ನುವ ಹೇಳಿಕೆ ನೀಡಿ ಮಾಧ್ಯಮದ ಮತ್ತು ಅಭಿಮಾನಿಗಳ ಅನುಕಂಪಗಳಿಸಲು ಪ್ರಯತ್ನಿಸುತ್ತಾನೆಮಾತನಾಡುವ ಉತ್ಸಾಹದಲ್ಲಿ  ನೆಲದಿಂದ ತಾನು ಪಡೆದದ್ದೇನು ಎನ್ನುವ ಕಿಂಚಿತ್ ಉಪಕಾರ ಸ್ಮರಣೆಯೂ  ನಟನಲ್ಲಿ ಸುಳಿಯುವುದಿಲ್ಲನಾನು ನೋಡಿದಂತೆ ಸರ್ಕಸ್ ಎನ್ನುವ ದೂರದರ್ಶನದ ಧಾರಾವಾಹಿಯಿಂದ ಸಿನಿಮಾ ಜಗತ್ತಿಗೆ ಕಾಲಿಟ್ಟವನು  ಶಾರುಕ್ ಖಾನ್ಹಿಂದಿ ಚಿತ್ರರಂಗದ ಸ್ಟಾರ್ ನಿರ್ದೇಶಕರ ಕೈಗೆ ಸಿಕ್ಕ ಆತ ನಂತರದ ದಿನಗಳಲ್ಲಿ ಜನಪ್ರಿಯ ನಟನಾಗಿ ಬೆಳೆದು ನಿಂತಅವನಲ್ಲಿನ ಪ್ರತಿಭೆಯ ಜೊತೆಗೆ  ನಟನನ್ನು ಆರಾಧಿಸುವ ಅಭಮಾನಿಗಳ ಪಡೆಯೇ ಹುಟ್ಟಿಕೊಂಡ ಪರಿಣಾಮ ಆತ ಹಂತ ಹಂತವಾಗಿ ಯಶಸ್ಸಿನ ಉತ್ತುಂಗಕ್ಕೇರಿದಅಂದೇ ಶಾರುಕ್ ಖಾನ್ ಒಂದು ಧರ್ಮಕ್ಕೆ ಸೇರಿದವನೆಂದು ಆತನನ್ನು ಅನುಮಾನದಿಂದ ನೋಡಿರುತ್ತಿದ್ದರೆ ಹೀಗೆ ಎರಡು ದಶಕಗಳಿಂದ ಭಾರತದ ಸಿನಿಮಾ ಪ್ರೇಕ್ಷಕರ ಡಾರ್ಲಿಂಗ್ ನಟನಾಗಿ ಜನಪ್ರಿಯತೆಯ ಉತ್ತುಂಗದಲ್ಲಿರಲು ಸಾಧ್ಯವಾಗುತ್ತಿರಲಿಲ್ಲ

        ಈ ಸಿನಿಮಾವನ್ನು ಭಾರತೀಯ ಪ್ರೇಕ್ಷಕರು ಪ್ರೀತಿಸುವಷ್ಟು  ಪ್ರಪಂಚದ ಬೇರೆ ಯಾವ ದೇಶದ ಪ್ರೇಕ್ಷಕರು ಪ್ರೀತಿಸಲಾರರು. ಭಾರತೀಯ ಪ್ರೇಕ್ಷಕರಿಗೆ ರಾಜ್ ಕಪೂರ, ದಿಲೀಪ ಕುಮಾರ, ಅಮಿತಾಬ್ ಬಚ್ಚನ್, ಅಮೀರ ಖಾನ್, ಶಾರುಕ್ ಖಾನ್ ಈ ನಟರ ಸಿನಿಮಾ ಮತ್ತು ಅಭಿನಯ ಮುಖ್ಯವೇ ವಿನಃ ಅವರ ಧರ್ಮ ಮತ್ತು ರಾಷ್ಟ್ರೀಯತೆಯಲ್ಲ. ಅದಕ್ಕೆಂದೇ ಅನ್ಯ ದೇಶದ ಅನ್ಯ ಧರ್ಮದ ಜಾಕಿಚಾನ್ ಕೂಡ ಇಲ್ಲಿ ಜನಪ್ರಿಯ ನಟನೆಂಬ ಅಭಿಮಾನಕ್ಕೆ ಪಾತ್ರನಾಗುತ್ತಾನೆ. ಇಲ್ಲಿನ ಸಿನಿಮಾ ಪ್ರೇಕ್ಷಕರು ತೀರ ಧರ್ಮಾಭಿಮಾನಿಗಳಾಗಿದ್ದರೆ ದಿಲೀಪ ಕುಮಾರ, ಅಮೀರ ಖಾನ್, ಅಮ್ಜದ್ ಖಾನ್, ಖಾದರ್ ಖಾನ್, ನರ್ಗಿಸ್, ಶಾರುಕ್ ಖಾನ್, ಸಲ್ಮಾನ್ ಖಾನ್ ಇವರುಗಳೆಲ್ಲ ಜನಪ್ರಿಯ ಕಲಾವಿದರುಗಳಾಗಿ ಭಾರತೀಯರ ಮನೆ ಮತ್ತು ಮನಸ್ಸುಗಳಲ್ಲಿ ನೆಲೆಯೂರಿ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಇಲ್ಲಿ ಇನ್ನೊಂದು ಮಾತು  ಕೆಲವು ವರ್ಷಗಳ ಹಿಂದೆ ಇದೇ ಶಾರುಕ್ ಖಾನ್ ಅಭಿನಯದ 'ಮೈ ನೇಮ್ ಈಸ್ ಖಾನ್' ಸಿನಿಮಾ ಬಿಡುಗಡೆಯಾದಾಗ ಭಾರತದ ಎಲ್ಲ ಪ್ರೇಕ್ಷಕ ವರ್ಗ ಚಿತ್ರವನ್ನು ವೀಕ್ಷಿಸಿ ಆತನ ಅಭಿನಯವನ್ನು ಮೆಚ್ಚಿ ಮಾತನಾಡಿದರು. ಆ ಸಿನಿಮಾದುದ್ದಕ್ಕೂ ಮುಸ್ಲಿಂ ಧರ್ಮದ ನಾಯಕನನ್ನು ಸಮಾಜ ಹೇಗೆ ಅನುಮಾನದಿಂದ ನೋಡುತ್ತಿದೆ ಎನ್ನುವುದನ್ನೇ ತೋರಿಸಲಾಗಿತ್ತು. ಆದರೂ ಸಿನಿಮಾ ಪ್ರೇಕ್ಷಕರಿಗೆ ಇಲ್ಲಿ ಕಥಾ ವಸ್ತುವಿಗಿಂತ ಶಾರುಕ್ ಅಭಿನಯ ಇಷ್ಟವಾಗಿತ್ತು.

       ಶಾರುಕ್ ಖಾನನ ಈ ಹೇಳಿಕೆಯನ್ನು ದೇಶದಾದ್ಯಂತ ಖಂಡಿಸುತ್ತಿರುವ ಹೊತ್ತಿನಲ್ಲೇ ಪಾಕಿಸ್ತಾನ ರಾಷ್ಟ್ರದ ಮಂತ್ರಿಯೋರ್ವರು ಭಾರತದಲ್ಲಿ ಶಾರುಕ್ ಖಾನ್ ಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಹೇಳಿ ಎಡಬಿಡಂಗಿಯಂತೆ ವರ್ತಿಸುತ್ತಾರೆ. ಶಾರುಕ್ ಖಾನ್ ಭಾರತೀಯ ಮತ್ತು ಇದು ಭಾರತದ ಆಂತರಿಕ ವಿಚಾರ. ಭಾರತದ ಆಂತರಿಕ ವ್ಯವಹಾರದಲ್ಲಿ ಮೂಗು ತೂರಿಸಿ ಮಾತನಾಡುವ ರೆಹಮಾನ್ ಮಲೀಕ್ ಗೆ ಮೊದಲು ತನ್ನ ರಾಷ್ಟ್ರದ ಪ್ರಜೆಗಳ ಸುರಕ್ಷತೆಯ ಬಗ್ಗೆ ಕಾಳಜಿ ಇರಲಿ. ಏಕೆಂದರೆ ಆತನದು ಭಯೋತ್ಪಾದಕರನ್ನು ತನ್ನ ಮಡಿಲಲ್ಲಿಟ್ಟುಕೊಂಡು ಸಾಕುತ್ತಿರುವ ರಾಷ್ಟ್ರ. ಪ್ರಪಂಚದ ಪರಮ ಪಾತಕಿ ಬಿನ್ ಲಾಡೆನ್ ಗೆ ತನ್ನ ಸೇನಾ ತರಬೇತಿ ಶಿಬಿರದ ಅನತಿ ದೂರದಲ್ಲೇ ರಾಜಾಶ್ರಯ ನೀಡಿದ ನೆಲವದು. ಭಾರತದ ಮೇಲೆ ದಾಳಿಮಾಡುವ ಉಗ್ರರನ್ನು ಆ ರಾಷ್ಟ್ರ ಸದಾಕಾಲ ಬೆಂಬಲಿಸುತ್ತ ಬಂದಿದೆ. ದಾವೂದ್ ಇಬ್ರಾಹಿಂ, ಅಜರ್ ಮಸೂದ್ ರಂಥ ಅಂತರಾಷ್ಟ್ರೀಯ ಭಯೋತ್ಪಾದಕರು ಪಾಕಿಸ್ತಾನದ ನೆಲದಲ್ಲಿ ಕುಳಿತುಕೊಂಡು ಭಾರತದ ವಿರುದ್ಧ ದಾಳಿಯ ತಂತ್ರ ರೂಪಿಸುತ್ತಾರೆ. ಭಾರತದ ಮೇಲೆ ಭಯೋತ್ಪಾದಕರ  ದಾಳಿಯನ್ನು ಹೆಚ್ಚಿಸಲು ಅಗತ್ಯವಾದ ಯಾವ ಅವಕಾಶವನ್ನು ಪಾಕಿಸ್ತಾನ ಕೈ ಬಿಡುವುದಿಲ್ಲ. ಮೇಲಾಗಿ ಇಡೀ ಪಾಕಿಸ್ತಾನವೇ ಇವತ್ತು ತಾಲಿಬಾನಿಗಳ ನಿಯಂತ್ರಣದಲ್ಲಿದೆ. ಉಗ್ರರಿಂದಾಗಿ ಅಲ್ಲಿನ ನಾಗರಿಕರ ಬದುಕು ಅಸ್ತವ್ಯಸ್ತಗೊಂಡಿದೆ. ಆರ್ಥಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರಗಳಲ್ಲಿ ಅರಾಜಕತೆ ಮನೆ ಮಾಡಿದೆ. ಎಲ್ಲರಿಗೂ ನೆನಪಿರುವಂತೆ ಕಳೆದ ವರ್ಷ ಅಕ್ಟೋಬರ್ ತಿಂಗಳ ಒಂದು ದಿನ ತಾಲಿಬಾನಿಗಳು ಅಲ್ಲಿನ ಮಲಾಲಾ ಎನ್ನುವ ಶಾಲಾ ಬಾಲಕಿಯನ್ನು ಹತ್ಯೆ ಗೈಯಲು ಪ್ರಯತ್ನಿಸಿದ ಸಂಗತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಲ್ಪಟ್ಟಿತು. ಎಲ್ಲ ರಾಷ್ಟ್ರಗಳು ಈ ಅಮಾನವೀಯ ಕೃತ್ಯವನ್ನು ಖಂಡಿಸಿದವು. ಪಾಕಿಸ್ತಾನಿ ನಾಗರಿಕರಿಗೆ ಉಗ್ರರ ಉಪಟಳದ ನಡುವೆ ದಿನನಿತ್ಯದ ಬದುಕು ನಡೆಸುವುದೇ ಕಷ್ಟವಾಗಿದೆ. ಶಾರುಕ್ ಖಾನ್ ಭದ್ರತೆ ವಿಷಯವಾಗಿ ಹೇಳಿಕೆ ನೀಡುವ ಮೊದಲು ತನ್ನ ರಾಷ್ಟ್ರದಲ್ಲಿನ ಪ್ರಜೆಗಳ ಸುರಕ್ಷತೆಯ ಬಗ್ಗೆ ರೆಹಮಾನ್ ಮಲ್ಲಿಕ್ ಚಿಂತಿಸಬೇಕಿತ್ತು.

         ಭಯೋತ್ಪಾದನೆಯೊಂದು ಆ ರಾಷ್ಟ್ರದಲ್ಲಿ ಯಾವ ಪರಿ ಅಲ್ಲಿನ ಜನರ ಬದುಕನ್ನು ಅಸಹಾಯಕತೆಯ ಅಂಚಿಗೆ ತಂದು ನಿಲ್ಲಿಸಿದೆ ಎನ್ನುವುದನ್ನು ಕುರಿತು ಪಾಕಿಸ್ತಾನಿ ಸಹೋದರಿಯೊಬ್ಬಳು ಇಂಗ್ಲಿಷ್ ದೈನಿಕವೊಂದಕ್ಕೆ ಬರೆದ ಪತ್ರ ಹೀಗಿದೆ,


ಮುಂಬೈ ನಾಗರಿಕರಿಗೆ ನನ್ನ ಸಹಾನುಭೂತಿ,
        ಮುಂಬೈನ ಎಲ್ಲ ನಾಗರಿಕರಿಗೆ, ವಿಶೇಷವಾಗಿ ಉಗ್ರರ ದಾಳಿಯಲ್ಲಿ  ಗಾಯಗೊಂಡವರಿಗೆ ಮತ್ತು ತಮ್ಮ ಬಂಧುಗಳು, ಸ್ನೇಹಿತರನ್ನು ಕಳೆದುಕೊಂಡವರಿಗೆ ನನ್ನ ಹೃದಯಾಂತರಾಳದ ಸಾಹಾನುಭೂತಿ . ಸಾವಿರಾರು ಮೈಲಿ ದೂರದಲ್ಲಿ ಕುಳಿತು ಟೆಲಿವಿಜನ್ ಪರದೆಯ ಮೇಲೆ ನೂರು ವರ್ಷ ಹಳೆಯದಾದ ತಾಜ್ ಹೋಟೆಲ್ ನಲ್ಲಿ ನಡೆದ ಕಮಾಂಡೋ ಪಡೆಯ ಕಾರ್ಯಾಚರಣೆ ನೋಡುತ್ತಿರುವಾಗ ಮನಸ್ಸು ರೋಧಿಸುತ್ತದೆ.  ಮುಂಬೈನ ಈ ಘಟನೆ ನನಗೆ ಕಳೆದ ವರ್ಷ ೨೦೦೭ ಡಿಸೆಂಬರ್ ೨೮ ರಂದು ಕರಾಚಿಯಲ್ಲಿ ನಡೆದ ಘಟನೆಯನ್ನು ನೆನಪಿಸುತ್ತಿದೆ. ಆ ದಿನ ಉಗ್ರರು ನಮ್ಮ ನಾಯಕಿ ಬೆನಜೀರ್ ಭುಟ್ಟೊರನ್ನು ಹತ್ಯೆಗೈದರು. ಇಡೀ ಕರಾಚಿ ಪಟ್ಟಣ ಹೊಗೆಯಿಂದ ತುಂಬಿ ಕೊಂಡಿತ್ತು.
        ಈ ಉಗ್ರರು ಪಾಕಿಸ್ತಾನಿ ಪ್ರಜೆಗಳನ್ನು ಇನ್ನಿಲ್ಲದಂತೆ ಕಾಡುತ್ತಿರುವರು. ಇಲ್ಲಿಯ ಕಟ್ಟಡಗಳು ಉಗ್ರರ ವಿಧ್ವಂಸಕ ಕೃತ್ಯಗಳಿಗೆ ಧ್ವಂಸಗೊಂಡಿವೆ. ರೈತರ ಬೆಳೆಗಳು ನಾಶಗೊಂಡಿವೆ. ಮಕ್ಕಳಿಗೆ ಕಲಿಯಲು ಶಾಲೆಗಳಿಲ್ಲ. ಲಾಹೋರ್ ನಲ್ಲಿ ಪತ್ರಿಕೆ ನಡೆಸುತ್ತಿರುವ ನನ್ನ ಸಹೋದರಿ ಮತ್ತವಳ ಪತಿ ಭಯೋತ್ಪಾದಕರ ಬೆದರಿಕೆಯಿಂದ ಪ್ರತಿನಿತ್ಯ ಪೊಲೀಸರ ರಕ್ಷಣೆಯಲ್ಲಿ ಬದುಕು ಸಾಗಿಸುತ್ತಿರುವರು.
       ನಿಜ ಹೇಳುತ್ತಿದ್ದೇನೆ ಭಾರತೀಯರು ನೀವು ಎಷ್ಟು ದ್ವೇಷಿಸುತ್ತಿರೋ  ಅದಕ್ಕಿಂತ ಹೆಚ್ಚು ನಾನು ಈ ಉಗ್ರರನ್ನು ದ್ವೇಷಿಸುತ್ತೇನೆ. ಸಾವಿರಾರು ಪಾಕಿಸ್ತಾನಿಯರನ್ನು ಕೊಂದ ಇವರು ದಿನನಿತ್ಯ ನಮ್ಮನ್ನು ಸಾಯಿಸುತ್ತಿರುವರು. ಬೇರೆ ರಾಷ್ಟ್ರದೊಂದಿಗೆ ಯುದ್ಧ ಮಾಡಿ ಸಾಯುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪಾಕಿಸ್ತಾನಿ ಪ್ರಜೆಗಳು ಭಯೋತ್ಪಾದಕರ ಗುಂಡಿಗೆ ಬಲಿಯಾಗಿರುವರು.
        ಮುಂಬೈ ನಮಗೆ ದಿಲಿಪ ಕುಮಾರ್, ಅಮಿತಾಬ ಬಚ್ಚನ್, ಶಾರುಕ  ಖಾನ್ ರಂಥ ಸೆಲೆಬ್ರಿಟಿಗಳನ್ನು ನೀಡಿದ ನಗರ. ಅದು ನಮ್ಮ ಕನಸುಗಳ ಮಾಯಾ ನಗರ. ನಿಮ್ಮ ಧೈರ್ಯಕ್ಕೆ ನನ್ನ ಸಲಾಂಗಳು. ಈ ಘಟನೆಗೆ ಕಾರಣರಾದವರನ್ನು ಖಂಡಿಸುತ್ತೇನೆ. ನಡೆದ ಈ ಅಸಂಗತ ಘಟನೆಯಿಂದ ಬಹು ಬೇಗ ಚೇತರಿಸಿಕೊಳ್ಳಿರೆಂದು ಹಾರೈಸುವೆ.
ಇಂತಿ ನಿಮ್ಮ
ಪಾಕಿಸ್ತಾನಿ ಸಹೋದರಿ


          ಈ ಸಂದರ್ಭ ಇಷ್ಟವಿಲ್ಲದಿದ್ದರು ಒಂದೆರಡು ವಿಷಯಗಳನ್ನು ಹೇಳಬೇಕಾಗಿದೆ. ಈ ಎಲ್ಲ ಅಸಂಗತ ಘಟನೆಗಳು ನಡೆಯುತ್ತಿರುವ ಸಮಯದಲ್ಲೇ ಕೇಂದ್ರ ಸರ್ಕಾರದ ಮಂತ್ರಿಯೋರ್ವರು ಭಾರತದಲ್ಲಿ ಹಿಂದೂ ಉಗ್ರಾಮಿಗಳ ಸಂಖ್ಯೆ ಹೆಚ್ಚುತ್ತಿದೆ ಎನ್ನುವ ಹೇಳಿಕೆ ನೀಡುತ್ತಾರೆ. ಸಿನಿಮಾವೊಂದರ ಪ್ರದರ್ಶನಕ್ಕೆ ಪ್ರತಿರೋಧ ತೋರುತ್ತಿರುವ ಸಂಘಟನೆಗಳಿಗೆ ನಮ್ಮ ಬುದ್ದಿಜೀವಿಗಳು ಬೆಂಬಲ ನೀಡುತ್ತಾರೆ. ನಿಮಗೆ ಗೊತ್ತಿರಬಹುದು ಕೆಲವು ವರ್ಷಗಳ ಹಿಂದೆ ಕರ್ನಾಟಕದಲ್ಲಿ ನೆರೆಹಾವಳಿ ಸಂಭವಿಸಿದಾಗ ರಾಜ್ಯದ ಅನೇಕ ಭಾಗಗಳಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದರು. ನೆರೆ ಸಂತ್ರಸ್ತರ ಸಮಸ್ಯೆಗಳನ್ನು ಅಧ್ಯಯನ ಮಾಡಲು ಸಮತಿಯೊಂದನ್ನು ರಚಿಸಿದಾಗ ಅದರಲ್ಲಿದ್ದ ಬುದ್ದಿಜೀವಿಗಳು ನೆರೆ ಹಾವಳಿ ಪ್ರದೇಶಗಳಲ್ಲಿ ಇಂತಿಂಥ ಜಾತಿಯವರಿಗೆ ಹೀಗಿಗೆ ಅನ್ಯಾಯವಾಗಿದೆ ಎಂದು ಹೇಳಿದರು. ಇಡೀ ಪ್ರದೇಶದ ಜನ ನೆರೆ ಹಾವಳಿಯಿಂದ ಸಂಕಷ್ಟಗಳನ್ನು ಅನುಭವಿಸುತ್ತಿರುವಾಗ ನಮ್ಮ ಬುದ್ದಿ ಜೀವಿಗಳಿಗೆ ಜಾತಿ ಧರ್ಮದ ವಿಷಯವೇ ಮುಖ್ಯವಾಗಿತ್ತು. ಪಾರ್ಲಿಮೆಂಟ್ ಮೇಲಿನ ದಾಳಿಯ ಸಂಚು ರೂಪಿಸಿದ ಅಫ್ಜಲ್ ಗುರುವಿಗೆ ಕ್ಷಮಾದಾನ ನೀಡುವಂತೆ  ಇವತ್ತಿಗೂ ಒತ್ತಾಯಿಸುವ ಬುದ್ದಿಜೀವಿಗಳ ದೊಡ್ಡ ಪಡೆಯೇ ನಮ್ಮ ರಾಷ್ಟ್ರದಲ್ಲಿದೆ.
      ಈ ಪ್ರತಿಭಟನೆ ಮತ್ತು ಹೇಳಿಕೆಗಳನ್ನು ನೀಡುತ್ತಿರುವ ಸಂದರ್ಭ ಭಾರತ ಕಂಡ ಅತ್ಯಂತ ದಕ್ಷ, ಪ್ರಾಮಾಣಿಕ ಮತ್ತು  ಸೃಜನಶೀಲ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಮ್ ಅವರ ಬದುಕಿನಲ್ಲಿ ನಡೆದ ಪ್ರಸಂಗವೊಂದು ನೆನಪಾಗುತ್ತಿದೆ. ಒಮ್ಮೆ ಪತ್ರಕರ್ತ ಡಾ.ಅಬ್ದುಲ್ ಕಲಾಮ್ ಅವರಿಗೆ 'ಸರ್ ನಿಮ್ಮನ್ನು ಜನ ವಿಜ್ಞಾನಿ, ರಾಷ್ಟ್ರಪತಿ ಮತ್ತು ಮುಸ್ಲಿಂ ಈ ಯಾವುದರಿಂದ ಗುರುತಿಸಬೇಕೆಂದು ಇಚ್ಚಿಸುತ್ತಿರಿ?' ಎಂದು ಕೇಳಿದ. ಆಗ ಕಲಾಮ್ ಅವರ ಉತ್ತರ ಹೀಗಿತ್ತು 'ಮೊದಲು ನಾನು ಭಾರತೀಯ ನಂತರ ಉಳಿದದ್ದೆಲ್ಲ. ಜನರು ನನ್ನನ್ನು ಭಾರತೀಯನೆಂದು ಗುರುತಿಸಲು ಇಚ್ಚಿಸುತ್ತೇನೆ'. ಸಂಕುಚಿತ ಮನಸ್ಸುಗಳಿಗೆ  ಕಲಾಮ್ ಅವರ ವಿಶಾಲ ಮನೋಭಾವ ಅರ್ಥವಾಗಲಿ.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 




   



No comments:

Post a Comment