Friday, March 21, 2014

ಖುಷ್ವಂತಜ್ಜನ ನೆನಪುಗಳಲ್ಲಿ






             ಪತ್ರಕರ್ತ, ಅಂಕಣಕಾರ, ಸಾಹಿತಿ ಖುಷ್ವಂತ ಸಿಂಗ್ ತಮ್ಮ ೯೯ನೇ ವಯಸ್ಸಿನಲ್ಲಿ ನಿಧನರಾದರು. ಬೆಚ್ಚನೆಯ ಜೀವನ ಪ್ರೀತಿಯನ್ನು ತನ್ನೊಳಗೆ ಬದುಕಿನ ಕೊನೆಯ ದಿನದವರೆಗೂ ಕಾಪಿಟ್ಟುಕೊಂಡು ಬಂದ ಈ ಅಜ್ಜ ಇತರರಲ್ಲೂ ಅದೇ ಜೀವನ ಪ್ರೀತಿಯನ್ನು ತನ್ನ ಬರವಣಿಗೆಯ ಮೂಲಕ ಕಟ್ಟಿಕೊಟ್ಟ. ಖುಷ್ವಂತ ಸಿಂಗರ ಬದುಕು ಮತ್ತು ಬರವಣಿಗೆ ಅಂದಿಗೂ ಮತ್ತು ಇಂದಿಗೂ ಅದೊಂದು ಅಚ್ಚರಿ ಮತ್ತು ಬೆರಗುಗಳ ಸಮ್ಮಿಶ್ರಣ. ಸಾಯುವುದಕ್ಕೆ ಇನ್ನೇನು ಕೆಲವು ತಿಂಗಳುಗಳಿವೆ ಎನ್ನುವವರೆಗೂ ರಾಷ್ಟ್ರದ ಪ್ರಮುಖ ಇಂಗ್ಲಿಷ್ ದೈನಿಕಗಳಲ್ಲಿ ಅವರ ಅಂಕಣ ಬರಹಗಳು  ನಿಯಮಿತವಾಗಿ ಪ್ರಕಟವಾಗುತ್ತಿದ್ದವು.  ಪ್ರತಿ ಶನಿವಾರದಂದು ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ 'Sweet and sour' ಅಂಕಣದ ಓದಿಗಾಗಿ ಓದುಗರು ಅತ್ಯಂತ ಕುತೂಹಲದಿಂದ ಕಾಯುತ್ತಿದ್ದರು. ಪ್ರತಿವಾರ ಒಂದೊಂದು ಹೊಸವಿಷಯ ಲೇಖನದ ಕೊನೆಗೆ ಸಣ್ಣದೊಂದು ಜೋಕು ಅವರ ಆ ಅಂಕಣ ಓದುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತಿತ್ತು. ಸಾಮಾನ್ಯ ಸಂಗತಿಯನ್ನೂ ನಾವುಗಳೆಲ್ಲ ಅತ್ಯಂತ ಕುತೂಹಲ ಮತ್ತು ಬೆರಗಿನಿಂದ ಓದುವಂತೆ ಬರೆಯುತ್ತಿದ್ದ ಖುಷ್ವಂತ ಸಿಂಗಗೆ ಬರವಣಿಗೆ ಒಲಿಯುವುದರ ಜೊತೆಗೆ ಓದುಗರ ನಾಡಿಮಿಡಿತ ಅರ್ಥವಾಗಿತ್ತು. ಸಣ್ಣ  ಸಣ್ಣ ಸಂಗತಿಗಳಿಗೂ ಹಾಸ್ಯದ ಲೇಪ ಹಚ್ಚಿ  ಅತ್ಯಂತ ಲವಲವಿಕೆಯಿಂದ ಬರೆಯುತ್ತಿದ್ದ ಖುಷ್ವಂತ್ ಸಿಂಗರಿಗೆ ತಮ್ಮ ಸುತ್ತಮುತ್ತಲಿನ ಜನರು, ಮನೆಯ ಸೇವಕ, ಕಸಗುಡಿಸುವವ ಇಂಥ ವ್ಯಕ್ತಿಗಳೇ ಬರವಣಿಗೆಗೆ ಆಹಾರವಾಗುತ್ತಿದ್ದರು.  ಅಚ್ಚರಿಯ ಸಂಗತಿ ಎಂದರೆ ಖುಷ್ವಂತ್ ಸಿಂಗ್ ಬರವಣಿಗೆಯ ಬದುಕನ್ನು ಆಯ್ಕೆಮಾಡಿಕೊಂಡಿದ್ದು ಅದೊಂದು ಆಕಸ್ಮಿಕ ಸನ್ನಿವೇಶದಲ್ಲಿ. ವಕೀಲರಾಗಬೇಕೆಂದು ವೃತ್ತಿಯನ್ನಾರಂಭಿಸಿದ ಆ ದಿನಗಳಲ್ಲಿ ಕೈಯಲ್ಲಿ ಕೆಲಸವಿಲ್ಲದೆ ಖಾಲಿ ಕುಳಿತಾಗ ಖುಷ್ವಂತ್ ಸಿಂಗಗೆ ಓದುವ ಗೀಳು ಅಂಟಿಕೊಂಡಿತು. ಇಂಗ್ಲಿಷ್ ಸಾಹಿತ್ಯವನ್ನು ಓದುತ್ತ ಹೋದಂತೆಲ್ಲ ಅವರೊಳಗೊಬ್ಬ ಬರಹಗಾರ ಹುಟ್ಟಿಕೊಂಡ. ಮುಂದೆ ಬರವಣಿಗೆಯನ್ನೇ ವೃತ್ತಿಯಾಗಿಸಿಕೊಂಡು ಈ ಅಜ್ಜ ಅದ್ಭುತವಾದದ್ದನ್ನು ಸಾಧಿಸಿದ. ಪತ್ರಿಕೆಯ ಸಂಪಾದಕನಾಗಿ, ೮೦ ಕ್ಕೂ ಹೆಚ್ಚು ಪುಸ್ತಕಗಳ ಲೇಖಕನಾಗಿ, ಅಂಕಣಕಾರನಾಗಿ ಅವರು ಭಾರತೀಯ ಇಂಗ್ಲಿಷ್ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯ.

                     ಖುಷ್ವಂತ್ ಸಿಂಗರ ಬದುಕು ಅದೊಂದು ಅತ್ಯಂತ ವರ್ಣರಂಜಿತ ಬದುಕದು. ನೇರ, ನಿರ್ಭೀತ, ದಿಟ್ಟ ವ್ಯಕ್ತಿತ್ವದ ಜೊತೆಗೆ  ಯಾರ  ಮುಲಾಜು ಹಾಗೂ ಬಿಡೆಗೆ ಸಿಲುಕದ ಬದುಕು ಅವರದಾಗಿತ್ತು. ತಮ್ಮೊಳಗಿನ ದೌರ್ಬಲ್ಯಗಳನ್ನು ಅತ್ಯಂತ ನಿರ್ಭಿಡೆ ಮತ್ತು ನಿಸ್ಸಂಕೋಚವಾಗಿ ಹೇಳಿಕೊಂಡ ಲೇಖಕನೆಂದರೆ ಅದು ಖುಷ್ವಂತ್ ಸಿಂಗ್ ಮಾತ್ರ. ಬರವಣಿಗೆಯ ಬದುಕು ಮತ್ತು ಖಾಸಗಿ ಬದುಕನ್ನು ಪ್ರತ್ಯೇಕವಾಗಿಸಿಕೊಂಡು ಬದುಕುತ್ತಿರುವ ಊಸರವಳ್ಳಿಗಳ ನಡುವೆ ಈ ಖುಷ್ವಂತ್ ಸಿಂಗ್ ತಮ್ಮ ನೇರಾನೇರ ಗುಣಗಳಿಂದ ಇಷ್ಟವಾಗುತ್ತಾರೆ. ಒಂದೊಮ್ಮೆ ಆಹ್ವಾನಿತ ಪ್ರಧಾನಿಯ ಆಗಮನಕ್ಕೂ ಕಾಯದೆ ವೇಳೆಯಾಯಿತೆಂದು ಹುಟ್ಟುಹಬ್ಬವನ್ನು ಆಚರಿಸಿಕೊಂಡ ಹುಂಬನೀತ. ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿ ಹೇರಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು ಕೂಡ ಇದೆ ಅಜ್ಜ. ಒಟ್ಟಿನಲ್ಲಿ ಖುಷ್ವಂತ್ ಸಿಂಗರದು ಸುಲಭವಾಗಿ ಅರ್ಥವಾಗುವ ಮತ್ತು ಕೈಗೆ ಸಿಗುವ ವ್ಯಕ್ತಿತ್ವವಲ್ಲ. ಆಧುನಿಕತೆಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಮತ್ತು ಹೊಸ ಬದಲಾವಣೆಗಳಿಗೆ ತನ್ನನ್ನು ತಾನು ತೆರೆದುಕೊಳ್ಳುತ್ತಿದ್ದ ಖುಷ್ವಂತ್ ಸಿಂಗ್ ಕೊನೆಯ ಉಸಿರಿನವರೆಗೂ ಸಿಖ್ ಸಂಪ್ರದಾಯದ ವೇಷ ಭೂಷಣಗಳನ್ನು ಕಳಚಿ ಹೊರಬರದಿರುವುದು ಅತ್ಯಂತ ಅಚ್ಚರಿಯ ಸಂಗತಿಗಳಲ್ಲೊಂದು. ಮಗ ರಾಹುಲ್ ಗಡ್ಡ ಬೋಳಿಸಿಕೊಂಡಾಗ ಆತನೊಂದಿಗೆ ಮಾತನಾಡುವುದನ್ನೇ ಬಿಟ್ಟ ಖುಷ್ವಂತ್ ವ್ಯಕ್ತಿತ್ವ ಸಂಪ್ರದಾಯ ಮತ್ತು ಆಧುನಿಕತೆಯ ಸಮ್ಮಿಶ್ರಣದಂತೆ ಕಾಣುತ್ತದೆ.

        ಖುಷವಂತ್ ಸಿಂಗ್ ಬಗ್ಗೆ ಬರೆಯುತ್ತ ಪಿ.ಲಂಕೇಶ್ 'ಭಾರತದಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಸಿಗಬೇಕಿದ್ದರೆ ಅದು ಖುಷ್ವಂತ್ ಗೆ' ಎಂದು ಹೇಳುತ್ತಾರೆ. ಏಕೆಂದರೆ ಖುಷ್ವಂತ್ ಸಿಂಗ್ ಭಾರತದಲ್ಲಿನ ಎಲ್ಲ ಜಾತಿ ಮತ್ತು ಧರ್ಮದವರನ್ನು ಪ್ರೀತಿಸಿದವರು. ಅವರ 'ಟ್ರೇನ್ ಟು ಪಾಕಿಸ್ತಾನ್' ಕೃತಿಯಲ್ಲಿ ನಾವು ಅವರೊಳಗಿನ ಧರ್ಮಾತೀತ ಮನೋಭಾವವನ್ನು ಕಾಣಬಹುದು. ಏಕಕಾಲಕ್ಕೆ ಮುಸ್ಲಿಂ ಮತ್ತು ಸಿಖ್ ಎರಡೂ ಧರ್ಮಗಳಲ್ಲಿನ ಉತ್ತಮ ಗುಣಗಳನ್ನು ತಮ್ಮ ಈ ಕೃತಿಯಲ್ಲಿ ಪಟ್ಟಿ ಮಾಡುತ್ತಾರೆ. 'ಆತನಂತೆ ಬರೆಯುವವರು, ಛೇಡಿಸುವವರು, ಕುಡಿಯುವವರು, ಕಲ್ಪಿಸಿಕೊಳ್ಳುವವರು ಬರಬಹುದು. ಆದರೆ ಈ ಸರ್ದಾರ್ಜಿಯಂತೆ ಲವಲವಿಕೆ, ದೇಶ ಪ್ರೇಮ, ತುಂಟತನ, ಒಳ್ಳೆಯತನ ಇರುವವರು ಬರುವುದು ಕಷ್ಟ' ಎಂದ ಲಂಕೇಶರ ಮಾತಿನಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ.

                          ಖುಷ್ವಂತ್ ಸಿಂಗ್ ಎಂದಾಕ್ಷಣ ಆ ಕ್ಷಣಕ್ಕೆ ನಮಗೆ ನೆನಪಾಗುವುದು ಅವರು ಹೇಳಿದ ಮತ್ತು ಬರೆದ ಜೋಕುಗಳು. ಟ್ರೇನ್ ಟು ಪಾಕಿಸ್ತಾನ್, ಹಿಸ್ಟರಿ ಆಫ್ ಇಂಡಿಯಾ, ಕಂಪನಿ ವಿಥ್ ವುಮೆನ್ ದಂಥ ಮಹತ್ವದ ಕೃತಿಗಳನ್ನು ಬರೆದ ಖುಷ್ವಂತ್ ಸಿಂಗ್ ಅಷ್ಟೇ ಸಮರ್ಥವಾಗಿ ಸಾವಿರಾರು ಜೋಕುಗಳನ್ನು ಬರೆದಿರುವರು. ಅವರ ಜೋಕುಗಳ ಪುಸ್ತಕಗಳು ಸರಣಿಯೋಪಾದಿಯಲ್ಲಿ ಪ್ರಕಟವಾಗಿವೆ. ಇವತ್ತಿಗೂ ಅನೇಕ ಭಾರತೀಯರ ಮನೆಯ ಪುಸ್ತಕಗಳ ಸಂಗ್ರಹಾಲಯದಲ್ಲಿ ನಾವು ಖುಷ್ವಂತರ ಜೋಕುಗಳ ಪುಸ್ತಕಗಳನ್ನು ಕಾಣಬಹುದು. ತಮ್ಮ ಈ ನಗೆಹನಿಗಳ ಮೂಲಕ ಕೋಟ್ಯಾಂತರ ಭಾರತೀಯರ ಬದುಕಿಗೆ ನವನಾವಿನ್ಯತೆಯ ಲೇಪವನ್ನು ಬಳಿದ ಕಲಾಕಾರನೀತ. ಒಂದಿಷ್ಟು ನಗೆಯುಕ್ಕಿಸಿ ಮನಸ್ಸನ್ನು ಆಹ್ಲಾದಕರವಾಗಿಸಿ ಬದುಕುವ ಚೈತನ್ಯ ನೀಡಿ ಆ ಮೂಲಕ ನಮ್ಮಗಳ ಬದುಕನ್ನು ಸಹನೀಯವಾಗಿಸಿದ ಅವರ ನಗೆಹನಿಗಳು ಅಂದು ಇಂದು ಎಲ್ಲ ಕಾಲಕ್ಕೂ ಪ್ರಸ್ತುತವೆನಿಸುತ್ತವೆ. ತಮ್ಮ ನಗೆಹನಿಗಳ ಪುಸ್ತಕವೊಂದರ ಮುನ್ನುಡಿಯಲ್ಲಿ ಖುಷ್ವಂತ್ ಸಿಂಗ್ ಹೀಗೆ ಹೇಳುತ್ತಾರೆ 'ಈ ಪುಸ್ತಕ ಬರೆಯುತ್ತಿರುವ ಸಂದರ್ಭ ಒಂದು ರಾತ್ರಿ ನಾನೊಂದು ಕನಸು ಕಂಡೆ. ಆಗ ನನಗೆ ವಯಸ್ಸು ೯೨. ನನ್ನ ಹತ್ತಿರ ಬಂದ ದೇವರು ಇನ್ನು ನಿನ್ನ ಭೂಮಿಯ ಋಣ ತೀರಿತು ಬಾ ನನ್ನೊಡನೆ ಎಂದು ಕರೆದ. ನಾನು ಹೇಳಿದೆ ನನ್ನ ಕೆಲವೊಂದು ಹಸ್ತಪ್ರತಿಗಳು ಪ್ರಕಟಣೆಯ ಹಂತದಲ್ಲಿವೆ ಏಕಾಏಕಿ ಅದೆಲ್ಲವನ್ನು ಅರ್ಧಕ್ಕೆ ಬಿಟ್ಟು ಬಂದರೆ ಪ್ರಕಾಶಕರಿಗೆ ತೊಂದರೆಯಾಗುತ್ತದೆ. ದಯವಿಟ್ಟು ನನಗೆ ಇನ್ನೊಂದಿಷ್ಟು ಸಮಯ ಕೊಡು. ದೇವರು ನನ್ನ ಮನವಿಯಿಂದ ಪ್ರಸನ್ನನಾಗಲಿಲ್ಲ. ಜೊತೆಗೆ ಬರುವಂತೆ ಖಡಾಖಂಡಿತವಾಗಿ ಹೇಳಿದ. ಕೊನೆಗೆ ಬೇರೆ ಉಪಾಯವಿಲ್ಲದೆ ಹೇಳಿದೆ ನಾನು ಇನ್ನು ಕೆಲವು ಜೋಕುಗಳ ಪುಸ್ತಕ ಬರೆಯಬೇಕಾಗಿದೆ. ದೇವರಿಗೆ ನನ್ನ ಮಾತುಗಳು ಅರ್ಥವಾಗಲಿಲ್ಲ. ಹಾಗೆಂದರೇನು? ಕೇಳಿದ. ಜೋಕುಗಳನ್ನು ಓದುವುದರಿಂದ ಜನರು ನಗುತ್ತಾರೆ ಇದರಿಂದ ಅವರ ಮನಸ್ಸು ಆಹ್ಲಾದಗೊಳ್ಳುತ್ತದೆ. ದೇವರಿಗೆ ನನ್ನ ಮಾತು ಒಪ್ಪಿಗೆಯಾಯಿತು. ಹೌದು ನಾನು ಸಹ ಜನರು ಆನಂದದಿಂದ ಇರಲೆಂದು ಬಯಸುತ್ತೆನೆ. ಜನರನ್ನು ಸಂತೋಷಗೊಳಿಸುವ ಕೆಲಸ ನೀನು ಮಾಡುವುದಾದರೆ   ಇನ್ನು ಹಲವು ವರ್ಷ ಭೂಮಿಯ ಮೇಲೆ ಇರು ಹೀಗೆ ಹೇಳಿದವನೇ ಅದೃಶ್ಯನಾದ'. ನಿಜಕ್ಕೂ ಖುಷ್ವಂತ್ ಸಿಂಗರ ಈ ಮಾತು ಕಲ್ಪಿತವಾದರೂ  ಅವರ ಜೋಕುಗಳು ಅಸಂಖ್ಯಾತ ಜನರನ್ನು ತಲುಪಿವೆ. ಅಕ್ಷರಸ್ಥರಿಂದ ಅನಕ್ಷರಸ್ಥರವರೆಗೂ, ಮಕ್ಕಳಿಂದ ವೃದ್ಧರವರೆಗೂ, ಪುರುಷ ಮಹಿಳೆ ಎನ್ನುವ ತಾರತಮ್ಯವಿಲ್ಲದೆ ಹಲವು ದಶಕಗಳ ಕಾಲ ಎಲ್ಲರನ್ನೂ ನಕ್ಕು ನಲಿಸಿದ ಈ ಮೋಡಿಗಾರನ ಪೆನ್ನಿನಿಂದ ಹೊರಬಂದ ಜೋಕುಗಳ ಸಂಖ್ಯೆ ಅಗಣಿತ.

     ಅಂಥದ್ದೇ ಅವರ ಕೆಲವೊಂದು ಜೋಕುಗಳು ಇಂಗ್ಲಿಷಿನಿಂದ ಕನ್ನಡಕ್ಕೆ ಖುಷ್ವಂತಜ್ಜನ ನೆನಪುಗಳೊಂದಿಗೆ..........

                ಒಂದು ದಿನ ಸಂತಾ ಪುಣೆಯಿಂದ ಚಂಡೀಘರ್ ಗೆ ವಿಮಾನದಲ್ಲಿ ಪಯಣಿಸುತ್ತಿದ್ದ. ತನಗೆ ಕಾಯ್ದಿರಿಸಲಾಗಿದ್ದ ಮಧ್ಯದ ಸೀಟನ್ನು ಬಿಟ್ಟು ಕಿಟಕಿ  ಹತ್ತಿರದ ಸೀಟಿನಲ್ಲಿ ಹೋಗಿ ಕುಳಿತ. ಸ್ವಲ್ಪ ಸಮಯದ ನಂತರ ಅಲ್ಲಿಗೆ ಬಂದ ವಯಸ್ಸಾದ ಮಹಿಳೆ ಸಂತಾ ಕುಳಿತ ಸೀಟು ತಾನು ಕಾಯ್ದಿರಿಸಿದ್ದೆಂದು ಅಲ್ಲಿಂದ ಏಳುವಂತೆ ಸೂಚಿಸಿದಳು. 'ಕಿಟಕಿ ಹತ್ತಿರ ಕುಳಿತು ಹೊರಗಿನ ದೃಶ್ಯವನ್ನು ವೀಕ್ಷಿಸುತ್ತಿದ್ದೇನೆ' ಎಂದು ಕಾರಣ ನೀಡಿದ ಸಂತಾ ಅಲ್ಲಿಂದ ಏಳಲು ಒಪ್ಪಲಿಲ್ಲ. ಬೇರೆ ದಾರಿಕಾಣದೆ ಮಹಿಳೆ ಅಲ್ಲಿಯೇ ಇದ್ದ ವಿಮಾನ ಪರಿಚಾರಕಿಗೆ  ಈ ವಿಷಯ ತಿಳಿಸಿ ಸಂತಾನನ್ನು ಅಲ್ಲಿಂದ ಎಬ್ಬಿಸುವಂತೆ ಹೇಳಿದಳು. ವಿಮಾನ ಪರಿಚಾರಕಿ  ಎಷ್ಟೇ ಮನವಿ ಮಾಡಿಕೊಂಡರು ಸಂತಾ ಅ ಜಾಗದಿಂದ ಕದಲಲಿಲ್ಲ. ಪರಿಚಾರಕಿ  ಸಹ ಪೈಲೆಟ್ ಗೆ ಈ ವಿಷಯ ತಿಳಿಸಿ ಸಂತಾನನ್ನು ಅಲ್ಲಿಂದ ಎಬ್ಬಿಸಿ ವಯಸ್ಸಾದ ಮಹಿಳೆಗೆ ಆ ಸೀಟನ್ನು ಒದಗಿಸುವಂತೆ ಸೂಚಿಸಿದಳು. ಸಹ ಪೈಲೆಟ್ ಮಾತಿಗೂ ಸಂತಾ ಅಲ್ಲಿಂದ ಸರಿದು ತನಗಾಗಿ ಕಾಯ್ದಿರಿಸಿದ್ದ ಸೀಟಿನಲ್ಲಿ ಕೂಡಲು ನಿರಾಕರಿಸಿದ. ಕೊನೆಗೆ ವಿಮಾನದ ಕ್ಯಾಪ್ಟನ್ ಗೆ  ದೂರು ಕೊಡಲಾಯಿತು. ಸಂತಾ ಕುಳಿತ ಜಾಗಕ್ಕೆ ಬಂದ ಕ್ಯಾಪ್ಟನ್ ಯಾರಿಗೂ ಕೇಳಿಸದಂತೆ ಸಂತಾನ ಕಿವಿಯಲ್ಲಿ ಏನನ್ನೋ ಹೇಳಿದ. ತಕ್ಷಣವೇ ಸಂತಾ ಕಿಟಕಿ ಹತ್ತಿರದ ಸೀಟನ್ನು ಆ ವಯಸ್ಸಾದ ಮಹಿಳೆಗೆ ಬಿಟ್ಟು ತನ್ನ ಮಧ್ಯದ ಸೀಟಿನಲ್ಲಿ ಬಂದು ಕುಳಿತ. ವಿಮಾನ ಪರಿಚಾರಕಿ ಮತ್ತು ಸಹ ಪೈಲೆಟ್ ಗೆ ಆಶ್ಚರ್ಯವಾಯಿತು. ತಾವು ಪರಿಪರಿಯಾಗಿ ಬೇಡಿಕೊಂಡರೂ ಅಲ್ಲಿಂದ ಕದಲದ ಸಂತಾ ನೀವು  ಕಿವಿಯಲ್ಲಿ ಏನನ್ನೋ ಉಸುರಿದ ಮಾತ್ರಕ್ಕೆ ಹೇಗೆ ಸೀಟು ಬಿಟ್ಟುಕೊಟ್ಟ ಎಂದು ಕ್ಯಾಪ್ಟನ್ ನನ್ನು ಪ್ರಶ್ನಿಸಿದರು. ಕ್ಯಾಪ್ಟನ್ ಪ್ರತಿಕ್ರಿಯಿಸಿದ 'ನಾನು ಸಂತಾಗೆ ಹೇಳಿದ್ದು ಇಷ್ಟೇ ವಿಮಾನದಲ್ಲಿನ ಮಧ್ಯದ ಸೀಟುಗಳು ಮಾತ್ರ ಚಂಡೀಘರ್ ಗೆ ಹೋಗುತ್ತವೆ ಉಳಿದ ಸೀಟುಗಳು ಹೋಗುತ್ತಿರುವುದು ಜಲಂಧರ್ ಗೆ'
---೦೦೦---

                      ಭಾರತದಿಂದ ಸಂತಾ, ಅಮೇರಿಕಾದಿಂದ ಮಾರ್ಕ್ ಮತ್ತು ಬ್ರಿಟನ್ ದಿಂದ ಟಾಮ್ ಗೂಢಚಾರ ಸಂಸ್ಥೆಯಲ್ಲಿ ಖಾಲಿಯಿದ್ದ ಪತ್ತೇದಾರ ಕೆಲಸಕ್ಕೆ ಅರ್ಜಿ ಹಾಕಿದ್ದರು. ನಿಗದಿತ ದಿನದಂದು ಈ ಮೂವರನ್ನು ಸಂದರ್ಶನಕ್ಕೆ ಕರೆಯಲಾಯಿತು. ಮೊದಲು ಮಾರ್ಕ್ ನನ್ನು ಸಂದರ್ಶನ ಕೊಠಡಿಗೆ ಕರೆಯಲಾಯಿತು. ಅಲ್ಲಿದ್ದ ಗೂಢಚಾರ ಸಂಸ್ಥೆಯ ಮುಖ್ಯಸ್ಥ 'ಏಸು ಕ್ರಿಸ್ತನನ್ನು ಕೊಲೆ ಮಾಡಿದವರು ಯಾರು?' ಎಂದು ಪ್ರಶ್ನಿಸಿದ. ಮಾರ್ಕ್ ಯಾವ ಅನುಮಾನ ಇಲ್ಲದಂತೆ ತಟ್ಟನೆ ಉತ್ತರಿಸಿದ 'ಏಸುವನ್ನು ಕೊಂದವರು ಬ್ರಿಟಿಷರು'. ಮಾರ್ಕ್ ನಂತರ ಟಾಮ್ ನನ್ನು ಕರೆದು ಅದೇ ಪ್ರಶ್ನೆಯನ್ನು ಕೇಳಲಾಯಿತು. ಟಾಮ್ ಏಸುವನ್ನು ಕೊಂದವರು ಅಮೇರಿಕನ್ನರು ಎಂದು ಉತ್ತರಿಸಿದ. ಕೊನೆಗೆ ಸಂತಾನ ಸರದಿ ಬಂದಿತು. ಮುಖ್ಯಸ್ಥ ಮತ್ತದೇ ಪ್ರಶ್ನೆಯನ್ನು ಪುನರಾವರ್ತಿಸಿದ. ಪ್ರಶ್ನೆ ಕೇಳಿದ ಸಂತಾ ಅರೆಘಳಿಗೆ ಯೋಚನಾಮಗ್ನನಾದ. ಈ ಪ್ರಶ್ನೆಗೆ ಉತ್ತರಿಸಲು ಒಂದಿಷ್ಟು ಕಾಲಾವಕಾಶ ಬೇಡಿದ. ಸಂತಾನ ಮನವಿಗೆ ಸಮ್ಮತಿಸಿದ ಸಂಸ್ಥೆಯ ಮುಖ್ಯಸ್ಥ ನಾಳೆ ಬಂದು ಉತ್ತರ ಕೊಡಲು ಸೂಚಿಸಿದ. ಸಂದರ್ಶನದಿಂದ ಮನೆಗೆ ಮರಳಿದ ಸಂತಾನನ್ನು ಆತನ ಹೆಂಡತಿ ಕೆಲಸದ ವಿಷಯವಾಗಿ ಕೇಳಿದಳು. ಸಂತಾ ಆ ಕೆಲಸ ತನಗೇ ಸಿಕ್ಕಿದೆ ಎಂದು  ನುಡಿದ. ಸಂತಾನ ಮಾತುಗಳಿಂದ ಅಚ್ಚರಿಗೊಂಡ ಪತ್ನಿ ಅದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದಳು. 'ಈಗಾಗಲೇ ನನ್ನನ್ನು ಏಸು ಕ್ರಿಸ್ತನ ಕೊಲೆಗಾರನನ್ನು ಪತ್ತೆ ಹಚ್ಚಲು ನಿಯೋಜಿಸಲಾಗಿದೆ. ಅಂದ ಮೇಲೆ ಕೆಲಸ ನನಗೇ ಸಿಕ್ಕಂತಲ್ಲವೇ' ಸಂತಾ ಉತ್ತರಿಸಿದ.
---೦೦೦---

         ಬಂತಾ ಸಿಂಗ್ ಕಂಪ್ಯೂಟರ್ ಖರೀದಿಸಿದ. ಮನೆಗೆ ತಂದು ಕಂಪ್ಯೂಟರ್ ಎದುರು ಕುಳಿತವನಿಗೆ ಅನೇಕ ಪ್ರಶ್ನೆಗಳು ಕಾಡಲಾರಂಭಿಸಿದವು. ತನ್ನೆಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿಯಲು ನೇರವಾಗಿ ಬಿಲ್ ಗೇಟ್ ಗೆ ಪತ್ರ ಬರೆಯಲು ನಿರ್ಧಿರಿಸಿದ.

ಡಿಯರ್ ಬಿಲ್ ಗೇಟ್,

ನಿನ್ನೆ ನಾನೊಂದು ಕಂಪ್ಯೂಟರ್ ಖರೀದಿಸಿದೆ. ಕಂಪ್ಯೂಟರ್ ಎದುರು ಕುಳಿತಾಗ ಅನೇಕ ಸಮಸ್ಯೆಗಳು ಎದುರಾದವು. ಆ ಎಲ್ಲ ಸಮಸ್ಯೆಗಳನ್ನು ನಾನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ ಮತ್ತು ಅವುಗಳಿಗೆ ನಿಮ್ಮಿಂದ ಪರಿಹಾರಗಳನ್ನು ನಿರೀಕ್ಷಿಸುತ್ತೇನೆ.

೧. ಕಂಪ್ಯೂಟರ್ ನಲ್ಲಿ shut down ಎಂದಿದ್ದು ಅದಕ್ಕೆ ಮುಚ್ಚಲು ನೀವು ಬಾಗಿಲುಗಳನ್ನೇ ಮಾಡಿಲ್ಲ.

೨. ಇಲ್ಲಿ START ಎಂದು ಮಾತ್ರವಿದೆ ಆದರೆ STOP ಎಂದಿಲ್ಲ. ದಯವಿಟ್ಟು ಈ ಕುರಿತು ಯೋಚಿಸಿ.

೩. ಮೇನುವಿನಲ್ಲಿ RUN ಎಂದಿದೆ. ನನ್ನೊಬ್ಬ ಗೆಳೆಯ ಕಂಪ್ಯೂಟರ್ ನಲ್ಲಿ ಈ RUN ಶಬ್ದವನ್ನು ನೋಡಿ ಅಮೃತಸರದವರೆಗೂ ಓಡಿದ. ದಯವಿಟ್ಟು RUN ಬದಲು SIT ಎಂದು ಇರಲಿ.

೪. ನಿಮ್ಮ ಈ ಕಂಪ್ಯೂಟರ್ ನಲ್ಲಿ 'Re-cycle' ಎಂದಿದೆ ಅದರ ಬದಲು 'Re-scooter' ಎಂದಿದ್ದರೆ ಚೆನ್ನಾಗಿರುತ್ತಿತ್ತು. ಏಕೆಂದರೆ ನನ್ನ ಮನೆಯಲ್ಲಿ scooter ಇದೆ.

೫. ಕಂಪ್ಯೂಟರ್ ನಲ್ಲಿ 'Find' ಎನ್ನುವ ಪದವಿದೆ ಆದರೆ ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮೊನ್ನೆ ನನ್ನ ಹೆಂಡತಿ ಮನೆಯ ಬೀಗದ ಕೈ ಕಳೆದುಕೊಂಡಾಗ ನಾವು ಈ Find ನಿಂದ ಎಷ್ಟು ಹುಡುಕಿದರೂ ಸಿಗಲಿಲ್ಲ. ದಯವಿಟ್ಟು ಇದನ್ನು ತುರ್ತಾಗಿ ಪರಿಶೀಲಿಸಿ.

೬. ಈ ಕಂಪ್ಯೂಟರ್ ಜೊತೆಗಿರುವ mouse ನ್ನು ಬೆಕ್ಕಿನಿಂದ ಕಾಯಲು ನಾನು ರಾತ್ರಿಯೆಲ್ಲ ನಿದ್ದೆ ಇಲ್ಲದೆ ಕಳೆಯಬೇಕಾಗಿದೆ. ಆದ್ದರಿಂದ ಬೆಕ್ಕನ್ನು ಹೊಡೆದೊಡಿಸಲು ಕಂಪ್ಯೂಟರ್ ಜೊತೆಗೆ ನೀವು ನಾಯಿಯೊಂದನ್ನು ಕೊಟ್ಟರೆ ಒಳ್ಳೆಯದು.

೭. ನನ್ನ ಮಗ Microsoft word ಕಲಿತಿರುವನು ಈಗ ಅವನು Microsoft sentence ಕಲಿಯಲು ಬಯಸುತ್ತಿರುವನು. Microsoft sentence ನ್ನು ನೀವು ಯಾವಾಗ ಕೊಡುತ್ತಿರಿ.

ಧನ್ಯವಾದಗಳು

ಬಂತಾ ಸಿಂಗ್

---೦೦೦---

        ಸಂತಾ ಸತ್ತು ಸ್ವರ್ಗದತ್ತ ಪ್ರಯಾಣ ಬೆಳೆಸಿದ. ಸ್ವರ್ಗದ ಬಾಗಿಲಲ್ಲೇ ಅವನನ್ನು ಒಳಗೆ ಪ್ರವೇಶಿಸದಂತೆ ತಡೆಯಲಾಯಿತು. ಬಾಗಿಲ ಬಳಿಯಲ್ಲೇ ಕುಳಿತಿದ್ದ ಚಿತ್ರಗುಪ್ತ ಹೇಳಿದ 'ಈಗ ಸ್ವರ್ಗ ಪ್ರವೇಶಕ್ಕೆ ಕೆಲವೊಂದು ನಿಯಮಗಳನ್ನು ಮಾಡಲಾಗಿದೆ. ನಾನು ನಿನಗೆ ಎರಡು ಪ್ರಶ್ನೆಗಳನ್ನು ಕೇಳುತ್ತೇನೆ ಅವುಗಳಿಗೆ ಸರಿಯಾದ ಉತ್ತರ ನೀಡಿ ನೀನು ಸ್ವರ್ಗವನ್ನು ಪ್ರವೇಶಿಸಬಹುದು'. 

ಪ್ರಶ್ನೆ ಒಂದು:- 'ವಾರದಲ್ಲಿ T ಅಕ್ಷರದಿಂದ ಆರಂಭವಾಗುವ ದಿನಗಳಾವವು?'

ಪ್ರಶ್ನೆ ಎರಡು:- 'ಒಂದು ವರ್ಷದಲ್ಲಿ ಎಷ್ಟು ಸೆಕೆಂಡ್ ಗಳು ಇರುತ್ತವೆ?'

          ಸಂತಾ ಒಂದು ಕ್ಷಣ ಯೋಚಿಸಿ ಉತ್ತರಿಸಿದ 'ವಾರದಲ್ಲಿ T ಅಕ್ಷರದಿಂದ ಆರಂಭವಾಗುವ ದಿನಗಳು ಎರಡು ಅವು Today ಮತ್ತು Tomorrow. ಇನ್ನು ಎರಡನೇ ಪ್ರಶ್ನೆಗೆ ಉತ್ತರ ವರ್ಷದಲ್ಲಿ ೧೨ ಸೆಕೆಂಡ್ ಗಳಿರುತ್ತವೆ' 

ಚಿತ್ರಗುಪ್ತ: 'ಮೊದಲನೇ ಪ್ರಶ್ನೆಗೆ  ಉತ್ತರ ನಾನು ನಿರೀಕ್ಷೆ ಮಾಡಿದ್ದು ಅಲ್ಲವಾದರೂ ಎರಡು ಎಂದಿದ್ದರಿಂದ ಒಪ್ಪಿಕೊಳ್ಳುತ್ತೇನೆ ಆದರೆ ವರ್ಷದಲ್ಲಿ ೧೨ ಸೆಕೆಂಡ್ ಗಳು ಎನ್ನುವ ಉತ್ತರ ಅದು ಹೇಗೆ ಸರಿ?'

ಸಂತಾ: 'ಜನೆವರಿ ಸೆಕೆಂಡ್, ಫೆಬ್ರುವರಿ ಸೆಕೆಂಡ್, ಮಾರ್ಚ್ ಸೆಕೆಂಡ್, ಎಪ್ರಿಲ್ ಸೆಕೆಂಡ್ .......... '

ಚಿತ್ರಗುಪ್ತ  ಮಧ್ಯದಲ್ಲೆ ತಡೆದು ಸಂತಾ ಸ್ವರ್ಗ ಪ್ರವೇಶಿಸಲು ದಾರಿಮಾಡಿ ಕೊಟ್ಟ. 

---೦೦೦---

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 



No comments:

Post a Comment