Monday, May 5, 2025

ವಿ.ವಿ.ಗಳಲ್ಲಿ ಸಂಶೋಧನೆ: ನಿಂತ ನೀರು?

 



(ಪ್ರಜಾವಾಣಿ 'ಸಂಗತ' ಅಂಕಣ, ೦೪.೧೦.೨೦೨೪)

   ಇತ್ತೀಚೆಗೆ ಕಾಲೇಜು ಅನುಮತಿಯ ನವೀಕರಣದ ಪರಿವೀಕ್ಷಣೆಗೆಂದು ಹೋಗಿದ್ದ ಪ್ರಾಧ್ಯಾಪಕರು ಅಲ್ಲಿನ ಸಂಶೋಧನಾ ಬೆಳವಣಿಗೆಯನ್ನು ನೋಡಿ ದಂಗಾದರು. ಒಂದು ವಿಭಾಗದ ಮೂರುಜನ ಪ್ರಾಧ್ಯಾಪಕರ ದಾಖಲೆಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿದಾಗ ಒಂದು ವರ್ಷದ ಅವಧಿಯಲ್ಲಿ ಆ ವಿಭಾಗ ಸಂಬಂಧಿತ ವಿಷಯದಲ್ಲಿ ಒಂಬತ್ತು ಸಂಶೋಧನಾ ಲೇಖನಗಳು ಪ್ರಕಟವಾಗಿರುವುದನ್ನು ದಾಖಲೆ ತೋರಿಸುತ್ತಿತ್ತು. ಆ ಒಂಬತ್ತು ಲೇಖನಗಳನ್ನು ಒಟ್ಟಿಗೆ ಸೇರಿಸಿ ನೋಡಿದಾಗ ಪ್ರಕಟವಾದ ಲೇಖನಗಳ ಸಂಖ್ಯೆ ಕೇವಲ ಮೂರು ಮಾತ್ರ ಎನ್ನುವ ಸತ್ಯ ಬಹಿರಂಗಗೊಂಡಿತು. ಅಂದರೆ ಪ್ರತಿಯೊಬ್ಬ ಪ್ರಾಧ್ಯಾಪಕ ತನ್ನ ಲೇಖನದಲ್ಲಿ ಉಳಿದ ಇಬ್ಬರು ಪ್ರಾಧ್ಯಾಪಕರ ಹೆಸರುಗಳನ್ನು ಸಹ ಲೇಖಕರೆಂದು ಸೇರಿಸಿದ್ದು ಕಂಡುಬಂತು. ಮೂವರೂ ಪ್ರಾಧ್ಯಾಪಕರು ಲೇಖನಗಳನ್ನು ಪ್ರತ್ಯೇಕವಾಗಿ ತೋರಿಸಿದ ಪರಿಣಾಮ ಮೂರು ಲೇಖನಗಳ ಸಂಖ್ಯೆ ಒಂಬತ್ತಾಗಿ ತ್ರಿಗುಣಗೊಂಡಿತ್ತು. ಬೋಧಕರು ತಮ್ಮ ಶೈಕ್ಷಣಿಕ ಸಾಧನೆಯ ಉತ್ಕೃಷ್ಟತೆಯ ಪ್ರದರ್ಶನಕ್ಕಾಗಿ ಈ ರೀತಿಯ ಕೊಡು-ಕೊಳ್ಳುವಿಕೆಯ ಮಾರ್ಗವನ್ನು ಅನುಸರಿಸುತ್ತಿರುವರು. 

ಬೋಧಕರು ಸಂಶೋಧನಾ ಲೇಖನಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ತಮ್ಮ ಸಂಶೋಧನಾ ವಿದ್ಯಾರ್ಥಿಗಳನ್ನು ಅವಲಂಬಿಸಿರುವ ಇನ್ನೊಂದು ವಿಧಾನ ಚಾಲ್ತಿಯಲ್ಲಿದೆ. ವಿಶ್ವವಿದ್ಯಾಲಯ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕರು ತಮ್ಮ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ಸಂಶೋಧನಾ ಲೇಖನಗಳನ್ನು ಪ್ರಕಟಿಸುವಂತೆ ಒತ್ತಡ ತರುವ ಪ್ರವೃತ್ತಿ ಹೆಚ್ಚುತ್ತಿದೆ. ಸಂಶೋಧನಾ ವಿದ್ಯಾರ್ಥಿ ತನ್ನ ಸಂಶೋಧನಾ ಲೇಖನದಲ್ಲಿ ಮಾರ್ಗದರ್ಶಕರ ಹೆಸರನ್ನು ಪ್ರಥಮ ಇಲ್ಲವೇ ಸಹಲೇಖಕರೆಂದು ನಮೂದಿಸುವುದೇ ಇಂತಹದ್ದೊಂದು ಹುನ್ನಾರಕ್ಕೆ ಕಾರಣ. ಇಲ್ಲಿ ಕೂಡ ಪ್ರಾಧ್ಯಾಪಕರು ತಮ್ಮ ಸಂಶೋಧನಾ ವಿದ್ಯಾರ್ಥಿಗಳ ಲೇಖನಗಳ ಮೂಲಕ ತಮ್ಮ ಶೈಕ್ಷಣಿಕ ಸಾಧನೆಯ ಉತ್ಕೃಷ್ಟತೆಯನ್ನು ಪ್ರದರ್ಶಿಸಲು ಪ್ರಯತ್ನಿಸುವರು. 

ಈ ನಡುವೆ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಬೋಧಕರಿಂದ ಉಚಿತ ಸಂಶೋಧನಾ ಲೇಖನಗಳ ಬೇಡಿಕೆ ಹೆಚ್ಚುತ್ತಿದೆ. ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಸಹಾಯಕ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿರುವ ನನ್ನ ಸ್ನೇಹಿತರಿಗೆ ಇತ್ತೀಚೆಗೆ ಸಂಶೋಧನಾ ವಿದ್ಯಾರ್ಥಿಯಿಂದ ನಿರ್ಧಿಷ್ಟ ಲೇಖನದ ಬೇಡಿಕೆ ಬಂತು. ವಿವಿಧ ಜಾಲತಾಣಗಳನ್ನು ಪರಿಶೀಲಿಸಿದಾಗ ಲೇಖನ ಪಡೆಯಲು ನಿರ್ಧಿಷ್ಟ ಶುಲ್ಕ ಪಾವತಿಸುವುದು ಕಡ್ಡಾಯವೆಂದು ತಿಳಿದುಬಂತು. ಈ ವಿಷಯವನ್ನು ಸಂಶೋಧನಾ ವಿದ್ಯಾರ್ಥಿಗೆ ತಿಳಿಸಿದಾಗ ಆತ ಉಚಿತವಾಗಿ ದೊರೆಯುವ ಬೇರೆ ಲೇಖನ ಓದಿದರಾಯಿತು ಎಂದು ಪ್ರತಿಕ್ರಿಯಿಸಿದ. ಸಂಶೋಧನೆಯ ವೇಳೆ ನಿರ್ಧಿಷ್ಟ ಲೇಖನಕ್ಕೆ ಬದಲಾಗಿ ಪರ್ಯಾಯ ಲೇಖನ ಎನ್ನುವ ಅನುಕೂಲಸಿಂಧುವಿನಿಂದ ಸಂಶೋಧನೆಯಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವುದಾದರೂ ಹೇಗೆ ಸಾಧ್ಯ ಎನ್ನುವುದು ನನ್ನ ಸ್ನೇಹಿತರ ಆತಂಕವಾಗಿತ್ತು. ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲ ಆಕರ್ಷಕ ಸಂಬಳ ಪಡೆಯುವ ಬೋಧಕರು ಕೂಡ ಉಚಿತ ಮಾಹಿತಿಗಾಗಿ ಬೇಡಿಕೆ ಸಲ್ಲಿಸುತ್ತಿರುವುದು ವಿಪರ್ಯಾಸದ ಸಂಗತಿ.

ವಿದ್ಯಾರ್ಥಿಗಳ ಮತ್ತು ಬೋಧಕರ ಈ ಉಚಿತ ಬೇಡಿಕೆಗೆ ಇಂದು ಮಾಹಿತಿಯನ್ನು ವಾಮಮಾರ್ಗದ ಮೂಲಕ ಓದುಗರಿಗೆ ತಲುಪಿಸಲು ಅನೇಕ ಜಾಲತಾಣಗಳು ಕಾರ್ಯಪ್ರವೃತ್ತವಾಗಿರುವುದೇ ಕಾರಣ. ಸಾಮಾನ್ಯ ಮಾಹಿತಿ ಮಾತ್ರವಲ್ಲದೆ ಸಂಶೋಧನಾ ಲೇಖನಗಳು ಕೂಡ ಓದುಗರಿಗೆ ಉಚಿತವಾಗಿ ಲಭ್ಯವಾಗುತ್ತಿವೆ. ಪ್ರಕಾಶಕರ ಅನುಮತಿ ಇಲ್ಲದೆ  ಉಚಿತ ಸಂಶೋಧನಾ ಲೇಖನಗಳನ್ನು ಒದಗಿಸುವ ಜಾಲತಾಣಗಳನ್ನು ಪತ್ತೆಹಚ್ಚುವಲ್ಲಿ ಗ್ರಂಥಪಾಲಕರ ಪಾತ್ರ ಪ್ರಮುಖವಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಯಾವುದೇ ಮಾರ್ಗದಿಂದಾದರೂ ಸರಿ ಗ್ರಂಥಪಾಲಕ ತಮಗೆ ಬೇಕಾದ ಲೇಖನವನ್ನು ಉಚಿತವಾಗಿ ಒದಗಿಸಬೇಕೆಂದು ಅಪೇಕ್ಷಿಸುವರು. ತಮ್ಮ ವೃತ್ತಿಯ ಅಸ್ತಿತ್ವಕ್ಕಾಗಿ ಗ್ರಂಥಪಾಲಕರು ಹಲವು ವಿಧಾನಗಳ ಮೂಲಕ ಲೇಖನಗಳನ್ನು ಉಚಿತವಾಗಿ ಸಂಗ್ರಹಿಸಿ ಒದಗಿಸುತ್ತಿರುವರು.  

ಇತ್ತೀಚಿನ ದಿನಗಳಲ್ಲಿ ಸಂಖ್ಯಾತ್ಮಕವಾಗಿ ಸಂಶೋಧನಾ ನಿಯತಕಾಲಿಕೆಗಳ (ಜರ್ನಲ್) ಪೇಪರ್ ಮಾದರಿಯ ಪ್ರಕಟಣೆ ಕ್ಷೀಣಿಸುತ್ತಿದೆ. ಹೆಚ್ಚಿನ ಪ್ರಕಾಶಕರು ವಿದ್ಯುನ್ಮಾನ (ಎಲೆಕ್ಟ್ರಾನಿಕ್) ಮಾದರಿಯಲ್ಲಿ ನಿಯತಕಾಲಿಕೆಗಳನ್ನು ಪ್ರಕಟಿಸಲು ಒಲವು ತೋರುತ್ತಿರುವರು. ಕಾಗದ ಮತ್ತು ಮುದ್ರಣ ಸಾಮಗ್ರಿಗಳ ಅಧಿಕ ಬೆಲೆ ಈ ಮಾರ್ಪಾಡಿಗೆ ಕಾರಣ. ಇಂಥ ಸನ್ನಿವೇಶದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಂಶೋಧನಾ ಲೇಖನಗಳನ್ನು ಶುಲ್ಕ ಪಾವತಿಸಿ ಪಡೆಯಲು ಸಿದ್ಧರಿಲ್ಲದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಜೊತೆಗೆ ಕೆಲವು ಜಾಲತಾಣಗಳು ಉಚಿತವಾಗಿ ಸಂಶೋಧನಾ ಲೇಖನಗಳನ್ನು ವಿತರಿಸುತ್ತಿರುವುದು ಪ್ರಕಾಶಕರ ಆರ್ಥಿಕ ಸಮಸ್ಯೆಯನ್ನು ಉಲ್ಬಣಗೊಳಿಸಿದೆ.  

ಇನ್ನು ಸಂಶೋಧಕರ ಆಸಕ್ತಿ ಗಮನಿಸಿದರೆ ಸಂಶೋಧನೆಯ ಹಿಂದಿನ ಉದ್ದೇಶ ಹುದ್ದೆ ಮತ್ತು ವೇತನ ಬಡ್ತಿ ಎನ್ನುವುದು ಪಾರದರ್ಶಕ ಸತ್ಯವಾಗಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗ, ರಾಷ್ಟ್ರೀಯ ವೈದ್ಯಕೀಯ ಆಯೋಗ ಮತ್ತು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿಯಂಥ ಉನ್ನತ ಶಿಕ್ಷಣ ಸಮಿತಿಗಳು ಬೋಧಕರು ಸಂಶೋಧನಾ ಲೇಖನ ಪ್ರಕಟಿಸುವುದನ್ನು ಕಡ್ಡಾಯಗೊಳಿಸಿವೆ. ವೇತನ ಬಡ್ತಿ ಮತ್ತು ಹುದ್ದೆಯ ಬಡ್ತಿಗೆ ಸಂಬಂಧಿಸಿದಂತೆ ಸಂಶೋಧನಾ ಲೇಖನಗಳ ಪ್ರಕಟಣೆ ಕಡ್ಡಾಯವಾಗಿರುವುದರಿಂದ ಹೆಚ್ಚಿನ ಸಂಖ್ಯೆಯ ಶಿಕ್ಷಕರು ಇದನ್ನೊಂದು ಅನಿವಾರ್ಯ ನಿಯಮವೆನ್ನುವಂತೆ ಪಾಲಿಸುತ್ತಾರೆಯೇ ವಿನಾ ಸ್ವಯಂ ಆಸಕ್ತಿಯಿಂದ ತಮ್ಮನ್ನು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವುದು ತುಂಬಾ ವಿರಳ.

ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಎನ್ನುವುದು ನಿಂತ ನೀರಾಗಿದೆ. ಸಂಶೋಧನೆಯಲ್ಲಿ ಗುಣಮಟ್ಟದ ಕೊರತೆಯು ಎದ್ದು ಕಾಣುತ್ತಿದೆ. ಪ್ರತಿವರ್ಷದ ಸಂಶೋಧನಾ ಶೀರ್ಷಿಕೆಗಳನ್ನು ಗಮನಿಸಿದರೆ ವಿಷಯ ಪುನರಾವರ್ತನೆಯಾಗುತ್ತಿರುವುದು ಢಾಳಾಗಿ ಕಣ್ಣಿಗೆ ಗೋಚರಿಸುತ್ತದೆ. ದೀರ್ಘಕಾಲ ಅಧ್ಯಯನದಲ್ಲಿ ತೊಡಗಿಸಿಕೊಳ್ಳಲು ಸಿದ್ಧರಿಲ್ಲದ ಸಂಶೋಧಕರಲ್ಲಿ ನಕಲು ಮಾಡುವ ಪ್ರವೃತ್ತಿ ಬೆಳೆಯುತ್ತಿದೆ. ನಕಲನ್ನು ಪತ್ತೆಹಚ್ಚಲು ತಂತ್ರಾಂಶಗಳು ಬಳಕೆಯಲ್ಲಿವೆಯಾದರೂ ಅದೇ ತಂತ್ರಾಂಶಗಳ ಸಹಾಯದಿಂದ ನಕಲಿನ ಪ್ರಮಾಣವನ್ನು ಕಡಿಮೆಗೊಳಿಸಲು ಕೂಡ ಸಾಧ್ಯವಿದೆ ಎಂದು ಸಂಶೋಧಕರು ಬಲ್ಲರು. 

ಒಟ್ಟಾರೆ ವೇತನ ಬಡ್ತಿ ಮತ್ತು ಉದ್ಯೋಗ ಬಡ್ತಿ ಶಿಕ್ಷಣಕ್ಷೇತ್ರದಲ್ಲಿ ಸಂಶೋಧನೆಯ ಮೊದಲ ಆದ್ಯತೆಯಾಗಿದೆ. ಜೊತೆಗೆ ಸಂಶೋಧನಾ ಲೇಖನಗಳನ್ನು ಖರೀದಿಸುವ ಔದಾರ್ಯವನ್ನು ಶಿಕ್ಷಕರು ತೋರುತ್ತಿಲ್ಲ. ಸಂಶೋಧನಾ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಈ ಉಚಿತ ಬೇಡಿಕೆಗೆ ಗ್ರಂಥಪಾಲಕರು ಮತ್ತು ಜಾಲತಾಣಗಳು ಸ್ಪಂದಿಸುತ್ತಿರುವುದು ಸಂಶೋಧನಾಕ್ಷೇತ್ರದ ದುರಂತ. ಗುಣಮಟ್ಟದ ಸಂಶೋಧನೆಗಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮಾತ್ರವಲ್ಲದೆ ಗ್ರಂಥಪಾಲಕರ ಹಾಗೂ ಜಾಲತಾಣಗಳ ನಿರ್ವಾಹಕರ ಮನೋಭಾವದಲ್ಲೂ ಸಾಕಷ್ಟು ಬದಲಾವಣೆಗಳಾಗಬೇಕಾದದ್ದು ಸಧ್ಯದ ಅಗತ್ಯವಾಗಿದೆ.  

-ರಾಜಕುಮಾರ ಕುಲಕರ್ಣಿ

Wednesday, April 9, 2025

ಪುಸ್ತಕೋದ್ಯಮ: ಮುಳುವಾಗುತ್ತಿದೆ ‘ಗಿಮಿಕ್’

   




(ಪ್ರಜಾವಾಣಿ 'ಸಂಗತ' ಅಂಕಣ, ೦೬.೦೯.೨೦೨೪)

    ಕನ್ನಡ ಪುಸ್ತಕೋದ್ಯಮ ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಪುಸ್ತಕ ಪ್ರಕಾಶಕರಾದ ಸೃಷ್ಟಿ ನಾಗೇಶ್ ತಮ್ಮ ಲೇಖನದ (ಚರ್ಚೆ, ಸೆ.3) ಮೂಲಕ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಅವರು ಹೇಳಿದಂತೆ ಪ್ರಭಾವಶಾಲಿ ಪ್ರಕಾಶಕರು ಮಾತ್ರ ಗ್ರಂಥಾಲಯ ಇಲಾಖೆಗೆ ಪುಸ್ತಕಗಳನ್ನು ಪೂರೈಸಿ ಹಣ ಮಾಡಿಕೊಳ್ಳುತ್ತಿರುವರು ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ. ಪ್ರಬಲ ಪ್ರಕಾಶಕರು ತಾವು ಹಣಗಳಿಸುವ ಉಮೇದಿಯಲ್ಲಿ ಸಣ್ಣ ಪುಟ್ಟ ಪ್ರಕಾಶನ ಸಂಸ್ಥೆಗಳನ್ನು ಮೂಲೆಗುಂಪಾಗಿಸುತ್ತಿರುವರು.

ಇತ್ತೀಚಿನ ದಿನಗಳಲ್ಲಿ ಪ್ರಕಾಶಕರ ನಡುವೆ ಅನಾರೋಗ್ಯಕರ ಸ್ಪರ್ಧೆ ನಡೆಯುತ್ತಿರುವುದು ಸುಳ್ಳಲ್ಲ. ಕೆಲವು ಪ್ರಕಾಶಕರು ಗ್ರಂಥಾಲಯ ಇಲಾಖೆಯನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡು ಇನ್ನುಳಿದ ಪ್ರಕಾಶಕರನ್ನು ಹತ್ತಿರವೂ ಸುಳಿಯಗೊಡುತ್ತಿಲ್ಲ. ಪ್ರಭಾವಶಾಲಿ ಪ್ರಕಾಶಕರು ಹತ್ತಾರು ಪ್ರಕಾಶನ ಸಂಸ್ಥೆಗಳ ಹೆಸರಿನಲ್ಲಿ ಪುಸ್ತಕಗಳನ್ನು ಪ್ರಕಟಿಸಿ ಗ್ರಂಥಾಲಯ ಇಲಾಖೆಗೆ ಪೂರೈಸುತ್ತಿರುವರು. ಒಬ್ಬ ಪ್ರಕಾಶಕ ಹತ್ತು ಹೆಸರುಗಳಿಂದ ಪುಸ್ತಕಗಳನ್ನು ಇಲಾಖೆಗೆ ಪೂರೈಸಿದರೆ ಆಗ ಒಂಬತ್ತು ಪ್ರಕಾಶಕರ ಅವಕಾಶಗಳನ್ನು ಕಸಿದುಕೊಂಡಂತಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಪ್ರಾಮಾಣಿಕವಾಗಿ ಒಂದೇ ಪ್ರಕಾಶನ ಸಂಸ್ಥೆಯ ಹೆಸರಿನಿಂದ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಪ್ರಕಾಶಕರು ಬದುಕುಳಿಯುವುದಾದರೂ ಹೇಗೆ ಸಾಧ್ಯ?. ಇನ್ನು ಕೆಲವು ಪ್ರಕಾಶಕರು ಪುಸ್ತಕ ಪ್ರಕಾಶನವನ್ನು ಪುಸ್ತಕೋದ್ಯಮವಾಗಿಸಲು ಹಲವಾರು ತಂತ್ರಗಳನ್ನು ಬಳಸಿಕೊಳ್ಳುತ್ತಿರುವರು. ಪುಸ್ತಕ ಬಿಡುಗಡೆ, ಮಾರಾಟ, ಚರ್ಚೆ, ಸಂವಾದಗಳು ಇಂದು ಹೊಸ ಪರಿವೇಷದಲ್ಲಿ ಕಾಣಿಸತೊಡಗಿವೆ. ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಪಾನಗೋಷ್ಠಿ ಮತ್ತು ಔತಣಕೂಟಗಳ ಮೆರಗು ನೀಡಲಾಗುತ್ತಿದೆ. ಇದನ್ನೆಲ್ಲ ಆರ್ಥಿಕವಾಗಿ ಬಲಶಾಲಿಗಳಾದ ಪ್ರಕಾಶಕರು ಮಾತ್ರ ಮಾಡಲು ಸಾಧ್ಯ. ಹೀಗಾಗಿ ಬಲಶಾಲಿಗಳಲ್ಲದ ಪ್ರಕಾಶಕರು ಒಂದೆರಡು ಪುಸ್ತಕಗಳ ಪ್ರಕಟಣೆಯಲ್ಲೇ ಹೈರಾಣಾಗಿ ಪುಸ್ತಕ ಪ್ರಕಟಣೆಯ ಕೆಲಸವನ್ನೆ ಕೈಬಿಡುತ್ತಿರುವರು. 

ಪ್ರತಿ ಪ್ರಕಾಶಕನೂ ಗ್ರಂಥಾಲಯ ಅವಲಂಬಿತನೆ ಎನ್ನುವುದು ಒಪ್ಪುವಂತಹ ಮಾತು. ಈ ವಿಷಯದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ತನ್ನ ಯೋಜನೆ ಮತ್ತು ನಿಯಮಗಳಲ್ಲಿ ಸಾಕಷ್ಟು ಬದಲಾವಣೆ ಹಾಗೂ ಸಡಿಲತೆಯನ್ನು ತರುವ ಅಗತ್ಯವಿದೆ. ಒಂದು ಪ್ರಕಾಶನ ಸಂಸ್ಥೆಯಿಂದ ಒಂದೊಂದು ಪುಸ್ತಕದ ಮುನ್ನೂರು ಪ್ರತಿಗಳನ್ನು ಮಾತ್ರ ಇಲಾಖೆ ಖರೀದಿಸುತ್ತದೆ. ಆಯ್ಕೆ ಸಮಿತಿಯು ಪ್ರಕಾಶನ ಸಂಸ್ಥೆ ಒಂದು ವರ್ಷದಲ್ಲಿ ಪ್ರಕಟಿಸಿದ ಎಲ್ಲ ಪುಸ್ತಕಗಳನ್ನು ಆಯ್ಕೆ ಮಾಡಲಾರದು. ಆಯ್ಕೆಗೆಂದು ಕಳುಹಿಸಿದ ಪುಸ್ತಕಗಳಲ್ಲಿ ಯಾವುದೋ ಮಾನದಂಡವನ್ನಾಧರಿಸಿ ಕೆಲವು ಪುಸ್ತಕಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು. ಒಂದರ್ಥದಲ್ಲಿ ಇದು ಕುಂಭಕರ್ಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ. ಗ್ರಂಥಾಲಯ ಇಲಾಖೆಯ ಈ ನಡೆಯನ್ನು ಗಮನಿಸಿಯೇ ಕೆಲವು ಪ್ರಕಾಶಕರು ತಾವು ಒಂದು ವರ್ಷದಲ್ಲಿ ಪ್ರಕಟಿಸಿದ ಒಟ್ಟು ಪುಸ್ತಕಗಳನ್ನು ಬೇರೆ ಬೇರೆ ಪ್ರಕಾಶನ ಸಂಸ್ಥೆಗಳ ಹೆಸರಿನಡಿ ಆಯ್ಕೆಗೆ ಕಳುಹಿಸುವರು. ಇದು ಇಲಾಖೆಗೆ ಗೊತ್ತಿಲ್ಲದ ಸತ್ಯವೇನಲ್ಲ. 

ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಮಾತ್ರವಲ್ಲದೆ ಹಳ್ಳಿಗಳಲ್ಲೂ ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದೆ ಎನ್ನುವ ಸತ್ಯ ಗ್ರಂಥಾಲಯ ಇಲಾಖೆಗೆ ಮನವರಿಕೆಯಾಗಬೇಕು. ಸಾಕಷ್ಟು ಸಂಖ್ಯೆಯಲ್ಲಿ ಗ್ರಂಥಾಲಯಗಳು ಸ್ಥಾಪನೆಯಾಗಿರುವಾಗ ಪ್ರಕಾಶಕರಿಂದ ಖರೀದಿಸುವ ಪುಸ್ತಕಗಳ ಸಂಖ್ಯೆ ಹೆಚ್ಚಬೇಕು. ಒಂದೆಡೆ ಇದು ಪ್ರಕಾಶಕರನ್ನು ಆರ್ಥಿಕವಾಗಿ ಪೆÇ್ರೀತ್ಸಾಹಿಸಿದಂತಾದರೆ ಇನ್ನೊಂದೆಡೆ ಓದುಗರಿಗೆ ಓದಲು ಹೆಚ್ಚಿನ ಪುಸ್ತಕಗಳನ್ನು ಒದಗಿಸಿದಂತಾಗುತ್ತದೆ. ವಿಪರ್ಯಾಸದ ಸಂಗತಿ ಎಂದರೆ ಸರ್ಕಾರ ಗ್ರಂಥಾಲಯವನ್ನು ಅನುತ್ಪಾದನಾ ಕ್ಷೇತ್ರವೆಂದು ಪರಿಗಣಿಸಿದೆ. ಆರ್ಥಿಕ ಬೆಳವಣಿಗೆಯೊಂದೆ ಬೆಳವಣಿಗೆಯಲ್ಲ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಬೆಳವಣಿಗೆಗಳು ಕೂಡ ನಾಡಿನ ಬೆಳವಣಿಗೆಯ ಭಾಗವೆಂದು ಸರ್ಕಾರ ಅರಿತುಕೊಳ್ಳಬೇಕು.

ಇಂದು ಪ್ರಕಾಶಕರು ಮಾತ್ರ ಸಮಸ್ಯೆಗಳನ್ನು ಎದುರಿಸುತ್ತಿಲ್ಲ. ಹೊಸ ಲೇಖಕರು ಕೂಡ ಸಂಕಷ್ಟದ ಹಾದಿಯಲ್ಲಿ ನಿಂತಿರುವರು. ಪ್ರಕಾಶಕರು ಹೊಸ ಲೇಖಕರ ಪುಸ್ತಕಗಳನ್ನು ಪ್ರಕಟಿಸಲು ಮುಂದೆ ಬರುತ್ತಿಲ್ಲ. ಗೌರವಧನದ ಯಾವ ನಿರೀಕ್ಷೆಯೂ ಇಲ್ಲದೆ ಹೊಸ ಲೇಖಕರು ಯಾರಾದರೂ ತಮ್ಮ ಪುಸ್ತಕಗಳನ್ನು ಪ್ರಕಟಿಸಿದರೆ ಸಾಕು ಎನ್ನುವ ಮನಸ್ಥಿತಿಗೆ ತಲುಪಿರುವರು. ಸ್ಥಾಪಿತ ಹಾಗೂ ಜನಪ್ರಿಯ ಲೇಖಕರ ಪುಸ್ತಕಗಳನ್ನು ಪ್ರಕಟಿಸಲು ಮುಂದಾಗುವ ಪ್ರಕಾಶಕರಿಗೆ ಹೊಸ ಲೇಖಕರ ಪುಸ್ತಕಗಳನ್ನು ಪ್ರಕಟಿಸಲು ಬಂಡವಾಳ ಹೂಡುವ ಧೈರ್ಯ ಇಲ್ಲವಾಗಿದೆ. ಹೆಚ್ಚಿನ ಪ್ರಕಾಶಕರು ಹಾಕಿದ ಬಂಡವಳ ವಾಪಸ್ಸಾಗಲು ಅವರು ನೆಚ್ಚಿಕೊಂಡಿರುವುದು ಗ್ರಂಥಾಲಯ ಇಲಾಖೆಯನ್ನು. ಅಲ್ಲಿಯೂ ನೂರೆಂಟು ರಾಜಕೀಯಗಳಿವೆ. ಪುಸ್ತಕಗಳನ್ನು ಪೂರೈಸಿ ಹಣ ಪಡೆಯುವುದು ಅದೊಂದು ಹರಸಾಹಸದ ಕೆಲಸ ಎನ್ನುವಂತಾಗಿದೆ. ಜೊತೆಗೆ ಗ್ರಂಥಾಲಯ ಇಲಾಖೆಗೆ ಪುಸ್ತಕಗಳನ್ನು ಪೂರೈಸಲು ಪ್ರಬಲ ಪ್ರಕಾಶನ ಸಂಸ್ಥೆಗಳೊಂದಿಗೆ ಸ್ಪರ್ಧೆಗೆ ಇಳಿಯಬೇಕಾದ ವಾತಾವರಣ ನಿರ್ಮಾಣವಾಗಿದೆ. ಇಲ್ಲಿ ಪ್ರಭಾವಶಾಲಿ ಪ್ರಕಾಶಕ ಮಾತ್ರ ಸ್ಪರ್ಧೆಯಲ್ಲಿ ಗೆಲುವು ಸಾಧಿಸುತ್ತಾನೆ. 

ಇನ್ನು ಕೆಲವು ಲೇಖಕರು ಸ್ವತ: ಪ್ರಕಾಶಕರಾಗಿ ಪುಸ್ತಕಗಳನ್ನು ಪ್ರಕಟಿಸುತ್ತಿರುವರು. ಅಚ್ಚರಿಯ ಸಂಗತಿ ಎಂದರೆ ಪುಸ್ತಕ ಪ್ರಕಟಿಸಿದ ನಾಲ್ಕೈದು ತಿಂಗಳುಗಳಲ್ಲಿ ಎರಡನೆ ಮುದ್ರಣವನ್ನು ಹೊರತರುತ್ತಿರುವರು. ಓದುಗರ ನಿರುತ್ಸಾಹ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಸಹಕಾರ, ಪುಸ್ತಕ ಮಳಿಗೆಗಳ ಕೊರತೆಯ ನಡುವೆ ಕೆಲವು ಲೇಖಕರು ಕಡಿಮೆ ಅವಧಿಯಲ್ಲಿ ಎರಡನೆ ಮುದ್ರಣವನ್ನು ತರುತ್ತಿರುವರು. ಕೇವಲ ಇನ್ನೂರು, ಮುನ್ನೂರು ಪ್ರತಿಗಳನ್ನು ಪ್ರಕಟಿಸಿ ಮೊದಲ ಮುದ್ರಣದ ಪ್ರತಿಗಳೆಲ್ಲ ಖಾಲಿಯಾದವು ಎನ್ನುವಂತಹ ವಾತಾವರಣವನ್ನು ಸೃಷ್ಟಿಸುತ್ತಿರುವರೆಂದು ನಾಗೇಶ ತಮ್ಮ ಲೇಖನದಲ್ಲಿ ಉಲ್ಲೇಖಿಸಿರುವರು. ಹೀಗೆ ಮಾಡುವುದರ ಮೂಲಕ ಲೇಖಕರು ಏನು ಸಾಧಿಸಿದಂತಾಗುತ್ತದೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಇಂತಹ ಕೃತ್ಯಗಳು ಆ ಲೇಖಕನನ್ನು ಜನಪ್ರಿಯ ಸಾಹಿತಿಯನ್ನಾಗಿ ರೂಪಿಸುವುದಾಗಲಿ ಮತ್ತು ಪುಸ್ತಕೋದ್ಯಮಕ್ಕೆ ನೆರವಾಗುವುದಾಗಲಿ ಮಾಡಲಾರವು. ಕೊನೆಗೂ ಓದುಗರ ವಲಯದಲ್ಲಿ ಹೆಚ್ಚು ದಿನಗಳ ಕಾಲ ನೆನಪಿನಲ್ಲಿ ಉಳಿಯುವುದು ಗಟ್ಟಿ ಸಾಹಿತ್ಯವೇ ವಿನಾ ಇಂತಹ ಗಿಮಿಕ್‍ಗಳಲ್ಲ. ಲೇಖಕರ ಮತ್ತು ಪ್ರಕಾಶಕರ ಇಂತಹ ಗಿಮಿಕ್‍ಗಳು ಪ್ರಕಾಶನ ಸಂಸ್ಥೆಗಳಿಗೆ ಮುಳುವಾಗುತ್ತಿವೆ.

ಪುಸ್ತಕಗಳನ್ನು ಖರೀದಿಸಿ ಓದುತ್ತಿರುವ ಓದುಗರಿಗೂ ಜಾಲತಾಣಗಳಲ್ಲಿ ಸಂಪೂರ್ಣ ಮಾಹಿತಿ ಸಿಗುತ್ತಿಲ್ಲ. ಯಾವುದೇ ಪ್ರಕಾಶನ ಸಂಸ್ಥೆ ಅಥವಾ ಪುಸ್ತಕ ಮಳಿಗೆಯ ಜಾಲತಾಣಕ್ಕೆ ಭೇಟಿಕೊಟ್ಟರೆ ಅಲ್ಲಿ ಜನಪ್ರಿಯ ಲೇಖಕರ ಮತ್ತು ಪ್ರಕಾಶನ ಸಂಸ್ಥೆಗಳ ಪುಸ್ತಕಗಳ ಮಾಹಿತಿ ಮಾತ್ರ ಲಭ್ಯವಿರುತ್ತದೆ. ಪ್ರತಿವರ್ಷ ಸಾವಿರಾರು ಪುಸ್ತಕಗಳು ಪ್ರಕಟವಾಗುತ್ತಿದ್ದರೂ ಆನ್‍ಲೈನ್‍ನಲ್ಲಿ ಸಿಗುತ್ತಿರುವ ಪುಸ್ತಕಗಳ ಸಂಖ್ಯೆ ಅಭಿಮಾನ ಪಡುವಂತಿಲ್ಲ. ಒಂದರ್ಥದಲ್ಲಿ ಅದೆಷ್ಟೋ ಅತ್ಯುತ್ತಮ ಪುಸ್ತಕಗಳು ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳದೆ ಓದಿಗೆ ದಕ್ಕದೆ ಹೋಗುವ ಸಂದರ್ಭವೇ ಹೆಚ್ಚು. ಪುಸ್ತಕಗಳ ಮಾರಾಟದ ವಿಷಯದಲ್ಲಿ ಪ್ರಕಾಶಕರ ನಡುವೆ ಒಂದು ಸೌಹಾರ್ದಯುತವಾದ ವಾತಾವರಣ ನಿರ್ಮಾಣವಾಗಬೇಕು. ಆ ಮೂಲಕ ಪ್ರಕಾಶಕ ಮತ್ತು ಲೇಖಕ ಬೆಳೆಯುವಂತಾಗಬೇಕು. ಸಧ್ಯದ ಸಂದರ್ಭದಲ್ಲಿ ಇಂತಹದ್ದೊಂದು ವಾತಾವರಣ ಸೃಷ್ಟಿಯಾಗುವ ಯಾವ ಸುಳಿವು ಗೋಚರಿಸುತ್ತಿಲ್ಲ. 

-ರಾಜಕುಮಾರ ಕುಲಕರ್ಣಿ

Tuesday, February 11, 2025

ಇಲ್ಲಿದೆ ಜ್ಞಾನಧಾರೆ, ಸವಿಯಬನ್ನಿ





(ಪ್ರಜಾವಾಣಿ, ೦೬.೦೯.೨೦೨೪)

 ಪ್ರಿಯ ಓದುಗ ನಮಸ್ಕಾರಗಳು,

ಪ್ರತಿವರ್ಷ ಅಗಸ್ಟ್ 12 ರಂದು ನನ್ನ ಕುರಿತು ವಿಚಾರಸಂಕೀರಣ, ಉಪನ್ಯಾಸ, ನನ್ನಲ್ಲಿರುವ ಪುಸ್ತಕಗಳ ಪ್ರದರ್ಶನದಂತಹ ಕಾರ್ಯಕ್ರಮಗಳನ್ನು ದೇಶದಾದ್ಯಂತ ಆಯೋಜಿಸುವರು. ಭಾರತದಲ್ಲಿ ಗ್ರಂಥಾಲಯಗಳ ಬೆಳವಣಿಗೆಯ ಜನಕ ಎಂದೇ ಖ್ಯಾತರಾದ ಡಾ.ಎಸ್.ಆರ್.ರಂಗನಾಥನ್‍ರ ಜನ್ಮದಿನದ ನಿಮಿತ್ಯ ಈ ಎಲ್ಲ ಸಂಭ್ರಮ ಮತ್ತು ಸಡಗರ. ಭಾರತದಲ್ಲಿ ಗ್ರಂಥಾಲಯ ವ್ಯವಸ್ಥೆಗೆ ಒಂದು ವೈಜ್ಞಾನಿಕ ತಳಹದಿಯನ್ನು ನಿರ್ಮಿಸಿದವರು ಅವರು. ಗ್ರಂಥಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿಟ್ಟು ಆಸಕ್ತ ಓದುಗರಿಗೆ ಒದಗಿಸುವ ಗ್ರಂಥಾಲಯ ವ್ಯವಸ್ಥೆಯ ರೂಪುರೇಷೆಯ ಹಿಂದೆ ರಂಗನಾಥನ್‍ರ ಅಗಾಧ ಪರಿಶ್ರಮ ಮತ್ತು ಪ್ರತಿಭೆ ಪರಿಣಾಮಕಾರಿಯಾಗಿ ಕೆಲಸ ಮಾಡಿ

ಜನಸಾಮಾನ್ಯರಿಗೂ ಓದಲು ಪುಸ್ತಕಗಳು ದೊರೆಯುವಂತಾಗಬೇಕು ಎನ್ನುವುದು ರಂಗನಾಥನ್‍ರ ಆಲೋಚನೆಯಾಗಿತ್ತು. ಗ್ರಂಥಾಲಯಗಳ ಮೂಲಕ ಜ್ಞಾನ ಪ್ರಸಾರದ ಕಾರ್ಯ ಅತ್ಯಂತ ಸುಲಲಿತವಾಗಿ ನಡೆಯಲಿ ಎನ್ನುವ ಮಹತ್ವಾಕಾಂಕ್ಷೆಯಿಂದ ರಂಗನಾಥನ್ ನನ್ನ (ಸಾರ್ವಜನಿಕ ಗ್ರಂಥಾಲಯಗಳ) ಕಾರ್ಯನಿರ್ವಹಣೆಗೆ ಒಂದು ವೈಜ್ಞಾನಿಕ ವ್ಯವಸ್ಥೆಯನ್ನು ನಿರ್ಮಿಸಿದರೇನೋ ಸರಿ. ಆದರೆ ಕಾಲಾನಂತರದಲ್ಲಿ ನಾನು ಸಮಸ್ಯೆಗಳ ಆಗರವಾದೆ. ಗುಣಮಟ್ಟದ ಪುಸ್ತಕಗಳ ಕೊರತೆ, ಪೀಠೋಪಕರಣಗಳ ಕೊರತೆ, ವ್ಯವಸ್ಥಿತ ಕಟ್ಟಡ ಇಲ್ಲದಿರುವುದು, ಸಿಬ್ಬಂದಿಯ ಕೊರತೆ ಮತ್ತು ಅವರ ಅಸಮರ್ಪಕ ಕಾರ್ಯನಿರ್ವಹಣೆ, ತಂತ್ರಜ್ಞಾನವನ್ನು ಬಳಸಿಕೊಳ್ಳದೇ ಇರುವುದು ಹೀಗೆ ಸಮಸ್ಯೆಗಳ ಸರಮಾಲೆಯನ್ನೇ ಪೆÇಣಿಸಲಾಗುತ್ತಿದೆ. 

ಪ್ರಿಯ ಓದುಗ ಈ ಮೇಲಿನ ಸಮಸ್ಯೆಗಳೆಲ್ಲ ನಿರಾಧಾರವಾದವುಗಳೆಂದು ನಾನು ವಾದಿಸುತ್ತಿಲ್ಲ. ಸಮಸ್ಯೆಗಳ ಹುತ್ತದಲ್ಲಿ ನಾನು ಮುಳುಗಿ ಹೋಗಿದ್ದೇನೆ. ಪುಸ್ತಕಗಳ ವಿಷಯವಾಗಿ ಹೇಳುವುದಾದರೆ ಓದಲು ಗುಣಾತ್ಮಕ ಪುಸ್ತಕಗಳು ನನ್ನಲ್ಲಿರುವುದು ಶೇಕಡಾ 30 ರಿಂದ 40 ಮಾತ್ರ. ಉಳಿದ ಪ್ರತಿಶತ 60 ರಷ್ಟು ಪುಸ್ತಕಗಳು ಸಂಖ್ಯಾತ್ಮಕ ದೃಷ್ಟಿಯಿಂದ ಖರೀದಿಸಿದವುಗಳೇ ವಿನಾ ಓದಲು ಯೋಗ್ಯವಾಗಿಲ್ಲ. ನನ್ನಲ್ಲಿರುವ ಪುಸ್ತಕಗಳ ರಾಶಿಯನ್ನು ನೋಡಿ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ತಕ್ಕಡಿಯಲ್ಲಿ ತೂಗಿ ಖರೀದಿಸುವರೆಂಬ ವಿಡಂಬನಾತ್ಮಕ ಹೇಳಿಕೆ ಚಾಲ್ತಿಯಲ್ಲಿದೆ. ಈ ಮಾತು ಕೇಳಿದಾಗಲೆಲ್ಲ ನಾನು ಅದೆಷ್ಟು ವೇದನೆಯಿಂದ ನರಳಿದ್ದೇನೆಂದು ಗೊತ್ತೇ ನಿನಗೆ?. 

ಓದಲು ಯೋಗ್ಯವಲ್ಲದ ಪುಸ್ತಕಗಳ ರಾಶಿಯನ್ನು ನನ್ನ ಒಡಲಲ್ಲಿ ತುಂಬುತ್ತಿರುವವರು ಯಾರು ಎಂದು ದೂಷಿಸಲು ನನ್ನಲ್ಲಿ ದೀರ್ಘ ಪಟ್ಟಿಯೇ ಇದೆ. ಪುಸ್ತಕಗಳ ಪ್ರಕಟಣೆ ಮತ್ತು ಮಾರಾಟಕ್ಕಾಗಿ ರಾಜ್ಯದ ರಾಜಧಾನಿ, ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮಾತ್ರವಲ್ಲದೆ ಹೊಬಳಿ ಮತ್ತು ಹಳ್ಳಿಗಳಲ್ಲೂ ಪ್ರಕಾಶನ ಸಂಸ್ಥೆಗಳು ಹುಟ್ಟಿಕೊಂಡಿವೆ. ಜೊತೆಗೆ ಲೇಖಕರೆ ಪ್ರಕಾಶಕರಾಗಿ ಪುಸ್ತಕಗಳನ್ನು ಪ್ರಕಟಿಸುತ್ತಿರುವರು. ಪರಿಣಾಮವಾಗಿ ಪ್ರತಿವರ್ಷ ಅಸಂಖ್ಯಾತ ಪುಸ್ತಕಗಳು ಕನ್ನಡ ಭಾಷೆಯಲ್ಲಿ ಪ್ರಕಟಗೊಳ್ಳುತ್ತಿವೆ. ಕೆಲವು ಪ್ರಕಾಶಕರಂತೂ ಎರಡು ಮೂರು ಪ್ರಕಾಶನ ಸಂಸ್ಥೆಗಳ ಹೆಸರಿನಡಿ ಪುಸ್ತಕಗಳನ್ನು ಪ್ರಕಟಿಸಿ ಲಾಭ ಮಾಡಿಕೊಳುತ್ತಿರುವರೆಂಬ ಆರೋಪ ಬಹಳ ವರ್ಷಗಳಿಂದ ಕೇಳಿ ಬರುತ್ತಿದೆ. ಆದರೆ ಸಂಬಂಧಿಸಿದ ಇಲಾಖೆ ಮತ್ತು ಸರ್ಕಾರ ಕಣ್ಣಿದ್ದು ಕುರುಡಾಗಿವೆ. ಹಾಗೆಂದು ನಾನು ಎಲ್ಲ ಪ್ರಕಾಶಕರನ್ನು ಕಾಮಾಲೆ ಕಣ್ಣಿನಿಂದ ನೋಡುತ್ತಿಲ್ಲ. ಗುಣಾತ್ಮಕ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಪ್ರಕಾಶಕರು ನನ್ನಿಂದ ದೂರವೇ ಉಳಿದಿರುವರು.

ಪ್ರಕಾಶಕರ ಹುನ್ನಾರದ ಹಿಂದೆ ನನ್ನ ಇಲಾಖೆಯ ಅಧಿಕಾರಿಗಳ ಪಾತ್ರವಿದೆ ಎನ್ನುವುದು ಪಾರದರ್ಶಕ ಸತ್ಯ. ಪ್ರಕಾಶನ ಸಂಸ್ಥೆಗಳೊಂದಿಗೆ ಒಳಒಪ್ಪಂದಕ್ಕಿಳಿದು ಕಸದ ರಾಶಿಯನ್ನೆಲ್ಲ ನನ್ನ ಒಡಲಲ್ಲಿ ತುಂಬುತ್ತಿರುವರು. ಪುಸ್ತಕ ಆಯ್ಕೆ ಸಮಿತಿಯವರು ತಮಗೆ ನಿಗದಿಪಡಿಸಿದ ಅಲ್ಪ ಸಮಯದಲ್ಲೆ ರಾಶಿ ರಾಶಿ ಪುಸ್ತಕಗಳನ್ನು ನನಗಾಗಿ ಆಯ್ಕೆ ಮಾಡುವರು. ಒಂದೆರಡು ದಿನಗಳಲ್ಲಿ ಸಾವಿರಾರು ಪುಸ್ತಕಗಳನ್ನು ಓದುವುದಾದರೂ ಹೇಗೆ ಸಾಧ್ಯ?. ಇನ್ನು ಇರುವ ಅಲ್ಪ ಸಂಖ್ಯೆಯ ಗುಣಾತ್ಮಕ ಪುಸ್ತಕಗಳಾದರೂ ಓದಲು ಓದುಗರಿಗೆ ದೊರೆಯುತ್ತಿವೆಯೆ ಎನ್ನುವ ಪ್ರಶ್ನೆಗೆ ಮತ್ತದೆ ನಿರಾಶಾದಾಯಕ ಉತ್ತರ.  ಪುಸ್ತಕಗಳ ಉಪಯೋಗ ಹೆಚ್ಚಿಸಲು ಗ್ರಂಥಾಲಯ ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿಲ್ಲವೆಂಬ ಕೂಗು ಕೇಳಿ ಬರುತ್ತಿದೆ. ಗ್ರಂಥಾಲಯದಲ್ಲಿ ಕೆಲಸದ ವೇಳೆ  ಸಿಬ್ಬಂದಿಯ ಅನುಪಸ್ಥಿತಿ ಸಾಮಾನ್ಯವಾಗಿದೆ. ಓದುಗರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುವುದಿಲ್ಲ. ಅದೆಷ್ಟೋ ಸಿಬ್ಬಂದಿಗೆ ನನ್ನಲ್ಲಿರುವ ಪುಸ್ತಕಗಳ ಹೆಸರೇ ಗೊತ್ತಿರುವುದಿಲ್ಲ. 

ಹಳ್ಳಿ ಪ್ರದೇಶಗಳಲ್ಲಿನ ಜನರಿಗೂ ಪುಸ್ತಕ ಓದುವ ಭಾಗ್ಯ ದೊರೆಯಲೆಂದು ನನ್ನನ್ನು ಗ್ರಾಮೀಣ ಪ್ರದೇಶಗಳಲ್ಲೂ ಒಯ್ದು ಪ್ರತಿಷ್ಠಾಪಿಸಿರುವರು. ಪುಸ್ತಕಗಳ ಸಂಗ್ರಹಣಾ ವಿಷಯವಾಗಿ ಆಯಾ ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯವಾದ ಓದಿನ ಬೇಕು-ಬೇಡಗಳನ್ನು ಸಮೀಕ್ಷೆ ಮಾಡಬೇಕು. ಗ್ರಾಮೀಣ ಗ್ರಂಥಾಲಯಗಳ ಮೇಲ್ವಿಚಾರಕರಿಂದ ಬೇಡಿಕೆಯ ಪಟ್ಟಿಯನ್ನು ಪಡೆಯಬೇಕು. ಆದರೆ ಇಲ್ಲಿಯೂ ಇಲಾಖೆಯದು ಸರ್ವಾಧಿಕಾರಿ ಧೋರಣೆ. ದೂರದ ನಗರದಲ್ಲಿ ಕುಳಿತು ತಾವು ಆಯ್ಕೆ ಮಾಡಿ ಕಳುಹಿಸಿದ ಪುಸ್ತಕಗಳನ್ನೆ ನನ್ನಲ್ಲಿನ ಅಲ್ಮೆರಾಗಳಲ್ಲಿ ತುಂಬುತ್ತಿರುವರು. ಅರೆಕಾಲಿಕ ನೌಕರಿ ಮತ್ತು ಸೀಮಿತ ಸಂಬಳದಿಂದ ಮೇಲ್ವಿಚಾರಕರು ನನ್ನನ್ನು ಸರಿಯಾಗಿ ಪೆÇೀಷಿಸುತ್ತಿಲ್ಲ. ಸ್ಥಳೀಯರು ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿರುವ ಪರಿಣಾಮ ಅದೆಷ್ಟೋ ಗ್ರಾಮೀಣ ಪ್ರದೇಶಗಳಲ್ಲಿ ನನ್ನ ಬಾಗಿಲುಗಳು ಸದಾಕಾಲ ಮುಚ್ಚಿರುತ್ತವೆ.

ಶಿಕ್ಷಣ ಸಂಸ್ಥೆಗಳಲ್ಲಿರುವ ನನ್ನ ಸಹೋದರ/ಸಹೋದರಿಯರದೂ ಇದೇ ಅವಸ್ಥೆ. ಅಲ್ಲಿ ಕೂಡ ವಿದ್ಯಾರ್ಥಿಗಳಾಗಲಿ, ಶಿಕ್ಷಕರಾಗಲಿ ಪುಸ್ತಕಗಳತ್ತ ಕಣ್ಣೆತ್ತಿಯೂ ನೋಡುತ್ತಿಲ್ಲವಂತೆ. ಅಧ್ಯಾಪನಕ್ಕೆ ಅಧ್ಯಯನವೇ ಬಂಡವಾಳವಾಗಿರುವ ಸರಸ್ವತಿ ಮಂದಿರಗಳಲ್ಲೇ ಪುಸ್ತಕಗಳು ಅನಾದರಕ್ಕೆ ಒಳಗಾಗಿವೆ. ಹೀಗಿರುವಾಗ ಶ್ರೀಸಾಮಾನ್ಯರನ್ನೇ ನಂಬಿಕುಳಿತಿರುವ ನನ್ನದಂತೂ ಶೋಚನೀಯ ಸ್ಥಿತಿ. 

ಇಷ್ಟೆಲ್ಲ ಅಸಂಗತಗಳ ನಡುವೆ ನಾನಿನ್ನೂ ಉಸಿರಾಡುತ್ತಿರುವೆ. ನಾನು ದೀರ್ಘಕಾಲ ಬದುಕುಳಿಯಲು ಈಗ ನನಗಿರುವ ಏಕೈಕ ಆಸರೆ ಎಂದರೆ ಓದುಗ ದೊರೆ ನೀನು ಮಾತ್ರ. ಮೊಬೈಲ್ ವ್ಯಸನಿಯಾದ ನೀನು ಈಗ ನನ್ನನ್ನು ನಿರ್ಲಕ್ಷಿಸುತ್ತಿರುವುದು ಸತ್ಯಕ್ಕೆ ಹತ್ತಿರವಾದ ಮಾತು. ತಂತ್ರಜ್ಞಾನದ ಹೊಡೆತಕ್ಕೆ ನಾನು ನಲುಗಿಹೋಗಿದ್ದೇನೆ. ನಾನು ನಶಿಸಿ ಹೋಗುವ ಮೊದಲು ನನ್ನ ಒಡಲಲ್ಲಿರುವ ಜ್ಞಾನಾಮೃತದ ಧಾರೆಯನ್ನು ಸವಿಯಲು ಬಾ. ನಿನ್ನ ಆಗಮನಕ್ಕಾಗಿ ಕಾದಿರುವೆ.

ಇಂತಿ ನಿನ್ನ ಗ್ರಂಥಾಲಯ 

-ರಾಜಕುಮಾರ ಕುಲಕರ್ಣಿ

Tuesday, January 7, 2025

ಕಂಡಿರಾ, ನಾಗರಿಕನೆಂಬ ‘ದ್ವೀಪ?

 


(೧೮.೦೭.೨೦೨೪ ರ ಪ್ರಜಾವಾಣಿಯ ಸಂಗತ ಅಂಕಣದಲ್ಲಿ ಪ್ರಕಟ)

  ನಟಿ ನಿರೂಪಕಿ ಅಪರ್ಣಾ ಅವರ ನಿಧನದ ಸಂದರ್ಭ ಒಂದು ನಿರ್ಧಿಷ್ಟ ಸಮುದಾಯದ ಅಭಿಮಾನಿಯೊಬ್ಬರು ಈ ಸಾವು ತಮ್ಮ ಸಮುದಾಯಕ್ಕಾದ ತುಂಬಲಾರದ ನಷ್ಟವೆಂದು ವಾಟ್ಸ್‍ಆ್ಯಪ್‍ನಲ್ಲಿ ಶೋಕ ಸಂದೇಶವನ್ನು ಹಂಚಿಕೊಂಡಿದ್ದು ಓದಿ ದಿಗ್ಭ್ರಮೆಯಾಯಿತು. ಅಪರ್ಣಾ ಅವರ ನಿಧನ ಇಡೀ ಕನ್ನಡ ನಾಡು ಮತ್ತು ನುಡಿಗೆ ಆದ ನಷ್ಟವದು. ತಮ್ಮ ನಿರೂಪಣೆಯಿಂದ ಕನ್ನಡ ಭಾಷೆಗೆ ಘನತೆ ಮತ್ತು ಹಿರಿಮೆಯನ್ನು ತಂದುಕೊಟ್ಟವರು ಅವರು. ನಾಡಿನ ವಿವಿಧ ಕ್ಷೇತ್ರಗಳ ಗಣ್ಯರು ಮತ್ತು ಸಾರ್ವಜನಿಕರು ಅಪರ್ಣಾ ಅವರ ಸಾವಿಗೆ ಕಂಬನಿ ಮಿಡಿದರು. ಹೀಗಿರುವಾಗ ತಮ್ಮ ಸಮುದಾಯಕ್ಕೆ ಸೇರಿದವರೆಂಬ ಅಭಿಮಾನದಿಂದ ಸಮುದಾಯಕ್ಕಾದ ನಷ್ಟವೆಂದು ಕಲಾವಿದೆಯನ್ನು ಒಂದು ಗುಂಪಿಗೆ ಸೀಮಿತಗೊಳಿಸುವುದು ಸರಿಯಲ್ಲ. 

ಕಲಾವಿದರಿಗೆ ಜಾತಿ ಮತ್ತು ಧರ್ಮದ ಹಂಗಿಲ್ಲ ಎಂದು ರಾಜಕುಮಾರಾದಿಯಾಗಿ ಎಲ್ಲ ಕಲಾವಿದರು ತಮ್ಮ ಅಭಿನಯದ ಮೂಲಕ ಕಾಲಕಾಲಕ್ಕೆ ಸಾಬೀತುಪಡಿಸುತ್ತಲೆ ಬಂದಿರುವರು. ಜಾತಿ ಎನ್ನುವ ಸೀಮಿತವಲಯವನ್ನು ದಾಟಿದ್ದರಿಂದಲೇ ರಾಜಕುಮಾರ ಅವರಿಗೆ ಕನಕದಾಸ, ಕುಂಬಾರ, ಕಬೀರ, ತುಕಾರಾಮ, ರಾಘವೇಂದ್ರಸ್ವಾಮಿ, ರಾಮ, ಕೃಷ್ಣ, ಕಾಳಿದಾಸ ಈ ಎಲ್ಲ ಪಾತ್ರಗಳಲ್ಲಿ ಲೀಲಾಜಾಲವಾಗಿ ಅಭಿನಯಿಸಲು ಸಾಧ್ಯವಾಯಿತು. ಪ್ರೇಕ್ಷಕವರ್ಗ ಕೂಡ ಯಾವ ಸಂಕುಚಿತ ಭಾವನೆಗಳಿಲ್ಲದೆ ರಾಜಕುಮಾರ ಅವರನ್ನು ಈ ಎಲ್ಲ ಪಾತ್ರಗಳಲ್ಲಿ ನೋಡಿ ಆನಂದಿಸಿದರು. ರಾಜಕುಮಾರ ಈ ನೆಲದ ಮತ್ತು ಭಾಷೆಯ ಹೆಮ್ಮೆ ಹಾಗೂ ಅಭಿಮಾನವಾಗಿ ರೂಪುಗೊಂಡರು. ಅವರನ್ನು ಯಾವುದೆ ಒಂದು ಸಮುದಾಯಕ್ಕೆ ಕಟ್ಟಿಹಾಕದೆ ಇಡೀ ನಾಡಿನ ಸಾಂಸ್ಕೃತಿಕ ನಾಯಕನೆನ್ನುವ ಗೌರವದಿಂದ ನೋಡಲಾಯಿ

ಮನುಷ್ಯ ಸುಶಿಕ್ಷಿತನಾದಷ್ಟು ಅವನ ಮನಸ್ಸು ಮತ್ತು ಭಾವನೆಗಳು ಸಂಕುಚಿತಗೊಳ್ಳುತ್ತಿವೆ. ಈ ಜಾತಿ, ಧರ್ಮ ಮತ್ತು ವರ್ಗಗಳ ಪ್ರೇಮ ಗಾಢವಾಗುತ್ತಿದೆ. ಇತ್ತೀಚೆಗೆ ನನ್ನ ಸ್ನೇಹಿತ ಶಿಕ್ಷಕನಾಗಿರುವ ಶಾಲೆಗೆ ಭೇಟಿ ನೀಡಿದ ಹಿರಿಯರೊಬ್ಬರು ತಮ್ಮ ಜಾತಿಗೆ ಸೇರಿದ ವಿದ್ಯಾರ್ಥಿಗಳನ್ನು ಮಾತನಾಡಿಸಿ ವಿದ್ಯಾಭ್ಯಾಸದ ಪ್ರಗತಿಯ ಬಗ್ಗೆ ವಿಚಾರಿಸಿದರಂತೆ. ಸಮುದಾಯದ ಮುಖಂಡರಿಂದ ಹಣಕಾಸಿನ ನೆರವು ಒದಗಿಸುವ ಆಶ್ವಾಸನೆ ನೀಡಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ ಎಂದು ಆಶೀರ್ವದಿಸಿರಂತೆ. ಹೀಗೆ ಹೇಳುವಾಗ ಆ ಶಾಲೆಯಲ್ಲಿ ಬೇರೆ ಜಾತಿ ಮತ್ತು ಸಮುದಾಯಗಳ ವಿದ್ಯಾರ್ಥಿಗಳು ಸಹ ಓದುತ್ತಿರುವರೆಂದು ಕಿಂಚಿತ್ ಪ್ರಜ್ಞೆ ಕೂಡ ಅವರಲ್ಲಿಲ್ಲದಿದ್ದುದು ಆಶ್ಚರ್ಯದ ಸಂಗತಿ. ಮನುಜಜಾತಿ ತಾನೊಂದೆ ವಲಂ ಎಂದು ತರಗತಿಗಳಲ್ಲಿ ಬೋಧಿಸಿ ಜಾತಿಯ ಸಂಕೋಲೆಯನ್ನು ಹರಿದೊಗೆಯಬೇಕೆಂದು ಯಾವ ಮಕ್ಕಳಿಗೆ ಪಾಠ ಮಾಡಿದ್ದೇವೋ ಆ ಮಕ್ಕಳೆದುರು ಮುಜುಗರಕ್ಕೊಳಗಾಗಬೇಕಾಯಿತು ಎಂದು ಸ್ನೇಹಿತ ನೋವು ತೋಡಿಕೊಂಡ.    

ಪ್ರತಿ ನಗರಗಳಲ್ಲಿ ಸಮುದಾಯಕ್ಕೊಂದು ಮಠ, ದೇವಸ್ಥಾನ ಮತ್ತು ಸ್ಮಶಾನ ಭೂಮಿ ನಿರ್ಮಾಣವಾಗುತ್ತಿವೆ. ಸಭಾಭವನ ಹಾಗೂ ಕಲ್ಯಾಣ ಮಂಟಪಗಳು ಕೂಡ ಸಮುದಾಯದ ಹೆಸರಲ್ಲಿ ಸ್ಥಾಪನೆಯಾಗುತ್ತಿವೆ. ಉತ್ತರ ಕರ್ನಾಟಕದಲ್ಲಿ ಹೊಟೆಲ್ ಮತ್ತು ಖಾನಾವಳಿಗಳ ಹೆಸರುಗಳಲ್ಲಿ ಜಾತಿ ಸೂಚಕ ಪದಗಳನ್ನು ಕಾಣಬಹುದು. ಕಿತ್ತೂರ ಕರ್ನಾಟಕ ಭಾಗದಲ್ಲಿ (ಮುಂಬೈ ಕರ್ನಾಟಕ) ಅಪರಿಚಿತರು ಬೇಟಿಯಾದಾಗ ಅವರ ಹೆಸರಿನ ಬದಲು ಜಾತಿಸೂಚಕವಾದ ಮನೆತನದ ಹೆಸರನ್ನು ಕೇಳುವುದು ಇಂದಿಗೂ ರೂಢಿಯಲ್ಲಿದೆ. ಮನೆತನದ ಹೆಸರು ಜಾತಿಸೂಚಕವೆಂದು ತಮ್ಮ ಶಿಷ್ಯರನ್ನು ಅವರುಗಳ ಊರಿನ ಹೆಸರಿನಿಂದ ಕರೆಯುತ್ತಿದ್ದ ಗದುಗಿನ ಪುಣ್ಯಾಶ್ರಮದ ಪುಟರಾಜ ಗವಾಯಿಗಳ ನಡೆ ಸಮಾಜಕ್ಕೆ ಮಾದರಿಯಾಗಬೇಕಿದೆ. 

ಪುರಸ್ಕಾರ, ಗೌರವಗಳು ಕೂಡ ಜಾತಿ ಪ್ರೇಮದ ಕಬಂದ ಬಾಹುಗಳಲ್ಲಿ ಸಿಲುಕಿ ನರಳುತ್ತಿವೆ. ಸಾಧಕರನ್ನು ಗುರುತಿಸಿ ಗೌರವಿಸುವಲ್ಲಿ ಸ್ವಜಾತಿ ಪ್ರೇಮ ಮುನ್ನೆಲೆಗೆ ಬರುತ್ತಿದೆ. ಶಿಕ್ಷಕರು, ಸಾಹಿತಿಗಳು, ಸಮಾಜಸೇವಕರು, ವಿದ್ಯಾರ್ಥಿಗಳನ್ನು ವಿವಿಧ ಸಮುದಾಯ ಮತ್ತು ಪಂಗಡಗಳಾಗಿ ವಿಭಜಿಸಲಾಗಿದೆ. ಪ್ರತಿಯೊಂದು ಸಮುದಾಯ ತನ್ನದೆ ಸಮುದಾಯದ ಸಾಧಕರನ್ನು ಮಾತ್ರ ಗೌರವಿಸುವ ಪರಿಪಾಟ ಚಾಲನೆಗೆ ಬಂದಿದೆ. ಒಟ್ಟಾರೆ ಮನುಷ್ಯ ನಾಗರಿಕನಾದಂತೆ ಅವನೊಂದು ದ್ವೀಪವಾಗುತ್ತಿರುವನು.

ಸಾವಿನಂತಹ ಸೂತಕಕ್ಕೂ ಕೂಡ ಈಗ ಜಾತಿ, ಧರ್ಮ, ಭಾಷೆಯ ಭೂತ ಬೆನ್ನುಹತ್ತಿದೆ. ಮನುಷ್ಯ ತನ್ನ ಅಂತ:ಕರಣ ಮತ್ತು ಸಂವೇದನೆಯನ್ನು ಜಾತಿ, ಧರ್ಮ, ಭಾಷೆಯ ಚೌಕಟ್ಟಿನಲ್ಲಿ ಬಂಧಿಸಿಟ್ಟಿರುವನು. ಇಂತಿಂಥ ಜಾತಿ, ಧರ್ಮ, ಭಾಷೆಗೆ ಸೇರಿದ ಮನುಷ್ಯರ ಸಾವು ಮಾತ್ರÀ ಅಂತ:ಕರಣವನ್ನು ತಟ್ಟುವ, ಮನಸ್ಸನ್ನು ವೇದನೆಗೊಳಿಸುವ ಸ್ಥಿತಿ ನಿರ್ಮಾಣವಾಗಿದೆ. ಸಾವು ಯಾರದಾದರೇನು ಅದು ಮನುಷ್ಯನದು ಎನ್ನುವ ಭಾವನೆ ನಮ್ಮನ್ನು ಕಾಡುತ್ತಿಲ್ಲ. ಯಶವಂತ ಚಿತ್ತಾಲರ ಕಥೆಯಲ್ಲಿ ಪಾತ್ರವೊಂದು ಹೀಗೆ ಪ್ರಶ್ನಿಸುತ್ತದೆ-‘ಸತ್ತವಳು ಯಾವ ಜಾತಿಯವಳಾಗಿ ಕೊಂದವರು ಯಾವ ಜಾತಿಯವರಾದರೆ, ಇಲ್ಲ ಧರ್ಮದವರಾದರೆ, ಇಲ್ಲ ವರ್ಗದವರಾದರೆ ಈ ‘ಸಾವು’ ಮಹತ್ವಪೂರ್ಣವಾದೀತು? ಸಮಕಾಲೀನ ಸಾಹಿತ್ಯದ ವಸ್ತುವಾಗುವ ಯೋಗ್ಯತೆ ಪಡೆದು ನಾವು ಸುರಿಸಬಹುದಾದ ಕಣ್ಣೀರಿಗೆ ಸಾರ್ಥಕತೆ ತಂದುಕೊಟ್ಟೀತು?’. ಈ ಮಾತು ಮನುಷ್ಯ ಅಸಂವೇದಿಯಾಗುವುದರತ್ತ ಹೆಜ್ಜೆ ಹಾಕುತ್ತಿರುವನು ಎನ್ನುವುದಕ್ಕೊಂದು ದೃಷ್ಟಾಂತ. 

ನಾಗರಿಕ ಮನುಷ್ಯರ ಸಂಕುಚಿತ ವರ್ತನೆ ನೋಡಿದಾಗಲೆಲ್ಲ ನನಗೆ ನನ್ನೂರಿನ ಬಾಲ್ಯದ ದಿನಗಳು ನೆನಪಾಗುತ್ತವೆ. ರಾಮನವಮಿ, ಯುಗಾದಿ, ಮೊಹರಂ, ರಂಜಾನ್ ಹಬ್ಬಗಳ ಸುಂದರ ನೆನಪುಗಳು ಮನಸ್ಸನ್ನು ಆವರಿಸುತ್ತವೆ. ದೀಪಾವಳಿ, ಹೋಳಿ ಹುಣ್ಣಿಮೆ, ಕಾರ ಹುಣ್ಣಿಮೆ, ಮೊಹರಂ, ರಂಜಾನ್, ಸಂಕ್ರಾಂತಿ ಹಬ್ಬಗಳಲ್ಲಿ ಜಾತಿ ಧರ್ಮದ ಹಂಗಿಲ್ಲದಂತೆ ಊರಿನವರೆಲ್ಲ ಅತ್ಯಂತ ಉಮೇದಿ ಮತ್ತು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ದೀಪಾವಳಿ ಹಬ್ಬದ ಆ ಮೂರು ದಿನಗಳಂದು ಎಲ್ಲರ ಮನೆಗಳಲ್ಲೂ ಪಟಾಕಿ ಸಿಡಿಯುತ್ತಿದ್ದವು. ಹೋಳಿ ಹುಣ್ಣಿಮೆಯಂದು ಪರಸ್ಪರ ಓಕುಳಿ ಎರಚಿ ಸಂಭ್ರಮಿಸುತ್ತಿದ್ದರು. ರಂಜಾನ್ ಹಬ್ಬದಂದು ಕುಡಿದ ಹಾಲಿನ ಖಾದ್ಯದ ಘಮಲು ಇದೇ ಈಗ ಆಘ್ರಾಣಿಸಿದಂತಿದೆ. ಊರಿನ ಯಾರದಾದರೂ ಮನೆಯಲ್ಲಿ ಸಾವು ಸಂಭವಿಸಿದರೆ ಇಡೀ ಊರಿಗೇ ಸೂತಕದ ಛಾಯೆ ಆವರಿಸುತ್ತಿತ್ತು. ಸಾವು ಸಂಭವಿಸಿದ ಮನೆಯವರ ದು:ಖದಲ್ಲಿ ಎಲ್ಲ ಜಾತಿ-ವರ್ಗ-ಸಮುದಾಯದ ಜನ ಭಾಗಿಯಾಗುತ್ತಿದ್ದರು. 

ಹಿಂದಿದ್ದ ಸೌಹಾರ್ದ ವಾತಾವರಣ ಇಂದಿಲ್ಲ. ಇಂದು ಮನಸ್ಸು ಮನಸ್ಸುಗಳ ನಡುವೆ ಗೋಡೆಗಳು ನಿರ್ಮಾಣಗೊಳ್ಳುತ್ತಿವೆ. ಮನುಷ್ಯ ಭಾವನೆಗಳು ಸಂಕುಚಿತಗೊಳ್ಳುತ್ತಿವೆ. ಜಾತಿ ಮತ್ತು ಧರ್ಮದ ಅಮಲು ಮನುಷ್ಯನ ಅಂತ:ಕರಣವನ್ನು ಕ್ಷೀಣವಾಗಿಸಿ ಅವನನ್ನು ಸಂವೇದನಾರಹಿತನನ್ನಾಗಿ ಮಾಡಿದೆ. ಸ್ವಜಾತಿ, ಸ್ವಧರ್ಮದ ಕುರುಡು ಮೋಹಕ್ಕೆ ಒಳಗಾದ ನಾಗರಿಕ ಮನುಷ್ಯ ಅನ್ಯಜಾತಿ, ಧರ್ಮಗಳ ನಿಂದನೆಗೆ ವಾಟ್ಸ್‍ಆ್ಯಪ್, ಫೇಸ್‍ಬುಕ್‍ಗಳೆಂಬ ಹತಾರಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವನು. ಇಂತಹ ಅಸಹನೀಯ ವಾತಾವರಣದಿಂದ ಹೊರಬರಲು ಹಿಂದಿನ ಸೌಹಾರ್ದದ ದಿನಗಳು ಮತ್ತೆ ಮರುಕಳಿಸಬೇಕಾದದ್ದು ಇಂದಿನ ತುರ್ತು ಅಗತ್ಯ

--ರಾಜಕುಮಾರ ಕುಲಕರ್ಣಿ

Friday, December 6, 2024

ಅಭಿಮಾನ ಅತಿರೇಕಕ್ಕೆ ಹೋಗದಿರಲಿ

 



(ಪ್ರಜಾವಾಣಿಯ  04.07.2024 ರ ಸಂಗತ ಅಂಕಣದಲ್ಲಿ ಪ್ರಕಟ)

ಪ್ರೌಢಶಾಲಾ ಶಿಕ್ಷಕರೊಬ್ಬರು ತಮ್ಮ ರಕ್ತದಿಂದ ಕ್ರಿಕೇಟ್ ಆಟಗಾರನ ಚಿತ್ರ ರಚಿಸಿದ ವಿಷಯ ಪತ್ರಿಕೆಯಲ್ಲಿ ಪ್ರಕಟವಾಗಿ ಸಾರ್ವಜನಿಕರ ಗಮನಸೆಳೆಯಿತು. ಅಭಿಮಾನವನ್ನು ಈ ರೀತಿ ವ್ಯಕ್ತಪಡಿಸುವ ಅಗತ್ಯವೇನಿತ್ತು ಎನ್ನುವುದು ಪ್ರಜ್ಞಾವಂತರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. ಏಕೆಂದರೆ ಅಭಿಮಾನದ ಅಭಿವ್ಯಕ್ತಿಗಾಗಿ ರಕ್ತದಂತಹ ಅಮೂಲ್ಯ ದ್ರವ್ಯವನ್ನು ವ್ಯರ್ಥಗೊಳಿಸಿದ್ದು ಅದು ತಪ್ಪು ನಡೆಯಾಗುತ್ತದೆ. ಬೇರೆ ವಿಧಾನದಲ್ಲಿ ಅಭಿಮಾನವನ್ನು ವ್ಯಕ್ತಪಡಿಸುವ ಹಲವು ಅವಕಾಶಗಳಿರುವಾಗ ರಕ್ತವನ್ನು ಹಾಳುಮಾಡಿದ್ದು ಅಭಿಮಾನದ ಅತಿರೇಕ ಎಂದು ಸಹಜವಾಗಿಯೇ ಸಾರ್ವಜನಿಕರ ಟೀಕೆಯನ್ನು ಶಿಕ್ಷಕ ಎದುರಿಸಬೇಕಾಯಿತು. 

ರಕ್ತವನ್ನು ಜನರ ಜೀವ ಉಳಿಸುವ ಅಮೂಲ್ಯ ದ್ರವ್ಯವೆಂದು ಪರಿಗಣಿಸಲಾಗಿದೆ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಸ್ವಯಂ ಪ್ರೇರಣೆಯಿಂದ ರಕ್ತವನ್ನು ಕೊಡಲು ಮುಂದೆ ಬರುವ ದಾನಿಗಳಿಂದ ಮಾತ್ರ ರಕ್ತಪಡೆಯಲು ಸಾಧ್ಯ. ಅದೆಷ್ಟೋ ಸಂದರ್ಭಗಳಲ್ಲಿ ಅಗತ್ಯದ ರಕ್ತ ದೊರೆಯದೆ ರೋಗಿಗಳು ಸಾವನ್ನಪ್ಪುವುದು ಸಾಮಾನ್ಯವಾಗಿದೆ. ಪರಿಸ್ಥಿತಿ ಹೀಗಿರುವಾಗ ರಕ್ತವನ್ನು ಚಿತ್ರ ರಚಿಸಲು ಬಳಸಿ ವ್ಯರ್ಥಗೊಳಿಸಿದ್ದು ತಪ್ಪು ಸಂದೇಶಕ್ಕೆ ಎಡೆಮಾಡುತ್ತದೆ. ಇಂಥದ್ದೊಂದು ಅಸಂಗತ ವರ್ತನೆಗೆ ಪ್ರಜ್ಞಾವಂತ ಶಿಕ್ಷಕ ಕಾರಣನಾಗಿದ್ದು ಆತಂಕದ ಸಂಗತಿ. ಮಕ್ಕಳಿಗೆ ಪಾಠ ಮಾಡಿ ಆದರ್ಶನಾಗಬೇಕಿರುವ ಶಿಕ್ಷಕ ರಕ್ತದಂತಹ ಅಮೂಲ್ಯ ದ್ರವ್ಯದ ಮಹತ್ವವನ್ನು ಅರಿಯದೇ ಹೋದದ್ದು ಇಡೀ ಶಿಕ್ಷಣ ವ್ಯವಸ್ಥೆಯ ಗುಣಮಟ್ಟವನ್ನೇ ಅನುಮಾನದಿಂದ ನೋಡಲು ಕಾರಣವಾಗಬಹುದು. 

ಈಗಾಗಲೇ ಶಿಕ್ಷಣ ಕ್ಷೇತ್ರ ಅನೇಕ ಆಪಾದನೆಗಳನ್ನು ಎದುರಿಸುತ್ತಿದೆ. ಶಿಕ್ಷಕರ ಬೌದ್ಧಿಕ ಗುಣಮಟ್ಟದ ಕುರಿತು ಪಾಲಕರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಶಾಲೆಯಲ್ಲಿ ಶಿಕ್ಷಕರು ಸರಿಯಾಗಿ ಪಾಠ ಮಾಡುತ್ತಿಲ್ಲವೆಂಬ ಕಾರಣವನ್ನು ಮುಂದೆ ಮಾಡಿ ಮಕ್ಕಳನ್ನು ಶಾಲಾ ಅವಧಿಯ ನಂತರ ಮನೆಪಾಠಕ್ಕೆ ಕಳುಹಿಸುವ ವ್ಯವಸ್ಥೆ ಬಹುಪಾಲು ಕುಟುಂಬಗಳನ್ನು ವ್ಯಾಪಿಸಿಕೊಂಡಿದೆ. ಪರಿಸ್ಥಿತಿ ಹೀಗಿರುವಾಗ ಶಿಕ್ಷಕರ ಇಂತಹ ಅತಿರೇಕದ ಅಭಿಮಾನದ ನಡೆ ಶಿಕ್ಷಣ ವ್ಯವಸ್ಥೆ ಕುರಿತು ಸಾರ್ವಜನಿಕರಲ್ಲಿರುವ ಅಸಮಾಧಾನವನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ. ಒಂದು ರೀತಿಯಲ್ಲಿ ಇದು ಗಾಯದ ಮೇಲೆ ಬರೆ ಎಳೆದಂ

ಅಭಿಮಾನದ ಅತಿರೇಕಕ್ಕೆ ನಾಂದಿ ಹಾಡಿದ್ದು ಸಿನಿಮಾ ಮಾಧ್ಯಮ ಎಂದರೆ ತಪ್ಪಾಗಲಾರದು. ತಮ್ಮ ನೆಚ್ಚಿನ ನಟರ ಸಿನಿಮಾ ಬಿಡುಗಡೆಯ ದಿನ ಮೆರವಣಿಗೆ, ಬೃಹತ್ ಗಾತ್ರದ ಕಟೌಟ್‍ಗಳಿಗೆ ಹಾಲಿನ ಅಭಿಷೇಕ, ಪಟಾಕ್ಷಿಗಳ ಸಿಡಿತ ಇತ್ಯಾದಿ ಚಟುವಟಿಕೆಗಳ ಮೂಲಕ ಅಭಿಮಾನಿಗಳು ತಮ್ಮ ಅಭಿಮಾನ ಮೆರೆಯುವರು. ಆರೋಗ್ಯಕ್ಕೆ ಅಗತ್ಯವಾದ ಹಾಲಿನಂತಹ ಪೌಷ್ಟಿಕ ಪದಾರ್ಥವನ್ನು ಸಿನಿಮಾ ತಾರೆಯರ ಕಟೌಟ್‍ಗಳ ಮೇಲೆ ಸುರಿದು ಹಾಳು ಮಾಡುತ್ತಾರೆ. ಅದೆಷ್ಟೋ ಕುಟುಂಬಗಳಲ್ಲಿ ಅಪೌಷ್ಟಿಕ ಆಹಾರ ಸೇವನೆಯಿಂದ ಮಕ್ಕಳು ಅಶಕ್ತರಾಗಿ ಹಲವಾರು ರೋಗಗಳಿಗೆ ತುತ್ತಾಗುತ್ತಿರುವರು. ಬಡ ಕುಟುಂಬಗಳಿಗೆ ತಮ್ಮ ಮಕ್ಕಳಿಗೆ ಅಗತ್ಯವಾದ ಎರಡು ಹೊತ್ತಿನ ಪೌಷ್ಟಿಕಾಂಶಗಳಿರುವ ಊಟವನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಆದರೆ ಅಭಿಮಾನಿಗಳು ತಮ್ಮ ನೆಚ್ಚಿನ ಕಲಾವಿದರ ಮೇಲಿನ ಅಭಿಮಾನದಿಂದ ಹಾಲಿನಂತಹ ಅತ್ಯುತ್ತಮ ಆಹಾರವನ್ನು ಚರಂಡಿಗೆ ಸುರಿಯುತ್ತಿರುವರು.  

ಸಿನಿಮಾ ನಟರ ಜನ್ಮದಿನದಂದು ಅವರು ವಾಸಿಸುವ ಬಡಾವಣೆ ಅಕ್ಷರಶ: ಇರುವೆ ಕೂಡ ನುಸುಳಲು ಜಾಗವಿಲ್ಲದಷ್ಟು ಜನಸಂದಣಿಯಿಂದ ಕೂಡಿರುತ್ತದೆ. ಅಕ್ಕಪಕ್ಕದ ನಿವಾಸಿಗಳಿಗೆ ಮತ್ತು ಸಾರ್ವಜನಿಕರಿಗೆ ಆಗುವ ತೊಂದರೆಗಳ ಕುರಿತು ಅಭಿಮಾನಿ ಬಳಗ ಯೋಚಿಸುವುದಿಲ್ಲ. ರಾತ್ರಿಯಿಂದಲೇ ಅಭಿಮಾನದ ನಟನ ಮನೆಯ ಮುಂದೆ ಜಮಾಯಿಸುವ ಅಭಿಮಾನಿ ಪಡೆ ತಮ್ಮ ಗೌಜು ಗದ್ದಲಗಳಿಂದ ಸುತ್ತಮುತ್ತಲಿನ ನಿವಾಸಿಗಳ ನಿದ್ರೆಯನ್ನು ಹಾಳುಗೆಡವಿ ಅಶಾಂತಿಯನ್ನುಂಟು ಮಾಡುತ್ತಾರೆ. ಅದೆಷ್ಟೋ ಮನೆಗಳಲ್ಲಿ ವೃದ್ಧರು, ಮಕ್ಕಳು, ಕಾಯಿಲೆಗಳಿಂದ ಬಳಲುತ್ತಿರುವವರು, ಪರೀಕ್ಷೆಗಾಗಿ ಓದಿಕೊಳ್ಳುತ್ತಿರುವವರು, ಇಡೀ ಹಗಲು ದುಡಿದು ಹೈರಾಣಾಗಿ ವಿಶ್ರಾಂತಿ ಪಡೆಯುತ್ತಿರುವವರು ಇರುವರೆಂಬ ಕಿಂಚಿತ್ ಪ್ರಜ್ಞೆ ಕೂಡ ಇಲ್ಲದಂತೆ ವರ್ತಿಸುತ್ತಾರೆ. ಕೆಲವೊಮ್ಮೆ ಅತಿರೇಕದ ಅಭಿಮಾನವೇ ಪ್ರಾಣಕ್ಕೆ ಅಪಾಯವಾಗಿ ಪರಿಣಮಿಸುವುದುಂಟು. ಕೆಲವು ತಿಂಗಳುಗಳ ಹಿಂದೆ ಸಿನಿಮಾ ನಟರೊಬ್ಬರ ಜನ್ಮದಿನದ ಸಂದರ್ಭ ಮೆರವಣಿಗೆ ವೇಳೆ ವಿದ್ಯುತ್ ತಂತಿ ಸ್ಪರ್ಷಿಸಿ ಎರಡು ಜೀವಗಳು ಬಲಿಯಾದ ದುರ್ಘಟನೆ ಇನ್ನೂ ಸಾರ್ವಜನಿಕರ ನೆನಪಿನಲ್ಲಿ ಹಸಿರಾಗಿದೆ.

ಒಂದುಕಾಲದಲ್ಲಿ ಸಿನಿಮಾ ನಟರ ಅಭಿಮಾನಿಗಳ ನಡುವೆ ಜಗಳ, ಕಾದಾಟ ಸಾಮಾನ್ಯವಾಗಿದ್ದವು. ಸಿನಿಮಾ ಬಿಡುಗಡೆಯ ದಿನ ಅಭಿಮಾನಿ ಗುಂಪುಗಳ ನಡುವಿನ ದ್ವೇಷ ತಾರಕ್ಕೇರುತ್ತಿತ್ತು. ರಸ್ತೆಗಳಲ್ಲಿ ಕೈಮಿಲಾಯಿಸಿ ಹೊಡೆದಾಟಕ್ಕಿಳಿಯುತ್ತಿದ್ದರು. ವಿರೋಧಿ ನಟರ ಪೆÇೀಸ್ಟರ್‍ಗಳಿಗೆ ಸಗಣಿ ಬಳಿಯುವ, ಹರಿದು ಹಾಕುವ, ಸಿನಿಮಾ ಮಂದಿರಗಳಲ್ಲಿ ಚಿತ್ರ ಪ್ರದರ್ಶನದ ವೇಳೆ ಗಲಾಟೆ ಮಾಡುವಂತಹ ಅತಿರೇಕದ ವರ್ತನೆಗಳನ್ನು ಅಭಿಮಾನಿ ಬಳಗ ತೋರುತ್ತಿತ್ತು. ಕೆಲವೊಮ್ಮೆ ಅಭಿಮಾನಿಗಳ ವರ್ತನೆಯಿಂದ ಸ್ವತ: ಕಲಾವಿದರಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ಮುಜುಗರವಾಗುವುದುಂಟು. ಮೇರುನಟನ ಅಂತ್ಯಕ್ರಿಯೆಯ ಸಂದರ್ಭ ಅಂತಿಮ ವಿದಿವಿಧಾನಗಳನ್ನು ಮಾಡಲು ಕುಟುಂಬ ವರ್ಗದವರಿಗೆ ಆಸ್ಪದಕೊಡದೆ ನೂಕುನುಗ್ಗಲು, ತಳ್ಳಾಟ ಮಾಡಿದ್ದು ಅಭಿಮಾನಿಗಳ ಅತಿರೇಕದ ವರ್ತನೆಗೆ ಒಂದು ನೈಜ ದೃಷ್ಟಾಂತವಾಗಿದೆ.

ಇತ್ತೀಚೆಗೆ ಘಟನೆಯೊಂದರಲ್ಲಿ ಆರೋಪಿಯಾಗಿ ಜೈಲು ಸೇರಿರುವ ನಟನ ಅಭಿಮಾನಿಗಳ ಹುಚ್ಚಾಟ ಎಲ್ಲೆ ಮೀರಿದೆ. ತಮ್ಮ ಮೆಚ್ಚಿನ ನಟನ ವಿರುದ್ಧ ಹೇಳಿಕೆ ನೀಡುವ ಕಲಾವಿದರನ್ನು ಗೋಳುಹೊಯ್ದುಕೊಳ್ಳುತ್ತಿರುವರು. ಅತಿಯಾದ ಅಭಿಮಾನ ಮತ್ತು ಆರಾಧಾನಾ ಭಾವನೆ ಅಭಿಮಾನಿಗಳನ್ನು ಅಂಧರನ್ನಾಗಿಸಿದೆ. ನಡೆದ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ತೀರ್ಪು ನೀಡಲು ನ್ಯಾಯಾಲಯವಿದೆ. ಆದರೆ ಅಭಿಮಾನಿಗಳೇ ಸ್ವಯಂ ಘೋಷಿತ ನ್ಯಾಯಾಧೀಶರಾಗಿ ತಮ್ಮ ಆರಾಧ್ಯದೈವದ ನಟನನ್ನು ಆರೋಪ ಮುಕ್ತಗೊಳಿಸಿರುವರು. ಅದೆಷ್ಟೋ ಅಭಿಮಾನಿಗಳು ನಟನಿಗೆ ಜೈಲಿನಲ್ಲಿ ನೀಡಲಾದ ಖೈದಿಸಂಖ್ಯೆಯನ್ನು ತಮ್ಮ ವಾಹನಗಳ ಮೇಲೆ ಬರೆದುಕೊಂಡು ಧನ್ಯರಾಗಿರುವರು. 

ಯುವಪೀಳಿಗೆಯಲ್ಲಿ ತಾವು ಆರಾಧಿಸುವ ನಟ ನಟಿಯರ ಮತ್ತು ಕ್ರೀಡಾಪಟುಗಳ ಹೆಸರುಗಳನ್ನು ಹಚ್ಚೆ ಹಾಕಿಸಿಕೊಳ್ಳುವ, ನಡೆ-ನುಡಿಯಲ್ಲಿ ಅವರನ್ನು ಅನುಕರಿಸುವ ಚಾಳಿ ಸೋಂಕಿನಂತೆ ಆವರಿಸಿಕೊಂಡಿದೆ. ತಾವು ಆರಾಧಿಸುವ ಐಕಾನ್‍ಗಳ ಮೇಲಿನ ಅತಿಯಾದ ಪ್ರೀತಿ ಮತ್ತು ಅಭಿಮಾನ ಯುವ ಜನತೆಯನ್ನು ತಪ್ಪು ದಾರಿಗೆ ಕರೆದೊಯ್ಯುತ್ತಿದೆ. ಈ ತಪ್ಪು ನಡೆ ರಕ್ತದಲ್ಲಿ ಚಿತ್ರ ಬರೆಯುವುದು, ಹಾಲಿನ ಅಭಿಷೇಕ, ಸಾರ್ವಜನಿಕರ ನೆಮ್ಮದಿಗೆ ಧಕ್ಕೆ ತರುವಂತಹ ವರ್ತನೆಗಳಲ್ಲಿ ವ್ಯಕ್ತವಾಗುತ್ತಿದೆ. ಇದೇ ಯುವಪೀಳಿಗೆ ವಿಜ್ಞಾನಿಗಳು, ಶಿಕ್ಷಕರು, ಸಮಾಜ ಸೇವಕರನ್ನು ಆರಾಧಿಸುತ್ತಿಲ್ಲವೇಕೆ? ಎನ್ನುವುದು ಪ್ರಜ್ಞಾವಂತರನ್ನು ಕಾಡುತ್ತಿರುವ ಈ ಸಂದರ್ಭದ ಬಹುಮಹತ್ವದ ಪ್ರಶ್ನೆಯಾಗಿದೆ.

-ರಾಜಕುಮಾರ ಕುಲಕರ್ಣಿ 

Wednesday, November 13, 2024

ಲೋಕಾಂತದಲ್ಲೂ ಏಕಾಂತಕ್ಕಿರಲಿ ಜಾಗ

      



(೦೪.೦೬.೨೦೨೪ ರ ಪ್ರಜಾವಾಣಿಯ  'ಸಂಗತ' ಅಂಕಣದಲ್ಲಿ ಪ್ರಕಟ)

    ಮನೆಯ ಕುಟುಂಬದ ಸದಸ್ಯರ ನಡುವಣ ಜಗಳಗಳು, ಕಚೇರಿಯಲ್ಲಾದ ಗಲಾಟೆ, ಮೇಲಧಿಕಾರಿ ಕುರಿತು ಒಂದಿಷ್ಟು ಅಸಹನೆಯ ಮಾತುಗಳು, ಸಹೋದ್ಯೋಗಿಗಳ ನಡುವಳಿಕೆಯ ವಿಶ್ಲೇಷಣೆ, ದಾಯಾದಿಗಳೊಂದಿಗಿನ ಕಾದಾಟ, ಪಕ್ಕದ ಮನೆಯವರ ಉಪದ್ರವ ಈ ಎಲ್ಲ ಸಂಗತಿಗಳ ಕುರಿತು ಸಂಭಾಷಣೆಗಳು ಬೇಡವೆಂದರೂ ಬೆಳಗ್ಗಿನ ವಾಕಿಂಗ್ ವೇಳೆ ಕಿವಿಯ ಮೇಲೆ ಬೀಳುತ್ತವೆ. ಮಹಿಳೆಯರ ಸಂಭಾಷಣೆಯಲ್ಲಿ ಅತ್ತೆ, ನಾದಿನಿ, ವಾರಗಿತ್ತಿಯರ ಕುರಿತು ಅತ್ಯಂತ ಕೆಟ್ಟ ಬೈಗುಳಗಳು ಮಾರ್ದನಿಸುತ್ತವೆ. ತಾವು ರಸ್ತೆಯ ಮೇಲೆ ನಡೆಯುತ್ತಿದ್ದೇವೆ ಎನ್ನುವುದನ್ನು ಮರೆತು ಜೋರು ಧ್ವನಿಯಿಂದ ತಮಗಾಗದವರನ್ನು ನಿಂದಿಸುತ್ತ, ಹೀಯಾಳಿಸುತ್ತ, ಬೈಯುತ್ತ ಪ್ರತಿಕಾರ ತೀರಿಸಿಕೊಳ್ಳುತ್ತಿರುವ ಉದ್ವೇಗದಲ್ಲಿ ಹೆಜ್ಜೆ ಹಾಕುವ ಪರಿ ಅಚ್ಚರಿ ಮೂಡಿಸುತ್ತದೆ. 

ಬೆಳಗಿನ ಆಹ್ಲಾದಕರವಾದ ವಾತಾವರಣದಲ್ಲಿ ಶುದ್ಧಗಾಳಿ ಸೇವಿಸುತ್ತ ದೇಹ ಮತ್ತು ಮನಸ್ಸು ಎರಡನ್ನೂ ಶುದ್ಧಿಯಾಗಿಸಿಕೊಳ್ಳವುದು ವಾಯುವಿಹಾರದ ಹಿಂದಿರುವ ಉದ್ದೇಶ. ಆದರೆ ಹಲವರ ಜೊತೆಗೂಡಿ ಮಾತನಾಡುತ್ತಾ ನಡಿಗೆಯಲ್ಲಿ ತೊಡಗುವ ಈ ಸಂದರ್ಭ ಮನುಷ್ಯನ ಮನಸ್ಸು ಅನ್ಯರ ನಿಂದನೆಯ ಸುತ್ತ ಗಿರಕಿ ಹೊಡೆಯುತ್ತ ಅನಾರೋಗ್ಯಗೊಳ್ಳುತ್ತಿದೆ. ದೇಹದಷ್ಟೇ ಮನಸ್ಸಿನ ಆರೋಗ್ಯ ಕೂಡ ಮಹತ್ವದ್ದಾಗಿದೆ. ‘ಮನುಷ್ಯ ಏಕಾಂಗಿಯಾಗಿದ್ದಾಗ ಅದು ಆತ್ಮದ ವಿಶ್ಲೇಷಣೆಗೆ ದಾರಿ ಮಾಡಿಕೊಡುತ್ತದೆ. ಇನ್ನೊಬ್ಬ ಜೊತೆಗೂಡಿದಾಗ ಬೇರೆಯವರನ್ನು ನಿಂದಿಸುವುದು ಶುರುವಾಗುತ್ತದೆ. ಮೂರು ಜನ ಕಲೆತಾಗ ಅದು ಜಗಳಕ್ಕೆ ನಾಂದಿ ಹಾಡುತ್ತದೆ’ ಎಂದಿರುವರು ಅನುಭಾವಿಗಳು

ವಾಯುವಿಹಾರ, ಯೋಗ, ದ್ಯಾನ, ಆಧ್ಯಾತ್ಮ ಪ್ರವಚನ, ದೇವಸ್ಥಾನಗಳ ಭೇಟಿ ಈ ಎಲ್ಲ ಸಂದರ್ಭಗಳಲ್ಲೂ ಮನುಷ್ಯ ಮನಸ್ಸಿನ ಶುದ್ಧತೆಗೆ ಆದ್ಯತೆ ಕೊಡುತ್ತಿಲ್ಲ. ಅಲೌಕಿಕ ವಾತಾವರಣದಲ್ಲೂ ಮನುಷ್ಯನು ರಾಗದ್ವೇಷಗಳು, ಮದ, ಮೋಹ, ಮತ್ಸರ ಇತ್ಯಾದಿ ಅರಿಷಡ್ವರ್ಗಗಳಿಂದ ಬಂಧಿತನಾಗುತ್ತಿರುವನು.   ಬದುಕಿನಲ್ಲಿ ಭೌತಿಕ ಸಂಗತಿಗಳೇ ಮುನ್ನೆಲೆಗೆ ಬರುತ್ತಿರುವ ಇಂದಿನ ದಿನಗಳಲ್ಲಿ ವಾಯುವಿಹಾರ, ಯೋಗ, ಧ್ಯಾನದಂತಹ ಕ್ರಿಯೆಗಳು ಕೇವಲ ತೋರಿಕೆಯಾಗುತ್ತಿವೆ.

ಸದಾಕಾಲ ಲೋಕಾಂತದ ವ್ಯವಹಾರಗಳಲ್ಲಿ ಮುಳುಗಿರುವವರಿಗೆ ಏಕಾಂತಕ್ಕೆ ಲಗ್ಗೆ ಇಡುವುದು ಕಷ್ಟದ ಕೆಲಸ. ಆಗಾಗ ಏಕಾಂತವನ್ನು ಪ್ರವೇಶಿಸಿ ತನ್ನನ್ನು ತಾನು ಆತ್ಮವಿಮರ್ಶೆಗೆ ಮತ್ತು  ಆತ್ಮವಿಶ್ಲೇಷಣೆಗೆ ಒಳಗಾಗಿಸಿಕೊಳ್ಳುವುದು ಭಾವಶುದ್ಧತೆಯ ದೃಷ್ಟಿಯಿಂದ ತುಂಬ ಅಗತ್ಯವಾಗಿದೆ. ಇಂದಿನ ದಿನಗಳಲ್ಲಿ ಯೋಗ, ಧ್ಯಾನದಂಥ ಏಕಾಂತದ ಕ್ರಿಯೆಗಳಿಗೆ ಮಾರುಕಟ್ಟೆಯ ಮೌಲ್ಯ ಪ್ರಾಪ್ತವಾಗಿದೆ. ಎಲ್ಲವನ್ನೂ ಲಾಭ ಮತ್ತು ನಷ್ಟದ ದೃಷ್ಟಿಯಲ್ಲೇ ಅಳೆಯುತ್ತ ಯೋಗ ಮತ್ತು ಧ್ಯಾನದಂತಹ ಏಕಾಂತದ ಕ್ರಿಯೆಗಳನ್ನು ಲೋಕಾಂತದಲ್ಲಿ ಮಾರಾಟದ ಸರಕುಗಳಾಗಿ ಪರಿವರ್ತಿಸಲಾಗಿದೆ. ತನ್ನ ನಡೆ-ನುಡಿ, ತನ್ನೊಳಗಿನ ಸರಿ-ತಪ್ಪುಗಳ ವಿವೇಚನೆ ಮತ್ತು ವಿಶ್ಲೇಷಣೆ ಇದೆಲ್ಲ ಸಾಧ್ಯವಾಗುವುದು ಏಕಾಂತದಲ್ಲಿ ಮಾತ್ರ. ಲೋಕಾಂತದಲ್ಲಿ ಕಳೆದು ಹೋಗಿರುವ ಮನುಷ್ಯನಿಗೆ ಏಕಾಂತದ ಸುಖದ ಅರಿವಿಲ್ಲವಾಗಿದೆ. 

  ಶರಣರು ಲೋಕಾಂತದಲ್ಲೇ  ಬದುಕಿನ ಸತ್ಯವನ್ನು ಶೋಧಿಸಿದರು ಮತ್ತು ಮೋಕ್ಷವನ್ನು ಸಾಧಿಸಿದರು. ಕಾಯಕ ಎನ್ನುವುದು ಕಾಯವನ್ನು ಶುದ್ಧವಾಗಿಸುವ ಕ್ರಿಯೆಯಾಗಿತ್ತು ಅವರಿಗೆ. ಏಕಕಾಲಕ್ಕೆ ದೇಹವನ್ನು ಕಾಯಕದಲ್ಲಿ ಮನಸ್ಸನ್ನು ಆಧ್ಯಾತ್ಮದಲ್ಲಿ ತೊಡಗಿಸುತ್ತಿದ್ದರು. ಅಂತರಂಗ ಮತ್ತು ಬಹಿರಂಗ ಎರಡನ್ನೂ ಏಕತ್ರಗೊಳಿಸಿ ಲೋಕಾಂತದಲ್ಲೂ ಏಕಾಂತವನ್ನು ಪ್ರವೇಶಿಸುತ್ತಿದ್ದ ಅನುಭಾವಿಗಳ ಬದುಕು ನಿಜಕ್ಕೂ ಅದೊಂದು ಪವಾಡವೇ ಸರಿ. ‘ದಿಟದಿಂದ ತನ್ನ ತಾ ಕಾಣಬೇಕು, ದಿಟದಿಂದ ತನ್ನ ತಾ ಕೇಳಬೇಕು, ದಿಟದಿಂದ ತನ್ನ ತಾ ಮಾತಾಡಬೇಕು’ ಎಂದಿರುವ ಅಲ್ಲಮಪ್ರಭು ಬಹಿರಂಗಕ್ಕಿಂತ ಅಂತರಂಗ ಶುದ್ಧಿ ಮೇಲು ಎನ್ನುತ್ತಾರೆ. 

ಪುಸ್ತಕಗಳ ಓದು ಮನುಷ್ಯನನ್ನು ಧ್ಯಾನಸ್ಥ ಸ್ಥಿತಿಗೆ ಕೊಂಡೊಯ್ಯುತ್ತದೆ. ಏಕಾಂತದಲ್ಲಿ ಕೃತಿಯೊಂದನ್ನು ಓದುತ್ತಿರುವ ಗಳಿಗೆ ಓದುಗ ತನ್ನೊಂದಿಗೆ ತಾನು ಸಂಭಾಷಣೆಗಿಳಿಯುತ್ತಾನೆ. ಪುಸ್ತಕಗಳಲ್ಲಿ ಅಂತರಂಗವನ್ನು ಶುದ್ಧವಾಗಿಸುವ ವಿಚಾರಗಳು ಹೇರಳವಾಗಿ ಲಭಿಸುತ್ತವೆ. ಶಾಂತಿನಾಥ ದೇಸಾಯಿ ಅವರ ‘ಓಂ ಣಮೋ’ ಕಾದಂಬರಿಯಲ್ಲಿ ಮೋಕ್ಷಕ್ಕೆ ದಾರಿ ಮಾಡಿಕೊಡುವ ಐದು ತತ್ವಗಳನ್ನು ಪಾತ್ರವೊಂದು ರೂಢಿಸಿಕೊಳ್ಳುವುದು ಹೀಗಿದೆ-‘ನಾನಂತೂ ಮರಣದ ಮುಖ ನೋಡಿದ ಮೇಲೆ ನಿರ್ಲಿಪ್ತನಾಗಿಬಿಟ್ಟಿದ್ದೇನೆ. ಇದಕ್ಕೆ ನಾವು ಅಪರಿಗ್ರಹ ಅಂತೀವಿ. ಹೆಂಡತಿಯಿಂದಲೂ ನಿರ್ಲಿಪ್ತ. ಅದಕ್ಕೆ ಬ್ರಹ್ಮಚರ್ಯೆ ಅಂತಾರೆ. ಬಿಜಿನಸ್ಸನ್ನೆಲ್ಲ ಮಗನ ಕೊರಳಿಗೆ ಕಟ್ಟೀನಿ-ಅದಕ್ಕಂತಾರೆ ಆಸ್ತೇಯ. ಯಾವ ಪ್ರಾಣಿಗೂ ತ್ರಾಸ ಕೊಡೋಲ್ಲ-ಅದಕ್ಕಂತಾರೆ ಅಹಿಂಸಾ. ಇನ್ನು ಸತ್ಯ, ಎಂದಾದರೂ ಸಾಯೋದೇ ಸತ್ಯ’. ಆದರೆ ಇಂದಿನ ದಿನಗಳಲ್ಲಿ ಪುಸ್ತಕಗಳನ್ನು ಓದುವ ಓದುಗರ ಸಂಖ್ಯೆ ಗಣನೀಯವಾಗಿ ಕ್ಷೀಣಿಸುತ್ತಿದ್ದು ಪುಸ್ತಕಗಳ ಓದು ಸೃಷ್ಟಿಸುವ ಧ್ಯಾನಸ್ಥದ ಸುಖದಿಂದ ಮನುಷ್ಯ ವಂಚಿತನಾಗುತ್ತಿರುವನು. 

ಕಥೆಗಾರ್ತಿ ಕಸ್ತೂರಿ ಬಾಯರಿ ತಮ್ಮ ಸಂದರ್ಶನದಲ್ಲಿ ಬದುಕಿನ ಕುರಿತು ತುಂಬ ಅರ್ಥಪೂರ್ಣವಾದ ಒಂದು ಮಾತು ಹೇಳಿರುವರು-‘ಅಸಹಾಯಕತೆ, ಹಸಿವು ನಮಗೆ ಕಾಡಲಿಲ್ಲ ಅಂದರೆ, ಹೌ ಮಚ್ ವಿ ಆರ್ ಸ್ಟ್ರಾಂಗ್ ಇನ್‍ಫ್ರಂಟ್ ಆಫ್ ಹಂಗರ್? ಅಂತ ಹ್ಯಾಂಗ ಗೊತ್ತಾಗೋದು. ಯಾರು ನಮ್ಮನ್ನು ನೋಡಿದರೂ ಒಂದು ಕೆಟ್ಟ ಭಾವ ಬರದಂಗ ಘನತೆಯ ಬದುಕು ಬದುಕೀವಿ ಅಂದರ ಅದು ಸಣ್ಣ ಮಾತಲ್ಲ’. ಲೋಕಾಂತದಲ್ಲೂ ಏಕಾಂತಕ್ಕೆ ಲಗ್ಗೆ ಇಡುವ ಅನುಭಾವಿಗಳ ಆಧ್ಯಾತ್ಮವಿದು. ಬದುಕಿನ ಪಯಣವೇ ಮನುಷ್ಯನಿಗೆ ಅಗತ್ಯವಾದ ಏನೆಲ್ಲ ಪಾಠಗಳನ್ನು ಕಲಿಸುತ್ತದೆ ಎಂದು ಅರ್ಥೈಸುತ್ತದೆ ಈ ಮಾತು.

ಏಕಮುಖವಾದ ಬದುಕಿನ ಪಯಣದಲ್ಲಿ ಕಿಂಚಿತ್ ಏರುಪೇರಾದರೂ ಮನುಷ್ಯ ಹತಾಶೆ, ಖಿನ್ನತೆ, ಉದ್ವಿಗ್ನತೆಗಳಿಗೆ ದೂಡಲ್ಪಡುತ್ತಿದ್ದಾನೆ. ಇಂಥ ಸಂದರ್ಭದಲ್ಲಿ ಮುಳುಗುವವನಿಗೆ ಹುಲ್ಲುಕಡ್ಡಿ ಆಸರೆ ಎನ್ನುವಂತೆ ಬದುಕುವುದನ್ನು ಕಲಿಸಲು ಯೋಗ ಮತ್ತು ಆಧ್ಯಾತ್ಮದ ಕೇಂದ್ರಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಮನುಷ್ಯನ ದೌರ್ಬಲ್ಯವನ್ನೇ ಬಂಡವಾಳವಾಗಿಸಿಕೊಂಡು ಹಣಗಳಿಸುತ್ತಿವೆ. ಆದರೆ ಮನುಷ್ಯ ತನ್ನನ್ನು ತಾ ಅರಿಯಲು ಇಂಥ ತರಬೇತಿ ಶಾಲೆಗಳ ಅಗತ್ಯವಿಲ್ಲ. ಜೀವನವೇ ಒಂದು ಪಾಠಶಾಲೆ. ಬದುಕಿನ ತನ್ನ ಪಯಣದ ದಾರಿಯಲ್ಲೇ ಮನುಷ್ಯ ಜೀವನದ ಪಾಠಗಳನ್ನು ಕಲಿಯಬೇಕಿದೆ. ಲೋಕಾಂತದ ನಡುವೆಯೂ ಏಕಾಂತಕ್ಕೆ ಲಗ್ಗೆ ಇಟ್ಟು ಬದುಕನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕಿದೆ. 

-ರಾಜಕುಮಾರ ಕುಲಕರ್ಣಿ



Friday, October 4, 2024

ರಾಜಕಾರಣಕ್ಕೆ ಆಗಲಿ ನೀತಿಯ ದೀಕ್ಷೆ



(ಪ್ರಜಾವಾಣಿ, 18.05.2024

ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳ ನೈತಿಕ ಅಧ:ಪತನ ಸಮಾಜದಲ್ಲಿ ಆತಂಕದ ವಾತಾವರಣವನ್ನು ನಿರ್ಮಾಣ ಮಾಡಿದೆ. ದಿನಬೆಳಗಾದರೆ ಪತ್ರಿಕೆಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ರಾಜಕಾರಣಿಗಳ ಕಳಂಕಿತ ಚಾರಿತ್ರ್ಯದ ಸುದ್ಧಿಗಳು ಸಾರ್ವಜನಿಕರಲ್ಲಿ ಜಿಗುಪ್ಸೆ ಮೂಡಿಸಿವೆ. ರಾಜಕಾರಣಿಗಳ ನಡೆ ಮತ್ತು ನುಡಿ ಬಹು ಚರ್ಚಿತ ಸಂಗತಿಗಳಾಗಿವೆ. ಕಳಂಕಿತ ರಾಜಕಾರಣಿಗಳನ್ನು ನಮ್ಮ ಶಾಸಕರು ಮತ್ತು ಸಂಸದರೆಂದು ಹೇಳಿಕೊಳ್ಳಲು ಮುಜುಗರಕ್ಕೊಳಗಾಗುವ ಅಸಹಾಯಕ ಸ್ಥಿತಿಯಲ್ಲಿ ಶ್ರೀಸಾಮಾನ್ಯನಿರುವನು. ರಾಜಕಾರಣಿಗಳ ಅಧಿಕಾರ ಲಾಲಸೆ, ಕುಟುಂಬ ಪ್ರೇಮ, ತಪ್ಪುನಡೆ,  ಲೈಂಗಿಕ ಹಗರಣಗಳಿಂದ ಸಾರ್ವಜನಿಕರು ತಲೆತಗ್ಗಿಸುವಂತಾಗಿದೆ. ಒಟ್ಟಾರೆ ರಾಜಕಾರಣದಲ್ಲಿ ನಿರ್ಲಜ್ಜ ವ್ಯವಸ್ಥೆಯೊಂದು ನಿಧಾನವಾಗಿ ರೂಪುಗೊಳ್ಳುತ್ತಿದೆ.

ರಾಜಕಾರಣವು ಸಮಾಜಸೇವೆ ಎನ್ನುವುದಕ್ಕಿಂತ ಅದು ಆದಾಯದ ಮೂಲ ಎನ್ನುವ ಪರಿಕಲ್ಪನೆ ಬಲವಾಗುತ್ತಿದೆ. ಈ ಮಾತಿಗೆ ಪುಷ್ಟಿ ನೀಡುವಂತೆ ಚುನಾವಣೆಯಿಂದ ಚುನಾವಣೆಗೆ ರಾಜಕಾರಣಿಗಳ ಸಂಪತ್ತಿನಲ್ಲಿ ಗಮನಾರ್ಹವಾದ ಪ್ರಗತಿ ಕಂಡುಬರುತ್ತಿದೆ. ಕಾನೂನಿನ ಕಣ್ಣಿಗೆ ಮಣ್ಣೆರೆಚಿ ಅಕ್ರಮವಾಗಿ ಹಣಗಳಿಸುತ್ತಿರುವರೆಂಬ ಆರೋಪ ರಾಜಕಾರಣಿಗಳ ಮೇಲಿದೆ. ಚುನಾವಣೆಯಲ್ಲಿ ಅಭ್ಯರ್ಥಿಗಳಿಂದ ಹಣದ ಹೊಳೆ ಹರಿಯುತ್ತದೆ. ಅಭ್ಯರ್ಥಿಗಳು ಕೋಟ್ಯಾಂತರ ರೂಪಾಯಿಗಳನ್ನು ಚುನಾವಣೆಗಾಗಿ ಖರ್ಚು ಮಾಡುತ್ತಾರೆ. ರಾಜಕಾರಣವು ಬಂಡವಾಳ ಹೂಡಿ ಲಾಭ ಗಳಿಸುವ ಕ್ಷೇತ್ರವಾಗಿದೆ. ಲಾಭ ಮತ್ತು ನಷ್ಟದ ಸಂಗತಿಗಳು ಪರಿಗಣನೆಗೆ ಬಂದಾಗ ಸಮಾಜಸೇವೆ ಹಿಂದೆ ಸರಿಯುತ್ತದೆ.

ರಾಜಕಾರಣದ ಮೇಲಿರುವ ಇನ್ನೊಂದು ಗುರುತರವಾದ ಆರೋಪ ಅದು ಅವರ ಕುಟುಂಬ ಪ್ರೇಮ. ಇಂದಿನ ಕುಟುಂಬ ರಾಜಕಾರಣವನ್ನು ನೋಡಿದರೆ ಆಳರಸರ ರಾಜಪ್ರಭುತ್ವದ ವ್ಯವಸ್ಥೆ ಮತ್ತೆ ಮರುಕಳಿಸುತ್ತಿರುವಂತೆ ಭಾಸವಾಗುತ್ತಿದೆ. ರಾಜಕಾರಣಿಗಳು ತಮ್ಮ ಮಕ್ಕಳನ್ನು ಭವಿಷ್ಯದ ನೇತಾರರನ್ನಾಗಿ ತಯ್ಯಾರು ಮಾಡುತ್ತಿರುವರು. ಮತಕ್ಷೇತ್ರಗಳು ಅಪ್ಪನಿಂದ ಮಕ್ಕಳಿಗೆ ಸಲೀಸಾಗಿ ಉಡುಗೊರೆಯ ರೂಪದಲ್ಲಿ ಬಳುವಳಿಯಾಗಿ ದೊರೆಯುತ್ತಿವೆ. ಯಾವುದೇ ರಾಜಕೀಯ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ದೊರೆಯುವುದು ಬಹಳ ವಿರಳ. ಒಂದರ್ಥದಲ್ಲಿ ರಾಜಕಾರಣ ಎನ್ನುವುದು ಕುಟುಂಬದ ಪಿತ್ರಾರ್ಜಿತ ಆಸ್ತಿಯಂತಾಗಿದೆ. ಪಕ್ಷದ ಏಳ್ಗೆಗಾಗಿ ಒಂದು ಹನಿ ಬೆವರು ಹರಿಸದ ರಾಜಕಾರಣಿಗಳ ಸಂತಾನ ಅಧಿಕಾರದ ಗದ್ದುಗೆ ಏರುತ್ತಿದೆ.  

ಅಧಿಕಾರ ಪ್ರಾಪ್ತಿ ರಾಜಕಾರಣದ ಮೂಲ ಧ್ಯೇಯವಾಗಿದೆ. ಅಧಿಕಾರಕ್ಕಾಗಿ ಚುನಾವಣೆಯ ಸಂದರ್ಭ ರಾಜಕಾರಣಿಗಳು ಪಕ್ಷದಿಂದ ಪಕ್ಷಕ್ಕೆ ವಲಸೆ ಹೋಗುತ್ತಾರೆ. ಬೇರೆ ಬೇರೆ ಪಕ್ಷಗಳಲ್ಲಿದ್ದು ಒಬ್ಬರನ್ನೊಬ್ಬರು ವಾಚಾಮಗೋಚರವಾಗಿ ಬೈಯ್ದುಕೊಂಡುವರು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಒಂದೇ ಪಕ್ಷದವರಾಗಿ ಆತ್ಮೀಯರಾಗುತ್ತಾರೆ. ಯಾರನ್ನು ನಂಬುವುದೆಂದು ಮತದಾರ ಗೊಂದಲಕ್ಕೊಳಗಾಗುತ್ತಾನೆ. ಅದೆಷ್ಟೋ ಸಂದರ್ಭಗಳಲ್ಲಿ ಅಧಿಕಾರದ ಆಸೆಯಿಂದ ಶಾಸಕ ಅಥವಾ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿ ಬೇರೊಂದು ಪಕ್ಷವನ್ನು ಸೇರುವ ರಾಜಕಾರಣಿಗಳು ಮತದಾರರ ಮತಗಳನ್ನು ಅಪಮೌಲ್ಯಗೊಳಿಸುತ್ತಿರುವರು. ಮೌಲ್ಯ ಮತ್ತು ಸಿದ್ಧಾಂತಗಳು ಹಿನ್ನೆಲೆಗೆ ಸರಿದು ಅಧಿಕಾರ ಮತ್ತು ಹಣ ಮುನ್ನೆಲೆಗೆ ಬರುತ್ತಿವೆ. ಯುದ್ಧ ಮತ್ತು ಪ್ರೀತಿಯಲ್ಲಿ ಎಲ್ಲವೂ ನ್ಯಾಯಸಮ್ಮತ ಎನ್ನುವುದು ರಾಜಕಾರಣಕ್ಕೂ ಅನ್ವಯಿಸುತ್ತಿದೆ.  

ಇಂಥ ವಿಷಮ ಪರಿಸ್ಥಿತಿಯಲ್ಲಿ ರಾಜಕಾರಣವು ವಿದ್ಯಾರ್ಥಿಗಳು, ಶಿಕ್ಷಕರು, ಚಿಂತಕರು, ಸಾಹಿತಿಗಳಿಗೆ ಆದರ್ಶ ಮತ್ತು ಮಾದರಿಯಾಗುತ್ತಿರುವುದು ದುರಂತದ ಸಂಗತಿ. ಕೆಲವು ದಿನಗಳ ಹಿಂದೆ ನನ್ನ ಪರಿಚಿತರೊಬ್ಬರು ವೈದ್ಯಳಾಗಿರುವ ತಮ್ಮ ಮಗಳಿಗೆ ರಾಜ್ಯದ ಮಂತ್ರಿಯೊಬ್ಬರಿಗೆ ಚಿಕಿತ್ಸೆ ನೀಡುವ ಭಾಗ್ಯ ಪ್ರಾಪ್ತವಾಯಿತೆಂದು ತುಂಬ ಅಭಿಮಾನದಿಂದ ವಾಟ್ಸ್‍ಆ್ಯಪ್‍ನಲ್ಲಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದರು. ರಾಜಕಾರಣವು ಸಮಾಜವನ್ನು ಹೇಗೆ ಪ್ರಭಾವಿಸುತ್ತಿದೆ ಎನ್ನುವುದಕ್ಕೆ ಇದೊಂದು ನಿದರ್ಶನ. ವೃತ್ತಿಗೆ ರಾಜಿನಾಮೆ ನೀಡಿ ರಾಜಕಾರಣವನ್ನು ಪ್ರವೇಶಿಸುವವರ ಸಂಖ್ಯೆ ಹೆಚ್ಚುತ್ತಿದೆ. ರಾಜಕಾರಣವು ಸಮಾಜವನ್ನು ಪ್ರಭಾವಿಸುತ್ತಿರುವ ಇಂಥ ಹೊತ್ತಿನಲ್ಲಿ ಅದು ನೈತಿಕವಾಗಿ ಕೆಳಮಟ್ಟಕ್ಕಿಳಿಯುವುದು ಜನಜೀವನದ ಅಧೋಗತಿಗೆ ಕಾರಣವಾಗುತ್ತದೆ.

ಯೇಟ್ಸ್ ಹೇಳಿದ ಮಾತು ಹೀಗಿದೆ- ‘ಬೇರೆಯವರ ಜೊತೆ ಜಗಳವಾಡುವವನು ರಾಜಕಾರಣಿ ಆಗುತ್ತಾನೆ. ತನ್ನ ಜೊತೆಗೇ ಜಗಳ ಮಾಡಿಕೊಳ್ಳುವವನು ಕವಿ ಆಗುತ್ತಾನೆ’. ತನ್ನೊಂದಿಗೇ ಜಗಳ ಮಾಡುವುದೆಂದರೆ ಆತ್ಮವಿಶ್ಲೇಷಣೆಗೆ, ಆತ್ಮವಿಮರ್ಶೆಗೆ ಒಳಗಾಗುವುದು ಎಂದರ್ಥ. ಯೇಟ್ಸ್ ಪ್ರಕಾರ ರಾಜಕಾರಣಿ ಎಂದಿಗೂ ಆತ್ಮವಿಮರ್ಶೆಗೆ ಇಳಿಯಲಾರ. ಸದಾಕಾಲ ಲೋಕಾಂತವನ್ನೇ ನೆಚ್ಚಿಕೊಂಡವರಿಗೆ ಏಕಾಂತವನ್ನು ಪ್ರವೇಶಿಸುವ ಎದೆಗಾರಿಕೆ ಇರುವುದಾದರೂ ಹೇಗೆ ಸಾಧ್ಯ?. ಆತ್ಮವಿಮರ್ಶೆ ಮಾಡಿಕೊಳ್ಳದ ರಾಜಕಾರಣಿಗೆ ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸ ಅರಿವಾಗಲಾರದು. ಆಗ ನೈತಿಕತೆ ಮೂಲೆಗುಂಪಾಗಿ ಅನೈತಿಕತೆ ವಿಜೃಂಭಿಸುತ್ತದೆ.

ರಾಜಕಾರಣದಲ್ಲಿ ನೈತಿಕತೆಯನ್ನು ವ್ರತದಂತೆ ಪಾಲಿಸಿಕೊಂಡುಬಂದ ಅನೇಕ ರಾಜಕಾರಣಿಗಳಿರುವರು. ರೈಲು ದುರಂತವಾದಾಗ ಮಂತ್ರಿಗಳಾಗಿದ್ದ ಲಾಲ್‍ಬಹದ್ದೂರ್ ಶಾಸ್ತ್ರಿ ಅವರು ನೈತಿಕೆ ಹೊಣೆ ಹೊತ್ತು ರಾಜಿನಾಮೆ ನೀಡಲು ಮುಂದಾದ ಪ್ರಸಂಗ ಇಂದಿಗೂ ರಾಜಕಾರಣದಲ್ಲಿ ಆದರ್ಶ ನಡೆಯಾಗಿ ಉಳಿದಿದೆ. ಜಯಪ್ರಕಾಶ ನಾರಾಯಣ, ಲೋಹಿಯಾ, ಬಿ.ಸಿ.ರಾಯ್, ಜಾರ್ಜ್ ಫರ್ನಾಂಡಿಸ್, ಕರ್ಪೂರಿ ಠಾಕೂರ, ವಾಜಪೇಯಿ, ಎಸ್.ನಿಜಲಿಂಗಪ್ಪ, ಶಾಂತವೇರಿ ಗೋಪಾಲಗೌಡರು ತಮ್ಮ ಪ್ರಾಮಾಣಿಕತೆಯಿಂದ ರಾಜಕಾರಣಕ್ಕೆ ಒಂದು ಘನತೆ ತಂದುಕೊಟ್ಟರು. ಕುಟುಂಬವರ್ಗವನ್ನು ರಾಜಕಾರಣದಿಂದ ದೂರವೇ ಇಟ್ಟಿದ್ದ ಈ ಮಹನೀಯರು ಸದಾಕಾಲ ಪ್ರಾತ:ಸ್ಮರಣೀಯರಾಗಿ ಸಾರ್ವಜನಿಕರ ಸ್ಮರಣೆಯಲ್ಲಿ ಉಳಿದಿರುವರು. ಆದರೆ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಇಂಥ ರಾಜಕಾರಣಿಗಳ ಸಂಖ್ಯೆ ಸಾರ್ವಜನಿಕರು ಆತಂಕಪಡುವಷ್ಟು ಕ್ಷೀಣಿಸಿದೆ.

‘ಪ್ರಕೃತಿ ಸೃಷ್ಟಿಸಿದ ಜೀವಿಗಳಲ್ಲೆಲ್ಲಾ ಅತ್ಯಂತ ನೀಚನೆಂದರೆ ಮನುಷ್ಯ. ಮನುಷ್ಯನಾಗಿಯೇ ಈ ಮಾತು ಹೇಳಬೇಕಾಗಿ ಬಂದಿರುವುದು ಇನ್ನೂ ದೊಡ್ಡ ನೀಚತನ ಅನ್ನಿಸುತ್ತಿದೆ’ ಎಂದು ದಾಸ್ತೋವಸ್ಕಿ ಅಂದಿರುವ ಮಾತು ಇಂದಿನ ರಾಜಕಾರಣವನ್ನು ಕುರಿತೇ ಹೇಳಿದಂತಿದೆ. ನೀತಿ ಇಲ್ಲದ ರಾಜಕಾರಣವನ್ನು ಗಾಂಧೀಜಿ ಸಾಮಾಜಿಕ ಪಾಪ ಎಂದಿರುವರು. ರಾಜಕಾರಣದ ಕುರಿತು ಸಾರ್ವಜನಿಕರಲ್ಲಿ ಮನೆಮಾಡಿರುವ ಭ್ರಮನಿರಸನ ಮತ್ತು ಅಸಹ್ಯ ಭಾವನೆಯನ್ನು ತೊಡೆದುಹಾಕಲು ರಾಜಕಾರಣಕ್ಕೆ ನೀತಿಯ ದೀಕ್ಷೆ ನೀಡುವುದು ಸಧ್ಯದ ತುರ್ತು ಅಗತ್ಯವಾಗಿದೆ. ಆದರೆ ಸಮಸ್ಯೆ ಇರುವುದು ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ಎನ್ನುವುದರಲ್ಲಿ.

-ರಾಜಕುಮಾರ ಕುಲಕರ್ಣಿ