Thursday, April 4, 2024

ಬರವಣಿಗೆ ಹಿಂದಿನ ಬವಣೆ

     



(ಪ್ರಜಾವಾಣಿಯ ಸಂಗತ ಅಂಕಣದಲ್ಲಿ ೫.೨.೨೦೨೪ ರಂದು ಪ್ರಕ

     ಇತ್ತೀಚೆಗೆ ನನ್ನ ಸ್ನೇಹಿತರದೂ ಸೇರಿದಂತೆ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಪ್ರಕಾಶಕರು ತುಂಬ ಅದ್ದೂರಿಯಾಗಿ ಆಯೋಜಿಸಿದ್ದರು. ಅಂದು ಹಲವು ಪುಸ್ತಕಗಳನ್ನು ಗಣ್ಯಅತಿಥಿಗಳಿಂದ ಲೋಕಾರ್ಪಣೆಗೊಳಿಸಲಾಯಿತು. ಸಮಾರಂಭದ ವೇದಿಕೆಯಲ್ಲಿ  ಲೇಖಕರಿಗೆ ಹಾರ, ಫಲತಾಂಬೂಲು, ಶಾಲು ಮತ್ತು ಪುಸ್ತಕದ ಇಪ್ಪತ್ತೈದು ಪ್ರತಿಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಕೊನೆಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದವರು ತಮ್ಮ ತಮ್ಮ ಪರಿಚಯದ ಲೇಖಕರಿಂದ ಗೌರವ ಪ್ರತಿಗಳನ್ನು ಪಡೆದು ಸುಗ್ರಾಸು ಭೋಜನ ಸವಿದು ತೆರಳಿದರು. ಸಭಾಂಗಣದ ಬಾಗಿಲಬಳಿ ಮಾರಾಟಕ್ಕೆಂದು ಪ್ರದರ್ಶನಕ್ಕಿಟ್ಟಿದ್ದ ಅಂದು ಬಿಡುಗಡೆಗೊಂಡ ಪುಸ್ತಕಗಳತ್ತ ಯಾರೊಬ್ಬರೂ ಕಣ್ಣು ಹಾಯಿಸಲಿಲ್ಲ. ಪುಸ್ತಕದ ಪ್ರತಿಗಳನ್ನೇ ಲೇಖಕರು ತಮಗೆ ದೊರೆತ ಗೌರವಧನವೆಂದು ತೃಪ್ತಿಪಟ್ಟುಕೊಳ್ಳಬೇಕಾಯಿತು.

ಕನ್ನಡದಲ್ಲಿ ಬರವಣಿಗೆಯಿಂದಲೇ ಬದುಕು ಕಟ್ಟಿಕೊಂಡ ಲೇಖಕರ ಸಂಖ್ಯೆ ಬಲು ವಿರಳ. ಶಿವರಾಮ ಕಾರಂತ, ಅನೃಕ, ತರಾಸು ಅಂಥವರು ಈ ಮಾತಿಗೆ ಅಪವಾದವಾಗಿರಬಹುದು. ಹಾಗೆಂದು ಅಂತಹ ಲೇಖಕರ ಸಂಖ್ಯೆ ಕನ್ನಡಿಗರು ಹೆಮ್ಮೆಪಡುವಷ್ಟೆನಿಲ್ಲ. ಇಲ್ಲಿ ಲೇಖಕ ತನ್ನ ಪುಸ್ತಕ ಪ್ರಕಟಣೆಗಾಗಿ ಪ್ರಕಾಶಕರನ್ನು ಅವಲಂಬಿಸಬೇಕಾದ ಅನಿವಾರ್ಯತೆಯಿದೆ. ಪ್ರಕಾಶಕರು ಪುಸ್ತಕಗಳ ಮಾರಾಟಕ್ಕಾಗಿ ಪುಸ್ತಕ ವ್ಯಾಪಾರಿಗಳು, ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕ ಗ್ರಂಥಾಲಯ ಇಲಾಖೆ ಮತ್ತು ಓದುಗರನ್ನು ಅವಲಂಬಿಸಿರುವರು. ಶಿಕ್ಷಣ ಸಂಸ್ಥೆಗಳು ಪಠ್ಯೇತರ ಪುಸ್ತಕಗಳನ್ನು ಖರೀದಿಸುವುದು ಕಡಿಮೆ. ಪುಸ್ತಕ ವ್ಯಾಪಾರಿಗಳು ಮುಂಗಡ ಹಣ ನೀಡಿ ಪ್ರಕಾಶಕರಿಂದ ಪುಸ್ತಕಗಳನ್ನು ಖರೀದಿಸಲಾರರು. ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಪುಸ್ತಕಗಳನ್ನು ಪೂರೈಸಲು ಅನೇಕ ಪಟ್ಟುಗಳನ್ನು ಕರಗತ ಮಾಡಿಕೊಂಡಿರಬೇಕು. ಓದುಗರು ಪುಸ್ತಕಗಳನ್ನು ಖರೀದಿಸಿ ಓದುವ ಔದಾರ್ಯ ತೋರುತ್ತಿಲ್ಲ. ಇನ್ನು ಲೇಖಕನೇ ಪ್ರಕಾಶಕನಾಗಿ ಪುಸ್ತಕ ಪ್ರಕಟಿಸಲು ಮುಂದಾಗುವುದಾದರೆ ಪುಸ್ತಕ ಮಾರಾಟದ ವಿಭಿನ್ನ ತಂತ್ರಗಳ ಅರಿವಿರಬೇಕು. ಒಟ್ಟಿನಲ್ಲಿ ಸನ್ನಿವೇಶ ಲೇಖಕ ಗೌರವಧನವನ್ನು ಅಪೇಕ್ಷಿಸದಷ್ಟು ಪ್ರಕಾಶಕರಿಗೆ ಪೂರಕವಾಗಿದೆ.

ಕೃತಿಸ್ವಾಮ್ಯ ಕಾಯ್ದೆ ಪ್ರಕಾರ ಬೌದ್ಧಿಕಸ್ವತ್ತಿನ ಕಾನೂನಾತ್ಮಕ ಹಕ್ಕು ಲೇಖಕನಿಗೆ ಸೇರಿದ್ದು. ಕೆಲವು ಪ್ರಕಾಶಕರು ನಿಯಮಬಾಹೀರವಾಗಿ ಕೃತಿಸ್ವಾಮ್ಯವನ್ನು ತಮ್ಮದಾಗಿಸಿಕೊಳ್ಳುತ್ತಿರುವರು. ಪ್ರಕಾಶಕರು ಪುಸ್ತಕದ ಹಕ್ಕನ್ನು ತಮ್ಮದಾಗಿಸಿಕೊಳ್ಳುತ್ತಿರುವುದರ ಹಿಂದೆ ಆರ್ಥಿಕ ಲಾಭದ ಸಂಗತಿ ಅಡಕವಾಗಿದೆ. ಪುಸ್ತಕದ ಮೊದಲ ಆವೃತ್ತಿಯನ್ನು ಸಾರ್ವಜನಿಕ ಗ್ರಂಥಾಲಯಕ್ಕೆ ಮಾರಾಟಮಾಡುವ ಪ್ರಕಾಶಕರು ಅದರ ಎರಡನೇ ಆವೃತ್ತಿಯನ್ನೂ ಪ್ರಕಟಿಸಿ ಮಾರಾಟ ಮಾಡುವ ಉದ್ದೇಶದಿಂದ ಪುಸ್ತಕದ ಹಕ್ಕನ್ನು ತಮ್ಮದಾಗಿಸಿಕೊಳ್ಳುವರು. ಒಂದು ಪುಸ್ತಕ ಪ್ರಕಟವಾದ ಹತ್ತು ವರ್ಷಗಳ ನಂತರ ಅದರ ಎರಡನೇ ಆವೃತ್ತಿಯನ್ನು ಪ್ರಕಟಿಸಿ ಸಾರ್ವಜನಿಕ ಗ್ರಂಥಾಲಯಕ್ಕೆ ಮಾರಾಟ ಮಾಡಬಹುದು ಎಂದು ನಿಯಮವೇ ಹೇಳುತ್ತದೆ. ಒಮ್ಮೆ ಪುಸ್ತಕದ ಹಕ್ಕು ಪ್ರಕಾಶಕರ ಪಾಲಾದರೆ ಆಗ ಲೇಖಕನ ಒಪ್ಪಿಗೆ ಇಲ್ಲದೆ ಅದರ ಎರಡನೇ ಆವೃತ್ತಿಯನ್ನು ಪ್ರಕಟಿಸಲು ಯಾವ ಅಡೆತಡೆಯೂ ಎದುರಾಗದು. ಒಂದರ್ಥದಲ್ಲಿ ಪ್ರಕಾಶಕರು ಲೇಖಕರನ್ನು ಆರ್ಥಿಕವಾಗಿ ಶೋಷಣೆಗೊಳಪಡಿಸುತ್ತಿರುವರು. ಹಾಗೆಂದು ಎಲ್ಲ ಪ್ರಕಾಶಕರನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ತಪ್ಪು ನಿರ್ಧಾರವಾಗುತ್ತದೆ. ಆದರೆ ಲೇಖಕರನ್ನು ಪೋಷಿಸಿ ಬೆಳೆಸುವ ಪ್ರಕಾಶಕರ ಸಂಖ್ಯೆ ಕ್ಷೀಣಿಸುತ್ತಿದೆ ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ.

ಪ್ರಕಾಶಕರಿಂದ ಲೇಖಕನ ಶೋಷಣೆ ಒಂದು ಬಗೆಯಾದರೆ, ಅವನ ವೈಚಾರಿಕ ಪ್ರತಿಭೆಯನ್ನು ದಮನಗೊಳಿಸುವ ಪ್ರಭುತ್ವದ ಶೋಷಣೆ ಇನ್ನೊಂದು ಬಗೆ. ಪ್ರಭುತ್ವ ಎಂದಿಗೂ ತನ್ನನ್ನು ಪ್ರಶ್ನಿಸುವುದನ್ನು ಸಹಿಸಲಾರದು. ಬರಹಗಾರನ ವೈಚಾರಿಕ ಚಿಂತನೆಯನ್ನು ಕತ್ತುಹಿಸುಕಿ ಸಾಯಿಸುವ ಮತ್ತು ಅವನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಗೊಳಿಸುವ ಹುನ್ನಾರ ಕಾಲಕಾಲಕ್ಕೆ ಸಾಹಿತ್ಯ ಕ್ಷೇತ್ರದಲ್ಲಿ ತನ್ನ ಅಟ್ಟಹಾಸವನ್ನು ಮೆರೆಯುತ್ತ ಬಂದಿದೆ. ‘ಸದಾಕಾಲ ಸಮಾಜಕ್ಕೆ ಪ್ರಿಯವಾದದ್ದನ್ನೇ ಹೇಳುವುದು ಲೇಖಕನ ಕೆಲಸವಲ್ಲ. ಪ್ರತಿರೋಧದ ಮೂಲಕವೇ ನಿಜವಾದ ಸತ್ವಯುತ ಬರವಣಿಗೆ ಹೊರಹೊಮ್ಮುತ್ತದೆ. ಆದ್ದರಿಂದ ಓದುಗರನ್ನು ನಾವು ಬದುಕುತ್ತಿರುವ ಪರಿಸರದಲ್ಲಿನ ಜ್ವಲಂತ ಸಮಸ್ಯೆಗಳಿಗೆ ಮುಖಾಮುಖಿಯಾಗಿಸುವ ದಿಸೆಯಲ್ಲಿ ಬರವಣಿಗೆಯು ಪ್ರತಿರೋಧದ ನಡುವೆ ಹುಟ್ಟಿಕೊಳ್ಳುವ ಸೃಜನಶೀಲ ಸೃಷ್ಟಿ ಎನ್ನುವ ನಂಬಿಕೆ ನನ್ನದು’ ಎನ್ನುತ್ತಾರೆ ಲೇಖಕ ಅಮಿತಾವ್ ಘೋಷ್.   

ತಸ್ಲಿಮಾ ನಸ್ರೀನ್, ಸಲ್ಮಾನ್ ರಶ್ದಿ, ಪೆರುಮಾಳ್ ಮುರುಗನ್, ಅರುಂಧತಿ ರಾಯ್ ಇವರೆಲ್ಲ ಪ್ರಭುತ್ವದ ದಮನಕಾರಿ ನೀತಿಗೆ ಒಳಗಾದ ಬರಹಗಾರರು. ಪೆರುಮಾಳ್ ಮುರುಗನ್ ಪ್ರಭುತ್ವದ ಶೋಷಣೆಗೆ ಬೇಸತ್ತು ಒಂದು ಹಂತದಲ್ಲಿ ತನ್ನೊಳಗಿನ ಲೇಖಕ ಸತ್ತು ಹೋದ ಇನ್ನುಮುಂದೆ ನಾನು ಬರೆಯುವುದಿಲ್ಲ ಎಂದು ಘೋಷಿಸಿಕೊಂಡರು. ತಸ್ಲಿಮಾ ನಸ್ರೀನ್ ‘ಲಜ್ಜಾ’ ಕಾದಂಬರಿ ಬರೆದು ತಮ್ಮ ದೇಶವನ್ನೇ ತ್ಯಜಿಸಿದರು. ಸಲ್ಮಾನ್ ರಶ್ದಿ ಹಲ್ಲೆಗೆ ಒಳಗಾಗಿ ಒಂದು ಕಣ್ಣು ಕಳೆದುಕೊಂಡರು. ಸಂಸ್ಕಾರ ಕಾದಂಬರಿ ಬರೆದ ಆರಂಭದ ದಿನಗಳಲ್ಲಿ ಅನಂತಮೂರ್ತಿ ಅವರು ಒಂದು ಸಮುದಾಯದ ವಿರೋಧವನ್ನು ಎದುರಿಸಬೇಕಾಯಿತು. ಸಾರಾ ಅಬೂಬಕ್ಕರ್ ಧಾರ್ಮಿಕ ಮುಖಂಡರ ಕೋಪಕ್ಕೆ ಗುರಿಯಾಗಬೇಕಾಯಿತು. 

ಪ್ರಕಾಶಕ ಮತ್ತು ಪ್ರಭುತ್ವದ ಶೋಷಣೆಯ ಜೊತೆಗೆ ಲೇಖಕ ವಿಮರ್ಶೆ ಎಂಬ ಅಗ್ನಿದಿವ್ಯವನ್ನು ಹಾಯ್ದು ಬರಬೇಕು. ಈಗ ವಿಮರ್ಶೆಗೆ ಕೊಡುಕೊಳ್ಳುವಿಕೆಯ ಮಾರುಕಟ್ಟೆ ಮೌಲ್ಯ ಪ್ರಾಪ್ತವಾಗಿದೆ. ವಿಮರ್ಶಕ ಎಂತಹ ಗಟ್ಟಿ ಸಾಹಿತ್ಯವನ್ನೂ ಪ್ರಪಾತಕ್ಕೆ ತಳ್ಳಬಹುದು ಮತ್ತು ಕೆಟ್ಟ ಸಾಹಿತ್ಯವನ್ನು ಮೇಲ್ಪಂಕ್ತಿಗೆ ತರಬಹುದು. ಈಗೀಗ ವಿಮರ್ಶೆಯಲ್ಲಿ ಜಾತಿ, ಧರ್ಮದ ವಾಸನೆ ಢಾಳಾಗಿ ಮೂಗಿಗೆ ಬಡಿಯುತ್ತಿದೆ. ಲೇಖಕನನ್ನು ವೈಚಾರಿಕವಾಗಿ ಹಣಿಯುವ ಷಡ್ಯಂತ್ರದಲ್ಲಿ ವಿಮರ್ಶಾಲೋಕದ ಪಾಲಿದೆ ಎನ್ನುವ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕುವಂತಿಲ್ಲ.  

ಒಟ್ಟಾರೆ ಆರ್ಥಿಕ ಶೋಷಣೆ, ಪ್ರಭುತ್ವದ ಹಿಂಸೆ ಮತ್ತು ವಿಮರ್ಶೆಯ ಕಾಕದೃಷ್ಟಿಗೆ ಲೇಖಕ ಏಕಕಾಲಕ್ಕೆ ಒಳಗಾಗುತ್ತಿರುವನು. ಈ ನಡುವೆ ಕಥೆ, ಕವಿತೆ, ಪ್ರಬಂಧ, ಪುಸ್ತಕ ಸ್ಪರ್ಧೆಗಳ ಅಖಾಡದಲ್ಲಿ ಲೇಖಕ ಪ್ರತಿಸ್ಪರ್ಧಿಗಳ ವಿರುದ್ಧ ತೊಡೆತಟ್ಟಬೇಕು. ಪ್ರಶಸ್ತಿ, ಪುರಸ್ಕಾರಗಳಿಗಾಗಿ ಲಾಬಿಮಾಡುತ್ತ ಶಿಫಾರಸಿಗಾಗಿ ರಾಜಕಾರಣಿಗಳ ಹಾಗೂ ಅಧಿಕಾರಗಳ ಓಲೈಕೆಗೆ ತೊಡಗಬೇಕು. ತನ್ನ ನಡೆ, ನುಡಿಯನ್ನು ಹದ್ದಿನ ಕಣ್ಣಿನಿಂದ ಅವಲೋಕಿಸುತ್ತಿರುವ ಕುಟುಂಬ ಮತ್ತು ಸಮಾಜದ ದೃಷ್ಟಿಗೆ ಬಲಿಪಶುವಾಗಬೇಕು. ಇಂತಹ ಸನ್ನಿವೇಶದಲ್ಲಿ ನಿಜವಾದ ಸತ್ವಯುತ ಬರವಣಿಗೆ ಸೃಷ್ಟಿಯಾಗುವುದಾದರೂ ಹೇಗೆ?. ಯಶವಂತ ಚಿತ್ತಾಲರು ಹೇಳಿದಂತೆ ಲೇಖಕನ ಸೃಷ್ಟಿಕಾರ್ಯಕ್ಕೆ ಬೇಕಾದದ್ದು ‘ನಿನ್ನ ಬರವಣಿಗೆ ಬೇಕು’ ಎನ್ನುವ ಇಷಾರೆ, ‘ಬರೆಯುವುದನ್ನು ನಿಲ್ಲಿಸಬೇಡ’ ಎನ್ನುವಂಥ ಪುಸಲಾಯಿಸುವಿಕೆ. ಇಂತಹ ವಾತಾವರಣ ನಿರ್ಮಾಣವಾಗುವುದೇ ಎನ್ನುವುದು ಸಧ್ಯದ ಸಂದರ್ಭದಲ್ಲಿ ಅದೊಂದು ಯಕ್ಷಪ್ರಶ್ನೆಯಾಗಿದೆ.

-ರಾಜಕುಮಾರ ಕುಲಕರ್ಣಿ  

No comments:

Post a Comment