Tuesday, March 26, 2019

ನೆನಪು (ಕಥೆ)

           ದಾಮೋದರ ಜೋಷಿ ಒಂದು ಬೆಳಗ್ಗೆ ಹಾಸಿಗೆಯಲ್ಲಿ ನಿದ್ದೆಯಿಂದ ಎದ್ದು ಕುಳಿತವನು ಮಲಗುವ ಕೋಣೆಯಲ್ಲಿನ ವಸ್ತುಗಳನ್ನೆಲ್ಲ ಹೊಸದಾಗಿ ನೋಡುತ್ತಿರುವವನಂತೆ ಪ್ರತಿಯೊಂದು ವಸ್ತುವನ್ನು ದಿಟ್ಟಿಸಿ ನೋಡತೊಡಗಿದ. ದೇಹ ಮತ್ತು ಮನಸ್ಸು ಭಾರವನ್ನು ಕಳೆದುಕೊಂಡು ಹಗುರಾದಂತೆಯೂ ತಾನು ಯಾವುದೋ ಒಂದು ಅನೂಹ್ಯ ಅನುಭವಕ್ಕೆ ಒಳಗಾದಂತೆಯೂ ಅವನಿಗೆ ಭಾಸವಾಗತೊಡಗಿತು. ಎಷ್ಟು ಪ್ರಯತ್ನಿಸಿದರೂ ನಿನ್ನೆ ನಡೆದ ಘಟನೆಗಳು ಅವನ ನೆನಪಿಗೆ ಬರುತ್ತಿಲ್ಲ. ನೆನಪಿನ ಕೋಶದ ಭಾಗವೊಂದು ತನ್ನಿಂದ ಕಳಚಿ ಬಿದ್ದಂತೆಯೂ ಮತ್ತು ಹೀಗಾಗಿದ್ದರಿಂದ ತನ್ನಲ್ಲಿ ಲವಲವಿಕೆ ಮೂಡಿದಂತೆಯೂ ಅನಿಸಲುತೊಡಗಿತು. ರಾತ್ರಿ ಅಂಗಡಿ ಬಾಗಿಲು ಹಾಕಿ ಮನೆಗೆ ಬಂದು ಊಟ ಮಾಡಿದ್ದಷ್ಟೆ ತನಗೆ ನಿದ್ದೆ ಯಾವಾಗ ಬಂತು ಎನ್ನುವುದಾಗಲಿ ರಾತ್ರಿ ಏನು ನಡೆಯಿತೆನ್ನುವುದಾಗಲಿ ನೆನಪಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದ ದಾಮೋದರನಿಗೆ ಎಲ್ಲವೂ ಗೋಜಲುಗೋಜಲಾಗಿ ಕಾಣಿಸಿತು. ಅಲ್ಲಲ್ಲಿ ಚದುರಿದ ನೆನಪಿನ ತುಣುಕುಗಳನ್ನು ಒಂದೊಂದಾಗಿ ಜೋಡಿಸಿದಾಗ ರಾತ್ರಿ ಕನಸಿನಲ್ಲಿ ಶ್ವೇತ ವಸ್ತ್ರಧಾರಿಯಾದ ಜಟಾಧಾರಿ ಮುದುಕನೊಬ್ಬ ಕಾಣಿಸಿಕೊಂಡು ತನಗೆ ಏನನ್ನೊ ಹೇಳಿದನೆಂದೂ ಮತ್ತು ಹತ್ತಿರ ಬಂದು ತನ್ನ ಕೈಯಿಂದ ನನ್ನ ತಲೆಯನ್ನು ಸವರಿದನೆನ್ನುವ ಅಸ್ಪಷ್ಟ ಸಂಗತಿಯೊಂದು ಅವನ ಸ್ಮೃತಿ ಪಟಲದ ಮೇಲೆ ಮೂಡಿತು. ಆ ಮುದುಕ ಹಾಗೆ ತನ್ನ ತಲೆಯನ್ನು ಸವರಿದ ಕ್ಷಣದಿಂದಲೇ ನನಗೆ ಆ ದಿನವೆಲ್ಲ ನಡೆದ ಘಟನೆಗಳ ಯಾವ ನೆನಪೂ ಮನಸ್ಸಿನಲ್ಲಿ ಉಳಿಯದ ಅನುಭವವಾಯಿತೆನ್ನುವ ಅರಿವು ಬಂದದ್ದೆ ದಾಮೋದರ ದಗ್ಗನೆ ಹಾಸಿಗೆಯಿಂದ ಎದ್ದು ಹತ್ತಿರದ ಕಿಟಕಿಯ ಬಳಿ ಹೋಗಿ ನಿಂತ. ಕಿಟಕಿಯ ಹೊರಗೆ ಕಾಣುತ್ತಿದ್ದ ಮನೆಯ ಅಂಗಳದಲ್ಲಿನ ಮರಗಿಡಗಳು, ಹೂ ಹಣ್ಣುಗಳು, ಅಮ್ಮ ಬಿಡಿಸಿದ ರಂಗೋಲಿ ಸುಂದರ ದೃಶ್ಯಗಳಂತೆ ಗೋಚರಿಸಿ ಅವುಗಳನ್ನೆ ನೋಡುತ್ತ ಮೈಮರೆತು ನಿಂತ. 

  ಬೆಳ್ಳನೆಯ ಪಂಚೆಯನ್ನು ಉಟ್ಟಿದ್ದ ಬರೀ ಮೈಯ ಸಣಕಲು ದೇಹದ ಗಡ್ಡ ಮೀಸೆ ಬಿಟ್ಟಿದ್ದ ಜಟಾಧಾರಿ ಆ ಮುದುಕ ನಿನ್ನೆಯಷ್ಟೆ ಕನಸಿನಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಕಳೆದ ಹಲವು ದಿನಗಳಿಂದ ಪ್ರತಿನಿತ್ಯ ಕನಸಿನಲ್ಲಿ ಬಂದು ಕೆಲವು ಕ್ಷಣಗಳ ಕಾಲ ಸುಮ್ಮನೆ ಹತ್ತಿರ ನಿಂತು ಹೊರಟು ಹೋಗುತ್ತಿದ್ದ. ದಾಮೋದರನಿಗೂ ಅದೊಂದು ವಿಚಿತ್ರ ಸಂಗತಿಯಾಗಿ ಕಾಣಿಸಿದರೂ ತನ್ನ ದಿನನಿತ್ಯದ ಬಿಡುವಿಲ್ಲದ ದುಡಿಮೆಯಲ್ಲಿ ಮರೆತು ಬಿಟ್ಟಿದ್ದ. ನಿನ್ನೆಯಷ್ಟೆ ಅವನು ಹತ್ತಿರ ಬಂದು ತನ್ನನ್ನು ಸ್ಪರ್ಷಿಸಿದ್ದು. ಮುದುಕನ ಕೈ ತನ್ನ ತಲೆಯನ್ನು ಸ್ಪರ್ಷಿಸಿದ್ದೆ ದಾಮೋದರನಿಗೆ ದೇಹ ಹಗುರಾದಂತೆಯೂ ತಾನು ಗಾಳಿಯಲ್ಲಿ ತೇಲಾಡುತ್ತಿರುವಂತೆಯೂ ಭಾಸವಾಗತೊಡಗಿತು. ಆ ಮುದುಕನ ಸ್ಪರ್ಷದಲ್ಲಿ ಅದೇನೋ ಮಾಂತ್ರಿಕತೆ ಇದ್ದಂತೆ ಭಾಸವಾಗಿ ತಾನು ಅನಿವರ್ಚನೀಯ ಆನಂದಕ್ಕೆ ಒಳಗಾದ. ನರನಾಡಿಗಳಲ್ಲಿ ವಿದ್ಯುತ್ ಸಂಚಾರವಾದಂತಾಗಿ ಅವನ ಮೈ ವಿಚಿತ್ರವಾದ ಅನುಭವದಿಂದ ಕಂಪಿಸಿತು. 

   ಕೋಣೆಯಿಂದ ಹೊರಬಂದ ದಾಮೋದರನಿಗೆ ಮನೆಯ ಎದುರಿನ ರಸ್ತೆಯಲ್ಲಿದ್ದ ಸಾರ್ವಜನಿಕ ನಲ್ಲಿಯಿಂದ ನೀರಿನ ಕೊಡವನ್ನು ಬಗಲಲ್ಲಿಟ್ಟುಕೊಂಡು ಏದುಸಿರು ಬಿಡುತ್ತ ಪಡಸಾಲೆಯ ಮೆಟ್ಟಿಲುಗಳನ್ನು ಏರುತ್ತಿರುವ ಅಮ್ಮ ಕಣ್ಣಿಗೆ ಬಿದ್ದಳು. ಅಮ್ಮನ ಮುಖದಲ್ಲಿನ ಆಯಾಸ ಮತ್ತು ಬಳಲಿಕೆ ಅವನಲ್ಲಿ ವಿಚಿತ್ರ ಸಂಕಟವನ್ನುಂಟು ಮಾಡಿತು. ಲಗುಬಗೆಯಿಂದ ಮೆಟ್ಟಿಲಿಳಿದು ಅಮ್ಮನ ಹತ್ತಿರ ಹೋದವನು ಅವಳ ಕಂಕುಳಲ್ಲಿದ್ದ ನೀರಿನ ಕೊಡವನ್ನು ತನ್ನ ಕೈಗೆ ತೆಗೆದುಕೊಂಡು ಅಡುಗೆ ಕೋಣೆಯತ್ತ ಹೋಗುತ್ತ ‘ಅಮ್ಮ ನಿನಗೆ ಈಗ ಮೊದಲಿನಂತೆ ಆಗೋದಿಲ್ಲ. ಯಾಕೆ ಆಯಾಸ ಮಾಡ್ಕೊತಿ’ ಎಂದು ನುಡಿದ. ಸಾವಿತ್ರಮ್ಮನವರು ದಂಗು ಬಡಿದಂತೆ ಒಂದು ಕ್ಷಣ ತಮ್ಮ ಇರುವಿಕೆಯನ್ನೇ ಮರೆತು ಅಡುಗೆ ಕೋಣೆಯತ್ತ ಹೋಗುತ್ತಿದ್ದ ಮಗನನ್ನೇ ನೋಡುತ್ತ ನಿಂತರು. ಅಡುಗೆ ಮನೆಯಲ್ಲಿ ಒಲೆಯ ಮೇಲಿಟ್ಟಿದ್ದ ಡಿಕಾಕ್ಷನ್ನಿಗೆ ಹಾಲು ಬೆರೆಸುತ್ತಿದ್ದ ಅಕ್ಕ ಶಾರದಾ ತಮ್ಮ ದಾಮೋದರ ನೀರಿನ ಕೊಡ ಹಿಡಿದುಕೊಂಡು ಬಂದದ್ದನ್ನು ನೋಡಿ ‘ಯಾಕೋ ದಾಮೂ ಅಮ್ಮ ಎಲ್ಲಿ’ ಎಂದು ಕೇಳಿದವಳೇ ತಮ್ಮನನ್ನು ಹೊಸದಾಗಿ ನೋಡುತ್ತಿರುವಂತೆ ನೋಡತೊಡಗಿದಳು. ಬೆಳಗಿನ ಪ್ರಾತ:ವಿಧಿಗಳನ್ನು ಮುಗಿಸಿ ಚಹಾ ಕುಡಿಯಲೆಂದು ಅಡುಗೆ ಮನೆಗೆ ಬಂದ ಶ್ರೀನಿವಾಸರಾಯರಿಗೂ ಮಗ ಇವತ್ತು ಬೇಗನೆ ಎದ್ದು ಮನೆಕೆಲಸದಲ್ಲಿ ತೊಡಗಿರುವುದು ನೋಡಿ ಅಚ್ಚರಿ ಎನಿಸಿತು. ದಾಮೋದರ ಕೊಡದಲ್ಲಿದ್ದ ನೀರನ್ನು ಬಚ್ಚಲು ಮನೆಯಲ್ಲಿದ್ದ ಹಂಡೆಗೆ ಸುರಿದು ಖಾಲಿಯಾದ ಕೊಡವನ್ನು ಕೈಯಲ್ಲಿ ಹಿಡಿದು ಲಗುಬಗೆಯಿಂದ ಅಡುಗೆ ಕೋಣೆಯನ್ನು ದಾಟಿ ಪಡಸಾಲೆಯ ಮೆಟ್ಟಿಲಿಳಿದು ರಸ್ತೆಗೆ ಹೋದ. ಅಡುಗೆ ಕೋಣೆಯಲ್ಲಿ ಒಲೆಯ ಮುಂದೆ ಕುಳಿತಿದ್ದ ಶ್ರೀನಿವಾಸರಾಯರು ಮತ್ತು ಶಾರದಾ ಅರ್ಥವಾಗದವರಂತೆ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಅಷ್ಟರಲ್ಲಿ ಸಾವಿತ್ರಮ್ಮನವರು ಅಡುಗೆ ಮನೆಗೆ ಬಂದು ಅವರನ್ನು ಕೂಡಿಕೊಂಡರು. ‘ಏನ್ರೀ ಇದು ವಿಚಿತ್ರ. ಬೆಳಗ್ಗೆ ಎದ್ದ ಕೂಡಲೇ ದುರ್ವಾಸಮುನಿ ಅವತಾರ ತಾಳ್ತಿದ್ದವನು ಇವತ್ತು ಎಷ್ಟೊಂದು ಶಾಂತನಾಗಿದ್ದಾನೆ. ಏನಾಯ್ತುರಿ ಇವನಿಗೆ’ ಒಲೆಯ ಮುಂದೆ ಕೂಡುತ್ತ ಸಾವಿತ್ರಮ್ಮನವರು ಗಂಡ ಮತ್ತು ಮಗಳ ಮುಖ ನೋಡುತ್ತ ಅಚ್ಚರಿ ವ್ಯಕ್ತಪಡಿಸಿದರು. ರಾಯರಿಗಾಗಲಿ ಮತ್ತು ಶಾರದಾಳಿಗಾಗಲಿ ಏನು ಉತ್ತರಿಸುವುದೆಂದು ತಿಳಿಯದೆ ಎದುರಿನಲ್ಲಿದ್ದ ಚಹಾದ ಲೋಟವನ್ನು ಕೈಗೆತ್ತಿಕೊಂಡು ಚಹಾ ಕುಡಿಯಲಾರಂಭಿಸಿದರು. ಅಲ್ಲಿದ್ದ ಮೂರೂ ಜನರ ಮುಖಗಳಲ್ಲಿ ಅಚ್ಚರಿಯೊಂದು ಮನೆ ಮಾಡಿತ್ತು.

   ಹೊರಗೆ ರಸ್ತೆಯಲ್ಲಿ ದಾಮೋದರ ಖಾಲಿ ಕೊಡ ಹಿಡಿದು ಬಂದದ್ದನ್ನು ನೋಡಿದ ನಲ್ಲಿಯ ಹತ್ತಿರ ಜಮಾಯಿಸಿದ್ದ ಅಕ್ಕಪಕ್ಕದ ಮನೆಯವರು ಪರಸ್ಪರ ಮುಖ ನೋಡಿಕೊಂಡು ದೂರ ಸರಿದು ಅವನಿಗೆ ಜಾಗ ಮಾಡಿಕೊಟ್ಟರು. ಅದುವರೆಗೂ ಗೌಜು ಗದ್ದಲದಿಂದ ಕೂಡಿದ್ದ ಆ ಜಾಗ ದಾಮೋದರ ಬರುತ್ತಿದ್ದಂತೆ ಸದ್ದು ಕಡಿಮೆಯಾಗಿ ನೀರವ ಮೌನವನ್ನು ಹೊದ್ದು ಮಲಗಿರುವಂತೆ ಭಾಸವಾಗತೊಡಗಿತು. ದಾಮೋದರನಿಗೂ ಅಲ್ಲಿ ನೆಲೆಸಿದ ಮೌನ ಅಸಹನೀಯ ಎನಿಸಿತು. ನಿಂತಿದ್ದವರ ಮೇಲೊಮ್ಮೆ ತನ್ನ ದೃಷ್ಟಿಯನ್ನು ಹರಿಸಿದವನಿಗೆ ಅಲ್ಲಿ ತನಗಿಂತ ವಯಸ್ಸಾದವರೆ ಗೋಚರಿಸಿದರು. ಪಕ್ಕದ ಮನೆಯ ಕಾಮಾಕ್ಷಮ್ಮ, ಎದುರು ಮನೆಯ ಗೌರಜ್ಜಿ, ಹಿಂದಿನ ಮನೆಯ ಲಿಂಗಜ್ಜ ಅವರನ್ನೆಲ್ಲ ನೋಡಿ ಅವನಿಗೆ ಅಯ್ಯೋಪಾಪ ಎನಿಸಿತು. ಮನೆಯಲ್ಲಿ ಮೊಮ್ಮಕ್ಕಳೊಡನೆ ಆಡುತ್ತಲೋ ಇಲ್ಲವೇ ಸಮವಯಸ್ಸಿನವರೊಂದಿಗೆ ಹರಟುತ್ತಲೋ ಕಾಲಕಳೆಯಬೇಕಾದವರು ಇಲ್ಲಿ ನೀರಿಗಾಗಿ ಪಾಳಿಗೆ ನಿಂತಿರುವುದು ನೋಡಿ ಅವನಿಗೆ ಬೇಸರವೆನಿಸಿತು. ನಲ್ಲಿಯ ನೀರು ವ್ಯರ್ಥ ಹರಿಯುತ್ತಿದ್ದುದ್ದರಿಂದ ದಾಮೋದರ ಕೊಡವನ್ನು ತುಂಬಿಸಿಕೊಳ್ಳಲಿ ಎಂದು ದೂರ ಸರಿದು ನಿಂತವರಿಗೆ ಅವನು ದೂರದಲ್ಲೇ ಕೈಕಟ್ಟಿಕೊಂಡು ನಿಂತಿರುವುದು ನೋಡಿ ಅಲ್ಲಿದ್ದವರಿಗೆಲ್ಲ ತುಂಬ ಆಶ್ಚರ್ಯವಾಯಿತು. ‘ದಾಮೂ ನಿನಗೆ ಅಂಗಡಿಗೆ ಹೊತ್ತಾಗುತ್ತೆ ನೀನು ನೀರು ತುಂಬ್ಕೊ. ನಾವೆಷ್ಟೆಂದರೂ ಕೆಲಸವಿಲ್ಲದೆ ಮನೆಯಲ್ಲಿರೋ ದಂಡಪಿಂಡಗಳು ತಾನೆ’ ಗೌರಜ್ಜಿ ದಾಮೋದರನನ್ನು ನೋಡುತ್ತ ನುಡಿದಳಾದರೂ ಅವನು ನೀಡಬಹುದಾದ ಪ್ರತ್ಯುತ್ತರವನ್ನು ಊಹಿಸಿಕೊಂಡು ಅವಳ ಧ್ವನಿ ಹೆದರಿಕೆಯಿಂದ ನಡುಗುತ್ತಿತ್ತು. ದಾಮೋದರ ಗೌರಜ್ಜಿಯ ಮುಖವನ್ನೊಮ್ಮೆ ನೋಡಿ ಸಮಾಧಾನದ ಧ್ವನಿಯಲ್ಲಿ ‘ಗೌರಜ್ಜಿ ಪಾಪ ನೀವೆಲ್ಲ ವಯಸ್ಸಾದವರು ಹೀಗೆ ಬಿಸಿಲಲ್ಲಿ ನಿಂತಿರುವುದು ನೋಡಿದರೆ ಕರುಳು ಚುರುಕ್ ಅನ್ನುತ್ತೆ. ಮೊದಲು ನೀವು ನೀರು ತುಂಬಿಸಿಕೊಳ್ಳಿ. ನಾನು ಆಮೇಲೆ ತೊಗೊಳ್ತೀನಿ’ ಎಂದವನೇ ಖಾಲಿ ಕೊಡವನ್ನು ನಲ್ಲಿಯ ಸಮೀಪದಲ್ಲಿಟ್ಟು ಮನೆಯ ಒಳಗಡೆ ಹೋದ. ಅಲ್ಲಿದ್ದ ಮೂರೂಜನ ಅವಕ್ಕಾಗಿ ಮನೆಯ ಒಳಗೆ ಹೋಗುತ್ತಿದ್ದ ದಾಮೋದರನನ್ನೇ ನೋಡುತ್ತ ಕ್ಷಣಕಾಲ ಮೈಮರೆತು ನಿಂತವರು ನಂತರ ಎಚ್ಚೆತ್ತುಕೊಂಡು ಲಗುಬಗೆಯಿಂದ ನೀರು ತುಂಬಿಸಿಕೊಳ್ಳತೊಡಗಿದರು.

  ದಾಮೋದರ ಜೋಷಿಗೆ ಈಗ ಮೂವತ್ತರ ಹರೆಯ. ಇನ್ನೂ ಮದುವೆಯಾಗಿಲ್ಲ. ಅಪ್ಪ ಶ್ರೀನಿವಾಸರಾಯರು ಮಗನಿಗಾಗಿ ಹೆಣ್ಣು ನೋಡುತ್ತಿರುವರಾದರೂ ಪಾಪ ದಾಮೋದರನಿಗೆ ಇನ್ನೂ ಕಂಕಣಭಾಗ್ಯ ಕೂಡಿ ಬಂದಿಲ್ಲ. ಮದುವೆಯಾಗಿ ಅತ್ತೆ ಮನೆಯಲ್ಲಿನ ನೂರಾರು ಸಮಸ್ಯೆಗಳಿಂದ ಗಂಡನೊಡನೆ ಜಗಳವಾಡಿ ತವರುಮನೆಗೆ ಬಂದು ಕುಳಿತ ಅಕ್ಕ ಶಾರದಾಳಿಂದಾಗಿ ತನಗೆ ಯಾರೂ ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ ಎನ್ನುವ ಸಿಟ್ಟು ಅವನಿಗಿದೆ. ಶ್ರೀನಿವಾಸರಾಯರದೋ ಪಾಪ ಬಡತನದ ಸಂಸಾರ. ತಲಾತಲಾಂತರದಿಂದ ನಡೆಸಿಕೊಂಡು ಬರುತ್ತಿರುವ ದಿನಸಿ ಅಂಗಡಿಯೇ ಅವರ ಸಂಸಾರಕ್ಕೆ ಆಧಾರವಾಗಿತ್ತು. ಸಾವಿತ್ರಮ್ಮನವರದು ಆರತಿ ತೊಗೊಂಡರೆ ಉಷ್ಣ ತೀರ್ಥ ಕುಡಿದರೆ ಶೀತ ಎನ್ನುವ ಆರೋಗ್ಯ. ಮಕ್ಕಳನ್ನು ತಮ್ಮ ಬಡತನದ ಕಾರಣ ಹೆಚ್ಚಿಗೆ ಓದಿಸಲು ಸಾಧ್ಯವಾಗಲಿಲ್ಲ ಎನ್ನುವ ಕೊರಗು ಶ್ರೀನಿವಾಸರಾಯರನ್ನು ಆಗಾಗ ಕಾಡುವುದುಂಟು. ಊರಿನಲ್ಲಿರುವ ಹೈಸ್ಕೂಲು ಶಿಕ್ಷಣ ಮುಗಿದದ್ದೆ ಶ್ರೀನಿವಾಸರಾಯರು ಮಗನನ್ನು ತಮ್ಮ ನಿತ್ಯದ ದಿನಸಿ ಅಂಗಡಿಯ ವ್ಯವಹಾರದಲ್ಲಿ ಜೊತೆಯಾಗಿಸಿಕೊಂಡರು. ಮುಂದೆ ಓದಬೇಕೆನ್ನುವ ಆಸೆ ಇದ್ದರೂ ಮನೆಯ ಬಡತನ ಅಮ್ಮನ ಅನಾರೋಗ್ಯ ಅಕ್ಕನ ಮದುವೆ ಅದಕ್ಕೆ ಅಡ್ಡಿಯಾಗಿವೆ ಎನ್ನುವ ಭಾವನೆ ದಾಮೋದರನಲ್ಲಿ ಮೊಳಕೆಯೊಡೆದು ಈಗ ಆ ಭಾವನೆಯೇ ಬಲಿತುಕೊಂಡಿತ್ತು. ತನ್ನ ಜೊತೆಯಲ್ಲಿ ಓದಿದವರೆಲ್ಲ ಕಾಲೇಜು ಸೇರಿ ಈಗ ಕೈತುಂಬ ಸಂಬಳ ತರುವ ಉದ್ಯೋಗದಲ್ಲಿರುವಾಗ ನಾನಿನ್ನೂ ಇದೇ ಹಳ್ಳಿಯಲ್ಲಿ ಆರಕ್ಕೇರದ ಮೂರಕ್ಕಿಳಿಯಿದ ವ್ಯಾಪಾರದಲ್ಲಿ ಬದುಕನ್ನೇ ಹಾಳು ಮಾಡಿಕೊಂಡೆ ಎನ್ನುವ ಸಿಟ್ಟು ದಾಮೋದರನಿಗಿದೆ. ಅದಕ್ಕೆಂದೇ ಅವನು ಮನೆಯಲ್ಲಾಗಲಿ ಅಕ್ಕಪಕ್ಕದ ಮನೆಯವರೊಂದಿಗಾಗಲಿ ನಗುನಗುತ್ತ ಮಾತನಾಡುವುದೇ ಕಡಿಮೆ. ಅವನ ಸಮವಯಸ್ಸಿನವರಲ್ಲಿ ಹಲವು ಸ್ನೇಹಿತರು ದೂರದ ಊರುಗಳಲ್ಲಿಯೂ ಮತ್ತು ಇನ್ನು ಕೆಲವರು ಮದುವೆಯಾಗಿ ಅದೇ ಊರಿನಲ್ಲಿದ್ದರೂ ಅವರೊಂದಿಗೆ ದಾಮೋದರನ ಒಡನಾಟ ಯಾವತ್ತೋ ಕಡಿದು ಹೋಗಿತ್ತು. ಮನೆ ಬಿಟ್ಟರೆ ಅಂಗಡಿ ಇವರಡೇ ಅವನ ಪ್ರಪಂಚ ಎಂಬಂತಾಗಿ ದಿನದಿಂದ ದಿನಕ್ಕೆ ಯಾರನ್ನೇ ಕಂಡರೂ ಸಿಡಿಮಿಡಿಗೊಳ್ಳುವುದು ಮಾತಿಗೆ ಪ್ರತಿ ಮಾತನ್ನಾಡಿ ಜಗಳಕ್ಕೆ ನಿಲ್ಲುವುದು ಸಹಜ ಸ್ವಭಾವ ಎನ್ನುವಂತಾಯಿತು. ಇಡೀ ಸಂಸಾರದ ಖರ್ಚನ್ನೆಲ್ಲ ಮಗನೇ ಈಗ ನಿಭಾಯಿಸುತ್ತಿದ್ದರಿಂದ ಮನೆಯಲ್ಲಿ ಅವನಿಗೆ ಯಾರೂ ಎದುರಾಡುತ್ತಿರಲಿಲ್ಲ. ಶಾರದಾ ಗಂಡನ ಮನೆಯಲ್ಲಿ ಜಗಳವಾಡಿ ತವರು ಮನೆ ಸೇರಿದವಳಿಗೆ ಇಲ್ಲಿ ಒಂದೊತ್ತಿನ ಊಟಕ್ಕೂ ಹೊರೆಯಾದೆನೇನೋ ಎನ್ನುವ ಭಾವವೇ ಬೆಳೆದು ಹೆಮ್ಮರವಾಗಿ ತಮ್ಮನೆದುರು ನಿಂತು ಮಾತನಾಡುವುದಕ್ಕೂ ಹೆದರುತ್ತಿದ್ದಳು. ಒಂದುದಿನವಂತೂ ಖರ್ಚಿಗೆಂದು ಒಂದಿಷ್ಟು ಹಣ ಕೇಳಿದ ಶಾರದಾಳನ್ನು ದಾಮೋದರ ಅಪ್ಪ ಅಮ್ಮನ ಎದುರೇ ಬಾಯಿಗೆ ಬಂದಂತೆ ಬಯ್ದು ಹೊಡೆಯಲು ಹೋಗಿದ್ದ. ಮಗನ ಅವತಾರ ನೋಡಿ ಶ್ರೀನಿವಾಸರಾಯರು ಮತ್ತು ಸಾವಿತ್ರಮ್ಮ ಭೂಮಿಗಿಳಿದು ಹೋಗಿದ್ದರು. ಆ ಘಟನೆಯ ನಂತರ ಮಗನ ಎದುರು ನಿಂತು ಮಾತನಾಡಲೂ ಅವರು ಹೆದರುತ್ತಿದ್ದರು.

      ಇಂಥ ಸ್ವಭಾವದ ದಾಮೋದರ ಜೋಷಿ ಒಂದು ದಿನ ಇದ್ದಕ್ಕಿದ್ದಂತೆ ಅಕ್ಕರೆ ತುಂಬಿದ ಮಾತುಗಳನ್ನಾಡತೊಡಗಿದಾಗ ಊರಿನವರಿರಲಿ ಮನೆಯವರಿಗೂ ಅವನ ಬದಲಾದ ಸ್ವಭಾವ ವಿಚಿತ್ರ ಸಮಸ್ಯೆಯಾಗಿ ತೋರಿತು. ಅಕ್ಕಪಕ್ಕದ ಮನೆಯವರು ದಾಮೋದರ ಅಂಗಡಿಗೆ ಹೋದ ಸಮಯವನ್ನು ನೋಡಿಕೊಂಡು ಸಾವಿತ್ರಮ್ಮನವರಿಗೆ ನಿಮ್ಮ ಮಗನಿಗೆ ಯಾವುದೋ ದೆವ್ವ ಮೆಟ್ಟಿಕೊಂಡಿರಬಹುದು ಯಾವುದಕ್ಕೂ ಮಂತ್ರಗಾರನ ಹತ್ತಿರ ಕರೆದೊಯ್ಯಿರಿ ಎಂದು ಸಲಹೆ ನೀಡಿದರು. ಇನ್ನು ಕೆಲವರು ದೇವರಿಗೆ ಹರಕೆ ಕಟ್ಟುವಂತೆಯೂ ಕೆಲವರು ಬೇಗ ಮದುವೆ ಮಾಡಿದರೆ ಸರಿಹೋಗಬಹುದೆಂದು ಹೇಳಿದರು. ಇದೇ ವೇಳೆ ದಾಮೋದರ ಭಾವನನ್ನು ಭೇಟಿ ಮಾಡಿ ಅಕ್ಕನ ಸಂಸಾರ ಸರಿಮಾಡಲು ಪ್ರಯತ್ನಿಸಿದ ವಿಷಯ ಎದುರು ಮನೆಯ ಶಾಮರಾಯರಿಂದ ತಿಳಿದು ಮನೆಯವರು ಇನ್ನಷ್ಟು ಗಾಬರಿಯಾದರು. ದಾಮೋದರನ ದಿನಚರಿಯಲ್ಲೂ ಸಾಕಷ್ಟು ಮಾರ್ಪಾಡುಗಳಾದವು. ಈ ಮೊದಲು ತಡರಾತ್ರಿ ಮನೆಗೆ ಬಂದು ಬೆಳಗ್ಗೆ ಲೇಟಾಗಿ ಎಳುತ್ತಿದ್ದವನು ಈಗ ಅಂಗಡಿ ಬಾಗಿಲು ಹಾಕಿದ್ದೆ ಬೇಗನೆ ಮನೆ ಸೇರಿಕೊಳ್ಳತೊಡಗಿದ. ಬೆಳಗ್ಗೆ ಮನೆಯ ಎದುರಿನ ನಲ್ಲಿಯಿಂದ ನೀರು ತರುವುದು, ದೇವರ ಪೂಜೆ, ಅಡುಗೆ ಮನೆಯಲ್ಲಿ ಅಕ್ಕನಿಗೆ ನೆರವಾಗುವುದು, ಅಮ್ಮನಿಗೆ ಸಮಯಕ್ಕೆ ಸರಿಯಾಗಿ ಔಷಧಿ ಕೊಡುವುದು ದಿನದಿಂದ ದಿನಕ್ಕೆ ಹೊಸ ವ್ಯಕ್ತಿಯಾಗಿ ಬದಲಾಗುತ್ತ ಹೋದ. ಈಗ ಸಾವಿತ್ರಮ್ಮನವರಿಗಾಗಲಿ ಶ್ರೀನಿವಾಸರಾಯರಿಗಾಗಲಿ ಮಗನೊಂದಿಗೆ ಮಾತನಾಡುವಾಗ ಈ ಮೊದಲಿನ ಹೆದರಿಕೆ ಇಲ್ಲದೆ ತುಂಬ ಸಲುಗೆಯಿಂದ ಮಾತನಾಡುವ ಧೈರ್ಯ ಬಂದಿದೆ. ಅಕ್ಕ ಶಾರದಾಳಿಗೆ ತಮ್ಮನೊಂದಿಗೆ ತನ್ನ ಕಷ್ಟ ಸುಖ ಹೇಳಿಕೊಳುವಷ್ಟು ಅವರಿಬ್ಬರ ನಡುವೆ ಅನ್ಯೋನ್ಯತೆ ಬೆಳೆದಿದೆ. ಅಕ್ಕಪಕ್ಕದ ಮನೆಯವರೊಂದಿಗೆ ಮತ್ತು ಅಂಗಡಿಗೆ ಬರುವ ಗಿರಾಕಿಗಳೊಂದಿಗೆ ದಾಮೋದರ ನಗುನಗುತ್ತ ಮಾತನಾಡುತ್ತ ಅವರ ಯೋಗಕ್ಷೇಮ ವಿಚಾರಿಸುವನು. ಮೊದಲಿನ ಸಿಡುಕು ಮೋರೆಯ ಸದಾ ಸಿಡಿಸಿಡಿಗುಟ್ಟುತ್ತಿದ್ದ ದಾಮೋದರ ಇವನೇ ಏನು ಎಂದು ಇಡೀ ಊರೇ ಅಚ್ಚರಿಪಡುತ್ತ ಮೂಗಿನ ಮೇಲೆ ಬೆರಳಿಟ್ಟುಕೊಂಡು ಅವನನ್ನು ನೋಡುವಷ್ಟು ನಮ್ಮ ಕಥಾನಾಯಕನ ವ್ಯಕ್ತಿತ್ವದಲ್ಲಿ ಬದಲಾವಣೆಯಾಯಿತು. ಇದಕ್ಕೆಲ್ಲ ಕಾರಣ ಮನಸ್ಸಿಗೆ ದು:ಖ ಕೊಡುವ ಸಂಗತಿಗಳು ಈಗ ದಾಮೋದರನ ನೆನಪಿನಲ್ಲುಳಿಯುತ್ತಿಲ್ಲ. ಕನಸಿನಲ್ಲಿ ಕಾಣಿಸಿಕೊಂಡ ಮುದುಕ ಅವನ ತಲೆಯನ್ನು ಸವರಿಹೋದ ಕ್ಷಣದಿಂದ ಹಿತಕರ ನೆನಪುಗಳಷ್ಟೇ ಮನಸ್ಸಿನಲ್ಲಿ ಉಳಿಯುತ್ತಿವೆ. ಸ್ವತ: ದಾಮೋದರನಿಗೂ ತನ್ನಲ್ಲಾದ ಬದಲಾವಣೆ ಅಚ್ಚರಿ ತಂದಿದೆ. ಕೆಟ್ಟ ಘಟನೆಗಳು ನೆನಪಿನಲ್ಲುಳಿಯದ ಈ ಹೊಸ ಬದುಕು ಅವನಲ್ಲಿ ಜೀವನೋತ್ಸಾಹವನ್ನು ಇಮ್ಮಡಿಗೊಳಿಸಿದೆ.

      ಹೊಸ ಮನುಷ್ಯನಾಗಿ ರೂಪಾಂತರ ಹೊಂದಿದ ನಮ್ಮ ದಾಮೋದರನಲ್ಲಿ ಮನಸ್ಸಿನ ನೆಮ್ಮದಿ ಕೆಡಿಸುವ ಘಟನೆಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಶಕ್ತಿ ಮತ್ತೆ ಪ್ರಾಪ್ತವಾಗುತ್ತೆದೆಂದು ಪಾಪ ಅವನಿಗೂ ಗೊತ್ತಿರಲಿಲ್ಲ. ಇವತ್ತು ಬೆಳಗ್ಗೆ ನಿದ್ದೆಯಿಂದ ಎಚ್ಚರವಾಗಿ ಹಾಸಿಗೆಯಲ್ಲಿ ಎದ್ದು ಕುಳಿತವನಿಗೆ ಮೈಯೆಲ್ಲ ಭಾರವಾದ ಅನುಭವ. ನಿನ್ನೆ ಇಡೀ ದಿನ ನಡೆದ ಘಟನೆಗಳೆಲ್ಲ ಒಂದೊಂದಾಗಿ ನೆನಪಿನ ಕೋಶದಿಂದ ಹೊರಬಂದು ತನ್ನ ಮೇಲೆ ದಾಳಿಯಿಡುತ್ತಿರುವಂತೆ ಭಾಸವಾಗಿ ತಲೆ ನೋವಿನಿಂದ ಸಿಡಿಯಲಾರಂಭಿಸಿತು. ತಲೆಯಲ್ಲಿ ಕಾಣಿಸಿಕೊಂಡ ನೋವು ಕ್ರಮೇಣ ದೇಹವನ್ನೆಲ್ಲ ವ್ಯಾಪಿಸುತ್ತಿರುವಂತೆ ಅನಿಸತೊಡಗಿತು.  ನಿನ್ನೆ ಬೆಳಗ್ಗೆ ರಸ್ತೆಯಲ್ಲಿ ನೀರು ತರುವಾಗ ಪಕ್ಕದ ಮನೆಯ ಗೋವಿಂದ ಬೈಯ್ದದ್ದು ಯಾವುದೋ ಮಾತಿಗೆ ಅಪ್ಪ ಹರಿಹಾಯ್ದದ್ದು ಅಂಗಡಿಯಲ್ಲಿ ಕೆಲವು ಗಿರಾಕಿಗಳು ಸಿಟ್ಟಿನಿಂದ ಮಾತನಾಡಿದ್ದು ಎಲ್ಲವೂ ಒಂದೊಂದಾಗಿ ನೆನಪಿಗೆ ಬಂದು ದಾಮೋದರನ ಮನಸ್ಸು ಕ್ಷೋಭೆಗೊಂಡಿತು. ಮರುಕ್ಷಣವೆ ಅರೇ ಕಳೆದ ಹದಿನೈದು ದಿನಗಳಿಂದ ಯಾವ ಕೆಟ್ಟ ಘಟನೆಗಳೂ ನೆನಪಿಗೆ ಬರದಿರುವ ತನಗೆ ಇವತ್ತು ಇದ್ದಕ್ಕಿದ್ದಂತೆ ಮತ್ತೆ ನೆನಪಾಗುತ್ತಿರುವುದು ಅವನಿಗೆ ಆಶ್ಚರ್ಯವೆನಿಸಿತು. ದಾಮೋದರ ತಾನು ಮತ್ತೆ ಮೊದಲಿನ ಸ್ಥಿತಿಗೆ ಮರಳಿದ್ದಕ್ಕೆ ಅಧೀರನಾದ. ಕಳೆದ ಹಲವು ದಿನಗಳಿಂದ ಯಾವ ಅಹಿತಕರ ಘಟನೆಗಳು ನೆನಪಿನಲ್ಲಿ ಸ್ಥಿರವಾಗಿ ನಿಲ್ಲದೆ ಇದ್ದುದ್ದರಿಂದ ಅವನ ಮನಸ್ಸು ತುಂಬ ಹಗುರವಾಗಿತ್ತು. ಮನೆ ಮತ್ತು ಸುತ್ತಲಿನ ಪರಿಸರ ತುಂಬ ಹಿತಕರವಾಗಿಯೂ ಮತ್ತು ಸಹನೀಯವಾಗಿಯೂ ಅವನಿಗೆ ಗೋಚರಿಸಿತ್ತು. ಮನಸ್ಸಿನೊಂದಿಗೆ ದೇಹವೂ ಲವಲವಿಕೆಯಿಂದ ಇದ್ದು ಬದುಕಿನಲ್ಲಿ ಆಸಕ್ತಿ ಮೂಡತೊಡಗಿತ್ತು. ಆದರೆ ಇವತ್ತು ಮನಸ್ಸಿನ ನೆಮ್ಮದಿ ಕದಡಿಹೋದಂತಾಗಿ ದೇಹ ಮಣಭಾರವಾದಂತಾಗಿತ್ತು. ಇಡೀ ದಿನ ದಾಮೋದರ ಒಂದು ರೀತಿಯ ಅಶಾಂತಿಯಲ್ಲೇ ಕಾಲಕಳೆದ.

     ರಾತ್ರಿ ಅಂಗಡಿಯಿಂದ ಮನೆಗೆ ಬಂದು ಊಟ ಮಾಡಿ ಮಲಗುವ ಕೋಣೆ ಸೇರಿದ ದಾಮೋದರ ಬೇಗ ನಿದ್ದೆಗೆ ಜಾರಲು ಹಂಬಲಿಸಿದ. ಕನಸಿನಲ್ಲಿ ಇಂದು ಮುದುಕ ಬರಬಹುದೇನೋ ಅನ್ನುವ ನಿರೀಕ್ಷೆ ಅವನದಾಗಿತ್ತು. ಮಲಗಿ ಒಂದೆರಡು ಗಂಟೆಗಳಾದರೂ ನಿದ್ದೆ ಹತ್ತಿರ ಸುಳಿಯದೆ ಹಾಸಿಗೆಯಲ್ಲಿ ಹೋರಳಾಡಿದ. ಘಳಿಗೆಗೊಮ್ಮೆ ಎದ್ದು ತಂಬಿಗೆಯಲ್ಲಿದ್ದ ನೀರು ಕುಡಿಯುವುದು ಗಡಿಯಾರ ನೋಡಿಕೊಳ್ಳುವುದು ಮತ್ತೆ ಮತ್ತೆ ಪುನರಾವರ್ತನೆಯಾಗತೊಡಗಿತು. ಮುದುಕನ ಆಗಮನದ ನಿರೀಕ್ಷೆಯಲ್ಲಿ ಒಂದೊಂದು ಕ್ಷಣ ಯುಗದಂತೆ ಭಾಸವಾಗತೊಡಗಿತು. ಸೂರ್ಯ ಉದಯಿಸಲು ಇನ್ನೇನು ಒಂದೆರಡು ಗಂಟೆಗಳಿವೆ ಎನ್ನುವಾಗ ದಾಮೋದರ ಗಾಢ ನಿದ್ದೆಗೆ ಜಾರಿದ. ಹಾಗೆ ನಿದ್ದೆ ಹೋದವನಿಗೆ ಕನಸಿನಲ್ಲಿ ತನ್ನ ಹತ್ತಿರ ಯಾರೋ ನಿಂತು ಮೃದುವಾದ ಧ್ವನಿಯಲ್ಲಿ ಮಾತನಾಡುತ್ತಿರುವಂತೆ ಅನ್ನಿಸಿ ದಾಮೋದರ ಕಣ್ಣು ಬಿಟ್ಟ. ಇಡೀ ಕೋಣೆ ಪ್ರಕಾಶಮಾನವಾಗಿ ಬೆಳಗಲಾರಂಭಿಸಿದಂತೆ ಅನ್ನಿಸತೊಡಗಿತು. ಎದುರಿಗೆ ಹಸನ್ಮುಖಿಯಾಗಿ ಶ್ವೇತವಸ್ತ್ರ ಧರಿಸಿದ್ದ ಜಟಾಧಾರಿ ಮುದುಕ ನಿಂತಿರುವುದು ಕಾಣಿಸಿತು. ದಾಮೋದರ ಎದ್ದು ಮುದುಕನ ಹತ್ತಿರ ಹೋದ. ಮುದುಕ ತಾನು ಮೊದಲು ನಿಂತಿದ್ದ ಸ್ಥಳದಿಂದ ಸ್ವಲ್ಪ ಹಿಂದೆ ಸರಿದ. ದಾಮೋದರ ಮುದುಕನನ್ನು ಸಮೀಪಿಸುವುದು ಅವನು ದೂರ ಸರಿಯುವುದು ಸ್ವಲ್ಪ ಹೊತ್ತು ಈ ಆಟ ಮುಂದುವರಿಯಿತು. ಕೊನೆಗೆ ದಾಮೋದರ ಹತಾಶನಾಗಿ ಕೇಳಿದ ‘ದಯವಿಟ್ಟು ನಿನ್ನ ಕೈಯನ್ನೊಮ್ಮೆ ನನ್ನ ತಲೆಯ ಮೇಲಿಡು. ನನ್ನ ನೆನಪಿನ ಶಕ್ತಿ ಕುಂದಲಿ’. ಮುದುಕ ದಾಮೋದರನನ್ನು ಕರುಣೆಯಿಂದ ನೋಡಿ ಮುಗುಳ್ನಕ್ಕ. ಮುದುಕನ ಮುಖದಲ್ಲಿ ಗೋಚರಿಸಿದ ಆ ದೇದಿಪ್ಯಮಾನ ಪ್ರಭೆಗೆ ದಾಮೋದರ ಬೆರಗಾದ. ‘ನನ್ನನ್ನು ನಿನ್ನಂತೆ ಮಾಡು ತಂದೆ’ ಕೈಮುಗಿದು ಬೇಡಿಕೊಂಡ ಕಾಲು ಹಿಡಿದು ಅಂಗಲಾಚಿದ. ‘ಲೌಕಿಕ ಬದುಕಿನಿಂದ ನನ್ನನ್ನು ಪಾರು ಮಾಡು. ಈ ಬದುಕು ನನಗೆ ಬೇಡ. ನನ್ನ ಬದುಕೆಂಬುದು ಶಾಂತಿಯ ಕಡಲಾಗಲಿ’ ಅವನ ಧ್ವನಿಯಲ್ಲಿ ದೈನ್ಯತೆ ಇತ್ತು. ಮುದುಕ ಕರಗಿಹೋದ. ಹತ್ತಿರ ಬಂದು ಕರುಣೆಯಿಂದ ದಾಮೋದರನ ತಲೆಯನ್ನೊಮ್ಮೆ ತನ್ನ ಕೈಯಿಂದ ಸವರಿದ. ಅದುವರೆಗೂ ಆವರಿಸಿಕೊಂಡಿದ್ದ ಜಡತ್ವ ದೂರಾಗಿ ದಾಮೋದರನಿಗೆ ಮನಸ್ಸು ಮತ್ತು ದೇಹ ಹಗುರವಾದ ಅನುಭವವಾಗಿ ಅವನ ಮುಖದಲ್ಲಿ ದೇದಿಪ್ಯಮಾನದ ಪ್ರಭೆ ಬೆಳಗಲಾರಂಭಿಸಿತು.
---000---

(ಎಪ್ರಿಲ್ ೨೦೧೯ ರ ತುಷಾರ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ)

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Saturday, March 2, 2019

ಮಾಧ್ಯಮ ಮತ್ತು ಉದ್ಯಮ

     


         ಹೊಸ ಬದಲಾವಣೆಯ ಕಾಲಘಟ್ಟದಲ್ಲಿ ನಾವು ನಿಂತಿದ್ದೇವೆ. ಜಾಗತೀಕರಣದ ಪ್ರಭಾವಕ್ಕೆ ಒಳಗಾಗಿ ಮಾನವನ ಸಾಧನೆಯ ಕ್ಷೇತ್ರಗಳೆಲ್ಲ ಬದಲಾವಣೆ ಹೊಂದಿ ಅವುಗಳೆಲ್ಲ ಹೊಸ ಪರಿವೇಷದಲ್ಲಿ ನಮಗೆ ಗೋಚರಿಸುತ್ತಿವೆ. ಬದಲಾವಣೆಯನ್ನುವುದು ನಿರಂತರವಾದದ್ದು ಮತ್ತು ಅದು ಬೆಳವಣಿಗೆಯ ಸಂಕೇತ ಕೂಡ ಹೌದು. ಹರಿಯದೇ ನಿಂತ ನೀರು ಕೂಡ ಪಾಚಿಗಟ್ಟಿ ಮಲೀನಗೊಳ್ಳುತ್ತದೆ. ಇನ್ನು ಮಾನವನ ಕಾರ್ಯಕ್ಷೇತ್ರಗಳೂ ಬದಲಾವಣೆಯಿಂದ ಹೊರತಾಗಿಲ್ಲ. ಸದಾ ಹೊಸತನಕ್ಕೆ ತೆರೆದುಕೊಳ್ಳುತ್ತಿರುವುದು ಮಾನವ ಜನಾಂಗದ ಅಭ್ಯುದಯಕ್ಕೆ ಅಗತ್ಯವಾದ ಪ್ರಕ್ರಿಯೆಯಾಗಿದೆ. ಮನುಷ್ಯನ ಸಾಧನೆಯ ಕಾರ್ಯ ಕ್ಷೇತ್ರಗಳಾದ ಶಿಕ್ಷಣ, ಪತ್ರಿಕೆ, ಸಿನಿಮಾ ಮತ್ತು ಬರವಣಿಗೆ ಕಾಲಕಾಲಕ್ಕೆ ಆಧುನಿಕತೆಯನ್ನು ಮೈಗೂಡಿಸಿಕೊಳ್ಳುತ್ತ ಹೊಸ ಹೊಸ ಪರಿವೇಷದಲ್ಲಿ ನಮಗೆ ಗೋಚರಿಸುತ್ತಿವೆ. ಒಂದುಕಾಲದಲ್ಲಿ ಮಾಧ್ಯಮಗಳಾಗಿ ಮಾನವ ಜನಾಂಗದ ಪ್ರಗತಿಯನ್ನೇ ತಮ್ಮ ಮೂಲ ಧ್ಯೇಯವಾಗಿಸಿಕೊಂಡಿದ್ದ ಈ ನಾಲ್ಕು ಮಾಧ್ಯಮ ಕ್ಷೇತ್ರಗಳು ಇಂದು ಉದ್ಯಮದ ಅವತಾರವನ್ನು ಆವಾಹಿಸಿಕೊಂಡು ಬಂಡವಾಳ ಹೂಡಿಕೆದಾರರ ದುರಾಸೆಗೆ ಸಿಲುಕಿ ತಮ್ಮ ಮೂಲ ಅರ್ಥವನ್ನೇ ಕಳೆದುಕೊಂಡು ವಿಕಾರಗೊಳ್ಳುತ್ತಿವೆ. ಮಾಧ್ಯಮವೊಂದು ಉದ್ಯಮವಾಗಿ ರೂಪಾಂತರಗೊಂಡಾಗ ಅಲ್ಲಿ ಹಣಗಳಿಕೆಯೇ  ಮುನ್ನೆಲೆಗೆ ಬಂದು ಸಮಾಜದ ಕಳಕಳಿ ಮತ್ತು ಅಭ್ಯುದಯ ಎನ್ನುವುದು ಹಿನ್ನೆಲೆಗೆ ಸರಿಯುತ್ತದೆ.

ಶಿಕ್ಷಣ

    ಇವತ್ತು ರಾಷ್ಟ್ರದಲ್ಲಿ ಸಾರ್ವಜನಿಕರಿಗೆ ಅಗತ್ಯವಾದ ಶಿಕ್ಷಣವು ಬೃಹತ್ ಉದ್ಯಮದ ರೂಪವನ್ನು ತಾಳಿ ಸಾಮಾನ್ಯ ಜನರಿಗೆ ಕೈಗೆಟುಕದಷ್ಟು ದುಬಾರಿಯಾಗಿದೆ. ಶಿಕ್ಷಣ ಮನುಷ್ಯನ ಮೂಲಭೂತ ಅಗತ್ಯಗಳಲ್ಲೊಂದು. ಹೀಗಾಗಿ ಈ ರಾಷ್ಟ್ರದಲ್ಲಿ ಬದುಕುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣ ಉಚಿತವಾಗಿ ಮತ್ತು ಗುಣಾತ್ಮಕವಾಗಿ ದೊರೆಯಬೇಕು. ಜೊತೆಗೆ ಉಚಿತ ಮತ್ತು ಗುಣಾತ್ಮಕ ಶಿಕ್ಷಣವನ್ನು ತನ್ನದಾಗಿಸಿಕೊಳ್ಳುವುದು ಇಲ್ಲಿರುವ ಪ್ರತಿಯೊಬ್ಬ ಪ್ರಜೆಯ ಹಕ್ಕು ಕೂಡ ಹೌದು. ಹಾಗೆಂದು ಸರ್ಕಾರವನ್ನಾಗಲಿ ಮತ್ತು ಜನಪ್ರತಿನಿಧಿಗಳನ್ನಾಗಲಿ ನೇರವಾಗಿ ಆರೋಪಿಗಳನ್ನಾಗಿಸುವುದು ತುಂಬ ಕಷ್ಟವಾದ ಕೆಲಸ. ಏಕೆಂದರೆ ಈ ರಾಷ್ಟ್ರದಲ್ಲಿ ಉಚಿತ ಶಿಕ್ಷಣಕ್ಕಾಗಿ ನಮ್ಮ ಸರ್ಕಾರ ಕಾನೂನನ್ನೇ ಮಾಡಿದೆ. ಪ್ರತಿಯೊಂದು ಮಗು ಹತ್ತು ವರ್ಷಗಳವರೆಗಿನ ಶಿಕ್ಷಣವನ್ನು ಉಚಿತವಾಗಿ ಪಡೆಯುವ ಎಲ್ಲ ಅವಕಾಶಗಳನ್ನು ರೂಪಿಸಲಾಗಿದೆ. ಹೀಗೆ ಸರ್ಕಾರ ಕಾನೂನನ್ನು ರೂಪಿಸಿದ್ದೆ ತಪ್ಪಾಯೊತೇನೋ ಎನ್ನುವಂತೆ ಬಂಡವಾಳ ಹೂಡಿಕೆದಾರರಿಗೆ ಮತ್ತು ಉದ್ಯಮಪತಿಗಳಿಗೆ ಶಿಕ್ಷಣ ಎನ್ನುವುದು ಮನುಷ್ಯನ ಮೂಲಭೂತ ಅಗತ್ಯಗಳಲ್ಲೊಂದು ಎನ್ನುವ ಅರಿವು ಮೂಡಿ ಶಿಕ್ಷಣವನ್ನು ಕೂಡ ಅವರು ಬಂಡವಾಳ ಹೂಡಿಕೆಗೆ ತುಂಬ ಫಲವತ್ತಾದ ಕ್ಷೇತ್ರವೆಂದು ಪರಿಭಾವಿಸಲಾರಂಭಿಸಿದರು. ಪರಿಣಾಮವಾಗಿ ಉದ್ಯಮಿಗಳು ಬೇರೆ ಬೇರೆ ಉದ್ಯಮದಲ್ಲಿ ತಾವು ಗಳಿಸಿದ್ದನ್ನು ಶಿಕ್ಷಣ ಕ್ಷೇತ್ರದಲ್ಲಿ ಬಂಡವಾಳ ಹೂಡತೊಡಗಿದರು. ಪಾಲಕರನ್ನು ಮತ್ತು ವಿದ್ಯಾರ್ಥಿಗಳನ್ನು ಆಕರ್ಷಿಸಲು ಮಗುವಿನ ಶಿಕ್ಷಣ ಮಾಧ್ಯಮವನ್ನು ಇಂಗ್ಲಿಷಾಗಿ ಪರಿವರ್ತಿಸಿ ಬೃಹದಾಕಾರದ ಕಟ್ಟಡಗಳು, ಆಧುನಿಕ ತಂತ್ರಜ್ಞಾನದಡಿ ನಿರ್ಮಾಣಗೊಂಡ ಪಾಠದ ಕೊಠಡಿಗಳು, ಡಿಜಿಟಲ್ ಗ್ರಂಥಾಲಯಗಳು, ವಿಶಾಲವಾದ ಆಟದ ಆವರಣ, ಸುಸಜ್ಜಿತ ಪ್ರಯೋಗಾಲಯಗಳು, ಅರಳು ಹುರಿದಂತೆ ಮಾತನಾಡುವ ಶಿಕ್ಷಕರು ಹೀಗೆ ಒಟ್ಟಿನಲ್ಲಿ ಉದ್ಯಮಕ್ಕೆ ಅಗತ್ಯವಾದ ಎಲ್ಲ ಸಿದ್ಧತೆಗಳೊಂದಿಗೆ ಶಿಕ್ಷಣ ಕ್ಷೇತ್ರಕ್ಕೆ ಉದ್ಯಮಪತಿಗಳು ಕಾಲಿಟ್ಟರು. ಒಟ್ಟಾರೆ ಅದುವರೆಗಿನ ಸರ್ಕಾರಿ ಶಾಲೆಗಳಲ್ಲಿನ ಕೊರತೆಗಳನ್ನೇ ತಮ್ಮ ಲಾಭಕ್ಕೆ ಪರಿವರ್ತಿಸಿಕೊಂಡ ಉದ್ಯಮಪತಿಗಳು ಪಾಲಕರ ಮತ್ತು ವಿದ್ಯಾರ್ಥಿಗಳ ಮೂಗಿಗೆ ಗುಣಾತ್ಮಕ ಶಿಕ್ಷಣ ಎನ್ನುವ ತುಪ್ಪ ಸವರಿದ್ದು ಮಾತ್ರ ಸತ್ಯವಾದ ಸಂಗತಿ.
    ಹೀಗೆ ಪ್ರತಿ ಮಗುವಿಗೂ ಅಗತ್ಯವಾದ ಶಿಕ್ಷಣವು ಉದ್ಯಮಪತಿಗಳ ನೇರ ಪ್ರವೇಶದಿಂದಾಗಿ ಖಾಸಗೀಕರಣವಾಗಿ ರೂಪಾಂತರಗೊಂಡಿತ್ತು. ಅಚ್ಚರಿಯ ಸಂಗತಿ ಎಂದರೆ ಈ ನೆಲದಲ್ಲಿ ಶಿಕ್ಷಣವನ್ನು ಆರಂಭದಲ್ಲಿ ಖಾಸಗೀಕರಣಗೊಳಿಸಿದ್ದು ಧಾರ್ಮಿಕ ಕೇಂದ್ರಗಳಾದ ಮಠಗಳು. ಎಲ್ಲಿ ಸರ್ಕಾರಕ್ಕೆ ಉಚಿತ ಮತ್ತು ಪರಿಣಾಮಕಾರಿಯಾದ ಶಿಕ್ಷಣವನ್ನು ಒದಗಿಸಲು ಸಾಧ್ಯವಾಗುತ್ತಿರಲಿಲ್ಲವೋ ಅಲ್ಲೆಲ್ಲ ಮಠಗಳು ಸರ್ಕಾರದ ಅನುಮತಿಯೊಂದಿಗೆ ಖಾಸಗಿ ಶಾಲೆಗಳನ್ನು ಸ್ಥಾಪಿಸಲಾರಂಭಿಸಿದವು. ಮಠಗಳು ಸ್ಥಾಪಿಸುತ್ತಿದ್ದ ಖಾಸಗಿ ಶಾಲೆಗಳಲ್ಲೂ ಕೂಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿತ್ತು ಎನ್ನುವುದು ಗಮನಿಸಬೇಕಾದ ಸಂಗತಿ. ಸರ್ಕಾರ ಕೂಡ ತನ್ನ ಹೊರೆ ಅಥವಾ ಜವಾಬ್ದಾರಿಯನ್ನು ಮಠಗಳು ನಿರ್ವಹಿಸಲು ಮುಂದೆ ಬಂದಾಗ ಅದು ಸಹಜವಾಗಿಯೇ  ಒಪ್ಪಿಗೆ ನೀಡಿತು. ಮಠಗಳ ಉದ್ದೇಶ ಕೂಡ ಶಿಕ್ಷಣದ ಮೂಲಕವೇ ನಿರ್ಲಕ್ಷಿತ ತಳಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತಂದು ನಿಲ್ಲಿಸಬೇಕೆನ್ನುವ ಒಂದು ಕಳಕಳಿ ಇದ್ದುದ್ದರಿಂದ ಇಲ್ಲಿ ಧಾರ್ಮಿಕ ಮಠಗಳ ನಡೆಯನ್ನು ಅನುಮಾನಿಸುವಂತಿರಲಿಲ್ಲ. ಮಠಗಳು ಸಹ ಶಿಕ್ಷಣವನ್ನು ಸಮಾಜದ ಅಭಿವೃದ್ಧಿಗಾಗಿ ತುಂಬ ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಂಡವು ಎನ್ನುವುದು ಗಮನಾರ್ಹ ಸಂಗತಿ.  
   ಶಿಕ್ಷಣದ ಖಾಸಗೀಕರಣ ಉದ್ಯಮದ ರೂಪವನ್ನು ತಳೆಯಲು ಜಾಗತೀಕರಣದ ಪ್ರಭಾವ ಮತ್ತು ಪಾತ್ರ ಗಣನೀಯವಾಗಿದೆ. ಇಂಗ್ಲಿಷ್ ಮಾಧ್ಯಮದ ಮೂಲಕ ಶಿಕ್ಷಣ ಪಡೆದ ನಮ್ಮ ಯುವ ಪೀಳಿಗೆ ಜಾಗತೀಕರಣದ ಕಾರಣ ನಾಲ್ಕಂಕಿ ಸಂಬಳ ಪಡೆಯುವ ಉದ್ಯೋಗವನ್ನು ದಕ್ಕಿಸಿಕೊಳತೊಡಗಿದರು. ಜೊತೆಗೆ ಇದೇ ವಿದ್ಯಾವಂತ ಪೀಳಿಗೆಗೆ ಸಲೀಸಾಗಿ ವಿದೇಶಗಳಿಗೆ ಉದ್ಯೋಗದ ನೆಪದಲ್ಲಿ ವಲಸೆಹೋಗಲು ಜಾಗತೀಕರಣ ಅನುವು ಮಾಡಿಕೊಟ್ಟಿತು. ಪರಿಣಾಮವಾಗಿ ಪಾಲಕರೆಲ್ಲ ಸರ್ಕಾರದ ಕನ್ನಡ ಶಾಲೆಗಳಿಗೆ ಬದಲಾಗಿ ಖಾಸಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಪ್ರವೇಶ ದೊರಕಿಸಿಕೊಡಲು ಆರಂಭಿಸಿದರು. ಇದು ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ ಹಳ್ಳಿಗಳಲ್ಲಿನ ಕೃಷಿಕರು ಕೂಡ ತಮ್ಮ ಮಕ್ಕಳಿಗೂ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಕೊಡಿಸಲು ನಗರ ಪ್ರದೇಶಗಳಿಗೆ ವಲಸೆ ಬರಲಾರಂಭಿಸಿದರು. ಪಾಲಕರ ಈ ಮಹತ್ವಾಕಾಂಕ್ಷೆಯನ್ನೇ ತಮ್ಮ ಬಂಡವಾಳವಾಗಿಸಿಕೊಂಡ ಖಾಸಗಿ ಶಿಕ್ಷಣ ಸಂಸ್ಥೆಗಳು ಲಕ್ಷಾಂತರ ರೂಪಾಯಿಗಳ ಶುಲ್ಕವನ್ನು ವಸೂಲು ಮಾಡುತ್ತ ಬೆಳೆಯತೊಡಗಿದವು. ಸರ್ಕಾರ ಕೂಡ ಖಾಸಗಿ ಶಿಕ್ಷಣ ಸಂಸ್ಥೆಗಳ ನಡೆಗೆ ಸಮ್ಮತಿ ಸೂಚಿಸಿ ಒಂದರ್ಥದಲ್ಲಿ ಶಿಕ್ಷಣ ಮಾಧ್ಯಮವನ್ನು ಉದ್ಯಮವಾಗಿಸಲು ಉದ್ಯಮ ಪತಿಗಳೊಂದಿಗೆ ಕೈಜೋಡಿಸಿತು. ಇವತ್ತು ನಾವುಗಳೆಲ್ಲ ಬಹುದೂರ ಸಾಗಿ ಬಂದಿದ್ದೇವೆ. ಒಂದೆಡೆ ಅನೇಕ ಸಮ್ಸ್ಯೆಗಳು ಮತ್ತು ಕೊರತೆಗಳಿಂದ ಕುಂಟುತ್ತ ಸಾಗಿರುವ ಸರ್ಕಾರದ ಕನ್ನಡ ಶಾಲೆಗಳು ಇನ್ನೊಂದೆಡೆ ಲಕ್ಷಾಂತರ ರೂಪಾಯಿಗಳ ಶುಲ್ಕವನ್ನು ವಸೂಲಿ ಮಾಡುತ್ತ ಶಿಕ್ಷಣವನ್ನು ವ್ಯಾಪಾರದ ಮಟ್ಟಕ್ಕಿಳಿಸಿರುವ ಖಾಸಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳು. ಮೊದಲಿನದನ್ನು ನೆಚ್ಚಿಕೊಂಡು ಕೂಡುವಂತಿಲ್ಲ ಮತ್ತು ಎರಡನೆಯದನ್ನು ನಿಭಾಯಿಸುವಷ್ಟು ಆರ್ಥಿಕ ಸಾಮರ್ಥ್ಯವಿಲ್ಲ. ಇಂಥ ವಾತಾವರಣದಲ್ಲಿ ಬಡವರ ಮಕ್ಕಳ ಗೋಳು ಕೇಳುವವರಿಲ್ಲದಂತಾಗಿದೆ. ಸರ್ಕಾರದ ಉಚಿತ ಮತ್ತು ಕಡ್ಡಾಯ ಶಿಕ್ಷಣ ತನ್ನ ಅರ್ಥವನ್ನು ಕಳೆದುಕೊಂಡು ಸಾರ್ವಜನಿಕರ ಕಣ್ಣೊರೆಸುವ ಒಂದು ತಂತ್ರವಾಗಿ ಗೋಚರಿಸುತ್ತದೆ. ಈಗ ಆಗಬೇಕಾಗಿರುವುದು ಶಿಕ್ಷಣವನ್ನು ಉದ್ಯಮದ ಸ್ವರೂಪದಿಂದ ಹೊರತಂದು ಅದನ್ನು ಮೊದಲಿನಂತೆ ಮಾಧ್ಯಮವಾಗಿ ರೂಪಾಂತರಿಸಬೇಕಾಗಿದೆ. 

ಪತ್ರಿಕೋದ್ಯಮ


     ಆರಂಭದಲ್ಲೇ ಒಂದು ವಿಷಯವನ್ನು ಹೇಳುವುದೊಳಿತು. ಕನ್ನಡಿಗರಾದ ಶಾರದಾ ಪ್ರಸಾದ ಇಪ್ಪತ್ತು ವರ್ಷಗಳಷ್ಟು ದೀರ್ಘಕಾಲ ಪ್ರಧಾನ ಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿ ಕಾರ್ಯನಿರ್ವಹಿಸಿದವರು. ನಾಲ್ಕು ಜನ ಪ್ರಧಾನ ಮಂತ್ರಿಗಳನ್ನು ತೀರ ಹತ್ತಿರದಿಂದ ಕಂಡವರು. ಅವರು ಮನಸ್ಸು ಮಾಡಿದಿದ್ದರೆ ಪ್ರಧಾನ ಮಂತ್ರಿಗಳನ್ನು ಕುರಿತು ಹಲವಾರು ಪುಸ್ತಕಗಳನ್ನು ಬರೆಯಬಹುದಿತ್ತು. ಅವರ ಎದೆಗೂಡಲ್ಲಿ ಅದೆಷ್ಟು ರಹಸ್ಯಗಳು ಅಡಕವಾಗಿದ್ದವೋ ಬಲ್ಲವರಾರು. ಆದರೆ ಅವರೆಂದು ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ. ಮಾಧ್ಯಮ ಸಲಹೆಗಾರರಾಗಿದ್ದ ಅವರಲ್ಲಿ ಒಂದು ಎಥಿಕ್ಸ್ ಇತ್ತು. ನಿಮಗೆಲ್ಲ ನೆನಪಿರುವಂತೆ ಇತ್ತೀಚಿಗೆ ‘The Accidental Primeminister’   ಎನ್ನುವ ಹೆಸರಿನ ಸಿನಿಮಾ ಬಿಡುಗಡೆಗೆ ಮೊದಲೇ ಸ್ವಲ್ಪ ಹೆಚ್ಚೆ ಎನ್ನುವಂತೆ ಸುದ್ದಿ ಮಾಡಿತು. ಇದು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಕುರಿತು ತಯ್ಯಾರಾದ ಸಿನಿಮಾ. ಈ ಸಿನಿಮಾಕ್ಕೆ ‘The Accidental Primeminister’ ಎನ್ನುವ ಹೆಸರಿನ ಪುಸ್ತಕ ಆಧಾರವಾಗಿತ್ತು. ಈ ಪುಸ್ತಕದ ಲೇಖಕ ಮನಮೋಹನ ಸಿಂಗ್ ಪ್ರಧಾನ ಮಂತ್ರಿಯಾಗಿದ್ದಾಗ ನಾಲ್ಕು ವರ್ಷಗಳ ಕಾಲ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ ಬಾರು. ಮನಮೋಹನ ಸಿಂಗ್ ಅವರ ಅಧಿಕಾರವಧಿ ಕೊನೆಗೊಂಡ ತಕ್ಷಣ ಈ ಕೃತಿ ಪ್ರಕಟವಾಗಿ ಹೊರಬಂತು. ಸಹಜವಾಗಿಯೇ  ಪುಸ್ತಕ ಸಾರ್ವಜನಿಕ ವಲಯದಲ್ಲಿ ಕುತೂಹಲ ಹುಟ್ಟಿಸಿತು. ಕೊನೆಗೆ ಸಿನಿಮಾ ಆಗಿ ದೇಶದ ಹೆಚ್ಚಿನ ಜನರನ್ನು ತಲುಪಿತು. ಈ ಪುಸ್ತಕ ಮತ್ತು ಸಿನಿಮಾದಿಂದ ಕೆಲವರ ವ್ಯಕ್ತಿತ್ವಕ್ಕೆ ಅಪಚಾರವಾದರೂ ಲೇಖಕರಿಗೆ ಸಾಕಷ್ಟು ಖ್ಯಾತಿಯನ್ನು ತಂದುಕೊಟ್ಟಿತು. ಇನ್ನು ಮುಂದೆ ಭವಿಷ್ಯದಲ್ಲಿ ಮಾಧ್ಯಮ ಸಲಹೆಗಾರರನ್ನು ಆಯ್ಕೆ  ಮಾಡುವಾಗ ಪ್ರಧಾನ ಮಂತ್ರಿ ಸಾವಿರಾರು ಸಲ ಯೋಚಿಸಬಹುದು. ಕೊನೆಗೂ ಇಲ್ಲಿ ಮಾಧ್ಯಮವು ಉದ್ಯಮವಾಗಿ ಎಥಿಕ್ಸ್ ಎನ್ನುವುದು ಗಾಳಿಗೆ ತೂರಿ ಹೋಯಿತು. 
     ಈ ಮೇಲಿನ ಉದಾಹರಣೆ ಹೇಳಲು ಕಾರಣವಿಷ್ಟೇ ಇವತ್ತು ದೇಶದಲ್ಲಿ ಪತ್ರಿಕಾ ಮಾಧ್ಯಮ ಎನ್ನುವುದು ಉದ್ಯಮದ ರೂಪವನ್ನು ತಾಳಿದೆ. ದೇಶದ ಸ್ವಾತಂತ್ರ್ಯ ಚಳವಳಿಯ ಕಾಲಘಟ್ಟದಲ್ಲಿ ಹೋರಾಟಕ್ಕೆ ಲೇಖನಗಳ ಮೂಲಕವೇ ಸಕಾರಾತ್ಮಕವಾಗಿ ಸ್ಪಂದಿಸಿದ ಪತ್ರಿಕಾ ಮಾಧ್ಯಮ ನಂತರದ ದಿನಗಳಲ್ಲಿ ಉದ್ಯಮಪತಿಗಳ ಮತ್ತು  ರಾಜಕಾರಣಿಗಳ ಸ್ವಹಿತಾಸಕ್ತಿಗೆ ಬಲಿಯಾಯಿತು. ಅಕ್ಷರಗಳ ಪ್ರಾಮುಖ್ಯತೆಯ ಅರಿವಿಲ್ಲದ ರಾಜಕಾರಣಿಗಳು ಮತ್ತು ಉದ್ಯಮಪತಿಗಳು ಇವತ್ತು ತಮ್ಮ ರಕ್ಷಣೆಗಾಗಿ ಪತ್ರಿಕಾ ಮಾಧ್ಯಮವನ್ನು ಬೆಂಗಾವಲು ಪಡೆಯಂತೆ ಉಪಯೋಗಿಸುತ್ತಿರುವರು. ಪತ್ರಿಕಾ ಮಾಧ್ಯಮವರು ಕೂಡ ಆಸ್ಥಾನದ ಹೊಗಳು ಭಟ್ಟರಾಗಿ ರಾಜಕಾರಣಿಗಳನ್ನು ಮತ್ತು ಉಳ್ಳವರನ್ನು ಓಲೈಸುತ್ತ ತಮ್ಮ ತಮ್ಮ ಬದುಕನ್ನು ಹಸನಾಗಿಸಿಕೊಳ್ಳುತ್ತಿರುವರು. ಆಧುನಿಕ ತಂತ್ರಜ್ಞಾನದ ಈ ದಿನಗಳಲ್ಲಿ ಪತ್ರಿಕಾ ಮಾಧ್ಯಮ ತಂತ್ರಜ್ಞಾನದ ಛದ್ಮವೇಷದಲ್ಲಿ ಇಡೀ ಮಾಧ್ಯಮವನ್ನು ಉದ್ಯಮದ ಸ್ವರೂಪಕ್ಕೆ ಕೊಂಡೊಯ್ದಿದೆ. ಹಣವಿರುವವರು ಬಂಡವಾಳ ಹೂಡಲು ಪತ್ರಿಕಾ ಮಾಧ್ಯಮಕ್ಕೆ ಕಾಲಿಡುತ್ತಿರುವುದರಿಂದ ಇಲ್ಲಿ ಲಾಭ-ನಷ್ಟಗಳ ಸಂಗತಿ ಮೇಲುಗೈ ಸಾಧಿಸುತ್ತಿದೆ. ಪತ್ರಿಕಾ ಧರ್ಮ ಮತ್ತು ಪತ್ರಿಕಾ ಸ್ವಾತಂತ್ರ್ಯ ತೆರೆಮರೆಗೆ ಸರಿದಿವೆ. ಇಂಥದ್ದೊಂದು ವಿಪ್ಲವದ ನಡುವೆಯೂ ಪಿ.ಸಾಯಿನಾಥ ಅವರಂಥ ಪ್ರಾಮಾಣಿಕ ಮತ್ತು ಸಾಮಾಜಿಕ ಕಳಕಳಿಯುಳ್ಳ ಪತ್ರಕರ್ತರು ಪತ್ರಿಕಾ ಧರ್ಮವನ್ನು ಮತ್ತೆ ಮರು ಸ್ಥಾಪಿಸಲು ಪ್ರಯತ್ನಿಸುತ್ತಿರುವುರಾದರೂ ಅಂಥವರ ಸಂಖ್ಯೆ ಆಶಾದಾಯಕವಾಗೇನೂ ಇಲ್ಲ ಎನ್ನುವುದು ಆತಂಕದ ಸಂಗತಿ.

ಸಿನಿಮೋದ್ಯಮ


     ಆ ಕಾಲವೊಂದಿತ್ತು. ಆಗ ಸಿನಿಮಾ ಮಾಧ್ಯಮವಾಗಿತ್ತು ಮತ್ತು ಸಮಾಜದ ಜ್ವಲಂತ ಸಮಸ್ಯೆಗಳು ಸಿನಿಮಾ ಪರದೆಯ ಮೇಲೆ ಪ್ರತಿಫಲಿಸುತ್ತಿದ್ದವು. ಸಿನಿಮಾದ ಮೂಲಕವೇ ಸಮಾಜದಲ್ಲಿ ಬಹುದೊಡ್ಡ ಪರಿವರ್ತನೆಗಳಾದ ಅನೇಕ ಉದಾಹರಣೆಗಳಿವೆ. ಬಾಲ್ಯವಿವಾಹ ಮತ್ತು ಸತಿಸಗಮನ ಪದ್ಧತಿಯ ವಿರುದ್ಧದ ಹೋರಾಟ, ಮಧ್ಯಪಾನ ವಿರೋಧಿ ಚಳವಳಿ, ಸಾಕ್ಷರತೆಯ ಮಹತ್ವ, ವರದಕ್ಷಿಣೆಯ ಸಮಸ್ಯೆ, ಮಹಿಳಾ ಸಮಸ್ಯೆಗಳು, ರೈತರ ಬದುಕಿನ ಸಮಸ್ಯೆಗಳು ಹೀಗೆ ಸಿನಿಮಾ ಮಾಧ್ಯಮ ಸಮಾಜದ ಇಂಥ ಹಲವಾರು ಸಮಸ್ಯೆಗಳಿಗೆ ಧ್ವನಿಯಾಗಿತ್ತು. ಸಮಾಜ ಕೂಡ ಅಂಥ ಸಿನಿಮಾಗಳನ್ನು ಸ್ವೀಕರಿಸಿ ಬದಲಾವಣೆಗೆ ತನ್ನನ್ನು ತಾನು ತೆರೆದುಕೊಳ್ಳುತ್ತಿತ್ತು. ರಾಜಕುಮಾರರಂಥ ಕಲಾವಿದ ನಾವು ಬದುಕುತ್ತಿರುವ ಇಡೀ ಸಮಾಜದ ಪ್ರತಿನಿಧಿ ಎನ್ನುವಂತೆ ಆಗೆಲ್ಲ ಸಿನಿಮಾಗಳನ್ನು ವೀಕ್ಷಿಸಿದಾಗ ಭಾಸವಾಗುತ್ತಿತ್ತು. ಕಮರ್ಷಿಯಲ್ ಸಿನಿಮಾಗಳ ಉದ್ದೇಶ ಹಣ ಗಳಿಕೆಯೇ  ಆಗಿದ್ದರೂ ಆ ಸಿನಿಮಾಗಳಲ್ಲಿ ಸಮಾಜಕ್ಕೆ ಒಂದು ಸಂದೇಶವಿರುತ್ತಿತ್ತು. ಕಮರ್ಷಿಯಲ್ ಸಿನಿಮಾಗಳ ಮೂಲಕ ಹೇಳಲು ಸಾಧ್ಯವಾಗದೆ ಇದ್ದದ್ದನ್ನು ಕಲಾತ್ಮಕ ಸಿನಿಮಾಗಳು ಅಭಿವ್ಯಕ್ತಿಸುತ್ತಿದ್ದವು. ಕಾಡು, ಬರ, ಫಣಿಯಮ್ಮ ಇತ್ಯಾದಿ ಕಲಾತ್ಮಕ ಸಿನಿಮಾಗಳು ಸಮಾಜದಲ್ಲಿನ ಜ್ವಲಂತ ಸಮಸ್ಯೆಗಳನ್ನು ಸಿನಿಮಾ ಪರದೆಯ ಮೂಲಕ ಜನರನ್ನು ತಲುಪಿಸುವಲ್ಲಿ ಯಶಸ್ವಿಯಾದವು. ಮನೋರಂಜನೆ ಮತ್ತು ನಾಯಕ ಪ್ರಧಾನ ಸಿನಿಮಾಗಳ ಮಧ್ಯೆಯೂ ಆಗ ಸಿನಿಮಾ ಮಾಧ್ಯಮ ತನ್ನ ಮೂಲ ಉದ್ದೇಶಕ್ಕೆ ಬದ್ಧವಾಗಿತ್ತು. 
       ಸಿನಿಮಾ ಮಾಧ್ಯಮ ಉದ್ಯಮವಾಗಿ ರೂಪಾಂತರ ಹೊಂದಲು ಕಾರಣವೇನು ಎನ್ನುವ ಪ್ರಶ್ನೆ ಎದುರಾದಾಗ ನಾವು ಮತ್ತೆ ಮುಖ ಮಾಡುವುದು ಜಾಗತೀಕರಣದತ್ತಲೆ. ಜಾಗತೀಕರಣದ ಕಾರಣ ಇಲ್ಲಿನ ಪ್ರೇಕ್ಷಕನಿಗೆ ವಿದೇಶಿ ಸಿನಿಮಾಗಳನ್ನು ನೋಡುವ ಹೇರಳ ಅವಕಾಶ ಮುಕ್ತವಾಗಿ ದೊರೆಯಲಾರಂಭಿಸಿತು. ಆಗೆಲ್ಲ ಅವನ ಮನಸ್ಸು ಇಲ್ಲಿನ ಸಿನಿಮಾಗಳನ್ನು ಬೇರೆ ರಾಷ್ಟ್ರಗಳ ಸಿನಿಮಾಗಳೊಂದಿಗೆ ತುಲನಾತ್ಮಕವಾಗಿ ನೋಡಲು ಆರಂಭಿಸಿತು. ಪ್ರೇಕ್ಷಕರಲ್ಲಾದ ಬದಲಾವಣೆ ಮತ್ತು ಅವರಲ್ಲಿ ಒಡಮೂಡಿದ ಹೊಸ ಅಭಿರುಚಿಯನ್ನು ಗುರುತಿಸಿದ ಕನ್ನಡ ಸಿನಿಮಾ ಮಾಧ್ಯಮದವರು ತಾವು ಕೂಡ ಹೊಸದೊಂದು ಬದಲಾವಣೆಗೆ ತೆರೆದುಕೊಳ್ಳತೊಡಗಿದರು. ಜೊತೆಗೆ ಅದೇ ಆಗ ಕಾಲಿಟ್ಟ ತಂತ್ರಜ್ಞಾನದ ಬಿಸಿ ಸಿನಿಮಾ ಮಾಧ್ಯಮಕ್ಕೂ ತಟ್ಟಿತು. ಅಷ್ಟೊತ್ತಿಗಾಗಲೇ ಇಂಗ್ಲಿಷ್ ಭಾಷೆಯಲ್ಲಿ ವಿಜ್ಞಾನದ ಅನ್ವೇಷಣೆಯಾದ ಗ್ರಾಫಿಕ್ ತಂತ್ರಜ್ಞಾನವನ್ನು ಅತ್ಯಂತ ಸಶಕ್ತವಾಗಿ ದುಡಿಸಿಕೊಂಡು ನಿರ್ಮಾಣವಾದ ಹಲವಾರು ಸಿನಿಮಾಗಳು ತೆರೆಗೆ ಬಂದು ಪ್ರೇಕ್ಷಕರನ್ನು ಸಮ್ಮೋಹಿನಿಯಂತೆ ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದವು. ಪರಿಣಾಮವಾಗಿ ಕನ್ನಡ ಸಿನಿಮಾ ಮಾಧ್ಯಮದೆದುರು ಜಾಗತಿಕ ಮಟ್ಟದ ಪ್ರೇಕ್ಷಕರಿಗೆ ಒಪ್ಪಿಗೆಯಾಗುವ ಸಿನಿಮಾಗಳನ್ನು ನಿರ್ಮಿಸುವ ಸವಾಲು ಎದುರಾಯಿತು. ಒಟ್ಟಾರೆ ದೇಶ ಭಾಷೆಗಳ ಗಡಿಯನ್ನು ಮೀರಿ ಅಸಂಖ್ಯಾತ ಪ್ರೇಕ್ಷಕರಿಗೆ ತಮ್ಮ ಸಿನಿಮಾಗಳನ್ನು ತೋರಿಸಬೇಕೆನ್ನುವ ಇಲ್ಲಿನ ನಿರ್ದೇಶಕರು ಮತ್ತು ನಿರ್ಮಾಪಕರ ಹಂಬಲದಿಂದಾಗಿ ಕನ್ನಡ ಸಿನಿಮಾ ಮಾಧ್ಯಮದ ಮಾರುಕಟ್ಟೆ ಅಚಿತರರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿತು. ಇಲ್ಲಿ ಸವಾಲು ಸ್ವೀಕರಿಸಿ ಗೆಲುವು ಸಾಧಿಸಿದವರು ಉಳಿದುಕೊಂಡರು ಮತ್ತು ಹೊಸ ಸವಾಲಿಗೆ ಎದೆಗುಂದಿದವರು ಸಿನಿಮಾ ಮಾಧ್ಯಮದಿಂದ ದೂರಸರಿದರು. ಹೀಗೆ ದೂರ ಸರಿದವರಲ್ಲಿ ಸಿನಿಮಾ ಕುರಿತು ಅಪಾರ ಪ್ರೀತಿ ಮತ್ತು ಪ್ರತಿಭೆ ಹೊಂದಿದವರ ಸಂಖ್ಯೆಯೇ  ಬಹಳಷ್ಟು ಎನ್ನುವುದು ಗಮನಿಸಬೇಕಾದ ವಿಷಯ. 
     ಈಗ ಸಿನಿಮಾ ಮಾಧ್ಯಮದಲ್ಲಿ ಅದೇನಿದ್ದರೂ ಹೊಸಬರ ಭರಾಟೆ0iÉು. ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ ಹುಟ್ಟಿದ ಈ ನವ ನಾಗರಿಕರಿಗೆ ಸಿನಿಮಾ ಅದೇನಿದ್ದರೂ ಉದ್ಯಮವೇ ವಿನ: ಮಾಧ್ಯಮವಲ್ಲ. ಎಲ್ಲವೂ ಲಾಭ ಮತ್ತು ನಷ್ಟದ ಲೆಕ್ಕಾಚಾರದಲ್ಲೇ ತೂಗಿ ನೋಡುವ ಮನೋಭಾವ. ಪರಿಣಾಮವಾಗಿ ಇಲ್ಲಿ ಪ್ರೇಕ್ಷಕರನ್ನು ಸಮ್ಮೋಹಿನಿಯಂತೆ ಹಿಡಿದಿಟ್ಟು ಕಾಸು ಮಾಡಿಕೊಳ್ಳುವ ಲೆಕ್ಕಾಚಾರ ಈ ಸಿನಿಮಾ ಜನಗಳದ್ದು. ಆದ್ದರಿಂದ ಸಿನಿಮಾ ಎನ್ನುವುದು ವಾಸ್ತವಿಕತೆಗೆ ಹತ್ತಿರವಾಗಿರಬೇಕು ಎನ್ನುವುದಾಗಲಿ ಅಥವಾ ಸಿನಿಮಾವನ್ನು ಹೀಗೆ ತೆಗೆಯಬೇಕೆನ್ನುವ ಆ ಒಂದುಕಾಲದ ಫಾರ್ಮುಲಾ ಆಗಲಿ ಈಗಿಲ್ಲ. ಏನಿದ್ದರೂ ಮನೋರಂಜನೆಯೇ  ಪ್ರಧಾನ ಮತ್ತು ಗ್ರಾಫಿಕ್ ತಂತ್ರಜ್ಞಾನವೇ ಮೂಲ ಬಂಡವಾಳ. 

ಪುಸ್ತಕೋದ್ಯಮ  


     ಪುಸ್ತಕ ಪ್ರಕಟಣೆ ಕೂಡ ಇವತ್ತು ಬಂಡವಾಳ ಹೂಡಿ ಲಾಭ ಗಳಿಸುವ ಉದ್ದಿಮೆಯಾಗಿ ಪರಿವರ್ತಿತಗೊಂಡಿದೆ. ಪುಸ್ತಕ ಎನ್ನುವುದು ಕೂಡ ಬರಹಗಾರ ತನ್ನ ಅಭಿವ್ಯಕ್ತಿಗಾಗಿ ಆಯ್ಕೆ  ಮಾಡಿಕೊಳ್ಳುವ ಮಾಧ್ಯಮ. ಆಗೆಲ್ಲ ಪುಸ್ತಕ ಪ್ರಕಟಣೆ ಎನ್ನುವುದು ಈಗಿನಷ್ಟು ಸುಲಭವಾಗಿರಲಿಲ್ಲ. ಲೇಖಕರಂತೂ ಸ್ವತ: ಪ್ರಕಾಶಕರಾಗಿ ಪುಸ್ತಕಗಳನ್ನು ಪ್ರಕಟಿಸಲು ಆಗ ಮುಂದಾಗುತ್ತಿರಲಿಲ್ಲ. ಪುಸ್ತಕಗಳ ಪ್ರಕಟಣೆಗಾಗಿಯೇ  ಪ್ರಕಾಶನ ಸಂಸ್ಥೆಗಳಿದ್ದವು. ಜಿ.ಬಿ.ಜೋಷಿ ಅಂಥವರು ಪುಸ್ತಕಗಳ ಪ್ರಕಟಣೆಯನ್ನು ಒಂದು ತಪಸ್ಸಿನಂತೆ ಪಾಲಿಸಿಕೊಂಡು ಬಂದರು. ಪುಸ್ತಕಗಳ ಪ್ರಕಟಣೆ ಎನ್ನುವುದು ಆರ್ಥಿಕ ಹೊರೆಯಾಗಿದ್ದ ಆ ದಿನಗಳಲ್ಲಿ ಮನೋಹರ ಗ್ರಂಥಮಾಲೆಯವರು ಓದುಗರಿಂದ ಚಂದಾ ಹಣವನ್ನು ಪಡೆದು ಪುಸ್ತಕಗಳನ್ನು ಪ್ರಕಟಿಸುತ್ತಿದ್ದರು. ಮನೋಹರ ಗ್ರಂಥಮಾಲೆಯ ಪ್ರಕಾಶಕರಾಗಿದ್ದ ಜಿ.ಬಿ.ಜೋಷಿ ಅವರು ಪ್ರಕಟಿತ ಪುಸ್ತಕಗಳ ಗಂಟನ್ನು ತಲೆಯ ಮೇಲೆ ಹೊತ್ತೊಯ್ದು ಮಾರಾಟ ಮಾಡುತ್ತಿದ್ದರು. ಪುಸ್ತಕ ಓದುವವರ ಸಂಖ್ಯೆ ಅಪಾರ ಪ್ರಮಾಣದಲ್ಲಿದ್ದ ದಿನಗಳಲ್ಲೂ ಪುಸ್ತಕಗಳ ಪ್ರಕಟಣೆ ಎನ್ನುವುದು ಪ್ರಕಾಶಕರಿಗೆ ಹೊರೆಯಾಗುತ್ತಿತ್ತು. ಅದೆಷ್ಟೋ ಪ್ರತಿಭಾನ್ವಿತ ಲೇಖಕರು ತಮ್ಮ ಕೃತಿಗಳು ಬೆಳಕು ಕಾಣದ ಕಾರಣ ತೆರೆಮರೆಗೆ ಸರಿದು ಹೋದರು. 
       ಪುಸ್ತಕ ಪ್ರಕಾಶಕರ ಸಮಸ್ಯೆಯನ್ನು ಅರಿತು ಸರ್ಕಾರ ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಖರೀದಿಸುವ ಕಾಯ್ದೆ  ತಂದ ನಂತರ ಪುಸ್ತಕ ಮಾಧ್ಯಮದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದವು. ಈಗ ಪುಸ್ತಕ ಪ್ರಕಟಣೆ ಎನ್ನುವುದು ಪ್ರಕಾಶಕರಿಗೆ ಲಾಭ ತರುವ ಉದ್ದಿಮೆಯಾಗಿ ಬೆಳೆದು ನಿಂತಿದೆ. ಪರಿಣಾಮವಾಗಿ ಅಸಂಖ್ಯಾತ ಪ್ರಕಾಶನ ಸಂಸ್ಥೆಗಳು ಹುಟ್ಟಿಕೊಂಡಿವೆ. ಲಾಭದ ಆಸೆಯಿಂದ ಲೇಖಕರೇ ಪ್ರಕಾಶಕರಾಗಿ ಪುಸ್ತಕಗಳನ್ನು ಪ್ರಕಟಿಸುತ್ತಿರುವರು. ಕೆಲವರಂತೂ ತಮ್ಮ ಪಿ.ಹೆಚ್.ಡಿ ಪ್ರಬಂಧಗಳನ್ನೇ ಪುಸ್ತಕ ರೂಪದಲ್ಲಿ ಪ್ರಕಟಿಸಿ ಸಾರ್ವಜನಿಕ ಗ್ರಂಥಾಲಯಗಳಿಗೆ ಮಾರಾಟ ಮಾಡುತ್ತಿರುವರು. ಕೆಲವು ವರ್ಷಗಳ ಹಿಂದೆ ರಾಜ್ಯದ ಮಂತ್ರಿಯೋರ್ವರು ತಮ್ಮ ಸಂಬಂಧಿಕರ ಪ್ರಕಾಶನ ಸಂಸ್ಥೆಯಿಂದಲೇ ಪುಸ್ತಕಗಳನ್ನು ಖರೀದಿಸುವಂತೆ ಒತ್ತಡ ತಂದು ಕೋಟ್ಯಾಂತರ ರೂಪಾಯಿಗಳ ವಹಿವಾಟು ನಡೆಸಿದರು. ಹೀಗೆ ಲಾಭದ ಆಸೆಯಿಂದ ಪುಸ್ತಕಗಳನ್ನು ಪ್ರಕಟಿಸುವುದರಿಂದ ಸಾಹಿತ್ಯದ ಗುಣಮಟ್ಟ ಕುಸಿಯುತ್ತದೆ ಎನ್ನುವ ಆತಂಕ ಹಲವರದು. ಬರವಣಿಗೆ ಎನ್ನುವುದು ಅದೊಂದು ಸೃಜನಶೀಲ ಸೃಷ್ಟಿ. ಸಮಾಜದ ಹಿತವೇ ಬರವಣಿಗೆಯ ಉದ್ದೇಶ. ಆದರೆ ಲಾಭದ ಆಸೆಯಿಂದ ಈಗ ಕನ್ನಡ ಸಾಹಿತ್ಯದಲ್ಲಿ ಪ್ರಕಟವಾಗುತ್ತಿರುವ ಪುಸ್ತಕಗಳನ್ನು ಗಮನಿಸಿದಾಗ ಹೆಚ್ಚಿನ ಪುಸ್ತಕಗಳು ಕಾಟಾಚಾರಕ್ಕೆಂಬಂತೆ ಪ್ರಕಟವಾಗುತ್ತಿವೆ. ಧನದಾಹ ಮತ್ತು ವ್ಯಾಪಾರಿ ಮನೋಭಾವದ ಲೇಖಕರು ಹಾಗೂ ಪ್ರಕಾಶಕರಿಂದಾಗಿ ಸಾಹಿತ್ಯ ಇಲ್ಲಿ ಮಾರಾಟವಾಗುತ್ತಿದೆ. 

ಕೊನೆಯ ಮಾತು


     ಹಿರಿಯ ಬರಹಗಾರರಾದ ಬರಗೂರು ರಾಮಚಂದ್ರಪ್ಪನವರು ಮಾದ್ಯಮ ಮತ್ತು ಉದ್ಯಮದ ನಡುವಣ ವ್ಯತ್ಯಾಸವನ್ನು ಬಹಳ ಅರ್ಥಪೂರ್ಣವಾಗಿ ಗುರುತಿಸುತ್ತಾರೆ. ಅವರ ದೃಷ್ಟಿಯಲ್ಲಿ ಮಾಧ್ಯಮದಲ್ಲಿ ಸಂವೇದನೆಯೆ   ಮುಖ್ಯವಾಗಿದ್ದರೆ ಉದ್ಯಮದಲ್ಲಿ ಲಾಭದ ಹಿತಾಸಕ್ತಿ ಮುಖ್ಯವಾಗಿರುತ್ತದೆ. ಶ್ರೀಯುತರ ಚಿಂತನೆ ಸತ್ಯಕ್ಕೆ ಹತ್ತಿರವಾಗಿದೆ. ಮಾಧ್ಯಮ ಸಂವೇದನಾಶೀಲವಾಗಿದ್ದಾಗ ಮಾತ್ರ ಬದುಕುತ್ತಿರುವ ವ್ಯವಸ್ಥೆ ಕುರಿತು ಅದಕ್ಕೆ ಸಹಜವಾದ ಕಾಳಜಿ ಇರಲು ಸಾಧ್ಯ. ಉದ್ಯಮವಾದಾಗ ಬಂಡವಾಳ ಮತ್ತು ಲಾಭ-ನಷ್ಟಗಳೇ ಮುನ್ನೆಲೆಗೆ ಬಂದು ಸಮಾಜದ ಕುರಿತಾದ ಕಳಕಳಿ ಹಿನ್ನೆಲೆಗೆ ಸರಿಯುತ್ತದೆ. ಜಾಗತೀಕರಣದ ಈ ಯುಗದಲ್ಲಿ ಪುಸ್ತಕ, ಪತ್ರಿಕೆ, ಸಿನಿಮಾ ಮತ್ತು ಶಿಕ್ಷಣ ಮಾಧ್ಯಮಗಳು ಉದ್ಯಮಗಳಾಗಿ ಬದಲಾಗುತ್ತಿರುವುದು ತುಂಬ ಆತಂಕದ ಸಂಗತಿ. ಹೀಗೆ ಸಮಾಜದ ಪ್ರಮುಖ ಮಾಧ್ಯಮಗಳು ಉದ್ಯಮದ ರೂಪವನ್ನು ತಾಳುತ್ತಿರುವುದರಿಂದ ಇಲ್ಲಿ ಬದುಕುತ್ತಿರುವ ಮನುಷ್ಯರು ಕೂಡ ಸಂವೇದನೆಯನ್ನು ಕಳೆದುಕೊಂಡು ಕ್ರೂರರಾಗುತ್ತಿರುವರು. ನಾವುಗಳೆಲ್ಲ ತುಂಬ ಆತಂಕ ಪಡುವ ವಿಷಯವಿದು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Monday, February 4, 2019

ಹೆಜ್ಜೆ ಮೂಡಿದ ಹಾದಿ: ಪುಸ್ತಕ ಬಿಡುಗಡೆ






ಫೆಬ್ರುವರಿ ೩, ೨೦೧೯ ರಂದು ಕಲಬುರಗಿಯಲ್ಲಿ ನನ್ನ 'ಹೆಜ್ಜೆ ಮೂಡಿದ ಹಾದಿ' ಪುಸ್ತಕ ಬಿಡುಗಡೆಯಾಯಿತು. ಕನ್ನಡದ ಮಹತ್ವದ ಲೇಖಕರಾದ ಡಾ.ಬರಗೂರು ರಾಮಚಂದ್ರಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. 

ಬರವಣಿಗೆ ಎನ್ನುವುದು ನನ್ನನ್ನು ನಾನು ಕಂಡುಕೊಳ್ಳುವ ಪ್ರಯತ್ನ. ಈ ಸಾಹಿತ್ಯ ಕೃತಿಗಳ ಓದಿನಿಂದ ನನ್ನ ಭಾವದಲ್ಲಿ ಹರಳುಗಟ್ಟಿ ನಿಲ್ಲುವ ವಿಚಾರಗಳಿಗೆ ಅಕ್ಷರರೂಪ ನೀಡಬೇಕೆನ್ನುವ ನನ್ನೊಳಿಗಿನ ತುಡಿತ ಇದುವರೆಗೆ ಕೆಲವು ಪುಸ್ತಕಗಳನ್ನು ನಾನು ಬರೆಯಲು ಕಾರಣವಾಗಿದೆ. ಒಟ್ಟಾರೆ ಈ ಓದು ಮತ್ತು ಬರವಣಿಗೆಯಂಥ ಸೃಜನಶೀಲ ಚಟುವಟಿಕೆ ನನ್ನನ್ನು ಹೆಚ್ಚು ಹೆಚ್ಚು ಕ್ರಿಯಾಶೀಲಗೊಳಿಸುವುದರಿಂದ ನಾನು ಸಾಹಿತ್ಯ ಕೃತಿಗಳ ಓದನ್ನು ಹೆಚ್ಚು ಪ್ರೀತಿಸುತ್ತೇನೆ. ಜೊತೆಗೆ ಈ ಬರವಣಿಗೆ ಎನ್ನುವುದು ಬದುಕುತ್ತಿರುವ ಈ ಸಮಾಜದಲ್ಲಿ ನಾನು ಒಂಟಿಯಲ್ಲ ಎನ್ನುವ ಭಾವ ಹುಟ್ಟಿಸಿ ಬರೆಯುವ ಕ್ರಿಯೆಯಲ್ಲಿ ನಾನು ಮತ್ತೆ ಮತ್ತೆ ತೊಡಗಿಸಿಕೊಳ್ಳುವಂತೆ ಆ ಭಾವವೆ ಪ್ರೇರೇಪಿಸುತ್ತದೆ. ಒಂದರ್ಥದಲ್ಲಿ ಅಕ್ಷರಗಳ ಸಾಂಗತ್ಯದಲ್ಲಿ ನೆಮ್ಮದಿಯನ್ನು ಕಂಡುಕೊಳ್ಳುವ ಮನೋಭಾವ ನನ್ನದು. 
ಬರವಣಿಗೆ ವಿಷಯವಾಗಿ ನನ್ನನ್ನು ಕಾಡುವ ಸಂಗತಿಗಳು ಅನೇಕ. ಬರವಣಿಗೆಯು ಲೇಖಕನ ಸ್ವಂತದ ಹಿತಾಸಕ್ತಿಯನ್ನು ಕಾಪಾಡುವ ಕ್ರಿಯೆಯಾಗದೆ ಅದು ಸಮಾಜಮುಖಿಯಾಗಿರಬೇಕು ಎನ್ನುವುದರಲ್ಲಿ ನನಗೆ ಅಚಲವಾದ ನಂಬಿಕೆ. ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಲೇಖಕ ಮಾರಿಯೋ ವರ್ಗಾಸ್ ಯೋಸಾ ಸಾಹಿತ್ಯದ ಮಹತ್ವವನ್ನು ಹೀಗೆ ಹೇಳುತ್ತಾನೆ “ಬಹುಕಾಲ ಬಾಳುವಂಥ ಯಾವುದನ್ನು ರಾಜಕಾರಣ ಮಾಡಲಾಗುವುದಿಲ್ಲವೋ ಅದನ್ನು ಸಾಹಿತ್ಯ ಮಾಡಬೇಕು. ಲೇಖಕ ಕೇವಲ ವರ್ತಮಾನಕ್ಕಾಗಿ ಮಾತ್ರ ಪುಸ್ತಕ ಬರೆಯುವುದಿಲ್ಲ. ಟೀಕಿಸುವ ಮೂಲಕವೋ ತಮ್ಮ ಆಲೋಚನೆಗಳನ್ನು ಬಳಸಿ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮೂಲಕವೋ ಲೇಖಕರಾದವರು ಕಾರ್ಯಪ್ರವೃತ್ತರಾಗುವುದು ತುಂಬಾ ಮುಖ್ಯ. ಕೆಲವು ಸಂದರ್ಭಗಳಲ್ಲಿ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಬೇಕಾಗಿ ಬರುವಂಥ ಯಾವುದೇ ಅಭಿಪ್ರಾಯಕ್ಕೂ ಲೇಖಕ ಜಗ್ಗ ಕೂಡದು. ಒಂದು ಅಗತ್ಯದಂತೆ ಲೇಖಕರು ತಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕು”. ಯೋಸಾನ ಒಟ್ಟು ಹೇಳಿಕೆಯ ಅರ್ಥ ಬರಹಗಾರ ರಾಜಕೀಯ ಅಥವಾ ರಾಜಕಾರಣದೊಂದಿಗೆ ರಾಜೀ ಮಾಡಿಕೊಳ್ಳದೆ ಸಮಾಜವನ್ನು ಭ್ರಷ್ಟ ರಾಜಕಾರಣದಿಂದ ಕಾಯುವ ಕೆಲಸ ಮಾಡಬೇಕು. ಆತಂಕದ ಸಂಗತಿ ಎಂದರೆ ಇವತ್ತು ಬರವಣಿಗೆಯು ರಾಜಕಾರಣಿಗಳನ್ನು ಮತ್ತು ಉಳ್ಳವರನ್ನು ಓಲೈಸುವ  ಒಂದು ಸಾಂಸ್ಕೃತಿಕ ಚಟುವಟಿಕೆಯಾಗಿದೆ.

ಇನ್ನು ಈ ಕೃತಿಯ ವಿಷಯಕ್ಕೆ ಬಂದರೆ ಇಲ್ಲಿ 22 ಸಾಧಕರ ಬದುಕಿನ ಸಾಧನೆಯ ಚಿತ್ರಣವಿದೆ. ಹಾಗೆಂದು ಇದು ಜೀವನ ಚರಿತ್ರೆ ಗ್ರಂಥವಾಗಲಿ ಇಲ್ಲವೇ ಅಭಿನಂದನಾ ಗ್ರಂಥವಾಗಲಿ ಅಲ್ಲ. ಜೊತೆಗೆ ಇಲ್ಲಿ ದಾಖಲಿಸಿದ್ದಷ್ಟೆ ಅವರ ಸಾಧನೆ ಎಂದು ಸೀಮಿತಗೊಳಿಸುವುದೂ ತಪ್ಪು ನಿರ್ಧಾರವಾಗುತ್ತದೆ. ಆಯಾ ಸಂದರ್ಭಕ್ಕನುಗುಣವಾಗಿ ಈ ಕೃತಿಯಲ್ಲಿ ವ್ಯಕ್ತಿ ಚಿತ್ರಣ ರೂಪುಗೊಂಡಿದೆ.


-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Monday, January 14, 2019

ಸಂತೆಯಲ್ಲೊಂದು ಮನೆಯ ಮಾಡಿ (ಕಥೆ)

     


         ‘ಶುಡ್ ಐ ಗಿವ್ ಕ್ಲ್ಯಾರಿಫಿಕೇಷನ್ ಟು ದೀಜ್ ಪೀಪಲ್ ಮಿ.ರವಿ. ನಿಮಗೆ ಅನಿಸುತ್ತಾ’ ಪ್ರೊಫೆಸರ್ ರಾಘವ ಧ್ವನಿಯಲ್ಲಿ ಸಿಟ್ಟು, ಆಕ್ರೋಶ ನೋಡಿ ಒಂದು ಕ್ಷಣ ಅವರ ಪಾಡಿಗೆ ಅವರನ್ನು ಬಿಡುವುದು ಒಳಿತೆಂದು ಅನ್ನಿಸಿ ಏನೂ ಮಾತನಾಡದೆ ಸುಮ್ಮನೆ ಕುಳಿತೆ. ‘ಮಿ.ರವಿ ಇವರನ್ನೆಲ್ಲ ನೋಡ್ತಿದ್ರೆ ನನಗೆ ಎಂದೋ ಓದಿದ ಕಥೆಯೊಂದು ನೆನಪಿಗೆ ಬರ್ತಿದೆ. ಮೂರು ಜನ ಸ್ನೇಹಿತರು ಸಾಯಂಕಾಲ ತಿರುಗಾಡಲು ಊರ ಹೊರಗಿನ ಬೆಟ್ಟಕ್ಕೆ ಹೋಗ್ತಾರೆ. ಅಲ್ಲೊಬ್ಬ ಸುಮ್ನೆ ನಿಂತಿದ್ದಾನೆ. ಅವನನ್ನು ನೋಡಿ ಈ ಸ್ನೇಹಿತರು ಆತ ನಿಂತಿರುವುದೇಕೆಂದು ತಮ್ಮ ತಮ್ಮ ನಿರ್ಧಾರಕ್ಕೆ ಬರ್ತಾರೆ. ಒಬ್ಬ ಆ ಮನುಷ್ಯ ಕಳೆದುಹೋದ ತನ್ನ ಹಸು ಹುಡ್ಕೊದಕ್ಕೆ ಬಂದಿದ್ದಾನೆ ಅಂದರೆ ಇನ್ನೊಬ್ಬ ಇಲ್ಲ ಆತ ತನ್ನ ಪ್ರೇಯಸಿಗಾಗಿ ದಾರಿ ಕಾಯ್ತಿದ್ದಾನೆ ಅಂತಾನೆ. ಮೂರನೆಯವನು ಪ್ರಕೃತಿಯ ಸೌಂದರ್ಯ ನೋಡ್ತಿದ್ದಾನೆ ಎಂದು ಹೇಳ್ತಾನೆ. ಕೊನೆಗೆ ಮೂರೂ ಜನ ಅವನ ಹತ್ತಿರ ಹೋಗಿ ಆತನ ಬಗ್ಗೆ ತಾವು ತಾವು ನಿರ್ಧರಿಸಿದ್ದನ್ನ ಹೇಳ್ತಾರೆ. ಆಗ ಆ ಮನುಷ್ಯ ನಾನು ಇಲ್ಲಿ ಸುಮ್ನೆ ನಿಂತಿದ್ದೀನಿ ಅಂತಾನೆ. ನೋಡಿ ನಾವುಗಳೆಲ್ಲ ನಮ್ಮ ನಮ್ಮ ವಿವೇಚನೆಯಲ್ಲೇ ಯೋಚಿಸಿ ನಿರ್ಧಾರಕ್ಕೆ ಬರ್ತೀವಿ. ವಿಶ್ಲೇಷಣೆಯ ಶಕ್ತಿನೇ ಇಲ್ಲ.’ ಪ್ರೊಫೆಸರ್  ಧ್ವನಿಯಲ್ಲಿ ವ್ಯಗ್ರತೆಯಿತ್ತು. ರಾಘವ ಅವರಲ್ಲಿ ಕೋಪ ಎರುತ್ತಿದ್ದಂತೆ ಎದುರುಗಡೆ ಟೇಬಲ್ ಮೇಲಿಟ್ಟ ಕಪ್‍ನಲ್ಲಿದ್ದ ಚಹಾ ತಣ್ಣಗಾಗುತ್ತಿತ್ತು. ಮಾತನಾಡುವ ಲಹರಿಯಲ್ಲಿದ್ದ ಅವರು ಇನ್ನೂ ಚಹಾ ಕಪ್‍ನ್ನು ಕೈಗೆತ್ತಿಕೊಂಡಿಲ್ಲವಾದ್ದರಿಂದ ಅವರನ್ನು ಮಾತಿಗೆ ಬಿಟ್ಟು ನಾನು ಚಹಾ ಕುಡಿಯುವುದು ಸೌಜನ್ಯವಲ್ಲವೆಂದು ಕೈಕಟ್ಟಿ ಕುಳಿತು ರಾಘವ ಅವರ ಮಾತುಗಳನ್ನು ಆಲಿಸುತ್ತಿದ್ದೆ.

    ಇವತ್ತಿನ ರಾಘವ ಅವರ ಇಷ್ಟೆಲ್ಲ ವಿಶ್ಲೇಷಣೆಗೆ ಕಾರಣವಾದದ್ದು ನಾನು ಸ್ಟಾಪ್ ರೂಮಿನಲ್ಲಿ ಯಾರೂ ಇಲ್ಲದ ವೇಳೆ ಕೇಳಿದ ಒಂದೇ ಒಂದು ಪ್ರಶ್ನೆ. ಬಹಳ ದಿನಗಳಿಂದ ಮನಸ್ಸಿನಲ್ಲಿ ಕೊರೆಯುತ್ತಿದ್ದ ವಿಷಯವೊಂದು ತಡೆಹಿಡಿದಷ್ಟೂ ನನ್ನನ್ನು ವ್ಯಾಕುಲಗೊಳಿಸುತ್ತಿದ್ದುದ್ದರಿಂದ ಈ ದಿನ ಪ್ರೊಫೆಸರ್   ಬೇಕಾದರೆ ನನ್ನನ್ನು ಬೈಯಲಿ ಯಾವುದಕ್ಕೂ ಕೇಳಿಯೇ ಬಿಡಬೇಕೆಂದು ನಿರ್ಧರಿಸಿಕೊಂಡೇ ಮನೆ ಬಿಟ್ಟಿದ್ದೆ. ಬೆಳಗ್ಗೆ ಡಿಪಾರ್ಟಮೆಂಟ್‍ನಲ್ಲಿ ಇತರ ಸಹೊದ್ಯೋಗಿಗಳು ಕ್ಲಾಸಿಗೆ ಹೋಗಿದ್ದರಿಂದ ಪ್ರೊಫೆಸರ್   ರಾಘವ ಒಬ್ಬರೇ ತಮ್ಮ ಸೀಟಿನಲ್ಲಿ ಇಂಟರ್‍ನ್ಯಾಷನಲ್ ಜರ್ನಲ್‍ಗೆ ಕಳುಹಿಸಿಬೇಕಾದ ಲೇಖನದ ಮುದ್ರಿತ ಪ್ರತಿಯನ್ನು ತಿದ್ದುತ್ತ ಕುಳಿತಿದ್ದರು. ಅಷ್ಟರಲ್ಲಿ ಡಿಪಾರ್ಟಮೆಂಟ್ ಪ್ಯೂನ್ ರಂಗಪ್ಪ ಎರಡು ಕಪ್‍ಗಳಲ್ಲಿ ಚಹಾ ತಂದು ರಾಘವ ಅವರ ಟೇಬಲ್ ಮೇಲಿಟ್ಟು ಹೋದ. ಬೆಳಗ್ಗೆ ಕಾಲೇಜಿಗೆ ಬಂದ ತಕ್ಷಣ ಚಹಾ ಕುಡಿಯುವುದು ರಾಘವ ಅವರ ನಿತ್ಯದ ದಿನಚರಿಯಾಗಿತ್ತು. ಆ ಸಂದರ್ಭ ಬೇರೆ ಯಾರಾದರೂ ಸ್ಟಾಪ್ ರೂಮಿನಲ್ಲಿದ್ದರೆ ರಾಘವ ಅವರೊಂದಿಗೆ ಅಲ್ಲಿದ್ದವರಿಗೂ ಚಹಾ ಕುಡಿಯಲು ಆಹ್ವಾನವಿರುತ್ತಿತ್ತು. ಇವತ್ತು ನನಗೂ ಬೆಳಗ್ಗೆ ಕ್ಲಾಸ್ ಇಲ್ಲದಿದ್ದದ್ದು ಮತ್ತು ರಾಘವ ಅವರೊಂದಿಗೆ ಮಾತಿಗೆ ಇಳಿಯಬೇಕೆಂದು ನಿರ್ಧರಿಸುತ್ತಿರುವ ಹೊತ್ತಲ್ಲೇ ರಂಗಪ್ಪ ಚಹಾದ ಕಪ್‍ಗಳನ್ನು ತಂದು ಟೇಬಲ್ ಮೇಲಿಟ್ಟು ಹೋಗಿದ್ದು ಮಾತಿಗೊಂದು ಸೂಕ್ತ ಸನ್ನಿವೇಶವನ್ನು ಒದಗಿಸಿತ್ತು. ರಾಘವ ಅವರ ಟೇಬಲ್ ಎದುರಿನ ಖುರ್ಚಿಯಲ್ಲಿ ಕುಳಿತು ಅವರು ತಿದ್ದುತ್ತಿರುವ ಲೇಖನದಿಂದ ತಲೆ ಎತ್ತಿ ನೋಡುವುದನ್ನೇ ಕಾಯುತ್ತ ಮನಸ್ಸಿನಲ್ಲೇ ಕೇಳಬೇಕಾದ ಪ್ರಶ್ನೆಯನ್ನು ಉರು ಹೊಡೆಯುತ್ತಿದ್ದೆ. ರಾಘವ ಕೈಯಲ್ಲಿದ್ದ ಲೇಖನದ ಪ್ರತಿಯನ್ನು ಟೇಬಲ್ ಮೇಲಿಟ್ಟು ಲೋಟದಲ್ಲಿದ್ದ ನೀರನ್ನು ಕುಡಿದು ‘ಮಿ.ರವಿ ಚಹಾ ತೆಗೆದುಕೊಳ್ಳಿ ತಣ್ಣಗಾಗುತ್ತೆ’ ಎಂದು ಉಪಚರಿಸಿದರು. ‘ಸರ್ ಒಂದು ಮಾತು ಬಹಳ ದಿನಗಳಿಂದ ನಿಮಗೆ ಕೇಳಬೇಕು ಅಂತ. ಆದರೆ ಹೇಗೆ ಕೇಳೋದು ಗೊತ್ತಾಗ್ತಿಲ್ಲ’ ಕೇಳಬೇಕಾದ ವಿಷಯ ಸಂಕೋಚದಿಂದ ಹೊರಬರದೆ ಶಬ್ದಗಳಿಗಾಗಿ ತಡಕಾಡಿದೆ. ರಾಘವ ನನ್ನೊಮ್ಮೆ ಪ್ರಶ್ನಾರ್ಥಕವಾಗಿ ನೋಡಿ ಕೈಗೆತ್ತಿಕೊಂಡಿದ್ದ ಚಹಾದ ಕಪ್ಪನ್ನು ಮತ್ತೆ ಟೇಬಲ್ ಮೇಲಿಟ್ಟು ತಮ್ಮ ಎಂದಿನ ಗಂಭೀರ ಮುಖಮುದ್ರೆಯಿಂದ ‘ರವಿ ಕೇಳಲೇ ಬೇಕು ಅಂತ ನಿರ್ಧಾರ ಮಾಡಿದ್ದರೆ ಏನು ಅಂತ ಕೇಳಿ. ಸುಮ್ನೆ ಮನಸ್ಸಿನಲ್ಲಿಟ್ಟುಕೊಂಡು ಅದೇ ವಿಷಯ ಕುರಿತು ಚಿಂತಿಸ್ತಿದ್ದರೆ ಬೇರೆ ಯಾವ ಕೆಲಸದಲ್ಲೂ ತನ್ಮಯತೆ ಸಿಗೊಲ್ಲ’ ನನ್ನನ್ನು ಕ್ಷಣಕಾಲ ಯೋಚಿಸಲು ಬಿಟ್ಟು ಪ್ರೊಫೆಸರ್   ಕಣ್ಮುಚ್ಚಿ ಕುಳಿತರು. ‘ಅದೇ ಸರ್ ಕಾಲೇಜಿನಲ್ಲಿ ಎಲ್ಲರೂ ನಿಮ್ಮ ಮತ್ತು ಮನಸ್ವಿನಿ ಮೇಡಮ್ ಬಗ್ಗೆ ಏನೇನೋ ಮಾತಾಡ್ತಿದ್ದಾರೆ’ ಅಪ್ರಯತ್ನಪೂರ್ವಕವಾಗಿ ಮಾತು ನನ್ನಿಂದ ಹೊರಬಂತು. ಪ್ರೊಫೆಸರ್  ರಾಘವ ಅವರ ಮುಖ ಸಿಟ್ಟಿನಿಂದ ಕೆಂಪಾಗಿ ಉಸಿರಾಟದ ತೀವ್ರತೆಯಿಂದ ಮೂಗಿನ ಹೊಳ್ಳೆಗಳು ಅಗಲವಾಗಿ ತೆರೆದುಕೊಂಡು ಆ ಕ್ಷಣಕ್ಕೆ ಅವರ ತೀಕ್ಷ್ಣ ನೋಟವನ್ನು ಎದುರಿಸಲಾರದೆ ನಾನು ತಲೆತಗ್ಗಿಸಿದೆ. ‘ಓ.ಕೆ ರವಿ ನಮ್ಮಗಳ ಹಿಂದೆ ಮಾತಾಡ್ತಿರೊ ಸಂಗತಿಗಳು ನನ್ನ ಕಿವಿಗೂ ಮುಟ್ಟಿವೆ. ನಿಮ್ಮ ಪ್ರಶ್ನೆ ಸಹಜ ಕೂಡ ಹೌದು. ಶುಡ್ ಐ ಗಿವ್ ಕ್ಲ್ಯಾರಿಫಿಕೇಷನ್ ಟು ದೀಜ್ ಪೀಪಲ್ ಮಿ.ರವಿ. ನಿಮಗೆ ಅನಿಸುತ್ತಾ’ ರಾಘವ ಅವರ ಧ್ವನಿ ಸಹಜವಾಗಿತ್ತಾದರೂ ಅಲ್ಲಿ ಸಿಟ್ಟು ಆಕ್ರೋಶವಿತ್ತು. ರಾಘವ ತಮ್ಮ ಮಾತಿನ ಕೊನೆಯಲ್ಲಿ ‘ನಾಳೆ ಮನಸ್ವಿನಿ ಅವರ ಪುಸ್ತಕ ಬಿಡುಗಡೆ ಇದೆ. ತಮ್ಮ ತೋಟದ ಮನೆನಲ್ಲಿ ಕಾರ್ಯಕ್ರಮ ಇಟ್ಕೊಂಡು ನನ್ನನ್ನ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಾರೆ. ಜೊತೆಗೆ ನೀವೂ ಬನ್ನಿ. ದಾರಿಯಲ್ಲಿ ಮಾತಾಡ್ಕೊಂಡು ಹೋಗೋಣ. ಬೇಕಿದ್ರೆ ನನ್ನ ಮತ್ತು ಮನಸ್ವಿನಿ ವಿಷಯ ಕೂಡ ನಮ್ಮ ಪಯಣದಲ್ಲಿ ಚರ್ಚೆಗೆ ಗ್ರಾಸವಾಗಬಹುದು’ ಎಂದು ನುಡಿದು ತಮಗೆ ಬಿ.ಎ ಫೈನಲ್ ಇಯರ್ ಕ್ಲಾಸಿದೆಯೆಂದು ಸ್ಟಾಪ್ ರೂಮಿನಿಂದ ಹೊರನಡೆದರು. ರಾಘವ ಅವರ ಮುಖದಲ್ಲಿ ತುಂಬಿನಿಂತಿದ್ದ ಅಶಾಂತಿಯನ್ನು ನೋಡಿ ಪ್ರಶ್ನೆ ಕೇಳಿ ತಪ್ಪು ಮಾಡಿದೆನೇನೋ ಎಂದೆನಿಸಿತು. ಟೇಬಲ್ ಮೇಲೆ ಕಪ್ಪುಗಳಲ್ಲಿದ್ದ ಚಹಾ ಆರಿ ತಣ್ಣಗಾಗಿ ಕೆನೆಗಟ್ಟಿತ್ತು. 

       ಭಾನುವಾರ ಸ್ವಲ್ಪ ತಡವಾಗಿ ಎದ್ದರಾಯ್ತೆಂದು ಇನ್ನು ಮುಸುಕು ಹಾಕಿ ಮಲಗಿದ್ದ ನನಗೆ ರಾಘವ ಅವರ ಫೋನ್   ಕರೆಯಿಂದ ಎಚ್ಚರವಾಯಿತು. ಅದಾಗಲೇ ದೇವರ ಮನೆಯಲ್ಲಿ ಹೆಂಡತಿಯ ವಾತಾಪಿ ಗಣಪತಿ ಶ್ಲೋಕ ಕೇಳಿಸಿ ಗಡಿಯಾರ ನೋಡಿದಾಗ ಗಂಟೆ ಏಳು ತೋರಿಸುತ್ತಿತ್ತು. ಕರೆ ಸ್ವೀಕರಿಸಿದವನಿಗೆ ಆ ಕಡೆಯಿಂದ ‘ಏನು ಮಹಾನುಭಾವರು ನಿದ್ದೆ ಮಾಡುತ್ತ ರಜಾದಿನವನ್ನು ಸದುಪಯೋಗಪಡಿಸಿಕೊಳ್ತಿರುವಂತಿದೆ. ನಿನ್ನೆ ನಾನು ಹೇಳಿದ ವಿಷಯ ನೆನಪಿದೆಯೋ ಹೇಗೆ. ಇನ್ನು ಒಂದು ಗಂಟೆಯಲ್ಲಿ ನನ್ನ ಕಾರು ನಿಮ್ಮ ಮನೆ ಮುಂದಿರುತ್ತೆ. ಗೆಟ್ ಅಪ್ ಬೇಗ ರೆಡಿಯಾಗಿ’ ರಾಘವ ಅವರ ಧ್ವನಿ ಕೇಳಿ ಬಾತ್ ರೂಮಿಗೆ ಓಡಿದೆ. ಸ್ನಾನ ಮಾಡಿ ಬಾತ್ ರೂಮಿನಿಂದ ಹೊರಬರುವಷ್ಟರಲ್ಲಿ ಹೊರಗೆ ಕಾರಿನ ಹಾರ್ನ್ ಕೇಳಿಸಿ ಹೆಂಡತಿಗೆ ಅವರನ್ನು ಸ್ವಾಗತಿಸಲು ಹೇಳಿ ಅವಸರವಸರವಾಗಿ ಬಟ್ಟೆ ಧರಿಸಿ ಹೊರಬಂದಾಗ ರಾಘವ ಹಾಲ್‍ನಲ್ಲಿ ಕುಳಿತು ಕಾಫಿ ಕುಡಿಯುತ್ತಿದ್ದರು. ‘ಏನಯ್ಯಾ ಸ್ವಲ್ಪಾನೂ ಸಿರಿಯಸ್ನೆಸ್ ಇಲ್ಲ ನೋಡು. ನಿನ್ನೆ ಹೇಳಿದ ವಿಷಯ ಬೆಳಗಾಗುವಷ್ಟರಲ್ಲಿ ಮರೆತು ಬಿಟ್ರೆ ಇನ್ನು ಪಾಠ ಹೇಗೆ ಮಾಡ್ತೀರಿ’ ರಾಘವ ಆಗಾಗ ಇಂಥ ಮಾತುಗಳಿಂದ ನನ್ನನ್ನು ಛೇಡಿಸುತ್ತಿದ್ದುದ್ದರಿಂದ ನಾನಾಗಲಿ ನನ್ನ ಹೆಂಡತಿಯಾಗಲಿ ಅವರ ಮಾತನ್ನು ಸಿರಿಯಸ್ಸಾಗಿ ತೆಗೆದುಕೊಳ್ಳಲಿಲ್ಲ. ‘ನೋಡಮ್ಮ ನಿನ್ನ ಗಂಡನ್ನ ಇವತ್ತೊಂದಿನ ನಿನ್ನಿಂದ ಕಸಿದುಕೊಳ್ತಿದ್ದೀನಿ. ಯಾವುದೇ ಪ್ರಾಬ್ಲಮ್ ಇಲ್ಲಾ ತಾನೆ’ ನನ್ನ ಹೆಂಡತಿಗೆ ಹೇಳಿ ಹೊರನಡೆದ ರಾಘವ ಅವರನ್ನು ನಾನು ಹಿಂಬಾಲಿಸಿದೆ. 

      ಮನಸ್ವಿನಿ ಅವರ ತೋಟದ ಮನೆ ಇರುವುದು ನಗರದಿಂದ ಸುಮಾರು ಇಪ್ಪತ್ತು ಕಿಲೋ ಮೀಟರ್ ದೂರದ ಹೊರವಲಯದಲ್ಲಿ. ಸಮಾಜಶಾಸ್ತ್ರದ ಪ್ರಾಧ್ಯಾಪಕಿಯಾದರೂ ಸಾಹಿತ್ಯದಲ್ಲಿ ಅಭಿರುಚಿ ಅವರಿಗೆ. ನಾಡಿನ ಹಲವಾರು ಪತ್ರಿಕೆಗಳಲ್ಲಿ ಅವರ ಲೇಖನ, ಕಥೆಗಳು ಪ್ರಕಟವಾಗಿವೆ. ರಾಘವ ಅವರಿಗೂ ಸಾಹಿತ್ಯದಲ್ಲಿ ಆಸಕ್ತಿ ಇರುವುದರಿಂದ ಅವರನ್ನೇ ಇವತ್ತಿನ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿ ಸನ್ಮಾನಿಸುವ ಆಸೆ. ರಾಘವ ಕಾರು ಓಡಿಸುತ್ತ ಎಫ್.ಎಮ್ ನಲ್ಲಿ ಬಿತ್ತರವಾಗುತ್ತಿದ್ದ ಹಳೆಯ ಕನ್ನಡ ಹಾಡಿಗೆ ತಮ್ಮ ಧ್ವನಿಗೂಡಿಸುತ್ತಿದ್ದರು. ಡಿಸೆಂಬರ್ ತಿಂಗಳ ಚಳಿಗಾಲದ ಆಹ್ಲಾದಕರ ವಾತಾವರಣದಲ್ಲಿ ರಸ್ತೆಯ ಪಕ್ಕದ ಹೊಲಗಳಲ್ಲಿ ದೃಷ್ಟಿ ಹಾಯುವವರೆಗೆ ತುಂಬಿ ನಿಂತ ಹಸಿರು ಪೈರಿನಿಂದ ವಸುಂಧರೆ ಕಂಗೊಳಿಸುತ್ತಿದ್ದಳು. ‘ನೋಡಿ ರವಿ ಎಲ್ಲವೂ ನಮ್ಮ ನಮ್ಮ ನೋಡುವ ದೃಷ್ಟಿಕೋನವನ್ನು ಅವಲಂಬಿಸಿರುತ್ತೆ. ಅಲ್ಲಿ ನೋಡಿ ದೂರದಲ್ಲಿ ಬೆಟ್ಟ ಕಾಣ್ತಿದೆಯಲ್ಲ ಅದನ್ನು ನಾವು ಯಾವ ಭಾವದಿಂದ ನೋಡ್ತೀವಿ ಆ ಅರ್ಥದಲ್ಲಿ ಅದು ನಮಗೆ ಭಾಸವಾಗುತ್ತೆ. ಅದೇ ರೀತಿ ಗಂಡು ಹೆಣ್ಣಿನ ಸಂಬಂಧ ಕೂಡ. ಎಲ್ಲವನ್ನೂ ತಪ್ಪು ಎನ್ನುವ ಗ್ರಹಿಕೆಯಿಂದ ನೋಡಿದರೆ ಎಲ್ಲ ಸಂಬಂಧಗಳೂ ನಮಗೆ ತಪ್ಪಾಗಿಯೇ ಕಾಣಿಸ್ತವೆ’ ತಮ್ಮ ಮತ್ತು ಮನಸ್ವಿನಿ ಅವರ ಸಂಬಂಧದ ಕುರಿತು ಮಾತನಾಡಲು ಪೀಠಿಕೆ ಹಾಕುವಂತೆ ರಾಘವ ನುಡಿದರು. ‘ಸರ್ ಹಾಗೆಂದು ಎಲ್ಲವೂ ಪರಿಶುದ್ಧ ಮತ್ತು ಪಾವಿತ್ರ್ಯವೇ ಎಂದು ನಂಬಿದರೆ ಮುಂದೊಂದು ದಿನ ನಮ್ಮ ನಂಬಿಕೆಗಳೇ ಸಡಿಲಾಗುವ ಸಾಧ್ಯತೆಯೂ ಇರಬಹುದಲ್ಲ’ ನನ್ನ ಪ್ರಶ್ನೆಯಿಂದ ಸ್ವಲ್ಪ ವಿಚಲಿತರಾದಂತೆ ಕಂಡ ರಾಘವ ಪ್ರತಿಕ್ರಿಯಿಸದೆ ಮೌನವಾದರು. ನಾವು ಕುಳಿತಿದ್ದ ಕಾರು ರಸ್ತೆಯನ್ನು ಸೀಳಿಕೊಂಡು ಓಡುತ್ತಿತ್ತು. ‘ಸರ್ ನಾನು ಕೇಳಿದ್ದರಲ್ಲಿ ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ’ ರಾಘವ ಅವರ ಚಿಂತೆ ತುಂಬಿದ ಮುಖ ನೋಡಿ ಹೊರಬಂದ ನನ್ನ ಧ್ವನಿಯಲ್ಲಿ ಪಶ್ಚಾತ್ತಾಪವಿತ್ತು. ‘ನೋ ರವಿ ಹಾಗಲ್ಲ. ಪ್ರತಿಯೊಂದು ಸಂಬಂಧಕ್ಕೆ ಸಮಾಜದ ನಂಬಿಕೆ ಎನ್ನುವ ಮುದ್ರೆ ಬೇಕೆ ಎನ್ನುವುದಾದರೆ ಮನುಷ್ಯ ಸಂಬಂಧಗಳು ಎಷ್ಟೊಂದು ಕೃತಕವಾಗಿರುತ್ತವೆ ನೀವೇ ಯೋಚಿಸಿ’ ರಾಘವ ಅವರ ಮಾತು ನನ್ನ ಪ್ರಶ್ನೆಗೆ ಪ್ರತ್ಯುತ್ತರ ಎನ್ನುವುದಕ್ಕಿಂತ ಆಳವಾದ ಅನುಭವದಿಂದ ಅವರು ತಳೆದ ನಿಲುವಾಗಿತ್ತದು. ‘ತಾಯಿ-ಮಗುವಿನ ಪ್ರೀತಿ, ಗಂಡ-ಹೆಂಡತಿಯ ಪ್ರೇಮ, ಭಾತೃತ್ವ, ಗೆಳೆತನ ಇವೆಲ್ಲ ವ್ಯಕ್ತಿಗತವಾಗಿ ರೂಪುಗೊಳ್ಳುವ ಸಂಬಂಧಗಳು. ಪ್ರತಿ ಸಂಬಂಧವನ್ನು ನಾವು ನಮ್ಮದೆ ತರ್ಕ, ಸಿದ್ಧಾಂತದ ನೆಲೆಯಲ್ಲಿ ವಿಶ್ಲೇಷಿಸಲು ಹೊರಟರೆ ಅಲ್ಲಿ ನಾವು ಅಪೇಕ್ಷಿಸುವುದು ನಮಗೆ ಅನುಕೂಲವಾಗುವ ಫಲಿತಾಂಶವನ್ನೆ. ನನ್ನ ಮತ್ತು ಮನಸ್ವಿನಿ ಅವರ ಕುರಿತು ನೀವೆಲ್ಲ ಯೋಚಿಸಿದ್ದು ಕೂಡ ಇದು ಇಂಥದ್ದೆ ಸಂಬಂಧ ಎನ್ನುವ ಪೂರ್ವ ಗ್ರಹಿಕೆಯಲ್ಲೆ’ ರಾಘವ ಕಾಲೇಜಿನ ಸಹೊದ್ಯೋಗಿಗಳನ್ನು ಆರೋಪಿಸುವ ಭರದಲ್ಲಿ ನೀವೆಲ್ಲ ಎಂದು ನನ್ನನ್ನೂ ಸೇರಿಸಿದ್ದು ಮನಸ್ಸಿಗೆ ಕೊಂಚ ನೋವಾಯಿತು. ಅರ್ಥವಾದವರಂತೆ ‘ಸಾರಿ ಮಿ.ರವಿ’ ರಾಘವ ನನ್ನ ಬಲಗೈಯನ್ನೊಮ್ಮೆ ಅದುಮಿದರು.

       ಮನಸ್ವಿನಿ ಅವರ ತೋಟದ ಮನೆ ತಲುಪಿದಾಗ ಅದಾಗಲೇ ಅತಿಥಿಗಳೆಲ್ಲ ಬಂದಾಗಿತ್ತು. ಮನೆಯ ಎದುರಿನ ರಸ್ತೆಯಲ್ಲಿ ಮನಸ್ವಿನಿ ನಮಗಾಗಿ ಕಾಯುತ್ತಿದ್ದರು. ಸಮಾರಂಭದಲ್ಲಿ ರಾಘವ ಅವರ ಉಪಸ್ಥಿತಿಯಿಂದ ಮನಸ್ವಿನಿಗೆ ಖುಷಿಯಾಗಿದೆಯೆಂದು ಅವರ ಮುಖದ ಭಾವವೇ ಹೇಳುತ್ತಿತ್ತು. ಪತಿ ಮತ್ತು ಮಕ್ಕಳನ್ನು ಪರಿಚಯಿಸಿ ನಮ್ಮನ್ನು ವೇದಿಕೆಯ ಮುಂಭಾಗದಲ್ಲಿ ಕರೆದೊಯ್ದು ಕುಳ್ಳಿರಿಸಿದರು. ಇಡೀ ಸಮಾರಂಭದ ಮೇಲುಸ್ತುವಾರಿ ಮನಸ್ವಿನಿ ಅವರ ಪತಿ ಪ್ರದೀಪ ಅವರದಾಗಿತ್ತು. ತುಂಬ ಅಚ್ಚುಕಟ್ಟಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಅವರ ಹೆಣ್ಣು ಮಕ್ಕಳಿಬ್ಬರೂ ಅತಿಥಿಗಳನ್ನು ಉಪಚರಿಸುತ್ತ ಸಂಭ್ರಮದಿಂದ ಓಡಾಡುತ್ತಿದ್ದರು. ಅತಿಥಿಗಳೇನೂ ಹೆಚ್ಚಿನ ಸಂಖ್ಯೆಯಲ್ಲಿರಲಿಲ್ಲ. ಮನಸ್ವಿನಿ ತಮ್ಮ ಆಪ್ತರನ್ನಷ್ಟೇ ಆಹ್ವಾನಿಸಿದ್ದರು. ನಮ್ಮ ಕಾಲೇಜಿನಿಂದ ಆಹ್ವಾನಿತರಾದವರಲ್ಲಿ ರಾಘವ ಅವರೊಬ್ಬರೆ. ಅನಿರೀಕ್ಷಿತ ಅತಿಥಿಯಾಗಿದ್ದ ನನ್ನನ್ನು ಮನಸ್ವಿನಿ ತುಂಬ ಆದರದಿಂದಲೇ ಸ್ವಾಗತಿಸಿದ್ದರು. ರಾಘವ ಅವರ ಆತ್ಮೀಯ ಎನ್ನುವ ಕಾರಣವೂ ಇರಬಹುದು. ಮನಸ್ವಿನಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಮಾರಂಭದಲ್ಲಿ ರಾಘವ ‘ಸಾಂಗತ್ಯ’ ಕಥಾಸಂಕಲನವನ್ನು ಬಿಡುಗಡೆ ಮಾಡಿ ಅತಿಥಿಗಳಿಗೆ ಒಂದೊಂದು ಪ್ರತಿ ನೀಡಿದರು. ಸಾಹಿತ್ಯದ ಕುರಿತು ಮಾತನಾಡುವಂತೆ ಮನಸ್ವಿನಿಯೇ ರಾಘವ ಅವರನ್ನು ಒತ್ತಾಯಿಸಿದರು. ರಾಘವ ತಮ್ಮ ಎಂದಿನ ಗಂಭೀರ ಮುಖಮುದ್ರೆಯಿಂದ ಅಲ್ಲಿ ಕುಳಿತಿದ್ದವರನ್ನೊಮ್ಮೆ ದೃಷ್ಟಿಸಿ ಮಾತು ಶುರು ಮಾಡಿದರು. ‘ನಾನೇನೂ ಸಾಹಿತ್ಯದ ವಿದ್ಯಾರ್ಥಿಯಲ್ಲ. ಸಾಹಿತ್ಯವನ್ನು ಶಿಸ್ತಿನಿಂದ ಅಭ್ಯಸಿಸಿದವನೂ ಅಲ್ಲ. ಆದರೆ ಸಾಹಿತ್ಯದ ಕುರಿತು ನನಗೆ ಒಂದಿಷ್ಟು ಅಭಿರುಚಿ ಇದೆ. ಮನಸ್ವಿನಿ ಅವರ ‘ಸಾಂಗತ್ಯ’ ಕಥಾಸಂಕಲನವನ್ನು ಅದು ಹಸ್ತಪ್ರತಿ ರೂಪದಲ್ಲಿರುವಾಗಲೇ ಓದಿದ್ದೀನಿ. ಸಾಹಿತ್ಯದ ಮೂಲಕವೇ ಮನುಷ್ಯ ಸಂಬಂಧಗಳಿಗೊಂದು ಹೊಸ ವ್ಯಾಖ್ಯಾನ ಕೊಡಲು ಹೊರಟಿರುವ ಮನಸ್ವಿನಿ ಅವರ ಪ್ರಯತ್ನವನ್ನು ನಾನು ಮೆಚ್ಚುತ್ತೇನೆ. ಇಲ್ಲಿನ ಕಥೆಗಳ ಮೂಲಕ ಕಥೆಗಾರ್ತಿ ಪ್ರಶ್ನಿಸಲು ಹೊರಟಿರುವುದು ಸಂಬಂಧಗಳನ್ನು ಸೀಮಿತ ಚೌಕಟ್ಟಿನಲ್ಲೇ ನಾವು ನೋಡಬೇಕೆ ಎಂದು. ಸಂಬಂಧಗಳಿಗೆ ಸಮಾಜದ ಒಪ್ಪಿಗೆ ಅಥವಾ ನಂಬಿಕೆ ಎನ್ನುವ ಮುದ್ರೆಯ ಅಗತ್ಯವಿದೆಯೇ ಎನ್ನುವ ಪ್ರಶ್ನೆ ಸಹ ಈ ಕಥೆಗಳಲ್ಲಿ ಅಡಗಿದೆ. ಸ್ಥಾಪಿತ ನಂಬಿಕೆಗಳನ್ನು ಮುರಿದು ಹೊಸ ನಂಬಿಕೆಯನ್ನು ಕಟ್ಟಲು ಹೊರಟಿರುವ ಲೇಖಕಿಯ ಪ್ರಯತ್ನಕ್ಕೆ ಓದುಗರ ವಲಯದಿಂದ ಬೆಂಬಲ ಸಿಗಬೇಕು. ಅಂದರೆ ಮಾತ್ರ ಇಂಥ ಗಟ್ಟಿಧೈರ್ಯದ ಬರಹಗಾರ್ತಿಯಿಂದ ಇನ್ನಷ್ಟು ಕೃತಿಗಳು ಹೊರಬರಬಹುದೆನ್ನುವ ನಿರೀಕ್ಷೆಯಿದೆ’ ರಾಘವ ಅವರ ಮಾತುಗಳಿಗೆ ಅಲ್ಲಿ ನೆರೆದಿದ್ದ ಆಮಂತ್ರಿತರು ಚಪ್ಪಾಳೆಯ ಮೂಲಕ ಮೆಚ್ಚುಗೆ ಸೂಚಿಸಿದರು. ರಾಘವ ಪೂರ್ಣವಾಗಿ ತೆರೆದುಕೊಳ್ಳಬಹುದೆಂದು ನಿರೀಕ್ಷಿಸಿದ್ದ ನನಗೆ ಅವರು ಮಾತನ್ನು ಬೇಗನೆ ಮುಗಿಸಿದ್ದು ನಿರಾಸೆ ಮೂಡಿಸಿತು. 

     ಸಮಾರಂಭದ ಕೊನೆಯಲ್ಲಿ ಅತಿಥಿಗಳಿಗೆ ರುಚಿಕಟ್ಟಾದ ಊಟದ ವ್ಯವಸ್ಥೆಯಿತ್ತು. ಪ್ರದೀಪ ಸ್ವತ: ಮುಂದೆ ನಿಂತು ಎಲ್ಲರಿಗೂ ಉಪಚರಿಸುತ್ತಿದ್ದರು. ಪ್ರದೀಪ ಮಾತುಗಳಿಂದಲೇ ತಿಳಿಯುತ್ತಿತ್ತು ಅವರಿಗೆ ಸಾಹಿತ್ಯದ ಬಗ್ಗೆ ಆಸಕ್ತಿಯಾಗಲಿ ಅಭಿರುಚಿಯಾಗಲಿ ಇಲ್ಲವೆಂದು. ಆದರೆ ಹೆಂಡತಿಯನ್ನು ಪ್ರೀತಿಸುವ ಅವರು ಆಕೆಯ ಸಾಹಿತ್ಯಾಸಕ್ತಿಗೂ ಆಸರೆಯಾಗಿ ನಿಂತಿದ್ದು ಅಭಿಮಾನವೆನಿಸಿತು. ಮರಳಿ ಬರುವಾಗ ಕಾರಿನವರೆಗೂ ಬಂದು ಬಿಳ್ಕೊಟ್ಟ ಮನಸ್ವಿನಿ ‘ಸರ್ ನಿಮ್ಮ ಅಭಿಮಾನದ ಮಾತುಗಳಿಗೆ ತುಂಬಾ ಥ್ಯಾಂಕ್ಸ್. ನನ್ನ ಬರವಣಿಗೆಗೆ ಮತ್ತು ಇವತ್ತಿನ ಈ ಕಥಾಸಂಕಲನಕ್ಕೆ ನೀವೆ ಸ್ಪೂರ್ತಿ ಸರ್’ ಕೊರಳುಬ್ಬಿ ಕಣ್ಣಂಚಿನಲ್ಲಿ ನೀರೊಡೆದು ಮಾತಿಗಾಗಿ ತಡವರಿಸಿದರು. ರಾಘವ ಅವರ ಮನಸ್ಥಿತಿ ಕೂಡ ಭಿನ್ನವಾಗಿರಲಿಲ್ಲ. ಪ್ರದೀಪ ಹತ್ತಿರ ಬಂದು ಕೈಕುಲುಕಿ ಧನ್ಯವಾದ ಹೇಳುವಾಗ ಅವರ ಮುಖದಲ್ಲಿ ಧನ್ಯತೆಯ ಭಾವವಿತ್ತು. ಮಕ್ಕಳಿಬ್ಬರೂ ರಾಘವ ಅವರ ಕಾಲಿಗೆರಗಿ ಆಶಿರ್ವಾದ ಪಡೆದರು. ಇಡೀ ವಾತವರಣದಲ್ಲಿ ಆ ಕ್ಷಣ ಭಾವ ಲಯವೊಂದು ಪ್ರವಹಿಸುತ್ತಿರುವ ಅನುಭವವಾಗಿ ಮೈ ಜುಮ್ಮೆಂದಿತು. 

     ರಾಘವ ಮೌನದ ಚಿಪ್ಪಿನೊಳಗೆ ಹುದುಗಿಹೋಗಿದ್ದರು. ಅವರನ್ನು ಮಾತನಾಡಿಸುವ ಧೈರ್ಯ ನನಗಿರಲಿಲ್ಲ. ಕಾರಿನ ಸದ್ದು ಮತ್ತು ಎಫ್.ಎಮ್ ನಲ್ಲಿ ಬರುತ್ತಿದ್ದ ಲತಾಮಂಗೇಶ್ಕರ್ ಹಾಡೊಂದು ಬಿಟ್ಟರೆ ನಮ್ಮಿಬ್ಬರ ನಡುವೆ ಮೌನ ಮನೆಮಾಡಿತ್ತು. ಸ್ವಲ್ಪ ದೂರ ಕ್ರಮಿಸಿದ ನಂತರ ರಾಘವ ಮೌನ ಮುರಿದು ಮಾತಿಗಿಳಿದರು ‘ಮಿ.ರವಿ ನೀವೆ ನೋಡಿದ್ದೀರಿ. ಈಗ ಹೇಳಿ ನನ್ನ ಮತ್ತು ಮನಸ್ವಿನಿಯ ಸಂಬಂಧವನ್ನು ನೀವು ಯಾವ ಹೆಸರಿನಿಂದ ಕರಿತೀರಿ?’. ನನ್ನಲ್ಲಿ ಉತ್ತರವಿರಲಿಲ್ಲ. ನಾಚಿಕೆಯಿಂದ ತಲೆತಗ್ಗಿಸಿದೆ. ‘ನಿಮ್ಮನ್ನ ನೋಯಿಸಬೇಕು ಅಂತಲ್ಲ ರವಿ. ಸತ್ಯಾಸತ್ಯತೆಗಳನ್ನು ನೋಡದೆ ನಾವು ಒಂದು ನಿರ್ಧಾರಕ್ಕೆ ಬರ್ತೀವಿ ನೋಡಿ ಅದೇ ನಾವು ಮಾಡೋ ತಪ್ಪು. ನಾಗರಿಕರಾಗ್ತಾ ಆಗ್ತಾ ನಾವು ವಿವೇಚನೆಯನ್ನೇ ಕಳೆದುಕೊಳ್ತಿದ್ದೀವಿ ಅಂತ ನನಗೆ ಭಯವಾಗುತ್ತೆ’ ರಾಘವ ಮಾತನಾಡುವ ಲಹರಿಯಲ್ಲಿದ್ದರು. ಅವರ ಮಾತನ್ನು ಆಲಿಸುವುದಷ್ಟೇ ಆ ಕ್ಷಣಕ್ಕೆ ನನ್ನ ಪ್ರತಿಕ್ರಿಯೆಯಾಗಿತ್ತು. ‘ಈ ದೇಶದಲ್ಲಿ ನೇಣುಗಂಬಕ್ಕೆ ಏರಿಸುವ ಅಪರಾಧಿಯನ್ನು ಕೂಡ ಅವನ ಕೊನೆಯ ಆಸೆ ಏನು ಅಂತ ಕೇಳ್ತಾರೆ. ತಪ್ಪು ಮಾಡಿದವನಿಗೂ ಸಹ ಕೋರ್ಟಿನಲ್ಲಿ ವಾದಿಸೋಕೆ ಅವಕಾಶವಿದೆ. ಇಂಥ ಸಹನೆಯ ಸಂಸ್ಕೃತಿಯ ನಡುವೆಯೂ ನಾವು ಮಾತ್ರ ಬೇರೆಯವರ ವ್ಯಕ್ತಿತ್ವವನ್ನು ನಮ್ಮದೇ ಆದ ದೃಷ್ಟಿಕೋನದಲ್ಲಿ ನಿರ್ಧರಿಸಿ ಬಿಡ್ತಿವಿ. ಇಲ್ಲಿ ಒಂದು ಗಂಡು ಮತ್ತು ಹೆಣ್ಣು ತಮ್ಮಲ್ಲಿನ ಸಮಾನ ಅಭಿರುಚಿಯಿಂದ ಹತ್ತಿರವಾಗಿ ಗೆಳೆತನ ಬೆಳೆಸೋದೆ ತಪ್ಪು ಅಂತ ನಿರ್ಧರಿಸಿ ಬಿಡ್ತಿವಲ್ಲ ರವಿ ಇದೆಂಥ ಸಮಾಜ. ಒಮ್ಮೊಮ್ಮೆ ಎಂಥವರ ನಡುವೆ ಬದುಕುತ್ತಿದ್ದೀನಿ ಅಂತ ಹೇಸಿಗೆಯಾಗುತ್ತೆ’ ರಾಘವ ಅವರ ಧ್ವನಿಯಲ್ಲಿ ಸಿಟ್ಟಿಗಿಂತ ವೇದನೆಯಿತ್ತು. ‘ಮದುವೆಯಾದ ನಂತರ ಒಂದು ಗಂಡು ಮತ್ತು ಹೆಣ್ಣು ಸ್ನೇಹಕ್ಕೆ ಚಾಚಿಕೊಳ್ಳಬಾರದು ಅಂತ ಇಲ್ಲೇನಾದರೂ ನಿಯಮ ಇದೇನಾ. ಗಂಡು ಹೆಣ್ಣಿನ ನಡುವಣ  ಸ್ನೇಹ ಎಂದರೆ ಅದು ಕೇವಲ ಕಾಮಕ್ಕೆ ಮಾತ್ರ ಸೀಮಿತಗೊಳಿಸ್ತೀವಿ. ರವಿ ನನಗೂ ಮದುವೆಯಾಗಿ ಹೆಂಡತಿ ಮತ್ತು ಮಕ್ಕಳಿದ್ದಾರೆ ಮನಸ್ವಿನಿದೂ ನನ್ನದೆ ಸ್ಥಿತಿ. ಇಲ್ಲಿ ಯಾಕೆ ನಮ್ಮಿಬ್ಬರ ನಡುವೆ ಸ್ನೇಹ ಬೆಳೀತು ಎನ್ನುವುದನ್ನು ನೀವು ಎಂದಾದರೂ ನಮ್ಮ ಜಾಗದಲ್ಲಿ ನಿಂತು ಯೋಚಿಸಿದ್ದರೆ ಹೀಗೆ ತಪ್ಪು ಕಲ್ಪನೆ ಆಗ್ತಿರಲಿಲ್ಲ. ಮನಸ್ವಿನಿಗೆ ಸಾಹಿತ್ಯದ ಅಭಿರುಚಿ ಇದೆ. ತಾನು ಓದಿದ ಪುಸ್ತಕಗಳ ಕುರಿತು ಹಂಚಿಕೊಳ್ಳೊಕೆ ಅವರಿಗೊಂದು ಜೊತೆಯ ಅಗತ್ಯವಿದೆ. ಪ್ರದೀಪ ಬಿಜಿನೆಸ್ ಮ್ಯಾನ್. ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ ಇಲ್ಲ. ಸಮಾನ ಆಸಕ್ತಿ ಇರುವವರ ಗೆಳೆತನಕ್ಕಾಗಿ ಹುಡುಕ್ತಿದ್ದಾಗ ಅವರಿಗೆ ನಾನು ಸಿಕ್ಕೆ. ನನಗೂ ಸಾಹಿತ್ಯದ ಒಲುವಿದೆ ಎಂದು ಗೊತ್ತಾದದ್ದೆ ಮನಸ್ವಿನಿ ನನ್ನೊಡನೆ ಗಂಟೆಗಟ್ಟಲೆ ಚರ್ಚೆ ಮಾಡೋರು. ನಿಜ ಹೇಳ್ತಿದ್ದೀನಿ ರವಿ ನಾವು ಎಂದೂ ನಮ್ಮ ಸಂಸಾರದ್ದಾಗಲಿ ಬೇರೆಯವರ ಬಗ್ಗೆಯಾಗಲಿ ಮಾತಾಡಿಲ್ಲ. ನಮ್ಮ ಮಾತುಕತೆ, ಗೆಳೆತನ ಅದು ಸಾಹಿತ್ಯದ ವಿಷಯಕ್ಕಷ್ಟೆ ಸೀಮಿತ. ಕಾಲೇಜಿನ ಕ್ಯಾಂಟಿನಿನಲ್ಲೊ ಡಿಪಾರ್ಟ್‍ಮೆಂಟ್‍ನಲ್ಲೊ ಜೊತೆಯಾಗಿ ಕುಳಿತು ಮಾತಾಡಿದ್ದನ್ನೇ ದೊಡ್ಡ ವಿಷಯವಾಗಿಸಿ ಅದಕ್ಕೆ ನಿಮ್ಮ ನಿಮ್ಮ ಕಲ್ಪನೆಯ ರೆಕ್ಕೆ ಪುಕ್ಕ ಕಟ್ಟಿ ಕಥೆಯಾಗಿಸ್ತಿರಲ್ಲ ಇದರಿಂದ ಇನ್ನೊಬ್ಬರಿಗೆ ಹರ್ಟ್ ಆಗುತ್ತೆ ಅನ್ನೊ ಕಿಂಚಿತ್ ಪ್ರಜ್ಞೆಯೂ ಬೇಡ ಅಂದರೆ ನಾವು ಎಲ್ಲಿ ಇದ್ದೀವಿ ರವಿ’ ರಾಘವ ಅವರ ಮುಖದಲ್ಲಿ ನೋವು ತುಂಬಿತ್ತು. ರಾಘವ ಅವರ ಮಾತಿಗೆ ಹೇಗೆ ಪ್ರತಿಕ್ರಿಯಿಸಬೇಕೆನ್ನುವುದಾಗಲಿ ಅವರನ್ನು ಸಮಾಧಾನ ಪಡಿಸುವುದಾಗಲಿ ತೋಚದೆ ನಾನು ಸುಮ್ಮನೆ ಕುಳಿತೆ. 

    ಮನೆ ಸಮೀಪಿಸುವವರೆಗೂ ಇಬ್ಬರೂ ಮಾತನಾಡಲಿಲ್ಲ. ಮನೆ ಎದುರು ಕಾರು ನಿಂತಾಗ ‘ಸರ್ ಬನ್ನಿ ಕಾಫಿ ಕುಡಿಯುವಿರಂತೆ’ ಆಹ್ವಾನಿಸಿದೆ. ನನ್ನ ಆಹ್ವಾನವನ್ನು ನಯವಾಗಿ ನಿರಾಕರಿಸಿದ ರಾಘವ ‘ರವಿ ಇನ್ನೊಮ್ಮೆ ಸಮಯ ಮಾಡಿಕೊಂಡು ಬರ್ತೀನಿ. ಮನಸ್ಸಿನ ಭಾರವನ್ನು ಯಾರೊಂದಿಗಾದರೂ ಹಂಚಿಕೊಳ್ಳಬೇಕಿತ್ತು. ಅದಕ್ಕೆ ಇವತ್ತು ನಿಮ್ಮೊಂದಿಗೆ ಸ್ವಲ್ಪ ಒರಟಾಗಿ ಮಾತಾಡ್ದೆ ಅಂತ ಅನಿಸುತ್ತೆ. ದಯವಿಟ್ಟು ಕ್ಷಮಿಸಿ. ಬೇರೆಯವರ ಬಗ್ಗೆ ಕಥೆ ಕಟ್ಟೋರು ಅವರೆಲ್ಲ ಮುಖವಾಡ ಧರಿಸಿ ತಾವು ಮಾತ್ರ ಪರಮ ಸಾಚಾಗಳು ಅನ್ನೋ ಥರ ಬದುಕೊದನ್ನ ನೋಡಿದ್ದೀನಿ. ಮುಖವಾಡದ ಹಿಂದೆ ಅದೆಂಥ ಕ್ರೂರ ಮನಸ್ಸಿದೆ ಅಂದರೆ ಅಂಥವರ ನಡುವಿದ್ದೂ ನಮ್ಮಂಥವರು ಇನ್ನೂ ಸೆನ್ಸಿಟಿವ್ ಆಗಿ ಉಳಿದಿದ್ದಿವಲ್ಲ ಅಂತ ಆಶ್ಚರ್ಯ ಆಗುತ್ತೆ’ ರಾಘವ ಮಾತು ನಿಲ್ಲಿಸಿ ಕಾರನ್ನು ಮುಂದೊಡಿಸಿದರು. ಕಾರು ಕಣ್ಮರೆಯಾಗುವವರೆಗೂ ನೋಡುತ್ತ ನಿಂತವನನ್ನು ಹೆಂಡತಿಯ ಧ್ವನಿ ಎಚ್ಚರಿಸಿ ವಾಸ್ತವಕ್ಕೆ ಮರಳಿದೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Tuesday, January 1, 2019

ಮಂಟೋ ಕಥೆಗಳಲ್ಲಿ ದೇಶವಿಭಜನೆಯ ನೋವಿನ ವ್ಯಥೆ








           ಸಾದತ್ ಹಸನ್ ಮಟೋ ಉರ್ದು ಸಾಹಿತ್ಯದಲ್ಲಿ ಮಹತ್ವದ ಹೆಸರು. ಮಂಟೋ ನಿಧನ ಹೊಂದಿ ಆರು ದಶಕಗಳೇ ಸರಿದು ಹೋಗಿವೆ. ನಂದಿತಾ ದಾಸ್ ಹಿಂದಿ ಭಾಷೆಯಲ್ಲಿ ನಿರ್ದೇಶಿಸುತ್ತಿರುವ ಮಂಟೋ ಜೀವನ ಆಧಾರಿತ ಸಿನಿಮಾದಿಂದಾಗಿ ಮಂಟೋ ಈಗ ಮತ್ತೆ ನೆನಪಾಗುತ್ತಿದ್ದಾರೆ. ಸಾಮಾನ್ಯವಾಗಿ ಈ ಸಿನಿಮಾ ಮಾಧ್ಯಮದಲ್ಲಿ ಬರಹಗಾರರ ಕುರಿತು ಸಿನಿಮಾಗಳು ನಿರ್ಮಾಣಗೊಂಡಿದ್ದು ನನಗೆ ನೆನಪಿದ್ದಂತೆ ಇಲ್ಲವೇ ಇಲ್ಲ. ಸದಾ ಜನಪ್ರಿಯತೆಯ ಬೆನ್ನು ಹತ್ತುವ ಈ ಸಿನಿಮಾ ಮಾಧ್ಯಮಕ್ಕೆ ಬರಹಗಾರರ ಬದುಕನ್ನು ತನ್ನ ಚೌಕಟ್ಟಿಗೆ ಹೊಂದಿಸಿಕೊಳ್ಳಲು ಕಷ್ಟಸಾಧ್ಯವೇನೋ. ಜೊತೆಗೆ ಬರಹಗಾರನ ಬದುಕು ಪ್ರೇಕ್ಷಕರನ್ನು ಆಕರ್ಷಿಸುವ ಸರಕಲ್ಲ ಎನ್ನುವ ಸಿನಿಮಾದವರ ವ್ಯಾಪಾರೀ ಮನೋಭಾವವೂ ಇದಕ್ಕೆ ಕಾರಣವಾಗಿರಬಹುದು. ಹೀಗಾಗಿ ಕ್ರೀಡಾಪಟುಗಳ, ರಾಜಕಾರಣಿಗಳ ವರ್ಣರಂಜಿತ ಬದುಕನ್ನು ಸೆಲ್ಯೂಲಾಯ್ಡ್  ಪರದೆಯ ಮೇಲೆ ತೋರಿಸಲು ಆಸಕ್ತಿ ತೋರುವ ಈ ಸಿನಿಮಾ ಜನ ಬರಹಗಾರರ ಬದುಕನ್ನು ಸದಾಕಾಲ ನಿರ್ಲಕ್ಷಿಸುತ್ತಲೇ ಬಂದಿದ್ದಾರೆ. ಇಂಥದ್ದೊಂದು ನಿರ್ಲಕ್ಷಿತ ವಾತಾವರಣದಲ್ಲೂ ನಂದಿತಾದಾಸ್ ಆರುದಶಕಗಳ ಹಿಂದೆ ಬದುಕಿದ್ದ ಸಾದತ್ ಹಸನ್ ಮಂಟೋ ಎನ್ನುವ ಬರಹಗಾರನ ಬದುಕಿನ ಕಥೆಯನ್ನು ಸಿನಿಮಾಕ್ಕಾಗಿ ಆಯ್ದುಕೊಂಡಿದ್ದು ಸ್ವಾಗತಾರ್ಹ. ಸಿನಿಮಾ ಪ್ರಿಯರು ಕೂಡ ಇಂಥ ಸಿನಿಮಾಗಳನ್ನು ನೋಡಿ ಉತ್ತೇಜಿಸಬೇಕು. ಮಂಟೋ ಜೀವನಗಾಥೆಯ ಸಿನಿಮಾ ಯಶಸ್ವಿಯಾದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಬರಹಗಾರರ ಬದುಕು ಸಿನಿಮಾ ಪರದೆಯ ಮೇಲೆ ಕಥೆಯಾಗಿ ಮೂಡಿಬರಬಹುದೆನ್ನುವ ನಿರೀಕ್ಷೆ ಇದೆ.

         ಪಂಜಾಬಿನ ಸಣ್ಣ ಹಳ್ಳಿಯೊಂದರಲ್ಲಿ ಹುಟ್ಟಿದ ಸಾದತ್ ಹಸನ್ ಮಂಟೋ ಅವರಿಗೆ ಭಾರತ ವಿಭಜನೆಯ ಸಂದರ್ಭ ಮೂವತ್ತೈದು ವರ್ಷ ವಯಸ್ಸು. ತುಂಬ ಯೌವನದ  ದಿನಗಳವು. ಅಮೃತಸರದಲ್ಲಿ ವಿದ್ಯಾಭ್ಯಾಸ, ಮುಂಬಯಿಯಲ್ಲಿ ವೃತ್ತಿ. ಬಾಲ್ಯದಿಂದಲೇ ಇದ್ದ ಓದಿನ ಗೀಳು ಮುಂದೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿತು. ಮಂಟೋ ಬರೆದದ್ದೆಲ್ಲ ಬದುಕಿನ ಜೀವನಾನುಭವವೆ. ಒಂದು ಕಾದಂಬರಿ, ಏಳು ನಾಟಕಗಳು, ಮೂರು ಪ್ರಬಂಧ ಸಂಕಲನಗಳು, ಇಪ್ಪತ್ತೆರಡು ಕಥಾ ಸಂಕಲನಗಳು ಇದು ಮಂಟೋ ಅವರ ಒಟ್ಟು ಸಾಹಿತ್ಯ ಕೃಷಿಯ ಅಂಕಿಸಂಖ್ಯೆ. ಅವರ ಕಥೆಗಳು ಪ್ರಂಚದ ಹಲವು ಭಾಷೆಗಳಿಗೆ ಭಾಷಾಂತರಗೊಂಡಿದ್ದು ಆ ಕಥೆಗಳ ಶ್ರೇಷ್ಠತೆಗೊಂದು ದೃಷ್ಟಾಂತ. ಮಂಟೋ ಅವರ ಕಥೆಗಳು ಕನ್ನಡಕ್ಕೂ ಅನುವಾದಗೊಂಡು ಇಲ್ಲಿನ ಓದುಗರ ಮನ್ನಣೆಗೆ ಪಾತ್ರವಾಗಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಮಂಟೋ ಜೀವನ ಕಥೆಯ ಇಂಗ್ಲಿಷ ಅವತರಣಿಕೆಯನ್ನು ಕೆ.ಹೆಚ್.ಶ್ರೀನಿವಾಸ ಕನ್ನಡಕ್ಕೆ ಅನುವಾದಿಸಿರುವರು. ಕನ್ನಡದ ಮಹತ್ವದ ಕಥೆಗಾರ ಫಕೀರ ಮಹಮ್ಮದ್ ಕಟ್ಪಾಡಿ ಅವರು ಅನುವಾದಿಸಿರುವ ಮಂಟೋ ಅವರ ಹಲವು ಕಥೆಗಳನ್ನು ಸಂಕಲನ ರೂಪದಲ್ಲಿ ನವಕರ್ನಾಟಕ ಪ್ರಕಾಶನದವರು ಪ್ರಕಟಿಸಿರುವರು. ಈ ಇಬ್ಬರು ಲೇಖಕರ ಪ್ರಯತ್ನದಿಂದಾಗಿ ಸಾದತ್ ಹಸನ್ ಮಂಟೋ ಅವರಂಥ ಮಹತ್ವದ ಬರಹಗಾರ ಕನ್ನಡದ ಓದುಗರ ಅರಿವಿನ ವ್ಯಾಪ್ತಿಗೆ ದಕ್ಕುವಂತಾಯಿತು.

        ಸಾದತ್ ಹಸನ್ ಮಂಟೋ ಬದುಕಿದ್ದದ್ದು ಕೇವಲ 43 ವರ್ಷಗಳು. ಮುಂಬಯಿಯಲ್ಲಿ ಚಿತ್ರಕಥೆ ಮತ್ತು ಸಂಭಾಷಣೆಕಾರರಾಗಿ ಹಿಂದಿ ಸಿನಿಮಾರಂಗದಲ್ಲಿ ಉತ್ತುಂಗದಲ್ಲಿದ್ದ ಸಂದರ್ಭದಲ್ಲೇ ದೇಶ ವಿಭಜನೆಯ ಬಿಸಿ ತಟ್ಟಿತು. ಪರಿಣಾಮವಾಗಿ ಮಂಟೋ ಮುಂಬಯಿ ತೊರೆದು ಪಾಕಿಸ್ತಾನಕ್ಕೆ ವಲಸೆ ಹೋಗಿ ಲಾಹೋರಿನಲ್ಲಿ ನೆಲೆಸಬೇಕಾಯಿತು. ತೀರ ಧಾರ್ಮಿಕ ನೆಲೆಯ ಪಾಕಿಸ್ತಾನದಲ್ಲಿ ಮಂಟೋ ಅವರ ಕಥೆಗಳು ಧರ್ಮಾಂಧರ ಟೀಕೆಗಳಿಗೆ ಗುರಿಯಾದವು. ಒಬ್ಬ ಮಹತ್ವದ ಬರಹಗಾರನಿಗೆ ತನ್ನ ಜೀವಿತಾವಧಿಯಲ್ಲಿ ದೊರೆಯಬೇಕಿದ್ದ ಗೌರವ-ಮನ್ನಣೆ ದೊರೆಯಲಿಲ್ಲ. ವೈಯಕ್ತಿಕ ಬದುಕಿನಲ್ಲೂ ಹಲವು ಸಮಸ್ಯೆಗಳು ಮಂಟೋ ಅವರನ್ನು ಹಣ್ಣು ಮಾಡಿದವು. ಒಂದೆಡೆ ಸಾಹಿತ್ಯ ಲೋಕ ಮಂಟೋ ಅವರ ಬರವಣಿಗೆಯನ್ನು ಕ್ರೂರವಾಗಿ ವಿಮರ್ಶಿಸುತ್ತ ಗೇಲಿ ಮಾಡಿದರೆ ಇನ್ನೊಂದೆಡೆ ವೈಯಕ್ತಿಕ ಬದುಕಿನ ನೋವುಗಳು ಅವರನ್ನು ಜರ್ಜರಿತಗೊಳಿಸಿದವು. ಬದುಕಿನ ಕೊನೆಯ ದಿನಗಳಲ್ಲಿ ಆರೋಗ್ಯ ತೀರ ಹದಗೆಟ್ಟು 1955 ರಲ್ಲಿ ಮಂಟೋ ನಿಧನರಾದಾಗ ಅವರಿಗೆ ಆಗ ಕೇವಲ 43 ವರ್ಷ ವಯಸ್ಸು. ಪಾಕಿಸ್ತಾನದ ನೆಲದಲ್ಲಿ ಅವರು ಬದುಕಿದ್ದದ್ದು ಕೇವಲ ಏಳು ವರ್ಷಗಳು ಮಾತ್ರ. ತಮ್ಮ ಬದುಕಿನ ಮೊದಲ ಮೂವತ್ತೈದು ವರ್ಷಗಳನ್ನು ಮಂಟೋ ಕಳೆದದ್ದು ಪಂಜಾಬ್ ಮತ್ತು ಮುಂಬಯಿಯಲ್ಲಿ. ವೃತ್ತಿಬದುಕನ್ನು ಕಟ್ಟಿಕೊಟ್ಟ ಮುಂಬಯಿ ಅವರ ಸಾಹಿತ್ಯ ಕೃಷಿಗೂ ನೀರೆರೆಯಿತು. ಈ ಕಾರಣಕ್ಕಾಗಿಯೇ  ಮಂಟೋ ಪಾಕಿಸ್ತಾನದಲ್ಲಿ ನೆಲೆನಿಂತರೂ ‘ನಾನು ಮೂಲತ: ಮುಂಬಯಿಯವನೇ ಆಗಿದ್ದೇನೆ’ ಎನ್ನುತ್ತಿದ್ದರು.

        1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಗುವುದರ ಜೊತೆಗೆ ದೇಶವಿಭಜನೆ ಕೂಡ ನಡೆದು ಹೋಯಿತು. ಒಂದೇ ನೆಲದಲ್ಲಿ ವಾಸಿಸುತ್ತಿದ್ದ ಜನರು ಹಿಂದುಸ್ತಾನ ಮತ್ತು ಪಾಕಿಸ್ತಾನ ಎನ್ನುವ ಎರಡು ದೇಶಗಳ ನಡುವೆ ಹಂಚಿ ಹೋದರು. ಇತಿಹಾಸಕಾರರು ಈ ಘಟನೆಯನ್ನು ನೆಲದೊಂದಿಗೆ ಜನರನ್ನೂ ಹಂಚಿಕೊಂಡ ಇತಿಹಾಸ ಕಂಡು ಕೇಳರಿಯದ ವೈಚಿತ್ರಗಳಲ್ಲೊಂದು ಎಂದು ಉಲ್ಲೇಖಿಸಿರುವರು. ದೇಶ ವಿಭಜನೆ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿತು. ವೃದ್ಧರು, ಹಸುಳೆಗಳು, ಮಹಿಳೆಯರೆನ್ನದೆ ಎಲ್ಲ ವಯೋಮಾನದವರು ಧರ್ಮಾಂಧರ ಕಾಕದೃಷ್ಟಿಗೆ ಬಿದ್ದು ಜೀವಕಳೆದುಕೊಂಡರು. ಸಾದತ್ ಹಸನ್ ಮಂಟೋ ಅವರ ಕಥೆಗಳು ಆ ದಿನಗಳ ವಾಸ್ತವ ಚಿತ್ರಣವನ್ನು ತುಂಬ ಮನೋಜ್ಞವಾಗಿ ಕಟ್ಟಿಕೊಡುತ್ತವೆ. ಇತಿಹಾಸದ ಘಟನೆಗೆ ಸಾಕ್ಷಿಯಾದ ಮಂಟೋ ದೇಶ ವಿಭಜನೆಯ ಕರಾಳ ಕಥೆಯನ್ನೇ ಬರವಣಿಗೆಯಾಗಿಸುತ್ತಾರೆ. ದೇಶ ವಿಭಜನೆಯ ಕರಾಳ ಘಟನೆಗಳನ್ನಾಧರಿಸಿ ಕಥೆಗಳನ್ನು ಬರೆಯುವಾಗ ಮಂಟೋ ಅವರಲ್ಲಿ ಒಂದು ಪ್ರಾಮಾಣಿಕತೆಯ ನೋಟವಿತ್ತು. ಈ ಕಾರಣದಿಂದ ಅವರ ಕಥೆಗಳು ಒಂದು ಧರ್ಮದ ಪರ ನಿಲ್ಲುವುದಿಲ್ಲ. ಅವರ ಕಥೆಗಳಲ್ಲಿ ಎರಡೂ ಧರ್ಮದವರು ಕ್ರೂರವಾಗಿ ಚಿತ್ರಿತವಾದಂತೆ ದಯೆ, ಅನುಕಂಪ, ಕಾರುಣ್ಯವುಳ್ಳ ವ್ಯಕ್ತಿಗಳಾಗಿಯೂ ಕಾಣಸಿಗುತ್ತಾರೆ. ‘ದೇಶವಿಭಜನೆಯ ಚಿತ್ರಣವನ್ನು ನೀಡುವಾಗ ನನಗೆ ಜನ ಏನು ಮಾಡುತ್ತಾರೆ ಎನ್ನುವುದು ಮುಖ್ಯವೇ ಹೊರತು ಯಾವ ಧರ್ಮಕ್ಕೆ, ಸಂಪ್ರದಾಯಕ್ಕೆ ಸೇರಿದವರೆನ್ನುವುದು ಮುಖ್ಯವಲ್ಲ’ ಎನ್ನುತ್ತಾರೆ ಮಂಟೋ. ಬರಹಗಾರನ ಈ ಮನೋಭಾವದಿಂದಲೇ ಮಂಟೋ ಅವರ ಕಥೆಗಳು ಭಾಷೆ, ಪ್ರದೇಶ ಮತ್ತು ಕಾಲವನ್ನು ಮೀರಿ ಬೆಳೆದು ನಮ್ಮೆಲ್ಲರ ಕಥೆಗಳಾಗುತ್ತವೆ. 

         ತೋಬಾ ತೇಕ್ ಸಿಂಗ್ ಎನ್ನುವ ಕಥೆ ಸಾದತ್ ಹಸನ್ ಮಂಟೋ ಅವರ ದೇಶ ವಿಭಜನೆಯ ಕಥೆಗಳಲ್ಲೆ ತುಂಬ ಮಹತ್ವದ ಕಥೆಯಿದು. ವಿಭಜನೆಯ ಎರಡು ವರ್ಷಗಳ ನಂತರ ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳು ತಮ್ಮ ತಮ್ಮ ದೇಶದ ಹುಚ್ಚಾಸ್ಪತ್ರೆಗಳಲ್ಲಿದ್ದ ಹುಚ್ಚರನ್ನು ವಿನಿಮಯ ಮಾಡಿಕೊಳ್ಳಲು ಯೋಜನೆ ರೂಪಿಸುತ್ತವೆ. ಅಂದರೆ ಭಾರತದ ಹುಚ್ಚಾಸ್ಪತ್ರೆಗಳಲ್ಲಿದ್ದ ಮುಸ್ಲಿಂ ಹುಚ್ಚರನ್ನು ಪಾಕಿಸ್ತಾನಕ್ಕೂ ಮತ್ತು ಪಾಕಿಸ್ತಾನದ ಹುಚ್ಚಾಸ್ಪತ್ರೆಗಳಲ್ಲಿದ್ದ ಹಿಂದು-ಸಿಖ್ ಹುಚ್ಚರನ್ನು ಭಾರತಕ್ಕೂ ವರ್ಗಾಯಿಸುವ ಯೋಜನೆ ಅದು. ಪಾಕಿಸ್ತಾನದ ಹುಚ್ಚಾಸ್ಪತ್ರೆಯಲ್ಲಿ ಬಿಷನ್ ಸಿಂಗ್ ಎನ್ನುವ ಹುಚ್ಚನಿದ್ದು ಅವನು ತೋಬಾ ತೇಕ್ ಸಿಂಗ್ ಎನ್ನುವ ಹಳ್ಳಿಯವನು. ಬಿಷನ್ ಸಿಂಗನಿಗೆ ಪಾಕಿಸ್ತಾನ, ಹಿಂದುಸ್ತಾನಗಳು ಮುಖ್ಯವಲ್ಲ. ಅವನಿಗೆ ತನ್ನ ಊರು ತೋಬಾ ತೇಕ್ ಸಿಂಗ್‍ಗೆ ಹೋಗಬೇಕಿದೆ. ಆಸ್ಪತ್ರೆಗೆ ಬಂದವರಿಗೆಲ್ಲ ಅವನು ಕೇಳುವುದು ಒಂದೇ ಪ್ರಶ್ನೆ ‘ತೋಬಾ ತೇಕ್ ಸಿಂಗ್ ಯಾವ ದೇಶದಲ್ಲಿದೆ’ ಎಂದು. ಹಿಂದು-ಸಿಖ್ ಹುಚ್ಚರನ್ನು ಭಾರತಕ್ಕೆ ಸ್ಥಳಾಂತರಿಸಲು ಗಡಿರೇಖೆಯ ಬಳಿ ಕರೆತಂದಾಗ ಅಲ್ಲಿದ್ದ ಅಧಿಕಾರಿಯನ್ನು ತೋಬಾ ತೇಕ್ ಸಿಂಗ್ ಎಲ್ಲಿದೆ ಎಂದು ಬಿಷನ್ ಸಿಂಗ್ ಕೇಳುತ್ತಾನೆ. ಪಾಕಿಸ್ತಾನದಲ್ಲಿದೆ ಎಂದು ಅಧಿಕಾರಿ ನುಡಿಯುತ್ತಿದ್ದಂತೆ ನನ್ನೂರಿಗೆ ಕಳುಹಿಸಿ ಎಂದು ಹಟ ಹಿಡಿಯುವ ಬಿಷನ್ ಸಿಂಗ್ ಅವರಿಂದ ತಪ್ಪಿಸಿಕೊಂಡು ಎರಡೂ ದೇಶಗಳ ನಡುವಣ ಗಡಿರೇಖೆಯ ಮೇಲೆ ಬಿದ್ದು ಪ್ರಾಣ ಬಿಡುತ್ತಾನೆ. ದೇಶದ ಕಲ್ಪನೆಯೇ  ಇಲ್ಲಿ ತೀರ ಅವಾಸ್ತವಿಕ ಎನಿಸಿ ಬಿಡುತ್ತದೆ.

        ದೇಶ ವಿಭಜನೆಯಾಗಿ ಒಂದು ನೆಲದಿಂದ ಇನ್ನೊಂದು ನೆಲಕ್ಕೆ ವಲಸೆ ಬಂದರೂ ಕ್ರೂರ ಬದುಕು ತನ್ನ ಕರಾಳ ಹಸ್ತವನ್ನು ಚಾಚಿ ನಸೀಮ್ ಅಖ್ತರಳನ್ನು ಅಸಹಾಯಕಳನ್ನಾಗಿಸುವ ಕಥೆ ‘ದೆಹಲಿ ಹುಡುಗಿ’. ದೆಹಲಿಯ ಕೆಂಪು ದೀಪದ ಓಣಿಯಲ್ಲಿ ನೃತ್ಯಗಾತಿಯಾಗಿ ಬದುಕುತ್ತಿರುವ ನಸೀಮ್ ಅಖ್ತರಳಿಗೂ ದೇಶ ವಿಭಜನೆಯ ಬಿಸಿ ತಟ್ಟಿದೆ. ಹಲವು ಅಮಾಯಕರ ಕೊಲೆಗಳನ್ನು ನೋಡಿದವಳಿಗೆ ಇನ್ನು ಈ ನೆಲದಲ್ಲಿ ತನ ಬದುಕು ಕಷ್ಟ ಸಾಧ್ಯವೆನಿಸಿ ತಾಯಿಗೂ ಹೇಳದೆ ಪಾಕಿಸ್ತಾನಕ್ಕೆ ವಲಸೆ ಬಂದು ಲಾಹೋರಿನಲ್ಲಿ ನೆಲೆಸುತ್ತಾಳೆ. ಹೀಗೆ ವಲಸೆ ಬಂದವಳಿಗೆ ಹಿಂದಿನ ಬದುಕಿಗೆ ಮರಳುವ ಆಸೆಯಿಲ್ಲ. ಹೊಸ ನೆಲದಲ್ಲಿ ಹೊಸ ಬದುಕನ್ನು ಕಟ್ಟಿಕೊಳ್ಳಬೇಕೆನ್ನುವ ಹಂಬಲ ಅವಳದು. ನೆಲ ಬೇರೆಯಾದರೇನಂತೆ ಮನುಷ್ಯ ಸ್ವಭಾವ ಒಂದೇ. ಲಾಹೋರಿನಲ್ಲಿ ಜನ್ನತಿ ಎನ್ನುವ ಮುದುಕಿಯ ಮೋಸಕ್ಕೆ ಬಲಿಯಾಗುವ ನಸೀಮ್ ಅಖ್ತರ್ ವೈಶ್ಯಾಗೃಹವನ್ನು ಸೇರುತ್ತಾಳೆ. ಹೊಸ ಬದುಕನ್ನು ಅರಸಿ ಬಂದವಳಿಗೆ ಕ್ರೂರ ವಿಧಿ ಮತ್ತದೇ ನರಕಕ್ಕೆ ದೂಡುತ್ತದೆ.

        ‘ವಿಷದ ಬೆಳೆ’ಯಲ್ಲಿ ಹಲವು ವರ್ಷಗಳಿಂದ ಸೌಹಾರ್ದತೆಯಿಂದ ಬದುಕುತ್ತಿದ್ದ ಎರಡು ಕುಟುಂಬಗಳು ಪರಸ್ಪರ ದ್ವೇಷದಿಂದ ನಾಶವಾಗುವ ಕಥೆಯಿದೆ. ಕಾಸಿಮನ ತೊಡೆಗೆ ಗುಂಡಿನ ಗಾಯವಾಗಿದೆ. ಹೆಂಡತಿಯ ಶವ ಮನೆಯ ಅಂಗಳದಲ್ಲಿದ್ದರೆ ಕೋಣೆಯಲ್ಲಿ ಮುದ್ದಿನ ಮಗಳು ಷರೀಫನ್ ದುರುಳರ ದ್ವೇಷಕ್ಕೆ ಬಲಿಯಾಗಿ ಸತ್ತು ನಗ್ನವಾಗಿ ಮಲಗಿದ್ದಳು. ಹೆಂಡತಿ ಮತ್ತು ಮಗಳ ಸಾವು ಕಾಸಿಮನಲ್ಲಿ ದ್ವೇಷದ ಅಟ್ಟಹಾಸಕ್ಕೆ ಕಾರಣವಾಗಿದೆ. ಪ್ರತಿಕಾರಕ್ಕಾಗಿ ಅವನು ತಹತಹಿಸುತ್ತಿದ್ದಾನೆ. ಕೊಡಲಿ ಹಿಡು ಹೊರಗೆ ಹೋದವನ ಆಕ್ರೋಶಕ್ಕೆ ನಾಲ್ಕಾರು ತಲೆಗಳು ಉರುಳುತ್ತವೆ. ಮುಚ್ಚಿದ ಮನೆಯ ಬಾಗಿಲನ್ನು ಮುರಿದು ಒಳಗೆ ಹೋದವನ ದೃಷ್ಟಿಗೆ ಹದಿನೈದರ ಹರೆಯದ ಬಾಲೆ ಕಾಣಿಸುತ್ತಾಳೆ. ಹಿಂಸ್ರಪಶುವಿನಂತೆ ಅವಳ ಮೇಲೆ ಹಾರಿ ನೆಲಕ್ಕೆ ಕೆಡವಿ ಬಟ್ಟೆಯನ್ನು ಹರಿಯತೊಡಗುತ್ತಾನೆ. ಮುಗ್ಧ ಹುಡುಗಿ ಪ್ರಜ್ಞಾಹೀನಳಾಗುತ್ತಾಳೆ. ಒಂದು ಕ್ಷಣ ತನ್ನ ಮುದ್ದಿನ ಮಗಳು ಶವವಾಗಿ ತನ್ನ ಮುಂದೆ ಮಲಗಿದಂತೆ ಭಾಸವಾಗಿ ‘ಷರೀಫನ್’ ಎಂದು ನಡಗುವ ಸ್ವರದಿಂದ ಕಾಸಿಮ್ ಚೀರುತ್ತಾನೆ.

      ಮಂಟೋ ಅವರ ಕೆಲವು ಕಥೆಗಳಂತೂ ಕೇವಲ ಒಂದೆರಡು ವಾಕ್ಯಗಳಲ್ಲೇ ಕೊನೆಗೊಳ್ಳುತ್ತವೆ. ಹೀಗಾಗಿ ಈ ಅತಿ ಸಣ್ಣ ಕಥೆಗಳಲ್ಲಿ ಪಾತ್ರಗಳ ಹೆಸರು, ಧರ್ಮ, ಜಾತಿ, ಸಂಪ್ರದಾಯಗಳೆಲ್ಲ ಅಪ್ರಸ್ತುತವಾಗಿ ಸಂದರ್ಭ, ಸನ್ನಿವೇಶಗಳು ಮಾತ್ರ ಪ್ರಸ್ತುತವಾಗುತ್ತವೆ.

ಮಂಟೋ ಅವರ ಕೆಲವು ಸಣ್ಣ ಕಥೆಗಳು ಹೀಗಿವೆ,

1. ಮಿಷ್ಟೀಕು:

ಹೊಟ್ಟೆಗೆ ಇರಿದ ಚೂರಿ ನೇರವಾಗಿ ಕೆಳಗಡೆ ಎಳೆದಾಗ ಪೈಜಾಮದ ಲಾಡಿಯನ್ನು ಕತ್ತರಿಸಿ ಪೈಜಾಮ ಮತ್ತು ಒಳಚಡ್ಡಿ ಕಳಚಿ ಕೆಳಗೆ ಬಿದ್ದವು.
ಇರಿಯುತ್ತಿದ್ದವನು ಅದನ್ನು ಕಂಡು ಚೀರಿದ ‘ಛೇ ಎಂಥ ಮಿಷ್ಟೀಕಾಯ್ತು’.

2. ವಿಶ್ರಾಂತಿ:

‘ಅವನಿನ್ನೂ ಸತ್ತಿಲ್ಲ. ಇನ್ನೂ ಜೀವ ಇದ್ದ ಹಾಗಿದೆ.
‘ಸ್ವಲ್ಪ ಸುಮ್ನಿರಯ್ಯ. ನನಗೆ ಸುಸ್ತಾಗಿ ಬಿಟ್ತು. ನನಗಿನ್ನು ಸಾಧ್ಯವಿಲ್ಲ. ಸ್ವಲ್ಪ ವಿಶ್ರಾಂತಿ ಬೇಕು’.

3. ಅನ್ಯಾಯ:

‘ನೋಡಯ್ಯ ಇದು ನ್ಯಾಯವಲ್ಲ. ನೀನು ನನಗೆ ಕಲಬೆರಕೆ ಮಾಡಿದ ಪೆಟ್ರೋಲನ್ನು ದುಬಾರಿ ಬೆಲೆಗೆ ಮಾರಾಟ ಮಾಡಿದೆ. ಈ ಕೆಟ್ಟ ಪೆಟ್ರೋಲಿನಿಂದ ಒಂದು ಅಂಗಡಿಯನ್ನೂ ಸುಡಲಾಗಲಿಲ್ಲ’.

          ಒಟ್ಟಾರೆ ಸಾದತ್ ಹಸನ್ ಮಂಟೋ ದೇಶ ವಿಭಜನೆಯ ಸಂದರ್ಭದ  ಘೋರ ಕೃತ್ಯಗಳನ್ನು ತಮ್ಮ ಕಥೆಗಳ ಮೂಲಕ ಓದುಗರಿಗೆ ಮುಟ್ಟಿಸುತ್ತಾರೆ. ಯಾವುದೇ ಧರ್ಮ ಅಥವಾ ಸಂಪ್ರದಾಯವನ್ನು ಗೇಲಿ ಮಾಡುವುದು, ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಮಂಟೋ ಅವರ ಕಥೆಗಳ ಉದ್ದೇಶವಲ್ಲ. ಅವರು ಇಡೀ ದೇಶವಿಭಜನೆಯ ಸಂದರ್ಭದಲ್ಲಿನ ಘಟನೆಗಳನ್ನು ನೋಡುವುದು ಮಾನವೀಯ ಪ್ರಜ್ಞೆಯ ಹಿನ್ನೆಲೆಯಲ್ಲಿ. ಅದಕ್ಕೆಂದೇ ‘ಧರ್ಮ, ಸಂಪ್ರದಾಯ ನನ್ನ ಕಥೆಗಳಲ್ಲಿ ಗೌಣವಾಗಿ ಕಾಣುತ್ತವೆ. ಆ ಹೀನ ಕೃತ್ಯಗಳಲ್ಲಿ ಭಾಗಿಗಳಾಗಿದ್ದ ಜನರಷ್ಟೇ ನನಗೆ ಮುಖ್ಯ’ ಎನ್ನುತ್ತಾರೆ ಮಂಟೋ. 
   
            ‘ಕೋಮುವಾದಿಗಳಿಗೆ, ಮೂಲಭೂತವಾದಿಗಳಿಗೆ, ಉಗ್ರಗಾಮಿಗಳಿಗೆ ಹಿಂಸೆಯೇ  ಗುರಿ. ಅದೇ ಅವರ ಮಾರ್ಗ ಕೂಡ. ಮನುಷ್ಯ ತನ್ನ ವಿವೇಕವನ್ನು ಕಳೆದುಕೊಂಡಾಗ ನರಕ ಇಲ್ಲೇ ಸೃಷ್ಟಿಯಾಗುತ್ತದೆ. ಎಷ್ಟೋ ವರ್ಷಗಳ ಹಿಂದೆ ಮಂಟೋ ಬರೆದ ಕಥೆಗಳು ಸಮಕಾಲೀನ ಸಂದರ್ಭಕ್ಕೆ ಹಿಡಿದ ಕನ್ನಡಿಗಳೂ ಆಗಿವೆ’ ಸಾದತ್ ಹಸನ್ ಮಂಟೋ ಅವರ ಕಥೆಗಳನ್ನು ಕುರಿತು ವಿಮರ್ಶಕ ಟಿ.ಪಿ.ಅಶೋಕ ಅವರು ಹೇಳುವ ಮಾತಿದು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Tuesday, November 20, 2018

ಕಾಲಚಕ್ರ (ಕಥೆ)




         ‘ಓಂ ಕೇಶವಾಯ ಸ್ವಾಹ, ಓಂ ನಾರಾಯಣಾಯ ಸ್ವಾಹ, ಓಂ ಮಾಧವಾಯ ಸ್ವಾಹ, ಓಂ ಗೋವಿಂದಾಯ ನಮ:’ ಎಂದು ಆಚಮನ ಮಾಡಿ  ಹನ್ನೊಂದು ಸಲ ಗಾಯತ್ರಿ ಮಂತ್ರವನ್ನು ಪಠಿಸಿ ಮನೆದೇವರಾದ ವೆಂಕಟರಮಣನಿಗೆ ದೀರ್ಘದಂಡ ಪ್ರಣಾಮ ಸಲ್ಲಿಸಿ ದೇವರ ಕೋಣೆಯಿಂದ ಮಾಧವಶಾಸ್ತ್ರಿಗಳು ಹೊರಬಂದರೆಂದರೆ ಆ ದಿನದ ಮಹತ್ವದ ಕಾರ್ಯವೊಂದು ಪೂರ್ಣಗೊಂಡಂತೆ. ಮಾಧವಶಾಸ್ತ್ರಿಗಳು ದೇವರ ಕೋಣೆಯಿಂದ ಪಡಸಾಲೆಗೆ ಬರುವುದಕ್ಕೂ ಸಾವಿತ್ರಮ್ಮನವರು ಮೊಸರವಲಕ್ಕಿ ಮತ್ತು ತಂಬಿಗೆ ನೀರಿನೊಂದಿಗೆ ಅವರಿಗಾಗಿ ಕಾಯುತ್ತ ನಿಂತಿರುವುದಕ್ಕೂ ಸರಿಹೋಯಿತು. ಹೆಂಡತಿಯ ಕೈಯಿಂದ ತಾಟನ್ನು ತೆಗೆದುಕೊಂಡು ಮೊಸರವಲಕ್ಕಿ ಮೆಲ್ಲುತ್ತಿದ್ದ ಶಾಸ್ತ್ರಿಗಳು ಅದೇನೋ ವಿಚಾರ ಮಾಡುತ್ತ ಕ್ಷಣಕ್ಕೊಮ್ಮೆ ತಲಬಾಗಿಲಿನತ್ತ ನೋಡತೊಡಗಿದರು. ಗಂಡನ ಇವತ್ತಿನ ವರ್ತನೆ ಸಾವಿತ್ರಮ್ಮನವರಿಗೆ ವಿಚಿತ್ರವಾಗಿ ಕಾಣಿಸಿ ‘ಅಷ್ಟೊತ್ಲಿಂದ ನೋಡ್ಲಿಕತ್ತಿನಿ ಘಳಿಗೆಗೊಮ್ಮೆ ತಲಬಾಗಿಲ ಕಡಿ ನೋಡ್ಲಿಕತ್ತಿರಿ. ಯಾರ ದಾರಿ ಕಾಯ್ಲಿಕತ್ತಿರಿ ಅದಾದ್ರೂ ಬಿಡಿಸಿ ಹೇಳ್ರಿ’ ಎಂದ ಹೆಂಡತಿ ಮಾತಿಗೆ ಮಾಧವ ಶಾಸ್ತ್ರಿಗಳು ‘ಏನಿಲ್ಲ ಇವತ್ತು ನಸಕಿನ್ಯಾಗ ತ್ವಾಟದ ಹತ್ರ ಕೃಷ್ಣಾಚಾರ್ಯ ಭೇಟಿಯಾಗಿದ್ದ. ನಮ್ಮ ರಾಘುಗ ಒಂದು ಹೆಣ್ಣು ನೋಡ್ಯಾನಂತ. ಬೆಳಿಗ್ಗೆ ಮನಿಗಿ ಹುಡುಗಿ ಜಾತಕ ತರ್ತಿನಿ ಅಂದಿದ್ದ. ಅದಕ್ಕ ಅವನ ದಾರಿ ಕಾಯ್ಲಿಕತ್ತಿನಿ. ಇಷ್ಟರಾಗ ಬಂದ್ರೂ ಬರಬಹುದು. ಸ್ವಲ್ಪ ಚಹಾಕ್ಕ ಇಡು’ ಎಂದುತ್ತರಿಸಿದವರು ತಾಟನ್ನು ಹೆಂಡತಿಯ ಕೈಗೆ ಕೊಟ್ಟು ತಂಬಿಗೆಯನ್ನು ಎತ್ತರಿಸಿ ಅದರೊಳಗಿನ ಇಡೀ ನೀರನ್ನು ಗಂಟಲಿಗೆ ಸುರಿದು ಕೊಂಡರು.
  
      ರಾಘವ ಮಾಧವಶಾಸ್ತ್ರಿಗಳ ಏಕೈಕ ಸಂತಾನ. ಊರಿನ ಶಾಲೆಯಲ್ಲಿ ಹೈಸ್ಕೂಲು ಶಿಕ್ಷಣ ಮುಗಿಸಿದವನು ಮುಂದೆ ಕಾಲೇಜು ಸೇರಲು ಪಟ್ಟಣಕ್ಕೆ ಹೋಗುತ್ತೇನೆಂದು ಹಠ ಹಿಡಿದರೂ ತಮಗಿರುವ ಇಪ್ಪತ್ತು ಎಕರೆ ಹೊಲ ಮತ್ತು ವಂಶಪಾರಂಪರ್ಯವಾಗಿ ಬಂದ ದೇವಸ್ಥಾನದ ಪೂಜೆಯನ್ನು ನೋಡಿಕೊಂಡು ಮನೆಯಲ್ಲೇ ಇರಲಿ ಎಂದು ಶಾಸ್ತ್ರಿಗಳು ಮಗನ ಹಠಕ್ಕೆ ಸೊಪ್ಪು ಹಾಕಿರಲಿಲ್ಲ. ಶಾಸ್ತ್ರಿಗಳ ಮನೆಯಲ್ಲಿ ಶ್ರೀಮಂತಿಕೆಗೇನೂ ಕೊರತೆ ಇರಲಿಲ್ಲ. ದೇವಸ್ಥಾನದ ಆದಾಯವೇ ಸಾಕಷ್ಟಿತ್ತು. ಹೊಲದಿಂದ ಬರುವ ಆದಾಯವೂ ತಕ್ಕಮಟ್ಟಿಗಿತ್ತು. ಪೂರ್ವಿಕರಿಂದ ಬಂದ ಚಿನ್ನ, ಬೆಳ್ಳಿ ಮನೆಯಲ್ಲಿ ಸಮೃದ್ಧವಾಗಿದ್ದು ಮನೆತುಂಬ ಮಕ್ಕಳಿಲ್ಲ ಎನ್ನುವ ಕೊರತೆಯೊಂದು ಬಿಟ್ಟರೆ ಮಾಧವಶಾಸ್ತ್ರಿಗಳ ಬದುಕಿನಲ್ಲಿ ಅಂಥ ಸಮಸ್ಯೆಗಳೇನೂ ಇರಲಿಲ್ಲ. ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡು ತವರು ಮನೆ ಸೇರಿದ ತಂಗಿ ಶಾರದಾ ಅವರಿಗೆಂದೂ ಹೊರೆ ಎನಿಸಿರಲಿಲ್ಲ. ಪೌರೋಹಿತ್ಯದ ಮನೆತನವಾದ್ದರಿಂದ ಮನೆಗೆ ಬಂದುಹೋಗುವವರ ತಿಂಡಿ, ಊಟದ ಆತಿಥ್ಯದಲ್ಲಿ ಶಾರದಾ ಅತ್ತಿಗೆ ಸಾವಿತ್ರಮ್ಮನವರಿಗೆ ನೆರವಾಗುತ್ತ ಶಾಸ್ತ್ರಿಗಳ ಮನೆಯಲ್ಲಿ ತನ್ನ ಅಸ್ತಿತ್ವದ ಅನಿವಾರ್ಯತೆಯನ್ನು ಸಾಬಿತುಪಡಿಸಿದ್ದಳು. ಹೈಸ್ಕೂಲು ಶಿಕ್ಷಣದ ನಂತರ ರಾಘವ ಉಡುಪಿಯ ಮಠದಲ್ಲಿ ಪೌರೋಹಿತ್ಯದ ಎಲ್ಲ ವಿಧಿ ವಿಧಾನಗಳನ್ನು ಕಲಿತು ಬಂದಿದ್ದ. ತಮಗೆ ವಯಸ್ಸಾಗಿದೆ ಎಂದು ಈಗೀಗ ಮಾಧವಶಾಸ್ತ್ರಿಗಳು ದೇವಸ್ಥಾನ, ಮನೆ ಮತ್ತು ಹೊಲದ ಜವಾಬ್ದಾರಿಗಳನ್ನೆಲ್ಲ ಮಗ ರಾಘವನಿಗೆ ವಹಿಸಿಕೊಟ್ಟು ರಾಮಾಯಣ, ಮಾಹಾಭಾರತಗಳನ್ನು ಓದುತ್ತ ಕಾಲ ಕಳೆಯುತ್ತಿದ್ದರು. 

       ಕೃಷ್ಣಾಚಾರ್ಯರು ಎದುಸಿರು ಬಿಡುತ್ತ ಬಂದವರೆ ಮಾಧವ ಶಾಸ್ತ್ರಿಗಳು ಕುಳಿತಿದ್ದ ಎದುರಿನ ಕುರ್ಚಿಯಲ್ಲಿ ಕೂಡುತ್ತ ಹೆಗಲ ಮೇಲಿನ ಪಂಚೆಯಿಂದ ಎದೆ ಮತ್ತು ಕಂಕುಳಲ್ಲಿನ ಬೇವರನ್ನು ಒರೆಸಿಕೊಂಡು ‘ಶಾಸ್ತ್ರಿಗಳೆ ಒಂದು ತಂಬಿಗೆ ತಣ್ಣನೆ ನೀರು ಹೊಟ್ಟೆ ಸೇರಿದರ ಜೀವ ತಂಪಾಗ್ತದ ನೋಡಿ’ ಎಂದು ಮಾಧವ ಶಾಸ್ತ್ರಿಗಳ ಮುಖ ನೋಡಿದರು. ‘ಅದಕ್ಕೆನಂತೆ ಬರೀ ನೀರೇನು ಮೊಸರವಲಕ್ಕಿನೆ ತಿನ್ನುವಿಯಂತೆ’ ಎಂದು ‘ಏ ಇವಳೇ ಕೃಷ್ಣಾಚಾರ್ಯಗ ಗಟ್ಟಿ ಮೊಸರಲ್ಲಿ ನೆನಸಿದ ಅವಲಕ್ಕಿ ತೊಗೊಂಡು ಬಾ’ ತಮ್ಮ ಹೆಂಡತಿಯನ್ನು ಕೂಗಿ ಕರೆದವರು ಆಚಾರ್ಯರು ಹೇಳಲಿದ್ದ ಸುದ್ದಿಗಾಗಿ ಕಾಯತೊಡಗಿದರು. ಮಾಧವಶಾಸ್ತ್ರಿಗಳ ಮನದಿಂಗಿತ ಅರಿತ ಕೃಷ್ಣಾಚಾರ್ಯರು ‘ಮೊದಲು ಅವಲಕ್ಕಿ ಸೇವನೆಯಾಗಲಿ ಬಂದ ವಿಷಯ ನಿಧಾನವಾಗಿ ಮಾತಾಡಿದರಾಯ್ತು ಅದಕ್ಕೇನು ಅವಸರ’ ಎಂದವರೆ ಸಾವಿತ್ರಮ್ಮನವರು ತಂದು ಕೊಟ್ಟ ಮೊಸರವಲಕ್ಕಿ ತಿನ್ನತೊಡಗಿದರು. ಆಚಾರ್ಯರೊಂದಿಗೆ ಮಾಧವಶಾಸ್ತ್ರಿಗಳೂ ಮತ್ತೊಮ್ಮೆ ಚಹ ಕುಡಿದು ಇನ್ನೇನು ವಿಷಯ ಹೇಳೊಣವಾಗಲಿ ಎನ್ನುವಂತೆ ಕೃಷ್ಣಾಚಾರ್ಯರ ಮುಖ ನೋಡಿದರು. ಖಾಲಿಯಾದ ಚಹಾ ಕಪ್ಪುಗಳನ್ನು ಒಯ್ಯಲೆಂದು ಬಂದ ಸಾವಿತ್ರಮ್ಮನವರು ಆಚಾರ್ಯರು ಹೇಳಲಿರುವ ಸುದ್ದಿ ಕೇಳಲು ಕಾತುರರಾಗಿ ಕಪ್ಪುಗಳನ್ನು ಕೈಯಲ್ಲಿ ಹಿಡಿದುಕೊಂಡು ಅಲ್ಲಿಯೇ ನಿಂತರು. ಸಾವಿತ್ರಮ್ಮನವರನ್ನು ನೋಡಿದ ಕೃಷ್ಣಾಚಾರ್ಯರು ‘ಶಾಸ್ತ್ರಿಗಳೇ ನೀವು ಹೇಗೂ ತೋಟಕ್ಕೆ ಹೋಗುವ ವೇಳೆಯಲ್ವೇ ನಾನು ನಿಮ್ಮ ಜೊತೆ ಬರ್ತಿನಿ ಹಾಗೆ ದಾರಿಯಲ್ಲಿ ಮಾತಾಡ್ಕೊಂಡು ಹೋದರಾಯ್ತು’ ಎಂದು ಮಾಧವಶಾಸ್ತ್ರಿಗಳ ಪ್ರತಿಕ್ರಿಯೆಗೂ ಕಾಯದೆ ಎದ್ದು ನಿಂತರು. ಏನೋ ಗಂಭೀರವಾದ ವಿಷಯವೇ ಇರಬಹುದು ಕೃಷ್ಣಾಚಾರ್ಯನಿಗೆ ಇಲ್ಲಿ ಸಾವಿತ್ರಿ ಎದುರು ಹೇಳಲು ಮನಸ್ಸಿಲ್ಲದಿರಬಹುದು ಎಂದರಿತ ಮಾಧವಶಾಸ್ತ್ರಿಗಳು ಹೆಂಡತಿಗೆ ಹೇಳಿ ಪಡಸಾಲೆಯಿಂದ ಅಂಗಳಕ್ಕೆ ಬಂದು ತಲಬಾಗಿಲ ಕಡೆ ನಡೆದರು. ಗಂಡಸರ ವಿಷಯವೇ ಇಷ್ಟು ಮನೆಯವರೊಂದಿಗೂ ಗುಟ್ಟು ಮಾಡ್ತಾರೆ ಎಂದು ಬೇಸರದಿಂದ ಸಾವಿತ್ರಮ್ಮನವರು ಆ ದಿನದ ಅಡುಗೆ ಸಿದ್ಧತೆಗಾಗಿ ಮನೆಯ ಒಳಗಡೆ ಕಾಲಿಟ್ಟರು. 

       ಕೃಷ್ಣಾಚಾರ್ಯರೊಂದಿಗೆ ತೋಟಕ್ಕೆ ಬಂದ ಮಾಧವಶಾಸ್ತ್ರಿಗಳು ಗಂಟೆ ಹನ್ನೆರಡಾದರೂ ಇನ್ನೂ ತೋಟದಲ್ಲೇ ಕುಳಿತಿದ್ದರು. ಕೃಷ್ಣಾಚಾರ್ಯರು ರಾಘವನ ಮದುವೆಗೆ ಸಂಬಂಧಿಸಿದ್ದ ಹೇಳಬೇಕಾಗಿದ್ದ ವಿಷಯವನ್ನು ಕೂಲಂಕುಷವಾಗಿ ಶಾಸ್ತ್ರಿಗಳೊಂದಿಗೆ ಚರ್ಚಿಸಿ ಯಾವುದಕ್ಕೂ ಇನ್ನೆರಡು ದಿನಗಳಲ್ಲಿ ಅಭಿಪ್ರಾಯ ತಿಳಿಸಿರೆಂದು ಹೇಳಿ ಮನೆಗೆ ಹಿಂತಿರುಗಿದ್ದರು. ಆಚಾರ್ಯರು ಹೇಳಿದ ವಿಷಯವನ್ನು ಒಪ್ಪಿಕೊಳ್ಳಲು ಶಾಸ್ತ್ರಿಗಳ ಮನಸ್ಸು ಹಿಂದೇಟು ಹಾಕುತ್ತಿತ್ತು. ಛೇ ಎಂಥ ಕಾಲ ಬಂತು. ಮಗನಿಗೊಂದು ಅನುರೂಪವಾದ ಹೆಣ್ಣು ಹುಡುಕಿ ಮದುವೆ ಮಾಡುವ ಸಾಮರ್ಥ್ಯವೂ ತಮಗಿಲ್ಲವಾಯಿತಲ್ಲ ಎಂದು ಶಾಸ್ತ್ರಿಗಳು ಪರಿತಪಿಸತೊಡಗಿದರು. ಊರಿನಲ್ಲಿ ಮಾತ್ರವಲ್ಲದೆ ಸುತ್ತ ಹತ್ತು ಗ್ರಾಮಗಳಲ್ಲಿ ಮಾಧವಶಾಸ್ತ್ರಿಗಳಿಗೆ ಗೌರವವಿತ್ತು. ಮದುವೆ, ಸೀಮಂತ, ಜಾವಳ, ಸತ್ಯನಾರಾಯಣ ಪೂಜೆಗೆಲ್ಲ ಮಾಧವಶಾಸ್ತ್ರಿಗಳದೇ ಪೌರೋಹಿತ್ಯ. ನೇಮ, ನಿಷ್ಠೆ, ಸಂಪ್ರದಾಯಗಳಿಗೆ ಬದ್ಧರಾಗಿದ್ದ ಮಾಧವಶಾಸ್ತ್ರಿಗಳಿಂದ ಮಾತ್ರ ಪೂಜೆ ಪುನಸ್ಕಾರಗಳು ಸಾಂಗವಾಗಿ ನೇರವೇರುವವೆನ್ನುವ ನಂಬಿಕೆ ಜನರಲ್ಲಿ ಮನೆಮಾಡಿತ್ತು. ಬೇರೆ ಜಾತಿಯವರ ಮನೆಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಪೌರೋಹಿತ್ಯ ವಹಿಸಿದರೂ ಆ ಮನೆಯಲ್ಲಿ ಒಂದು ಹನಿ ನೀರನ್ನೂ ಸೇವಿಸುತ್ತಿರಲಿಲ್ಲ. ಮನೆಗೆ ಬಂದು ಮತ್ತೆ ಸ್ನಾನ ಮಾಡಿ ಮಡಿ ಬಟ್ಟೆ ಉಟ್ಟ ನಂತರವೇ ಊಟ. ಇಷ್ಟೊಂದು ಕರ್ಮಠರಾದ ತಾವು ಮಗನ ಮದುವೆಗಾಗಿ ಕೃಷ್ಣಾಚಾರ್ಯ ಹೇಳಿದಂತೆ ಒಪ್ಪಿದ್ದೇ ಆದರೆ ಊರಿನ ಮತ್ತು ಸುತ್ತಲಿನ ಗ್ರಾಮಗಳ ಜನರ ದೃಷ್ಟಿಯಲ್ಲಿ ತಮ್ಮ ಗೌರವ, ಮರ್ಯಾದೆಯೆಲ್ಲ ಮಣ್ಣು ಪಾಲಾದಂತೆ. ನಾಲ್ಕು ತಲೆಮಾರುಗಳು ಕುಳಿತು ತಿನ್ನುವಷ್ಟು ಆಸ್ತಿಯಿದೆಯಾದರೂ ಮಗನಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಈಗಾಗಲೇ ರಾಘವನಿಗೆ ಮದುವೆ ವಯಸ್ಸು ಮೀರುತ್ತಿದೆ. ಬರುವ ಗಣೇಶ ಚತುರ್ಥಿಗೆ ಅವನಿಗೆ ಮೂವತ್ತೈದು ಮುಗಿದು ಮೂವತ್ತಾರು ಶುರು. ಅವನ ವಯಸ್ಸಿನ ಗೌಡರ ಓಣಿಯ ಶಂಕ್ರೆಗೌಡನಿಗೆ ಈಗಾಗಲೇ ಮದುವೆಯಾಗಿ ನಾಲ್ಕು ಮಕ್ಕಳಿವೆ. ಅವನ ಹಿರಿಯ ಮಗಳು ಹತ್ತನೆ ಕ್ಲಾಸಲ್ಲಿ ಊರಿಗೇ ಮೊದಲನೆಯವಳಾಗಿ ಪಾಸಾದಾಗ ಶಂಕ್ರೆಗೌಡ ಮನೆಗೆ ಬಂದು ಸಿಹಿಹಂಚಿ ಹೋಗಿದ್ದ. ಶಂಕ್ರೆಗೌಡ ಹೋದ ಮೇಲೆ ‘ನೋಡ್ರಿ ರಾಘುಗೂ ಆಗಬೇಕಾದ ವಯಸ್ಸಲ್ಲಿ ಮದ್ವಿ ಆಗಿದ್ದರ ನಮಗೂ ಮೊಮ್ಮಕ್ಕಳಿರುತ್ತಿದ್ದರು’ ಎಂದ ಸಾವಿತ್ರಿಯ ಮಾತನ್ನು ಕೇಳಿಸಿಕೊಂಡ ರಾಘವ ತುಳಿಸಿ ಕಟ್ಟೆಯಲ್ಲಿನ ಮಾರುತಿಗೆ ಮಾಡುತ್ತಿದ್ದ ಪೂಜೆಯನ್ನು ಅರ್ಧಕ್ಕೇ ಬಿಟ್ಟು ಒಳ ಹೋಗಿದ್ದ. ಈ ಬ್ರಾಹ್ಮಣರೆಲ್ಲ ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗಿ ಅಲ್ಲಿಯೇ ನೆಲೆಸುತ್ತಿರುವುದರಿಂದ ಹಳ್ಳಿಗಳಲ್ಲಿನ ಗಂಡುಗಳಿಗೆ ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡಲು ಒಪ್ಪುತ್ತಿಲ್ಲ. ಈ ಕನ್ಯಾಮಣಿಗಳಿಗೆಲ್ಲ ದೊಡ್ಡ ಪಟ್ಟಣಗಳಲ್ಲಿ ಕೆಲಸ ಮಾಡುತ್ತಿರುವ ಸಾಫ್ಟ್ ವೇರ್   ಇಂಜಿನಿಯರುಗಳೇ ಬೇಕು ಮದುವೆಯಾಗಲು. ದೇವಸ್ಥಾನದ ಆದಾಯದ ಆಸೆಯಿಂದ ಮಗನನ್ನು ಮನೆಯಲ್ಲೇ ಉಳಿಸಿಕೊಂಡಿದ್ದು ತಪ್ಪಾಯಿತೇನೋ ಎಂದು ಶಾಸ್ತ್ರಿಗಳ ಮನಸ್ಸು ಒಂದುಕ್ಷಣ ನೋವಿನಿಂದ ಒದ್ದಾಡಿತು. ತಲೆ ಎತ್ತಿ ಆಕಾಶವನ್ನೊಮ್ಮೆ ನೋಡಿದವರಿಗೆ ಹೊಟ್ಟೆ ಚುರುಗುಟ್ಟಿದ ಅನುಭವವಾಗಿ ಪಂಚೆಯನ್ನು ಹೆಗಲ ಮೇಲೆ ಹಾಕಿಕೊಂಡು ಮನೆಯ ದಾರಿ ಹಿಡಿದರು. 

     ಮಾಧವಶಾಸ್ತ್ರಿಗಳು ಮನೆಗೆ ಬಂದಾಗ ಸಾವಿತ್ರಮ್ಮನವರು ಅವರಿಗಾಗಿ ಕಾಯುತ್ತ ಪಡಸಾಲೆಯಲ್ಲಿ ಹೂ ಪೋಣಿಸುತ್ತ  ಕುಳಿತಿದ್ದರು. ಸ್ವಲ್ಪ ದೂರದಲ್ಲಿ ಬತ್ತಿ ಹೊಸೆಯುತ್ತ ದೇವರ ನಾಮವನ್ನು ಪಠಿಸುತ್ತ ಕುಳಿತಿದ್ದ ಶಾರದಾ ಅಣ್ಣನ ಆಗಮನವನ್ನು ಅತ್ತಿಗೆಗೆ ಸೂಚಿಸಲೆಂಬಂತೆ ಕೆಮ್ಮಿ ಮತ್ತೆ ತನ್ನ ಕೆಲಸದಲ್ಲಿ ಮಗ್ನಳಾದಳು. ಪತಿಯ ಮುಖದಲ್ಲಿನ ದುಗುಡವನ್ನು ಗುರುತಿಸಿದ ಸಾವಿತ್ರಮ್ಮನವರು ಮೊದಲು ಊಟ ಮಾಡಲಿ ಆಮೇಲೆ ಕೇಳಿದರಾಯ್ತೆಂದು ಶಾಸ್ತ್ರಿಗಳಿಗೆ ಊಟ ಬಡಿಸಲು ಹೂವಿನ ಬುಟ್ಟಿಯೊಂದಿಗೆ ಅಡುಗೆ ಮನೆ ಪ್ರವೇಶಿಸಿದರು. ತೋಟದಲ್ಲಿ ಕೃಷ್ಣಾಚಾರ್ಯರೊಂದಿಗೆ ಗಹನವಾದ ವಿಷಯವೇ ಚರ್ಚೆಯಾಗಿರಬೇಕೆಂದು ಶಾರದಾ ಕೂಡ ಅಣ್ಣನಿಗೆ ಏನನ್ನು ಕೇಳಲಿಲ್ಲ. ಮಾಧವಶಾಸ್ತ್ರಿಗಳಿಗೆ ಇಡೀ ಮನೆಯಲ್ಲಿ ನೆಲೆಸಿದ ಗಾಢ ಮೌನ ಅಸಹನೀಯವೆನಿಸತೊಡಗಿತು. ಆ ಮೌನವನ್ನು ಹೊಡೆದೊಡಿಸಲೆಂಬಂತೆ ತೊಟ್ಟ ಜುಬ್ಬಾವನ್ನು ಪಡಸಾಲೆಯಲ್ಲಿನ ಗೂಟಕ್ಕೆ ತೂಗು ಹಾಕುತ್ತ  ‘ರಾಘು ಎಲ್ಲಿ ಕಾಣಿಸ್ತಿಲ್ಲ’ ಎಂದು ತಂಗಿ ಶಾರದಾಳನ್ನು ಕೇಳಿ ಅವಳ ಉತ್ತರಕ್ಕಾಗಿ ಕಾಯತೊಡಗಿದರು. ಅಣ್ಣ ಹೀಗೆ ಮನೆಯವರ ಉತ್ತರಕ್ಕಾಗಿ ಕಾಯುವ ಮನೋಭಾವದವನಲ್ಲವಾದ್ದರಿಂದ ಇಂದಿನ ಅಣ್ಣನ ವರ್ತನೆ ಶಾರದಾಳಿಗೆ ಅಚ್ಚರಿಯೆನಿಸಿತು. ‘ದೇವಸ್ಥಾನದ ಪೂಜೆ ಮುಗಿಸಿ ಪಟ್ಟಣಕ್ಕೆ ಹೋಗಿ ಬರ್ತಿನಿ ಎಂದು ಹೇಳಿ ಹೋದ’ ಎಂದವಳ ಮಾತಿನಲ್ಲಿ ಅಣ್ಣನ ಬಗ್ಗೆ ಕಕ್ಕುಲಾತಿಯಿತ್ತು. ಅಣ್ಣ ಮಗನ ಮದುವೆಗಾಗಿ ಪಡುತ್ತಿರುವ ಕಷ್ಟ ಶಾರದಾಳಿಗೆ ಗೊತ್ತಿಲ್ಲದ ವಿಷಯವೇನಲ್ಲ. ಮನೆದೇವರಾದ ವೆಂಕಟೇಶ್ವರನಿಗೆ ಅಣ್ಣನ ಮಗನ ಮದುವೆ ಸಾಂಗವಾಗಿ ನೆರವೇರಿದರೆ ಕುಟುಂಬ ಸಮೇತರಾಗಿ ಬಂದು ದರ್ಶನ ಮಾಡುತ್ತೆವೆಂದು ಶಾರದಾ ಹರಕೆ ಹೊತ್ತಿದ್ದಳು. ‘ವೈನಿ ಈ ಯೆಂಕಪ್ಪಗ ಎಡಕ್ಕೊಂದು ಬಲಕ್ಕೊಂದು ಹೆಂಡ್ತಿರನ್ನ ನಿಲ್ಲಿಸಿಕೊಂಡು ಪೂಜೆ ಮಾಡಿಸಿಕೊಳ್ಳೊದು ಗೊತ್ತದ ಆದರ ನಮ್ಮ ರಾಘಪ್ಪಗೊಂದು ಹೆಣ್ಣು ಹುಡುಕಿ ಕೊಡೊದು ಗೊತ್ತಿಲ್ಲ ನೋಡ್ರಿ’ ಎಂದು ಅತ್ತಿಗೆ ಎದುರು ಅದೆಷ್ಟೋ ಸಲ ಮನೆದೇವರಾದ ವೆಂಕಟೇಶ್ವರನನ್ನು ತರಾಟೆಗೆ ತೆಗೆದುಕೊಂಡಿದ್ದಳು. ಆಗೆಲ್ಲ ಸಾವಿತ್ರಮ್ಮನವರು ‘ಬಿಡ್ತು ಅನ್ನು ಶಾರದಾ ದೇವರಿಗೆ ಹಾಗೆಲ್ಲ ಅಂತಾರೇನು’ ಎಂದು ತಿರುಪತಿ ತಿಮ್ಮಪ್ಪನೆಲ್ಲಿ ಸಿಟ್ಟಾಗಿ ಇದ್ದೊಬ್ಬ ಮಗನ ಮದುವೆಗೆ ವಿಘ್ನ ತರುವನೋ ಎಂದು ಹೆದರಿ ಗಲ್ಲ ಗಲ್ಲ ಬಡಿದುಕೊಳ್ಳುತ್ತಿದ್ದರು.
      ಊಟ ಮಾಡುವಾಗಲಾದರೂ ಗಂಡ ಕೃಷ್ಣಾಚಾರ್ಯರ ಜೊತೆಗೆ ನಡೆದ ಮಾತುಗಳನ್ನು ತಮಗೆ ಮುಟ್ಟಿಸಬಹುದೆಂದು ನಿರೀಕ್ಷಿಸಿದ್ದ ಸಾವಿತ್ರಮ್ಮನವರಿಗೆ ಶಾಸ್ತ್ರಿಗಳು ಮೌನವಾಗಿ ಊಟ ಮಾಡಿ ಕೈತೊಳೆಯಲು ಬಚ್ಚಲು ಮನೆಗೆ ಹೋಗುತ್ತಿರುವುದನ್ನು ನೋಡಿ ನಿರಾಸೆಯಾಯಿತು. ಜೊತೆಗೆ ತನ್ನ ಮಗನ ಮದುವೆಗೆ ಸಂಬಂಧಿಸಿದ ವಿಚಾರವನ್ನು ತಾಯಿಯಾಗಿ ತನಗೆ ತಿಳಿದುಕೊಳ್ಳುವ ಹಕ್ಕಿಲ್ಲವೇನು ಎಂದು ಕೋಪ ಬಂದು ‘ರ್ರೀ ಬೆಳಿಗ್ಗೆಯಿಂದ ನೋಡ್ತಿದ್ದೀನಿ ನನ್ನಿಂದ ಏನನ್ನೋ ಮುಚ್ಚಿಡ್ತಿದ್ದೀರಿ. ಆ ಕಿಷ್ಟಪ್ಪ ಕೂಡ ಅದೇನೋ ಗುಟ್ಟಿನ ವಿಷಯ ಅನ್ನೊಥರ ಮನೆಯಲ್ಲಿ ಮಾತಾಡೊದು ಬ್ಯಾಡ ಅಂತ ತ್ವಾಟಕ್ಕ ಕರೆದುಕೊಂಡು ಹೋದ. ನೀವಾಗಿಯೇ ಹೇಳಬಹುದು ಅಂತ ಕಾಯ್ತಿದ್ದೆ. ತಾಯಿಯಾಗಿ ನನಗ ಅಷ್ಟು ಹಕ್ಕಿಲೇನ್ರಿ’ ಬಚ್ಚಲುಮನೆಯಿಂದ ಕೈತೊಳೆದುಕೊಂಡು ಹೊರಗೆ ಬರುತ್ತಿದ್ದ ಗಂಡನನ್ನು ನಿಲ್ಲಿಸಿ ಕೇಳಿದ ಸಾವಿತ್ರಮ್ಮನವರನ್ನು ಕರುಣೆಯಿಂದ ನೋಡಿದ ಶಾಸ್ತ್ರಿಗಳು ‘ಚಿಂತಿ ಮಾಡೊ ಅಂಥ ವಿಷಯ ಅಲ್ಲ ಸಾವಿತ್ರಿ’ ಎಂದು ಚುಟುಕಾಗಿ ಉತ್ತರಿಸಿ ಮಲಗುವ ಕೋಣೆಯ ಕಡೆ ಹೆಜ್ಜೆ ಹಾಕಿದರು. ಇವರನ್ನು ಈ ಜನ್ಮದಲ್ಲಿ ಅರ್ಥ ಮಾಡಿಕೊಳ್ಳೊಕೆ ಸಾಧ್ಯವಿಲ್ಲವೇನೊ ಎಂದು ಗೊಣಗುತ್ತ ಸಾವಿತ್ರಮ್ಮನವರು ನಾದಿನಿ ಶಾರದಾಳನ್ನು ಊಟಕ್ಕೆ ಕರೆಯಲು ನಡುಮನೆಯಿಂದ ಹೊರಬಂದರು. 

     ಊಟಮಾಡಿ ಘಳಿಗೆ ನಿದ್ದೆ ತೆಗೆದರಾಯ್ತೆಂದು ಮಂಚದ ಮೇಲೆ ಮಲಗಿದ ಶಾಸ್ತ್ರಿಗಳಿಗೆ ನಿದ್ದೆ ಹತ್ತಿರ ಸುಳಿಯದಾಯ್ತು. ಕೃಷ್ಣಾಚಾರ್ಯರು ಹೇಳಿದ ವಿಷಯವೇ ಮನಸ್ಸನ್ನು ಕೊರೆಯುತ್ತಿದ್ದುದ್ದರಿಂದ ಎಂದಿನಂತೆ ಸುಖವಾಗಿ ನಿದ್ದೆ ಮಾಡುವುದು ಅವರಿಂದಾಗಲಿಲ್ಲ. ಬಲವಂತವಾಗಿ ಕಣ್ಣು ಮುಚ್ಚಿದವರಿಗೆ ಶಾರದಾ ಎದುರು ನಿಂತು ‘ಅಣ್ಣಾ ನಾನೇನು ತಪ್ಪ ಮಾಡೀನಿ ಅಂತ ನನ್ನ ಮದುವಿಗಿ ವಿರೋಧ ಮಾಡ್ದಿ’ ಎಂದು ಕೇಳಿದಂತಾಗಿ ಮೈಯೆಲ್ಲ ಬೆವರೊಡೆದು ಹಾಸಿಗೆಯಲ್ಲಿ ಎದ್ದು ಕುಳಿತವರಿಗೆ ಆ ಕೋಣೆಯಲ್ಲಿ ಉಸಿರು ಕಟ್ಟಿದಂತಾಗಿ ಶರೀರ ಕಂಪಿಸಿತು. ಕಣ್ಣನ್ನು ಅಗಲಗೊಳಿಸಿ ನೋಡಿದವರಿಗೆ ಇಡೀ ಕೋಣೆಯಲ್ಲಿ ತಾವೊಬ್ಬರೆ ಇರುವುದು ಅರಿವಿಗೆ ಬಂದು ಇದೆಲ್ಲ ತನ್ನ ಭ್ರಮೆ ಎಂದು ಮನಸ್ಸಿಗೆ ಸಮಾಧಾನ ತಂದುಕೊಂಡರು. ಮೂವತ್ತು ವರ್ಷಗಳ ಹಿಂದೆ ನಡೆದ ಘಟನೆಯೊಂದು ಈಗ ತನ್ನ ಮಗನ ಬದುಕಿನೊಂದಿಗೆ ತಳಕು ಹಾಕಿಕೊಳ್ಳುತ್ತಿರುವುದು ಪೂರ್ವನಿರ್ಧಾರಿತವೇ ಇರಬಹುದೇನೋ ಎಂದು ಶಾಸ್ತ್ರಿಗಳ ಮನಸ್ಸು ಆಲೋಚಿಸತೊಡಗಿತು. ಆ ಸಂದರ್ಭದ ತನ್ನ  ನಿರ್ಣಯವೊಂದು ಹೀಗೆ ಇವತ್ತು ನನ್ನೆದುರೇ ಪ್ರಶ್ನೆಯಾಗಿ ನಿಲ್ಲಬಹುದೆಂದು ಯೋಚಿಸಿರಲಿಲ್ಲ. ಯಾವ ನಿರ್ಧಾರವನ್ನು ಕೈಗೊಳ್ಳಲಿ? ಶಾರದಾಳಿಗೆ ಹೇಗೆ ಮನವರಿಕೆ ಮಾಡಿಸಲಿ? ಅವಳನ್ನು ಎದುರಿಸುವ ಮಾನಸಿಕ ಸ್ಥೈರ್ಯ ತನಗಿದೆಯೇ? ಆಲೋಚಿಸಿದಷ್ಟೂ ವಿಷಯ ಕಗ್ಗಂಟಾಗುತ್ತ ಹೋಗುತ್ತಿತ್ತು. ಕೃಷ್ಣಾಚಾರ್ಯ ಬೇರೆ ಇನ್ನೆರಡು ದಿನಗಳಲ್ಲಿ ನಿರ್ಧಾರ ತಿಳಿಸುವಂತೆ ಹೇಳಿರುವನು. ಯಾವ ನಿರ್ಧಾರಕ್ಕೂ ಬರಲಾಗದೆ ಮಾಧವಶಾಸ್ತ್ರಿಗಳು ಅಶಾಂತಿಯಿಂದ ಹಾಸಿಗೆಯಲ್ಲಿ ನಿದ್ದೆಯಿಲ್ಲದೆ ಅತ್ತಿಂದಿತ್ತ ಮಗ್ಗಲು ಬದಲಾಯಿಸತೊಡಗಿದರು. ಬಾಗಿಲಲ್ಲಿ ನಿಂತು ನೋಡುತ್ತಿದ್ದ ಸಾವಿತ್ರಮ್ಮನವರಿಗೆ ಶಾಸ್ತ್ರಿಗಳು ಯಾವುದೋ ಗಹನವಾದ ಸಮಸ್ಯೆಯಲ್ಲಿ ಸಿಲುಕಿರುವರೆಂಬ ಸಂಗತಿ ಅವರನ್ನು ಚಿಂತೆಗೀಡುಮಾಡಿತು.  

       ರಾತ್ರಿ ಹಸಿವಿಲ್ಲವೆಂದು ಲೋಟ ಹಾಲು ಕುಡಿದು ಮಲಗಿದ ಮಾಧವಶಾಸ್ತ್ರಿಗಳು ‘ರಾಘು ಬಂದನೇನೆ’ ಎಂದು ಮಲಗಿದ್ದಲ್ಲೇ ಸಾವಿತ್ರಮ್ಮನವರನ್ನು ಕೂಗಿ ಕೇಳಿ ಮಗ ಬಂದಿರುವುದನ್ನು ಖಾತ್ರಿಪಡಿಸಿಕೊಂಡು ಮನಸ್ಸಿಗೆ ಸಮಾಧಾನ ತಂದುಕೊಂಡರು. ಮದುವೆಯಾಗಿ ಅವನಿಗೂ ಹೆಂಡತಿ ಮಕ್ಕಳು ಅಂತಿದ್ದರೆ ಹೀಗೆ ಊರೂರು ಅಲೆಯುತ್ತಿರಲಿಲ್ಲ. ಮನೆತುಂಬ ಶ್ರೀಮಂತಿಕೆ ಇದೆ ಆದರೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ ವೆಂಕಪ್ಪ ನೀನೇ ದಾರಿ ತೋರಿಸಬೇಕು ಎಂದು ಹಾಸಿಗೆಯಲ್ಲೇ ಮನೆದೇವರಿಗೆ ಕೈಮುಗಿದರು. ಯೋಚಿಸುತ್ತ ಮಲಗಿದ್ದ ಶಾಸ್ತ್ರಿಗಳ ಮನಸ್ಸು ಮೂವತ್ತು ವರ್ಷಗಳ ಹಿಂದಕ್ಕೆ ಜಾರಿತು. ತಂಗಿ ಶಾರದಾಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿದಾಗ ಆಗಿನ್ನೂ ಆಕೆಗೆ ಹದಿನೆಂಟು ವರ್ಷ ವಯಸ್ಸು. ಅವಳ ದುರಾದೃಷ್ಟಕ್ಕೆ ಮದುವೆಯಾದ ಆರು ತಿಂಗಳಲ್ಲೆ ಗಂಡ ರಸ್ತೆ ಅಪಘಾತದಲ್ಲಿ ಅಸುನೀಗಿದ. ತಂಗಿ ವಿಧವೆಯಾಗಿ ತವರು ಮನೆ ಸೇರಿದಳು. ಅಪ್ಪ ಅಮ್ಮ ಇದೇ ಕೊರಗಿನಲ್ಲಿ ಹಾಸಿಗೆ ಹಿಡಿದವರು ಮುಂದಿನ ಕೆಲವೇ ತಿಂಗಳುಗಳಲ್ಲಿ ಒಬ್ಬರ ಹಿಂದೆ ಒಬ್ಬರಂತೆ ದೇವರ ಪಾದ ಸೇರಿದರು. ಮನೆಯ ಜವಾಬ್ದಾರಿ ಮಾಧವಶಾಸ್ತ್ರಿಗಳ ಹೆಗಲೇರಿತು. ಮನೆಯಲ್ಲಿ ಶ್ರೀಮಂತಿಕೆಗೇನೂ ಕೊರತೆ ಇರಲಿಲ್ಲ. ತಂಗಿ ಶಾರದಾ ಅವರಿಗೆಂದೂ ಭಾರವೆನಿಸಲಿಲ್ಲ. ಬದುಕು ನಿರಾತಂಕವಾಗಿ ಸಾಗುತ್ತಿದ್ದ ಆ ದಿನಗಳಲ್ಲಿ ಮಾಧವಶಾಸ್ತ್ರಿಗಳ ಬದುಕಿನಲ್ಲಿ ಶಾರದಾಳಿಗೆ ಸಂಬಂಧಿಸಿದ ವಿಷಯವೊಂದು ಬಿರುಗಾಳಿಯಾಗಿ ಪ್ರವೇಶಿಸಿ ಅವರ ಮನಸ್ಸಿನ ಶಾಂತಿಯನ್ನೇ ಕದಡಿತು. ಆ ಊರಿಗೆ ಮೇಷ್ಟ್ರಾಗಿ ಬಂದ ಶ್ರೀನಿವಾಸನೆಂಬ ಯುವಕ ವಿಧವೆ ಶಾರದಾಳನ್ನು ತನಗೆ ಮದುವೆ ಮಾಡಿಕೊಡುವಂತೆ ಕೇಳಿದಾಗ ಶಾಸ್ತ್ರಿಗಳು ಭೂಮಿಗಿಳಿದು ಹೋದರು. ಶ್ರೀನಿವಾಸ ತಮ್ಮದೆ ಜಾತಿಯವನಾದರೂ ವಿಧವೆಯನ್ನು ಸುಮಂಗಲಿಯಾಗಿಸುವುದು ತಮ್ಮ ಮನೆತನಕ್ಕೆ ಮಾಡುವ ಅಪಚಾರವೆಂದೇ ಭಾವಿಸಿದ ಮಾಧವಶಾಸ್ತ್ರಿಗಳು ಮದುವೆಗೆ ಸುತಾರಾಂ ಒಪ್ಪಿಗೆ ನೀಡಲಿಲ್ಲ. ಇದನ್ನು ಹೀಗೇ ಮುಂದುವರೆಯಲು ಬಿಟ್ಟರೆ ಊರಲ್ಲಿ ತಮ್ಮ ಮರ್ಯಾದೆ ಮಣ್ಣು ಪಾಲಾದಂತೆ ಎಂದು ಬಗೆದ ಶಾಸ್ತ್ರಿಗಳು ಊರ ಪಟೇಲರ ಶಿಫಾರಸ್ಸಿನಿಂದ ಶ್ರೀನಿವಾಸನನ್ನು ಬೇರೆ ಊರಿಗೆ ಎತ್ತಂಗಡಿ ಮಾಡಿಸಿ ಸಮಾಧಾನದ ನಿಟ್ಟುಸಿರು ಬಿಟ್ಟರು. ಇದೆಲ್ಲ ನಡೆದು ಮೂವತ್ತು ವರ್ಷಗಳೇ ಕಳೆದು ಹೋಗಿವೆ. ಪಾಪ ಶಾರದಾಳಲ್ಲೂ ಮದುವೆಯಾಗಿ ಹೊಸ ಬದುಕನ್ನು ಕಟ್ಟಿಕೊಳ್ಳಬೇಕೆನ್ನುವ ಆಸೆ ಇತ್ತೇನೋ. ಆದರೆ ಆ ಸಂದರ್ಭ ಅವಳ ಮನಸ್ಸಿನ ಭಾವನೆಗಳನ್ನು ತಿಳಿದುಕೊಳ್ಳುವ ಒಂದು ಸಣ್ಣ ಪ್ರಯತ್ನವನ್ನೂ ನಾನು ಮಾಡಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಈಗ ರಾಘವನಿಗೆ ನೋಡಿದ ಹೆಣ್ಣಿನ ವಿಷಯವಾಗಿ ಶಾರದಾಳ ಜೊತೆ ಹೇಗೆ ಮಾತನಾಡಬೇಕು. ಸಾವಿತ್ರಿ ಮತ್ತು ರಾಘವನನ್ನು ಒಪ್ಪಿಸುವುದು ಅಂಥ ಕಷ್ಟದ ಸಂಗತಿಯೇನಲ್ಲ. ಆದರೆ ಮನಸ್ಸು ಹಿಂಜರಿಯುವುದು ಶಾರದಾಳ ವಿಷಯದಲ್ಲಿ ಮಾತ್ರ. ಅವಳೆದುರು ನಾನು ತೀರ ಸಣ್ಣವನಾಗಬಹುದೇನೋ ಎನ್ನುವ ಆತಂಕ ಶಾಸ್ತ್ರಿಗಳ ನಿದ್ದೆಯನ್ನು ದೂರ ಮಾಡಿತು. ನಾಳೆ ಕೃಷ್ಣಾಚಾರ್ಯನಿಗೆ ಈ ಸಂಬಂಧ ಬೇಡ ಎಂದರಾಯ್ತು ಎನ್ನುವ ನಿರ್ಧಾರ ಅವರಲ್ಲಿ ಗಟ್ಟಿಯಾಗುತ್ತಿದ್ದಂತೆ ಹೊರಗೆ ಬೆಳಗಾಗುತ್ತಿರುವ ಸಂಕೇತವಾಗಿ ಹಕ್ಕಿಗಳ ಚಿಲಿಪಿಲಿ ನಿನಾದ ಕಿವಿ ತುಂಬಲಾರಂಭಿಸಿತು. 

      ಮಾಧವಶಾಸ್ತ್ರಿಗಳು ಎಂದಿನಂತೆ ಬೆಳೆಗ್ಗೆ ಸಂಧ್ಯಾವಂದನೆ ಪೂಜೆ ಮುಗಿಸಿ ಕೃಷ್ಣಾಚಾರ್ಯರ ಮನೆಗೆ ಹೊರಡುವ ತಯ್ಯಾರಿಯಲ್ಲಿದ್ದವರನ್ನು ‘ಅಣ್ಣ ನಿನ್ನ ಜೊತಿ ಸ್ವಲ್ಪ ಮಾತಾಡ್ಬೇಕಾಗ್ಯಾದ’ ಎಂದ ಶಾರದಾಳ ಧ್ವನಿ ತಡೆಯಿತು. ಏನು ಎನ್ನುವಂತೆ ನೋಡಿದವರನ್ನು ‘ಇಲ್ಲಿ ಬ್ಯಾಡ ಹಿತ್ತಲಕಡಿ ಬಾ’ ಎಂದು ಮುಂದೆ ನಡೆದ ತಂಗಿಯನ್ನು ಅನುಸರಿಸಿ ಹಿತ್ತಲಕಡೆ ಹೆಜ್ಜೆ ಹಾಕಿದರು. ‘ನಸಿಕಿನ್ಯಾಗ ದೇವಸ್ಥಾನದ ಕಸಗೂಡಿಸ್ಲಿಕ್ಕ ಹೋದಾಗ ಕೃಷ್ಣಾಚಾರ್ಯರು ಭೇಟಿಯಾಗಿದ್ರು. ಎಲ್ಲ ವಿಷಯ ನನಗ ಹೇಳ್ಯಾರ. ಸವಣೂರಿನ ನಾರಾಯಣರಾಯರ ಮಗಳು ಮದುವಿ ಆದ ಎರಡ ತಿಂಗಳಿಗೀ ಗಂಡನ್ನ ಕಳ್ಕೊಂಡು ವಿಧವಾ ಆಗ್ಯಾಳಂತ. ನಾರಾಯಣರಾಯರು ಮಗಳಿಗಿ ಮರುಮದ್ವಿ ಮಾಡಲಿಕ್ಕ ತಯ್ಯಾರ ಆದಾರಂತ. ನಮ್ಮ ರಾಘಪ್ಪಗ ಬೇರೆ ಈ ಕಾಲದಾಗ ಹೆಣ್ಣ ಸಿಗ್ತಿಲ್ಲ. ಸುಮ್ನ ಒಪ್ಕೊಂಡು ಬಿಡು. ಶಾರದಾ ಏನಂತಾಳೋ ಅಂದಿಅಂತ. ಮೂವತ್ತು ವರ್ಷದ ಹಿಂದ ವಿಧವಾಗ ಮರುಮದ್ವಿ ಅನ್ನೊದು ಈಗಿನಷ್ಟು ಸರಳ ಆಗಿರಲಿಲ್ಲ. ಅದು ನನ್ನ ಹಣೆಬರಹ ನೀ ಕೊರಗಬ್ಯಾಡ. ನನ್ನ ಮದ್ವಿ ನೀ ವಿರೋಧ ಮಾಡದಾಗ ನನ್ನ ಮನಸ್ಸಿಗೂ ಭಾಳ ಕೆಟ್ಟದನಿಸಿತ್ತು. ಈ ಮನಸಿನ್ಯಾಗೂ ಹುಚ್ಚ ಆಸೆಗಳಿದ್ವು. ಹಾಗಂತ ಸಂಪ್ರದಾಯ, ಪದ್ಧತಿಗಳನ್ನ ಬಿಡೊಕ್ಕ ಆಗ್ತಿತ್ತೇನು. ಈಗ ಕಾಲ ಬದಲಾಗ್ಯಾದ. ಬದಕನ್ಯಾಗ ಸೋತ ಹೆಣ್ಣಿಗಿ ಬಾಳ ಕೊಟ್ಟಾಂಗ ಆಗ್ತದ. ಎಲ್ಲಾ ಒಳ್ಳೆದಾಗ್ತದ ಮದುವಿಗಿ ಒಪ್ಕೊಂಡು ಬಿಡು. ವೈನಿ ಮತ್ತು ರಾಘಪ್ಪನ ಜೋಡಿನೂ ಮಾತಾಡಿ ಒಪ್ಪಿಸಿದ್ದೀನಿ. ಕೃಷ್ಣಾಚಾರ್ಯರಿಗಿ ಹೆಣ್ಣು ನೋಡ್ಲಿಕ್ಕಿ ಬರ್ತಿವಿ ಅಂತ ಭೇಟಿಯಾಗಿ ಹೇಳ್ಬಿಡು’ ಶಾರದಾ ಅಣ್ಣನಿಗೆ ಹೇಳಿ ಅವರ ಉತ್ತರಕ್ಕೂ ಕಾಯದೆ ಹಿತ್ತಲ ಬಾಗಿಲಿಂದ ಅಡುಗೆ ಮನೆಯ ಕಡೆ ಹೆಜ್ಜೆ ಹಾಕಿದಳು. ಬಂಡೆಯಂತೆ ಬಂದೆರಗಿದ ಸಮಸ್ಯೆಯನ್ನು ಶಾರದಾ ಕ್ಷಣ ಮಾತ್ರದಲ್ಲಿ ಬಗೆಹರಿಸಿದ್ದಳು. ಮಾಧವಶಾಸ್ತ್ರಿಗಳು ಕತ್ತೆತ್ತಿ ನೋಡಿದರು.  ದೂರದಲ್ಲಿ ನಡೆದು ಹೋಗುತ್ತಿರುವ ತಂಗಿ ಶಾರದೆ ಕ್ಷಣ ಕ್ಷಣಕ್ಕೂ ಆಕಾಶದೆತ್ತರಕ್ಕೆ ಬೆಳೆಯುತ್ತಿರುವಂತೆಯೂ ತಾವು ಅವಳೆದುರು ತೀರ ಕುಬ್ಜರಾದಂತೆ ಅನ್ನಿಸಿ ಕಣ್ಣಿಗೆ ಕತ್ತಲಾವರಿಸಿ ಆಸರೆಗಾಗಿ ಸುತ್ತಲೂ ನೋಡತೊಡಗಿದರು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 



Friday, November 2, 2018

ಭಾಷೆಯ ಅಸ್ತಿತ್ವದ ವಿವಿಧ ನೆಲೆಗಳು





              ಭಾಷೆಯ ಅಸ್ಮಿತೆಯ ಪ್ರಶ್ನೆ ನಮಗೆ ಎದುರಾಗುತ್ತಲೆ ಇರುತ್ತದೆ. ಭಾಷಾತಜ್ಞರ ಅಧ್ಯಯನಗಳ ಪ್ರಕಾರ ಪ್ರಪಂಚದಲ್ಲಿ ಸಾವಿರಾರು ಭಾಷೆಗಳು ಸಂವಹನದ ಕೊರತೆಯಿಂದ ನಾಶ ಹೊಂದಿವೆ. ಜೊತೆಗೆ ಪ್ರತಿವರ್ಷ ಹಲವಾರು ಭಾಷೆಗಳು ಮರೆಯಾಗುತ್ತಿವೆ. ಕನ್ನಡ ಭಾಷೆಗೆ ಅಂಥದ್ದೊಂದು ಸಮಸ್ಯೆ ಎದುರಾಗುವ ಕಾಲ ಇನ್ನೂ ದೂರವಿದೆ. ಏಕೆಂದರೆ ಕನ್ನಡ ಸಂವಹನದ ಭಾಷೆಯಾಗಿ ಇನ್ನೂ ಚಾಲ್ತಿಯಲ್ಲಿದೆ ಮತ್ತು ರಾಜ್ಯದ ಹಳ್ಳಿಗಳಲ್ಲಿ ಶಿಕ್ಷಣದ ಮಾಧ್ಯಮವಾಗಿ ಬಳಕೆಯಲ್ಲಿದೆ. ಹಾಗೆಂದು ಮೈಮರೆತು ಕೂಡುವಂತಿಲ್ಲ. ಈಗಾಗಲೇ ಒಂದು ತಲೆಮಾರಿನ ಯುವಜನಾಂಗ ಕನ್ನಡ ಭಾಷೆಯೊಂದಿಗಿನ ತಮ್ಮ ಕರುಳು ಸಂಬಂಧವನ್ನು ಕಡಿದುಕೊಂಡಾಗಿದೆ. ಅವರಿಗೆ ಇಂಗ್ಲಿಷ್ ಬದುಕಿನ ಭಾಷೆಯಾಗುವುದರ ಜೊತೆಗೆ ಅದು ಹೃದಯದ ಭಾಷೆಯಾಗಿಯೂ ಮಹತ್ವ ಪಡೆದುಕೊಳ್ಳುತ್ತಿದೆ. ಪ್ರಾಥಮಿಕ ಶಿಕ್ಷಣವನ್ನಾದರೂ ಕನ್ನಡ ಭಾಷೆಯಲ್ಲಿ ಪಡೆದ ನನ್ನ ವಯೋಮಾನದ ನಂತರದ ಪೀಳಿಗೆ ತಮ್ಮ ಮಕ್ಕಳನ್ನು ಕನ್ನಡದ ಪರಿಸರಕ್ಕೆ ಸಂಪೂರ್ಣವಾಗಿ  ಬೆನ್ನು ಮಾಡಿಸಿ ನಿಲ್ಲಿಸಿರುವರು. ಈ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ, ಇಂಗ್ಲಿಷ್ ಪುಸ್ತಕಗಳು, ಇಂಗ್ಲಿಷ್ ವಾತಾವರಣ ಜೊತೆಗೆ ಬದುಕುತ್ತಿರುವುದು ಕೂಡ ಮಹಾನಗರಗಳ ಕನ್ನಡೇತರ ಸಂಸ್ಕೃತಿಯ ಆಧುನಿಕತೆಯೇ  ಮೈವೆತ್ತ ಅಪಾರ್ಟಮೆಂಟ್‍ಗಳಲ್ಲಿ. ಹೀಗಾಗಿ ಇಂದಿನ ಮಕ್ಕಳಿಗೆ ಕನ್ನಡ ಪದಗಳೇ ಕಿವಿಯ ಮೇಲೆ ಬೀಳುತ್ತಿಲ್ಲ. ಇಂಥದ್ದೆ ಪರಿಸ್ಥಿತಿ ಒಂದು ದಶಕದ ಕಾಲ ಮುಂದುವರೆದಲ್ಲಿ ನಗರಗಳಲ್ಲಿ ಕನ್ನಡ ಭಾಷೆಯನ್ನು ಮಾತನಾಡುವವರೇ ವಿರಳರಾಗಬಹುದು. ನಾನು ಇಲ್ಲಿ ಉದ್ದೇಶ ಪೂರ್ವಕವಾಗಿ ನಗರ ಎನ್ನುತ್ತಿದ್ದೇನೆ. ಏಕೆಂದರೆ ಇಂದಿನ ಗ್ರಾಮಗಳೆಲ್ಲ ವೃದ್ಧಾಶ್ರಮಗಳಂತಾಗಿದ್ದು ಅಲ್ಲಿ ಕನ್ನಡದ ಅಸ್ಮಿತೆಯನ್ನು ಹುಡುಕುವ ಅವಶ್ಯಕತೆ ಇಲ್ಲ. ನಾವು ಮಹತ್ವ ನೀಡಬೇಕಿರುವುದು ನಗರ ಪ್ರದೇಶಗಳಿಗೆ ಮಾತ್ರ.  ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಮತ್ತು ಸಾಂಸ್ಕೃತಿಕ ಹಿನ್ನೆಲೆ ಇರುವ ಕನ್ನಡ ಭಾಷೆಯನ್ನು ಕುರಿತು ಹೀಗೆ ಆತಂಕ ವ್ಯಕ್ತಪಡಿಸುತ್ತಿರುವುದು ನಿಜಕ್ಕೂ ತುಂಬ ನೋವಿನ ಸಂಗತಿ. 

ಸಾಹಿತ್ಯ

ಕನ್ನಡದ ಅಸ್ಮಿತೆಯ ಪ್ರಶ್ನೆ ಎದುರಾದಾಗಲೆಲ್ಲ ಸಾಹಿತ್ಯದ ಕುರಿತು ಚರ್ಚೆ ಮುನ್ನೆಲೆಗೆ ಬರುತ್ತದೆ. ಏಕೆಂದರೆ ಭಾಷೆಯ ಅಸ್ತಿತ್ವದ ಪ್ರಧಾನ ನೆಲೆಯಾಗಿ ಮೊದಲು ಕಾಣಿಸುವುದು ನಮಗೆ ಸಾಹಿತ್ಯ. ಕನ್ನಡ ಸಾಹಿತ್ಯದ ಮಟ್ಟಿಗೆ ಅದು ತುಂಬ ಸಶಕ್ತವಾಗಿದೆ ಎನ್ನುವುದು ಹೆಚ್ಚಿನವರ ಅಭಿಪ್ರಾಯ. ಹಾಗೆ ಅವರು ಹೇಳುವುದಕ್ಕೂ ಅನೇಕ ಕಾರಣಗಳಿವೆ. ಪ್ರತಿವರ್ಷ ಲಕ್ಷಾಂತರ ಪುಸ್ತಕಗಳು ಕನ್ನಡ ಭಾಷೆಯಲ್ಲಿ ಪ್ರಕಟವಾಗುತ್ತಿರುವುದು ಆ ಕಾರಣಗಳಲ್ಲೊಂದು. ಕಥೆ, ಕಾವ್ಯ, ನಾಟಕ, ಕಾದಂಬರಿ, ಗದ್ಯಬರಹ ಹೀಗೆ ವಿವಿಧ ಪ್ರಕಾರಗಳಲ್ಲಿ ಪ್ರತಿವರ್ಷ ಕನ್ನಡ ಪುಸ್ತಕಗಳು ಪ್ರಕಟವಾಗುತ್ತಿವೆ. ಪುಸ್ತಕಗಳ ಪ್ರಕಟಣೆಗಾಗಿಯೇ  ಹಲವು ಪ್ರಕಾಶನ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಜೊತೆಗೆ ಬರಹಗಾರರೇ ಪ್ರಕಾಶಕರಾಗಿಯೂ ತಮ್ಮ ತಮ್ಮ ಪುಸ್ತಕಗಳನ್ನು ಪ್ರಕಟಿಸಿಕೊಳ್ಳುತ್ತಿರುವರು. ಮೊನ್ನೆ ಒಬ್ಬರು ಸುಮಾರು ಸಾವಿರದ ಸಂಖ್ಯೆಯಲ್ಲಿ ಆಧುನಿಕ ವಚನಗಳನ್ನು ಬರೆದು ಸ್ವಂತ ಖರ್ಚಿನಲ್ಲಿ ಪುಸ್ತಕ ಪ್ರಕಟಿಸಿ ಗಿನ್ನಿಸ್ ದಾಖಲೆಗೆ ಭಾಜನರಾದರು. ಇನ್ನು ಅಭಿನಂದನಾ ಗ್ರಂಥಗಳಂತೂ ಪ್ರಕಟವಾಗುತ್ತಿರುವುದಕ್ಕೆ ಲೆಕ್ಕವೇ ಇಲ್ಲ. ಹಿಂದೆಲ್ಲ ಮಹಾನ್ ಸಾಧಕರ ಬಗ್ಗೆ ಮಾತ್ರ ಅಭಿನಂದನಾ ಗ್ರಂಥಗಳು ಪ್ರಕಟವಾಗುತ್ತಿದ್ದವು. ಆದರೆ ಇಂದು ಪ್ರತಿಮನೆಗೆ ಒಬ್ಬರ ಅಥವಾ ಇಬ್ಬರ ಅಭಿನಂದನಾ ಗ್ರಂಥಗಳು ಪ್ರಕಟವಾಗುತ್ತಿವೆ. ಒಂದರ್ಥದಲ್ಲಿ ಅಭಿನಂದನಾ ಗ್ರಂಥಗಳ ಪ್ರಕಟಣೆ ಎನ್ನುವುದು ಕೊಡು-ಕೊಳ್ಳುವ ಸಂಸ್ಕೃತಿಯಾಗಿದೆ. 

ಇನ್ನು ಪ್ರಕಟವಾಗುತ್ತಿರುವ ಪುಸ್ತಕಗಳಲ್ಲಿ ಜೊಳ್ಳು ಮತ್ತು ಗಟ್ಟಿಯೆಂದು  ವರ್ಗೀಕರಿಸುವ ಅವಶ್ಯಕತೆಯೂ ಇಲ್ಲವಾಗಿದೆ. ಎಡ, ಬಲ, ದಲಿತ, ಸ್ತ್ರೀ, ಆ ಜಾತಿ, ಈ ಜಾತಿ ಎಂದು ಸಮ್ಮೇಳನಗಳನ್ನು ಸಂಘಟಿಸಿ ಆಯಾ ವರ್ಗಕ್ಕೆ ಸೇರುವ ಲೇಖಕರ ಪುಸ್ತಕಗಳಿಗೆ ಬಹುಮಾನ ನೀಡುವ ಸಂಪ್ರದಾಯ ಇಲ್ಲಿದೆ. ಪರಿಣಾಮವಾಗಿ ಪ್ರಕಟವಾಗುವ ಎಲ್ಲ ಪುಸ್ತಕಗಳೂ ಬಹುಮಾನಕ್ಕೆ ಯೋಗ್ಯವಾದವುಗಳೇ. ತನ್ನ ಪುಸ್ತಕಕ್ಕೆ ಬಹುಮಾನ ಪಡೆದ ಲೇಖಕನ ಮೇಲೆ ಸಮಾಜ ಮತ್ತು ಸಂಸ್ಕೃತಿಯ ಋಣವಿರುವುದರಿಂದ ಆತ ಋಣಮುಕ್ತಿಗಾಗಿ ಮತ್ತಷ್ಟು ಪುಸ್ತಕಗಳ ಬರವಣಿಗೆಗೆ ಕೈಹಾಕುತ್ತಾನೆ. ಪ್ರತಿವರ್ಷ ಸಾವಿರಾರು ಪುಸ್ತಕಗಳು ಪ್ರಕಟವಾಗಿ ಸಾಹಿತ್ಯಲೋಕಕ್ಕೆ ಸೇರುವುದರಿಂದ ಕನ್ನಡ ಸಾಹಿತ್ಯ ಸಂಖ್ಯಾತ್ಮಕವಾಗಿ ವೃದ್ಧಿಸುತ್ತ ಹೋಗುತ್ತದೆ. ಇಷ್ಟೆಲ್ಲ ಬೆಳವಣಿಗೆಗಳ ನಡುವೆಯೂ ಭಾಷೆಯ ಅಸ್ತಿತ್ವದ ಪ್ರಶ್ನೆ ಎದುರಾದಾಗ  ಕನ್ನಡ ಸಾಹಿತ್ಯದ ಸ್ಪಂದನೆ ಪರಿಣಾಮಕಾರಿಯಾಗಿ ಆಗುತ್ತಿಲ್ಲವೇಕೆ? ಎನ್ನುವ ಪ್ರಶ್ನೆ ಕಾಡುತ್ತದೆ. ಈಗ ಆತ್ಮವಿಮರ್ಶೆ ಮಾಡಿಕೊಳ್ಳುವ ಸರದಿ ನಮ್ಮ ಬರಹಗಾರರ ಗುಂಪಿನದು. ಓದುಗರನ್ನು ಹೋಗಿ ಮುಟ್ಟುವ ಮೌಲಿಕ ಸಾಹಿತ್ಯವನ್ನು ನಾವು ಸೃಷ್ಟಿಸುತ್ತಿದ್ದೇವೆಯೇ  ಎನ್ನುವ ವಿಷಯ ಚರ್ಚೆಗೆ ಒಳಗಾಗಬೇಕು. ಎಡ-ಬಲ ಎನ್ನುವ ಪೂರ್ವಾಗ್ರಹಪೀಡಿತ ಮನೋಭಾವದಿಂದ ಹೊರಬಂದು ಪ್ರತಿವರ್ಷ ಪ್ರಕಟವಾಗುತ್ತಿರುವ ಪುಸ್ತಕಗಳಲ್ಲಿ ಎಷ್ಟು ಪುಸ್ತಕಗಳು ಓದಲು ಯೋಗ್ಯವಾಗಿವೆ ಎನ್ನುವುದು ಮೌಲ್ಯಮಾಪನಕ್ಕೆ ಒಳಪಡಬೇಕು. ಓದಿನ ರುಚಿ ಹತ್ತಿಸಿ ಓದುಗರನ್ನು ಕನ್ನಡ ಪುಸ್ತಕಗಳ ಕಡೆ ಕರೆತರುವಂಥ ಪುಸ್ತಕಗಳ ಸಂಖ್ಯೆ ಹೆಚ್ಚಬೇಕು. ಒಟ್ಟಾರೆ ಕನ್ನಡ ಸಾಹಿತ್ಯ ಗುಣಾತ್ಮಕವಾಗಿ ಬೆಳೆಯಬೇಕೇ ವಿನ: ಸಂಖ್ಯಾತ್ಮಕವಾಗಿ ಅಲ್ಲ. 

ಸಿನಿಮಾ

ಸಿನಿಮಾ ಎಂದಾಗ ಸಾಹಿತ್ಯಲೋಕದ ಮಡಿವಂತರು ಮೂಗು ಮುರಿಯುವುದೇ ಹೆಚ್ಚು. ಇದು ಅವರ ತಪ್ಪಲ್ಲ. ಈ ಸಿನಿಮಾ ಮಾಧ್ಯಮ ಕನ್ನಡ ಭಾಷೆಯನ್ನು ದುಡಿಸಿಕೊಳ್ಳುತ್ತಿರುವ ರೀತಿ ಆ ಮಡಿವಂತರಲ್ಲಿ ರೇಜಿಗೆ ಹುಟ್ಟಿಸಿದೆ. ಹಾಗೆಂದು ಸಿನಿಮಾ ಮಾಧ್ಯಮವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವಂತಿಲ್ಲ. ಭಾಷೆಯ ಅವನತಿಗೆ ಕಾರಣವಾಗುವಂತೆ ಭಾಷೆಯ ಉನ್ನತಿಗೂ ಈ ಮಾಧ್ಯಮ ಕಾರಣವಾಗುವಷ್ಟು ಪ್ರಬಲವಾಗಿದೆ. ಭಾಷೆಯ ಉನ್ನತಿ ಎಂದು ನಾನು ಹೇಳುವುದರಲ್ಲಿ ಸತ್ಯಾಂಶವಿದೆ. ಸುಮಾರು ದಶಕಗಳ ಹಿಂದಿನ ಸಿನಿಮಾಗಳನ್ನು ವೀಕ್ಷಿಸುತ್ತಿದ್ದ ಸಿನಿಮಾ ಪ್ರಿಯರಿಗೆ ಈ ಮಾತು ಅರ್ಥವಾಗುತ್ತದೆ. ಅಂದಿನ ಸಿನಿಮಾಗಳಲ್ಲೂ ಹಾಡು, ಹೊಡೆದಾಟಗಳಿದ್ದವು ಆದರೆ ಇಂದಿನ ಸಿನಿಮಾಗಳಲ್ಲಿರುವಷ್ಟು ಅತಿಯಾಗಿರಲಿಲ್ಲ. ಅಂದಿನ ನಿರ್ದೇಶಕರು ಭಾಷೆಯನ್ನು ತಮ್ಮ ಸಿನಿಮಾಗಳಲ್ಲಿ ಅತ್ಯಂತ ಸಶಕ್ತವಾಗಿ ದುಡಿಸಿಕೊಂಡರು. ಭಾಷೆಗೆ ಅಪಚಾರವಾಗದಂತೆ ಸಿನಿಮಾಗಳನ್ನು ರೂಪಿಸಿದರು. ಪ್ರತಿ ಸಿನಿಮಾದಲ್ಲೂ ಕನ್ನಡತನವಿರುತ್ತಿತ್ತು. ನಾಡು-ನುಡಿಯ ಪ್ರೇಮ ಸಿನಿಮಾವೊಂದನ್ನು ನೋಡುತ್ತಿರುವ ಘಳಿಗೆ ಪ್ರೇಕ್ಷಕನ ಅನುಭವಕ್ಕೆ ಬರುತ್ತಿತ್ತು. ಅನೇಕ ಸಾಹಿತ್ಯ ಕೃತಿಗಳು ಸಿನಿಮಾಗಳಾಗಿ ಅಪಾರ ಮನ್ನಣೆಗೆ ಪಾತ್ರವಾದವು. ಕನ್ನಡ ಭಾಷೆಯ ಉಳುವಿಗಾಗಿ ಸಂಘಟಿಸಿದ್ದ ಗೋಕಾಕ್ ಚಳವಳಿಯಲ್ಲಿ ಸಿನಿಮಾ ಮಾಧ್ಯಮದ ಕೊಡುಗೆಯೇ  ಹೆಚ್ಚು. ಅಪಾರ ಅಭಿಮಾನಿ ಬಳಗವನ್ನು ಪಡೆದಿದ್ದ ಸಿನಿಮಾದ ಜನಪ್ರಿಯ ಕಲಾವಿದ ಚಳವಳಿಯ ನೇತೃತ್ವವನ್ನು ವಹಿಸಿದ್ದರಿಂದ ಲಕ್ಷಾಂತರ ಜನ ಸೇರಿದರು. ಭಾಷೆಯ ಅಸ್ಮಿತೆಯ ಪ್ರಶ್ನೆ ಎದುರಾದಾಗ ಸಿನಿಮಾ ಮಾಧ್ಯಮ ಗೋಕಾಕ್ ಚಳವಳಿಯ ಮೂಲಕ ಮೂಗು ಮುರಿಯುವ ಮಡಿವಂತರಿಗೆ ತಕ್ಕ ಉತ್ತರ ನೀಡಿತು. 

ಆದರೆ ಈಗ ಕಾಲ ಬದಲಾಗಿದೆ. ಸಿನಿಮಾ ಮಾಧ್ಯಮ ಎಲ್ಲವನ್ನೂ ಕೂಡಿ ಕಳೆಯುವ ಲೆಕ್ಕದ ಮನೋಭಾವದಿಂದಲೇ ನೋಡುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆಯನ್ನು ವಿಸ್ತರಿಸುವ ಧಾವಂತಕ್ಕೆ ಒಳಗಾಗಿರುವ ಈ ಮಾಧ್ಯಮಕ್ಕೆ ಭಾಷೆ ಗೌಣವಾಗಿ ಕಾಣಿಸುತ್ತದೆ. ಕನ್ನಡದ ಪ್ರೇಕ್ಷಕರನ್ನು ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳ ಪ್ರೇಕ್ಷಕರನ್ನು ತನ್ನತ್ತ ಸೆಳೆಯಬೇಕಾಗಿರುವುದರಿಂದ ಇವತ್ತು ಸಿನಿಮಾಗಳಲ್ಲಿ ಸಂವಹನದ ಭಾಷೆಯಾಗಿ ಇಂಗ್ಲಿಷ್ ಪ್ರಾಬಲ್ಯವನ್ನು ಮೆರೆಯುತ್ತಿದೆ. ಅನ್ಯಭಾಷಾ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಕನ್ನಡವೇ ಗೊತ್ತಿರದ ಕಲಾವಿದರು ಇಲ್ಲಿ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಕಲಾವಿದರೊಂದಿಗೆ ನಿರ್ಮಾಪಕ, ನಿರ್ದೇಶಕರು ಕನ್ನಡ ಸಿನಿಮಾ ಮಾಧ್ಯಮಕ್ಕೆ ವಲಸೆ ಬರುತ್ತಿರುವುದರಿಂದ ಕನ್ನಡತನ ಎನ್ನುವುದು ಇಲ್ಲಿ ಮರೀಚಿಕೆಯಾಗಿದೆ. ಬಂಗಾಳಿ ಮತ್ತು ಮಲೆಯಾಳಿ ಭಾಷೆಗಳಂಥ ಸಣ್ಣ ಮಾರುಕಟ್ಟೆಯ ಸಿನಿಮಾ ಮಾಧ್ಯಮ ಮಾಡುತ್ತಿರುವ ಪ್ರಯೋಗಶೀಲತೆ ಅತಿದೊಡ್ಡ ಮಾರುಕಟ್ಟೆಯನ್ನು ಹೊಂದಿರುವ ಕನ್ನಡ ಸಿನಿಮಾ ಮಾಧ್ಯಮದಲ್ಲಿ ಕಂಡುಬರುತ್ತಿಲ್ಲ. ಇವತ್ತಿಗೂ ಬಂಗಾಳಿ ಮತ್ತು ಮಲೆಯಾಳಿ ಭಾಷೆಗಳ ಸಿನಿಮಾಗಳಲ್ಲಿ ಅವುಗಳ ನೆಲದ ಮತ್ತು ಭಾಷೆಯ ಅಸ್ಮಿತೆ ಇದೆ. ನೆಲದ ಅಸ್ಮಿತೆಯನ್ನಿಟ್ಟುಕೊಂಡೆ ನಿರ್ಮಾಣವಾಗುವ ಈ ಭಾಷೆಗಳ ಸಿನಿಮಾಗಳು ಪ್ರತಿವರ್ಷದ ರಾಷ್ಟ್ರಿಯ ಪ್ರಶಸ್ತಿಗಳಲ್ಲಿ ಸಿಂಹಪಾಲು ಪಡೆಯುತ್ತವೆ. ಆದರೆ ಕನ್ನಡ ಸಿನಿಮಾ ಮಾಧ್ಯಮದಲ್ಲಿ ನೆಲದ ಅಸ್ಮಿತೆಯನ್ನು ಪ್ರತಿನಿಧಿಸುವ ಸಿನಿಮಾಗಳನ್ನು ಕಲಾತ್ಮಕ ಎಂದು ಹಣೆಪಟ್ಟಿ ಕಟ್ಟಿ ಅವುಗಳನ್ನು ನಿರ್ಲಕ್ಷದಿಂದ ನೋಡಲಾಗುತ್ತಿದೆ. 

ಶಿಕ್ಷಣ

ಇಂಗ್ಲಿಷ್‍ನ್ನು ಭಾಷೆಯಾಗಿ ಮಾತ್ರ ಕಲಿಯಬೇಕೆ ವಿನ: ಅದು ಶಿಕ್ಷಣದ ಮಾಧ್ಯಮವಾಗುವುದು ಸಲ್ಲದು ಎಂದು ಅನಂತಮೂರ್ತಿ ಸದಾಕಾಲ ಹೇಳುತ್ತಿದ್ದ ಮಾತಿದು. ನಾವು ಪ್ರಾಥಮಿಕ ಶಿಕ್ಷಣದ ವಿದ್ಯಾರ್ಥಿಗಳಾಗಿದ್ದಾಗ ಆಗೆಲ್ಲ ಇಂಗ್ಲಿಷ್ ಭಾಷೆಯ ಪಠ್ಯವನ್ನು ಸರಳೀಕರಿಸಿದ ಗೈಡ್ ಮಾದರಿಯ ಪುಸ್ತಕಗಳು ಇರುತ್ತಿದ್ದವು. ಈ ಗೈಡ್‍ಗಳಲ್ಲಿ ಇಂಗ್ಲಿಷ್ ಪಠ್ಯದ ಎಲ್ಲ ಪಾಠಗಳ ಕನ್ನಡ ಭಾವಾರ್ಥವಿರುತ್ತಿತ್ತು ಮತ್ತು ಇಡೀ ಪಾಠವನ್ನು ಕನ್ನಡದ ಅಕ್ಷರಗಳಲ್ಲಿ ಕೊಟ್ಟಿರುತ್ತಿದ್ದರು. ಹೀಗಾಗಿ ನಾವೆಲ್ಲ ಇಂಗ್ಲಿಷ್ ಪಾಠವನ್ನು ಕನ್ನಡ ಅಕ್ಷರಗಳ ಮೂಲಕ ಕಲಿಯುತ್ತಿದ್ದೇವು. ಇಂಗ್ಲಿಷ್ ಭಾಷೆಯ ಪ್ರವೇಶಿಕೆ ಕನ್ನಡದ ಮೂಲಕವೇ ಆಗುತ್ತಿತ್ತು. ಕಾಲಾನಂತರದಲ್ಲಿ ಜಾಗತೀಕರಣದ ಪ್ರಭಾವಕ್ಕೆ ಒಳಗಾದ ಪಾಲಕರು ಇಂಗ್ಲಿಷ್ ಭಾಷೆ ಮಾತ್ರ ಬದುಕಿನ ಭಾಷೆ ಎನ್ನುವ ನಿರ್ಣಯಕ್ಕೆ ಬಂದು ತಮ್ಮ ಮಕ್ಕಳಿಗಾಗಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾರಂಭಿಸಿದರು. ಪಾಲಕರ ಈ ಮನೋಭಾವವನ್ನೇ ತಮ್ಮ ಏಳ್ಗೆಗಾಗಿ ಉಪಯೋಗಿಸಿಕೊಂಡ ಖಾಸಗಿ ಶಿಕ್ಷಣ ಸಂಸ್ಥೆಗಳು ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತ ಕನ್ನಡ ಮಾಧ್ಯಮದ ಶಾಲೆಗಳನ್ನು ಅಕ್ಷರಶ: ನಿರ್ಲಕ್ಷಿಸತೊಡಗಿದರು. ಪರಿಣಾಮವಾಗಿ ಇವತ್ತು ಕನ್ನಡ ಮಾಧ್ಯಮದ ಶಿಕ್ಷಣ ಕೇವಲ ಸರ್ಕಾರಿ ಶಾಲೆಗಳಲ್ಲಿ ಮಾತ್ರ ದೊರೆಯುತ್ತಿದೆ ಎನ್ನುವಂಥ ಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಾತ್ಮಕ ಶಿಕ್ಷಣ ಎನ್ನುವ ವಿಷಯವನ್ನು ಮುಂದೆ ಮಾಡಿ ಇವತ್ತು ಉದ್ಯಮದ ರೂಪವನ್ನು ತಳೆದಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಒಡ್ಡುತ್ತಿರುವ ಪ್ರಬಲ ಪೈಪೋಟಿ  ಎದುರು ಸರ್ಕಾರದ ಕನ್ನಡ ಮಾಧ್ಯಮದ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಶಾಶ್ವತವಾಗಿ ಮುಚ್ಚುತ್ತಿವೆ. ದುರಂತದ ವಿಷಯವೆಂದರೆ ಖಾಸಗಿ ಶಾಲೆಗಳ ಇಂಗ್ಲಿಷ್ ಮಾಧ್ಯಮದ ಶಿಕ್ಷಣದಲ್ಲಿ ರಾಜ್ಯದ ಭಾಷೆಯಾದ ಕನ್ನಡವು ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಎಲ್ಲ ವಿಷಯಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಕಲಿಯುತ್ತಿರುವ ಮಗು ಎರಡನೇ ಭಾಷೆಯಾದ ಕನ್ನಡವನ್ನು ಕಾಟಾಚಾರಕ್ಕೆನ್ನುವಂತೆ ಕಲಿಯುತ್ತಿದೆ. ಪರಿಸ್ಥಿತಿ ಹೀಗಿರುವಾಗ ಇನ್ನು ಇಪ್ಪತ್ತು ವರ್ಷಗಳ ನಂತರ ಕನ್ನಡ ಪುಸ್ತಕಗಳನ್ನು ಓದುವವರಾರು ಎನ್ನುವ ಹಿರಿಯ ಲೇಖಕ ಎಸ್.ಎಲ್.ಭೈರಪ್ಪನವರ ಆತಂಕ ಸಹಜವಾಗಿದೆ. 

ರಾಜಕಾರಣ

ರಾಜಕಾರಣದ ಹಿತಾಸಕ್ತಿ ಕೂಡ ನಾಡಿನ ಭಾಷೆಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಸದಾಕಾಲ ಸ್ವಹಿತಾಸಕ್ತಿಯ ನೆಲೆಯಲ್ಲೇ ರಾಜಕೀಯ ಮಾಡುವ ನಮ್ಮ ರಾಜಕಾರಣಿಗಳಿಗೆ ಭಾಷೆಯ ಕುರಿತು ಕಿಂಚಿತ್ ಚಿಂತೆಯೂ ಇಲ್ಲ. ಜೊತೆಗೆ ಅನಕ್ಷರಸ್ಥರು, ರೌಡಿಗಳು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುತ್ತಿರುವುದರಿಂದ ಅಂಥ ರಾಜಕಾರಣಿಗಳಿಂದ ಭಾಷೆಯ ಅಭ್ಯುದಯವನ್ನು ನಿರೀಕ್ಷಿಸುವುದು ಮೂರ್ಖತನವಾಗುತ್ತದೆ. ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಅಕ್ಷರಶ: ನಿಷ್ಕ್ರಿಯಗೊಂಡಿದೆ. ಇವತ್ತು ಭಾಷೆಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳು ನಮ್ಮ ಜನಪ್ರತಿನಿಧಿಗಳೆದುರಿವೆ. ಅವುಗಳಲ್ಲಿ ಗಡಿನಾಡ ಸಮಸ್ಯೆಯೂ ಒಂದು. ಗಡಿನಾಡ ಕರ್ನಾಟಕದಲ್ಲಿ ಮರಾಠಿ, ತೆಲುಗು, ತಮಿಳು ಭಾಷೆಗಳು ಅತ್ಯಂತ ಪ್ರಬಲವಾಗಿವೆ. ಬೀದರ್, ಬೆಳಗಾವಿ, ಕೋಲಾರ, ರಾಯಚೂರು ಜಿಲ್ಲೆಗಳಲ್ಲಿ ಕನ್ನಡಕ್ಕಿಂತ ಅನ್ಯಭಾಷೆಗಳನ್ನೆ ತಮ್ಮ ನೆಲದ ಭಾಷೆಯಂತೆ ಬಳಸುವುದನ್ನು ಕಾಣಬಹುದು. ಇವತ್ತಿಗೂ ಚಿಕ್ಕೊಡಿಯನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸದೆ ಇರುವುದಕ್ಕೆ ಕಾರಣ ಬೆಳಗಾವಿ ಮರಾಠಿಗರ ಪ್ರಾಬಲ್ಯಕ್ಕೆ ಒಳಗಾಗಬಹುದೆನ್ನುವ ಭೀತಿ. ಸದಾಕಾಲ ಪ್ರಾದೇಶಿಕತೆಯ ಹಿತಾಸಕ್ತಿಯ  ನೆಲೆಯಲ್ಲೇ ರಾಜಕಾರಣ ಮಾಡುವ ತಮಿಳು ಮತ್ತು ಮಹಾರಾಷ್ಟ್ರದ ರಾಜಕಾರಣಿಗಳಿಂದ ನಮ್ಮ ರಾಜಕೀಯ ನಾಯಕರು ಕಲಿಯುವುದು ಸಾಕಷ್ಟಿದೆ. ಇತ್ತೀಚಿಗೆ ಸಂದರ್ಶನದಲ್ಲಿ ಹಿರಿಯ ವಿಮರ್ಶಕ ಆಮೂರ ಅವರು ‘ರಾಜಕಾರಣವನ್ನು ಹೊರಗಿಟ್ಟು ಭಾಷೆಯ ಅಭಿವೃದ್ಧಿಯನ್ನು ನಿರೀಕ್ಷಿಸುವುದು ಅಸಾಧ್ಯ. ರಾಜಕಾರಣ ಎನ್ನುವುದು ಅದೊಂದು ಬಹುದೊಡ್ಡ ಶಕ್ತಿಕೇಂದ್ರ. ಆದರೆ ನನ್ನ ವಿರೋಧ ಇರುವುದು ಕೆಟ್ಟ ರಾಜಕಾರಣದ ಕುರಿತು’ ಎಂದ ಮಾತು ರಾಜಕಾರಣದ ಮಹತ್ವಕ್ಕೊಂದು ದೃಷ್ಟಾಂತವಾಗಿದೆ.

ಕನ್ನಡಿಗ ದೊರೆ

ಭಾಷೆ ತನ್ನ ಅಸ್ತಿತ್ವದ ವಿವಿಧ ನೆಲೆಗಳನ್ನು ಕಳೆದುಕೊಳ್ಳುತ್ತಿರುವ ಈ ಘಳಿಗೆ ಕನ್ನಡಕ್ಕೆ ಅದರ ಹಿಂದಿನ ಹಿರಿಮೆಯನ್ನು ತಂದುಕೊಡುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ. ಭಾಷಾಪ್ರೇಮ ಪ್ರತಿಯೊಬ್ಬರ ಮನೆ ಮತ್ತು ಮನಸ್ಸುಗಳಲ್ಲಿ ಬೆಳೆಯಬೇಕು. ನೆಲ ಮತ್ತು ಭಾಷೆಯಿಂದ ದೂರವಾಗಿ ಬದುಕುತ್ತಿರುವ ಘಳಿಗೆ ನಮಗೆ ಕಾಡುವ ಅನಾಥ ಪ್ರಜ್ಞೆ ನಾವು ಕನ್ನಡದ ನೆಲದಲ್ಲೇ ಬದುಕುತ್ತಿರುವಾಗ ಕಾಡುವುದಿಲ್ಲ. ಆಗೆಲ್ಲ ಭಾಷೆಯನ್ನು ನಿರ್ಲಕ್ಷಿಸುತ್ತೇವೆ. ಇದು ಸರಿಯಲ್ಲ. ಜಾಗತೀಕರಣದ ಈ ದಿನಗಳಲ್ಲಿ ಇಂಗ್ಲಿಷ್ ಬದುಕಿನ ಭಾಷೆಯಾಗುತ್ತಿರುವುದರಿಂದ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಅನಿವಾರ್ಯವಾಗುತ್ತಿದೆ. ಸರ್ಕಾರ ಮಕ್ಕಳ ಪ್ರಾಥಮಿಕ ಶಿಕ್ಷಣವನ್ನಾದರೂ ಮಾತೃಭಾಷೆಯಲ್ಲಿ ಕಡ್ಡಾಯಗೊಳಿಸಬೇಕಿತ್ತು. ಆದರೆ ಅಂಥದ್ದೊಂದು ನಿರ್ಧಾರವನ್ನು ತೆಗೆದುಕೊಳ್ಳಲು ಸರ್ಕಾರ ಮನಸ್ಸು ಮಾಡುತ್ತಿಲ್ಲ. ಮಕ್ಕಳ ಶಿಕ್ಷಣದ ಮಾಧ್ಯಮವನ್ನು ಪಾಲಕರ ಆಯ್ಕೆಗೆ  ಬಿಟ್ಟು ಯಾವ ಭಾಷೆಯನ್ನಾದರೂ ಆಯ್ದುಕೊಳ್ಳಲಿ ಎಂದು ಸರ್ಕಾರ ಕೈಕಟ್ಟಿ ಕುಳಿತಿದೆ. ಹೀಗಾಗಿ ಬಹುಸಂಖ್ಯಾತ ಪಾಲಕರು ಇಂಗ್ಲಿಷ್ ಮಾಧ್ಯಮದ ಶಿಕ್ಷಣಕ್ಕೆ ಒತ್ತು ನೀಡುತ್ತಿರುವಾಗ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದ ಶಾಲೆಗಳಿಗೆ ಸೇರಿಸಿ ಎಂದು ಹೇಳುವ ನೈತಿಕ ಹಕ್ಕು ಇವತ್ತು ಯಾರಿಗೂ ಇಲ್ಲ. ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಎಂದು ಕಡ್ಡಾಯಗೊಳಿಸಿದಾಗ ಮಾತ್ರ ಆಗ ಆರ್ಥಿಕ ಸ್ಥಿತಿವಂತರ ಮತ್ತು ದುರ್ಬಲರ ಮಕ್ಕಳು ಕೂಡಿಯೇ  ಕನ್ನಡ ಶಾಲೆಗಳಿಗೆ ಹೋಗುವ ವಾತಾವರಣ ನಿರ್ಮಾಣವಾಗುತ್ತದೆ. ಆದರೆ ಸಧ್ಯದ ಪರಿಸ್ಥಿತಿಯಲ್ಲಿ ಇಂಥ ವಾತಾವರಣ ನಿರ್ಮಾಣವಾಗುವುದು ಕಷ್ಟಸಾಧ್ಯ. ಆದ್ದರಿಂದ ಮಕ್ಕಳನ್ನು ಇಂಗ್ಲಿಷ್ ಶಾಲೆಗಳಿಗೆ ಕಳುಹಿಸಿದರೂ ಪಾಲಕರು ಮನೆಯಲ್ಲಿ ಕನ್ನಡದ ವಾತಾವರಣವನ್ನು ಸೃಷ್ಟಿಸಬೇಕು. ಮಕ್ಕಳಿಗೆ ಕನ್ನಡ ಪುಸ್ತಕಗಳ ಓದಿನಲ್ಲಿ ಆಸಕ್ತಿ ಮೂಡಿಸಬೇಕು. ಕನ್ನಡದಲ್ಲಿ ಮಾತನಾಡುವುದನ್ನು ಕಲಿಸಬೇಕು. ಒಟ್ಟಿನಲ್ಲಿ ಅವರಲ್ಲಿ ಕನ್ನಡತನವನ್ನು ತುಂಬಬೇಕು. 

ಭಾಷೆಯ ಕುರಿತು ತೀರ ಅಂದಾಭಿಮಾನವೂ ಬೇಡ. ನಮ್ಮ ಭಾಷೆಯ ಜೊತೆಗೆ ಅನ್ಯಭಾಷೆಗಳ ಸೊಗಡನ್ನೂ ನಾವು ಅರಿಯುವುದರಿಂದ ಸಾಂಸ್ಕೃತಿಕವಾಗಿ ಬೆಳೆಯಲು ತುಂಬ ನೆರವಾಗುತ್ತದೆ. ಭಾಷೆಯೊಂದು ಸಾಂಸ್ಕೃತಿಕವಾಗಿ ಬೆಳೆಯಬೇಕಾದರೆ ಅದು ಬೇರೆ ಬೇರೆ ಭಾಷೆಗಳಿಂದ ಪಡೆಯುತ್ತ ಬೆಳೆಯಬೇಕಾಗುತ್ತದೆ. ಸಾಹಿತ್ಯಿಕವಾಗಿ ಇದು ತುಂಬ ಮುಖ್ಯವಾದ ಅಗತ್ಯಗಳಲ್ಲೊಂದು.  ಹಾಗೆಂದು ಬೇರೆ ಭಾಷೆಗಳು ಕನ್ನಡದ ಅಸ್ತಿತ್ವವನ್ನೇ ಪ್ರಶ್ನಿಸುವ ಮಟ್ಟಿಗೆ ತಾಳ್ಮೆ ಮತ್ತು ಔದಾರ್ಯ ಮೆರೆಯುವುದು ಸರಿಯಲ್ಲ. ಬೇರೆ ಭಾಷೆ ಮತ್ತು ಸಂಸ್ಕೃತಿಗಳಿಂದ ಪಡೆಯುತ್ತ ನಾವು ಕನ್ನಡವನ್ನು ಬೆಳೆಸಬೇಕು ಮತ್ತು ಉಜ್ವಲಗೊಳಿಸಬೇಕು. ಜೊತೆಗೆ ಕನ್ನಡದ ಸಾಹಿತ್ಯಿಕ ಮಹತ್ವ ಮತ್ತು ಸಾಂಸ್ಕೃತಿಕ ಪರಂಪರೆ ಅನುವಾದದ ರೂಪದಲ್ಲಿ ಅನ್ಯಭಾಷೆಗಳಿಗೂ ವಿಸ್ತರಿಸಬೇಕು. ಕೊಡು-ಕೊಳ್ಳುವ ಸಂಸ್ಕೃತಿಯ ಮೂಲಕ ಕನ್ನಡ ಭಾಷೆ ಶ್ರೀಮಂತಗೊಳ್ಳಬೇಕು. ಒಟ್ಟಾರೆ ಕನ್ನಡ ಭಾಷೆ ನಮ್ಮ ನಮ್ಮ ಹೃದಯದ ಭಾಷೆಯಾಗಿ ತನ್ನ ಅಸ್ತಿತ್ವದ ನೆಲೆಯನ್ನು ವಿಸ್ತರಿಸಿಕೊಳ್ಳುವುದು ಇವತ್ತಿನ ತುರ್ತು ಅಗತ್ಯವಾಗಿದೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ