(ಪ್ರಜಾವಾಣಿ 'ಸಂಗತ' ಅಂಕಣ, ೦೪.೧೦.೨೦೨೪)
ಇತ್ತೀಚೆಗೆ ಕಾಲೇಜು ಅನುಮತಿಯ ನವೀಕರಣದ ಪರಿವೀಕ್ಷಣೆಗೆಂದು ಹೋಗಿದ್ದ ಪ್ರಾಧ್ಯಾಪಕರು ಅಲ್ಲಿನ ಸಂಶೋಧನಾ ಬೆಳವಣಿಗೆಯನ್ನು ನೋಡಿ ದಂಗಾದರು. ಒಂದು ವಿಭಾಗದ ಮೂರುಜನ ಪ್ರಾಧ್ಯಾಪಕರ ದಾಖಲೆಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿದಾಗ ಒಂದು ವರ್ಷದ ಅವಧಿಯಲ್ಲಿ ಆ ವಿಭಾಗ ಸಂಬಂಧಿತ ವಿಷಯದಲ್ಲಿ ಒಂಬತ್ತು ಸಂಶೋಧನಾ ಲೇಖನಗಳು ಪ್ರಕಟವಾಗಿರುವುದನ್ನು ದಾಖಲೆ ತೋರಿಸುತ್ತಿತ್ತು. ಆ ಒಂಬತ್ತು ಲೇಖನಗಳನ್ನು ಒಟ್ಟಿಗೆ ಸೇರಿಸಿ ನೋಡಿದಾಗ ಪ್ರಕಟವಾದ ಲೇಖನಗಳ ಸಂಖ್ಯೆ ಕೇವಲ ಮೂರು ಮಾತ್ರ ಎನ್ನುವ ಸತ್ಯ ಬಹಿರಂಗಗೊಂಡಿತು. ಅಂದರೆ ಪ್ರತಿಯೊಬ್ಬ ಪ್ರಾಧ್ಯಾಪಕ ತನ್ನ ಲೇಖನದಲ್ಲಿ ಉಳಿದ ಇಬ್ಬರು ಪ್ರಾಧ್ಯಾಪಕರ ಹೆಸರುಗಳನ್ನು ಸಹ ಲೇಖಕರೆಂದು ಸೇರಿಸಿದ್ದು ಕಂಡುಬಂತು. ಮೂವರೂ ಪ್ರಾಧ್ಯಾಪಕರು ಲೇಖನಗಳನ್ನು ಪ್ರತ್ಯೇಕವಾಗಿ ತೋರಿಸಿದ ಪರಿಣಾಮ ಮೂರು ಲೇಖನಗಳ ಸಂಖ್ಯೆ ಒಂಬತ್ತಾಗಿ ತ್ರಿಗುಣಗೊಂಡಿತ್ತು. ಬೋಧಕರು ತಮ್ಮ ಶೈಕ್ಷಣಿಕ ಸಾಧನೆಯ ಉತ್ಕೃಷ್ಟತೆಯ ಪ್ರದರ್ಶನಕ್ಕಾಗಿ ಈ ರೀತಿಯ ಕೊಡು-ಕೊಳ್ಳುವಿಕೆಯ ಮಾರ್ಗವನ್ನು ಅನುಸರಿಸುತ್ತಿರುವರು.
ಬೋಧಕರು ಸಂಶೋಧನಾ ಲೇಖನಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ತಮ್ಮ ಸಂಶೋಧನಾ ವಿದ್ಯಾರ್ಥಿಗಳನ್ನು ಅವಲಂಬಿಸಿರುವ ಇನ್ನೊಂದು ವಿಧಾನ ಚಾಲ್ತಿಯಲ್ಲಿದೆ. ವಿಶ್ವವಿದ್ಯಾಲಯ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕರು ತಮ್ಮ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ಸಂಶೋಧನಾ ಲೇಖನಗಳನ್ನು ಪ್ರಕಟಿಸುವಂತೆ ಒತ್ತಡ ತರುವ ಪ್ರವೃತ್ತಿ ಹೆಚ್ಚುತ್ತಿದೆ. ಸಂಶೋಧನಾ ವಿದ್ಯಾರ್ಥಿ ತನ್ನ ಸಂಶೋಧನಾ ಲೇಖನದಲ್ಲಿ ಮಾರ್ಗದರ್ಶಕರ ಹೆಸರನ್ನು ಪ್ರಥಮ ಇಲ್ಲವೇ ಸಹಲೇಖಕರೆಂದು ನಮೂದಿಸುವುದೇ ಇಂತಹದ್ದೊಂದು ಹುನ್ನಾರಕ್ಕೆ ಕಾರಣ. ಇಲ್ಲಿ ಕೂಡ ಪ್ರಾಧ್ಯಾಪಕರು ತಮ್ಮ ಸಂಶೋಧನಾ ವಿದ್ಯಾರ್ಥಿಗಳ ಲೇಖನಗಳ ಮೂಲಕ ತಮ್ಮ ಶೈಕ್ಷಣಿಕ ಸಾಧನೆಯ ಉತ್ಕೃಷ್ಟತೆಯನ್ನು ಪ್ರದರ್ಶಿಸಲು ಪ್ರಯತ್ನಿಸುವರು.
ಈ ನಡುವೆ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಬೋಧಕರಿಂದ ಉಚಿತ ಸಂಶೋಧನಾ ಲೇಖನಗಳ ಬೇಡಿಕೆ ಹೆಚ್ಚುತ್ತಿದೆ. ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಸಹಾಯಕ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿರುವ ನನ್ನ ಸ್ನೇಹಿತರಿಗೆ ಇತ್ತೀಚೆಗೆ ಸಂಶೋಧನಾ ವಿದ್ಯಾರ್ಥಿಯಿಂದ ನಿರ್ಧಿಷ್ಟ ಲೇಖನದ ಬೇಡಿಕೆ ಬಂತು. ವಿವಿಧ ಜಾಲತಾಣಗಳನ್ನು ಪರಿಶೀಲಿಸಿದಾಗ ಲೇಖನ ಪಡೆಯಲು ನಿರ್ಧಿಷ್ಟ ಶುಲ್ಕ ಪಾವತಿಸುವುದು ಕಡ್ಡಾಯವೆಂದು ತಿಳಿದುಬಂತು. ಈ ವಿಷಯವನ್ನು ಸಂಶೋಧನಾ ವಿದ್ಯಾರ್ಥಿಗೆ ತಿಳಿಸಿದಾಗ ಆತ ಉಚಿತವಾಗಿ ದೊರೆಯುವ ಬೇರೆ ಲೇಖನ ಓದಿದರಾಯಿತು ಎಂದು ಪ್ರತಿಕ್ರಿಯಿಸಿದ. ಸಂಶೋಧನೆಯ ವೇಳೆ ನಿರ್ಧಿಷ್ಟ ಲೇಖನಕ್ಕೆ ಬದಲಾಗಿ ಪರ್ಯಾಯ ಲೇಖನ ಎನ್ನುವ ಅನುಕೂಲಸಿಂಧುವಿನಿಂದ ಸಂಶೋಧನೆಯಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವುದಾದರೂ ಹೇಗೆ ಸಾಧ್ಯ ಎನ್ನುವುದು ನನ್ನ ಸ್ನೇಹಿತರ ಆತಂಕವಾಗಿತ್ತು. ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲ ಆಕರ್ಷಕ ಸಂಬಳ ಪಡೆಯುವ ಬೋಧಕರು ಕೂಡ ಉಚಿತ ಮಾಹಿತಿಗಾಗಿ ಬೇಡಿಕೆ ಸಲ್ಲಿಸುತ್ತಿರುವುದು ವಿಪರ್ಯಾಸದ ಸಂಗತಿ.
ವಿದ್ಯಾರ್ಥಿಗಳ ಮತ್ತು ಬೋಧಕರ ಈ ಉಚಿತ ಬೇಡಿಕೆಗೆ ಇಂದು ಮಾಹಿತಿಯನ್ನು ವಾಮಮಾರ್ಗದ ಮೂಲಕ ಓದುಗರಿಗೆ ತಲುಪಿಸಲು ಅನೇಕ ಜಾಲತಾಣಗಳು ಕಾರ್ಯಪ್ರವೃತ್ತವಾಗಿರುವುದೇ ಕಾರಣ. ಸಾಮಾನ್ಯ ಮಾಹಿತಿ ಮಾತ್ರವಲ್ಲದೆ ಸಂಶೋಧನಾ ಲೇಖನಗಳು ಕೂಡ ಓದುಗರಿಗೆ ಉಚಿತವಾಗಿ ಲಭ್ಯವಾಗುತ್ತಿವೆ. ಪ್ರಕಾಶಕರ ಅನುಮತಿ ಇಲ್ಲದೆ ಉಚಿತ ಸಂಶೋಧನಾ ಲೇಖನಗಳನ್ನು ಒದಗಿಸುವ ಜಾಲತಾಣಗಳನ್ನು ಪತ್ತೆಹಚ್ಚುವಲ್ಲಿ ಗ್ರಂಥಪಾಲಕರ ಪಾತ್ರ ಪ್ರಮುಖವಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಯಾವುದೇ ಮಾರ್ಗದಿಂದಾದರೂ ಸರಿ ಗ್ರಂಥಪಾಲಕ ತಮಗೆ ಬೇಕಾದ ಲೇಖನವನ್ನು ಉಚಿತವಾಗಿ ಒದಗಿಸಬೇಕೆಂದು ಅಪೇಕ್ಷಿಸುವರು. ತಮ್ಮ ವೃತ್ತಿಯ ಅಸ್ತಿತ್ವಕ್ಕಾಗಿ ಗ್ರಂಥಪಾಲಕರು ಹಲವು ವಿಧಾನಗಳ ಮೂಲಕ ಲೇಖನಗಳನ್ನು ಉಚಿತವಾಗಿ ಸಂಗ್ರಹಿಸಿ ಒದಗಿಸುತ್ತಿರುವರು.
ಇತ್ತೀಚಿನ ದಿನಗಳಲ್ಲಿ ಸಂಖ್ಯಾತ್ಮಕವಾಗಿ ಸಂಶೋಧನಾ ನಿಯತಕಾಲಿಕೆಗಳ (ಜರ್ನಲ್) ಪೇಪರ್ ಮಾದರಿಯ ಪ್ರಕಟಣೆ ಕ್ಷೀಣಿಸುತ್ತಿದೆ. ಹೆಚ್ಚಿನ ಪ್ರಕಾಶಕರು ವಿದ್ಯುನ್ಮಾನ (ಎಲೆಕ್ಟ್ರಾನಿಕ್) ಮಾದರಿಯಲ್ಲಿ ನಿಯತಕಾಲಿಕೆಗಳನ್ನು ಪ್ರಕಟಿಸಲು ಒಲವು ತೋರುತ್ತಿರುವರು. ಕಾಗದ ಮತ್ತು ಮುದ್ರಣ ಸಾಮಗ್ರಿಗಳ ಅಧಿಕ ಬೆಲೆ ಈ ಮಾರ್ಪಾಡಿಗೆ ಕಾರಣ. ಇಂಥ ಸನ್ನಿವೇಶದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಂಶೋಧನಾ ಲೇಖನಗಳನ್ನು ಶುಲ್ಕ ಪಾವತಿಸಿ ಪಡೆಯಲು ಸಿದ್ಧರಿಲ್ಲದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಜೊತೆಗೆ ಕೆಲವು ಜಾಲತಾಣಗಳು ಉಚಿತವಾಗಿ ಸಂಶೋಧನಾ ಲೇಖನಗಳನ್ನು ವಿತರಿಸುತ್ತಿರುವುದು ಪ್ರಕಾಶಕರ ಆರ್ಥಿಕ ಸಮಸ್ಯೆಯನ್ನು ಉಲ್ಬಣಗೊಳಿಸಿದೆ.
ಇನ್ನು ಸಂಶೋಧಕರ ಆಸಕ್ತಿ ಗಮನಿಸಿದರೆ ಸಂಶೋಧನೆಯ ಹಿಂದಿನ ಉದ್ದೇಶ ಹುದ್ದೆ ಮತ್ತು ವೇತನ ಬಡ್ತಿ ಎನ್ನುವುದು ಪಾರದರ್ಶಕ ಸತ್ಯವಾಗಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗ, ರಾಷ್ಟ್ರೀಯ ವೈದ್ಯಕೀಯ ಆಯೋಗ ಮತ್ತು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿಯಂಥ ಉನ್ನತ ಶಿಕ್ಷಣ ಸಮಿತಿಗಳು ಬೋಧಕರು ಸಂಶೋಧನಾ ಲೇಖನ ಪ್ರಕಟಿಸುವುದನ್ನು ಕಡ್ಡಾಯಗೊಳಿಸಿವೆ. ವೇತನ ಬಡ್ತಿ ಮತ್ತು ಹುದ್ದೆಯ ಬಡ್ತಿಗೆ ಸಂಬಂಧಿಸಿದಂತೆ ಸಂಶೋಧನಾ ಲೇಖನಗಳ ಪ್ರಕಟಣೆ ಕಡ್ಡಾಯವಾಗಿರುವುದರಿಂದ ಹೆಚ್ಚಿನ ಸಂಖ್ಯೆಯ ಶಿಕ್ಷಕರು ಇದನ್ನೊಂದು ಅನಿವಾರ್ಯ ನಿಯಮವೆನ್ನುವಂತೆ ಪಾಲಿಸುತ್ತಾರೆಯೇ ವಿನಾ ಸ್ವಯಂ ಆಸಕ್ತಿಯಿಂದ ತಮ್ಮನ್ನು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವುದು ತುಂಬಾ ವಿರಳ.
ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಎನ್ನುವುದು ನಿಂತ ನೀರಾಗಿದೆ. ಸಂಶೋಧನೆಯಲ್ಲಿ ಗುಣಮಟ್ಟದ ಕೊರತೆಯು ಎದ್ದು ಕಾಣುತ್ತಿದೆ. ಪ್ರತಿವರ್ಷದ ಸಂಶೋಧನಾ ಶೀರ್ಷಿಕೆಗಳನ್ನು ಗಮನಿಸಿದರೆ ವಿಷಯ ಪುನರಾವರ್ತನೆಯಾಗುತ್ತಿರುವುದು ಢಾಳಾಗಿ ಕಣ್ಣಿಗೆ ಗೋಚರಿಸುತ್ತದೆ. ದೀರ್ಘಕಾಲ ಅಧ್ಯಯನದಲ್ಲಿ ತೊಡಗಿಸಿಕೊಳ್ಳಲು ಸಿದ್ಧರಿಲ್ಲದ ಸಂಶೋಧಕರಲ್ಲಿ ನಕಲು ಮಾಡುವ ಪ್ರವೃತ್ತಿ ಬೆಳೆಯುತ್ತಿದೆ. ನಕಲನ್ನು ಪತ್ತೆಹಚ್ಚಲು ತಂತ್ರಾಂಶಗಳು ಬಳಕೆಯಲ್ಲಿವೆಯಾದರೂ ಅದೇ ತಂತ್ರಾಂಶಗಳ ಸಹಾಯದಿಂದ ನಕಲಿನ ಪ್ರಮಾಣವನ್ನು ಕಡಿಮೆಗೊಳಿಸಲು ಕೂಡ ಸಾಧ್ಯವಿದೆ ಎಂದು ಸಂಶೋಧಕರು ಬಲ್ಲರು.
ಒಟ್ಟಾರೆ ವೇತನ ಬಡ್ತಿ ಮತ್ತು ಉದ್ಯೋಗ ಬಡ್ತಿ ಶಿಕ್ಷಣಕ್ಷೇತ್ರದಲ್ಲಿ ಸಂಶೋಧನೆಯ ಮೊದಲ ಆದ್ಯತೆಯಾಗಿದೆ. ಜೊತೆಗೆ ಸಂಶೋಧನಾ ಲೇಖನಗಳನ್ನು ಖರೀದಿಸುವ ಔದಾರ್ಯವನ್ನು ಶಿಕ್ಷಕರು ತೋರುತ್ತಿಲ್ಲ. ಸಂಶೋಧನಾ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಈ ಉಚಿತ ಬೇಡಿಕೆಗೆ ಗ್ರಂಥಪಾಲಕರು ಮತ್ತು ಜಾಲತಾಣಗಳು ಸ್ಪಂದಿಸುತ್ತಿರುವುದು ಸಂಶೋಧನಾಕ್ಷೇತ್ರದ ದುರಂತ. ಗುಣಮಟ್ಟದ ಸಂಶೋಧನೆಗಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮಾತ್ರವಲ್ಲದೆ ಗ್ರಂಥಪಾಲಕರ ಹಾಗೂ ಜಾಲತಾಣಗಳ ನಿರ್ವಾಹಕರ ಮನೋಭಾವದಲ್ಲೂ ಸಾಕಷ್ಟು ಬದಲಾವಣೆಗಳಾಗಬೇಕಾದದ್ದು ಸಧ್ಯದ ಅಗತ್ಯವಾಗಿದೆ.
-ರಾಜಕುಮಾರ ಕುಲಕರ್ಣಿ
No comments:
Post a Comment