Wednesday, April 24, 2013

ರಾಜಕುಮಾರ: ನಾಡಿನ ಸೃಜನಶೀಲ ಆಯಾಮ

   




   






           
     (ಇಂದು ರಾಜಕುಮಾರ ಜನ್ಮದಿನ. ಬದುಕಿದ್ದರೆ ಅವರು ಈ ದಿನ ತಮ್ಮ ೮೫ ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದರು. ರಾಜ್ ನೆನಪಿಗಾಗಿ ಈ ಲೇಖನ)

           'ಐದು ಕೋಟಿ ಕನ್ನಡಿಗರನ್ನು ಜಾಗೃತಗೊಳಿಸಲು ಇಡೀ ಕನ್ನಡ ಸಾಹಿತ್ಯವಲಯಕ್ಕೆ ಸಾಧ್ಯವಾಗದೇ ಇದ್ದಾಗ ಕಲಾವಿದನಾಗಿ ರಾಜಕುಮಾರ ಪ್ರತಿಯೊಬ್ಬ ಕನ್ನಡಿಗನ ಮನೆ ಮತ್ತು ಮನಸ್ಸನ್ನು ತಲುಪಿದರು'. ಕನ್ನಡದ ವರನಟ ಡಾ. ರಾಜಕುಮಾರ ಕುರಿತು ನಾಡಿನ ಹಿರಿಯ ಸಾಹಿತಿ ಯು. ಆರ್. ಅನಂತಮೂರ್ತಿ ಅವರು ಹೇಳಿದ ಮಾತಿದು. ಈ ಮಾತಿನಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಮತ್ತು ಇದು ಮುಖಸ್ತುತಿಯೂ ಅಲ್ಲ. ನಿಜ ಯಾರಿಗೂ ಸಾಧ್ಯವಾಗದೇ ಇರುವುದನ್ನು ರಾಜಕುಮಾರ ಒಬ್ಬ ಕಲಾವಿದನಾಗಿ ಸಾಧಿಸಿದರು. ರಾಜಕುಮಾರ ಎಂದರೆ ಕನ್ನಡ ಸಿನಿಮಾ ಎನ್ನುವಷ್ಟರ ಮಟ್ಟಿಗೆ ಅವರು ಕನ್ನಡ ಸಿನಿಮಾ ರಂಗಕ್ಕೆ ಅನಿವಾರ್ಯವಾದರು. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ರಾಜಕುಮಾರ ಪೂರ್ವದಲ್ಲಿ ಮತ್ತು ರಾಜಕುಮಾರ ನಂತರ ಎನ್ನುವ ರೀತಿ ಕನ್ನಡ ಸಿನಿಮಾ ಪ್ರಪಂಚದ ಅವಿಭಾಜ್ಯ ಅಂಗವಾದರು. ಕನ್ನಡ ಚಿತ್ರರಂಗದ ಈ ಮೇರು ನಟ ನಿಧನ ಹೊಂದಿದ ಆ ಘಳಿಗೆ ಸಿನಿಮಾ ಲೋಕ ಮಾತ್ರವಲ್ಲ ಇಡೀ ಕನ್ನಡ ನಾಡು ಆಘಾತದಿಂದ ತತ್ತರಿಸಿ ಹೋಯಿತು. ಬದುಕಿದ್ದರೆ ಈ ದಿನ (ಎಪ್ರಿಲ್ ೨೪) ತಮ್ಮ ೮೫ನೇ ಹುಟ್ಟುಹಬ್ಬ ಆಚರಿಸಿ ಕೊಳ್ಳುತ್ತಿದ್ದರು. ಆದರೆ ೨೦೦೬ ರಲ್ಲಿ ಸಾವಿನ ರೂಪದಲ್ಲಿ ಬಂದ ವಿಧಿ ಅವಕಾಶವನ್ನೇ ಕೊಡಲಿಲ್ಲ.

           ರಾಜಕುಮಾರ ಮೂಲತ: ರಂಗಭೂಮಿ ಕಲಾವಿದ. ಅನೇಕ ನಾಟಕಗಳಲ್ಲಿ ನಟಿಸಿ ಪಳಗಿದ ನಟ. ರಂಗಭೂಮಿಯ ನಂಟು ಇದ್ದುದ್ದರಿಂದಲೇ ಸಂಭಾಷಣೆ ಹಾಗೂ ಭಾವನೆಗಳನ್ನು ಅಭಿವ್ಯಕ್ತ ಪಡಿಸುವುದರ ಮೇಲೆ ಅವರಿಗೆ ಹಿಡಿತವಿತ್ತು. ೧೯೫೦ ರ ದಶಕದಲ್ಲಿ 'ಬೇಡರ ಕಣ್ಣಪ್ಪ' ಚಿತ್ರದ ಮೂಲಕ ಸಿನಿಮಾ ರಂಗವನ್ನು ಪ್ರವೇಶಿಸಿದಾಗ ಆಗ ಕನ್ನಡ ಭಾಷೆಯಲ್ಲಿ ತಯ್ಯಾರಾದ ಚಿತ್ರಗಳ ಸಂಖ್ಯೆ ಕೇವಲ ೪೬. ಆಗಿನ್ನೂ ಕನ್ನಡ ಸಿನಿಮಾ ಇಂಡಸ್ಟ್ರಿ ಬೆಳೆದಿರಲಿಲ್ಲ. ತೆಲಗು, ತಮಿಳು, ಹಿಂದಿ ಸಿನಿಮಾಗಳ ಪ್ರಭಾವ ಸಾಕಷ್ಟಿತ್ತು. ಕರ್ನಾಟಕದಲ್ಲಿ ಸಿನಿಮಾಗಳ ಚಿತ್ರೀಕರಣಕ್ಕೆ ಯಾವುದೇ ಅನುಕೂಲಗಳಿರಲಿಲ್ಲ. ಕನ್ನಡ ಸಿನಿಮಾ ಇಂಡಸ್ಟ್ರಿ ಆಗ ಸಂಪೂರ್ಣವಾಗಿ ಮದ್ರಾಸಿನಲ್ಲಿ ನೆಲೆಯೂರಿತ್ತು. ಕನ್ನಡ ಸಿನಿಮಾರಂಗ ಇನ್ನು ಬಾಲ್ಯಾವಸ್ಥೆಯಲ್ಲಿದ್ದ ದಿನಗಳಲ್ಲಿ ರಾಜಕುಮಾರ ಚಿತ್ರರಂಗವನ್ನು ಪ್ರವೇಶಿಸಿದರು. ಪ್ರಥಮ ಪ್ರಯತ್ನದಲ್ಲೇ ಯಶಸ್ವಿಯಾದ ಅವರು ನಂತರ ಹಿಂತಿರುಗಿ ನೋಡುವ ಸಂದರ್ಭವೇ ಬರಲಿಲ್ಲ. ಚಿತ್ರದಿಂದ ಚಿತ್ರಕ್ಕೆ ರಾಜಕುಮಾರ ತಾವು ಮಾತ್ರ ಬೆಳೆಯಲಿಲ್ಲ. ಅವರ ಜೊತೆಗೆ ಅನೇಕ ಕಲಾವಿದರು, ತಂತ್ರಜ್ಞರು ಬೆಳೆದರು. ಮದರಾಸಿನಲ್ಲಿ ನೆಲೆಯೂರಿದ್ದ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಬೆಂಗಳೂರಿಗೆ ಕರೆತರುವಲ್ಲಿ ರಾಜಕುಮಾರ ಪಾತ್ರ ಅತ್ಯಂತ ಮಹತ್ವದ್ದು. ಕನ್ನಡ ಸಿನಿಮಾ ಉದ್ಯಮ ಸಂಕಷ್ಟದಲ್ಲಿದ್ದಾಗ ಅದರ ಪುನಶ್ಚೇತನಕ್ಕಾಗಿ 'ರಣಧೀರ ಕಂಠೀರವ' ಸಿನಿಮಾ ತಯ್ಯಾರಿಸಿದ್ದು ರಾಜಕುಮಾರ ಸಿನಿಮಾವನ್ನು ಅದೆಷ್ಟು ಗಾಢವಾಗಿ ಪ್ರೀತಿಸುತ್ತಿದ್ದರು ಎನ್ನುವುದಕ್ಕೊಂದು ಉದಾಹರಣೆ. ಚಿತ್ರ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಆ ಸಂಸ್ಥೆಯ ಮೂಲಕ ಅನೇಕ ಕಲಾವಿದರನ್ನು, ನಿರ್ದೇಶಕರನ್ನು ಪರಿಚಯಿಸಿದರು. ಒಂದರ್ಥದಲ್ಲಿ ರಾಜಕುಮಾರ ದೊಡ್ಡ ಆಲದಮರವಿದ್ದಂತೆ ಆ ಮರದ ಕೆಳಗೆ ನೆರಳು ಪಡೆದು ಬೆಳೆದ ಕಲಾವಿದರ ಸಂಖ್ಯೆ ಅದೆಷ್ಟೋ.......

ರಾಜ್ ಜನಪ್ರಿಯತೆಗೆ ಕಾರಣಗಳು 


          ರಾಜಕುಮಾರ ಅವರ ಜನಪ್ರಿಯತೆಗೆ ನಿರ್ಧಿಷ್ಟ ಕಾರಣಗಳನ್ನು ಕೊಡಲು ಸಾಧ್ಯವಿಲ್ಲ. ಅನೇಕ ಕಾರಣಗಳಿಂದ ಅವರೊಬ್ಬ ಜನಪ್ರಿಯ ನಟರಾದರು. ಅಭಿನಯ, ಸಂಭಾಷಣೆ ಹೇಳುವ ರೀತಿ, ಕಥಾವಸ್ತು, ಗಾಯನ, ಸಾಹಿತ್ಯ ಹೀಗೆ ಹೇಳುತ್ತ ಹೋದರೆ ಅನೇಕ ಕಾರಣಗಳು ಕಾಣಸಿಗುತ್ತವೆ. ರಾಜಕುಮಾರ ಅವರ ಜನಪ್ರಿಯತೆಗೆ ಸಂಬಂಧಿಸಿದಂತೆ ಯು. ಆರ್. ಅನಂತಮೂರ್ತಿ ಅವರು 'ರಾಜಕುಮಾರ ಅಭಿನಯದ ಅನೇಕ ಚಿತ್ರಗಳು ಮಧ್ಯಮ ವರ್ಗದ ಜನರ ಆಶೋತ್ತರಗಳು ಹಾಗೂ ಸಂದರ್ಭಗಳನ್ನು ಪ್ರತಿನಿಧಿಸುತ್ತಿದ್ದವು. ಆದ್ದರಿಂದಲೇ ಅವರು ಅನೇಕ ಜನರನ್ನು ತಲುಪಲು ಸಾಧ್ಯವಾಯಿತು' ಎಂದಿರುವರು. ಹೌದು ರಾಜಕುಮಾರ ಅವರ ಚಿತ್ರಗಳಲ್ಲಿ ವಿಲಾಸಿ ಬದುಕಿನ ಕಥೆಗಳಿರುತ್ತಿರಲಿಲ್ಲ. ಮಧ್ಯಮ ವರ್ಗದ ಜನರ ಬದುಕಿನ ಹೋರಾಟವೇ ಅವರ ಹೆಚ್ಚಿನ ಚಿತ್ರಗಳ ಕಥಾವಸ್ತುವಾಗಿದೆ. ತಾಯಿ, ತಂದೆ, ಸಹೋದರ, ಪತಿ, ಪತ್ನಿ, ಮಕ್ಕಳ ನಡುವಣ ಅನೋನ್ಯ ಸಂಬಂಧ ಅವರ ಚಿತ್ರಗಳಲ್ಲಿ ಹಾಸುಹೊಕ್ಕಾಗಿರುತ್ತಿತ್ತು. ಹೀಗಾಗಿ ಪ್ರೇಕ್ಷಕ ಕೇವಲ ಸಿನಿಮಾ ಎನ್ನುವ ದೃಷ್ಟಿಯಿಂದ ರಾಜಕುಮಾರ ಅಭಿನಯದ ಸಿನಿಮಾಗಳನ್ನು ನೋಡುತ್ತಿರಲಿಲ್ಲ. ಸಿನಿಮಾ ನೋಡುತ್ತ ಹೋದಂತೆ ಅದು ತನ್ನದೇ ಬದುಕಿನ ಕಥೆ ಎನ್ನುವಂತೆ ತಲ್ಲೀನನಾಗುತ್ತಿದ್ದ. ಒಂದು ಕುಟುಂಬದ ಸದಸ್ಯರೆಲ್ಲರೂ ಯಾವುದೇ ಮುಜುಗರವಿಲ್ಲದೆ ಒಟ್ಟಾಗಿ ಕುಳಿತು ನೋಡುವಂತಹ ಚಿತ್ರಗಳಿರುತ್ತಿದ್ದವು. ರಾಜಕುಮಾರ ಸಿನಿಮಾಗಳಲ್ಲಿ ಕನ್ನಡ ನಾಡಿನ ಮಣ್ಣಿನ ವಾಸನೆ ಇದೆ. ಅಲ್ಲಿ ರೈತರ ಸಂಕಷ್ಟಗಳಿವೆ, ಸಮಸ್ಯೆಗಳಿವೆ. ರೈತರ ಸಮಸ್ಯೆಗಳನ್ನು ಕೇಂದ್ರವಾಗಿಟ್ಟುಕೊಂಡು ತಯಾರಾದ 'ಮಣ್ಣಿನ ಮಗ', 'ಚೆಂದವಳ್ಳಿಯ ತೋಟ' ಹಾಗೂ ರೈತನ ಶ್ರಮ ಮಾತು ಶ್ರೀಮಂತಿಕೆಯನ್ನು ಬಿಂಬಿಸುವ 'ಬಂಗಾರದ ಮನುಷ್ಯ' ಈ ಎಲ್ಲ ಚಿತ್ರಗಳು ಕನ್ನಡ ಚಿತ್ರರಂಗದ ಮೈಲಿಗಲ್ಲುಗಳಾಗಿವೆ. ಈ ಕಾರಣದಿಂದಲೇ ಕನ್ನಡ ಪ್ರೇಕ್ಷಕರನ್ನು ರಾಜಕುಮಾರ ಗಾಢವಾಗಿ ಆವರಿಸಿಕೊಂಡಷ್ಟು ಬೇರೆ ಕಲಾವಿದರಿಂದ ಸಾಧ್ಯವಾಗಲೇ ಇಲ್ಲ.

             ಪೌರಾಣಿಕ ಮತ್ತು ಐತಿಹಾಸಿಕ ಚಿತ್ರಗಳೂ ಸಹ ರಾಜಕುಮಾರ ಅವರ ಜನಪ್ರಿಯತೆಗೆ ಕಾರಣಗಳಾದವು. ರಾಜಕುಮಾರ ರಂಗಭೂಮಿಯ ನಟರಾಗಿದ್ದರಿಂದ ಅವರಿಗೆ ಪರಕಾಯ ಪ್ರವೇಶ ಸುಲಭವಾಯಿತು. ಅವರ ಪೌರಾಣಿಕ ಮತ್ತು ಐತಿಹಾಸಿಕ ಪಾತ್ರಗಳು ಇವತ್ತಿಗೂ ಕನ್ನಡ ಪ್ರೇಕ್ಷಕರ ನೆನಪಿನಲ್ಲಿ ಅಚ್ಚಳಿಯದೆ ಉಳಿದಿವೆ. ರಾಜಕುಮಾರ ಅವರನ್ನು ಹೊರತುಪಡಿಸಿ ಬೇರೆ ಯಾವುದೇ ಕಲಾವಿದರನ್ನು ರಾಮ, ಕೃಷ್ಣ, ಅರ್ಜುನ, ಕೃಷ್ಣದೇವರಾಯ, ಭಕ್ತ ಕುಂಬಾರ, ಕಾಳಿದಾಸ ಇತ್ಯಾದಿ ಪಾತ್ರಗಳಲ್ಲಿ ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎನ್ನುವಂತೆ ಅವರು ಐತಿಹಾಸಿಕ ಮತ್ತು ಪೌರಾಣಿಕ ಪಾತ್ರಗಳಿಗೆ ಅನಿವಾರ್ಯವಾಗಿದ್ದರು. ರಾಜಕುಮಾರ ಅವರ ಶರೀರ ಮತ್ತು ಶಾರೀರ ಈ ಪ್ರಕಾರದ ಪಾತ್ರಗಳಿಗೆ ಹೊಂದಿಕೊಳ್ಳುತ್ತಿತ್ತು ಎನ್ನುವುದು ಅವರ ಜನಪ್ರಿಯತೆಗೆ ಒಂದು ಪ್ರಬಲ ಕಾರಣವಾಗಿತ್ತು. ರಾಜಕುಮಾರ ಸಮಕಾಲಿನ ನಾಯಕ ನಟರುಗಳೆಲ್ಲ ತಮ್ಮ ದೇಹ ತೂಕವನ್ನು ಹೆಚ್ಚಿಸಿಕೊಂಡು ಪೋಷಕ ಪಾತ್ರಗಳೆಡೆ ಹೊರಳಬೇಕಾದ  ಪರಿಸ್ಥಿತಿ ತಲೆದೊರಿತು. ಯೋಗದ ಮೂಲಕ ತಮ್ಮ ಅಂಗ ಸೌಷ್ಟವವನ್ನು ಕಾಪಾಡಿಕೊಂಡು ಬಂದ ರಾಜಕುಮಾರ ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದರು. ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚಿನ ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ ಹೆಗ್ಗಳಿಕೆ ಅವರದು. ಅಭಿನಯದ ಜೊತೆಗೆ ದೈಹಿಕ ಸೌಂದರ್ಯವೂ ಅವರ ಜನಪ್ರಿಯತೆಗೆ ಕಾರಣವಾಯಿತು. ಯಾವುದೇ ಒಂದು ಪಾತ್ರಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ಪೌರಾಣಿಕ, ಐತಿಹಾಸಿಕ, ಭಕ್ತಿ ಪ್ರಧಾನ, ಸಾಮಾಜಿಕ ಹೀಗೆ ವಿವಿಧ ಬಗೆಯ ಪಾತ್ರಗಳಲ್ಲಿ ಅಭಿನಯಿಸಿದರು. ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿದ್ದರಿಂದಲೇ ರಾಜಕುಮಾರ ಎಲ್ಲ ವರ್ಗದ ಪ್ರೇಕ್ಷಕರು ಮೆಚ್ಚುವಂತ ನಟನಾಗಿ ರೂಪಗೊಂಡರು.

ರಾಜಕುಮಾರ ಮತ್ತು ಕನ್ನಡ ಪ್ರೇಮ 


               ಕರ್ನಾಟಕ ರಾಜ್ಯ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲೇ ರಾಜಕುಮಾರ ಚಿತ್ರರಂಗವನ್ನು ಪ್ರವೇಶಿಸಿದ ಐವತ್ತು ವರ್ಷಗಳ ನೆನಪಿಗಾಗಿ ಸಾರ್ಥಕ ಸುವರ್ಣವನ್ನು ಆಚರಿಸಲಾಯಿತು. ೫೦ ವರ್ಷಗಳವರೆಗೆ ರಾಜಕುಮಾರ ತಮ್ಮ ಸಿನಿಮಾಗಳ ಮೂಲಕ ಕನ್ನಡ ಭಾಷೆಯನ್ನು ಮನೆ ಮನೆಗೂ ಕೊಂಡೊಯ್ದರು. ಒಂದರ್ಥದಲ್ಲಿ ಅವರ ಚಿತ್ರಗಳು ಅನಕ್ಷರಸ್ಥರನ್ನೂ ಅಕ್ಷರಸ್ಥರನ್ನಾಗಿಸಿದವು ಎನ್ನುವ ಮಾತಿನಲ್ಲಿ ಸತ್ಯವಿದೆ. ತಮ್ಮ ಐವತ್ತು ವರ್ಷಗಳ ಚಿತ್ರ ಜೀವನದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಅಪಚಾರವಾಗದಂತೆ ಅಭಿನಯಿಸಿದರು. ಅವರ ಪ್ರತಿಯೊಂದು ಚಿತ್ರದಲ್ಲಿ ಕನ್ನಡ ಭಾಷೆಯ ಪ್ರೇಮ ಹಾಡು ಇಲ್ಲವೇ ಸಂಭಾಷಣೆ ರೂಪದಲ್ಲಿ ಬೆಳ್ಳಿತೆರೆಯ ಮೇಲೆ ವಿಜೃಂಭಿಸುತ್ತಿತ್ತು. ಜೊತೆಗೆ ರಾಜಕುಮಾರ ರೀಮೇಕ್ ಸಿನಿಮಾಗಳ ಪ್ರಬಲ ವಿರೋಧಿಯಾಗಿದ್ದರು. ಕನ್ನಡ ಭಾಷೆಯಲ್ಲೇ ಅನೇಕ ಉತ್ತಮ ಕಥೆಗಾರರಿರುವಾಗ ಬೇರೆ ಭಾಷೆಯ ಸಿನಿಮಾ ಕಥೆಗಳನ್ನು ತಂದು ಚಿತ್ರ ತಯ್ಯಾರಿಸುವುದು ಅವರಿಗೆ ಇಷ್ಟವಿರಲಿಲ್ಲ. ಅನೇಕ ಕಾದಂಬರಿ ಆಧಾರಿತ ಸಿನಿಮಾಗಳಲ್ಲಿ ನಟಿಸಿ ಬೆಳ್ಳಿತೆರೆಯ ಮೂಲಕ ಕಾದಂಬರಿಗಳನ್ನು ಸಾಮಾನ್ಯ ಪ್ರೇಕ್ಷಕನಿಗೂ ಪರಿಚಯಿಸಿದ ಕೀರ್ತಿ ರಾಜಕುಮಾರ ಅವರಿಗೆ ಸಲ್ಲುತ್ತದೆ.

               ಗೋಕಾಕ ಚಳುವಳಿಯ ಯಶಸ್ಸು ರಾಜಕುಮಾರ ಅವರ ಕನ್ನಡ ಪ್ರೇಮಕ್ಕೊಂದು ಅತ್ಯುತ್ತಮ ಉದಾಹರಣೆ. ಕನ್ನಡ ಭಾಷೆಗೆ ಸಂಬಂಧಿಸಿದಂತೆ ಗೋಕಾಕ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವಂತೆ ಸರ್ಕಾರವನ್ನು ಒತ್ತಾಯಿಸಲು ಕನ್ನಡ ಸಾಹಿತಿಗಳೆಲ್ಲ ಚಳುವಳಿಗೆ ಮುಂದಾದರು. ಆದರೆ ಆ ಸಂದರ್ಭ ಅವರುಗಳ ಮುಂದಿದ್ದ ಪ್ರಶ್ನೆ ಜನರನ್ನು ಹೇಗೆ ಒಂದುಗೂಡಿಸುವುದು ಎನ್ನುವುದಾಗಿತ್ತು. ಆಗ ಕನ್ನಡ ಹೋರಾಟಗಾರರಿಗೆ ಗೋಚರಿಸಿದ್ದು ರಾಜಕುಮಾರ ಅವರ ಹೆಸರು. ಏಕೆಂದರೆ ಅವರಿಗೆ ಜನರನ್ನು ಆಕರ್ಷಿಸುವ ಶಕ್ತಿಯಿತ್ತು. ಜೊತೆಗೆ ಚಳುವಳಿಯ ಮುಂದಾಳತ್ವವಹಿಸುವ ನಾಯಕನ ಗುಣ ಅವರಲ್ಲಿತ್ತು. ಜನರ ಕರೆಗೆ ಓಗೊಟ್ಟ ರಾಜಕುಮಾರ ಚಳುವಳಿಗೆ ಧುಮುಕಿದರು. ನ ಭೂತೋ ನ ಭವಿಷ್ಯತಿ ಎನ್ನುವಂತೆ ಚಳುವಳಿ ಯಶಸ್ವಿಯಾಯಿತು. ರಾಜಕುಮಾರ ಹೋದಲ್ಲೆಲ್ಲ ಲಕ್ಷಾಂತರ ಜನ ಕೂಡಿದರು. ನಾಡಿನ ಮೂಲೆ ಮೂಲೆಗೂ ಹೋದ ಚಳುವಳಿಗಾರರು ಕನ್ನಡ ಪ್ರೇಮವನ್ನು ಜಾಗೃತಗೊಳಿಸಿದರು. ರಾಜಕುಮಾರ ಅವರ ಹಿಂದೆ ಇಡೀ ಕನ್ನಡ ಚಿತ್ರರಂಗವೇ ಬೆಂಗಾವಲಾಗಿ ನಿಂತಿತ್ತು. ಚಳುವಳಿಯ ತೀವೃತೆಗೆ ಮಣಿದ ಸರ್ಕಾರ ಗೋಕಾಕ ಸಮೀತಿಯಲ್ಲಿನ ಎಲ್ಲ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವ ಭರವಸೆ ನೀಡಿತು. ಇದು ನಡೆದದ್ದು ೧೯೮೨ ರಲ್ಲಿ. ಆಗ ರಾಜಕುಮಾರ ಚಿತ್ರರಂಗವನ್ನು ಪ್ರವೇಶಿಸಿ ಇಪ್ಪತ್ತೈದು ವರ್ಷಗಳಾಗಿದ್ದವು. ೨೦೦೬ ರಲ್ಲಿ ಗೋಕಾಕ ಚಳುವಳಿಯ ರಜತ ಮಹೋತ್ಸವದ ಸಂಭ್ರಮದ ಸಂದರ್ಭದಲ್ಲಿ ಚಳುವಳಿಯ ಯಶಸ್ಸಿಗೆ ಕಾರಣರಾದ ರಾಜಕುಮಾರ ನಮ್ಮೊಡನೆ ಇಲ್ಲದಿದ್ದದ್ದು ವಿಷಾದದ ಸಂಗತಿ.

            ಕಾವೇರಿ ನದಿ ನೀರಿನ ವಿಷಯದಲ್ಲಿ ರೈತರಿಗೆ ಅನ್ಯಾಯವಾದಾಗ, ಪರಭಾಷಾ ಸಿನಿಮಾಗಳ ಹಾವಳಿ ತಡೆಗಟ್ಟಲು, ಸಿನಿಮಾ ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡಲು, ಅನ್ಯ ಭಾಷೆಯ ಚಿತ್ರಗಳನ್ನು ಪ್ರದರ್ಶಿಸುವ ಸಿನಿಮಾ ಮಂದಿರಗಳ ಮಾಲೀಕರ ವಿರುದ್ಧ ಹೀಗೆ ಅನೇಕ ಹೋರಾಟಗಳಲ್ಲಿ ರಾಜಕುಮಾರ ಮುಂದಾಳತ್ವ ವಹಿಸಿದ್ದರು. ಕನ್ನಡಕ್ಕೆ ಅನ್ಯಾಯವಾದಾಗಲೆಲ್ಲ ಕನ್ನಡ ಪರ ಧ್ವನಿ ಎತ್ತಿರುವರು.

ಅಸಾಮಾನ್ಯನಾಗಿಯೂ ಸಾಮಾನ್ಯ 


              ರಾಜಕುಮಾರ ಅವರದು ಅಸಾಮಾನ್ಯ ವ್ಯಕ್ತಿತ್ವ. ಕನ್ನಡ ಚಿತ್ರರಂಗ ಕಂಡ ಅದ್ಭುತ ಪ್ರತಿಭೆ. ಒಂದರ್ಥದಲ್ಲಿ ಅವರದು ದೈತ್ಯ ಪ್ರತಿಭೆ. ಅನೇಕ ಪ್ರಶಸ್ತಿಗಳನ್ನು ಪಡೆದು ಹಲವು ಪುರಸ್ಕಾರಗಳಿಗೆ ಭಾಜನರಾದ ಅಭಿಜಾತ ಕಲಾವಿದ. ಆದರೆ ರಾಜಕುಮಾರ ಎಂದೂ ತಾನೊಬ್ಬ ಸೂಪರ್ ಸ್ಟಾರ್ ಎಂದು ವರ್ತಿಸಲಿಲ್ಲ. ಅಸಾಮಾನ್ಯನಾಗಿಯೂ ಒಬ್ಬ ಸಾಮಾನ್ಯನಂತೆ ಬದುಕಿದರು. ಸಿನಿಮಾ ಬದುಕಿನ ಥಳಕು ಬಳುಕಿನ ನಡುವೆ ಇದ್ದೂ ತೀರ ಸರಳವಾಗಿ ಬದುಕಿದ ಅಪರೂಪದ ಕಲಾವಿದ. ಒಂದೆರಡು ಸಿನಿಮಾಗಳಲ್ಲಿ ನಟಿಸಿದ ಮಾತ್ರಕ್ಕೆ ತಾನೊಬ್ಬ ಮಹಾನ್ ಕಲಾವಿದ ಎಂದು ವರ್ತಿಸುವವರಿಗೆ ರಾಜಕುಮಾರ ಬದುಕು ಒಂದು ನೀತಿ ಪಾಠ. ಅದೊಂದು ಆದರ್ಶ. ರಾಜಕುಮಾರ ಯಾವತ್ತೂ ವಿಲಾಸಿ ಜೀವನಕ್ಕೆ ಮಾರು ಹೋದವರಲ್ಲ. ತೀರ ಸರಳ ಜೀವನ ನಡೆಸಿದ್ದರಿಂದಲೇ ೧೦೮ ದಿನಗಳವರೆಗೆ ನರರಾಕ್ಷಸ ವೀರಪ್ಪನ್ ಸೆರೆಯಲ್ಲಿದ್ದು ನಾಡಿಗೆ ಹಿಂತಿರುಗಿ ಬರಲು ಸಾಧ್ಯವಾಯಿತು.

            ನೆರೆಯ ರಾಜ್ಯಗಳಲ್ಲಿ ಎಮ್. ಜಿ. ರಾಮಚಂದ್ರನ್, ಎನ್. ಟಿ. ರಾಮರಾವ, ಜಯಲಲಿತಾ ಇವರೆಲ್ಲ ಸಿನಿಮಾದಿಂದ ದೊರೆತ ಯಶಸ್ಸಿನಿಂದಲೇ ರಾಜಕೀಯವನ್ನು ಪ್ರವೇಶಿಸಿ ಕೊನೆಗೆ ಮುಖ್ಯ ಮಂತ್ರಿಯೂ ಆದರು. ಕರ್ನಾಟಕದಲ್ಲಿ ರಾಜಕುಮಾರ ಅವರಿಗೆ ಖಂಡಿತವಾಗಿಯೂ ಆ ಅವಕಾಶವಿತ್ತು. ಮನಸ್ಸು ಮಾಡಿದ್ದರೆ ಅವರು ರಾಜ್ಯದ ಮುಖ್ಯ ಮಂತ್ರಿಯಾಗಬಹುದಿತ್ತು. ಆದರೆ ಅವರೆಂದೂ ರಾಜಕೀಯದ ವ್ಯಾಮೋಹಕ್ಕೆ ಸಿಲುಕಲಿಲ್ಲ. ಅಭಿನಯದಲ್ಲೇ ತೃಪ್ತಿ ಕಂಡರು. ಈ ಕಾರಣದಿಂದಲೇ ರಾಜಕುಮಾರ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾದರು.

         ರಾಜಕುಮಾರ ಅವರ ತಾರಾ ಮೌಲ್ಯ ಅವರು ಅಭಿನಯಿಸುವುದನ್ನು  ಬಿಟ್ಟ ನಂತರವೂ ಕಡಿಮೆಯಾಗಿರಲಿಲ್ಲ ಎನ್ನುವುದಕ್ಕೆ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದ ಜನಸಮೂಹವೇ ಸಾಕ್ಷಿ. ಸರ್ಕಾರ ಕಂಠೀರವ ಸ್ಟುಡಿಯೋದ ಆವರಣದಲ್ಲಿ ಅಂತ್ಯಸಂಸ್ಕಾರಕ್ಕೆ ಸ್ಥಳ ಒದಗಿಸಿ ಮೇರು ನಟನಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸಿತು. ಏಕೆಂದರೆ ಸ್ಟುಡಿಯೋ ಕಲಾವಿದನ ಕರ್ಮಭೂಮಿ. ಆದರೆ ಸರ್ಕಾರದ ಪ್ರಯತ್ನ ಇಷ್ಟಕ್ಕೆ ನಿಲ್ಲಬಾರದು. ರಾಜಕುಮಾರ ಹೆಸರಿನಲ್ಲಿ ಸ್ಮಾರಕ ನಿರ್ಮಾಣವಾಗಬೇಕು. ಅವರ ಚಿತ್ರ ಜೀವನವನ್ನು ಪರಿಚಯಿಸುವ ಸಿನಿಮಾ ಸಂಪುಟ ಪ್ರಕಟವಾಗಬೇಕು. ಪ್ರತಿ ವರ್ಷದ ಎಪ್ರಿಲ್ ತಿಂಗಳಲ್ಲಿ ರಾಜಕುಮಾರ ಚಿತ್ರಗಳ ಕುರಿತು ವಿಚಾರ ಸಂಕಿರಣ ಹಾಗೂ ಅವರ ಅಭಿನಯದ ಚಿತ್ರಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಬೇಕು. ಸಿನಿಮಾ ರಂಗದಲ್ಲಿ ಐವತ್ತು ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಎಪ್ಪತ್ತೇಳು ವಸಂತಗಳ ಸಾರ್ಥಕ ಬದುಕು ಬದುಕಿದ ಆ ಹಿರಿಯ ಜೀವ ಚಿರಕಾಲ ನೆನಪಿನಲ್ಲುಳಿಯಬೇಕು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

No comments:

Post a Comment