Thursday, January 3, 2013

ಯು ಕ್ಯಾನ್ ವಿನ್

    

"ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು"
     
      ಕೆಲವು ದಿನಗಳಿಂದ ಶಿವ ಖೇರಾ ಬರೆದ 'ಯು ಕ್ಯಾನ್ ವಿ' ಪುಸ್ತಕವನ್ನು ಓದುತ್ತಿದ್ದೇನೆ. ಈ ಶಿವ ಖೇರಾ ಜೀವನೋತ್ಸಾಹವನ್ನು ಇಮ್ಮಡಿಗೊಳಿಸಲು, ಜನರು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು, ಸಾಧನೆಗಳೆಡೆಗೆ ಪಯಣಿಸಲು ಅಗತ್ಯವಾದ ಸ್ಫೂರ್ತಿಯನ್ನು ತಮ್ಮ ಬರವಣಿಗೆಯ ಮೂಲಕ ಒದಗಿಸುತ್ತಲೇ ಬಂದಿರುವ ಮಹತ್ವದ ಲೇಖಕ. ಅವರ ಇತ್ತೀಚಿನ ಕೃತಿ 'ಯು ಕ್ಯಾನ್ ವಿನ್' ಸುಮಾರು 16 ಭಾಷೆಗಳಲ್ಲಿ ಪ್ರಕಟವಾಗಿ ಎರಡು ದಶಲಕ್ಷ ಪ್ರತಿಗಳು ಮಾರಾಟವಾಗಿವೆ. 'ಜಯಶಾಲಿಗಳು ವಿಭಿನ್ನ ಕೆಲಸಗಳನ್ನು ಮಾಡುವುದಿಲ್ಲ. ಅವರು ಸಾಧಾರಣ ಕೆಲಸಗಳನ್ನೇ ವಿಭಿನ್ನವಾಗಿ ಮಾಡುವರು' ಎನ್ನುವುದು ಅವರು ನಂಬಿಕೊಂಡುಬಂದಿರುವ ಸಿದ್ಧಾಂತ.

           ಕಳೆದ ಕೆಲವು ದಿನಗಳಿಂದ ಮನಸ್ಸನ್ನು ಪೂರ್ತಿಯಾಗಿ ಶಿವ ಖೇರಾ ಅವರ ವಿಚಾರಗಳೇ ಆವರಿಸಿವೆ. ಪುಸ್ತಕದಲ್ಲಿ ಅಲ್ಲಲ್ಲಿ ಬದುಕಿಗೆ ಸ್ಫೂರ್ತಿ ನೀಡುವ ಉದಹಾರಣೆಗಳನ್ನು ಲೇಖಕರು ಉಲ್ಲೇಖಿಸಿರುವರು. ಮನಸ್ಸನ್ನು ತಟ್ಟಿದ ಒಂದಿಷ್ಟು ಉಲ್ಲೇಖಗಳನ್ನು ಪುಸ್ತಕದಿಂದ ಹೆಕ್ಕಿ ತೆಗೆದು ಕನ್ನಡಕ್ಕೆ ಅನುವಾದಿಸಿ ಕೊಟ್ಟಿದ್ದೇನೆ. ಓದಿ ನೋಡಿ ನಮಗರಿವಿಲ್ಲದಂತೆ ಬದುಕು ಬದಲಾಗುತ್ತ ಹೋಗುತ್ತದೆ.

        ಒಂದು ನಗರದಲ್ಲಿ ವ್ಯಕ್ತಿಯೊಬ್ಬ ಬಲೂನ್ ಗಳ ಮಾರಾಟದಿಂದ ಬದುಕು ನಡೆಸುತ್ತಿದ್ದ. ಬಲೂನ್ ಗಳ ವ್ಯಾಪಾರವೇ ಅವನ ಕುಟುಂಬ ನಿರ್ವಹಣೆಗೆ ಆಧಾರವಾಗಿತ್ತು. ಪ್ರತಿದಿನ ಜನಸಂದಣಿಯ ಪ್ರದೇಶಗಳಲ್ಲಿ ಆತ ಕೈಗಾಡಿಯೊಂದರಲ್ಲಿ ಬಲೂನ್ ಗಳನ್ನು ಹರವಿಕೊಂಡು ವ್ಯಾಪಾರ ಮಾಡುತ್ತಿದ್ದ. ಬೆಳಿಗ್ಗೆಯಿಂದ ಸಂಜೆವರೆಗೂ ಬಲೂನ್ ಗಳ ಮಾರಾಟದಿಂದ ದೊರೆಯುವ ಹಣ ಅವನ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿತ್ತು. ಕೆಲವೊಮ್ಮೆ ಕೊಳ್ಳುವವರಿಲ್ಲದೆ ಬಲೂನ್ ಗಳ ಮಾರಾಟ ಕ್ಷೀಣಿಸುತ್ತಿತ್ತು. ಅಂಥ ದಿನದಂದು ಆ ವ್ಯಾಪಾರಿ ಬಣ್ಣ ಬಣ್ಣದ ಬಲೂನ್ ಗಳಿಗೆ ಗಾಳಿತುಂಬಿ ಅವುಗಳನ್ನು ಆಕಾಶಕ್ಕೆ ಬಿಡುತ್ತಿದ್ದ. ಹೀಗೆ ಅವನು ಗಾಳಿಯಲ್ಲಿ ಹಾರಾಡಲು ಬಿಡುತ್ತಿದ್ದ ಬಲೂನ್ ಗಳಲ್ಲಿ ಕೆಂಪು, ನೀಲಿ, ಹಸಿರು ಮತ್ತು ಹಳದಿ ಬಣ್ಣಗಳಿರುತ್ತಿದ್ದವು. ಗಾಳಿಯಲ್ಲಿ ಹಾರಾಡುವ ಸುಂದರ ಬಲೂನ್ ಗಳನ್ನು ನೋಡಿದ ತಕ್ಷಣ ಮಕ್ಕಳೆಲ್ಲ ಆಕರ್ಷಿತರಾಗಿ ಬಲೂನ್ ಗಳನ್ನು ಖರೀದಿಸಲು ಓಡೋಡಿ ಬರುತ್ತಿದ್ದರು. ಆತನ ವ್ಯಾಪಾರ ಜೋರಾಗಿ ಕುಟುಂಬ ನಿರ್ವಹಣೆಗೆ ಅಗತ್ಯವಾದ ಹಣ ದೊರೆಯುತ್ತಿತ್ತು.  ವ್ಯಾಪಾರ ಕ್ಷೀಣಿಸಿದ ದಿನಗಳಂದು ಆಕಾಶದಲ್ಲಿ ಬಣ್ಣ ಬಣ್ಣದ ಬಲೂನ್ ಗಳು ಹಾರಾಡುತ್ತಿದ್ದವು. ಒಂದು ದಿನ ಬಲೂನ್ ಗಳನ್ನು ಆಕಾಶದಲ್ಲಿ ಹಾರಾಡಲು ಬಿಟ್ಟ ಆ ಘಳಿಗೆ ಅವನ ಕೈಯನ್ನು ಯಾರೋ ಹಿಡಿದೆಳೆದಂತಾಯಿತು. ತಿರುಗಿ ನೋಡಿದಾಗ ಪುಟ್ಟ ಬಾಲಕ ನಿಂತಿದ್ದ. ಬಲೂನ್ ಬೇಕಿತ್ತಾ ಮಗು ಎಂದು ಕೇಳಿದಾಗ ಆ ಮಗು ಅವನನ್ನು ಪ್ರಶ್ನಿಸಿತು 'ನೀನು ಗಾಳಿಯಲ್ಲಿ ಹಾರಾಡಲು ಬಿಟ್ಟಿರುವ ಬಲೂನ್ ಗಳ ಗುಂಪಿನಲ್ಲಿ ಕಪ್ಪು ಬಣ್ಣದ ಬಲೂನ್ ಗಳೇ  ಇಲ್ಲ. ಕಪ್ಪು ಬಣ್ಣದ ಬಲೂನ್ ಗಳನ್ನೂ ಹೀಗೆ ಗಾಳಿಯಲ್ಲಿ ತೇಲುವಂತೆ ಮಾಡಲು ಸಾಧ್ಯವೇ'. ಮಗುವಿನ ಮುಗ್ಧ ಪ್ರಶ್ನೆಗೆ ವ್ಯಾಪಾರಿ ಜಾಣತನದಿಂದ ಉತ್ತರಿಸಿದ 'ಮಗು ಬಲೂನ್ ಗಾಳಿಯಲ್ಲಿ ತೇಲುವುದನ್ನು ಅದರ ಬಣ್ಣ ನಿರ್ಧರಿಸುವುದಿಲ್ಲ. ಬದಲಾಗಿ ಆ ಬಲೂನ್ ಒಳಗಡೆ ಏನಿದೆ ಎನ್ನುವುದು ಅದರ ಹಾರಾಟವನ್ನು ನಿರ್ಧರಿಸುತ್ತದೆ'.
---000---

        ಪ್ರತಿಯೊಂದು ಯಶಸ್ಸಿನ ಕಥೆಯೂ ಒಂದು ದೊಡ್ಡ ವಿಫಲತೆಯಿಂದಲೇ ಶುರುವಾಗುತ್ತದೆ. ಅದಕ್ಕೊಂದು ಶ್ರೇಷ್ಠ ಉದಾಹರಣೆಯಾಗಿ ವಿಶ್ವ ಪ್ರಸಿದ್ಧ ವ್ಯಕ್ತಿಯ ಬದುಕಿನ ವೈಫಲ್ಯಗಳನ್ನು ಉಲ್ಲೇಖಿಸುತ್ತೇನೆ. ಈ ವ್ಯಕ್ತಿ ತನ್ನ 21ನೇ ವಯಸ್ಸಿನಲ್ಲಿ ತಾನು ಮಾಡುತ್ತಿದ್ದ ವ್ಯಾಪಾರದಲ್ಲಿ ಬಹು ದೊಡ್ಡ ನಷ್ಟ ಅನುಭವಿಸಿದ. 22ನೇ ವಯಸ್ಸಿನಲ್ಲಿ ಶಾಸನ ಸಭೆ ಸ್ಪರ್ಧೆಯಲ್ಲಿ ಸೋಲುಂಟಾಯಿತು. 24ನೇ ವಯಸ್ಸಿನಲ್ಲಿ ಮತ್ತೊಮ್ಮೆ ವ್ಯಾಪಾರದಲ್ಲಿ ನಷ್ಟ ಸಂಭವಿಸಿತು. 26ನೇ ವಯಸ್ಸಿನಲ್ಲಿ ಪ್ರಾಣಕ್ಕೆ ಪ್ರಾಣವಾಗಿದ್ದ ಪ್ರಿಯತಮೆ ಅಕಾಲಿಕ ಮರಣಕ್ಕೆ ತುತ್ತಾಗಿ ಶಾಶ್ವತವಾಗಿ ದೂರಾದಳು. 27ನೇ ವಯಸ್ಸಿಗೆ ನರಸಂಬಂದಿ ಕಾಯಿಲೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಜರ್ಜರಿತವಾಯಿತು. 34ನೇ ವಯಸ್ಸಿಗೆ ಅಮೇರಿಕ ಸಂಯುಕ್ತ ಸಂಸ್ಥಾನದ ನ್ಯಾಯ ವಿಧಾಯಕ ಸಭೆಗೆ ಸ್ಪರ್ಧಿಸಿದಾಗ ಮತ್ತೊಮ್ಮೆ ಸೋಲು ಎದುರಾಯಿತು. 47ನೇ ವಯಸ್ಸಿಗೆ ಅಮೇರಿಕಾದ ಉಪ ರಾಷ್ಟ್ರಪತಿ ಹುದ್ಧೆಗೆ ಸ್ಪರ್ಧಿಸಲು ಪ್ರಯತ್ನಿಸಿದಾಗ ವಿಫಲತೆ ಮತ್ತೆ ಕೈ ಹಿಡಿದೆಳೆಯಿತು. 49ನೇ ವಯಸ್ಸಿಗೆ ಶಾಸನ ಸಭೆಗೆ ಸ್ಪರ್ಧಿಸಿದಾಗಲೂ ಸೋಲು. ಹೀಗೆ ಬದುಕಿನಲ್ಲಿ ನಿರಂತರವಾಗಿ ಸೋಲು ಮತ್ತು ವಿಫಲತೆಗಳನ್ನು ಕಂಡ ವ್ಯಕ್ತಿ ತನ್ನ 52ನೇ ವಯಸ್ಸಿನಲ್ಲಿ ಅಮೇರಿಕ ದೇಶದ ಅಧ್ಯಕ್ಷನಾಗಿ ಆಯ್ಕೆಯಾದ. ಆ ವ್ಯಕ್ತಿಯೇ ಅಮೇರಿಕ ರಾಷ್ಟ್ರ ಕಂಡ ಸರ್ವಕಾಲಿಕ ಶ್ರೇಷ್ಠ ಆಡಳಿತಗಾರ ಅಬ್ರಾಹಂ ಲಿಂಕನ್.

                                                                         ---000---
         ಶಿಷ್ಯ ಗುರುವಿಗೆ ಕೇಳಿದ ಯಶಸ್ಸಿನ ರಹಸ್ಯವೆನೆಂದು. ಗುರು ನಾಳೆ ಬೆಳಿಗ್ಗೆ ನದಿ ತೀರದಲ್ಲಿ ತನ್ನನ್ನು ಕಾಣುವಂತೆಯೂ ಅಲ್ಲಿ ಉತ್ತರ ಹೇಳುವುದಾಗಿ ತಿಳಿಸಿದ. ರಾತ್ರಿ ಇಡೀ ಶಿಷ್ಯನಿಗೆ ಕುತೂಹಲ. ಕೊನೆಗೂ ಬೆಳಗಾಯಿತು.  ಮುಂಜಾನೆ ಗುರು ಶಿಷ್ಯರಿಬ್ಬರೂ ನದಿ ತೀರದಲ್ಲಿ ಭೇಟಿಯಾದರು. ಗುರು ಶಿಷ್ಯನಿಗೆ ತನ್ನ ಹಿಂದೆ ನಡೆದು ಬರುವಂತೆ ಹೇಳಿದ. ಗುರು ನದಿಯೊಳಗೆ ಒಂದೊಂದೆ ಹೆಜ್ಜೆ ಇಡುತ್ತ ಮುಂದೆ ಮುಂದೆ ನಡೆದರೆ ಮರು ಮಾತಿಲ್ಲದೆ ಶಿಷ್ಯ ಗುರುವನ್ನು ಹಿಂಬಾಲಿಸಿದ. ಕೆಲವು ಅಡಿಗಳಷ್ಟು ನಡೆದ ಮೇಲೆ ನೀರು ಮೇಲೆರುತ್ತ ಬಂತು. ನೀರು ಕುತ್ತಿಗೆವರೆಗೆ ಬಂದಾಗ ಇದ್ದಕ್ಕಿದ್ದಂತೆ ಗುರು ತನ್ನ ಶಿಷ್ಯನನ್ನು ಹಿಡಿದು ಜೋರಾಗಿ ನೀರೊಳಗಡೆ ಮುಳುಗಿಸಿದ. ಈ ಅನಿರೀಕ್ಷಿತ ಘಟನೆಯಿಂದ ಶಿಷ್ಯ ಕಂಗಾಲಾಗಿ ಹೋದ. ನೀರಿನಿಂದ ಹೊರಬರಲು ಪ್ರಯತ್ನಿಸಿ ಸೋತ. ಕೆಲವು ಕ್ಷಣಗಳ ನಂತರ ಗುರು ತನ್ನ ಹಿಡಿತ ಸಡಿಲಿಸಿ ಶಿಷ್ಯ ನೀರಿನಿಂದ ಹೊರ ಬರಲು ಸಹಕರಿಸಿದ. ನೀರಿನಿಂದ ಹೊರಬಂದ ತಕ್ಷಣ ಶಿಷ್ಯ ದೀರ್ಘವಾಗಿ ಉಸಿರೆಳೆದುಕೊಂಡು ಗಾಳಿಯನ್ನು ಒಳತೆಗೆದುಕೊಂಡ. ಆಗ ಗುರು ಕೇಳಿದ 'ನೀನು ನೀರಿನೊಳಗಡೆ ಇರುವಷ್ಟು ಹೊತ್ತು ಏನನ್ನು ಕುರಿತು ಚಿಂತಿಸುತ್ತಿದ್ದೆ?' ಶಿಷ್ಯ ಉತ್ತರಿಸಿದ 'ನನಗೆ ಗಾಳಿ ಬೇಕೆನ್ನುವುದನ್ನು  ಬಿಟ್ಟು ಬೇರೆ ಯಾವ ವಿಚಾರವೂ ನನ್ನ ಮನಸ್ಸಿನಲ್ಲಿ  ಇರಲಿಲ್ಲ'. 'ಇದೇ ಯಶಸ್ಸಿನ ಹಿಂದಿರುವ ರಹಸ್ಯ. ಹೇಗೆ ನೀರಿನೊಳಗಡೆ ಇರುವಷ್ಟು ಹೊತ್ತು ಗಾಳಿ ಬೇಕೆಂದು ನಿನ್ನ ಮನಸ್ಸು ಯೋಚಿಸುತ್ತಿತ್ತೋ ಅದೇ ರೀತಿ ಯಶಸ್ಸು ಬೇಕೆಂದಾಗ ನೀನು ಯಶಸ್ಸನ್ನು ಕುರಿತೇ ಯೋಚಿಸಬೇಕು. ಅದು ತಾನಾಗಿಯೇ ನಿನಗೆ ದೊರೆಯುತ್ತದೆ.' ಗುರುವಿನ ಮಾತಿನಿಂದ ಶಿಷ್ಯನಿಗೆ ಜ್ಞಾನೋದಯವಾಯಿತು.

---000---
        ಮೂರು ಜನ ಕಾರ್ಮಿಕರು ವಿಶಾಲ ಬಯಲಿನಲ್ಲಿ ಇಟ್ಟಿಗೆಗಳನ್ನು ಜೋಡಿಸಿಡುತ್ತಿದ್ದರು. ಅವರ ಕೆಲಸವನ್ನು ಗಮನಿಸಿದ ದಾರಿಹೋಕನೋರ್ವ ಅವರುಗಳು ಮಾಡುತ್ತಿರುವ ಕೆಲಸ ಏನೆಂದು ಕೇಳಿದ. ಮೊದಲನೇಯ ಕೆಲಸಗಾರ ಉತ್ತರಿಸಿದ 'ನಿನಗೆ ಕಾಣಿಸುತ್ತಿಲ್ಲವೇ ನಾನು ಹೊಟ್ಟೆ ಪಾಡಿಗಾಗಿ ಇಲ್ಲಿ ದುಡಿಯುತ್ತಿದ್ದೇನೆ'. ಆ ಪ್ರಯಾಣಿಕ ಮುಂದೆ ನಡೆದು ಸ್ವಲ್ಪ ದೂರದಲ್ಲಿ ಕೆಲಸ ಮಾಡುತ್ತಿರುವ ಎರಡನೆಯವನಿಗೂ  ಅದೇ ಪ್ರಶ್ನೆ ಕೇಳಿದ. ಅವನ ಪ್ರತಿಕ್ರಿಯೆ ಹೀಗಿತ್ತು 'ಇಲ್ಲಿ ನಾನು ಇಟ್ಟಿಗೆಗಳನ್ನು ಜೋಡಿಸುತ್ತಿರುವೇನು'. ದಾರಿಹೋಕ ಮತ್ತೆ ಮುಂದೆ ಹೋಗಿ ಮೂರನೇಯ ಕೆಲಸಗಾರನಿಗೂ ಅದೇ ಪ್ರಶ್ನೆಯನ್ನು ಕೇಳಿದ. ಅವನು ಹೀಗೆ ಉತ್ತರಿಸಿದ 'ನಾನು ಇಲ್ಲಿ ಸುಂದರವಾದ ಒಂದು ಸ್ಮಾರಕವನ್ನು ಕಟ್ಟುತ್ತಿದ್ದೇನೆ'. ಮೂರೂ ಜನ ಕೆಲಸಗಾರರು ಮಾಡುತ್ತಿದ್ದ ಕೆಲಸ ಒಂದೇ ಆಗಿದ್ದರೂ ತಾವು ಮಾಡುತ್ತಿರುವ ಕೆಲಸದ ಕುರಿತು ಪ್ರತಿಯೊಬ್ಬರ ಅಭಿಪ್ರಾಯ ಬೇರೆ ಬೇರೆಯಾಗಿತ್ತು. ಒಟ್ಟಾರೆ ಮೂರೂ ಜನ ಮೂರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದರು. ವ್ಯಕ್ತಿಯೊಬ್ಬ ತನ್ನ ಕೆಲಸದ ಬಗ್ಗೆ ಬೆಳೆಸಿಕೊಳ್ಳುವ ಅಭಿಪ್ರಾಯ ಅದು ಆತನ ಕೆಲಸದ ನಿರ್ವಹಣೆಯ ಮೇಲೆ ತುಂಬ ಪ್ರಭಾವ ಬೀರುತ್ತದೆ.

---000---
       ಅವರಿಬ್ಬರೂ ಅಣ್ಣ ತಮ್ಮಂದಿರು. ಅಣ್ಣ ಮಧ್ಯ ವ್ಯಸನಿ ಪ್ರತಿನಿತ್ಯ ಕುಡಿದು ಬಂದು ಮನೆಯಲ್ಲಿ ಹೆಂಡತಿ ಮಕ್ಕಳಿಗೆ ಹೊಡೆಯುತ್ತಿದ್ದ. ಅವನಿಂದಾಗಿ ಮನೆ ಅಶಾಂತಿಯ ತಾಣವಾಗಿತ್ತು. ತಮ್ಮ ಒಬ್ಬ ಯಶಸ್ವಿ ಉದ್ಯಮಿಯಾಗಿ ಸಮಾಜದಲ್ಲಿ ಗೌರವ ಮತ್ತು ಮನ್ನಣೆಗೆ ಪಾತ್ರನಾಗಿದ್ದ. ಸುಂದರ ಮತ್ತು ಸುಖಿ ಕುಟುಂಬ ಅವನದಾಗಿತ್ತು. ಒಂದೇ ತಂದೆಯ ಮಕ್ಕಳಾಗಿ ಒಂದೇ ಪರಿಸರದಲ್ಲಿ ಬೆಳೆದ ಆ ಅಣ್ಣ ತಮ್ಮಿಂದರ ಗುಣ ಸ್ವಭಾವಗಳಲ್ಲಿ ಅಜಗಜಾಂತರ ವ್ಯತ್ಯಾಸ. 'ನಿನ್ನಲ್ಲರುವ ದುಶ್ಚಟಗಳಿಗೆ ಕಾರಣವೇನು?' ಅಣ್ಣನನ್ನು ಪ್ರಶ್ನಿಸಿದಾಗ ಅವನು ಉತ್ತರಿಸಿದ 'ಇವತ್ತಿನ ನನ್ನೆಲ್ಲ ಅವಗುಣಗಳಿಗೆ ಕಾರಣ ನನ್ನ ತಂದೆ. ಅವನೊಬ್ಬ ಕುಡುಕನಾಗಿದ್ದು ಮನೆಯಲ್ಲಿ ನಮ್ಮನ್ನೆಲ್ಲ ಹೊಡೆದು ಹಿಂಸಿಸುತ್ತಿದ್ದ. ಅಂಥ ಅಪ್ಪನ ಮಗನಾಗಿ ನಾನು ಒಳ್ಳೆಯವನಾಗಿರಲು ಹೇಗೆ ಸಾಧ್ಯ'. ಅವನು ಹೇಳಿದ್ದರಲ್ಲಿ ತಪ್ಪಿರಲಿಲ್ಲ.

        ತಮ್ಮನನ್ನು ಕೇಳಲಾಯಿತು 'ಒಬ್ಬ ಯಶಸ್ವಿ ಉದ್ಯಮಿಯಾಗಿ ಬೆಳೆಯಲು ಮತ್ತು ಉತ್ತಮ ನಾಗರಿಕನಾಗಿ ಬದುಕನ್ನು ರೂಪಿಸಿಕೊಳ್ಳಲು ನಿನಗಾರು ಪ್ರೇರಣೆ?' ತಮ್ಮನ ಪ್ರತಿಕ್ರಿಯೆ ಹೀಗಿತ್ತು 'ಇವತ್ತಿನ ನನ್ನ ಯಶಸ್ಸಿಗೆಲ್ಲ ನನ್ನ ತಂದೆಯೇ ನನಗೆ ಪ್ರೇರಣೆ. ನನ್ನ ತಂದೆ ಒಬ್ಬ ಕುಡುಕ, ಸೋಮಾರಿ ಮತ್ತು ಜಗತ್ತಿನಲ್ಲಿರುವ ಎಲ್ಲ ದುಶ್ಚಟಗಳ ದಾಸನಾಗಿದ್ದ. ಮನೆಯಲ್ಲಿ ಪ್ರತಿನಿತ್ಯ ಜಗಳವಾಡುತ್ತಿದ್ದ. ಇದನ್ನೆಲ್ಲ ಪ್ರತಿನಿತ್ಯ ನೋಡುತ್ತಿದ್ದ ನಾನು ಸಣ್ಣವನಿರುವಾಗಲೇ ನಿರ್ಧರಿಸಿದೆ ಅಪ್ಪನಂತೆ ಕೆಟ್ಟ ವ್ಯಕ್ತಿಯಾಗಬಾರದೆಂದು. ಬದಲಾಗಿ ಉತ್ತಮ ಮನುಷ್ಯ ಮತ್ತು ಯಶಸ್ವಿ ಉದ್ಯಮಿಯಾಗಬೇಕು ಹಾಗೂ ಸಮಾಜದಲ್ಲಿ ಗೌರವ ಮನ್ನಣೆಗಳನ್ನು ಗಳಿಸಬೇಕೆಂದು ನಿರ್ಧರಿಸಿದೆ. ಅದಕ್ಕಾಗಿ ಪ್ರಯತ್ನಿಸಿ ಯಶಸ್ವಿಯೂ ಆದೆ'.

        ಪ್ರೇರಣೆ ನೀಡುವ ಇಂಥ ಹತ್ತಾರು ಉದಾಹರಣೆಗಳು 'ಯು ಕ್ಯಾನ್ ವಿನ್' ಪುಸ್ತಕದಲ್ಲಿವೆ. ಪುಸ್ತಕವನ್ನೊಮ್ಮೆ ಕೈಯಲ್ಲಿ ಹಿಡಿದು ನೋಡಿ ಸ್ಫೂರ್ತಿಯ  ಸೆಲೆ ಜೀವನೋತ್ಸಾಹಕ್ಕೆ ನೀರೆರೆಯಲಾರಂಭಿಸುತ್ತದೆ.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 


No comments:

Post a Comment