Tuesday, January 28, 2020

ಹರಿವ ನದಿಗೆ ನೂರುಕಾಲು: ಪುಸ್ತಕ ಬಿಡುಗಡೆ




ದಿನಾಂಕ ೨೭.೦೧.೨೦೨೦ ರಂದು ಕಲಬುರಗಿಯಲ್ಲಿ ನನ್ನ 'ಹರಿವ ನದಿಗೆ ನೂರುಕಾಲು' ಪುಸ್ತಕ ಬಿಡುಗಡೆಯಾಯಿತು. 


ಬರೆಯಲೇ ಬೇಕೆನ್ನುವ ಹಟವಾಗಲಿ ಮತ್ತು ತೀರ ವ್ಯಾಮೋಹವಾಗಲಿ ನನಗಿಲ್ಲ. ಬರೆದ ನಂತರ ಸಾಹಿತ್ಯ ಕ್ಷೇತ್ರಕ್ಕೊಂದು ಮೌಲಿಕ ಕೊಡುಗೆ ನೀಡಿದೆ ಎನ್ನುವ ಅಹಂಕಾರವಂತೂ ನನ್ನಿಂದ ಗಾವುದ ದೂರದಲ್ಲಿರುತ್ತದೆ. ಬರವಣಿಗೆ ನನಗೆ ವೈಯಕ್ತಿಕವಾಗಿ ಅತ್ಯಂತ ಖುಷಿ ಕೊಡುವ ಕ್ರಿಯೆ. ಬರೆಯುವ ಮೂಲಕವೇ ನನ್ನನ್ನು ನಾನು ಕಂಡುಕೊಳ್ಳುತ್ತ ನನ್ನ ಅಸ್ತಿತ್ವವನ್ನು ಬದುಕುತ್ತಿರುವ ಈ ಸಮಾಜದಲ್ಲಿ ದಾಖಲಿಸುತ್ತ ಹೋಗುತ್ತೇನೆ. ಬರೆಯುವ ಕ್ರಿಯೆಯಲ್ಲಿ ತೊಡಗಿದಾಗ ಅಕ್ಷರಶ: ನಾನು ರಾಗ ದ್ವೇಷಗಳಿಂದ ಮುಕ್ತನಾಗಿರುತ್ತೇನೆ. ಬದುಕುತ್ತಿರುವ ಸಮಾಜವನ್ನು ನಾನು ದ್ವೇಷದ ಭಾವದಿಂದ ಗ್ರಹಿಸಲಾರೆ. ಹಾಗೆ ಗ್ರಹಿಸುವ ಶಕ್ತಿಯಾಗಲಿ ಮತ್ತು ಸಾಮರ್ಥ್ಯವಾಗಲಿ ನನಗಿಲ್ಲ. ಬದುಕುತ್ತಿರುವ ಈ ಸಮಾಜವನ್ನು ನಾನು ಗ್ರಹಿಸುವುದು ಪ್ರೀತಿಯ ಮೂಲಕವೇ.



ಇನ್ನು ಪುಸ್ತಕದ ವಿಷಯಕ್ಕೆ ಬರುವುದಾದರೆ ಇದು ನನ್ನ ಹತ್ತನೇ ಕೃತಿ. ಹಿಂದಿನ ಕೃತಿಗಳಂತೆ ಈ ಪುಸ್ತಕದ ವಿಷಯ ವ್ಯಾಪ್ತಿ ಕೂಡ ಹಲವು ದಿಕ್ಕುಗಳೆಡೆ ಚಾಚಿಕೊಂಡಿದೆ. ಒಂದೇ ವಿಷಯದ ಮೇಲೆ ಪಟ್ಟಾಗಿ ಕುಳಿತು ಬರೆಯುವುದು ಅದು ನನ್ನ ಜಾಯಮಾನವಲ್ಲ. ಕಾಡಿದ ಸಮಸ್ಯೆ, ನೋಡಿದ ಸಿನಿಮಾ, ಓದಿದ ಪುಸ್ತಕ, ಪ್ರಭಾವಿಸಿದ ವ್ಯಕ್ತಿತ್ವ ಇಂಥದ್ದನ್ನೆಲ್ಲ ನಾನು ಅಕ್ಷರಗಳ ಮೂಲಕ ದಾಖಲಿಸುತ್ತ ಹೋಗುತ್ತೇನೆ. ಆ ಮೂಲಕ ವಿಭಿನ್ನ ಓದಿನ ಅಭಿರುಚಿಯ ಓದುಗರನ್ನು ಹೋಗಿ ತಲುಪುವ ಸ್ವಾರ್ಥ ಕೂಡ ನನಗೇ ಗೊತ್ತಿಲ್ಲದಂತೆ ನನ್ನ ಬರವಣಿಗೆಯ ಹಿಂದೆ ಕೆಲಸ ಮಾಡಿರಬಹುದೆನ್ನುವ ಅನುಮಾನ ನನ್ನದು.




ಬ್ಲೇಕ್ ತನ್ನ ಬರವಣಿಗೆಯನ್ನು ಕುರಿತು ಹೀಗೆ ಹೇಳುತ್ತಾನೆ ‘ಇದು ನನ್ನದು ಆದರೆ ನನ್ನದು ಮಾತ್ರವಲ್ಲ’. ತನ್ನ ಬರವಣಿಗೆಯ ಕೃಷಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣರಾದವರನ್ನು ಬ್ಲೇಕ್ ನೆನಪಿಸಿಕೊಳ್ಳುವ ರೀತಿ ಇದು. ಕ್ರಮಿಸುತ್ತಿರುವ ಬರವಣಿಗೆಯ ಈ ದಾರಿಯಲ್ಲಿ ಒಂದಿಷ್ಟು ನಿಂತು ಹೊರಳಿ ನೋಡಿದಾಗ ನಾನು ನೆನೆಯಲೇ ಬೇಕಾದ ಹಲವರ ಚಿತ್ರ ಕಣ್ಮುಂದೆ ಬರುತ್ತದೆ. ನಾನು ಎಲ್ಲರನ್ನೂ ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. 


ಓದಿದ, ನೋಡಿದ ನಂತರ ಅನುಭವವಾಗಿ ಮನಸ್ಸಿನಲ್ಲಿ ಕುಳಿತು ಕಂಗೆಡಿಸಿದ, ಹಗಲಿರುಳು ಚಿಂತಿಸುವಂತೆ ಮಾಡಿದ ಒಂದಿಷ್ಟು ಚಿಂತನೆಗಳನ್ನು ಓದುಗರಿಗೆ ದಾಟಿಸುವ ಪ್ರಯತ್ನವಾಗಿ ಈ ಪುಸ್ತಕದ ಬರವಣಿಗೆ. ಹೀಗೆ ಅನುಭವವನ್ನು ಓದುಗರಿಗೆ ದಾಟಿಸುವ ಈ ಪ್ರಯತ್ನ ನನ್ನದು ಆದರೆ ನನ್ನದು ಮಾತ್ರವಲ್ಲ ಎನ್ನುವ ವಿನಮೃತೆಯೂ ನನ್ನ ಅಂತ:ಪ್ರಜ್ಞೆಯೊಳಗೆ ಜಾಗೃತವಾಗಿದೆ ಎನ್ನುವ ಅರಿವಿನಿಂದಲೆ ನಾನು ಬರವಣಿಗೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. 

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

No comments:

Post a Comment