Wednesday, April 18, 2012

ಆ ಪತ್ರದ ಹಿಂದೆ ಅದೆಂಥ ವೇದನೆಯಿತ್ತು

   ಮುಂಬೈ ನಗರದ ಮೇಲೆ ಉಗ್ರರ ದಾಳಿ ನಡೆದು ಮೂರು ವರ್ಷಗಳೇ ಕಳೆದು ಹೋದವು. ಸೆರೆ ಸಿಕ್ಕ ಉಗ್ರನಿಗೆ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ. ವಾಣಿಜ್ಯ ನಗರಿ ಮುಂಬೈ ಮೈಕೊಡವಿಕೊಂಡು ಮೇಲೆದ್ದು ನಿಂತಿದೆ. ಬದುಕಿನ ಧಾವಂತದ ಓಟದೆದುರು ಜನರು ಆ ಘಟನೆಯನ್ನು ಮರೆತು ಹೋಗಿರುವರು. ಪತ್ರಿಕೆಯಲ್ಲೋ, ಟಿ.ವಿ. ಚಾನೆಲ್ಲುಗಳಲ್ಲೋ ಉಗ್ರರ ಕುರಿತು ಸುದ್ದಿ ಬಿತ್ತರವಾದಾಗ ಮುಂಬೈನ ಕಹಿ ಘಟನೆ ಮರುಕಳಿಸಿದಂತಾಗುತ್ತದೆ. ಭಾರತದ ಆಂತರಿಕ ಭದ್ರತೆಗೆ ನಿರಂತರವಾಗಿ ಸವಾಲು ಹಾಕುತ್ತಿರುವ ನೆರೆಯ ರಾಷ್ಟ್ರ ಒಂದು ನೆನಪಾಗುತ್ತದೆ. ಭಯೋತ್ಪಾದನೆಯನ್ನೇ ಬಂಡವಾಳ ಮಾಡಿಕೊಂಡ ಆ ರಾಷ್ಟ್ರದಲ್ಲಿ ನಾಗರಿಕರು ಅದು ಹೇಗೆ ಸಹಜ ಜೀವನ ನಡೆಸುತ್ತಿರಬಹುದು ಎನ್ನುವ ವಿಷಯ ಒಂದು ಕ್ಷಣ ಯಾರನ್ನೇ ಆಗಲಿ ಆತಂಕಕ್ಕೆ ದೂಡುತ್ತದೆ. ಏಕೆಂದರೆ  ಎಷ್ಟಾದರೂ ಅವರು ಸಹ ನಮ್ಮಂತೆ ಮನುಷ್ಯರೇ ತಾನೆ. ಈ ನಡುವೆ 'ಟೈಮ್ಸ್ ಆಫ್ ಇಂಡಿಯಾ' ದಿನ ಪತ್ರಿಕೆಯಲ್ಲಿ ಪ್ರಕಟವಾದ ಆ ಹೆಣ್ಣು ಮಗಳ ಪತ್ರ ಮನಸ್ಸನ್ನು ಮತ್ತೆ ಮತ್ತೆ ಕಾಡಲಾರಂಭಿಸುತ್ತದೆ. ಮೂರು ವರ್ಷಗಳ ಹಿಂದೆ ಆ ಪತ್ರವನ್ನು ನಾನು ಕನ್ನಡಕ್ಕೆ ಅನುವಾದಿಸಿ ನನ್ನ ಲೇಖನವೊಂದಕ್ಕೆ ಪೂರಕವಾಗಿ ಬಳಸಿಕೊಂಡಿದ್ದೆ. ಯಾವುದೋ ಒಂದು ಲೇಖನ ಹುಡುಕುತ್ತಿರುವ ಹೊತ್ತು ಆ ಪತ್ರ ಮತ್ತೆ ಕಣ್ಣಿಗೆ ಬಿತ್ತು. ಒಂದು ಕ್ಷಣ ಕೈಹಿಡಿದು ಜಗ್ಗಿ ನಿಲ್ಲಿಸಿದ ಆ ಪತ್ರವನ್ನು ಯಥಾವತ್ತಾಗಿ ಇಲ್ಲಿ ಬರೆಯುತ್ತಿದ್ದೇನೆ. ಓದಿ ನೋಡಿ ಆ ಅಕ್ಷರಗಳ ಹಿಂದೆ ಅದೆಂಥ ವೇದನೆ ಇತ್ತೆಂದು ಅರ್ಥವಾದಿತು.
ಮುಂಬೈ ನಾಗರಿಕರಿಗೆ ನನ್ನ ಸಹಾನುಭೂತಿ,
     ಮುಂಬೈನ ಎಲ್ಲ ನಾಗರಿಕರಿಗೆ, ವಿಶೇಷವಾಗಿ ಉಗ್ರರ ದಾಳಿಯಲ್ಲಿ  ಗಾಯಗೊಂಡವರಿಗೆ ಮತ್ತು ತಮ್ಮ ಬಂಧುಗಳು, ಸ್ನೇಹಿತರನ್ನು ಕಳೆದುಕೊಂಡವರಿಗೆ ನನ್ನ ಹೃದಯಾಂತರಾಳದ ಸಾಹಾನುಭುತಿ. ಸಾವಿರಾರು ಮೈಲಿ ದೂರದಲ್ಲಿ ಕುಳಿತು ಟೆಲಿವಿಜನ್ ಪರದೆಯ ಮೇಲೆ ನೂರು ವರ್ಷ ಹಳೆಯದಾದ ತಾಜ್ ಹೋಟೆಲ್ ನಲ್ಲಿ ನಡೆದ ಕಮಾಂಡೋ ಪಡೆಯ ಕಾರ್ಯಾಚರಣೆ ನೋಡುತ್ತಿರುವಾಗ ಮನಸ್ಸು ರೋಧಿಸುತ್ತದೆ.  ಮುಂಬೈನ ಈ ಘಟನೆ ನನಗೆ ಕಳೆದ ವರ್ಷ ೨೦೦೭ ಡಿಸೆಂಬರ್ ೨೮ ರಂದು ಕರಾಚಿಯಲ್ಲಿ ನಡೆದ ಘಟನೆಯನ್ನು ನೆನಪಿಸುತ್ತಿದೆ. ಆ ದಿನ ಉಗ್ರರು ನಮ್ಮ ನಾಯಕಿ ಬೆನಜೀರ್ ಭುಟ್ಟೊರನ್ನು ಹತ್ಯೆಗೈದರು. ಇಡೀ ಕರಾಚಿ ಪಟ್ಟಣ ಹೊಗೆಯಿಂದ ತುಂಬಿ ಕೊಂಡಿತ್ತು.
     ಈ ಉಗ್ರರು ಪಾಕಿಸ್ತಾನಿ ಪ್ರಜೆಗಳನ್ನು ಇನ್ನಿಲ್ಲದಂತೆ ಕಾಡುತ್ತಿರುವರು. ಇಲ್ಲಿಯ ಕಟ್ಟಡಗಳು ಉಗ್ರರ ವಿಧ್ವಂಸಕ ಕೃತ್ಯಗಳಿಗೆ ಧ್ವಂಸಗೊಂಡಿವೆ. ರೈತರ ಬೆಳೆಗಳು ನಾಶಗೊಂಡಿವೆ. ಮಕ್ಕಳಿಗೆ ಕಲಿಯಲು ಶಾಲೆಗಳಿಲ್ಲ. ಲಾಹೋರ್ ನಲ್ಲಿ ಪತ್ರಿಕೆ ನಡೆಸುತ್ತಿರುವ ನನ್ನ ಸಹೋದರಿ ಮತ್ತವಳ ಪತಿ ಭಯೋತ್ಪಾದಕರ ಬೆದರಿಕೆಯಿಂದ ಪ್ರತಿನಿತ್ಯ ಪೊಲೀಸರ ರಕ್ಷಣೆಯಲ್ಲಿ ಬದುಕು ಸಾಗಿಸುತ್ತಿರುವರು.
    ನಿಜ ಹೇಳುತ್ತಿದ್ದೇನೆ ಭಾರತೀಯರು ನೀವು ಎಷ್ಟು ದ್ವೆಷಿಸುತ್ತಿರೋ ಅದಕ್ಕಿಂತ ಹೆಚ್ಚು ನಾನು ಈ ಉಗ್ರರನ್ನು ದ್ವೇಷಿಸುತ್ತೇನೆ. ಸಾವಿರಾರು ಪಾಕಿಸ್ತಾನಿಯರನ್ನು ಕೊಂದ ಇವರು ದಿನನಿತ್ಯ ನಮ್ಮನ್ನು ಸಾಯಿಸುತ್ತಿರುವರು. ಬೇರೆ ರಾಷ್ಟ್ರದೊಂದಿಗೆ ಯುದ್ಧ ಮಾಡಿ ಸಾಯುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪಾಕಿಸ್ತಾನಿ ಪ್ರಜೆಗಳು ಭಯೋತ್ಪಾದಕರ ಗುಂಡಿಗೆ ಬಲಿಯಾಗಿರುವರು.
     ಮುಂಬೈ ನಮಗೆ ದಿಲಿಪ ಕುಮಾರ್, ಅಮಿತಾಬ ಬಚ್ಚನ್, ಶಾರುಖ್ ಖಾನ್ ರಂಥ ಸೆಲೆಬ್ರಿಟಿಗಳನ್ನು ನೀಡಿದ ನಗರ. ಅದು ನಮ್ಮ ಕನಸುಗಳ ಮಾಯಾ ನಗರ. ನಿಮ್ಮ ಧೈರ್ಯಕ್ಕೆ ನನ್ನ ಸಲಾಂಗಳು. ಈ ಘಟನೆಗೆ ಕಾರಣರಾದವರನ್ನು ಖಂಡಿಸುತ್ತೇನೆ. ನಡೆದ ಈ ಅಸಂಗತ ಘಟನೆಯಿಂದ ಬಹು ಬೇಗ ಚೇತರಿಸಿಕೊಳ್ಳಿರೆಂದು ಹಾರೈಸುವೆ.
ಇಂತಿ ನಿಮ್ಮ
ಪಾಕಿಸ್ತಾನಿ ಸಹೋದರಿ

ಮೇಲಿನ ಪತ್ರ ಓದಿದ ನಂತರ ಭಯೋತ್ಪಾದನೆಗೆ ದೇಶ ಮತ್ತು ಧರ್ಮದ ಗಡಿ ಇಲ್ಲವೆಂಬ ಮಾತು ನಿಜ ಎಂದೆನಿಸಿತು.

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 




No comments:

Post a Comment