Thursday, January 30, 2020

ಗಾಂಧಿ ನಮ್ಮ ಉಸಿರಾಗಲಿ ಮತ್ತು ಬದುಕಾಗಲಿ

            



(ಜನೆವರಿ ೩೦ ಗಾಂಧಿ ಹುತಾತ್ಮರಾದ ದಿನ)

        ಮಹಾತ್ಮ ಗಾಂಧಿ ಈ ಭೂಮಿಯ ಮೇಲೆ ಜನಿಸಿ ಅದಾಗಲೇ 150 ವರ್ಷಗಳು ಕಳೆದು ಹೋದವು ಮತ್ತು ಅವರು ನಮ್ಮಿಂದ ದೂರವಾಗಿ ಏಳು ದಶಕಗಳಾದವು. ಗಾಂಧಿಯ ಬದುಕನ್ನು ಆಲ್ಬರ್ಟ್ ಐನ್‍ಸ್ಟೀನ್‍ನಂಥ ಮಹಾಮೇಧಾವಿ ಹೀಗೆ ವರ್ಣಿಸುತ್ತಾನೆ ‘ಮುಂದೊಂದು ದಿನ ನಮ್ಮ ಪೀಳಿಗೆಗೆ ಈ ಭೂಮಿಯ ಮೇಲೆ ಗಾಂಧಿಯಂಥ ವ್ಯಕ್ತಿಯೊಬ್ಬ ಜೀವಿಸಿದ್ದ ಎನ್ನುವುದನ್ನು ನಂಬುವುದೇ ಅಸಾಧ್ಯವಾಗಬಹುದು’. ಹೌದು ಗಾಂಧಿಯ ಬದುಕು ಎಷ್ಟು ಸರಳವೋ ಅಷ್ಟೇ ಅದು ಸಂಕೀರ್ಣ ಕೂಡ ಹೌದು. ಏಕೆಂದರೆ ಗಾಂಧಿ ನಮಗೆ ಒಂದೊಂದು ಬಗೆಯಲ್ಲಿ ಅರ್ಥವಾಗುತ್ತ ಹೋಗುವ ವ್ಯಕ್ತಿ. ಗಾಂಧಿಯನ್ನು ಸಂತನೆನ್ನಬೇಕಾ, ಅವರೊಬ್ಬ ಚಳವಳಿಗಾರನೇ, ಪತ್ರಕರ್ತನೇ, ಬರಹಗಾರನೇ, ಅಹಿಂಸಾವಾದಿಯೇ, ತನ್ನನ್ನೇ ಆತ್ಮವಿಮರ್ಶೆಯ ನಿಕಷಕ್ಕೆ ಒಡ್ಡಿಕೊಂಡ ದೃಷ್ಟಾರನೇ ಹೀಗೆ ಏನೆಂದು ಗಾಂಧಿಯನ್ನು ಅರ್ಥ ಮಾಡಿಕೊಳ್ಳಬೇಕು. ಆದರೆ ಒಂದಂತೂ ಸತ್ಯ ಗಾಂಧಿ ಇವತ್ತಿಗೂ ಪ್ರಸ್ತುತ. ಪತ್ರಕರ್ತ ಆಶಿಶ್ ನಂದಿ ಹೇಳುವಂತೆ ‘ಹುಟ್ಟಿ ಒಂದೂವರೆ ಶತಮಾನ ಕಳೆದರೂ ಮತ್ತು ಸಾವನ್ನಪ್ಪಿ ಎಪ್ಪತ್ತು ವರ್ಷಗಳೇ ಗತಿಸಿ ಹೋದರೂ ಗಾಂಧಿಯದು ಇನ್ನೂ ಬಳಸಿಕೊಳ್ಳಬಹುದಾದ ವ್ಯಕ್ತಿತ್ವ’. ಇವತ್ತು ಕಿಂಡರ್ ಗಾರ್ಟನ್‍ಗೆ ಹೋಗುವ ಮಗುವನ್ನು ಕೇಳಿ ನೋಡಿ ಗಾಂಧಿ ಕುರಿತು ತನ್ನ ಬಾಲ ಭಾಷೆಯಲ್ಲಿ ಪುಂಖಾನುಪುಂಖವಾಗಿ ಮಾತನಾಡಲುತೊಡಗುತ್ತದೆ. ಇದು ಗಾಂಧಿಯ ಶಕ್ತಿ ಮತ್ತು ಅವರ ವ್ಯಕ್ತಿತ್ವದ ಹಿರಿಮೆ. 

    ಗಾಂಧಿಯನ್ನು ಈ ಜಗತ್ತು ಪ್ರೀತಿಸಿದಷ್ಟೇ ಅವರನ್ನು ಟೀಕಿಸಿದೆ. ನಮ್ಮ ಮನೆಯ ಅಜ್ಜನೇನೋ ಎನ್ನುವಷ್ಟು ನಮಗೆಲ್ಲ ಗಾಂಧಿಯ ಮೇಲೆ ಸಲುಗೆ ಮತ್ತು ಅಕ್ಕರೆ. ನಮ್ಮ ಈ ಅಕ್ಕರೆ ಮತ್ತು ಸಲುಗೆಯೇ ಗಾಂಧಿಯ ಕುರಿತಾದ ಟೀಕೆಗೆ ಮತ್ತು ವಿಮರ್ಶೆಗೆ ಕಾರಣವಾಗುತ್ತದೆ. ಭಾರತದ ಸ್ವಾತಂತ್ರ್ಯ ಚಳವಳಿಯ ನಂತರದ ಕಾಲಘಟ್ಟದಲ್ಲಿ ಜನಿಸಿದ ನಾವೆಲ್ಲ ಗಾಂಧಿಯನ್ನು ಹಲವು ಕಾರಣಗಳಿಗೆ ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತೇವೆ. ಹೀಗೆ ಆರೋಪಿಸಲು ಹೊರಡುವ ನಮಗೆ ಬಹುಮುಖ್ಯವಾದ ಒಂದು ಚಾರಿತ್ರಿಕ ಘಟನೆ ಎಂದರೆ ಅದು ದೇಶದ ಇಭ್ಭಾಗದ ಸಂಗತಿ. ಭಾರತದ ಸ್ವಾತಂತ್ರ್ಯದ ಜೊತೆ ಜೊತೆಗೆ ದೇಶದ ವಿಭಜನೆ ಸಹ ನಡೆದು ಹೋಗುತ್ತದೆ. ಒಂದೇ ನೆಲದಲ್ಲಿ ಬಾಳಿ ಬದುಕಿದ ಜನ ಹಿಂದೂಸ್ತಾನ್ ಮತ್ತು ಪಾಕಿಸ್ತಾನ್ ಎನ್ನುವ ಎರಡು ಪ್ರತ್ಯೇಕ ರಾಷ್ಟ್ರಗಳಲ್ಲಿ ಹರಿದು ಹಂಚಿ ಹೋದರು. ನೆಲವೇನೋ ಇಬ್ಭಾಗಗೊಂಡಿತಾದರೂ ಜನರನ್ನು ಪ್ರತ್ಯೇಕಿಸುವುದು ಅಸಾಧ್ಯದ ಮಾತಾಗಿತ್ತು. ಹೀಗಾಗಿ ಲಕ್ಷಾಂತರ ಹಿಂದೂಗಳು ಪಾಕಿಸ್ತಾನದ ನೆಲದಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡರೆ ಅಸಂಖ್ಯಾತ ಮುಸ್ಲಿಂ ಕುಟುಂಬಗಳು ಭಾರತದಲ್ಲಿ ನೆಲೆಕಂಡುಕೊಂಡರು. ಸಮಸ್ಯೆ ಅಲ್ಲಿಗೆ ಮುಗಿಯಲಿಲ್ಲ. ತೀರ ಧರ್ಮಾಂಧತೆಯಲ್ಲಿ ಮುಳುಗಿ ಹೋಗಿರುವ ಪಾಕಿಸ್ತಾನ ಸಮಯ ಸಿಕ್ಕಾಗಲೆಲ್ಲ ಭಾರತದ ಮೇಲೆ ಕಾಲುಕೆರೆದುಕೊಂಡು ಜಗಳಕ್ಕೆ ಬರುತ್ತಿದೆ. ಜೊತೆಗೆ ಭಾರತದೊಂದಿಗೆ ಜಗಳ ಕಾಯಲು ಪ್ರತ್ಯೇಕ ಉಗ್ರರ ಪಡೆಯನ್ನೇ ಹುಟ್ಟುಹಾಕಿದೆ. ಹೀಗೆ ಪಾಕಿಸ್ತಾನ ಮತ್ತು ಭಾರತದ ನಡುವಿನ ಕದನದ ಮಾತುಗಳು ಕೇಳಿ ಬಂದಾಗಲೆಲ್ಲ ಗಾಂಧಿ ನೆನಪಾಗುತ್ತಾರೆ. ಪಾಕಿಸ್ತಾನದ ಹುಟ್ಟಿಗೆ ಗಾಂಧಿಯೇ ಕಾರಣವೆಂದೂ ಮತ್ತು ಇವತ್ತಿನ ಈ ಎಲ್ಲ ಸಮಸ್ಯೆಗಳಿಗೆ ಗಾಂಧಿಯೇ ಮೂಲವೆಂದು ಆರೋಪಿಸುವ ಜನರ ಗುಂಪೇ ಇಲ್ಲಿದೆ. ಹೀಗೆ ಆರೋಪಿಸಲು ಹೊರಡುವವರು ಮಹಮದ್ ಅಲಿ ಜಿನ್ನಾ ಎನ್ನುವ ವ್ಯಕ್ತಿಯನ್ನು ಮರೆತು ಬಿಡುತ್ತಾರೆ. ಮರೆಯುವುದಿರಲಿ ದೇಶ ವಿಭಜನೆಗೆ ಜಿನ್ನಾ ಕಾರಣರಲ್ಲ ಎನ್ನುವ ವಾದವನ್ನೂ ಅವರು ಮಂಡಿಸುತ್ತಾರೆ. ಅವರ ಪ್ರಕಾರ ಜಿನ್ನಾ ಗಡ್ಡ ಬಿಟ್ಟಿರಲಿಲ್ಲ, ವಿದೇಶದಲ್ಲಿ ಶಿಕ್ಷಣ ಪಡೆದಿದ್ದ ಮತ್ತು ಪಾರ್ಸಿ ಹೆಣ್ಣುಮಗಳನ್ನು ಮದುವೆಯಾಗಿದ್ದ. ಆತ ಮಧ್ಯ ಸೇವಿಸುತ್ತಿದ್ದ ಒಟ್ಟಿನಲ್ಲಿ ಜಿನ್ನಾ ಧರ್ಮಾಂಧನಾಗಿರಲಿಲ್ಲ. ಆದ್ದರಿಂದ ಆತನಿಗೆ ಪ್ರತ್ಯೇಕ ಮುಸ್ಲಿಂ ರಾಷ್ಟ್ರ ಬೇಕಿರಲಿಲ್ಲ ಎಂದು ಕಾರಣ ನೀಡಿ ಪಾಕಿಸ್ತಾನದ ಹುಟ್ಟಿಗೆ ಗಾಂಧಿಯೇ ಕಾರಣ ಎಂದು ವಾದಿಸುತ್ತಾರೆ. ಆದರೆ ಜಿನ್ನಾನಲ್ಲಿ ಅಧಿಕಾರದ ಆಸೆ ಅವನೊಳಗೇ ಅಂತರ್ಗತವಾಗಿತ್ತು. ಅಖಂಡ ಹಿಂದೂಸ್ತಾನದ ಪ್ರಧಾನಿಯಾಗಬೇಕೆಂಬ ಆಸೆ ತನ್ನೊಳಗೆ ಇಟ್ಟುಕೊಂಡೇ ಆತ ರಾಷ್ಟ್ರೀಯ ಕಾಂಗ್ರೇಸ್‍ನ ಸದಸ್ಯನಾದದ್ದು. ಯಾವಾಗ ನೆಹರು ಹೆಸರು ಪ್ರಧಾನಿ ಸ್ಥಾನಕ್ಕೆ ಕೇಳಿಬರತೊಡಗಿತೋ ಆಗ ಜಿನ್ನಾ ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ಆಟ ಶುರು ಮಾಡಿದ. ಮೊದಲಿನಿಂದಲೂ ಒಡೆದು ಆಳುವ ನೀತಿಗೆ ಹೆಸರಾದ ಬ್ರಿಟಿಷರು ಜಿನ್ನಾನ ಆ ಮನೋಭಾವವನ್ನು ತಮ್ಮ ಅನುಕೂಲಕ್ಕೆ ಸರಿಯಾಗಿಯೇ ಬಳಸಿಕೊಂಡರು. ಭಾರತವನ್ನು ಬಿಟ್ಟು ಹೋಗುವಾಗ ಅವರು ದೇಶವನ್ನು ವಿಭಜಿಸಿ ಭಾರತೀಯರ ಮೇಲಿನ ತಮ್ಮ ಪ್ರತಿಕಾರವನ್ನು ತೀರಿಸಿಕೊಂಡರು. 

           ಪಾಕಿಸ್ತಾನದ ಸೃಷ್ಟಿಗೆ ಗಾಂಧಿಯೇ ಕಾರಣ ಎನ್ನುವವರು 1946 ಅಕ್ಟೋಬರ್ 6 ರಂದು ಗಾಂಧೀಜಿ ‘ಹರಿಜನ’ ಪತ್ರಿಕೆಗೆ ಬರೆದ ಲೇಖನವನ್ನೊಮ್ಮೆ ಓದುವುದೊಳಿತು. ಆ ಪತ್ರಿಕೆಯಲ್ಲಿ ಪಾಕಿಸ್ತಾನವನ್ನು ಸೃಷ್ಟಿಸುವುದಕ್ಕಾಗಿ ಭಾರತದ ವಿಭಜನೆಯಾಗಬೇಕು ಎನ್ನುವ ಅಭಿಪ್ರಾಯಕ್ಕೆ ಉತ್ತರವಾಗಿ ಗಾಂಧೀಜಿ ಹೀಗೆ ಬರೆಯುತ್ತಾರೆ ‘ಮುಸ್ಲಿಂ ಲೀಗ್‍ನಿಂದ ಪ್ರತ್ಯೇಕ ಪಾಕಿಸ್ತಾನಕ್ಕಾಗಿ ಪ್ರಸ್ತಾಪಿಸಲ್ಪಟ್ಟಿರುವ ಬೇಡಿಕೆಯು ಇಸ್ಲಾಂ ನೀತಿಯಿಂದ ಹೊರತಾಗಿದೆಯಾದ್ದರಿಂದ ಇದನ್ನು ಪಾಪವೆಂದು ಕರೆಯಲು ನಾನು ಹಿಂಜರಿಯುವುದಿಲ್ಲ. ಮನುಕುಲದ ಒಗ್ಗಟ್ಟು ಹಾಗೂ ಭಾತೃತ್ವದ ಸಂಕೇತವಾಗಿ ಇಸ್ಲಾಂ ನಿಲ್ಲುತ್ತದೆಯೇ ಹೊರತು ಮಾನವ ಕುಟುಂಬದ ಐಕ್ಯಮತವನ್ನು ಒಡೆದು ಹಾಕುವುದಕ್ಕಲ್ಲ. ಆದ್ದರಿಂದ ಭಾರತವನ್ನು ವಿಭಜಿಸಿ ಸಂಭವನೀಯ ಯುದ್ಧ ಗುಂಪುಗಳಾಗಿ ಮಾಡಲು ಯಾರು ಪ್ರಯತ್ನ ಮಾಡುತ್ತಾರೋ ಅಂತಹವರು ಭಾರತ ಮತ್ತು ಇಸ್ಲಾಂ ಎರಡಕ್ಕೂ ಬದ್ದ ವೈರಿಗಳು’. ಹೀಗೆ ಹೇಳಿದ ಗಾಂಧಿ ಆಶಯಕ್ಕೆ ವಿರುದ್ಧವಾಗಿ ಭಾರತದ ವಿಭಜನೆಯಾಗುತ್ತದೆ. ಆದರೆ ಇತಿಹಾಸ ಓದದ ನಾವು ಗಾಂಧಿಯ ವಿರುದ್ಧ ಟೀಕಾಪ್ರಹಾರಕ್ಕೆ ಮುಂದಾಗುತ್ತೇವೆ. ಇತಿಹಾಸವನ್ನು ಇವತ್ತು ನಾವೆಲ್ಲ ನಮ್ಮ ನಮ್ಮ ಅನುಕೂಲ ಸಿಂಧುತ್ವದ ನೆಲೆಯಲ್ಲೇ ನೋಡುತ್ತಿರುವುದರಿಂದ ಗಾಂಧಿಯ ಅದೆಷ್ಟೋ ಪ್ರಯತ್ನಗಳು ಚಾರಿತ್ರಿಕ ಮಹತ್ವ ಕಳೆದುಕೊಂಡು ಬಿಟ್ಟಿವೆ. ಇತಿಹಾಸಕಾರರು ಇಂಥ ಚಾರಿತ್ರಿಕ ತಪ್ಪುಗಳನ್ನು ತಿದ್ದುವ ಮತ್ತು ಆ ಮೂಲಕ ಗಾಂಧಿಯನ್ನು ಪರಿಶುದ್ಧ ಅಂತ:ಕರಣದ ಭಾವದಲ್ಲಿ ಕಟ್ಟಿಕೊಡುವ ಕೆಲಸಕ್ಕೆ ಮುಂದಾಗಬೇಕು. ಆ ಮೂಲಕವಾದರೂ ಗಾಂಧಿಯನ್ನು ನಾವೆಲ್ಲ ನಮ್ಮವನು ಎಂದು ಇನ್ನಷ್ಟು ಹತ್ತಿರಕ್ಕೆ ಕರೆದುಕೊಳ್ಳಲು ಸಾಧ್ಯವಾಗಬಹುದೇನೋ.

     ಗಾಂಧಿ ಬಗ್ಗೆ ಮಾತನಾಡುವಾಗ ಜಗತ್ತಿನ ಬಹುದೊಡ್ಡ ಪ್ರಶಸ್ತಿ ಎಂದೇ ಪರಿಗಣಿಸಲ್ಪಟ್ಟ ನೊಬೆಲ್ ಪ್ರಶಸ್ತಿ ಕುರಿತು ಹೇಳಲೇಬೇಕು. 1885 ರಲ್ಲೇ ಆರಂಭಗೊಂಡ ಈ ನೊಬೆಲ್ ಪ್ರಶಸ್ತಿ ಜಗತ್ತಿನ ಅನೇಕ ಹೋರಾಟಗಾರರಿಗೆ ಮತ್ತು ಚಳವಳಿಗಾರರಿಗೆ ಸಂದಿದೆ ಅದು ಗಾಂಧಿ ಒಬ್ಬರನ್ನು ಬಿಟ್ಟು.  1964 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಸ್ವೀಕರಿಸುವ ವೇಳೆ ಲೂಥರ್ ಕಿಂಗ್ ‘ಬ್ರಿಟಿಷರ ವಿರುದ್ಧ ಸತ್ಯ ಮತ್ತು ಅಂಹಿಸೆ ಎನ್ನುವ ಈ ಎರಡು ಆಯುಧಗಳಿಂದ ಹೋರಾಡಿದ ಗಾಂಧಿ ನನಗೆ ಯಾವತ್ತಿಗೂ ಆದರ್ಶ’ ಎಂದು ಹೇಳುವ ಮೂಲಕ  ಗಾಂಧಿ ವ್ಯಕ್ತಿತ್ವವನ್ನು ಇಡೀ ವಿಶ್ವಕ್ಕೆ ಪರಿಚಯಿಸುತ್ತಾನೆ. ಅರ್ಜೆಂಟಿನಾದ ಅಡಾಲ್ಫೋ ಪೆರೆಜ್ ಎಸ್ಕುವೆಲ್, ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೆಲಾ, ಟಿಬೆಟ್‍ನ ದಲೈ ಲಾಮಾ, ಮಯನ್ಮಾರ್‍ನ ಆಂಗ್ ಸಾನ್ ಸೂಕಿ ಇವರೆಲ್ಲ ಗಾಂಧೀಜಿಯ ಹೋರಾಟದಿಂದ ಪ್ರೇರಿತರಾಗಿ ಹೋರಾಡಿದವರು. ಇನ್ನೊಂದು ಮಹತ್ವದ ವಿಷಯವೆಂದರೆ ಇವರೆಲ್ಲರೂ ನೊಬೆಲ್ ಶಾಂತಿ ಪ್ರಶಸ್ತಿ ಭಾಜನರು. ಆದರೆ ಇವರಿಗೆಲ್ಲ ಸ್ಪೂರ್ತಿಯ ಸೆಲೆಯಾದ ಗಾಂಧಿ ಮಾತ್ರ ಐದು ಬಾರಿ ನೊಬೆಲ್ ಶಾಂತಿ ಪ್ರಶಸ್ತಿಗಾಗಿ ನಾಮಾಂಕಿತರಾಗಿ ಪ್ರಶಸ್ತಿಯಿಂದ ವಂಚಿತರಾದರು. 2006 ರಲ್ಲಿ ನೊಬೆಲ್ ಪ್ರಶಸ್ತಿ ಪ್ರತಿಷ್ಠಾನದ ಕಾರ್ಯದರ್ಶಿ ‘ಈ 121 ವರ್ಷಗಳ ನೊಬೆಲ್ ಪ್ರಶಸ್ತಿಯ ಇತಿಹಾಸದಲ್ಲಿನ ಬಹುದೊಡ್ಡ ಲೋಪವೆಂದರೆ ಮಹಾತ್ಮ ಗಾಂಧಿಗೆ ನೊಬೆಲ್ ಪ್ರಶಸ್ತಿ ನೀಡದೆ ಇರುವುದು’ ಎಂದು ಸಾರ್ವಜನಿಕವಾಗಿ ಘೋಷಿಸುತ್ತಾರೆ. 1948 ರಲ್ಲಿ ಗಾಂಧಿ ಹತ್ಯೆಯಾದ ವರ್ಷ ‘ಬದುಕಿರುವ ಯಾವ ವ್ಯಕ್ತಿಯೂ ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹರಿಲ್ಲ’ ಎಂದು ಘೋಷಿಸುವ ಸಂಸ್ಥೆ ಆ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ತಡೆಹಿಡಿದು ಗಾಂಧಿಗೆ ಬಹುದೊಡ್ಡ ಗೌರವ ನೀಡುತ್ತದೆ. ಆ ಮೂಲಕ ಗಾಂಧಿ ವಿಶ್ವದ ಬಹುಮುಖ್ಯ ಪ್ರಶಸ್ತಿಗಿಂತ ದೊಡ್ಡವ್ಯಕ್ತಿಯಾಗಿ ಬೆಳೆದು ನಿಲ್ಲುತ್ತಾರೆ.  

         ಗಾಂಧಿಯನ್ನು ಈ ಸಮಾಜ ಹೇಗೆಲ್ಲ ಬಳಸಿಕೊಂಡಿದೆ ಎನ್ನುವುದಕ್ಕೆ ಭಾರತದ ಸಿನಿಮಾ ಮಾಧ್ಯಮ ಕೂಡ ಹೊರತಾಗಿಲ್ಲ. ನೂರು ವರ್ಷಗಳ ಇತಿಹಾಸವಿರುವ ಭಾರತೀಯ ಸಿನಿಮಾ ರಂಗದಲ್ಲಿ ಗಾಂಧಿ ಬದುಕಿನ ಕುರಿತಾದ ಹಲವಾರು ಸಿನಿಮಾಗಳು ನಿರ್ಮಾಣವಾಗಿವೆ. ಅಂದರೆ ಗಾಂಧಿ ಬದುಕು ಮತ್ತು ಹೋರಾಟ ಸಿನಿಮಾ ಮಾಧ್ಯಮವನ್ನೂ ಪ್ರಭಾವಿಸಿದೆ. ಗಾಂಧಿ ಕುರಿತು ತಯ್ಯಾರಾದ ಮೊದಲ ಸಿನಿಮಾ ಅದು 1982 ರಲ್ಲಿ ತೆರೆಕಂಡ ರಿಚರ್ಡ್ ಅಟೆನ್ ಬರೋ ನಿರ್ದೇಶನದ ‘ಗಾಂಧಿ’ ಸಿನಿಮಾ. ಈ ಸಿನಿಮಾದಲ್ಲಿ ಗಾಂಧಿ ಪಾತ್ರದಲ್ಲಿ ನಟಿಸಿದ್ದ ಕಲಾವಿದ ಬೆನ್ ಕಿಂಗ್ ಸ್ಲೇಯದು ಒಂದು ರೀತಿಯಲ್ಲಿ ಪರಕಾಯ ಪ್ರವೇಶದ ಅಭಿನಯ. ಚಿತ್ರದಲ್ಲಿ ಆತನ ನಟನೆ ಮನೋಜ್ಞವಾಗಿತ್ತು. ಆತ ತನ್ನ ಅಭಿನಯಕ್ಕೆ ಆಸ್ಕರ್ ಪ್ರಶಸ್ತಿ ಪಡೆದನಲ್ಲದೆ ಸಿನಿಮಾಕ್ಕೆ ಅನೇಕ ಅಂತರಾಷ್ಟ್ರೀಯ ಪ್ರಶಸ್ತಿಗಳು ದೊರೆತವು. ಇದುವರೆಗೆ ಗಾಂಧಿ ಕುರಿತು ನಿರ್ಮಾಣವಾದ ಸಿನಿಮಾಗಳಲ್ಲಿ ಅಟೆನ್ ಬರೋ ನಿರ್ದೇಶನದ 1982 ರಲ್ಲಿ ತೆರೆಕಂಡ ‘ಗಾಂಧಿ’ ಸಿನಿಮಾ ಸರ್ವಕಾಲೀಕ ಶ್ರೇಷ್ಠ ಸಿನಿಮಾ ಎನ್ನುವ ಮನ್ನಣೆಗೆ ಪಾತ್ರವಾಗಿದೆ. ಇನ್ನು ಭಾರತೀಯ ಚಿತ್ರರಂಗದವರ ಪ್ರಯತ್ನದ ಕುರಿತಾಗಿ ಹೇಳುವುದಾದರೆ ‘ಲಗೆ ರಹೋ ಮುನ್ನಾಭಾಯಿ’ ಎನ್ನುವ ಕಮರ್ಷಿಯಲ್ ಹಿಂದಿ ಸಿನಿಮಾದಲ್ಲಿ ನಾಯಕನಿಗೆ ಸತ್ಯ, ಅಂಹಿಸೆ ಕುರಿತು ಉಪದೇಶಿಸಲು ಗಾಂಧಿ ಪಾತ್ರವನ್ನೇ ಸೃಷ್ಟಿಸಲಾಯಿತು. ಶಾಮ ಬೆನಗಲ್ ನಿರ್ದೇಶನದ ‘ಗಾಂಧಿ ಸೆ ಮಹಾತ್ಮ ತಕ್’ ಇನ್ನೊಂದು  ಗಾಂಧಿ ಬದುಕಿನ ಕುರಿತಾದ ಅಪರೂಪದ ಸಿನಿಮಾ. ಅದೇರೀತಿ ಸರ್ದಾರ್ ವಲ್ಲಭಭಾಯಿ ಪಟೇಲರ ಜೀವನವೃತ್ತಾಂತವನ್ನಾಧರಿಸಿದ ‘ಪಟೇಲ್’ ಚಿತ್ರದಲ್ಲೂ ಗಾಂಧಿ ಪಾತ್ರವನ್ನು ಸೃಷ್ಟಿಸಲಾಗಿತ್ತು. ಇನ್ನುಳಿದಂತೆ ಕಮಲ್ ಹಾಸನ್ ಅವರ ‘ಹೇ ರಾಮ್’ ಮತ್ತು ತೆಲುಗು ಭಾಷೆಯ ‘ಮಹಾತ್ಮ’ ಸಿನಿಮಾಗಳು ಗಾಂಧಿ ಬದುಕನ್ನಾಧರಿಸಿದ ಚಲನಚಿತ್ರಗಳು.

         ಈ ಮೇಲೆ ಹೆಸರಿಸಿದ ಸಿನಿಮಾಗಳ ಕಥಾವಸ್ತುವಿಗೆ ವಿರುದ್ಧವಾಗಿ ಗಾಂಧಿಯನ್ನು ಸಾಮಾನ್ಯ ಮನುಷ್ಯನ ಹಾಗೆ ಚಿತ್ರಿಸುವ ಪ್ರಯತ್ನವನ್ನು ಭಾರತೀಯ ಸಿನಿಮಾರಂಗದಲ್ಲಿ ಮಾಡಲಾಗಿದೆ. ಅದಕ್ಕೆರಡು ಉದಾಹರಣೆಗಳೆಂದರೆ ‘ಬಾಬಾಸಾಹೇಬ ಅಂಬೇಡ್ಕರ್’ ಮತ್ತು ‘ಗಾಂಧಿ ಮೈ ಫಾದರ್’ ಸಿನಿಮಾಗಳು. ಜಬ್ಬಾರ್ ಪಟೇಲ್ ನಿರ್ದೇಶನದ ‘ಬಾಬಾಸಾಹೇಬ ಅಂಬೇಡ್ಕರ್’ ಚಿತ್ರದಲ್ಲಿ ಗಾಂಧಿ ಪಾತ್ರ ನೆಗೆಟಿವ್ ನೆರಳಲ್ಲಿ ರೂಪುಗೊಂಡಿದೆ. ತಮ್ಮ ಬೇಡಿಕೆಗಳ ಇಡೇರಿಕೆಗಾಗಿ ಗಾಂಧಿ ಬ್ಲ್ಯಾಕ್ ಮೇಲ್ ತಂತ್ರವನ್ನು ಅನುಸರಿಸುತ್ತಿದ್ದರು ಎನ್ನುವ ಸಂಗತಿಯನ್ನು ಹೇಳುವ ಮೂಲಕ ನಿರ್ದೇಶಕರು ಗಾಂಧಿಯ ಅನುಯಾಯಿಗಳ ಮನಸ್ಸಿಗೆ ನೋವುಂಟು ಮಾಡುತ್ತಾರೆ. ‘ಗಾಂಧಿ ಮೈ ಫಾದರ್’ ಎನ್ನುವ ಇನ್ನೊಂದು ಸಿನಿಮಾದಲ್ಲಿ ಹರಿಲಾಲ್ ಗಾಂಧಿ ಎನ್ನುವ ಇನ್ನೊಬ್ಬ ಗಾಂಧಿಯೇ ಸಿನಿಮಾದ ನಿಜವಾದ ಹೀರೋ. ಗಾಂಧೀಜಿಯ ಮಗನಾದ ಈತ ತನ್ನ ತಂದೆಯನ್ನು ವಿರೋಧಿಸುವುದನ್ನೇ ಬದುಕಿನ ಗುರಿಯಾಗಿಸಿಕೊಂಡಿರುತ್ತಾನೆ. ಪ್ರತಿಕ್ಷಣ ತನ್ನ ತಂದೆಯನ್ನು ಅವಮಾನಿಸುತ್ತ ಹೋಗುತ್ತಾನೆ. ಇಲ್ಲಿ ಗಾಂಧಿ ಬದುಕು ಮತ್ತು ಅವರ ಹೋರಾಟಕ್ಕಿಂತ ಅವರನ್ನು ಅವಮಾನಿಸುವುದೇ ನಿರ್ದೇಶಕರ ಉದ್ದೇಶವಾಗಿತ್ತು. 

       ಒಟ್ಟಿನಲ್ಲಿ ಗಾಂಧಿ ಬದುಕು ಮತ್ತು ಹೋರಾಟ ಸಿನಿಮಾ ಉದ್ಯಮದ ಜನರನ್ನು ಪ್ರಭಾವಿಸಿದ್ದು ನಿಜ. ಅದಕ್ಕೆಂದೇ ಗಾಂಧಿ ಕುರಿತು ಹಲವಾರು ಸಿನಿಮಾಗಳು ನಿರ್ಮಾಣವಾದವು. ಕೆಲವರು ಗಾಂಧಿ ಬದುಕಿನ ತತ್ವಾದರ್ಶಗಳನ್ನು ತೆರೆಯ ಮೇಲೆ ತರಲು ಪ್ರಯತ್ನಿಸಿದರೆ ಕೆಲವರು ನೆಗೆಟಿವ್ ಅಂಶಗಳಿಗೆ ಒತ್ತು ಕೊಟ್ಟರು. ಗಾಂಧಿ ಬದುಕಿನ ಸಿನಿಮಾಗಳ ಕುರಿತು ಮಾತನಾಡುವಾಗ ಕೊನೆಗೂ ನಮ್ಮ ನೆನಪಲ್ಲುಳಿಯುವುದು ರಿಚರ್ಡ್ ಅಟೆನ್ ಬರೋ ನಿರ್ದೇಶನದ ‘ಗಾಂಧಿ’ ಸಿನಿಮಾ ಮಾತ್ರ. 

  ಗಾಂಧಿ ಕುರಿತು ಕನ್ನಡ ಸಾಹಿತ್ಯದಲ್ಲಿ ಕಡುವ್ಯಾಮೋಹಿಯಂತೆ ಬರೆದವರು ಇಬ್ಬರು ಮಾತ್ರ. ಅವರಲ್ಲಿ ಯು.ಆರ್.ಅನಂತಮೂರ್ತಿ ಒಬ್ಬರಾದರೆ ಇನ್ನೊಬ್ಬರು ದೇವನೂರ ಮಹಾದೇವ. ಯು.ಆರ್.ಅನಂತಮೂರ್ತಿ ಅವರಿಗೆ ನಾವು ಬದುಕುತ್ತಿರುವ ಭಾರತ ಅದು ಗಾಂಧಿ ಪ್ರಣೀತ ಭಾರತ. ಭಾರತದ ಈ ನೆಲದಲ್ಲಿ ಸಾಮಾನ್ಯನೊಬ್ಬ ದೇಶದ ಪ್ರಧಾನ ಮಂತ್ರಿಯ ಸ್ಥಾನಕ್ಕೇರುವುದು ಅದು ಗಾಂಧಿಯ ಭಾರತದಲ್ಲಿ ಮಾತ್ರ ಸಾಧ್ಯವಾಗಬಹುದಾದ ಬಹುದೊಡ್ಡ ಸಾಮಾಜಿಕ ಪಲ್ಲಟ ಎನ್ನುತ್ತಾರೆ ಅನಂತಮೂರ್ತಿ. ಇನ್ನು ದೇವನೂರ ಮಹಾದೇವ ಅವರಂತೂ ಗಾಂಧಿಯನ್ನು ಕಡು ವ್ಯಾಮೋಹಿಯಂತೆ ಪ್ರೀತಿಸುತ್ತಾರೆ. ಗಾಂಧಿ ಸಿನಿಮಾ ನೋಡದಂತೆ ಒಂದು ಸಮುದಾಯದ ಸಮಿತಿ ಬಹಿಷ್ಕಾರ ಹಾಕಿದಾಗ ದೇವನೂರ ಆ ಸಿನಿಮಾ ನೋಡುತ್ತಾರೆ. ಸಾಯಲು ಸಿದ್ಧವಾದವನು ಮಾತ್ರ ಗಾಂಧಿಯಾಗಲು ಸಾಧ್ಯ ಎನ್ನುತ್ತಾರೆ ಮಹಾದೇವ. ಪುಣಾ ಒಪ್ಪಂದವನ್ನೇ ಆಧಾರವಾಗಿಟ್ಟುಕೊಂಡು ಗಾಂಧಿಯನ್ನು ದ್ವೇಷಿಸುವುದು ತರವಲ್ಲ ಎಂದು ಬುದ್ಧಿಮಾತು ಹೇಳುತ್ತಾರೆ. ಮಹಾದೇವರ ಪ್ರಕಾರ ಗಾಂಧಿ ಮತ್ತು ಅಂಬೇಡ್ಕರ್ ಮಾಡುತ್ತಿದ್ದದ್ದು ಒಂದೇ ರೀತಿಯ ಕೆಲಸವಾಗಿತ್ತು. ಅವರಿಬ್ಬರ ನಡುವೆ ಅಭಿಪ್ರಾಯ ಭೇದವಿರಬಹುದು ಆದರೆ ಉದ್ದೇಶ ಮಾತ್ರ ಒಂದೇ ಆಗಿತ್ತು ಎನ್ನುತ್ತಾರೆ. ಈ ಕಾರಣದಿಂದಲೇ ‘ಮಹಾದೇವರ ಒಳಗೆ ಗಾಂಧಿ ಇಳಿದಷ್ಟು ಬುದ್ಧ ಇನ್ನೂ ಅವರ ಒಳಗಿಳಿದಿಲ್ಲ’ ಎನ್ನುತ್ತಾರೆ ಲೇಖಕ ಕೆ.ಸತ್ಯನಾರಾಯಣ. 

    ಗಾಂಧಿ ಇಷ್ಟವಾಗಲು ಅವರು ತಮ್ಮನ್ನೆ ತಾನು ಆತ್ಮವಿಮರ್ಶೆಯ ನಿಕಷಕ್ಕೆ ಒಡ್ಡಿಕೊಂಡ ರೀತಿ. ಪ್ರಾಯಶ್ಚಿತದ ಭಾವವೇ ಮಾನವೀಯತೆಯ ಹುಟ್ಟಿಗೆ ಕಾರಣ ಎನ್ನುವ ಬಲವಾದ ನಂಬುಗೆ ಗಾಂಧಿಯವರಲ್ಲಿತ್ತು. ಬದುಕಿನ ಕೊನೆಯ ದಿನಗಳವರೆಗೂ ಗಾಂಧಿ ತಮ್ಮ ಬದುಕನ್ನು ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಲೇ ಬಂದರು. ಬ್ರಹ್ಮಚರ್ಯೆ, ಸರಳ ಜೀವನ, ಮಿತಹಾರ, ಸತ್ಯದ ಅನ್ವೇಷಣೆ ಇಲ್ಲೆಲ್ಲ ಗಾಂಧಿಯವರ ಪ್ರಯೋಗಗಳನ್ನು ಕಾಣಬಹುದು. ಗಾಂಧಿಯನ್ನು ಟ್ಯಾಗೋರರು ‘ಮಹಾತ್ಮ’ ಎಂದು ಕರೆದಾಗ ಇದೇ ಗಾಂಧಿ ‘ನನ್ನ ಎದೆಗೆ ಗುಂಡಿಟ್ಟು ಕೊಲ್ಲಲು ಬಂದವನನ್ನು ಕೂಡ ನಾನು ಸಾಯುವ ಘಳಿಗೆ ಕ್ಷಮಿಸಿದೆನೆಂದರೆ ಆಗ ಮಾತ್ರ ನನಗೆ ಮಹಾತ್ಮನಾಗುವ ಯೋಗ್ಯತೆ ಬರುತ್ತದೆ’ ಎಂದು ಪ್ರತಿಕ್ರಿಸಿದವರು. ಇದು ಮಹಾತ್ಮನಾದ ಗಾಂಧಿ ತನ್ನನ್ನು ತಾನು ಆತ್ಮವಿಮರ್ಶೆಗೆ ಒಡ್ಡಿಕೊಳ್ಳುವ ರೀತಿಯಾಗಿತ್ತು. ಗಾಂಧಿಯಂಥ ಮತ್ತೊಬ್ಬ ಮಹಾತ್ಮ ಈ ನೆಲದ ಮೇಲೆ ಮತ್ತೆ ಹುಟ್ಟಿ ಬರಲಾರನೇನೋ ಎನ್ನುವಷ್ಟು ಗಾಂಧಿಯ ಬದುಕು ಮತ್ತು ವ್ಯಕ್ತಿತ್ವ ಈ ನೆಲದ ಪರಿಸರದಲ್ಲಿ ಅಂತರ್ಗತಗೊಂಡಿದೆ. 

    ಈ ಕಾಲಘಟ್ಟದಲ್ಲಿ ನಿಂತು ನೋಡಿದಾಗ ಗಾಂಧಿ ಬಳಕೆಯಾಗುತ್ತಿರುವರೇನೋ ಎನ್ನುವ ಭಾವ ಹುಟ್ಟುತ್ತದೆ. ಗಾಂಧಿ ಕೇವಲ ಬಳಕೆಯಾಗಬಾರದು, ಅವರು ಅರ್ಥವಾಗಬೇಕು ಮತ್ತು ನಮ್ಮ ಬದುಕಿನ ಭಾಗವಾಗಬೇಕು. ಗಾಂಧಿ ನಮ್ಮ ಉಸಿರಾಗಬೇಕು ಮತ್ತು ಬದುಕಾಗಬೇಕು. ಗಾಂಧಿ ನಮಗೆಲ್ಲ ಅರ್ಥವಾಗುವಂತೆ ಬರವಣಿಗೆಯಲ್ಲಿ ಅವರು ಮತ್ತೆ ಮತ್ತೆ ಹುಟ್ಟಿ ಬರಬೇಕು. ಹೀಗೆ ಹುಟ್ಟಿ ಬರುವ ಗಾಂಧಿ ಸಂತನಾಗಿರಲಿ, ಚಳವಳಿಗಾರನಾಗಿರಲಿ, ಅಹಿಂಸಾವಾದಿಯಾಗಿರಲಿ, ಪತ್ರಕರ್ತನಾಗಿರಲಿ, ಬರಹಗಾರನಾಗಿರಲಿ, ನಿಷ್ಟುರವಾದಿಯಾಗಿರಲಿ, ಜಾತ್ಯಾತೀತವಾದಿಯಾಗಿರಲಿ ಒಟ್ಟಿನಲ್ಲಿ ನಮ್ಮವನೆಂದು ನಾವೆಲ್ಲ ಸ್ವೀಕರಿಸುವಂತಿರಲಿ. ಗಾಂಧಿಯನ್ನು ಸ್ವೀಕರಿಸಿ ನಮ್ಮವನನ್ನಾಗಿಸಿಕೊಳ್ಳುವುದರಲ್ಲೇ ದೇಶದ ಹಿತವಿದೆ ಅಷ್ಟೇಕೆ ಅದು ನಮ್ಮೆಲ್ಲರ ಹಿತ ಕೂಡ ಹೌದು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟ 

No comments:

Post a Comment