Thursday, March 7, 2024

ಶೈಕ್ಷಣಿಕ ಸಮ್ಮೇಳನ: ಉದ್ದೇಶ ನೇಪಥ್ಯಕ್ಕೆ?

 



(೧೮.೦೧.೨೦೨೪ ರ ಪ್ರಜಾವಾಣಿಯ 'ಸಂಗತ' ಅಂಕಣದಲ್ಲಿ ಪ್ರಕಟ)

    ಬೆಳಿಗ್ಗೆ ವಾಕಿಂಗ್ ವೇಳೆ ಎದುರಾದ ಸ್ನೇಹಿತರು ಇತ್ತೀಚೆಗೆ ತಮ್ಮ ಬೋಧನಾ ವಿಷಯದ ಸಮ್ಮೇಳನದಲ್ಲಿ ಪಾಲ್ಗೊಂಡ ಅನುಭವವನ್ನು ಹಂಚಿಕೊಂಡರು. ಮಾತಿನುದ್ದಕ್ಕೂ ತಾವು ಭೇಟಿ ನೀಡಿದ ನಗರದ ವಿಶೇಷತೆ, ಸುತ್ತಲಿನ ಪ್ರೇಕ್ಷಣಿಯ ಸ್ಥಳಗಳು, ಕಡಲ ಕಿನಾರೆ, ಅಲ್ಲಿನ ಜನಪ್ರಿಯ ತಿಂಡಿ ತಿನುಸುಗಳು ಮತ್ತು  ದೇವಸ್ಥಾನಗಳ ಕುರಿತು ತುಂಬ ಆಸಕ್ತಿಯಿಂದ ಹೇಳಿದರು. ಸಮ್ಮೇಳನದಲ್ಲಿನ ಚರ್ಚೆ, ಸಂವಾದ, ಗೋಷ್ಠಿಗಳ ಕುರಿತು ಏನನ್ನು ಹೇಳಲಿಲ್ಲ. ನಾನೇ ಮುಂದಾಗಿ ವಿಚಾರಿಸಿದಾಗ, ‘ಅಯ್ಯೋ ಅದೇನು ಹೇಳಿಕೊಳ್ಳುವಂತಹದ್ದಲ್ಲ. ಸಮ್ಮೇಳನಕ್ಕೆ ಬಂದವರಲ್ಲಿ ಹೆಚ್ಚಿನವರು ಪ್ರವಾಸಕ್ಕೆಂದೇ ಬಂದಿದ್ದರು. ಕೆಲವರು  ಕುಟುಂಬಸಮೇತರಾಗಿ ಬಂದು ಮೋಜು ಮಸ್ತಿ ಮಾಡಿದರು’ ಎಂದು ನುಡಿದರು.  

ಶೈಕ್ಷಣಿಕ ಸಮ್ಮೇಳನಗಳ ಉದ್ದೇಶ ವಿಫಲವಾಗುತ್ತಿರುವುದಕ್ಕೆ ಪ್ರತಿನಿಧಿಗಳು ತಮ್ಮ ಪೂರ್ಣ ಸಮಯವನ್ನು ಸಮ್ಮೇಳನದ ಚಟುವಟಿಕೆಗಳಿಗೆ ವಿನಿಯೋಗಿಸುತ್ತಿಲ್ಲದಿರುವುದೇ ಕಾರಣವಾಗಿದೆ. ಆಯೋಜಕರು ಕೂಡ ಪ್ರತಿನಿಧಿಗಳ ಸಂಖ್ಯೆ ಹೆಚ್ಚಿಸಬೇಕೆಂದು ಹಾಜರಾತಿಯಲ್ಲಿ ವಿನಾಯಿತಿ ಕೊಡುವುದರಿಂದ ಸಮ್ಮೇಳನಗಳು ಪ್ರವಾಸ ಕೇಂದ್ರಿತವಾಗುತ್ತಿವೆ. ಸಾಮಾನ್ಯವಾಗಿ ಸಮ್ಮೇಳನಗಳ ಆಯೋಜಕರು ಪ್ರತಿನಿಧಿಗಳಿಗೆ ಕುಟುಂಬದ ಸದಸ್ಯರನ್ನು ಜೊತೆಗೆ ಕರೆತರಲು ಅವಕಾಶಕೊಡುವುದುಂಟು. ಇಂಥ ಸಂದರ್ಭಗಳಲ್ಲಿ ಪ್ರತಿನಿಧಿಗಳು ಹೆಚ್ಚುವರಿ ಶುಲ್ಕ ಪಾವತಿಸಿ ತಮ್ಮೊಂದಿಗೆ ಪತ್ನಿ ಮತ್ತು ಮಕ್ಕಳನ್ನು ಕರೆದೊಯ್ಯುವರು. ಹೀಗೆ ಕುಟುಂಬಸಮೇತರಾಗಿ ಸಮ್ಮೇಳನಗಳಿಗೆ ಆಗಮಿಸುವವರು ತಮ್ಮ ಸಂಪೂರ್ಣ ಸಮಯವನ್ನು ಸಮ್ಮೇಳನದ ಕಾರ್ಯಕಲಾಪಗಳಿಗೆ ಮೀಸಲಾಗಿಡುವುದಿಲ್ಲ. ಸುತ್ತಲಿನ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸಿ ಕೊನೆಯ ದಿನ ವೇದಿಕೆಯಲ್ಲಿ ಪ್ರಮಾಣಪತ್ರವನ್ನು ಸ್ವೀಕರಿಸುವುದರೊಂದಿಗೆ ಸಮ್ಮೇಳನಕ್ಕೆ ಆಗಮಿಸಿದ ಪ್ರತಿನಿಧಿಗಳ ಉದ್ದೇಶ ಸಫಲಗೊಳ್ಳುತ್ತದೆ.   

ವಿಶ್ವವಿದ್ಯಾಲಯ ಧನಸಹಾಯ ಆಯೋಗ, ರಾಷ್ಟ್ರೀಯ ವೈದ್ಯಕೀಯ ಆಯೋಗ ಮತ್ತು ಭಾರತೀಯ ತಾಂತ್ರಿಕ ಶಿಕ್ಷಣ ಆಯೋಗದಂಥ ಉನ್ನತ ಶಿಕ್ಷಣ ಸಮಿತಿಗಳು ಬೋಧಕರು ಸಮ್ಮೇಳನಗಳಲ್ಲಿ ಭಾಗವಹಿಸುವುದನ್ನು ಮತ್ತು ಸಂಶೋಧನಾ ಲೇಖನ ಮಂಡಿಸುವುದನ್ನು ಕಡ್ಡಾಯಗೊಳಿಸಿವೆ. ವೇತನ ಬಡ್ತಿ ಮತ್ತು ಹುದ್ದೆಯ ಬಡ್ತಿಗೆ ಸಂಬಂಧಿಸಿದಂತೆ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಾಗಿರುವುದರಿಂದ ಹೆಚ್ಚಿನ ಸಂಖ್ಯೆಯ ಶಿಕ್ಷಕರು ಇದನ್ನೊಂದು ಅನಿವಾರ್ಯ ನಿಯಮವೆನ್ನುವಂತೆ ಪಾಲಿಸುತ್ತಾರೆಯೇ ವಿನಾ ಸ್ವಯಂ ಆಸಕ್ತಿಯಿಂದ ತಮ್ಮನ್ನು ತೊಡಗಿಸಿಕೊಳ್ಳುವುದು ತುಂಬಾ ವಿರಳ. ಇನ್ನು ವೃತ್ತಿನಿರತರ ಸಂಘಗಳು ಆಯೋಜಿಸುವ ಸಮ್ಮೇಳನಗಳು ಜಗಳ, ಕಿರುಚಾಟ, ಪರಸ್ಪರ ನಿಂದನೆಗಳಲ್ಲಿ ಕೊನೆಗೊಳ್ಳುವುದೇ ಹೆಚ್ಚು. ಸಮ್ಮೇಳನದ ಮೊದಲದಿನ ಮಾತ್ರ ಒಂದಿಷ್ಟು ಶೈಕ್ಷಣಿಕ ವಾತಾವರಣ ನೆಲೆಗೊಂಡಿರುತ್ತದೆ. ಕೊನೆಯ ದಿನ ತಮ್ಮ ವೃತ್ತಿ ಸಂಬಂಧಿತ ಸಂಘದ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಪದಾಧಿಕಾರಿಗಳ ಆಯ್ಕೆ ಹಾಗೂ ನೇಮಕಾತಿಯ ಪ್ರಕ್ರಿಯೆಗೆ ಸಂಪೂರ್ಣ ಸಮಯ ಮೀಸಲಾಗಿರುವುದು. ವರ್ಷದ ಖರ್ಚು-ವೆಚ್ಚದ ವರದಿ ಓದುವ ಸಂದರ್ಭ ಸಮ್ಮೇಳನದ ವೇದಿಕೆ ಅಕ್ಷರಶ: ರಣಾಂಗಣದ ರೂಪುತಳೆಯುತ್ತದೆ. ಸದಸ್ಯರು ಮತ್ತು ಪದಾಧಿಕಾರಿಗಳ ನಡುವೆ ವಾಗ್ವಾದ ತಾರಕಕ್ಕೇರಿ ಕೈ ಕೈ ಮಿಲಾಯಿಸುವ ಹಂತಕ್ಕೆ ಪರಿಸ್ಥಿತಿ ವಿಕೋಪಗೊಂಡು ಸಮ್ಮೇಳನದ ಮೂಲ ಉದ್ದೇಶವೇ ಮೂಲೆಗುಂಪಾಗುತ್ತದೆ.

ಪುಸ್ತಕ ಪ್ರಕಾಶಕರು ಮತ್ತು ಶೈಕ್ಷಣಿಕ ಸಾಮಗ್ರಿಗಳ ಉತ್ಪಾದಕರು ತಮ್ಮ ಉತ್ಪಾದನೆಯ ಪ್ರಚಾರಕ್ಕಾಗಿ ಸಮ್ಮೇಳನಗಳಿಗೆ ಸಂಬಂಧಿಸಿದಂತೆ ಪ್ರಾಯೋಜಕರಾಗಿ ವ್ಯವಹರಿಸುವುದುಂಟು. ಸಮ್ಮೇಳನದ ನೋಂದಣಿ ಶುಲ್ಕ ಸೇರಿದಂತೆ ಪಾಲ್ಗೊಳ್ಳಲು ತಗಲುವ ಇಡೀ ವೆಚ್ಚವನ್ನು ಪ್ರಾಯೋಜಕರು ಭರಿಸುವುದರಿಂದ ಶಿಕ್ಷಕರು ಮತ್ತು ಸಂಶೋಧಕರು ಇದರ ಲಾಭ ಪಡೆದು ಧನ್ಯರಾಗುವರು. ಕೆಲವೊಮ್ಮೆ ಈ ಉಚಿತ ಪ್ರಾಯೋಜಕತ್ವದಿಂದ ವಿದೇಶಗಳಿಗೂ ಪಯಣಿಸುವ ಭಾಗ್ಯ ಪ್ರಾಪ್ತವಾಗುವುದುಂಟು. ಒಟ್ಟಾರೆ ಉಚಿತ ಪ್ರಾಯೋಜಕತ್ವದ ಪರಿಣಾಮ ಶೈಕ್ಷಣಿಕ ಆಸಕ್ತಿ ಹಿನ್ನೆಲೆಗೆ ಸರಿದು ಪ್ರವಾಸದ ಉಮೇದು ಮುನ್ನೆಲೆಗೆ ಬರುತ್ತದೆ.  

ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ಪದವಿ ಕಾಲೇಜುಗಳಲ್ಲಿ ಶೈಕ್ಷಣಿಯ ಗುಣಮಟ್ಟದ ಸುಧಾರಣೆಗಾಗಿ ಹಲವಾರು ನಿಯಮಗಳನ್ನು ಜಾರಿಗೆ ತಂದಿದೆ. ಪ್ರತಿವರ್ಷ ಪದವಿ ಕಾಲೇಜುಗಳಲ್ಲಿ ಶೈಕ್ಷಣಿಕ ಸಮ್ಮೇಳನಗಳ ಆಯೋಜನೆಯನ್ನು ಕಡ್ಡಾಯಗೊಳಿಸಲಾಗಿದೆ. ಉಪನ್ಯಾಸಕರು ವರ್ಷದಲ್ಲಿ ನಿರ್ಧಿಷ್ಟ ಸಂಖ್ಯೆಯ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುವುದು ಮತ್ತು ಸಂಶೋಧನಾ ಲೇಖನ ಮಂಡಿಸುವುದು ಅಗತ್ಯವಾಗಿದೆ. ಪರಿಣಾಮವಾಗಿ ಮಂಡಳಿಯ ನಿಯಮಗಳನ್ನು ಅನುಸರಿಸುವ ಒತ್ತಡದಲ್ಲಿ ಸಮ್ಮೇಳನಗಳ ಆಯೋಜನೆ ಮತ್ತು ಪಾಲ್ಗೊಳ್ಳುವಿಕೆಯು ಅನಿವಾರ್ಯ ಎನ್ನುವಂತಾಗಿರುವುದು ದುರ್ದೈವದ ಸಂಗತಿ. ಈ ನಡುವೆ ಅಂತರರಾಷ್ಟ್ರೀಯ ಸಮ್ಮೇಳನಗಳನ್ನು ಆಯೋಜಿಸುವ ವ್ಯಾಮೋಹ ಈಗ ಸೋಂಕಿನಂತೆ ವ್ಯಾಪಕವಾಗಿ ವಿಸ್ತರಿಸುತ್ತಿದೆ. ನ್ಯಾಕ್ ನಿಯಮಗಳ ಪ್ರಕಾರ ಅಂತರರಾಷ್ಟ್ರೀಯ ಸಮ್ಮೇಳನದ ಆಯೋಜನೆಗೆ ಹೆಚ್ಚು ಅಂಕಗಳು ಲಭ್ಯವಾಗುವುದೆ ಈ ವ್ಯಾಮೋಹಕ್ಕೆ ಕಾರಣವಾಗಿದೆ. ನೆರೆಯ ಶ್ರೀಲಂಕಾ, ನೇಪಾಳ, ಸಿಂಗಪೂರ್‍ನಿಂದ ಒಂದೆರಡು ಪ್ರತಿನಿಧಿಗಳು ಭಾಗವಹಿಸಿದರೂ ಸಮ್ಮೇಳನಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ಪ್ರಾಪ್ತವಾಗುತ್ತದೆ. ಪರಿಣಾಮವಾಗಿ ಜಿಲ್ಲಾಕೇಂದ್ರಗಳಲ್ಲಿ ಮಾತ್ರವಲ್ಲದೆ ಹೊಬಳಿಯಂಥ ಸಣ್ಣ ಊರುಗಳಲ್ಲಿರುವ ಪದವಿ ಕಾಲೇಜುಗಳಲ್ಲಿ ಕೂಡ ಈಗ ಅಂತರರಾಷ್ಟ್ರೀಯ ಸಮ್ಮೇಳನಗಳನ್ನು ಏರ್ಪಡಿಸಲಾಗುತ್ತಿದೆ.

ಕೋವಿಡ್ ಸಂದರ್ಭದಲ್ಲಿ ಶೈಕ್ಷಣಿಕ ಸಮ್ಮೇಳನಗಳನ್ನು ಆನ್‍ಲೈನ್ ಮೂಲಕ ಆಯೋಜಿಸಲಾಯಿತು. ವೆಬಿನಾರ್ ಪದ ಪ್ರಾಥಮಿಕ ಶಾಲಾ ಮಕ್ಕಳಿಗೂ ಪರಿಚಿತವಾಗುವಷ್ಟು ವ್ಯಾಪಕವಾಗಿ ಆನ್‍ಲೈನ್ ಮೂಲಕ ಶೈಕ್ಷಣಿಕ ಸಮ್ಮೇಳನಗಳು ಆಯೋಜನೆಗೊಂಡವು. ಪ್ರತಿನಿಧಿಗಳಿಗೂ ನೋಂದಣಿ ಶುಲ್ಕ ಹಾಗೂ ಮತ್ತಿತರ ಖರ್ಚುಗಳಿಲ್ಲದೆ ಇರುವುದರಿಂದ ಬಹಳ ಉಮೇದಿಯಿಂದಲೇ ಈ ವೆಬಿನಾರ್‍ಗಳಲ್ಲಿ ಪಾಲ್ಗೊಂಡರು. ಕೆಲವೊಮ್ಮೆ ಏಕಕಾಲಕ್ಕೆ ಎರಡು ಅಥವಾ ಮೂರು ವೆಬಿನಾರ್‍ಗಳಲ್ಲಿ ಪಾಲ್ಗೊಂಡು ಪ್ರಮಾಣಪತ್ರಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡರೆ ವಿನಾ ಶೈಕ್ಷಣಿಕವಾಗಿ ಯಾವ ಉನ್ನತಿಯನ್ನೂ ಸಾಧಿಸಲಿಲ್ಲ.

‘ಈ ನೆಲದ ಮೇಲಿನ ಅತಿದೊಡ್ಡ ಕಸವೆಂದರೆ ಪ್ರಶ್ನಿಸುವ ಸಾಮರ್ಥ್ಯವನ್ನು ಕಳೆದುಕೊಂಡ ಮೆದುಳು’ ಎಂದಿರುವರು ವಿಜ್ಞಾನಿ ಆಲ್ಬರ್ಟ್ ಐನ್‍ಸ್ಟೀನ್. ಪ್ರಶ್ನೆ, ಚರ್ಚೆ, ಸಂವಾದದ ಮೂಲಕವೇ ಹೊಸ ಚಿಂತನೆಗಳು ಮತ್ತು ಸಾಧ್ಯತೆಗಳು ಹುಟ್ಟುವವು. ವಿಪರ್ಯಾಸವೆಂದರೆ ಚರ್ಚೆ ಮತ್ತು ಸಂವಾದ ಇಂದಿನ ಬಹುಪಾಲು ಶೈಕ್ಷಣಿಕ ಸಮ್ಮೇಳನಗಳಲ್ಲಿ ಗೋಚರಿಸುತ್ತಿಲ್ಲ. ಹೊಸ ಹೊಳಹುಗಳು ಮತ್ತು ಚಿಂತನೆಗಳು ಸಮ್ಮೇಳನಗಳ ಫಲಶ್ರುತಿಯಾಗಬೇಕು. ಆಗಮಾತ್ರ ಶೈಕ್ಷಣಿಕ ಸಮ್ಮೇಳನಗಳ ಉದ್ದೇಶ ಸಾಕಾರಗೊಂಡು ಅವುಗಳಿಗೆ ಒಂದು ಘನತೆ ಮತ್ತು ಅರ್ಥ ಪ್ರಾಪ್ತವಾಗುತ್ತದೆ.

-ರಾಜಕುಮಾರ ಕುಲಕರ್ಣಿ

No comments:

Post a Comment